Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡಲು ನಿರಾಕರಿಸುತ್ತಿರುವ ಸಂಗೀತಪ್ರೇಮಿ ಹಾಡುಗಾರನ ಅಳಲು

ನಾನೇಕೆ ‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡುತ್ತಿಲ್ಲ…

 – ಟಿ.ಎಂ.ಕೃಷ್ಣ
ಕನ್ನಡಕ್ಕೆ: ಶ್ರೀಮತೀ ದೇವಿ.ಪಿ

ಮದರಾಸಿನ ಸಂಗೀತ ಸೀಸನ್

ಇದು ಮದರಾಸಿನಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ನಡೆಯುವ ಸಂಗೀತ ಹಬ್ಬ. ಸುಮಾರು ಆರು ವಾರಗಳ ಕಾಲ ನಡೆಯುವ ಇದರಲ್ಲಿ ಹಾಡುವುದು, ನುಡಿಸುವುದು ಸಂಗೀತಗಾರರಿಗೆ ಪ್ರತಿಷ್ಠೆಯ ವಿಷಯ. ದೇಶವಿದೇಶಗಳ ಸಂಗೀತ ಪ್ರೇಮಿಗಳು ತಮ್ಮ ನೆಚ್ಚಿನ ಸಂಗೀತಗಾರರ ಸಂಗೀತ ಕೇಳಲು ಮುಗಿಬಿದ್ದರೆ ಈಗ ತಾನೇ ತಲೆಯೆತ್ತುತ್ತಿರುವ ಕಲಾವಿದರು ಹಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ. ಚೆನ್ನೈನ ವಿವಿಧ ಸಭಾಗಳು ಪೈಪೋಟಿಯ ಮೇಲೆ ಸ್ಟಾರ್ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅವಕಾಶಕ್ಕಾಗಿ ಲಾಬಿ, ಸ್ಟಾರ್ ಸಂಗೀತಗಾರರ ಮೇಲಾಟ, ಜನಪ್ರಿಯತೆಯೇ ಮುನ್ನೆಲೆಗೆ ಬರುತ್ತಿರುವುದು, ಭಿನ್ನ ಸಮುದಾಯಗಳನ್ನು ಒಳಗೊಳ್ಳದಿರುವುದು ಹೀಗೆ ಈ ಸಂಗೀತ ಹಬ್ಬ ಸಂಗೀತೇತರ ಕಾರಣಗಳಿಗೂ ಚರ್ಚೆಗೆ ಒಳಗಾಗುತ್ತಿರುವುದು chennai-music-seasonಅಲ್ಲಲ್ಲಿ ನಡೆದೇ ಇದ್ದರೂ ಈ ಬಗ್ಗೆ ದೊಡ್ಡದನಿ ಎತ್ತುವ ಕೆಲಸ ನಡೆದಿರಲಿಲ್ಲ. ಟಿ.ಎಂ.ಕೃಷ್ಣ ತಾವು ಇನ್ನು ಮುಂದೆ ಸೀಸನ್ನಲ್ಲಿ ಹಾಡುವುದಿಲ್ಲ ಎನ್ನುವುದರ ಮೂಲಕ ಕಲಾವಿದರು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳನ್ನು ಎತ್ತುತ್ತಾ ವಾಗ್ವಾದಕ್ಕೆ ಮುನ್ನುಡಿ ಬರೆದಿದ್ದಾರೆ.

ಚೆನ್ನೈಯ ಮ್ಯೂಸಿಕ್ ಸೀಸನ್ (ಡಿಸೆಂಬರ್) ನಲ್ಲಿ ಇನ್ನು ಮುಂದೆ ನಾನು ಹಾಡುವುದಿಲ್ಲ ಎಂಬ ನನ್ನ ತೀರ್ಮಾನ, ಏಕಾಏಕಿಯಾದದ್ದಲ್ಲ ಹಾಗೂ ಯಾವುದೇ ಒಂದು ನಿರ್ದಿಷ್ಟ ಘಟನೆಯಿಂದ ಹುಟ್ಟಿದ್ದಲ್ಲ. ಕಳೆದ ೪-೫ ವರ್ಷಗಳಿಂದ ನಾನು ಈ ಬಗ್ಗೆ ತುಂಬಾ ಆಲೋಚಿಸಿದ್ದೇನೆ. ಮ್ಯೂಸಿಕ್ ಸೀಸನ್‌ನೊಂದಿಗಿನ ನನ್ನ ಸಂಬಂಧವೇನು, ಇದರ ಮೂಲಕ ಸಂಗೀತಕ್ಕೆ ನಾವೇನನ್ನು ಕೊಡಲು ಹೊರಟಿದ್ದೇವೆ, ಹಾಗೂ ಈಗ ಈ ಸೀಸನ್ ಎಂಬುದು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳನ್ನು ನನಗೆ ನಾನೇ ಹಲವಾರು ಬಾರಿ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದಲೂ ನಾನು, ಈ ಮ್ಯೂಸಿಕ್ ಸೀಸನ್ನಿನ ಕಛೇರಿಗಳನ್ನು ಕೇಳುತ್ತಾ ಬೆಳೆದಿದ್ದೇನೆ ಹಾಗೂ ಇವುಗಳಿಂದ ತುಂಬಾ ಕಲಿತಿದ್ದೇನೆ. ಸಂಗೀತ ಕ್ಷೇತ್ರದಲ್ಲಿನ ನನ್ನ ಪ್ರಗತಿಯೂ ಈ ’ಸಂಗೀತ ಹಬ್ಬ’ದೊಂದಿಗೇ ನಡೆದಿದೆ. ಆದ್ದರಿಂದ ಕಲಾತ್ಮಕವಾಗಿಯೂ, ವ್ಯವಸಾಯದಲ್ಲೂ ನನ್ನ ಬೆಳವಣಿಗೆಗೆ ಕಾರಣವಾದ ಸಂಗೀತ ಸೀಸನ್‌ಗೆ ಕೃತಜ್ನತೆ ಸಲ್ಲಿಸಲು ಮರೆತರೆ ಅದು ದೊಡ್ಡ ತಪ್ಪಾಗುತ್ತದೆ. ಆದರೆ, ಇತ್ತೀಚಿಗಿನ ಸಂಗೀತ ಸೀಸನ್, ಸಂಗೀತದಿಂದಲೇ ದೂರ ಹೋಗುತ್ತಿರುವಂತೆ ನನಗೆ ಕಾಣುತ್ತಿದೆ. ಇಲ್ಲಿ ಸಂಗೀತದ ಒಳಗಿನ ಹಾಗೂ ಸಂಗೀತದ ಆಚೆಗಿನ ಗಲಾಟೆ(ಶಬ್ದ) ನೋಡಿದರೆ, ಸಂಗೀತವೇ ಇಲ್ಲಿಂದ ಓಡಿ ಹೋಗುತ್ತಿದೆಯೆಂದು ಹೇಳುವುದೇ ಸೂಕ್ತವೇನೋ…

ಕಳೆದ ಎರಡು ದಶಕಗಳಿಂದ, ಚೆನ್ನೈನಲ್ಲಿ ಅದರಲ್ಲೂ ಮುಖ್ಯವಾಗಿ ಸಂಗೀತ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಸ್ಪರ್ಧಾತ್ಮಕವಾದ ಸಂಗೀತ ಆಯೋಜಕರು ಇರುವುದನ್ನು ನೋಡುತ್ತಿದ್ದೇವೆ. ಇಲ್ಲಿನ ಕಛೇರಿಗಳಲ್ಲೂ ವೈರುಧ್ಯವಿದೆ. ಇವುಗಳು ಎರಡು ವಿರುದ್ಧ ಧ್ರುವಕ್ಕೆ ಸೇರಿದಂಥವು. ಒಂದು ಕಡೆ ಇಲ್ಲಿ ಕೇವಲ ಬೆರೆಳೆಣಿಕೆಯಷ್ಟು ಜನ ಮಾತ್ರ ಸಂಗೀತ ಕೇಳಲು ಸೇರಿದ್ದರೆ, ಇನ್ನೊಂದೆಡೆ ’ಸೂಪರ್ ಸ್ಟಾರ್’ಗ:ಅ ಕಛೇರಿಗೆ ತಡೆಯಲಾಗದಷ್ಟು ಜನ ಸಂದಣಿ. tm-krishna-singerಇದು ಇವತ್ತು ಬಹುದೊಡ್ಡ ಸಮಸ್ಯೆ ಎನಿಸುವವರೆಗೆ ಸಾಗಿದೆ. ಜನರು ’ಸ್ಟಾರ್’ ಸಂಗೀತಗಾರರ ಸಂಗೀತ ಕೇಳಲು ಮುಗಿಬೀಳುವುದರಲ್ಲಿ ಯಾವುದೇ ಆಶ್ಚರ್ಯಪಡುವ ಸಂಗತಿ ಇಲ್ಲ ಎಂಬುದು ನನಗೆ ತಿಳಿದಿದ್ದರೂ, ಎಲ್ಲೋ ಒಂದು ಕಡೆ ಇಡೀ ಜನಸಮೂಹವೇ ಈ ’ಜನಪ್ರಿಯತೆ’ಯ ಕಡೆ ವಾಲುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಇದು ನಮ್ಮಲ್ಲಿನ ಒಂದು ’ಕಲಾತ್ಮಕತೆಯ ಸಮಸ್ಯೆ’ಯೇ ಎಂದು ನನಗನಿಸುತ್ತದೆ. ಹಾಗೂ ಇದೇ ಸಮಸ್ಯೆಯನ್ನು ನಾವು ಮ್ಯೂಸಿಕ್ ಸೀಸನ್ ನಲ್ಲಿ ಕಾಣುತ್ತಿರುವುದು. ಈ ಭ್ರಮೆಯಿಂದಾಗಿ ನಮ್ಮಲ್ಲಿನ ಎಷ್ಟೋ ಅದ್ಭುತವಾದ ಸಂಗೀತಗಾರರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ಯಾವುದೇ ಕಲಾಪ್ರಕಾರ ತನ್ನೊಳಗಿರುವ ಕಲೆಯ ವೈವಿಧ್ಯತೆಯನ್ನು ಅರಿತುಕೊಂಡು, ಪ್ರಸಿದ್ಧರಾದ ಕೆಲವು ಗಾಯಕರು ಈ ವೈವಿಧ್ಯತೆಯೆ ’ಮುಖ’ ಹಾಗೂ ಉಳಿದೆಲ್ಲಾ ಕಲಾವಿದರು ಈ ಕಲೆಯ ಶ್ರೀಮಂತಿಕೆಗೆ ಕಾರಣರಾದ ದಾನಿಗಳು, ಪೋಷಕರು ಎಂದು ಗುರುತಿಸಲ್ಪಡುವ ವ್ಯವಸ್ಥೆ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಆದರೆ, ಇವತ್ತು ನಮ್ಮಲ್ಲಿ ಈ ಉಳಿದ ಸಂಗೀತಗಾರರು ಗಣನೆಗೇ ಇಲ್ಲದವರಾಗಿದ್ದಾರೆ. ಈ ಪರಿಸ್ಥಿಗೆ ನಾನೂ ಒಬ್ಬ ಕಾರಣಕರ್ತನಾಗಿರುವುದರಿಂದ ಈ ವಿಚಾರ ನನ್ನನ್ನು ತುಂಬಾ ಕಾಡುತ್ತದೆ.

ಕನಸುಗಳನ್ನು ಹೊತ್ತ ಯುವ ಸಂಗೀತಗಾರರಿಗಂತೂ ನಿರಾಶಾದಾಯಕವಾದ ಸನ್ನಿವೇಶವೇ ಇಲ್ಲಿದೆ. ಒಂದು ಕಡೆ ಕಛೇರಿ ಪಡೆಯಲು ’ಹಣ’ ಡೊನೇಷನ್ ಹೆಸರಿನಲ್ಲಿ ಓಡಾಡುತ್ತಿದ್ದರೆ ಇನ್ನೊಂದೆಡೆ ಮಧ್ಯವರ್ತಿಗಳ ಕಸರತ್ತು. ’ಡಾಲರ್’ನ ಮಹಾತ್ಮೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆಯೂ ಕೇವಲ ತಮ್ಮ ಪ್ರತಿಭೆಯಿಂದ ಗುರುತಿಸಲ್ಪಟ್ಟ ಯುವಮಿತ್ರರ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ. ಆದರೆ, ಈ ಎಲ್ಲಾ ’ಆಟ’ ಗಳನ್ನು ಮಾಡಲಾಗದೇ ಇರುವ, ಅವಕಾಶ ವಂಚಿತರಾಗಿ ಹಿಂದೆ ಉಳಿದ ಅನೇಕ ಸಂಗೀತಗಾರರು ಇನ್ನೂ ನಮ್ಮಲ್ಲಿದ್ದಾರೆ. ೯೦ರ ದಶಕದ ಆರಂಭದಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತೆಂದು ನನಗನಿಸುವುದಿಲ್ಲ.

ಚೆನ್ನೈನ ಮ್ಯೂಸಿಕ್ ಸೀಸನ್ ಎಂಬುದು ಹೆಚ್ಚು ಕಡಿಮೆ ’NRI ಕೃಪಾಪೋಷಿತ’ ಸೀಸನ್ ಆಗಿಬಿಟ್ಟಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅನೇಕ ಸಂಗೀತ ವಿದ್ಯಾರ್ಥಿಗಳು ಡೆಸೆಂಬರ್‌ನಲ್ಲಿ ಅಲ್ಲಿಂದ ಇಲ್ಲಿ ಬಂದು ಕಛೇರಿ ಮಾಡುವುದು ಸಾಮಾನ್ಯವೆನಿಸಿಬಿಟ್ಟಿದೆ. ಸ್ವಲ್ಪ ಸಮಯದ ಹಿಂದೆ ಇದು ಸೀಸನ್ನಿನ ಒಂದು ಭಾಗ ಮಾತ್ರವಾಗಿದ್ದರೆ ಇವತ್ತು ಹೆಚ್ಚಿನ ಎಲ್ಲಾ ಜೂನಿಯರ್ ಸ್ಲಾಟ್‌ಗಳು NRI ಯುವಕರ ಪಾಲಾಗುತ್ತಿದೆ. ಅಲ್ಲೂ-ಇಲ್ಲೂ ಹೆಸರಾದ ದೊಡ್ಡ ಕಲಾವಿದರುಗಳೇ ತಮ್ಮ NRI ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಸಿ ಕೊಡುವ ಹೊಣೆ ಹೊತ್ತವರಂತೆ ವರ್ತಿಸುತ್ತಿದ್ದಾರೆ. ‘ಹಣ’ದ ಕೆಲಸ ಇಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಪತ್ರಿಕೆಗಳಲ್ಲಿ ಇವರ ಬಗ್ಗೆ ಲೇಖನಗಳನ್ನು ಬರೆಯಿಸಲಾಗುತ್ತದೆ. ಸಂಗೀತಗಾರರನ್ನು ‘ತಯಾರು’ ಮಾಡಲಾಗುತ್ತದೆ. ಇವೆಲ್ಲವೂ ಮುಚ್ಚಿದ ಬಾಗಿಲಿನ ಹಿಂದೆ ನಡೆಯುವ ಕೆಲಸವಾದದ್ದರಿಂದ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ಇದರಿಂದಾಗಿ ನಮ್ಮಲ್ಲಿನ ಕಲಾವಿದರಿಗೆ ಮೋಸವಾಗುತ್ತಿರುವುದು ಮಾತ್ರವಲ್ಲದೇ, ನಿಜವಾಗಿ ಸತ್ವವುಳ್ಳ NRI ಕಲಾವಿದನಿಗೆ ತಾನು ಅಂಥವನಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಕರ್ನಾಟಕ ಸಂಗೀತವೆಂಬ ಪುಟ್ಟ ಪ್ರಪಂಚಕ್ಕೆ ಸೇರಿದ ಹಾಗೂ ಸಂಗೀತ ಸೀಸನ್ನಿನ ಭಾಗಿಗಳಾದ ನಾವು ಈ ಸಣ್ಣ ಪ್ರಪಂಚದಿಂದ tm-krishna-singer2ಆಚೆಗೆ ಸಂಗೀತಕ್ಕೆ ಸಂಬಂಧಿಸಿದ ಕೆಲಸವನ್ನೇನಾದರೂ ಮಾಡಿದ್ದೇವೆಯೇ? ಸೀಸನ್‌ನಲ್ಲಿ ಪಾಲ್ಗೊಳ್ಳಲು, ಸಂಗೀತ ಕೇಳಲು ಸಮಾಜದಲ್ಲಿನ ಬೇರೆ ಕೇಳುಗರನ್ನೇನಾದರೂ ಬರುವಂತೆ ಮಾಡಿದ್ದೇವೆಯೇ? ಆ ಬಗ್ಗೆ ಎನಾದರೂ ಪ್ರಯತ್ನ ಮಾಡಿದ್ದೇವೆಯೇ ಅಥವಾ ನಮ್ಮ ಸಂಗೀತವನ್ನು ಒಯ್ದು ಸಮಾಜದ ಉಳಿದ ಸ್ಥರಗಳಿಗೆ ಪರಿಚಯಿಸುವ ಬಗ್ಗೆ ಚಿಂತಿಸಿದ್ದೇವೆಯೇ? ಎಲ್ಲೋ ಒಂದಿಬ್ಬರ ವೈಯಕ್ತಿಕ ಪ್ರಯತ್ನಗಳನ್ನು ಕಾಣಬಹುದಷ್ಟೇ. ಉಳಿದಂತೆ ನಮಗೆ ಸಮಾಜದ ಇತರರ ಬಗ್ಗೆ ಗಮನವೇ ಇಲ್ಲ. ಹಾಗೂ ಬಹು ಮುಖವಾಗಿ ನಮಗೆ ನಮ್ಮ ಸಂಗೀತವನ್ನು ಡೆಮೊಕ್ರಟೈಸ್ (ಎಲ್ಲರಿಗೂ ದೊರಕುವಂತೆ) ಮಾಡಬೇಕೆಂಬ ಯಾವ ಇಚ್ಛೆಯೂ ಇಲ್ಲ.

ಈ ರೀತಿಯಾಗಿ ಪ್ರತ್ಯೇಕ ವರ್ಗವನ್ನು ನಿರ್ಮಿಸಿಕೊಂಡು ಒಂದು ದ್ವೀಪದಂತೆ ಇರುವ ಕರ್ನಾಟಕಿ ಸಂಗೀತ, ತನ್ನ ನಾಳೆಯನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆ ಎಂಬುದು ನನ್ನ ಬಲವಾದ ಅಭಿಪ್ರಾಯ. ಸಂಕುಚಿತತೆ, ಮಡಿವಂತಿಕೆಗಳನ್ನು ಬಿಟ್ಟು ’ಮುಕ್ತ’ವಾಗುವ ಅವಶ್ಯಕತೆ ಇಂದು ಕರ್ನಾಟಕಿ ಸಂಗೀತಕ್ಕಿದೆ.

ನನ್ನಂಥಹ ’ಪವರ್‌ಫುಲ್’ ಸಂಗೀತಗಾರರು ತಮ್ಮ-ತಮ್ಮ ವೈಯಕ್ತಿಕ ಲಾಭವನ್ನು ಬಿಟ್ಟು ಈ ಕಾರ್ಯಕ್ಕಾಗಿ ಜೊತೆಗೆ ಕೈ ಜೋಡಿಸಲು ಮುಂದೆ ಬರುತ್ತಿಲ್ಲ. ನಮ್ಮ ಜೊತೆಗೇ ವೇದಿಕೆಯೇರುವ ಮೃದಂಗ, ವಯೋಲಿನ್, ಘಟ ವಾದಕರಿಗೆ ಕೊಡಲಾಗುವ ಸಂಭಾವನೆಯ ಬಗ್ಗೆ ಮಾತನಾಡಲೂ ನಾವು ಅಸಮರ್ಥರಾಗಿದ್ದೇವೆ.

ಈಗ ಈ ’ಸಂಗೀತ ಸೀಸನ್ನಿನ ಹುಚ್ಚುತನ’ ಎಂಬುದು ತಂತ್ರಜ್ಞಾನದ ಮಾಯಾಲೋಕದೊಂದಿಗೆ ಸೇರಿಬಿಟ್ಟಿದೆ. ಇಂಥಹ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಹಾಗೂ ಹಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನ್ನದೇ ಅಸಮರ್ಥತತೆಯೇನೋ….

ಈ ಎಲ್ಲಾ ಕಾರಣಗಳಿಂದ ಹಾಡದೇ ಇರುವುದೇ ಉತ್ತಮ ಎಂದು ನನಗನಿಸಿದೆ. ಕಳೆದ ೫ ವರ್ಷಗಳಲ್ಲಿ ಈ ಸೀಸನ್ನಿನ ಒಳಗಿದ್ದುಕೊಂಡೇ ಈ ಬಗ್ಗೆ ಏನಾದರೂ ಮಾಡಬೇಕೆಂದು ಟಿಕೆಟ್ ಇಲ್ಲದೆ ಕಛೇರಿ ಮಾಡುವುದು ಮುಂತಾದ ಹಲವು ರೀತಿಗಳಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಇಡೀ ವಾತಾವರಣವೇ ಎಷ್ಟು ವ್ಯವಹಾರಾತ್ಮಕವಾಗಿದೆಯೆಂದರೆ, ಸಂಗೀತವನ್ನು ಕೇಳುವುದು ಎಂಬುದೇ ಇಲ್ಲವಾದಂತಾಗಿದೆ.

ಚೆನ್ನೈನ ಕರ್ನಾಟಕಿ ಸಂಗೀತವೆಂಬುದು ’ಸಂಗೀತ’ಕ್ಕಿಂತ ಹೆಚ್ಚಾಗಿ ’ಸೀಸನ್’ ಮಾತ್ರವೇ ಆಗಿಬಿಟ್ಟಿದೆ. ಇದು ಕಲೆಗೆ ಮಾರಕವಾದದ್ದು. ಇಲ್ಲಿ ನಾವು ಕಲೆ, ಅದರ ಸ್ವರೂಪ, ಕಲೆಯ ದೊರಕುವಿಕೆ ಹಾಗೂ ಅದರ ಒಟ್ಟಂದದ ಕಡೆಗಿನ ಆತ್ಮಾವಲೋಕನದ ಕೊರತೆಯನ್ನು ಕಾಣುತ್ತಿದ್ದೇವೆ. ಆದರೆ ಇವೆಲ್ಲದರ ನಡುವೆಯೂ ತಮ್ಮ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುವ ಕೆಲವು ವ್ಯಕ್ತಿಗಳು, ಕೆಲವು ಆಯೋಜಕರು, ಸಂಗೀತಗಾರರು ಹಾಗೂ ಬೆರಳೆಣಿಕೆಯಷ್ಟು ಶೋತೃಗಳು ಇರುವುದನ್ನು ನಾವು ಮರೆಯುವಂತಿಲ್ಲ.

ಹಳೆಯದೆಲ್ಲವೂ ಚೆನ್ನಾಗಿತ್ತು ಎಂದೇನು ನಾನು ಹೇಳ ಹೊರಟಿಲ್ಲ. ಆದರೆ, ಇಂದಿನ ಚೆನ್ನೈನ ಸಂಗೀತ ಸೀಸನ್ ಮಾತ್ರ ’ರಸಹೀನವಾದ ಬಹು ದೊಡ್ಡ ಬದಲಾವಣೆಗೆ ಈಡಾದ ಘಟ್ಟ’ವೊಂದನ್ನು ತಲುಪಿದೆ ಎಂದು ನನಗೆ ಖೇದವಾಗುತ್ತದೆ. ಅಥವಾ ಇದು ಮೊದಲಿನಿಂದಲೂ ಹೀಗೆಯೇ ಇದ್ದು, ನನಗೆ ಕಾಣಿಸಿದ್ದು ಮಾತ್ರ ಈಗವೇ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಈಗ ಎಲ್ಲಾ ತಿಳಿದ ಮೇಲೂ ಇದರ ’ಕೇವಲ ಪಾಲುದಾರ’ನಾಗಲು ನನಗೆ ಸಾಧ್ಯವಾಗುತ್ತಿಲ್ಲ.

ಪುಸ್ತಕ ವಿಮರ್ಶೆ: “ಭಾರತ ಭಾಗ್ಯವಿಧಾತ”

– ಸುಭಾಷ್ ರಾಜಮಾನೆ

’ಭಾರತ ಭಾಗ್ಯವಿಧಾತ’ ಮಹಾಂತೇಶ ನವಲಕಲ್ ಅವರ ಎರಡನೆಯ ಕಥಾ ಸಂಕಲನ. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನವಲಕಲ್ಲಿನವರಾದ ಮಹಾಂತೇಶ ಅವರು ತಮ್ಮ ಮೊದಲನೆಯ ಸಂಕಲನ ’ನೀರಿನ ನೆರಳು’ ಮೂಲಕವೇ ತಾನೊಬ್ಬ ಸೂಕ್ಷ್ಮ ಪ್ರಜ್ಞೆಯ ಕತೆಗಾರರೆಂದು ಗುರುತಿಸಿಕೊಂಡಿದ್ದಾರೆ. ಸಣ್ಣಕತೆಯ ಪ್ರಭೇದದ ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಿರುವ ಹೊಸ ತಲೆಮಾರಿನ ಕತೆಗಾರರಲ್ಲಿ ನವಲಕಲ್ ಮುಖ್ಯರಾಗಿದ್ದಾರೆ. ಸಣ್ಣಕತೆಯ ಪ್ರಭೇದಕ್ಕೆ ಪ್ರಧಾನವಾಗಿ ಬೇಕಿರುವ ಖಚಿತವಾದ ತಾತ್ವಿಕತೆ, ಚುರುಕಾದ ಭಾಷೆ, ಪಾತ್ರ ಪೋಷಣೆ, ನಾಟಕೀಯತೆ, ಅನಿರೀಕ್ಷಿತ ತಿರುವು- ಎಲ್ಲ ಗುಣಲಕ್ಷಣಗಳು ಅವರ ಕತೆಗಳಲ್ಲಿವೆ.

ನಮ್ಮ ಸಮಾಜವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳೇ ಇಲ್ಲಿಯ ಕತೆಗಳ ವಸ್ತುಗಳಾಗಿವೆ. bharata Bhagyavidhata Mukaputaಅದರಲ್ಲೂ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಅನಾವರಣ ಮಾಡುತ್ತವೆ. ಬಹುತೇಕ ಕತೆಗಳು ಬದಲಾಗುತ್ತಿರುವ ಸಮಕಾಲೀನ ಸನ್ನಿವೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಕಾರಣದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಸೆರೆಹಿಡಿಯುತ್ತವೆ. ಜಾಗತೀಕರಣದ ಆಕ್ರಮಣದಿಂದ ಗ್ರಾಮೀಣ ಸಮುದಾಯದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಶೋಧಿಸುವುದೇ ಕೆಲವು ಕತೆಗಳ ಕೇಂದ್ರ ಕಾಳಜಿಯಾಗಿದೆ ಎಂದು ಹೇಳಬಹುದು.

’ನಾನು ಚಂದ್ರಗುಪ್ತನೆಂಬ ಮೌರ್ಯ’ ಸಂಕಲನದ ಪ್ರಾತಿನಿಧಿಕ ಮತ್ತು ಒಂದು ಅತ್ಯುತ್ತಮ ಕತೆಯಾಗಿದೆ. ಚರಿತ್ರೆಯಲ್ಲಿ ಸಾಮಾಜಿಕ ಅಸಮಾನತೆಯ ಮೂಲಗಳು ಹೇಗೆ ಸಾಂಸ್ಥಿಕ ರೂಪವನ್ನು ಪಡೆದುಕೊಂಡಿವೆ ಎಂಬುದನ್ನು ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಹಲವು ರೀತಿಯ ಆಕರಗಳನ್ನು ಬಳಸಿಕೊಂಡಿರುವ ಕತೆಗಾರರು ಚಂದ್ರಗುಪ್ತನ ಮೂಲಕ ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ಸ್ವರೂಪಕ್ಕೂ ಕನ್ನಡಿ ಹಿಡಿಯುತ್ತಾರೆ. ನವ್ಯ ಕಾಲಘಟ್ಟದ ಕತೆ-ಕಾದಂಬರಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಪ್ರಜ್ಞಾಪ್ರವಾಹ ತಂತ್ರವನ್ನು ನವಲಕಲ್ ಅವರು ಸದರಿ ಕತೆಯಲ್ಲಿ ಪರಿಣಾಮಕಾರಿಯಾಗಿ ಬಳಸಿದ್ದಾರೆ. ಚಂದ್ರಗುಪ್ತ ಮೌರ್ಯ ತನ್ನ ಕೊನೆಯ ದಿನಗಳಲ್ಲಿ ಜಾತಿ, ಅಸ್ಪೃಶ್ಯತೆ, ಧರ್ಮ, ದೇವರು, ಅಧಿಕಾರ, ವ್ಯವಸ್ಥೆ, ಮಾನವೀಯತೆಗಳ ಕುರಿತು ತೀವ್ರವಾಗಿ ಪರಿತಪಿಸುವ ಹಾಗೂ ಆತ್ಮಾವಲೋಕನಕ್ಕೆ ಒಡ್ಡಿಕೊಳ್ಳುವಂತೆ ಮಾಡಲಾಗಿದೆ. ಕತೆಯ ಈ ತಂತ್ರವೇ ಭಾರತದ ಪ್ರಾಚೀನ ಚರಿತ್ರೆಯನ್ನು ಏಕರೂಪಾತ್ಮಕ ನೆಲೆಯಲ್ಲಿಯೇ ನೋಡುವ ವಿಧಾನವನ್ನು ಭಂಜನ ಮಾಡುತ್ತದೆ; ಚಾರಿತ್ರಿಕ ಘಟನೆಗಳನ್ನು ಹತ್ತು ಹಲವು ದಿಕ್ಕುಗಳಿಂದ ಯೋಚಿಸುವಂತೆ ಮಾಡುತ್ತದೆ; ಚರಿತ್ರೆಯನ್ನು ಹೊಸ ಬೆಳಕಿನಲ್ಲಿ ಪುನಾರಚಿಸಲು ಯತ್ನಿಸುತ್ತದೆ; ಭೂತ-ವರ್ತಮಾನ-ಭವಿಷತ್‌ಗಳನ್ನು ಏಕತ್ರಗೊಳಿಸಿ ನೋಡುತ್ತದೆ.

ಬಹುರಾಷ್ಟ್ರೀಯ ಕಂಪನಿಗಳು ಅಗೋಚರವಾಗಿಯೇ ಗ್ರಾಮೀಣ ಪ್ರದೇಶದ ಬಡ ರೈತರನ್ನು ದಿವಾಳಿಯಾಗಿಸಿವೆ. ರೈತರು ತಮ್ಮ ಜೀವನಾಧಾರದ ನೆಲೆಯಾಗಿರುವ ಭೂಮಿಯನ್ನೆ ಕಳೆದುಕೊಳ್ಳುವ ದುಸ್ಥಿತಿಗೆ ತಲುಪಿರುವುದನ್ನು ’ಭಾರತ ಭಾಗ್ಯವಿಧಾತ’ ಕತೆ ನವಿರಾಗಿ ತೆರೆದಿಡುತ್ತದೆ. ಆದರೆ ವೈರುಧ್ಯದ ಸಂಗತಿಯೆಂದರೆ ತನ್ನ ಅಪ್ಪನನ್ನು ಬಲಿ ತೆಗೆದುಕೊಂಡ ಬಹುರಾಷ್ಟ್ರೀಯ ಕಂಪನಿಯೊಂದರಲ್ಲೇ ರಮೇಶ ಉದ್ಯೋಗ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕಾರ್ಪೊರೇಟ್ ಜಗತ್ತು ಪರೋಕ್ಷವಾಗಿ ರೈತರ ವಿನಾಶಕ್ಕೆ ಮಾತ್ರ ಕಾರಣವಾಗಿಲ್ಲ; ಅದು ಶಿಕ್ಷಣ ಪಡೆದ ನಿರುದ್ಯೋಗಿ ತರುಣ ಪೀಳಿಗೆಯನ್ನು ತನ್ನ ಸೇವೆಗಾಗಿ ಅವಲಂಬಿಸುವಂತೆ ಮಾಡುವುದರಲ್ಲಿ ಸಫಲವಾಗಿದೆ ಎಂಬುದನ್ನು ಕತೆ ಮಾರ್ಮಿಕವಾಗಿ ವಿವರಿಸುತ್ತದೆ. ಆದ್ದರಿಂದ ರಮೇಶನಂತಹ ನವ ತರುಣರ ಪ್ರತಿರೋಧದ ಶಕ್ತಿಯನ್ನು ಕಾರ್ಪೊರೇಟ್ ಜಗತ್ತು ದಮನ ಮಾಡಿದೆ. ಇದರಿಂದ ನವ ವಸಾಹತುಶಾಹಿ ವ್ಯವಸ್ಥೆಯು ಭದ್ರವಾಗಿ ಕಾಲೂರಿ ತನ್ನ ಯಜಮಾನಿಕೆಯನ್ನು ನಿರಾಯಾಸವಾಗಿ ನಡೆಸುತ್ತಿದೆ.

ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಂದ ಅನುದಾನ ಪಡೆಯುವ ಸರ್ಕಾರೇತರ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ’ಎಲುಬಿನ ವ್ಯಾಪಾರ’ ಕತೆಯು ಶಿವಕುಮಾರ್‌ನೆಂಬ ಪಾತ್ರದ ಮೂಲಕ ಬಿಚ್ಚಿಡುತ್ತದೆ. ಅಧಿಕಾರಶಾಹಿ ವರ್ಗದವರ ಅಮಾನವೀಯ ನಡತೆ ಮತ್ತು ಸುಳ್ಳು ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿಗಳನ್ನು ಲಪಟಾಯಿಸುವಿಕೆಯು ಶಿವಕುಮಾರ್‌ನನ್ನು ದಿಗ್ಭ್ರಾಂತನನ್ನಾಗಿಸುತ್ತದೆ. ಶಿವಕುಮಾರನಿಗೆ ಬೀಳುವ ಕನಸುಗಳು ತನ್ನ ಸುತ್ತಲಿನ ಜನರ ಅಮಾನುಷತೆಯನ್ನು ಕಂಡು ಕಂಗಾಲಾಗಿರುವುದನ್ನೇ ಧ್ವನಿಸುತ್ತವೆ. ಶಿವಕುಮಾರ್ ಮತ್ತು ’ಭಾರತ ಭಾಗ್ಯವಿಧಾತ’ ಕತೆಯ ರಮೇಶನಿಗೂ ಅನೇಕ ಬಗೆಗಳಲ್ಲಿ ಸಾಮ್ಯತೆಗಳಿವೆ. ಇಬ್ಬರು ಸಹ ಬುದ್ಧಿ ಮತ್ತು ಹೃದಯಗಳ ನಡುವಿನ ಸಂಘರ್ಷದಲ್ಲಿ ಹೃದಯವಂತಿಕೆಯ ದಾರಿಯಲ್ಲೆ ನಡೆದವರು. ಆದರೆ ಕತೆಯಲ್ಲಿನ ಒಳಿತು ಮತ್ತು ಕೇಡಿನ ಮಧ್ಯೆ ನಡೆಯುವ ಘರ್ಷಣೆಯಲ್ಲಿ ಕೇಡುಗಳ ಅಟ್ಟಹಾಸವೇ ವಿಜೃಂಭಿಸುವಂತಿದೆ. ಶಿವಕುಮಾರ್ ಮತ್ತು ರಮೇಶ- ಅನ್ಯಾಯ ಹಾಗೂ ಅವ್ಯವಸ್ಥೆಗೆ ಎಷ್ಟೇ ಪ್ರತಿರೋಧ ತೋರಿದರೂ ಕೊನೆಯಲ್ಲಿ ಅಸಹಾಯಕರಾಗಿಯೇ ಉಳಿಯುತ್ತಾರೆ.

ಹಿಂದೂ ಕರ್ಮ ಸಿದ್ಧಾಂತದ ವಿಡಂಬನಾತ್ಮಕ ಕತೆಯಾಗಿ ’ಶ್ವಾನ ಪರಿಣಯ ಪ್ರಸಂಗ’ ಗಮನಾರ್ಹವಾಗಿದೆ. ನಿರುದ್ವಿಗ್ನವಾದ ನಿರೂಪಣೆಯ ಧಾಟಿಯೇ ಓದುಗರನ್ನು ಸೆಳೆಯುತ್ತದೆ. ಶಾಂಭವಿ ಎನ್ನುವ ಮಹಿಳೆ ತನ್ನ ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದಳೆಂದು ಗಾಢವಾಗಿ ನಂಬುವುದು ಮತ್ತು ಅದರ ಪ್ರಾಯಶ್ಚಿತ್ತ ನಿವಾರಣೆಗಾಗಿ ನಡೆಯುವ ಅವಾಂತರಗಳು ತಮಾಷೆಯಾಗಿವೆ. ಈ ತಮಾಷೆ ಮತ್ತು ವೈನೋದಿಕ ದೃಷ್ಟಿಯ ಹಿಂದೆ ಸಾಮಾಜಿಕ ಮೌಢ್ಯತೆಗಳು ದುರ್ಬಲ ಮನಸ್ಸನ್ನು ಆಕ್ರಮಿಸಿಕೊಂಡಿರುವ ಸ್ವರೂಪವನ್ನು ತೋರಿಸುತ್ತವೆ. ನಾಯಿಗಳ ಮದುವೆಯ ಸನ್ನಿವೇಶವು ವೈದಿಕ ಮೌಲ್ಯಗಳನ್ನು ಒಂದು ಅತಿರೇಕಕ್ಕೆ ಒಯ್ದು ನೋಡುವ ವಿನ್ಯಾಸವನ್ನು ಹೊಂದಿದೆ.

ಸರ್ಕಾರದ ಅಭಿವೃದ್ಧಿಯ ಯೋಜನೆಗಳು ನೂರಾರು ವರ್ಷಗಳಿಂದ ಕಾಡುಗಳಲ್ಲಿ ವಾಸಿಸುತ್ತ ಬಂದಿರುವ ಒಂದು ನಿರ್ದಿಷ್ಟ ಸಮುದಾಯದ ಬದುಕನ್ನು ಹೇಗೆಲ್ಲ ಅಸ್ತವ್ಯಸ್ತಗೊಳಿಸಿವೆ ಎಂಬುದನ್ನು ’ಪಂಚಾವರಂ ಎಂಬ ದಂಡಕಾರಣ್ಯದೊಳಗೆ ಮಕ್ಕಳ ಮಾರುಕಟ್ಟೆ’ ಎಂಬ ಕತೆ ನಿರೂಪಿಸುತ್ತದೆ. ಆದರೆ ಕತೆಯ ವಸ್ತು ಮತ್ತು ಧೋರಣೆಗೆ ತಕ್ಕ ಭಾಷಾ ಶೈಲಿ ಇಲ್ಲದಿರುವುದರಿಂದ ಅದರ ಬಂಧವೂ ಸಡಿಲವಾಗಿರುವಂತೆ ಕಾಣುತ್ತದೆ.

ಪ್ರಗತಿಶೀಲ ಲೇಖಕರು ತಮ್ಮ ಕತೆ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಮಠದ ಸ್ವಾಮಿಗಳ ಅನಾಚಾರ, ಢಾಂಬಿಕತೆ, ಹಾದರ, ಭ್ರಷ್ಟತೆಗಳನ್ನು ರೊಚ್ಚಿನಿಂದ ಬರೆದವರು. ’ಬೇರಿಲ್ಲದ ಬೇವಿನ ಮರದ ಮೇಲೆ ರೆಕ್ಕೆ ಇಲ್ಲದ ಹಕ್ಕಿ’ ಕತೆಯಲ್ಲಿ ಪ್ರಗತಿಶೀಲ ಲೇಖಕರು ಬಳಸುವ ಆವೇಷದ ಧಾಟಿಯಿಲ್ಲ. ಕತೆಯಲ್ಲಿ ಬರುವ ಮಠದ ಸ್ವಾಮಿಗಳು ಆಗಾಗ ಉಸುರುವ ಬಸವಣ್ಣ, ಅಂಬಿಗರ ಚೌಡಯ್ಯ, ಕಡಕೋಳ ಮಡಿವಾಳರ ವಚನಗಳ ತಾತ್ವಿಕತೆಯು ಅನ್ಯರ ಉಪದೇಶಕ್ಕೆ ಸೀಮಿತವಾಗದೆ ಅವರು ತಮ್ಮ ಅಂತರಂಗವನ್ನೇ ಪರೀಕ್ಷಿಸಿಕೊಳ್ಳುವಂತೆ ಮಾಡಿವೆ. ಇಂತಹ ಸ್ವವಿಮರ್ಶೆಯ ವಿಧಾನವು ಪಾತ್ರದ ಮಾನಸಿಕ ಪಾತಳಿಯನ್ನು ತೆರೆದು ತೋರುವಂತೆ ಮಾಡುವಲ್ಲಿ ಸಫಲವಾಗುತ್ತದೆ. ಆಶಯದ ದೃಷ್ಟಿಯಿಂದ ಗ್ರಹಿಸುವುದಾದರೆ ಕತೆಯು ಜಾತಿ ಹಾಗೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಉದಾರವಾದಿ ನೆಲೆಯಲ್ಲಿಯೇ ನೋಡುತ್ತದೆ.

ನವಲಕಲ್ ಅವರ ಬಹುತೇಕ ಕತೆಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಗಳ ಗೈರುಹಾಜರಿ ಎದ್ದು ಕಾಣುತ್ತದೆ. ಇಲ್ಲಿಯ ಕತೆಗಳಲ್ಲಿ ಪುರುಷ ಪಾತ್ರಗಳೇ ಕತೆಯ ತುಂಬ ಆವರಿಸಿಕೊಂಡು ಪ್ರಭಾವಿಯಾಗಿವೆ. ಇದರಿಂದ ಸ್ತ್ರೀ ಪಾತ್ರಗಳಿಗೆ ಸಿಗಬೇಕಾದಷ್ಟು ಸ್ಪೇಸ್ ಸಿಗುವುದಿಲ್ಲ. ಆದ್ದರಿಂದ ಪುರುಷ ಪಾತ್ರಗಳಂತೆ ಸ್ತ್ರೀ ಪಾತ್ರಗಳ ಮನೋಜಗತ್ತು ಸೂಕ್ಷ್ಮವಾಗಿ ಬಿಚ್ಚಿಕೊಳ್ಳುವುದಿಲ್ಲವೆನೋ ಅನ್ನಿಸುತ್ತದೆ. ಅಷ್ಟೆ ಅಲ್ಲದೆ ಹೆಣ್ಣು ಪಾತ್ರಗಳು ತುಂಬ ಸಂಪ್ರದಾಯಸ್ಥವಾದ ಮನೋಧರ್ಮವನ್ನು ಹೊಂದಿವೆ ಹಾಗೂ ಅಷ್ಟೇ ದುರ್ಬಲವಾಗಿವೆ; ಇಂತಹ ಕೆಲವು ಮಿತಿಗಳ ನಡುವೆಯೂ ನವಲಕಲ್ ಅವರ ಕತೆಗಳು ನಮ್ಮ ಕಾಲದ ಸಾಮಾಜಿಕ ಸಮಸ್ಯೆಗಳನ್ನು ಮುಖಾಮುಖಿ ಮಾಡುವುದರಿಂದ ಓದಲು ಪ್ರೇರಿಸುತ್ತವೆ.

“ಭಾರತ ಭಾಗ್ಯವಿಧಾತ”
ಲೇ: ಮಹಾಂತೇಶ್ ನವಲಕಲ್
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಹೊಸಪೇಟೆ
ಪುಟ: ೧೨೪, ಬೆಲೆ: ೧೦೦/-

ಚಾಯ್ ಪೆ ಚರ್ಚಾ : ಸುಳ್ಳುಗಾರನ ಬಂಡವಾಳಶಾಹಿ ಆಡಳಿತದ ಒಂದು ವರ್ಷ

– ಬಿ. ಶ್ರೀಪಾದ ಭಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವ್ಯಕ್ತಿತ್ವವನ್ನು ಮತ್ತು ಅವರ ಸರ್ಕಾರ ಒಂದು ವರ್ಷ ತುಂಬಿದ್ದರ ಕುರಿತಾಗಿ ವಿವರಿಸುತ್ತಾ ಪತ್ರಕರ್ತ ನೀಲಂಜನ್ ಮುಖ್ಯೋಪಾಧ್ಯಾಯ್ ಅವರು “ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಚನೆಗಳೊಂದಿಗೆ ಕಾರ್ಯ ನಿರ್ವಹಿಸಲು ಮೋದಿ ಅಸಮರ್ಥರೆಂಬುದನ್ನು ಬಿಜೆಪಿ ಸರ್ಕಾರದ ಒಂದು ವರ್ಷದ ಆಡಳಿತವು ಸಾಕ್ಷೀಕರಿಸುತ್ತದೆ. ಮೋದಿಯು ಏಕವ್ಯಕ್ತಿ ಪ್ರದರ್ಶನದ ಮಾದರಿಗೆ ಹೊಂದಿಕೊಳ್ಳುತ್ತಾರೆ. Modiಒಬ್ಬ ವ್ಯಕ್ತಿ, ಏಕ ನಿಷ್ಠೆ, ಒಂದು ಸಂಸ್ಥೆ, ಏಕ ಸದನದ ಸಂಸತ್ತು; ಹೀಗೆ ಒಂದು ರೀತಿ ಏಕಮುಖಿ ಸಂಚಾರದಂತೆ. ಅಂದರೆ ಪರಸ್ಪರ ಸಂಭಾಷಣೆಯ ರೀತಿಯದಲ್ಲ, ಬದಲಾಗಿ ಸ್ವಗತ, ಆತ್ಮಗತ ಭಾಷಣದಂತೆ, ಮತ್ತು ನಿಜ, ಕಡ್ಡಾಯವಾಗಿ ಯಾವುದೇ ಪ್ರಶ್ನೆಗಳಿರುವುದಿಲ್ಲ” ಎಂದು ಬರೆಯುತ್ತಾರೆ.

ಸಮಾಜ ಶಾಸ್ತ್ರಜ್ಞ ನಿಸ್ಸಿಮ್ ಮನ್ನತುಕ್ಕರೆನ್ ಅವರು ಬರೆಯುತ್ತಾ, “ಒಂದು ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಮೋದಿಯು ಇಂಡಿಯಾವನ್ನು ಬದಲಿಸುತ್ತಾರ? ಮನಮೋಹನ್ ಸಿಂಗ್ ಮಾಡಲಾಗದ್ದು ಇವರು ಮಾಡುತ್ತಾರ?ಮೋದಿಯು ಇಂಡಿಯಾವನ್ನು ಸೂಪೆರ್‌ಪವರ್ ಘಟ್ಟಕ್ಕೆ ಕೊಂಡೊಯ್ಯುತ್ತಾರ? ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ ಅತ್ಯಂತ ಮುಖ್ಯವಾದ ಮತ್ತು ಸೂಕ್ಷ್ಮವಾದ ವಿಚಾರವೇನೆಂದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಮೇಲಿನ ಪ್ರಶ್ನೆಗಳು ಸಂಪೂರ್ಣವಾಗಿ ವಿರೋಧಾತ್ಮಕವಾಗಿವೆ. ಆದರೆ ಈ ವಿರೋಧಾತ್ಮಕ ಮನಸ್ಥಿತಿಯಿಂದ ಹೊರಬರಲು ಅಸಮರ್ಥವಾಗಿರುವುದೇ ಇಂಡಿಯಾ ರಾಜಕೀಯದ ಒಂದು ದೊಡ್ಡ ಬಿಕ್ಕಟ್ಟು. ಪ್ರಜೆಗಳ ಹಕ್ಕು ಮತ್ತು ಶಕ್ತಿಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತ ಅವರನ್ನು ಪ್ರಭುತ್ವಕ್ಕೆ, ಆಡಳಿತಗಾರರಿಗೆ ಶರಣಾಗಿಸಲಾಗುತ್ತಿದೆ. ಇಲ್ಲಿ ಮೋದಿಯು ತನಗೆ ಅಧಿಕಾರವನ್ನು ತಂದುಕೊಟ್ಟ ವ್ಯವಸ್ಥೆಯಿಂದಲೇ ಬೇರ್ಪಟ್ಟ ಒಂದು ನೀರ್ಗುಳ್ಳೆಯಂತೆ. ನಾವು ನಾಯಕನನ್ನು ಈ ರೀತಿಯಾಗಿ ಉದ್ಧಾರಕನೆಂದು ಪರಿಭಾವಿಸುವುದು ಸರಿಯೆ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಾ ಹೋದಂತೆ ಪಾರ್ಲಿಮೆಂಟರಿ ವ್ಯವಸ್ಥೆಯನ್ನೇ ತಿರಸ್ಕರಿಸುವ ಮತ್ತು ಪ್ರಧಾನ ಮಂತ್ರಿಯು ತನ್ನ ಸಹೋದ್ಯೋಗಿಗಳಿಗಿಂತ ಮೊದಲಿಗ ಎನ್ನುವ ಧೋರಣೆಯನ್ನು ನಾವು ಎದುರಿಸಬೇಕಾಗುತ್ತದೆ. modi_bjp_conclaveಪ್ರಧಾನ ಮಂತ್ರಿಯೊಬ್ಬರನ್ನು ಶಕ್ತಿಶಾಲಿ ಸರ್ವಜ್ಞನೆಂಬುವ ತರ್ಕಕ್ಕೆ ಬಲಿಯಾಗಿಸುವ ಕೈಮೀರಿದ ಕ್ಯಾಬಿನೆಟ್ ಅನ್ನು ನಾವು ಮತ್ತೆಲ್ಲಿ ಕಾಣಲು ಸಾಧ್ಯ? ಪ್ರಧಾನ ಮಂತ್ರಿ ಮೋದಿಯ ಎದುರು ಶಾಲಾ ಮಕ್ಕಳಂತೆ ಕೈಕಟ್ಟಿ ನಿಂತುಕೊಂಡ ಅವರ ಕ್ಯಾಬಿನೆಟ್ ಮಂತ್ರಿಗಳ ಪ್ರಾರಂಭದ ದುರದೃಷ್ಟಕರ ದಿನಗಳಿಂದ ಮೊದಲುಗೊಂಡು ವಿದೇಶಾಂಗ ಸಚಿವೆಯ ಎಲ್ಲಾ ಅಧಿಕಾರ ಮತ್ತು ಜವಬ್ದಾರಿಗಳನ್ನು ಕತ್ತರಿಸಿ ಅವರ ರೆಕ್ಕೆಗಳನ್ನೇ ತುಂಡರಿಸುವ ಅತಿಕ್ರೌರ್ಯದ ಅಧಿಕಾರದ ಇಂದಿನ ದಿನಗಳವರೆಗಿನ ಒಂದು ವರ್ಷದ ಆಡಳಿತ ಇಂಡಿಯಾದ ಜಾಗತಿಕ ಶಕ್ತಿಯನ್ನು ಕೀಳುದರ್ಜೆಗೆ ಇಳಿಸಿದೆ. ಹಳೆಯ ಯುಪಿಎ ಸರ್ಕಾರದಲ್ಲಿ ಅದರ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಮೌನಿಯಾಗಿದ್ದರೆ ಇಂದಿನ ಮೋದಿ ಸರ್ಕಾರದಲ್ಲಿ ಇಡೀ ಕ್ಯಾಬಿನೆಟ್ ಮೌನಿಯಾಗಿದೆ. ಈ ಮೌನಗೊಂಡ ಕ್ಯಾಬಿನೆಟ್ ದೇಶವನ್ನು ’ಮನ್ ಕಿ ಬಾತ್’ ಎನ್ನುವ ಆತ್ಮರತಿಯ ಮೂಲಕ ಗಣರಾಜ್ಯವನ್ನು ಕಟ್ಟಬಹುದೆಂದು ಅಹಂಕಾರದಿಂದ ವರ್ತಿಸುತ್ತಿದೆ. ೧೩೦ ಕೋಟಿ ಜನರ ಭವಿಷ್ಯವನ್ನು ಕೇವಲ ಒಂದು ವ್ಯಕ್ತಿಯ ಕೈಗೆ ಕೊಡಲಾಗುವುದಿಲ್ಲ” ಎಂದು ವಿವರಿಸುತ್ತಾರೆ. ( ದ ಹಿಂದೂ,೨೨,೨೩, ೨೦೧೫)

ಪ್ರಧಾನ ಮಂತ್ರಿ ಮೋದಿಯ ಒಂದು ವರ್ಷದ ಆಡಳಿತದ ಸಾಧನೆಯೆಂದರೆ ಅದು ಸ್ವತಃ ‘ಮೋದಿಯ ಪುನಃಸೃಷ್ಟಿ, ಶೋಧನೆ ಮತ್ತು ಮಾರಾಟ’ ಎಂದು ಸೋಷಿಯಾಲಜಿಸ್ಟ್ ಶಿವ ವಿಶ್ವನಾಥನ್ ಹೇಳಿದ್ದಾರೆ.

೫೬ ಇಂಚಿನ ಎದೆಯ ಸರ್ಕಾರ್ ಅವರ ಆಡಳಿತಕ್ಕೆ ಒಂದು ವರ್ಷ ತುಂಬಿದೆಯಂತೆ. ಅರುಣ್ ಜೇಟ್ಲಿ ಮನೆಯಲ್ಲಿ ದೇಶದ ಪ್ರಮುಖ ಪತ್ರಕರ್ತರು, ಸಂಪಾದಕರ ಜೊತೆ ಏರ್ಪಡಿಸಿದ್ದ ಮಧ್ಯರಾತ್ರಿಯ ಔತಣಕೂಟದಲ್ಲಿ ೫೬ ಇಂಚಿನ ಎದೆಯ ಸರ್ಕಾರ್ ಭಾಗವಹಿಸಿದ್ದರು. modi_ambani_tata_kamathಈ ಸರ್ಕಾರ್ ಅವರ ಋಣ ತೀರಿಸಲೋ ಎಂಬಂತೆ ಇಂಡಿಯಾದ ಮಾಧ್ಯಮಗಳು ಪುಂಖಾನುಪುಂಖವಾಗಿ ಸಮೀಕ್ಷೆಗಳು, ಚರ್ಚೆಗಳನ್ನು ಮಾಡುತ್ತಿವೆ. ದೇಶದ ಪ್ರತಿಯೊಂದು ಸ್ಟುಡಿಯೋಗಳಲ್ಲಿ ಬಿಜೆಪಿ ವಕ್ತಾರರು, ಕೇಂದ್ರ ಮಂತ್ರಿಗಳ ದಂಡೇ ನೆರೆದಿರುವಂತೆ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಗೋಬೆಲ್ಸ್ ತಂತ್ರವನ್ನು ಬಳಸಿಕೊಂಡು ಸುಳ್ಳುಗಳನ್ನು ದಿನವಿಡೀ ಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಮಾಧ್ಯಮಗಳೂ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿವೆ. ಸುಳ್ಳುಗಳ ಭಾರವನ್ನು ಹೊತ್ತುಕೊಂಡ, ಅತಿರಂಜಿತ ಅಂಕಿಅಂಶಗಳನ್ನು ಉತ್ಪಾದಿಸಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ೫೬ ಇಂಚಿನ ಎದೆಯ ಸರ್ಕಾರ್ ’ಖುಷ್ ಹೋನೇ ಕೆ ಲಿಯೆ’ ಸಂಘ ಪರಿವಾರ ಮತ್ತು ಬಹುಪಾಲು ಮಾಧ್ಯಮಗಳು ಹಗಲಿರುಳು ಶ್ರಮಪಡುತ್ತಿದ್ದಾರೆ. ಈ ೫೬ ಇಂಚಿನ ಎದೆಯ ಸರ್ಕಾರ್ ಅವರ ವರ್ಣರಂಜಿತ ಫೋಟೋಗಳು, ಅಸದೃಶ್ಯವಾದ ಡ್ರೆಸ್‌ಗಳು, ಫ್ಲೆಕ್ಸ್ ಬೋರ್ಡಗಳು ಕೇವಲ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಾಂತ ರಾರಾಜಿಸಲಿವೆ. ಆಕಾಶ ಮತ್ತು ಭೂಮಿಯನ್ನು ಒಳಗೊಂಡಂತೆ ಎಲ್ಲವೂ ಮೋದಿಯ ಆಡಳಿತ ಫಲವಾಗಿ ಸೃಷ್ಟಿಯಾಗಿವೆ ಎನ್ನುವ ಜಾಹೀರಾತುಗಳು ದೇಶದಾದ್ಯಾಂತ ಕಂಗೊಳಿಸಲಿವೆ

ಕಳೆದ ೬೫ ವರ್ಷಗಳಿಂದ ಬೆಸೆದುಕೊಂಡಿದ್ದ ಇಂಡಿಯಾದ ಗಣರಾಜ್ಯ ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲಾ ಎಳೆಗಳನ್ನು, ಬಂಧಗಳನ್ನು ಕಳೆದ ಒಂದು ವರ್ಷದಲ್ಲಿ ನಾಶಗೊಳಿಸಿ, ಕ್ಯಾಬಿನೆಟ್ ಅರ್ಥಾತ್ ಕೇಂದ್ರ ಮಂತ್ರಿಮಂಡಲವನ್ನೇ ಅದೃಶ್ಯಗೊಳಿಸಿ ಅಧಿಕಾರವನ್ನು ತನ್ನ ಬಳಿ ಕೇಂದ್ರೀಕರಿಸಿಕೊಂಡ ಈ ಮೋದಿ ಅವರ ಸರ್ವಾಧಿಕಾರಿಯ ವ್ಯಕ್ತಿತ್ವವನ್ನು ’ಮನ್ ಕಿ ಬಾತ್’ ಎಂದು ವೈಭವೀಕರಿಸಿ ದೇಶದೆಲ್ಲಡೆ ಹಂಚಲಾಗುತ್ತಿದೆ. ಮೊಟ್ಟ ಮೊದಲು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಭಾವೋದ್ರೇಕದಿಂದ ಭಾಷಣ ಮಾಡಿದ ಮೋದಿಯವರ ನಂತರದ ಒಂದು ವರ್ಷದ ಆಡಳಿತದಲ್ಲಿ ರೈತರು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟು ಅವರ ಭವಿಷ್ಯವನ್ನು ಮಾರಕ ಭೂ ಸ್ವಾಧೀನ ಮಸೂದೆ ೨೦೧೪ರಲ್ಲ್ಲಿ ಮಣ್ಣು ಮಾಡಲಾಗಿದೆ. ambani-modiಮೋದಿಯ ಕಾರ್ಪೋರೇಟ್ ಪರವಾದ ಆರ್ಥಿಕ ನೀತಿಗಳ ಅನುಸಾರ ಕೃಷಿ ಸಾಗುವಳಿಯೇ ಹಂತಹಂತವಾಗಿ ಕಣ್ಮರೆಯಾಗಲಿದೆ. ದೇಶದ ತೆರಿಗೆದಾರರ ಹಣವನ್ನು ಬಳಸಿಕೊಂಡು (ಕಳೆದ ೯ ತಿಂಗಳ ಪ್ರವಾಸದ ಖರ್ಚು ೩೧೭ ಕೋಟಿ) ದೂರ ಜಿಗಿತದ ಹರ್ಡಲ್ಸ್ ಓಟಗಾರನ ಹಾಗೆ ಒಂದು ವರ್ಷದಲ್ಲಿ ೧೮ ವಿದೇಶಗಳನ್ನು ಸುತ್ತಿದ ಈ ಮೋದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ರಾಜ್ಯಗಳ ಕಡೆ ಕಾಲಿಟ್ಟಿಲ್ಲ. ಉದ್ಯೋಗ ಖಾತ್ರಿ ಯೋಜನೆಯ ನರೇಗಾದಿಂದ ಮೊದಲುಗೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಒಳಗೊಂಡಂತೆ ಅನೇಕ ಜನಕಲ್ಯಾಣ ಯೋಜನೆಗಳಿಗೆ (Social Welfare Schemes) ಸಂಬಂದಿಸಿದ ಅನುದಾನವನ್ನು ಕ್ರಮೇಣ ಕಡಿತಗೊಳಿಸಿರುವುದು ಮೋದಿ ಸರ್ಕಾರದ ಮತ್ತೊಂದು ಕೊಡುಗೆ. ಬಂಡವಾಳಶಾಹಿಗಳಿಗಾಗಿಯೇ ಸರ್ಕಾರವನ್ನು ಸಜ್ಜುಗೊಳಿಸಿರುವ ಮುಕ್ತ ಮಾರುಕಟ್ಟೆಯ, ನವ ಉದಾರೀಕರಣದ ವ್ಯಾಮೋಹಿಯಾದ ಮೋದಿ ಯಾವುದೇ ಮಾದರಿಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ. ಎಲ್ಲಾ ಬಡಜನರ ಪರವಾದ ಯೋಜನೆಗಳು ಮುಂದಿನ ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ರದ್ದಾದರೆ ಆಶ್ಚರ್ಯವಿಲ್ಲ.

ವಿದೇಶದಿಂದ ಕಪ್ಪುಹಣವನ್ನು ಮರಳಿ ತರುವ, ತಪ್ಪಿತಸ್ಥರನ್ನು ಶಿಕ್ಷಿಸುವ ಛಾತಿ ಬೇಕೆಂದರೆ ನನ್ನಂತೆ ೫೬ ಇಂಚಿನ ಎದೆ ಬೇಕು ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದ ಈ ಮೋದಿ ಕನಿಷ್ಠ ಒಂದಂಕಿಯ ಮೊತ್ತವನ್ನೂ ಭಾರತೀಯರಿಗೆ ತಂದು ತೋರಿಸದೆ, ಈ ಕಪ್ಪು ಹಣವನ್ನು ಮರಳಿ ತರುವ ಆಶಯಗಳನ್ನು “Money Laundering Bill” ನಲ್ಲಿ ಮಣ್ಣು ಮಾಡಲಾಗಿದೆ. ಸದರಿ ಮೋದಿ ಸರ್ಕಾರದ ಯಶಸ್ವೀ ಮಸೂದೆ ಎಂದೇ ಬಣ್ಣಿಸಲಾಗುವ ಕಲ್ಲಿದ್ದಲು ಮತ್ತು ಸ್ಪೆಕ್ಟ್ರಮ್ ಹರಾಜು ನೀತಿಗಳು ಮುಂದಿನ ದಿನಗಳಲ್ಲಿ ನೇರವಾಗಿಯೇ ಕಾರ್ಪೋರೇಟ್ ಕುಟುಂಬಗಳಿಗೆ Autonomous ನ ಮುಕ್ತ ಸ್ವಾತಂತ್ರವನ್ನು ತಂದುಕೊಡುತ್ತವೆ. ಒಮ್ಮೆ ಈ ಕಾರ್ಪೋರೇಟ್ ಶಕ್ತಿಗಳಿಗೆ ಯಾವುದೇ ಕಾನೂನಿನ ಕಟ್ಟುಪಾಡುಗಳಿಲ್ಲದ ಮುಕ್ತ ಸ್ವಾತಂತ್ರ ದೊರೆತರೆ ಕಲ್ಲಿದ್ದಲಿನ, ಸೇವಾ ವಲಯದ, ಸರಕುಗಳ ಬೆಲೆಗಳು ಊಹೆಗೆ ನಿಲುಕದಷ್ಟು ಏರಿಕೆಯಾಗುತ್ತವೆ. ಜನಸಾಮಾನ್ಯರ ಬದುಕು ದುರ್ಭರಗೊಳ್ಳತೊಡಗುತ್ತದೆ. ಅವರು ಅಂಚಿಗೆ ತಳ್ಳಲ್ಪಡುತ್ತಾರೆ. ಇದು ಈ ಮೋದಿಯ ಒಂದು ವರ್ಷದ ಆಡಳಿತದ ಫಲ.

ಸ್ವಾತಂತ್ರದ ನಂತರದ ಮೊದಲ ಸಂಸತ್ತಿನ ಅಧಿವೇಶನದಲ್ಲಿ (೧೯೪೯-೫೦) ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ಚರ್ಚೆchild-labour ನಡೆದಾಗ ಅನೇಕ ಸಂಸದರು ಮಕ್ಕಳೆಲ್ಲಾ ಶಾಲೆಗೆ ಸೇರಿಕೊಂಡರೆ ನಮ್ಮ ಹೊಲ ಗದ್ದೆಗಳಲ್ಲಿ ಕೂಲಿ ಮಾಡುವವರು ಯಾರು ಎಂದು ಪ್ರಶ್ನಿಸಿದ್ದರು. ಅಗ ಇದನ್ನು ಬಹುಪಾಲು ಸಂಸದರು ವಿರೋಧಿಸಿ ೧೧ ವಯಸ್ಸಿನವರೆಗೂ ಶಿಕ್ಷಣವನ್ನು ಕಡ್ಡಾಯ ಮಾಡಬೇಕು ಎಂದು ಗೊತ್ತುವಳಿ ಮಂಡಿಸಿದರು. ಇದನ್ನು ಮಾರ್ಪಡಿಸಿದ ಅಂಬೇಡ್ಕರ್ ಅವರು ಮಕ್ಕಳು ಬಾಲಕಾರ್ಮಿಕರಾಗುವುದೇ ೧೧ನೇ ವಯಸ್ಸಿನ ಸಂದರ್ಭದಲ್ಲಿ. ಬದಲಿಗೆ ೧೪ನೇ ವಯಸ್ಸಿನವರೆಗೂ ಮಕ್ಕಳ ಶಿಕ್ಷಣ ಕಡ್ಡಾಯ ಮತ್ತು ಹಕ್ಕು ಎಂದು ಪ್ರತಿಪಾದಿಸಿದರು. ನಂತರ ಅದು ಅನುಮೋದನೆಗೊಂಡು ೧೪ನೇ ವಯಸ್ಸಿನವರೆಗೂ ಶಿಕ್ಷಣ ಕಡ್ಡಾಯ ಮತ್ತು ಮಕ್ಕಳ ಹಕ್ಕಾಗಿ ಪರಿಗಣಿತವಾಯಿತು. ಆದರೆ ೧೩ ಮೇ, ೨೦೧೫ ರಂದು ಪ್ರಧಾನ ಮಂತ್ರಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ೨೦೧೨ರ ಮಸೂದೆಗೆ ಮತ್ತಷ್ಟು ತಿದ್ದುಪಡಿಗಳನ್ನು ಅನುಮೋದಿಸಿದೆ. ಈ ಮೊದಲಿನ ಬಾಲ ಕಾರ್ಮಿಕ ಪದ್ಧತಿಗೆ ಇರುವ ನಿಷೇಧಕ್ಕೆ ತಿದ್ದುಪಡಿಗಳನ್ನು ಮಾಡಿ ಕೌಟುಂಬಿಕ ಕೆಲಸಗಳು, ಕೌಟುಂಬಿಕ ಉದ್ಯಮದಲ್ಲಿ, ಅಪಾಯಕಾರಿಯಲ್ಲದ ಹೊರಗುತ್ತಿಗೆ ಕೆಲಸಗಳಲ್ಲಿ ಬಾಲಕರನ್ನು ಕಾರ್ಮಿಕರಾಗಿ ಬಳಸಿಕೊಳ್ಳಬಹುದೆಂದು ವಿವರಿಸಿದೆ. ಇದಕ್ಕೆ ಈ ಮೋದಿ ಸಚಿವ ಸಂಪುಟ ಸಭೆ ಕೊಟ್ಟ ವಿವರಣೆ ’ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವುದು!’ ಅಂದರೆ ಈ ಸದರಿ ಮೋದಿ ಸರ್ಕಾರಕ್ಕೆ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಿಂತಲೂ ಕೌಟುಂಬಿಕ, ಕುಶಲ ಕೆಲಸಗಳಲ್ಲಿ ಕೌಶಲ್ಯವನ್ನು ಹೆಚ್ಚಿಸುವುದು ಪ್ರಮುಖವಾಗಿದೆ. ಅಂದರೆ ಭಾರತದಂತಹ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿನ ಕೌಟುಂಬಿಕದ ಹಿನ್ನೆಲೆಯಲ್ಲಿ ಬಾಲಕಿಯರಿಗೆ ದಿನವಿಡೀ ಕೆಲಸಕ್ಕೆ ಕೊರತೆ ಇರುವುದಿಲ್ಲ. ಈ ಮೋದಿ ಸರ್ಕಾರದ ಮಸೂದೆ ಜಾರಿಗೊಂಡರೆ ಮುಖ್ಯವಾಗಿ ಬಾಲಕಿಯರು child-marriage-indiaಕೌಟುಂಬಿಕ ಕೆಲಸಗಳಿಗೆ ಸೀಮಿತಗೊಂಡು ಅವರ ಶಿಕ್ಷಣ ಮೊಟಕುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದು ಗ್ರಾಮೀಣ ಭಾಗದ ಬಾಲಕರಿಗೂ ಅನ್ವಯಿಸುತ್ತದೆ. ಇಂಡಿಯಾದಂತಹ ಸಾಮಾಜಿಕ-ಆರ್ಥಿಕ ಸಂರಚನೆಯೇ ದುರ್ಬಲವಾಗಿರುವ ದೇಶದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಹೆಚ್ಚಾಗುತ್ತದೆ. ಇದು ಭಾರತದ ಮಕ್ಕಳಿಗೆ ತನ್ನ ಒಂದು ವರ್ಷದ ಆಡಳಿತ ಪೂರೈಸಿದ ಮೋದಿ ಸರ್ಕಾರದ ಪ್ರತಿಗಾಮಿ ನೀತಿಯ ಕೊಡುಗೆ

ಬಹುಸಂಖ್ಯಾತರ ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತ ತತ್ವದ (Majoritarianism) ಪರವಾದ ಗುಣಗಳನ್ನು ಗೌಣಗೊಳಿಸಿಕೊಂಡು ಬಹುತ್ವದ, ಎಲ್ಲರನ್ನೂ ಒಳಗೊಳ್ಳುವಿಕೆಯ ಸಿದ್ಧಾಂತವನ್ನು ರೂಪಿಸಬೇಕಾದ ಅಗತ್ಯವಿರುತ್ತದೆ. ಆದರೆ ಮೋದಿ ಸ್ವತಃ ಒಬ್ಬ Authoritarian ವ್ಯಕ್ತಿತ್ವದ, Majoritarianism ತತ್ವದ ಪರವಾಗಿ ಅಪಾರವಾದ ಒಲವಿರುವ, ತನ್ನನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಬಣ್ಣಿಸಿಕೊಂಡ ಪ್ರಧಾನಿ. ಆರೆಸ್ಸಸ್‌ನ ಕೇಂದ್ರ ಕಛೇರಿಯಲ್ಲಿ ರಾಜಕೀಯ ಫಿಲಾಸಫಿಯನ್ನು ನಿರ್ಧರಿಸುವ ಅಧಿಕಾರವನ್ನು ರೂಪಿಸಲಾಗಿದೆ. ಇದಕ್ಕೆ ಮೋದಿಯವರ ಅನುಮೋದನೆ ಇದೆ. ಆರೆಸ್ಸಸ್ ಹೆಡ್ ಕ್ವಾಟ್ರಸ್‌ನಲ್ಲಿ ರಾಜಕೀಯ, ಸಾಮಾಜಿಕ ತತ್ವ ಸಿದ್ದಾಂತಗಳು ರೆಕ್ಕೆ ಪಡೆದುಕೊಳ್ಳತೊಡಗಿದರೆ ಅಲ್ಲಿಗೆ ಈ ದೇಶದ ಜನರ ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯದ ಎಲ್ಲಾ ಆಶಯಗಳು ಮುಣ್ಣುಗೂಡಿದಂತೆ. ಕಳೆದ ಒಂದು ವರ್ಷದಲ್ಲಿ ಅಲ್ಪಸಂಖ್ಯಾತರ ದನಿಯನ್ನೇ ಒತ್ತಿ ಹಿಡಿಯಲಾಗಿದೆ. ಸಂಘ ಪರಿವಾರದ ಸದಸ್ಯರು, ಮೋದಿ ಮಂತ್ರಿಮಂಡಲದ ಮಂತ್ರಿಗಳು ಅಲ್ಪಸಂಖ್ಯಾತರ ವಿರುದ್ಧ ಕಳೆದ ವರ್ಷವಿಡೀ ಪ್ರಚೋದನಾತ್ಮಕವಾಗಿ ಹೇಳಿಕೆಗಳನ್ನು ಕೊಡುತ್ತ,ಬೆದರಿಸುತ್ತಾ ಅವರಿಗೆ ’ಹಿಂದೂ’ಸ್ತಾನದ ಮಹತ್ವವನ್ನು ಪ್ರತಿ ಕ್ಷಣಕ್ಕೂ ಮನವರಿಕೆ ಮಾಡಿಕೊಡಲಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದ ವಿಜಯೋತ್ಸವಕ್ಕಾಗಿ ಸಂಘ ಪರಿವಾರದ ಕಾರ್ಯಕರ್ತರು ದೆಹಲಿಯ ರಸ್ತೆಗಳಿಗೆ ಮುಸ್ಲಿಂ ರಾಜರು, ನಾಯಕರುಗಳ ಹೆಸರಿರುವ ಸಫ್ದರ್ ಹಶ್ಮಿ ಮಾರ್ಗ, ಫಿರೋಜ್ ಶಾ ರಸ್ತೆ, ಔರಂಗಜೇಬ್ ರಸ್ತೆ, ಅಕ್ಬರ್ ರಸ್ತೆಗಳ ನಾಮಫಲಕಗಳಿಗೆ ಕಪ್ಪು ಮಸಿಯನ್ನು ಬಳಿದಿದ್ದಾರೆ ಮತ್ತು ಇಂಡಿಯಾದಲ್ಲಿ ಇಸ್ಲಾಮೀಕರಣವನ್ನು ಸಹಿಸುವುದಿಲ್ಲ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ

ಕಳೆದ ಒಂದು ವರ್ಷದಲ್ಲಿ ಗಾಂಧಿ ಹಂತಕ ನಾತುರಾಮ್ ಗೋಡ್ಸೆಯ ವೈಭವೀಕರಣ, ಕೇಂದ್ರ ಶಿಕ್ಷಣ ಇಲಾಖೆಯ ಕೇಸರೀಕರಣ, narender_modi_rssಚರ್ಚುಗಳ ಮೇಲೆ ದಾಳಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರನ್ನು ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಳಿಸುವ ‘ಘರ್ ವಾಪಸಿ’ ಎನ್ನುವ ಮೂಲಭೂತವಾದಿ ಕಾರ್ಯಚಟುವಟಿಕೆಗಳು, ಲವ್ ಜಿಹಾದಿಯ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ (ಮುಸ್ಲಿಂರನ್ನು ಮದುವೆಯಾಗುತ್ತಾರೆ ಎನ್ನುವ ಕಾರಣಕ್ಕೆ) ಗಳಂತಹ ಫ್ಯಾಸಿಸ್ಟ್ ಪ್ರವೃತ್ತಿಯ ವರ್ತನೆಗಳು, ಹಲ್ಲೆಗಳಿಂದಾಗಿ ಇಂಡಿಯಾದ ಸಾರ್ವಜನಿಕ ಬದುಕಿನ ಜೀವಪರವಾದ ಎಲ್ಲಾ ಸೆಲೆಗಳು ಮತ್ತು ಬಹುಸಂಸ್ಕೃತಿಯ ಜೀವನ ಶೈಲಿ ನಾಶಗೊಂಡಿದೆ.

ಕಡೆಗೆ ಕಳೆದ ಒಂದು ವರ್ಷದ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸದರಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರಕ್ಕೆ ದಾಖಲೆ ಹಣವನ್ನು ಖರ್ಚು ಮಾಡಲಾಗಿದೆ. ಇದರ ಸಂಪೂರ್ಣ ವೆಚ್ಚವನ್ನು ಇಂಡಿಯಾದ ಪ್ರಮುಖ ಕಾರ್ಪೋರೇಟ್ ಕುಟುಂಬಗಳು ವಹಿಸಿಕೊಂಡಿದ್ದವು. ಈ ಕಾರ್ಪೋರೇಟ್ ಹಣದಿಂದ ಚುನಾವಣೆಯನ್ನು ಜಯಿಸಿದ ಮೋದಿ ಇಂದು ಅದರ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕಾದಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರ್ಪೋರೇಟ್ ಕುಟುಂಬಗಳಿಗೆ ಋಣ ತೀರಿಸಲು “ಭೂಸ್ವಾಧೀನ ಮಸೂದೆ ೨೦೧೪” ನ್ನು ಹಠದಿಂದ ಸಂಸತ್ತಿನಲ್ಲಿ ಅಥವಾ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಮೋದಿ ಪಣತೊಟ್ಟಿದ್ದಾರೆ. ಮತ್ತೊಂದೆಡೆ ಆರೆಸ್ಸಸ್ ತನ್ನ ಹಿಂದೂ ರಾಷ್ಟ್ರೀಯತೆಯ ತತ್ವಗಳನ್ನು ಜಾರಿಗೊಳಿಸುವ ತವಕದಲ್ಲಿದೆ. ಈ ಧಾರ್ಮಿಕ ಮೂಲಭೂತವಾದ ಮತ್ತು ಕಾರ್ಪೋರೇಟ್ ಶಕ್ತಿಗಳ ದೌರ್ಜನ್ಯದ ನಡುವೆ ಇಂದು ಇಂಡಿಯಾದ ಜನ ಸಾಮಾನ್ಯರು ಧ್ವಂಸವಾಗುತ್ತಿದ್ದಾರೆ. ಇದು ಯಾವ ಬಗೆಯ “ಅಚ್ಚೇ ದಿನ್”?

ನನ್ನ ನೆನಪಿನಲ್ಲಿ ನೀನು ಕಣ್ಣೀರು ಹಾಕಬೇಡ, ಮನಸ್ಸು ನೋಯಿಸಿಕೊಳ್ಳಬೇಡ

– ಬಿ. ಶ್ರೀಪಾದ ಭಟ್

ಆತ ಲಖ್ನೋ ಬಾಯ್. ಹೆಸರು ತಲಾತ್ ಮಹಮೂದ್. ತನ್ನ ೧೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಸಾಧಿಸಿದ್ಧ ಈ ಲಖ್ನೋ ಬಾಯ್ ಗಝಲ್ ಹಾಡುವುದರಲ್ಲಿ ಜನಪ್ರಿಯನಾಗಿದ್ದ. ಆತನ ೧೭ನೇ ವಯಸ್ಸಿನಲ್ಲಿಯೇ ಎಚ್‌ಎಂವಿ ಮೂಲಕ ಗಝಲ್ talat_mahmoodಹಾಡುಗಳ ಡಿಸ್ಕ್ ಬಿಡುಗಡೆಯಾಗಿತ್ತು. ಆ ೪೦ರ ದಶಕದ ಪ್ರಖ್ಯಾತ ಗಝಲ್ ಹಾಡುಗಾರ ಉಸ್ತಾದ್ ಬರ್ಖಾತ್ ಅಲಿ ಖಾನ್ ನೊಂದಿಗೆ ಈ ಲಖ್ನೋ ಬಾಯ್ “ತಲಾತ್ ಮಹಮೂದ್”ನ ಹಾಡುಗಳನ್ನು ಗುನುಗುನಿಸುತ್ತಿದ್ದರು. ೪೦ರ ದಶಕದ ಮಧ್ಯ ಭಾಗದಲ್ಲಿ ಬಾಂಬೆಗೆ ಬಂದ ತಲಾತ್‌ಗೆ ಆಗಿನ ಹಿಂದಿ ಸಿನಿಮಾದ ಸಂಗೀತ ನಿರ್ದೇಶಕರು ತೀರಾ ತೆಳುವಾದ ಧ್ವನಿ, ಹಾಡುವಾಗ ಕಂಪಿಸುತ್ತದೆ ಎಂದು ಮೂದಲಿಸಿ ಅವಕಾಶಗಳನ್ನು ನಿರಾಕರಿಸಿದ್ದರು. ಕಡೆಗೆ ೧೯೪೯ರಲ್ಲಿ ಅನಿಲ್ ಬಿಶ್ವಾಸ್ ಸಂಗೀತ ನಿರ್ದೇಶನದ, ದಿಲೀಪ್ ಕುಮಾರ್ ಅಭಿನಯದ ’ಆರ್ಜೂ’ ಸಿನಿಮಾಗೆ ’ಐ ದಿಲ್ ಮುಜೆ ಐಸೆ ಜಗಾ ಲೇ ಚಲ್’ ಎನ್ನುವ ಹಾಡನ್ನು ಹಾಡುವ ಅವಕಾಶ ದೊರಕಿತು. ಮುಂದೆ ಸುಮಾರು ಮೂರು ದಶಕಗಳ ಕಾಲ ಹಾಡಿದ ತಲಾತ್ ಮಹಮೂದ್ ತುಂಬಾ ಸರಳ ಮತ್ತು ಸಹಜ ಗಾಯಕರಾಗಿದ್ದರು. ಇವರ ಧ್ವನಿ ಮತ್ತು ಮೃದು ವ್ಯಕ್ತಿತ್ವ ಶಾಸ್ತ್ರೀಯ ಸಂಗೀತಕ್ಕೆ ಸರಿ ಎಂದು ಟೀಕಿಸುವವರಿಗೆ ಅತ್ಯುತ್ತಮ ಹಿಂದಿ ಹಾಡುಗಳನ್ನು ಹಾಡಿ ಬಾಯಿ ಮುಚ್ಚಿಸಿದ್ದರು. ತಲಾತ್ ಮಹಮೂದ್ ಅವರು ಪದಗಳನ್ನು ಬಳಸಿಕೊಳ್ಳುವ ಶೈಲಿ, ಸ್ವರ ಪ್ರಯೋಗದ ಶೈಲಿ, ಧ್ವನಿಯ ಏರಿಳಿದ ಶೈಲಿ ೪೦, ೫೦ ರ ದಶಕದ ಹಿಂದಿ ಹಾಡುಗಳಿಗೆ ನಾವೀನ್ಯತೆಯನ್ನು ತಂದು ಕೊಟ್ಟವು.

೫೦ರ ದಶಕದ ಆರಂಭದಲ್ಲಿ ಬಿಡುಗಡೆಯಾದ ದಿಲೀಪ್ ಕುಮಾರ್ ಅಭಿನಯದ ’ದಾಗ್’ ಸಿನಿಮಾಗೆ ’ಐ ಮೇರಿ ದಿಲ್ ಕಹೀ ಔರ್ ಚಲ್, ಗಮ್ ದುನಿಯಾ ಸೆ ದಿಲ್ ಭರ್ ಗಯಾ’ ಎನ್ನುವ ಹಾಡನ್ನು ಭೈರವಿ ರಾಗದಲ್ಲಿ ಹಾಡಿದರೆ, ಅದೇ ಸಮಯದಲ್ಲಿ ದೇವ್ ಆನಂದ್ ಅಭಿನಯದ ’ಟಾಕ್ಸಿ ಡ್ರೈವರ್’ ಸಿನಿಮಾಗೆ ಹಾಡಿದ ’ಜಾಯೆತೊ ಜಾಯೆ ಕಹಾ, ಸಮ್ಜೇಗಾ ಕೌನ್ ಯಹಾ’ ಎನ್ನುವ ಹಾಡನ್ನು ಜಾನ್‌ಪುರಿ ರಾಗದಲ್ಲಿ ಹಾಡಿದ್ದರು. dilip-kumar-and-dev-anandಆದರೆ ಎರಡೂ ಹಾಡುಗಳನ್ನು ತಲಾತ್ ಮಹಮೂದ್ ಎಷ್ಟು ಆಳದಲ್ಲಿ ಮತ್ತು ಮಾಧುರ್‍ಯದಲ್ಲಿ ಹಾಡಿದರೆಂದರೆ ಎರಡೂ ಹಾಡುಗಳು ವಿಭಿನ್ನ ನಾಯಕರ ಉದಾಸ, ಆಲಸ್ಯದ ಮನಸ್ಥಿತಿಯನ್ನು ಒಂದೇ ಸ್ತರದಲ್ಲಿ ಕೇಳುಗರಿಗೆ ತಲುಪಿಸುತ್ತಿದ್ದವು. ದಿಲೀಪ್ ಕುಮಾರ್ ಮತ್ತು ದೇವ್ ಆನಂದ್ ಸಮಾನ ದುಖಿಗಳಾಗಿಯೇ ನಮಗೆ ಕಂಡು ಬರುತ್ತಿದ್ದರು. ತಲಾತ್‌ರ ಪ್ರತಿಭೆ ಮತ್ತು ಪರಿಪೂರ್ಣತೆ ಇದನ್ನು ಸಾಧ್ಯವಾಗಿಸಿತ್ತು. ೧೯೫೩ರಲ್ಲಿ ಬಿಡುಗಡೆಗೊಂಡ ’ಫುಟ್‌ಪಾತ್’ ಸಿನಿಮಾಗೆ ದಿಲೀಪ್ ಕುಮಾರ್ ಅಭಿನಯದ ಖಯ್ಯಾಮ್ ಸಂಗೀತ ನೀಡಿದ ’ಶಾಮ್ ಎ ಗಮ್ ಕಿ ಕಸಮ್, ಆಜ್ ಗಮ್‌ಗೀ ಹೈ ಹಮ್’ ಎನ್ನುವ ಹಾಡನ್ನು ತಲಾತ್ ಮಹಮೂದ್ ತಮ್ಮೊಳಗಿನ ಜೀವವನ್ನೇ ಬಳಸಿ ಹಾಡಿದ್ದರು. ಅದಕ್ಕೆ ದಿಲೀಪ್ ಕುಮಾರ್ ಅಭಿನಯವೂ ಸಹ ಅಷ್ಟೇ ಸರಿಸಾಟಿಯಾಗಿತ್ತು. ಇಂದಿಗೂ ಆ ಹಾಡು ಅತ್ಯುತ್ತಮ ಹಿಂದಿ ಸಿನಿಮಾ ಗಝಲ್‌ಗಳಲ್ಲಿ ಒಂದು. ಇಂದಿಗೂ ಶಾಮ್ ಎ ಗಮ್ ಕಿ ಕಸಮ್ ಹಾಡು, ತಲಾತ್ ದ್ವನಿ ನಮ್ಮನ್ನು ಕಾಡುತ್ತದೆ, ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಅದೇ ಕಾಲದ ರಾಜೇಂದ್ರ ಕ್ರಿಷ್ಣನ್ ಸಂಗೀತ ನೀಡಿದ ’ದೇಖ್ ಕಬೀರಾ ರೋಯಾ’ ಸಿನಿಮಾದಲ್ಲಿ ಹಾಡಿದ ’ಹಮ್‌ಸೆ ಆಯಾ ನ ಗಯಾ, ತುಮ್‌ಸೆ ಬುಲಾಯಾ ನ ಗಯಾ’ ಎನ್ನುವ ಹಾಡು ಹಗುರವಾದ ಮನಸ್ಥಿತಿಯಲ್ಲಿ, ನಿರುಮ್ಮಳ ಭಾವದಲ್ಲಿ ಪ್ರಾರಂಭವಾಗುತ್ತಾ ಕಡೆಗೆ ’ದಾಗ್ ಜೊ ತುಮ್ನೆ ದಿಯಾ, ದಿಲ್ ಸೆ ಮಿಠಾಯ ನ ಗಯಾ’ ಎಂದು ಭಾರವಾಗುತ್ತ ಕಳೆದುಕೊಂಡ, ಪಡೆದುಕೊಂಡಿದ್ದಾದರೂ ಏನು ಎನ್ನುವ ಮನಸ್ಥಿತಿಯೊಂದಿಗೆ ಮುಗಿಯುತ್ತದೆ. ಈ ಎರಡೂ ಭಾವಗಳನ್ನು ಪಡೆದುಕೊಂಡ, ಕಳೆದುಕೊಂಡ ಮನಸ್ಥಿತಿಯನ್ನು ತಲಾತ್ ಮಹಮೂದ್ ತನ್ನ ಧ್ವನಿಯಲ್ಲಿ, ಅದ್ಭುತವಾದ ಏರಿಳಿತಗಳ ಮೂಲಕ ನಮಗೆ ದಾಟಿಸುತ್ತಾ ಹೋಗುತ್ತಾರೆ. ಹೌದು ತಲಾತ್ ಧ್ವನಿ ನಮಗೆ ಎಲ್ಲಾ ಭಾವಗಳನ್ನು ದಾಟಿಸುತ್ತಾ ಹೋಗುತ್ತದೆ. ಅದೂ ಹೇಗೆ, ನಾವೂ ಅವರೊಂದಿಗೆ ಕಂಪಿಸುವ ಹಾಗೆ.

೧೯೫೫ ರಲ್ಲಿ ಬಿಡುಗಡೆಗೊಂಡ ’ಬಾರಾದರಿ’ ಸಿನಿಮಾದ ನಾಶಾದ್ ( ನೌಶಾದ್ ಅಲ್ಲ) ಸಂಗೀತ ನೀಡಿದ ’ತಸವೀರ್ ಬನಾತಾ ಹೂ, talat_mahmood_audio_cdತಸವೀರ್ ನಹೀ ಬನತೀ, ಎಕ್ ಖ್ವಾಬ್ ಸೆ ದೇಖಾ ಹೈ, ತಾಬೀರ್ ನಹೀ ಬನತೀ’ ಎನ್ನುವ ಹಾಡು ತಲಾತ್ ಮಹಮೂದ್ ಧ್ವನಿಯ ಒಂದು ಕ್ಲಾಸಿಕ್. ಅದನ್ನು ರೇಶ್ಮೆಯಂತಹ ನುಣುಪಿನ ಧ್ವನಿಯಲ್ಲಿ ಹಾಡಿದ ತಲಾತ್ ’ದಮ್ ಭರ್ ಕೆ ಲಿಯೆ ಮೇರಿ, ದುನಿಯಾ ಮೆ ಚಲೇ ಆವೋ’ ಎಂದು ಹಗುರ ಅಂದರೆ ಹಗುರ ಧ್ವನಿಯಲ್ಲಿ ಕರೆಯುವಾಗ ನಾವು ಆಗಲೇ ಆ ದುನಿಯಾದಲ್ಲಿ ಸೇರಿ ಹೋಗಿರುತ್ತೇವೆ.

ಛಾಯಾ ಸಿನಿಮಾದ ’ಇತನಾನ ಮುಜೆಸೆ ತು ಪ್ಯಾರ್ ಬಧಾ, ತೊ ಮೈ ಎಕ್ ಬಾದಲ್ ಆವಾರ’, ಸುಜಾತಾ ಸಿನಿಮಾದ ’ಜಲ್ತೇ ಹೈ ಜಿಸ್ಕೆ ಲಿಯೇ’, ಉಸ್ನೆ ಕಹಾ ಥಾ ಸಿನಿಮಾದ ’ಆಹಾ ರಿಮ್ ಜಿಮ್ ಕೆ ಯೆ ಪ್ಯಾರೆ ಪ್ಯಾರೆ ಗೀತ್ ಲಿಯೆ’, ಮಧೋಶ್ ಸಿನಿಮಾದ ’ಮೇರೆ ಯಾದ್ ಮೆ ತುಮ್ನಾ ಆಸೂ ಬಹಾ ನ, ನ ದಿಲ್ ಕೋ ಜಲಾನ, ಮುಜೇ ಭೂಲ್ ಜಾನಾ’, ಬಾಬುಲ್ ಸಿನಿಮಾದ ’ಮಿಲ್ತೆ ಹಿ ಆಂಖೇ, ದಿಲ್ ಹುವಾ ದೀವಾನಾ ಕಿಸಿ ಕಾ’ ಮತ್ತು ಮುಂತಾದ ಹಾಡುಗಳು ತಲಾತ್ ಮಹಮೂದ್ ಅವರ ಕ್ಲಾಸಿಕ್ ಹಾಡುಗಳು. ತಮ್ಮ ರೇಶ್ಮೆಯಂತಹಾ ನುಣುಪಾದ ಧ್ವನಿಯಲ್ಲಿ ಹತಾಶಗೊಂಡ ಮನಸ್ಸಿನ, ಮುರಿದ ಹೃದಯದ ಭಾವನೆಗಳನ್ನು ನಮ್ಮೊಳಗೆ ಆಳವಾಗಿ ತೇಲಿ ಬಿಡುವ ತಲಾತ್ ಒಬ್ಬ ಕ್ಲಾಸಿಕ್ ಹಾಡುಗಾರ. ಅವರ ಎಲ್ಲಾ ಹಾಡುಗಳಲ್ಲಿ ಉರ್ದು ಭಾಷೆಯನ್ನು ಬಳಸಿಕೊಂಡು,ಹೊರಹೊಮ್ಮಿಸುವ ಶೈಲಿ ಅನನ್ಯವಾದದ್ದು. ಉರ್ದು ಭಾಷೆ ತಲಾತ್ ಧ್ವನಿಯಲ್ಲಿ ತನ್ನ ಎಲ್ಲಾ ಗುಣಗಳೊಂದಿಗೆ ನಮ್ಮೊಳಗೆ ಇಳಿಯುತ್ತಾ ಹೋಗುತ್ತದೆ.

ಐವತ್ತರ ಆ ದಶಕದಲ್ಲಿ ಸಾಹಿರ್, ಕೈಫೀ ಅಜ್ಮಿ, ಖಯ್ಯಾಮ್, ನೌಶಾದ್, ಮಜರೂಹ್ ಸುಲ್ತಾನ್ ಪುರಿ, ಶೈಲೇಂದ್ರ, ಹಸರತ್ ಜೈಪುರಿ, ಮಹಮದ್ ರಫಿ, ಮುಖೇಶ್, ಶಕೀಲ್ ಬದಾಯೆ, ಸಿ.ರಾಮಚಂದ್ರ, ಮದನ್ ಮೋಹನ್, ಗುಲಾಮ್ ಮಹಮದ್, ಶಂಕರ್ ಜೈಕಿಶನ್, ಲತಾ ಮಂಗೇಶ್ಕರ್, talatmahmood1ಮನ್ನಾಡೆ ರಂತಹ ಮಹಾನ್ ಸಂಗೀತ ನಿರ್ದೇಶಕರು, ಕವಿಗಳೊಂದಿಗೆ ಹಾಡಿದ ತಲಾತ್ ಮಹಮೂದ್ ಮರೆಯಲಾಗದ ಹಾಡುಗಾರ. ಮನುಷ್ಯನ ಮನಸ್ಸು ಜೀವಂತಿಕೆಯಾಗಿರುವವರೆಗೂ ತಲಾತ್‌ರ velvety ಧ್ವನಿಗೆ ಮಾರು ಹೋಗುತ್ತಲೇ ಇರುತ್ತದೆ. ಲಿರಿಕ್ಸ್ ಅನ್ನು ಮತ್ತೊಂದು ಸ್ತರಕ್ಕೆ ಎತ್ತರಿಸುವ ತಲಾತ್ ಮಹಮೂದ್‌ರವರ ಧ್ವನಿ ನಮ್ಮನ್ನು ಕಾಡುತ್ತಲೇ ಇರುತ್ತದೆ.

ಈ ಲಖ್ನೋ ಬಾಯ್ ನಮ್ಮನ್ನು ಅಗಲಿ ೧೭ ವರ್ಷಗಳಾದವು. ಆದರೆ ತಲಾತ್ ಹಾಡಿದ “ಮನಸ್ಸಿನೊಳಗೆ ಆಸೆಗಳು ಬೇಯುತ್ತಿವೆ, ಕಣ್ಣಿನೊಳಗಡೆ ಕಣ್ಣೀರು ಬಾಕಿ ಇದೆ, ನಾನು ಮತ್ತು ನನ್ನ ಒಂಟಿತನ ಮಾತ್ರ ಇಲ್ಲಿದೆ” ಸಾಲುಗಳು ಸದಾ ನಮ್ಮೊಂದಿಗೆ…

ಗಾಂಧಿ ಎಂಬ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ”


– ಶ್ರೀಧರ್ ಪ್ರಭು


ಫೆಬ್ರವರಿ ೧೯೪೮ ರ ಸಂದರ್ಭ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿ ಹತ್ತು ಹದಿನೈದು ದಿನಗಳು ಸಂದಿರಬೇಕು. ಪ್ರಧಾನಿ ನೆಹರು ಮತ್ತು ಉಪ ಪ್ರಧಾನಿ ಪಟೇಲರು ಅಧೀರರಾಗಿದ್ದರು. ಭಾರತದಲ್ಲಂತೂ ಸೂತಕದ ಛಾಯೆ. ಇಡೀ ಪ್ರಪಂಚದಾದ್ಯಂತ ಮಹಾತ್ಮರ ಹತ್ಯೆಯನ್ನು ಖಂಡಿಸಿ ಸಾವಿರಾರು ಶ್ರದ್ಧಾಂಜಲಿ ಸಭೆ ಸಮಾರಂಭಗಳು ನಡೆದಿದ್ದವು.

ಕೇವಲ ಎರಡು ಮೂರು ದಿನಗಳ ಅಂತರದಲ್ಲಿ, ಅತ್ಯಂತ ವಿಭಿನ್ನ ಹಿನ್ನೆಲೆಯ ಇಬ್ಬರು ಭಾರತೀಯ ಗಣ್ಯರು, gandhi_dead_bodyದೇಶವೆಂದೂ ಮರೆಯದ ಶ್ರದ್ಧಾಂಜಲಿ ಅರ್ಪಿಸಿದರು.

ಒಬ್ಬರು, ನಲವತ್ತರ ಅಂಚಿನ ಸರ್ವ ಸಂಗ ಪರಿತ್ಯಾಗಿ ಮತ್ತು ಅಂದು ಕರಾಚಿಯಲ್ಲಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ – ಸ್ವಾಮಿ ರಂಗನಾಥನಂದ.

ಇನ್ನೊಬ್ಬರು, ವರ್ಲಿ ರೈತ ದಂಗೆ, ತೆಲಂಗಾಣ ಸಶಸ್ತ್ರ ಹೋರಾಟ ಮತ್ತು ಮಹಾರಾಷ್ಟ್ರ ರಾಜ್ಯ ರಚನೆಯ ಸುಡುಬಿಸಿಯ ಹೋರಾಟಗಳ ನಡುಮಧ್ಯದಲ್ಲಿದ್ದ ಅರವತ್ತರ ಹರೆಯದ ಕಮ್ಯುನಿಸ್ಟ್ ನಾಯಕ – ಶ್ರೀಪಾದ ಅಮೃತ ಡಾಂಗೆ.

ಎಂತಹ ಅಗಾಧ ಭಿನ್ನತೆ ಮತ್ತು ಅಸಾಮ್ಯತೆ!

ವ್ಯಕ್ತಿಗಳ ಹಿನ್ನೆಲೆಗಳ ಅಗಾಧ ಭಿನ್ನತೆಯತೆಗಳ ಜೊತೆ ಜೊತೆಯಲ್ಲೇ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಗಾಂಧಿಯವರೂ ಕೂಡ ಅಗಾಧ ವೈರುಧ್ಯ ಮತ್ತು ವಿರೋಧಬಾಸಗಳ ಮೊತ್ತವಾಗಿದ್ದರು. ಹೀಗಾಗಿ ಗಾಂಧಿಯನ್ನು ಕುರಿತು ಒಂದೇ ಹಿನ್ನೆಲೆಯ ಇಬ್ಬರು ವ್ಯಕ್ತಿಗಳು ಒಂದೇ ರೀತಿ ಮಾತನಾಡುವುದು ಸಾಧ್ಯವಿದೆಯೇ? ಸಾಧ್ಯವಾಯಿತು ನೋಡಿ!

ಇನ್ನೊಂದು ವಿಶೇಷತೆ ಗಮನಿಸಿ. ವಿವೇಕಾನಂದರಾಗಲಿ, ಅವರ ಗುರುಭಾಯಿಗಳಾಗಲಿ ಅಥವಾ ಆಶ್ರಮವಾಗಲಿ, ನೇರ ಅಥವಾ ಪರೋಕ್ಷವಾಗಿ ಯಾವುದೇ ರಾಜಕೀಯ ಹೋರಾಟ (ಸಾಮಾಜಿಕ ಹೋರಾಟಗಳಲ್ಲಿ ಕೂಡ) ಭಾಗಿಯಾಗಿರಲಿಲ್ಲ. ಏನಿದ್ದರೂ, ರಂಗನಾಥನಂದರಾಗಲಿ ಅವರ ಅಶ್ರಮವಾಗಲಿ ಗಾಂಧಿವಾದದ ಆಸುಪಾಸು ಎನ್ನುವಂತೆ ಕೂಡ ಇರಲಿಲ್ಲ.

ಇನ್ನು ಡಾಂಗೆಯವರಂತೂ ಗಾಂಧೀಜಿಯವರನ್ನು ಉದ್ದಕ್ಕೂ ವಿರೋಧಿಸಿದವರು. ಗಾಂಧಿ ಪ್ರೇರಿತ ಸಮಾಜವಾದ ಕಮ್ಯುನಿಸ್ಟ್ ರ ಮಟ್ಟಿಗೆ ಒಂದು ಕಾಗಕ್ಕ ಗುಬ್ಬಕ್ಕ ಕಥೆಗಿಂತ ಹೆಚ್ಚು ಮಹತಿಯದ್ದೇನಲ್ಲ.

ಹಾಗಿದ್ದರೆ, ಗಾಂಧಿಯವರ ಬದುಕು ಇವರನ್ನು ಒಟ್ಟು ಗೂಡಿಸಿತಲ್ಲದೆ, ಸಾವು ಕೂಡ ಹೇಗೆ ಸಾಮ್ಯತೆ ಬೆಸೆಯಿತು?

ಇವರಿಬ್ಬರ ಮಾತುಗಳಲ್ಲಿ ಅಗಾಧ ಸಾಮ್ಯತೆ ಇತ್ತು ಎಂದರೆ ಆಶ್ಚರ್ಯವಾಗುತ್ತದೆ. ಎಷ್ಟರ ಮಟ್ಟಿಗೆಂದರೆ, Gandhi's Funeralಇವರಿಬ್ಬರ ಭಾಷಣದ ವಾಕ್ಯಗಳನ್ನು ಬಿಡಿಯಾಗಿ ಉದಹರಿಸಿದರೆ, ಯಾವುದನ್ನು ಯಾರು ಹೇಳಿದ್ದು ಎಂದು ಹೇಳುವುದು ಕಷ್ಟ. ಇದಕ್ಕಿಂತ ಜಾಸ್ತಿ, ಹಂತಕ ಗೋಡ್ಸೆಯ ಕುರಿತಾದ ಇವರಿಬ್ಬರ ನಿಲುಮೆಯಲ್ಲಿ ಕೂಡ ಒಂದಿನಿತೂ ಭಿನ್ನತೆಗಳಿರಲಿಲ್ಲ. ಗೋಡ್ಸೆಯನ್ನು ಕ್ಷಮಿಸಿ ಬಿಡಬೇಕು ಎಂದು ಕೆಲವರು ರಾಗ ತೆಗೆದಿದ್ದನ್ನು ತಮ್ಮದೇ ರೀತಿಯಲ್ಲಿ ಇಬ್ಬರೂ ವಿರೋಧಿಸುತ್ತಾರೆ. ಡಾಂಗೆ ವಿಧಾನ ಸಭೆಯಲ್ಲಿ ಮಾತನಾಡಿದ್ದಕ್ಕೂ, ರಂಗನಾಥನಂದರು ಭಕ್ತರಿಗೆಂದು ಮೀಸಲಾದ ಸಂಜೆಯ ಪ್ರವಚನದಲ್ಲಿ ಹೇಳಿದ್ದೂ ಏಕಸೂತ್ರ ದಂತಿದೆ!

ಹಾಗೆಂದು ಸ್ವಾಮಿ ರಂಗನಾಥನಂದರು ನಮ್ಮ ಇಂದಿನ ಕೆಲವು ಪ್ರಗತಿಪರ ಮಠಾಧೀಶರ ಸಾಲಿನವರೇನಲ್ಲ. ರಂಗನಾಥನಂದರು ನಾಲ್ಕು ಕಂತುಗಳಲ್ಲಿ ಬರೆದ ಬರೆದ ಬೃಹತ್ ಮತ್ತು ಪ್ರಸಿದ್ಧ ಪುಸ್ತಕ “Eternal Values for a Changing Society” ವೇದ, ವೇದಾಂತ ಇತ್ಯಾದಿ ಕುರಿತೇ ಇರುವಂಥಹದ್ದು.

ಇದಕ್ಕಿಂತ ವಿಶೇಷ ಏನು ಗೊತ್ತೇ? ರಂಗನಾಥನಂದರ ಕರಾಚಿ ಆಶ್ರಮದಲ್ಲಿ ಅತ್ಯಂತ ಭೀಕರ ಕೋಮು ಭೀತಿಯ ವಾತಾವರಣ ಇತ್ತು. ಇಂಥ ಸಂದರ್ಭದಲ್ಲೂ ಗಾಂಧಿಯನ್ನು ಧೇನಿಸುವ ತಿಳಿ ಮನಸ್ಸು ನೋಡಿ!

ಇನ್ನೊಂದು ವಿಶೇಷವೆಂದರೆ ಕರಾಚಿ ರಾಮಕೃಷ್ಣ ಆಶ್ರಮದಲ್ಲಿ ಜರುಗುತ್ತಿದ್ದ ಭಜನೆ ಮತ್ತು ಉಪನ್ಯಾಸ ಕಾರ್ಯಕ್ರಮಗಳಿಗೆ ಸದಾ ಬರುತ್ತಿದ್ದವರಲ್ಲಿ ಒಬ್ಬ ವಿಶೇಷ ವ್ಯಕ್ತಿ ಕೂಡ ಇದ್ದರು. ಈ ವ್ಯಕ್ತಿ ಇಂದಿಗೂ ಸ್ವಾಮೀಜಿಯವರ ವ್ಯಕ್ತಿತ್ವ ಮತ್ತು ಅವರ ಅಧ್ಯಾತ್ಮಿಕತೆ ಕುರಿತ ಅವರ ಉಪನ್ಯಾಸ ಗಳನ್ನು ನೆನೆದುಕೊಳ್ಳುತ್ತಾರೆ. ಆದರೆ ಈ ವ್ಯಕ್ತಿ ಗಾಂಧಿ ಹತ್ಯೆ ಕುರಿತ ಸ್ವಾಮಿಜಿಯವರ ಈ ಉಪನ್ಯಾಸ ಕೇಳಿಸಿಕೊಂಡಿದ್ದ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಯಾರು ಗೊತ್ತೇ ಆ ವ್ಯಕ್ತಿ? ಲಾಲಕೃಷ್ಣ ಅಡ್ವಾಣಿ!

ಅಂದು ಮತ್ತೆ ಇಂದು, ಅಡ್ವಾಣಿಯವರಿಗಾಗಲಿ ಅಥವಾ ಸಂಘ ಪರಿವಾರಕ್ಕಾಗಲಿ ಗಾಂಧಿ ತತ್ವವನ್ನು ವಿರೋಧಿಸುವ ಮನಸ್ಸೇನೋ ತುಂಬಾ ಇದೆ Advaniಆದರೆ ಸ್ವಾಮಿ ರಂಗನಾಥನಂದರಂಥ ಸಂತರು ಗಾಂಧಿಯನ್ನು ಗೌರವಿಸುವಾಗ ಸಂಘ ಪರಿವಾರಕ್ಕೆ ಎಷ್ಟು ಇರುಸು ಮುರುಸು ಉಂಟಾಗುತ್ತದೆ ಗಮನಿಸಿ.

ಆ ವಿಷಯ ಹಾಗಿರಲಿ; ಗಾಂಧಿ ಎರಡಾಣೆ ಶುಲ್ಕ ಕೊಟ್ಟು ಕಾಂಗ್ರೆಸ್ ನ ಸದಸ್ಯರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಅವರು ಗಾಂಧಿ ಟೊಪ್ಪಿ ಎಂದೂ ತೊಡಲಿಲ್ಲ. ಎಂದಿಗೂ ಯಾವುದೇ ಮಠ ಮಾನ್ಯ ಗಳ ಬಾಗಿಲಿಗೆ ಹೋಗಲಿಲ್ಲ; ದೇವಸ್ಥಾನ, ಆಶ್ರಮ ಇತ್ಯಾದಿಗಳ ಗೋಜಿಗೂ ಹೋಗಲಿಲ್ಲ. ಬೆಳಗಾವಿಯಲ್ಲಿ ಜರುಗಿದ ಅಧಿವೇಶನ ಬಿಟ್ಟು ಬೇರೆಲ್ಲೂ ಕಾಂಗ್ರೆಸ್ ಅಧ್ಯಕ್ಷರಾಗಿರಲಿಲ್ಲ.

ಗಾಂಧಿ, ಭಾರತದ ಅತ್ಯಂತ ಪ್ರಭಾವಿ ಶಕ್ತಿ ಕೇಂದ್ರವಾಗಿದ್ದರೂ, ಯಾವ ವ್ಯಕ್ತ ಅಥವಾ ಪ್ರಕಟ ಸ್ವರೂಪದ ಅಧಿಕಾರವನ್ನು ಸ್ವೀಕರಿಸಲಿಲ್ಲ. ಭಾರತದ ಸ್ವಾಯತ್ತತೆ ಮತ್ತಿತರೇ ಮಹತ್ತರ ತೀರ್ಮಾನ ಗಳನ್ನು ಕೈಗೊಳ್ಳಲು ೧೯೪೫ ರಲ್ಲಿ ಅಂದಿನ ವೈಸ್ ರಾಯ್ ಮೌಂಟ್ ಬ್ಯಾಟನ್ ಶಿಮ್ಲಾದಲ್ಲಿ ಕರೆದ ಸಭೆಯನ್ನು ಗಾಂಧಿ ನಿರ್ದೇಶಿದ ರೀತಿ ನೋಡಿ. ಸಭೆಯ ಮುನ್ನಾ ದಿನ ಶಿಮ್ಲಾಗೆ ಬಂದಿಳಿಯುವ ಗಾಂಧಿ, ಸಭೆಗೆ ಹಾಜರಾಗುವುದಿಲ್ಲವಾದರೂ, ಸಭೆಗೆ ಹಾಜರಾಗುವ ಕಾಂಗ್ರೆಸ್ಸನ ಎಲ್ಲ ನಾಯಕರಿಗೆ ನೀತಿ ನಿರ್ದೇಶನ ನೀಡುತ್ತಾರೆ.

ಗಾಂಧಿ ಹಾಗೆಂದು ರಿಮೋಟ್ ಕಂಟ್ರೋಲ್ ನಾಯಕರಲ್ಲ. ಸ್ವಾತಂತ್ರ್ಯ ಬಂದ ಹೊಸ್ತಿಲಿನಲ್ಲಿ ಕೋಮು ದಳ್ಳುರಿ ತಣಿಸಲು ಗಾಂಧೀ ನೌಖಾಲಿಗೆ ಹೊರಡುತ್ತಾರೆ. ಅಲ್ಲಿ ಕೆಲವು ದುಷ್ಟರು ಗಾಂಧೀಜಿ ಉಳಿದುಕೊಂಡ ಗ್ರಾಮಗಳಲ್ಲಿ ಸಾಗುವ ದಾರಿಯುದ್ದಕ್ಕೂ ಮಲವನ್ನು ಮೂತ್ರ ಹರಡಿರುತ್ತಾರೆ. ಗಾಂಧೀಜಿಯ ಮೊಮ್ಮಗಳು ಮನು ಗಾಂಧಿ ಬೇಗನೆ ಮುಂದೆ ತೆರಳಿ ಅದನ್ನು ಸ್ವಚ್ಛ ಗೊಳಿಸುತ್ತಾರೆ. ಇದನ್ನು ಅರಿತ ಗಾಂಧಿ ಹೇಳುತ್ತಾರೆ “ಇಂದು ಶ್ರೇಷ್ಠ ವಾದದ್ದನ್ನು ನನ್ನಿಂದ ಕಸಿದುಕೊಂಡೆ”!

ಗಾಂಧಿಯ ಸಂವಹನ ಪ್ರಕ್ರಿಯೆ ತುಂಬಾ ಸೂಕ್ಷ್ಮ ಆದರೆ ತೀಕ್ಷ್ಣ ಮಟ್ಟದ್ದು. ಗಾಂಧಿ ಮೆಲ್ಪದರಿನ ರಾಜಕಾರಣ ಮಾಡಲೇ ಇಲ್ಲ. ದೇಶದ ವಿಭಜನೆಯೂ ಸೇರಿದಂತೆ, ಸರಕಾರದ ಅಥವಾ ಕಾಂಗ್ರೆಸ್ಸ್ ನ ಅನೇಕ ಮಹತ್ತರ ತೀರ್ಮಾನಗಳಲ್ಲಿ ಗಾಂಧಿ ನೇರವಾಗಿ ಭಾಗಿಯಲ್ಲ. ನೇತಾಜಿ – ಪಟ್ಟಾಭಿ ಸ್ಪರ್ಧೆಯ ಸಂದರ್ಭ ಬಿಟ್ಟರೆ ಗಾಂಧಿ ಕಾಂಗ್ರೆಸ್ಸನ ಸಂಘಟನೆಯ ಒಳಗಿನ ಸೋಲು ಗೆಲುವನ್ನು ತಮ್ಮ ಸೋಲು – ಗೆಲುವು ಎಂದು ಭಾವಿಸಲಿಲ್ಲ – ಕನಿಷ್ಠ ಬಿಂಬಿಸಲಂತೂ ಇಲ್ಲ .

ಹಾಗಿದ್ದಾಗ್ಯೂ, ಗೋಡ್ಸೆ ಕೊಲ್ಲುವುದು ಗಾಂಧಿಯನ್ನು; ಪ್ರಧಾನಿ ನೆಹರು ಅಥವಾ ಇತರ ಕಾಂಗ್ರೆಸ್ ನ ನಾಯಕರನ್ನಲ್ಲ. ಇನ್ನೊಂದು ಕಡೆಯಿಂದ ನೋಡಿದರೆ, ವರ್ಣಾಶ್ರಮವನ್ನು ಸಂಪೂರ್ಣವಾಗಿ ಒಪ್ಪುವ ಹಿಂದೂ ಆಗಿದ್ದ ಗಾಂಧಿಯನ್ನು ಕೊಂದದ್ದು ಇನ್ನೊಬ್ಬ ‘ಹಿಂದೂ’ – ಅದರಲ್ಲೂ ಬ್ರಾಹ್ಮಣ!

ಯುಗ ಯುಗಾಂತರದಿಂದ ಶೋಷಣೆ ಸಾಧನ ಮಾಡಿಕೊಂಡ ವೈದಿಕ ಧರ್ಮವನ್ನು ಸಮರ್ಥವಾಗಿ ಬೀದಿಯಲ್ಲಿ ಬೆತ್ತಲೆ ಮಾಡಿದ Young_Ambedkarಅಂಬೇಡ್ಕರರನ್ನು ಕಡೆಗಣಿಸಿದ ಸಾತ್ವಿಕ ಸಿಟ್ಟಿನ ಕಾರಣ ಯಾವ ದಲಿತನೂ ಗಾಂಧಿಯನ್ನು ಕೊಲ್ಲಲಿಲ್ಲ. ಪಾಕಿಸ್ತಾನದ ಮುಸ್ಲಿಂ ಉಗ್ರಪಂಥೀಯರಾಗಲಿ ಅಥವಾ ಸರ್ವಸ್ವ ಕಳೆದುಕೊಂಡ ವರಳಿಯ-ತೆಲಂಗಾಣದ ಕಮ್ಯುನಿಸ್ಟ್ ರೈತರಾಗಲಿ ಗಾಂಧಿಯನ್ನು ಕೊಲ್ಲಲಿಲ್ಲ. ಗಾಂಧಿಯನ್ನು ಕೊಂದದ್ದು ಒಬ್ಬ ‘ಹಿಂದೂ’ ಬ್ರಾಹ್ಮಣ! ಗಾಂಧಿಯ ರಾಮನ ಬಾಣ ಯಾರನ್ನು ಹೆಚ್ಚು ಚುಚ್ಚುತ್ತಿತ್ತು ಎಂದು ಇದರಿಂದಲೇ ವೇದ್ಯ ವಾಗುತ್ತದೆ.

ದಲಿತರಿಗೆ ಗಾಂಧೀ ಬಗೆಗಿನ ವಿರೋಧಕ್ಕೆ, ಅಂಬೇಡ್ಕರರ ವಿದ್ವತ್ ಪೂರ್ಣ ಸಿದ್ಧಾಂತ, ಬರಹ – ಭಾಷಣಗಳ ತಳಹದಿ ಇತ್ತು. ಕಮ್ಯುನಿಸ್ಟ್ ರಿಗೆ ಗಾಂಧಿವಾದದ ಎದುರು ಮಾರ್ಕ್ಸ್ ವಾದವೆಂಬ ವಿಶ್ವ ವಿಶಾಲ ತತ್ವದ ಆಸರೆಯಿತ್ತು. ಆದರೆ ವೈದಿಕಶಾಹಿಗಳಿಗೆ ಯಾವ ಸೈದ್ಧಾಂತಿಕ ತಲೆ ಬುಡವೂ ಇರಲಿಲ್ಲ. ಅವರ ಗರ್ಭಗುಡಿಯೊಳಗೇ ನಿಂತು ಅವರ ಮಂತ್ರ ಗಳನ್ನೂ ಉಚ್ಚರಿಸಿಯೇ ಅವರ ಭೂತವನ್ನು ಉಚ್ಚಾಟನೆ ಮಾಡುತ್ತಿದ್ದ ಗಾಂಧಿಯನ್ನು ದೈಹಿಕ ಹಲ್ಲೆ / ಕೊಲೆ ಮಾಡದೆ ಬೇರೆ ಮಾರ್ಗವೇ ಇರಲಿಲ್ಲ.

ಆದರೆ ಇಂದು ಹಿಂದುತ್ವ ಪರಿವಾರ ಗಾಂಧಿಯನ್ನು ಮತ್ತು ಗಾಂಧಿಯ ಅಂತರಂಗದ ಶಿಷ್ಯ ಪಟೇಲ್ ರನ್ನು ನುಂಗುತ್ತಿದೆ. ಸಂಘ ಪರಿವಾರವನ್ನು ನೆಹರುಗಿಂತ ಒಂದು ಕೈ ಹೆಚ್ಚೇ ವಿರೋಧಿಸುತ್ತಿದ್ದ ಪಟೇಲರು ಇಂದು ಗಣ ವೇಷ ತೊಟ್ಟು ನಡು ನೀರಿನಲ್ಲಿ ಮೂರ್ತಿಯಾಗಿ ನಿಂತಿದ್ದರೆ, ನೆಹರು ಇನ್ನೊಂದು ಐದು ವರ್ಷಕ್ಕೆ “ನಮಸ್ತೆ ಸದಾ ವತ್ಸಲೇ….” ಶುರು ಮಾಡಿಕೊಳ್ಳಬಹುದು. ಇನ್ನು ಅಂಬೇಡ್ಕರ್ ರಂತೂ “ಸಾಮಾಜಿಕ ಕ್ರಾಂತಿ ಸೂರ್ಯ” ರಾಗಿ ಹಿಂದೂ ಧರ್ಮದ ರಕ್ಷಣೆಗೆ ಕಂಕಣ ತೊಟ್ಟು ನಿಂತಾಗಿದೆ!

ಇಂಥದ್ದರಲ್ಲಿ, ಸಂಘ ಪರಿವಾರದ ಬದ್ಧ ವಿರೋಧಿಗಳಾದ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ‘ಮಹಾತ್ಮಾ ಗಾಂಧಿ ಬ್ರಿಟಿಷರ ಏಜೆಂಟ್’ ಎಂದು ಇತ್ತೀಚಿಗೆ ಅಪ್ಪಣೆ ಕೊಡಿಸಿದ್ದಾರೆ. ಅರುಂಧತಿ, ಗಾಂಧಿಯನ್ನು ಹಿಗ್ಗಾ ಮುಗ್ಗಾ ಖಂಡಿಸಿ, ನವಯಾನ ಪ್ರಕಟಿಸಿದ ಬಾಬಾ ಸಾಹೇಬರ “Annihilation of Caste” ನಲ್ಲಿ ಮುನ್ನುಡಿ ಬರೆದಿದ್ದಾರೆ. ಇದೆಲ್ಲದುರಿಂದ ಯಾರಿಗೆ ಯಾವ ರಾಜಕೀಯ ಲಾಭ ಸಿಗುತ್ತದೆ ಎಂದು ಗೊತ್ತಾಗದಷ್ಟು ಅಮಾಯಕರೇ ಇವರೆಲ್ಲ ಎಂದು ಅಚ್ಚರಿಯಾಗುತ್ತದೆ!

ಬುದ್ಧ- ಬಸವ-ಮಾರ್ಕ್ಸ್-ಫುಲೆ-ಅಂಬೇಡ್ಕರ್ ವಾದಿಗಳು ಗಾಂಧಿಯನ್ನು ಹೀಗೆ ದೂರ ಮಾಡಿಕೊಂಡಿದ್ದ ಪರಿಣಾಮ ಇಂದು ಗಾಂಧಿಯನ್ನು ಸಂಘಿಗಳು ಹೈಜಾಕ್ ಮಾಡಿಕೊಂಡಿದ್ದಾರೆ. ನಿಮಗೆ ಗೊತ್ತಿರಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪ್ರಾತಃ ಸ್ಮರಣೀಯರ ಪಟ್ಟಿ ಒಂದಿದೆ; ಅದರಲ್ಲಿ ಗಾಂಧಿ ಕೂಡ ಒಬ್ಬರು. ೧೯೯೨ ರ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣದ ಜೊತೆ ಜೊತೆಗೆ ಕೈಗೆತ್ತಿ ಕೊಂಡ ಅಜೆಂಡಾ ಗಾಂಧಿಯ “ಸ್ವದೇಶೀ”. ಸಂಘ ಪರಿವಾರದ ಬೆನ್ನೆಲಬು ಎನಿಸಿಕೊಂಡ ವ್ಯಾಪಾರಸ್ಹರು ತಾವು ವಿದೇಶಿ ಸರಕು ಅಂಗಡಿಯಲ್ಲಿ ಇಟ್ಟುಕೊಂಡೇ “ಸ್ವದೇಶೀ ಸಾಮಗ್ರಿ ಕೊಳ್ಳಿ” ಎಂದು ಪ್ರಚಾರ ಶುರು ಮಾಡಿದರು. ಹೀಗೆ, ಗಾಂಧಿಯನ್ನು ಕಾಪಿ ಹೊಡೆಯದೆ ಇದ್ದಿದ್ದರೆ ಸಂಘಿಗಳಿಗೆ ಸಂಸತ್ತಿನಲ್ಲಿ “೩೫ ಮಾರ್ಕು” ದಾಟುತ್ತಿರಲಿಲ್ಲ.

ಇನ್ನು ಗಾಂಧಿಯನ್ನು ದೊಡ್ಡ ದೊಡ್ಡ ‘ಸೈದ್ಧಾಂತಿಕ’ ಕಾರಣಗಳಿಗೆ ವಿರೋಧಿಸಿದವರು ಇಂದು ಬೋರ್ಡಿಗಿಲ್ಲದೆ ಹೋದರು. ಏನೇ ಆದರೂ ಗಾಂಧಿ ವಿರೋಧದಿಂದ ಒಂದು ಪೈಸೆಯ ಲಾಭವಂತೂ ಇಲ್ಲ; ಉಲ್ಟಾ ನಷ್ಟವೇ ಜಾಸ್ತಿ. ಇಂದು ವಿದೇಶಗಳಲ್ಲಿ ಭಾರತ ಪ್ರತಿಮೆ ಎಂದರೆ ಗಾಂಧಿ ಪ್ರತಿಮೆ. ವಿದೇಶಗಳಲ್ಲಿ ಗಾಂಧಿಯನ್ನು ಬೈದುಕೊಂಡು ತಿರುಗಿದರೆ ಭಾರತ ವನ್ನೇ ಬೈದಂತೆ. ಉಗ್ರ ನಾಸ್ತಿಕವಾದಿ ಗೊ.ರಾ ಮತ್ತು ಹೆಚ್. ನರಸಿಂಹಯ್ಯನವರು ಎಷ್ಟು ಗಾಂಧಿವಾದಿಯೊ ಅಷ್ಟೇ ಸ್ವಮೂತ್ರ ಪಾನ ಮಾಡುವ ಕಟ್ಟಾ ಸಂಪ್ರದಾಯವಾದಿ ಮೊರಾರ್ಜಿ ಕೂಡ ಅಷ್ಟೇ ಗಾಂಧಿವಾದಿ. JP, ಲೋಹಿಯಾರಷ್ಟೇ ಗಾಂಧಿಯನ್ನು ಸರದಾರ್ ಪಟೇಲ್ ಮತ್ತು ಕೆ. ಎಲ್. ಮುನ್ಷಿ ಇಷ್ಟ ಪಟ್ಟಿದ್ದರು. ಇನ್ನು ತೆಲಂಗಾಣದಲ್ಲಿ ಪಟೇಲರ ಗುಂಡು ಎದುರಿಸುತ್ತಲೇ, ಗಾಂಧಿಗೆ ಶ್ರದ್ಧಾಂಜಲಿ ಅರ್ಪಿಸುವ ಡಾಂಗೆಯ ವೈಶಿಷ್ಟ್ಯ ನೋಡಿ! ತತ್ವ ಸಿದ್ಧಾಂತಗಳ ಎಲ್ಲೆ ಮೀರಿ ಎಲ್ಲ ಹಂತದ ಮತ್ತು ಭಿನ್ನ ಒಲವಿನ ವ್ಯಕ್ತಿ ಗಳನ್ನೂ ಆಕರ್ಷಿಸುವ ಶಕ್ತಿ ಮತ್ತು ಸತ್ವ ಗಾಂಧಿಯಲ್ಲಿತ್ತು.

ಗೋಡೆಗೆ ಬಣ್ಣ ಹಚ್ಚುವ ಮೊದಲು ಪುಟ್ಟಿ ಹಚ್ಚುವ ಮಾದರಿಯಲ್ಲಿ ರಾಜಕೀಯ ಹೋರಾಟಕ್ಕೆ ಮುನ್ನ ಮತ್ತು ನಂತರ ವಯಕ್ತಿಕ ಮತ್ತು MKGandhiಸಾಮಾಜಿಕ ಸನ್ನದ್ಧತೆ ತಂದು ಕೊಳ್ಳಬೇಕಾದ ಅಗತ್ಯತೆಯನ್ನು ಗಾಂಧಿಯಷ್ಟು ಪ್ರಖರವಾಗಿ ಪ್ರತಿಪಾದಿಸಿದವರೇ ಇಲ್ಲ. ಎಲ್ಲ ಪಕ್ಷ ಗಳಿಗೆ ರಾಜಕೀಯವೆಂದರೆ ಚುನಾವಣೆ ಮಾತ್ರ. ಆದರೆ ಸಂಘ ಪರಿವಾರಕ್ಕೆ ಚುನಾವಣಾ ಸೋಲು ಗೆಲವು ಗೌಣ. ಸಂಘ ಪರಿವಾರದ್ದು “ವಾಲ್ ಪುಟ್ಟಿ” ರಾಜಕಾರಣ. ಬಣ್ಣ ಯಾವುದಾದರೂ ಆದೀತು ತಳಹದಿ ಭದ್ರವಾಗಿರಬೇಕು. ಇದನ್ನೇ ಅವರು ಗಾಂಧಿಯಿಂದ ಕಲಿತದ್ದು ಮತ್ತು ಉಳಿದವರು ಬಿಟ್ಟಿದ್ದು. ಗಾಂಧಿಯನ್ನು ಪ್ರಗತಿಪರರು ತುಚ್ಚೀಕರಿಸಿದರೆ ಕೋಮುವಾದಿಗಳು ಗುರುವಾಗಿ ಸ್ವೀಕರಿಸಿದರು. ಇಂದು ಅದೇ ಗುರುವನ್ನು ಮುಂದಿಟ್ಟುಕೊಂಡು ಪ್ರಗತಿಪರರ ಹೆಬ್ಬೆಟ್ಟು ಕಿತ್ತಿದ್ದಾರೆ. ರಾಜಕೀಯದ ಇಸ್ಪೀಟ್ ಆಟದಲ್ಲಿ ನಮಗೆ ಬೇಡ ಎಂದು ಪ್ರಗತಿಪರರು ಎಸೆದ ಕಾರ್ಡ್ ಇಂದು ಸಂಘಿಗಳಿಗೆ ಟ್ರಂಪ್ ಕಾರ್ಡ್ ಆಗಿದೆ!

ಕಾಂಗ್ರೆಸ್ ಗೆ ಚುನಾವಣಾ ರಾಜಕಾರಣ ಬಿಟ್ಟರೆ ಬೇರೆ ಗೊತ್ತಿಲ್ಲ. ಸಿದ್ಧಾಂತದ ಗೋಜು ಏನಾದರೂ ಇದ್ದರೆ ಸಿಪಿಐ / ಸಿಪಿಎಂ ಮತ್ತು ಬಿ‌ಎಸ್‌ಪಿ ಗಳಿಗೆ. ಆದರೆ ಈ ಸೈದ್ಧಾಂತಿಕ ಪಕ್ಷಗಳ ಗತಿ ಏನಾಗಿದೆ? ಇಂದು ಸಂಘಿಗಳ ‘ರಾಮ’ನನ್ನು ಎದುರಿಸುವ ಶಕ್ತಿ ಏನಾದರೂ ಇದ್ದರೆ ಅದು ಗಾಂಧಿಯ ರಾಮನಿಗೆ ಮಾತ್ರ ಹೊರತು (ಯೆಚೂರಿ) ಸೀತರಾಮನಿಗಲ್ಲ ಅಥವಾ (ಕಾನ್ಷಿ) ರಾಮನನ್ನು ತೊರೆದ ಮಾಯಾವತಿಗೂ ಅಲ್ಲ. ಸತ್ವಹೀನ ಕಾಲರ ಕೀಟಾಣು ಗಳು ಕಾಲರ ರೋಗಕ್ಕೆ ಮದ್ದು. ಹಾಗೆಯೇ ಸಂಘಿಗಳ ಕೋಮುವಾದಕ್ಕೆ ಹಿಂದೂಧರ್ಮ ಮತ್ತು ವರ್ಣಾಶ್ರಮ ‘ಪ್ರತಿಪಾದಿಸುವ’ ಗಾಂಧಿಯೇ ಮದ್ದು. ಗಾಂಧಿಯಷ್ಟು ರಾಜಕಾರಣ ದಲ್ಲಿ ‘ಧರ್ಮವನ್ನು’ ಬೇರೆಸಿದವರೇ ಇಲ್ಲ. ಆದರೆ ಗಾಂಧಿ ಧರ್ಮವನ್ನು ಬಳಸಿದ್ದು ವಿಷವನ್ನು ವಿಷ ಕೊಳ್ಳುವಂತೆ ಗಾಂಧಿ ಬಿಡಿಸಿದ ಒಂದೊಂದೇ ಚಿತ್ರವು ವಿಚಿತ್ರವಾಗಿ ಕಂಡರೂ ಒಟ್ಟಿನ ಕೊಲಾಜ್ ಅರ್ಥಪೂರ್ಣವಾಗಿಸುವ ಗಾಂಧಿ ಭಾರತವನ್ನು ಒಟ್ಟು ಗೂಡಿಸಿದ ಶಕ್ತಿ.

ಗಾಂಧಿ, ಎರಡಲ್ಲ, ನಾಲ್ಕು ಧ್ರುವಗಳನ್ನು (ಹಿಂದೂ-ಮುಸ್ಲಿಂ-ಎಡ-ಬಲ) ಸಮಗ್ರವಾಗಿ ಸಮನ್ವಯಗೊಳಿಸಿದ ಶಕ್ತಿ. ಸಂವಿಧಾನ ರಚನೆಗೆ ಬಾಬಾ ಸಾಹೇಬರನ್ನೇ ನೇಮಿಸಬೇಕು ಎಂದು ನೆಹರುಗೆ ಒತ್ತಾಯಿಸಿದ್ದು ಗಾಂಧಿಯೇ. ಅಂಬೇಡ್ಕರ್ ಮತ್ತು ಗಾಂಧಿ ನಡುವಣ ಬಿನ್ನತೆಗಳು ಹೊರಪದರಿನ ಹೊಂದಾಣಿಕೆ ಸಮಸ್ಯೆಗಳೇ ವಿನಃ ಅಂತರಂಗದ ಸರಿಹೋಗಲು ಸಾಧ್ಯವೇ ಇಲ್ಲದ ವೈರುಧ್ಯಗಳಲ್ಲ. ಅಂಬೇಡ್ಕರ್, ಗಾಂಧಿಗಿಂತ ಹೆಚ್ಚು ವಿದ್ವತ್ಪೂರ್ಣ ಮತ್ತು ಪ್ರಖರ ಶಕ್ತಿ. ನಿಜ. ಆದರೆ, ಗಾಂಧಿಯನ್ನು ನಂಜಿಕೊಳ್ಳಲು ಒಲ್ಲದ ಅಂಬೇಡ್ಕರ್ ವಾದಕ್ಕೆ ನಂಜು ತಗಲುವ ಭಯವಿದೆ. ಹಾಗೆಯೇ, ಮಾರ್ಕ್ಸ್‌ವಾದ ಭಾರತದ ಸಂದರ್ಭಕ್ಕೆ ಗಾಂಧೀ ಸತ್ವ ಮತ್ತು ಅಂಬೇಡ್ಕರ್‌ರ ಕಾಣ್ಕೆಯನ್ನು ಅಂತರ್ಗತಗೊಳಿಸಿಕೊಳ್ಳಲೇಬೇಕು. ಹಾಗೆಯೇ ಮಾರ್ಕ್ಸ್ ಪ್ರತಿಪಾದಿಸಿದ ಅಂತರರಾಷ್ಟ್ರೀಯ ಶೋಷಿತರ ಭ್ರಾತೃತ್ವ, ಅರ್ಥಿಕ ಸಮಾನತೆಯ ತತ್ವ ಅಂಬೇಡ್ಕರ್ ಸಿದ್ಧಾಂತಕ್ಕೆ ಅತಿ ಮುಖ್ಯ.

ಈ ತತ್ವ ಸಮನ್ವಯ ಇಂದಿನ ಸಾಮಾಜಿಕ ಮತ್ತು ರಾಜಕೀಯ ತುರ್ತುಗಳಲ್ಲಿ ಒಂದು ಎಂದಾದ ಮೇಲೆ ಗಾಂಧಿ ಇಂದಿನ ತುರ್ತು ಎಂದು ಬೇರೆ ಹೇಳಬೇಕಿಲ್ಲ. ಏಕೆಂದರೆ ಈ ತತ್ವ ಸಮನ್ವಯ ಸಾಧ್ಯವಾಗುವುದು ಗಾಂಧಿ ಎಂಬ ಸಮಾನಾಂತರ ಕೇಂದ್ರ ಬಿಂದುವಿನಿಂದ.

ಇಂದು, ಅಂಬೇಡ್ಕರ್ ವಾದಿಗಳು, ಲೋಹಿಯಾ ಮತ್ತು ಮಾರ್ಕ್ಸ್ ವಾದಿಗಳು ಸೇರಿದಂತೆ ಎಲ್ಲ ಸಮಾಜಪರ ಪ್ರಗತಿಪರ ಶಕ್ತಿಗಳು, ನಮ್ಮ- ನಮ್ಮಲ್ಲಿ ೧೦೦-೫ ಎಂಬ ಭೇದ ಬೆಳೆಸಿಕೊಂಡರೂ, ಬೇರೆಯವರನ್ನು ೧೦೫ ರ ಶಕ್ತಿಯಿಂದ ಎದುರಿಸಬೇಕಾದ ಅಗತ್ಯವಿದೆ. ಈ ಒಗ್ಗಟ್ಟಿನ ಸಾಧ್ಯವಾಗಿಸುವ ಅತ್ಯಂತ ಸರಳ ಸಂವಹನ ಸಾಧನ ಇಂದಿಗೆ ಗಾಂಧಿ ಮಾತ್ರ.

ಗಾಂಧಿಯ ಕುರಿತ ಬಿಡಿ ಬಿಡಿ facts ಗಳು ಸತ್ಯವೆನಿಸಿಕೊಳ್ಳುವುದಿಲ್ಲ. ಇಂದಿಗೆ ಇದನ್ನೆಲ್ಲಾ ಕೆದಕಿ ಕೊಂಡು ಇದ್ದೊಂದು ಗುಡಿಸಲನ್ನೂ gandhi2ಮೈಮೇಲೆ ಕೆಡವಿಕೊಳ್ಳಲು ಇದು ಸಂದರ್ಭವೂ ಅಲ್ಲ. ಇನ್ನು ಈ ಎಲ್ಲ ಅಂತರ್ ಕಲಹದ ಲಾಭ ಯಾರಿಗೆ ಎಂದು ಬಿಡಿಸಿ ಹೇಳಬೇಕಾದ ಅಗತ್ಯವೂ ಇಲ್ಲ.

ವಿಚಿತ್ರವೆಂದರೆ, ಇಂದು ಬಿಜೆಪಿಯಲ್ಲಿನ ಅಡ್ವಾಣಿ ಮತ್ತು ಬ್ರಾಹ್ಮಣಶಾಹಿ ನಾಯಕತ್ವಕ್ಕೆ ಮೋದಿ ಮೇಲೆ ಇರುವಷ್ಟು ಸಿಟ್ಟು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ರ ಮೇಲೂ ಇಲ್ಲ. ಆದರೂ ಹೇಗೆ ತೆಪ್ಪಗೆ ನುಂಗಿಕೊಂಡು ಕೂತಿದ್ದಾರೆ ನೋಡಿ. ಇಂತಹದ್ದರಲ್ಲಿ ನಾವು ನಾವುಗಳೇ ಇಲ್ಲ ಸಲ್ಲದ ರಾದ್ದಾಂತ ಮಾಡಿಕೊಂಡು ಹೋಗುತ್ತಿದ್ದೇವೆ. ಹಾಗೆಂದು ಪ್ರಗತಿಪರರ ವಿವಿಧ ಬಣಗಳು ತಮ್ಮ ಎಲ್ಲ ತಾತ್ವಿಕ ಭಿನ್ನಾಭಿಪ್ರಾಯಗಳನ್ನೂ ಸುಮ್ಮ ಸುಮ್ಮನೆ ಬಿಟ್ಟು ಬಿಡಬೇಕು ಸಕಾರಣವಿಲ್ಲದೆ ಸುಟ್ಟು ಬಿಡಬೇಕು ಎಂದಲ್ಲ. ಹೀಗೆ ಮಾಡಿದರೆ ಅದು ತುಂಬಾ ತಾತ್ಕಾಲಿಕ ಮತ್ತು ಕೃತ್ರಿಮವಾದೀತು.

ಅಭಿಪ್ರಾಯ ಮತ್ತು ಸೈದ್ಧಾಂತಿಕ ಭೇದಗಳು ಇರಲಿ. ಅವುಗಳನ್ನು ಮನಸ್ಸಿನ ಒಂದು ಒಳ ಕೊಣೆಯಲ್ಲಿ ಇಟ್ಟುಕೊಂಡೇ ಗಾಂಧಿ ಎಂಬ ಅಂಗಳದಲ್ಲಿ ಒಟ್ಟು ಸೇರೋಣ. ನಮ್ಮ ನಮ್ಮ ಕಾರ್ಯಕ್ರಮ ನಮಗಿರಲಿ; ಗಾಂಧಿ ಮಾತ್ರ ನಮ್ಮೆಲ್ಲರ “ಕನಿಷ್ಠ ಸಾಮಾನ್ಯ ಕಾರ್ಯಕ್ರಮ” ವಾಗಿರಲಿ.