– ಆನಂದ ಪ್ರಸಾದ್
ಗುಜರಾತ್ ವಿಧಾನಸಭೆಯಲ್ಲಿ ಆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಅಧಿಕಾರಸ್ಥರ ಕೈಗೊಂಬೆಯನ್ನಾಗಿ ಮಾಡುವ ಪ್ರಯತ್ನ ಮುಖ್ಯಮಂತ್ರಿ ಮೋದಿಯವರಿಂದ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಖಾಲಿ ಬಿಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪಾರದರ್ಶಕ ಆಡಳಿತ ನೀಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಇದು ತದ್ವಿರುದ್ಧವಾಗಿದೆ. ಮುಖ್ಯಮಂತ್ರಿಯ ಈ ನಿಲುವಿನಿಂದ ಬೇಸತ್ತ ಗುಜರಾತಿನ ರಾಜ್ಯಪಾಲರು ನೂತನ ಲೋಕಾಯುಕ್ತರನ್ನು ನೇಮಿಸಿದ್ದರೂ ಅದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ರಾಜ್ಯ ಸರ್ಕಾರದ ನಿಲುವನ್ನು ಅವೆರಡೂ ತಳ್ಳಿಹಾಕಿ ಲೋಕಾಯುಕ್ತರ ನೇಮಕ ಸಿಂಧು ಎಂದು ತೀರ್ಪು ನೀಡಿವೆ. ಈ ಮಧ್ಯೆ ಮೋದಿ ಸರ್ಕಾರ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದೆ. ಇದೀಗ ಲೋಕಾಯುಕ್ತರ ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದೆ.
ಲೋಕಾಯುಕ್ತ ಕಾಯ್ದೆಗೆ ತಂದಿರುವ ನೂತನ ತಿದ್ದುಪಡಿಯ ಪ್ರಕಾರ ಲೋಕಾಯುಕ್ತರ ನೇಮಕದ ಅಧಿಕಾರ ರಾಜ್ಯ ಸರ್ಕಾರದ ಪರಮಾಧಿಕಾರವನ್ನಾಗಿ ಮಾಡಲಾಗಿದೆ. ಲೋಕಾಯುಕ್ತರ ನೇಮಕ ಸಮಿತಿಯೊಂದರ ಮೂಲಕ ಮಾಡಲಾಗುತ್ತದೆ. ಅದಕ್ಕೆ ಸದಸ್ಯರಾಗಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆಯ ಸ್ಪೀಕರ್, ವಿರೋಧ ಪಕ್ಷದ ನಾಯಕ, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸೂಚಿಸುವ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ರಾಜ್ಯದ ವಿಜಿಲೆನ್ಸ್ ಕಮಿಷನರ್ ಹೀಗೆ ಆರು ಜನರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ನೂತನ ತಿದ್ದುಪಡಿಯ ಪ್ರಕಾರ ರಾಜ್ಯಪಾಲರ ಲೋಕಾಯುಕ್ತ ನೇಮಕದ ಅಧಿಕಾರವನ್ನು ತೆಗೆದುಹಾಕಲಾಗಿದೆ. ರಾಜ್ಯಪಾಲರು ಸಮಿತಿಯು ಸೂಚಿಸಿದ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ಮಾಡಬೇಕಾಗುತ್ತದೆ.
ಲೋಕಾಯುಕ್ತ ನೇಮಕ ಸಮಿತಿಯಲ್ಲಿ ರಾಜ್ಯ ಸರ್ಕಾರದ ಹಿಡಿತ ಅಧಿಕವಾಗಿದೆ ಹೇಗೆಂದರೆ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆ ಸ್ಪೀಕರ್ ಹೀಗೆ ಮೂರು ಜನ ಸೇರಿ 50% ಹಿಡಿತ ರಾಜ್ಯ ಸರ್ಕಾರದಲ್ಲಿರುತ್ತದೆ. ಅದಲ್ಲದೆ ರಾಜ್ಯ ವಿಜಿಲೆನ್ಸ್ ಕಮಿಷನರ್ ಕೂಡ ರಾಜ್ಯ ಸರ್ಕಾರದ ನೇಮಕವಾಗಿರುವ ಕಾರಣ ಈ ಹಿಡಿತ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನುಳಿದಿರುವುದು ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರು. ಇವರು ಅಲ್ಪಸಂಖ್ಯಾತರಾಗಿರುವ ಕಾರಣ ಬಹುಸಂಖ್ಯಾತ ಸದಸ್ಯರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಹೀಗೆ ಅಧಿಕಾರಸ್ಥರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಇವರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೀಗೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇದರ ಬದಲು ಹೈಕೋರ್ಟಿನ ನ್ಯಾಯಾಧೀಶರು, ವಿರೋಧ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿ ಹೀಗೆ ಮೂವರಿಗೂ ಒಪ್ಪಿಗೆಯಾಗುವ ವ್ಯಕ್ತಿ ಅಥವಾ ಈ ಮೂವರಲ್ಲಿ ಇಬ್ಬರಿಗೆ ಒಪ್ಪಿಗೆಯಾಗುವ ವ್ಯಕ್ತಿ ಲೋಕಾಯುಕ್ತರಾದರೆ ಅದನ್ನು ನಿಷ್ಪಕ್ಷಪಾತ ನೇಮಕ ಎಂದು ಹೇಳಬಹುದು. ಮೋದಿ ಸರ್ಕಾರದ ಕ್ರಮ ಇದಕ್ಕೆ ಪೂರಕವಾಗಿಲ್ಲ. ಹೀಗಾಗಿ ಮೋದಿ ಸರ್ಕಾರಕ್ಕೆ ನಿಷ್ಪಕ್ಷಪಾತ ನೇಮಕ ಬೇಕಾಗಿಲ್ಲ, ತನ್ನ ಕೈಗೊಂಬೆಯಾಗುವ ವ್ಯಕ್ತಿಯ ನೇಮಕ ಬೇಕಾಗಿದೆ ಎಂದು ಹೇಳಬಹುದು. ಕೇಂದ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐ ಅನ್ನು ಕೈಗೊಂಬೆಯ ರೀತಿ ಬಳಸುತ್ತದೆ ಎಂದು ವ್ಯಂಗ್ಯವಾಡುವ ಮೋದಿಯವರು ಅಥವಾ ಬಿಜೆಪಿಯವರು ಈಗ ಗುಜರಾತಿನಲ್ಲಿ ಮಾಡಲು ಹೊರಟಿರುವುದು ಇದನ್ನೇ ಅಲ್ಲವೇ? ಹೀಗಾದರೆ ಇವರಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡದೆ ಇರಲಾರದು.
ಗುಜರಾತಿನ ವಿಧಾನಸಭೆಯಲ್ಲಿ ಮಂಡಿಸಿದ 2009-2010 ಹಾಗೂ 2010-2011ನೇ ಸಾಲಿನ ಸಿಎಜಿ ವರದಿ ರಾಜ್ಯ ಸರ್ಕಾರ 17,000 ಕೋಟಿ ಅವ್ಯವಹಾರ ನಡೆಸಿದೆ ಹಾಗೂ ಬೊಕ್ಕಸಕ್ಕೆ ನಷ್ಟವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನು ನೋಡುವಾಗ ಮೋದಿ ಸರ್ಕಾರದಲ್ಲಿ ಅವ್ಯವಹಾರಗಳು ನಡೆದಿರುವ ಮತ್ತು ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತರ ನೇಮಕ ಮಾಡಲಾಗಿಲ್ಲ ಮತ್ತು ತಮ್ಮ ಕೈಗೊಂಬೆಯಾಗುವ ಲೋಕಾಯುಕ್ತರ ನೇಮಕ ಮೋದಿ ಸರ್ಕಾರಕ್ಕೆ ಬೇಕಾಗಿದೆ ಎಂಬ ಅಭಿಪ್ರಾಯ ಜನತೆಯಲ್ಲಿ ಮೂಡಿದರೆ ಅಚ್ಚರಿ ಇಲ್ಲ. ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಸಾಧ್ಯ ಎಂಬ ಪ್ರಚಾರ ಬಂಡವಾಳಶಾಹಿಗಳು ವ್ಯವಸ್ಥಿತವಾಗಿ ನಡೆಸುವ ಅಬ್ಬರದ ಪ್ರಚಾರ ಎಂದು ಇದರಿಂದ ಜನರಿಗೆ ಅನಿಸುವ ಸಾಧ್ಯತೆ ಹೆಚ್ಚಾಗಿದೆ.