Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸ್ವರ್ಗ ಹಾಗೂ ನರಕದ ಕಲ್ಪನೆ ಮತ್ತು ರಮ್ಯಾ ಹೇಳಿಕೆ


-ಇರ್ಷಾದ್ ಉಪ್ಪಿನಂಗಡಿ


 

ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಪಾಕಿಸ್ತಾನ ನರಕ ಎಂಬ ಹೇಳಿಕೆಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ನರಕವಲ್ಲ ಅಲ್ಲೂ ನಮ್ಮಂತಹಾ ಒಳ್ಳೆಯ ಮನಸ್ಸಿನ ಜನರಿದ್ದಾರೆ ಎಂಬ ಮಾಜಿ ಸಂಸದೆ ನಟಿ ರಮ್ಯಾ ನೀಡಿದ ಹೇಳಿಕೆ ಸದ್ಯ ವಿವಾದದ ಕೇಂದ್ರ ಬಿಂದು. ಪಾಕಿಸ್ತಾನದ ಜನರ ಪರವಾಗಿ ರಮ್ಯಾ ನೀಡಿದ ಹೇಳಿಕೆ ಇಂದು ಅವರನ್ನು “ದೇಶದ್ರೋಹಿ” ಪಟ್ಟಕ್ಕೆ ಏರಿಸಿದೆ.

ಹೇಳಿಕೆಗಳನ್ನು ಖಂಡಿಸಿ ಅಲ್ಲಲ್ಲಿ ಸಂಘಪರಿವಾರದ ಪ್ರತಿಭಟನೆಗಳನ್ನು ನಡೆಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಮ್ಯಾramya-siddaramaiah ವಿರುದ್ಧ ಕೀಳು ಮಟ್ಟದ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ ಭಕ್ತರ ವಲಯ. ಅಷ್ಟಕ್ಕೂ ಪಾಕಿಸ್ತಾನದ ಭಾರತದ ಶತ್ರು ರಾಷ್ಟ್ರವಾಗಿರಹುದು. ಎರಡೂ ದೇಶಗಳ ನಡುವೆ ಗಡಿಯಲ್ಲಿ ಘರ್ಷಣೆ ನಡೆಯುತ್ತಿರಬಹುದು. ಇದು ಎರಡೂ ದೇಶಗಳ ನಡುವಿನ ರಾಜಕೀಯ ಸಂಘರ್ಷ. ಆದರೆ ಅಲ್ಲೂ ಜನಪರ, ಜೀವಪರ ಜ್ಯಾತ್ಯಾತೀತ ಮನಸ್ಸುಗಳಿವೆ. ತಮ್ಮ ಹಾಡಿನ ಮೂಲಕ ಜನರ ಮನಸ್ಸಿನಲ್ಲಿ ಶಾಂತಿ, ಪ್ರೀತಿಯನ್ನು ಬಿತ್ತುವ ಆಬಿದಾ ಪರ್ವೀನ್ , ನುಸ್ರತ್ ಫತೇ ಅಲಿಖಾನ್, ಗುಲಾಮ್ ಅಲಿ ಹಾಗೂ ಇತ್ತೀಚೆಗೆ ಉಗ್ರರ ಕೈಯಿಂದ ಹತರಾದ ಅಜ್ಮದ್ ಸಾಬ್ರಿಯಂತಹಾ ಸೂಫಿ ಗಾಯಕರನ್ನು ಶತ್ರುಗಳಾಗಿ ಕಾಣಲು ಸಾಧ್ಯವೇ ?

ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇ. 2 ರಷ್ಟಿರುವ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಕ್ರೈಸ್ತರು ಹಾಗೂ ಮಹಿಳಾ ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿರುವ ಅಸ್ಮಾ ಜಹಾಂಗೀರ್, ಅನ್ಸಾರ್ ಬರ್ನಿ, ಮಲಾಲ ಯೂಸುಫ್ ಝೈನಿ ಹಾಗೂ ಇತ್ತೀಚೆಗೆ ಮೂಲಭೂತವಾದಿಗಳಿಂದ ಹತ್ಯೆಗೊಳಗಾದ ಸಬೀನ್ ಮೆಹಮೂದ್ ರಂತಹಾ ನೂರಾರು ಹೋರಾಟಗಳನ್ನು ತಿರಸ್ಕರಿಸಲು ಸಾಧ್ಯವೇ ? ಆದರೆ ಪಾಕಿಸ್ತಾನದಲ್ಲಿ ಬೆಳೆದು ನಿಂತ ಮುಸ್ಲಿಮ್ ಮೂಲಭೂತವಾದಿ ಶಕ್ತಿಗಳು ಆ ದೇಶವನ್ನು ನರಕ ಮಾಡಲು ಹೊರಟಿವೆ. ಧರ್ಮ ರಕ್ಷಣೆಯ ಹೆಸರಿನಲ್ಲಿ ಅಭಿವ್ಯಕ್ತಿಯ ಹರಣವಾಗುತ್ತಿವೆ. ಮೂಲಭೂತವಾದಿಗಳ ವಿರುದ್ಧ ಧ್ವನಿ ಎತ್ತುವ ಪ್ರಗತಿಪರ, ಜ್ಯಾತ್ಯಾತೀತ ಹೋರಾಟಗಾರರನ್ನು ಸಂಗೀತಗಾರರನ್ನು ಹತ್ಯೆಮಾಡಲಾಗುತ್ತಿದೆ. ಧರ್ಮ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರ ಮೇಲೂ ದೌರ್ಜನ್ಯಗಳು, ಉಗ್ರವಾದಿ ಚಟುವಟಿಕೆಗಳು ಪಾಕಿಸ್ತಾನದಲ್ಲಿ ಮಿತಿಮೀರುತ್ತಿವೆ ಎಂಬುವುದು ಆತಂಕಕಾರಿ ವಿಚಾರ.

ಇದು ಕೇವಲ ಪಾಕಿಸ್ತಾನದ ಸಮಸ್ಯೆ ಮಾತ್ರವಲ್ಲ. ಭಾರತದಲ್ಲೂ ಇಂತಹದ್ದೇ ಸನ್ನಿವೇಶವನ್ನು ಇಲ್ಲಿರುವ ಮತಾಂಧ ಶಕ್ತಿಗಳು ಸೃಷ್ಟಿಸುತ್ತಿವೆ. ಪಾಕಿಸ್ತಾನ ನರಕವಾದರೆ ಭಾರತ ಸ್ವರ್ಗವೇ ಎಂಬ ಪ್ರೆಶ್ನೆಗೆ ನಮ್ಮ ಮುಂದೆ ನಡೆಯುವ ನೂರಾರು ನಿದರ್ಶನಗಳು ಉತ್ತರವಾಗಿವೆ. ಪ್ರತಿದೇಶದಲ್ಲೂ ಉಳ್ಳವರ ಪಾಲಿಗೆ ಖಂಡಿತಾ ಸ್ವರ್ಗವಿದೆ. ಆ ದೇಶದಲ್ಲಿ ನರಕದ ಪರಿಸ್ಥಿತಿಯನ್ನು ಅನುಭವಿಸುವವರು ಅಲ್ಲಿರುವ ಬಡವರು, ನಿರ್ಗತಿಕರು, ಶೋಷಿತರು ಹಾಗೂ ದುರ್ಬಲರು.

ಅಷ್ಟಕ್ಕೂ ನಮ್ಮ ಭವ್ಯ ಭಾರತ ಸ್ವರ್ಗಾನಾ..? ಹೌದು ಖಂಡಿತಾ ಸ್ವರ್ಗ. ಅದು ಯಾರ ಪಾಲಿಗೆ ಅಂದರೆ. ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಧನಿಗಳINDIA-BHOPAL-POLLUTION-ACCIDENT-25YRS ಪಾಲಿಗಷ್ಟೇ. ಬದಲಾಗಿ ಒಡಿಸ್ಸಾದ ದಾನಾ ಸಿಂಗ್ ಮಾಝಿ ಪಾಲಿಗಲ್ಲ. ಊನಾದ ದಲಿತರ ಪಾಲಿಗೂ ಅಲ್ಲ. ಮಜಾಫರನಗರದ ಮುಸ್ಲಿಮರ ಪಾಲಿಗೂ ಅಲ್ಲ. ಕಂದಮಾಲಿನ ಕ್ರೈಸ್ತರ ಪಾಲಿಗೂ ಅಲ್ಲ. ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಘಟನೆ ಸದ್ಯ ಭವ್ಯ ಭಾರತದ ನರಕದ ಬದುಕನ್ನು ನಮ್ಮ ಮುಂದೆ ತೆರೆದಿಟ್ಟಿದೆ. ದಾನಾ ಸಿಂಗ್ ಮಾಝಿ ಎಂಬ ಬಡ ವ್ಯಕ್ತಿ, ಕ್ಷಯ ರೋಗದಿಂದ ಬಳಲಿ ಸಾವನ್ನಪ್ಪಿದ ತನ್ನ ಪತ್ನಿಯ ಶವವನ್ನು ಆಸ್ಪತ್ರೆಯಿಂದ ಮನೆಗೆ ಸಾಗಿಸಲು ವಾಹನವನ್ನು ನೀಡಲು ಸರ್ಕಾರಿ ಆಸ್ಪತ್ರೆ ನಿರಾಕರಿಸಿತ್ತು. ಪರಿಣಾಮ ಹೆಂಡತಿಯ ಶವವನ್ನು ಹೆಗಲಲ್ಲೇ ಹೊತ್ತು 10 ಕಿಲೋ ಮೀಟರ್ ನಡೆದುಕೊಂಡು ಊರಿನತ್ತ ತೆರಳುವ ದೃಶ್ಯ ಸ್ವರ್ಗದಲ್ಲಿ ಕಾಣಲು ಸಾಧ್ಯವೇ ? ಸತ್ತ ತಾಯಿಯ ಹೆಣವನ್ನು ಹೊತ್ತುಕೊಂಡು ಹೋಗುವ ತಂದೆ ಜೊತೆಯಲ್ಲಿ ಕಣ್ಣೀರಿಡುತ್ತಾ ನಡೆಯುತ್ತಿದ್ದ ದಾನಾ ಸಿಂಗ್ ಮಾಝಿ ಮಗಳಲ್ಲಿ ಸ್ವರ್ಗ ಯಾವುದು ನರಕ ಯಾವುದು ಎಂದು ಕೇಳಿದ್ರೆ ಸ್ಪಷ್ಟ ಉತ್ತರ ಎಲ್ಲರಿಗೂ ಸಿಗಬಹುದು. ಮಾಯಾ ನಗರಿ ಮುಂಬಯಿನಲ್ಲಿರುವ ಧಾರಾವಿ ಸ್ಲಮ್ ಬಗ್ಗೆ ನಿಮಗೂ ತಿಳಿದಿರಬಹುದು. ಭವ್ಯ ಮುಂಬಯಿ ನಗರದ ಮಧ್ಯ ಭಾಗದಲ್ಲೇ ಇರುವ ಈ ಸ್ಲಮ್ ಏಷ್ಯಾದಲ್ಲೇ ಅತೀ ದೊಡ್ಡ ಸ್ಲಮ್ ಎಂಬ “ಹೆಗ್ಗಳಿಕೆಯನ್ನು” ಪಡೆದುಕೊಂಡಿದೆ. ಈ ಸ್ಲಮ್ ಇರುವುದು ನಮ್ಮ ಭವ್ಯ ಭಾರತದಲ್ಲೇ ಅಲ್ಲವೇ ? ಸ್ಲಮ್ ನಲ್ಲಿ ಜೀವನ ನಡೆಸುತ್ತಿರುವ ನಿವಾಸಿಗಳಲ್ಲಿ ಹೋಗಿ ನೀವು ಸ್ವರ್ಗದಲ್ಲಿ ಬದುಕುತ್ತೀದ್ದೀರಾ ಅಥವಾ ನರಕದಲ್ಲಾ ಎಂದು ಪ್ರಶ್ನಿಸಿದರೆ ಬಹುಷಃ ರಕ್ಷಣಾ ಸಚಿವ ಮನೋಹರ್ ಪರಿಕ್ಕಾರ್ ಗೂ ಉತ್ತರ ಸಿಗಬಹುದೇನೋ !.

ಇಂದಿಗೂ ಬಡವರು , ಆದಿವಾಸಿಗಳು ಕನಿಷ್ಠ ಮೂಲಸೌಕರ್ಯವಿಲ್ಲದೆ ನರಕದಂತಹಾ ಬದುಕನ್ನೇ ಸಾಗಿಸುತ್ತಿದ್ದಾರೆ. ಇದು ಒಂದೆಡೆಯಾದರೆ Kalburgiಇನ್ನೊಂದೆಡೆ ಮತಾಂಧರು ಸೃಷ್ಟಿಸಿದ ನರಕ ಅತ್ಯಂತ ಭಯಾನಕವಾದುದು. ಗುಜರಾತ್ ಹತ್ಯಾಕಾಂಡ, ಸಿಖ್ ಹತ್ಯಾಕಾಂಡ, ಮತಾಂತರದ ಆರೋಪದಲ್ಲಿ ನಡೆದ ಓಡಿಸ್ಸಾ ಕಂದಮಾಲ್ ಹತ್ಯಾಕಾಂಡ, ಮುಝಫರ್ ನಗರ್, ಖೈರ್ಲಾಂಜಿ ಹಾಗೂ ಕಂಬಾಲಪಳ್ಳಿಯಲ್ಲಿ ಹತ್ಯಾಕಾಂಡಗಳಲ್ಲಿ ಕಾಣುವ ಭೀಕರತೆಗಳು ಸ್ವರ್ಗದ ಕಲ್ಪನೆಯಲ್ಲಿ ಖಂಡಿತಾ ಕಾಣೋದಕ್ಕೆ ಸಿಗುವುದಿಲ್ಲ. ಈ ಕರಾಳ ಅನುಭವಗಳನ್ನು ಅನುಭವಿಸಿದ ಜನರಲ್ಲಿ ಹೋಗಿ ವಿಚಾರಿಸಿದರೆ ಅವರು ಅನುಭವಿಸಿದ ನರಕದ ಬದುಕಿನ ದರ್ಶನವಾಗಬಹುದು. ಪಾಕಿಸ್ತಾನದ ಮೂಲಭೂತವಾದಿಗಳು ನಡೆಸುವ ಕೃತ್ಯದಂತೆ ನಮ್ಮ ದೇಶದಲ್ಲೂ ನಡೆದ ವಿಚಾರವಾದಿಗಳ ಹತ್ಯೆ ಏನನ್ನು ಸೂಚಿಸುತ್ತದೆ. ದಾಭೋಲ್ಕರ್, ಪನ್ಸಾರೆ ಹಾಗೂ ಡಾ.ಕಲಬುರ್ಗಿಯವರ ಹತ್ಯೆಗಳನ್ನು ನಡೆಸೋ ಮೂಲಕ ಭಾರತವನ್ನು ನರಕವನ್ನಾಗಿ ಮಾಡಲು ಹೊರಟಿಲ್ಲವೇ ನಮ್ಮ ದೇಶದ ಕೋಮುವಾದಿಗಳು.

ಇನ್ನು ಮಂಗಳೂರಿನ ವಿಚಾರಕ್ಕೆ ಬರೋಣ. ಖಾಸಗಿ ವಾಹಿನಿಯೊಂದಕ್ಕೆ ನಟಿ ರಮ್ಯಾ ನೀಡಿದ ಸಂದರ್ಶನದಲ್ಲಿ ಮಂಗಳೂರಿನಲ್ಲೂ ನರಕ ಇದೆ ಎಂಬ ಹೇಳಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ. ಗುರುವಾರ ಮಂಗಳೂರಿನಲ್ಲಿ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ರಮ್ಯಾ ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರಿವಾರದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಮುಂದುವರಿದು ರಮ್ಯಾ ಪ್ರಯಾಣಿಸುತ್ತಿದ್ದ ಕಾರಿಗೂ ಮೊಟ್ಟೆ ಎಸೆದದ್ದು ಅಲ್ಲದೆ ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ವೇದಿಕೆಯತ್ತ ಮೊಟ್ಟೆ ಎಸೆದು “ಪೌರುಷ” ಪ್ರದರ್ಶಿಸಿದ್ದರು.

ನಟಿ ರಮ್ಯಾ ಯಾವ ಅರ್ಥದಲ್ಲಿ ಮಂಗಳೂರಿನಲ್ಲಿ ನರಕ ಇದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಮಂಗಳೂರು ಒಂದು ವರ್ಗದ ಜನರ ಪಾಲಿಗೆ ಖಂಡಿತವಾಗಿಯೂ ನರಕ. ಒಂದು ಭಾಗದಲ್ಲಿ ಪಶ್ವಿಮ ಘಟ್ಟದ ಹಚ್ಚ ಹಸುರಿನ ಸುಂದರ ಪ್ರದೇಶ, ಇನ್ನೊಂದೆಡೆ ಕಡಲ ತೀರದ ವೈಭವ. ಜೊತೆಗೆ ಮಂಗಳೂರು ಕಲೆ ಸಂಸ್ಕೃತಿ ತಿಂಡಿತಿನಿಸುಗಳಲ್ಲಿ ಪ್ರಸಿದ್ದಿ ಪಡೆದ ಜಿಲ್ಲೆ. ಹೀಗೆ ನೋಡಲು ಸ್ವರ್ಗದಂತಿರುವ ಈ ಜಿಲ್ಲೆಯನ್ನು ಇಲ್ಲಿಯ ಹಿಂದೂ ಮುಸ್ಲಿಮ್ ಮತಾಂಧರು ನರಕ ಮಾಡಲು ಹೊರಟಿದ್ದಾರೆ. ಅದರಲ್ಲಿ ಯಶಸ್ಸನ್ನೂ ಕಾಣುತ್ತಿದ್ದಾರೆ.

ಕಲ್ಲಡ್ಕದಲ್ಲಿ ಹಿಂದೂ ಹುಡುಗಿ ಹಾಗೂ ಮುಸ್ಲಿಮ್ ಹುಡುಗಿ ಜೊತೆಯಲ್ಲಿ ನಡೆದಾಡುವುದೂ ತಪ್ಪು. ಅವರನ್ನು ಸುತ್ತುವರಿಸಿದು ಪ್ರಶ್ನಿಸಿ ಮತಾಂಧರುmangalore_moral1 ನೈತಿಕ ಪೊಲೀಸ್ ಗಿರಿ ನಡೆಸುತ್ತಾರೆ. ಹಿಂದೂ ಯುವತಿಯ ಜೊತೆ ಕಾರಲ್ಲಿ ಪ್ರಯಾಣಿಸಿದ ಎಂಬ ಕಾರಣಕ್ಕಾಗಿ ಮಂಗಳೂರಿನ ಅತ್ತಾವರದಲ್ಲಿ ಯುವಕನೊಬ್ಬನ ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸುತ್ತಾರೆ. ಮುಸ್ಲಿಮ್ ಯುವತಿಯ ಜೊತೆ ಮಾತನಾಡಿದ ಎಂಬ ಕಾರಣಕ್ಕಾಗಿ ಪತ್ರಕರ್ತನೊಬ್ಬರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಯುವಕ ಯುವತಿಯರು ಹುಟ್ಟುಹಬ್ಬದ ಪಾರ್ಟಿ ಆಚರಣೆ ಮಾಡಿದಾಗಲೂ ದಾಳಿ ನಡೆಸಿ ಸುಸಂಸ್ಕೃತಿಯ ಪ್ರದರ್ಶನ ಮಾಡ್ತಾರೆ. ದನ ಸಾಗಾಟ ಮಾಡಿದ್ದಾರೆಂಬ ಆರೋಪ ಹೊರಿಸಿ ಆದಿ ಉಡುಪಿಯಲ್ಲಿ ಹಾಜಬ್ಬ ಹಸನಬ್ಬರನ್ನು ಬೆತ್ತಲೆಗೊಳಿಸಿ ಅಮಾನವೀಯತೆಯನ್ನ ಮೆರೆಯುತ್ತಾರೆ. ದನ ಸಾಗಾಟದ ಆರೋಪದಲ್ಲಿ ಮನಬಂದಂತೆ ಹಲ್ಲೆ ನಡೆಸಿ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡುತ್ತಾರೆ. ಸಾಯುವ ಸಂಧರ್ಭದಲ್ಲಿ ಕುಡಿಯಲು ಸ್ವಲ್ಪ ನೀರು ಕೇಳಿದಾಗಲೂ ಕರುಣೆ ತೋರದೆ ಮನುಷ್ಯತ್ವವನ್ನೇ ಮರೆಯುವ ಇಂಥಹಾ ಘಟನೆಗಳು ಖಂಡಿತಾ ಸ್ವರ್ಗದ ಕಲ್ಪನೆಯಲ್ಲಿ ಕಾಣಲು ಸಾಧ್ಯವಿಲ್ಲ. ಇವುಗಳು ಮತಾಂಧರು ಮಂಗಳೂರನ್ನು ಹೇಗೆ ನರಕವನ್ನಾಗಿ ಪರಿವರ್ತಿಸಿದ್ದಾರೆ ಎಂಬುವುದರ ಉದಾಹರಣೆಗಳಷ್ಟೇ.. ಸ್ವರ್ಗವೆಂದರೆ ಅಲ್ಲಿ ಯಾವ ಭಯವೂ ಇಲ್ಲವಂತೆ. ವಿಪರ್ಯಾಸವೆಂದರೆ ಮಂಗಳೂರಿನಲ್ಲಿ ಭಯದಲ್ಲೇ ಜೀವನ ನಡೆಸುವಂತಾ ನರಕದ ಬದುಕನ್ನು ಇಲ್ಲಿಯ ಮತಾಂಧರು ಸೃಷ್ಟಿಮಾಡ್ತಿದ್ದಾರೆ.

ಮತಾಂಧರು ಸೃಷ್ಟಿಸುತ್ತಿರುವ ನರಕ ಒಂದೆಡೆಯಾದರೆ. ಮಂಗಳೂರಿನಲ್ಲಿ ಕಂಡುಬರುತ್ತಿರುವಂತಹಾ ಆರ್ಥಿಕ ಅಸಮಾನತೆಯ ವ್ಯಾಪಕತೆ ಇಲ್ಲಿ ನರಕದ ಇರುವಿಕೆಯತ್ತಲೇ ಬೊಟ್ಟುಮಾಡಿ ತೋರಿಸುತ್ತಿದೆ. ಆರ್ಥಿಕ ಬೆಳೆವಣಿಗೆಯಲ್ಲಿ ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್, ಬೃಹತ್ ಕೈಗಾರಿಕೆ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳು ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಕಂಡಿದೆ. ಆದರೆ ಈ ಅಭಿವೃದ್ದಿಯ ಫಲ ಸಮಾನವಾಗಿ ಹಂಚಿಕೆಯಾಗಿದೆಯೇ ? ಮಂಗಳೂರಿನಲ್ಲಿ ಈ ಅಭಿವೃದ್ಧಿಯ ಫಲಗಳನ್ನುಂಡ ಸಮುದಾಯಗಳಾವುವು ? ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅಪಾರ ಸಂಪನ್ಮೂಲಗಳನ್ನು ಸೃಷ್ಟಿಸುತ್ತಿರುವ ಈ ಕ್ಷೇತ್ರಗಳಲ್ಲಿ ಹಿಂದುಳಿದವರ, ದಲಿತರ, ಕೊರಗರ, ಮಲೆಕುಡಿಯರ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಎಷ್ಟಿದೆ? ಈ ಕ್ಷೇತ್ರಗಳಲ್ಲಿ ನಿರ್ವಾಹಕ ಹುದ್ದೆ ಮತ್ತು ಕೂಲಿಕಾರ ಹುದ್ದೆಗಳ ಸಾಮಾಜಿಕ ಸಂರಚನೆ ಯಾವ ರೂಪದಲ್ಲಿದೆ? ಮಂಗಳೂರಿನಲ್ಲಿ ಬೇಕಾದಷ್ಟು ಹೈಟೆಕ್ ಮಲ್ಟೀ ಸ್ಪೆಶಾಲಿಟಿ ಆಸ್ಪತ್ರೆಗಳಿವೆ. ರಾಜ್ಯದ ವಿವಿಧ ಮೂಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ಹಣ ಚೆಲ್ಲಲು ತಾಕತ್ತಿದ್ದರಿಗೆ ಇಲ್ಲಿಯ ಆಸ್ಪತ್ರೆಗಳಲ್ಲಿ ಯೋಗ್ಯ ರೀತಿಯ ಚಿಕಿತ್ಸೆಯೂ ದೊರಕುತ್ತದೆ. ಆದ್ರೆ ಬಡವನ ಪಾಲಿಗಂತ್ತೂ ಇದು ದೂರದ ಮಾತು.

ಇದೇ ಮಂಗಳೂರಿನಲ್ಲಿ ಬಡ ರೋಗಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಲ್ಲಿ ಆಸ್ಪತ್ರೆಯ ದುಬಾರಿ ಬಿಲ್ ಪಾವತಿಸಲಾಗದೆ ಹೆಣವನ್ನುMRPL ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವಂತಹಾ ಪರಿಸ್ಥಿತಿಯೂ ಇಲ್ಲಿದೆ. ಹೆಣ ಪಡೆದುಕೊಳ್ಳಲೂ ಸಾಲಕ್ಕೆ ಮೋರೆ ಹೋಗುವ ಬಡವನಲ್ಲಿ ಕೇಳಿದ್ರೆ ಮಂಗಳೂರಿನ ವೈದ್ಯಕೀಯ ದಂಧೆಯ ನರಕ ದರ್ಶನವನ್ನು ನಿಮ್ಮ ಕಣ್ಣ ಮುಂದೆ ಕಟ್ಟಿಕೊಡಬಹುದು. ಇದರ ಜೊತೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೂ ಮಂಗಳೂರಿನಲ್ಲಿ ಕೊರತೆಯಿಲ್ಲ. ಸಮಾಜ ಸೇವೆಯ ಮುಖವಾಡ ತೊಟ್ಟು ಶಿಕ್ಷಣವನ್ನ ದಂಧೆ ಮಾಡುವ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ಮಂಗಳೂರಿನಲ್ಲಿ ತಲೆಎತ್ತುತ್ತಿವೆ. ಮಗುವಿಗೆ ಎಲ್.ಕೆ.ಜಿ ಶಿಕ್ಷಣ ಕೊಡಿಸಲು ಲಕ್ಷ ಲಕ್ಷ ರೂಪಾಯಿ ಡೊನೇಷನ್ ಕೊಡಬೇಕಾದ ಪರಿಸ್ಥಿತಿ ಇಲ್ಲಿಯ ಪೋಷಕರದ್ದು. ಇನ್ನು ಮಂಗಳೂರಿನಲ್ಲಿ ನಾಲ್ಕು ಮೆಡಿಕಲ್ ಕಾಲೇಜುಗಳಿವೆ ಆದ್ರೆ ಈ ಜಿಲ್ಲೆಯ ಬಡವನೊಬ್ಬನ ಮಗ ಅಥವಾ ಮಗಳು ಡಾಕ್ಟರ್ ಆಗಬೇಕು ಎಂಬ ಕನಸು ಅವನಲ್ಲಿ ನರಕದ ಅನುಭವವನ್ನು ಮೂಡಿಸುವುದರಲ್ಲಿ ಸಂಶಯವಿಲ್ಲ.

ಇನ್ನು ಅಭಿವೃದ್ದಿಯ ಪಥದತ್ತ ದಾಪುಗಾಲಿಡುತ್ತಿರುವ ಮಂಗಳೂರಿನ ಧಾರಣಾ ಸಾರರ್ಥ್ಯವನ್ನು ಮೀರಿ ಕೈಗಾರಿಕೆಗಳು ಹಾಗೂ ಸುಸ್ತಿರವಲ್ಲದ ಆರ್ಥಿಕ ಚಟುವಟಿಕೆಗಳು ಕಾಲಿಡುತ್ತಿವೆ. ಮಂಗಳೂರು ಒಂದು ಸೂಕ್ಷ್ಮ ಪರಿಸರ ವಲಯ. ಆದರೆ ಅಂಕೆ ಮೀರಿದ ಹಾಗೂ ಪರಿಸರದ ನಿಯಮಾವಳಿಗಳನ್ನು ಗಾಳಿಗೆ ತೂರುವ ಆರ್ಥಿಕ ಅಭಿವೃದ್ಧಿ ಮಂಗಳೂರಿನ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮಂಗಳೂರಿನಲ್ಲಿ ಸ್ವರ್ಗ ನಿರ್ಮಿಸುತ್ತೇವೆ ಎಂಬ ಭ್ರಮೆಯನ್ನು ಸೃಷ್ಟಿಸಿ ಮಂಗಳೂರಿಗೆ ಕಾಲಿಟ್ಟ ಎಸ್.ಇ.ಜೆಡ್, ಎಮ್.ಆರ್.ಪಿ.ಎಲ್ ಕೈಗಾರಿಕೆಗಳು ಸೃಷ್ಟಿಸಿದ ಸ್ವರ್ಗ ಹೇಗಿದೆ ಎಂಬುವುದನ್ನು ತಿಳಿಯಬೇಕಾದರೆ ಒಂದುಬಾರಿ ಮಂಗಳೂರಿನ ಜೋಕಟ್ಟೆ ಪರಿಸರಕ್ಕೆ ಭೇಟಿ ಕೊಡಬೇಕು. ಸ್ವರ್ಗದಲ್ಲಿ ಸಿಗುವ ಶುದ್ಧಜಲವಂತೂ ಇಲ್ಲಿ ಹುಡುಕಿದರೂ ಸಿಗುವುದಿಲ್ಲ ಬಿಡಿ. ಏರುತ್ತಿರುವ ಬಿಸಿ ವಾತಾವರಣ, ಮೂಗುಮುಚ್ಚೋ ಕೆಟ್ಟ ವಾಸನೆ ಹಾಗೂ ಕೋಕ್ ಸಲ್ಫರ್ ಹಾರುಬೂದಿಗಳು ಇಲ್ಲಿಯ ವಾತಾವರಣವನ್ನು ಅಕ್ಷರಸಃ ನರಕವನ್ನಾಗಿಸಿದೆ.

ಇದೀಗ ಮತ್ತೆ ಎಮ್.ಆರ್.ಪಿ.ಎಲ್ ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ 1050 ಎಕರೆ ಭೂಮಿಯ ಬೇಡಿಕೆ ಇಟ್ಟಿದೆ. ಇದು ಜಾರಿಯಾದಲ್ಲಿ ಸ್ವರ್ಗದ ಉದ್ಯಾನವನಗಳಂತಿರುವ ಪೆರ್ಮುದೆ, ಕುತ್ತೆತ್ತೂರು ಗ್ರಾಮಗಳ ಜನರೂ ನರಕವಾಸಿಗಳಾಗಿ ಜೀವಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಜೊತೆಗೆ ಪಶ್ವಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುವ ಎತ್ತಿನಹೊಳೆ ಯೋಜನೆಯೂ ಚುರುಕುಪಡೆದುಕೊಳ್ಳುತ್ತಿದೆ.

ಆದರೆ ಇದ್ಯಾವುದರ ಬಗ್ಗೆ ಯೂ ತಲೆಕೆಡಿಸಿಕೊಳ್ಳದ ಮತಾಂಧ ಸಂಘಟನೆಗಳು ಇದೀಗ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ ಮೊಟ್ಟೆ ಬಿಸಾಡುತ್ತಿದ್ದಾರೆ. ರಮ್ಯಾಳಿಗೆ ಮೊಟ್ಟೆ ಬಿಸಾಡಿದ ಯುವಕರೇ ನಿಮ್ಮ ತಂದೆ –ತಾಯಂದಿರ ಬಳಿ ಹೋಗಿ ಒಮ್ಮೆ ವಿಚಾರಿಸಿ ಮಂಗಳೂರು ನಿಮ್ಮ ಪಾಲಿಗೆ ಸ್ವರ್ಗವೇ ಎಂದು ? ಬಹುಷಃ ನಿಮಗೂ ಉತ್ತರ ಸಿಗಬಹುದು.

ಆಂದಹಾಗೆ, ಮಂಗಳೂರು ಹಾಗೂ ಕಾಸರಗೋಡು ಗಡಿ ಭಾಗದಲ್ಲಿ ಒಂದು ಊರಿದೆ. ಆ ಊರಿನ ಹೆಸರೇ ಸ್ವರ್ಗ. ಊರ ಹೆಸರು ನೋಡಿ ಅಲ್ಲಿಗೆendosulfan-250 ಭೇಟಿ ಕೊಟ್ಟರೆ ಆ ಗ್ರಾಮದ ನರಕ ಸದೃಶ್ಯ ಬದುಕಿನ ಅರಿವು ನಿಮಗಾಗುತ್ತದೆ. ಗ್ರಾಮದ ಜನರು ಎಂಡೋಸಲ್ಪಾನ್ ಕೀಟನಾಶಕ ಸಿಂಪಡನೆಯ ಪರಿಣಾಮ ಅನುಭವಿಸುತ್ತಿರುವ ಕರಾಳ ಅನುಭವ ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಊರಿನ ಬಹುತೇಕ ಮನೆಗಳಲ್ಲಿ ಎಂಡೋ ಪೀಡಿತ ಮಕ್ಕಳು ನಿಮಗೆ ಕಾಣಲು ಸಾಧ್ಯ. ಅಸಲಿಗೆ ಈ ಸ್ವರ್ಗ ಎಂಬ ಊರು ಅಲ್ಲಿನ ಗ್ರಾಮಸ್ಥರ ಪಾಲಿಗೆ ನಿಜಕ್ಕೂ ನರಕ. ಆದ್ದರಿಂದ ಮಂಗಳೂರಿನಲ್ಲೂ ನರಕವಿದೆ ಎಂದು ನಟಿ ರಮ್ಯಾ ನೀಡಿದ್ದಾರೆಂಬ ಹೇಳಿಕೆಯಲ್ಲಿ ಖಂಡಿತಾ ತಪ್ಪಿಲ್ಲ. ಸುಂದರ ಜಿಲ್ಲೆಯನ್ನು ನರಕ ಮಾಡಲು ಹೊರಟಿರುವ ಈ ಎಲ್ಲಾ ದುಷ್ಟ ಶಕ್ತಿಗಳನ್ನು ಹೇಗೆ ಸೋಲಿಸಬಹುದೆಂಬುವುದು ನಮ್ಮ ಮುಂದಿರುವ ಸವಾಲು.

“ದೇವಸ್ಥಾನ ತೊರೆದು ಗರಡಿಗೆ ಬರದಿದ್ದರೆ ಬಿಲ್ಲವರಿಗೆ ಉಳಿಗಾಲವಿಲ್ಲ..”

Naveen Soorinje


ನವೀನ್ ಸೂರಿಂಜೆ


 

ಉಡುಪಿಯಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ ಎರಡು ಕೊಲೆಗಳು ಸುದ್ದಿ ಮಾಡಿದವು. ಒಂದು ಬಹುಕೋಟಿ ಒಡೆಯ ಬಾಸ್ಕರ ಶೆಟ್ಟಿ ಕೊಲೆ. ಎರಡನೆಯದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ. ಭಾಸ್ಕರ ಶೆಟ್ಟಿಯದ್ದು ತೀPoojaryರಾ ವೈಯುಕ್ತಿಕ ಕಾರಣಕ್ಕಾಗಿ ನಡೆದ ಕೊಲೆ. ಪ್ರವೀಣ್ ಪೂಜಾರಿಯದ್ದು ಸಾಮಾಜಿಕ, ರಾಜಕೀಯ ಕಾರಣಕ್ಕಾಗಿ ನಡೆದ ಕೊಲೆ. ಚರ್ಚೆ ಇರುವುದು ಎರಡೂ ಕೊಲೆಗಳನ್ನು ಆಯಾ ಸಮಾಜ ತೆಗೆದುಕೊಂಡ ರೀತಿಯ ಬಗ್ಗೆ. ಭಾಸ್ಕರ ಶೆಟ್ಟಿಯ ವೈಯುಕ್ತಿಕ ಕಾರಣದ ಕೊಲೆಯನ್ನು ಬಂಟರ ಸಂಘಟನೆ ಗಂಭೀರವಾಗಿ ತೆಗೆದುಕೊಂಡು ಸಭೆಗಳ ಮೇಲೆ ಸಭೆ ನಡೆಸ್ತು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮಾಡಿತ್ತು. ಆದರೆ ಪ್ರವೀಣ್ ಪೂಜಾರಿ ಕೊಲೆ ? ಪ್ರವೀಣ್ ಪೂಜಾರಿ ಸಾವು ಯಾವುದೋ ವೈಯುಕ್ತಿಕ ಕಾರಣಕ್ಕಾಗಿ ನಡೆದ ಸಾವಲ್ಲ. ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದ ಆರೋಪಿಗಳ ಮುಖ್ಯಸ್ಥರು ಹಿಂದೆಯೂ ಹಲವು ಬಿಲ್ಲವರ ಆಹುತಿ ತೆಗೆದುಕೊಂಡಿದ್ದರು. ಮುಂದೆಯೂ ತಮ್ಮ ಅಜೆಂಡಾ ಜಾರಿಗಾಗಿ ಹಲವು ಬಿಲ್ಲವರ ರಕ್ತತರ್ಪಣಕ್ಕಾಗಿ ಈ ಕೊಲೆಗಡುಕರ ಮುಖ್ಯಸ್ಥರು ಕಾಯುತ್ತಿದ್ದಾರೆ. ಆದರೂ ಬಿಲ್ಲವ ಸಂಘಟನೆಗಳು ತುಟಿಪಿಟಿಕ್ ಎನ್ನುತ್ತಿಲ್ಲ. ಅಗಾಧ ಸಂಖ್ಯೆಯ ವಿದ್ಯಾವಂತ ಬಿಲ್ಲವ ಯುವಕರ ಸದಸ್ಯತ್ವವನ್ನು ಹೊಂದಿರುವ ಬಿಲ್ಲವ ಯುವ ವಾಹಿನಿಯೂ ಮಾತನಾಡುತ್ತಿಲ್ಲ. ಇದು ನಿಜಕ್ಕೂ ದುರಂತ. ಕರಾವಳಿಯ ಅತಿ ದೊಡ್ಡ ಸಮುದಾಯವಾಗಿರುವ ಬಿಲ್ಲವರು ಇತ್ತಿಚೆಗೆ ಒಂದೋ ಕೋಮುಸಂಬಂಧಿ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾಗುತ್ತಿದ್ದಾರೆ. ಅಥವಾ ಜೈಲು ಸೇರುತ್ತಾರೆ. ಮಂಗಳೂರು ಮತ್ತು ಉಡುಪಿಯ ಜೈಲುಗಳಲ್ಲಿ ಮುಸ್ಲೀಮರನ್ನು ಹೊರತುಪಡಿಸಿದ್ರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಗಳಾಗಿರುವವರು ಬಿಲ್ಲವರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ಮತ್ತು ಬಂಟರು ಅತ್ಯಂತ ಹೆಚ್ಚು ಪ್ರಾಬಲ್ಯವನ್ನು ಹೊಂದಿರುವ ಸಮುದಾಯ. narayana-guruಇತೀಚ್ಚೆಗೆ ಎಲ್ಲಾ ಕ್ಷೇತ್ರದಲ್ಲೂ ಬಿಲ್ಲವರು ಬಂಟರಿಗೆ ಪೈಪೋಟಿ ಕೊಡುತ್ತಿದ್ದಾರೇನೋ ಎಂದು ಕಂಡು ಬಂದರೂ ಅದು ತೋರಿಕೆಗೆ ಮಾತ್ರ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಂಟರು ತುಂಬಿ ಹೋಗಿದ್ದರೆ ಬಿಲ್ಲವರು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಸ್ವಾತಂತ್ರ್ಯಾ ನಂತರದ ಕರಾವಳಿಯಲ್ಲಿ ಬ್ಯಾಂಕಿಂಗ್, ಔದ್ಯಮಿಕ, ಹೊಟೇಲ್, ವಲಸೆ ಕ್ಷೇತ್ರದಲ್ಲಿ ಅಭಿವೃದ್ದಿಯಾದ್ರೂ ಇದರ ಭರಪೂರ ಲಾಭ ಪಡೆದಿದ್ದು ಮೇಲ್ವರ್ಗಗಳಾಗಿರುವ ಬಂಟರು ಮತ್ತು ಬ್ರಾಹ್ಮಣರು. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಬಿಲ್ಲವರು ಇದ್ದಾರೆ ಅನ್ನುವಂತೆ ಕಂಡು ಬಂದರೂ ಅದು ತೀರಾ ಕೆಳ ದರ್ಜೆಯ ಕೆಲಸಗಳಲ್ಲಿ ಅಥವಾ ತೀರಾ ನಗಣ್ಯ ಸಂಖ್ಯೆಯಲ್ಲಿ.

ಸಿನೇಮಾ ಕ್ಷೇತ್ರದಿಂದ ಹಿಡಿದು ಅಂಡರ್ ವಲ್ಡ್ ವರೆಗೆ ಬಂಟರಿಗೆ ಪೈಪೋಟಿ ಕೊಡುವ ಬಿಲ್ಲವರು ಕಂಡು ಬರುತ್ತಾರೆ. ಆದರೆ ಅಂಡರ್ ವಲ್ಡ್ ಡಾನ್ ಆಗಿರುವ ಬಂಟರೆಲ್ಲರೂ ನಿಧಾನಕ್ಕೆ ಉದ್ಯಮಿಗಳಾದರೆ, ಬಿಲ್ಲವ ಡಾನ್ ಗಳಿಗೆ ವಯಸ್ಸಾದರೂ ಅಂಡರ್ ವಲ್ಡ್ ನಿಂದ ಹೊರಗೆ ಬರಲಾಗದ ಸ್ಥಿತಿ ಇದೆ. ಇದೇ ರೀತಿ ಭಜರಂಗದಳ ಸೇರಿದ ಬಂಟರ ಹುಡುಗರು ತನ್ನಿಂತಾನೇ ಬಿಜೆಪಿ ನಾಯಕರಾಗುತ್ತಾರೆ. ಆದರೆ ಬಿಲ್ಲವ ಹುಡುಗರು ಸಾಯುವಾಗಲೂ ಭಜರಂಗದಳದಲ್ಲೇ ಇದ್ದು ಅದಕ್ಕಾಗಿ ಸಾಯಬೇಕಾಗುತ್ತದೆ.

ಎಲ್ಲಾ ಕೆಳಜಾತಿಗಳಂತೆ ಬಿಲ್ಲವ ಸಮುದಾಯ ಕೂಡಾ ಕಿರುಸಂಸ್ಕೃತಿಯ ಸಮುದಾಯ. ಭೂತಾರಾಧನೆ, ಪೂರ್ವಜರ ಆರಾಧನೆಯೇ ಬಿಲ್ಲವರ ಸಂಸ್ಕೃತಿಯಾಗಿತ್ತು. ಆದರೆ ವೈದಿಕ ಧರ್ಮದ ಪ್ರಭಾವಕ್ಕೊಳಗಾಗಿ ದೇವಸ್ಥಾನ ಆರಾಧನೆಯ ಪ್ರಧಾನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿತು. ಗರ್ಭಗುಡಿಯ ಹೊರಗಡೆ ಅಂಗಿ ಹಾಕದೆ ಕೆಲಸ ಮಾಡುವುದೇ ಬಿಲ್ಲವರ ಅದೃಷ್ಟವಾಯಿತು. ಬಿಲ್ಲವರಂತೆ ಬಂಟರೂ ಕೂಡಾ ಗರ್ಭಗುಡಿಯ ಹೊರಗೇ ಇದ್ದರೂ ಬಿಳಿ ವಸ್ತ್ರಧಾರಿಯಾಗಿ ಇಡೀ ಕಾರ್ಯಕ್ರಮದ ಯಜಮಾನಿಕೆಯನ್ನು ಪಡೆದುಕೊಂಡರು. ಈಗಲೂ ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ಕೇಸರಿ ಲುಂಗಿದಾರಿಯಾಗಿ ಸ್ವಯಂ ಸೇವಕರಾಗಿದ್ದರೆ, ಬಂಟರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿರುತ್ತಾರೆ.

ದೇವಸ್ಥಾನಗಳ ಬ್ರಹ್ಮಕಲಶ, ಜೀರ್ಣೋದ್ದಾರಗಳಲ್ಲಿ ಕಾಲಕಳೆಯುವ, ಆ ಮೂಲಕ ಕೇಸರಿ ವಸ್ತ್ರಧಾರಿಗಳಾಗಿ, ಗೊತ್ತಿದ್ದೋ ಗೊತ್ತಿಲ್ಲದೆಯೋkoti-chennay ಹಿಂದೂ ಸಂಘಟನೆ ಸೇರುವ ಬಿಲ್ಲವ ಯುವಕರು ಇದೀಗ ಮದುವೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇವಸ್ಥಾನದ ಕೆಲಸಗಳಲ್ಲಿ ಬಹುಪಾಲು ಸಮಯವನ್ನು ಸ್ವಯಂಸೇವಕರಾಗಿಯೋ, ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿರುವ ಬಿಲ್ಲವ ಯುವಕರು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ದಿಯತ್ತಾ ಗಮನ ಕೊಡುವುದಿಲ್ಲ. ಹಿಂದೊಮ್ಮೆ ನೈತಿಕ ಪೊಲೀಸ್ ಗಿರಿ ಮಾಡಿ 40 ಜನ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಜೈಲು ಸೇರಿದಾಗ, ಅವರ ಕುಟುಂಬದ ಹಿನ್ನಲೆ ಅಧ್ಯಯನ ನಡೆಸಿದ್ದೆ. ಅದರಲ್ಲಿ ಬಂಧಿಯಾಗಿದ್ದ ಮೂವರು ಬಿಲ್ಲವ ಯುವಕರ ಮನೆಯಲ್ಲಿ ಈ ದಿನಗಳಲ್ಲೂ ವಿದ್ಯುತ್ ಸಂಪರ್ಕ ಇಲ್ಲ. ಅವರ ಮನೆಯ ದೇವರ ಫೋಟೋಗೆ ದೀಪ ಇಡಲೂ ಎಣ್ಣೆಗೆ ದುಡ್ಡಿಲ್ಲದ ಪರಿಸ್ಥಿತಿ ಇದೆ. ಆದರೆ ಅವರ ಮನೆಯ ಯುವಕ ದೇವಸ್ಥಾನದಲ್ಲಿ ಬ್ರಾಹ್ಮಣರ ಹೊಟ್ಟೆ ತುಂಬಿಸಲು, ಧರ್ಮ ರಕ್ಷಣೆಗಾಗಿ ದುಡಿದು ಜೈಲು ಸೇರುತ್ತಾರೆ ಅಥವಾ ಕೊಲೆಯಾಗುತ್ತಾನೆ.

ಈಗ ಬಿಲ್ಲವ ಸಮುದಾಯ ಯೋಚಿಸಬೇಕಾದ ಸಮಯ. ಉದಯ ಪೂಜಾರಿಯಿಂದ ಪ್ರಾರಂಭವಾಗಿ ಪ್ರವೀಣ್ ಪೂಜಾರಿಯವರೆಗೆ ಕೋಮು ಕಾರಣಕ್ಕಾಗಿ ಸತ್ತ ಬಿಲ್ಲವರೆಷ್ಟು, ಬಂಟರೆಷ್ಟು, ಬ್ರಾಹ್ಮಣರೆಷ್ಟು ಎಂದು ಲೆಕ್ಕ ಹಾಕಬೇಕಿದೆ. ಇದಕ್ಕೆಲ್ಲಾ ಕಾರಣ ಕೇಸರಿ ಲುಂಗಿ ಧರಿಸುವಂತೆ ಮಾಡುವ ದೇವಸ್ಥಾನ ಸಂಸ್ಕೃತಿ. ಬಿಲ್ಲವರು ಮತ್ತೆ ತಮ್ಮ ಕಿರು ಸಂಸ್ಕೃತಿಯಾದ ಗರಡಿಯತ್ತಾ ತೆರಳಬೇಕಿದೆ. ಗರಡಿ ಎನ್ನುವುದೇ ಬಿಲ್ಲವರ ಸ್ವಾಭಿಮಾನದ ಸಂಕೇತ. ದೇವಸ್ಥಾನ ಎನ್ನುವುದು ಬಿಲ್ಲವರನ್ನು ಅಧೀನರಾಗಿಸುವ ಸಂಕೇತ. ದೇವಸ್ಥಾನವೆಂಬ ವೈದಿಕ ಸಂಸ್ಕೃತಿಯಿಂದ ದೂರವಾಗಿ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಗರಡಿಯತ್ತಾ ತೆರಳದಿದ್ದರೆ ಬಿಲ್ಲವ ಸಮುದಾಯಕ್ಕೆ ದುರಂತಮಯ ಭವಿಷ್ಯವನ್ನು ಕಾಣಲಿದೆ.

ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ

– ರವಿ ಕೃಷ್ಣಾರೆಡ್ಡಿ

[ಇದೇ ತಿಂಗಳ 9 ರಂದು (09-07-2016) ಧಾರವಾಡದಲ್ಲಿ ನಡೆದ “ಜನಪರ್ಯಾಯ” ಸಮಾವೇಶದಲ್ಲಿ ಮಂಡಿಸಿದ ವಿಷಯದ ಲೇಖನ ರೂಪ.]

ಭಾರತ ದೇಶದಲ್ಲಿ ಕರ್ನಾಟಕ ಭೌಗೋಳಿಕವಾಗಿ ಏಳನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಎಂಟನೆಯದು. ದಕ್ಷಿಣ ಭಾರತದಲ್ಲಿ ಇಂದು ಭೌಗೋಳಿಕವಾಗಿ ಅತಿದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ತಮಿಳುನಾಡಿನ ನಂತರದ ಸ್ಥಾನದಲ್ಲಿದೆ. ಅಪಾರ ವೈವಿಧ್ಯತೆ ಮತ್ತು ಸಂಕೀರ್ಣತೆಗಳಿಂದ ಕೂಡಿದ ರಾಜ್ಯ ಇದು.

ಇದೇ ರಾಜ್ಯದಲ್ಲಿಯೆ, ಇಲ್ಲಿಂದ ಅಷ್ಟೇನೂ ದೂರವಿರದ ಬಿಜಾಪುರ ಮತ್ತು ಬೀದರ್ ಜಿಲ್ಲೆಯ ಕಲ್ಯಾಣದಲ್ಲಿ ಸುಮಾರು ಎಂಟು-ಒಂಬತ್ತು ನೂರು ವರ್ಷಗಳ ಹಿಂದೆ ಭಾರತದಲ್ಲಿಯೇ ಅಪರೂಪವಾದ ಸಾಮಾಜಿಕ ಕ್ರಾಂತಿ ನಡೆದಿತ್ತು. rkr-janaparyaya-dharwad-09072016ಆ ಕ್ರಾಂತಿಯ ನೆರಳು ಮತ್ತು ಪ್ರಭಾವ ಇಂದೂ ಸಹ ಕರ್ನಾಟಕದಲ್ಲಿ ಗಾಢವಾಗಿದೆ. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಯಂತಹ ನೂರಾರು ಶರಣರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಂದಿನ ಅಸಮಾನತೆ, ಜಾತಿವ್ಯವಸ್ಥೆ, ಶೋಷಣೆಯ ವಿರುದ್ಧ ಕಟ್ಟಿದ ಹೋರಾಟ, ಬಂಡಾಯ, ಚಳವಳಿ ಅದು. ಅಂದು ಕಲ್ಯಾಣದಲ್ಲಿ ರಕ್ತಪಾತವಾಗಿ ನೂರಾರು-ಸಾವಿರಾರು ಕಗ್ಗೊಲೆಗಳಾಗಿ, ಬಸವಣ್ಣನೇ ಅಕಾಲಿಕ ಸಾವಿಗೆ ಈಡಾದರೂ, ಇಂದಿಗೂ ಆ ಕ್ರಾಂತಿ ಚಾಲ್ತಿಯಲ್ಲಿರುವುದು ಈ ನಾಡಿನ ಹೆಮ್ಮೆಯೂ ಹೌದು, ದುರಂತವೂ ಹೌದು.

ಅದೇ ರೀತಿ ಈ ನಾಡಿಗೆ ಕಳೆದ ಶತಮಾನದಲ್ಲಿ ವೈಚಾರಿಕ ದೀಕ್ಷೆ ಕೊಟ್ಟವರು ಕುವೆಂಪು. “ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ” ಎಂದು ಹೇಳಿದ ಆ ದಾರ್ಶನಿಕ ಕವಿ “ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ” ಎಂದು ಆಹ್ವಾನ ಕೊಡುವ ಮೂಲಕ ಸರ್ವೋದಯ, ಸಹಕಾರ, ಸಹಬಾಳ್ವೆ, ಸಮಭಾಗಿತ್ವ, ಸಮತ್ವ, ಸಮಾನತೆಯ ದಾರಿದೀಪ ತೋರಿಸಿದವರು.

ಇಲ್ಲಿಯ ರಾಜಕಾರಣ ಜಾತಿ ಮತ್ತು ಹಣದ ಪ್ರಭಾವಕ್ಕೆ ಸಿಲುಕುತ್ತಿದ್ದಂತಹ ಸಂದರ್ಭದಲ್ಲಿ 50-60 ರ ದಶಕದಲ್ಲಿಯೇ “ಒಂದು ವೋಟು, ಒಂದು ನೋಟು” ಘೋಷಣೆಯ ಮೂಲಕ ಜನಸಾಮಾನ್ಯರ ಸಹಭಾಗಿತ್ವದಲ್ಲಿ, ಜನರ ದುಡ್ಡಿನಲ್ಲಿಯೇ ಬಲಾಢ್ಯರ ಹಣ ಮತ್ತು ಜಾತಿಯ ಪ್ರಭಾವವನ್ನು ಹಿಮ್ಮೆಟ್ಟಿಸಿ ಈ ರಾಜ್ಯದಲ್ಲಿ ಮುಂದಿನ ದಿನಗಳ ಸಾಮಾಜಿಕ ನ್ಯಾಯ ಮತ್ತು ಭೂಸುಧಾರಣೆಯ ಹೋರಾಟಗಳಿಗೆ ಜನಪರ್ಯಾಯ ಮಾರ್ಗ ತೋರಿಸಿದವರು ಶಾಂತವೇರಿ ಗೋಪಾಲ ಗೌಡರು.

ಹೀಗೆ ದೇಶದ ಯಾವುದೇ ಭಾಗದ ಆದರ್ಶ ಮತ್ತು ಕನಸುಗಳಿಗೂ ಕಡಿಮೆಯಿಲ್ಲದ ರೀತಿ ಈ ರಾಜ್ಯ, ಅಂದರೆ ಇಲ್ಲಿಯ ಜನ, ತಮ್ಮ ಜೀವನವನ್ನು ಹಲವಾರು ಸವಾಲುಗಳನ್ನು ಎದುರಿಸುತ್ತಾ ಕಟ್ಟಿಕೊಳ್ಳುತ್ತಾ ಬಂದಿದ್ದಾರೆ,

ಆದರೆ, ಈಗ?

ಇದೇ ಧಾರವಾಡದ ಅವಿಭಜಿತ ಜಿಲ್ಲೆಯಲ್ಲಿ ಮತ್ತು ಪಕ್ಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ಮತ್ತು ನೀರಾವರಿ ಸೌಲಭ್ಯಕ್ಕಾಗಿ ರೈತರು ಕಳೆದ ಒಂದು kalasabanduri-mapವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ನರಗುಂದ ಮತ್ತು ನವಲಗುಂದದಲ್ಲಿ ರೈತರು ಸ್ವಯಂಪ್ರೇರಣೆಯಿಂದ ಪ್ರತಿದಿನ ಧರಣಿಯ ಸ್ಥಳದಲ್ಲಿ ಹಾಜರಿದ್ದು ಹೋರಾಟವನ್ನು ಜೀವಂತ ಇಟ್ಟಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿಯೂ ನೂರಕ್ಕೂ ಹೆಚ್ಚು ದಿನ ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ಮಾಡಿತು. ಮಂಡ್ಯ ಜಿಲ್ಲೆ ಒಂದರಲ್ಲಿಯೇ 2015 ರಲ್ಲಿ ನೂರು ರೈತರು ಆತ್ಮಹತ್ಯೆ ಮಾಡಿಕೊಂಡರು; ರಾಜ್ಯದಲ್ಲಿ ಆ ಸಂಖ್ಯೆ ಒಂದೂವರೆ ಸಾವಿರಕ್ಕಿಂತ ಹೆಚ್ಚು. 2015-16 ರಲ್ಲಿ ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 817. ರಾಜ್ಯದಲ್ಲಿ ಆರೇಳು ತಿಂಗಳ ಹಿಂದೆ ಸುಮಾರು ನಾಲ್ಕೂವರೆ ಸಾವಿರ FDA/SDA ಹುದ್ದೆಗಳಿಗೆ KPSC ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯೇ ಸೋರಿಕೆ ಆಗಿತ್ತು. ಅದು ಮತ್ತು ಅಂತಹ ಅಕ್ರಮಗಳು ನಮ್ಮ ರಾಜ್ಯದಲ್ಲಿ ಆಗುತ್ತಲೇ ಇರುತ್ತವೆ. ನಮ್ಮ ರಾಜ್ಯಕ್ಕೆ ಅದು ದೊಡ್ದ ವಿಷಯವೇ ಅಲ್ಲ. ಆದರೆ ಅದಕ್ಕಿಂತ ದೊಡ್ಡ ವಿಷಯ ಅಥವ ದುರಂತ ಎಂದರೆ ಆ ನಾಲ್ಕೂವರೆ ಸಾವಿರ ನೌಕರಿಗಳಿಗೆ ಪರೀಕ್ಷೆ ಬರೆದವರು ಮಾತ್ರ ರಾಜ್ಯದ ಕೇವಲ 19 ಲಕ್ಷ ಬಡ ನಿರುದ್ಯೋಗಿ ಯುವಕರು!

ಈಗ ಎಲ್ಲದಕ್ಕಿಂತ ದೊಡ್ಡ ದುರಂತ ಯಾವುದು?

ತೀರಾ ಇತ್ತೀಚೆಗೆ, ಮೂರ್ನಾಲ್ಕು ತಿಂಗಳ ಹಿಂದೆ, ತಾಲ್ಲೂಕು-ಜಿಲ್ಲಾ ಪಂಚಾಯತ್ ಚುನಾವಣೆಗಳಾದವು. ಈ ಮೇಲಿನ ಯಾವುವೂ ಚುನಾವಣೆ ವಿಷಯಗಳಾಗಲಿಲ್ಲ.

ಇದೇ ಬಸವಣ್ಣನ ನಾಡಿನಲ್ಲಿ ಇಂದು ಮರ್ಯಾದಾಹತ್ಯೆಗಳಾಗುತ್ತಿವೆ. ಜಾತಿಯ ಕಾರಣಕ್ಕೆ ತಲೆ ಕಡಿಯುತ್ತಿದ್ದಾರೆ. ಈ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜಾತಿಜಾತಿಗೇ ಸ್ಮಶಾನ ಮೀಸಲೀಡುತ್ತದೆ. ಸರ್ಕಾರದ ಸಮುದಾಯ ಭವನಗಳು ಅಧಿಕೃತವಾಗಿ ಜಾತಿ ಸಮುದಾಯ ಭವನಗಳಾಗಿವೆ. ಜಾತಿಗಳಿಗಷ್ಟೇ ಮೀಸಲಾದ ರಾಜಕೀಯ ಪಕ್ಷಗಳಿವೆ; ಜಿಲ್ಲೆಗಳಿವೆ.

ಇದೇ ನೆಲದಲ್ಲಿ, garments-workers-2016ಯಾರದೇ ಚಿತಾವಣೆ ಇಲ್ಲದೆ ಲಕ್ಷಾಂತರ ಮಹಿಳಾ ಕಾರ್ಮಿಕರು ಇಡೀ ದೇಶದ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಾರೆ.

ಭ್ರಷ್ಟ ಬಿಜೆಪಿಯನ್ನು ಆಚೆಗಟ್ಟಿ ಅಪಾರ ನಿರೀಕ್ಷೆ ಮತ್ತು ಆಶಾಕಿರಣದೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ನೈತಿಕವಾಗಿ ನೆಲಕಚ್ಚಿದೆ. ಅಧಿಕಾರ ಸ್ವೀಕರಿಸುತ್ತಲೇ ಅನ್ನಭಾಗ್ಯ ಹಾಗು ಇತರೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಇಂದು ಸಿದ್ಧರಾಮಯ್ಯ ಅವರ ಸರ್ಕಾರ ಸ್ವಜನ ಪಕ್ಷಪಾತ ಹಾಗು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾದಯಾತ್ರೆ ಮಾಡಿದ್ದರು. ಆದರೆ ಇಂದು ಅಕ್ರಮ ಗಣಿಗಾರಿಕೆ ಮಾಡಿರುವವರು ಅವರ ಸಚಿವ ಸಂಪುಟದಲ್ಲಿದ್ದಾರೆ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ವಿಸ್ತೃತವಾಗಿ ಬಯಲಿಗೆಳೆದ ಲೋಕಾಯುಕ್ತ ಸಂಸ್ಥೆಯನ್ನೇ ಇಂದು ಮೂಲೆಗುಂಪು ಮಾಡಿ ಸರ್ಕಾರದ ಕೈಗೊಂಬೆಯಂತಿರುವ ಮತ್ತು ಭ್ರಷ್ಟರನ್ನು ರಕ್ಷಿಸುವ ಎಸಿಬಿಯನ್ನು ಆರಂಭಿಸಿದ್ದಾರೆ. ಲೋಕಾಯುಕ್ತದಲ್ಲಿ ಹತ್ತಾರು ಮೊಕದ್ದಮೆಗಳಿರುವ ಮತ್ತು ಸರ್ಕಾರಿ ಅಧಿಕಾರಿಗಳ ಭ್ರಷ್ಟತೆಗೆ ಸಂಕೇತವಾಗಿರುವ ಶ್ಯಾಮ್ ಭಟ್ಟರನ್ನು ರಾಜ್ಯದ ಮುಂದಿನ ಸರ್ಕಾರಿ ಅಧಿಕಾರಿಗಳ ನೇಮಕಾತಿ ನಡೆಸುವ ಕೆಪಿಎಸ್‌ಸಿಗೆ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. lokayukta_karnatakaಸ್ವತಃ ಸಿದ್ಧರಾಮಯ್ಯನವರೇ ಸ್ವಜನ ಪಕ್ಷಪಾತದಲ್ಲಿ ಸಿಲುಕಿಕೊಂಡಿದ್ದಾರೆ. ದುಬಾರಿ ವಾಚ್ ಪ್ರಕರಣದಿಂದ ಹಿಡಿದು ತಮ್ಮ ಮಗನಿಗೆ ಆಸ್ಪತ್ರೆ ಕಾಂಟ್ರಾಕ್ಟ್ ನೀಡುವಿಕೆಯಲ್ಲಿ ಸೇರಿ ಹಲವಾರು ಅಕ್ರಮಗಳಲ್ಲಿ ಸಿಲುಕಿದ್ದಾರೆ. ಯಾವ ವ್ಯಕ್ತಿಯನ್ನು ಕಳಂಕಿತ ಎಂದು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರೊ, ಯಾವ ವ್ಯಕ್ತಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಡಿನೋಟಿಫಿಕೇಷನ್ ಹಗರಣದ ಫಲಾನುಭವಿಯಾಗಿದ್ದರೋ, ಆ ಡಿ.ಕೆ.ಶಿವಕುಮಾರ್‌ರನ್ನು ಈಗ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಮತ್ತು ಅವರ ಉಸ್ತುವಾರಿಯಲ್ಲಿ ಆ ಪಕ್ಷ ಮುಂದಿನ ಚುನಾವಣೆ ನಡೆಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದ ಇತಿಹಾಸದಲ್ಲೇ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಪಡೆದ ಬಿ. ಎಸ್. ಯಡಿಯೂರಪ್ಪನವರನ್ನೇ ಇಂದು ಬಿಜೆಪಿಯು ಅಧಿಕಾರ ಹಿಡಿಯುವ ಸಲುವಾಗಿ ಮತ್ತು ಜಾತಿಯ ಬೆಂಬಲಕ್ಕಾಗಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ತಮ್ಮ ಐದೂ ವರ್ಷದ ಆಡಳಿತಾವಧಿಯಲ್ಲಿ ಅಪಾರ ಭ್ರಷ್ಟಾಚಾರ ಮತ್ತು ’ಆಪರೇಷನ್ ಕಮಲ’ದಂತಹ ಅನೈತಿಕ ಚುನಾವಣಾ ರಾಜಕಾರಣ ಮಾಡಿದ್ದು ಬಿಜೆಪಿ. ಕಳ್ಳತನ ಮತ್ತು ಭ್ರಷ್ಟಾಚಾರವನ್ನು ಕದ್ದುಮುಚ್ಚಿ ಮಾಡದೇ ಬಹಿರಂಗವಾಗಿ ಮತ್ತು ಪಾರದರ್ಶಕವಾಗಿ ಮಾಡಿದ ಕೀರ್ತಿ ಅವರದು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ್ದು, ಜಾತೀಯತೆಯನ್ನು ಪೋಷಿಸುವ ಜಾತಿ ಸಂಘಗಳಿಗೆ ಹುಡುಕಿಹುಡುಕಿ ಹಣ ಕೊಟ್ಟಿದ್ದು, ಬೆಳಗ್ಗೆ ಸರ್ಕಾರಿ ಆದೇಶಕ್ಕೆ ಸಹಿ ಮಾಡಿ ಸಂಜೆಗೆ ಚೆಕ್‌ನಲ್ಲಿ ಲಂಚದ ಹಣ ಪಡೆದದ್ದು, ಗೊತ್ತಿದ್ದೂ ಗೊತ್ತಿದ್ದು ಭಾಸ್ಕರ್ ರಾವ್‌ರಂತಹ ಭ್ರಷ್ಟನನ್ನು ಲೋಕಾಯುಕ್ತರನ್ನಾಗಿ ನೇಮಿಸಿದ್ದು, ಶ್ಯಾಮ್ ಭಟ್‌ರನ್ನು ಬಿಡಿಎ ಯಂತಹ ಅಕ್ರಮ ಕೂಪಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದು; ಅಕ್ರಮ ಗಣಿಗಾರಿಕೆಯಲ್ಲಿ ಸಚಿವರೇ ಪಾಲುದಾರರಾಗಿದ್ದದ್ದು, ಅಕ್ರಮ ಡಿನೋಟಿಫಿಕೇಷನ್‌ಗಳನ್ನು ಮಾಡಿ ಮಾಡಿ ಮಂತ್ರಿ-ಮುಖ್ಯಮಂತ್ರಿಗಳಾಗಿದ್ದವರೇ ಪ್ರತಿದಿನ ಕೋರ್ಟ್‍ಗೆ ಅಲೆದಿದ್ದು, ಮೂರು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳಾಗಿದ್ದು, ಒಂದು ಸಂದರ್ಭದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ, ನಾಲ್ವರು ಮಾಜಿ ಮಂತ್ರಿಗಳು, ಒಬ್ಬ ಶಾಸಕ ವಿಚಾರಣಾಧೀನ ಕೈದಿಗಳಾಗಿದ್ದದ್ದು, ಸಚಿವರೇ ಸದನದಲ್ಲಿ ಬ್ಲೂಫಿಲ್ಮ್ ನೋಡುತ್ತ ಕಾಲಕಳೆದದ್ದು; ಒಂದೇ ಎರಡೇ ಆ ಐದು ವರ್ಷಗಳಲ್ಲಿ ಘಟಿಸಿದ್ದು?

ಇನ್ನು, ಜಾತ್ಯತೀತ ಪಕ್ಷ ಎಂದು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ಜಾತ್ಯತೀತ ಜನತಾದಳ ತನ್ನ ಜಾತೀವಾದವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ತವರು ಜಿಲ್ಲೆ ಹಾಸನದ ಸಿಗರನಹಳ್ಳಿಯ ಪ್ರಸಂಗ ಜಗಜ್ಜಾಹಿರು ಮಾಡಿದೆ. ಆ ಊರಿನಲ್ಲಿರುವ ಸರ್ಕಾರಿ ಸಮುದಾಯ ಭವನ ಒಂದು ನಿರ್ದಿಷ್ಟ ಜಾತಿಯ ಸಮುದಾಯ ಭವನ ಎಂಬ ಬೋರ್ಡ್ ಹಾಕಿಕೊಂಡಿತ್ತು. ಜನರ ಹೋರಾಟದ ಫಲವಾಗಿ ಮತ್ತು ಮಾಧ್ಯಮಗಳಲ್ಲಿ sigaranahalli-hassanರಾಜ್ಯ-ರಾಷ್ಟ್ರ ಮಟ್ಟದಲ್ಲಿ ವರದಿಯಾದ ಕಾರಣ ಇಂದು ಆ ನಾಮಫಲಕ ಬದಲಾಗಿದೆ. ಅಂದ ಮಾತ್ರಕ್ಕೆ ದಲಿತರಿಗೆ ಪ್ರವೇಶವೇನೂ ಸಿಕ್ಕಿಲ್ಲ. AC/DySP/ತಹಸೀಲ್ದಾರ್ ಹುದ್ದೆಗಳನ್ನು ಕೋಟಿಗಳಿಗೆ ಹರಾಜು ಹಾಕಿದ ಭ್ರಷ್ಟ ವ್ಯಕ್ತಿಯನ್ನು ದೇವೇಗೌಡರು ಇತ್ತೀಚೆಗೆ ಯಾವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಎನ್ನುವುದು ನಮ್ಮ ಮುಂದೆಯೇ ಇದೆ. ಅನುಕೂಲಸಿಂಧು ರಾಜಕಾರಣಕ್ಕೆ ಉತ್ತಮ ಉದಾಹರಣೆಯಾಗಿರುವ ಈ ಜೆಡಿಎಸ್ ಜೊತೆಗೆ ಸ್ಥಳೀಯವಾಗಿ ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೊಂದಾಣಿಕೆ ಮಾಡಿಕೊಂಡಿವೆ. ಇದರಲ್ಲಿ ಜೆಡಿಎಸ್‌ದು ಮಾತ್ರ ಅನೈತಿಕ ರಾಜಕಾರಣ ಎಂದರೆ ಅದು ನಮ್ಮ ಅಪ್ರಾಮಾಣಿಕ ಮಾತಾಗುತ್ತದೆ.

ಇತ್ತೀಚೆಗೆ ತಾನೆ ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಶಾಸಕರಿಂದ ಚುನಾವಣೆ ನಡೆಯಿತು. ದೇಶದ ಪ್ರಮುಖ ಮಾಧ್ಯಮಗಳಲ್ಲಿ ರಾಜ್ಯದ ಹೆಸರು ಹರಾಜಾಯಿತು. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ಚುನಾವಣೆ ನಡೆಯಿತು. ಶಿಕ್ಷಕರು ಮತ್ತು ಪದವೀಧರರಿಗೂ ಹಣ ಮತ್ತು ಗಿಫ್ಟ್‌ಗಳನ್ನು ಹಂಚಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಮೂರೂ ಒಂದೇ ತರಹದ ಕಾರ್ಯಾಚರಣೆ, ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿವೆ. ಆಯಾಯಾ ಕ್ಷೇತ್ರಕ್ಕೆ ಯಾರ ಹಣ ಹೆಚ್ಚಾಗಿ ಖರ್ಚಾಗುತ್ತಿದೆಯೋ, ಅಥವ ಯಾವ ಜಾತಿ/ಒಳಜಾತಿ ಲೆಕ್ಕಾಚಾರ ಕೆಲಸ ಮಾಡುತ್ತದೆಯೋ ಅದಕ್ಕೆ ಅನುಗುಣವಾಗಿ ಫಲಿತಾಂಶ ಬರುತ್ತಿದೆ.

ಹೀಗೆ ನೈತಿಕವಾಗಿ ದಿವಾಳಿಯಾಗಿರುವ ಪಕ್ಷಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಜ್ಯದ ನೈಸರ್ಗಿಕ ಸಂಪತ್ತುಗಳಾದ ಮರಳು, ಅರಣ್ಯ, ಗ್ರಾನೈಟ್, ಭೂಮಿ ಯಾವುದೇ ನಿಯಂತ್ರಣವಿಲ್ಲದೆ dharwad-janaparyaya-09072016ಪಟ್ಟಭದ್ರರ ಪಾಲಾಗುತ್ತಿದೆ. ಇದಾವುದೂ ಅವರುಗಳ ಗಮನಕ್ಕೆ ಬರದಂತೆಯೇ ವರ್ತಿಸುತ್ತಿದ್ದಾರೆ. ಈ ಪಟ್ಟಭದ್ರರು ಇಂದಿನ ಮತ್ತು ಹಿಂದಿನ ಸರ್ಕಾದಲ್ಲಿ ಇದ್ದವರೇ ಆಗಿದ್ದಾರೆ. ಇಂತಹವರಿಂದ ಜನ ಸಾಮಾನ್ಯರ ಹಕ್ಕು ಮತ್ತು ಆಸ್ತಿಗಳ ರಕ್ಷಣೆಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?

ನೈಸರ್ಗಿಕ ಸಂಪತ್ತುಗಳು ಕೆಲವೇ ಕೆಲವು ಮಂದಿಯ ಸ್ವತ್ತಾಗುವುದರ ಜೊತೆಗೆ, ಸಾಮಾಜಿಕ ನ್ಯಾಯ ಅರ್ಹ ವರ್ಗಗಳಿಗೆ ತಲುಪುತ್ತಿಲ್ಲ.

ಶೋಷಣೆ, ತಾರತಮ್ಯ, ದೇವರು-ದೆವ್ವ-ನಂಬಿಕೆ ಹೆಸರಿನಲ್ಲಿ ಅಮಾನವೀಯ ಆಚರಣೆಗಳು ಮುಂದುವರೆಯುತ್ತಲೇ ಇವೆ.

ಎಂಟು ನೂರು ವರ್ಷಗಳ ಹಿಂದೆ ಬಸವಣ್ಣ ಹೇಳಿದ್ದು ಇಂದಿಗೂ ಪ್ರಸ್ತುತ, ಏಕೆಂದರೆ ಇಂದಿಗೂ ಆವತ್ತಿನ ಸಮಸ್ಯೆಗಳು ಮುಂದುವರೆಯುತ್ತಿವೆ.

ಇದು ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ.

ಡಾ.ಝಾಕಿರ್ ನಾಯ್ಕ್ ಮತ್ತು ಸ್ವಧರ್ಮ ಶ್ರೇಷ್ಠತಾ ವ್ಯಸನ


-ಇರ್ಷಾದ್ ಉಪ್ಪಿನಂಗಡಿ


 

ವಿವಾದಿತ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಜಾಕಿರ್ ನಾಯ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ನಾಯ್ಕ್ ಕುರಿತಾಗಿ ಚರ್ಚೆಗಳು ನಡಿಯುತ್ತಿವೆ. ಝಾಕಿರ್ ನಾಯ್ಕ್ ಮತ್ತೆ ವಿವಾದದ ಕೇಂದ್ರ ಬಿಂದುವಾಗಲು ಕಾರಣ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿ. 25 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ರೂವಾರಿಗಳು ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳಿಂದ ಪ್ರಭಾವಿತಗೊಂಡಿದ್ದರು ಎಂಬ ಮಾಹಿತಿ. ಪರಿಣಾಮ ತನಿಖಾ ಸಂಸ್ಥೆಗಳು ಝಾಕಿರ್ ನಾಯ್ಕ್ ದೇಶ ವಿದೇಶಗಳಲ್ಲಿ ಮಾಡಿರುವ ಧರ್ಮ ಪ್ರಚಾರ ಭಾಷಣಗಳ ತನಿಖೆಗೂ ಮುಂದಾಗಿವೆ. ಮಾಧ್ಯಮಗಳು “ಬ್ಯಾನ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಮೂಲಕ ಕ್ಯಾಂಪೇನ್ ನಡೆಸುತ್ತಿವೆ. ಇನ್ನೊಂದೆಡೆ ಝಾಕಿರ್ ನಾಯ್ಕ್ ಅಭಿಮಾನಿಗಳ “ಐ ಆಮ್ ವಿಥ್ ಝಾಕಿರ್ ನಾಯ್ಕ್” ಹ್ಯಾಶ್ ಟ್ಯಾಗ್ ಕ್ಯಾಂಪೇನ್ ಕೂಡಾ ಜೋರಾಗಿದೆ. ಹಾಗಾದರೆ ಡಾ. ಝಾಕಿರ್ ನಾಯ್ಕ್ ವಿಚಾರಧಾರೆಗಳೇನು? ಯುವ ಮನಸ್ಸುಗಳಲ್ಲಿ ಕ್ರೌರ್ಯವನ್ನು ತುಂಬುವಷ್ಟು ವಿಷಪೂರಿತವಾಗಿವೆಯಾ ನಾಯ್ಕ್ ಚಿಂತನೆಗಳು? ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿಯೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕಿದೆ.

ಯಾರು ಈ ಡಾ. ಝಾಕಿರ್ ನಾಯ್ಕ್?

ಪೀಸ್ ಟಿವಿ ಎಂಬ ವಹಾಬಿ ಇಸ್ಲಾಮ್ ಧರ್ಮ ಪ್ರಚಾರಕ ವಾಹಿನಿಯನ್ನು ವೀಕ್ಷಿಸುತ್ತಿರುವ ಎಲ್ಲರಿಗೂ ಡಾ. ಝಾಕಿರ್ ನಾಯ್ಕ್ ಚಿರಪರಿಚಿತ. dr zhakir naikತಲೆಗೊಂದು ಟೊಪ್ಪಿ, ಮೀಸೆಯನ್ನು ಕತ್ತರಿಸಿ ಗಡ್ಡ ಬಿಟ್ಟು ಸೂಟ್ ಧರಿಸಿ ವಿದ್ಯುತ್ ಅಲಂಕಾರಗಳಿಂದ ಕೂಡಿರುವ ಜಗಮಗಿಸುವ ಸೆಟ್ ನಲ್ಲಿ ನಿಂತು ಸಾವಿರಾರು ಜನರ ಮುಂದೆ ಧರ್ಮಪ್ರವಚನ ನೀಡುತ್ತಾ ಇಸ್ಲಾಮ್ ಧರ್ಮದ ಪ್ರಚಾರ ಮಾಡುತ್ತಾರೆ. ಸಭಿಕರು ಇಸ್ಲಾಮ್ ಕುರಿತಾಗಿ ಕೇಳುವ ಪ್ರೆಶ್ನೆಗಳಿಗೆ ಕುರುಆನ್ ಹಾಗೂ ಹದೀಸ್ ಗಳನ್ನು ಮುಂದಿಟ್ಟುಕೊಂಡು ತನ್ನದೇ ಆದ ರೀತಿಯಲ್ಲಿ ಉತ್ತರವನ್ನು ಕೊಡುವ ಚಾಣಾಕ್ಷ ಮಾತುಗಾರ ಡಾ. ಝಾಕಿರ್ ನಾಯ್ಕ್. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾಗಿರುವ ಝಾಕಿರ್ ನಾಯ್ಕ್ ಧರ್ಮ ಪ್ರಚಾರ ಕಾರ್ಯಕ್ರಮಕ್ಕೆ ಬರುವವರು ಕೇವಲ ಮುಸ್ಲಿಮರಷ್ಟೇ ಅಲ್ಲ, ಹಿಂದೂ ಕ್ರೈಸ್ತ ಸಮುದಾಯದವರೂ ಬರುತ್ತಾರೆ. ಇಸ್ಲಾಮ್ ಕುರಿತಾಗಿ ತಮ್ಮ ಪ್ರೆಶ್ನೆಗಳನ್ನು ಡಾ. ನಾಯ್ಕ್ ಮುಂದಿಡುತ್ತಾರೆ. ಹೀಗೆ ಪ್ರೆಶ್ನೆ ಕೇಳುತ್ತಾ ಚರ್ಚೆ ನಡೆಸುತ್ತಾ ನೂರಾರು ಮಂದಿ ಇಸ್ಲಾಮ್ ಧರ್ಮವನ್ನು ಬಹಿರಂಗವಾಗಿಯೇ ಸ್ವೀಕಾರ ಮಾಡುತ್ತಾರೆ. ಪೀಸ್ ಟಿವಿ ಮೂಲಕ ಜನಜನಿತವಾಗಿರುವ ಡಾ.ಜಾಕಿರ್ ನಾಯ್ಕ್ ಗೆ ದೇಶ ವಿದೇಶಗಳಾದ್ಯಂತ ಅಭಿಮಾನಿಗಳಿದ್ದಾರೆ. ಡಾ. ಝಾಕಿರ್ ನಾಯ್ಕ್ ಇದುವರೆಗೂ ಪ್ರಪಂಚದಾದ್ಯಂತ 4000 ಕ್ಕೂ ಅಧಿಕ ಧಾರ್ಮಿಕ ಪ್ರವಚನಗಳನ್ನು ನೀಡಿದ್ದಾರೆ. ಅವೆಲ್ಲವೂ ಪೀಸ್ ಟಿವಿ ಮೂಲಕ ಪ್ರಸಾರವಾಗುತ್ತವೆ. ಕೆಲವು ದೇಶಗಳಲ್ಲಿ ಇವರು ಧರ್ಮ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಹಾಗೂ ಇವರ ಭಾಷಣಗಳನ್ನು ಪ್ರಸಾರ ಮಾಡುವ ಪೀಸ್ ಟಿವಿ ವಾಹಿನಿಗೂ ನಿಷೇಧವಿದೆ. ಗಮನಾರ್ಹವಾದ ಸಂಗತಿ ಏನೆಂದರೆ ಮುಸ್ಲಿಮ್ ಯುವ ಸಮೂಹ ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳತ್ತ ಇತ್ತೀಚೆಗೆ ಹೆಚ್ಚಾಗಿ ವಾಲುತ್ತಿವೆ. ಮನೆ ಮನೆಗಳಲ್ಲಿ ಟಿವಿ ಮೂಲಕ ಇವರ ಧಾರ್ಮಿಕ ವಿಚಾರಧಾರೆಗಳನ್ನು ವೀಕ್ಷಿಸುವವರಲ್ಲಿ ಯುವ ಸಮೂಹದ್ದೇ ಅಧಿಕ ಪಾಲು.

ಡಾ. ಜಾಕಿರ್ ನಾಯ್ಕ್ ಹಾಗೂ ಧರ್ಮ ಶ್ರೇಷ್ಠತಾ ವ್ಯಸನ

ಡಾ. ಜಾಕಿರ್ ನಾಯ್ಕ್ ವಹಾಬಿ ಇಸ್ಲಾಮ್ ಪ್ರತಿಪಾದಕ. 18 ನೇ ಶತಮಾನದಲ್ಲಿ ಅರೇಬಿಯಾದಲ್ಲಿ ಅಬ್ದುಲ್ ವಹಾಬ್ ಎಂಬುವವರು ಈ ಪಂಥವನ್ನು ಹುಟ್ಟುಹಾಕಿದರು. ಭಾರತೀಯ ಮುಸ್ಲಿಮರು ಪಾಲಿಸಿಕೊಂಡು ಬಂದ ಸೂಫೀ ಪರಂಪರೆಯ ಇಸ್ಲಾಮ್ ಧರ್ಮವನ್ನು ಈ ವಹಾಬಿ ಸಿದ್ದಾಂತವಾದಿಗಳು ಒಪ್ಪುವುದಿಲ್ಲ. ಕಾರಣ ಭಾರತೀಯ ಮುಸ್ಲಿಮರು ಪಾಲಿಸುವ ಇಸ್ಲಾಮ್ “ಅಶುದ್ಧಿಯಾಗಿದೆ” ಹಾಗೂ ಸೂಫಿ ವಿಚಾರಧಾರೆಗಳಿಂದ ಪ್ರಭಾವಿತವಾಗಿ ಇತರ ಧರ್ಮಗಳ ಸಂಸ್ಕೃತಿ ಹಾಗೂ ಆಚರಣೆಗಳನ್ನೂ ಇಸ್ಲಾಮ್ ಧರ್ಮದಲ್ಲಿ ಅಳವಡಿಸಿಕೊಂಡಿವೆ. ಇದು ಧರ್ಮ ನಿಷಿದ್ಧ ಕಾರ್ಯ ಎಂಬುವುದು ವಹಾಬಿ ಮೂಲಭೂತವಾದಿಗಳ ವಾದ. ಈ ಕಾರಣಕ್ಕಾಗಿ ಧರ್ಮದ ಪರಿಶುದ್ದೀಕರಣದ ಹೆಸರಲ್ಲಿ ಸೌದಿ ಅರೇಬಿಯಾದ ಕಟ್ಟರ್ ವಹಾಬಿ ಚಿಂತನೆಯನ್ನು ನೈಜ್ಯ ಇಸ್ಲಾಮ್ ಎಂದು ಬಿಂಬಿಸಲು ಇವರು ಹೊರಟಿದ್ದಾರೆ. ಡಾ. ಜಾಕಿರ್ ನಾಯ್ಕ್ ಮಾಡುತ್ತಿರುವುದು ಈ ಕಾರ್ಯವನ್ನೇ. ಪರಿಶುದ್ದ ಇಸ್ಲಾಮ್ ಹೆಸರಿನಲ್ಲಿ ವಹಾಬಿ ಮೂಲಭೂತವಾದ ಸಿದ್ದಾಂತವನ್ನು ವಿಶ್ವದಾದ್ಯಂತ ಪ್ರಚುರ ಪಡಿಸುವುದು ನಾಯ್ಕ್ ನೇತ್ವತ್ವದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯ ಪ್ರಮುಖ ಉದ್ದೇಶ. ಇವರ ಧಾರ್ಮಿಕ ಪ್ರವಚನಗಳನ್ನು ಆಲಿಸಿದಾಗ ಅವರಲ್ಲಿರುವ ಧರ್ಮ ಶ್ರೇಷ್ಠತಾ ವ್ಯಸನ ಎದ್ದು ಕಾಣುತ್ತದೆ. ಇಸ್ಲಾಮ್ ಧರ್ಮ ಹೊರತುಪಡಿಸಿ ಇತರ ಎಲ್ಲಾ ಧರ್ಮಗಳು ನ್ಯೂನ್ಯತೆಯಿಂದ ಕೂಡಿದೆ ಎಂಬ ವಾದ ಇವರ ಮತಪ್ರವಚನಗಳಲ್ಲಿ ಪದೇ ಪದೇ ಉಲ್ಲೇಖವಾಗುತ್ತದೆ. ತಾನು ಪಾಲಿಸುತ್ತಿರುವ ಧರ್ಮವನ್ನು ಸಮರ್ಥಿಸುತ್ತಾ ಹಾಗೂ ಅದರ ಶ್ರೇಷ್ಠತೆಯನ್ನು ಸಾರುತ್ತಾ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ಮನೋಭಾವ ಯಾವ ಧರ್ಮದಲ್ಲೇ ಇರಲಿ ಅದು ತೀರಾ ಅಪಾಯಕಾರಿ.

ಇತರ ಧರ್ಮಗಳ ಬಗ್ಗೆ ವಿಮರ್ಶಿಸುವುದು ಖಂಡಿತಾ ತಪ್ಪಲ್ಲ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಅಥವಾ ಇನ್ನಾವುದೇ ಧರ್ಮದ ಅನುಯಾಯಿಗಳುdr zhakir naik_1 ಪರಸ್ಪರ ಎಲ್ಲಾ ಧರ್ಮಗಳ ಕುರಿತಾಗಿ ಚರ್ಚೆ ನಡೆಸಲು ಹಾಗೂ ವಿಮರ್ಶಿಸಲು ಅವಕಾಶವಿದೆ, ಇರಬೇಕು ಕೂಡಾ. ಆದರೆ ಇದು ವೈಜ್ಞಾನಿಕ ನೆಲೆಯಲ್ಲಿರಬೇಕು. ಹಾಗಲ್ಲದೆ, ತನ್ನ ಧರ್ಮದ ಶ್ರೇಷ್ಠತೆಯನ್ನು ಸಾರುವ ಭರದಲ್ಲಿ ಮತ್ತೊಂದು ಧರ್ಮದ ಅಸ್ತಿತ್ವವನ್ನೇ ನಿರಾಕರಿಸಿಸುವುದು ಹಾಗೂ ಇತರ ಧರ್ಮಗಳನ್ನು ಅವಹೇಳನಕಾರಿಯಾಗಿ ಚಿತ್ರಿಸುವುದು ಮಾತ್ರ ಅತಿರೇಕದ ನಡವಳಿಕೆ. ಡಾ. ಝಾಕಿರ್ ನಾಯ್ಕ್ ಬಹುತೇಕ ವಾದಗಳಲ್ಲೂ ಪರಧರ್ಮ ಅಸಹಿಷ್ಠುತಾ ಮನೋಭಾವ ಹೊಂದಿರುವುದು ಎದ್ದು ಕಾಣುತ್ತಿದೆ. ಇದು ಕೇವಲ ಝಾಕಿರ್ ನಾಯ್ಕ್ ರಲ್ಲಿ ಮಾತ್ರವಲ್ಲ ಅವರ ವಿಚಾರಧಾರೆಗಳನ್ನು ಪಾಲಿಸುವ ಸಿದ್ದಾಂತವಾದಿಗಳಲ್ಲೂ ಕಂಡುಬರುತ್ತದೆ. ಡಾ. ಝಾಕಿರ್ ನಾಯ್ಕ್ ಅವರ ಚಿಂತನೆಯನ್ನು ಪ್ರಚಾರ ಪಡಿಸುವ ಸಲಫೀ, ಅಹ್ಲೆಹದೀಸ್ ಸಿದ್ದಾಂತವಾದಿಗಳಲ್ಲಿ ಚರ್ಚೆ ನಡೆಸಿದರೆ ಅವರಲ್ಲಿ ಪರಧರ್ಮ ಅಸಹಿಷ್ಠುತಾ ಮನೋಭಾವ ಎಷ್ಟರ ಮಟ್ಟಿಗೆ ಇದೆ ಎಂಬುವುದನ್ನು ನಾವು ಕಾಣಬಹುದು. ಇಸ್ಲಾಮ್ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದ ಅಸ್ತಿತ್ವವನ್ನೇ ಇವರು ಒಪ್ಪಲು ತಯಾರಿಲ್ಲ.

“ಬಹುಸಂಸ್ಕೃತಿ, ಕೂಡುಕೊಳ್ಳುವಿಕೆ ಮುಸ್ಲಿಮರ ಪಾಲಿಗೆ ಧರ್ಮ ನಿಷಿದ್ಧ. ನೈಜ್ಯ ಮುಸಲ್ಮಾನನೊಬ್ಬ ಹಿಂದೂಗಳ ಹಬ್ಬಹರಿದಿನಗಳಲ್ಲಿ ಭಾಗವಹಿಸಲಾರ, ಅವರು ಕೊಡುವ ಹಬ್ಬದೂಟವನ್ನೂ ಸ್ವೀಕರಿಸುವುದು ಧರ್ಮಬಾಹಿರ” ಎನ್ನುತ್ತಾರೆ ಮಂಗಳೂರಿನ ಸಲಫಿ ಮೂಮೆಂಟ್ ಮುಖಂಡರೊಬ್ಬರು. ಧರ್ಮಾಂಧತೆಯ ನಶೆಯಲ್ಲಿ ಮುಳುಗಿರುವ ಬಹುತೇಕ ಯುವಕರು ವಾದ ಮಾಡುವವಾಗ ಬಳಸುವುದು ಡಾ. ಝಾಕಿರ್ ನಾಯ್ಕ್ ಬಳಸೋ ಮೆಟೀರಿಯಲ್ ಗಳನ್ನೇ. ಬಹುಸಂಸ್ಕೃತಿ ವಿರೋಧಿ ಮನೋಭಾವ ಹಾಗೂ ಸ್ವಧರ್ಮ ಶ್ರೇಷ್ಠತಾ ವ್ಯಸನ ಯುವಮನಸ್ಸುಗಳಲ್ಲಿ ಆಳವಾಗಿ ಬೆರೂರುತ್ತಿರುವುದಕ್ಕೆ ಡಾ.ನಾಯ್ಕ್ ಕೊಡುಗೆ ತುಂಬಾನೇ ಇದೆ. ಇನ್ನೂ ಅಪಾಯಕಾರಿಯಾದ ಸಂಗತಿ ಏನಂದರೆ ಝಾಕಿರ್ ನಾಯ್ಕ್ ಮುಸ್ಲಿಮ್ ಯುವಮನಸ್ಸುಗಳಲ್ಲಿ ಸರ್ವಶ್ರೇಷ್ಠ ಮುಸ್ಲಿಮ್ ಧರ್ಮಗುರುವಾಗಿ ಸ್ಥಾನಪಡೆದುಕೊಳ್ಳುತ್ತಿರುವುದು. ಡಾ.ಝಾಕಿರ್ ನಾಯ್ಕ್ ವಿಚಾರಧಾರೆಗಳಿಗೆ ಭಿನ್ನವಾದ ಚಿಂತನೆಗಳು ಇಸ್ಲಾಮ್ ಧರ್ಮದಲ್ಲಿದ್ದರೂ ಅಲ್ಲದೆ ಅವರು ಪ್ರಚುರಪಡಿಸುವ ವಹಾಬಿ ಮೂಲಭೂತವಾದಿ ಚಿಂತನೆಗೆ ಮುಸ್ಲಿಮ್ ಸಮೂಹದಲ್ಲಿ ವಿರೋಧವಿದ್ದರೂ ಇಂದಿನ ಯುವಕರ ಪಾಲಿಗೆ ಡಾ. ಝಾಕಿರ್ ನಾಯ್ಕ್ ಪ್ರಮುಖ ಮುಸ್ಲಿಮ್ ಧಾರ್ಮಿಕ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ.

ಇತ್ತೀಚೆಗೆ ಕೆಲ ಮುಸ್ಲಿಮ್ ಯುವಕರಂತೂ ಅತಿಧಾರ್ಮಿಕತೆಯ ಗುಲಾಮರಾಗುತ್ತಿದ್ದಾರೆ. ಧಾರ್ಮಿಕತೆಯ ಗುಂಗಿನಲ್ಲೇ ದಿನದ ಅಧಿಕ ಸಮಯವನ್ನು ಕಳೆಯುವ ಸುಶಿಕ್ಷಿತ ಮುಸ್ಲಿಮ್ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ವಯೋಸಹಜ ನಡವಳಿಕೆಗೆ ಬದಲಾಗಿ ಪರಲೋಕ ಸ್ವರ್ಗ ನರಕಗಳ ಕುರಿತಾದ ವಿಚಾರಗಳಲ್ಲಿ ಅತಿಯಾಗಿ ತಲೆಕೆಡಿಸಿಕೊಳ್ಳುತ್ತಾರೆ. ಸಂಗೀತ, ಕಲೆ, ಸಿನಿಮಾಗಳ ವಿರುದ್ಧವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ಇಂತಹಾ ಮನಸ್ಥಿತಿ ಹೊಂದಿರುವ ಯುವಕರು ಲೌಕಿಕ ಜೀವನದ ಕುರಿತಾಗಿ ತಾತ್ಸಾರ ಮನೋಭಾವ ಹೊಂದಿರುತ್ತಾರೆ. ಈ ಲೌಕಿಕ ಜೀವನವಿರುವುದೇ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಲು; ನಮ್ಮ ಬದುಕು ಏನಿದ್ದರೂ ಪರಲೋಕದಲ್ಲ ಎಂಬ ನಂಬಿಕೆ ಅತಿಯಾಗಿ ಧರ್ಮಪಾಲನೆ ಹಾಗೂ ಧರ್ಮರಕ್ಷಣೆಯೇ ಈ ಯುವಕರ ಜೀವನದ ಪರಮ ಗುರಿಯಾಗುತ್ತಿದೆ. ನನ್ನ ಸ್ನೇಹಿತನೊಬ್ಬ ಮಧ್ಯಾಹ್ಮದ ನಮಾಜ್ ಮಾಡಲು ಕಚೇರಿಯಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ಸಿಕ್ಕಿದ್ದ ಉತ್ತಮ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದ. ಐಸೀಸ್ ಗೆ ಸೇರಿದ್ದಾರೆಂದು ಶಂಕಿಸಲ್ಪಡುತ್ತಿರುವ ಕೇರಳದ ಯುವಕರ ಪೋಷಕರೊಬ್ಬರು ತನ್ನ ಮಗನ ಅತಿಧಾರ್ಮಿಕತೆಯ ಬಗ್ಗೆ ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ನಿಜಕ್ಕೂ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ. ಆ ಯುವಕನ ಅತಿಧಾರ್ಮಿಕತೆ ಎಷ್ಟಿತ್ತೆಂದರೆ ತನ್ನ ತಂದೆಯನ್ನೇ “ಕಾಫಿರ್ ” ಎಂದು ಕರೆದಿದ್ದ. ಶರಿಯಾ ಕಾನೂನು ಜಾರಿಗಾಗಿ ಹೋರಾಡುತ್ತೇನೆ ಎಂದಿದ್ದನಂತೆ. ತನ್ನ ಹೋರಾಟದ ಮೂಲಕ ಸ್ವರ್ಗ ಪಡೆಯುತ್ತೇನೆ ಎನ್ನುತ್ತಿದ್ದನಂತೆ. ಈ ರೀತಿಯಲ್ಲಿ ಅತಿಧಾರ್ಮಿಕತೆಯತ್ತ ವಾಲುತ್ತಿರುವ ಯುವಮನಸ್ಸುಗಳ ಮೇಲೆ ಡಾ.ಝಾಕಿರ್ ನಾಯ್ಕ್ ಪ್ರಭಾವ ಬಹಳಷ್ಟಿದೆ. ಅತಿಧಾರ್ಮಿಕತೆ ಮಿತಿಮೀರಿದರೆ ಅದರ ಪರಿಣಾಮ ಹೇಗಿರುತ್ತದೆ ಎಂಬುವುದು ಇಂದು ನಾವು ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಂತಹಾ ನೆರೆ ರಾಷ್ಟ್ರಗಳಲ್ಲಿ ಕಾಣಸಿಗುತ್ತದೆ.

ಕೇಂದ್ರ ಸರ್ಕಾರದ ಕಣ್ಣು ಕೇವಲ ಡಾ. ಝಾಕಿರ್ ನಾಯ್ಕ್ ವಿರುದ್ಧ ಯಾಕೆ ?

ಬಾಂಗ್ಲಾದೇಶದಲ್ಲಿ ನಡೆದ ಭಯೋತ್ಪಾಧನಾ ಕೃತ್ಯದ ನಂತರ ಡಾ. ಝಾಕಿರ್ ನಾಯ್ಕ್ ಮೇಲೆ ನಿಗಾ ಇಡಲು ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.gujarat_violence_1 ಆದರೆ ಡಾ. ಝಾಕಿರ್ ನಾಯ್ಕ್ ಎಂಬ ಇಸ್ಲಾಮ್ ಮೂಲಭೂತವಾದಿ ಧಾರ್ಮಿಕ ಮುಖಂಡನನ್ನು ಮಾತ್ರ ನಿಯಂತ್ರಿಸಿದರೆ ಸಾಕೇ? ಹಿಂದುತ್ವದ ಹೆಸರಲ್ಲಿ ಅಮಾಯಕರ ರಕ್ತ ಹರಿಸಲು ಪ್ರೇರೇಪಿಸುವ ಫ್ಯಾಸಿಸ್ಟ್ ಕೋಮುವಾದಿಗಳ ಬಾಯಿಗೆ ಬೀಗ ಹಾಕುವವರು ಯಾರು? ಬಾಂಗ್ಲಾದ ಇಸ್ಲಾಮಿಕ್ ಭಯೋತ್ಪಾದಕರು ಡಾ. ಝಾಕಿರ್ ನಾಯ್ಕ್ ರಿಂದ ಪ್ರಭಾವಿತರಾದರೆ ಹಿಂದುತ್ವದ ಹೆಸರಲ್ಲಿ ಅಮಾಯಕ ಮುಸ್ಲಿಮರ ರಕ್ತ ಹರಿಸುವವರಿಗೆ ಅಥವಾ ದಾಬೋಳ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಮಾಡಿದ ಹಿಂದುತ್ವ ಭಯೋತ್ಪಾದಕರಿಗೆ ಸಾದ್ವಿ ಪ್ರಾಗ್ಯ, ಮಾಯಾ ಕೊಡ್ನಾನಿ, ಪ್ರವೀಣ್ ತೊಗಾಡಿಯಾ, ಸ್ವಾದ್ವಿ ಪ್ರಾಚಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥರಂತಹಾ ಹಿಂದೂ ಮೂಲಭೂತವಾದಿಗಳು ಆದರ್ಶಪ್ರಾಯರಾಗಿದ್ದಾರೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಪ್ರಚೋದನೆಯಿಂದ ಕೂಡಿದ ಹೇಳಿಕೆಯನ್ನು ನೀಡುತ್ತಾ ಮುಝಾಫರ್ ನಗರ್, ದಾದ್ರಿಯಂತಹಾ ಹತ್ತಾರು ಅಮಾನುಷ ಘಟನೆಗಳಿಗೆ ಕಾರಣರಾದವರಲ್ಲವೇ ಇವರು. ಡಾ. ನಾಯ್ಕ್ ರಂತೆ ಧರ್ಮ ಶ್ರೇಷ್ಠತಾ ವ್ಯಸನ ಪ್ರಖರ ಹಿಂದುತ್ವವಾದಿಗಳಲ್ಲೂ ಹೆಚ್ಚಾಗುತ್ತಿದೆ. ಈ ಕೋಮುವಾದಿಗಳ ವಿರುದ್ಧ ಕೇಂದ್ರದ ತನಿಖಾ ಸಂಸ್ಥೆಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುವುದು ಪ್ರಶ್ನಾರ್ಹ ಸಂಗತಿ.

ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದ ಹಾಗೂ ಕೋಮುವಾದ ಮನುಕುಲಕ್ಕೆ ಅಪಾಯಕಾರಿ. ಕೇವಲ ಒಬ್ಬ ವ್ಯಕ್ತಿಯ ವಿರುದ್ಧ ಕ್ರಮಕೈಗೊಂಡರೆ ಸಾಲದು. ಬದಲಾವಣೆಯಾಗಬೇಕಾಗಿರೋದು ಜನರ ಮನಸ್ಸಿನಲ್ಲಿ. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯೋನ್ಮುಖರಾಗಬೇಕಿದೆ. ಧಾರ್ಮಿಕತೆಗೆ ವಿರೋಧವಿಲ್ಲ. ಆದರೆ ಅತಿ ಧಾರ್ಮಿಕತೆ ಯಾವತ್ತೂ ಅಪಾಯಕಾರಿ. ಸಂವಿಧಾನದ ಪ್ರಕಾರ ಎಲ್ಲರಿಗೂ ತಮ್ಮ ತಮ್ಮ ವಿಚಾರಧಾರೆಗಳನ್ನು ವ್ಯಕ್ತಪಡಿಸಲು ಹಾಗೂ ಪ್ರಚುರಪಡಿಸಲು ಹಕ್ಕಿದೆ. ಆದರೆ ಸದ್ಯ ನಮಗೆಲ್ಲಾ ಬೇಕಾಗಿರೋದು ಡಾ. ಝಾಕಿರ್ ನಾಯ್ಕ್ ಪ್ರಚಾರ ಪಡಿಸುವ ಇಸ್ಲಾಂ ಮೂಲಭೂತವಾದಿ ಸಿದ್ದಾಂತವಲ್ಲ ಅಥವಾ ಸಂಘಪರಿವಾರದ ಫ್ಯಾಶಿಸ್ಟ್ ಕೋಮುವಾದಿ ಸಿದ್ದಾಂತವದ ಪ್ರಚಾರವಲ್ಲ. ಬದಲಾಗಿ ಅಗತ್ಯವಿರೋದು ಮಾನವೀಯತೆ ಹಾಗೂ ಜೀವಪರ ವಿಚಾರಗಳನ್ನು ಯುವಮನಸ್ಸಿನೊಳಗೆ ಬಿತ್ತುವ ವಿಚಾರಾಧಾರೆಗಳು. ಒಡೆದುಹೋಗುತ್ತಿರುವ ಮನಸ್ಸುಗಳನ್ನು ಬೆಸೆಯುವ ಕೆಲಸ ಆಗಬೇಕಿರುವುದು ಇಂದಿನ ಜರೂರತ್ತು.

ಕೊನೆಗೊಂದು ಮಾತು ಹೇಳಲೇ ಬೇಕು. ಬಾಂಗ್ಲಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಉಗ್ರರು ಕುರಾನ್ ಪಠಿಸಲು ಬಾರದವರ ಕತ್ತುಸೀಳಿ ಹತ್ಯೆ ಮಾಡಿದ್ದರು. ಈ ಸಂದರ್ಭದಲ್ಲಿ ತನ್ನ ಗೆಳತಿ ತರುಷಿ ಜೊತೆಗಿದ್ದ ಮುಸ್ಲಿಮ್ ಯುವಕ ಫರಾಜ್ ಹುಸೇನ್ ಗೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ಉಗ್ರರು ಜೀವದಾನವನ್ನು ನೀಡಿದ್ದರು. ಆದರೆ ಅದನ್ನ ತಿರಸ್ಕರಿಸಿ ಹುಸೇನ್ ಗೆಳತಿಯೊಡನೆ ತನ್ನ ಪ್ರಾಣತೆತ್ತ. ಈತನ ಪ್ರಾಣವನ್ನು ಕಸಿದುಕೊಂಡ ಉಗ್ರರಿಗೆ ಡಾ.ಝಾಕಿರ್ ನಾಯ್ಕ್ ಮಾದರಿಯಾದರೆ ನಮಗೆ ಮಾದರಿಯಾಗಬೇಕಾಗಿರುವುದು ಧರ್ಮಾಂಧರನ್ನು ಧಿಕ್ಕರಿಸಿ ಮಾನವಧರ್ಮವನ್ನು ಎತ್ತಿಹಿಡಿದ ನೈಜ್ಯ ಮುಸ್ಲಿಮ್ ಫರಾಜ್ ಹುಸೇನ್.

ಸಾವಿನ ನಂತರ ‘ಹೀರೋ’ ಆದ ಎಂ.ಕೆ. ಗಣಪತಿ!

                                                                                                             – ನವೀನ್ ಸೂರಿಂಜೆ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಈಗ ಚರ್ಚೆಯ ವಿಷಯವಾಗಿದೆ. ಈ ಗಣಪತಿಗೆ ಒಂದು ಇತಿಹಾಸವಿದೆ. ಮಂಗಳೂರಿನ ಚರ್ಚ್ ದಾಳಿಯಲ್ಲಿ ಆಗ ಕದ್ರಿ ಇನ್ಸ್ ಪೆಕ್ಟರ್ ಆಗಿದ್ದ ಎಂ ಕೆ ಗಣಪತಿ ಪಾತ್ರವನ್ನು ನಾನು ಕಣ್ಣಾರೆ ಕಂಡಿದ್ದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಭಜರಂಗದಳದಿಂದ ಪ್ರಾರಂಭವಾದ ಚರ್ಚ್ ದಾಳಿಯನ್ನು ಪೊಲೀಸ್ ಯೂನಿಫಾರಂ ಮೂಲಕವೇ ಮುನ್ನಡೆಸಿದವರು ಎಂ.ಕೆ ಗಣಪತಿ.

 

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸರ ಚರ್ಚ್ ದಾಳಿಯಲ್ಲಿ ನೋವುಂಡವರು.

ಪೊಲೀಸ್ ಅಧಿಕಾರಿಯೊಬ್ಬನ ಸಾವಿಗೆ ಮರುಕವಿದೆ. ಆದರೆ ಆ ಪೊಲೀಸ್ ಅಧಿಕಾರಿಯನ್ನು ಹೀರೋ ಮಾಡುವ ಮುನ್ನ ಆತನ ಇತಿಹಾಸ ಅರಿಯುವುದು ಮುಖ್ಯ.

 

2008 ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಕ್ರಿಶ್ಚಿಯನ್ನರ ಧರ್ಮಶಾಲೆ ಮೇಲೆ ಭಜರಂಗದಳ ದಾಳಿ ನಡೆಸಿತ್ತು. ಇದು ಮಂಗಳೂರಿನಲ್ಲಿ ಆ ವರೆಗೂ ಬೀದಿಗಿಳಿಯದ ಕ್ರಿಶ್ಚಿಯನ್ ಸಮುದಾಯ ಬೀದಿಗಿಳಿಯುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ಮಾಡುತ್ತಿದ್ದ ಸಂಧರ್ಭದಲ್ಲಿ ಭಜರಂಗದಳ ನಡೆಸಿದ ದಾಳಿಗೆ ಪೂರಕವಾಗಿ ಪೊಲೀಸರೂ ವರ್ತಿಸತೊಡಗಿದ್ರು.

 

ಅಡೋರೇಷನ್ ಮೊನೆಸ್ಟ್ರಿ ಮೇಲೆ ದಾಳಿ ನಡೆದ ಮಾಹಿತಿ ದೊರೆತ ತಕ್ಷಣ ನಾವು ಪತ್ರಕರ್ತರೂ ಚರ್ಚಗೆ ಭೇಟಿ ನೀಡಲಾರಂಭಿಸಿದೆವು. ನಂತರ ಮಂಗಳೂರಿನಾದ್ಯಂತ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯಲಾರಂಭಿಸಿತು. ದಾಳಿ ಎಲ್ಲೆಲ್ಲಿ ನಡೆಯಿತೋ ಅಲ್ಲೆಲ್ಲಾ ಪತ್ರಕರ್ತರಾದ ನಾವುಗಳೂ ಇರುತ್ತಿದ್ದೆವು. ವಾಸ್ತವವಾಗಿ ಭಜರಂಗಿಗಳು ದಾಳಿ ನಡೆಸಿದ್ದು ಮಿಲಾಗ್ರಿಸ್ ಅಡೋರೇಷನ್ ಮೊನೆಸ್ಟ್ರಿ ಎಂಬ ಮಠದ ಮಾಧರಿಯ ಧರ್ಮಶಾಲೆಗೆ ಮಾತ್ರ. ಉಳಿದಂತೆ ಬಿಜೈ ಚರ್ಚ್, ಕುಲಶೇಖರ ಚರ್ಚ್ಗಳಿಗೆ ನಡೆದ ದಾಳಿಯ ವೇಳೆ ಒಂದೇ ಒಂದು ಭಜರಂಗಿಗಳು ಇರಲಿಲ್ಲ. ಆದರೂ ದಾಳಿಯಾಗಿತ್ತು.

 

ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಚರ್ಚ್ ನಲ್ಲಿ ಕ್ರಿಶ್ಚಿಯನ್ ಯುವಕರು ಸೇರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ತಕ್ಷಣ ಕದ್ರಿ ಪೊಲೀಸ್ ಇನ್ಸ್ಸ್ಪೆಕ್ಟರ್ ಎಂ ಕೆ ಗಣಪತಿ ನೇತೃತ್ವದಲ್ಲಿ ಪೊಲೀಸರು ಕುಲಶೇಖರ ಚಚರ್್ಗೆ ಧಾವಿಸಿದ್ರು. ಎಂ ಕೆ ಗಣಪತಿ ಮತ್ತು ತಂಡ ಕುಲಶೇಖರ ಚರ್ಚ್ ಗೆ ಬರುತ್ತಿದ್ದಂತೆಯೇ ನಾನೂ ಕೂಡಾ ಕುಲಶೇಖರ ಚರ್ಚ್ ಆವರಣ ಪ್ರವೇಶಿಸಿದ್ದೆ. ಕುಲಶೇಖರ ಚರ್ಚ್ ಒಳಗೆ ಕ್ರಿಶ್ಚಿಯನ್ನರು ಪ್ರಾರ್ಥನೆ ನಡೆಸುತ್ತಿದ್ದರು. ಪ್ರಾರ್ಥನೆ ಜೋರಾಗಿ ಹೊರಗೆ ಕೇಳಿಸುತ್ತಿತ್ತು.

 

ವಾಹನದಿಂದ ಇಳಿದ ಎಂ ಕೆ ಗಣಪತಿ ಕ್ರಿಶ್ಚಿಯನ್ನರು ಪ್ರಾರ್ಥನೆ ನಿಲ್ಲಿಸಿ ಹೊರಬರುವಂತೆ ಸೂಚಿಸಿದ್ರು. ಪ್ರಾರ್ಥನನಿರತರು ಹೊರಬರಲು ಒಪ್ಪಲಿಲ್ಲ. ಅಷ್ಟರಲ್ಲಿ ಚರ್ಚ್ ಒಳಗೆ ನುಗ್ಗುವಂತೆ ಪೊಲೀಸರಿಗೆ ಎಂ ಕೆ ಗಣಪತಿ ಸೂಚಿಸಿದ್ರು. ಆಗ ಹಿರಿಯ ವಕೀಲರಾದ ಮರಿಯಮ್ಮ ಥಾಮಸ್ ಮತ್ತು ಚರ್ಚ್ ನ ಫಾದರ್ ಒಬ್ಬರು ಮಧ್ಯ ಪ್ರವೇಶಿಸಿದರು. ಕೊನೆಗೆ ಎಂ ಕೆ ಗಣಪತಿ ಸೂಚನೆಯಂತೆ ಚರ್ಚ್ ಒಳಗಿದ್ದ ಮಹಿಳೆಯರು, ಮಕ್ಕಳು, ನನ್ ಗಳನ್ನು ಸರತಿ ಸಾಲಿನಲ್ಲಿ ಹೊರಗೆ ಬರುವಂತೆ ಮಾಡಲಾಯ್ತು. ಶಿಸ್ತುಬದ್ದವಾಗಿ, ಶಾಂತಿಯುತವಾಗಿ ಹೊರಬರುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಧಾರ್ಮಿಕ ಸಮGanapatiವಸ್ತ್ರ ಧರಿಸಿದ್ದ ನನ್ ಗಳ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ನನ್ ಗಳ ತೊಡೆ, ಕೈ ಕಾಲುಗಳು ಬಾತು ಹೋಗುವಂತೆ ಬಾರಿಸಲಾಗಿತ್ತು. ಆ ಚರ್ಚಿನಲ್ಲಿ ಪೊಲೀಸರ ಆಗಮನಕ್ಕೂ ಕಾರಣಗಳಿಲ್ಲದೇ ಇರುವ ಸಂಧರ್ಭದಲ್ಲಿ ಆರ್ ಎಸ್ ಎಸ್ ಹಿನ್ನಲೆಯ ಎಂ ಕೆ ಗಣಪತಿ ವಿನಾಕಾರಣ ದಾಳಿ ನಡೆಸಿದ್ದರು.

 

ಇದಾದ ನಂತರ ಚರ್ಚ್ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯ್ತು. ಮರುದಿನವೇ ರಾಜ್ಯ ಮಾನವ ಹಕ್ಕು ಆಯೋಗ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಂಗಳೂರು ಬೇಟಿ ಮಾಡಿ ಚರ್ಚ್ ದಾಳಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅಮೇರಿಕಾದ ಅಧ್ಯಕ್ಷರೂ ಕೂಡಾ ಮಂಗಳೂರು ಚರ್ಚ್ ದಾಳಿ ಬಗ್ಗೆ ಮಾತನಾಡಿದ ನಂತರ ಗಂಭೀರವಾಗಿ ತೆಗೆದುಕೊಂಡ ಕೇಂದ್ರ ಸರಕಾರವು ಕೇಂದ್ರ ಗೃಹ ಕಾರ್ಯದರ್ಶಿಯನ್ನು ಮಂಗಳೂರಿಗೆ ಕಳುಹಿಸಿತ್ತು. ಮಂಗಳೂರಿಗೆ ಬಂದ ಕೇಂದ್ರ ಗೃಹ ಕಾರ್ಯದರ್ಶಿ ಕೆಲವು ಚರ್ಚ್ ಗಳ ವಿಸಿಟ್ ಮಾಡಿದ ನಂತರ ಕುಲಶೇಖರ ಚರ್ಚ್ ಗೂ ಬೇಟಿ ನೀಡಿದ್ರು. ಆಗ ಚರ್ಚ್ ನಲ್ಲಿದ್ದ ಕ್ರೈಸ್ತ ಸನ್ಯಾಸಿಗಳು ತಮ್ಮ ಬಟ್ಟೆಯನ್ನು ಎತ್ತಿ ಹಲ್ಲೆ ನಡೆದ ಭಾಗಗಳನ್ನು ತೋರಿಸುತ್ತಿದ್ದರು. ಈ ಸಂಧರ್ಭ ಕೇಂದ್ರ ಗೃಹ ಕಾರ್ಯದರ್ಶಿಯವರ ನಿಯೋಗಕ್ಕೆ ಭದ್ರತೆ ನೀಡಲು ಇದೇ ಎಂ ಕೆ ಗಣಪತಿ ಬಂದಿದ್ದರು.

 

ನಿಯೋಗಕ್ಕೆ ಪೊಲೀಸರ ದಾಳಿಯನ್ನು ಜನ ವಿವರಿಸುತ್ತಿರಬೇಕಾದರೆ ಸ್ವಲ್ಪ ಆಚೆ ಬಂದ ಎಂ. ಕೆ. ಗಣಪತಿ ಹಿಂದೂ ಸಂಘಟನೆಗಳ ಪ್ರಮುಖರಿಗೆ ಫೋನಾಯಿಸಿದ್ದರು. ನಾನು ಅಲ್ಲೇ ಇರುವುದನ್ನು ಗಮನಿಸದ ಎಂ ಕೆ ಗಣಪತಿ ಹಿಂದೂ ಸಂಘಟನೆಗಳನ್ನು ಗುಂಪು ಸೇರಿಸಲು ಪ್ರಯತ್ನಿಸುತ್ತಿದ್ದರು. “ಕ್ರಿಶ್ಚಿಯನ್ನರು ಅವರ ಮನವಿ ನೀಡ್ತಾ ಇದ್ದಾರೆ. ನೀವೂ ಕೂಡಾ ಬಂದು ಮತಾಂತರ ಮಾಡುತ್ತಿದ್ದನ್ನು ಹೇಳಿ” ಎಂದು ನನ್ನೆದುರಿಗೇ ಹೇಳಿದ್ದರು. ಕೇಂದ್ರ ಗೃಹ ಕಾರ್ಯದರ್ಶಿ ಚರ್ಚ್ ಆವರಣದಿಂದ ಹೊರಬರುತ್ತಿದ್ದಂತೆ ನೂರಕ್ಕೂ ಅಧಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಅವರು ದಾಳಿಕೋರ ಸಂಘಟನೆಯವರು ಎಂದು ತಿಳಿದ ಕೇಂದ್ರ ಗೃಹ ಕಾರ್ಯದರ್ಶಿ ಅವರ ಮನವಿಯನ್ನು ಚರ್ಚ್ ಆವರಣ ಸುತ್ತಮುತ್ತ ಸ್ವೀಕರಿಸಲು ನಿರಾಕರಿಸಿದ್ರು. ಹಿಂದೂ ಸಂಘಟನೆಗಳು ಮನವಿ ನೀಡಬೇಕಾದ್ರೆ ಸರ್ಕ್ಯೂಟ್ ಹೌಸ್ ಗೆ ಬರಲಿ ಎಂದರು. ಇದರಿಂದ ಕೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕೇಂದ್ರ ಗೃಹ ಕಾರ್ಯದರ್ಶಿ ಕಾರನ್ನು ತಡೆಯಲು ಮುಂದಾದ್ರು. ಆಗ ಭದ್ರತೆಗೆ ನಿಯೋಜಿತರಾಗಿದ್ದ ಎಂ ಕೆ ಗಣಪತಿ ಸುಮ್ಮನಿದ್ದರು. ಇದು ಬಿಜೆಪಿ ಸರಕಾರವಿದ್ರೂ ಅಧಿಕಾರಿಗಳ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

 

ಚರ್ಚ್ ದಾಳಿಯಲ್ಲಿ ಎಂ ಕೆ ಗಣಪತಿ ಪಾತ್ರ ಮತ್ತು ಕ್ರೈಸ್ತ ಸನ್ಯಾಸಿನಿಯರ ಮೇಲೆ ನಡೆದ ಭೀಕರ ದಾಳಿಯಲ್ಲಿ ಅವರ ಪಾತ್ರದ ಬಗ್ಗೆ ನಾನು ಚರ್ಚ್ ದಾಳಿಗಳ ವಿಚಾರಣಾ ಆಯೋಗದ ನ್ಯಾಯಮೂರ್ತಿಯಾಗಿದ್ದ ಸೋಮಶೇಖರ್ ರವರ ಬಳಿ ಮಾಹಿತಿ ಹಂಚಿಕೊಂಡಿದ್ದೆ.
ನಂತರ ಉರ್ವಸ್ಟೋರ್ ಎಂಬ ಪ್ರದೇಶದಲ್ಲಿ ಸಿಂಗಲ್ ನಂಬರ್ ದಂಧೆ ಹೆಚ್ಚಾದಾಗ ಡಿವೈಎಫ್ಐ ಹೋರಾಟಕ್ಕಿಳಿದಿತ್ತು. ಈ ಸಿಂಗಲ್ ನಂಬರ್ ದಂಧೆಯ ಹಿಂದೆ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಕೈವಾಡವಿತ್ತು. ಪ್ರತಿಭಟನೆ ನಡೆದ್ರೂ ಕೂಡಾ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಸಿಂಗಲ್ ನಂಬರ್ ಅಡ್ಡೆಗಳ ಮೇಲೆ ದಾಳಿ ನಡೆಸಲು ಸಿದ್ದರಿರಲಿಲ್ಲ. ಆಗ ಮಂಗಳೂರಿನಲ್ಲಿ ಐಜಿಪಿಯಾಗಿದ್ದವರು ಈಗ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿರುವ ಅಶಿತ್ ಮೋಹನ್ ಪ್ರಸಾದ್. ಡಿವೈಎಫ್ ಐ ಐಜಿಪಿ ಅಶಿತ್ ಮೋಹನ್ ಪ್ರಸಾದ್ ಗೆ ದೂರು ನೀಡಿದಾಗ ಅವರೂ ಕೂಡಾ ಇನ್ಸ್ ಸ್ಪೆಕ್ಟರ್ ಗಣಪತಿ ಪಾತ್ರ ಇರುವುದನ್ನು ಮನಗಂಡು ನೇರವಾಗಿ ಸಿಂಗಲ್ ನಂಬರ್ ದಂಧೆಯ ಮೇಲೆ ದಾಳಿ ನಡೆಸಿದ್ದರು.
ನಾನೊಬ್ಬ ಆರ್ ಎಸ್ ಎಸ್ ಹಿನ್ನಲೆಯಿಂದ ಬಂದವನು ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದ ಎಂ ಕೆ ಗಣಪತಿ ಎಡಪಂಥೀಯ ಸಂಘಟನೆಗಳು ಮತ್ತು ಮುಸ್ಲೀಮರ ವಿರೋಧಿ ನಿಲುವನ್ನು ಹೊಂದಿದ್ದರು. ನೀರಿನ ಖಾಸಗೀಕರಣವನ್ನು ವಿರೋಧಿಸಿ ಮಂಗಳೂರು ಮಹಾನಗರ ಪಾಲಿಕೆಯ ಎದುರು ಡಿವೈಎಫ್ಐ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆಯ ಸ್ಥಳ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯದ್ದು. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಇದೇ ಎಂ ಕೆ ಗಣಪತಿ ವ್ಯಾಪ್ತಿ ಮೀರಿ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ ಆಗುವ ಬಗ್ಗೆ ಖುದ್ದು ಬಂದರು ಠಾಣೆಗೆ ಮಾಹಿತಿ ಇರಲಿಲ್ಲ. ಸೈದ್ದಾಂತಿಕವಾಗಿ ವಿರೋಧಿಸುತ್ತಿದ್ದವರನ್ನು ಹಣಿಯಲು ಎಂ ಕೆ ಗಣಪತಿ ಪೊಲೀಸ್ ಯೂನಿಫಾರಂ ಅನ್ನು ಬಳಸುತ್ತಿದ್ದರು.
ನಕಲಿ ಎನ್ ಕೌಂಟರ್, ಚರ್ಚ್ ದಾಳಿಯ ವೇಳೆ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ, ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದ ಇನ್ಸ್ ಸ್ಪೆಕ್ಟರ್ ಎಂ ಕೆ ಗಣಪತಿ ಇದೀಗ ಸಾವಿನ ನಂತರ ಹೀರೋ ಆಗುತ್ತಿದ್ದಾರೆ.

 

ಅವರ ಸಾವು ನ್ಯಾಯಯುತವಾದುದಲ್ಲ. ಅವರಿಗೆ ಪೊಲೀಸ್ ಉನ್ನತಾಧಿಕಾರಿಗಳು, ಸಚಿವರುಗಳು ಕಿರುಕುಳ ನೀಡಿದ್ದರೆ ಅದು ಶಿಕ್ಷಾರ್ಹ. ಆದರೆ ಎಂ ಕೆ ಗಣಪತಿ ಒಬ್ಬ ದಕ್ಷ, ಕೆಚ್ಚೆದೆಯ ಪ್ರಾಮಾಣಿಕ, ರಿಯಲ್ ಹೀರೋ ಎಂದೆಲ್ಲಾ ಕರೆದರೆ ಅದು ಅಪ್ಪಟ ಸುಳ್ಳಾಗುತ್ತದೆ.