ಯಡಿಯೂರಪ್ಪ ಮತ್ತು ನಿರಾಣಿಯ ತಪ್ಪು ಕಂಡುಹಿಡಿದ ಲೋಕಾಯುಕ್ತ ಪೋಲಿಸರು…

– ರವಿ ಕೃಷ್ಣಾರೆಡ್ಡಿ

ಅಕ್ಟೋಬರ್  18, 2011 ರಂದು ವರ್ತಮಾನ.ಕಾಮ್‌ನಲ್ಲಿ “ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…” ವರದಿ ದಾಖಲೆಗಳ ಸಮೇತ ಪ್ರಕಟವಾಗಿತ್ತು. ಆಗ ಈ ಕೇಸು ಲೋಕಾಯುಕ್ತ ನ್ಯಾಯಾಲಯದಲ್ಲಿತ್ತು ಮತ್ತು ಲೋಕಾಯುಕ್ತ ಪೋಲಿಸರು ತನಿಖೆ ನಡೆಸುತ್ತಿದ್ದರು. ಎಷ್ಟೋ ತಿಂಗಳಗಳ ನಂತರ, ಬಹುಶಃ ವರ್ಷದ ನಂತರ, ನಮ್ಮ ಘನ, ದಕ್ಷ ಲೋಕಾಯುಕ್ತ ಪೋಲಿಸರು ಈ ಕೇಸಿನಲ್ಲಿ ಸತ್ಯಾಂಶ ಇಲ್ಲ ಎಂದು ನವೆಂಬರ್ 13, 2012 ರಂದು ನ್ಯಾಯಾಲಯಕ್ಕೆ ’ಬಿ’ ರಿಪೋರ್ಟ್ ಸಲ್ಲಿಸಿದರು. DC-bsy-nirani-lokayukta_141112ನ್ಯಾಯಾಲಯ ಅದನ್ನು ತಿರಸ್ಕರಿಸಿ ಮತ್ತೊಮ್ಮೆ ತನಿಖೆಗೆ ಆದೇಶಿಸಿತು.

ಮತ್ತೆ ತಿಂಗಳುಗಳಾದ ಮೇಲೆ, ನೆನ್ನೆ, ನಮ್ಮ ದಕ್ಷ ಮತ್ತು ನಿಷ್ಪಕ್ಷಪಾತಿ ಲೋಕಾಯುಕ್ತ ಪೋಲಿಸರು ಲೊಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಎರಡನೆ ವರದಿ ಸಲ್ಲಿಸಿದ್ದಾರೆ. ಈ ಬಾರಿ ಯಡಿಯೂರಪ್ಪ ಮತು  ಸಚಿವ ಮುರುಗೇಶ್ ನಿರಾಣಿಯ ವಿರುದ್ಧದ ಆರೋಪದಲ್ಲಿ ನಿಜಾಂಶ ಇದೆ ಎಂದಿದ್ದಾರೆ. ನ್ಯಾಯಾಲಯದ ಅಭಿಪ್ರಾಯ ಇನ್ನೂ ಪ್ರಕಟವಾಗಿಲ್ಲ.

ಲೋಕಾಯುಕ್ತ ಪೋಲಿಸರಿಗೆ ಈಗ ಯಾವ ಹೊಸ ವಿವರಗಳು ಸಿಕ್ಕವು ಗೊತ್ತಿಲ್ಲ. ಆದರೆ, ಲೋಕಾಯುಕ್ತ ಪೋಲಿಸರು ಹಾಕುತ್ತಿದ್ದ ಮತ್ತು ಹಾಕುತ್ತಿರುವ ’ಬಿ’ ರಿಪೋರ್ಟ್‌ಗಳು ಎಷ್ಟು ಅಸಂಬದ್ಧ ಎಂದು ಇದರಿಂದ ಗೊತ್ತಾಗುತ್ತದೆ. ರಾಜಕೀಯ ಹಸ್ತಕ್ಷೇಪದಿಂದ ಲೋಕಾಯುಕ್ತ ಸಂಸ್ಥೆಯನ್ನು ಮುಕ್ತಗೊಳಿಸಿ ಅದನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡದಿದ್ದರೆ ಆ ಸಂಸ್ಥೆ ಪೋಲಿಸ್ ಇಲಾಖೆಯ ಹೆಚ್ಚುವರಿ ಅಂಗ ಮಾತ್ರವಾಗಿರುತ್ತದೆ.

ಇನ್ನು ಫ್ರಾಡ್‌ಗಳೆಲ್ಲ ಈ ರಾಜ್ಯದಲ್ಲಿ ಮಂತ್ರಿಗಳಾಗಿ ಮುಂದುವರೆಯುತ್ತಲೇ ಇದ್ದಾರೆ. ಲೊಕಾಯುಕ್ತ ಪೋಲಿಸರು ಸರಿಯಾಗಿ ತನಿಖೆ ನಡೆಸಿ ಶೀಘ್ರಗತಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುವು ಮಾಡಿಕೊಟ್ಟರೆ ನಮ್ಮ ಅನೇಕ ಭ್ರಷ್ಟ ರಾಜಕಾರಣಿಗಳು ಜೈಲಿನಲ್ಲಿದ್ದು ನಮ್ಮ ರಾಜಕೀಯ ಕ್ಷೇತ್ರ ಅಷ್ಟು ಮಾತ್ರಕ್ಕಾದರೂ ಶುದ್ದವಾಗಿರುತ್ತಿತ್ತು. ಆದರೆ,  ಕೊತ್ವಾಲನೂ ಕಳ್ಳರೊಂದಿಗೆ ಶಾಮೀಲಾಗಿರುವಾಗ ಅಥವ ಮಂತ್ರಿಯೇ ಕಳ್ಳನಾಗಿರುವಾಗ ಅವನ ಕೆಳಗಿರುವ ಕೊತ್ವಾಲ ತಾನೆ ಏನು ಮಾಡುತ್ತಾನೆ? ಲೊಕಾಯುಕ್ತ ಸಂಸ್ಥೆಯ ಸ್ವಾಯತ್ತತೆಗಾಗಿ ನಮ್ಮ ರಾಜಕೀಯ ಪಕ್ಷಗಳನ್ನು ಜನರು ಒತ್ತಾಯಿಸಬೇಕಿದೆ.

ವಿಜಯ ಕರ್ನಾಟಕ:

bsy-nirani-pasha

The Hindu:

thehindu-bsy-nirani-lokayukta

 

ಅತಿ ದೈವಭಕ್ತಿ ಇದ್ದೂ ನಮ್ಮ ದೇಶ ನಾಗರಿಕತೆಯಲ್ಲಿ ಯಾಕೆ ಹಿಂದೆ?

– ಆನಂದ ಪ್ರಸಾದ್

ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಅಧ್ಯಾತ್ಮಿಕ ಪರಂಪರೆ ಹೊಂದಿದೆ ಹಾಗೂ ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಕೃತಿ ಉಳ್ಳ ದೇಶವೆಂದು ಹಿಂದುತ್ವವಾದಿಗಳು ಅವಕಾಶ ಸಿಕ್ಕಿದಾಗಲೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಮ್ಮ ದೇಶದ ಎಲ್ಲಾ ರಂಗಗಳಲ್ಲೂ ಇದಕ್ಕೆ ವ್ಯತಿರಿಕ್ತವಾದ ಅನುಭವ ಜನತೆಗೆ ಆಗುತ್ತಾ ಇರುತ್ತದೆ. ನಮ್ಮ ದೇಶದ ಜನ ದೇವರಲ್ಲಿ ಅಪಾರವಾದ ಭಕ್ತಿ ಹಾಗೂ ಶ್ರದ್ಧೆ ತೋರಿಸುತ್ತಾರೆಯೇ ವಿನಃ ಅದೇ ಶ್ರದ್ಧೆ ಹಾಗೂ ಕಾಳಜಿಯನ್ನು ತಮ್ಮ ಸಹಮಾನವರ ಬಗ್ಗೆ ತೋರಿಸುವುದಿಲ್ಲ. ಹೀಗಾಗಿ ಆಧ್ಯಾತ್ಮಿಕ ಶ್ರದ್ಧೆ ಹಾಗೂ ದೇವರ ಭಕ್ತಿಗೂ ಹಾಗೂ ನಾಗರಿಕತೆಯ ವಿಕಾಸಕ್ಕೂ ಸಂಬಂಧ ಇರುವಂತೆ ಕಾಣುವುದಿಲ್ಲ. tirupati-brahmotsavತೀರಾ ಇತ್ತೀಚೆಗಿನ ಕೆಲವು ಶತಮಾನಗಳ ಇತಿಹಾಸವುಳ್ಳ ಅಮೇರಿಕಾ ಹಾಗೂ ಯೂರೋಪಿನ ದೇಶಗಳು ನಾಗರಿಕತೆಯಲ್ಲಿ ನಮಗಿಂತ ಮುನ್ನಡೆ ಸಾಧಿಸಿರುವುದು ಕಂಡುಬರುತ್ತದೆ. ಅಲ್ಲಿನ ದೇಶಗಳು ತಮ್ಮ ನಾಗರಿಕರ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿವೆ. ಅಲ್ಲಿನ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ ನಮ್ಮ ದೇಶಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಕಾಳಜಿಯನ್ನು ತಮ್ಮ ದೇಶದ ಪ್ರಜೆಗಳ ಬಗ್ಗೆ ತೋರಿಸುತ್ತಾರೆ. ತೀರಾ ಇತ್ತೀಚೆಗಿನ ಇತಿಹಾಸ ಉಳ್ಳ ಅಲ್ಲಿನ ದೇಶಗಳು ಇದನ್ನು ಸಾಧಿಸಿರುವುದು ಅಲ್ಲಿನ ನಾಗರಿಕತೆ ನಮ್ಮ ದೇಶಕ್ಕಿಂತ ಮುಂದುವರಿದಿರುವುದನ್ನು ತೋರಿಸುತ್ತದೆ.

ನಮ್ಮ ದೇಶದಲ್ಲಿ ರಾಜಕಾರಣಿಗಳಾಗಲಿ, ಸರ್ಕಾರೀ ಅಧಿಕಾರಿಗಳಾಗಲೀ ಹೆಚ್ಚಿನವರೂ ಪರಮ ದೈವಭಕ್ತರೇ ಆಗಿರುತ್ತಾರೆ. ಇಂಥ ದೈವಶ್ರದ್ಧೆ ಇದ್ದೂ ಭ್ರಷ್ಟಾಚಾರ, ಮೋಸ, ವಂಚನೆ, ತಮ್ಮ ಕೆಲಸ ನಿರ್ವಹಿಸುವಲ್ಲಿ ಉದಾಸೀನತೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ದೈವಭಕ್ತಿ ತಮ್ಮ ಸ್ವಾರ್ಥ ಸಾಧನೆಗೆ ಮಾತ್ರ ನಮ್ಮ ಜನರಲ್ಲಿ ಇರುವಂತೆ ಕಂಡುಬರುತ್ತದೆ. ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಭ್ರಷ್ಟಾಚಾರದಲ್ಲಿ ಇಡೀ ಪ್ರಪಂಚದಲ್ಲೇ ಮೊದಲ ಕೆಲ ಸ್ಥಾನಗಳಲ್ಲೇ ಇರುತ್ತಾರೆ. ದೈವಭಕ್ತರಲ್ಲಿ ತಮ್ಮ ಸಹಮಾನವರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲದೆ ಹೋದರೆ ದೈವಭಕ್ತಿ ಇದ್ದು ಏನು ಪ್ರಯೋಜನ? ಯುರೋಪ್ ಹಾಗೂ ಅಮೇರಿಕಾ ದೇಶಗಳ ಉದ್ಯಮಿಗಳು ನಮ್ಮ ದೇಶದ ಉದ್ಯಮಿಗಳಷ್ಟು ಪರಮ ದೈವಭಕ್ತರಲ್ಲದಿದ್ದರೂ tirupati-brahmotsavತಮ್ಮ ಸಂಪಾದನೆಯ ಬಹುಪಾಲನ್ನು ಸಮಾಜದ ಒಳಿತಿಗೆ ದಾನ ಮಾಡುವ ಕಾಳಜಿ ತೋರಿಸುತ್ತಾರೆ. ಆದರೆ ಪರಮ ದೈವಭಕ್ತರಾಗಿರುವ ನಮ್ಮ ಕೋಟ್ಯಾಧಿಪತಿ ಉದ್ಯಮಿಗಳು ಸಮಾಜದ ಒಳಿತಿಗೆ ದಾನ ನೀಡುವ ಪ್ರಮಾಣ ಬಹಳ ಕಡಿಮೆ ಇದೆ. ನಿಜವಾಗಿ ಪರಮ ದೈವಭಕ್ತರಲ್ಲಿ ಈ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗಿತ್ತು.

ಪಾಶ್ಚಾತ್ಯ ದೇಶಗಳಲ್ಲಿ ಉದ್ಯೋಗದ ಹಿನ್ನೆಲೆಯಲ್ಲಿ ಮೇಲು ಕೀಳು ಎಂದು ಸಾಮಾಜಿಕ ಭೇದಭಾವ ಪ್ರವೃತ್ತಿ ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಅತ್ಯಂತ ವಿದ್ಯಾವಂತ ವರ್ಗ ಕೂಡ ವ್ಯಕ್ತಿಯ ಉದ್ಯೋಗ ನೋಡಿಕೊಂಡು ಮೇಲುಕೀಳು ತಾರತಮ್ಯ ತೋರಿಸುವ ಪ್ರವೃತ್ತಿ ಎದ್ದು ಕಾಣುತ್ತದೆ. ಜಾತಿ ತಾರತಮ್ಯ ಇದ್ದದ್ದೇ. ಇದು ನಾವು ಪಾಶ್ಚಾತ್ಯರಿಗಿಂತ ನಾಗರಿಕತೆಯಲ್ಲಿ ಹಿಂದುಳಿದಿರುವುದನ್ನು ತೋರಿಸುತ್ತದೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಹೊಂದಿದೆ ಎಂದು ಹೇಳಲಾಗುವ ನಮಗಿಂತ ಕೆಲವು ನೂರು ವರ್ಷಗಳ ಸಂಸ್ಕೃತಿ ಹೊಂದಿರುವ ಪಾಶ್ಚಾತ್ಯರು ತಮ್ಮ ನಾಗರಿಕರ ನಡುವೆ ಪರಸ್ಪರ ಸಾಧಿಸಿರುವ ಈ ಸಮಾನತೆ ಅವರನ್ನು ನಾಗರಿಕತೆಯಲ್ಲಿ ದೈವಭಕ್ತ ನಮ್ಮ ಸಮಾಜಕ್ಕಿಂತ ಎಷ್ಟೋ ಎತ್ತರದಲ್ಲಿ ನಿಲ್ಲಿಸುತ್ತದೆ. ಪ್ರಾಮಾಣಿಕತೆ, ಸಹಮಾನವರಿಗೆ ತೋರಿಸುವ ಕಾಳಜಿಯಲ್ಲೂ ಪಾಶ್ಚಾತ್ಯ ದೇಶಗಳ ನಾಗರಿಕರು ನಮಗಿಂತ ಎಷ್ಟೋ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ನಮ್ಮ ದೇಶದಲ್ಲಿ ನಾವು ಯಾವುದಾದರೂ ವ್ಯಕ್ತಿಗಳಿಗೆ ಅಥವಾ ಏನಾದರೂ ಮಾಹಿತಿ ಕೇಳಿ ಪತ್ರ ಬರೆದರೆ ಬಹಳಷ್ಟು ಸಂದರ್ಭಗಳಲ್ಲಿ ಉತ್ತರ ಬರುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳ ಜನರಿಗೆ ಯಾವುದೇ ಮಾಹಿತಿ ಕೇಳಿ ಪತ್ರ ಬರೆದರೂ ಹೆಚ್ಚಿನ ಸಂದರ್ಭಗಳಲ್ಲೂ, ನಮಗೆ ಅವರು ಪರಿಚಿತರಲ್ಲದಿದ್ದರೂ ಉತ್ತರ ಬರುತ್ತದೆ.

ನಮ್ಮ ದೇಶದಲ್ಲಿ ಯಾವುದೇ ಯೋಜನೆ ಕೈಗೊಂಡರೂ ನಿರಾಶ್ರಿತಗೊಂಡವರಿಗೆ, ಸಂತ್ರಸ್ತರಿಗೆ ದಶಕಗಳೇ ಕಳೆದರೂ ಸಮರ್ಪಕ ಪರಿಹಾರ ದೊರೆಯುವುದಿಲ್ಲ. ಕೈತುಂಬಾ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಎಂದೂ ಸ್ಪಂದಿಸುವುದಿಲ್ಲ. maha-kumbhಆದರೆ ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನಾಗರಿಕರಿಗೆ, ಯೋಜನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕುತ್ತದೆ. ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಶೀಘ್ರ ಸ್ಪಂದಿಸುತ್ತಾರೆ. ಪ್ರಪಂಚದಲ್ಲಿಯೇ ನಮ್ಮದು ಅತ್ಯುನ್ನತ ನಾಗರಿಕತೆ, ಸಂಸ್ಕೃತಿ ಎಂದು ನಮ್ಮ ಹಿಂದುತ್ವವಾದಿಗಳು ಹಾಗೂ ಆಧ್ಯಾತ್ಮವಾದಿಗಳು ಇಲ್ಲಿ ಜಂಭ ಕೊಚ್ಚುತ್ತಾರಾದರೂ ಇಲ್ಲಿನ ಅಧಿಕಾರಿಗಳ ಜನಪರ ಕಾಳಜಿ ಶೂನ್ಯದ ಸಮೀಪ ಇರುತ್ತದೆ. ಅಧ್ಯಾತ್ಮ ಹಾಗೂ ದೈವಭಕ್ತಿಗೂ ಜನರ ನಾಗರಿಕತೆಯ ಮಟ್ಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇದರಿಂದ ಕಂಡುಬರುತ್ತದೆ. ನಮ್ಮ ದೈವಭಕ್ತಿ ಹಾಗೂ ಆಧ್ಯಾತ್ಮದ ಅತಿ ಗೀಳು ನಮ್ಮಲ್ಲಿ ಉನ್ನತ ನಾಗರಿಕತೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿಲ್ಲ. ರಾಜಕೀಯ ನಾಯಕರಲ್ಲಿ ಧರ್ಮ, ದೈವಭಕ್ತಿ ಬಗ್ಗೆ ಬಹಳ ಮಾತಾಡುವವರಲ್ಲಿಯೇ ಸಹಮಾನವರ ಬಗ್ಗೆ ಕಾಳಜಿ ಕಡಿಮೆ ಇರುವುದು ಕಂಡುಬರುತ್ತದೆ. ಧರ್ಮ, ದೇವರ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಪಕ್ಷಗಳಲ್ಲೇ ಹೆಚ್ಚಿನ ಭ್ರಷ್ಟಾಚಾರ, ಸಂವೇದನಾಹೀನತೆ ಇರುವ ರಾಜಕಾರಣಿಗಳು ಕಂಡುಬರುತ್ತಾರೆ. ಇಂಥ ರಾಜಕೀಯ ಪಕ್ಷಗಳು ಬೆಳವಣಿಗೆಯಾದ ನಂತರ ನಮ್ಮ ದೇಶದ ರಾಜಕೀಯ ಮತ್ತಷ್ಟು ಕಲುಷಿತವಾಗಿದೆ. ಹೀಗಾಗಿ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಜನರ ಬಗ್ಗೆ ನಾವು ಜಾಗೃತರಾಗದೆ ದೇಶದ ನಾಗರಿಕತೆಯ ವಿಕಾಸ ಸಾಧ್ಯವಿರುವಂತೆ ಕಾಣುವುದಿಲ್ಲ.

ನವೀನ್ ಸೂರಿಂಜೆ : ಮುಖ್ಯಮಂತ್ರಿಗಳಿಗೊಂದು ಪತ್ರ…

– ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

ರಾಜ್ಯ ಸರ್ಕಾರದ ಸಚಿವ-ಸಂಪುಟ ನವೀನ್ ಸೂರಿಂಜೆಯವರೆ ಮೇಲಿನ ಆಪಾದನೆಗಳನ್ನು ಕೈಬಿಡಲು ತೀರ್ಮಾನಿಸಿ ಇಂದಿಗೆ ಸರಿಯಾಗಿ ನಾಲ್ಕು ವಾರವಾಯಿತು. ಅದಾದ ನಂತರ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಪ್ರಜ್ಞೆಯಿಂದ ವರ್ತಿಸಿದ್ದರೆ ಇಷ್ಟೊತ್ತಿಗೆ ನವೀನ್ ಸೂರಿಂಜೆ ಎಂದೋ ಬಿಡುಗಡೆ ಆಗಬೇಕಿತ್ತು. ಸಚಿವ ಸಂಪುಟದ ನಿರ್ಧಾರಗಳ ಮೇಲೆ ಮುಖ್ಯಮಂತ್ರಿ ಸಹಿ ಹಾಕುವ ಕ್ರಮ ಒಂದಿದೆ. ಅದು ಕೇವಲ ಶಿಷ್ಟಾಚಾರ. ಸಂಪುಟ ಸಭೆ ಆದ ದಿನವೇ ಅಥವ ಮಾರನೆಯ ದಿನವೇ ಮುಖ್ಯಮಂತ್ರಿ ಸಹಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಶಿಷ್ಟಾಚಾರದಂತೆ ನಾಲ್ಕು ವಾರಗಳ ಹಿಂದೆ (31-01-13) ಆದ ಸಂಪುಟ ಸಭೆ ತೀರ್ಮಾನಗಳ ಮೇಲೆ ಮುಖ್ಯಮಂತ್ರಿ ಮಾರನೆಯ ದಿನ ಸಹಿ ಹಾಕಿದರು. ಆದರೆ ನವೀನ್ ಸೂರಿಂಜೆ ವಿಷಯದ ಮೇಲಿನ ನಿರ್ಧಾರದ ಕಡತಕ್ಕೆ ಸಹಿ ಹಾಕದೆ ಹಾಗೆಯೇ ಉಳಿಸಿಕೊಂಡರು. ಇಂತಹುದೊಂದು ಘಟನೆ ಬಹುಶ: ಇಲ್ಲಿಯವರೆಗಿನ ಯಾವೊಂದು ಸಚಿವ ಸಂಪುಟದ ತೀರ್ಮಾನದ ವಿಷಯಕ್ಕೂ ಆಗಿಲ್ಲ. ಇದೊಂದು ಕೆಟ್ಟ ಪರಂಪರೆ.

ಇದೆಲ್ಲ ಯಾಕಾಯಿತು, ಇದರ ಹಿಂದೆ ಯಾರಿದ್ದಾರೆ, ಇಷ್ಟಕ್ಕೂ ನಮ್ಮ ಮುಖ್ಯಮಂತ್ರಿಗಳ ಘನತೆ, ಧೀಮಂತಿಕೆ, ನಿಷ್ಟುರತೆ, ನ್ಯಾಯಪ್ರಜ್ಞೆ ಎಷ್ಟಿದೆ naveen-soorinjeಎನ್ನುವ ವಿವರಗಳಿಗೆ ನಾನು ಹೋಗುವುದಿಲ್ಲ. ಇವೆಲ್ಲವನ್ನೂ ಬದಿಗಿಟ್ಟು ನಮ್ಮ ಈ ಮುಖ್ಯಮಂತ್ರಿ ತಮಗೆ ವೈಯಕ್ತಿಕವಾಗಿ ಹೆಚ್ಚು ಅನಾನುಕೂಲವಾಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ಅದು ನಮ್ಮನ್ನಾಳುವ ಜನರ ಸ್ವಾರ್ಥವನ್ನೂ, ಹೇಡಿತನವನ್ನೂ, ಅಧಿಕಾರಲೋಲುಪತೆಯನ್ನೂ, ನ್ಯಾಯಪ್ರಜ್ಞಾರಾಹಿತ್ಯವನ್ನೂ ತಿಳಿಸುತ್ತದೆ ಎಂದು ಭಾವಿಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಕೆಲವು ಪತ್ರಿಕೆಗಳು ಈ ವಿಷಯದ ಹಿಂದೆ ಬಿದ್ದಿದ್ದು ಫಾಲೊ-ಅಪ್ ಸ್ಟೋರಿಗಳನ್ನು ಮಾಡುತ್ತಿದ್ದಾರೆ (ದಿ ಹಿಂದು, ಡೆಕ್ಕನ್ ಕ್ರಾನಿಕಲ್). ರಾಜ್ಯದ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಈ ಮೂಲಕ ಕೋರುತ್ತೇನೆ. ಹಾಗೆಯೇ, ನಾಡಿನ ನ್ಯೂಸ್ ಚಾನೆಲ್‌ಗಳೂ ಈ ವಿಷಯದ ಮೇಲೆ ಧ್ವನಿಯೆತ್ತಿ ತಮ್ಮ ಸಹೊದ್ಯೋಗಿಗೆ ನ್ಯಾಯ ದೊರಕಿಸಿಕೊಳ್ಳಬೇಕೆಂದೂ ವಿನಂತಿಸುತ್ತೇನೆ. ನವೀನ್ ಸೂರಿಂಜೆ ಜೈಲಿನಲ್ಲಿರುವ ಪ್ರತಿ ಕ್ಷಣವೂ ಅನ್ಯಾಯದ ವಿಸ್ತರಣೆ ಎಂದು ಪ್ರತ್ಯೇಕವಾಗಿ ಯಾರಿಗೂ ನೆನಪಿಸಬೇಕಿಲ್ಲ ಎಂದು ಭಾವಿಸುತ್ತೇನೆ.

ಇನ್ನು, ನಾನು, ನೀವು ಏನು ಮಾಡಬಹುದು? ಇಷ್ಟು ದಿನ ಕಾದದ್ದಾಯಿತು. ನೇರವಾಗಿ ಮುಖ್ಯಮಂತ್ರಿಗೇ ಪತ್ರ ಬರೆಯೋಣ, ಪೆಟಿಷನ್ ಮಾಡೋಣ. ಕೇವಲ ಅರ್ಧ ನಿಮಿಷದಲ್ಲಿ ನೀವು ಮುಖ್ಯಮಂತ್ರಿ ಕಚೇರಿಗೆ ಇಮೇಲ್ ಮಾಡಬಹುದು. ಅದಕ್ಕಾಗಿ ಈ ಪುಟದಲ್ಲಿ ಸುಲಭವಾದ ಸೌಲಭ್ಯ ಇದೆ. ಇಲ್ಲಿ ಕೆಳಗಿರುವ ಪತ್ರವನ್ನು ನೋಡಿ, ಅದಕ್ಕೆ ನಿಮ್ಮ ಸಹಮತಿಯಿದ್ದಲ್ಲಿ ನಿಮ್ಮ ಹೆಸರು, ಊರು, ಮತ್ತು ಇಮೇಲ್ ವಿಳಾಸ ನೀಡಿ “Sign Now” ಬಟನ್ ಒತ್ತಿದರೆ ಸಾಕು, ಈ ಪತ್ರ ನಿಮ್ಮ ಹೆಸರಿನಲ್ಲಿ ನೇರವಾಗಿ ಮುಖ್ಯಮಂತ್ರಿ, ಗೃಹ ಸಚಿವ, ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳ ಇಮೇಲ್ ವಿಳಾಸಕ್ಕೆ ಹೋಗುತ್ತದೆ. ನಾವು ಇಷ್ಟನ್ನಾದರೂ ಮಾಡಬಹುದಲ್ಲವೇ?

[emailpetition id=”1″]
[signaturelist id=”1″]

ಕಣ್ಮರೆಯಾದ ಮಾನವೀಯ ಒಳನೋಟಗಳು ಮತ್ತು ಸಹಜ ಸೆಕ್ಯುಲರ್‌ತನ

– ಬಿ. ಶ್ರೀಪಾದ ಭಟ್

ಇಂದು ನಾನು ನನ್ನ ಮನೆ ನಂಬರನ್ನು ಒರೆಸಿದೆ
ನನ್ನ ಓಣಿಯ ಹಣೆಯ ಮೇಲಿರುವ ಐಡೆಂಟಿಟಿಯನ್ನು ತೆಗೆದು ಹಾಕಿದೆ
ಪ್ರತಿಯೊಂದು ರಸ್ತೆಯಲ್ಲಿರುವ ನಾಮ ನಿರ್ದೇಶನಗಳನ್ನು ಅಳಿಸಿ ಹಾಕಿದೆ
ಆದರೆ ನೀನು ನಿಜವಾಗಲೂ ನನ್ನನ್ನು ಭೇಟಿಯಾಗಬೇಕೆಂದರೆ
ಪ್ರತಿಯೊಂದು ದೇಶದ ಮನೆಬಾಗಿಲುಗಳನ್ನು ತಟ್ಟು
ಪ್ರತಿಯೊಂದು ನಗರ,ಪ್ರತಿಯೊಂದು ಓಣಿಗಳನ್ನು ಸಹ
ಎಲ್ಲೆಲ್ಲಿ ಮುಕ್ತವಾದ ಚೈತನ್ಯ ಬದುಕಿರುತ್ತದೆಯೋ
ಅದೇ ನನ್ನ ಮನೆ
— ಅಮೃತಾ ಪ್ರೀತಂ

ಭಯೋತ್ಪಾದನೆ, ಕೋಮುವಾದ ಇಂದಿಗೂ ನಿರಂತರವಾಗಿ ಚಾಲ್ತಿಯಲ್ಲಿರುವುದನ್ನು ಅನುಭವಿಸುತ್ತಿರುವ ನಮಗೆಲ್ಲ ಇದೆಲ್ಲಾ ವಾಸ್ತವಕ್ಕೆ ಅದೇನಾ? ಎಂದು ಅನುಮಾನ ಹುಟ್ಟುವಷ್ಟರ ಮಟ್ಟಿಗೆ ಇವೆಲ್ಲ ಸಹಜ ಘಟನೆಗಳಾಗಿ ಹೋಗಿವೆ. ಕನಿಷ್ಟ ಮಟ್ಟದಲ್ಲಾದರೂ ಜೊತೆಗಾರರಾಗಿ ಬದುಕವಂತಹ ಜನ ಸಮೂಹವನ್ನು, ನಾಗರಿಕ ಸಮಾಜವನ್ನು ಕಟ್ಟಬೇಕಾದಂತಹ ರಾಜಕೀಯ ಪ್ರಜ್ಞೆ ಮತ್ತು ಮಾನವೀಯ, ಜನಪರ ರಾಜಕೀಯ ಸಿದ್ಧಾಂತಗಳು ಸತ್ತು ಹೋಗಿರುವುದೇ ಈ ಅರಾಜಕತೆಗೆ ಮೂಲಭೂತ ಕಾರಣವೆನ್ನುವ ತರ್ಕಗಳೂ ಇಂದು ಬೆಲೆ ಕಳೆದುಕೊಂಡಿದೆ. ಏಕೆಂದರೆ ರಾಜಕೀಯದ ಹೊರತಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ನಾವೆಲ್ಲ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇವೆಯೇ? ಇಲ್ಲ. ಒಂದು ವೇಳೆ ನಿಭಾಯಿಸಿದ್ದರೆ ಇವೆಲ್ಲ ಅವೇನಾ ಎನ್ನುವ ದುಸ್ಥಿತಿಗೆ ಬಂದು ತಲುಪುತ್ತಿರಲಿಲ್ಲ. ಸ್ವಾತಂತ್ರ್ಯ ನಂತರದ ಕಳೆದ 64 ವರ್ಷಗಳಲ್ಲಿ ಎಲ್ಲಾ ಧರ್ಮದ ಮೂಲಭೂತವಾದಿಗಳ ಕ್ರೌರ್ಯವನ್ನು, ಹಿಂಸೆಯನ್ನು ಸಶಕ್ತವಾಗಿ ಎದುರಿಸುವಂತಹ ವ್ಯವಸ್ಥೆಯನ್ನು ನಿರ್ಮಿಸಲು ನಾವೆಲ್ಲ ದಯನೀಯವಾಗಿ ಸೋತಿದ್ದೇವೆ. ವೈಯುಕ್ತಿಕ ನಂಬಿಕೆಗಳು ದ್ವೇಷವಾಗಿ ಪರಿವರ್ತನೆಗೊಂಡು ತದನಂತರ ಅದು ಹಿಂಸೆಯ ರೂಪ ತಾಳಿ ಸಮಾಜದ ಮೇಲೆ ಆಕ್ರಮಣ ನಡೆಸಿದಾಗ, ಈ ಹಿಂಸೆಗೆ ಮುಖಾಮುಖಿಯಾಗದೆ ನಾವೆಲ್ಲ ಮೂಕಪ್ರೇಕ್ಷಕರಾಗಬೇಕಾಗಿ ಬಂದದ್ದು ನಮ್ಮೆಲ್ಲರ ಸ್ವಯಂಕೃತ ಅಪರಾಧವಷ್ಟೇ.

ಇಲ್ಲದಿದ್ದರೆ ಪತ್ರಕರ್ತ ಸಿದ್ದಿಕಿಯನ್ನು ಭಯೋತ್ಪಾದನೆಯ ಆಪಾದನೆಯ ಮೇಲೆ ಬಂಧಿಸಿ ತಿಂಗಳುಗಳ ಕಾಲ ಜೈಲಿನಲ್ಲಿರಿಸಿದಾಗ, siddiqui‘ಇರಬಹುದೇನೋ, ಯಾವ ಹುತ್ತದಲ್ಲಿ ಯಾವ ಹಾವು ಯಾರಿಗೆ ಗೊತ್ತು’ ಎಂದು ಮುಗುಮ್ಮಾಗಿದ್ದ ನಾವು ಇದೇ ಸಿದ್ಧಿಕಿಯನ್ನು ಇತ್ತೀಚೆಗೆ ಅಪರಾಧಿಯಲ್ಲ, ಆತನ ಮೇಲೆ ಸುಳ್ಳು ಕೇಸುಗಳನ್ನು ಸೃಷ್ಟಿಸಲಾಗಿದೆ, ಆತನ ಮೇಲಿನ ಆರೋಪಗಳನ್ನು ಹಿಂದಕ್ಕೆ ಪಡೆದಿದ್ದೇವೆ ಎಂದು ತನಿಖಾ ತಂಡ ಕೋರ್ಟಗೆ ತಪ್ಪೊಪ್ಪಿಕೆಯ ಮನವಿ ಸಲ್ಲಿಸಿದಾಗ ‘ಎಂತಹ ಅನಾಹುತವಾಗಿ ಹೋಯಿತೆಂದು’ ನಾವ್ಯಾರೂ ಮರುಗಲಿಲ್ಲ, ತರುಣ ಪತ್ರಕರ್ತನೊಬ್ಬನ ಭವಿಷ್ಯವೇನು ಎಂದು ಚಿಂತಿಸಲಿಲ್ಲ. ಕನಿಷ್ಟ ಸಾರ್ವಜನಿಕವಾಗಿ ಈ ಫ್ಯಾಸಿಸ್ಟ್ ಶಕ್ತಿಗಳನ್ನು ಖಂಡಿಸಬೇಕಿತ್ತು!! ಕೆಲವು ಹಿಂದೂ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳನ್ನು ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಿದಾಗ ಇದು ಹೇಗೆ ಸಾಧ್ಯವೆಂದು ಅಚ್ಚರಿ ಪಡುವ ಮನಸ್ಥಿತಿಯಿಂದ, ಮುಸ್ಲಿಂ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಲ್ಪಟ್ಟಾಗ ನಾನು ಹೇಳಲಿಲ್ಲವೇ ಎನ್ನುವ ಪೂರ್ವಗ್ರಹ ಪೀಡಿತ, ಕೊಳಕು, ಹಳಸಿದ ಮನಸ್ಥಿತಿಯಿಂದ ಹೊರಬರದ ಹೊರತು ವ್ಯವಸ್ಥೆಯಲ್ಲಿನ ಕ್ರೌರ್ಯಕ್ಕೆ ಪರ್ಯಾಯವಾದ ನೆಲೆಗಳು ಹುಟ್ಟಲಾರವು.

ಗಾಂಧೀಜಿ ಹತ್ಯೆಯೇ ಇಂಡಿಯಾ ದೇಶದ ಮೊಟ್ಟಮೊದಲ ಭಯೋತ್ಪಾದನೆಯ ಕೃತ್ಯ ಎಂದು ಹಿರಿಯ ಪತ್ರಕರ್ತ ಮಿತ್ರರು ಹೇಳುತ್ತಿದ್ದುದು ಅಕ್ಷರಶಃ ಸತ್ಯ. ಈ ಮೊಟ್ಟ ಮೊದಲ ಭಯೋತ್ಪಾದನೆಯನ್ನು ನಡೆಸಿದ ಸಂಘಟನೆ ಹಿಂದೂ ಮಹಾ ಸಭಾ ಮತ್ತು ಭಾರತದ ಮೊಟ್ಟ ಮೊದಲ ಭಯೋತ್ಪಾದಕ ನಾಥುರಾಮ್ ಘೋಡ್ಸೆ ತಮ್ಮ ಸಹವರ್ತಿಗಳಾಗಿದ್ದನ್ನು ಇಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದಷ್ಟು ಸಂಘ ಪರಿವಾಕ್ಕೆ ಅಮ್ನೇಷಿಯಾ ತಗಲಿದೆ!! ಮಾಲೇಗಾವ್ ಸ್ಪೋಟ,ಹೈದರಾಬಾದನ ಜಾಮಾ ಮಸಿದಿಯ ಸ್ಪೋಟ,ಸಂಜೋತಾ ಎಕ್ಸಪ್ರೆಸ್‌ನ ಸ್ಪೋಟಗಳು ಮತ್ತು ಅಮಾಯಕರ ಸಾವುಗಳ ಕುರಿತಾಗಿ ಈಗ ಸಂಘ ಪರಿವಾರ ಕ್ವಚಿತ್ತೂ ಮಾತನಾಡುತ್ತಿಲ್ಲ.ತಮ್ಮ ಸಹವರ್ತಿಗಳೇ ಈ ಭಯೋತ್ಪಾದನೆಯ ಆರೋಪಗಳ ಮೇಲೆ ಜೈಲಿನಲ್ಲಿರುವುದು ಸಂಘಪರಿವಾರಕ್ಕೆ ನೆನಪಿಸಿಕೊಟ್ಟಷ್ಟೂ ಅದಕ್ಕೆ ಅಮ್ನೇಷಿಯಾ ಮರುಕಳಿಸುತ್ತದೆ!!

2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ವಿನಾಕಾರಣ ಸಾವಿರಾರು ಮುಸ್ಲಿಮರನ್ನು ನಿರಾಳವಾಗಿ ಹತ್ಯೆ ಮಾಡಿದ್ದನ್ನು, ಆ ಕ್ರೌರ್ಯದ ಮನೋಸ್ಥಿತಿಯನ್ನು, ಈ ಹಿಂಸಾಚಾರದ ರೂವಾರಿಯೆಂದು ಆರೋಪಿತವಾಗಿರುವ ಫ್ಯಾಸಿಸ್ಟ್ ಮುಖ್ಯಂತ್ರಿ ನರೇಂದ್ರ ಮೋದಿ ಇವರನ್ನೆಲ್ಲ ಭಾರತದ ಮಧ್ಯಮ ವರ್ಗ ಇನ್ನಾದರೂ ಬಹಿರಂಗವಾಗಿ ಖಂಡಿಸಲಾರರೇಕೆ? sangh_parivarತನ್ನ ಕೈಗೆ ಅಂಟಿಕೊಂಡಿರುವ ಆ ರಕ್ತದ ಕಲೆ ಮತ್ತು ತನಗಂಟಿದ ಕಳಂಕ ಸಾಬೀತಾದರೆ ಮೋದಿ ಶಿಕ್ಷೆಗೆ ಒಳಗಾಗಲೇ ಬೇಕೆಂದು ಮಧ್ಯಮ ವರ್ಗ ಆಗ್ರಹಿಸಿ ಸರದಿ ಉಪವಾಸಕ್ಕೆ ತೊಡಗಲಾರರೇಕೆ? ಮುಸ್ಲಿಂ ಮೌಲ್ವಿಗಳನ್ನು, ಜಮಾತೆಗಳನ್ನು ಶಿಲಾಯುಗದವರೆಂದು ಖಂಡಿಸುವ ನಮ್ಮ ಮಧ್ಯಮವರ್ಗ ಅಷ್ಟೇ ನೈತಿಕತೆಯಿಂದ, ಮುಕ್ತ ಮನಸ್ಸಿನಿಂದ ಸಂಘ ಪರಿವಾರದ ಹಿಂದೂ ಫೆನಟಿಸಂ ಮತ್ತು ಕ್ಯಾಸ್ಟಿಸಂ ವಿರುದ್ಧ ಸಾರ್ವಜನಿಕವಾಗಿ ಹೋರಾಡುತ್ತಿಲ್ಲವೇಕೆ? ಕೇವಲ ಟಿವಿಗಳ ಮೂಲಕ ತಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಿಕೊಳ್ಳಬಯಸುವ ಇಂಡಿಯಾದ ಮಧ್ಯಮವರ್ಗಕ್ಕೆ ಈ ದೃಶ್ಯ ಮಾಧ್ಯಮವನ್ನು ಹೊರತುಪಡಿಸಿಯೂ ಅನೇಕ ಬಗೆಯ ಜ್ಞಾನದ ಮಾರ್ಗಗಳಿವೆ ಎಂದೇಕೆ ಅರಿವಾಗುತ್ತಿಲ್ಲ? ಇತರೇ ಜ್ಞಾನದ ಮಾರ್ಗಗಳನ್ನು ಮುಕ್ತ ಮನಸ್ಸಿನಿಂದ ನೋಡಿದ್ದರೆ ಈ ತ್ರಿಶೂಲಧಾರಿ ಸಂಘಪರಿವಾರದ ಲುಂಪೆನ್ ಗುಂಪನ್ನು ಮಧ್ಯಮವರ್ಗ ತೀವ್ರವಾಗಿ ಖಂಡಿಸುತ್ತಿತ್ತು. ಈ ಒಳನೋಟ ದಕ್ಕಿದ್ದರೆ ತನ್ನ ಧರ್ಮದ ಮತಾಂಧರಿಂದ ಹಲ್ಲೆಗೊಳಗಾದ ತಸ್ಲೀಮಾಳಿಗೆ ಆಸರೆ ಕೊಡಲು ಮುಂದಾದ ಸಂಘಪರಿವಾರದ ವರ್ತನೆಯ ಹಿಂದಿನ ಗುಪ್ತ ಕಾರ್ಯಸೂಚಿಗಳ ಕುರಿತಾಗಿ ಅರಿವಾಗುತ್ತಿತ್ತು.

ಮತ್ತೊಂದು ಕಡೆ ಈ ಮುಸ್ಲಿಂ ಮೂಲಭೂತವಾದಿಗಳ, ಈ ಪಾಪ್ಯುಲರ್ ಫ್ರಂಟ್‌ಗಳ, ಜಮಾತೆಗಳ ಧಾರ್ಮಿಕ ಮೂಲಭೂತವಾದ ಮತ್ತದರ ದುಷ್ಪರಿಣಾಮಗಳ ಕುರಿತಾಗಿ ನೇರವಾಗಿ ಖಂಡಿಸದೆ ಅದೇಕೆ ಅನೇಕ ಎಡಪಂಥೀಯ ಚಿಂತಕರು ಅದು ಹಾಗೇ, ಅದು ಹೀಗೆ ಎಂದು ಉಗ್ಗುತ್ತ ತಲೆಮರೆಸಿಕೊಳ್ಳುತ್ತಾರೆ? ಇನ್ನಾದರೂ ಈ ಎಡಪಂಥೀಯರು ತಾನು ಮುಸ್ಲಿಂ ಮೂಲಭೂತವಾದವನ್ನು ಖಂಡಿಸಿದರೆ ತಾನು ಸ್ವಧರ್ಮನಿಷ್ಟನಾಗಿಬಿಡುತ್ತೇನಲ್ಲ, ನನ್ನ ಸಿದ್ಧಾಂತಗಳ ಗತಿಯೇನು? ಎಂಬ ಹುಂಬ ಮತ್ತು ಚಲನರಹಿತ ಮನಸ್ಥಿತಿಯಿಂದ ಹೊರ ಬಂದು ವರ್ತಿಸತೊಡಗಿದಾಲೇ ಹೊಸಬೆಳಕು ಮೂಡುತ್ತದೆ. ಆಗ ಈ ಕೋಮುವಾದಿ ಮಧ್ಯಮವರ್ಗವನ್ನು ಈ ಹಿಂದೂತ್ವದ ಕಬಂಧಬಾಹುಗಳಿಂದ ಹೊರತರಬಹುದು. ಈ ಇಂಡಿಯ ಮುಜಾಹಿದ್ದಿನ್‌ಗಳು, ಲಷ್ಕರ್ ಎ ತೊಯ್ಬಾಗಳು ಯಾವುದೂ ಗೊತ್ತಿಲ್ಲದ, ಗೊತ್ತಿದ್ದರೂ ಅದರ ಸಹವಾಸ ಅವರಿಗೆ ಬೇಕಿಲ್ಲದ, Ghetto ಗಳಲ್ಲಿ ಅತಂತ್ರರಾಗಿ ಬದುಕುತ್ತಿರುವ ಇಂಡಿಯಾದ ಮುಸ್ಲಿಂರನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ಇಂಡಿಯಾದ ಮಧ್ಯಮವರ್ಗ ಮತ್ತು ಎಡಪಂಥೀಯ ಚಿಂತಕರು ಅತ್ಯಂತ ಪ್ರಮುಖ ಪಾತ್ರ ವಹಿಸಲೇಬೇಕಾಗಿದೆ. ಈ ಮಧ್ಯಮವರ್ಗ ಮೋದೀಕರಣ, ಹಿಂದುತ್ವದ ಪ್ರಭಾವದಿಂದ ಕಳಚಿಕೊಂಡಾಗಲಷ್ಟೇ ಇದು ಸಾಧ್ಯ. ಆಗಲೇ ಎಲ್ಲಾ ಧರ್ಮಗಳ ಹೆಸರಿನಲ್ಲಿ ನಡೆಯುವ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ನೈತಿಕತೆಯ ಬಲ ದೊರಕುತ್ತದೆ. ಇಲ್ಲದಿದ್ದಲ್ಲಿ ಕ್ಷುಲ್ಲಕ, ಸ್ವಾರ್ಥ ರಾಜಕಾರಣ ಮತ್ತು ಮೂಲಭೂತವಾದಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ನಿರಂತರವಾಗಿ ಪರಿಸ್ಥಿಯ ದುರ್ಲಾಭ ಪಡೆದುಕೊಳ್ಳುತ್ತಲೇ ಇರುತ್ತವೆ.

ಕುಲಪತಿಗಳಲ್ಲ, ಇವರು ಹಣಪತಿಗಳು…

– ಜಿ.ಮಹಂತೇಶ್, ಭದ್ರಾವತಿ

“ಆ ಕುರ್ಚಿ ಮೇಲೆ ಅವರು ಕುಳಿತಿರುತ್ತಿದ್ದರೆ ದೇವರೆ ಆ ಕುರ್ಚಿ ಮೇಲೆ ಕುಳಿತುಕೊಂಡಿದ್ದರು ಎಂದು ನನಗೆ ಭಾಸವಾಗುತ್ತಿತ್ತು. ಅಂಥಾ ದೇವರು ಕೂತಿದ್ದ ಕುರ್ಚಿ ಮೇಲೆ ಇವತ್ತು ಅರ್ಹತೆ, ಮುನ್ನೋಟ ಇಲ್ಲದವರೆಲ್ಲ ಕುಳಿತು ಕುರ್ಚಿ ಮಹತ್ವಕ್ಕೆ ಧಕ್ಕೆ ತಂದು ಬಿಟ್ಟರು.”

ಇಲ್ಲಿ ಕುರ್ಚಿ ಎಂದು ಹೇಳುತ್ತಿರುವುದು ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿ ಕುರ್ಚಿ ಬಗ್ಗೆ. ಇಲ್ಲಿ ಕೂತಿದ್ದ ದೇವರು ಯಾರೆಂದರೆ, kuvempuಜಗತ್ತಿಗೆ ವಿಶ್ವಮಾನವ ಸಂದೇಶವನ್ನು ಸಾರಿದ ಯುಗದ ಕವಿ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕ ಹಾಗೂ ಕಟು ವಿಮರ್ಶಕರೊಬ್ಬರು ವಿಶ್ವವಿದ್ಯಾಲಯ ಆವರಣದಲ್ಲಿ ಹಣದ ವಹಿವಾಟು ಮತ್ತು ಜಾತಿಯ ಗಲೀಜನ್ನು ಕಂಡು, “ಇಂಥಾ ವೈಸ್ ಛಾನ್ಸಲರ್​ಗಳೆಲ್ಲ ವಿಶ್ವವಿದ್ಯಾಲಯವನ್ನು ಹಾಳು ಮಾಡಿಬಿಟ್ಟರು” ಎಂದು ತಣ್ಣಗೆ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ಮೌನವಾದರು.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯದಲ್ಲಿ ಅದೇ ಮೌನ ಈಗ ಹೆಪ್ಪುಗಟ್ಟಿದೆ. ಹೌದು, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಎನ್ನುವುದು ಇವತ್ತು ಹರಾಜಿನಲ್ಲಿ ಕೂಗಿ ಉಳ್ಳವರು ಅದನ್ನು ಖರೀದಿಸುತ್ತಿರುವ ಸರಕಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆಗಳನ್ನು ನೋಡಿದರೆ ಇದು ಅರಿವಿಗೆ ಬರುತ್ತದೆ.

ಕುಲಪತಿಗಳ ನೇಮಕದಲ್ಲಿ ಮೂಗಿಗೆ ಬಡಿಯುತ್ತಿರುವುದು ಜಾತಿಯ ಕಮಟು ವಾಸನೆ. ವಿಶ್ವವಿದ್ಯಾಲಯವನ್ನು ಮುನ್ನಡೆಸಬೇಕಾದ ಕುಲಪತಿಗಳು ಕೋಟಿ ಕೋಟಿ ರೂಪಾಯಿ ಕೊಟ್ಟು ನೇಮಕವಾಗುತ್ತಿರುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲೂ ವ್ಯಾಪಕ ಚರ್ಚೆಗೀಡಾಗಿತ್ತು. ವಿಧಾನ ಮಂಡಲದ ಅಧಿವೇಶನದಲ್ಲಿ ಕುಲಪತಿಗಳ ನೇಮಕದ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ’ಶೈಕ್ಷಣಿಕ ವಲಯದಲ್ಲಿ ಉತ್ತಮ ಅನುಭವ ಹೊಂದಿರುವ ಪ್ರಾಧ್ಯಾಪಕರ ಮನಸ್ಸಿಗೆ ನೋವಾಗಿದೆ. ಇದು ನಿಜಕ್ಕೂ ವಿಷಾದನೀಯ,’ ಎಂದು ಮಂಗಳೂರಿನ ಸಮಾರಂಭದಲ್ಲಿ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ಇದು ವಿಷಾದ ವ್ಯಕ್ತಪಡಿಸಿ, ಸುಮ್ಮನೆ ಕೂರುವ ಸಂಗತಿಯೂ ಅಲ್ಲ. ಸರಳ ಮತ್ತು ಸುಲಭದ ವಿಚಾರವೂ ಅಲ್ಲ. ವಿಶ್ವವಿದ್ಯಾಲಯಗಳು ಈಗ ಬ್ಯುಸಿನೆಸ್ ಸೆಂಟರ್​ಗಳಾಗುತ್ತಿವೆ. ಕೇಂದ್ರ ಧನ ಸಹಾಯ ಆಯೋಗ ಮತ್ತು ರಾಜ್ಯ ಸರ್ಕಾರ ಕೋಟಿ ಕೋಟಿಗಳ ಲೆಕ್ಕದಲ್ಲಿ ಅನುದಾನದ ಹೊಳೆಯನ್ನೇ ಹರಿಸುತ್ತಿರುವುದರಿಂದ ಎಲ್ಲರೂ ತಮ್ಮ ಶೈಕ್ಷಣಿಕ ಜೀವಮಾನದಲ್ಲಿ ಒಮ್ಮೆಯಾದರೂ ಕುಲಪತಿಗಳಾಗಲೇಬೇಕು ಎಂದು ವಿಧಾನಸೌಧದ ಮೂರನೇ ಮಹಡಿಯ ಕಂಬಗಳನ್ನು ಸುತ್ತು ಹಾಕುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯಕ್ಕೆ ಕುಲಪತಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ನಡೆದಿರುವ ಎಲ್ಲಾ ಪ್ರಕ್ರಿಯೆಗಳು ಅನುಮಾನಕ್ಕೀಡಾಗಿದೆ. ಶೋಧನಾ ಸಮಿತಿಗೆ ಸದಸ್ಯರೊಬ್ಬರ ನೇಮಕದಿಂದ ಹಿಡಿದು, ಕುಲಪತಿ ಹುದ್ದೆಗೆ ಕೂರುವವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ತನಿಖೆಗೆ ಅಥವಾ ವಿಚಾರಣೆಗೆ ಒಳಪಡಿಸಿದರೆ, ಬಹಳಷ್ಟು ಸತ್ಯಗಳು ಹೊರಗೆ ಬರುವುದರಲ್ಲಿ ಅನುಮಾನವಿಲ್ಲ. ಕುಲಾಧಿಪತಿಗಳ ಕಚೇರಿಯಿಂದಲೇ ನೇಮಕ ಪತ್ರವನ್ನು ಖುದ್ದು ಪಡೆದುಕೊಂಡು ನೇರವಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಅಧಿಕಾರ ಸ್ವೀಕರಿಸಿರುವುದನ್ನು ನೋಡಿದರೇ ಎಂಥವರಿಗೂ ಅನುಮಾನ ಬರದಿರದು.

ಈ ನೇಮಕ ಪ್ರಕ್ರಿಯೆ ಆದ ನಂತರ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳಿಗೆ ಆಗಿರುವ ನೇಮಕದ ಹಿಂದೆಯೂ ಇಂಥದ್ದೇ ಅನುಮಾನಗಳು ಎದುರಾಗಿವೆ. ಶತಮಾನೋತ್ಸವ ಸಂಭ್ರಮದ ಹೆಜ್ಜೆಗಳನ್ನಿಡುತ್ತಿರುವ ವಿಶ್ವವಿದ್ಯಾಲಯಕ್ಕೆ ನೇಮಕವಾದವರೇ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ನೇಮಕ ಮಾಡಿಸುವ “ಗುತ್ತಿಗೆ” ಪಡೆದುಕೊಂಡಿದ್ದರು, ಹೀಗಾಗಿ ಅವರ ಇಚ್ಛೆಯಂತೆ ಎರಡೂ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿದ್ದಾರೆ ಎಂಬ ಚರ್ಚೆ ಈಗ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ತಾವು ಬಯಸಿದವರೇ ಕುಲಪತಿಗಳಾಗಬೇಕು ಎಂದು “ಗುತ್ತಿಗೆ” ಪಡೆದುಕೊಂಡ ಪ್ರಭೃತಿಗಳು, ನೇಮಕ ಪತ್ರಕ್ಕೆ ಸಹಿ ಮಾಡಿಸಲು ರಾತ್ರಿ ಇಡೀ ರಾಜಭವನದಲ್ಲಿ ತಂಗಿದ್ದರು ಎಂಬ ಸುದ್ದಿಯೂ ಶೈಕ್ಷಣಿಕ ವಲಯದಲ್ಲಿ ಹರಿದಾಡುತ್ತಿದೆ. ಸತ್ಯಾಂಶಗಳು ಬಯಲಿಗೆ ಬರಬೇಕಾದರೆ, ಕುಲಪತಿಗಳ ನೇಮಕ ದಿನಾಂಕದ ಹಿಂದುಮುಂದಿನ ದಿನಗಳಲ್ಲಿ ಯಾರ್‍ಯಾರು ರಾಜಭವನದಲ್ಲಿ ತಂಗಿದ್ದರು ಎನ್ನುವ ಮಾಹಿತಿ ಹೊರಬೀಳಬೇಕಷ್ಟೆ.

ಇಲ್ಲಿ, ಇನ್ನೂ ಒಂದು ವಿಚಾರವನ್ನು ಹೇಳಬೇಕು. ಅದೇನಂದರೇ ವಿಶ್ವವಿದ್ಯಾಲಯ ಕುಲಪತಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಬಗ್ಗೆ. ಇತ್ತೀಚೆಗೆ vc-rangappaಮೂವರು ಕುಲಪತಿಗಳಾಗಿ ನೇಮಕವಾಗಿರುವ ವಿಶ್ವವಿದ್ಯಾಲಯಗಳ ಮಟ್ಟಿಗೆ ಹೇಳುವುದಾದರೇ ಸಾಮಾಜಿಕ ನ್ಯಾಯ ಕಸದ ಬುಟ್ಟಿಗೆ ಸೇರಿದೆ ಎಂಬುದು ನಿರ್ವಿವಾದ. ಮೂರು ವಿಶ್ವವಿದ್ಯಾಲಯಗಳಿಗೆ ನೇಮಕವಾಗಿರುವ ಮೂರೂ ಮಂದಿ ಒಂದೇ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಕುಲಾಧಿಪತಿಗಳೇ ಅದನ್ನು ಕಸದ ಬುಟ್ಟಿಗೆ ಎಸೆದಿರುವುದು ನಿಜಕ್ಕೂ ದುರಂತ ಎಂದು ಹೇಳದೇ ಬೇರೆ ವಿಧಿ ಇಲ್ಲ.

ಮೊನ್ನೆ ಮೊನ್ನೆ ಪ್ರಧಾನಿ ಮನಮೋಹನ್ ಸಿಂಗ್ ದೇಶದ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆ ಬಗ್ಗೆ ತುಸು ಬೇಸರ ಮತ್ತು ಅಸಮಾಧಾನದಿಂದಲೇ ಮಾತನಾಡಿದ್ದರು. ಜಗತ್ತಿನ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯ ಇಲ್ಲ ಎಂದು ಬೇಸರಿಸಿದ್ದರು. ಕುಲಪತಿಗಳ ನೇಮಕದಲ್ಲಿ ಹಣದ ಪ್ರಭಾವ ಮತ್ತು ಜಾತಿಯ ಗಲೀಜು ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೆ ಇಂಥ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕು ಎಂದು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕುಲಪತಿಗಳ ನೇಮಕದ ಬಗ್ಗೆ ಇನ್ನಷ್ಟು ಗಂಭೀರವಾಗಿ ಚರ್ಚೆಗಳಾಗಬೇಕಿದೆ. ವಿಶ್ವವಿದ್ಯಾಲಯಕ್ಕೆ ವಿವಿಧ ಮೂಲಗಳಿಂದ ಹರಿದು ಬರುತ್ತಿರುವ ಅನುದಾನದ ಲೆಕ್ಕಾಚಾರವೂ ಪರಿಣಾಮಕಾರಿಯಾಗಿ ಪರಿಶೋಧನೆ ಆಗಬೇಕಿದೆ. ಬ್ಯುಸಿನೆಸ್ ಸೆಂಟರ್‌ಗಳಾಗುತ್ತಿರುವ ವಿಶ್ವವಿದ್ಯಾಲಯಗಳನ್ನು ಶೈಕ್ಷಣಿಕ ಸಂಶೋಧನೆ ವ್ಯಾಪ್ತಿಗೆ ತರುವುದು ಮತ್ತು ಬೋಧನಾ ಅನುಭವ ಹಾಗೂ ಮುನ್ನೋಟ ಇರುವ ಪ್ರಾಧ್ಯಾಪಕರನ್ನು ಕುಲಪತಿಗಳನ್ನಾಗಿ ನೇಮಿಸುವುದೊಂದೇ ಇದಕ್ಕೆ ಪರಿಹಾರ. ಇದು ಇವತ್ತಿನ ಅಗತ್ಯ ಮತ್ತು ಅನಿವಾರ್ಯವೂ ಹೌದು.