ನಿಂಗಮ್ಮನ ಹರಕೆ, ಸೂರಿದೇವರ ಗೂಳಿ : ಗಂಗೆ, ಗೌರಿ,..: ಭಾಗ–4

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು
ಭಾಗ – 3: ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು

ಭಾಗ – 4: ನಿಂಗಮ್ಮನ ಹರಕೆ, ಸೂರಿದೇವರ ಗೂಳಿ

ಉಳುವ ಎತ್ತು/ಕೋಣ ಕಳಿಹಾಕಿದರೆ, ಕರೆವ ಹಸು ಹಾಲಿಳಿಸದಿದ್ದರೆ, ಗಬ್ಬಕಟ್ಟಿ ಕರುಹಾಕದಿದ್ದರೆ, ಕಾಲುಕುಂಟಿದರೆ, ಕೈತಪ್ಪಿ ಹೋಗಿಯೇ ಬಿಟ್ಟಿತೆಂಬ ಕಾಯಿಲೆಗೆ ತುತ್ತಾದರೆ-ಹೀಗೆ ಹಸುಗಳ ಮೇಲೆಹರಕೆಗಳು ಹುಟ್ಟಿಕೊಳ್ಳುವುದಕ್ಕೆ ಕಾರಣಗಳು ಹಲವು. ನಾಗ, ಬೊಬ್ಬರ್ಯ, ಹೈಗುಳಿ, ಚೌಂಡಿ, ಕೀಳು ಹೀಗೆ ಸರದಿಯ ಮೇಲೆ ಹಟ್ಟಿಯ ಹಸುವಿನ ಮೇಲಿನ ಮೌಲು ಹಾಳಾಗದ ಹಾಗೆ ಕಾದುಕೊಡುವ ಸೈನಿಕರಿಗೆ ತೆಂಗಿನಕಾಯಿ, ಹಸುವಿನ ಹಾಲು,ಕೋಳಿ-ಪಾಳಿ ಇನ್ನು ಏನೇನೋ ಹರಕೆ ಹೇಳಿಕೊಂಡು ಸಂದಾಯ ಮಾಡಿ ‘ಚಾಷ್ಟಿ’ (ಚೇಷ್ಟೆ) ಆಗದ ಹಾಗೆ ಜಾಗೃತೆವಹಿಸದೆ ಹೋದರೆ ಹಟ್ಟಿ ಖಾಲಿಯಾದೀತೆಂಬ ಭಯ. Pongal-calfಈ ಭಯ-ಭಕ್ತಿಯ ಭಾಗವಾಗಿ ಅಮ್ಮನವರಮನೆಗೆ (ಈಗ ಅವುಗಳೆಲ್ಲಾ ಪರಮೇಶ್ವರಿಯ ದೇವಸ್ಥಾನಗಳಾಗಿವೆ!) ಹಸು ಕರುವನ್ನೇ ಬಿಡುವ ಕ್ರಮವೂ ಇದೆ. ಇದೊಂತರಹ ಹಸುಗಳ ಪಾಲಿಗೆ ವಿಮೆ ಮಾಡಿಸಿದ ಹಾಗೆ!

ನನ್ನ ಅಕ್ಕಪಕ್ಕದ ಮನೆಗಳೆರಡರಲ್ಲಿ ಎರಡು ಕುತೂಹಲಕಾರಿ ಹಸುಸಂಬಂಧಿ ಹರಕೆಗಳಿದ್ದವು. ಒಂದು ಮನೆಯಲ್ಲಿ ಕಮ್ರಸಾಲಿನಿಂಗಮ್ಮ (ಕಮಲಶಿಲೆ ಬ್ರಾಹ್ಮೀದುರ್ಗಾಪರಮೇಶ್ವರಿ!)ನ ಹೆಸರು ಹೇಳಿ ಬಿಟ್ಟ ಹರಕೆಯ ಚಾಲ್ತಿ ರೂಪವಿದೆ. ಇನ್ನೊಂದು ಮನೆಯಲ್ಲಿ ನಾನು ಮತ್ತೆಲ್ಲೂ ಕೇಳಿರದ ಸೂರೀ ದೇವರಿಗೆ (ಸೂರ್ಯ ದೇವರಿಗೆ) ಬಿಟ್ಟ ಹರಕೆ ನಡೆದುಕೊಂಡು ಬರುತ್ತಿತ್ತು ಮಾತ್ರವಲ್ಲ ಈಗಲೂ ಇದೆ. ನಿಂಗಮ್ಮನಿಗೆ ಹರಕೆಬಿಟ್ಟ ಹಸುವಿನ ಕರುಮರಿ ಮಾಡಿ ಕರಾವು ಮಾಡಿಕೊಂಡು ಉಣ್ಣುವುದಕ್ಕೆ ತೆರಿಗೆ ಕಟ್ಟುವ ಹಾಗೆ ವರ್ಷಕ್ಕೊಂದಾವರ್ತಿ ನಿಂಗಮ್ಮನಿಗೆ ಹಾಲು,ತುಪ್ಪ ಒಪ್ಪಿಸಿ ಕಾಸುರುಬಿ (ಕಾಸುರೂಪಾಯಿ) ಕಾಣಿಕೆ ಸಲ್ಲಿಸುವ ಕ್ರಮವಿತ್ತು. ಈ ಹಸುವಿನ ಹೆಣ್ಣು ಕರುಗಳೆಲ್ಲಾ ನಿಂಗಮ್ಮ ಕೊಟ್ಟ ಸಂತಾನವಾಗಿ ಆ ಹಟ್ಟಿಯಲ್ಲಿಯೇ ಹರಕೆಯ ನಿಯಮಕ್ಕೊಳಪಟ್ಟು ಸಾಕಲ್ಪಡುತ್ತಿದ್ದವು. ಆದರೆ ಗಂಡು ಕರುಗಳನ್ನು ಅಲ್ಲಿಗೇ ಹೊಡೆದು ಬರಬಹುದು, ಇಲ್ಲವೇ ಅವುಗಳನ್ನು ‘ಯಾರಿಗಾದರೂ’ ಮಾರಿದರೆ ಮೌಲು ಹಾಕಬೇಕಾಗಿತ್ತು.

ನಿಂಗಮ್ಮನ ಹರಕೆಯಲ್ಲಿ ಹರಕೆ ಸಂದಾಯ ಮಾಡುವ ದಾರಿಯ ಬಗ್ಗೆ ಹೆಚ್ಚು ಗೊಂದಲ ಇರಲಿಲ್ಲ. ಆದರೆ ಸೂರೀದೇವರ ಹರಕೆಯ ಕರುಮರಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಇರಲಿಲ್ಲ. ಈ ಹಸುವಿನ ಕರುಗಳನ್ನು ಮಾರುವುದಕ್ಕಿಲ್ಲ. ಹರಕೆ ಸಂದಾಯದ ಭಾಗವಾಗಿ ಬೆಳಿಗ್ಗೆ ಹಾಲು ಕರೆದು (ಹಾಲುತಿಂಡಿ) ಒಳತರುವಾಗ ಪಾತ್ರೆಯನ್ನು ಸೆರಗಿನಿಂದ ಮುಚ್ಚದೆ, ತೆರೆದುಕೊಂಡೇ ತರಬೇಕು. ಒಳತರುವ ಮುನ್ನ ತುಳಸಿಕಟ್ಟೆಯ ಎದುರಿಗೆ ಮೂಡುದಿಕ್ಕಿನ ಸೂರ್ಯನಿಗೆ ತೋರಿಸಿ, ಒಂದಿಷ್ಟು ಹಾಲನ್ನು ತುಳಸಿಬುಡಕ್ಕೆ ಬಿಟ್ಟು ನಂತರ ತಮ್ಮ ಉಪಯೋಗಕ್ಕಾಗಿ ಮನೆಯ ಒಳಕ್ಕೆ ಕೊಂಡೊಯ್ಯುವ ಕ್ರಮ ಹರಕೆ ಸಂದಾಯದ ದಿನಚರಿಯ ಭಾಗವಾಗಿತ್ತು. ಹಾಲು ಮಾರುವುದಕ್ಕೆ , ಮಜ್ಜಿಗೆ ಮೊಸರು ತಿನ್ನುವುದಕ್ಕೆ ತಕರಾರಿರದ ಈ ಹರಕೆಯಲ್ಲಿ ‘ಹಣ’ ಎಂಬುದರ ಪ್ರಶ್ನೆಯೇ ಇರಲಿಲ್ಲ. ಶುದ್ಧ ಆದಿಮಸ್ವರೂಪದ ವಿಕ್ರಯ ವಿಲೇವಾರಿಯಿರದ ಈ ಹರಕೆಯಲ್ಲಿ ಯಾವುದೇ ನಿರ್ದಿಷ್ಟ ದೈವ ಕೇಂದ್ರದ ಕಲ್ಪನೆಯೂ ಇಲ್ಲ. ವಸ್ತುರೂಪದ ಸಂದಾಯವೂ ಇಲ್ಲ.bull ಭಾವನೆಯ ಬುನಾದಿಯಲ್ಲಿ ಕಟ್ಟಲಾಗಿದ್ದ ಪರಿಹಾರದ ಸುಲಭದಾರಿಗಳಿಲ್ಲದ ಈ ಹರಕೆಯಲ್ಲಿ ಅಳಿದುಳಿದು ಬದುಕಿ ಬಿಡುವ ಗಂಡುಕರುಗಳದ್ದೇ ಸಮಸ್ಯೆ. ಅವುಗಳನ್ನು ಬೀಜ ಒಡೆಯುವಂತಿಲ್ಲ (ಶೀಲ ಮಾಡುವಂತಿಲ್ಲ). ಶೀಲಮಾಡದೆ ಉಳಲು ಬಳಸುವುದು ಅಷ್ಟು ಸುಲಭವಲ್ಲ. ಜೀವಿತದುದ್ದಕ್ಕೂ ಮನೆಯ ಹಟ್ಟಿಯಲ್ಲಿಯೇ ಅವನ್ನು ಉಳಿಸಿಕೊಳ್ಳಬೇಕಾಗಿತ್ತು. ಉಳಿದ ಹರಕೆಗಳಲ್ಲಿ ಅಂದರೆ ಧರ್ಮಸ್ಥಳದ ಅಣ್ಣಪ್ಪನಿಗೋ, ಹಿರಿಯಡಕದ ಅಬ್ಬಗದಾರಕನಿಗೋ ಬಿಡುವ ಗಂಡು ಕರುಗಳನ್ನು ಅಲ್ಲಿಗೇ ಹೊಡೆದು ಬರಬೇಕಾಗಿರಲಿಲ್ಲ. ಅವುಗಳನ್ನು ಉಳುವವರಿಗೋ,ತಿನ್ನುವವರಿಗೋ ಮಾರಿ ಮೌಲು ಕಳಿಸಿದರೆ ಮುಗಿಯಿತು. ಅಣ್ಣಪ್ಪ ದೇವರಿಗೆ ಹರಕೆಬಿಟ್ಟ ಗಂಡುಕೋಳಿಯನ್ನು ಗೃಹಸ್ಥರು ಕಟ್ಟುವ ರೇಟಿಗೆ ಕೊಟ್ಟು ಮೌಲು ಕಳಿಸುವ ಕ್ರಮದಷ್ಟೆ ಸರಳವಿದು. ಆದರೆ ಸೂರೀದೇವರ ಹರಕೆಯಲ್ಲಿ ಇದಕ್ಕೆ ಅವಕಾಶವಿರಲಿಲ್ಲ.

ಮೇಲೆ ಹೇಳಲಾದ ಕಮ್ರಸಾಲಿ ಮತ್ತು ಸೂರೀದೇವರ ಹರಕೆಯ ಕುಡಿಗಳು ಈಗಲೂ ಆ ಎರಡು ಮನೆಗಳಲ್ಲಿ ಮುಂದುವರೆದುಕೊಂಡು ಬಂದಿವೆ. ನನ್ನ ದಾಯದ್ಯರೇ ಆದ ನನ್ನ ಪಕ್ಕದಮನೆಯಲ್ಲಿ ಕಮ್ರಸಾಲಿಗೆ ಬಿಟ್ಟದ್ದೆಂದು ಹೇಳಲಾಗುವ ರತ್ನು ಎಂಬ ದನವಿತ್ತು. ನನಗೆ ಬುದ್ಧಿ ಬರುವಾಗಲೇ 3-4 ಕರುಹಾಕಿ ಮುಗಿಸಿರುವ ಈ ಹಸು ದಿನಕ್ಕೆ 2-3 ಸಿದ್ದೆ ಹಾಲು ಕೊಡುತ್ತಿದ್ದ ಕಿರುಗಾತ್ರದ ಬೂದುಗೆಂಪು ಬಣ್ಣದ್ದು. ತಲೆಯ ಮೇಲೆ ಬೆಳ್ಳನೆಯ ಬೆರಳಿನಷ್ಟೇ ಉದ್ದದ ಅಲುಗಾಡುವ ಪುಟ್ಟ ಪುಟ್ಟ ಹಾಲುಗೋಡುಗಳನ್ನು ಹೊಂದಿದ್ದ ಈ ಹಸುವಿನ ಬಗೆಗೆ ಅಕ್ಕಪಕ್ಕದ ಮನೆಗಳಲ್ಲಿ ಒಳ್ಳೆಯ ಮಾತೆಂಬುದೇ ಇರಲಿಲ್ಲ. ಎಂತಹ ಬೇಲಿಯನ್ನಾದರೂ ಹಂದಿಯ ಹಾಗೆ ತೂರಿಕೊಂಡು ಕಳ್ಳನ ಹಾಗೆ ನುಗ್ಗಿ ಬಿಡುವ ಛಾತಿಯ ಹಸುವಿದು. ಈ ಹಸು ತಿಂದ ಬೆಳೆಗಳು ಅಲ್ಲಿಯೇ ಕಮರಿಹೋಗುತ್ತವೆ ಎಂಬುದಾಗಿ ಆಡಿಕೊಳ್ಳುತ್ತಿದ್ದ ಊರಮಂದಿ ಇದನ್ನು ಒಡುವಿನಂತೆ ಕಬರು ನಾಲಿಗೆಯದ್ದೆಂದೂ (ಉಡ/ಒಡು = ಅರಿಷ್ಟದ ಪ್ರಾಣಿ), ಅರಿಷ್ಟ ಹಿಡಿದದ್ದೆಂದೂ ಕರೆಯತ್ತಿದ್ದುದನ್ನು ಕೇಳಿದ್ದೇನೆ. ನನ್ನಪ್ಪನಂತೂ ಈ ದನವನ್ನು ಕಂಡರೇ ಕುದಿಯುತ್ತಿದ್ದುದನ್ನು ಕಂಡಿದ್ದೇನೆ. ನೋಡಲು ಪಾಪದ ನಿರುಪದ್ರವಿಯಂತೆ ಕಾಣಿಸುತತ್ತಿದ್ದ ಈ ದನ ನುಗ್ಗಿ ಬಾಯಿ ಹಾಕಿದ ಬೆಳೆ ಹಾಳಾಯಿತೆಂದೇ ಊರಲ್ಲನೇಕರು ಭಯಪಡುತ್ತಿದ್ದರು. ನಮ್ಮ ತಂದೆ ಹೊಳೆ ಬದಿಯಲ್ಲಿ ತಮ್ಮೆಲ್ಲಾ ಶ್ರಮ ಹಾಕಿ ಮಕ್ಕಳಂತೆ ಬೆಳೆಸಿದ ಮೆಣಸಿನ ಹಿತ್ತಲಿಗೆ ಎಂತಹದೇ ಬೇಲಿ ಮಾಡಿದರೂ ಈ ದನ ಅದನ್ನು ತಿನ್ನದೇ ಬಿಟ್ಟ ವರ್ಷವೇ ಇಲ್ಲ. ಹೆಚ್ಚು ವೇಗವಾಗಿ ಓಡಲಾರದ, decorated-bullಎಂತಹ ಬೇಲಿಯನ್ನಾದರೂ ನುಸಿಯುವ ಈ ದನ ತೊಂಡು ತಿನ್ನುವಾಗ ಸಿಕ್ಕಿದರೆ ಇದನ್ನೇನು ದೇವರಿಗೆ ಬಿಟ್ಟದನ ಎಂದು ಯಾರೂ ರಿಯಾಯಿತಿ ತೋರುತ್ತಿರಲಿಲ್ಲ. ಸಿಕ್ಕಿದಲ್ಲಿ ಬುಡ್ಡುಬುಡ್ಡು ಅಂತ ಹೇರುತ್ತಿದ್ದರು. (ಹೊಡೆಯುತ್ತಿದ್ರು). ಇಷ್ಟೆಲ್ಲ ಮಾಡಿ ಅದು ಕರೆಯುತ್ತಿದ್ದುದೇನೂ ಲೀಟರ್‌ಗಟ್ಟಲೆಯಾಗಿರಲಿಲ್ಲ. ಹಾಗಾಗಿ ಸಾಕಿದವರಿಗೆ ಕರೆಯುವ ಹಾಲಿನ ಪಾತ್ರೆ ತುಂಬಿಸದೆ ಹೋದರೂ ಕಿವಿತುಂಬ ಬೈಗುಳ ತುಂಬಿಸದೇ ಬಿಡುತ್ತಿರಲಿಲ್ಲ. ಗದ್ದೆಗಳಿಗೆ ನುಗ್ಗುವ ಪ್ರತೀ ಬಾರಿಯೂ ಶಾಪವನ್ನೇ ಬಳುವಳಿಯಾಗಿ ಪಡೆಯುತ್ತಿದ್ದ ‘ರತ್ನು’ ತನ್ನ ಮೈಯಲ್ಲಿ ಕಸುವು ಇರುವಲ್ಲಿಯವರೆಗೂ ಕಾಡುವುದನ್ನು ಬಿಡಲಿಲ್ಲ. ಜತೆಗೆ ಈ ಪುಣ್ಯಾತಗಿತ್ತಿ ಹಸುವಿನ ಬಳುವಳಿಯಾಗಿ ಬದುಕಿದ್ದು ಒಂದೋ ಎರಡೋ ಹೆಣ್ಣು ಕರುಗಳು ಮಾತ್ರ.. ಮತ್ತುಳಿದಂತೆ ಬದುಕಿದ ಕೆಲವು ಗಂಡುಕರುಗಳು ಮೌಲಾಗಿ ಪರಿವರ್ತಿಸಲ್ಪಟ್ಟು ನಿಂಗಮ್ಮನ ಕಾಣಿಕೆ ಹುಂಡಿ ಸೇರಿದುವು. ಕಸುವಿರುವ ತನಕ ಕಾಡುತ್ತಾ, ಕರುಹಾಕುತ್ತಾ ಬದುಕಿದ ರತ್ನು, ಮುದಿ ಅವಸ್ಥೆಯಲ್ಲಿ ತನ್ನ ಮೇಲೆ ಈ ಹಿಂದೆಬಿದ್ದ ಸಾಪುಳಿ (ಶಾಪದಉಲಿ) ಯನ್ನೆಲ್ಲಾ ತಾನೇ ಅನುಭವಿಸಿ ತೀರಿಸುವಂತೆ ಒಣಹುಲ್ಲು ಜಗಿಯಲಾರದೆ, ನಡೆಯಲು ತ್ರಾಸಪಡತೊಡಗಿತು. ಅದೇನು ದೊಡ್ಡಗಾತ್ರದ ಹಸುವಾಗಿರಲಿಲ್ಲ. ಒಂದಿಬ್ಬರು ಆರಾಮವಾಗಿ ಅದನ್ನು ಎತ್ತಿ ನಿಲ್ಲಿಸಬಹುದಿತ್ತು. ಆದರೆ ಆ ಒಂದಿಬ್ಬರು ಮನೆಯಲ್ಲಿ ಇರಬೇಡವೇ? ಇಲ್ಲಿಯವರೆಗೆ ನಿಂಗಮ್ಮನ ಹರಕೆಯ ಹೊರೆ ಅರ್ಥವಾಗದ ಮನೆಮಂದಿಗೆ ಹಟ್ಟಿಯಲ್ಲ್ಲಿಯೇ ಮಲಗಿ ಗಾಯವಾಗಿ ಹುಳಪಳ ಆಗಿ ನವೆಯತೊಡಗಿದಾಗ ಆದಷ್ಟು ಬೇಗ ಸಾವಿನ ಮೂಲಕವಾದರೂ ಅದರ ನೋವಿಗೆ ಪರಿಹಾರ ಸಿಕ್ಕಲಿ ಎಂದು ಬೇಡತೊಡಗಿದರು. ಒಂದೆರೆಡು ತಿಂಗಳು ಕೊರಗಿ ಕೊನೆಗೂ ಸತ್ತು ಹೋದ ರತ್ನುವನ್ನು ಹಟ್ಟಿಯಿಂದ ಕದಲಿಸಿ ಹಪ್ಪುಗಳ (ರಣಹದ್ದಿಗೆ) ಬಾಯಿಗೆ ಆಹಾರವಾಗಿಸಲು ಅದನ್ನು ಸಾಕಿ ಈಗ ಮುದಿಯಾಗಿ ಕುಳಿತ ಯಜಮಾನದಂಪತಿಯೇ ತ್ರಾಸ ಪಡಬೇಕಾಯಿತು. ಅದನ್ನು ಸಾಕಿದ ಕಾರಣದಿಂದಾಗಿ ಅದರ ಹಾಲಿಗಿಂತ ತುಸು ಹೆಚ್ಚೇ ಬೈಗುಳ ತಿಂದ ಆ ಮುದಿ ಗಂಡ-ಹೆಂಡತಿಯೇ ಒದ್ದಾಡಬೇಕಾಗಿ ಬಂತು. ಅದು ಅನಿವಾರ್‍ಯವೂ ಹೌದು. ಯಾಕೆಂದರೆ ಅನ್ನ ಹುಡುಕುವ ಅನಿವಾರ್‍ಯತೆಯಲ್ಲಿ ಮನೆಯಲ್ಲಿ ಹುಟ್ಟಿದವರೆಲ್ಲಾ ಮನೆಯಲ್ಲಿಯೇ ಕೂರಲಾದೀತೆ? ಅಪ್ಪ-ಅಮ್ಮನನ್ನು ನೋಡಲು ವರ್ಷಕ್ಕೊಂದಾವರ್ತಿ ನೋಡಲು ಬರುವ ಅವರ ಮಕ್ಕಳಿಗೆ ಮುದಿರತ್ನುವನ್ನು ಸಾಕುತ್ತಾ ಕೂತುಬಿಡಿ ಎನ್ನಲಾದೀತೆ? ಅವರ ಹೊಟ್ಟೆ ಮತ್ತು ಆ ಹೊಟ್ಟೆಯಲ್ಲಿ ಮತ್ತೆ ಹುಟ್ಟುವವರ ಹೊಟ್ಟೆಗಳ ಪ್ರಶ್ನೆ ರತ್ನುವಿಗಿಂತಲೂ ಕಂಡಿತಾ ದೊಡ್ಡದಲ್ಲವೆ? ಅಂತೂ ನಿಂಗಮ್ಮನ ಹರಕೆಯ ಹಸು ಕೊನೆಗೂ ಹೆಣವಾಗಿ, ಮೂಳೆಯಾಗಿ ಹಾಡಿಯಲ್ಲಿ ಚದುರಿ ಹೋಯಿತು.

ಹಟ್ಟಿಯ ಹಸುವನ್ನು ಹುಲಿ ಹಿಡಿದು ತಿನ್ನುತ್ತಿದ್ದ ಕಾಲದಲ್ಲಿ ‘ಸೂರೀದೇವರೇ ನೀನೇ ಕಾದುಕೊಡು’ ಎಂದು ಹೇಳಿಕೊಂಡು ಆರಂಭಿಸಿದ ಹರಕೆಯೆಂಬಂತೆ ಪ್ರತೀತಿಯುಳ್ಳ ಹರಕೆಯನ್ನು ಪಾಲಿಸುತ್ತಿದ್ದ ಇನ್ನೊಂದು ಮನೆಯಲ್ಲಿ ಹುಟ್ಟಿದವುಗಳಲ್ಲಿ ಸತ್ತು-ಬದುಕಿ ಅಂತೂ ಕೆಲವು ಕರುಮರಿಗಳಿದ್ದವು. ಈ ಹರಕೆಯ ಗಂಭೀರ ಪರಿಣಾಮವನ್ನು ಹರಕೆಯಾಚರಣೆಯ ಮನೆಯವರು, ಊರವರು ಅನುಭವಿಸುವಂತಾದುದು ಪಾಪದ ಹೆಣ್ಣುಕರುಗಳಿಂದಲ್ಲ. ಬದಲಾಗಿ ಶೀಲಮಾಡಲು ನಿಷೇಧವಿರುವ ಕಾರಣಕ್ಕಾಗಿ ಸೊಕ್ಕಿದ ಗಂಡುಗೂಳಿಯಿಂದ. ಮೈಕೈ ತುಂಬಿಕೊಂಡು ಗುಟುರು ಹಾಕುತ್ತಾ ಗದ್ದೆ ಅಂಚುಗಳನ್ನು ತನ್ನ ಎಳೆಗೋಡುಗಳ ತೀಟೆಗೆ ಉದುರಿಸುತ್ತಿದ್ದ ಗುಡ್ಡನ(ಗೂಳಿಯ)ಕೋಡು ಮನುಷ್ಯರ ಕಡೆಗೆ ತಿರುಗಲು ಹೊರಟಾಗಲೇ ಅಪಾಯ ಆರಂಭವಾದುದು. ಸೊಕ್ಕಿನ ಈ ಗುಡ್ಡ ಗಾತ್ರದಲ್ಲಿ ಬಹಳವಾಗಿಯೇನು ಇರಲಿಲ್ಲ. ಹಾಗಿದ್ದೂ ಊರಿನ ಬೆದೆಹಸುಗಳ ಯಜಮಾನನಾಗಿ ಕಂಡವರ ಹಟ್ಟಿಗೆ ದಾಳಿಯಿಟ್ಟು ಪ್ರತಾಪ ತೋರಿಸಲು ತೊಡಗಿ, ಪ್ರಾಯದ ಎತ್ತುಗಳ ಜತೆಗೆ ಇದರ ಹೊ ಕೈ ನಿತ್ಯದ ಸಂಗತಿಯಾಯ್ತು. ರಾಜನಹಾಗೆ ಗುಟುರುಹಾಕುತ್ತಾ ಬೆದೆಬರಿಸಿದ ಹಸುಗಳಿಗೆಲ್ಲಾ ಹುಟ್ಟಿದವುಗಳು ಇದಕ್ಕಿಂತಲೂ ಚಿಕ್ಕ ಮಾವಿನಕಾಯಿ ಗಾತ್ರದ ಕರುಗಳೇ ಆದವು. ಆರಂಭದಲ್ಲಿ ಮನೆಮಂದಿಗೆ ತಕರಾರು ಮಾಡದಿರುತ್ತಿದ್ದ ಗುಡ್ಡ ಊರಲ್ಲಿರುವ ಮಕ್ಕಳು, ಹೆಂಗಸರ ಪಾಲಿನ ಆತಂಕವಷ್ಟೇ ಆಗಿತ್ತು. ಬರಬರುತ್ತಾ ಮನೆಮಂದಿಯೇ ಆದ ಬಚ್ಚಣ್ಣ, ಅಣ್ಣಪ್ಪಣ್ಣನಂತವರನ್ನು ಹೊರಳಾಡಿಸಿಕೊಂಡು ಗುದ್ದಿತು. ಬೆದೆಗೆ ಒಂದು ಬೀಜದ ಗುಡ್ಡವಿದೆಯಲ್ಲಾ ಎಂಬ ನೆಮ್ಮದಿಯ ನಡುವೆಯೇ ಇದರ ಉಪಟಳಕ್ಕಾಗಿ ಇಷ್ಟು ದಿನ ಊರ ಮಂದಿ ಬೈಯುತ್ತಿದ್ದರು. ಈಗ ಮನೆಮಂದಿಯೂ ಅದರ ಮೇಲೆ ವ್ಯಗ್ರರಾಗತೊಡಗಿದರು. bull-Jallikattuಒಮ್ಮೆ ಮನೆ ಹುಡುಗನೊಬ್ಬನ ಎಡವಟ್ಟಿನಿಂದ ಈ ಗೂಳಿಯಿರುವ ಹಟ್ಟಿಗೆ ಬಲಿಪಾಡ್ಯದಂದು ರಾತ್ರಿ ಬೆಂಕಿ ಬಿದ್ದಿತ್ತು. ಆಗ ಪ್ರಾಣ ರಕ್ಷಣೆಗಾಗಿ ಹಟ್ಟಿಯಲ್ಲಿರುವ ಹಸುಗಳ ಕೊರಳ ಬಳ್ಳಿಯನ್ನು ಕತ್ತರಿಸಿ ಬಿಡಲಾಯಿತು. ಈ ವೇಳೆಯಲ್ಲಿ ಹಟ್ಟಿಯಿಂದ ಹೊರಬಂದ ಆ ಗೂಳಿ ಇತರ ಹಸುಗಳೊಂದಿಗೆ ನಮ್ಮ ಹಿತ್ತಿಲಿಗೆ ನುಗ್ಗಿತ್ತು. ಅದು ಹಿತ್ತಲಲ್ಲಿದ್ದುದನ್ನು ಅರಿಯದ ನನ್ನಮ್ಮ ಕತ್ತಲೆಯಲ್ಲಿ ಅವುಗಳನ್ನು ಹೊರಗಟ್ಟಲು ಹೋಗಿ ಅಪಾಯಕ್ಕೆ ಸಿಕ್ಕಿದ್ದಳು. ಈ ಗೂಳಿಯ ಉಪಟಳ ಹೀಗೆ ದಿನೇ ದಿನೇ ಏರುತ್ತಾ ಹೋಯಿತು. ಹಣವೇ ಇಲ್ಲದ ಹರಕೆ ಮನೆಮಂದಿಗೆ ಪರಿಹಾರವೇ ಕಾಣದ ಸಮಸ್ಯೆಯಾಗಿ ಕಾಡತೊಡಗಿತು. ಕೊನೆಗೊಂದು ದಿನ ಸಂಬಂಧವೇ ಇರದಿದ್ದರೂ ಪರಿಹಾರಕ್ಕ್ಕಾಗಿ ಊರದೈವದ ದರ್ಶನದಲ್ಲಿ ಕೇಳಿಕೆಯಾಯ್ತು. ಸಿಕ್ಕ ಪರಹಾರ ಅದಕ್ಕೊಂದು ಎಣೆ(ಜೋಡು)ಮಾಡಿ ಮಾರಿ ಮೌಲನ್ನು ತನ್ನ ಹುಂಡಿಗೆ ಹಾಕುವಂತೆ ಕೊಟ್ಟ ಆದೇಶವಾಗಿತ್ತು. ಎಲ್ಲಿಯ ಸೂರ್‍ಯ ಇನ್ನೆಲ್ಲಿಯ ಮಕ್ಕಿಯಲ್ಲಿ ಕೂತ ನಂದಿ? ಏನೇ ಆಗಲಿ ಕೊನೆಗೂ ಹರಕೆಯ ಮನೆಯವರಿಗೆ ಪರಿಹಾರ ಸಿಕ್ಕಿದ ನೆಮ್ಮದಿ. ಮನೆಯವರಿಗಿಂತ ಹೆಚ್ಚಾಗಿ ಊರಿನ ಮಕ್ಕಳುಮರಿ, ಹೆಂಗಸರು ಅದು ಓಡಿಸಿಕೊಂಡು ಬರುವಾಗಿ ಸೀರೆಯೆತ್ತಿಕೊಂಡು ಓಡುವ ದಾರಿ ಹುಡುಕಬೇಕಾದ ಸ್ಥಿತಿ ತಪ್ಪಿದಕ್ಕಾಗಿ ಖುಷಿಪಟ್ಟರು. ಈ ಸಂಕಟಕಂಡು ಸೂರೀದೇವರಿಗೆ ಸಂಕಟವಾಯಿತೊ ಏನೋ. ಮತ್ತೆ ಅಂತಹ ಇನ್ನೊಂದು ಕಂಟಕ ಆ ಹಸುಗಳ ಒಡಲಿನಿಂದ ಹುಟ್ಟಿದರೂ ಬದುಕಲಿಲ್ಲ. ಆದರೆ ಅಲ್ಲಿಯೇ ಕಾಣುವಂತಾದ ಗೊಡ್ಡು ಹಸುವೊಂದನ್ನು ಗಬ್ಬ ಕಟ್ಟಿಸುವಲ್ಲಿ ಸೋತು, ಹಡ್ಲು-ಪಡ್ಲು ಎಳೆಸಿ ಏನೂ ಮಾಡಲಾರದೆ ಹರಕೆ ಹೊತ್ತ ಕಾರಣಕ್ಕಾಗಿ ಶಾಪಹಾಕಿಕೊಳ್ಳುತ್ತಾ ಐದು ನಯಾ ಪೈಸೆ ಪ್ರಯೋಜನ ಕಾಣದೆ ಬದುಕಿನುದ್ದಕ್ಕೂ ಸಾಕಿ ಸೈ ಎನಿಸಿ ನಿಟ್ಟುಸಿರುಬಿಟ್ಟರು.

ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು : ಗಂಗೆ, ಗೌರಿ,..: ಭಾಗ–3

– ಎಚ್.ಜಯಪ್ರಕಾಶ್ ಶೆಟ್ಟಿ

ಭಾಗ – 1: ಗಂಗೆ, ಗೌರಿ, ಕೆಂಪಿ, ಬುಡ್ಡಿಯರನ್ನು ಕೂಗಿ…
ಭಾಗ – 2: ಹಟ್ಟಿಯ ಅವತಾರ, ಹಕ್ಕಿಯ ಕೂಗು

ಭಾಗ – 3 : ನಮ್ಮ ಅಪ್ಪ ಎಮ್ಮೆ ಸಾಕಣೆ ಸಾಕುಮಾಡಿದ್ದು

ನಾನು ಕಂಡಂತೆ ನಮ್ಮ ಹಟ್ಟಿಯಲ್ಲಿ ಉಳುವುದಕ್ಕೆ ಕೋಣ/ಎತ್ತು, ಹಾಲಿಗಾಗಿ ಕೆಂಪಿದನ ಮತ್ತು ಚಿಕ್ಕು ಎಮ್ಮೆಗಳು ಬಹಳ ಕಾಲದವರೆಗೆ ಇದ್ದುವು. ಈ ನಡುವೆ ಮೊಳಹಳ್ಳಿಯ ಮಾವಿನಕಟ್ಟೆಯಲ್ಲಿ ಹಾಲುಡೈರಿ ಬರುವುದು ಅಂತಾದಮೇಲೆ ಅದರ ಪರವಾಗಿ ಮತ್ತೊಂದು ಎಮ್ಮೆ ತಂದೆವು. ಬೆಳ್ಳಗಿದ್ದ ಆ ಎಮ್ಮೆಯನ್ನು ಬೆಳ್ಳಿಎಂದು ಕರೆಯುತ್ತಿದ್ದೆವು. ಅದಕ್ಕಿಂತ ಮುಂಚೆ ಇದ್ದ ಚಿಕ್ಕುವಿಗಿಂತ ಗುಣದಲ್ಲಿ ಅದು ಸ್ವಲ್ಪ ಒಳ್ಳೆಯ ಎಮ್ಮೆ. ಎರಡು ಎಮ್ಮೆಗಳನ್ನು ಕಟ್ಟಿ ಸಾಕುವುದು ದುಸ್ತರವಾಗಿ ಚಿಕ್ಕು ಎಮ್ಮೆಯನ್ನು ಯಾರಿಗೋ ಮಾರಿಬಿಟ್ಟೆವು. ಈ ನಡುವೆ 6 ವರ್ಷಗಳವರೆಗೆ ಬೆಳ್ಳಿಯ ಕಾರುಬಾರು ನಡೆಯಿತು. ಆದರೆ ಅದರ ಒಂದೇ ಒಂದು ಕರುವನ್ನು ಉಳಿಸಿಕೊಳ್ಳಲಾಗಲಿಲ್ಲ. ಎಮ್ಮೆಕರುಗಳ ಕಿರುಕೋಡುಗಳು ಕಿವಿಯ ಮೂಲವನ್ನು ಕಳೆಯುವುದಕ್ಕಿಂತ ಮುಂಚಿತವಾಗಿಯೇ ಅವು ಹೊಟ್ಟೆಬಾತುಕೊಂಡೋ, ಕಾಲುಸೋತೋ, ಸಗಣಿಗಟ್ಟಿಯಾಗಿಯೋ, ಇನ್ನು ಏನೇನೋ ಆಗಿ ಸತ್ತು ಬಿಡುತ್ತಿದ್ದವು. ಕಣ್ಣ್ಹೆಡಿಗೆ(ಬೀಳಿನಹೆಡಿಗೆ)ಯಲ್ಲ್ಲಿ ಹಾಕಿಕೊಂಡು ನೇರಳಜಡ್ಡಿಗೆ ಕರುಗಳನ್ನು ಎಳೆದು ಹಾಕುವಾಗಲೇ ಒಂದಾದರೂ ಬದುಕಿದ್ರೆ ಒಳ್ಳೆಯದಾಗಿತ್ತು ಎಂದು ಆಸೆ ಕಣ್ಣಿನಿಂದ ನೋಡುವುದಷ್ಟೇ ನಮ್ಮ ಪಾಡಾಗಿತ್ತು. ಅಂತೂ ಈ ಸಾವಿನ ಸಾಲಿನ ನಡುವೆ ಒಂದು ಎಮ್ಮೆ ಕರು, ಅದೂ ಹೆಂಗರುವೊಂದು ಉಳಿದುಕೊಂಡು ಬಿಡ್ತು. ಪ್ರೀತಿಯ ಕರುವಿಗೆ ಮನೆಯ ಕಿರಿಮಗಳಿಗೆ ಇದ್ದ ಹೆಸರನ್ನೇ ಇಟ್ಟು ಹುಲ್ಲು ತಿನ್ನಿಸಿ, ಹಿಂಡಿಕೊಟ್ಟು ಅದರ ಚಿಕ್ಕ ಚಿಕ್ಕ ಕೋಡುಗಳು ಕಿವಿಯಬುಡಬಿಟ್ಟು ಮುಂದುವರೆಯುತ್ತಿದ್ದಂತೆ ನಮಗೆ ಯುದ್ಧಗೆದ್ದ ಸಂಭ್ರಮವಿತ್ತು. ಅದು ನಿಜವೂ ಆಗುವಂತೆ ಕರು ಮೈಕೈ ತುಂಬಿಕೊಂಡು ಬೆಳೆದೇ ಬಿಟ್ಟಿತ್ತು!

ಅದು ಬೆಳೆಯಿತು. ಬೆಳೆದು ಕರುವಾದದ್ದು ಕಡಸಾಯಿತು. ಈ ನಡುವೆ ಅದಕ್ಕೊಂದು ಕೆಟ್ಟ ಚಾಳಿ ಅಂಟಿಕೊಂಡಿತು. ಬಟ್ಟೆ ಕಂಡಿತೆಂದರೆ ಹುಲ್ಲನ್ನೂ ಬಿಟ್ಟು ಬಟ್ಟೆಯನ್ನು ಬಾಯಿಗಿಟ್ಟು ಅಗಿದು ಹಾಕುತ್ತಿತ್ತು. ಕಂಡವರು ತೊಳೆದು ಒಣಗಿಸಿದ ಬಟ್ಟೆ ತಿನ್ನುವುದಕ್ಕೆ ಯಾವಾಗ ತೊಡಗಿತೋ ಅಲ್ಲಿಂದ ಪೇಚಿಗಿಟ್ಟುಕೊಂಡಿತು. ಆಚೀಚೆ ಮನೆಯವರು ಎಮ್ಮೆಯ ಕರುವಿನ ಈ ಮಂಗಾಟಕ್ಕೆ ರೋಸಿ ಹೋಗಿ, ಸಾಕಿದವರಿಗೆ ಸೋಬಾನೆ ಹೇಳಲು ಶುರುಮಾಡಿದಾಗ ಈ ಚಾಳಿ ಬಿಡಿಸುವುದು ನಮ್ಮ ಪಾಲಿನ ಸವಾಲಾಯಿತು. ತಿನ್ನಲು ಬಟ್ಟೆಯನ್ನು ಎದುರಿಗೆ ಹಿಡಿದು ಮುಸುಡಿ ಒಡೆದು ಹೋಗುವಂತೆ ಹೊಡೆದು ನೋಡಿದೆವು. ಆದರೆ ನೆತ್ತರುಕಂಡದ್ದು ಬಂತಲ್ಲದೆ, ಚಾಳಿ ಬಿಡಿಸಲಾಗಲಿಲ್ಲ. ಬಟ್ಟೆಯೊಳಗಡೆ ಚೂರಿಮುಳ್ಳು ಇಟ್ಟುಕೊಟ್ಟೆವು. Cows-pastureಇದರಿಂದ ಆ ಬಟ್ಟೆಯನ್ನು ಹೊರಗೆ ಉಗಿಯಿತಲ್ಲದೆ ಚಾಳಿ ತಪ್ಪಲಿಲ್ಲ. ಕೊನೆಗೆ ಒಂದು ಮಹಾಸಾಹಸಕ್ಕೆ ಕೈ ಹಾಕಿದೆವು. ತಿನ್ನಲು ಬಟ್ಟೆಕೊಟ್ಟು ಅದರ ಕೆಳತುದಿಗೆ ಬೆಂಕಿಕೊಟ್ಟೆವು. ಬಟ್ಟೆ ಕೊಟ್ಟ ತಕ್ಷಣ ಸಿಹಿತಿಂಡಿ ಸಿಕ್ಕವರಂತೆ ಅರ್ಧಬಟ್ಟೆಯನ್ನು ನಮ್ಮ ಕಣ್ಣೆದುರೇ ಜಗಿಯಹತ್ತಿದ ಮೇಲೆ ಅದನ್ನು ಹೆದರಿಸುವುದಕ್ಕಾಗಿ ಬಟ್ಟೆಯ ಹೊರತುದಿಗೆ ಬೆಂಕಿ ಕೊಟ್ಟೆವು. ಬಾಯಿಯ ಬಟ್ಟೆಯನ್ನು ಉಗಿಯುವ ದಾರಿಕಾಣದೆ ಮತ್ತು ಇಲ್ಲಿಯವರೆಗೆ ಬೆಂಕಿಯಿಂದ ಅಂತಹ ಅನುಭವವನ್ನೇ ಹೊಂದಿರದ ಆ ಕೆಟ್ಟಚಾಳಿಯ ಎಮ್ಮೆಯಕರು ಬೆಂಕಿಯನ್ನೂ ಲೆಕ್ಕಿಸದೆ ಬಟ್ಟೆಯ ಚಂಡೆಯನ್ನು ಜಗಿಯತೊಡಗಿದ್ದರಿಂದ ಅದರ ಮುಖ ಮೂತಿ ಸುಟ್ಟುಹೋಗಿ ಕೊನೆಗೂ ಬಟ್ಟೆಯನ್ನು ಹೊರಕ್ಕೆ ಉಗಿಯಿತು. ಬೆಂಕಿ ಹಿಡಿದ ಬಟ್ಟೆಯನ್ನು ಹೊರಕ್ಕುಗಿದ ಮೇಲೆ ಬೇರೆ ಇನ್ನೊಂದು ಬಟ್ಟೆತುಂಡನ್ನು ಕೊಟ್ಟೆವಾದರೂ ಹೆದರಿದ ಎಮ್ಮೆಕರು ಬಟ್ಟೆಗೆ ಬಾಯಿಹಾಕಲಿಲ್ಲ. ಬಟ್ಟೆಯ ಮೇಲೆ ಹಾತೊರೆಯುವುದು ಕಡಿಮೆಯಾಯಿತೆಂಬ ಖುಷಿಯ ನಡುವೆಯೂ ನಮಗೆ ಇದರ ಪರಿಣಾಮದ ಬಗೆಗೆ ಭಯವಿತ್ತು. ಹಾಗಾಗಿ ಸುಟ್ಟಗಾಯಕ್ಕೆ ಏನೂ ಆಗದಿರಲಿ ಎಂದು ಒಂದಷ್ಟು ಎಣ್ಣೆ ಉದ್ದಿ ಅಪ್ಪನಿಗೆ ಹೇಳದೆ ಸುಮ್ಮನಾದೆವು. ಆದರೆ ಒಂದೆರಡು ದಿನದಲ್ಲಿ ನಮ್ಮ ಭಯ ನಿಜಗೊಂಡಿತ್ತು. ಸುಟ್ಟಗಾಯಕ್ಕೆ ನಾವು ಅಂದು ಲೇಪಿಸಿದ ಎಣ್ಣೆ-ಬೆಣ್ಣೆಗಳಿಂದ ಏನೂ ಉಪಯೋಗವಾಗದೆ ಬಾಯಿಯ ಕೆಳತುದಿಯ ಚರ್ಮದಹಾಸು ಸಿಪ್ಪೆಯಂತೆಯೇ ಕಳಚಿಬಂದಿತ್ತು. ಒಳಗಿನ ಮಾಂಸ ಬೆಂದುಹೋಗಿತ್ತು. ಸುಟ್ಟು ಚರ್ಮಕಳಚಿ ಉಂಟಾದ ಗಾಯದ ಮೇಲೆ ನೊಣಕುಳಿತು ಇಪ್ಪಿಹಾಕಿದ ಪರಿಣಾಮವಾಗಿ ಹುಳುವಾಯಿತು. ಹುಳುಗಳು ಮಾಡಿದ ತೂತಿನಿಂದ ನೆತ್ತರು ಸೋರಲು ಶುರುವಾಯಿತು. ಸೋರುವ ನೆತ್ತರಿಂದ ಗಾಬರಿ ಬಿದ್ದ ನಾವು ಅಪ್ಪನಿಗೆ ಹೇಳಿ ಒಂದಿಷ್ಟು ಬೈಸಿಕೊಂಡು ಮದ್ದುಮಾಡುವ ಬಗೆ ತಿಳಿದೆವು. ಕಳ್ಳಿಹಾಲು, ಕರಿಮದ್ದು ಹಾಕಿ ಹುಳ ತೆಗೆದು, ಮತ್ತೆ ನೊಣಕೂರದಂತೆ ಯಾವ್ಯಾವುದೋ ಎಣ್ಣೆ ಉದ್ದಿ ಸಹಜ ಸ್ಥಿತಿಗೆ ತರಬೇಕಾದರೆ ಸಾಕುಬೇಕಾಯಿತು. ಅಂತೂ ಕಂಡವರ ಬೈಗುಳಕ್ಕೆ ಕಡಸಿನ ಮೂತಿ ಸುಟ್ಟರೂ ಅದರ ಚಾಳಿಯನ್ನು ಪೂರ್ತಿಬಿಡಿಸಲಾಗಲಿಲ್ಲ. ದಕ್ಕಿದ್ದು ಕೆಲಮಟ್ಟಿನ ನಿಯಂತ್ರಣ ಸಾಧಿಸಿದ ಯಶಸ್ಸಷ್ಟೇ.

ಈ ಕೆಟ್ಟಚಾಳಿಯ ನಡುವೆಯೂ ಅದು ಬದುಕಿ ಉಳಿದ ಒಂದೇ ಕರುವಾದ ಕಾರಣ ಮತ್ತು ನಮ್ಮೊಂದಿಗೆ ತೋರುತ್ತಿದ್ದ ಸಲುಗೆಯ ಕಾರಣದಿಂದ ಅಕ್ಕರೆಯ ಕರುವೇ ಆಗಿತ್ತು. ಕೊಂಡಾಟದ ಕಡಸು ಹೋದಲ್ಲಿ ಬಂದಲ್ಲಿ ಮನೆಮಂದಿಯ ಅಕ್ಕರೆಯ ಬಳುವಳಿ ಅನಿಭವಿಸಿ ಹುಲುಸಾಗಿ ಬೆಳೆಯಿತು. ಬೆಳೆದದ್ದು ಜಾಸ್ತಿಯಾಗಿ ಚರ್ಬಿಸೊಕ್ಕಿದ ಅದಕ್ಕೆ ಗರ್ಭನಿಲ್ಲಲಿಲ್ಲ. ಈಗ ಅದರ ನೆಣಕರಗಿಸುವ ಸರದಿ. ಹುಲ್ಲು ಒಕ್ಕುವ ಕಲ್ಲುಕಟ್ಟಿ ಎಳೆಸಿದೆವು. ಹಡ್ಲುಒಕ್ಕಲು ಉಳಿದ ಎತ್ತು,ಕರುಗಳ ಜತೆಗೆಕಟ್ಟಿ ತಿರುಗಿಸಿದೆವು. ಮಾತ್ರವಲ್ಲ ಬೆದೆಬರಲು ಅನುಕೂಲವಾಗುವಂತೆ ಉದ್ದಿನಕಾಳು ನೆನೆಹಾಕಿ ಕಡೆದುಕೊಟ್ಟು ಅಮವಾಸ್ಯೆಯ ಎದುರಿಗೆ ಬೆದೆಗೆ ಕೂಗುವಂತೆ ಮಾಡಿದೆವು. ಹೇಳಿಕೇಳಿ ಅದು ಸಹಜರೂಪದಲ್ಲಿ ಹುಟ್ಟಿದ ಕರು. ಅದಕ್ಕೆ ಕೋಣವನ್ನೇ ಹುಡುಕಬೇಕಿತ್ತು. ದುರಾದೃಷ್ಟಕ್ಕೆ ಊರಲ್ಲಿ ಶೀಲವಾಗಿರದ ಬೀಜದ ಕೋಣಗಳಿರಲಿಲ್ಲ. ಊರಲ್ಲಿ ಕೋಣಗಳಿರದೆ ಪಕ್ಕದೂರಾದ ಗುಡಿಬೆಟ್ಟಿಗೆ ಹೋಗಿ ಯಾರದೋ ಮನೆಯ ಹಟ್ಟಿಯ ಹಿಂದೆ ಕಟ್ಟಿ ಗಬ್ಬ ನಿಲ್ಲುವಂತೆ ಮಾಡಿ ಅದರ ಚೊಚ್ಚಲ ಹೆರಿಗೆಯನ್ನು ಕಂಡೆವು.

ಹೀಗೆ ಅಕ್ಕರೆ, ಅವಸ್ಥೆಗಳ ನಡುವೆ ಮನೆಯಲ್ಲಿಯೇ ಹುಟ್ಟಿನೆರೆದ ಕರು, ಎಮ್ಮೆಯಾಗಿ 8-10 ಕರುಗಳನ್ನು ಹಾಕಿದರೂ ಅವುಗಳಲ್ಲಿ ಒಂದೇ ಒಂದು ಕರುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆದೆಗೆ ಬಂದಾಗ ಮೈಮೇಲೆ ಏರಿ ಬಂದಂತೆ ತೊಕ್ಕಲಿಗೆ ಹಾತೊರೆಯುವ ಎಮ್ಮೆಗೆ ಬೆದೆಕೋಣಗಳೇ ಬೇಕಾಗಿದ್ದವು. ಡಾಕ್ಟರ್ ಕೊಡುವ ಇಂಜಕ್ಷನ್‌ಗೆ ಗಬ್ಬಕಟ್ಟದೆ ಕೆಲವು ಸುಳಿ(ಸರದಿ)ತಪ್ಪಿ ಹೋಗುತ್ತಿತ್ತು. ಹೇಗೋ ಕಷ್ಟಪಟ್ಟು ಅದರ ಬೆದೆ ಪೂರೈಸಿ ಹುಟ್ಟಿಸಿಕೊಂಡ ಕರುಗಳು 6-8 ತಿಂಗಳು ಬದುಕಿ ಯಾಕೋ ಏನೋ ಲೋಕಬಿಡುತ್ತಿದ್ದವು. ಈ ನಡುವೆ ಮೇಯಲು ಇದ್ದ ಬಿಡುಬೀಸಾದ ಜಾಗವೂ ದರಖಾಸ್ತುಗಳಿಂದಲೂ, ಕಬ್ಬಿನ ತೋಟಗಳಾದುದರಿಂದಲೂ ಕಡಿಮೆ ಬೀಳತೊಡಗಿತು. ಬಿಟ್ಟು ಮೇಯಿಸಿ ಹಟ್ಟಿಗೆ ಕಟ್ಟುವುದೇ ಬರುಬರುತ್ತಾ ತ್ರಾಸವಾಗತೊಡಗಿತು. ಎಮ್ಮೆಗೆ ವಯಸ್ಸಾಗುತ್ತಿದ್ದಂತೆ ಮನೆಯಲ್ಲಿ ಮಂದಿಯ ಸಂಖ್ಯೆಯೂ ಕಡಿಮೆಯಾಗತೊಡಗಿತು. ಉದ್ಯೋಗ ಹುಡುಕಿ, ಶಾಲೆಕಲಿತ ನಾವುಗಳು ಊರುಬಿಡುತ್ತಿದ್ದಂತೆ ಹೊತ್ತು ಹೊತ್ತಿಗೆ ಈ ಎಮ್ಮೆಯನ್ನು ಬಿಟ್ಟು ಕಟ್ಟುವ ಕ್ರಮಾನುಸರಣೆಯಲ್ಲಿ ಏರು ಪೇರುಗಳಾಗತೊಡಗಿತು. ಸಿಕ್ಕಷ್ಟು ಹೊತ್ತು ಬೇಸಿಗೆ-ಮಳೆಗಾಲವೆಂಬ ಭೇದವಿಲ್ಲದೆ ಹೊಳೆಬದಿಯಲ್ಲಿ ಒಂದಿಷ್ಟು ಮೇಯಿಸಿ, ವೈನಾಗಿ ಮೈತಿಕ್ಕಿ ಹಟ್ಟಿಯಲ್ಲಿ ಕಟ್ಟುವ ಜವಾಬ್ದಾರಿಯನ್ನು ಅಪ್ಪನೇ ನಿರ್ವಹಿಸುವಂತಾಯಿತು. ಹೀಗೆ ಮಾಡುವಾಗಲೆಲ್ಲಾ ಹೊಳೆ ನೋಡಿದ ತಕ್ಷಣ ಚಂಗುಬೀಳುವ ಎಮ್ಮೆ ಆಚೆ ಪೇರಿಕೀಳುವುದಕ್ಕೆ ಯತ್ನಿಸುವುದು, ಅಪ್ಪನಿಂದ ಹೊಡೆತ ತಿನ್ನುವುದು ಸಾಮಾನ್ಯ ಸಂಗತಿ. brahma-cow-indiaಅಪಾಯದ ಸಂಗತಿಯೆಂದರೆ ಅದು ಈ ಚಾಳಿಯನ್ನು ಮಳೆಗಾಲ-ಅರೆಗಾಲವೆಂಬ ಬೇದವಿಲ್ಲದೆ ತುಂಬಿದ ಹೊಳೆಯಲ್ಲಿಯೂ ಕಾರ್ಯರೂಪಕ್ಕೆ ತರುತ್ತಿತ್ತು. ಹೊಳೆ ತಡಿಯಲ್ಲಿಯೇ ಬದುಕಿದ ಅನುಭವ ಇರುವ ಅಪ್ಪನಿಗೆ ಹೊಳೆ ಮತ್ತು ಅದರ ನೀರು ಬಹಳದೊಡ್ಡ ಸಂಗತಿಯಾಗಿರಲಿಲ್ಲ. ಆಚೆಗೆ ಹೊರಟಾಗಲೋ, ಹೋದಮೇಲೆಯೋ ತಾನೇ ಕೊನೆಯಲ್ಲಿ ಈಜಿ ಈಚೆಗೆ ಹೊಡೆದುಕೊಂಡು ಬರುತ್ತಿದ್ದರು. ಅಪ್ಪನಿಗೆ 75 ರ ವಯಸ್ಸು ದಾಟುತ್ತಿರುವಂತೆ ಈ ಸಾಹಸ ದುಬಾರಿ ಎನಿಸತೊಡಗಿತ್ತು. ಹಾಳಾದ ಎಮ್ಮೆ ಹೊಳೆಬದಿಯಲ್ಲದೆ ಬೇರೆ ಎಲ್ಲಿಬಿಟ್ಟರೂ ಸೊಡ್ಡು ಕುತ್ತುತ್ತಿರಲಿಲ್ಲ. ಒಂದು ಹೊಳೆ ತುಂಬಿದ ದಿನ ಎಮ್ಮೆಯ ಯಥಾ ಪ್ರಕಾರದ ಜಲಪ್ರಯಾಣಕ್ಕೆ ಪ್ರತಿಯಾಗಿ ಅಪ್ಪ ತುಂಬಿದ ಹೊಳೆಗೆ ಹಾರಿ ಈಜಿಕೊಂಡು ಅದನ್ನು ಮರಳಿ ದಡಕ್ಕೆ ಎಬ್ಬುವ ಸಲುವಾಗಿ ಬಾಲಹಿಡಿದು ಬೆನ್ನಿಗೆ ಬಾರಿಸಿದ್ದೇ, ಅಪ್ಪನನ್ನು ಜಾಡಿಸಿ ಬಾಲತಪ್ಪಿಸಿಕೊಂಡು ಹಿಂತಿರುಗಿತು. ತುಂಬಿದ ಹೊಳೆ, ವಾರಾಹಿ ಯೋಜನೆಯ ಅಣೆಕಟ್ಟೆಯ ಹೆಚ್ಚುವರಿ ನೀರು ಬೇರೆ ಬಿಟ್ಟಿದ್ದರಿಂದ ಎರಡೂ ದಡಗಳು ಒಂದಾಗಿವೆ. ಅಪ್ಪನಿಗೆ ದಿಕ್ಕು ತಪ್ಪಿತು. ಹೊಳೆನೀರಿನ ಒಯ್ಲಿನಲ್ಲಿ ಹರೆಯ ಜಾರಿದ ಅಪ್ಪನ ತೊಡೆಯ ಬಲ ಸಾಕಾಗಲಿಲ್ಲ. ಕೈಕಾಲು ಬಲಿಯಲಾಗದೆ ತೇಲಿಹೋಗಿಯೇ ಬಿಟ್ಟರು. ಜೀವಮಾನ ಪೂರ್ತಿ ಹೊಳೆಯೆದುರಿಗೇ ಬೆಳೆದರೂ ತುಂಬಿದ ಹೊಳೆಯಲ್ಲಿ ಸಾಹಸ ಮಾಡಬಾರದ ವಯಸ್ಸಿನಲ್ಲಿ ಸಾಹಸಕ್ಕಿಳಿದ ಅಪ್ಪ ಹೇಗೋ ನೀರಿನಲ್ಲಿ ಬಚಾವಾಗುವ ದಾರಿ ಕಂಡುಕೊಂಡದ್ದರಿಂದ ಈಚೆಯ ದಡಕ್ಕೆ ಬರಬೇಕಾದವರು ಬರಲಾರದೇ ಹೋದರೂ, ತೇಲಿಕೊಂಡು ಯಾವುದೋ ಒಂದು ದಡಮುಟ್ಟಿ ಸುಧಾರಿಸಿಕೊಂಡರು. ದೋಣಿಯವನನ್ನು ಕರೆದು ದೋಣಿಯ ಮೂಲಕ ಈಚೆಗೆ ಬರುವಷ್ಟರಲ್ಲಿ ಹೊಳೆಯ ದಡಯೇರಿದ ಎಮ್ಮೆ ಬೈಲು ಹತ್ತಿಕೊಂಡು ಯಾರದೋ ಅಗೇಡಿಯಲ್ಲಿ ಅಗೆ(ಭತ್ತದಸಸಿ)ತಿನ್ನುತ್ತಿತ್ತು. ಅಪ್ಪನಿಗೆ ಎಮ್ಮೆಯನ್ನು ಕಾಣುತ್ತಲೇ ನೆತ್ತಿಗೇರಿದ್ದ ಕೋಪ ಮತ್ತಷ್ಟು ಹೆಚ್ಚಾಯಿತು. ‘ನನ್ನನ್ ಕೊಲ್ತಿದ್ಯಲೆ?’ ಎಂದು ಕೈಯಲ್ಲಿನ ಹೂಂಟಿಕೋಲಿಂದ ಎರಡು ಬಾರಿಸಿ, ಅದರ ಮೈಯನ್ನೂ ತೊಳೆಯದೆ ಹಾಗೆಯೇ ತಂದು ಹಟ್ಟಿಯಲ್ಲಿ ಕಟ್ಟಿ, ಮನೆ ಸೇರಿಕೊಂಡು ನಿಟ್ಟುಸಿರುಬಿಟ್ಟರು.

ಅಪ್ಪನಿಗೆ ತನ್ನ ಮೇಲೆ ಇಲ್ಲಿಯವರೆಗೆ ಇದ್ದ ಅಪಾರವಾದ ಭರವಸೆಯನ್ನು ಇನ್ನು ಮುಂದೆಯೂ ಈ ಎಮ್ಮೆಯ ಕಾರಣದಿಂದ ಪರೀಕ್ಷಿಸುತ್ತಲೇ ಹೋಗಬೇಕೆಂಬ ಉತ್ಸಾಹ ಕಡಿಮೆಯಾಗತೊಡಗಿತು. ವಯಸ್ಸುಕಳೆದರೂ, ಗಬ್ಬಕಟ್ಟಿ ಹಾಲುಕರೆಯುವ ನಿಯಮಿತತೆ ತಪ್ಪಿದರೂ ಎಮ್ಮೆಯ ಹಾರಾಟ ಕಡಿಮೆಯಾಗಲಿಲ್ಲ, ಜಾಸ್ತಿಯಾಗುತ್ತಲೇ ಹೋಯಿತು. ಹಟ್ಟಿಯಲ್ಲಿ ಹಾಕುವುದಾಗಲೀ, ಬಿಟ್ಟಾಗ ಸಿಕ್ಕುವುದಾಗಲೀ ಅದಕ್ಕೆ ಸಾಕೆನಿಸುತ್ತಿರಲಿಲ್ಲ. ಕಂಡಲ್ಲಿಗೆ ಓಡತೊಡಗುವ ಅದರಿಂದ ಬಹುದೊಡ್ಡ ಅಪಾಯ ಇರುತ್ತಿದ್ದುದು ಹೊಳೆಯ ಮೂಲಕ. ಈಗೀಗ ಅದರ ವೇಗಕ್ಕೆ ಸರಿಯಾಗಿ ಓಡಿ ಹೋಗಿ ಅಡ್ಡ ಹಾಕುವುದು ಅಪ್ಪನಿಂದ ಸಾಧ್ಯವಾಗುತ್ತಿಲ್ಲ. ನಿಯಂತ್ರಣಕ್ಕೆ ಕುಂಟಿಕಟ್ಟಿದ್ದೂ ಪ್ರಯೋಜನಕ್ಕೆ ಬರಲಿಲ್ಲ. ಕಾಲುಕುತ್ತಿಗೆಗೆ ಬಳ್ಳಿ ಹಾಕಿದರು. ಇದರಿಂದ ಅದರ ಓಟಕ್ಕೆ ಬ್ರೇಕ್ ಬಿದ್ದರೂ ಕಾಟಕ್ಕೆ ಬ್ರೇಕ್ ಹಾಕಲು ಆಗಲೇ ಇಲ್ಲ. ಮಾತ್ರವಲ್ಲ ಅದಕ್ಕಿರುವ ಹೊಳೆಹಾರಿ ಪೇರಿಕೀಳುವ ಹವ್ಯಾಸದ ವೇಳೆಯಲ್ಲಿಯೂ ಈ ಕಾಲುಕುತ್ತಿಗೆಗೆ ಹಾಕಿದ ಬಳ್ಳಿ ಅದರ ಜೀವಕ್ಕೂ ಅಪಾಯ ಎನಿಸತೊಡಗಿತು. ಈ ನಡುವೆ ಹೊಳೆದಾಟಿ ಹೋದಾಗ ಅಪ್ಪ ಜಾಗ್ರತೆ ಮಾಡಿ, ಸಾಹಸವನ್ನೂ ತೋರಿ ಅದನ್ನು ಹೇಗೋ ಹಟ್ಟಿಗೆಹೊಡಕೊಂಡು ಬರುತ್ತಿದ್ದರು. ಇದು ನಿತ್ಯದ ಕಾಯಕದಂತಾದಾಗ ಆಚೀಚೆಯವರು ಈ ಸಾಹಸಕ್ಕೆ ಕೊನೆಹಾಡಿ ಎಂದು ಅಪ್ಪನಿಗೆ ಬೈಯಲು ಶುರು ಮಾಡಿದರು. ಅವರಿಗೆ ವಯಸ್ಸಾದುದನ್ನು ನೆನಪಿಸಿ ಈ ಹುಚ್ಚಾಟ ಆಡದಂತೆ ಎಚ್ಚರ ಹೇಳಲು ಶುರುಮಾಡಿದರು. ನಮಗೂ ಆ ಎಮ್ಮೆಯನ್ನು ಇಷ್ಟು ದುಬಾರಿಯಾಗಿ ಪ್ರೀತಿಸುವುದು ಸಾದ್ಯವಿರಲಿಲ್ಲ. ಕೊನೆಗೂ ಅಪ್ಪ ಒಂದು ನಿರ್ಧಾರಕ್ಕೆ ಬಂದು ಅದನ್ನು ಕೊಟ್ಟುಬಿಡಲು ನಿರ್ಧರಿಸಿದರು.

ಹಾಲುಕರೆಯದ, ಗಬ್ಬಕಟ್ಟದ ಎಮ್ಮೆಯನ್ನು ಮಾರಬೇಕು ಯಾರಿಗೆ? ಪೈರಿನವರೋ, ಸಾಕುವವರೋ ಕೊಂಡ್ಕೊಂಡು ಮಾಡುವುದಾದರೂ ಏನನ್ನು? ಕೊನೆಗೂ ಆ ಎಮ್ಮೆಯ ಗಿರಾಕಿಯಾಗಿ ಅಪ್ಪನಿಗೆ ಸಿಕ್ಕಿದ್ದು ಕಂಡ್ಲೂರಿನ ಪರಿಚಿತ ಸಾಬಿಯೇ. ಚೌಕಾಸಿ ಮಾಡಿ ಒಂದು ರೇಟಿಗೆ ಒಪ್ಪಿಕೊಂಡು ಕಾಸನ್ನೂ ಕೊಡುವುದಾಗಿ ಸಂಚಕಾರಕೊಟ್ಟು ಮುಂದಿನವಾರ ಬರುವುದಾಗಿ ಹೇಳಿಹೋದ. ಆತ ಇನ್ನೊಬ್ಬನ ಜತೆಗೆ ಬಂದು ಯಥಾಪ್ರಕಾರ ಉಳಿದ ಹಣಕೊಟ್ಟು ಅಪ್ಪನಿಲ್ಲದ ವೇಳೆಯಲ್ಲಿ ಮನೆಯಲ್ಲಿರುವ ಅಮ್ಮ ಹಾಗೂ ನನ್ನ ಅಕ್ಕತಂಗಿಯರ ಅನುಮತಿ ಪಡೆದು ಹಟ್ಟಿಯಿಂದ ಎಬ್ಬಿಕೊಂಡು ನಡೆದ. ಹಟ್ಟಿಯಿಂದ ಹೊರಟು ಎರಡು ಫರ್ಲಾಂಗು ನಡೆದುಹೋಗುವುದರೊಳಗೆ, ತಾನು ಊಹಿಸಿಯೇ ಇರದ ಭೀಕರದಾಳಿಗೆ ಆತ ತುತ್ತಾಗುವಂತಾದುದು ನನ್ನೂರಿನ ಮೊದಲ ಆಕಸ್ಮಿಕ.!

ದನ, ಎಮ್ಮೆ, ಕೋಣ, ಎತ್ತುಗಳೆಂಬ ನಾಲ್ಕು ಕಾಲಿನ ಜಾನುವಾರುಗಳನ್ನು ಸಾಯುವ, ಸಾಕಲಾರದ ಸ್ಥಿತಿಯಲ್ಲಿ ಹೀಗೆ ಮಾರುತ್ತಿದ್ದುದು ಅದೇ ಮೊದಲಾಗಿರಲಿಲ್ಲ. Indian-Cow-calfಕೊನೆಯೂ ಆಗಿರಲಿಲ್ಲ. ನಾವೇ ಸಾಕಿದ ಕರು-ಕಡಸು-ಎಮ್ಮೆ ಎಲ್ಲವೂ ಆಗಿದ್ದೂ ನಮಗೆ ಅದಕ್ಕಿಂತ 75 ರ ಅಪ್ಪನೂ ಮುಖ್ಯವಾಗಿದ್ದರಲ್ಲವೇ? ನಮ್ಮಪ್ಪನಿಗೆ ಬೇರೆ ದಾರಿಯಿಲ್ಲದೆ ಕೊಡಲೇಬೇಕಾಗಿ ಕೊಟ್ಟ ಎಮ್ಮೆಯದು. ಅದಕ್ಕೆ ಪ್ರತಿಯಾಗಿ ನಮ್ಮ ಮನೆಯವರು ಕಾಸನ್ನೂ ಪಡೆದಿದ್ದರು. ಆದರೆ ನನ್ನೂರಿಗೆ ಪರಿಚಿತವೇ ಅಲ್ಲದ ಬೆಳವಣಿಗೆಯೊಂದು ಚುರುಕು ಪಡೆದುಕೊಳ್ಳುತ್ತಿದ್ದ ಕಾಲವದಾಗಿತ್ತು ಅಂತ ಕಾಣುತ್ತದೆ. ಅಲ್ಲಿ ಇಲ್ಲಿ ಗುಸುಗುಸು ಅನ್ನುತ್ತಿದ್ದ ಸಮಸ್ಯೆಯೊಂದು ನಮ್ಮ ಹಟ್ಟಿಗೆ ತಗುಲಿಕೊಂಡು ಅಂದು ನಡೆದು ಹೋಗಿತ್ತು. ಎಮ್ಮೆಯನ್ನು ಹೊಡೆದುಕೊಂಡು ಒಂದೆರಡು ಫರ್ಲಾಂಗು ಬರುವಷ್ಟರಲ್ಲಿ ನಿರಪರಾಧಿಯಾದ ಆ ಸಾಬಿ ಮತ್ತು ಆತನ ಸಹಚರನ ಮೇಲೆ ದಾಳಿ ಮಾಡಿದ ಈ ತಂಡ ಆ ಬೋಳುಗುಡ್ಡೆಯಲ್ಲಿ ನಿರ್ದಯವಾಗಿ ಕೇಳುವವರೇ ಇಲ್ಲದಂತೆ ಸಿಕ್ಕಸಿಕ್ಕಲ್ಲಿ ಬಾರಿಸಿತು. ಈ ಹೊಡೆತ ತಿಂದೂ ಆ ಸಾಬಿ ಮತ್ತು ಆತನೊಂದಿಗಿದ್ದ ಹುಡುಗ ಎಮ್ಮೆಯನ್ನು ಮರಳಿ ನಮ್ಮ ಹಟ್ಟಿಗೇ ತಂದು ಕಟ್ಟಿದರು. ನನ್ನ ಅಮ್ಮ ಮತ್ತು ಅಕ್ಕ ತಂಗಿಯರು ಹೇಳುವಂತೆ ಪೆಟ್ಟು ತಿಂದು ಬಾತುಕೊಂಡ ತನ್ನ ಕೆನ್ನೆಯನ್ನು ತೋರಿ ಆ ಮನುಷ್ಯ ಅತ್ತದ್ದು ಕರಳು ಕರಗುವಂತಿತ್ತು. ತಪ್ಪೇ ಮಾಡದ ತಮ್ಮ ಮೇಲೆ ಹೀಗೆ ದಾಳಿ ಮಾಡಬಹುದೇ ಎಂಬ ಪ್ರಶ್ನೆಗೆ ನನ್ನ ಮನೆಯಲ್ಲಿದ್ದವರಲ್ಲಿ ಅಂದು ಉತ್ತರವಿರಲಿಲ್ಲ. ಅವರಿಗೆ ಈ ನೋವಿನ ಜತೆಗೇ ಆ ಎಮ್ಮೆ ಮತ್ತೆ ಹಟ್ಟಿಗೆ ಬಂದದ್ದು ಮತ್ತಷ್ಟು ಚಿಂತೆಗಿಟ್ಟುಕೊಂಡಿತು. ನಮ್ಮದೇ ಅಕ್ಕರೆಯ ಎಮ್ಮೆ ನಮಗೆ ಅಂದು ನಿಶ್ಚಿತವಾಗಿಯೂ ಹೊರೆಯೆನಿಸಿತ್ತು. ಎಮ್ಮೆಯನ್ನು ಹಟ್ಟಿಯಲ್ಲಿ ಕಟ್ಟಿದ ಕೆಲಹೊತ್ತಿನಲ್ಲಿ ಬಂದ ಅಪ್ಪನಿಗೆ ಈ ಹೊಸ ಸಂಗತಿ ಕೇಳಿ ಸಿಟ್ಟುಬಂತು. ಹೀಗೆ ಎಮ್ಮೆಯನ್ನೂ, ಕೋಣವನ್ನೋ, ಎತ್ತಿನಗುಡ್ಡವನ್ನೋ ಅವರು ಮೊದಲನೆ ಬಾರಿ ಮಾರಿದುದಲ್ಲ. ಹಿಂದಣೆಯಲ್ಲಿ ಕಟ್ಟಲು ಜಾಗವಿಲ್ಲದಾಗ ಮುಂದಣೆಯಲ್ಲಿದ್ದು ಭಾರವಾಗುವಾಗ ಹಗುರವಾಗಲು ನನ್ನ ಅಪ್ಪನಿಗಾಗಲೀ, ಆ ಊರಿನ ಸುತ್ತಮುತ್ತಲಿನ ಎಲ್ಲರಿಗೂ ಇರುವ ಕೊನೆಯ ದಾರಿ ಇದೊಂದೇ ಆಗಿತ್ತು. ಅದು ಅವರ ಪಾಲಿಗೆ ಯಾವುದೇ ತೆರನಾದ ಕೃತಘ್ನತೆಯ ಕೆಲಸವೂ ಆಗಿರಲಿಲ್ಲ. ಹಾಗೆಯೇ ಅದನ್ನವರು ಉತ್ಸಾಹದಿಂದಲೂ ಮಾಡುತ್ತಿರಲಿಲ್ಲ. ಅಂತಹ ಯಾವುದೇ ನೀತಿಪಾಠವೂ ಅವರ ಹಟ್ಟಿಯ ಮತ್ತು ಹೊಟ್ಟೆಯ ಸಮಸ್ಯೆಯನ್ನು ನೀಗಿಸುತ್ತಿರಲಿಲ್ಲ. ಹಟ್ಟಿಯಲ್ಲಿ ಕಟ್ಟಿಕೊಳ್ಳಲಾಗದವುಗಳನ್ನು ಏನು ‘ಕೊರಳಿಗೆ ಕಟ್ಟಿಕೊಳ್ಳುವುದೇ?’ ಎಂಬ ಸರಳ, ನೇರಪ್ರಶ್ನೆ ಅವರದ್ದಾಗಿತ್ತು. ಸಾಬಿಗೆ ಬಿದ್ದಏಟು, ಏಟು ಕೊಟ್ಟ ಹುಡುಗರ ವಯಸ್ಸು ಕೇಳಿ ಅಪ್ಪ ಉರಿದುಹೋದರು. ‘ಇಪ್ಪತ್ತರಲ್ಲಿ ಯಜಮಾನ್ಕಿ ಸಿಕ್ಕುಕಾಗ, ಎಪ್ಪತ್ತರಲ್ಲಿ ಹೇಲು ಸುರುವಾಪ್ಕಾಗ’ ಎಂಬಂತೆ ಹಿರಿಯರು ಹೇಳುವ ಗಾದೆಯನ್ನು ಉಲ್ಲೇಖಿಸಿ, ‘ಅದ್ಯಾವುದಕ್ಕೊ ಯಜಮಾನಿಕೆ ಸಿಕ್ಕಿದರೆ ಮನೆಮಂದಿಗೆಲ್ಲಾ ಬಸುರು ಮಾಡುತ್ತದೆ’ ಎಂದು ಗುಟುರು ಹಾಕಿದ ಎಪ್ಪತ್ತೈದರ ಅಪ್ಪ ‘ಅದ್ಯಾವನು ಬಂದು ಹೊಡಿತಾನೆ ಬಾ ನಾನೇ ಬಂದು ಹೊಡೆದುಕೊಂಡು ಬರುತ್ತೇನೆ’ ಎಂದು ಸಾಬಿಗೆ ಧೈರ್ಯ ತುಂಬಿದರು. ಬರಿಯ ಧೈರ್ಯ ತುಂಬಿದ್ದಲ್ಲ. ಕಂಡ್ಲೂರಿನ ತನಕ ತಾವೇ ಸ್ವಯಂ ಆತನ ಜೊತೆಗೆ ಹೋಗಿ ಅಂತೂ ಆ ಎಮ್ಮೆಯನ್ನು ಸಾಗಹಾಕಿ ಹೊಳೆಯಲ್ಲಿ ತೇಲಿಹೋಗುವ ಅಪಾಯದಿಂದ ಮುಕ್ತಿ ಕಂಡರು.

ಸಾಬಿ ಪೆಟ್ಟು ತಿಂದುದು, ಸಾಬಿಗೆ ಹೊಡೆದು ಪೌರುಷ ಮೆರೆದುದು ಎರಡೂಕಡೆ ಸುದ್ದಿಯಾಯಿತೇ ವಿನಹಾ ಸರಿ-ತಪ್ಪುಗಳ ವಿಮರ್ಶೆಗೆ ಒಳಪಡಲಿಲ್ಲ. ಎಮ್ಮೆಯನ್ನು ಸಾಗಹಾಕಿ ಹೊಳೆಯಲ್ಲಿ ನಡೆಸಬೇಕಾಗಿದ್ದ ಸರ್ಕಸ್‌ನಿಂದ ಅಪ್ಪ ಪಾರಾದರು. ಇದೇ ಕಾರಣದಿಂದ ಪೆಟ್ಟುತಿಂದ ಅಪ್ಪನಿಗಿಂತ ತುಸು ಕಡಿಮೆ ಪ್ರಾಯದ ಮಾಲುಕೊಂಡಾತನೂ ಸುಮ್ಮನಾದ. ವಯಸ್ಕರಿಬ್ಬರ ನಡುವೆ ನಡೆದ ಈ ವ್ಯವಹಾರದಲ್ಲಿ ತಲೆಹಾಕಿ ತಮ್ಮ ತಮ್ಮ ಸಂಸ್ಕೃತಿ ಪರಂಪರೆಯ ರಕ್ಷಣೆಗಾಗಿ ಹೊಡೆದಾಟಕ್ಕೆ ನಿಂತವರು ೨೦ರ ಆಸುಪಾಸಿನ ಹುಡುಗರು. ನ್ಯಾಯವಾದ ಹಣ ನೀಡಿ, ಮಾಲುಕೊಂಡು ಬರುವಾಗ ಅಮಾನವೀಯ ಥಳಿತಕ್ಕೊಳಗಾದ ಸಾಬಿಯಕಡೆಯ ಪಡ್ಡೆಹುಡುಗರಿಗೆ ಇದೊಂದು ಶೌರ್ಯದ ಸವಾಲಾಯಿತು. ಪೆಟ್ಟು ತಿಂದ ಸಾಬಿ ತನ್ನ ಉಬ್ಬಿದ ದವಡೆಯ ನೋವು ಸುಧಾರಿಸಿಕೊಂಡು ತಣ್ಣಗಾದ. ಆದರೆ ಈ ಹುಡುಗರು ಸೇಡಿಗಾಗಿ ಕಾತರಿಸಿದರು. ಘಟನೆ ನಡೆದ ನಾಲ್ಕೆಂಟು ದಿನಗಳ ಅಂತರದಲ್ಲಿ ಸಾಬಿಯ ಮೇಲೆ ಆಕ್ರಮಣ ಮಾಡಿ ಸಾಹಸಮೆರೆದ ತಂಡದನಾಯಕನ ಮೇಲೆ ತಮ್ಮೂರಿನ ಹೆದ್ದಾರಿಯಲ್ಲಿ ಈ ಹುಡುಗರು ಮುಗಿಬಿದ್ದು ಮುಖಮೂತಿ ನೋಡದೆಯೇ ಹೊಡೆದು ಬಿಟ್ಟರು. ಅಲ್ಲಿಯವರೆಗೆ ಸಣ್ಣ ಪುಟ್ಟ ಮಟ್ಟದ ತರಲೆ ತಕರಾರಿಗಷ್ಟೇ ಸೀಮಿತವಾಗಿದ್ದ ಊರು ಬೆಂಕಿಯ ಕುಂಡವಾಯಿತು. ದಿಗ್ಭಂಧನ, ನಿಷೇಧ, ಸಂಘಟನೆ, ಹೋರಾಟ ಮುಂತಾದ ಪರಿಭಾಷೆಗಳೇ ತೇಲಾಡಿದವು.

ದೀಪಾವಳಿಯ ಕೊಯ್ಲಿಗೆ ಮೊದಲೇ ಹುರಿಹಗ್ಗ ಮಾಡಿಕೊಂಡು ಯಾರ ಹೆಸರು ಎನೇ ಆಗಿರಲಿ ಎಲ್ಲರನ್ನೂ ‘ಪುಟ್ಟಯ್ಯ ಶೆಟ್ರೇ, ಪುಟ್ಟಮ್ಮ ಶೆಡ್ತಿರೇ’ ಎಂದು ಕರೆಯುತ್ತಾ ಮುಂಗಡ ಹಗ್ಗ ಕೊಟ್ಟು, ಕೊಯ್ಲಾದ ಮೇಲೆ ಭತ್ತ ಸಂಗ್ರಹಿಸುತ್ತಿದ್ದ ಖಾದಿರನಂತವರು, ಹಳೇಬಾಟ್ಲಿ,ಪಾತ್ರೆ,ಗುಜಿರಿ ಒಟ್ಟು ಮಾಡಲು ಬರ್‍ತಾಯಿದ್ದ ಕಂಪದ ಅಹಮ್ಮದ್‌ಸಾಹೇಬರು, ಗೇರುಬೀಜ,ಕಾಸಾನಬೀಜ,ಅಟ್ಲಕಾಯಿ ಒಟ್ಟುಮಾಡಿಕೊಂಡು ಹೋಗ್ತಿದ್ದ ಗುಲ್ವಾಡಿಯ ಇಸ್ಮಾಯಿಲ್ ಇವರೆಲ್ಲಾ ಊರ ಮೇಲೆ ಬರುವುದು ಒಮ್ಮೆಗೆ ಬಂದ್ ಆಯಿತು. ಕಂಡ್ಲೂರೆಂಬ ಪಾಕಿಸ್ತಾನವನ್ನು ಬಿಟ್ಟು ಈ ಊರಮೇಲೆ ಬರುವವರಿಗೆಲ್ಲಾ ಅಘೋಷಿತವಾದ ನಿಷೇಧವೇ ಆಗ ಹೆಚ್ಚು ಕಡಿಮೆ ಜಾರಿಗೆ ಬಂದಿತ್ತು. ಬೀಡಿ ಕಂಪೆನಿಯ ಸಾಬಿಯೂ ಕೆಲ ದಿನ ಬೀಡಿ ಸಂಗ್ರಹಿಸಲು ಬರದಾದ. ಅಷ್ಟೋ ಇಷ್ಟೋ ಮೋಸ ಮಾಡಿಯೂ ಊರವರ ಪ್ರೀತಿಗಳಿಸಿ ಚೆನ್ನಾಗಿಯೇ ಮಾತಾಡಿಕೊಂಡು ತಮ್ಮ ಹೊಟ್ಟೆಪಾಡಿನ ವ್ಯವಹಾರ ಮಾಡಿಕೊಂಡಿದ್ದ ಹಳೆಯ ತಲೆಮಾರಿನ ಎರಡೂ ಕಡೆಯ ಮಂದಿ ಅಕ್ಷರಶಃ ಚಡಪಡಿಸಿದರು. cow-calfಗೇರುಬೀಜ,ಕಾಸಾನಬೀಜಗಳು ಕೊಂಕಣಿಗಳ ಇಲ್ಲವೇ ಸ್ವಧರ್ಮಿಕರ ಅಂಗಡಿಗೆ ಹೊತ್ತುಕೊಂಡು ಹೋಗಿ ಹಾಕಬೇಕಾಗಿ ಬಂದು ಹೆಂಗಸರ ಕೈಗೆ ಅಷ್ಟೋ ಇಷ್ಟೋ ಸಿಕ್ತಾಯಿದ್ದ ಕಾಸು ನೇರವಾಗಿ ಗಂಡಸರ ಕಿಸೆಗೆ ಜಮೆಯಾಗತೊಡಗಿದವು. ಈ ನಡುವೆ ಮೊದಲು ಪೆಟ್ಟುಕೊಟ್ಟು ಆಮೇಲೆ ಆಕ್ರಮಣಕ್ಕೊಳಗಾದವರ ಪರವಾಗಿ ಚಿಕ್ಕಚಿಕ್ಕ ಊರುಗಳಲ್ಲಿ ಪ್ರತಿಭಟನೆಗಳು ನಡೆದವು. ತಾವು ಮಾಡಿದುದನ್ನು ಕರ್ತವ್ಯವೆಂದೂ, ತಮ್ಮ ಮೇಲಾದುದನ್ನು ಆಕ್ರಮಣವೆಂದೂ ವ್ಯಾಖ್ಯಾನಿಸಿ ಈ ಸಭೆಗಳಲ್ಲಿ ವೇದಿಕೆಯ ಮೇಲಿಂದ ಉಗ್ರಭಾಷಣಗಳು ನಡೆದವು. ಈ ಮಾದರಿಯ ಗಿರಾಕಿಗಳನ್ನು ಕೊಳ್ಳುವವರೆಂಬುದಕ್ಕೆ ಬದಲಾಗಿ ಕದಿಯುವರೆಂದೂ, ತಾವುಗಳು ಗೋವುಗಾಳಗಕ್ಕೆ ಮುಂದಾಗಿ ಊರಳಿವನ್ನು ನಿವಾರಿಸುವಂತೆ ಕರೆಕೊಡುವ ಶಾಸನಗಳ ಮಾತನ್ನು ಪಾಲಿಸುವವರೆಂದು ಘೋಷಿಸಲಾಯಿತು. ಇದಕ್ಕೆ ಪೂರಕವಾಗಿ ದನದ ಅಪಹರಣದ ದಿಟವಾದ, ಸುಳ್ಳಿನ ಎರಡೂ ಮಾದರಿಯ ಸಂಗತಿಗಳು ಸೇರಿದ ಕಥೆಗಳು ಹುಟ್ಟಿಕೊಂಡವು. ಸಾಕುವವರ ಪರವಾಗಿ ಅವುಗಳನ್ನು ಹಗಲು-ರಾತ್ರಿ ಕಾಯುವುದು ತಮ್ಮ ಕರ್ತವ್ಯವೆಂದು ಸ್ವಯಂ ಘೋಷಿಸಿಕೊಳ್ಳುವ ಅರಿಯದ ಹರೆಯದ ಹುಡುಗರ ಪಡೆಗಳು ಹುಟ್ಟಿಕೊಂಡವು. ಈ ಪಡೆಗಳು ಗಟ್ಟಿಗೊಳ್ಳುತ್ತಿದ್ದಂತಯೇ ಊರವರಲ್ಲಿ ಚಿಂತೆ ಆವರಿಸಿಕೊಳ್ಳಹತ್ತಿತು. ಕೆಲವರು ಗುಟ್ಟಾಗಿ ಹಟ್ಟಿಯಲ್ಲಿ ಇದ್ದ-ಬಿದ್ದ ದನಕರುಗಳನ್ನು ಹೊಳೆಯ ಮೂಲಕ ದನಕೊಳ್ಳುವವರಿಗೆ ರವಾನಿಸಿ ತಮ್ಮ ಹಟ್ಟಿಯನ್ನು ಸಗಣಿ ಮುಕ್ತವಾಗಿಸಿಕೊಳ್ಳತೊಡಗಿದರು. ‘ಯಾವನು ಬಂದು ತಡೆಯುತ್ತಾನೆ ನೋಡೋಣ?’ ಎಂದು ಸ್ವಯಂ ಕೆಚ್ಚುತೋರಿ ಅಲ್ಲಗೇ ಹೋಗಿ ಮುಟ್ಟಿಸಿಬಂದಿದ್ದ ನನ್ನ ಅಪ್ಪನೂ ಮತ್ತೆ ಎಮ್ಮೆ ತರುವ ಉಸಾಬರಿಗೆ ಹೋಗಲಿಲ್ಲ. ಮಾತ್ರವಲ್ಲ ಎಮ್ಮೆಯ ಜತೆಗೆ ಗೋಮಯಕ್ಕಾಗಿ ಇದ್ದ ಒಂದೇ ಒಂದು ದನ ಹಾಗೂ ಅದರ 2 ವರ್ಷದ ಗಂಡುಕರುವನ್ನು ಅದೇ ವರ್ಷ ಗುಟ್ಟಾಗಿ ಸಾಗಹಾಕಿದ ಮೇಲೆ ಹಳೆಯ ಹಸು-ಎಮ್ಮೆಗಳ ತಳಿಗಳಿಗೆ ಖಾಯಂ ಆದ ಪೂರ್ಣವಿರಾಮಬಿತ್ತು. ಈ ಮಾರುವಿಕೆಯ ಚಾಳಿ ಮತ್ತೂ ಮುಂದುವರೆದು ಗಟ್ಟಿಮುಟ್ಟಾಗಿದ್ದ ಕೋಣಗಳನ್ನು ಉಳುವವರಿಗೆ ಮಾರಿ ಗಂಟಿಸಾಕುವ ಉಸಾಬರಿಯೇ ಸಾಕು ಎಂಬ ನಿರ್ಧಾರಕ್ಕೆ ಬಂದಂದಿನಿಂದ ನಮ್ಮ ಗದ್ದೆಗಳಲ್ಲಿ ಮಳೆಗಾಲದಲ್ಲಿ ಟ್ರಿಲ್ಲರ್‌ಗಳ ಸದ್ದಷ್ಟೇ ಕೇಳಿಸುತ್ತದೆ. ಇದು ನನ್ನೊಬ್ಬನ ಮನೆಯ ಪರಿಸ್ಥಿತಿಯಲ್ಲ. ನನ್ನೂರಿನ ಯಾವ ಮನೆಯಲ್ಲಿಯೂ ಇಂದು ಜೋಡಿಲ್ಲ. ಹಿಂದೆ ಜೋಡು ಇರುವಾಗ ಬೆಳೆಯುತ್ತಿದ್ದ ಎಳ್ಳು, ಉದ್ದು, ಹುರುಳಿ, ಅವಡೆ, ಹೆಸರು ಮುಂತಾದ ಧಾನ್ಯದ ಕಾಳುಗಳು ಮತ್ತು ಗೆಣಸಿನ ಬೆಳೆ ಪೂರ್ಣವಾಗಿ ನಿಂತು ಹೋಗಿವೆ. ನನ್ನೂರು ಚಿಕ್ಕದಾದರೂ ತಾಲೂಕಿನಲ್ಲಿಯೇ ಅತ್ಯಂತ ಸಮೃದ್ಧವಾದ ಎಳ್ಳ್ಳುಬೆಳೆಯುವ ಜಾಗವಾಗಿತ್ತು. ಗೆಣಸು,ಉದ್ದು, ಹುರುಳಿ, ಕಾಳುಕಡಿ ಏನೆಲ್ಲವನ್ನೂ ಬೆಳೆಯುವ ಮೂಲಕ ಬೇಸಿಗೆಯಲ್ಲೂ ನನ್ನೂರಿನ ಬಯಲು ಹಸಿರು ತುಂಬಿಕೊಳ್ಳುತ್ತಿತ್ತು. ಬೆಳೆಯುವ ಬಯಲು ಖಾಲಿಯಾದಂತೆ ಎಮ್ಮೆ, ಕೋಣ,ನಾಟಿಹಸು ಯಾವುದೂ ಇರದ ನನ್ನ ಹಟ್ಟಿಯೂ ವಸ್ತುಶಃ ಖಾಲಿಯಾಗಿದೆ. ಆದರೆ ಕಟ್ಟಿಟ್ಟ ಹಟ್ಟಿ ಖಾಲಿ ಎನ್ನದ ಹಾಗೆ ಈಗ ಅಲ್ಲಿ ಬೂಸಾತಿಂದು, ಹಾಲುಕರೆಯುವ ಎರಡು ಯಂತ್ರಗಳಿವೆ. ಅವುಗಳ ಹೆಣ್ಣುಕರುಗಳಿಗೆ ಮಾತ್ರ ಬದುಕುವಹಕ್ಕು ಎಂಬ ಶಾಸನವೂ ಜಾರಿಯಲ್ಲಿದೆ. ಇವುಗಳ ಗಂಡುಕರುಗಳನ್ನು ಮಾರುವ ತಾಪತ್ರಯವಿಲ್ಲ.ಅವುಗಳಿಗೆ ಕೊಡುವ ಹಾಲಿನಲ್ಲಿಯೇ ಏರುಪೇರು ಮಾಡಿ ಕೊಂದುಬಿಡುತ್ತಾರೆ. ಪಾಪ ಅವರಾದರೂ ಏನೂ ಮಾಡಿಯಾರು?

ಎಮ್ಮೆ ಕಟ್ಟಿದ ದಪ್ಪ ಮರ್ಚುಗಳು ಹಟ್ಟಿಯಗೋಡೆಯೇರಿ ಅಲ್ಲಿಯೇ ಲಡ್ಡಾಗಿವೆ. Two old and weak cows looking hungry, weak and unhealthy standinಶಾಲೆಯ ದಿನಗಳಲ್ಲಿ ಅಮ್ಮ ತುಂಬಿಕೊಡುತ್ತಿದ್ದ ಬುತ್ತಿಯಲ್ಲಿನ ದಪ್ಪನೆಯ ಕೆನೆಬರಿತ ಎಮ್ಮೆ ಹಾಲಿನ ಮೊಸರಹೆಟ್ಟೆ (ಗಟ್ಟಿಮೊಸರು) ನೆನಪಿನ ಖಜಾನೆ ಸೇರಿದೆ. ಹಿಂದಿನಂತೆ ಕಿರ್‍ಗಾಲು,ಕಡಾಲುಗಳಿಗೆ ಕೆಲಸವಿಲ್ಲ. ‘ಸಾರ್‌ಬೋರ್ ಸಕ್ಕರ್ ಬೋರ್ ಅಜ್ಜಿಮನಿಮಜ್ಜಿಗಿ ಮಜ್ಜನಾರೂ ತಿಕ್ಲಿಲ್ಲೆ’ ಎಂಬ ರೂಢಿಯ ಸೊಲ್ಲುಗಳೂ ನಮ್ಮ ಎಳೆಯ ತಲೆಮಾರುಗಳಿಗೆ ಕೇಳಿಸುತ್ತಿಲ್ಲ. ನಾಲ್ಕೆಂಟು ದಿನದ ಬೆಣ್ಣೆಸೇರಿಸಿ ಮಾಡುತ್ತಿದ್ದ ಪರಿಮಳಭರಿತವಾದ ಬಾಳಿಕೆಯ ತುಪ್ಪದ ಭರಣಿಗಳು ಖಾಲಿಕುಳಿತಿವೆ. ದೇವರ ಪೂಜೆಗೆ ನಿರಾಕೃತವೆಂದೂ, ಎಮ್ಮೆಹಾಲು ಕುಡಿದ ತಲೆಮಂದ(ಚುರುಕಲ್ಲ)ವೆಂದೂ ಕಥೆಗಳ ಮೇಲೆ ಕಥೆಗಳಿದ್ದರೂ ಕಾಣೆಯಾಗದೆ ಗಟ್ಟಿಯಾಗಿ ಉಳಿದಿದ್ದ ನನ್ನ ಹಟ್ಟಿಯ ‘ಎಮ್ಮೆ’ ಎಂಬ ಬಹುಗಾತ್ರದ ‘ರೂಹು’ ಈ ಮಹೋನ್ನತ ರಕ್ಷಣಾಕಾರ್ಯದ ಅಭಿಯಾನ ಆರಂಭವಾಗುತ್ತಿದ್ದಂತಯೇ ನಾಪತ್ತೆಯಾಗಿ ಹೋಯಿತು. ಹಟ್ಟಿಯ ಈ ಖಾಲಿತನವು ನನ್ನಂತವರ ಹೊಣೆಗಾರಿಕೆಯನ್ನೇ ಅಣಕಿಸುವಂತೆ ಎಪ್ಪತ್ತಾರರ ಅಪ್ಪನಸಾಹಸವನ್ನೇ ದರ್ಶಿಸಿ ಅಲ್ಲಿಗೇ ನಿಂತು ಬಿಡುತ್ತಿದೆ. ಬಹುಗಾತ್ರದ ಅಕ್ಕಚ್ಚು ಬೇಯಿಸುವ ಹರಿ (ಹಂಡೆ), ಅಕ್ಕಚ್ಚಿನ ಕೊಣ್ಣೆಯನ್ನು ಕೊಚ್ಚುತ್ತಿದ್ದ ಕೊಳ್ಳಿ(ದಿಮ್ಮಿ), ಅಕ್ಕಚ್ಚು ಬೇಯುತ್ತಿದ್ದಾಗಲೇ ಮಗಚಿಹಾಕಲು ಬಳಸುತ್ತಿದ್ದ ಕೊಕ್ಕೋಲು (ಸೊಟ್ಟಗಿರುವ ಬಿದಿರಕೋಲು), ಕರುಗಳಿಗೆ ಹಾಲು,ಮದ್ದು ಕುಡಿಸುತ್ತಿದ್ದ ನೆಳಾಲ್(ಬಿದಿರಲೋಟದಂತಹ ವಸ್ತು)ಗಳು ಎತ್ತ ಸರಿದುಹೋದವೋ ಅರ್ಥವೇ ಆಗುತ್ತಿಲ್ಲ!? ಹೋರ್ ಸತ್ತ್ಹೋಯ್ತೋ ಎಂಬ ಹಕ್ಕಿಯಾಗಿ ಹಾರಿದವನಿಗೆ ಸತ್ತದ್ದು ಹೋರಿಯಷ್ಟೇ ಆಗಿತ್ತು. ಆದರೆ ನಮ್ಮ ಕಾಲದಲ್ಲಿ ಹೋರಿ ಎಮ್ಮೆ ಹಸುಗಳ ಜೊತೆಗೆ ನೇಗಿಲು, ನೊಗ, ಗೋರಿ, ಅಕ್ಕಚ್ಚು, ನಳಗಳೆಂಬ ನಮ್ಮ ಒಡಿನಾಡಿಗಳಾಗಿದ್ದ ಪರಿಕರಗಳೆಲ್ಲವೂ ಜೀವ ಕಳೆದುಕೊಂಡಿವೆ.

ಸಮುದಾಯ ಕಾಲೇಜುಗಳಲ್ಲಿ ಗ್ರಾಮೀಣ ಕಸಬುಗಳಿಗೆ ಜೀವ ಬರಲಿ

– ಅರುಣ್ ಜೋಳದಕೂಡ್ಲಿಗಿ

ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ (ಎಂ.ಎಚ್.ಆರ್.ಡಿ) ಮುಂದಾಗಿರುವುದು ಸ್ವಾಗತಾರ್ಹ. ಇನ್ನು ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹೇರ್‌ಕಟಿಂಗ್ ಮುಂತಾದ ಕೋರ್ಸುಗಳು ಶುರುವಾಗುವುದಾಗಿಯೂ ವರದಿಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಪೂರ್ವಭಾವಿಯಾಗಿ ಕೆಲವು ಚರ್ಚೆಗಳು ನಡೆಯಬೇಕಾಗಿದೆ. ಇದನ್ನು ರಾಜ್ಯದ ಆಯಾ ಪ್ರಾದೇಶಿಕ ನೆಲೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ.

ಸಮುದಾಯ ಕಾಲೇಜುಗಳಲ್ಲಿ ಜನಪದ ಕಸಬುಗಳಿಗೆ ಮರುಜೀವ ನೀಡುವಂತಾಗಬೇಕು. ಹಾಗೆಯೇ ಒಂದು naaru-udyamaಕಸಬು ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದಿರುವಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವೆಂದರೆ ಆಯಾ ಕಸುಬುಗಳ ನೆಲೆಯಲ್ಲಿ ಜಾತಿ ಪ್ರಜ್ಞೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗುತ್ತದೆ. ಇದು ಸರಕಾರವೇ ಜಾತಿ ತರತಮವನ್ನು ಬಲಪಡಿಸಲು ಮುಂದಾದಂತಾಗುತ್ತದೆ. ಅಥವಾ ಆಯಾ ಸಮುದಾಯವನ್ನು ಒಂದೇ ಕಸುಬಿಗೆ ಕಟ್ಟಿಹಾಕಿದಂತೆಯೂ ಆಗುತ್ತದೆ. ಹಾಗಾಗಿ ಸಮುದಾಯ ಕಾಲೇಜುಗಳನ್ನು ರಾಜ್ಯ ಸರಕಾರ ತುಂಬಾ ಎಚ್ಚರದಿಂದ ಕರ್ನಾಟಕದ ಸಂದರ್ಭಕ್ಕೆ ಅಗತ್ಯ ಬದಲಾವಣೆಯೊಂದಿಗೆ ಮರು ರೂಪಿಸಬೇಕಾಗಿದೆ.

ಮುಖ್ಯವಾಗಿ ಸಮುದಾಯ ಕಾಲೇಜುಗಳನ್ನು ಪ್ರಾದೇಶಿಕ ವೈಶಿಷ್ಟ್ಯ ಮತ್ತು ಅಗತ್ಯಗಳನ್ನು ಆಧರಿಸಿ ಅಭಿವೃದ್ಧಿಪಡಿಸಬೇಕಿದೆ. ಕಾರಣ ಪ್ರಾದೇಶಿಕವಾಗಿ ಆಯಾ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಕಿನ್ನಾಳ ಮತ್ತು ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗಿದೆ, ಹಾಗಾಗಿ ಕೊಪ್ಪಳ ಮತ್ತು ಚನ್ನಪಟ್ಟಣಗಳಲ್ಲಿ ಈ ಕಲೆಯನ್ನು ಆಧರಿಸಿಯೇ ಸಮುದಾಯ ಕಾಲೇಜನ್ನು ಸ್ಥಾಪಿಸಬಹುದು. channapatna-toysಚಳ್ಳಕೆರೆ, ಬಳ್ಳಾರಿ, ಹಿರಿಯೂರು ಮುಂತಾದ ಕಡೆ ಕಂಬಳಿ ನೇಯುವಿಕೆ ಇದೆ. ಉತ್ತರ ಭಾರತದಿಂದ ಕಂಬಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಚಳ್ಳಕೆರೆಯಲ್ಲಿ ನಡೆಯುವ ಕಂಬಳಿ ಸಂತೆಯಲ್ಲಿ ಪ್ರತಿವಾರವೂ ಲಕ್ಷಾಂತರ ರೂಗಳ ವಹಿವಾಟು ಇದೆ. ಹೀಗಾಗಿ ಈ ಭಾಗದಲ್ಲಿ ಕಂಬಳಿ ನೇಯ್ಗೆಯ ತರಬೇತಿಯನ್ನು ಕೊಡುವ ಸಮುದಾಯ ಕಾಲೇಜುಗಳನ್ನು ನಿರ್ಮಿಸಬಹುದಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕತ್ತಾಳೆಯನ್ನು ಬಳಸಿ ನಾರು ಮಾಡುವಲ್ಲಿ ಲಂಬಾಣಿ ತಾಂಡಗಳು ಕ್ರಿಯಾಶೀಲವಾಗಿದೆ. ಈ ಉದ್ದಿಮೆಯನ್ನು ಆಧರಿಸಿ ಈ ಭಾಗದ ಹೊಲದ ಬದುವುಗಳಲ್ಲಿ ದೊಡ್ಡಮಟ್ಟದಲ್ಲಿ ಕತ್ತಾಳೆ ಬೆಳೆಯುತ್ತಾರೆ. ಇಂತಹ ಕಡೆ ಕತ್ತಾಳೆ ನಾರನ್ನು ಮಾಡುವ ಕಲೆಯನ್ನು ಆಧರಿಸಿ ಕೋರ್ಸುಗಳನ್ನು ತೆರೆಯುವ ಅಗತ್ಯವಿದೆ. ಅಂತೆಯೇ ತುಮಕೂರು, ತಿಪಟೂರು ಮುಂತಾದ ಕಡೆ ತೆಂಗು ಬೆಳೆ ಹೆಚ್ಚಾಗಿದೆ. ಇಂತಹ ಕಡೆಗಳಲ್ಲಿ ತೆಂಗನ್ನು ಆಧರಿಸಿದ ಉಪ ಉತ್ಪನ್ನಗಳನ್ನು ತಯಾರಿಸುವ ತರಬೇತಿ ಕೋರ್ಸನ್ನು ಈ ಭಾಗದ ಸಮುದಾಯ ಕಾಲೇಜುಗಳಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ. ಹೀಗೆ ಕರ್ನಾಟಕದ ಆಯಾ ಪ್ರಾದೇಶಿಕ ಉತ್ಪನ್ನಗಳನ್ನು ಆಧರಿಸಿ ಕೋರ್ಸಗಳನ್ನು ಆರಂಭಿಸುವುದು ಸೂಕ್ತವಾಗಿದೆ.

ಇನ್ನು ಸಿವಿಲ್ ಎಂಜಿನೀಯರಿಂಗ್ ಪದವೀಧರರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮನೆಕಟ್ಟುವ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅನಕ್ಷರಸ್ತರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಆಧರಿಸಿ ಕಟ್ಟಡ ನಿರ್ಮಾಣದ ಕೋರ್ಸನ್ನು ತೆರೆಯುವ ಅಗತ್ಯವಿದೆ. ಅಂತೆಯೇ ಪ್ರಾದೇಶಿಕವಾಗಿ ಕೃಷಿಯ ಭಿನ್ನ ಪ್ರಯೋಗಗಳು ಆಯಾ ಭಾಗದಲ್ಲಿವೆ. ಈ ವೈಶಿಷ್ಟಗಳೂ ಕೂಡ ಕೋರ್ಸಗಳನ್ನು ರೂಪಿಸುವಂತಾಗಬೇಕು. ಇಂದು ಸಾಂಪ್ರಾದಾಯಿಕ ಕೃಷಿಯ ಜತೆ ಆಧುನಿಕ ಕೃಷಿಯ ಪ್ರಯೋಗಗಳು ನಡೆಯುತ್ತಿವೆ. ಹಾಗಾಗಿ ಇಂತಹ ಆಧುನಿಕ ಕೃಷಿಗೆ ಸಂಬಂಧಿಸಿದಂತೆ ಗ್ರಾಮೀಣ ಯುವಕರಿಗೆ ಅನುಕೂಲವಾಗುವ ಕೋರ್ಸುಗಳನ್ನು ಆರಂಭಿಸಬೇಕಿದೆ. ಅದರಲ್ಲಿ ಮುಖ್ಯವಾಗಿ ಕೋಳಿ, ಕುರಿ, ಹಂದಿ, ಜಾನುವಾರು ಸಾಕಣೆಯನ್ನು ಆಧರಿಸಿದ ತರಬೇತಿಗಳನ್ನು ಆರಂಭಿಸಬಹುದು.

ಕೃಷಿಯ ಬೆಳೆಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳನ್ನು ಮಾಡುವ ನೆಲೆಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ತರಬೇತಿ ನೀಡುವಂತಹ ಕೋರ್ಸಗಳನ್ನು ಮಾಡಬಹುದಾಗಿದೆ. ಉದಾ: ಉತ್ತರ ಕರ್ನಾಟಕ ಮತ್ತು ಹೈದರಬಾದ್ ಕರ್ನಾಟಕದಲ್ಲಿ ಮುಸುಕಿನ ಜೋಳದ ಬೆಳೆ ಪ್ರಮಾಣ ಹೆಚ್ಚಾಗಿದೆ. ಈ ಮುಸುಕಿನ ಜೋಳವನ್ನು ಬಳಸಿಕೊಂಡಿ ಹಳ್ಳಿಗಳಲ್ಲಿಯೇ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸುವ ಅಗತ್ಯವಿದೆ. ಹತ್ತಿ, ಸೂರ್ಯಕಾಂತಿ, ಶೇಂಗ ಮುಂತಾದ ಬೆಳೆಗಳ ಉಪ ಉತ್ಪನ್ನಗಳನ್ನು ತಯಾರಿಸುವ ಕೋರ್ಸುಗಳನ್ನು ಆರಂಭಿಸಬಹುದು. ಇದರಿಂದಾಗಿ ಗ್ರಾಮೀಣ ಯುವ ಜನತೆಗೆ ದೊಡ್ಡಮಟ್ಟದಲ್ಲಿ ಉದ್ಯೋಗ ನಿರ್ಮಿಸಿದಂತಾಗುತ್ತದೆ.

ಹಳ್ಳಿಗಳು ಇಂದು ವೃದ್ಧರ ತಾಣಗಳಾಗಿವೆ. ಅದೇ ಹೊತ್ತಿಗೆ ನಗರಗಳು ಯುವಕ ಯುವತಿಯರ ಆಕರ್ಷಕ ಕೇಂದ್ರಗಳಾಗಿವೆ. construction-workersಇದಕ್ಕೆ ಕಾರಣ ಯುವ ಜನಾಂಗ ಹಳ್ಳಿಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಬೇಕಾದ ಉದ್ಯೋಗಗಳ ಕೊರತೆ ಇರುವುದು. ಸಮುದಾಯ ಕಾಲೇಜುಗಳ ಮೂಲಕ ಹಳ್ಳಿಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸಾದ್ಯವಾದರೆ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವನ್ನು ಉಳಿಸಿಕೊಳ್ಳುವ ಆಕರ್ಷಣೆಯನ್ನು ಹೆಚ್ಚಿಸಬಹುದಾಗಿದೆ. ಈ ಕೋರ್ಸುಗಳಿಗೆ ವಿದ್ಯಾರ್ಹತೆಯ ವಿಷಯದಲ್ಲಿ ಕೆಲವು ವಿನಾಯಿತಿಗಳು ಬೇಕಾಗುತ್ತದೆ. ಅರೆ ವಿದ್ಯಾವ0ತ ಮತ್ತು ಅನಕ್ಷರಸ್ತ ಯುವ ಸಮುದಾಯವನ್ನು ಒಳಗೊಳ್ಳುವ ಹಾಗೆ ವಿದ್ಯಾರ್ಹತೆಗಳಲ್ಲಿ ಸಡಿಲ ನಿಲುವಿರಬೇಕು. ಕೌಶಲ್ಯವನ್ನು ಆಧರಿಸಿಯೂ ವಿದ್ಯಾರ್ಹತೆಯನ್ನು ನಿಗದಿಪಡಿಸುವಂತಾಗಬೇಕು. ಇನ್ನು ಇಂತಹ ಎಲ್ಲಾ ಕೋರ್ಸುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತರನ್ನೂ, ದೇವದಾಸಿಯರನ್ನೂ ಒಳಗೊಂಡಂತೆ ಧ್ವನಿ ಇಲ್ಲದ ಅಂಚಿನ ಸಮುದಾಯಗಳಿಗೆ ಆಧ್ಯತೆ ಕೊಡಬೇಕಿದೆ.

ಮುಖ್ಯವಾಗಿ ಈ ಕೋರ್ಸಗಳನ್ನು ಮುಗಿಸಿಕೊಂಡು ಹೊರ ಹೋದಾಗ ಸ್ವತಃ ಉದ್ಯೋಗ ಸೃಷ್ಟಿಸಿಕೊಳ್ಳಲು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಿದೆ. ಇಂತಹ ಸಮರ್ಪಕ ಯೋಜನೆಗಳಿರದೆ ಈ ಕೋರ್ಸುಗಳಿಗೆ ಯುವ ಸಮುದಾಯವನ್ನು ಸೆಳೆಯುವುದು ಸರಿಯಾಗಲಾರದು. ಕಾರಣ ಹೊಸ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ. ಈ ನೆಲೆಯಲ್ಲಿ ಸಮುದಾಯ ಕಾಲೇಜುಗಳಲ್ಲಿ ಆರಂಭಿಸುವ ಯಾವುದೇ ಕೋರ್ಸುಗಳಲ್ಲಿ ತರಬೇತಿ ಪಡೆದವರು ಮುಂದೆ ಜೀವನ ನಿರ್ವಹಣೆಗೆ ಇದು ಹೇಗೆ ನೆರವಾಗಬಹುದು ಎನ್ನುವ ಬಗ್ಗೆ ಖಚಿತತೆ ಮತ್ತು ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಿದೆ.

ಅಕ್ಕಿಯೊಳಗಿನ ಕಲ್ಲಾಗದೇ ಸಾಣಿಗೆಯಾಗೋಣ


– ಡಾ.ಎಸ್.ಬಿ. ಜೋಗುರ


 

ಮನುಷ್ಯನಿಗೆ ಇದು ನನ್ನದು ಇದು ನಿನ್ನದು ಎನ್ನುವ ಆಸ್ತಿ ಪ್ರಜ್ಞೆ ಹುಟ್ಟಿದ ಗಳಿಗೆಯಿಂದಲೇ ಸಾಮಾಜಿಕ ಅಸಾಮನತೆ ಎನ್ನುವದು ಆವೀರ್ಭವಿಸಿತು. ಅದಕ್ಕಿಂತಲೂ ಮುಂಚೆ ಇದ್ದ ಅಸಮಾನತೆ ಕೇವಲ ಜೈವಿಕವಾಗಿತ್ತು, ಸ್ವಾಭಾವಿಕವಾಗಿತ್ತು. ಈ ಬಗೆಯ ಸಾಮಾಜಿಕ ಅಸಮಾನತೆಗಳು ಇತಿಹಾಸದುದ್ದಕ್ಕೂ ವ್ಯಾಪಿಸಿಕೊಂಡಿರುವದಿದೆ. ಬಹುಷ: ಆ ಕಾರಣದಿಂದಾಗಿಯೇ ಕಾರ್ಲಮಾರ್ಕ್ಸ್ ರಂಥಾ ಚಿಂತಕರು ಅಸ್ತಿತ್ವದಲ್ಲಿರುವ ಸಮಾಜಗಳ ಚರಿತ್ರೆ ಎಂದರೆ ವರ್ಗಸಂಘರ್ಷದ ಚರಿತ್ರೆಯೇ ಆಗಿದೆ ಎಂದಿರುವದಿದೆ. ಜೊತೆಗೆ ಉತ್ಪಾದನಾ ಸಾಧನಗಳ ಮೇಲಿನ ಒಡೆತನವಿರುವ ಬಂಡವಾಳಶಾಹಿಗಳು ಶೋಷಣೆಯನ್ನೇ ತಮ್ಮ ಮೇಲ್ಮುಖ ಸಂಚಲನೆಯ ಸಾಧನವನ್ನಾಗಿ ಮಾಡಿಕೊಂಡಿದ್ದರು. ಈ ಬಗೆಯ ಶೋಷಣೆಯ ಗರ್ಭದಲ್ಲಿಯೇ ವರ್ಗ ಸಂಘರ್ಷದ ಬೀಜಗಳು ಅಂಕುರಿಸಿದ್ದವು. ಇದು ಮುಂದೆ ಸಮತಾವಾದಿ ಸಮಾಜಕ್ಕೆ ಜನ್ಮ ನೀಡುತ್ತದೆ ಎಂದು ಭವಿಷ್ಯ ನುಡಿದ ಮಾರ್ಕ್ಸನ ಹೇಳಿಕೆ ಹುಸಿಯಾಯಿತು.

ಯಾವುದೇ ಒಂದು ರಾಷ್ಟ್ರದ ಆರ್ಥಿಕ ಸಂಪನ್ಮೂಲಗಳ ಶೇಖರಣೆಯ ಹಿಂದೆ ದುಡಿಯುವ ಜನಸಮೂಹದ ಬೆವರಿದೆ. ಬಂಡವಾಳ ಎನ್ನುವುದು ಯಾವುದೋ ಒಂದು ಅಗೋಚರ ಶಕ್ತಿಯ ವರಪ್ರಸಾದವಲ್ಲ. ಶ್ರಮಸಂಸ್ಕೃತಿಯಿಂದಲೇ ಅದು ಸೃಷ್ಟಿಯಾಗುತ್ತದೆ, ಒಟ್ಟುಗೂಡುತ್ತದೆ. drought12 ನೇ ಶತಮಾನದಲ್ಲಿ ಬಸವಣ್ಣನವರು ಈ ಬಗೆಯ ಶೊಷಣೆಗೆ ಅನುವು ಮಾಡಿಕೊಡಬಾರದು ಎನ್ನುವ ದೃಷ್ಟಿಯಿಂದಲೇ ಅವನು ರಾಜನಾದರೂ ಸೈ, ದಾಸನಾದರೂ ಸೈ ಇಬ್ಬರೂ ದುಡಿಯಲೇಬೇಕು. ಇನ್ನು ಇವರಿಬ್ಬರ ದುಡಿಮೆಯ ಮಿಗುತಾಯವನ್ನು ಗುಡ್ದೆ ಹಾಕದೇ ಸಮಾಜಕ್ಕೆ ದಾಸೋಹದ ರೂಪದಲ್ಲಿ ಹಿಂತಿರುಗಿಸಬೇಕು. ಅಷ್ಟಕ್ಕೂ ಅದು ಕೆರೆಯ ನೀರನು ಕೆರೆಗೆ ಚೆಲ್ಲುವ ಪರಿ ಎನ್ನುವ ಹಾಗೆ ದಾಸೋಹದ ತತ್ವವನ್ನು ಪರಿಚಯಿಸಿದ್ದರು. ಇತ್ತೀಚೆಗೆ ಬಡಜನರಿಗೆ ನೀಡಲಾಗುವ ಮೂವತ್ತು ಕಿಲೊ ಅಕ್ಕಿಯ ಬಗ್ಗೆ ಕೆಲವು ಅಪಸ್ವರಗಳು ಕೇಳಿಬರುತ್ತಿವೆ. ಇದು ಅವರ ದುಡಿಯುವ ಮನೋಭಾವವನ್ನು ಹಾಳುಗೆಡುವಲಿದೆ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಪೆಟ್ಟು ಬೀಳಲಿದೆ ಎನ್ನುವದು ಇವರ ವಾದ. ಬಡವರಿಗೆ ಈ ಅಕ್ಕಿಯನ್ನು ನೀಡದಿದ್ದರೂ ಅತ್ಯಂತ ಸುಭಿಕ್ಷವಾದ ಸುವರ್ಣಯುಗವಂತೂ ಪ್ರಚಲಿತ ರಾಜಕಾರಣದ ಸಂದರ್ಭದಲ್ಲಿ ಪ್ರತಿಷ್ಟಾಪಿತವಾಗದು. ಈಗಾಗಲೇ ದೊಡ್ಡ ದೊಡ್ಡ ಹೊಟೇಲುಗಳಲ್ಲಿ, ಮದುವೆ ಮಂಟಪಗಳಲ್ಲಿ, ವಿವಿಧ ಸಭೆ ಸಮಾರಂಭಗಳಲ್ಲಿ ಟನ್ ಗಟ್ಟಲೇ ಆಹಾರ ಪದಾರ್ಥ ಹಾಳಾಗಿ ಕಸವಾಗುವದರ ಬಗ್ಗೆಯೂ ನಮಗೆ ತಿಳಿದಿರಬೇಕು. ಅದು ಖಾಸಗಿ ಖರ್ಚಾಗಿದ್ದರೂ ಆಹಾರಧಾನ್ಯ ಹಾಳುಗೆಡಹುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಬಹುದಾಗಿದೆ. ಹಾಡುಹಗಲಲ್ಲಿಯೇ ಸೂರ್ಯನಿಗೆ ಸವಾಲಾಗಿ ಐಷಾರಾಮಿ ಹೊಟೆಲುಗಳಲ್ಲಿ ಉರಿಯುವ ಸಾವಿರಾರು ದೀಪಗಳ ಬೆಳಕಿನ ವ್ಯಯವಾಗುವದನ್ನೂ ಪ್ರಶ್ನಿಸಬೇಕಿದೆ. ಎಲ್ಲೆಲ್ಲೋ ಕೋಟಿಗಟ್ಟಲೆ ಹಣ ವ್ಯಯವಾಗುವ ಬಗ್ಗೆ ಮಾತನಾಡದೇ ಹೀಗೆ ಬಡವರಿಗೆ ಅಗ್ಗದ ದರದಲ್ಲಿ ಅಕ್ಕಿಯ ಬಗ್ಗೆ ಮಾತ್ರ ಯಾಕೆ ಸಂಕುಚಿತವಾದ ಪ್ರತಿಕ್ರಿಯೆಗಳು ಬರುತ್ತವೆ..?

ಬಡವರಿಗೆ ನೀಡುವ ಈ ಅಕ್ಕಿ ಎಲ್ಲೋ..ಯಾವುದೋ ಗೋದಾಮಿನಲ್ಲಿ ಹುಳ ಹಿಡಿದು, ಕಮುಚುಕಟ್ಟಿ ನಾರುವ ಬದಲು ಬಡವನ ಹೊಟ್ಟೆಯ ಸವಾಲಿಗೆ ಉತ್ತರವಾಗುವದಾದರೆ ಅದಕ್ಕಿಂತಲೂ ಸಾರ್ಥಕತೆ ಆ ಅಕ್ಕಿಗೆ ಇನ್ನೇನಿದೆ..? ಅಕ್ಕಿ ಎನ್ನುವದು ಸರ್ವಸ್ವವಲ್ಲ. ಅದು ಆ ಬಡವನ ಪಾಲಿಗೆ ಬೇಳೆಯಲ್ಲ, ಎಣ್ಣೆಯಲ್ಲ, ಉಪ್ಪಲ್ಲ, ಖಾರವಲ್ಲ, ತರಕಾರಿಯೂ ಅಲ್ಲ, ಹೆಂಡತಿಯ ಸೀರೆಯಲ್ಲ, ಮಕ್ಕಳ ವಸ್ತ್ರವಲ್ಲ, ಸ್ಕೂಲ ಫ಼ೀ ಅಲ್ಲ.. ಇರಲು ಮನೆಯಲ್ಲ. ಇಂಥಾ ಇನ್ನೂ ಹತ್ತಾರು ಅಲ್ಲಗಳ ನಡುವೆ ಹೊಟ್ಟೆಗಾಗುವ ಅಕ್ಕಿಯೇ ಎಲ್ಲವೂ ಎಂದು ತಿಳಿದು ವಾದ ಮಾಡುವ ಕ್ರಮವೇ ಸರಿಯಲ್ಲ. ಇಂಥಾ ಹತ್ತಾರು ಇಲ್ಲದ ಸಂಗತಿಗಳು ಬಡವನನ್ನು ಮುತ್ತಿ ಪೀಡಿಸುತ್ತಿರುವಾಗ ಸರಕಾರ ಕೊಡುವ 30 ಕಿಲೊ ಅಕ್ಕಿ ಅವನನ್ನು ಹೇಗೆ ದುಡಿಯದವನನ್ನಾಗಿ ಮಾಡುತ್ತವೆ ಎನ್ನುವದೇ ನಿಗೂಢ ರಹಸ್ಯ.

ಇನ್ನು ಅಗ್ಗದ ದರದಲ್ಲಿ ಅಕ್ಕಿ ಕೊಡುತ್ತಿರುವದು ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನದ ಜನರಿಗೋ..ಇಲ್ಲಾ ಬಂಗ್ಲಾ ದೇಶದ ಜನರಿಗೊ.. ಇಲ್ಲಾ ಶ್ರೀಲಂಕಾದವರಿಗೋ ಆಗಿದ್ದರೆ ತಕರಾರು ಎತ್ತಬಹುದು. ಇದು ನನದೇ ದೇಶದ, ನನ್ನದೇ ರಾಜ್ಯದ ಬಡಜನತೆಗೆ ಕೊಡುತ್ತಿರುವದು. ತಿನ್ನಲು ಸಾಕು ಬೇಕಾದಷ್ಟಿದ್ದರೂ ತಿಂದು ಅರಗಿಸಿಕೊಳ್ಳಲಾಗದೇ ಮಾತ್ರೆ ನುಂಗಿ ಚಡಪಡಿಸುವ ಅತ್ಯಂತ ಕಡಿಮೆ ಪ್ರಮಾಣದ ಜನರಿಗಿಂತಲೂ ಅರೆಹೊಟ್ಟೆಯಲ್ಲಿ ದಿನದೂಡುವ ಕೋಟಿ ಕೋಟಿ ಜನರ ಹಸಿವು ಹಿಂಗುವದು ಮುಖ್ಯವಾಗಬೇಕು.

ಸಿಗರೇಟು, ಮದ್ಯ, ಗುಟ್ಕಾದಂಥಾ ಪದಾರ್ಥಗಳನ್ನು ನೀಡಿದರೆ ಒಕ್ಕೊರಳಿನಿಂದ ವಿರೋಧಿಸಬಹುದು ಆದರೆ ಬಡವರ riceದಿನದ ಗಂಜಿಗಾಗಿ ನೀಡುವ ಅಕ್ಕಿಯನ್ನು ಕುರಿತು ವಿರೋಧಾತ್ಮವಾಗಿ ಪ್ರತಿಕ್ರಿಯಿಸುವುದು ಮಾತ್ರ ಸರಿಯಲ್ಲ. ಬಡತನ ಎನ್ನುವುದು ಒಂದು ಸ್ಥಿತಿ. ಅದನ್ನು ಯಾರೂ ಇಷ್ಟಪಟ್ಟು ತಂದುಕೊಂಡಿರುವದಿಲ್ಲ. ಆ ಬಡತನದ ಹತ್ತಾರು ಅಸಹಾಯಕ ಮುಖಗಳಲ್ಲಿ ಈ ಹಸಿವೂ ಒಂದು ಕನಿಷ್ಟ ಪಕ್ಷ ಅದಾದರೂ ಹಿಂಗುವಂತಾಗುವ ಗಳಿಗೆಗೆ ನಾವು ಸಂತಸ ಪಡಬೇಡವೇ..? ಸ್ವಾತಂತ್ರ್ಯಪೂರ್ವದಿಂದ ಇವತ್ತಿನವರೆಗೂ ಸರ್ವೋದಯ ಸಮಾಜದ ಕನಸನ್ನು ಕಾಣುವ ನಾವುಗಳು ನಮ್ಮದೇ ರಾಜ್ಯದ ಶೋಷಿತರಿಗೆ, ಕೆಳಸ್ತರಗಳಿಗೆ ನೀಡಲಾಗುವ ಕನಿಷ್ಟ ಸೌಲಭ್ಯಗಳನ್ನೂ ಸಹಿಸಲಾಗುವದಿಲ್ಲವಲ್ಲ..! ಎನ್ನುವದೇ ಬಹು ದೊಡ್ದ ವಿಷಾದ.

30 ಕಿಲೊ ಅಕ್ಕಿ ಬಡವರ ಬದುಕಿನ ಭಾಗ್ಯವನ್ನಂತೂ ಬದುಕಿಸಲಾರದು. ಆದರೆ ಕೊನೆಯ ಪಕ್ಷ ಆ ಕುಟುಂಬದ ಹಸಿವನ್ನಾದರೂ ನೀಗಿಸಬಲ್ಲದು. ದೇಶ ಸ್ವಾಯತ್ತವಾಗಿ 6 ದಶಕಗಳಾದರೂ ಇಂದಿಗೂ ನನ್ನದೇ ದೇಶದ ಅರ್ಧದಷ್ಟು ಜನ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುವದು, ಅರೆಹೊಟ್ಟೆಯಲ್ಲಿ ಮಲಗುವ ಸ್ಥಿತಿ ಇದೆ. ಈ ಸ್ಥಿತಿ ಬ್ರಿಟಿಷರು ಇಲ್ಲಿಂದ ಕಾಲ್ತೆಗೆದ ಮೇಲೆ ನಮ್ಮವರು ನಮ್ಮನ್ನಾಳುವಾಗ ನಿರ್ಮಾಣವಾದದ್ದು ಎನ್ನುವುದೇ ಒಂದು ಬಹುದೊಡ್ಡ ವ್ಯಂಗ್ಯ. ಕಸದಲ್ಲಿ ಎಸೆಯುವ ಎಂಜಲು ಅನ್ನಕ್ಕಾಗಿ ನಾಯಿ-ಹಂದಿಗಳ ಜೊತೆ ಸೆಣಸಾಡುವ ಸನ್ನಿವೇಶದ ಎದುರು ನಮ್ಮ ನಾಗರಿಕತೆ ನಾಚಿ ನೀರಾಗಬೇಕು. ಹಾಗಾದಾಗ ಮಾತ್ರ ನಾವು ಬಡವರಿಗೆ ನೀಡುವ ಅಕ್ಕಿಯಲ್ಲಿ ಕಲ್ಲಾಗದೇ ಸಾಣಿಗೆಯಾಗುವ ಸಾಧ್ಯತೆಯಿದೆ.

ನಿಡ್ಡೋಡಿ ವಿದ್ಯುತ್ ಸ್ಥಾವರ ಯಾಕೆ ಬೇಡ ?


– ಚಿದಂಬರ ಬೈಕಂಪಾಡಿ


 

ನೆಲದ ಮೇಲೆ ಅಂಗಾತ ಮಲಗಿದ ಇಪ್ಪತ್ತರ ಜೀವ ಅತ್ತ ಮಗುವೂ ಅಲ್ಲ, ಇತ್ತ ಯುವಕನೂ ಅಲ್ಲ. ತೆವಳುತ್ತಾ ಮನೆಯೊಳಗೇ ಕಾಲ ಕಳೆಯುವ ಮತ್ತೊಂದು ಜೀವ. ಸುಂದರ ಯುವತಿಯ ಕೈಹಿಡಿಯಲು ಯುವಕರು ಮುಂದೆ ಬರುವುದಿಲ್ಲ, ಆ ಊರಿನ ಯುವಕರಿಗೆ ಹೆಣ್ಣು ಕೊಡಲು ಹೊರಗಿನವರು ಇಚ್ಛೆಪಡುವುದಿಲ್ಲ. ಹುಟ್ಟುವ ಮಕ್ಕಳು ಅಂಗವೈಕಲ್ಯದಿಂದ ಕೂಡಿದ್ದರೆ, ಮದುವೆ ಆದರೂ ಹೆಣ್ಣು ಗರ್ಭ ಧರಿಸುವುದಿಲ್ಲ. ಇಂಥ ವೈರುಧ್ಯಗಳಿಂದ ನಲುಗುತ್ತಿರುವ ಕೊಕ್ಕಡದ ಹೆಸರು ಕೇಳಿದರೆ ಮೈಜುಮ್ಮೆನ್ನುತ್ತದೆ. ಕಾರಣ ಮಹಾಮಾರಿ ಏಡ್ಸ್ ಅಲ್ಲ ಅದಕ್ಕಿಂತಲೂ ಭೀಕರವಾದ ಎಂಡೋಸಲ್ಫಾನ್ ಈ ಭಾಗದಲ್ಲಿ ಮಾಡಿರುವ ಪರಿಣಾಮ.

ನವಮಂಗಳೂರು ಬಂದರು ನಿರ್ಮಾಣಕ್ಕೆ ಫಲವತ್ತಾದ ಭೂಮಿ ಕೊಟ್ಟು mangalore-oil-refineryಕಾಟಿಪಳ್ಳ-ಕೃಷ್ಣಾಪುರ ಪುನರ್ವಸತಿ ಕೇಂದ್ರದಲ್ಲಿ ಕೇವಲ ಹನ್ನೆರಡೂವರೆ ಸೆಂಟ್ಸ್ ನಿವೇಶನದಲ್ಲಿ ಮನೆಕಟ್ಟಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ ಮಾಡುತ್ತಿರುವ ಅನ್ನದಾತನ ಬದುಕು ಬವಣೆ ಅಧ್ಯಯನ ಯೋಗ್ಯ.

ಮಂಗಳೂರು ತೈಲಾಗಾರ ನಿರ್ಮಾಣಕ್ಕೆ ಭೂಸ್ವಾಧೀನವಾಗಿ ಈಗ ಚೇಳಾರಿನಲ್ಲಿ ಏದುಸಿರು ಬಿಡುತ್ತಿರುವ ನಿರ್ವಸಿತರು, ಎಂಎಸ್‌ಇಝಡ್ ಸ್ಥಾಪನೆಯಿಂದಾಗಿ ಭೂಮಿ ಕಳೆದುಕೊಂಡವರು ಸಿಂಗಾಪುರದಂಥ ಪುನರ್ವಸತಿ ನಗರಿಯಲ್ಲಿ ಬದುಕುತ್ತಿದ್ದಾರೆ.

ಪಡುಬಿದ್ರಿ ನಂದಿಕೂರು ವಿದ್ಯುತ್ ಸ್ಥಾವರದ ಸುಮಾರು 30 ಕಿ.ಮೀ ಸುತ್ತಳತೆಯಲ್ಲಿ ಹಸಿರು ಗಿಡಗಳು ನಳನಳಿಸುವುದಿಲ್ಲ. mangalore-pollutionಯಾಕೆಂದರೆ ಹಾರು ಬೂದಿಯ ಪ್ರಭಾವ. ಈ ಮೇಲಿನ ಎಲ್ಲವೂ ಪರಿಸರಕ್ಕೆ ಹಾನಿ ಮಾಡುತ್ತಿರುವಂಥವು ಮತ್ತು ಮನುಷ್ಯರು ಮನುಷ್ಯರಾಗಿ ಬದುಕಲು ಅವಕಾಶ ಮಾಡಿಕೊಡದ ಕೈಗಾರಿಕೆಗಳು. ಭೂಮಿಗೆ ಪರ್ಯಾಯವಾಗಿ ಹಣಕೊಟ್ಟಿವೆ, ಆದರೆ ಬದುಕು ಕಿತ್ತುಕೊಂಡಿವೆ. ಹತ್ತಾರು ಎಕರೆ ಭೂಮಿಯ ಒಡೆಯನಾಗಿದ್ದ ಜಮೀನ್ದಾರ ಈ ಕೈಗಾರಿಕೆಗಳ ಸ್ಥಾಪನೆಯಿಂದ ಬೀದಿಗೆ ಬಿದ್ದಿದ್ದಾನೆ.

ಈಗ ನಿಡ್ಡೋಡಿ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಜನ ನಿರ್ವಸಿತರಾಗುವುದು, ಫಲವತ್ತಾದ ಭೂಮಿಯನ್ನು ಬಿಟ್ಟುಕೊಟ್ಟು ಹಣದ ಥೈಲಿ ಹಿಡಿದಿಕೊಂಡು ಬಾರು, ಮೋಜು ಮಸ್ತಿಯಲ್ಲಿ ಕಾಲಕಳೆದು ಬಿಕಾರಿಯಾಗುವ ಕಾಲ ಸನ್ನಿಹಿತವಾಗುತ್ತಿದೆ.

ಯಾವುದೇ ಸರ್ಕಾರವಾದರೂ ಸರಿ ಜನಸ್ನೇಹಿ, ಪರಿಸರ ಸ್ನೇಹಿ, ಸಹ್ಯ ಕೈಗಾರಿಕೆಯನ್ನು ಸ್ಥಾಪಿಸುತ್ತದೆ ಎಂದು mangalore-pollution-at-seaನಿರೀಕ್ಷೆಮಾಡುವುದು ಜನರ ಸಾಮಾನ್ಯ ಗ್ರಹಿಕೆ ಹೊರತು ವಾಸ್ತವ ಅಲ್ಲ ಎನ್ನುವುದಕ್ಕೆ ಮೇಲಿನ ಎಲ್ಲವೂ ಉದಾಹರಣೆಗಳು.

ಕಡಂದಲೆ, ಕೊಜೆಂಟ್ರಿಕ್ಸ್ ಎರಡೂ ಉದಾಹರಣೆ ಮೂಲಕ ಹಾನಿಕಾರಕ ಕೈಗಾರಿಕೆಗಳನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಜನ ಹೆಮ್ಮೆ ಪಟ್ಟುಕೊಂಡರೂ ನಂದಿಕೂರು ಸ್ಥಾವರ ಕೊಜೆಂಟ್ರಿಕ್ಸ್ ಗಿಂತ ಭಿನ್ನ ಹೇಗೆಂದು ಸಮರ್ಥನೆ ಕೊಡಲು ಸಾಧ್ಯವೇ?

ಎಂಆರ್‌ಪಿಎಲ್ ತ್ಯಾಜ್ಯ ನೀರು ಹರಿಸುವ ಕೊಳವೆ ಅಳವಡಿಸುವ ಸಂದರ್ಭದಲ್ಲಿ ನಡೆದ ಗೋಲಿಬಾರ್ ನೆನಪಿಸಿಕೊಂಡರೆ ಒಂದು ಹೋರಾಟ ತಾರ್ಕಿಕ ಅಂತ್ಯ ಕಾಣುವುದು ಸಾಧ್ಯವೆಂದು ಭ್ರಮೆ ತರಿಸಿತೇ ಹೊರತು ಪರೋಕ್ಷವಾಗಿ ಜನರನ್ನು ಸರ್ಕಾರ ಮೋಸಗೊಳಿಸಿತು ಎನ್ನುವುದೇ ಸೂಕ್ತ.

ಗೋಲಿಬಾರ್ ವೇಳೆ ಹೋರಾಟದಲ್ಲಿ ಭಾಗವಹಿಸಿಯೋ, ಆಕಸ್ಮಿಕವಾಗಿಯೋ ಆ ಸಂದರ್ಭದಲ್ಲಿ ಗಾಯಗೊಂಡವರಿಗೆ ಪರಿಹಾರ, ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿತು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಪ್ರಯೋಜನ ಆಗಿಲ್ಲ. ನೆಲ-ಜಲ ನಮ್ಮದು. ಇಲ್ಲಿ ತಯಾರಾಗುವ ಪೆಟ್ರೋಲ್ ಕಡಿಮೆ ದರದಲ್ಲಿ ಬಳಕೆ ಮಾಡುವ ಭಾಗ್ಯ ರಾಜಧಾನಿ ದೆಹಲಿ ಜನಕ್ಕೆ. ಇಲ್ಲಿ ಉದ್ಯೋಗಕ್ಕೆ ಆಯ್ಕೆಯಲ್ಲೂ ಅವರದ್ದೇ ಮಾನದಂಡ, ಅವರದ್ದೇ ಜನ, ಎಲ್ಲರೂ ಭಾರತೀಯರು ಎನ್ನುವ ಸಮಾಧಾನದ ಮಾತು.

ನಾವು ನವಮಂಗಳೂರು ಬಂದರು ನಿರ್ಮಾಣವಾದ ಮೇಲೂ ಪಾಠ ಕಲಿಯಲಿಲ್ಲ. ಪುನರ್ವಸತಿ ಕೇಂದ್ರದ ಅಭಿವೃದ್ಧಿಗೆ ಬಂದರಿನ ಲಾಭದಲ್ಲಿ ಬಿಡಿಗಾಸೂ ಇಲ್ಲ, ಆದರೆ ಭೂಸ್ವಾಧೀನ ಮಾಡುವ ವೇಳೆ ಮಾಡಿಕೊಂಡ ನಿರ್ಣಯಗಳನ್ನು ಬೈಕಂಪಾಡಿ ಪಟೇಲ್ ಶ್ರೀನಿವಾಸ ರಾವ್ ಅವರನ್ನು ಸಂಪರ್ಕಿಸಿ ಪಡೆದುಕೊಳ್ಳಿ.

ಎಂಆರ್‌ಪಿಎಲ್ ವಿರುದ್ಧ ಹೋರಾಟ ಮಾಡಿದಾಗ ಜನರನ್ನು ಬಗ್ಗು ಬಡಿಯಲು ಅನುಸರಿಸಿದ ತಂತ್ರ ಒಡೆದು ಆಳುವ ನೀತಿ. ಒಕ್ಕಲೆಬ್ಬಿಸುವ ಸಾಮರ್ಥ್ಯವಿದ್ದವರಿಗೆ ಎಲ್ಲಾ ರೀತಿಯ ಗುತ್ತಿಗೆ ಕಾಣಿಕೆ.

ನಂದಿಕೂರು ಸ್ಥಾವರದ ವಿರುದ್ಧ ಹೋರಾಟ citizens-protest-niddodi-mangaloreಶುರುವಾದಾಗ ಧುತ್ತನೆ ಪ್ರತ್ಯಕ್ಷವಾದ ಪರ್ಯಾಯ ಹೋರಾಟ ಸಮಿತಿ, ಪರಿಸರಕ್ಕೆ ಹಾನಿಯಾಗುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುವ ಘೋಷಣೆ- ಚಪ್ಪಾಳೆ ಗಿಟ್ಟಿಸುವಂಥ ಭಾಷಣ. ಈಗ ಅವರೆಲ್ಲಿದ್ದಾರೆ? ಅವರೊಂದಿಗೆ ಕಾಣಿಸಿಕೊಂಡಿದ್ದ ನಂದಿಕೂರಿನ ಮುಖಗಳೆಲ್ಲಿವೆ?

ಇಷ್ಟೆಲ್ಲಾ ಹೇಳಿದ ಮೇಲೂ ನಿಡ್ಡೋಡಿ ಸ್ಥಾವರವನ್ನು ಸಮರ್ಥಿಸಿಕೊಳ್ಳುವವರಿದ್ದರೆ ಅದು ಅವರ ಜಾಣತನ ಎನ್ನುತ್ತೇನೆ. 1200 ಮೆ.ವಾ ಸಾಮರ್ಥ್ಯದ ನಂದಿಕೂರು ಸ್ಥಾವರದ ಅನಾಹುತವನ್ನು ಸಹಿಸಿಕೊಳ್ಳುವುದು ಕಷ್ಟ ಎನ್ನುತ್ತಿರುವಾಗ 4000 ಮೆ.ವಾ ಸಾಮರ್ಥ್ಯದ ಸ್ಥಾವರವನ್ನು ಮತ್ತು ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಊಹೆಮಾಡಿಕೊಳ್ಳುವುದು ಕಷ್ಟವಲ್ಲ.

ಕರಾವಳಿ ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶ ಅತೀ ಸೂಕ್ಷ್ಮ ಎನ್ನುವ ಪರಿಣತರ ವರದಿಯನ್ನು ನಿರಾಕರಿಸುವಂತಿಲ್ಲ. ಸರ್ಕಾರಿ ಪ್ರಾಯೋಜಿತ, ಕಂಪೆನಿ ಕೃಪಾಪೋಷಿತ ಪರಿಣತರ ಅಥವಾ ಢೋಂಗಿ ಪರಿಸರವಾದಿ ಪರಿಣತರ ಮಾತಿನಲ್ಲಿ ಜನ ವಿಶ್ವಾಸವಿಡುವಂತಿಲ್ಲ.

ಧಾರಣಾ ಶಕ್ತಿ ಅಧ್ಯಯನ ಮಾಡುವ ತನಕ ಯಾವುದೇ ಕೈಗಾರಿಕೆಗಳಿಗೆ ಕರಾವಳಿಯಲ್ಲಿ ಅವಕಾಶವಿಲ್ಲ ಎನ್ನುವ ಒಂದಂಶ ಅಜೆಂಡಾ ಮಾತ್ರ ಹೋರಾಟ ಸಮಿತಿಯ ಮುಂಚೂಣಿಯಲ್ಲಿರಬೇಕು ಹೊರತು ಅದು ಅಪಾಯಕಾರಿಯೋ, ಅಲ್ಲವೋ ಎನ್ನುವುದು ಈಗ ಮುಖ್ಯವಲ್ಲ ಎನ್ನುವುದೇ ಜನರ ಬೇಡಿಕೆಯಾಗಬೇಕು.

ಕರಾವಳಿಯಲ್ಲಿ ಸ್ಥಾಪನೆಯಾಗಿರುವ ಮತ್ತು ಸ್ಥಾಪನೆಯಾಗುತ್ತಿರುವ ಕೈಗಾರಿಕೆಗಳೆಲ್ಲವೂ ರಾಸಾಯನಿಕ ಆಧಾರಿತ ಮತ್ತು ಕಲ್ಲಿದ್ದಲು ಆಧಾರಿತ. ಹಾಗಾದರೆ ಕರಾವಳಿ ತ್ಯಾಜ್ಯದ ತಿಪ್ಪೇಗುಂಡಿಯೇ?

ಧಾರಾಳವಾಗಿ ಉದ್ಯೋಗ ನೀಡುತ್ತಿದ ಎಂಡಿಎಲ್ ಯಾರ್ಡನ್ನು save-niddodiಇಲ್ಲಿನ ರಾಜಕಾರಣಿಗಳು ಮುಂಬೈಗೆ ಸ್ಥಳಾಂತರಿಸಲು ಸಮ್ಮತಿಸಿದ್ದೇಕೆ? ನೆಲ, ಜಲ, ವಾಯು ಮಾರ್ಗದ ಅನುಕೂಲವಿರುವ ಕರಾವಳಿಯಲ್ಲಿ ಪರಿಸರಕ್ಕೆ ಹಾನಿಯಾಗದಂಥ ಆಟೋಮೊಬೈಲ್ ಉದ್ದಿಮೆ ಸ್ಥಾಪಿಸಿದ್ದರೆ ಸಹಸ್ರಾರು ಜನರಿಗೆ ಉದ್ಯೋಗ ಸಿಗುತ್ತಿರಲಿಲ್ಲವೇ? ಕರಾವಳಿಯಲ್ಲೂ ಖರ್ಗೆಯವರು ರೈಲ್ವೇ ಕೋಚ್ ನಿರ್ಮಾಣ ಕಾರ್ಖಾನೆ ಸ್ಥಾಪಿಸಲು ಮುಂದಾಗಬಾರದೇ? ಈ ಪ್ರಶ್ನೆಗಳನ್ನು ನಿಡ್ಡೋಡಿಗೆ ಓಡೋಡಿ ಬರುವ ರಾಜಕಾರಣಿಗಳಿಗೆ ಕೇಳಿ. ಮಠ ಪೀಠಾಧೀಶರು, ರಾಜಕಾರಣಿಗಳು ಸಾರಥ್ಯ ವಹಿಸಿಕೊಳ್ಳುವ ಹೋರಾಟದಲ್ಲಿ ಯಾರೂ ನಂಬಿಕೆ ಇಟ್ಟುಕೊಳ್ಳುವಂತಿಲ್ಲ.

ಮಠ-ಪೀಠಾಧಿಗಳಿಂದ, ಜಾತಿ, ಧರ್ಮಗಳ ನೆಲೆಯಿಂದ ಮತ್ತು ರಾಜಕೀಯ ಪಕ್ಷಗಳ ಸೆರಗಿನ ಮರೆಯಿಂದ ಹೊರತಾದ ಹೋರಾಟವಾಗಬೇಕು. ಅಲ್ಲಿ ಭೂಮಿ ಕಳೆದುಕೊಳ್ಳುತ್ತಿರುವ ಹಿರಿ ತಲೆಯಿಂದ ಹಿಡಿದು ಅಲ್ಲೇ ಬದುಕುವ ಕನಸು ಕಟ್ಟಿಕೊಂಡು ಹುಟ್ಟಿರುವ ಹಸುಗೂಸಿನ ತನಕ ಜನರಿಗಾಗಿ, ಜನರ ಹೋರಾಟವಾಗಬೇಕು. ಅದು ಆಗಲಿ ಎನ್ನುವ ಆಶಯ ನನ್ನದು.