ಸ್ಥಳೀಯ ಸಂಸ್ಥೆ : ಮತಗಟ್ಟೆಯತ್ತ ಮುಖ ಮಾಡಬೇಕು


-ಚಿದಂಬರ ಬೈಕಂಪಾಡಿ


 

ರಾಜ್ಯದ ಸ್ಥಳೀಯ ಸಂಸ್ಥೆಗಳ ಆಡಳಿತದ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎನ್ನುವುದನ್ನು ನಿರ್ಧರಿಸಲು ಜನತೆಗೆ ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರ ಸಿಕ್ಕಿದೆ. ಅದನ್ನು ಈಗ ಚಲಾಯಿಸುವ ಹೊಣೆಗಾರಿಕೆ ಜನರದ್ದು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ತಮ್ಮನ್ನು ಯಾರು ಆಳಬೇಕು ಎನ್ನುವುದನ್ನು ಮತದಾರ ಮತ ಚಲಾಯಿಸುವ ಮೂಲಕ ನಿರ್ಧರಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ಜನರ ದಿನನಿತ್ಯದ ಬದುಕಿಗೆ ತೀರ ಹತ್ತಿರವಾದವು. ವಿಧಾನಸಭೆ, ಲೋಕಸಭೆ ಚುನಾವಣೆಗಿಂತಲೂ ಹೆಚ್ಚು ಜನರಿಗೆ ಹತ್ತಿರವಾದವು. ಜನಸಾಮಾನ್ಯರು ತಮ್ಮ ದೈನಂದಿನ ಆವಶ್ಯಕತೆಗಳಿಗೆ ಅವಲಂಬಿಸಿರುವುದೂ ಕೂಡಾ ಸ್ಥಳೀಯ ಸಂಸ್ಥೆಗಳನ್ನೇ. ಆದ್ದರಿಂದ ಈ ಚುನಾವಣೆಯನ್ನು ಅವಗಣನೆ ಮಾಡುವಂತಿಲ್ಲ.

ಮತದಾರರ ಮುಂದೆ ಅಭ್ಯರ್ಥಿಗಳು ಕಾಣಿಸಿಕೊಂಡಿದ್ದಾರೆ. ಹಿಂದಿನವರ್ಷವೂ ಇವರೇ ಕಾಣಿಸಿಕೊಂಡಿರಬಹುದು, voteಈ ವರ್ಷವೂ ಅವರೇ ಮತ್ತೆ ನಿಮ್ಮ ಮತಗಳಿಗಾಗಿ ಕಾತುರರಾಗಿರಬಹುದು. ಆದರೆ ಅವರ ಭವಿಷ್ಯ ನಿರ್ಧರಿಸುವವರು ನೀವು. ನಿಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲ, ನಿಮಗೆ ಸಾದಾ ನೆರಳಾಗಿ ನಿಲ್ಲಬಲ್ಲವರೇ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಜನ ಸಾಮಾನ್ಯರಿಗೆ ಬೇಕಾಗಿರುವುದು ಜನರ ಸೇವೆ ಮಾಡುವಂಥ ಉತ್ಸಾಹಿಗಳು. ಕುಡಿಯುವ ನೀರು, ನಡೆದಾಡಲು ವ್ಯವಸ್ಥಿತ ರಸ್ತೆ, ದಾರಿದೀಪ, ಚರಂಡಿ ವ್ಯವಸ್ಥೆ, ನೈರ್ಮಲ್ಯ ಕಾಪಾಡುವುದು ಹೀಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರೆ ಸಾಕು, ಜನ ಮತ್ತೇನನ್ನೂ ಕೇಳುವುದಿಲ್ಲ. ಕೇವಲ ತಮ್ಮ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳುವಂಥ ಸುಲಲಿತ ವ್ಯವಸ್ಥೆಗಳನ್ನು ಜನಪ್ರತಿನಿಧಿ ಮಾಡಿದರೆ ಜನ ನಿಶ್ಚಿತಕ್ಕೂ ಬೆಂಬಲಿಸುತ್ತಾರೆ, ಬೆಂಬಲಿಸಬೇಕು.

ಜನರಿಗೆ ಸದಾಕಾಲ ಬಯಸಿದಾಗ ಸಿಗುವಂಥ ಮನುಷ್ಯ ಜನರ ಒಲವು ಗಳಿಸುತ್ತಾನೆ. ಸಾಮಾನ್ಯವಾಗಿ ಮತದಾರ ಇಂಥ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅನಾಸಕ್ತಿಯೇ ಹೆಚ್ಚು. ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದೆಂದರೆ ಆಲಸ್ಯ. ಇದು ಕೇವಲ ಸ್ಥಳೀಯ ಸಂಸ್ಥೆಗಳಿಗೆ ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯಲ್ಲೂ ಇದನ್ನೇ ಕಾಣುತ್ತಿದ್ದೇವೆ. ಮತದಾರನ ನಿರಾಸಕ್ತಿಗೂ ಕಾರಣವಿರಬಹುದು. ಅದೇನೆಂದರೆ ತಮ್ಮ ಜನಸೇವೆ ಮಾಡುವವನು ಅಸಮರ್ಥ ಅಥವಾ ನಿರುಪಯುಕ್ತ ಎನ್ನುವ ಕಾರಣವೋ, ಅಭ್ಯರ್ಥಿಯನ್ನು ಬೆಂಬಲಿಸುವ ಬದಲು ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದು ಎನ್ನುವ ಕಾರಣವೋ ಏನೋ? ಅಂತೂ ಮತದಾರ ತಾನು ಚಲಾಯಿಸುವ ಮತದ ಬಗ್ಗೆ ಗಂಭೀರವಾಗಿ ಯೋಚಿಸದಿರುವುದು ಅಪಾಯಕಾರಿ.

ಯಾವುದೇ ಚುನಾವಣೆಯನ್ನು ಗಮನಿಸಿ ಚಲಾವಣೆಯಾಗುವ ಮತಗಳ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಮತದಾರರ ನಿರಾಸಕ್ತಿ ಅರಿವಿಗೆ ಬರುತ್ತದೆ. ಸರಾಸರಿ 55 ರಿಂದ 60 ಶೇ. ಮತದಾನವಾಗುವ ಪರಂಪರೆ ಅನೇಕ ದಶಕಗಳಿಂದ ಕಂಡು ಬರುತ್ತಿದೆ. ಸ್ಥಳೀಯ ಸಂಸ್ಥೆಯಾಗಲೀ, ವಿಧಾನಸಭೆ, ಲೋಕಸಭೆ, ಯಾವುದೇ ಚುನಾವಣೆಯಲ್ಲೂ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ. ಆದರೆ ಮತದಾರರ ಸಂಖ್ಯೆ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮತದಾರರ ಸಂಖ್ಯೆಯ ಅನುಪಾತದಲ್ಲಿ ಮತದಾನ ಆಗದಿರುವುದು ಕಳವಳಕಾರಿ.

ಮತಗಟ್ಟೆ ಹೋಗಿ ಮತ ಚಲಾಯಿಸುವುದು ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡಾ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸಿಕ್ಕಿರುವ ಪರಮಾಧಿಕಾರವನ್ನು ಚಲಾಯಿಸದಿರುವುದೇ ಈಗಿನ ಎಲ್ಲಾ ಅವಾಂತರಗಳಿಗೆ ಮೂಲ ಕಾರಣ. ನಮಗೆ ಯಾರು ಹಿತವರು ಎನ್ನುವುದನ್ನು ಜನಸೇವೆಗೆ ಮುಂದಾಗುವವರಿಗೆ ತಿಳಿಸಿ ಹೇಳಲು ಇದೊಂದೇ ಸೂಕ್ತ ಅವಕಾಶ. ಯಾರೇ ಕಣಕ್ಕಿಳಿದರೂ, ಎಷ್ಟೇ ಆಮಿಷ ಒಡ್ಡಿದರೂ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುವ ಚುನಾವಣೆಯಲ್ಲಿ ಮತದಾರ ಮೌನವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಅಪಾಯವಿದೆ.

ಶೇ. 55 ಮಂದಿ ಮಾತ್ರ ಮತ ಚಲಾಯಿಸಿ ಶೇ.45 ರಷ್ಟು ಮಂದಿ ದೂರ ಉಳಿದರೆ ಅದು ಅನರ್ಹರು ಆಯ್ಕೆಯಾಗಲು ಕಾರಣವಾಗುತ್ತದೆ. ಅದಕ್ಕೆ ಆಯ್ಕೆಯಾದವನು ಹೊಣೆಯಲ್ಲ, ಮತ ಹಾಕದವರೇ ಹೊಣೆಯಾಗುತ್ತಾರೆ. ಮತದಾನ ಮಾಡದಿರುವುದರಿಂದ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವವರಿದ್ದಾರೆ. ತಾನೊಬ್ಬ ಮತ ಹಾಕದಿದ್ದರೆ ಅವನು ಗೆದ್ದು ಬರುವುದಿಲ್ಲವೇ? ಎನ್ನುವವರೂ ಇದ್ದಾರೆ. ಹೀಗೆಯೇ ಶೇ. 45 ರಷ್ಟು ಮಂದಿ ಯೋಚಿಸಿದರೆ ಪರಿಣಾಮ ಏನಾಗಬಹುದು ಊಹಿಸಿ.

ಪಕ್ಷ ವ್ಯಕ್ತಿಗಳನ್ನು ದೂರುವುದು ಸುಲಭ. ಆದರೆ ಅವರನ್ನು ಸರಿದಾರಿಗೆ ತರಬಲ್ಲ ಅಸ್ತ್ರ ಚುನಾವಣೆ, ಜನರಿಗಿರುವ ಮತದಾನದ ಹಕ್ಕು. ಅದನ್ನು ಚಲಾಯಿಸದಿದ್ದಾಗ ಸಹಜವಾಗಿಯೇ ಉತ್ತಮ ಅಭ್ಯರ್ಥಿ ಆರಿಸಿ ಬರದೇ ಹೋಗಬಹುದು, ಅದಕ್ಷ, ಅಪ್ರಾಮಾಣಿಕ ಆರಿಸಿ ಬರಬಹುದು. ಮತ್ತೆ ಐದು ವರ್ಷ ಅವರ ದುರಾಡಳಿತವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಜನರದ್ದಾಗುತ್ತದೆ.

18 ರಿಂದ 30 ರ ಒಳಗಿನ ಯುವಕ, ಯುವತಿಯರು ಈಗ ಮತಚಾಲಾಯಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ. INDIA-ELECTION35 ರಿಂದ 45 ರೊಳಗಿನವರಲ್ಲಿ ನಿರಾಸಕ್ತಿಯೇ ಹೆಚ್ಚು. 50 ರ ಮೇಲ್ಪಟ್ಟವರು ತಮ್ಮ ಹಕ್ಕು ಚಲಾಯಿಸುತ್ತಾರೆ. ಅದರಲ್ಲೂ ಆತಂಕಕಾರಿ ಅಂಶವೆಂದರೆ ಸುಶಿಕ್ಷಿತರು, ಸರ್ಕಾರಿ, ಅರೆಸರ್ಕಾರಿ ಕಚೇರಿಗಳಲ್ಲಿ ದುಡಿಯುವ ಮಧ್ಯಮವರ್ಗದ ಜನ ಮತಗಟ್ಟೆಗೆ ಹೋಗುವುದಕ್ಕೆ ಹಿಂಜರಿಯುತ್ತಾರೆ. ಮತದಾನ ಮಾಡಲೆಂದೇ ಕಚೇರಿಗಳಿಗೆ ರಜೆ ಸೌಲಭ್ಯವಿದ್ದರೂ ಆದಿನ ಮನೆಯಲ್ಲಿ ಆಯಾಗಿ ವಿಶ್ರಾಂತಿ ತೆಗೆದುಕೊಂಡು ಮೋಜು, ಮಸ್ತಿಯಲ್ಲಿ ಕಾಲ ಕಳೆಯಲು ಹಾತೊರೆಯುವಂಥ ಪ್ರವೃತ್ತಿ ಹೆಚ್ಚಾಗಿ ಕಾಣುತ್ತಿದೆ. ಮತದಾನಕ್ಕೆ ಸಿಕ್ಕ ರಜೆಯನ್ನು ಉಂಡು ಮಲಗುವುದಕ್ಕೆ ಬಳಕೆ ಮಾಡುವವರಿದ್ದಾರೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಈ ಪ್ರವೃತ್ತಿ ಅತ್ಯಂತ ಅಪಾಯಕಾರಿಯಾದುದು.

ಪಕ್ಷ, ಪಂಗಡವನ್ನು ಬೆಂಬಲಿಸುವುದು, ವ್ಯಕ್ತಿಯನ್ನು ಗುರುತಿಸುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದು ಅಗತ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಕೊಟ್ಟಿರುವ ಹಕ್ಕನ್ನು ಚಲಾಯಿಸದಿರುವುದು ಅನರ್ಹ ಆಯ್ಕೆಯಾಗುವುದಕ್ಕಿಂತಲೂ ಅಪಾಯಕಾರಿ. ಆದ್ದರಿಂದ ಈ ಸಲವಾದರೂ ಗರಿಷ್ಠ ಮತದಾನವಾಗಬೇಕು. ಜನ ಮತಗಟ್ಟೆಯತ್ತ ಮುಖಮಾಡಿದರೆ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯ.

ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ : ಅಸಹನೆ ಏಕೆ?

– ಎಚ್.ಕೆ.ಶರತ್

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ “ಜಾನಪದ ಕಲಾ ಉತ್ಸವ”ದ ವೇಳೆ ಹಂದಿ ಮಾಂಸ ಭೋಜನ ವ್ಯವಸ್ಥೆ ಮಾಡಿದ್ದಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಅಂತೆಲ್ಲ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಮಾಂಸಾಹಾರ ಅದರಲ್ಲೂ ಹಂದಿ ಮಾಂಸ ಸೇವಿಸುವುದು ಕೆಲವರ ಕಣ್ಣಿಗೆ ಅಸಹ್ಯಕರವಾಗಿ ಗೋಚರಿಸಬಹುದು. ಇದು ತಿನ್ನುವವರ ಸಮಸ್ಯೆಯಲ್ಲ. ಎಲ್ಲಾ ಬಗೆಯ ಆಹಾರ ಪದ್ಧತಿಯನ್ನೂ ಸಮಾನವಾಗಿ ಪರಿಗಣಿಸದೆ, ಸಸ್ಯಾಹಾರ ಶ್ರೇಷ್ಠವೆಂಬ ಸಂಕುಚಿತ ಮನಸ್ಥಿತಿ ಇಲ್ಲಿ ಪ್ರಭಾವ ಬೀರುತ್ತಿರುವುದು ಸ್ಪಷ್ಟ.

ಜಾನಪದ ಕಲಾ ಉತ್ಸವದಲ್ಲಿ ಮಾಂಸಾಹಾರ ಸೇವನೆಗೆ ವೇದಿಕೆ ಕಲ್ಪಿಸಿಕೊಟ್ಟ ಕಾರ್ಯಕ್ರಮದ ಸಂಘಟಕರ ವಿರುದ್ಧ ದನಿ ಎತ್ತುತ್ತಿರುವವರ ಮನಸ್ಥಿತಿ ಎಂತಹದ್ದಿರಬಹುದು? ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಡೆಯುವ ಬಹುತೇಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿರುತ್ತದೆ. ಪರಿಷತ್ತಿನ ಆವರಣದಲ್ಲಿ ಸಸ್ಯಾಹಾರ ಸೇವನೆ ಸ್ವೀಕಾರಾರ್ಹ. ಅದೇ ಮಾಂಸಾಹಾರ ಸೇವಿಸಿದರೆ ಅದೊಂದು ಮಹಾ ಅಪರಾಧ ಎಂದು ಗುಲ್ಲೆಬ್ಬಿಸುತ್ತಿರುವವರ ಧೋರಣೆ ಆರೋಗ್ಯಕರವಾದುದಲ್ಲ.

ಮಾಂಸಾಹಾರ ಸೇವಿಸುವ ಕೆಲವರಲ್ಲೂ ಹಂದಿ ಮಾಂಸವೆಂದರೆ ಕೀಳೆಂಬ ಮನೋಭಾವ ಮನೆ ಮಾಡಿದೆ. pig_mutton_stallಹಂದಿ ಮಾಂಸ ಸೇವಿಸುವ ಎಷ್ಟೋ ಮಂದಿ, ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು, ಹೇಳಿಕೊಳ್ಳಲು ಹಿಂಜರಿಯುತ್ತಾರೆ.

ಶಾಲಾ ದಿನಗಳಲ್ಲಿ ನಾವೇನಾದರೂ ಮಾಂಸಾಹಾರವನ್ನು ಬಾಕ್ಸಿಗೆ ಹಾಕಿಕೊಂಡು ಹೋಗಿ ಮಧ್ಯಾಹ್ನ ತಿನ್ನಲು ಕುಳಿತರೆ, ಉಳಿದ ವಿದ್ಯಾರ್ಥಿಗಳೆಲ್ಲ, ನಾವೇನೊ ಮಾಡಬಾರದ್ದನ್ನು ಮಾಡುತ್ತಿದ್ದೇವೆ ಎಂಬಂತೆ ನೋಡುತ್ತಿದ್ದರು. ಕೆಲವರು ಹಂಗಿಸಿಯೂ ಮಾತನಾಡುತ್ತಿದ್ದರು. ಇಂದಿಗೂ ಅದೇ ಮನಸ್ಥಿತಿ ಕೆಲವರಲ್ಲಿ ಬೇರು ಬಿಟ್ಟಿರುವುದರಿಂದ ಮಾಂಸಾಹಾರ ಸೇವನೆ ಕುರಿತು ಈ ಪರಿ ಅಸಹನೆ ವ್ಯಕ್ತವಾಗುತ್ತಿದೆ.

ಸಾಹಿತ್ಯ ಪರಿಷತ್ತು ಎಲ್ಲರನ್ನೂ ಒಳಗೊಂಡಿರುವ ಮತ್ತು ಒಳಗೊಳ್ಳಬೇಕಾದ ಸಂಸ್ಥೆ. ಇದು ಯಾವುದೋ ಒಂದು ಜಾತಿಗೆ ಅಥವಾ ಮತಕ್ಕೆ ಸೀಮಿತವಾದ ಪವಿತ್ರ(?) ದೇಗುಲವಲ್ಲ. ಹೀಗಿರುವಾಗ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾಂಸಾಹಾರ ಸೇವಿಸಬಾರದೆಂದು ನಿರ್ಬಂಧ ವಿಧಿಸುವುದು ಪುರೋಹಿತಶಾಹಿ ಮನಸ್ಥಿತಿಯ ಹೇರಿಕೆಯಂತೆ ತೋರುತ್ತದೆ.

ಎಲ್ಲರಿಗೂ ತಮ್ಮದೇ ಆದ ಆಹಾರ ಪದ್ಧತಿ ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಸಸ್ಯಾಹಾರವೇ ಪರಮಶ್ರೇಷ್ಠವೆಂದು ಪ್ರತಿಪಾದಿಸುವ ಕೆಲ ಮೇಲ್ಜಾತಿಗಳಿಗೆ ಸೇರಿದವರು ಕೂಡ ಇಂದು ಮಾಂಸಾಹಾರ ಮಾಡುತ್ತಿದ್ದಾರೆ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಮಾಂಸಾಹಾರ ಸೇವಿಸುವಂತಿಲ್ಲ ಅಥವಾ ಸೇವಿಸಲೇಬೇಕೆಂಬ ನಿಯಮ ಪಾಲಿಸುವುದು, ವಿಧಿಸುವುದು ಮೂರ್ಖತನ.

ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿರುವವರು, ಹಂದಿ ಮಾಂಸ ಸೇವಿಸಿದ ಮಾತ್ರಕ್ಕೆ ಪರಿಷತ್ತಿನ ಪಾವಿತ್ರ್ಯತೆಗೆ “ಅದ್ಹೇಗೆ ಧಕ್ಕೆಯಾಯಿತು” ಎಂಬ ಕುರಿತು ಎಲ್ಲರಿಗೂ ಮನದಟ್ಟು ಮಾಡಿಕೊಡಬೇಕಿದೆ.

ಪ್ರಾಮಾಣಿಕ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಬಹಿಷ್ಕಾರ !?

– ದಿನೇಶ್ ಕುಮಾರ್ ಎಸ್.ಸಿ.

ಇದು ನನ್ನ ಮಟ್ಟಿಗಂತೂ ಬೆಚ್ಚಿಬೀಳಿಸುವ ಸುದ್ದಿ.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ “ದಿ ಹಿಂದೂ” ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಜಿ.ಟಿ.ಯವರಿಗೆ ನೋಟೀಸೊಂದು ಹೋಗಿದೆ. ನಿಮ್ಮನ್ನು ಸಂಘದ ಸದಸ್ಯತ್ವದಿಂದ ಉಚ್ಛಾಟಿಸಲಾಗುವುದು, ಯಾವುದೇ ಪತ್ರಿಕಾಗೋಷ್ಠಿ ವರದಿಗೆ ಕರೆಯಲಾಗುವುದಿಲ್ಲ ಮತ್ತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನಾಗಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂಬುದು ಈ ನೋಟೀಸಿನ ಒಟ್ಟು ತಾತ್ಪರ್ಯ.

“ದಿ ಹಿಂದೂ” ಪತ್ರಿಕೆ ರಾಷ್ಟ್ರಮಟ್ಟದಲ್ಲಿ ಪತ್ರಿಕಾಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. The_Hindu_logoಈ ಪತ್ರಿಕೆಯ ಬಹುತೇಕ ವರದಿಗಾರರು ಶುದ್ಧಹಸ್ತರಾಗಿಯೇ ಇರುತ್ತಾರೆ. ಸತೀಶ್ ಹಿಂದೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಕೆಲಸ ಮಾಡಿದವರು. ಗ್ರಾಮೀಣ ಭಾಗದ ವರದಿಗಾರಿಕೆಯ ಆಸಕ್ತಿಯಿಂದಾಗಿ ಈಗ ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಬರುವ ಪತ್ರಕರ್ತರೇ ಹೆಚ್ಚಿರುವ ಸಂದರ್ಭದಲ್ಲಿ ಸತೀಶ್ ಬೆಂಗಳೂರೆಂಬ ಮಾಯಾನಗರಿ ಬಿಟ್ಟು ಹಾಸನಕ್ಕೆ ತೆರಳಿದವರು. ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರಿಕೆ ಆರಂಭಿಸಿದಾಗಿನಿಂದ ಆ ಎರಡೂ ಜಿಲ್ಲೆಗಳ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಂತೆ ಬರೆದಿದ್ದಾರೆ. ಯಾರಿಗೂ ಅಂಜದೆ, ಅಳುಕದೆ ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿದ್ದಾರೆ.

ಇಂಥ ಸತೀಶ್ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾಕಾದರೂ ನೋಟೀಸು ಕೊಟ್ಟಿದೆ? Satish_GTಇದರ ಹಿನ್ನೆಲೆ ಏನು ಎಂಬುದಕ್ಕೆ ನೋಟೀಸಿನಲ್ಲೇ ಸ್ಪಷ್ಟ ಉತ್ತರವಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯೊಬ್ಬರ ವಿರುದ್ಧ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಅಪಮಾನಗೊಳಿಸಲಾಗಿದೆ ಎಂಬುದು ನೋಟೀಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸತೀಶ್ ಯಾಕಾಗಿ ಈ ದೂರನ್ನು ನೀಡಿದರು? ಆ ದೂರಿನಲ್ಲಿ ಏನಿದೆ ಎಂಬುದಕ್ಕೆ ಸತೀಶ್ ಕೊಟ್ಟ ದೂರೇ ಎಲ್ಲ ಉತ್ತರ ಹೇಳುತ್ತದೆ. ಸತೀಶ್ ನೀಡಿದ ದೂರು ಈ ಕೆಳಕಂಡಂತಿದೆ.

ಇಂದ.
ಸತೀಶ್ ಜಿ.ಟಿ.
ವರದಿಗಾರ,
ದಿ ಹಿಂದು,
ಹಾಸನ.

ಗೆ.
ಅಧ್ಯಕ್ಷರು,
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ,
ಬೆಂಗಳೂರು.

ಅಧ್ಯಕ್ಷರೆ,

ವಿಷಯ: ಹಾಸನದಲ್ಲಿ ಬೆಳಕಿಗೆ ಬಂದ ‘ಪ್ಯಾಕೆಜ್ ಸಂಸ್ಕೃತಿ’ ಮತ್ತು ಸಂಘದ ಪದಾಧಿಕಾರಿಯೊಬ್ಬರಿಂದ ಮುಖ್ಯವಾಹಿನಿ ಪತ್ರಿಕೆಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿಮಗೆ ದೂರು ಸಲ್ಲಿಸುವುದು.

‘ಭ್ರಷ್ಟರಿಂದ ಪತ್ರಿಕೋದ್ಯಮವನ್ನು ಮುಕ್ತ ಗೊಳಿಸುವುದು’ – ಈ ಸಂಘದ ಆಶಯಗಳಲ್ಲಿ ಒಂದು ಎಂದು ಭಾವಿಸಿ ಹಾಗೂ ನಾನು ಕೆಲಸ ಮಾಡುತ್ತಿರುವ “ದಿ ಹಿಂದು” ಪತ್ರಿಕೆಯ ಮ್ಯಾನೇಜ್‌ಮೆಂಟ್‌ನವರ ಸೂಚನೆ ಮೇರೆಗೆ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ.

ದಿನಾಂಕ ಅಕ್ಟೋಬರ್ 3 ರಂದು ಹಾಸನ ನಗರದಲ್ಲಿ ಕಾಂಗ್ರೆಸ್ ಪಕ್ಷ ಮಹಿಳಾ ಸಮಾವೇಶ ಆಯೋಜಿಸಿತ್ತು. ಸಮಾವೇಶದ ಬಗ್ಗೆ ಹಾಸನ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಶಿವರಾಂ ಕೆಲವೇ ದಿನಗಳ ಹಿಂದೆ ಪತ್ರಿಕಾ ಗೋಷ್ಟಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು.

ಸಮಾವೇಶದ ದಿನ (ಅಕ್ಟೋಬರ್ 3ರಂದು) ಬೆಳಗ್ಗೆ 11.01 ಗಂಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರು ದೂರವಾಣಿ ಮೂಲಕ (ಅವರ ದೂರವಾಣಿ ಸಂಖ್ಯೆ 94486 55043) ನನ್ನನ್ನು ಸಂಪರ್ಕಿಸಿ ‘ನೀವು ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ’ ಎಂದರು. ಅದಕ್ಕೂ ಮೊದಲು “ಕಾಂಗ್ರೆಸ್‌ನವರು ನನಗೆ ಮತ್ತು ಕೆಲ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರಷ್ಟೆ. ಆದರೆ ಸುದ್ದಿವಾಹಿನಿಯ ವರದಿಗಾರರು ಈ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ…” – ಹೀಗೆ ಹೇಳಿದರು. ಅವರ ಮಾತಿನ ಹಿನ್ನೆಲೆ ಗ್ರಹಿಸಲಾಗಲಿಲ್ಲ. ಆದರೆ ಕಾರ್ಯಕ್ರಮಕ್ಕೆ ದಯಮಾಡಿ ಬನ್ನಿ ಎಂದು ಹೇಳಿದ್ದು ಮಾತ್ರ ಸ್ಪಷ್ಟ.

ಇದೇ ರೀತಿ ಇನ್ನೊಂದು ಇಂಗ್ಲಿಷ್ ಪತ್ರಿಕೆ ವರದಿಗಾರನಿಗೂ ದೂರವಾಣಿ ಕರೆ ಮಾಡಿ, ಆ ವರದಿಗಾರ ರಜೆಯ ಮೇಲೆ ಊರಿಗೆ ತೆರಳಿದ್ದರೂ, “ಹೇಗಾದರೂ ಮಾಡಿ ಒಂದೇ ಒಂದು ಸಾಲಿನಷ್ಟಾದರೂ ಈ ಕಾರ್ಯಕ್ರಮದ ವರದಿ ನಿಮ್ಮ ಪತ್ರಿಕೆಯಲ್ಲಿ ಬರುವಂತೆ ಮಾಡು, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಲೀಲಾವತಿಯವರು ಗೋಗರೆದಿದ್ದರು. ವರದಿಗಾರ ಮಿತ್ರ ಈ ಸಂಗತಿಯನ್ನು ಆಪ್ತರ ಬಳಿ ಹಂಚಿಕೊಂಡಿದ್ದಾನೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೀಗೆ ಇವರು ಆಹ್ವಾನ ನೀಡಿದ್ದು ಮತ್ತು ಗೋಗರೆದಿದ್ದು ತೀರಾ ವಿಚಿತ್ರ ಎನಿಸಿತು. ಕೆಲವೇ ನಿಮಿಷಗಳ ನಂತರ ಈ ವರ್ತನೆ ಮೂಲ ಉದ್ದೇಶ ಸ್ಪಷ್ಟವಾಯಿತು.

ಸುದ್ದಿ ವಾಹಿನಿಯೊಂದರ ವರದಿಗಾರ ಮಿತ್ರನಿಗೆ, ಬಿ.ಶಿವರಾಂ ಪತ್ರಿಕಾಗೋಷ್ಟಿಗೆ ತಡವಾಗಿ ಬಂದಿದ್ದರ ಕಾರಣ, ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಹಿತಿ ಇರಲಿಲ್ಲ. ಸಮಾವೇಶದ ದಿನ ಹೈಸ್ಕೂಲ್ ಆವರಣದಲ್ಲಿ ಶಾಮಿಯಾನ ಹಾಕಿದ್ದನ್ನು ನೋಡಿ, ಅಲ್ಲಿಯೇ ಇದ್ದ ಹಾಸನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲಿತಮ್ಮನವರನ್ನು ವಿಚಾರಿಸಿದ್ದಾರೆ. ಆಗ ಅವರಿಂದ ಬಂದ ಉತ್ತರ, “ಯಾಕ್ರಿ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲವಾ? ನಿಮಗೆ ಕೊಡಬೇಕಾದ ಪ್ಯಾಕೇಜನ್ನೆಲ್ಲಾ ನಿಮ್ಮ ಸಂಘದ ಅಧ್ಯಕ್ಷೆ ಲೀಲಾವತಿಯವರಿಗೆ ಕೊಟ್ಟಿದ್ದೇವಲ್ಲ, ಅವರು ಹೇಳಲಿಲ್ಲವಾ? ಇನ್ನು ನಿಮಗೆ ಕೊಡಬೇಕಾದ್ದು ಏನಾದರೂ ಇದ್ದರೆ, ಬನ್ನಿ ತಗೊಂಡು ಹೋಗಿ ಸುದ್ದಿ ಮಾಡಿ..” ಎಂದು ದರ್ಪದಿಂದಲೇ ಮಾತನಾಡಿದ್ದಾರೆ.

ಯಾವ ಸುದ್ದಿಗೂ ಯಾವ ದಿನವೂ ಯಾರ ಬಳಿಯೂ ಪುಡಿಕಾಸು ಕೇಳದ ನಾವು ಪಕ್ಷವೊಂದರ ಸಮಾವೇಶದಲ್ಲಿ ಸಾರ್ವಜನಿಕವಾಗಿ ಹೀಗೆ ಅನ್ನಿಸಿಕೊಳ್ಳಬೇಕಾಯಿತಲ್ಲ ಎಂದು ಕ್ರುದ್ಧನಾದ ವರದಿಗಾರ ತಕ್ಷಣ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಏನಿದರ ಮರ್ಮ ಎಂದು ಕೇಳಿದ್ದಾನೆ. ತಾನು ಕೆಲಸ ಮಾಡುತ್ತಿರುವ ಸುದ್ದಿ ಸಂಸ್ಥೆ ಹೆಸರಿನಲ್ಲಿ ‘ಪ್ಯಾಕೇಜ್’ ಕೇಳುವ ಮತ್ತು ಆ ಮೂಲಕ ಚಾನೆಲ್‌ಗೆ ಮಸಿ ಬಳಿಯುತ್ತಿರುವ ಬಗ್ಗೆ ತನ್ನ ಸಿಟ್ಟು ವ್ಯಕ್ತ ಪಡಿಸಿದ್ದಾನೆ.

ಈ ಘಟನೆಯಿಂದ ವಿಚಲಿತನಾದ ವರದಿಗಾರ ಇತರೆ ಮಿತ್ರರೊಂದಿಗೆ ತನ್ನ ನೋವನ್ನು ಹಂಚಿಕೊಂಡಾಗ ಲೀಲಾವತಿಯವರು ಫೋನ್ ಮಾಡಿದ್ದರ ಹಿಂದಿನ ಉದ್ದೇಶ ಅರ್ಥವಾಯಿತು. ವರದಿಗಾರನೊಂದಿಗೆ ಸಂಭಾಷಣೆ ನಂತರ ಕಾಂಗ್ರೆಸ್ ನಾಯಕಿ ಶ್ರೀಮತಿ ಲಲಿತಮ್ಮನವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಯಾಕ್ರಿ ಯಾರಿಗೂ ನೀವು ಕಾರ್ಯಕ್ರಮದ ಬಗ್ಗೆ ಹೇಳಿಲ್ಲವೇ ಎಂದು ಕೇಳಿದ್ದಾರೆ. ಆ ನಂತರ ನನಗೂ ಮತ್ತು ಇನ್ನಿತರೆ ಮಿತ್ರರಿಗೂ ಲೀಲಾವತಿಯವರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆದಿದ್ದಾರೆ.

ಈ ಸನ್ನಿವೇಶಗಳನ್ನು ಗಮನಿಸಿದಾಗ ನಮ್ಮ (ದಿ ಹಿಂದು) ಪತ್ರಿಕೆಯನ್ನೂ ಸೇರಿದಂತೆ ಮುಖ್ಯವಾಹಿನಿಯ ಪತ್ರಿಕೆಗಳ ಹೆಸರುಗಳನ್ನು ಬಳಸಿಕೊಂಡು ಈ ಘನ ಸಂಘದ ಜಿಲ್ಲಾಧ್ಯಕ್ಷರು ‘ಪ್ಯಾಕೇಜ್’ ಸ್ವೀಕರಿಸಿರುವ ಅನುಮಾನ ಬರುತ್ತದೆ. ಅನುಮಾನಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಿಲತಮ್ಮನವರು ಸಮಾವೇಶದ ಸ್ಥಳದಲ್ಲಿ ಸುದ್ದಿ ವಾಹಿನಿಯ ವರದಿಗಾರನಿಗೆ ಹೇಳಿರುವ ಮಾತುಗಳು – ‘ಎಲ್ಲರಿಗೂ ಸೇರಿ ಪ್ಯಾಕೇಜನ್ನು ಈಗಾಗಲೇ ನಿಮ್ಮ ಅಧ್ಯಕ್ಷರಿಗೆ ನೀಡಿದ್ದೇವಲ್ಲ, ನಿಮಗೂ ಮತ್ತೇನಾದರೂ ಬೇಕಿದ್ದರೆ ತಗೊಂಡು ಹೋಗಿ ಸುದ್ದಿ ಮಾಡಿ..’ ಈ ಮಾತುಗಳನ್ನು ಕೇಳಿಸಿಕೊಂಡ ವರದಿಗಾರನ ಜೊತೆ ಕೆಮಾರಮನ್ ಕೂಡಾ ಇದ್ದರು. ರಾಷ್ಟೀಯ ಪಕ್ಷವೊಂದರ ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿರುವ ಮಾತನ್ನು ಅಲ್ಲಗಳೆಯಲಾದೀತೆ?

2. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಲೀಲಾವತಿಯವರು ನನಗೆ ಮತ್ತು ಇತರೆ ಪತ್ರಕರ್ತರಿಗೆ ದೂರವಾಣಿ ಕರೆಮಾಡಿ ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿದ್ದು. (ಇವರು ಪ್ಯಾಕೇಜ್ ಲಾಭ ಪಡೆಯದಿದ್ದರೆ ನಮಗೆ ಫೋನ್ ಮಾಡಿ ಆಹ್ವಾನಿಸಲು ಇವರ್ಯಾರು? ಅಥವಾ ಇವರೇನು ಕಾಂಗ್ರೆಸ್ ಕಾರ್ಯಕರ್ತರೆ?)

3. “ಕಾರ್ಯಕ್ರಮದ ವರದಿ ಒಂದು ಸಾಲಿನಷ್ಟಾದರೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೋ, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಸಂಘದ ಅಧ್ಯಕ್ಷರು ಕೋರುತ್ತಾರೆಂದರೆ ಅದರ ಹಿಂದಿನ ಮರ್ಮವೇನು? ಪತ್ರಕರ್ತರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕ್ರಮ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗುವಂತೆ ನೋಡಿಕೊಳ್ಳುತ್ತೇನೆಂದು ಪಕ್ಷದ ನೇತಾರರಿಗೆ ಭರವಸೆ ನೀಡಿದ್ದರೆ?

ರಾಷ್ಟ್ರಮಟ್ಟದಲ್ಲಿ ‘ಪೇಯ್ಡ್ ನ್ಯೂಸ್’ ವಿರುದ್ಧ ದನಿ ಎತ್ತಿರುವವರ ಪೈಕಿ ದಿ ಹಿಂದು ಪತ್ರಿಕೆ ಪ್ರಮುಖವಾದದ್ದು. ಪ್ರಸ್ತುತ ಘಟನೆಯಲ್ಲಿ ನಮ್ಮ ಪತ್ರಿಕೆಯ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಸಂಶಯಗಳಿವೆ. ಈ ಬಗ್ಗೆ ನಮ್ಮ ಸಂಸ್ಥೆಗೂ ಮಾಹಿತಿ ನೀಡಿದ್ದೇನೆ. ಅವರ ಸೂಚನೆ ಮೇರೆಗೆ ಈ ದೂರನ್ನು ನಿಮಗೆ ಸಲ್ಲಿಸುತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಿರೀಕ್ಷಿಸುತ್ತೇನೆ.

ಇತಿ,
ಸತೀಶ್ ಜಿ.ಟಿ
ಹಾಸನ
05-10-2012

• ದೂರು ನೀಡುತ್ತಿರುವುದು ನಮ್ಮ ಸಂಸ್ಥೆಯ ಸೂಚನೆ ಮೇರೆಗೆ. ಮಿತ್ರರು ಪ್ರತಿನಿಧಿಸುವ ಸಂಸ್ಥೆಗಳು ದೂರು ನೀಡುವ ನಿರ್ಧಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಗೊತ್ತಿಲ್ಲ. ಹಾಗಾಗಿ ನಾನು ಈ ಪತ್ರದಲ್ಲಿ ಉಲ್ಲೇಖಿಸಿರುವ ವರದಿಗಾರ ಮಿತ್ರರನ್ನು ಮತ್ತು ಅವರು ಪ್ರತಿನಿಧಿಸುವ ಸುದ್ದಿ ಸಂಸ್ಥೆಗಳನ್ನು ಹೆಸರಿಸಿಲ್ಲ.
• ಈ ದೂರಿನ ಪ್ರತಿಯನ್ನು ಹಾಸನ ಜಿಲ್ಲಾ ಸಂಘದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ಕಳುಹಿಸುತ್ತಿದ್ದೇನೆ. ಅಧ್ಯಕ್ಷರ ಮೇಲೆಯೇ ಆರೋಪ ಇರುವುದರಿಂದ, ಅವರಿಗೆ ಪ್ರತಿ ಕಳುಹಿಸುವುದು ಅರ್ಥಹೀನ ಎಂಬುದು ನನ್ನ ಅನಿಸಿಕೆ.

ಈ ದೂರನ್ನು ನೀಡಿರುವುದು 2012ರ ಅಕ್ಟೋಬರ್ 5ರಂದು. “ದಿ ಹಿಂದೂ” ನಂಥ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಪತ್ರಕರ್ತ ತಮ್ಮ ಹೆಸರಲ್ಲಿ, ತಮ್ಮ ಸಂಸ್ಥೆ ವಿಷಯದಲ್ಲಿ ಸುದ್ದಿಗಾಗಿ ಕಾಸು ಎತ್ತುತ್ತಿರುವುದು ಕಂಡುಬಂದರೆ ಏನನ್ನು ಮಾಡಬಹುದೋ ಅದನ್ನೇ ಸತೀಶ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕ್ರಮ ಕೈಗೊಳ್ಳುವುದಿರಲಿ, ದೂರು ತಲುಪಿರುವ ಕುರಿತು ಒಂದು ಸಾಲಿನ ಪ್ರತಿಕ್ರಿಯೆಯನ್ನೂ ಸತೀಶ್ ಅವರಿಗೆ ನೀಡಿಲ್ಲ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ಗಮನಿಸಿದರೆ ಇಂಥ ಪ್ರತಿಕ್ರಿಯೆ, ಕ್ರಮ ಕೈಗೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಅದು ಬೇರೆಯ ವಿಷಯ.

ತಮಾಶೆಯೆಂದರೆ ಈಗ ನಾಲ್ಕು ತಿಂಗಳ ಬಳಿಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸತೀಶ್ ಅವರ ಸದಸ್ಯತ್ವ ರದ್ದುಗೊಳಿಸುವುದಾಗಿ ಗುಟುರು ಹಾಕುತ್ತಿದೆ. ಪತ್ರಿಕಾಗೋಷ್ಠಿಗಳಿಗೆ ಸೇರಿಸುವುದಿಲ್ಲ ಎಂದು ಯಜಮಾನಿಕೆ ದರ್ಪ ಪ್ರದರ್ಶಿಸಿದೆ.

ಹಾಸನ ಜಿಲ್ಲೆಯ ಪತ್ರಿಕಾರಂಗದ ಇತಿಹಾಸ ದೊಡ್ಡದು. ಇಲ್ಲಿ ತಮ್ಮ ಇಡೀ ಜೀವನವನ್ನೇ ಪತ್ರಿಕಾವೃತ್ತಿಗೆ ಸಮರ್ಪಿಸಿದ ಕೃ.ನ,ಮೂರ್ತಿಯಂಥವರಿದ್ದರು. ಪತ್ರಿಕಾವೃತ್ತಿಯನ್ನೇ ಒಂದು ಚಳವಳಿಯನ್ನಾಗಿಸಿಕೊಂಡ ಆರ್.ಪಿ.ವೆಂಕಟೇಶ್ ಮೂರ್ತಿ, ಮಂಜುನಾಥ ದತ್ತ ಅಂಥವರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರು ಸೇರಿದಂತೆ ಬೇರೆಬೇರೆ ಕಡೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿದ್ದಾರೆ. ಶೇಷಾದ್ರಿ, ರಂಗನಾಥ್, ಎಚ್.ಬಿ.ಮದನ್ ಗೌಡ, ವೈ.ಪಿ.ರಾಜೇಗೌಡ, ಬಿ.ಜೆ.ಮಣಿ, ಮಂಜುನಾಥ್, ಕೆಂಚೇಗೌಡ, ಪ್ರಸನ್ನ ಕುಮಾರ್, ಬಾಳ್ಳು ಗೋಪಾಲ್, ಡಿ.ಜಿ.ರಾಜೇಶ್, ರವಿ ನಾಕಲಗೋಡು, ವೇಣು, ವೆಂಕಟೇಶ್, ರವಿಕುಮಾರ್, ಹರೀಶ್, ಬಿ.ಮಂಜು ಹೀಗೆ ನೆನಪಿಸಿಕೊಳ್ಳಲು ಹಾಸನದಲ್ಲಿ ಹತ್ತು ಹಲವಾರು ಹೆಸರುಗಳಿವೆ.

ಹೀಗಿರುವಾಗ ಇಂಥ ಅನೈತಿಕವಾದ, ಮುಖೇಡಿಯಾದ ತೀರ್ಮಾನವನ್ನು ಜಿಲ್ಲಾ ಪತ್ರಕರ್ತರ ಸಂಘ ತೆಗೆದುಕೊಳ್ಳುತ್ತದೆ ಎಂದು ನಂಬುವುದಾದರೂ ಹೇಗೆ? ಅಷ್ಟಕ್ಕೂ ಸಂಘದಿಂದ ಉಚ್ಛಾಟಿಸಿದ ಮಾತ್ರಕ್ಕೆ, ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿರ್ಬಂಧಿಸಿದ ಮಾತ್ರಕ್ಕೆ ಸತೀಶ್ ಅವರ ವೃತ್ತಿಜೀವನವನ್ನು ಕಸಿದುಕೊಳ್ಳಲಾದೀತೆ? ಒಂದು ವೇಳೆ ಸತೀಶ್ ವೃತ್ತಿಯನ್ನು ಕಸಿದುಕೊಳ್ಳುವುದು ಸಂಘದ ಹವಣಿಕೆಯಾದರೆ ಇದೆಂಥ ಸಂಘ?

ನಾನು ಹಲವು ವರ್ಷಗಳ ಕಾಲ ಇದೇ ಹಾಸನ ಜಿಲ್ಲೆಯಲ್ಲಿ ಪತ್ರಿಕಾ ವೃತ್ತಿ ನಡೆಸಿದವನು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ, ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಈ ನೋಟೀಸನ್ನು ಗಮನಿಸಿದಾಗ ನಿಜಕ್ಕೂ ನೋವಾಯಿತು. ಸತೀಶ್ ಅವರನ್ನು ಅವಮಾನಿಸುವ ಭರದಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ತನ್ನನ್ನು ತಾನು ಅಪಮಾನಿಸಿಕೊಂಡಿದೆ. ಕಾಸಿಗಾಗಿ ಸುದ್ದಿ ವಿರುದ್ಧ ಧ್ವನಿಯೆತ್ತಿದ ಪತ್ರಕರ್ತನ ನ್ಯಾಯಶೀಲತೆಯನ್ನು, ವೃತ್ತಿಧರ್ಮವನ್ನು ಗೌರವಿಸುವ, ಪ್ರಶಂಶಿಸುವ ಬದಲು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಾತಾಳಕ್ಕೆ ಇಳಿದಿದೆ.

ಮೇಲೆ ಉಲ್ಲೇಖಿಸಿದ, ಉಲ್ಲೇಖಿಸದೇ ಇರುವ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತ ಮಿತ್ರರಿಗೆ ನನ್ನದೊಂದು ಪ್ರೀತಿಯ ಮನವಿ. ಇದೊಂದು ಕಪ್ಪುಚುಕ್ಕೆ ಅಳಿಸುವುದು ನಿಮ್ಮ ಕೈಯಲ್ಲೇ ಇದೆ. ಸತೀಶ್ ಅವರಿಗೆ ಕಳುಹಿಸಿರುವ ನೋಟೀಸನ್ನು ಬೇಷರತ್ತಾಗಿ ಹಿಂದಕ್ಕೆ ಪಡೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಕಾಸಿಗಾಗಿ ಸುದ್ದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಪತ್ರಕರ್ತರು ಈ ನೋಟೀಸಿನ ಕಾರಣಕ್ಕೆ ತಲೆತಗ್ಗಿಸಿ ನಿಲ್ಲುವಂತಾಗಬಾರದು. ಸತೀಶ್ ಅವರಿಗೆ ತಮ್ಮ ವೃತ್ತಿಯನ್ನು ಯಾರ ಅಡ್ಡಿ, ಆತಂಕ, ಹಸ್ತಕ್ಷೇಪ, ಬೆದರಿಕೆಗಳು ಇಲ್ಲದಂತೆ ನಡೆಸಿಕೊಂಡು ಹೋಗುವಂತೆ ಸಹಕರಿಸಬೇಕು.

ಅದು ಸಾಧ್ಯವಾಗದೆ ಹೋದರೆ, ನಾಡಿನ ನ್ಯಾಯಪರವಾದ ಮನಸ್ಸುಗಳು ಅನಿವಾರ್ಯವಾಗಿ ಜಿಲ್ಲಾ ಪತ್ರಕರ್ತರ ಸಂಘದ ಎದುರೇ ಬಂದು ಧರಣಿ ನಡೆಸಿ, ನಿಮ್ಮ ಕಣ್ಣುಗಳನ್ನು ತೆರೆಸಬೇಕಾದೀತು. ವಿಷಯ ದೊಡ್ಡದಾಗುವ ಮುನ್ನ ಜಿಲ್ಲಾ ಪತ್ರಕರ್ತರು ಎಲ್ಲದಕ್ಕೂ ತೆರೆ ಎಳೆದಾರೆಂಬ ನಂಬಿಕೆ ನನ್ನದು. ಯಾಕೆಂದರೆ ಜಿಲ್ಲೆಯ ಪತ್ರಕರ್ತರು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಬಲಿ ತೆಗೆದುಕೊಳ್ಳುವಷ್ಟು ಅಮಾನವೀಯರು, ಹೇಡಿಗಳು, ಫ್ಯಾಸಿಸ್ಟ್‌ಗಳು ಅಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು.

ಅಮಲಿನಲ್ಲಿರುವವರಿಗೆ ಕಳಕಳಿಯ ಮನವಿ ಅಣಕದಂತೆ ಕಂಡಿತೆ?

– ರಂಜನ್ ರಾಗಿಗುಡ್ಡ

ಸಿಯೆರಾ ಲಿಯೋನ್ ನಲ್ಲಿ ನಡೆದ (1999) ಬಂಡುಕೋರರ ದಾಳಿಯಲ್ಲಿ ಅನೇಕ ಅಮಾಯಕರು ಸತ್ತರು. ಮಕ್ಕಳನ್ನೂ ಕೊಂದರು. ಬಂಡುಕೋರರ ತಂಡದ ನಾಯಕನೊಬ್ಬ ಬಿಬಿಸಿಗೆ ಸಂದರ್ಶನ ನೀಡಿದ. ಸಂದರ್ಶಕ, ‘ಹೆಣ್ಣು ಮಕ್ಕಳು..ಮಕ್ಕಳು ನಿಮ್ಮನ್ನು ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ ಎಂದು ಕೇಳಿದಾಗಲೂ ನಿಮಗೆ ಏನೂ ಅನ್ನಿಸುತ್ತಿರಲಿಲ್ಲವೆ’ ಎಂದು ಕೇಳುತ್ತಾನೆ. ಬಂಡುಕೋರ ಹೇಳುತ್ತಾನೆ.. “ನಾವು ದಾಳಿ ಮಾಡುವಾಗ ಮಾದಕ ವಸ್ತು ಸೇವಿಸಿರುತ್ತಿದ್ದ ಕಾರಣ ಅಮಲಿನಲ್ಲಿರುತ್ತಿದ್ದೆವು. ಯಾರಾದರೂ ಪ್ಲೀಸ್ ಎಂದು ಬೇಡಿಕೊಂಡರೆ ನಮಗೆ ಅವರ ಕೋರಿಕೆ ನಮ್ಮನ್ನು ಅಣಕ ಮಾಡಿದಂತೆ ಎನಿಸುತ್ತಿತ್ತು. ನಾವು ಆಗ ಮತ್ತಷ್ಟು ಹಿಂಸೆ ಮಾಡಲು ಪ್ರಚೋದಿತರಾಗುತ್ತಿದ್ದೆವು..”

ಮಂಗಳೂರಿನ ವರದಿಗಾರ ಮಿತ್ರ ನವೀನ್ ಸೂರಿಂಜೆ ವಿರುದ್ದ ದುರುದ್ದೇಶದಿಂದ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ, ದಯವಿಟ್ಟು ಅವನ ವಿರುದ್ಧದ ಸುಳ್ಳು ಕೇಸುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಕೇಳುವಾಗಲೂ.. naveen-soorinjeಬಹುಶಃ ಈ ಅಮಲಿನಲ್ಲಿರುವ ವ್ಯವಸ್ಥೆಗೆ ಅಣಕ ಮಾಡಿದಂತೆ ಕಾಣಿಸಬಹುದು. ವ್ಯವಸ್ಥೆ ಎಂದರೆ ಕೇವಲ ಆಡಳಿತದಲ್ಲಿರುವ ಸರಕಾರ ಮಾತ್ರ ಅಲ್ಲ. ಸರಕಾರವನ್ನು ಆಡಿಸುತ್ತಿರುವ ಕೈಗಳು, ಮಹಿಳೆಯರ ಉಡುಪನ್ನು ನಿರ್ಧರಿಸುವ ಸಂಘ ಸಂಸ್ಥೆಗಳು ಮತ್ತು ಇಂಥ ಘಾತುಕ ಶಕ್ತಿಗಳನ್ನು ಬೆಂಬಲಿಸುವ ಮನಸ್ಸುಗಳು – ಎಲ್ಲವೂ ಅಮಲಿನಲ್ಲಿಯೇ ಇವೆ ಎಂದೆನಿಸುತ್ತದೆ.

ಕೃಷ್ಣ ಜೆ. ಪಾಲೆಮಾರ್ ಎಂಬ ಮಾಜಿ ಮಂತ್ರಿಗೆ ನವೀನ್ ಸೂರಿಂಜೆ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸಮ್ಮತವಲ್ಲ. ಅವರ ಕಡೆಯ ಅನೇಕ ಅಮಾಯಕರೂ ಇದೇ ಪ್ರಕರಣದಲ್ಲಿ ಸಿಕ್ಕಿ ಜೈಲಿನಲ್ಲಿದ್ದಾರಂತೆ..ಅವರ ಬಿಡುಗಡೆಯೂ ಆಗುವುದಾದರೆ ಮಾತ್ರ ಸೂರಿಂಜೆಯನ್ನು ಬಿಡುಗಡೆ ಮಾಡಬೇಕಂತೆ. ಮತ್ತೊಬ್ಬ ಘನ ಮಂತ್ರಿ ತನ್ನ ಅಸಹಾಯಕತೆಯನ್ನು ಆಪ್ತರ ಬಳಿ ತೋಡಿಕೊಂಡಿದ್ದಾರೆ. ಇದೆಲ್ಲದರ ಹಿಂದೆ ಮಂಗಳೂರು ಭಾಗದಲ್ಲಿ ಕೋಮುವಾದದ ಅಮಲನ್ನು ಹಂಚುತ್ತಿರುವ ಕಲ್ಲು ಹೃದಯದವರೊಬ್ಬರ ಪ್ರಭಾವ ನಿಚ್ಚಳವಾಗಿ ಕಾಣುತ್ತಿದೆ.

ಮಂಗಳೂರಿನ ಕಾರಾಗೃಹದಲ್ಲಿ ನವೀನ್ ಸೂರಿಂಜೆ ಬಂಧಿತನಾಗಿರುವುದು ಮುಸಲ್ಮಾನ ಮಿತ್ರರು ಇರುವಂತಹ ಕೋಣೆಯಲ್ಲಿ. ಹೋಮ್ ಸ್ಟೇ ಪ್ರಕರಣದಲ್ಲಿ ಬಂಧಿಗಳಾಗಿರುವ ಇತರರು ಪ್ರತ್ಯೇಕ ಕೋಣೆಯಲ್ಲಿದ್ದಾರೆ. ಹೋಮ್ ಸ್ಟೇ ದಾಳಿಯ ಸಂಚಿನಲ್ಲಿ ಸೂರಿಂಜೆಯ ಪಾತ್ರ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನವೀನ್ ಮತ್ತು ಪ್ರಕರಣದ ಇತರರು ಮುಖಾಮುಖಿಯಾಗುವುದನ್ನು ತಡೆಯುವ ಸಲುವಾಗಿ ಬೇರೆ ಬೇರೆ ಕೋಣೆಯಲ್ಲಿ ಇರಿಸಲಾಗಿದೆ ಎಂಬ ಸಂಗತಿಯಷ್ಟೇ ಸಾಕು,

ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರಲ್ಲ ಮಿಸ್ಟರ್ ಜಗದೀಶ್ ಶೆಟ್ಟರ್. Jagadish Shettarಆದರೆ ಅವರು ಬಹುಶಃ ಸಂಘ ಪರಿವಾರ ಹಂಚಿರುವ ಮಾದಕ ಸಿದ್ಧಾಂತದ ಪರಿಣಾಮ ಉಂಟಾಗಿರುವ ಅಮಲಿನಲ್ಲಿದ್ದಾರೆ. ಇಲ್ಲವಾದರೆ ಹಿಂದಿನ ಕ್ಯಾಬಿನೆಟ್ ತೀರ್ಮಾನದ ನಂತರವೂ ಸಹಿ ಹಾಕಲು ಹಿಂಜರಿಯುತ್ತಿರಲಿಲ್ಲ. ಸಚಿವ ಸುರೇಶ್ ಕುಮಾರ್ ಕ್ಯಾಬಿನೆಟ್ ಮೀಟಿಂಗ್ ನಂತರದ ಪತ್ರಿಕಾ ಗೋಷ್ಟಿಯಲ್ಲಿ ಸೂರಿಂಜೆ ವಿರುದ್ಧದ ಪ್ರಕರಣ ಹಿಂಪಡೆಯಲು ಮಂತ್ರಿ ಮಂಡಲ ತೀರ್ಮಾನಿಸಿದೆ ಎಂದು ಘೋಷಿಸಿದ್ದರು. ಆದರೆ ಇದುವರೆಗೂ ಮುಖ್ಯಮಂತ್ರಿ ಅದಕ್ಕೆ ಅಧಿಕೃತ ಮುದ್ರೆ ಒತ್ತಿಲ್ಲ.

ನವೆಂಬರ್ 7 ರಂದು ಜೈಲು ಸೇರಿದ ನವೀನ್ ಸೂರಿಂಜೆ ಈಗಾಗಲೆ ಹತ್ತಿರ ಹತ್ತಿರ ನಾಲ್ಕು ತಿಂಗಳ ಕಾಲ ಶಿಕ್ಷೆ ಅನುಭವಿಸಿದ್ದಾರೆ. ನವೀನ್ ಒಬ್ಬ ವರದಿಗಾರನಾಗಿ ಮುಖವಾಡ ಕಳಚಿದ್ದ ಅನೇಕರಿಗೆ ಇದು ಖುಷಿಯ ಸಂಗತಿ. ಅಷ್ಟೇ ಏಕೆ, ಮಂತ್ರಿಯೊಬ್ಬರು ಆಪ್ತರೊಬ್ಬರ ಹತ್ತಿರ ಮಾತನಾಡುತ್ತಾ ಸರಕಾರದ ಹೆಸರಿಗೇ ಮಸಿ ಬಳಿಯಲು ಪ್ರಯತ್ನಪಟ್ಟವನನ್ನು ಸುಮ್ಮನೆ ಬಿಡಲು ಸಾಧ್ಯವೇ.. ಎಂದಿದ್ದರು.

ಅದಕ್ಕೆ ಪದೇ ಪದೇ ಅನ್ನಿಸುತ್ತೆ – ಇವರೆಲ್ಲಾ ಅಮಲಿನಿಂದ ಹೊರಬರೋದು ಯಾವಾಗ?

ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯೇ?

-ಬಸವರಾಜು

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೋದಲ್ಲಿ ಬಂದಲ್ಲಿ “ನಾನು ಕೂಡ ಸಿಎಂ ಪದವಿ ಆಕಾಂಕ್ಷಿ” ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಕಲ್ಚರ್ ಅರಿತವರು, ಹೈಕಮಾಂಡ್ ಅರ್ಥ ಮಾಡಿಕೊಂಡವರು ಯಾರೂ ಹೀಗೆ ಮಾತನಾಡಲಾರರು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಏಳು ವರ್ಷಗಳಾದರೂ ಸಿದ್ದರಾಮಯ್ಯನವರು ಇನ್ನೂ ಫ್ಯೂಡಲ್ ಗುಣಗಳನ್ನು ಬಿಟ್ಟಿಲ್ಲ. ಸಿದ್ದರಾಮಯ್ಯನವರ ದುರಾದೃಷ್ಟವೋ ಏನೋ, ಅವರ “ಸಿಎಂ ಆಕಾಂಕ್ಷಿ” ಒಬ್ಬೊಬ್ಬರಿಗೆ ಒಂದೊಂದು ರೀತಿ ಕೇಳಿಸುತ್ತಿದೆ. ಹತ್ತಾರು ವಿರೋಧಿಗಳನ್ನು ಹುಟ್ಟುಹಾಕಿದೆ. ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಹಾಗೆ ನೋಡಿದರೆ, ಸಿದ್ದರಾಮಯ್ಯನವರು ಚಾಣಾಕ್ಷ ರಾಜಕಾರಣಿಯಲ್ಲ. ಇವತ್ತಿನ ರಾಜಕಾರಣಕ್ಕೆ ಬೇಕಾದ ಡ್ಯಾಷಿಂಗ್ ಗುಣಗಳಿಲ್ಲ. Siddaramaiahಆದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರದವರು. ಅಷ್ಟೇ ಅಲ್ಲ, ಜನಪರವಾಗಿ ಚಿಂತಿಸುವವರು. ನೆಲ-ಜಲ-ಭಾಷೆಯ ವಿಷಯದಲ್ಲಿ ಬದ್ಧತೆಯಿಂದ ವರ್ತಿಸುವವರು. ಜೊತೆಗೆ ರಾಮಮನೋಹರ ಲೋಹಿಯಾರ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜವಾದಿ ಹೋರಾಟ, ಎಡಪಂಥೀಯ ವಿಚಾರಧಾರೆಗಳತ್ತ ಒಲವುಳ್ಳವರು. ಹಿಂದುಳಿದವರು, ಬಡವರು, ದಲಿತರ ಪರ ಕಾಳಜಿ ಕಳಕಳಿಯುಳ್ಳವರು. ತಮ್ಮ ಹಿಂಬಾಲಕರಿಗೆ, ಜಾತಿಯವರಿಗೆ ಅನುಕೂಲ ಮಾಡಿಕೊಟ್ಟರೂ, ಕಡು ಭ್ರಷ್ಟರ ಪಟ್ಟಿಗೆ ಸೇರದವರು. ಅಧಿಕಾರದಲ್ಲಿದ್ದಾಗ ಜನರತ್ತ ನೋಡದೆ “ಹಾಂ ಹೂಂ” ಎನ್ನುವ ಅಹಂಕಾರದ ಮೂಟೆಯಂತೆ ಕಂಡರೂ, ಕೇಡಿ ರಾಜಕಾರಣದಿಂದ ದೂರವಿರುವವರು.

ಇಂತಹ ಸಿದ್ಧರಾಮಯ್ಯನವರು ಹುಟ್ಟಿದ್ದು 12 ಆಗಸ್ಟ್, 1948ರಲ್ಲಿ, ಮೈಸೂರು ತಾಲೂಕಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ. ರಾಜಕೀಯ ರಂಗಕ್ಕೆ ಧುಮುಕಿದ್ದು 1978ರಲ್ಲಿ, ತಾಲೂಕ್ ಬೋರ್ಡ್ ಮೆಂಬರ್ ಆಗುವ ಮೂಲಕ. ಆನಂತರ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊಟ್ಟ ಮೊದಲಬಾರಿಗೆ ಭಾರತೀಯ ಲೋಕದಳ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯನವರು, ಆ ನಂತರ ಜನತಾ ಪಕ್ಷ ಸೇರಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪರಿಚಿತರಾದರು. 1985ರಲ್ಲಿ ಮತ್ತೆ ಶಾಸಕರಾಗಿ ಚುನಾಯಿತರಾದ ಸಿದ್ದರಾಮಯ್ಯನವರು, ಮೊದಲ ಬಾರಿಗೆ ಪಶು ಸಂಗೋಪನೆ ಮಂತ್ರಿಯಾದರು. ಅಲ್ಲಿಂದ ಇಲ್ಲಿಯವರೆಗೆ, ತಮ್ಮ 35 ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಹತ್ತು ಹಲವು ಹುದ್ದೆಗಳನ್ನು ನಿರ್ವಹಿಸಿ ನಿಭಾಯಿಸಿ ಹೆಸರು ಗಳಿಸಿದರು. ಈಗ ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಗಾಳಿ ಬೀಸುತ್ತಿದೆ, ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗುವ ಕನಸು ಈಡೇರುವ ಕಾಲ ಕೂಡಿ ಬರುತ್ತಿದೆ. ಆದರೆ ಸಿದ್ದರಾಮಯ್ಯನವರ ಒರಟು ಸ್ವಭಾವ ಅವಕಾಶಗಳಿಂದ ವಂಚಿತರನ್ನಾಗಿಸುತ್ತಿದೆ. ಸಿದ್ದರಾಮಯ್ಯನವರನ್ನು ಹತ್ತಿರದಿಂದ ಬಲ್ಲವರು, “ಪಾರ್ಟಿಗೆ ಸೇರಿಸಿಕೊಂಡು ಮೊದಲು ಮಂತ್ರಿ ಮಾಡಿದವರು ರಾಮಕೃಷ್ಣ ಹೆಗಡೆಯವರು. ಸಿದ್ದರಾಮಯ್ಯನವರು ಅವರನ್ನು ಬಿಟ್ಟು ದೇವೇಗೌಡರ ಹಿಂದೆ ಹೋದರು. ಗೌಡರು ಸಿದ್ದರಾಮಯ್ಯರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದರು. ಉಪಮುಖ್ಯಮಂತ್ರಿಯನ್ನಾಗಿಸಿದರು. ಸಿದ್ದರಾಮಯ್ಯನವರು ಗೌಡರನ್ನೂ ಬಿಟ್ಟರು. siddaramaiah_dharam_khargeಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಆ ಪಕ್ಷದ ರೀತಿ ರಿವಾಜುಗಳನ್ನು ಅರಿತು ವರ್ತಿಸಬೇಕಾದವರು, ಹೋದಲ್ಲಿ ಬಂದಲ್ಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇದು ಅವರ ಹಾದಿಗೆ ತೊಡಕಾದರೂ ಆಗಬಹುದು” ಎನ್ನುತ್ತಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ಇವರಿಬ್ಬರದೇ ಕಾರುಬಾರು. ಹೈಕಮಾಂಡ್ ಕೂಡ ಕುರುಬ-ದಲಿತ ಜಾತಿ ಸಮೀಕರಣವನ್ನು ಮುಂದಿಟ್ಟು, ಸಿದ್ದರಾಮಯ್ಯ- ಪರಮೇಶ್ವರ್ ಅವರುಗಳ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸುವುದೆಂದು ನಿರ್ಧರಿಸಿದೆ. ಹೈಕಮಾಂಡ್ ಹೀಗೆ ನಿರ್ಧರಿಸಿದ ಮೇಲೆ, ಸಿದ್ದರಾಮಯ್ಯನವರು ಮುತ್ಸದ್ದಿ ರಾಜಕಾರಣಿಯಂತೆ ವರ್ತಿಸಿ ಎಲ್ಲರ ನಾಯಕನಾಗಿ ಹೊರಹೊಮ್ಮಬೇಕಾದವರು, ಯಾಕೋ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಪರಮೇಶ್ವರ್ ಗುಂಪು, ಎಸ್.ಎಂ. ಕೃಷ್ಣರ ಗುಂಪು ಮತ್ತು ಹಿರಿಯ ನಾಯಕರ ಗುಂಪುಗಳಿಗೆ ಕಂಡರಾಗದ ವ್ಯಕ್ತಿಯಾಗುತ್ತಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವ ಖಾತೆಗೆ ರಾಜೀನಾಮೆ ಕೊಟ್ಟು ಎಸ್.ಎಂ. ಕೃಷ್ಣ ಮರಳಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದಾಗ,smkrsihwig ನಿಜಕ್ಕೂ ಕಂಗಾಲಾದವರು ಜೆಡಿಎಸ್‌ನ ದೇವೇಗೌಡ ಮತ್ತು ಕುಮಾರಸ್ವಾಮಿ. ಜೆಡಿಎಸ್‌ಗೆ ಬಲ ಇರುವುದೇ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ. ಅಲ್ಲಿಗೆ ಮತ್ತೊಬ್ಬ ಒಕ್ಕಲಿಗ ನಾಯಕ ಬಂದರೆ, ಪಕ್ಷಾಂತರದ ಮೂಲಕ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಸಹಜವಾಗಿಯೇ ಜೆಡಿಎಸ್ ಸೊರಗುತ್ತದೆ. ಇದನ್ನರಿತ ಅಪ್ಪಮಕ್ಕಳು ಕೃಷ್ಣರ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಸಿದ್ದರಾಮಯ್ಯನವರೇ ಕೃಷ್ಣರ ವಿರುದ್ಧ ಉಗ್ರ ವಿರೋಧ ವ್ಯಕ್ತಪಡಿಸಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ಕೃಷ್ಣರಿಗೆ ಯಾವ ಸ್ಥಾನವನ್ನೂ ನೀಡದಿರುವಂತೆ ನೋಡಿಕೊಂಡರು.

ಹೈಕಮಾಂಡ್ ಮೇಲೆ ಒತ್ತಡ ಹಾಕಲು ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು, ಬೆನ್ನ ಹಿಂದೆ ನಿಂತು ಬೆಂಬಲಿಸಿದವರು ಯಾರು ಎಂದರೆ, “ಕೃಷ್ಣರನ್ನು ಕಂಡರಾಗದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಮತ್ತು ಶ್ಯಾಮನೂರು ಶಿವಶಂಕರಪ್ಪನವರು” ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ಸಿನೊಳಗಿನ ಗುಂಪು ರಾಜಕಾರಣವನ್ನು ಬಿಚ್ಚಿಟ್ಟರು. ಮುಂದುವರೆದು, “ಈ ಗುಂಪಿಗೆ ಮುಂದಿನ ಮುಖ್ಯಮಂತ್ರಿಯಾಗುವ ಆಸೆ ಇದೆ. ಸೀನಿಯಾರಿಟಿ ಮುಂದೆ ಮಾಡಿ ಖರ್ಗೆಯವರನ್ನು ಸಿಎಂ ಮಾಡಿದರೆ, ಸಿದ್ದರಾಮಯ್ಯನವರಿಗೆ ಡೆಪ್ಯೂಟಿ ಸಿಎಂ ಮಾಡುವುದು. ಇಲ್ಲ, ಚುನಾವಣೆಯನ್ನು ಎದುರಿಸಿದವರೇ ಸಿಎಂ ಆಗಬೇಕು ಎಂದರೆ, ಪರಮೇಶ್ವರ್ ಬಿಟ್ಟು ಸಿದ್ದುವನ್ನು ಬೆಂಬಲಿಸುವುದು ಈ ಗುಂಪಿನ ಒಳ ಒಪ್ಪಂದ” ಎನ್ನುತ್ತಾರೆ ಆ ಹಿರಿಯರು.

ಹೀಗಾಗಿ ಈ ಗುಂಪು ಕೃಷ್ಣರನ್ನು, ಅವರ ಶಿಷ್ಟಕೋಟಿಯನ್ನು ವ್ಯವಸ್ಥಿತವಾಗಿ ಅಧಿಕಾರ ರಾಜಕಾರಣದಿಂದ ದೂರವಿಡಲು ಈ ಸಂಚನ್ನು ರೂಪಿಸಿತು. ಹೈಕಮಾಂಡ್ ಕೂಡ ಈ ಸಂಚಿಗೆ ಬಲಿಯಾಗಿ, ಕೃಷ್ಣರಿಗೆ ಯಾವ ಸ್ಥಾನಮಾನ ನೀಡದಂತೆ ನೋಡಿಕೊಂಡಿತು. ಮುಂದುವರೆದು, ಲಿಂಗಾಯಿತ ಕೋಮಿನ ವೀರಣ್ಣ ಮತ್ತಿಕಟ್ಟಿಯನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿಸಿತು. ಅಲ್ಲಿಗೆ ಕೃಷ್ಣರ ಅಧ್ಯಾಯ ಮುಗಿಯಿತು. ಸಿದ್ದರಾಮಯ್ಯನವರ ಹಾದಿ ಸುಗಮವಾಯಿತು.

ಹೀಗಾಗಿದ್ದು, ಕಾಂಗ್ರೆಸ್ಸಿನ ಕೃಷ್ಣ ಮತ್ತವರ ಗುಂಪಿಗಷ್ಟೇ ಅಲ್ಲ, ಸಿದ್ದರಾಮಯ್ಯನವರನ್ನು ಕಂಡರಾಗದ ಜೆಡಿಎಸ್‌ನ devegowda_kumaraswamyದೇವೇಗೌಡ ಮತ್ತವರ ಮಕ್ಕಳಿಗೆ ಸಹಿಸಲಸಾಧ್ಯ ಸಂಕಟ ತಂದಿಟ್ಟಿದೆ. ಮತ್ತೊಂದು ಕಡೆ, ಬಿಜೆಪಿಯ ಮತ್ತೊಬ್ಬ ಕುರುಬ ಜನಾಂಗದ ನಾಯಕ ಕೆ.ಎಸ್. ಈಶ್ವರಪ್ಪನವರ ಮೆರೆದಾಟಕ್ಕೆ ಬ್ರೇಕ್ ಹಾಕಿದೆ. ಸಹಜವಾಗಿ ಈಗ ಇವರೆಲ್ಲರೂ ಸಿದ್ದು ಮೇಲೆ ಬಿದ್ದಿದ್ದಾರೆ. ಹೇಗಾದರೂ ಸರಿ, ಸಿದ್ದು ಸಿಎಂ ಆಗದಂತೆ ನೋಡಿಕೊಳ್ಳಬೇಕೆಂಬ ಒಳ ಒಪ್ಪಂದಕ್ಕೆ ಬಂದಿದ್ದಾರೆ. ಅವರೆಲ್ಲರ ಕಣ್ಣು ವರುಣಾ ಕ್ಷೇತ್ರದತ್ತ ನೆಟ್ಟಿದೆ.

ಸಿದ್ದರಾಮಯ್ಯನವರ ಉಡಾಫೆ ಗುಣಕ್ಕೆ ಸರಿಯಾಗಿ, ಮೈಸೂರಿನ ವರುಣಾದಿಂದ ಗೆದ್ದುಬಂದ ದಿನದಿಂದ ಇಲ್ಲಿಯವರೆಗೆ ಪಾರ್ಟಿಯೊಳಗಿನ ಕಸರತ್ತಿನಲ್ಲಿ ಕಳೆದುಹೋಗಿ, ಹೈಕಮಾಂಡಿನ ಜೊತೆ ಜಗಳಕ್ಕಿಳಿದು ವಿರೋಧಪಕ್ಷದ ನಾಯಕನ ಸ್ಥಾನ ಗಿಟ್ಟಿಸುವಲ್ಲಿ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಮತ ನೀಡಿ ಗೆಲ್ಲಿಸಿದ ಮತದಾರರನ್ನೇ ಮರೆತುಬಿಟ್ಟಿದ್ದಾರೆ. ಜೊತೆಗೆ ಕ್ಷೇತ್ರವನ್ನು ಮಗ ರಾಕೇಶನ ಉಸ್ತುವಾರಿಗೆ ಕೊಟ್ಟಿದ್ದರಿಂದ, ಆ ಹುಡುಗಾಟಿಕೆಗೆ ಜನ ಬೆಚ್ಚಿ ಬಿದ್ದು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆ.

ಸಿದ್ದರಾಮಯ್ಯನವರು ಕೈಬಿಟ್ಟ ಕ್ಷೇತ್ರ ವಿರೋಧಿಗಳ ಪಾಲಾಗಿದೆ. ವರುಣಾ ಕ್ಷೇತ್ರಕ್ಕೆ ಸೇರಿದ, ಯಡಿಯೂರಪ್ಪನವರ ಬಲಗೈ ಬಂಟ ಕಾಪು ಸಿದ್ದಲಿಂಗಸ್ವಾಮಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹುಟ್ಟಿದೆ. ಜೊತೆಗೆ ಕ್ಷೇತ್ರದಲ್ಲಿ 42 ಸಾವಿರ ಲಿಂಗಾಯತ ಕೋಮಿನ ಮತದಾರರಿರುವುದು, ಇದಕ್ಕೆ ಸುತ್ತೂರು ಸ್ವಾಮಿಗಳ ಸಹಕಾರವಿರುವುದು ಸಿದ್ದಲಿಂಗಸ್ವಾಮಿಗೆ ಆನೆಬಲ ಬಂದಂತಾಗಿದೆ. ಅಷ್ಟೇ ಅಲ್ಲ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದಲಿಂಗಸ್ವಾಮಿಗೆ ತಾವೇ ಶಾಸಕರಂತೆ ಓಡಾಡುತ್ತ, ಸರ್ಕಾರದಿಂದ ಹತ್ತೆಂಟು ಕೋಟಿ ರೂಪಾಯಿಗಳ ಯೋಜನೆಗಳನ್ನು ತಂದು ಸುರಿಯುತ್ತ, ಕೇಳಿದವರಿಗೆಲ್ಲ ಹಣ ಕೊಟ್ಟು ಆಪ್ತರಾಗಿದ್ದಾರೆ. ಸಿದ್ದರಾಮಯ್ಯನವರ ಮಗನ ಅಟಾಟೋಪಕ್ಕೆ ಬೇಸತ್ತಿದ್ದ ಜನ ಸಿದ್ದಲಿಂಗಸ್ವಾಮಿ ಕೆಲಸ ಮತ್ತು ಹಣಕ್ಕೆ ಮನಸೋತು, ಅವರಿಗಿಂತ ಇವರೇ ವಾಸಿ ಎನ್ನತೊಡಗಿದ್ದಾರೆ.

ಮತ್ತೊಂದು ಬದಿಯಿಂದ ಜೆಡಿಎಸ್‌ನ ದೇವೇಗೌಡರು, “ಬೆನ್ನಿಗೆ ಚೂರಿ ಹಾಕಿ ಹೋದವನು, ಅದು ಹೇಗೆ ಮುಖ್ಯಮಂತ್ರಿಯಾಗುತ್ತಾನೋ ನೋಡ್ತೀನಿ” ಎಂದು ಹಠಕ್ಕೆ ಬಿದ್ದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು ಎದುರಿಗೆ ನಿಲ್ಲಿಸಲು ಐನಾತಿ ಆಸಾಮಿಯನ್ನೇ ಅಭ್ಯರ್ಥಿಯನ್ನಾಗಿ ಹುಡುಕಿದ್ದಾರೆ. ಮೈಸೂರಿನ ದೇವರಾಜ ಠಾಣೆಯಲ್ಲಿ ಎಸಿಪಿಯಾಗಿದ್ದ ಚೆಲುವರಾಜು ಎಂಬ ನಾಯಕ ಜನಾಂಗದ ಪೊಲೀಸ್ ಅಧಿಕಾರಿ, ಸ್ವಯಂನಿವೃತ್ತಿ ಪಡೆದು ಮನೆಗೆ ಮರಳಿದ್ದಾರೆ. ಜೊತೆಗೆ ಸೇವೆಯಲ್ಲಿದ್ದಾಗ ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದಾರೆ. ಈಗ ಗೌಡರು ಈ ಚೆಲುವರಾಜು ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ. ಹಾಗೆ ನೋಡಿದರೆ, ವರುಣಾ ಕ್ಷೇತ್ರದಲ್ಲಿ 35 ಸಾವಿರ ಕುರುಬ ಮತದಾರರಿದ್ದಾರೆ. ಇವರಷ್ಟೇ ಸಂಖ್ಯೆಯಲ್ಲಿ ನಾಯಕರ ಜನಾಂಗದ ಜನರೂ ಇದ್ದಾರೆ.

ಇದಷ್ಟೇ ಅಲ್ಲ, ಮುಂಬರುವ ಚುನಾವಣೆ ಮತ್ತು ಚುನಾವಣಾ ನಂತರ ಬಿಜೆಪಿ-ಜೆಡಿಎಸ್ ಒಂದಾಗುವ ಸೂಚನೆಗಳಿವೆ. KS-Eshwarappaಒಳಒಪ್ಪಂದವೂ ನಡೆದಿದೆ. ಹೀಗಾಗಿ ದೇವೇಗೌಡರ ಮಾತು ಈಗ ಬಿಜೆಪಿಗೆ ವೇದವಾಕ್ಯವಾಗಿದೆ. ಮೊದಲೇ ಸಿದ್ಧರಾಮಯ್ಯನವರನ್ನು ಕಂಡರಾಗದ ಈಶ್ವರಪ್ಪ, ದೇವೇಗೌಡರ ತಂತ್ರಕ್ಕೆ ತಲೆಬಾಗಿ ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದೆ ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಿದರೆ, ಬಿಜೆಪಿಯ ಮತಗಳ ಜೊತೆಗೆ ಜೆಡಿಎಸ್‌ನ ಮತಗಳು ಸೇರಿ ನಾಯಕ ಜನಾಂಗದ ಚೆಲುವರಾಜು, ಸಿದ್ದರಾಮಯ್ಯನವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಇದೇ ಫಾರ್ಮುಲಾ 2006 ರಲ್ಲಿ ನಡೆದ ವರುಣಾ ಉಪಚುನಾವಣೆಯಲ್ಲಿ ಕಾರ್ಯರೂಪಕ್ಕೆ ಬಂದಿತ್ತು, ಕೇವಲ 257 ಓಟುಗಳಿಂದ ಸಿದ್ಧರಾಮಯ್ಯ ಏದುಸಿರು ಬಿಟ್ಟು ಗೆದ್ದಿದ್ದರು. ಇದು ಮತ್ತೆ ಪುನರಾವರ್ತನೆಯಾಗಲಿದೆ.

ಹಾಗೆಯೇ ಮತ್ತೊಂದು ಬದಿಯಿಂದ ಕಾಪು ಸಿದ್ದಲಿಂಗಸ್ವಾಮಿ, ಸುತ್ತೂರು ಸ್ವಾಮಿ, ಯಡಿಯೂರಪ್ಪನವರ ಹೊಡೆತವೂ ಬಿದ್ದರೆ ಸಿದ್ದು ಮೇಲೇಳುವುದು ಕಷ್ಟವಿದೆ. ಇದಲ್ಲಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ವಿರೋಧಿ ಗುಂಪು ಒಳಗಿಂದೊಳಗೇ ಸಿದ್ದರಾಮಯ್ಯನವರ ವಿರೋಧಿಗಳೊಂದಿಗೆ ಕೈ ಜೋಡಿಸಿದರೆ, ಅಲ್ಲಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಿರಲಿ, ಶಾಸಕರಾಗುವುದೂ ಕಷ್ಟವಾಗುತ್ತದೆ.

ಈಗ ಸಿದ್ದರಾಮಯ್ಯನವರ ಮುಂದಿರುವ ದಾರಿ- ತಮ್ಮ ಗುಣಸ್ವಭಾವವನ್ನು ಬದಲಿಸಿಕೊಳ್ಳುವುದು, ಕಾಂಗ್ರೆಸ್ ಕಲ್ಚರ್ ಅಳವಡಿಸಿಕೊಳ್ಳುವುದು, ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಇದು ಸಿದ್ದರಾಮಯ್ಯನವರಿಗೆ ಸಾಧ್ಯವೇ?