Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅಕ್ಕಿಯೊಳಗಿನ ಕಲ್ಲಾಗದೇ ಸಾಣಿಗೆಯಾಗೋಣ


– ಡಾ.ಎಸ್.ಬಿ. ಜೋಗುರ


 

ಮನುಷ್ಯನಿಗೆ ಇದು ನನ್ನದು ಇದು ನಿನ್ನದು ಎನ್ನುವ ಆಸ್ತಿ ಪ್ರಜ್ಞೆ ಹುಟ್ಟಿದ ಗಳಿಗೆಯಿಂದಲೇ ಸಾಮಾಜಿಕ ಅಸಾಮನತೆ ಎನ್ನುವದು ಆವೀರ್ಭವಿಸಿತು. ಅದಕ್ಕಿಂತಲೂ ಮುಂಚೆ ಇದ್ದ ಅಸಮಾನತೆ ಕೇವಲ ಜೈವಿಕವಾಗಿತ್ತು, ಸ್ವಾಭಾವಿಕವಾಗಿತ್ತು. ಈ ಬಗೆಯ ಸಾಮಾಜಿಕ ಅಸಮಾನತೆಗಳು ಇತಿಹಾಸದುದ್ದಕ್ಕೂ ವ್ಯಾಪಿಸಿಕೊಂಡಿರುವದಿದೆ. ಬಹುಷ: ಆ ಕಾರಣದಿಂದಾಗಿಯೇ ಕಾರ್ಲಮಾರ್ಕ್ಸ್ ರಂಥಾ ಚಿಂತಕರು ಅಸ್ತಿತ್ವದಲ್ಲಿರುವ ಸಮಾಜಗಳ ಚರಿತ್ರೆ ಎಂದರೆ ವರ್ಗಸಂಘರ್ಷದ ಚರಿತ್ರೆಯೇ ಆಗಿದೆ ಎಂದಿರುವದಿದೆ. ಜೊತೆಗೆ ಉತ್ಪಾದನಾ ಸಾಧನಗಳ ಮೇಲಿನ ಒಡೆತನವಿರುವ ಬಂಡವಾಳಶಾಹಿಗಳು ಶೋಷಣೆಯನ್ನೇ ತಮ್ಮ ಮೇಲ್ಮುಖ ಸಂಚಲನೆಯ ಸಾಧನವನ್ನಾಗಿ ಮಾಡಿಕೊಂಡಿದ್ದರು. ಈ ಬಗೆಯ ಶೋಷಣೆಯ ಗರ್ಭದಲ್ಲಿಯೇ ವರ್ಗ ಸಂಘರ್ಷದ ಬೀಜಗಳು ಅಂಕುರಿಸಿದ್ದವು. ಇದು ಮುಂದೆ ಸಮತಾವಾದಿ ಸಮಾಜಕ್ಕೆ ಜನ್ಮ ನೀಡುತ್ತದೆ ಎಂದು ಭವಿಷ್ಯ ನುಡಿದ ಮಾರ್ಕ್ಸನ ಹೇಳಿಕೆ ಹುಸಿಯಾಯಿತು.

ಯಾವುದೇ ಒಂದು ರಾಷ್ಟ್ರದ ಆರ್ಥಿಕ ಸಂಪನ್ಮೂಲಗಳ ಶೇಖರಣೆಯ ಹಿಂದೆ ದುಡಿಯುವ ಜನಸಮೂಹದ ಬೆವರಿದೆ. ಬಂಡವಾಳ ಎನ್ನುವುದು ಯಾವುದೋ ಒಂದು ಅಗೋಚರ ಶಕ್ತಿಯ ವರಪ್ರಸಾದವಲ್ಲ. ಶ್ರಮಸಂಸ್ಕೃತಿಯಿಂದಲೇ ಅದು ಸೃಷ್ಟಿಯಾಗುತ್ತದೆ, ಒಟ್ಟುಗೂಡುತ್ತದೆ. drought12 ನೇ ಶತಮಾನದಲ್ಲಿ ಬಸವಣ್ಣನವರು ಈ ಬಗೆಯ ಶೊಷಣೆಗೆ ಅನುವು ಮಾಡಿಕೊಡಬಾರದು ಎನ್ನುವ ದೃಷ್ಟಿಯಿಂದಲೇ ಅವನು ರಾಜನಾದರೂ ಸೈ, ದಾಸನಾದರೂ ಸೈ ಇಬ್ಬರೂ ದುಡಿಯಲೇಬೇಕು. ಇನ್ನು ಇವರಿಬ್ಬರ ದುಡಿಮೆಯ ಮಿಗುತಾಯವನ್ನು ಗುಡ್ದೆ ಹಾಕದೇ ಸಮಾಜಕ್ಕೆ ದಾಸೋಹದ ರೂಪದಲ್ಲಿ ಹಿಂತಿರುಗಿಸಬೇಕು. ಅಷ್ಟಕ್ಕೂ ಅದು ಕೆರೆಯ ನೀರನು ಕೆರೆಗೆ ಚೆಲ್ಲುವ ಪರಿ ಎನ್ನುವ ಹಾಗೆ ದಾಸೋಹದ ತತ್ವವನ್ನು ಪರಿಚಯಿಸಿದ್ದರು. ಇತ್ತೀಚೆಗೆ ಬಡಜನರಿಗೆ ನೀಡಲಾಗುವ ಮೂವತ್ತು ಕಿಲೊ ಅಕ್ಕಿಯ ಬಗ್ಗೆ ಕೆಲವು ಅಪಸ್ವರಗಳು ಕೇಳಿಬರುತ್ತಿವೆ. ಇದು ಅವರ ದುಡಿಯುವ ಮನೋಭಾವವನ್ನು ಹಾಳುಗೆಡುವಲಿದೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಪೆಟ್ಟು ಬೀಳಲಿದೆ ಎನ್ನುವದು ಇವರ ವಾದ. ಬಡವರಿಗೆ ಈ ಅಕ್ಕಿಯನ್ನು ನೀಡದಿದ್ದರೂ ಅತ್ಯಂತ ಸುಭಿಕ್ಷವಾದ ಸುವರ್ಣಯುಗವಂತೂ ಪ್ರಚಲಿತ ರಾಜಕಾರಣದ ಸಂದರ್ಭದಲ್ಲಿ ಪ್ರತಿಷ್ಟಾಪಿತವಾಗದು. ಈಗಾಗಲೇ ದೊಡ್ಡ ದೊಡ್ಡ ಹೊಟೇಲುಗಳಲ್ಲಿ, ಮದುವೆ ಮಂಟಪಗಳಲ್ಲಿ, ವಿವಿಧ ಸಭೆ ಸಮಾರಂಭಗಳಲ್ಲಿ ಟನ್ ಗಟ್ಟಲೇ ಆಹಾರ ಪದಾರ್ಥ ಹಾಳಾಗಿ ಕಸವಾಗುವದರ ಬಗ್ಗೆಯೂ ನಮಗೆ ತಿಳಿದಿರಬೇಕು. ಅದು ಖಾಸಗಿ ಖರ್ಚಾಗಿದ್ದರೂ ಆಹಾರಧಾನ್ಯ ಹಾಳುಗೆಡಹುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಬಹುದಾಗಿದೆ. ಹಾಡುಹಗಲಲ್ಲಿಯೇ ಸೂರ್ಯನಿಗೆ ಸವಾಲಾಗಿ ಐಷಾರಾಮಿ ಹೊಟೆಲುಗಳಲ್ಲಿ ಉರಿಯುವ ಸಾವಿರಾರು ದೀಪಗಳ ಬೆಳಕಿನ ವ್ಯಯವಾಗುವದನ್ನೂ ಪ್ರಶ್ನಿಸಬೇಕಿದೆ. ಎಲ್ಲೆಲ್ಲೋ ಕೋಟಿಗಟ್ಟಲೆ ಹಣ ವ್ಯಯವಾಗುವ ಬಗ್ಗೆ ಮಾತನಾಡದೇ ಹೀಗೆ ಬಡವರಿಗೆ ಅಗ್ಗದ ದರದಲ್ಲಿ ಅಕ್ಕಿಯ ಬಗ್ಗೆ ಮಾತ್ರ ಯಾಕೆ ಸಂಕುಚಿತವಾದ ಪ್ರತಿಕ್ರಿಯೆಗಳು ಬರುತ್ತವೆ..?

ಬಡವರಿಗೆ ನೀಡುವ ಈ ಅಕ್ಕಿ ಎಲ್ಲೋ..ಯಾವುದೋ ಗೋದಾಮಿನಲ್ಲಿ ಹುಳ ಹಿಡಿದು, ಕಮುಚುಕಟ್ಟಿ ನಾರುವ ಬದಲು ಬಡವನ ಹೊಟ್ಟೆಯ ಸವಾಲಿಗೆ ಉತ್ತರವಾಗುವದಾದರೆ ಅದಕ್ಕಿಂತಲೂ ಸಾರ್ಥಕತೆ ಆ ಅಕ್ಕಿಗೆ ಇನ್ನೇನಿದೆ..? ಅಕ್ಕಿ ಎನ್ನುವದು ಸರ್ವಸ್ವವಲ್ಲ. ಅದು ಆ ಬಡವನ ಪಾಲಿಗೆ ಬೇಳೆಯಲ್ಲ, ಎಣ್ಣೆಯಲ್ಲ, ಉಪ್ಪಲ್ಲ, ಖಾರವಲ್ಲ, ತರಕಾರಿಯೂ ಅಲ್ಲ, ಹೆಂಡತಿಯ ಸೀರೆಯಲ್ಲ, ಮಕ್ಕಳ ವಸ್ತ್ರವಲ್ಲ, ಸ್ಕೂಲ ಫ಼ೀ ಅಲ್ಲ.. ಇರಲು ಮನೆಯಲ್ಲ. ಇಂಥಾ ಇನ್ನೂ ಹತ್ತಾರು ಅಲ್ಲಗಳ ನಡುವೆ ಹೊಟ್ಟೆಗಾಗುವ ಅಕ್ಕಿಯೇ ಎಲ್ಲವೂ ಎಂದು ತಿಳಿದು ವಾದ ಮಾಡುವ ಕ್ರಮವೇ ಸರಿಯಲ್ಲ. ಇಂಥಾ ಹತ್ತಾರು ಇಲ್ಲದ ಸಂಗತಿಗಳು ಬಡವನನ್ನು ಮುತ್ತಿ ಪೀಡಿಸುತ್ತಿರುವಾಗ ಸರಕಾರ ಕೊಡುವ 30 ಕಿಲೊ ಅಕ್ಕಿ ಅವನನ್ನು ಹೇಗೆ ದುಡಿಯದವನನ್ನಾಗಿ ಮಾಡುತ್ತವೆ ಎನ್ನುವದೇ ನಿಗೂಢ ರಹಸ್ಯ.

ಇನ್ನು ಅಗ್ಗದ ದರದಲ್ಲಿ ಅಕ್ಕಿ ಕೊಡುತ್ತಿರುವದು ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನದ ಜನರಿಗೋ..ಇಲ್ಲಾ ಬಂಗ್ಲಾ ದೇಶದ ಜನರಿಗೊ.. ಇಲ್ಲಾ ಶ್ರೀಲಂಕಾದವರಿಗೋ ಆಗಿದ್ದರೆ ತಕರಾರು ಎತ್ತಬಹುದು. ಇದು ನನದೇ ದೇಶದ, ನನ್ನದೇ ರಾಜ್ಯದ ಬಡಜನತೆಗೆ ಕೊಡುತ್ತಿರುವದು. ತಿನ್ನಲು ಸಾಕು ಬೇಕಾದಷ್ಟಿದ್ದರೂ ತಿಂದು ಅರಗಿಸಿಕೊಳ್ಳಲಾಗದೇ ಮಾತ್ರೆ ನುಂಗಿ ಚಡಪಡಿಸುವ ಅತ್ಯಂತ ಕಡಿಮೆ ಪ್ರಮಾಣದ ಜನರಿಗಿಂತಲೂ ಅರೆಹೊಟ್ಟೆಯಲ್ಲಿ ದಿನದೂಡುವ ಕೋಟಿ ಕೋಟಿ ಜನರ ಹಸಿವು ಹಿಂಗುವದು ಮುಖ್ಯವಾಗಬೇಕು.

ಸಿಗರೇಟು, ಮದ್ಯ, ಗುಟ್ಕಾದಂಥಾ ಪದಾರ್ಥಗಳನ್ನು ನೀಡಿದರೆ ಒಕ್ಕೊರಳಿನಿಂದ ವಿರೋಧಿಸಬಹುದು ಆದರೆ ಬಡವರ riceದಿನದ ಗಂಜಿಗಾಗಿ ನೀಡುವ ಅಕ್ಕಿಯನ್ನು ಕುರಿತು ವಿರೋಧಾತ್ಮವಾಗಿ ಪ್ರತಿಕ್ರಿಯಿಸುವುದು ಮಾತ್ರ ಸರಿಯಲ್ಲ. ಬಡತನ ಎನ್ನುವುದು ಒಂದು ಸ್ಥಿತಿ. ಅದನ್ನು ಯಾರೂ ಇಷ್ಟಪಟ್ಟು ತಂದುಕೊಂಡಿರುವದಿಲ್ಲ. ಆ ಬಡತನದ ಹತ್ತಾರು ಅಸಹಾಯಕ ಮುಖಗಳಲ್ಲಿ ಈ ಹಸಿವೂ ಒಂದು ಕನಿಷ್ಟ ಪಕ್ಷ ಅದಾದರೂ ಹಿಂಗುವಂತಾಗುವ ಗಳಿಗೆಗೆ ನಾವು ಸಂತಸ ಪಡಬೇಡವೇ..? ಸ್ವಾತಂತ್ರ್ಯಪೂರ್ವದಿಂದ ಇವತ್ತಿನವರೆಗೂ ಸರ್ವೋದಯ ಸಮಾಜದ ಕನಸನ್ನು ಕಾಣುವ ನಾವುಗಳು ನಮ್ಮದೇ ರಾಜ್ಯದ ಶೋಷಿತರಿಗೆ, ಕೆಳಸ್ತರಗಳಿಗೆ ನೀಡಲಾಗುವ ಕನಿಷ್ಟ ಸೌಲಭ್ಯಗಳನ್ನೂ ಸಹಿಸಲಾಗುವದಿಲ್ಲವಲ್ಲ..! ಎನ್ನುವದೇ ಬಹು ದೊಡ್ದ ವಿಷಾದ.

30 ಕಿಲೊ ಅಕ್ಕಿ ಬಡವರ ಬದುಕಿನ ಭಾಗ್ಯವನ್ನಂತೂ ಬದುಕಿಸಲಾರದು. ಆದರೆ ಕೊನೆಯ ಪಕ್ಷ ಆ ಕುಟುಂಬದ ಹಸಿವನ್ನಾದರೂ ನೀಗಿಸಬಲ್ಲದು. ದೇಶ ಸ್ವಾಯತ್ತವಾಗಿ 6 ದಶಕಗಳಾದರೂ ಇಂದಿಗೂ ನನ್ನದೇ ದೇಶದ ಅರ್ಧದಷ್ಟು ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವದು, ಅರೆಹೊಟ್ಟೆಯಲ್ಲಿ ಮಲಗುವ ಸ್ಥಿತಿ ಇದೆ. ಈ ಸ್ಥಿತಿ ಬ್ರಿಟಿಷರು ಇಲ್ಲಿಂದ ಕಾಲ್ತೆಗೆದ ಮೇಲೆ ನಮ್ಮವರು ನಮ್ಮನ್ನಾಳುವಾಗ ನಿರ್ಮಾಣವಾದದ್ದು ಎನ್ನುವುದೇ ಒಂದು ಬಹುದೊಡ್ಡ ವ್ಯಂಗ್ಯ. ಕಸದಲ್ಲಿ ಎಸೆಯುವ ಎಂಜಲು ಅನ್ನಕ್ಕಾಗಿ ನಾಯಿ-ಹಂದಿಗಳ ಜೊತೆ ಸೆಣಸಾಡುವ ಸನ್ನಿವೇಶದ ಎದುರು ನಮ್ಮ ನಾಗರಿಕತೆ ನಾಚಿ ನೀರಾಗಬೇಕು. ಹಾಗಾದಾಗ ಮಾತ್ರ ನಾವು ಬಡವರಿಗೆ ನೀಡುವ ಅಕ್ಕಿಯಲ್ಲಿ ಕಲ್ಲಾಗದೇ ಸಾಣಿಗೆಯಾಗುವ ಸಾಧ್ಯತೆಯಿದೆ.

ನಿಡ್ಡೋಡಿ ವಿದ್ಯುತ್ ಸ್ಥಾವರ ಯಾಕೆ ಬೇಡ ?


– ಚಿದಂಬರ ಬೈಕಂಪಾಡಿ


 

ನೆಲದ ಮೇಲೆ ಅಂಗಾತ ಮಲಗಿದ ಇಪ್ಪತ್ತರ ಜೀವ ಅತ್ತ ಮಗುವೂ ಅಲ್ಲ, ಇತ್ತ ಯುವಕನೂ ಅಲ್ಲ. ತೆವಳುತ್ತಾ ಮನೆಯೊಳಗೇ ಕಾಲ ಕಳೆಯುವ ಮತ್ತೊಂದು ಜೀವ. ಸುಂದರ ಯುವತಿಯ ಕೈಹಿಡಿಯಲು ಯುವಕರು ಮುಂದೆ ಬರುವುದಿಲ್ಲ, ಆ ಊರಿನ ಯುವಕರಿಗೆ ಹೆಣ್ಣು ಕೊಡಲು ಹೊರಗಿನವರು ಇಚ್ಛೆಪಡುವುದಿಲ್ಲ. ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಕೂಡಿದ್ದರೆ, ಮದುವೆ ಆದರೂ ಹೆಣ್ಣು ಗರ್ಭ ಧರಿಸುವುದಿಲ್ಲ. ಇಂಥ ವೈರುಧ್ಯಗಳಿಂದ ನಲುಗುತ್ತಿರುವ ಕೊಕ್ಕಡದ ಹೆಸರು ಕೇಳಿದರೆ ಮೈಜುಮ್ಮೆನ್ನುತ್ತದೆ. ಕಾರಣ ಮಹಾಮಾರಿ ಏಡ್ಸ್ ಅಲ್ಲ ಅದಕ್ಕಿಂತಲೂ ಭೀಕರವಾದ ಎಂಡೋಸಲ್ಫಾನ್ ಈ ಭಾಗದಲ್ಲಿ ಮಾಡಿರುವ ಪರಿಣಾಮ.

ನವಮಂಗಳೂರು ಬಂದರು ನಿರ್ಮಾಣಕ್ಕೆ ಫಲವತ್ತಾದ ಭೂಮಿ ಕೊಟ್ಟು mangalore-oil-refineryಕಾಟಿಪಳ್ಳ-ಕೃಷ್ಣಾಪುರ ಪುನರ್ವಸತಿ ಕೇಂದ್ರದಲ್ಲಿ ಕೇವಲ ಹನ್ನೆರಡೂವರೆ ಸೆಂಟ್ಸ್ ನಿವೇಶನದಲ್ಲಿ ಮನೆಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ ಮಾಡುತ್ತಿರುವ ಅನ್ನದಾತನ ಬದುಕು ಬವಣೆ ಅಧ್ಯಯನ ಯೋಗ್ಯ.

ಮಂಗಳೂರು ತೈಲಾಗಾರ ನಿರ್ಮಾಣಕ್ಕೆ ಭೂಸ್ವಾಧೀನವಾಗಿ ಈಗ ಚೇಳಾರಿನಲ್ಲಿ ಏದುಸಿರು ಬಿಡುತ್ತಿರುವ ನಿರ್ವಸಿತರು, ಎಂಎಸ್‌ಇಝಡ್ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡವರು ಸಿಂಗಾಪುರದಂಥ ಪುನರ್ವಸತಿ ನಗರಿಯಲ್ಲಿ ಬದುಕುತ್ತಿದ್ದಾರೆ.

ಪಡುಬಿದ್ರಿ ನಂದಿಕೂರು ವಿದ್ಯುತ್ ಸ್ಥಾವರದ ಸುಮಾರು 30 ಕಿ.ಮೀ ಸುತ್ತಳತೆಯಲ್ಲಿ ಹಸಿರು ಗಿಡಗಳು ನಳನಳಿಸುವುದಿಲ್ಲ. mangalore-pollutionಯಾಕೆಂದರೆ ಹಾರು ಬೂದಿಯ ಪ್ರಭಾವ. ಈ ಮೇಲಿನ ಎಲ್ಲವೂ ಪರಿಸರಕ್ಕೆ ಹಾನಿ ಮಾಡುತ್ತಿರುವಂಥವು ಮತ್ತು ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡದ ಕೈಗಾರಿಕೆಗಳು. ಭೂಮಿಗೆ ಪರ್ಯಾಯವಾಗಿ ಹಣಕೊಟ್ಟಿವೆ, ಆದರೆ ಬದುಕು ಕಿತ್ತುಕೊಂಡಿವೆ. ಹತ್ತಾರು ಎಕರೆ ಭೂಮಿಯ ಒಡೆಯನಾಗಿದ್ದ ಜಮೀನ್ದಾರ ಈ ಕೈಗಾರಿಕೆಗಳ ಸ್ಥಾಪನೆಯಿಂದ ಬೀದಿಗೆ ಬಿದ್ದಿದ್ದಾನೆ.

ಈಗ ನಿಡ್ಡೋಡಿ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಜನ ನಿರ್ವಸಿತರಾಗುವುದು, ಫಲವತ್ತಾದ ಭೂಮಿಯನ್ನು ಬಿಟ್ಟುಕೊಟ್ಟು ಹಣದ ಥೈಲಿ ಹಿಡಿದಿಕೊಂಡು ಬಾರು, ಮೋಜು ಮಸ್ತಿಯಲ್ಲಿ ಕಾಲಕಳೆದು ಬಿಕಾರಿಯಾಗುವ ಕಾಲ ಸನ್ನಿಹಿತವಾಗುತ್ತಿದೆ.

ಯಾವುದೇ ಸರ್ಕಾರವಾದರೂ ಸರಿ ಜನಸ್ನೇಹಿ, ಪರಿಸರ ಸ್ನೇಹಿ, ಸಹ್ಯ ಕೈಗಾರಿಕೆಯನ್ನು ಸ್ಥಾಪಿಸುತ್ತದೆ ಎಂದು mangalore-pollution-at-seaನಿರೀಕ್ಷೆಮಾಡುವುದು ಜನರ ಸಾಮಾನ್ಯ ಗ್ರಹಿಕೆ ಹೊರತು ವಾಸ್ತವ ಅಲ್ಲ ಎನ್ನುವುದಕ್ಕೆ ಮೇಲಿನ ಎಲ್ಲವೂ ಉದಾಹರಣೆಗಳು.

ಕಡಂದಲೆ, ಕೊಜೆಂಟ್ರಿಕ್ಸ್ ಎರಡೂ ಉದಾಹರಣೆ ಮೂಲಕ ಹಾನಿಕಾರಕ ಕೈಗಾರಿಕೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಜನ ಹೆಮ್ಮೆ ಪಟ್ಟುಕೊಂಡರೂ ನಂದಿಕೂರು ಸ್ಥಾವರ ಕೊಜೆಂಟ್ರಿಕ್ಸ್ ಗಿಂತ ಭಿನ್ನ ಹೇಗೆಂದು ಸಮರ್ಥನೆ ಕೊಡಲು ಸಾಧ್ಯವೇ?

ಎಂಆರ್‌ಪಿಎಲ್ ತ್ಯಾಜ್ಯ ನೀರು ಹರಿಸುವ ಕೊಳವೆ ಅಳವಡಿಸುವ ಸಂದರ್ಭದಲ್ಲಿ ನಡೆದ ಗೋಲಿಬಾರ್ ನೆನಪಿಸಿಕೊಂಡರೆ ಒಂದು ಹೋರಾಟ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವೆಂದು ಭ್ರಮೆ ತರಿಸಿತೇ ಹೊರತು ಪರೋಕ್ಷವಾಗಿ ಜನರನ್ನು ಸರ್ಕಾರ ಮೋಸಗೊಳಿಸಿತು ಎನ್ನುವುದೇ ಸೂಕ್ತ.

ಗೋಲಿಬಾರ್ ವೇಳೆ ಹೋರಾಟದಲ್ಲಿ ಭಾಗವಹಿಸಿಯೋ, ಆಕಸ್ಮಿಕವಾಗಿಯೋ ಆ ಸಂದರ್ಭದಲ್ಲಿ ಗಾಯಗೊಂಡವರಿಗೆ ಪರಿಹಾರ, ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಆಗಿಲ್ಲ. ನೆಲ-ಜಲ ನಮ್ಮದು. ಇಲ್ಲಿ ತಯಾರಾಗುವ ಪೆಟ್ರೋಲ್ ಕಡಿಮೆ ದರದಲ್ಲಿ ಬಳಕೆ ಮಾಡುವ ಭಾಗ್ಯ ರಾಜಧಾನಿ ದೆಹಲಿ ಜನಕ್ಕೆ. ಇಲ್ಲಿ ಉದ್ಯೋಗಕ್ಕೆ ಆಯ್ಕೆಯಲ್ಲೂ ಅವರದ್ದೇ ಮಾನದಂಡ, ಅವರದ್ದೇ ಜನ, ಎಲ್ಲರೂ ಭಾರತೀಯರು ಎನ್ನುವ ಸಮಾಧಾನದ ಮಾತು.

ನಾವು ನವಮಂಗಳೂರು ಬಂದರು ನಿರ್ಮಾಣವಾದ ಮೇಲೂ ಪಾಠ ಕಲಿಯಲಿಲ್ಲ. ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ ಬಂದರಿನ ಲಾಭದಲ್ಲಿ ಬಿಡಿಗಾಸೂ ಇಲ್ಲ, ಆದರೆ ಭೂಸ್ವಾಧೀನ ಮಾಡುವ ವೇಳೆ ಮಾಡಿಕೊಂಡ ನಿರ್ಣಯಗಳನ್ನು ಬೈಕಂಪಾಡಿ ಪಟೇಲ್ ಶ್ರೀನಿವಾಸ ರಾವ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳಿ.

ಎಂಆರ್‌ಪಿಎಲ್ ವಿರುದ್ಧ ಹೋರಾಟ ಮಾಡಿದಾಗ ಜನರನ್ನು ಬಗ್ಗು ಬಡಿಯಲು ಅನುಸರಿಸಿದ ತಂತ್ರ ಒಡೆದು ಆಳುವ ನೀತಿ. ಒಕ್ಕಲೆಬ್ಬಿಸುವ ಸಾಮರ್ಥ್ಯವಿದ್ದವರಿಗೆ ಎಲ್ಲಾ ರೀತಿಯ ಗುತ್ತಿಗೆ ಕಾಣಿಕೆ.

ನಂದಿಕೂರು ಸ್ಥಾವರದ ವಿರುದ್ಧ ಹೋರಾಟ citizens-protest-niddodi-mangaloreಶುರುವಾದಾಗ ಧುತ್ತನೆ ಪ್ರತ್ಯಕ್ಷವಾದ ಪರ್ಯಾಯ ಹೋರಾಟ ಸಮಿತಿ, ಪರಿಸರಕ್ಕೆ ಹಾನಿಯಾಗುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುವ ಘೋಷಣೆ- ಚಪ್ಪಾಳೆ ಗಿಟ್ಟಿಸುವಂಥ ಭಾಷಣ. ಈಗ ಅವರೆಲ್ಲಿದ್ದಾರೆ? ಅವರೊಂದಿಗೆ ಕಾಣಿಸಿಕೊಂಡಿದ್ದ ನಂದಿಕೂರಿನ ಮುಖಗಳೆಲ್ಲಿವೆ?

ಇಷ್ಟೆಲ್ಲಾ ಹೇಳಿದ ಮೇಲೂ ನಿಡ್ಡೋಡಿ ಸ್ಥಾವರವನ್ನು ಸಮರ್ಥಿಸಿಕೊಳ್ಳುವವರಿದ್ದರೆ ಅದು ಅವರ ಜಾಣತನ ಎನ್ನುತ್ತೇನೆ. 1200 ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದ ಅನಾಹುತವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವಾಗ 4000 ಮೆ.ವಾ ಸಾಮರ್ಥ್ಯದ ಸ್ಥಾವರವನ್ನು ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಊಹೆಮಾಡಿಕೊಳ್ಳುವುದು ಕಷ್ಟವಲ್ಲ.

ಕರಾವಳಿ ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶ ಅತೀ ಸೂಕ್ಷ್ಮ ಎನ್ನುವ ಪರಿಣತರ ವರದಿಯನ್ನು ನಿರಾಕರಿಸುವಂತಿಲ್ಲ. ಸರ್ಕಾರಿ ಪ್ರಾಯೋಜಿತ, ಕಂಪೆನಿ ಕೃಪಾಪೋಷಿತ ಪರಿಣತರ ಅಥವಾ ಢೋಂಗಿ ಪರಿಸರವಾದಿ ಪರಿಣತರ ಮಾತಿನಲ್ಲಿ ಜನ ವಿಶ್ವಾಸವಿಡುವಂತಿಲ್ಲ.

ಧಾರಣಾ ಶಕ್ತಿ ಅಧ್ಯಯನ ಮಾಡುವ ತನಕ ಯಾವುದೇ ಕೈಗಾರಿಕೆಗಳಿಗೆ ಕರಾವಳಿಯಲ್ಲಿ ಅವಕಾಶವಿಲ್ಲ ಎನ್ನುವ ಒಂದಂಶ ಅಜೆಂಡಾ ಮಾತ್ರ ಹೋರಾಟ ಸಮಿತಿಯ ಮುಂಚೂಣಿಯಲ್ಲಿರಬೇಕು ಹೊರತು ಅದು ಅಪಾಯಕಾರಿಯೋ, ಅಲ್ಲವೋ ಎನ್ನುವುದು ಈಗ ಮುಖ್ಯವಲ್ಲ ಎನ್ನುವುದೇ ಜನರ ಬೇಡಿಕೆಯಾಗಬೇಕು.

ಕರಾವಳಿಯಲ್ಲಿ ಸ್ಥಾಪನೆಯಾಗಿರುವ ಮತ್ತು ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳೆಲ್ಲವೂ ರಾಸಾಯನಿಕ ಆಧಾರಿತ ಮತ್ತು ಕಲ್ಲಿದ್ದಲು ಆಧಾರಿತ. ಹಾಗಾದರೆ ಕರಾವಳಿ ತ್ಯಾಜ್ಯದ ತಿಪ್ಪೇಗುಂಡಿಯೇ?

ಧಾರಾಳವಾಗಿ ಉದ್ಯೋಗ ನೀಡುತ್ತಿದ ಎಂಡಿಎಲ್ ಯಾರ್ಡನ್ನು save-niddodiಇಲ್ಲಿನ ರಾಜಕಾರಣಿಗಳು ಮುಂಬೈಗೆ ಸ್ಥಳಾಂತರಿಸಲು ಸಮ್ಮತಿಸಿದ್ದೇಕೆ? ನೆಲ, ಜಲ, ವಾಯು ಮಾರ್ಗದ ಅನುಕೂಲವಿರುವ ಕರಾವಳಿಯಲ್ಲಿ ಪರಿಸರಕ್ಕೆ ಹಾನಿಯಾಗದಂಥ ಆಟೋಮೊಬೈಲ್ ಉದ್ದಿಮೆ ಸ್ಥಾಪಿಸಿದ್ದರೆ ಸಹಸ್ರಾರು ಜನರಿಗೆ ಉದ್ಯೋಗ ಸಿಗುತ್ತಿರಲಿಲ್ಲವೇ? ಕರಾವಳಿಯಲ್ಲೂ ಖರ್ಗೆಯವರು ರೈಲ್ವೇ ಕೋಚ್ ನಿರ್ಮಾಣ ಕಾರ್ಖಾನೆ ಸ್ಥಾಪಿಸಲು ಮುಂದಾಗಬಾರದೇ? ಈ ಪ್ರಶ್ನೆಗಳನ್ನು ನಿಡ್ಡೋಡಿಗೆ ಓಡೋಡಿ ಬರುವ ರಾಜಕಾರಣಿಗಳಿಗೆ ಕೇಳಿ. ಮಠ ಪೀಠಾಧೀಶರು, ರಾಜಕಾರಣಿಗಳು ಸಾರಥ್ಯ ವಹಿಸಿಕೊಳ್ಳುವ ಹೋರಾಟದಲ್ಲಿ ಯಾರೂ ನಂಬಿಕೆ ಇಟ್ಟುಕೊಳ್ಳುವಂತಿಲ್ಲ.

ಮಠ-ಪೀಠಾಧಿಗಳಿಂದ, ಜಾತಿ, ಧರ್ಮಗಳ ನೆಲೆಯಿಂದ ಮತ್ತು ರಾಜಕೀಯ ಪಕ್ಷಗಳ ಸೆರಗಿನ ಮರೆಯಿಂದ ಹೊರತಾದ ಹೋರಾಟವಾಗಬೇಕು. ಅಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಹಿರಿ ತಲೆಯಿಂದ ಹಿಡಿದು ಅಲ್ಲೇ ಬದುಕುವ ಕನಸು ಕಟ್ಟಿಕೊಂಡು ಹುಟ್ಟಿರುವ ಹಸುಗೂಸಿನ ತನಕ ಜನರಿಗಾಗಿ, ಜನರ ಹೋರಾಟವಾಗಬೇಕು. ಅದು ಆಗಲಿ ಎನ್ನುವ ಆಶಯ ನನ್ನದು.

ಈ ಬಾಲಕಿಯರ ಮೌನ ರೋದನ ಕೇಳುವವರಾರು?

– ರೂಪ ಹಾಸನ

ಈಗ್ಗೆ ಕೆಲ ವರ್ಷದ ಹಿಂದೆ ವಸತಿಯುತ ಅಂಧ ಮಕ್ಕಳ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಹೆಣ್ಣು ಮಗಳೊಬ್ಬಳು ಗರ್ಭಿಣಿಯಾಗಿದ್ದಳು. ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಸಹಶಿಕ್ಷಣ ನೀಡುವ ಆ ಶಾಲೆಯಲ್ಲಿ ಇಂತಹ ನೀಚ ಕೆಲಸ ಮಾಡಿದವರು ಯಾರು ಎಂಬುದನ್ನು ಕಂಡು ಹಿಡಿಯಲು ಗುಟ್ಟಾಗಿ ಪತ್ತೆ ಹಚ್ಚುವ ಪ್ರಯತ್ನ ನಡೆಯಿತಾದರೂ ಕಾಮುಕನ ಪತ್ತೆಯಾಗಿರಲಿಲ್ಲ. ಕೊನೆಗೆ ತನ್ನದಲ್ಲದ ತಪ್ಪಿಗೆ ಆ ಹುಡುಗಿ ಶಿಕ್ಷಣವನ್ನು ಅರ್ಧದಲ್ಲೇ ಮೊಟುಕುಗೊಳಿಸಿ ಬಡ ತಂದೆ-ತಾಯಿಯರ ಜೊತೆಗೆ ಮನೆಗೆ ತೆರಳಿದ್ದಳು. ತಾನು ಉಪಯೋಗಿಸಲ್ಪಟ್ಟದ್ದಕ್ಕೆ ಆ ಹುಡುಗಿಯ ಬಳಿ ಯಾವ ಸಾಕ್ಷ್ಯವೂ ಇರಲಿಲ್ಲ. rape-illustrationಈ ಅನ್ಯಾಯವನ್ನು ಕಾನೂನುರೀತ್ಯ ಎದುರಿಸುವ ಆರ್ಥಿಕ ಚೈತನ್ಯವಾಗಲೀ, ಸಮಾಜವನ್ನು ಎದುರಿಸುವ ನೈತಿಕ ಶಕ್ತಿಯಾಗಲೀ ಇಲ್ಲದ ಪೋಷಕರು ಆ ಹೆಣ್ಣುಮಗುವಿನ ಬಸಿರು ತೆಗೆಸಿ, ತಮ್ಮ ಹಣೆಬರಹವನ್ನು ಬೈಯ್ದುಕೊಳ್ಳುತ್ತಾ ಹುಡುಗಿಯನ್ನು ಸಾಕುತ್ತಿದ್ದಾರೆ. ಈ ವಿಷಯ ಸಂಸ್ಥೆಯಿಂದ ಹೊರಬರದೇ, ಎಲ್ಲಿಯೂ ಸುದ್ದಿಯೂ ಆಗದೇ ಅಲ್ಲೇ ಸತ್ತು ಹೋಯಿತು.

ಕಳೆದ ವರ್ಷದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರಾದ ಎಚ್.ಆರ್. ಭಾರದ್ವಾಜ್ ಅವರು ತಮಗಾಗಿ ರಚಿತವಾಗಿರುವ ಕಾನೂನುಗಳ ಪ್ರಯೋಜನವನ್ನು ಅಂಗವಿಕಲರು ಪಡೆದುಕೊಳ್ಳುವಂತಾಗಬೇಕು. ಇಂತಹ ಕಾನೂನುಗಳು ಇದುವರೆಗೂ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ ಅವರಿಗೆ ಮೀಸಲಾಗಿರುವ ಸೌಲಭ್ಯ ದಕ್ಕುತ್ತಿಲ್ಲ ಎಂದು ವಿಷಾದಿಸಿದ್ದರು. ಆದರೆ ಅಂಗವಿಕಲ ಮಕ್ಕಳು, ಮುಖ್ಯವಾಗಿ ಬಡ ಹೆಣ್ಣುಮಕ್ಕಳು ಕಾನೂನಿನ ಸೌಲಭ್ಯ ಪಡೆಯುವುದಿರಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲೂ ಸಾಧ್ಯವಾಗದೇ ಲೈಂಗಿಕ ದೌರ್ಜನ್ಯಕ್ಕೆ, ಶೋಷಣೆಗೆ ಗುರಿಯಾಗುತ್ತಿರುವುದನ್ನು ಕಾಣುವಾಗ ಅಂಗವಿಕಲತೆ ಶಾಪವಲ್ಲ ಎಂದು ನಾವು ಬಿಗಿಯುವ ಭಾಷಣ ಅವರನ್ನು ಅಪಹಾಸ್ಯ ಮಾಡಿದಂತೆನಿಸುತ್ತದೆ.

ಕರ್ನಾಟಕದ ಜನಸಂಖ್ಯೆಯ ಶೇಕಡಾ 5 ರಿಂದ 6 ರಷ್ಟಿರುವ ಅಂಗವಿಕಲರ ಅಭ್ಯುದಯಕ್ಕಾಗಿ ಅಂಗವಿಕಲರ ಕಲ್ಯಾಣ ಇಲಾಖೆ 1988 ರಿಂದಲೇ ಕೆಲಸ ಮಾಡುತ್ತಿದೆ. ಅಂಗವಿಕಲರ ಅಧಿನಿಯಮ 1995 ರ ಅನ್ವಯ ಅಂಗವಿಕಲ ವ್ಯಕ್ತಿಗಳಿಗೆ ವಿದ್ಯಾಭ್ಯಾಸ, ತರಬೇತಿಗಳೊಂದಿಗೆ ಉತ್ತಮ ಅವಕಾಶವನ್ನು ಕಲ್ಪಿಸಿ ಸೌಲಭ್ಯ ನೀಡಿದಲ್ಲಿ ಅವರು ಕೂಡ ದೇಶದ ಆರ್ಥಿಕ ಅಭಿವೃದ್ಧಿಗೆ ಸಮನಾದ ಪಾಲನ್ನು ನೀಡುತ್ತಾರೆ ಎಂದು ಹೇಳಿ ಅಂಗವಿಕಲ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯನ್ನು ಎತ್ತಿಹಿಡಿಯಲಾಗಿದೆ. ಇದಕ್ಕಾಗಿ ಸರ್ಕಾರ ಹಲವು ಕೋಟಿಗಳನ್ನು ವಿನಿಯೋಗಿಸುತ್ತಿದೆ.

ದೃಷ್ಟಿದೋಷ, ಶ್ರವಣದೋಷ, ಮಾನಸಿಕ ಅಸ್ವಸ್ಥತೆ, ಬುದ್ಧಿಮಾಂದ್ಯತೆಗಳನ್ನು ವಿಶೇಷ ಅಂಗವೈಕಲ್ಯವೆಂದು ಗುರುತಿಸಲಾಗುತ್ತದೆ. ಇಂತಹ ಮಕ್ಕಳಿಗೆ ಪ್ರತ್ಯೇಕವಾಗಿಯೇ ಶಿಕ್ಷಣ ನೀಡಬೇಕಾದ ಅನಿವಾರ್ಯತೆಯೂ ಇದೆ. ಹೀಗೆಂದೇ ರಾಜ್ಯದಲ್ಲಿ, ದೃಷ್ಟಿದೋಷವಿರುವ ಮಕ್ಕಳಿಗಾಗಿ ಸರ್ಕಾರದ ವತಿಯಿಂದ ನಾಲ್ಕು ವಿಶೇಷ ವಸತಿಶಾಲೆಗಳನ್ನು, ಹಾಗೇ ಶ್ರವಣದೋಷವುಳ್ಳ ಮಕ್ಕಳಿಗಾಗಿ ನಾಲ್ಕು ವಿಶೇಷ ವಸತಿಶಾಲೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಒಂದೊಂದು ಶಾಲೆ ಪ್ರತ್ಯೇಕವಾಗಿ ಹೆಣ್ಣುಮಕ್ಕಳಿಗಾಗಿಯೇ ಇರುವಂತದ್ದು.

ಇವುಗಳಲ್ಲದೇ ವಿಶೇಷ ಅಂಗವೈಕಲ್ಯತೆಯುಳ್ಳ ಮಕ್ಕಳಿಗಾಗಿಯೇ ಕರ್ನಾಟಕದಾದ್ಯಂತ 150 ಕ್ಕೂ ಹೆಚ್ಚು ಅನುದಾನಿತ-ಅನುದಾನರಹಿತ, ವಸತಿಯುತ-ವಸತಿರಹಿತ ಶಾಲೆಗಳು, ಸ್ವಯಂಸೇವಾ ಸಂಸ್ಥೆಗಳಿಂದ ನಡೆಸಲ್ಪಡುತ್ತಿವೆ. ಹಾಗೆ ಪ್ರತ್ಯೇಕ ಹೆಣ್ಣುಮಕ್ಕಳ ಶಾಲೆಗಳಲ್ಲಿ ಮಹಿಳಾ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಗಂಡು-ಹೆಣ್ಣು ಮಕ್ಕಳಿಬ್ಬರಿಗೂ ಸಹಶಿಕ್ಷಣ ನೀಡುವ ಈ ವಿಶೇಷ ಶಾಲೆಗಳಲ್ಲಿ ಮಹಿಳಾ ಮೇಲ್ವಚಾರಕಿಯರ ಹುದ್ದೆಯನ್ನು ಕಡ್ಡಾಯಗೊಳಿಸಿಲ್ಲ. ಜೊತೆಗೆ ಇರುವೊಬ್ಬರು ರಜೆಯ ಮೇಲೆ ತೆರಳಿದರೆ, ಆ ಕೆಲಸವನ್ನು ನಿರ್ವಹಿಸಲು ಮತ್ತೊಬ್ಬ ಮಹಿಳಾ ಮೇಲ್ವಿಚಾರಕಿಯ ಹುದ್ದೆಯನ್ನೂ ನಿಗದಿಗೊಳಿಸಿಲ್ಲ. ಇಂತಹ ವಸತಿಶಾಲೆಗಳಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.

ಈ ಅಸಹಾಯಕ ಮಕ್ಕಳಿಗೆ ಶಿಕ್ಷಣದೊಂದಿಗೆ, ವಿಶೇಷ ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ಧಾರಿಯೂ ಇಂತಹ ಸಂಸ್ಥೆಗಳ ಮೇಲಿರುತ್ತದೆ. girl-harassementಅದರಲ್ಲೂ ಹೆಣ್ಣು ಮಕ್ಕಳಿಗೆ ಅಂಗವೈಕಲ್ಯತೆ ಒಂದು ಶಾಪವಾದರೆ, ಅವರ ದೇಹವೇ ಅವರಿಗೆ ಇನ್ನೊಂದು ಶಾಪವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸುಲಭವಾಗಿ ಸಿಕ್ಕಿಹಾಕಿಕೊಳ್ಳುವ, ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಇಂಥಹ ಮಕ್ಕಳಿಗೆ ಬದುಕೇ ನರಕವೆನಿಸಿ, ಮನುಷ್ಯ ಪ್ರಪಂಚದ ಬಗೆಗೇ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅವರ ಮುಗ್ಧತೆ, ಅಸಹಾಯಕತೆ, ಅಂಗವೈಕಲ್ಯ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಬಹು ದೊಡ್ಡ ಜವಾಬ್ದಾರಿಯಾಗಿರುತ್ತದೆ.

ಪುರುಷ ಶಿಕ್ಷಕರು, ಮೇಲ್ವಿಚಾರಕರು, ಸಿಬ್ಬಂದಿಯಿಂದ ಲೈಂಗಿಕ ಕಿರುಕುಳಕ್ಕೆ ಇಂತಹ ಹಲವು ಹೆಣ್ಣುಮಕ್ಕಳು ಗುರಿಯಾಗುತ್ತಿದ್ದರೂ ಆಡಲಾಗದೇ ಅನುಭವಿಸಲಾಗದೇ ಅವರು ಪಡುತ್ತಿರುವ ಮಾನಸಿಕ ಯಾತನೆ ಕರುಳು ಹಿಂಡುವಂತದ್ದು. ಹೆಚ್ಚಿನ ಮಕ್ಕಳು ತಮ್ಮ ಪೋಷಕರೊಂದಿಗೂ ಇದನ್ನು ಹಂಚಿಕೊಳ್ಳದೇ ಹಿಂಸೆ ಅನುಭವಿಸುತ್ತಾರೆ. ಹಾಗೊಮ್ಮೆ ಹೇಳಿಕೊಂಡರೂ ಅವರೂ ಅಸಹಾಯಕರೇ. ಒಂದೋ ಶಾಲೆ ಬಿಡಿಸಿ ಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳಬೇಕು ಇಲ್ಲವೇ ಅಲ್ಲೇ ಹೇಗೋ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಮಕ್ಕಳಿಗೆ ಸೂಚಿಸಬೇಕು. ಇಂತಹ ಶಾಲೆಗಳು ಜಿಲ್ಲೆಗೊಂದರಂತೆ ಕೂಡ ಇಲ್ಲದಿರುವುದರಿಂದ, ಇರುವುದರಲ್ಲಿ ಹತ್ತಿರದ ಶಾಲೆ ಬಿಡಿಸಿ ದೂರದ ಶಾಲೆಗೆ ಮಗುವನ್ನು ಕಳಿಸುವ ಆರ್ಥಿಕ ಸಾಮರ್ಥ್ಯವೂ ಅವರಲ್ಲಿರುವುದಿಲ್ಲ. ಇಂತಹ ಹೆಚ್ಚಿನ ಮಕ್ಕಳು ಬಡತನ ರೇಖೆಗಿಂತ ಕೆಳಗಿರುವವರೇ ಆಗಿರುತ್ತಾರೆ. ಅಸಹಾಯಕ ಮಕ್ಕಳು ಲೈಂಗಿಕ ಕಿರುಕುಳವನ್ನು ಮೌನವಾಗಿ ಸಹಿಸಿ, ಗೌಪ್ಯವಾಗಿಯೇ ನೋವನುಭವಿಸುತ್ತಾರೆ.

ಮಕ್ಕಳಿಗೆ ಆಗುತ್ತಿರುವ ಲೈಂಗಿಕ ಹಿಂಸೆ ತಿಳಿದಿರುವ ಸಾಮಾಜಿಕ ಕಾರ್ಯಕರ್ತರೂ ಇಂತಹ ಸೂಕ್ಷ್ಮ ವಿಷಯವನ್ನು ಹೇಗೆ ನಿರ್ವಹಿಸುವುದೆಂದು ತಿಳಿಯದೇ ಅಸಹಾಯಕರಾಗುವ ಪರಿಸ್ಥಿತಿ ಇದೆ. ಆಪ್ತರಾಗಿರುವವರಲ್ಲಿ ಮಕ್ಕಳು ಮನ ಬಿಚ್ಚಿ ತಮ್ಮ ಸಂಕಟ ಹೇಳಿಕೊಂಡರೂ ಯಾವುದೇ ಕಾರಣಕ್ಕೂ ಶಾಲೆಯವರಿಗೆ, disabled-girlsಪೋಷಕರಿಗೆ ತಿಳಿಸಬಾರದೆಂದು ಬೇಡಿಕೊಳ್ಳುತ್ತಾರೆ. ಕಾನೂನಿನ ನೆರವು ಪಡೆಯಲು ವಿಷಯವನ್ನು ಬಹಿರಂಗ ಪಡಿಸುವುದು, ಮಗುವಿನೊಂದಿಗೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರತ್ಯೇಕವಾಗಿ ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ಇಂತಹ ವಿಷಯಗಳನ್ನು ಬಹಳಷ್ಟು ಬಾರಿ ಅಸೂಕ್ಷ್ಮವಾಗಿ ನಿರ್ವಹಿಸುವ ಸಂಬಂಧಪಟ್ಟ ಅಧಿಕಾರಿಗಳು ಮಗುವಿನ ಭವಿಷ್ಯಕ್ಕೆ ಅನುಕೂಲಕ್ಕಿಂಥಾ ತೊಂದರೆ ಮಾಡುವುದೇ ಹೆಚ್ಚು. ನಿರ್ದಿಷ್ಟ ವ್ಯಕ್ತಿಯನ್ನು ಗುರಿ ಮಾಡಿ ದೂರು ದಾಖಲಿಸಲೂ ಯಾವುದೇ ಸಾಕ್ಷ್ಯಾಧಾರಗಳೂ ಇರುವುದಿಲ್ಲ. ಹಾಗೆ ಅವರ ವಿರುದ್ಧ ಪ್ರತಿಭಟನೆ ಮಾಡಲೂ, ಮಕ್ಕಳಪರ ಹೋರಾಟದ ಗಟ್ಟಿ ದನಿ ಇನ್ನೂ ರೂಪುಗೊಂಡಿಲ್ಲ. ಹಲವು ಸಂದರ್ಭದಲ್ಲಿ ಏಕಾಂಗಿಯಾಗಿ ಇಂತಹ ಅನಿಷ್ಟದ ವಿರುದ್ಧ, ಮಕ್ಕಳ ಪರವಾಗಿ ಹೋರಾಡುವಾಗ ಸಾಮಾಜಿಕ ಕಾರ್ಯಕರ್ತರೇ ತೊಂದರೆಗೆ ಸಿಲುಕುವ ಪ್ರಸಂಗಗಳು ಹೆಚ್ಚುತ್ತಿವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮಕ್ಕಳ ಹಕ್ಕುಗಳ ಬಗ್ಗೆಯೂ ಗಮನ ಹರಿಸಬೇಕೆಂಬ ಜಾಗೃತಿ ನಮ್ಮ ಸಾಮಾಜಿಕ ಹೋರಾಟಗಾರರಿಗೂ ಇನ್ನೂ ಬಂದಿಲ್ಲ!

ಇಂತಹ ಸಂದರ್ಭದಲ್ಲಿ ಈ ವಿಶೇಷ ಅಂಗವೈಕಲ್ಯ ಹೊಂದಿರುವ ಹೆಣ್ಣುಮಕ್ಕಳು ಸುರಕ್ಷಿತವಾಗಿರಲು, ನೆಮ್ಮದಿಯಿಂದ ಶಿಕ್ಷಣವನ್ನು ಪಡೆಯಲು ಬೇಕಾದಂತಾ ಅನುಕೂಲಗಳನ್ನು ಅಂಗವಿಕಲ ಕಲ್ಯಾಣ ಇಲಾಖೆಯೇ ಸೂಕ್ಷ್ಮವಾಗಿ ವಿವೇಚಿಸಿ ಕೈಗೊಳ್ಳಬೇಕಿದೆ. ಮುಖ್ಯವಾಗಿ ಸಹ ಶಿಕ್ಷಣ ನೀಡುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ ಇಬ್ಬರಾದರು ಮಹಿಳಾ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕಿದೆ. ಜೊತೆಗೆ ವಸತಿಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದಿಸುವ ಮೂಲಕ ಅರಣ್ಯರೋದನವಾಗಿರುವ ಇಂತಹ ಹೆಣ್ಣುಮಕ್ಕಳ ಗಂಭೀರ ಸಮಸ್ಯೆಯೆಡೆಗೆ ತುರ್ತಾಗಿ ಗಮನಹರಿಸಬೇಕಿದೆ.

ನಾನು ಬಡವ, ನೀನು ಬಡವಿ, ನಮ್ಮ ಘನತೆ ನುಚ್ಚುನೂರು

– ಬಿ.ಶ್ರೀಪಾದ ಭಟ್

“ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಬಡತನದ ಪ್ರಮಾಣವು 2004-05 ರಲ್ಲಿ ಶೇಕಡಾ 37.2 ರಿಂದ 2009-10 ರಲ್ಲಿ ಶೇಕಡಾ 29.8 ಕ್ಕೆ ಕುಸಿದಿದೆ. 2011-12 ರಲ್ಲಿ ಭಾರತದಲ್ಲಿ ದಾರಿದ್ರ್ಯವು ಶೇಕಡ 22 ಕ್ಕೆ ಇಳಿದಿದೆ. ಇಂದು ಭಾರತದಲ್ಲಿ 27 ಕೋಟಿ ಬಡವರಿದ್ದಾರೆ. ಇವರಲ್ಲಿ 21.6 ಕೋಟಿ ಬಡವರು ಗ್ರಾಮೀಣ ಭಾರತದಲ್ಲಿದ್ದಾರೆ.”

ಮೇಲಿನ ಹೇಳಿಕೆ ಮತ್ತು ಸಂಬಂಧಪಟ್ಟ ವಿವರಗಳನ್ನು 22 ನೇ ಜುಲೈ 2013 ರಂದು ಯೋಜನಾ ಆಯೋಗವು ಪತ್ರಿಕೆಗಳ ಮೂಲಕ ಸಕಲ ಸಮಸ್ತ ಭಾರತೀಯರಿಗೆ ತಲುಪಿಸಿತು. 21 ನೇ ಶತಮಾನದ ಈ ಎರಡನೇ ದಶಕದಲ್ಲಿ ಮೂಳೆ ಮಾಂಸದ ತಡಿಕೆಯಾದ ನಗರವಾಸಿಯ ಮಾನವನ ದೇಹವು ಸಂತೃಪ್ತಿಯಾಗಿ ಬದುಕಲು ದಿನವೊಂದಕ್ಕೆ 33 ರೂಪಾಯಿ ಸಾಕಾಗುತ್ತದೆಂದೂ, ಗ್ರಾಮೀಣವಾಸಿ ಮಾನವನ ದೇಹವು ಸಂತೃಪ್ತಿಯಾಗಿ ಬದುಕಲು ದಿನವೊಂದಕ್ಕೆ 27 ರೂಪಾಯಿ ಸಾಕಾಗುತ್ತದೆಂದೂ ಈ ಯೋಜನಾ ಆಯೋಗದ ಉಪಾಧ್ಯಕ್ಷ ಮಂಟೆಕ್‌ಸಿಂಗ್ ಅಹುಲುವಾಲಿಯಾ ಅಧಿಕೃತವಾಗಿ ಘೋಷಿಸಿದ್ದಾರೆ. Poverty_4C_--621x414ಇದನ್ನು ಅವರ ಹಿರಿಯ ಗೆಣೆಕಾರ ‘ದ ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ’ ಮನಮೋಹನ್ ಸಿಂಗ್ ಕೂಡ ಅನುಮೋದಿಸಿದ್ದಾರೆ. ಇನ್ನು 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಅಧಿನಾಯಕಿ ,ಆಮ್ ಆದ್ಮಿಯ ಆಶಾದೀಪ ಸೋನಿಯಾಗಾಂಧಿ ತಮ್ಮ ಎರಡು ದಶಕಗಳ ಸುಧೀರ್ಘ ಮೌನವನ್ನು ಇಂದಿಗೂ ಸಹ ಮುರಿಯದೆ ನಿಗೂಢವಾಗಿ ವರ್ತಿಸುತ್ತ ಎಂದಿನಂತೆ ತಮ್ಮ ವೈಯುಕ್ತಿಕ ವರ್ಚಸ್ಸನ್ನು ಜತನದಿಂದ ಕಾಪಾಡಿಕೊಳ್ಳುತ್ತಿರಲಾಗಿ, ಇತ್ತ ಸುಧೀರ್ಘ ಮೌನದಲ್ಲಿರಬೇಕಾದಂತಹ ಸದರಿ ಕಾಂಗ್ರೆಸ್ ಪಕ್ಷದ ಜೋಕರ್‌ಗಳು ಕ್ಷಣಕ್ಕೊಂದು ದುರ್ನಾತ ಬೀರುವ ಹೇಳಿಕೆಗಳನ್ನು ಕೊಡುತ್ತ, ತಾವೂ ನಗೆಪಾಟಲಿಗೀಡಾಗಿ ತಮ್ಮ ಪಕ್ಷವನ್ನು ನಗೆಪಾಟಲಿಗೀಡಾಗಿಸುತ್ತಿರಲು, ಅತ್ತ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಘನತೆಯಿಂದ ಕಾರ್ಯ ನಿರ್ವಹಿಸಬೇಕಾಗಿದ್ದ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಬದಲಾಗಿ ತನ್ನ ದಮನಕಾರಿ ಪ್ಯಾಸಿಸಂ ಅನ್ನು ಮರಳಿ ಚಾಲ್ತಿಗೆ ತರಲು ನೂರಾರು ಕಳ್ಳ ಮಾರ್ಗಗಳ ಹುಡುಕಾಟದಲ್ಲಿರಲಾಗಿ, ಇವರೆಲ್ಲರ ಕೇಂದ್ರಬಿಂದು ಇಂಡಿಯಾದ ಬಿಪಿಎಲ್ ಕಾರ್ಡುದಾರ ಮಾತ್ರ ಎಂದಿನಂತೆ ಹೊಸ ಬೆಳಕಿಗೆ ಕಾಯುತ್ತಾ ತಾನು ಗಳಿಸುತ್ತಿರುವುದೆಷ್ಟು, ಅದರಲ್ಲಿ ತನಗೆ ದಕ್ಕಿದ್ದೆಷ್ಟು, ಉಳಿಸಿದ್ದೆಷ್ಟು ಯಾವುದೂ ಗೊತ್ತಾಗದೆ, ಕ್ಷಣ ಕ್ಷಣಕ್ಕೂ ಬದುಕಬೇಕಾದ ತನ್ನ ಆತಂಕದ, ಅತಂತ್ರ ಬದುಕಿನ ಮುಕ್ತಿಗಾಗಿ ಹಂಬಲಿಸಿ ಕಾಯುತ್ತಿದ್ದಾನೆ.

“ಬದುಕಿನಲ್ಲಿ ನನ್ನ ಎಲ್ಲ ಆಸೆಗಳನ್ನು, ಬಯಕೆಗಳನ್ನು ಸಂಪೂರ್ಣವಾಗಿ ಈಡೇರಿಸಿಕೊಳ್ಳುವುದು ಸಂತೋಷದಾಯಕ ಪ್ರವೃತ್ತಿಯಲ್ಲ, ಬದಲಾಗಿ ನನ್ನ ಆಸೆಗಳನ್ನು, ಬಯಕೆಗಳನ್ನು ಆದಷ್ಟೂ ಸೀಮಿತಗೊಳಿಸಿಕೊಂಡು ಇದ್ದುದರಲ್ಲೇ ಕನಿಷ್ಟ ಮಟ್ಟದಲ್ಲಿ ಬದುಕುವುದು ಮಾತ್ರ ಸಂತೋಷದಾಯಕವಾದದ್ದು,” ಎಂದು ಪಶ್ಚಿಮದ ಆರ್ಥಿಕ ತಜ್ಞ ಜೆ.ಎಸ್.ಮಿಲ್ ಹೇಳುತ್ತಾನೆ. ಈತನ ಈ ಹೇಳಿಕೆಯನ್ನೇ ಅತ್ಯಂತ ಸೀರಿಯಸ್ ಆಗಿ ತೆಗೆದುಕೊಂಡಿರುವ ಇಂಡಿಯಾದ ಯೋಜನಾ ಆಯೋಗದ ಮಂದಿ ಇದನ್ನು ಏಕಪಕ್ಷೀಯವಾಗಿ ಅತ್ಯಂತ ಅಮಾನವೀಯತೆಯಿಂದ ಇಲ್ಲಿನ ಬಡವರ ಮೇಲೆ ಉಪಯೋಗಿಸಿಕೊಂಡಿದ್ದಾರೆ. ಆದರೆ ಭಾರತದ ಮಧ್ಯಮ ವರ್ಗ, ಮೇಲ್ವರ್ಗಗಳಿಗೆ ಮಾತ್ರ ಈ ಯೋಜನಾ ಆಯೋಗದ ಈ ಮಾನಗೇಡಿ ಹೇಳಿಕೆ ಅನ್ವಯಿಸುವುದಿಲ್ಲ. ಅಂದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಜಾಗತೀರಣದ ನೇರ ಫಲಾನುಭವಿಗಳಾದ ಭಾರತದ ಮಧ್ಯಮ ಹಾಗು ಮೇಲ್ವರ್ಗಗಳು ಈ ನವ ಕಲೋನಿಯಲ್ ಸಂಸ್ಕೃತಿ ಕೊಡಮಾಡಿದ ಕೊಳ್ಳುಬಾಕ ಸಂಸ್ಕೃತಿಯಿಂದ ತಿಂದುHindustan_petroleum, ತೇಗಿ ಅಜೀರ್ಣದಿಂದ ಏದುಸಿರು ಬಿಡುತ್ತಿದ್ದರೆ, ಈ ಗುಂಪಿಗೆ ನಿಮ್ಮ ಆಸೆಗಳನ್ನು, ಬಯಕೆಗಳನ್ನು ಆದಷ್ಟೂ ಸೀಮಿತಗೊಳಿಸಿಕೊಂಡು ಇದ್ದುದರಲ್ಲೇ ಕನಿಷ್ಟ ಮಟ್ಟದಲ್ಲಿ ಬದುಕಿ ಮತ್ತು ಸಂತೋಷದಿಂದಿರಿ ಎಂದು ಹೇಳುವುದರ ಬದಲಾಗಿ ಜಾಗತೀರಣದ ಕಳೆದ ಇಪ್ಪತ್ತು ವರ್ಷಗಳಲ್ಲಿ ಸರ್ಕಾರಗಳ ಎಲ್ಲಾ ಬಗೆಯ ಪಾಲಿಸಿಗಳು, ಅಭಿವೃದ್ಧಿ ಮಂತ್ರಗಳು ಜಾರಿಗೊಳಿಸಿದ್ದು ಮಧ್ಯಮ ಮತ್ತು ಮೇಲ್ವರ್ಗಗಳ ದುರಾಸೆಗಳನ್ನು ನಿರಂತರವಾಗಿ ಪೂರೈಸುವ ಕೊಳ್ಳುಬಾಕ ಸಂಸ್ಕೃತಿಯನ್ನು ಮಾತ್ರ. ಆದರೆ ದಾರಿದ್ರ್ಯದಲ್ಲಿರುವ ಬಹುಸಂಖ್ಯಾತ ಬಡವರ ವಿಷಯದಲ್ಲಿ ಮಾತ್ರ ಈ ಸರ್ಕಾರಗಳು ಮತ್ತು ಯೋಜನಾ ಆಯೋಗವು ಬಡವನೊಬ್ಬ ತನ್ನ ಆಸೆಗಳನ್ನು ಸೀಮಿತಗೊಳಿಸಿಕೊಂಡು ಕನಿಷ್ಟ ಮಟ್ಟದಲ್ಲಿ ಬದುಕಲು ಏನು ಬೇಕು ಎಂಬುದನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ದೇಶದ ಬಡತನ ರೇಖೆ, ದಾರಿದ್ರ್ಯವನ್ನು ಅಳೆಯುತ್ತಾರೆ. ಇದಕ್ಕಾಗಿ ಅನೇಕ ಅವೈಜ್ಞಾನಿಕ ಮಾನದಂಡಗಳನ್ನು ಬಳಸುತ್ತಾರೆ. ಈ ಅಧಿಕಾರಿಶಾಹಿಗಳು ಮತ್ತು ಸರ್ಕಾರಗಳ ಈ ದಿಕ್ಕುದೆಸೆಯಿಲ್ಲದ ನಡೆಗಳಿಂದಾಗಿಯೇ ಇಂದು ಬಡವರು ಮತ್ತು ಶ್ರೀಮಂತರ ನಡುವಿನ ಕಂದಕದ ಪ್ರಮಾಣ ದಿನದಿನಕ್ಕೂ ಅಗಾಧವಾಗುತ್ತಿರುವುದು.

ಖ್ಯಾತ ಅರ್ಥಿಕ ತಜ್ಞ ಮೋಹನ್ ಗುರುಸ್ವಾಮಿಯವರು “ಬಡತನವೆನ್ನವುದು ಒಂದು ಆರ್ಥಿಕ ಸ್ಥಿತಿ. ಹಸಿವು ದೈಹಿಕ ಸ್ಥಿತಿ. ದೈಹಿಕ ಸ್ಥಿತಿಯಾದ ಹಸಿವಿಗೆ ಕಾರಣ ಬಡತನವೆನ್ನುವ ಆರ್ಥಿಕ ಸ್ಥಿತಿ. ಇಲ್ಲಿ ಹಸಿವೆನ್ನುವುದು ಸ್ಥಿರವಾದದ್ದು. ಆದರೆ ಬಡತನದ ವಾಖ್ಯಾನ ಮತ್ತು ಸ್ಥಿತಿ ಶಾಸಕಾಂಗ ಮತ್ತು ಕಾರ್ಯಾಂಗದ ನೀತಿಗಳಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ,” ಎಂದು ಹೇಳುತ್ತಾರೆ. food-wasteಅಂದರೆ ಅವನು ಶ್ರೀಮಂತ ಅವನ ಊಟಕ್ಕೆ 500 ರೂಪಾಯಿ ಖರ್ಚಾಗುತ್ತದೆ. ಅದು ಸಹಜ. ನೀನು ಬಡವ. ನಿನ್ನ ಊಟಕ್ಕೆ 12 ರೂಪಾಯಿ ಸಾಕು. ನೀನೇನಾದರೂ ಆ 500 ರೂಪಾಯಿಯ ಊಟಕ್ಕೆ ಪ್ರಯತ್ನಿಸೀಯ ಜೋಕೆ! ಇದೂ ಸಹಜ. ಎರಡೂ ವಾಸ್ತವವಾಗಿದ್ದರಿಂದ ಸಹಜವಾಗಿಯೇ ಇಂದು ಭಾರತದ ಬಡತನ ರೇಖೆಯ ಪ್ರಮಾಣ ಶೇಕಡಾ 22 ಕ್ಕೆ ಕುಸಿದಿದೆ!! ಅಂದರೆ ಭಾರತ ಪ್ರಕಾಶಿಸುತ್ತಿದೆ!! ಇದು ಸರ್ವಾಧಿಕಾರಿ ನರೇಂದ್ರ ಮೋದಿಯ ಅಪ್ಪಟ ಗುಜರಾತ್ ಮಾದರಿ. ನಾಮೋ ಶೈಲಿ. ಅದನ್ನೇ ಅತ್ಯಂತ ಕುರುಡಾಗಿ ಬುದ್ಧಿಗೇಡಿ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ. ಇದೇ ಮಾದರಿಯನ್ನು ದಿವಾಳಿಯಾದ ಕಾಂಗ್ರೆಸ್ ನೇತೃತ್ವದ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಭಿವೃದ್ಧಿ ಮಾನದಂಡವಾಗಿ ಬಳಸಿಕೊಳ್ಳುತ್ತಿದೆ. ಜೈ ಹೋ!!

ಕೇಂದ್ರ ಯೋಜನಾ ಆಯೋಗವು 1957 ರಲ್ಲಿ ಪ್ರತಿ ವ್ಯಕ್ತಿಗೆ, ಪ್ರತಿ ತಿಂಗಳಿಗೆ 20 ರೂಪಾಯಿಯ ಆಧಾರದ ಮೇಲೆ ಬಡತನ ರೇಖೆಯನ್ನು ನಿಗದಿಪಡಿಸಿತು. ಇದನ್ನು ಪ್ರತಿಯೊಬ್ಬ ವ್ಯಕ್ತಿ ಖರ್ಚು ಮಾಡುವ ಶಕ್ತಿಗೆ ಅನುಗುಣವಾಗಿ ನಿರ್ಧರಿಸಲಾಯಿತು. ಅಂದರೆ ಅವನಿಗೆ/ಅವಳಿಗೆ ಪ್ರತಿ ತಿಂಗಳಿಗೆ 21 ರೂಪಾಯಿ ಖರ್ಚು ಮಾಡಲು ಸಾಧ್ಯವಾದರೆ ಆತ/ಆಕೆ ಬಡತನ ರೇಖೆಯಿಂದ ಮೇಲೇರುತ್ತಾರೆ. 1979 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 57 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 47 ರೂಪಾಯಿಯನ್ನು ನಿಗದಿಪಡಿಸಿತು. 2000 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 454 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 357 ರೂಪಾಯಿಯನ್ನು ನಿಗದಿಪಡಿಸಿತು. 2005 ರಲ್ಲಿ ನಗರವಾಸಿಗೆ ಪ್ರತಿ ತಿಂಗಳಿಗೆ 559 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 368 ರೂಪಾಯಿಯನ್ನು ನಿಗದಿಪಡಿಸಿತು. 2012 ರಂದು ಈ ಮೊಂಟೆಕ್ ಎನ್ನುವ ಪಂಡಿತ ನಗರವಾಸಿಗೆ ಪ್ರತಿ ತಿಂಗಳಿಗೆ 990 ರೂಪಾಯಿಯನ್ನು, ಗ್ರಾಮೀಣವಾಸಿಗೆ ಪ್ರತಿ ತಿಂಗಳಿಗೆ 810 ರೂಪಾಯಿಯನ್ನು ನಿಗದಿಪಡಿಸಿದ್ದಾನೆ. ಅದೇ ರೀತಿ ಯೋಜನಾ ಆಯೋಗದ ಶೋಧನೆಯ ಪ್ರಕಾರ 1974 ರಲ್ಲಿ ಶೇಕಡಾ 59 ರಷ್ಟಿದ್ದ ಬಡತನ ರೇಖೆಯ ಪ್ರಮಾಣ 1984 ರಲ್ಲಿ ಶೇಕಡಾ 43 ರಷ್ಟಿತ್ತೆಂದೂ, 2012 ರ ವೇಳೆಗೆ ಶೇಕಡಾ 22 ಕ್ಕೆ ಕುಸಿದಿದೆಯೆಂದು ಅಧಿಕೃತವಾಗಿ ತಿಳಿಸಿದೆ.

ಆದರೆ ಈ ಯೋಜನಾ ಆಯೋಗದ ಇಡೀ ಅಂಕಿ ಅಂಶಗಳನ್ನು ಸಧ್ಯದ ತರ್ಕಕ್ಕಾಗಿ ಗಣನೆಗೆ ತೆಗೆದುಕೊಂಡಾಗ Dantewada Killings1984 ರಲ್ಲಿ ಬಡತನದ ರೇಖೆಯು ಶೇಕಡಾ 43 ರಷ್ಟಿದ್ದ ಸಂದರ್ಭದಲ್ಲಿ ಬಡವನೊಬ್ಬ/ನೊಬ್ಬಳು ಸೇವಿಸುವ ಸರಾಸರಿ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಪ್ರಮಾಣ ಸರಾಸರಿ 38 ಗ್ರಾಂ ನಷ್ಟಿದ್ದರೆ, ಈಗ, ಅಂದರೆ 2012 ರಲ್ಲಿ ಬಡತನದ ರೇಖೆಯು ಶೇಕಡಾ 22ಕ್ಕೆ ಕುಸಿದಂತಹ ಸಂದರ್ಭದಲ್ಲಿ, ಬಡವನೊಬ್ಬ/ನೊಬ್ಬಳ ಸೇವಿಸುವ ಸರಾಸರಿ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಪ್ರಮಾಣ ಸರಾಸರಿ 24 ಗ್ರಾಂಗೆ ಕುಸಿದಿದೆ!! ಅಂದರೆ ವ್ಯಕ್ತಿಯೊಬ್ಬ/ಯೊಬ್ಬಳು ಸೇವಿಸುವ ಆಹಾರದ ಕ್ಯಾಲೋರಿಯ, ಪೋಷಕಾಂಶಗಳ ಮೇಲೆ ಬಡತನದ ರೇಖೆಯನ್ನು ನಿರ್ಧರಿಸುವುದಿಲ್ಲ, ಬದಲಾಗಿ ವ್ಯಕ್ತಿಯೊಬ್ಬ/ಯೊಬ್ಬಳು ಬಳಸುವ ಮೊಬೈಲ್, ವಾಸಿಸುವ ಸೂರು ಇತ್ಯಾದಿಗಳನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ!! ಹರ್ಷ ಮಂದರ್ ಅವರು ಹೇಳಿದ ಹಾಗೆ ಮಸಲ ಬಡತನ ರೇಖೆಯ ಕೆಳಗಿರುವ ವ್ಯಕ್ತಿಯೇನಾದರು ಶೌಚಾಲಯವನ್ನು ನಿರ್ಮಿಸಿಕೊಂಡಾಕ್ಷಣ, ವಾರಕ್ಕೆ, ತಿಂಗಳಿಗೆ ಮೊಟ್ಟೆಯನ್ನು ತಿಂದಾಕ್ಷಣ ಆತ ಬಡತನ ರೇಖೆಯಿಂದ ಮೇಲೇರಲ್ಪಡುತ್ತಾನೆ!! ಬಿಪಿಎಲ್ ಕಾರ್ಡುದಾರನಿಂದ ಎಪಿಎಲ್ ಕಾರ್ಡುದಾರನಾಗಿ ಪ್ರಮೋಶನ್! ನಾಗರಿಕರಾದ ನಾವೆಲ್ಲ ಹೇಗೆ ಬಡವನೊಬ್ಬ/ನೊಬ್ಬಳ ಬದುಕನ್ನು ಅವಮಾನಿಸುತ್ತಿದ್ದೇವೆ ನೋಡಿ!! ಅವರಿಗೆ ಘನತೆಯನ್ನೇ ನಿರಾಕರಿಸಿದ್ದೇವೆ.

ಅಲ್ಲದೆ ಬಡತನದ ಪ್ರಮಾಣ ಶೇಕಡಾ 22 ಕ್ಕೆ ಕುಸಿದಿದೆಯೆಂದು ಪಂಡಿತ ಅಹುಲುವಾಲಿಯಾ ಬೂಸಿ ಬಿಡುತ್ತಿರುವ ಈ ಸಂದರ್ಭದಲ್ಲಿ ಅವರ ಹಿರಿಯ ಗೆಣೆಕಾರ ಮನಮೋಹನ ಸಿಂಗರ ಯುಪಿಎ ಸರ್ಕಾರವು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿರುವ, ಸೋನಿಯಾ ಮೇಡಂರ ಪ್ರತಿಷ್ಠೆಯ ಮಸೂದೆಯಾದ ಆಹಾರ ಭದ್ರತೆ ಮಸೂದೆಯ ಮೂಲ ಆಶಯವೇ ಶೇಕಡಾ 67 ರಷ್ಟಿರುವ ಭಾರತೀಯರಿಗೆ ಸಬ್ಸಿಡಿ ದರದಲ್ಲಿ ಅಥವಾ ಉಚಿತವಾಗಿ ಧಾನ್ಯವನ್ನು ಹಂಚುವುದು. ಅಂದರೆ ಯೋಜನಾ ಆಯೋಗದ ಪ್ರಕಾರ ಬಡತನ ರೇಖೆ ಶೇಕಡಾ 22 ರಷ್ಟಿದ್ದರೆ ಕೇಂದ್ರ ಸರ್ಕಾರದ ಪ್ರಕಾರ ಶೇಕಡ 67ರಷ್ಟಿದೆ!!

ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ ಇಂಡಿಯಾ ದೇಶದಲ್ಲಿನ ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಶೇಕಡಾ 46 ರಷ್ಟಿದೆ. Manmohan Singhಇದನ್ನು ಉದಾಹರಿಸಿಯೇ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಇದು ಭಾರತದ ಅವಮಾನ ಎಂದು ಉದ್ಗರಿಸಿದ್ದರು. ಆದರೆ ಮಕ್ಕಳ ಅಪೌಷ್ಟಿಕತೆ ಶೇಕಡಾ 46 ರಷ್ಟಿರುವ ದೇಶದಲ್ಲಿ ಬಡತನ ರೇಖೆ ಶೇಕಡ 22 ರಷ್ಟಿರುವುದು ಬಹುಶಃ ಇಡೀ ಜಗತ್ತಿನಲ್ಲಿ ಇಂಡಿಯಾದಲ್ಲಿ ಮಾತ್ರವೇನೋ! ಇದನ್ನು ಸಾಧ್ಯವಾಗಿಸಿದ ಪಂಡಿತ ಮೊಂಟೆಕ್‌ಸಿಂಗ್‌ಗೆ ನಮೋನಮಹಃ!

ಮತ್ತೊಂದು ಉದಾಹರಣೆಯನ್ನು ನೀಡುವುದಾದರೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಈ ನರೇಗ ಯೋಜನೆಯಡಿ ಪ್ರತಿಯೊಬ್ಬ ಗ್ರಾಮೀಣ ವ್ಯಕ್ತಿಗೆ ದಿನವೊಂದಕ್ಕೆ 120 ರೂಪಾಯಿಯ ಆಧಾರದ ಮೇಲೆ ಕೆಲಸ ದೊರಕುತ್ತದೆ. ಆತ ತಿಂಗಳಪೂರ್ತಿ, ಒಂದು ದಿನವೂ ಬಿಡದೆ ಕೆಲಸ ಮಾಡಿದಾಗಲೂ ಆತನ ಗಳಿಕೆ ತಿಂಗಳಿಗೆ 3720 ರೂಪಾಯಿ. ಐದು ಸದಸ್ಯರಿರುವ ಸಂಸಾರವೊಂದರಲ್ಲಿ ಈ ಆದಾಯದ ಪ್ರಕಾರ ಪ್ರತಿ ವ್ಯಕ್ತಿಗೆ 744 ರೂಪಾಯಿ ದೊರಕುತ್ತದೆ. ಇದು ಯೋಜನಾ ಆಯೋಗವು ಬಡತನ ರೇಖೆಯ ಪ್ರಮಾಣದ ಅನುಸಾರ ಗ್ರಾಮೀಣ ಮಟ್ಟಕ್ಕೆ ನಿಗದಿಪಡಿಸಿದ ಅವೈಜ್ಞಾನಿಕ ಮೊತ್ತ ರೂಪಾಯಿ 850 ಕ್ಕಿಂತಲೂ ಶೇಕಡಾ 14 ರಷ್ಟು ಕಡಿಮೆ!! ಅಲ್ಲದೆ ಈ ನರೇಗಾ ಯೋಜನೆಯ ಅನುಕೂಲ ವರ್ಷಕ್ಕೆ ಕೇವಲ 100 ದಿನಗಳು ಮಾತ್ರ. ಅಂದರೆ ಸರಾಸರಿ ವರ್ಷಕ್ಕೆ ಮೂರು ತಿಂಗಳು!! ಉಳಿದ 265 ದಿಗಳ ಕುರಿತು ಯೋಜನಾ ಆಯೋಗದ ಬಳಿ ಯಾವುದೇ ಉತ್ತರವಿಲ್ಲ.

2020 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಎಲೈಟ್ ಗುಂಪಿಗೆ ಸೇರುವ ಧ್ಯೇಯವನ್ನು ಹೊಂದಿರುವ ಇಂಡಿಯಾದ ಸರ್ಕಾರವು ಮೊದಲು ಮಾಡಬೇಕಾದ ಕೆಲಸವೇ ಸಮಾಜವಾದಿ ಸಿದ್ಧಾಂತವನ್ನು ಅತ್ಯಂತ ಸರಳ ರೂಪದಲ್ಲಿ ಗ್ರಹಿಸಿ ಅನುಷ್ಠಾನಕ್ಕೆ ತರುವುದು. ಸರಳವಾಗಿ ಹೇಳಬೇಕೆಂದರೆ ಶ್ರೀಮಂತರ, ಮಧ್ಯಮವರ್ಗಗಗಳ ಮೇರೆ ಮೀರಿದ ಅಸಹಜ ಮಟ್ಟದ ವರಮಾನ ಗಳಿಕೆಗೆ ಕಡಿವಾಣ ಹಾಕಿ ಒಂದು ಮಿತಿಯನ್ನು ನಿಗದಿಪಡಿಸುವುದು. gujarat-povertyಬಡವರಿಗೆ ಅತ್ಯಧಿಕ ಕ್ಯಾಲೋರಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನೊಳಗೊಂಡ ದಿನಕ್ಕೆ ಎರಡು ಹೊತ್ತು ಪೂರ್ಣ ಪ್ರಮಾಣದ ಊಟವನ್ನು ಗಳಿಸುವಂತಹ ಬದುಕನ್ನು ರೂಪಿಸುವುದು. ಮುಖ್ಯವಾಗಿ ಅವರ ಬದುಕಿಗೆ ಘನತೆಯನ್ನು ಮರಳಿ ತಂದುಕೊಡಬೇಕು.

ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯೊಬ್ಬ ಸೇವಿಸುವ ದಿನವೊಂದರ ಆಹಾರದ ಪ್ರಮಾಣವು ಸರಾಸರಿ 1500 ಕಿಲೋ ಕ್ಯಾಲೋರಿಯಾಗಿದ್ದರೆ ಬಡತನ ರೇಖೆಗಿಂತ ಮೇಲಿರುವ ವ್ಯಕ್ತಿ ಬಳಸುವ ದಿನವೊಂದರ ಆಹಾರದ ಪ್ರಮಾಣವು ಸರಾಸರಿ 2400 ಕಿಲೋ ಕ್ಯಾಲರಿಯಷ್ಟಿರುತ್ತದೆ (Nutrition intake in India – NSS Report 1999 – 2000). 1000 ಕಿಲೋ ಕ್ಯಾಲೋರಿಯಷ್ಟು ವ್ಯತ್ಯಾಸದ ಈ ಅಸಮಾನತೆಯನ್ನು ಹೋಗಲಾಡಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕು. ಅಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಜನರು ಅಪಾರ ದೈಹಿಕ ಶ್ರಮದ ಕೆಲಸಗಳನ್ನು ನಿರ್ವಹಿಸುತ್ತಾರೆ. ಇವರಿಗೆ ಪೋಷಕಾಂಶಗಳ ಪ್ರಮಾಣ ಬೇರೆಲ್ಲರಿಗಿಂತಲೂ ಅಧಿಕವಿರಬೇಕು. ಇದೆಲ್ಲವೂ ಅಪಾರ ಬುದ್ಧಿವಂತಿಕೆಯ ಈ ಮೊಂಟೆಕ್ ಗ್ಯಾಂಗ್‌ಗೆ ಅರ್ಥವಾಗುವುದಿಲ್ಲವೇ?? ನಿಜಕ್ಕೂ ಇವರು ಜೀವವಿರೋಧಿಗಳು.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಬಡತನದ ರೇಖೆಗಿಂತ ಕೆಳಗಿರುವ ಜನಸಂಖ್ಯೆಯನ್ನು ಆರ್ಥಿಕವಾಗಿ ಮತ್ತು ಅತ್ಯಧಿಕ ಕ್ಯಾಲೋರಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನೊಳಗೊಂಡ ದಿನಕ್ಕೆ ಎರಡು ಹೊತ್ತು ಪೂರ್ಣ ಪ್ರಮಾಣದ ಊಟವನ್ನು ಗಳಿಸುವಂತಹ ಬದುಕನ್ನು ರೂಪಿಸಲು ವರ್ಷಕ್ಕೆ ಸುಮಾರು 60000 ಕೋಟಿ ರೂಪಾಯಿ ಬೇಕಾಗುತ್ತದೆ. ಇದರ ಖರ್ಚು ದೇಶದ ಇಡೀ ಅಧಿಕಾರಶಾಹಿಯನ್ನು ಸಾಕಲು ಸರ್ಕಾರ ವ್ಯಯಿಸುವ ಖರ್ಚಾದ 2,27,000 ಕೋಟಿಗೆ ಹೋಲಿಸಿದರೆ ಶೇಕಡ 25 ರಷ್ಟು ಮಾತ್ರ. ಅಥವಾ ಜಿಡಿಪಿಯ 8,47,000 ಕೋಟಿಗೆ ಹೋಲಿಸಿದರೆ ಶೇಕಡಾ 2 ರಷ್ಟು ಮಾತ್ರ.

ಎಲ್ಲಿಯವರೆಗೂ ಶೇಕಡ 5 ರಿಂದ ಶೇಕಡ 10 ರಷ್ಟಿರುವ ಸಮಾಜದ ಮೇಲ್ಪದರ ಜನರ ಆದಾಯ, ಸುಖಲೋಲುಪ್ತ ಜೀವನ ಮತ್ತು ಅವರ ನಿರಂತರ ಮೇಲ್ಮುಖ ಚಲನೆಯೇ ದೇಶವೊಂದರ ಅಭಿವೃದ್ಧಿಯ ಮಾರ್ಗಸೂಚಿಯಾಗುತ್ತದೆಯೋ, ಎಲ್ಲಿಯವರೆಗೂ ಸರ್ಕಾರವೂ ಸಹ ನಿರ್ಲಜ್ಯವಾಗಿ ಇದನ್ನೇ ತನ್ನ ಅಭಿವೃದ್ಧಿಯೆಂದು ಕೂಗುತ್ತಿರುತ್ತದೆಯೂ, ಅಲ್ಲಿ ಆ ದೇಶದ ಆತ್ಮಸಾಕ್ಷಿ ಸತ್ತಿದೆಯೆಂದರ್ಥ. ಆ ದೇಶ ಮತ್ತೇನಲ್ಲದೆ ಒಂದು ಕೊಳೆತ ಗೊಬ್ಬರದ ಗುಂಡಿಯಷ್ಟೇ. ನಮ್ಮ ಭಾರತ ಇದಕ್ಕೆ ಹೊರತಾಗಿಲ್ಲ. ಬದಲಾಗಿ ಜ್ವಲಂತ ಸಾಕ್ಷಿಯಾಗಿದೆ.

ಸರ್ವೇಗಳು, ಜನಾಭಿಪ್ರಾಯ, ಸ್ಥಾನಗಳು, ಆಮ್ ಆದ್ಮಿ ಪಾರ್ಟಿ…


– ರವಿ ಕೃಷ್ಣಾರೆಡ್ದಿ


 

ಕಳೆದ ನಾಲ್ಕೈದು ದಿನದಿಂದ CNN-IBN ಮತ್ತು ಹಿಂದು ಪತ್ರಿಕೆಯವರು ದೇಶದಲ್ಲಿ ಇಂದು ಲೋಕಸಭಾ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಗಳಿಸುತ್ತದೆ ಎನ್ನುವಂತಹ ಸರ್ವೆ ನಡೆಸಿ, ಅದನ್ನು CNN-IBN ಚಾನೆಲ್‌ನಲ್ಲಿ ಮತ್ತು ಹಿಂದು ಪತ್ರಿಕೆಯಲ್ಲಿ ವಿವರಣೆ ಮತ್ತು ಚರ್ಚೆಗೆ ಒಳಪಡಿಸಿದ್ದವು. ನೆನ್ನೆ ರಾತ್ರಿ CNN-IBN ನಲ್ಲಿ ರಾಜ್‌ದೀಪ್ ಸರ್ದೇಸಾಯಿ ನಡೆಸಿಕೊಟ್ಟ ಕೊನೆಯ ಸುತ್ತಿನ ಚರ್ಚೆ ಚೆನ್ನಾಗಿತ್ತು. ಸಂದೀಪ್ ಶಾಸ್ತ್ರಿ, ರಾಮಚಂದ್ರ ಗುಹ, ಯೋಗೇಂದ್ರ ಯಾದವ್, ಸ್ವಪನ್ ದಾಸ್‌ಗುಪ್ತ, ಸುರ್ಜಿತ್ ಭಲ್ಲ ಪಾಲ್ಗೊಂಡಿದ್ದ ಈ ಚರ್ಚೆ ಅಧಿಕಾರವಿರೋಧಿ ಅಲೆ, ಭ್ರಷ್ಟಾಚಾರ, ಮೋದಿ, ರಾಹುಲ್, ಒಕ್ಕೂಟ ವ್ಯವಸ್ಥೆ, 2009 ರ ಚುನಾವಣಾ ಫಲಿತಾಂಶ, ಈಗಿನ ಪ್ರೊಜೆಕ್ಷನ್, ಮುಂತಾದುವುಗಳ ಬಗ್ಗೆ ಇತ್ತು. ಈ ಸರ್ವೆ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಗುಂಪಿಗೂ ಬಹುಮತದ ಹತ್ತಿರ ಬರುವುದಿರಲಿ, 200 ಸ್ಥಾನಗಳ ಹತ್ತಿರಕ್ಕೂ ಹೋಗಲಾಗುವುದಿಲ್ಲ. ಇದು, ಇಂದಿನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿರುವ ಸರ್ವೆಯ ವಿವರ:
AllIndiaPicture-2014Likeabilitypicture_2013

ಇಲ್ಲಿ ಸಂಸದ ಸ್ಥಾನಗಳ ವಿಚಾರಕ್ಕೆ ಬಂದಾಗ ಅದನ್ನು ಆಯಾಯ ಪಕ್ಷ ತೆಗೆದುಕೊಳ್ಳಬಹುದಾದ ಶೇಕಡಾವಾರು ಮತಪ್ರಮಾಣದ ಮೇಲಷ್ಟೇ ಆಧರಿಸದೆ ಇತರೆ ಸಂಗತಿಗಳ ಮೇಲೆಯೂ ಆಧರಿಸಿ ನಿರ್ಧರಿಸಿದ್ದಾರೆ ಎನ್ನಿಸುತ್ತದೆ. ಅಷ್ಟಾದರೂ ಸರ್ವೆಗಳು ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ಹೇಳುವುದು ನೈಜ ಫಲಿತಾಂಶಕ್ಕೆ ಹತ್ತಿರವೂ ಬರುತ್ತಿಲ್ಲ. ಸರ್ವೇಗಳು ಒಂದು ಪಕ್ಷ ಪಡೆಯಬಹುದಾದ ಶೇಕಡಾವಾರು ಮತಪ್ರಮಾಣವನ್ನು ಹೆಚ್ಚುಕಮ್ಮಿ ಮತದಾನದ ನಂತರ ಸಿಗುವ ಅಂಕಿಅಂಶಗಳಿಗೆ ಹತ್ತಿರಹತ್ತಿರ ಇರುವಂತೆ ಕೊಡಬಹುದೆ ಹೊರತು, ಪಕ್ಷಗಳು ಪಡೆಯುವ ಸ್ಥಾನಗಳನ್ನಲ್ಲ.

ಸರ್ವೆಯಲ್ಲಿಯ ಕೆಲವೊಂದು ವಿವರಗಳ ಬಗ್ಗೆ ಮಾತನಾಡುವುದಾದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಶೇಕಡಾವಾರು ಮತಪ್ರಮಾಣ ಹೆಚ್ಚಿಸಿಕೊಳ್ಳಬಹುದಾದರೂ, ಈ ಸರ್ವೆ ಹೇಳುವಂತೆ ಆ ರಾಜ್ಯದಲ್ಲಿ ಸುಮಾರು 30-40 ಸ್ಥಾನಗಳನ್ನು ಪಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಬಿಎಸ್‌ಪಿ ಜೊತೆಗಿದ್ದ ಬ್ರಾಹ್ಮಣರು ಬಿಜೆಪಿಯತ್ತ ವಾಲುತ್ತಿರುವಂತೆ ಕಾಣಿಸಿದರೂ, ಅಲ್ಲಿಯ ವಿಧಾನಸಭೆಯಲ್ಲಿ ಎರಡು ದೊಡ್ಡ ಪಕ್ಷಗಳಾಗಿರುವ SJP ಮತ್ತು BSPಗಿಂತ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎನ್ನುವುದರ ಬಗ್ಗೆ ಸಂಶಯಪಡಬೇಕಿದೆ. ಆದರೆ, ಹೀಗೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ ಎನ್ನುವ ವಿಚಾರವನ್ನು ಪಕ್ಕಕ್ಕಿಟ್ಟರೆ ಈ ಸರ್ವೆ ಸಮಾಜ ಯಾವ ರೀತಿ ಚಿಂತಿಸುತ್ತಿದೆ ಎನ್ನುವ ಬಗ್ಗೆ ಸ್ಪಷ್ಟ ಸಂಕೇತಗಳನ್ನು ಕೊಡುತ್ತಿದೆ. ದೇಶದಾದ್ಯಂತ UPA-2 ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ವಿಶ್ವಾಸವಿಲ್ಲ. ಆದರೆ ಯಾವ ಗುಂಪಿನ ಬಗ್ಗೆಯೂ ಬಹುಸಂಕ್ಯಾತ ಮತದಾರರಿಗೆ ವಿಶ್ವಾಸವಿಲ್ಲ. ಕಾಂಗ್ರೆಸ್ ಮತ್ತು ಯುಪಿಎಯ ವೈಫಲ್ಯದ ಕಾರಣಕ್ಕೆ ಮತ್ತು ಭ್ರಷ್ಟಾಚಾರದ ಕಾರಣಕ್ಕೆ ಇತರೆ ಪಕ್ಷಗಳು, ಅದರಲ್ಲೂ ಬಿಜೆಪಿಗೆ ಅನುಕೂಲವಾಗುತ್ತಿದೆ ಎನ್ನುವುದೂ ಉತ್ತರ ಪ್ರದೇಶದ ಹಿನ್ನೆಲೆಯಲ್ಲಿ ನೋಡಿದಾಗ ಮೇಲ್ನೋಟಕ್ಕೆ ಕಾಣಿಸುತ್ತದೆ.

ಮತ್ತು, ಮೋದಿಯಿಂದಾಗಿ ಬಿಜೆಪಿಗೆ ಹೆಚ್ಚು ಲಾಭವಾಗುತ್ತಿದೆ ಎನ್ನುವುದಕ್ಕೂ ಈ ಸರ್ವೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕೊಡುತ್ತಿಲ್ಲ. ಗುಜರಾತ್ ಮತ್ತು ಉತ್ತರ ಪ್ರದೇಶ ಬಿಟ್ಟರೆ ಮಿಕ್ಕ ರಾಜ್ಯಗಳಲ್ಲಿ ಬಿಜೆಪಿಗೆ ಆಯಾಯ ರಾಜ್ಯಗಳ ನಾಯಕತ್ವ ಮತ್ತು ಕಾರ್ಯಕರ್ತರಿಂದ ಸ್ಥಾನ ಭದ್ರವಾಗಿದೆಯೇ ಹೊರತು ಮೋದಿ ಕಾರಣಕ್ಕಲ್ಲ. ಬಹುಶಃ ಅದ್ವಾನಿಯವರೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರೂ ಬಿಜೆಪಿಯ ಸ್ಥಿತಿ ಈಗಿರುವುದಕ್ಕಿಂತ ಕಡಿಮೆಯೇನೂ ಆಗುತ್ತಿರಲಿಲ್ಲ. ದಕ್ಷಿಣ ಭಾರತದ ಜನ ಮೋದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದೂ ಸರ್ವೆಯಲ್ಲಿ ವ್ಯಕ್ತವಾಗಿದೆ.

ನೆನ್ನೆ ರಾತ್ರಿ ನಡೆದ ಚರ್ಚೆಯಲ್ಲಿ ಒಬ್ಬರು ಬಹಳ ಮುಖ್ಯವಾದ ವಿಷಯವನ್ನು ಎತ್ತಿ ತೋರಿಸಿದರು. ಲೋಕಸಭಾ ಚುನಾವಣೆ ಕೇಂದ್ರ ಸರ್ಕಾರ ರಚನೆಗಾಗಿ ನಡೆಸುವ ರಾಷ್ಟ್ರೀಯ ಚುನಾವಣೆಯೇ ಆದರೂ, ಆಯಾಯ ರಾಜ್ಯದ ವಿಷಯ ಮತ್ತು ಪೈಪೋಟಿಯ ಮೇಲೆ ಯಾರು ಗೆಲ್ಲುತ್ತಾರೆ ಎನ್ನುವುದು ನಿರ್ಧಾರವಾಗುತ್ತದೆಯೆ ಹೊರತು ಯಾವುದೇ ರಾಷ್ಟ್ರೀಯ ನಾಯಕತ್ವವಾಗಲಿ ಅಥವ ರಾಷ್ಟ್ರೀಯ ವಿಷಯದ ಆಧಾರದ ಮೇಲಾಗಲಿ ಅಲ್ಲ. ಕಳೆದ ಎರಡು-ಮೂರು ಚುನಾವಣೆಗಳಲ್ಲಿಯೂ ಹೀಗೆ ಆಗಿದೆ. 2009 ರ ಚುನಾವಣೆ ಆದನಂತರ ನಾನು ಬರೆದಿದ್ದ ಲೇಖನವೊಂದರಲ್ಲಿ ಈ ವಿಷಯದ ಬಗ್ಗೆ ಹಲವು ರಾಜ್ಯಗಳ ಉದಾಹರಣೆ ತೆಗೆದುಕೊಂಡು ವಿಶ್ಲೇಷಿಸಿದ್ದೆ. (ಆ ಲೇಖನವನ್ನು ಕೆಳಗಡೆ ಕೊಡಲಾಗಿದೆ.)

ಬಹುತೇಕ ಸ್ಥಾನಗಳಲ್ಲಿ ಅಭ್ಯರ್ಥಿಗಳು ಹೇಗೆ ಗೆಲ್ಲುತ್ತಾರೆ ಮತ್ತು ಪಕ್ಷ ಎನ್ನುವುದು ಹೇಗೆ ಗೌಣವಾಗುತ್ತದೆ ಎನ್ನುವುದಕ್ಕೆ ಕೆಲವು ಗೊತ್ತಿರುವ ವಿಚಾರಗಳ ಮೂಲಕ ಹೇಳಲು ಪ್ರಯತ್ನಿಸುತ್ತೇನೆ. ಎರಡು ತಿಂಗಳ ಹಿಂದೆ ನಡೆದ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಎಂಬಂತೆ ನಾಯಕಿಯೊಬ್ಬರು ಸೋತುಹೋದರು. ಅದಕ್ಕೆ ಆ ನಾಯಕಿಯ ಪಕ್ಷಕ್ಕೆ ಸೇರಿದ ಒಬ್ಬರು ನನಗೆ ಹೇಳಿದ ವಿಷಯ ಏನೆಂದರೆ ಆ ನಾಯಕಿಗೆ ಕಡೆಯ ಎರಡು-ಮೂರು ದಿನಗಳಲ್ಲಿ ಹಣವಿತರಣೆ ಮಾಡಲು ಸಾಧ್ಯವಾಗಲಿಲ್ಲ. ಕಾರಣ ಏನೆಂದರೆ ಆ ಕ್ಷೇತ್ರಕ್ಕೆಂದು ಬಂದಿದ್ದ ಹಣವನ್ನು ಈಚೆಗೆ ತೆಗೆಯಲಾಗದ ಸ್ಥಿತಿ. ಯಾವ ವಾಹನದಲ್ಲಿ ಹಣ ಬಂದಿತ್ತೊ ಆ ವಾಹನ ತನ್ನ ಜಾಗ ಬಿಟ್ಟು ಹೊರಗೆ ಬಂದಿದ್ದರೆ ಐದಾರು ಕೋಟಿ ರೂಪಾಯಿಗಳ ಹಣ ಸೀಜ್ ಆಗುವ ಪರಿಸ್ಥಿತಿ. ಆದರೆ ಈ ಸಮಸ್ಯೆ ಸೈಕಲ್‌ನಲ್ಲಿ ಹಣ ಸಾಗಿಸುವವರಿಗೆ ಇಲ್ಲದೆ ಆ ನಾಯಕಿ ಸೋಲಬೇಕಾಯಿತು. ಕಡೆಯ ದಿನ ಹಣದ ಮುಖ ನೋಡಿ ಓಟು ಹಾಕುವ ನಾಲ್ಕೈದು ಸಾವಿರ ಜನ ಉಲ್ಟಾ ಹೊಡೆದಿದ್ದರೂ ಇವರು ಗೆದ್ದುಬಿಡುತ್ತಿದ್ದರು. ಹೀಗೆ, ಇಂದಿನ ಬಹುತೇಕ ಚುನಾವಣೆಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ದುರದೃಷ್ಟವಶಾತ್ ಆಯಾಯ ಕ್ಷೇತ್ರ, ಅಲ್ಲಿಯ ಅಭ್ಯರ್ಥಿಗಳು, ಸಂಪನ್ಮೂಲ ಸಂಗ್ರಹಣೆ ಮತ್ತು ನಿರ್ವಹಣೆ, ಜಾತಿ, ಇತ್ಯಾದಿಯಂತಹ ಸ್ಥಳೀಯ ವಿಷಯಗಳ ಮೇಲೆ ನಿರ್ಧರಿಸಲ್ಪಡುತ್ತಿದೆಯೇ ಹೊರತು ಒಂದು ಪಕ್ಷದ ನೀತಿ-ನಿಲುವು-ಸಿದ್ಧಾಂತಗಳ ಮೇಲಲ್ಲ. ಇದಕ್ಕೆ ಅಪವಾದಗಳು ಇಲ್ಲ ಎಂದಲ್ಲ. ಕಡಿಮೆ ಅಷ್ಟೇ. ಹಾಗಾಗಿಯೇ ಮಾಧ್ಯಮಗಳು ನಡೆಸುವ ಸರ್ವೇಗಳಲ್ಲಿ ಸ್ಥಾನಗಳ ಸಂಖ್ಯೆ ಏರುಪೇರಾಗುವುದು.

ಇನ್ನು, ಇಂದು ಕರ್ನಾಟಕದಲ್ಲಿ ಹೊಸದೊಂದು ರಾಜಕೀಯ ಪಕ್ಷದ ಔಪಚಾರಿಕ ಉದ್ಘಾಟನೆ ಆಗುತ್ತಿದೆ. aravind-kejriwalಅರವಿಂದ್ ಕೇಜ್ರಿವಾಲರ ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಘಟಕ ಇಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಅರವಿಂದ್ ಕೇಜ್ರಿವಾಲ್ ತಮ್ಮ ಸರಳತೆ, ಸ್ಪಷ್ಟತೆ, ಹೋರಾಟ, ಪ್ರಾಮಾಣಿಕತೆಯಿಂದಾಗಿ ದೇಶದಲ್ಲಿ ಒಂದು ಮಟ್ಟಕ್ಕೆ ಗುರುತಾಗಿರುವಂತಹವರು. ದೆಹಲಿಯಲ್ಲಿ ಅವರ ಪಕ್ಷ ಸಮಾಜದ ಎಲ್ಲಾ ವರ್ಗಗಳನ್ನು ಜೊತೆಯಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ. ಅಲ್ಲಿ ಅದು ಬಡವರ ಮತ್ತು ಕೆಳಮಧ್ಯಮವರ್ಗದವರಿಗೆ ತೊಂದರೆ ಕೊಡುವ ದೈನಂದಿನ ವಿಷಯಗಳನ್ನೂ ಇಟ್ಟುಕೊಂಡು ಸಂಘಟನೆ ಮಾಡುತ್ತಿದೆ. ಈ ಸಾರಿಯ ದೆಹಲಿ ವಿಧಾನಸಭಾ ಚುನಾವಣೆ ಆಮ್ ಆದ್ಮಿ ಪಾರ್ಟಿಯ ಪಾಲ್ಗೊಳ್ಳುವಿಕೆಯ ಕಾರಣವಾಗಿ ಬಹಳ ಮುಖ್ಯವಾದ ಚುನಾವಣೆ ಎನ್ನುವುದು ನನ್ನ ಅಭಿಪ್ರಾಯ. ಬಹುಶಃ ದೇಶದ ಚುನಾವಣಾ ರಾಜಕೀಯ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ದಿಶೆಯನ್ನು ಅದು ತೋರಿಸಲಿದೆ. ಕೇಜ್ರಿವಾಲರ ಪಕ್ಷಕ್ಕೆ ದೆಹಲಿ ಬಿಟ್ಟರೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಒಳ್ಳೆಯ ಪ್ರೋತ್ಸಾಹ ಇದೆ. ಆ ಪಕ್ಷದ ಪ್ರಕಟಣೆ ತಿಳಿಸಿರುವಂತೆ ನಮ್ಮ ರಾಜ್ಯದಿಂದ ಕೇವಲ ಅಂತರ್ಜಾಲದ ಮೂಲಕ ಆ ಪಕ್ಷಕ್ಕೆ ನೀಡಿರುವ ದೇಣಿಗೆಯೇ 42 ಲಕ್ಷ ರೂಪಾಯಿಯನ್ನು ದಾಟಿದೆಯಂತೆ (online donations). ಉತ್ತಮ ರಾಜಕೀಯ ವ್ಯವಸ್ಥೆಯನ್ನು ಬಯಸುವವರಿಗೆ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಆಯ್ಕೆ ಸೃಷ್ಟಿಯಾಗುತ್ತಿರುವುದು ಸಂತಸದ ವಿಚಾರ. ಈ ಪಕ್ಷದ ಕರ್ನಾಟಕದ ನಾಯಕತ್ವದ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಅದು ಆಮ್ ಆದ್ಮಿ ಪಾರ್ಟಿಯ ಕೇಂದ್ರ ನಾಯಕತ್ವ ಇಟ್ಟುಕೊಂಡಿರುವ ಬದ್ದತೆ ಮತ್ತು ಸಾಮಾಜಿಕ ಕಾಳಜಿಯ ಚೌಕಟ್ಟಿನೊಳಗೇ ಕೆಲಸ ಮಾಡುತ್ತದೆ ಎನ್ನುವ ಭರವಸೆ ಅರವಿಂದ್ ಕೇಜ್ರಿವಾಲ್ ಮತ್ತವರ ತಂಡದ ಕಾರಣಕ್ಕಾಗಿ ಇಟ್ಟುಕೊಳ್ಳಬಹುದಾಗಿದೆ. ಒಳ್ಳೆಯ ಜನ ರಾಜಕೀಯಕ್ಕೆ ಬಂದು ಕೆಲಸ ಮಾಡಲು ಇದು ಸೂಕ್ತ ಸಮಯ. ಕರ್ನಾಟಕದಲ್ಲಿ ಲೋಕ್‍ಸತ್ತಾ, ಎಡಪಕ್ಷಗಳು, ಆಮ್ ಆದ್ಮಿ ಪಾರ್ಟಿ, ಹೀಗೆ ಹಲವು ಪರ್ಯಾಯಗಳು ಜನರ ಮುಂದಿವೆ. ಜವಾಬ್ದಾರಿಯುತ ಜನ ಕೆಲಸ ಮಾಡಲು ಮತ್ತು ನಾಯಕತ್ವ ಕೊಡಲು ಮುಂದಾಗಬೇಕಿದೆ.


ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ… ಕ್ಷಮಿಸಿ…
[ಮೇ 18, 2009]

ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ ‘ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.’ ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಸಾದಾ ಗ್ರಾಮೀಣ ಹಿನ್ನೆಲೆಯಿಂದ, ವಿಭಜನೆಯ ಸಮಯದಲ್ಲಿ ಇಡೀ ಕುಟುಂಬದ ಬೇರುಗಳನ್ನೆ ಕಿತ್ತು ಬೇರೆಡೆ ನೆಟ್ಟುಕೊಳ್ಳಬೇಕಾಗಿ ಬಂದ ಕುಟುಂಬದ, ತನ್ನ ಕಾರ್ಯಕ್ಷೇತ್ರದಲ್ಲಿ ತಜ್ಞತೆ ಪಡೆದುಕೊಂಡ, ಜಾತ್ಯಾತೀತ ನಿಲುವಿನ, ಕ್ಷುದ್ರ ರಾಜಕೀಯ ನಡೆಸದ, ಜೀವನದ ಅದ್ಭುತ ತಿರುವುಗಳಲ್ಲಿ ಭಾರತದ ಪ್ರಧಾನಿಯಾದ ಡಾ. ಸಿಂಗ್ ಇತ್ತೀಚಿನ ದಶಕಗಳಲ್ಲಿ ದೇಶ ಕಂಡ ನಿಸ್ವಾರ್ಥಿ ಮತ್ತು ಅತ್ಯುತ್ತಮ ಪ್ರಧಾನಿ. ಅನೇಕ ಕಾಂಗ್ರೆಸ್ ನಾಯಕರು ಅಧಿದೇವರುಗಳ ಮುಂದೆ ಮಂಡಿಯೂರುವ, ಸಾಷ್ಟಾಂಗ ಪ್ರಣಾಮ ಹಾಕುವ ಪರಿಸರದಲ್ಲೂ ತಮ್ಮ ಮತ್ತು ದೇಶದ Diginity ಉಳಿಸಿಕೊಂಡ ವ್ಯಕ್ತಿ. ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕಾದ ವಿಷಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಘನತೆಯಿಂದ ಕೂಡಿದ ನಡವಳಿಕೆ. ಯಾವುದೇ ಸಂದರ್ಭದಲ್ಲೂ ಪ್ರಧಾನಿಯ ಸ್ಥಾನಕ್ಕೆ ಅಗೌರವ ಬರುವಂತಹ ನಡವಳಿಕೆಯನ್ನು, ಧಾರ್ಷ್ಟ್ಯವನ್ನು ಅವರು ತೋರಿಸಿಲ್ಲ. ಕೊನೆಗೆ ಅವರ ಯುವ ಮಕ್ಕಳೂ ಅದನ್ನು ಮಾಡಲಿಲ್ಲ. ಅಹಂಕಾರ ಮತ್ತು ಠೇಂಕಾರವೆ ಅಧಿಕಾರ ಇರುವುದರ ಕುರುಹು ಎಂಬಂತೆ ಆಗಿಹೋಗಿರುವ ಭಾರತದ ಸಂದರ್ಭದಲ್ಲಿ (ಅದರಲ್ಲೂ ವಿಶೇಷವಾಗಿ “ರಾಜಕುಮಾರ’ರ ಪ್ರಜಾಪ್ರಭುತ್ವದಲ್ಲಿ) ಈ ಎಲ್ಲಾ ವಿಷಯಗಳು ನಮ್ಮ ಗಮನ ಸೆಳೆಯಬೇಕು.

2009 ರ ಚುನಾವಣೆಯ ಫಲಿತಾಂಶ ಬಂದಿದೆ. ಜಾತ್ಯಾತೀತ ಸರ್ಕಾರ ಬರಬೇಕು ಮತ್ತು ನಿಸ್ವಾರ್ಥಿ, ಅರ್ಹ, ಯೋಗ್ಯರಾದ, ಭಾರತ ಮುಂದೆಯೂ ಹೆಮ್ಮೆಪಟ್ಟುಕೊಳ್ಳಬಹುದಾದ ಡಾ. ಸಿಂಗ್ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನನ್ನಂತಹವರ ಆಶಾವಾದ ಒಂದು ರೀತಿಯಲ್ಲಿ ನೇರವೇರಿದೆ. ಇದು ಖಂಡಿತವಾಗಿಯೂ ಭಾರತದ ಜನ UPA ಅನ್ನು ಮತ್ತು ಡಾ. ಸಿಂಗ್‌ರನ್ನು ಪುರಸ್ಕರಿಸಿರುವ ರೀತಿ ಎಂದು ಭಾವಿಸಲು ನಾನು ಬಹುವಾಗಿಯೇ ಇಷ್ಟಪಡುತ್ತೇನೆ. I really like to believe that. ಆದರೆ ವಾಸ್ತವ ಹಾಗೆ ಆಗಿಲ್ಲ ಎಂದು ನನ್ನ ಸೀಮಿತ ಅವಲೋಕನದಲ್ಲಿ ನನಗೆ ಗಾಢವಾಗಿ ಅನ್ನಿಸುತ್ತಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಜನ ಮತಚಲಾಯಿಸಿರುವ ರೀತಿಯನ್ನು ನೋಡಿದರೆ, ಬಹುಪಾಲು ಕಡೆ ಚುನಾವಣೆ ಆಗಿರುವುದು ಸ್ಥಳೀಯ ವಿಷಯಗಳ ಮೇಲೆ ಮತ್ತು ಅಲ್ಲಿಯ ಪಕ್ಷಗಳ ಸಂಘಟನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ತಾಕತ್ತಿನ ಮೇಲೆ.

ಹಾಗಿದ್ದರೆ UPA ಗೆಲ್ಲಲು ಹೇಗೆ ಸಾಧ್ಯ? ಇವತ್ತಿಗೂ ಭಾರತದ ಬಹುಪಾಲು ಭಾಗದಲ್ಲಿ ಬೇರಿರುವ ಪಕ್ಷ ಎಂದರೆ ಕಾಂಗ್ರೆಸ್, ಮತ್ತು ಈ ಸಲ ಸ್ಥಳೀಯ Factors ಕಾಂಗ್ರೆಸ್‌ಗೆ ಪೂರಕವಾಗಿದ್ದವು. ಹಾಗಾಗಿ ಜನ ಸಹಜವಾಗಿಯೆ ಆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನಗೆ ಅನ್ನಿಸುವ ಪ್ರಕಾರ ಕಳೆದ 2004 ರ ಚುನಾವಣೆಯಲ್ಲಿ ಆಗಿದ್ದೂ ಇದೆ. ಇದು ಒಂದು ರಾಷ್ಟ್ರೀಯ ಚುನಾವಣೆ ನಡೆಯುವ ರೀತಿ ಅಲ್ಲ ಮತ್ತು ಅದು ಒಟ್ಟು ದೇಶದ ಹಿತಕ್ಕೆ ಒಳ್ಳೆಯದಲ್ಲ. ಜನ ಯಾವ ಕಾರಣಕ್ಕೆ ಚುನಾವಣೆ ನಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಯಾವ ಅಭ್ಯರ್ಥಿಯನ್ನು ಆರಿಸಬೇಕಿದೆ ಎಂಬ ಪ್ರಾಥಮಿಕ ತಿಳಿವಳಿಕೆ ಇಟ್ಟುಕೊಳ್ಳದೆ, ಬಹುಪಾಲು ಸ್ಥಳೀಯ ವಿಷಯ/ಚಿತಾವಣೆ/ಪ್ರಲೋಭನೆ/ಪ್ರಭಾವಗಳ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದಾರೆ. ಹಾಗೆ ಮಾಡದೆ, ಈ ಬಾರಿ ದೇಶದ ಜನತೆ ಕೇಂದ್ರ ಸರ್ಕಾರವನ್ನು ನಿರ್ಧರಿಸಿದ್ದೇ ಆಗಿದ್ದರೆ, UPA ಇನ್ನೂ ಹೆಚ್ಚಿನ ಸ್ಥಾನ ಪಡೆಯಬೇಕಿತ್ತು; ಹಲವಾರು ಜನ ಸುಲಭವಾಗಿ ಆರಿಸಿಬರಬೇಕಿತ್ತು; ಸೋತ ಹಲವರು ಗೆಲ್ಲಬೇಕಿತ್ತು; ಮತ್ತೊಂದಷ್ಟು ಗೆದ್ದವರು ಸೋಲಬೇಕಿತ್ತು.

ಕರ್ನಾಟಕದ ಉದಾಹರಣೆಯನ್ನೆ ತೆಗೆದುಕೊಳ್ಳಿ. ಇಡೀ ದೇಶದ ಬಹುಪಾಲು ಜನ UPA ಎಂದರೆ ಇಲ್ಲಿ ಬಿಜೆಪಿ ಎಂದಿದ್ದಾರೆ. ಹಾಗೆ ಆಗಲು ಕಾರಣ ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಇದ್ದ ಸಂಪನ್ಮೂಲಗಳು ಮತ್ತು ಸಂಘಟನೆ ಕಾರಣವೆ ಹೊರತು, ಜನರಿಗೆ ಇಲ್ಲಿ UPA ಯನ್ನು ಬೆಂಬಲಿಸಬಾರದು ಎಂಬ ಕಾರಣ ಅಲ್ಲವೆ ಅಲ್ಲ. ಚುನಾವಣೆಗಳಂತೂ ಈಗ ಒಂದು ವ್ಯವಸ್ಥಿತ ಆಟ. ಮೊದಲ ದಿನದಿಂದಲೆ ಹಣ ಹರಿಸಬೇಕು. ಚುನಾವನೆಯ ಹಿಂದಿನ ದಿನ ಪ್ರತಿ ಮತದಾರನ ಮನೆಗೆ ಆತನ ಕ್ರಮಸಂಖ್ಯೆಯ ಚೀಟಿ ಮುಟ್ಟಿಸಬೇಕು; ಪ್ರತಿ ಬೂತ್‌ನಲ್ಲೂ ಪೋಲಿಂಗ್ ಏಜೆಂಟ್‌ನ ವ್ಯವಸ್ಥೆ ಮಾಡಬೇಕು. ಬೂತಿನ ಹೊರಗಡೆ ಪಕ್ಷದ ವತಿಯಿಂದ ನಾಲ್ಕಾರು ಟೇಬಲ್ ಹಾಕಿಕೊಂಡು ಕೂತು ಮತ ಹಾಕಲು ಬರುವ ಮಂದಿಗೆ ಮತ್ತೊಮ್ಮೆ ಅವರ ಕ್ರಮಸಂಖ್ಯೆ ತೆಗೆದುಕೊಡಬೇಕು. ಮತ್ತೊಮ್ಮೆ ಪುಸಲಾಯಿಸಬೇಕು. ಕೆಲವೊಮ್ಮೆ ಮತದಾರರನ್ನು ಮನೆಗೇ ಹೋಗಿ ಕರೆದುಕೊಂಡು ಬರಬೇಕು. ಸಾಧ್ಯವಾದರೆ ಗುಂಪಿನ ನಾಯಕರಿಗೆ ಲಕ್ಷಾಂತರ ದುಡ್ಡು ಕೊಟ್ಟು ಮೊದಲೆ ಬುಕ್ ಮಾಡಿಕೊಳ್ಳಬೇಕು. ಒಂದೆರಡು ವಾರ ಒಂದಷ್ಟು ಜನರನ್ನು ಸಂತೃಪ್ತಿಯಿಂದ ಇಟ್ಟುಕೊಳ್ಳಬೇಕು. ಕಾರ್ಯಕರ್ತರನ್ನೊಳಗೊಂಡ ಪ್ರಚಾರದ ಇಡೀ Machinery ಯನ್ನು ಪ್ರಚಾರದ ಅಷ್ಟೂ ದಿನ ಹಣಕಾಸಿಗೆ ತೊಂದರೆ ಆಗದಂತೆ ನೊಡಿಕೊಳ್ಳಬೇಕು. ಮತ್ತೆ ಇದೆಲ್ಲದರಿಂದ ಹೊರತಾದದ್ದು ಜಾತಿ ಲೆಕ್ಕಾಚಾರಗಳು ಮತ್ತು ಹಣ/ಸಾರಾಯಿ/ವಸ್ತು ಹಂಚಿಕೆಗಳು. ಅಮೆರಿಕದ ಪುಟ್‌ಬಾಲ್ ಟೀಮಿನ ಕೋಚ್‌ಗಳು ಮಾಡುವ ಪ್ಲಾನಿಂಗ್‌ನಂತೆ ನಮ್ಮ ಚುನಾವಣೆಗಳನ್ನು ಎದುರಿಸುವವರೂ ಎಲ್ಲವನ್ನೂ ಪಕಡ್‌‍ಬಂಧಿಯಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಈ ಎಲ್ಲವನ್ನೂ ಬೇರೆ ಮಿಕ್ಕ ಪಕ್ಷಗಳಿಗಿಂತ ವ್ಯವಸ್ಥಿತವಾಗಿ ಮಾಡುವ ಮಟ್ಟ ಮುಟ್ಟಿಕೊಂಡಿದೆ. ಹಾಗಾಗಿ ಸುಲಭವಾಗಿ ಗೆದ್ದಿದೆ. ಇದು ರಾಜ್ಯ ಬಿಜೆಪಿ ಪರ ಎಂದಾಗಲಿ, ಗೆದ್ದವರು ಸೋತವರಿಗಿಂತ ಅರ್ಹರು ಎಂದಾಗಲಿ, ಕರ್ನಾಟಕದ ಜನತೆಗೆ (ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಧ್ಯಮವರ್ಗಕ್ಕೆ) UPA ಅಪಥ್ಯವಾಗಲಿ ಎಂತಲ್ಲ.

ಇದೇ ಪರಿಸ್ಥಿತಿ ದೂರದ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಿದೆ. ಅಲ್ಲಿ ಇತ್ತೀಚೆಗೆ ತಾನೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಹಜವಾಗಿ ಅಲ್ಲಿ ಇಲ್ಲಿಯ ಬಿಜೆಪಿ ತೊರಿಸಿರುವ ಸಾಧನೆಯನ್ನೆ ಅಲ್ಲಿಯ ಕಾಂಗ್ರೆಸ್ ಪಕ್ಷ ತೊರಿಸಿದೆ. ದೆಹಲಿಯೂ. ಇಲ್ಲೆಲ್ಲ ಅದು UPA ಗೆ ಪೂರಕವಾಗಿದೆ.

ಇನ್ನು ನೆರೆಯ ಆಂಧ್ರ, ತಮಿಳುನಾಡು, ಕೇರಳವನ್ನೆ ತೆಗೆದುಕೊಳ್ಳಿ. ಈ ಸಲ ಆಂಧ್ರದಲ್ಲಿ ಅಲ್ಲಿಯ ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧವಾಗಿ ಆಡಳಿತಾರೂಢ ವಿರೋಧಿ ಅಲೆ ಇರಲಿಲ್ಲ. ಇದ್ದದ್ದೆಲ್ಲ ಚಿರಂಜೀವಿಯ ಪಕ್ಷ ಕಾಂಗ್ರೆಸ್ ಓಟುಗಳನ್ನು ಒಡೆಯುತ್ತದೆಯೆ ಎನ್ನುವ ಸಂಶಯ. ಆದರೆ ಪ್ರಜಾರಾಜ್ಯಂ ಪಕ್ಷಕ್ಕೆ ಈಗಿನ ಚುನಾವಣೆಗಳನ್ನು ಎದುರಿಸಲು ಬೇಕಾದ (ಮೇಲೆ ಹೇಳಿದಂತಹ) ಸಂಘಟನೆ ಮತ್ತು ಕಾರ್ಯಕರ್ತರು ಇಲ್ಲದೆ ಅದು ಹಾಗೆ ಆಗಿಲ್ಲ. ಇನ್ನು ಅಲ್ಲಿಯ ಆಡಳಿತಾರೂಢ ಕಾಂಗ್ರೆಸ್‌ಗೆ ಇರುವ ಹಣದ ಸಂಪನ್ಮೂಲಗಳನ್ನು ಮಿಕ್ಕವರಿಗೆ ಸರಿಗಟ್ಟಲು ಆಗಿಲ್ಲ. (ಕಳೆದ ಸಾರಿಯ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹರಿದ ರಿಯಲ್ ಎಸ್ಟೇಟ್/ಗಣಿ ದುಡ್ಡು ನೆನಪಿಸಿಕೊಳ್ಳಿ. ಈ ಸಲ ಆಂಧ್ರದಲ್ಲಿ ಆಗಿರುವುದೂ ಅದೇ ರೀತಿ.) ಹಣ ಇದ್ದವರು, ಪಕ್ಷ ಸಂಘಟನೆ ಇದ್ದವರು, ಹಣ-ಅಧಿಕಾರ ಪ್ರಯೋಗಿಸಬಲ್ಲವರು ಗೆದ್ದಿದ್ದಾರೆ. ಹಾಗೆಯೆ ಗ್ರಾಮೀಣ ಮಟ್ಟದಲ್ಲಿ ಅಲ್ಲಿಯ ಸರ್ಕಾರ ನೀರಾವರಿ ಯೋಜನೆಗಳಿಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯವೂ ಕೆಲಸ ಮಾಡಿದೆ. ಹೀಗಾಗಿ ಅಲ್ಲಿಯ ಸ್ಥಳೀಯ ಕಾಂಗ್ರೆಸ್ ಗೆದ್ದಿದೆ. ಸಹಜವಾಗಿ ಕೇಂದ್ರದ UPA ಸಹ.

ತಮಿಳುನಾಡಿನಲ್ಲೂ ಸ್ಥಳೀಯ ವಿಷಯ, ಸಂಪನ್ಮೂಲಗಳೆ ಮುಖ್ಯವಾಗಿವೆ. ಅಲ್ಲಿಯೂ ಆಡಳಿತ ವಿರೋಧಿ ಅಲೆ ಇರಲಿಲ್ಲ. ಗುಜರಾತ್-ಚತ್ತೀಸ್‍ಗಡ್-ಜಾರ್ಖಂಡ್ ನಲ್ಲೂ ಹೀಗೆ ಆಗಿದೆ. ಬಿಹಾರದಲ್ಲಿ ಈ ವಿಷಯಗಳ ಜೊತೆಗೆ ನಿತೀಶ್ ಕುಮಾರರ ಆಡಳಿತವೂ ಅವರ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ತಂದುಕೊಟ್ಟಿದೆ. ಒರಿಸ್ಸಾದಲ್ಲಂತೂ ಪಟ್ನಾಯಿಕರ ಬಿಜೆಡಿ ವಿಧಾನಸಭೆಗೆ ಮೂರನೆ ಎರಡರ ಬಹುಮತ ಪಡೆದುಕೊಂಡಿದ್ದಷ್ಟೆ ಅಲ್ಲದೆ ಲೋಕಸಭೆಗೂ ತನ್ನವರನ್ನೆ ಹೆಚ್ಚಿಗೆ ಕಳುಹಿಸಿದೆ. ಇನ್ನು ನೆರೆಯ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಹಣ-ಹೆಂಡ ಹೆಚ್ಚಾಗಿ ಹರಿಯದ ದೂರದ ಪಶ್ಚಿಮ ಬಂಗಾಳದಲ್ಲೂ ಇದೇ ವಿಷಯ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಅಲ್ಲಿಯ ಪ್ರಮುಖ ನಾಲ್ಕು ಪಕ್ಷಗಳು ಹೆಚ್ಚುಕಮ್ಮಿ ಹಂಚಿಕೊಂಡಿವೆ.

ಹೀಗೆ ಯಾವ ರೀತಿ ನೋಡಿದರೂ ಸ್ಥಳೀಯ ವಿಷಯ/ಸಂಪನ್ಮೂಲ/ಸಂಘಟನೆ/ಬಲ ಮುಖ್ಯವಾಗಿದೆಯೆ ಹೊರತು ಇಡೀ ದೇಶ “ಇದು ಕೇಂದ್ರ ಸರ್ಕಾರವನ್ನು ಆರಿಸುವ ಚುನಾವಣೆ. ನಾವು ಅದೇ ರೀತಿ ಅದನ್ನು ನೋಡಬೇಕು,” ಎಂದು ಭಾವಿಸಿಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಇಂತಹ ಮನೋಭಾವ ಜಾಸ್ತಿ ಆಗುತ್ತಿದೆ. ಅಕ್ಷರಸ್ಥರು ಹೆಚ್ಚಿಗೆ ಆಗುತ್ತಿರುವಾಗಲೂ, ಯುವಜನತೆ ನಿರ್ಣಾಯಕವಾಗುತ್ತಿರುವಾಗಲೂ, ಈಗಲೂ ಮುಂದುವರೆಯುತ್ತಿರುವ ಈ ವಿದ್ಯಾಮಾನ ಭಾರತದ ಪ್ರಜಾಪ್ರಭುತ್ವದ Maturity ಯನ್ನು ತೋರಿಸುತ್ತಿಲ್ಲ.

ಹೀಗೆ ಆಗದೆ, ದೇಶದ ಜನ ಡಾ. ಸಿಂಗ್‌ರನ್ನು ಅವರ ಕೆಲಸಕ್ಕಾಗಿ ಪುರಸ್ಕರಿಸಿದ್ದರೆ ಅದರ ಕತೆಯೆ ಬೇರೆ ಇರಬೇಕಿತ್ತು. ಉತ್ತಮವಾಗಬೇಕಿತ್ತು. ಸದ್ಯದಲ್ಲಿ ಇದು ಒಂದು ಒಳ್ಳೆಯ ಸಿದ್ಧಾಂತ ಮತ್ತು ವ್ಯಕ್ತಿಯನ್ನು ಬೆಂಬಲಿಸಿದಂತೆ ಕಾಣುತ್ತಿದ್ದರೂ ದೂರಗಾಮಿಯಾಗಿ ಯೋಚಿಸಿದಾಗ ಭಾರತ ಪ್ರತಿಸಲವೂ ಇದೇ ರೀತಿ Lucky ಆಗುತ್ತದೆ ಎಂದು ಅಂದುಕೊಳ್ಳಬೇಕಿಲ್ಲ. ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮಾತ್ರ ಇಲ್ಲಿ ವಿವೇಕವನ್ನು ಕಾಪಾಡಬಲ್ಲದು.