Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆ ಹಾಗೂ  ಸಂತ್ರಸ್ತರ ಗೋಳು


-ಇರ್ಷಾದ್ ಉಪ್ಪಿನಂಗಡಿ


“ನನಗೆ ನಾಲ್ಕು ಎಕರೆ ಕೃಷಿ ಇದೆ. ಕೃಷಿ ನನ್ನ ಪಾಲಿನ ದೇವರು. ಕಷ್ಟ ಪಟ್ಟು ತನ್ನ ಮಕ್ಕಳಂತೆ ಈ ಜಮೀನಿನಲ್ಲಿ ಮರಗಿಡಗಳನ್ನು  ನೆಟ್ಟು ಬೆಳೆಸಿದ್ದೇನೆ. ಇದೀಗ ಕೈಗಾರಿಕೆಗಂತ ನನ್ನ ಭೂಮಿಯನ್ನ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಜೀವ ಹೋದರೂ ನನ್ನMRPL ಜಮೀನನ್ನು ಕಂಪನಿಗೆ ಬಿಟ್ಟು ಕೊಡುವುದಿಲ್ಲ. ನನ್ನ ಬದುಕನ್ನು ಉಳಿಸಿಕೊಳ್ಳಲು ಅದ್ಯಾವ ರೀತಿಯ ಹೋರಾಟಕ್ಕೂ ನಾನು ತಯಾರಿದ್ದೀನಿ” ಹೀಗೆ ಆಕ್ರೋಶ ಭರಿತ ದುಖಃದೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡವರ ಹೆಸರು ಮೊಂತಿ ಡಿಸೋಜಾ. ಮಂಗಳೂರಿನ ಪೆರ್ಮುದೆ ನಿವಾಸಿಯಾಗಿರುವ ಮೊಂತಿ ಡಿಸೋಜಾಗೆ 78 ವರ್ಷ. ನಡೆಯಲು ಆಧಾರಕ್ಕಾಗಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಬೆಳೆದು ನಿಂತ ಪೈರು, ಹಚ್ಚ ಹಸಿರಾಗಿರುವ ತೋಟವನ್ನು ತೋರಿಸುತ್ತಾ ಕಂಪನಿಯವರು ಕೇಳ್ತಾರಂತಾ ಇದನ್ನೆಲ್ಲಾ ಬಿಟ್ಟುಕೊಟ್ಟು ನಾನು ಎಲ್ಲಿಗೆ ಹೋಗಲಿ ಅಂದಾಗ ಅವರ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕುತಿತ್ತು. ಹತ್ತು ವರ್ಷದ ಹಿಂದೆ ಕೂಡಾ ಮೊಂತಿ ಡಿಸೋಜಾರಿಗೆ ಇಂತಹದ್ದೇ ಪರಿಸ್ಥಿತಿ ಎದುರಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ರಾಜ್ಯ ಸರ್ಕಾರ ರೈತರ ಕೃಷಿ ಭೂಮಿಯನ್ನ ಸ್ವಾಧೀನಪಡಿಸಿಕೊಂಡಿತ್ತು. ಭಾರೀ ಹೋರಾಟ ನಡೆಸಿ ಮೊಂತಿ ಡಿಸೋಜಾ ತನ್ನ ಕೃಷಿ ಭೂಮಿಯನ್ನ ಉಳಿಸಿಕೊಂಡಿದ್ದರು. ಒಲಿದುಕೊಂಡ ಭೂಮಿಯಲ್ಲಿ ಕೃಷಿ ಅಭಿವೃದ್ದಿಗೊಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಏನಂತೆ, ಇದೀಗ ಮತ್ತೆ ಎಂ.ಆರ್.ಪಿ.ಎಲ್  ತನ್ನ ನಾಲ್ಕನೇ ಹಂತದ ವಿಸ್ತರಣೆಗಾಗಿ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಮುಂದಾಗಿದೆ. ಪರಿಣಾಮ ಭೂಸ್ವಾಧೀನದ ಭೂತ ಮೊಂತಿಬಾಯಿಯವರನ್ನು ಮತ್ತೊಮ್ಮೆ ಕಾಡಲಾರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಎಂ.ಆರ್.ಪಿ.ಎಲ್ ಕಾಲಿಟ್ಟಾಗಿನಿಂದಲೂ ಅದು ಸ್ಥಳೀಯರ ನಿದ್ದೆಗೆಡೆಸಿದೆ. 2006 ರಲ್ಲಿ ಎಂ.ಆರ್.ಪಿ.ಎಲ್wiliyam disoza ನೇತ್ರತ್ವ ಹಾಗೂ ಪಾಲುಗಾರಿಕೆಯಲ್ಲಿ ರೂಪು ತಳೆದ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ರಾಜ್ಯ ಸರ್ಕಾರ ಈಗಾಗಲೇ 2017 ಎಕರೆ ಜಮೀನನ್ನು ರೈತರಿಂದ ಕಿತ್ತು ಕೊಟ್ಟಿದೆ. ಈ ಪೈಕಿ ಎಸ್.ಇ.ಜೆಡ್ ನೊಳಗೆ ವಿವಿಧ ಘಟಕಗಳ ಸ್ಥಾಪನೆಗಾಗಿ ಬಳಕೆಯಾಗಿರುವುದು ಕೇವಲ 717 ಎಕರೆ. ಉಳಿದ 1300 ಎಕರೆ ಜಮೀನು ಖಾಲಿ ಇದ್ದರೂ ತೃಪ್ತಿಗೊಳ್ಳದ ಎಂ.ಆರ್.ಪಿ.ಎಲ್ ಇದೀಗ ಮತ್ತೆ ಮಂಗಳೂರು ತಾಲೂಕಿನ ತೂಕೂರು, ಬೈಕಂಪಾಡಿ, ತಣ್ಣೀರುಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಹಾಗೂ ದೇಲಂತಬೆಟ್ಟು ಗ್ರಾಮಗಳ ಸುಮಾರು 1050 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಡುವಂತೆ ಕರ್ನಾಟಕ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ. ಅಲ್ಲದೆ ಮುಂದಿನ ಹಂತದಲ್ಲಿ 3000 ಎಕರೆಗೂ ಮೀರಿದ ಭೂಮಿಯನ್ನ ಸ್ವಾಧೀನ ಪಡಿಸಿಕೊಳ್ಳುವ ಗುರಿ ಎಮ್.ಆರ್.ಪಿ.ಎಲ್ ನದ್ದು. ಸರ್ಕಾರವೂ ಕಂಪನಿಯ ಈ ಎಲ್ಲಾ ಬೇಡಿಕೆಗೆ ಅಸ್ತು ಅಂದಿದೆ. ಪರಿಣಾಮ ಜನರು ತಾವು ಶ್ರಮಪಟ್ಟು ಬೆಳೆಸಿದ ಕೃಷಿ, ಜಮೀನು, ಮನೆ ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪೆರ್ಮುದೆ, ಕುತ್ತೆತ್ತೂರು ಗ್ರಾಮ ಮಂಗಳೂರು ನಗರದಿಂದ 30 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ ಸುಮಾರುpermude-sez-3 6000. ಗ್ರಾಮದ ಶೇ. 75 ರಷ್ಟು ಜನರು ಕೃಷಿಕರು. ಭತ್ತ, ಅಡಿಕೆ, ತೆಂಗು, ಬಾಳೆ, ತರಕಾರಿ ಇಲ್ಲಿಯ ಪ್ರಮುಖ ಕೃಷಿ. 2006 ರಲ್ಲಿ ಎಸ್.ಇ.ಜೆಡ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಹಾಗೂ ದೇಲಂತ ಬೆಟ್ಟು ಗ್ರಾಮಗಳು ಒಳಗೊಂಡಿದ್ದವು. ಆದರೆ ಬಲವಂತದ ಭೂಸ್ವಾಧೀನದ ವಿರುದ್ಧವಾಗಿ ನಡೆದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ 2011 ರಲ್ಲಿ ಭೂಸ್ವಾಧೀನದಿಂದ ಈ ಗ್ರಾಮಗಳನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಎಮ್.ಆರ್.ಪಿ.ಎಲ್ ನಾಲ್ಕನೇ ಹಂತಕ್ಕಾಗಿ ಭೂಸ್ವಾಧೀನದ ಪ್ರಕ್ರಿಯೆ ಚುರುಕು ಪಡೆಯುತ್ತಿರುವಂತೆ ಈ ಗ್ರಾಮದ ಜನರು ಆತಂಕಿತರಾಗಿದ್ದಾರೆ.

ವಿಲಿಯಂ ಡಿಸೋಜಾ ಕುತ್ತೆತ್ತೂರಿನ ನಿವಾಸಿ. ನಮ್ಮನ್ನು ಬರಮಾಡಿಕೊಂಡು ಕುತ್ತೆತ್ತೂರಿನ ಹಚ್ಚ ಹಸಿರಾದ ವಾತಾವರಣವನ್ನು ತೋರಿಸಲು ತಮ್ಮ ಜೀಪ್ ನಲ್ಲಿ ಕರೆದೊಯ್ದರು. ವಿಲಿಯಂ ಡಿಸೋಜಾರಿಗೆ 15 ಎಕರೆ ಜಮೀನಿದೆ. ಇವರ ಜಮೀನಿನಲ್ಲೊಮ್ಮೆ ನಿಂತು ಎಲ್ಲಿ ಕಣ್ಣು ಹಾಯಿಸಿದರೂ ಸಮೃದ್ದವಾಗಿ ಬೆಳೆದು ನಿಂತ ಕೃಷಿತೋಟ ನಮ್ಮನ್ನು ಸೆಳೆಯುತ್ತದೆ. ಪುಟ್ಟ ಮನೆ, ಹೆಂಡತಿ ಇಬ್ಬರು ಮಕ್ಕಳ ಜೊತೆ ನೆಮ್ಮದಿಯ ಪರಿಸರದಲ್ಲಿ ಜೀವನ ನಡೆಸುತ್ತಿರುವ ವಿಲಿಯಂಗೆ ಇದೀಗ ಎಲ್ಲವನ್ನೂ ಕಳೆದುಕೊಳ್ಳುತ್ತೇನೆಂಬ ಆತಂಕ. “ನಾನು ನನ್ನ ಸ್ವಂತ ಜಮೀನನ್ನು ಮಾರಿ ಬಿಟ್ಟು ಎಂ.ಆರ್.ಪಿ.ಎಲ್ ಕೂಲಿಯಾಳಾಗಲು ತಯಾರಿಲ್ಲ. ಮೈಮುರಿದು ಗದ್ದೆ ತೋಟ ಬೆಳೆಸಿದ್ದೇನೆ. ಉತ್ತಮ ಆದಾಯಗಳಿಸಿ ಯಾರ ಹಂಗಿಲ್ಲದೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಇದೀಗ ಎಮ್.ಆರ್.ಪಿ.ಎಲ್ ಕಂಪನಿ ನನ್ನ ಜಮೀನಿಗೆ ಕನ್ನ ಹಾಕ್ತಿದೆ. ನನ್ನನ್ನು ಕೊಂದರೂ ನನ್ನ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ” ಅಂತಿದ್ದಾರೆ ವಿಲಿಯಂ. ವಿಲಿಯಂ ಡಿಸೋಜಾ ಎಂ.ಆರ್.ಪಿ.ಎಲ್ ಭೂಸ್ವಾಧೀನದಿಂದ ರೈತರ ಕೃಷಿ ಭೂಮಿಯನ್ನ ಸಂರಕ್ಷಿಸಲು ಹುಟ್ಟಿಕೊಂಡ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷರು. ಗ್ರಾಮದ ಮನೆಮನೆಗಳನ್ನು ಸುತ್ತಿಕೊಂಡು ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಧುಮುಕುವಂತೆ ರೈತರನ್ನು ಸಂಘಟಿಸುವವರಲ್ಲಿ ಇವರೂ ಒಬ್ಬರಾಗಿದ್ದಾರೆ.

ಇದು ಕೇವಲ ಮೊಂತಿ ಡಿಸೋಜಾ, ವಿಲಿಯಂ ಡಿಸೋಜಾರಂತಹ ಕೃಷಿಕರ ಆತಂಕ ಮಾತ್ರವಲ್ಲ. ಪೆರ್ಮುದೆ, ಕುತ್ತೆತ್ತೂರು ಗ್ರಾಮದpermude-sez ಎಲ್ಲಾ ಕೃಷಿಕರ ಆತಂಕ ಕೂಡಾ ಹೌದು. ಕುತ್ತೆತ್ತೂರಿನ ನಾಗೇಶ್ ಎಂಬುವವರಿಗೆ 6 ಎಕರೆ ಜಮೀನಿದೆ. ಇವರ ತೋಟ ವರ್ಷವಿಡೀ ಹಸಿರಿನಿಂದ ಕಂಗೊಳಿಸುತ್ತೆ. ಎಲ್ಲಾ ರೀತಿಯ ಬೇಸಾಯವನ್ನು ತನ್ನ ಫಲವತ್ತಾದ ಭೂಮಿಯಲ್ಲಿ ನಾಗೇಶ್ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಕೃಷಿ ಭೂಮಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿದ್ದು ಅವರ ಮನೆ ದೈವದ ಸ್ಥಾನ. “ಕೃಷಿ ದೈವದೇವರುಗಳನ್ನು ಬಿಟ್ಟು ಇಲ್ಲಿಂದ ಹೊರಹೋಗೋದಕ್ಕಿಂತ ಹೋರಾಡಿ ಸಾಯೋದೇ ಲೇಸು” ಅನ್ನುತ್ತಾರೆ ನಾಗೇಶ್. ಇವರಂತೆ ಪೆರ್ಮುದೆಯ ನಿವಾಸಿ ರಾಘವೇಂದ್ರ. ಇವರು ವೃತ್ತಿಯಲ್ಲಿ ಅರ್ಚಕರು. ತೋಟದ ನಡುವಿನ ಮನೆಗೆ ಅವರನ್ನ ಮಾತನಾಡಿಸಲೆಂದು ಹೋದಾಗ ಮಾವಿನ ರಸದಿಂದ ತಯಾರಿಸಿದ ರುಚಿಯಾದ ತಿಂಡಿಯನ್ನು ನಮಗೆ ಸವಿಯಲು ನೀಡಿ ಇದು ನಿಮ್ಮ ಸಿಟಿಯಲ್ಲಿ ಸಿಗುತ್ತಾ ಮಾರಾಯರೇ ಎಂದು ನಗುತ್ತಾ ಮಾತಿಗಿಳಿದರು. “ನಾವೇನು ಕೈಗಾರಿಕೆಗಳ ವಿರೋಧಿಗಳಲ್ಲ ಆದ್ರೆ ಇವರಿಗೆ ಕೃಷಿ ಭೂಮಿಯೇ ಯಾಕೆ ಬೇಕು? ಎಮ್.ಆರ್.ಪಿ.ಎಲ್ ನಂತಹಾ ಕೈಗಾರಿಕೆ ಇಲ್ಲಿಗೆ ಬಂದ ನಂತರ ಇಲ್ಲಿನ ಪರಿಸರ, ಜೀವವೈವಿದ್ಯ ನಾಶವಾಗುತ್ತಿದೆ. ಜಿಲ್ಲೆಯ ಧಾರಣಾ ಸಾಮರ್ಥ್ಯವನ್ನು ಮೀರಿ  ಕೈಗಾರಿಕೆ ಬೆಳೆಯುತ್ತಿದೆ” ಎನ್ನುತ್ತಾ ತಮ್ಮ ತೋಟದ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ಎರಡೂವರೆ ಎಕರೆ ಜಮೀನಿನಲ್ಲಿ ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ರಾಘವೇಂದ್ರ ಬೆಳೆಸಿದ್ದಾರೆ. ಉತ್ತಮ ಪರಿಹಾರ ಸಿಗುತ್ತಲ್ಲಾ, ಕೈತುಂಬಾ ಹಣ ಸಿಗುತ್ತಲ್ವಾ ಮತ್ತೆ ನೀವು ಯಾಕೆ ಎಮ್.ಆರ್.ಪಿ.ಎಲ್ ಗೆ ಭೂಮಿ ಕೊಡುವುದಿಲ್ಲಾ ಎಂಬ ಪ್ರಶ್ನೆಗೆ “ಈ ಹಿಂದೆ ಹಣದ ದುರಾಸೆಗೆ ಬಿದ್ದು ಭೂಮಿ ಕೊಟ್ಟವರ ದುಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ. ನಾವು ಅದನ್ನು ಅನುಭವಿಸಲು ಸಾಧ್ಯವಿಲ್ಲ. ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಭಾವನೆಗಳಿವೆ, ಇಲ್ಲಿ ನಮಗೆ ನೆಮ್ಮದಿಯಿದೆ ನಮ್ಮ ಬದುಕನ್ನು ಬಲವಂತವಾಗಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ” ಎನ್ನುತ್ತಾ ಮಾತು ಮುಗಿಸುವಾಗ ಅರ್ಚಕರ ಕಣ್ಣು ಕೆಂಪಾಗಿತ್ತು.

ಹೀಗೆ ಪೆರ್ಮುದೆ, ಕುತ್ತೆತ್ತೂರು ಗ್ರಾಮದಲ್ಲಿ ಮಾತಿಗೆ ಸಿಕ್ಕ ಬಹುತೇಕ ರೈತರ ಅಭಿಪ್ರಾಯ ಒಂದೇ ಆಗಿತ್ತು. ಯಾವುದೇ ಕಾರಣಕ್ಕೂVidya ಕಂಪನಿಗೆ ನಮ್ಮ ಕೃಷಿ ಭೂಮಿಯನ್ನು ನೀಡುವುದಿಲ್ಲವೆಂಬುವುದಾಗಿದೆ. ರೈತರ ವಿರೋಧದ ನಡುವೆಯೂ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಎಮ್.ಆರ್.ಪಿ.ಎಲ್ ವಿರುದ್ಧ ಇವರೆಲ್ಲಾ ಸಂಘಟಿತರಾಗುತಿದ್ದಾರೆ. ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನೇತ್ರತ್ವದಲ್ಲಿ ತಮ್ಮ ನೆಲ ಜನ ಉಳಿಸಿಕೊಳ್ಳಲು ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಾರೆ. “ನಮಗೆ ರೈತರ ಕೃಷಿ ಭೂಮಿ ಹಾಗೂ ಅವರ ಬದುಕು ಇಲ್ಲಿಯ ಪರಿಸರ ಮುಖ್ಯವಾಗಿವೆಯೇ ಹೊರತು ಎಮ್.ಆರ್.ಪಿ.ಎಲ್ ನಂತಹ ಕಂಪನಿಯಲ್ಲ. ಖಾಲಿ ಬಿದ್ದಿರುವ ಹೆಚ್ಚುವರಿ ಭೂಮಿ ಎಮ್.ಆರ್.ಪಿ.ಎಲ್ ಬಳಿ ಇದ್ದರೂ ಮತ್ತೆ ಮತ್ತೆ ಭೂಸ್ವಾಧೀನಕ್ಕೆ ಮುಂದಾಗೋ ಉದ್ದೇಶವೇನು” ಎಂದು ಪ್ರಶ್ನಿಸುತ್ತಾರೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಮೂಲಕ ಈ ಭಾಗದ ರೈತರ ಹೋರಾಟಕ್ಕೆ ಮುಂದಾಳತ್ವವನ್ನು ನೀಡುತ್ತಿರುವ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್. “ಭೂಮಿ ಕೊಡಲೊಪ್ಪದ ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಈ ಹಿಂದೆ ಎಸ್.ಇ.ಜೆಡ್ ಗಾಗಿ ರೈತರ ಭೂಮಿಯನ್ನು ಸರ್ಕಾರ ಕಿತ್ತುಕೊಂಡಾಗ ಅದರ ವಿರುದ್ಧ ಹೋರಾಟ ನಡೆಸಿ ಭೂಮಿ ಉಳಿಸಿಕೊಂಡಿದ್ದೇವೆ. ಇದೀಗ ಮತ್ತೊಂದು ಹಂತದ ಹೋರಾಟ ಶುರುವಾಗಿದೆ” ಅನ್ನುತ್ತಾರೆ ವಿದ್ಯಾ ದಿನಕರ್.

ಪೆರ್ಮುದೆ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಆಕ್ಷೇಪಣೆ ಸಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇಷ್ಟಾಗಿಯೂ ಜನರಿಗೆ ಹಾಗೂ ಸ್ಥಳೀಯ ಪಂಚಾಯತ್ ಗೆ ಯಾವುದೇ ಮಾಹಿತಿ ನೀಡದೆ ಗುಪ್ತವಾಗಿ ಭೂಸ್ವಾಧೀನದ ಪ್ರಕ್ರಿಯೆಗೆ ಎಮ್.ಆರ್.ಪಿ.ಎಲ್ ಮುಂದಾಗುತ್ತಿರುವುದು ಆತಂಕಕಾರಿ ವಿಚಾರ ಎಂಬುವುದು ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಾ ಅಭಿಪ್ರಾಯ. ಇಷ್ಟೆಲ್ಲಾ ಪ್ರಬಲ ವಿರೋಧಗಳ ನಡುವೆಯೂ ಎಮ್.ಆರ್.ಪಿ.ಎಲ್ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲು ಹಿಂಭಾಗಿಲ ಮೂಲಕ ಪ್ರಯತ್ನ ನಡೆಸುತ್ತಿದೆ. ಊರಿನ ಜನರಿಗೂ, ಸ್ಥಳೀಯ ಗ್ರಾಮಪಂಚಾಯತ್ ಗೂ ಯಾವುದೇ ಮಾಹಿತಿ ನೀಡದೆ ಗ್ರಾಮದ ಸರ್ವೇ ಕಾರ್ಯ ನಡೆಸಲು ಎಮ್.ಆರ್.ಪಿ.ಎಲ್ ಸಿಬಂಧಿ ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನ ಬೆನ್ನಟ್ಟಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ಕಂಪನಿ ಹಾಗೂ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಸ್ಥಳೀಯರನ್ನು ಚೂಬಿಟ್ಟು ರೈತರಿಗೆ ಅಮಿಷ ಒಡ್ಡುವ ಕೆಲಸದಲ್ಲೂ ಕಂಪನಿ ನಿರತವಾಗಿದೆ.

ದೈತ್ಯ ಕಂಪನಿಯ ದುರಾಸೆಯ ಭೂಬೇಡಿಕೆ ವಿರುದ್ಧದ ಹೋರಾಟ ಕೇವಲ ಪೆರ್ಮುದೆ ಕುತ್ತೆತ್ತೂರು ಗ್ರಾಮದ ಜನರಿಗಷ್ಟೇ ಸೀಮಿತವಾಗಬಾರದು. ಕಾರಣ ಎಮ್,ಆರ್.ಪಿ.ಎಲ್ ಭೂಬೇಡಿಕೆ ಅಷ್ಟು ಸುಲಭವಾಗಿ ತಣಿಯುವಂತಹದಲ್ಲ. ಇಂದು ಪೆರ್ಮುದೆ, ಕುತ್ತೆತ್ತೂರು ಗ್ರಾಮಸ್ಥರು ಎದುರಿಸುತ್ತಿರುವ ಆತಂಕ, ಅತಂತ್ರತೆ ಮುಂದಿನ ದಿನಗಳಲ್ಲಿ ಮಂಗಳೂರಿನ ಸುತ್ತಮುತ್ತಲ ಹಳ್ಳಿಯ ಜನರದ್ದಾಗಬಹುದು. ಈ ನಿಟ್ಟಿನಲ್ಲಿ ಎಮ್.ಆರ್.ಪಿ.ಎಲ್ ದುರಾಸೆಯ ಭೂಬೇಡಿಕೆಯ ವಿರುದ್ಧದ ರೈತ ಹೋರಾಟಕ್ಕೆ ಕೈಜೋಡಿಸಬೇಕಿದೆ. ಇಲ್ಲವಾದಲ್ಲಿ ಕೈಗಾರೀಕರಣ ಎಂಬ ಹೆಸರಿನ ಬುಲ್ಡೋಜರ್ ಬಾಯಿಗೆ ಮತ್ತಷ್ಟು ರೈತ ಸಮುದಾಯ ಬಲಿಯಾಗೋದಂತೂ ನಿಶ್ಚಿತ.

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.

ಪ್ರಭುತ್ವ, ಪೋಲಿಸ್ ವ್ಯವಸ್ಥೆ ಮತ್ತು ಪ್ರತಿಭಟನೆ


– ಶ್ರೀಧರ್ ಪ್ರಭು


ಪತ್ರಕರ್ತ ನವೀನ ಸೂರಿಂಜೆ ಅವರು ವರ್ತಮಾನದಲ್ಲಿ ಬರೆದ ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ ಲೇಖನದಲ್ಲಿ ಪೋಲಿಸ್ ಪ್ರತಿಭಟನೆಯ ವಿಚಾರವನ್ನು ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿ ಬರೆದಿದ್ದಾರೆ. ಅವರೆಲ್ಲಾ ವಿಚಾರಗಳಿಗೂ ಸಂಪೂರ್ಣ ಸಹಮತಿ ಸೂಚಿಸುತ್ತಾ, ನನ್ನ ಕೆಲವು ಮಾತುಗಳನ್ನು ಸೇರಿಸುತ್ತಿದ್ದೇನೆ.

೧೯೧೭ ರಲ್ಲಿ ‘ಪ್ರಭುತ್ವ ಮತ್ತು ಕ್ರಾಂತಿ’ ಎಂಬ ತಮ್ಮ ಅಗ್ರ ಲೇಖದಲ್ಲಿ ಲೆನಿನ್ ಹೇಳುತ್ತಾರೆ: “A standing army and police are the chief instruments of state power.” ಪೋಲಿಸ್ ವ್ಯವಸ್ಥೆ ಪ್ರಭುತ್ವದ ಪ್ರಮುಖ ಅಸ್ತ್ರ. ಪೋಲೀಸರ ಪರವಾಗಿ ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಜೊತೆಗೂಡಿ ಸೇನೆಯ ಅಥವಾ ಪೋಲೀಸರ ‘ಮುಕ್ತಿಗೆ’ ನಿಲ್ಲುವುದು ಅತ್ಯಂತ ದೊಡ್ಡ ಅಭಾಸ. ಪೇದೆಗಳು, ಕೆಳಹಂತ, ಮೇಲು ಹಂತ ಎಂದೆಲ್ಲಾ ಕೂದಲು ಸೀಳಿ ವಿಂಗಡಣೆ ಮಾಡುವುದು ಪ್ರಭುತ್ವದ ಒಂದು ಸಮಷ್ಟಿಪೂರ್ಣ ಸ್ವರೂಪವನ್ನು ಕೈ, ಕಾಲು, ತಲೆ ಎಂದೆಲ್ಲಾ ವಿಂಗಡಣೆ ಮಾಡುವ ರೀತಿ ಅನರ್ಥಪೂರ್ಣವಾದದ್ದು.

ನವೀನ್ ಸೂರಿಂಜೆ ಅವರು ಹೇಳುವ ಹಾಗೆ ಇಂದು ಧರ್ಮ ಮತ್ತು ಜಾತಿಯನ್ನು ಬಳಸಿ ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ‘ಸಾಮಾಜಿಕ ಪೋಲಿಸ’ ರೊಂದಿಗೆ ಪ್ರಭುತ್ವದ ಪೊಲೀಸರು ಒಟ್ಟು ಸೇರಿದ್ದಾರೆ. ಹೀಗಾಗಿ, ಪೋಲೀಸರ ಬಗೆಗಿನ ಸಹಾನುಭೂತಿ ಪ್ರಭುತ್ವದ ಕುರಿತ ಸಹಾನುಭೂತಿಯೇ.

ಸಮಾಜದ ಎಲ್ಲ ವರ್ಗ ವಿಭಾಗಗಳಿಗೂ ಸಂಘಟನೆಯ ಹಕ್ಕಿದೆ. ನಿಜ. Police Forces (Restriction of Rights) Act, 1966 ಎಂಬ ಕಾಯಿದೆಯcaste-riot-police ಪ್ರಕಾರ ಪೊಲೀಸರು ಯಾವುದೇ ರಾಜಕೀಯ ಅಥವಾ ಕಾರ್ಮಿಕ ಸಂಘಟನೆಯ ಸದಸ್ಯರಾಗಲು ಕೇಂದ್ರ ಸರಕಾರದ ಅನುಮತಿ ಅವಶ್ಯಕ. ಕಾನೂನಿನಲ್ಲಿ ಇವರು ಸಂಘಟನೆಗಳನ್ನು ಸ್ಥಾಪಿಸಬಹುದು. ಆದರೆ ಈ ಸಂಘಟನೆಗೆ ಇಲಾಖೆ ಮಾನ್ಯತೆ ಕೊಟ್ಟಿರಬೇಕು. ಇಷ್ಟು ಬಿಟ್ಟರೆ ಪೊಲೀಸರಿಗೆ ಮುಷ್ಕರ, ಪ್ರತಿಭಟನೆ ಇತ್ಯಾದಿ ನಡೆಸುವ ಹಕ್ಕಿಲ್ಲ. ಈ ಕಾಯಿದೆ ಇಂದು ಎಡಪಂಥೀಯ ಆಡಳಿತವಿದ್ದ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಇದನ್ನು ಬದಲಾಯಿಸಲು ಯಾವ ಸರಕಾರಗಳೂ ಪ್ರಯತ್ನಿಸಿಲ್ಲ. ಎಡ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಪೋಲಿಸ್ ವ್ಯವಸ್ಥೆಯನ್ನು ಮಾನವೀಯವಾಗಿಸಲು ತಮ್ಮ ಸರಕಾರದ ಹಂತದಲ್ಲಿ ಏನೇನು ಕ್ರಮ ಕೈಗೊಂಡಿದ್ದಾರೆ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಈ ರೀತಿ ಪೋಲಿಸರ ಪ್ರತಿಭಟನೆ ಎಡ ಪಕ್ಷಗಳು ಆಡಳಿತವಿರುವ ಕೇರಳದಲ್ಲಿ ನಡೆದರೆ ಇವರ ನಿಲುವೇನು ಎನ್ನುವುದನ್ನೂ ಸ್ಪಷ್ಟಪಡಿಸಬೇಕು.

ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪೋಲಿಸ್ ವ್ಯವಸ್ಥೆ ಕೇವಲ ಒಂದು ನಿರ್ಜೀವ ಯಂತ್ರವಲ್ಲ. ಈ ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಅಂತರಿಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪೋಲಿಸ್ ವ್ಯವಸ್ಥೆ ಪ್ರಯತ್ನಪೂರ್ವಕವಾಗಿ ಗಟ್ಟಿಗೊಳಿಸುತ್ತಿದೆ. ಇಂತಹ ಪ್ರಭುತ್ವವಾದಿ ಶಕ್ತಿಗಳನ್ನು ಪ್ರತಿನಿಧಿಸುವ ಮತ್ತು ಪೋಷಿಸುವ ಪೋಲೀಸರನ್ನು ಬೆಂಬಲಿಸಲು ಹೊರಟರೆ ಪ್ರಭುತ್ವವಾದಿ ಶಕ್ತಿಗಳಿಗೆ ಬಲಬರುವುದು.

ಪೋಲಿಸ್ ವ್ಯವಸ್ಥೆಯನ್ನು ‘ಮಾನವೀಯಗೊಳಿಸಲು’ ಒಂದು ಪಕ್ಷ ಮತ್ತು ರಾಜಕೀಯ ಪ್ರೇರಿತ ಸಂಘಟನೆಗಳ ರಾಜಕೀಯ ಪ್ರತಿಭಟನೆಗಳು ಹೇಗೆ ಸಹಕಾರಿಯಾದಾವು ಎಂಬ ಬಗೆಗೆ ಗಂಭೀರ ಭಿನ್ನಾಭಿಪ್ರಾಯಗಳಿವೆ. ಪೋಲಿಸ್ ವ್ಯವಸ್ಥೆಯ ನಡುವೆಯೇ ಮನುವಾದಿ ಮತ್ತು ಪ್ರಭುತ್ವದ ಪರ ರಾಜಕೀಯ ಮತ್ತಷ್ಟು ಬೇರೂರಲು ಇದು ಕಾರಣವಾಗುತ್ತದೆ.

ಇಂದು ಕರ್ನಾಟಕದಲ್ಲಿ ಪೋಲಿಸ್ ಮುಷ್ಕರಕ್ಕೆ ನೇತೃತ್ವ ಕೊಡಲು ಹೊರಟಿರುವ ಹಿಂದಿನ ಶಕ್ತಿಗಳ ಬಗೆಗೆ ಅನೇಕ ಅನುಮಾನಗಳಿವೆ. indian-policeಇವರೊಂದಿಗೆ ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಕೈಜೋಡಿಸುವ ಔಚಿತ್ಯವನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುತ್ತಿರುವ ಶಕ್ತಿಗಳ ಜೊತೆಗೆ ಎಡ ಮತ್ತು ಅವರ ಸಾಮೂಹಿಕ ಸಂಘಟನೆಗಳ ರಾಜಕೀಯ ಅಥವಾ ತಾತ್ವಿಕ ಸಹಮತಿಯಿದೆಯೇ? ಇದು ಬಹು ಮುಖ್ಯ ಪ್ರಶ್ನೆ.

ಪೊಲೀಸರು ಮುಷ್ಕರಕ್ಕೆ ಇಳಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವರ್ಗಗಳ ಮೇಲಿನ ದೌರ್ಜನ್ಯ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ದುಡುಕಿ ನಿರ್ಧರಿಸುವ ಮುನ್ನ ಇದಕ್ಕೆ ಪರ್ಯಾಯಗಳನ್ನು ಹುಡುಕದೇ ಇರಕೂಡದು.

ನವೀನ ಸೂರಿಂಜೆ ಅವರು ಅಭಿಪ್ರಾಯ ಪಡುವಂತೆ  “ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.”

ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ

Naveen Soorinje


ನವೀನ್ ಸೂರಿಂಜೆ


 

ಅಸಂಖ್ಯ ಹೋರಾಟ, ಚಳುವಳಿಗಳನ್ನು ಕಂಡ ಕರ್ನಾಟಕದಲ್ಲಿ ಇದೀಗ ಪೋಲಿಸರ ಪ್ರತಿಭಟನೆ ದಿನೇದಿನೇ ಸುದ್ದಿಯಾಗುತ್ತಿದೆ. ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ನೇತೃತ್ವದಲ್ಲಿ ಹಲವು ತಳಹಂತದ ಪೋಲಿಸ್ ಸಿಬಂದಿಗಳು ವೇತನ ತಾರತಮ್ಯ, ಸಾಕಷ್ಟು ಸೌಲಭ್ಯಗಳು ಇಲ್ಲದಿರುವುದು, ರಜೆ ನಿರಾಕರಣೆ, ಮೇಲಾಧಿಕಾರಿಗಳ ಕಿರುಕುಳ ಹಾಗೂ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿ ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಅನ್ಯಾನ್ಯ ಬೇಡಿಕೆಗಳ ಈಡೇರಿಕೆಯ ವಿಚಾರವನ್ನು ಮುಂದಿಟ್ಟುಕೊಂಡು ಸಾವಿರಾರು ಪೊಲೀಸರು ಜೂನ್ 4 ರಂದು ಸಾಮೂಹಿಕ ರಜೆ ಹಾಕಲು ನಿರ್ಧರಿಸುವ ಮೂಲಕ ಸಂಘರ್ಷಾತ್ಮಕ ಹೋರಾಟದ ಮಾರ್ಗವನ್ನು ಹಿಡಿದಿದ್ದಾರೆ. ಅನ್ಯ ಸಂದರ್ಭಗಳಲ್ಲಿ ಪೋಲಿಸ್ ಇಲಾಖೆಯ ಮಟ್ಟದಲ್ಲೇ ಮಂಥನಕ್ಕೆ ಒಳಗಾಗಬಹುದಾಗಿದ್ದ, ಇತ್ಯರ್ಥವಾಗಬಹುದಾಗಿದ್ದ ಪೋಲಿಸರ ಪ್ರತಿಭಟನೆ ಮತ್ತು ಅವರ ಹಕ್ಕೊತ್ತಾಯದ ವಿಚಾರವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಹೊಸ ಆಯಾಮವನ್ನು ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ರಿಯಾಶೀಲವಾಗಿರುವ ಯುವ ಕಾರ್ಯಕರ್ತರು ಹಾಗೂ ಲೇಖಕರು ಈ ವಿಚಾರದಲ್ಲಿ ಹೋರಾಟಕ್ಕೆ ಕಟಿಬದ್ಧವಾಗಿರುವ ಪೋಲಿಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ; ಸಹಾನುಭೂತಿ ಹಾಗೂ ಅನುಕಂಪವನ್ನು ಸೂಚಿಸುತ್ತಿದ್ದಾರೆ.

ಪೊಲೀಸರ ಹೆಸರಿನಲ್ಲಿ ನಡೆಯುವ ಪ್ರತಿಭಟನೆಗೆ ಇದೀಗ ದೊರಕುತ್ತಿರುವ ಅಭೂತಪೂರ್ವ ಬೆಂಬಲ ಹಲವು ಅನಪೇಕ್ಷಿತ ಪರಿಣಾಮಗಳಿಗೆ ಆಹ್ವಾನ ನೀಡುವ state-logoರೀತಿಯಲ್ಲಿ ಗೋಚರಿಸುತ್ತಿದೆ. ಯಜಮಾನ ಸ್ವರೂಪಿ ಪ್ರಭುತ್ವದ ಮೂರ್ತ ರೂಪವಾಗಿರುವ ಪೊಲೀಸರನ್ನೇ ಸಂತ್ರಸ್ತರನ್ನಾಗಿ ಬಿಂಬಿಸುವ ಪ್ರಯತ್ನ ಎಡಪಂಥೀಯ ಹೋರಾಟಗಾರರು ಮತ್ತು ಯುವ ಸಾಹಿತಿಗಳಿಂದ ನಡೆಯುತ್ತಿದೆ. ಇಂತಹ ಚಟುವಟಿಕೆಗಳು ಪರೋಕ್ಷವಾಗಿ ಪ್ರಭುತ್ವವನ್ನೇ ಸಂತ್ರಸ್ತರ ಸ್ಥಾನದಲ್ಲಿ ನಿಲ್ಲಿಸುವ ಅಪಾಯಕಾರಿ ಸಾಧ್ಯತೆಗಳನ್ನು ಹೊಂದಿವೆ. ಯುವ ಕಾರ್ಯಕರ್ತರ ಔದಾರ್ಯದ ಫಲವಾಗಿ ಇಂದು ಸಾಂಪ್ರದಾಯಿಕ ಶೋಷಿತ-ಶೋಷಕ ಸಮೀಕರಣದ ಸ್ವರೂಪವೇ ಒಮ್ಮೆಗೆ ಮಾರ್ಪಾಡಾದಂತೆ ಕಂಡುಬರುತ್ತಿದೆ.

ಅದಿರಲಿ. ಪೊಲೀಸರ ಬೇಡಿಕೆಗಳೇನು ಎಂಬುದರ ಬಗ್ಗೆ ಚರ್ಚಿಸೋಣಾ. ಸಾಮಾಜಿಕ ಜಾಲತಾಣದಲ್ಲಿ “ಪೊಲೀಸರ ಪರಿಸ್ಥಿತಿ ತೀರಾ ಹೀನಾಯವಾಗಿದೆ” ಎಂದು ಥರೇವಾರಿ ಬಿಂಬಿಸಲಾಗುತ್ತಿದೆ. ಅದರಲ್ಲೂ ಯುವ ಸಾಹಿತಿಗಳು ಮತ್ತು ಹೋರಾಟಗಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಪೊಲೀಸರೂ ನಮ್ಮಂತೆ ಮನುಷ್ಯರು!” ಎಂದು ಕೂಗಿ ಹೇಳುತ್ತಿದ್ದಾರೆ. ಆ ಮೂಲಕ ವ್ಯವಸ್ಥೆ ಪೊಲೀಸರನ್ನು ಕನಿಷ್ಠ ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಇದನ್ನಂತೂ ಒಪ್ಪಲು ಅಸಾಧ್ಯ.

ಕೆಳ ಹಂತದ ಪೊಲೀಸರಿಗೆ ಸರಕಾರ ತೀರಾ ಕಡಿಮೆ ಸಂಬಳವನ್ನೇನೂ ನೀಡುತ್ತಿಲ್ಲ. ಕೇವಲ ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ಹೊಂದಿದ ಪೊಲೀಸ್ ಸಿಬಂದಿಯೊಬ್ಬ ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯದ ಜೊತೆಗೆ ವೇತನ ಪ್ರಾರಂಭವಾಗುವುದೇ 18 ಸಾವಿರ ರೂಪಾಯಿಗಳಿಂದ. ಸೈನ್ಯ ಹೊರತುಪಡಿಸಿ ಯಾವ ಸರಕಾರಿ ನೌಕರನಿಗೂ ಇಲ್ಲದ ಉಚಿತ ರೇಷನ್ ವ್ಯವಸ್ಥೆ ಪೊಲೀಸರಿಗಾಗಿ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಪೊಲೀಸ್ ಸಿಬಂದಿಯೊಬ್ಬ ಕರ್ತವ್ಯದಲ್ಲಿ ಇದ್ದಾಗ ಸಾವನ್ನಪ್ಪಿದಲ್ಲಿ ಆತನ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತದೆ. ಈ ರೀತಿ ಬೇರೆ ಇಲಾಖೆಗಳಲ್ಲಿ ಇದ್ದರೂ ಅದಕ್ಕಾಗಿ ಅಲೆದಾಡಿಸಲಾಗುತ್ತದೆ. ಆದರೆ ಪೊಲೀಸ್ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಸಲ್ಲಿಸಿದ ಒಂದೇ ಒಂದೇ ಅರ್ಜಿ ಇತ್ಯರ್ಥವಾಗದೆ ಬಾಕಿಯಾಗಿಲ್ಲ. ಒಂದು ವೇಳೆ ಪೊಲೀಸ್ ಪೇದೆಯೊಬ್ಬ ಕರ್ತವ್ಯ ನಿರ್ವಹಿಸುವ ಸಂದರ್ಭ ಮೃತನಾದಲ್ಲಿ ತಕ್ಷಣವೇ ಆತನ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾದಲ್ಲಿ 2 ಲಕ್ಷ ರೂಪಾಯಿಗಳನ್ನು ತಕ್ಷಣ ನೀಡಲಾಗುತ್ತದೆ. ಇನ್ನು ಪೊಲೀಸ್ ಸಿಬಂದಿಯೊಬ್ಬ ಯಾವುದೇ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸೌಲಭ್ಯ ಪಡೆಯುವ ವ್ಯವಸ್ಥೆ ಇದೆ. ಇಷ್ಟು ವ್ಯವಸ್ಥೆಗಳು ಬೇರಾವ ಇಲಾಖೆಯಲ್ಲೂ ಊಹಿಸಲೂ ಅಸಾಧ್ಯ. ಆದುದರಿಂದಲೇ ಈಗೀಗ ನಡೆಯುತ್ತಿರುವ ಪೋಲಿಸ್ ಪೇದೆ ನೇಮಕಾತಿ ಸಂದರ್ಭಗಳಲ್ಲಿ ಲಕ್ಷ ಲಕ್ಷ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇದು ಮನುಷ್ಯನೊಬ್ಬನನ್ನು ನಡೆಸಿಕೊಳ್ಳುವ ರೀತಿಯಲ್ಲದೆ ಇನ್ನೇನು ಅನ್ನಬೇಕು?

ಇಷ್ಟೆಲ್ಲಾ ಸೌಲಭ್ಯಗಳು ಇದ್ದರೂ ಪೊಲೀಸರು ಪ್ರತಿಭಟಿಸೋದ್ಯಾಕೆ? ಕೇವಲ ರಜೆಯ ಕಾರಣಕ್ಕಾಗಿಯಂತೂ ಅಲ್ಲ. ಪೊಲೀಸ್ ಅಥವಾ ಸೈನ್ಯKSP Recruitment 2015 ಸೇರುವಾಗಲೇ ಅಲ್ಲಿನ ರಜಾ ಸೌಲಭ್ಯದ ಬಗ್ಗೆ ಅರಿವು ಇರುತ್ತದೆ. ಹಾಗೆಂದು ಸೈನಿಕರ ರೀತಿ ಪೊಲೀಸರಿಗೆ ರಜೆ ನೀಡುವುದೇ ಇಲ್ಲವೆಂದಲ್ಲ. ಕೆಲವೊಂದು ಕಠಿಣ ಮತ್ತು ಸಹಜ ನಿಯಮಗಳು ಇದ್ದೇ ಇರುತ್ತವೆ. ರಜೆಯಲ್ಲಿ ಅನಿಶ್ಚಿತತೆ ವಿಶೇಷವಾಗಿ ಪೋಲಿಸ್ ಮೊದಲಾದ ರಕ್ಷಣಾ ಪಡೆಗಳ, ಸುರಕ್ಷಾ ಸಂಸ್ಥೆಗಳ ಸೇವಾವೃತ್ತಿಯ ಅನಿವಾರ್ಯ ಲಕ್ಷಣ. ಅಷ್ಟಕ್ಕೂ ಪೋಲಿಸರಿಗೆ ರಜೆ ಇರಲೇಬೇಕು ಅನ್ನುವ ಕಾರಣಕ್ಕಾಗಿ ಈಗ ಅವರಿಗೆ ಬೆಂಬಲ ಕೊಡುವ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು ವಾರದ ರಜಾದಿನಗಳಲ್ಲಿಲಿ ಪ್ರತಿಭಟನೆ, ಆಂದೋಲನಗಳನ್ನು ಹಮ್ಮಿಕೊಳ್ಳುವುದಿಲ್ಲವೆಂಬ ನಿರ್ಧಾರವನ್ನು ಮಾಡುತ್ತಾರೆಯೇ ಎಂಬ ಪ್ರಶ್ನೆ ವ್ಯಂಗ್ಯವಾಗಿ ಕಂಡರೂ ಇಲ್ಲಿ ಪ್ರಸ್ತುತ. ಹಾಗೆಂದುಕೊಂಡು ಪೊಲೀಸರು ಪ್ರತಿಭಟಿಸಲೇ ಬಾರದೆಂದಲ್ಲ. ವೇತನ ತಾರತಮ್ಯ ಮತ್ತು ರಜೆಯ ಬಗ್ಗೆ ಈವೆರೆಗೂ ಒಂದೇ ಒಂದು ಮನವಿ ಪೊಲೀಸ್ ಇಲಾಖೆಗೆ ತಲುಪಿಲ್ಲ ಎಂಬುದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇತ್ತಿಚೆಗೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಮನವಿಯನ್ನೂ ಮಾಡದೇ, ಇಲಾಖಾ ಮಟ್ಟದಲ್ಲೇ ಇರತಕ್ಕಂತಹ ಸಾಂಸ್ಥಿಕ ಮಾಧ್ಯಮಗಳನ್ನು ಬಳಸದೇ ಪೊಲೀಸ್ ಮ್ಯಾನುವಲ್ ನಲ್ಲಿ ಅವಕಾಶ ಇಲ್ಲದ, ಸಂವಿಧಾನ ವಿರೋಧಿಯಾಗಿ ಪೊಲೀಸರು ದಿಡೀರನೆ ಪ್ರತಿಭಟನೆ ನಡೆಸುತ್ತಿರೋದ್ಯಾಕೆ ಎಂಬುದರ ಬಗ್ಗೆ ಸಂಶಯಗಳು ಮೂಡಲಾರಂಭಿಸಿದೆ.

ಪೊಲೀಸರ ಪ್ರತಿಭಟನೆಗಿಂತಲೂ ಆತಂಕ ಸೃಷ್ಟಿಸಿರುವುದು ಪ್ರಜಾಸತ್ತಾತ್ಮಕ ಚಳುವಳಿಗಾರರು ಮತ್ತು ಯುವ ಸಾಹಿತಿಗಳ ಮಾತುಗಳು. “ಪೊಲೀಸರು ಹಲವು ಬಾರಿ ಜನಸಾಮಾನ್ಯರ ಮೇಲೆ ನಡೆಸುವ ಹಲ್ಲೆ ದೌರ್ಜನ್ಯಗಳಿಗೆ ಅವರ ಮೇಲಿರುವ ಒತ್ತಡಗಳೇ ಕಾರಣ….” ಈ ರೀತಿಯ ಅಭಿಪ್ರಾಯಗಳನ್ನು ತೇಲಿಸಲಾಗುತ್ತಿದೆ. ಇಂತಹ ವಾದಗಳು ತಮ್ಮ ಕುಟುಂಬದಿಂದ ದೂರ ಇರುವ ಸೈನಿಕರು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರಗಳನ್ನು ನಡೆಸುವುದು ಸಹಜ ಎಂಬಷ್ಟೇ ಆಪಾಯಕಾರಿ.

ಕರ್ನಾಟಕ ಪೊಲೀಸರ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಒಂದೆರಡಲ್ಲ. ಈಗಲೂ ಪ್ರತೀ ಠಾಣೆಯ ಲಾಕಪ್ಪಿನಲ್ಲಿ ನೋಡಿದರೆpolice-brutality ಬರಿಮೈಯ್ಯಲ್ಲಿ, ಕೇವಲ ಚೆಡ್ಡಿ ಹಾಕಿಕೊಂಡು ಕುಳಿತಿರುವ ನ್ಯಾಯಾಂಗದ ಮುಂದೆ ಹಾಜರುಪಡಿಸದ ಆರೋಪಿಗಳು ಕಂಡುಬರುತ್ತಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ವ್ಯಾಪ್ತಿ ಮೀರಿ ಮನೆಯ ಯಜಮಾನನ್ನು ಬಂಧಿಸಿ ಆತನ ಮಗನ ಎದುರೇ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಸೂಜಿ ಹಾಕಿಸಿದ್ದು ಯಾವ ಮೇಲಾಧಿಕಾರಿಯಾಗಲೀ, ಐಪಿಎಸ್ ಅಧಿಕಾರಿಯಾಗಲೀ ಅಲ್ಲ. ದನದ ವ್ಯಾಪಾರ ಮಾಡುತ್ತಿದ್ದವರ ಜೊತೆ ಕೆಲಸ ಮಾಡುತ್ತಿದ್ದ ಕಬೀರ್ ನನ್ನು ಗುಂಡು ಹಾಕಿ ಸಾಯಿಸಿದ್ದು ಇದೇ ತಳ ಹಂತದ ಪೊಲೀಸ್ ಸಿಬಂದಿಗಳು. ಮೊನ್ನೆ ಮೊನ್ನೆ ಸಿಎಂ ಮನೆಗೆ ದೂರು ಕೊಡಲು ಬಂದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದು ಕುಮಾರಸ್ವಾಮಿ ಹೇಳುವಂತೆ ಸಿಎಂ ಸಿದ್ದರಾಮಯ್ಯ ಅಲ್ಲ; ಯಾವ ಮೇಲಾಧಿಕಾರಿಯ ಅಥವಾ ರಾಜಕಾರಣಿಯ ಕುಮ್ಮಕ್ಕೂ ಇಲ್ಲದ ಪೊಲೀಸ್ ಸಿಬಂದಿಗಳು! ಇಂತಹ ಸಾವಿರ ಸಾವಿರ ಪ್ರಕರಣಗಳು, ನಮ್ಮ ಮನೆಯ, ನೆರೆ ಮನೆಯ ವ್ಯಕ್ತಿಗಳಿಗಾದ ಅನ್ಯಾಯಗಳು ಕೇವಲ ಪೊಲೀಸ್ ಸಿಬಂದಿಗಳ ಅಮಾನವೀಯತೆಯಿಂದ ಕಾನೂನುಬಾಹಿರ ವರ್ತನೆಯಿಂದ ಆಗಿವೆಯೇ ಹೊರತು ಮೇಲಾಧಿಕಾರಿಗಳು ಮತ್ತು ರಾಜಕರಣಿಗಳ ಕುಮ್ಮಕ್ಕಿನಿಂದಲೋ ಅಥವಾ ವೇತನ ತಾರತಮ್ಯ, ರಜಾ ನಿರಾಕರಣೆಯಿಂದ ಅಲ್ಲ ಎಂಬುದಂತೂ ಸತ್ಯ.

ಹಾಗೆಯೇ ಈಗ ಪೊಲೀಸರ ಪ್ರತಿಭಟನೆಯನ್ನು ಬೆಂಬಲಿಸುವವರು ಎಡಪಂಥೀಯ ಹೋರಾಟಗಾರರು ಹೇಳುತ್ತಿರುವ “ನಾವು ಪ್ರತಿಭಟನೆ ಮಾಡುವ ಸಂದರ್ಭ ನಿಮ್ಮಿಂದ ಎಷ್ಟೇ ಹಲ್ಲೆಗೊಳಗಾದರೂ ನಿಮ್ಮ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೇವೆ” ಎಂಬ ಮಾತುಗಳೇ ಸಿನಿಕತನದ್ದು. ದಲಿತ ಅಥವಾ ಮುಸ್ಲೀಮನೊಬ್ಬ ತನ್ನ ಜಾತಿ ಧರ್ಮದ ಕಾರಣಕ್ಕಾಗಿಯೋ, ಕೇಳುವವರಿಲ್ಲ ಎನ್ನುವ ಕಾರಣಕ್ಕೋ ಲಾಕಪ್ಪಿನಲ್ಲಿ ಚಡ್ಡಿಯಲ್ಲಿ ಕುಳಿತು ಹಲ್ಲೆಗೊಳಗಾಗುವುದಕ್ಕೂ, ದಲಿತ ಮಹಿಳೆಯರು ವಿವಸ್ತ್ರಕ್ಕೊಳಗಾಗುವುದಕ್ಕೂ, ರಾಜಕೀಯ ಉದ್ದೇಶದ ಪ್ರತಿಭಟನೆಯ ಸಂದರ್ಭದ ಲಾಠಿಚಾರ್ಜ್ನ ಹಲ್ಲೆಗೂ ವ್ಯತ್ಯಾಸ ಇದೆ. ಕೇವಲ ಮುಸ್ಲೀಮರೆನ್ನುವ ಕಾರಣಕ್ಕೆ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲ್ಪಟ್ಟು ಹತ್ತು ವರ್ಷ ಜೈಲಿನಲ್ಲಿ ಕೊಳೆತು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಒಂಬತ್ತು ದನಿಯಿಲ್ಲದ ನಿರಪರಾಧಿಗಳ ಜೈಲುವಾಸವೂ ರಾಜಕೀಯ ಪಕ್ಷಗಳು ಸಂಘಸಂಸ್ಥೆಗಳು ನಡೆಸುವ ಜೈಲ್ ಭರೋ ಆಂದೋಲನಗಳು ಏಕರೂಪದ್ದೇ? ಇದು ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನವಲ್ಲವೇ?

ಅಷ್ಟಕ್ಕೂ ಪೊಲೀಸರ ಬೇಡಿಕೆಗಳ ಬಗ್ಗೆ ಯಾವ ಆಕ್ಷೇಪಗಳೂ ಇಲ್ಲ. ಸೌಲಭ್ಯಗಳನ್ನು ಹೊಂದಿರುವವರು ಮತ್ತಷ್ಟೂ ಸೌಲಭ್ಯಗಳು ಬೇಕು ಎನ್ನುವುದಕ್ಕೆ ಯಾರflowers in gun ಆಕ್ಷೇಪವೂ ಇಲ್ಲ. ಪೋಲಿಸರೇ ಖುದ್ದು ತಮಗೆ ಅದು ಬೇಕು ಇದು ಬೇಕು, ನಮ್ಮ ಸೇವಾಸ್ಥಿತಿ ಹಾಗಿರಬೇಕು ಹೀಗಿರಬೇಕು ಅನ್ನಲಿ. ಹಾಗೆಂದು ಜವಾಬ್ಧಾರಿಯುತ ರಾಜಕೀಯ ಪಕ್ಷಗಳು ಅಥವಾ ಸಾಮಾಜಿಕ ಕಾರ್ಯಕರ್ತರು “ಪೊಲೀಸರಿಗೆ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣಕ್ಕಾಗಿ ಅವರು ದೌರ್ಜನ್ಯ ಎಸಗುತ್ತಾರೆ” ಎಂಬಂತಹ ಮಾತುಗಳನ್ನು ಆಡುವುದು, “ಅವರೂ ಮನುಷ್ಯರೇ” ಎಂದು ಘೋಷಣೆ ಕೂಗುವುದು ಅನುಚಿತ. ಅವರ ಸದ್ಯದ ತುರ್ತು ಪೋಲಿಸ್ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಮಾನವೀಯಗೊಳಿಸುವುದು ಹಾಗು ಅದನ್ನು ಪೂರ್ಣವಾಗಿ ಸಂವಿಧಾನ ಮತ್ತು ನೆಲದ ಕಾನೂನಿನ ಪರಿಧಿಗೆ ತರುವ ಕೆಲಸವಾಗಿದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.

ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ  ಮುಸ್ಲಿಮ್  ಡಿಸಿಯ  ಹೆಸರು ವಿವಾದ ಹಾಗೂ ಕರಾವಳಿಯ  ಕೋಮು ಸಾಮರಸ್ಯದ  ಇತಿಹಾಸ


-ಇರ್ಷಾದ್ ಉಪ್ಪಿನಂಗಡಿ


ದಕ್ಷಿಣ ಕನ್ನಡ  ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ  ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ  ಪತ್ರಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ  ಇಬ್ರಾಹಿಂ ಅವರ  ಹೆಸರನ್ನು  ಉಲ್ಲೇಖಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. “ಜಿಲ್ಲಾಧಿಕಾರಿ  ಎ.ಬಿ ಇಬ್ರಾಹಿಂ ಮುಸ್ಲಿಮ್  ಸಮುದಾಯದವರಾಗಿದ್ದು ಅವರ ಹೆಸರನ್ನುsri-mahalingeshwara-temple_1409380877 ಆಮಂತ್ರಣ ಪತ್ರಿಕೆಯಲ್ಲಿ  ಮುದ್ರಿಸಿರುವುದು ಹಿಂದೂಗಳ ಭಾವನೆ ಧಕ್ಕೆ ಉಂಟಾಗುತ್ತದೆ ಮಾತ್ರವಲ್ಲ ಇದು 1997ರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 7 ವಿಧಿಯ ಉಲ್ಲಂಘನೆ” ಎಂಬುವುದು ಸಂಘಪರಿವಾರದ ಸಂಘಟನೆಗಳ ವಾದ. ಇದರ ಮುಂದುವರಿದ ಭಾಗವಾಗಿ ಮಾಜಿ ಬಿಜೆಪಿ ಶಾಸಕಿ ಹಾಗೂ ಹಾಲಿ ಪುತ್ತೂರು ವಿಧಾನಸಭಾ ಕ್ಷೇತ್ರದ  ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿಯವರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ “ಮುಸ್ಲಿಮ್” ಜಿಲ್ಲಾಧಿಕಾರಿಯ  ಹೆಸರನ್ನು  ಆಮಂತ್ರಣ  ಪತ್ರಿಕೆಯಿಂದ ಕೈಬಿಟ್ಟು ಮರುಮುದ್ರಣ ಮಾಡಲು ಸೂಚಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಂಘಪರಿವಾರ ದೇವಸ್ಥಾನದ ಮುಂಭಾಗದ ಜಾತ್ರೆ ನಡೆಯುವ ಸ್ಥಳದಲ್ಲಿ ಹಿಂದೂಗಳ ಹೊರತಾಗಿ ಇತರ ಧರ್ಮೀಯರಿಗೆ ಅಂಗಡಿ ತೆರೆಯಲು ಅವಕಾಶ ನೀಡುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಈ ಬೆಳವಣಿಗೆ ನಿಜಕ್ಕೂ ಆತಂಕಕಾರಿ. ಜಿಲ್ಲೆಯ ದಂಡಾಧಿಕಾರಿಯಾಗಿರುವರು ಜಿಲ್ಲಾಧಿಕಾರಿಗಳು. ಅವರು ಅಲಂಕರಿಸಿರೋ ಹುದ್ದೆ  ಧರ್ಮಾತೀತವಾದುದು. ಜಿಲ್ಲಾಧಿಕಾರಿಯನ್ನೇ ಧರ್ಮದ ಆಧಾರದಲ್ಲಿ ಪರಿಗಣಿಸುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಎಲ್ಲಿಗೆ ಬಂದು ತಲುಪುತ್ತಿದೆ ಎಂಬುವುದು ಸ್ಪಷ್ಟಗೊಳ್ಳುತ್ತಿದೆ. ಇಂದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆರೆಯುತ್ತಿರುವ ಸಂಘಪರಿವಾರದ ಕೋಮುವಾದ ಹಾಗೂ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರೋ ಮುಸ್ಲಿಮ್ ibrahim-iasಕೋಮುವಾದ ಜಿಲ್ಲೆಯ ಜನರನ್ನು ಸಂಪೂರ್ಣವಾಗಿ ಧರ್ಮದ ಆಧಾರದಲ್ಲಿ  ಬೇರ್ಪಡಿಸುವ ಕಾರ್ಯದಲ್ಲಿ ನಿರತವಾಗಿವೆ. ದಕ್ಷಿಣ  ಕನ್ನಡ ಜಿಲ್ಲೆ ಒಂದು  ಕಾಲದಲ್ಲಿ ಧಾರ್ಮಿಕ ಸೌಹಾರ್ದತೆಗೆ  ಹೆಸರಾದ ಜಿಲ್ಲೆಯಾಗಿತ್ತು. ಇಂದು  ಜಾತ್ರೆಯ  ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಮ್ ಜಿಲ್ಲಾಧಿಕಾರಿಯ ಹೆಸರು ಉಲ್ಲೇಖವಾಗಿರುವುದಕ್ಕೆ ವಿವಾದ ಎಬ್ಬಿಸುವ ಕೋಮುವಾದಿಗಳು, ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯಬಾರದು ಎಂದು ಫರ್ಮಾನು  ಹೊರಡಿಸುವ ಸಂಘಪರಿವಾರಿಗಳು ಜಿಲ್ಲೆಯ  ಸಾಮರಸ್ಯ  ಇತಿಹಾಸದತ್ತ  ಒಮ್ಮೆ ಕಣ್ಣು ಹಾಯಿಸಬೇಕು. ದಕ್ಷಿಣ ಕನ್ನಡ  ಜಿಲ್ಲೆಯ ಮೂಲ  ಪೂಜಾ ಪದ್ಧತಿ ಭೂತಾರಾಧನೆ ಮತ್ತು ನಾಗಾರಾಧನೆ. ಈ ನಾಡಿಗೆ ವೈದಿಕ ಹಿಂದೂ ಧರ್ಮ ಕಾಲಿಟ್ಟ ತರುವಾಯ ಇಸ್ಲಾಮ್  ಧರ್ಮ ಅರಬ್  ವರ್ತಕರ ಮೂಲಕ ಇಲ್ಲಿಗೆ ಕಾಲಿಟ್ಟಿತು. ನಂತರ ಪೋರ್ಚುಗೀಸ್ ಪ್ರವಾಸಿ ವಾಸ್ಕೋಡಗಾಮನ ಆಗಮನದೊಂದಿಗೆ ಕ್ರೈಸ್ತ ಧರ್ಮ ಕೂಡಾ ತುಳುನಾಡನ್ನ ಪ್ರವೇಶಿಸಿತು. ಈ ನಾಡಿನ ಮೂಲಧರ್ಮಕ್ಕೆ  ಭಿನ್ನವಾದ ಎರಡೂ ಮತಗಳನ್ನ ಇಲ್ಲಿಯ ಮೂಲನಿವಾಸಿಗಳು ಸ್ವಾಗತಿಸಿ ಅವರನ್ನು ತಮ್ಮದಾಗಿಸಿಕೊಂಡರು. ಅದೇ  ರೀತಿ ಇಲ್ಲಿ ನೆಲೆವೂರಿದ ಅರಬ್ ಮುಸ್ಲಿಮರೂ, ಪೂರ್ಚ್ ಗೀಸ್ ಕ್ರೈಸ್ತರೂ ತಮ್ಮ ಧರ್ಮ, ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರೊಂದಿಗೆ ಈ  ನಾಡಿನ ಜನ , ಸಂಸ್ಕೃತಿಯೊಂದಿಗೆ  ಬೆರೆತು ತುಳುವರಾದರು ಎಂಬುವುದನ್ನು ಇತಿಹಾಸ ತಿಳಿಸಿಕೊಡುತ್ತದೆ. ತುಳುನಾಡಿದ ಭೂತಕೋಲದ  ಪಾಡ್ದನಗಳಲ್ಲಿ ಮುಸ್ಲಿಮರು ಪ್ರಮುಖಪಾತ್ರಗಳಲ್ಲಿ ಮಿಂಚುತ್ತಾರೆ. ಜುಮಾದಿ ದೈವ ಪಾಡ್ದನ, ಸಿರಿ ಪಾಡ್ದನ ಹಾಗೂ ಅತ್ತಾವರ ದೈವಗಳ ಪಾಡ್ದನಗಳಲ್ಲಿ ಮುಸ್ಲಿಮ್ ಪಾತ್ರದಾರಿಗಳು ಕಂಡುಬರುತ್ತಾರೆ. ಮುಸ್ಲಿಮ್ ಮಂತ್ರವಾದಿ ಅಲಿಭೂತ, ಸಮುದ್ರ ಬೀಭತ್ಸದಿಂದ ರಕ್ಷಣೆ ಕೊಡುತ್ತಿದ್ದ ಬಬ್ಬರ್ಯ ಯಾನೆ ಬಪ್ಪ  ಬ್ಯಾರಿಯನ್ನ ತುಳುವರು  ದೈವೀ  ಪುರುಷರನ್ನಾಗಿ  ಆರಾಧನೆ ಮಾಡುವ ಸಂಸ್ಕೃತಿ  ಈ ತುಳುನಾಡಿದ್ದು.  ಉಡುಪಿ  ಮಠಗಳ ಪರ್ಯಾಯ ಉತ್ಸವಗಳಲ್ಲಿ ಮುಸ್ಲಿಮ್ ಕುಟುಂಬವೊಂದು ರಥ ಅಲಂಕರಿಸುವುದು, ಪ್ರಭಾವಳಿ ರಚಿಸುವುದು, ದುರುಸು ಬಾಣಗಳನ್ನು ಬಿಡುವುದೇ ಮೊದಲಾದ ಶತಮಾನಗಳಿಂದ ನಡೆದುಕೊಂಡ ಬಂದ ಸಂಪ್ರದಾಯಗಳು ಇಲ್ಲಿಯ ಧಾರ್ಮಿಕ ಸಾಮರಸ್ಯಕ್ಕೆ ಉದಾಹರಣೆಗಳಾಗಿವೆ.

ಜಿಲ್ಲೆಯನ್ನು ಕೆಳದಿರಾಜ ವೆಂಕಟಪ್ಪ ನಾಯಕ  ಆಳುತ್ತಿದ್ದಾಗ ಭುವನಗಿರಿ ದುರ್ಗವೆನ್ನುವಲ್ಲಿ ಮುಸ್ಲಿಮರಿಗೆ ಮಸೀದಿ ಕಟ್ಟಿಸಿಕೊಟ್ಟ. ಆತನ ಮೊಮ್ಮಗ  ವೀರಭದ್ರನಾಯಕ  ತಾವರೆಕೆರೆಯ ಮಸೀದಿಗೆ  ಎಡಹಳ್ಳಿ ಗ್ರಾಮವನ್ನು ದತ್ತು ನೀಡಿದನಂತೆ. ಕೆಳದಿರಾಣಿ ಚೆನ್ನಮ್ಮಾಜಿ ದಕ್ಷಿಣ ಕನ್ನಡ  ಜಿಲ್ಲೆಯ ಕಿನ್ನಿಕಂಬಳ ಹಾಗೂ  ಗಂಜಿ ಮಠವೆನ್ನುವಲ್ಲಿ  ಮುಸ್ಲಿಮ್ ಸೂಫಿ ಸಂತರಿಗೆ 101  ಎಕರೆ ಜಮೀನು ದಾನ  ನೀಡಿದ ಉಲ್ಲೇಖಗಳು ಇತಿಹಾಸದ ಪುಟ ತಿರುಗಿಸಿದಾಗ  ತಿಳಿದುಬರುತ್ತದೆ. ದಕ್ಷಿಣ ಕನ್ನಡ  ಜಿಲ್ಲೆ ಮೈಸೂರು ಅರಸರಾದ  ಹೈದರಾಲಿ ಹಾಗೂ ಟಿಪ್ಪು ಸುಲ್ತಾನದ ಆಡಳಿತದಲ್ಲಿದ್ದ  ಸಂದರ್ಭದಲ್ಲಿ ಹಿಂದೂ ಧರ್ಮೀಯರ ಆರಾಧನಾ ಕೇಂದ್ರಗಳಿಗೆ ಭೂಮಿ ಹಾಗೂ ಆರ್ಥಿಕ ಸಹಕಾರವನ್ನು ನೀಡಿರುವ ಅನೇಕ  ಉದಾಹರಣೆಗಳಿವೆ. ಟಿಪ್ಪು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನಕ್ಕೆ ಮೂಡುಶೆಡ್ಡೆ ಗ್ರಾಮವನ್ನು ದತ್ತುವಾಗಿ ನೀಡಿ, ಅಲ್ಲಿಯ ಪೂಜಾ ವಿಧಿಗಳಿಗೆ ದಿನಕ್ಕೆ ನಾಲ್ಕು ರೂಪಾಯಿಯಂತೆ  ತಸ್ತಿಕ್  ನೀಡಿದ್ದ. ಗುರುಪುರದ ಲಿಂಗಾಯಿತ  ಮಠ , ಮಂಜೇಶ್ವರದ ಮದನಂತೇಶ್ವರ ದೇವಾಲಯ  ಹಾಗೂ ಬಂಟ್ವಾಳ ತಾಲೂಕಿನ ಶಂಬೂರು  ಎಂಬಲ್ಲಿ ಹಿಂದೂ ದೇವಾಲಯಗಳಿಗೆ ಭೂಮಿ ಹಾಗೂ  ಆರ್ಥಿಕ ಸಹಾಯ ನೀಡಿರುವ  ಅನೇಕ ಉಲ್ಲೇಖಗಳು ದಕ್ಷಿಣ ಕನ್ನಡ  ಜಿಲ್ಲಾಡಳಿತ ಪ್ರಕಟಿಸಿದ ಜಿಲ್ಲೆಯ  ಇತಿಹಾಸದ ಕುರಿತಾಗಿ ಬೆಳಕು  ಚೆಲ್ಲುವ  ಪುಸ್ತಕವೊಂದರಲ್ಲಿ ವಹಾಬ್ ದೊಡ್ಡಮನೆ  ಬರೆದಿರುವ  ಲೇಖನದಲ್ಲಿ ಇಂಥಹಾ ಸಾಮರಸ್ಯದ  ಅನೇಕ ಉಲ್ಲೇಖಗಳಿವೆ. ಬಹುಷಃ ಈ ಎಲ್ಲಾ  ವಿಚಾರಗಳು ಧರ್ಮದ  ಹೆಸರಲ್ಲಿ ಮನಸ್ಸನ್ನು  ಒಡೆಯೋ ಕೆಲಸದಲ್ಲಿ   ನಿರತರಾಗಿರುವ ಧರ್ಮರಕ್ಷಕರಿಗೆ  ತಿಳಿದಿರಲಿಕ್ಕಿಲ್ಲ. ಒಂದು ವೇಳೆ  ತಿಳಿದಿದ್ದರೂ ಇಂಥಹಾ  ಸಾಮರಸ್ಯವನ್ನು ಅವರು ಬಯಸೋದಿಲ್ಲ  ಎಂಬುವುದು  ಜಿಲ್ಲೆಯಯಲ್ಲಿ  ಪದೇ  ಪದೇ ನಡೆಯುತ್ತಿರುವ ಘಟನೆಗಳಿಂದ ಸಾಬೀತಾಗುತ್ತಾ   ಬಂದಿರುವ  ಸತ್ಯ.

ಇಂದಿಗೂ  ದಕ್ಷಿಣ  ಕನ್ನಡ  ಜಿಲ್ಲೆಯಲ್ಲಿ ಕೂಡುಬಾಳುವಿಕೆ ಹಾಗೂ  ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಅನೇಕ ಧಾರ್ಮಿಕ ಕೇಂದ್ರಗಳು  ನಮ್ಮ ಮುಂದಿವೆ. ಮಂಗಳೂರಿನ ಬೈಲು ಪೇಟೆಯೆಂಬಲ್ಲಿ  ಸೂಫಿ  ಸಂತರ ದರ್ಗಾವೊಂದಿದೆ. ಅದರ  ಹೆಸರು ಶೈಖ್ ಸೈಯದ್ ಮೆಹಮೂದ್  ಜಲಾಲುದ್ದೀನ್ ಮತ್ತು ಅಶೈಖ್  ಸೈಯದ್ ಹಯಾತ್ ವಲಿವುಲ್ಲಾಹಿ ದರ್ಗಾ. ಈ  ದರ್ಗಾದಲ್ಲಿರುವ ಸಂತ ಮೂಲತಃ  ಬಾಗ್ದಾದ್ ನಿಂದ ಬಂದು ಇಲ್ಲಿ ನೆಲೆನಿಂತವರು. ಸ್ಥಳೀಯರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆತು  ಅವರ ಮನಗೆದ್ದರು.20160121_130438 ಈ ಸೂಫಿ ಸಂತ ಕೊನೆಉಸಿರೆಳೆದ ನಂತರ ಬೈಲು ಪೇಟೆಯಲ್ಲೇ ಅವರನ್ನು ಸಮಾಧಿ ಮಾಡಲಾಯಿತು.  ನಂತರ ಗ್ರಾಮಸ್ಥರ ಪಾಲಿಗೆ ಪುಣ್ಯಪುರುಷರ ಈ ಸಮಾಧಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿತು. ಇಂದಿಗೂ ಈ ದರ್ಗಾಕ್ಕೆ ಮುಸ್ಲಿಮರಿಗಿಂತ ಅಧಿಕ ಸಂಖ್ಯೆಯಲ್ಲಿ ಹಿಂದೂಗಳೇ ಭೇಟಿನೀಡುತ್ತಾರೆ. ಈ ಗ್ರಾಮ  ಹಿಂದೂ ಕೃಷಿಕರು ತಾವು ಬೆಳೆದ ಮೊದಲ  ಬೆಳೆಯನ್ನು ಸಂತರ ದರ್ಗಾಕ್ಕೆ ತಂದು ಭಕ್ತಿಯಿಂದ ಅರ್ಪಿಸುತ್ತಾರೆ. ದರ್ಗಾದಲ್ಲಿ ಪೂಜೆ ಸಲ್ಲಿಸಿ ನಂತ್ರ  ತಾವು  ಬೆಳೆದ ಬೆಳೆಯನ್ನ ಮಾರಾಟ ಮಾಡುತ್ತಾರೆ. ಇಂದಿಗೂ ಈ ಪದ್ದತಿ ಇಲ್ಲಿ ಚಾಲ್ತಿಯಲ್ಲಿದೆ. ಈ ಗ್ರಾಮದ ಹಿಂದೂಗಳು ಇಲ್ಲಿರುವ ಸೂಫಿ ಸಂತರನ್ನು  “ಶೇಖರ್ ಪಂಡಿತೆರ್” ಎಂದು ಕರೆಯುತ್ತಾರೆ. “ಶೇಖರ್  ಪಂಡಿತೆರ್” ಕುರಿತಾಗಿ ಗ್ರಾಮದ  ಹಿಂದೂಗಳ ಮನಸ್ಸಿನಲ್ಲಿ   ಗೌರವ, ಭಕ್ತಿ.  ಪ್ರತಿ ವಾರ ದರ್ಗಾಕ್ಕೆ ಬೆಲ್ಲ, ಅಕ್ಕಿ ಕೊಡುವ ಪದ್ದತಿಯನ್ನು ಸ್ಥಳೀಯ ಹಿಂದೂಗಳು ಪಾಲಿಸಿಕೊಂಡು ಬರುತ್ತಿದ್ದಾರೆ. ಇನ್ನು  ಮೂರು  ವರ್ಷಕ್ಕೊಮ್ಮೆ ನಡೆಯುವ ಊರೂಸ್ ಸಮಾರಂಭವನ್ನೂ ಇಲ್ಲಿ ಹಿಂದೂ ಮುಸ್ಲಿಮರು ಜೊತೆಗೂಡಿ ಆಚರಿಸುತ್ತಾರೆ.  “ ಮಂಗಳೂರಿನಲ್ಲಿ  ಏನೇ ಗಲಾಟೆ  ಆದ್ರೂ  ನಮಗಿಲ್ಲಿ  ಯಾವ ಭಯವೂ ಇಲ್ಲ . ಈ ದರ್ಗಾದ ಬಳಿ ಇರೋದು ಕೇವಲ ಎರಡು ಮುಸ್ಲಿಮರ ಮನೆ .ಆದ್ರೂ ಸ್ಥಳೀಯ ಬಹುಸಂಖ್ಯಾತ ಹಿಂದೂಗಳಿಂದ ನಮಗ್ಯಾವ  ಭಯವೂ ಇಲ್ಲ. ನಾವೆಲ್ಲರೂ  ಜೊತೆಗಿದ್ದೇವೆ, ಅದಕ್ಕೆ ಶೇಖ್  ಸೈಯದ್ ಮೆಹಮೂದ್ ಜಲಾಲುದ್ದೀನ್ ಸಂತರ ದರ್ಗಾ  ಕಾರಣ” ಎನ್ನುತ್ತಾರೆ ಸ್ಥಳೀಯ ನಿವಾಸಿ  ಅಬ್ದುಲ್ ಖಾದರ್ . ಇಲ್ಲಿಗೆ  ಭೇಟಿ  ನೀಡಿದಾಗ ಗ್ರಾಮಸ್ಥರ ಮೂಲಕ ಮತ್ತೊಂದು  ಸೌಹಾರ್ದದ ಕಥೆ  ಕೇಳಲ್ಪಟ್ಟೆ. ಬೈಲು ಪೇಟೆಯ ಜುಮ್ಮಾ ಮಸೀದಿಯಲ್ಲಿ  ಧರ್ಮ ಗುರುವೊಬ್ಬರಿದ್ದರು. ದಿನಂಪ್ರತಿ ಐದು  ಹೊತ್ತಿನ ಅಜಾನ್ (ನಮಾಜಿಗೆ ಕರೆಯುವ )  ಕರೆಯನ್ನು ಇವರೇ  ನೀಡುತ್ತಿದ್ದರು. ಮಸೀದಿಯ ಅಲ್ಪ ಸನಿಹದಲ್ಲೇ ಜುಮಾದಿ ದೈವದ ಭಂಡಾರದ  ಮನೆಯಿದೆ. ಪ್ರತಿನಿತ್ಯ ಮಸೀದಿಯಯಲ್ಲಿ ಕೊಡುತ್ತಿರುವ  ಆಜಾನ್  ಕರೆ  ಪಕ್ಕದ  ಜುಮಾದಿ ದೈವದ   ಬಂಡಾರದ  ಮನೆಯ ಪೂಜಾರಿಗೂ  ಕೇಳುತಿತ್ತು. ಆದರೆ, ರಂಜಾನ್ ತಿಂಗಳ ಒಂದು ದಿನ ಮಸೀದಿಯ ಧರ್ಮಗುರು ಕೂಗುತ್ತಿದ್ದ ಆಜಾನ್ ಕರೆ ಎಂದಿನಂತಿರಲಿಲ್ಲ. ಅವರ ಧ್ವನಿ ತುಂಬಾನೇ ಕ್ಷೀಣವಾಗಿತ್ತು. ಇದರಿಂದ  ವಿಚಲಿತರಾದ ಜುಮಾದಿ ದೈವದ ಭಂಡಾರ ಮನೆಯ ಪುಜಾರಿ ಮಸೀದಿಗೆ ಹೋಗಿ ಧರ್ಮಗುರುವನ್ನು ವಿಚಾರಿಸಿದಾಗ, ಧರ್ಮಗುರು ರಂಜಾನ್ ಉಪವಾಸದಲ್ಲಿದ್ದು  ವೃತ ತೊರೆಯಲು ಅವರ ಬಳಿ  ಆಹಾರವಿಲ್ಲ ಎಂಬ ಸಂಗತಿ ತಿಳಿದುಬರುತ್ತದೆ. ಕೂಡಲೇ ಭಂಡಾರದ ಮನೆಗೆ ಬಂದ ಪೂಜಾರಿ ಜುಮಾದಿ ದೈವದ ಚಿನ್ನದ ನಾಲಗೆಯನ್ನು ಕೊಯ್ದು ಧರ್ಮಗುರುವಿಗೆ ನೀಡಿ ಅದನ್ನು ಸ್ಥಳೀಯ ದೋಂದಜ ಗುತ್ತಿನ ಮನೆಗೆ ಮಾರಿ ಉಪವಾಸ ತೊರೆಯಲು ಬೇಕಾದ ಆಹಾರ ಪದಾರ್ಥಗಳನ್ನು ತಂದುಕೊಳ್ಳುವಂತೆ ಸೂಚಿಸಿದರು. ನಂತರ ಊರ ಜನರಿಗೆ ಜುಮಾದಿ ದೈವದ ಚಿನ್ನದ  ನಾಲಗೆ ಕಾಣೆಯಾಗಿರುವ  ಸುದ್ದಿ ತಿಳಿಯಿತು.ಈ ಕುರಿತಾಗಿ ಭಂಡಾರದ ಮನೆಯ ಪೂಜಾರಿಯ  ಬಳಿ ಗ್ರಾಮಸ್ಥರು ವಿಚಾರಿಸಿದಾಗಲೂ ಪೂಜಾರಿಗೆ ಏನೂ  ತಿಳಿದಿರಲಿಲ್ಲ. ಕೆಲ ಹೊತ್ತಿನಲ್ಲೇ ಜುಮಾದಿ ದೈವ ಪೂಜಾರಿಗೆ ದರ್ಶನದಲ್ಲಿ  ಬಂದು ತಾನೇ ಮಸೀದಿಯ ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನ  ನೀಡಿದ್ದೇನೆಂದು ತಿಳಿಸಿತು. ಅಂದು ಧರ್ಮಗುರುಗಳಿಗೆ ಚಿನ್ನದ ನಾಲಗೆಯನ್ನು ಕೊಯ್ದು ಕೊಟ್ಟಿದ್ದು ಪೂಜಾರಿಯಲ್ಲ  ಬದಲಾಗಿ ಪುಜಾರಿಯ ರೂಪವನ್ನು ತಾಳಿದ ಜುಮಾದಿ ದೈವ ಎಂಬುವುದು  ಇಲ್ಲಿನ ಎರಡೂ  ಸಮುದಾಯದ  ಗ್ರಾಮಸ್ಥರ ನಂಬಿಕೆ. ಇಂಥಹಾ ಹತ್ತಾರು ಧರ್ಮಮೀರಿದ ಮನುಷ್ಯ ಪ್ರೀತಿಯ ಕಥೆಗಳು ಇಲ್ಲಿ ಸಾಮಾನ್ಯ.

ಧಾರ್ಮಿಕ ಕೂಡುಬಾಳುವಿಕೆಗೆ ಸಾಕ್ಷಿಯಾಗಿರುವ ಮತ್ತೊಂದು ಕ್ಷೇತ್ರ ದಕ್ಷಿಣ  ಕನ್ನಡ ಜಿಲ್ಲೆಯ ಪಕ್ಕದ ಜಿಲ್ಲೆ ಕಾಸರಗೋಡಿನ ಉದ್ಯಾವರ ಅಸಯ್ಯದ್  ಶಹೀದ್  ದರ್ಗಾ ಹಾಗೂ ಮಾಡಾ ಅರಸು  ದೈವಗಳ ದೈವಸ್ಥಾನ. ಇತ್ತೀಚೆಗೆ ಅತ್ಯಂತ ಕೋಮುಸೂಕ್ಷ್ಮ ಪ್ರದೇಶವಾಗಿ  ಮಾರ್ಪಡುತ್ತಿರುವ ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮ್ ಭಾಂಧವ್ಯವನ್ನು  ಕಟ್ಟಿಬೆಳೆಸಿದ  ಕ್ಷೇತ್ರವಿದು. ಇಲ್ಲೊಂದು ಅಪರೂಪದ ಹಾಗೂ ವಿಶಿಷ್ಟ ಸಂಪ್ರದಾಯವಿದೆ. ವರ್ಷಂಪ್ರತಿ ಎಪ್ರಿಲ್ ತಿಂಗಳಲ್ಲಿ ಬಿಸು ಹಬ್ಬದ ಬಳಿಕ ಅಂದರೆ, ಎಪ್ರಿಲ್ 14 ಕ್ಕೆ ಮಾಡ ಅರಸು ದೈವಗಳ ಜಾತ್ರಾಮಹೋತ್ಸವ ನಡೆಯುತ್ತದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರು ಅಂಗಡಿ ಅಥವಾ ಸಂತೆ ಇಡಬಾರದು ಎಂದು ಸಂಘಪರಿವಾರಿಗಳು ಫರ್ಮಾನು ಹೊರಡಿಸಿದ್ದಾರೋ ಅದಕ್ಕೆ ವಿರುದ್ಧ ಎಂಬುವಂತೆ  ಮಾಡಾ ಅರಸು ದೈವಗಳ  ಜಾತ್ರೆ ಆರಂಭಕ್ಕೂ ಮುನ್ನ  ಗ್ರಾಮದ  ಮುಸ್ಲಿಮರು ಅರಸು ದೈವಗಳ  ದೈವಸ್ಥಾನದ  ಆವರಣಕ್ಕೆ ಬಂದು ಸಂತೆ ಇಡುವ ಪದ್ದತಿ ಇಂದಿಗೂ ಇದೆ. ಊರ ಮುಸ್ಲಿಮ್  ಕುಟುಂಬ ವೀಳ್ಯದೆಳೆ ತೆಂಗಿನಕಾಯಿ  ಜೊತೆಗೆ ಬಂದು ಅರಸು ದೈವಗಳ  ಆರ್ಶೀರ್ವಾದ ಪಡೆದುಕೊಂಡು ಮೊದಲು ದೈವಸ್ಥಾನದ ಆವರಣದಲ್ಲಿ ಸಂತೆ  ನಡೆಸುತ್ತಾರೆ. ನಂತರ ಇತರರಿಗೂ ಸಂತೆ ನಡೆಸಲು  ಅವಕಾಶ ನೀಡಲಾಗುತ್ತದೆ.

ನಂತರ  ಗ್ರಾಮದ  ಮುಸ್ಲಿಮರನ್ನು ಅರಸು ದೈವಗಳ  ಜಾತ್ರೆಗೆ  ಆಹ್ವಾನಿಸಲು ದೈವಸ್ಥಾನದ  ಪ್ರಮುಖರು ಉದ್ಯಾವರ ಮಸೀದಿಗೆ ತೆರಳುತ್ತಾರೆ. ದರ್ಗಾದ ಮುಂದೆ  ಮಸೀದಿಯ ಜಮಾತ್ ಮುಖಂಡರಿಗೆ  ಜಾತ್ರೆಗೆ  ಆಹ್ವಾನ  ನೀಡುತ್ತಾರೆ. ಈ ಸಂಪ್ರದಾಯ ಹುಟ್ಟಲು ಒಂದು ಕಾರಣವಿದೆ. ಶತಮಾನಗಳ  ಹಿಂದೆ  ಈ ಗ್ರಾಮಕ್ಕೆ  ಬಂದ ಅರಸು ಸಹೋದರರಿಗೆ  ಉದ್ಯಾವರ ದರ್ಗಾದ  ಪುಣ್ಯ ಪುರುಷ  ಇದೇ  ಊರಲ್ಲಿ ನೆಲೆನಿಲ್ಲುವಂತೆ ವಿನಂತಿ ಮಾಡ್ತಾರೆ. ಅದರಂತೆ ಅರಸು  ಸಹೋದರರು ಈ ಗ್ರಾಮದಲ್ಲಿ ನೆಲೆನಿಲ್ತಾರೆ. ಗ್ರಾಮದ ಮುಸ್ಲಿಮ್ ಪುಣ್ಯ ಪುರುಷ  ಹಾಗೂ  ಅರಸು  ಸಹೋದರರ  ನಡುವೆ ಉತ್ತಮ ಭಾಂದವ್ಯವಿತ್ತು. ಈ ಪ್ರಕಾರ ಮುಸ್ಲಿಮ್ ಸಂತ  ಹಾಗೂ  ಅರಸು ಸಹೋದರರ ನಡುವೆ ಒಂದು ಒಪ್ಪಂದವಾಗುತ್ತದೆ. ಈ  ಪ್ರಕಾರ ಪ್ರತಿ ವರ್ಷ ನಡೆಯೋ ಉತ್ಸವಕ್ಕೆ  ಗ್ರಾಮದ ಮುಸ್ಲಿಮರು ಆಹ್ವಾನದ ಮೇರೆಗೆ ಬಂದು ಪಾಲ್ಗೊಳ್ಳಬೇಕು ಹಾಗೂ  ಊರೂಸ್ ಕಾರ್ಯಕ್ರಮಕ್ಕೆ ನಾಡಿನ ಹಿಂದೂಗಳು  ಭಾಗವಹಿಸಬೇಕೆಂದು. ಇದರಂತೆ  ಈ  ಸಂಪ್ರದಾಯ ಇಂದಿಗೂ ಆಚರಿಸಲ್ಪಡುತ್ತಾ  ಬಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ವರ್ಷಂಪ್ರತಿ ಮಾಡ ಅರಸು ದೈವಗಳ 5 ದಿನಗಳ  ಜಾತ್ರೆ ಹಾಗೂ  ಎರಡು  ದಿನಗಳ  ಬಂಡಿ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಜಾತ್ರೆಗೆ  ಗ್ರಾಮದ 20160211_165540 ಮುಸ್ಲಿಮರು ಬರುತ್ತಾರೆ. ದೈವಸ್ಥಾನದ  ಅಂಗಳದಲ್ಲಿರೋ ಸಿಂಹಾಸನ  ಕಟ್ಟೆಯಲ್ಲಿ  ಬ್ರಾಹ್ಮಣರಿಗೆ ಹಾಗೂ ಮುಸ್ಲಿಮರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ  ಮುಸ್ಲಿಮರನ್ನು ಬಹಳ ಗೌರವದಿಂದ ನೋಡಿಕೊಳ್ಳಲಾಗುತ್ತಿದೆ. ಇನ್ನು 5 ವರ್ಷಕ್ಕೊಮ್ಮೆ ನಡೆಯೋ ದರ್ಗಾದ ಉರೂಸ್ ಗೂ ಇಲ್ಲಿಯ  ಗ್ರಾಮದ ಹಿಂದೂಗಳು ಹೊರೆಕಾಣಿಕೆಯನ್ನ ನೀಡ್ತಾರೆ. ಉರೂಸ್ ಗೆ  ಆಗಮಿಸಿದ ಎಲ್ಲಾ ಹಿಂದೂಗಳಿಗೆ ಊಟೋಪಚಾರ ಗೌರವಗಳನ್ನ ನೀಡಲಾಗುತ್ತೆ. ಮಾಡಾ ಅರಸು ದೈವಗಳ ದೈವಸ್ಥಾನ ನಿರ್ಮಾಣಕ್ಕೆ ಇಲ್ಲಿಯ ಮುಸ್ಲಿಮ್ ಜಮಾತ್ ವತಿಯಿಂದ 15,000  ಧನ ಸಹಾಯ  ನೀಡಲಾಗಿದೆ. ಈ ರೀತಿಯ ಧಾರ್ಮಿಕ ಸೌಹಾರ್ದತೆಯ ಕುರಿತಾಗಿ ಗ್ರಾಮದ ಎರಡೂ ಸಮುದಾಯಗಳ ಹಿರಿಯರಿಗೆ ಉತ್ತಮ ಅಭಿಪ್ರಾಯವಿದೆ. “ಈ ಗ್ರಾಮದಲ್ಲಿರೋ ಅರಸು ದೈವ ಹಾಗೂ ದರ್ಗಾದ ಶೇಖರು ಊರಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಇಂಥಹಾ ಸೌಹಾರ್ದತೆ ಉಳಿಯಬೇಕು ಬೆಳಿಯಬೇಕು. ಇದುವರೆಗೂ ನಾವೆಲ್ಲಾ ಈ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು  ಬಂದಿದ್ದೇವೆ, ಇದನ್ನು ಮುಂದುವರಿಸುವ  ಜಾವಾಬ್ದಾರಿ ಇಂದಿನ ಯುವ ಸಮೂಹದ್ದು”  ಎನ್ನುತ್ತಾರೆ ಅರಸು ದೈವದ ಮುಂಡತ್ತಾಯ  ದೇವರ  ಪಾತ್ರದಾರಿ ಮಂಜು ಬೆಲ್ಚಡ. “ನಾವು ಈ ರೀತಿಯ ಮತ ಸೌಹಾರ್ದತೆಯನ್ನು ಬಯಸ್ತೇವೆ. ಇದು ಹೀಗೆ ಮುಂದುವರಿಯಲಿ ಎಂದು ದೇವರಲ್ಲಿ  ಪ್ರಾರ್ಥನೆ ಮಾಡ್ತೇನೆ. ನಮ್ಮ ಮಕ್ಕಳನ್ನು ಅರಸು ದೈವಗಳ ಜಾತ್ರಾಮಹೋತ್ಸವಕ್ಕೆ ಕಲಿಸಿಕೊಡುತ್ತೇನೆ” ಎನ್ನುತ್ತಾರೆ ಗ್ರಾಮಸ್ಥ ಯು.ಕೆ ಮುಹಮ್ಮದ್.  ಉದ್ಯಾವರ-ಮಾಡ ಅರಸು ದೈವಗಳ ಸ್ಥಾನ ಹಾಗೂ ಅಸೈಯದ್ ಶೇಖ್ ದರ್ಗಾಗಳು ಈ ಗ್ರಾಮದಲ್ಲಿ ಮತಸೌಹಾರ್ದತೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿವೆ.

ದಕ್ಷಿಣ ಕನ್ನಡ  ಜಿಲ್ಲೆಯ ಅಜಿಲಮೊಗೆರು  ಗ್ರಾಮದಲ್ಲಿರು  ಮುಸ್ಲಿಮ್ ಸಂತನ ಉರೂಸ್ ಕಾರ್ಯಕ್ರಮಕ್ಕೆ ಸ್ಥಳೀಯ  ಹಿಂದೂಗಳು ತುಪ್ಪ ಕೊಡುವುದು  ಹಾಗೂ ಆ ಗ್ರಾಮದ ದೇವಸ್ಥಾನದ  ಜಾತ್ರಾಮಹೋತ್ಸವಕ್ಕೆ ಮುಸ್ಲಿಮರು ಎಣ್ಣೆ ಕೊಡುವ  ಸಂಪ್ರದಾಯ ಆಚರಣೆಯಲ್ಲಿತ್ತು. ಉರೂಸ್ ಕಾರ್ಯಕ್ರಮಕ್ಕೆ ಊರ  ಹಿಂದೂಗಳೂ ಜಾತ್ರಾ ಮಹೋತ್ಸವಕ್ಕೆ ಗ್ರಾಮದ ಮುಸ್ಲಿಮರೂ ಹೋಗಿಬರುತ್ತಾ ಪರಸ್ಪರ ಸಹಕಾರ ನೀಡುತ್ತಾ ಸಾರಮಸ್ಯ ಸಾರುವ ಪದ್ದತಿ  ಇಂದಿಗೂ ಗ್ರಾಮದಲ್ಲಿ  ಕಾಣಸಿಗುತ್ತದೆ. ಇವತ್ತು ಮುಸ್ಲಿಮ್ ಜಿಲ್ಲಾಧಿಕಾರಿಯ  ಹೆಸರಿನಲ್ಲಿ ವಿವಾದಕ್ಕೆ ಕಾರಣವಾಗಿರುವ ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಅಧಿಕ  ಸಂಖ್ಯೆಯ  ಮುಸ್ಲಿಮರು ಭಾಗವಹಿಸುತ್ತಿದ್ದರು. ಜಾತ್ರೆಗದ್ದೆಯಲ್ಲಿ ವ್ಯಾಪಾರ ಮಾಡುವವರೂ ಬಹುತೇಕ  ಮುಸ್ಲಿಮರೇ ಆಗಿದ್ದರು. ಜಾತ್ರೆಗೆ ಅಗತ್ಯವಿರುವ ಬಾಳೆಕಾಯಿ, ತೆಂಗಿನಕಾಯಿಯನ್ನು ಮುಸ್ಲಿಮ್ ವರ್ತಕರು ನೀಡುತ್ತಿದ್ದರು. ಇನ್ನು ಜಾತ್ರಾಮಹೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ ಮಾಡುತ್ತಿದ್ದವನು ಬದಿಯಡ್ಕ ಮೂಲದ ಮುಸ್ಲಿಮ್ ಸುಡುಮದ್ದು  ವ್ಯಾಪಾರಿ. ಆದರೆ ಬಾಬರೀ  ಮಸೀದಿ  ಧ್ವಂಸ ಘಟನೆಯ ನಂತರ ಜಾತ್ರೆಗೆ ಬರುವ ಮುಸ್ಲಿಮರ ಸಂಖ್ಯೆ ಕಡಿಮೆಯಾಯಿತು. ಕೋಮುವಾದಿ  ಸಂಘಟನೆಗಳು ಅನ್ಯಧರ್ಮಿಯರು ಜಾತ್ರೆಗೆ ಬರದಂತೆ ಹಾಗೂ  ಜಾತ್ರೆಯಲ್ಲಿ ಮುಸ್ಲಿಮರು  ವ್ಯಾಪಾರ ನಡೆಸದಂತೆ ಫರ್ಮಾನು ಹೊರಡಿಸಿದರು. ಇವೆಲ್ಲದರ ನಡುವೆಯೂ ಇಂದಿಗೂ ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳ ದೇವಸ್ಥಾನಗಳ ವಾರ್ಷಿಕ ಮೇಳಗಳಲ್ಲಿ, ಭೂತಕೋಲ ಆಚರಣೆಗಳಲ್ಲಿ, ಕಾರ್ಕಳದ ಆತ್ತೂರ್ ಚರ್ಚ್ ಉತ್ಸವಗಳಲ್ಲಿ, ಸೈದಾನ್ ಬೀಬಿ ದರ್ಗಾ, ಉಳ್ಳಾಲ ಸೈಯದ್ ಮದನಿ ದರ್ಗಾಗಳ ಉರೂಸ್ ಗಳಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಕೂಡಿ ಆಚರಣೆ ಮಾಡೋ ಇಂಥಹಾ ಸಾಕಷ್ಟು ಉದಾಹರಣೆಗಳು  ಜಿಲ್ಲೆಯಲ್ಲಿ ಕಾಣಸಿಗುತ್ತದೆ. ಆದ್ರೆ  ಇಂದು ಎರಡೂ ಧರ್ಮಗಳ ಕೋಮುವಾದಿಗಳು ಮೂಲಭೂತವಾದಿಗಳು ಇಂಥಹಾ ಕೂಡುಬಾಳುವಿಕೆಯ ಸಂಸ್ಕೃತಿಗೆ ಕೊಳ್ಳಿ ಇಡುತ್ತಿದ್ದಾರೆ. ಈ ಮೂಲಕ  ಕರಾವಳಿಯಲ್ಲಿ  ಹಿಂದೂ ಮುಸ್ಲಿಮ್  ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕಂದಕವನ್ನು ಇನ್ನಷ್ಟು ವಿಸ್ತರಿಸೋ  ದುರುದ್ದೇಶ ಇವರದ್ದು. ಜಿಲ್ಲೆಯ  ಜಿಲ್ಲಾಧಿಕಾರಿ ಮುಸ್ಲಿಮ್ ಸಮುದಾಯದವರೆಂಬ ಕಾರಣಕ್ಕಾಗಿ  ಜಾತ್ರೆಯ  ಆಮಂತ್ರಣ  ಪತ್ರದಿಂದ ಹೆಸರು ಕಿತ್ತುಹಾಕುವಂತೆ ಒತ್ತಾಯಿಸುವುದು, ಜಾತ್ರೆಗದ್ದೆಯಲ್ಲಿ ಮುಸ್ಲಿಮರು ಅಂಗಡಿ  ತೆರೆಯದಂತೆ ಫರ್ಮಾನು ಹೊರಡಿಸುತ್ತಿರುವುದು ಇದರ ಮುಂದುವರಿದ ಭಾಗವಷ್ಟೇ. ಕರಾವಳಿಯ ಸಾರಮಸ್ಯ ಬಯಸೋ ಜನಸಮುದಾಯ ಎಚ್ಚೆತ್ತುಕೊಂಡು ಮನಸ್ಸುಗಳನ್ನು ವಿಭಜಿಸೋ  ಸನಾತನವಾದಿಗಳ ಇಂಥಹಾ ಪ್ರಯತ್ನಗಳನ್ನು ಸೋಲಿಸಬೇಕಿದೆ.