ಗೆದ್ದ ರಾಹುಲ್ ಮುಗ್ಗರಿಸಿದ ಪ್ರತಿಪಕ್ಷಗಳು


– ಚಿದಂಬರ ಬೈಕಂಪಾಡಿ


 

ಸದಾ ಮೌನವಾಗಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮೌನ ಮುರಿಯುವಂತೆ ಮಾಡುವುದು ಯಾರಿಗೆ ಸಾಧ್ಯವೆನ್ನುವುದು ಈಗ ಜಗತ್ತಿಗೇ ಗೊತ್ತಾಗಿದೆ. ಯಾಕೆಂದರೆ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಡಾ.ಸಿಂಗ್ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನಂಬರ್ 2 ನಾಯಕ rahul-gandhiರಾಹುಲ್ ಗಾಂಧಿ ಕಳಂಕಿತರನ್ನು ರಕ್ಷಿಸುವ ಕೇಂದ್ರ ಸರ್ಕಾರದ ತರಾತುರಿ ಅಧ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದದ್ದೇ ತಡ ಮೌನ ಮುರಿದು ಹೇಳಿಕೆ ನೀಡಿದ್ದಾರೆ.

ನಿಜ, ಕೇಂದ್ರದ ಯುಪಿಎ ಸರ್ಕಾರ ಕಳಂಕಿತರನ್ನು ರಕ್ಷಿಸಲು ಮುಂದಾಗಿದ್ದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಸುಪ್ರಿಂಕೋರ್ಟ್ ಕ್ರಿಮಿನಲ್ ಜನಪ್ರತಿನಿಧಿಗಳನ್ನು ಸಂಸತ್ತು ಮತ್ತು ಶಾಸನ ಸಭೆಗಳಿಂದ ಹೊರಗಿಡಲು ಕೈಗೊಂಡ ಪ್ರಮುಖ ತೀರ್ಮಾನದ ತೀರ್ಪು ದೇಶದಲ್ಲಿ ಸಂಚಲನ ಉಂಟು ಮಾಡಿತ್ತು. ಆದರೆ ಅದು ಹೆಚ್ಚು ದಿನ ಕಾವನ್ನು ಉಳಿಸಿಕೊಳ್ಳಲಿಲ್ಲ. ಸುಪ್ರಿಂಕೋರ್ಟ್ ತೆಗೆದುಕೊಂಡ ಐತಿಹಾಸಿಕ ನಿಲುವಿಗೆ ಪ್ರತಿಯಾಗಿ ಕೇಂದ್ರ ಯುಪಿಎ ಸರ್ಕಾರ ಅಷ್ಟೇ ತರಾತುರಿಯಾಗಿ ಅಧ್ಯಾದೇಶ ಹೊರಡಿಸಿ ಕ್ರಿಮಿನಲ್ ಹಿನ್ನೆಲೆಯ ಪ್ರತಿನಿಧಿಗಳು ಮತ್ತೆ ಅಖಾಡದಲ್ಲಿ ಉಳಿಯುವಂಥ ಚಾಣಾಕ್ಷ ನಡೆಗೆ ಮುಂದಾಯಿತು.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಧ್ಯಾದೇಶಕ್ಕೆ ಸಹಿ ಹಾಕಬಾರದು ಎನ್ನುವ ನಿಲುವು ಸಾರ್ವತ್ರಿಕವಾಗಿ ಜನ ಸಾಮಾನ್ಯರದ್ದಾಗಿತ್ತು. ಆದರೆ ಅವರು ಸಹಿ ಹಾಕುತ್ತಿದ್ದರೋ, ಇಲ್ಲವೋ ಎನ್ನುವುದು ಈಗ ಅಪ್ರಸ್ತುತ. ಯಾಕೆಂದರೆ ಅಧ್ಯಾದೇಶವನ್ನೇ ಯುಪಿಎ ಸರ್ಕಾರ ಹಿಂದಕ್ಕೆ ಪಡೆಯಲು ನಿರ್ಧರಿಸಿ ಆಗಿದೆ. ರಾಷ್ಟ್ರಪತಿಗಳು ನಿಜಕ್ಕೂ ಒತ್ತಡಕ್ಕೆ ಒಳಗಾಗುತ್ತಿದ್ದರು ಒಂದು ವೇಳೆ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯಲು ಮನಸ್ಸು ಮಾಡದೇ ಇದ್ದಿದ್ದರೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಈಗ ಪ್ರತಿಪಕ್ಷಗಳು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿ ಪ್ರತಿಕ್ರಿಯೆಸುತ್ತಿವೆ ರಾಹುಲ್ ಚೀರಾಡಿದ ಮೇಲೆ. ಅಧ್ಯಾದೇಶ ಹಿಂದಕ್ಕೆ ಪಡೆಯುವಂತೆ ಮಾಡಿದ್ದು ಪ್ರತಿಪಕ್ಷಗಳಲ್ಲ ರಾಹುಲ್. ಆಡಳಿತ ಪಕ್ಷದಲ್ಲಿದ್ದರೂ ಪ್ರತಿಪಕ್ಷದ ನಾಯಕರಂತೆ ರಾಹುಲ್ ಕೆಲಸ ಮಾಡಿದರು ಎನ್ನುವುದು ಪ್ರತಿಕ್ಷಗಳ ಟೀಕೆಯೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಪ್ರತಿಪಕ್ಷಗಳು ಅಷ್ಟೇನೂ ಗಂಭೀರವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದವು ಎನ್ನುವಂತಿಲ್ಲ. ಇದಕ್ಕೆ ಕಾರಣ ಸರಳ ಅವರು ಸನ್ಯಾಸಿಗಳಲ್ಲ,Rahul_Gandhi_Ajay_Maken ಅವರಿಗೂ ಅಧಿಕಾರ ಬೇಕು. ಕ್ರಿಮಿನಲ್ ಹಿನ್ನೆಲೆ ಎನ್ನುವುದು ಈಗಿನ ರಾಜಕೀಯಕ್ಕೆ ತೀರಾ ಅಗತ್ಯವಾದ ಮತ್ತು ಹೆಚ್ಚು ಫಲ ತಂದುಕೊಡಬಲ್ಲ ಅರ್ಹತೆ ಎನ್ನುವಂತಾಗಿದೆ. ಕ್ರಿಮಿನಲ್ ಕೇಸುಗಳಿಲ್ಲದ ರಾಜಕಾರಣಿಗಳ ಸಂಖ್ಯೆ ತೀರಾ ವಿರಳ ಎನ್ನುವುದಕ್ಕಿಂತಲೂ ಕ್ರಿಮಿನಲ್ ಕೇಸಿಲ್ಲದವರು ರಾಜಕೀಯಕ್ಕೆ ನಾಲಾಯಕ್ಕು ಎನ್ನುವಂಥ ಭಾವನೆ ನೆಲೆಗೊಂಡಿದೆ. ಆದ್ದರಿಂದಲೇ ಬಿಜೆಪಿ ಸಹಿತ, ಈ ದೇಶದ ಎಲ್ಲಾ ವಿರೋಧಪಕ್ಷಗಳು ಯುಪಿಎ ತರಾತುರಿಯಲ್ಲಿ ತಂದ ಅಧ್ಯಾದೇಶವನ್ನು ಬಹಿರಂಗವಾಗಿ ವಿರೋಧಿಸುವಂಥ ಮನಸ್ಥಿತಿಗೆ ಬರಲಾಗಲಿಲ್ಲ.

ತೋರಿಕೆಗೆ ಲಾಲು ಪ್ರಸಾದ್ ಯಾದವ್ ಮೇಲೆ ಸುಪ್ರೀಂಕೋರ್ಟ್ ತೀರ್ಪು ಮುಳುವಾಗಲಿದೆ ಎನ್ನುವ ಭಾವನೆ ಹುಟ್ಟು ಹಾಕಲಾಯಿತೇ ಹೊರತು ಪ್ರತಿಪಕ್ಷಗಳು ತಮ್ಮಲ್ಲೂ ಇರಬಹುದಾದ ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಯುಪಿಎ ಜೊತೆಗೆ ಕೈಜೋಡಿಸಿದ್ದವು ಎನ್ನುವುದರಲ್ಲಿ ಅನುಮಾನಗಳಿಲ್ಲ.

ಬಲವಾಗಿ ವಿರೋಧಿಸುತ್ತಿದ್ದಂಥ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರೂ ಕೂಡಾ ಸುಪ್ರೀಂಕೋರ್ಟ್ ತೀರ್ಪಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ಮೌನಕ್ಕೆ ಶರಣಾಗಿದ್ದರು. ಪ್ರಧಾನಿಯದ್ದು ನಿರಂತರ ಮೌನ, ಇವರದು ಅನಿರೀಕ್ಷಿತ ಮೌನ. ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಮತ್ತು ರಾಹುಲ್ ಮಾತಿಗಷ್ಟೇ ಮಣೆ-ಮನ್ನಣೆ ಎನ್ನುವುದು ಗೊತ್ತಿರುವುದರಿಂದ ಮತ್ತೆ ಮತ್ತೆ ಅದನ್ನು ಇಲ್ಲಿ ಚರ್ಚಿಸುವ ಅಗತ್ಯವಿಲ್ಲ.

ಈ ದೇಶದಲ್ಲಿ ಒಬ್ಬನೇ ಒಬ್ಬ ರಾಜಕಾರಣಿ ಯುಪಿಎ ಸರ್ಕಾರದ ಅಧ್ಯಾದೇಶವನ್ನು ಬಹಿರಂಗವಾಗಿ, ಖಡಾಖಂಡಿತವಾಗಿ ವಿರೋಧಿಸುವಂಥ ಎದೆಗಾರಿಕೆ ತೋರಿಸಲ್ಲಿಲ್ಲ ಎನುವುದು ಎಷ್ಟು ಸತ್ಯವೋ ಸುಪ್ರೀಂಕೋರ್ಟ್ ತೀರ್ಪನ್ನು ಆತ್ಮಪೂರ್ವಕವಾಗಿ ಸ್ವಾಗತಿಸಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಮಾಧ್ಯಮಗಳು ಕೂಡಾ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಕಟಿಸಿ ಗಮನ ಸೆಳೆದವು, ಯುಪಿಎ ಸರ್ಕಾರ ಹೊರಡಿಸಿದ ಅಧ್ಯಾದೇಶವನ್ನು ವ್ಯಾಪಕವಾಗಿ ಪ್ರಚಾರ ಮಾಡಿದವು. ರಾಹುಲ್ ಗಾಂಧಿ ಈ ಅಧ್ಯಾದೇಶವನ್ನು ಹರಿದು ಬಿಸಾಡಿ ಎನ್ನುವ ತನಕವೂ ಕೇವಲ ಒಂದು ಸುದ್ದಿಯಾಗಿ ನೋಡಿದ ಮಾಧ್ಯಮಗಳು ಈಗ ತಾವೂ ಎಡವಟ್ಟು ಮಾಡಿದೆವು ಎನ್ನುವ ಮನಸ್ಥಿತಿಗೆ ಬಂದಿವೆ.

ರಾಹುಲ್ ಗಾಂಧಿ ಅಧ್ಯಾದೇಶವನ್ನು ವಿರೋಧಿಸಿರುವುದು ಅದನ್ನು ಕಸದ ಬುಟಿಗೆ ಹಾಕಿಸಿರುವುದು ವಯಸ್ಸಿನಲ್ಲಿ ಕಿರಿಯರಾಗಿದ್ದರೂ ಒಂದು ಪ್ರಬಲ ರಾಜಕೀಯ ತಂತ್ರಗಾರಿಕೆಯ ನಡೆ ಎನ್ನುವುದನ್ನು ಯಾರೇ ಆದರೂ ಒಪ್ಪಿಕೊಳ್ಳಲೇ ಬೇಕು. ರಾಜಕಾರಣದಲ್ಲಿ ಸಕ್ರಿಯರಾಗಿರುವ advani-sushma-jaitleyರಾಹುಲ್ ಗಾಂಧಿ ಅವರಿಂದ ರಾಜಕೀಯ ನಡೆಗಳನ್ನು ನಿರೀಕ್ಷೆ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದಾದರೆ ಅವರು ಅರಿವಿದ್ದೇ ಅಧ್ಯಾದೇಶದ ಬಗ್ಗೆ ಮೌನ ವಹಿಸಿರಬಹುದು, ಈಗ ಉದ್ದೇಶಪೂರ್ವಕವಾಗಿ ಅದನ್ನು ವಿರೋಧಿಸಿರಬಹುದು. ವಾಸ್ತವ ಈ ಅಧ್ಯಾದೇಶದಿಂದ ರಾಜಕೀಯದಲ್ಲಿರುವವರಿಗೆ ನಡುಕವಾಗಿರುವುದು ಮತ್ತು ಪ್ರತಿಪಕ್ಷಗಳಿಗೆ ಹಿನ್ನಡೆಯಾಗಿರುವುದು.

ಪ್ರತಿಪಕ್ಷಗಳು ಮಾಡಬೇಕಿದ್ದ ಕೆಲಸವನ್ನು ತಮ್ಮ ಸರ್ಕಾರದ ಮುಂಚೂಣಿಯಲ್ಲಿರುವ ನಾಯಕ ರಾಹುಲ್ ಗಾಂಧಿ ಮಾಡಿದ್ದಾರೆ ಎನ್ನುವುದಾದರೆ ಅದು ಅವರ ಮುಂದಿನ ರಾಜಕೀಯದ ನಡೆಗೆ ದಿಕ್ಸೂಚಿ. ರಾಹುಲ್ ಗಾಂಧಿ ತಮ್ಮ ಪಕ್ಷದ ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರಬಹುದು, ಆದರೆ ಮತದಾರರ ಮನಗೆದ್ದಿದ್ದಾರೆ, ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾದ ಸನ್ನಿವೇಶವಿತ್ತು. ರಾಹುಲ್ ಗಾಂಧಿ ಗುಟುರು ಹಾಕಿರುವುದರಿಂದ ಅಂಥವರಿಗೆ ಹಿನ್ನಡೆಯಾಗಿದೆ. ಆದರೆ ಈಗ ರಾಜಕೀಯದಲ್ಲಿ ಹೊಸರಕ್ತದ ಹರಿವಿಗೆ ಅವಕಾಶ ಸಿಕ್ಕಿದರೂ ಸಿಗಬಹುದು ಎನ್ನುವ ಆಶಾಭಾವನೆ ಮೂಡುತ್ತಿದೆ.

ಸುಪ್ರೀಂಕೋರ್ಟ್ ತೀರ್ಪು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಬಲ ಅಸ್ತ್ರವಾಗುತ್ತಿತ್ತು ಬಳಸಿಕೊಂಡಿದ್ದರೆ, ಆದರೆ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿಬಿಟ್ಟವು. ಕಾಂಗ್ರೆಸ್ ಯುವರಾಜ ಈಗ ಚಾಲಾಕಿತನ ತೋರಿಸಿ ಸಂಚಲನ ಉಂಟು ಮಾಡಿದ್ದಾರೆ. ಈಗ ಉಂಟಾಗಿರುವ ಸಂಚಲನ ಯುಪಿಎ ಸರ್ಕಾರಕ್ಕಿಂತಲೂ ಪ್ರತಿಪಕ್ಷಗಳಿಗೆ ಆತಂಕ ತಂದಿದೆ. ಒಂದು ವೇಳೆ ಸುಪ್ರೀಂ ತೀರ್ಪು ಸುಪ್ರೀಂ ಆಗಿಯೇ ಮುಂದಿನ ಚುನಾವಣೆಯಲ್ಲಿ ಚಾಲ್ತಿಯಲ್ಲಿದ್ದರೆ ರಾಹುಲ್ ಹೀರೋ ಆಗುವುದನ್ನು ಅಷ್ಟು ಸುಲಭವಾಗಿ ತಪ್ಪಿಸಲಾಗದು.

CET ಮತ್ತು ಕಾಮೆಡ್-ಕೆ ಗಳಲ್ಲಿ ಡ್ರಾಪ್‌ಔಟ್ ಅಕ್ರಮ : ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ಅನ್ಯಾಯ


– ರವಿ ಕೃಷ್ಣಾರೆಡ್ದಿ


 

ಇದು ಬಹಳ ವರ್ಷಗಳಿಂದ ನಡೆದು ಬರುತ್ತಿರುವ ಮೋಸ ವಂಚನೆಗಳ ಕರ್ಮಕಾಂಡ. ಸಾರ್ವಜನಿಕರಿಗೆ ಗೊತ್ತಿರಲಿಲ್ಲ ಅಷ್ಟೇ. ಪ್ರತಿವರ್ಷ ನೂರಾರು ಮೆಡಿಕಲ್ ಸೀಟುಗಳನ್ನು ಅರ್ಹರಿಗೆ ಮತ್ತು ಪ್ರತಿಭಾವಂತರಿಗೆ ವಂಚಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರು ಅಕ್ರಮವಾಗಿ ಮಾರಿಕೊಳ್ಳುವ ಒಂದು ವ್ಯವಸ್ಥಿತ ಜಾಲವೇ ಇಲ್ಲಿದೆ.

ಇದು ಮೊದಲಿಗೆ ಬಯಲಾಗಿದ್ದು 2011 ರಲ್ಲಿ, ಲೇಖಕ ಬೇದ್ರೆ ಮಂಜುನಾಥರವರ ಮೂಲಕ. Bedre-Photoಬೇದ್ರೆ ಮಂಜುನಾಥರವರ ಪ್ರತಿಭಾವಂತ ಮಗನಿಗೆ ಸಿಇಟಿಯಲ್ಲಿ ಎಂಬಿಬಿಎಸ್‌ಗೆ ಉಚಿತ ಸೀಟು ದೊರಕಿತ್ತು. ಆದರೆ ಆ ಹುಡುಗನಿಗೆ ಪಶುವೈದ್ಯಕೀಯ ಓದಲು ಮನಸ್ಸಿತ್ತು. ಅದನ್ನು ಹೇಗೋ ತಿಳಿದುಕೊಂಡ ಖದೀಮರು ಆ ಹುಡುಗನನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿಗಳ ಆಮಿಷ ಒಡ್ಡಿ, ಆತ ತಾವು ಸೂಚಿಸಿದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್‌ಗೆ ಅಡ್ಮಿಷನ್ ಮಾಡಿಕೊಳ್ಳುವಂತೆಯೂ, ಹಾಗೆಯೇ ತನಗೆ ಬೇಕಾದ ಪಶುವೈದ್ಯಕೀಯ ಕೋರ್ಸ್‌ಗೂ ಸೇರಿಕೊಳ್ಳುವಂತೆಯೂ, ಅದಾದ ನಂತರ್ ಸಿಇಟಿ ಕೌನ್ಸೆಲಿಂಗ್ ಮುಗಿಯುತ್ತಿರುವಂತೆ ಮೆಡಿಕಲ್ ಕಾಲೇಜಿನಿಂದ ಡ್ರಾಪ್‌ಔಟ್ ಆಗುವಂತೆಯೂ ಸೂಚಿಸಿತು. ಆಗ ಇದ್ದ ನಿಯಮಗಳ ಪ್ರಕಾರ ಸಿಇಟಿ ಕೌನ್ಸೆಲಿಂಗ್ ಮುಗಿದ ನಂತರ ಹೀಗೆ ಡ್ರಾಪ್‌ಔಟ್ ಆದರೆ ಆ ಖಾಲಿ ಉಳಿಯುವ ಸೀಟು ಖಾಸಗಿ ಕಾಲೇಜಿನ ಆಡಳಿತ ಮಂಡಳಿಗೆ ಸೇರುತ್ತದೆ. ಅದನ್ನವರು ಎಂದಿನಂತೆ ಮಾರುಕಟ್ಟೆ ದರದಲ್ಲಿ ಐವತ್ತು ಲಕ್ಷದಿಂದ ಕೋಟಿ ರೂಪಾಯಿಗಳ ತನಕ ಮಾರಿಕೊಳ್ಳಬಹುದು. ಆದರೆ ಇಂತಹ ವಂಚನೆಯ ಜಾಲಕ್ಕೆ ಬೀಳುವ ಮನಸ್ಸಿಲ್ಲದ ಆ ಹುಡುಗ ತನ್ನ ನೈತಿಕ ಪ್ರಜ್ಞೆಯ ಕಾರಣಕ್ಕೆ ಅಂತಹ ಕೆಲಸ ಮಾಡಲು ನಿರಾಕರಿಸಿದ. ಈ ವಿಷಯ ತಿಳಿದ ಬೇದ್ರೆ ಮಂಜುನಾಥರು ಈ ವಂಚನೆಯ ಜಾಲದ ಬಗ್ಗೆ ಮತ್ತು ಅದರಿಂದ ಅರ್ಹರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪತ್ರಿಕೆಗಳ ವಾಚಕರ ವಾಣಿಗೆ 2011 ಜುಲೈ-ಆಗಸ್ಟ್‌ನಲ್ಲಿ ಪತ್ರ ಬರೆದರು. ಆ ಮೂಲಕ ಅದು ಸಾರ್ವಜನಿಕವಾಗಿ ಬಯಲಾಯಿತು. ನಂತರ ಸಿಇಟಿಯ ಮೂಲಕ ಇಂತಹ ಅಕ್ರಮಗಳು ಮತ್ತು ಮೋಸಗಳು ಆಗದಂತೆ ಕ್ರಮಕೈಗೊಳ್ಳುವ ಘೋಷಣೆಗಳು ಸರ್ಕಾರದ ಕಡೆಯಿಂದ ಆದವು.

bedre-manjunath-cet
ಆದರೆ, ಮುಂದಿನ ವರ್ಷ, ಅಂದರೆ 2012 ರಲ್ಲಿ ಇದರ ತೀವ್ರತೆ ಕಾಣಿಸಿಕೊಂಡಿತು. ರಂಗೋಲಿಯ ಕೆಳಗೆ ತೂರುವ ಮೋಸಗಾರರು ಆ ವರ್ಷ ಸುಮಾರು 800 ಮೆಡಿಕಲ್ ಸೀಟುಗಳನ್ನು ಹೀಗೆ ಡ್ರಾಪ್‌ಔಟ್ ಮಾಡಿಸಿದ್ದರು. ಬದಲಾದ ಸಿಇಟಿ ನಿಯಮಗಳಿಂದಾಗಿ ಮತ್ತು ಹಗರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವಿದ್ದ ಕಾರಣದಿಂದಾಗಿ ಅನೇಕ ಕಾಲೇಜುಗಳಲ್ಲಿ ಇಂತಹ ಅಕ್ರಮ ಸೀಟುಗಳನ್ನು ತುಂಬಲಾಗಲಿಲ್ಲ. ಆ ಮೂಲಕ ಕೇವಲ ಪ್ರತಿಭಾವಂತರಿಗೆ ಅನ್ಯಾಯವಾಗಿದ್ದೇ ಅಲ್ಲದೆ, ನೂರಾರು ವಿದ್ಯಾರ್ಥಿಗಳು ವೈದ್ಯರಾಗುವ ಅವಕಾಶವನ್ನೇ ನಿರಾಕರಿಸಲಾಯಿತು.

ಇದು ಸಿಇಟಿ ಕತೆ. ಈ ವರ್ಷ ಏನಾಗಿದೆಯೋ ನನಗೆ ಮಾಹಿತಿ ಇಲ್ಲ. ಆದರೆ ಇದು ಕಾಮೆಡ್‌-ಕೆ ಯಲ್ಲೂ ಅವ್ಯಾಹತವಾಗಿ ನಡೆಯುತ್ತ ಬಂದಿದೆ comdekಎಂದು ಇತ್ತೀಚೆಗೆ ತಿಳಿಯಿತು. ನಿಮಗೆ ಗೊತ್ತಿರಬಹುದು, ಕಾಮೆಡ್‌-ಕೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರದ ಸಿಇಟಿಯನ್ನು ಧಿಕ್ಕರಿಸಿ ತಮ್ಮ ಪಾಲಿನ ಪೇಮೆಂಟ್ ಸೀಟುಗಳನ್ನು (ಮ್ಯಾನೇಜ್‌ಮೆಂಟ್ ಸೀಟುಗಳನ್ನಲ್ಲ) ತುಂಬಿಕೊಳ್ಳಲು ಮಾಡಿಕೊಂಡ ಒಂದು ತಂತ್ರ. ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾದ ಪೇಮೆಂಟ್ ಸೀಟುಗಳಿಗೆ ನಾವೇ ಪರೀಕ್ಷೆ ಮಾಡಿ ತುಂಬಿಸಿಕೊಳ್ಳುತ್ತೇವೆ ಎಂದು ಖಾಸಗಿ ಕಾಲೇಜುಗಳು ಸಿಇಟಿಗೆ ಪರ್ಯಾಯವಾಗಿ ಇವನ್ನು ನಡೆಸುತ್ತವೆ. ಇಲ್ಲಿಯೂ ಸಹ ಕೆಲವು ಆಡಳಿತ ಮಂಡಳಿಯವರು ಪ್ರತಿಭಾವಂತರಿಗೆ ವಂಚಿಸಿ ಸಿಇಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಅಕ್ರಮವಾಗಿ ಮಾರಿಕೊಳ್ಳುತ್ತಿದ್ದಾರೆ.

ಈ ವರ್ಷವೂ ಅದು ಮುಂದುವರೆದಿದೆ. ನಂಬಬಲ್ಲ ಮೂಲಗಳ ಪ್ರಕಾರ ಹೀಗೆ ಡ್ರಾಪ್‌ಔಟ್ ಮಾಡಿಸಿದ ಸುಮಾರು ಹತ್ತು ವೈದ್ಯಕೀಯ ಸೀಟುಗಳಿಗೆ ಜಾತಿ ಸಂಘವೊಂದು ಬೆಂಗಳೂರಿನಲ್ಲಿರುವ ತನ್ನ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಇಂದು “ಸ್ಪಾಟ್ ಅಡ್ಮಿಷನ್” ಸಂದರ್ಶನ ನಡೆಸುತ್ತಿದೆ. ಈ ಹತ್ತೂ ಸೀಟುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೋಗಬೇಕಿತ್ತು. ಇದು ಒಂದು ಕಾಲೇಜಿನ ಕತೆ. ರಾಜ್ಯದ ಇತರೆ ಅನೇಕ ಖಾಸಗಿ ಕಾಲೇಜುಗಳಲ್ಲಿ ಹೀಗೆ ಅದೆಷ್ಟು ಸ್ಥಾನಗಳು ಬಿಕರಿ ಆಗುತ್ತಿವೆಯೋ? ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

ಈಗಾಗಲೆ ಇಂಜಿನಿಯರಿಂಗ್, ಮೆಡಿಕಲ್ ಓದುತ್ತಿರುವ ಉತ್ತಮ ಅಂಕ ಪಡೆದಿರುವ ಪ್ರತಿಭಾವಂತ ಹುಡುಗರನ್ನು ಐದತ್ತು ಲಕ್ಷ ಕೊಟ್ಟು ಹಿಡಿದುಕೊಂಡು ಬಂದು ಅವರಿಂದ ಕಾಮೆಡ್-ಕೆ ಪರೀಕ್ಷೆ ಬರೆಸಿ, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಿ, ಮತ್ತೆ ಡ್ರಾಪ್‌ಔಟ್ ಮಾಡಿಸುವ ಧಂಧೆ ಮತ್ತು ಅಕ್ರಮದ ಬಗ್ಗೆ ನಗರದ ಸೆಂಟ್ರಲ್ ಪೊಲೀಸ್ ಠಾಣೆಯವರು ವಿಚಾರಣೆ ನಡೆಸಿ ಸಿದ್ದಪಡಿಸಿರುವ ಸುಮಾರು 642 ಪುಟಗಳ ಚಾರ್ಜ್‍ಷೀಟ್ ನನ್ನ ಮುಂದಿದೆ. 2011 ನೇ ಸಾಲಿನಲ್ಲಿ ಕಾಮೆಡ್-ಕೆ ಪರೀಕ್ಷೆ ಬರೆದು ಕೆಂಪೇಗೌಡ ಮೆಡಿಕಲ್ ಕಾಲೇಜನ್ನು ಆಯ್ಕೆ ಮಾಡಿಕೊಂಡು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ನಂತರ ಕೊನೆಯ ದಿನಾಂಕದಂದು ಡ್ರಾಪ್‌ಔಟ್ ಆದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಡ್ರಾಪ್‌ಔಟ್ ದಂಧೆ ಪತ್ತೆ ಹಚ್ಚಲು ಒಬ್ಬರು ಕೊಟ್ಟ ದೂರಿನ ಆಧಾರದ ಮೇಲೆ kims-chargesheet-1ಪೋಲಿಸರು ಸುಮಾರು 110 ಜನರನ್ನು ವಿಚಾರಣೆಗೆ ಕರೆದು ಸಿದ್ದಪಡಿಸಿದ ದೋಷಾರೋಪಣೆ ಪಟ್ಟಿ ಇದು. ಕೆಳಹಂತದ ನ್ಯಾಯಾಲಯದಲ್ಲಿದ್ದ ಈ ಮೊಕದ್ದಮೆಯ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ ಎನ್ನುವುದು ಸುದ್ದಿ.

ಇಂತಹ ಅಕ್ರಮಗಳು ಹೀಗೆ ಸಾರ್ವಜನಿಕವಾಗಿ ಬಯಲಾಗುತ್ತಿದ್ದರೂ ನಮ್ಮ ಸರ್ಕಾರಗಳ ಕುಸಿದ ನ್ಯಾಯಪ್ರಜ್ಞೆ ಮತ್ತು ನೈತಿಕತೆಯ ಕಾರಣವಾಗಿ ಇದ್ಯಾವುದೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಕೈಸನ್ನೆ-ಬಾಯ್ಸನ್ನೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುತ್ತಿಲ್ಲ. ಅನ್ಯಾಯಕ್ಕೊಳಗಾದ ಪೋಷಕರು ಮತ್ತು ಪ್ರಜ್ಞಾವಂತರು ಎಚ್ಚೆತ್ತುಕೊಂಡು ಈ ಅಕ್ರಮಗಳನ್ನು ಅನ್ಯಾಯಗಳನ್ನು ತಡೆಯಬೇಕಿದೆ.

kims-chargesheet-2

ಹಿಂದೂಧರ್ಮ – ಗೋಮತಿ ಮತ್ತು ಪೆರಿಯಾರ್

 -ಎನ್. ರವಿಕುಮಾರ್, ಶಿವಮೊಗ್ಗ

ಕರ್ನಾಟಕ ವಿಚಾರ ವೇದಿಕೆ ಇತ್ತೀಚೆಗೆ ವಿಚಾರ ಸಂಕಿರಣ ಹಾಗು ಪೆರಿಯಾರ್ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ನಡೆಸುವ ಮೂಲಕ ಈ.ವಿ.ಪೆರಿಯಾರ್ (ಈರೋಡು ವೆಂಕಟಪ್ಪ ರಾಮಸ್ವಾಮಿ ನಾಯ್ಕರ್ : 1879-1973) ವಿಚಾರಧಾರೆಗಳ ಪ್ರಸ್ತುತತೆ ಮತ್ತು periyarಹಿಂದೂ ಧರ್ಮದ ಶ್ರೇಣಿಕೃತ ವ್ಯವಸ್ಥೆಯ ಜೀವಂತಿಕೆಯನ್ನು ಚರ್ಚೆಗೀಡು ಮಾಡಿತು. ದೇಶದಲ್ಲಿಯ ಪ್ರಗತಿಪರ ವಿಚಾರಧಾರೆಗಳಿಗೆ ಹಿನ್ನಡೆಯಾಗುತ್ತಿರುವ ಈ ಆತಂಕದ ವೇಳೆಯಲ್ಲಿ ಪೆರಿಯಾರ್ ಅವರ ವಿಚಾರ ಧಾರೆಗಳು, ಸಾಮಾಜಿಕ ಹೋರಾಟದ ಇತಿಹಾಸಗಳನ್ನು ನೆನಪಿಸುವ, ವಿಚಾರ ಪ್ರಚೋದಿಸುವ, ಅದೇ ಕಾಲಕ್ಕೆ ಹಿಂದೂತ್ವದ ಹೆಸರಿನಲ್ಲಿ ನಡೆದ ಮನುಷ್ಯ ವಿರೋಧಿ ಕೃತ್ಯಗಳನ್ನು ಖಂಡಿಸುವ, ಎಚ್ಚರಿಸುವ ಜವಾಬ್ದಾರಿಯನ್ನು ಕರ್ನಾಟಕ ವಿಚಾರ ವೇದಿಕೆ ಮಾಡಿದೆ.

ಜಾತಿ ನಿರ್ಮೂಲನೆಗಾಗಿ ಕ್ರಾಂತಿಕಾರಿ ಹೋರಾಟವನ್ನೆ ಮಾಡಿದ ಈ.ವಿ. ಪೆರಿಯಾರ್ ಹುಟ್ಟಿದ ತಮಿಳುನಾಡಿನಲ್ಲಿ ವೈರುಧ್ಯವೆಂಬಂತೆ ಇಂದು ಜಾತೀಯತೆಯ, ಹಿಂದೂ ಧರ್ಮದೊಳಗಿನ ಮತೀಯ ದ್ವೇಷ ಹೆಚ್ಚುತ್ತಲೆ ಇದೆ. ಇದು ಪೆರಿಯಾರ್ ಬಿತ್ತಿದ ಬೀಜವಲ್ಲ. ಅಸಹಿಷ್ಣುತೆಯ ಕುಲುಮೆಯೊಳಗೆ ಮೇಲ್ಜಾತಿಗಳ ಮನುಷ್ಯ ದ್ವೇಷದ ಸಾಂಪ್ರಾದಾಯದ ಅಸ್ತಿತ್ವಕ್ಕಾಗಿ ನಡೆಸಿರುವ ಕಟುಕತನಗಳು ಎಂಬುದಕ್ಕೆ ಈ ಹಸಿ ಘಟನೆಯೊಂದೆ ಸಾಕು ಎನಿಸುತ್ತದೆ.

ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಸೀವಲಪೇರಿ ಗ್ರಾಮದ ಮೇಲ್ಜಾತಿಯ ಹುಡುಗಿ ಗೋಮತಿ ಅದೇ ಗ್ರಾಮದ ದಲಿತ ಹುಡುಗ ಮುರುಗನ್‌ನನ್ನು ಪ್ರೀತಿಸುತ್ತಿದ್ದಳು. ಇದನ್ನು ಸಹಿಸದ ಹುಡುಗಿಯ ಸಹೋದರರು ಒಡಹುಟ್ಟಿದ ಸಹೋದರಿ gomathy-murugan-honour-killingಗೋಮತಿಯ ಗಂಟಲಿಗೆ ಆಸಿಡ್ ಸುರಿದು‍, ಸಾಲದೆಂಬಂತೆ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಅಮಾನುಷವಾಗಿ ಕೊಂದು ಹಾಕಿದರು. (ಸೆ 13, 2013)

ಹಿಂದೂ ಧರ್ಮದೊಳಗಿನ ಜಾತಿಯ ದ್ವೇಷದ ಕೆನ್ನಾಲಿಗೆ ಬರು ಬರುತ್ತಾ ದಲಿತ ಜಾತಿಯನ್ನು ವಿರೋಧಿಸುವುದಿರಲಿ, ದಲಿತರೊಂದಿಗೆ ಸಹಬಾಳ್ವೆ, ಸ್ನೇಹ, ಪ್ರೀತಿ ಬಯಸುವ ತಮ್ಮವರನ್ನು ಕೊಂದು (ಮರ್ಯಾದಾ ಹತ್ಯೆ) ಹಾಕುವ ಅಮಾನುಷತೆ ಹಿಂದೂ ಧರ್ಮಾಭಿಮಾನಿಗಳಲ್ಲಿ ತೆರೆದುಕೊಳ್ಳುತ್ತಿದೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಅಪಾಯಕಾರಿಯಾಗಿದೆ.

ಇಂತಹ ಘಟನೆಗಳು ತಮಿಳುನಾಡಿನಲ್ಲಿ ನಿರಂತರ. ಅವುಗಳಾವು ದೆಹಲಿಯ ದಾಮಿನಿ ಅತ್ಯಾಚಾರ-ಹತ್ಯೆ ಪ್ರಕರಣದಷ್ಟು ಪ್ರಚಾರ ಪಡೆದುಕೊಳ್ಳುತ್ತಿಲ್ಲ. ತಮಿಳುನಾಡಿನಲ್ಲೆ ಪೆರಿಯಾರ್ ನಿಮ್ನ ಜಾತಿ, ಸಮುದಾಯಗಳ ಧ್ವನಿಯಾದವರು. ಹಿಂದೂ ಧರ್ಮದಲ್ಲಿನ ವರ್ಣಾಶ್ರಮ ನೀತಿ, ಶ್ರೇಣಿಕೃತ ಜಾತಿ ವ್ಯವಸ್ಥೆಯ, ಅಮಾನುಷ ಧೋರಣೆಗಳನ್ನು ಅಷ್ಟೆ ಪ್ರಖರವಾಗಿ ಪೆರಿಯಾರ್ ವಿರೋಧಿಸದವರು. ತಮ್ಮ ಹೆಸರಿಗೆ ತಗಲಿಕೊಂಡಿದ್ದ ಜಾತಿ ಸೂಚಕ ’ನಾಯ್ಕರ್’ ಪದವನ್ನು (1929) ಕಿತ್ತಾಕುವ ಮೂಲಕ ಜಾತಿ ರಹಿತ ಸಮಾಜಕ್ಕಾಗಿ ಪಣ ತೊಟ್ಟವರು.

ಹಿಂದೂಸ್ಥಾನದ ಚರಿತ್ರೆಯಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಪೆರಿಯಾರ್ ಸಾಮಾಜಿಕ ನ್ಯಾಯದ Periyar_and_Maniammaiಹೋರಾಟಗಾರನಾಗಿ ಬಹುಜನರಿಗೆ ದನಿಯದವರು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟು ಹಾಕಿದ ಪೆರಿಯಾರ್ ದೇವರು, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು-ಜನಿವಾರಗಳನ್ನು ಕಂಡ ಕಂಡಲ್ಲಿ ಕಿತ್ತೆಸೆಯುವಂತೆ ಕರೆ ನೀಡಿದರು. ಮನುವಾದಿಗಳನ್ನು ವಿರೂಪಗೊಳಿಸದರು. ಅದಕ್ಕೆ ಕಾರಣ ಸ್ಪಷ್ಟವಾಗಿದೆ. ಶತಮಾನಗಳಿಂದಲೂ ಜಾತಿಯ ಹೆಸರಿನಲ್ಲಿ ಈ ದೇಶದ ಬಹು ಜನರನ್ನು ಶಿಕ್ಷಣ-ಮನುಷ್ಯ ಸಹಜ ಸಂಬಂಧಗಳಿಂದಲೂ ದೂರವಿಟ್ಟವರ್‍ಯಾರು? ಇಂದು ಸಾಮಾಜಿಕ ನ್ಯಾಯ, ಸಮಾನತೆ, ಹಕ್ಕುಗಳಿಗಾಗಿ ಹೋರಾಡುವ ಮನಸ್ಸುಗಳಲ್ಲಿ ಕರಗದಷ್ಟು ಇತಿಹಾಸದ ನೋವಿದೆ ಅಥವಾ ನೋವಿನ ಕಾವಿದೆ ಎಂಬುದನ್ನು ಪೆರಿಯಾರ್ ಅವರನ್ನು ವಿರೋಧಿಸುವವರು ಅರ್ಥಮಾಡಿಕೊಳ್ಳಬೇಕು.

ಪೆರಿಯಾರ್ ತಮಿಳುನಾಡಿನಲ್ಲಿಯೆ ಬಹುದೊಡ್ಡ ಸಾಮಾಜಿಕ ಕ್ರಾಂತಿಯನ್ನೆ ಮಾಡಿದವರು. ಜಾತಿ ವಿಷವೃಕ್ಷವನ್ನು ಬುಡ ಮಟ್ಟ ಕಿತ್ತೊಗೆಯಲು ಕೊಡಲಿ ಹಿಡಿದು ನಿಂತವರು. ಜಾತಿ ರಹಿತ ನೆಲೆಯಲ್ಲಿ ಮಹಿಳಾ ಹಕ್ಕು ಕಾಯ್ದೆಯ ಜಾರಿಗೆ 30 ರ ದಶಕದಲ್ಲಿಯೇ ದೊಡ್ಡ ದನಿ ಎತ್ತಿದ ಪೆರಿಯಾರ್ ನಾಡಿನಲ್ಲಿ ಗೋಮತಿ ಎಂಬ ಹೆಣ್ಣು ಮಗಳು ಹಿಂದೂ ಮತದೊಳಗಿನ ಜಾತಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ಜಾತಿ ಕಲಹಕ್ಕೆ ಹಳ್ಳಿಗೆ ಹಳ್ಳಿಯೆ ಉರಿದು ಹೊಗೆಯಾಡುತ್ತಿದೆ. ದಲಿತರನ್ನು ಮುಟ್ಟಿದ್ದಕ್ಕೆ, ಪ್ರಕೃತಿದತ್ತ ಪ್ರೀತಿಯನ್ನು ಸಾರಿದ್ದಕ್ಕೆ, ಮುಗ್ದ ಜೀವಗಳು ಮರ್ಯಾದಾ ಹತ್ಯೆಗೆ ಬಲಿಯಾಗುತ್ತಿರುವುದರ ಹಿಂದೆ ಯಾವ ಧರ್ಮದ ದಾರಿ ದೀವಿಗೆ ಇದೆ?

ಭಾರತದಲ್ಲಿನ ಕೋಮು ಗಲಭೆಗಳು ಹಿಂದೂ-ಮುಸ್ಲಿಂರ ನಡುವಿನ ಕ್ರೂರ ಮಾರಾಮಾರಿಯನ್ನೆ ಉಲ್ಲೇಖಿಸಿರುತ್ತವೆ. periyar-ambedkarರಾಜಕೀಯ ಕಾರಣಗಳ ನೆಲೆಯಲ್ಲಿ ಬಹುತೇಕ ನಡೆಯುವ ಈ ಕೋಮುಗಲಭೆಗಳು ಸಾಂದರ್ಭಿಕವಾಗಿ ನಡೆಯತ್ತಿರುತ್ತವೆಯಾದರು, ಹಿಂದೂ ಧರ್ಮದೊಳಗೆ ಇರುವ ಜಾತಿಯ ಒಳಜಗಳ, ಹತ್ಯೆಗಳ ಹಿಂದೆ ಸಾಮಾಜಿಕ ಅಸಮಾನತೆಗಳು ಸದಾ ಕೆಲಸ ಮಾಡುತ್ತಿದೆ. ಇದು ಕೋಮು ಗಲಭೆಗಿಂತ ಹೆಚ್ಚು ಅನಾಹುತವನ್ನು ಉಂಟುಮಾಡುತ್ತದೆ. ಈ ಕಾರಣದಿಂದಲೆ ಅಂಬೇಡ್ಕರ್ ಅವರು ’ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಆದರೆ ಹಿಂದೂ ಆಗಿ ಸಾಯಲಾರೆ’ ಎಂದು ಬೌದ್ಧ ಧರ್ಮವನ್ನು ಅನುಸರಿಸಿದ್ದು. ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳನ್ನಷ್ಟೆ ಅಲ್ಲ ಮನುಷ್ಯ ಪ್ರೀತಿಯ ಸಹಜ ಸ್ವಭಾವದ ಎಲ್ಲರಲ್ಲೂ ಬಸವಣ್ಣ, ಬುದ್ಧ, ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು ಅವರ ವಿಚಾರಧಾರೆಗಳನ್ನು ಪಸರಿಸುವ, ಆ ತಳಪಾಯದಲ್ಲಿ ಮುಂದಿನ ಪೀಳಿಗೆಯನ್ನು ಎಚ್ಚರಿಸುವ ಕೆಲಸ ನಡೆಯಬೇಕು.

ಜನರಿಂದ, ಜನರಿಗಾಗಿ ಸಮಾಜದಿಂದ ನಾಯಕನಿಂದ, ನಾಯಕನಿಗಾಗಿ ಎನ್ನುವ ಫ್ಯಾಸಿಸ್ಟ್ ವ್ಯವಸ್ಥೆಗೆ ತೆವಳುತ್ತಿರುವ ಇಂಡಿಯಾ

– ಬಿ.ಶ್ರೀಪಾದ ಭಟ್

ಕೆಲವೊಮ್ಮೆ ಚರಿತ್ರೆ ತೆವಳುತ್ತದೆ, ಬಸವನ ಹುಳುವಿನ ಹಾಗೆ;ನಿ ಧಾನಕ್ಕೆ ಚಲಿಸುವ ಉಡದ ಹಾಗೆ. ಕೆಲವೊಮ್ಮೆ ಚರಿತ್ರೆ ಹಾರುತ್ತದೆ, ಹದ್ದಿನ ಹಾಗೆ. ಮಿಂಚಿನ ಹಾಗೆ ಕಣ್ಣು ಕುಕ್ಕಿ ಮಾಯವಾಗುತ್ತದೆ. -ಡಿ.ಆರ್.ನಾಗರಾಜ್

2012 ರಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಸರ್ಕಾರವನ್ನು ಸೋಲಿಸಿ ಅಧಿಕಾರಕ್ಕೇರಿದ ಗೂಂಡಾಗಿರಿ ಪಕ್ಷವೆಂದೇ ಕುಖ್ಯಾತಿಗೊಂಡ ಸಮಾಜವಾದಿ ಪಕ್ಷದ ಒಂದು ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಕೋಮು ಗಲಭೆಗಳು ಮತ್ತು ಹಿಂಸಾಚಾರ ಘಟನೆಗಳು :

2/6/12 ಮಥುರಾ 4 ಜನರ ಸಾವು. 4/6/12 ಮುಜಪ್ಫರ್ ನಗರ 20 ಜನರ ಸಾವು
23/7/12 ಬರೇಲಿ 3 ಜನರ ಸಾವು 16/9/12 ಘಜಿಯಾಬಾದ್ 6 ಜನರ ಸಾವು
24/10/12 ಫೈಜಾಬಾದ್ 1 ಜನರ ಸಾವು 6/12/12 ಅಜಮಗರ್ 11 ಜನರ ಸಾವು
16/1/13 ಲಖ್ನೋ 2 ಜನರ ಸಾವು 4/2/13 ಮಥುರಾ 1 ಜನರ ಸಾವು
24/2/13 ಇಟಾವ 1 ಜನರ ಸಾವು 3/3/13 ಪ್ರತಾಪ್ ಘಡ್ 2 ಜನರ ಸಾವು
27/8/13 ಮುಜಪ್ಫರ್ ನಗರ 4 ಜನರ ಸಾವು 9/9/13 ಮುಜಪ್ಫರ್ ನಗರ 50 ಜನರ ಸಾವು

ಇದಲ್ಲದೆ ಅಮೇಥಿಯಲ್ಲಿ ದಲಿತರ ಮನೆಗಳ ಮೇಲೆ ದಾಳಿ ನಡೆಸಿ ಸುಡಲಾಗಿದೆ.
– (ತೆಹೆಲ್ಕ, 21ನೇ ಸೆಪ್ಟೆಂಬರ್ 2013 )

ಕೋಮು ಗಲಭೆಗಳಲ್ಲಿ ನಿಜಾಂಶಗಳು ಗೌಣಗೊಂಡು ಕಟ್ಟುಕಥೆಗಳು ಮೇಲುಗೈ ಸಾಧಿಸುತ್ತವೆ. ವದಂತಿಗಳು ಅನೇಕ ಬಗೆಯ ಹೌದು ಮತ್ತು ಅಲ್ಲಗಳೊಂದಿಗೆ ಪ್ರಾಮುಖ್ಯತೆ ಪಡೆದು ಪ್ರತಿಯೊಂದು ಕೋಮುಗಲಭೆಗಳನ್ನು ಹಿಂದಿನದಿಕ್ಕಿಂಲೂ ವಿಭಿನ್ನವೆಂಬಂತೆಯೂ, ಈ ಸಂದರ್ಭದಲ್ಲಿ ಹಿಂಸಾಚಾರ ಮತ್ತು ಹತ್ಯೆಗಳು ಅನಿವಾರ್ಯವೆಂಬಂತೆಯೂ ಸಮರ್ಥಿಸಲ್ಪಡುತ್ತವೆ ಮತ್ತು ಕಾಲಕ್ರಮೇಣ ತೆರೆಮರೆಗೆ ಸರಿಯಲ್ಪಡುತ್ತವೆ. -ಫರಾ ನಕ್ವಿ

ಮೇಲಿನ ಕೋಮು ಗಲಭೆಗಳಿಗೆ ಅಖಿಲೇಶ್ ಸರ್ಕಾರದ ಸಂಪೂರ್ಣ ವೈಫಲ್ಯತೆ ಮೂಲಭೂತ ಕಾರಣವಾದರೆ, ಇದರ ಹುಟ್ಟಿಗೆ ಕಾರಣರಾರು, ಇದನ್ನು ಬೆಂಕಿ ಹಾಕಿ ಬೆಳೆಸಿದವರಾರು ಎಂಬ ಪ್ರಶ್ನೆಗೆ ಅನಾಯಾಸವಾಗಿ ನಮ್ಮ ಗೋಣು ಬಿಜೆಪಿಯ ದಿಕ್ಕಿಗೆ ತಿರುಗುತ್ತದೆ. ಇದಕ್ಕೆ ಕಳೆದ ಎಂಬತ್ತು ವರ್ಷಗಳಲ್ಲಿ ಇಂಡಿಯಾದಲ್ಲಿ ಘಟಿಸುವ ಪ್ರತಿಯೊಂದು ಕೋಮು ಗಲಭೆಯ ಸಂದರ್ಭಗಳನ್ನು, ಹಿನ್ನೆಲೆಗಳನ್ನು ಅವಲೋಕಿಸಿದಾಗ ಈ ಸಂಘ ಪರಿವಾರದ ಪ್ರಚೋದನೆಗಳು, ಗುಪ್ತ ಆಶಯಗಳು ಅದಕ್ಕಾಗಿ ಯಾವುದೇ ಕೃತ್ಯಕ್ಕೂ ರೆಡಿಯಾಗುವ ಮನಸ್ಥಿತಿ ಇವೆಲ್ಲವೂ ಇತಿಹಾಸದಲ್ಲಿ ದಾಖಲಾಗಿವೆ. ಪ್ರತಿಯೊಂದು ದುಷೃತ್ಯದಲ್ಲೂ ತನ್ನ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಅದನ್ನು ನಿರಾಕರಿಸುವುದರ ಬದಲು ಸಂಘ ಪರಿವಾರ ತೀಕ್ಷಣವಾಗಿ ಪ್ರತಿಕ್ರಿಯಿಸುವುದು ‘ನೀವು ಕೇವಲ ನಮ್ಮನ್ನು ದೂಷಿಸುತ್ತೀರಿ ಆದರೆ ಅವರೇನು ಕಡಿಮೆಯೇ ? ಮೊದಲು ಅವರಿಗೆ ತಣ್ಣಗಿರಲು ಹೇಳಿ, ಇಲ್ಲದಿದ್ದರೆ ನಾವು ಪಾಠ ಕಲಿಸುತ್ತೇವೆ’ ಎಂದೇ. ಹೀಗೆ ಕಳೆದ ಎಂಬತ್ತು ವರ್ಷಗಳಲ್ಲಿ ಅವರು ಎನ್ನುವ ಗುಮ್ಮನನ್ನು ಸದಾ ಜೀವಂತವಾಗಿರಿಸಿಕೊಂಡೇ ಹಿಂದೂತ್ವದ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದ ಸಂಘ ಪರಿವಾರ ಇಂದು ತಮ್ಮವರಿಗಾಗಿಯೇ ದೇಶವನ್ನು ತಯಾರಿಸಲು ಹೊರಟಿದೆ.

2002 ರಲ್ಲಿ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿಯ ನೇತೃತ್ವದ ಅಧಿಕಾರದ ಅವಧಿಯಲ್ಲಿ ಗುಜರಾತ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ಸಾವಿರಾರು ಮುಸ್ಲಿಂರನ್ನು ಹತ್ಯೆ ಮಾಡಲಾಗಿಯಿತು. ಕಳೆದ ದಶಕದಲ್ಲಿ ಗುಜರಾತ್ ನಂತರ ಮಧ್ಯಪ್ರದೇಶದಲ್ಲಿ ಅಲ್ಲಿನ ಸಂಘ ಪರಿವಾರದ ಸೋಕಾಲ್ಡ್ ಜನಪ್ರಿಯ ಮುಖ್ಯಮಂತ್ರಿಯ ರಾಜ್ಯಭಾರದಲ್ಲಿ ಹೆಚ್ಚಿನ ಕೋಮು ಗಲಭೆಗಳು ಜರುಗಿವೆ. ಹೈದರಾಬಾದನಲ್ಲಿ ನಡೆದ ಸಣ್ಣ ಮಟ್ಟದ ಹಿಂಸಾಚಾರವನ್ನು ಹೊರತುಪಡಿಸಿದರೆ ಸೆಪ್ಪೆಂಬರ್ 2013 ರಲ್ಲಿ ಉತ್ತರ ಪ್ರದೇಶದ ಮುಜಫರ್ ನಗರ್ ಜಿಲ್ಲೆಯಾದ್ಯಾಂತ ಜರುಗಿದ ಕೋಮು ಗಲಭೆಗಳು ಮತ್ತು ಹತ್ಯಾಕಾಂಡಗಳಲ್ಲಿ ಸುಮಾರು 56 ಜನ ಸಾವಿಗೀಡಾಗಿದ್ದಾರೆ. Mulayam_Muzaffarnagarಮೋದಿಯು ದೇಶದ ಪ್ರಧಾನಿಯಾಗಲು ಮತ್ತು ಸಂಘ ಪರಿವಾರವು 2014 ರಲ್ಲಿ ಡೆಲ್ಲಿ ಗದ್ದುಗೆ ಕಬಳಿಸಲು ಯಾವುದೇ ಬಗೆಯ ಹಿಂಸಾಚಾರಕ್ಕೆ ಮತ್ತು ಮತಾಂಧತೆಗೆ ತಯಾರಾಗಿದ್ದರೆ ಅದಕ್ಕೆ ಎಣ್ಣೆ ಸುರಿದದ್ದು ಈ ಮುಲಾಯಂ ಸಿಂಗ್ ಎನ್ನುವ ಮತ್ತೊಬ್ಬ ಮತಾಂಧ ರಾಜಕಾರಣಿ.

ಒಂದು ಕಡೆ ಇಂಡಿಯಾದ ಮುಸ್ಲಿಂರು ತಮ್ಮ ಮೌಢ್ಯದ ಕೂಪಗಳಾದ Ghettoಗಳಿಂದ ಹೊರಬರದಂತೆ ಅಲ್ಲಿನ ಧರ್ಮಗುರುಗಳು ಅಡ್ಡಗೋಡೆಯಾಗಿ ನಿಂತಿದ್ದರೆ ಈ ಮೂಲಭೂತವಾದಿಗಳನ್ನು ಓಲೈಸುತ್ತ ಮುಸ್ಲಿಂರನ್ನು ಸದಾ ಅಭದ್ರತೆಯ ನೆರಳಿನಲ್ಲಿ ಬದಕುವಂತೆ ಮಾಡಿದ್ದು ಈ ಮುಲಾಯಂ ಎನ್ನುವ ಅಪಾಯಕಾರಿ ರಾಜಕಾರಣಿ. ಕಾಂಗ್ರೆಸ್ ಸಹ ಅಲ್ಪಸಂಖ್ಯಾತರನ್ನು ಬಳಸಿ ಓಟ್ ಬ್ಯಾಂಕ್ ರಾಜಕಾರಣ ಮಾಡಿತ್ತು. ಅದಕ್ಕೆ ಸರಿಯಾಗಿ ಬೆಲೆ ತೆತ್ತಿದೆ ಕೂಡ. ಆದರೆ ಈ ಮುಲಾಯಂನಂತೆ ಈ ಮಟ್ಟದಲ್ಲೆಂದೂ ಬೆಂಕಿಯೊಂದಿಗೆ ನಿರಂತರವಾಗಿ ಸರಸವಾಡಿದಂತಿಲ್ಲ. ಆದರೆ ಸಂಘ ಪರಿವಾರ ಮತ್ತು ಮುಲಾಯಂ ಸಿಂಗ್ ತಮ್ಮ ತಮ್ಮ ನೆಲೆಗಟ್ಟಿನ ಮತಗಳ ಬೇಟೆಗೋಸ್ಕರ ಹಿಂದೂ ಮತ್ತು ಮುಸ್ಲಿಂರ ನಡುವೆ ಹುಟ್ಟಿ ಹಾಕಿದ ವೈಮನಸ್ಯ ಈ ಕೋಮು ಗಲಭೆಗಳಗೆ ಮೂಲ ಬೀಜಗಳು. ಅದಕ್ಕಾಗಿಯೇ ಗುಜರಾತ್ ಹಿಂಸಾಚಾರದ ಆರೋಪಿ, ಮೋದಿಯ ಬಲಗೈ ಬಂಟ ಅಮಿತ್ ಷಾಗೆ ಉತ್ತರ ಪ್ರದೇಶದ ಉಸ್ತುವಾರಿ ವಹಿಸಲಾಯಿತು. ಉಸ್ತುವಾರಿಯ ಜವಬ್ದಾರಿ ವಹಿಸಿಕೊಂಡ ನಂತರ ಈ ಮತೀಯವಾದಿ ಅಮಿತ್ ಷಾ ಮಾಡಿದ ಮೊದಲ ಕೆಲಸ ಅಯೋಧ್ಯೆಗೆ ಭೇಟಿ ನೀಡಿ ರಾಮಮಂದಿರ ನಿರ್ಮಾಣಕ್ಕಾಗಿ ಪಣ ತೊಟ್ಟಿದ್ದು. ಅದೇ ವೇಳೆಯಲ್ಲಿ ಸಂಫ ಪರಿವಾರದ ಅಂಗ ಪಕ್ಷವಾದ ವಿಚ್‌ಪಿ ಅಯೋಧ್ಯೆ ಚಲೋ ಎನ್ನುವ ಕೇಸರೀ ಯಾತ್ರೆಯನ್ನು ಪ್ರಾರಂಭಿಸಿತು. ಸಂಘ ಪರಿವಾರ ಮತ್ತೊಮ್ಮೆ ಏಕ್ ಧಕ್ಕ ಔರ್ ದೋ ಮಾದರಿಯ ಮತಾಂಧತೆಯ ಉನ್ಮಾದದ ಅಲೆ ಸೃಷ್ಟಿಸಲು ಸಜ್ಜಾಯಿತು. ಇವರೊಂದಿಗೆ ಅನಧಿಕೃತವಾಗಿ ಹೊಂದಾಣಿಕೆ ಮಾಡಿಕೊಂಡಂತೆ ಮುಲಾಯಂ ಸಿಂಗ್ ವರ್ತಿಸತೊಡಗಿದ್ದು, ಮುಸ್ಲಿಂ ಸಮುದಾಯವನ್ನು ಸದಾ ಭೀತಿಯ ನೆರಳಿನಲ್ಲಿ ಬದುಕುವಂತೆ ವಾತಾವರಣ ಸೃಷ್ಟಿಸಿ ಅಥವಾ ಆ ಬಗೆಯ ಭೀತಿಯ ವಾತಾವರಣ ಸೃಷ್ಟಿಸಲು ಸಂಘ ಪರಿವಾರಕ್ಕೆ ಕುಮ್ಮಕ್ಕು ನೀಡಿದ್ದರ ಫಲವಾಗಿ ಇಂದು ಮತ್ತೊಮ್ಮೆ ಉತ್ತರ ಪ್ರದೇಶವು ಮತೀಯವಾದಿಗಳ ಫೆನೆಟಿಸಂಗೆ ಆಡೊಂಬಲವಾಗುತ್ತಿದೆ. ಸಂಘ ಪರಿವಾರ ಮತ್ತು ಈ ಮುಲಾಯಂ ಧರ್ಮವನ್ನು ಮತ್ತೊಮ್ಮೆ ರಾಜಕಾರಣದ ಆಯುಧವೆಂಬಂತೆ ಬಳಸಿಕೊಂಡು ಜನರನ್ನು ಭಾವಾವೇಶಕ್ಕೆ ತಳ್ಳಿ ಮರಳಿ ತೊಂಬತ್ತರ ದಶಕದ ಮತೀಯವಾದದ ಅತಿರೇಕತೆಯನ್ನು ಹುಟ್ಟು ಹಾಕಲು ಕೈ ಜೋಡಿಸಿದ್ದಾರೆ.

ಒಂದಂತೂ ನಿಜ ಹಂದಿಯನ್ನು ಕೊಂದು ಮಸೀದಿಯ ಮುಂದೆ ಬಿಸಾಡುವ ಮತಾಂಧತೆಯ ಹಿಂಸೆಯ ಸ್ವರೂಪ ಮತ್ತೆ ಮರುಕಳಿಸುತ್ತಿದೆ. ಧರ್ಮಾಂಧತೆಯ ಐಡೆಂಟಿಟಿ ಪಾಲಿಟಿಕ್ಸ್ ತನ್ನೆಲ್ಲ ಆಯುಧಗಳೊಂದಿಗೆ ಬೆಂಕಿಯುಗುಳುವ ಹಿಂದೂ ರಾಷ್ಟೀಯವಾದಿಯ ನುಡಿಕಟ್ಟುಗಳೊಂದಿಗೆ ಚಾಲನೆಗೆ ಬರುತ್ತಿದೆ. ಮತೀಯ ರಾಷ್ಟ್ರೀಯತೆ ತನ್ನೆಲ್ಲ ಫ್ಯಾಸಿಸಂನೊಂದಿಗೆ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿದೆ.

ಮೊನ್ನೆ ಮುಜಫರ್ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳಿಗೂ 2002 ರ ಗುಜರಾತ್‌ನ ನರಮೇಧದ ಹಿನ್ನೆಲೆಗೂ ಸಾಮ್ಯತೆಗಳಿವೆ:

2002 ರ ಫೆಬ್ರವರಿಯಲ್ಲಿ ಗೋಧ್ರಾದಲ್ಲಿ ಸಂಭವಿಸಿದ ರೈಲು ಅಗ್ನಿ ದುರಂತದಲ್ಲಿ ಸುಮಾರು ಐವತ್ತು ಪ್ರಯಾಣಿಕರು ಸಾವನ್ನಪ್ಪಿದರು, muzaffarnagar-riots-tentsಅವರೆಲ್ಲ ಹಿಂದೂಗಳು. ಅದರ ಕುರಿತಾಗಿ ನ್ಯಾಯಾಂಗ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಮತ್ತೆರೆಡು ಸ್ವತಂತ್ರ ತನಿಖೆಗಳು ನಡೆದು ಈ ಅಗ್ನಿ ದುರಂತವು ಆಕಸ್ಮಿಕವೆಂದು ವರದಿ ನೀಡಿದವು. ಮತ್ತೊಂದು ಕಡೆ 2002 ಫೆಬ್ರವರಿ 27 ರಂದು ಗೋಧ್ರಾ ರೈಲು ನಿಲ್ದಾಣದಲ್ಲಿ, ಅಗ್ನಿಗೆ ಆಹುತಿಗೊಳಗಾದ ಬೋಗಿಯಲ್ಲಿ ಮುಸ್ಲಿಂ ನಾಗರಿಕರು ಇರದಂತೆ, ಕೇವಲ ಹಿಂದೂ ಕರಸೇವಕರು ಮಾತ್ರ ಇರುವಂತೆ ಆಯೋಜಿಸಬೇಕೆಂದು ಪೋಲೀಸರಿಗೆ ಸೂಚನೆ ನೀಡಲಾಗಿತ್ತು ಎನ್ನುವ ಅನುಮಾನದ ಅಂಶಗಳು ಕೂಡ ತನಿಖೆಗೆ ಒಳಗಾಗುತ್ತಿದೆ. ಆದರೆ ಫೆಬ್ರವರಿ 28 ರಂದು ಗುಜರಾತ್‌ನ ಪ್ರಾದೇಶಿಕ ದಿನಪತ್ರಿಕೆಗಳು ಗೋದ್ರಾ ಘಟನೆಯನ್ನು ತಿರುಚಿ, ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸುವಂತಹ ವರದಿಗಳನ್ನು ಪ್ರಕಟಿಸಿದವು. ಅಂದು ಗೋಧ್ರಾ ರೈಲು ನಿಲ್ದಾಣದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತೆಂದು ಸುಳ್ಳು ವರದಿಗಳನ್ನು ಪ್ರಕಟಿಸಲಾಯಿತು. ಅತ್ಯಾಚಾರಕ್ಕೊಳಗೊಂಡ, ಇರಿತದಿಂದ ಸಾವನ್ನಪ್ಪಿದ ಕೆಲವು ಮಹಿಳೆಯರ ಫೋಟೋಗಳನ್ನು ತಮ್ಮ ದಿನ ಪತ್ರಿಕೆಗಳಲ್ಲಿ ಪ್ರಕಟಿಸಿ ಇದು ಗೋದ್ರಾ ರೈಲು ನಿಲ್ದಾಣದಲ್ಲಿ ನಡೆದದ್ದೆಂದು ಹಸಿ ಹಸಿ ಸುಳ್ಳುಗಳನ್ನು ಪ್ರಚಾರ ಮಾಡಲಾಯಿತು. 2002 ರ ಫೆಬ್ರವರಿಯ ಗೋಧ್ರಾ ರೈಲು ದುರಂತದ ನಂತರ ಹಿಂದೂಗಳ ಮತೀಯ ಭಾವನೆಗಳನ್ನು ಕೆರಳಿಸಿ ಗುಜರಾತ್ ರಾಜ್ಯಾದ್ಯಾಂತ ಮುಸ್ಲಿಂ ವಿರೋಧಿ ಪ್ರಚಾರ ನಡೆಸಿದ ಸಂಘ ಪರಿವಾರ ಇದಕ್ಕೆ ಕುಮ್ಮಕ್ಕು ನೀಡಿದ ನರೇಂದ್ರ ಮೋದಿ ನಂತರದ ವಾರಗಳಲ್ಲಿ ನಡೆಸಿದ ಹತ್ಯಾಕಾಂಡದಲ್ಲಿ ಪ್ರತ್ಯಕ್ಷವಾಗಿಯೇ, ಸರ್ಕಾರದ ಮತ್ತು ಗೃಹ ಖಾತೆಯ ಬೆಂಬಲದಿಂದ ಸಾವಿರಾರು ಮುಸ್ಲಿಂರ ಹತ್ಯೆ ಮಾಡಲಾಯಿತು. ಅದಾಗಿ 11 ವರ್ಷಗಳ ನಂತರವೂ ಇಂದಿಗೂ ಅಲ್ಲಿ ಭಯದ ವಾತಾವರಣವಿದೆ. ಮುಸ್ಲಿಂರನ್ನು ಸದಾ ಅಭದ್ರತೆಯಲ್ಲಿ ನರಳುವಂತೆ ಮಾಡಲಾಗಿದೆ. ಇನ್ನೂ ಕೆಲವು ನಿರಾಶ್ರಿತ ಶಿಬಿರಗಳಲ್ಲಿ ಮುಸ್ಲಿಂರು ಅತಂತ್ರರಾಗಿ ಬದುಕುತ್ತಿದ್ದಾರೆ.ಮಾನವ ವಿರೋಧಿ ಹಿಂದುತ್ವದ ಆಫೀಮು ಇಂದಿಗೂ ಗುಜರಾತ್‌ನಲ್ಲಿ ಜಾರಿಯಲ್ಲಿದೆ

2013 ಆಗಸ್ಟ್ 27 ರಂದು ಮುಜಫರ್ ನಗರದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯೊಬ್ಬಳನ್ನು ಚುಡಾಯಿಸಿದರೆಂಬ ವದಂತಿಯಿಂದ ಪ್ರಾರಂಭಗೊಂಡ ಈ ಚಿಲ್ಲರೆ ಜಗಳ ಜಾಟ್ ಸಮುದಾಯಕ್ಕೆ ಸೇರಿದ ಗುಂಪೊಂದು ಮುಸ್ಲಿಂ ಯುವಕನನ್ನು ಹತ್ಯೆಗೈಯುವಷ್ಟರ ಮಟ್ಟಿಗೆ ಬಂದು ಮುಟ್ಟಿತು. ಇದಕ್ಕೆ ಪ್ರತಿಯಾಗಿ ಹತ್ಯೆಗೆ ಪ್ರತೀಕಾರವೆಂಬಂತೆ ಮುಸ್ಲಿಂರ ಗುಂಪೊಂದು ಯುವತಿಯ ಇಬ್ಬರು ಸಂಬಂಧಿಕರ ಮೇಲೆ ಹಲ್ಲೆ ನಡೆಸಿತೆಂದೂ ನಂತರ ಈ ಪ್ರಾಣಾಂತಿಕ ಹಲ್ಲೆಯಿಂದಾಗಿ ಈ ಇಬ್ಬರು ಸಹೋದರರು ಸಾವನ್ನಪ್ಪಿದರೆಂದೂ ಪತ್ರಿಕೆಗಳಲ್ಲಿ ವರದಿಯಾಯಿತು. ಆದರೆ ಕೆಲವು ಕಿಡಿಗೇಡಿಗಳು ಪಕ್ಕದ ತಾಲಿಬಾನ್ ರಾಷ್ಟ್ರಗಳಲ್ಲಿ ಚಿತ್ರೀಕರಣಗೊಂಡ ಇಬ್ಬರು ಯುವಕರನ್ನು ಇರಿದು ಸಾಯಿಸುವ ವಿಡಿಯೋ ದೃಶ್ಯವನ್ನು ಮುಜಫರ್ ನಗರದ ಈ ಘಟನೆಗೆ ಸಂಬಂದಿಸಿದ್ದೆಂದು ಸುಳ್ಳು ಪ್ರಚಾರ ಪ್ರಾರಂಬಿಸಿದರು. ಈ ನಕಲಿ ವಿಡಿಯೋ ಅಂತರ್ಜಾಲದಲ್ಲೆಲ್ಲ ಹರಿದಾಡಿತು. ಆಗಸ್ಟ್ 31 ರ ವೇಳೆಗೆ ಮೊಬೈಲ್‌ಗಳಲ್ಲಿ ಎಸ್ಸೆಮ್ಮೆಸ್ ಮೂಲಕ ರವಾನೆಯಾಗತೊಡಗಿತು. ಈ ನಕಲಿ ವಿಡಿಯೋವನ್ನು ಕಾಳ್ಗಿಚ್ಚಿನಂತೆ ಹಬ್ಬಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವಲ್ಲಿ ಸಂಘಪರಿವಾರದ ಕೈವಾಡವಿದೆಯೆಂದೂ ನೇರವಾಗಿಯೇ ಆರೋಪಿಸಲಾಗುತ್ತಿದೆ. ಆದರೆ ಬಿಜೆಪಿ ಇದನ್ನು ನಿರಾಕರಿಸುತ್ತಿದೆ. ಒಟ್ಟಿನಲ್ಲಿ ಈ ಮತೀಯವಾದವನ್ನು ಈ ಸಂಘ ಪರಿವಾರ ಹುಟ್ಟು ಹಾಕಿತೋ ಇಲ್ಲವೋ ಅದು ತನಿಖೆಯಿಂದ ಗೊತ್ತಾಗುತ್ತದೆ, ಆದರೆ ಈ ಬಗೆಯ ಆಕಸ್ಮಿಕ ವಿಷಮಯ ವಾತಾವರಣಕ್ಕೆ ಕಾಯುತ್ತಿದ್ದ ಸಂಘ ಪರಿವಾರವು ಮುಜಫರ್ ನಗರದಲ್ಲಿ ಘಟಿಸಿದ ಈ ಅಂತಧರ್ಮಗಳ ಒಳ ಕಲಹವನ್ನು ತದನಂತರ ತನ್ನ ಕೈಗೆತ್ತಿಕೊಂಡು ಅದು ಜಿಲ್ಲೆಯಾದ್ಯಾಂತ ವ್ಯಾಪಿಸುವಂತೆ ಮಾಡುವುದರಲ್ಲಿ ಮಾತ್ರ ತನ್ನ ಕೈವಾಡವಿರುವುದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಉತ್ತರ ಪ್ರದೇಶದ ಬಿಜೆಪಿ ಶಾಸಕರಾದ ಸಂಗೀತ್ ಸಿಂಗ್ ಸೋಮ್ ಮತ್ತು ಭಾರತೇಂದು ಸಿಂಗ್ ಮತ್ತು ಹುಕುಮ್ ಸಿಂಗ್ ಮೇಲೆ ಮತೀಯ ಭಾವನೆಗಳನ್ನು ಕೆರಳಿಸಿ ಮುಜಫರ ನಗರದ ಕೋಮು ಗಲಭೆಗಳಿಗೆ ಕಾರಣರಾದರೆಂದು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಜಾಮೀನುರಹಿತ ವಾರೆಂಟ್ ಜಾರಿಯಾಗಿದೆ. Suresh ranaಆದರೆ ಅವರನ್ನು ಬಂಧಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅದಕ್ಕೆ ಪೋಲೀಸರು ಕೊಡುತ್ತಿರುವ ಕಾರಣ ಆಡಳಿತಾತ್ಮಕ ತೊಂದರೆಗಳು. ಕಡೆಗೆ ಬಂದಿಸಿದ್ದಾರೆ ಎಂದು ವರದಿಯಾಗಿದೆ. ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅಲ್ಲಿನ ಶಾಸಕಿಯಾಗಿ ಆಯ್ಕೆಗೊಂಡ, ತನ್ನ ತೊಂಬತ್ತರ ದಶಕದ ಹಿಂಸಾತ್ಮಕ ವ್ಯಕ್ತಿತ್ವಕ್ಕೆ ಮರಳಿದ ಬಿಜೆಪಿಯ ಉಮಾಭಾರತಿ ಸದನದಲ್ಲಿ ಮಾತನಾಡುತ್ತ “ಹುಷಾರ್! ಬಿಜೆಪಿಯ ಶಾಸಕರನ್ನು ಬಂಧಿಸಿದರೆ ಮುಂದಿನ ಗತಿ ನೆಟ್ಟಗಾಗಲಿಕ್ಕಿಲ್ಲ, ತೀವ್ರವಾದ ಪರಿಣಾಮಗಳನ್ನು ಎದರುರಿಸಬೇಕಾಗುತ್ತದೆ,” ಎಂದು ಗುಡುಗಿದ್ದಾರೆ. (ದ ಹಿಂದೂ, ಸೆಪ್ಟೆಂಬರ್ 19, 2013)

ಈ ಬಿಜೆಪಿ ನಾಯಕರು, ಮೋದಿ ಮತ್ತು ಮತಾಂಧ ಗುಂಪುಗಳು ತಮ್ಮ ಹಿಂದೂ ಧರ್ಮದ ಭಗವದ್ಜಜ, ಶಂಖ, ಕಮಂಡಲ, ಓಂ ಇತ್ಯಾದಿಗಳು ಧರ್ಮ ರಕ್ಷಣೆಯ, ಸದ್ಭಾವನೆಯ, ರಾಷ್ಟ್ರೀಯವಾದಿ ಸಂಕೇತಗಳೆಂದೂ ಇತರೇ ಧರ್ಮಗಳ ಆಚರಣೆಗಳು ಮತ್ತು ಉಡುಗೆ ತೊಡುಗೆಗಳನ್ನು ಅಪಾಯಕಾರಿ, ರಾಷ್ಟ್ರ ವಿರೋಧಿ ಸಂಕೇತಗಳಾಗಿ ಬಿಂಬಿಸಿ ಅವುಗಳ ಕುರಿತಾಗಿ ಒಂದು ಬಗೆಯ ಹೀಗಳಿಕೆಯ ನುಡಿಕಟ್ಟನ್ನು, ಮನೋಭೂಮಿಕೆಯನ್ನು ಜಾರಿಗೊಳಿಸಿತು. ಎರಡು ವರ್ಷಗಳ ಹಿಂದೆ ಇದೇ ಮೋದಿ ತನ್ನ ಸದ್ಭಾವನಾ ರ್‍ಯಾಲಿಯಲ್ಲಿ ಮುಸ್ಲಿಂ ನಾಯಕರು ತೊಡಿಸಲು ಬಂದ ಸ್ಕಲ್ ಕ್ಯಾಪ್ ಅನ್ನು ತೊಡಲು ಬಹಿರಂಗವಾಗಿಯೇ ನಿರಾಕರಿಸಿದ್ದ. ಕಳೆದ ಹತ್ತು ವರ್ಷಗಳಲ್ಲಿ ನಾನೇನು ಬದಲಾಗಿಲ್ಲ, ಹುಷಾರಾಗಿರಿ ಎಂಬ ವಾರ್ನಿಂಗ್ ರೀತಿಯಲ್ಲಿತ್ತು ಈ ಸರ್ವಾಧಿಕಾರಿಯ ವರ್ತನೆ. ಮಿಯ್ಯಾ ಮುಶ್ರಫ್, ಮೇಡಂ ಮೇರಿ, ಮೈಖೆಲ್ ಲಿಂಗ್ಡೋ ಎಂದು ಅತ್ಯಂತ ಸ್ಯಾಡಿಸ್ಟ್ ಮನಸ್ಥಿತಿಯಲ್ಲಿ ಇತರೇ ಧರ್ಮಗಳನ್ನು ಕ್ರೂರವಾಗಿ, ಅಮಾನವೀಯವಾಗಿ ಹಂಗಿಸಿದ್ದ ಈ ಮೋದಿ ಈ ವರ್ಷ ಮುಂದುವರೆದು “ಬುರ್ಖಾ ಸೆಕ್ಯುಲರಿಸಂ” ಎಂದು ಅಮಾನವೀಯವಾಗಿ ಮಾತನಾಡಿದ್ದಾನೆ. ಇದೇ ಫ್ಯಾಸಿಸ್ಟ್ ಆರೆಸಸ್ 1926 ರಲ್ಲಿ ನಾಗಪುರದಲ್ಲಿ ಹಿಂದೂ ಡಾಕ್ಟರ್ ಮನೆಯ ಮೇಲೆ ಯಾರೋ ಅಲ್ಲಾಹೊ ಅಕ್ಬರ್ ಎಂದು ಕೂಗುತ್ತ ದಾಳಿ ನಡೆಸಿದರು ಎಂದು ಗುಲ್ಲೆಬ್ಬಿಸಿ ಕೋಮು ಗಲಭೆಗಳನ್ನು ಹುಟ್ಟು ಹಾಕಿದ್ದ ಕಾಲದಿಂದ ಹಿಡಿದು 2013 ರಲ್ಲಿ ಮುಜಫರ್ ನಗರದಲ್ಲಿ ನಡೆದ ಕೋಮು ಗಲಭೆಗಳವರೆಗೂ ವರೆಗೂ ಅಂದರೆ ಕಳೆದ 87 ವರ್ಷಗಳಿಂದ ‘ದಾಡಿ, ಟೋಪಿ, ಬುರ್ಖಾದವರೇನಾದರು ಕಂಡಲ್ಲಿ ಅವರ ಮೇಲೆ ಹಲ್ಲೆ ನಡೆಸಿ ಏಕೆಂದರೆ ಅವರು ಇಲ್ಲಿಯವರಲ್ಲ, ನಮ್ಮವರಲ್ಲ’ ಎಂದು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಾ ಕಾಲಕಾಲಕ್ಕೆ ಲುಂಪೆನ್ ಹಿಂದುತ್ವವಾದಿ ದಾಳಿಕೋರ ತಲೆಮಾರುಗಳನ್ನು ಬೆಳೆಸಿತ್ತು. ಎಂಟು ದಶಕಗಳ ಕಾಲ ಎರಡು ಧರ್ಮಗಳ ನಡುವೆ ವೈಷಮ್ಯದ, ದ್ವೇಷದ ವಾತಾವರಣವನ್ನು ಜೀವಂತವಾಗಿಟ್ಟಿತ್ತು. ಇವರ ಜೊತೆಗಾರ ಬಾಳಾ ಠಾಕ್ರೆ ಮುಂಬೈಯಲ್ಲಿ ಈ ದಾಡಿ, ಟೋಪಿ, ಬುರ್ಖಾದ ವಿರುದ್ಧ ಬೆಂಕಿಯುಗುಳುತ್ತಿದ್ದರೆ ಇತ್ತ ಈ ಅರೆಸೆಸ್ ಉತ್ತರ ಭಾರತಾದ್ಯಾಂತ ‘ಗರ್ವಸೆ ಕಹೋ ಹಂ ಹಿಂದೂ ಹೈ’ ಎಂಬ ಪ್ರಚೋದನಾತ್ಮಕವಾದ, ದೇಶ ವಿರೋಧಿ ಘೋಷಣೆಯನ್ನು ಪ್ರತಿಧ್ವನಿಸುತ್ತಿತ್ತು.

ಸ್ವಂತಂತ್ರೋತ್ತರ ಭಾರತದಲ್ಲಿ ಸಂಘ ಪರಿವಾರವು ದೇಶದ ಯಾವುದೇ ಭಾಗದಲ್ಲಾಗಲಿ ಈ ದಾಡಿಯವರು, ಬುರ್ಖಾದವರೇನದರೂ ಕಂಡರೆ ಅವರ ಮೇಲೆ ಹಲ್ಲೆ ನಡೆಸಿ, ಅವರನ್ನು ಬಿಡಬೇಡಿ ಎಂದು ಕರೆ ಕೊಟ್ಟು ಭಿವಂಡಿಯಲ್ಲಿ, ಮುಂಬೈನಲ್ಲಿ, ಮೀರತ್‌ನಲ್ಲಿ, ಕಾನ್ಪುರದಲ್ಲಿ, ಭಾಗಲ್ಪುರದಲ್ಲಿ, ಅಯೋಧ್ಯೆಯಲ್ಲಿ, ಮುಜಫರ್ ನಗರ ದಲ್ಲಿ, ಗುಜರಾತ್‌ನಲ್ಲಿ ಕೋಮು ಗಲಭೆಗಳನ್ನು ಹುಟ್ಟು ಹಾಕಿ ಸಾವಿರಾರು ಮುಗ್ಧ ನಾಗರಿಕರ ಹತ್ಯೆಗಳಿಗೆ ಬೀಜವನ್ನು ಬಿತ್ತಿತು. ತೊಂಬತ್ತರ ದಶಕದಲ್ಲಿ ‘ಜೈ ಶ್ರೀರಾಂ, ಹರ ಹರ ಮಹಾದೇವ’ ಘೋಷಣೆಗಳು ಅಲ್ಪಸಂಖ್ಯಾತರ ಪಾಲಿಗೆ ಮರಣ ಶಾಸನವಾಗಿದ್ದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಕೋಮು ಗಲಭೆಗಳಲ್ಲಿ ಸತ್ತ ಮುಸ್ಲಿಂ ನಾಗರಿಕರ ಸಂಖ್ಯೆಗಳನ್ನು ಎದೆ ತಟ್ಟಿ ಘೋಷಿಸಿಕೊಳ್ಳುತ್ತಿತ್ತು ಈ ಸಂಘ ಪರಿವಾರ. ಒಟ್ಟಿನಲ್ಲಿ ಇಂಡಿಯಾದ ಮುಸ್ಲಿಂರು ತಮ್ಮ ಮೌಢ್ಯದ, ಕ್ರೌರ್ಯದ ಕೂಪಗಳಾದ Ghetto ಗಳಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಅಣಿಯಾಗುತ್ತಿದ್ದಂತೆಯೇ ಈ ಸಂಘ ಪರಿವಾರ ಮತ್ತು ಈ ಮೋದಿ ಅವರನ್ನು ಸಮಾಜದ ಎರಡನೇ ದರ್ಜೆಯ ನಾಗರಿಕರನ್ನಾಗಿಸುತ್ತ, ಅವರ ಧಾರ್ಮಿಕ ಸಂಕೇತಗಳನ್ನು ವಿಂಡಬನಾತ್ಮಕವಾಗಿ ಹೀನಾಯವಾಗಿ ಹಂಗಿಸುತ್ತ ದೇಶದಾದ್ಯಂತ ಧಾರ್ಮಿಕ ಧ್ರುವೀಕರಣಕ್ಕೆ ಚಾಲ್ತಿ ನೀಡಿತ್ತು.

ಆದರೆ ಮತ್ತೊಂದು ಕಡೆ ತನ್ನನ್ನು ಸರ್ವಧರ್ಮ ಸಹಿಷ್ಣುವೆಂಬಂತೆ ಬಿಂಬಿಸಿಕೊಳ್ಳಲು ಅನೇಕ ವಾಮಮಾರ್ಗಗಳನ್ನು ಹುಡುಕುತ್ತಿದೆ ಸಂಘ ಪರಿವಾರ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ 2013 ರ ಸೆಪ್ಟೆಂಬರ್‌ನಲ್ಲಿ ರಾಜಸ್ತಾನದ ಜೈಪುರದಲ್ಲಿ ಮೋದಿಯ ನೇತೃತ್ವದಲ್ಲಿ ನಡೆದ ಬಿಜೆಪಿಯ ರ್‍ಯಾಲಿಯಲ್ಲಿ ಭಾಗವಹಿಸಲು ಮುಸ್ಲಿಂರ ಗುಂಪೊಂದನ್ನು ಆರಿಸಿ ಅವರಿಗೆಲ್ಲ ಸ್ಕಲ್ ಟೋಪಿ ಮತ್ತು ಬುರ್ಖಾಗಳನ್ನು ಉಚಿತವಾಗಿ ವಿತರಿಸಿ, modi_skull_capಇದನ್ನು ಕಡ್ಡಾವಾಗಿ ಧರಿಸಿ ಈ ಬಿಜೆಪಿ ರ್‍ಯಾಲಿಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿತ್ತು. ಈ ಮುಸ್ಲಿಂ ಗುಂಪು ತಮ್ಮ ಸಾಂಪ್ರದಾಯಿಕ ಸ್ಕಲ್ ಕ್ಯಾಪ್ ಅನ್ನು ಧರಿಸಿಕೊಂಡು ಬರುವಂತೆ ಅವರಿಗೆ ವಿಶೇಷವಾಗಿ ಸೂಚಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ಸಂಘ ಪರಿವಾರದ ನಾಯಕರು ಇದರಲ್ಲಿ ವಿಶೇಷತೆಯೇನಿದೆ? ಅವರರವರ ನಂಬಿಕೆ ಅವರದ್ದು, ಇದು ಸಂಘ ಪರಿವಾರದ ಧರ್ಮ ಸಹಿಷ್ಣತೆಯನ್ನು ಸೂಚಿಸುತ್ತದೆ ಎಂದು ಹೇಳಿ ಪ್ರಜ್ಞಾವಂತರು ಕಕ್ಕಾಬಿಕ್ಕಯಾಗುವಂತೆ ಮಾಡಿದರು. ಅಂದರೆ ಪ್ರಜಾಪ್ರಭುತ್ವ, ಸೆಕ್ಯುಲರ್ ದೇಶವೊಂದರ ಪ್ರಧಾನ ಮಂತ್ರಿ ಆಕಾಂಕ್ಷಿ ನೀವಂದುಕೊಂಡಂತೆ ಧರ್ಮಾಂಧನಲ್ಲ, ಆತನಿಗೂ ಒಳಗೊಳ್ಳುವಿಕೆಯ ಅರಿವಿದೆ, ಅದಕ್ಕೇ ನೋಡಿ ಈ ಸ್ಕಲ್ ಕ್ಯಾಪ್ ಧರಿಸಿರುವ ಮಂದಿ ಹೇಗೆ ಹಿಂದೂಗಳೊಂದಿಗೆ ಬಿಜೆಪಿ ರ್‍ಯಾಲಿಯಲ್ಲಿ ಕೂತಿದ್ದಾರೆ ಎನ್ನುವ ಸಂದೇಶವನ್ನು ರವಾನಿಸುವ ಮಾರ್ಕೆಟಿಂಗ್ ತಂತ್ರವನ್ನು ಹೆಣೆಯಲಾಗಿತ್ತು.

ಇಂದು ಆರೆಸಸ್ ತನ್ನ ಮತೀಯವಾದಿ, ಹಿಂಸಾತ್ಮಕ ರಾಜಕಾರಣದ ಪಯಣದಲ್ಲಿ ಅತ್ಯಂತ ಮುಖ್ಯ ಘಟ್ಟದಲ್ಲಿದೆ. ಬಿಜೆಪಿಯ ಜುಟ್ಟಿನ ಮೇಲೆ ತನ್ನ ಕೇಶವಕೃಪಾದ ಹಿಡಿತವನ್ನು ಬಿಗಿಗೊಳಿಸಿಕೊಳ್ಳುತ್ತಲೇ ಅಖಂಡ ಭಾರತವನ್ನು ಆಳುವ ತನ್ನ ದಶಕಗಳ ಕಾಲದ ಕನಸನ್ನು ನನಸಾಗಿಸುವ ಕಾಲ ಹೆಚ್ಚೂ ಕಡಿಮೆ ಕೈಯಳತೆಯಲ್ಲಿದೆ ಎಂದು ಭ್ರಮಿಸಿರುವ ಈ ಆರೆಸಸ್ ಅದಕ್ಕಾಗಿ ಯೂರೋಪಿಯನ್ ಫ್ಯಾಸಿಸ್ಟರ ಮಾದರಿಯಲ್ಲಿಯೇ ನೇರವಾಗಿ ತನ್ನ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡೇ ಡೆಲ್ಲಿ ಗದ್ದುಗೆ ಕಬಳಿಸುವ ಹುನ್ನಾರದಲ್ಲಿದೆ. ಏಕೆಂದರೆ ಬ್ರಾಹ್ಮಣರಾದ ವಾಜಪೇಯಿಯವರಿಗೆ ಸುಧಾರಣವಾದಿ ಮುಖವಾಡ ತೊಡೆಸಿ ಅವರ ಇಮೇಜ್‌ಗೆ ಯಾವುದೇ ಕುಂದು ಬರದಂತೆ ಅತ್ಯಂತ ಜತನದಿಂದ ಕಾಪಾಡಿಕೊಳ್ಳುತ್ತ, ಅತ್ತ ಅಡ್ವಾನಿಯವರನ್ನು ಮತೀಯವಾದಿ ರಾಜಕಾರಣಕ್ಕೆ ಬಹಿರಂಗವಾಗಿಯೇ ಪಟ್ಟಾಭಿಷೇಕ ಮಾಡಿ ಅಡ್ವಾನಿಯ ಕೋಮುವಾದಿ ರಾಜಕಾರಣದ ಫಲವನ್ನು ತೊಂಬತ್ತರ ದಶಕದ ಮಧ್ಯದ ವೇಳೆಗೆ ಹೆಚ್ಚೂ ಕಡಿಮೆ ತನ್ನ ಕೈಗೆಟುಕಿಸಿಕೊಂಡುಬಿಟ್ಟಿತ್ತು ಈ ಆರೆಸೆಸ್. ಆದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ತಾತ್ಕಲಿಕವಾಗಿ ತನ್ನ ತೀವ್ರವಾದಿ ಮಾರ್ಗವನ್ನು ಹಿಂದಿಟ್ಟು ಮಧ್ಯಮ ಮಾರ್ಗದ ರಾಜಕಾರಣಕ್ಕೆ ಅಣಿಗೊಳ್ಳುವ ಅನಿವಾರ್ಯತೆಗೆ ವಿಷಾದಿಂದ ಒಪ್ಪಿಕೊಳ್ಳುತ್ತಲೇ ತಮ್ಮ ನೀಲಿ ಕಣ್ಣಿನ ಹುಡುಗ ವಾಜಪೇಯಿಗೆ ಪ್ರಧಾನಮಂತ್ರಿಯ ಪಟ್ಟ ತೊಡೆಸಿ, ತಮ್ಮ ಸೇನಾಧಿಪತಿ ಅಡ್ವಾನಿಗೆ ಅವರ ಡೆಪ್ಯುಟಿಯನ್ನಾಗಿಸಿತ್ತು. ಇದು ಆರೆಸಸ್‌ನ ಎರಡಂಚಿನ ಕತ್ತಿಯ ನಡುಗೆಯ ಶೈಲಿ. ಆದರೆ ತಾತ್ಕಾಲಿಕವಾಗಿ ದಕ್ಕಿದ ಆಧಿಕಾರ ಕೈತಪ್ಪಿ ಇಂದಿಗೆ ಹತ್ತು ವರ್ಷಗಳಾಗಿವೆ. ಅಂದು ತೀವ್ರ ಹಿಂದೂತ್ವದ ಪ್ರತಿಪಾದಕರಾಗಿದ್ದ ಅಡ್ವಾನಿಯವರಿಗೆ ವಾಜಪೇಯಿಯವರ ಸುಧಾರಣವಾದಿ ಮುಖವಾಡದ ಅನುಕೂಲತೆಗಳು ಮತ್ತು ಅದರ ತೋರಿಕೆಯ, ಹುಸಿಯಾದ ಒಳಗೊಳ್ಳುವಿಕೆಯ ಪ್ರಾಮುಖ್ಯತೆ ಅರಿವಾಗಿ ಅತ್ತ ಕಡೆ ವಾಲತೊಡಗಿದಾಗ ಆರೆಸಸ್‌ಗೆ ತನ್ನ ಕಟ್ಟರ್ ಹಿಂದುತ್ವದ ಪೋಸ್ಟರ್ ಬಾಯ್ ಆಗಿ ಕಂಡಿದ್ದು ಈ ನರೇಂದ್ರ ಮೋದಿ. ಆತನ ಈ ಫ್ಯಾಸಿಸಂ ವ್ಯಕ್ತಿತ್ವ ಆರೆಸಸ್‌ಗೆ ವರವಾಗಿ ದೊರೆತಂತಾಗಿದೆ. ಮತ್ತೊಮ್ಮೆ ತನ್ನ ಅಖಂಡ ಭಾರತವನ್ನು ಈ ಬಾರಿ ಕರಾರುವಕ್ಕಾಗಿ ಹಿಂದೂ ಮತಾಂಧತೆಯ ಕಪಿಮುಷ್ಟಿಗೆ ಸೆಳೆದುಕೊಳ್ಳುವ, ಧರ್ಮಾಂಧ ರಾಜಕಾಣಕ್ಕೆ ಬಿಡಿಸಲಾಗದಂತೆ ಬಂಧಿಸುವ ಮತ್ತು ಮುಖ್ಯವಾಗಿ ತನ್ನ ಗುರಿಯಾದ ಹಿಂದೂ ರಾಷ್ಟ್ರಕ್ಕಾಗಿ ಈ ಅವಕಾಶವನ್ನು ಬಳಸಿಕೊಳ್ಳಲು ಆರೆಸಸ್ ಪಣತೊಟ್ಟಿದೆ. ಇವರ ಅನುಕೂಲಕ್ಕೆ ಆರೆಸಸ್‌ನ ಅಧಿಪತಿ ಮೋಹನ್ ಭಾಗವತ್ ಮತ್ತು ನರೇಂದ್ರ ಮೋದಿಯ ನಡುವಿನ ಕೆಮಿಸ್ಟ್ರಿ ಸರಿಯಾಗಿಯೇ ಕೂಡಿಕೊಂಡಿದೆ. ಈಗ ಆರೆಸಸ್ ಕೇಶವ ಕೃಪಾದಿಂದ ಹೊರಬಂದು ಬಿಜೆಪಿಯ ಹೈಕಮಾಂಡ್ ಸ್ಥಾನವನ್ನು ಬಹಿರಂಗವಾಗಿಯೇ ವಹಿಸಿಕೊಂಡಿದೆ. ಇಂದು ಇದು ಓಪನ್ ಸೀಕ್ರೆಟ್.

ಚಿಂತಕ ಜ್ಯೋತಿರ್ಮಯೀ ಶರ್ಮ ಅವರು ಹಿಂದೊಮ್ಮೆ ರಾಜಕಾರಣವನ್ನು ತನ್ನ ವೈಯುಕ್ತಿಕ ಆಶೆಗಳ ಪೂರೈಕೆಗಾಗಿ ಯಾರೊಂದಿಗಾದರೂ ಕೂಡಿಕೊಳ್ಳುವ, ಹೊಂದಾಣಿಕೆ ಮಾಡಿಕೊಳ್ಳುವ ಹಾದಿ ತಪ್ಪಿದ ಹೆಂಗಸೆಂದು ಬಣ್ಣಿಸಿದ ಗೋಳ್ವಕರ್ ಮಾತುಗಳನ್ನು ಸ್ವತಃ ತಾನೇ ಚಾಲ್ತಿಗೆ ತರಲು ಆರೆಸಸ್ ಮುಂದಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮೋದಿ ಮತ್ತು ಮೋಹನ್ ಭಾಗವತ್ ಜೋಡಿ ತಮ್ಮ ಜಂಟಿ ಕಾರ್ಯಾಚರಣೆಯ ಮೂಲಕ ದಂಡ ಮತ್ತು ಧರ್ಮದ ಬಳಕೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಪಣತೊಟ್ಟಿದ್ದಾರೆ. ಇವರ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಮೋದಿಯು ಕ್ಷತ್ರಿಯ ರಾಜನಾಗಿ ಪಟ್ಟಾಭಿಷೇಕಗೊಂಡರೆ ಮೋಹನ್ ಭಾಗವತ್ ಆತನ ರಾಜಗುರು. ಬಿಜೆಪಿ ರಾಜ್ಯಭಾರ ಮಾಡುವ ಕ್ಷತ್ರಿಯ ವಂಶವಾದರೆ ಆರೆಸಸ್ ಈ ಕ್ಷತ್ರಿಯ ವಂಶದ ಗುರುಕುಲ ಮತ್ತು ಧರ್ಮಪೀಠ. ಇಪ್ಪತೊಂದನೇ ಶತಮಾನದಲ್ಲಿ ಹಿಂದೂ ಮತ್ತು ಹಿಂದೂ ರಾಷ್ಟ್ರವು ಕಾರ್ಪೋರೇಟ್ ವರ್ಗಗಳದೇ ಒಂದು ಇಂಡಿಯಾ ಆಗಿ ರೂಪುಗೊಳ್ಳುತ್ತದೆ. ಅದು ಕಾರ್ಪೋರೇಟ್ ಇಂಡಿಯಾ ಎಂದು ಕರೆಸಿಕೊಳ್ಳುತ್ತದೆ. ಇಡೀ ಪಾರ್ಲಿಮೆಂಟ್ ವ್ಯವಸ್ಥೆ ಬೋರ್ಡ ರೂಮ್ ಆಗಿ ಕಂಗೊಳಿಸುತ್ತದೆ ಎಂದು ಮಾರ್ಮಿಕವಾಗಿ ಬರೆಯುತ್ತಾರೆ

ಈ ಮೋಮೋ (ಮೋದಿ ಮತ್ತು ಮೋಹನ್ ಭಾಗವತ್) ಜೋಡಿಯ ಕಾರ್ಯಾಚರಣೆಯ ಮೊದಲ ಬಲಿಯೇ ಭಾರತದ ಸಂವಿಧಾನ. bhagvat-gadkari-modiಈ ಮೋಮೋ ಜೋಡಿ ಮಾಡುವ ಮೊದಲ ಕೆಲಸ ನಮ್ಮ ಸಂವಿಧಾನವನ್ನು ಹಿಂದೂ ಮತ್ತು ಹಿಂದೂ ರಾಷ್ಟ್ರದ ಕನಸಿನ ಸಾಕಾರಕ್ಕೆ ಅನುಗುಣವಾಗುವಂತೆ ಸಂಪೂರ್ಣವಾಗಿ ಬದಲಿಸುವುದು. ಇದು ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಗಣರಾಜ್ಯಗಳ ಮಾದರಿಯ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಸಮತಾವಾದದ, ಸೆಕ್ಯುಲರ್ ಆಶಯವನ್ನು ಧಿಕ್ಕರಿಸುವಂತೆ, ಅಲ್ಲಗೆಳೆಯುವಂತೆ ಮೋದಿಯನ್ನು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಂದು ಪಟ್ಟ ಕಟ್ಟಿದ ಪ್ರಕ್ರಿಯೆಯೇ ಪ್ರಜಾಪ್ರಭುತ್ವದ ಮಾದರಿಗೆ ವಿರೋಧವಾದದ್ದು. ಇದು ಅಧ್ಯಕ್ಷೀಯ ವ್ಯವಸ್ಥೆಯ ಮಾದರಿ. ಆದರೆ ಈ ಅಧ್ಯಕ್ಷೀಯ ಮಾದರಿಯನ್ನು ನಮ್ಮ ಸಂವಿಧಾನ ಪುರಸ್ಕರಿಸುವುದಿಲ್ಲ. ಆದರೆ ಮೋಮೋ ಜೋಡಿಯ ಮೊದಲ ಉದ್ದೇಶವೇ ನಮ್ಮ ಸಂವಿಧಾನದ ಆಶಯಗಳಿಗೆ ವಿರೋಧವಾದ ಅಧ್ಯಕ್ಷೀಯ ವ್ಯವಸ್ಥೆಯನ್ನು ಜಾರಿಗೆ ತರುವುದು. ಈ ಮೋಮೋ ಆಡಳಿತದ ಮತ್ತೊಂದು ಉದ್ದೇಶ ಜನರಿಂದ, ಜನರಿಗಾಗಿ ಎನ್ನುವ ಪ್ರಜಾಪ್ರಭುತ್ವದ ಮೂಲ ನ್ಯಾಯ ನೀತಿಯನ್ನೇ ತಿರಸ್ಕೃತಗೊಳಿಸುವುದು. ಆ ಸ್ಥಾನದಲ್ಲಿ ನಾಯಕನಿಂದ, ನಾಯಕನಿಗಾಗಿ ಎನ್ನುವ ಸರ್ವಾಧಿಕಾರಿ ವ್ಯವಸ್ಥೆಯನ್ನು ಹುಟ್ಟುಹಾಕುವುದು. ಇದು ಕೂಡ ಉತ್ಪ್ರೇಕ್ಷೆಯಲ್ಲ.

ಮುಖ್ಯವಾದ ಮತ್ತೊಂದು ಗುರಿಯೆಂದರೆ ಆರೆಸಸ್‌ನ ಗುಪ್ತ ಕಾರ್ಯಸೂಚಿಯಾದ ಪ್ರಾಚೀನ ಭಾರತದ ಪುನರುಜ್ಜೀವನ. ಬ್ರಾಹ್ಮಣ ಮತ್ತು ಶೂದ್ರ ಶಕ್ತಿಯನ್ನು ಕ್ರೋಢೀಕರಿಸಿ ದಲಿತರನ್ನು ಮರಳಿ ಊರ ಹೊರಗಿನ ಕೇರಿಗೆ ತಳ್ಳುವ ವರ್ಣಾಶ್ರಮದ ಯುಗದ ಪುನನಿರ್ಮಾಣ. ಅದಕ್ಕೆ ಶಕ್ತಿವಂತ ಶೂದ್ರ ಮೋದಿಯನ್ನು ಸರಿಯಾಗಿ ಗಾಳ ಹಾಕಿ ತನ್ನ ಕಬ್ಜಾದೊಳಕ್ಕೆ ಹಿಡಿದಿಟ್ಟುಕೊಂಡಿದೆ ಈ ಆರೆಸಸ್.

ಮೂವತ್ತರ ದಶಕದಲ್ಲಿ ಫ್ಯಾಸಿಸ್ಟ್ ಪಕ್ಷದ ನಾಯಕ ಮಸಲೋನಿ ಇಟಲಿಯ ಮಹಾನ್ ಚಿಂತಕ ಗ್ರಾಮ್ಷಿಯನ್ನು ಜೈಲಿಗೆ ತಳ್ಳಿ ತನ್ನ ಅಧಿಕಾರಿಗಳಿಗೆ gramsciಹೇಳುತ್ತಾನೆ: “ಈತನನ್ನು ( ಗ್ರಾಮ್ಷಿಯನ್ನು) ಸಾಯಿಸಬೇಡಿ. ಆದರೆ ಮುಂದಿನ ಇಪ್ಪತ್ತು ವರ್ಷಗಳ ಕಾಲ ಈತ ಚಿಂತಿಸಬಾರದು, ಓದಬಾರದು. ಆ ರೀತಿ ಈತನ ಬೌದ್ಧಿಕತೆಯನ್ನು ನಾಶಗೊಳಿಸಿ.” ಇದು ಈ ಮೋಮೋ ಜೋಡಿಯ ಸಂದರ್ಭದಲ್ಲಿ ಇಂಡಿಯಾದ ಮಟ್ಟಿಗೆ ಕೂಡ ನಿಜವಾಗುತ್ತದೆ. ಇದು ಕೂಡ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಗುಜರಾತ್‌ನಲ್ಲಿ ಮೋದಿ ಆಡಳಿತದ ಕಳೆದ ಹತ್ತು ವರ್ಷಗಳಲ್ಲಿ ಪ್ರಜ್ಞಾವಂತರ ಚಿಂತನೆಗಳು, ಬೌದ್ಧಿಕತೆ, ವಿಚಾರಶೀಲತೆ ಸತ್ತು ಹೋಗಿದೆ. ಇದು ಇಂಡಿಯಾದ ಪಾಲಿಗೂ ನಿಜವಾಗುತ್ತದೆ. ಏಕೆಂದರೆ ಬಿಜೆಪಿಯ ಕನಸೇ ಇಂಡಿಯಾವನ್ನು ಗುಜರಾತ್ ಮಾದರಿಯಲ್ಲಿ ರೂಪಿಸುವುದು.

ಆದರೆ ಮತ್ತೊಂದು ಕಡೆ ಬಿಜೆಪಿ ಪಕ್ಷವು ಮಾಧ್ಯಮಗಳು ಸೃಷ್ಟಿಸಿದ ಮೋದಿಯ ಅಭಿವೃದ್ಧಿಯ ಜನಪ್ರಿಯತೆಯನ್ನು ಬಳಸಿಕೊಂಡು ದೇಶದ ಮಧ್ಯಮ ಹಾಗೂ ಮೇಲ್ವರ್ಗಗಳ ಮತಗಳನ್ನು ಬೇಟೆಯಾಡಲು ಕಾರ್ಯತಂತ್ರ ರೂಪಿಸುತ್ತಿದೆ. ಕಳೆದ ಎರಡು ದಶಕಗಳಲ್ಲಿ ಜಾಗತೀಕರಣದ ಫಲವಾದ ಕನ್ಸೂಮರಿಸಂನ ಸೆಳೆತಕ್ಕೆ ಒಳಗಾಗಿ ಕೊಳ್ಳುಬಾಕ ಸಂಸ್ಕೃತಿಯನ್ನು ಚಾಲ್ತಿಗೊಳಿಸಿದ ಈ ಅಖಂಡ ಭಾರತದ ಮಧ್ಯಮವರ್ಗ ಈ ಕೊಳ್ಳುಬಾಕ ಸಂಸ್ಕೃತಿಯನ್ನೇ ಅಭಿವೃದ್ಧಿಯೆಂದು ಭ್ರಮಿಸಿ ಇಂದಿಗೂ ಕೂಪಮಂಡೂಕಗಳಂತೆ ಬದುಕುತ್ತಿವೆ. ಮೊನ್ನೆಯವರೆಗೂ ಈ ಮಧ್ಯಮವರ್ಗ ಮತ್ತು ಕಾರ್ಪೋರೇಟ್ ವರ್ಗಗಳಿಗೆ ಈ ಜಾಗತೀಕರಣದ ಹರಿಕಾರ Manmohan Singhಮನಮೋಹನ್ ಸಿಂಗ್ ಡಾರ್ಲಿಂಗ್ ಆಗಿದ್ದರು. ಆದರೆ ಇಂದು ಇವರ ಪಾಲಿಗೆ ಮನಮೋಹನ್ ಸಿಂಗ್ ಖಳನಾಯಕ. ಏಕೆಂದರೆ ಇವರ ಆಡಳಿತದಲ್ಲಿ ಮತ್ತಷ್ಟು ಕೊಳ್ಳಲು, ಮಗದಷ್ಟು ಕೊಳ್ಳಲು ಕಷ್ಟವಾಗುತ್ತಿದೆ. ಆದರೆ ನಮ್ಮ ಮಾಧ್ಯಮಗಳ ಮತ್ತು ಮಧ್ಯಮವರ್ಗಗಳ ಈ ಬೌದ್ಧಿಕ ದಿವಾಳಿತನ ಇಂದು ನಮ್ಮ ಪ್ರಜಾಪ್ರಭುತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ ತುಂಬಾ ಅಪಾಯಕಾರಿಯಾದ್ದು. ಡಬಲ್ ಡಿಗ್ರಿಗಳನ್ನು ಪಡೆದು, ಎಲ್ಲವನ್ನೂ ಬಲ್ಲವರಂತೆ ಮಹಾನ್ ಬುದ್ದಿವಂತರಂತೆ ವರ್ತಿಸುವ ಮಾಧ್ಯಮಗಳು ಮತ್ತು ಮಧ್ಯಮವರ್ಗಗಳಿಗೆ ಆರೆಸಸ್‌ನ ಮೇಲಿನ ಸರ್ವಾಧಿಕಾದ ಆಶಯಗಳು ಅಪ್ಯಾಯಮಾನವಾಗಿ ಕಂಡಿದ್ದು ಇಂದಿನ ಸಂದರ್ಭದಲ್ಲಿ ಇಂಡಿಯಾವನ್ನು ಸಂಪೂರ್ಣ ಅಪಮೌಲ್ಯೀಕರಣಗೊಳಿಸಿದೆ. ಈ ಮೋದಿ ಬಂದರೆ ಈತ ಮರಳಿ ತಮ್ಮನ್ನು ಕಳೆದ ದಶಕದ ಸ್ವರ್ಗಕ್ಕೆ ಕೊಂಡೊಯ್ಯೊತ್ತಾನೆಂಬ ಸ್ವಾರ್ಥದ ಲೋಲುಪತೆಯಲ್ಲಿ ಮೋದಿಯ ಪರವಾಗಿ ತಾವು ಮಾಡುವ ಪ್ರತಿಯೊಂದು ಮತವೂ ಇಡೀ ದೇಶವನ್ನು ಫ್ಯಾಸಿಸಂಗೆ ತಳ್ಳುತ್ತದೆ ಎಂಬ ಪ್ರಾಥಮಿಕ ಜ್ಞಾನವಿಲ್ಲದೆ ಅತ್ಯಂತ ಬೇಜವಬ್ದಾರಿಯಿಂದ ವರ್ತಿಸಿ ನಾಶವಾಗುತ್ತಿದ್ದಾರೆ ಈ ಮಧ್ಯಮವರ್ಗ. ಕರಾರುವಕ್ಕಾದ ರಾಜಕೀಯ ಭಾಷೆಯನ್ನು ಬಳಸಲು ನಿರಾಕರಿಸುವ ಈ ಮಧ್ಯಮವರ್ಗ ಇಂದು ಸಂವಿಧಾನದ ಮೂಲ ಆಶಯವಾದ ಸೆಕ್ಯುಲರಿಸಂ ಮತ್ತು ಜಾತ್ಯಾತೀತ ಗುಣಗಳನ್ನು ನಿರಾಕರಿಸುತ್ತಿರುವುದು ಇಂಡಿಯಾದ ದುರಂತ. ಈ ಜನ ಸಂಘ ಪರಿವಾರದ ಜೊತೆಗೂಡಿ ದೇಶದ ಜೀವ ತೋರಣಗಳನ್ನು,ಅದರ ಮಾದರಿಗಳನ್ನು ಸ್ಯೂಡೋ ಸೆಕ್ಯುಲರಿಸ್ಟ್ ಎಂದು ಹಂಗಿಸುತ್ತಿರುವುದು ಇವರ ಪತನವಷ್ಟೇ.

ಇನ್ನು ಈ ನರೇಂದ್ರ ಮೋದಿಯು ಪ್ರಧಾನ ಮಂತ್ರಿಯಾದರೆ ಇಂಡಿಯಾದ ವಿದೇಶಾಂಗ ನೀತಿಯನ್ನು ನೆನೆಸಿಕೊಂಡರೆ ಮೂರ್ಛೆ ಬರುತ್ತದೆ. ಈತನಿಗೆ ಅಮೇರಿಕಾ, ಇಂಗ್ಲೆಂಡಿನಲ್ಲಿ ಪ್ರವೇಶವಿಲ್ಲ. ಫ್ಯಾಸಿಸ್ಟರಿಗೆ ನೋ ಎಂಟ್ರಿ. ಇನ್ನು ಪಕ್ಕದ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶ ಮತ್ತು ಮಧ್ಯ ಏಷ್ಯಾ ಹಾಗೂ ಅರಬ್ ರಾಷ್ಟ್ರಗಳಿಗೆ ಈ ಮೋದಿ ಯಾವ ಮುಖವಿಟ್ಟುಕೊಂಡು ಹೋಗಬಲ್ಲ? ಸಹಜವಾಗಿಯೇ ಮುಸ್ಲಿಂ ರಾಷ್ಟ್ರಗಳಲ್ಲಿ ಈತ ತಿರಸ್ಕೃತ ನಾಯಕ. ಅಲ್ಲದೆ ಈತ ಮಹಾನ್ ದೇಶಭಕ್ತನಾದುದರಿಂದ ಪ್ರತಿ ವರ್ಷ ಪಾಕಿಸ್ತಾನದೊಂದಿಗೆ ಯುದ್ಧ ಗ್ಯಾರಂಟಿ. ಏಕೆಂದರೆ ಶತೃಗಳನ್ನು ಧೂಳಿಪಟ ಮಾಡಬೇಕೆಂದು ಜಂಬ ಕೊಚ್ಚಿಕೊಂಡಿದ್ದಾರಲ್ಲವೇ ಈ ಸಂಘ ಪರಿವಾರ!! ಕಡೆಗೆ ಸ್ವತಃ ದೇಶದೊಳಗೆ ಮತ್ತು ವಿದೇಶದೊಳಗೆ ತಿರಸ್ಕೃತಗೊಂಡ ರಾಜಕಾರಣಿಯನ್ನು ತನ್ನ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿಕೊಂಡ ದುರಂತಮಯ ರಾಷ್ಟ್ರ ಭಾರತವೆಂದು ಈ ದೇಶ ಇತಿಹಾಸ ನಿರ್ಮಿಸಬೇಕಾಗುತ್ತದೆ.

ಆದರೆ ನಮ್ಮ ಪುಣ್ಯಕ್ಕೆ ಆರೆಸಸ್ ಏನೇ ತಿಪ್ಪರಲಾಗ ಹಾಕಿದರೂ, ಮಾಧ್ಯಮಗಳು ಆತ್ಮವಂಚನೆಯಿಂದ ಮೋದಿಯ ಪರ ಎಷ್ಟೇ ಕಿರುಚಾಡಿದರೂ, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ 160 ರಿಂದ 170 ಸೀಟುಗಳನ್ನು ಮಾತ್ರ ಗಳಿಸಬಲ್ಲದಷ್ಟೇ. ಅದನ್ನು ದಾಟಲು ಸಾಧ್ಯವೇ ಇಲ್ಲ. ಕೆಲವು ಮಾಧ್ಯಮಗಳ ಈ ಸಮೀಕ್ಷೆ ನಮ್ಮ ಪ್ರಜಾಪ್ರಭುತ್ವವನ್ನು ಬದುಕಿಸಿದೆ. ಅದು ನಿಜವಾಗಬೇಕಷ್ಟೆ. ಆದರೂ ನಮ್ಮೆಲ್ಲರ ಮುಂದೆ ದೊಡ್ಡ ಸವಾಲಿದೆ. ಅದು ಈ ಶಕ್ತಿ ಕೇಂದ್ರಗಳನ್ನು ಒಡೆಯುವುದು. ಇದಕ್ಕಾಗಿ ನಾವೆಲ್ಲ ಗ್ರಾಮ್ಷಿಗಳಾಗಲು ತಯಾರಾಗಬೇಕು.

ಭಾರತಕ್ಕೆ ಬೇಕಾಗಿರುವುದಾದರೂ ಏನು?

– ಎಮ್.ಸಿ.ಡೋಂಗ್ರೆ

ನಾವೀಗ ಸಂದಿಗ್ಧ ಕಾಲಘಟ್ಟದಲ್ಲಿ ನಿಂತಿದ್ದೇವೆ. 1991 ರಲ್ಲಿ ಆರಂಭಗೊಂಡ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದ ಬಗ್ಗೆ ಇದ್ದ ಭ್ರಮೆಗಳು ಒಂದೊಂದಾಗಿ ಕಳಚಿಬೀಳುತ್ತಿದ್ದು ಅಮೇರಿಕಾ ಹಾಗೂ ಇತರ ಬಂಡವಾಳಶಾಹೀ ರಾಷ್ಟ್ರಗಳ ಸ್ವಾರ್ಥಪರ ಸಂಚುಗಳು ಒಂದೊಂದಾಗಿ Globalizationನಮಗೆಲ್ಲರಿಗೂ ಅರಿವಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014 ರ ಸಾರ್ವತ್ರಿಕ ಚುನಾವಣೆಯು ಬಹಳ ಪ್ರಾಮುಖ್ಯತೆಯನ್ನು ಪಡೆಯಲಿದೆ.

ದೇಶದ ಜನತೆಯ ಮುಂದೆ “ನಮ್ಮ ಮುಂದಿನ ಪ್ರಧಾನಿ ಯಾರು?” ಎಂಬ ಪ್ರಶ್ನೆಯನ್ನಿಡುವುದರ ಬದಲು “ನಮ್ಮ ಮುಂದಿನ ನೀತಿಗಳು ಏನಾಗಿರಬೇಕು?” ಎಂಬ ಪ್ರಶ್ನೆಯನ್ನಿಡುವುದು ಈಗಿನ ತುರ್ತುಸ್ಥಿತಿಯಾಗಿರುತ್ತದೆ. ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ ವಿಶ್ವಬ್ಯಾಂಕ್ ಪ್ರಣೀತ ನೀತಿಗಳನ್ನು ಅನುಷ್ಟಾನಗೊಳಿಸುವಲ್ಲಿ ಪರಸ್ಪರ ಪೈಪೋಟಿಯಲ್ಲಿ ನಿರತರಾಗಿದ್ದು ಇವರಲ್ಲಿ ಯಾರು ಗೆದ್ದು ಬಂದರೂ ಸಹ ಅಮೇರಿಕಾ ಅಥವಾ ಇತರ ಯುರೋಪಿಯನ್ ದೇಶಗಳಿಗೆ ಆತಂಕವಿಲ್ಲ. ಭಾರತದ ಈ ಎರಡೂ ಬಣಗಳೂ ಅಮೇರಿಕಾದ ಆಜ್ಞಾನುವರ್ತಿಗಳಾಗಿರುತ್ತಾರೆ-ಇದರಲ್ಲಿ ಯಾವ ಸಂಶಯವೂ ಇಲ್ಲ.

ಹಾಗಾದರೆ ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ನಾವು ಯೋಚಿಸಬೇಕಾಗಿದೆಯೇ ವಿನಹ ಪಾಶ್ಚಿಮಾತ್ಯ ದೇಶಗಳ ಸಂಚಿಗೆ ಬಲಿಯಾಗಿ ಈಗಿನ ಕಾಂಗ್ರೆಸ್ ಅಥವಾ ಮೋದಿ-ಇವರಿಬ್ಬರಲ್ಲಿ ಒಬ್ಬರನ್ನು ಅಧಿಕಾರಕ್ಕೆ ತರುವ ಗಾಳಕ್ಕೆ ಬೀಳಬಾರದು. ಭಾರತಕ್ಕೆ ಬೇಕಾಗಿರುವುದಾದರೂ ಏನು? ಎಂಬುದನ್ನು ಮೊದಲು ಅರಿಯಬೇಕು.

ಮೋದಿ ಮತ್ತು ಈಗಿನ ಕಾಂಗ್ರೆಸ್ ಇವರಿಬ್ಬರೂ FDI ಯನ್ನು ಭಾರತಕ್ಕೆ ತರುವುದರಲ್ಲಿ, ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುವುದರಲ್ಲಿ ನಿರತರಾಗಿದ್ದಾರೆ. ನಮ್ಮಿಂದ ಬೇರೆ ದೇಶಗಳಿಗೆ ಜ್ಞಾನದ ಹಾಗೂ ವಸ್ತುಗಳ ಮಾರಾಟವಾಗಬೇಕು. ಭಾರತದ ಸಾಮರ್ಥ್ಯದ Investment ಬೇರೆಡೆಗೆ, ಅನ್ಯರನ್ನು ಶೋಷಣೆಗೈಯ್ಯದೇ, ನಮ್ಮ ದೇಶಕ್ಕೆ ಲಾಭ ತರುವ ನಿಟ್ಟಿನಲ್ಲಿ ಆಗಬೇಕಾಗಿದೆ. ನಮಗೆ ಬೇಕಾಗಿರುವುದು ಪರ್ಯಾಯ ನೀತಿಗಳೇ ವಿನಹ ಪರ್ಯಾಯ ಪಕ್ಷಗಳಲ್ಲ!!

ಯಾವಾಗ ದೇಶದ ಜನ ಹಸಿವಿನಿಂದ ಬಳಲುವ ಪ್ರಸಂಗ ಇರುವುದಿಲ್ಲವೋ, ಯಾವಾಗ ದೇಶದಲ್ಲಿ ಜನ ವಿದ್ಯಾವಂತರಾಗಿರುತ್ತಾರೋ, ಎಲ್ಲಿ ಗಂಡು-ಹೆಣ್ಣುಗಳ ನಡುವೆ ತಾರತಮ್ಯವಿರುವುದಿಲ್ಲವೋ, ಯಾವಾಗ ದೇಶದಲ್ಲಿ ನಿರಂತರ ಉದ್ಯೋಗ ಸೃಷ್ಟಿಯಾಗುತ್ತಿರುತ್ತದೋ, ಯಾವಾಗ ದೇಶದಲ್ಲಿ ಕೋಮು ಗಲಭೆಗಳು ಇರುವುದಿಲ್ಲವೋ, ಎಲ್ಲಿ ಆರ್.ಎಸ್.ಎಸ್., ಭಜರಂಗ ದಳ ಅಥವಾ ಶ್ರೀ ರಾಮಸೇನೆಯಂತಹ ಬೇಜಬ್ದಾರೀ ಸಂಘಟನೆಗಳು ಇರುವುದಿಲ್ಲವೋ, india-poverty-hungerಎಲ್ಲಿ ಮುಸ್ಲಿಂ ಧಾರ್ಮಿಕ ಮತಾಂಧರಿಗೆ ಬೆಳೆಯಲು ಅವಕಾಶಗಳನ್ನು ತೊಡೆದುಹಾಕಲಾಗುತ್ತದೋ-ಆಗ ಮಾತ್ರ ಭಾರತ ಬೆಳೆಯಲು ಸಾಧ್ಯ.

ಭಾರತಕ್ಕೆ ಬೇಕಾಗಿರುವುದು ಏನು ಎಂಬುದನ್ನು ಅರಿಯುವ ಮೊದಲು ಈಗ ಭಾರತ ಏನಾಗಿದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ಜಾಗತಿಕ ಹಸಿವಿನ ಸೂಚ್ಯಂಕ (2008):
ಹಸಿವಿನ ಜಾಗತಿಕ ಸೂಚ್ಯಂಕ (2008)ರಲ್ಲಿ ಭಾರತದ ದಾಖಲೆ ಅತ್ಯಂತ ಚಿಂತಾಜನಕವಾಗಿದೆ. 88 ದೇಶಗಳ ಪಟ್ಟಿಯಲ್ಲಿ ಭಾರತ 66 ನೇ ಸ್ಥಾನದಲ್ಲಿದೆ. ಹಸಿವಿನ ಜಾಗತಿಕ ಸೂಚ್ಯಂಕ (2008) ರಲ್ಲಿ ಭಾರತವು 23.70% ಅಂಕಗಳನ್ನು ಪಡೆದು “ಅತಿ ಗಂಭೀರ” ಎಂಬ ಹಣೆಪಟ್ಟಿಯನ್ನು ತನ್ನದಾಗಿಸಿದೆ. ಹಸಿವಿನ ಜಾಗತಿಕ ಸೂಚ್ಯಂಕ (2012)ರಲ್ಲಿ ಭಾರತ ಪಡೆದಿರುವ ಅಂಕ 22.90% ಅಂದರೆ, ಈಗಲೂ ಅದೇ “ಹಣೆಬರಹ”.

ಭಾರತದ ಹಸಿವಿನ ಸೂಚ್ಯಂಕ (2008) ರ ಪ್ರಕಾರ (ಇದಕ್ಕಿಂತ ಈಚಿನ ಅಂಕಿ-ಅಂಶಗಳು ಇಲ್ಲ) ನಮ್ಮ ದೇಶದ 17 ರಾಜ್ಯಗಳ ಸ್ಥಿತಿ-ಗತಿಗಳನ್ನು ಗಮನಿಸೋಣ.

ರಾಜ್ಯ ಅಪೌಷ್ಟಿಕತೆಯಿಂದ ನರಳುವವರು (ಅಲ್ಲಿಯ ಜನಸಂಖ್ಯೆಯ ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ underweight ಮಕ್ಕಳ (ಶೇಕಡಾವಾರು) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಸಾವನ್ನಪ್ಪುವವರ ಶೇಕಡಾವಾರು ಸಂಖ್ಯೆ ಹಸಿವಿನ ಸೂಚ್ಯಂಕ ರ್‍ಯಾಂಕ್ ಪಟ್ಟಿಯಲ್ಲಿ ಸ್ಥಾನ
ಪಂಜಾಬ್ 11.1 24.6 5.2 13.63 1
ಕೇರಳ 28.6 22.7 1.6 17.63 2
ಆಂಧ್ರ ಪ್ರದೇಶ 19.6 32.7 6.3 19.53 3
ಅಸ್ಸಾಂ 14.6 36.4 8.5 19.83 4
ಹರಿಯಾಣ 15.1 39.7 5.2 20.00 5
ತಮಿಳುನಾಡು 29.1 30.0 3.5 20.87 6
ರಾಜಾಸ್ಥಾನ್ 14.0 40.0 8.5 20.97 7
ಪಶ್ಚಿಮ ಬಂಗಾಳ 18.5 38.5 5.9 20.97 8
ಉತ್ತರ ಪ್ರದೇಶ 14.5 42.3 9.6 22.13 9
ಮಹಾರಾಷ್ಟ್ರ 27.0 36.7 4.7 22.80 10
ಕರ್ನಾಟಕ 28.0 37.6 5.5 23.73 11
ಓರಿಸ್ಸಾ 21.4 40.9 9.1 23.80 12
ಗುಜರಾತ್ 23.3 44.7 6.1 24.70 13
ಛತ್ತೀಸ್ ಘರ್ 23.3 47.6 9.0 26.63 14
ಬಿಹಾರ್ 17.3 56.1 8.5 27.30 15
ಝಾರ್ ಖಂಡ್ 19.6 57.1 9.3 28.67 16
ಮಧ್ಯ ಪ್ರದೇಶ್ 23.4 59.8 9.4 30.87 17
ಭಾರತ 20.0 42.5 7.4 23.30

ಅಂದರೆ ಪಂಜಾಬ್ ರಾಜ್ಯವು ಭಾರತದ ರಾಜ್ಯಗಳ ಪೈಕಿ ಸ್ವಲ್ಪ ಉತ್ತಮ ಬೆಳವಣಿಗೆಯನ್ನು ಹೊಂದಿದೆ ಹಾಗೂ ಮಧ್ಯ ಪ್ರದೇಶದ ಸ್ಥಿತಿ ಅತ್ಯಂತ ಹೀನವಾಗಿದೆ. ಜಾಗತಿಕ ಮಟ್ಟದಲ್ಲಿ ಇಥಿಯೋಪಿಯಾಗೆ ಮಧ್ಯಪ್ರದೇಶದ ಸ್ಥಿತಿ ಇದೆ. ನಿಕಾರಾಗುವ ಹಾಗೂ ಘಾನಾಗಳ ಸಾಲಿಗೆ ಪಂಜಾಬ್, ಕೇರಳ, ಆಂಧ್ರ ಹಾಗೂ ಅಸ್ಸಾಂ ಸೇರಿದರೆ, ಉಳಿದ ರಾಜ್ಯಗಳ ಪರಿಸ್ಥಿತಿ “ಅತಿ ಗಂಭೀರ” (Alarming) ಸ್ಥಿತಿಯಲ್ಲಿದೆ.

ಒಂದು ರಾಜ್ಯದ ಅಭಿವೃದ್ಧೀ ದರ ಹೆಚ್ಚಾಗಿದೆ ಎಂದಾಕ್ಷಣ ಅಲ್ಲಿಯ ಜನರಿಗೆ ಸಂಪತ್ತಿನ ಹಂಚಿಕೆಯು ಸಮರ್ಪಕವಾಗಿದೆ ಎಂದಾಗುವುದಿಲ್ಲ. ಅಥವಾ ಒಂದು ರಾಜ್ಯವು ಅತಿ ಹೆಚ್ಚಿನ FDI ಯನ್ನು ತನ್ನದಾಗಿಸಿದೆ (ಉದಾ: ಮಹಾರಾಷ್ಟ್ರ) ಎಂದಾಕ್ಷಣ ಅಲ್ಲಿಯ ಜನ ಹಸಿವು ಇತ್ಯಾದಿಗಳಿಂದ ಮುಕ್ತರಾಗಿರುತ್ತಾರೆ ಎನ್ನುವುದೂ ಸಹ ಸರಿಯಲ್ಲ.
ಅಂದರೆ ಸಂಪತ್ತನ್ನು ಸರಿಯಾಗಿ, ಎಲ್ಲರಿಗೂ ಸಮನಾಗಿ ಹಂಚುವ ನೀತಿಯನ್ನು ಜಾರೀ ತರುವ ನೀತಿಯುಳ್ಳವರು ನಮಗೆ ಬೇಕಾಗಿದ್ದಾರೆಯೇ ವಿನಹ ಬರೀ “ಅಭಿವೃದ್ಧಿ ದರ”ಗಳ ಲೆಕ್ಕಾಚಾರದ ಮಂಕುಬೂದಿಯನ್ನು ಎರಚುವವರಲ್ಲ.

ಭ್ರಷ್ಟಾಚಾರದ ನಿಗ್ರಹ:

ಜಾಗತಿಕ ಮಟ್ಟದ Corruption Perception Index (2012) ರ ಪಟ್ಟಿಯಲ್ಲಿ 178 ದೇಶಗಳ ನಡುವೆ ಭಾರತಕ್ಕೆ 94ನೇ ಸ್ಥಾನ. corruption-india-democracyಅಂದರೆ ಅತ್ಯಂತ ಭ್ರಷ್ಟ ದೇಶಗಳಲ್ಲಿ ಭಾರತವೂ ಸಹ ಒಂದು. 1998 ರಲ್ಲಿ 66 ನೇ ಸ್ಥಾನ, 2000 ನೇ ಇಸವಿಯಲ್ಲಿ 69 ನೇ ಸ್ಥಾನ, 2004 ರಲ್ಲಿ 90 ನೇ ಸ್ಥಾನ, 2008 ರಲ್ಲಿ 85 ನೇ ಸ್ಥಾನ!!.
ಅನೈತಿಕತೆಗೆ, ಕಪ್ಪುಹಣದ ವೃದ್ಧಿಗೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆಗೆ ಭ್ರಷ್ಟಾಚಾರವೂ ಸಹ ಒಂದು ಕಾರಣ. ವ್ಯಕ್ತಿಗತ ಭ್ರಷ್ಟಾಚಾರಗಳು ಹಾಗೂ ರಾಜಕೀಯ ಭ್ರಷ್ಟಾಚಾರ ಇವೆರಡನ್ನೂ ನಿಯಂತ್ರಣದಲ್ಲಿಡಬಲ್ಲ ಪರ್ಯಾಯ ರಾಜಕೀಯ ನಾಯಕತ್ವದ ಅವಶ್ಯಕತೆ ನಮಗೆ ಬಹಳವಿದೆ.

ಭ್ರಷ್ಟಾಚಾರ = ಅವಕಾಶಗಳು-ತಡೆಗಳು.
ಸರಿಯಾದ ತಡೆಗಳಿಲ್ಲದಿದ್ದಲ್ಲಿ ಭ್ರಷ್ಟಾಚಾರವು ಮಿತಿ ಮೀರುವುದು ಸಹಜ.

  • ಆರ್ಥಿಕ ಸಂಕಷ್ಟ ಅಥವಾ ಅನಿಶ್ಚಿತತೆಯಲ್ಲಿ ತೊಳಲುವ ಪ್ರಜೆಗಳು ಭ್ರಷ್ಟಾಚಾರದ ಕುಕೃತ್ಯದಲ್ಲಿ ತೊಡಗುತ್ತಾರೆ. ಗುಮಾಸ್ತರು, ಪೋಲೀಸರು, ನ್ಯಾಯಾಧೀಶರು, ಸರ್ಕಾರೀ ಡಾಕ್ಟರುಗಳು, ರಾಜಕೀಯ ವ್ಯಕ್ತಿಗಳು ಆರ್ಥಿಕವಾಗಿ ಒಳ್ಳೆಯ ಮಟ್ಟದಲ್ಲಿದ್ದಲ್ಲಿ ಅವರು ಭ್ರಷ್ಟಾಚಾರದಲ್ಲಿ ತೊಡಗುವುದು ಎಷ್ಟೋ ಕಮ್ಮಿಯಾಗುತ್ತದೆ. ಹೀಗಾಗಿ ಇವರೆಲ್ಲರಿಗೆ ಅತ್ಯಾಕರ್ಷಕ ವೇತನವನ್ನು ನೀಡುವುದು ಬಹಳ ಮುಖ್ಯವಾಗಿದೆ.
  • ಚುನಾವಣೆಗಳ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಹೊರುವುದು ಬಹಳ ಉತ್ತಮವಾದ ನಡೆಯಾಗಿರುತ್ತದೆ. ಒಂದು ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದಲ್ಲಿ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿ ಅಭಿವೃದ್ಧೀ ಕೆಲಸಗಳು ಜಾರಿಯಾದ್ದಲ್ಲಿ ಅಲ್ಲಿಯ ವಿಧಾಸಸಭಾ ಸದಸ್ಯನಿಗೆ ಹಾಗೂ ಲೋಕಸಭಾ ಸದಸ್ಯನಿಗೆ ಪ್ರೋತ್ಸಾಹ-ಧನವನ್ನು ಕೊಡುವ ವ್ಯವಸ್ಥೆಯನ್ನು ತರಬೇಕು.
  • ಯಾವ, ಯಾವ ಇಲಾಖೆ/ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಅನುಮಾನಗಳು, ಆರೋಪಗಳು ಅಥವಾ ಅನಿಸಿಕೆಗಳು ಇರುತ್ತವೆಯೋ ಅಂತಹ ಇಲಾಖೆ ಅಥವಾ ಕ್ಷೇತ್ರಗಳ ಕುರಿತು ಅಧ್ಯಯನ ತಂಡಗಳನ್ನು, ಆಡಿಟ್ ಸಂಸ್ಥೆಗಳನ್ನು ಅಗಿಂದಾಗ್ಗೆ ಕಳುಹಿಸಿ ವಾಸ್ತವಗಳನ್ನು ಗೊತ್ತುಪಡಿಸಿಕೊಳ್ಳುವುದು ಆಗಬೇಕು ಅಲ್ಲದೇ ಸ್ವಯಂ-ಸೇವಾ ಸಂಸ್ಥೆಗಳನ್ನು ಬಳಸಿಕೊಂಡು ಇಂತಹ ಇಲಾಖೆ/ಕ್ಷೇತಗಳ ಕುರಿತು ಆಗುತ್ತಿರುವ ಬದಲಾವಣೆಗಳ ಬಗ್ಗೆ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.
  • ಸಾಧ್ಯವಾದೆಡೆಯಲ್ಲೆಲ್ಲ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ (E-governance) ಕೆಲಸಗಳು ಆಗುವಂತೇ ವ್ಯವಸ್ಥೆಯನ್ನು ತರಬೇಕು.

1991 ರ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣವನ್ನು ಒಳಗೊಂಡ ಹೊಸ ಆರ್ಥಿಕ ನೀತಿಯ ನಂತರ ದೇಶದಲ್ಲಿ ಭ್ರಷ್ಟಾಚಾರವು ಎಲ್ಲೆ ಮೀರಿರುವುದನ್ನು ನೋಡಬಹುದು. ಬಹುರಾಷ್ಟ್ರೀಯ ಕಂಪೆನಿಗಳು ಎಷ್ಟು ಕೋಟಿ ಹಣವನ್ನು ಬೇಕಾದರೂ ನೀಡಲು ತಯಾರಾಗಿರುವುದೇ ಮುಖ್ಯ ಕಾರಣ.

ಸಾರ್ವಜನಿಕ ಕ್ಷೇತ್ರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಸಿ, ಭ್ರಷ್ಟಾಚಾರದ ವಿರುದ್ಧ ಸಮರ್ಪಕ ತಡೆಗಳನ್ನು ನಿರ್ಮಿಸಿ, ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವೆದೇ ನಮ್ಮ ಮುಂದಿರುವ ಮಾರ್ಗ.

ತನ್ನ ರಾಜ್ಯದಲ್ಲಿ ಅನೇಕ ವರ್ಷಗಳಿಂದ “ಲೋಕಾಯುಕ್ತ”ರನ್ನು ನೇಮಿಸದ, ಕರ್ನಾಟಕದ “ಕಳಂಕಿತ” ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನು ಅಧಿಕಾರ-ಲಾಲಸೆಯಿಂದ ಪುನಹ ಪಕ್ಷಕ್ಕೆ ಸೇರಿಸಿಕೊಳ್ಳಲು ಹಿಂಜರಿಯದ ಹಾಗೂ ರಾಜ್ಯಯಂತ್ರವನ್ನು ಒಂದು ವರ್ಗದ ಜನರನ್ನು ಕೊಲೆ ಮಾಡಲು ಉಪಯೋಗಿಸಿದ ಮಾನ್ಯ ನರೇಂದ್ರ ಮೋದಿಯಿಂದ ಇದೆಲ್ಲವನ್ನು ಅಪೇಕ್ಷಿಸುವುದು ಒಂದು ದುಸ್ಸಾಹಸವೇ ಸರಿ.

ವಿದೇಶಾಂಗ ನೀತಿ :

ಭಾರತವು ತನ್ನ “ಅಲಿಪ್ತ ನೀತಿ”ಗೆ ಹೆಸರುವಾಸಿಯಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ಯಾಯಗಳನ್ನು ವಿರೋಧಿಸುವ ನೈತಿಕತೆಯನ್ನು ಭಾರತವು ಬೆಳೆಸಿಕೊಂಡು ಬಂದಿತ್ತು. ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ನೆಹರೂರವರ ಮುತ್ಸದ್ದೀತನದ ಪರಿಣಾಮವೇ ನಮ್ಮ ವಿದೇಶಾಂಗ ನೀತಿಯಾಗಿತ್ತು. ಸೋವಿಯತ್ ಯೂನಿಯನ್ನಿನ ಪತನಾನಂತರ “ಭಾರತದ ಅಲಿಪ್ತ ನೀತಿ”ಯು ತನ್ನ ಕೊನೆಯನ್ನು ಕಂಡಿರುತ್ತದೆ.

ಈಗ ಭಾರತದ ವಿದೇಶಾಂಗ ನೀತಿಯ ಪ್ರಮುಖ ಗುರಿಯು ತನ್ನ ಸುತ್ತಮುತ್ತಲಿನ ದೇಶಗಳೊಡನೆ ಪರಸ್ಪರ ವಿಶ್ವಾಸ ಮತ್ತು ಸ್ನೇಹದ ಸಂಬಂಧಗಳನ್ನು ಬೆಳೆಸಿ ಮುಂದುವರಿಸುವುದು ಹಾಗೂ ಅಮೇರಿಕಾ ಮತ್ತು ಇತರ ಯುರೋಪಿಯನ್ ದೇಶಗಳಿಂದ ಭಾರತಕ್ಕೆ ಉಪಯೋಗವಾಗುವ ರೀತಿಯಲ್ಲಿ Nehruಸಂಬಂಧಗಳನ್ನು ಜೋಡಿಸುವುದು ಇವು ಬಹಳ ಪ್ರಮುಖವಾದದ್ದಾಗಿದೆ.

ಈ ಹಿನ್ನೆಲೆಯಲ್ಲಿ ತನ್ನ ನೆರೆಯ ಪಾಕಿಸ್ತಾನ್ ಅಥವಾ ಚೀನದಿಂದ ಎಷ್ಟೇ provocation ಗಳು ಬಂದರೂ ಸಂಯಮವನ್ನು ಭಾರತವು ಕಾಪಾಡಿಕೊಂಡು ಬಂದಿದೆ. ಈಗಿನ ವಿದೇಶಾಂಗ ನೀತಿಯು ಭವಿಷ್ಯದಲ್ಲಿ ಭಾರತಕ್ಕೆ ಅತ್ಯಂತ ಉಪಯೋಗಕ್ಕೆ ಬರುವುದರಲ್ಲಿ ಸಂಶಯವಿಲ್ಲ.

ಭಾರತವು ಅತ್ಯಂತ ನಾಜೂಕಿನ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಯುದ್ಧಕ್ಕೆ ತಳ್ಳಲು ಅನೇಕ ಶಕ್ತಿಗಳು ಪ್ರಯತ್ನಪಡುತ್ತಿವೆ. ಅತ್ಯಂತ ತಾಳ್ಮೆಯನ್ನು ಪ್ರದರ್ಶಿಸುವ ಕಾಲ ಇದಾಗಿದ್ದು,ಭಾರತವು ಈ ಅಗ್ನಿಪರೀಕ್ಷೆಯನ್ನು ಯಶಸ್ವಿಯಾಗಿ ದಾಟಬಲ್ಲದು-ಈಗಿನ ನಾಯಕತ್ವದ ಚಿಂತನೆಗಳು ಮುಂದುವರಿದರೆ ಮಾತ್ರ ಇದು ಸಾಧ್ಯ.

ಮಾಜಿ ಪ್ರಧಾನಿ ವಾಜಪೇಯೀಯವರು ಇದನ್ನೆಲ್ಲ ಅರ್ಥಮಾಡಿಕೊಂಡಿದ್ದರು ಹಾಗೂ ಆಗ ವಾಜಪೇಯಿಯವರು ಹೇಳಿದಂತೆ ಆರ್.ಎಸ್.ಎಸ್. ಕೇಳುತ್ತಿತ್ತು (ಎನ್.ಡಿ.ಎ.ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಸಂಘ ಪರಿವಾರವು “ಸ್ವದೇಶೀ ಜಾಗರಣ ಮಂಚ್‌”ನ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ತ್ಯಜಿಸಿ ವಿದೇಶೀ ವಸ್ತುಗಳನ್ನು ಹಾಗೂ ವಿದೇಶೀ ಬಂಡವಾಳವನ್ನು ವಿರೋಧಿಸುವುದನ್ನು ಕೈಬಿಟ್ಟಿದ್ದು ಒಂದು ದೊಡ್ಡ ಉದಾಹರಣೆ.) ಆದರೆ ಈಗ ಮೋದಿಯು ಆರ್.ಎಸ್.ಎಸ್ ನ್ನು ಮೀರಿ ನಡೆವಷ್ಟು ಸಮರ್ಥರೇನು?

ಪಂಚಸೂತ್ರಗಳು :

ಈ ಮುಂದೆ ಹೇಳಿರುವ ಪಂಚಸೂತ್ರಗಳು ಮುಂಬರುವ “ಪರ್ಯಾಯ ನೀತಿ”ಗಳ ಅವಿಭಾಜ್ಯ ಅಂಗವಾಗಿದ್ದಲ್ಲಿ ಮಾತ್ರ ಹೊಸ ಭಾರತವನ್ನು ನೋಡಬಹುದು.

  1. ಆಹಾರ ಭದ್ರತಾ ಕಾಯ್ದೆಯನ್ನು ಕೇವಲ ಬಿ.ಪಿ.ಎಲ್.ಕಾರ್ಡುದಾರರಿಗೆ ಮಾತ್ರ ಸೀಮಿತಗೊಳಿಸದೆ ದೇಶದ ಎಲ್ಲ ಜನವಿಭಾಗಕ್ಕೂ ವಿಸ್ತರಿಸುವುದು ಹಾಗೂ ಅದರಲ್ಲಿ ಪರಿಷ್ಕರಣವನ್ನು ಅಳವಡಿಸುವುದು. ಖಾಸಗೀ ಕ್ಷೇತ್ರದಲ್ಲೂ ಸಹ ಮೀಸಲಾತಿಯನ್ನು ಕಡ್ಡಾಯಗೊಳಿಸುವುದು.
  2. ದೇಶದಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಜನಸಂಖ್ಯೆಯ ಕೇವಲ ಶೇಕಡಾ 3 ಮಾತ್ರ. ನಮ್ಮಲ್ಲಿ ಮಿಲಿಯಾಧಿಪತಿ ಹಾಗೂ ಕೋಟ್ಯಾಧಿಪತಿಗಳಿಂದ ಅತಿಹೆಚ್ಚು ಎಂದರೆ ಅವರ ಆದಾಯದ ಕೇವಲ 30%ನ್ನು ಮಾತ್ರ ತೆರಿಗೆಯನ್ನು ಸರ್ಕಾರವು ಸಂಗ್ರಹಿಸುತ್ತಿದ್ದು, ಇದನ್ನು ಬ್ರಿಟನ್, ಸ್ಪೈನ್,ಸ್ವೀಡನ್ ಇತ್ಯಾದಿ ದೇಶಗಳಲ್ಲಿರುವಂತೆ 50%ಗೆ ಏರಿಸುವುದು.
  3. ಮೂಲಭೂತ ಸೌಕರ್ಯಗಳನ್ನು ವೃದ್ಧಿಸುವಲ್ಲಿ ಆದ್ಯತೆ ನೀಡುವುದು. ಈ ಕಾರ್ಯವನ್ನು ಖಾಸಗೀಯವರಿಗೆ ವಹಿಸದೇ ಸರ್ಕಾರವೇ ಕೈಗೆತ್ತಿಕೊಳ್ಳುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ಜೊತೆ-ಜೊತೆಯಲ್ಲೇ ನಗರ ಪ್ರದೇಶಗಳ ಬದಲು ಗ್ರಾಮಗಳಲ್ಲಿ ಉದ್ಯೋಗ ನಿರ್ಮಾಣದ ವಿಕೇಂದ್ರೀಕರಣ ಯೋಜನೆಗಳನ್ನು ಹಮ್ಮಿಕೊಳ್ಳುವುದು ತನ್ಮೂಲಕ ಗ್ರಾಮಗಳಲ್ಲೂ ಕೊಳ್ಳುವ ಶಕ್ತಿಯನ್ನು ವೃಧ್ಧಿಸುವುದು
  5. ವಸತಿ ಸೌಕರ್ಯವನ್ನು ಆದ್ಯತೆ ಮೇರೆಗೆ ವಿಸ್ತರಿಸುವುದು .