Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ದಲಿತರು ಮತ್ತು ಉದ್ಯಮಶೀಲತೆ…

ಸ್ನೇಹಿತರೇ,

ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆಶಯದಂತೆ ವರ್ತಮಾನ.ಕಾಮ್ ಬಳಗ ಇತರೆ ಸಮಾನಮನಸ್ಕ ಗುಂಪು ಮತ್ತು ಸಂಘಟನೆಗಳ ಜೊತೆಗೂಡಿ ರಾಜ್ಯದ ಹಲವು ಕಡೆ ಸಂವಾದ ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಮೊದಲ ಕಾರ್ಯಕ್ರಮ ಹಾಸನದಲ್ಲಿ ಇದೇ ಶನಿವಾರ (07-09-2013) ನಡೆಯುತ್ತಿದೆ. ವಿಷಯ: “ದಲಿತರು ಮತ್ತು ಉದ್ಯಮಶೀಲತೆ”.

ದಲಿತರು ಉದ್ಯಮಿಗಳಾಗಬೇಕೆ ಬೇಡವೆ, ಅವರೂ ಅಂತಿಮವಾಗಿ ಬಂಡವಾಳಶಾಹಿಯ ಶೋಷಕವರ್ಗದ ಪಾಲುದಾರರಾಗಬೇಕೆ, ಎನ್ನುವುದರಿಂದ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಉದ್ಯಮಿಗಳಾಗಲು ಇರುವ ಅಡೆತಡೆಗಳೇನು, ಬಂಡವಾಳ ಹೂಡಿಕೆ ಯಾರಿಂದ, ಇತ್ಯಾದಿ ವಿಷಯಗಳ ಬಗ್ಗೆ ಇಂದು ದೇಶದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಅನೇಕ ದಲಿತರು ಉದ್ಯಮಿಗಳಾಗಿ ಯಶಸ್ಸನ್ನೂ ಪಡೆಯುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಸರ್ಕಾರ ಮತ್ತು ಸಮಾಜದಲ್ಲಿ ಆಗಬೇಕಾದ ನೀತಿನಿರೂಪಣೆಗಳು, ಸುಧಾರಣೆಗಳು, ಮನಸ್ಥಿತಿಯ ಬದಲಾವಣೆ, ಇತ್ಯಾದಿಗಳ ಬಗ್ಗೆ ಮತ್ತು ಉದ್ಯಮಿಗಳಾಗಿ ಪರಿವರ್ತಿತರಾಗುವ ದಲಿತರ ಮೇಲಿರುವ ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಮಾಜ ಅವರಿಂದ ಬಯಸುವ ಅತಿಯಾದ ಜವಾಬ್ದಾರಿತನ ಮತ್ತು ನೈತಿಕತೆ, ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಸಂವಾದಗಳು ಆಗಬೇಕಿದೆ. ಅಂತಿಮವಾಗಿ ಉದ್ಯಮಕ್ಷೇತ್ರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವರ್ತಮಾನ.ಕಾಮ್ ಹಾಸನದ “ಸಹಮತ ವೇದಿಕೆ”ಯ ಜೊತೆಗೂಡಿ ಈ ಕಾರ್ಯಕ್ರಮ ಆಯೋಜಿಸಿದೆ. vartamaana-sahamata-invitationಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿದ ಮತ್ತು ದಲಿತಪರ ಹೋರಾಟಗಾರ ಕೆ.ಟಿ..ಶಿವಪ್ರಸಾದ್ ವಹಿಸುತ್ತಾರೆ. ಸಾಹಿತಿಗಳೂ, ಮಾಜಿ ವಿಧಾನಪರಿಷತ್ ಸದಸ್ಯರೂ, ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ಎಲ್.ಹನುಮಂತಯ್ಯನವರು ಮತ್ತು ಉದ್ಯಮಿಗಳೂ, Dalit Indian Chamber of Commerce & Industry (DICCI)ಯ ರಾಜ್ಯಾಧ್ಯಕ್ಷರೂ ಆದ ರಾಜಾ ನಾಯಕರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸನ್‌‌ರು, ನಮ್ಮ ವರ್ತಮಾನ.ಕಾಮ್ ಬಳಗದ  ಬಿ.ಶ್ರೀಪಾದ್ ಭಟ್ಟರೂ ಸಹ ಬರಲಿದ್ದಾರೆ.

ಹಾಸನದ “ಸಹಮತ ವೇದಿಕೆ”ಯ ಬಗ್ಗೆ ಒಂದೆರಡು ಮಾತು. ಹಾಸನದಲ್ಲಿರುವ ಕೆಲವು ಸಮಾನಮಸ್ಕ ಸ್ನೇಹೊತರು ಸೇರಿ ಕಟ್ಟಿಕೊಂಡಿರುವ ಈ ವೇದಿಕೆ ಅವರೇ ಹೇಳುವಂತೆ: “ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ ‘ಸಹಮತ ವೇದಿಕೆ’ ಸಾಹಿತ್ಯ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ.” ಅವರ ಇತ್ತೀಚಿನ ತಿಂಗಳುಗಳ ಕಾರ್ಯಕ್ರಮಗಳ ವಿವರಗಳು ಅವರ ಬ್ಲಾಗಿನಲ್ಲಿ ಇವೆ (sahamathasana.blogspot.in). ಪ್ರಾಮಾಣಿಕರೂ, ಬದ್ಧತೆಯುಳ್ಳ ಸಮಾಜಮುಖಿಗಳೂ ಆದ “ಸಹಮತ ವೇದಿಕೆ”ಯ ಸ್ನೇಹಿತರೊಡನೆಗೂಡಿ ವರ್ತಮಾನ.ಕಾಮ್‌ನ ಈ ತರಹದ ಮೊದಲ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ನಿಜಕ್ಕೂ ಸಂತೋಷವಿದೆ.

ಇನ್ನು ಇದೇ ಸಂದರ್ಭದಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು. ದಯವಿಟ್ಟು ಬರೆಯಿರಿ ಎಂದು ನಮ್ಮ ಬಳಗದ ಲೇಖಕರಲ್ಲಿ ಮತ್ತು ಓದುಗರಲ್ಲಿ ವಿನಂತಿಸುತ್ತೇನೆ. ಹಾಗೆಯೇ, ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿ. ಮತ್ತು, ಸಂವಾದದಲ್ಲಿ ನಿಮ್ಮ ಪರವಾಗಿ ಏನಾದರೂ ಪ್ರಶ್ನೆಗಳನ್ನು ಎತ್ತಬೇಕಿದ್ದಲ್ಲಿ ಅವನ್ನೂ ಕಾಮೆಂಟ್‌ ರೂಪದಲ್ಲಿ ಹಾಕಿ. ಅವನ್ನು ಕಾರ್ಯಕ್ರಮದಲ್ಲಿ ಮತ್ತು ಸಂವಾದದಲ್ಲಿ ಪಾಲ್ಗೊಂಡವರಿಗೆ ತಲುಪಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಸಂಪಾದಕ, vartamaana.com

 

ಪ್ರಭುತ್ವ ಮತ್ತು ಅದರ ದಮನಕಾರಿಗುಣ


– ಡಾ.ಎಸ್.ಬಿ. ಜೋಗುರ


 

ಪ್ರಭುತ್ವ ಬಹುತೇಕವಾಗಿ ಜನಜಾಗೃತಿಯನ್ನು, ಆಂದೋಲನವನ್ನು ಸಹಿಸುವದಿಲ್ಲ. ಅದರಲ್ಲೂ ಬಂಡುಕೋರರು ಬೀದಿಗಿಳಿದು ಅರಾಜಕತೆಗೆ ಕಾರಣರಾದವರ ಹೆಸರಿಡಿದು ಕೂಗುತ್ತಾ ಪ್ರತಿಭಟಿಸುವವರನ್ನು ಮೊದಲು ಸಹಿಸುವದಿಲ್ಲ. ಪ್ರಜಾಸತ್ತೆಯನ್ನು ಅಣಕಿಸಲೆಂಬಂತೆ ಅದರ ಗರ್ಭದಲ್ಲಿಯೇ ಸರ್ವಾಧಿಕಾರಿ ಧೋರಣೆಯ ಬೀಜಗಳು ನಿಧಾನವಾಗಿ ಆವೀರ್ಭವಿಸುವುದು ಬಹುದೊಡ್ಡ ವಿಪರ್ಯಾಸ. ಹಿಂದೆ 1988 ರ ಸಂದರ್ಭದಲ್ಲಿ ತಿಕ್ಕಲು ಸರ್ವಾಧಿಕಾರಿ ಸದ್ದಾಂ ಹುಸೇನ ವಿಷಕಾರಿ ಅಸ್ತ್ರಗಳನ್ನು ಬಂಡುಕೋರರ ಮೇಲೆ ಬಳಸುವ ಮೂಲಕ, ಐದಾರು ಸಾವಿರ ಜನರ ಸಾವಿಗೆ ಕಾರಣವಾಗಿ ಇಡೀ ಜಗತ್ತಿನಲ್ಲಿಯೇ ಒಂದು ಬಗೆಯ ನಿಶೇಧಾತ್ಮಕ ಪ್ರತಿಕ್ರಿಯೆಯನ್ನು ಪಡೆಯಬೇಕಾಗಿ ಬಂದಿತ್ತು. syria-chemical-attackಈಗ 24 ವರ್ಷಗಳ ನಂತರ ಮತ್ತೆ ಅಂತಹದೇ ರಾಸಾಯನಿಕ ಅಸ್ತ್ರದ ಬಳಕೆ ಸಿರಿಯಾದಲ್ಲಿ ಸರ್ವಾಧಿಕಾರಿ ಬಸರ್ ಅಲ್-ಅಸದ್ ಆಳ್ವಿಕೆಯಲ್ಲಿ ನಾಗರಿಕ ಹೋರಾಟಗಾರರ ಮೇಲೆ ಪ್ರಯೋಗಿಸಲಾಗಿದೆ. ಸಾವಿರಾರು ಜನ ಬಂಡುಕೋರರ ಜೊತೆಯಲ್ಲಿ ಯಾವುದೇ ವಿದ್ಯಮಾನಗಳನ್ನು ಅರಿಯದ ಅಸಂಖ್ಯಾತ ಎಳೆಯ ಜೀವಗಳು ಈ ರಾಸಾಯನಿಕ ಅಸ್ತ್ರದ ಬಳಕೆಗೆ ಬಲಿಯಾಗಿವೆ. ಕಣ್ಣು ಊದಿರುವ, ಬಾಯಿಗೆ ನೊರೆ ಮೆತ್ತಿರುವ, ಮುಖ ಊದಿ ವಿಕಾರವಾಗಿ ಅಸು ನೀಗಿರುವ ಶರೀರಗಳು ರಾಶಿ ರಾಶಿಯಾಗಿ ಡಮಾಸ್ಕಸ್ ಸುತ್ತಮುತ್ತಲೂ ಬಿದ್ದಿರುವದಿತ್ತು. ಆ ಸನ್ನಿವೇಶ ಇಡೀ ಜಗತ್ತನ್ನೇ ಒಂದು ಸಾರಿ ಕಂಪಿಸುವಂತೆ ಮಾಡಿತು. ಅತ್ಯಂತ ಅಮಾನವೀಯ ಎನ್ನಬಹುದಾದ ಈ ಆಯ್ಕೆ ಮತ್ತು ತೀರ್ಮಾನಕ್ಕೆ ಇಡೀ ಜಗತ್ತೇ ಖಂಡಿಸಿತು. ಹಾಗೆ ನೋಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗೆಯ ಜೈವಿಕ ಇಲ್ಲವೇ ರಸಾಯನಿಕ ಶಸ್ತ್ರಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಗೆ ಒಂದೊಮ್ಮೆ ತೀರಾ ಅನಿವಾರ್ಯವಾಗಿ ಬಳಸಲೇಬೇಕು ಎಂದಾಗ ಹೇಗ್ ನಲ್ಲಿರುವ ಅದಕ್ಕೆ ಸಂಬಂಧಿಸಿದ ಸಂಸ್ಥೆಯೊಂದರ ಅನುಮತಿಯನ್ನು ಪಡೆಯಬೇಕು. ಇಂಥಾ ಯಾವುದೇ ಬಗೆಯ ಅನುಮತಿಗಳಿಲ್ಲದೇ ಹೀಗೆ ಬೇಕಾಬಿಟ್ಟಿಯಾಗಿ ರಸಾಯನಿಕ ಅಸ್ತ್ರದ ಪ್ರಯೋಗವಾಗಿರುವುದು ಅಸದ್ ಆಡಳಿತ ಜಗತ್ತಿನ ಪ್ರಮುಖ ರಾಷ್ಟ್ರಗಳಿಂದ ಟೀಕೆಗೆ ಒಳಗಾಗಬೇಕಾಯಿತು.

ಈಗಾಗಲೇ ಸಿರಿಯಾದ ಅಧ್ಯಕ್ಷನ ಆಡಳಿತ ವೈಖರಿ ಮತ್ತು ತೀರ್ಮಾನಗಳ ಬಗ್ಗೆ ಸಂಯುಕ್ತ ರಾಷ್ಟ್ರ ಸಂಘ ಕೆಂಡಾಮಂಡಲವಾಗಿದೆ. Basharal-Assad-syrianಸುಮಾರು 35 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಫ಼್ರಾನ್ಸ್ ಮತ್ತು ಇಂಗ್ಲಂಡದಂಥ ರಾಷ್ಟ್ರಗಳೂ ಇವೆ. ಸಂಯುಕ್ತ ರಾಷ್ಟ್ರ ಸಂಘದ ಸೆಕ್ರೆಟರಿ ಜನರಲ್ ಬನ್-ಕಿ-ಮೂನ್ ಅವರು ಈ ಬಗೆಯ ರಸಾಯನಿಕ ಅಸ್ತ್ರಗಳ ಬಳಕೆ ಇಡೀ ಮನುಕುಲಕ್ಕೆ ಮಾರಕ, ಅದನ್ನು ಇಡೀ ವಿಶ್ವವೇ ಖಂಡಿಸುತ್ತದೆ, ಈ ವಿಷಯವಾಗಿ ತಡ ಮಾಡದೇ ತನಿಖೆಯಾಗಬೇಕು ಎಂದು ಒಕ್ಕೂಟದಲ್ಲಿಯ ಕೆಲ ಪ್ರಮುಖ ರಾಷ್ಟ್ರಗಳು ಆಗ್ರಹಿಸುತ್ತಿವೆ ಎಂದು ಹೇಳಿರುವದಿದೆ. ಈಗಾಗಲೇ ವಿಶ್ವ ಸಂಸ್ಥೆ ತನಿಖೆಗಾಗಿ ಸಿರಿಯಾ ತಲುಪಿರುವದಿದೆ. ಕುಟುಂಬದ ರಾಜಕಾರಣ ಮತ್ತು ಅಧಿಕಾರವನ್ನು ಪ್ರಶ್ನಿಸುವದೇ ಮಹಾಪ್ರಮಾದ ಎನ್ನುವ ವಾತಾವರಣ ಇಂದಿಗೂ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ ಇದ್ದದ್ದೇ ಒಂದು ದೊಡ್ಡ ವಿಪರ್ಯಾಸ. ಪ್ರಜಾಪ್ರಭುತ್ವದ ಬಗೆಗಿನ ಹಂಬಲವೇ ಅನೇಕ ಕಡೆಗಳಲ್ಲಿ ಈ ಬಗೆಯ ಬಂಡುಕೋರರನ್ನು ಹುಟ್ಟುಹಾಕಿರುವದಿದೆ. ಸಿರಿಯಾದ ಅಧ್ಯಕ್ಷ ಅಸದ್ ಕುಟುಂಬ ಕಳೆದ ನಾಲ್ಕು ದಶಕಗಳಿಂದಲೂ ರಾಜಕೀಯ ಸತ್ತೆಯನ್ನು ತನ್ನ ಕೈಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಾ, ನಿಭಾಯಿಸುತ್ತಾ ಬಂದದ್ದಿದೆ. ಈಜಿಪ್ತ ಮತ್ತು ಇರಾಕ್ ಗಳಲ್ಲಿ ಪ್ರಜಾಪ್ರಭುತ್ವದ ಹಂಬಲಕ್ಕಾಗಿ ನಡೆದ ಹೋರಾಟದ ಪ್ರಭಾವದ ಹಿನ್ನೆಲೆಯಲ್ಲಿ ಸಿರಿಯಾದಲ್ಲಿಯೂ ಆ ಬಗೆಯ ಹೋರಾಟ ಆರಂಭವಾಯಿತು. ನಾಗರಿಕರು ದೊಡ್ದ ಪ್ರಮಾಣದಲ್ಲಿ ಬೀದಿಗಿಳಿದು ಆ ಬಗ್ಗೆ ಹೋರಾಟ ಆರಂಭಿಸಿದ್ದೇ ತಡ ಮಿಲಿಟರಿ ನೆರವಿನೊಂದಿಗೆ ಈ ರಸಾಯಕ ಅಸ್ತ್ರ ಪ್ರಯೋಗದ ಅಹಿತಕರವಾದ ತೀರ್ಮಾನವನ್ನು ಕೈಗೊಳ್ಳಲಾಯಿತು ಎನ್ನುವುದು ಮಾಧ್ಯಮಗಳ ವರದಿಯಾದರೆ, ರಷ್ಯಾ ಮಾತ್ರ ಈ ಬಗೆಯ ರಸಾಯನಿಕ ಅಸ್ತ್ರದ ಬಳಕೆಯ ಹಿಂದೆ ಬಂಡುಕೋರ ಹೋರಾಟಗಾರರ ಕೈವಾಡವಿದೆ, ಆದಾಗ್ಯೂ ಸಂಯುಕ್ತ ರಾಷ್ಟ್ರ ಸಂಘದ ತನಿಕೆಗೆ ಸಿರಿಯಾದ ಅಧ್ಯಕ್ಷ ಅಸದ್ ಸಹಕರಿಸಬೇಕು ಎಂದು ಕರೆ ನೀಡಿರುವದಿದೆ. ಇದರೊಂದಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಸಿರಿಯಾದ ಮೆಲೆ ಕ್ರಮ ಜರುಗಿಸುವಂತೆ ಒತ್ತಡವನ್ನೂ ಹೇರುತ್ತಿರುವುದೂ ಸತ್ಯ. obamaಇದರ ಹಿಂದೆ ಯಾರ ಕೈವಾಡ ಇದೆಯೋ.. ಗೊತ್ತಿಲ್ಲ. ಒಟ್ಟಾರೆ ಸಾವಿರಾರು ಜನ ಅಮಾಯಕರು ಹೆಣವಾದದ್ದು, ಲಕ್ಷಾನುಗಟ್ಟಲೆ ಮಕ್ಕಳು ನಿರಾಶ್ರಿತರಾದದ್ದು ಮಾತ್ರ ಸುಳ್ಳಲ್ಲ. ಸುಮಾರು 1 ದಶಲಕ್ಷ ಮಕ್ಕಳು ನಿರಾಶ್ರಿತರಾಗಿ ಲೆಬಿನಾನ್, ಜೋರ್ಡಾನ್, ಟರ್ಕಿ, ಇರಾಕ್ , ಈಜಿಪ್ತ, ಉತ್ತರ ಆಫ್ರಿಕಾ ಹಾಗೂ ಯುರೋಪ ಮುಂತಾದ ಕಡೆಗೆ ತೆರಳಿರುವದಿದೆ. ಲೆಬಿನಾನಂತೂ ನಿರಾಶ್ರಿತರ ಪಾಲಿನ ಮುಖ್ಯ ತಾಣ.

ಸಿರಿಯಾ ನಾಗರಿಕ ಹೋರಾಟದ ಸಂದರ್ಭದಲ್ಲಿ ಈ ಬಗೆಯ ಅಸ್ತ್ರಗಳನ್ನು ಯಾವುದೇ ಕಾರಣಕ್ಕೆ ಬಳಸಬಾರದೆಂದು ಅಂತರರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಆ ರೆಡ್‌ಲೈನ್ ನ್ನು ದಾಟಿರುವದಿದೆ. ಆಮೂಲಕ ಮಾನವ ಹಕ್ಕುಗಳ ಉಲ್ಲಂಘನೆಗೂ ಅದು ಕಾರಣವಾಗಿದೆ. ಸಿರಿಯಾದ ಲಕ್ಷಾನುಗಟ್ಟಲೆ ಜನರು ಈ ಬಗೆಯ ರಸಾಯನಿಕ ಅಸ್ತ್ರದ ಧಾಳಿಗೆ ಹೆದರಿ ಇರಾಕನ ಖುರ್ದಿಸ್‌ನಲ್ಲಿ ನಿರಾಶ್ರಿತರಾಗಿ ಆಶ್ರಯಪಡೆದಿರುವದಿದೆ. 2011 ರ ಮಾರ್ಚ್ ತಿಂಗಳಿನಿಂದಲೂ ಈ ನಾಗರಿಕ ಹೋರಾಟ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡದೇ ಇತ್ತು. ಹಾಗೆಯೇ ಅದನ್ನು ದಮನ ಮಾಡಲು, ಹತ್ತಿಕ್ಕಲು ಅನೇಕ ಬಗೆಯ ಹಲ್ಲೆಗಳು ನಡೆಯುತ್ತಲೇ ಬಂದಿವೆ. ಈ ಬಗೆಯ ಹೋರಾಟದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಸಿರಿಯಾದಲ್ಲಿ ಸುಮಾರು 1 ಲಕ್ಷ ಹೋರಾಟಗಾರರು ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಸದ್ಯದ ಸಂದರ್ಭದಲ್ಲಿ ಇಡೀ ಗ್ಲೋಬ್ ತೀರಾ ಗರಂ ಆಗಿರುವ ಸ್ಥಿತಿಯಲ್ಲಿದೆ. ಗ್ಲೋಬಿನ ಯಾವುದೇ ಬದಿಗೆ ನೀವು ಬೆರಳು ತಾಗಿಸಿದರೂ ಚುರ್ ಎನ್ನುವಷ್ಟು ಗರಂ ಆಗಿರುವ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. syria-chemical-attacksಹೀಗಿರುವಾಗ ಯಾವುದೇ ಒಂದು ರಾಷ್ಟ್ರದ ಸರ್ವಾಧಿಕಾರಿ ಧೋರಣೆ ಇಲ್ಲವೇ ಹೇಗಾದರೂ ಸರಿ ತನ್ನ ಇಜಂ ನ್ನು ಬಲಪಡಿಸಿಕೊಳ್ಳಲೇಬೇಕು ಎಂಬ ಹುಂಬತನದಿಂದ ಇಂಥಾ ಮಾರಕ ಅಸ್ತ್ರಗಳನ್ನು ಬಳಸುತ್ತಾ ನಡೆದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಬರೀ ವಿಷಪೂರಿತ ಕಲ್ಲು, ಮಣ್ಣು ಮಾತ್ರ ಉಳಿಯುವ ಸಾಧ್ಯತೆಯಿದೆ. ಮನುಷ್ಯನನ್ನು ಅತ್ಯಂತ ತುಚ್ಚವಾದ ಕ್ರಿಮಿಗಳನ್ನು ಒರೆಸಿಹಾಕುವಂತೆ ಸಾಯಿಸಲು ಬಳಸಲಾಗುವ ಈ ಬಗೆಯ ಅಸ್ತ್ರಗಳ ಸೃಷ್ಟಿಗಾಗಿಯೇ ನಾಗರಿಕತೆ ಎನ್ನುವುದು ಜನ್ಮ ತಾಳಿರಲಿಕ್ಕಿಲ್ಲ. ಇಂಥಾ ಅಸ್ತ್ರಗಳ ಬಳಕೆಯನ್ನು ಜೀವಪರ ಹಂಬಲ ಮತ್ತು ಖಾಳಜಿ ಇರುವ ಯಾರೂ ಸಹಿಸುವದಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ಇಡೀ ಜಗತ್ತನ್ನು ಗ್ಲೋಬಲ್ ವಿಲೇಜ್ ಎಂದು ಸಂಬೋಧಿಸುವ ನಮಗೆ ಈ ಬಗೆಯ ಮಾರಣಹೋಮ ಭೂಮಂಡಲದ ಮೇಲೆ ಎಲ್ಲಿಯೇ ಜರುಗಿದರೂ ಈ ಗ್ಲೋಬಲ್ ವಿಲೇಜನ್ನು ಮಾನಸಿಕವಾಗಿ ಬಾಧಿಸುತ್ತದೆ. ಹೀಗೆ ಪ್ರಭುತ್ವ ಜನರ ಹೋರಾಟವನ್ನು ದಮನ ಮಾಡುವಲ್ಲಿ ತನ್ನ ಅಸಹಾಯಕತೆಯ ಸಾಧನವಾಗಿ ಇಂಥಾ ರಸಾಯನಿಕ ಅಸ್ತ್ರಗಳ ಬಳಕೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು.

ಆ ರಾತ್ರಿ ಚಿನು ಎಲ್ಲಿದ್ದಳು ?

– ಬಿ. ಶ್ರೀಪಾದ ಭಟ್

ಎಂಬತ್ತರ ದಶಕದಲ್ಲಿ ದೂರದರ್ಶನ ಪ್ರತಿ ಶುಕ್ರವಾರ ರಾತ್ರಿಯಂದು ಭಾರತೀಯ ಭಾಷೆಗಳ ಕ್ಲಾಸಿಕ್ ಸಿನಿಮಾಗಳನ್ನು ಪ್ರದರ್ಶಿಸುತ್ತಿತ್ತು. ಆಗ ಕಾಲೇಜು ವಿಧ್ಯಾರ್ಥಿಗಳಾಗಿದ್ದ ನಾವೆಲ್ಲ ನೋಡಿದ್ದ ಹಲವಾರು ಶ್ರೇಷ್ಠ ಚಿತ್ರಗಳಲ್ಲಿ “ಏಕ್ ದಿನ್ ಪ್ರತಿದಿನ್” ಸಿನಿಮಾ ಕೂಡ ಒಂದು. ನಮಗೆಲ್ಲ ಭಾರತೀಯ ಸಿನಿಮಾರಂಗದ ಹೊಸ ಲೋಕವನ್ನೇ ತೋರಿಸಿದ ದೂರದರ್ಶನವನ್ನು ನಮ್ಮ ತಲೆಮಾರು ಮರೆಯಲು ಸಾಧ್ಯವೇ ಇಲ್ಲ.

“ಏಕ್ ದಿನ್ ಪ್ರತಿದಿನ್” 1979ರಲ್ಲಿ ತೆರೆಕಂಡ, ಮೃಣಾಲ್ ಸೇನ್ ನಿರ್ದೇಶನದ ಬೆಂಗಾಲಿ ಸಿನೆಮಾ. Ek_Din_Pratidin_DVD_coverಬೆಂಗಾಲಿ ಲೇಖಕ ಅಮಲೇಂದು ಚಕ್ರವರ್ತಿ ಅವರ ಸಣ್ಣ ಕತೆಯನ್ನಾಧರಿಸಿ ಮೃಣಾಲ್‌ದ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರ ಕತೆ ಸ್ಥೂಲವಾಗಿ ಹೀಗಿದೆ: ಎಪ್ಪತ್ತರ ದಶಕದಲ್ಲಿ ಕೊಲ್ಕತ್ತ ( ಆಗಿನ ಕಲ್ಕತ್ತ) ದಲ್ಲಿ ವಾಸಿಸುತ್ತಿರುವ ಏಳು ಜನ ಸದಸ್ಯರ ಮಧ್ಯಮವರ್ಗದ ಕುಟುಂಬ. ಇದರಲ್ಲಿ ತಂದೆ, ತಾಯಿ ಮತ್ತು ಐವರು ಹೆಣ್ಣು ಮಕ್ಕಳು ಮತ್ತಿಬ್ಬರು ಗಂಡು ಮಕ್ಕಳು. ಇಡೀ ಕುಟುಂಬದ ಹೊರೆ ಹೊತ್ತುಕೊಂಡಿದ್ದು ಹಿರಿಯಕ್ಕ ಚಿನು (ಮಮತಾ ಶಂಕರ್). ಕಛೇರಿಯೊಂದರಲ್ಲಿ ಕೆಲಸ ಮಾಡುತ್ತ ತನ್ನ ಉಳಿದ ಆರು ಜನರ ಬದುಕನ್ನು ನಿಭಾಯಿಸುತ್ತಿರುತ್ತಾಳೆ ಹಿರಿಯಕ್ಕ ಚಿನು. ಅದರೊಂದು ದಿನ ರಾತ್ರಿಯಾದರೂ ಹಿರಿಯಕ್ಕ ಚಿನು ಮನೆಗೆ ಮರಳುವುದಿಲ್ಲ. ಬಹುಶಃ ಕಛೇರಿಯಲ್ಲಿ ಹೆಚ್ಚಿದ ಕೆಲಸದಿಂದಾಗಿ ತಡವಾಗಬಹುದೆಂದು ಕುಟುಂಬದ ಇತರೆ ಮಂದಿ ಭಾವಿಸಿರುತ್ತಾರೆ. ಕಿರಿಯ ತಂಗಿ ಮಿನು ( ಅದ್ಭುತವಾಗಿ ನಟಿಸಿದ್ದಾಳೆ. ಹೆಸರು ಮರೆತಿದೆ) ಅಕ್ಕನ ಆಫೀಸಿಗೆ ಫೋನ್ ಮಾಡಿದಾಗ ತನ್ನಕ್ಕ ಆಫೀಸಿನಲ್ಲಿ ಇರದಿರುವುದು ಗೊತ್ತಾಗಿ ಕಳವಳಪಡುತ್ತಾಳೆ.

ನಿಶ್ಚಿಂತೆಯಿಂದ ಇದ್ದ ಈ ಕುಟುಂಬವು ಕ್ಷಣ ಮಾತ್ರದಲ್ಲಿ ಆತಂಕಕ್ಕೆ ದೂಡಲ್ಪಡುತ್ತದೆ. ತೀವ್ರ ದುಗುಡದಿಂದ ಅಪ್ಪ ಬಸ್ ಸ್ಟಾಪಿನ ಬಳಿ ಬಂದು ಕಡೆಯ ಬಸ್ ಬರುವವರೆಗೂ ಕಾಯುತ್ತಾನೆ. ಆದರೆ ಮಗಳು ಕಾಣುವುದಿಲ್ಲ. ಇಡೀ ಅಪಾರ್ಟಮೆಂಟಿನಲ್ಲಿ ಚಿನುವಿನ ನಾಪತ್ತೆಯ ಸುದ್ದಿ ಕ್ಷಣ ಮಾತ್ರದಲ್ಲಿ ಹಬ್ಬುತ್ತದೆ. ನೆರೆಹೊರೆಯ ಜನ ತಲೆಗೊಬ್ಬರಂತೆ ಮಾತನಾಡಲಾರಂಬಿಸುತ್ತಾರೆ. ಕೆಲವರು ಸಹಾನುಭೂತಿಯಿಂದ, ಕೆಲವರು ಕುಹುಕದಿಂದ, ಬಹುಪಾಲು ಜನ ವಿಚಿತ್ರವಾದ ಮಾತುಗಳಿಂದ ಇಡೀ ಘಟನೆಯನ್ನು ವಿಶ್ಲೇಷಿಸುತ್ತಾರೆ. ಇದನ್ನು ಮೃಣಾಲ್‌ದ ಅತ್ಯಂತ ಸಂಯಮದಿಂದ ಆದರೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕಡೆಗೆ ಪೋಲೀಸರಿಗೂ ದೂರು ನೀಡಲಾಗುತ್ತದೆ. ನಾಪತ್ತೆಯಾದ ಚಿನುವಿನ ತಮ್ಮ ಮತ್ತವನ ಸ್ನೇಹಿತನೊಂದಿಗೆ ಕಡೆಗೆ ಹತಾಶೆಯಿಂದ ಶವಾಗಾರಕ್ಕೆ ತೆರಳಿ ತನ್ನಕ್ಕ ಶವವನ್ನು ಹುಡುಕುತ್ತಾನೆ. ಮತ್ತೊಂದು ಕಡೆ ಚಿನುವಿನ ಚಹರೆಯನ್ನು ಹೋಲುವ ಮಹಿಳೆಯೊಬ್ಬಳು ಅಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾಳೆಂದು ಸುದ್ದಿ ತಿಳಿದು ಆಕೆಯ ಅಪ್ಪ ಕೂಡಲೆ ಆಸ್ಪತ್ರೆಗೆ ಧಾವಿಸುತ್ತಾನೆ. ekdin-pratidinಆದರೆ ಆಕೆ ತನ್ನ ಮಗಳಲ್ಲವೆಂದು ಖಚಿತವಾದ ನಂತರ ಅರ್ಧ ನಿರಾಸೆ, ಇನ್ನರ್ಧ ನಿರಾಳತೆಯಿಂದ ಮನೆಗೆ ಮರಳುತ್ತಾನೆ. ಚಿನುವಿನ ಕುಟುಂಬವು ಇಡೀ ರಾತ್ರಿಯನ್ನು ಆತಂಕ, ತಲ್ಲಣಗಳಿಂದ ಎದುರಿಸುತ್ತದೆ. ಮರುದಿನದ ಮುಂಜಾನೆಯ ನಸುಕತ್ತಲಿನಲ್ಲಿ ಕುಟುಂಬದ ಕಿರಿಯ ಹೆಣ್ಣುಮಗಳು ಕಾಣೆಯಾಗಿದ್ದ ಚಿನು ನಿಧಾನವಾಗಿ ಮೆಟ್ಟಿಲೇರುತ್ತ ಬರುತ್ತಿರವುದನ್ನು ಗುರುತಿಸಿ ಸಂತೋಷದಿಂದ ಕಿರುಚುತ್ತ ಇಡೀ ಕುಟುಂಬವನ್ನು ಎಚ್ಚರಿಸುತ್ತಾಳೆ. ಮೆಟ್ಟಲೇರಿ ಬರುತ್ತಿದ್ದ ಮಗಳನ್ನು ಕುಟುಂಬದ ಸದಸ್ಯರು ಮಾತನಾಡಿಸದೇ ವಿಲಕ್ಷಣ ಮೌನದಲ್ಲಿ, ಹೇಳಿಕೊಳ್ಳಲಾಗದ ಶಂಕೆಯಲ್ಲಿ, ಹೊಯ್ದಾಟದ ಮನಸ್ಸಿನಲ್ಲಿ ಎದುರುಗೊಳ್ಳುತ್ತಾರೆ. ಹಿಂದಿನ ರಾತ್ರಿ ಎಲ್ಲಿದ್ದೆ ಎಂದು ಕೇಳಲಾಗದೆ ವಿಚಿತ್ರ ತೊಳತಾಟದಲ್ಲಿರುತ್ತದೆ ಚಿನುವಿನ ಕುಟುಂಬ. ಆಗ ಅಪಾರ್ಟಮೆಂಟಿನ ಮಾಲೀಕ ಎಂದಿನಂತೆ ಅಪ್ಪನನ್ನು ದಬಾಯಿಸುತ್ತಾ ಇದು ಮರ್ಯಾದಸ್ಥರು ಇರುವ ಜಾಗವೆಂತಲೂ ಈ ಕೂಡಲೇ ನಿಮ್ಮ ಕುಟುಂಬ ಇಲ್ಲಿಂದ ಜಾಗ ಬದಲಿಸಬೇಕೆಂತಲೂ ತಾಕೀತು ಮಾಡುತ್ತಾನೆ. ಕಡೆಗೆ ಇದಾವುದಕ್ಕೂ ಮೈಟ್ ಮಾಡದ ಚಿನುವಿನ ಹಾಗೂ ಕುಟುಂಬದ ಅಮ್ಮ ಎಂದಿನಂತೆ ತನ್ನ ದಿನನಿತ್ಯದ ಮನೆಗೆಲಸವನ್ನು ಶುರು ಮಾಡುವದರೊಂದಿಗೆ ಈ ಸಿನಿಮಾ ಮುಗಿಯುತ್ತದೆ.

’ಏಕ್ ದಿನ್ ಪ್ರತಿದಿನ್’ ಮೃಣಾಲ್ ಸೇನ್ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಈ ಚಿತ್ರಕ್ಕಾಗಿ 1980 ರಲ್ಲಿ ಅತ್ಯುತ್ತಮ ನಿರ್ದೇಶಕನೆಂದು ರಾಷ್ಟ್ರ ಪ್ರಶಸ್ತಿ ಗಳಿಸುತ್ತಾರೆ.

ಅವರ ಈ ಮುಂಚಿನ ಮಹತ್ವದ ಚಿತ್ರಗಳಾದ ಪ್ರತಿನಿಧಿ, ಭುವನ್ ಶೋಮ್, ಏಕ್ ಅಧೂರಿ ಕಹಾನಿ, ಮೃಗಯಾಗಳಿಗೆ ಹೋಲಿಸಿದರೆ ಕಥಾ ಹಂದರದಲ್ಲಿ ಅತ್ಯಂತ ಸರಳವಾದ ಆದರೆ ಸಂವೇದನೆಯ ಮಟ್ಟದಲ್ಲಿ ಇವೆಲ್ಲಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾದ ಸಿನಿಮಾ ಏಕ್ ದಿನ್ ಪ್ರತಿದಿನ್. mrinal-senಇಂಡಿಯಾದ ಬದಲಾಗುತ್ತಿರುವ ನಗರ, ಈ ಬದಲಾವಣೆಯ ಮೂಲಧಾತು ನಗರಗಳ ವಾಣಿಜ್ಯೀಕರಣ ಮತ್ತು ಈ ಅನಿರೀಕ್ಷಿತ ಬದಲಾವಣೆಗಳೊಂದಿಗೆ ನೇರವಾಗಿ ಮುಖಾಮುಖಿಯಾಗುತ್ತಿರುವ ನಗರದ ಎಪ್ಪತ್ತರ ದಶಕದ ಮಧ್ಯಮ ವರ್ಗ, ಇವೆಲ್ಲವನ್ನು ಕೇಂದ್ರವಾಗಿಟ್ಟುಕೊಂಡು ಮೊಟ್ಟ ಮೊದಲಬಾರಿಗೆ ಮೃಣಾಲ್‌ದ ನಿರ್ದೇಶಿಸಿದ ಸಿನಿಮಾ ಇದು. ಕಥಾ ನಾಯಕಿ ಆ ಒಂದು ರಾತ್ರಿ ಎಲ್ಲಿದ್ದಳು ಎಂಬುದನ್ನೇ ಗೌಣವಾಗಿಸಿ ಅದು ಅವಳ ವೈಯುಕ್ತಿಕ ಬದುಕು ಎಂದು ಪರೋಕ್ಷವಾಗಿ ಆದರೆ ಅತ್ಯಂತ ಘನತೆಯಿಂದ ತೋರಿಸುತ್ತಾರೆ ಮೃಣಾಲ್‌ದ. ಇಲ್ಲಿ ಅವರು ಕೇಂದ್ರೀಕರಿಸುವುದು ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರದ ಮಧ್ಯಮ ವರ್ಗದ ಹಿಪೋಕ್ರೆಸಿ, ಆಧುನಿಕ ಶಿಕ್ಷಣವನ್ನು ಪಡೆದೂ ಜಡಗಟ್ಟಿದ ಮನಸ್ಸನ್ನು ಕಳೆದು ಹಾಕಲು ನಿರಾಕರಿಸುವ ಈ ವರ್ಗಗಳ ಕ್ಷುದ್ರತೆ ಮತ್ತು ತಾನು ಪರಂಪರೆಯನ್ನು ಪಾಲಿಸುತ್ತಿರುವ ಭಾರತೀಯ ನಾರಿಯೋ ಅಥವಾ ಬದಲಾವಣೆಗೆ ತೆತ್ತುಕೊಂಡ ಈ ಶತಮಾನದ ಮಾದರಿ ಹೆಣ್ಣೋ ಎಂಬುದರ ಕುರಿತಾಗಿ ದಿಟ್ಟತೆಯನ್ನು ಪ್ರದರ್ಶಿಸುವ ಮನೋಭೂಮಿಕೆಗಳ ಹುಡುಕಾಟದಲ್ಲಿರುವ ಹೊರಗೆ ದುಡಿದು ಕುಟುಂಬವನ್ನು ಸಾಕುವ ಅವಿವಾಹಿತ ಹೆಣ್ಣುಮಗಳು.

ಚಿತ್ರದ ಕ್ಲೈಮಾಕ್ಸ ಅನ್ನು ನೋಡಿ. ಕಡೆಗೆ ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಹತಾಶೆಯಿಂದ ದೂಷಿಸಿಕೊಳ್ಳುತ್ತಿರುತ್ತಾರೆ. ತಮಗೆಲ್ಲ ದುಡಿದು ಹಾಕುತ್ತಿರುವ ಚಿನುವಿನ ಕುರಿತಾಗಿ ನಾವ್ಯಾರು ಗಮನವೇ ಹರಿಸಿಲ್ಲ, ಅವಳಿಗೇನು ಮಾಡಿದ್ದೇವೆ? ಎಂಬ ಪಾಪ ನಿವೇದನೆಯಲ್ಲಿರುತ್ತಾರೆ. ಆಗ ಕೂಡಲೆ ಹೊರಗಡೆ ಕಾರು ಭರ್ರನೆ ಬಂತು ನಿಂತ ಶಬ್ದ ಕೇಳಿಸುತ್ತದೆ. (ಇದು ದೌರ್ಜ್ಯನ್ಯದ, ಅಧಿಕಾರದ, ದೈಹಿಕ ಹಲ್ಲೆಯ ಸಂಕೇತವೇ??) ಕೂಡಲೆ ಕುಟುಂಬದ ಕಿರಿಯ ಹುಡುಗಿ ಬಾಗಿಲ ಬಳಿ ಧಾವಿಸುತ್ತಾಳೆ. ಮನೆ ಪ್ರವೇಶಿಸುವ ಚಿನು ‘ನೀವೆಲ್ಲ ರಾತ್ರಿಯೆಲ್ಲ ಮಲಗಲಿಲ್ಲವೇ?’ ಎಂದು ನಿರ್ಲಿಪ್ತಳಾಗಿ ಪ್ರಶ್ನಿಸುತ್ತಾಳೆ.

ಆದರೆ ಚಿತ್ರ ಬಿಡುಗಡೆಯ ನಂತರ ಬಹುತೇಕ ಪ್ರೇಕ್ಷಕರು ಮೃಣಾಲ್‌ದ ಅವರನ್ನು ಪ್ರಶ್ನಿಸುವುದು ಚಿನು ಆ ರಾತ್ರಿ ಎಲ್ಲಿದ್ದಳು? ಇದಕ್ಕೆ ಉತ್ತರಿಸುತ್ತಾ ಮೃಣಾಲ್‌ದ ಹೇಳುತ್ತಾರೆ, “ಹಿಂದೆ ವೇಟಿಂಗ್ ಫಾರ್ ಗೋಡೋ ನಾಟಕವನ್ನು ಬರೆದ ನಾಟಕಕಾರ ಬೆಕೆಟ್‌ನನ್ನು ಕೂಡ ಹೀಗೆಯೇ ಪ್ರಶ್ನಿಸಿದ್ದರು, ಯಾರಿಗಾಗಿ ಕಾಯುತ್ತಿರುವುದು? ಯಾರು ಈ ಗೋಡೋ? ಅದಕ್ಕೆ ಬೆಕೆಟ್ ಹೇಳಿದ್ದು ನನಗೆ ಗೊತ್ತಿದ್ದರೆ ನಾನದನ್ನು ನಾಟಕದಲ್ಲಿ ಹೇಳುತ್ತಿರಲಿಲ್ಲವೇ!! ಹಾಗೆಯೇ ಚಿನು ಆ ರಾತ್ರಿ ಎಲ್ಲಿದ್ದಳೆಂದು ನನಗೆ ಗೊತ್ತಿದ್ದರೆ ನಾನು ಹೇಳುತ್ತಿರಲಿಲ್ಲವೇ!!”

ಅದರೆ ಇಡೀ ಚಿತ್ರಕ್ಕೆ ಒಂದು ನಿಜವಾದ ಭಾಷ್ಯೆ ಬರೆವುದು ಮತ್ತು ಇಡೀ ಚಿತ್ರದ ದಿಟ್ಟತೆ ಮತ್ತು ಹೆಣ್ಣಿನ ಆತ್ಮ ಗೌರವವು ತನ್ನ ಮೇರುತನವನ್ನು mrinal-sen2ಮುಟ್ಟುವ ಕ್ಷಣವೆಂದರೆ ಅಲ್ಲಿಯವರೆಗೂ ಅನಾರೋಗ್ಯದಿಂದ ನರಳುತ್ತ ಹಿನ್ನೆಲೆಯಲ್ಲಿ ಉಳಿದುಕೊಳ್ಳುವ ಕುಟುಂಬದ ತಾಯಿ ( ಮೃಣಾಲ್‌ದ ಪತ್ನಿ ಗೀತಾ ಸೇನ್) ಕ್ಲೈಮಾಕ್ಸಿನಲ್ಲಿ ಧಿಡೀರನೆ ಮುನ್ನಲೆಗೆ ಬಂದು ಇದಾವುದು ತನಗೆ ಸಂಬಂಧವಿಲ್ಲವೆಂಬಂತೆ ತನ್ನ ಮುಂಜಾವಿನ ಕಾರ್ಯಗಳಲ್ಲಿ ತೊಡಗುವುದರ ಮೂಲಕ ಇದು ನನ್ನ ಬದುಕು ಇದಕ್ಕೆ ನಾನೇ ಯಜಮಾನಿ, ಹಾಗೇಯೇ ಚಿನು ರಾತ್ರಿ ಎಲ್ಲಿದ್ದಳೆಂಬುದು ಅವಳ ವೈಯುಕ್ತಿಕ ಬದುಕು, ಅದಕ್ಕೆ ಅವಳು ಮಾತ್ರ ಯಜಮಾನಿ, ಅದನ್ನು ಪ್ರಶ್ನಿಸಲು ನಮಗಾರಿಗೂ ಹಕ್ಕಿಲ್ಲ ಎಂದು ಮೌನವಾಗಿಯೇ ಒಂದು ಶಬ್ದವನ್ನಾಡದೇ ಇಡೀ ವ್ಯವಸ್ಥೆಗೆ ದಿಟ್ಟ ಉತ್ತರ ನೀಡುತ್ತಾಳೆ. ಇಲ್ಲಿಯೇ “ಏಕ್ ದಿನ್ ಪ್ರತಿದಿನ್” ಗೆಲ್ಲುವುದು. ಇದೇ ಅದರ ಮಾನವೀಯತೆ. ಇದೇ ನಿರ್ದೇಶಕನ ಜೀವಪರ ಮನಸ್ಸು.

ಇದು ಈಗ ಮತ್ತೆ ನೆನಪಾಗಲಿಕ್ಕೆ ಕಾರಣ ಮೊನ್ನೆ ಮುಂಬೈನಲ್ಲಿ ಜರುಗಿದ ಮತ್ತೊಂದು ಅತ್ಯಾಚಾರದ ಪ್ರಕರಣವನ್ನು ಕೇಳಿದಾಗ, ಓದಿದಾಗ. ಇಂತಹ ಹತ್ತಾರು ಅತ್ಯಾಚಾರದ ಪ್ರಕರಣಗಳು ಇಂದು ದಿನನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಆದರೆ ಹಳ್ಳಿಗಳ, ಪಟ್ಟಣಗಳ ಮಟ್ಟದಲ್ಲಿ ನಡೆಯುವ india-rapeಅತ್ಯಾಚಾರಗಳು ಬೆಳಕಿಗೇ ಬರುತ್ತಿಲ್ಲ. ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಜಡ್ಡುಗಟ್ಟಿದೆಯೆಂದರೆ ಮಾಧ್ಯಮಗಳು ಯಾವುದಾದರೊಂದು ಅತ್ಯಾಚಾರದ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಬೇಕು. ಆಗಲೇ ನಾವು ಕೂಡ ಸ್ಪಂದಿಸುವುದು. ಆಗಲೇ ಮೂಲೆ ಸೇರಿದ್ದ ನಮ್ಮ ಮೊಂಬತ್ತಿಗಳು ಬೆಳಕು ಕಾಣುವುದು. ಇಲ್ಲದಿದ್ದರೆ ನಮ್ಮ ಪುಟ ತಿರುವಿ ನೋಡಿ ಮನಸ್ಥಿತಿ ನಿರಂತರವಾಗಿರುತ್ತದೆ. ಮಧ್ಯಮವರ್ಗದ ಈ ಅಮಾನವೀಯ ಹಿಪೋಕ್ರಸಿಯೇ ಇಂದಿಗೂ ನಮ್ಮನ್ನು ಕಾಡುತ್ತಿರುವುದು. ಇಂದು ಪ್ರತಿ ಅತ್ಯಾಚಾರದ ಸಂದರ್ಭದಲ್ಲೂ ಚಿನು ನಮ್ಮನ್ನು ಕಾಡತೊಡಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಚಿನುವಿನಂತೆಯೇ ಮೌನಕ್ಕೆ ಶರಣಾಗಬೇಕಾಗುತ್ತದೆ. ಅತ್ಯಾಚಾರಕ್ಕೆ ಕಾರಣಗಳನ್ನು ಹುಡುಕುತ್ತಿದ್ದೇವೆ, ಅದನ್ನು ತಡೆಗಟ್ಟಲು ಮಾರ್ಗೋಪಾಯಗಳ ಕುರಿತಾಗಿ ಆ ಕ್ಷಣಕ್ಕೆ ನೂರಾರು ಚರ್ಚೆಯಾಗುತ್ತದೆ. ಮತ್ತೆ ಕಾನೂನು ವೈಫಲ್ಯ, ವೋಟ್ ಬ್ಯಾಂಕ್ ರಾಜಕಾರಣ, ಲೈಂಗಿಕ ಅನಾಗರಿಕತೆಯನ್ನು ಹುಟ್ಟು ಹಾಕುವ ಸಾಮಾಜಿಕ ಹಾಗೂ ಮಾನಸಿಕ ಸ್ಥಿತಿ ಒಟ್ಟಲ್ಲಿ ಎಲ್ಲವೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆಯೇ?

ಆದರೆ ನಗರೀಕರಣದ ಅಪಾಯಕಾರಿ ಬದುಕು ಮತ್ತು ಇದಕ್ಕೆ ಮೂಲಭೂತ ಕಾರಣಕರ್ತರಾದ ನಾವು, ಇದರ ಕುರಿತಾಗಿ ಚರ್ಚೆ ಆಗುತ್ತಿಲ್ಲ. stop-rapes-bombayಅತ್ಯಂತ ಸಂಕೀರ್ಣಗೊಳ್ಳುತ್ತಿರುವ, ಮಾನಗೆಡುತ್ತಿರುವ ಇಂದಿನ ಬದುಕನ್ನು ನಾವೇ ಸ್ವತಃ ಕಟ್ಟಿಕೊಂಡಿದ್ದು. ನಾವು ಕಟ್ಟಿದ ಈ ಕೊಳ್ಳುಬಾಕ ಸಂಸ್ಕೃತಿಯಿಂದಲೇ ಅತ್ಯಾಚಾರಿಗಳು ಹುಟ್ಟಿಕೊಳ್ಳುತ್ತಾರೆ. ಸಹಜವಾಗಿಯೇ ಇವರೆಲ್ಲ ಲುಂಪೆನ್ ಗುಂಪಿನಿಂದ ಬಂದವರಾಗಿರುತ್ತಾರೆ. ವ್ಯವಸ್ಥೆಯೊಂದರಲ್ಲಿ ಉಳ್ಳವರು ಮತ್ತು ಮತ್ತು ನಿರ್ಗತಿಕರ ನಡುವಿನ ಕಂದಕ ದೊಡ್ಡದಾದಷ್ಟು ಈ ಲುಂಪೆನ್ ಗುಂಪು ಬೆಳೆಯುತ್ತಾ ಹೋಗುತ್ತದೆ. ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಇತರ ವಸ್ತುಗಳಂತೆಯೇ ಹೆಣ್ಣು ಸಹ ಒಂದು ಕಮಾಡಿಟಿ ಅಷ್ಟೇ. ಹೆಣ್ಣು ಭ್ರೂಣಾವಸ್ಥೆಯಲ್ಲಿದ್ದಾಗ ಹತ್ಯೆ ಮಾಡುವ ನಾಗರಿಕ ಸಮಾಜ ಬೆಳೆದ ನಂತರ ಎಡನೇ ದರ್ಜೆಯ ನಾಗರಿಕಳನ್ನಾಗಿರುಸುತ್ತದೆ. ಆಗಲೇ ಆಕೆಯನ್ನು ಕೇವಲ ಒಂದು ಭೋಗದ ವಸ್ತುವಾಗಿ ನೋಡಲು ಶುರು ಮಾಡುವುದು. ಟಿವಿ, ಫ್ರಿಜ್ ಕೊಂಡಂತೆ, ವರ್ಷಕ್ಕೊಮ್ಮೆ ಬದಲಾಯಿಸುವಂತೆ ಹೆಣ್ಣನ್ನು ಕೊಳ್ಳಲು, ಬದಲಾಯಿಸಲು ಪ್ರಯತ್ನಿಸುತ್ತದೆ ಈ ನಾಗರೀಕತೆ. ಅತ್ಯಾಚಾರದ ದೈಹಿಕ ಕ್ರೌರ್ಯ ಒಂದು ಕಡೆಯಾದರೆ ಮುಂದೇನು? ಮನೆಯ ಮಾಲೀಕ ಇದು ಮರ್ಯಾದಸ್ಥರು ವಾಸಿಸುವ ಸ್ಥಳವೆಂದು ಗೊಣಗಲು ಶುರು ಮಾಡಿದಾಗ ನಮ್ಮ ನೂರಾರು ಚಿನುಗಳು ಮುಂದೇನು ಮಾಡಬೇಕು??

ನಿಡ್ಡೋಡಿ ಯೋಜನೆಗೆ ಸಿಂಧ್ಯಾ ಬ್ರೇಕ್

– ಚಿದಂಬರ ಬೈಕಂಪಾಡಿ

ನಿಡ್ಡೋಡಿ ಪ್ರಸ್ತಾವಿತ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಜನ ಮಾಡುತ್ತಿರುವ ಹೋರಾಟಕ್ಕೆ ಜಯ ಸಿಕ್ಕಿದೆ ಅಂದುಕೊಳ್ಳಬೇಕಾಗಿಲ್ಲ ತಕ್ಷಣಕ್ಕೆ ಆದರೆ ಜಯದ ನಿರೀಕ್ಷೆ ಇಟ್ಟುಕೊಳ್ಳುವುದಕ್ಕೆ ಕಾರಣಗಲಿವೆ. ಕೇಂದ್ರ ಇಂಧನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಇಂಥ ಭರವಸೆ ನೀಡಿದ್ದಾರೆನ್ನುವ ಸುದ್ದಿ ಇಂದು ಮಾಧ್ಯಮಗಳಲ್ಲಿ ಹರಿದಾಡಿರುವುದರಿಂದ ಇಂಥಾ ಆಶಾವಾದ ಹುಟ್ಟಿಕೊಳ್ಳಲು ಕಾರಣವಾಗಿದೆ.

ಮಾಧ್ಯಮದಲ್ಲಿ ಬಂದಿರುವ ಸುದ್ದಿಯನ್ನು ಗಣನೆಗೆ ತೆಗೆದುಕೊಂಡರೆ ‘ಜನರಿಗೆ ಬೇಡವಾದರೆ ಯೋಜನೆ ಕೈಗೊಳ್ಳುವುದಿಲ್ಲ, ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲಾಗುವುದು’. ಮೊದಲು ಸಚಿವರು ಈ ಕೆಲಸ ಮಾಡಲಿ. ಯುವ ಸಚಿವ ಸಿಂಧ್ಯಾ ಅವರು ಆಡಿರುವ ಮಾತಿನಲ್ಲಿ ಬೇಸರವಿದೆ. ಇದಕ್ಕೆ ಹೊಣೆ ಪ್ರತಿಭಟನೆ ಮಾಡುತ್ತಿರುವ ಜನರಲ್ಲ.

ನಿಡ್ಡೋಡಿಯಲ್ಲಿ ಯೋಜನೆ ಸ್ಥಾಪಿಸಲು ಸ್ವಾಧೀನ ಪಡಿಸಿಕೊಳ್ಳುವ ಭೂಮಿಯನ್ನು ಸಚಿವರು ಖುದ್ದು ನೋಡಿದರೆ ಅಲ್ಲಿ ಯೋಜನೆ ಮಾಡಲು ಶಿಫಾರಸು ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. save-niddodiಯಾಕೆಂದರೆ ಆ ಪರಿಸರವೇ ಅಂಥ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಹಚ್ಚ ಹಸಿರಿನಿಂದ ನಳನಳಿಸುವ ಭತ್ತ, ತೆಂಗು, ಕಂಗು, ಬಾಳೆ ತೋಟಗಳು, ಜುಳು ಜುಳು ಹರಿಯುವ ನೀರಿನ ತೊರೆಗಳನ್ನು ನಾಶಮಾಡಿ ದೇಶಕ್ಕೆ ಬೆಳಕು ಕೊಡಲು ಮುಂದಾಗಿದ್ದವರು ಯಾರಿರಬಹುದು ಎನ್ನುವ ಕುತೂಹಲ ಅವರಿಗೂ ಬರಬಹುದು.

ಯಾರೋ ಮಾಡಿದ ಯೋಜನೆ ಜನೋಪಯೋಗಿಯಾದರೆ ಅದರ ಕ್ರೆಡಿಟ್ ತನ್ನದೇ ಎನ್ನುವ ರಾಜಕಾರಣಿಗಳು ನಿಡ್ಡೋಡಿ ಯೋಜನೆಗೆ ತಾವೇ ಮೂಲಪುರುಷ ಎಂದು ಎದೆತಟ್ಟಿ ಹೇಳಿಕೊಳ್ಳಲು ಯಾಕೆ ಮುಂದೆ ಬರುವುದಿಲ್ಲ?
ನವಮಂಗಳೂರು ಬಂದರು, ಹೆದ್ದಾರಿ, ಕೊಂಕಣ ರೈಲ್ವೇ ಯೋಜನೆಯನ್ನು ತಮ್ಮ ಸಾಧನೆಯೆಂದು ಹೇಳಿಕೊಳ್ಳಲು ಅದೆಂಥಾ ಉತ್ಸಾಹ ರಾಜಕಾರಣಿಗಳಿಗೆ. ಕೇಂದ್ರ ಸರ್ಕಾರದ ನಿಡ್ಡೋಡಿ ಯೋಜನೆ ಜನಪರವಾಗಿದ್ದರೆ ಅದರ ಕೀರ್ತಿಗಾಗಿ ಎಷ್ಟೆಲ್ಲ ಜನ ಬಾವುಟ ನೆಟ್ಟು ತಮ್ಮ ಪ್ರತಿಮೆ ಸ್ಥಾಪಿಸಿಕೊಳ್ಳಲು ಬಯಸುತ್ತಿದ್ದರು ಅನ್ನಿಸುವುದಿಲ್ಲವೇ?

ಈಗ ಅವರು ಮೌನವಾಗಿದ್ದಾರೆ, ಯಾಕೆಂದರೆ ಜನರಿಗೆ ಮೂಲಪುರುಷರ ಮಾಹಿತಿ ಗೊತ್ತಾದರೆ ತಮ್ಮ ಭವಿಷ್ಯವೇ ಕಮರಿಹೋಗಬಹುದು ಎನ್ನುವ ಭಯ ಕಾಡದಿರದು. ಆದರೆ ನಿಡ್ಡೋಡಿ ಯೋಜನೆ ಕೇಂದ್ರದಲ್ಲಿ ಕುಳಿತವರಿಗೆ ಕನಸಿಗೆ ಗೋಚರಿಸಲು ಸಾಧ್ಯವಿಲ್ಲ. ಇಂಥ ಯೋಜನೆಗೆ ಭೂಮಿಯನ್ನು ಗುರುತಿಸಿ ಶಿಫಾರಸು ಮಾಡಿರಲೇ ಬೇಕು. ಬಹುಕಾಲದ ಅಧ್ಯಯನದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಸಾಕಷ್ಟು ಹೋಂವರ್ಕ್ ಮಾಡಿಯೇ ಕೇಂದ್ರಕ್ಕೆ ಈ ಯೋಜನೆ ಕಳುಹಿಸಲಾಗಿದೆ. ತಮ್ಮ ಕಾಲಬುಡದಲ್ಲೇ ಇಂಥ ಘನಘೋರ ಜನವಿರೋಧಿ ಯೋಜನೆ ಅಸ್ತಿತ್ವಕ್ಕೆ ಬರುತ್ತಿರುವುದನ್ನು ಗುರುತಿಸಲಾಗದಂಥ ದಡ್ಡರೂ ನಮ್ಮವರು ಎನ್ನುವುದು ಜೀರ್ಣಿಸಿಕೊಳ್ಳಲಾಗದ ಸತ್ಯ.

ಅಂದಹಾಗೆ ನಿಡ್ಡೋಡಿ ಯೋಜನೆ ರದ್ಧಾದ ಘೋಷಣೆ ಹೊರಬಿದ್ದರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು, ಮೈಲೇಜ್‌ಗಾಗಿ ರಾಜಕಾರಣಿಗಳು ಮುಂದಾಗುವ ಅಪಾಯವೂ ಇದೆ. ಒಂದು ರಾಜಕೀಯ ಪಕ್ಷದ ಹೋರಾಟ ಇದಾಗಿರಲಿಲ್ಲ. ಎಲ್ಲ ಪಕ್ಷದವರು ಮುಕ್ತವಾಗಿ ಮಾತನಾಡಿದ್ದಾರೆ. ಆದ್ದರಿಂದ ಇದೊಂದು ಜನವಿರೋಧಿ ಯೋಜನೆ, ಜನರ ಪ್ರಯತ್ನದಿಂದ ಇಲ್ಲಿಂದ ತೊಲಗಿತು ಅಂದುಕೊಳ್ಳುವುದು ಸೂಕ್ತವಲ್ಲವೇ?

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 : ಹತ್ತೇ ದಿನಗಳು ಬಾಕಿ…

ಸ್ನೇಹಿತರೇ,

ಕಳೆದ ವರ್ಷದಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2013ಈ ಕಥಾ ಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ: 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ನಾನು. ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ನನಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಕಳೆದ ವರ್ಷ ವರ್ತಮಾನದ ಅಡಿಯಲ್ಲಿ ಅದನ್ನು ಮತ್ತೆ ಆರಂಭಿಸಲಾಯಿತು. (ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 ರ ಬಹುಮಾನಿತ ಕತೆಗಳ ವಿವರ ಇಲ್ಲಿದೆ.) ಈ ವರ್ಷದ ಕಥಾ ಸ್ಪರ್ಧೆಗೆ ಕತೆಗಳನ್ನು ಆಹ್ವಾನಿಸುವ ಸಮಯ ಇದು.

ಅಂದ ಹಾಗೆ ಈ ಸ್ಪರ್ಧೆಗೆ ಕಳೆದ ಬಾರಿ ಕೆಲವರು ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಕತೆಗಳನ್ನು ಕಳುಹಿಸಿದ್ದರು. ಇದು ಗಾಂಧಿಯ ಕುರಿತಾದ ಕತೆಗಳ ಕಥಾ ಸ್ಪರ್ಧೆಯಲ್ಲ. ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

– ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು.
– ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:
– ಮೊದಲ ಬಹುಮಾನ: ರೂ. 6000
– ಎರಡನೆ ಬಹುಮಾನ: ರೂ. 4000
– ಮೂರನೆಯ ಬಹುಮಾನ: ರೂ. 3000
– ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2013

ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ