ಅವಳು ನನಗೆ ಬೇಕೇ ಬೇಕು ಎನ್ನುವ ತಿಕ್ಕಲುತನದ ಅಪಾಯ..!


– ಡಾ.ಎಸ್.ಬಿ. ಜೋಗುರ


 

ಹತ್ತಾರು ರೋಮ್ಯಾಂಟಿಕ್ ಮೆಸೇಜಗಳು ರವಾನೆಯಾಗಿದ್ದೇ ತಡ ಪ್ರೀತಿ ಪ್ರೇಮದ ಪುರಾಣವೇ ಆರಂಭವಾಗುವ ಈ ದಿನಮಾನಗಳಲ್ಲಿ ಪರಿಣಾಮದ ಪರಿವಿಲ್ಲದೇ ದುಡುಕುವ ಹುಡುಗಾಟದ ಹುಡುಗ-ಹುಡುಗಿಯರು ಏನೇನೋ ಅನಾಹುತಗಳನ್ನು ಅನುಭವಿಸುವದಿದೆ. ಬರೀ ಮೋಹವನ್ನೇ ಪ್ರೀತಿಯೆಂದು ಪರಿಭಾವಿಸುವ ಹುಚ್ಚ ಖೊಡಿ ಮನಸಿನ ಬೆನ್ನಿಗೆ ಬಿದ್ದವರು ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮ ಬದುಕನ್ನೇ ನರಕವಾಗಿಸಿಕೊಳ್ಳುತ್ತಾರೆ. ಎರಿಕ್ ಫ಼್ರಾಮ್ ಎನ್ನುವ ಸಮಾಜಶಾಸ್ತ್ರ ಹೇಳುವ ಹಾಗೆ ನಿಜವಾದ ಪ್ರೀತಿಯಲ್ಲಿ ಕೊಡುವ ಗುಣವಿದೆಯೇ ಹೊರತು ಕಸಿಯುವ, ಕಿತ್ತಿಕೊಳ್ಳುವ, ವಿರೂಪಗೊಳಿಸುವ ಭಂಜನೆಯ ಗುಣವಿಲ. ಪೊಸ್ಸೆಸ್ಸಿವ್ ಗುಣ ಒಂದು ಹಂತದವರೆಗೆ ಓ.ಕೆ. ಏನೇ ಆಗಲಿ ಅವಳು ನನಗೆ ಬೇಕೇ ಬೇಕು ಎನ್ನುವ ಹಠ ಪ್ರಯೋಗದ ನಡುವೆ ಅವಳು ಒಂದೊಮ್ಮೆ ಆ ಒನ್ ವೇ ಪ್ರೀತಿಯನ್ನು ನಿರಾಕರಿಸಿದ್ದೇಯಾದರೆ ಈತ ಇದ್ದಕ್ಕಿದ್ದಂತೆ ಸೈತಾನನಾಗಿ ಆಕೆಯ ಸುಂದರ ಮುಖಕ್ಕೆ acid-attack-victimಎಸಿಡ್ ಎರಚುವ, ಕತ್ತು ಕೊಯ್ಯುವ ಇಲ್ಲವೇ ಹಲ್ಲೆ ಮಾಡುವ ಹುಂಬತನಕ್ಕಿಳಿಯುತ್ತಾನೆ. ಇಂಥಾ ತಿಕ್ಕಲು ಮನ:ಸ್ಥಿತಿಯನ್ನೇ ಸಿನೇಮಾ ಮಾಡಿ ದುಡ್ದು ಮಾಡಿಕೊಂಡವರಿಗೂ ನಮ್ಮಲ್ಲಿ ಕೊರತೆಯಿಲ್ಲ. ತಕ್ಕಲು ಹುಡುಗನೊಬ್ಬನ ಅತಿಯಾದ ಪೊಸೆಸ್ಸಿವ್ ನಿಂದಾಗಿ ಅನೇಕ ಸುಂದರ ಯುವತಿಯರು ವಿಕಾರವಾಗಿದ್ದಾರೆ. ಅಂಥಾ ಕೆಲವು ಘಟನೆಗಳಲ್ಲಿ ಎಪ್ರಿಲ್ 20-1999 ರಂದು ಹಸೀನಾ, ಫ಼ೆಬ್ರುವರಿ 2001 ರಲ್ಲಿ ನೂರಜಹಾನ್ , ಅಗಸ್ಟ್ 12-2002 ರಂದು ಶೃತಿ ಸತ್ಯನಾರಾಯಣ, ಜೂನ 24-2007 ಸರೋಜಿನಿ ಕಲಭಾಗ, ಅಗಸ್ಟ 8-2007 ಹಿನಾ ಫ಼ಾತಿಮಾ, ಅಕ್ಟೋಬರ್ 21-2008 ಕಾರ್ತಿಕಾ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರೂ ಎಸಿಡ್ ಧಾಳಿಗೆ ತುತ್ತಾದವರು. ನಿಜವಾದ ಪ್ರೀತಿ ಹೀಗೆ ಹಿಂಸೆಯನ್ನು, ಸೇಡನ್ನು ಪುರಷ್ಕರಿಸುವದಿಲ್ಲ ಎನ್ನುವುದು ತಿಳಿದಿರಬೇಕು.

ಈಚೆಗೆ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಆಕಾಶ ಎನ್ನುವ ಹುಡುಗ ರೋಷನಿ ಗುಪ್ತಾ ಎನ್ನುವ ಹುಡುಗಿಯನ್ನು ಕೊಡಲಿಯಿಂದ ಹಲ್ಲೆ ಮಾಡಿ ಡೆತ್ ನೋಟ್ ಬರೆದಿಟ್ಟು ತಾನೂ ಕೂಡಾ ಕತ್ತು ಕತ್ತರಿಸಿಕೊಂಡಿದ್ದಾನೆ. ರೋಷನಿ ಯ ತಲೆಬುರುಡೆಗೆ ತೀವ್ರ ಪೆಟ್ಟು ಬಿದ್ದು ಈಗ ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೊಡಲಿಯ ಪೆಟ್ಟು ಕೊಟ್ಟಾತ ಅದಾಗಲೇ ಈ ಲೋಕವನ್ನು ತ್ಯಜಿಸಿದ್ದಾನೆ. ಬಿಹಾರದ ಗಯಾ ಮೂಲದ ಆಕಾಶ ಒಬ್ಬ ಬಡ ರೈತನ ಮಗ. ಓದಲೆಂದು ದೆಹಲಿಗೆ ಬಂದವನು ಮಾಡಿರುವ ಕಿಸಾಮತಿ ಇದು. ಆತ ಬರೆದಿರುವ ಡೆತ್ ನೋಟಿನಲ್ಲಿ ನನ್ನನ್ನು ಕ್ಷಮಿಸಿ ಪ್ರತಿ ಬಾರಿಯೂ ಹುಡುಗರದೇ ತಪ್ಪಿರುವದಿಲ್ಲ.. ನಾನು ಎಂಥವನು ಎನ್ನುವದನ್ನು ನನ್ನ ಗೆಳೆಯರಿಂದ ಕೇಳಿ ತಿಳಿಯಿರಿ ಹೀಗೆ ಇನ್ನೂ ಅನೇಕ ವಿಷಯಗಳನ್ನು ನಾಲ್ಕು ಪುಟದ ಪತ್ರದಲ್ಲಿ ಬರೆದಿದ್ದ ಆಕಾಶ, ಆತನ ಸ್ನೇಹಿತರು ಹೇಳುವಂತೆ ಅಂತರ್ಮುಖಿಯಾಗಿದ್ದು, ಕಡಿಮೆ ಮಾತನಾಡುತ್ತಿದ್ದ. ತನ್ನದೇ ಸಹಪಾಠಿಯನ್ನು ಹೀಗೆ ಭೀಕರವಾಗಿ ಕೊಡಲಿಯಿಂದ ಹಲ್ಲೆ ಮಾಡಿ ತಾನೂ ಸಾವೀಗೀಡಾಗಿದ್ದು ಸರಿಯಾದ ನಿಲುವಂತೂ ಅಲ್ಲ. ಕೇವಲ ಇದು ಮಾತ್ರವಲ್ಲ ಇಂಥಾ ಘಟನೆಗಳು ಬೇಕಾದಷ್ಟು ನಡೆಯುತ್ತವೆ.. ವರದಿಯಾಗುತ್ತವೆ.

ಮೇ ತಿಂಗಳಲ್ಲಿ ಮುಂಬೈನ ಬಾಂದ್ರಾದಲ್ಲಿ ಒಬ್ಬ ಯುವಕ 23 ವರ್ಷ ವಯಸ್ಸಿನ ಯುವತಿಯ ಮುಖಕ್ಕೆ ಎಸಿಡ್ ಎರಚಿ ಪರಾರಿಯಾದ. ಆ ಹುಡುಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ ಅವಳ ಮೊಬೈಲನ್ನು ಪೋಲಿಸರು ಪರಿಶೀಲಿಸಿದಾಗ ಅದರಲ್ಲಿ ಸುಮಾರು 250 ರಷ್ಟು ರೋಮ್ಯಾಂಟಿಕ್ ಆದ ಸಂದೇಶಗಳಿದ್ದವು. ಆ ಸಂದೇಶಗಳು ದೆಹಲಿಯ ಅನಾಮಿಕನೊಬ್ಬನಿಂದ ಬಂದಿರುವದಿತ್ತು. ಇದೇ ತಿಂಗಳು ಚೆನೈನ ಎಮ್.ಜಿ.ಆರ್ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜಾರ್ಖಂಡ್ ಮತ್ತು ಬಿಹಾರದ ಇಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮದ ವಿಷಯವಾಗಿ ಜಗಳಾಡಿ ಒಬ್ಬಾತ ಪಿಸ್ತೂಲಿನಿಂದ ಇನ್ನೊಬ್ಬನ ತಲೆಗೆ ಜೋರಾಗಿ ಹೊಡೆದಿದ್ದ. ಹೊಡೆದವನು ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಮಾತನಾಡಬೇಡ ಎನ್ನುವದು ಕಡಕ್ ವಾರ್ನಿಂಗ್ ಆಗಿತ್ತು. ವಿಚಿತ್ರವೆಂದರೆ ಆ ಹುಡುಗಿ ಮತ್ತು ಈ ಇಬ್ಬರು ಯುವಕರು ಒಂದೇ ತರಗತಿಯಲ್ಲಿ ಓದುವವರು. ಕಳೆದ ಎಪ್ರಿಲ್ ನಲ್ಲಿ ಮುಂಬೈನ ಠಾಣಾದಲ್ಲಿ ಒಂದು ಘಟನೆ ನಡೆದಿತ್ತು. ೧೯ ವರ್ಷದ ಓರ್ವ ಯುವತಿಯನ್ನು 22 ವರ್ಷದ ಒಬ್ಬ ಯುವಕ ಪ್ರೀತಿಸುತ್ತಿದ್ದ. ಅದು ಬಹುತೇಕವಾಗಿ ಒನ್ ವೇ ಲವ್ ಆಗಿತ್ತು. ಆ ಹುಡುಗಿ ಅವನನ್ನು ಮದುವೆಯಾಗಲು ಇಷ್ಟವಿಲ್ಲ ಎಂದದ್ದೇ ಆತ ನೇರವಾಗಿ ಅವರ ಮನೆಗೆ ತೆರಳಿ ಕಲಹಕ್ಕಿಳಿದು ಆ ಹುಡುಗಿಯ ಕತ್ತಲ್ಲಿ ಚಾಕು ಹಾಕಿ ಬಿಟ್ಟ ಹಾಗೆಯೇ ತಾನೂ ಕತ್ತನ್ನು ಸೀಳಿಕೊಂಡ. ಸುದೈವಕ್ಕೆ ಇಬ್ಬರೂ ಬದುಕಿ ಉಳಿದರು. ಇಂಥಾ ಅದೆಷ್ಟೋ ಘಟನೆಗಳು ಪ್ರೇಮ ವೈಫ಼ಲ್ಯ ಇಲ್ಲವೇ ನಿರಾಕರಣೆಯ ಹೆಸರಲ್ಲಿ ನಡೆಯುತ್ತವೆ. ಅದರಲ್ಲೂ ಈಗೀಗ ಮೊಬೈಲ್ ಮೂಲಕ ಪ್ರೇಮ ಪ್ರಕರಣಗಳು ಆರಂಭವಾಗುತ್ತಿವೆ. ಪ್ರಬುದ್ಧತೆ ಮತ್ತು ಪರಸ್ಪರರನ್ನು ಅರಿಯಲಿಕ್ಕೆ ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಹುಡುಗಾಟವೇ ಪ್ರೇಮವಾಗಿ ಅನಾಹುತಗಳು ಘಟಿಸುತ್ತವೆ. ನಿರಂತರವಾಗಿ ರೋಮ್ಯಾಂಟಿಕ್ ಮೆಸೇಜಗಳನ್ನು ರವಾನಿಸುವದೇ ಪ್ರೀತಿಯ ಪರಿಪಾಠವಾಗಿದೆ. ಪ್ರೇಮ ತರಾತುರಿಯಲ್ಲಿ ಕುದುರುವ ವ್ಯವಹಾರವಲ್ಲ. ಹಾಗೆಯೇ ಮೋಹ ಸೆಳೆತಗಳನ್ನೇ ಹಂಬಲಿಸಿ ಪ್ರೀತಿಸುವದು ಸರಿಯೂ ಅಲ್ಲ. ಪ್ರೀತಿಯನ್ನು ಒಂದು ಮೌಲ್ಯ ಎಂದು ಪರಿಗಣಿಸುವ ಮನೋಭಾವ ಬೆಳೆಯಬೇಕು.. ಆ ದಿಶೆಯಲ್ಲಿ ನಮ್ಮ ಯುವಕರಿಗೆ ಸುತ್ತಲ್ಲಿನ ಪರಿಸರ ಮಾರ್ಗದರ್ಶನ ನೀಡಬೇಕು. ಕತ್ತು ಕತ್ತರಿಸಿಕೊಳ್ಳುವ ಇಲ್ಲವೇ ಕೊಯ್ಯುವ, ವಿಷ ಸೇವಿಸುವ ಇಲ್ಲವೇ ಎಸಿಡ್ ಎರಚುವ ಕ್ರಿಯೆಗಳಿಗಿಂತಲೂ ಈ ಪ್ರೀತಿ ಅಗಾಧವಾದುದು. ನಿಜವಾದ ಪ್ರಾಮಾಣಿಕ ಪ್ರೀತಿ ಪರಸ್ಪರರ ಖುಷಿ.. ಮತ್ತು ಏಳ್ಗೆಯನ್ನು ಬಯಸುತ್ತದೆಯೇ ಹೊರತು ಪರಸ್ಪರರ ದುರಂತ ಕತೆಗಳನ್ನಲ್ಲ.

ಜಡಗೊಂಡ ಮನೋಸ್ಥಿತಿಯನ್ನು ಪಲ್ಲಟಗೊಳಿಸಬೇಕಾದಂತಹ ಸಂಕ್ರಮಣ ಸ್ಥಿತಿ

– ಬಿ.ಶ್ರೀಪಾದ ಭಟ್

ದೇಶದ ಪ್ರಾಕೃತಿಕ ಸಂಪತ್ತಿನ ಮೇಲೆ ನವ ಕಲೋನಿಯಲ್‌ನ ಲೂಟಿಕೋರತನದ ದಾಳಿಯನ್ನು, ಭೂತಕಾಲದ ಕುರೂಪಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ರಕ್ತಪಾತಕ್ಕೆ ಕಾರಣವಾಗುವ ಆ ಮೂಲಕ ದೇಶದ ಬೌದ್ಧಿಕತೆಯ ಮೇಲೆ ಆಕ್ರಮಣ ನಡೆಸಿ ಸಾಮಾಜಿಕ ಆರ್ಥಿಕ ಮಾನಸಿಕ ಸ್ಥಿತಿಗಳನ್ನು ಕಬ್ಜಾ ಮಾಡಿಕೊಳ್ಳುವ ಫ್ಯಾಸಿಸ್ಟ್ ಸಂಘಪರಿವಾರವನ್ನು, ಮತ್ತು ಮುಖ್ಯವಾಗಿ ಜಾಗತೀಕರಣದ ಕೊಳ್ಳುಬಾಕುತನ ತನ್ನ ಅತಿರೇಕದ ಪರಮಾವಧಿಗೆ ತಲುಪಿದಂತಹ ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಒಟ್ಟಾರೆ ಸಾಂಸ್ಕೃತಿಕ ಸಾಮರಸ್ಯತೆ, ವೈವಿಧ್ಯತೆಯಲ್ಲಿ ಏಕತೆ ಮತ್ತು ಆದಿಮ ಸಂಸ್ಕೃತಿಯ ಜೀವಪರ ಶೈಲಿಯೂ ಸಹ ಇಂದು ಹೆಚ್ಚೂ ಕಡಿಮೆ ವಿನಾಶದ ಅಂಚಿಗೆ ತಳ್ಳಲ್ಪಟ್ಟಿದೆ.

ಹಾಗಿದ್ದಲ್ಲಿ ನಾವೆಲ್ಲ ಪುನಃ ಸ್ಥಾಪಿಸಿಕೊಳ್ಳಬಯಸುವ ಪ್ರತಿರೋಧದ ನೆಲೆಗಳು, ಕಟ್ಟಬೇಕಾದ ಜೀವತೋರಣಗಳ ಮಾದರಿಗಳಾವುವು? ನಮ್ಮ ಸಾಂಸ್ಕೃತಿಕ ಯಜಮಾನಿಕೆಯೇನು? ನಮ್ಮೆಲ್ಲರ ಸಾಂಸ್ಕೃತಿಕ ಪುನುರುಜ್ಜೀವನದ (Cultural   renaissance) ಸ್ವರೂಪಗಳೇನು? hind-swarajಗಾಂಧಿ ಮಾದರಿಯ ಹಿಂದ್ ಸ್ವರಾಜ್ ಪರಿಕಲ್ಪನೆ ಇಂದಿನ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವ ಬಗೆಗಳೇನು? ಅಂಬೇಡ್ಕರ್‌ವಾದವು ಕೇವಲ ದಲಿತರ ಸ್ವಾಭಿಮಾನದ ಅಭಿವ್ಯಕ್ತಿಯ ಹೋರಾಟ ಮಾತ್ರವಲ್ಲ ಜೊತೆಗೆ ಸ್ವದೇಶಿ ಸೋಗಿನಡಿ ದೇಶವನ್ನು ಮರಳಿ ನೂರಾರು ವರ್ಷಗಳ ಹಿಂದಿನ ವರ್ಣಾಶ್ರಮದ ಮನಸ್ಥಿತಿಯ, ಭಿನ್ನ ಭೇದಗಳ ಸಾಮಾಜಿಕ ಜೀವನದ ಮಟ್ಟಕ್ಕೆ ಕೊಂಡೊಯ್ಯಲು ಹಪಾಹಪಿಸುತ್ತಿರುವ ಸಂಪ್ರದಾಯಸ್ಥ, ಜಾತಿವಾದಿ ಸಮಾಜದೊಂದಿಗೆ ಮುಖಾಮುಖಿಯಾಗಲು ಸಹ ಅಂಬೇಡ್ಕರ್‌ವಾದವನ್ನು ನಮ್ಮೆಲ್ಲ ಪ್ರಭುದ್ದತೆಯೊಂದಿಗೆ ಬಳಸಿಕೊಳ್ಳುವ ಸಾಂಸ್ಕೃತಿಕ ಯಜಮಾನಿಕೆ, ರಾಜಕೀಯ, ಆರ್ಥಿಕ ಮಾದರಿಗಳೇನು? ಅನಗತ್ಯವಾಗಿ ಪಶ್ಚಿಮವನ್ನು ಹೀಗೆಳೆಯುವ, ಪೂರ್ವವನ್ನು ವೈಭವೀಕರಿಸುವ ನಮ್ಮೆಲ್ಲರ ಸೋಗಲಾಡಿತನದ ಎಡಪಂಥೀಯ ಚಿಂತನೆಗಳನ್ನು ಕೈಬಿಟ್ಟು ಇಂದಿನ ಸಂದರ್ಭದಲ್ಲಿ ಮೂಲಭೂತವಾಗಿ ಜಾಗತೀಕರಣದ ಎಲ್ಲ ಬಗೆಯ ಸವಲತ್ತುಗಳನ್ನು ಬಳಸಿಕೊಂಡು ಗೆಳೆಯ ಸಿ.ಜಿ.ಲಕ್ಷ್ಮೀಪತಿ ಹೇಳಿದ ಪರ್ಯಾಯ ಭಾರತವನ್ನು ಕಟ್ಟಲಿಕ್ಕಾಗಿ ಚಾರಿತ್ರಿಕ ಸಾಂಸ್ಕೃತಿಕ ಪ್ರಣಾಳಿಕೆಗಳನ್ನು ನಾವೆಲ್ಲ ರೂಪಿಸಿಕೊಳ್ಳಬೇಕಾದಂತಹ, ಜಡಗೊಂಡ ನಮ್ಮ ಮನೋಭೂಮಿಕೆಯನ್ನು ಸಂಪೂರ್ಣವಾಗಿ ಪಲ್ಲಟಗೊಳಿಸಬೇಕಾದಂತಹ ಕವಲು ದಾರಿಯಲ್ಲಿ ನಾವಿದ್ದೇವೆ.

ಕಳೆದ ಶತಮಾನದ 30 ರ ದಶಕ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಇಂದಿಗೂ ಅತ್ಯಂತ ಮಹತ್ವದ, ಚಾರಿತ್ರಿಕ ಕಾಲಘಟ್ಟವಾಗಿದೆ. ಆಗ ಇಂಡಿಯಾದಲ್ಲಿ ಗಾಂಧೀಜಿ ನೇತೃತ್ವದ ವಸಾಹತುಶಾಹಿ ವಿರುದ್ಧದ ಸ್ವಾತಂತ್ರ್ಯ ಚಳುವಳಿ ಅತ್ಯಂತ ತೀವ್ರ ಸ್ವರೂಪದಲ್ಲಿತ್ತು. ಅಂಬೇಡ್ಕರ್ ಅವರು ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು, ಘನತೆಯಿಂದ ಬದುಕುವ ಹಕ್ಕನ್ನು ಸಮಾಜದ ಮುಂಚೂಣಿಗೆ ತಂದು ದಲಿತರ ವಿಮೋಚನೆ ಆಗದೆ ಇಡೀ ಭಾರತೀಯ ಸಮಾಜದ ಸ್ವಾತಂತ್ರ್ಯವೂ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಭಾರತದ ಜಾತಿವಾದಿ ಮನಸ್ಸಿಗೆ ಮನವರಿಕೆ ಮಾಡಿಕೊಡುತ್ತಿದ್ದಂತಹ ಕಾಲ. Young_Ambedkarಆ ಮೂಲಕ ಬಾಬಾ ಸಾಹೇಬರು ಇಡೀ ಜಾತಿವಾದಿ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಸಂಘಟನೆಗಳ ಒಕ್ಕೂಟವನ್ನು ಪ್ರಾರಂಭಿಸಿದ್ದರು. ಜಾತಿ ವಿನಾಶದ ಕುರಿತಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದರು. ಅದೇ ಸಮಯದಲ್ಲಿ ಪಶ್ಚಿಮ ರಾಷ್ಟ್ರಗಳಲ್ಲಿ ಹಿಟ್ಲರ್, ಮುಸಲೋನಿಯಂತಹ ಫ್ಯಾಸಿಸ್ಟರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದ್ದಂಹ ಸಂಕ್ರಮಣದ, ತಲ್ಲಣಗಳ, ಅಪಾರ ಬಿಕ್ಕಟ್ಟಿನ ಕಾಲ. ಈ ಭಯಭೀತಿಯ ಕಾಲಘಟ್ಟದಲ್ಲಿಯೇ ಯುರೋಪಿಯನ್ ಪ್ರಗತಿಪರ ಲೇಖಕರು ಫ್ಯಾಸಿಸಂ ವಿರುದ್ಧದ ಹೋರಾಟವನ್ನು ಕೈಗೆತ್ತಿಕೊಂಡರು. 15 ನೇ ಜೂನ್ 1935 ರಲ್ಲಿ ಪ್ಯಾರಿಸ್‌ನಲ್ಲಿ ಪ್ರಗತಿಪರ ಲೇಖಕರ ಸಮ್ಮೇಳನ ಜರುಗಿತು. ಅದರಲ್ಲಿ ಗಾರ್ಕಿ, ಫಾರೆಸ್ಟರ್ ಹಾಗೂ ಇನ್ನಿತರ ಪ್ರಮುಖ ಎಡಪಂಥೀಯ ಲೇಖಕರು ಭಾಗವಹಿಸಿ ಫ್ಯಾಸಿಸಂ ಅನ್ನು ವಿರೋಧಿಸಲು ಪ್ರಗತಿಪರ ಲೇಖಕರ ಒಕ್ಕೂಟಕ್ಕಾಗಿಯೇ ಒಂದು ಪ್ರಣಾಳಿಕೆಯನ್ನು ರೂಪಿಸಿದರು.

ಇವರಿಂದ ಪ್ರೇರಿತಗೊಂಡ ಇಂಡಿಯಾದ ಎಡಪಂಥೀಯ ಲೇಖಕರು ಒಂದುಗೂಡಿ 1936 ರಲ್ಲಿ ಅಂದರೆ 77 ವರ್ಷಗಳ ಹಿಂದೆ ಪ್ರಗತಿಪರ ಲೇಖಕರ ಒಕ್ಕೂಟ ಸ್ಥಾಪಿಸಿದರು. ಈ ಲೇಖಕರು ಮಹಾನ್ ಕಾದಂಬರಿಕಾರ ಮುನ್ಷಿ ಪ್ರೇಮಚಂದರಿಂದ ಸ್ಪೂರ್ತಿಯನ್ನು, ಬೆಂಬಲವನ್ನು ಪಡೆದಿದ್ದರು. ಈ ಪ್ರಗತಿಪರ ಲೇಖಕರ ಚಳುವಳಿಯ ಆಸ್ಥಿತ್ವವನ್ನು ಮೊದಲಿಗೆ ಘೋಷಿಸಿದವರು ಉರ್ದು ಲೇಖಕರಾದ ಅಹಮದ್ ಅಲಿ, ಮಾಮುದ್ ಜಫರ್ ಮತ್ತು ಸೈಯ್ಯದ್ ಸಾಜದ್ ಜಾಹಿರ್. ಇವರೊಂದಿಗೆ ಈ ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ munshi_premchandಪ್ರಮುಖ ಲೇಖಕರೆಂದರೆ ಸಾದತ್ ಹಸನ್ ಮಂಟೋ, ಅಲಿ ಜವಾದ್ ಜೈದಿ, ಫೈಜ್ ಅಹ್ಮದ್ ಫೈಜ್, ಭೀಷ್ಮ ಸಹಾನಿ, ಇಸ್ಮತ್ ಚುಗತಾಯಿ, ತನ್ವೀರ್ ಹಬೀಬ್, ಕೈಫಿ ಅಜ್ಮಿ, ಕ್ರಿಷ್ಣಚಂದರ್, ರಾಜೇಂದ್ರಸಿಂಗ್ ಬೇಡಿ, ಫಿರಕ್ ಗೋರಕ್‌ಪುರಿ, ಇದ್ರಿಸ್ ಇಜಾದ್, ಮುಲ್ಕರಾಜ್ ಆನಂದ್, ಕೆ.ಎ.ಅಬ್ಬಾಸ್, ಮುಂತಾದವರು. ಈ ಲೇಖಕರು ಆ ಕಾಲಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಜನಪ್ರಿಯ ಮಾದರಿ ರಂಜನೆ, ರಮ್ಯತೆಯನ್ನು ಕಟುವಾಗಿ ಟೀಕಿಸುತ್ತ ಭಾರತದ ಜನಸಾಮಾನ್ಯರ, ಅಲ್ಪಸಂಖ್ಯಾತರ ಬದುಕನ್ನು ಅದರ ವಾಸ್ತವ ಸ್ಥಿತಿಯಲ್ಲಿ ಎದುರಿಸಿ ಅದನ್ನೇ ತಮ್ಮ ಅನುಭವದ ಸರಕನ್ನಾಗಿಸಿ ಸಾಹಿತ್ಯವನ್ನು ಸೃಷ್ಟಿಸಲು, ಇಂಡಿಯಾದ ಸಾಹಿತ್ಯವನ್ನು ಸಾಂಪ್ರದಾಯಿಕ ಶಕ್ತಿಗಳಿಂದ, ಕೋಮುವಾದಿಗಳಿಂದ ರಕ್ಷಿಸಲು ಧೃಢ ಸಂಕಲ್ಪ ಮಾಡಿದರು.

ನಂತರ ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಕರ್ನಾಟಕದಲ್ಲಿ ದಲಿತ ಸಂಘಟನೆ, ಬರಹಗಾರರ ಒಕ್ಕೂಟ, ಜಾತಿವಿನಾಶ ಸಮ್ಮೇಳನ, ಬಂಡಾಯ ಚಳುವಳಿಗಳ ಮೂಲಕವೂ ಇಲ್ಲಿನ ಪ್ರಗತಿಪರ ಲೇಖಕರು ಸಾಹಿತ್ಯವನ್ನು ಜಾತಿವಾದಿ ಸಂಕೋಲೆಗಳಿಂದ ಬಿಡುಗಡೆಗೊಳಿಸಿ ವಾಸ್ತವವಾದಿ ಮಾರ್ಗಕ್ಕೆ ಹೊರಳಬೇಕಾಗಿದೆ, ಹೊಸ ದಿಗಂತದೆಡೆಗೆ ಚಲಿಸಬೇಕಾಗಿದೆ ಎಂದು ಘೋಷಿಸಿದರು. ಇವೆಲ್ಲವೂ (ದಲಿತ ಸಂಘಟನೆ ಹೊರತುಪಡಿಸಿ) ಒಟ್ಟಾರೆಯಾಗಿ ಮತ್ತು ಸ್ಥೂಲವಾಗಿ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಧ್ಯೇಯವನ್ನಾಗಿಸಿಕೊಂಡು ಈ ಅಸ್ಮಿತೆಯನ್ನು ನಿರ್ದಿಷ್ಟವಾಗಿ ಸಾಹಿತ್ಯದ ಮೂಲಕವೇ ಬದಲಾವಣೆಯ ದಾರಿಗಾಗಿ ಬರೆಯತೊಡಗಿದರು. ಈ ಚಳುವಳಿಗಳೊಂದಿಗೆ ಗುರುತಿಸಿಕೊಂಡ ಮತ್ತು ಅದರಿಂದ ಹೊರಬಂದ ಕನ್ನಡದ ಪ್ರಮುಖ ಲೇಖಕರು ಸಾಹಿತ್ಯದೊಂದಿಗಿನ ಸಂಬಂಧವನ್ನು ಬಿಡಿಸಿಕೊಳ್ಳದೆ ಲೋಹಿಯಾ ಮತ್ತು ಮಾರ್ಕ್ಸ ಚಿಂತನೆಗಳ ಗರ್ಭದೊಂದಿಗೆ ಅನುಸಂಧಾನ ನಡೆಸುತ್ತಾ ಸಾಹಿತ್ಯಕ ನೆಲೆಯಿಂದಲೇ ಜಾತಿವಾದದ ವಿರುದ್ಧ, ಕೋಮುವಾದದ ವಿರುದ್ಧ ಮಾತನಾಡತೊಡಗಿದರು.ಈ ಮೂಲಕ ಮೂರು ತಲೆಮಾರುಗಳನ್ನು ರೂಪಿಸಿದರು. ಈ ಲೇಖಕರು ಕನ್ನಡದ ಮನಸ್ಸಿಗೆ ನೀಡಿದ ಜಾತ್ಯಾತೀತ ಧೋರಣೆ, ಸೆಕ್ಯುಲರ್ ಚಿಂತನೆಗಳು ಅನನ್ಯವಾದದ್ದು. ಮರೆಯಲಿಕ್ಕೆ ಸಾಧ್ಯವೇ ಇಲ್ಲ.

ಆದರೆ ಇಡೀ ಎರಡುವರೆ ದಶಕಗಳ ಸಾಂಸ್ಕೃತಿಕ ಚಳುವಳಿಗಳ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಚಿಂತನೆ ಮತ್ತು ಅವರ ಸಮಕಾಲೀನ ಸಾಮಾಜಿಕ ಮತ್ತು ರಾಜಕಾರಣದ ಮಾದರಿಗಳು ಹೆಚ್ಚೂ ಕಡಿಮೆ ಗೈರುಹಾಜರಾಗಿತ್ತು. ಬಾಬಾ ಸಾಹೇಬರು ಕೇವಲ ದಲಿತ ಸಂಘಟನೆಗಳಿಗಷ್ಟೇ ಸೀಮಿತಗೊಂಡು ನಮ್ಮ ಲೋಹಿಯವಾದಿ, ಮಾರ್ಕ್ಸವಾದಿ ಸಾಹಿತಿಗಳ ಪ್ರಜ್ಞೆಯೊಳಗೆ ಒಂದು ಸಮಗ್ರ ಧಾರೆಯಾಗಿ ಇಳಿಯಲಿಲ್ಲ. ದಲಿತ ಸಂಘಟನೆಯ ಬಹುಪಾಲು ನಾಯಕರು, ಕಾರ್ಯಕರ್ತರು, ಲೇಖಕರು ಗಾಂಧೀಜಿಯನ್ನು ಅತ್ಯಂತ ಮುಗ್ಧವಾಗಿ, ಕೆಲವೊಮ್ಮೆ ಸಕಾರಣವಾಗಿ ಅನೇಕ ಬಾರಿ ಕುರುಡಾಗಿ ಟೀಕಿಸುತ್ತಿದ್ದಾಗ ನಮ್ಮ ಪ್ರೀತಿಯ ಬಹುಪಾಲು ದಲಿತೇತರ ಲೇಖಕರು ಸ್ವತಃ ತಾವು ಅಂಬೇಡ್ಕರ್‌ವಾದಿಗಳಾಗಿ ಗಾಂಧೀಜಿಯೊಂದಿಗೆ ಅನುಸಂಧಾನ ನಡೆಸುತ್ತ ದಲಿತ ಚಳುವಳಿಗಳಿಗೆ ಮಾರ್ಗದರ್ಶನ ಮತ್ತು ನಿರ್ದಿಷ್ಟ ಮಾದರಿಗಳನ್ನು ಕಟ್ಟಿಕೊಡಲು ವಿಫಲರಾದರೆಂದೇ ಹೇಳಬೇಕು. ಸ್ವತಂತ್ರ್ಯ ಭಾರತದಲ್ಲಿ ರಾಜಕೀಯವಾಗಿ, ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಪ್ರಶ್ನಾತೀತ ನಾಯಕರಾದ ಅಂಬೇಡ್ಕರ್ ಸೋಲುತ್ತಾ ಹೋದರೆ, ಹರಿಜನ ನಾಯಕರಾಗಿ ಬಾಬು ಜಗಜೀವನ ರಾಂ ಗೆಲ್ಲುತ್ತಾ ಹೋದರು. ಈ ಮಾದರಿಯ ವೈರುಧ್ಯಗಳನ್ನು, ಔದಾರ್ಯದ ಹೆಸರಿನಲ್ಲಿ ಮೇಲುಜಾತಿಗಳ ಅಮಾನವೀಯತೆಯನ್ನು ನಮ್ಮ ಲೇಖಕರು ಅಂಬೇಡ್ಕರ್‌ವಾದಿಗಳಾಗಿ ಗ್ರಹಿಸಿದ್ದು ಕಡಿಮೆ. ಆದರೆ ಆಗಲೇ ಡಿ.ಆರ್.ನಾಗರಾಜ್ ರಂತಹವರು ಭಿನ್ನವಾಗಿ ಚಿಂತಿಸತೊಡಗಿದ್ದು.

ಅಷ್ಟೇಕೆ ಮುಸ್ಲಿಂ ಸಮುದಾಯದ Ghetto ಗಳನ್ನು ಸಹ ಸೆಕ್ಯುಲರ್‌ಗಳಾದ ನಾವು ಇಂದಿಗೂ ಅರಿತಿಲ್ಲ. ಅವರನ್ನು ಮಾನಸಿಕವಾಗಿ ಒಳಗೊಂಡೇ ಇಲ್ಲ. ಪ್ರತಿ ಸಂದರ್ಭದಲ್ಲಿಯೂ ಮೇಲ್ಮಟ್ಟದಲ್ಲಿ ವರ್ತಿಸುತ್ತಾ, ಸಂಘ ಪರಿವಾರದ ಮತೀಯವಾದದ ವಿರುದ್ಧದ ಹೋರಾಟದಲ್ಲಿ ನಮ್ಮ ಈ ಅತಿರೇಕ ಎಲ್ಲಿಗೆ ಮುಟ್ಟುತ್ತದೆಯೆಂದರೆ ಮೂಲಭೂತವಾದಿ ಪಾಪ್ಯುಲರ್ ಪ್ರಂಟ್‌ಗಳು, ಜಮಾತೆಗಳೊಂದಿಗೆ ವೇದಿಕೆ ಹಂಚಿಕೊಳ್ಳುವಷ್ಟರ ಮಟ್ಟಿಗೆ! ಆದರೆ ದುರಂತವೆಂದರೆ ಮುಸ್ಲಿಂರ Ghetto ಗಳು, ಅಲ್ಲಿನ ಮೌಢ್ಯತೆ, ಕ್ರೌರ್ಯ ನಮಗೆ ಅನುಭವವೇ ಇಲ್ಲ. ಏಕೆಂದರೆ ಸೆಕ್ಯುಲರ್ ಇಂಡಿಯನ್‌ಗಳಾದ ನಾವೆಲ್ಲ ಆ Ghetto ಗಳಿಗೆ ಇಂದಿಗೂ ಕಾಲಿಟ್ಟಿಲ್ಲ. ಅಲ್ಲಿನ ಮೌಢ್ಯತೆ, ಅರಾಜಕತೆ ನಾಶವಾಗದೆ ವಿಮೋಚನೆ ಸಾಧ್ಯವೇ ಇಲ್ಲ. ಆದರೆ ದಿನನಿತ್ಯದ ತಲ್ಲಣಗಳಲ್ಲಿ, ಅತಂತ್ರದ ಸ್ಥಿತಿಯಲ್ಲಿ ಬದುಕುತ್ತಿರುವ ಮೊಹಲ್ಲದ ಬಡವರನ್ನು ನಮ್ಮೆಲ್ಲ ಬೌದ್ಧಿಕ ಸೆಮಿನಾರ್‌ಗಳಿಗೆ, ಅಕಡೆಮಿಕ್ ಕಮ್ಮಟಗಳಿಗೆ ಒಳಗೊಳಿಸಿಕೊಳ್ಳುತ್ತಲೇ ಇಲ್ಲ ! ನಾವೊಂದು ತೀರ ! ಅವರೊಂದು ತೀರ !

ಅಷ್ಟೇಕೆ ನಮ್ಮ ಪ್ರೀತಿಯ ಬಸವಲಿಂಗಯ್ಯನವರು ನಿರ್ದೇಶಿಸಿದ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ಮುಸ್ಲಿಂರನ್ನು ಚಿತ್ರಿಸಿದ್ದು ತೀರ ಒರಟಾಗಿ!! malegalalli-3ನೋಡಿದಾಗ ಮನಸ್ಸು ಕುಗ್ಗುತ್ತದೆ. ಕುವೆಂಪು ಕಾದಂಬರಿಗೆ ಅಪಚಾರವಾಗುವಂತಿದೆ. ಕಾದಂಬರಿಯಲ್ಲಿರುವ 20 ನೇ ಶತಮಾನದ ಆರಂಭದ ಘಟ್ಟದಲ್ಲಿನ ಸನ್ನಿವೇಶಗಳನ್ನು ವಿವರಿಸುವಾಗ ಮುಸ್ಲಿಂ ಯುವಕರನ್ನು ಜಮೀನ್ದಾರರು ವಸೂಲಿ ಸಾಬರಾಗಿ ಬಳಸಿಕೊಂಡು ಇವರ ಮೂಲಕವೇ ದೈಹಿಕವಾಗಿ ದಲಿತರ ಶೋಷಣೆ ನಡೆಸುತ್ತಿದ್ದರು ಎಂದು ಕುವೆಂಪು ಅಲ್ಲಿ ಸೂಕ್ಷ್ಮವಾಗಿ ವಿವರಿಸಿದ್ದರು. ಇದನ್ನು 110 ವರ್ಷಗಳ ನಂತರ ಕಾಮಾಲೆ ಕಣ್ಣಿನ ಮಧ್ಯಮ ವರ್ಗಗಳ ಮುಂದೆ ನಾಟಕದಲ್ಲಿ ತೋರಿಸುವಾಗ ಈ ವಸೂಲಿ ಸಾಬರ ಚಿತ್ರಣ ಪರೋಕ್ಷವಾಗಿರಬೇಕಾಗಿತ್ತು. ಕಡೆಗೆ ಮುಸ್ಲಿಂರು ಮತ್ತು ದಲಿತರು ಹೇಗೆ ಜಮೀನ್ದಾರರ ಕೈಯಲ್ಲಿ ತಮಗರಿವಿಲ್ಲದಂತೆಯೇ ಪರಸ್ಪರ ವಿರೋಧಿಗಳಾಗಿ ದುರ್ಬಳಕೆಗೆ ಒಳಗಾಗುತ್ತಾರೆ ಎಂಬುದು ಪ್ರತ್ಯಕ್ಷವಾಗಿರಬೇಕಿತ್ತು. ಬೇರೆ ಸಂದರ್ಭಗಳಲ್ಲಿ ಯಾವದೇ ಸಮುದಾಯಗಳ ಆಶಯಗಳಿಗೆ ಭಂಗ ಬರದಂತೆ ಪರೋಕ್ಷವಾಗಿ ತೋರಿಸಲಾಗಯುತ್ತದೆ, ಆದರೆ ಮುಸ್ಲಿಂ ಸಮುದಾಯದ ವಿಷಯದಲ್ಲಿ ಎಲ್ಲವೂ ನೇರ! ದಿಟ್ಟ! ನಿರಂತರ! ಆದರೆ ಬೆಂಗಳೂರಿನಲ್ಲಿ ಈ ನಾಟಕ ಹಿಟ್ ಆಗಲಿಕ್ಕೆ ಕಾರಣರಾದ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಹೆಸರನ್ನು ಕೇಳಿರದ ಇಲ್ಲಿನ ಮಧ್ಯಮವರ್ಗ ನಾಟಕದಲ್ಲಿ ಮುಸ್ಲಿಂ ಪಾತ್ರಧಾರಿಗಳು ತಳವರ್ಗದವರ ಮೇಲೆ ದೈಹಿಕವಾಗಿ ನಡೆಸುವ ಹಲ್ಲೆಗಳ ದೃಶ್ಯಗಳನ್ನು ಚಪ್ಪಾಳೆಗಳ ಮೂಲಕ ಸಂಪೂರ್ಣವಾಗಿ ಅನಂದಿಸುತ್ತಿದ್ದರು. ನೋಡ್ರೀ ಇವ್ರು ಆಗಲೂ ಹಂಗೇನೇ, ಇಗ್ಲೂ ಹಂಗೇನೇ ಎಂದು ಮಾತನಾಡಿಕೊಳ್ಳುತ್ತಿದ್ದರು! ಈ ಮಟ್ಟದಲ್ಲಿ ಅದು ಹೇಗೆ ವಿಮೋಚನೆ ಸಾಧ್ಯ?

ಮತ್ತೊಂದು ಉದಾಹರಣೆ ಕೊಡುವುದಾದರೆ ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶದ ಕುರಿತಾದ ಇಂದಿನ ವಿವಾದದ ಕಾಲದಲ್ಲಿ, ಚರ್ಚೆಯಲ್ಲಿ ಪಾಲ್ಗೊಂಡು ಮಸೀದಿ ಪ್ರವೇಶಿಸುವುದರ ಮೂಲಕ, ಅಲ್ಲಿ ನಮಾಜು ಮಾಡುವುದರ ಮೂಲಕ ಮುಸ್ಲಿಂ ಮಹಿಳೆಯರು ಆ ಧರ್ಮದ ಮೂಲಭೂತವಾದಿಗಳ ಹಿಡಿತವನ್ನು Muslim-women-mosqueಸಾರ್ವಜನಿಕವಾಗಿಯೇ ಒಡೆದು ಹಾಕುತ್ತಾ ಮಾನಸಿಕವಾಗಿ ವಿಜಯ ಸಾಧಿಸುವ ಈ ಐತಿಹಾಸಿಕ ಸಂದರ್ಭವನ್ನು ನಾವೆಲ್ಲ ಸಮರ್ಥಿಸಿ ಅವರನ್ನು ಬೆಂಬಲಿಸಬೇಕಾದಂತಹ ಸಮಯದಲ್ಲಿ ಇದರ ಬದಲಾಗಿ ಇಂದು ಮುಸ್ಲಿಂ ಮಹಿಳೆಯರಿಗೆ ಬೇಕಾಗಿರುವುದು ಶಿಕ್ಷಣ, ಮಸೀದಿ ಪ್ರವೇಶವಲ್ಲ ಎಂದು ವಿತಂಡವಾದದ ತರ್ಕ ಹೂಡುವುದು ಮತ್ತೇನಲ್ಲದೆ ಮುಸ್ಲಿಂಮೇತರರಾದ ನಮ್ಮೆಲ್ಲರ ಸೀಮಿತ ಗ್ರಹಿಕೆಗಳನ್ನು ಬಹಿರಂಗಗೊಳಿಸುತ್ತದೆ. ಶಿಕ್ಷಣ ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕಾಗಿರುವುದರಿಂದ ಅದಕ್ಕಾಗಿ ಸರ್ಕಾರವನ್ನು ನಾವು ಒತ್ತಾಯಿಸಬಹುದು.ಇಲ್ಲಿ ಪ್ರಭುತ್ವಕ್ಕೆ ನುಣಿಚಿಕೊಳ್ಳುವ ಅವಕಾಶವೇ ಇಲ್ಲ. ಆದರೆ ಮಹಿಳೆಯರ ಘನತೆಯ ವಿಷಯದಲ್ಲಿ ಪ್ರಭುತ್ವವು ಸದಾಕಾಲ ಮರೆಮೋಸದ, ಬೆನ್ನಿಗೆ ಚೂರಿ ಹಾಕುವ ಕಾಯಕದಲ್ಲಿರುತ್ತದೆ. ನಾವೆಲ್ಲ ಮುಸ್ಲಿಂರ ಈ Ghetto ಗಳೊಳಗೆ, ದಲಿತ ಸಮಾಜದ ಕೇರಿಗಳೊಳಗೆ ಒಳಗೊಳ್ಳುವಿಕೆಯ ಮೂಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರವೇಶಿಸದ ಹೊರತು, ಅವರ ಅವಮಾನ ಮತ್ತು ನೋವುಗಳು ನಮ್ಮೊಳಗೆ ಅಂತರ್ಗತವಾಗದೇ ಹೋದಲ್ಲಿ ಪ್ರಗತಿಪರರೆನಿಸಿಕೊಂಡ ನಮಗೇ ಈ ಜಾತೀಯತೆಯ, ಕೋಮುವಾದದ ಸರಪಣಿಗಳಿಂದ ಮುಕ್ತಿಯಿಲ್ಲ. ಕೊನೆಗೆ ನಮ್ಮ ಪ್ರಗತಿಪರತೆಯ ಸ್ವರೂಪ ಕೇವಲ ಅನುಕಂಪದ ಮಟ್ಟದಲ್ಲಿ ಉಳಿದು ಅದೆಂದೂ ಧಗಧಗಿಸುವ ಒಡಲೊಳಗಿನ ದಾವಾಗ್ನಿಯಾಗದೇ ಅಟಕ್ಕುಂಟು ಲೆಕ್ಕಕ್ಕಿಲ್ಲದ ಮೃದುವಾದಿ ಹುಸಿ ತತ್ವಗಳಾಗಿ ಉಳಿದುಬಿಡುತ್ತದೆ.

ಸಾಂಸ್ಕೃತಿಕ ಹೆಜಮನಿಯನ್ನು ವಿಶ್ವವಿದ್ಯಾಲಯಗಳ ಬುದ್ಧಿಜೀವಿಗಳು, ಇಂಟರ್ನೆಟ್ ಪಂಡಿತರು ರೂಪಿಸುವುದರ ಬದಲಾಗಿ ಈ ಮಣ್ಣಿನ ಜನ ಸಾಮಾನ್ಯರು ತಮ್ಮ ಅನುಭವದ ನೆಲೆಯಿಂದ, ಜಾತ್ರೆಗಳಿಂದ, ಚಿತ್ರಕಲೆಗಳಿಂದ, ಶಿಲ್ಪಕಲೆಗಳಿಂದ, ಹಾಡು, ನೃತ್ಯ, ವೈವಿಧ್ಯಮಯವಾದ ಅವೈದಿಕ ನೆಲಸಂಸ್ಕೃತಿಯ ಆಚರಣೆಗಳಿಂದ ಅದನ್ನು ಈ ದೇಶದ ವ್ಯವಸ್ಥೆಯೊಳಗೆ ಅಂತರ್ಗತವಾಗುವಂತೆ ಕಟ್ಟಿಕೊಡಬೇಕಾಗಿದೆ. ಅಂದರೆ ಈ ನೆಲದೊಳಗೆ ಬೇರು ಬಿಡುತ್ತಲೇ ಭವಿಷ್ಯವನ್ನು ರೂಪಿಸುವುದು ನಿರಂತರ ಪ್ರಕ್ರಿಯೆಯಾಗಬೇಕಿದೆ. ಜಾಗತೀಕರಣದ ಕಲೋನಿಯಲ್ ವ್ಯವಸ್ಥೆ ಹುಟ್ಟು ಹಾಕುವ ಉಪಭೋಗ ಸರಣಿಯನ್ನು ಮುರಿಯಲು ವಿವಿಧ ಪಂಗಡಗಳು, ವಿವಿಧ ಧರ್ಮಗಳು, ವಿವಿಧ ಜಾತಿಗಳು ತಮಗರಿವಿಲ್ಲದಂತೆಯೇ ಪರಸ್ಪರ ಒಂದುಗೂಡಲು ಸಾಂಸ್ಕೃತಿಕ ಹೆಜಮನಿಯನ್ನು ಸಶಕ್ತವಾಗಿ ಬಳಕೆಗೆ ತರಬೇಕಾಗಿದೆ. ಇದಕ್ಕಾಗಿಯೇ ನಾವೆಲ್ಲ ಸಾಮಾಜಿಕ,ಆರ್ಥಿಕ ಮತ್ತು ಮಾನಸಿಕ ನೆಲೆಗಳನ್ನು ಪ್ರಮುಖವಾಗಿ ಪರಿಗಣಿಸಿ ಸಾಂಸ್ಕೃತಿಕ ಪ್ರಣಾಳಿಕೆಯನ್ನು ರೂಪಿಸಬೇಕು.

ಒಂದು ಉದಾಹರಣೆಯ ಮೂಲಕ ವಿವರಿಸಬಹುದಾದರೆ 2002 ರ ಭೂಪಾಲ್ ಘೋಷಣೆಯನ್ನು ಅವಲೋಕಿಸಿ(’Transforming India Through a Dalit Paradigm’). ಆಗ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ದಿಗ್ವಿಜಯ್ ಸಿಂಗ್ dalit-chamber-commerceಅವರು ಚಂದ್ರಭಾನು ಪ್ರಸಾದ್ ಹಾಗೂ ಇತರ ದಲಿತ ಚಿಂತಕರೊಂದಿಗೆ ನಡೆಸಿದ ಚಿಂತನೆಗಳ ಫಲವಾಗಿ ಈ ಭೂಪಾಲ್ ಘೋಷಣೆ ಜಾರಿಗೆ ಬಂತು. ಅತ್ಯಂತ ಸರಳ ರೂಪದಲ್ಲಿ ಹೇಳಬೇಕೆಂದರೆ ಈ ಭೂಪಾಲ್ ಘೋಷಣೆಯಲ್ಲಿರುವ ಹತ್ತಾರು ಅಂಶಗಳಲ್ಲಿ ಒಂದು ಪ್ರಮುಖ ಘೋಷಣೆಯ ಪ್ರಕಾರ ಸರ್ಕಾರವು ದಲಿತರಿಂದ ಶೇಕಡ 30 ರಷ್ಟು ಸರಕನ್ನು ಕಡ್ಡಾಯವಾಗಿ ಖರೀದಿಸಬೇಕು. ದಲಿತರಿಂದ ಶೇಕಡಾ 30ರಷ್ಟು ಖರೀದಿಸಬೇಕೆಂದರೆ ದಲಿತರು ಸ್ವತಃ ಉತ್ಪಾದಕರಾಗಬೇಕು. ಇದಕ್ಕಾಗಿ ಜಾಗತೀಕರಣದ ಸವಲತ್ತುಗಳು ದಲಿತರಿಗೂ ದಕ್ಕಬೇಕು. ಹೀಗೆಯೇ ಮುಂದುವರೆಯುವ ಈ ವ್ಯಾಪಾರದ ಸರಣಿ ದಲಿತರು ಖಾಸಗಿ ಉದ್ಯಮಪತಿಗಳಾಗುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ. ತಮ್ಮ ಉತ್ಪಾದನೆಯಲ್ಲಿ ಶೇಕಡ 30 ರಷ್ಟು ಸರಕಿಗೆ ಸರ್ಕಾರವೇ ಗ್ರಾಹಕನಾಗಿರುವುದರಿಂದ ನಷ್ಟದ ಅಂಶ ಕಡಿಮೆ ಇರುತ್ತದೆ. ಆಗ ಉಳಿದ ಶೇಕಡ 70ರಷ್ಟನ್ನು ಖಾಸಗೀ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾಗುತ್ತದೆ. ಆಗ ಕೊಡುಕೊಳ್ಳುವಿಕೆಯ ವ್ಯಾಪಾರದ ವಹಿವಾಟು ಶುರುವಾಗುತ್ತದೆ. ಈ ಮೂಲಕ ಅಸ್ಪೃಶ್ಯತೆಯ ಕರಾಳತೆ ನಾಶವಾಗದಿದ್ದರೂ ಅದರ ವ್ಯಾಪಕತೆ ಮತ್ತು ಪರಿಣಾಮಗಳು ತೆಳುವಾಗುವುದಂತೂ ಖಚಿತ. ಇದನ್ನೇ ಚಂದ್ರಬಾನು ಪ್ರಸಾದ್ ಅವರು ಕೆಲಸ ಕೇಳುವವರಾಗಬೇಡಿ, ಕೆಲಸ ಕೊಡುವವರಾಗಿ ಎಂದು ಹೇಳಿದ್ದು. ಅವರು ಇತರ ದಲಿತ ಉದ್ದಿಮೆದಾರರೊಂದಿಗೆ ಸ್ಥಾಪಿಸಿದ ಡಿಕ್ಕಿ ( ದಲಿತ ಛೇಂಬರ್ ಆಫ್ ಕಾಮರ್ಸ ಆಫ್ ಇಂಡಿಯಾ) ಇಂದು ಭಾರತ ಸರ್ಕಾರಕ್ಕೆ ಕೋಟಿಯಷ್ಟು ಲೆಕ್ಕದಲ್ಲಿ ತೆರಿಗೆ ನೀಡುತ್ತಿದೆ. ಒಂದು ಕ್ಷಣ ಯೋಚಿಸಿ ಪ್ರತಿಯೊಂದು ಕೆಲಸಕ್ಕಾಗಿ ಸರ್ಕಾರಕ್ಕೆ ಅರ್ಜಿ ಗುಜರಾಯಿಸುವುದರ ಬದಲು ಇದನ್ನು ಇತರೇ ಹಿಂದುಳಿದ ಜಾತಿಗಳು ಮತ್ತು ಮುಸ್ಲಿಂ ವರ್ಗಗಳಿಗೂ ಅನ್ವಯಿಸಿದರೆ ಈ ವರ್ಗಗಳ ಕುಶಲತೆಯನ್ನಾಧರಿಸಿ ಇಡೀ ರಾಜ್ಯದಲ್ಲಿ ವಿವಿಧ ಬಗೆಯ ಸ್ವಯಂ ಉದ್ಯೋಗಗಳನ್ನು ಹುಟ್ಟು ಹಾಕಬಹುದು. ಇದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆಚರಣೆಯಲ್ಲಿ ಸರಳವೇನಿಲ್ಲ. ಆದರೆ ಇದು ಅಸಾಧ್ಯವಂತೂ ಅಲ್ಲವೇ ಅಲ್ಲ. ಆದರೆ ನಮ್ಮ ಮನೋಭೂಮಿಕೆಯಲ್ಲಿಯೇ ಅತ್ಯಂತ ದೊಡ್ಡ ಬಿಕ್ಕಟ್ಟಿದೆ. ನಾಗರೀಕತೆಯ ವಿಶ್ಲೇಷಣೆ ಮಾಡುತ್ತ ಈ ಅಕಡೆಮಿಕ್ ಬುದ್ಧಿಜೀವಿಗಳು, ಸಮಾಜ ಶಾಸ್ತ್ರಜ್ಞರು, ಫ್ರೊಫೆಸರ್‌ಗಳು ಯಾವುದೇ ಬಗೆಯ ಖಾಸಗೀ ವೃತ್ತಿಯನ್ನು, ಖಾಸಗೀ ವ್ಯಾಪಾರವನ್ನು ಬಂಡವಾಳಶಾಹಿಗಳ ಮಟ್ಟಕ್ಕೆ ಇಳಿಸಿಬಿಡುತ್ತಾರೆ. ಮುಂದುವರೆದು ಈ ವಿಶ್ವವಿದ್ಯಾಲಯದ ಜನ ಇದರಿಂದ ದಲಿತರು, ಹಿಂದುಳಿದ ವರ್ಗಗಳು ಈ ಜಾಗತೀಕರಣದ ಉಪಭೋಗ ಸಂಸ್ಕೃತಿಗೆ ಶರಣಾಗುತ್ತಾರೆ, ಅಂದರೆ ಇವರು ಮುಂದೆ ನವ ಶೋಷಕರಾಗುತ್ತಾರೆ ಎಂದು ಹುಯಿಲೆಬ್ಬಿಸುತ್ತಾರೆ.

ಹಾಗಿದ್ದರೆ ಬಾಬಾ ಸಾಹೇಬರು ಹೇಳಿದ ಚಲನಶೀಲತೆಯ ಅರ್ಥವೇನು? ರಾಜ್ಯವೊಂದರಲ್ಲಿ ನಾಗರೀಕತೆ ನೆಲೆಗೊಂಡಿದೆ dicciಎಂದರೆ ಆ ಸಮಾಜದ ಎಲ್ಲ ಜಾತಿಗಳೂ, ಎಲ್ಲ ವರ್ಗಗಳು ಮೂಲಭೂತ ಅವಕಾಶಗಳನ್ನು ಪಡೆದುಕೊಂಡಿವೆ, ಅಂದರೆ ಸಮಾನವಾಗಿ ಅಲ್ಲದಿದ್ದರೂ ವಂಚಿತರಂತೂ ಅಲ್ಲ ಎಂದರರ್ಥವಲ್ಲವೇ? ಹಾಗಿದ್ದಾಗ ಬಂಡವಾಳಶಾಹಿಯ ಪರಿಕಲ್ಪನೆಯನ್ನು, ಅದರ ನುಡಿಕಟ್ಟನ್ನು ನಾವು ಇನ್ನಾದರೂ ಬದಲಿಸಕೊಳ್ಳಬೇಕಾಗಿದೆ. ತಳವರ್ಗಗಳ ಆರ್ಥಿಕ ಪ್ರಗತಿಯೆಂದರೆ ಇದು ಅವರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಬೆಳೆಸುತ್ತದೆಂದು ಮಾತನಾಡುವುದೇ ಅಮಾನವೀಯತೆ. ಏಕೆಂದರೆ ಇಂದಿಗೂ ಪ್ರಗತಿಗೂ, ಅಭಿವೃದ್ಧಿಗೂ ನಡುವೆ ಇರುವ ಅಂತರಗಳ ವಿಶ್ಲೇಷಣೆಯೇ ತೀರಾ ಗೋಜಲಾಗಿದೆ. ಸಂಕೀರ್ಣವಾಗಿದೆ. ಇಂದು ತಂತ್ರಜ್ಞಾನವನ್ನು, ಕೌಶಲ್ಯವನ್ನು ಕೇವಲ ಓದಿನ ಮೂಲಕ ಗಳಿಸಿ, ಹೊರಗಿನಿಂದ ಎರವಲು ಪಡೆದ ಜ್ಞಾನದಿಂದ ಗಳಿಸಿ ಅದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಉದ್ದಿಮೆದಾರರಾಗುವವರಲ್ಲಿ ಶೋಷಣೆಯ ಗುಣಗಳು ಅಂತರ್ಗತವಾಗಿರಲು ಸಾಧ್ಯತೆಗಳಿವೆ. ಆದರೆ ಸ್ವತಃ ಕುಶಲಕರ್ಮಿಗಳಾದ ತಳಸಮುದಾಯಗಳು, ತಮ್ಮ ಈ ಕೌಶಲ್ಯವನ್ನು ಪುಸ್ತಕದ ಜ್ಞಾನದ ಮೂಲಕವಲ್ಲದೆ ತಮ್ಮ ವೈಯುಕ್ತಿಕ ಅನುಭವದ ಮೂಲಕ ಗಳಿಸಿಕೊಂಡವರಾದ್ದರಿಂದ ಅವರಿಗೆ ಅದರ ಶ್ರಮಸಂಸ್ಕೃತಿಯ ಅನೇಕ ಮಗ್ಗಲುಗಳ ಸಂಪೂರ್ಣ ಪರಿಚಯವಿರುತ್ತದೆ. ಈ ಶ್ರಮಿಕ ವರ್ಗದ ಹಿನ್ನಲೆಯಿಂದ ಬಂದವರು ಸ್ವತಃ ಉದ್ದಿಮೆದಾರರಾದಾಗ ಅಲ್ಲಿ ಮಾನವೀಯತೆಯ ಜೀವಸೆಲೆಗಳು, ಸಹಭಾಗಿತ್ವ, ಬಹುರೂಪಿ ಸಂಸ್ಕೃತಿ, ಒಳಗೊಳ್ಳುವಿಕೆಯ ನ್ಯಾಯವಂತಿಕೆ ಹುಟ್ಟಿಕೊಳ್ಳುತ್ತವೆಯೇ ಹೊರತಾಗಿ ನವಶೋಷಕರಲ್ಲ. ಬದಲಾಗಿ ತಂತ್ರಜ್ಞಾನದ ಪರಿಕಲ್ಪನೆಯೇ ನಿಧಾನಗತಿಯಲ್ಲಿ ನಶಿಸುತ್ತ ನೆಲಸಂಸ್ಕೃತಿಯ ಬೀಜಗಳು ಮೊಳಕೆಯೊಡಲ್ಪಡುತ್ತವೆ. ವೈಯುಕ್ತಿಕ ಹಿತಾಸಕ್ತಿ ಅಳಿಸಿಹೋಗಿ, ಸಮುದಾಯದ ಹಿತಾಸಕ್ತಿಯ ಒಂದು ಚಳುವಳಿಯೇ ಶುರುವಾಗುತ್ತದೆ. ಪರಕೀಯತೆಯ ಭಾವ ಕಣ್ಮರೆಯಾಗುತ್ತದೆ. ಇದನ್ನು ನಾವು ಚಾಲ್ತಿಯಲ್ಲಿರುವ ಕಾರ್ಮಿಕ ಮತ್ತು ಮಾಲೀಕನ ಚೌಕಟ್ಟಿನಿಂದಾಚೆಗೆ, ಮತ್ತೊಂದು ಅನುಭಾವದಲ್ಲಿ ನೋಡಿದಾಗಲೇ ನಮಗೆ ಅರಿವಾಗುವುದು. ಏಕೆಂದರೆ ಮರಳಿ ನಾವು ಅತ್ಯಂತ ಮೌಢ್ಯದಿಂದ ಬೂರ್ಜ್ಞಾ ನುಡಿಕಟ್ಟನ್ನು ತರ್ಕಹೀನವಾಗಿ ಬಳಸಲು ಶುರುಮಾಡಿದರೆ ಶಿವಾಯನಮಃ!

ಬಿಸಿಯೂಟ ನಿರ್ವಹಣೆ ಖಾಸಗಿಯವರ ಪಾಲಾಗದಿರಲಿ


– ಅನಂತನಾಯ್ಕ ಎನ್.


 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದ ಘೋಷಣೆ ಯಾವುದೇ ಮಗುವು ಆಹಾರದಿಂದ ವಂಚಿತರಾಗಬಾರದು. ಹಸಿವು, ಬಡತನ, ಅಪೌಷ್ಟಿಕತೆ ಹಾಗೂ ತಾರತಮ್ಯಗಳು ಬದುಕುವ ಹಕ್ಕಿನಿಂದ ವಂಚಿಸಬಾರದು ಎಂದು ಹೇಳಿದೆ. ಹಸಿವು, ಬಡತನ ಹಾಗೂ ಅಪೌಷ್ಟಿಕತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದನ್ನು ಗಮನಿಸಿ ಶಾಲೆಗಳಲ್ಲಿಯೇ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟಗಳ ಫಲವಾಗಿ ಬಿಸಿಯೂಟದ ಯೋಜನೆ ಜಾರಿಯಾಗಿದ್ದು ಜನ ಚಳವಳಿಗಳಿಗೆ ದೊರೆತ ಜಯ.

ಕಾರ್ಪೋರೇಟ್ ಕಂಪೆನಿಗಳ ಪರ ಸರ್ಕಾರದ ವಕಾಲತ್ತು:
ಜುಲೈ 23 ರಂದು ವಿಧಾನಪರಿಷತ್ತಿನ ಅಧಿವೇಶನದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, “ಬಿಸಿಯೂಟದ ನಿರ್ವಹಣೆಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ವಹಿಸಲಾಗುವುದು. ನಾನೇ ಖುದ್ದಾಗಿ ಕಂಪೆನಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸುತ್ತೇನೆ” ಎಂದು ಹೇಳಿದ್ದಾರೆ. mid-day_mealsಈ ಹೇಳಿಕೆ ಸರ್ಕಾರದ ಹಿತಾಸಕ್ತಿ ಯಾರ ಪರ ಎಂಬುದನ್ನು ಸೂಚಿಸುತ್ತದೆ. ಇವರು ಜನತೆಯ ಪ್ರತಿನಿಧಿಗಳೋ ಅಥವಾ ಖಾಸಗೀ ಕಂಪೆನಿಗಳ ಏಜೆಂಟರೋ? ಎಂಬ ಪ್ರಶ್ನೆ ಏಳುತ್ತದೆ. ಸಾರ್ವಜನಿಕ ವ್ಯವಸ್ಥೆಯನ್ನು ನಾಶಗೊಳಿಸಿ ಖಾಸಗಿ ಅಧಿಪತ್ಯ ಸ್ಥಾಪಿಸಲು ಹೊರಟಿರುವ ಈ ಹೇಳಿಕೆಯ ಹಿಂದೆ ಶಿಕ್ಷಣದ ಹಕ್ಕು, ಆಹಾರದ ಹಕ್ಕನ್ನು ನಿರಾಕರಿಸುವುದಲ್ಲದೇ ಲಕ್ಷಾಂತರ ದಮನಿತ ಮಹಿಳೆಯರ ಉದ್ಯೋಗವನ್ನೂ ಕಸಿದುಕೊಳ್ಳುವುದಾಗಿದೆ. ಬಿಸಿಯೂಟ ಯೋಜನೆಯ ಸಮಸ್ಯೆಯ ಮೂಲವಿರುವುದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆ, ಅಸಮರ್ಪಕ ನಿರ್ವಹಣೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡದೇ ಇರುವುದರಲ್ಲಿ. ಇದನ್ನು ಸರಿಪಡಿಸಲು ಹಣಕಾಸು ಖರ್ಚು, ಅಗತ್ಯ ಸೌಲಭ್ಯ ನೀಡುವ ಬದಲು ಯೋಜನೆಯನ್ನೇ ಖಾಸಗೀಕರಿಸಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಲಾಭವೇ ತಮ್ಮ ಏಕಮಾತ್ರ ಉದ್ದೇಶವೆಂದು ನಂಬಿರುವ ಕಾರ್ಪೋರೇಟ್ ಕಂಪನಿ, ಎನ್‌ಜಿಓಗಳಿಗೆ ಈ ರೀತಿ ಯೋಜನೆ ಹಸ್ತಾಂತರಿಸುವುದಾದರೆ ಜನರು ಆಯ್ಕೆ ಮಾಡಿದ ಸರ್ಕಾರದ ಕೆಲಸವೇನು? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಯೋಜನೆಯ ಉದ್ದೇಶ:
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ 2002-03ರಲ್ಲಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಈಶಾನ್ಯ ವಲಯದ 7 ಜಿಲ್ಲೆಗಳ ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪ್ರಾರಂಭವಾಗಿ, ಇಂದು ರಾಜ್ಯವ್ಯಾಪಿ 1 ರಿಂದ 10 ನೇ ತರಗತಿವರೆಗೆ ವಿಸ್ತರಣೆಯಾಗಿದೆ. ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸುವುದು, ಶಾಲೆ ತೊರೆಯುವುದನ್ನು ತಡೆಯುವುದು, ಪೌಷ್ಟಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯ ಹೆಚ್ಚಿಸಿ ಶಕ್ತಿವಂತರು, ದೃಢಕಾಯರಾಗಿ ಮಕ್ಕಳನ್ನು ಬೆಳೆಸುವುದು. ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ‘ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿಗೊಳಿಸಿ ತನ್ಮೂಲಕ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಿಸುವುದು’ ಅಕ್ಷರ ದಾಸೋಹ ಕಾರ್ಯಕ್ರಮದ ಉದ್ದೇಶ.

ಈ ಯೋಜನೆಯು ಜಾರಿಯಾದಾಗಿನಿಂದ ಮಕ್ಕಳ ಹಾಜರಾತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. mid-day-meal-2ಅಪೌಷ್ಟಿಕತೆ ಸಣ್ಣ ಪ್ರಮಾಣದಲ್ಲಿ ದೂರ ಸರಿಯಲು ಸಹಕಾರಿಯಾಗಿದೆ. ವಿವಿಧ ಸಮುದಾಯದ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಊಟ ಮಾಡುವುದು ‘ಸಮಾನತೆಯೆಡೆಗೆ ಉತ್ತಮ ಪ್ರಯತ್ನವಾಗಿದೆ’. ಶಾಲಾ ಆವರಣದಲ್ಲಿಯೇ ಬಿಸಿಯೂಟ ತಯಾರು ಮಾಡಿ ನೀಡುತ್ತಿರುವುದರಿಂದ ಮಕ್ಕಳಿಗೆ ಮನೆ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಲೆ ಎಂದರೆ ಭಯಪಡುವ ಕೆಲ ಮಕ್ಕಳಿಗೆ ತಾಯಿ ಮಮತೆ-ಪ್ರೀತಿ ನೀಡಿ ಸಂತೈಸುವಲ್ಲಿ ಅಡುಗೆ ತಯಾರಕರ ಕಾರ್ಯ ಶ್ಲಾಘನೀಯ. ಕನಿಷ್ಠ ರೂ.1100, 1000 ವೇತನ ಪಡೆಯುತ್ತಿದ್ದರೂ ಕೂಡ ಮಕ್ಕಳ ಪಾಲನೆಯಲ್ಲಿ ತೊಡಗುವ ಅಡುಗೆ ತಯಾರಕ ಮತ್ತು ಮಕ್ಕಳ ನಡುವಿನ ಒಡನಾಟ ಕಲಿಕೆಯ ಪ್ರಗತಿಗೆ ಸಹಕಾರಿಯಾಗುತ್ತಿದೆ. ಶೋಷಿತ, ಸಂಕಷ್ಟದಲ್ಲಿರುವ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿ ಸಬಲೀಕರಣಗೊಳಿಸುವುದು ಈ ಯೋಜನೆಯ ಇನ್ನೊಂದು ಪ್ರಮುಖ ಅಂಶ ಹಾಗೂ ಗಮನಾರ್ಹ ಸಂಗತಿಯೂ ಹೌದು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 55,113 ಶಾಲೆಗಳಲ್ಲಿ (ಸರಕಾರಿ (48,773), ಅನುದಾನಿತ (6,340)), 61.40 ಲಕ್ಷ ವಿದ್ಯಾರ್ಥಿಗಳು ಬಿಸಿಯೂಟದ ಪ್ರಯೋಜನ ಪಡೆಯಲಿದ್ದಾರೆ. ಪ್ರತಿದಿನ ಊಟದ ವೆಚ್ಚವಾಗಿ ಕಿರಿಯ ಪಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ.3.11, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ.4.65, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೂ.6.16 ಖರ್ಚು ಮಾಡುತ್ತಿದೆ. ಈ ಕನಿಷ್ಠ ಹಣದಲ್ಲಿ ಪೌಷ್ಟಿಕ ಆಹಾರ ನೀಡಲು ಸಾಧ್ಯವೇ?

ಸರ್ಕಾರಿ ಸೂಚಿತ ಆಹಾರ ಪಟ್ಟಿಯಲ್ಲಿ ಅನ್ನ ಸಾಂಬಾರು, ಬಿಸಿ ಬೇಳೆಬಾತ್, ಉಪ್ಪಿಟ್ಟು, ಸಿಹಿ ಪೊಂಗಲ್ ನೀಡಲು ಆದೇಶಿಸಲಾಗಿದೆ. ಇದು ಪೌಷ್ಟಿಕ ಆಹಾರವೇ? ರೊಟ್ಟಿ, ಮುದ್ದೆ, ಮೊಟ್ಟೆ, ಮೀನು, ಮಾಂಸಾಹಾರ ಮತ್ತು ಸ್ಥಳೀಯವಾಗಿ ಸಿಗುವ ಧಾನ್ಯ ತರಕಾರಿ, ಹಣ್ಣುಗಳು ಪೌಷ್ಟಿಕವಲ್ಲವೇ? ಎಂಬುದು ಚರ್ಚೆಯಾಗಬೇಕಿದೆ. ಅಗತ್ಯ ಪೌಷ್ಟಿಕ ಆಹಾರ ನೀಡುವ ಬದಲು ಮಾತ್ರೆಗಳ ಮೂಲಕವೇ ಪೌಷ್ಟಿಕತೆ ಹೆಚ್ಚಿಸಲು ಹೊರಟ ಸರಕಾರದ ಕ್ರಮ ಎಷ್ಟು ಸರಿ? ಪಕ್ಕದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬಿಸಿಯೂಟದ ಜತೆ ಮೊಟ್ಟೆ, ಬಾಳೆಹಣ್ಣು ಹಾಗೂ ಅಗತ್ಯ ಕಾಳುಗಳನ್ನು ನೀಡಲಾಗುತ್ತಿದೆ.

ರಾಜ್ಯವ್ಯಾಪಿ ಪ್ರಸ್ತುತ 1,04,357 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ರೂ.1,100. ಸಹಾಯಕರಿಗೆ ರೂ.1,000 ಗಳನ್ನು ನೀಡಲಾಗುತ್ತಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ ರೂ 4,000, ಸಹಾಯಕ ಅಡುಗೆಯವರಿಗೆ ರೂ 3,000 ವೇತನ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಸೇವಾ ಭದ್ರತೆ, ಕನಿಷ್ಠ ವೇತನ, ಅಗತ್ಯ ತರಬೇತಿ, ಸೂಕ್ತ ತರಬೇತಿಯಿಂದ ಅಡುಗೆ ತಯಾರಕರು ವಂಚಿತರಾಗಿದ್ದಾರೆ. ದೌರ್ಜನ್ಯ, ಅವಮಾನಿಸುವುದು ಹಾಗೂ ಕೆಲಸದಿಂದ ತೆಗೆದುಹಾಕುವುದು ಕೆಲವೆಡೆ ನಡೆಯುತ್ತಲೇ ಇದೆ.

ಬಿಸಿಯೂಟ ತಯಾರಿಸಲು ಅಗತ್ಯ ಸೌಲಭ್ಯಗಳ ಕೊರತೆ:
ಎಲ್ಲಾ ಶಾಲೆಗಳಿಗೂ ಸುಸಜ್ಜಿತ ಅಡುಗೆಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಬಯಲಲ್ಲಿ, ಚಪ್ಪರದಲ್ಲಿ, ತರಗತಿ ಕೋಣೆಗಳಲ್ಲಿಯೇ MID-DAY-MEALಅಡುಗೆ ತಯಾರಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇಂದಿಗೂ ಹಳ್ಳ, ಇನ್ನಿತರ ಕಡೆಯ ಅಶುದ್ಧ ನೀರನ್ನೇ ಬಳಸಲಾಗುತ್ತಿದೆ. ಅವಶ್ಯವಿರುವ ಪಾತ್ರೆ, ಸ್ಟೌ, ತಟ್ಟೆ ಇನ್ನಿತರ ಪರಿಕರಗಳನ್ನು ಸಮರ್ಪಕವಾಗಿ ಪೂರೈಸಲಾಗಿಲ್ಲ. ನಿರಂತರವಾಗಿ ಶಾಲಾ ಆವರಣ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಸಿಯೂಟ ಅಡುಗೆಯಲ್ಲಿ ಹಲ್ಲಿ, ಇಲಿ, ಇನ್ನಿತರ ಕೀಟಗಳು ಬೀಳುತ್ತಿರುವ ವರದಿಗಳು ಕೆಲವೆಡೆ ಆಗಿವೆ. ಬಿಸಿಯೂಟ ಯೋಜನೆಯನ್ನು ವಿಫಲಗೊಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೂಡ ಇಂತಹ ಹೀನಕೃತ್ಯ ಮಾಡುತ್ತಿರುವ ಶಂಕೆ ಇದೆ!

ಕಳಪೆ ಪದಾರ್ಥಗಳ ವಿತರಣೆ:
ಸರಕಾರದಿಂದ ಶಾಲಾ ವಿದ್ಯಾರ್ಥಿಗೆ ಅಕ್ಕಿ, ಬೇಳೆಯನ್ನು ವಿತರಿಸಲಾಗುತ್ತಿದೆ. ಈ ಅಕ್ಕಿ ಬೇಳೆ ಕಳಪೆ ಗುಣಮಟ್ಟದ್ದು ಅಲ್ಲದೇ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೇ ಪ್ರತಿದಿನ ವಿದ್ಯಾರ್ಥಿಗಳಿಗೆ ಊಟಕ್ಕಾಗಿ ಖರ್ಚು ಮಾಡುತ್ತಿರುವ ಹಣ ಇವತ್ತಿನ ಬೆಲೆ ಏರಿಕೆಗೆ ತುಲನೆ ಮಾಡಿದರೆ ತರಕಾರಿ, ಕಾಳು, ಮಸಾಲೆ ಪದಾರ್ಥ ಕೊಳ್ಳಲು ಕಷ್ಟಸಾಧ್ಯ.

ಸೇವೆಯ ಹೆಸರಿನಲ್ಲಿ ಎನ್.ಜಿ.ಓ (ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ) ಗಳಿಂದ ಲೂಟಿ:
ಈಗಾಗಲೇ ರಾಜ್ಯದಲ್ಲಿ ಅಕ್ಷಯಪಾತ್ರೆ ಫೌಂಡೇಶನ್ (ಇಸ್ಕಾನ್), ಅದಮ್ಯ ಚೇತನ, ಸೇರಿದಂತೆ 93 ಸ್ವಯಂಸೇವಾ ಸಂಸ್ಥೆಗಳು 5,790 ಶಾಲೆಗಳಲ್ಲಿ ಸರಕಾರದಿಂದ ಹಣ ಪಡೆದು 10.68 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿವೆ. ಅಲ್ಲದೆ ಕರ್ನಾಟಕದ ಬಡ ಮಕ್ಕಳ ಚಿತ್ರಗಳನ್ನು ತೋರಿಸಿ ದೇಶ ವಿದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ. ಇಸ್ಕಾನ್ ನೀಡುವ ಊಟದಲ್ಲಿ ಇಲಿ ಇದ್ದುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಾರಗಟ್ಟಲೇ ಹಳಸಿದ ಊಟ ನೀಡಿದ ಎನ್.ಜಿ.ಓ ವಿರುದ್ಧ ಈ ಹಿಂದೆ ಪ್ರತಿಭಟನೆಗಳು ನಡೆದಿವೆ. ಊಟವೆಂದರೆ, ಕೇವಲ ಸಸ್ಯಾಹಾರ ಮಾತ್ರ, ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೇಕಿಲ್ಲಾ ಎನ್ನುತ್ತಲೇ ಈ ಎನ್.ಜಿ.ಓ ಗಳು ಅಹಾರದ ಹಕ್ಕಿನ ಮೇಲೆ ದಾಳಿ ಮಾಡಲು ಹೊರಟಿವೆ. ಪ್ರಾದೇಶಿಕ ಅಹಾರವನ್ನು ತಿರಸ್ಕರಿಸಲಾಗುತ್ತಿದೆ. ನೂರಾರು ಶಾಲೆಗಳಿಗೆ ಒಂದೇ ರೀತಿಯ ಊಟವನ್ನು ಸಾಗಿಸಲಾಗುತ್ತಿದೆ. ಬಿಸಿಯೂಟ ಕಲ್ಪನೆಗೆ ವಿರುದ್ಧವಾಗಿ ತಂಗಳು, ಹಳಸಿದ, ತಣ್ಣಗಾದ ಊಟವನ್ನು ನೀಡಲಾಗುತ್ತಿದೆ.

ಬಿಸಿಯೂಟ ಯೋಜನೆ ಸಮರ್ಪಕ ಜಾರಿಗೆ ಸಲಹೆಗಳು:

  • ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಬಿಸಿ ತಾಜಾ ಊಟವನ್ನು ತಯಾರು ಮಾಡಿಕೊಡಬೇಕು.
  • ಅಡುಗೆಮನೆ, ಶುದ್ಧ ಕುಡಿಯುವ ನೀರು, ಗ್ಯಾಸ್ ಸ್ಟೌ, ಪಾತ್ರೆ, ತಟ್ಟೆ ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು. ಆಹಾರ ಪದಾರ್ಥ, ತರಕಾರಿ ಹಾಳಾಗದಂತೆ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
  • ರಾಜ್ಯವ್ಯಾಪಿ 61 ಲಕ್ಷದಷ್ಟು ವಿದ್ಯಾರ್ಥಿಗಳು ಈ ಯೋಜನೆ ವ್ಯಾಪ್ತಿಯಲ್ಲಿ ಬರುವುದರಿಂದ ಶಿಕ್ಷಣ ಇಲಾಖೆಯಡಿ ಬಿಸಿಯೂಟ ಯೋಜನೆ ಪ್ರಾಧಿಕಾರ/ನಿಗಮ ಅಥವಾ ನಿರ್ದೇಶನಾಲಯ ಸ್ಥಾಪಿಸಿ ನಿರ್ವಹಿಸಬೇಕು.
  • ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು (ತರಕಾರಿ, ಹಣ್ಣುಗಳು, ಮೊಟ್ಟೆ, ಮೀನು, ಮಾಂಸಾಹಾರ ಇತ್ಯಾದಿ) ಉಪಯೋಗಿಸಿ ಅಡುಗೆ ತಯಾರಿಸಲು ಮುಂದಾಗಬೇಕು. ವಾರಕ್ಕೊಮ್ಮೆಯಾದರೂ ಆಹಾರ ತಜ್ಞರು ಶಾಲೆಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಬೇಕು.
  • ಶಿಕ್ಷಕರನ್ನು ಈ ಯೋಜನೆಯ ಕೆಲಸಕ್ಕೆ ತೊಡಗಿಸಬಾರದು. ಯೋಜನೆಯ ಜಾರಿಗೆ ಶಾಲೆ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಅವಶ್ಯಕವಿರುವ ಹುದ್ದೆಗಳನ್ನು ಮಾರ್ಪಾಡು ಮಾಡಿ ನೇಮಕ ಮಾಡಿಕೊಳ್ಳಬೇಕು. ಶಾಲಾ ಮುಖ್ಯೋಪಾಧ್ಯಾಯರು ತಿಂಗಳ ಆಹಾರ ಪದಾರ್ಥಗಳ ಬೇಡಿಕೆ ಪಟ್ಟಿಯನ್ನು ತಯಾರಿಸಿ ನೀಡಬೇಕು.
  • ಪೋಷಕರ ಪ್ರಾತಿನಿಧ್ಯವಿರುವ ಎಸ್.ಡಿ.ಎಂ.ಸಿ ಯಲ್ಲಿ ಪಾರದರ್ಶಕವಾಗಿ ಈ ಯೋಜನೇಯ ಜಾರಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಯ ಕೆಲವರು ಅನಗತ್ಯವಾಗಿ ಕಿರುಕುಳ ನೀಡದಂತೆ ಎಚ್ಚರವಹಿಸಬೇಕು.
  • ಈ ಯೋಜನೆಯಲ್ಲಿ ದುಡಿಯುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಡ, ದಲಿತ, ಹಿಂದುಳಿದ ವರ್ಗಗಳ ದುರ್ಬಲರಾಗಿದ್ದು ಇವರ ಸೇವೆಯನ್ನು ಖಾಯಂಗೊಳಿಸಬೇಕು, ಕನಿಷ್ಠ ವೇತನ ನಿಗದಿಗೊಳಿಸಬೇಕು. (ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ 4 ಸಾವಿರ ರೂಪಾಯಿ, ಸಹಾಯಕ ಅಡುಗೆಯವರಿಗೆ 3 ಸಾವಿರ ವೇತನ ನೀಡಲಾಗುತ್ತಿದೆ). ಮಕ್ಕಳ ಕಲಿಕೆಯ ಪ್ರೇರೇಪಣೆಗೆ ಅನುಕೂಲವಾಗುವಂತೆ ಅಡುಗೆಯವರಿಗೆ ಸೂಕ್ತ ತರಬೇತಿ ನೀಡಬೇಕು.
  •  ಅಡುಗೆಯವರಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿಗಳನ್ನು ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸಿಗುವಂತಾಗಲು ಪ್ರತಿದಿನ ಒಬ್ಬ ವಿದ್ಯಾರ್ಥಿಗೆ ಕನಿಷ್ಠ ರೂ.20 ಗಳನ್ನು ಆಹಾರ ವೆಚ್ಚ ನೀಡಬೇಕು. ಅಡುಗೆಮನೆಯ ತಪಾಸಣೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪ್ರತಿವಾರ ನಡೆಸಬೇಕು. ಪ್ರಾದೇಶಿಕ ಭಿನ್ನತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ವಿತರಿಸಬೇಕು.

ಇತ್ತೀಚೆಗೆ ಒಂದು ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ “ಶೇಕಡಾ 98%ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿಯೇ ತಯಾರಿಸಿದ ಊಟ ಬೇಕು” ಎಂಬ ಅಂಶವನ್ನು ಹೇಳಿದ್ದಾರೆ. ಹಾಗಾಗಿ, ಸಾರ್ವಜನಿಕ ಹಾಗೂ ಸರ್ಕಾರಿ ವ್ಯವಸ್ಥೆಯ ಮೂಲಕವೇ ನಮ್ಮ ಮಕ್ಕಳಿಗೆ ಬಿಸಿಯೂಟ ಪೂರೈಕೆಯಾಗಬೇಕೇ ವಿನಾಃ ಖಾಸಗೀ ಕಾರ್ಪೋರೇಟ್ ಕಂಪೆನಿಗಳ ಇಲ್ಲವೇ ಎನ್‌ಜಿಒಗಳ ಮೂಲಕ ಪೂರೈಕೆಯಾಗುವ ‘ತಂಗಳನ್ನ’ ಅಲ್ಲ.

ಆಗಷ್ಟ ಹದಿನೈದರ ಚಿತ್ರಗಳು

– ಅರುಣ್ ಜೋಳದಕೂಡ್ಲಿಗಿ

ಚಿತ್ರ: 1

ಬಹಳ ದಿನದ ನಂತರ ಮೊನ್ನೆ ನನ್ನ ಬಾಲ್ಯದ ಮಿತ್ರ ಕೊಟ್ರೇಶ್ ಸಿಕ್ಕಿದ್ದ. ಹೀಗೇ ಲೋಕಾಭಿರಾಮವಾಗಿ ಮಾತಿಗೆ ಕೂತೆವು. ಮಾತಿನ ನಡುವೆ ಆಗಷ್ಟ ಹದಿನೈದರ ಚಿತ್ರಗಳು ಕಣ್ಣಮುಂದೆ ಬಂದವು. ಕೊಟ್ರೇಶ್ ಆಗಷ್ಟ ಹದಿನೈದರ ಹೊತ್ತಿಗೆ ಸರಿಯಾಗಿ ತಲೆ ಕೂದಲು ಬೋಳಿಸಿ, ತಲೆಗೆ ಸಿಲ್ವರ್ ಬಣ್ಣ ಹಚ್ಚಿಕೊಂಡು, ಗೋಲಿಯಾಕಾರದ ಕನ್ನಡಕ ಹಾಕಿ, ಕಚ್ಚೆ ಉಟ್ಟು, ಉದ್ದನೆ ಕೋಲು ಹಿಡಿದು ಥೇಟ್ ಗಾಂಧಿಯೇ ಆಗಿ ಪ್ಲಾಗ್ ಹಾಯಿಸ್ಟಿಂಗ್ ಹೊತ್ತಿಗೆ ಶಾಲೆಯ ಆವರಣಕ್ಕೆ ಹಾಜರಾಗುತ್ತಿದ್ದ. ನಮಗೆಲ್ಲಾ ಖುಷಿಯೋ ಖುಷಿ. ನಾವೆಲ್ಲಾ ಗಾಂಧಿ ಬಂದ, ಗಾಂಧಿ ಬಂದ ಎಂದು ಕೇಕೆ ಹೊಡೆಯುತ್ತಿದ್ದೆವು. ಅಷ್ಟರ ಮಟ್ಟಿಗೆ ಗಾಂಧಿ ನಮ್ಮ ಸ್ನೇಹಿತನೇ ಆಗಿರುತ್ತಿದ್ದ.

ಫೋಟೋದ ಗಾಂಧಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದು, ವೇಷದಾರಿ ಗಾಂಧಿಯ ಚಿವುಟಿ ಕಿಚಾಯಿಸುವುದು ಎರಡೂ ನಡೆಯುತ್ತಿತ್ತು. boy-as-gandhiಕೊಟ್ರ ಮಹಾನ್ ಕಿಲಾಡಿ, ಅವ ಗಾಂಧಿ ಉಡುಪು ತೊಟ್ಟಾಗಲೂ ತನ್ನ ಕಿಡಗೇಡಿ ತನವ ಮರೆಯುತ್ತಿರಲಿಲ್ಲ. ಸಾಲಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ವೇಷದಾರಿ ಸವಿತಾಳ ಜಡೆ ಜಗ್ಗಿ ಗೊತ್ತಾಗದಂತೆ ನಿಂತು ಒಳಗೊಳಗೇ ನಗುತ್ತಿದ್ದ. ಅವ ಊರಲ್ಲಿ ಪ್ರಭಾತ್ ಪೇರಿ ಹೊರಟಾಗ ಕೆಲವು ಮನೆಯವು ಗಾಂಧಿ ಕಾಲಿಗೆ ನೀರು ಹಾಕಿ ಪೂಜಿಸಿ ದಕ್ಷಿಣಿಯನ್ನು ಕೈಲಿಡುತ್ತಿದ್ದರು. ಇದೂ ಸಹ ಅವ ಗಾಂಧಿ ವೇಷ ಹಾಕಲು ಪ್ರೇರಣೆಯಾಗುತ್ತಿತ್ತು. ಊರಲ್ಲಿ ಇವನನ್ನು ಗಾಂಧಿಕೊಟ್ರ ಎಂದೇ ಕರೆಯುತ್ತಿದ್ದೆವು. ಈ ವೇಷವನ್ನು ಶಾಲೆಯ ಮಾಸ್ತರರು ಹೇಳಿ ಹಾಕಿಸುತ್ತಿರಲಿಲ್ಲ. ಕೊಟ್ರೇಶಿಯ ಅಜ್ಜ ಬೋರಯ್ಯ ಗಾಂಧಿ ಮೇಲಿನ ಭಯ ಭಕ್ತಿ ಪ್ರೀತಿಯನ್ನು ಹೀಗೆ ಕೊಟ್ರನಿಗೆ ವೇಷ ಧರಿಸುವ ಮೂಲಕ ತೋರುತ್ತಿದ್ದನು.

ಕೊಟ್ರ ಒಮ್ಮೆ ಗಾಂಧಿ ವೇಷ ತೊಟ್ಟು ಶಾಲೆಯ ಆವರಣಕ್ಕೆ ಬಂದಿದ್ದ, ಇನ್ನೇನು ಧ್ವಜ ಹಾರಿಸಬೇಕೆಂದಾಗ ಗಾಂಧಿ ಮಾಯವಾಗಿದ್ದ. ವಿಚಾರಿಸಿ ನೋಡಲಾಗಿ ಶಾಲೆಯ ಹಿಂದಿರುವ ಜೋಳದ ಹೊಲದಲ್ಲಿ ಗಾಂಧಿ ನಂಬರ್ ಎರಡಕ್ಕೆ ಹೋಗಿದ್ದಾನೆಂದು ತಿಳಿಯಿತು. ಇದ ತಿಳಿದ ಮೇಷ್ಟ್ರು ಅವನನ್ನು ಕರೆತರಲು ಹುಡುಗರನ್ನು ಕಳಿಸಿದರು. ಜೋಳದ ಹೊಲದಲ್ಲಿ ಉಚ್ಚಿದ ಕಚ್ಚಿಯನ್ನು ಮತ್ತೆ ಕಟ್ಟಿಕೊಳ್ಳಲು ಆಗದೆ ಕೊಟ್ರ ಪಂಚೆಯನ್ನು ಕೈಲಿಡುದು ಶಾಲೆಯ ಆವರಣಕ್ಕೆ ಬಂದ. ಆಗ ಎಲ್ಲಾ ಹುಡುಗ OLYMPUS DIGITAL CAMERAಹುಡುಗಿಯರು ಗಾಂಧಿ ನೋಡ್ರೋ ಚಡ್ಡೀಲೆ ಬಂದವ್ನೇ ಎಂದು ಕೂಗತೊಡಗಿದರು. ಪಿ.ಟಿ ಮೇಷ್ಟ್ರ ಕರಿಯಪ್ಪ ಒಮ್ಮೆ ಸಿಟ್ಟಿನಿಂದ ಗುರಾಯಿಸುತ್ತಲೂ ಮಕ್ಕಳು ಗಪ್ ಚುಪ್ ಆಗಿ ಮೊದಲಿನಂತೆಯೇ ನಿಂತರು. ಕೊಟ್ರೇಶ ಸಪ್ಪೆ ಮೋರೆ ಹಾಕಿ ಮೌನವಾದ. ಈ ಸಮಾರಂಭಕ್ಕೆ ಬಂದ ಭರಮನ ಗೌಡರು ಹುಡುಗರ ಮುಂದೆಯೇ ಕಚ್ಚಿ ತೊಡಿಸಿ ಗಾಂಧಿಯನ್ನು ತಯಾರು ಮಾಡಿದ್ದರು. ಆ ದಿನ ಕೊಟ್ರ ತುಂಬಾ ಡಲ್ಲಾಗಿಯೇ ಊರಲ್ಲಿ ಸುತ್ತಿದ್ದನು. ಇದಾದ ನಂತರವೂ ಹುಡುಗರು ಇವನನ್ನು ಗಾಂಧಿ ಕಚ್ಚಿ ಉಚ್ಚಿತ್ರೋ ಎಂದು ಗೇಲಿ ಮಾಡುತ್ತಿದ್ದರು.

ಇದನ್ನು ನೆನಪಿಸಿಕೊಂಡ ಕೊಟ್ರೇಶ್ ಬಿದ್ದು ಬಿದ್ದು ನಕ್ಕರು. ಮತ್ತೆ ಒಂದಷ್ಟು ಮಾತಾಡಿ ನಂತರ ಟೀ ಕುಡಿದೆವು. ಕೊಟ್ರೇಶ್ ಕೃಷಿ ಮಾಡುತ್ತಾ ಸ್ವಲ್ಪ ಹೈರಾಣಾದಂತೆ ಕಾಣುತ್ತಿದ್ದರು. ‘ಗಾಂಧಿ ಈಗ ಬಂದ್ರ ಇದು ನಮ್ಮ ದೇಶ ಅಲ್ಲ ಅಂತ ವಾಪಾಸ ವಕ್ಕಾನ ನೋಡ ಅರುಣ್’ ಅಂದರು.. ನಾನು ‘ಇಲ್ಲ ಇಲ್ಲ ಈ ದೇಶ ನೋಡಿ ವಾಪಸ್ ಹೋಗೋ ತ್ರಾಣನೂ ಕಳಕೊಂಡಿರ್‍ತಾನ..ಇನ್ನು ವಾಪಸ್ ಹೋಗೋ ಮಾತೆಲ್ಲಿ’ ಅಂದೆ ಆಗ ಕೊಟ್ರೇಶ್ ನಕ್ಕರು. ಹೀಗೆ ಗಾಂಧಿ ನಮ್ಮೊಳಗೂ, ನಮ್ಮೊಳಗೆ ಗಾಂಧಿಯೂ ಕಳೆದು ಹೋಗುವ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಚಿತ್ರ: 2

ಒಮ್ಮೆ ನಮ್ಮ ಶಾಲೆಗೆ ಹೊಸದಾಗಿ ಬಂದ ಟೀಚರ್ ಸಿದ್ದಮ್ಮ ಈ ವರ್ಷ ಆಗಷ್ಟ ಹದಿನೈದಕ್ಕೆ ಏನಾದರು ಹೊಸದನ್ನು ಮಾಡಬೇಕೆಂದು ತಯಾರಿ ನೆಡೆಸಿದರು. ಅದೇನಂದರೆ ಇನ್ನು ಹದಿನೈದನೇ ತಾರೀಕಿಗೆ ಹತ್ತು ದಿನ ಮೊದಲೇ ಭಾರತದ ನಕ್ಷೆಯ ಆಕಾರದಲ್ಲಿ ರಾಗಿ ಬೆಳೆಸಿ ಭಾರತವನ್ನು ಹಸಿರಾಗಿಸಬೇಕೆಂಬುದು. ಈ ಕನಸು ಕಾರ್ಯರೂಪಕ್ಕೂ ಬಂತು. ಭಾರತವನ್ನು ಹೋಲುವ ಒಂದು ರೇಖಾ ಚಿತ್ರವನ್ನು ಬಿಡಿಸಲಾಯಿತು. ಅದು ದಷ್ಟಪುಷ್ಟ ಭಾರತದಂತಿರದೆ ಬಡಕಲು ಭಾರತದಂತ್ತಿತ್ತು. ಆ ರೇಖಾ ಚಿತ್ರದ ಒಳಗೇ ಗುದ್ದಲಿಯಿಂದ ಅಗೆದು ಮಣ್ಣನ್ನು ಅದಲುಬದಲು ಮಾಡಿದೆವು. ಶಾಲೆಗೆ ಹೊಂದಿಕೊಂಡಂತಿದ್ದ ಜಗ್ಗೋ ಬೋರಿನಿಂದ(ಕೈ ಪಂಪು) ನೀರುತಂದು ಭಾರತವನ್ನು ನೆನೆಸಿದೆವು. ನಂತರ ದುರುಗಜ್ಜಿ ಮನೆಯಲ್ಲಿ ಎರಡು ಹಿಡಿ ರಾಗಿ ಕಾಳನ್ನು ತಂದು ಭಾರತದ ತುಂಬೆಲ್ಲಾ ಚೆಲ್ಲಿದೆವು. ಒಂದೆರಡು ಕಳ್ಳಿ ಜಾಲಿ ಮುಳ್ಳುಗಳನ್ನು ಕಡಿದುಕೊಂಡು ಬಂದು ಭಾರತದ ಮೇಲೆಲ್ಲಾ ಹರಡಿ ದೇಶಕ್ಕೆ ಮುಳ್ಳು ಬಡಿದೆವು. ಆಗ ಟೀಚರ್ ಭಾರತವನ್ನು ದನಗಳು ತುಳಿಯದಂತೆ, ಸಣ್ಣ ಮಕ್ಕಳು ಕೆಡಿಸದಂತೆ ಕಾಯಲು ಒಬ್ಬರು ತಪ್ಪುತ್ತಲು ಒಬ್ಬರಂತೆ ಹತ್ತು ಹುಡುಗ ಹುಡುಗಿಯರನ್ನು ನೇಮಿಸಿದರು. ಈಪಾಳೆಯದಲ್ಲಿ ನನ್ನದೂ ಸರತಿ ಇತ್ತು. ನಾವು ಭಾರತದ ಗಡಿಯನ್ನು ಕಾಯುವ ಯೋಧರಂತೆ ಈ ನೆಲದಲ್ಲಿನ ಭಾರತವನ್ನು ಕಾಯುತ್ತಿದ್ದೆವು.

ನನ್ನದು ಬೆಳಗ್ಗೆ ಆರಕ್ಕೆ ಕಾಯುವ ಸರದಿಯಿತ್ತು. ನಾನು ಬೆಳಗ್ಗೆ ಎದ್ದವನೇ ಎದ್ದೆನೋ ಬಿದ್ದೆನೋ ಎಂಬಂತೆ ಶಾಲೆಯ ಮುಂದೆ ಓಡಿ ಭಾರತ ಸುರಕ್ಷಿತವಾಗಿರುವ ಬಗ್ಗೆ ಖಾತರಿ ಮಾಡಿಕೊಂಡು ನಿರಾಳವಾಗುತ್ತಿದ್ದೆ. ಒಮ್ಮೆ ದನಗಳ ಹಿಂಡೊಂದು ತುಳಿದು ಹೋಗಿತ್ತು. ನಾನು ಭಾರತಾಂಬೆಗೆ ನೋವಾದಂತೆ ಮಮ್ಮಲ ಮರುಗಿದೆನು. ಹೊಡೆಯೋಣವೆಂದರೆ ಯಾವ ದನ ತುಳಿದಿರಬಹುದು ಎನ್ನುವುದು ಗೊತ್ತಾಗಲಿಲ್ಲ. ಆಗ ಇಡೀ ಊರಿನ ಎಮ್ಮೆಗಳೆಲ್ಲಾ ನನ್ನ ಅಸಹಾಯಕತೆ ನೋಡಿ ನಕ್ಕಂತಾಯಿತು.

ಒಮ್ಮೆ ಹಸಿ ಆರದಿರಲಿ ಎಂದು ಮುಳ್ಳು ತೆಗೆದು ಗೋಣಿ ಚೀಲವನ್ನು ಹಾಸಿದ್ದೆವು. grass-map-indiaಮರುದಿನ ಬೆಳಗ್ಗೆ ಆ ಗೋಣಿಯ ಮೇಲೆ ನಾಯಿಯೊಂದು ಮಲಗಿ ಸಂಪು ನಿದ್ದೆ ಮಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಖಶಿಖಾಂತ ಸಿಟ್ಟು ಬಂದು ನಾಯಿಯನ್ನು ಕಯ್ಯಯ್ಯೋ.. ಕಯ್ಯಯ್ಯೋ ಎಂದು ಕಿರುಚುತ್ತಾ ಓಡುವಂತೆ ಹೊಡೆದೆವು. ಪಾಪ ಭಾರತಾಂಬೆಯ ಮೇಲೆ ನೀಧಾನಕ್ಕೆ ಮೊಳಕೆ ಹೊಡೆದ ರಾಗಿಯ ಕಾಳುಗಳು ನಡ ಮುರಿದ ಮುದುಕಿಯಂತೆ ಬಾಗಿ ಮುದುಡಿಕೊಂಡಿದ್ದವು. ಆ ನಂತರ ಮತ್ತೆ ನೀರು ಹಾಕಿ ಮುದುಡಿಕೊಂಡ ಜೀವಗಳಿಗೆ ಮರುಜೀವ ತರಲು ನಾವೆಲ್ಲಾ ತುಂಬಾ ಶ್ರಮಿಸಿದ್ದೆವು.

ಭಾರತವನ್ನು ದನಗಳಿಂದಲೂ, ನಾಯಿಗಳಿಂದಲೂ, ಕಿಡಗೇಡಿ ಮಕ್ಕಳಿಂದಲೂ ಕಾಯುವುದು ತುಂಬಾ ಕಷ್ಟವೇ ಆಗಿತ್ತು. ಮೊಳಕೆಯೊಡೆದ ರಾಗಿಯ ಸಸಿಗಳು ನಿಧಾನಕ್ಕೆ ದಿನಕ್ಕೊಂದು ಚೆಂದದಂತೆ ಬೆಳೆಯುತ್ತಿದ್ದರೆ, ಭಾರತಾಂಬೆ ಹಸಿರಾಗುವ ಬಗ್ಗೆ ನಾವುಗಳೆಲ್ಲಾ ಖುಷಿಗೊಳ್ಳುತ್ತಿದ್ದೆವು. ಇದನ್ನು ನೋಡಿದ ಟೀಚರ್ ಮುಖದಲ್ಲಿ ಸಂತಸದ ಗೆರೆಗಳು ಕಾಣುತ್ತಿದ್ದವು. ಎಲ್ಲಾ ಬಗೆಯ ಅಡೆತಡೆಗಳ ಮಧ್ಯೆಯೂ ಮೊದಲು ಬಡಕಲು ಕಾಣುತ್ತಿದ್ದ ಭಾರತ ಮಾತೆ ಹಸಿರಿನಿಂದ ಮೈದುಂಬಿಕೊಳ್ಳತೊಡಗಿದ್ದಳು. ಆಗಷ್ಟ ಹದಿನೈದರ ದಿನ ನಮಗೆಲ್ಲಾ ಖುಷಿಯೋ ಖುಷಿ. ಕಾರಣ ಭಾರತ ಮಾತೆಯನ್ನು ಸಾಕಿ ಸಲಹಿದವರು ನಾವೆ ಎಂಬ ಉತ್ಸಾಹ ನಮ್ಮಲ್ಲಿ ಚಿಮ್ಮುತ್ತಿತ್ತು.

ಹೀಗೆ ರಾಗಿಯ ಹಸಿರು ಮೊಳಕೆಯ ಭಾರತವನ್ನು ನೋಡಿದ ಊರವರು ಟೀಚರಮ್ಮನನ್ನು ಬಾಯಿತುಂಬಿ ಹೊಗಳಿದರು. ಆ ವರ್ಷ ಆಗಷ್ಟ ಹದಿನೈದರ ದೊಡ್ಡ ಆಕರ್ಷಣೆ ಈ ಹಸಿರು ಭಾರತ ಮಾತೆಯೇ ಆಗಿದ್ದಳು. ಈಗ ನೆನಪಿಸಿಕೊಂಡರೆ ಈ ದೇಶದ ಬಹುಪಾಲು ಕೆಳಸಮುದಾಯಗಳು ಉಣ್ಣುವ ಜೀವಧಾತು ರಾಗಿ ಭಾರತದ ನಕ್ಷೆಯಲ್ಲಿ ಬೆಳೆದದ್ದು ಒಂದು ರೂಪಕವೇ ಆದಂತಿತ್ತು. ಕನಕದಾಸರ ರಾಮಧ್ಯಾನ ಚರಿತೆ ಕಾವ್ಯವೂ ನೆನಪಾಗಿ ಭತ್ತದ ಮುಂದೆ ಗೆದ್ದ ರಾಗಿಯು ಕಣ್ಣಮುಂದೆ ನಿಂತಿತು.

ಚಿತ್ರ: 3

ಈಚೆಗೆ ಮೂರು ವರ್ಷದ ಹಿಂದೆ ಆಗಷ್ಟ ಹದಿನೈದಕ್ಕೆ ಸರಿಯಾಗಿ ನಮ್ಮೂರು ಜೋಳದ ಕೂಡ್ಲಿಗಿಗೆ ಬಂದಿದ್ದೆ. ಈ ವಿಷಯ ಹೇಗೋ ನಮ್ಮೂರಿನ ಶಾಲಾ ಮಾಸ್ತರಿಗೆ ತಿಳಿದಿತ್ತು. ನನ್ನ ಹೆಸರ ಜತೆ ಊರ ಹೆಸರು ಸೇರಿಸಿ ಬರೆಯುತ್ತಿದ್ದರಿಂದ, ಅದು ಯಾವಾಗಲಾದರೊಮ್ಮೆ ಪತ್ರಿಕೆಯಲ್ಲಿ ಕಾಣುತ್ತಿದ್ದರಿಂದ, ಮಾಸ್ತರರಿಗೆ ನನ್ನನ್ನು ಆಗಷ್ಟ ಹದಿನೈದರ ಅಥಿತಿಯಾಗಿ ಮಾಡಬೇಕೆಂದೆನ್ನಿಸಿ ಕರೆದರು. ನಾನು ಮೊದಲು ಇಲ್ಲ ಎಂದೆನಾದರೂ ಪೂರ್ತಿ ನಿರಾಕರಿಸಲಾಗದೆ ಒಪ್ಪಿಕೊಂಡು ಶಾಲೆಯ ಆವರಣಕ್ಕೆ ಹೋದೆ. ಆಗಷ್ಟ ಹದಿನೈದರ ಅಥಿತಿಯಾಗಿ ವೇದಿಕೆಯ ಮೇಲೆ ಕೂತದ್ದು ಇದು ಮೊದಲ ಅನುಭವ.

ಶಾಲೆಯ ಮುಂದೆ ದೊಡ್ಡದಾದ ಅಂಗಳಕ್ಕೆ ಸೆಗಣಿ ಸಾರಿಸಿ, ತರಾವರಿ ರಂಗೋಲಿ ಬಿಟ್ಟಿದ್ದರು. ಆ ರಂಗೋಲಿಗಳಲ್ಲಿ ಮಕ್ಕಳ ಮುಗ್ಧತೆ ಇತ್ತು. independence-day-at-schoolಭಾರತದ ನಕ್ಷೆ, ಸ್ವಂತಂತ್ರ್ಯ ದಿನಾಚರಣೆಯ ಶುಭಾಷಯಗಳು, ಜೈ ಭಾರತ ಮಾತಾಕಿ ಜೈ ಮುಂತಾದ ಬರಹಗಳು ರಂಗೋಲಿಯಲ್ಲಿ ಎದ್ದು ಕಾಣುತ್ತಿದ್ದವು. ಮಕ್ಕಳು ಸಮವಸ್ತ್ರ ಧರಿಸಿ ಹಬ್ಬದ ಸಂಭ್ರಮದಲ್ಲಿ ಕೂತಿದ್ದರು. ಕೆಲವರು ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಲು ತಯಾರಿ ಮಾಡಿಕೊಳ್ಳುತ್ತಿದ್ದರು. ನಮ್ಮ ಓಣಿಯ ಮಕ್ಕಳು ನನ್ನನ್ನು ನೋಡಿ ಕಣ್ಣ ಸನ್ನೆಯಲ್ಲೇ ಹುಬ್ಬುಹಾರಿಸಿ ಖುಷಿಪಟ್ಟರು. ಮಾಸ್ತರುಗಳು ಮಾಸ್ತರಮ್ಮಂದಿರು ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಲವಲವಿಕೆಯಿಂದ ಓಡಾಡಿಕೊಂಡಿದ್ದ ಹೊಸ ಹುರುಪಿನ ಇನ್ನೂ ಮದುವೆಯಾಗಿರದ ಚೆಂದದ ಟೀಚರಮ್ಮನನ್ನು ಬಂದ ಅಥಿತಿಗಳು ಕದ್ದು ನೋಡುತ್ತಾ ನೋಡದಂತೆ ನಟಿಸುತ್ತಿದ್ದರು. ಇದು ನನ್ನ ಅನುಭವಕ್ಕೂ ಬಂತು. ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಕೆಲವು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಹೀಗೆ ಕಾರ್ಯಕ್ರಮ ಆರಂಭವಾಯಿತು. ಸ್ವಾಗತ, ಧ್ವಜಾರೋಹಣ, ರಾಷ್ಟ್ರಗೀತೆ ಒಂದರ ಹಿಂದೆ ಒಂದರಂತೆ ಅಚ್ಚುಕಟ್ಟಾಗಿ ನಡೆಯಿತು.

ಬಾಯಿಪಾಠ ಮಾಡಿದ ಭಾಷಣವನ್ನು ಕೆಲಮಕ್ಕಳು ಹೆದರುತ್ತಾ, ಕೆಲವರು ತಪ್ಪು ತಪ್ಪು ಓದಿ ತಡವರಿಸುತ್ತಾ, ಮತ್ತೆ ಕೆಲವರು ಗಟ್ಟಿಯಾಗಿ ದೈರ್ಯವಾಗಿ ಓದಿ ಶಬ್ಬಾಷ್‌ಗಿರಿ ಪಡೆಯುತ್ತಾ ಗಾಂಧಿ ಮುಂತಾದ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸಿಕೊಂಡರು. ಈಗ ಮುಖ್ಯ ಅಥಿತಿಯಾಗಿ ಮಾತನಾಡುವ ಸರದಿ ನನಗೆ ಬಂತು. ಏನು ಮಾತನಾಡುವುದು ಎನ್ನುವ ಗೊಂದಲದಲ್ಲೇ ನಮ್ಮೂರಿನ ಸಂಗತಿಗಳನ್ನು ಬಳಸಿಕೊಂಡೇ ಸ್ವಾತಂತ್ರವನ್ನು ಬೇರೆಯದೇ ರೀತಿಯಲ್ಲಿ ಹೇಳಬೇಕೆನಿಸಿ ಒಂದಷ್ಟು ಮಾತನಾಡಿದೆ.

ಅದರ ಸಾರಾಂಶ ಹೀಗಿತ್ತು: ಸ್ವಾತಂತ್ರ್ಯ ಎಂದರೆ ಬ್ರಿಟೀಷರು ಬಿಟ್ಟುಕೊಟ್ಟದ್ದು ಎಂದೇ ಇನ್ನೆಷ್ಟು ದಿನ ಮಾತಾಡೋದು? ಮೊದಲು ನಮ್ಮ ನಮ್ಮ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೇಗಿದೆ ಎಂದು ನೋಡೋಣ. ನಮ್ಮ ಊರಿನ ಕೇರಿಯ ಹರಿಜನರನ್ನು ಎಷ್ಟು ಜನ ನಮ್ಮ ಮನೆಯ ಒಳಗೆ ಕರ್‍ಕೊಂಡು ಊಟ ಹಾಕ್ತೀವಿ? ಅಥವಾ ಮೇಲ್ಜಾತಿಯವ್ರು ಹರಿಜನರ ಕೇರಿಗೆ ಹೋಗಿ ಅವರ ಮನೆಯಾಗ ಕೂತ್ಕೊಂಡು ಎಷ್ಟು ಜನ ಊಟ ಮಾಡ್ತಾರೆ? ಅವರನ್ನು ಒಳ್ಳೆಯ ಮನಸ್ಸಿನಿಂದ ಗುಡಿ ಒಳಗ ಬಿಟ್ಕಳ್ಳಾಕ ಎಷ್ಟ ಜನ ತಯಾರಿದಿವಿ? ಹಾಗಾದರೆ ಈ ಊರಿನ ಹರಿಜನರಿಗೆ ನಮ್ಮೂರಿನವರಿಂದ ಸ್ವಾತಂತ್ರ್ಯ ಸಿಕ್ಕಿದೆಯೇ?

ನಾವು ನಮ್ಮೂರಿನ ಹೆಣ್ಣುಮಕ್ಕಳಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಟ್ಟೀವಿ? ಗಂಡುಹುಡುಗರ್‍ನ ಓದ್ಸಾಕ ಇಷ್ಟಪಡೋ ನಾವು ಹೆಣ್ಣು ಹುಡುಗಿಯರನ್ನ independence-dayಹೆಚ್ಚು ಓದಿಸ್ದೆ ಅವರನ್ನು ಬಂಧನದಲ್ಲಿಟ್ಟಿಲ್ಲವಾ? ಮಕ್ಕಳನ್ನು ಓದಿಸದೆ ನಮ್ಮ ಮನೆ ಕೆಲಸಗಳಿಗೆ ಹಚ್ಚಿಕೊಂಡು ಮಕ್ಕಳನ್ನು ಅಜ್ಞಾನದ ಕೂಪಕ್ಕೆ ದೂಡೋದು ಸಹಾ ಅವರನ್ನು ಸ್ವಾಂತಂತ್ರ್ಯವಾಗಿ ಬೆಳೆಯುವ ಅವಕಾಶವನ್ನು ಕಸಿದುಕೊಂಡಂತಲ್ಲವೆ?

ಸರಕಾರದ ಇಲಾಖೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಇಲಾಖೆಗಳಲ್ಲಿ ಜಗಳ ತೆಗೆದರೆ, ಅಥವಾ ಹಲವರು ಸೇರಿ ಮುತ್ತಿಗೆ ಹಾಕಿದರೆ ಪೋಲಿಸ್ ಬಂಧನವಾಗಿ ಬೆದರಿಕೆ ಹಾಕ್ತಾರೆ? ಹಾಗಾದರೆ ನಮ್ಮ ಹಕ್ಕುಗಳ ಚಲಾವಣೆ ಮಾಡೋದಾದ್ರೂ ಹೇಗೆ? ನಮ್ಮ ಭೂಮಿಯನ್ನು ಸರಕಾರ ಕೊಡು ಎಂದಾಕ್ಷಣ ಕೊಡಲು ನಾವು ತಯಾರಾಗ್ತೀವಿ, ಅದನ್ನು ವಿರೋಧಿಸುವ ಸ್ವಾತಂತ್ರ್ಯ ನಮಗಿಲ್ಲವೇ?

ಇಂತದೇ ಕೆಲವು ಮಾತುಗಳನ್ನು ಹೇಳಿದೆ. ಈ ಮಾತುಗಳನ್ನು ಮಕ್ಕಳನ್ನು ಒಳಗೊಂಡಂತೆ ಹೆಚ್ಚಾಗಿ ದೊಡ್ಡವರನ್ನು ಕೇಂದ್ರೀಕರಿಸಿ ಮಾತನಾಡಿದ್ದೆ. ಈ ಮಾತುಗಳಿಗೆ ಕೆಲವು ಮಿತಿಗಳು ಇವೆಯಾದರೂ ಗಮನಸೆಳೆಯಲೆಂದು ಉದ್ದೇಶಪೂರ್ವಕವಾಗಿಯೇ ಮಾತನಾಡಿದ್ದೆ. ಕೆಲವು ಮಾತುಗಳಿಗೆ ಚಪ್ಪಾಳೆ ಬಿದ್ದವಾದರೂ ಊರಿನ ಹಿರಿಯರಿಗೆ ನನ್ನ ಮಾತುಗಳು ಅಷ್ಟಾಗಿ ಇಷ್ಟವಾದಂತಾಗಲಿಲ್ಲ. ಕೆಲವರು ಗಾಂಧಿ, ಲಜಪತ್ ರಾಯರ ಹೆಸರೇ ಹೇಳಲಿಲ್ಲ ಎಂದರು. ಕೆಲವರು ‘ಇವು ಹೇಳಕ ಚೆಂದ ಊರಾಗ ಅನುಸರಿಸಾಕಲ್ಲ ಎಂದರು. ಹೀಗೆ ತರಾವರಿ ಅಭಿಪ್ರಾಯಗಳು ಬಂದವು.

ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯೇ

– ರೂಪ ಹಾಸನ

ನಮ್ಮ ಸಮಾಜದಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುವವರು ಮಕ್ಕಳು. ಲೈಂಗಿಕ ಕಿರುಕುಳಕ್ಕೆ-ಅತ್ಯಾಚಾರಕ್ಕೆ ಒಳಗಾಗುವ, ಪರಿತ್ಯಜಿಸಲ್ಪಡುವ, ಬಾಲಕಾರ್ಮಿಕರಾಗುವ, ಶಾಲೆಯ ಮೆಟ್ಟಿಲನ್ನೇ ಹತ್ತದ, ಕುಟುಂಬ ಮತ್ತು ಪೋಷಕರಿಂದ ದುರುಪಯೋಗಕ್ಕೆ ಒಳಗಾಗುವ, ದತ್ತು ಹೋಗುವ, ಮಕ್ಕಳ ಸಾಗಣೆಗೆ ಒಳಗಾಗುವ, ಮೋಸ ಹೋಗುವ, ಕಳೆದು ಹೋದ, ಪೊಲೀಸರಿಗೆ ಸಿಕ್ಕಿರುವ, ಮಾದಕ ವಸ್ತುಗಳಿಗೆ, ಹೆಚ್.ಐ.ವಿ, ಏಡ್ಸ್ ಮುಂತಾದ ಭೀಕರ ರೋಗಕ್ಕೆ ತುತ್ತಾಗುವ…….. ಇಂತಹ ಅಸಂಖ್ಯ ಮಕ್ಕಳನ್ನು ನಮ್ಮ ಸುತ್ತ ನೋಡುತ್ತಲೇ ಇರುತ್ತೇವೆ. ಈ ಎಲ್ಲ ವಿಷಮ ಪರಿಸ್ಥಿತಿಗೂ ಅವರ ಮುಗ್ಧತೆ ಹಾಗೂ ಅಸಹಾಯಕತೆಯೇ ಮುಖ್ಯ ಕಾರಣ. ತೀರಾ ಇತ್ತೀಚೆಗಷ್ಟೇ ನಾವು ಮಕ್ಕಳನ್ನೂ ವ್ಯಕ್ತಿಗಳಂತೆ ಕಾಣಬೇಕು, ಅವರಿಗೂ ಹಿರಿಯರಿಗಿರುವಂತೆಯೇ ಸಂವಿಧಾನಾತ್ಮಕವಾದ ಹಕ್ಕುಗಳಿವೆ ಎಂದು ಅರಿಯಲು ಪ್ರಾರಂಭಿಸಿದ್ದೇವೆ. ಬೆಳಕಿಗೇ ಬರದೇ, ಎಲ್ಲಿಯೂ ದಾಖಲಾಗದೇ ಹೋಗುತ್ತಿದ್ದ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಕೆಲವಾದರೂ, ಇಂದು ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಿವೆ. ಆದರೆ ದೊಡ್ಡವರ ಈ ಪ್ರಪಂಚದಲ್ಲಿ ಮಕ್ಕಳಿಗೆ ನ್ಯಾಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 2448 ಮಕ್ಕಳ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 714 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಮಕ್ಕಳಿಗೆ ತುರ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಕ್ಕಳಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಇತ್ತೀಚೆಗೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. ಇದೊಂದು ಸ್ವಾಗತಾರ್ಹವಾದ ವಿಚಾರವೇ. ಸ್ಕಾಟ್‌ಲ್ಯಾಂಡ್‌ನಲ್ಲಿ 1996 ರಲ್ಲಿ ಪ್ರಥಮ ಮಕ್ಕಳ ನ್ಯಾಯಾಲಯ ಸ್ಥಾಪನೆಯಾದ ನಂತರ ಅನೇಕ ದೇಶಗಳಲ್ಲಿ ಇಂತಹ ವಿಶೇಷ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಕೇಂದ್ರ ಸರ್ಕಾರವು 2005 ರಲ್ಲೇ ಮಕ್ಕಳ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಆದರೆ ಈ ಆದೇಶವನ್ನು ಎಲ್ಲ ರಾಜ್ಯಗಳೂ ಕಳೆದ ಐದು ವರ್ಷಗಳಿಂದ ಉಲ್ಲಂಘಿಸುತ್ತಲೇ ಬಂದಿವೆ! ಹೋದ ವರ್ಷ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್, ತುರ್ತಾಗಿ ದೆಹಲಿಯಲ್ಲಿ ಮಕ್ಕಳ ನ್ಯಾಯಾಲಯ ಸ್ಥಾಪಿಸಲು ಆದೇಶ ನೀಡಿತ್ತು. ಅದೇನಾದರೂ ಕಾರ್ಯಗತಗೊಂಡಿದ್ದರೆ, ದೇಶದಲ್ಲೇ ಮೊದಲ ಮಕ್ಕಳ ನ್ಯಾಯಾಲಯ ಅಲ್ಲಿ ಸ್ಥಾಪನೆಯಾಗುತ್ತಿತ್ತು. ಆದರೆ ನಮ್ಮ ದೇಶಕ್ಕೇ ಹೊಸದಾಗಿರುವ ಈ ಮಕ್ಕಳ ನ್ಯಾಯಾಲಯದ ಪರಿಕಲ್ಪನೆಯ ನೀಲಿ ನಕಾಶೆಯೇ ಈವರೆಗೆ ಸಿದ್ಧಗೊಂಡಿಲ್ಲ!

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು 2011-12 ನೇ ವರ್ಷವನ್ನು ‘ಮಕ್ಕಳ ಹಕ್ಕುಗಳ ವರ್ಷ’ ಎಂದು ಘೋಷಿಸಿದೆ. Streetchildrenಈಗಾಗಲೇ ದೇಶದಲ್ಲಿ ಮಕ್ಕಳ ನ್ಯಾಯ [ಮಕ್ಕಳ ಪೋಷಣೆ ಮತ್ತು ರಕ್ಷಣೆ] ಕಾಯ್ದೆ 2000 ದಲ್ಲಿಯೇ ರಚನೆಗೊಂಡಿದೆ. ಈ ಕಾಯ್ದೆ ಕುರಿತು ಕರ್ನಾಟಕ ರಾಜ್ಯ 2002 ರಲ್ಲಿಯೇ ನಿಯಮವನ್ನು ಜಾರಿಗೆ ತಂದು, ಮಕ್ಕಳ ರಕ್ಷಣೆಗೆ ಬದ್ಧವಾಗಿರುವ ಸಂಕಲ್ಪ ಮಾಡಿದೆ. ಇದರ ಒಂದು ಭಾಗವಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು 2009 ರ ಜುಲೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಚಿಸಿದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯಿದೆ 2005 ರಡಿಯಲ್ಲಿನ ಸ್ವತಂತ್ರ ಶಾಸನಬದ್ಧ ಅಂಗಸಂಸ್ಥೆಯಾಗಿರುವ ಈ ಆಯೋಗವು ಭಾರತ ಸಂವಿಧಾನ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 1989 ರಲ್ಲಿ ಸ್ಪಷ್ಟಪಡಿಸಿರುವ ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಬೆಂಬಲ ನೀಡಲೆಂದೇ ರೂಪುಗೊಂಡಿದೆ.

ಇದರ ಜೊತೆಗೆ ಈಗಾಗಲೇ, ಮಕ್ಕಳ ಪೋಷಣೆ, ರಕ್ಷಣೆ ಮತ್ತು ಕಾನೂನಿನ ನೆರವಿನ ಹಿತದೃಷ್ಟಿಯಿಂದ ಶಾಸನಬದ್ಧವಾದ ನ್ಯಾಯವನ್ನು ಒದಗಿಸಲು ಕರ್ನಾಟಕ ಸರ್ಕಾರ ‘ಮಕ್ಕಳ ಕಲ್ಯಾಣ ಸಮಿತಿ’ಗಳನ್ನು 2003 ರಲ್ಲೇ ನೇಮಿಸಿದೆ. ಈ ಸಮಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರತಿ ಜಿಲ್ಲೆಯಲ್ಲಿಯೂ ನೇಮಕವಾಗಿದೆ. ಇದರಲ್ಲಿ 0-18 ವರ್ಷದವರೆಗಿನ ಮಕ್ಕಳು ಯಾವುದೇ ತಾರತಮ್ಯವಿಲ್ಲದಂತೆ ಪೋಷಣೆ, ರಕ್ಷಣೆ ಮತ್ತು ನ್ಯಾಯದ ನೆರವನ್ನು ಪಡೆಯುವ ಅವಕಾಶವಿದೆ. ಈ ಮಕ್ಕಳ ನ್ಯಾಯ ಮಂಡಳಿಯು ಮಕ್ಕಳ ನ್ಯಾಯ ಕಾಯ್ದೆಯ ಒಂದು ಅಂಗವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಮುಖ್ಯಸ್ಥರು ನ್ಯಾಯಾಧೀಶರಾಗಿದ್ದು, ಪ್ರಕರಣಗಳನ್ನು ನಡೆಸಲು ಇಬ್ಬರು ಸಮಾಜಸೇವಾ ಕಾರ್ಯಕರ್ತರಿರುತ್ತಾರೆ. ಜೊತೆಗೆ ಪದವಿ ಹೊಂದಿದ ಒಬ್ಬ ಅಧ್ಯಕ್ಷರು ಹಾಗೂ ಐದು ಜನ ಸದಸ್ಯರನ್ನೊಳಗೊಂಡ ಸಮಿತಿಯೂ ಕಾರ್ಯನಿರ್ವಹಿಸಬೇಕಿದೆ.

ಮಕ್ಕಳ ಹಿತರಕ್ಷಣೆಗಾಗಿಯೇ ಈ ಎಲ್ಲಾ ಸರ್ಕಾರಿ ಇಲಾಖೆ, ಆಯೋಗ, ಸಮಿತಿಗಳು ಇರುವಾಗ ಮತ್ತೆ ಪ್ರತ್ಯೇಕ, ವಿಶೇಷ ನ್ಯಾಯಾಲಯದ ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆ ಹಲವರದು. ಆದರೆ ಇವುಗಳೆಲ್ಲದರ ಮಧ್ಯೆ ಕೂಡ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. childlaboursಇದಕ್ಕೆ ಒಂದು ಉದಾಹರಣೆಯನ್ನು ನೋಡುವುದಾದರೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದು 25 ವರ್ಷಗಳೇ ಆಗಿದ್ದರೂ ಕರ್ನಾಟಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಬಾಲಕಾರ್ಮಿಕರಿರುವರೆಂದು ಬೆಂಗಳೂರಿನ ‘ಬಾಲ ಕಾರ್ಮಿಕ ವಿರೋಧಿ ಆಂದೋಲನ’ದ ವರದಿ ತಿಳಿಸುತ್ತದೆ. ಆದರೆ ಕಾಯ್ದೆಯಡಿ ಇದುವರೆಗೆ ದಾಖಲಾಗಿರುವುದು ಕೇವಲ 446 ಪ್ರಕರಣಗಳು! ಅದರಲ್ಲಿ ಶಿಕ್ಷೆಗೆ ಒಳಗಾದವರು ಒಬ್ಬರು ಮಾತ್ರ! ಇದು ನಮ್ಮ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ.

ಮಕ್ಕಳ ದೌರ್ಜನ್ಯದ ಕ್ಷೇತ್ರ ಅತ್ಯಂತ ವಿಸ್ತಾರವಾದುದು. ಈ ಎಲ್ಲ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ರೂಪುಗೊಂಡಿರುವ ವ್ಯವಸ್ಥೆಯ ಪರಿಧಿಯಾಚೆಗೇ ಇಂದಿಗೂ ಅಸಂಖ್ಯಾತ ಮಕ್ಕಳು ನಿತ್ಯ ಶೋಷಣೆಗೆ, ಸಂಕಷ್ಟಗಳಿಗೆ ಊಹಿಸಲೂ ಸಾಧ್ಯವಿಲ್ಲದ ರೀತಿಗಳಲ್ಲಿ ಗುರಿಯಾಗುತ್ತಲೇ ಇದ್ದಾರೆ. ಮಕ್ಕಳ ಸಂಬಂಧಿತ ಈ ಎಲ್ಲ ಸಂಸ್ಥೆಗಳು ಕ್ರಿಯಾಶೀಲವಾಗದೇ, ವಿಕೇಂದ್ರಿಕರಣಗೊಳ್ಳದೇ, ಅಧಿಕಾರಿಗಳ, ಸಿಬ್ಬಂದಿಯ ನಿರ್ಲಕ್ಷ್ಯ, ನಿಷ್ಕ್ರಿಯತೆಗೆ ಒಳಗಾಗಿ ಮತ್ತು ಎಲ್ಲಕ್ಕಿಂತಾ ಮುಖ್ಯವಾಗಿ ಮಕ್ಕಳೊಂದಿಗಿನ ನೇರ ಸಂಪರ್ಕದ ಕ್ಷೇತ್ರಕಾರ್ಯ ಮಾಡದೆ, ಮಕ್ಕಳ ಮನಸ್ಸಿನ ಸೂಕ್ಷ್ಮಗಳನ್ನರಿಯದೇ ನಿರೀಕ್ಷಿತ ಪ್ರಮಾಣದ ಕೆಲಸವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಬಾರಿ ಜಾತಿ ಹಾಗೂ ಸ್ಥಳೀಯ ರಾಜಕಾರಣದ ಪ್ರಭಾವ ಮತ್ತು ಒತ್ತಡದಲ್ಲಿ ಮಕ್ಕಳಿಗೆ ನ್ಯಾಯ ಒದಗಿಸುವಲ್ಲಿ ತಾರತಮ್ಯ ಹಾಗೂ ಲೋಪ ಉಂಟಾಗುತ್ತಿದೆ. ಪ್ರಕರಣ ದಾಖಲಾಗಿದ್ದರೂ, ಆಗದಿದ್ದರೂ ತೊಂದರೆಯಲ್ಲಿರುವ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ, ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥಗೊಳಿಸಿ ನ್ಯಾಯ ನೀಡುವ ವ್ಯವಸ್ಥೆಯನ್ನು ತುರ್ತಾಗಿ ಪುನರ್‌ರೂಪಿಸಬೇಕಿದೆ.