Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಸರ್ವಕಾರಣಗಳ ಹಿಂದೆಯೂ ರಾಜಕಾರಣ

– ಡಾ.ಎಸ್.ಬಿ.ಜೋಗುರ

ರಾಜಕಾರಣ ಎನ್ನುವದು ಎಲ್ಲ ಕಾರಣಗಳು, ಸಂದರ್ಭಗಳೊಂದಿಗೆ ತೂರಿಕೊಳ್ಳಬೇಕಿಲ್ಲ. ಮಾಡಬಾರದ ವಿಷಯಗಳಲ್ಲಿ ರಾಜಕಾರಣ ಮಾಡುವದು ಪ್ರಬುದ್ಧ ರಾಜಕಾರಣಿಯ ಲಕ್ಷಣವೂ ಅಲ್ಲ. ಎಲ್ಲ ಬಗೆಯ ವೃತ್ತಿಗಳಲ್ಲಿಯೂ ಒಂದು ಬಗೆಯ ನೈತಿಕತೆ ಅಡಕವಾಗಿರಬೇಕು. ಗಾಳಿ ಬಿಟ್ಟಾಗ ತೂರಿಕೊಳ್ಳುವ ಸೂತ್ರ ದವಸ ಧಾನ್ಯಗಳಿಗೆ ಅನ್ವಯವಾಗಬೇಕೇ ಹೊರತು ಹಾಳೂರಿನ ಮಣ್ಣು ತೂರುವದಕ್ಕಾಗಿ ಅಲ್ಲ. ಉತ್ತರಾಖಂಡದಲ್ಲಿ ಜನ ಅತ್ಯಂತ ಕ್ಷುದ್ರ ಜೀವಜಂತುಗಳಂತೆ ಸಾಯುತ್ತಿದ್ದಾರೆ. uttarakhand-floodsಸತ್ತವರ ಸಂಖ್ಯೆ 5 ಸಾವಿರ ದಾಟಿದೆ ಎನ್ನುವ ವರದಿಗಳೇ ಇಡೀ ದೇಶವೇ ತತ್ತರಿಸುವಂತೆ ಮಾಡಿದೆ. ರವಿವಾರ ಒಂದೇ ದಿನ ಹತ್ತು ಸಾವಿರದಷ್ಟು ಸಂಕಷ್ಟದಲ್ಲಿ ಸಿಲುಕಿದವರನ್ನು ಪಾರು ಮಾಡಿರುವ ರೀತಿಯನ್ನು ಗಮನಿಸಿದರೆ ಅದರ ಭೀಕರತೆಯ ಅರಿವಾಗುತ್ತದೆ. ಮನುಷ್ಯನಲ್ಲಿಯ ಎಂಪೆಥೆಟಿಕ್ ಸೆನ್ಸ್ ಜಾಗೃತವಾಗುವ ಹೊತ್ತಿನಲ್ಲಿಯೇ ಆತನ ಬೇರುಮಟ್ಟದ ನೀಚತನವೂ ಬಯಲಾಗುವದು ಇಂಥಾ ಸಂದರ್ಭಗಳಲ್ಲಿಯೇ.. ಇಡೀ ವಿಶ್ವಕ್ಕೆ ಸಾಂಸ್ಕೃತಿಕ ಮೌಲ್ಯಗಳ ವಿಷಯವಾಗಿ ನಮ್ಮ ದೇಶ ಗುರುವಿನ ಸ್ಥಾನದಲ್ಲಿದೆ ಎಂದಿರುವ ಕವಿವರ್ಯ ರವಿಂದ್ರನಾಥ ಟಾಗೂರರ ಹೇಳಿಕೆ ಪ್ರಸ್ತುತ ಸಂದರ್ಭದಲ್ಲಿ ಕೇವಲ ಹಳಹಳಿಕೆಯ ಹೇಳಿಕೆಯಾಗಿ ಬಿಂಬಿತವಾಗುತ್ತಿದೆ. ಮನುಷ್ಯನೊಬ್ಬ ರಣಹದ್ದುಗಳಾಗುವ ಸನ್ನಿವೇಶ ಈ ಬಗೆಯ ಪ್ರವಾಹ, ಅಪಘಾತದ ಸಂದರ್ಭದಲ್ಲಿ ಸೃಷ್ಟಿಯಾಗುವ ರೀತಿಯೇ ಅತ್ಯಂತ ಅಸಹ್ಯ ಎನಿಸುವಂಥದ್ದು. ಒಮ್ಮೊಮ್ಮೆ ಹೀಗೂ ಅನಿಸುತ್ತದೆ. ಮನುಷ್ಯನ ಜೀವಾಳದ ಅಸಲೀಯತ್ತೇ ಹೀಗಿರಬಹುದೇ..?

ಇಂಥಾ ನೈಸರ್ಗಿಕ ಅವಘಡಗಳ ಸಂದರ್ಭಗಳಲ್ಲಿ ಎಲ್ಲ ರಾಜ್ಯಗಳು ಅದರಲ್ಲೂ ಈ ಉತ್ತರಾಖಂಡದ ನೆರೆಯ ರಾಜ್ಯಗಳು ಪ್ರಜ್ಞಾತೀತವಾಗಿ ನೆರವು ನೀಡಬೇಕಿದೆ. ಮಾಡಿದೆನೆನ್ನುವದೇ ಈ ಸಂದರ್ಭದಲ್ಲಿ ಮಹಾನ್ ವ್ಯಂಗ್ಯ. ಅದರಲ್ಲೂ ನಾನೇ ಮಾಡಿದ್ದು, ನೆರವು ನೀಡಿದ್ದು ಎನ್ನುವ ಮಾತು ಇನ್ನೂ ಸಣ್ಣತನದ್ದು. ಇಲ್ಲಿ ಮಾಡಿದೆ ಎನ್ನುವದು ಶರಣರು ಹೇಳುವ ಹಾಗೆ ಮನದಲ್ಲೂ ಹೊಳೆಯಬಾರದು. ಹಾಗೆ ನೆರವಿಗೆ ಬರುವ ಜನಪ್ರತಿನಿಧಿಗಳ ಅಗತ್ಯತೆಯಿದೆ. ಮಾಧ್ಯಮಗಳ ಮೂಲಕ ಸದ್ದಾಗುವ, ಸುದ್ದಿಯಾಗುವ ಹಂಬಲದಲ್ಲಿ ಇಂಥಾ ಕಾರ್ಯಗಳನ್ನು ಮಾಡುವಂತಿಲ್ಲ. ಕೆಲವು ರಾಜಕೀಯ ಪಕ್ಷಗಳು ಅದಾಗಲೇ ನಾ ಮುಂದು, ತಾ ಮುಂದು ಎಂದು ಕ್ರೆಡಿಟ್‌ಗಾಗಿ ಪೈಪೋಟಿಗಿಳಿದಂತೆ ಮಾಡುವದನ್ನು ನೋಡಿದರೆ ಸೂತಕದ ಮನೆಯಲ್ಲೂ ರಾಜಕಾರಣ ಬೇಕೆ..? ಎನ್ನುವ ಪ್ರಶ್ನೆ ಕಾಡುತ್ತದೆ.

ಮಾಧ್ಯಮ ಸಲಹೆಗಾರರಾಗಿ ಅಪ್ಪಟ ಪತ್ರಕರ್ತ

– ಮಧುಚಿತ್ತ ಸೋಲಂಕಿ

ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡ ನಂತರ ಫೇಸ್‌ಬುಕ್‌ನಲ್ಲಿ ಪತ್ರಿಕೋದ್ಯಮ ವೃತ್ತಿಯಿಂದ ಹೊರನಡೆದರೂ, ಅದರ ಗುಂಗಿನಿಂದ ಹೊರಬರಲಾಗದ ಸ್ಥಿತಿಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಉತ್ತರಖಾಂಡ್‌ದಲ್ಲಿನ ಸಾವು-ನೋವುಗಳನ್ನು ವರದಿ ಮಾಡಬೇಕೆಂಬ ಹಂಬಲ ಅವರ ಮಾತಿನಲ್ಲಿತ್ತು. ಅಪ್ಪಟ ಪತ್ರಕರ್ತನಿಗೆ ಅವರ ಮಾತು ಅರ್ಥವಾಗುತ್ತೆ. ಎಲ್ಲಿ ಯಾರೇ ಸಂಕಟದಲ್ಲಿರಲಿ, ಅವರ ನೋವಿಗೆ ದನಿಯಾಗುವ ಮೂಲಕ ಅವರ ದು:ಖಕ್ಕೆ ಸ್ಪಂದಿಸಿದ ಸಮಾಧಾನ ಪಡೆಯುವವನು ಪತ್ರಕರ್ತ. ನೋವಿನಲ್ಲಿರುವವರಿಗೆ ಒಂದಿಷ್ಟು ಹಣ, ನೆರವು ನೀಡುವ ಮೂಲಕ ಇತರರಿಗೆ ಸಮಾಧಾನ ಆಗಬಹುದು. ಆದರೆ ಪತ್ರಕರ್ತನಿಗೆ ಹಾಗಲ್ಲ. ಅವರ ನೋವಿನ ಕತೆಯನ್ನು ಇತರರಿಗೂ ತಲುಪಿಸಿದರಷ್ಟೇ ಸಮಾಧಾನ.

ಸುನಾಮಿ ಬಂದು ತಮಿಳುನಾಡಿನಲ್ಲಿ ಸಾವಿರಾರು ಮಂದಿ ಸತ್ತಾಗ, ಊರುಗಳೇ ನೀರಾದಾಗ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ನೂರಾರು ಮಂದಿ ಮನೆ ಕಳೆದುಕೊಂಡಾಗ, ಭೂಕಂಪವಾದಾಗ, ಕೋಮುವಾದಿ ರಾಜಕಾರಣಿಗಳ ಸ್ವಾರ್ಥಕ್ಕಾಗಿ ರೂಪುಗೊಂಡ ಗಲಭೆಗಳಲ್ಲಿ ಅಮಾಯಕರು ಸತ್ತಾಗ.. dinesh-amin-mattuಹೀಗೆ ಏನೇ ಆದರೂ ಅಂತಹ ಸಂದರ್ಭಗಳಲ್ಲಿ ತಾನಿರಬೇಕು ಎಂದು ಬಯಸುವವನು ಅಪ್ಪಟ ಪತ್ರಕರ್ತ. ಅಮಿನ್ ಮಟ್ಟು ಅವರಲ್ಲಿ ಅಪ್ಪಟ ಪತ್ರಕರ್ತನಿರುವ ಕಾರಣದಿಂದಲೇ ಅವರು ಹೀಗೆ ಬರೆಯಲು ಸಾಧ್ಯವಾಯಿತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬುದು ಪಕ್ಕಾ ಆದ ಕೆಲವೇ ಗಂಟೆಗಳಲ್ಲಿ ಪತ್ರಿಕಾಲಯಗಳಲ್ಲಿ ಸಣ್ಣದಾಗಿ ಹರಿದಾಡುತ್ತಿದ್ದ ಸುದ್ದಿ – ದಿನೇಶ್ ಅಮಿನ್ ಮಟ್ಟು ಅವರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿ ಸೇರ್ತಾರಂತೆ. ಎರಡು ದಿನಗಳಲ್ಲಿ ದಿನೇಶ್ ಅವರು ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ್ದಾಯಿತು. ಹೊಸ ಜವಾಬ್ದಾರಿ ವಹಿಸಿಕೊಂಡದ್ದೂ ಆಯಿತು. ಅವರ ನಿರ್ಧಾರದ ಬಗ್ಗೆ ಅಲ್ಲಲ್ಲಿ ಚರ್ಚೆಗಳಾದವು.
“ಇವರಿಗೇಕೆ ಬೇಕಿತ್ತು?”
“ಅವರು ಇತ್ತೀಚೆಗೆ ಬರೆಯೋದನ್ನೆಲ್ಲಾ ನೋಡಿದರೆ, ಅವರು ಹೀಗೆ ಸರಕಾರ ಸೇರ್ತಾರೆ ಅಂತ ಯಾರಾದರೂ ಹೇಳಬಹುದಿತ್ತು”.
“ಅವರು ಮೊದಲಿನಿಂದಲೂ ಕಾಂಗ್ರೆಸ್ಸೇ”
“ಅದರಲ್ಲಿ ತಪ್ಪೇನಿದೆ ಬಿಡ್ರಿ. ಅದು ಒಂದು ಅವಕಾಶ. ವ್ಯವಸ್ಥೆಯಲ್ಲಿ ಸಾಧ್ಯವಾದರೆ ಒಂದಿಷ್ಟು ಉತ್ತಮ ಬದಲಾವಣೆ ತರಲಿ..”
ಹೀಗೆ ನಾನಾ ಅಭಿಪ್ರಾಯಗಳು ವ್ಯಕ್ತವಾದವು. ಹೊಸ ಜವಾಬ್ದಾರಿ ವಹಿಸಿಕೊಳ್ಳುವಾಗ ದಿನೇಶ್ ಅವರು ಕೂಡಾ ಹೀಗೆ ಗೊಂದಲವನ್ನು ಅನುಭವಿಸಿದ್ದಾರೆ ಎನ್ನುವುದು ಮಾತ್ರ ಅವರ ಫೇಸ್‌ಬುಕ್‌ ಪೋಸ್ಟ್‌ನಿಂದ ಸ್ಪಷ್ಟವಾಗಿತ್ತು. ಪ್ರಜಾವಾಣಿ ಕಚೇರಿಯನ್ನು ತೊರೆಯುವ ಬಗ್ಗೆ ಅವರಿಗಾದ ಸಂಕಟವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದರು. ಅವರ ಮಾತುಗಳಲ್ಲಿ ಅವರ ನಿರ್ಧಾರದ ಹಿಂದೆ ಅನುಭವಿಸಿರಬಹುದಾದ ತಾಕಲಾಟ ಕಾಣುತ್ತಿತ್ತು.

ದಿನೇಶ್ ಅವರ ಬರಹಗಳನ್ನು ಹಲವು ವರ್ಷಗಳಿಂದ ಓದಿಕೊಂಡು ಬಂದಿದ್ದ ಕೆಲವರು ಅವರು ಈ ಕೆಲಸಕ್ಕೆ ಸೂಕ್ತನಾ ಎಂದು ತಮ್ಮ ಕಾಮೆಂಟುಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಕಾರಣಗಳಿದ್ದವು. ಈ ಹಿಂದಿನ ಮುಖ್ಯಮಂತ್ರಿಯೊಬ್ಬರಿಗೆ ಇದ್ದ ಮಾಧ್ಯಮ ಸಲಹೆಗಾರರು ಆ ಹುದ್ದೆಗೆ ಸಾಕಷ್ಟು ಮಸಿಬಳಿದು ಹೋಗಿದ್ದರು. ಮಾಧ್ಯಮ ಸಲಹೆಗಾರರ ಕೆಲಸವೆಂದರೆ ಪತ್ರಕರ್ತರಿಗೆ ಆಗಾಗ ಪಾರ್ಟಿಗಳನ್ನು ಏರ್ಪಡಿಸಿ ’ತೃಪ್ತಿ’ ಪಡಿಸುವುದು, ಪೇಮೆಂಟ್ ಕೆಟಗರಿ ಪತ್ರಕರ್ತರಿಗೆ ನಿಗದಿತವಾಗಿ ಪಾಕೆಟ್ ತಲುಪಿಸುವುದು – ಎನ್ನುವಷ್ಟಕ್ಕೆ ಸೀಮಿತಗೊಳಿಸಿದ್ದರು.

ಮಾಧ್ಯಮ ಸಲಹೆಗಾರರದು ದೊಡ್ಡ ಜವಾಬ್ದಾರಿ. ಅವರು ಒಂದರ್ಥದಲ್ಲಿ ಮುಖ್ಯಮಂತ್ರಿ ಹೆಚ್ಚು ಜನಪರವಾಗಿರಲು ಮಾಡಬೇಕಾದ ಕೆಲಸಗಳ ಬಗ್ಗೆ ಸಲಹೆ ಕೊಡುವವರು. ಜನಪರ ಎಂದರೆ ಅದು ಅಭಿವೃದ್ಧಿ ಪರ, ಸಾಮಾಜಿಕ ನ್ಯಾಯದ ಪರ, ಸಮಾನತೆ ಪರ, ಜಾತ್ಯತೀತ ನಿಲುವುಗಳ ಪರ. ಹೀಗೆ ಮುಖ್ಯಮಂತ್ರಿಯವರು ಸಮಾಜದ ಪರವಾಗಿ ವರ್ತಿಸುತ್ತಿದ್ದರೆ ಸಮಚಿತ್ತದ ಮಾಧ್ಯಮ ಸಹಜವಾಗಿಯೇ ಮುಖ್ಯಮಂತ್ರಿಯವರ ಒಳ್ಳೆ ಕೆಲಸಗಳಿಗೆ ಬೆಂಬಲ ಕೊಡುತ್ತದೆ. ಒಂದು ಸರಕಾರ ಹೀಗೆ ಜನರ ಮಧ್ಯೆ ಸದಾಭಿಪ್ರಾಯಕ್ಕೆ ಯೋಗ್ಯವಾಗುವಂತೆ ಮಾಡುವ ಕೆಲಸದಲ್ಲಿ ಮಾಧ್ಯಮ ಸಲಹೆಗಾರರ ಪಾತ್ರವಿದೆ. ಪತ್ರಕರ್ತರಿಗೆ ಪಾರ್ಟಿ ಏರ್ಪಡಿಸುತ್ತ ’ಮಿಡಿಯಾ ಮ್ಯಾನೇಜ್’ ಮಾಡುವುದಾದರೆ ಆಡಳಿತದ ಬಗ್ಗೆ ಜನರಲ್ಲಿ ಸದಾಭಿಪ್ರಾಯ ಇದೆ ಎಂಬ ಭ್ರಮೆಯನ್ನು ಸೃಷ್ಟಿಸಬಹುದಷ್ಟೆ.

ಈ ಹಿಂದೆ ಹಿರಿಯ ಪತ್ರಕರ್ತ ಹರೀಶ್ ಖರೆ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು. dinesh-amin-mattu-2ನಂತರ ಸಂಜಯ್ ಬಾರು ಅದೇ ಸ್ಥಾನ ವಹಿಸಿದರು. ಆ ಸ್ಥಾನವನ್ನು ತೊರೆದು ಬಂತ ನಂತರವೂ ಅವರು ತಮ್ಮ ಕ್ಷೇತ್ರಗಳಲ್ಲಿ (ಪತ್ರಿಕೋದ್ಯಮ, ಸಂಶೋಧನೆ, ಬೋಧನೆ) ತೊಡಗಿಸಿಕೊಂಡಿದ್ದಾರೆ. ಇವರ್‍ಯಾರೂ ಅಧಿಕಾರದ ಸ್ಥಾನಗಳ ಹತ್ತಿರ ಇದ್ದರೂ ಹೆಸರು ಕೆಡಿಸಿಕೊಳ್ಳಲಿಲ್ಲ. ಕನ್ನಡದವರೇ ಆದ ಶಾರದಾ ಪ್ರಸಾದ್ ದೆಹಲಿಯಲ್ಲಿ ಬಹಳ ಕಾಲ ಇಂದಿರಾ ಗಾಂಧಿಯವರಿಗೆ ಮಾಧ್ಯಮ ಕಾರ್ಯದರ್ಶಿಯಾಗಿದ್ದವರು. ಹೀಗೆ ಒಂದು ಪರಂಪರೆಯೇ ಇದೆ. ದಿನೇಶ್ ಅಮಿನ್ ಮಟ್ಟು ಆ ಪರಂಪರೆಯನ್ನು ಮುಂದುವರಿಸಿ ಆ ಸ್ಥಾನಕ್ಕೆ ಉನ್ನತ ಗೌರವ ತಂದುಕೊಡಬಲ್ಲರು. ಏಕೆಂದರೆ, ಅವರು ತಮ್ಮ ಒಂದು ಅಂಕಣದಲ್ಲಿ ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಟೀಕಿಸುತ್ತಾ.. “ಪದೇ ಪದೇ ಬಸವಣ್ಣನನ್ನು ತಮ್ಮ ಮಾತುಗಳಲ್ಲಿ ಉಲ್ಲೇಖಿಸುವ ಯಡಿಯೂರಪ್ಪ ಕಾಯಕ ಸಿದ್ಧಾಂತವನ್ನೇ ಮರೆತುಬಿಟ್ಟರು. ತನ್ನ ಸ್ವಂತ ಪರಿಶ್ರಮದ ಹೊರತಾಗಿ ಬರುವ ಎಲ್ಲಾ ಫಲವು ಅಮೇಧ್ಯ ಎಂದು ಹೇಳುವುದೇ ಕಾಯಕ ತತ್ವ” (ನೆನಪಿನಿಂದ ಬರೆದಿದ್ದು. ವಾಕ್ಯ ರಚನೆ ಬೇರೆ ಇರಬಹುದು. ಆದರೆ ಅರ್ಥ ಅದೇ) ಎಂದು ಬರೆದಿದ್ದರು. ಕಾಯಕ ತತ್ವದಲ್ಲಿ ನಂಬಿಕೆ ಇರುವವರು ಅಮಿನ್ ಮಟ್ಟು. ಅವರು ಅದನ್ನು ಮರೆಯಲಾರರು. ಅಂತೆಯೇ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರಾದರೂ ಕಾಯಕ ತತ್ವ ಪಾಲಿಸಿದರೆ, ಅವರ ಸರಕಾರ ಜನಪರವಾಗಿರುತ್ತೆ. ಇಲ್ಲವಾದರೆ ಜನ ಪಾಠ ಕಲಿಸುತ್ತಾರೆ.

ಅಕಾಡೆಮಿಗಳು, ಪ್ರಾಧಿಕಾರಗಳ ನೇಮಕಾತಿ ಸಮಯದಲ್ಲಿ ಹೊಸಬರಿಗೆ ಅವಕಾಶ ಸಿಗಲಿ

– ಪ್ರದೀಪ್ ಮಾಲ್ಗುಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಇತರೆ ಅಕಾಡೆಮಿ, ಪ್ರಾಧಿಕಾರ, ನಿಗಮ ಮಂಡಳಿಗಳು, ರಂಗಾಯಣದ ಕೇಂದ್ರಗಳಿಗೆ ಸರ್ಕಾರವು ಅಧ್ಯಕ್ಷರು, ನಿರ್ದೇಶಕರನ್ನು ಆದಷ್ಟು ಶೀಘ್ರವಾಗಿ ನೇಮಿಸಬೇಕಿದೆ. ಅದರಲ್ಲೂ ಸಾಂಸ್ಕೃತಿಕ ಮಹತ್ವವುಳ್ಳ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗಾಯಣದಂತಹ ಸಂಸ್ಥೆಗಳು ದೀರ್ಘಕಾಲ ಖಾಲಿ ಉಳಿಯಬಾರದು. ಅದರಿಂದ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ಇದು ಕನ್ನಡ ಸಂಸ್ಕೃತಿಗೆ ಭವಿಷ್ಯದಲ್ಲಿ ಹಾನಿಯುಂಟುಮಾಡಬಲ್ಲುದು. ಆದರೆ ಈ ನೇಮಕದ ವಿಷಯದಲ್ಲಿ ಇದುವರೆಗೆ ಅನೇಕ ತಪ್ಪುಗಳು ಘಟಿಸಿವೆ.

ಸಾಂಸ್ಕೃತಿಕ ವಲಯದ ಬಹುತೇಕ ವಿದ್ವಾಂಸರು, ರಂಗಕರ್ಮಿಗಳು, ರಂಗಾಸಕ್ತರು ಈಗಾಗಲೇ ಒಂದು ಹುದ್ದೆಯನ್ನು ಪಡೆದಿರುವ ವ್ಯಕ್ತಿ ಮತ್ತೆ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯುವುದು ಹಾಗೂ ಈಗಿನ ಅಕಾಡೆಮಿಗಳು, ಪ್ರಾಧಿಕಾರಗಳು ಮೊದಲಾದವುಗಳಿಂದ ಒಂದರಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡುವುದನ್ನು ಅಂತರಂಗ-ಬಹಿರಂಗದಲ್ಲಿ ಖಂಡಿಸಿದ್ದಾರೆ. ಆದರೆ, ಈ ಯಾವ ಖಂಡನೆಗಳೂ ಅಧಿಕಾರದ ಆಕಾಂಕ್ಷಿಗಳ ಮಂಡನೆಗಳ ಮುಂದೆ ಪರಿಣಾಮಕಾರಿಯಾಗುತ್ತಿಲ್ಲ.

ಇರುವ ಎಲ್ಲ ಸಾಂಸ್ಕೃತಿಕ ಹುದ್ದೆಗಳನ್ನು ಅಲಂಕರಿಸುವ ಅನಿವಾರ್ಯತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಾಗೇನಾದರೂ ಇದೆ ಎಂದಾದರೆ, ಆ ವ್ಯಕ್ತಿಗಳು ಎರಡನೆ ತಲೆಮಾರಿನ ವ್ಯಕ್ತಿಗಳನ್ನು ಬೆಳೆಸಿಲ್ಲವೆಂದರ್ಥ. ಯುವ ಜನಾಂಗದ ಮೇಲೆ ತಮ್ಮ ನಡೆ-ನುಡಿಗಳಿಂದ ಪ್ರೇರಣೆ ಬೀರಲಾಗದಂಥ-ಭಿನ್ನ ಕ್ಷೇತ್ರಗಳಲ್ಲಿ ಆಳವಾಗಿ ತೊಡಗಿಸಿಕೊಳ್ಳುವ ದಾರಿಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡದವರು ಯಾವ ಹುದ್ದೆಯಲ್ಲಿದ್ದರೂ-ನಿರಂತರ ಹುದ್ದೆಗಳನ್ನು ಪಡೆಯುತ್ತಿದ್ದರೂ ಅದು ಅವರವರ ವೈಯಕ್ತಿಕ ಸಾಧನೆಯಾಗುತ್ತದೆಯೇ ಹೊರತು ಸಾಂಘಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಯಾಗಲಾರದು.

ಅಕಾಡೆಮಿ, ಪ್ರಾಧಿಕಾರ ಹಾಗೂ ಸರ್ಕಾರದ ಇತರೆ ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕ ಹುದ್ದೆಗಳನ್ನು ಒಂದು ಬಾರಿ ನಿರ್ವಹಿಸಿರುವವರನ್ನೇ ವರ್ಗಾಯಿಸುವ/ಪುನರ್ನೇಮಿಸುವ ಕ್ರಿಯೆಯು ಈಗಾಗಲೇ ಅಧಿಕಾರದಲ್ಲಿರುವವರನ್ನು ಬಿಟ್ಟು-ಅರ್ಹರಾದ ಒಬ್ಬ ವ್ಯಕ್ತಿಯೂ ಕರ್ನಾಟಕದಲ್ಲಿಲ್ಲ ಎಂದು ಹೇಳಿದಂತಾಗುತ್ತದೆ. ಈ ಬಗೆಯ ಅಪಕಲ್ಪನೆಗಳನ್ನು ಸಾಂಸ್ಕೃತಿಕ ವಾತಾವರಣದ ಹಿನ್ನೆಲೆಯುಳ್ಳವರು ಹುಟ್ಟು ಹಾಕಬಾರದು. ಯಯಾತಿ’ ನಾಟಕವನ್ನು ಓದಿ, ನೋಡಿ, ಅಭಿನಯಿಸಿ, ನಿರ್ದೇಶಿಸಿ, ಬೋಧಿಸಿ, ವಿಮರ್ಶಿಸಿದವರು ಆ ಯಯಾತಿ’ಯಂತಾಗಬಾರದಲ್ಲವೆ? ಸಾಂಸ್ಕೃತಿಕ ಕ್ಷೇತ್ರದಲ್ಲಿರುವವರು ಯಯಾತಿಯ ನೆನಪೇ ಇಲ್ಲದಂತೆ ವರ್ತಿಸುತ್ತಿರುವುದೇಕೆ? ಯುವ ಜನಾಂಗ ಈ ಎಲ್ಲವನ್ನು ಎಚ್ಚರದಿಂದ ಗಮನಿಸುತ್ತಿದೆ. ನೀವುಗಳು ಕೇಳಿದ ಪ್ರಶ್ನೆಗಳನ್ನೇ ಮತ್ತೆ ಯುವ ಜನಾಂಗವು ಇನ್ನೆಷ್ಟು ಕಾಲ ಮುಂದುವರಿಸಬೇಕು?

ಸರ್ಕಾರವಾದರೂ ಈ ಸಂದರ್ಭದಲ್ಲಿ ಕಠಿಣವಾದರೂ ನಿಷ್ಠುರವಾದ, ಸೂಕ್ತವಾದ ನಿರ್ಧಾರವನ್ನು ಕೈಗೊಂಡು ಇನ್ನುಮುಂದಾದರೂ ಮೇಲ್ಪಂಕ್ತಿಯನ್ನು ಹುಟ್ಟುಹಾಕಬೇಕಾಗಿದೆ.

ಮುಂದಿನ ರಂಗಾಯಣದ ನಿರ್ದೇಶಕರು ಯಾರು?

ಕಳೆದ ನಾಲ್ಕು ಬಾರಿಯಿಂದ ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಜನಾರ್ಧನ್ ಹೆಸರು ಮೊದಲ ಆದ್ಯತೆಯಲ್ಲಿರುತ್ತದೆ. ಆದರೆ ಮತ್ತಾರದ್ದೋ ನೇಮಕ ಆಗುತ್ತದೆ. ಅವರು ನಿರ್ದೇಶಕರಾಗದಿರುವುದಕ್ಕೆ ಕಾರಣಗಳೇನಿರಬಹುದು? ಕೇಳಿದರೆ ಆಯ್ಕೆಯ ಪ್ರಕ್ರಿಯೆಯಲ್ಲಿದ್ದವರೆಲ್ಲ ಇಬ್ಬಂದಿತನ ಮಾಡಿದರೆನಿಸುತ್ತದೆ. ಅವರೆ ಆಯ್ಕೆ ಆಗುತ್ತಾರೆಂದು ಹೇಳುತ್ತಲೆ ಆಗದಂತೆ ನೋಡಿಕೊಂಡಿದ್ದಾರೆ. ಪಿಳ್ಳೆ ನೆವಗಳನ್ನು ಹೇಳುತ್ತ ಬಂದಿದ್ದಾರೆ. ಬಿ.ವಿ.ಕಾರಂತರ ಶಿಷ್ಯರಲ್ಲೊಬ್ಬರಾದ ಜನ್ನಿ ದೇಶದ ಪ್ರಸಿದ್ಧ ರಂಗಕರ್ಮಿಗಳಲ್ಲೊಬ್ಬರು. ಒಬ್ಬ ಗಾಯಕನಾಗಿ ದಲಿತ-ಬಂಡಾಯ ಕಾವ್ಯ ಹಾಗೂ ತತ್ವಪದ ಪರಂಪರೆಗೆ ಹೊಸಜೀವ ನೀಡಿದವರು. ಸಿ.ಅಶ್ವಥ್‌ರಂತ ಸಂಗೀತ ನಿರ್ದೇಶಕರು ಜನ್ನಿಯ ಸಹಚರ್ಯದಿಂದ ತಮ್ಮ ಸಂಗೀತದಲ್ಲಿ ಹೊಸ ಸಾಧ್ಯತೆಗಳನ್ನು ಕಂಡವರು. ರಂಗಸಂಗೀತಕ್ಕೆ ಹೊಸತನವನ್ನು ತಂದವರಲ್ಲಿ ಜನ್ನಿ ಪ್ರಮುಖರು. ಕುಸುಮಬಾಲೆ ಕಾದಂಬರಿಯನ್ನು ಮೊದಲು ರಂಗಕ್ಕೆ ಅಳವಡಿಸಿದವರು. ದಲಿತ ಸಂಘರ್ಷ ಸಮಿತಿಗೆ ಮುಖವಾಣಿಯಂತ ಗಾಯಕರು. ಕನ್ನಡದ ಅಲಕ್ಷಿತ ಕಾವ್ಯಕ್ಕೆ ಸಂಗೀತ ಸಂಯೋಜಿಸಿದವರು. ಪ್ರಸಿದ್ಧ ರಂಗನಿರ್ದೇಶಕರು. ಬಸವಲಿಂಗಯ್ಯನವರ ನಂತರ ಮತ್ತೊಂದು ದಲಿತ ಪ್ರತಿಭೆ ರಂಗಾಯಣಕ್ಕೆ ಬೇಕಿಲ್ಲವೇ?

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತ ಜನ್ನಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಂಗಭೂಮಿ ಮತ್ತು ರಂಗಸಂಗೀತದಲ್ಲಿ ಪ್ರಸಿದ್ಧರಾದವರು. ಇಂಥವರಿಗೆ ಮೈಸೂರಿನಲ್ಲೆ ಇರುವ ರಂಗಾಯಣದ ನಿರ್ದೇಶಕರಾಗುವ ಅರ್ಹತೆಯಿಲ್ಲವೇ? ದಲಿತ, ಬುಡಕಟ್ಟು, ಅಲೆಮಾರಿ ಹಾಗೂ ಬೀದಿರಂಗಭೂಮಿಯಲ್ಲಿ ಪರಿಣಿತರಾದ ಜನ್ನಿ ಅಭಿಜಾತ ರಂಗಭೂಮಿಯಲ್ಲೂ ಪಳಗಿದವರು. ಅವರ ನಾಲ್ಕು ದಶಕಗಳ ರಂಗಾನುಭವ ರಂಗಾಯಣಕ್ಕೆ ಹೊಸ ಸತ್ವವನ್ನು ನೀಡಬಲ್ಲದು. ಪ್ರತಿಭಾವಂತನೊಬ್ಬನನ್ನು ಮತ್ತೆ ಮತ್ತೆ ರಂಗಾಯಣದಿಂದ ದೂರವಿಡುತ್ತಿರುವುದು ಜಾತಿಯ ಕಾರಣದಿಂದಲೋ ಅಥವಾ ಹೊಸ ವಿಚಾರಗಳು ರಂಗಾಯಣದಲ್ಲಿ ಸೃಜನಗೊಳ್ಳದಿರುವ ರಾಜಕಾರಣದಿಂದಲೋ ತಿಳಿಯುತ್ತಿಲ್ಲ.

ರಂಗಾಯಣದ ವಿಕೇಂದ್ರೀಕರಣ ಹಾಗೂ ವರ್ಗಾವಣೆ:

ರಂಗಾಯಣದ ವಿಕೇಂದ್ರೀಕರಣದ ಸಂದರ್ಭದಲ್ಲಿ ಮೈಸೂರಿನ ರಂಗಾಯಣದ ಕಲಾವಿದರ ವ್ಯಾಪಕವಾದ ಅನುಭವವನ್ನು ಶಿವಮೊಗ್ಗ ಹಾಗೂ ಧಾರವಾಡ ಶಾಖೆಗಳಲ್ಲಿ ಬಳಸಿಕೊಳ್ಳಬೇಕಾಗಿದೆ. ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಮೊದಲಾದ ನಿರ್ದೇಶಕರುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿರುವ, ಅಭಿನಯಿಸಿರುವ ಈ ನಟ ನಟಿಯರು ಭಾರತೀಯ, ಪಾಶ್ಚಿಮಾತ್ಯ ರಂಗಕರ್ಮಿಗಳು ಮತ್ತು ರಂಗಸಿದ್ಧಾಂತಗಳು ಹಾಗೂ ಅವುಗಳ ಪ್ರಾಯೋಗಿಕ ಸಾಧ್ಯತೆಗಳು-ಸಮಸ್ಯೆಗಳನ್ನು ಅರಿತವರು. ಹಾಗೆಯೇ, ಅನೇಕ ರಂಗಶಿಬಿರಗಳಲ್ಲಿ, ಧ್ವನಿ-ಬೆಳಕು ಪ್ರದರ್ಶನಗಳಲ್ಲಿ, ರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಈ ನಟನಟಿಯರು ಕರ್ನಾಟಕದ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಅಸಂಖ್ಯ ಸಾಧ್ಯತೆಗಳನ್ನು ಸೃಷ್ಟಿಸಬಲ್ಲರು.

ಆದರೆ ಅವರನ್ನು ಹೊಸ ರಂಗಾಯಣದ ಘಟಕಗಳಲ್ಲಿ ದ್ವಿತೀಯ ದರ್ಜೆಯವರಂತೆ ಪರಿಗಣಿಸಬಾರದು. ರಂಗಾಯಣದ ನಿರ್ದೇಶಕರ ಆಯ್ಕೆಯಲ್ಲಿ ಈ ಹಿರಿಯ ಕಲಾವಿದರಿಗೆ ಅವಮಾನ ಮಾಡುವಂಥ ಕೆಲಸಗಳಾಗಬಾರದು. ಅವರ ಅನುಭವವನ್ನು ಈ ಶಾಖೆಗಳು ಬಳಸಿಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕು. Kalamandira_Mysoreಈಗಿರುವ ಈ ಕಲಾವಿದರು ಏಳೆಂಟು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ. ಇವರ ನಂತರ ರಂಗಾಯಣ ಹೊಸ ಕಲಾವಿದರನ್ನು ನೇಮಿಸಿಕೊಂಡು, ಅವರಿಗೆ ನಂತರ ತರಬೇತಿ ನೀಡುವುದು, ಇತ್ಯಾದಿ ಪ್ರಯೋಗಗಳಿಗಿಂಥ ಇವರ ಗರಡಿಯಲ್ಲಿ ಯುವ ಕಲಾವಿದರನ್ನು ನೇಮಿಸಿಕೊಂಡು, ಅವರನ್ನು ರಂಗಾಯಣಗಳನ್ನು ಕಟ್ಟುವ ನಿಟ್ಟಿನಲ್ಲಿ ಕ್ರಿಯಾಶೀಲಗೊಳಿಸಬೇಕಾದ ಅಗತ್ಯವಿದೆ.

ರಂಗಾಯಣದ ಕ್ರಿಯಾಶೀಲತೆಯನ್ನು ಹೆಚ್ಚಿಸುವಲ್ಲಿ ನಿಲಯದ ಕಲಾವಿದರ ಪಾತ್ರ ದೊಡ್ಡದು. ಕಾಲಕಾಲಕ್ಕೆ ವಿವಿಧ ವಯೋಮಾನದ, ಭಿನ್ನ ಅನುಸಂಧಾನದ ನಿರ್ದೇಶಕರುಗಳೊಡನೆ ಕಲಾವಿದರು ತಮ್ಮ ಸಾಮರ್ಥ್ಯವನ್ನು ಸಾಬೀತುಗೊಳಿಸಿದ್ದಾರೆ. ಬಂದು-ಹೋಗುವ ನಿರ್ದೇಶಕರುಗಳ ಜೊತೆ ಅಲ್ಲಿಯೇ ಖಾಯಂ ಆಗಿರುವ ಕಲಾವಿದರು ತಗಾದೆ ತೆಗೆದದ್ದೂ ಉಂಟು. ಕಲಾವಿದರ ಅನುಭವ ರಂಗಾಯಣದ ಬೆಳವಣಿಗೆಗೆ ಅವಶ್ಯಕ. ಅದರಲ್ಲೂ ಈಗ ಹೊಸದಾಗಿ ಆರಂಭವಾಗುತ್ತಿರುವ ಶಾಖೆಗಳಿಗೆ ಈ ಅನುಭವೀ ಕಲಾವಿದರು ಹಾಗೂ ಯುವ ಕಲಾವಿದರನ್ನು ಬೆಳೆಸುವ ಕೆಲಸ ಅಗತ್ಯವಾಗಿದೆ. ಏಕೆಂದರೆ, ರಂಗಾಯಣದ ’ಗೋರಾ’ ರಂಗ ಪ್ರಯೋಗದಲ್ಲಿ 16,17,18 ವಯೋಮಾನದ ಪಾತ್ರಗಳನ್ನು 35-45 ರ ಆಸುಪಾಸಿನ ಪ್ರಾಯದ ಪಾತ್ರಧಾರಿಗಳು ಅಭಿನಯಿಸುತ್ತಿದ್ದರು. ಇದು ಪ್ರೇಕ್ಷಕರಿಗಿರಲಿ, ಕಲಾವಿದರಿಗೇ ಮುಜುಗರ ತರುತ್ತಿತ್ತು.

ಸ್ವತಃ ರಂಗಭೂಮಿಯ ನಟಿ ಉಮಾಶ್ರೀ ತಮ್ಮ ರಂಗ ಗುರುಗಳಾದ ಸಿ.ಜಿ.ಕೆ.ಯ ನೆನಪಿಗಾದರೂ ತಮಗಿಂತ ಹಿರಿಯ ಸಿ.ಜಿ.ಕೆ. ರಂಗಶಿಷ್ಯ ಜನಾರ್ಧನ್ ಅವರನ್ನು ರಂಗಾಯಣದ ನಿರ್ದೇಶಕರನ್ನಾಗಿ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿಭಾಯಿಸುತ್ತಾರೆಂದು ಅಪೇಕ್ಷಿಸಬಹುದೇ?

ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆ ಅನಿರೀಕ್ಷಿತವಲ್ಲ

– ಡಾ.ಎಸ್.ಬಿ.ಜೋಗುರ

ಮುಖ್ಯಮಂತ್ರಿಗಳು ಅಕಾಡೆಮಿಗಳ ಅಧ್ಯಕ್ಷರ ರಾಜೀನಾಮೆಯನ್ನು ಕೇಳಿದ್ದೇ ಕೆಲವು ಸಾಹಿತಿಗಳು ತುಂಬಾ ಬೇಸರ ವ್ಯಕ್ತಪಡಿಸಿ ಕನಿಷ್ಟ ಮೂರು ವರ್ಷದ ಮಟ್ಟಿಗಾದರೂ ಇರಬೇಡವೇ..? ಎನ್ನುವ ಮಾತನಾಡಿರುವದನ್ನು ನೋಡಿದರೆ ಪ್ರಭುತ್ವಕ್ಕಂಟಿದ ಅಧಿಕಾರದ ಮೋಹವನ್ನು ಸಾಹಿತಿಗಳಿಗೂ ಮೀರಲಾಗುವದಿಲ್ಲ ಎಂಬಂತಾಯಿತು. ಸದ್ಯದ ಸಂದರ್ಭದಲ್ಲಿ ಸಾಂಸ್ಕೃತಿಕ ಲೋಕದಲ್ಲಿಯೂ ಅನೇಕ ಬಗೆಯ ವಿಪ್ಲವಗಳಿವೆ. ಅಲ್ಲಿಯ ಮೌಲ್ಯಗಳ ಬಗೆಗಿನ ಮಾತೇ ಒಂದು ಬಗೆಯ ಕ್ಲೀಷೆಯಾಗುತ್ತದೆ. ಅಷ್ಟಕ್ಕೂ ಸಾಹಿತ್ಯಕ್ಕೂ ರಾಜಕಾರಣಕ್ಕೂ ತುಂಬಾ ವ್ಯತ್ಯಾಸಗಳು ಈಗ ಉಳಿದಿಲ್ಲ. ಕೆಲ ಸಾಹಿತಿಗಳು ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ಇಂದು ಸಾಹಿತ್ಯಕ ವಲಯದಲ್ಲಿ ಜಾತಿ, ಧರ್ಮ, ಲಾಬಿ, ಪ್ರಭಾವಗಳ ಹಾವಳಿಯೇ ಹೆಚ್ಚಾಗಿ ಎದ್ದು ತೋರುತ್ತದೆ. ಕೆಲ ದೊಡ್ಡ ಸಾಹಿತಿಗಳ ಸಣ್ಣತನ ಅನೇಕ ಬಾರಿ ಬಯಲಾಗಿರುವದಿದೆ. ಇಂಥವರು ಸಾಹಿತಿ ಕಂ ರಾಜಕಾರಣಗಳೇ ಸರಿ. ನಡೆ-ನುಡಿಯೊಳಗೆ ಸಾರೂಪ್ಯತೆಯಿರುವ ಸಾಹಿತಿಗಳನ್ನು ಈಗ ಕೇಳುವವರೇ ಇಲ್ಲ. ಹಿಂದಿನ ಪ್ರಭುತ್ವ ತನ್ನ ಆಡಳಿತಕ್ಕೆ ಸರಿ ಹೊಂದುವವರನ್ನು ಆ ಹುದ್ದೆಗಳಲ್ಲಿ ಕೂಡಿಸಿದ್ದರೆ, ಈಗಿನ ಪ್ರಭುತ್ವ ತನಗೆ ಬೇಕಿರುವವರನ್ನು ಆ ಸ್ಥಾನದಲ್ಲಿ ಕುಳ್ಳರಿಸುತ್ತದೆ. ಅದು ನಿರೀಕ್ಷಿತವೂ ಹೌದು. ಇಲ್ಲಿ ಸಾಮರ್ಥ್ಯ, ಪ್ರತಿಭೆ, ಅರ್ಹತೆ ಎನ್ನುವ ಮಾತುಗಳೆಲ್ಲಾ ಬರೀ ಸಂಸ್ಕೃತಾನುಕರಣದ ಮೇಲ್ಪದರಿನ ಸಂಭಾಷಣೆ ಮಾತ್ರ. ಕೊನೆಗೆ ಮತ್ತೆ ಗೆಲ್ಲುವ ಸೂತ್ರಗಳೆಂದರೆ ಜಾತಿ, ಧರ್ಮ, ಲಾಬಿ, ಹಣ ಮತ್ತು ಪ್ರಭಾವಗಳೇ.. ಇವುಗಳನ್ನು ಮೀರಿ ದಕ್ಷ ಮತ್ತು ಸಮರ್ಥರಾದವರನ್ನು ಅಕಾಡೆಮಿಗಳಿಗೆ ನೇಮಿಸುವಂತಾದರೆ ಸಾಕು.

ಈಗಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭದಲ್ಲಿ ಮೌಲ್ಯ ಎನ್ನುವ ಪದವನ್ನು ಬಳಸುವದೇ ಮಹಾ ಪ್ರಮಾದವಾಗಿ ತೋರುತ್ತದೆ. ಧರ್ಮವನ್ನೂ ರಾಜಕಾರಣ ವ್ಯಾಪಿಸಿರುವ ಸಂದರ್ಭದಲ್ಲಿ ಜಾತಿಯನ್ನೇ ಸಾಮರ್ಥ್ಯದ ಜಾಗೆಯಲ್ಲಿ ಪ್ರಬಲ ಮಾನದಂಡವಾಗಿಸಿಕೊಂಡ ಈ ಹೊತ್ತಿನಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ವಲಯದ ಶ್ರೇಷ್ಟತೆಯ ಬಗ್ಗೆ ಮಾತನಾಡುವವರ ಬಗ್ಗೆ ಮರುಕವೆನಿಸುತ್ತದೆ. ಅಸ್ಥಿತ್ವದಲ್ಲಿರುವ ಸರಕಾರವೊಂದು ತಾನು ಕೊಡಮಾಡುವ ಹಣಕಾಸಿನ ನೆರವಿನ ಹಿನ್ನೆಲೆಯಲ್ಲಿ ಪ್ರಭುತ್ವದ ಮೂಲಕ ಅಲ್ಲಿಯ ಆಯಕಟ್ಟಿನ ಹುದ್ದೆಗಳನ್ನು ಬದಲಿಸುವ ಸ್ವಾತಂತ್ರ್ಯ ಹೊಂದುವದು ಸರಿಯಲ್ಲ ಎನ್ನುವ ಕೂಗೇ ಒಂದು ಬಗೆಯ ರಾಜಕೀಯ ಹಿತಾಸಕ್ತಿಯಂತಿದೆ.
kannada-writers-politicsಅಕಾಡೆಮಿಗಳಲ್ಲಿ ಅಲಂಕರಿಸುವವರಿಗೆ ರಾಜೀನಾಮೆ ಕೇಳುವ ಮುನ್ನವೇ ತಾವೇ ಮುಂದಾಗಿ ಅದನ್ನು ನೀಡುವದರಲ್ಲಿ ಆ ಹುದ್ದೆಯ ಬಗೆಗೆ ಮೋಹವಿಲ್ಲ ಎನ್ನುವದನ್ನು ತೋರಿಸಿಕೊಡುವ ಮೂಲಕ ತಮಗೂ ರಾಜಕಾರಣಿಗಳಿಗೂ ಸ್ವಲ್ಪವಾದರೂ ಭಿನ್ನತೆಯಿದೆ ಎಂದು ಸಾಬೀತು ಮಾಡಬೇಕು, ಅದನ್ನು ಬಿಟ್ಟು ಹೀಗೆ ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಆ ಹುದ್ದೆಯಿಂದ ನನ್ನನ್ನು ಕೆಳಗಿಳಿಸಿದರು ಎನ್ನುವದನ್ನೇ ಮತ್ತೆ ಮತ್ತೆ ಹಲಬುವ ಮೂಲಕ ತಾವೂ ಅಧಿಕಾರ ದಾಹಿಗಳೇ ಎನ್ನುವದನ್ನು ಸಾಬೀತು ಮಾಡಬಾರದು. ಕೆಲ ಸಾಹಿತಿಗಳು ಪ್ರಶಸ್ತಿಗಾಗಿ ಲಾಬಿ ಮಾಡುವದನ್ನು ನೋಡಿ ಜನಸಾಮಾನ್ಯನೇ ರೋಸಿ ಹೋಗಿರುವನು. ಅಷ್ಟಕ್ಕೂ ಸದ್ಯದ ಸಾಹಿತ್ಯಕ ಸಂದರ್ಭ ಯಾವ ರಾಜಕೀಯ ಪರಿಸರಕ್ಕಿಂತಲೂ ವಿಭಿನ್ನವಾಗಿಲ್ಲ. ಇಂದು ಅಮೂರ್ತವಾದ ಜಾತಿಯೇ ಬಹುತೇಕವಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಿರ್ವಹಿಸುವ, ನಿರ್ದೇಶಿಸುವ ದಿನಮಾನಗಳಲ್ಲಿ ಅದ್ಯಾವ ಸಾಂಸ್ಕೃತಿಕ ಮೌಲ್ಯಗಳಿರುವ ಕ್ಷೇತ್ರದ ಬಗ್ಗೆ ಮಾತನಾಡುತ್ತಿರುವಿರಿ ಸ್ವಾಮಿ..?

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕಾಡೆಮಿಗಳಲ್ಲಿರುವ ಅಧ್ಯಕ್ಷರುಗಳು ರಾಜೀನಾಮೆ ನೀಡಬೇಕು ಎಂದು ಕೇಳಿರುವದರಲ್ಲಿ ಒಂದು ಬಗೆಯ ತಾತ್ವಿಕತೆಯಿದೆಯಾದರೂ ರಾಜೀನಾಮೆಯ ನಂತರ ನಡೆಯಬಹುದಾದ ಆಯ್ಕೆಯ ಪಾರದರ್ಶಕತೆಯ ಬಗ್ಗೆಯೂ ಸ್ವಲ್ಪ ಯೋಚಿಸಬೇಕಾಗುತ್ತದೆ. ಹೊಸದಾಗಿ ಅಕಾಡೆಮಿಗಳಿಗೆ ನೇಮಕ ನಡೆಯಲಿದೆ ಎನ್ನುವ ಸುದ್ದಿ ಬಯಲಾದದ್ದೇ ತಡ ಮೊದಲು ಜಾತಿಯ ಲಾಬಿ ಶುರುವಾಗುತ್ತದೆ. ಅಸಹ್ಯ ಮತ್ತು ಹೇಸಿಗೆ ಹುಟ್ಟಿಸುವ ಮಟ್ಟದಲ್ಲಿ ಈ ಜಾತಿ ಲಾಭಿ ನಡೆಯುತ್ತದೆ. ಎಲ್ಲರೂ ಅಗಾಧ ಪಂಡಿತರೇ ಆದರೂ ಎಲ್ಲರ ಸಾಮರ್ಥ್ಯದ ಮಾನದಂಡ ಜಾತಿ. ಹಿಂದೆಂದಿಗಿಂತಲೂ ಇಂದು ಹೆಜ್ಜೆ ಹೆಜ್ಜೆಗೂ ನಮ್ಮನ್ನು ಆಳುವ, ನಮ್ಮ ಎಲ್ಲ ವ್ಯವಹಾರಗಳನ್ನು ನಿರ್ಧರಿಸುವ ಒಂದು ಪ್ರಬಲ ಸಂಸ್ಥೆಯಾಗಿ ಜಾತಿ ಕೆಲಸ ಮಾಡುತ್ತಿದೆ. ಸಾಹಿತ್ಯಕ ವಲಯದಲ್ಲಂತೂ ಇದರ ಹಾವಳಿ ಮತ್ತೂ ಹೆಚ್ಚಿಗಿದೆ. ಲೇಖಕನೊಬ್ಬನ ಕೃತಿಯನ್ನು ಜಾತಿಯ ವಾಸನೆಯ ಮೂಲಕವೇ ಓದುವ, ವಿಮರ್ಶಿಸುವ ಸೂಕ್ಷ್ಮ ನಾಸಿಕವಾಹಿಗಳ ಸಂಖ್ಯೆ ಈಗ ಅಪಾರವಾಗಿದೆ. ಹೀಗಾಗಿ ಒಬ್ಬ ಹೊಸ ಬರಹಗಾರ ಈ ಸಾಂಸ್ಕೃತಿಕ ಹೊಲಸುತನದ ನಡುವೆ ಒಂದು ಒಳ್ಳೆಯ ಕೃತಿಯನ್ನು ಕೊಟ್ಟರೂ ಅದನ್ನು ಸರಿಯಾಗಿ ಗುರುತಿಸದ ಸಂದರ್ಭ ಸಾಹಿತ್ಯಕ ವಲಯದಲ್ಲಿದೆ. ಮಹಾನ್ ದೊಡ್ಡ ದೊಡ್ಡ ಸಾಹಿತಿಗಳೆನಿಸಿಕೊಂಡವರು ಪರೋಕ್ಷವಾಗಿ ಸ್ವಜಾತಿಯನ್ನು ಪ್ರೀತಿಸುತ್ತ, ಪೊರೆಯುತ್ತ ಬಂದಿರುವದರ ಪರಿಣಾಮವಾಗಿಯೇ ಇಂದು ಸಾಹಿತ್ಯಕ ವಲಯ ಹೇಸಿಗೆ ಹುಟ್ಟಿಸುವಂತಾಗಿದೆ. ರಾಜಕಾರಣಿಯೊಬ್ಬ ರಾಜಕೀಯ ಮಾಡುತ್ತಾನೆ ಎನ್ನುವದಾದರೆ ಅದು ಅವನ ವೃತ್ತಿ ಮತ್ತು ಪ್ರವೃತ್ತಿ. ಅಲ್ಲೊಂದು ಬಗೆಯ ತಾದಾತ್ಮ್ಯತೆ ಇದೆ. ಇನ್ನು ನಾವು ಅವನನ್ನು ಶಪಿಸಬೇಕಿರುವದು ಆತನ ಭ್ರಷ್ಟ ಗುಣ ಮತ್ತು ಸುಳ್ಳು ಭರವಸೆಗಳಿಗಾಗಿ. ಸಾಹಿತಿಯಾದವನು ಹಾಗಲ್ಲ. ನುಡಿದಂತೆ ನಡೆವವನು ಎನ್ನುವ ಹಾಗೆ ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಮಾತನಾಡುವವನು. ನಿಜಜೀವನಕ್ಕಿಳಿದರೆ ನಡೆ-ನುಡಿಯಲ್ಲಿ ಒಂದಾಗಿರುವ ಸಂದರ್ಭಗಳು ಅಪರೂಪ. ರಾಜಕಾರಣ ಇವನ ವೃತ್ತಿಯೂ ಅಲ್ಲ, ಪ್ರವೃತ್ತಿಯೂ ಅಲ್ಲ. ಆದ್ರೆ ರಾಜಕಾರಣಿಗಳು ಕೂಡಾ ನಾಚುವ ಹಾಗೆ ರಾಜಕೀಯ ಮಾಡುವ ನಾಜೂಕಯ್ಯ. ಹೀಗಾಗಿಯೇ ಇಂದು ಸಾಹಿತ್ಯಕ ವಲಯದಲ್ಲಿ ನಿಂತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮಾತನಾಡುವವರು ತುಂಬಾ ಸಿಂಪಥಿ ಗಿಟ್ಟಿಸುವವರ ಹಾಗೆ ಕಾಣುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನ ಸರಿಯಾದುದು. ಪ್ರತಿಯೊಂದು ರಾಜಕೀಯ ಪಕ್ಷವು ತನ್ನ ತನ್ನ ಹಿಂಬಾಲಕರನ್ನು ಓಲೈಸುವದು ಮಾಮೂಲು. ಮೊದಲಿನ ರಾಜಕೀಯ ಪಕ್ಷದ ಅವಧಿಯಲ್ಲಿ ನೇಮಕಗೊಂಡವರ ಬದಲಾಗಿ ಹೊಸ ಆಯ್ಕೆ ಬಯಸುವದು ಸಹಜ. ಆದರೆ ಮೊದಲಿನ ಆಯ್ಕೆಗೂ ಮತ್ತು ಈಗಿನ ಆಯ್ಕೆಯ ನಡುವೆ ಯಾವ ವ್ಯತ್ಯಾಸಗಳೂ ಉಳಿಯಲಿಲ್ಲ ಎನ್ನುವ ಹಾಗೆ ಸಾಂಸ್ಕೃತಿಕ ವಲಯದ ಜನತೆ ಆಡಿಕೊಳ್ಳದ ಹಾಗೆ ಆಯ್ಕೆ ಮಾಡಿದರೆ ಸಾಕು ಎನ್ನುವದು ನನ್ನಂಥವರ ಆಸೆ.

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

– ಬಿ.ಶ್ರೀಪಾದ ಭಟ್

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನಾತ್ಮಕ ಬದಲಾವಣೆಗಳಿಗಾಗಿ ಸದಾ ತುಡಿಯುವ, ಹಂಬಲಿಸುವ ಚಿಂತನೆಗಳು ಮತ್ತು ಅದನ್ನು ಕಾರ್ಯಗತಗೊಳಿಸುವ ಕ್ರಿಯಾತ್ಮಕ ರೂಪರೇಷೆಗಳು, indiaಮತ್ತು ತಾನು ರೂಪಿಸುವ ನಿಯಮಾವಳಿಗಳಿಗೆ ಉತ್ತರದಾಯಿತ್ವ ಇವೆಲ್ಲವನ್ನು ಕಳೆದುಕೊಂಡು ಅತ್ಯಂತ ಕ್ಷುಲ್ಲಕ ಮತ್ತು ಹೇಸಿಗೆ ಹುಟ್ಟಿಸುವ, ಲಜ್ಜೆಗೆಟ್ಟ ಸ್ಥಿತಿಗೆ ಬಂದು ತಲುಪಿದ್ದರೆ ನಮ್ಮ ಮಾಧ್ಯಮಗಳು ಸದಾ ಧಗಧಗಿಸುವ ತಮ್ಮೊಡಲೊಳಗಿನ ನೈತಿಕತೆ, ಅಂತರ್ಗತವಾಗಿ ಪ್ರವಹಿಸುವ ನ್ಯಾಯವಂತಿಕೆ, ಸಾಮಾಜಿಕ ಮೌಲ್ಯಗಳು ಮತ್ತು ಮುಖ್ಯವಾಗಿ ಮಾನವೀಯತೆಯ, ಸಾಮಾಜಿಕ ನ್ಯಾಯದ ತತ್ವಜ್ಞಾನ ಇವೆಲ್ಲವನ್ನೂ ಮರೆತು, ಅವಕ್ಕೆಲ್ಲಾ ತಿಲಾಂಜಲಿ ನೀಡಿ, ಬದಲಾಗಿ ಅಳುವ ವ್ಯವಸ್ಥೆಯನ್ನು, ಪ್ರಭುತ್ವವನ್ನು ತಮಗೆ ಬೇಕೆಂದಹಾಗೆ ಅಲ್ಲಾಡಿಸುತ್ತೇವೆ, ಬೇಕಿದ್ದರೆ ಬೀಳಿಸುತ್ತೇವೆ ಸಹ ಎಂಬಂತಹ ಮಿತಿಮೀರಿದ ಭಂಡತನದಿಂದಾಗಿ ಇಂದು ತಲುಪಿರುವ ಕೆಳಮಟ್ಟದ ಅನೈತಿಕತೆ ಮತ್ತು ತಮ್ಮೊಂದಿಗೆ ಇಡೀ ವ್ಯವಸ್ಥೆಯ ಶುದ್ಧಾಂಗ ಲವಲವಿಕೆಯನ್ನೇ ಒಂದು ಮಟ್ಟದಲ್ಲಿ ನಿರ್ಜೀವಗೊಳಿಸಿರುವುದು, ಇವೆರೆಡೂ ಒಂದಕ್ಕೊಂದು ತಳಕು ಹಾಕಿಕೊಂಡು ಇಂದು ಇಡೀ ದೇಶವನ್ನೇ ನಗೆಪಾಟಲಿಗೀಡಾಗಿಸಿವೆ. ಇಂಡಿಯಾಗೆ ಈ ರಾಜಕೀಯ ಪಕ್ಷಗಳು ಮತ್ತು ಬಹುಪಾಲು ಮಾಧ್ಯಮಗಳು ಅಂಟಿಸಿರುವ ಕಳಂಕಗಳು ವಿವಿಧ ಸ್ವರೂಪಗಳಲ್ಲಿವೆ. ಒಂದನ್ನು ಬಿಡಿಸಹೊರಟರೆ ಮತ್ತೊಂದಕ್ಕೆ ತಗಲಿಕೊಳ್ಳುತ್ತೇವೆ ಮತ್ತು ಈ ನಿರಂತರ ಅರಾಜಕತೆಗೆ ಭಾಗಿಗಳಾಗುತ್ತಲೇ ಸಾಕ್ಷಿಗಳಾಗುತ್ತೇವೆ. ಸ್ವತಂತ್ರ ಭಾರತದಲ್ಲಿ ಭಾರತೀಯರು ಈ ಮಟ್ಟದಲ್ಲಿ ಮಾನಸಿಕ ದಾಸ್ಯಕ್ಕೆ ಬಲಿಯಾಗಿದ್ದು ಇದೇ ಮೊದಲೇನೊ.

ಬಿಜೆಪಿ ತನ್ನ ವಾರ್ಷಿಕ ಕಾರ್ಯಕಾರಣಿ ಸಭೆಯನ್ನು ನಡೆಸುತ್ತದೆ. ಇದರಲ್ಲಿ ವಿಶೇಷವೇನಿದೆ? ಆದರೆ ಬಹುಪಾಲು ಮಾಧ್ಯಮಗಳಿಗೆ Advaniಅದು ಮೊದಲ ಪುಟದ ಸುದ್ದಿ. ಬ್ರೇಕಿಂಗ್ ನ್ಯೂಸ್. ಮ್ಯಾಜಿಕ್ ಮೊಮೆಂಟ್. ಇದನ್ನು ಮತ್ತು ಈ ತರಹದ ಅನೇಕ ಕ್ಷುಲ್ಲಕ ವಿದ್ಯಾಮಾನಗಳನ್ನು ಒಂದು ಬಗೆಯ ರಿಯಲ್ ಎಸ್ಟೇಟ್ ಧಂಧೆಯ ಮಟ್ಟಕ್ಕೆ ತಂದು ನಿಲ್ಲಿಸಿದ್ದು ನಮ್ಮ ಬಹುಪಾಲು ಕಳಂಕಿತ ಮಾಧ್ಯಮಗಳು. ಈ ರಿಯಲ್ ಎಸ್ಟೇಟ್ ಧಂಧೆಯಲ್ಲಿ ಬಹುಪಾಲು ಕಳಂಕಿತ ಮಾಧ್ಯಮಗಳು ಉತ್ಸಾಹಿ ಬ್ರೋಕರ್‌ನ ಪಾತ್ರ ನಿರ್ವಹಿಸಿದ್ದರೆ ಆ ಬದಿಯಲ್ಲಿ ರಾಜಕೀಯ ಪಕ್ಷಗಳು ಭ್ರಷ್ಟ ಭೂಮಾಲೀಕನ ಪಾತ್ರ ನಿರ್ವಹಿಸಿದ್ದರೆ ಇಲ್ಲಿನ ಜನತೆ ಎಂದಿನಂತೆ ಮೋಸಹೋದ ಖರೀದುದಾರರು. ಇಂದಿನ ಸಂದರ್ಭದಲ್ಲಿ ಮತ್ತು ಹಿಂದೆ ಅನೇಕ ಸಂದರ್ಭಗಳಲ್ಲಿ ಮಾಧ್ಯಮಗಳ ಈ ಗತಿಗೆಟ್ಟ ಹಪಾಹಪಿತನವನ್ನು ತನ್ನ ಅನುಕೂಲಕ್ಕೆ, ತನ್ನ ಮೇಲ್ಮುಖ ಚಲನೆಗೆ ಅದ್ಭುತವಾಗಿ ಬಳಸಿಕೊಂಡಿದ್ದು ಫ್ಯಾಸಿಸ್ಟ್ ರಾಜಕಾರಣಿ ನರೇಂದ್ರ ಮೋದಿ. ಪರಸ್ಪರ ದೈವತ್ವತ್ತಕ್ಕೇರಿಸಿಕೊಳ್ಳುವ ಇವರಿಬ್ಬರ ಕಣ್ಣಾಮುಚ್ಚಾಲೆಯಾಟದ ವಿಷಚಕ್ರದ ಸುಳಿಯಲ್ಲಿ ಸಿಲುಕಿಕೊಂಡ ಇಂಡಿಯಾದ ನಾಗರಿಕರು ತಾವಿದನ್ನು ಆನಂದಿಸುತ್ತಿದ್ದೇವೆಯೋ ಅಥವಾ ತಿರಸ್ಕರಿಸುತ್ತಿದ್ದೇವೆಯೋ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿ ಮಾನಸಿಕ ದಾಸ್ಯಕ್ಕೆ ಬಲಿಯಾಗುತ್ತಿರುವುದು ಮಾತ್ರ ದುರಂತವೇ ಸರಿ. ಅದರಲ್ಲಿಯೂ ವಿದ್ಯಾವಂತ ಮಧ್ಯಮ, ಮೇಲ್ಮಧ್ಯಮ ವರ್ಗ ಈ ಮಟ್ಟದಲ್ಲಿ ಆತ್ಮವಂಚನೆಗೆ ಗುರಿಯಾಗಿದ್ದು ಇವರ ಕುರಿತಾದ ಪ್ರೀತಿ, ಗೌರವಗಳು ಕುಂಠಿತಗೊಳ್ಳುತ್ತಿವೆ.

ಎಂಬತ್ತು ವರ್ಷಗಳ ಹಿಂದೆಯೇ ಯುರೋಪಿಯನ್ ರಾಷ್ಟ್ರಗಳಲ್ಲಿ ಫ್ಯಾಸಿಸ್ಟರು ನೇರವಾಗಿಯೇ ತಮ್ಮ ಫ್ಯಾಸಿಸ್ಟ್ ಧೋರಣೆಗಳನ್ನು, ಸರ್ವಾಧಿಕಾರ ನೀತಿಯನ್ನು ಬಳಸಿಕೊಂಡು ಅಧಿಕಾರವನ್ನು ವಹಿಸಿಕೊಂಡಿದ್ದೂ ಆಯ್ತು. ಅಲ್ಪಕಾಲಾವಧಿಯ ಸರ್ವಾಧಿಕಾರದ ಆಡಳಿತದ ನಂತರ ತಿರಸ್ಕಾರಕ್ಕೆ ಗುರಿಯಾಗಿ ಅಷ್ಟೇ ಕ್ಷ್ರಿಪ ಗತಿಯಲ್ಲಿ ನಾಶವಾಗಿ, ಕಣ್ಮೆಯಾಗಿದ್ದೂ ಆಯ್ತು. ಆದರೆ ಇಂಡಿಯಾದ ಸಂದರ್ಭದಲ್ಲಿ ತಾನು ಚಾಲ್ತಿಗೆ ಬಂದು ಎಂಬತ್ತು ವರ್ಷಗಳಾದರೂ ಇಲ್ಲಿನ ಫ್ಯಾಸಿಸ್ಟ್ ಪಕ್ಷ ಆರೆಸಸ್‌ಗೆ ತಮ್ಮ ಮತೀಯವಾದಿ ಸಿದ್ಧಾಂತಗಳನ್ನು ಆಧರಿಸಿ ನೇರವಾಗಿ ಅಧಿಕಾರವನ್ನು ಕಬಳಿಸಲು ಇಂದಿಗೂ ಸಾಧ್ಯವಾಗಿಲ್ಲ. ಕೇವಲ ಆರೆಸಸ್ ಮಾತ್ರವಲ್ಲ ಇತರೇ ಧರ್ಮಗಳ ಎಲ್ಲಾ ಬಗೆಯ ಮೂಲಭೂತವಾದಿ ಫ್ಯಾಸಿಸ್ಟರ ವಿಷಯದಲ್ಲಿಯೂ ಸಹ ಈ ಮಾತು ಸತ್ಯ. ಎಲ್ಲಾ ಧರ್ಮಗಳ ಫ್ಯಾಸಿಸ್ಟರು ನೇರವಾಗಿ ಅಧಿಕಾರ ವಹಿಸಿಕೊಳ್ಳುವ ಎಲ್ಲಾ ದಾರಿಗಳನ್ನೂ ನಿರಾಕರಿಸಿದ್ದಾನೆ ಇಂಡಿಯಾದ ಪ್ರಜೆ. ಇಂದಿಗೂ ಫ್ಯಾಸಿಸ್ಟರ ಕೈಗೆ ಸಂಪೂರ್ಣ ಅಧಿಕಾರವನ್ನು ಹಸ್ತಾಂತರಗೊಳಿಸಿಲ್ಲ ಇಲ್ಲಿನ ಪ್ರಜ್ಞಾವಂತ ನಾಗರಿಕ. ಇದನ್ನು ಸೋಷಿಯಲಾಜಿ ಮತ್ತು ಅಂಥ್ರೋಪಾಲಜಿ ನೆಲೆಯಲ್ಲಿ ವಿಶ್ಲೇಷಿಸಬೇಕಾದಂತಹ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಮತ್ತು ಬಹುಪಾಲು ಮಾಧ್ಯಮಗಳು ಮಾಡುತ್ತಿರುವುದಾದರೂ ಏನು? ಭಜನೆ !!! ಮೋದಿ ಭಜನೆ!!! ಲಜ್ಜಗೆಟ್ಟ ಈ ಜನಗಳು ಫ್ಯಾಸಿಸ್ಟರ ವಿವಿಧ ಆಯಾಮಗಳನ್ನು, ಅವುಗಳು ರೂಪುಗೊಳಿಸುತ್ತಿರುವ ಏಕರೂಪಿ ವಿನ್ಯಾಸಗಳನ್ನು, ಅವುಗಳ ದಮನೀಯತೆಯ ನಡೆಗಳನ್ನು ಪದರುಪದರಾಗಿ ಬಿಡಿಸಿಡುವುದರ ಬದಲಾಗಿ ಈ ಗುಂಪು ಹಸಿಹಸಿಯಾಗಿ ಸತ್ಯದರ್ಶನದ ಹೆಸರಿನಲ್ಲಿ ಇಲ್ಲಿನ ಜನತೆಯ ಮೇಲೆ ಬೌದ್ಧಿಕ ಡಿಕ್ಟೇಟರ್‌ಶಿಪ್ ನಡೆಸುತ್ತಿದ್ದಾರೆ. ಇಡೀ ವ್ಯವಸ್ಥೆಯನ್ನೇ ಋಣಾತ್ಮಕತೆಯ ದಿಕ್ಕಿಗೆ ದಾರಿ ತಪ್ಪಿಸಿದ ಅಪಕೀರ್ತಿ ಈ ಜನಗಳಿಗೇ ಸಲ್ಲಬೇಕು.

ಸಧ್ಯಕ್ಕೆ ಸುದ್ದಿಯಲ್ಲಿರುವ ಸಂಘಪರಿವಾರವು ಮತ್ತೇನಲ್ಲದೆ ಒಂದು ಮತೀಯವಾದಿ ಲುಂಪೆನ್ ಗುಂಪು. ಧಾರ್ಮಿಕ ಫೆನಟಿಸಂ ಅನ್ನು ತನ್ನ ಏಕಮಾತ್ರ ಅಜೆಂಡಾವನ್ನಾಗಿರಿಸಿಕೊಂಡಿರುವ, ಏಕ್ ಧಕ್ಕ ಔರ್ ದೋ ನುಡಿಗಟ್ಟನ್ನು ತನ್ನ ಸ್ಲೋಗನ್ನಾಗಿಸಿಕೊಂಡ ಈ ಮತೀಯವಾದಿ ಗುಂಪು 1990 ರಿಂದ ಪ್ರತ್ಯಕ್ಷವಾಗಿಯೇ ಮತ್ತು ನೇರವಾಗಿಯೇ ಧರ್ಮದ, ಜಾತಿಯ ಆಧಾರದ ಮೇಲೆ ಇಂಡಿಯಾವನ್ನು ಇಬ್ಭಾಗಿಸಿತು. ಆಗ ಇದರ ನೇತೃತ್ವ ವಹಿಸಿದ್ದು ಎಲ್.ಕೆ,ಅಡ್ವಾನಿ. ತಮ್ಮ ಕೋಮುವಾದಿ ರಥಯಾತ್ರೆಯ ಮೂಲಕ ದೇಶದ ಮೂಲಸೆಲೆಯಾಗಿದ್ದ, ಸ್ವತಂತ್ರ ಭಾರತದಲ್ಲಿ ನೆಹರೂ, ಅಂಬೇಡ್ಕರ್ ಅವರು ಅಪಾರ ನಿಷ್ಟೆ ಮತ್ತು ಬದ್ಧತೆಯಿಂದ ಕಟ್ಟಿದ್ದ ಸಹೋದರತ್ವದ, ಸಂಕೀರ್ಣವಾದ, ಮಾನವೀಯ ಹಿನ್ನೆಲೆಯ ಸಾಂಸ್ಕೃತಿಕ ಎಳೆಗಳ, ಸೆಕ್ಯುಲರ್, Narendra_Modiಜಾತ್ಯಾತೀತ ಸಂವಿಧಾನದ ಧ್ವಂಸ ಕಾರ್ಯವನ್ನು ಶುರಮಾಡಿದ ಅಡ್ವಾನಿ ಮತ್ತವರ ಸಹಚರರಿಗೆ ಸಾರಥಿಯಾಗಿದ್ದು ಆ ಕಾಲದ ಆರೆಸಸ್ ಸ್ವಯಂಸೇವಕ ನರೇಂದ್ರ ಮೋದಿ. ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಇವರ ಕಾರ್ಯಕ್ಕೆ ಸಂಪೂರ್ಣವಾಗಿ ಬೆಂಬಲಿಸಿದ್ದು ಆರೆಸಸ್. ಇದೆಲ್ಲವೂ ಇಂದು ಇತಿಹಾಸದಲ್ಲಿ ದಾಖಲಾಗಿದೆ. ದೇಶವನ್ನು ಒಡೆಯುವ ಈ ದುಷ್ಕೃತ್ಯ ತಾರಕಕ್ಕೇರಿದ್ದು ಬಾಬರಿ ಮಸೀದಿಯ ಧ್ವಂಸದ ಮೂಲಕ. ನಂತರ ತನ್ನ ರಕ್ತಸಿಕ್ತ ಪ್ರಯಾಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದು 2002ರ ಗುಜರಾತ್ ನರಮೇಧದ ಮೂಲಕ.

ಇಡೀ ಕಾಲಘಟ್ಟದಲ್ಲಿ ಅಡ್ವಾನಿಯವರು ಅನೇಕ ಬಾರಿ ನೇರವಾಗಿ ಪಾಲುದಾರrAಗಿದ್ದರೆ ಕೆಲವು ಬಾರಿ ಪ್ರೇಕ್ಷಕರಾಗಿಯೂ ತಮ್ಮ ಆರೆಸಸ್ ಸ್ವಯಂಸೇವಕನ ಜವಾಬ್ದಾರಿ ನಿಭಾಯಿಸಿದ್ದಾರೆ. ಇಂದಿಗೂ ಬಾಬರಿ ಮಸೀದಿಯ ಧ್ವಂಸ ಪ್ರಕರಣದಲ್ಲಿ ಇವರ ಮೇಲಿನ ಆಪಾದನೆ ನಿವಾರಣೆಯಾಗಿಲ್ಲ. ಇಂದು ವೃದ್ಧನಾರಿ ಪತಿವ್ರತೆಯ ಮಾದರಿಯಲ್ಲಿ ತಮ್ಮನ್ನು ತಾವು ಹುತಾತ್ಮರಾಗಿಸಕೊಳ್ಳಬಯಸುವ ಅಡ್ವಾನಿಯವರಿಗೆ ಮೃದುವಾದಿಯ ಮುಖವಾಡವನ್ನು ಅದೂ ವಾಜಪೇಯಿಯವರ ವೇಷವನ್ನು ತೊಡಿಸಲು ಬೌದ್ಧಿಕವಾಗಿ ದಿವಾಳಿಯೆದ್ದಿರುವ ಮಾಧ್ಯಮಗಳು ವೇದಿಕೆಯನ್ನೊದಗಿಸುತ್ತಿರುವುದು ಒಂದು ದುರಂತ ಪ್ರಹಸನವಲ್ಲದೆ ಮತ್ತಿನ್ನೇನು ?? ಎಂಬತ್ತಾರರ ಇಳಿ ವಯಸ್ಸಿನಲ್ಲಿಯೂ ನಾವೆಲ್ಲ ಅಸೂಯೆ ಪಡುವಷ್ಟು ಅತ್ಯಂತ ಲವಲವಿಕೆಯಿಂದಿರುವ ಅಡ್ವಾನಿಯವರಿಗೆ ಇಂದು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಗತಕಾಲದ ತಪ್ಪುಗಳ ಕುರಿತಾಗಿ ಪ್ರಾಯಶ್ಚಿತ್ತವಿದ್ದಂತಿಲ್ಲ. ಇಂದು ಮಾಡಿದ್ದುಣ್ಣೋ ಮಾರಾಯನೆಂಬ ಸ್ಥಿತಿಗೆ ಬಂದು ತಲುಪಿರುವ ಅಡ್ವಾನಿಯವರ ಅರವತ್ತು ವರ್ಷಗಳ ದೀರ್ಘವಾದ ರಾಜಕೀಯ ಬದುಕು ಪ್ರತಿಯೊಬ್ಬ ಮತೀಯವಾದಿ ರಾಜಕಾರಣಿಗೆ ತಕ್ಕ ಪಾಠವಾಗಬಲ್ಲದೆಂದು ವಾಸ್ತವ ಸತ್ಯಗಳನ್ನು ಹೇಳಲು ನಿರಾಕರಿಸುತ್ತಿರುವ ನಮ್ಮ ಮಾಧ್ಯಮಗಳಿಗೆ ಸದಾ ಕಾಲ ಅಮ್ನೀಸಿಯ !!

ದೇಶಪ್ರೇಮಕ್ಕೂ ಮತ್ತು ಅದನ್ನು ನೆಪವನ್ನಾಗಿರಿಸಿಕೊಂಡು ದಬ್ಬಾಳಿಕೆ ನಡೆಸುವ ಫ್ಯಾಸಿಸಂನ ಮುಖಗಳಿಗೂ ಇರುವ ಅಜಗಜಾಂತರ ವ್ಯತ್ಯಾಸ ಮತ್ತು ಅಪಾರ ಭಿನ್ನತೆ ಅರವತ್ತು ವರ್ಷಗಳಷ್ಟು ಕಾಲ ಅತ್ಯಂತ ಪ್ರಾಮಾಣಿಕವಾಗಿ ಪಕ್ಷನಿಷ್ಟ ರಾಜಕಾರಣವನ್ನು ಮಾಡಿಕೊಂಡು ಬಂದ ಅಡ್ವಾನಿಯವರಲ್ಲಿನ ಮುಗ್ಧತೆಯ ವ್ಯಕ್ತಿತ್ವ ಅರಿಯದೇ ಹೋಗಿದ್ದು ಕೂಡ ಭಾರತದ ರಾಜಕಾರಣದ ದುರಂತ ಅಧ್ಯಾಯ. ಈ ಕಾಮನ್‌ಸೆನ್ಸ್ ಅನ್ನು ಒಳಗೊಂಡತಂಹ, ಆಳವಾದ ಸಾಮಾಜಿಕ ಒಳನೋಟಗಳನ್ನು ತನ್ನೊಳಗೆ ಬಸಿದುಕೊಳ್ಳುವ ಗುಣವಿಲ್ಲದಿದ್ದಕ್ಕಾಗಿಯೇ ವೈಯುಕ್ತಿಕವಾಗಿ ಮುಸ್ಲಿಂರನ್ನು ತಮ್ಮ ಸ್ನೇಹಿತನಂತೆ ನಡೆಸಿಕೊಳ್ಳುವ, ಮಾನವತಾವಾದಿ, ಸ್ನೇಹಶೀಲ, ಅಪಾರ ಪ್ರೀತಿಯ ಸ್ನೇಹಿತನಂತೆ, ತಂದೆಯಂತೆ ವರ್ತಿಸುವ ಅಡ್ವಾನಿ ಸಾರ್ವಜನಿಕವಾಗಿ ಮತೀಯವಾದಿಯಾಗಿ, ಅನ್ಯಧರ್ಮದ್ವೇಷಿಯಾಗಿ ಬದಲಾಗುತ್ತಿದ್ದದು. ಸಂಘಪರಿವಾರದ ಫೆನಟಿಕ್, ಲುಂಪೆನ್ ಗುಂಪಿನ ನೇತಾರರಾಗಿದ್ದು.ಈ ಸಂದರ್ಭದಲ್ಲಿಯೇ ನರೇಂದ್ರ ಮೋದಿಯೆಂಬ ವರ್ಕೋಹಾಲಿಕ್, ಪ್ರಾಮಾಣಿಕ ಸ್ವಯಂಸೇವಕ ಫ್ಯಾಸಿಸ್ಟ್ ಆಗಿ ರೂಪುಗೊಳ್ಳತೊಡಗಿದ್ದು. ಮೋದಿಯು ಈ ಫ್ಯಾಸಿಸಂನ ಎಲ್ಲ ಪಟ್ಟುಗಳನ್ನು ನಿಭಾಯಿಸುವ ಗುಣಗಳನ್ನೂ ಕಲಿತದ್ದು ಈ ಕಾಲಘಟ್ಟದಲ್ಲಿಯೇ.

ಈ ವರ್ಷಗಳಲ್ಲಿ ಫೆನಟಿಸಂನ ರಾಜಕಾರಣವನ್ನು ಹತ್ತಿರದಿಂದ ನೋಡಿ ಈ ಗುಣಗಳನ್ನು ತನ್ನ ವ್ಯಕ್ತತ್ವದ ಅವಿಭಾಜ್ಯ gujarat-povertyಅಂಗವಾಗಿ ರೂಪಿಸಿಕೊಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಈ ನರೇಂದ್ರ ಮೋದಿ. ಮುಸಲೋನಿಯ ಮಾದರಿಯಲ್ಲಿಯೇ ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿ ಮಾನವೀಯತೆಯ, ಸೆಕ್ಯುಲರ್‌ನ ಎಲ್ಲಾ ಬಗೆಯ ಮಾದರಿಗಳನ್ನು ಮತ್ತು ಬದುಕನ್ನು ,ಪ್ರಜ್ಞಾವಂತರ ಚಿಂತನೆಗಳನ್ನು ತನ್ನ ಸರ್ವಾಧಿಕಾರದ ಮೂಲಕ ಹೆಚ್ಚೂ ಕಡಿಮೆ ಸಾಯಿಸಿರುವ ಈ ಮೋದಿ ಭಸ್ಮಾಸುರನ ರೀತಿಯಲ್ಲಿ ತನ್ನ ಮುಂದಿನ ಆಹುತಿಗಳಿಗಾಗಿ ದೆಹಲಿಯ ಗುದ್ದುಗೆಗಾಗಿ ತಡಕಾಡುತ್ತಿದ್ದಾನೆ. ಅಪಾರ ಮಹಾತ್ವಾಕಾಂಕ್ಷಿಯಾದ ಈ ಅದ್ಭುತ ಭಾಷಣಕಾರ ನರೇಂದ್ರ ಮೋದಿಯ ಸರ್ವಾಧಿಕಾರಕ್ಕೆ ಮುಂದಿನ ಪ್ರಯೋಗಶಾಲೆ ಕೇಂದ್ರದಲ್ಲಿನ ಅಧಿಕಾರ. ಆದರೆ ಫ್ಯಾಸಿಸ್ಟರಿಗೆ ಎಂದೂ ಮಣೆ ಹಾಕದ ಭಾರತದ ಆರೋಗ್ಯವಂತ ಮನಸ್ಸು ಸರ್ವಾಧಿಕಾರಿ ಮೋದಿಗೂ ಸರಿಯಾಗಿಯೇ ಕಪಾಳಮೋಕ್ಷ ಮಾಡಲಿದೆ. ಹಿಂದೂ ಧರ್ಮದ ಏಕರೂಪಿ ಸಂಸ್ಕೃತಿಯ ಪ್ರತಿಪಾದಕನಾದ ಈ ಮೋದಿ ಸರ್ವಾಧಿಕಾರವನ್ನು ಬಳಸಿಕೊಂಡು ಎಲ್ಲವನ್ನೂ ಸಾಧಿಸಬಹುದೆಂಬ ಹುಸಿ ನಂಬುಗೆಯಲ್ಲಿದ್ದಾನೆ. ಅನೇಕ ಸುಳ್ಳುಗಳನ್ನೊಳಗೊಂಡ ಈತನ ಅಭಿವೃದ್ಧಿ ಮಂತ್ರಗಳ ನಿಜಬಣ್ಣ ಇಂದು ಬಯಲಾಗುತ್ತಿದೆ. ಸರ್ವಾಧಿಕಾರದ ಉಕ್ಕಿನ ಹಿಡಿತದ ಆಡಳಿತದ ಶೈಲಿಯನ್ನು ಸಶಕ್ತ ಆಡಳಿತಗಾರನ ಶೈಲಿಯೆಂದು ಸ್ವತಃ ಮೋದಿ ಮತ್ತು ದಿವಾಳಿಯೆದ್ದ ಬಹುಪಾಲು ಮಾಧ್ಯಮಗಳು ಬೂಸಿ ಬಿಟ್ಟಿದ್ದು, ವರ್ಷಗಳ ಕಾಲ ಹಾದಿ ತಪ್ಪಿಸಿದ್ದು ಇಂದು ಇವೆಲ್ಲವೂ ಬತ್ತಲಾಗಿ ಬಯಲಾಗಿದ್ದೂ ಪ್ರಜ್ಞಾವಂತ ಭಾರತೀಯ ಮರೆತಿಲ್ಲ. ಈತನ ಹತ್ತು ವರ್ಷಗಳ ಕಾಲದ ಆಡಳಿತದಲ್ಲಿ ಗುಜರಾತ್‌ನ ಸೌರಾಷ್ಟ್ರ ಭಾಗವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಗುರಿಯಾಗಿ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರುವುದು ಇಂದು ಭಾರತದ ಕಣ್ಣ ಮುಂದಿದೆ.

ಗುಜರಾತ್‌ನ ಹುಸಿ ಅಭಿವೃದ್ಧಿಯ ಕಾಲಘಟ್ಟದಲ್ಲಿಯೇ ಆ ರಾಜ್ಯದಲ್ಲಿ ಮಾನವ ಸಂಪನ್ಮೂಲದ ಸೂಚ್ಯಾಂಕ ಕೆಳಮಟ್ಟದಲ್ಲಿದೆ. Modiಖಾಸಗಿ ಮಾಲೀಕರು ಮತ್ತು ಖಾಸಗಿ ಉದ್ದಿಮೆದಾರರ ಅಭಿವೃದ್ಧಿಯನ್ನು ರಾಜ್ಯದ ಏಳ್ಗೆಯೆಂಬಂತೆ ಜಂಬ ಕೊಚ್ಚಿಕೊಂಡಿದ್ದು, ಮೇಲ್ಪದರದ, ನಗರಕೇಂದ್ರಿತ ಸುಧಾರಣೆಗಳನ್ನು ಇಡೀ ರಾಜ್ಯಕ್ಕೆ ಅನ್ವಯಿಸಿ ದಾರಿ ತಪ್ಪಿಸಿದ್ದು ಇಂದು ಭಾರತೀಯ ಮನಸ್ಸಿಗೆ ನಿಧಾನವಾಗಿಯಾದರೂ ನಿಖರವಾಗಿ ಗೋಚರಿಸುತ್ತಿದೆ. ಸಣ್ಣ ಮಟ್ಟದ ಬಂಡವಾಳ ಹೂಡಿಕೆಯನ್ನು ಕೃತಕವಾಗಿ, ಕಾಲ್ಪನಿಕವಾಗಿ ದ್ವಿಗುಣಗೊಳಿಸಿ ಮೋಸದ ಅಂಕಿಅಂಶಗಳನ್ನು ತೇಲಿಬಿಟ್ಟರೂ ಅದು ಬಹಳ ಕಾಲ ನಿಲ್ಲದೇ ಮೋದಿ ನಗೆಪಾಟಲಿಗೀಡಾಗಬೇಕಾಯ್ತು. ಶಿಲಾಯುಗದ, ಮನುವಾದದ ಗುಂಪಿನ ಸ್ವಯಂಸೇವಕನೊಬ್ಬ ಇಂದು ತಾನೊಬ್ಬ ಆಧುನಿಕ ಮುಖ್ಯಮಂತ್ರಿಯೆಂದು ಅತ್ಯಂತ ಯಶಸ್ವಿಯಾಗಿ ಮಾರ್ಕೆಟಿಂಗ್ ಮಾಡಿದ್ದು ಮೋದಿಯ ಬಲು ದೊಡ್ಡ ಸಾಧನೆ. ಹಾಗೆಯೇ 2002 ರಲ್ಲಿ ಮುಸ್ಲಿಂರ ಹತ್ಯಾಕಾಂಡವೂ ಸಹ. ಇದರ ಕಲೆಯನ್ನು ಯಾವುದೇ ಬಗೆಯ ಸುಗಂಧ ದ್ರವ್ಯಗಳಿಂದಲೂ ತೊಳೆಯಲಾಗದೆ ಸೋತುಹೋಗಿರುವ ಮೋದಿ ಇಂದು ತಿರಸ್ಕೃತಗೊಂಡ ಜನಪ್ರಿಯ ರಾಜಕಾರಣಿ. ಸ್ವತಂತ್ರ ಭಾರತದಲ್ಲಿ ಇಷ್ಟರ ಮಟ್ಟಿಗೆ ಏಕಾಂಗಿಯಾದ ಜನಪ್ರಿಯ ರಾಜಕಾರಣಿಯ ಉದಾಹರಣೆ ಮತ್ತೆಲ್ಲೂ ಸಿಗಲಾರದು. ಏಕೆಂದರೆ ಶಿವ ವಿಶ್ವನಾಥನ್ ಹೇಳಿದಂತೆ ,”ಮೋದಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಏಕೆಂದರೆ ಸಂವಿಧಾನವನ್ನು ಗೌರವಿಸುವ, ಒಳಗೊಳ್ಳುವಿಕೆಯ ಯಾವುದೇ ಗುಣಲಕ್ಷಣಗಳು ಈತನಲ್ಲಿಲ್ಲ.”