ಸಿದ್ದಿಕಿ ಪ್ರಕರಣ : ಆಗಿದ್ದೇನು? ಅನ್ಯಾಯಕ್ಕೆ ನ್ಯಾಯ ಹೇಗೆ?

– ಗೌತಮ್ ರಾಜ್

ಆರು ತಿಂಗಳ ಹಿಂದಿನ ಮಾತು; ಬೆಂಗಳೂರು ಪೋಲೀಸರ ಅಂಗ ಸಂಸ್ಥೆಯಾಗಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ ಆಗಸ್ಟ್ 29, 2012 ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು ಹನ್ನೊಂದು ಜನ ಮುಸ್ಲಿಂ ಯುವಕರನ್ನು ಬಂಧಿಸಿತು. ಮರುದಿನ ರಾಜ್ಯದ ಡಿಜಿಪಿ ಲಾಲ್ ರುಕೊಮಾ ಪಚಾವೋ ಪತ್ರಿಕಾ ಘೋಷ್ಠಿಯಲ್ಲಿ ಈ ವಿವರಗಳನ್ನು ರಾಜ್ಯದ ಜನತೆಯ ಮುಂದೆ ಮಂಡಿಸಿದರು – ಈ ಹನ್ನೊಂದು ಜನ ಯುವಕರು ಲಷ್ಕರ್-ಎ-ತೊಯ್ಬಾ ಮತ್ತು ಹುಜಿ ಉಗ್ರವಾದಿ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದು, ಮೊದಲ ಬಾರಿಗೆ ಬಾಂಬು ಸಿಡಿಸುವುದನ್ನು ಕೈಬಿಟ್ಟು ಟಾರ್ಗೆಟೆಡ್ ಅಸಾಸಿನೇಷನ್‌ಗೆ ಕೈಹಾಕಿದ್ದು, ಅವರು ಕನ್ನಡಪ್ರಭ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಅಂಕಣಕಾರ ಪ್ರತಾಪ ಸಿಂಹ,  VRL ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ, ಮತ್ತು ಹುಬ್ಬಳ್ಳಿಯ ಸಂಸದ ಪ್ರಹ್ಲಾದ್ ಜೋಶಿಯವರನ್ನು ಮುಗಿಸಲು ಸಂಚು ರೂಪಿಸಿದ್ದರು – ಎಂದು. ಅವತ್ತು ಸಿಸಿಬಿಯವರು ಒಂದು ಬಂದೂಕನ್ನು ಕೂಡ ವಶಪಡಿಸಿಕೊಂಡಿದ್ದರು.

ಈ ವಿವರಗಳು ಹೊರಬೀಳುತ್ತಿದ್ದಂತೆಯೇ ನಾಡಿನ ಜನರನ್ನು ಬೆಚ್ಚಿಬೀಳಿಸಿದ್ದು ಬಂಧಿತ ಯುವಕರ ವಿವರಗಳು. ಬಂಧಿತರಲ್ಲಿ ಒಬ್ಬsiddiqui ಮುತಿ-ಉರ್-ರೆಹಮಾನ್ ಸಿದ್ದಿಕಿ, ಪ್ರತಿಷ್ಠಿತ ಪ್ರಜಾವಾಣಿ ಸಮೂಹದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದ, ಮತ್ತೊಬ್ಬ ಐಜಾಜ್ ಅಹಮದ್ ಮಿರ್ಜಾ ಅತಿ ಸುನ್ನಿತವಾದ ಡಿಆರ್‌ಡಿಒ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ, ಒಬ್ಬ ಎಂಸಿಎ ವಿದ್ಯಾರ್ಥಿ, ಒಬ್ಬ ವೈದ್ಯ, ಮತ್ತೊಬ್ಬನ ತಂದೆ ಸದ್ಯ ಸೇವೆಯಲ್ಲಿರುವ ಅರಣ್ಯ ಅಧಿಕಾರಿ. ಪ್ರಜ್ಞಾವಂತರು ನಿಜಕ್ಕೂ ಬೆಚ್ಚಿಬಿದ್ದಿದ್ದರು.

ನಂತರ ಕೂಡ ಇನ್ನೂ ನಾಲ್ಕು ಜನರನ್ನು ನಗರದಿಂದಲೇ ಸಿಸಿಬಿ ಪೋಲೀಸರು ಬಂಧಿಸಿದರು. ಅಲ್ಲಿಗೆ ಒಟ್ಟಾರೆ 15 ಜನರನ್ನು ಈ ಪ್ರಕರಣದ ಸಂಬಂಧ ಬಂಧಿಸಲಾಯಿತು. ಆ ನಂತರದಲ್ಲಿ ಮಾದ್ಯಮದ ವರದಿಗಳನ್ನೂ ನೀವು ಓದಿಯೇ ಇರುತ್ತೀರಿ – ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಿಕಿ ಈ ಗುಂಪಿನ ನಾಯಕನೆಂದೂ, ಅಸಲು ಆತ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕೆಲಸಕ್ಕೆ ಸೇರಿದ್ದೇ ಅದರ ಎದುರಿರುವ ಮೆಟ್ರೋವನ್ನು ಉಡಾಯಿಸಲು ಎಂಬಲ್ಲಿಂದ ಹಿಡಿದು ಎಲ್ಲ ಗಾಳಿಪಟಗಳಿಗೂ ಸಂಕ್ರಾಂತಿಯ ಸಂಭ್ರಮ! ಈ ಎಲ್ಲ ಪಟಗಳನ್ನೂ ಹಾರಿಸುತ್ತಿದ್ದದ್ದು ಈ ಪ್ರಕರಣದ ತನಿಖೆ ನಡೆಸುತ್ತಿದ್ದವರೇ!

ಆ ನಂತರ ನವೆಂಬರ್‌ನಲ್ಲಿ ಈ ಪ್ರಕರಣದ ತನಿಖೆಯನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (NIA) ಕೈಗೆತ್ತಿಕೊಂಡಿತು. ಮೊನ್ನೆ ಬುಧವಾರ ಫೆಬ್ರವರಿ 20ನೇ ತಾರೀಖು ಎನ್‌ಐಎ ಈ ಪ್ರಕರಣದಲ್ಲಿ ಆರೋಪಟ್ಟಿಯನ್ನು ಸಲ್ಲಿಸಿದೆ. ಎನ್‌ಐಎ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಈ ಮೊದಲೇ ಹೇಳಿದ ಹಾಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 15. ಎನ್‌ಐಎ ಈಗ ಒಟ್ಟು 12 ಮಂದಿಯ ಮೇಲೆ ಆರೋಪಟ್ಟಿಯನ್ನು ಸಲ್ಲಿಸಿದೆ. ಈ ಹನ್ನೆರಡು ಮಂದಿಯಲ್ಲಿ 11 ಮಂದಿ ಈಗಾಗಲೇ ಬಂಧಿತರಾಗಿದ್ದರೆ, ಒಬ್ಬ ಜಾಕೀರ್ ಉಸ್ತಾದ್ ಸೌದಿ ಅರೇಬಿಯಾದಲ್ಲಿ ಕೂತಿರುವ ಹ್ಯಾಂಡ್ಲರ್. ಅಲ್ಲಿಗೆ ಒಟ್ಟು ಬಂಧಿತ 15 ಮಂದಿಯಲ್ಲಿ ನಾಲ್ವರ ವಿರುದ್ಧ ಎನ್‌ಐಎ ಆರೋಪಟ್ಟಿಯನ್ನು ಸಲ್ಲಿಸಿಲ್ಲ. ಇಲ್ಲಿರುವುದು ಸುದ್ದಿ.

ಎನ್‌ಐಎ ಮೂಲಗಳು ತಿಳಿಸುವಂತೆ ಮತ್ತು ಆರೋಪಪಟ್ಟಿಯ ಪ್ರತಿಯನ್ನು ಸ್ವತಃ ನಾನು ಕಂಡಿರುವಂತೆ, ಈ ನಾಲ್ವರು – ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ, ಸೈಯದ್ ಯೂಸುಫ್ ನಳಬಂದ್, ಐಜಾಜ್ ಅಹಮದ್ ಮಿರ್ಜಾ ಮತ್ತು ಸೈಯದ್ ತಂಜೀಮ್. ಈ ನಾಲ್ವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಎನ್‌ಐಎ ಅತ್ಯಂತ ಸ್ಪಷ್ಟವಾಗಿ ಹೇಳಿದೆ: “ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ ಮತ್ತು ಸೈಯದ್ ಯೂಸುಫ್ ನಳಬಂದ್ ಅವರ ವಿರುದ್ಧ ನಮಗೆ ಯಾವುದೇ ಸಾಕ್ಷ್ಯಾದಾರಗಳು ಸಿಕ್ಕಿಲ್ಲವಾದ್ದರಿಂದ ಅವರನ್ನು ಎಲ್ಲ ಆರೋಪಗಳಿಂದಲೂ ವಿಮುಕ್ತಗೊಳಿಸುತ್ತಿದ್ದೇವೆ. ಇನ್ನು ಐಜಾಜ್ ಅಹಮದ್ ಮಿರ್ಜಾ ವಿರುದ್ಧ ಇನ್ನೂ ತನಿಖೆ ಬಾಕಿಯಿದ್ದು ಅದಕ್ಕೆ ಮತ್ತಷ್ಟು ಕಾಲಾವಕಾಶ ನೀಡಬೇಕು. ಸದ್ಯದ ಮಟ್ಟಿಗೆ ಆತನ ವಿರುದ್ಧವೂ ಪ್ರಬಲ ಸಾಕ್ಷ್ಯಾಧಾರಗಳಿಲ್ಲ. ಇನ್ನು ನಾಲ್ಕನೆಯ ಸೈಯದ್ ತಂಜೀಮ್ – ಈತನನ್ನು ಬಂಧಿಸಿದ್ದೇ ನವೆಂಬರ್‌ನಲ್ಲಿ. ಹಾಗಾಗಿ ಈತನ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲಾವಕಾಶವಿದೆ. ಹಾಗಾಗಿ ಈ ನಾಲ್ವರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ.”

ಅಲ್ಲಿಗೆ ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ ಇಷ್ಟರಲ್ಲೇ ಗೌರವಯುತವಾಗಿ ಹೊರಬರುವ ಸಾಧ್ಯತೆಗಳಿವೆ. ಉಗ್ರವಾದಿಗಳ ತಂಡದ ನಾಯಕನೆಂದೇ ಬ್ರಾಂಡ್ ಆಗಿಹೋಗಿದ್ದ ಸಿದ್ಧಿಕಿಯನ್ನು ಎನ್‌ಐಎ ದೋಷಮುಕ್ತಗೊಳಿಸಿದೆ. ಆರು ತಿಂಗಳ ಕಾಲ ಜೈಲಿನಲ್ಲಿ ಕೊಳೆತ ಮೇಲೆ, ಉಗ್ರವಾದಿಯೆಂಬ ಅಪಾದನೆಯನ್ನು ಹೊತ್ತ ಮೇಲೆ ಈಗ ಕಡೆಗೂ ನ್ಯಾಯ ಸಿಕ್ಕಿದೆ, ಇಲ್ಲವೆನ್ನುತ್ತಿಲ್ಲ. ಆದರೆ ಇದು ನ್ಯಾಯವೇ?

ಒಂದು ಕ್ಷಣ – ಇಫ್ತಿಕಾರ್ ಗಿಲಾನಿ, ಶಹಿನಾ ಕೆಕೆ, ನವೀನ್ ಸೂರಿಂಜೆ ಮತ್ತಿತರೆ ಪತ್ರಕರ್ತರ ಪ್ರಕರಣಗಳೊಂದಿಗೆ ಈ ಪ್ರಕರಣವನ್ನು ಜೊತೆಗೂಡಿಸಿ ಇದು ಸರ್ಕಾರವು ಪತ್ರಕರ್ತ ಸಮೂಹವನ್ನು ದಮನಿಸಲು ನಡೆಸಿರುವ ಷಡ್ಯಂತ್ರ ಎಂದು ಬೊಬ್ಬಿಡುವುದು ಬೇಡ. ಪ್ರತಿ ಪ್ರಕರಣಕ್ಕೂ ಅದರದೇ ಆದ ಹಿನ್ನೆಲೆಯಿದೆ. ಮತ್ತು ಸಿದ್ಧಿಕಿಯನ್ನು ವೈಯಕ್ತಿಕವಾಗಿ ಬಲ್ಲ ನಾನು ಕಂಡಂತೆ ಈ ಪ್ರಕರಣದಲ್ಲಿ ಸಿದ್ಧಿಕಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದಲ್ಲ.

ಆದದ್ದಿಷ್ಟು. ಕನ್ನಡಪ್ರಭದ ಅಂಕಣಕಾರ ಪ್ರತಾಪ ಸಿಂಹರನ್ನು ಮುಗಿಸಲು ಕೆಲ ಮುಸ್ಲಿಂ ಹುಡುಗರು ನಗರದಲ್ಲಿ ಸಂಚು ರೂಪಿಸಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಸಿಸಿಬಿಯವರಿಗೆ ಲಭಿಸುತ್ತದೆ. siddiqui-arrestಈ ಕುರಿತು ಅಸಲು ಕೆಲಸ ಮಾಡಿದವರು ಆಂಧ್ರದ ಗುಪ್ತಚರ ಇಲಾಖೆ. ಹೈದರಾಬಾದಿನ ವಿವಾದಿತ ಇಮಾಮ್ ಒಬ್ಬರ ಕುಟುಂಬದ ಒಬ್ಬನ ಚಲನವಲನಗಳನ್ನು ಗಮನಿಸುತ್ತಿದ್ದವರಿಗೆ ಆತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಶುರು ಮಾಡುವುದು ಆಶ್ಚರ್ಯವಾಗುತ್ತದೆ. ಆತನನ್ನು ಹಿಂಬಾಲಿಸಿ ನಗರಕ್ಕೆ ಬಂದವರಿಗೆ ಆತ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಒಂದು ರೂಮಿನ ಸಣ್ಣ ಮನೆಯಲ್ಲಿ ಕೆಲವರನ್ನು ಬೇಟಿಯಾಗುತ್ತಿದ್ದಾನೆಂದೂ ತಿಳಿಯುತ್ತದೆ.

ಆ ಮನೆಯಲ್ಲಿ ವಾಸ ಇದ್ದವರು ಐದು ಮಂದಿ – ಎಲ್ಲರೂ ಹುಬ್ಬಳ್ಳಿಯ ಓಲ್ಡ್ ಸಿಟಿ ಭಾಗದ ಮುಸ್ಲಿಂ ಯುವಕರು, ಬೆಂಗಳೂರಿನಲ್ಲಿ ಬದುಕು ಅರಸಿ ಬಂದವರು – ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ, ಸೈಯದ್ ಯೂಸುಫ್ ನಳಬಂದ್, ಐಜಾಜ್ ಅಹಮದ್ ಮಿರ್ಜಾ, ಆತನ ತಮ್ಮ ಶೋಯೆಬ್ ಅಹಮದ್ ಮಿರ್ಜಾ ಮತ್ತು ರಿಯಾಜ್ ಅಹಮದ್ ಬ್ಯಾಹಟ್ಟಿ. ಇವರ ಬಗ್ಗೆ ತನಿಖೆ ಮಾಡುತ್ತಾ ಹೋದಾಗ ಹುಬ್ಬಳ್ಳಿಯಲ್ಲಿ ಇವರ ಸಂಪರ್ಕ ಇದ್ದ ಐದು ಮಂದಿ ಬಯಲಾಗುತ್ತಾರೆ. ಆನಂತರ ಆಂಧ್ರದ ಗುಪ್ತಚರ ಇಲಾಖೆ ಬೆಂಗಳೂರಿನ ಸಿಸಿಬಿಗೆ ಈ ಮಾಹಿತಿಯನ್ನು ಸ್ಪೂನ್‌ಫೀಡ್ ಮಾಡುತ್ತದೆ.

ಧಿಗ್ಗನೆದ್ದು ಕೂತ ಸಿಸಿಬಿ ಪೋಲೀಸರು ಆಗಸ್ಟ್ 29 ರ ಮುಂಜಾವು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಒಟ್ಟು 11 ಮಂದಿಯನ್ನು ಬಂಧಿಸಿಬಿಟ್ಟರು, ಜೇಮ್ಸ್ ಬಾಂಡ್‌ಗಳಂತೆ ಪೋಸುಕೊಟ್ಟವರು ಪ್ರಥಮ ಮಾಹಿತಿ ವರದಿಯಲ್ಲೇ ಆತ್ಮರತಿಯ ರಂಜನೀಯ ಕಥೆಗಳನ್ನು ಬರೆದುಕೊಂಡರು. ಪ್ರತಾಪ ಸಿಂಹ ತಮ್ಮನ್ನು ಚೆ ಗೋವೆರಾನಿಗೆ ಹೋಲಿಸಿಕೊಂಡರು.

ನಂತರದ್ದು ಮೀಡಿಯಾ ಮ್ಯಾನೇಜ್‌ಮೆಂಟ್. ನಮ್ಮ ಗುಪ್ತಚರ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರೊಬ್ಬರು ಅದನ್ನು “ಪರ್ಸೆಪ್ಷನ್ ಮ್ಯಾನೇಜ್‌ಮೆಂಟ್” ಎಂದು ಕರೆಯುತ್ತಾರೆ. ಅದನ್ನು ಅದ್ಭುತವಾಗಿ ಮಾಡಿದರು ಸಿಸಿಬಿಯ ಜೇಮ್ಸ್ ಬಾಂಡುಗಳು. ಸ್ವತಃ ತಮ್ಮ ನೌಕರನೇ ಬಂಧಿತನಾಗಿದ್ದ ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಪತ್ರಿಕೆಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಪತ್ರಿಕೆಗಳು ಇದಕ್ಕೆ ಬಲಿಯಾದವುಗಳೇ,

ಈಗ ಎನ್‌ಐಎ ತನಿಖೆ ನಡೆಸಿ ಆರೋಪಪಟ್ಟಿ ಹಾಕುವಾಗ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಮನೆಯಿಂದ ನಮ್ಮ ಸಿಸಿಬಿಯವರು ಬಂಧಿಸಿದ್ದ ಐವರಲ್ಲಿ ಮೂವರ ವಿರುದ್ಧ ಯಾವುದೇ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ. ಇದರಲ್ಲಿ ಸ್ವಂತ ಅಣ್ಣ ತಮ್ಮಂದಿರಾದ ಐಜಾಜ್ ಅಹಮದ್ ಮಿರ್ಜಾ ಮತ್ತು ಶೋಯೆಬ್ ಅಹಮದ್ ಮಿರ್ಜಾ ಅವರಲ್ಲಿ ಶೋಯೆಬ್ ಅಹಮದ್ ಮಿರ್ಜಾನನ್ನು ಈ ಉಗ್ರ ಸಂಚಿನ ಪ್ರಮುಖ ರೂವಾರಿಯೆಂದು ಗುರುತಿಸಿದರೆ, ಆತನ ಅಣ್ಣ ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಐಜಾಜ್ ಅಹಮದ್ ಮಿರ್ಜಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದಿರುವುದು ಎನ್‌ಐಎ ತನಿಖೆಯ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಗೆ ದ್ಯೋತಕ. ಒಂದು ವೃತ್ತಿಪರ ತನಿಖೆಯ ಉದಾಹರಣೆ. ಹೀಗೆ ಯಾವುದೇ ಸಾಕ್ಷ್ಯಗಳಿಲ್ಲವೆಂದು ನಮ್ಮ ಮುತಿ-ಉರ್-ರೆಹಮಾನ್ ಸಿದ್ಧಿಕಿಯನ್ನೂ ಸಹ ಎನ್‌ಐಎ ಎಲ್ಲ ಆರೋಪಗಳಿಂದಲೂ ಮುಕ್ತಗೊಳಿಸಿದೆ.

ಅಷ್ಟೇ ಅಲ್ಲ ನಮ್ಮ ಸಿಸಿಬಿಯವರು ಬಂಧಿಸಿದ ಎಲ್ಲ ಹದಿನೈದು ಜನರ ವಿರುದ್ಧವೂ ಐಪಿಸಿಯ ಸೆಕ್ಷನ್ 121 ರ ಅಡಿ (ಭಾರತ ಪ್ರಭುತ್ವದ ವಿರುದ್ಧ ಯುದ್ಧ ಸಾರುವುದು) ಕೇಸು ಹಾಕಿದ್ದರು. ಆದರೆ ಎನ್‌ಐಎ ಈ ಕೇಸನ್ನು ಕೈಬಿಟ್ಟಿದೆ. ಯುಎಪಿಎ, 1967 ರ ಸೆಕ್ಷನ್ 10, 13, 17 ಮತ್ತು 18 ರಡಿಯಷ್ಟೇ ಪ್ರಕರಣ ದಖಲಿಸಿದ್ದಾರೆ. ಇದು ಅತ್ಯಂತ ಫೇರ್ ಆದ ಕ್ರಮ. ನಾಲ್ವರು ಹುಡುಗರು ಒಂದು ಬಂದೂಕು ಹಿಡಿದು ತಮ್ಮ ಕೋಮಿನ ವಿರುದ್ಧ ಬರೆಯುತ್ತಿದ್ದಾನೆಂಬ ಒಂದು ಸಿಟ್ಟು ಮತ್ತು ಮತಾಂಧತೆಯಲ್ಲಿ ಆತನನ್ನು ಹೊಡೆಯಲು ಹುಚ್ಚರಂತೆ ತಿರುಗುವುದು ಹೇಗೆ ಪ್ರಭುತ್ವದ ವಿರುದ್ಧ ಯುದ್ಧ ಸಾರಿದಂತಾಗುತ್ತದೆ?

ನಿಜ, ಎನ್‌ಐಎ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡದ್ದರಿಂದ ನ್ಯಾಯ ದೊರಕಿತು. ಇಂಥ ಪ್ರಕರಣಗಳಲ್ಲಿ ಎಲ್ಲ ಆಸೆಗಳನ್ನೂ ಕಳೆದುಕೊಂಡಿದ್ದ ನಮ್ಮಂಥವರಿಗೆ ಒಂದು ಆಶಾಭಾವನೆಯನ್ನು ಚಿಗುರಿಸಿರುವುದು ದಿಟ. ಆದರೆ ಈಗ ಸಿಸಿಬಿ ಪೋಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು? ಒಂದು ಮನೆಯಲ್ಲಿ ಐವರು ಹುಡುಗರು ಇದ್ದರೆಂದ ಮಾತ್ರಕ್ಕೆ ಐವರನ್ನು ಹೆಡೆಮುರಿಗೆ ಕಟ್ಟಿ ತಂದವರು ಈಗ ಏನು ಹೇಳುತ್ತಾರೆ? ಅವರ ವಿರುದ್ಧ ಯಾವ ಕ್ರಮವೂ ಇಲ್ಲವೇ? ತಮ್ಮನ್ನು ಅಂತಹ ಕ್ರಮಗಳಿಂದ ರಕ್ಷಿಸಿಕೊಳ್ಳಲು ಬಹುಶಃ ಯುಎಪಿಎ, 1967 ದ ಸೆಕ್ಷನ್ 18 ನ್ನೂ ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ.
Section 18, UAPA, 1967:
Protection of action taken in good faith.
No suit, prosecution or other legal proceeding shall lie against the District Magistrate or any officer authorised in this behalf by the Government or the District Magistrate in respect of anything which is in good faith done or intended to be done in pursuance of this Act or any rules or orders made thereunder.

ಇದಕ್ಕೆ ಏನು ಹೇಳಬೇಕು? ಸಿದ್ಧಿಕಿ ಹೊರಬರುತ್ತಾನೆ ನಿಜ. ಆದರೆ ನೀವು ಸುಮ್ಮನೆ ಮುತಿ-ಉರ್-ರೆಹಮಾನ್ ಸಿದ್ಧಿಕಿಯ ಹೆಸರು ಹೊಡೆದು ನೋಡಿ ಗೂಗಲ್ಲಿನಲ್ಲಿ – ನೂರು ಪುಟಗಳು ಪುಟಿಯುತ್ತವೆ ಆತನನ್ನು “ಮಾಸ್ಟರ್ ಮೈಂಡ್” ಎಂದು ಘೋಷಿಸುತ್ತಾ. ಇದರಿಂದ ಬಿಡುಗಡೆ? ಆತ ಜೀವನದುದ್ದಕ್ಕೂ ಈ ಉಗ್ರವಾದಿ ಎಂಬ ಹಣೆಪಟ್ಟಿಯನ್ನು ಹೊರಲೇಬೇಕಲ್ಲವೇ? ಸಮಾಜ ಮುಖ್ಯವಾಹಿನಿಯ ಮಾತು ಬಿಡಿ. ನಮ್ಮ ಪೋಲೀಸ್ ವ್ಯವಸ್ಥೆ, ಗುಪ್ತಚರ ವ್ಯವಸ್ಥೆಯ ಕಣ್ಣಲ್ಲಿ ಈಗಲೂ ಆತ ಸಾಕ್ಷ್ಯಾಧಾರಗಳು ಲಭಿಸದೆ ತಪ್ಪಿಸಿಕೊಂಡ ಒಬ್ಬ ಉಗ್ರ ಅಷ್ಟೆ. ಆತ ಜೀವನ ಪರ್ಯಂತ ನಮ್ಮ ಪೋಲೀಸ್ ಮತ್ತು ಗುಪ್ತಚರ ಇಲಾಖೆಗಳ ರಡಾರ್‌ನಲ್ಲಿ ಇದ್ದೇ ಇರುತ್ತಾನೆ. ಪ್ರತಿ ಉಗ್ರವಾದಿ ದಾಳಿಯ ನಂತರವೂ ಆತ ತನ್ನ ಇನ್ನೋಸೆನ್ಸ್ ಅನ್ನು ಋಜು ಮಾಡುತ್ತಲೇ ಇರಬೇಕು. 2001 ರ ಸುಮಾರಿನಲ್ಲಿ ಪಾಕಿಸ್ತಾನಕ್ಕೆ ಗುಪ್ತಚರ ಏಜೆಂಟನಾಗಿ ಕೆಲಸ ಮಾಡುವ ಆರೋಪದ ಮೇಲೆ ಬಂಧಿತನಾಗಿ ನಂತರ ಖುಲಾಸೆಯಾದ ಪತ್ರಕರ್ತ ಇಫ್ತಿಕಾರ್ ಗಿಲಾನಿಯನ್ನು ನಮ್ಮ ದೆಹli ಪೋಲೀಸರು ಅಫ್ಜಲ್ ಗುರುವನ್ನು ನೇಣಿಗೇರಿಸಿದ ಕೂಡಲೇ ಗೃಹ ಬಂಧನದಲ್ಲಿರಿಸಿದರು. ಆತ ಇವತ್ತು ರಾಷ್ಟ್ರೀಯ ಪತ್ರಿಕೆಯೆನ್ನಿಸಿಕೊಂಡಿರುವ ಡಿಎನ್‌ಎದ ಹಿರಿಯ ಸಂಪಾದಕ! ಇದಕ್ಕೆ ಬೆಲೆ ಕಟ್ಟುವವರಾರು?

ಇವತ್ತು ಶನಿವಾರ ಎನ್‌ಐಎದಲ್ಲಿ ಈ ಪ್ರಕರಣದ ವಿಚಾರಣೆಯಿದ್ದು, ಸಿದ್ಧಿಕಿಯ ಬಿಡುಗಡೆಯ ಕ್ರಮಗಳು ಶುರುವಾಗುತ್ತವೆ. ಮಂಗಳವಾರದಂದು ಆತ ಸ್ವತಂತ್ರ ಹಕ್ಕಿಯಾಗಿ ಹೊರಬರುವ ಎಲ್ಲ ನಿರೀಕ್ಷೆಗಳಿವೆ. ಆತ ಹೊರಬಂದ ಮೇಲೆ ಮತ್ತೆ ಆತನನ್ನು ಮುಖ್ಯವಾಹಿನಿಗೆ ತರಬೇಕಿದೆ. ಆತನನ್ನು ಹೇಗೆ ನಡೆಸಿಕೊಳ್ಳುತ್ತದೆ ನಮ್ಮ ಸಮಾಜ ಎಂಬುದರ ಮೇಲೆ ಅದರ ಪ್ರಬುದ್ಧತೆಯನ್ನು ಅಳೆಯಬಹುದಾಗಿದೆ. ಈ ನಿಟ್ಟಿನಲ್ಲಿ “ಡೆಕ್ಕನ್ ಹೆರಾಲ್ಡ್ ಪತ್ರಿಕೆ” ಇನ್ನೂ ಆತನನ್ನು ಕೆಲಸದಿಂದ ತೆಗೆದುಹಾಕದೆ ಇಟ್ಟುಕೊಂಡಿರುವುದು ಅತ್ಯಂತ ಸ್ವಾಗತಾರ್ಹ. ಮಂಗಳವಾರ ಆತ ಹೊರಬಂದರೆ ಬುಧವಾರದಿಂದಲೇ ಆತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಲು ಶುರು ಮಾಡಬಹುದೆಂಬ ವರ್ತಮಾನವಿದೆ. ಪ್ರಜಾವಾಣಿ ಸಮೂಹದ ಈ ಕ್ರಮವನ್ನು ನಾವು ಸ್ವಾಗತಿಸುವ ಅವಶ್ಯಕತೆಯಿದೆ. ಅಂತೆಯೇ ಒಂದು ದಕ್ಷ, ವೃತ್ತಿಪರ, ಪಾರದರ್ಶಕ ತನಿಖೆಗಾಗಿ ಎನ್‌ಐಎಗೆ ಒಂದು ಕೃತಜ್ಞತೆ ಸಲ್ಲಿಸಬೇಕಿದೆ.

ಕೊನೆಯದಾಗಿ ಒಂದು ಮಾತು – ಪ್ರತಾಪ ಸಿಂಹ ಮತ್ತು ಅವರಂತೆ ಬರೆಯುವವರಿಗೆ: ಒಂದು ಕೋಮಿನ ತಮ್ಮದೇ ವಯಸ್ಸಿನ ತಮ್ಮಷ್ಟೇ ಬಿಸಿರಕ್ತದ ವಿದ್ಯಾವಂತ ಹುಡುಗರು ತಮ್ಮ ಬರವಣಿಗೆಯಿಂದ ಬೇಸತ್ತು, ಹೌಹಾರಿ ರೇಜಿಗೆಯಾಗಿ ಕೊಲ್ಲಲು ಹವಣಿಸುತ್ತಾರೆಂದರೆ ಆ ಬರವಣಿಗೆ ಅವರ ಮನಸ್ಸುಗಳನ್ನು ಎಷ್ಟು ಘಾಸಿಗೊಳಿಸಿರಬಹುದು? ಟೀಕೆಯನ್ನು ಸಹಿಸಿಕೊಳ್ಳಲಾಗದವರು, ಇವರಂತೆಯೇ ಮತಾಂಧರೂ ಆಗಿರುವ ಹುಡುಗರು ಪೆನ್ನು ಹಿಡಿದು ಉತ್ತರಿಸುವ ಬದಲು ಬಂದೂಕು ಹಿಡಿದರು. ಅದು ಅವರ ಅಭಿವ್ಯಕ್ತಿ ಮತ್ತು ಅಪರಾಧ. ಬರವಣಿಗೆ ಎದೆಗೆ ಬಿದ್ದ ಅಕ್ಷರವಾಗಬೇಕು. ಒಂದು ಕೋಮಿನ ವಿರುದ್ಧ ಒಂದು ತೀರದ ನಂಜನ್ನಿಟ್ಟುಕೊಂಡು ಬರೆಯುವುದು ಪ್ರಚಾರ ಮತ್ತು ಅಪಪ್ರಚಾರದ ಬರವಣಿಗೆ. ಇಂತಹದು ಪತ್ರಿಕೋದ್ಯಮವಾ? ಚೆ ಗೋವೆರಾನಿಗೆ ಹೋಲಿಸಿಕೊಂಡು ಆ ಹಿರಿಯ ಚೇತನದ ಸ್ಮೃತಿಗೂ ಅವಮಾನ ಮಾಡಿ ಭ್ರಮೆಗಳಲ್ಲಿ ತೇಲುವ ಬದಲು ಇದು ಆತ್ಮಾವಲೋಕನಕ್ಕೆ ಸಕಾಲ.

ಸಿದ್ದಿಕಿ ಪ್ರಕರಣ: ‘ಮಾಸ್ಟರ್ ಮೈಂಡ್’ ಎಂದವರು ಈಗ ಏನ್ಮಾಡ್ತಾರೆ?

– ಸುಧಾಂಶು ಕಾರ್ಕಳ

ಡೆಕ್ಕನ್ ಹೆರಾಲ್ಡ್ ವರದಿಗಾರ ಮುತಿ-ಉರ್-ರಹಮಾನ್ ಸಿದ್ದಿಕಿ ವಿರುದ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್‌ಐ‌ಎ) ತನ್ನ ಚಾರ್ಜಶೀಟ್ ನಲ್ಲಿ ಯಾವುದೇ ಉಲ್ಲೇಖ ಮಾಡದೆ ಅವರ ವಿರುದ್ಧ ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತುಪಡಿಸಲು ಆಗಲಿಲ್ಲ ಎಂಬ ಸೂಚನೆ ನೀಡಿದೆ.siddiqui ಆರು ತಿಂಗಳ ಕಾಲ ಸಿದ್ದಿಕಿ ಆತ ಅನುಭವಿಸಿದ ಶಿಕ್ಷೆ, ಅವಮಾನ, ಎದುರಿಸಿದ ಅನುಮಾನದ ಕಣ್ಣುಗಳು, ಟಾರ್ಚರ್, ತನ್ನದೇ ವೃತ್ತಿಯ ಹಲವರು ಕಟ್ಟಿದ ಕತೆಗಳು..ಎಲ್ಲವನ್ನೂ ನೆನಸಿಕೊಂಡರೆ ಆತಂಕ, ಭಯ, ಬೇಸರ ಎಲ್ಲವೂ ಒಮ್ಮೆಗೇ.

ಇಷ್ಟು ದಿನಗಳ ಕಾಲ ತನಿಖೆ ಮಾಡಿದ ನಂತರವೂ ತನಿಖಾ ಸಂಸ್ಥೆಗೆ ಆತನ ವಿರುದ್ಧ ಚಾಜ್ರ್ ಶೀಟ್ ಹಾಕಲಾಗಲಿಲ್ಲ. ಆದರೆ ನಾಡಿನ ಪ್ರಮುಖ ಪತ್ರಿಕೆಗಳು ಸಿದ್ದಿಕಿ ವಿರುದ್ಧ ಪುಂಖಾನುಪುಂಖವಾಗಿ ಕತೆ ಬರೆದವು. ಟೈಮ್ಸ್ ಆಫ್ ಇಂಡಿಯಾ ಎಂಬ ದೇಶದ ನಂಬರ್ 1 ಪತ್ರಿಕೆ ಸಿದ್ದಿಕಿಯನ್ನು ಭಯೋತ್ಪಾದಕ ಚಟುವಟಿಕೆಗಳ ಹಿಂದಿನ ‘ಮಾಸ್ಟರ್ ಮೈಂಡ್’ ಎಂದು ಬಣ್ಣಿಸಿತು.

ಅಷ್ಟೇ ಏಕೆ, ಬಂಧನವಾದ ಮಾರನೆಯ ದಿನವೇ ಬಂಧಿತರನ್ನೆಲ್ಲಾ ಮುಲಾಜಿಲ್ಲದೆ ‘ಉಗ್ರರು’ ಎಂದು ಹಣೆಪಟ್ಟಿಕಟ್ಟಿದ್ದು ಸಂಯಮ ಕಳೆದುಕೊಂಡಿರುವ ಮಾಧ್ಯಮ. ಆತ ಸಿದ್ದಿಕಿ ಅಲ್ಲದೆ ಸಿದ್ದಯ್ಯನೋ, ಸಿದ್ದಲಿಂಗೇಶನೋ ಆಗಿದ್ದರೆ ‘ಉಗ್ರ’ ಎಂದು ಘೋಷಿಸುವ ಉತ್ಸಾಹವನ್ನು ಮಾಧ್ಯಮ ತೋರಿಸುತ್ತಿತ್ತೇ? (ಇಂತಹದೇ ಆರೋಪ ಹೊತ್ತು ಜೈಲು ವಾಸ ಅನುಭವಿಸುತ್ತಿರುವ ಪ್ರಜ್ಞಾಳನ್ನು ಇಂದಿಗೂ ಮಾಧ್ಯಮ ‘ಸಾಧ್ವಿ ಪ್ರಜ್ಞಾ’ ಎಂದೇ ಸಂಬೋಧಿಸುತ್ತಿದ್ದಾರೆ. ಸಿದ್ದಕಿಗೆ ಸಿಕ್ಕ ‘ಉಗ್ರ’ ಪಟ್ಟ ಆಕೆಗೆ ಏಕಿಲ್ಲ?)

ಸಿದ್ದಿಕಿಯಿಂದ ಪೊಲೀಸರು ಲ್ಯಾಪ್ ಟಾಪ್ ವಶಪಡಿಸಿಕೊಂಡರು. ಅವನ ಬಳಿ ವಿದೇಶಿ ಕರೆನ್ಸಿ ಇತ್ತು, ವಿದೇಶಿ ಬ್ಯಾಂಕ್ ಅಕೌಂಟ್ ಇತ್ತು..- ಹೀಗೆ ಏನೆಲ್ಲಾ ಕತೆ ಬರೆದರಲ್ಲಾ..ಈಗ ಕ್ಷಮೆ ಕೇಳುವ ಸೌಜನ್ಯ ತೋರುತ್ತಾರಾ? ಒಂದು ಪತ್ರಿಕೆಯವರು ಬರೆದರು – ಅವನ ಲ್ಯಾಪ್ ಟ್ಯಾಪ್ ನಲ್ಲಿ ಗೋಧ್ರ ಹತ್ಯಾಕಾಂಡ ಕುರಿತ ವಿಡಿಯೋ ತುಣುಕುಗಳಿದ್ದವು ಮತ್ತು ಇಬ್ಬರು ಪತ್ರಕರ್ತರು ನರೇಂದ್ರ ಮೋದಿಯನ್ನು ಭೇಟಿ ಮಾಡುತ್ತಿರುವ ಚಿತ್ರವೂ ಸಿಕ್ಕಿತು. ಗೋಧ್ರ ಹತ್ಯಾಕಾಂಡದ ದೃಶ್ಯಗಳು ಇಂದು ಲಕ್ಷಾಂತರ ಲ್ಯಾಪ್ ಟಾಪ್ ಗಳಲ್ಲಿ ಇರಬಹುದು. ಹಾಗಾದರೆ ಅವರೆಲ್ಲರೂ ಲಷ್ಕರ್-ಎ-ತೊಯಬಿ ಸಂಘಟನೆಯವರು ಎನ್ನಬೇಕೆ?

ಸಿದ್ದಿಕಿ ವಿರುದ್ಧ ಆರೋಪಗಳೆಲ್ಲವೂ ಗಂಭೀರವಾದವು. ಅವರ ಜೊತೆಗೆ ಇದ್ದವರಿಗೂ, ಅವನ ಬಗ್ಗೆ ಚೆನ್ನಾಗಿ ಗೊತ್ತಿದ್ದವರಿಗೂ ಆ ಆರೋಪಗಳು ದಂಗು ಪಡಿಸಿದವು. ಅವರ ಪರವಾಗಿ ದನಿ ಎತ್ತಿದ್ದವರ ಸಂಖ್ಯೆ ತೀರಾ ಕಡಿಮೆಯಾಗಲು ಇದೂ ಕಾರಣ. ಎಲ್ಲಾ ಪತ್ರಿಕೆಗಳು, ಟಿವಿ ಚಾನೆಲ್ ಗಳು ಸಿದ್ದಕಿ ಒಬ್ಬ ಉಗ್ರ ಎನ್ನುತ್ತಿರುವಾಗ ಪರ ವಹಿಸುವುದು ಹೇಗೆ?

ಸದ್ಯ ಎನ್‌ಐ‌ಎ ಅವರ ವಿರುದ್ಧ ದೋಷಾರೋಪಣೆ ಮಾಡಿಲ್ಲ. ಹಾಗಾದರೆ, ಕಳೆದ ಆರು ತಿಂಗಳು ಅವರು ಕಳೆದುಕೊಂಡಿದ್ದನ್ನೆಲ್ಲಾ ಹಿಂದಕ್ಕೆ ಪಡೆಯಲು ಸಾಧ್ಯವೇ? ಪೊಲೀಸರು ಕೊಟ್ಟ ಟಾರ್ಚರ್ ಮರೆಯಲು ಸಾಧ್ಯವೇ? ಅವರ ಮಧ್ಯಮ ವರ್ಗದ ಕುಟುಂಬ ಅನುಭವಿಸಿರುವ ಯಾತನೆಗೆ ಸಮಾಧಾನ ಹೇಳುವವರಾರು? ಎಂತಹ ಅಸಹ್ಯ ಪರಿಸ್ಥಿತಿ ಇದೆ ನೋಡಿ, ಸಿದ್ದಿಕಿ ವಿರುದ್ಧ ಸುಳ್ಳೇ ಸುಳ್ಳೆ ವರದಿ ಮಾಡಿದವರು ಮುಂದೆ ಬಂದು ಒಂದೇ ಒಂದು ಸಾಲಿನ ‘ತಪ್ಪಾಯ್ತು’ ಎಂದು ಬರೆಯುವುದಿಲ್ಲ.

ಡೆಕ್ಕನ್ ಹೆರಾಲ್ಡ್‌ನಲ್ಲಿ ಮುಖ್ಯ ಸ್ಥಾನದಲ್ಲಿರುವ ರಶೀದ್ ಕಪ್ಪನ್ ಅವರು ತಮ್ಮ ಫೇಸ್ ಬುಕ್ ಸ್ಟೇಟಸ್‍ನಲ್ಲಿ ಸಿದ್ದಿಕಿಯನ್ನು ವರದಿಗಾರನನ್ನಾಗಿ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಇದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಸಿದ್ದಿಕಿ ವರದಿಗಾರಿಕೆಗೆ ಬೀದಿಗೆ ಬಂದರೆ, ಅವರ ವಿರುದ್ದ arnabಕಪೋಲ ಕಲ್ಪಿತ ಸುದ್ದಿ ಬರೆದ ಸಹೋದ್ಯೋಗಿಗಳು ಅನುಮಾನದ ಕಣ್ಣುಗಳಿಂದ ನೋಡುವುದನ್ನೇ ನಿಲ್ಲಿಸುತ್ತಾರಾ?

ದೆಹಲಿ ವಿ.ವಿ ಕಾಲೇಜಿನ ಉಪನ್ಯಾಸಕ ಎಸ್. ಆರ್. ಗಿಲಾನಿ ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿದ್ದರೂ “ಟೈಮ್ಸ್ ನೌ”ನ ಅರ್ನಾಬ್ ಗೋಸ್ವಾಮಿ ಕಣ್ಣಲ್ಲಿ ಇಂದಿಗೂ ಆರೋಪಿ. ಅಫ್ಜಲ್ ಗುರು ನೇಣುಗಂಬಕ್ಕೆ ಏರಿದ ಸಂದರ್ಭದ ಟಿವಿ ಚರ್ಚೆಯಲ್ಲಿ ‘ಗಿಲಾನಿ ಹೇಗೋ ಬಚಾವಾಗಿಬಿಟ್ಟ’ ಎಂದು ಕೀಳು ಮಟ್ಟದ ಟೀಕೆ ಮಾಡಿದ್ದರು ಗೋಸ್ವಾಮಿ. ಗಿಲಾನಿ ಮತ್ತೊಂದು ಚಾನೆಲ್ ನಲ್ಲಿ ಸಂವಾದಕನಾಗಿ ಪಾಲ್ಗೊಳ್ಳುವುದನ್ನೂ ಮೂದಲಿಸಿದ್ದರು. ಹೀಗಿರುವಾಗ ಸಿದ್ದಿಕಿ ಬಗ್ಗೆ ಮಾಧ್ಯಮದ ಬೀದಿ ಬೀದಿಗಳಲ್ಲಿರುವ ಮರಿ ಗೋಸ್ವಾಮಿಗಳು ಭಿನ್ನವಾಗಿ ವರ್ತಿಸುತ್ತಾರೆಂದು ನಿರೀಕ್ಷಿಸುವುದು ಕಷ್ಟಕರ. ಸಿದ್ದಿಕಿಗೆ ಯಶಸ್ಸು ಲಭಿಸಲಿ. ಹೆಚ್ಚು ಗೋಜಲುಗಳಿಲ್ಲದೆ ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಗೆ ಬರಲಿ.

ರಿಯಲ್ ಎಸ್ಟೇಟ್‌ನ ಒಂದು ರಿಯಲ್ ಕತೆ

– ಬಸವರಾಜು

ರಜನೀಕಾಂತ್… ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿದ್ದ ಇವರು, ಇವತ್ತು ಭಾರತೀಯ ಸಿನಿಮಾ ಲೋಕದ ಸೂಪರ್ ಸ್ಟಾರ್. ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ವ್ಯಕ್ತಿ. ಬೆಂಗಳೂರಿನ ಹನುಮಂತನಗರದ ರಜನೀಕಾಂತ್ ಕಂಡಕ್ಟರ್ ಕೆಲಸ ಬಿಟ್ಟು, ಬಣ್ಣದ ಬದುಕನ್ನು ಅರಸಿ ಮದ್ರಾಸಿಗೆ ಹೋಗಿದ್ದು, ಜನಪ್ರಿಯ ಚಿತ್ರತಾರೆಯಾಗಿ ರೂಪುಗೊಂಡದ್ದು ಇವತ್ತು ದಂತಕತೆ.

ನಾವಿಲ್ಲಿ ಪ್ರಸ್ತಾಪಿಸಲಿರುವ ವ್ಯಕ್ತಿಯ ಕತೆ ಕೂಡ ರಜನೀಕಾಂತ್ ಥರದ್ದೆ. LNR2ಆದರೆ ಕೊಂಚ ಬೇರೆ. ರಜನಿ ನಟನಾಗಲು ಕಂಡಕ್ಟರ್ ಕೆಲಸ ಬಿಟ್ಟರೆ, ಈ ನಮ್ಮ ಕಥಾನಾಯಕ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಕಂಡಕ್ಟರ್ ಕೆಲಸ ಬಿಟ್ಟರು. ಕ್ಲಿಕ್ ಆದರು.

ಹೆಸರು- ಲಕ್ಷ್ಮಿನಾರಾಯಣ ರಾಜ ಅರಸ್.
ವಿದ್ಯಾಭ್ಯಾಸ- ಎಸ್‌ಎಸ್‌ಎಲ್‌ಸಿ.
ವೃತ್ತಿ- ಬಿಟಿಎಸ್ ಕಂಡಕ್ಟರ್, ಬ್ಯಾಡ್ಜ್ ನಂಬರ್ 6259.
ಊರು- ರಾಮೋಹಳ್ಳಿ, ದೊಡ್ಡ ಆಲದಮರಕ್ಕೆ ಮೂರು ಕಿ.ಮಿ. ದೂರ ಮತ್ತು ಮಂಚನಬೆಲೆ ಡ್ಯಾಂಗೆ ಹತ್ತಿರ.

ಲಕ್ಷ್ಮಿನಾರಾಯಣ ಬಿಟಿಎಸ್ ಕಂಡಕ್ಟರ್ ಆಗಿದ್ದು 20 ವರ್ಷಗಳ ಹಿಂದೆ. ಈಗ ಇವರು ಕಂಡಕ್ಟರ್ ಅಲ್ಲ, ರಿಯಲ್ ಎಸ್ಟೇಟ್ ಕಿಂಗ್!

ಕಿಂಗ್ ಎಂದು ಕರೆಯುವುದು ಸುಲಭ. ಆದರೆ ಅವರನ್ನು ನೋಡಿದರೆ, ಕಿಂಗ್ ಎಂದು ಕರೆಯಲಿಕ್ಕೆ ಇರಬೇಕಾದ ಕನಿಷ್ಠ ಕುರುಹುಗಳೂ ಕಾಣುವುದಿಲ್ಲ. ಅಂದರೆ, ಇವತ್ತಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರ ಗೆಟಪ್ಪು, ಗತ್ತು, ದಿಮಾಕು, ದೌಲತ್ತು ಯಾವುದೂ ಇಲ್ಲ. ಮೂರ್‍ನಾಲ್ಕು ಐಶಾರಾಮಿ ವೆಹಿಕಲ್‌ಗಳಿಲ್ಲ, ಹಿಂದೆ ಮುಂದೆ ಸುಳಿದಾಡುವ ಶಿಷ್ಯರಿಲ್ಲ, ವೈಟ್ ಅಂಡ್ ವೈಟ್ ಸೂಟಿಲ್ಲ, ಹಣೆಯಲ್ಲಿ ಕಾಸಗಲ ಕುಂಕುಮವಿಲ್ಲ, ಇಂಪೋರ್‍ಟೆಡ್ ಗಾಗಲ್, ಶೂಸ್‌ಗಳಿಲ್ಲ, ಕತ್ತಿನಲ್ಲಿ ನಾಯಿಗೆ ಹಾಕುವಂತಹ ಭಾರೀ ತೂಕದ ಚಿನ್ನದ ಚೈನಿಲ್ಲ, ಕೈಯಲ್ಲಿ ಬ್ರೇಸ್ ಲೆಟ್ ಇಲ್ಲ, ಐದು ಬೆರಳಿಗೆ ಐದು ಉಂಗುರಗಳಂತೂ ಇಲ್ಲವೇ ಇಲ್ಲ.

ವಯಸ್ಸು ೪೧, ಆರೂವರೆ ಅಡಿ ಹೈಟು, ಕಪ್ಪು ಮೈಬಣ್ಣ, ಕಣ್ಣಿಗೊಂದು ಕನ್ನಡಕ, ಸಾಧಾರಣವೆನ್ನಿಸುವ ಡ್ರೆಸ್, ಸಾದಾ ಸೀದಾ ನಡೆ, ನುಡಿ… ಥೇಟ್ ಪಕ್ಕದ್ಮನೆ ಹುಡುಗ.

ಲಕ್ಷ್ಮಿಯವರೆ, ಮತ್ತೆ ಕಿಂಗ್ ಆಗಿದ್ದು ಹೇಗೆ?

“ನಮ್ಮದು ಬಡ ಕುಟುಂಬ, ಮನೆ ತುಂಬಾ ಮಕ್ಕಳು, ಜಮೀನಿತ್ತು, ಆದರೆ ಹುಟ್ಟುವಳಿ ಇರ್‍ಲಿಲ್ಲ. LNR1ನಮ್ ತಂದೆಯವರು ಬಿಟಿಎಸ್‌ನಲ್ಲಿ ಮೆಕ್ಯಾನಿಕ್ ಆಗಿದ್ದರು. 1987 ರಲ್ಲಿ, ನಾನಿನ್ನೂ ಆಗ ಚಿಕ್ಕ ಹುಡುಗ, ನಮ್ಮಪ್ಪ ತೀರಿಕೊಂಡರು. ಅನುಕಂಪದ ಆಧಾರದ ಮೇಲೆ ನಮ್ಮ ಮನೆಯಲ್ಲಿ ಯಾರಿಗಾದರೂ ಕೆಲಸ ಕೊಡಲಿಕ್ಕೆ, ಆಗ ನಾವ್ಯಾರೂ ಎಸ್‌ಎಸ್‌ಎಲ್‌ಸಿ ಕೂಡ ಮಾಡಿರ್‍ಲಿಲ್ಲ. ಗೌರ್‍ಮೆಂಟ್ ಕೆಲಸ ಬಿಟ್ರೆ ಹೋಗ್ತದಲ್ಲ ಅಂತ ಕಷ್ಟಬಿದ್ದು ನಾನೇ ಎಸ್‌ಎಸ್‌ಎಲ್‌ಸಿ ಮುಗಿಸಿದೆ, ಅಪ್ಪ ಸತ್ತು ಮೂರು ವರ್ಷಕ್ಕೆ ನನಗೆ ಬಿಟಿಎಸ್ ಕಂಡಕ್ಟರ್ ಕೆಲಸ ಸಿಕ್ತು. ನನ್ನ ಬ್ಯಾಡ್ಜ್ ನಂಬರ್ 6259. ಮೊದಲು ನಾನು ಕೆಲಸ ಮಾಡಿದ್ದು ಬೆಂಗಳೂರಿನ ಬಿಟಿಎಸ್‌ನ 11 ನೇ ಡಿಪೋನಲ್ಲಿ.

“1991 ರಿಂದ 1998 ರವರೆಗೆ ಬಿಟಿಎಸ್‌ನಲ್ಲಿ ನಾನು ಕಂಡಕ್ಟರ್ ಕೆಲಸ ಮಾಡಿದೆ. ಸಿಟಿ ಸುತ್ತಾಡ್ತಾ, ಟಿಕೆಟ್ ಹರೀತಾ, ರಿಯಲ್ ಎಸ್ಟೇಟ್ ವ್ಯವಹಾರದತ್ತ ಗಮನ ಹರಿಸಿದೆ. ನನಗೆ ಆಗ ಅದು ರಿಯಲ್ ಎಸ್ಟೇಟ್ ಅಂತಾನೂ ಗೊತ್ತಿರಲಿಲ್ಲ. ಎಕ್ಸ್‌ಟ್ರಾ ಇನ್‌ಕಮ್ ಬರೋ ಒಂದು ವ್ಯವಹಾರ ಅಂತ ಗೊತ್ತಿತ್ತು, ಓಡಾಡ್ತಾ ಇದ್ದೆ. ಎಷ್ಟರಮಟ್ಟಿಗೆ ಅಂದ್ರೆ ಕಂಡಕ್ಟರ್ ಕೆಲಸಕ್ಕೆ ಚಕ್ಕರ್ ಹೊಡೆದು, ಯಾರ್‍ಯಾರಿಂದೇನೋ ಹೋಗ್ತಿದ್ದೆ, ಇಡೀ ದಿನ ಅಲೆದರೂ ಒಂದು ರೂಪಾಯಿ ಗಿಟ್ತಿರಲಿಲ್ಲ. ಹಿಂಗೆ 1992 ರಿಂದ 2000 ದವರೆಗೆ, ಸುಮಾರು ಎಂಟು ವರ್ಷ ಸಾರ್… ಒಂದೇ ಒಂದು ವ್ಯವಹಾರವೂ ಕುದುರಲಿಲ್ಲ. ಅತ್ತ ಅಬ್ಸೆಂಟ್ ಆಗಿ, ಸಸ್ಪೆಂಡ್ ಆಗಿ ಕಂಡಕ್ಟರ್ ಕೆಲಸವೂ ಹೋಯ್ತು. ಲೈಫ್ ಬಗ್ಗೆ ಭಾರೀ ಬೇಜಾರಾಯ್ತು. ಮನೆ ಪರಿಸ್ಥಿತಿ ಬೇರೆ ಸರಿಯಿರಲಿಲ್ಲ. ಬದುಕೋದೆ ಕಷ್ಟ ಅನ್ನಿಸಿಬಿಡ್ತು.

“ಇಂಥ ಸಂದರ್ಭದಲ್ಲಿಯೇ, ಒಂದಿನ ನನ್ನ ಫ್ರೆಂಡ್ ಒಬ್ಬ ಬಂದು, ‘ನಮ್ಮ ಪರಿಚಯದವರೊಬ್ಬರು ಪೆಪ್ಸಿ ಕಂಪನಿಲಿದಾರೆ, ವಿನಾಯಕ ನಗರದಲ್ಲಿ ಅವರದೊಂದು ಸೈಟ್ ಇದೆ, ಮಾರಾಟ ಮಾಡಿಸಿಕೊಡು’ ಅಂದ. ನಾನು ಅವರನ್ನು ಮೀಟ್ ಮಾಡಿ, ರೇಟ್ ಕೇಳಿ, ಗಿರಾಕಿಗಳನ್ನು ಹುಡುಕೋಕೆ ಶುರು ಮಾಡಿದೆ. ಅದೇನು ಗ್ರಹಚಾರವೋ ಯಾರೊಬ್ರು ಮುಂದೆ ಬರಲಿಲ್ಲ, ಇದೂ ಕೂಡ ಸಾಧ್ಯವಾಗಲಿಲ್ಲವಲ್ಲ ಎಂದು ಕಂಗಾಲಾದೆ. ಕೊನೆಗೊಂದು ನಿರ್ಧಾರಕ್ಕೆ ಬಂದು, ಎಲ್ಲೆಲ್ಲೋ ಸಾಲಸೋಲ ಮಾಡಿ ೮ ಸಾವಿರ ಹೊಂದಿಸಿಕೊಂಡು ಆ ಸೈಟನ್ನ ನಾನೇ ಕೊಂಡುಕೊಂಡೆ. ಅದೇ ನೋಡಿ ನಾನ್ ಮಾಡಿದ ಮೊಟ್ಟಮೊದಲ ರಿಯಲ್ ಎಸ್ಟೇಟ್ ಡೀಲು. ಆ ಸೈಟ್ ಕೊಂಡು ಎಂಟು ತಿಂಗಳಿಗೆ ಒಂದು ಒಳ್ಳೆ ಆಫರ್ ಬಂತು, 40 ಸಾವಿರಕ್ಕೆ ಆ ಸೈಟ್ ಮಾರಾಟ ಆಯ್ತು. ಎಂಟು ವರ್ಷದಲ್ಲಿ ಸಿಗದಿದ್ದದ್ದು ಎಂಟೇ ತಿಂಗಳಲ್ಲಿ ಸಿಕ್ತು.

“ಆ 40 ಸಾವಿರದಲ್ಲಿ ನಾನು… ನಮ್ಮೂರಿನ ಶ್ಯಾನುಭೋಗರ ಮಗ, ‘ನನ್ ಒಂದು ಎಕರೆ ಜಮೀನು ಮಾರ್‍ತೀನಿ ಗಿರಾಕಿ ಇದ್ರೆ ನೋಡಿ’ ಅಂತ ಹೇಳಿದ್ದು ನೆನಪಾಯಿತು, ಅವತ್ತು ಅಮಾವಾಸ್ಯೆ ರಾತ್ರಿ, ಸಾಮಾನ್ಯವಾಗಿ ಮಾರೋರು, ಕೊಳ್ಳೋರು ಯಾರು ಅವತ್ತು ಮಾತೂ ಆಡಲ್ಲ, ನಾನು ಅದ್ನೇನು ನೋಡ್ಲಿಲ್ಲ, ಅವರೂ ಕೇಳ್ಲಿಲ್ಲ, ಒಂದು ಎಕರೆ ಜಮೀನು 1 ಲಕ್ಷ 90 ಸಾವಿರಕ್ಕೆ ಮಾತಾಯಿತು. ಕೈಯಲ್ಲಿದ್ದ 40 ಸಾವಿರ ಅಡ್ವಾನ್ಸ್ ಅಂತ ಅವರ ಮುಂದೆ ಇಟ್ಟೆ, ಅಗ್ರಿಮೆಂಟ್ ಮಾಡಿಕೊಂಡು ಬಂದೆ. ಐದಾರು ತಿಂಗಳಲ್ಲಿ ಅದೇ ಒಂದು ಎಕರೆ ಜಮೀನು, ನೀವು ನಂಬಲ್ಲ, 6 ಲಕ್ಷಕ್ಕೆ ಮಾರಾಟ ಆಯ್ತು. 40 ಸಾವಿರದಿಂದ 4 ಲಕ್ಷಕ್ಕೆ ಸಡನ್ ಜಂಪ್ ಆದೆ.

“ಈ ವ್ಯವಹಾರದಲ್ಲಿ ಒಂದು ಟ್ರಿಕ್ ಇದೆ, ಎಲ್ಲರೂ ಏನ್ ಮಾಡ್ತರೆ, ಕೈಗೆ ದುಡ್ಡು ಬರ್ತಿದ್ದಹಾಗೆ ಗಾಡಿ, ಕ್ಲಬ್ಬು, ಕುಡಿತ, ಫ್ರೆಂಡ್ಸು ಅಂತ ಶೋಕಿಗೇ ಸಿಕ್ಕಾಪಟ್ಟೆ ಖರ್ಚು ಮಾಡ್ತರೆ. ಆದರೆ ನನಗೆ ಬಡತನ ಬೆನ್ನಿಗಿತ್ತಲ್ಲ, ಅದು ಬಿಡಲಿಲ್ಲ. ನಾಲ್ಕು ಲಕ್ಷವನ್ನು ಹತ್ತಾರು ಪ್ರಾಪರ್ಟಿ ಮೇಲೆ ಹಾಕ್ದೆ, ಅಗ್ರಿಮೆಂಟ್ ಮಾಡ್ಕೊಂಡೆ, ಹತ್ತಾರು ವರ್ಷ ಅದೇ ವ್ಯವಹಾರದಲ್ಲಿ ಓಡಾಡ್ತಿದ್ನಲ್ಲ, ಗಿರಾಕಿಗಳನ್ನು ಹಿಡಿಯೋದು, ಮಾರಾಟ ಮಾಡೋದು, ರಿಜಿಸ್ಟ್ರೇಷನ್ನು ಎಲ್ಲ ಗೊತ್ತಿತ್ತು, ಅನುಕೂಲ ಆಯ್ತು. ಅದರಲ್ಲೂ 2003 ರಿಂದ 2007 ರವರೆಗಿನ ಟೈಮ್ ಇದೆಯಲ್ಲ, ಅದು ರಿಯಲ್ ಎಸ್ಟೇಟ್‌ನ ಪ್ರೈಮ್ ಟೈಮು. ಬೂಮ್ ಟೈಮು, ಆಗ ನಾನು ಕ್ಲಿಕ್ ಆದೆ… ನಿಮ್ಮ ಪ್ರಕಾರ ‘ಕಿಂಗ್’ ಅಂತಿದೀರಲ್ಲ ಅದಾದೆ.”

ರಾಮೋಹಳ್ಳಿಯ ವ್ಯಾಪ್ತಿಗೆ ಬರುವ ಮೂರೂವರೆ ಎಕರೆ ಜಮೀನನ್ನು ಹೀಗೆಯೇ 18 ಲಕ್ಷಕ್ಕೆ ಖರೀದಿಸಿದ್ದ ಲಕ್ಷ್ಮಿನಾರಾಯಣ ರಾಜ ಅರಸ್, ಅದರ ಅರ್ಧ ಎಕರೆಯನ್ನು ಕೇವಲ ಒಂದು ವರ್ಷದ ಅವಧಿಯೊಳಗೆ 20 ಲಕ್ಷಕ್ಕೆ ಮಾರಿದ್ದರು. ಅಷ್ಟೇ ಅಲ್ಲ, ಮಿಕ್ಕ ಮೂರು ಎಕರೆಯಲ್ಲಿ, ಅದರಿಂದಲೇ ಬಂದ 20 ಲಕ್ಷ ಹಣವನ್ನು ವಿನಿಯೋಗಿಸಿ, ಸುತ್ತಮುತ್ತಲ ಹಳ್ಳಿಯ ಮಕ್ಕಳಿಗಾಗಿ 1 ರಿಂದ 10 ರ ತನಕದ ಸ್ಕೂಲ್‌ವೊಂದನ್ನು ತೆರೆದಿದ್ದರು. LNR5ಸ್ಕೂಲಿಗೆ ‘ಎಲ್‌ಎನ್‌ಆರ್ ವಿದ್ಯಾ ಸಂಸ್ಥೆ’ ಎಂದು ಹೆಸರಿಟ್ಟಿದ್ದರು. ಆ ಸ್ಕೂಲಿನ ಕೊಠಡಿಯಲ್ಲಿ ಕೂತು ಕಂಡಕ್ಟರ್‌ನಿಂದ ರಿಯಲ್ ಎಸ್ಟೇಟ್ ಕಿಂಗ್ ಆದ ಕತೆಯನ್ನು ಬಿಚ್ಚಿಡುತ್ತಿದ್ದರು.

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಆ ಸ್ಕೂಲ್ ಎಷ್ಟು ವ್ಯವಸ್ಥಿತವಾಗಿದೆ ಎಂದರೆ, ನುರಿತ ಅನುಭವಿ ಟೀಚರ್‌ಗಳು, ಸುಸಜ್ಜಿತ ಕೊಠಡಿಗಳು, ಎಲ್ಲ ಕೊಠಡಿಗಳಲ್ಲೂ ಸ್ಮಾರ್ಟ್ ಬೋರ್ಡ್‌ಗಳು, ಸುತ್ತಮುತ್ತಲ ಹಳ್ಳಿಯ ಮಕ್ಕಳನ್ನು ಕರೆತರಲು ೫ ವ್ಯಾನ್‌ಗಳು, ಅದೆಲ್ಲಕ್ಕಿಂತ ಮುಖ್ಯವಾಗಿ ಕೈಗೆಟುಕುವ ದರದಲ್ಲಿ ಸ್ಕೂಲ್ ಫೀಸು. ಸ್ಕೂಲ್ ಶುರು ಮಾಡಿ ಮೂರು ವರ್ಷಗಳಾಗಿವೆ, ಆಗಲೇ 600 ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಆ ಅಷ್ಟೂ ಮಕ್ಕಳು ಸ್ಕೂಲ್‌ನ ಮಾಲೀಕ ಲಕ್ಷ್ಮಿಯನ್ನು ಬಹಳವಾಗಿ ಇಷ್ಟಪಡುತ್ತವೆ ಮತ್ತು ಎಲ್ಲೇ ಇದ್ದರೂ ಗುರುತು ಹಿಡಿದು ಮಾತನಾಡಿಸುತ್ತವೆ.

ಈ ವ್ಯಕ್ತಿಯ ವಿಶೇಷತೆ ಇಷ್ಟೇ ಅಲ್ಲ, ವ್ಯವಹಾರ ಗರಿಗಟ್ಟಿದ ಮೇಲೆ, ಹಣ ದ್ವಿಗುಣಗೊಂಡ ಮೇಲೆ ಅವರಿಗಾಗಿ ಒಂದು ಫಾರ್ಮ್ ಹೌಸ್ ಕಟ್ಟಿಸಿಕೊಂಡರು. ಆದರೆ ಅದೇನನ್ನಿಸಿತೋ, ಅದನ್ನು ‘ಆಸರೆ ಸೇವಾ ಟ್ರಸ್ಟ್’ ಎಂಬ ಅನಾಥಾಶ್ರಮಕ್ಕೆ ಬರೆದು ಕೊಟ್ಟರು. ಅವರೇ ಖುದ್ದು ನಿಂತು, ಅನಾಥಾಶ್ರಮಕ್ಕೆ ಒಂದು ಟ್ರಸ್ಟ್ ರಚಿಸಿ, ರಿಜಿಸ್ಟರ್ ಮಾಡಿಸಿದರು. ಅಲ್ಲೀಗ ನಾಡಿನ ಮೂಲೆ ಮೂಲೆಯಿಂದ ಬಂದ 21 ಅನಾಥ ಮಕ್ಕಳಿವೆ. ಆ ಮಕ್ಕಳಿಗೆ ಉಚಿತ ಊಟ, ಬಟ್ಟೆ, ವಸತಿ ಮತ್ತು ತಮ್ಮದೇ ಸ್ಕೂಲಿನಲ್ಲಿ ಉಚಿತ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. LNR3ಸದ್ಯಕ್ಕೆ ಅನಾಥಾಶ್ರಮಕ್ಕೆ ತಿಂಗಳಿಗೆ 40 ಸಾವಿರ ಖರ್ಚು ಬರುತ್ತಿದೆ. ಲಕ್ಷ್ಮಿ ಆ ಖರ್ಚಿಗೂ ಒಂದು ದಾರಿ ಮಾಡಿದ್ದಾರೆ. ಅದೇನೆಂದರೆ, ಲಕ್ಷ್ಮಿ ರಾಮೋಹಳ್ಳಿಯಲ್ಲಿ ಒಂದು ಸುಸಜ್ಜಿತವಾದ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಸುತ್ತಮುತ್ತಲ ಹಳ್ಳಿಯವರಿಗಾಗಿ ಅತ್ಯಂತ ಕಡಿಮೆ ಅಂದರೆ, 2 ದಿನಕ್ಕೆ 25 ಸಾವಿರ ರೂ. ಬಾಡಿಗೆ ಪಡೆಯುತ್ತಾರೆ. ಬಡವರಾದರೆ ಅವರು ಕೊಟ್ಟಷ್ಟು ಇವರು ಪಡೆದಷ್ಟು. ಈ ಕಲ್ಯಾಣ ಮಂಟಪದಿಂದ ಬರುವ ಆದಾಯದಲ್ಲಿ, ತಿಂಗಳಲ್ಲಿ ಒಂದು ದಿನದ ಬಾಡಿಗೆಯನ್ನು ಅನಾಥಾಶ್ರಮಕ್ಕೆ ಮೀಸಲಿಟ್ಟಿದ್ದಾರೆ. ಮಿಕ್ಕಿದ್ದನ್ನು ತಮ್ಮ ಸ್ವಂತ ಜೇಬಿನಿಂದ ಹಾಕುತ್ತಿದ್ದಾರೆ.

ಜನಪರವಾಗಿ ಇರಬೇಕು ಅನ್ನಿಸಿದ್ದು ಯಾಕೆ? ಎಂದರೆ.

“ನನಗೇ ಗೊತ್ತಿರಲಿಲ್ಲ, ನಾನು ಈ ಮಟ್ಟಕ್ಕೆ ಬೆಳಿತೀನಿ ಅಂತ, ಅವತ್ತೊಂದು ದಿನ ನನಗೇನೂ ಇರಲಿಲ್ಲ, ಇವತ್ತು ಎಲ್ಲಾ ಇದೆ. ಅದೆಲ್ಲ ಬಂದಿದ್ದೇ ಈ ಜನರಿಂದ. ಅಂದಮೇಲೆ ಅದೆಲ್ಲ ಅವರಿಗೇ ಹೋಗಲಿ ಅನ್ನೋದು ನನ್ನ ಪಾಲಿಸಿ. ಅದಕ್ಕೆ ರಾಜಕಾರಣೀನೆ ಆಗಬೇಕು, ಅಧಿಕಾರವೇ ಇರಬೇಕು ಅಂತೇನಿಲ್ವಲಾ? ನೋಡಿ, ಇವತ್ತಿಗೂ ಅಪ್ಪ ಕಟ್ಟಿಸಿದ ಹಳ್ಳಿಯ ಹಳೆ ಹಂಚಿನ ಮನೆಯಲ್ಲಿಯೇ ವಾಸವಾಗಿದ್ದೇನೆ. ಮನೇಲಿ ಮಿಕ್ಸಿ ಇಲ್ಲ, ಒಳಕಲ್ಲಿದೆ. ಹಳ್ಳಿಯವರ ಜೊತೆ ಹಳ್ಳಿಯವನಾಗಿಯೇ ಇದ್ದೇನೆ. ಇದರಲ್ಲಿಯೇ ಖುಷಿ ನನಗೆ.

“ಬೆಂಗಳೂರಿನಿಂದ ಮಂಚನಹಳ್ಳಿ ಡ್ಯಾಂವರೆಗೆ ಯಾವುದೇ ಜಮೀನಿರಲಿ, ಸೈಟಿರಲಿ, ಯಾವ್ಯಾವುದು ಯಾರ್‍ಯಾರಿಗೆ ಸೇರಿದ್ದು ಅಂತ ನೋಡ್ತಿದ್ದ ಹಾಗೇ ಹೇಳ್ತೀನಿ, ಎಂಥದೇ ತಕರಾರಿರಲಿ ಬಗೆಹರಿಸ್ತೀನಿ. ಅದಕ್ಕೆ ಜನ ನನ್ನ ಹುಡಕ್ಕೊಂಡು ಬರ್‍ತಾರೆ. ನಂಬಿಕೆ ಮುಖ್ಯ. ರಿಯಲ್ ಎಸ್ಟೇಟ್ ವ್ಯವಹಾರ ಅಂದಮೇಲೆ ಅಲ್ಲಿ ಕೋರ್ಟು, ಕೇಸು, ಹೊಡೆದಾಟ, ರೌಡಿಗಳು, ಲಾಯರ್‍ಸ್, ಪೊಲೀಸು, ಎಲ್ಲ ಇದ್ದದ್ದೇ. ಆದರೆ ನಾನು ಕೈ ಹಾಕಿದ ವ್ಯವಹಾರದಲ್ಲಿ ಅದ್ಯಾವುದೂ ಇರಲ್ಲ ಅಂಥಾಲ್ಲ, ಇರ್ತದೆ ತುಂಬಾ ಕಡಿಮೆ.”

ಸಾಮಾನ್ಯವಾಗಿ ದುಡ್ಡು ಬಂದ ಮೇಲೆ, ಅದರಲ್ಲೂ ರಿಯಲ್ ಎಸ್ಟೇಟ್‌ನಿಂದ ಬಂದು ಈ ಮಟ್ಟಕ್ಕೆ ಬೆಳೆದ ಮೇಲೆ, ರಕ್ಷಣೆಗಾಗಿ ಯಾವುದಾದರೂ ಪಕ್ಷ ಸೇರಿ ರಾಜಕಾರಣಿಯಾಗುತ್ತಾರೆ, ಅಧಿಕಾರ ಪಡೆಯುತ್ತಾರೆ. ನೀವು ಆ ಹಾದಿಯಲ್ಲಿ ಏನಾದರೂ? ಎಂದರೆ.

“2005 ರಿಂದ 2010 ರವರೆಗೆ ರಾಮೋಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೆ. LNR4ಅದು ನಾನಾಗಿ ಬಯಸಿ ಆಗಿದ್ದಲ್ಲ, ಜನ ಮಾಡಿದ್ದು. ಆಗ ಜನರಿಗಾಗಿ ನನ್ನ ಕೈಲಾದ ಸೇವೆಯನ್ನೂ ಮಾಡಿದೆ. ಆದರೆ ರಾಜಕೀಯ ನಮಗಲ್ಲ… ಅದಕ್ಕೆ ಜಾತಿ, ಹಣ, ತೋಳ್ಬಲ ಅಷ್ಟೇ ಅಲ್ಲ ಇನ್ನೂ ಏನೇನೋ ಇರಬೇಕು. ರಾಮೋಹಳ್ಳಿಯಲ್ಲಿ ನಮ್ಮ ಜಾತಿಯ ಜನಗಳಿರೋದು 10 ಮನೆ. ಒಕ್ಕಲಿಗರು ಹೆಚ್ಚಾಗಿದಾರೆ. ಆದರೆ ಅವರೆಲ್ಲ ನಮ್ಮನ್ನ ಅಣ್ಣತಮ್ಮಂದಿರಂತೆಯೇ ಕಾಣ್ತರೆ. ನಾನೂ ಅಷ್ಟೆ, ಸುತ್ತಮುತ್ತಲಿನ ಹಳ್ಳಿಯ ಜನಕ್ಕೆ ನನ್ನ ಕೈಲಾದ ಸಹಾಯ ಮಾಡಿದರೆ, ಅಷ್ಟೇ ಸಾಕು. ನೋಡಿ, ಅವರ ಮಕ್ಕಳೆಲ್ಲ ನನ್ನ ಸ್ಕೂಲಿನಲ್ಲಿ ಓದ್ತಿದಾರೆ. ಕೆಲವರು ಫೀಸು ಕಟ್ಟಕ್ಕಾಗದೆ ಇದ್ರು ಅವರಿಗೆಲ್ಲ ನನ್ನ ಸ್ಕೂಲಿನಲ್ಲಿ ಸೀಟ್ ಕೊಟ್ಟಿದೀನಿ. ಅವರ್‍ನ ಅಷ್ಟೆ ಪ್ರೀತಿಯಿಂದ ನೋಡ್ಕೊಂಡಿದೀನಿ. ಇದಕ್ಕೆ ರಾಜಕೀಯ ಯಾಕ್ ಬೇಕೇಳಿ… ಜೊತೆಗೆ ಈಗ ನನಗೆ ರಾಜಕೀಯಕ್ಕಿಂತ ಈ ಕಲ್ಯಾಣ ಮಂಟಪ, ಸ್ಕೂಲು, ಅನಾಥಾಶ್ರಮ… ಸಮಾಜ ಸೇವಾ ಕಾರ್ಯಗಳನ್ನು ಚೆನ್ನಾಗಿ ನಡೆಸಿಕೊಂಡು ಹೋದ್ರೆ ಸಾಕು.”

ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿಮಗಾದ ವಿಚಿತ್ರ ಅನುಭವಗಳು?

“ಈ ವ್ಯವಹಾರಾನೇ ವಿಚಿತ್ರ. ಬೆಂಗಳೂರಿನ ಸುತ್ತಮುತ್ತಲ ಜಾಗ ಇದೆಯಲ್ಲ, ಇದು ಮಣ್ಣಲ್ಲ ಹೊನ್ನು. ಇವತ್ತು ಎಲ್ರೂ, ಕಸ ಗುಡಿಸುವ ಜವಾನರಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ, ಪೆಟ್ಟಿಗೆ ಅಂಗಡಿಯ ಮಾಲೀಕನಿಂದ ಫಿಲ್ಮ್ ಪ್ರೊಡ್ಯೂಸರ್‌ಗಳವರೆಗೆ, ಪುಡಿ ಪುಢಾರಿಗಳಿಂದ ಮಂತ್ರಿಗಳವರೆಗೆ, ಲೋಕಲ್ ರೌಡಿಗಳಿಂದ ಡಾನ್‌ಗಳವರೆಗೆ, ಪೊಲೀಸ್ ಪೇದೆಯಿಂದ ಐಪಿಎಸ್ ಆಫೀಸರ್‌ವರೆಗೆ… ಇಂಥೋರಿಲ್ಲ ಅನ್ನುವ ಹಾಗೇ ಇಲ್ಲ, ಎಲ್ಲರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡೋರೆ. ಎಲ್ರೂ ಕಾಗದ ಪತ್ರ ಹಿಡಕ್ಕೊಂಡು ಓಡಾಡರೆ, ಎಲ್ಲೋದ್ರು ಅದೇ ಮಾತೆ. ಯಾಕಂದ್ರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಹಾಗಿದೆ. ಇವತ್ತು ಭಿಕಾರಿಯಾಗಿದ್ದೋನು ನಾಳೆ ಇದ್ದಕ್ಕಿದ್ದಂತೆ ಕೋಟ್ಯಧಿಪತಿಯಾಗಬಹುದು. ಹಣ ಎಲ್ಲರಲ್ಲೂ ಆಸೆ ಹುಟ್ಟಿಸಿಬಿಟ್ಟಿದೆ. ಆದರೆ ಎಲ್ಲರೂ ಶ್ರೀಮಂತರಾಗಲಿಕ್ಕಾಗಲ್ಲ, ಎಲ್ಲರಿಗೂ ಈ ವ್ಯವಹಾರ ಮಾಡಕ್ಕಾಗಲ್ಲ.

“ಈಗ ನನ್ನದೇ ಅನುಭವ ತಗೊಂಡ್ರೆ, ನನ್ನ ಜೊತೆ ಜೊತೆಗೇ ನಮ್ಮ ಸುತ್ತಮುತ್ತಲಿನ ಹಳ್ಳಿಯ ಸುಮಾರು 25 ಜನ ನನ್ನ ಸ್ನೇಹಿತರೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದರು. ಈ 25 ರಲ್ಲಿ ನಾನೊಬ್ಬನೇ, ಇವತ್ತು ಈ ಮಟ್ಟಕ್ಕೆ ಇರೋದು. ಉಳಿದೋರೆಲ್ಲ… ಕೆಲವರು ಉಳಿದೇ ಇಲ್ಲ. ಸಿಕ್ಕಾಪಟ್ಟೆ ದುಡ್ಡು, ಸಿಕ್ಕಾಪಟ್ಟೆ ರಿಸ್ಕು… ಅಷ್ಟೇ ಸಾರ್.

“ವಿಚಿತ್ರ ಅನುಭವ ಕೇಳಿದ್ರಲ್ವಾ… ಒಂದು ಸೈಟಿತ್ತು. ಅದಕ್ಕೆ ನಾನೇ ಮೊದಲ ಮೀಡಿಯೇಟರ್. ನೀವು ನಂಬ್ತೀರಾ, ಅದು ಇಲ್ಲಿಯವರೆಗೆ ಏಳು ಕೈ ಬದಲಾಗಿದೆ, ಏಳಕ್ಕೂ ನಾನೇ ಮೀಡಿಯೇಟರ್. ಮೊದಲ ಸಲ ಮಾರಾಟವಾದ ಆ ಸೈಟಿನ ಅಮೌಂಟಿತ್ತಲ್ಲ, ಅಷ್ಟೇ ಅಮೌಂಟು ನನಗೆ ಕಮಿಷನ್ ಬಂದಿದೆ. ಈ ಕಮಿಷನ್ ಹೇಗೆ ಅಂದ್ರೆ, 25 ಸಾವಿರದಿಂದ 50 ಸಾವಿರದವರೆಗಿನ ವ್ಯವಹಾರ ಆದ್ರೆ 2%. 50 ಸಾವಿರದಿಂದ ಮೇಲೆ ಎಷ್ಟೇ ಕೋಟಿಯಾಗಲಿ 1% ಕಮಿಷನ್.”

ಇವತ್ತಿನ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಯಾರ ಕೈಯಲ್ಲಿದೆ?

“ಹಳ್ಳಿಯ ಜನರ ಕೈಯಲ್ಲಂತೂ ಇಲ್ಲ. ಜಮೀನಾದ್ರು ಇದೆಯಾ ಅಂದ್ರೆ ಅದೂ ಇಲ್ಲ. ಇವತ್ತಿನ ರಿಯಲ್ ಎಸ್ಟೇಟ್ ಪೂರ್ತಿ ಉಳ್ಳವರ ಕೈಯಲ್ಲಿದೆ. ಹಾಗೆಯೇ ಶೇಠುಗಳು, ಶೆಟ್ರುಗಳು, ಮಾರ್ವಾಡಿಗಳು, ರಾಜಕಾರಣಿಗಳು, ಸ್ವಾಮೀಜಿಗಳ ಕೈಯಲ್ಲಿದೆ. ಆದರೆ ಅವರ್‍ಯಾರೂ ಓಪನ್ನಾಗಿ ಕಾಣಿಸಿಕೊಳ್ಳೋದಿಲ್ಲ. ಲೋಕಲ್ ಜನಗಳನ್ನು ಮುಂದೆ ನಿಲ್ಲಿಸ್ತಾರೆ, ಹಣ ಹಾಕ್ತರೆ, ನೂರಾರು ಎಕರೆ ಜಮೀನು ತೆಗೀತರೆ. ಬರೀ ಕೈ ಬದಲಾಗೋದ್ರೊಳಗೆ ಕೋಟ್ಯಂತರ ರೂಪಾಯಿ ದುಡೀತಾರೆ…. ಹಂಗೇ ಕೋಟ್ಯಂತರ ಕಳಕೊಂಡಿರೋರು, ನೂರಾರು ಥರದ ಮೋಸಕ್ಕೆ ಒಳಗಾಗಿರೋರು ಇಲ್ಲಿ ಬೇಕಾದಷ್ಟು ಜನ ಇದಾರೆ…”, ಎನ್ನುವ ಲಕ್ಷ್ಮಿನಾರಾಯಣ ರಾಜ ಅರಸ್, ತಾವೂ ಅದೇ ಹೊಸಗಾಲದ ವ್ಯವಹಾರದಲ್ಲಿದ್ದರೂ, ದುಡಿದ ದುಡ್ಡಿಂದ ಮತ್ತಷ್ಟು ಹಣ ಮಾಡುವ ಉದ್ದಿಮೆಗಳತ್ತ ಎಲ್ಲರ ಗಮನವಿದ್ದರೂ, ಸಮಾಜ ಸ್ಮರಿಸಿಕೊಳ್ಳುವ ಸೇವೆ ಸಲ್ಲಿಸಬೇಕು ಎಂಬುದರತ್ತ ತುಡಿಯುವ, ಎಲ್ಲರೊಂದಿಗೆ ಬೆರೆತು ಬಾಳುವುದರಲ್ಲಿಯೇ ಖುಷಿ ಕಾಣುವ ಅಪರೂಪದ ಆಸಾಮಿ. ಅವರೇ ಬೇರೆ, ಅವರ ಶೈಲಿಯೇ ಬೇರೆ… ರಜನೀಕಾಂತ್ ಥರ.

ಸರಕಾರಿ ಸೇವೆ ಮೆಚ್ಚಿ ಕೊಡೋಕೆ, ನಾಡೋಜ ಪದವಿಯೇನು ಇಂಕ್ರಿಮೆಂಟಾ?

– ಶಿವರಾಜ್

ಹಂಪಿ ವಿ.ವಿ ನಾಡೋಜ ಗೌರವ ಪದವಿ ಕುರಿತ ಲೇಖನಕ್ಕೆ ವರ್ತಮಾನದ ಕೆಲ ಓದುಗರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಒಬ್ಬರು, ಮಹೇಶ್ ಜೋಶಿ ಆ ಪ್ರಶಸ್ತಿಗೆ ಅರ್ಹರು, ಅವರ ಕೊಡುಗೆಯನ್ನು ಪರಿಗಣಿಸದೆ ಅವರನ್ನು ಹೀಗಳೆಯುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮಹೇಶ್ ಜೋಶಿಯವರು ಈ ಗೌರವ ಪದವಿಗೆ ಹೇಗೆ ಅರ್ಹರು ಎಂಬುದನ್ನು ನಮ್ಮೆಲ್ಲರಿಗಿಂತ ಮಿಗಿಲಾಗಿ ಸೂಕ್ತ ಉತ್ತರ ಕೊಡಬಲ್ಲವರು ಹಂಪಿ ವಿ.ವಿ.ಯ ಆಯ್ಕೆ ಸಮಿತಿ. ಪ್ರಶಸ್ತಿ ಪ್ರದಾನ ಸಮಾರಂಭದ ದಿನ ವಿ.ವಿ.ಯವರು ಪುರಸ್ಕೃತರ ವಿವರಗಳನ್ನೊಳಗೊಂಡ ಕೈಪಿಡಿಯೊಂದನ್ನು ಸಭೆಯಲ್ಲಿ ಹಾಜರಿದ್ದವರಿಗೆ ಹಂಚಿದ್ದಾರೆ. ಅದರಲ್ಲಿ ಮಹೇಶ್ ಜೋಶಿ ಏಕೆ ಈ ಗೌರವಕ್ಕೆ ಪಾತ್ರರಾದರು ಎಂಬುದಕ್ಕೆ ವಿವರಗಳಿವೆ.

ಅವರ ನೌಕರಿ, ಪದವಿ ಮಾಹಿತಿ ಇದೆ. 2005 ರ ನಂತರ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿ mahesh-joshiಅಧಿಕಾರ ವಹಿಸಿಕೊಂಡ ನಂತರದ ಅವರ ಸಾಧನೆಗಳ ವಿವರಗಳಿವೆ. ಅವೆಂದರೆ, “ದೂರದರ್ಶನವನ್ನು ಸಮೀಪ ದರ್ಶನವನ್ನಾಗಿಸಿದ್ದು, ವಿನೂತನವಾದ ಹೆಲೋ ಸಿ.ಎಂ, ಹೆಲೋ ಮಿನಿಸ್ಟರ್, ಹೆಲೋ ಲೋಕಾಯುಕ್ತ.. ಇತರ ಕಾರ್ಯಕ್ರಮಗಳು, ದೃಷ್ಟಿ ವಿಕಲಚೇತನರಿಗೆ ಶಿಕ್ಷಣ ಹಾಗೂ ತರಬೇತಿ ನೀಡಿ ವಾರ್ತಾವಾಚಕರನ್ನಾಗಿ ಮಾಡಿದ್ದು, ಹುತಾತ್ಮರಿಗೆ ಭಾವಪೂರ್ಣ ಕಾರ್ಯಕ್ರಮ, ಸ್ಮರಣಾಂಜಲಿ ಕಾರ್ಯಕ್ರಮ, ಕಾನೂನು ವಾರ್ತೆ, ಮಾನವ ಹಕ್ಕುಗಳ ವಾರ್ತೆ, ಮಧುರ ಮಧುರವೀ ಮಂಜುಳಗಾನ…”

ಖಾಸಗಿ ಚಾನೆಲ್‌ನಲ್ಲಿ ಪ್ರೊಗ್ರಾಮ್ ಹೆಡ್ ಅಥವಾ ನಾನ್-ಫಿಕ್ಷನ್ ಹೆಡ್ ಕೆಲಸ ನಿರ್ವಹಿಸುತ್ತಿರುವ ಬಹುತೇಕ ಯುವಕರು ಇದಕ್ಕಿಂತಲೂ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ತಮಗಿರುವ ನೂರಾರು ಮಿತಿಗಳಲ್ಲಿ ರೂಪಿಸಿ ಯಶಸ್ಸು ಕಂಡಿದ್ದಾರೆ. ಪಂಪನಿಗೆ ಬಿರುದಾಗಿದ್ದ “ನಾಡೋಜ” ಎಂಬ ಗೌರವ ಪದವಿಗೆ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದ ಅರ್ಹತೆ ಸಾಕೆ? ನಾಡಿಗೆ ಗುರುವಾಗಿದ್ದುಕೊಂಡು ಮಾರ್ಗದರ್ಶನ ಮಾಡಬಲ್ಲಂತಹ ಅರ್ಹತೆಯನ್ನು ಸೂಚಿಸುವ ಅದ್ಯಾವ ಘನಕಾರ್ಯ ಸನ್ಮಾನ್ಯ ಮಹೇಶ್ ಜೋಶಿಯವರಿಂದ ಆಗಿದೆ ಎಂಬುದನ್ನು ಅವರನ್ನು ಮೆಚ್ಚುವವರೇ ಹೇಳಬೇಕು.

ಜೆಡಿಎಸ್ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿ ಅಥವಾ ರೇವಣ್ಣನವರ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಅನುಯಾಯಿಗಳು ರಾಮನಗರ, ಹಾಸನಗಳಲ್ಲಿ ಫ್ಲೆಕ್ಸ್ ಹಾಕಿ ಅವರಿಗೆ ಶುಭಾಶಯ ಹೇಳುವುದು ರೂಢಿ. ಥೇಟ್ ಅದೇ ಮಾದರಿಯಲ್ಲಿ ಮಹೇಶ್ ಜೋಶಿಗೆ ಶುಭಾಶಯಗಳನ್ನು ಹೇಳುವ ಫ್ಲೆಕ್ಸ್‌ಗಳು ಹಂಪಿಯಲ್ಲಿ ರಾರಾಜಿಸಿದವು. (ವಿ.ವಿ.ಯ ಕುಲಪತಿಯ ಕಣ್ಣಿಗೆ ಅವು ಬಿದ್ದಿದ್ದರಿಂದ ಬಹುಬೇಗ ಅವನ್ನು ವಿ.ವಿ ಸಿಬ್ಬಂದಿ ಕಿತ್ತು ಹಾಕಿದರು.) ಗೌರವ ಪದವಿ ಸ್ವೀಕರಿಸುವವರ ನಡವಳಿಕೆಯಲ್ಲಿ ಕನಿಷ್ಟ ಸೌಜನ್ಯ ಬೇಡವೆ?

ವಿಶ್ವವಿದ್ಯಾನಿಲಯದ ಕಾರಿಡಾರುಗಳಲ್ಲಿ ಚರ್ಚೆಯಾಗುತ್ತಿರುವ ಮಾತು, “ಜೋಶಿಗೆ ಯಾವ ಅರ್ಹತೆ ಆಧಾರದಲ್ಲಿ ನಾಡೋಜ ಕೊಟ್ಟರು?” ನುಡಿ ಹಬ್ಬ (ಘಟಿಕೋತ್ಸವ)ದ ದಿನ ಬೆಳಗಿನ ಕಾರ್ಯಕ್ರಮವೊಂದರಲ್ಲಿ ಡಾ.ಕಾಳೇಗೌಡ ನಾಗವಾರ ಇಂಥದೇ ಪ್ರಶ್ನೆಯನ್ನು ಸೂಚ್ಯವಾಗಿ ಎತ್ತಿದರು. “ನಾಡೋಜ ಗೌರವಕ್ಕೆ ಆಯ್ಕೆ ಮಾಡುವಾಗ ನಾವು ಹತ್ತಲ್ಲ, ಇಪ್ಪತ್ತು ಸಾರಿ ಯೋಚಿಸಬೇಕು..” ಎಂದರು. ಖಾಸಗಿಯಾಗಿ ಗೆಳೆಯರೊಡನೆ ಮಾತನಾಡುವಾಗ ನಾಡೋಜ ಪದವಿಗೆ ಕುಂದುಂಟಾಗುತ್ತಿರುವ ಬಗ್ಗೆ ಮತ್ತಷ್ಟು ಬೇಸರ ವ್ಯಕ್ತಪಡಿಸಿದರು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಲ್ಲ, “ಮೇಲಿನವರಿಂದ” ಒತ್ತಡ ಬಂದು ಜೋಶಿಯವರ ಹೆಸರು ನಾಡೋಜ ಗಳಿಸುವವರ ಪಟ್ಟಿಗೆ ಸೇರಿಕೊಂಡಿದೆ ಎಂಬ ಮಾತುಗಳೂ ಕೇಳಿಬಂದಿವೆ.

ರೂಪುರೇಷೆ:
ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯನವರು hichiboralingayyaನುಡಿಹಬ್ಬ (ಘಟಿಕೋತ್ಸವ)ಕ್ಕಾಗಿ ಸಿದ್ಧಪಡಿಸಿದ್ದ ಭಾಷಣದಲ್ಲಿ ನಾಡೋಜ ಗೌರವ ಪದವಿಯ ಅವಾಂತರಗಳ ಬಗ್ಗೆ ಪ್ರಸ್ತಾಪಿಸಿರುವುದು, ಅರ್ಹರನ್ನು ಆಯ್ಕೆ ಮಾಡುವಾಗ ನಡೆದಿರಬಹುದಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. (ಅವರ ಲಿಖಿತ ಭಾಷಣ ಸಮಾರಂಭದಲ್ಲಿ ವಿತರಿಸಿದ ಕೈಪಿಡಿಯಲ್ಲಿದೆ. ಆದರೆ ತಾಂತ್ರಿಕ ಕಾರಣಗಳಿಂದ ಅವರ ಭಾಷಣವನ್ನು ಕುಲಸಚಿವ ಮಂಜುನಾಥ ಬೇವಿನಕಟ್ಟಿ ಓದಬೇಕಾಯಿತು. ಅವರು ಅಲ್ಲಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಓದಿದರು. ಪ್ರಸ್ತುತ ಪ್ಯಾರಾವನ್ನು ಅವರು ಓದಲಿಲ್ಲ).

ಕುಲಪತಿ ಹೇಳುತ್ತಾರೆ (ಪುಟ 9):

“ಕನ್ನಡ ವಿಶ್ವವಿದ್ಯಾನಿಲಯವು ಪ್ರತಿ ವರ್ಷ ತನ್ನ ನುಡಿಹಬ್ಬದಲ್ಲಿ ನೀಡುತ್ತಿರುವ ಘಟಿಕೋತ್ಸವ ಪುರಸ್ಕಾರವಾದ ನಾಡೋಜ ಪದವಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿ, ಆಯ್ಕೆಯ ಸಂಬಂಧದ ಕೆಲವು ಸಮಸ್ಯೆಗಳು ತಲೆದೋರುತ್ತಿವೆ. ಆಯ್ಕೆ ವಿಧಾನ, ಅವರ ವಯಸ್ಸು, ಅರ್ಹತೆ ಮತ್ತು ಎಷ್ಟು ಜನರಿಗೆ ನೀಡಬೇಕೆಂಬ ತೀರ್ಮಾನಗಳನ್ನು ಪರಿಶೀಲಿಸಿ ಅದಕ್ಕೊಂದು ತಕ್ಕ ರೂಪರೇಷೆಯನ್ನು ಸಿದ್ಧಪಡಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡಂತೆ ಕನ್ನಡ ನಾಡಿನ ಹಿರಿಯರೊಂದಿಗೆ ಚರ್ಚಿಸಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಈ ಪುರಸ್ಕಾರಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮೌಲ್ಯ ತಂದುಕೊಡುವುದು ನನ್ನ ಆಶಯವಾಗಿದೆ.”

ಅಂತಹದೊಂದು ರೂಪುರೇಷೆ ತೀರಾ ಅಗತ್ಯ. ಬೋರಲಿಂಗಯ್ಯನವರು ತಮ್ಮ ಮಾತುಗಳಲ್ಲಿ ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ ಮತ್ತು ಅವರು ಆಯ್ಕೆ ಪಟ್ಟಿ ಸಿದ್ಧಪಡಿಸುವಾಗ ಎದುರಿಸಿರಬಹುದಾದ ಸಮಸ್ಯೆಗಳನ್ನು ಇತರರಲ್ಲಿ ನಿವೇದಿಸಿಕೊಂಡಿದ್ದಾರೆ.

ಸರಕಾರಿ ಕೆಲಸ ಮಾಡಿದವರಿಗೂ ನಾಡೋಜ ಕೊಡುವುದಾದರೆ, ಅದಕ್ಕೊಂದು ಘನತೆ ಬೇಡವೆ? ಅವರ ಕೆಲಸ ಮನ್ನಣೆ ಗಳಿಸಿದ್ದರೆ ಸರಕಾರ ಅವರಿಗೆ ಬಡ್ತಿಯನ್ನೋ, ಇಂಕ್ರಿಮೆಂಟನ್ನೋ ಕೊಡಲಿ. ಅದು ಬಿಟ್ಟು ಒಂದು ವಿಶ್ವವಿದ್ಯಾನಿಲಯ ಅಂತಹವರನ್ನು ಕರೆದು ಗೌರವ ನಾಡೋಜ ಕೊಡುವುದೆಂದರೆ!

ಚುನಾವಣಾ ಸಿದ್ಧತೆಗಳು, ಸ್ವಪರಿಚಯ, ಇತ್ಯಾದಿ…

ವರ್ತಮಾನ.ಕಾಮ್‌ನ ಪ್ರಿಯ ಓದುಗರೆ,

ನಿಮಗೆ ಗೊತ್ತಿರುವ ಹಾಗೆ ನಾನು ಇತ್ತೀಚೆಗೆ ಚುನಾವಣಾ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯತನಕದ ಪ್ರತಿಕ್ರಿಯೆ ಚೆನ್ನಾಗಿದೆ. ಈಗಾಗಲೇ ಸುಮಾರು 40000 ದಷ್ಟು ಪ್ಯಾಂಪ್ಲೆಟ್‌ಗಳನ್ನು ಕ್ಷೇತ್ರದಲ್ಲಿ ಹಂಚಲಾಗಿದೆ. ಒಂದು ತಂಡವನ್ನು ಕಟ್ಟುವ ಕೆಲಸ ನಡೆಯುತ್ತಿದೆ. Ravi_pamphlet_Kan_11-02_13ಚುನಾವಣಾ ಆಯೋಗದ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯ ವೆಚ್ಚದ ಮಿತಿ ರೂ.16 ಲಕ್ಷ. ಬಹುಶಃ ಅಷ್ಟನ್ನೂ ನಿಮ್ಮಂತಹ ಸಮಾನಮನಸ್ಕರಿಂದ, ಸ್ನೇಹಿತರಿಂದ, ಸಾರ್ವಜನಿಕರಿಂದಲೇ ಸಂಗ್ರಹಿಸುವ ಗುರಿ ಇದೆ. ಚುನಾವಣೆಗೆ ಮೊದಲು ಕ್ಷೇತ್ರದ ಬಹುತೇಕ ಮತದಾರರನ್ನು ಮುಟ್ಟುವ ವಿಶ್ವಾಸ ಇದೆ. ಈ ಚುನಾವಣೆ ಮುಂದಿನ ದಿನಗಳಲ್ಲಿನ ನಮ್ಮ ರಾಜ್ಯದ ರಾಜಕಾರಣದ ರೀತಿ-ನೀತಿಗಳನ್ನು ಬಹುಪಾಲು ನಿರ್ಧರಿಸುತ್ತದೆ ಎನ್ನುವ ನಂಬಿಕೆ ನನಗಿದೆ. ಇನ್ನು ನಾಲ್ಕೈದು ವರ್ಷಗಳ ನಂತರ ಈ ತರಹದ ರಾಜಕಾರಣ ಮತ್ತು ಚುನಾವಣೆಗಳೇ ಮುಖ್ಯವಾಹಿನಿಯಲ್ಲಿರುತ್ತವೆ ಮತ್ತು ಅದು ಪ್ರಮುಖ ಪಕ್ಷಗಳನ್ನೂ ಸರಿದಾರಿಗೆ ಬರಲು ಒತ್ತಡ ಹೇರುತ್ತದೆ. ಅದಕ್ಕಾಗಿ ಕೇವಲ ಕೆಲವರೇ ಅಲ್ಲ, ಸಮಾಜದ ಬಗ್ಗೆ ಮಾತನಾಡುವ ಮತ್ತು ಕಾಳಜಿ ಇರುವ ಎಲ್ಲರೂ ಪ್ರಯತ್ನಿಸಬೇಕಿದೆ.

ಈ ಹಿನ್ನೆಲೆಯಲ್ಲಿ ನಾನು ನನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಲೇಖನ ನಿಮ್ಮ ಗಮನಕ್ಕೂ ತರೋಣ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ನೀವೂ ಸಹ ಈ ಪ್ರಯತ್ನಕ್ಕೆ ಕೈಜೋಡಿಸುತ್ತೀರ ಎಂದು ಭಾವಿಸುತ್ತೇನೆ.

ರವಿ…


“There comes a time when one must take the position that is neither safe nor politic nor popular, but he must do it because conscience tells him it is right.” ― Martin Luther King Jr.

ಪ್ರಿಯ ನಾಗರಿಕ ಬಂಧುಗಳೇ,

ನನ್ನೂರು ಬೆಂಗಳೂರಿನ ಪಕ್ಕದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದುತ್ತ ಬೆಳೆದ ನಾನು ಹೊಲಗದ್ದೆಯಲ್ಲಿ ಕೆಲಸ ಮಾಡುತ್ತ, ಹಸು ಎಮ್ಮೆಗಳನ್ನು ಮೇಯಿಸುತ್ತ, ಕತೆ ಕಾದಂಬರಿಗಳನ್ನು ಓದುತ್ತ ಬಾಲ್ಯ ಕಳೆದೆ. ನಂತರ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತು ಎಮ್.ಇ. ಪಡೆದು ಕಳೆದ ಹದಿನೈದು ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದು, ನನ್ನ ಉದ್ಯೋಗ ಮತ್ತು ಚಟುವಟಿಕೆಗಳು ಕೆನಡಾ, ಇಟಲಿ, ಕೊರಿಯಾ ದೇಶಗಳಿಗೂ ನನ್ನನ್ನು ಒಯ್ದಿವೆ. ನನ್ನ ವಯಸ್ಕ ಜೀವನದ ಬಹುಪಾಲು ಭಾಗ ಹೊರದೇಶದಲ್ಲಿಯೇ ಕಳೆದಿದ್ದರೂ ಕನ್ನಡ ಮತ್ತು ಕರ್ನಾಟಕ ಯಾವಾಗಲೂ ನನ್ನ ಮನಸ್ಸು ಮತ್ತು ಕ್ರಿಯೆಯ ಭಾಗವಾಗಿತ್ತು. ಕಳೆದ ಹತ್ತು ವರ್ಷಗಳಿಂದಲೂ ನಾನು ರಾಜ್ಯದ ಅನೇಕ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ವಿಷಯಗಳಿಗೆ ಸ್ಪಂದಿಸುತ್ತ, ಅವುಗಳ ಬಗ್ಗೆ ನಿರಂತರವಾಗಿ ಬರೆಯುತ್ತಾ ಬಂದಿದ್ದೇನೆ. ಅಮೆರಿಕದಲ್ಲಿ ಇದ್ದಾಗ ಅಲ್ಲಿಯ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಅದೇ ಸಮಯದಲ್ಲಿ ಕನ್ನಡದ ವಚನಗಳು, ಹಲವು ವೈಚಾರಿಕ ಲೇಖನ-ಪುಸ್ತಕಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸಲು www.vicharamantapa.net ಎಂಬ ವೆಬ್‌ಸೈಟ್ ಆರಂಭಿಸಿದ್ದೆ. ಮತ್ತು, ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವಿಕೆಯ ಮುಂದುವರೆದ ಭಾಗವಾಗಿ 2006 ರಲ್ಲಿ “ವಿಕ್ರಾಂತ ಕರ್ನಾಟಕ” ಎಂಬ ವಾರಪತ್ರಿಕೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದೆ. ಈ ಪತ್ರಿಕೆಯು ಆ ಕಾಲಘಟ್ಟದ ಎಲ್ಲಾ ಬಗೆಯ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳಿಗೆ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದ್ದು ಇಂದಿಗೂ ನನಗೆ ಹೆಮ್ಮೆಯ ವಿಷಯ. ಆ ಪ್ರಕ್ರಿಯೆಯಲ್ಲಿ ವಿಕ್ರಾಂತ ಕರ್ನಾಟಕದೊಂದಿಗೆ ಕೆಲಸ ಮಾಡಿದ, ಅದರಲ್ಲಿ ತೊಡಗಿಕೊಂಡ ಎಲ್ಲಾ ಲೇಖಕ-ಪ್ರಗತಿಪರ ಮಿತ್ರರ ಸಹಭಾಗಿತ್ವ ಮತ್ತು ಬೆಂಬಲ ಇಂದಿಗೂ ನನ್ನಲ್ಲಿ ಆಶಾವಾದ ಮತ್ತು ಸ್ಫೂರ್ತಿಯನ್ನು ಹೆಚ್ಚಿಸುತ್ತಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ 2008 ರ ಸಮಯದಲ್ಲಿ ಕರ್ನಾಟಕದ ರಾಜಕಾರಣ ಅಧೋಗತಿಗೆ ತಲುಪಿ, ಎಲ್ಲಾ ಪ್ರಜಾವಂತರಲ್ಲಿ ಹೇಸಿಗೆ ಮತ್ತು ಸಿನಿಕತನವನ್ನು ಮೂಡಿಸಿತ್ತು, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಬಗ್ಗೆ ಮಾತನಾಡುವುದೇ ಅಪ್ರಸ್ತುತ ಮತ್ತು ಗೇಲಿಯ ವಿಷಯವಾಗಿತ್ತು. ರಾಜಕೀಯ ರಂಗ ತನ್ನ ಕನಿಷ್ಟ ಮಟ್ಟದ ಪ್ರಬುದ್ಧತೆ, ಸೂಕ್ಷ್ಮತೆ, ಮತ್ತು ಜನಪರ ಕಾಳಜಿಗಳನ್ನು ಕಳೆದುಕೊಂಡಿತ್ತು. ರಾಜ್ಯದ ಕುಖ್ಯಾತ ಗಣಿ ಮಾಫಿಯಾದವರು, ರಿಯಲ್ ಎಸ್ಟೇಟ್ ಏಜೆಂಟರು, ಭ್ರಷ್ಟ ಮಾರ್ಗಗಳಿಂದ ಅತಿಶ್ರೀಮಂತರಾಗಿ ಹೋಗಿದ್ದ ರಾಜಕಾರಣಿಗಳು ಆಗಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಿ ರಾಜ್ಯದ ಪ್ರಜಾಪ್ರಭುತ್ವದ ನೆಲೆಯನ್ನೇ ಅಲ್ಲಾಡಿಸಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತರ ವಿರೋಧ ಇರಬೇಕು ಎಂದು ಭಾವಿಸಿ ನಾನು ರಾಜ್ಯದ ಹಲವು ಪ್ರಗತಿಪರ ಮಿತ್ರರೊಂದಿಗೆ ಮತ್ತು ಲೇಖಕರೊಂದಿಗೆ ಚರ್ಚಿಸಿ, ಅವರ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಅದೇ ಸಂದರ್ಭದಲ್ಲಿ ನಮ್ಮ ರಾಜ್ಯದ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ ಮೂರು ದಿನಗಳ ಕಾಲ “ಮೌಲ್ಯಾಗ್ರಹ”ದ ಹೆಸರಿನಲ್ಲಿ ಗಾಂಧಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆ. ರಾಜ್ಯದ ಹಲವು ಕಡೆಗಳಿಂದ ಬಂದಿದ್ದ ಸಮಾನ ಮನಸ್ಕರು ಆ ಪ್ರತಿಭಟನೆ ಮತ್ತು ಉಪವಾಸದಲ್ಲಿ ಪಾಲ್ಗೊಂಡಿದ್ದು ಇಲ್ಲಿ ಎಲ್ಲವೂ ಕಳೆದುಹೋಗಿಲ್ಲ ಎಂಬುದನ್ನು ತೋರಿಸಿಕೊಟ್ಟಿತ್ತು. ಚುನಾವಣೆಗಾಗಿ ಸಾರ್ವಜನಿಕರಿಂದಲೇ ಹಣ ಸಂಗ್ರಹಿಸಿ, ಅಷ್ಟರಲ್ಲೇ ಗೆದ್ದು ಬಂದು ಸ್ವಚ್ಛ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿಪಾದಿಸಿದ ರಾಜ್ಯದ ಹೆಮ್ಮೆಯ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಆದರ್ಶವನ್ನು ಇಟ್ಟುಕೊಂಡು ಅದೇ ಮಾದರಿಯಲ್ಲಿ ಚುನಾವಣೆ ನಡೆಸಿದೆ. ನಾನು ಹೇಳಲು ಬಯಸಿದ ವಿಚಾರಗಳಿಗೆ ಜಯನಗರದ ಶಿಕ್ಷಿತ ಮತ್ತು ಮಧ್ಯಮವರ್ಗದ ಮತದಾರರು ಸ್ಪಂದಿಸುತ್ತಾರೆ ಎಂದು ಭಾವಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ, ಸುಮಾರು 4.25 ಲಕ್ಷವನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅಷ್ಟನ್ನೇ ಚುನಾವಣಾ ಪ್ರಚಾರಕ್ಕೆ ಉಪಯೋಗಿಸಿ ಹದಿನೈದು ದಿನಗಳ ಪ್ರಚಾರ ಮಾಡಿದ್ದೆ. ಚುನಾವಣಾ ಆಯೋಗಕ್ಕೆ ಆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಸಲ್ಲಿಸಿದ ಖರ್ಚಿನ ಮಾಹಿತಿಯ ಪ್ರಕಾರ ಅತಿ ಹೆಚ್ಚು ಖರ್ಚು ಮಾಡಿದ ಅಭ್ಯರ್ಥಿ ನಾನೇ ಆಗಿದ್ದೆ. ಗೆದ್ದ ಅಭ್ಯರ್ಥಿ ತೋರಿಸಿದ ಲೆಕ್ಕ ಮೂರು ಲಕ್ಷಕ್ಕೂ ಕಡಿಮೆ.

ಕರ್ನಾಟಕದ ಇಂದಿನ ರಾಜಕಾರಣದ ಬಗ್ಗೆ ನಿಮಗೆ ವಿಶೇಷವಾಗಿ ಹೇಳುವಂತಹುದೇನಿಲ್ಲ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕ ಇಂದಿಗಿಂತ ನೆನ್ನೆಯೇ ವಾಸಿ ಎನ್ನುವ ಸ್ಥಿತಿಯಲ್ಲಿಯೇ ಮುಂದುವರೆಯುತ್ತಿದೆ. ನಮ್ಮ ಸಾಮಾಜಿಕ ಮತ್ತು ರಾಜಕೀಯ ಮೌಲ್ಯಗಳು ಅಧೋಗತಿಯಲ್ಲಿಯೇ ಸಾಗುತ್ತಿವೆ. ಐದು ವರ್ಷದ ಹಿಂದಿನ ಸಂದರ್ಭಕ್ಕಿಂತ ಕರ್ನಾಟಕ ಈಗ ಇನ್ನೂ ಕೆಟ್ಟಿದೆ. ಇನ್ನು ಎರಡು-ಮೂರು ತಿಂಗಳಿನಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಾದರೂ ಈಗಿನ ಹಾಲಿ ವಿಧಾನಸಭಾ ಸದಸ್ಯರಿಗಿಂತ ಉತ್ತಮವಾದವರು ಆರಿಸಿಬರುತ್ತಾರೆ ಎನ್ನುವ ವಿಶ್ವಾಸ ಯಾರಲ್ಲಿಯೂ ಇಲ್ಲವಾಗಿದೆ.

ಎರಡು ವರ್ಷದ ಹಿಂದೆ ಅಮೆರಿಕದಿಂದ ವಾಪಸ್ಸಾದ ನಾನು ಅಂದಿನಿಂದ ನನ್ನದೇ ನೆಲೆಯಲ್ಲಿ, ಸಮಾನಮನಸ್ಕರೊಡನೆ ಹಲವು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿಯವರೆಗೆ ನನ್ನ ಲೇಖನ, ಅನುವಾದಗಳ ನಾಲ್ಕು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದೇನೆ, ಮತ್ತು ವರ್ಷದ ಹಿಂದೆ “ಭೂಮಿ ಹುಟ್ಟಿದ್ದೆ ಹೇಗೆ?” ಎಂಬ ಕನ್ನಡ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚಿಸುವ www.vartamaana.com ಎನ್ನುವ ವೆಬ್‌ಸೈಟ್ ಅನ್ನು ನಡೆಸುತ್ತಿದ್ದೇನೆ. ಈ ವೆಬ್‌ಸೈಟ್‌ಗೆ ರಾಜ್ಯದ ಹಲವು ಸಮಾನಮನಸ್ಕ ಮತ್ತು ಪ್ರಗತಿಪರ ಲೇಖಕರು ಬರೆಯುವ ಮೂಲಕ ಕೈಜೋಡಿಸಿದ್ದಾರೆ.

ಇದೆಲ್ಲದರ ಜೊತೆಗೆ, ನಾನು ಪ್ರತಿಪಾದಿಸುವಂತಹ ಆಂತರಿಕ ಪ್ರಜಾಪ್ರಭುತ್ವ, ಸ್ವಚ್ಛ ಹಣ, ಸೈದ್ಧಾಂತಿಕ ಮತ್ತು ಮೌಲ್ಯಾಧಾರಿತ ರಾಜಕಾರಣವನ್ನು ಪ್ರತಿನಿಧಿಸುವ “ಲೋಕಸತ್ತಾ ಪಕ್ಷ“ದ ಸದಸ್ಯನಾಗಿ ಈಗ ಸಕ್ರಿಯನಾಗಿದ್ದೇನೆ. ಈ ಚಟುವಟಿಕೆಯ ಮುಂದುವರಿಕೆಯಾಗಿ ಈ ಬಾರಿಯೂ ಚುನಾವಣಾ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ, ಕಳೆದ ಬಾರಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆಗ ನಾನು ಅಮೆರಿಕದಲ್ಲಿದ್ದೆ ಮತ್ತು ನನ್ನೂರಿನ ಆನೇಕಲ್ ಕ್ಷೇತ್ರ ಮೀಸಲು ಕ್ಷೇತ್ರವಾದ ಕಾರಣ, ನಾನು ಹೇಳಲು ಬಯಸಿದ ವಿಚಾರಗಳಿಗೆ ಜಯನಗರದ ಶಿಕ್ಷಿತ ಮತ್ತು ಮಧ್ಯಮವರ್ಗದ ಮತದಾರರು ಸ್ಪಂದಿಸುತ್ತಾರೆ ಎಂದು ಭಾವಿಸಿ ಆ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೆ. ಈಗ ಅಮೆರಿಕದಿಂದ ಬಂದ ಎರಡು ವರ್ಷಗಳಿಂದಲೂ BTM_Layout_Const_Mapಬಿಟಿಎಮ್ ಬಡಾವಣೆಯಲ್ಲಿ ನೆಲೆಸಿದ್ದೇನೆ, ಹಾಗಾಗಿ ಈ ಬಾರಿ ಬಿಟಿಎಮ್‌ನಿಂದ ಸ್ಪರ್ಧಿಸುವುದು ಸಮಂಜಸ ಎಂದು ಭಾವಿಸಿ ಇಲ್ಲಿಂದ “ಲೋಕಸತ್ತಾ ಪಕ್ಷ”ದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಬೆಂಗಳೂರು ನಗರದ ಬಿಟಿಎಂ ಲೇಔಟ್, ಕೋರಮಂಗಲ, ಮಡಿವಾಳ, ಜಕ್ಕಸಂದ್ರ, ಆಡುಗೋಡಿ, ಈಜಿಪುರ, ಸುದ್ದುಗುಂಟೆಪಾಳ್ಯ, ಮತ್ತು ಲಕ್ಕಸಂದ್ರ ವಾರ್ಡುಗಳು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ.

ಮತ್ತು ಈ ಬಾರಿಯದು ಸಾಂಕೇತಿಕವಲ್ಲ. ನಾನು ನಂಬಿದ ಸಿದ್ಧಾಂತಗಳ ಮತ್ತು ಮೌಲ್ಯಗಳ ಅಡಿಯಲ್ಲಿ ಎಷ್ಟೆಲ್ಲ ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತೇನೆ ಎಂದು ಈ ಮೂಲಕ ನಿಮಗೆ ತಿಳಿಸಬಯಸುತ್ತೇನೆ. ಜೊತೆಗೆ ಈಗಾಗಲೆ ನಮ್ಮ ಪಕ್ಷದ ವತಿಯಿಂದ ಬೆಂಗಳೂರಿನ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ತೀರ್ಮಾನವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಇತರೆ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆಯಾಗಲಿದೆ. ಈ ನಿಟ್ಟಿನಲ್ಲಿ ಇದು ಸಾಂಘಿಕ ಪ್ರಯತ್ನವೂ ಹೌದು.

ಈ ಹಿನ್ನೆಲೆಯಲ್ಲಿ ನಿಮ್ಮ ಬೆಂಬಲ, ಸಹಾಯ, ಮತ್ತು ಸಹಕಾರವನ್ನು ಕೋರಬಯಸುತ್ತೇನೆ. ಸಾರ್ವಜನಿಕರ ಬೆಂಬಲದಿಂದಲೇ ಚುನಾವಣೆ ನಡೆಸುವ ಆದರ್ಶ ಮಾದರಿಗೆ ತಮ್ಮ ಹೃತ್ಪೂರ್ವಕ ಬೆಂಬಲ ನಿಡಬೇಕೆಂದು ವಿನಂತಿಸುತ್ತೇನೆ. ನಾವು ಸಂಗ್ರಹಿಸುವ ಹಣದ ಪ್ರತಿಯೊಂದು ವಿವರವನ್ನೂ ಲೆಕ್ಕ ಇಡಲಾಗುತ್ತದೆ ಮತ್ತು ಈ ವೆಬ್‌ಸೈಟ್‌ನಲ್ಲಿ (www.ravikrishnareddy.com) ಪ್ರಕಟಿಸಲಾಗುತ್ತದೆ. ಹಾಗೆಯೇ ಚುನಾವಣಾ ಪ್ರಚಾರಕ್ಕಾಗಿ ಖರ್ಚು ಮಾಡುವ ಪ್ರತಿಯೊಂದು ವಿವರವೂ ಅಲ್ಲಿ ದಾಖಲಾಗುತ್ತದೆ. ತಾವು ಧನಸಹಾಯ ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ಹೆಚ್ಚಿನ ಬಲ ತುಂಬಬೇಕೆಂದು ಪ್ರಾರ್ಥಿಸುತ್ತೇನೆ. ಇದರ ಜೊತೆಗೆ, ನೀವೂ ಸಹ ಬಂದು ನಮ್ಮ ಜೊತೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸಾಧ್ಯವಾದರೆ, ನನ್ನ ಮತ್ತು ನಮ್ಮ ತಂಡದ ಹುಮ್ಮಸ್ಸು ಮತ್ತು ಕಾರ್ಯಕ್ಷಮತೆ ನೂರ್ಮಡಿಯಾಗುತ್ತದೆ.

ಹಣವನ್ನು ‘Loksatta Party‘ ಹೆಸರಿಗೆ ಚೆಕ್ ಬರೆದು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: (ರಾಜಕೀಯ ಪಕ್ಷಕ್ಕೆ ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಇರುತ್ತದೆ)

ರವಿ ಕೃಷ್ಣಾರೆಡ್ಡಿ
ನಂ.400, 23ನೇ ಮುಖ್ಯರಸ್ತೆ,
ಬಿಟಿಎಮ್ ಲೇಔಟ್ 2ನೇ ಹಂತ,
ಬೆಂಗಳೂರು – 560076

ನಿಮ್ಮ ವಿಶ್ವಾಸಿ,
ರವಿ…