Category Archives: ಇತರೆ

ವಿಭಾಗಿಸಿಲ್ಲದ ಲೇಖನಗಳು

ಕೆಟಿ ಶಿವಪ್ರಸಾದ್ : ಕಾಡುವ ಚಿತ್ರಗಳು

– ಪ.ಸ. ಕುಮಾರ್

[ಖ್ಯಾತ ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಇತ್ತೀಚೆಗೆ “ವರ್ಣಶಿಲ್ಪಿ ವೆಂಕಟಪ್ಪ ಕಲಾ ಪ್ರಶಸ್ತಿ”ಗೆ ಭಾಜನರಾಗಿದ್ದು ಅವರ ಕುರಿತು ಇನ್ನೊಬ್ಬ ಖ್ಯಾತ ಕಲಾವಿದ ಪ.ಸ.ಕುಮಾರ ಬರೆದಿರುವ ಒಂದಿಷ್ಟು ಮಾತುಗಳು.]

ನದಿ ದಂಡೆಯಲ್ಲಿ ಹರಿವ ನೀರೊಳಗೆ ಇಳಿಬಿಟ್ಟ ಕಾಲುಗಳಿಗೆ ಮೀನ ಮರಿಗಳ ಹಿಂಡು ಮುತ್ತಿಡುವ ಕ್ರಿಯೆಗೆ ಮೈ ಒಂದು ಕ್ಷಣ ಜುಂ ಎಂದು ಮನಪುಲಕಗೊಳ್ಳುತ್ತದೆ. ಮೈಮನಸ್ಸಷ್ಟೇ ಅಲ್ಲ ಎದೆಗೂಡು ಹೊಟ್ಟೆಯೊಳಗೆಲ್ಲಾ ನುಣ್ಣನೆಯ ಮೀನ ಮರಿಗಳ ಸಾಲು ಹರಿದಾಡಿದಂತಾಗಿ ಜೀವ ಹಾಯೆನಿಸುತ್ತದೆ.

ಗಂಭೀರವಾಗಿ ಒಪ್ಪಾಗಿ ಟುಸ್ . . . ಟುಸ್ ಎಂದು ಸಣ್ಣಗೆ ಹೊಗೆ ಬಿಡುತ್ತಾ ನಿರುಪದ್ರವಿಯಂತೆ ರೈಲ್ವೆ ನಿಲ್ದಾಣದಲ್ಲಿ ನಿಂತಿರುವ ಹೊಗೆ ಬಂಡಿಯ ಹತ್ತಿರ ನಿಲ್ಲಿ. ಕರಿ ಇದ್ದಿಲಿನ ಹೊಗೆಯ ಕಮಟು ಘಾಟಿನ ನಾಟಿ ವಾಸನೆಯ ಪರಿಚಯ ಮಾಡಿಸುತ್ತದೆ. ಕ್ಷಣ ಕಳೆದಂತೆ ಅದರ ಒಡಲ ಬೆಂಕಿಯ ಶಾಖ ನಿಮ್ಮನ್ನು ಅವರಿಗೆ ತತ್ತರಿಸುವಂತೆ ಮಾಡುತ್ತದೆ.

ಈ ರೀತಿ ಒಂದರಲ್ಲಿ ತಂಗಾಳಿ ಒಡಲೊಳಗೆ ನುಗ್ಗಿದಂತಹ ಮುದ ಅನುಭವವಾದರೆ ಚರ್ಮ ಚುರುಮುರು ಕಿರ್ರೋ ಎನ್ನುವ ಅನುಭವ ಮತ್ತೊಂದರಲ್ಲಿ . kt_shivaprasad-art-familyಈ ತದ್ವಿರುದ್ದ ಅನುಭವಗಳನ್ನು ಆಗಿಂದ್ದಾಗ್ಗೆ ನಮಗೆ ನೀಡಬಲ್ಲ ಏಕೈಕ ವ್ಯಕ್ತಿಯೆಂದರೆ ಶಿವಪ್ರಸಾದ್ ಕೆ.ಟಿ. ಅಲಿಯಾಸ್ ಶಿವ. “ಶಿವ”. ಈ ಎರಡಕ್ಷರದ ಹಸ್ತಾಕ್ಷರವನ್ನು ಒಂದು ಬೃಹತ್ ಕಲಾಕೃತಿಯ ಕೆಳಭಾಗದಲ್ಲಿ ನಾನು ಗಮನಿಸಿ ಎರಡೂವರೆ ದಶಕ ಕಳೆದಿದೆ. ಆದರೆ ಆಕೃತಿ ನೀಡಿದ ಷಾಕ್ ಮಾತ್ರ ಇನ್ನೂ ನನ್ನಲ್ಲಿ ಹಸಿಯಾಗಿಯೇ ಇದೆ. ಸ್ಟಿಲ್ ಲೈಫ್, ಪೋರ್ಟ್‌ರೈಟ್, ಲ್ಯಾಂಡ್ ಸ್ಕೇಪ್, ಕಾಂಪೋಸಿಷನ್ ಇತ್ಯಾದಿ ಕೆಲವೇ ಪದಗಳ ಲಿಮಿಟೆಡ್ ಬೌಂಡರಿಯೊಳಗೆ ಬೆಳೆದ ನನ್ನ ಜ್ಝಾನಕ್ಕೆ ಆಕೃತಿಯ “Opening Ceremony of Bharati Factory” ಶೀರ್ಷಿಕೆ ಕನ್ನಡದಲ್ಲಿದ್ದ ಹಸ್ತಾಕ್ಷರ ವಿಸ್ಮಯ ಜೊತೆಗೆ ಆ ಕೃತಿಕಾರನ ಬಗ್ಗೆ ಕೂತೂಹಲ ಮೂಡಿಸಿತ್ತು. ಶಿವ ಎಂಬ ವ್ಯಕ್ತಿಯ ಬಗ್ಗೆ ವಿವರ ಸಂಗ್ರಹಿಸತೊಡಗಿದೆ. ವ್ಯಕ್ತಿ ಹಾಸನದವರು, ಬಾಂಬೆ ಜೆ.ಜೆ.ಕಲಾಶಾಲೆಯ ಪ್ರಾಡಕ್ಟ್ ಎಂದು ತಿಳಿಯಿತು. ಕರ್ನಾಟಕದ ಕಲಾವಿದರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಪರಿಚಯಿಸಿಕೊಳ್ಳುತ್ತಿದ್ದ ನನ್ನ ಪಟ್ಟಿಯಲ್ಲಿ ಈ ಹೆಸರೂ ಸೇರ್ಪಡೆಯಾಯಿತು.

ನಾನು ಮತ್ತು ಸಿ.ಚಂದ್ರಶೇಖರ್ ಕರ್ನಾಟಕ ಕಲಾಯಾತ್ರೆ ಕಾರ್ಯಕ್ರಮವನ್ನು ರೂಪಿಸಿದಾಗ ಶಿವ ನಮ್ಮ ತಂಡದಲ್ಲಿ ಬಂದರು. ಅಲ್ಲಿಂದ ಪ್ರಾರಂಭವಾದ ಗೆಳೆತನ ಇಂದಿಗೂ ಹಸಿರಾಗೇ ಉಳಿದಿದೆ. ಹಸಿರಾಗಿದೆ ಅಂದರೆ ಜೀವಂತವಾಗಿದೆ ಅಂತ ತಾನೇ? ಜೀವಂತಿಕೆ ಎಂದರೆ ಭಿನ್ನಾಭಿಪ್ರಾಯ, ಮುನಿಸು, ಹೊಗಳಿಕೆ, ತೆಗಳಿಕೆ, ಪಿನ್ನಿಂಗ್ ಎಲ್ಲಾ ಸೇರಿಕೊಂಡಿದೆ.

ಕಲಾಯಾತ್ರೆಯ ಪ್ರದರ್ಶನದಲ್ಲಿ ಶಿವನ ಒಂದು ಚಿತ್ರವಿತ್ತು ಅದು ನಗ್ನ ಪುರುಷನ ಚಿತ್ರ. ಆ ಚಿತ್ರದಲ್ಲಿ ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಧಿಕ್ಕರಿಸಿ ತನ್ನ ಲೋಕಕ್ಕೆ ತಾನೇ ಒಡೆಯ ನೆಂಬ ಗತ್ತಿನಿಂದ ಕೂತಿದ್ದ ಆ ಪುರುಷ ಯಾರನ್ನೂ ಲೆಕ್ಕಿಸದೆ ರಸ್ತೆಯಲ್ಲಿ ನಿಂತಿದ್ದ ಗೂಳಿಯಂತಿದ್ದ ಇದು ಶಿವನ ಮನಃಸ್ಥಿತಿ ಕೂಡ.

ಜಾತಿವ್ಯವಸ್ಥೆಯ ವಿರುದ್ಧ ಸಿಡಿದೇಳೂವ ಈತನ ಮನಸ್ಸು ಡಾಂಭಿಕ ಲೌಕಿಕ ರೀತಿ ನೀತಿಗಳಿಗೆ ಧಿಕ್ಕರಿಸುತ್ತದೆ. ಈತ ಹೆಜ್ಜೆ ಇಟ್ಟ ಕಡೆ ದಿಕ್ಕು ಮೂಡತ್ತದೆ.

ಶ್ರೀಮಂತಿಕೆಯ ನೆರಳ ತೊರೆದು ಉರಿವ ಬೆಂಕಿಯನ್ನು ಪ್ರೀತಿಸಿದ್ದು ಇದೇ ಕಾರಣಕ್ಕೆ ಬಾಳ್ಳುಪೇಟೆಯ ದಲಿತರೊಡನೆ ರೈತರೊಡನೆ ಬದುಕಿ ಹದ ಹೊಂದಿದ ಅವನ ಮನಸ್ಸು ರೇಖೆಗಳಲ್ಲಿ ಹರಿಯುತ್ತದೆ. ಇದರಿಂದಾಗಿಯೇ ಈತನ ಕೈಯಲ್ಲಿ ಮೂಡುವ ರೇಖೆಗಳಿಗೆ ಲಾವಣ್ಯವಿರುವುದಿಲ್ಲ. ಒರಟುತನವಿರುತ್ತದೆ. ಕಾಯಿಸಿದ ತಮಟೆಯ ನಾದವಿರುತ್ತದೆ. ಜಾನಪದ ಸೂಕ್ಷ್ಮತೆಯ ನವಿರಿರುತ್ತದೆ. ನೋಡುಗನ ಎದೆಗೆ ಜಾಡಿಸಿ ಒದೆಯುತ್ತದೆ. ಇಲ್ಲಿ . . .ಇಲ್ಲಿ. . . ನಿನ್ನೊಡನೆ ದಲಿತನಿದ್ದಾನೆ. ಅವನ ಕಣ್ಣಲ್ಲಿರುವ ನೋವ ನೋಡು , ಸೇಡು ನೋಡು ಅವನ ಎಣ್ಣೆ ಮುಖದಲ್ಲಿ ಮಿಂಚುವ ಸಾವಿರ ಸೂರ್ಯನ ನೋಡು ಎಂದು ಕೆಣಕುತ್ತದೆ. ಶಿವನನ್ನು ಕಾಡಿದ ವ್ಯಕ್ತಿಗಳ ಚಿತ್ರಗಳಲ್ಲಿ ಆತ್ಮವಿರುತ್ತದೆ.

ಒಂದು ಹೂವಿನ ಸೌಂದರ್ಯ, ಮಗುವಿನ ಕಣ್ಣುಗಳಲ್ಲಿರುವ ಮುಗ್ಧತೆಯನ್ನು ಅರಿಯ ಬೇಕಾದರೆ ಯಾವ art history ಯನ್ನು ಓದಬೇಕಾಗಿಲ್ಲ. ಯಾವ aesthetic ಪಂಡಿತನಾಗಬೇಕಾಗಿಲ್ಲ. ನೋಡೋ ಕಣ್ಣು ಮಿಡಿಯೋ ಹೃದಯ ಎರಡೂ ಸರಿಯಾಗಿದ್ರೆ ಸಾಕು ತನ್ನಷ್ಟಕ್ಕೆ ತಾನೇ ಅರ್ಥವಾಗುತ್ತೆ ಎಂದು ವೈ.ಎನ್.ಕೆ. ಹೇಳಿದ ಮಾತಿನ ಮರ್ಮ ತಿಳಿಯ ಬೇಕಾದರೆ ಶಿವ ರಚಿಸಿದ ಫಾತೀಮಾ ಮತ್ತು ಮಗು ಚಿತ್ರದ ಎದುರು ನಿಲ್ಲಬೇಕಾಗುತ್ತದೆ. ಗರ್ಭಿಣಿ ಫಾತೀಮಾಳ ಕನ್ಣುಗಳನ್ನು ನೋಡಬೇಕು ಅವಳ ಸಆಂಸ್ಕೃತಿಕ ಜೀವನದ ಚಹರೆ ಪ್ರತ್ಯಕ್ಷವಾಗುತ್ತದೆ. ಮೂಲಭೂತವಾದೀತನದ ಸೆಳಕು, ಬಡತನದ ಕ್ರೌರ್ಯ ಇದರ ಮಧ್ಯೆ ಅನಿವಾರ್ಯದ ಬದುಕು , ಮಿಂಚುವ ತಾಯ್ತನ ಎಲ್ಲವನ್ನು ಒಟ್ಟಿಗೆ ಗಂಭೀರವಾಗಿ ಕಟ್ಟಿಕೊಡುವ ಕೃತಿ ಅದರಲ್ಲಿ ಫಾತೀಮಾಳ ಪಕ್ಕ ನಿಂತ ಹುಡುಗನ ಕಣ್ಣುಗಳ ಮುಗ್ಧತೆ ದಂಗು ಬಡಿಸುತ್ತದೆ. ಜಗತ್ತಿನ ಬೆರಗಿಗೆ ಬೆರಗುಗೊಂಡು ಅರಳಿದ ಹೂವ ಪಕಳೆಗಳಂತಿದೆ. ಆ ಕಣ್ಣುಗಳ ಕಡೆಗೆ ಬೆರಳು ಮಾಡಿ ನಾನು ಹೇಳಿದ್ದೆ. ‘ಈ Portion ತುಂಬಾ Sensitive ಆಗಿದೆ ಕಣೋ.’

ಅವನ ಕಣ್ಣುಗಳು ಅರಳಿತು. ‘ಲೇ ನಾಲ್ಕು ದಿನ ತಗೊಂಡಿದ್ದೀನೋ ದಿನಾ ಕಣ್ಣುಗಳನ್ನು ಬರೆಯೋದು ಅಳಿಸೋದು ಬೇಜಾರಾಗೋಯ್ತು. ಕೋಪ ಬಂದು ಕೈಯ್ಯಲಿದ್ದ ಬಟ್ಟೆಯನ್ನು ಜೋರಾಗಿ ಆ ರೇಖೆ ಮೇಲೆ ಎಸೆದು ಹೊರಗಡೆ ಬಂದು ಸಿಗರೇಟ್ ಸೇದ್ತಾ ಕುಳಿತುಕೊಂಡೆ. ಯಾಕೋ ಗೊತ್ತಿಲ್ಲ. ಕಣ್ಣುಗಳ ತುಂಬಾ ನೀರ್ ತುಂಬಿಕೊಂಡ್ ಬಿಡ್ತು ಕಣೋ . . . ಇವತ್ತಿಗೆ ಸಾಕು ಅಂತ ಅನಿಸಿ ಒಳಗೆ ಬಂದ್ ಕ್ಯಾನ್‌ವಾಸ್‌ನ ನೋಡ್ದೆ… ನನ್ನ ಕಣ್ಣನ್ನ ನಂಬಕಾಗಿಲ್ಲ. ನಾನು ಬಟ್ಟೆ ಎಸೆದ ರಭಸಕ್ಕೆ ಆ ರೇಖೆಗಳು smudge ಆಗಿ ಆ ಕಣ್ಣುಗಳಲ್ಲಿ innocence ಬಂದ್ ಬಿಟ್ಟಿತ್ ಕಣೋ’ ಎಂದು ಹೇಳುವಾಗ ktshivprasad-artಅವನ ಮುಖ ಕೆಂಪು ಕೆಂಪಾಗಿತ್ತು. ಕಣ್ಣಂಚಿನಲ್ಲಿ ನೀರಿನ ಸಣ್ಣ ರೇಖೆ ಮಿಂಚುತಿತ್ತು. ಕೃತಿ ರಚನಾ ಸಮಯದಲ್ಲಿನ ಕಾಳಜಿ, ಮನಸ್ಸಿನ ಆರ್ದ್ರತೆ ಮೈ ನರನರಗಳು ಭಾವನೆಗಳನ್ನು ಅಪೋಷಿಸಿರುವ ರೀತಿಯನ್ನು ಅವನ ಕೃತಿಗಳು ಪರಿಚಯಿಸುತ್ತವೆ. ಎಷ್ಟು ಕಲಾವಿದರಿಗೆ ಒಲಿದಿದೆ ಈ ಜೀವರಸ ಹರಿಸುವ ಸಿದ್ಧಿ? ಈ ರೀತಿಯ ತಲ್ಲೀನತೆ ಮುಗ್ಧತೆ ಇಲ್ಲದಿದ್ದಲ್ಲಿ ವಾಷ್ ಬೇಸನ್ನಿನ ಮೇಲಿನ ಕನ್ನಡಿಯಲ್ಲಿ ಆಕಾಶ ಆವರಿಸಿ ಕೊಳ್ಳುತ್ತಾ ತೊಗಲು ಗೊಂಬೆಗಳು ತಲೆಕೆಳಕಾಗಿ ಇಷ್ಟ ಬಂದಂತೆ ಕ್ಯಾನ್ ವಾಸ್ ತುಂಬಾ ಓಡಾಡುತ್ತಾ? ಓಡಾಡಲಿ ಬಿಡಿ ಎಷ್ಟಾದರೂ ಅದು ಮುಕ್ತತೆಯನ್ನು ಆರಾಧಿಸುವ ಕೃತಿಕಾರನ ಕೂಸುಗಳಲ್ಲವೆ?

ಶಿವನ ಮೇಲೆ ದಲಿತರು ರೈತರು, ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿಯವರ ಪ್ರಭಾವ ಸಾಮಾಜಿಕ ಪ್ರಜ್ಜೆ, ತರ್ಕ, ಜಾಗೃತ ಅವಸ್ಥೆಯನ್ನು ಮೂಡಿಸಿದ್ದರೆ ವಿದ್ಯಾರ್ಥಿ ಜೀವನ ಕಲಿಸಿದ ಪಾಠ ಮಾತ್ರ ಬೇರೆ. ಸಟ್ಟಾ ಸಾರಾಯಿ , ಜೂಜು. ಗಾಂಜಾ, ಗೂಂಡಾಗಿರಿ, ಅಫೀಮುಗಳ ಒಡನಾಟ ಅಸಲೀ ಜೀವನವನ್ನು ಪರಿಚಯಿಸಿದೆ. ಎಲ್ಲಾ ರೀತಿಯ ಪಟ್ಟುಗಳನ್ನು ಬಾಂಬೆ ಕಲಿಸಿದೆ. ಅದ್ದರಿಂದಲೇ ವ್ಯವಹಾರದಲ್ಲಿ ಚತುರತೆ, ತರ್ಕಬದ್ಧವಾದ ಮಾತು, ಕ್ಷಣದಲ್ಲಿ ಎದುರು ಕೂತವನ ಬಾಯಿಮುಚ್ಚಿಸುವ ನಾಜೂಕುತನ ಪಡೆಯಬೇಕೆಂಬುದನ್ನು ತನ್ನ ಪಾದದ ಬಳಗೇ ಬರುವಂತೆ ಮಾಡುವ ಮ್ಯಾಜಿಕ್ ಅವನ ಬೆಚ್ಚನೆಯ ಹೃದಯದೊಳಗೀ ನೇತಾಡುವ ಕಾಲೇಳೆಯುವ ಕುಶಲತೆಯಿದೆ.

ಅನ್ಯಾಯದ ವಿರುದ್ಧ ಸಿಡಿದೇಳುವ ಮಾನವೀಯತೆಗೆ ಮರಗುವ ಈತನ ಮನಸ್ಸು ಲಾಬಿ ಮಾಡಬೇಕಾದ ಸಂದರ್ಭದಲ್ಲಿ ಚತುರತೆಯಿಂದ ವರ್ತಿಸುತ್ತದೆ. ರೂಪಿಸುವ ತಂತ್ರ ಇಡುವ ಹೆಜ್ಜೆ ನೀಡುವ ಹೇಳಿಕೆಗಳು ಅಚಾರ್ತುಯಕ್ಕೆ ನಿದರ್ಶನ. ಇಷ್ಟೆಲ್ಲಾ ಯಾಕೆ ಹೇಳುತ್ತೇನೆಂದರೆ ಶಿವ ಎಂದೂ ಮಹಾತ್ಮನಂತೆ, ತ್ಯಾಗಿಯಂತೆ ಪೋಸು ಕೊಡುವುದಿಲ್ಲ. ಮಹಾತ್ಮನಾಗುವ ಹುಚ್ಚೂ ಆತನಿಗಿಲ್ಲ. ಪಾರದರ್ಶಕ ಪದರಗಳಲ್ಲಿ ಆತನ ಎಲ್ಲಾ ಗುಣಗಳು ಸ್ಪಷ್ಟವಾಗಿ ಕಾಣುತ್ತದೆ. ಇಷ್ಟೆಲ್ಲಾ ಗುಣಗಳೊಂದಿಗೆ ಅಳವಾದ ಅಧ್ಯಯನದ ಗಟ್ಟಿ ತಳಪಾಯ ಇರುವುದರಿಂದಲೇ ಈತನ ಗುಟುರಿಗೆ ಮೂಲಭೂತವಾದಿಗಳ ತೊಡೆ ನಡುಗುತ್ತದೆ. ಸಮಾಜ ಚಿಂತಕರು ಈತನ ವಾದಕ್ಕೆ ತಲೆದೂಗುತ್ತಾರೆ. ಕಲಾಕ್ಷೇತ್ರದಲ್ಲಿ ಈತನದು ಗಟ್ಟಿಗಳು, ಅದುದರಿಂದಲೇ ಆತ ಪ್ರೇರಕ ಪ್ರಚೋದಕ ಕ್ರಿಯಾತ್ಮಕತೆಯೊಂದಿಗೆ ವಿಶಿಷ್ಟ ಸಂವೇದನೆಯ ಕಲಾವಿದರಾಗಿ ಗುರುತಿಸಲ್ಪಟ್ಟಿರುವುದು.

ಸಂಬಂಧ ಅನುಬಂಧಗಳಿಗೆ ನಮ್ಮ ನಿಮ್ಮಂತೆ ಅಂಟಿಕೊಳ್ಳುವ ಅಭ್ಯಾಸವಿಲ್ಲ. ಶಿವನಿಗೆ ಕೂತ ಗೂಳಿ ಎದ್ದು ನಿಂತು ಮೈಯ್ಯ ಮೇಲಿನ ಧೂಳು ಕೊಡವುದಷ್ಟೇ dalit-entrepreneurship-10ಸಲೀಸಾಗಿ ಸಂಬಂಧಗಳನ್ನು ಕೊಡವಿಬಿಡುತ್ತಾನೆ. ಆದ್ದರಿಂದಲೇ ಪರಿಚಯಸ್ಥರು ಗೆಳೆಯರಾಗುವಂತೆ, ಗೆಳೆಯರೂ ಪರಿಚಯಸ್ಥರಾಗಿಯೇ ಉಳಿದುಬಿಡುತ್ತಾರೆ. ಹೆಣ್ಣುಗಳ ವಿಚಾರದಲ್ಲೂ ಅಷ್ಟೆ. ಪರಿಚಯಸ್ಥರು ಗೆಳತಿಯರಾಗುತ್ತಾರೆ, ಕೆಲವರು ಬಾಳ ಸಂಗಾತಿಗಳಾಗುತ್ತಾರೆ. ಮತ್ತೆ ಅವರು ಗೆಳತಿಯರಾಗಿ ಪರಿಚಯಸ್ಥರ ಸ್ಥಾನಕ್ಕೆ ಬಂದು ನಿಂತುಬಿಡುತ್ತಾರೆ. ವಿಚ್ಛೇದನ ಪಡೆದ ಕೆಲವೇ ತಿಂಗಳುಗಳು ಕಳೆದಿತ್ತು. ಮಾರ್ಥ ಮತ್ತು ಶಿವ ಕಲಾ ಪ್ರದರ್ಶನದಲ್ಲಿ ಹರಟೆ ಹೊಡೆಯುತ್ತಾ ನಿಂತಿದ್ದನ್ನು ನೋಡಿದ ಕಲಾವಿದೆಯೊಬ್ಬಳು ‘ನೀವು ಡೈವೋರ್ಸ್ ಮಾಡಿದ್ದೀರಾ ಅಂಥಾ ಕೇಳಿದ್ದು ಸುಳ್ಳಾ?’ ಎಂದು ಕಣ್ಣಗಲಿಸಿ ಕೇಳಿದ್ದಳು.

‘ನಾವಿಬ್ರು ಒಟ್ಟಾಗಿ ಇರಕ್ಕಾಗಲ್ಲ ಅನ್ಸ್ತು ಅದಕ್ಕೆ ಡೈವೋರ್ಸ್ ಮಾಡಿದ್ವಿ. ನಾವು simple human beings ರ್ರೀ, ಈಗ friends ಆಗಿದ್ದೀವಿ ಅದಕ್ಕೆ ಹರಟೆ ಹೋಡಿತಾ ಇದ್ದೀವಿ’ ಎಂದು ಗಂಭೀರವಾಗಿ ನಕ್ಕಿದ್ದನ್ನು ಕಂಡ ಕಲಾವಿದೆ ಕಕ್ಕಾಬಿಕ್ಕಿಯಾಗಿದ್ದಳು. ಇದು ಶಿವ ಹಾಕುವ ಪಟ್ಟಿನ ಒಂದು ಸ್ಯಾಂಪಲ್ ಮಾತ್ರ. ಪಟ್ಟು ಚೌಕಟ್ಟು ಇಲ್ಲದ ಜೀವನ ಎಲ್ಲಾದ್ರೂ ಇರುತ್ತಾ ಚೌಕಟ್ಟಿನಿಂದ ಸರಿಯೋದು ಮಾತ್ರ ಜಾಣರ ಲಕ್ಷಣ.

ಇಷ್ಟೆಲ್ಲಾ multi ಲಕ್ಷಣಗಳ ಆಗರವಾಗಿರುವ ಶಿವ ಪರಿಚಯಸ್ಥರಿಗೆ ಒಂಟಿ ಮುನಿ. ಈ ಮುನಿಗೆ ಅಂಟಿಕೊಂಡವರಿಗಿಂತ ದೂರ ನಿಂತವರೇ ಹೆಚ್ಚು. ಆಶ್ಚರ್ಯದ ಸಂಗತಿಯೆಂದರೆ ದೂರ ನಿಂತವರ ಮನದಲ್ಲೂ ಶಿವ ಗಟ್ಟಿಯಾಗಿ ಬೇರುಬಿಟ್ಟು ನಿಂತಿರುತ್ತಾನೆ. ದೂರನಿಂತವರೂ ತನ್ನನ್ನು ಪ್ರೀತಿಸುವಂತೆ ನೆನೆಯುವಂತೆ ಕ್ಷಮಿಸಿಬಿಡುವಂತೆ ಮಾಡುವಲ್ಲಿ ಸಫಲನಾಗುತ್ತಾನೆ.

ಇದೆಲ್ಲಾ ಏನೇ ಇರಲಿ ರಾಷ್ಟ್ರದ ಕಲಾಕ್ಷೇತ್ರದಲ್ಲಿ ಒಬ್ಬ ಧೀಮಂತ ಕಲಾವಿದ ಎನ್ನುವುದರಲ್ಲಿ ಯಾರಿಗೂ ಅನುಮಾನ ಕಾಡಬೇಕಿಲ್ಲ.

ಚಿಂತಕ ಅಧ್ಯಯನಶೀಲ ಹೋರಾಟಗಾರನಾಗಿರುವುದರ ಜೊತೆಗೆ ನಿರಂತರ ಪ್ರಯೋಗಶೀಲತೆಯನ್ನು ಕಾಪಾಡಿಕೊಂಡಿರುವ ಶಿವ Atheist ನಿಂದ Buddhisy ನಾಗುವವರೆಗೆ ನಡೆದ ಹಾದಿ ಮಾತ್ರ ರೋಚಕ. ಈತನ ಚಿಂತನೆಗಳನ್ನು ಆಸಕ್ತಿಗಳನ್ನು ಹಂಚಿಕೊಂಡ ಕೆಲವೇ ಕಲಾವಿದರಲ್ಲಿ ನಾನು ಒಬ್ಬ ಎನ್ನುವುದು ಮಾತ್ರ ನನಗೆ ಹೆಮ್ಮೆಯೆನಿಸಿದೆ.

3ನೇ ವಾರ್ಷಿಕದಂದು ವರ್ತಮಾನ.ಕಾಮ್‌ನ ಪ್ರಸ್ತುತತೆ ..

ಸ್ನೇಹಿತರೇ,

ವರ್ತಮಾನ.ಕಾಮ್ ಕಾರ್ಯಾರಂಭಿಸಿ ಮೂರು ವರ್ಷಗಳು ತುಂಬಿದವು. (ಮೊದಲನೆಯ ಮತ್ತು ಎರಡನೆಯ ವಾರ್ಷಿಕದಂದು ಬರೆದಿದ್ದ ಟಿಪ್ಪಣಿಗಳು ಇಲ್ಲಿ ಮತ್ತು ಇಲ್ಲಿ ಇವೆ. ಗಮನಿಸಿ.)

ಮೂರನೆಯ ವರ್ಷದಲ್ಲಿ ವರ್ತಮಾನ.ಕಾಮ್ ಎಲ್ಲಾ ತರಹದ ಏರಿಳಿತಗಳನ್ನು ಕಂಡಿತು. 2013  ರ ಅಕ್ಟೋಬರ್, ನವೆಂಬರ್ ಮತ್ತು vartamaana-32014ರ ಮಾರ್ಚ್‌ ತಿಂಗಳುಗಳು ಹಿಂದಿನ ಎಲ್ಲಾ ತಿಂಗಳುಗಳಿಗಿಂತ ಹೆಚ್ಚಿನ ಓದನ್ನು ಪಡೆದುಕೊಂಡ ತಿಂಗಳುಗಳಾದರೆ 2014 ರ ಜೂನ್ ತಿಂಗಳು ಕಳೆದ ಎರಡು ವರ್ಷಗಳಲ್ಲಿಯೇ ಕಡಿಮೆ ಓದು ಪಡೆದುಕೊಂಡ ತಿಂಗಳು. ಈ ನಿಟ್ಟಿನಲ್ಲಿ ಇದು ವರ್ತಮಾನ.ಕಾಮ್‌ನ ಯಶಸ್ವಿ ವರ್ಷವೂ ಹೌದು. ಹಾಗೆಯೇ, ಇದರ ಪ್ರಸ್ತುತತೆ ಮತ್ತು ಮುಂದುವರೆಸುವುದರ ಬಗ್ಗೆ ಯೋಚನೆ ಮಾಡಬೇಕಾದ ದಿನಗಳೂ ಹೌದು.

ಈ ಮೊದಲೆ ನಾನು ಅಲ್ಲಲ್ಲಿ ಪ್ರಸ್ತಾಪಿಸಿದಂತೆ, ವರ್ತಮಾನ.ಕಾಮ್‌ಗೆ ಬರೆಯುವವರೆಲ್ಲರೂ ಇಲ್ಲಿಗೆ ಬರೆಯಬೇಕು ಎಂಬ ಆಸಕ್ತಿಯಿಂದ ಬರೆಯುವವರು ಮತ್ತು ಯಾರಿಗೂ ಗೌರವಧನವಾಗಲಿ ಇನ್ನೊಂದಾಗಲಿ ಇಲ್ಲ. ಇದರ ಇಲ್ಲಿಯ ತನಕ ಯಶಸ್ಸು ಮತ್ತು ಪ್ರಸ್ತುತತೆಯಲ್ಲಿ ನಮಗೆ ಒಂದೇ ಒಂದು ಲೇಖನ ಬರೆದವರಿಂದ ಹಿಡಿದು ನಿಯಮಿತವಾಗಿ ಬರೆಯುತ್ತ ಬಂದವರೆಲ್ಲರದು. ಹಾಗೆಯೇ, ಆರಂಭದ ದಿನಗಳಲ್ಲಿ ಕೆಲವೊಬ್ಬರಿಗೆ ದಯವಿಟ್ಟು ಬರೆಯಿರಿ ಎಂದು ಕೇಳಿಕೊಂಡಿದ್ದನ್ನು ಬಿಟ್ಟರೆ ಬರೆಯಿರಿ ಎಂದು ಅತಿಯಾದ ಒತ್ತಾಯವನ್ನು ನಮ್ಮ ಬಳಗದ ಯಾರೊಬ್ಬರೂ ಯಾರಿಗೂ ಮಾಡಿಲ್ಲ. ಆದರೆ ಕೆಲವೊಮ್ಮೆ ಕೆಲವು ಗಂಭೀರ ಸಮಕಾಲೀನ ವಿಷಯದ ಬಗ್ಗೆ ಇಂತಹವರು ಬರೆಯಬಹುದು ಎನ್ನಿಸಿದಾಗ ಅಂತಹವರಿಗೆ ಕೋರಿದ್ದೇವೆ, ಅದೂ ಅಪರೂಪಕ್ಕೆ. ಈ ರೀತಿಯಾಗಿ ಇದು ತನಗೆ ತಾನೆ ಉಳಿಯುತ್ತ, ಕುಗ್ಗುತ್ತ, ಬೆಳೆಯುತ್ತ, ಒಂದು ರೀತಿಯಲ್ಲಿ ಸ್ವಾವಲಂಬಿಯಾಗಿ ಬರುತ್ತಿದೆ.

ಹಾಗೆಯೇ, ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುವ ಅನೇಕ ಲೇಖನಗಳು ರಾಜ್ಯದ ಅನೇಕ ಇತರೆ ವೇದಿಕೆಗಳಲ್ಲಿ ಪ್ರಕಟವಾಗುತ್ತಿರುವುದೂ ಸಹ ಮುಂದುವರೆದಿದೆ. ಅಂತಹ ಸಂದರ್ಭಗಳಲ್ಲಿ ಲೇಖಕರನ್ನು ಮತ್ತು ವರ್ತಮಾನ.ಕಾಮ್ ಅನ್ನು ಹೆಸರಿಸುವ ಎಲ್ಲರೂ ನಮ್ಮ ಪ್ರಶಂಸೆಗೆ ಅರ್ಹರು.

ನಿಮಗೆ ಗೊತ್ತಿರುವ ಹಾಗೆ, ನಮಗೆ ಬರುವ ಒಂದು ಲೇಖನವನ್ನು ಯೂನಿಕೋಡ್‌ಗೆ ಪರಿವರ್ತಿಸಿ, ಇರಬಹುದಾದ ಕಾಗುಣಿತ ಮತ್ತು ವ್ಯಾಕರಣ ದೋಷಗಳನ್ನು ತಿದ್ದಿ, ನಂತರ ಅದನ್ನು ವೆಬ್‌ಸೈಟಿನಲ್ಲಿ ಸರಿಯಾಗಿ ಪೇಜ್ ಕೂರಿಸಿ, ಸೂಕ್ತ ಚಿತ್ರಗಳನ್ನು ಹಾಕಿ, ಅಂತಿಮವಾಗಿ ಪ್ರಕಟಿಸಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಈ ಕೆಲಸವನ್ನು ನಮ್ಮ ಬಳಗದಲ್ಲಿ ನಾನೂ ಸೇರಿದಂತೆ ಮೂವರು ಮಾಡುತ್ತೇವೆ, ಮತ್ತು ಬಹುತೇಕ ಸಂದರ್ಭಗಳಲ್ಲಿ ಆ ಕೆಲಸ ನಾನೇ ಮಾಡುತ್ತಿದ್ದೆ. ನಾನು ಊರಿನಲ್ಲಿಲ್ಲದಾಗ, ಅಥವ ಬೇರೆ ಕೆಲಸದಲ್ಲಿ ವ್ಯಸ್ತನಾಗಿ ಒಂದೆರಡು ದಿನ ಇತ್ತ ಗಮನ ಕೊಡಲು ಆಗುವುದಿಲ್ಲ ಎಂತಾದಾಗ, ನಮ್ಮ ಬಳಗದ ಸ್ನೇಹಿತರು ಅದನ್ನು ಮಾಡುತ್ತಾರೆ. ನಾನು ಈ ಬಾರಿಯ ಲೋಕಸಭಾ ಚುನಾವಣೆಗೆ ನಿಂತ ಕಾರಣದಿಂದಾಗಿ ಈ ವರ್ಷದ ಮಾರ್ಚ್ ತಿಂಗಳಿನಿಂದ ಈಚೆಗೆ ಬಳಗದ ಮಿತ್ರರೇ ಹೆಚ್ಚಿಗೆ ಮಾಡಿದ್ದಾರೆ. ಅವರೂ ಸಹ ಉದ್ಯೋಗಗಳಲ್ಲಿರುವುದರಿಂದ, ಮತ್ತು ಅವರು ನೌಕರಿ ಮುಗಿಸಿಕೊಂಡು ಮನೆಗೆ ಬಂದನಂತರವೇ ಅದನ್ನು ಮಾಡಬೇಕಾಗಿರುವುದರಿಂದ ಒಮ್ಮೊಮ್ಮೆ ನಮಗೆ ಬಂದ ಲೇಖನಗಳು ಎರಡು-ಮೂರು ದಿನವಾದರೂ ಪ್ರಕಟವಾಗಿರುವುದಿಲ್ಲ. ಇತ್ತೀಚೆಗೆ ಮತ್ತೆ ನನ್ನ ಜೀವನ ಸ್ವಲ್ಪ ನಿಯಮಿತತೆಗೆ ಹೊರಳಿರುವುದರಿಂದ ವರ್ತಮಾನ.ಕಾಮ್ ಸಹ ನಿಯಮಿತವಾಗುತ್ತಿದೆ. ಮುಂದಕ್ಕೆ ನೋಡೋಣ, ಏನಾಗುತ್ತದೊ!

ಅಂದ ಹಾಗೆ, ತನ್ನ ಮೂರನೆ ವರ್ಷದಲ್ಲಿ ವರ್ತಮಾನ.ಕಾಮ್ ರಾಜ್ಯದ ಹಲವು ಕಡೆಗಳಲ್ಲಿ ಸ್ಥಳಿಯ ಸಂಘಸಂಸ್ಥೆ ಮತ್ತು ಸಮಾನಸಾಕ್ತರ ಸಹಕಾರದೊಂದಿಗೆ “ದಲಿತರು ಮತ್ತು ಉದ್ಯಮಶೀಲತೆ” ಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಮತ್ತು ಶಿಬಿರಗಳನ್ನು ನಡೆಸಿಕೊಟ್ಟಿತು. ನಮ್ಮ ಬಳಗದ ಬಿ. ಶ್ರೀಪಾದ ಭಟ್ಟರು ಇದರ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡು ಅದನ್ನು ಬಹಳ ಮುತುವರ್ಜಿಯಿಂದ ನಿರ್ವಹಿಸಿದರು.

dalit-entrepreneurship-4ಹಾಸನ, ತುಮಕೂರು ಮತ್ತು ಮೈಸೂರಿನಲ್ಲಿ ಈ ಕಾರ್ಯಕ್ರಮಗಳಾದವು. ಚಿತ್ರದುರ್ಗ ಅಥವ ಬಳ್ಳಾರಿಯಲ್ಲಿ ನಡೆಸಬೇಕು ಎಂದುಕೊಂಡ ಕಾರ್ಯಕ್ರಮ ನಾನಾ ಕಾರಣಗಳಿಗಾಗಿ ಇನ್ನೂ ಆಗಿಲ್ಲ. ಇನ್ನು ಮುಂದಕ್ಕೆ ನಡೆಸುತ್ತೇವೋ ಇಲ್ಲವೋ ಗೊತ್ತಿಲ್ಲ, ಆದರೆ ನಮಗೆಲ್ಲ ತುಂಬ ತೃಪ್ತಿ ಕೊಟ್ಟ ಕೆಲಸ ಅದು. ಇದರ ಬಹುತೇಕ ಖರ್ಚುಗಳನ್ನೆಲ್ಲ ಶ್ರೀಪಾದ ಭಟ್ಟರು ವಹಿಸಿಕೊಂಡಿದ್ದರು. ಮೈಸೂರಿನ ಕಾರ್ಯಕ್ರಮಕ್ಕೆ ನಾವಂದುಕೊಂಡದ್ದಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ನಾವೂ ಸಹ ಒಂದಷ್ಟು ಪಾಠ ಕಲಿತೆವು. ಹಿರಿಯ ಮಿತ್ರರಾದ ಜಿ.ವಿ.ಸುಂದರ್‌ರವರು ಆ ಕಾರ್ಯಕ್ರಮದ ಬಹುತೇಕ ಖರ್ಚನ್ನು ವಹಿಸಿಕೊಂಡು ಬಹಳ ಬೆಂಬಲ ಕೊಟ್ಟರು. ಸ್ಥಳೀಯರ ಸಹಕಾರ ಮತ್ತು ಪ್ರಾಮಾಣಿಕತೆ ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ ಮತ್ತು ನಾವಂದುಕೊಂಡಂತೆ ಎಲ್ಲರೂ ಅಕಡೆಮಿಕ್ ಆಗಿಯೋ ಅಥವ ನಿಸ್ವಾರ್ಥವಾಗಿಯೋ ಚಿಂತಿಸಿ ನಡೆದುಕೊಳ್ಳುತ್ತಾರೆ ಎಂದು ಖಾತರಿ ಇಲ್ಲ. ಅಂದ ಹಾಗೆ, ಕವಿ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯರಾಗಿರುವ ಎಲ್. ಹನುಮಂತಯ್ಯನವರು ಎರಡು ಕಡೆಯ ಕಾರ್ಯಕ್ರಮಗಳಿಗೆ ಬಂದು ನಮಗೆ ಒಳ್ಳೆಯ ಬೆಂಬಲ, ಸಹಕಾರ, ಮತ್ತು ಪ್ರೋತ್ಸಾಹ ಕೊಟ್ಟರು. ಅವರಿಗೆ ಮತ್ತು ಸಿ.ಜಿ.ಶ್ರೀನಿವಾಸನ್‌ರವರಿಗೂ ನಾವು ಕೃತಜ್ಞರು.

2012 ರ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದಿದ್ದ ಒಂದಷ್ಟು ಕತೆಗಳನ್ನು ಪುಸ್ತಕವಾಗಿ ತರೋಣ ಎಂದು ಶ್ರೀಪಾದ ಭಟ್ಟರು ಹೇಳುತ್ತಲೇ ಇದ್ದರು. katha sprade 2014ಆದರೆ ನನಗೆ ಹುಮ್ಮಸ್ಸಿರದ ಕಾರಣ ಅದು ಆಗಲಿಲ್ಲ. ಆದರೆ ನಮಗೆಲ್ಲ ಸಂತೋಷವಾಗುವಂತೆ 2013 ರ ಕಥಾಸ್ಪರ್ಧೆಯ ಸುಮಾರು ಇಪ್ಪತ್ತು ಕತೆಗಳು “ವರ್ತಮಾನದ ಕಥೆಗಳು” ಕಥಾಸಂಕಲನ ಪುಸ್ತಕವಾಗಿ ಹೊರಬಂದಿದೆ. ಇದಕ್ಕೆ ಕಾರಣರಾಗಿದು ರಾಮಲಿಂಗಪ್ಪ ಟಿ. ಬೇಗೂರರು. ಅವರಿಗೆ ಮತ್ತು ಪ್ರಕಾಶಕರಾದ “ಕಣ್ವ ಪ್ರಕಾಶನ”ದವರಿಗೆ ವರ್ತಮಾನ.ಕಾಮ್ ಬಳಗದ ಪರವಾಗಿ ಧನ್ಯವಾದಗಳು. ಈ ವರ್ಷ ಬರುವ ಕಥೆಗಳೂ ಪುಸ್ತಕವಾಗಿ ಬರುತ್ತದೆ ಎನ್ನುವ ನಂಬಿಕೆ ಈಗ ನಮ್ಮೆಲ್ಲರದು. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದಗಳು.

ಇನ್ನು, ಖರ್ಚಿನ ವಿಷಯ. ಸುಮಾರು ಆರೇಳು ಸಾವಿರ ರೂಪಾಯಿ ವರ್ತಮಾನ.ಕಾಮ್‌ನ ಡೊಮೈನ್ ಮತ್ತು ಹೋಸ್ಟಿಂಗ್‌ಗೆ ಖರ್ಚಾಗಿರಬಹುದು. ನನ್ನ ಇತರ ಹಲವು ವೆಬ್‍‌ಸೈಟುಗಳನ್ನು ಒಂದೇ ಹೋಸ್ಟಿಂಗ್‍ ಖಾತೆಗೆ ಸೇರಿಸಿದರೆ ನನಗೆ ತಿಂಗಳಿಗೆ ಕನಿಷ್ಟ ಎಂದರೂ ಸಾವಿರ ರೂಪಾಯಿ ಉಳಿಯುತ್ತದೆ. ಆದರೆ ಹಾಗೆ ಪೋರ್ಟ್ ಮಾಡಬೇಕಾದ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳ ಭಯ ಮತ್ತು ನನ್ನ ಸೋಮಾರಿತನದಿಂದಾಗಿ ಅದಿನ್ನೂ ಆಗಿಲ್ಲ. ಇದು ಬಿಟ್ಟರೆ, “ದಲಿತರು ಮತ್ತು ಉದ್ಯಮಶೀಲತೆ” ಕಾರ್ಯಕ್ರಮಗಳಿಗೆ ಆಗಿರಬಹುದಾದ ವೆಚ್ಚಗಳು. ಆಗಲೆ ಹೇಳಿದಂತೆ ಅದರಲ್ಲಿ ಬಹುಪಾಲನ್ನು ಶ್ರೀಪಾದ ಭಟ್ಟರು ಮತ್ತು ಸುಂದರ್‌ರವರು ಭರಿಸಿದ್ದಾರೆ. ಮಿಕ್ಕಂತೆ ಏನು ಖರ್ಚಾಗಿದೆ ಎಂದು ನೆನಪಿಗೆ ಬರುತ್ತಿಲ್ಲ.

ಈಗ ಮುಖ್ಯ ವಿಷಯ: ವರ್ತಮಾನ.ಕಾಮ್ ಮುಂದುವರೆಯಬೇಕೇ, ಹೌದಾದಲ್ಲಿ ಹೇಗೆ? ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ನನ್ನ ರಾಜಕೀಯ ಚಟುವಟಿಕೆಗಳ ಕಾರಣವಾಗಿ ನಾನು ಇದಕ್ಕೆ ಕೊಡಬೇಕಾದಷ್ಟು ಸಮಯ ಕೊಡಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಬಳಗದ ಮಿತ್ರರು ಒಮ್ಮೆ ಸೇರಿ ಮಾತನಾಡೋಣ ಎಂದು ಕಳೆದ ಒಂದೆರಡು ತಿಂಗಳಿನಿಂದ ಸೂಕ್ತ ದಿನಕ್ಕೆ ಕಾಯುತ್ತಿದ್ದೇವೆ, ಅದು ಇನ್ನೂ ಆಗಿಲ್ಲ. ಅಂದ ಹಾಗೆ, ವರ್ತಮಾನ.ಕಾಮ್‌ನ ಯೋಚನೆ ಮತ್ತು ಯೋಜನೆ ನನಗೆ ಹೊಳೆದದ್ದೇ “ನಾವು ನಮ್ಮಲ್ಲಿ” ಬಳಗ 2011ರಲ್ಲಿ ಚಿತ್ರದುರ್ಗದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನಾನು ಮಾತನಾಡಬೇಕಾಗಿ ಬಂದ ಸಂದರ್ಭದಲ್ಲಿ. ಈ ವರ್ಷದ “ನಾವು ನಮ್ಮಲ್ಲಿ” ಕಾರ್ಯಕ್ರಮ ಇದೇ ತಿಂಗಳ 30 ಮತ್ತು 31 ರಂದು ಕೊಟ್ಟೂರಿನಲ್ಲಿ ಇದೆ ಎಂಬ ಮಾಹಿತಿ ಇದೆ. ಬಹುಶಃ ನಾವು ಅಲ್ಲಿಯೇ ಸೇರಿ ತಿರ್ಮಾನಿಸಬೇಕಿದೆ ಎನ್ನಿಸುತ್ತದೆ.

ಅಂದ ಹಾಗೆ, ನಿಮಗೇನನ್ನಿಸುತ್ತದೆ? ನಮ್ಮ ಓದುಗರಲ್ಲಿ ಮತ್ತು ಬೆಂಬಲಿಗರಲ್ಲಿ ಬಹುಪಾಲು ಜನ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದ ಶಾಂತ ಮತ್ತು ನಿಧಾನ ಸ್ವಭಾವದವರು ಎಂದು ಗೊತ್ತು! ಅದರೂ ಆಗಾಗ ಒಮ್ಮೊಮ್ಮೆ ಕೆಲವು ಅಭಿಪ್ರಾಯಗಳನ್ನೊ, ಅನಿಸಿಕೆಗಳನ್ನೊ, ಯೋಜನೆಗಳನ್ನೊ, ಹಂಚಿಕೊಂಡರೆ ಮುಂದಕ್ಕೆ ಹೇಗಿರಬೇಕು ಎಂದು ತೀರ್ಮಾನಿಸಲು ನಮಗೂ ಒಂದಷ್ಟು ಸಹಾಯ ಮಾಡಬಹುದು.

ಹಾಗೆ ಮಾಡುತ್ತೀರಿ ಎನ್ನುವ ನಿರೀಕ್ಷೆಯಲ್ಲಿ,

ನಮಸ್ಕಾರ ಮತ್ತು ಧನ್ಯವಾದಗಳು,
ರವಿ


ಗಾಂಧಿ ಜಯಂತಿ ಕಥಾ ಸ್ಪರ್ಧೆ – 2014 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಎಂದಿನಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2014(ಕಳೆದ ವರ್ಷದ ಈ ಆಹ್ವಾನದಲ್ಲಿ ಈ ಕಥಾಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಒಂದಿಷ್ಟು ವಿವರಗಳಿವೆ.)

ಇದು ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

  • ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು. ನೀಳ್ಗತೆಯಾದರೂ ನಡೆದೀತು.
  • ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:

  • ಮೊದಲ ಬಹುಮಾನ: ರೂ. 6000
  • ಎರಡನೆ ಬಹುಮಾನ: ರೂ. 4000
  • ಮೂರನೆಯ ಬಹುಮಾನ: ರೂ. 3000
  • ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2014

ಸೆಪ್ಟೆಂಬರ್ katha spardhe inside logo 2014 ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

ವರ್ತಮಾನದ ಕಥೆಗಳು : ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013ರ ಆಯ್ದಕತೆಗಳ ಕಥಾಸಂಕಲನ

ಆತ್ಮೀಯರೇ,

ಕಳೆದ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013″ರ ಫಲಿತಾಂಶ ಮತ್ತು ಬಹುಮಾನಿತ ಕತೆಗಳ ಬಗ್ಗೆ ನಿಮಗೀಗಾಗಲೆ ತಿಳಿದಿದೆ. katha-sprade-2013(ಫಲಿತಾಂಶ, ತೀರ್ಪುಗಾರರ ಮಾತು, ಮೊದಲ ಬಹುಮಾನ ಪಡೆದ ಕತೆ, ಎರಡನೆಯ, ಮೂರನೆಯ, ಸಮಾಧಾನಕರ ಬಹುಮಾನ ಪಡೆದ ಕತೆ-೧, ಕತೆ-೨). ಆ ಸಂದರ್ಭದಲ್ಲಿ ಈ ಬಾರಿಯ ತೀರ್ಪುಗಾರರಾಗಿದ್ದ ಡಾ. ರಾಮಲಿಂಗಪ್ಪ ಟಿ. ಬೇಗೂರುರವರು ಆ ಸ್ಪರ್ಧೆಗೆ ಬಂದಿದ್ದ ಸುಮಾರು ಇಪ್ಪತ್ತು ಕತೆಗಳನ್ನು ಆಯ್ದು “ವರ್ತಮಾನದ ಕಥೆಗಳು” ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸುವ ಆಸಕ್ತಿ ತೋರಿಸಿ ಅದಕ್ಕೆ ಕೆಲವು ಪ್ರಕಾಶಕರನ್ನೂ ಸಂಪರ್ಕಿಸಿದ್ದರು. ಆ ಸಮಯದಲ್ಲಿ ನಾವು ಆಯ್ಕೆ ಮಾಡಿದ ಕತೆಗಳ ಕತೆಗಾರರಿಗೆಲ್ಲ ಇಮೇಲ್ ಬರೆದು ಇದರ ಬಗ್ಗೆ ತಿಳಿಸಿದ್ದೆವು. ಈಗ ಆ ಕಥಾಸಂಕಲನ ಪ್ರಕಟವಾಗಿದೆ ಮತ್ತು ಪ್ರಕಟಗೊಂಡಿರುವ ಕತೆಗಳ ಲೇಖಕರಿಗೆಲ್ಲ ಗೌರವ ಪ್ರತಿಗಳನ್ನು ತಲುಪಿಸಬೇಕಿದೆ. ದಯವಿಟ್ಟು ಈ ಪಟ್ಟಿಯಲ್ಲಿರುವ ಲೇಖಕರು ಡಾ. ರಾಮಲಿಂಗಪ್ಪ ಟಿ. ಬೇಗೂರುರವರನ್ನಾಗಲಿ (೯೪೪೯೨೭೧೧೫೬) ಅಥವ ನನ್ನನ್ನಾಗಲಿ (೯೬೮೬೦೮೦೦೦೫) ಸಂಪರ್ಕಿಸಿ ತಮ್ಮ ಗೌರವ ಪ್ರತಿಗಳನ್ನು ಪಡೆದುಕೊಳ್ಳಬೇಕೆಂದು ಕೋರುತ್ತೇವೆ.

ಸಮಸ್ಯೆ ಏನೆಂದರೆ, ಹಲವರ ಫೋನ್ ನಂಬರ್ ಸಹ ನಮ್ಮಲ್ಲಿಲ್ಲ. ಮತ್ತೆ ಹಲವರು ಇಮೇಲ್ ಮೂಲಕ, ಅದೂ ಹಲವು ದಿನಗಳ ನಂತರ ಉತ್ತರಿಸುತ್ತಾರೆ. ಹಾಗಾಗಿ ನಮ್ಮ ಓದುಗರಿಗೆ ಈ ಪಟ್ಟಿಯಲ್ಲಿರುವ ಯಾರಾದರೂ ಲೇಖಕರು ಪರಿಚಿತರಿದ್ದಲ್ಲಿ ಅವರಿಗೆ ಈ ವಿಷಯದ ಬಗ್ಗೆ ಕರೆ ಮಾಡಿ ತಿಳಿಸಿದರೆ, ಅದೂ ಬಹಳ ಅನುಕೂಲವಾಗುತ್ತದೆ.

ಇದನ್ನೆಲ್ಲ ಸಾಧ್ಯವಾಗಿಸಿದ ಕತೆಗಾರರಿಗೆ, ಮತ್ತು ಡಾ. ರಾಮಲಿಂಗಪ್ಪ ಟಿ. ಬೇಗೂರುರವರಿಗೆ ವರ್ತಮಾನ.ಕಾಮ್ ಪರವಾಗಿ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

vartamaanada-kathegalu-cobverpage

vartamaanada-kathegalu-authours1

vartamaanada-kathegalu-authours2

ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಹರಿಯುವ ಕಣ್ಣೀರಿಗೆ ಕೊನೆ ಇಲ್ಲವೇ?


-ಇರ್ಷಾದ್


 

 

 

“ ನನ್ನ ಕುರಿತು ಅತೀ ಕೆಟ್ಟ ಶಬ್ಧಗಳ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಮಹಿಳೆಯೆಂದುmodannana-tamma ನೋಡದೇ 30 ರಷ್ಟು ಯುವಕರ ಗುಂಪು ನನ್ನನ್ನು ಸುತ್ತುವರಿದು ಹೀನವಾಗಿ ನಿಂದಿಸಿದ್ದಾರೆ. ನನ್ನ ಸೀರೆಯನ್ನು ಎಳೆಯೋದಕ್ಕೆ ಮುಂದಾಗಿದ್ದಾರೆ. ಈ ಎಲ್ಲಾ ಯುವಕರು ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಕೆಲ ಯುವಕರು ಹಿಂದೂ ಪರ ಸಂಘಟನೆಯೊಂದರ ಸದಸ್ಯರು. ಅನ್ಯಾಯವಾದ ನನಗೆ ದಯಮಾಡಿ ನ್ಯಾಯ ಕೊಡಿಸಿ” ಹೀಗನ್ನುತ್ತಾ ಕಣ್ಣೀರು ಸುರಿಸುತ್ತಾ ತನ್ನ ಮನದಾಳದ ನೋವನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದು ಮಂಗಳೂರು ಮಹಾನಗರ ಪಾಲಿಕೆಯ ಕುಳಾಯಿ ವಾರ್ಡ್ ನ ಸದಸ್ಯೆ ಪ್ರತಿಭಾ ಕುಳಾಯಿ. ಅದೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಸಮ್ಮುಖದಲ್ಲಿ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ.

ದಕ್ಷಿಣ ಕನ್ನಡ ಜಿಲ್ಲೆಯ ಅನೈತಿಕ ಪೊಲೀಸರಿಗೆ ಇಂಥಹಾ ನೂರಾರು ಹೆಣ್ಣುಮಕ್ಕಳ ಕಣ್ಣೀರ ಸುರಿಸಿದ “ಹೆಗ್ಗಳಿಕೆ” ಯ ಇತಿಹಾಸವಿದೆ. ಪ್ರತಿಭಾ ಕುಳಾಯಿ ಕಣ್ಣೀರಿಟ್ಟ ಹಾಗೆ ಸಾಕಷ್ಟು ಅಮಾಯಕ ಯುವತಿಯರು, ಮಹಿಳೆಯರು ಸಂಸ್ಕೃತಿ ರಕ್ಷಕರ ಕೆಂಗಣ್ಣಿಗೆ ಸಿಲುಕಿ ಕಣ್ಣೀರಿಟ್ಟಿದ್ದಾರೆ. ಸುಶಿಕ್ಷಿತ ಮಹಿಳೆಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆಯಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತೆಯಾಗಿ ಪ್ರತಿಭಾ ಕುಳಾಯಿ ಮಾಧ್ಯಮದ ಮುಂದೆ ಬಂದು ತನ್ನ ಅಳಲನ್ನು ತೋಡಿಕೊಂಡು ನ್ಯಾಯ ಕೊಡಿಸಿ ಎಂದು ಕೇಳುವ ಧೈರ್ಯವನ್ನು ತೋರಿಸಿದ್ದಾರೆ. ಆದರೆ ಈ ನೈತಿಕ ಪೊಲೀಸರ ಗುಂಡಾಗಿರಿಗೆ ಬಲಿಯಾಗಿ ಅದೆಷ್ಟೋ ಕಾಲೇಜು ವಿದ್ಯಾರ್ಥಿನಿಯರು, ಅಮಾಯಕ ಮಹಿಳೆಯರು ಮಾನ ಮಾರ್ಯಾದೆಗೆ ಅಂಜಿ ಮನೆಯಲ್ಲೇ ಕುಳಿತು ನಿತ್ಯ ಕಣ್ಣೀರಿಟ್ಟಿದ್ದಾರೆ ಹಾಗೂ ಕಣ್ಣೀರಿಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸರ ಕೆಂಗಣ್ಣಿಗೆ ಬಿದ್ದು ಅಸಹಾಯಕ ಹೆಣ್ಮಕ್ಕಳು ಕಣ್ಣೀರಿಟ್ಟಿದ್ದು ದೇಶಕ್ಕೆ ಗೊತ್ತಾಗಿರುವುದು 2008 ರಲ್ಲಿ ನಡೆದ ಪಬ್New ದಾಳಿ ಸಂಧರ್ಭದಲ್ಲಿ. ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ದಾಳಿ ಮಾಡಿದ್ದರು. ಪಬ್ ಒಳಗಡೆ ಇದ್ದ ಯುವಕ –ಯುವತಿಯರನ್ನು ಎಳೆದಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದರು. ಅವಮಾನಕ್ಕೀಡಾದ ಯುವತಿಯರು ಕಣ್ಣೀರು ಸುರಿಸುತ್ತಾ ಎದ್ದು ಬಿದ್ದು ನೈತಿಕ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನ ಪಡುತ್ತಿದ್ದರು. ನೈತಿಕ ಪೊಲೀಸರ ದಾಳಿಗೆ ಸುಸ್ತಾಗಿ ಅತ್ತ ಅವಮಾನವನ್ನೂ ಸಹಿಸಿಕೊಳ್ಳಲಾಗದೇ ಇತ್ತ ಅನ್ಯಾಯವನ್ನು ಪ್ರತಿಭಟಿಸಲಾಗದೆ ಕಣ್ಣೀರು ಸುರಿಸಿ ಅಷ್ಟಕ್ಕೆ ಸುಮ್ಮನಾದರು. ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಣಿನ ಕಣ್ಣೀರು ಅಷ್ಟಕ್ಕೆ ನಿಲ್ಲಲಿಲ್ಲ. ನಂತರದಲ್ಲಿ ಮತ್ತೊಮ್ಮೆ ಕರಾವಳಿಯ ಹೆಣ್ಣಿನ ಕಣ್ಣೀರನ್ನು ದೇಶ ನೋಡಿದ್ದು 2012 ರಲ್ಲಿ ನಡೆದ ಹೋಂ ಸ್ಟೇ ದಾಳಿಯ ಸಂಧರ್ಭದಲ್ಲಿ. ಪತ್ರಕರ್ತ ನವೀನ್ ಸೂರಿಂಜೆಯ mangalore_moral1ಕ್ಯಾಮರಾ ಕಣ್ಣಿನಲ್ಲಿ ಅಮಾಯಕ ಹೆಣ್ಣುಮಕ್ಕಳ ಕಣ್ಣೀರು ಸೆರೆಯಾಗಿತ್ತು. ಸ್ನೇಹಿತನೊಬ್ಬನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಯುವತಿಯರನ್ನು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ಮತ್ತೆ ನೈತಿಕ ಪೊಲೀಸರು ಕಾಡಿದ್ದರು. ಅಲ್ಲಿದ್ದ ಹೆಣ್ಮಕ್ಕಳ ಮೇಲೆ ರಾಕ್ಷಸೀಯ ವರ್ತನೆ ತೋರಿಸಿ ಮನಬಂದಂತೆ ಥಳಿಸಿ ಮಾನಭಂಗ ಮಾಡಿದ್ದರು. ಸಂತಸದ ಪಾರ್ಟಿಗೆ ಆಗಮಿಸಿದ್ದ ಹೆಣ್ಮಕ್ಕಳ ಕಣ್ಣಿನಲ್ಲಿ ಹರಿಯುತ್ತಿದ್ದ ಕಣ್ಣೀರ ಕೋಡಿಯನ್ನು ನಾಗರಿಕ ಸಮಾಜ ನೋಡಿತ್ತು. ಅಲ್ಲಿಯೂ ಹೆಣ್ಣು ಅಸಹಾಯಕಲಾಗಿದ್ದಳು. ಸಮಾಜದ ಮುಂದೆ ಬಂದು ತಮ್ಮ ಮೇಲೆ ಅಮಾನುಷವಾಗಿ ವರ್ತಿಸಿದ ರಾಕ್ಷಸರ ವಿರುದ್ಧ ಸೆಟೆದು ನಿಲ್ಲಲು ಆಕೆಗೆ ಸಾಧ್ಯವಾಗಲಿಲ್ಲ. ಅವಮಾನದ ಕಣ್ಣೀರೇ ಆಕೆಯ ಪಾಲಿಗೆ ಅಂತಿಮವಾಯಿತು. ಈ ಎಲ್ಲಾ ಸಂಧರ್ಭಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೈತಿಕ ಪೊಲೀಸರ ದಾಳಿ ಒಳಗಾಗಿ ಹೆಣ್ಣು ಸುರಿಸಿದ ಅವಮಾನದ ಕಣ್ಣೀರನ್ನು ದೇಶ ನೋಡಿತು. ನಾಗರಿಕ ಸಮಾಜ ಪ್ರತಿಭಟಿಸಿತು. ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿತ್ತು. ಆದರೂ ವ್ಯವಸ್ಥೆಯ ವೈಫಲ್ಯದಿಂದ ಅಸಹಾಯಕರಾದ ಹೆಣ್ಮಕ್ಕಳ ಕಣ್ಣೀರನ್ನು ದೇಶದ ಜನರ ಮುಂದಿಟ್ಟ ತಪ್ಪಿಗೆ ಪತ್ರಕರ್ತ ನವೀನ್ ಸೂರಿಂಜೆ 4 ತಿಂಗಳುಗಳ ಕಾಲ ಜೈಲಲ್ಲಿ ಕೊಳೆಯುವಂತಾಯಿತು.

ಇವುಗಳು ನಾವು ನೀವು ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಹೆಣ್ಮಕ್ಕಳ ಕಣ್ಣೀರಾಗಿವೆ. ಹೀಗೆ ನಿತ್ಯ ಇಂಥಹಾ ಸಾಕಷ್ಟು ಅಮಾಯಕ ಹೆಣ್ಮಕ್ಕಳು ಉಭಯ ಧರ್ಮಗಳ ಸಂಘಟನೆಗಳ ನೈತಿಕ ಪೊಲೀಸರ ಕಾಟಕ್ಕೆ ಬಲಿಯಾಗಿ ಕಣ್ಣೀರನ್ನು ಸುರಿಸುತ್ತಲೇ ಇದ್ದಾರೆ.

  • ಒಂದು ವರ್ಷದ ಹಿಂದೆ ಮಂಗಳೂರಿನ ಬಜ್ಪೆಯಲ್ಲಿ ಹಿಂದು ಯುವಕನೊಬ್ಬನ ಜೊತೆಯಲ್ಲಿ ಮುಸ್ಲಿಂ ಯುವತಿಯೊಬ್ಬಳು ಕಾರಲ್ಲಿ ತಿರುಗಾಡಿದನ್ನು ಕಂಡು ಮುಸ್ಲಿಂ ಸಂಘಟನೆಗೆ ಸೇರಿದ್ದಾರೆ ಎನ್ನಲಾದ ಯುವಕರ ಗುಂಪು ಜೋಡಿಗಳ ಮೇಲೆ ಮುಗಿಬಿದ್ದಿತ್ತು. ಹಲ್ಲೆಯನ್ನೂ ನಡೆಸಿತ್ತು. ಆ ಸಂಧರ್ಭದಲ್ಲೂ ಅವಮಾನಕ್ಕೆ ಒಳಗಾದ ಮುಸ್ಲಿಂ ಯುವತಿ ಕಣ್ಣೀರಿಟ್ಟಿದ್ದಳು. ಕೈಮುಗಿದು ಅತ್ತು ಗೋಗರಿದಿದ್ದಳು ಆ ಕತ್ತಲಲ್ಲಿ ಅವಳ ಕಣ್ಣೀರು ಯಾರಿಗೂ ಕಾಣಲಿಲ್ಲ.
  • ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಬ್ಬನ ಜೊತೆ ಹಿಂದೂ ಯುವತಿಯೊಬ್ಬಳು ಸುತ್ತಾಡುತ್ತಿದ್ದಿದ್ದನ್ನು ಕಂಡ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಯುವಕರು ದಾಳಿ ಮಾಡಿದ್ದರು. ಅಲ್ಲಿಯೂ ಇದೇ ಪರಿಸ್ಥಿತಿ. ಧರ್ಮ ರಕ್ಷಣೆಯ ಹೆಸರಲ್ಲಿ ಅವಮಾನಕ್ಕೊಳಗಾದ ಹೆಣ್ಣು ಅಲ್ಲಿಯೂ ಕಣ್ಣೀರಿಟ್ಟಿದ್ದಳು ಸಮುದ್ರ ಗಾಳಿಯ ಹೊಡೆತಕ್ಕೆ ಆಕೆಯ ಕಣ್ಣೀರು ಅಲ್ಲೇ ಆರಿ ಹೋಗಿತ್ತು.
  • ಮಂಗಳೂರಿನ ಸುರತ್ಕಲ್ ನಲ್ಲಿ ಉತ್ತರ ಭಾರತ ಮೂಲದ ಯುವತಿಯೊಬ್ಬಳು ತಾನು ಮದುವೆಯಾಗಲಿರುವ ತನ್ನದೇ ಕೋಮಿನ ಯುವಕನ ಜೊತೆಯಲ್ಲಿದ್ದಾಗ ಅವರ ಮೇಲೂ ನೈತಿಕ ಪೊಲೀಸರ ಕಣ್ಣು ಬಿದ್ದಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಗುಂಪು ಅವರ ಮೇಲೆ ಮುಗಿಬಿದ್ದಿತ್ತು. ಎಲ್ಲರ ಮುಂದೆ ಅವಮಾನಕ್ಕೀಡಾದ ಯುವತಿ ಕಣ್ಣೀರು ಸುರಿಸುತ್ತಿದ್ದಳು. ಪಾಪ ಬಡವರಾದ ದೂರದ ಜಾರ್ಖಂಡ್ ಯುವತಿಯ ಕಣ್ಣೀರು ಜಿಲ್ಲೆಯ ಪೊಲೀಸರಿಗೆ ಕಣ್ಣೀರಾಗಿ ಕಾಣಲೇ ಇಲ್ಲ.
  • ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಮುಸ್ಲಿಂ ಮಹಿಳೆಯೊಬ್ಬಳಿಗೆ ಸಹಾಯಮಾಡುವ ನೆಪದಲ್ಲಿ ಸಲುಗೆಯಿಂದಿದ್ದಾರೆ ಎಂಬ ಕಾರಣವನ್ನಿಟ್ಟು ಸ್ಥಳೀಯ ಪತ್ರಕರ್ತ ವಿ.ಟಿ ಪ್ರಸಾದ್ ಮೇಲೆ ಮುಸ್ಲಿಂ ಸಂಘಟನೆಯೊಂದಕ್ಕೆ ಸೇರಿದ ಯುವಕರ ಗುಂಪು ಹಲ್ಲೆ ನಡೆಸಿತ್ತು. ವಿ.ಟಿ ಪ್ರಸಾದ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಲ್ಪಟ್ಟ ಮುಸ್ಲಿಂ ಮಹಿಳೆಗೆ ಹಲ್ಲೆಕೋರರು ಧರ್ಮದ ಜಾಗೃತಿಯ ಹೆಸರಲ್ಲಿ ಅವಮಾನ ಮಾಡಿದ್ದರು. ಅಲ್ಲಿಯೂ ಆ ಬಡಪಾಯಿ ಮಹಿಳೆ ಕಣ್ಣೀರು ಸುರಿಸಿದ್ದಳು. ಪಾಪ ಆಕೆ ಧರಿಸಿದ ಬುರ್ಖಾ ಪರದೆಯ ಒಳಗಿನ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರು ಹೊರ ಜಗತ್ತಿಗೆ ಕಾಣಲೇ ಇಲ್ಲ.

ಇವುಗಳು ಕೆಲವೊಂದು ಉದಾಹರಣೆಗಳಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೀಗೆ ನಿತ್ಯ ಮಹಿಳೆ ಕಣ್ಣೀರು ಸುರಿಯುತ್ತಲೇ ಇದ್ದಾಳೆ. ಈ ಕಣ್ಣೀರು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಇನ್ನು ಕೆಲವು ಪ್ರಕರಣಗಳು ಹೊರ ಪ್ರಪಂಚದ ಗಮನಕ್ಕೆ ಬಾರದೇ ಮುಚ್ಚಿಹೋಗುತ್ತವೆ. ನೈತಿಕ ಪೊಲೀಸ್ ಗಿರಿ ಪದ್ದತಿಯನ್ನು ಹಿಂದೂ ಪರ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸಿದವು. ಅದನ್ನು ಮುಸ್ಲಿಂ ಪರ ಸಂಘಟನೆಗಳು ಚಾಚೂ ತಪ್ಪದೆ ಪಾಲಿಸುತ್ತಾ ಬಂದಿವೆ. ಏಟಿಗೆ ಇದಿರೇಟು ಎಂಬ ಮಾದರಿಯಲ್ಲಿ ಉಭಯ ಕೋಮುಗಳ ಸಂಘಟನೆಗಳು ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಯನ್ನು ಮಾಡುತ್ತಾ ಬರುತ್ತಿವೆ. ಇದಕ್ಕೆ ಬಲಿಯಾಗುತ್ತಿರುವವರು ಉಭಯ ಧರ್ಮಗಳ ಅಮಾಯಕ ಯುವಕ –ಯುವತಿಯರು. ಮಾರ್ಚ್ 31 ರಂದು ಮಂಗಳೂರಿನ ಸುರತ್ಕಲ್ ಕೋಡಿಕೆರೆಯಲ್ಲಿ ಮಹಿಳಾ ಕಾರ್ಪೋರೇಟರ್ ಮೇಲೆ ನಡೆದದ್ದು ಇಂಥಹಾ ನೈತಿಕ ಪೊಲೀಸರ ದಾಳಿಯೇ.

ಪಾಲಿಕೆ ಸದಸ್ಯೆ ಪ್ರತಿಭಾ ಮೇಲಿನ ಅಕ್ರಮಣಕ್ಕೆ ಕಾರಣ ಅವರು ಸಂಸ್ಕೃತಿಯ ಚೌಟಕ್ಕಿನ unnamedಎಲ್ಲೆ ಮೀರಿದ್ದಾರೆ ಎಂಬ ನೈತಿಕ ಪೊಲೀಸರ ಸಂಶಯ. ಇದುವೇ ಇವರ ನಿದ್ದೆಗೆಡಲು ಪ್ರಮುಖ ಕಾರಣವಾಗಿರುವುದು. ಪ್ರತಿಭಾ ಕುಳಾಯಿ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂಧರ್ಭದಲ್ಲಿ ಅವರನ್ನು ಅಡ್ಡಗಟ್ಟಿದ ತಂಡ ಅವರನ್ನು ತರಾಟೆಗೆ ತೆಗೆದುಕೊಂಡ ಸಂಧರ್ಭದಲ್ಲಿ ನಿಂದಿಸಿದ ರೀತಿ, ಅದಕ್ಕಾಗಿ ಬಳಸಿದ ಪದಗಳು ಇದನ್ನು ಸಾಬೀತುಪಡಿಸುತ್ತವೆ. ವಿಪರ್ಯಾಸವೆಂದರೆ ಮಹಿಳಾ ಜನಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ತಮ್ಮ ಕ್ಷೇತ್ರದ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವ ಬದಲಾಗಿ ಆ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಪ್ರತಿಭಾ ಅವರ ಜೊತೆ ಮಾಧ್ಯಮದ ಮುಂದೆ ಬಂದು ಹಲ್ಲೆಕೋರನ್ನು ಬಂಧಿಸಿ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸುವಂತೆ ಕೇಳಿಕೊಳ್ಳುವುದರ ಹಾಸ್ಯಾಸ್ಪದ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಬಾರಿಯ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ನಡೆದಿತ್ತು. ಇದು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡುಮಾಡಿತ್ತು. ಜಿಲ್ಲೆಯಲ್ಲಿ ನಡೆಯುತ್ತಿದ್ದ ನೈತಿಕ ಪೊಲೀಸ್ ಗಿರಿಯನ್ನೇ ಪ್ರಮುಖ ಚುನಾವಣಾ ವಿಚಾರವನ್ನಾಗಿಸಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿತ್ತು. ಅದರಲ್ಲಿ ಯಶಸ್ಸನ್ನೂ ಗಿಟ್ಟಿಸಿಕೊಂಡಿತ್ತು. ಸರ್ಕಾರ ರಚನೆಯಾದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ರಮನಾಥ್ ರೈ , ಆರೋಗ್ಯ ಸಚಿವ ಯು.ಟಿ ಖಾದರ್ ಸೇರಿದಂತೆ ಅನೇಕ ಮುಖಂಡರು ನೈತಿಕ ಪೊಲೀಸ್ ಗಿರಿಯ ಕಡಿವಾಣವೇ ನಮ್ಮ ಗುರಿ ಎಂದರು. ಆದರೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಬಿಜೆಪಿ ಆಡಳಿತ ಅವಧಿಯಲ್ಲಿ ಪ್ರಮುಖ ನೈತಿಕ ಪೊಲೀಸ್ ಗಿರಿ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಕಾರ್ಯ ಆಗಿತ್ತು. ಆದರೆ ಇದೀಗ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲೆ ಮೀರುತ್ತಿರುವ ನೈತಿಕ ಪೊಲೀಸ್ ಗಿರಿಯ ಆರೋಪಿಗಳನ್ನು ಕನಿಷ್ಠ ಪಕ್ಷ ಬಂಧಿಸುವ ಕಾರ್ಯವೂ ನಡೆಯದೇ ಇರುವುದು ವಿಪರ್ಯಾಸ. ಆಡಳಿತ ಯಂತ್ರದ ವೈಫಲ್ಯ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತಿದೆ. ಹೀಗೆ ನೈತಿಕ ಪೊಲೀಸರ ಅಟ್ಟಹಾಸಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಈ ಜಿಲ್ಲೆಯ ಇನ್ನೆಷ್ಟು ಅಮಾಯಕ ಹೆಣ್ಮಕ್ಕಳು ಕಣ್ಣೀರು ಸುರಿಸಬೇಕಾಗಿ ಬರುತ್ತೋ ?