ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?

– ಆನಂದ ಪ್ರಸಾದ್

ನಮ್ಮ ದೇಶದಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರವನ್ನು ಪ್ರೇರೇಪಿಸಿದ ಬಲಪಂಥೀಯರಿಗೆ ಶಿಕ್ಷೆ ಆಗುವುದು ಕಂಡುಬರುವುದು ಬಹಳ ಕಡಿಮೆ. ಕಾನೂನು ಕೈಗೆತ್ತಿಕೊಂಡು ಸಶಸ್ತ್ರ ಹೋರಾಟದ ಹಾದಿ ಹಿಡಿದಿರುವ ನಕ್ಸಲರಿಗೆ ಹೆಚ್ಚಾಗಿ ಶಿಕ್ಷೆಯಾಗುತ್ತದೆ. ನ್ಯಾಯಾಲಯದಲ್ಲಿ ನಕ್ಸಲರು ಸಾಕ್ಷ್ಯಗಳಿಲ್ಲದೆ ಬಿಡುಗಡೆಯಾಗಬಹುದೆಂದು ಪೊಲೀಸರೇ ಎಷ್ಟೋ ನಕ್ಸಲ್ ನಾಯಕರನ್ನು ಯಾವುದೇ ವಿಚಾರಣೆಯಿಲ್ಲದೆ ನಕಲಿ ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕುತ್ತಾರೆ. ನಕ್ಸಲರು ಹಿಂಸೆಯ communal-clashಹಾದಿ ಹಿಡಿದಿರುವ ಕಾರಣ ಇದರ ಬಗ್ಗೆ ಜನರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದು ಅವರಿಗೆ ಕ್ಷಮಾದಾನ ನೀಡಬೇಕು, ನೀಡಬಾರದು ಎಂಬ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಕಾನೂನು ಎಲ್ಲರಿಗೂ ಒಂದೇ, ಅದರಲ್ಲಿ ಭೇದ ಇರಬಾರದು. ಇದೇ ರೀತಿ ಬಲಪಂಥೀಯ ಹಿಂಸಾಚಾರ ಪ್ರೇರೇಪಿಸಿದ ನಾಯಕರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ. ಹಾಗಾದಾಗ ಮಾತ್ರ ಧಾರ್ಮಿಕ ವಿಷಯಗಳನ್ನು ರಾಜಕೀಯ ಅಧಿಕಾರಸಾಧನೆಗಾಗಿ ದುರ್ಬಳಕೆ ಮಾಡಿ ದುರಾಡಳಿತ ನೀಡುವ ದುಷ್ಟರಿಗೆ ಪಾಠ ಕಲಿಸಿದಂತೆ ಆಗುತ್ತದೆ ಹಾಗೂ ಅಂಥವರು ಮತ್ತೆ ಮತ್ತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ವಿಷಯಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯ.

1992ರಲ್ಲಿ ಬಾಬ್ರಿ ಮಸೀದಿಯನ್ನು ನ್ಯಾಯಾಲಯದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂಬ ಆದೇಶದ ಹೊರತಾಗಿಯೂ ಬಲಪಂಥೀಯ ಹಿಂದುತ್ವವಾದಿಗಳು ಕರಸೇವೆಯ ನೆಪದಲ್ಲಿ ಉರುಳಿಸಿದರು.್ ಇದು ಹಾಡಹಗಲೇ ನಡೆದ ಬಲಪಂಥೀಯರು ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡ ಕೃತ್ಯವಾದರೂ ಈವರೆಗೂ ಈ ಕೇಸಿನಲ್ಲಿ ಸಂಬಂಧಪಟ್ಟ ಯಾರಿಗೂ ಶಿಕ್ಷೆ ಆಗಿಲ್ಲದಿರುವುದು ಏನನ್ನು ಸೂಚಿಸುತ್ತದೆ ಇದು ಸೂಚಿಸುವುದು ಏನೆಂದರೆ ಬಲಪಂಥೀಯರು ಕಾನೂನನ್ನು ಉಲ್ಲಂಘಿಸಿದರೆ ಅವರಿಗೆ ಕ್ಷಮಾದಾನ ಇದೆಯೆಂದು ಅಲ್ಲವೇ? ಬಲಪಂಥೀಯರ ಈ ದ್ವಂದ್ವ ನೀತಿಯನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾದ ಅಗತ್ಯ ಇದೆ. ಬಾಬ್ರಿ ಮಸೀದಿಯ ಜಾಗದಲ್ಲಿ ಹಿಂದೆ ರಾಮನ ದೇವಾಲಯ ಇತ್ತು, ಅದನ್ನು ಹಿಂದೆ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದರು ಎಂಬುದು ಬಲಪಂಥೀಯರ ವಾದ ಹಾಗೂ ಅಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬುದು ಅವರ ವಾದ. ಇದು ನಿಜವಾಗಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇರುವ ನಮ್ಮ ದೇಶದಲ್ಲಿ ಅದಕ್ಕೊಂದು ನಾಗರಿಕ ವಿಧಾನ ಇದೆ ಅಲ್ಲವೇ? ಅಂಥ ನಾಗರಿಕ ವಿಧಾನಗಳಲ್ಲಿ ಒಂದು ನ್ಯಾಯಾಲಯದ ಮೊರೆ ಹೋಗಿ ತೀರ್ಪು ಬರುವವರೆಗೂ ಕಾಯುವುದು. ಇಲ್ಲವಾದರೆ ಇದೇ ವಿಷಯವನ್ನು ಮುಖ್ಯ ಚುನಾವಣಾ ವಿಷಯವಾಗಿ ಎತ್ತಿಕೊಂಡು ಸ್ಪರ್ಧಿಸಿ ಮೂರನೇ ಎರಡು ಬಹುಮತವನ್ನು ಪಡೆದು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಿ ಅದನ್ನು ಅಗತ್ಯ ಮೂರನೇ ಎರಡು ಬಹುಮತದ ಮೂಲಕ ಪಾಸು ಮಾಡಿಸಿಕೊಂಡು ನಂತರ ಮುಂದುವರಿದಿದ್ದರೆ ಬಾಬ್ರಿ ಮಸೀದಿ ನಾಶದಿಂದ ದೇಶದಲ್ಲಿ ಉಂಟಾದ ಭೀಕರ ಗಲಭೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಬಲಪಂಥೀಯ ಹಿಂದುತ್ವವಾದಿಗಳು ದೇಶದ ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡು assam_violenceಮಹಾ ಹಿಂಸಾಚಾರಕ್ಕೆ ಕಾರಣರಾದುದು ಸ್ಪಷ್ಟ. ಈ ಸಂದರ್ಭದಲ್ಲಿ ನಡೆದ ಗಲಭೆಗಳಲ್ಲಿ 2000 ಸಾವಿರಕ್ಕೂ ಅಧಿಕ ಜನ ಸಾವಿಗೀಡಾದರು. ಇದರಿಂದ ದೇಶಕ್ಕೆ ಉಂಟಾದ ರಾಷ್ಟ್ರೀಯ ನಷ್ಟ 20,000 ಕೋಟಿ ರೂಪಾಯಿಗಳು ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತಿನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ 10,000 ಕೋಟಿ ರೂಪಾಯಿಗಳ ರಾಷ್ಟ್ರೀಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಯೆಲ್ಲಾ ಗಲಭೆಗಳು ಮತೀಯವಾದಿಗಳು ಅಧಿಕಾರ ಪಡೆಯಲು ನಡೆಸಿದ ಕಸರತ್ತಿನ ಫಲವಾಗಿ ಉಂಟಾಗಿವೆ. ಇದು ಬಲಪಂಥೀಯರ ದೇಶಭಕ್ತಿಯ ಒಂದು ಸ್ಯಾಂಪಲ್. ದೇಶಭಕ್ತಿಯ ಬಗ್ಗೆ ಬಹಳ ಬೊಬ್ಬೆ ಹಾಕುವ ಬಲಪಂಥೀಯರು ವಿವೇಕ ಹಾಗೂ ವಿವೇಚನೆಯಿಂದ ವರ್ತಿಸಿದ್ದಿದ್ದರೆ ಈ ಎಲ್ಲ ಗಲಭೆಗಳನ್ನು ತಡೆಯಬಹುದಿತ್ತು. 1992ರ ಮುಂಬೈ ಗಲಭೆಯಲ್ಲಿ ತನಿಖಾ ಆಯೋಗ ಪಾತ್ರವಿದೆ ಎಂದು ಸೂಚಿಸಿದ ಬಲಪಂಥೀಯರಿಗೂ ಯಾವುದೇ ಶಿಕ್ಷೆ ಆಗಿಲ್ಲ. ಇದರಿಂದಾಗಿ ನಮ್ಮ ದೇಶದ ನ್ಯಾಯನಿರ್ಣಯ ವ್ಯವಸ್ಥೆ ಹಾಗೂ ಅದನ್ನು ಜಾರಿಮಾಡಬೇಕಾದ ಆಡಳಿತ ವ್ಯವಸ್ಥೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪನಂಬಿಕೆ ಮೂಡುವುದರಲ್ಲಿ ಸಂಶಯವಿಲ್ಲ.

ದೇಶಕ್ಕೆ ಈ ಮಟ್ಟದ ಹಾನಿ ಮಾಡಿದವರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಬಾಬ್ರಿ ಮಸೀದಿಯ ನಾಶಕ್ಕೆ ಕಾರಣರಾದ ಮತೀಯವಾದಿಗಳು ಯಾರು, ಅವರು ಮಾಡಿದ ಜನರನ್ನು ಉದ್ರೇಕಿಸುವ ಭಾಷಣಗಳು, ವೀಡಿಯೊಗಳು ಇವುಗಳ ಆಧಾರದ ಮೇಲೆ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿದೆ, ಆದರೂ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂದರೆ ಅವರನ್ನು ಶಿಕ್ಷಿಸಲು ಆಡಳಿತ ಹಾಗೂ ನ್ಯಾಯಾಂಗ ವಿಫಲವಾಗಿದೆ ಎಂದಲ್ಲವೇ? ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಕಾನೂನು ಕೈಗೆತ್ತಿಕೊಳ್ಳುವ ಎಲ್ಲರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ.

ರಾಜಕಾರಣದ ಭ್ರಷ್ಟ ಸುಳಿಗಳ ನೋಟ


– ಚಿದಂಬರ ಬೈಕಂಪಾಡಿ


 

ಜಾಗತಿಕವಾಗಿ ಮಲೇಶಿಯಾಕ್ಕೆ ಭ್ರಷ್ಟಾಚಾರದಲ್ಲಿ ಅಗ್ರಪಟ್ಟ. ನಂತರದ ಸ್ಥಾನ ಮೆಕ್ಸಿಕೋ, ಕಡೆಯ ಸ್ಥಾನ ಜಪಾನ್ ಎನ್ನುವುದು ಅಧ್ಯಯನ ವರದಿಯ ತಿರುಳು. ಭ್ರಷ್ಟಾಚಾರ ವಿಶ್ವಮಾನ್ಯವಾಗಿದೆ. ಭಾರತದಲ್ಲಿ ರಾಜಕಾರಣದ ಮೂಲಕವೇ ಭ್ರಷ್ಟಾಚಾರ ಹುಟ್ಟಿಕೊಂಡಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಕ್ಷ ಮುನ್ನಡೆಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹ ಭ್ರಷ್ಟಾಚಾರದ ಮೂಲ. ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಅರಿವಿಗೆ ಬರುವ ಸಂಗತಿಯೆಂದರೆ 60 ರ ದಶಕದಲ್ಲಿ ರಾಜಕೀಯ ಪಕ್ಷಗಳಿಗೆ ಸಂಪನ್ಮೂಲ ಸಂಗ್ರಹಿಸುವ ಅನಿವಾರ್ಯತೆ ಇರಲಿಲ್ಲ. 70 ರ ದಶಕದಲ್ಲಿ ಇದರ ಉಗಮ. ಕಾರ್ಪೊರೇಟ್ ಸಂಸ್ಥೆ ತಾನಾಗಿಯೇ ಪಾರ್ಟಿ ಫಂಡ್‌ಗೆ ದೇಣಿಗೆ ನೀಡುವ ಸಂಪ್ರದಾಯ ಆರಂಭ ಮಾಡಿತು. ಅದಕ್ಕೆ ಪ್ರತಿಯಾಗಿ ಗುತ್ತಿಗೆ ಪಡೆಯುವುದಕ್ಕೆ ಪರ್ಸೆಂಟೇಜ್ ವ್ಯವಹಾರ. ಇದು ಯಾವ ಮಟ್ಟಕ್ಕೆ ಬೆಳೆಯಿತೆಂದರೆ ಈಗ ತಳಮಟ್ಟದ ಗ್ರಾಮಪಂಚಾಯತ್ ಗುತ್ತಿಗೆ ಪಡೆಯುವುದಕ್ಕೂ ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿದೆ. ಇದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ?

70 ರ ದಶಕದಲ್ಲಿ ಒಂದು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ 50 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗಿತ್ತು. ಅಷ್ಟೊಂದು ಸಂಪನ್ಮೂಲ ಹೊಂದಿಸಿಕೊಳ್ಳುವುದಕ್ಕೆ ಅಭ್ಯರ್ಥಿಗೆ ಅಸಾಧ್ಯವಾಗುತ್ತಿತ್ತು. ಈ ಕಾರಣಕ್ಕೆ ಪಕ್ಷದ ವತಿಯಿಂದ ಇಂತಿಷ್ಟು ಫಂಡ್ ಕೊಡುವ ಸಂಪ್ರದಾಯ ಬೆಳೆಯಿತು. ಆ ಕಾಲದಲ್ಲಿ ಗರಿಷ್ಠ ಒಂದು ಲೋಕಸಭಾ ಕ್ಷೇತ್ರದ ಸಿರಿವಂತ ಅಭ್ಯರ್ಥಿ 2 ಕೋಟಿ ರೂಪಾಯಿ ವೆಚ್ಚ ಮಾಡಿದ್ದು ದಾಖಲೆ, ಈಗ?

ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ಖರ್ಚು ಹುಬ್ಬೇರಿಸುವಂತೆ ಮಾಡುತ್ತದೆ. ಯಾವುದೇ ದೇಶ ಆರ್ಥಿಕವಾಗಿ ಬಲಿಷ್ಠವಾಗಿದ್ದರೂ ಭ್ರಷ್ಟವಾಗಿದ್ದರೆ ಆ ದೇಶ ಬಲಿಷ್ಠವಲ್ಲ ಎನ್ನುವುದು ಆರ್ಥಿಕ ಥಿಯರಿ. ಆದರಿಂದಲೇ ಭಾರತ ಶ್ರೀಮಂತಿಕೆಯಿದ್ದರೂ ಬಡ ದೇಶ.

ಭ್ರಷ್ಟಾಚಾರವನ್ನು ಹುಟ್ಟು ಹಾಕಿದ ದೇಣಿಗೆ ಸಂಸ್ಕೃತಿ ಈಗ ರಾಜಕಾರಣವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದೆ. ಹಿಂದೆ ಆಡಳಿತ ಪಕ್ಷಗಳಿಗೆ ಮಾತ್ರ ಸಾಧ್ಯವಿದ್ದ ದೇಣಿಗೆ ಪಡೆಯುವ ಸಾಮರ್ಥ್ಯ ಈಗ ವಿರೋಧ ಪಕ್ಷಗಳಿಗೂ ಸಾಧ್ಯವಾಗಿದೆ. ಯಾಕೆಂದರೆ ತಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭರವಸೆಯಿಂದ. ಈಗಲೂ ಪಕ್ಷಗಳು ನಿಧಿ ಸಂಗ್ರಹಿಸುವ ಸಂಪ್ರದಾಯವಿದೆ. ಹಿಂದೆಯೂ ಬಿ-ಫಾರಂ ಪಡೆಯಲು ಅಭ್ಯರ್ಥಿಗಳು ಹಂತಹಂತವಾಗಿ ಹಣಕೊಡಬೇಕಾಗಿತ್ತು, ಈಗಲೂ ಅದು ಮುಂದುವರಿದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಕರ್ನಾಟಕದ ಮಟ್ಟಿಗೆ ರಾಜಕಾರಣವನ್ನು ಭ್ರಷ್ಟಾಚಾರ ಆವರಿಸಿಕೊಂಡುಬಿಟ್ಟಿದೆ. ರಾಜಕಾರಣದಲ್ಲಿ ಶುದ್ಧ ಹಸ್ತ ಎನ್ನುವ ಮಾತಿಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ವ್ಯಾಖ್ಯಾನಿಸುತ್ತಾರೆ. ಅತೀ ಭ್ರಷ್ಟ, ಇದ್ದವರಲ್ಲಿಯೇ ಕಡಿಮೆ ಭ್ರಷ್ಟ ಎನ್ನುವ ಮಟ್ಟಿಗೆ ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಭ್ರಷ್ಟಾಚಾರ ಮಾಡಿಯೂ ಜಾಣತನದಿಂದ ನಿಭಾಯಿಸುವವರಿದ್ದಾರೆ. ಭ್ರಷ್ಟಾಚಾರವನ್ನು ಅರಗಿಸಿಕೊಳ್ಳುವಂಥ ಸಾಮರ್ಥ್ಯವನ್ನು ಗಳಿಸಿದವರೂ ಇದ್ದಾರೆ. ಚುನಾವಣೆ ಕಾಲಘಟ್ಟದಲ್ಲಿ ಮಾತ್ರ ಕೇಳಿ ಬರುವ ಭ್ರಷ್ಟಾಚಾರದ ಆರೋಪಗಳಿಗೆ ಅಷ್ಟೊಂದು ಮಹತ್ವ ಕೊಡಬೇಕಾಗಿಲ್ಲ ಅಂದುಕೊಂಡರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರ ಬಗ್ಗೆ ಆರೋಪ ಬಂದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಮೇಲೆ ಅಬಕಾರಿ ಸಚಿವ ರೇಣುಕಾಚಾರ್ಯ ಮಾಡಿರುವ ಆರೋಪ ತಾಜಾ. ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಕಾಲದಲ್ಲಿ ತಾವು ಸದಾನಂದ ಗೌಡರ ಕೋರಿಕೆಯಂತೆ ಹಣಕೊಟ್ಟಿದ್ದೆ ಎಂದಿದ್ದಾರೆ. ತಮ್ಮಲ್ಲಿ ಹಣಕೊಟ್ಟಿರುವುದಕ್ಕೆ ದಾಖಲೆಗಳಿವೆ, ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಒಂದು ವೇಳೆ ದಾಖಲೆ ಇಟ್ಟುಕೊಂಡಿದ್ದರೆ ನಿಜಕ್ಕೂ ರೇಣುಕಾಚಾರ್ಯ ಬುದ್ಧಿವಂತ ರಾಜಕಾರಣಿ. ಹಣಪಡೆದು ದಾಖಲೆ ಮೂಲಕ ಸಿಕ್ಕಿಹಾಕಿಕೊಂಡರೆ ಸದಾನಂದ ಗೌಡರು ದಡ್ಡ ರಾಜಕಾರಣಿ ಎನ್ನುವುದು ಇಲ್ಲಿ ಮುಖ್ಯವಲ್ಲ. ರಾಜಕಾರಣದ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅತೀ ಮುಖ್ಯ.

ಕರ್ನಾಟಕದಲ್ಲಿ ರಾಜಕಾರಣಿಗಳ ಮೇಲೆ ಅದರಲ್ಲೂ ಗುರುತರವಾದ ಜವಾಬ್ದಾರಿ ನಿಭಾಯಿಸುವಂಥವರ ವಿರುದ್ಧ ಆರೋಪಗಳು ಹೊಸತೇನೂ ಅಲ್ಲ. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಧರಂ ಸಿಂಗ್, ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹೀಗೆ ಎಲ್ಲರ ವಿರುದ್ಧವೂ ಒಂದಲ್ಲ ಒಂದು ಆರೋಪ ಥಳುಕು ಹಾಕಿಕೊಂಡಿದೆ.

ಅತ್ಯಂತ ಮುಖ್ಯವಾಗಿ ಎರಡು ಕಾರಣಗಳಿಂದಾಗಿ ರಾಜಕಾರಣ ಭ್ರಷ್ಟಾಚಾರದ ಸುಳಿಗೆ ಸಿಲುಕಿದೆ. ಅಧಿಕಾರದ ಮೇಲೆ ಕುಳಿತ ವ್ಯಕ್ತಿ ಪಕ್ಷ ಮುನ್ನಡೆಸಲು ಸಂಪನ್ಮೂಲ ಒದಗಿಸಬೇಕು ಎನ್ನುವುದು ಮೊದಲ ಕಾರಣವಾದರೆ ಸಹಜವಾಗಿಯೇ ಮತ್ತೊಂದು ಕಾರಣ ಸ್ವಹಿತಾಸಕ್ತಿ. ರಾಜಕಾರಣಿ ಸನ್ಯಾಸಿಯಲ್ಲ, ಸನ್ಯಾಸಿಗಳೆಲ್ಲರೂ ಭ್ರಷ್ಟಾಚಾರದಿಂದ ಹೊರತಲ್ಲ ಎನ್ನುವುದು ಬೇರೆಯೇ ಮಾತು.

ಚುನಾವಣೆ ಎನ್ನುವುದು ಯಾವಾಗ ದುಬಾರಿಯಾಯಿತೋ ಆ ಕ್ಷಣದಿಂದಲೇ ಭ್ರಷ್ಟಾಚಾರದ ವೇಗ ಮತ್ತು ವ್ಯಾಪ್ತಿ ಹೆಚ್ಚಾಯಿತು. corruption-india-democracyಯಾವುದೇ ಮುಖ್ಯಮಂತ್ರಿ ಒಂದು ಪಕ್ಷದ ಹಿನ್ನೆಲೆಯಿಂದಾಗಿ ಅಧಿಕಾರಕ್ಕೇರಿದರೂ ಸಂಪನ್ಮೂಲಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಅಲಿಖಿತ ನಿಯಮ ಈಗಿನ ರಾಜಕಾರಣದಲ್ಲಿ. ಈ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೊಂದು ವೇಳೆ ಅಲ್ಲಗಳೆದರೆ ಆತ್ಮವಂಚನೆಯಾಗುತ್ತದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಮಿತಿಯೂ ಇಲ್ಲ, ಮಾನದಂಡವೂ ಇಲ್ಲ. ಪೊಲೀಸ್ ಠಾಣೆ ಸ್ಥಾಪನೆಯಾಯಿತೆಂದರೆ ಅಲ್ಲಿ ಕಳವು, ಹೊಡೆದಾಟ, ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಯಾಕೆಂದರೆ ಆ ಠಾಣೆಯವರಿಗೂ ಕೆಲಸಬೇಕಲ್ಲ. ಹಾಗೆಯೇ ಭ್ರಷ್ಟಾಚಾರ ತಡೆಗೆ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕಾರಣಿಗಳು, ಅಧಿಕಾರಸ್ಥರು ಸಾಲುಗಟ್ಟಿ ಕೋರ್ಟು ಕಚೇರಿಗೆ ಎಡತಾಕುವಂತಾಗಿದೆ. ಯಾಕೆಂದರೆ ಅದು ಕೆಲಸ ಮಾಡುತ್ತಿದೆ, ಮಾಡಲೇ ಬೇಕು.

ಚುನಾವಣಾ ವೆಚ್ಚವನ್ನು ನಿಯಂತ್ರಣ ಮಾಡುವ ಮೊದಲೇ ಅಭ್ಯರ್ಥಿಗಳು ಮಾಡುತ್ತಿದ್ದ ವೆಚ್ಚಕ್ಕಿಂತೇನೂ ಈಗ ಕಡಿಮೆಯಾಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ವೆಚ್ಚ ಮಾಡುವ ವಿಧಾನಗಳು ಮಾತ್ರ ಬದಲಾಗಿವೆ. ಅತ್ಯಂತ ಮಹತ್ವದ ಅಂಶವೆಂದರೆ ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ತನ್ನ ಸ್ವಂತ ದುಡಿಮೆಯನ್ನು ಹೂಡಿಕೆ ಮಾಡಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಸಾಧ್ಯ. ಸಂಪನ್ಮೂಲ ಹೊಂದಿಸಿಕೊಳ್ಳುತ್ತಾರೆ, ಹೊಂದಿಸಿಕೊಳ್ಳಲೇ ಬೇಕು. ಇಂಥ ವ್ಯವಸ್ಥೆಯ ಭಾಗವಾಗಿ ರಾಜಕಾರಣದಲ್ಲಿ ಭ್ರಷ್ಟಾಚಾರ ಬೆಳೆದುಬಂದಿದೆ. ಚುನಾವಣಾ ವ್ಯವಸ್ಥೆಯಲ್ಲೇ ಬದಲಾವಣೆಯಾಗಬೇಕು ಎನ್ನುವುದು ನಿರೀಕ್ಷೆಯಾದರೂ ಅಂಥ ಮಾನಸಿಕ ಸ್ಥಿತಿ ರಾಜಕಾರಣಿಗಳಲ್ಲಿ ಬೆಳೆಯುವುದು ಯಾವಾಗ? ಸೈಕಲ್ ತುಳಿದುಕೊಂಡೇ ರಾಜಕೀಯಕ್ಕೆ ಇಳಿದ ವ್ಯಕ್ತಿ ಅದೇ ಸೈಕಲ್‌ಗೆ ತನ್ನನ್ನು ಸೀಮಿತಗೊಳಿಸಿಕೊಳ್ಳುವಂಥ ಮನಸ್ಥಿತಿ ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯವಾಗಲಿ ಎನ್ನುವುದು ಈ ಕ್ಷಣದ ಆಶಯ.

ನಿಮ್ಮ ಮನೆ ಬಾಗಿಲಿಗೆ ಬರುವವರನ್ನು ನೋಡಿ


– ಚಿದಂಬರ ಬೈಕಂಪಾಡಿ


 

ಕರ್ನಾಟಕದ ವಿಧಾನಸಭೆಯ 224 ಸ್ಥಾನಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ. ತಮಗೆ ಬೇಕಾದವರನ್ನು, ತಮ್ಮ ಉದ್ಧಾರ ಮಾಡುವವರನ್ನು ಹೆಕ್ಕಿ ತೆಗೆದು ವಿಧಾನಸೌಧಕ್ಕೆ ಕಳುಹಿಸಬೇಕಾಗಿದೆ. ಇದು ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಆಯ್ಕೆ ಪ್ರಕ್ರಿಯೆ. ನಮ್ಮನ್ನು ಯಾರು ಆಳಬೇಕು ಎನ್ನುವುದನ್ನು ನಾವೇ ನಿರ್ಧರಿಸುವಂಥ ಸದವಕಾಶ. ನಮ್ಮ ಮನೆ ಮುಂದೆ ಬಂದು ನಿಲ್ಲುವ, ಮತ ಹಾಕಿರೆಂದು ಕೈಮುಗಿದು ದೈನ್ಯತೆಯಿಂದ ಕೇಳುವ ಆ ಮುಖವನ್ನು ನಾವೂ-ನೀವು ಎಷ್ಟು ಬಾರಿ ಕಂಡಿದ್ದೇವೆ? ಆ ವ್ಯಕ್ತಿಯಿಂದ ಸಮಾಜಕ್ಕೆ ಎಷ್ಟು ಒಳಿತಾಗಿದೆ? ಸಮಾಜದಿಂದ ಆ ವ್ಯಕ್ತಿಗೆಷ್ಟು ಲಾಭವಾಗಿದೆ? ಆ ವ್ಯಕ್ತಿಯ ಜೊತೆಗೆ ಮತ ಯಾಚಿಸಲು ಬಂದವರು ಯಾವ ವ್ಯಕ್ತಿತ್ವ ಹೊಂದಿದವರು? ಮತಹಾಕಿ ಆರಿಸಿ ಕಳುಹಿಸಿದ ಮೇಲೆ ಅವರನ್ನು ನೋಡಲು, ಅವರಿಂದ ನಮ್ಮ ಕೆಲಸ ಮಾಡಿಸಿಕೊಳ್ಳಲು ಸುಲಭವೇ? ಕೆಲಸ ಮಾಡಿಕೊಡಬಲ್ಲರೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡರೆ ಆಯ್ಕೆ ಮಾಡುವುದು ಸುಲಭವಾಗುತ್ತದೆ. ಯಾಕೆಂದರೆ ನಿಮ್ಮ ಮುಂದೆ ಹಲವು ಮಂದಿ ಇರುತ್ತಾರೆ. ಪಕ್ಷದ ಹಿನ್ನೆಲೆ, ಮನೆತನದ ಪೂರ್ವಇತಿಹಾಸ, ಅವರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, election_countingಕಾರ್ಯಕ್ಷಮತೆ ಇತ್ಯಾದಿಗಳೆಲ್ಲವನ್ನೂ ಅಳೆದು ತೂಗಿ ಆಯ್ಕೆ ಮಾಡಬೇಕೇ, ಬೇಡವೇ ಎನ್ನುವ ನಿರ್ಧಾರಕ್ಕೆ ಬರಲು ಅವಕಾಶವಿದೆ.

ಹಿಂದಿನ ಚುನಾವಣೆಯಲ್ಲಿ ಹೀಗೆಯೇ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಿ ನಿಮ್ಮ ಮತ ಪಡೆದು ಆಯ್ಕೆಯಾದ ಮೇಲೆ ಮಾಡಿದ್ದೇನು? ಸಮಾಜಕ್ಕೆ ಕೊಟ್ಟ ಕೊಡುಗೆಯೇನು? ಮತ್ತೆ ಕಣಕ್ಕಿಳಿದಿರುವ ಈ ವ್ಯಕ್ತಿಗೆ ಮತ್ತೆ ವಿಧಾನ ಸೌಧದ ಮೆಟ್ಟಿಲೇರಲು ಅವಕಾಶ ಮಾಡಿಕೊಡಬೇಕೇ? ಎನ್ನುವುದನ್ನು ನಿರ್ಧರಿಸುವವರು ನೀವೇ ಆಗಿರುತ್ತೀರಿ. ಇಷ್ಟೆಲ್ಲಾ ಅಂಶಗಳನ್ನು ವಿಚಾರ ವಿಮರ್ಶೆ ಮಾಡಿ ಮತದಾರ ಮತ ಹಾಕುತ್ತಿದ್ದಾನೆಯೇ? ಇಂಥ ಅಳೆದು, ತೂಗಿ ಆಯ್ಕೆ ಮಾಡಲು ಅವಕಾಶವಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿದರೆ ಭ್ರಷ್ಟರು, ಅಪ್ರಾಮಾಣಿಕರು ಸಾಲುಗಟ್ಟಿ ಜೈಲು ಸೇರುತ್ತಿರುವವರು ನಮ್ಮವರೇ ಅಲ್ಲವೇ? ನಾವೇ ಆರಿಸಿ ಕಳುಹಿಸಿದವರಲ್ಲವೇ? ಎನ್ನುವ ಉತ್ತರ ಸುಲಭವಾಗಿ ಸಿಗುತ್ತದೆ.

ರಾಜಕಾರಣ ಭ್ರಷ್ಟವಾಗಿದೆ ಎನ್ನುವ ಮಾತಿನ ಹಿಂದಿರುವ ಸತ್ಯ ವ್ಯಕ್ತಿ ಭ್ರಷ್ಟನಾಗಿದ್ದಾನೆ ಎನ್ನುವುದು. ಭ್ರಷ್ಟಾಚಾರದ ಬಗ್ಗೆ ವಾಹಿನಿಗಳಲ್ಲಿ ಕುಳಿತು ಮಾತನಾಡುವವರು ಭ್ರಷ್ಟಾಚಾರ ಎನ್ನುವುದನ್ನು ರಾಜಕಾರಣದ ಅವಿಭಾಜ್ಯ ಅಂಗ ಎನ್ನುವಂತೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಭ್ರಷ್ಟಾಚಾರ ಮಾಡಿದವನೇ ಮಾತನಾಡುವುದಕ್ಕೆ ನೈತಿಕತೆಯಾದರೂ ಎಲ್ಲಿದೆ? ಭ್ರಷ್ಟಾಚಾರ ತಾನಾಗಿಯೇ ಹುಟ್ಟಿಕೊಂಡದ್ದಲ್ಲ, ವ್ಯಕ್ತಿಯಿಂದ ಹುಟ್ಟು ಪಡೆದುಕೊಂಡಿದೆ, ಆದ್ದರಿಂದ ಭ್ರಷ್ಟಾಚಾರ ಹುಟ್ಟು ಹಾಕಿದ ವ್ಯಕ್ತಿಯೇ ಭ್ರಷ್ಟ ಹೊರತು ರಾಜಕಾರಣವಲ್ಲ. ರಾಜಕಾರಣಿ ಪ್ರಾಮಾಣಿಕನಾಗಿದ್ದರೂ ಅವನೂ ಆ ವ್ಯವಸ್ಥೆಯ ಭಾಗವಾಗಿ ಹೋಗುತ್ತಿರುವುದು ದುರಂತ. ಆದ್ದರಿಂದಲೇ ನಿಮ್ಮ ಮತಯಾಚನೆಗೆ ಬರುವವರು ರಾಜಕಾರಣದಲ್ಲಿ ಶುದ್ಧ ಹಸ್ತರಾಗಿದ್ದರೂ ಆ ವ್ಯವಸ್ಥೆಯನ್ನು ಸೇರಿದ ಮೇಲೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಭ್ರಷ್ಟರಾಗುತ್ತಿದ್ದಾರೆ. ಇದಕ್ಕೆ ಒಂದು ಪಕ್ಷ ಮಾತ್ರ ಸೀಮಿತವಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಎದುರಾಳಿಯನ್ನು ಮಣಿಸಲು ಅದೇ ತಂತ್ರ ಅನುಸರಿಸುತ್ತವೆ, ಅವುಗಳಿಗೆ ಅದು ಅನಿವಾರ್ಯವಾಗಿದೆ. ಇಂಥ ಅನಿವಾರ್ಯತೆ ಮತದಾರನಿಗೆ ಇರಬೇಕೇ? ಯಾಕೆ ತಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಇಂಥ ಅನಿವಾರ್ಯತೆಯ ಒತ್ತಡಕ್ಕೆ ಒಳಗಾಗಿ ಆಯ್ಕೆ ಮಾಡಬೇಕು?

ಭ್ರಷ್ಟರನ್ನು ಆಯ್ಕೆ ಮಾಡಲೇ ಬೇಕು ಎನ್ನುವ ಅನಿವಾರ್ಯತೆ ಮತದಾರನಿಗೆ ಖಂಡಿತಕ್ಕೂ ಇಲ್ಲ. ಆದರೆ ಅಂಥ ಪ್ರಬುದ್ಧತೆ ಮತದಾರನಿಗೆ ಬಂದಿಲ್ಲ. ಅಣ್ಣಾ ಹಜಾರೆ ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ. ಯಾಕೆಂದರೆ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ ಚುನಾವಣೆ ಎದುರಿಸಲು ಬಂಡವಾಳ ಹೊಂದಿಸಿಕೊಳ್ಳಬೇಕು. ಬಂಡವಾಳವಿಲ್ಲದಿದ್ದರೆ ಅವರು ಸ್ಪರ್ಧೆಗೆ ಇಟ್ಟ ಠೇವಣಿಯೂ ಸಿಗುವುದಿಲ್ಲ ಎನ್ನುವ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಜನರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸಿ ಗೆಲ್ಲುವಂಥ ರಾಜಕಾರಣವೇ ಈಗ ನಡೆಯುತ್ತಿರುವುದು. ಮತದಾರ ತಾನಾಗಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂಥ ವ್ಯವಸ್ಥೆ ಖಂಡಿತಕ್ಕೂ ಇದೆ. INDIA-ELECTIONಆದರೆ ಹೀಗೆ ಸ್ವಪ್ರೇರಣೆಯಿಂದ ಮತಚಲಾಯಿಸುವವರ ಸಂಖ್ಯೆ ಶೇ.10 ರಿಂದ 15 ಮಾತ್ರ. ಶೇ. 20 ರಷ್ಟು ಮಂದಿ ಮತದಾನದಿಂದ ದೂರವೇ ಉಳಿಯುತ್ತಾರೆ. ಶೇ.20 ರಷ್ಟು ಮಂದಿ ಜಾತಿ ಹಿನ್ನೆಲೆಯಲ್ಲಿ ಮತ ಚಲಾಯಿಸುತ್ತಾರೆ. ಶೇ.20 ರಷ್ಟು ಮಂದಿ ಅಭ್ಯರ್ಥಿಯ ಹಣಬಲದ ಪ್ರಭಾವಕ್ಕೆ ಒಳಗಾಗುತ್ತಾರೆ. ಶೇ.20 ಮಂದಿ ಹಣ ಮತ್ತು ಪ್ರಭಾವ ಎರಡನ್ನೂ ಅವಲಂಬಿಸಿ ಆಯ್ಕೆ ಮಾಡುತ್ತಾರೆ. ಶೇ.5 ರಷ್ಟು ಮಂದಿ ಅತಂತ್ರರು. ಅವರಿಗೆ ಹಣ ಸಿಗಬಹುದು, ಸಿಗದೆಯೂ ಇರಬಹುದು. ಸಿಕ್ಕಿದರೆ ಖುಷಿ, ಸಿಗದಿದ್ದರೆ ಅಸಹಾಯಕತೆ ಅಷ್ಟೇ.

ಇಂಥ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗ ಯಾರನ್ನು ದೂಷಿಸಬೇಕು? ಯಾಕೆ ದೂಷಿಸಬೇಕು?

ಅವಕಾಶವಾದಿ ರಾಜಕಾರಣ, ಹಣಬಲದ ರಾಜಕಾರಣ, ಸಾಮಾಜಿಕ ಬದ್ಧತೆಯ ರಾಜಕಾರಣ; ಹೀಗೆ ಮೂರು ಗುಂಪುಗಳನ್ನಾಗಿ ಮಾಡಿದರೆ ಪಾರುಪತ್ಯ ಮೆರೆಯುವುದು ಮೊದಲ ಎರಡು ಗುಂಪೇ ಹೊರತು ಮೂರನೆಯ ಗುಂಪು ಮೂಲೆಗುಂಪಾಗುತ್ತದೆ. ಅಣ್ಣಾ ಹಜಾರೆಯನ್ನು ಮೂರನೇ ಗುಂಪಿಗೆ ನಾಯಕ ಅಂದುಕೊಂಡರೆ ಸಾಮಾಜಿಕ ಬದ್ಧತೆಯ ರಾಜಕಾರಣ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತದೆ. ಈ ಸತ್ಯ ಅಣ್ಣಾನಿಗೂ ಗೊತ್ತು. ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಮಂದಿ ಅಣ್ಣಾನ ಭಾಷಣ ಕೇಳಲು ಬರುತ್ತಾರೆ, ಆದರೆ ಅವರೆಲ್ಲರೂ ಅಣ್ಣಾನ ಬೆನ್ನಿಗೆ ನಿಲ್ಲುವುದಿಲ್ಲ, ನಿಲ್ಲಲು ವ್ಯವಸ್ಥೆ ಬಿಡುವುದಿಲ್ಲ. ಆದ್ದರಿಂದಲೇ ಅಣ್ಣಾ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಶರಣಾದರು.

ಈ ದೇಶದ ರಾಜಕೀಯ ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ರೈತಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಮಂಡಿಯೂರಲೇ ಬೇಕು. vote-participate-democracyಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಿದ್ದರೂ ರೈತಶಕ್ತಿಯೇ ಬಲಿಷ್ಠ. ಆದರೆ ರೈತಶಕ್ತಿಯನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ಶಕ್ತಿ ಯಾವುದು? ಮಹೇಂದ್ರ ಸಿಂಗ್ ಟಿಕಾಯತ್ ಈ ದೇಶ ಕಂಡ ಸಮರ್ಥ ರೈತ ನಾಯಕ. ಅವರ ಒಂದು ಕರೆಗೆ ರಾಜಧಾನಿ ದೆಹಲಿ ಜನಸಾಗರವಾಗುತ್ತಿತ್ತು, ಸರ್ಕಾರ ನಡುಗುತ್ತಿತ್ತು. ಪ್ರೊ.ನಂಜುಂಡಸ್ವಾಮಿ ಈ ರಾಜ್ಯ ಕಂಡ ಮೇಧಾವಿ, ಚಿಂತಕ, ರೈತ ನಾಯಕ. ವಿಧಾನಸಭೆಯೊಳಗೆ ಅವರು ಮಾತಿಗೆ ನಿಂತರೆ ಕಂಚಿನಕಂಠ ಮೊಳಗುತ್ತಿತ್ತು. ಕೆಂಟುಕಿ ಚಿಕನ್ ವಿರುದ್ಧ ಎರಡು ದಶಕಗಳ ಹಿಂದೇಯೇ ಧ್ವನಿ ಎತ್ತಿದ್ದ ಪ್ರೊಫೆಸರ್ ಈಗ ಇಲ್ಲ, ಆದರೆ ಅವರ ಮಾತುಗಳು ಇಂದಿಗೂ ಪ್ರಸ್ತುತ. ಅವರು ಕಟ್ಟಿ ಬೆಳೆಸಿದ ರೈತ ಸಂಘಟನೆ ಈಗ ಏನಾಗಿದೆ?

ಆದ್ದರಿಂದ ಈ ಚುನಾವಣೆಯ ಕಾಲಘಟ್ಟದಲ್ಲಿ ಜನ ಚಿಂತನೆ ಮಾಡಬೇಕು ಎನ್ನುವುದು ಕಳಕಳಿ ಮಾತ್ರ. ಅದು ಆಗುತ್ತದೆ ಎನ್ನುವ ನಂಬಿಕೆ ಇಡುವಂತಿಲ್ಲ. ಜನ ತಾವಾಗಿಯೇ ಎಚ್ಚೆತ್ತುಕೊಳ್ಳಬೇಕು ಹೊರತು ಅಣ್ಣಾ ಎಚ್ಚೆತ್ತಿಸಬೇಕು ಎನ್ನುವುದು ನಿರೀಕ್ಷೆಯಾಗಬಾರದು. ಬಹಳ ಜನ ಯಾವಾಗ ಮಲಗುವುದು ಎನ್ನುವುದನ್ನೇ ನಿರೀಕ್ಷೆ ಮಾಡುತ್ತಾರೆ ಹೊರತು ನಿದ್ದೆ ಮಾಡಿದ್ದು ಸಾಕು ಬೇಗ ಏಳಬೇಕು ಎನ್ನುವುದನ್ನು ಬಯಸುವುದಿಲ್ಲ. ಈಗ ಜನ ಮಲಗಿದರೆ ರಾಜಕಾರಣಿಗಳು ಅಂಥ ಸಂದರ್ಭವನ್ನೇ ಕಾಯುತ್ತಿರುತ್ತಾರೆ. ಜನ ರಾಜಕಾರಣಿಗಳನ್ನು ಕಾಯುವ ವ್ಯವಸ್ಥೆ ನಿಲ್ಲಬೇಕು, ರಾಜಕಾರಣಿಗಳು ಜನರನ್ನು ಕಾಯುವಂತಾಗಬೇಕು. ಈ ಕಾಯುವಿಕೆ ಚುನಾವಣೆ ಕಾಲದಲ್ಲಿ ಮಾತ್ರವಲ್ಲ, ಚುನಾವಣೆ ನಂತರವೂ.

ಬೆತ್ತಲಾದಷ್ಟೂ ಮಾಧ್ಯಮ ಮಾನವಂತವಾಗುತ್ತದೆ!

– ಶ್ರಮಣ

“ಸಮಯ” ಸುದ್ದಿ ವಾಹಿನಿ ಮುಖ್ಯಸ್ಥರಾದ ಮಂಜುನಾಥ್ ಅವರಿಗೆ ಬಹುಪರಾಕು ಸಲ್ಲಲೇಬೇಕು. ಒಂದು ವಾರಗಳ ಕಾಲ ಅವರು ‘ಮಾಧ್ಯಮ ಭ್ರಷ್ಟರ ಬೆತ್ತಲು ಅಭಿಯಾನ’ ನಡೆಸಿದರು. ಅಭಿನಂದನೆ ಸಲ್ಲಬೇಕಾದ್ದು ಅದಕ್ಕಲ್ಲ, ಮಾಧ್ಯಮ ಲೋಕದ ಯಾವ ಭ್ರಷ್ಟನನ್ನೂ ‘ಬೆತ್ತಲು ಮಾಡದೆಯೂ’ ಅಭಿಯಾನ ಮಾಡಿದರಲ್ಲಾ ಅದಕ್ಕೆ! Corruption-in-News-Mediaಇದೊಂಥರಾ ಊಟ-ಉಪಚಾರ ಮಾಡಿಕೊಂಡೇ ಕೆಲವರು ಧರಣಿ ಕುಂತು ತಮ್ಮದು ‘ಉಪವಾಸ ಸತ್ಯಾಗ್ರಹ’ ಅಂತಾರಲ್ಲ ಹಾಗೆ.

ಲಂಚ ಪಡೆದ ಪ್ರಕರಣದಲ್ಲಿ ಬೆತ್ತಲಾದ ಶಾಸಕ ಸಂಪಂಗಿಯ ಹಾಗೆ, ಮಾಡಿದ ತಪ್ಪಿಗೆ ಜೈಲು ಅನುಭವಿಸಿ ಬೆತ್ತಲಾದ ಯಡಿಯೂರಪ್ಪನ ಹಾಗೆ, ಅದ್ಯಾಕೆ ಒಬ್ಬೇ ಒಬ್ಬೇ ಪತ್ರಕರ್ತ ಈ ಅಭಿಯಾನದಲ್ಲಿ ಬೆತ್ತಲಾಗಲಿಲ್ಲ. ಹಾಗಿದ್ದರೂ, ಆ ಕಾರ್ಯಕ್ರಮ ಸರಣಿಗೆ ‘ಬೆತ್ತಲು ಅಭಿಯಾನ’ ಅಂತ ಹೆಸರೇಕೆ ಸ್ವಾಮಿ?

ಸಮಯ ಸುದ್ದಿ ವಾಹಿನಿಯ ಬಳಗ ಎಡವಿದ್ದೇ ತಮ್ಮ ಕಾರ್ಯಕ್ರಮದ ಟೈಟಲ್ ಕಾರ್ಡ್‌ನಿಂದಾಗಿ. ಆ ತಲೆಬರಹದಡಿಯಲ್ಲಿ ಮಾಧ್ಯಮ ಲೋಕದೊಳಗಿನ ಭ್ರಷ್ಟಾಚಾರವನ್ನು ಚರ್ಚಿಸಿದ್ದಾರೆಯೇ ಹೊರತು, ಯಾರನ್ನೂ ಬೆತ್ತಲು ಮಾಡಿಲ್ಲ. ಅಂತಹದೊಂದು ಚರ್ಚೆಯಾಗಿದ್ದು ಶ್ಲಾಘನೀಯ. ಆದರೆ, ನಮಗೆ ಗೊತ್ತಿರುವ ಭ್ರಷ್ಟ ಪತ್ರಕರ್ತರೇನಾದರೂ ಈ ಅಭಿಯಾನದಲ್ಲಿ ಬೆತ್ತಲಾಗುತ್ತಾರಾ ಎಂದು ನಿರೀಕ್ಷಿಸಿದವರಿಗೆ ಮೋಸವಾಯಿತು.

ತಮ್ಮ ಸುದ್ದಿ ವಾಹಿನಿ ವಿಶಿಷ್ಟವಾದ ನೀತಿ ಸಂಹಿತೆ ಜಾರಿಗೆ ತಂದಿದೆ ಎಂದು ಸಮಯ ಬೀಗುತ್ತಿದೆ. Samaya-TVಹಾಗಂತ ಮುರುಗೇಶ್ ನಿರಾಣಿಯ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುತ್ತೇವೆಂದು ಅವರು ಹೇಳಲು ಸಾಧ್ಯವೆ? ಅದು ಸಾಧುವಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಅಂತಹ ‘ಆಕುಪೇಶನಲ್ ಹಜಾರ್ಡ್ಸ್’ ಎಲ್ಲಾ ಸುದ್ದಿ ವಾಹಿನಿಗಳಿಗೆ ಇದ್ದದ್ದೇ. ಜನಶ್ರೀ ಸುದ್ದಿ ವಾಹಿನಿಗೆ ಶ್ರೀರಾಮುಲು ಎಂದಿಗೂ ‘ಸ್ವಾಭಿಮಾನಿ’ಯೇ. ಕಸ್ತೂರಿ ಸುದ್ದಿ ವಾಹಿನಿ ಪಾಲಿಗೆ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅತ್ಯಂತ ಜನಪ್ರಿಯ ರಾಜಕಾರಣಿಗಳು. ಆ ಮಿತಿಗಳನ್ನು ಆಯಾ ಸುದ್ದಿ ವಾಹಿನಿಗಳು ಮೀರಿ ಸುದ್ದಿ ಮಾಡುತ್ತವೆ ಎಂದು ನಿರೀಕ್ಷಿಸದ ಮಟ್ಟಿಗೆ ಪ್ರೇಕ್ಷಕ ಜಾಗೃತನಾಗಿದ್ದಾನೆ.

ಚರ್ಚೆಯಾಗದ ವಿಷಯಗಳು:
ಸಮಯ ನಡೆಸಿದ ಕಾರ್ಯಕ್ರಮಗಳಲ್ಲಿ ಚರ್ಚೆಯಾಗದೇ ಉಳಿದ ಹಲವು ಸಂಗತಿಗಳಿವೆ. ಅವುಗಳ ಮೂಲಕವೂ ಭ್ರಷ್ಟಾಚಾರವನ್ನು ನೋಡುವ ಸಾಧ್ಯತೆಗಳಿವೆ. ಮೂರ್ನಾಲ್ಕು ಸುದ್ದಿ ಸಂಸ್ಥೆಗಳು ನಿಯಮಿತವಾಗಿ ತನ್ನ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಸಂಬಳ ಕೊಟ್ಟರೂ, ವರದಿಗಾರರು ಅಲೆದಾಡಿ ಸುದ್ದಿ ಸಂಗ್ರಹಿಸಿದ ಖರ್ಚಿನ ಬಿಲ್ಲುಗಳನ್ನು ಕ್ಲಿಯರ್ ಮಾಡುತ್ತಿಲ್ಲ.

ಒಂದು ಸುದ್ದಿ ವಾಹಿನಿಯಂತೂ ‘ಬರುವ ಜೂನ್ ವರೆಗೆ ಸಂಬಳದ ಮಾತು ಕೇಳಬೇಡಿ..’ ಎಂಬ ಸೂಚನೆಯನ್ನು ತನ್ನ ಸಿಬ್ಬಂದಿಗೆ ಹೇಳಿದೆ. kannada-news-channelsಕೆಲವು ದಿನಗಳ ಹಿಂದೆ ಸಂಬಳ ನೀಡಲು ತಿಂಗಳುಗಟ್ಟಲೆ ತಡಮಾಡಿದ ಕಾರಣ ಹಠಾತ್ ಪ್ರತಿಭಟನೆಗೆ ಇಳಿದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಿದ ವರದಿಗಳಿವೆ. ಇತ್ತೀಚಿನ ಚಾನೆಲ್ ಒಂದು ತನ್ನ ಜಿಲ್ಲಾ ಕೆಮರಾಮನ್‌ಗಳಿಗೆ ನಿಗದಿ ಮಾಡಿರುವ ಸಂಬಳವಂತೂ, ತೀರಾ ಕಡಿಮೆ. ನಾಲ್ಕು – ಐದು ಸಾವಿರ ರೂಗಳಿಗೆ ಒಬ್ಬ ವ್ಯಕ್ತಿ ತನ್ನ ಸಂಸಾರ ನಡೆಸಲು ಸಾಧ್ಯವೆ? ಎರಡು-ಮೂರು ತಿಂಗಳಾದರೂ ಸಂಬಳ ನೀಡದಿದ್ದರೆ ಮನೆ ಮಾಲೀಕನಿಗೆ ಬಾಡಿಗೆ ಕೊಡುವುದು ಹೇಗೆ? ಮಕ್ಕಳ ಸ್ಕೂಲ್ ಫೀ ಕಟ್ಟುವುದು ಹೇಗೆ?

ಈಗಂತೂ ಚುನಾವಣೆ ಬಿಸಿ. ವರದಿಗಾರರು ಸದಾ ಓಡಾಡುತ್ತಲೇ ಇರಬೇಕು. ಕೈಯಿಂದ ಖರ್ಚು ಮಾಡಿಕೊಂಡು ಸುದ್ದಿ ಮಾಡಲು ಹೋಗೋಣವೆಂದರೆ ಸಂಬಳವಿಲ್ಲ. ಅಪ್ಪಿ ತಪ್ಪಿ ಹೋದರೂ, ಆದ ಖರ್ಚನ್ನು ಆಫೀಸಿನವರು ತುಂಬುತ್ತಾರೆಂಬ ವಿಶ್ವಾಸವಿಲ್ಲ. ಇದು ಕೇವಲ ಸುದ್ದಿವಾಹಿನಿಗಳ ಸಮಾಚಾರವಲ್ಲ. ಕನ್ನಡದ ಘನತೆವೆತ್ತ ಪತ್ರಿಕೆಯೊಂದರ ತಾಲೂಕು ಮಟ್ಟದ ಬಿಡಿ ಸುದ್ದಿ ಸಂಗ್ರಹಕಾರರಿಗೆ ನಿಗದಿ ಮಾಡಿರುವ ಮಾಸಿಕ ಗೌರವಧನ ರೂ 750 ಮಾತ್ರ ಎಂದರೆ ನೀವು ವಿಧಿ ಇಲ್ಲದೆ ನಂಬಲೇ ಬೇಕು. ಅಂಗನವಾಡಿ ಸಹಾಯಕರು ಸಂಘ ಕಟ್ಟಿಕೊಂಡು ತಮ್ಮ ಗೌರವಧನಕ್ಕೆ ಹೋರಾಡುವ ಅವಕಾಶವಿದೆ. ಈ ತಾಲೂಕು ಮಟ್ಟದ ಪತ್ರಕರ್ತರಿಗೇನಿದೆ?

ಇಂತಹ ಸಂದರ್ಭಗಳಲ್ಲಿಯೇ ಭ್ರಷ್ಟಾಚಾರದ ನಾನಾ ಮುಖಗಳು ಅನಾವರಣಗೊಳ್ಳುವುದು. ರಾಜಕೀಯ ಪಕ್ಷದ ಸಮಾವೇಶ ನಡೆಸುವವರು ಪತ್ರಕರ್ತರನ್ನು ಕರೆಯುತ್ತಾರೆ. ಕೇವಲ ಕರೆದರೆ ಅವರು ಬರುವ ಸ್ಥಿತಿಯಲ್ಲಿಲ್ಲ ಎನ್ನುವ ಸಂಗತಿ ಕೂಡಾ ಬಹುತೇಕ ರಾಜಕೀಯ ಕಾರ್ಯಕರ್ತರಿಗೆ ಗೊತ್ತು. ಪಕ್ಷದ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡುತ್ತಾರೆ. ಆಗ ಸಹಜವಾಗಿ ವಾಹನ ವ್ಯವಸ್ಥೆ ಮಾಡಿ ಕಾರ್ಯಕ್ರಮ ಮಾಡಿದವರ ಸುದ್ದಿ ಮಾತ್ರ ಪ್ರಸಾರವಾಗುತ್ತದೆ. ಹಾಗಾದರೆ, ಬರದಿಂದ ತತ್ತರಿಸಿದ ರೈತ, ಶೋಷಣೆಗೆ ಬಲಿಯಾದ ದಲಿತ ಅಥವಾ ಮಹಿಳೆ – ಇಂತಹವರ ಸುದ್ದಿಗೆ ವಾಹನ ವ್ಯವಸ್ಥೆ ಮಾಡುವವರಾರು?

ಮುಖ್ಯವಾಗಿ ನೀತಿ ಸಂಹಿತೆ ಬೇಕಿರುವುದು ಚಾನೆಲ್ ಮುಖ್ಯಸ್ಥರಿಗೆ. tv-mediaಒಂದು ಸಂಸ್ಥೆ ತೆರೆಯುವ ಮುನ್ನ ‘ರಾಜಕೀಯ ಲಾಭವನ್ನಷ್ಟೇ’ ಅಲ್ಲದೆ ಆರ್ಥಿಕವಾಗಿ ತನ್ನ ಸಂಸ್ಥೆಯನ್ನು, ಸಿಬ್ಬಂದಿಯನ್ನು ಸುಸ್ಥಿತಿಯಲ್ಲಿಡಲು ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ. ಚಾನೆಲ್ ನಡೆಸಲು ಕೈ ಹಾಕುವ ಹಿರಿಯ ಪತ್ರಕರ್ತರು ‘ಸಾಹಸಿ ಪತ್ರಕರ್ತರಾಗಿ’ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು. ಆದರೆ ಅವರ ಕೈ ಕೆಳಗೆ ದುಡಿಯುವ ಪತ್ರಕರ್ತರು ಸದಾ ‘ಸಾಲಗಾರ’ರಾಗಿಯೇ ಉಳಿಯುತ್ತಾರಲ್ಲ? ತನ್ನ ಸಿಬ್ಬಂದಿ ಅದ್ಧೂರಿಯಾಗಿ ಅಲ್ಲ, ಕನಿಷ್ಠ ವೃತ್ತಿ ಗೌರವ ಕಾಪಾಡಿಕೊಂಡು ಜೀವಿಸಲು ಬೇಕಾಗುಷ್ಟು ಸಂಬಳ ಕೊಡುವ ಜವಾಬ್ದಾರಿಯನ್ನು ಸುದ್ದಿ ಸಂಸ್ಥೆಗಳ ಮಾಲೀಕರು ಹೊರಬೇಕು.

ಇಷ್ಟು ಕಡಿಮೆ ಸಂಬಳವಾದರೂ, ಅವರೇಕೆ ಕೆಲಸಕ್ಕೆ ಸೇರಿಕೋಬೇಕು ಎಂದು ಅನೇಕರು ಕೇಳುತ್ತಾರೆ. ಇದಕ್ಕೆ ಎರಡು ಕಾರಣಗಳನ್ನು ತಕ್ಷಣಕ್ಕೆ ಗುರುತಿಸಬಹುದು. ಅನೇಕರು ತಾವು ಪತ್ರಕರ್ತರಾಗಬೇಕು, ಎಷ್ಟೇ ಕಷ್ಟವಾದರೂ ಪತ್ರಕರ್ತರೇ ಆಗಬೇಕು ಎಂದು ಕೊಂಡವರು ಸಂಬಳಕ್ಕಿಂತ ಕ್ಷೇತ್ರದೆಡೆಗಿನ ಆಸಕ್ತಿಯಿಂದ ಬಂದಿರುತ್ತಾರೆ. ಇನ್ನೊಂದು ಕಾರಣ – ಜೀವನ ನಡೆಸಲು ಒಂದು ಕೆಲಸ ಬೇಕು ಎಂಬ ಅನಿವಾರ್ಯತೆ.

ಒಂದು ಉದಾಹರಣೆಯನ್ನು ನಿರೂಪಿಸಲು ಬಯಸುತ್ತೇನೆ. ಒಬ್ಬ ಜಿಲ್ಲಾ ವರದಿಗಾರ ತನ್ನ ಮೇಲಿನ ಸಿಬ್ಬಂದಿಯವರ ಸೂಚನೆ ಮೇರೆಗೆ ತನ್ನ tv-mediaವಾಹಿನಿಗೊಂದು ಬಾಡಿಗೆ ಕಚೇರಿ ಹುಡುಕಿದ. ಮಾಲೀಕರೊಂದಿಗೆ ಬಾಡಿಗೆ ಮಾತುಕತೆಯಾಯಿತು. ಮೇಲಿನವರಿಂದಲೂ ಅದಕ್ಕೆ ಒಪ್ಪಿಗೆ ಸಿಕ್ಕಿತು. ಇನ್ನೇನು ತಿಂಗಳ ಬಾಡಿಗೆ ಕೊಡುವ ಸಂದರ್ಭ ಬಂತು, ಆ ಹೊತ್ತಿಗೆ ಆ ಮೇಲಿನ ಅಧಿಕಾರಿ ಅಥವಾ ಸಹೋದ್ಯೋಗಿ ಬದಲಾಗಿದ್ದ. ಹಿಂದಿನವರು ನಿಗದಿ ಮಾಡಿದ್ದ ಬಾಡಿಗೆಯನ್ನು ಹೊಸಬ ಒಪ್ಪಲು ಸಿದ್ಧನಿಲ್ಲ. ಮಾಲೀಕರೊಂದಿಗೆ ಮಾತನಾಡಿ ಮತ್ತಷ್ಟು ಕಡಿಮೆ ಮಾಡಿಸಿ ಎಂದು ಸೂಚಿಸಿದ. ಪೀಕಲಾಟಕ್ಕೆ ಸಿಲುಕಿದ ವರದಿಗಾರ, ಮಾಲೀಕರಿಂದ ಮುಜುಗರ ಅನುಭವಿಸುವುದನ್ನು ತಪ್ಪಿಸಿಕೊಳ್ಳಲು, ತನ್ನ ಕೈಯಿಂದಲೆ ಒಂದಷ್ಟು ಹಾಕಿ ಹಳೆಯ ಬಾಡಿಗೆಯನ್ನೇ ಮುಂದುವರೆಸಿದ. ಅಲ್ಲಿಗೇ ಕತೆ ಮುಗಿಯಲಿಲ್ಲ. ಆ ಮೇಲಿನ ಹುದ್ದೆಗೆ ಕೆಲವೇ ದಿನಗಳಲ್ಲಿ ಮತ್ತೊಬ್ಬ ಬಂದ. ತನ್ನ ಹಿಂದಿನವನಂತೆಯೇ ಈತನೂ ಮತ್ತೆ ಬಾಡಿಗೆ ಬಗ್ಗೆ ತಕರಾರು ತೆಗೆದ, ಮತ್ತಷ್ಟು ಕಡಿಮೆ ಮಾಡಿ ಎಂದ. ಪರಿಣಾಮವಾಗಿ ವರದಿಗಾರನೇ ತನ್ನ ಅಲ್ಪ ಸಂಬಳದಲ್ಲಿಯೇ ಹೊರಲಾರದ ಹೊರೆಯನ್ನು ಹೊತ್ತು ಏಗಬೇಕಾಯಿತು.

ಅಂತಹ ಪತ್ರಕರ್ತರು ಅನೇಕರಿದ್ದಾರೆ. ಅದಕ್ಕೆ ಕಾರಣ ಅವರು ತಮ್ಮ ವೃತ್ತಿಗೆ ಕೊಡುವ ಗೌರವ ಮತ್ತು ಅದರೆಡೆಗೆ ಇರುವ ಅದಮ್ಯ ಒಲವು. ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ಭರಪೂರ ಕನಸುಗಳನ್ನು ಹೊತ್ತ ಅನೇಕರು ದುಡಿಯುತ್ತಿದ್ದಾರೆ. ತಮ್ಮ ಕನಿಷ್ಠ ಆದಾಯದಲ್ಲಿಯೇ ತಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಂಡು ನಿಷ್ಠೆಯಿಂದ ಬದುಕುತ್ತಿದ್ದಾರೆ. ಅವರಿಗೆ ಯಾವ ನೀತಿ ಸಂಹಿತೆಯ ಅಗತ್ಯವೂ ಇಲ್ಲ. ಪತ್ರಿಕೋದ್ಯಮದಲ್ಲಿ ಇವತ್ತಿಗೂ ಒಂದಿಷ್ಟು ಪ್ರಾಮಾಣಿಕತೆ ಉಳಿದಿರೋದ್ದಕ್ಕೆ ಅವರೇ ಕಾರಣ.

ಮಾಧ್ಯಮ ಕ್ಷೇತ್ರದ ಒಳಗಿನ ಹುಳುಕುಗಳಿಗೆ ಮಾಧ್ಯಮದ ಬಾಗಿಲು ಇತ್ತೀಚೆಗಷ್ಟೆ ತೆರೆದುಕೊಳ್ಳುತ್ತಿವೆ. ಬಹುಶಃ ಇತ್ತೀಚಿನ ದಿನಗಳಲ್ಲಿ ಅಪರೂಪ ಎಂಬಂತೆ ಪ್ರಜಾವಾಣಿ ದಿನ ಪತ್ರಿಕೆ ಹಾಸನ ಪತ್ರಕರ್ತರ ಸಂಘ ಕುರಿತ ಸುದ್ದಿಯೊಂದನ್ನು ಪ್ರಕಟಿಸಿತು. ಇದೇ ಹೊತ್ತಿಗೆ ಸಮಯ ವಾಹಿನಿ ಒಂದು ಸರಣಿ ಪ್ರಸಾರ ಮಾಡಿತು. ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳಲ್ಲಿ ಆಗಾಗ ಇನ್-ಹೌಸ್ ಸಂಗತಿಗಳು ಮುನ್ನೆಲೆಗೆ ಬಂದರೆ ಒಳಿತು. ಮಾಧ್ಯಮ ಬೆತ್ತಲಾದಷ್ಟೂ ಮಾನವಂತವಾಗುತ್ತದೆ!