Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸಂಗಯ್ಯ ಹಿರೇಮಠರಿಗೆ ಧನ್ಯವಾದಗಳನ್ನು ತಿಳಿಸುತ್ತಾ…


– ರವಿ ಕೃಷ್ಣಾರೆಡ್ದಿ


 

ಹಿಂದಿನ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಗಣಿ ಹಗರಣಗಳ ವಿರುದ್ಧವಾಗಿ, ಹಾಗೂ ಬಿಜೆಪಿ ಮತ್ತದರ ಸಹಪಕ್ಷಗಳ ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣದ ವಿರುದ್ಧದ ಜನತೀರ್ಪಿನಿಂದಾಗಿ ಆರೇಳು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ಕೊನೆಗೂ ಸಂತೋಷ್ ಲಾಡ್ ಹೊರ ನಡೆದಿದ್ದಾರೆ. KPN photoಇದು ಸಿದ್ಧರಾಮಯ್ಯ ಮತ್ತವರ ಪಕ್ಷದವರು ನೈತಿಕತೆ ಮೆರೆಯೋಣ ಎಂದು ಭಾವಿಸಿದ ಕಾರಣಕ್ಕೆ ಅಲ್ಲವೇ ಅಲ್ಲ. ಸಂಗಯ್ಯ ಹಿರೇಮಠ್ ಎಂಬ ಸುಮಾರು ಎಪ್ಪತ್ತು ವರ್ಷದ ಹೋರಾಟಗಾರ ಮತ್ತು ಎಚ್.ಎಸ್.ದೊರೆಸ್ವಾಮಿ ಎಂಬ ತೊಂಬತ್ತೈದು ವರ್ಷದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಹೋರಾಟದ ಫಲವಾಗಿ ಮಾತ್ರ ಸಂತೋಷ್ ಲಾಡ್ ಎಂಬ ಅಕ್ರಮ ಗಣಿಗಾರಿಕೆಯ ಆರೋಪಗಳನ್ನು ಹೊತ್ತ ವ್ಯಕ್ತಿ ಈ ರಾಜ್ಯದ ಸಚಿವ ಸಂಪುಟದಿಂದ ಹೊರ ನಡೆಯುವಂತಾಗಿದೆ.

ಅಣ್ಣಾ ಹಜಾರೆಯವರು ತಮ್ಮ ಭಾಷಣಗಳಲ್ಲಿ ಸಂದರ್ಭ ಸಿಕ್ಕಾಗಲೆಲ್ಲ ತಾವು ಮಹಾರಾಷ್ಟ್ರ ಸರ್ಕಾರದ ಎಷ್ಟು ಭ್ರಷ್ಟ ಸಚಿವರ ರಾಜೀನಾಮೆಗೆ ಕಾರಣನಾಗಿದ್ದೇನೆ ಎಂದು ಹೇಳುತ್ತಿರುತ್ತಾರೆ. ವರ್ಷದ ಹಿಂದೆ ನಡೆದ ಕೇಂದ್ರ ಸರ್ಕಾರದ ಸಂಪುಟ ಪುನರ್‌ರಚನೆಯ ಸಂದರ್ಭದಲ್ಲಿ ಆರು ಸಚಿವರನ್ನು ಕೈಬಿಟ್ಟ ಸಂದರ್ಭದಲ್ಲೂ “ನಾನು ಆರು ಸಚಿವರ ವಿಕೆಟ್ ಪಡೆದಿದ್ದೇನೆ” ಎಂದು ಹೇಳಿದ್ದರು. ಆ ದೃಷ್ಟಿಯಲ್ಲಿ ಯೋಚಿಸುವುದಾದರೆ ನಮ್ಮ ರಾಜ್ಯದ ಸಮಾಜ ಪರಿವರ್ತನಾ ಸಮುದಾಯanna-hazareಎಸ್.ಆರ್.ಹಿರೇಮಠರು ರಾಜ್ಯದ ಜನತೆಯ ಪರ ತಮ್ಮ ಹೋರಾಟದಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ವಿಕೆಟ್‌ಗಳನ್ನು ಪಡೆಯುತ್ತಲೇ ಬಂದಿದ್ದಾರೆ ಮತ್ತು ಭ್ರಷ್ಟರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ. ಈ ರಾಜ್ಯದ ಸಾರ್ವಜನಿಕ ಹಿತಾಸಕ್ತಿ ಮತ್ತು ನೈಜ ಪ್ರಜಾಪ್ರಭುತ್ವದ ಉಳಿವಿಗಾಗಿ ಅವರು ಮಾಡುತ್ತಿರುವ ಹೋರಾಟಕ್ಕೆ ನಮ್ಮ ಅಭಿನಂದನೆಗಳಲ್ಲ, ಬದಲಿಗೆ ಧನ್ಯವಾದ ಮತ್ತು ಕೃತಜ್ಞತೆಗಳನ್ನು ತಿಳಿಸಬೇಕಿದೆ.

ಅಂದ ಹಾಗೆ, ಸಂತೋಷ್ ಲಾಡ್‌ರವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಅವರ ವಿರುದ್ಧ ಯಾವ ಆರೋಪಗಳು ಇದ್ದವೊ ಮತ್ತು ಯಾವ ದಾಖಲೆಗಳು ಲಭ್ಯವಿದ್ದವೊ, ಅದಕ್ಕಿಂತ ತೀರಾ ಹೆಚ್ಚಿನ ಮಾಹಿತಿಗಳೇನೂ ಕಳೆದ ಐದಾರು ತಿಂಗಳಿನಲ್ಲಿ ಹೊರಬಂದಿರಲಿಲ್ಲ. ಲಾಡ್‌ರನ್ನು ಅಕ್ರಮಗಳ ಆರೋಪದ ಮೇಲೆ ಕೈಬಿಡಬೇಕೆಂದಿದ್ದರೆ ಎಂದೋ ಕೈಬಿಡಬಹುದಿತ್ತು. ಇಷ್ಟು ದಿನಗಳ ಕಾಲ ಸ್ವತಃ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಲಾಡ್‌ರನ್ನು ಸಮರ್ಥಿಸಿಕೊಳ್ಳುತ್ತಲೆ ಬಂದರು ಮತ್ತು ತಾವೆ ಅವರಿಗೆ ಕ್ಲೀನ್ ಚಿಟ್ ಕೊಡುತ್ತಿದ್ದರು. ಆದರೆ, ಹಿರೇಮಠರು ಮತ್ತು ದೊರೆಸ್ವಾಮಿಯವರ ಸಂಘಟಿತ ಪ್ರಯತ್ನದ ಫಲವಾಗಿ ಈ ಪ್ರಸ್ತಾಪ ಮತ್ತು ಹೋರಾಟವನ್ನು ಚಾಪೆಯ ಕೆಳಗೆ ಹುದುಗಿಸಿಡಲಾಗದು ಮತ್ತು ಕ್ರಮ ತೆಗೆದುಕೊಳ್ಳುವುದನ್ನು ಹೆಚ್ಚು ದಿನ ಮುಂದೂಡಲಾಗದು ಎನ್ನುವ ಕಾರಣಕ್ಕೆ ತಮಗೆ ಅನುಕೂಲಕರವಾದ ಸಮಯ ಸಂದರ್ಭ ನೋಡಿಕೊಂಡು ಮುಖ್ಯಮಂತ್ರಿಗಳು ಸಂತೋಷ್ ಲಾಡ್‌ರ ರಾಜೀನಾಮೆ ಪಡೆದಿದ್ದಾರೆ.

ಬೆಳಗಾವಿಯ ಅಧಿವೇಶನ ಮತ್ತು ಅಲ್ಲಿ ವಿಪಕ್ಷಗಳು ಈ ವಿಷಯ ಎತ್ತಬಹುದಾದ ಸಾಧ್ಯತೆಯಿಂದಾಗಿಯೂ santosh-ladಈಗ ರಾಜೀನಾಮೆ ಪಡೆದಿರಬಹುದು. ಆದರೆ, ವಿಪಕ್ಷಗಳ ಇಂತಹ ಎಷ್ಟು ಒತ್ತಡಗಳನ್ನು ನಮ್ಮ ಆಡಳಿತ ಪಕ್ಷಗಳು ಮೆಟ್ಟಿ ನಿಂತಿಲ್ಲ ಮತ್ತು ಕಡೆಗಣಿಸಿಲ್ಲ? ಇನ್ನು, ಈ ವಿಷಯ ಇರಲಿ, ಇಲ್ಲದಿರಲಿ, ಸದನದ ಕಲಾಪಗಳು ಸುಸೂತ್ರವಾಗಿ ನಡೆಯುವ ಯಾವ ಖಾತರಿ ಇದೆ? ವಿರೋಧಿಸುವುದೇ, ಬಾಯಿ ಮಾಡುವುದೇ ಕಲಾಪದಲ್ಲಿ ಪಾಲ್ಗೊಳ್ಳುವ ವಿಧಾನ ಎಂದು ವಿಪಕ್ಷಗಳ ಸದಸ್ಯರು ಅಂದುಕೊಂಡರೆ, ಇದೊಂದು ಅನಗತ್ಯ ಕಸರತ್ತು, ಸಮಯ ಹಾಳು ಎಂಬ ಭಾವನೆಯಲ್ಲಿ ಆಳುವ ಪಕ್ಷದ ಸದಸ್ಯರು ಮತ್ತು ಸಚಿವರು ಭಾವಿಸುತ್ತಾರೆ. ಅವರು ಸದನದಲ್ಲಿ ಪಾಲ್ಗೊಳ್ಳಲು ತೋರಿಸುವ ಉತ್ಸಾಹದಿಂದಲೇ ಇದನ್ನೆಲ್ಲ ಅಳೆಯಬಹುದು. ಹಾಗಾಗಿ, ವಿಪಕ್ಷಗಳಿಗೆ ಹೆದರಿ ಮತ್ತು ಅವರ ಒತ್ತಡಕ್ಕೆ ಮಣಿದು ಸಿದ್ಧರಾಮಯ್ಯನವರು ಲಾಡ್‌ರ ರಾಜೀನಾಮೆ ಪಡೆದಿದ್ದಾರೆ ಎನ್ನುವುದು ಅಷ್ಟೇನೂ ಸರಿಯಲ್ಲ. (ನಾವು ಪ್ರತಿನಿಧಿಸುವ ಲೋಕ್‌ಸತ್ತಾ ಪಕ್ಷದ ವತಿಯಿಂದ ನಾನು ಮತ್ತು ನನ್ನ ಸಹೋದ್ಯೋಗಿಗಳು ಒಮ್ಮೆ ಪತ್ರಿಕಾಗೋಷ್ಟಿ ಕರೆದು ಸಂತೋಷ್ ಲಾಡ್‌ರ ರಾಜೀನಾಮೆ ಪಡೆಯಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದೆವು. ನಮ್ಮ ಒತ್ತಾಯದ ಕಾರಣಕ್ಕಾಗಿಯೆ ಅವರ ರಾಜೀನಾಮೆ ಪಡೆಯಲಾಯಿತು ಎನ್ನುವುದು ಎಷ್ಟು ಬಾಲಿಶವಾಗುತ್ತದೊ, ಅದಕ್ಕಿಂತ ಸ್ವಲ್ಪ ಕಮ್ಮಿ ಬಾಲಿಶತನದ್ದು ಬಿಜೆಪಿಯವರ ಒತ್ತಡದಿಂದಾಗಿ ಮತ್ತು ಅವರು ಸದನದಲ್ಲಿ ಮಾಡಬಹುದಾದ ಕಿರಿಕಿರಿಯ ಕಾರಣಕ್ಕಾಗಿ ಲಾಡ್‌ರ ರಾಜೀನಾಮೆ ಪಡೆಯಲಾಯಿತು ಎನ್ನುವುದು.)

ಇನ್ನು, ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿವೆ, parameshwara-roshanbeg-dkshivakumarಡಿ.ಕೆ.ಶಿವಕುಮಾರ್ ಮತ್ತು ರೋಷನ್ ಬೇಗ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮನಸ್ಸಿಲ್ಲದ ಮುಖ್ಯಮಂತ್ರಿಗಳು, ಲಾಡ್‌ರವರು ರಾಜೀನಾಮೆ ನೀಡುವಂತೆ ಮಾಡುವುದರ ಮೂಲಕ ತಮಗಿಷ್ಟವಿಲ್ಲದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಆಗದಂತಹ ವಾತಾವರಣ ಸೃಷ್ಟಿಸಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಒಂದಷ್ಟು ವಾಸ್ತವಾಂಶ ಇರಬಹುದು. ಸಂಪುಟ ವಿಸ್ತರಣೆ ಎಂದರೆ ಅದು ಭಿನ್ನಮತವನ್ನು ಉಂಟು ಹಾಕಿದಂತೆ ಎನ್ನುವ ವಾತಾವರಣ ನಮ್ಮಲ್ಲಿದೆ. ಹಾಗಾಗಿ ಸಂಪುಟ ವಿಸ್ತರಣೆಯನ್ನು ಮುಂದೂಡಲು ಅಥವ ಹಾಗೆ ವಿಸ್ತರಣೆ ಮಾಡಲೇಬೇಕಾದ ಸಂದರ್ಭ ಬಂದಲ್ಲಿ ಪರ್ಯಾಯ ಶಕ್ತಿ ಕೇಂದ್ರವಾಗಬಹುದಾದಂತಹ ಕೆಲವರನ್ನು ಹೊರಗಿಡಲು ಸಿದ್ದರಾಮಯ್ಯನವರು ಹೀಗೆ ಮಾಡಿರಲೂಬಹುದು. ಆದರೆ, ಹಾಗೆ ಆದಲ್ಲೂ ಅದು ನೈತಿಕವಾದ ನಡೆಯಲ್ಲ. ಅದು “ರಾಜಕಾರಣ” ಯಾವೆಲ್ಲ ಕೆಟ್ಟ ಅಧಿಕಾರ್ಥಗಳನ್ನು (connotations) ಕೊಡುತ್ತದೆಯೊ ಅದಕ್ಕೆ ತಕ್ಕನಾದ ನಡವಳಿಕೆಯೇ ಆಗಿದೆ. ರಾಜ್ಯ ಈ ಮುಖ್ಯಮಂತ್ರಿಯಿಂದ ಇನ್ನೂ ಹೆಚ್ಚಿನ ನೈತಿಕತೆ ಮತ್ತು ಪ್ರಬುದ್ಧತೆಯನ್ನು ಬಯಸುತ್ತದೆ.

ಸಂತೋಷ್ ಲಾಡ್‌ರ ರಾಜೀನಾಮೆಯ ಸಂದರ್ಭ ಏನೇ ಇರಲಿ, ಎಸ್.ಆರ್.ಹಿರೇಮಠರು ದಾಖಲೆಗಳ ಮೇಲೆ ದಾಖಲೆಗಳನ್ನು ಬಿಡುಗಡೆ ಮಾಡುತ್ತ, ಸುಪ್ರೀಮ್‌ ಕೋರ್ಟ್‌ನಲ್ಲಿ ದಾವೆಗಳನ್ನು ನಡೆಸುತ್ತ, sr-hiremath-hansrajದೆಹಲಿಯ ಕಾಂಗ್ರೆಸ್ ವರಿಷ್ಠರಿಗೂ ಈ ಬಗ್ಗೆ ಮಾಹಿತಿಯನ್ನು ತಲುಪಿಸುವಂತಹ, ಮತ್ತು ಮಾಧ್ಯಮಗಳಲ್ಲಿ ಈ ವಿಷಯ ಕಾಲಕಾಲಕ್ಕೆ ಚರ್ಚೆಯಾಗುವಂತೆ ಮಾಡದೇ ಹೋಗಿದ್ದಿದ್ದರೆ, ಈ ಸಂದರ್ಭವೂ ಬರುತ್ತಿರಲಿಲ್ಲ. ಬಹುಶಃ ದೊರೆಸ್ವಾಮಿಯವರು ಐವತ್ತು ಪೈಸೆಯ ಅಂಚೆ ಕಾಗದದ ಮೇಲೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯದೆ ಇದ್ದಿದ್ದರೆ ಇನ್ನೂ ಒಂದಿಬ್ಬರು ಕಳಂಕಿತರು ಈ ಸಂಪುಟದಲ್ಲಿ ಇರುತ್ತಿದ್ದರು. ನಾಡು ಈ ಹಿರಿಯರಿಬ್ಬರ ಹೋರಾಟಕ್ಕೆ ಎಂದೂ ಕೃತಜ್ಞರಾಗಿರಬೇಕಿದೆ.

ಕೊನೆಯದಾಗಿ, ಸಂತೋಷ್ ಲಾಡ್‌ರ ರಾಜೀನಾಮೆಯ ನಂತರ ಎಸ್.ಆರ್.ಹಿರೇಮಠರು ಪ್ರತಿಕ್ರಿಯಿಸಿರುವ ಮಾತುಗಳಲ್ಲಿರುವ ಘನತೆ ಮತ್ತು ದೊಡ್ಡತನವನ್ನು ರಾಜ್ಯದ ಜನತೆ ಗಮನಿಸಬೇಕಿದೆ. “ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ನಮ್ಮ ಹೋರಾಟವಲ್ಲ. ಆತ ಎಷ್ಟೇ ಪ್ರಭಾವಶಾಲಿಯಿದ್ದರೂ, ಯಾವುದೇ ಪಕ್ಷವಿದ್ದರೂ ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಹೋರಾಟ ಅವಿರತ, ನಿಶ್ಚಲ. ಅದೇ ನಮ್ಮ ಧ್ಯೇಯ. ಸಿದ್ದರಾಮಯ್ಯ ಅವರು ಸಚ್ಚಾರಿತ್ರ್ಯ ಹೊಂದಿದ್ದವರು. ಇಂತಹ ಕೆಲವರು ಸೇರಿಕೊಂಡು ಮುಜುಗರ ತಂದಿದ್ದರು. ಕಾಂಗ್ರೆಸ್ ಪಕ್ಷ ಕೂಡ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದಾಗಿ ರಾಜ್ಯದ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೇರಿತ್ತು. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳು ಚರ್ಚೆಯಾಗಬೇಕೇ ವಿನಃ ಇಂತಹ ಕ್ಷುಲ್ಲಕ ಸಂಗತಿಗಳು ಚರ್ಚೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗಳು ಅಧಿವೇಶನಕ್ಕೆ ಮೊದಲೇ ಈ ವಿಷಯಕ್ಕೆ ಅಂತ್ಯ ಹಾಡಿದ್ದಾರೆ. ಇದು ರಾಜ್ಯದ ಜನತೆಗೆ, ನ್ಯಾಯಕ್ಕೆ ಸಿಕ್ಕ ಜಯ.” ಹೀಗೆಂದಿರುವ ಹಿರೇಮಠರ ರೀತಿಯಲ್ಲಿಯೇ ನಮ್ಮ ರಾಜ್ಯದ ಬಹುಸಂಖ್ಯಾತ ಜನರೂ ನಮ್ಮ ಜನಪ್ರತಿನಿಧಿಗಳಿಂದ ಹೆಚ್ಚಿನ ಉತ್ತರದಾಯಿತ್ವ ಮತ್ತು ನೈತಿಕತೆಯನ್ನು ಆಗ್ರಹಿಸಿದಾಗ ಮಾತ್ರ ಅವರಂತಹವರ ಹೋರಾಟಗಳಿಗೂ ಒಂದು ಅರ್ಥ ಮತ್ತು ತಾರ್ಕಿಕ ಅಂತ್ಯ ಇರುತ್ತದೆ. ಇಲ್ಲದಿದ್ದರೆ, ಇವೆಲ್ಲ ಈ ಸಂದರ್ಭದ ಕ್ಷಣಿಕ ಗೆಲುವುಗಳಾಗುತ್ತವೆ. ಅದು ನಾವು ಹಿರೇಮಠರಂತಹವರಿಗೆ ಕೃತಜ್ಞತೆಯ ಬದಲಿಗೆ ಕೃತಘ್ನತೆ ತೋರಿಸಿದಂತೆ. ಈ ರಾಜ್ಯದ ಸಮಷ್ಟಿ ಪ್ರಜ್ಞೆ ಹಾಗೆ ಇಲ್ಲ ಎನ್ನುವ ಆಶಾವಾದ ಮತ್ತು ಕ್ರಿಯಾಶೀಲತೆ ನಮ್ಮದಾಗಲಿ.

ಪ್ರಜಾಪ್ರಭುತ್ವಕೆ ದಾರಿ ತೋರಿಸುವವರಾರು? ದಾರಿ ಯಾವುದಯ್ಯಾ?

– ಬಿ.ಶ್ರೀಪಾದ ಭಟ್

ಕಾಂಗ್ರೆಸ್ ಪಕ್ಷ 2014 ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಯಾವ ಬಗೆಯ ಪೂರ್ವ ತಯಾರಿ ನಡೆಸಿದೆ? ಆ ಪಕ್ಷದ ಅಂತರಿಕ ಸಿದ್ಧತೆಗಳು, ಚಿಂತನೆಗಳು ಹಾಗೂ ಪಕ್ಷವೊಂದರ Internal Organisation Structure ಇಂದು ಚುನಾವಣೆಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಅದರ ಸಾಮರ್ಥ್ಯ ಯಾವ ಮಟ್ಟದಲ್ಲಿದೆ? 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ನಂತಹ ಪ್ರಮುಖ ಪಕ್ಷವೊಂದು ಸತತವಾಗಿ ಮೂರನೇ ಬಾರಿಗೆ ಮರು ಆಯ್ಕೆ ಬಯಸಿದಾಗ ಮೇಲಿನ ಈ ಅಂಶಗಳು ಬಹಳ ಮುಖ್ಯವಾಗುತ್ತವೆ.

ಇವೆಲ್ಲವನ್ನೂ ಕಾಂಗ್ರೆಸ್‌ನ ಇಂದಿನ ಸ್ಥಿತಿಯಲ್ಲಿ ಪರಸ್ಪರ ಹೋಲಿಕೆಯಲ್ಲಿಟ್ಟು ವಿಮರ್ಶಿಸಿದಾಗ ಕಂಡುಬರುವುದೇನೆಂದರೆ ಅಪಾರ ನಿರಾಶೆ. narender_modi_rssಏಕೆಂದರೆ ಫ್ಯಾಸಿಸ್ಟ್ ಗುಂಪು ಆರೆಸಸ್ ಮತ್ತು ಫ್ಯಾಸಿಸ್ಟ್ ನಾಯಕ ನರೇಂದ್ರ ಮೋದಿ ರಾಜಕೀಯದ ಮುಂಚೂಣಿಗೆ ಧುಮುಕಿದ್ದು ದೇಶದ ಇಂದಿನ ಇಡೀ ರಾಜಕೀಯ ಚಟುವಟಿಕೆಗಳು ಮತ್ತು ಚುನಾವಣಾ ಪ್ರಚಾರವನ್ನು ಸಂಪೂರ್ಣ ಶಕ್ತಿ ಪ್ರದರ್ಶನ ವೇದಿಕೆಗಳಾಗಿ ಪರಿವರ್ತಿಸಿದ್ದಾರೆ. ಫ್ಯಾಸಿಸ್ಟರು ಅಧಿಕಾರಕ್ಕಾಗಿ ಎಲ್ಲಾ ಬಗೆಯ ತಂತ್ರ ಕುತಂತ್ರಗಳಲ್ಲಿ ನಿರತರಾಗಿದ್ದಾರೆ. ಮಾಧ್ಯಮಗಳು ಏಕಪಕ್ಷೀಯವಾಗಿ, ಕುರುಡಾಗಿ ಈ ಫ್ಯಾಸಿಸ್ಟರ ಪರವಾಗಿ ಪ್ರಚಾರ ಮಾಡುತ್ತಿವೆ. ಮತೀಯ, ಕೋಮುವಾದಿ ರಾಷ್ಟ್ರೀಯವಾದವು ಮುನ್ನುಗ್ಗುತ್ತಿರುವಂತಹ ಹೊರಳು ದಾರಿಗೆ ತಿರುಗಿರುವ ಇಂಡಿಯಾದ ಇಂದಿನ ಆತಂಕಭರಿತ ರಾಜಕೀಯ ಸ್ಥಿತಿಯಲ್ಲಿ ಅಪಾರ ಅನುಭವವುಳ್ಳ, ಅತ್ಯಂತ ನಿರ್ಣಾಯಕ ಪಾತ್ರ ವಹಿಸಬೇಕಿದ್ದ ಕಾಂಗ್ರೆಸ್ ಪಕ್ಷ ಹವ್ಯಾಸಿ ರಾಜಕೀಯ ಪಕ್ಷದಂತೆ ವರ್ತಿಸುತ್ತ ಈ ಬಿರುಗಾಳಿಗೆ ತತ್ತರಿಸುತ್ತಿದೆ. ಇಂದು ದೇಶದಲ್ಲಿ ಕಾಂಗ್ರೆಸ್‌ನಷ್ಟು ನೈತಿಕವಾಗಿ ದಿವಾಳಿಯೆದ್ದ ಪಕ್ಷ ಮತ್ತೊಂದಿಲ್ಲ.

ರಾಜಕೀಯ ಪಂಡಿತರ ಪ್ರಕಾರ ಅದರ ಬಹಿರಂಗ ಪ್ರಚಾರದ ವರದಿಗಳು ಮತ್ತು ನಾಯಕರ ಭಾಷಣಗಳನ್ನು ಹೊರತುಪಡೆಸಿದರೆ 2004 ಮತ್ತು 2009 ರ ಚುನಾವಣೆಗಳ ಸಂದರ್ಭಕ್ಕೆ ನಡೆಸಿದ ತಯಾರಿಗಳಿಗೆ ಹೋಲಿಸಿದರೆ 2014 ರ ಚುನಾವಣೆಗಾಗಿ ಕಾಂಗ್ರೆಸ್‌ನ ಪೂರ್ವ ತಯಾರಿ ಯೋಜನೆಗಳು ಸಂಪೂರ್ಣ ಭಿನ್ನವಾಗಿವೆ ಮತ್ತು ಸೂತ್ರ ಹರಿದ ಗಾಳಿಪಟದಂತಿದೆ. ಕಳೆದ ಹದಿನೈದು ವರ್ಷಗಳಲ್ಲಿ ಅಂದರೆ 1997 ರಿಂದ 2012 ರವರೆಗೆ ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಸೋಲು ಮತ್ತು ಗೆಲವುಗಳು ಸೋನಿಯಾ ಗಾಂಧಿಯವರ ನಿರ್ಧಾರಗಳು, ಚಿಂತನೆಗಳು, ಮತ್ತು ಮೇಡಂರ ರಾಜಕೀಯ ಕಾರ್ಯದರ್ಶಿ sonia-ahmad-patelಅಹ್ಮದ್ ಪಟೇಲ್‌ರ ರಾಜಕೀಯ ಚಾಣಾಕ್ಷತೆ ಮತ್ತು ಸಮ್ಮಿಶ್ರ ಸರ್ಕಾರವೊಂದರ ಸಹಯೋಗಿ ಪಕ್ಷಗಳೊಂದಿಗೆ ನಿರಂತರವಾಗಿ ಕಾಯ್ದುಕೊಂಡುಬರುವ ಪರಸ್ಪರ ಸಹಕಾರದ ಮಟ್ಟ ಇವುಗಳನ್ನು ಅವಲಂಬಿಸಿತ್ತು. ಸೋನಿಯಾ ಗಾಂಧಿ ಅವರ ನಾಯಕತ್ವದ ದೂರದರ್ಶತ್ವ ಮತ್ತು ಮಿತಿಗಳು ಮತ್ತು ಅಹ್ಮದ್ ಪಟೇಲ್‌ರ ರಾಜಕೀಯ ಕಾರ್ಯದರ್ಶಿಯ ಕಾರ್ಯಕ್ಷಮತೆಯ ಫಲವಾಗಿ ಕಳೆದ ಹದಿನೈದು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಅಂತರಿಕ ಚಟುವಟಿಕೆಗಳು ಮತ್ತು ನಿರ್ಧಾರಗಳು ಈ ಕೆಳಗಿನಂತಿತ್ತು:

  • ವೈಯುಕ್ತಿಕ ಮಟ್ಟದಲ್ಲಿನ ರಾಜಕೀಯ ಸಂಬಂಧಗಳನ್ನು ಮತ್ತು ಅವರ ಪ್ರಭಾವ ಮಟ್ಟವನ್ನು ಆಧರಿಸಿ ಯೋಜನೆಗಳನ್ನು ರೂಪಿಸುವುದು ಮತ್ತು ರಾಜಕೀಯ ಬಿಕ್ಕಟ್ಟಿಗೆ ಪರಿಹಾರಗಳನ್ನು ಕಂಡುಕೊಳ್ಳುವುದು. ಅಂದರೆ ಅಹ್ಮದ್ ಪಟೇಲರ ಕೆಲಸವೇ ರಾಜಕೀಯ ಬಿಕ್ಕಟ್ಟುಗಳನ್ನು ಸರಿಪಡಿಸುವದಕ್ಕಿಂತಲೂ ಹೆಚ್ಚಾಗಿ “ನಿಭಾಯಿಸುವುದು” ಮುಖ್ಯವಾಗಿತ್ತು.
  • ಚರ್ಚೆಗಳು, ಸಂಧಾನಗಳು, ಮತ್ತು ಕಾದು ನೋಡುವ ತಂತ್ರ ಸೋನಿಯಾ ಗಾಂಧೀಯವರ ರಾಜಕೀಯ ಗುಣಲಕ್ಷಣಗಳು ಮತ್ತು ಪ್ರಧಾನ ಚೌಕಟ್ಟಾಗಿದ್ದರೆ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ಇಳಿಸಿದ್ದು ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ಈ ಅಹ್ಮದ್ ಪಟೇಲ್.
  • ಮೇಲ್ನೋಟಕ್ಕೆ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವ ಜಾರಿಯಲ್ಲಿದೆ ಎಂದು ಕಂಡುಬರುತ್ತಿದ್ದರೂ ಆಳದಲ್ಲಿ ಕಾಂಗ್ರೆಸ್ ಪಕ್ಷವು ಮೈಗೂಡಿಸಿಕೊಂಡಿರುವುದು ರಾಜವಂಶದ ಆಡಳಿತ ಮಾದರಿಯನ್ನು. ಅಂದು ಇಂದಿರಾ ರಾಜಮಾತೆಯಾಗಿದ್ದರೆ ಇಂದು ಸೋನಿಯಾ ಗಾಂಧಿ. ಪಕ್ಷದ ಅಂತರಿಕ ಆಡಳಿತ ವ್ಯವಸ್ಥೆಯಲ್ಲಿ ಏನೂ ವ್ಯತ್ಯಾಸವಿಲ್ಲ. ಜೀ ಹುಜೂರ್ ಶೈಲಿಗೆ ಮಾತ್ರ ಮಣೆ ದೊರಕುತ್ತದೆ.
  • ದೇಶದ ಪ್ರಮುಖ ಕೈಗಾರಿಕೋದ್ಯಮಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಈ ಭೇಟಿಗಳನ್ನು ಆದಷ್ಟು ಪಕ್ಷದ “ಒಳಿತಿಗೆ” ಅನುಗುಣವಾಗುವಂತೆ ರೂಪಿಸುವುದು (ಅಹ್ಮದ್ ಪಟೇಲ್ ಇದರಲ್ಲಿ ಸಂಪೂರ್ಣ ಪಳಗಿದ ಕೈ). ಸೋನಿಯಾ ಗಾಂದಿಯವರ ರಾಜಕೀಯ ಕಾರ್ಯದರ್ಶಿಯಾಗಿ ಕಳೆದ ಹದಿನೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಹ್ಮದ್ ಪಟೇಲ್ ಮೇಡಂರವರ ನಿರ್ಧಾರಗಳಿಗೆ, ಚಿಂತನೆಗಳಿಗೆ ಪೂರಕವಾಗುವಂತೆ ಇಡೀ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳನ್ನು, ಕಾರ್ಯಕಾರಿ ಸಭೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದದ್ದು ಈ ಅಹ್ಮದ್ ಪಟೇಲ್‌ರ ಯಶೋಗಾಥೆಗಳಲ್ಲೊಂದು.
  • ಸೋನಿಯಾ ಗಾಂಧಿಯವರು ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಆ ಸಂದರ್ಭಕ್ಕೆ ಅನುಗುಣವಾಗಿ ಸಂಬಂಧಪಟ್ಟಂತಹ ಪಕ್ಷದ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ರಾಜ್ಯಗಳ ನಾಯಕರ, ಆಪ್ತರ ಸಾಮೂಹಿಕ ನಿರ್ಧಾರಗಳಿಗೆ, ಅಭಿಪ್ರಾಯಗಳ ಅಭಿವ್ಯಕ್ತಿಗೆ ಮಾನ್ಯತೆ ನೀಡುತ್ತಿದ್ದರು. ನಂತರ ಅಳೆದೂ ತೂಗಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದರು. ಅದರ ಪರಿಣಾಮಗಳು ಅನೇಕ ಬಾರಿ ಗೆಲುವು ನೀಡಿವೆ. ಹಲವಾರು ಬಾರಿ ಮರೆಯಲಾರದಂತಹ ಬಲವಾದ ಪೆಟ್ಟನ್ನು, ಕಂಡರಿಯದಂತಹ ಸೋಲನ್ನು ನೀಡಿವೆ. ಸೋನಿಯಾರ ಅಧ್ಯಕ್ಷತೆಯಲ್ಲಿ ಪಕ್ಷದ ನೇತಾರರನ್ನು ಆರಿಸುವಾಗ, ಚುನಾವಣೆಗೆ ಅಭ್ಯರ್ಥಿಗಳನ್ನು ಆರಿಸುವಾಗ ಆತನ ಪ್ರಾಮಾಣಿಕತೆ, ಪಕ್ಷನಿಷ್ಠತೆ, ವೈಯುಕ್ತಿಕ ಪರಿಶುದ್ಧತೆಯೇ ಮೊದಲ ಆದ್ಯತೆಯಾಗಿ ಪರಿಗಣಿಸಲಾಗುವುದೆಂದು ಬಹಿರಂಗವಾಗಿ, ಕಾರ್ಯಕಾರಿಣಿ ಸಭೆಗಳಲ್ಲಿ ಹೇಳಲಾಗುತ್ತಿದ್ದರೂ, ವಾಸ್ತವದಲ್ಲಿ ಮುಖ್ಯವಾಗಿ ಆತ ಗೆಲ್ಲುವ ಕುದುರೆಯಾಗುವ ಸಾಧ್ಯತೆಗಳನ್ನು ಆಧರಿಸಿಯೇ ರಾಜ್ಯಗಳ ನಾಯಕರಾಗಿ ಆರಿಸುತ್ತಿದ್ದರು. ಅಲ್ಲಿ ಭ್ರಷ್ಟತೆಯ, ಜಾತೀಯತೆಯ ಆರೋಪಗಳು ಹಿನ್ನೆಲೆಗೆ ಸರಿಯಲ್ಪಡುತ್ತಿದ್ದವು. ಗೆಲುವಿನ ಸಾಧ್ಯತೆ ಮಾತ್ರ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಕಡೆಗೆ ಭವಿಷ್ಯದ ಆಶೋತ್ತರಗಳು ಗೌಣಗೊಂಡು ಹಣಬಲ, ತೋಳ್ಬಲ ಮೇಲುಗೈ ಸಾಧಿಸುತ್ತಿತ್ತು. ಇದು ಇಂದಿರಾ ಗಾಂಧಿಯವರ ರಾಜಕೀಯ ಶೈಲಿ. ಇದನ್ನು ಸೋನಿಯಾ ಅವರೂ ಸಹ ಇದನ್ನು ಮುಂದುವರೆಸಿಕೊಂಡು ಹೋದರು. sonia-kharge-dksಅಂದಿನ ಮುಖ್ಯಮಂತ್ರಿ ಗುಂಡೂರಾಯರಿಂದ ಹಿಡಿದು ಇಂದಿನ ಡಿ.ಕೆ.ಶಿವಕುಮಾರ್‌ವರೆಗಿನ ರಾಜಕೀಯ ವಿದ್ಯಾಮಾನಗಳನ್ನು ಅವಲೋಕಿಸಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೆ ಇಂದಿರಾ ಗಾಂಧಿಯವರ ಕಾಲಘಟ್ಟದ ರಾಜಕೀಯ ಚಿತ್ರಣಗಳ ಸ್ವರೂಪ ಮತ್ತು ಸೋನಿಯಾ ಗಾಂಧಿಯವರ ಕಾಲಘಟ್ಟದ ರಾಜಕೀಯ ನಿರ್ಧಾರಗಳ ಸ್ವರೂಪಕ್ಕೂ ಅಪಾರವಾದ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಸೋನಿಯಾ ಗಾಂಧಿಯವರ ಅನೇಕ ರಾಜಕೀಯ, ಸಾಮಾಜಿಕ ನಿರ್ಧಾರಗಳು ಇಂದಿರಾ ಅವರಂತೆ ಜನಪ್ರಿಯ ಶೈಲಿಯನ್ನೇ ಹೋಲುತ್ತಿದ್ದರೂ ಅನೇಕ ಸಂದರ್ಭಗಳಲ್ಲಿ ಸೋನಿಯಾ ಗಾಂಧಿಯವರು ತಮ್ಮ ಅತ್ತೆಗಿಂತಲೂ ಭಿನ್ನವಾಗಿ ವರ್ತಿಸಿದ್ದಾರೆ. ಅನೇಕ ಬಾರಿ ರಾಜಕೀಯವಾಗಿ ಮುಗ್ಗರಿಸಿದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಸೋನಿಯಾ ಗಾಂಧಿಯವರ ಜಾತ್ಯಾತೀತ, ಸೆಕ್ಯುಲರ್ ವ್ಯಕ್ತಿತ್ವ ನಿಜಕ್ಕೂ ಇಂದು ನಮಗೆಲ್ಲ ಮಾದರಿಯಾಗಿದೆ. ಸೋನಿಯಾ ಅವರು ಇಂಡಿಯಾದ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿಯೇ, ಸಂವಿಧಾನಕ್ಕೆ ಬದ್ಧರಾಗಿಯೇ ತಮ್ಮ ಸೆಕ್ಯುಲರ್ ವ್ಯಕ್ತಿತ್ವವನ್ನು ರೂಪಿಕೊಂಡಿದ್ದು ಅಭೂತಪೂರ್ವವೆನಿಸುತ್ತದೆ. ಇದರಲ್ಲಿ ಇಂದಿರಾ ಗಾಂಧಿಯವರು ಸೋಲುತ್ತಾರೆ.

ಆದರೆ 2004 ರಲ್ಲಿ ಯುಪಿಎ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಪಕ್ಷದ ಉನ್ನತಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕಾಂಗ್ರೆಸ್ ಪಕ್ಷದ ಪ್ರಶ್ನಾತೀತ ಅಧ್ಯಕ್ಷೆಯಾಗಿ, Manmohan-Sonia-Rahulಯುಪಿಎ ಕೂಟದ ಛೇರ್ಮನ್ ಆಗಿ ಸೋನಿಯಾ ಗಾಂಧಿಯವರು ಯುಪಿಎ ತಂಡದ ರಾಜಕೀಯದ ಹೊಣೆಗಾರಿಕೆ ಹೊತ್ತರೆ ಪ್ರಧಾನಮಂತ್ರಿಯಾಗಿ ಮನಮೋಹನ್ ಸಿಂಗ್ ಅವರು ಯುಪಿಎ ಸರ್ಕಾರವನ್ನು ಸಮತೋಲನವಾಗಿ ನಡೆಸುವ ಜವಾಬ್ದಾರಿ ಹೊತ್ತರು. ಆದರೆ ದುರಂತವೆಂದರೆ ಕಳೆದ ಹತ್ತು ವರ್ಷಗಳಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಆ ಮೂಲಕ ಯುಪಿಎ ತಂಡವನ್ನು ರಾಜಕೀಯವಾಗಿ ನಿಭಾಯಿಸಲು ಸಂಪೂರ್ಣವಾಗಿ ಸೋತಿದ್ದಾರೆ. ಒಂದು ವೇಳೆ ಯುಪಿಎ ಗುಂಪು 2014 ರ ಚುನಾವಣೆಯಲ್ಲಿ ದಯನೀಯವಾಗಿ ಸೋತರೆ (130 ರಿಂದ 140 ಸೀಟುಗಳನ್ನು ಗೆದ್ದರೆ) ಬಹುಶಃ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಹೊರತುಪಡಿಸಿ ಮತ್ತಾವ ಪಕ್ಷವು 2014 ರ ನಂತರ ಯುಪಿಎದೊಂದಿಗೆ ಉಳಿಯುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರದ ವಿವಿಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾನ ತತ್ವಗಳ ಅಡಿಯಲ್ಲಿ ಸಾಮರಸ್ಯ ಸಾಧಿಸಲು ಸೋನಿಯಾ ಗಾಂಧಿಯವರ ಸೋಲು ಇಂದು ನಿಚ್ಛಳವಾಗಿ ಕಾಣುತ್ತಿದೆ.

ಮತ್ತೊಂದು ಕಡೆ ಕಳೆದ ಹತ್ತು ವರ್ಷಗಳಲ್ಲಿ ಪ್ರಮುಖ ವಿರೋಧ ಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಸೌಹಾರ್ದಯುತ ಸಂಬಂಧ ಸಂಪೂರ್ಣ ಹಳಸಿಹೋಗಿದ್ದು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರಷ್ಟೇ ಸಮನಾಗಿ ಸೋನಿಯಾ ಗಾಂಧಿಯವರೂ ಸಹ ಇದಕ್ಕೆ ಜವಾಬ್ದಾರರು. ಏಕೆಂದರೆ ಸದಾ ಒಳಸಂಚು ಮತ್ತು ಕಾಲೆಳೆಯುವ ಪ್ರವೃತ್ತಿಯೇ ಇಂಡಿಯಾ ರಾಜಕೀಯದ ಮುಖ್ಯಲಕ್ಷಣವಾಗಿರುವಂತಹ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ಇಮೇಜ್ ಮತ್ತು ತಮ್ಮ ಕುಟುಂಬದ ಸಾರ್ವಭೌಮತ್ವಕ್ಕೆ ಅಪಾರ ಮಹತ್ವ ನೀಡಿದರೇ ಹೊರತಾಗಿ ಸದಾ Sonia-UPAನಿರಂತರ ಜನಸಂಪರ್ಕ ಮತ್ತು ಜನತೆ ಮತ್ತು ಮಾಧ್ಯಮಗಳೊಂದಿಗೆ ಸಂವಾದವನ್ನು ನಡೆಸುವುದರ ಮೂಲಕವೇ ತಮ್ಮನ್ನು ಸದಾ ಸಾಮಾಜಿಕ ಸಂವೇದನಶೀಲ ವ್ಯಕ್ತಿತ್ವವುಳ್ಳವರಾಗಿ ರೂಪಿಸಿಕೊಳ್ಳುವ ಸಾಧ್ಯತೆಗಳನ್ನು, ಒಂದು ಸ್ಪೇಸ್ ಅನ್ನು ಹುಟ್ಟುಹಾಕದೇ ಹೋದರು ಸೋನಿಯಾ ಗಾಂಧಿ.

ಯುಪಿಎ ಸರ್ಕಾರದ ಛೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ಸೋನಿಯಾ ಗಾಂಧಿಯವರು ವಿರೋಧ ಪಕ್ಷಗಳೊಂದಿಗೆ ನೇರಾನೇರ ಮುಖಾಮುಖಿಯಾಗುವಂತಹ ರಾಜಕೀಯ ವಾಗ್ವಾದಗಳನ್ನು ನಡೆಸುತ್ತಲೇ ಪಕ್ಷಾಧಾರಿತ ರಾಜಕಾರಣವನ್ನು ನಡೆಸುತ್ತಲೇ, ಸಮಾನಾಂತರವಾಗಿ ರಾಜಕೀಯ ಮುತ್ಸದ್ದಿತನ ಮತ್ತು ರಾಜಕೀಯ ತಂತ್ರಗಾರಿಕೆಯನ್ನು ಪ್ರದರ್ಶಿಸುತ್ತಾ ವಿರೋಧಪಕ್ಷಗಳೊಂದಿಗೆ ಸಾಮರಸ್ಯವನ್ನು ಸಾಧಿಸುವ ಅವಕಾಶಗಳನ್ನು ಕಲ್ಪಿಸುವುದು ಮೊದಲ ಆದ್ಯತೆಯಾಗಬೇಕಿತ್ತು. ಆದರೆ ಇದನ್ನು ಸೋನಿಯಾ ಗಾಂದಿಯವರು ಸಾಧಿಸಲೇ ಇಲ್ಲ. ರಾಜಕೀಯ ಪಂಡಿತರ ಪ್ರಕಾರ ಒಂದು ವೇಳೆ ಸೋನಿಯಾ ಅವರು ಮೇಲ್ಕಾಣಿಸಿದ ರಾಜಕೀಯ ಮುತ್ಸದ್ದಿನವನ್ನು ಪ್ರದರ್ಶಿಸಿದ್ದರೆ ಈ ಕೋಲ್‌ಗೇಟ್, 2-ಜಿ ಸ್ಪೆಕ್ಟ್ರಮ್‌ದಂತಹ ಹಗರಣಗಳು ಇಂದಿನ ತೀವ್ರ ಸ್ವರೂಪಕ್ಕೆ ತಿರುಗುತ್ತಿರಲಿಲ್ಲ. ಕಾಂಗ್ರೆಸ್‌ನ ಕೊರಳಿಗೆ ಉರುಳಾಗುತ್ತಿರಲಿಲ್ಲ. ಇದು ಸೋನಿಯಾರ ಬಲು ದೊಡ್ಡ ರಾಜಕೀಯ ಸೋಲು.

ಕಾಂಗ್ರೆಸ್ ಪಕ್ಷದ ಇಂದಿನ ಬಿಕ್ಕಟ್ಟು ಸದರಿ ಪಕ್ಷವನ್ನು ಮರಳಿ 1997 ರ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಆಗ ಅಧ್ಯಕ್ಷರಾಗಿ ಸಂಪೂರ್ಣವಾಗಿ ಸೋತಿದ್ದ ಅವಸರದ ಮುದುಕ ಸೀತಾರಾಮ್ ಕೇಸರಿಯವರನ್ನು ಅಧಿಕಾರದಿಂದ ಕೆಳಗಿಳಿಸಿ ಪಕ್ಷದ ಪುನರುಜ್ಜೀವನದ ಕಾರ್ಯವನ್ನು ತಮ್ಮ ಕೈಗೆತ್ತಿಕೊಂಡ ಸೋನಿಯಾ ಗಾಂಧಿಯವರು ನಂತರ 2004 ರವರೆಗೂ ಏಳು ವರ್ಷಗಳ ಕಾಲ ನುರಿತ, ಅಪಾರ ಅನುಭವವುಳ್ಳ ರಾಜಕಾರಣಿಯಂತೆ ಇಡೀ ಪಕ್ಷವನ್ನು ನಿಭಾಯಿಸಿದರು. ಆ ಕಾಲಘಟ್ಟದಲ್ಲಿ ತಮ್ಮ ಹೆಗಲೇರಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ, ಘನತೆಯಿಂದ ನಿರ್ವಹಿಸಿದ ಸೋನಿಯಾ ಗಾಂಧಿ 2004 ರಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದರು. rahul-robert-priyankaಹದಿನೈದು ವರ್ಷಗಳ ನಂತರ ತಮ್ಮ ತಾಯಿಯವರು ಕೈಗೆತ್ತುಕೊಂಡ ಜವಾಬ್ದಾರಿಯನ್ನು ಇಂದು ತಮ್ಮ ಹೆಗಲಗೇರಿಸಿಕೊಂಡಿರುವ “ಯುವರಾಜ” ರಾಹುಲ್ ಗಾಂಧಿ ರಾಜಕೀಯವಾಗಿ ಯಾವ ಬಗೆಯ ಧೃವೀಕರಣಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ?? ಕಳೆದ ವರ್ಷಗಳ ಅವರ ನಡೆನುಡಿಗಳ ಮಾತು ಬಿಡಿ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷನ ಪದವಿಯನ್ನು ವಹಿಸಿಕೊಂಡ ನಂತರ ಇಂದಿನ ರಾಹುಲ್ ಗಾಂಧಿಯ ವರ್ತನೆ ಹೇಗಿದೆ? ಬೌದ್ಧಿಕವಾಗಿ ಅನೇಕ ವೇಳೆ ಭಾವುಕರಾಗಿ, ಕೋಮುವಾದಿ ರಾಷ್ಟ್ರೀಯತೆಗೆ ಪರ್ಯಾಯವೇನೋ ಎಂಬಂತೆ ಸದಾ ಒತ್ತಡದಲ್ಲಿ ಮಾತನಾಡುವ ರಾಹುಲ್ ವಾಸ್ತವದಲ್ಲಿ ದಿವಾಳಿಯೆದ್ದ ಇಡೀ ಪಕ್ಷವನ್ನು ಹೇಗೆ ನಿಭಾಯಿಸುತ್ತಿದ್ದಾರೆ?? ಹಳ್ಳಿಯಿಂದ ದಿಲ್ಲಿಯವರೆಗೆ ಎನ್ನುವ ನುಡಿಕಟ್ಟು ಈ ಕಾಂಗ್ರೆಸ್ ಉಪಾಧ್ಯಕ್ಷನಿಗೆ ಯಾವ ಬಗೆಯಲ್ಲಿ ಅರ್ಥವಾಗಿದೆ?? ಸದಾ ಮ್ಯಾಜಿಕ್ ಅನ್ನು ಬಯಸುವ ಕಾಂಗ್ರೆಸ್‌ನ ಸೋಮಾರಿ, ನಿಸ್ತೇಜಗೊಂಡ, ಬೇಜವಬ್ದಾರಿ ನಾಯಕಮಣಿಗಳಗೆ ಈ ರಾಹುಲ್ ಯಾವ ಬಗೆಯ ಮ್ಯಾಜಿಕ್ ತರಬಲ್ಲರು??

ಅನೇಕ ಬಾರಿ ತನ್ನ ಬಳಿ ಅಂತಹ ಮಂತ್ರದಂಡವಿದೆಯೆಂಬಂತೆಯೇ ವರ್ತಿಸುತ್ತಿರುವ ಆಶಾವಾದದ ರಾಹುಲ್ ಮತ್ತೊಂದು ಕ್ಷಣದಲ್ಲಿಯೇ ತೀರಾ ಎಲ್ಲವನ್ನೂ ಕಳೆದಕೊಂಡ ತಬ್ಬಲಿಯಂತೆ, ಅಮೆಚೂರ್ ರಾಜಕಾರಣಿಯಂತೆ ವರ್ತಿಸುವುದರಲ್ಲಿ ನಿಸ್ಸೀಮ. ಉದಾಹರಣೆಗೆ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವುದು, ಕಾಂಗ್ರೆಸ್‌ಗೆ ಶಿಸ್ತುಬದ್ಧ ನಡುಳಿಕೆಯನ್ನು ಕಲಿಸುತ್ತೇನೆ, ಕೇಡರ್ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಮರಳಿ ಕಟ್ಟುತ್ತೇನೆ ಎಂದು ಮಹಾತ್ವಾಕಾಂಕ್ಷೆಯಿಂದ ನುಡಿಯುವ ರಾಹುಲ್ ತನ್ನ rahul_priyanka_soniaಆಶಯಗಳಿಗೆ ಅನುಗುಣವಾಗಿಯೇ ಯುವ ಕಾರ್ಯಕರ್ತರ ನೇಮಕಾತಿಗೆ ಚಾಲನೆ ನೀಡುತ್ತಾರೆ. ಅಪಾರ ಭರವಸೆಯೊಂದಿಗೆ ದೇಶಾದ್ಯಾಂತ ಈ ನೇಮಕಾತಿಗಳು ನಡೆಯುತ್ತವೆ.ಈ ನೇಮಕಾತಿ ಪ್ರಕ್ರಿಯೆಯು ಅಪ್ಪಟ ಕಾರ್ಪೋರೇಟ್ ಮಾದರಿಯಲ್ಲಿರುವಂತೆ ರೂಪಿಸಿದ್ದಾರೆ ರಾಹುಲ್. ಅಂದರೆ ಕಾಂಗ್ರೆಸ್ ಪಕ್ಷದ ಸದಸ್ಯರಾಗ ಬಯಸುವವರು ಮೊದಲು ತಮ್ಮ ಬಯೋಡಾಟವನ್ನು ಮಂಡಿಸಬೇಕು. ನಂತರ ರಾಹುಲ್ ಆಯ್ಕೆ ಮಾಡಿದ ಸಂದರ್ಶಕರ ಮುಂದೆ ಸಂದರ್ಶನಕ್ಕೆ ಹಾಜರಾಗಬೇಕು. ಒಮ್ಮೆ ಆಯ್ಕೆಗೊಂಡ ನಂತರ ದಿನನಿತ್ಯ ಪಕ್ಷದ ಕಛೇರಿಗೆ ಹಾಜರಾಗಬೇಕು. ಹೀಗೆ ಸೋಮಾರಿಗಳ, ಬೇಜವ್ದಾರಿಗಳ ಆಡೊಂಬಲವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಶಿಸ್ತುಬದ್ಧ ಒಂದು ಕಾರ್ಪೋರೇಟ್ ಸಂಸ್ಥೆಯ ರೂಪ ಕೊಡಲು ಶ್ರಮಿಸುತ್ತಿರುವ ರಾಹುಲ್ ಗಾಂಧಿಯ ಈ ಪ್ರಯತ್ನ ಮತ್ತು ಯೋಜನೆ ಶ್ಲಾಘನೀಯವೇ. ಅನುಮಾನವೇ ಇಲ್ಲ. ಮತೀಯವಾದದ ವಿರುದ್ಧ ಹೋರಾಡಲು, ಸರ್ವಾಧಿಕಾರದ ವಿರುದ್ಧ ಪ್ರತಿರೋಧ ತೋರಲು ಕಾಂಗ್ರೆಸ್ ಪಕ್ಷಕ್ಕೆ ಸೆಕ್ಯುಲರ್ ತತ್ವದ ಮಾನವೀಯ ಮುಖವನ್ನು, ಸಮತಾವಾದದ ನುಡಿಕಟ್ಟನ್ನು ತೊಡಿಸಲು ಶ್ರಮಿಸುತ್ತಿರುವ ರಾಹುಲ್ ಅವರ ಕಾರ್ಯಕ್ಷಮತೆಗೆ, ಆಶಯಗಳಿಗೆ ಭಾರತೀಯರೆಲ್ಲರಿಗೂ ಸಹಮತವಿದೆ. So far so good. ನಂತರ ಮುಂದೇನು?? ಮುನ್ನುಗ್ಗುವ ದಿನಗಳು ಮುಗಿದ ನಂತರ ತಮ್ಮನ್ನು ದಿನನಿತ್ಯದ ವ್ಯವಹಾರಗಳಲ್ಲಿ ತೊಡಗಬೇಕಾದಂತಹ ಕಾಲಘಟ್ಟದಲ್ಲಿಯೇ ಈ ಯುವ ನಾಯಕ ಮುಗ್ಗರಿಸಲಾರಂಬಿಸುತ್ತಾರೆ. ಎಲ್ಲವೂ ಟೋಕನಿಸಂನ ಮಟ್ಟಕ್ಕೆ ತಂದು ಬಿಡುವ ರಾಹುಲ್ ಅನೇಕ ವೇಳೆ ನಗೆಪಾಟಲಗೀಡಾಗುತ್ತಾರೆ. ಇದ್ದಕ್ಕಿದ್ದಂತೆಯೇ ಬದಲಾಗುವ, ದಿನನಿತ್ಯ ಪಲ್ಲಟಗೊಳ್ಳುವ ರಾಜಕೀಯದ ವಿದ್ಯಾಮಾನಗಳಿಗೆ ಡೈನಮಿಕ್ ಆಗಿ ಉತ್ತರಿಸಬೇಕಾದ ರಾಹುಲ್ ತೀರಾ ತಣ್ಣಗೆ ಪ್ರತಿಕ್ರಿಯಿಸಲಾರಂಬಿಸುತ್ತಾರೆ. Rahul_Gandhi_Ajay_Makenಅನೇಕ ಬಾರಿ ದಿಗಿಲು ಬೀಳುವಂತಿರುತ್ತಾರೆ. ಅಸಹಾಯಕತೆ ಪ್ರದರ್ಶಿಸುತ್ತಾರೆ. ಇನ್ನು ನಮಗೆ ಅಧಿಕಾರ ಇಲ್ಲದಿದ್ದರೆ ಪರವಾಗಿಲ್ಲ, ನಾನು ಮುಂದಿನ ಹೊಸ ತಲೆಮಾರಿಗೆ ರಾಜಕೀಯ ಕಟ್ಟುತ್ತೇನೆ, ಎಂದು ಹಾಡುತ್ತಿದ್ದ “ಯುವರಾಜ” ಚುನಾವಣಾ ಪ್ರಕ್ರಿಯೆ ಶುರುವಾಗುತ್ತಿರುವಂತೆಯೇ ಮರಳಿ ಹಳೇ ಜಾಡಿಗೆ ಜಾರಿಬಿಡುತ್ತಾರೆ. ಮತ್ತದೇ ಹಳೇ ತಲೆಗಳು, ಅನುಭವಸ್ಥರು, ಗೆಲ್ಲುವ ಕುದುರೆಗಳು, ಸಧ್ಯಕ್ಕೆ ಬೇರಾವ ದಾರಿಯಿಲ್ಲ ಎನ್ನುವ ಅದೇ ಹಳೆ ರಾಗಗಳ, ಸವೆದ ನಿರ್ದಿಷ್ಟ ಬಗೆಯ ರಾಜಕೀಯ ಶೈಲಿಗೆ ಶರಣಾಗುವ ರಾಹುಲ್ ತಾವೇ ಉದ್ಘಾಟಿಸಿದ ಹೊಸ ಬಗೆಯ ಪ್ರಯೋಗಕ್ಕೆ ತಿಲಾಂಜಲಿ ನೀಡಲಾರಂಬಿಸುತ್ತಾರೆ. ಇನ್ನು ಅವರ ಆರಂಭಶೂರತ್ವವನ್ನು ನಂಬಿದವರ ಗತಿ?? ಸ್ವತಃ ಮನೆಮಂದಿಯೇ ಕಂಗಾಲಾಗುವಂತಹ ಗೊದಲದ ವಾತಾವರಣ ಸೃಷ್ಟಿಸುವುದರಲ್ಲಿ ರಾಹುಲ್ ನಿಸ್ಸೀಮರು. ನಾಯಕನೊಬ್ಬ ಗೊಂದಲಕ್ಕೆ ಈಡಾಗುವುದೆಂದರೆ ಕೊರಳಿಗೆ ಕಲ್ಲನ್ನು ಕಟ್ಟಿಕೊಂಡು ಬಾವಿಗೆ ಬಿದ್ದಂತೆ!! ಇಂತಹ ಗೋಜಲು ಸ್ಥಿತಿಯಲ್ಲಿ ಕಾಂಗ್ರಸ್ ಪಕ್ಷದ ಹಳೆ ತಲೆಗಳು ಸಂಪೂರ್ಣ ಗೊಂದಲದಲ್ಲಿದ್ದರೆ, ಹೊಸದನ್ನು ಸಾಧಿಸುವ ಬಯಕೆಯೊಂದಿಗೆ ಪಕ್ಷಕ್ಕೆ ಸೇರಿಕೊಂಡ ಹೊಸ ತಲೆಮಾರು ಕಂಗಾಲಾಗಿದ್ದಾರೆ.

ಯಾರ ಬಳಿಯೂ ಉತ್ತರವಿಲ್ಲ, ಸ್ವತಃ ಯುವರಾಜನ ಬಳಿಯೂ!! ಇದು ರಾಹುಲ್ ಗಾಂಧಿಯ ರಾಜಕೀಯ ಶೈಲಿ! ಅದೆಲ್ಲ ಹಾಳಾಗಿ ಹೋಗಲಿ, ಕನಿಷ್ಠ ಒಬ್ಬ ಸಂಸದೀಯಪಟುವಾಗಿ ರಾಹುಲ್ ಗಾಂಧಿಯ ಸಾಧನೆ ಏನು? ಶೂನ್ಯ ! ದೊಡ್ಡ ಶೂನ್ಯ! Rahul-Gandhiಈ ಯುವರಾಜರು ಸಂಸತ್ತಿಗೆ ಹಾಜರಾತಿ ಹಾಕಿದ್ದೇ ಕೇವಲ ಎರಡು ಅಥವಾ ಮೂರು ಬಾರಿ. ಅಲ್ಲಿ ಮಾತನಾಡಿದ್ದಕ್ಕೆ ದಾಖಲೆಯೂ ಇಲ್ಲ. ಪಾರ್ಲಿಮೆಂಟ್ ವ್ಯವಸ್ಥೆಯ ಕುರಿತಾಗಿ ಈ ಮಟ್ಟದ ನಿರ್ಲಕ್ಷ್ಯ ಪ್ರದರ್ಶಿಸುವ ರಾಹುಲ್ ಗಾಂಧಿ ತನ್ನ ಅನುಯಾಯಿಗಳಿಗೆ ಪ್ರಜಾಪ್ರಭುತ್ವದ ಆಶಯಗಳನ್ನು ಹೇಗೆ ವಿವರಿಸುತ್ತಾರೆ?

ಒಟ್ಟಿನಲ್ಲಿ ಈ ಹಾಲುಗೆನ್ನೆಯ, ಹಸುಕೂಸಿನಂತಿರುವ, ರಾಜಕಾರಣಿಯಾಗಿ ಇನ್ನೂ ಅಪ್ರೈಂಟಿಸ್ ಮಟ್ಟದಲ್ಲಿರುವ, ಅಪಕ್ವ ರಾಜಕಾರಣಿ ರಾಹುಲ್ ಗಾಂಧಿ ವಾತಾಪಿ ಜೀರ್ಣೋಭವಕ್ಕೆ ಹೆಸರುವಾಸಿಯಾದ ಭಾರತದ ರಾಜಕೀಯ ಒಡಲಿಗೆ ಬಲಿಯಾಗದಿರಲಿ.

ಕೋಮುವಾದಿ ರಾಷ್ಟ್ರೀಯವಾದವನ್ನು ಬೆಳಸುತ್ತಿರುವ ಆರೆಸಸ್ ಮತ್ತು ಮೋದಿ ಒಂದು ಕಡೆಗೆ ಕ್ರಿಯಾಶೀಲವಾಗುತ್ತಿದ್ದರೆ ಕನಿಷ್ಠ ಈ ಕೋಮುವಾದಿ ರಾಜಕಾರಣಕ್ಕಾದರೂ ಪ್ರತಿರೋಧವೇನೋ ಎಂಬಂತಿದ್ದ ಕಾಂಗ್ರೆಸ್‌ನ ಹಣೆಬರಹ ಹೆಚ್ಚೂ ಕಡಿಮೆ ಮೇಲಿನಂತೆ ನಿರ್ಧಾರವಾಗಿ ಹೋಗಿದೆ. ಇಂದಿನ ಭಾರತದ ರಾಜಕೀಯ ಅಪಾರ ನಾಟಕೀಯತೆಯೊಂದಿಗೆ ವರ್ತಿಸುತ್ತಿದೆ. ದಿನನಿತ್ಯ ಜಟಿಲತೆಯತ್ತ ವಾಲುತ್ತಿದೆ. ಮೇಲುನೋಟಕ್ಕೆ ಸರಳವಾಗಿ ಕಂಡರು ಆಳದಲ್ಲಿ ಸಂಕೀರ್ಣವಾಗಿದೆ. ಭವಿಷ್ಯದ ಕ್ರೌರ್ಯದ ಮುನ್ಸೂಚನೆಗಳಿಗೆ, ಮತೀಯವಾದಿ ಶಕ್ತಿಗಳು ಸೃಷ್ಟಿಸುವ ಹಿಂಸಾಚಾರಕ್ಕೆ ಎಚ್ಚರಿಕೆ ಅವಶ್ಯಕತೆಯೇ ಇಲ್ಲ. ವರ್ತಮಾನದಲ್ಲಿಯೇ ತಾಂಡವವಾಡುತ್ತಿದೆ.

“ನಾವು-ನಮ್ಮಲ್ಲಿ” ಸುಗತ ಶ್ರೀನಿವಾಸರಾಜು ಮಾತನಾಡಿದ್ದು…

“ವಿಜಯ ಕರ್ನಾಟಕ” ದಿನಪತ್ರಿಕೆಯ ಸಂಪಾದಕ ಸುಗತ ಶ್ರೀನಿವಾಸರಾಜು ಅವರು ಹಾಸನದಲ್ಲಿ ನಡೆದ ’ನಾವು-ನಮ್ಮಲ್ಲಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರ ಮಾತುಗಳು ಹಲವು ಚರ್ಚೆಗಳಿಗೆ ಕಾರಣವಾಯಿತು. ನಾವು ನಮ್ಮಲ್ಲಿ - ಅಭಿವ್ಯಕ್ತಿ ಕರ್ನಾಟಕಕೆ.ಫಣಿರಾಜ್ ಮತ್ತು ಇತರರು ಉದ್ಘಾಟನಾ ಕಾರ್ಯಕ್ರಮದ ನಂತರ ಸುಗತ ಜೊತೆ ವಾಗ್ವಾದಕ್ಕೆ ಇಳಿದರು. ಸುಗತ ತಮ್ಮ ಮಾತುಗಳಲ್ಲಿ ತಾನು ಜಗಳಕ್ಕೇ ಬಂದಿದ್ದೇನೆ ಎಂದಿದ್ದರು. ಆದರೆ, ಅವರು ಜಗಳಕ್ಕೆ ಅವಕಾಶ ಕೊಡದೇ ಕಾರ್ಯ ನಿಮಿತ್ತ ಬೇಗ ಬೆಂಗಳೂರಿಗೆ ಹೊರಟಿದ್ದು ಅನೇಕರಿಗೆ ನಿರಾಶೆಯೂ ಆಯಿತು. ಅದೇ ದಿನ ಸಂಜೆ ಮಾತನಾಡಿದ ಪ್ರೊ. ವಿ.ಎಸ್. ಶ್ರೀಧರ್, ಸುಗತ ಅವರ ಮಾತುಗಳಿಗೆ ಪ್ರತಿಕ್ರಿಯಿಸಿದ್ದರು. ಕಾರಣ ಸುಗತ ’ಮೂಢನಂಬಿಕೆ ವಿರುದ್ಧ ಬಿಲ್’ ಬಗ್ಗೆ ತುಸು ಖಾರವಾಗಿಯೇ ಮಾತನಾಡಿದ್ದರು.

ಇದು ಸುಗತರ ಭಾಷಣದ ಪೂರ್ಣ ಧ್ವನಿಸುರಳಿ:

ಇವು ಸುಗತ ಶ್ರೀನಿವಾಸರಾಜುರವರ ಮೇಲಿನ ಭಾಷಣದ ಕೆಲವು ಆಯ್ದ ಮಾತುಗಳ ಪಠ್ಯ:

  • ಇಂದು ಬೆಳಗ್ಗೆ ನಿಮ್ಮ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿ ತುಂಬಾ ಸಂತೋಷ ಆಯ್ತು. ಇವತ್ತು ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳು, ಫಿನಾಮಿನನ್ ಗಳ ಮಧ್ಯೆ ಇಂತಹದೊಂದು sugata-srinivasaraju-navu-nammalli-hassan-nov162013ಗುಂಪು ಬೆಳೆಯೋದು ಒಂದು ರಚನಾತ್ಮಕ ಕಾರ್ಯ ಅನ್ನೋದು ನನ್ನ ಆಶಯ.
  • ವಾಗ್ವಾದ, ಚರ್ಚೆ, ಸಂವಾದ ಸಮಾನ ಮನಸ್ಕರ ಮಧ್ಯೆ ಸಾಮಾನ್ಯ. ಆದರೆ ಇತ್ತೀಚೆಗೆ ಸಮಾನ ಮನಸ್ಕರ ಮಧ್ಯೆಯೇ ಕಳೆದು ಹೋಗುತ್ತಿರುವ ಗುಣ ಅಂದರೆ ಭಿನ್ನಮತವನ್ನು ಒಪ್ಪಿಕೊಳ್ಳುವ ಗುಣ. ಭಿನ್ನಮತ, ವಿರೋಧವನ್ನೂ ಒಪ್ಪಿಕೊಳ್ಳುವ ಗುಣ ಇರಬೇಕು. ಇಲ್ಲವಾದರೆ ಬುಷ್ ನ ಪ್ರಸಿದ್ಧ ಹೇಳಿಕೆ ’ವಿತ್ ಅಸ್ ಅಥವಾ ಅಗೇನ್ಸ್ಟ್ ಅಸ್’ (ನಮ್ಮ ಜೊತೆ ಅಥವಾ ನಮ್ಮ ವಿರೋಧ) ಕ್ಕೆ ಚರ್ಚೆಗಳು ಸೀಮಿತವಾಗಿಬಿಡುತ್ತವೆ.
  • ನಿಜವಾದ ಪ್ರಜಾಸತ್ತಾತ್ಮಕ ಮುಕ್ತ ವಾತಾವರಣವನ್ನು ಸೃಷ್ಟಿಮಾಡುವುದೇ ಸದ್ಯ ನಮ್ಮ ಎದುರು ಇರುವ ಚಾಲೆಂಜ್. ನಾನು ಯಾಕೆ ಮತ್ತೆ ಮತ್ತೆ ಡಿಸೆಂಟ್ ಒಪ್ಪುವ ವಾತಾವರಣ ಬೇಕು ಅಂತ ಹೇಳ್ತೀನಿ ಅಂದರೆ, ನಾವು ಯಾರನ್ನು ಲಿಬರಲ್ಸ್ ಅಂತ ಅಂದ್ಕೊಡಿದ್ದೇವೋ, ಅವರು ಕೂಡ ಇತ್ತೀಚೆಗೆ ನಮ್ಮನ್ನು ಅನುಮಾನದಿಂದ ನೋಡ್ತಿದಾರೆ. ಬೈಗಾಟ್, ಡೆಸ್ಪಾಟ್ಸ್, ಡಿಕ್ಟೇಟರ್ಸ್, ಓರಿಯೆಂಟಲಿಸ್ಟ್ಸ್.. ಬಳಸುವ ಭಾಷೆಯನ್ನೇ ಇವರೂ ಬಳಸೋಕೆ ಆರಂಭಿಸಿದ್ದಾರೆ.
  • ಲಿಬರಲ್ಸ್ ಕೂಡಾ ಒಂದು ತರಹದ ಸಿಂಪಲ್ ಕನ್ಸೆಪ್ಚುಯಲ್ ಆಪೋಸಿಟ್ಸ್‌ಗಳಲ್ಲಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಬಹು ಸಾಧ್ಯತೆಗಳಿರುವ ಸಂದರ್ಭದಲ್ಲಿ ಕೇವಲ ಎರಡು ಸಾಧ್ಯತೆಗಳು (ಪರ ಮತ್ತು ವಿರೋಧ) ಇವೆ.
  • ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವದ ಬಗ್ಗೆ ನಮಗೆಲ್ಲಾ ಮೆಚ್ಚುಗೆ ಇರಬಹುದು. ಆದರೆ ಅವರ ನೇತೃತ್ವದ ಸರಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಸರಿ ಅಂತ ಹೇಳೋಕಾಗೊಲ್ಲ. ಅನ್ನಭಾಗ್ಯ ಯೋಜನೆಯನ್ನು ಬೆಂಬಲಿಸಿ ಬರೆದ ಏಕೈಕ ಪತ್ರಿಕೆ ನಮ್ಮದು. ಆಗ ಇದು ಕಾಂಗ್ರೆಸ್ ಪತ್ರಿಕೆ ಅಂತ ಅನೇಕರು ಕರೆದರು. ಆದರೆ ಸಂತೋಷ್ ಲಾಡ್ ಸಂಪುಟದಿಂದ ಹೊರಹೋಗಬೇಕು ಅಂತ ಬರೆದಾಗ.. ಅನೇಕರು ಈ ಪತ್ರಿಕೆಯವರು ಯಾಕೋ ಉಲ್ಟಾ ಹೊಡೆದರು ಅಂತ ಮಾತನಾಡಿಕೊಂಡರು. ಲಿಬರಲ್ಸ್ ಅಂತ ಅಂದುಕೊಂಡವರೇ ಹೀಗೆ ಸರಳ ಪರ-ವಿರೋಧಗಳ ಭಾಷೆಯಲ್ಲಿ ಮಾತನಾಡೋದು ಅಪಾಯಕಾರಿ. ಈ ತರಹ ಮಾಡುವ ಮೂಲಕ ಒಂದು ಲಿಬರಲ್ಸ್ ಸ್ಪೇಸ್ ಕಡಿಮೆ ಮಾಡುತ್ತಿರುತ್ತೇವೆ.
  • ಬ್ಲಾಕ್ ಮತ್ತು ವೈಟ್ ಮಧ್ಯೆ ಸ್ಪೆಕ್ಟ್ರಮ್ ಆಫ್ ಕಲರ್‍ಸ್ ಇರುತ್ತೆ, ಗ್ರೇ ಏರಿಯಾ ಇರುತ್ತೆ. ಆದರೆ ಇವತ್ತು ಎಂಥ ಸೊಸೈಟಿಯಲ್ಲಿದ್ದೇವೆ ಅಂದ್ರೆ, ಲಿಬರಲ್ಸ್ ಕೂಡಾ ರಿಯಾಕ್ಷನರಿ ಯಾಗಿದ್ದಾರೆ. ಕೊನೆಗೆ ಎಲ್ಲಿ ಬಂದು ನಿಂತಿದ್ದೇವೆ ಅಂದರೆ ನಮ್ಮ ಬುದ್ಧಿಮತ್ತೆಯನ್ನು ಬದಿಗಿಟ್ಟು ಕೇವಲ ಸ್ಲೋಗನೇರಿಂಗ್‌ಗೆ ಸೀಮಿತ ಆಗಿಬಿಟ್ಟಿದ್ದೇವೆ. ಇದು ಮುಂದೆ ಹೇಗಾಗುತ್ತೆ ಅಂದರೆ ಯಾರ ಗಂಟಲು ಗಟ್ಟಿಯಾಗಿರುತ್ತೋ ಅವನು ಗೆಲ್ಲುತ್ತಾನೆ.
  • ಕರ್ನಾಟಕದಲ್ಲಿ ನಾನು ಬೆಳೆಯುತ್ತಿರುವ ಕಾಲದಲ್ಲಿ ಲಂಕೇಶ್, ದೇವನೂರು, ತೇಜಸ್ವಿ.. ಅನೇಕರನ್ನು ಓದುತ್ತಿದೆ. ಆಗ ನನ್ನ ತಂದೆ ಕಟ್ಟಿಕೊಂಡ ಜಗತ್ತು ಬಹಳ ವಿಶಾಲವಾಗಿತ್ತು ನನಗೆ. ಆದರೆ ಇಪ್ಪತ್ತು ವರ್ಷಗಳ ನಂತರ ಇಲ್ಲಿಗೆ ವಾಪಾಸ್ ಬಂದರೆ, ನಮ್ಮ ಆಡುಂಬೋಲ ಕ್ಷೀಣಿಸಿದೆ ಅಂತ ಅನ್ನಿಸುತ್ತಿತ್ತು. ಲಂಕೇಶ್ ಅವರನ್ನು ಓದಿಕೊಂಡು ವಿವಿಧ ದೇಶಗಳ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದೆ.
  • ನನಗೆ ಅನೇಕ ಬಾರಿ ಕೇಳುವ ಪ್ರಶ್ನೆ ನೀವು ಲೆಫ್ಟಾ, ರೈಟಾ? ಲೆಫ್ಟ್ ಮತ್ತು ರೈಟ್ ಮಧ್ಯೆ ವಿಶಾಲ ಸ್ಪೇಸ್ ಇದೆ. ಹಾಗೆಯೆ ಕೆಂಪು ಮತ್ತು ಕೇಸರಿ ಮಧ್ಯೆ ಕೂಡಾ ಹಲವು ಬಣ್ಣಗಳಿವೆ, ನಿಲುವುಗಳಿವೆ. ಇದನ್ನು ಇಂದಿನ ಪತ್ರಿಕೋದ್ಯಮ ಮತು ಬೌದ್ಧಿಕ ವಲಯ ಮರೆತಿದೆ ಅನ್ಸುತ್ತೆ. ಇಂದಿನ ಯುವ ಜನಾಂಗ, ನಾವು, ಆ ವಿಶಾಲ ಸ್ಪೇಸ್‌ನ್ನು ಮತ್ತೆ ನಮ್ಮ ವಶಕ್ಕೆ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.
  • ನಾನು ಈ ಪತ್ರಿಕೆಗೆ ಸಂಪಾದಕನಾದಾಗ ಈ ಸೋಶಿಯಲ್ ಮೀಡಿಯಾದಲ್ಲಿ, ಅದು ನಿಜವಾಗಿಯೂ ಎ-ಸೋಶಿಯಲ್ ಮೀಡಿಯಾ, ತುಂಬಾ ಕ್ಯಾಂಪೇನ್ ನಡೆಸಿದರು. ಇವರು ಲೆಫ್ಟ್ ಅಂತೆ, ಲೆಫ್ಟ್ ಅಂತೆ ಅಂತ ಪ್ರಚಾರ ಮಾಡಿದರು. ಲೆಫ್ಟ್ ಆಗಿರೋದು ಅಂದರೆ ಅದೇನೋ ಅಪರಾಧ ಏನೋ ಎಂಬಂತೆ. ಒಬಾಮ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಿಂತಾಗ ಅಮೆರಿಕಾ ಮೀಡಿಯಾ ಅವನು ಸಮಾಜವಾದಿ ಅಂತ ಕರೆಯಿತು. ಸಮಾಜವಾದಿ ಆಗಿರೋದು ಅಪರಾಧ ಅನ್ನೋ ಹಾಗೆ.
  • ಗೆಳೆಯ ಅನಂತ ಚಿನಿವಾರ್ ಜನಶ್ರೀ ಸಂದರ್ಶನದಲ್ಲಿ ಇದೇ ಪ್ರಶ್ನೆ ಕೇಳಿದ್ದರು. ಆಗ ನಾನು ಹೇಳಿದೆ.. ಹಾಗೆ ನನ್ನನ್ನು ಕರೆಯುವವರು ನಾನು ಹಿಂದೆ ಕೆಲಸ ಮಾಡುತ್ತಿದ್ದ ಔಟ್‌ಲುಕ್ ಪತ್ರಿಕೆಯಲ್ಲಿ, ಹಿಂದೂಸ್ಥಾನ್ ಟೈಮ್ಸ್‌ನಲ್ಲಿ ಅಥವಾ ಐರಿಷ್ ಟೈಮ್ಸ್ ಪತ್ರಿಕೆಗೆ ಬರೆದ ಯಾವುದನ್ನೂ ಓದಿಲ್ಲ ಎಂದೇ ಅರ್ಥ. ಅದನ್ನೆಲ್ಲಾ ಓದಿದ್ದರೆ ನಾನು ಲೆಫ್ಟ್‌ನಿಂದ ತುಂಬಾ ದೂರ ಅನ್ನೋದು ಗೊತ್ತಾಗುತ್ತಿತ್ತು. ಆದರೆ ನಾನು ಜನಪರ ಆಗಿದ್ದೀನೆ ಅನ್ನೋ ಕಾರಣಕ್ಕೆ ಲೆಫ್ಟ್ ಅಂತ ಕರೆಯೋದೆ ಆದರೆ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ.
  • ಈ ತರಹದ ಗೊಂದಲಗಳನ್ನು ಆಗಾಗ ಸೃಷ್ಟಿ ಮಾಡ್ತಾ ಇರ್ತಾರೆ. ದೇವನೂರು ಅವರ ಅನುಭವಕ್ಕೂ ಇದು ಬಂದಿರುತ್ತೆ. ನನಗೆ ಯಾರೋ ಹೇಳಿದ್ರು, ದೇವನೂರು ಅವರ ಲೇಖನ ಪ್ರಕಟ ಮಾಡಿದರೆ ಪತ್ರಿಕೆ ಪ್ರಸರಣ ಬಿದ್ದು ಹೋಗುತ್ತೆ. ನಾನು ಅವರ ಲೇಖನ ಮೂರು ಬಾರಿ ಪ್ರಕಟಿಸಿದೆ. ಪ್ರಸರಣ ಏನು ಬಿದ್ದು ಹೋಗಲಿಲ್ಲ. ಜಾಸ್ತಿ ಆಯಿತು.
  • ಈಚೆಗೆ ಆದ ಒಂದು ಅನುಭವ. ನಾವು ನಮ್ಮ ಪತ್ರಿಕೆಯಲ್ಲಿ ಮೂಢನಂಬಿಕೆ ವಿರುದ್ಧ ಬಿಲ್‌ಗೋಸ್ಕರ ಕ್ಯಾಂಪೇನ್ ಮಾಡಿದ್ವಿ. ಕರಡು ಸಿದ್ಧ ಗೊಂಡಾಗ ಅದರ ಪರಿಕಲ್ಪನಾ ಟಿಪ್ಪಣಿಯನ್ನು ನಮ್ಮ ಪತ್ರಿಕೆಗೆ ಕಳುಹಿಸಿಕೊಡಲಾಯ್ತು. ಅದರಲ್ಲಿ ನಮಗೆ ಕೆಲವು ಅನುಮಾನಗಳು ಇದ್ದವು. ಅವು ಯಾವುದೇ ಯೋಚಿಸುವ ವ್ಯಕ್ತಿಗೆ ಬರಬಹುದಾದ ಅನುಮಾನಗಳೆ. ಅದರಲ್ಲಿನ ಕೆಲವು ಅಂಶಗಳು ರ್‍ಯಾಡಿಕಲ್ ಆಗಿದ್ದವು. ಒಂದು ಸಣ್ಣ ಪತ್ರಿಕೆ ನಡೆಸುವಾಗ ಇಂತಹ ರಿಸ್ಕ್ ಬರೋಲ್ಲ. ಆದರೆ ಒಂದು ದೊಡ್ಡ ದಿನ ಪತ್ರಿಕೆ, ಅದರಲ್ಲೂ 200 ಕೋಟಿ ರೂಗಳ ಪ್ರಾಫಿಟ್ ಮಾಡುವ ಮತ್ತು 80 ಲಕ್ಷ ಓದುಗರಿರುವ ಪತ್ರಿಕೆ ನಡೆಸುವಾಗ ಬ್ಯಾಲೆನ್ಸ್‌ನ್ನು ಕಾಪಾಡಿಕೊಳ್ಳಬೇಕಾಗುತ್ತೆ ಮತ್ತು ಓದುಗರ ಪ್ರತಿಕ್ರಿಯೆ ಏನಾಗಿರುತ್ತೆ ಅಂತ ಒಂದ್ಹತ್ತು ಹೆಜ್ಜೆ ಮುಂದೆ ಹೋಗಿ ಅಂದಾಜು ಮಾಡಬೇಕಾಗುತ್ತೆ. ಇಲ್ಲಾ ಅಂದರೆ ನನ್ನ ಪತ್ರಿಕೆಯ ಸ್ಪೇಸ್ ಕೂಡಾ ನಿಮಗಾರಿಗೂ ಉಳಿಯೋಲ್ಲ.
  • ನಾವು ಒಂದು ಸಂಪಾದಕೀಯ ಬರೆದ್ವಿ. ನಂಬಿಕೆ ಮತ್ತು ಮೂಢ ನಂಬಿಕೆ ಅನ್ನೋದರ ಬಗ್ಗೆ ಮತ್ತಷ್ಟು ವಿಶ್ಲೇಷಣೆ, ಚರ್ಚೆ ಅಗತ್ಯ ಅನ್ನೋದು ನಮ್ಮ ವಾದ ಆಗಿತ್ತು. ಅದರಲ್ಲಿ ಬಿಲ್ ಅಗತ್ಯ ಅನ್ನೋದು ಮೊದಲ ಅಂಶವಾಗಿತ್ತು. ಮತ್ತೆ ಪರಿಶೀಲಿಸಬೇಕು, ಮತ್ತಷ್ಟು ಚರ್ಚೆಯಾಗಬೇಕು ಮತ್ತು ಜನರ ನಂಬಿಕೆಗೆ ಧಕ್ಕೆ ತರುವಂತೆ ಇರಬಾರದು, ಸಮಾಜವನ್ನು ಈ ಸಂದರ್ಭದಲ್ಲಿ ಕದಡುವಂತಿರಬಾರದು ಎನ್ನೋದು ನಮ್ಮ ಅಭಿಪ್ರಾಯವಾಗಿತ್ತು. ಯಾಕೆಂದರೆ ನಿಮಗೆ ಗೊತ್ತು, ಚುನಾವಣೆ ಹತ್ತಿರದಲ್ಲಿದೆ. ಪೊಲರೈಸಿಂಗ್ ಚರ್ಚೆಗಳು ನಡಿತಿವೆ… ಮತ್ತು ಬಹಳ ಕಷ್ಟ ಪಟ್ಟು ಯಾವುದೋ ಒಂದು ಒಂದು ಲಿಬರಲ್ ರೆಜೀಮ್ ಅಧಿಕಾರಕ್ಕೆ ಬಂದಿದೆ. ಅಷ್ಟೆ ಬರೆದದ್ದು. ಆಮೇಲೆ ನನ್ನನ್ನು ಒಬ್ಬ ವಿಲನ್ ಅಂತೆ ನೋಡಲಾರಂಭಿಸದರು. ಯಾರು ನನ್ನ ಜೊತೆ ಚರ್ಚೆ ನಡೆಸಿದ್ದರೋ.. ಅವರೇ ನನ್ನನ್ನು ವಿಲನ್ ಅಂತೆ ಕಂಡರು. ನನಗೆ ಅನೇಕ ಎಸ್ಸೆಮ್ಮೆಸ್ಸುಗಳ ಬಂದವು. ’ನೀವು ಕೊನೆಗೂ ಚಡ್ಡಿ ಅಂತ ತೋರಿಸ್ಕಂಡ್ರಿ..’ ಅಂತ ಕಾಮೆಂಟ್‌ಗಳು ಬಂದವು. ನನಗೆ ನೋವಾಯಿತು.
  • ಅಣ್ಣಾ ಹಜಾರೆಯ ಲೋಕಪಾಲ್ ಬಿಲ್‌ನಲ್ಲಿ ಇದ್ದ ಸರ್ವಾಧಿಕಾರಿ ಟೆಂಡೆನ್ಸಿಗಳಿವೆ ಅಂತ ನಾವೆಲ್ಲಾ ವಿರೋಧ ಮಾಡಿದ್ವಿ. ಲೋಕಪಾಲ್ ನ ಬಿಲ್ ಅನ್ನೂ, ಈ ಬಿಲ್ ಅನ್ನು ಅಕ್ಕ-ಪಕ್ಕ ಇಟ್ಟುಕೊಂಡು ನೀವು ನೋಡಿ. ನಾನ್ಯಾಕೆ ಇಷ್ಟೆಲ್ಲಾ ಹೇಳ್ತಿದೀನಿ ಅಂದರೆ, ನನಗೆ ಬಿಲ್ ಬೇಕು.

ಧಾರ್ಮಿಕ ಹಕ್ಕುಗಳಿಗೆ ತೊಂದರೆಯಾಗದಂತೆ ಮೌಢ್ಯಗಳನ್ನು ನಿಷೇಧಿಸುವ ಕಾನೂನು ಅವಶ್ಯ

– ಜಗದೀಶ ಡಿ

ಮೂಢನಂಬಿಕೆಯ ಪರ ಮತ್ತು ವಿರೋಧಗಳ ಬಗ್ಗೆ ಇತ್ತೀಚಿಗೆ ಕೇಳಿಬರುತ್ತಿವೆ. ಮೂಢನಂಬಿಕೆಗಳಿಗೂ ಮತ್ತು ನಂಬಿಕೆಗಳಿಗೂ ಇರುವ ವ್ಯತ್ಯಾಸ ತುಂಬಾ ತೆಳುಗೆರೆಗಳಾಗಿವೆ. ಮೂಢನಂಬಿಕೆಗಳಿಂದ ತೊಂದರೆ ಒಳಗಾದವರೆ ಇದನ್ನು ನಂಬಿಕೆ ಅಂದುಕೊಂಡಿದ್ದಾರೆ. ಸರ್ಕಾರ ಕಾಯಿದೆಯ ಮೂಲಕ ಮನುಷ್ಯನ ನಂಬಿಕೆಗಳಿಗೆ ಧಕ್ಕೆ ತರಲು ಮುಂದಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. superstitionsಮೂಢನಂಬಿಕೆಗಳ ಬಗ್ಗೆ ಹಲವಾರು ಪ್ರಶ್ನೆಗಳು ಸಹ ಇವೆ.

ಮೂಢನಂಬಿಕೆಗಳು ಯಾವುವು? ಮೂಢನಂಬಿಕೆಗಳನ್ನು ಆಚರಿಸುತ್ತಿರುವರು ಯಾರು? ಮೂಢನಂಬಿಕೆಯ ಶೋಷಣೆಗೆ ಒಳಗಾಗಿರುವವರು ಯಾರು? ಮೂಡನಂಬಿಕೆಗಳು ಇವುಗಳು ಎಂದು ನಿರ್ಧರಿಸುವವರು ಯಾರು? ಇವುಗಳಿಗೆ ಕಾನೂನಿನಲ್ಲಿ ಉತ್ತರ ಹೇಳಬೇಕಾಗುತ್ತದೆ. ಆದರೆ ಸರ್ಕಾರ ಮಹಾರಾಷ್ಟ್ರದ ಮಾದರಿಯಲ್ಲಿ ಕಾನೂನು ಮಾಡಲು ಹೊರಟಿದೆ. ಮಹಾರಾಷ್ಟ್ರ ಸರ್ಕಾರ 18 ವರ್ಷ ಚಳುವಳಿ ಕಟ್ಟಿ, ಬೆಳಸಿ, ಮುನ್ನಡೆಸುತ್ತಿದ್ದ ನರೇಂದ್ರ ದಾಬೋಲ್ಕರ್‌ರ ಕೊಲೆಯ ನಂತರ ಆತುರಾತುರವಾಗಿ 12 ಆಚರಣೆಗಳನ್ನು ಮಾತ್ರ ಮೂಡನಂಬಿಕೆಗಳೆಂದು ತಿಳಿಸಿದೆ. ಆದರೆ ದಾಬೋಲ್ಕರ್ ಹೇಳಿದ 27 ಆಚರಣೆಗಳಲ್ಲಿ 15 ನ್ನು ಮೂಲೆಗುಂಪು ಮಾಡಿದೆ. dhabolkarದಾಬೋಲ್ಕರ್ ಅಂತವರಿಗೆ ರಕ್ಷಣೆಯ ಬಗ್ಗೆ ಯಾವುದೇ ವಿಧಾನಗಳಿಲ್ಲ. ಮೂಢನಂಬಿಕೆಯ ಬಗ್ಗೆ ತರಬೇತಿ ಇಲ್ಲದ ಸಬ್‌ಇನ್‌ಸ್ಪೆಕ್ಟರ್‌ಗೆ ವಿಚಾರಣೆಗೆ ನೇಮಿಸಿರುವುದು ಎಷ್ಟು ಸರಿ! ಇವೆಲ್ಲದರ ಕಡೆಗೆ ಕರ್ನಾಟಕ ಸರ್ಕಾರ ಗಮನ ನೀಡಬೇಕಾಗಿದೆ.

ನಮ್ಮ ಸಂವಿಧಾನದಲ್ಲಿ ಕರ್ತವ್ಯಗಳಿಗಿಂತ ಹಕ್ಕುಗಳಿಗೆ ಹೆಚ್ಚಿನ ಮಹತ್ವ ಇದೆ. ಹಕ್ಕುಚ್ಯುತಿಯಾದರೆ ಮೊಕದ್ದಮೆ ಹೂಡಬಹುದು. ಆದರೆ, ಕರ್ತವ್ಯಚ್ಯುತಿ ಬಂದರೆ ಕಾನೂನುಕ್ರಮ ಜರುಗಿಸುವುದಿಲ್ಲ. ಸಂವಿಧಾನದ 51-ಎ ವಿಧಿಯಲ್ಲಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವುದು ಮೂಲಭೂತ ಕರ್ತವ್ಯವಾಗಿದೆ. ಆದರೆ, ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳು ಸಹ ಮೂಲಭೂತ ಹಕ್ಕುಗಳಾಗಿರುವುದರಿಂದ ಹೆಚ್ಚಿನ ಮಹತ್ವ ಇದೆ. ಜೊತೆಗೆ 298 ವಿಧಿ ಕೂಡ ಧಾರ್ಮಿಕ ಹಕ್ಕು ಮತ್ತು ನಂಬಿಕೆಗಳಿಗೆ ಧಕ್ಕೆ ತರಬಾರದೆಂದು ತಿಳಿಸುತ್ತದೆ.

ಧಾರ್ಮಿಕ ಹಕ್ಕನ್ನು ತಮ್ಮಗೆ ಇಷ್ಟಬಂದ ಹಾಗೆ ಬಳಸಿಕೊಂಡು ಮಾನವನ ಚಿಂತನಾ ಶಕ್ತಿಯನ್ನೆ ಪುರೋಹಿತರು ಮತ್ತು ಜೋತಿಷಿಗಳು ನಿಯಂತ್ರಿಸುತ್ತಿದ್ದಾರೆ. ಅವರು ಹೇಳಿದಂತೆ ಎಲ್ಲವೂ, ಎಲ್ಲರೂ ಕೇಳುವಂತಾಗಿದೆ. ಕಾರ್ಪೋರೇಟ್ ಕಂಪನಿಗಳನ್ನು ಕಾನೂನಿನೊಳಗೆ ವ್ಯಕ್ತಿ ಎಂದು ಪರಿಗಣಿಸುವುದರಿಂದ ಸುಭವಾಗಿ ನುಣಚಿಕೊಳ್ಳುತ್ತಾರೆ. ಕಾರ್ಪೋರೇಟ್‌ಗಳು ಧಾರ್ಮಿಕ ಮುಖವಾಡಗಳನ್ನು ಹಾಕಿಕೊಂಡು ಬಾಬಾರಾಮ್, ರವಿಶಂಕರ್ ಗುರೂಜಿಯಂತಹವರಿಗೆ ಮೊರೆಹೋಗಿದ್ದಾರೆ. idiotic-brahmandaಅದೂ ಅಲ್ಲದೇ ಕಾನೂನು ಮಾಡಬೇಕಾದ ಕ್ಷೇತ್ರದಲ್ಲೇ ಮತ್ತು ವ್ಯಕ್ತಿಗಳಿಂದಲೇ ಮೌಡ್ಯಗಳು ನಡೆಯುತ್ತಿವೆ.

ಇಷ್ಟೆಲ್ಲ ಅಡೆತಡೆಗಳಿದ್ದರು ನಮ್ಮ ರಾಜ್ಯಕ್ಕೆ ಮೂಢನಂಬಿಕೆ ವಿರೋಧಿ ಕಾನೂನು ತುಂಬಾ ಅವಶ್ಯಕವಾಗಿದೆ. ಭಯ ಮತ್ತು ಅರಿವಿನ ಕೊರತೆಯಿಂದ ಹುಟ್ಟಿಕೊಂಡ ಮೂಢನಂಬಿಕೆಗಳು ಜನರನ್ನು ತುಂಬಾ ಬಾಧಿಸುತ್ತಿವೆ. ಜನರ ಆಲೋಚನೆಯನ್ನು ಕಟ್ಟಿಹಾಕುತ್ತಿವೆ. ಅದರಿಂದ ನೊಂದವರು ಜೊತೆಗೆ ಮೂಢನಂಬಿಕೆಗಳನ್ನು ವಿರೋಧಿಸುವವರು ದೂರು ನೀಡಿ ನ್ಯಾಯ ಪಡೆಯುವಂತೆ ಕಾನೂನು ಇರಬೇಕು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ಸಮಿತಿ ಇರಬೇಕು. ಜನರು ಮೌಢ್ಯದಿಂದ ಮುಕ್ತರಾಗಬೇಕು. ಧಾರ್ಮಿಕ ಹಕ್ಕುಗಳಿಗೆ ತೊಂದರೆಯಾಗದಂತೆ ಮೌಢ್ಯಗಳನ್ನು ನಿಷೇಧಿಸುವ ಕಾನೂನು ಜಾರಿಗೆ ಬರಬೇಕು.

ಮೋದಿ ಅಂತಃಪುರದಲ್ಲಿ ಬೆಂಗಳೂರು ಯುವತಿ : ಸರ್ವಾಧಿಕಾರಿ ರಾಜ್ಯದಲ್ಲಿ ಸ್ವಾತಂತ್ರ್ಯ ಇಲ್ಲ

– ಸುಧಾಂಶು ಕಾರ್ಕಳ

ತನ್ನ ಮಗಳು ಹೊತ್ತಲ್ಲದ ಹೊತ್ತಲ್ಲೂ ಆಸ್ಪತ್ರೆಗೆ ಅಮ್ಮನನ್ನು ಭೇಟಿಯಾಗೋಕೆ ಹೋಗಬೇಕಾಗುತ್ತೆ. ಹಾಗಾಗಿ ಅವಳಿಗೆ ಸೂಕ್ತ ಭದ್ರತೆ ಕೊಡಿ ಅಂತ ತಂದೆಯೊಬ್ಬರು ತನಗೆ ಪರಿಚಿಯ ಇರುವ ಮುಖ್ಯಮಂತ್ರಿಗೆ ಪತ್ರ ಬರೆಯುತ್ತಾರೆ. ಅದು ದೇಶದ ಬಹುದೊಡ್ಡ ಸಮಸ್ಯೆ ಏನೋ ಎಂಬಂತೆ, ಮುಖ್ಯಮಂತ್ರಿ ತನ್ನ ಮಂತ್ರಿಮಂಡಲದ ಪ್ರಮುಖ ಮಂತ್ರಿಗೆ ಭದ್ರತೆಯ ಜವಾಬ್ದಾರಿ ವಹಿಸುತ್ತಾರೆ. amit-shahಆ ಮನುಷ್ಯ ತನ್ನ ಇಲಾಖೆಯ ಅಧೀನದಲ್ಲಿರುವ ಇಂಟೆಲಿಜೆನ್ಸ್ ವಿಭಾಗದ ಹಿರಿಯ ಅಧಿಕಾರಿಯನ್ನು ಬಳಸಿಕೊಂಡು ಆ ಯುವತಿಗೆ ಭದ್ರತೆ ಕೊಡುತ್ತಾರೆ.

ಅದು ಎಷ್ಟರ ಮಟ್ಟಿಗೆ ಎಂದರೆ… ಸ್ವತಃ ಮಂತ್ರಿಯವರೇ ಪದೇ ಪದೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಹುಡುಗಿ ಎಲ್ಲಿದ್ದಾಳೆ, ಅವಳ ಜೊತೆ ಯಾರಿದ್ದಾರೆ, ಅವಳು ಯಾರಿಗೆ ಫೋನ್ ಮಾಡಿದಳು, ಯಾವ ವಿಮಾನದಲ್ಲಿ ಪ್ರಯಾಣಿಸಿದಳು, ಯಾವ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದಳು, ಜೊತೆಯಲ್ಲಿದ್ದ ಹುಡುಗನ ವಯಸ್ಸೆಷ್ಟು.. ಹೀಗೆ ನಾನಾ ಮಾಹಿತಿ ಕಲೆ ಹಾಕುತ್ತಾರೆ. ಅಷ್ಟೇ ಅಲ್ಲ ಅವಳಿಗೆ ’ಭದ್ರತೆ’ ನೀಡುತ್ತಿರುವ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಿಡಬಹುದು ಅಂತ ಸ್ವತಃ ಮಂತ್ರಿ ಆತಂಕ ವ್ಯಕ್ತಪಡಿಸುತ್ತಾರೆ. ಜೊತೆಗೆ ಅವಳು ಐಎಎಸ್ ಅಧಿಕಾರಿಯನ್ನು ಸಂಪರ್ಕಿಸುತ್ತಾಳಾ ಎಂಬುದನ್ನೂ ಕರ್ತವ್ಯ ನಿರತ ಅಧಿಕಾರಿಗಳು ಪರಿಶೀಲಿಸಬೇಕು. ಆದರೂ ಆ ಪಕ್ಷದವರು ಸರಕಾರದ ’ಭದ್ರತೆ’ ಬಗ್ಗೆ ಆಕೆಗೆ ಗೊತ್ತಿತ್ತು ಎಂದು ಸುಳ್ಳೇ ಹೇಳುತ್ತಾರೆ.

ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿ ಸದ್ಯ ಮುಖ್ಯಮಂತ್ರಿಯಾಗಿರುವ modi_amit_shahಗುಜರಾತ್ ರಾಜ್ಯದಿಂದ ಕೇಳಿ ಬಂದಿರುವ ಕತೆ ಇದು. ’ಭದ್ರತೆ’ಗೆ ಆದೇಶ ಕೊಟ್ಟವರು ಮುಖ್ಯಮಂತ್ರಿ, ಹೊಣೆ ಹೊತ್ತವರು ಅಮಿತ್ ಶಾ ಮತ್ತು ಆದೇಶವನ್ನು ಶಿರಸಾವಹಿಸಿ ಪಾಲಿಸಿದವರು ಪೊಲೀಸ್ ಅಧಿಕಾರಿ ಜಿ.ಎಲ್. ಸಿಂಘಾಲ್.

ಜಿ.ಎಲ್. ಸಿಂಘಾಲ್ ಸಿಐಡಿಗೆ ಸಲ್ಲಿಸಿರುವ ಫೋನ್ ರೆಕಾರ್ಡಿಂಗ್ ದಾಖಲೆಗಳಲ್ಲಿ ಅಮಿತ್ ಶಾ ಮತ್ತು ಆತನ ನಡುವೆ ನಡೆದ ಸಂಭಾಷಣೆಯ ಪೂರ್ಣ ವಿವರಗಳಿವೆ. ಕೋಬ್ರಾಪೋಸ್ಟ್.ಕಾಂ ಆ ಧ್ವನಿ ಮುದ್ರಿಕೆಗಳನ್ನು ಪ್ರಕಟಿಸಿದೆ. ಆ ಮಾತುಗಳನ್ನು ಒಮ್ಮೆ ಕೇಳಿದರೆ, ಗುಜರಾತ್ ಮುಖ್ಯಮಂತ್ರಿಯ ಇದುವರೆಗೆ ಅಷ್ಟಾಗಿ ಹೊರಬಾರದ ಮುಖ ಸ್ಪಷ್ಟವಾಗಿ ಕಾಣುತ್ತದೆ.

ಬೆಂಗಳೂರು ಮೂಲದ ಆರ್ಕಿಟೆಕ್ಟ್ ಒಬ್ಬಳು ಭೂಕಂಪದಿಂದ ತತ್ತರಿಸಿದ್ದ ಕಛ್ ಪುನರ್ನಿಮಾಣ ಸಂಬಂಧ ಅಲ್ಲಿನ ಜಿಲ್ಲಾಧಿಕಾರಿ ಪ್ರದೀಪ್ ಶರ್ಮ ಅವರ ಸಂಪರ್ಕಕ್ಕೆ ಬರುತ್ತಾಳೆ. ಭುಜ್ ನಗರದ ಗುಡ್ಡ ಪ್ರದೇಶವನ್ನು ಸುಂದರಗಾಣಿಸುವ ಯೋಜನೆಗೆ ಆಕೆ ಲ್ಯಾಂಡ್‌ಸ್ಕೇಪ್ ಆರ್ಕಿಟೆಕ್ಟ್ ಆಗಿ ಆಯ್ಕೆ ಆಗಿರುತ್ತಾಳೆ. ಆ ಯೋಜನೆ ಮುಗಿದು ಉದ್ಘಾಟನೆಯಾಗುವ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಗೆ ಪರಿಚಿತಳಾಗುತ್ತಾಳೆ. ಮೊದಲ ಭೇಟಿಯಲ್ಲಿ ಮೋದಿ ತನ್ನ ಖಾಸಗಿ ಇ-ಮೇಲ್ ಅವಳಿಗೆ ನೀಡುತ್ತಾರೆ.

ಸದ್ಯ ವಿವಿಧ ಆರೋಪಗಳನ್ನು ಹೊತ್ತು ಸೇವೆಯಿಂದ ಅಮಾನತ್ತಾಗಿರುವ ಪ್ರದೀಪ್ ಶರ್ಮ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಈ ಎಲ್ಲಾ ಮಾಹಿತಿಗಳಿವೆ. ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಸುಪ್ರಿಂಕೋರ್ಟ್‌ನಲ್ಲಿ ಅವರು ಮನವಿ ಮಾಡಿಕೊಂಡಿದ್ದರೆ. ನರೇಂದ್ರ ಮೋದಿ ಮತ್ತು ಆರ್ಕಿಟೆಕ್ಟ್ ನಡುವಿನ ’ಸಂಬಂಧ’ದ ಬಗ್ಗೆ ತನಗೆ ಖಚಿತ ಮಾಹಿತಿ ಇರುವುದು modi-for-women-powerಕೂಡಾ ತನ್ನ ವಿರುದ್ಧ ’ಸುಳ್ಳು’ ಆರೋಪಗಳನ್ನು ಹೊರಿಸಿ ಬಂಧಿಸಲು ಮತ್ತು ಅಮಾನತ್ತು ಮಾಡಲು ಕಾರಣ ಎನ್ನುವುದು ಅವರ ವಾದ.

ತಮ್ಮ ಅಫಿಡವಿಟ್ಟಿನಲ್ಲಿ ಅವರು ಹೇಳುವಂತೆ, ಆರ್ಕಿಟೆಕ್ಟ್ ಆಗಾಗ ತನ್ನ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಅವರೊಂದಿಗೆ ಹಂಚಿಕೊಂಡಿದ್ದಾಳೆ. ಅವಳು ತನ್ನ ಘನತೆಯನ್ನು ಹೆಚ್ಚಿಸಿಕೊಳ್ಳಲು ಹಾಗೆ ಹೇಳುತ್ತಿರಬಹುದು ಎಂದು ಮೊದಮೊದಲು ಸಂಶಯಿಸಿದ್ದ ಪ್ರದೀಪ್ ಶರ್ಮಾಗೆ ಅವಳ ಮಾತು ಸತ್ಯ ಎಂದು ಗೊತ್ತಾಗುವುದು ಸರಕಾರಿ ಕಾರ್ಯಕ್ರಮವೊಂದರಲ್ಲಿ ಮೋದಿ ಮತ್ತು ಆ ಯುವತಿ ಆಪ್ತವಾಗಿ ಖಾಸಗಿ ಸಂಗತಿಯನ್ನು ಹಂಚಿಕೊಂಡದ್ದನ್ನು ಆಕಸ್ಮಿಕವಾಗಿ ಅವರು ಕೇಳಿಸಿಕೊಂಡಾಗ.

2006 ರ ಮಾರ್ಚ್‌ನಲ್ಲಿ ಒಮ್ಮೆ ಬೆಂಗಳೂರಿನಿಂದ ಅಹ್ಮದಾಬಾದ್‌ಗೆ ಬಂದ ಆ ಯುವತಿ ಪ್ರದೀಪ್ ಶರ್ಮಾರನ್ನು ಫೋನ್ ಮೂಲಕ ಸಂಪರ್ಕಿಸಿ ಭುಜ್‌ಗೆ ಭೇಟಿ ನೀಡುವ ಉದ್ದೇಶ ಇದೆ ಎಂದು ಹೇಳುತ್ತಾಳೆ. ಆದರೆ ನಂತರ ಪ್ರದೀಪ್ ಅವಳನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ. ಕಾರಣ ಅವಳ ದೂರವಾಣಿ ಆಫ್ ಆಗಿರುತ್ತದೆ. modi-bangalore-rallyನಂತರ ಭೇಟಿಯಾದಾಗ ಅವಳು ಹೇಳುವುದು ಆ ಎರಡು ದಿನ ಅವಳು ಇದ್ದದ್ದು ಮುಖ್ಯಮಂತ್ರಿಯ ನಿವಾಸದಲ್ಲಿ. ಅವಳನ್ನು ಹಿಂದಿನ ಬಾಗಿಲಿನಿಂದ ಒಳಗೆ ಕರೆದುಕೊಂಡು ಹೋಗಿದ್ದರಂತೆ. ಮುಖ್ಯಮಂತ್ರಿ ಮಲಗುವ ಕೋಣೆ ಸಮೀಪದಲ್ಲಿಯೇ ಅವಳನ್ನು ಉಳಿಸಿದ್ದರಂತೆ. ಅಂದು ಹೋಳಿ. ಮುಖ್ಯಮಂತ್ರಿ ಭೇಟಿ ಮಾಡಲು ಅನೇಕ ಗಣ್ಯರು ಬಂದಿದ್ದರು. ಆದರೂ, ಅವರು ಬೇಗನೆ ಮನೆಗೆ ಹಿಂತಿರುಗಿ ಅವಳೊಂದಿಗೆ ಕಾಲ ಕಳೆಯುತ್ತಾರೆ. ಆಗ ಅವಳಿಗೆ ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತೆ. ತಕ್ಷಣ ಒಬ್ಬ ವೈದ್ಯರನ್ನು ಕರೆಸಬಹುದೇ ಎಂದು ಅವಳು ಕೇಳಿದಾಗ, ತನ್ನ ಆ ಹೊತ್ತಿನ ವಿಚಿತ್ರ ಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎನ್ನುತ್ತಾರಂತೆ ಸದ್ಯ ’ಭಾರತವನ್ನೇ ಉಳಿಸಲು’ ಹೊರಟಿರುವ ಪ್ರಧಾನಿ ಅಭ್ಯರ್ಥಿ!

ಆ ಯುವತಿ ಮೋದಿಯೊಂದಿಗೆ ಸಂಪರ್ಕಿಸಲು ಕರೆ ಮಾಡುತ್ತಿದ್ದ ಮೊಬೈಲ್ ದೂರವಾಣಿ ಸಂಖ್ಯೆಯನ್ನು (99099-23400) ಪ್ರದೀಪ್ ಶರ್ಮಾ ಅವಳಿಂದಲೇ ಪಡೆದು ತನ್ನ ಒಂದು ಮೊಬೈಲ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ಅದೊಂದು ದಿನ ಆಕಸ್ಮಿಕವಾಗಿ ಯಾರಿಗೋ ಕರೆ ಮಾಡಲು ಹೋಗಿ, ಆ ನಂಬರ್ ಡಯಲ್ ಆಗಿ ಬಿಡುತ್ತದೆ. ಅತ್ತ ಕಡೆಯಿಂದ ಕರೆ ರಿಸೀವ್ ಮಾಡಿದವರು ಮಾತನಾಡುವುದಿಲ್ಲ. ಪ್ರದೀಪ್ ಶರ್ಮಾರ ಪ್ರಕಾರ ತನ್ನ ವಿರುದ್ಧ ಪ್ರಕರಣಗಳು ದಾಖಲಾಗಿ ಜೈಲು ಸೇರಲು ಈ ಘಟನೆ ಪ್ರಮುಖ ಕಾರಣ.

ಶರ್ಮಾ ಹೇಳುವಂತೆ ತಮ್ಮ ಕರೆಯ ನಂತರ ಮೋದಿ ಆ ನಂಬರ್‌ನ ವಾರಸುದಾರರನ್ನು ಹುಡುಕಿಸಿ ಹಿಂದಿನ ಕರೆ ದಾಖಲೆಗಳನ್ನು ಪರಿಶೀಲಿಸಿದರು. ಆ ಮೂಲಕ ಆ ಯುವತಿ ಇವರೊಂದಿಗೆ ಸಂಪರ್ಕದಲ್ಲಿರುವುದನ್ನು ತಿಳಿದುಕೊಂಡರು. ಆ ನಂತರವೇ ಮೋದಿ ಸರಕಾರ ಆ ಯುವತಿಯ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ತೀರ್ಮಾನಿಸಿದ್ದು. ಆ ಕೆಲಸಕ್ಕೆ ಅಮಿತ್ ಶಾ ನೇಮಿಸಿದ್ದು ಜಿ.ಎಲ್.ಸಿಂಘಾಲ್‌ರನ್ನು. ಅವರು ಎಲ್ಲಾ ಕಾನೂನುಗಳನ್ನು ಸುಟ್ಟು ಹಾಕಿ ಅನೇಕರ ಫೋನ್‌ಗಳನ್ನು ಕದ್ದಾಲಿಸಿದ್ದಾರೆ. ಒಬ್ಬ ಯುವತಿಯನ್ನು ಎಡಬಿಡದಂತೆ ಫಾಲೋ ಮಾಡಿದ್ದಾರೆ. ಅವಳು ಸಂಪರ್ಕಿಸುವ ಎಲ್ಲರ ಹಿನ್ನೆಲೆ ಜಾಲಾಡಿದ್ದಾರೆ. ಇದನ್ನೆಲ್ಲಾ ನಾಗರಿಕ ಸಮಾಜ ಒಪ್ಪಿಕೊಳ್ಳಬೇಕೆ? ಆದರೂ ಆ ಯುವತಿಯ ಅಪ್ಪನ ಮನವಿ ಮೇರೆಗೆ ಸರಕಾರ ರಕ್ಷಣೆ ಕೊಟ್ಟಿತ್ತು ಎಂದು ಬಿಜೆಪಿ ವಕ್ತಾರರಾದ ಮೀನಾಕ್ಷಿ ಲೇಖಿ ಮತ್ತು ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಳ್ಳುತ್ತಾರೆಂದರೆ ಅವರನ್ನು ಏನನ್ನಬೇಕು?

ಒಬ್ಬ ಯುವತಿ ತನ್ನ ತಾಯಿಯನ್ನು ಭೇಟಿಯಾಗಲು ಆಸ್ಪತ್ರೆಗೆ ಆಗಾಗ ಹೋಗುತ್ತಿರುತ್ತಾಳೆ ಎಂಬ ಕಾರಣಕ್ಕೆ ಒಬ್ಬ modi-rakhidayತಂದೆ ಮುಖ್ಯಮಂತ್ರಿಗೆ ಹೇಳಿ ಭದ್ರತೆ ಬೇಡಿದರು ಎಂದು ಬೂಸಿ ಬೀಡುವವರನ್ನು ಮುಂದಿನ ನಗೆಹಬ್ಬಕ್ಕೆ ಆಹ್ವಾನಿಸುವುದು ಸೂಕ್ತ. ನಮ್ಮ ಜನರಿಗೆ ಒಂದಿಷ್ಟು ಮನರಂಜನೆ ಸಿಗುತ್ತೆ. ಭದ್ರತೆ ನೀಡುವವರು ಕಾನೂನು ಉಲ್ಲಂಘಿಸಿ ಎಲ್ಲರ ಫೋನ್ ಕದ್ದು ಆಲಿಸಬಹುದೇ? ಇದನ್ನು ಹೇಗೆ ಒಪ್ಪಿಕೊಳ್ಳೋದು? ಇಷ್ಟೇ ಅಲ್ಲ.. ಹೀಗೆ ಅದೆಷ್ಟು ಜನರಿಗೆ ಈ ಗುಜರಾತ್ ಸರಕಾರ ಇಂತಹ “ವಿಶೇಷ ಭದ್ರತೆ” ನೀಡಿದೆಯೋ? ಎಷ್ಟು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಹೋರಾಟಗಾರರು ಈ “ಭದ್ರತೆ”ಯಿಂದ ಬಳಲಿದ್ದಾರೋ?

ಅಮಲುಗಣ್ಣುಗಳಿಗೆ ಮಾತ್ರ ಈ ಮೋದಿ ಅಪ್ರತಿಮ ನಾಯಕನಂತೆ ಕಾಣಬಹುದು. ಬೆಂಗಳೂರಿಗೆ ಬಂದಾಗ ಹೆಲಿಪ್ಯಾಡ್‌ನಲ್ಲಿ ಅವರ ಜೊತೆ ನಿಂತು ಫೋಟೋ ತೆಗೆಸಿಕೊಳ್ಳಲು ಆಸಕ್ತಿ ತೋರಬಹುದು. ಆದರೆ ಜನಸಾಮಾನ್ಯರು ಇಂತಹವರ ರಾಜ್ಯದಲ್ಲಿ ಎಷ್ಟು ಸುರಕ್ಷಿತ? ಮೋದಿ ಮುಖದಲ್ಲಿ ಒಬ್ಬ ಸರ್ವಾಧಿಕಾರಿ ಕಂಡರೆ ನಿಮ್ಮ ಕಣ್ಣುಗಳು ಆರೋಗ್ಯವಾಗಿದ್ದಾವೆ ಎಂದೇ ಅರ್ಥ.


ಸಿಂಘಾಲ್ ಮತ್ತು ಅಮಿತ್ ಶಾ ನಡುವೆ ನಡೆದ ಮಾತುಕತೆಯ ಸಂಪೂರ್ಣ ವಿವರಗಳು