ದಲಿತರು ಮತ್ತು ಉದ್ಯಮಶೀಲತೆ : ಈ ವಿಚಾರಗಳ ಬಗ್ಗೆಯೂ ಚರ್ಚೆಯಾಗಲಿ

– ಎನ್.ರವಿಕುಮಾರ್, ಶಿವಮೊಗ್ಗ

“ದಲಿತರು ಮತ್ತು ಉದ್ಯಮಶೀಲತೆ” ಕುರಿತಾದ ವಿಚಾರ ಸಂಕೀರ್ಣ-ಸಂವಾದ ನಿಜಕ್ಕೂ ಇಂದಿನ ಅಗತ್ಯವಾಗಿದೆ. ದಲಿತರಿಗೆ ಶಿಕ್ಷಣದ ಜೊತೆಗೆ ಜಾಗತಿಕ ಮತ್ತು ಆರ್ಥಿಕ ಪ್ರಪಂಚದ ಅರಿವನ್ನು ಮೂಡಿಸುವ ಅಗತ್ಯತೆ ಇದ್ದೇ ಇದೆ. ಜಾತಿಯ ತಾರತಮ್ಯ ಔದ್ಯೋಗಿಕ ಜಗತ್ತಿನಲ್ಲಿ ಯಥಾ ರೀತಿ ಭಿನ್ನ ಸ್ವರೂಪಗಳಲ್ಲಿ ದೊಡ್ಡ ಪಿಡುಗಾಗಿ ದಲಿತ ಉದ್ಯಮಿಗಳನ್ನು ಕಾಡುತ್ತಿವೆ. ಆರ್ಥಿಕ ಸಂಪನ್ಮೂಲ ನೆರವು ನೀಡುವ ಆರ್ಥಿಕ ಸಂಸ್ಥೆಗಳು (ಬ್ಯಾಂಕ್‌ಗಳು) ಯಾರ ಕೈಯಲ್ಲಿವೆ ಎಂಬುದನ್ನು ನಾವು ಯೋಚಿಸಬೇಕಾಗಿದೆ.

ಆರ್ಥಿಕ ಶಕ್ತಿಯ ಕ್ರೋಢೀಕರಣ ಕೂಡ ಜಾತಿಯ ನೆಲೆಯಲ್ಲಿಯೆ ಆರಂಭವಾದದ್ದು ಎಂಬುದನ್ನು ಚರಿತ್ರೆ ಸ್ಪಷ್ಟ ಪಡಿಸುತ್ತದೆ. 1987 ರ ಅವಧಿಯಲ್ಲಿ ಅಂದಿನ ಕೇಂದ್ರದ ಹಣಕಾಸು ಸಚಿವರಾಗಿದ್ದ ಜನಾರ್ಧನ ಪೂಜಾರಿ ಅವರು ದಲಿತರು, ಹಿಂದುಳಿದ ವರ್ಗಗಳಿಗೆ ಮೈಕ್ರೊ ಸಾಲ (ಪೂಜಾರಿ ಸಾಲ) ಯೋಜನೆ ರೂಪಿಸುವ ಮೂಲಕ vartamaana-sahamata-invitationಈ ಸಮುದಾಯಗಳನ್ನು ಮೊಟ್ಟ ಮೊದಲ ಬಾರಿಗೆ ಬ್ಯಾಂಕ್‌ಗಳ ಮೆಟ್ಟಿಲು ಹತ್ತಿಸಿದರು. ಇಂದು ಪರಿಸ್ಥಿತಿ ಬದಲಾಗಿದೆ ನಿಜ, ಆದರೆ ಭೂಮಿ, ಬಂಡವಾಳದ ಸಮಸ್ಯೆಗಳು ದಲಿತರು, ಹಿಂದುಳಿದ ವರ್ಗಗಳಲ್ಲಿನ ಉದ್ಯಮಶೀಲತೆಯನ್ನು ಹತ್ತಿಕ್ಕುತ್ತಿವೆ. ಇನ್ನೂ ಮಾರುಕಟ್ಟೆಯನ್ನು ಆವರಿಸಿಕೊಂಡಿರವ ಸಂತತಿಗಳು ಒಬ್ಬ ಯಶಸ್ವಿ ಉದ್ಯಮಶೀಲನಾಗುವಲ್ಲಿ ದಲಿತನನ್ನು ಹೈರಾಣಗೊಳಿಸುವ ಸಾಧ್ಯತೆಗಳು ಜಾತಿ ಜಿದ್ದಿನ ಮತ್ತೊಂದು ಸ್ವರೂಪವೆ ಆಗಿರುತ್ತದೆ.

ದಲಿತರು ಕಾರ್ಮಿಕರಾಗಿರುವುದನ್ನೆ ಬಯಸುವ ಔದ್ಯೋಗಿಕ ಕ್ಷೇತ್ರದ ಬಹುಸಂಖ್ಯಾತ ಕುಳಗಳು ಮಾಲೀಕನಾಗುವ ಹಾದಿಗೆ ಅಡ್ಡಗೋಡೆಗಳನ್ನು ಕಟ್ಟುತ್ತಲೆ ಇರುತ್ತವೆ. ಇಂದು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ವಿರೋಧಿಸುವ ಶಕ್ತಿಗಳೆ ದಲಿತರಲ್ಲಿನ ಉದ್ಯಮಶೀಲತೆಯನ್ನೂ ಸಹಿಸುವುದಿಲ್ಲ. ಸರ್ಕಾರಗಳು ದಲಿತರು, ಹಿಂದುಳಿದವರ್ಗಗಳಿಗಾಗಿ ಸ್ವಯಂ ಉದ್ಯೋಗ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳನ್ನು ದಕ್ಕಿಸಿಕೊಳ್ಳುವುದು ದುಸ್ತಃರವಾಗಿದೆ. ಇಂದು ಮಾಧಮ ಕ್ಷೇತ್ರ ಕೂಡ ಉದ್ಯಮವಾಗಿ ಬೆಳೆಯತೊಡಗಿದ್ದು ಸಾಮಾಜಿಕ ಹೊಣೆಗಾರಿಕೆಗಿಂತ ವ್ಯಾಪಾರಿ ಮನೋಭಾವ ಹೆಚ್ಚು ಆಕ್ರಮಿಸಿಕೊಳ್ಳತೊಡಗಿರುವುದು ಅಪಾಯಕಾರಿ ಎನಿಸುತ್ತದೆ. ಈ ಕ್ಷೇತ್ರದಲ್ಲೂ ದಲಿತರು ಉದ್ಯಮಿಯಾಗಿ ಪೈಪೋಟಿ ನಡೆಸುವುದು ಕಷ್ಟಕರ.

ಇಂದು ದಲಿತರಲ್ಲೂ ಔದ್ಯೋಗಿಕ ಜ್ಞಾನದ ಕೊರತೆ ಇಲ್ಲ, ಬೇಕಿರುವುದು ಬಂಡವಾಳ, ಭೂಮಿ ಮತ್ತು ಜಾತಿ ಮುಕ್ತ ಮಾರುಕಟ್ಟೆ ಮಾತ್ರ. ಈ ನಿಟ್ಟಿನಲ್ಲಿ ಸರ್ಕಾರಗಳು ದಲಿತರಲ್ಲಿನ ಉದ್ಯಮಶೀಲತೆಯನ್ನು ಜಾಗತಿಕ ಮಟ್ಟದಲ್ಲಿ ಕಾಯುವ ಕೆಲಸವನ್ನು ಕರ್ತವ್ಯದಂತೆ ಮಾಡಬೇಕಿದೆ. ಈ ಸಂಗತಿಗಳ ಬಗ್ಗೆ ಯೂ ಸೆ. 7 ರಂದು ಹಾಸನದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮಂಥನ ನಡೆಯಲಿದೆ ಎಂಬ ಭರವಸೆ ನನಗಿದೆ.

 

ಅಕ್ಷೀ – ಒಂದು ಸೀನಿನ ವೃತ್ತಾಂತ…

ಮೂಲ: ಆಂಟೊನ್ ಚೆಕೊವ್
ಅನುವಾದ: ಜೆ.ವಿ.ಕಾರ್ಲೊ

ಅದೊಂದು ಸುಂದರ ಸಂಜೆ. ಒಂದು ಸರಕಾರಿ ಧಫ್ತರಿನಲ್ಲಿ ಕಾರಕೂನನಾಗಿದ್ದ ದಿಮಿಟ್ರಿಚ್ ಚೆರ್ವಾಕ್ಯೊವ್ ರಂಗಮಂದಿರದ ಎರಡನೇ ಸಾಲಿನಲ್ಲಿ ಕುಳಿತುಕೊಂಡು ಒಂದು ಸಂಗೀತ ನಾಟಕವನ್ನು ನೋಡುವುದರಲ್ಲಿ ತಲ್ಲೀನನಾಗಿದ್ದ. ಅವನು ತುಂಬಾ ಹರ್ಷಚಿತ್ತನಾಗಿದ್ದ. ಆದರೆ, ಇದ್ದಕ್ಕಿದ್ದಂತೆ… ಹೌದು, ಸಾಮಾನ್ಯವಾಗಿ ಈ ಇದ್ದಕ್ಕಿದ್ದಂತೆ ಎನ್ನುವ ಪದ ಹೆಚ್ಚಾಗಿ ಕತೆ ಪುಸ್ತಕಗಳಲ್ಲಿ ಧುತ್ತನೇ ನಮ್ಮೆದುರು ಎದ್ದು ನಿಲ್ಲುತ್ತದೆ! ಈ ಲೇಖಕರು ಹೇಳುವುದೂ ದಿಟವೇ. ಜಿವನದಲ್ಲಿ ಏನೆಲ್ಲಾ ಅನೀರಿಕ್ಷಿತ ತಿರುವುಗಳು!

ಹೌದು, ಇದ್ದಕ್ಕ್ಕಿದ್ದಂತೆ ದಿಮಿಟ್ರಿಚಿಯ ಕಣ್ಣುಗಳು ಕಿರಿದಾದವು. ಹಣೆಯ ಮೇಲೆ ನೆರಿಗೆಗಳು ಮೂಡಿದವು. ಒಂದು ಕ್ಷಣ ಉಸಿರೇ ನಿಂತು ಹೋದಂತೆ… ಅವನು ಶಿರವನ್ನು ಬಾಗಿಸಿ.. “ಅಕ್ಷೀ..” ಎಂದು ಭಯಂಕರವಾಗಿ ಸೀನಿದ!

ಸೀನುವುದೇನು ಮಹಾಪರಾಧವಲ್ಲ. ಎಲ್ಲರೂ ಸೀನುತ್ತಾರೆ. ಎಲ್ಲೆಂದರಲ್ಲಿ ಸೀನುತ್ತಾರೆ. ರೈತನಿಂದಿಡಿದು ಪೋಲಿಸ್ ಅಧಿಕಾರಿ, ರಾಜಕಾರಣಿವರೆಗೆ ಎಲ್ಲರೂ ಸೀನುತ್ತಾರೆ. ಸೀನುವ ಕ್ರಿಯೆಯಲ್ಲಿ ನಾಚಿಕೆಪಡುವಂತದೇನಿರಲಿಲ್ಲ. ಜೇಬಿನಿಂದ ಕರವಸ್ತ್ರವನ್ನು ಹೊರತೆಗೆದು ಚೆರ್ವಾಕ್ಯೊವ್ ಮುಖವನ್ನು ಒರೆಸಿದ. ಅವನೊಬ್ಬ ಸುಸಂಸ್ಕೃತ ಮನುಷ್ಯನಾದುದರಿಂದ ತನ್ನ ಅನೀರಿಕ್ಷಿತ ಸೀನಿನಿಂದ ಯಾರಿಗಾದರೂ ತೊಂದರೆಯಾಯ್ತೇನೋ ಎಂಬ ದಿಗಿಲಿನಿಂದ ಸುತ್ತಲೂ ಒಮ್ಮೆ ಕಣ್ಣಾಡಿಸಿದ..

ತನ್ನ ಮುಂದಿನ ಸಾಲಿನಲ್ಲಿ ಕುಳಿತಿದ್ದ ವೃದ್ದನೊಬ್ಬ ವಟಗುಟ್ಟುತ್ತಾ ಕರವಸ್ತ್ರದಿಂದ ತನ್ನ ಬೋಳು ತಲೆಯನ್ನು ಒರೆಸಿಕೊಳ್ಳುತ್ತಿರುವುದು ಅವನ ಗಮನಕ್ಕೆ ಬಂತು. ಆ ಮುದುಕ ಸಾರಿಗೆ ಇಲಾಖೆಯ ಮುಖ್ಯಾಧಿಕಾರಿ ಜನರಲ್ ಬ್ರಿಜ್ಝಾಲೊವ್ ಎಂದು ಗುರುತು ಹಿಡಿಯಲು ಚೆರ್ವಾಕ್ಯೊವಾನಿಗೆ ತಡವಾಗಲಿಲ್ಲ.

‘ನನ್ನ ಸೀನು ಖಂಡಿತಾ ಅವನ ಮೇಲೆ ಹಾರಿದೆ!’ ಚೆರ್ವಾಕ್ಯೊವ್ ದಿಗಿಲುಗೊಂಡ. ‘ಅವನು ನನ್ನ ಇಲಾಖೆಯ ಅಧಿಕಾರಿಯಲ್ಲದಿದ್ದರೂ ಕ್ಷಮೆ ಕೇಳುವುದು ಶಿಷ್ಠಾಚಾರ..’

ಚೆರ್ವಾಕ್ಯೊವ್ ಮುಂದಕ್ಕೆ ಬಾಗಿ, ಅಪರಾಧಿ ಪ್ರಜ್ಞೆಯಿಂದ ಜನರಲ್ ಬ್ರಿಜ್ಝಾಲೊವಾನ ಬಲಗಿವಿಯಲ್ಲಿ ಮೆಲ್ಲಗೆ ಉಸುರಿದ:
“ಸರ್, ದಯವಿಟ್ಟು ಕ್ಷಮಿಸಿ. ಅನೀರಿಕ್ಷಿತವಾಗಿ ಸೀನಿದ್ದು ನಿಮ್ಮ ಮೇಲೆ ಹಾರಿತು.”
“ಪರವಾಯಿಲ್ಲ..ಪರವಾಯಿಲ್ಲಾ!” ಜನರಲ್ ಉತ್ತರಿಸಿದ.
“ಸರ್.. ಖಂಡಿತವಾಗಿಯೂ ನಾನು…”
“ಛೆ!.. ಏನಿದು? ನನಗೆ ನಾಟಕ ನೋಡಲು ಬಿಡುವೆಯಾ?” ಮುದುಕ ಕಿರಿಕಿರಿಗೊಂಡು ಬೈದ.

ಚೆರ್ವಾಕ್ಯೊವ್ ಲಜ್ಜೆಯಿಂದ ಮುದುರಿಕೊಂಡ. ಅವನು ಬಲವಂತದಿಂದ ರಂಗ ಮಂಚದ ಕಡೆಗೆ ದೃಷ್ಟಿ ಹರಿಸಿದ. ಅವನ ಖುಷಿ ಮಾಯವಾಗಿತ್ತು. ಅವನು ಮಾನಸಿಕವಾಗಿ ನರಳತೊಡಗಿದ. ಮಧ್ಯಂತರದ ವೇಳೆಯಲ್ಲಿ ಅವನು ಎದ್ದು ಜನರಲ್ ಬ್ರಿಜ್ಝಾಲೊವಾನ ಬಳಿ ಎದ್ದು ಹೊದ. ಲಜ್ಜೆಯನ್ನು ಅದುಮಿಡುತ್ತಾ,

“ಸರ್, ನಾನು ನಿಮ್ಮ ಮೇಲೆ ಸೀನಿದೆ…ಆದರೆ ನನ್ನ ಉದ್ದೇಶ..” ಎಂದು ಶುರು ಮಾಡಿದ.

ಜನರಲ್ ಬ್ರಿಜ್ಝಾಲೊವ್ ಕೈಯನ್ನು ಮೇಲೆತ್ತುತ್ತಾ, “ಆದದ್ದು ಆಗಿ ಹೋಯ್ತು. ನೀನು ಸುಖಾಸುಮ್ಮನೆ ನನ್ನ ಗೋಳು ಹುಯ್ಕೋಬೇಡ.. ನಾನಾಗಲೇ ಅದನ್ನು ಮರೆತುಬಿಟ್ಟಿದ್ದೇನೆ.” ಎಂದರು ಖಾರವಾಗಿ. ಅವರು ಸಹನೆ ಕಳೆದುಕೊಳ್ಳುವ ಹಂತದಲ್ಲಿದ್ದರು.

’ಮುದುಕ ಅಷ್ಟರಲ್ಲೇ ಮರೆತುಬಿಟ್ಟಿದ್ದಾನಂತೆ! ಆದರೆ ಅವನ ಕಣ್ಣುಗಳಲ್ಲಿ ಹಾಗೆ ಕಾಣುತ್ತಿಲ್ಲ. ಸಿಟ್ಟಿನ ಜ್ವಾಲೆ ಇನ್ನೂ ಉರಿಯುತ್ತಿದೆ! ಆದರೂ ಮಾತನಾಡಲು ಮುದುಕನಿಗೆ ಏನೋ ಬಿಗುಮಾನ! ನಾನು ಅವನಿಗೆ ಸರಿಯಾಗಿ ಮನದಟ್ಟು ಮಾಡಿಕೊಡಬೇಕು. ಸೀನುವುದು ಒಂದು ಪ್ರಾಕೃತಿಕ ಘಟನೆ. ಯಾರಿಂದ ತಡೆಯಲು ಸಾಧ್ಯ? ಈ ಕ್ಷಣ ಮದುಕನಿಗೆ ಇದು ಅನುಚಿತವೆಂದು ತೋರುತ್ತಿಲ್ಲದಿರಬಹುದು. ಆದರೆ ಮನೆಗೆ ಹೋದ ನಂತರ ಅವನ ಅಭಿಪ್ರಾಯ ಬದಲಾಗುವುದಿಲ್ಲವೆಂದು ಏನು ಖಾತ್ರಿ.’

ಅಂದು ರಾತ್ರಿ ಚೆರ್ವಾಕ್ಯೊವ್ ರಂಗಮಂದಿರದಲ್ಲಿ ಘಟಿಸಿದ ಸಂಗತಿಯನ್ನು ಮಡದಿಯ ಬಳಿ ಕೂಲಂಕುಷವಾಗಿ ತಿಳಿಸಿದ. ಮೊದಲಿಗೆ ಅವಳು ಇಂತ ಕ್ಷುಲ್ಲಕ ಸಂಗತಿಯನ್ನು ತನ್ನ ಗಂಡ ಅನಾವಶ್ಯವಾಗಿ ದೊಡ್ಡದು ಮಾಡುತ್ತಿದ್ದಾನೆ ಎಂದುಕೊಂಡಳಾದರೂ, ಮುದುಕ, ಜನರಲ್ ಎಂದು ಗೊತ್ತಾದಾಕ್ಷಣ ಸಹಜವಾಗಿ ಆತಂಕಗೊಂಡಳು. ಮುದುಕ ಬೇರೊಂದು ಇಲಾಖೆಯ ಜನರಲ್ ಎಂದು ತಿಳಿದಾಗ ಕೊಂಚ ನಿರಾಳಳಾದಳು.

“ಏನಾದರೂ ಆಗಲಿ. ನಾಳೆ ಮತ್ತೊಮ್ಮೆ ಕಂಡು ಅವನ ಕ್ಷಮೆ ಕೇಳಿ. ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕೆಂದು ಅರಿಯದ ಅನಾಗರಿಕ ಎಂದುಕೊಂಡಾನು.” ಎಂದಳು.

“ನಿಜ ಕಣೆ! ನಾನು ಹಾಗೇ ಅಂದುಕೊಂಡೆ. ಅವನೊಬ್ಬ ವಿಕ್ಷಿಪ್ತ ಮನುಷ್ಯ. ನಾನು ಎಷ್ಟೊಂದು ಭಾರಿ ಕ್ಷಮೆ ಕೇಳಿಕೊಂಡರೂ ಅವನ ಪ್ರತಿಕ್ರಿಯೆ ನನಗ್ಯಾಕೋ ಸರಿ ಕಾಣಬರಲಿಲ್ಲ.”

ಮರುದಿನ ನೀಟಾಗಿ ಶೇವ್ ಮಾಡಿಕೊಂಡು, ಗರಿಗರಿಯಾಗಿ ಇಸ್ತ್ರಿ ಮಾಡಿದ ಸಮವಸ್ತ್ರವನ್ನು ಧರಿಸಿ ಚೆರ್ವಾಕೊವ್ ಜನರಲ್ ಬ್ರಿಜ್ಝಾಲೋವನ ಕಚೇರಿಗೆ ಹೋದ. government-clerkಜನರಲನ ಕಚೇರಿ ಅಹವಾಲು ಸಲ್ಲಿಸುವ ಜನರಿಂದ ಕಿಕ್ಕಿರಿದು ತುಂಬಿತ್ತು. ಕೊನೆಗೂ ಜನರಲ್ ಬ್ರಿಜ್ಝಾಲೊವಾನ ದೃಷ್ಟಿ ಚೆರ್ವಾಕ್ಯೊವಾನ ಮೇಲೆ ಹರಿಯಿತು. ಏನೆಂಬಂತೆ ಜನರಲ್ ಹುಬ್ಬು ಏರಿಸಿದರು.

“ಸರ್..” ಚೆರ್ವಾಕೊವ್ ಶುರುವಿಟ್ಟುಕೊಂಡ. “ನಿನ್ನೆ ಸಂಜೆ ಆಕಸ್ಮಿಕವಾಗಿ ನಾನು ನಿಮ್ಮ ಮೇಲೆ ಸೀನಿದೆ ಸರ್,.. ಖಂಡಿತವಾಗಿಯೂ ನಾನು ಉದ್ದೇಶಪೂರ್ವಕವಾಗಿ.. ಸರ್, ನನ್ನನ್ನು ನಂಬಿ. ಖಂಡಿತವಾಗಿಯೂ ಇದೊಂದು ಆಕಸ್ಮಿಕ..”

ಜನರಲ್‌ನ ವದನ ಕೆಂಪಗಾಗತೊಡಗಿತು. “ಓಹ್..” ಅವನು ಅವಡುಗಚ್ಚಿದ. “ಇನ್ಯಾರಾದರೂ ಇದ್ದಾರೆಯೇ?” ಸುತ್ತಾ ದೃಷ್ಟಿ ಹರಿಸುತ್ತಾ ಅವನು ಕೇಳಿಕೊಂಡ.

’ಜನರಲ್ ಸಾಹೇಬರು ಮುನಿಸಿಕೊಂಡಿದ್ದಾರೆ!’ ಚೆರ್ವಾಕ್ಯೊವ್ ತನ್ನಷ್ಟಕ್ಕೆ ಹೇಳಿಕೊಂಡ. ಅವನು ಹತಾಶನಾದ. ಇಷ್ಟಕ್ಕೆ ಬಿಡಬಾರದು. ಅವನಿಗೆ ಸರಿಯಾಗಿ ಅರ್ಥ ಮಾಡಿಸಬೇಕು. ಚೆರ್ವಾಕ್ಯೊವ್ ನಿಶ್ಚಯಿಸಿದ.

ಜನರಲ್ ಕಟ್ಟ ಕಡೆಯ ಮನುಷ್ಯನೊಬ್ಬನ ಅಹವಾಲನ್ನು ಕೇಳಿ ಎದ್ದು ತನ್ನ ಖಾಸಗಿ ಕಛೇರಿಯ ಕಡೆ ಹೆಜ್ಜೆ ಹಾಕತೊಡಗಿದ. ಚೆರ್ವಾಕ್ಯೊವ್ ಸರಸರನೆ ಹೆಜ್ಜೆ ಹಾಕುತ್ತಾ, ಜನರಲನ ಬಳಿಗೆ ಧಾವಿಸಿದ.

“ಸರ್.., ನಿಜವಾಗಿಯೂ ಹೇಳುತ್ತಿದ್ದೇನೆ.. ನನ್ನನ್ನು ನಂಬಿ..”

ಜನರಲ್ ಬ್ರಿಜ್ಝಾಲೊವ್ ಹತಾಶೆಯಿಂದ ತಲೆಯನ್ನಾಲ್ಲಾಡಿಸಿದ.

“ಸರ್.. ನೀವು ನನ್ನನ್ನು ಅಣಕಿಸುತ್ತಿದ್ದೀರಿ!..” ಜನರಲ್ ಬ್ರಿಜ್ಝಾಲೊವ್ ಕಚೇರಿಯ ಬಾಗಿಲನ್ನು ರಪ್ಪನೇ ಅವನ ಮುಖದ ಮೇಲೆಂಬಂತೆ ಅಪ್ಪಳಿಸಿದಾಗ ಚೆರ್ವಾಕ್ಯೊವ್ ಅವಲತ್ತುಕೊಂಡ.

ಚೆರ್ವಾಕೊವ್ ನಖಶಿಖಾಂತ ಕಂಪಿಸುತ್ತಿದ್ದ. ’ಮುದುಕ ನನ್ನ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅವನಿಗೆ ದೈಯ್ಯ ಹೊತ್ತುಕೊಂಡು ಹೊಗಲಿ!.. ಅವನಿಗೊಂದು ಪತ್ರ ಬರೆಯುತ್ತೇನೆ.. ಸುಮ್ಮನೇ ಕೂರುವವನಲ್ಲ ನಾನು.. ನಾಳೆ ಮತ್ತೆ ಭೇಟಿಯಾಗುತ್ತೇನೆ..’ ಹೀಗೆಂದುಕೊಳ್ಳುತ್ತಾ ಚೆರ್ವಾಕ್ಯೊವ್ ಆ ಸಂಜೆ ಮನೆಗೆ ಹೋದ.

ಎಷ್ಟು ತಲೆಕೆಡಿಸಿಕೊಂಡರು ಪತ್ರವನ್ನು ಹೇಗೆ ಆರಂಬಿಸುವುದೆಂದೇ ಅವನಿಗೆ ಗೊತ್ತಾಗಲಿಲ್ಲ. ನಾಳೆ ಜನರಲನಿಗೆ ಭೇಟಿಯಾಗುವುದೇ ಲೇಸೆಂದು ನಿರ್ಧರಿಸಿದ.

“ಸರ್.., ದಯವಿಟ್ಟು ನಿಮ್ಮನ್ನು ಗೇಲಿ ಮಾಡುತ್ತಿದ್ದೇನೆಂದು ಭಾವಿಸಬೇಡಿ…” ಮಾರನೆಯ ಬೆಳಿಗ್ಗೆ ಜನರಲ್‌ನ ಆಫೀಸಿಗೆ ಕಾಲಿಡುತ್ತಿದ್ದಂತೆಯೇ ಚೆರ್ವಾಕ್ಯೊವ್ ಹೇಳತೊಡಗಿದ. “ನಿಮ್ಮ ಮೇಲೆ ಆಕಸ್ಮಿಕವಾಗಿ ಸೀನಿದ ನನ್ನನ್ನು ದಯವಿಟ್ಟು ಕ್ಷಮಿಸಬೇಕು..”

“ತೊಲಗಾಚೆ ಮೂರ್ಖ!! “ಜನರಲ್ ಬ್ರಿಜ್ಝಾಲೊವ್ ಸಿಟ್ಟಿನಿಂದ ಕಿರುಚಿದ. ಅವನು ಕಂಪಿಸುತ್ತಿದ್ದ. ಅವನ ಮುಖ ಕಪ್ಪಿಟ್ಟಿತ್ತು.

“ಸರ್..!!” ಚೆರ್ವಾಕ್ಯೊವಾನ ಬಾಯಿಂದ ಮಾತುಗಳೇ ಹೊರಡಲಿಲ್ಲ.

“ತೊಲಗಾಚೆ..!!” ಜನರಲ್ ನೆಲಕ್ಕೆ ಕಾಲನ್ನು ಗುದ್ದುತ್ತಾ ಮತ್ತೊಮ್ಮೆ ಅರಚಿದ.

ಚೆರ್ವಾಕ್ಯೊವಾನ ಹೊಟ್ಟೆ ತೊಳಸಿದಂತಾಯ್ತು. ಅವನು ತೂರಾಡುತ್ತಾ ಹೊರಬಂದ. ಅವನ ದೃಷ್ಟಿ ಮಂದವಾಗಿತ್ತು. ಕಿವಿಗಳು ಕೇಳಿಸುತ್ತಿರಲಿಲ್ಲ. ಅವನು ಹೇಗೆ ಮನೆಯನ್ನು ತಲುಪಿದ ಎನ್ನುವುದೇ ಆಶ್ಚರ್ಯದ ವಿಷಯ. ಸಮವಸ್ತ್ರವನ್ನು ಧರಿಸಿಕೊಂಡೇ ಅವನು ಸೋಫಾದ ಮೇಲೆ ಅಡ್ಡಾದ. ಹಾಗೆಯೇ ಸತ್ತು ಹೋದ.

***

(Anton Chekov ನ ‘The Death of a Government Clerk’ ಕತೆಯ ಅನುವಾದ)

ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ : ಗಂಗೆ, ಗೌರಿ,.. ಭಾಗ–8

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು
ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ
ಭಾಗ–5 : ಹೊಳೆಗಟ್ಟಿದ ಶೆಟ್ಟಿ, ದಡಮುಟ್ಟಿಸಿದ ಖಾದರ್
ಭಾಗ–6 : ಕೊರಳಿನ ಕುಂಟಿ, ಮೂತಿಯ ಚುಳ್ಳಿ, ಶೀಲ ಸರ್ಕಸ್
ಭಾಗ–7 : ದಾನದ ಪಾತ್ರೆ ಪಂಚೆ ಹಾಗೆಯೆ ಗೋವು

ಭಾಗ–8 : ಹಸು ಹುಲ್ಲನ್ನಷ್ಟೇ ತಿನ್ನುವುದಿಲ್ಲ

ಶಾಲೆಯಿಲ್ಲದ ದಿನಗಳಲ್ಲಿ ದಿನಪೂರ್ತಿ ಬಯಲಲ್ಲಿರುತ್ತಿದ್ದ ನಮ್ಮ ನಿತ್ಯದ ನಿಗಧಿತ ಕಾಯಕವೆಂದರೆ ದನಮೇಯಿಸುವುದೇ ಆಗಿತ್ತು. ಬೆಳಗಿನ ಕಾಯಕದಲ್ಲಿ ಏರುಪೇರಾದರೂ ಇಳಿಹೊತ್ತಿನಲ್ಲಿಯ ಈ ಅವಕಾಶವನ್ನು ನಾವುಗಳು ಮಿಸ್‌ಮಾಡಿಕೊಳ್ತಿರಲಿಲ್ಲ. ಯಾಕೆಂದರೆ ತೆರೆದ ವಿಶಾಲವಾದ ಬಯಲಿನಲ್ಲಿರುವ ಗದ್ದೆಗಳೇ ಲಗೋರಿ ಮತ್ತಿತರ ಆಟಗಳ ಅಂಗಣವಾಗಿ ಆಕ್ಷೇಪಣಾರಹಿತವಾಗಿ ಒದಗಿಬರುತ್ತಿದ್ದ ಘಳಿಗೆಯದು.ಹೊತ್ತುಮುಳುಗಲು ಇನ್ನೇನು ಘಳಿಗೆ ಹೊತ್ತಿದೆ ಎನ್ನುತ್ತಿರುವಂತೆ ಅಥವಾ ಬಯಲಿನಲ್ಲಿ ಆಟವಾಡುತ್ತಾ ಮೈಮರೆಯುತ್ತಿದ್ದ ನಮ್ಮ ಆಟಗಳಿಗೆ ಬ್ರೇಕ್‌ಬೀಳುವ ಹೊತ್ತು ಕರೆಯುವ ಹಸುಗಳಿಗಾಗಿ ತಾಯಂದಿರುಗಳು ಹಸಿಹುಲ್ಲನ್ನು ಸಂಗ್ರಹಿಸಿಕೊಂಡು ಬರುತ್ತಿದ್ದ ದೃಶ್ಯ ಅಂದು ಸಾಮಾನ್ಯವಾಗಿತ್ತು. ಅಮ್ಮಂದಿರ ಸೊಂಟದಲ್ಲಿನ ಹುಲ್ಲಬುಟ್ಟಿಗಳನ್ನು Cows-pastureನೋಡುತ್ತಿದ್ದಂತೆಯೇ ಕರೆಯುವ ಹಸುಗಳು ಅಥವಾ ಮುದ್ದಿನ ಎಳೆಗರುಗಳು ಚಂಗುಹಾರಿಕೊಳ್ಳುತ್ತಾ ಬೆನ್ನಟ್ಟುತ್ತಿದ್ದುವು. ಅಮ್ಮಂದಿರಿಗೂ ಇದು ಬೇಸರದ ಸಂಗತಿಯಲ್ಲ. ಅವರುಗಳು ಸಂಭ್ರಮವನ್ನೇ ಅನುಭವಿಸುತ್ತಿದ್ದರು. ನಮ್ಮಮ್ಮನೂ ಹರ್ಲಿಹುಲ್ಲನ್ನೋ, ನೆಲಗೊಣ್ಣೆಯನ್ನೋ ಮಟ್ಟ್ಹುಲ್ಲನ್ನೋ ಕಿತ್ತು ಹೊಳೆಯಲ್ಲಿ ತೊಳೆದು ಕುಕ್ಕೆಯಲ್ಲಿಹಾಕಿ, ಸೊಂಟದ ಮೇಲೇರಿಸಿಕೊಂಡು ಬರುತ್ತಿದ್ದ ಆ ದಿನಗಳಲ್ಲಿ ಶಾಲೆಯಿಲ್ಲದ ಹೊತ್ತು ಬಯಲಲ್ಲಿ ದನ ಮೇಯಿಸಿಕೊಂಡು ಲಗೋರಿ ಆಡುತ್ತಿದ್ದ ಸರದಿ ನನ್ನದಾಗಿರುತ್ತಿತ್ತು. ನಮ್ಮ ಅಮ್ಮನ ಹುಲ್ಲಹೆಡಿಗೆ ನೋಡುತ್ತಿದ್ದಂತೆಯೇ ಕೊಂಗಾಟದ ಕುಣಿತ ಕುಣಿದು ಸೊಂಟದೆತ್ತರದಲ್ಲಿಯೇ ಬಾಯಿಗೆ ಸಿಕ್ಕುತ್ತಿದ್ದ ಕುಕ್ಕೆಯ ಹುಲ್ಲನ್ನು ಮುಕ್ಕಲು ನಮ್ಮ ಹಸುಗಳಾಗಿದ್ದ ಕೆಂಪಿ, ಬುಡ್ಡಿಯರುಗಳು ಓಡುತ್ತಿದ್ದವು. ಈ ದನಗಳು ಓಡಿಬರುತ್ತಿದ್ದಂತೆಯೇ ನನ್ನಮ್ಮ ಅವುಗಳಿಗೆ ಕೈತುತ್ತು ತಿನಿಸುವಂತೆ ಅವುಗಳ ಬಾಯಿಗೆ ನಾಲ್ಕೆಳೆ ಹುಲ್ಲು ಇರಿಸಿ, ಕೆಚ್ಚಲಿಂದ ಹಾಲೆಳೆಯುವ ಹೊತ್ತು ಅವುಗಳೆದುರು ಕ್ಯಾಡಬರಿ ಚಾಕಲೇಟು ಇಡುವಂತೆ ಇಡಲೇಬೇಕಾಗಿದ್ದ ಹುಲ್ಲನ್ನು ಜೋಪಾನವಾಗಿ ಉಳಿಸಿಕೊಂಡು ಬಯಲಿನಿಂದ ದಾಟಿಹೋಗಲು ಹರಸಾಹಸಪಡುತ್ತಿದ್ದಳು. ನಮ್ಮ ಹಾಗೂ ಅಮ್ಮನ ಅಕ್ಕರೆಯಲ್ಲಿ ಮಿಂದ ಇವುಗಳನ್ನು ಕೆಲವೊಮ್ಮೆ ಹೀಗೆ ಓಡಿಬಂದಾಗ ಹತ್ತಿರಬರುವುದಕ್ಕೇ ಅವಳು ಬಿಡುತ್ತಿದ್ದುದಿಲ್ಲ. ಕೊಂಗಾಟದ ಬೈಗುಳ ಬೈಯ್ದು ಮೂಗು ಮುಚ್ಚಿಕೊಳ್ಳುತ್ತಾ, ದೂರವೇ ಉಳಿಯುವಂತೆ ಸಣ್ಣ ಕೋಲು ಹಿಡಿದು ಗದರುತ್ತಾ ದೂರದಿಂದಲೇ ನಾಲ್ಕೆಳೆ ಹುಲ್ಲನ್ನು ನಾಯಿಗೆ ಎಸೆಯುವಂತೆ ಎಸೆದು ಪಾರಾಗುತ್ತಿದ್ದಳು. ಯಾಕೆಂದರೆ ಅವು ಅವಳಿಗೂ, ನಮಗೂ ಗೊತ್ತಿರುವಂತೆ ಹುಲ್ಲನ್ನಷ್ಟೇ ತಿನ್ನುವವುಗಳಾಗಿರಲಿಲ್ಲ.ಅವುಗಳ ಅಹಾರ ಬಹುಮಾದರಿಯದಾಗಿತ್ತು. ಯಾರ್‍ಯಾರೋ ತಿನ್ನುವ ಏನೇನೋ ಆಹಾರಗಳು, ಆಹಾರಗಳೇ ಆಗಿದ್ದರೂ ಕೇಳುವ ಕಿವಿ, ಅನುಭವಿಸುವ ಮೈ ಒಲ್ಲೆಯೆನ್ನುವುದು ಉಂಟಲ್ಲವೇ? ಒಲ್ಲೆಯೆಂದರೂ ನಿಜವನ್ನೂ ಒಪ್ಪಿಕೊಳ್ಳಬೇಕಲ್ಲವೇ?ಅವು ನಮ್ಮ ಹಸುಗಳಲ್ಲವೇ?

ಹುಲ್ಲು ತಿನ್ನುವ ಸಂಗತಿಯೊಂದಿಗೆ ತಗಲು ಹಾಕಿಕೊಂಡ ಹಸು ಹುಲ್ಲನ್ನು ಮಾತ್ರ ತಿನ್ನುತ್ತದೆಯೆ ಎಂದು ಕೇಳಿದರೆ ಉತ್ತರ ಏನೆನ್ನಬೇಕು? cows-garbageಪವಿತ್ರವಾದ ಗೋವು ಪವಿತ್ರವೂ, ಶುದ್ಧವೂ ಆದ ಹುಲ್ಲನ್ನು ಮಾತ್ರ ತಿನ್ನುತ್ತದೆ ಎಂದು ಹೇಳುವವರಿದ್ದರೆ ಒಂದೋ ಅವರ ಉದ್ದೇಶವನ್ನು ಅನುಮಾನಿಸಬೇಕು ಇಲ್ಲವೇ ಅವರ ಲೋಕಾನುಭವಕ್ಕೆ ಕನಿಕರಪಡಬೇಕು. ಯಾಕೆಂದರೆ ಹಸುವನ್ನು ಶುದ್ಧ ಸಸ್ಯಾಹಾರಿ ಎಂದು ವರ್ಗೀಕರಿಸುವುದೂ ಪೂರ್ಣ ಪ್ರಮಾಣದಲ್ಲಿ ಸರಿಯೆನಿಸಲಾರದು. ಯಾವೊಂದು ಪ್ರಾಣಿ ಸಮುದಾಯವೂ ಮುಖ್ಯಾಹಾರದಲ್ಲಿ ಸಮಾನತೆ ತೋರಬಹುದಲ್ಲದೆ, ಇಡಿಯ ಆ ಜೀವಸಮುದಾಯವೇ ಆಹಾರದಲ್ಲಿ ಏಕರೂಪಿಯಾಗಿ ವರ್ತಿಸುತ್ತದೆ ಎಂಬ ತರ್ಕ ತಳಬುಡವಿಲ್ಲದ ತರ್ಕವೇ ಸರಿ. ಎಲ್ಲವೂ ಹುಲ್ಲು ತಿನ್ನುತ್ತವೆ ಎಂಬಲ್ಲಿ ಅನುಮಾನವಿಲ್ಲ. ಆದರೆ ತರಾವರಿ ಆಹಾರಾಸಕ್ತಿಯಿರುವ ಹಸುಗಳು ಒಂದು ತಿನ್ನುವುದನ್ನೇ ಮತ್ತೊಂದು ತಿಂದೇ ತಿನ್ನುತ್ತದೆ ಎಂದು ಪ್ರಮೇಯ ಕಟ್ಟಲು ಸಾಧ್ಯವಿಲ್ಲ. ನಾಡಾಡಿ ಹೋರೆಮ್ಮೆ, ಹಸು ಕರುವಿನ ಆಹಾರ ಲೋಕವು ಮನುಷ್ಯರ ಹೇಲಿನಿಂದ ತೊಡಗಿ, ಕರುಹಾಕುವ ವೇಳೆಯ ಮಾಸು (ಕಸ),ಅವುಗಳದ್ದೇ ಕರುಗಳ ವಿಸರ್ಜನೆಯಾದ ಕಂದಿ, ಒಣಗಿದ ಮೂಳೆ, ಮಣ್ಣು, ಬಟ್ಟೆ, ಕಂಬಳಿ, ಪ್ಲಾಸ್ಟಿಕ್‌ಡಬ್ಬ, ಹೊಗೆಸೊಪ್ಪು, ಕಾಸರಕನ (ಕಾಯೆರ್) ಬೀಜ, ಗೊಬ್ಬರಗಳ ತನಕವೂ ವಿಸ್ತರಿತವಾಗಿದೆ ಎಂದರೆ ಅನೇಕರು ಹುಬ್ಬೇರಿಸಬಹುದು, ಕೆಲವರಿಗೆ ಅಸಹ್ಯ ಅನಿಸಬಹುದು. ಇನ್ನು ಕೆಲವರು ಸುತರಾಂ ಒಪ್ಪದೆಯೂ ಇರಬಹುದು. ಯಾಕೆಂದರೆ ಶುದ್ಧವಾದ (?) ಹಾಲುಕೊಡುವ ಹಸು, ಪವಿತ್ರವಾದ ಭಾವನೆಯ ಹೂರಣವಾಗಿರುವ ಹಸು ಚಿ ಕೊಳಕನ್ನೆಲ್ಲಾ ತಿನ್ನುತ್ತದೆ ಎಂಬುದು ಕಣ್ಣೆದುರು ಕಾಣಬಾರದ ಸತ್ಯ. ಆದರೂ ಅವು ಅದನ್ನು ಹಿಂದಿನಿಂದ ತಿನ್ನುತ್ತಿದ್ದವು ಮತ್ತು ಈಗಲೂ ತಿನ್ನುತ್ತಿವೆ. ಪದವಿ ಮುಗಿಸುವತನಕ ಮತ್ತು ಆ ಮೇಲೂ ಕೂಡ ಇಂತಹ ಹಸುಗಳನ್ನು ಹಟ್ಟಿಯಲ್ಲಿ ಕಟ್ಟುವವೇಳೆ ಅವುಗಳ ಮೂತಿ ತಗುಲಿದಾಗ ಮೈಯೆಲ್ಲಾ ಹೇಸಿಕೊಂಡು ಸ್ನಾನದ ಮೇಲೆ ಮತ್ತೆ ಸ್ನಾನಮಾಡಿದ ಅನುಭವ ನನಗಿದೆ.

ಮನುಷ್ಯರ ಸೆಗಣಿ ಹೋರೆಮ್ಮೆ, ಹಸು, ಎತ್ತುಗಳೆಲ್ಲವುದರ ಬಹಳ ಪ್ರಿಯವಾದ ಆಹಾರಗಳಲ್ಲೊಂದು. ಆದರೆ ಎಲ್ಲವೂ ಶತಸಿದ್ಧವಾಗಿ cows-garbage-paperಇದನ್ನು ತಿಂದೇ ತೀರುತ್ತವೆ ಎನ್ನುವುದು ಅಪಚಾರವಷ್ಟೇ ಅಲ್ಲ ಸುಳ್ಳು ಕೂಡಾ ಆಗುತ್ತದೆ. ನಮ್ಮ ಹಟ್ಟಿಯಲ್ಲಿ ನಾನು ಕಂಡಂತೆ ಶೇ.80 ರಷ್ಟು ಜಾನುವಾರುಗಳು ಹೇಲುಬಾಕಗಳು. ಕೆಲವಂತೂ ಇದನ್ನು ತಿನ್ನುವುದಕ್ಕಾಗಿಯೇ ವಿಶೇಷ ತಂತ್ರ ಮಾಡುತ್ತಿದ್ದವು. ನಮ್ಮ ಮನೆಯಲ್ಲಿ ಕೆಂಪಿ ಅಂತ ಒಂದು ದನ ಬಹಳ ವರ್ಷಗಳವರೆಗೂ ಇತ್ತು. ಹತ್ತಿಂಚು ಉದ್ದದ ಮುಂದಕ್ಕೆ ಬಾಗಿದ ಎರಡು ಕೋಡುಗಳಿಂದ ಇದು ಕೆಲವೊಮ್ಮೆ ನಮಗೆ ಆತಂಕವನ್ನೂ ಉಂಟುಮಾಡುತ್ತಿತ್ತು. ಇದರ ಮೈಬಣ್ಣ ಅತ್ಯಂತ ಸೊಗಸು. ಜಾಜಿಕೆಂಪು ಬಣ್ಣದ ಈ ಹಸುವಿನ ಬೆಳ್ಳನೆಯ ಮುಸುಡಿಯ ಮೇಲೆ ಕಪ್ಪುಮಚ್ಚೆಗಳಿದ್ದವು. ಹೆಚ್ಚು ಹರಾಮಿಯೂ ಅಲ್ಲದ, ತೊಂಡು ಮೇಯುವ ಕೆಟ್ಟಸ್ವಭಾವದ್ದೂ ಅಲ್ಲದ ಈ ಹಸುವಿಗೆ ಇದೊಂದು ಕೆಟ್ಟಚಾಳಿಯಿತ್ತು. ಇದಕ್ಕೆಂದೇ ಮೇವಿಗೆ ಬಿಡುವುದಕ್ಕಾಗಿ ಕೊರಳುಬಳ್ಳಿ ತಪ್ಪಿಸಿ ಹಟ್ಟಿಯಿಂದ ಹೊರಗೆ ಎಬ್ಬುವಾಗಲೇ ಉಳಿದವುಗಳಿಗಿಂತ ಮುಂದೆ ಹೊರಟು, ತನ್ನ ಇಷ್ಟದ ಒಣಕುತಿಂಡಿ ಸಿಕ್ಕುವ ಪರಿಚಿತ ಜಾಗಕ್ಕೆ ನುಗ್ಗಿ ಬಿಡುತ್ತಿತ್ತು. ಸಾರ್ವತ್ರಿಕವಾಗಿ ಶೌಚಾಲಯರಹಿತ ಹಳ್ಳಿಯಾಗಿದ್ದ, ಆಂಶಿಕವಾಗಿ ಈಗಲೂ ಹಾಗೆಯೇ ಇರುವ ನಮ್ಮೂರಿನಲ್ಲಿ ಇದಕ್ಕೇನೂ ಬರಗಾಲವೂ ಇರಲಿಲ್ಲ. ಈ ಜಾಗಗಳಲ್ಲಿ ಕಾಲು ಹಾಕಲು ಸರ್ಕಸ್ ಮಾಡಿಕೊಂಡು ಹೋಗಬೇಕಾಗಿದ್ದ ನಮಗೆ ಆ ಪ್ರಕ್ರಿಯೆಯನ್ನು ತಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಇದೇ ತೆರನಾದ ವರ್ತನೆಯನ್ನು ಹಟ್ಟಿಗೆ ಎಬ್ಬುವಾಗಲೂ ಪುನರಾವರ್ತಿಸುತ್ತಿದ್ದ ಚಂದದ ಮೈಬಣ್ಣದ ಈ ಹಸು ಗೋಧೂಳಿಯಲ್ಲಿ ಉಳಿದವುಗಳಂತೆ ಹಟ್ಟಿಗೆ ಬಾರದೇ ಗ್ವಾಯ್‌ಒಳಾಲ್(ಗೇರುತೋಟ)ಗೆ ನುಗ್ಗಿ ತನ್ನ ಕೆಲಸ ನಿರ್ವಹಿಸುತ್ತಿತ್ತು. ಕೆಂಪಿಯೂ ಸೇರಿದಂತೆ ಅನೇಕ ಜಾನುವಾರುಗಳು ಶೌಚಾಲಯವೇ ಇಲ್ಲದೇ ಎಲ್ಲೆಂದರಲ್ಲಿ ಅವತರಿಸುತ್ತಿದ್ದ ಈ ಮಲಿನದ ಕುರುಹೂ ಸಿಕ್ಕದಂತೆ ನೆಕ್ಕಿ ಬಿಡುತ್ತಿದ್ದವು. ಕಣ್ತಪ್ಪಿ ಉಳಿದುದನ್ನು ಒಣಕಲು ತಿಂಡಿ ತಿನ್ನುವಂತೆ ತಿನ್ನುತ್ತಿದ್ದವು. ಇದೇ ಸ್ಥಿತಿ ಬೇಸಿಗೆಯ ಕಾಲದಲ್ಲಿ ಹೊಳೆಗೆ ಮತ್ತು ಹೊಳೆಯಿಂದ ಹೋರೆಮ್ಮೆಗಳನ್ನು ಎಬ್ಬಿಕೊಂಡು ಬರುತ್ತಿದ್ದ ತೋಡಿನಲ್ಲಿಯೂ ಎದುರಾಗುತ್ತಿತ್ತು. ಲೋಕಕ್ಕೆ ತೋರದಂತೆ ಮರೆಯಿರುವ ಈ ಜಾಗ ಮಬ್ಬು ಹೊತ್ತಿನಲ್ಲಿ ಆಪ್ಯಾಯಮಾನವಾದ ಶೌಚಕ್ರಿಯೆಯ ತಾಣವಾಗುತ್ತಿದ್ದುದರಿಂದ ಜಾನುವಾರುಗಳನ್ನು ಈ ಜಾಗೆಯ ಮೂಲಕ ಎಬ್ಬಿಕೊಂಡು ಬರುವಾಗ ನಾವು ಯಾರೂ ಅವುಗಳ ಹಿಂದೆ ಬರುತ್ತಿರಲಿಲ್ಲ. ಹಾಗಾಗಿ ದೂರನಿಂತು ಹೈ, ಹೋ . . ಎಂದು ಬೊಬ್ಬಿಡುವ ನಮ್ಮ ಕೂಗಿಗೆ ಅವು ಕ್ಯಾರೆ ಅನ್ನದೆ ಅವುಗಳ ಪಾಡಿಗೆ ಓಣಿ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗುತ್ತಿದ್ದವು. ಹಾಗಾಗಿ ಹಟ್ಟಿಯಲ್ಲಿ ಇವುಗಳನ್ನು ಕಟ್ಟುವವೇಳೆ ಮೈ ಕೈ ತಾಗದಂತೆ ಸರ್ಕಸ್ ಮಾಡುವ ಜತೆಗೂ ಉಸಿರನ್ನು ಬಿಗಿಹಿಡಿದುಕೊಂಡು ಬೈಯ್ದುಕೊಳ್ಳುತ್ತಾ ಅವುಗಳ ಕೊರಳಿಗೆ ದಾಂಬು (ಹಗ್ಗ) ಸಿಕ್ಕಿಸುತ್ತಿದ್ದೆವು.

ಇನ್ನು ಕೆಲವು ಜಾನುವಾರುಗಳ ಆಹಾರದ ಆಯ್ಕೆ ಮತ್ತು ಬಯಕೆಯೇ ವಿಚಿತ್ರ ತೆರನಾಗಿದೆ. ನಮ್ಮ ಮನೆಯಲ್ಲಿದ್ದ ಬುಡ್ಡಿ ಎಂಬ ಹೆಸರಿನ ಹಸು ಕಾಸರಕದಕಾಯಿ ಆಗುವ ವೇಳೆ ಅದರ ಹಣ್ಣು ಮತ್ತು ಬೀಜ ತಿನ್ನಲು ಹುಡುಕಾಡುತ್ತಿತ್ತು. ಇದರ ಪರಿಣಾಮವಾಗಿ ಹೀಗೆ ತಿಂದಾಗಲೆಲ್ಲಾ ಅದು ಕೊಡುತ್ತಿದ್ದ ಹಾಲು ಕಾಸರಕನ ಬೀಜದ ಕಹಿಯಂಶ ತೋರಿಸುತ್ತಿತ್ತು. ಅದು ಕಾಸಾನ್(ಕಾಯೆರ್) ಹಣ್ಣುಬೀಜ ತಿಂದುದನ್ನು ಕಾಣದೆಯೂ ಅದರ ಹಾಲಿನ ಮೂಲಕ ಅದು ನಿನ್ನೆ ಏನನ್ನು ತಿಂದಿತ್ತು ಎಂಬುದನ್ನು ಗುರುತಿಸುತ್ತಿದ್ದೆವು. ಹಾಗೆಯೇ ಶೇ. 90ಕ್ಕೂ ಮಿಕ್ಕಿದ ಹಸು-ಎಮ್ಮೆಗಳು ಕರುಹಾಕುವಾಗ ಬೀಳುವ ತಮ್ಮದೇ ದೇಹದ ಮಾಸು (ಕಸ) ತಿನ್ನಲು ಹಪಹಪಿಸುತ್ತವೆ. cows-garbageಹೀಗೆ ತಿಂದರೆ ಹಾಲು ಖೋತಾ ಆಗುತ್ತದೆ ಎಂಬ ನಂಬುಗೆಯ ಮೇರೆಗೆ ಅವು ಅದನ್ನು ತಿನ್ನದಂತೆ ಕಾಯುತ್ತಾರೆ. ರಾತ್ರಿವೇಳೆ ಕರುಹಾಕಿದರೆ ತಿನ್ನದಿರಲಿ ಎಂದು ಎಚ್ಚರಿಕೆವಹಿಸಿ ಎರಡೆರಡು ಕಡೆಯಿಂದ ಹಗ್ಗ ಕಟ್ಟಿದರೂ ಕೆಲವು ಹಸುಗಳು ಏನಾದರೂ ಸರ್ಕಸ್ ಮಾಡಿ ತಿಂದುಬಿಡುತ್ತವೆ. ಅಷ್ಟೇ ಅಲ್ಲದೆ ಕರುಹಾಕಿದಾಗ ಕರುವಿನ ಮೈಮೇಲಿನ ಪೊರೆಯನ್ನು ಕೆಲವು ಹಸುಗಳು ನೇರವಾಗಿಯೇ ನೆಕ್ಕಿ ಸಾಫು ಮಾಡುತ್ತವೆ. ಇನ್ನು ಕೆಲವು ಹಸುಗಳಿಗೆ ಹಾಗೆ ನೆಕ್ಕಲಿ ಎಂದು ಕರುವಿನ ಮೈಮೇಲೆ ಭತ್ತದ ತೌಡುಹಾಕಬೇಕಾಗುತ್ತದೆ. ತಮ್ಮದೇ ಕರುಗಳ ಕಂದಿಯನ್ನು ಸಹಜವಾಗಿಯೇ ತಾಯಿಹಸು ಮತ್ತು ಎಮ್ಮೆಗಳು ತಿನ್ನತ್ತವೆ. ಕರುಹಾಕಿದ ವೇಳೆಯಲ್ಲಿ ಕರುಗಳ ಕಾಲಿನ ಎಳೆಗೊರಸುಗಳ ಮೇಲ್ಪದರವನ್ನು ಉಗುರಿನಿಂದಲೋ, ಹಲ್ಲುಕತ್ತಿಯಿಂದಲೋ ಚಿವುಟಿತೆಗೆದು ಅದನ್ನು ತಾಯಿಹಸು/ಎಮ್ಮೆಗೇ ಕೊಡುತ್ತಾರೆ. ಹಾಗೆಯೇ ಕರುಗಳು ಮಣ್ಣು ತಿನ್ನುವುದು ಸಾಮಾನ್ಯ. ಕೆಲವೊಮ್ಮೆ ಈ ಚಾಳಿ ದೊಡ್ಡವಾದ ಮೇಲೂ ಮುಂದುವರೆಯಬಹುದು.

ಈ ಮೇಲಣ ವಿಲಕ್ಷಣ ಆದರೆ ಸಹಜ ಆಹಾರಾಸಕ್ತಿಗಳಲ್ಲದೆ ಇನ್ನು ಕೆಲವೊಂದು ಕಡೆ ಉಳುವ ಜಾನುವಾರುಗಳಿಗೆ ಚೆನ್ನಾಗಿ ಮೈಬರಲಿ ಎಂಬ ಉದ್ದೇಶದಿಂದ ಅವುಗಳು ಬಾಯರು ಕುಡಿಯುವ ಬಾಣೆಗೆ ರಾತ್ರಿ ಉಚ್ಚೆ ಹೊಯ್ದು ಅವು ಕುಡಿಯುವಂತೆ ಮಾಡುವುದುಂಟು. ಈ ರೂಢಿ ಅಧಿಕವಾಗಿ ಕಾಣುವುದು ಕೋಣಗಳಿಗೆ ಸಂಬಂಧಿಸಿದಂತೆ. ಉಳುವ ವೇಳೆ ಉಳುವಾತನೇ ಉಳುಮೆ ನಿಲ್ಲಿಸಿ ಅವುಗಳ ಬಾಯಿಗೆ ಉಚ್ಚೆ ಹೊಯ್ಯುವ ರೂಢಿಯನ್ನು ನಾನೂ ಸಾಮಾನ್ಯವಾಗಿ ಕಂಡಿದ್ದೇನೆ. ಹೀಗೆ ಮೂತ್ರ ಕುಡಿದ ಜಾನುವಾರುಗಳು ಆ ರೂಢಿಯಿಲ್ಲದವರ cattle-feedಮನೆಗೆ ಹೋದಾಗ ಮೈತೆಗೆಯುತ್ತವೆಯೆಂದೂ ಹೇಳಲಾಗುತ್ತದೆ. ಆ ಕಾರಣಕ್ಕಾಗಿ ಈ ಮೂತ್ರ ಕುಡಿಸುವ ರೂಢಿಯನ್ನು ಯಾರೂ ಮುಕ್ತವಾಗಿ ಹೇಳಿಕೊಳ್ಳೋದಿಲ್ಲವಂತೆ. ಉಳುವ ಜಾನುವಾರುಗಳ ಖರೀದಿಯಲ್ಲಿ ಅವುಗಳ ಮೈಗೆ (ದಪ್ಪಕ್ಕೆ) ಪ್ರಾಶಸ್ತ್ಯ ನೀಡುವುದರಿಂದ ಇದೊಂದು ಗೌಪ್ಯತಂತ್ರ. ಆಹಾರಕ್ಕೆ ಸಂಬಂಧಿಸಿದಂತೆ ಈ ವಾಸ್ತವದ ಅರಿವಿನ ನಡುವೆಯೂ ಮೀನು ತಿಂದು ತೊಳೆದ ಪಾತ್ರೆಯ ನೀರನ್ನಾಗಲೀ, ಮೀನು ಕುದಿಸಿದ ಪಾತ್ರೆಯ ನೀರನ್ನಾಗಲೀ ಜಾನುವಾರುಗಳ ಬಾಯರಿಗೆ ಸೇರಿಸುವುದಿಲ್ಲ. ಅವು ಮೂಳೆಯನ್ನು ಕಡಿಯುವುದು, ಮಾಸು ತಿನ್ನುವುದರ ಅರಿವಿದ್ದೂ, ತಾವು ತಿನ್ನುವ ಮಾಂಸದ ಸಾರಿನ ಉಳಿಕೆಯನ್ನು ಅವುಗಳು ತಿನ್ನುವ ಆಹಾರದೊಂದಿಗೆ ಸೇರಿಸುವುದಿಲ್ಲ. ಆದರೆ ತರಕಾರಿ ಸಾರು, ಅಕ್ಕಿ, ಅನ್ನದ ನೀರನ್ನು ಧಾರಾಳವಾಗಿ ಸೇರಿಸಿ ನೀಡುತ್ತಾರೆ. ತಾವು ತಿನ್ನಲು ಕೊಡದೆಯೂ ಕೊಳಕನ್ನು ತಿನ್ನುವ ಹಸುಗಳ ಬಾಯಿಯನ್ನು ಶಾಸ್ತ್ರಗ್ರಂಥಗಳೇ ಅಪವಿತ್ರ ಎಂಬ ಅರ್ಥದಲ್ಲಿ ಹೇಳಿದ ಉಲ್ಲೇಖಗಳು ಸ್ಮೃತಿ, ಪುರಾಣದ ಓದುಗರಿಗೆ ಬರವಣಿಗೆಯ ಮೂಲಕ ಪರಿಚಿತವಾದದು. ಆದರೆ ಜನಸಾಮಾನ್ಯರಿಗೆ ಜೀವನಾನುಭವದ ಮೂಲಕವೇ ಆ ಹೇಳಿಕೆಗಳ ನಿಖರವಾದ ಕಾರಣಗಳು ದಕ್ಕಿವೆ. ಈ ತರಾವರಿ ಆಹಾರಾಸಕ್ತಿಯನ್ನು ಕಣ್ಣಾರೆ ಕಂಡೂ ಅವರಿಗೆ ಹಸುಗಳನ್ನು ಹೇಸದೆಯೇ ಪ್ರೀತಿಸುವುದು ಹೇಗೆಂದು ಗೊತ್ತಿದೆ. ಹಾಗೆ ಯಾಕೆ ಪ್ರೀತಿಸುತ್ತೇವೆ ಎಂಬುದೂ ಗೊತ್ತಿದೆ. ಅದು ಹಾಕುವ ಸೆಗಣಿ, ಎಳೆಯುವ ನೇಗಿಲು, ಕೊಡುವ ಹಾಲು ಎಲ್ಲವೂ ಅವರ ಅನ್ನವೇ ಅಲ್ಲವೇ?

(ಮುಂದುವರೆಯುವುದು…)

ದಲಿತರು ಮತ್ತು ಉದ್ಯಮಶೀಲತೆ…

ಸ್ನೇಹಿತರೇ,

ವರ್ತಮಾನ.ಕಾಮ್‌ಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆಶಯದಂತೆ ವರ್ತಮಾನ.ಕಾಮ್ ಬಳಗ ಇತರೆ ಸಮಾನಮನಸ್ಕ ಗುಂಪು ಮತ್ತು ಸಂಘಟನೆಗಳ ಜೊತೆಗೂಡಿ ರಾಜ್ಯದ ಹಲವು ಕಡೆ ಸಂವಾದ ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಮೊದಲ ಕಾರ್ಯಕ್ರಮ ಹಾಸನದಲ್ಲಿ ಇದೇ ಶನಿವಾರ (07-09-2013) ನಡೆಯುತ್ತಿದೆ. ವಿಷಯ: “ದಲಿತರು ಮತ್ತು ಉದ್ಯಮಶೀಲತೆ”.

ದಲಿತರು ಉದ್ಯಮಿಗಳಾಗಬೇಕೆ ಬೇಡವೆ, ಅವರೂ ಅಂತಿಮವಾಗಿ ಬಂಡವಾಳಶಾಹಿಯ ಶೋಷಕವರ್ಗದ ಪಾಲುದಾರರಾಗಬೇಕೆ, ಎನ್ನುವುದರಿಂದ ಹಿಡಿದು ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಉದ್ಯಮಿಗಳಾಗಲು ಇರುವ ಅಡೆತಡೆಗಳೇನು, ಬಂಡವಾಳ ಹೂಡಿಕೆ ಯಾರಿಂದ, ಇತ್ಯಾದಿ ವಿಷಯಗಳ ಬಗ್ಗೆ ಇಂದು ದೇಶದಲ್ಲಿ ಚರ್ಚೆಗಳಾಗುತ್ತಿವೆ. ಈ ನಡುವೆ ಅನೇಕ ದಲಿತರು ಉದ್ಯಮಿಗಳಾಗಿ ಯಶಸ್ಸನ್ನೂ ಪಡೆಯುತ್ತಿದ್ದಾರೆ. ಅವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾದರೆ ಸರ್ಕಾರ ಮತ್ತು ಸಮಾಜದಲ್ಲಿ ಆಗಬೇಕಾದ ನೀತಿನಿರೂಪಣೆಗಳು, ಸುಧಾರಣೆಗಳು, ಮನಸ್ಥಿತಿಯ ಬದಲಾವಣೆ, ಇತ್ಯಾದಿಗಳ ಬಗ್ಗೆ ಮತ್ತು ಉದ್ಯಮಿಗಳಾಗಿ ಪರಿವರ್ತಿತರಾಗುವ ದಲಿತರ ಮೇಲಿರುವ ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಮಾಜ ಅವರಿಂದ ಬಯಸುವ ಅತಿಯಾದ ಜವಾಬ್ದಾರಿತನ ಮತ್ತು ನೈತಿಕತೆ, ಇತ್ಯಾದಿಗಳ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಸಂವಾದಗಳು ಆಗಬೇಕಿದೆ. ಅಂತಿಮವಾಗಿ ಉದ್ಯಮಕ್ಷೇತ್ರದಲ್ಲಿ ಅವರಿಗಿರುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಈ ನಿಟ್ಟಿನಲ್ಲಿ ವರ್ತಮಾನ.ಕಾಮ್ ಹಾಸನದ “ಸಹಮತ ವೇದಿಕೆ”ಯ ಜೊತೆಗೂಡಿ ಈ ಕಾರ್ಯಕ್ರಮ ಆಯೋಜಿಸಿದೆ. vartamaana-sahamata-invitationಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಕಲಾವಿದ ಮತ್ತು ದಲಿತಪರ ಹೋರಾಟಗಾರ ಕೆ.ಟಿ..ಶಿವಪ್ರಸಾದ್ ವಹಿಸುತ್ತಾರೆ. ಸಾಹಿತಿಗಳೂ, ಮಾಜಿ ವಿಧಾನಪರಿಷತ್ ಸದಸ್ಯರೂ, ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಅಧ್ಯಕ್ಷರೂ ಆದ ಎಲ್.ಹನುಮಂತಯ್ಯನವರು ಮತ್ತು ಉದ್ಯಮಿಗಳೂ, Dalit Indian Chamber of Commerce & Industry (DICCI)ಯ ರಾಜ್ಯಾಧ್ಯಕ್ಷರೂ ಆದ ರಾಜಾ ನಾಯಕರು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ದಯವಿಟ್ಟು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಎಸ್.ಸಿ/ಎಸ್.ಟಿ ಉದ್ಯಮಿಗಳ ಸಂಘದ ಕಾರ್ಯಾಧ್ಯಕ್ಷರಾದ ಸಿ.ಜಿ.ಶ್ರೀನಿವಾಸನ್‌‌ರು, ನಮ್ಮ ವರ್ತಮಾನ.ಕಾಮ್ ಬಳಗದ  ಬಿ.ಶ್ರೀಪಾದ್ ಭಟ್ಟರೂ ಸಹ ಬರಲಿದ್ದಾರೆ.

ಹಾಸನದ “ಸಹಮತ ವೇದಿಕೆ”ಯ ಬಗ್ಗೆ ಒಂದೆರಡು ಮಾತು. ಹಾಸನದಲ್ಲಿರುವ ಕೆಲವು ಸಮಾನಮಸ್ಕ ಸ್ನೇಹೊತರು ಸೇರಿ ಕಟ್ಟಿಕೊಂಡಿರುವ ಈ ವೇದಿಕೆ ಅವರೇ ಹೇಳುವಂತೆ: “ಜಾಗತಿಕ ಮಾರುಕಟ್ಟೆಯ ಭಾಗವೇ ಆಗಿರುವ ಬದುಕಿನಲ್ಲಿ ಉಳಿವಿಗಾಗಿ ತುರುಸಿನ ಪೈಪೋಟಿ ನಡೆಸುತ್ತಲೇ ತಮ್ಮೊಡಲಿನ ಜೀವದ್ರವ್ಯವನ್ನು ಜತನದಿಂದ ಕಾಯ್ದುಕೊಳ್ಳುವ ತುಡಿತವಿರುವ ಕೆಲವು ಸ್ನೇಹಿತರು ಸೇರಿ ಹಾಸನದಲ್ಲಿ ಹುಟ್ಟುಹಾಕಿದ ‘ಸಹಮತ ವೇದಿಕೆ’ ಸಾಹಿತ್ಯ, ಸಿನಿಮಾ, ನಾಟಕ ಮತ್ತು ವಿಚಾರ ಮಂಥನಗಳಂತಹ ಚಟುವಟಿಕೆಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ.” ಅವರ ಇತ್ತೀಚಿನ ತಿಂಗಳುಗಳ ಕಾರ್ಯಕ್ರಮಗಳ ವಿವರಗಳು ಅವರ ಬ್ಲಾಗಿನಲ್ಲಿ ಇವೆ (sahamathasana.blogspot.in). ಪ್ರಾಮಾಣಿಕರೂ, ಬದ್ಧತೆಯುಳ್ಳ ಸಮಾಜಮುಖಿಗಳೂ ಆದ “ಸಹಮತ ವೇದಿಕೆ”ಯ ಸ್ನೇಹಿತರೊಡನೆಗೂಡಿ ವರ್ತಮಾನ.ಕಾಮ್‌ನ ಈ ತರಹದ ಮೊದಲ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ನಿಜಕ್ಕೂ ಸಂತೋಷವಿದೆ.

ಇನ್ನು ಇದೇ ಸಂದರ್ಭದಲ್ಲಿ “ದಲಿತರು ಮತ್ತು ಉದ್ಯಮಶೀಲತೆ” ವಿಷಯದ ಬಗ್ಗೆ ಲೇಖನಗಳನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು. ದಯವಿಟ್ಟು ಬರೆಯಿರಿ ಎಂದು ನಮ್ಮ ಬಳಗದ ಲೇಖಕರಲ್ಲಿ ಮತ್ತು ಓದುಗರಲ್ಲಿ ವಿನಂತಿಸುತ್ತೇನೆ. ಹಾಗೆಯೇ, ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಕಾಮೆಂಟ್ ರೂಪದಲ್ಲಿ ವ್ಯಕ್ತಪಡಿಸಿ. ಮತ್ತು, ಸಂವಾದದಲ್ಲಿ ನಿಮ್ಮ ಪರವಾಗಿ ಏನಾದರೂ ಪ್ರಶ್ನೆಗಳನ್ನು ಎತ್ತಬೇಕಿದ್ದಲ್ಲಿ ಅವನ್ನೂ ಕಾಮೆಂಟ್‌ ರೂಪದಲ್ಲಿ ಹಾಕಿ. ಅವನ್ನು ಕಾರ್ಯಕ್ರಮದಲ್ಲಿ ಮತ್ತು ಸಂವಾದದಲ್ಲಿ ಪಾಲ್ಗೊಂಡವರಿಗೆ ತಲುಪಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ಸಂಪಾದಕ, vartamaana.com

 

ಪ್ರಭುತ್ವ ಮತ್ತು ಅದರ ದಮನಕಾರಿಗುಣ


– ಡಾ.ಎಸ್.ಬಿ. ಜೋಗುರ


 

ಪ್ರಭುತ್ವ ಬಹುತೇಕವಾಗಿ ಜನಜಾಗೃತಿಯನ್ನು, ಆಂದೋಲನವನ್ನು ಸಹಿಸುವದಿಲ್ಲ. ಅದರಲ್ಲೂ ಬಂಡುಕೋರರು ಬೀದಿಗಿಳಿದು ಅರಾಜಕತೆಗೆ ಕಾರಣರಾದವರ ಹೆಸರಿಡಿದು ಕೂಗುತ್ತಾ ಪ್ರತಿಭಟಿಸುವವರನ್ನು ಮೊದಲು ಸಹಿಸುವದಿಲ್ಲ. ಪ್ರಜಾಸತ್ತೆಯನ್ನು ಅಣಕಿಸಲೆಂಬಂತೆ ಅದರ ಗರ್ಭದಲ್ಲಿಯೇ ಸರ್ವಾಧಿಕಾರಿ ಧೋರಣೆಯ ಬೀಜಗಳು ನಿಧಾನವಾಗಿ ಆವೀರ್ಭವಿಸುವುದು ಬಹುದೊಡ್ಡ ವಿಪರ್ಯಾಸ. ಹಿಂದೆ 1988 ರ ಸಂದರ್ಭದಲ್ಲಿ ತಿಕ್ಕಲು ಸರ್ವಾಧಿಕಾರಿ ಸದ್ದಾಂ ಹುಸೇನ ವಿಷಕಾರಿ ಅಸ್ತ್ರಗಳನ್ನು ಬಂಡುಕೋರರ ಮೇಲೆ ಬಳಸುವ ಮೂಲಕ, ಐದಾರು ಸಾವಿರ ಜನರ ಸಾವಿಗೆ ಕಾರಣವಾಗಿ ಇಡೀ ಜಗತ್ತಿನಲ್ಲಿಯೇ ಒಂದು ಬಗೆಯ ನಿಶೇಧಾತ್ಮಕ ಪ್ರತಿಕ್ರಿಯೆಯನ್ನು ಪಡೆಯಬೇಕಾಗಿ ಬಂದಿತ್ತು. syria-chemical-attackಈಗ 24 ವರ್ಷಗಳ ನಂತರ ಮತ್ತೆ ಅಂತಹದೇ ರಾಸಾಯನಿಕ ಅಸ್ತ್ರದ ಬಳಕೆ ಸಿರಿಯಾದಲ್ಲಿ ಸರ್ವಾಧಿಕಾರಿ ಬಸರ್ ಅಲ್-ಅಸದ್ ಆಳ್ವಿಕೆಯಲ್ಲಿ ನಾಗರಿಕ ಹೋರಾಟಗಾರರ ಮೇಲೆ ಪ್ರಯೋಗಿಸಲಾಗಿದೆ. ಸಾವಿರಾರು ಜನ ಬಂಡುಕೋರರ ಜೊತೆಯಲ್ಲಿ ಯಾವುದೇ ವಿದ್ಯಮಾನಗಳನ್ನು ಅರಿಯದ ಅಸಂಖ್ಯಾತ ಎಳೆಯ ಜೀವಗಳು ಈ ರಾಸಾಯನಿಕ ಅಸ್ತ್ರದ ಬಳಕೆಗೆ ಬಲಿಯಾಗಿವೆ. ಕಣ್ಣು ಊದಿರುವ, ಬಾಯಿಗೆ ನೊರೆ ಮೆತ್ತಿರುವ, ಮುಖ ಊದಿ ವಿಕಾರವಾಗಿ ಅಸು ನೀಗಿರುವ ಶರೀರಗಳು ರಾಶಿ ರಾಶಿಯಾಗಿ ಡಮಾಸ್ಕಸ್ ಸುತ್ತಮುತ್ತಲೂ ಬಿದ್ದಿರುವದಿತ್ತು. ಆ ಸನ್ನಿವೇಶ ಇಡೀ ಜಗತ್ತನ್ನೇ ಒಂದು ಸಾರಿ ಕಂಪಿಸುವಂತೆ ಮಾಡಿತು. ಅತ್ಯಂತ ಅಮಾನವೀಯ ಎನ್ನಬಹುದಾದ ಈ ಆಯ್ಕೆ ಮತ್ತು ತೀರ್ಮಾನಕ್ಕೆ ಇಡೀ ಜಗತ್ತೇ ಖಂಡಿಸಿತು. ಹಾಗೆ ನೋಡಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಬಗೆಯ ಜೈವಿಕ ಇಲ್ಲವೇ ರಸಾಯನಿಕ ಶಸ್ತ್ರಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಗೆ ಒಂದೊಮ್ಮೆ ತೀರಾ ಅನಿವಾರ್ಯವಾಗಿ ಬಳಸಲೇಬೇಕು ಎಂದಾಗ ಹೇಗ್ ನಲ್ಲಿರುವ ಅದಕ್ಕೆ ಸಂಬಂಧಿಸಿದ ಸಂಸ್ಥೆಯೊಂದರ ಅನುಮತಿಯನ್ನು ಪಡೆಯಬೇಕು. ಇಂಥಾ ಯಾವುದೇ ಬಗೆಯ ಅನುಮತಿಗಳಿಲ್ಲದೇ ಹೀಗೆ ಬೇಕಾಬಿಟ್ಟಿಯಾಗಿ ರಸಾಯನಿಕ ಅಸ್ತ್ರದ ಪ್ರಯೋಗವಾಗಿರುವುದು ಅಸದ್ ಆಡಳಿತ ಜಗತ್ತಿನ ಪ್ರಮುಖ ರಾಷ್ಟ್ರಗಳಿಂದ ಟೀಕೆಗೆ ಒಳಗಾಗಬೇಕಾಯಿತು.

ಈಗಾಗಲೇ ಸಿರಿಯಾದ ಅಧ್ಯಕ್ಷನ ಆಡಳಿತ ವೈಖರಿ ಮತ್ತು ತೀರ್ಮಾನಗಳ ಬಗ್ಗೆ ಸಂಯುಕ್ತ ರಾಷ್ಟ್ರ ಸಂಘ ಕೆಂಡಾಮಂಡಲವಾಗಿದೆ. Basharal-Assad-syrianಸುಮಾರು 35 ರಾಷ್ಟ್ರಗಳ ಈ ಒಕ್ಕೂಟದಲ್ಲಿ ಫ಼್ರಾನ್ಸ್ ಮತ್ತು ಇಂಗ್ಲಂಡದಂಥ ರಾಷ್ಟ್ರಗಳೂ ಇವೆ. ಸಂಯುಕ್ತ ರಾಷ್ಟ್ರ ಸಂಘದ ಸೆಕ್ರೆಟರಿ ಜನರಲ್ ಬನ್-ಕಿ-ಮೂನ್ ಅವರು ಈ ಬಗೆಯ ರಸಾಯನಿಕ ಅಸ್ತ್ರಗಳ ಬಳಕೆ ಇಡೀ ಮನುಕುಲಕ್ಕೆ ಮಾರಕ, ಅದನ್ನು ಇಡೀ ವಿಶ್ವವೇ ಖಂಡಿಸುತ್ತದೆ, ಈ ವಿಷಯವಾಗಿ ತಡ ಮಾಡದೇ ತನಿಖೆಯಾಗಬೇಕು ಎಂದು ಒಕ್ಕೂಟದಲ್ಲಿಯ ಕೆಲ ಪ್ರಮುಖ ರಾಷ್ಟ್ರಗಳು ಆಗ್ರಹಿಸುತ್ತಿವೆ ಎಂದು ಹೇಳಿರುವದಿದೆ. ಈಗಾಗಲೇ ವಿಶ್ವ ಸಂಸ್ಥೆ ತನಿಖೆಗಾಗಿ ಸಿರಿಯಾ ತಲುಪಿರುವದಿದೆ. ಕುಟುಂಬದ ರಾಜಕಾರಣ ಮತ್ತು ಅಧಿಕಾರವನ್ನು ಪ್ರಶ್ನಿಸುವದೇ ಮಹಾಪ್ರಮಾದ ಎನ್ನುವ ವಾತಾವರಣ ಇಂದಿಗೂ ಕೆಲ ಮುಸ್ಲಿಂ ರಾಷ್ಟ್ರಗಳಲ್ಲಿ ಇದ್ದದ್ದೇ ಒಂದು ದೊಡ್ಡ ವಿಪರ್ಯಾಸ. ಪ್ರಜಾಪ್ರಭುತ್ವದ ಬಗೆಗಿನ ಹಂಬಲವೇ ಅನೇಕ ಕಡೆಗಳಲ್ಲಿ ಈ ಬಗೆಯ ಬಂಡುಕೋರರನ್ನು ಹುಟ್ಟುಹಾಕಿರುವದಿದೆ. ಸಿರಿಯಾದ ಅಧ್ಯಕ್ಷ ಅಸದ್ ಕುಟುಂಬ ಕಳೆದ ನಾಲ್ಕು ದಶಕಗಳಿಂದಲೂ ರಾಜಕೀಯ ಸತ್ತೆಯನ್ನು ತನ್ನ ಕೈಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಾ, ನಿಭಾಯಿಸುತ್ತಾ ಬಂದದ್ದಿದೆ. ಈಜಿಪ್ತ ಮತ್ತು ಇರಾಕ್ ಗಳಲ್ಲಿ ಪ್ರಜಾಪ್ರಭುತ್ವದ ಹಂಬಲಕ್ಕಾಗಿ ನಡೆದ ಹೋರಾಟದ ಪ್ರಭಾವದ ಹಿನ್ನೆಲೆಯಲ್ಲಿ ಸಿರಿಯಾದಲ್ಲಿಯೂ ಆ ಬಗೆಯ ಹೋರಾಟ ಆರಂಭವಾಯಿತು. ನಾಗರಿಕರು ದೊಡ್ದ ಪ್ರಮಾಣದಲ್ಲಿ ಬೀದಿಗಿಳಿದು ಆ ಬಗ್ಗೆ ಹೋರಾಟ ಆರಂಭಿಸಿದ್ದೇ ತಡ ಮಿಲಿಟರಿ ನೆರವಿನೊಂದಿಗೆ ಈ ರಸಾಯಕ ಅಸ್ತ್ರ ಪ್ರಯೋಗದ ಅಹಿತಕರವಾದ ತೀರ್ಮಾನವನ್ನು ಕೈಗೊಳ್ಳಲಾಯಿತು ಎನ್ನುವುದು ಮಾಧ್ಯಮಗಳ ವರದಿಯಾದರೆ, ರಷ್ಯಾ ಮಾತ್ರ ಈ ಬಗೆಯ ರಸಾಯನಿಕ ಅಸ್ತ್ರದ ಬಳಕೆಯ ಹಿಂದೆ ಬಂಡುಕೋರ ಹೋರಾಟಗಾರರ ಕೈವಾಡವಿದೆ, ಆದಾಗ್ಯೂ ಸಂಯುಕ್ತ ರಾಷ್ಟ್ರ ಸಂಘದ ತನಿಕೆಗೆ ಸಿರಿಯಾದ ಅಧ್ಯಕ್ಷ ಅಸದ್ ಸಹಕರಿಸಬೇಕು ಎಂದು ಕರೆ ನೀಡಿರುವದಿದೆ. ಇದರೊಂದಿಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಸಿರಿಯಾದ ಮೆಲೆ ಕ್ರಮ ಜರುಗಿಸುವಂತೆ ಒತ್ತಡವನ್ನೂ ಹೇರುತ್ತಿರುವುದೂ ಸತ್ಯ. obamaಇದರ ಹಿಂದೆ ಯಾರ ಕೈವಾಡ ಇದೆಯೋ.. ಗೊತ್ತಿಲ್ಲ. ಒಟ್ಟಾರೆ ಸಾವಿರಾರು ಜನ ಅಮಾಯಕರು ಹೆಣವಾದದ್ದು, ಲಕ್ಷಾನುಗಟ್ಟಲೆ ಮಕ್ಕಳು ನಿರಾಶ್ರಿತರಾದದ್ದು ಮಾತ್ರ ಸುಳ್ಳಲ್ಲ. ಸುಮಾರು 1 ದಶಲಕ್ಷ ಮಕ್ಕಳು ನಿರಾಶ್ರಿತರಾಗಿ ಲೆಬಿನಾನ್, ಜೋರ್ಡಾನ್, ಟರ್ಕಿ, ಇರಾಕ್ , ಈಜಿಪ್ತ, ಉತ್ತರ ಆಫ್ರಿಕಾ ಹಾಗೂ ಯುರೋಪ ಮುಂತಾದ ಕಡೆಗೆ ತೆರಳಿರುವದಿದೆ. ಲೆಬಿನಾನಂತೂ ನಿರಾಶ್ರಿತರ ಪಾಲಿನ ಮುಖ್ಯ ತಾಣ.

ಸಿರಿಯಾ ನಾಗರಿಕ ಹೋರಾಟದ ಸಂದರ್ಭದಲ್ಲಿ ಈ ಬಗೆಯ ಅಸ್ತ್ರಗಳನ್ನು ಯಾವುದೇ ಕಾರಣಕ್ಕೆ ಬಳಸಬಾರದೆಂದು ಅಂತರರಾಷ್ಟ್ರೀಯ ಮಟ್ಟದ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಆ ರೆಡ್‌ಲೈನ್ ನ್ನು ದಾಟಿರುವದಿದೆ. ಆಮೂಲಕ ಮಾನವ ಹಕ್ಕುಗಳ ಉಲ್ಲಂಘನೆಗೂ ಅದು ಕಾರಣವಾಗಿದೆ. ಸಿರಿಯಾದ ಲಕ್ಷಾನುಗಟ್ಟಲೆ ಜನರು ಈ ಬಗೆಯ ರಸಾಯನಿಕ ಅಸ್ತ್ರದ ಧಾಳಿಗೆ ಹೆದರಿ ಇರಾಕನ ಖುರ್ದಿಸ್‌ನಲ್ಲಿ ನಿರಾಶ್ರಿತರಾಗಿ ಆಶ್ರಯಪಡೆದಿರುವದಿದೆ. 2011 ರ ಮಾರ್ಚ್ ತಿಂಗಳಿನಿಂದಲೂ ಈ ನಾಗರಿಕ ಹೋರಾಟ ಸರ್ವಾಧಿಕಾರಿ ಆಡಳಿತದ ವಿರುದ್ಧ ನಡದೇ ಇತ್ತು. ಹಾಗೆಯೇ ಅದನ್ನು ದಮನ ಮಾಡಲು, ಹತ್ತಿಕ್ಕಲು ಅನೇಕ ಬಗೆಯ ಹಲ್ಲೆಗಳು ನಡೆಯುತ್ತಲೇ ಬಂದಿವೆ. ಈ ಬಗೆಯ ಹೋರಾಟದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಸಿರಿಯಾದಲ್ಲಿ ಸುಮಾರು 1 ಲಕ್ಷ ಹೋರಾಟಗಾರರು ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಸದ್ಯದ ಸಂದರ್ಭದಲ್ಲಿ ಇಡೀ ಗ್ಲೋಬ್ ತೀರಾ ಗರಂ ಆಗಿರುವ ಸ್ಥಿತಿಯಲ್ಲಿದೆ. ಗ್ಲೋಬಿನ ಯಾವುದೇ ಬದಿಗೆ ನೀವು ಬೆರಳು ತಾಗಿಸಿದರೂ ಚುರ್ ಎನ್ನುವಷ್ಟು ಗರಂ ಆಗಿರುವ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. syria-chemical-attacksಹೀಗಿರುವಾಗ ಯಾವುದೇ ಒಂದು ರಾಷ್ಟ್ರದ ಸರ್ವಾಧಿಕಾರಿ ಧೋರಣೆ ಇಲ್ಲವೇ ಹೇಗಾದರೂ ಸರಿ ತನ್ನ ಇಜಂ ನ್ನು ಬಲಪಡಿಸಿಕೊಳ್ಳಲೇಬೇಕು ಎಂಬ ಹುಂಬತನದಿಂದ ಇಂಥಾ ಮಾರಕ ಅಸ್ತ್ರಗಳನ್ನು ಬಳಸುತ್ತಾ ನಡೆದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಬರೀ ವಿಷಪೂರಿತ ಕಲ್ಲು, ಮಣ್ಣು ಮಾತ್ರ ಉಳಿಯುವ ಸಾಧ್ಯತೆಯಿದೆ. ಮನುಷ್ಯನನ್ನು ಅತ್ಯಂತ ತುಚ್ಚವಾದ ಕ್ರಿಮಿಗಳನ್ನು ಒರೆಸಿಹಾಕುವಂತೆ ಸಾಯಿಸಲು ಬಳಸಲಾಗುವ ಈ ಬಗೆಯ ಅಸ್ತ್ರಗಳ ಸೃಷ್ಟಿಗಾಗಿಯೇ ನಾಗರಿಕತೆ ಎನ್ನುವುದು ಜನ್ಮ ತಾಳಿರಲಿಕ್ಕಿಲ್ಲ. ಇಂಥಾ ಅಸ್ತ್ರಗಳ ಬಳಕೆಯನ್ನು ಜೀವಪರ ಹಂಬಲ ಮತ್ತು ಖಾಳಜಿ ಇರುವ ಯಾರೂ ಸಹಿಸುವದಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ಇಡೀ ಜಗತ್ತನ್ನು ಗ್ಲೋಬಲ್ ವಿಲೇಜ್ ಎಂದು ಸಂಬೋಧಿಸುವ ನಮಗೆ ಈ ಬಗೆಯ ಮಾರಣಹೋಮ ಭೂಮಂಡಲದ ಮೇಲೆ ಎಲ್ಲಿಯೇ ಜರುಗಿದರೂ ಈ ಗ್ಲೋಬಲ್ ವಿಲೇಜನ್ನು ಮಾನಸಿಕವಾಗಿ ಬಾಧಿಸುತ್ತದೆ. ಹೀಗೆ ಪ್ರಭುತ್ವ ಜನರ ಹೋರಾಟವನ್ನು ದಮನ ಮಾಡುವಲ್ಲಿ ತನ್ನ ಅಸಹಾಯಕತೆಯ ಸಾಧನವಾಗಿ ಇಂಥಾ ರಸಾಯನಿಕ ಅಸ್ತ್ರಗಳ ಬಳಕೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು.