Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ತಿರುವಿನಲ್ಲಿ ಕನ್ನಡ ಮಾಧ್ಯಮಲೋಕ


– ರವಿ ಕೃಷ್ಣಾರೆಡ್ದಿ


 

ನನ್ನ ಅನುಭವದಲ್ಲಿ ಮೊದಲ ಬಾರಿಗೆ ಕನ್ನಡ ಮಾಧ್ಯಮ ಲೋಕದ ಬಗ್ಗೆ ಆಶಾವಾದದಿಂದ ಬರೆಯುವ ಸಂದರ್ಭ ಬಂದಿದೆ ಎಂದು ಭಾವಿಸುತ್ತೇನೆ. ಕಳೆದ ಎಂಟತ್ತು ವರ್ಷಗಳಿಂದ ಕನ್ನಡ ಮಾಧ್ಯಮ ಜಗತ್ತು ಅಪ್ರಾಮಾಣಿಕತೆ, ವೃತ್ತಿಪರತೆಯ ಲೋಪ, ಭ್ರಷ್ಟಾಚಾರ, ಜನವಿರೋಧಿ ಪಿತೂರಿಕೋರ ನಿಲುವುಗಳು, ಮರೆತ ಪತ್ರಿಕೋದ್ಯಮದ ಉದ್ದೇಶ, ಇತ್ಯಾದಿಗಳಿಂದಾಗಿ ಪಾತಾಳ ತಲುಪಿದ್ದದ್ದು ಎಲ್ಲರಿಗೂ ಗೊತ್ತಿರುವುದೆ. ಆದರೆ, ತೀರಾ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವನತಿಯ ತುದಿಯಿಂದ ಮೇಲಕ್ಕೇರಲು ಮಾಧ್ಯಮರಂಗ ತಿರುವು ಪಡೆದುಕೊಳ್ಳುತ್ತಿದೆ ಎನ್ನಿಸುತ್ತದೆ. ಇಂತಹ ಮಾತುಗಳನ್ನು ಆಡಲು ಬಹುಶಃ ನಾನು ಅವಸರಿಸುತ್ತಿದ್ದೇನೆ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಇದನ್ನು ನಾನು ಪತ್ರಕರ್ತರು ಅಥವ ಮಾಧ್ಯಮಸಂಸ್ಥೆಗಳ ಮಾಲೀಕರು ಪರಿವರ್ತನೆಗೊಂಡಿದ್ಡಾರೆ ಎನ್ನುವ ಹುಸಿ ಆಧಾರದ ಮೇಲೆ ಆಧರಿಸದೆ, ಬದಲಾಗುತ್ತಿರುವ ಮಾರುಕಟ್ಟೆ ಮತ್ತು ಮಾಧ್ಯಮಸಂಸ್ಥೆಗಳ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತಿರುವ ದೀರ್ಘಕಾಲೀನ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಿಸಿದ್ದೇನೆ.

ಮುದ್ರಣ ಮಾಧ್ಯಮದ ವಿಷಯಕ್ಕೆ ಬಂದರೆ, ಬಹುಶಃ ಕಳೆದ ಒಂದು ದಶಕದಲ್ಲಿ ಮೊದಲ ಬಾರಿಗೆ ಎಂಬಂತೆ ಎರಡು ದೊಡ್ಡ ಪತ್ರಿಕೆಗಳು ಜನಪರ ವಿಚಾರಗಳನ್ನು ರಾಜ್ಯದ ಓದುಗರ ಮುಂದಿಡಲು ಪೈಪೋಟಿ ನಡೆಸುತ್ತಿವೆ. kpscಕಳೆದ ಎರಡು-ಮೂರು ವಾರಗಳಿಂದ ಪ್ರಜಾವಾಣಿಯಲ್ಲಿ ಕೆಪಿಎಸ್‌ಸಿ ಹಗರಣದ ಬಗ್ಗೆ ರವೀಂದ್ರ ಭಟ್ಟರು ಸವಿಸ್ತಾರವಾಗಿ, ನಿರಂತರವಾಗಿ, ಅಂಕಿ-ಅಂಶಗಳ ಸಹಿತ ಬರೆಯುತ್ತಾ ಬಂದಿದ್ದಾರೆ. ಇಂದಿನದು 13ನೇ ಸರಣಿ ಲೇಖನ. ಮುಂದಿನ ದಿನಗಳಲ್ಲಿ ಕೆಪಿಎಸ್‌ಸಿಯಲ್ಲಿಯ ಅವ್ಯವಹಾರಗಳನ್ನು ತಕ್ಕಮಟ್ಟಿಗೆ ತಡೆಗಟ್ಟಲು ಮತ್ತು ಅಲ್ಲಿ ಸುಧಾರಣಾಕ್ರಮಗಳು (checks and balances) ಅನುಷ್ಠಾನಗೊಳ್ಳಲು ಬಹುಶಃ ಈ ಲೇಖನ ಮಾಲೆಯ ಪ್ರಭಾವ, ಅದು ಉಂಟುಮಾಡಿರುವ ಜಾಗೃತಿ, ಮತ್ತು ಅದು ರೂಪಿಸಿರುವ ಜನಾಭಿಪ್ರಾಯ ಮಿಕ್ಕೆಲ್ಲ ಒತ್ತಡಗಳಿಗಿಂತ ಹೆಚ್ಚಿನದು.

ಅದೇ ರೀತಿ ಬಹುಶಃ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿಯ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಸರಣಿ ಲೇಖನಗಳನ್ನು ಪ್ರಜಾವಾಣಿ ಪ್ರಕಟಿಸುತ್ತ ಬಂದಿದೆ. ಇಲ್ಲಿಯವರೆಗೆ ಇಂತಹ 18 ಲೇಖನಗಳು ಈ ಮಾಲಿಕೆಯಲ್ಲಿ ಬಹುಶಃ ಆಯಾ ಜಿಲ್ಲಾ ವರದಿಗಾರರಿಂದ ಬರೆಸಲ್ಪಟ್ಟಿವೆ. ಈ ವರದಿಗಳು ಪ್ರಕಟವಾದ ಮೇಲೆ ಕೆಲವು ಕಡೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆಯೂ ವರದಿಯಾಗಿದೆ. ಒಟ್ಟಿನಲ್ಲಿ ಇಂತಹ ತನಿಖಾ ಮತ್ತು ವಿಶ್ಲೇಷಣಾ ವರದಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ ಎಂದು ಅನ್ನಿಸುತ್ತಿದೆ.

ಅದೇ ರೀತಿಯಲ್ಲಿ ವಿಜಯ ಕರ್ನಾಟಕವೂ ಹಲವು ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ. ಲೋಕಾಯುಕ್ತದ ಬಗ್ಗೆ ವಿಶೇಷವಾಗಿ ಗಮನ ಹರಿಸುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಒಂದು ಬಗೆಯ activism ಇಲ್ಲಿ ಕಾಣಿಸುತ್ತಿದೆ. ಈ ಪತ್ರಿಕೆಗಳಲ್ಲಿ ಆಯಾಯ ಪತ್ರಿಕೆಯ ಫಲಶೃತಿ ಎಂಬ ತಲೆಬರಹದ ಲೇಖನಗಳು ಹೆಚ್ಚಾಗುತ್ತಿರುವುದು ಇವು ಮಾಡುವ ಫಾಲೋ‌ಅಪ್‌ ಸಫಲತೆಯನ್ನು ತೋರಿಸುತ್ತದೆ. ವಿಜಯ ಕರ್ನಾಟಕದ ಸಂಪಾದಕ ಸುಗತ ಶ್ರೀನಿವಾಸರಾಜು ತಾವು ಇಂಗ್ಲಿಷ್ ಪತ್ರಿಕೆಗಳಲ್ಲಿ ದುಡಿಯುತ್ತ ಗಳಿಸಿದ ವೃತ್ತಿಪರತೆ ಮತ್ತು ವಸ್ತುನಿಷ್ಠತೆಯನ್ನು ಇತ್ತೀಚಿನ ದಿನಗಳಲ್ಲಿ ಅಂತಹುದರ ಅವಶ್ಯಕತೆ ಕಾಣದಿದ್ದ ಕನ್ನಡದ ಯುವಪತ್ರಕರ್ತರಿಗೆ ಮನಗಾಣಿಸಿದರೆ ಅದೇ ದೊಡ್ಡ ಕಾಣಿಕೆಯಾಗುತ್ತದೆ. ಪತ್ರಕರ್ತರಿಗಿಂತ ಹೆಚ್ಚಾಗಿ propagandist ಗಳಾಗಿದ್ದ ಕೂಗುಮಾರಿಗಳ ಹಾವಳಿ ಇಂತಹ ದೊಡ್ದ ಪತ್ರಿಕೆಯಲ್ಲಿ ಕಡಿಮೆಯಾಗಿರುವುದು ಅಲ್ಪ ಬೆಳವಣಿಗೆvijaykarnataka-150713ಯೇನಲ್ಲ. ಹಾಗೆಯೇ, ಕನ್ನಡದ ನಾಲ್ಕು ದೊಡ್ಡ ದಿನಪತ್ರಿಕೆಗಳಲ್ಲಿ ಮೂರು ಯಾವುದೇ ರಾಜಕಾರಣಿಯ ಹಿಡಿತದಲ್ಲಿಲ್ಲದಿರುವುದು ಮುಂದಿನ ದಿನಗಳಲ್ಲಿ ಇವು ಇನ್ನೂ ಹೆಚ್ಚಿನ ಸ್ವತಂತ್ರತೆ ಮತ್ತು ಪಕ್ಷಾತೀತತೆಯಿಂದ ವರ್ತಿಸುತ್ತವೆ ಎಂದು ಆಶಿಸಬಹುದು. ಪ್ರಜಾವಾಣಿ ಮತ್ತು ವಿಜಯ ಕರ್ನಾಟಕದ ನಡುವಿನ ಪೈಪೋಟಿ, ವೈವಿಧ್ಯತೆ, ವೃತ್ತಿಪರತೆ ಇತರೆ ಪತ್ರಿಕೆಗಳ ಮೇಲೆಯೂ ಅವೂ ಹೆಚ್ಚು ಜನಪರವಾಗಿ ಮತ್ತು ಮುಕ್ತವಾಗಿ ಕೆಲಸ ಮಾಡಲು ಒತ್ತಡ ಹೇರುತ್ತದೆ ಎಂದೂ ಭಾವಿಸಬಹುದು.

ಇದೆಲ್ಲದರ ನಡುವೆ ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಹಲವು ಮಾಜಿ ಅಧಿಕಾರಿಗಳಿಗೆ ಕನ್ನಡದ ಪತ್ರಿಕೆಗಳು ಜೀವನ ಚರಿತ್ರೆಯ ಅಂಕಣ ಭಾಗ್ಯ ಕೊಡುವಲ್ಲಿ ತೋರಿಸುತ್ತಿರುವ ಅತ್ಯುತ್ಸಾಹ ಒಳ್ಳೆಯ ಬೆಳವಣಿಗೆಯಲ್ಲ. ಅವರ ಅನುಭವ ಒಂದು ರೀತಿಯಲ್ಲಿ ಜನರಿಗೆ ಸರ್ಕಾರ ಹೇಗೆ ವರ್ತಿಸುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪರಿಚಯಿಸುತ್ತದೆ ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದರೇ ಹೀಗೆ ಜೀವನ ಚರಿತ್ರೆ ಹೇಳಲು ಅವಕಾಶ ಪಡೆದಿರುವ ಬಹುತೇಕರು ರಾಜಕೀಯ ಆಕಾಂಕ್ಷೆಗಳನ್ನುಳ್ಳವರು ಮತ್ತು ಈ ವೇದಿಕೆಗಳನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುವುದರಲ್ಲಿ ಆಸಕ್ತರು. ಹಾಗಾಗಿಯೇ ಅವರ ಕತೆಗಳ ವಸ್ತುನಿಷ್ಠತೆ ಮತ್ತು ಸತ್ಯತೆ ಸಂದೇಹಾಸ್ಪದವಾದದ್ದು.

ಮತ್ತು, ಈ ಮಧ್ಯೆ ಯಾವ ಪತ್ರಿಕೆಯೆ ಯಾವೊಂದು ಪುರವಣಿಗಳೂ–ಭಾನುವಾರದ ಪುರವಣಿಗೆಗಳನ್ನೂ ಒಳಗೊಂಡು–ಓದಲೇಬೇಕೆಂಬ ರೀತಿಯಲ್ಲಿ ಇಲ್ಲ ಅನ್ನಿಸುತ್ತಿರುವುದಕ್ಕೆ ಕೇವಲ ನನ್ನೊಬ್ಬನ ಬದಲಾಗಿರಬಹುದಾದ ಓದಿನ ಆದ್ಯತೆ ಕಾರಣವೇ ಅಥವ ಬಹುತೇಕ ಓದುಗರಿಗೂ ಹಾಗೇ ಅನ್ನಿಸುತ್ತಿದೆಯೋ ಗೊತ್ತಿಲ್ಲ.

ಇನ್ನು, ಮುದ್ರಣ ಮಾಧ್ಯಮದ ಮೀಡಿಯೋಕರ್ ಮತ್ತು ಭ್ರಷ್ಟ ಪತ್ರಕರ್ತರುಗಳ ಬಗ್ಗೆ ಹೇಳಬಹುದಾದರೆ, ಮುಂದಿನ ಒಂದೆರಡು ವರ್ಷದಲ್ಲಿ ಈ ರಂಗದಲ್ಲಿ ಆಗಲಿರುವ consolidation ಯೋಗ್ಯರು ಮತ್ತು ಪ್ರಾಮಾಣಿಕರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ತಂದುಕೊಡುತ್ತದೆ ಎನ್ನುವ ವಿಶ್ವಾಸ ನನ್ನದು. paperಮುಂದಿನ ವರ್ಷಗಳಲ್ಲಿ ಕನ್ನಡದ ಕೆಲವು ದಿನಪತ್ರಿಕೆಗಳು ಕಣ್ಣುಮುಚ್ಚುವ ಸಾಧ್ಯತೆ ಇರುತ್ತದೆಯೆ ಹೊರತು ಈಗ ಸ್ಥಾಪಿತವಾಗಿರುವವರನ್ನು ಅಲ್ಲಾಡಿಸುವಂತಹ ಇನ್ನೊಂದು ಪತ್ರಿಕೆ ಬರುವ ಸಾಧ್ಯತೆ ನನಗೆ ಕಾಣುತ್ತಿಲ್ಲ. ಇಂಟರ್ನೆಟ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ ಕ್ರಾಂತಿಯಿಂದಾಗಿ ಪ್ರಪಂಚದಾದ್ಯಂತ ಮುದ್ರಣ ಮಾಧ್ಯಮ ಮರುಅನ್ವೇಷಣೆಗೊಳಗಾಗುತ್ತಿದೆ. ಇನ್ನೊಂದೈದಾರು ವರ್ಷಗಳಲ್ಲಿ ಅದು ಕನ್ನಡಕ್ಕೂ ತಟ್ಟಲಿದೆ. Saturation ಹಂತ ತಲುಪಿರುವ ಈ ಉದ್ಯಮ mature ಆಗುವ ಮೂಲಕ ಮಾತ್ರ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಬಹುದಾಗಿದೆ.

ಇನ್ನು, ಕನ್ನಡದ ನ್ಯೂಸ್‌ಚಾನಲ್‌ಗಳ ವಲಯದಲ್ಲಾಗುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನಿಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುತ್ತದೆ. ಒನ್‌ಇಂಡಿಯಾ-ಕನ್ನಡದಲ್ಲಿ ಅದರ ಸಂಪಾದಕರಾದ ಶಾಮ್‌ಸುಂದರ್‌ರವರು ಇದರ ಬಗ್ಗೆ ಇಲ್ಲಿ ಆಸಕ್ತಿಕರವಾಗಿ ಬರೆದಿದ್ದಾರೆ. ಆ ಲೇಖನಕ್ಕೆ ನಾನು ಕಳುಹಿಸಿರುವ ಪ್ರತಿಕ್ರಿಯೆಯಲ್ಲಿ ಅದರ ಇನ್ನೊಂದು ಮಗ್ಗಲನ್ನು ಈ ಬೆಳವಣಿಗೆಗಳು ಅದು ಹೇಗೆ ಗುಣಾತ್ಮಕವಾಗಿಯೂ ಇರಲಿವೆ ಎಂದು ಚರ್ಚಿಸಿದ್ದೇನೆ. ಅದರ ಪೂರ್ಣಪಾಠ ಇಲ್ಲಿದೆ:

ಶಾಮಸುಂದರ್‌ರವರೆ,

ನೀವು ಹೇಳಿದಂತೆ ಕನ್ನಡದ ನ್ಯೂಸ್ ಚಾನಲ್‌ಗಳಿಗೆ ಈಗ ಸಂಕ್ರಮಣದ ಸಮಯ. ನನ್ನ ಪ್ರಕಾರ ಈಗ ಇರುವ ಎಲ್ಲಾ ಚಾನಲ್‌ಗಳಿಗೂ ಬದುಕುವ ಮತ್ತು ಬೆಳೆಯುವ ಅವಕಾಶ ಮತ್ತು ಮಾರುಕಟ್ಟೆ ಇದೆ. ಆದರೆ, ಕೆಲವು ಮಾತ್ರ ಲಾಭದಾಯಕವಾಗಿ ಉಳಿದು, ಮಿಕ್ಕವು ನಷ್ಟಕ್ಕೆ ಈಡಾಗಿ ಅಳಿವಿನ ಅಂಚಿಗೆ ಬಂದಿರುವುದಕ್ಕೆ, ಆ ಮೂಲಕ ಅನೇಕ ನೌಕರರು ಕೆಲಸ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಅವುಗಳ ಸ್ಥಾಪನೆಯಲ್ಲಿಯ ಮೂಲ ಉದ್ದೇಶ ಮತ್ತು ತದನಂತರ ಅವುಗಳ ನಿರ್ವಹಣೆಯಲ್ಲಿಯೇ ದೋಷಗಳಿರುವುದು.

ನೀವು ಲಾಭದಾಯಕವಾಗಿ ನಡೆಯುತ್ತಿರುವ ಕೆಲವು ಚಾನಲ್‌ಗಳನ್ನು ಹೆಸರಿಸಿ ಅವುಗಳ ಮಾಲೀಕರು ಯಾರೂ ಕನ್ನಡದವರಲ್ಲ ಎಂದಿರುವುದರಲ್ಲಿಯೇ ನಾವು ಆ ವಲಯದಲ್ಲಿ ಇಂದು ಕಾಣುತ್ತಿರುವ ಗೊಂದಲಗಳಿಗೆ ಉತ್ತರವಿದೆ. ಆ ಚಾನಲ್ ಸ್ಥಾಪಕರ ಮೂಲ ಉದ್ದೇಶ ಒಂದು ಲಾಭದಾಯಕ ವಾರ್ತಾವಾಹಿನಿಯನ್ನು ಕಟ್ಟುವುದು. ಆ ಉದ್ದೇಶ ಇರುವವರು ಒಂದು ಚಾನಲ್ ಕಟ್ಟಲು ಬೇಕಾದ ಅಗತ್ಯ ಬಂಡವಾಳದ ಜೊತೆಗೆ ಉತ್ತಮ ವೃತ್ತಿಪರ ನಿರ್ವಹಣಾಧಿಕಾರಿಗಳ ಕೈಗೆ ಅವುಗಳ ಉಸ್ತುವಾರಿ ಕೊಡುತ್ತಾರೆ. ಹಾಕಿರುವ ಬಂಡವಾಳಕ್ಕೆ ಮೋಸವಾಗದಂತೆ ಮತ್ತು ಚಾನಲ್ ಜನಪ್ರಿಯವಾಗಿ ಲಾಭದಾಯಕವಾಗಲು ಏನೇನು ನಿರ್ಧಾರಗಳು ಅಗತ್ಯವೋ ಅದೆಲ್ಲವನ್ನೂ ಅವರು ನಿರ್ಭಾವುಕವಾಗಿ ಕೈಗೊಳ್ಳುತ್ತಾರೆ. ಬೇರೆ ಕಡೆಯಿಂದ ಹೆಚ್ಚು ಸಂಬಳ ಕೊಟ್ಟು ಕರೆತರಬೇಕಾದ ಅವಶ್ಯಕತೆ ಬಿದ್ದರೆ ಕರೆತರುತ್ತಾರೆ, ಮತ್ತೆ ಅವರೇ ಹೊರೆ ಎನಿಸಿದರೆ ಕೂಡಲೆ ಮನೆಗೆ ಕಳುಹಿಸುತ್ತಾರೆ. ಆಗಾಗ ಖರ್ಚುಕಡಿತಕ್ಕೆ ಏನೇನು ಮಾಡಬೇಕೊ ಅದನ್ನು ಮಾಡುತ್ತಾರೆ ಮತ್ತು ಎಲ್ಲಿ ಹಣ ತೊಡಗಿಸಿದರೆ ಹೆಚ್ಚು ಉಪಯೋಗವಾಗುತ್ತದೆ ಎನಿಸುತ್ತದೆಯೋ ಅಲ್ಲಿ ತೊಡಗಿಸುತ್ತಾರೆ. ಅದೇ ರೀತಿ ಕಾರ್ಯಕ್ರಮಗಳ ವಿಷಯದಲ್ಲಿಯೂ ಹೆಚ್ಚಿನ ಗೊಂದಲಗಳಿಲ್ಲದೆ ಯಾವ ತರಹದ ಕಾರ್ಯಕ್ರಮ ಹೆಚ್ಚು ಜನಪ್ರಿಯವಾಗುತ್ತದೆ ಎನ್ನಿಸುತ್ತದೆಯೊ ಅಂತಹುದನ್ನು ಹೆಚ್ಚೆಚ್ಚು ವೃತ್ತಿಪರತೆಯಿಂದ ನೀಡುತ್ತ ಹೋಗುತ್ತಾರೆ. ಬೇರೆ ಭಾಷೆಗಳ ಯಶಸ್ವಿ ಕಾರ್ಯಕ್ರಮಗಳನ್ನು ನಕಲು ಮಾಡುವುದರಿಂದ ಹಿಡಿದು ಅವರ ಕಾರ್ಯನಿರ್ವಹಣೆಯ ತಂತ್ರಗಳನ್ನೂ ಇಲ್ಲಿಗೆ ತರುತ್ತಾರೆ.

ಆದರೆ ಕನ್ನಡದಲ್ಲಿ ನಷ್ಟದಲ್ಲಿ ನಡೆಯುತ್ತಿರುವ ಮತ್ತು ಮುಚ್ಚುವ ಹಂತಕ್ಕೆ ಬಂದಿರುವ ಚಾನಲ್‌ಗಳನ್ನು ನೋಡಿ. ಇವೆಲ್ಲವೂ ನಮ್ಮ ರಾಜ್ಯದ ರಾಜಕಾರಣಿಗಳಿಂದ ಆರಂಭಿಸಲ್ಪಟ್ಟಂತಹವು. ಈ ರಾಜಕಾರಣಿಗಳಲ್ಲಿ ಯಾರಿಗೂ ಮಾಧ್ಯಮ ರಂಗದ ಉದ್ದಿಮೆಯ ಪರಿಚಯ ಇರಲಿಲ್ಲ. ನಮ್ಮ ತುತ್ತೂರಿಯನ್ನು ಊದಿಕೊಳ್ಳಲು ನಮಗೂ ಒಂದು ಚಾನಲ್ ಇರಲಿ ಎಂದು ಚಾನಲ್ ಆರಂಭಿಸಿದವರೇ ಇವರೆಲ್ಲ. ಚಾನಲ್‌ಗಳ ಅರಂಭದ ಸಮಯದಲ್ಲಿ ಇವರ್ಯಾರಿಗೂ ಹಣದ ಕೊರತೆ ಇರಲಿಲ್ಲ. ಅಷ್ಟೇ ಅಲ್ಲ, ಒಂದು ಚಾನಲ್ ನಿಲ್ಲಲು ಎಷ್ಟು ದುಡ್ಡು ಮತ್ತು ದಿನ ಬೇಕಾಗುತ್ತದೆ ಎನ್ನುವ ಜ್ಞಾನವೂ ಇರಲಿಲ್ಲ. ಬಹುತೇಕ ಸಂದರ್ಭದಲ್ಲಿ ಅನೀತಿ ಮತ್ತು ಭ್ರಷ್ಟ ಮಾರ್ಗಗಳಿಂದ ಸಂಪಾದಿಸಿದ ದುಡ್ಡೇ ಆಗಿದ್ದರಿಂದ ಕಳೆದುಕೊಳ್ಳುತ್ತೇವೆಂಬ ಭಯವಾಗಲಿ, ಆರ್ಥಿಕ ಶಿಸ್ತಾಗಲಿ ಇರಲಿಲ್ಲ. ಜೊತೆಗೆ ತಾವೊ, ತಮ್ಮ ಪತ್ನಿಯರೊ, ತಮಗೆ ಬೇಕಾದ ಬೇನಾಮಿ ವ್ಯಕ್ತಿಗಳೊ ಅವುಗಳಿಗೆ ಮುಖ್ಯಸ್ಥರಾದರು. ಬಹುತೇಕ ಎಲ್ಲಾ ಸಂದರ್ಭದಲ್ಲಿ ಹೀಗೆ ಮುಖ್ಯಸ್ಥರಾದವರು ಅಂತಹ ಒಂದು ಸಂಸ್ಥೆ ನಡೆಸಲು ಅನರ್ಹರಾಗಿದ್ದರು. tv-mediaಇತ್ತೀಚೆಗೆ ಸ್ನೇಹಿತರೊಬ್ಬರು ಹೇಳಿದಂತೆ ಇಂತಹ ಹಲವರು ಕೊಳಕರೂ ಆಗಿದ್ದರು. ತೀರಾ ಅನೈತಿಕ ಕೆಲಸಗಳಿಗೆ ತಮ್ಮ ಮಾಲೀಕತ್ವ ಮತ್ತು ಮುಖ್ಯಸ್ಥ ಸ್ಥಾನಗಳನ್ನು ಬಳಸಿಕೊಂಡಿದ್ದರು. ಇವರಿಗೆ ಚಾನಲ್ ಉಸ್ತುವಾರಿ ತಮ್ಮ ತೆವಲುಗಳ ಪೂರೈಕೆಗೆ ಒಂದು ಆಸ್ಥಾನ. ಇಂತಹವರಿಗೆ ಒಂದು ಸಂಸ್ಥೆಯ ಉಳಿಯುವಿಕೆ ಹೇಗೆ ಮುಖ್ಯವಾಗುತ್ತದೆ?

ಇದರ ಜೊತೆಗೆ, ಈ ಚಾನಲ್‌ಗಳ ಬೇರೆ ಕಾರ್ಯಕ್ರಮಗಳು ಎಷ್ಟೇ ಚೆನ್ನಾಗಿದ್ದರೂ ವಾರ್ತೆ ಮತ್ತು ವಿಶ್ಲೇಷಣೆಯ ವಿಚಾರಕ್ಕೆ ಬಂದಾಗ ಜನರಿಗೆ ಇವುಗಳ ಮೇಲೆ ವಿಶ್ವಾಸ ಮೂಡಲೇ ಇಲ್ಲ. ಮಾಲೀಕನ ಬಗ್ಗೆ ಅಥವ ಆತನ ಪಕ್ಷದ/ನಾಯಕರ ಬಗ್ಗೆ ಅವರು ತೋರಿಸುತ್ತಿದ್ದ/ತೋರಿಸುತ್ತಿರುವ ಪಕ್ಷಪಾತಿತನ ಅವುಗಳನ್ನು ನೋಡುಗರ ಒಂದು ವಲಯಕ್ಕೆ ಸೀಮಿತಗೊಳಿಸಿಬಿಟ್ಟಿವೆ. ಹೀಗಿರುವಾಗ, ಅವುಗಳ ಮಾರುಕಟ್ಟೆ ವಿಸ್ತಾರವಾಗುವುದಾದರೂ ಹೇಗೆ? ಈ ಎಲ್ಲದರ ನಡುವೆ ಹಲವು ಚಾನಲ್‌ಗಳ ಕೆಲವು ನಿರೂಪಕರ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹವಾಗುತ್ತ ಹೋಯಿತು. ಕೆಲವರು ತಮ್ಮ ಹುದ್ದೆ ಅಥವ ಮುಖಪರಿಚಯವನ್ನು ಅನೈತಿಕವಾಗಿ ದುಡ್ಡುಮಾಡಿಕೊಳ್ಳುವ ಭ್ರಷ್ಟ ಮಾರ್ಗಗಳಿಗೂ ಬಳಸಿಕೊಂಡರು. ತಮ್ಮ ಅನೀತಿ, ವೃತ್ತಿಪರತೆ ಇಲ್ಲದಿರುವುದು, ತಲೆಗೇರಿಸಿಕೊಂಡ ಅಹಂಕಾರ, ಇವುಗಳಿಂದ ತಾವೂ ಕೆಟ್ಟಿದ್ದೂ ಅಲ್ಲದೆ ತಮ್ಮ ಚಾನಲ್‌ಗಳ ಉಳಿವಿಗೂ ಸಂಚಕಾರ ತಂದರು.

ಈಗ ಹೀಗೆ ನಷ್ಟದಲ್ಲಿರುವ ಚಾನಲ್‌ಗಳ ಕೆಲವು ಮಾಲೀಕರ ದುಡ್ಡಿನ ಮೂಲಗಳು ಬತ್ತಿವೆ. ವಿಧಿಯಿಲ್ಲದೆ ಮಾರಲು ನೋಡುತ್ತಿದ್ದಾರೆ. ಕೊಳ್ಳಲು ಇತರೆ ಭ್ರಷ್ಟ ರಾಜಕಾರಣಿಗಳು ಮುಂದೆ ಬರುತ್ತಿಲ್ಲ. ಉದ್ದಿಮೆ ಎಂದು ಪರಿಗಣಿಸಿ ಬರಬಹುದಾದವರಿಗೆ ಈ ಚಾನಲ್‌ಗಳ ಇತಿಹಾಸ ಸ್ಫೂರ್ತಿ ಹುಟ್ಟಿಸುತ್ತಿಲ್ಲ.

ನೀವು ಹೇಳಿದ ಹಾಗೆ, ಕಳೆದ ಆರೇಳು ವರ್ಷಗಳ ಸಂದರ್ಭದಲ್ಲಿ ಎಂತೆಂತಹವರೆಲ್ಲ ಸ್ಟಾರ್‌ಗಳಾಗಿಬಿಟ್ಟರು. ಸರಿಯಾಗಿ ಒಂದು ವಿಷಯದ ಬಗ್ಗೆ ಬರೆಯಲು ಮತ್ತು ಮಾತನಾಡಲು ಬಾರದವರೆಲ್ಲ ಜನಾಭಿಪ್ರಾಯ ರೂಪಿಸುವ ಮಹಾನುಭಾವರಾಗಿಬಿಟ್ಟ ದುರದೃಷ್ಟಕರ ಪರಿಸ್ಥಿತಿ ಉಂಟಾಯಿತು. ಒಳ್ಳೆಯ, ವೃತ್ತಿಪರ, ಕಾಳಜಿಯುಳ್ಳ, ಪ್ರಾಮಾಣಿಕ ಮತ್ತು ಅರ್ಹ ಪತ್ರಕರ್ತರು ತಮಗೆ ಸಲ್ಲದ ಜಾಗದಲ್ಲಿ ಕುಳಿತು ತಮ್ಮ ಮಿತಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಘನತೆಯನ್ನು ಈ ವೃತ್ತಿಗೆ ತರಲು ಶ್ರಮಪಡುತ್ತ ಹೋದರು. ಆದರೆ ಇಂತಹ ಸಂಕ್ರಮಣದ ಸಂದರ್ಭದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡ ಅಂತಹ ಜನಕ್ಕೆ ಹೆಚ್ಚಿನ ಅವಕಾಶಗಳು ಮತ್ತು ಜವಾಬ್ದಾರಿಗಳು ಸಿಗುತ್ತವೆ. ಲಾಭದಲ್ಲಿ ನಡೆಯುತ್ತಿರುವ ಚಾನಲ್‌ಗಳಲ್ಲಿದ್ದರೂ ವಿಶ್ವಾಸಾರ್ಹತೆ ಕಳೆದುಕೊಂಡ, ಭ್ರಷ್ಟ ಎಂದು ಪರಿಗಣಿಸಲ್ಪಟ್ಟ ಹಲವು ತಲೆಹರಟೆ ಜನ ಕೆಲಸ ಕಳೆದುಕೊಂಡಿದ್ದಾರೆ ಅಥವ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇದನ್ನು ಕೊಳೆ ತೊಳೆಯುವ ಸಮಯ ಎಂದೇ ನಾನು ಭಾವಿಸುತ್ತೇನೆ. ಈಗಿನ ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಉಳಿಯುವ ಚಾನಲ್‌ಗಳು ಕನಿಷ್ಟ ಪಕ್ಷ ಅರ್ಹ ವ್ಯಕ್ತಿಗಳ ಉಸ್ತುವಾರಿಗೆ ಒಳಪಡುತ್ತವೆ ಮತ್ತು ಅವುಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವವರು ಒಂದಿಷ್ಟು ಪತ್ರಕರ್ತನ ಬದ್ಧತೆ, ಕಾಳಜಿ, ವಿದ್ಯಾರ್ಹತೆ ಮತ್ತು ವೃತ್ತಿಪರತೆಯ ಇತಿಹಾಸ ಹೊಂದಿರುತ್ತಾರೆ ಎನ್ನುವ ವಿಶ್ವಾಸ ನನ್ನದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

 

ಫಲಭರಿತ ಮರವ ಕಡಿದವರು ಯಾರು..: ಒಂದು ಪ್ರತಿಕ್ರಿಯೆ


– ರವಿ ಕೃಷ್ಣಾರೆಡ್ದಿ


 

ಎರಡು ದಿನದ ಹಿಂದೆ ಪ್ರಜಾವಾಣಿ ಓದುವಾಗ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ವಸು ಮಳಲಿಯವರ “ಕಡೆಗೋಲು” ಅಂಕಣ ಓದುವುದು ಮಿಸ್ ಆಗಿತ್ತು. ಆದರೆ ಅದೇ ದಿನ ಇಬ್ಬರು ಗೆಳೆಯರು (ಪ್ರಗತಿಪರ ಹೋರಾಟದ ಹಿನ್ನೆಲೆ ಇರುವವರು) ಡಾ. ವಸುರವರ ಲೇಖನದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿ ವಿಮರ್ಶಿಸಿದಾಗ, ತಪ್ಪಿ ಹೋಗಿದ್ದನ್ನು ಹುಡುಕಿ ಓದಿದೆ.

ಫಲಭರಿತ ಮರವ ಕಡಿದವರು ಯಾರು…” ಎಂಬ ತಮ್ಮ ಲೇಖನದಲ್ಲಿ ಡಾ. ವಸುರವರು ಎಚ್‌ಎಂ‌ಟಿ ಕಾರ್ಖಾನೆಯ ಕುರಿತು ಬರೆಯುತ್ತ ಅದರ ಅವಸಾನಕ್ಕೆ ಜಾಗತೀಕರಣ ಮತ್ತು ಖಾಸಗೀಕರಣವೇ ಕಾರಣ ಎಂದು ಹೇಳುತ್ತಾರೆ. ಖಾಸಗೀಕರಣವನ್ನು ವಿರೋಧಿಸುವ ಭರದಲ್ಲಿ vasu-maLaliಲೇಖಕಿ ಹಲವಾರು ವಿಷಯಗಳನ್ನು ಪರಿಗಣಿಸದೆ, ಎಚ್‌ಎಂ‌ಟಿ ಕಾರ್ಖಾನೆ ಮತ್ತು ಅಂತಹ ಸಾರ್ವಜನಿಕ ಉದ್ದಿಮೆಗಳನ್ನು ಆದರ್ಶದ ಪರಮಾವಧಿ ಎಂಬ ರೀತಿಯಲ್ಲಿ ಕಟ್ಟಿಕೊಡುತ್ತಾರೆ. ಆದರೆ, ಇದು ನಿಜವೇ?

ಎಚ್‌ಎಂಟಿಯೊಂದೇ ಅಲ್ಲ, ದೇಶದ ಅನೇಕ ಪ್ರಮುಖ ಸಾರ್ವಜನಿಕ ಉದ್ದಿಮೆಗಳು, ಅದರಲ್ಲೂ ವಿಶೇಷವಾಗಿ ಕಾರ್ಖಾನೆಗಳು ಮುಚ್ಚಿಹೋಗಲು ಕಾರಣವಾಗಿದ್ದು ಅವುಗಳು ವರ್ಷದಿಂದ ವರ್ಷಕ್ಕೆ ನಷ್ಟಕ್ಕೀಡಾಗುತ್ತ ಹೋಗಿದ್ದೇ ಪ್ರಮುಖ ಕಾರಣ. ಲಾಭದಲ್ಲಿ ನಡೆಯುತ್ತಿದ್ದ ಹಲವು ಕಾರ್ಖಾನೆಗಳು ಈಗಲೂ ಬದುಕಿವೆ. ಆದರೆ ಎಚ್‌ಎಂ‌ಟಿಯಂತಹ ಕಾರ್ಖಾನೆಗಳು ಬಾಗಿಲು ಹಾಕುವಂತೆ ಆಗಿದ್ದು ಹೇಗೆ?

ಎಚ್‌ಎಂ‌ಟಿ, ಬೆಮೆಲ್, ಬಿಇಎಲ್, ಬಿಎಚ್‌ಇಎಲ್, ಮುಂತಾದ ಹಲವಾರು ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಸ್ಪಾಪಿಸಿದಾಗ ನಮ್ಮ ದೇಶದ ಆರ್ಥಿಕ ನೀತಿಗಳಲ್ಲಿ ಕಟ್ಟುಪಾಡುಗಳಿದ್ದವು. ಖಾಸಗಿಯವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರವೇಶಿಸುವುದಕ್ಕೆ ಕಷ್ಟವಿತ್ತು. ಮತ್ತು ಅಷ್ಟೇ ಮುಖ್ಯವಾಗಿ ಖಾಸಗಿಯವರಿಗೆ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಬೃಹತ್ ಮೊತ್ತದ ಹಣ ಮತ್ತು ಅದನ್ನು ಷೇರು ಮಾರುಕಟ್ಟೆಯಿಂದ ಸಂಗ್ರಹಿಸಬಹುದಾದ ಸಾಧ್ಯತೆಗಳೂ ಕಡಿಮೆ ಇದ್ದವು. watches-hmtಆದರೆ ದೇಶ ಕಟ್ಟುವುದಕ್ಕೆ ಈ ಬೃಹತ್ ಕಾರ್ಖಾನೆಗಳು ಬೇಕು ಎಂದಾದಾಗ ಸ್ವತಃ ಸರ್ಕಾರ ಇವುಗಳನ್ನು ಸ್ಥಾಪಿಸಲು ಮುಂದಾಯಿತು.

ಸರ್ಕಾರದ ನೇರ ಉಸ್ತುವಾರಿಯಲ್ಲಿ ಸ್ಥಾಪನೆಗೊಂಡ ಹಲವಾರು ಕಾರ್ಖಾನೆಗಳು ಆರಂಭದಲ್ಲಿ ಲಾಭವನ್ನೇ ಮಾಡಿದವು. ಹೂಡಿದ ಬಂಡವಾಳವನ್ನು ವಾಪಸು ಗಳಿಸಬೇಕೆಂಬ ಉಮೇದಿರಲಿಲ್ಲ. ಆಪರೇಷನಲ್ ಖರ್ಚುವೆಚ್ಚಗಳು ತೂಗಿ ಒಂದಿಷ್ಟು ಲಾಭ ಬಂದರೆ ಸಾಕಾಗಿತ್ತು. ಅದಕ್ಕೆ ಪೂರಕವಾದ ವಾತಾವರಣವೂ ಇತ್ತು. ಈ ಉದ್ದಿಮೆಗಳಿಗೆ ಸ್ಪರ್ಧಿಗಳೇ ಇರಲಿಲ್ಲ. ಇವರು ಎಂತಹ ಕಳಪೆ ಸಾಮಾನು ತಯಾರಿಸಿದರೂ ಅದಕ್ಕೆ ಮಾರುಕಟ್ಟೆ ಇತ್ತು. ಸಾಮಾನು ಕೊಂಡುಕೊಂಡ ನಂತರ ಎಂತಹ ಕಳಪೆ ಗ್ರಾಹಕ ಸೇವೆ ಕೊಟ್ಟರೂ ನಡೆಯುತ್ತಿತ್ತು. ಒಟ್ಟಿನಲ್ಲಿ ಮೊನಾಪಲಿ ಇತ್ತು. ಇದೇ ಕಾರಣಕ್ಕಾಗಿ ತಾವು ಏನು ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವನೆ ಬೆಳೆಯಿತು. ಹೊಸ ಉತ್ಪನ್ನಗಳ ಅನ್ವೇಷಣೆ ತೃಪ್ತಿಕರವಾಗಿರಲಿಲ್ಲ. ದಕ್ಷತೆ ಕಮ್ಮಿಯಾಯಿತು. ಆಧುನಿಕರಣಗೊಳ್ಳಲಿಲ್ಲ. ಖರ್ಚುಗಳು ಹೆಚ್ಚಾದವು. ಭ್ರಷ್ಟಾಚಾರವೂ ಬೆಳೆಯಿತು. ಯಾರೂ ಯಾವುದೇ ಭ್ರಷ್ಟಾಚಾರ, ನಿರ್ಲಕ್ಷ್ಯ, ಮತ್ತು ಅದಕ್ಷತೆಯ ಕಾರಣಕ್ಕಾಗಿ ಶಿಕ್ಷೆಗೊಳಗಾಗ ಅನಾರೋಗ್ಯಕರ ರಕ್ಷಣಾ ನೀತಿಗಳೂ ರೂಪುಗೊಂಡವು.

ಆದರೆ, ಇದೇ ಸಮಯದಲ್ಲಿ ದೇಶದ ಆರ್ಥಿಕತೆ ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿತ್ತು. ಉದಾರಿಕರಣ ಮತ್ತು ಖಾಸಗೀಕರಣದ ಕಾರಣದಿಂದಾಗಿ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಿಗೆ ಮೊದಲ ಬಾರಿಗೆ ಪೈಪೋಟಿ ಎದುರಾಯಿತು. ಖಾಸಗಿಯವರು ಎಚ್‍ಎಂಟಿ, ಬೆಮೆಲ್, ಬಿಎಚ್‍ಇಲ್, ಎನ್‌ಜಿಇಎಫ್‌ಗಳಿಗಿಂತ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಅವರಿಗಿಂತ ಕಡಿಮೆ ದರಕ್ಕೆ ಮಾರಲು ಆರಂಭಿಸಿದವು. ಮಾರುಕಟ್ಟೆಯಲ್ಲಿ ಉಳಿಯಬೇಕು bhel-meterಎನ್ನುವ ಉಮೇದಿನಲ್ಲಿ ಅವರ ಗ್ರಾಹಕ ಸೇವೆಯೂ ಚೆನ್ನಾಗಿತ್ತು. ಮೊನಾಪಲಿ ಕಳೆದುಕೊಂಡ ಸಾರ್ವಜನಿಕ ಉದ್ದಿಮೆಗಳು ಮೊದಲ ಬಾರಿಗೆ ನಷ್ಟ ಅನುಭವಿಸಲು ಆರಂಭಿಸಿದವು. ಅವುಗಳ ಭಾರದ ಮೇಲೆ ಅವೇ ಕುಸಿಯಲು ಆರಂಭಿಸಿದವು. ಹೆಚ್ಚು ಜನ ಕಮ್ಮಿ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದ ಕಾರಣಕ್ಕೆ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಗಳು ಘೋಷಣೆಯಾದವು. ಆದರೂ ಕೆಲವು ಬಿಳಿಯಾನೆಗಳನ್ನು ಸಂಪೂರ್ಣವಾಗಿ ಮುಚ್ಚದೆ ಸರ್ಕಾರಕ್ಕೆ ವಿಧಿಯಿರಲಿಲ್ಲ. ಅನಗತ್ಯವಾಗಿ ಪೋಲಾಗುತ್ತಿದ್ದ ದೇಶವಾಸಿಗಳ ಸಂಪತ್ತನ್ನು ಸರ್ಕಾರ ಅಷ್ಟು ಮಾತ್ರಕ್ಕೆ ತಡೆಹಿಡಿಯಿತು. (ಆದರೆ ಇದೇ ಸಮಯದಲ್ಲಿ ಕೆಲವು ಕಾರ್ಖಾನೆಗಳನ್ನು ಮುಚ್ಚಲು ಕೆಲವು ಖಾಸಗಿ ಕಂಪನಿಗಳು ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ದುರ್ಬಳಕೆ ಮಾಡಿಕೊಂಡಿರಬಹುದಾದ, ಆ ಪ್ರಕ್ರಿಯೆಯನ್ನು ವೇಗವಾಗಿಸಿರಬಹುದಾದ ಸಾಧ್ಯತೆಗಳಿರಬಹುದು. ಆದರೆ ಅದು ಬಹುಪಾಲು ನಷ್ಟ ಅನುಭವಿಸುತ್ತಿದ್ದ ಕಂಪನಿಗಳಿಗೇ ಅನ್ವಯಿಸುತ್ತದೆ. ಲಾಭದಲ್ಲಿದ್ದ ಕಂಪನಿಗಳು-ಅವುಗಳಲ್ಲಿ ಸರ್ಕಾರದ ಪಾಲು ಕಮ್ಮಿ ಆಗಿದ್ದರೂ-ಈಗಲೂ ನಡೆಯುತ್ತಿವೆ.)

ಈಗ ಒಂದೆರಡು ಖಾಸಗಿ ಕಂಪನಿಗಳ ವಿಚಾರಕ್ಕೆ ಬರೋಣ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ದೇಶದ ಜನರ ಕೈಯ್ಯಲ್ಲಿ ಓಡಾಡುತ್ತಿದ್ದ ಹೈಟೆಕ್ ಸಾಧನ ಎಂದರೆ motorola-pagerಅದು ಪೇಜರ್. ಅದನ್ನು ತಯಾರಿಸುತ್ತಿದ್ದ ಒಂದೇ ಕಂಪನಿ ಮೊಟೊರೊಲ, ಅಮೇರಿಕದ್ದು. ಅದಾದ ನಂತರ ನಿಧಾನಕ್ಕೆ ಸೆಲ್‌ಪೋನ್‌ಗಳು ಬಂದವು. ಆವಾಗಲೂ ಮುಂಚೂಣಿಯಲ್ಲಿದ್ದದ್ದು ಮೊಟೊರೊಲವೆ. ಇಡೀ ವಿಶ್ವದಲ್ಲಿ ಎಲ್ಲಿಂದ ಬೇಕಾದರೂ ಸೆಟಲೈಟ್ ಫೋನಿನಲ್ಲಿ ಮಾತನಾಡಬಹುದಾದಂತಹ ಒಂದು ಸಂಪರ್ಕ ವ್ಯವಸ್ಥೆಯನ್ನು (ಸುಮಾರು ಆರು ಬಿಲಿಯನ್ ಡಾಲರ್ ವೆಚ್ಚದಲ್ಲಿ) ಅದು ಅನುಷ್ಟಾನಗೊಳಿಸುತ್ತಿತ್ತು. ಆ ಸಂದರ್ಭದಲ್ಲಿ ಮೊಟೊರೊಲಕ್ಕಿಂತ ಚೆನ್ನಾಗಿ ಮೊಬೈಲ್ ಫೋನ್‌ ವ್ಯವಸ್ಥೆಯನ್ನು ಮತ್ತು ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡ ಯೂರೋಪಿನ ನೋಕಿಯಾ ಕಂಪನಿ ಮೊಟೊರೋಲಕ್ಕಿಂತ ಉತ್ತಮ ಮತ್ತು ಅಗ್ಗದ ಮೊಬೈಲ್‌ಗಳನ್ನು ತಯಾರಿಸಲು ಆರಂಭಿಸಿತು. ಮೊಟೊರೊಲ ಎರಡನೇ ಸ್ಥಾನಕ್ಕೆ ಹೋಯಿತು. ಕಾಲಕ್ರಮೇಣ ಮೂರಕ್ಕೆ, ನಾಲಕ್ಕೆ ಇಳಿಯುತ್ತಾ, ತೀವ್ರ ನಷ್ಟಕ್ಕೆ ಈಡಾಗುತ್ತ ಹೋಯಿತು. ಆ ಕಂಪನಿಗಳ ಹಲವು ವಿಭಾಗಗಳನ್ನು ಒಡೆದು ಪ್ರತ್ಯೇಕ ಕಂಪನಿಗಳನ್ನಾಗಿ ಮಾಡಿ ಹೂಡಿಕೆದಾರರ ಹಿತರಕ್ಷಣೆ ಮಾಡಿದರು, ಒಂದೆರಡು ವರ್ಷದ ಹಿಂದೆ ಮೊಟೊರೊಲದ ಮೊಬೈಲ್ ಘಟಕವನ್ನು ಸಾಫ್ಟ್‌ವೇರ ಕಂಪನಿಯಾದ ಗೂಗಲ್ ಕೊಂಡುಕೊಂಡಿತು. ಮೊಬೈಲ್ ಫೋನ್ ಉದ್ದಿಮೆಯಲ್ಲಿ ಇಲ್ಲದೇ ಇದ್ದ ಆಪಲ್ ಆ ರಂಗಕ್ಕೆ ಐಫೋನ್ ಎಂಬ ಸ್ಮಾರ್ಟ್‌ಫೋನ್ ಮೂಲಕ ಇಳಿದ ನಂತರ ಆ ವಲಯದಲ್ಲಿ ಕ್ರಾಂತಿಯಾಗಿ ಮೊದಲ ಸ್ಥಾನದಲ್ಲಿದ್ದ ನೋಕಿಯಾ ಅದಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸಲಾಗದ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ತೀವ್ರ ನಷ್ಟದಲ್ಲಿ ನಡೆಯುತ್ತಿದೆ. ಆ ಕಂಪನಿಯ ಭವಿಷ್ಯವೂ ಬಹಳ ದಿನ ಇದ್ದಂತಿಲ್ಲ. ಇಂದು ಕೇವಲ ದಿನವೊಂದಕ್ಕೆ ಹತ್ತು-ಹದಿನೈದು ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿದೆ ನೋಕಿಯಾ ಕಂಪನಿ. ಒಂದು ಕಾಲದಲ್ಲಿ ತಂತ್ರಜ್ಞಾನ ವಲಯದಲ್ಲಿ ದೈತ್ಯ ಕಂಪನಿಗಳಾಗಿದ್ದ ಐಬಿಎಮ್, ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳ ಲಾಭಾಂಶ ಇಂದು ಕಡಿಮೆಯಾಗಿ ಷೇರು ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಕಳೆದ ದಶಕದಿಂದೀಚೆಗೆ ಯಾವುದೇ ರೀತಿಯಲ್ಲಿ ಉತ್ತಮಗೊಂಡಿಲ್ಲ. ಪರ್ಸನಲ್ ಕಂಪ್ಯೂಟರ್‌ಗಳನ್ನು ಉತ್ಪಾದಿಸುತ್ತಿದ್ದ ಡೆಲ್, ಎಚ್‌ಪಿ, ಲೆನೊವೊ ಅಂತವುಗಳೆಲ್ಲ ಇಂದು iPhone_5_Samsung_Galaxy_S3ಸ್ಮಾರ್ಟ್‌ಪೋನ್ ಮತ್ತು ಟ್ಯಾಬ್ಲೆಟ್ ಉತ್ಪಾದನೆಯಿಂದೇನಾದರೂ ತಾವು ಬದುಕಿಕೊಳ್ಳುತ್ತೇವೆಯೇ ಎನ್ನುವ ಹಂತಕ್ಕೆ ಬಂದು ತಲುಪಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದವರು ಹಿಂದಕ್ಕೆ ಸರಿದೇ ಸರಿಯುತ್ತಾರೆ; ಎಲ್ಲಾ ವಲಯಗಳಲ್ಲೂ.

ನಮ್ಮ ಸಾರ್ವಜನಿಕ ಉದ್ದಿಮೆಗಳ ರೀತಿಯಲ್ಲಿಯೇ ಸ್ಪರ್ಧೆ ಮತ್ತು ಅನ್ವೇಷಣೆ ವಿಚಾರದಲ್ಲಿ ಮೈಮರೆತ ಅಮೆರಿಕದ ಮೂರು ಆಟೊಮೊಬೈಲ್ ದೈತ್ಯ ಕಂಪನಿಗಳು ನಾಲ್ಕು ವರ್ಷದ ಹಿಂದೆ ಇನ್ನೇನು ಬಾಗಿಲು ಮುಚ್ಚುವ ದಿವಾಳಿ ಹಂತ ತಲುಪಿದ್ದವು. ಜಪಾನಿನ ಟೊಯೊಟ ಮತ್ತು ಹೊಂಡ ಕಂಪನಿಗಳ ಉತ್ತಮ ಮತ್ತು ಕಡಿಮೆ ದರದ ಕಾರುಗಳಿಂದಾಗಿ ಜಿಎಮ್, ಫೋರ್ಡ್, ಮತ್ತು ಡೈಮ್ಲರ್-ಕ್ರೈಸ್ಲರ್ ಕಂಪನಿಗಳು ಅಮೆರಿಕ ಸರ್ಕಾರದ ಬೇಲ್‌ಔಟ್ ಮತ್ತು ಇತರೆ ಕೆಲವು ಸಂರಕ್ಷಣೆಯ ಪಾಲಿಸಿಗಳಿಲ್ಲದಿದ್ದಿದ್ದರೆ ಇಷ್ಟೊತ್ತಿಗೆ ಅವುಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡು, ಅದರ ಪರಿಣಾಮಗಳು ಆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲಾಗುತ್ತಿತ್ತು. ಆದರೆ, ಕೇವಲ ಅಮೆರಿಕ ಸರ್ಕಾರ ಆ ಕಂಪನಿಗಳಿಗೆ ಬೇಲ್‌ಔಟ್ ರೂಪದಲ್ಲಿ ಸಾಲ ಕೊಟ್ಟಿದ್ದರಿಂದೇನೂ ಆ ಕಂಪನಿಗಳು ಮತ್ತೆ ಸರಿ ದಾರಿಗೆ ಬರಲಿಲ್ಲ. ಆ ಕಂಪನಿಗಳ ಬದಲಾದ ಮ್ಯಾನೇಜ್‌ಮೆಂಟ್‌ನಿಂದಾಗಿ ಮತ್ತು ಅವರು ತೆಗೆದುಕೊಂಡ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ಇಂದು ಅವೂ ಬದುಕಿದವು, ಲಕ್ಷಾಂತರ ಜನ ನೌಕರಿ ಉಖಿಸಿಕೊಂಡರು, ಮತ್ತು ಅವುಗಳಲ್ಲಿ ಹಣ ಹೂಡಿದ್ದ ಲಕ್ಷಾಂತರ ಜನರ ಹಿತವೂ ರಕ್ಷಣೆಯಾಯಿತು. ಭಾರತದ ಅನೇಕ ಸಾರ್ವಜನಿಕ ಉದ್ದಿಮೆಗಳಿಗೆ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ಶಿಕ್ಷಣದ ಅನುಭವ ಇಲ್ಲದ ಅನೇಕರನ್ನು, ಆ ಹುದ್ದೆಗಳಿಗೆ ಅರ್ಹವಲ್ಲದ, ಉದ್ಯಮ-ಸ್ಪರ್ಧಾತ್ಮಕತೆಯ ಪರಿಚಯ ಇಲ್ಲದ ಐಎಎಸ್ ಅಧಿಕಾರಿ ವರ್ಗದವರನ್ನೇ ಹೆಚ್ಚಿಗೆ ನೇಮಿಸಿ ನಮ್ಮ ಸರ್ಕಾರವೇ ಅವುಗಳ ಅವನತಿಗೆ ಮೂಲ ಕಾರಣವಾಯಿತು.

ಇನ್ಫೋಸಿಸ್ ಅನೇಕ ಕಾರಣಗಳಿಗೆ ದೇಶದಲ್ಲಿ ಹೊಸ ಶಕೆ ಆರಂಭಿಸಿದ ಸಂಸ್ಥೆ. ಇಲ್ಲಿಯವರೆಗಿನ ಅದರ ಯಾವೊಬ್ಬ ಸಿಇಓನೂ ಹೊರಗಿನಿಂದ ಬಂದವರಲ್ಲ. ಆ ಸಂಸ್ಥೆಯ ಟಾಪ್ ಮ್ಯಾನೇಜ್‌ಮೆಂಟ್‌ನಲ್ಲಿ ಮೇಲ್ಮುಖ ಚಲನೆ ಇತ್ತು. ತಮಗಿನ್ನೂ ವಯಸ್ಸು ಮತ್ತು ಸಾಮರ್ಥ್ಯ ಇದ್ದರೂ, ಕಂಪನಿ ಊಹೆಗೂ ನಿಲುಕದಷ್ಟು ಲಾಭ ಮತ್ತು ಸಾಮರ್ಥ್ಯ ತೊರಿಸುತ್ತಿದ್ದರೂ ನಾರಾಯಣಮೂರ್ತಿಯವರು ನಂದನ್ ನಿಲೇಕಣಿಯವರನ್ನು ಸಿಇಓ ಮಾಡಿ ತಾವು ಚೇರ್ಮನ್ ಆದರು. ಆ ಕಂಪನಿಯಲ್ಲಿ ಖಾಸಗಿ ಕಂಪನಿಗಳಲ್ಲಿ ಕಾಣದಂತಹ ನಿವೃತ್ತಿ ವಯಸ್ಸಿನ ಮಿತಿ ಇತ್ತು. ಆ ಕಂಪನಿಯ ಕಾರ್ಯನಿರ್ವಹಣಾಧಿಕಾರಿಗಳಾದವರೆಲ್ಲರೂ ಸಾಮಾನ್ಯ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವರು. infosys-murthyಶ್ರೀಮಂತಿಕೆ ಮತ್ತು ಕೌಟುಂಬಿಕ ಹಿನ್ನೆಲೆ ಇರುವವರು ಮಾತ್ರ ಈ ದೇಶದಲ್ಲಿ ಬೃಹತ್ ಉದ್ಯಮವನ್ನು ಸ್ಥಾಪಿಸಬಲ್ಲರು ಮತ್ತು ನಡೆಸಬಲ್ಲರು ಎನ್ನುವ ನಂಬಿಕೆಯನ್ನು ತೊಡೆದ ಸಂಸ್ಥೆ ಅದು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಅದಕ್ಕೆ ಹಿನ್ನಡೆ ಆಗುತ್ತಿದೆ. ವಹಿವಾಟಿನ ವಿಚಾರದಲ್ಲಿ ಅದೀಗ ದೇಶದ ಐಟಿ ವಲಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ಫೋಸಿಸ್ ಹುಟ್ಟಿದ ಹಲವಾರು ವರ್ಷಗಳ ನಂತರ ಬಂದ ಕಾಗ್ನಿಜಂಟ್ ಇಂದು ಎರಡನೇ ಸ್ಥಾನದಲ್ಲಿದೆ. ತಾವೇ ಹಾಕಿಕೊಂಡಿದ್ದ ಆದರ್ಶ ಮತ್ತು ನಿಯಮಗಳನ್ನು ಮುರಿದು ಇನ್ಫೋಸಿಸ್ ಅನ್ನು ಉಳಿಸಿ-ಬೆಳೆಸುವ ಕೆಲಸಕ್ಕಾಗಿ ನಾರಾಯಣಮೂರ್ತಿಯವರು ಇನ್ಫೊಸಿಸ್‌ನ ದೈನಂದಿನ ಉಸ್ತುವಾರಿ ಹೊತ್ತುಕೊಂಡು ವಾಪಸಾಗಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇನ್ಫೋಸಿಸ್ ಮತ್ತೆ ತನ್ನ ಹಳೆಯ ಸ್ಥಾನವನ್ನು ಪಡೆದುಕೊಳ್ಳುವುದು ಕಷ್ಟವಿದೆ. ಬದಲಾದ ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ತ ಸಮಯದಲ್ಲಿ ಸರಿಯಾಗಿ ಗ್ರಹಿಸಿ ಆಂತರಿಕ ಬದಲಾವಣೆಯನ್ನು ಮಾಡಿಕೊಳ್ಳದೇ ಹೋದ ಕಾರಣಕ್ಕಾಗಿ ಇನ್ಫೋಸಿಸ್ ಹಿನ್ನಡೆ ಅನುಭವಿಸುತ್ತಿದೆ.

ಮತ್ತು, ಇದೇ ಸಮಯದಲ್ಲಿ ನಾಲ್ಕೈದು ವರ್ಷಗಳ ಹಿಂದೆ ಭಾರತದಲ್ಲಿ ಹೆಸರೇ ಕೇಳಿರದಿದ್ದ ಮೈಕ್ರೋಮ್ಯಾಕ್ಸ್, ಕಾರ್ಬನ್, ಇತ್ಯಾದಿ ಭಾರತೀಯ ಮೊಬೈಲ್ ಕಂಪನಿಗಳು ಸ್ಯಾಮ್ಸಂಗ್, ನೋಕಿಯಾಗಳಿಗೆ ಪೈಪೋಟಿ ನೀಡಿ ಬೆಳೆಯುತ್ತಿವೆ.

ಹೀಗೆ ಒಂದು ಉದ್ದಿಮೆ ಏಳಲು ಮತ್ತು ಬೀಳಲು ಅನೇಕ ಕಾರಣಗಳಿರುತ್ತವೆ ಮತ್ತು ನಾವು ಅವುಗಳ ಬಗ್ಗೆ ಹೆಚ್ಚುಹೆಚ್ಚು ಭಾವತೀವ್ರತೆಯಿಂದ ಯೋಚಿಸಿದಷ್ಟೂ ವಸ್ತುನಿಷ್ಠತೆಯನ್ನು ಕಳೆದುಕೊಳ್ಳುತ್ತೇವೆ. ಅರೆನಿಜ ಮತ್ತು ಭಾವಾವೇಶದಿಂದ ಜನಾಭಿಪ್ರಾಯ ರೂಪಿಸುವುದು ಮತ್ತು ಸಮಾಜವನ್ನು ಕಟ್ಟಲು ಪ್ರಯತ್ನಿಸುವುದು ಒಳ್ಳೆಯ ಮಾದರಿಯಲ್ಲ.

ತಮ್ಮ ಜನಪರ ಕಾಳಜಿ ಮತ್ತು ಬದ್ಧತೆಯ ಕಾರಣಕ್ಕಾಗಿ ಡಾ. ವಸು ಮಳಲಿಯವರನ್ನು ಇಷ್ಟಪಡುವವರಲ್ಲಿ ನಾನೂ ಒಬ್ಬ. ಆದರೆ ಅವರು ತಮ್ಮ ಅಂಕಣ ಲೇಖನದಲ್ಲಿ ಎತ್ತಿರುವ ವಿಚಾರಗಳು ಮತ್ತು ಮಂಡಿಸಿರುವ ವಿಧಾನಕ್ಕೆ ನನ್ನ ತಕರಾರಿದೆ. ಮೌಲ್ಯ, ಆದರ್ಶ, ಪ್ರಾಮಾಣಿಕತೆ, ವೃತ್ತಿಪರತೆಯ ಕೊರತೆ ಇರುವ ಭಾರತದ ಇಂದಿನ ಸಾರ್ವಜನಿಕ ಜೀವನದಲ್ಲಿ, ಯಾವುದೇ ಕ್ಷೇತ್ರದಲ್ಲಾಗಲಿ ಹಸ್ತಕ್ಷೇಪ ಮಾಡಿ ಸ್ವಾರ್ಥಸಾಧನೆ ಮಾಡಿಕೊಳ್ಳುವ ಪ್ರಸಕ್ತ ರಾಜಕೀಯ ಸಂದರ್ಭದಲ್ಲಿ, ತನಗೆ ಇಂದಿನ ವರ್ತಮಾನದಲ್ಲಿ ಯೋಗ್ಯವಲ್ಲದ ಮತ್ತು ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಂತಹ ಉದ್ದಿಮೆಗಳಿಂದ ಹೊರನಡೆದು ಸರ್ಕಾರ ಸರಿಯಾದುದನ್ನೇ ಮಾಡಿದೆ. ಸಾರ್ವಜನಿಕ ಉದ್ದಿಮೆಗಳ ನಷ್ಟ ತುಂಬಲು ಭರಿಸುತ್ತಿದ್ದ ದುಡ್ದನ್ನು ಅದು ಇಂದು nregaನರೇಗ, ಆಹಾರ-ಭದ್ರತೆ, ಆರೋಗ್ಯ, ಶಿಕ್ಷಣ ಮುಂತಾದ ಜನಪರ ಯೋಜನೆಗಳತ್ತ ಹರಿಸುತ್ತಿದೆ.

ಮತ್ತು, ಖಾಸಗೀಕರಣದ ಮುಂಚೂಣಿಯಲ್ಲಿರುವವರು ಲಾಭದಾಸೆಯಿಂದ ಸಮಾಜದಲ್ಲಿ ಅಸಮಾನತೆಯಂತಹ ತೀವ್ರ ದುಷ್ಪರಿಣಾಮಗಳನ್ನು ಉಂಟು ಮಾಡುವ ಸಮಯದಲ್ಲಿ ಅಂತಹ ಸಂಸ್ಥೆಗಳನ್ನು ಕಟ್ಟಿಹಾಕುವ ಅಧಿಕಾರ ದೇಶದ ಪಾರ್ಲಿಮೆಂಟ್‌ಗೆ ಇದ್ದೇ ಇದೆ. ಅದಕ್ಕಾಗಿ ಯೋಗ್ಯರಾದವರು ನಮ್ಮ ಜನಪ್ರತಿನಿಧಿಗಳನ್ನಾಗಿ ಮಾಡಿಕೊಳ್ಳುವತ್ತ ನಮ್ಮ ಚಟುವಟಿಕೆಗಳು ಕೇಂದ್ರೀಕೃತವಾಗಬೇಕು. ಉತ್ತಮ ಮತ್ತು ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಮಾತ್ರ ಕೆಲವರ ಹಿತಕ್ಕಿಂತ ಬಹುಜನರ ಹಿತ ಕಾಪಾಡುವ ವಾತಾವರಣ ನಿರ್ಮಾಣವಾಗುತ್ತದೆ.

ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 : ಕತೆಗಳಿಗೆ ಆಹ್ವಾನ

ಸ್ನೇಹಿತರೇ,

ಕಳೆದ ವರ್ಷದಂತೆ ಈ ವರ್ಷವೂ “ಗಾಂಧಿ ಜಯಂತಿ ಕಥಾ ಸ್ಪರ್ಧೆ” ಆಯೋಜಿಸಲಾಗುತ್ತಿದೆ. katha sprade 2013ಈ ಕಥಾ ಸ್ಪರ್ಧೆಯ ಹಿನ್ನೆಲೆಯ ಬಗ್ಗೆ ಹೇಳುವುದಾದರೆ: 2008ರಲ್ಲಿ ಮೊದಲ ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ನಡೆಸಿದ್ದು. ಎರಡನೆಯದು 2009ರಲ್ಲಿ. ಎರಡೂ “ವಿಕ್ರಾಂತ ಕರ್ನಾಟಕ” ವಾರಪತ್ರಿಕೆ ನಡೆಸಿದ್ದು; ಪ್ರಾಯೋಜಿಸಿದ್ದು ನಾನು. ನಂತರ ವಿಕ್ರಾಂತ ಕರ್ನಾಟಕ ನಿಂತು ಹೋದ ಮೇಲೆ ಹಲವಾರು ಕಾರಣಗಳಿಂದಾಗಿ ನನಗೆ ಅದನ್ನು ಮುಂದುವರೆಸಲು ಆಗಿರಲಿಲ್ಲ. ಕಳೆದ ವರ್ಷ ವರ್ತಮಾನದ ಅಡಿಯಲ್ಲಿ ಅದನ್ನು ಮತ್ತೆ ಆರಂಭಿಸಲಾಯಿತು. (ಗಾಂಧಿ ಜಯಂತಿ ಕಥಾ ಸ್ಪರ್ಧೆ – 2012 ರ ಬಹುಮಾನಿತ ಕತೆಗಳ ವಿವರ ಇಲ್ಲಿದೆ.) ಈ ವರ್ಷದ ಕಥಾ ಸ್ಪರ್ಧೆಗೆ ಕತೆಗಳನ್ನು ಆಹ್ವಾನಿಸುವ ಸಮಯ ಇದು.

ಅಂದ ಹಾಗೆ ಈ ಸ್ಪರ್ಧೆಗೆ ಕಳೆದ ಬಾರಿ ಕೆಲವರು ಗಾಂಧಿಯ ಜೀವನಕ್ಕೆ ಸಂಬಂಧಿಸಿದ ಕತೆಗಳನ್ನು ಕಳುಹಿಸಿದ್ದರು. ಇದು ಗಾಂಧಿಯ ಕುರಿತಾದ ಕತೆಗಳ ಕಥಾ ಸ್ಪರ್ಧೆಯಲ್ಲ. ಕನ್ನಡದಲ್ಲಿಯ ಕಾಲ್ಪನಿಕ ಮತ್ತು ಸೃಜನಶೀಲ ಸಣ್ಣಕತೆಗಳಿಗೆಂದು ನಡೆಸುವ ಒಂದು ಕಥಾ ಸ್ಪರ್ಧೆ. ಮಹಾತ್ಮ ಗಾಂಧಿಗೆ ಗೌರವಪೂರ್ವಕವಾಗಿ ಮತ್ತು ಗಾಂಧಿ ಜಯಂತಿಯ ಸಂದರ್ಭದಲ್ಲಿ ನಡೆಸುವುದರಿಂದ ಅದಕ್ಕೆ ’ಗಾಂಧಿ ಜಯಂತಿ ಕಥಾ ಸ್ಪರ್ಧ” ಎಂದು ಹೆಸರಿಡಲಾಗಿದೆ.

ಕಥಾ ಸ್ಪರ್ಧೆಯ ನಿಯಮಗಳು ಮತ್ತಿತರ ವಿವರಗಳು ಇಂತಿವೆ:

– ಕತೆ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು); ಕನಿಷ್ಟ 1500 ಪದಗಳದ್ದಾಗಿರಬೇಕು.
– ಕತೆಯ ಸಾಫ್ಟ್ ಕಾಪಿಯನ್ನೇ ಕಳುಹಿಸಬೇಕು. ಬರಹ/ನುಡಿ/ಯೂನಿಕೋಡ್, ಹೀಗೆ ಯಾವುದೇ ತಂತ್ರಾಂಶದಲ್ಲಿದ್ದರೂ ಸರಿ. ಸ್ಕ್ಯಾನ್ ಮಾಡಿ ಕಳುಹಿಸುವ ಇಮೇಜ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಬಹುಮಾನಗಳ ವಿವರ:
– ಮೊದಲ ಬಹುಮಾನ: ರೂ. 6000
– ಎರಡನೆ ಬಹುಮಾನ: ರೂ. 4000
– ಮೂರನೆಯ ಬಹುಮಾನ: ರೂ. 3000
– ಎರಡು ಪ್ರೋತ್ಸಾಹಕ ಬಹುಮಾನಗಳು: ತಲಾ ರೂ. 1000

ನಿಮ್ಮ ಕತೆ ತಲುಪಲು ಕೊನೆಯ ದಿನಾಂಕ:
ಆಗಸ್ಟ್ 31, 2013

ಸೆಪ್ಟೆಂಬರ್ ತಿಂಗಳಿನಲ್ಲಿ ಕತೆಗಳ ಮೌಲ್ಯಮಾಪನ ಮಾಡಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಬಹುಮಾನ ನೀಡಲಾಗುತ್ತದೆ. ಬಹುಮಾನ ಪಡೆದ ಕತೆಗಳು ನಂತರ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾಗಲಿವೆ.

ಕತೆಗಳನ್ನು ಕಳುಹಿಸಬೇಕಾಗದ ಇಮೇಲ್ ವಿಳಾಸ:
editor@vartamaana.com

ಹಾಗೆಯೇ, ಈ ಪ್ರಕಟಣೆ ಗೊತ್ತಿಲ್ಲದೇ ಇರಬಹುದಾದ ತಮ್ಮ ಕತೆಗಾರ ಸ್ನೇಹಿತರಿಗೂ ದಯವಿಟ್ಟು ಇದನ್ನು ತಲುಪಿಸಿ ಮತ್ತು ತಿಳಿಸಿ ಎಂದು ವಿನಂತಿಸುತ್ತೇನೆ.

ಧನ್ಯವಾದಗಳು,
ರವಿ ಕೃಷ್ಣಾರೆಡ್ಡಿ

 

ಆತಂಕದಲ್ಲಿ ತಲ್ಲಣಿಸುತ್ತಿದೆ ಹೆಣ್ಣುಜೀವ

– ರೂಪ ಹಾಸನ

ಹಳ್ಳಿಯ ಬಡಕುಟುಂಬವೊಂದರ 11 ವರ್ಷಗಳ ಎಳೆಬಾಲೆ ಅವಳು. ಋತುಮತಿಯಾಗಿ ಆರು ತಿಂಗಳೂ ಕಳೆದಿಲ್ಲ. ಲೈಂಗಿಕತೆ ಎಂದರೇನೆಂದು ಇರಲಿ, ಪ್ರೀತಿ-ಪ್ರೇಮವೆಂದರೆ ಏನೆಂದೂ ಅರಿಯದ ಮುಗ್ಧಳು. ಶಾಲೆಗೆ ಬಿಡಲು ಕರೆದುಕೊಂಡು ಹೋದ ಸಂಬಂಧಿಯಿಂದಲೇ ಕಳೆದ ವಾರವಷ್ಟೇ ಅವಳ ಅತ್ಯಾಚಾರವಾಗಿದೆ. ಮೈಮನಸುಗಳೆರಡೂ ಜರ್ಜರಿತವಾಗಿ ನಡುಗುತ್ತಿರುವ ಆ ಕಂದಮ್ಮ ಇದನ್ನು, ಅವನು ಕೊಟ್ಟ ಶಿಕ್ಷೆ ಎಂದೇ ಭಾವಿಸಿದ್ದಾಳೆ. rape-illustration‘ನಾನೇನೂ ತಪ್ಪು ಮಾಡಿಲ್ಲದಿದ್ದರೂ, ಮಾಮ ನನಗೆ ಈ ಶಿಕ್ಷೆ ಯಾಕೆ ಕೊಟ್ಟರು?’ ಎಂಬ ಪ್ರಶ್ನೆಗೆ ಏನು ಉತ್ತರಿಸುವುದೆಂಬ ಅರಿವಿಲ್ಲದೇ ಕಂಗಳು ತುಂಬುತ್ತವೆ. ಆ ವ್ಯಕ್ತಿಗೆ ರಾಜಕೀಯ ಪ್ರಮುಖರ ನಿಕಟ ಸಂಪರ್ಕವಿರುವುದರಿಂದ ಕೇಸು ದಾಖಲು ಮಾಡಿಕೊಳ್ಳಲೇ ಪೊಲೀಸರು ಹಿಂದೆಗೆದಿರುವುದರಿಂದ ಮಗುವನ್ನು ಒಳಗೊಂಡು ಕುಟುಂಬದವರು ಇನ್ನೂ ಆತಂಕದಿಂದ ತಲ್ಲಣಿಸುತ್ತಿದ್ದಾರೆ. ಈಗ ಆ ಮಗು ಅನುಭವಿಸಿದ ವಿನಾ ಕಾರಣದ ಮಾನಭಂಗದ ಶಿಕ್ಷೆಗೆ ನ್ಯಾಯ ಯಾರು ಕೊಡುತ್ತಾರೆ?

ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ವೈದ್ಯರೊಬ್ಬರು ಬರೆದುಕೊಂಡ ಸ್ವಾನುಭವದಂತೆ, 12 ವರ್ಷದ ಹೆಣ್ಣು ಮಗುವೊಂದು ಆಕಸ್ಮಿಕವಾಗಿ, ಅಕ್ರಮ ಮಾರಾಟದ ದಂಧೆಗೆ ಸಿಕ್ಕು ನಾಲ್ಕು ವರ್ಷ ಕಳೆಯುವುದರೊಳಗೆ ಅನೇಕ ಮಾರಕ ಲೈಂಗಿಕ ರೋಗಗಳಿಗೆ ತುತ್ತಾಗಿ ನಿತ್ರಾಣಳಾಗಿ, ವೈದ್ಯರೊಂದಿಗೆ, ಆ ‘ಭಾಗವನ್ನೇ’ ದೇಹದಿಂದ ತೆಗೆದು ಹಾಕಿ ಬಿಡಿ ಡಾಕ್ಟರ್, ಅದಿದ್ದರೆ ತಾನೇ ಏನೆಲ್ಲ ಹಿಂಸೆ ಅನುಭವಿಸಬೇಕು ಎಂದುದನ್ನು ಕೇಳಿದ ನಂತರವೂ, ಹೆಣ್ಣು ತನ್ನದೇ ದೇಹದ ಬಗೆಗೆ ಹೇಸುವಂತೆ ಮಾಡಿರುವ ಈ ವ್ಯವಸ್ಥೆಯನ್ನು ಹೇಗೆ ಕ್ಷಮಿಸುವುದು?

ಅವಳು 14 ವರ್ಷದ ಬಡ ಅಂಧ ಬಾಲೆ. ವಸತಿಯುತ ಶಾಲೆಯಲ್ಲಿ ಓದುತ್ತಿರುವ ಆ ಮಗುವಿನ ಮೇಲೆ ಮತ್ತೆ ಮತ್ತೆ ನಡೆದ ಬಲಾತ್ಕಾರದಿಂದಾಗಿ, ಎರಡು ಬಾರಿ ಗರ್ಭಪಾತಮಾಡಿಸಿದಾಗ, ವೈದ್ಯ ಮಹಾಶಯ ‘ಗರ್ಭಕೋಶವನ್ನೇ ತೆಗೆಸಿಬಿಡಿ, ಹೇಗೋ ಉಪಯೋಗ ಆಗ್ತಾಳೆ. ಇವೆಲ್ಲ ಮಾಮೂಲು. ಸುಮ್ಮನೆ ಪದೇ ಪದೇ ರಗಳೆ ಯಾಕೆ ಅನುಭವಿಸ್ತೀರಾ?’ ಎಂದರೆ, ರೋಗಿಯನ್ನು ರಕ್ಷಿಸುವ ದಯಾಳುವಾಗಿರಬೇಕೆಂದು ನಾವು ಭಾವಿಸುವ ವೈದ್ಯನೂ, ಅಸಹಾಯಕ ಹೆಣ್ಣುಮಕ್ಕಳ ಅತ್ಯಾಚಾರವನ್ನು ಜನಸಾಮಾನ್ಯರು ಇಂದು ‘ಮಾಮೂಲು’ ಎಂದು ತಿಳಿದುಬಿಟ್ಟಿರುವಂತೆ ಇವರೂ ಭಾವಿಸುವುದಾದರೆ, ನಂಬಿಕೆ ಎಂಬ ಪದಕ್ಕೆ ಅರ್ಥವುಳಿದೀತೆ?

ಜಾಗತೀಕರಣದೊಂದಿಗೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಮಾರುಕಟ್ಟೆಯು, ಹೆಣ್ಣಿನ ದೇಹವನ್ನೇ ‘ಸರಕ’ನ್ನಾಗಿ ವಿಜೃಂಭಿಸಲು ನಮ್ಮ ಮಾಧ್ಯಮಗಳನ್ನು ಯಶಸ್ವಿಯಾಗಿ ಅನುವು ಗೊಳಿಸಿದೆ. ಅದರ ಪ್ರಭಾವದಿಂದಾಗಿ, ಹೆಣ್ಣಿನ ದೇಹದ ಮೇಲೆ ‘ಪ್ರಭುತ್ವ’ ಸ್ಥಾಪಿಸಲು, ಅದನ್ನು ‘ಉಪಯೋಗಿಸಿಕೊಳ್ಳಲು’ ಅನೇಕ ಅನೈತಿಕ ಮಾರ್ಗಗಳನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ, ತನ್ನ ಮೂಗಿನ ನೇರಕ್ಕೆ ರೂಪಿಸಿಕೊಳ್ಳುತ್ತಿದೆ. sowjanya-rape-murderಹೆಣ್ಣಿನ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಬಲಾತ್ಕಾರದ ಜೊತೆಗೆ ಕಣ್ಮರೆ, ಮಾರಾಟದ ಪ್ರಮಾಣದ ಸೂಚಿ ದಿನದಿಂದ ದಿನಕ್ಕೆ ಏರುತ್ತಿರುವುದೇ ಇದಕ್ಕೆ ಸಾಕ್ಷಿ. ‘ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ ಅಧ್ಯಯನ ವರದಿ ಸುಳ್ಳಾಗಲಿ’ ಎಂದು ನಾವೆಷ್ಟು ಬೇಡಿಕೊಂಡರೂ, ಇನ್ನೂ ದಾಖಲಾಗದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ. ಭಾರತ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೊನೆಯಿಂದ ಎರಡನೆಯ ಸ್ಥಾನವನ್ನು ಪಡೆದಿರುವ, ವಿಶ್ವ ಮಟ್ಟದಲ್ಲಿ 80 ದೇಶಗಳಲ್ಲಿ ನಡೆದ ಅಧ್ಯಯನ ವರದಿಯನ್ನಂತೂ ನಾವು ಸುಳ್ಳೆನ್ನುವುದು ಸಾಧ್ಯವಿಲ್ಲವಲ್ಲ!

ವಿಶ್ವವಿದ್ಯಾಲಯವೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ‘ಸಾರ್ವಜನಿಕ ಗಣ್ಯ’ರೋರ್ವರು, ‘ಪತ್ನಿಯಾದವಳು ಯಾವ ಸಮಾನತೆ, ಸ್ವಾತಂತ್ರ್ಯವನ್ನಾದರೂ ಪಡೆಯಲಿ ಆದರೆ ಗಂಡ ಬಯಸಿದಾಗ ಅವನ ಬಯಕೆ ಪೂರೈಸಬೇಕು’ ಎನ್ನುತ್ತಾರೆ! ಪತ್ನಿಗೆ ಇಷ್ಟವಿಲ್ಲದಿದ್ದಾಗ ಕಾಮ ತೃಪ್ತಿಗಾಗಿ ಪೀಡಿಸುವುದನ್ನೂ ಅತ್ಯಾಚಾರವೆನ್ನುತ್ತದೆ ನಮ್ಮ ಕಾನೂನು. ಹೆಣ್ಣಿಗೂ ಒಂದು ಮನಸ್ಸಿದೆ. ಅದಕ್ಕೂ ತನ್ನದೇ ಇಷ್ಟಾನಿಷ್ಟಗಳಿವೆ ಎಂದು ಗೌರವಿಸದ ಯಾವನೇ ಮಹಾನ್ ಪುರುಷನಾದರೂ ಅವನು ಹೆಣ್ಣಿನ ಕಣ್ಣಲ್ಲಿ ಅನಾಗರಿಕನೇ! ವಿವಾಹ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ಇಂಥಹ ಅಸಂಖ್ಯ ಅತ್ಯಾಚಾರಗಳನ್ನು ಇಂದಿಗೂ ಯಾವ ಹೆಣ್ಣುಮಗಳೂ ಕೇಸು ದಾಖಲಿಸಿ ಪ್ರಶ್ನಿಸಿಲ್ಲ. ಇದಕ್ಕೆ ವಿರುದ್ಧವಾಗಿ ಸರಸ್ವತಿಯಿಂದ ಸಮ್ಮಾನಿತರೆಂದು ಬಿರುದು ಪಡೆದ ನಮ್ಮ ಮಹಾನ್ ಸಾಹಿತಿಗಳೊಬ್ಬರು ಮಾತ್ರ, ಭಾರತದ ಯಾವ ಮೂಲೆಯಲ್ಲೂ ಇಂತಹ ದಾಖಲೀಕರಣ ನಡೆದಿರದಿದ್ದರೂ, ಅಸಲಿಗೆ ಇಂತಹದೊಂದು ಕಾನೂನಿದೆ ಎಂದೂ 99% ಹೆಣ್ಣುಮಕ್ಕಳಿಗೆ ತಿಳಿದಿಲ್ಲದಿರುವಾಗ, ತಮ್ಮ ಕಾದಂಬರಿಯಲ್ಲಿ ಹೆಂಡತಿಯು ಗಂಡ ತನ್ನ ಕಾಮತೃಷೆ ತೀರಿಸಲಿಲ್ಲವೆಂದು ಅವನ ವಿರುದ್ಧವಾಗಿ ನ್ಯಾಯಾಲಯದ ಮೊರೆ ಹೋದ ಘಟನೆಯನ್ನು ವಿಜೃಂಭಿಸಿ ಚಿತ್ರಿಸುವಂತಾ ವಿಕೃತಿಯನ್ನು ಹೊಂದಿದ್ದಾರೆಂದರೆ ಅವರಿಗೆ ಯಾವ ಸನ್ಮಾನ ಮಾಡಿ ಗೌರವಿಸಬೇಕೋ ಅರ್ಥವಾಗುತ್ತಿಲ್ಲ!

ಯೂನಿಸೆಫ್‌ನ ಸ್ಟೇಟ್ ಆಫ್ ದಿ ವರ್ಲ್ಡ್ ಚಿರ್ಲ್ಡನ್-2009 ರ ವರದಿ, ‘47% ಭಾರತೀಯ ಹೆಣ್ಣುಮಕ್ಕಳ ವಿವಾಹ, ಕಾನೂನಿಗೆ ವಿರುದ್ಧವಾಗಿ 18 ವರ್ಷದೊಳಗೇ ನಡೆಯುತ್ತಿದೆ. ಇದರಲ್ಲಿ 56% ರಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ’ ಎಂದು ಹೇಳುತ್ತದೆ. ಬಾಲ್ಯ ವಿವಾಹ ಕಾನೂನಿನ ಕಣ್ಣಿನಲ್ಲಿ ಅಪರಾಧ. IndiaRapeಏಕೆಂದರೆ ಹೆಣ್ಣಿನ ದೇಹ ಆ ವಯಸ್ಸಿಗೆ ಲೈಂಗಿಕ ಕ್ರಿಯೆಗಾಗಲಿ, ಬಸಿರು, ತಾಯ್ತನದ ಬಲವಂತದ ಹೊರೆಗಳನ್ನು ಹೊರಲು ಸಮರ್ಥವಾಗಿರುವುದಿಲ್ಲ. ಹೀಗಿದ್ದೂ ನಮ್ಮ ದೇಶದಲ್ಲಿ ಈ ಪ್ರಮಾಣದಲ್ಲಿ ಬಾಲ್ಯವಿವಾಹಗಳು ನಡೆಯುತ್ತಿವೆ ಎಂದರೆ ಈ ಪ್ರಮಾಣದ ‘ಸಾಮಾಜಿಕ ಅತ್ಯಾಚಾರ’ಗಳು ನಮ್ಮ ದೇಶದಲ್ಲಿ ಅತ್ಯಂತ ಸಹಜವಾಗಿ ನಡೆಯುತ್ತಿವೆ! ಈ ಅಪರಾಧ ಕಾನೂನಿನಡಿ ದಾಖಲಾಗಿರುವುದೇ ವಿರಳಾತಿ ವಿರಳ! ಹಾಗಿದ್ದ ಮೇಲೆ ನಾವು ನಮ್ಮ ಹೆಣ್ಣುಮಗುವಿನ ದೇಹವನ್ನು ಏನೆಂದು ಭಾವಿಸಿದ್ದೇವೆ ಎಂದು ವಿವರಿಸುವ ಅಗತ್ಯವಿಲ್ಲ ಅಲ್ಲವೇ?

ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿದಂತೆ ಇದುವರೆಗೆ ಧಾರ್ಮಿಕ ಕಟ್ಟು ಪಾಡುಗಳ ಸಂಕೋಲೆಯೊಳಗೆ ನಿಕೃಷ್ಟವಾಗಿ ನರಳುತ್ತಿದ್ದ ಹೆಣ್ಣು ದೇಹ, ಇಂದು ಶೋಷಣೆಯ ಅನೇಕ ಹೊಸ ರೂಪಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಹೊರಟಿರುವುದಕ್ಕಿಂಥಾ ಘೋರ ದುರಂತ ಮತ್ತಿನ್ನೇನಿದೆ? ಇಂದು ದೇವದಾಸಿ ಪದ್ಧತಿ, ಬಸವಿ, ಬೆತ್ತಲೆ ಸೇವೆ, ಜೋಗತಿಯಂಥಾ ಅನಿಷ್ಟ ಪದ್ಧತಿಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ ಎನ್ನುತ್ತಿರುವಾಗಲೇ, ಅದರ ಅವಳಿ ರೂಪವಾಗಿ ವೇಶ್ಯಾವಾಟಿಕೆಯ ಜಾಲ ವಿಸ್ತೃತವಾಗಿ ನಗರ-ಪಟ್ಟಣವೆನ್ನದೇ ವ್ಯಾಪಕವಾಗಿ ಹಬ್ಬುತ್ತಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ವಿವರಣೆಯಂತೆ ಸಧ್ಯಕ್ಕೆ ದೇಶದಲ್ಲಿ 6.8 ಲಕ್ಷ ‘ದಾಖಲಾದ’ ಲೈಂಗಿಕ ಕಾರ್ಯಕರ್ತೆಯರಿದ್ದಾರೆಂದು ಭಾರತ ಸರ್ಕಾರ ವಿವರಣೆ ನೀಡಿದೆ. ಇದರಲ್ಲಿ ಶೇಕಡ 40 ರಷ್ಟು ಅಪ್ರಾಪ್ತ ಹೆಣ್ಣುಮಕ್ಕಳು! ‘ದಾಖಲಾಗದೇ’ ಹೊರಗುಳಿದವರ ಸಂಖ್ಯೆ ಇದರ ಮೂರರಷ್ಟಿದೆ ಎಂಬ ಅಂದಾಜಿದೆ. ಇದರಲ್ಲಿ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರಿಕರಣದ ಲೇಬಲ್ ಇಲ್ಲದ ‘ಸಭ್ಯ-ನಾಗರಿಕ’ ವ್ಯಭಿಚಾರವೂ ಸೇರುತ್ತದೆ.

ಎಳೆಯ ಬಾಲೆಯರನ್ನು, ಹದಿಹರೆಯದವರನ್ನು, ಮಹಿಳೆಯರನ್ನು ಅಪಹರಿಸಿ ಅವರನ್ನು ಅವರ ದೇಹ ಸಂಬಂಧಿ ವ್ಯಾಪಾರಗಳಲ್ಲಿ ತೊಡಗಿಸುವ ದಂಧೆ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಈ ದಂಧೆಗೆ ಇಂತಹುದೇ ಎಂದು ನಿರ್ದಿಷ್ಟ ಹೆಸರಿಲ್ಲ. ಇದಕ್ಕೆ ಸೇವೆ, ಮನೆಗೆಲಸ, ಪಬ್, ಬಾರ್, ಡಾನ್ಸ್‌ಬಾರ್, ಮಸಾಜ್‌ಪಾರ್ಲರ್, ಪ್ರವಾಸೋದ್ಯಮ ಇತ್ಯಾದಿಗಳ ಮುಖವಾಡವಿದ್ದರೂ ಕೊನೆಗಿದು ವೇಶ್ಯಾವಾಟಿಕೆಯ ದಂಧೆ! ಬೇರೆ ಬೇರೆ ಹೆಸರಿದ್ದರೂ ಸೇವೆಯ ಸ್ವರೂಪ ಮಾತ್ರ ಲೈಂಗಿಕ ಸೇವೆ! ಭಾರತದ ಆರು ಮಹಾನಗರಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಬಾಲೆಯರು ವೇಶ್ಯಾವಾಟಿಕೆಯಲ್ಲಿ ತೊಡಗಬೇಕಾಗಿ ಬಂದಿರುವುದು ನಮ್ಮ ಕಾನೂನು, ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ. ವಿಶ್ವದಲ್ಲಿ ಮೂರನೆ ಅತಿ ಹೆಚ್ಚು ವ್ಯಾಪಾರಿ ವಹಿವಾಟನ್ನು ಹೊಂದಿರುವ ದಂಧೆ ಎಂದರೆ ಸೆಕ್ಸ್ ದಂಧೆ! [ಮೊದಲನೆಯದು ಮಾರಕಾಸ್ತ್ರ, ಎರಡನೆಯದು ಮಾದಕದ್ರವ್ಯ.] ಈ ಆದ್ಯತೆಗಳೇ ಮನುಷ್ಯ ಸಂಕುಲ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿಯಾಗಿದೆ. ನಾವು ‘ಮಾನವ ಹಕ್ಕುಗಳ ರಕ್ಷಣೆ’ಯ ಬಗ್ಗೆ ಹೆಣ್ಣನ್ನು ಪಕ್ಕಕ್ಕಿಟ್ಟು, ಗಂಟಲು ಹರಿಯುವಂತೆ ಭಾಷಣ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳ ದೇಹ ಸದ್ದಿಲ್ಲದೇ ಬಿಕರಿಗೆ ಬಿದ್ದಿದೆ!

ಒಂದೆಡೆ ವೇಶ್ಯಾವಾಟಿಕೆ ಕಾನೂನುಬಾಹಿರವಾದರೂ ಪ್ರತಿ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೇ ನಡೆಯುತ್ತಿರುವ ಅಡ್ಡಾಗಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಮಿತಿಮೀರಿ ಏರುತ್ತಿದೆ. ವೃತ್ತಿನಿರತ ಲೈಂಗಿಕ ಕಾರ್ಯಕರ್ತೆಯರಿಗೆ ನಿಯಮಿತ ಆರೋಗ್ಯ ತಪಾಸಣೆ, ಕಾಂಡೊಂಗಳ ವಿತರಣೆ, ಹೆಚ್‌ಐವಿ, ಏಡ್ಸ್, ಇತರ ಲೈಂಗಿಕ ಗುಪ್ತ ರೋಗಗಳ ಕುರಿತು ತಿಳಿವಳಿಕೆ ನೀಡಿ ಸಮಾಜಕ್ಕೆ ಈ ಸೋಂಕು ಹರಡದಂತೆ ‘ಸುರಕ್ಷಿತ ಲೈಂಗಿಕತೆ’ಯ ಪಾಠ ಕಲಿಸಲು ಜಿಲ್ಲಾ ಆರೋಗ್ಯ ಇಲಾಖೆಯಡಿ ದಾಖಲಿಸಿಕೊಳ್ಳಲಾಗುತ್ತಿದೆ. ಸರ್ಕಾರದ ದಾಖಲಿಸುವ ಈ ಕ್ರಮವೇ ಪ್ರಶ್ನಾರ್ಹವಾದುದು! ಅಸಹಾಯಕತೆಗೆ, ಅನಿವಾರ್ಯತೆಗೆ, ಆಕಸ್ಮಿಕಕ್ಕೆ, ವಂಚನೆಯ ಜಾಲಕ್ಕೆ, ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಬಡ-ಗ್ರಾಮೀಣ ಪ್ರದೇಶದ ಮಹಿಳೆಯರು ಬೇರೆ ದಾರಿಯಿಲ್ಲದೇ ವೇಶ್ಯಾವಾಟಿಕೆಗೆ ಇಳಿಯಬೇಕಾಗಿ ಬಂದಿರುವುದು, ನಮ್ಮ ರೋಗಿಷ್ಟ ಸಮಾಜದ ದ್ಯೋತಕವಲ್ಲದೇ ಮತ್ತಿನ್ನೇನು? ಮೋಜಿಗಾಗಿ ಸ್ವಇಚ್ಛೆಯಿಂದ ಈ ದಂಧೆಗೆ ಇಳಿಯುತ್ತಿರುವವರದು ಬೇರೆಯದೇ ಕಥೆ.

ಲೈಂಗಿಕ ಕಾರ್ಯಕರ್ತೆಯರ ಹಿತಾಸಕ್ತಿಗಾಗಿ ದುಡಿಯುತ್ತಿರುವುದಾಗಿ ಹೇಳಿಕೊಳ್ಳುತ್ತಿರುವ ಕೆಲವು ಎನ್‌ಜಿಒಗಳು prostitution-indiaವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸುತ್ತಿವೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಕಲ್ಪನೆಯನ್ನು ಬಿತ್ತುತ್ತಿವೆ. ಈಗಾಗಲೇ ಹೆಣ್ಣುಮಕ್ಕಳ ಅಕ್ರಮ ಮಾರಾಟದ ದಂಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದನ್ನು, ವ್ಯಾಪಕವಾಗಿರುವ ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಎತ್ತಿ ತೋರುತ್ತಿವೆ. ಅದರಲ್ಲೂ ತನ್ನ ದೇಹವನ್ನು ಗೌರವಿಸಿಕೊಳ್ಳುವ ಯಾವ ಹೆಣ್ಣು, ಅದು ಮಾರಾಟದ ಸರಕಾಗಬೇಕು ಎಂದು ಬಯಸುತ್ತಾಳೆ? ಬಯಸುವುದೇ ಆದರೆ ಅದಕ್ಕೆ ಕಾರಣ ಅವಳನ್ನು ಹಾಗೆ ರೂಪಿಸಿದ ವ್ಯವಸ್ಥೆಯದೇ ಹೊರತು ಹೆಣ್ಣಿನದಲ್ಲ ಅಲ್ಲವೇ? ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಸಾಧ್ಯತೆಗಳ ಕುರಿತು ಉನ್ನತ ಆರೋಗ್ಯ ಅಧಿಕಾರಿಯೊಡನೆ ಚರ್ಚಿಸುತ್ತಿದ್ದಾಗ, ‘ಎಲ್ಲಿಯವರೆಗೆ ಡಿಮ್ಯಾಂಡ್ ಇರುತ್ತದೋ ಅಲ್ಲಿಯವರೆಗೆ ಸಪ್ಲೈ ಇರಲೇಬೇಕು’ ಎನ್ನುತ್ತಾ ಪುನರ್ವಸತಿ ಎಂಬ ಪರಿಕಲ್ಪನೆಯನ್ನೇ ಅಲ್ಲಗಳೆದುಬಿಟ್ಟರು! ಇದು ನಮ್ಮ ವ್ಯವಸ್ಥೆಯ ರಕ್ಷಣೆಯ ನೀತಿಗೊಂದು ಉದಾಹರಣೆ!

ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳನ್ನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೆಣ್ಣುಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ ಅವರನ್ನು ‘ಹದ್ದುಬಸ್ತಿನಲ್ಲಿಡುವುದು’ ಮಾತ್ರ ಅವರ ಮೇಲಿನ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಪರಿಹಾರ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟರು! ‘ಗಂಡ ಹೆಂಡತಿಗೆ ಎರಡೇಟು ಕೊಡುವುದು ವೈವಾಹಿಕ ಬದುಕಿನಲ್ಲಿ ಸಾಮಾನ್ಯ, ಅದು ದೌರ್ಜನ್ಯವಲ್ಲ’ ಎಂದು ನಮ್ಮ ಕಾರವಾರದ ತ್ವರಿತ ನ್ಯಾಯಾಲಯವೊಂದು ಮೊನ್ನೆಯಷ್ಟೇ ಆದೇಶದಲ್ಲಿ ಉಲ್ಲೇಖಿಸಿದೆ! ‘ಭೂಗತ ಜಗತ್ತಿನ ಮುಖಂಡರೂ ಮಹಿಳೆಯರನ್ನು ಗೌರವದಿಂದ ಕಾಣಲು ಬಯಸುತ್ತಾರೆ. ಗೌರವಯುತ ಮಹಿಳೆ ಮೇಲೆ ಅತ್ಯಾಚಾರ ನಡೆಯುವುದಿಲ್ಲ’ ಇದು ದೆಹಲಿ ಸಾಮೂಹಿಕ ಅತ್ಯಾಚಾರದ ಪಾತಕಿಗಳ ಪರ ವಕಾಲತ್ತು ವಹಿಸಿರುವ ನ್ಯಾಯವಾದಿ ಮನೋಹರಲಾಲ್ ಶರ್ಮಾ ಅವರ ಹೇಳಿಕೆ. ಇಂತಹ ಅಸೂಕ್ಷ್ಮ ಹೇಳಿಕೆಗಳು, ಯಾರ್‍ಯಾರಿಂದಲೋ! ಅದಿನ್ನೆಷ್ಟೋ! ಖಾಪ್ ಪಂಚಾಯಿತಿ, ಮತೀಯವಾದಿ ಸ್ವಯಂಘೋಷಿತ ಸಂಸ್ಕೃತಿಯ ರಕ್ಷಕರ ಹೇಳಿಕೆಗಳಿಗೂ, ಇವುಗಳಿಗೂ ಹೆಚ್ಚು ವ್ಯತ್ಯಾಸವೇನಾದರೂ ಇದೆಯೇ? ಅವರಂತೂ ನಮ್ಮ ಸಂವಿಧಾನದ ಆಶಯಗಳಿಗೆ ಬದ್ಧರಾಗಿಲ್ಲದವರು, ವಸ್ತುಸ್ಥಿತಿಯನ್ನು ವೈಚಾರಿಕವಾಗಿ ವಿವೇಚಿಸಲರಿಯದ ಮೂರ್ಖರು ಎಂದು ನಿರ್ಲಕ್ಷಿಸಿ ಪಕ್ಕಕ್ಕಿಟ್ಟುಬಿಡಬಹುದು. ಆದರೆ……..

ಇಂದು ಕಾನೂನು, ಪೊಲೀಸ್, ಆರೋಗ್ಯ……ಹೀಗೆ ರಕ್ಷಣೆ ನೀಡಬೇಕಾದ ಎಲ್ಲ ವ್ಯವಸ್ಥೆಗಳೂ ಯಥಾಸ್ಥಿತಿಯನ್ನು ನಾಜೂಕಾಗಿ ಕಾಯ್ದುಕೊಳ್ಳುತ್ತಾ, police-atrocity-womenಒಂದೆಡೆ ಹೆಣ್ಣನ್ನು ಸರಕೆಂಬಂತೆ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತಾ, ಇನ್ನೊಂದೆಡೆ ಅವಳಿಗೆ ನೈತಿಕತೆಯ ಬೋಧೆ ನೀಡುತ್ತಾ, ಮತ್ತೊಂದೆಡೆ ಅವಳನ್ನು ಉದ್ಧರಿಸುವ, ರಕ್ಷಿಸುವ ನಾಟಕವಾಡುತ್ತಿರುವಾಗ, ಈ ವ್ಯವಸ್ಥೆಯ ಕಣ್ಣು ತೆರೆಸುವುದು ಹೇಗೆ? ‘ಮಹಿಳಾ ಸ್ನೇಹಿ’ ಹಾಗೂ ‘ಲಿಂಗ ಸೂಕ್ಷ್ಮತೆ’ಯ ಎಚ್ಚರವನ್ನು ಸಮಾಜ ಕಲಿತುಕೊಳ್ಳುವ ಮೂಲಕ ಮಾತ್ರ ಮಹಿಳಾ ಸಮಾನತೆಯ ಕನಸಿನೆಡೆಗೆ ಮೊದಲ ಹೆಜ್ಜೆಯನ್ನು ಇಡಲು ಸಾಧ್ಯ ಎಂದು ನಂಬಿರುವ ಎಚ್ಚೆತ್ತ ಹೆಣ್ಣುಮಕ್ಕಳಿಂದು, ಮೊದಲಿಗೇ ಸಂವಿಧಾನಬದ್ಧವಾದ ಆಶಯಗಳಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ನಮ್ಮ ನ್ಯಾಯಾಂಗಕ್ಕೆ, ಮಾಧ್ಯಮಕ್ಕೆ, ಸರ್ಕಾರಿ ಆಡಳಿತ ಯಂತ್ರಕ್ಕೆ ಈ ಪಾಠವನ್ನು ಹೇಳಿಕೊಡಬೇಕಾಗಿ ಬಂದಿರುವುದನ್ನು ಯಾವ ಕರ್ಮವೆನ್ನೋಣ? ನಾವು ಪುರುಷರಿಗೆ ಸಮಾನವಾದ ಹಕ್ಕುಗಳನ್ನು ಪಡೆದಿರುವ ಪ್ರಜಾಪ್ರಭುತ್ವವಾದಿ ದೇಶದಲ್ಲಿರುವ ಪ್ರಜೆಗಳೆಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ! ಇಂತಹುದ್ದೊಂದು ವ್ಯವಸ್ಥೆಯ ಬಗ್ಗೆ ಹೆಣ್ಣುಮಕ್ಕಳು ಸಂಪೂರ್ಣವಾಗಿ ‘ನಂಬಿಕೆ’ ಕಳೆದುಕೊಳ್ಳುವ ಮೊದಲು ಸಮಾಜ ಎಚ್ಚೆತ್ತುಕೊಳ್ಳುವುದೇ?

ಗರ್ಭಕ್ಕೇ ದಾಳಿಯಿಟ್ಟ ವೈದ್ಯಕೀಯ ಕ್ರೌರ್ಯ!

ಹೊರಗಿನ ಅತ್ಯಾಚಾರ ಕಣ್ಣಿಗೆ ಕಾಣುವಂತದ್ದು. ಆದರೆ ಆಧುನಿಕ ವೈದ್ಯಕೀಯ ಆವಿಷ್ಕಾರಗಳು ಹೆಣ್ಣಿನ ಗರ್ಭಕ್ಕೇ ನೇರವಾಗಿ ದಾಳಿಯಿಟ್ಟು ಹೆಣ್ಣು ಸಂತತಿಯನ್ನು ಬೇರು ಸಹಿತ ನಾಶ ಮಾಡುವ ಅಮಾನುಷ ಅತ್ಯಾಚಾರದಲ್ಲಿ ನಿರತವಾಗಿರುವ ವೈದ್ಯಕೀಯ ಅಪರಾಧದಲ್ಲಿ ತೊಡಗಿರುವವರು ಮುಗ್ಧರೋ, ಮೂಢರೋ ಅಲ್ಲ. ನಾವು ದೇವರ ಸಮಾನವೆಂದು ನಂಬಿರುವ ಸಾಕ್ಷಾತ್ ವೈದ್ಯರು! ಈ ಕೃತ್ಯದ ನೇರ ಹೊಣೆಗಾರರು ಅವರೇ. ಜೀವ ರಕ್ಷಕನೇ, ಹೆಣ್ಣನ್ನು ಭ್ರೂಣದಲ್ಲೇ ಹೊಸಕಿ ಕೊಲೆ ಮಾಡಲು ನಿಂತರೆ ಅಸಹಾಯಕ ಹೆಣ್ಣು ಜೀವವನ್ನು ಇನ್ನಾರು ರಕ್ಷಿಸಬೇಕು?

ಪ್ರಕೃತಿ ತನ್ನ ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚಾಗಿ ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ಧಿ ಮಾಡುವ ಜವಾಬ್ದಾರಿ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಮನುಷ್ಯ ಶಿಕ್ಷಿತನೂ ನಾಗರಿಕನೂ ಆದಷ್ಟೂ ತನ್ನ ಸಹಜೀವಿಯೊಂದಿಗಿನ ಸಹೃದಯತೆ ಹೆಚ್ಚಾಗಬೇಕು. ಪ್ರಕೃತಿಯ ಈ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಆಗುತ್ತಿರುವುದೇನು? ‘ಹೆಣ್ಣು ಸಂಗಾತಿಯಾಗಿ ಬೇಕು. ಆದರೆ ಮಗಳಾಗಿ ಬೇಡ.’ ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚುತ್ತಾ ಸಾಗಿದಂತೆ ವರ್ಷದಿಂದ ವರ್ಷಕ್ಕೆ ಹೆಣ್ಣುಮಕ್ಕಳ ಸಂತತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಅದರಲ್ಲೂ 0-6 ವರ್ಷದ ಹೆಣ್ಣುಮಕ್ಕಳು 2011 ರಲ್ಲಿ ದೇಶದಲ್ಲಿ ಪ್ರತಿ 1000 ಪುರುಷರಿಗೆ 914 ಕ್ಕೆ ಇಳಿದಿದ್ದು, foeticideಕರ್ನಾಟಕದಲ್ಲಿ 943 ಕ್ಕೆ ಇಳಿದಿದ್ದಾರೆ. ಅಂದರೆ ಒಂದು ವರ್ಷದಲ್ಲಿ ಲಕ್ಷಾಂತರ ಹೆಣ್ಣುಮಕ್ಕಳು ಭೂಮಿಗೇ ಬರದೇ ಕಣ್ಮರೆಯಾಗುತ್ತವೆ. ಒಂದು ಅಂದಾಜಿನಂತೆ ಪ್ರತಿ ವರ್ಷ 6 ಲಕ್ಷ ಹೆಣ್ಣು ಜೀವಗಳು ಭ್ರೂಣದಲ್ಲೇ ಹತವಾಗುತ್ತಿವೆ. ಈ ಅಗಾಧ ಪ್ರಮಾಣದ ಗಂಡು ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ, ಈಗಾಗಲೇ ರಾಜಸ್ಥಾನ, ಹರಿಯಾಣ ಮುಂತಾದ ರಾಜ್ಯಗಳು ಹೆಣ್ಣು ವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಒಂದೇ ಹೆಣ್ಣು ಹಲವು ಪುರುಷರ ಕಾಮನೆಗಳನ್ನು ತಣಿಸುವ ‘ವಸ್ತು’ವಾಗಿ ಬಳಸುವಂತಾ ಸ್ಥಿತಿ ನಿರ್ಮಾಣವಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ!

ಗರ್ಭಧಾರಣೆ ಮತ್ತು ಪ್ರಸವ ಪೂರ್ವ ರೋಗ ನಿದಾನ ತಂತ್ರಗಳ [ಲಿಂಗ ಆಯ್ಕೆ ನಿಷೇಧ] ಅಧಿನಿಯಮ 1994 ಕಾಯ್ದೆ ಇದ್ದರೂ, ಅದರ ಪರಿಣಾಮಕಾರಿ ಜಾರಿಯಾಗದೇ, ಅಕ್ರಮ ಹೆಣ್ಣು ಭ್ರೂಣ ಹತ್ಯೆಗೆ ತಡೆ ಒಡ್ಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇಂದು ರಾಜ್ಯಾದ್ಯಂತ ಸುಮಾರು 4000 ಅಲ್ಟ್ರಾಸೌಂಡ್ ಸ್ಕ್ಯಾಂನಿಗ್ ಮೆಷಿನ್‌ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರೊಂದರಲ್ಲೇ ಈಗ 1200 ಇಂತಹ ಮೆಷಿನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಕಳೆದ 2-3 ದಶಕಗಳಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ ‘ಸಾಂಸ್ಕೃತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಸಂಪೂರ್ಣ ವಿಫಲವಾಗಿವೆ. ಈಗ ಅವಳನ್ನು ಇನ್ಯಾರು ರಕ್ಷಿಸುವವರು?

ಬಹುಶಃ ಹೆಣ್ಣುಮಕ್ಕಳೇ ಎಚ್ಚೆತ್ತು ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ದೃಢ ಸಂಕಲ್ಪ ಮಾಡದಿದ್ದರೆ, ‘ಅವಳ’ನ್ನು ಉಳಿಸಲು ಯಾವ ದೇವರಿಗೂ ಸಾಧ್ಯವಿಲ್ಲವೇನೋ!

ಕನ್ನಡ ಶಾಲೆಗಳ ಅಳಿವು ಉಳಿವಿನ ಪ್ರಶ್ನೆ : ಒಂದು ಸಾಧ್ಯವಿರುವ ಆಲೋಚನೆ

– ನಾಗರಾಜ್ ಹರಪನಹಳ್ಳಿ, ಕಾರವಾರ

ಜೂನ್ 27 ರಂದು ಕಾರವಾರದ ಸಾವಂತವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ಹೋಗಿದ್ದೆ. ಈ ಶಾಲೆ 1955 ರಲ್ಲಿ ಸ್ಥಾಪಿತವಾದದ್ದು. ಸಾವಾಂತವಾಡದ ನಿವಾಸಿಯೊಬ್ಬರು ಶಿಕ್ಷಣ ಇಲಾಖೆಗೆ 13 ಗುಂಟೆ ಜಾಗವನ್ನು ಶಾಲೆ ಸ್ಥಾಪಿಸಲು 58 ವರ್ಷಗಳ ಹಿಂದೆಯೇ ದಾನ ಮಾಡಿದ್ದರು. ಎಂಥ ಆದರ್ಶದ ಕಾಲ ನೋಡಿ ಅದು. ಇವತ್ತು ಒಂದಿಚು ಜಾಗವಿದ್ದರೆ ಅದನ್ನು ನಾವು ಬಿಡದೇ ಬೇಲಿಹಾಕಿಕೊಂಡು ಬಿಡುತ್ತೇವೆ. ಅದಿರಲಿ. kannada-schoolಈ ಕನ್ನಡ ಶಾಲೆ ನನ್ನನ್ನು ಆಕರ್ಷಿಸಿದ್ದಕ್ಕೆ ಒಂದು ಕಾರಣ ಇದೆ. ಅದೇನೆಂದರೆ ಈ ಶಾಲೆಯಲ್ಲಿರುವ 17 ಜನ ವಿದ್ಯಾರ್ಥಿಗಳಿಗೆ ಅಲ್ಲಿನ ಮೂರು ಜನ ಶಿಕ್ಷಕರು ತಮ್ಮ ವೇತನದ ಹಣ ಹಾಕಿ ಫಿಕ್ಸ ಡಿಪೋಜಿಟ್ ಮಾಡಿದ್ದರು. ಪ್ರತಿ ಮಗುವಿಗೆ ಪ್ರತಿ ತಿಂಗಳು 100 ರೂಪಾಯಿಯಂತೆ 8 ತಿಂಗಳ ಕಾಲ ಹಣ ಫಿಕ್ಸ ಇಡುವುದು. ಅಂದರೆ ಒಬ್ಬ ವಿದ್ಯಾರ್ಥಿ 1 ನೇ ತರಗತಿಗೆ ಪ್ರವೇಶ ಪಡೆದರೆ ಆತ ಏಳನೇ ತರಗತಿ ಮುಗಿಸಿದಾಗ ಆತನ ಖಾತೆಯಲ್ಲಿ ಬಡ್ಡಿ ಸಹಿತ 11,300 ರೂಪಾಯಿ ಜಮಾ ಆಗಿರುತ್ತದೆ. ಇದು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವ ಸದುದ್ದೇಶವೂ ಇದೆ. ಈ ಯೋಚನೆ ಶಿಕ್ಷಕರಿಗೆ ಯಾಕೆ ಬಂತು ಅಂತಾ ಅವರನ್ನೇ ಕೇಳಿದೆ. ಶಾಲೆಯನ್ನು ಉಳಿಸಿಕೊಳ್ಳಬೇಕು. ತಾವು ಉಳಿಯಬೇಕು ಎಂಬುದು ಶಿಕ್ಷಕರ ಉದ್ದೇಶ.

ಕನ್ನಡ ಶಾಲೆಯೊಂದನ್ನು ಉಳಿಸಬೇಕು. ಶಾಲೆಗೆ ಮಕ್ಕಳನ್ನು ಕರೆತರುವ ಉತ್ತಮ ಉದ್ದೇಶವೂ ಅಲ್ಲಿನ ಮೂರು ಜನ ಶಿಕ್ಷಕರದಾಗಿತ್ತು. ಅಲ್ಲಿನ ಶಿಕ್ಷಕರು ದಾನಿಗಳನ್ನು ಹಿಡಿದು ಅಲ್ಲಿನ ಮಕ್ಕಳಿಗೆ ಈಜು ತರಬೇತಿ, ಸಂಗೀತ ತರಬೇತಿ ಮತ್ತು ಇಂಗ್ಲೀಷ್ ಕೋಚಿಂಗ್ ಕೊಡಿಸಲು ಸಿದ್ಧತೆ ನಡೆಸಿದ್ದರು. 1 ರಿಂದ 7 ನೇ ತರಗತಿ ವರೆಗೆ ಇದ್ದದ್ದು 17 ಜನ ಮಕ್ಕಳು. ಆ ಶಾಲೆಯಲ್ಲಿ ಕಲಿಕಾ ಕೊಠಡಿಗಳಿವೆ. ಬಿಸಿಯೂಟಕ್ಕೆ ಕೋಣೆ ಇದೆ. ಆಟದ ಮೈದಾನವಿದೆ. ಟೀಚಿಂಗ್ ಏಡ್ ಇದೆ. ತಿರುವಿ ಹಾಕಲು ಪುಸ್ತಕಗಳು ಸಹ ಇವೆ. ಆದರೆ ಕೋಣೆ ತುಂಬುವಷ್ಟು ಮಕ್ಕಳಿಲ್ಲ !!

ಸಾವಾಂತವಾಡದಲ್ಲಿ ವಾಸಿಸುವ ಬಹುತೇಕರು ಹಿರಿಯರು. ಅವರ ಮಕ್ಕಳು, ಮೊಮ್ಮಕ್ಕಳು ಹೊರದೇಶ ಇಲ್ಲವೇ ಹೊರ ರಾಜ್ಯ (ಮುಂಬಯಿ, ಗೋವಾ) ದಲ್ಲಿ ನೆಲಸಿದ್ದಾರೆ. ಇರುವ ಶ್ರೀಮಂತರ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರೆ. ಕಾರವಾರಕ್ಕೆ ಕೂಲಿ ಮಾಡಲು ಬಂದ ಕಾರ್ಮಿಕರ ಮಕ್ಕಳು ಸಾವಾಂತವಾಡ ಸರಕಾರಿ ಶಾಲೆಯಲ್ಲಿದ್ದಾರೆ. ಅಲ್ಲಿರುವ ಎಲ್ಲಾ ಮಕ್ಕಳು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಮಕ್ಕಳೇ ಆಗಿದ್ದರು. ಕಾರವಾರದ ಸಾವಾಂತವಾಡ ಶಾಲೆ ಬಿಡಿ. ನಗರದ ಕೆಎಚ್‌ಬಿ ಕಾಲೂನಿಯಲ್ಲಿರುವ ಸರ್ಕಾರಿ ಶಾಲೆ, ಬಜಾರ್ ಶಾಲೆ, ಕೋಡಿಬಾಗ ಕನ್ನಡ ಶಾಲೆ, ಸಾಯಿ ಕಟ್ಟಾ ಕನ್ನಡ ಶಾಲೆ, ಸದಾಶಿವಗಡ ಹೊರವಲಯದ ಸರ್ಕಾರಿ ಕನ್ನಡ ಶಾಲೆ ತಿರುಗಾಡಿದೆ. ಅಲ್ಲಿನ ಶಾಲೆಗಳ ಸ್ಥಿತಿ ಸಾವಾಂತವಾಡ ಸರ್ಕಾರಿ ಶಾಲೆಗಿಂತ ಭಿನ್ನವಾಗಿರಲಿಲ್ಲ. ಬಾಜಾರ್ ಶಾಲೆ, ಸೋನಾರವಾಡ ಶಾಲೆಯಲ್ಲಿ ಮಕ್ಕಳ ಸಂಖ್ಯೆ 70 ರಿಂದ 110 ರಷ್ಟಿತ್ತು. ಕಾರಣ ಈ ಶಾಲೆಗಳು ನಗರದ ಕೇಂದ್ರಭಾಗದಲ್ಲಿರುವುದು. ಇಲ್ಲಿರುವ ಮಕ್ಕಳು ಹೊರ ಜಿಲ್ಲೆಯ ಕೂಲಿ ಕಾರ್ಮಿಕರ ಮಕ್ಕಳೆ. ಕಾರವಾರ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 2 ರಷ್ಟು ಮಾತ್ರ. ಇನ್ನು ಜೊಯಿಡಾ, ಸಿದ್ದಾಪುರ, ಶಿರಸಿ, ಕಾರವಾರ ಕುಗ್ರಾಮಗಳ ಬಡವರ ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಾಣಸಿಗುತ್ತಿದ್ದಾರೆ. ಈ ಕುಗ್ರಾಮದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 20 ಮೀರುವುದಿಲ್ಲ. ಹೀಗಿರುವಾಗ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವುದು ಹೇಗೆ? ಯೋಚಿಸಿದರೆ, ಇಚ್ಚಾ ಶಕ್ತಿ ಬಳಸಿದರೆ ದಾರಿ ಇದೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಅನ್ನು ಒಂದು ಭಾಷೆಯಾಗಿ ಹೇಳಿಕೊಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 8 ಶಾಲೆಗಳನ್ನು ಆಯ್ಕೆ ಮಾಡಿ 6 ನೇ ತರಗತಿಯಿಂದ ಆಂಗ್ಲಮಾಧ್ಯಮದ ಕಲಿಕೆ ಸಹ ಪ್ರಾರಂಭವಾಗಿದೆ. ಇಷ್ಟಾದರೂ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿಲ್ಲ!! ಪೋಷಕರ ಮನಸ್ಥಿತಿ ಯಾಕೆ ಬದಲಾಗುತ್ತಿಲ್ಲ? ಯಾಕೆಂದರೆ ಮಕ್ಕಳ ಸಂಖ್ಯೆ ಎಷ್ಟೇ ಇರಲಿ. ಹಿರಿಯ ಪ್ರಾಥಮಿಕ ಶಾಲೆಗೆ 7 ಜನ ಶಿಕ್ಷಕರನ್ನು, ವಿಷಯವಾರು ಶಿಕ್ಷಕರನ್ನು ತುಂಬುವ ಕೆಲಸ ಸರ್ಕಾರದ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಆಗಬೇಕು. ಸರ್ಕಾರಿ ಶಾಲೆ ಉಳಿಸುವ ಇಚ್ಚೆ ನಿಜಕ್ಕೂ ಶಿಕ್ಷಣ ಸಚಿವರಿಗೆ ಇದ್ದರೆ ಮಾರ್ಗಗಳು ಇವೆ. ಹೊಸದಾಗಿ ಖಾಸಗಿ ಶಾಲೆಗಳ ಪ್ರಾರಂಭಕ್ಕೆ ಅನುಮತಿ ನೀಡಬಾರದು. ಇಂಗ್ಲೀಷ್ ಮಾದ್ಯಮ ಇರಲಿ, ಕನ್ನಡ ಮಾದ್ಯಮ ಇರಲಿ ಖಾಸಗಿಯವರಿಗೆ ಇನ್ನು ಮುಂದೆ ಹೊಸದಾಗಿ ಶಾಲೆ ಪ್ರಾರಂಭಿಸಲು ಅನುಮತಿ ಬೇಡ. ಇದಕ್ಕೆ ವಿಧಾನಸಭೆಯಲ್ಲಿ ಶಾಸನ ರೂಪಿಸಲಿ. ಎಲ್ಲೇ ಬೇಕೆಂದರೂ ಸರ್ಕಾರವೇ ಶಾಲೆ ಪ್ರಾರಂಭಿಸಲಿ. ಇರುವ ಖಾಸಗಿ ಶಾಲೆಗಳು ಇರಲಿ. ಅವರ ಮೇಲೆ ಕೆಲ ನಿಯಮ ಹೇರಿ ಕಟ್ಟು ನಿಟ್ಟಾಗಿ ಜಾರಿಗೆ ತರುವಂತಾಗಬೇಕು. ಇದಕ್ಕೆ ಇಡೀ ಸಚಿವ ಸಂಪುಟ ಬದ್ಧವಾಗಿರಲಿ. ಯಾವುದೇ ಲಾಬಿಗೆ ಸರ್ಕಾರ ಮಣಿಯಬಾರದು.

– ಸರ್ಕಾರ ಇನ್ನೂ ಏನು ಮಾಡಬಹುದು………?

ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಕರನ್ನು, ಶಾಲೆಯ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ govt-school-kidsಕೋಣೆಗಳನ್ನು ಒದಗಿಸಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಿ. ಡೋನೇಶನ್ ಹಾವಳಿ ಮೇಲೆ ಸರ್ಕಾರ ಕಣ್ಣಿಡಬೇಕು. ಯಾವುದೇ ಒತ್ತಡಕ್ಕೆ ಮಣಿದು ಅಧಿಕಾರಿಗಳು ಖಾಸಗಿ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದಂತೆ ಸಚಿವರು ನಿಯಂತ್ರಿಸಬಾರದು. ಕಾರವಾರದ ಕೆಲ ಖಾಸಗಿ ಸಂಸ್ಥೆಗಳ ಶಿಕ್ಷಣ ವ್ಯವಸ್ಥೆ ನೋಡಿದರೆ ಅಚ್ಚರಿಯಾಗುತ್ತದೆ. ಪ್ರತಿ ಕ್ಲಾಸ್‌ಗೆ 3 ಡಿವಿಜನ್. ಪ್ರತಿ ಕೋಣೆಯಲ್ಲಿ 60 ರಿಂದ 80 ಮಕ್ಕಳು!! ಹೀಗಿರುವಾಗ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ? 6 ರಿಂದ 8 ಸಾವಿರ ರೂಪಾಯಿ ಶುಲ್ಕ ನೀಡಿ, ಮಕ್ಕಳನ್ನು ಇಂಥ ದನದ ಕೊಟ್ಟಿಗೆಗಳಿಗೆ ಮಕ್ಕಳನ್ನು ಕಳುಹಿಸಬೇಕೇ? ಪೋಷಕರು ಎಲ್ಲಿ ತಪ್ಪಿದ್ದಾರೆ. ಶಿಕ್ಷಣ ಇಲಾಖೆ ಏನು ಮಾಡುತ್ತಿದೆ. ಇದನ್ನ ಸಚಿವರು ಗಮನಿಸಬೇಕು. ಸಚಿವರು ದಿನವೂ ಒಂದಿಲ್ಲೊಂದು ಸರ್ಕಾರಿ ಇಲ್ಲವೇ ಖಾಸಗಿ ಶಾಲೆಯಲ್ಲಿರಬೇಕು. ಹೋದಲ್ಲಿ ಬಂದಲ್ಲಿ ಸರ್ಕಾರಿ ಶಾಲೆಯಲ್ಲಿರುವ ಸೌಲಭ್ಯಗಳನ್ನು ಜನತೆಗೆ ವಿವರಿಸಬೇಕು. ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ ಎಂದು ಸಚಿವರು ಪ್ರತಿ ಗ್ರಾಮ, ನಗರಕ್ಕೆ ಹೋಗಿ, ಪಾದಯಾತ್ರೆ ಮಾಡಿ ಜನರ ಮನವೊಲಿಸಬೇಕು. ಆಗ ಸ್ವಲ್ಪ ಬದಲಾವಣೆ ಸಾಧ್ಯ.

– ಕ್ರಾಂತಿಕಾರಿ ನಿಯಮ ಅನುಷ್ಠಾನ ಮಾಡಿ ………

ಕನ್ನಡ ಮತ್ತು ಕನ್ನಡ ಶಾಲೆಗಳನ್ನು ಉಳಿಸಬೇಕು ಎಂಬ ಮನಸ್ಸಿದ್ದರೆ ಸರ್ಕಾರ ಹೀಗೆ ಮಾಡಬೇಕು. ರಾಜ್ಯದಲ್ಲಿನ ಎಲ್ಲಾ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳಿಗೆ ಕನಿಷ್ಠ 5 ಜನ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 8 ಜನ ಶಿಕ್ಷಕರನ್ನ ನೇಮಿಸಿ. ಹೀಗೆ ನೇಮಿಸುವಾಗ ಮಕ್ಕಳ ಸಂಖ್ಯೆಯ ಅನುಪಾತ ನೋಡುವುದು ಬೇಡ. ಸರ್ಕಾರಕ್ಕೆ ಇದೇನು ಅಂತ ಹೊರೆಯಲ್ಲ. ಈ ವಿಷಯದಲ್ಲಿ ಐಎಎಸ್ ಅಧಿಕಾರಿಗಳ ಮಾತು ಕೇಳಬೇಡಿ. ಆರ್ಥಿಕ ಹೊರೆ ಎನಿಸಿದರೆ, ಐಎಎಸ್ ಮತ್ತು ಸೆಕ್ರೆರಿಟರಿಯೇಟ್‌ನಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಿಗೆ ನೀಡುವ ಸೌಲಭ್ಯ ಸ್ವಲ್ಪ ಮಟ್ಟಿಗೆ ಕಡಿತ ಮಾಡಿದರೆ ಶಿಕ್ಷಕರಿಗೆ ನೀಡುವ ಸಂಬಳ ನಿಭಾಯಿಸಬಹುದು.

ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳಲ್ಲಿ ಒಂದು ಮಗುವನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಕಳುಹಿಸುವ ನಿಯಮ ರೂಪಿಸಿ. government_schoolಒಂದೇ ಮಗು ಇದ್ದ ನೌಕರ ಸರ್ಕಾರಿ ಶಾಲೆಗೆ ಮಗುವನ್ನು ಕಳುಹಿಸಲು ಬಯಸದಿದ್ದರೆ, ಆ ನೌಕರನ ಅಥವಾ ನೌಕರಳ ಒಂದು ಇನ್ ಕ್ರಿಮೆಂಟ್ (ವೇತನ ಬಡ್ತಿ) ಕಡಿತ ಮಾಡಿ. ಈ ವಿಷಯದಲ್ಲಿ ಸಾರ್ವಜನಿಕರು ತಮ್ಮ ಮಕ್ಕಳನ್ನು ಯಾವುದೇ ಶಾಲೆಗೆ ಕಳುಹಿಸಲು ಸ್ವತಂತ್ರರು. ಇನ್ನು ಖಾಸಗಿ ಸಂಸ್ಥೆಯವರು ಸಮಾಜ ಸೇವೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಕಾರಣ ಅವರು ಡೋನೇಶನ್ ಸ್ವೀಕರಿಸುವಲ್ಲಿ ಕಡಿವಾಣ ಮತ್ತು ಮಿತಿ ಇರಲಿ. ಶಾಲೆ ಕಟ್ಟಡ ಕಟ್ಟಿದ ನಂತರ ಮತ್ತೆ ಡೋನೇಶನ್ ವಸೂಲಿಯ ಅವಶ್ಯಕತೆಯನ್ನು ಸರ್ಕಾರ ಪ್ರಶ್ನಿಸಲಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಶೋಷಣೆಗೆ ಒಂದು ಉದಾಹರಣೆ ಇಲ್ಲಿ ನೀಡುವುದಾದರೆ;
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೋಣೆಯೊಂದರ ಒಂದು ಡಿವಿಜನ್‌ನಿಂದ (60 ಮಕ್ಕಳಿಂದ) ಸಂಗ್ರಹಿಸುವ ದೇಣಿಗೆ ಹಣ 3 ಲಕ್ಷ ರೂಪಾಯಿ ಮೀರುತ್ತಿದೆ. ಎಲ್ಲಾ ತರಗತಿಯ, ಎಲ್ಲಾ ಮಕ್ಕಳಿಂದ (ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7ನೇ ತರಗತಿ) ಸಂಗ್ರಹಿಸುವ ಫೀಜ್ ಮತ್ತು ಡೋನೇಶನ್ 50 ಲಕ್ಷ ರೂಪಾಯಿ ಅಜುಬಾಜು ಆಗಿರುತ್ತದೆ. ಅದೇ ಖಾಸಗಿ ಶಾಲೆಯ ಹಂಗಾಮಿ ಶಿಕ್ಷಕರಿಗೆ ತಿಂಗಳಿಗೆ ನೀಡುವ ಗೌರವಧನ 2 ರಿಂದ 3 ಸಾವಿರ ರೂಪಾಯಿ ಆಗಿರುತ್ತದೆ. ಖಾಸಗಿ ಸಂಸ್ಥೆಗಳ ಶೋಷಣೆ, ಸುಲಿಗೆ ತಡೆಯಬೇಕಾದರೆ ಸರ್ಕಾರ ಕೆಲ ಸಮಯ ಕಠಿಣವಾಗಿ ವರ್ತಿಸಿ, ಶಿಸ್ತು ಕಲಿಸಬೇಕಾಗುತ್ತದೆ. ಜನತೆಯಲ್ಲಿ ಅರಿವು ಮೂಡಿಸಬೇಕಾಗುತ್ತದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿದರೆ ಕೆಲ ವಿಶೇಷ ಸವಲತ್ತುಗಳನ್ನು ಘೋಷಿಸಬೇಕಾಗುತ್ತದೆ. ಹಾಗೆ ಶಿಕ್ಷಣ ಸಚಿವರು, ಸರ್ಕಾರ ಮಾಡಬೇಕಾದ ತುರ್ತು ಅಗತ್ಯತೆ ಈಗ ಇದೆ.

ಇಂಥ ಕ್ರಾಂತಿಕಾರಿ ಹೆಜ್ಜೆಗಳು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಅನಿವಾರ್ಯವಾಗಿದೆ. ಸರ್ಕಾರಿ ವ್ಯವಸ್ಥೆಯನ್ನು ಬಲಗೊಳಿಸುತ್ತಲೇ ಖಾಸಗಿ ದೌರ್ಜನ್ಯವನ್ನು ಹತ್ತಿಕ್ಕಬೇಕು. ಶಿಕ್ಷಣದ ಪೂರ್ಣ ಸರ್ಕಾರೀಕರಣ ಅಸಾಧ್ಯ. ನಿಧಾನಕ್ಕೆ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ರಾಜಕೀಯ ಇಚ್ಛಾಶಕ್ತಿಯೂ ಬೇಕು. ಕೇವಲ ಶಾಲಾ ಕಟ್ಟಡ, ಬಿಸಿಯೂಟ, ಸೈಕಲ್, ಪಠ್ಯಪುಸ್ತಕ, ಸಮವಸ್ತ್ರ ನೀಡಿ, ಶಾಲೆಗೆ ಶಿಕ್ಷಕರನ್ನೇ ನೀಡದಿರುವುದು, ಶಿಕ್ಷಕರ ನೇಮಕದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುವುದು ನೋಡಿದರೆ ಖಾಸಗಿಯವರ ಜೊತೆ ಶಿಕ್ಷಣ ಇಲಾಖೆ ಒಳಗೊಳಗೇ ಹೇಗೆ ಶಾಮೀಲಾಗಿದೆ ಎಂಬುದು ಎಂಥವರಿಗೂ ಅರ್ಥವಾಗುವಂತಹದ್ದು.

ಸರ್ಕಾರಕ್ಕೆ ಕನ್ನಡ ಶಾಲೆಗಳನ್ನು ಉಳಿಸುವ ಮನಸ್ಸಿದ್ದರೆ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವುದು ಅನಿವಾರ್ಯ ಮತ್ತು ಅಗತ್ಯ ಕೂಡಾ. ಶಿಕ್ಷಕರ ಮಕ್ಕಳಷ್ಟೇ ಅಲ್ಲ, ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಗೆ ಕಳುಹಿಸುವಂತೆ ನಿಯಮ ರೂಪಿಸುವ ಜೊತೆಗೆ ಮಾನವೀಯ ಮುಖವನ್ನು ಸರ್ಕಾರ ಪ್ರದರ್ಶಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಕೆಲ ಸಂದರ್ಭಗಳಲ್ಲಿ ಕಠಿಣವಾಗಿ ಸಹ ವರ್ತಿಸಬೇಕು. ಈ ಧೈರ್ಯ ಪ್ರಾಥಮಿಕ ಶಿಕ್ಷಣ ಸಚಿವರಿಗೆ ಮತ್ತು ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ?