ಕೆ.ಎಸ್.ಪುಟ್ಟಣ್ಣಯ್ಯನವರ ಮೇಲಿರುವ ಅಗಾಧ, ಆದರೆ ನಿಭಾಯಿಸಬಹುದಾದ ಹೊರೆ

– ರವಿ ಕೃಷ್ಣಾರೆಡ್ಡಿ

ಕಳೆದ ವಾರ ವಿಧಾನಸಭೆಯಲ್ಲಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನ (29/5/2013) ಬೆಂಗಳೂರಿನಲ್ಲಿ ಸರ್ವೋದಯ ಕರ್ನಾಟಕ ಪಕ್ಷ ತನ್ನ ಮಿತ್ರ ಪಕ್ಷಗಳ ಸಹಯೋಗದೊಂದಿಗೆ ಸದಾಶಯ ಸಮಾವೇಶ ಹಮ್ಮಿಕೊಂಡಿತ್ತು. ಕಳೆದ ಚುನಾವಣೆಯಲ್ಲಿ ದೇವನೂರು ಮಹಾದೇವರ ನೇತೃತ್ವದ ಸರ್ವೊದಯ ಪಕ್ಷವು ಸಿಪಿಐ, ಸಿಪಿಐಎಮ್, ಫಾರ್ವರ್ಡ್ ಬ್ಲಾಕ್, ಮತ್ತು ನಾನು ಪ್ರತಿನಿಧಿಸುವ ಲೋಕಸತ್ತಾ ಪಕ್ಷದ ಜೊತೆ ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಂಡಿತ್ತು. sadashaya-samavesh-flierಪರಸ್ಪರರ ವಿರುದ್ಧ ಅಭ್ಯರ್ಥಿಗಳನ್ನು ಹಾಕದೇ ಇರುವುದು ಮತ್ತು ಪರಸ್ಪರರನ್ನು ತಾವು ಸ್ಪರ್ಧಿಸದೇ ಇರುವ ಕ್ಷೇತ್ರಗಳಲ್ಲಿ ಬೆಂಬಲಿಸುವ ಹೊಂದಾಣಿಕೆ ಅದು, ಈ ಐದು ಪಕ್ಷಗಳಿಂದ ಗೆದ್ದ ಏಕೈಕ ಅಭ್ಯರ್ಥಿ ನಮ್ಮ ರೈತಸಂಘದ ಕೆ.ಎಸ್.ಪುಟ್ಟಣ್ಣಯ್ಯನವರು. ಅವರು ವಿಧಾನಸಭೆಗೆ ಹೋಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಮೊದಲು ಅವರನ್ನು ಎಲ್ಲರೂ ಸಂಯುಕ್ತವಾಗಿ ಅಭಿನಂದಿಸುವ ಕಾರ್ಯಕ್ರಮವೇ ಸದಾಶಯ ಸಮಾವೇಶ.

ಅಂದು ನಾನು ಗಮನಿಸಿದ ಒಂದೆರಡು ವಿಚಾರಗಳನ್ನು ಹಂಚಿಕೊಳ್ಳಬೇಕು. ಸರ್ವೋದಯ ಕರ್ನಾಟಕ ಪಕ್ಷದ (ರೈತಸಂಘ) ಸುಮಾರು ಎರಡು-ಮೂರು ಸಾವಿರ ಜನ ಅಂದು ರಾಜ್ಯದ ಅನೇಕ ಕಡೆಗಳಿಂದ ಬಂದಿದ್ದರು. ಉತ್ತರ ಕರ್ನಾಟಕದಿಂದ ಬಂದಿದ್ದ ರೈತರೂ ಬಹುಸಂಖ್ಯೆಯಲ್ಲಿದ್ದರು. ಬಹುಶಃ ಎಲ್ಲರೂ ತಮ್ಮದೇ ಖರ್ಚುಗಳನ್ನು ಹೊಂದಿಸಿಕೊಂಡು ಬಂದಿದ್ದರು. ಕೆಲವು ರೈತರು ಸಂಸಾರಸಮೇತ ಬಂದಿದ್ದರು. ಬಾಡಿಗೆ ಜನರಿಲ್ಲದ ರಾಜಕೀಯ ಸಮಾವೇಶವನ್ನು ನೋಡುವುದೇ ಒಂದು ಆಶಾವಾದ ಮತ್ತು ಜೀವನಪ್ರೀತಿಯನ್ನು ಹೆಚ್ಚಿಸುವ ವಿಷಯ.

ಸುಮಾರು ಹದಿನೈದು ಜನ ನಾಯಕರು ಅಂದಿನ ಒಂದೂವರೆ ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ಕೈದು ಜನರನ್ನು ಬಿಟ್ಟರೆ ಎಲ್ಲರೂ ಮೂರ್ನಾಲ್ಕು ನಿಮಿಷಗಳ ಒಳಗೆ ಹೇಳಬೇಕಾದದ್ದನ್ನು ಹೇಳಿದರು. ಎಲ್ಲರೂ ಬಹಳ ಆಶಾದಾಯಕವಾಗಿ ಮಾತನಾಡಿದರು. ಕೇವಲ ಒಬ್ಬ ಶಾಸಕರ ಮೇಲೆ ಇಷ್ಟೊಂದು ಅಭಿಮಾನ ಮತ್ತು ನಿರೀಕ್ಷೆಗಳನ್ನು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಪ್ರಗತಿಪರರ ಗುಂಪು ಮತ್ತು ರೈತರು ಯಾರ ಮೇಲೂ ಇಟ್ಟುಕೊಂಡಿರಲಿಲ್ಲ ಎಂದರೆ ಕೆ.ಎಸ್.ಪುಟ್ಟಣ್ಣಯ್ಯನವರ ಮೇಲೆ ಎಷ್ಟೊಂದು ನಿರೀಕ್ಷೆಗಳಿವೆ ಎನ್ನುವುದು ಗೊತ್ತಾಗುತ್ತದೆ ಎಂದು ಭಾವಿಸುತ್ತೇನೆ.

ಅಲ್ಲಿ ನನಗೆ ವಿಲಕ್ಷಣವಾಗಿ ಎದ್ದುಕಾಣಿಸಿದ ವಿಷಯವೊಂದನ್ನು ಹೇಳಬೇಕು: ಬಹುತೇಕ ಎಲ್ಲರೂ ಹಸಿರು ಶಾಲು ಹೊದ್ದ ರೈತರೇ ಇದ್ದ ಆ ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಬಹಳ ಜನ ಪ್ರಸ್ತಾಪಿಸಲಿಲ್ಲ. ಆದರೆ ಎಲ್ಲರೂ ಸಾಮೂಹಿಕವಾಗಿ ಎಂಬಂತೆ ಪ್ರಸ್ತಾಪಿಸಿದ ವಿಷಯ “ಭ್ರಷ್ಟಾಚಾರ”. ಇದು ಇವತ್ತಿನ ಸಮಾಜದಲ್ಲಿ ಭ್ರಷ್ಟಾಚಾರ ಹೇಗೆ ಸಾರ್ವತ್ರಿಕ ಸಮಸ್ಯೆಯಾಗಿದೆ ಎನ್ನುವುದನ್ನು ತೋರಿಸುತ್ತದೆ,

ನನಗೆ ಮಾತನಾಡುವ ಅವಕಾಶ ಸಿಕ್ಕಾಗ ನಾನು ಪ್ರಮುಖವಾಗಿ ಒಂದೆರಡು ವಿಷಯ ಪ್ರಸ್ತಾಪಿಸಿದೆ: ’ಪುಟ್ಟಣ್ಣಯ್ಯನವರ ಮೆಲೆ ಅನೇಕ ನಿರೀಕ್ಷೆಗಳಿವೆ, ಅವರೊಬ್ಬರೇ ನಿಭಾಯಿಸಲಾಗದಷ್ಟು ಹೊರೆಯಿದೆ. ಈಗ ಅವರು ಶಾಸಕರೂ ಆಗಿದ್ದಾರೆ. ಹಾಗಾಗಿ ಪುಟ್ಟಣ್ಣಯ್ಯನವರ ಮೇಲಿರುವ ಪಕ್ಷ ಸಂಘಟನೆ ಮತ್ತಿತರ ಹೊರೆಯನ್ನು ಪಕ್ಷದ ಇತರರು ಹೊತ್ತುಕೊಂಡು ಪುಟ್ಟಣ್ಣಯ್ಯನವರು ಸದನದಲ್ಲಿ ಮತ್ತು ಕಾನೂನು ರಚನೆಯಲ್ಲಿ ಹೆಚ್ಚು ತೊಡಗುವಂತೆ ಅನುವು ಮಾಡಿಕೊಡಬೇಕು. ಇಂದು ಸರ್ಕಾರ ಒಳ್ಳೆಯ ಕಾನೂನುಗಳನ್ನು ತರುತ್ತಿಲ್ಲ. ಹಾಗಾಗಿ ಪುಟ್ಟಣ್ಣಯ್ಯನವರು ಖಾಸಗಿ ಮಸೂದೆಗಳನ್ನು ಮಂಡಿಸಲು ಮುಂದಾಗಬೇಕು. ಉದಾಹರಣೆಗೆ, ಕೆಐಎಡಿಬಿ ಸರ್ಕಾರದ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಲಾಭಕ್ಕೆ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಅದನ್ನು ತಡೆಗಟ್ಟುವ ಕಾನೂನು ತಿದ್ದುಪಡಿಗಳನ್ನು ಮಂಡಿಸಬೇಕು. ಇವರು ಮಂಡಿಸುವ ಖಾಸಗಿ ಮಸೂದೆಗಳು ಹೇಗಿರಬೇಕು ಎಂದರೆ ಅವನ್ನು ವಿರೋಧಿಸುವ ಶಾಸಕರು ಅಪ್ಪಟ ಜನವಿರೋಧಿಗಳು ಎನ್ನುವ ಹಾಗೆ ಇರಬೇಕು. ಅದಕ್ಕೆ ಅವರು ಮಿತ್ರಪಕ್ಷಗಳ ಮತ್ತು ಅವರದೇ ಪಕ್ಷದಲ್ಲಿಯ ಚಿಂತಕರ ಸಹಾಯ ಪಡೆದು ಸಶಕ್ತವಾದ ಮಸೂದೆಗಳನ್ನು ಬರೆಯಬೇಕು. ಇನ್ನು ಬಯಲುಸೀಮೆಯ, ನದಿ-ನೀರಾವರಿ ಇಲ್ಲದ ರೈತ ಇಂದು ಬಸವಳಿದಿದ್ದಾನೆ. ಕೆಲವೊಮ್ಮೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಬೋರ್ ಹಾಕಿಸಿ, sadashaya-samaveshaಮೂರ್ನಾಲ್ಕು ವರ್ಷ ಕಷ್ಟಪಟ್ಟು ಸಾಕಿದಂತಹ ಅಡಿಕೆ-ತೆಂಗಿನಂತಹ ಇನ್ನೂ ಫಸಲು ಬರದ ತೋಟಗಳಿಗೆ ಈಗ ನೀರಿಲ್ಲ. ವಿದ್ಯುತ್‌ನದೊಂದೇ ಸಮಸ್ಯೆಯಲ್ಲ. ಅವನ ಜಮೀನಿನಲ್ಲಿ ಎಲ್ಲಿ ಬೋರ್ ಹಾಕಿಸಿದರೂ ನೀರಿಲ್ಲ. ಹೀಗೆ ಕೆಟ್ಟಿರುವ ರೈತರು ಊರಿಗೆ ಹತ್ತಾರು ಜನ ಸಿಗುತ್ತಾರೆ. ಇದೆಲ್ಲ ಅವರ ಸ್ವಯಂಕೃತಾಪರಾಧ ಎಂದು ಪರಿಗಣಿತವಾಗುತ್ತದೆಯೆ ಹೊರತು ಈ ಅಸಂಘಟಿತ ಜನರಿಗೆ ಯಾವುದೇ ನೆರವು ಸಿಗುತ್ತಿಲ್ಲ.  ಇಂತಹ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಬೇಕು.’ ಇದು ನಾನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ ವಿಚಾರಗಳು.

ನಮ್ಮ ಬಹುತೇಕ ಶಾಸಕರಿಗೆ ಗೊತ್ತಿಲ್ಲದ ಅಥವ ಅರ್ಹತೆ ಇಲ್ಲದ ವಿಷಯ ಏನೆಂದರೆ, ಸರ್ಕಾರ ಮಾತ್ರ ಶಾಸನಗಳನ್ನು ಮಂಡಿಸಬೇಕಿಲ್ಲ. ಸದನದ ಯಾವುದೇ ಸದಸ್ಯ ಸ್ವತಃ ಕಾನೂನುಗಳನ್ನು ಬರೆದು ಸದನದಲ್ಲಿ ಮಂಡಿಸಬಹುದು. ಅದನ್ನು ಸದನ ಅನುಮೋದಿಸಿದರೆ ಅದೂ ಶಾಸನವಾಗುತ್ತದೆ. ಆದರೆ ನಮ್ಮಲ್ಲಿ ಸರ್ಕಾರಕ್ಕೆ ಕಾಯದೆ ರಾಜ್ಯಕ್ಕೆ ಅಥವ ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಬರೆಯುವ ಮತ್ತು ಮಂಡಿಸುವ ಪ್ರತಿಭೆಗಳು ಕಡಿಮೆ ಇವೆ. ಶಾಸಕಾಂಗದ ಪ್ರಾಥಮಿಕ ಜ್ಞಾನವಿಲ್ಲದವರನ್ನು ನಾವು ಶಾಸಕರನ್ನಾಗಿ ಆರಿಸಿಕೊಂಡು ದೇಶ ಬದಲಾಗಿಬಿಡಲಿ ಎಂದರೆ ಆಗಿಬಿಡುತ್ತದೆಯೆ? ಹಿಂದಿನ ವಿಧಾನಸಭೆಯ ಅವಧಿ ಮುಗಿಯುತ್ತ ಬಂದ ಸಂದರ್ಭದಲ್ಲಿ ಒಬ್ಬ ಪಕ್ಷೇತರ ಶಾಸಕ ಅಪರೂಪಕ್ಕೆ ಎಂಬಂತೆ ಖಾಸಗಿ ಮಸೂದೆ ಮಂಡಿಸಿದ್ದ. ಅದು ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ಕಾಯ್ದೆ. ಯಾವುದೇ ಶಾಸಕನ ಕೆಲಸ ಮತ್ತು ಅನುದಾನದ ಹಣದ ವಿಲೇವಾರಿಯ ಬಗ್ಗೆ ಮಾಹಿತಿ ಕೇಳುವುದಕ್ಕೆ ಮೊದಲು ಅದಕ್ಕೆ ಸ್ಪೀಕರ್‌ರಿಂದ ಅನುಮತಿ ಪಡೆಯತಕ್ಕದ್ದು ಎಂದು ಆ ತಿದ್ದುಪಡಿಯ ಸಾರಾಂಶ. ಬಹುಶಃ ಎಲ್ಲಾ ಶಾಸಕರಿಗೂ ಆ ಮಸೂದೆ ಪ್ರಿಯವೇ ಆಗಿದ್ದರೂ ಅದು ಮಂಡನೆಯಾದ ಮಾರನೆಯ ದಿನವೇ ಮಾಧ್ಯಮಗಳಲ್ಲಿ ಬಂದ ಜನಾಭಿಪ್ರಾಯಕ್ಕೆ ಹೆದರಿ ಆ ಬೆತ್ತಲೆ ಶಾಸಕ ಆ ಖಾಸಗಿ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಆಗಿತ್ತು.

ಇಂತಹ ಸಂದರ್ಭದಲ್ಲಿ ಕೆ.ಎಸ್.ಪುಟ್ಟಣ್ಣಯ್ಯನವರು ಸದನದಲ್ಲಿಯಂತೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಬಂದಿದೆ. ನಿಜಕ್ಕೂ ಅವರು ಒಂದೆರಡು ಖಾಸಗಿ ಮಸೂದೆಗಳನ್ನು ಮಂಡಿಸಿಬಿಟ್ಟರೆ–ಅವು ಅನುಮೋದನೆ ಆಗಲಿ ಬಿಡಲಿ–ಅದರ ದೀರ್ಘಕಾಲೀನ ಪರಿಣಾಮಗಳೇ ಬೇರೆ ಇರುತ್ತವೆ. ನಾನು ಸದಾಶಯ ಸಮಾವೇಶದಲ್ಲಿ ಹೇಳಲು ಮರೆತ ವಿಚಾರಗಳಲ್ಲಿ ಒಂದು ಲೋಕಾಯುಕ್ತಕ್ಕೆ ಸ್ವಾಯತ್ತತೆ ಕಲ್ಪಿಸುವುದು. ಸ್ವತಃ ಸರ್ವೋದಯ ಪಕ್ಷ ಈ ವಿಚಾರದಲ್ಲಿ ಸಮಾವೇಶಗಳನ್ನು ಹಮ್ಮಿಕೊಂಡಿತ್ತು. ಸರ್ಕಾರವನ್ನು ಮತ್ತು ಸಿದ್ಧರಾಮಯ್ಯನವರನ್ನು ಈ ವಿಚಾರದಲ್ಲಿ ಒತ್ತಾಯಿಸುವುದಕ್ಕಿಂತ ಸರ್ಕಾರ ಏನು ಮಾಡಬೇಕಿದೆ ಅದನ್ನು ಕೆ.ಎಸ್.ಪುಟ್ಟಣ್ಣಯ್ಯನವರು ಒಂದು ಕಾಯ್ದೆಯಾಗಿ ಮಂಡಿಸಿ ಅದರ ಅನುಮೋದನೆಗೆ ಪ್ರಯತ್ನಪಟ್ಟರೆ ಮತ್ತು ಜನಾಭಿಪ್ರಾಯವನ್ನು ರೂಪಿಸಲು ರಾಜ್ಯಾದಾದ್ಯಂತ ಓಡಾಡಿದರೆ ಅದಕ್ಕಿಂತ ಹೆಚ್ಚಿನ political activism ಇನ್ನೊಂದಿಲ್ಲ. ಅವರಿಗೆ ಇಲ್ಲಿ ಅತ್ಯುತ್ತಮ ರಾಜಕೀಯ ಅವಕಾಶವೂ ಇದೆ. ಅಮೆರಿಕದಲ್ಲಿ ಒಬಾಮ ಸರ್ಕಾರ ಕಾನೂನು ರಚನೆ ಮತ್ತು ತಿದ್ದುಪಡಿಗಳ ವಿಚಾರಕ್ಕೆ ಹೀಗೆಯೇ ಮಾಡುತ್ತದೆ. ತನ್ನ ಪಕ್ಷದವರಿಂದ ತನಗೆ ಸೂಕ್ತ ಅನ್ನಿಸಿದ ರೀತಿ ಮಸೂದೆಗಳನ್ನು ರಚಿಸಿ ಅವನ್ನು ಅಲ್ಲಿಯ ಕಾಂಗ್ರೆಸ್‌ನಲ್ಲಿ ಮಂಡನೆ ಮಾಡಿ, ಅದಕ್ಕೆ ತಮ್ಮ ಪಕ್ಷದಲ್ಲಿಯ ಭಿನ್ನಮತೀಯರು ಮತ್ತು ವಿರೋಧ ಪಕ್ಷಗಳ ಸದಸ್ಯರು ಬೆಂಬಲಿಸುವಂತೆ ಮಾಡಲು ಒಮ್ಮೊಮ್ಮೆ ಒಬಾಮ ದೇಶವ್ಯಾಪಿ ಪ್ರವಾಸ ಕೈಗೊಂಡು ಜನ ತಮ್ಮ ಜನಪ್ರತಿನಿಧಿಗಳ ಮೇಲೆ ಆ ಮಸೂದೆಯ ಪರವಾಗಿ ಮತ ಹಾಕುವಂತೆ ಒತ್ತಡ ತರಬೇಕೆಂದು ಪ್ರಚಾರ ಮಾಡುತ್ತಾನೆ. ಲೋಕಾಯುಕ್ತವನ್ನು ಬಲಪಡಿಸುವ ಮತ್ತು ಸ್ವಾಯತ್ತಗೊಳಿಸುವ ಕಾಯಿದೆಯ ಪರವಾಗಿ ಪುಟ್ಟಣ್ಣಯ್ಯನವರು ಒಂದಿಡೀ ವರ್ಷ ಇಂತಹುದೇ ರೀತಿಯಲ್ಲಿ ಕೆಲಸ ಮಾಡಿದರೆ ಖಂಡಿತ ಅದು ಫಲ ಕೊಡುತ್ತದೆ. ಇವರೇ ಮಂಡಿಸುವ ಮಸೂದೆ ಅನುಮೋದನೆ ಆಗುತ್ತದೆಯೋ ಇಲ್ಲವೋ, ಅಂತಹ ಸಕ್ರಿಯತೆ ಮತ್ತು ಹೋರಾಟದಿಂದ ಗುಣಾತ್ಮಕ ದೂರಗಾಮಿ ಪರಿಣಾಮಗಳಂತೂ ಆಗುತ್ತದೆ. ಶಾಸನಸಭೆಯಲ್ಲಿ ಆಕ್ಟಿವಿಸಂ ಎಂದರೆ ಹೀಗಿರುತ್ತದೆ.

ಸದಾಶಯ ಸಮಾವೇಶದಲ್ಲಿ ಎಲ್ಲರಿಗಿಂತ ಹೆಚ್ಚು ಮಾತನಾಡಿದವರು ಮತ್ತು ಚಪ್ಪಾಳೆ ಗಿಟ್ಟಿಸಿದವರು ಎಂದರೆ ರೈತಸಂಘದ ನಾಯಕರಾದ ಸೋಮಗುದ್ದು ರಂಗಸ್ವಾಮಿಯವರು. ಆಗಾಗ ಮಾತುಗಳನ್ನೇ ಪದ್ಯವನ್ನಾಗಿ ಹೊಸೆದು ಗಮಕಶೈಲಿಯಲ್ಲಿ ಹಾಡುತ್ತ ಭಾಷಣ ಮಾಡುವ ಇವರಿಗೆ ರೈತಸಂಘದ ಸಭೆಯಲ್ಲಿ ಭಾಷಣ ಮಾಡಲು ಬಹಳ ಬೇಡಿಕೆ ಇದ್ದಂತಿದೆ. ಇವರಂತೂ ಭ್ರಷ್ಟಾಚಾರದ ವಿಷಯದಲ್ಲಿ ಬಹಳ ಸಿಟ್ಟಿನಿಂದ ಮಾತನಾಡುತ್ತಾರೆ. ಪುಟ್ಟಣ್ಣಯ್ಯನವರು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎನ್ನುತ್ತ ಅವರು ಕೊನೆಯಲ್ಲಿ ಹೇಳಿದ “ಪುಟ್ಟಣ್ಣಯ್ಯನವರು ಸದನದಲ್ಲಿರುವ ಇತರ 223 ಹೇಂಟೆಗಳಿಗೆ (ಹೆಣ್ಣು ಕೋಳಿಗಳಿಗೆ) ಹುಂಜವಾಗಲಿ” ಎಂಬ ಮಾತು ಇಡೀ ಸಭೆಯನ್ನು ನಗೆಗಡಲಿನಲ್ಲಿ ಮುಳುಗಿಸಿತು. ನನಗೆ ಈಗ ಅನ್ನಿಸುವುದು, ಪುಟ್ಟಣ್ಣಯ್ಯನವರು ಒಂದಾದರೂ ಖಾಸಗಿ ಮಸೂದೆಯನ್ನು ಮಂಡಿಸಿ ಅದು ಅನುಮೋದನೆಯೂ ಆಗಿಬಿಟ್ಟರೆ ಸೋಮಗುದ್ದು ರಂಗಸ್ವಾಮಿಯವರ ಮಾತು ಉಪಮಾತ್ಮಕವಾಗಿ ನಿಜವಾದಂತೆಯೇ. ಹಾಗೇನಾದರೂ ಆದರೆ, ಮುಂದಿನ ವಿಧಾನಸಭಾ ಚುನಾವಣೆಯ ನಂತರ ಪುಟ್ಟಣ್ಣಯ್ಯನವರಿಗೆ ಸದನದಲ್ಲಿ ಸಾಥ್ ಕೊಡಲು ದೊಡ್ಡ ಗುಂಪೇ ಇರುತ್ತದೆ ಮತ್ತು ಕರ್ನಾಟಕದ ಹಿಂದಿನ ಭ್ರಷ್ಟ ದಿನಗಳಿಗೆ ಪ್ರಾಯಶ್ಚಿತ್ತ ದೊರಕಿದಂತಾಗುತ್ತದೆ. ನಮ್ಮ ಜನರಿಗೆ ಜನಪ್ರತಿನಿಧಿಗಳು ಎಂತಹವರಿರಬೇಕು ಮತ್ತು ಅವರ ಯೊಗ್ಯತೆಗಳು ಏನಿರಬೇಕು  ಎಂದು ತೋರಿಸುವುದಕ್ಕೆ ಒಂದಷ್ಟು ಉದಾಹರಣೆಗಳಾದರೂ ಬೇಕು.

1 ರೂ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರದ ಹಿಂದಿರುವ ಕಟು ವಾಸ್ತವಗಳು

– ಬಿ.ಜಿ.ಗೋಪಾಲಕೃಷ್ಣ

ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ವ್ಯಾಪಕ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಯಾವುದೇ ನಿಯಮ, ಕಾಯ್ದೆ, ಕಾನೊನು ಅಥವಾ ನಿರ್ಧಾರಗಳು ಚರ್ಚೆಗೆ ಬಾರದೆ ಅಂಕಿತವಾಗಿಬಿಟ್ಟರೆ ಅದರ ಸ್ಯಾರಸ್ಯವೇ ಇರುವುದಿಲ್ಲ. ಒಂದು ಚರ್ಚೆ ಪ್ರಾರಂಭವಾಗಿ ಕೊನೆಗೊಳ್ಳುವುದರೊಳಗಾಗಿ ಅನೇಕ ಕಹಿ ವಾಸ್ತವಗಳು ಬೆಳಕಿಗೆ ಬರುತ್ತವೆ.

ನಾವು ಒಂದು ವಿಷಯವನ್ನು ಯಾವ ದೃಷ್ಟಿ ಕೋನದಲ್ಲಿ ನೋಡುತ್ತೇವೆ, ಯಾವ ಪರಿಸರದಲ್ಲಿ ಬೆಳೆಯುತ್ತಿದೇವೆ, ನಮ್ಮಲ್ಲಿರುವ ವಿಚಾರಧಾರೆಗಳು, ಇವು ನಮ್ಮ ಮುಂದಿರುವ ಚರ್ಚೆಯ ವಿಷಯಗಳ ಬಗ್ಗೆ ಒಂದು ನಿರ್ಧಾರಕ್ಕೆ ತಂದು ನಿಲ್ಲಿಸುತ್ತವೆ. ಉದಾಹರಣೆಗೆ 1. ಮದುವೆಯ ಸಂದರ್ಭದಲ್ಲಿ ಮಾಂಗಲ್ಯ ಧಾರಣೆಯ ಸಮಯದಲ್ಲಿ ಅಕ್ಷತೆಕಾಳಿನ ಹೆಸರಿನಲ್ಲಿ ಅಕ್ಕಿಯನ್ನು ಪ್ರೊಕ್ಷಣೆ ಮಾಡುವುದು (ಕೆಲವು ಕಡೆ ನಿಷಿದ್ದ) . 2. ನವ ವಧು ಅಕ್ಕಿಯನ್ನು ಕಾಲಿನಿಂದ ಒದ್ದು ಗಂಡನ ಮನೆ ಪ್ರವೇಶಿಸುವುದು 3. ಹೊಸ ಮನೆ ಪ್ರವೇಶಿಸುವ ಮೊದಲು ಹಾಲು ಉಕ್ಕಿಸುವುದು. ಪ್ರಸಕ್ತ ಸಮಯದಲ್ಲಿ ಊರ್ಜಿತ. ಆದರೆ ಸತಿ ಪದ್ದತಿ ಅಥವಾ ಕೆರೆಗೆಹಾರ ಪದ್ದತಿಯ ಹೆಸರಿನಲ್ಲಿ ಹೆಣ್ಣಿನ ಪ್ರಾಣಹಾನಿ ಪ್ರಸಕ್ತ ಸಂದರ್ಭದಲ್ಲಿ ಅನೂರ್ಜಿತ. ಅಂದರೆ ನಮ್ಮ ದೃಷ್ಟಿ ಕೋನ ಬದಲಾದಂತೆ. ನಮ್ಮ ನಿರ್ಧಾರಗಳೂ ಬದಲಾಗುತ್ತಾ ಸಾಗುತ್ತವೆ.

ಈಗ ನಮ್ಮ ಮುಂದಿರುವ ಚರ್ಚೆಯ ವಿಷಯವೆಂದರೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ. ಈ ಸರ್ಕಾರದ ಸದ್ಯದ ಕ್ರಮ ಸೋಮಾರಿಗಳ ಸೃಷ್ಟಿಗೆ riceಕಾರಣವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಾ ದೇಶದ ಬಗೆಗಿನ ಕಾಳಜಿ ತೊರುತ್ತಿರುವವರಿಗೆ ಕೃತಜ್ಞತೆಗಳು. ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ಭೃಹತ್ ಕಟ್ಟಡಗಳ ನಿರ್ಮಾಣ, ರಸ್ತೆ ಕಾಮಗಾರಿಗಳು , ದೂರಸಂಪರ್ಕ ಟವರ್‌ಗಳ ನಿರ್ಮಾಣ ಮಾಡುತ್ತಿರುವವರು ಹೊರರಾಜ್ಯದವರೇ ಹೆಚ್ಚು. ತಮಿಳುನಾಡಿನಲ್ಲಿ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಉಚಿತ, ಕೇರಳ ರಾಜ್ಯದಲ್ಲಿ 14 ಅವಶ್ಯಕ ವಸ್ತುಗಳನ್ನು ಅತೀಕಡಿಮೆ ಬೆಲೆಯಲ್ಲಿ ವಿತರಿಸಲಾಗುತ್ತಿದೆ. ಅವರುಗಳೆಲ್ಲಾ ಸೋಮಾರಿಗಳಾಗಿರುವರೇ?

ಕರ್ನಾಟಕ ರಾಜ್ಯದಲ್ಲಿ ಒಟ್ಟು 1.10 ಕೋಟಿ ಕುಟುಂಬಗಳಲ್ಲಿ ಸುಮಾರು 36 ಲಕ್ಷ ಕುಟುಂಬಗಳಿಗೆ ತಮ್ಮದೇ ಎಂಬ ಒಂದೇ ಒಂದು ಗುಂಟೆ ತುಂಡು ಜಮೀನು ಕೂಡ ಇಲ್ಲ. ಕೂಲಿ-ನಾಲಿ ಮಾಡಿ ಹೂಟ್ಟೆ ಹೊರೆಯ ಬೇಕು. ಇದು ನಮ್ಮ ಭಾರತ ದೇಶದ ಜಮೀನ್‌ದ್ದಾರಿ ಮತ್ತು ಪಾಳೇಗಾರಿ ಪದ್ದತಿಯ ಫಲ ಶೃತಿ. ವರ್ಷ ಪೂರ್ತಿ ಕೂಲಿ ಸಿಗುವುದೇ? ಅವರಿಗೇನು ವಿಶ್ರಾಂತಿ ಬೇಡವೇ? ಮಳೇ ಬಂದರೆ ಕೂಲಿ, ಕೂಲಿ ಮಾಡಿದರೆ ಊಟ. 2 ವರ್ಷಗಳಿಂದ ಮಳೆಯೇ ಕಾಣದ ಕರ್ನಾಟಕದಲ್ಲಿ ಕೂಲಿ ಮಾಡಿ ಬದುಕುವವರ ಬದುಕು ಏನಾಗಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 100 ದಿನ ಕೂಲಿ. ಕಾರ್ಮಿಕರಿಗೆ ನಿಗದಿಪಡಿಸಿದ ಕೆಲಸದ ಪರಿಮಾಣಕ್ಕೆ ಅನುಗುಣವಾಗಿ ದಿನಗೂಲಿ ರೂ 155. 18 ವರ್ಷ ಮೀರಿದ 70 ವರ್ಷದ ಒಳಗಿನವರಿಗೆ ಮಾತ್ರ. ಒಂದು ಕುಟುಂಬದಲ್ಲಿ ಸರಾಸರಿ ಒಬ್ಬ ದುಡಿಯುವವನಿದ್ದು ಐದು ತಿನ್ನುವ ಬಾಯಿಗಳಿದ್ದರೆ ಕೂಲಿ ಸಿಕ್ಕ ದಿನ ತಲಾ ಅದಾಯ 31 ರೂ . ಬಿಸಿಯೂಟ ನೌಕರರ ಸಂಬಳ 500-600 ರೂಪಾಯಿ. ಅಂಗನವಾಡಿ ನೌಕರರ ಸಂಬಳ 1300-1400 ರೂಪಾಯಿ. ಇವರುಗಳ ಬದುಕು ಏಷ್ಟು ಅಸಹನೀಯವಿರಬಹುದು!

ಈ ನಡುವೆ ಹೊಸ ಹೊಸ ಸಂಶೋಧನೆಗಳಿಂದ ಆವಿಷ್ಕಾರಗೊಂಡ ಯಂತ್ರೋಪಕರಣಗಳು ಉಳ್ಳವರ ಜೀವನವನ್ನು ಮತ್ತೊಟ್ಟು ಉತ್ತಮ ಪಡಿಸಿ, ಸುಲಬೀಕರಿಸುವುದರೊಂದಿಗೆ ಬಡವರ ಜೀವನ ಕಟ್ಟಿಕೊಡುವುದಿರಲಿ ಬದುಕನ್ನೇ ಮುರಾಬಟ್ಟೆಯನ್ನಾಗಿಸಿವೆಯನ್ನುವುದು ಕಟು ವಾಸ್ತವ.

ಸರ್ವೋಚ್ಛ ನ್ಯಾಯಾಲಯ ಹೇಳಿದಂತೆ ಸರ್ಕಾರಿ ಗೋದಾಮುಗಳಲ್ಲಿ 6.67 ಕೋಟಿ ಟನ್ನುಗಳಷ್ಟು ಕೊಳೆಯುತ್ತಿರುವ ಆಹಾರ ಧಾನ್ಯಗಳು. ಲಂಡನ್ ಮೂಲದ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 210 ಲಕ್ಷ ಟನ್ ಗೋಧಿ ಅನಗತ್ಯವಾಗಿ ಹಾಳಾಗುತ್ತಿದೆ. ಶೇ.40 ರಷ್ಟು ಹಣ್ಣು ಮತ್ತು ತರಕಾರಿಗಳು ಜನರನ್ನು ತಲುಪದೆ ಹಾಳಾಗುತ್ತಿವೆ. ಇಷ್ಟಿದ್ದರೂ ನೆನ್ನೆ ಮೊನ್ನೆ ಕರ್ನಾಟಕದಲ್ಲಿ ಹಸಿವಿವಿನಿಂದ ಸತ್ತ ವರದಿ ಓದಿದ್ದೇವೆ. ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂಖ್ಯೆಯ ಅಪೌಷ್ಠಿಕ ಜನರಿರುವ ದೇಶ ನಮ್ಮದು. ಅಷ್ಟಕ್ಕೂ ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿಯ ನಿರ್ಧಾರ ಶಾಶ್ವತ ಪರಿಹಾರವೇನಲ್ಲವಲ್ಲ.

ಅದು ಸರಿ, ಒಂದು ರೂಪಾಯಿ ದರದಲ್ಲಿ 30 ಕೆ.ಜಿ. ಅಕ್ಕಿ ಸಿಕ್ಕರೆ ಸಾಕೇ? ಸಾಂಬಾರಿಗೆ ಬೇಕಾದ ಎಣ್ಣೆ, ಬೇಳೆ, ತರಕಾರಿ, ತೆಂಗು ಬೇಡವೆ? govt-school-kidsಅವರ ಆರೋಗ್ಯ, ವಿದ್ಯಾಭ್ಯಾಸ, ಮನೆ, ಬಟ್ಟೆ ಮತ್ತು ಇತರೆಗಳಿಗೇ ದುಡಿಯಲೇ ಬೇಕಲ್ಲವೇ? ಅಷ್ಟಕ್ಕೂ ಸರ್ಕಾರದ ಮೇಲೆ ಬೀಳುತ್ತಿರುವ ಹೊರೆಯೆಂದರೆ 24 ರೂಪಾಯಿಗೆ ಖರೀದಿಸಿ 1 ರೂಪಾಯಿ ನಲ್ಲಿ ವಿತರಿಸುವಾಗ 23 ರೂಪಾಯಿ ಹೊರೆ ಯಾಗುತ್ತದೆ ಎಂದರೆ 690 ರೂಪಾಯಿ ಪ್ರತಿ ಕುಟುಂಬಕ್ಕೆ. ಎ.ಪಿ.ಎಲ್ ಕಾರ್ಡ್ ಹೊಂದಿರುವವರಿಗೆ ವಿತರಿಸುತ್ತಿರುವ ಅನಿಲದ ಸಿಲಿಂಡರ್‌ಗೆ ಸರ್ಕಾರ  450 ರೂಗಳ ವರಗೆ ರಿಯಾಯಿತಿ ಕೊಡುತ್ತಿಲ್ಲವೆ?

ಕೆಲವೇ ಕೆಲವು ಉದ್ದಮಿಗಳ ಉದ್ಯಮಕ್ಕೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತಿರುವ ಭೂಮಿ, ನೀರು, ವಿದ್ಯುತ್, ರಸ್ತೆ, ತೆರಿಗೆ ರಿಯಾಯಿತಿ, ಸಹಾಯ ದನಗಳು ಲಕ್ಷ ಲಕ್ಷ ಕೋಟಿ ರೂಪಾಯಿ ರೂಪದಲ್ಲಿರುತ್ತವೆ. ಇದು ದೊಡ್ಡವರ (ಕೆಲವೇ ಕೆಲವರ) ವಿಷಯ, ಅಕ್ಕಿ ಸಣ್ಣವರ (ಬಹು ಸಂಖ್ಯಾತರ) ವಿಷಯವಲ್ಲವೇ?

ಕಾರ್ಮಿಕರಿಗೆ ಪೌಷ್ಠಿಕ ಅಹಾರ ದೊರೆತರೆ ಸದೃಢಕಾಯರಾಗಿ ಕೆಲಸದಲ್ಲಿ ಹೆಚ್ಚು ಶ್ರಮ ವಹಿಸಿ ಕೆಲಸ ನಿರ್ವಹಿಸುವ ಸಾಧ್ಯತೆ ಇರಬಹುದಲ್ಲಾ. Working_in_the_rice_paddyಅನ್ಯ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವೆಲ್ಲಿ? ಕಾರ್ಮಿಕರ ಮದ್ಯ (ಸರಾಯಿ), ಬೆಟ್ಟಿಂಗ್ ನೆಡೆಯುತ್ತದೆ ಎಂದು ಇಸ್ಪೀಟ್ ಆಟ, ಕೋಳಿ ಜೂಜು. ನಿಷೇದಿಸಲಾಗಿದೆ. ಇನ್ನೆಲ್ಲಿಯ ಅನ್ಯ ಚಟುವಟಿಕೆ. ಅದೇ ಶ್ರಿಮಂತರ ಮದ್ಯ ನಿಷೇದಿಸಲಾಗಿದೆಯೇ? ಜಗತ್ ಜಾಹೀರಾಗಿ ಬೆಟ್ಟಿಂಗ್ ಮೂಲಕ ಆಟಗಾರರನ್ನು ಮಾರಾಟಮಾಡಿ, ಯುವ ಜನತೆಯನ್ನು ಬೆಟ್ಟಿಂಗ್ ಕರಾಳ ಬಲೆಗೆ ಕೆಡವಿ, ದೇಶವನ್ನೇ ಸೋಮಾರಿಗಳನ್ನಾಗಿಸಿ ವರ್ಷವಿಡೀ ರಾರಾಜಿಸುತ್ತಿರುವ ಕ್ರಿಕೆಟ್ ಏಷ್ಟೇ ಆದರೂ ಬುದ್ದಿವಂತ ಶ್ರಿಮಂತರ ಆಟವಲ್ಲವೇ?

ಒಂದು ರೂಪಾಯಿ ದರದಲ್ಲಿ 30ಕೆ.ಜಿ. ಅಕ್ಕಿ ದೊರೆತರೆ ಕಡಿಮೆ ಕೂಲಿಗೆ ಜನಸಿಗುವುದಿಲ್ಲಾ ಎಂಬುವುದು ಹಲವರ ಅಹವಾಲು. ಕಡಿಮೆ ಕೂಲಿಗೆ ಯಾಕೆ ದುಡಿಯಬೇಕಂದು ಬಯಸುತ್ತೀರಿ? ಹೌದು, ಯಾರು ಯಾರ ಮನೆಯಲ್ಲೇಕೆ ಕೂಲಿಗಳಾಗಿ ದುಡಿಯಬೇಕು? ನಾವೇನಾರೂ ಅದೇ ಕೂಲಿಗೆ ಅವರುಗಳ ಮನೆಯಲ್ಲಿ ಕೂಲಿಮಾಡುವ ಮನಸ್ಥಿತಿಯಲ್ಲಿದ್ದೇವ? ಬಡವರೂ ಸಹ ಸ್ವತಂತ್ರ ಭಾರತದಲ್ಲಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಸ್ವತಂತ್ರರಾಗಿ ಬಾಳಲಿಬಿಡಿ.

ಬಡತನವನ್ನು ತೊಲಗಿಸಲು ಸಹಕಾರ ಕೊಡಿ, ಬಡವರನಲ್ಲಾ! ಬಡವರಿಗೆ ಶಿಕ್ಷಣ, ಸಮಾಜಿಕ ನ್ಯಾಯ, ಆರ್ಥಿಕ ಸದೃಢತೆ, ಸಾಂಸ್ಕೃತಿಕ ನ್ಯಾಯ ಅರ್ಥವಾಗದ ಪರಿಭಾಷೆಗಳೇ ಆಗಿವೆ. ಕಡೇ ಪಕ್ಷ ಅವರ ಪರವಾಗಿ ಸರ್ಕಾರದ ನಿರ್ದಾರಗಳು ಬಂದಾಗ ಬೆಂಬಲಿಸಲು ಸಾಧ್ಯವಾಗದಿದ್ದಲ್ಲಿ ಮೌನವನ್ನಾದರೂ ವಹಿಸೋಣ.

ಹೊಸ ಸರಕಾರ ಏಕ ರೂಪ ಶಿಕ್ಷಣ ನೀತಿ ಜಾರಿಗೊಳಿಸುತ್ತದೆಯೇ?

– ಕೋಡಿಬೆಟ್ಟು ರಾಜಲಕ್ಷ್ಮಿ

ಮತ್ತೆ ಶಾಲೆಗಳು ಆರಂಭವಾಗಿವೆ. ಪುಟಾಣಿ ಮಕ್ಕಳು ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಗಳಿಗೆ ಸೇರುವ, ಹೊಸ ಪುಸ್ತಕ ಖರೀದಿಸುವ, ಹೊಸ ಶಾಲೆಯಲ್ಲಿ ಕಲಿಯುವ ಗುಂಗಿನಲ್ಲಿ ಮುಳುಗಿದ್ದಾರೆ. ಅತ್ತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ ಮತ್ತಿತರ ಫಲಿತಾಂಶಗಳು ಬಂದಿದ್ದು ವಿದ್ಯಾರ್ಥಿಗಳು ತಮ್ಮ ಬದುಕಿನ ಮಹತ್ವದ ತಿರುವಿನಲ್ಲಿ ನಿಂತಿದ್ದಾರೆ. ಕಾಲೇಜುಗಳ ಆಯ್ಕೆ, ಬದುಕಿನ ದಾರಿಯ ಆಯ್ಕೆಗಳಲ್ಲಿ ವ್ಯಸ್ತರಾಗಿದ್ದಾರೆ. ಒಟ್ಟಿನಲ್ಲಿ ಜೂನ್ ಬಂತೆಂದರೆ ಶಿಕ್ಷಣ ಕ್ಷೇತ್ರದಲ್ಲಿಯೇ ತುಂಬ ಚಟುವಟಿಕೆಗಳು ಗೋಚರಿಸುತ್ತದೆ. ಆದರೆ ಈ ಬಾರಿಯ ಜೂನ್ 1 ಕೆಲವು ಪ್ರಮುಖ ವಿಚಾರಗಳನ್ನು ನೆನಪಿಗೆ ತರುತ್ತದೆ. ಅದಕ್ಕೆ ಕಾರಣ ಪ್ರಸ್ತುತ ಭರ್ಜರಿ ಜನ ಬೆಂಬಲದೊಂದಿಗೆ, ನಿರೀಕ್ಷೆಗಳ ಮಹಾಪೂರದೊಂದಿಗೇ ರೂಪುಗೊಂಡಿರುವ ಹೊಸ ಸರಕಾರ.

ಸಾಹಿತ್ಯ ಲೋಕದ ದಿಗ್ಗಜರು ಕಾಂಗ್ರೆಸ್ ಸರಕಾರ ಬರಬೇಕು ಎಂಬ ಆಗ್ರಹವನ್ನು ಒಕ್ಕೊರಲಿನಿಂದ ಪ್ರತಿಪಾದಿಸಿದ್ದ ಹಿನ್ನೆಲೆಯಲ್ಲಿ kannada-schoolಕನ್ನಡ ಭಾಷೆಯ ಬಗ್ಗೆ ಪ್ರೀತಿ ಇರಿಸಿಕೊಂಡ ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು ಏಕರೂಪದ ಶಿಕ್ಷಣ ನೀತಿ ಜಾರಿಗೊಳಿಸುವಂತೆ ಸರಕಾರವನ್ನು ನಿಷ್ಠುರವಾಗಿ ಆಗ್ರಹಿಸುತ್ತಾರೆಯೇ ಎನ್ನುವುದು ಸಹಜವಾಗಿ ಮೂಡಿರುವ ನಿರೀಕ್ಷೆ. ಅಪೇಕ್ಷಿಸಿದ ಸರಕಾರ ಬಂದಾಗ ನುಡಿ ರಕ್ಷಣೆಯ, ಅಥವಾ ನಾಡಿನ ಭವಿಷ್ಯದ ಜನಾಂಗವನ್ನು ರೂಪಿಸುವ ಜವಾಬ್ದಾರಿಯ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆ ಸರಕಾರವನ್ನು ಒತ್ತಾಯಿಸುವುದು ಕೂಡ ಜವಾಬ್ದಾರಿ. ಚುನಾವಣೆಗೆ ಮುನ್ನ ನಡೆದ ಅಭಿಯಾನದ ಪರಿಣಾಮ, ಇದೀಗ ಏಕರೂಪ ಶಿಕ್ಷಣ ನೀತಿಯನ್ನು ಕಡಕ್ ಆಗಿ ಜಾರಿ ಮಾಡಲು ಸಾಹಿತ್ಯವಲಯ ನಿಷ್ಠುರವಾಗಿ ಆಗ್ರಹಿಸುವುದು ಅನಿವಾರ್ಯ. ಹಾಗೆ ನೋಡಿದರೆ ಕನ್ನಡ ನಾಡು ನುಡಿಯ ರಕ್ಷಣೆಯ ಉದ್ದೇಶದಿಂದ ಏಕ ರೂಪದ ಶಿಕ್ಷಣ ಬಹಳ ಹಿಂದೆಯೇ ಜಾರಿಯಾಗಬೇಕಿತ್ತು.

ಕನ್ನಡ ಭಾಷೆಯ ಉಳಿವಿಗಾಗಿ ಖಾಸಗಿ ಮತ್ತು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಐದನೆ ತರಗತಿವರೆಗೆ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವುದು, ಅಂದರೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು ಒಂದು ಆಯ್ಕೆ. ಇದಕ್ಕೆ ಸರಕಾರ ಗಟ್ಟಿ ಮನಸ್ಸು ಮಾಡಬೇಕು. ಆಡಳಿತ ಶಾಹಿಯಲ್ಲಿಯೇ ಇರುವ ಶಿಕ್ಷಣದ ಬೃಹತ್ ಲಾಬಿಯನ್ನು ಎದುರು ಹಾಕಿಕೊಳ್ಳಬೇಕು.

ಎರಡನೆಯ ಆಯ್ಕೆ ಎಂದರೆ ಸರಕಾರಿ ಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮವನ್ನು ಕಲಿಸುವ ಅಥವಾ ಒಂದನೇ ತರಗತಿಯಿಂದಲೇgovernment_schoolಆಂಗ್ಲ ಭಾಷೆಯನ್ನು ಕಲಿಸುವ ದೃಢ ನಿರ್ಧಾರ ಸರಕಾರ ತೆಗೆದುಕೊಳ್ಳಬೇಕು. ಏಕೆಂದರೆ ಪ್ರಸ್ತುತ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರು. ಅದರಲ್ಲಿಯೂ ಹಿಂದುಳಿದವರ, ವಲಸೆ ಕಾರ್ಮಿಕರ, ಸಮಾಜದ ಅಂಚಿನಲ್ಲಿರುವವರ ಮಕ್ಕಳ ಸಂಖ್ಯೆಯೇ ಹೆಚ್ಚು. ನಮ್ಮ ಸರಕಾರಿ ಶಾಲೆಗಳು ಇನ್ನೂ ಇಂಗ್ಲೀಷ್ ಮಾಧ್ಯಮದ ದಾಳಿಗೆ ಒಳಗಾಗಿಲ್ಲ ಎಂದು ಹೇಳಿಕೊಳ್ಳುವುದಾದರೆ ಅದಕ್ಕೆ ಬೆಲೆ ತೆರುತ್ತಿರುವವರು ಖಾಸಗಿ ಶಾಲೆಗೆ ಹೋಗುವ ಸಾಮರ್ಥ್ಯ ಇಲ್ಲದ, ಸಮಾಜದ ಅಂಚಿನಲ್ಲಿರುವ ಪುಟಾಣಿ ಕಂದಮ್ಮಗಳು ಆಂಗ್ಲ ಮಾಧ್ಯಮದ ಸುಪ್ಪತ್ತಿಗೆಯಲ್ಲಿ ಓದಿದ ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ. ಒಂದಲ್ಲ ಒಂದು ದಿನ ಅವರು ಸ್ಪರ್ಧಿಸಲೇಬೇಕು.

ಪಿಯುಸಿ, ಸಿಇಟಿ ಫಲಿತಾಂಶಗಳನ್ನು ಒಮ್ಮೆ ಗಮನಿಸಿದಲ್ಲಿ, ಅಲ್ಲಿ ಮೇಲ್ವರ್ಗದ, ಅಥವಾ ಆರ್ಥಿಕವಾಗಿ ಸ್ಥಿತಿವಂತ ಕುಟುಂಬದಿಂದ ಬಂದ ಮಕ್ಕಳ ಸಂಖ್ಯೆಯೇ ದೊಡ್ಡದು. ಅಂದರೆ ಸಮಾಜದ ಅಂಚಿನಲ್ಲಿರುವ ಕುಟುಂಬದ ಮಕ್ಕಳು ದಡ್ಡರೇ ? ಖಂಡಿತಾ ಅಲ್ಲ. ಅವರು ಆಂಗ್ಲ ಮಾಧ್ಯಮದ ಪ್ರವಾಹಕ್ಕೆ ಎದುರಾಗಿ ಈಜುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ. ಆರಂಭಿಕ ಆತ್ಮವಿಶ್ವಾಸವನ್ನು ಗಳಿಸುವುದರಲ್ಲೇ ಅವರ ಹೆಚ್ಚಿನ ಶಕ್ತಿ ಕುಂದಿಬಿಡುತ್ತದೆ. ಉಳಿದ ಸ್ಪರ್ಧೆಗಳಿಗೆ ಅಣಿಯಾಗುವಷ್ಟರಲ್ಲಿ ದಣಿವಾಗಿಬಿಡುತ್ತದೆ. ಆದ್ದರಿಂದ ಹೀಗೆ ಹಿಂದುಳಿದ ವರ್ಗಗಳ ಮಕ್ಕಳಿಗೂ ಸರಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಲಭಿಸಬೇಕು, ಅಥವಾ ಸ್ಥಿತಿವಂತರ ಮಕ್ಕಳೂ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕಲಿಯಬೇಕು. ಇದು ಸಮಾಜದ ಒಟ್ಟು ಆರೋಗ್ಯದ ಹಿತ ದೃಷ್ಟಿಯಿಂದ ಒಳ್ಳೆದು.

ಹಿಂದೆಲ್ಲ ಅಂದರೆ ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಜಮೀನುದಾರರ ಮಕ್ಕಳೂ, ಅದೇ ಜಮೀನುದಾರನ ಜಮೀನಿನಲ್ಲಿ private-schoolಕೆಲಸ ಮಾಡುತ್ತಿರುವವರ ಮಕ್ಕಳೂ ಒಂದೇ ಶಾಲೆಗೆ ತೆರಳುತ್ತಿದ್ದರು. ಆದರೆ ಇಂದು ಹಾಗಲ್ಲ. ಆರ್ಥಿಕವಾಗಿ ಸಬಲವಾಗಿರುವ ವರ್ಗದ ಮಕ್ಕಳು, ಆರ್ಥಿಕವಾಗಿ ಹಿಂದುಳಿದವ ವರ್ಗದ ಮಕ್ಕಳೊಂದಿಗೆ ಸಮಾನವಾಗಿ ಬೆರೆಯಲಾರರು. ಎರಡೂ ವರ್ಗದ ಮಕ್ಕಳು ಬಹಳ ಹೊತ್ತು ಮಾತುಕತೆ ನಡೆಸಲಾರರು. ಅವರು ಕಲಿಯುವ ಮಗ್ಗಿಯಾಗಲೀ, ಹಾಡುಗಳಾಗಲೀ, ಶಾಲೆಯ ವಾರ್ಷಿಕೋತ್ಸವದ ಶೈಲಿಯಾಗಲೀ ತುಂಬಾ ಬೇರೆ ಬೇರೆಯಾಗಿರುತ್ತದೆ. ಈ ಅಂತರ ಹೆಚ್ಚಾದಷ್ಟೂ ಮುಂದಿನ ದಿನಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆಪತ್ತೂ ಹೆಚ್ಚು.

ಪ್ರತಿವರ್ಷ ಜೂನ್‌ನಲ್ಲಿ, ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು ಎಂಬ ಆಗ್ರಹಗಳೊಂದಿಗೆ ಭಾಷಣಗಳು ಬರಹಗಳು ಮೂಡಿಬರುತ್ತವೆ. ಆದರೆ ವಾಸ್ತವವಾಗಿ ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚುವ ಹಂತವನ್ನು ತಲುಪಿವೆ. ಕಳೆದ ಎರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ, ಅವು ಮುಚ್ಚಲಾರಂಭಿಸಿದಾಗ ಚರ್ಚೆಗಳಿಗೆ ಮತ್ತಷ್ಟು ಕಾವು ದೊರೆಯಿತು. ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವುದು ಒಂದು ಕಾರಣವಾದರೂ, ಇತ್ತೀಚಿನ ದಶಕಗಳಲ್ಲಿ ಪಾಲಕರು, govt-school-kidsತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿಯೇ ಕಲಿಯಲಿ ಎಂದು ಬಯಸುತ್ತಿರುವುದು ಶಾಲೆ ಮುಚ್ಚುತ್ತಿರುವುದರ ಹಿಂದಿರುವ ಪ್ರಧಾನ ಕಾರಣ. ಜಾಗತೀಕರಣದ ಪ್ರಭಾವದಿಂದ ಚಿಕ್ಕಪುಟ್ಟ ಉದ್ಯೋಗ ಅವಕಾಶಗಳಿಗೂ “ಇಂಗ್ಲಿಷ್ ಬರುತ್ತದೆಯೇ” ಎಂಬ ಪ್ರಶ್ನೆ ಮಾಮೂಲಾಗಿದೆ. ಅಂದ ಮೇಲೆ ಮಕ್ಕಳು ಇಂಗ್ಲಿಷ್ ಕಲಿಯದೇ ಇದ್ದರೆ ಕೆಲಸವೇ ಸಿಗುವುದಿಲ್ಲ ಎಂಬ ಭಯ ಪಾಲಕರಲ್ಲಿ ಮೂಡಿದೆ. ಇಂಗ್ಲಿಷ್ ಶಾಲೆಗಳತ್ತ ಅವರ ವಾಲುವುದಕ್ಕೆ ಇರುವ ಮುಖ್ಯ ಕಾರಣವು ಇದು ಹೌದು.

ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳು ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ನೀಡಬೇಕು ಎಂದು ಸರಕಾರ ಎಷ್ಟೇ ಹೇಳಿದರೂ ಪ್ರತಿವರ್ಷ ಕನ್ನಡ ಮಾಧ್ಯಮದ ಅನುಮತಿಯೊಂದಿಗೆ ಆರಂಭವಾಗುವ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠಗಳು ನಡೆಯುತ್ತವೆ.

ಶಾಲೆಗಳಲ್ಲಿ ಆಂಗ್ಲಭಾಷೆಯನ್ನು ಆರಂಭದಿಂದ ಕಲಿಸುವ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮಾಡಿದ್ದರು. 90 ರ ದಶಕದಿಂದ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸರಕಾರ ಅನುಮತಿ ನೀಡುವುದನ್ನು ನಿಲ್ಲಿಸಿದ್ದರೂ ಕೂಡ ಸುಳ್ಳು ಬೋರ್ಡುಗಳೊಂದಿಗೆ ಶಾಲೆಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಸಿಬಿಎಸ್‌ಇ ಎಂಬ ಬೋರ್ಡಿನಡಿಯಲ್ಲಿ “ನಮ್ಮದೇನಿದ್ದರೂ ಕೇಂದ್ರೀಯ ಪಠ್ಯ ಮಾದರಿಗೆ ಸಂಬಂಧಿಸಿದ ಸಂಸ್ಥೆ, ರಾಜ್ಯ ಸರಕಾರದ ನಿಯಮಗಳು ಲಗಾವ್ ಆಗುವುದಿಲ್ಲ” ಎಂಬ ಉಡಾಫೆಯೊಂದಿಗೆ ಐಶಾರಾಮಿ ಶಾಲೆಗಳು ಆರಂಭವಾಗುತ್ತಿವೆ. ನಮ್ಮ ದುಡ್ಡು, ನಮ್ಮ ಮಕ್ಕಳು, ಬೇಕಾದ್ದು ಕಲಿಸುತ್ತೇವೆ ಎಂಬ ಸ್ಥಿತಿವಂತ ಪಾಲಕರ ಉಡಾಫೆಯೂ ಸೇರಿ ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಾರೆ ಎನ್ನುವುದೇ ಮುಖ್ಯವಾಗುತ್ತಿಲ್ಲ.

ಖಾಸಗಿ- ಸರಕಾರಿ, ಕನ್ನಡ ಮಾಧ್ಯಮ- ಇಂಗ್ಲೀಷು ಮಾಧ್ಯಮ ಎನ್ನುವ ಭೇದದೊಂದಿಗೆ ಇಡೀ ಸಮಾಜ ಇಬ್ಬಾಗವಾಗುತ್ತಿರುವುದು ಸುಳ್ಳಲ್ಲ. ಹಿಂದಿನ ಸರಕಾರದ ಶಿಕ್ಷಣ ಸಚಿವರ ಮಕ್ಕಳೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೂ, ಏಕ ರೂಪ ಶಿಕ್ಷಣ ನೀತಿ ಜಾರಿ ಎನ್ನುವುದು ಅವರಿಂದ ಸಾಧ್ಯವಾಗಲಿಲ್ಲ. ಅಲ್ಲೊಂದು ಇಲ್ಲೊಂದು ನಡೆದ ಪ್ರಯತ್ನಗಳನ್ನೆಲ್ಲ ಖಾಸಗಿ ವಲಯದ ಲಾಬಿ ಮಣ್ಣು ಮುಕ್ಕಿಸಿವೆ. siddaramaiah-cmಆದರೆ ಲಾಬಿಯನ್ನು ಎದುರು ಹಾಕಿಕೊಂಡು, ದೃಢನಿರ್ಧಾರ ತೆಗೆದುಕೊಳ್ಳುವ ಧೈರ್ಯ ಪ್ರದರ್ಶಿಸುವುದಷ್ಟೇ ಪ್ರಸ್ತುತ ಸರಕಾರದ ಮುಂದಿನ ಸವಾಲು. ಆ ಸವಾಲನ್ನು ಸರಕಾರ ಗೆಲ್ಲಬೇಕಾಗಿದೆ. ತಪ್ಪಿದಲ್ಲಿ ಸರಕಾರವನ್ನು ಎಚ್ಚರಿಸುವ ಜವಾಬ್ದಾರಿ ಸಾಹಿತ್ಯ ವಲಯದ್ದಾಗಿದೆ.

ಮುಂದಿನ ತಲೆಮಾರನ್ನು ಸೃಷ್ಟಿಸುವ ಶಿಕ್ಷಣ ಬದುಕಿನ ಅತ್ಯಮೂಲ್ಯ ಅಂಗ. ಆ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರದಲ್ಲಿಡುವ, ಅದಕ್ಕಾಗಿ ಮಾಡು ಇಲ್ಲವೆ ಮಡಿ ಎಂಬ ಒಗ್ಗಟ್ಟಿನ ಹೋರಾಟವನ್ನಾದರೂ ಆರಂಭಿಸಲು ಹಿಂದುಮುಂದು ನೋಡುವುದು ಸಲ್ಲ. ಅಲ್ಲಿ ಮತ್ತೆ ಪರಸ್ಪರ ಕಾಲೆಳೆಯುವ ಸಣ್ಣತನಕ್ಕೂ ಎಡೆಯಿರಬಾರದು.

ಘನ ಹುದ್ದೆಗೆ ಘನತೆ ತರಬಲ್ಲ ಛಲಗಾರ ಕಾಗೋಡು

– ಚಿದಂಬರ ಬೈಕಂಪಾಡಿ

ಶಿವಮೊಗ್ಗ ಜಿಲ್ಲೆ ಸಮಾಜವಾದಿ ಸಿದ್ಧಾಂತದ ಸಮೃದ್ಧವಾದ ಮಣ್ಣು. ಈ ಮಣ್ಣಿನ ಕಾಗೋಡು ತಿಮ್ಮಪ್ಪ ಈಗ ವಿಧಾನಸಭೆಯ ೧೯ನೇ ಸಭಾಪತಿ. ಅತ್ಯಂತ ಸಜ್ಜನ ಮತ್ತು ನಿಜಕ್ಕೂ ತೂಕದ ವ್ಯಕ್ತಿತ್ವ. ಬಹುಮುಖ್ಯವಾಗಿ ಕಾಗೋಡು ತಿಮ್ಮಪ್ಪ ಯಾಕೆ ಇಷ್ಟವಾಗುತ್ತಾರೆಂದರೆ ತಾವು ನಂಬಿದ ತತ್ವ, Photo Captionಸಿದ್ಧಾಂತವನ್ನು ಅಧಿಕಾರಕ್ಕಾಗಿ ಮಾರಿಕೊಂಡವರಲ್ಲ, ಅಧಿಕಾರ ಬಂದಾಗ ಗಾಳಿಗೆ ತೂರಿದವರಲ್ಲ. ಅಧಿಕಾರವನ್ನು ತ್ಯಾಗಮಾಡಿದ್ದಾರೆ, ಆದರೆ ಮೌಲ್ಯಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿದ್ದಾರೆ. ಅಧಿಕಾರಕ್ಕಾಗಿ ತಮ್ಮ ನೆಲೆ, ಬೆಲೆಯನ್ನು ಕಳೆದುಕೊಂಡವರಲ್ಲ, ಅಧಿಕಾರಕ್ಕಾಗಿ ಒತ್ತೆಯಿಟ್ಟವರೂ ಅಲ್ಲ.

೧೯೩೨ ರ ಸೆಪ್ಟಂಬರ್ ೧೦ ರಂದು ಕಾಗೋಡು ಎಂಬ ಹಳ್ಳಿಯಲ್ಲಿ ಜನಿಸಿದ ತಿಮ್ಮಪ್ಪ ರಾಜಕೀಯದ ಹಳೆಬೇರು. ಮಾತಿನಲ್ಲಿ ಸೋಗಲಾಡಿತನವಿಲ್ಲ, ಕೃತಕತೆಯೂ ಇಲ್ಲ, ನಡೆನುಡಿಯಲ್ಲಿ ದೇಸೀತನವಿದೆ. ಛಲವಾದಿ ಕಾಗೋಡು ತಿಮ್ಮಪ್ಪ ಎನ್ನುವುದರಲ್ಲಿ ಅನುಮಾನಗಳಿಲ್ಲ. ಬಿ.ಕಾಂ, ಬಿ.ಎಲ್ ಪದವಿ ಪಡೆದು ೧೯೬೦ರಲ್ಲಿ ಸಾಗರದಲ್ಲಿ ವಕೀಲಿ ವೃತ್ತಿಗೆ ಇಳಿದವರು. ಸಮಾಜವಾದಿ ಪಕ್ಷದಿಂದ ೧೯೬೨ರಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡಿದರಾದರೂ ಜಯ ಅವರದಾಗಲಿಲ್ಲ. ಮತ್ತೆ ೧೯೬೭ರಲ್ಲಿ ಸ್ಪರ್ಧೆ ಮಾಡಿದರಾದರೂ ಸೋಲಬೇಕಾಯಿತು. ಛಲಬಿಡದ ಈ ತ್ರಿವಿಕ್ರಮ ೧೯೭೨ರಲ್ಲಿ ಮತ್ತೆ ಕಣಕ್ಕಿಳಿದು ಗೆದ್ದು ವಿಧಾನಸಭೆ ಪ್ರವೇಶ ಮಾಡಿದರು. ಸುಮಾರು ಒಂದು ದಶಕ ಕಾಲ ವಿಧಾನಸಭೆ ಪ್ರವೇಶಕ್ಕೆ ತಿಣುಕಾಡಿದ ಕಾಗೋಡು ತಿಮ್ಮಪ್ಪ ಸೋಲಿನಿಂದ ಕಲಿತ ಪಾಠವನ್ನು ನಂತರದ ದಿನಗಳಲ್ಲಿ ಗೆಲ್ಲುವುದಕ್ಕೆ ಬಳಸಿದರು. ಅಂದು ಸೋಲಿಸಿದ್ದ ಜನರೇ ಮತ್ತೆ ಕೈಹಿಡಿದು ಅವರನ್ನು ಮುನ್ನಡೆಸಿದರು.

ದೇವರಾಜ ಅರಸು ಗರಡಿಯಲ್ಲಿ ಭೂಮಸೂದೆ ಶಾಸನ ರೂಪಿಸುವ ಸಮಿತಿಯ ಸದಸ್ಯರಾಗಿ ತಮ್ಮ ಹಳ್ಳಿಗಾಡಿನ ಜನರ ಬದುಕು-ಬವಣೆಯನ್ನು ಆಧಾರವಾಗಿಟ್ಟುಕೊಂಡು ಉಳುವವನೇ ಹೊಲದೊಡೆಯನನ್ನು ಮಾಡಲು ಕಾಗೋಡು ತಿಮ್ಮಪ್ಪ ಅವರ ಅಪಾರ ಬುದ್ಧಿಮತ್ತೆಯೂ ಇತ್ತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಭೂಮಾಲೀಕರ ದಬ್ಬಾಳಿಕೆಯಿಂದ ಜರ್ಝರಿತವಾಗಿದ್ದ ರೈತರ ಬದುಕಿಗೆ ಆಸರೆಯಾದ ಅರಸು ಅವರ ಕಾರ್ಯತತ್ಪರತೆಯಲ್ಲಿ ಕಾಗೋಡು ಅವರ ಬಳುವಳುಯೂ ಇತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಾಜವಾದಿ ಕಾಗೋಡು ತಿಮ್ಮಪ್ಪ ೧೯೮೦ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದರು. ಗುಂಡುರಾಯರ ಸಂಪುಟದಲ್ಲಿ ಆಹಾರ, ಅರಣ್ಯ ಖಾತೆ ನಿಭಾಯಿಸಿದರು. ರಾಜಕೀಯ ಒಂದು ವೃತ್ತಿಯಾಗಿ ಚಿಗುರೊಡೆಯುತ್ತಿದ್ದ ಆ ಕಾಲಘಟ್ಟದಲ್ಲಿ ಗುಂಡುರಾಯರು ಕಾಗೋಡು ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅವಕಾಶವಿದ್ದರೂ ಕೈಚೆಲ್ಲಿದರು ಎನ್ನುವ ವ್ಯಾಖ್ಯೆ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಸಾಮಾಜಿಕ ನ್ಯಾಯ ಕೊಡುವ ನಿಟ್ಟಿನಲ್ಲಿ ಕಾಗೋಡು ತಿಮ್ಮಪ್ಪ ಅವರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಇಲಾಖೆಯಲ್ಲಿನ ಹೆಗ್ಗಣಗಳ ಮೇಲೆ ಹದ್ದಿನಕಣ್ಣಿಟ್ಟು ಕೆಲಸ ಮಾಡಿದವರು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ಸಮಾಜವಾದಿಯಾಗಿ ಗೋಪಾಲಗೌಡರು ಮಾಡಿದ ಕೆಲಸ ಇಂದಿನ ತಲೆಮಾರಿನವರಿಗೆ ಮಸುಕು ಮಸುಕಾಗಿ ಅರಿವಾಗಬಹುದು. ಸಮಾಜವಾದಿಯಾಗಿ ಎಸ್.ಬಂಗಾರಪ್ಪ ಬೇರೆ ಬೇರೆ ಆಯಾಮಗಳಲ್ಲಿ ಗುರುತಿಸಿಕೊಂಡು ರಾಜಕೀಯ ಸ್ಥಾನಮಾನ ಗಳಿಸಿದರಾದರೂ ಕಾಗೋಡು ತಿಮ್ಮಪ್ಪ ಮಾತ್ರ ಅಧಿಕಾರದ ಬೆನ್ನು ಹತ್ತಿ ಹೋಗದೆ ಸಮಾಜವಾದಿಗಳ ಮಧ್ಯೆ ಭಿನ್ನವಾಗಿಯೇ ಈಗಲೂ ಗುರುತಿಸಿಕೊಳ್ಳುತ್ತಾರೆ. ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ, ಮಂಡಳಿಯ ಅಧ್ಯಕ್ಷರಾಗಿ ಬೇರೆ ಹುದ್ದೆಗಳನ್ನು ನಿಭಾಯಿಸಿದ ಅನುಭವಿ. ಅವರ ಘನತೆ, ನ್ಯಾಯಪಾಲನೆ, ಮಾತಿನಲ್ಲಿರುವ ನಿಖರತೆ ಸಹಜವಾಗಿಯೇ ಸಭಾಪತಿ ಹುದ್ದೆಗೆ ಸೂಕ್ತ ಆಯ್ಕೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

ಬಾಳಿಗ, ಕಂಠಿ, ಡಿ.ಬಿ.ಚಂದ್ರೇಗೌಡ, ಬಣಕಾರ್, ಎಸ್.ಎಂ.ಕೃಷ್ಣ, ರಮೇಶ್ ಕುಮಾರ್, ಹೀಗೆ ಸಭಾಪತಿ ಸ್ಥಾನಕ್ಕೆ ಘನತೆ ತಂದುಕೊಟ್ಟವರು. ಅವರು ಆ ಸ್ಥಾನದಲ್ಲಿ ಕುಳಿತು ನೀಡಿದ ರೂಲಿಂಗ್‌ಗಳು ಈಗಲೂ ಅವರನ್ನು ಸ್ಮರಿಸುವಂತೆ ಮಾಡಿವೆ. ಈ ಕಾರಣಕ್ಕೆ ಈಗ ಕಾಗೋಡು ತಿಮ್ಮಪ್ಪ ಅವರೂ ಕೂಡಾ ತಮಗಿರುವ ಅಪಾರ ಅನುಭವವನ್ನು ಈ ಹುದ್ದೆಯ ಮೂಲಕ ಅಭಿವ್ಯಕ್ತಿಸಲಿದ್ದಾರೆಂದು ನಿರೀಕ್ಷಿಸಬಹುದು. ಕಾಗೋಡು ಅವರಿಗಿರುವ ಸಾಮಾಜಿಕ ಕಾಳಜಿ, ನ್ಯಾಯಪಾಲನೆಯಲ್ಲಿ ಅವರಿಗಿರುವ ಶ್ರದ್ಧೆ-ನಂಬಿಕೆ ಅವರಿಂದ ಬಹಳಷ್ಟು ನಿರೀಕ್ಷೆ ಮಾಡುವಂತೆ ಮಾಡಿದೆ. ಸದಸ್ಯರ ಹಕ್ಕನ್ನು ಕಾಪಾಡುವುದು ಹೇಗೆಂದು ಸದನದ ಹಿರಿಯ ಸದಸ್ಯರಾದ ಕಾಗೋಡು ಅವರಿಗೆ ಬೇರೆ ಯಾರೂ ಪಾಠ ಮಾಡಬೇಕಾಗಿಲ್ಲ. ಯಾವುದೇ ಸಂದರ್ಭದಲ್ಲೂ ಸ್ಥಾನಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತಾರೆನ್ನುವುದಕ್ಕೆ ಅವರು ನಡೆದು ಬಂದಿರುವ ಹಾದಿಯೇ ಸಾಕ್ಷಿ.

ಸಾಹಿತ್ಯಕ ರಾಜಕಾರಣ ಮತ್ತು ಸೃಜನಶೀಲ ಬರವಣಿಗೆ

– ಡಾ.ಎಸ್.ಬಿ.ಜೋಗುರ

ಈಚೆಗೆ ಹಿರಿಯರೊಬ್ಬರು ಸಾಹಿತ್ಯ ಕಾರ್ಯಕ್ರಮ ಒಂದರಲ್ಲಿ ಅತ್ಯಂತ ವಿಷಾದದಿಂದ ಮಾತನಾಡುತ್ತಿದ್ದರು. ಸಾಹಿತ್ಯಕ ವಲಯ ಎನ್ನುವುದು ಒಂದು ಸಂದರ್ಭದಲ್ಲಿ ಅತ್ಯಂತ ಮೌಲಿಕವಾಗಿತ್ತು. ಒಬ್ಬನನ್ನು ಹಳಿಯಲಿಕ್ಕಾಗಿಯೇ ಇನ್ನೊಬ್ಬ ಬರವಣಿಗೆಯನ್ನು ಶುರು ಮಾಡುವ ದಿನಮಾನಗಳಿರಲಿಲ್ಲ. ಈಗ ಪರಿಸ್ಥಿತಿ ಸಂಪೂರ್ಣವಾಗಿ ತಲೆಕೆಳಗಾಗಿದೆ. ರಾಜಕಾರಣಿಗಳು ಮುಜುಗರ ಪಡುವ ಹಾಗೆ ವ್ಯವಹರಿಸುವ ಈ ಸಂದರ್ಭದ ಸಾಹಿತ್ಯಕ ಪರಿಸರ ಅವರಲ್ಲಿ ರೇಜಿಗೆಯನ್ನು ಹುಟ್ಟಿಸಿರುವದಿತ್ತು. ಸೃಜನಶೀಲ ಬರವಣಿಗೆಯನ್ನು ಮಾಡುತ್ತಲೇ ಅದಕ್ಕಿಂತಲೂ ಹೆಚ್ಚು ಸೃಜನಶೀಲವಾದ, ನಾಜೂಕಾದ ರಾಜಕಾರಣವನ್ನು ಈ ಹೊತ್ತಿನ ಸಾಹಿತಿಗಳು ಮಾಡುವದನ್ನು ನೆನೆದು ಅವರು ಬೇಸರ ವ್ಯಕ್ತಪಡಿಸಿದರು. ಇದು ಕೇವಲ ಅವರು ಮಾತ್ರವಲ್ಲ, ಅವರ ಹಾಗೆ ಸಾಹಿತ್ಯಕ ಪರಿಸರವನ್ನು ಕಳೆದ ಅನೇಕ ವರ್ಷಗಳಿಂದ ಗಮನಿಸುತ್ತ ಬಂದವರೆಲ್ಲಾ ಬಹುತೇಕವಾಗಿ ಹೀಗೇ ಹೇಳುವದಿದೆ. ಇವತ್ತಿನ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಗಟ್ಟಿಯಾದ ಬರವಣಿಗೆಯನ್ನು ಮಾಡುತ್ತಾ ಗುರುತಿಸಿಕೊಳ್ಳುವ ಬದಲಾಗಿ ರಾಜಕೀಯದವರನ್ನು ಮೀರುವ ಹಾಗೆ ಚದುರಂಗ ಆಡುವ ಸಾಹಿತಿ ಕಂ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಇದರಲ್ಲಿ ಮಾತ್ರ ಲಿಂಗ ತಾರತಮ್ಯಗಳಿಲ್ಲ. ಗಂಡು-ಹೆಣ್ಣು ಇಬ್ಬರೂ ಆಯಕಟ್ಟಿನ ಜಾಗೆಯಲ್ಲಿ ಕುಳಿತು, ಸಂದರ್ಭಿಕವಾಗಿ ಅಚ್ಚುಕಟ್ಟಾಗಿಯೇ ಸಾಹಿತ್ಯಕ ರಾಜಕಾರಕಾರಣವನ್ನು ಮಾಡುವದಿದೆ. ಒಂದು ಒಳ್ಳೆಯ ಕೃತಿಯನ್ನು ಬರೆದು ಸಣ್ಣ ಪ್ರಮಾಣದ ಪ್ರಶಸ್ತಿಯೊಂದು ಜೋಬಿಗೆ ಬಿದ್ದರೆ ಅಲ್ಲಿಗೆ ಮುಗಿಯಿತು. ಆತ ತನ್ನ ಮೇಲಿರುವ ಸಮಾಜದ ನಿರೀಕ್ಷೆಯನ್ನೇ ಮರೆಯುತ್ತಾನೆ. sahitya-sammelanaಈಗಾಗಲೇ ಆತ ಪಡೆದಿರುವ ಪ್ರಶಸ್ತಿಗಿಂತಲೂ ದೊಡ್ದ ಪ್ರಶಸ್ತಿಯನ್ನು ಪಡೆಯುವದು ಹೇಗೆ ಎನ್ನುವ ಬಗ್ಗೆ ತನ್ನ ಎಲ್ಲ ಸಾಮರ್ಥ್ಯ ಶಕ್ತಿಯನ್ನು ಪಣಕ್ಕೊಡ್ದುತ್ತಾನೆ. ಪ್ರಶಸ್ತಿ, ಪುಸ್ಕಾರಗಳಿಗಾಗಿ ಸದಾ ಲಾಬಿ ಮಾಡುವದರಲ್ಲಿಯೇ ಒಂದು ಬಗೆಯ ಸೃಜನಶೀಲತೆಯನ್ನು ಕಂಡುಕೊಂಡು ಕೆಲ ಸಾಹಿತಿಗಳಿದ್ದಾರೆ. ಇವರಿಗೆ ನೇರವಾದ ಹಾದಿಗಳಿಂತಲೂ ಅಡ್ಡಹಾದಿಗಳು ಚೆನ್ನಾಗಿ ತಿಳಿದಿವೆ.

ಈಗೀಗ ಕೆಲ ಸಾಹಿತಿಗಳು ವೇದಿಕೆಯ ಮೇಲೆ ಮಾತನಾಡುವ ಮತ್ತು ಬರೆಯುವ ನಡುವೆ ಅಜಗಜಾಂತರ ಅಂತರವನ್ನು ಕಾದುಕೊಂಡಿದ್ದಾರೆ. ಈ ಬಗೆಯ ಅಂತರ ರಾಜಕಾರಣಿಗಳಲ್ಲಿ ಸರ್ವೆ ಸಾಮಾನ್ಯ. ಮಾತಿಗೂ ಕೃತಿಗೂ ಸಂಬಂಧವಿರದಂತೆ ಬರವಣಿಗೆ ಮಾಡುವವನಿಂದ ಬರಬಹುದಾದ ಸೃಜನಶೀಲ ಕೃತಿ ಯಾವ ಬಗೆಯ ಪ್ರಭಾವವನ್ನು ಸಹೃದಯಿಗರ ಮೇಲೆ ಬೀರಬಲ್ಲದು..? ಅದೂ ಅಲ್ಲದೇ ಬರೆದಂತೆ ಬದುಕಬೆಕೆಂಬ ಕರಾರು ಎಲ್ಲಿದೆ..? ಎನ್ನುವ ಮರುಪ್ರಶ್ನೆಯನ್ನು ಇವನು ಹಾಕುವಲ್ಲಿಯೂ ಹಿಂದೇಟು ಹಾಕಲಾರ. ಇವರ ಮುಖವಾಡಗಳನ್ನು ಕಳಚುವದು ತುಂಬಾ ಕಷ್ಟ ಒಂದೋ ಎರಡೋ ಇದ್ದರೆ ಆ ಪ್ರಯತ್ನವನ್ನು ಮಾಡಬಹುದು ಒಂದು ಮುಖವಾಡದ ಹಿಂದೆ ಅದಕ್ಕಿಂತಲೂ ಭಯಂಕರವಾದ ಮುಖವಾಡ, ಅದರ ಹಿಂದೆ ಇನ್ನೂ ಭಯಂಕರವಾದ ಮುಖವಾಡ ಇರುವದೇ ಇವರ ಸಾಮರ್ಥ್ಯ. ವೇದಿಕೆಯಲ್ಲಿ ಮಾತನಾಡಿ, ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಇವರು ಮರುಗಳಿಗೆಯಲ್ಲಿಯೇ ತಾವು ಮಾತನಾಡಿದ ವಿಚಾರಗಳಿಗೆ ಬದ್ಧರಾಗಿರಲಾರರು. ಅಷ್ಟಕ್ಕೂ ಬದ್ಧತೆ ಎಂದರೆ ಏನು..? ಎನ್ನುವ ಇನ್ನೊಂದು ಪ್ರಶ್ನೆಯೂ ಅವರಿಂದಲೇ ಬರುವ ಸಾಧ್ಯತೆ ಇದೆ. ಇಂಥಾ ನಡೆನುಡಿಯೊಳಗೆ ಒಂದಾಗಿರದವರಿಂದ ಮೂಡಿಬರುವ ಪ್ರತಿಬಿಂಬವೂ ಅದೇ ಆಗಿರುತ್ತದೆ ಎನ್ನುವ ಅರ್ಜೆಂಟೀನಾದ ಲೇಖಕ ಜಾರ್ಜ್ ಬೊರ್ಹೆಸ್ ನ ಮಾತು ನೆನಪಾಗುತ್ತದೆ.

ಅವನು ಬಹಳ ದೊಡ್ದ ಸಾಹಿತಿ. ಅವನ ಮಾತು, ವಿಚಾರ, ಬರವಣಿಗೆಗಳಲ್ಲಿ ವೈಚಾರಿಕ ಪ್ರಕರತೆ ತುಂಬಿ ತುಳುಕುತ್ತಿರುತ್ತದೆ. ಆದರೆ ಸಮಕಾಲಿನ ಸಾಹಿತ್ಯಕ ವಲಯದ ಪ್ರತಿಭೆಗಳನ್ನು ಗುರುತಿಸಿ ಹೆಸರಿಸುವಾಗ ಆತ ಕೇವಲ ತನ್ನ ಜಾತಿಯ ಬರಹಗಾರರನ್ನು ತಿಣುಕಿ..ತಿಣುಕಿ ಹುಡುಕಿ ಪಟ್ಟಿ ಮಾಡುತ್ತಾನೆ. ಹೀಗೆ ಮೈತುಂಬಾ ಜಾತಿ ವಾಸನೆ ಹೊಡೆಯುವವನು ಅದೆಷ್ಟು ವೈಚಾರಿಕತೆಯನ್ನು ಮಾತನಾಡಿದರೂ ಪ್ರಯೋಜನವಿಲ್ಲ. ಅದು ನಾಯಿಯ ಮುಕುಳಿಯಲ್ಲಿ ಮೆತ್ತಿರುವ ಜೇನಿನಂತಾಗುತ್ತದೆ. ಇವರ ಬರವಣಿಗೆಯಲ್ಲಿ ಅಲ್ಲಲ್ಲಿ ಕಾಣಸಿಗುವ ಜಾತ್ಯಾತೀತತೆ ಎನ್ನುವ ಪದ ಈ ಸಾಹಿತಿಯ ಶರೀರರ ತೂತುಗಳಿಂದ ಸದಾ ಹೊರಸೂಸುವ ಗಬ್ಬು ಜಾತಿಯ ವಾಸನೆಯಿಂದ ಮೂಗು ಮುಚ್ಚಿಕೊಂಡು ನಿಲ್ಲುತ್ತದೆ. ಆದರೂ ಇವನಿಗೆ ಮುಜುಗರ, ಅಳುಕು ಇಲ್ಲ. ತಾನು ಮಾತಾಡಿದ್ದು ಅತ್ಯಂತ ಪ್ರಖರವಾದ ವೈಚಾರಿಕ ನುಡಿಗಳು ಎನ್ನುವ ಆತ್ಮರತಿ ಮಾತ್ರ ಇದ್ದೇ ಇದೆ. ಇಂಥಾ ಜಾತಿಹಿಡುಕ ಸಾಹಿತಿಗಳಿಂದಾಗಿ ನೂರಾರು ಸಂಖ್ಯೆಯ ಹೊಸ ತಲೆ ಮಾರಿನ ಬರಹಗಾರರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನೀವು ಇವರನ್ನು ಹೀಗೆ ಜಾತೀಯತೆ ಮಾಡುವದು ಸರಿಯೇ..? ಎನ್ನುವ ಪ್ರಶ್ನೆಯನ್ನು ಕೇಳಿದರೆ ಎಲ್ಲರೂ ಮಾಡುತ್ತಿರುವದೂ ಅದೇ ಅಲ್ಲವೇ..? ಎನ್ನುವ ಮರುಪ್ರಶ್ನೆಯನ್ನು ನಿಮ್ಮ ಎದುರಿಟ್ಟು ಹಲ್ಲು ಗಿಂಜುತ್ತಾನೆ. ಇಂಥವರು ಬರೆಯದಿರುವದೇ ಶ್ರೇಯಸ್ಕರ.

ಇನ್ನೊಬ್ಬ ಆ ಊರಲ್ಲಿ ನಡೆಯುವ ಯಾವುದೇ ಸಭೆ-ಸಮಾರಂಭಗಳಿರಲಿ ತನ್ನನ್ನು ಕರೆಯುವಂತೆ ಸಂಘಟಕರನ್ನು ಪುಸಲಾಯಿಸುತ್ತಾನೆ. ಹೇಗಾದರೂ ಸರಿ ವೇದಿಕೆಗೆ ಬರಬೇಕು ಎನ್ನುವ ಚಪಲದ ನಡುವೆ ಅನೇಕ ಸಮರ್ಥರನ್ನು ಬದಿಗೆ ತಳ್ಳಿ ಈತ ವೇದಿಕೆಗೆ ಬರುತ್ತಾನೆ. ಇವನು ಬರೆದುದದಕ್ಕಿಂತಲೂ ಬೆಳೆದುದು ಹೆಚ್ಚು. ಸಕಲಕಲಾವಲ್ಲಭರಂತಿರುವ ಇವರು ತಮ್ಮ ಇಡೀ ದಿನದ ಕಸರತ್ತನ್ನು ಯಾವುದಾದರೂ ವೇದಿಕೆಗೆ ಬಂದು ಕುಕ್ಕುರಿಸಬೇಕು ಎನ್ನುವದು ಮಾತ್ರವಲ್ಲದೇ ತಾನು ಮಾಡುತ್ತಿರುವದು ಎಷ್ಟರ ಮಟ್ಟಿಗೆ ಸರಿ ಎನ್ನುವ ಬಗ್ಗೆ ಒಮ್ಮೆಯೂ ಯೋಚಿಸಿರುವದಿಲ್ಲ. ಈ ಸಮಾಜ ನಮ್ಮನ್ನು ಪ್ರತಿ ಹೆಜ್ಜೆಗೂ ಗಮನಿಸುತ್ತಿರುತ್ತದೆ. ಆದರೆ ಇವರು ಸಮಾಜಕ್ಕೆ ಕಣ್ಣಿಲ್ಲ ಎನ್ನುವ ತೀರ್ಮಾನ ತಳೆದವರು. ಈಚೆಗೆ ರಾಜ್ಯ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕೆಲ ಗೋಷ್ಟಿಗಳಲ್ಲಿ ತಮ್ಮ ಹೆಸರನ್ನು ಸೇರಿಸುವಂತೆ ಪುಸಲಾಯಿಸಿದ್ದು, ಉತ್ಪೀಡಕರಾಗಿ ಬೆನ್ನಿಗೆ ಬಿದ್ದದ್ದನ್ನು ಕೇಳಿ ನಾನು ಹೌ ಹಾರಿದ್ದೆ. ಇವಾವುಗಳ ಬಗ್ಗೆಯೂ ಅರಿವಿರದೇ ಯತಾರ್ಥವಾಗಿ ಬರವಣಿಗೆ ಮಾಡುವವ ಇವರ ದೃಷ್ಟಿಯಲ್ಲಿ ಸಾಹಿತಿಯೇ ಅಲ್ಲ. ಇಂಥಾ ಉತ್ಪೀಡಕ ಸಾಹಿತಿಗಳಿಗೆ ಪ್ರಶಸ್ತಿಗಳೂ ಬರುವದಿದೆ. ಅದು ಕೂಡಾ ಈ ಕಾಲದ ವಿಚಿತ್ರ ಮತ್ತು ವಿಷಾದ.

ಕೆಲ ಸಾಹಿತಿಗಳು ಒಂದೋ ಎರಡೊ ಕೃತಿಗಳನ್ನು ಬರೆದು ಯಾವುದೋ ಒಂದು ಜಿಲ್ಲೆ ಇಲ್ಲವೇ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದದ್ದೇ ಅವರ ಮುಖದ ನಿರಿಗೆಗಳು ಮತ್ತು ಹಾವ ಭಾವವೇ ಬದಲಾಗುತ್ತವೆ. ಅದರಲ್ಲೂ ವೇದಿಕೆಯಲ್ಲಿ ಕುಳಿತಾಗ ಇವರನ್ನು ನೋಡಲಿಕ್ಕಾಗುವದಿಲ್ಲ. ಸ್ವಾಭಾವಿಕವಾಗಿರುವ ಮುಖಮುದ್ರೆಯಲ್ಲಿ ಹೀಗೆ ಅನಾವಶ್ಯಕವಾದ ಗಾಂಭೀರ್ಯವನ್ನು ತಂದುಕೊಳ್ಳುವದು ಸೃಜನಶೀಲ ಬರವಣಿಗೆಗೆ ಪ್ರೇರಣೆಯಾಗದೆಯೇನೋ..? ಎಂದು ಜನಸಾಮಾನ್ಯ ಯೋಚಿಸುವಷ್ಟರ ಮಟ್ಟಿಗೆ ಇವರು ಕೃತ್ರಿಮವಾಗಿರುತ್ತಾರೆ. ಈ ನಡುವೆ ಹೊಸಬರ ಬರವಣಿಗೆಗಳನ್ನು ಓದುವ, ಚರ್ಚಿಸುವ ಪರಿಪಾಠಗಳೂ ಸಾಹಿತ್ಯಕ ವಲಯದಲ್ಲಿಲ್ಲ. ಕೇವಲ ಪತ್ರಿಕೆಯಲ್ಲಿ ಬರುವ ವಿಮರ್ಶೆ ಮತ್ತು ಟಾಪ್ ಟೆನ್ ಪಟ್ಟಿಯನ್ನು ನೋಡಿ ಓದುವ ಸಾಹಿತಿಗಳ ನಡುವೆ ಅದೆಷ್ಟೋ ಹೊಸ ತಲೆಮಾರಿನ ಲೇಖಕರ ಬರವಣಿಗೆ ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಹೆಸರು, ಜಾತಿ, ಪರಿಚಯಗಳೇ ನಿರ್ಣಾಯಕವಾಗಿರುವ ಸಂದರ್ಭದಲ್ಲಿ ಯಾವ ರೀತಿಯ ಕೃತಿಯನ್ನು ರಚಿಸಬೇಕು ಎನ್ನುವದೇ ಹೊಸ ತಲೆಮಾರಿನವರ ಎದುರಿಗಿನ ಬಹುದೊಡ್ಡ ಬಿಕ್ಕಟ್ಟು.