Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಈ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ…

– ಶರ್ಮಿಷ್ಠ

ಕಳೆದ ಹದಿನೈದು ದಿನಗಳಿಂದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿಗೆ ಬರುತ್ತಿರುವ ಪ್ರತಿಕ್ರಿಯೆಯನ್ನು ಗಮನಿಸುವಾಗ ಕೆಲವು ಓದುಗರು, ಕಮ್ಯುನಿಸ್ಟ್‌ರು ನಡೆಸುತ್ತಿರುವ ಹೋರಾಟ ಎಂಬ ಕಾರಣಕ್ಕೆ ತಮ್ಮ ಆರ್‌ಎಸ್‌ಎಸ್ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಪ್ರಕರಣವನ್ನು, ಎಲ್ಲರ ಕಾಳಜಿಯನ್ನು ಹಾದಿ ತಪ್ಪಿಸುತ್ತಿಸುತ್ತಿದ್ದಾರೆ ಎಂದು ನನಗನ್ನಿಸುತ್ತಿದೆ. ಇಲ್ಲಿ ನಕ್ಸಲರ ವಿಷಯ ಯಾಕೆ ಬೇಕು?

ಇಲ್ಲಿ ಒಂದು ಸ್ಪಷ್ಟವಾಗಬೇಕು ಮಹೇಶ ತಿಮರೋಡಿ ವಿಶ್ವಹಿಂದು ಪರಿಷತ್‌ನ ಮುಖಂಡನೇ ಹೊರತು ಕಮ್ಯುನಿಸ್ಟ್ ಪಕ್ಷದವರಲ್ಲ. Dharmasthala_Templeಅವರು ಯಾಕೆ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ? ಜೊತೆಗೆ ಕೆಲವು ಹಿಂದೂ ಪರ ಸಂಘಟನೆಗಳು ಅವರ ಜೊತೆ ಹೋರಾmಕ್ಕೆ ಕೈ ಜೋಡಿಸಿವೆ. ಜೊತೆಗೆ ಬಿಜೆಪಿ ನಾಯಕರ್‍ಯಾರು ಹೆಗ್ಗಡೆಯವರನ್ನು ಕಾಂಗ್ರೆಸ್ ನಾಯಕರ ಮಟ್ಟಿಗೆ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ.

ಅವರ ವೈಯಕ್ತಿಕ ಹಿತಾಸಕ್ತಿ ಎಂದು ಎಲ್ಲರು ಕೊಡುವ ಕಾರಣಗಳನ್ನೇ ಇಟ್ಟುಕೊಳ್ಳೋಣ. ರಾಜಕೀಯ ಭವಿಷ್ಯಕ್ಕೆ ಹಾದಿಮಾಡಿಕೊಳ್ಳುತ್ತಿದ್ದಾರೆ ಎಂಬ ಆಪಾದನೆ ಕೇಳಿ ಬರುತ್ತಿದೆ. ಪೂಜಾರಿಯಂತಹ ಹಿರಿಯ ರಾಜಕಾರಣಿ ಚುನಾವಣೆಗಾಗಿ ತನ್ನತನವನ್ನೇ ಮಾರಿಕೊಂಡು ಚೀಪ್ ಗಿಮಿಕ್ ಮಾಡಲು ಹೊರಟಿರುವಾಗ, ಗೋಧ್ರಾ ಹತ್ಯಾಕಾಂಡದ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ವಿಜೃಂಭಿಸುತ್ತಿರುವಾಗ, ರಿಯಲ್ ಎಸ್ಟೇಟ್ ಡಾನ್‌ಗಳು, ಗಣಿ ಕಳ್ಳರೆಲ್ಲ ಮಂತ್ರಿ ಪದವಿಗಾಗಿ ತಾಮುಂದು ತಾಮುಂದು ಎಂದು ಹೊರಟಿರುವಾಗ, ಅವರನ್ನೆಲ್ಲ ನಾವು ಸಹಿಸಿಕೊಂಡಿರುವಾಗ, ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಅದಕ್ಕಾಗಿ ಹೋರಾಟ ಮಾಡಿ, ರಾಜಕೀಯಕ್ಕೆ ಹಾದಿ ಮಾಡಿಕೊಳ್ಳುವದರಲ್ಲಿ ಯಾವ ತಪ್ಪಿದೆ? ಬಡವರಿಗಾದ ಅನ್ಯಾಯಕ್ಕೆ ಧ್ವನಿ ಎತ್ತುವುದು ಯಾವ ತಪ್ಪು?

ನಮಗೆ ರಾಜಕೀಯ ಪಕ್ಷಗಳ ನಿಲುವು ನೊಂದವರ ಶೋಷಿತರ ಪರವಾಗಿರಬೇಕು. ತಿಮರೋಡಿಯೋ, ಕಮ್ಯುನಿಸ್ಟರೋ ಶೋಷಿತರಿಗಾಗಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಮೊಸರಲ್ಲಿ ಕಲ್ಲು ಹುಡುಕುವ ಸಿನಿಕತನ ಯಾಕೆ? ಅವರನ್ನು ದೂಷಿಸುವರಿಗೆ ಸೌಜನ್ಯಳ ಪರವಾಗಿ ಹೋರಾಡಲು, ನ್ಯಾಯಕ್ಕಾಗಿ ಕಿಂಚಿತ್ತಾದರೂ ಮಾಡಲು ಸಾಧ್ಯವಿದೆಯೇ? ಬೇರೆಯವರ ಹೋರಾಟವನ್ನು ಯಾಕೆ ತೆಗಳಬೇಕು?

ಎಷ್ಟು ಜನ ರಾಜಕಾರಣಿಗಳು ತಮ್ಮ ಪ್ರಣಾಳಿಕೆಯಲ್ಲಿ ಬಡವರಿಗೆ ನ್ಯಾಯ ಒದಗಿಸುತ್ತೇವೆ ಎಂದು ಬರೆದುಕೊಳ್ಳುತ್ತಾರೆ? ಎಲ್ಲರೂ ಜನರನ್ನು ಮರಳು ಮಾಡಲು ಬಳಸುವುದು ಅಗ್ಗದ ಪ್ರಚಾರ ತಂತ್ರವನ್ನ ತಾನೇ? ಬಡವರು ಒಂದು ರೂಪಾಯಿ ಅಕ್ಕಿಗೆ, ಬಿಪಿಲ್ ಕಾರ್ಡ್‌ಗೆ, ಆಶ್ರಯ ಮನೆ ಕೇಳಲು ಮಾತ್ರ ಅರ್ಹರೇ?

ಸರ್ಕಾರ, ಪೋಲೀಸ್ ಇಲಾಖೆ ಎಲ್ಲರೂ sowjanya-heggadeಪ್ರಭಾವಿಗಳ ಕೃಪಾಕಟಾಕ್ಷದಲ್ಲಿರುವಾಗ ಆ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವವರಾದರೂ ಯಾರು? ಅವರಿಗೆ ನ್ಯಾಯ ಕೇಳುವ ಹಕ್ಕಿಲ್ಲವೇ? ಯಾರಾದರೂ ಮುಂದೆ ಬಂದು ಧ್ವನಿ ಎತ್ತಿದರೆ ಆಗುವ ನಷ್ಟವಾದರೂ ಏನು? ಅನ್ಯಾಯವಾಗಿ ಯಾರದೋ ಕಾಮದಾಹಕ್ಕೆ ಬಲಿಯಾದ ಆಕೆಯ ಮೇಲೆ ಎಳ್ಳಷ್ಟೂ ಕನಿಕರ ತೋರದೆ, ಹೋರಾಟವನ್ನೇ ಆರೋಪಿಸಿದರೆ?

ಆಕೆಯ ಮನೆಯವರು ಆರೋಪಿಸಿದವರನ್ನು ಪೋಲಿಸರು ತನಿಖೆ ಮಾಡಿದ್ದು ತೀರಾ ಇತ್ತೀಚೆಗೆ ತಾನೆ? ಅಂದರೆ ಹೋರಾಟ ಆರಂಭವಾದ ಬಳಿಕ. ತನ್ನದೇ ಸಂಸ್ಥೆ, ತನ್ನದೇ ಗ್ರಾಮದ ಹುಡುಗಿಯ ಸಾವಿನ ತನಿಖೆಗೆ ಹಗ್ಗಡೆಯವರೇ ಮುಂದೆಬರಬಹುದಿತ್ತಲ್ಲ? ಕಮಿನಿಸ್ಟರೋ, ತಿಮ್ಮರೋಡಿಯೋ, ಪ್ರಗತಿಪರರೋ ಯಾಕೆ. ಸಿಬಿಐ ತನಿಖೆಗೆ ಒತ್ತಾಯಿಸಲು ಒಂದು ವರ್ಷದ ನಂತರದ ಹೋರಾಟ ಬೇಕಾಯಿತೋ? ಸಮಾಜ ಸುಧಾರಕ ಖಾವಂದರಿಗೆ, ಧರ್ಮನಿಷ್ಠರಿಗೆ ಕಾಲಬುಡದಲ್ಲೇ ಹೋದ ಅಮಾಯಕ ಜೀವ ಕಾಣಲೇ ಇಲ್ಲವೇ? ಯಾಕೆ ಬಡವರಿಗೆ ನ್ಯಾಯ ಎಂಬ ಉದಾಸೀನವೋ ಅಥವಾ ಅಸಡ್ಡೆಯೋ?

ತಾನೇ ಗೃಹಮಂತ್ರಿಗಳಿಗೆ ತನಿಖೆ ಮಾಡಿಸಿ ಎಂದ ಹೆಗ್ಗಡೆಯವರಿಗೆ ಸಿಬಿಐ ಹೋಗಲಿ ಕನಿಷ್ಠ ಪಕ್ಷ ಸಿಓಡಿ ತನಿಖೆ ಯಾವ ಮಟ್ಟದಲ್ಲಿದೆ ಎಂಬ ವಿಷಯವನ್ನಾದರೋ ಫಾಲೋಅಪ್ ಮಾಡಿ ತನಿಖೆ ತ್ವರಿತಗತಿಯಲ್ಲಿ ಸಾಗುವಂತೆ ಮಾಡಬಹುದಿತ್ತಲ್ಲಾ?

ಅಷ್ಟಕ್ಕೂ ಸೋಮನಾಥ ನಾಯಕ್ ಹಾಗು ನರೇಂದ್ರ ನಾಯಕ್ ವ್ಯಥಾ ಯಾರ ಮೇಲೂ ಆರೋಪ ಹೊರಿಸುವವರಲ್ಲ. ಅವರು ಸೌಜನ್ಯ ಪ್ರಕರಣದಿಂದ ಲಾಭ ಮಾಡಿಕೊಂಡು ಯಾವ ಚುನಾವಣೆಯನ್ನೂ ಸ್ಫರ್ಧಿಸಬೇಕಿಲ್ಲ. ಹೆಗ್ಗಡೆಯವರ ವಿರುದ್ಧ ಆರೋಪಕ್ಕೆ ದಾಖಲೆ ಕೇಳುವವರು , ಸ್ವಸಹಾಯ ಸಂಘ, ಭೂ ಮಾಫಿಯಾಕ್ಕೆ ಸಂಬಂಧಿಸಿದ ಅವ್ಯವಹಾರಗಳಿಗೆ ಸೋಮನಾಥ ನಾಯಕರನ್ನು ಸಂಪರ್ಕಿಸಬಹುದು. ಅವರಲ್ಲಿ ಆರ್‌ಟಿಐ ಮೂಲಕ ಪಡೆದ ದಾಖಲೆಗಳಿವೆ. ಅದು ಸುಳ್ಳಾಗಲು ಸಾಧ್ಯವಿಲ್ಲ ಅಲ್ಲವೇ? ಧರ್ಮಸ್ಥಳದಲ್ಲಿ ಆದ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ಈ ಮೊದಲೇ ಪ್ರಕಟವಾಗಿದೆ. ಪಿಪಿ ಹೆಗ್ಡೆಯಂತಹ ಲಾಯರ್ ಮಾನಹಾನಿ ಎಂಬ ಬ್ರಹ್ಮಾಸ್ತ್ರವನ್ನು ಹಿಡಿದು ನಿಂತಿರುವಾಗ ಯಾರೂ ಸುಳ್ಳು ಸುದ್ದಿ ಪ್ರಕಟಿಸುವಂತಹ ಹುಂಬತನ ಕೈ ಹಾಕುವುದಿಲ್ಲ. ಬೇಕಾದವರು ಆರ್‌ಟಿಐ ಮೂಲಕ ಅಸಹಜ JusticeForSowjanyaಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡು ಆರೋಪ ಸುಳ್ಳು ಎಂದು ಸಾಬೀತುಪಡಿಸಬಹುದು. ಇನ್ನೂ ಅಗತ್ಯವಿದ್ದರೆ ಧರ್ಮಸ್ಥಳದಲ್ಲಿ ತಿರುಗಾಡಿ ಜನರ ಹತ್ತಿರ ಮಾತನಾಡಿದರೆ ಸತ್ಯಸಂಧ, ಧರ್ಮಸಂಧರ ಬಗೆಗೆ, ಅಲ್ಲಿನ ರಿಯಲ್ ಎಸ್ಟೇಟ್ ಮಾಫಿಯಾದ ಬಗ್ಗೆ ಹೆಚ್ಚಿನ ವಿಷಯ ತಿಳಿಯುತ್ತದೆ.

ಅಷ್ಟಕ್ಕೂ ಈ ಎಲ್ಲಾ ವಿಚಾರಗಳು ಅರ್ಥವಾಗುವುದು ಸೌಜನ್ಯ ನಮ್ಮವಳು ಅಂದುಕೊಂಡಾಗ ಮಾತ್ರ. ಸತ್ತದ್ದು ಯಾವುದೋ ಜೀವ, ಹತ್ತರೊಂದಿಗೆ ಇದು ಹನ್ನೊಂದನೇ ರೇಪ್ ಪ್ರಕರಣ ಅಂದುಕೊಂಡಾಗಲ್ಲ. ನಮ್ಮ ಮನೆಮಗಳಿಗೇ ಈ ಸ್ಥಿತಿ ಬಂದಿದ್ದರೆ? ಸೌಜನ್ಯಳ ಅಸಹಾಯಕ ತಂದೆತಾಯಿಯ ಸ್ಥಾನದಲ್ಲಿ ನಾವಿದ್ದಿದ್ದರೆ, ಇದೇ ಕೊಂಕು ಮಾತು ಹೇಳುತ್ತಿದ್ದೆವಾ?

ಧರ್ಮಸ್ಥಳದಲ್ಲಿ ಭಯಭೀತಿ ತೊಲಗಲಿ, ನೆಲದ ಕಾನೂನು ನೆಲೆಗೊಳ್ಳಲಿ…


– ರವಿ ಕೃಷ್ಣಾರೆಡ್ದಿ


ಕಳೆದ ಎರಡು ದಿನ ಮಂಗಳೂರು-ಉಡುಪಿ ಜಿಲ್ಲೆಗಳಲ್ಲಿ ಇದ್ದೆ. ಎರಡು ರಾತ್ರಿ ಮಂಗಳೂರು ಜಿಲ್ಲೆಯಲ್ಲಿ ಉಳಿದುಕೊಂಡಿದ್ದೆ. ನೆನ್ನೆ ಉಡುಪಿ-ಕಾರ್ಕಳ-ಮೂಡುಬಿದ್ರೆಯ ಮೂಲಕ ಬೆಂಗಳೂರಿಗೆ ಹೊರಟಾಗ ಯಾವ ದಾರಿ ಸೂಕ್ತ (ಶಿರಾಡಿ ಘಟ್ಟ ರಸ್ತೆಯೊ, ಚಾರ್ಮಾಡಿ ಘಟ್ಟ ರಸ್ತೆಯೋ) ಎಂದಿದ್ದಕ್ಕೆ ಅಲ್ಲಿಯ ಸೇಹಿತರೊಬ್ಬರು, ’ಬೆಳ್ತಂಗಡಿ ಮತ್ತು ಉಜಿರೆಯಿಂದ ನೇರವಾಗಿ ಚಾರ್ಮಾಡಿ ಘಟ್ಟದ ರಸ್ತೆಯಲ್ಲಿ ಹೋಗಿ. ಹಾಗೆ ಹೋದರೆ ನಿಮಗೆ ಧರ್ಮಸ್ಥಳದ ಮೂಲಕ ಹೋಗುವುದೂ ತಪ್ಪುತ್ತದೆ. ಅಲ್ಲಿ ಗೊತ್ತಲ್ಲ ಏನೇನಾಗುತ್ತಿದೆ ಎಂದು, ಜಾಗ ಸರಿ ಇಲ್ಲ,’ ಎಂದರು. ಆರೋಗ್ಯಕರ ಹಾಸ್ಯಪ್ರವೃತ್ತಿ ಇರುವ ಅವರು ಅದನ್ನು ತಮಾಷೆಯಿಂದ ಹೇಳಿದ್ದು. ಆದರೆ ಹೊರಗಿನವನಾದ ನನಗಿಂತ ಹೆಚ್ಚಿಗೆ ಅವರಿಗೆ ಗೊತ್ತಿತ್ತು, ಅದು ಕೇವಲ ತಮಾಷೆಯಲ್ಲ ಎಂದು.

ಇಲ್ಲಿಯವರೆಗೂ ಕರ್ನಾಟಕದಲ್ಲಿ ಪ್ರಶ್ನಾತೀತ ವ್ಯಕ್ತಿಯಾಗಿದ್ದವರೊಬ್ಬರು ಕೆಲ ತಿಂಗಳುಗಳಿಂದ ಪ್ರಶ್ನಾತೀತರಾಗಿ ಉಳಿದಿಲ್ಲ. ಬಹುಶಃ ನನ್ನ ತಂದೆ-ತಾಯಿಯ ಎರಡೂ ಕಡೆಯ ಪೂರ್ವಿಕರೆಲ್ಲರೂ ಸೇರಿ ಧರ್ಮಸ್ಥಳವನ್ನು ಸಂದರ್ಶಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿಗೆ ಮಂಜುನಾಥನನ್ನು ಸಂದರ್ಶಿಸಿರುವ ಬಯಲುಸೀಮೆಯ Dharmasthala_Templeನನ್ನಂತಹವರಿಗೆ ಧರ್ಮಸ್ಥಳದ ಬಗ್ಗೆ ಒಂದು ಭಯ-ಭಕ್ತಿ ಇದೆ. ಇಲ್ಲಿ ಭಕ್ತಿಗಿಂತಲೂ ಹೆಚ್ಚಾಗಿ ಕೆಲವು ಕಟ್ಟುಕತೆಗಳ ಮೂಲಕ (ವ್ಯವಸ್ಥಿತವಾಗಿ?) ಮೌಢ್ಯ ಮತ್ತು ದೈವಭಯವನ್ನು ಹುಟ್ಟು ಹಾಕಲಾಗಿದೆ.

ಈ ಸಾರಿಯ ನನ್ನ ಪ್ರಯಾಣದಲ್ಲಿ ಕಂಡಹಾಗೆ ಬೆಳ್ತಂಗಡಿ ಮತ್ತು ಸುತ್ತಮುತ್ತಲ ಜನಕ್ಕೆ ನಮಗಿಂತ ಹೆಚ್ಚಿನ ವಾಸ್ತವದ ಪರಿಚಯ ಇದೆ, ಮತ್ತು ಇಲ್ಲಿಯವರೆಗೆ ಬಹುತೇಕ ಎಲ್ಲರೂ ಭಯದಿಂದ ಹಾಗೂ ಏನು ಮಾಡಿದರೂ ಉಪಯೋಗವಿಲ್ಲ ಎನ್ನುವ ಕಾರಣಕ್ಕೆ ಬಾಯಿಮುಚ್ಚಿಕೊಂಡೇ ಇದ್ದರು. ಈಗ ಅವರು ಬಹಿರಂಗವಾಗಿ ತಮ್ಮ ಅಸಮಾಧಾನವನ್ನು, ಕೋಪವನ್ನು ಹೊರಹಾಕಲು ಸೌಜನ್ಯ ಎನ್ನುವ ಆ ಮಣ್ಣಿನ ಒಬ್ಬ ಹೆಣ್ಣುಮಗಳ ಬಲಿ ಮೂಲವಾದದ್ದು ಮಾತ್ರ ದುರಂತ.

ಅಂದ ಹಾಗೆ, ಬೆಳ್ತಂಗಡಿ ಸುತ್ತಮುತ್ತಲ ಅನೇಕ ಪ್ರಜ್ಞಾವಂತರಿಗೆ ಸೌಜನ್ಯಾಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಧಿಗ್ಭ್ರಾಂತಿ ಮೂಡಿಸಿದ ಘಟನೆ ಅಲ್ಲ. ಇಂತಹವು ಅಲ್ಲಿ ಆಗಾಗ್ಗೆ ಬಲಿಷ್ಟರಿಂದ ನಡೆಯುತ್ತಿದ್ದ, ಕಾಲಗರ್ಭದಲ್ಲಿ ಮುಚ್ಚಿಹೋಗುತ್ತಿದ್ದ ಘಟನೆಗಳೆ. ಆದರೆ ಅವರಿಗೆ ನಿಜಕ್ಕೂ ಶಾಕ್ ಆಗಿರುವುದು, ಹೀಗೂ ಆಗಲು ಸಾಧ್ಯವೇ ಎನ್ನಿಸುತ್ತಿರುವುದು, ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮುಚ್ಚಿಹೋಗದೆ “ಖಾವಂದ”ರಿಗೆ ಬೆವರಿಳಿಯುವಂತೆ ಆಗಿರುವುದು.

ನನಗೆ ದಕ್ಷಿಣ ಕನ್ನಡದಲ್ಲಿ ಹಲವಾರು ಸಜ್ಜನ ಸ್ನೇಹಿತರಿದ್ದಾರೆ. ಕೆಲವು ಬಂಡುಕೋರ, ರಾಜಿಯಿಲ್ಲದ ಯುವ ಸ್ನೇಹಿತರಂತೆ, ಪ್ರಬುದ್ಧ, ಮಿತಭಾಷಿಕ, ಮಧ್ಯವಯಸ್ಕ ಸ್ನೇಹಿತರೂ ಇದ್ದಾರೆ. ಆದರೆ ಈ ಎಲ್ಲಾ ಸ್ನೇಹಿತರಿಗೆ ಧರ್ಮಸ್ಥಳದ ವಿಚಾರಕ್ಕೆ ಬಂದಾಗ ತಕರಾರುಗಳಿವೆ. ಇವರ್‍ಯಾರೂ ವೈಯಕ್ತಿಕ ದ್ವೇಷದಿಂದ ಮಾತನಾಡುವವರಲ್ಲ. ವರ್ತಮಾನ.ಕಾಮ್‌ನಲ್ಲಿ ವಾರದ ಹಿಂದೆ “ಪ್ರಶ್ನೆಗಳಿರುವುದು ಡಿ. ವೀರೇಂದ್ರ ಹೆಗ್ಗಡೆಗೆ!” ಎನ್ನುವ ಲೇಖನ ಬಂದಾಗ ನಾನದನ್ನು ಫೆಸ್‌ಬುಕ್‌ನಲ್ಲಿ ಶೇರ್ ಮಾಡಿಕೊಳ್ಳುತ್ತ ಆ ಹಿನ್ನೆಲೆಯಲ್ಲಿ ಈ ಟಿಪ್ಫಣಿ ಬರೆದಿದ್ದೆ:

“ನಾನು ನಂಬುವ ಸ್ನೇಹಿತರ ಪ್ರಕಾರ ಧರ್ಮಸ್ಥಳ ಮತ್ತು ಅದರ ಸುತ್ತಮುತ್ತ ನಡೆಯುವ ಅನೇಕ ಘಟನೆಗಳು ಅಲ್ಲಿಯ ವ್ಯವಸ್ಥೆಯ ಬಗ್ಗೆ ಸಂಶಯ ಮತ್ತು ಭಯ ಹುಟ್ಟಿಸುವಂತಹವು. ಒಂದು ರೀತಿಯಲ್ಲಿ ಪರ್ಯಾಯ ಸರ್ಕಾರವೇ ಅಲ್ಲಿ ಅಸ್ತಿತ್ವದಲ್ಲಿದೆ ಎನ್ನುತ್ತಾರೆ. ನಾಲ್ಕಾರು ಮರಣದಂಡನೆಗಳಿಗಾಗುವಷ್ಟು ತಪ್ಪು ಮಾಡಿರುವವರು ಅಥವ ಅದರ ಪೋಷಕರು ಅಲ್ಲಿ “ದೊಡ್ಡವರ” ವೇಷದಲ್ಲಿ ಇದ್ದಾರೆ ಎಂದು ಜನ ಹೇಳುತ್ತಾರೆ. ಸೌಜನ್ಯ ಎನ್ನುವ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗಳು ಹೊರಗಿದ್ದಾರೆ, ಅಮಾಯಕ ಮತ್ತು ಮಾನಸಿಕ ಅಸ್ವಸ್ಥನೊಬ್ಬ ಈ ಕೇಸಿನಲ್ಲಿ ಫಿಕ್ಸ್ ಆಗಿ ಬಂದಿಯಾಗಿದ್ದಾನೆ ಎಂದು ವರ್ಷದಿಂದಲೂ ಕೆಲವು ಜನ ಹೇಳುತ್ತಾ, ನ್ಯಾಯಕ್ಕಾಗಿ ಹೋರಾಡುತ್ತ ಬಂದಿದ್ದಾರೆ.

ಜನ ವ್ಯಕ್ತಿಪೂಜೆಯನ್ನು ಬದಿಗಿಟ್ಟು ಸತ್ಯವನ್ನಷ್ಟೇ ನೋಡಲು ಪ್ರಯತ್ನಿಸಬೇಕು ಮತ್ತು ಮತೀಯ ಅಥವ ಆಸ್ತಿಕ ಕಾರಣಗಳಿಗಾಗಿ ಭಾವಾವೇಶಕ್ಕೆ ಒಳಗಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ನಿರಾಕರಣೆ ಮಾಡುವಂತಹ ಹಂತಕ್ಕೆ ತಮ್ಮ ಭಕ್ತಿ ಮತ್ತು ಆಸ್ತಿಕತೆಯನ್ನು ಬಲಿಕೊಡಬಾರದು ಎನ್ನುವುದು ನನ್ನ ಮನವಿ. ಗಾಂಧಿ ಹೇಳುತ್ತಾರೆ, “ಎಲ್ಲಾ ಧರ್ಮಗಳೂ ಮನುಷ್ಯ ನಿರ್ಮಿತ; ಹಾಗಾಗಿಯೇ ಅವು ಅಪೂರ್ಣ.” ಹಾಗಾಗಿ ಮತಾಂಧತೆಗೆ ಒಳಗಾಗದೆ, ದೇವರು ಮತ್ತು ನಮ್ಮ ನಡುವೆ ಇರುವ ಪೂಜಾರಿಯನ್ನು ಮನುಷ್ಯನೆಂದೇ ಪರಿಗಣಿಸಿ ಆತನನ್ನೂ ವಿಮರ್ಶಿಸುವ, ಪ್ರಶ್ನಿಸುವ, ಸಾಕ್ಷಿಗಳು ಇರುವಾಗ ಸಂಶಯಿಸುವ, ಅಂತಿಮವಾಗಿ ಅವನನ್ನು ನಿರಾಕರಿಸುವ ಹಕ್ಕನ್ನು ಉಳಿಸಿಕೊಳ್ಳಬೇಕು.

ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳು ಸೌಜನ್ಯ ಎಂಬ ಈ ನೆಲದ ಹೆಣ್ಣುಮಗಳಿಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ನಡೆಸಲಾಗುತ್ತಿರುವ ಹೋರಾಟವನ್ನು ಮುಚ್ಚಿಡದೆ ಜನರ ಮುಂದೆ ಇಡಬೇಕೆಂದು ವಿನಂತಿಸುತ್ತೇನೆ.”

ಇದಾದ ನಂತರವೇ ನಾನು ಮಂಗಳೂರಿಗೆ ಹೋಗಿದ್ದು. ಅಲ್ಲಿ ಮೇಲಿನದಕ್ಕಿಂತ ಹೆಚ್ಚು ಅಸಹ್ಯ ಹುಟ್ಟಿಸುವ, ಗಾಬರಿಯಾಗಿಸುವ ಮಾತುಗಳನ್ನು ಕೇಳಿದೆ. ಸ್ವತಃ ಈಗಿನ ಧರ್ಮಾಧಿಕಾರಿಯವರ ಸಜ್ಜನೆ ತಾಯಿಯವರು ಎರಡು-ಮೂರು ದಶಕಗಳ ಹಿಂದೆ ದುರ್ಮರಣಕ್ಕೀಡಾದ ಘಟನೆ ಅಪಘಾತವೋ ಅಥವ ಆಯೋಜಿತ ಕೊಲೆಯೋ sowjanya-heggadeಎನ್ನುವ ಸಂಶಯಗಳಿಂದ ಹಿಡಿದು. ಧರ್ಮಸ್ಥಳದ ಸಂಸ್ಥೆ ನಡೆಸುವ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಬೇಕಿದ್ದ ಶ್ರೀಮತಿ ಹರಳೆಯವರನ್ನು ಪೆಟ್ರೋಲ್ ಹಾಕಿ ಸುಟ್ಟ ಕೊಲೆಯ ಬಗ್ಗೆಯೂ ಜನ ಬೇಸರ ಖಿನ್ನತೆಯಿಂದ ಮಾತನಾಡುತ್ತಾರೆ. ಉಜಿರೆಯಲ್ಲಿ ಅವರ ಸಂಸ್ಥೆಯಲ್ಲಿ ಓದಿದ ಕೆಲವು ಪ್ರಾಮಾಣಿಕ ಮತ್ತು ಸಂಯಮಿ ಮನಸ್ಸುಗಳು ಸಹ ಹೆಗ್ಗಡೆಯವರ ಕುಟುಂಬದವರು ತಮ್ಮ ಕೆಳಗಿನ ನೌಕರರನ್ನು ನಡೆಸಿಕೊಳ್ಳುವ ದರ್ಪ ದೌರ್ಜನ್ಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಆ ಕುಟುಂಬದ ಕೆಲವು ದುರಂತಗಳನ್ನು ನೆನೆದು ಬಹುಶಃ ಇದು ನಿಸರ್ಗ ನ್ಯಾಯವೇನೋ ಎನ್ನುತ್ತಾರೆ.

ಹಾಗೆಯೇ, ’ಅವರ ಒಡೆತನದಲ್ಲಿರುವ ತನಕ ನಾನು ಆ ದೇವಸ್ಥಾನಕ್ಕೆ ಹೋಗುವುದಿಲ್ಲ. ಸರ್ಕಾರ ಅದನ್ನು ವಹಿಸಿಕೊಂಡ ದಿನ ಮಂಜುನಾಥನ ದರ್ಶನಕ್ಕೆ ಹೋಗುತ್ತೇನೆ,’ ಎಂದು “ಹರಕೆ” ಹೊತ್ತಿರುವ ಆಸ್ತಿಕರೂ ಇದ್ದಾರೆ.

ವಿಷಯ ದಿನದಿಂದ ದಿನಕ್ಕೆ ಗಂಭೀರವಾಗುತ್ತ ಹೋಗುತ್ತಿದೆ. ನಿಸರ್ಗ ನ್ಯಾಯಕ್ಕಿಂತ ಹೆಚ್ಚಾಗಿ ಈ ನೆಲದ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ. ಇಲ್ಲದಿದ್ದರೆ ನಾವು ಇಂತಹ ವ್ಯವಸ್ಥೆ ಕಟ್ಟಿಕೊಂಡದ್ದಕ್ಕೆ ಅರ್ಥವಾದರೂ ಏನಿರುತ್ತದೆ? ಸೌಜನ್ಯಾಳ ಕೊಲೆ ಪ್ರಕರಣ ಮಾತ್ರವಲ್ಲ, ಇಲ್ಲಿ ಹತ್ತಾರು ವರ್ಷಗಳಿಂದ ದಾಖಲಾಗುತ್ತ ಬಂದಿದ್ದ ಅನಾಥ ಶವಗಳ ಹಿನ್ನೆಲೆ ಏನು, ಅಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಅಸಹಜ ಸಾವುಗಳು ಘಟಿಸಲು ಕಾರಣವೇನು, ಮತ್ತು ಇದ್ದಕ್ಕಿದ್ದಂತೆ ವರ್ಷದಿಂದೀಚೆಗೆ ಅನಾಥ ಶವಗಳು ಸಿಗದೆ ಹೋಗುತ್ತಿರಲು ಕಾರಣವೇನು ಎನ್ನುವುದರ ತನಿಖೆಯೂ ಆಗಬೇಕು. ರಾಜ್ಯ ಸರ್ಕಾರದ ಸಿಐಡಿ ತನಿಖೆ ಎಂದರೆ ಅದು ಬಹಳಷ್ಟು ಸಲ JusticeForSowjanya(ಪಟ್ಟಭದ್ರರು ಮತ್ತು ಪ್ರಭಾವಿಗಳು ಪಾಲ್ಗೊಂಡಿರುವ ಕೇಸುಗಳಲ್ಲಿ) ಮೊದಲೇ ವರದಿ ಸಿದ್ಧಪಡಿಸಿ ನಂತರ ತನಿಖೆಯ ನಾಟಕ ಆಡುವುದು. ಸ್ಥಳೀಯ ಕಾಂಗ್ರೆಸ್ ಶಾಸಕರನ್ನು ಹೊರತುಪಡಿಸಿ ರಾಜ್ಯದ ಅನೇಕ ಕಾಂಗ್ರೆಸ್ ನಾಯಕರು ಮಂಡಿಯೂರಿ ಜೈಕಾರ ಹಾಕುತ್ತಿರುವಾಗ ಸಿಬಿಐ ತನಿಖೆಯಿಂದಲಾದರೂ ಸತ್ಯ ಹೊರಬರುತ್ತದೆ ಎನ್ನುವುದು ಸಂದೇಹಾಸ್ಪದ. ಬಹುಶಃ ಕೆಲವು ಸಂಘಸಂಸ್ಥೆಗಳು ಮತ್ತು ಮಾಧ್ಯಮಗಳೇ ಇದನ್ನು ಮಾಡಬೇಕಿದೆ.

ಈಗ ಹೊರಗುತ್ತಿಗೆಯ ಕಾಲ. ಸರ್ಕಾರದ ಕರ್ತವ್ಯವಾಗಿರುವ ಮತ್ತು ಅದು ಮಾಡಲೇಬೇಕಿರುವ ಕೆಲವು ಸಾಮಾಜಿಕ ಮತ್ತು ಶೈಕ್ಷಣಿಕ ಕೆಲಸಗಳನ್ನು ಕೆಲವು ವ್ಯಕ್ತಿ ಮತ್ತು ಸಂಸ್ಥೆಗಳೇ ಮಾಡಿದಾಕ್ಷಣ ನಾವು ಆ ವ್ಯಕ್ತಿ ಮತ್ತು ಸಂಸ್ಥೆಗಳನ್ನು ವೈಭವೀಕರಿಸಲು ಆರಂಭಿಸಿದರೆ ಸಮಸ್ಯೆ ನಮ್ಮ ತಿಳಿವಳಿಕೆಯದ್ದಾಗುತ್ತದೆ. ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳದ ನಮ್ಮ ಅಯೋಗ್ಯತನದ್ದಾಗುತ್ತದೆ. ಇದೆಲ್ಲವನ್ನೂ ತಿಳಿದುಕೊಳ್ಳದೆ, ನಮ್ಮ ಜವಾಬ್ದಾರಿಗಳನ್ನು ನಿರಾಕರಿಸಿಕೊಂಡು ಕೆಲವು ಸ್ವಾರ್ಥ ಮತ್ತು ಕಪಟಿ ವ್ಯಕ್ತಿಗಳು ಮಾಡುವ ’ಸಮಾಜಮುಖಿ ಕೆಲಸ’ಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅನಗತ್ಯವಾದ ವ್ಯಕ್ತಿನಿಷ್ಟೆ ಮತ್ತು ಆರಾಧನಾ ಮನೋಭಾವ ಬೆಳೆಸಿಕೊಳ್ಳುವುದು ಬೇಡ ಎಂದು ನನ್ನ ಯುವಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪ್ರಬುದ್ಧ ಮತ್ತು ನೈತಿಕ ಮೂಲದ ವ್ಯವಸ್ಥೆ ನಮ್ಮದಾಗಲಿ.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಾಢ್ಯರ ಪಕ್ಷಪಾತಿ ಆಗಬಹುದೇ?

– ಎಚ್.ಕೆ.ಶರತ್

ಒಡಲೊಳಗೆ ಮನುಷ್ಯತ್ವ ಕಾಪಿಟ್ಟುಕೊಂಡ ವ್ಯವಸ್ಥೆಯೊಂದು ಬಲಿಪಶುವಿನ ಪಕ್ಷಪಾತಿಯಾಗಬೇಕೊ ಅಥವಾ ಬೇಟೆಗಾರರ ಪಕ್ಷಪಾತಿಯಾಗಬೇಕೊ?

ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿರುವವರನ್ನು ಈ ಪ್ರಶ್ನೆ ಕಾಡದಿರದು.

ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಯಾರೆಲ್ಲರ ಕೈವಾಡವಿದೆ ಎಂಬ ಪ್ರಶ್ನೆಗೆ ಪ್ರಕರಣದ ಸಮಗ್ರ ತನಿಖೆಯ ನಂತರವಷ್ಟೇ ಉತ್ತರ ಸಿಗಲಿದೆ. ಪ್ರಕರಣ ನಡೆದು ಒಂದು ವರ್ಷ ಕಳೆದರೂ ನಿಜವಾದ ಅಪರಾಧಿಗಳ ಬಂಧನವಾಗಿಲ್ಲವೆಂಬ ಆರೋಪ ಕೇಳಿಬರುತ್ತಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹತ್ತಿರದ ಸಂಬಂಧಿ ಕೂಡ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ sowjanya-rape-murderಎಂಬ ಆರೋಪ ಹೊರ ಬಿದ್ದಿದ್ದೇ ತಡ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಲಾರಂಭಿಸಿದೆ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಧರ್ಮಸ್ಥಳದ ಕೆಲ ಭಕ್ತಾಧಿಗಳು ಹಾಗು ಹೆಗ್ಗಡೆ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡವರು ದೂರುತ್ತಿದ್ದಾರೆ.

ಸೌಜನ್ಯ ಎಂಬ ಅಮಾಯಕ ಹುಡುಗಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗಿಂತ ಇವರಿಗೆ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ರೂಪುಗೊಂಡವರ ಕುಟುಂಬದ ವಿರುದ್ಧ ಕೆಲವರು ಹೊರಿಸುತ್ತಿರುವ ಆರೋಪವೇ ದೊಡ್ಡ ಪ್ರಮಾದವಾಗಿ ತೋರುತ್ತಿರುವುದು ವಿಪರ್ಯಾಸವೇ ಸರಿ.

ಭವಿಷ್ಯದ ಕುರಿತು ಅಸಂಖ್ಯ ಕನಸುಗಳನ್ನು ಕಟ್ಟಿಕೊಂಡಿದ್ದ ಜೀವವೊಂದನ್ನು ಕೆಲ ವಿಕೃತ ಮನಸ್ಸುಗಳು ತಮ್ಮ ತೆವಲಿಗಾಗಿ ಹೊಸಕಿ ಹಾಕಿವೆ. ವಿಕೃತಿ ಮೆರೆದವರ ವಿರುದ್ಧ ತಿರುಗಿ ಬೀಳಬೇಕಿದ್ದ ವ್ಯವಸ್ಥೆಯೊಂದು ತನ್ನೊಳಗೆ ಇನ್ನಿಲ್ಲದ ಗೊಂದಲ ಸೃಷ್ಟಿಸಿಕೊಂಡು, ಹೀನ ಕೃತ್ಯ ಎಸಗಿದವರು ತೆರೆಮರೆಯಲ್ಲಿ ಮೆರೆಯಲು ಬಿಟ್ಟಿರುವುದು ದುರಂತ.

ಮನುಷ್ಯತ್ವವುಳ್ಳ ಮನಸ್ಸುಗಳು ಮಿಡಿಯಬೇಕಿರುವುದು ಬಲಿಪಶುವಿನ ಕೂಗಿಗೋ ಅಥವಾ ಬೇಟೆಗಾರರ ಮೊಸಳೆ ಕಣ್ಣೀರಿಗೋ?

ಪ್ರಕರಣದ ಕುರಿತು ಸಮಗ್ರ ತನಿಖೆಯಾಗದೆ ಯಾರಿಗೂ ಅಪರಾಧಿ ಅಥವಾ ನಿರಪರಾಧಿ ಪಟ್ಟ ಕಟ್ಟಲಾಗದು. ಅದರಲ್ಲೂ ಬಲಾಢ್ಯರನ್ನು ಸಕಾರಣವಿಲ್ಲದೆ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲಂತೂ ಸಾಧ್ಯವೇ ಇಲ್ಲ.

ವಾಸ್ತವ ಹೀಗಿದ್ದರೂ, ‘ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಕಳಂಕ ತರುವ ಸಲುವಾಗಿಯೇ ಅವರ ಸಂಬಂಧಿ ಪ್ರಕರಣದಲ್ಲಿ ಭಾಗಿಯಾದ್ದಾನೆ ಎಂದು ಆರೋಪಿಸಲಾಗುತ್ತಿದೆ. ಈ ಪ್ರಕರಣದಿಂದ ಹೆಗ್ಗಡೆ ಕುಟುಂಬವನ್ನು ಹೊರಗಿಡಬೇಕು’ ಎಂದು ಆಗ್ರಹಿಸಿ ಒಂದು ಗುಂಪು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದೆ.

ಸೌಜನ್ಯ ಹತ್ಯೆ ನಡೆದ ನಂತರ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಡೆಯದಷ್ಟು ಪ್ರತಿಭಟನೆಗಳು ಇದೀಗ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಸದಸ್ಯನ ಹೆಸರು ಪ್ರಸ್ತಾಪವಾದ ಮಾತ್ರಕ್ಕೆ ಆ ಕುಟುಂಬದ ಘನತೆ ಕಾಪಾಡುವ ಸಲುವಾಗಿ ನಡೆಯುತ್ತಿರುವುದು ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ?

ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರು ಎಲ್ಲ ರೀತಿಯಿಂದಲೂ ಬಲಾಢ್ಯರಾಗಿದ್ದಾರೆ. ಅಗತ್ಯವಿದ್ದರೆ ಕಾನೂನು ನೆರವು ಪಡೆಯುವುದು dharmasthala-veernedra-heggadeಅವರಿಗೆ ಕಷ್ಟವಾಗಲಾರದು. ಪ್ರಕರಣದಲ್ಲಿ ಅವರ ಕುಟುಂಬ ಸದಸ್ಯರ ಕೈವಾಡ ಇರದಿದ್ದರೆ, ತನಿಖೆಯಿಂದ ಯಾವುದೇ ಸಮಸ್ಯೆಯಂತೂ ಆಗುವುದಿಲ್ಲ. ಹೀಗಿರುವಾಗ ಹೆಗ್ಗಡೆ ಅವರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ನೆಪ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಏನನ್ನು ಸೂಚಿಸುತ್ತಿದೆ?

ವ್ಯವಸ್ಥೆಗಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ಯಾರೇ ಆಗಿರಲಿ, ಅವರು ಪ್ರಶ್ನಾತೀತರಲ್ಲ. ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡುವ ವ್ಯಕ್ತಿಯೊಬ್ಬರು, ತಮ್ಮ ಹಾಗು ಕುಟುಂಬ ಸದಸ್ಯರ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪರಿ ಮತ್ತು ಟೀಕೆಗಳನ್ನು ಜೀರ್ಣಿಸಿಕೊಳ್ಳಲು ಹೆಣಗುತ್ತಿರುವ ರೀತಿ ಗಮನಿಸಿದರೆ, ಇಲ್ಲಿ ಎಲ್ಲವೂ ಅಂದುಕೊಂಡಷ್ಟು ಸರಳವಾಗಿಲ್ಲ ಎಂಬುದು ಮನದಟ್ಟಾಗುತ್ತದೆ.

ಸೌಜನ್ಯ ಎಂಬ ಹುಡುಗಿಗಾಗಿ ದನಿ ಎತ್ತದ ಕೆಲ ಶಾಸಕರು, ಸಚಿವರು ಹಾಗು ರಾಜಕಾರಣಿಗಳು ಇದೀಗ ವೀರೇಂದ್ರ ಹೆಗ್ಗಡೆ ಅವರಿಗಾಗಿ ರಂಗಪ್ರವೇಶ ಮಾಡಿರುವುದು ಪ್ರಕರಣದ ಹಿಂದಿರಬಹುದಾದ ಒಳಸುಳಿಗಳಿಗೆ ಕನ್ನಡಿ ಹಿಡಿಯುತ್ತಿರುವಂತೆ ಭಾಸವಾಗುತ್ತಿದೆ.

ಯಾರ ಜಪ್ತಿಗೂ ಸಿಗದ ಧರ್ಮಸ್ಥಳದ ಕಲೋನಿಯಲ್ ಪಟ್ಟಭದ್ರ ವ್ಯವಸ್ಥೆ

– ಬಿ.ಶ್ರೀಪಾದ ಭಟ್

ಒಂದು ವರ್ಷದ ಹಿಂದೆ ನಡೆದ ಸೌಜನ್ಯ ಹತ್ಯೆ ಪ್ರಕರಣ ಈಗ ಅನಿರೀಕ್ಷಿತವಾದ ತಿರುವು ಪಡೆದುಕೊಂಡು ಕಡೆಗೆ ಧರ್ಮಸ್ಥಳದ ಸೋ ಕಾಲ್ಡ್ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಅಂಗಳಕ್ಕೆ ಬಂದು ತಲುಪಿದೆ. ಅಷ್ಟೇ ಅಲ್ಲ ಅವರಿಗೆ ಉರುಳಾಗುತ್ತಾ ಸಾಗಿದೆ. ಇವರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿದೆ. Dharmasthala_Templeಇಂದು ಸೌಜನ್ಯ ಹತ್ಯೆಯ ಹಿಂದೆಯೇ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಕಳೆದ ಕೆಲವು ವರ್ಷಗಳಿಂದ ನಿಗೂಢ ಕೊಲೆಗಳು ಮತ್ತು ಅದು ಮುಚ್ಚಿ ಹಾಕಿದ ಪ್ರಭಾವಶಾಲಿ ವ್ಯಕ್ತಿ ಮತ್ತು ಸಂಸ್ಥೆಗಳ ಕೈವಾಡ ಇಂದು ಬಯಲಿಗೆ ಬರುತ್ತಿದೆ.

ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಕೆಲವು ವರ್ಷಗಳಿಂದ ಧರ್ಮಸ್ಥಳ ಮತ್ತು ಉಜಿರೆಯ ಸುತ್ತ ಮುತ್ತ ನಡೆದಿದೆ ಎನ್ನಲಾದ ಕೊಲೆಗಳ ಸತ್ಯಶೋಧನೆಗಾಗಿ ಮಂಗಳೂರಿನ ಕಮ್ಯುನಿಷ್ಟ ಮಿತ್ರರು ಕಳೆದ ಒಂದು ವರ್ಷದಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟ ಈ ಪ್ರಕರಣ ಮರುಜೀವ ಪಡೆದುಕೊಳ್ಳಲು ಕಾರಣ. ನಿಸ್ವಾರ್ಥದಿಂದ ಈ ಹೋರಾಟವನ್ನು ನಡೆಸಿದ ನಮ್ಮ ಕಮ್ಯುನಿಷ್ಟ ಮಿತ್ರರಿಗೆ ಕನ್ನಡಿಗರು ಧನ್ಯವಾದಗಳನ್ನು ಹೇಳಬೇಕಾಗಿದೆ. ನಮ್ಮ ಮಿತ್ರರು ಇದೇ ತಿಂಗಳು ಸೌಜನ್ಯಳ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 18ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ. ನಮ್ಮ ಪ್ರೀತಿಯ ಗೆಳೆಯರಿಗೆ ನಾವೆಲ್ಲ ಸಂಪೂರ್ಣ ಬೆಂಬಲ ಕೊಡಬೇಕಾಗಿದೆ.

ಪ್ರಜಾಪ್ರಭುತ್ವದ ದೇಶದಲ್ಲೂ ಧರ್ಮಸ್ಥಳದಲ್ಲಿ ಈ ವೀರೇಂದ್ರ ಹೆಗ್ಗಡೆಯವರು ಅನಭಿಷಕ್ತ ರಾಜರಂತೆ ರಾಜ್ಯಾಭಾರ ನಡೆಸುತ್ತಿದ್ದಾರೆ. ಅಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಅವರ ಉಕ್ಕಿನ ಹಿಡಿತ ಸಡಿಲಗೊಂಡಿಲ್ಲ. ಇಂದು ಈ ಸರ್ವಾಧಿಕಾರದ ಆಡಳಿತಕ್ಕೆ ಸಮಾಜ ಸೇವೆಯ ಮುಖವಾಡ ಗಟ್ಟಿಯಾಗಿ ಅಂಟಿಕೊಂಡಿದೆ. ಇಷ್ಟಾದರೂ ನಮ್ಮ ದೇಶದ ಪ್ರಜಾಪ್ರಭುತ್ವದ ಸಂವಿಧಾನ ಸಮಾನತೆಗಾಗಿ ಕಲ್ಪಿಸಿಕೊಟ್ಟ ಅಲ್ಪಸಂಖ್ಯಾತರಿಗಾಗಿ ಇರುವ ಮೀಸಲಾತಿಯ ಸವಲತ್ತನ್ನು ತಮ್ಮ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಬಳಸಿಕೊಳ್ಳಲು ಈ  ವೀರೇಂದ್ರ ಹೆಗ್ಗಡೆಯವರಿಗೆ ಯಾವುದೇ ಸಂಕೋಚವಿಲ್ಲ. ಮಾತೆತ್ತಿದರೆ ನಮ್ಮ ಪರಿಸರ, ನಮ್ಮ ಸಂಸ್ಕೃತಿಯ ಕುರಿತಾಗಿ ಮಾತನಾಡುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಸುತ್ತಮುತ್ತ ವಸಾಹುಶಾಹಿಯ ಸಮಾಜವನ್ನು ನಿರ್ಮಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಅದು ಕಲೋನಿಯಲ್ ರೂಪದಂತೆ ಗೋಚರಿಸದಿರಲು ಅಲ್ಲಿ ಉದಾರವಾದಿ ಮುಖವಾಡವನ್ನು ತೊಡಿಸಲಾಗಿದೆ. ಇದಕ್ಕೆ ಪೂರಕವಾಗಿ ವೀರೇಂದ್ರ ಹೆಗ್ಗಡೆಯವರ ಸಂಘ ಸಂಸ್ಥೆಗಳ ಸಮಾಜ ಸೇವೆಯ ಗರಿಗಳು ಮುಡಿಗೇರಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಮೂಡಿಸಿದೆ. ಈ ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಮೂಲಭೂತವಾದವನ್ನು ಪ್ರಗತಿಪರರು ಬಿಚ್ಚಿ ತೋರಿಸಿದರೆ ಬೆಂಬಲಿಗರು ಅದನ್ನು ಅಲ್ಲಗೆಳೆಯದೆಯೇ ಬದಲಾಗಿ ಹೆಗ್ಗಡೆಯವರ ಸಮಾಜಸೇವೆಯ ಪಟ್ಟಿಗಳನ್ನು ನೀಡಿ ಇದೇ ಅವರ ಅಸ್ಮಿತೆ ನೆನಪಿರಲಿ ಎಂದು ತಾಕೀತು ಮಾಡುತ್ತಾರೆ. ಇಂದು ಧರ್ಮಸ್ಥಳದ ಧಾರ್ಮಿಕತೆಯ ಅಮಾನವೀಯ ಅಟ್ಟಹಾಸವನ್ನು Sowjanya-Rape-Murderದೈವತ್ವದ ಪವಾಡವಾಗಿ ಬಳಸಿಕೊಂಡಿರುವುದು ವೀರೇಂದ್ರ ಹೆಗ್ಗಡೆಯವರ ಚಾಣಾಕ್ಷತೆ ಎನ್ನುವದರಲ್ಲಿ ಅನುಮಾನವೇ ಇಲ್ಲ. ಅಲ್ಲಿನ ಗುಲಾಮಿತನವನ್ನು ಭಕ್ತಿಯ ಪರಾಕಷ್ಟೆಯೆಂಬಂತೆ ಜಗಜ್ಜಾಹೀರುಗೊಳಿಸಿರುವುದು ವೀರೇಂದ್ರ ಹೆಗ್ಗಡೆಯವರ ಬಲು ದೊಡ್ಡ ಮಾರ್ಕೆಟಿಂಗ್‌ ಸಕ್ಸೆಸ್. ಅಲ್ಲಿನ ನಾಗರಿಕರು ಚಿಂತನೆಗೆ ಒರೆ ಹಚ್ಚಬೇಕಾದಂತಹ ತಮ್ಮದೇ ಆದ ಮಿದುಳನ್ನು ಮೌನವಾಗಿ ನಿಷ್ಕ್ರಿಯೆಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಪದತಲದಲ್ಲಿ ಮುಡಿಪಾಗಿರಿಸಿದ್ದಾರೆ. ಕಲೋನಿಯಲ್ನ ಈ ದಿಗ್ವಿಜಯದ ಫಲವಾಗಿ  ಅಲ್ಲಿನ ‘ಒಡೆಯ-ಗುಲಾಮ’ ವ್ಯವಸ್ಥೆ ಗುರು-ಶಿಷ್ಯ ಸಂಬಂಧದ ಮುಖವಾಡ ಧರಿಸಿದೆ. ಹಾಗಾದಲ್ಲಿ ವೀರೇಂದ್ರ ಹೆಡೆಯವರ ಸಾಮ್ರಾಜ್ಯದಲ್ಲಿ ಆಧುನಿಕತೆಯ, ವೈಚಾರಿಕತೆಯ ವ್ಯಾಖ್ಯಾನವೇನು?? ಸ್ವಘೋಷಿತ ಧಾರ್ಮಿಕ ನಾಯಕನ ಈ ಸಕ್ಸೆಸ್ ಓಟ ಎಗ್ಗಿಲ್ಲದೆ ಜನಬೆಂಬಲ ಪಡೆದುಕೊಳ್ಳತೊಡಗಿದರೆ ಇನ್ನೆಲ್ಲಿದೆ ಮಾನವೀಯ ನಾಯಪರವಾದ ಸಂವಾದ?? ಇನ್ನೆಲ್ಲಿದೆ ಹೃದಯ ವೈಶಾಲ್ಯತೆ?

ಈ ವೀರೇಂದ್ರ ಹೆಗ್ಗಡೆಯವರ ಈ ಶಕ್ತಿಕೇಂದ್ರ ಯಾವುದೇ ಬಗೆಯ ಹೊನ್ನಾಳಿ ಹೊಡೆತಕ್ಕೂ, ಬಲವಾದ ಸುತ್ತಿಗೆ ಏಟಿಗೂ ಒಂದಿಂಚೂ ಅಲ್ಲಾಡದಿರಲು ಕಾರಣವೇನು?? ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ ಪ್ರಕರಣಗಳು ಸೂಕ್ತವಾಗಿ ತನಿಖೆಯಾಗದಂತೆ ತಡೆಯುತ್ತಿರುವ ಕಾಣದ ಕೈಗಳಾವವು?? ಅಲ್ಲಿನ ಪೋಲೀಸರು ನಿಷ್ಪಕ್ಷಪಾತ ತನಿಖೆ ನಡೆಸದಂತೆ ನಿಗ್ರಹಿಸುತ್ತಿರುವ ರಾಜಕೀಯ ಶಕ್ತಿಗಳಾವುವು?? ಉತ್ತರ ಕ್ಲಿಷ್ಟವೇನಲ್ಲ. ತುಂಬಾ ಸರಳ.

ಸೀನ್ 1:
ಈ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಕೊಲೆ ಸಂಚಿನ ಆರೋಪ ಎದುರಿಸುತ್ತಿರುವಂತಹ ಈ ಸೂಕ್ಷ್ಮ ಸಂದರ್ಭದಲ್ಲಿ  ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ಬುದ್ಧಿಜೀವಿ ರಾಜಕಾರಣಿ ಎಂದೇ ಪ್ರಖ್ಯಾತರಾದ ಕನ್ನಡ ಚಿತ್ರಕಲಾ ಪರಿಷತ್‌ನ ಅಧ್ಯಕ್ಷರೂ ಆಗಿರುವ ರಾಜಕಾರಣಿ ಬಿ.ಎಲ್. ಶಂಕರ್ ಏಕಾಏಕಿ ಅವರಿಗೆ ಬೆಂಬಲ ಸೂಚಿಸುತ್ತಿರುವುದರಲ್ಲಿ ಈ ಉತ್ತರ ಅಡಗಿದೆ.

ಸೀನ್ 2:
17ನೇ ಅಕ್ಟೋಬರ್ 2013ರಂದು ತನ್ನ ಶಕ್ತಿಯನ್ನು ಸಾಬೀತುಪಡಿಸಲು ಉಜಿರೆಯಲ್ಲಿ ರಾಜಕಾರಣಿಯಂತೆ ತನ್ನ ಬೆಂಬಲಿಗರ ಸಮಾವೇಶ ನಡೆಸಿದ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾಚಿಕೆ, ಮಾನವಿಲ್ಲದೆ ವೇದಿಕೆ ಹಂಚಿಕೊಂಡ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ವೀರೇಂದ್ರ ಹೆಗ್ಗಡೆಯವರ ಪರವಾಗಿ ಜಿದ್ದಿಗೆ ಬಿದ್ದವರಂತೆ ಮಾತನಾಡಿದರು. ಇವರಿಗೆ ಸಂವಿಧಾನದ ಆಶಯಗಳೇ ಮರೆತುಹೋಗಿದ್ದು ದುರಂತವಲ್ಲದೇ ಮತ್ತಿನ್ನೇನು ?? ನೆನಪಿರಲಿ ಇವರೆಲ್ಲ ಸೆಕ್ಯುಲರ್ ರಾಜಕಾರಣಿಗಳು.

ಸೀನ್ 3:
17ನೇ ಅಕ್ಟೋಬರ್ 2013ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಸಭ್ಯ, ನಿಷ್ಠಾವಂತ, ಶಿಕ್ಷಿತ, ಸೆಕ್ಯುಲರ್ ರಾಜಕಾರಣಿ ಎಂದೇ ಪ್ರಖ್ಯಾತರಾದ  ಕಾಂಗ್ರೆಸ್‌ನ ಸುದರ್ಶನ್, ಜನಪರ ರಾಜಕಾರಣಿ ಎಂದು ಪ್ರಸಿದ್ಧಿ ಪಡೆದ ಸಿಂಧ್ಯಾ, ಮತಾಂಧ ರಾಜಕಾರಣಿ ಸಿ.ಟಿ.ರವಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಮತ್ತು ಪ್ರಖ್ಯಾತ, ಜಾತ್ಯಾತೀತ, ಸೆಕ್ಯುಲರ್ ಸಾಹಿತಿಗಳಾದ ಕಮಲಾ ಹಂಪಾನಾ ಮತ್ತು ಇತ್ಯಾದಿ, ಇತ್ಯಾದಿ, ಇತ್ಯಾದಿ ಮುಖಂಡರು!!

ಸೀನ್ 4:
ಕೇವಲ ಕನ್ನಡ ಸಾಹಿತ್ಯ ಸಂಬಂದಿತ ವಿವಾದಗಳಿಗೆ ಮಾತ್ರ ತೀಕ್ಷಣವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಮುಗಿಲುಮುಟ್ಟುವಂತೆ ಘೋಷಿಸುವ ನಮ್ಮ ಬಹುಪಾಲು ಸಾಹಿತಿಗಳು ಮತ್ತು ವಿಮರ್ಶಕರು ಸಾಹಿತ್ಯೇತರವಾದ ಯಾವುದೇ ಬಗೆಯ ಶೋಷಣೆಯ ಕುರಿತಾಗಿ ತಳೆಯುವ ದಿವ್ಯ ನಿರ್ಲಕ್ಷ್ಯ, ನ್ಯಾಯದ, ಸಮತಾವಾದದ ಪರವಾಗಿ ಚಳುವಳಿ ನಡೆಸುವ ಚಳುವಳಿಗಾರರ ಕುರಿತಾದ ಈ ಯುಜಿಸಿ ಪಂಡಿತರ ಅಸಡ್ಡೆ ಇವರ ಕುರಿತಾಗಿ ನಮ್ಮಲ್ಲಿ ಅಸಹ್ಯ ಹುಟ್ಟಿಸಲು ಮಾತ್ರ ಸಾಧ್ಯವಷ್ಟೇ. ಇವರೆಲ್ಲ ತಿರಸ್ಕಾರಕ್ಕೆ ಮಾತ್ರ ಅರ್ಹರು. ಕನ್ನಡಿಗರು ಇವರ ಬೌದ್ಧಿಕ ಅಹಂಕಾರವನ್ನು ನಿರಾಕರಿಸಿ ಎಷ್ಟು ಬೇಗ ಮೂಲೆಗೆ ಎಸೆಯುತ್ತಾರೋ ಅಷ್ಟು ಒಳ್ಳೆಯದು. ಚಿಂತಕರು ಹೇಳಿದಂತೆ ಸಮತಾವಾದದ, ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದದ್ದೇನೆಂದರೆ ಪ್ರಜ್ಞಾವಂತರ, ಅಧಿಕಾರಶಾಹಿಯ ದಿವ್ಯ ಮೌನ. ಅನ್ಯಾಯದ, ಅತ್ಯಾಚಾರದ ವಿರುದ್ಧ ತುಟಿಬಿಚ್ಚದ ಭೀಕರವಾದ ಈ ಮೌನ ದಿನಗಳೆದಂತೆ ಒಂದೇ ಏಟಿಗೆ ಎಲ್ಲಾ ಬಗೆಯ ಮಾನವೀಯ, ಜನಪರ ಚಳುವಳಿಗಳನ್ನು ನಾಶಮಾಡಬಲ್ಲದು. ಅಂದರೆ ನ್ಯಾಯದ ಪರವಾಗಿ ಹೋರಾಟ ನಡೆಸುತ್ತಿರುವ ಚಳುವಳಿಗಾರರ ಪರವಾಗಿ ನೀವು ಮಾತನಾಡಲಿಲ್ಲವೆಂದರೆ ನೀವು ನಮ್ಮ ವಿರುದ್ಧ ಇದ್ದೀರಿ ಎಂಬುದಷ್ಟೇ ಈ ಭೀಕರ ಮೌನದ ತಾತ್ಪರ್ಯ. ಈ ಅತ್ಯಾಚಾರ, ಹಲ್ಲೆಗಳನ್ನು ನಡೆಸುವ ಪಟ್ಟಭದ್ರ ವ್ಯವಸ್ಥೆಯನ್ನು ವಿರೋಧಿಸುವವರೆನ್ನಲ್ಲ ತಂಟೆಕೋರರೆಂದು ವ್ಯಾಖ್ಯಾನಿಸುವ ಗುಂಪಿಗೆ ಈ ಮೌನಧಾರಿಗಳೂ ಸೇರಿಕೊಂಡಿದ್ದಾರೆ ಎಂಬುದು ಸೂರ್ಯ ಸ್ಪಷ್ಟ.

ಸೀನ್ 5 :
ಬದಲಾವಣೆಯ ತಂಗಾಳಿ ಬೀಸಿದೆ ಎನ್ನುವ ಹೆಗ್ಗಳಿಕೆಯೊಂದಿಗೆ ಗದ್ದುಗೆ ಹಿಡಿದಿರುವ ಸೋ ಕಾಲ್ಡ್ ಸೆಕ್ಯುಲರ್ ಪಕ್ಷ ಕಾಂಗ್ರೆಸ್‌ನ ದಿವ್ಯ ಮೌನದ ಅರ್ಥ ಬಿಡಿಸಿ ಹೇಳಬೇಕೆ ?? ತನ್ನ ರಾಜ್ಯಭಾರದಲ್ಲಿ ಯಾವುದೇ ಪ್ರಜೆಗೆ ಅನ್ಯಾಯವಾದರೂ ತನ್ನ ಶಾಸಕಾಂಗ ಮತ್ತು ಕಾರ್ಯಾಂಗವು ಆತನ/ಆಕೆಯ ಪರವಾಗಿ ಬೆಂಬಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆನ್ನುವುದು ಸಂವಿಧಾನ ಮೂಲ ಆಶಯವೆಂಬುದು ನಮ್ಮ ಮಾನವೀಯ ರಾಜಕಾರಣಿ ಸಿದ್ಧರಾಮಣ್ಣನವರಿಗೆ ಮರೆತು ಹೋಯಿತೆ? ಅಥವಾ ಜಾಣ ಮೌನವೇ !! ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಮತ್ತು ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳ ಸುತ್ತಮುತ್ತ ನಡೆದ ಅಸಹಜ ಕೊಲೆಗಳ ವಿರುದ್ಧದ ತನಿಖೆ ಮುಗಿಯುವವರೆಗೂ ತನ್ನ ಸರ್ಕಾರದ ಮಂತ್ರಿಗಳಿಗೆ, ತನ್ನ ಪಕ್ಷದ ಶಾಸಕರಿಗೆ, ಕಾರ್ಯಕರ್ತರಿಗೆ ನೀತಿಸಂಹಿತೆಯನ್ನು ಬೋಧಿಸಿ ಈ ಹೆಗ್ಗಡೆಯವರೊಂದಿಗೆ ಸಮಾನ ದೂರದಲ್ಲಿರಬೇಕೆಂದು ಆದೇಶಿಸಲು ಸಿದ್ಧರಾಮಯ್ಯನವರಿಗೆ ಇರುವ ತೊಂದರೆಯಾದರೂ ಏನು? ಅದು ಒಂದೇ ತೊಂದರೆ, ಅದು ರಾಜಕೀಯ ಇಚ್ಛಾಶಕ್ತಿಯ ಕೊರತೆ.

ಬಹುಮತವೇ ನಿರ್ಣಾಯಕವಾಗುವಂತಹ ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವೀರೇಂದ್ರ ಹೆಗ್ಗಡೆಯಂತಹ ಅತಿರಥರಿಗೆ ರಾಜ್ಯಾದ್ಯಾಂತ ಈ ನಿಗೂಢ ಬಹುಮತವನ್ನು ಗಳಿಸುವುದು ನೀರು ಕುಡಿದಷ್ಟೇ ಸುಲಭ. ಈ ನಿಗೂಢ ಬಹುಮತವನ್ನು ಆಧಾರವಾಗಿಟ್ಟುಕೊಂಡು ಶತಮಾನಗಳವರೆಗೆ ತನ್ನ ಸ್ಥಾನ ಮಾನವನ್ನು ಅಭಾದಿತವಾಗಿ ಕಾಪಾಡಿಕೊಳ್ಳುವ ನೈಪುಣ್ಯತೆಯೂ ವೀರೇಂದ್ರ ಹೆಗ್ಗಡೆಯವರಿಗೆ ಗೊತ್ತು.  ಸ್ನೇಹ – ಪ್ರೀತಿ – ಭಕ್ತಿಯ ಅಪೂರ್ವ ಸಮ್ಮಿಳನದ ಫಲವನ್ನು ಪಡೆದುಕೊಳ್ಳುವ ಕಲೆಗಾರಿಕೆ ಈ ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಿಸಿದೆ.

ಆದರೆ ಇದನ್ನು ವಿರೋಧಿಸುವ ನೈತಿಕತೆ ಮತ್ತು ಪ್ರಾಮಾಣಿಕತೆ ನಮಗೆ ಸಿದ್ಧಿಸಿಲ್ಲವಲ್ಲ! ಇದಲ್ಲವೇ ದುರಂತ.

ಸೌಜನ್ಯ ಹತ್ಯೆ: ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು

– ಶೌರೀಶ್ ಕುದ್ಕುಳಿ

ಪ್ರಜ್ಞಾಪೂರ್ವಕವಾಗಿ ಎಸಗಿದಂತಹ ಒಂದು ಮೃಗೀಯ ಕಾರ್ಯವನ್ನು ಮರೆಮಾಚುವ ಕೆಲಸ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಒಂದು ವರ್ಷದ ಹಿಂದೆ ಸೌಜನ್ಯ ಎಂಬ ಅಮಾಯಕ ಹೆಣ್ಣು ಮಗಳ ದಾರುಣ ಹತ್ಯೆಯಾಯಿತು. ಕೆಲವು ಕಾಮುಕರು ಆಕೆಯನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು, ಕೊಂದು ಹಾಕಿದರು. ಆ ಹೊತ್ತಲ್ಲಿ, ದೇಹದಲ್ಲಿ ಜೀವಾತ್ಮವಿದ್ದ ಪ್ರತಿ ಮಾನವನೂ ಯಾವ ರೀತಿ ಪ್ರಾಣ ಮತ್ತು ಮಾನ ಉಳಿಸಿಕೊಳ್ಳಲು sowjanya-murderedಒದ್ದಾಡುತ್ತಾನೆಯೋ, ಅದೇ ರೀತಿ ಆಕೆಯೂ ತನ್ನ ಪ್ರಾಣರಕ್ಷಣೆಗೆ ವಿಲವಿಲ ಒದ್ದಾಡಿದ ಕುರುಹುಗಳು ನಿಖರವಾಗಿ ಕಾಣಿಸಿವೆ. ತನ್ನ ಅರಿವಿಗೆ ಸಾವಿನ ಕೊನೆಗಳಿಗೆ ಕಾಣಿಸುತ್ತಿದ್ದು, ಅದನ್ನು ಇನ್ನಾರೋ ಬಲಾತ್ಕಾರವಾಗಿ ಹೇರುತ್ತಿರುವಾಗ, ಅದರಿಂದ ಬಿಡುಗಡೆ ಪಡೆಯುವ ಹೊತ್ತಿನಲ್ಲಿ ನಡೆಸುವ ಫಲಕಾರಿಯಲ್ಲದ ಹೋರಾಟ ಮತ್ತು ಆ ವೇದನೆ ಊಹಿಸಿಕೊಂಡರೆ ಎದೆ ನಡುಗುವಂತಹುದು.

ಧರ್ಮವೇ ನೆಲೆನಿಂತ ಬೀಡಾದ ತುಳುನಾಡು ಮತ್ತು ಕರ್ನಾಟಕದಾದ್ಯಂತ ಮನೆಮಾತಾದ ಶ್ರೀ ಮಂಜುನಾಥನಿರುವ ಧರ್ಮಸ್ಥಳದಲ್ಲಿ ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರ ನಡೆಸಿದರು. ಮನೆಗೆ ತೆರಳುವ ಹಾದಿ ಬದಿಯಲ್ಲಿ, ಸಂಜೆ ಸುಮಾರು 5 ಗಂಟೆ ಹೊತ್ತಿಗೆ ನಡೆದ ಈ ಘಟನೆಯ ಸ್ಥಳ ಆ ಸಂದರ್ಭದ ಭೀಕರತೆಯ ಕರಾಳತೆಗೆ ಸಾಕ್ಷಿ. ಮಾನರಕ್ಷಣೆ ಮತ್ತು ಜೀವರಕ್ಷಣೆಗಾಗಿ ಆಕೆ ಒದ್ದಾಡಿರಬಹುದಾದ ಪರಿ, ಆಕೆಯ ಶವ ಬಿದ್ದಿದ್ದ ಜಾಗದಲ್ಲಿರುವ ಕುರುಹುಗಳು ಎಂತಹವರನ್ನೂ ಬೆಚ್ಚಿ ಬೀಳಿಸುವಂತಹದ್ದು. ಕೈ ಕಾಲುಗಳನ್ನು ಮರಕ್ಕೆ ಕಟ್ಟಿ ಹಾಕಿದ ಭೀಭತ್ಸ ಚಿತ್ರ ಹಾಗೆಯೇ ಇತ್ತು. ಕಾಲೇಜಿನ ಗುರುತುಪತ್ರದ ದಾರವೇ ಕತ್ತು ಹಿಸುಕಿ ಕೊಲೆ ಮಾಡಲು ಬಳಸಿದ ಹಗ್ಗವಾಗಿತ್ತು.

ಈ ಘಟನೆಗೆ ಹಲವು ಸಂಘಟನೆಗಳು ಅದರಲ್ಲೂ ವಿದ್ಯಾರ್ಥಿ ಸಂಘಟನೆಗಳು ಮೌನವಾಗಿ ಕಣ್ಣೀರು ಸುರಿಸಿದವು. ಬೀದಿಗಿಳಿದು ಪ್ರತಿಭಟನೆ ಮಾಡಿದವು. ಆದರೆ ಸಾರ್ವಜನಿಕ ಸ್ಮರಣೆ ಅಥವಾ ನೆನಪು ಕ್ಷಣಕಾಲ ಎನ್ನುವಂತೆ, ಸಾರ್ವಜನಿಕರ ರೋಷದ ಬೆಂಕಿ ಇಂದು ತಣ್ಣಗಾಗುತ್ತಿದೆ. ಕಟುಕರು ಬೀದಿಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದಾರೆ.

ಇವುಗಳ ಅರಿವಿರುವ ಜನತೆ ನ್ಯಾಯಾಲಯ, ಪೋಲಿಸ್ ವ್ಯವಸ್ಥೆ ಮತ್ತು ಅಂತಿಮವಾಗಿ ಸರಕಾರದ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳಾ ಸಂಘಟನೆಗಳು ಮೂಕ ವೇದನವನ್ನು ಅನುಭವಿಸುತ್ತಿವೆಯೋ ಎನ್ನುವಂತೆ ಭಾಸವಾಗುತ್ತಿದೆ! ಮಂಗಳೂರಿನ ಪಬ್ ದಾಳಿಗೊಳಗಾದ ಹೆಣ್ಣು ಮಕ್ಕಳಿಗೆ ದೊರಕಿದ್ದ ಬೆಂಬಲ ಮೈಸೂರಿನಲ್ಲಿ ರೈಲಿನಿಂದ ತಳ್ಳಲ್ಪಟ್ಟ ಹೆಣ್ಣು ಮಗಳಿಗೆ ದೊರಕಿಲ್ಲ! JusticeForSowjanyaಹಾಗೆಯೇ ಧರ್ಮಸ್ಥಳದ ಸೌಜನ್ಯಳ ಅಮಾನುಷ ಕೊಲೆಯ ಖಂಡಿಸಿ ಹೋರಾಟ ಮಾಡಿದವರ ವಿರುದ್ಧ ಕೇಸ್ ದಾಖಲು ಮಾಡಿಕೊಂಡ ಉಡುಗೋರೆ ಮಾತ್ರವೇ ಬೆಳ್ತಂಗಡಿಯ ನಾಗರಿಕರಿಗೆ ದೊರಕಿತು!

ನಮ್ಮ ವ್ಯವಸ್ಥೆ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಪ್ರತಿ ವ್ಯಕ್ತಿ ಯಾ ಸಂಘಟನೆಗೆ ಇಂದು ಸಾರ್ವಜನಿಕವಾಗಿ ಅಜೆಂಡಾ ಬೇಕಾಗಿದೆ. ಕೆಲವೊಮ್ಮೆ ಇವರು ರಾಜಕೀಯ ಪಕ್ಷಗಳ ಮುಖವಾಣಿಯಂತೆ ವರ್ತಿಸುತ್ತವೆ. ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಸಾರ್ವಜನಿಕ ಸಂಸ್ಥೆಗಳು ವಿಷಯಾಧಾರಿತ ಚಳುವಳಿಗಳನ್ನು ಮಾಡುತ್ತವೆ. ಇಡೀ ಮನುಕುಲದ ಬುಡಕ್ಕೇ ಪೆಟ್ಟು ಬಿದ್ದಾಗಲೂ, ಸಾರ್ವಜನಿಕರು ಕ್ಷಣ ಕಾಲ ಮಾತ್ರ ವಿಚಲಿತರಾಗಿ ಖಂಡಿಸುತ್ತಾರೆ. ಆದರೆ ಅದರ ಮುಂದಿನ ಬೆಳವಣಿಗೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಸೌಜನ್ಯ ಪ್ರಕರಣವೂ ಈ ರೀತಿಯಾಗಿ ಜನರಿಂದ ಮರೆಯಾಗುತ್ತಿರುವ ವೇದನೆಯ ಪ್ರಕರಣ. ಮರೆಯಾಗುವ ರೀತಿಯಲ್ಲಿ ಕೊಲೆಯ ವಿಚಾರಣೆಯ ಗತಿಯೂ ಸಾಗಿದೆ! ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ. ಸೌಜನ್ಯ ಹೆತ್ತವರಿಗೆ ಪ್ರಚಾರ ಬೇಕಿಲ್ಲ, ನ್ಯಾಯ ಬೇಕಿದೆ. ಮೂಲತ: ಕೃಷಿ ಕುಟುಂಬವಾಗಿರುವ ಇವರು ನ್ಯಾಯಪರತೆಯಿಂದ ಜೀವಿಸುತ್ತಿರುವವರು. ಆಂತರಿಕ ಕಥೆಗಳು ಧರ್ಮದ ನೆಲೆವೀಡಾದ ಧರ್ಮಸ್ಥಳದಲ್ಲಿ ಹರಿದಾಡುತ್ತಿದ್ದರೂ, ಪೋಲಿಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತಿದ್ದರೂ, ಕಳೆದು ಹೋದ ಸೌಜನ್ಯ ಬರಲಾರಳು ಎಂಬುದು ಅವರ ಅರಿವಿನಲ್ಲಿದೆ. ಸಮಾಜ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸಿದ್ದೂ ಅವರ ಗಮನದಲ್ಲಿದೆ. Sowjanya-Rape-Murderಆದರೆ ವಿಕೃತವಾಗಿ ಕೊಲೆಗೈದ ಪರಮ ಪಾಪಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನ್ಯಾಯ ಮರೀಚಿಕೆಯಾಗಿರುವುದು ಪ್ರತಿದಿನವನ್ನೂ ನರಕ ಮಾಡಿದೆ.

ಮೂರು ನಾಲ್ಕು ವ್ಯಕ್ತಿಗಳ ಕುಕೃತ್ಯ ಇದು ಎಂಬುದು ಅನೇಕರ ಅಭಿಮತ. ಮನೋರೋಗಿ ಈ ಕೃತ್ಯ ಮಾಡಿರಲಾರ ಎಂಬುದು ಸ್ಥಳೀಯರ ಅಭಿಪ್ರಾಯ. ಪೋಲಿಸ್ ಇಲಾಖೆಯ ಕಸ್ಟಡಿಯಲ್ಲಿ ಸದ್ಯಕ್ಕೆ ಇರುವ ವ್ಯಕ್ತಿ ಮನೋರೋಗಿ. ಜಗತ್ತಿನ ವ್ಯವಹಾರದಲ್ಲಿ ಹುಚ್ಚರಾಗಿರುವ ಪ್ರತಿ ಮಾನವನಿಗೆ ಸೌಜನ್ಯ ಪ್ರಕರಣ ಕ್ಷುಲಕವೆಂದೆನಿಸಬಹುದು. ಆದರೆ ಈ ಘಟನೆಯನ್ನು ನಗಣ್ಯ ಮಾಡಿದ್ದಲ್ಲಿ, ಪ್ರತಿ ಕುಟುಂಬದ ಸ್ಥಿತಿಯೂ ಮುಂದೆ ಭಿನ್ನವಾಗಿರಲಾರದು ಎಂಬ ಸಂದೇಶ ಸಮಾಜಕ್ಕಿದೆ.