ಗುಜರಾತ್ ಲೋಕಾಯುಕ್ತ ಕಾಯ್ದೆ ತಿದ್ದುಪಡಿ – ಲೋಕಾಯುಕ್ತ ದುರ್ಬಲಗೊಳಿಸುವ ಯತ್ನ

– ಆನಂದ ಪ್ರಸಾದ್

ಗುಜರಾತ್ ವಿಧಾನಸಭೆಯಲ್ಲಿ ಆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಅಧಿಕಾರಸ್ಥರ ಕೈಗೊಂಬೆಯನ್ನಾಗಿ ಮಾಡುವ ಪ್ರಯತ್ನ ಮುಖ್ಯಮಂತ್ರಿ ಮೋದಿಯವರಿಂದ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಖಾಲಿ ಬಿಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪಾರದರ್ಶಕ ಆಡಳಿತ ನೀಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಇದು ತದ್ವಿರುದ್ಧವಾಗಿದೆ. Narendra_Modiಮುಖ್ಯಮಂತ್ರಿಯ ಈ ನಿಲುವಿನಿಂದ ಬೇಸತ್ತ ಗುಜರಾತಿನ ರಾಜ್ಯಪಾಲರು ನೂತನ ಲೋಕಾಯುಕ್ತರನ್ನು ನೇಮಿಸಿದ್ದರೂ ಅದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ರಾಜ್ಯ ಸರ್ಕಾರದ ನಿಲುವನ್ನು ಅವೆರಡೂ ತಳ್ಳಿಹಾಕಿ ಲೋಕಾಯುಕ್ತರ ನೇಮಕ ಸಿಂಧು ಎಂದು ತೀರ್ಪು ನೀಡಿವೆ. ಈ ಮಧ್ಯೆ ಮೋದಿ ಸರ್ಕಾರ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದೆ. ಇದೀಗ ಲೋಕಾಯುಕ್ತರ ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದೆ.

ಲೋಕಾಯುಕ್ತ ಕಾಯ್ದೆಗೆ ತಂದಿರುವ ನೂತನ ತಿದ್ದುಪಡಿಯ ಪ್ರಕಾರ ಲೋಕಾಯುಕ್ತರ ನೇಮಕದ ಅಧಿಕಾರ ರಾಜ್ಯ ಸರ್ಕಾರದ ಪರಮಾಧಿಕಾರವನ್ನಾಗಿ ಮಾಡಲಾಗಿದೆ. ಲೋಕಾಯುಕ್ತರ ನೇಮಕ ಸಮಿತಿಯೊಂದರ ಮೂಲಕ ಮಾಡಲಾಗುತ್ತದೆ. ಅದಕ್ಕೆ ಸದಸ್ಯರಾಗಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆಯ ಸ್ಪೀಕರ್, ವಿರೋಧ ಪಕ್ಷದ ನಾಯಕ, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸೂಚಿಸುವ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ರಾಜ್ಯದ ವಿಜಿಲೆನ್ಸ್ ಕಮಿಷನರ್ ಹೀಗೆ ಆರು ಜನರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ನೂತನ ತಿದ್ದುಪಡಿಯ ಪ್ರಕಾರ ರಾಜ್ಯಪಾಲರ ಲೋಕಾಯುಕ್ತ ನೇಮಕದ ಅಧಿಕಾರವನ್ನು ತೆಗೆದುಹಾಕಲಾಗಿದೆ. ರಾಜ್ಯಪಾಲರು ಸಮಿತಿಯು ಸೂಚಿಸಿದ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ಮಾಡಬೇಕಾಗುತ್ತದೆ.

ಲೋಕಾಯುಕ್ತ ನೇಮಕ ಸಮಿತಿಯಲ್ಲಿ ರಾಜ್ಯ ಸರ್ಕಾರದ ಹಿಡಿತ ಅಧಿಕವಾಗಿದೆ ಹೇಗೆಂದರೆ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆ ಸ್ಪೀಕರ್ ಹೀಗೆ ಮೂರು ಜನ ಸೇರಿ 50% ಹಿಡಿತ ರಾಜ್ಯ ಸರ್ಕಾರದಲ್ಲಿರುತ್ತದೆ. ಅದಲ್ಲದೆ ರಾಜ್ಯ ವಿಜಿಲೆನ್ಸ್ ಕಮಿಷನರ್ ಕೂಡ ರಾಜ್ಯ ಸರ್ಕಾರದ ನೇಮಕವಾಗಿರುವ ಕಾರಣ ಈ ಹಿಡಿತ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನುಳಿದಿರುವುದು ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರು. ಇವರು ಅಲ್ಪಸಂಖ್ಯಾತರಾಗಿರುವ ಕಾರಣ ಬಹುಸಂಖ್ಯಾತ ಸದಸ್ಯರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಹೀಗೆ ಅಧಿಕಾರಸ್ಥರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಇವರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೀಗೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇದರ ಬದಲು ಹೈಕೋರ್ಟಿನ ನ್ಯಾಯಾಧೀಶರು, ವಿರೋಧ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿ graft-corruptionಹೀಗೆ ಮೂವರಿಗೂ ಒಪ್ಪಿಗೆಯಾಗುವ ವ್ಯಕ್ತಿ ಅಥವಾ ಈ ಮೂವರಲ್ಲಿ ಇಬ್ಬರಿಗೆ ಒಪ್ಪಿಗೆಯಾಗುವ ವ್ಯಕ್ತಿ ಲೋಕಾಯುಕ್ತರಾದರೆ ಅದನ್ನು ನಿಷ್ಪಕ್ಷಪಾತ ನೇಮಕ ಎಂದು ಹೇಳಬಹುದು. ಮೋದಿ ಸರ್ಕಾರದ ಕ್ರಮ ಇದಕ್ಕೆ ಪೂರಕವಾಗಿಲ್ಲ. ಹೀಗಾಗಿ ಮೋದಿ ಸರ್ಕಾರಕ್ಕೆ ನಿಷ್ಪಕ್ಷಪಾತ ನೇಮಕ ಬೇಕಾಗಿಲ್ಲ, ತನ್ನ ಕೈಗೊಂಬೆಯಾಗುವ ವ್ಯಕ್ತಿಯ ನೇಮಕ ಬೇಕಾಗಿದೆ ಎಂದು ಹೇಳಬಹುದು. ಕೇಂದ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐ ಅನ್ನು ಕೈಗೊಂಬೆಯ ರೀತಿ ಬಳಸುತ್ತದೆ ಎಂದು ವ್ಯಂಗ್ಯವಾಡುವ ಮೋದಿಯವರು ಅಥವಾ ಬಿಜೆಪಿಯವರು ಈಗ ಗುಜರಾತಿನಲ್ಲಿ ಮಾಡಲು ಹೊರಟಿರುವುದು ಇದನ್ನೇ ಅಲ್ಲವೇ? ಹೀಗಾದರೆ ಇವರಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡದೆ ಇರಲಾರದು.

ಗುಜರಾತಿನ ವಿಧಾನಸಭೆಯಲ್ಲಿ ಮಂಡಿಸಿದ 2009-2010 ಹಾಗೂ 2010-2011ನೇ ಸಾಲಿನ ಸಿಎಜಿ ವರದಿ ರಾಜ್ಯ ಸರ್ಕಾರ 17,000 ಕೋಟಿ ಅವ್ಯವಹಾರ ನಡೆಸಿದೆ ಹಾಗೂ ಬೊಕ್ಕಸಕ್ಕೆ ನಷ್ಟವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನು ನೋಡುವಾಗ ಮೋದಿ ಸರ್ಕಾರದಲ್ಲಿ ಅವ್ಯವಹಾರಗಳು ನಡೆದಿರುವ ಮತ್ತು ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತರ ನೇಮಕ ಮಾಡಲಾಗಿಲ್ಲ ಮತ್ತು ತಮ್ಮ ಕೈಗೊಂಬೆಯಾಗುವ ಲೋಕಾಯುಕ್ತರ ನೇಮಕ ಮೋದಿ ಸರ್ಕಾರಕ್ಕೆ ಬೇಕಾಗಿದೆ ಎಂಬ ಅಭಿಪ್ರಾಯ ಜನತೆಯಲ್ಲಿ ಮೂಡಿದರೆ ಅಚ್ಚರಿ ಇಲ್ಲ. ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಸಾಧ್ಯ ಎಂಬ ಪ್ರಚಾರ ಬಂಡವಾಳಶಾಹಿಗಳು ವ್ಯವಸ್ಥಿತವಾಗಿ ನಡೆಸುವ ಅಬ್ಬರದ ಪ್ರಚಾರ ಎಂದು ಇದರಿಂದ ಜನರಿಗೆ ಅನಿಸುವ ಸಾಧ್ಯತೆ ಹೆಚ್ಚಾಗಿದೆ.

ಕಾಮೆಂಟ್ ಮಾಡುವವರ ಗಮನಕ್ಕೆ, ಮತ್ತೊಮ್ಮೆ…

ಸ್ನೇಹಿತರೇ,

ಇತ್ತೀಚೆಗೆ ಆನಂದ ಪ್ರಸಾದರ “ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?” ಲೇಖನಕ್ಕೆ ಬಂದ ಪ್ರತಿಕ್ರಿಯೆಗೆ ಪೂರಕವಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಅವು ಯಾವುವೂ ಬಹುಶಃ ಪ್ರಕಟವಾಗಿಲ್ಲ. ಅದಕ್ಕೆ ಕಾರಣ, ಪ್ರತಿಕ್ರಿಯಿಸಿದವರ ಹೆಸರು ಮತ್ತ್ ಇಮೇಲ್ ವಿಳಾಸಗಳು ನಮ್ಮ ವೆಬ್‌ಸೈಟ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿರುವುದು.

ನನಗೆ ಮತ್ತು ವರ್ತಮಾನ.ಕಾಮ್‌ಗೆ ಓದುಗರ ಪ್ರತಿಕ್ರಿಯೆಗಳನ್ನು ಅಲ್ಲಲ್ಲಿ ಎಡಿಟ್ ಮಾಡಿ ಅಪ್ರೂವ್ ಮಾಡುವುದರಲ್ಲಿ ನಂಬಿಕೆ ಇಲ್ಲ. courtesy-announcementಪ್ರಕಟವಾದರೆ ಸಂಪೂರ್ಣವಾಗಿ ಪ್ರಕಟವಾಗಬೇಕು, ಇಲ್ಲವಾದಲ್ಲಿ ಇಲ್ಲ. ಈ ನೀತಿಯಿಂದಾಗಿ ಒಂದೇ ಒಂದು ಕೆಟ್ಟ ಅಭಿರುಚಿಯ ಪದ ಇದ್ದರೂ ಅಂತಹ ಕಾಮೆಂಟ್‌ಗಳು ಪ್ರಕಟವಾಗಿಲ್ಲ. ಕೆಲವು ಬಾರಿ ಕಾಮೆಂಟ್ ಎಷ್ಟೇ ಒಳ್ಳೆಯದಿದ್ದರೂ ಒಂದೇ ಒಂದು ಪದದ ಕಾರಣಗಳಿಂದ ಅದನ್ನು ಡಿಲೀಟ್ ಮಾಡಲಾಗಿದೆ. ಇದನ್ನು ನಮ್ಮಲ್ಲಿಯ ಲೇಖನಗಳಿಗೆ ಪ್ರತಿಕ್ರಿಯಿಸುವವರು ಗಮನಿಸಬೇಕು.

ಹಾಗೆಯೇ, ಕೆಲವು ಜನ ಪದೇಪದೇ ವೈಯಕ್ತಿಕ ದಾಳಿ ಮಾಡುವ ಪ್ರತಿಕ್ರಿಯೆಗಳನ್ನು, ಕೆಟ್ಟ ಭಾಷೆಯಲ್ಲಿ ಬೆರೆದಿರುತ್ತಾರೆ. ಅಂತಹ ಮೂರ್ನಾಲ್ಕು ಹೆಸರುಗಳು ನಮ್ಮ ಸಿಸ್ಟಮ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿದ್ದು ಆ ಲಿಸ್ಟ್‌ನಲಿರುವವರು ಮಾಡುವ ಕಾಮೆಂಟ್‌ಗಳು ತನ್ನಂತಾನೆ ತಡೆಹಿಡಿಯಲ್ಪಡುತ್ತವೆ ಮತ್ತು ತನ್ನಂತಾನೆ ಟ್ರ್ಯಾಷ್‌ಗೆ ಹೋಗುತ್ತದೆ.

ಕಾಮೆಂಟ್‌ಗಳು ಎಷ್ಟೇ ತೀಕ್ಷಣವಾಗಿದ್ದರೂ ಅವು ಇಲ್ಲಿ ಪ್ರಕಟವಾಗುತ್ತವೆ, ಆದರೆ, ಭಾಷೆ ಸಭ್ಯವಾಗಿರಲಿ. ಹಾಗೆಯೇ ಪ್ರತಿಕ್ರಿಯಿಸುತ್ತಿರುವ ಲೇಖನಕ್ಕೆ ವಸ್ತುನಿಷ್ಟವಾಗಿರಲಿ. ಇಂತಹ ಅನೇಕ ಕಾಮೆಂಟ್‌ಗಳು ಇಲ್ಲಿ ಯಾವುದೇ ಅಡೆತಡೆ ಇಲ್ಲದೆ ಪ್ರಕಟವಾಗಿವೆ.

ಮತ್ತು, ನೀವು ಮೊದಲ ಸಲ ಕಾಮೆಂಟ್ ಹಾಕುತ್ತಿದ್ದರೆ ಅದು ಅಪ್ರೂವ್ ಆಗುವ ತನಕ ಪೆಂಡಿಂಗ್‌ನಲಿರುತ್ತದೆ. ಒಮ್ಮೆ ಅಪ್ರೂವ್ ಆದಮೇಲೆ, ನೀವು ಅದೇ ಹೆಸರಿನಲ್ಲಿ ಮತ್ತು ಇಮೇಲ್‌ನಲ್ಲಿ ಕಾಮೆಂಟ್ ಮಾಡಿದರೆ ಯಾವುದೇ ನಿರ್ಬಂಧ ಇಲ್ಲದೆ ತತ್‌ಕ್ಷಣ ಪ್ರಕಟವಾಗುತ್ತದೆ. ಮೊದಲ ಬಾರಿಗೆ ಮಾತ್ರ ಅಪ್ರೂವ್ ಮಾಡುವ ತನಕ ಕಾಯಬೇಕು. ಮತ್ತು, ಅಪ್ರೂವ್ ಆದ ಮೇಲೆ ನೀವು ಪದೇಪದೇ ಕೆಟ್ಟ ಭಾಷೆಯಲ್ಲಿ ಅಥವ ಅಸಂಗತವಾಗಿ ಪ್ರತಿಕ್ರಿಯಿಸುತ್ತ ಹೋದರೆ, ಒಂದು ಇಲ್ಲ ಎರಡು ಬಾರಿ ಡಿಲೀಟ್ ಮಾಡಿ ನೋಡಲಾಗುತ್ತದೆ. ಅದೇ ರೀತಿಯೆ ಮಾಡುತ್ತಿದ್ದರೆ ಆ ಹೆಸರು ನಮ್ಮ ಬ್ಲಾಕ್ಡ್ ಲಿಸ್ಟ್‌ಗೆ ಹೋಗುತ್ತದೆ.

ಬರಹಗಾರರು ಬರೆಯುವಷ್ಟೇ ಬದ್ಧತೆಯಿಂದ ಮತ್ತು ಪ್ರಬುದ್ಧತೆಯಿಂದ ಪ್ರತಿಕ್ರಿಯಿಸುವವರೂ ಸಂವಾದಿಸಬೇಕು ಎನ್ನುವುದೇ ಈ ಎಲ್ಲದರ ಹಿಂದಿರುವ ಉದ್ದೇಶ. ಕಾಮೆಂಟ್ ಮಾಡುವವರು ಸಹಕರಿಸಬೇಕು.

ಈ ಮಾಹಿತಿಗೆ ಪೂರಕವಾಗಿ ವರ್ತಮಾನ.ಕಾಮ್‌ಗೆ ವರ್ಷ ಪೂರೈಸಿದ ಆಸುಪಾಸಿನಲ್ಲಿ ಬರೆದಿದ್ದ “ಓದುಗರ ಮತ್ತು ಕಾಮೆಂಟುದಾರರ ಗಮನಕ್ಕೆ…” ಲೇಖನವನ್ನು ಮತ್ತೊಮ್ಮೆ  ಗಮನಿಸಬೇಕೆಂದು ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕುರಿಮಂದೆಯ ಹಿಂದೆ-ಮುಂದೆ ಎಂಥವರಿರಬೇಕು ?


– ಚಿದಂಬರ ಬೈಕಂಪಾಡಿ


 

ರಾಜಕಾರಣಿಗಳ ಹಿಂದೆ ಮತದಾರರೆಲ್ಲಾ ಕುರಿಮಂದೆ ಎನ್ನುವ ಮೂಲಕ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದಾರೆ. ಕಾಟ್ಜು ಅವರ ಹೇಳಿಕೆಯಿಂದ ಎರಡು ರೀತಿಯ ಪರಿಣಾಮ ಗುರುತಿಸಬಹುದು. ಹೀಗೆ ಹೇಳಿದ್ದು ಸರಿಯಲ್ಲ, ಮತದಾರರಿಗೆ ಅವಮಾನ ಎನ್ನುವುದು ಮತ್ತು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ಕಟುಸತ್ಯವನ್ನೇ ಹೇಳಿದ್ದಾರೆ ಎನ್ನುವುದು. ಇಂಥ ಚರ್ಚೆಗೆ ಕಾರಣವಾಗುವ ಅಂಶ ಹೇಳಿಕೆ ಕೊಟ್ಟ ವ್ಯಕ್ತಿಯ ಸ್ಥಾನಮಾನ.JUDGE MARKANDEY KATJU_1 ಇದೇ ಹೇಳಿಕೆಯನ್ನು ದಾರಿಹೋಕ ಹೇಳಿದ್ದರೆ ಅಥವಾ ಹೊಲದಲ್ಲಿ ಉಳುವ ರೈತ ಆಡಿದ್ದರೆ, ಹೊತ್ತು ಕಳೆಯುವುದಕ್ಕಾಗಿ ಹರಳಿಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುವ ಮಂದಿ ಹೇಳಿದ್ದರೆ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ. ಆದ್ದರಿಂದ ಕಾಟ್ಜು ಅವರು ಹೇಳಿರುವ ಈ ಮಾತುಗಳನ್ನು ಈ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಕನಿಷ್ಟ ಒಂದಿಬ್ಬರಾದರೂ ಹಿಂದೆ ಹೇಳಿರುತ್ತಾರೆ, ಈಗಲೂ ಅದನ್ನೇ ಹೇಳುತ್ತಾರೆ. ಆದರೆ ಅವರ ಹೇಳಿಕೆಗೆ ಮನ್ನಣೆ ಸಿಗುವುದಿಲ್ಲ. ಕಾಟ್ಜು ಹೇಳಿರುವುದರಿಂದ ಮಾತ್ರ ಸುದ್ದಿಯಾಗಿದೆ, ಚರ್ಚೆಯಾಗುತ್ತಿದೆ ಹೊರತು ಇದೇ ಮಾತನ್ನು ಸಾಮಾನ್ಯ ಜನ ಹೇಳಿದ್ದರೆ ಮಾಧ್ಯಮಗಳಿಗೆ ಅದು ಸುದ್ದಿಯೂ ಅಲ್ಲ, ಮನ್ನಣೆಯೂ ಸಿಗುತ್ತಿರಲಿಲ್ಲ. ದಿನದ ಮಟ್ಟಿಗೆ ಮಾಧ್ಯಮಗಳಿಗೆ ಹೆಡ್‌ಲೈನ್ ಸುದ್ದಿ. ಈ ಹೇಳಿಕೆಯ ಮುಂದುವರಿದ ಭಾಗವಾಗಿ ಇನ್ನು ಯಾರೇ ಹೇಳಿದರೂ ಆ ವ್ಯಕ್ತಿಯ ಸ್ಥಾನ ಮಾನ ಆಧರಿಸಿ ಮಾಧ್ಯಮಗಳಲ್ಲಿ ಸ್ಥಾನ ಸಿಗಬಹುದೇ ಹೊರತು ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ.

ಈಗ ಜಾತಿ, ಧರ್ಮದ ಹಿನ್ನೆಲೆಯಲ್ಲಿ ಮತದಾರರು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ. ಇದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಅಭ್ಯರ್ಥಿಯ ಆಯ್ಕೆಗೆ ಮಾನದಂಡಗಳಲ್ಲಿ ಅವನ ಜಾತಿ, ಧರ್ಮ ಮುಖ್ಯವಾಗಿರುತ್ತವೆ. ಇಂಥ ಜಾತಿಗೆ ಇಂತಿಷ್ಟು ಸ್ಥಾನ ಕೊಡಬೇಕು ಎನ್ನುವುದು ರಾಜಕೀಯ ಪಕ್ಷಗಳ ಆಶಯಾವಾಗಿದ್ದರೆ ತಮ್ಮ ಜಾತಿಯ ಜನಸಂಖ್ಯಾಬಲದ ಆಧಾರದಲ್ಲಿ ಇಂತಿಷ್ಟು ಸ್ಥಾನಗಳು ಸಿಗಲೇ ಬೇಕು ಎನ್ನುವ ಹಕ್ಕೊತ್ತಾಯಗಳನ್ನು ಬಹಿರಂಗವಾಗಿಯೇ ಮಾಡುತ್ತಿಲ್ಲವೇ? ಹಾಗೊಂದು ವೇಳೆ ಸ್ಥಾನಗಳನ್ನು ಕೊಡದಿದ್ದರೆ ಬಂಡಾಯವೇಳುತ್ತಿಲ್ಲವೇ? ಜಾತಿಯ ಆಧಾರದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಚುನಾವಣೆಗೆ ಸ್ಪರ್ಧಿಸಿದಾಗ ಜನ ಮತಹಾಕುವಾಗ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ ಎನ್ನಲಾಗದು. ಆದರೆ ಅವರ ಕಣ್ಣಮುಂದಿರುವ ವಿಭಿನ್ನ ಜಾತಿಗಳ ಅಭ್ಯರ್ಥಿಗಳ ಪೈಕಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆ ಆಯ್ಕೆ ಜಾತಿಯ, ಧರ್ಮದ ಆಧಾರದಲ್ಲಿ ಜನ ಮಾಡುತ್ತಾರೆ ಎನ್ನಲಾಗದು. ಮತ ಹಾಕಲೇ ಬೇಕಾದ ಅನಿವಾರ್ಯತೆಯಲ್ಲಿ ಮತದಾರರು ಕುರಿಮಂದೆಯಾಗುತ್ತಾರೆ. ಆದ್ದರಿಂದ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ, ಧರ್ಮದ ಮಾನದಂಡ ಬಳಸದೇ ಕಣಕ್ಕಿಳಿಸುವುದು ಸಾಧ್ಯವೇ? ಜಾತಿ ಮತ್ತು ಧರ್ಮವನ್ನು ಬಿಟ್ಟು ಆತನ ಸಮಾಜ ಸೇವೆ, ಅವನಿಗಿರುವ ಬದ್ಧತೆ, ಕಳಕಳಿ, ಸೈದ್ಧಾಂತಿಕ ಹಿನ್ನೆಲೆ ಇವುಗಳನ್ನು ಮಾನದಂಡವಾಗಿಟ್ಟುಕೊಂಡು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂಥ ವ್ಯವಸ್ಥೆ ಜಾರಿಗೆ ತರುವುದು ಸುಲಭ ಸಾಧ್ಯವೇ?

ಸಾಮಾಜಿಕ ನ್ಯಾಯದಾನ ನಿರ್ಧಾರದ ಮಾನದಂಡ ಯಾವುದು? ಜಾತಿಯನ್ನು ಹೊರತು ಪಡಿಸಿ ಸಾಮಾಜಿಕ ನ್ಯಾಯದಾನದ ಮಾನದಂಡವಿದ್ದರೆ, ಕೇವಲ ಆರ್ಥಿಕ ಶಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಮಾಜಿಕ ನ್ಯಾಯದಾನ ಮಾಡುವ ವ್ಯವಸ್ಥೆಯಿದ್ದಿದ್ದರೆ ಬೇರೆಯೇ ಮಾತು. ಈಗ ಯಾವುದೇ ಹಂತದಲ್ಲೂ ಜಾತಿ ಮತ್ತು ಧರ್ಮವನ್ನು ಪಕ್ಕದಲ್ಲಿಟ್ಟುಕೊಂಡೇ ಸಾಮಾಜಿಕ ನ್ಯಾಯದಾನದ ವ್ಯಾಖ್ಯಾಯನ ಕೊಡುತ್ತಿರುವುದರಿಂದ ಬೇರ್ಪಡಿಸುವುದು ಹೇಗೆ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ನಡೆಯುತ್ತಿರುವ ಆಯ್ಕೆಯ ಮೂಲವನ್ನೇ ಪ್ರಶ್ನಿಸಿರುವ ಕಾಟ್ಜು ತಾವು ಅಂಥವರನ್ನು ಆಯ್ಕೆ ಮಾಡಲು ಮತ ಚಲಾಯಿಸುವುದಿಲ್ಲವೆಂದಿದ್ದಾರೆ. ಎಲ್ಲರೂ ಹೀಗೆಯೇ ಯೋಚಿಸಿದರೆ ನಿಜಕ್ಕೂ ಬದಲಾವಣೆ ನಿಶ್ಚಿತ. ಹೀಗೆ ಯೋಚಿಸುವ ಸಾಮರ್ಥ್ಯವನ್ನು ಈಗ ಅವರೇ ಹೇಳಿರುವಂಥ ಶೇ.90ರಷ್ಟು ಮಂದಿ ಮತದಾರರು ಹೊಂದಿದ್ದಾರೆಯೇ? karnataka_womenಕನಿಷ್ಠ ಹೀಗೆ ಯೋಚಿಸುವ ಮಂದಿಯಾದರೂ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ? ಅಂಥವರನ್ನೇ ರಾಜಕೀಯ ಪಕ್ಷಗಳು ಕಣಕ್ಕಿಳಿಸುತ್ತವೆಯೇ? ಹೆಣ್ಣೊಬ್ಬಳು ಅಕ್ಷರ ಕಲಿತರೆ ಆಕೆ ಒಂದು ಶಾಲೆಗೆ ಸಮಾನ. ಯಾಕೆಂದರೆ ಆಕೆ ಆ ಮನೆಯ ಇತರರಿಗೂ ಕಲಿಸುತ್ತಾಳೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅದೆಂಥಾ ಅದ್ಭುತವಾದ ಕಲ್ಪನೆ? ಈ ಕಲ್ಪನೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳಾಗಿದ್ದರೂ ಇನ್ನೂ ಕಲ್ಪನೆಯಾಗಿಯೇ ಉಳಿದಿದೆ ಅನ್ನಿಸುತ್ತಿಲ್ಲವೇ? ಕಲಿತ ಹೆಣ್ಣು ಮಕ್ಕಳು ತಮ್ಮ ನೆಯಲ್ಲಿ ಈಗ ಮಕ್ಕಳಿಗೆ ಕಲಿಸುತ್ತಾರೆಯೇ? ಬಾಲವಾಡಿ, ಅಂಗನವಾಡಿ, ಕಿಂಡರ್ ಗಾರ್ಡನ್, ಮನೆ ಪಾಠ, ಟ್ಯೂಷನ್, ವ್ಯಕ್ತಿತ್ವ ವಿಕಸನ ಹೀಗೆ ಏನೇನೋ ತೆರೆದುಕೊಂಡಿವೆಯಲ್ಲಾ ಅವುಗಳಿಗೆ ಮೊರೆಹೋಗಿ ನಮ್ಮ ಹೆಣ್ಣು ಮಕ್ಕಳು ಜವಾಬ್ದಾರಿ ನಿಭಾಯಿಸುತ್ತಿಲ್ಲ ಅನ್ನಿಸುತ್ತಿಲ್ಲವೇ?

ಇಷ್ಟಕ್ಕೂ ಓದು ಬರಹದ ಅನಿವಾರ್ಯತೆಗೆ ಒಳಗಾಗಿರುವವರು ಯಾರು? ಕುರಿ ಮೇಯಿಸುವ ಕರಿಯ, ಕೂಲಿ ಮಾಡುವ ಬಸ್ಯ, ಈರವ್ವ, ಹೊಲ ಉಳುವ ಅಣ್ಣಪ್ಪ ಇಂಥವರೇ ಈ ದೇಶದಲ್ಲಿ ಶೇ.70 ಮಂದಿಯಿದ್ದಾರೆ. ಅವರಿಗೆ ಶಾಲೆ, ಮೇಸ್ಟ್ರು, ಪುಸ್ತಕ ಹೇಗೆ ಗೊತ್ತಿರಬೇಕು? ಊರಿಗೆ ಶಾಲೆ ಬೇಕು, ಕುಡಿಯಲು ನೀರು ಬೇಕು, ರಸ್ತೆ, ವಿದ್ಯುತ್ ವ್ಯವಸ್ಥೆ ಬೇಕೇ ಬೇಕೆಂದು ಹಕ್ಕಿನಿಂದ ಕೇಳುವವರು ಎಷ್ಟು ಮಂದಿಯಿದ್ದಾರೆ ಈ ದೇಶದಲ್ಲಿ? ಅವರು ಕೇಳುವುದಿಲ್ಲ, ಆದರೆ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎನ್ನುವ ಕಾಳಜಿಯಿದ್ದವರು ಅವರ ಪ್ರತಿನಿಧಿಗಳಾಗಿ ಆರಿಸಿಹೋಗಿದ್ದರೆ ಅವರಾದರೂ ಮಾಡಬೇಕಿತ್ತಲ್ಲಾ? ಹಾಗಾದರೆ ಆರು ದಶಕಗಳಲ್ಲಿ ಅವರು ಆರಿಸಿಕಳುಹಿಸಿದವರು ಏನು ಮಾಡಿದರು? ಅವರೇ ಅಲ್ಲವೇ ಮತ್ತೆ ನಾಳೆಯೂ ಆಯ್ಕೆಯಾಗಲು ತುದಿಗಾಲಲ್ಲಿ ನಿಂತವರು ಅಥವಾ ಅವರ ಮಗ, ಮಗಳು, ಅಳಿಯ, ರಕ್ತ ಸಂಬಂಧಿ, ಇಲ್ಲವೇ ಅವರ ಜಾತಿಯವರು, ಧರ್ಮದವರು.

ಬಯಲು ಶೌಚಾಲಯ ನಿರ್ಮೂಲನೆಗೆ ಶೌಚಾಲಯ ನಿರ್ಮಿಸಲು ಮನಸ್ಸು ಮಾಡದವರು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ adivasi-militant-women-maoist-naxalite-kishenji-kishanji1ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಾರಲ್ಲಾ ಅವರು ಸಾಮಾನ್ಯರೇ? ಅವರನ್ನು ಪ್ರಶ್ನೆ ಮಾಡುವ ಸಾಮರ್ಥ್ಯವಾದರೂ ಅಲ್ಲಿನ ಜನರಿಗಿದೆಯೇ? ಹಾಗೊಂದು ವೇಳೆ ಪ್ರಶ್ನೆ ಮಾಡಿದವರನ್ನು ಸುಮ್ಮನೆ ಬಿಡುವರೇ? ಪಡಿತರ ಅಂಗಡಿಗಳಿಲ್ಲದಿದ್ದರೂ ಸಾರಾಯಿ ಅಂಗಡಿಗಳಿವೆಯಲ್ಲವೇ? ಇದನ್ನು ಯಾಕೆಂದು ಕೇಳುತ್ತಾರೆಯೇ?

ಕಾಟ್ಜು ಅವರು ಮತಚಲಾಯಿಸುವ ಶೇ.90 ಮಂದಿಯಲ್ಲಿ ತಾವೂ ಒಬ್ಬರಾಗಲು ಬಯಸುವುದಿಲ್ಲವೆಂದಿದ್ದಾರೆ. ಅವರು ಅವರಲ್ಲಿ ಒಬ್ಬರಾಗಬಾರದು ನಿಜ. ಆದರೆ ಅಷ್ಟೂ ಮಂದಿಯೂ ಕುರಿಮಂದೆಯೆನ್ನಲಾಗದು. ಬಹುಪಾಲು ಎನ್ನುವುದನ್ನು ಒಪ್ಪುವುದು ಅಪರಾಧವಲ್ಲ. ಚುನಾವಣೆಯಲ್ಲಿ ಕೆಲಸ ಮಾಡುವುದೆಂದರೆ ಕೂಲಿ ಮಾಡಿದಂತೆ. ನಿರ್ದಿಷ್ಟ ಕೆಲಸಕ್ಕೆ ನಿರ್ದಿಷ್ಟ ಸಂಬಳ. ಐದುವರ್ಷಕ್ಕೊಮ್ಮೆ ಬರುವ ಇಂಥ ದಿನಗಳನ್ನು ಕಾತುರದಿಂದ ಕಾಯುವವರಿರುತ್ತಾರೆ. ಅವರಿಗೆ ಈ ಅವಧಿ ಸುಗ್ಗಿಯಂತೆ.

ಈ ಎಲ್ಲಾ ಅಂಶಗಳನ್ನು ಅಂಗೈಯ್ಯಲ್ಲಿಟ್ಟುಕೊಂಡು ವಿಶ್ಲೇಷಿಸಿದರೆ ಮಾರ್ಕಂಡೇಯ ಕಾಟ್ಜು ಹೊರಹಾಕಿರುವ ಅಸಮಾಧಾನ ಸರಿಯಾದುದೇ, ಆದರೆ ಅದಕ್ಕೆ ಹೊಣೆ ಯಾರು ಎನ್ನುವುದು ಪ್ರಶ್ನೆಯಾಗಿ ಉಳಿದುಬಿಡುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಶಾಸಕಾಂಗ ತನಗೆ ತಾನೇ ನೀತಿಸಂಹಿತೆ ಹಾಕಿಕೊಳ್ಳಬೇಕು. ವಿಧಾನ ಸೌಧ ಪ್ರವೇಶಿಸುವವರು ಹೇಗಿರಬೇಕೆಂದು ಮಾನದಂಡವೇ ಇಲ್ಲದಿದ್ದರೆ ಮತಹಾಕುವ ಮಂದಿ ಅನಿವಾರ್ಯವಾಗಿ ಅವರೊಳಗೇ ಆಯ್ಕೆ ಮಾಡಬೇಕಾಗುತ್ತದೆ. ಅಭ್ಯರ್ಥಿಗಳಾಗುವವರಿಗೆ ಸರಿಯಾದ ಮಾನದಂಡ ಫಿಕ್ಸ್ ಆಗಬೇಕು. ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವೇ?vote ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎನ್ನುವುದನ್ನು ಮತ್ತಷ್ಟು ವಿವರವಾಗಿ ಚರ್ಚಿಸಿ ಈಗ ಇರುವ ವ್ಯಾಖ್ಯಾನವನ್ನು ಮರುಪರಿಶೀಲಿಸಿದರೆ ಶೇ.50 ರಷ್ಟು ತಿಳಿಯಾಗುತ್ತದೆ. ಕ್ರಿಮಿನಲ್ ಎನ್ನುವುದು ಕಾರ್ಯತ:, ಆದರೆ ಮಾನಸಿಕವಾಗಿ ಕ್ರಿಮಿನಲ್ ಆಗಿರುವುದು ತುಂಬಾ ಅಪಾಯಕಾರಿ. ಆದ್ದರಿಂದ ಕಾಟ್ಜು ಅವರ ಹೇಳಿಕೆ ಹೊಸ ಸಂಚಲನ ಮೂಡಿಸಿದೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ನಿರ್ಮೂಲನೆ ಕನಸಿನ ಮಾತು ಎಂದಿದ್ದಾರೆ, ಅಲ್ಲಗಳೆಯುವಂತಿಲ್ಲ. ಒಬ್ಬ ಗಾಂಧಿಯ ನಂತರ ಹಲವು ಮಂದಿಯನ್ನು ಗಾಂಧಿ ಹೆಸರಿನಿಂದ ಗುರುತಿಸುವುದು ಸಾಧ್ಯವಾಯಿತೇ ಹೊರತು ಅವರಲ್ಲಿ ಗಾಂಧಿಯನ್ನು ಕಾಣಲಾಗಲಿಲ್ಲ. ಹಾಗೆಯೇ ಒಬ್ಬ ಅಣ್ಣಾ ಇಡೀ ದೇಶದ ಕಣ್ಣಾಗಲಾರ, ಧ್ವನಿಯಾಗಬಹುದು. ಆ ಧ್ವನಿಗೆ ಕಿವಿಯಾಗುವವರು, ಕೇಳಿದ್ದನ್ನು ಪ್ರತಿಧ್ವನಿಸುವವರು ಬೇಕಾಗಿದ್ದಾರೆ.

ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಲ್ಲವೇ?


– ಚಿದಂಬರ ಬೈಕಂಪಾಡಿ


 

ರಾಜಕಾರಣದಲ್ಲಿ ಮಹಿಳೆಯ ಪಾತ್ರ ಇರಬೇಕೇ?, ಇರಬೇಕಾದರೆ ಎಷ್ಟರ ಪ್ರಮಾಣದಲ್ಲಿರಬೇಕು?, ಮನೆ, ಕುಟುಂಬ, ಪತಿ, ಮಕ್ಕಳ ಯೋಗಕ್ಷೇಮ ನೋಡಿಕೊಂಡು ಸಂಸಾರ ಮುನ್ನಡೆಸುವುದಕ್ಕೇ ಮಹಿಳೆ ಸೀಮಿತವಾಗಬೇಕೇ? ಎನ್ನುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿವೆ. ಇಂಥ ಚರ್ಚೆಗಳಿಂದ ಸಾಮಾಜಿಕವಾಗಿ ಮಹಿಳೆಯ ಸ್ಥಾನ ಮಾನ ನಿರ್ಧಾರವಾಗುತ್ತದೆ ಎಂದೇನೂ ಭಾವಿಸಬೇಕಾಗಿಲ್ಲ. ಅಕಾಡೆಮಿಕ್ ಆಗಿ ನಡೆಯುವಂಥ ಚರ್ಚೆಗಳು, ವಿಚಾರ ಸಂಕಿರಣಗಳು ನೀಡಿರುವ ಅಭಿಪ್ರಾಯಗಳು ಅಕಾಡೆಮಿಕ್ ವ್ಯಾಪ್ತಿಗಷ್ಟೇ ಸೀಮಿತವಾಗಿವೆ ಹೊರತು ಅವು ಕಾರ್ಯರೂಪಕ್ಕೆ ಬಂದಿಲ್ಲ.

ಪುರುಷ ಪ್ರಧಾನ ಸಮಾಜ ಮಹಿಳೆಯನ್ನು ತನಗೆ ಸರಿಸಮಾನವಾಗಿ ಗುರುತಿಸಲು ಬಯಸುವುದಿಲ್ಲ ಎನ್ನುವ ಆರೋಪವನ್ನು ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ. ಮಹಿಳೆಯನ್ನು ಶೋಷಣೆ ಮಾಡುತ್ತಲೇ ಪುರುಷ ಪ್ರಧಾನ ಸಮಾಜ ಬಂದಿದೆ ಎನ್ನುವುದನ್ನು ನಿರಾಕರಿಸುವಂತೆಯೂ ಇಲ್ಲ. ಆದರೆ ಈಕ್ಷಣದಲ್ಲೂ ಮಹಿಳೆ ರಾಜಕೀಯವಾಗಿ ತನಗೆ ಸಿಗಬೇಕಾದ ಸ್ಥಾನಮಾನ, ಹಕ್ಕನ್ನು ಪಡೆಯುವುದಕ್ಕೆ ಮನಸ್ಸು ಮಾಡಿಲ್ಲ. ಇದು ಆಕೆಯ ದೌರ್ಬಲ್ಯವೆಂದು ಸುಲಭವಾಗಿ ಹೇಳಿಬಿಡಬಹುದು, ಆದರೆ ವಾಸ್ತವ ಬೇರೆಯೇ ಇದೆ.

ಕರ್ನಾಟಕದ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಿವೆ? ಎನ್ನುವ ಪ್ರಶ್ನೆಗೆ ಈಗ ಉತ್ತರವಿಲ್ಲ, women-gp-membersಮುಂದಿನ ಚುನಾವಣೆ ಕಾಲಕ್ಕೆ ಉತ್ತರ ಸಿಗಬಹುದೇನೋ?. ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ ನೀಡುವ ವಚನ ಕೊಡುತ್ತವೆ. ಆದರೆ ಮಹಿಳೆಯನ್ನು ಹೊರತು ಪಡಿಸಿ ಎನ್ನುವುದಿಲ್ಲ, ಬದಲಾಗಿ ಮಹಿಳೆಯನ್ನೂ ಗಮನದಲ್ಲಿಟ್ಟುಕೊಂಡೇ ವ್ಯಾಖ್ಯಾನ ನೀಡುತ್ತವೆ. ಯಾಕೆಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ ಎನ್ನುವುದು ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಅವರೂ ಚುನಾವಣೆಯ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎನ್ನುವ ಅರಿವಿದೆ.

ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಒಟ್ಟು ಸುಮಾರು 4.18 ಕೋಟಿ ಮತದಾರರಿದ್ದು ಇವರಲ್ಲಿ 2.13 ಕೋಟಿ ಪುರುಷರು ಹಾಗೂ 2.4 ಕೋಟಿ ಮಹಿಳೆಯರು ಎನ್ನುವ ಮಾಹಿತಿ. ಮತದಾರರ ಬಲಾಬಲದ ಆಧಾರವಾಗಿಟ್ಟುಕೊಂಡರೆ ಶೇ.50 ರಷ್ಟು ಸ್ಥಾನಗಳನ್ನು ರಾಜಕೀಯ ಪಕ್ಷಗಳು ಮಹಿಳೆಯರಿಗೆ ಕೊಡಲೇ ಬೇಕು. ಹಿಂದೆಯೂ ಕೊಟ್ಟಿಲ್ಲ, ಈಗ ಕೊಡುವುದೂ ಇಲ್ಲ, ಆದರೆ ಮುಂದೆ ಕೊಡುವ ಅನಿವಾರ್ಯತೆ ಬರಬಹುದು.

ಹಾಗೆಯೇ ರಾಜ್ಯದ ರಾಜಕೀಯದ ಚಿತ್ರಣವನ್ನು ಸ್ಥೂಲವಾಗಿ ಗಮನಿಸಿದರೆ 224 ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಮಹಿಳೆಯರೇ ಪ್ರಬಲರು ಹಾಗೂ ಅವರೇ ನಿರ್ಣಾಯಕರು. ಕನಿಷ್ಠ 20 ಕ್ಷೇತ್ರಗಳಲ್ಲಿ ಮಹಿಳೆಯರೇ ಗೆಲ್ಲುವುದು ನಿಶ್ಚಿತ. ಇಂಥ ಪ್ರಬಲ ಸ್ತ್ರೀಶಕ್ತಿಯನ್ನು ಇಷ್ಟು ಕಾಲ ರಾಜಕೀಯದಲ್ಲಿ ಪುರುಷರು ಹೇಗೆ ನಿಭಾಯಿಸುತ್ತಾ ಬಂದಿದ್ದಾರೆ ಎನ್ನುವುದು ಅವರ ಚಾಣಾಕ್ಷತೆಗೆ ಸಾಕ್ಷಿ. ಆದರೆ ಇನ್ನು ಮುಂದೆ ಇಂಥ ಚಾಣಾಕ್ಷತೆಗೆ ಅವಕಾಶ ಕಡಿಮೆ. ಯಾಕೆಂದರೆ ಈಗ ಮಹಿಳೆಯರೂ ತಮ್ಮ ಹಕ್ಕು ಏನೆಂಬುದನ್ನು ನಿಧಾನವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಂದಿರಾ ಗಾಂಧಿ ಎಂದು ಹಣ್ಣು ಹಣ್ಣು ಮುದುಕಿ ಹೇಳಿಬಿಡಬಹುದು. ವಾಸ್ತವವೆಂದರೆ ಮತ್ತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಮಹಿಳೆಯರು ಚಿರಋಣಿಯಾಗಿರಲೇಬೇಕು. ರಾಮಕೃಷ್ಣ ಹೆಗಡೆ, ಅಬ್ದುಲ್ ನಜೀರ್ ಸಾಬ್, ಎಂ.ಪಿ.ಪ್ರಕಾಶ್ ಕರ್ನಾಟಕದ ಮಟ್ಟಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಮಹಿಳೆಯರ ಸಕ್ರಿಯ ರಾಜಕಾರಣಕ್ಕೆ ಕಾರಣೀಕರ್ತರು. ರಾಜೀವ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೆಚ್ಚು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಮನಸ್ಸು ಮಾಡಿದ್ದರಿಂದ ಮಹಿಳೆ ಕೂಡಾ ರಾಜಕೀಯದಲ್ಲಿ ತನ್ನ ಛಾಪು ಮೂಡಿಸುವ ಹಂತಕ್ಕೆ ಬಂದಿದ್ದಾಳೆ.

ಇವೆಲ್ಲವೂ ಹೊಸ ವಿಚಾರಗಳೇನಲ್ಲ. ರಾಜಕೀಯ ಪಕ್ಷಗಳು ಮಹಿಳೆಯರ ಪ್ರಾಬಲ್ಯವನ್ನು ಅರಿತಿದ್ದರೂ ಆಕೆಯನ್ನು ಬದಿಗೆ ಸರಿಸುವಲ್ಲಿ ತಮ್ಮ ಸಾಮರ್ಥ್ಯ ಮೆರೆದು ಬಚಾವ್ ಆಗಿದ್ದಾರೆ ಎನ್ನದೇ ವಿಧಿಯಿಲ್ಲ. ಈಗ ಆಕೆಗೂ ಅವಕಾಶ ಸಿಗುವಂಥ ಕಾಲ ಕೂಡಿ ಬಂದಿದೆ ಎನ್ನಿಸುತ್ತಿದೆ. shobha-yeddyurappaದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸೈದ್ಧಾಂತಿಕವಾಗಿ ಮಹಿಳೆಗೆ ಹೆಚ್ಚು ಗೌರವ ಕೊಡುವುದನ್ನು ಉಲ್ಲೇಖಿಸುತ್ತದೆ, ನಿಜ. ಆದರೆ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದರೂ ಶೋಭಾ ಕರಂದ್ಲಾಜೆ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಮಹಿಳೆಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಅಧಿಕಾರ ನಡೆಸಿದಂಥ ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲೂ ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಸಚಿವರಾಗಿದ್ದರು. ಯಾಕೆ ಮಹಿಳೆಯರು ಹಕ್ಕೊತ್ತಾಯ ಮಾಡಲಿಲ್ಲ ಎನ್ನುವುದು ಕೇವಲ ಪ್ರಶ್ನೆಯಲ್ಲ ಆಕೆ ಅದೆಂಥ ಸಹನಶೀಲೆ ಎನ್ನುವ ಅಚ್ಚರಿ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಪರೂಪಕ್ಕೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನಿಸುತ್ತಿರುವುದು ಕಾಂಗ್ರೆಸ್ ನಾಯಕರು 100 ಮಂದಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆಕೆಯ ಕೈಗಿತ್ತಾಗ ಅದನ್ನು ನೋಡಿ ಕೆಂಡಾಮಂಡಲವಾಗಿರುವುದಕ್ಕೆ. ಸೋನಿಯಾ ಗಾಂಧಿ ಅವರನ್ನು ರಾಜಕೀಯವಾಗಿ ನೋಡಿ ಈ ದೇಶದ ಯಾವ ಹೆಣ್ಣು ಮಗಳೂ ಆಕೆಯನ್ನು ಬೆಂಬಲಿಸಬೇಕಾಗಿಲ್ಲ, ಬದಲಾಗಿ ಅವರು ಎತ್ತಿದ ಮೂಲಭೂತ ಪ್ರಶ್ನೆಯನ್ನು ಗಮನಿಸಬೇಕು.

ಯಾಕೆ ಕರ್ನಾಟಕದಲ್ಲಿ ಚುನಾವಣೆಗೆ ಸ್ಪರ್ಧಿಸುವ ಹೆಣ್ಣು ಮಕ್ಕಳಿಲ್ಲವೇ? ಎನ್ನುವ ಸೋನಿಯಾ ತಮ್ಮ ಪಕ್ಷದ ರಾಜ್ಯದ ಮುಖಂಡರಿಗೆ ಕೇಳಿದ ಪ್ರಶ್ನೆಯನ್ನು ಇಡೀ ದೇಶದ ರಾಜಕೀಯ ಪಕ್ಷಗಳ ನಿರ್ಣಾಯಕ ನಾಯಕರನ್ನು ಮಹಿಳೆಯರು ಕೇಳುವುದೇ ಹೆಚ್ಚು ಸೂಕ್ತ. ಖಂಡಿತಕ್ಕೂ ಕರ್ನಾಟಕದ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರಿಂದ ಇಂಥ ಪ್ರಶ್ನೆಯನ್ನು ನಿರೀಕ್ಷೆ ಮಾಡಿರಲು ಸಾಧ್ಯವಿಲ್ಲ. ಯಾಕೆಂದರೆ ಸೋನಿಯಾ ಗಾಂಧಿಯರಿಗೆ ಸಿಗುವ ಫೀಡ್ ಬ್ಯಾಕ್ ಅಷ್ಟೊಂದು ಡೀಪ್ ಥಿಂಕಿಂಗ್‌ಗಳಲ್ಲ. ಆ ಸಂದರ್ಭಕ್ಕೆ, ತಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಫೀಡ್ ಮಾಡುವ ಜನರಿದ್ದಾರೆ, ಅವರ ಸುತ್ತಲೂ ಇರುವವರು ಥಿಂಕ್‌ಟ್ಯಾಂಕ್‌ಗಳಲ್ಲ, ಸೋನಿಯಾ ಅವರಿಗೂ ಇಲ್ಲಿಯ ತನಕ ಅಂಥ ಮೇಧಾವಿಗಳು ತನ್ನ ಇಕ್ಕೆಲಗಳಲ್ಲಿ ಇರಬೇಕೆನಿಸಿರಲಿಲ್ಲ. ಆದರೆ ಈಗ ಅವರೂ ರಾಜಕೀಯದಲ್ಲಿ ಪಕ್ವವಾಗುತ್ತಿದ್ದಾರೆ.

ಒಂದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಕ್ಷೇತ್ರದಿಂದ ಮಹಿಳೆಯರು ಸ್ಪರ್ಧಿಸಲಿ, ಅಂದರೆ ಜಿಲ್ಲೆಗೆ ಒಬ್ಬರು ಮಹಿಳಾ ಅಭ್ಯರ್ಥಿಗೆ ಸ್ಥಾನ ಕಲ್ಪಿಸಬೇಕು, ಪರಿಷ್ಕರಿಸಿದ ಪಟ್ಟಿಯನ್ನು ತನ್ನಿ ಎಂದು ಹೇಳಿ ಸಭೆಯನ್ನು ಬರ್ಖಾಸ್ತು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ್ದ ಮೊದಲ ಕಂತಿನ 100 ಜನ ಅಭ್ಯರ್ಥಿಗಳ ಪಟ್ಟಿಯಲ್ಲಿ ತೇರದಾಳ ಕ್ಷೇತ್ರದಿಂದ ಚಿತ್ರ ನಟಿ ಉಮಾಶ್ರೀ ಅವರನ್ನು ಮಾತ್ರ ನಿರ್ಧರಿಸಿದ್ದರು, ಉಳಿದ 99 ಕ್ಷೇತ್ರಗಳೂ ಪುರುಷರೇ ವಶಪಡಿಸಿಕೊಂಡಿದ್ದರು.

ಈಗ ಸೋನಿಯಾ ಅವರ ಆಶಯದಂತೆ ಕಾಂಗ್ರೆಸ್ ನಾಯಕರು ಕನಿಷ್ಠ 28 ರಿಂದ 30 ವಿಧಾನಸಭಾ ಕ್ಷೇತ್ರಗಳಿಗೆ ಮಹಿಳೆಯರನ್ನು ಕಣಕ್ಕಿಳಿಸಬೇಕಾಗಿದೆ. karnataka_womenಖಂಡಿತಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಮಾಡಲು ಮಹಿಳೆಯರಿಗೆ ಕೊರತೆಯಿಲ್ಲ, ಸಂಪನ್ಮೂಲದ ಸಮಸ್ಯೆಯೂ ಇಲ್ಲ, ತಾವು ಕಣಕ್ಕಿಳಿಯುವುದಿಲ್ಲವೆಂದು ರಣಹೇಡಿ ಮಹಿಳೆಯರೂ ಯಾರೂ ಇಲ್ಲ. ನಾಯಕರನ್ನು ಕಾಡುತ್ತಿರುವ ಚಿಂತೆ ಸೋನಿಯಾ ಅವರ ಸೂಚನೆಯಂತೆ ಪಟ್ಟಿ ಪರಿಷ್ಕರಿಸಿ 29 ಸ್ಥಾನಗಳನ್ನು ಮಹಿಳೆಯರಿಗೆ ಬಿಟ್ಟುಕೊಟ್ಟರೆ ತಮ್ಮ ಬೆಂಬಲಿಗ ಪುರುಷರ ಕಾಟ ತಡೆದುಕೊಳ್ಳುವುದು ಹೇಗೆ? ಎನ್ನುವುದು. ತುಸು ಎಡವಟ್ಟಾದರೂ ತಮ್ಮ ವಿರುದ್ಧವೇ ಬಂಡಾಯವೆದ್ದರೆ ನಿಭಾಯಿಸುವುದು ಸುಲಭವಲ್ಲ ಎನ್ನುವ ಚಿಂತೆ. ಆದರೆ ಕಾಂಗ್ರೆಸ್ ನಾಯಕರು ಸಕಾರಣವಿಲ್ಲದೆ ತಮ್ಮ ಅಧಿನಾಯಕಿಯ ಸೂಚನೆಯನ್ನು ನಿರಾಕರಿಸುವಂತಿಲ್ಲ. ಕನಿಷ್ಠ 20 ಸ್ಥಾನಗಳನ್ನಾದರೂ ಮಹಿಳೆಯರಿಗೆ ತ್ಯಾಗ ಮಾಡಲೇಬೇಕು. ಆದರೆ ಅದು ತ್ಯಾಗವಲ್ಲ, ಮಹಿಳೆಯರ ಹಕ್ಕು.

ಈ ಹಕ್ಕನ್ನು ಪ್ರತಿಯೊಂದು ರಾಜಕೀಯ ಪಕ್ಷವೂ ಮಹಿಳೆಯರಿಗೆ ಕೊಡಲೇ ಬೇಕಾದ ಅನಿವಾರ್ಯತೆಯನ್ನು ಸೋನಿಯಾ ಗಾಂಧಿ ತಂದಿಟ್ಟಿದ್ದಾರೆ. ರಾಜಕೀಯವಾಗಿ ಇಂದಿರಾ ಗಾಂಧಿ ಮಹಿಳೆಯರನ್ನು ಬಳಸಿಕೊಳ್ಳುವ ಚಾಕಚಕ್ಯತೆಯನ್ನು ನಂತರದ ನಾಯಕರು ಮುಂದುವರಿಸಲಿಲ್ಲ. ಅನಕ್ಷರಸ್ಥೆಗೂ ಆ ಕಾಲದಲ್ಲಿ ಇಂದಿರಮ್ಮ ಯಾರೆಂದು ಗೊತ್ತಿತ್ತು. Gandhisonia05052007[2]ಮಹಿಳೆಯರ ಜನಮಾನಸದಲ್ಲಿ ಅಷ್ಟೊಂದು ಗಾಢ ಪ್ರಭಾವವನ್ನು ಇಂದಿರಾ ಗಾಂಧಿ ಬೀರಿದ್ದರು. ಈಗ ಸೋನಿಯಾ ಉರುಳಿಸಿರುವ ರಾಜಕೀಯ ದಾಳ ಮಹಿಳೆಯರ ಸ್ವಾಭಿಮಾನವನ್ನು ಜಾಗೃತಗೊಳಿಸಿದೆ, ಅವರ ಸಾಮರ್ಥ್ಯವನ್ನು ಗುರುತಿಸುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಂತಾಗಿದೆ. ಸೋನಿಯಾ ಗಾಂಧಿ ಅವರ ಈ ಹೆಜ್ಜೆ ರಾಜಕೀಯದಲ್ಲಿ ಮಹತ್ತರ. ಹಾಗೆಯೇ ಮಹಿಳೆಯರ ಶಕ್ತಿ ಪ್ರದರ್ಶನಕ್ಕೆ ಉಳಿದ ರಾಜಕೀಯ ಪಕ್ಷಗಳೂ ವೇದಿಕೆ ಕಲ್ಪಿಸಿಕೊಡುವಂಥ ಅನಿವಾರ್ಯತೆಗೆ ಈಡಾಗಿವೆ. ಸಾಮಾಜಿಕ ನ್ಯಾಯ ಮಹಿಳೆಯನ್ನು ಭಾಷಣದಲ್ಲಿ ಗುರುತಿಸಿ ಅಲ್ಲ, ಕಾರ್ಯದಲ್ಲೂ ಎನ್ನುವುದು ನೀತಿಪಾಠ.

ರಾಜಕಾರಣದಲ್ಲಿ ನಿಷ್ಠೆ ಮತ್ತು ಬದ್ಧತೆ ಶಾಶ್ವತವೇ?


– ಚಿದಂಬರ ಬೈಕಂಪಾಡಿ


 

ರಾಜಕೀಯದಲ್ಲಿ ಬದ್ಧತೆ ಮತ್ತು ನಿಷ್ಠೆ ಅತ್ಯಂತ ಹೆಚ್ಚು ಮಾನ್ಯವಾಗುವಂಥ ಮೌಲ್ಯಗಳು. ಬದ್ಧತೆ ಮತ್ತು ನಿಷ್ಠೆ ತನ್ನ ನಾಯಕರಿಗೆ, ಸಮೂಹಕ್ಕೆ ಮತ್ತು ಪಕ್ಷಕ್ಕೆ. ಇದು ಸರಳ ವ್ಯಾಖ್ಯಾನ. ಪ್ರಸುತ ರಾಜಕೀಯ ಸ್ಥಿತಿಯಲ್ಲಿ ಅಥವಾ ಈಗಿನ ಬದಲಾಗಿರುವ ವಾತಾವರಣದಲ್ಲಿ ಬದ್ಧತೆ ಮತ್ತು ನಿಷ್ಠೆಯನ್ನು ಕನ್ನಡಕ ಹಾಕಿಕೊಂಡು ಹುಡುಕಬೇಕಾಗಿದೆ. ಮೌಲ್ಯಗಳು ಅಪಮೌಲ್ಯಗಳಾಗಿರುವುದೇ ಹೆಚ್ಚು. ಮೌಲ್ಯಾಧಾರಿತ ರಾಜಕಾರಣದ ಹೆಸರು ಹೇಳುವುದು ಕೂಡಾ ರಾಜಕಾರಣಿಗಳಿಗೆ ಗೊತ್ತಿಲ್ಲವೋ ಅಥವಾ ಹಾಗೆ ಹೇಳಿ ಅದನ್ನು ಯಾಕೆ ಅಪಮೌಲ್ಯ ಮಾಡುವುದು ಎನ್ನುವ ತಿಳುವಳಿಕೆಯ ಕಾರಣವೋ ಗೊತ್ತಿಲ್ಲ. ಅಂತೂ “ಮೌಲ್ಯಾಧಾರಿತ ರಾಜಕಾರಣ” ಎನ್ನುವ ಪದ ಬಳಕೆ ಕಡಿಮೆಯಾಗಿದೆ. ರಾಮಕೃಷ್ಣ ಹೆಗಡೆ ಅವರಿಗೆ ಈ ಪದ ಬಳಕೆ ಬಿಟ್ಟು ಭಾಷಣವೇ ಇರುತ್ತಿರಲಿಲ್ಲ. ಎಲ್ಲ ಸಂದರ್ಭದಲ್ಲೂ ಅವರ ಬಾಯಿಂದ ಒಂದೆರಡು ಸಲವಾದರೂ ‘ಮೌಲ್ಯಾಧಾರಿತ’Ramakrishna-Hegdeಎನ್ನುವ ಪದ ಬಳಕೆಯಾಗುತ್ತಿತ್ತು. ಹಾಗೆಯೇ ನಜೀರ್ ಸಾಬ್ ಅವರಿಗೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಪದ ಬಳಕೆ ಇಷ್ಟವಾಗಿತ್ತು. ಸಾರ್ವಜನಿಕ ಸಭೆಯಾಗಲೀ, ಅಧಿಕಾರಿಗಳ ಜೊತೆ ನಡೆಸುವ ಪ್ರಗತಿ ಪರಿಶೀಲನಾ ಸಭೆಯಾಗಲೀ ನಜೀರ್ ಸಾಬ್ ಅವರು ಸಹಜವಾಗಿಯೇ ಈ ಪದ ಬಳಕೆ ಮಾಡುತ್ತಿದ್ದರು. ಇದರ್ಥ ಅವರಿಗೆ ಆ ಪದಗಳ ಮೇಲಿದ್ದ ಬದ್ಧತೆ ಅದೆಷ್ಟು ಎನ್ನುವುದು ಅರಿವಾಗುತ್ತದೆ.

ಈ ಉದಾಹರಣೆಯನ್ನು ಯಾಕೆ ಕೊಡಬೇಕಾಯಿತೆಂದರೆ ಈಗಿನ ರಾಜಕಾರಣದಲ್ಲಿ ಬದ್ಧತೆ ಮತ್ತು ನಿಷ್ಠೆ ಎರಡೂ ಇಲ್ಲ ಎನ್ನುವುದು ಸರ್ವರಿಗೂ ಗೊತ್ತಿದೆ. ಹಾಗೆಯೇ ಇವು ಇರಬೇಕೇ? ಅವುಗಳ ಅನಿವಾರ್ಯತೆ ಇದೆಯೇ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಪಕ್ಷಾಂತರ ನಡೆಯುತ್ತಿರುವುದನ್ನು ಮತ್ತು ಆಪರೇಷನ್ ಕಮಲ, ಆಪರೇಷನ್ ಕಾಂಗ್ರೆಸ್ ಅಥವಾ ಆಪರೇಷನ್ ಜೆಡಿಎಸ್ ಹೀಗೆ ಈ ಆಪರೇಷನ್‌ಗಳು ಬದ್ಧತೆ ಮತ್ತು ನಿಷ್ಠೆ ಎರಡೂ ಅನಿವಾರ್ಯವಲ್ಲ ಎನ್ನುವುದಕ್ಕೆ ಸಾಕ್ಷಿ.

ರಾಜಕೀಯವಾಗಿ, ಸೈದ್ಧಾಂತಿಕವಾಗಿ ಕಡು ವಿರೋಧಿಯಾದ ಬಿಜೆಪಿ ಮತ್ತು ಜೆಡಿಎಸ್ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಡೆಸುತ್ತವೆ ಎನ್ನುವುದಾದರೆ ಸೈದ್ಧಾಂತಿಕ ಬದ್ಧತೆಯನ್ನು ಎಲ್ಲಿ ಹುಡುಕುವಿರಿ? ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೋದ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತೆ ಯುಪಿಎ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡುತ್ತವೆ, ಸಂಪುಟದಲ್ಲಿ ಭಾಗಿಯಾಗುತ್ತವೆ ಅಂತಾದರೆ ಸೈದ್ಧಾಂತಿಕ ಚೌಕಟ್ಟಿಗೆ ಎಲ್ಲಿದೆ ಬದ್ಧತೆ?

ಆದ್ದರಿಂದ ಬದ್ಧತೆ ಮತ್ತು ನಿಷ್ಠೆ ಎರಡೂ ಈಗಿನ ರಾಜಕಾರಣಕ್ಕೆ ಅನಿವಾರ್ಯವಲ್ಲ. ನಾಯಕರಿಗೂ ಬದ್ಧತೆ ಇರಬೇಕಾಗಿಲ್ಲ, ನಾಯಕರೆಂದು ಒಪ್ಪಿಕೊಂಡವರಿಗೂ ಬದ್ಧತೆ ಮತ್ತು ನಿಷ್ಠೆ ಇರಲೇಬೇಕೆನ್ನುವ ಕಟ್ಟುಪಾಡು ಬೇಕಾಗಿಲ್ಲ.

ಕರ್ನಾಟಕದ ರಾಜಕೀಯ ಸ್ಥಿತಿಯನ್ನೇ ಅವಲೋಕಿಸಿದರೆ ನಾಲ್ಕು ದಶಕಗಳ ಕಾಲ ಹಿಂದುತ್ವ, ಬಿಜೆಪಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ರಾಜಕೀಯದಲ್ಲಿ ನೆಲೆ, ಬೆಲೆ ಗಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದ ಮೇಲೆ ತಾವು ಯಾರಿಗೆ ನಿಷ್ಠೆ ತೋರಿಸುತ್ತಿದ್ದರೋ, ಯಾವ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠರಾಗಿದ್ದರೋ ಅವರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದರೇ? ತಮ್ಮನ್ನು ಪದಚ್ಯುತಗೊಳಿಸಿದ ಕಾರಣಕ್ಕೆ ಆಕ್ರೋಶಗೊಂಡು ಪರ್ಯಾಯ ಪಕ್ಷ ಸ್ಥಾಪಿಸಿದ ಯಡಿಯೂರಪ್ಪ ಪ್ರತಿಪಾದಿಸುವ ಮೌಲ್ಯಗಳು ಯಾವುವು? yeddyurappa_rssಸಂಘ ಪರಿವಾರ ಕಲಿಸಿದ ನೀತಿ ಪಾಠ, ಬಿಜೆಪಿ ಕಲಿಸಿದ ತತ್ವ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ಈಗ ಕೆಜೆಪಿ ಕಟ್ಟಿಲ್ಲ. ಅವರು ಈಗ ಯಾವ ಸಿದ್ಧಾಂತವನ್ನೂ ಪ್ರತಿಪಾದಿಸುತ್ತಿಲ್ಲ. ಅವರು ಆಡುತ್ತಿರುವ ಮಾತು, ಮಾಡುತ್ತಿರುವ ಭಾಷಣದ ತುಣುಕುಗಳನ್ನು ಅವಲೋಕಿಸಿದರೆ ನಿಮಗೆ ಅವರು ನಾಲ್ಕು ದಶಕಗಳಿಂದ ನಂಬಿಕೊಂಡು, ಪಾಲಿಸಿಕೊಂಡು ಬಂದ ತತ್ವ, ಸಿದ್ಧಾಂತ, ನಿಷ್ಠೆಯ ಲವಲೇಶವೂ ಗೋಚರಿಸುವುದಿಲ್ಲ. ನಿಜವಾಗಿಯೂ ಅವರು ಕಾಂಗ್ರೆಸ್ ಪಕ್ಷ ಅಥವಾ ಬಿಜೆಪಿಗಿಂತಲೂ ಹೆಚ್ಚು ಸೆಕ್ಯೂಲರ್ ಎನ್ನುವ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ, ಮಾತು, ನಡವಳಿಕೆ ಮೂಲಕ. ಯಾಕೆಂದರೆ ಅದು ಈಗ ಅವರಿಗೆ ಅನಿವಾರ್ಯ. ಅವರು ತೋರಿಸಿದ ಪಕ್ಷ ನಿಷ್ಠೆಯಾಗಲೀ, ಬದ್ಧತೆಯಾಗಲೀ ಈಗ ಅವರ ನೆರವಿಗೆ ಬಂದಿಲ್ಲ ಆ ಪಕ್ಷ ಮತ್ತು ನಾಯಕರಿಂದ. ಆದ್ದರಿಂದಲೇ ಈಗ ಅವರು ಜನರಿಗೆ ಬದ್ಧರಾಗಿ, ಜನರಿಗೆ ನಿಷ್ಠರಾಗಿ, ಅಭಿವೃದ್ಧಿ ಮಾಡುವ ಕನಸು ನನಸು ಮಾಡುವುದಕ್ಕಾಗಿ ಹೆಚ್ಚಾಗಿ ಈ ನಾಡನ್ನು ಕಲ್ಯಾಣ ಕರ್ನಾಟಕ ಮಾಡುವುದಕ್ಕಾಗಿ ಕೆಜೆಪಿ ಕಟ್ಟಿದ್ದಾರಂತೆ. ಇವರೊಂದಿಗೆ ಹೆಜ್ಜೆ ಹಾಕಿರುವ ವಿ.ಧನಂಜಯ ಕುಮಾರ್ ಕೂಡಾ ಕಟ್ಟಾ ಸಂಘ ಪರಿವಾರ, ಹಿಂದುತ್ವ ಪ್ರತಿಪಾದನೆ ಮಾಡಿಕೊಂಡೇ ರಾಜಕೀಯದಲ್ಲಿ ತಮ್ಮ ನಿರೀಕ್ಷೆಗೂ ಮೀರಿದ ಸ್ಥಾನ ಪಡೆದಿದ್ದರು. ಅಟಲ್, ಅಡ್ವಾಣಿ, ರಾಜನಾಥ್ ಸಿಂಗ್ ಅವರ ಕಣ್ಣಿಗೆ ಯಡಿಯೂರಪ್ಪ, ಧನಂಜಯ ಕುಮಾರ್ ಭವಿಷ್ಯದ ಬೆಳಕಾಗಿದ್ದವರು, ಅವರುಗಳ ಒಡನಾಟದಲ್ಲಿ ಬೆಳೆದವರು. ಅಂಥ ಬದ್ಧತೆ, ನಿಷ್ಠೆಯನ್ನೂ ತೊರೆಯುವುದು ಸಾಧ್ಯವಾಗುವುದು ರಾಜಕೀಯದಲ್ಲಿ ಮಾತ್ರ, ಅದರಲ್ಲೂ ಅಧಿಕಾರಕ್ಕಾಗಿ ಮಾತ್ರ.

ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಸುಷ್ಮಾ ಅವರಿಗೆ ತೋರಿಸಿದ ನಿಷ್ಠೆ, ಬಿಜೆಪಿಗೆ ವ್ಯಕ್ತಪಡಿಸಿದ್ದ ಬದ್ಧತೆಯನ್ನು ನಿರಾಕರಿಸಲು ಸಾಧ್ಯವೇ? ಬಳ್ಳಾರಿಯಲ್ಲಿ ಹೆಸರಿರದಿದ್ದ ಬಿಜೆಪಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದವರು ರೆಡ್ಡಿ ಬ್ರದರ್ಸ್. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಗಣಿನಾಡಿನಲ್ಲಿ ಕಮಲ ಕಲರವಕ್ಕೆ ಕಾರಣರು ಎನ್ನುವುದು ವಾಸ್ತವ ಸತ್ಯ. ಹೆತ್ತ ತಾಯಿಗಿಂತಲೂ ಹೆಚ್ಚು ನಿಷ್ಠೆ ತೋರಿಸುತ್ತಿದ್ದ ಶ್ರೀರಾಮುಲು, ಮಗನಿಗಿಂತೇನೂ ಕಡಿಮೆ ಪ್ರೀತಿ ಹರಿಸದ ಸುಷ್ಮಾ ಈ ಇಬ್ಬರಲ್ಲಿ ಯಾವ, ಬದ್ಧತೆ, ಯಾರಿಗೆ ಬದ್ಧತೆ, ಯಾವ ನಿಷ್ಠೆ, ಯಾರಿಗೆ ನಿಷ್ಠೆ ಹುಡುಕುತ್ತೀರಿ?

ಬದ್ಧತೆ ಮತ್ತು ನಿಷ್ಠೆ ಕಾಣೆಯಾಗುತ್ತಿರುವ ಹಿನ್ನೆಲೆಯನ್ನು ವಿವರಿಸಲು ಮಾತ್ರ ಕೆಲವೇ ಕೆಲವು ಹೆಸರುಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದೆ ಹೊರತು ಇವಿಷ್ಟೇ ಹೆಸರೆಂದು ಯಾರೂ ಭಾವಿಸಬೇಕಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮರುಕ್ಷಣದಿಂದಲೇ ಮಹಾತ್ಮಾ ಗಾಂಧಿ ಅವರಿಗೂ ಬದ್ಧತೆ ಮತ್ತು ನಿಷ್ಠೆ ನಿರಂತರವಾಗಿ ಉಳಿಯಲಾರವು ತನ್ನ ಒಡನಾಡಿಗಳಲ್ಲಿ ಎನ್ನುವ ಸುಳಿವು ಸಿಕ್ಕಿತ್ತು. ಆದ್ದರಿಂದಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ವೇದಿಕೆ ಮಾತ್ರ, ಅದರ ಕೆಲಸ ಮುಗಿಯಿತು, ಅದನ್ನು ವಿಸರ್ಜಿಸುವುದೇ ಸೂಕ್ತವೆಂದು ಹೆಳಿದ್ದರು. ಅಲ್ಲಿಂದಲೇ ಪಕ್ಷ ವಿಭಜನೆಯ ಆರಂಭ ಎನ್ನುವುದನ್ನು ಮರೆಯುವಂತಿಲ್ಲ.

ಆಗಲೇ ಹೊಸ ಪಕ್ಷ, ಅವರವರ ಬದ್ಧತೆ, ನಿಷ್ಠೆಗೆ ಅನುಗುಣವಾಗಿ ಸ್ಥಾಪನೆಯಾದವು, ಅವುಗಳಲ್ಲಿ ನಂಬಿಕೆಯುಳ್ಳವರು, ವಿಶ್ವಾಸವಿರುವವರು ಸೇರಿಕೊಂಡರು. ಆಡಳಿತ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್ ಹೀಗೆ ವಿಭಜನೆಯಾಗುತ್ತಾ 70ರ ದಶಕದಲ್ಲಿ ಮತ್ತಷ್ಟು ಹೊಸ ಹೊಸ ಪಕ್ಷಗಳು ಜನ್ಮ ತಳೆದವು.

ಕಾಂಗ್ರೆಸ್ ಪಕ್ಷದ ಮೇಲೆ, ಇಂದಿರಾ ಗಾಂಧಿ ಮೇಲೆ ದೇವರಾಜ ಅರಸು ಅವರಿಗಿದ್ದ ಬದ್ಧತೆ, Devaraj Arasನಿಷ್ಠೆಯನ್ನು ಪ್ರಶ್ನೆ ಮಾಡಲು ಸಾಧ್ಯವಿತ್ತೇ? ಆದರೆ ಅವರೂ ತಮ್ಮ ಹಾದಿ ಬದಲಿಸಿಕೊಂಡರು ಅಧಿಕಾರಕ್ಕಾಗಿ. ಆದ್ದರಿಂದ ಬದ್ಧತೆ, ನಿಷ್ಠೆ ನಾಪತ್ತೆಯಾಗುತ್ತಿರುವುದು ಈಗಷ್ಟೇ ಎನ್ನುವಂತಿಲ್ಲ, ಅದರ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ವೀರೇಂದ್ರ ಪಾಟೀಲ್ ಇಂದಿರಾ ವಿರುದ್ಧವೇ ಚಿಕ್ಕಮಗಳೂರಲ್ಲಿ ಸ್ಪರ್ಧಿಸಿದ್ದರು. ಮತ್ತೆ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಮೂಲಕವೇ ಮುಖ್ಯಮಂತ್ರಿಯಾದರು. ಹಾಗಾದರೆ ನಿಷ್ಠೆ, ಬದ್ಧತೆಗೆ ಯಾವ ವ್ಯಾಖ್ಯಾನ ಕೊಡುತ್ತೀರಿ.

ಎಸ್.ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಹೇಗೆ ಜರೆದಿದ್ದರು. ನರಸಿಂಹ ರಾವ್ ಅವರನ್ನು ಚೇಳು ಎಂದಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಎಲ್ಲವು ಕಳೆದುಹೋದ ಅಧ್ಯಾಯವೆಂದಿದ್ದರು.

ಹೀಗೆ ವಿಶ್ಲೇಷಿಸುತ್ತಾ ಹೋದರೆ ಬದ್ಧತೆ ಮತ್ತು ನಿಷ್ಠೆಯ ಪಲ್ಲಟಗಳ ಪರಾಕಾಷ್ಠೆ ಇನ್ನು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿಸಿದ ಮರುದಿನವೇ ತಾವು ಬದುಕಿನುದ್ದಕ್ಕೂ ಹೇಳುತ್ತಲೇ ಬಂದ ಸಿದ್ಧಾಂತ, ತೋರಿಸುತ್ತಾ ಬಂದ ನಿಷ್ಠೆ, ಬದ್ಧತೆಯನ್ನು ಬಿಟ್ಟು ಯಾರು ಯಾವ ಪಕ್ಷದ ಕದ ತಟ್ಟುತ್ತಾರೆಂದು ನೋಡುತ್ತಿರಿ. ಈ ಹಿಂದೆ ಎಂದೂ ಆಗದಿದ್ದಷ್ಟು ವಲಸೆ ನಡೆಯಲಿವೆ. ನಿಷ್ಠೆ, ಬದ್ಧತೆ ಅನಿವಾರ್ಯವಲ್ಲವೆಂದು ಸಾರಿ ಹೇಳಿರುವ ಯಡಿಯೂರಪ್ಪ ಟಿಕೆಟ್ ಸಿಗದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೊರೆದು ಬರುವವರಿಗೆ ಮಣೆ ಹಾಕಲಿದ್ದಾರೆ. ಆಗ ಟಿಕೆಟ್ ಕೊಟ್ಟರೆ ಯಡಿಯೂರಪ್ಪ ಅವರಿಗೆ ಬದ್ಧತೆ, ಅವರ ಕೆಜೆಪಿ ಪಕ್ಷಕ್ಕೆ ನಿಷ್ಠೆ. ಯಡಿಯೂರಪ್ಪ ಹೇಳುವ ಸಿದ್ಧಾಂತಕ್ಕೆ ಬದ್ಧರು ಮತ್ತು ನಿಷ್ಠರು. ಅಂತಿಮವಾಗಿ ಉಳಿದು ಬಿಡುವ ಪ್ರಶ್ನೆ ಇಲ್ಲೂ ಬದ್ಧತೆ, ನಿಷ್ಠೆ ಶಾಶ್ವತವೇ?