Tag Archives: ಅಣ್ಣಾ ಹಜಾರೆ

Anna_Hazare

ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…

ಅಣ್ಣಾ ಹಜಾರೆಯವರ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ಯಾವುದೋ ಒಂದು ಲೊಕಪಾಲ್ ಮಸೂದೆ ಮುಂದಿನ ಒಂದೆರಡು ತಿಂಗಳಿನಲ್ಲಿ ಅಂಗೀಕಾರವಾಗುವುದು ಈಗ ನಂಬಬಹುದಾದ ವಿಚಾರ. ಇಂದಲ್ಲ ನಾಳೆ ಯಾವುದೋ ಒಂದು ಲೋಕ್‌ಪಾಲ್ ಬರುತ್ತಿತ್ತು. ಆದರೆ, ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹ ಇಲ್ಲದೇ ಹೋಗಿದ್ದರೆ ಅದು ಇಷ್ಟು ಬೇಗ ಆಗುತ್ತಿರಲಿಲ್ಲ. ಮತ್ತು ಇಷ್ಟು ಪರಿಣಾಮಕಾರಿಯಾಗಿಯೂ ಇರುತ್ತಿರಲಿಲ್ಲ.

Anna_Hazare

Anna_Hazare

ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಮೂಲ ಬೇರು ಇರುವುದು ನಮ್ಮ ಸಮಾಜದಲ್ಲಿ ಸಾರ್ವತ್ರಿಕವಾಗಿಲ್ಲದ ಮೌಲ್ಯಗಳಿಂದ ಮತ್ತು ಪ್ರಜಾಪ್ರಭುತ್ವದ ಆಳವಾದ ಕಲ್ಪನೆ ನಮ್ಮ ಬಹುತೇಕ ದೇಶವಾಸಿಗಳಿಗೆ ಇಲ್ಲದಿರುವುದರಿಂದ. ಮೂರ್ನಾಲ್ಕು ದಶಕಗಳ ಹಿಂದೆ ಕಳ್ಳತನ-ಕೊಲೆ-ಸುಲಿಗೆಯಲ್ಲಿ ತೊಡಗಿದ ಜನರನ್ನು, ಲಂಚ ತೆಗೆದುಕೊಂಡು ಸಿಕ್ಕಿಬೀಳುತ್ತಿದ್ದವರನ್ನು ಸಮಾಜ ಒಂದು ರೀತಿ ನೋಡುತ್ತಿತ್ತು. ಅಘೋಷಿತ ಬಹಿಷ್ಕಾರ ಹಾಕುತ್ತಿತ್ತು. ಆದರೆ ಯಾವಾಗ ದುಡ್ಡು ಮತ್ತು ನಮ್ಮ ಈಗಿನ ಬುದ್ಧಿಗೇಡಿ ಭ್ರಷ್ಟ ರಾಜಕಾರಣಿಗಳ ಅಭಿವೃದ್ಧಿಯ ಕಲ್ಪನೆ ಸಮಾಜದಲ್ಲಿ ಸ್ಥಾನ ಪಡೆದುಕೊಂಡಿತೊ, ಆಗ ನಮ್ಮ ಸಮಾಜದಲ್ಲಿದ್ದ ಅಷ್ಟಿಷ್ಟು ನೀತಿ-ನಿಜಾಯಿತಿಗಳೆಲ್ಲ ಮೂಲೆಗುಂಪಾದವು. ನ್ಯಾಯವಾಗಿರುವುದು, ಸರಳ-ಆದರ್ಶ ಜೀವನ ನಡೆಸುವುದು ಸಮಾಜದ ಪ್ರಕಾರ ಕೇವಲ ಸೋತವರ ಮೌಲ್ಯಗಳಾದವೇ ಹೊರತು ಸಮಾಜದ ಮೌಲ್ಯಗಳಾಗಲಿಲ್ಲ. ನಮ್ಮದೇ ದೇಶದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕಾನೂನಿನ ಪ್ರಕಾರ ನಡೆದುಕೊಳ್ಳುವುದಕ್ಕೆ, ಕಾನೂನು ಪಾಲಿಸುವುದಕ್ಕೆ ನಾವು ಯಾಕಾಗಿ ಲಂಚ ನೀಡಬೇಕು ಎಂದು ಜನ ನಿಂತು ಯೋಚಿಸಲಿಲ್ಲ. ಕೊಡದಿದ್ದರೆ ಕೆಲಸ ಆಗುವುದಿಲ್ಲ; ಎಲ್ಲರೂ ಕೊಡುತ್ತಾರೆ, ನಾವೂ ಕೊಡುವುದರಲ್ಲೇನು ತಪ್ಪು; ಇದು ಲೋಕಸಮ್ಮತ ಎನ್ನುವ ತೀರ್ಮಾನಕ್ಕೆ ಬಹುತೇಕ ಜನ ಬಂದ ಸಂದರ್ಭ ಇದು.

ಇದೇ ಸಮಯದಲ್ಲಿ ನಮ್ಮ ಜನರಿಗೆ ರಾಜಕೀಯ ಪಕ್ಷಗಳಲ್ಲಿ ಆಯ್ಕೆಗಳೂ ಇರಲಿಲ್ಲ. ನಾನು ಇತ್ತೀಚೆಗೆ ಎಲ್ಲರಿಗೂ ಹೇಳುವ ವಿಷಯ ಏನೆಂದರೆ, ’ಯಾವುದಾದರೂ ಒಂದು ಒಳ್ಳೆಯ ನಾಯಕನ ಅಥವ ಪಕ್ಷದ ಆಯ್ಕೆ ಕರ್ನಾಟಕದ ಜನಕ್ಕೆ ಇದ್ದಿದ್ದರೆ ಇಲ್ಲಿ ವರ್ಷದ ಹಿಂದೆಯೇ ಕ್ರಾಂತಿಯಾಗಿಬಿಡುತ್ತಿತ್ತು,’ ಎಂದು. ನಿಸ್ಸಂಶಯವಾಗಿ ಯಡ್ಡಯೂರಪ್ಪ ಮತ್ತವರ ಪಕ್ಷದ ಆಡಳಿತ ಹಗಲುದರೋಡೆಕೋರರದ್ದು. ಆ ಹಗಲುದರೋಡೆಯಿಂದಲೇ ಇಷ್ಟರಲ್ಲಿಯೇ ಮತ್ತೊಂದಷ್ಟು ಕರ್ನಾಟಕದ ರಾಜಕಾರಣಿಗಳು ಜೈಲು ಸೇರಬೇಕಾಗಿ ಬರಬಹುದು. ಆದರೆ ಮಿಕ್ಕ ಪಕ್ಷಗಳ ಕತೆ ಏನು? ಬಿಜೆಪಿಯದು ಹಗಲುದರೋಡೆಯಾದರೆ ಇತರರದು ಒಂದು ರೀತಿಯಲ್ಲಿ ರಾತ್ರಿದರೋಡೆ. ಕರ್ನಾಟಕದ ಕಾಂಗ್ರೆಸ್‌ನಲ್ಲಾಗಲಿ, ಜೆಡಿಎಸ್‌ನಲ್ಲಾಗಲಿ ಆದರ್ಶ ಮತ್ತು ಪ್ರಾಮಾಣಿಕತೆಯನ್ನು ಜನರಲ್ಲಿ ಉತ್ತೇಜಿಸುವ, ತಮ್ಮ ಮಾತುಗಳಲ್ಲಿ ಜನರಿಗೆ ನಂಬಿಕೆ ಉಂಟುಮಾಡುವಂತಹ ಒಬ್ಬನೇ ಒಬ್ಬ ಸಮೂಹನಾಯಕನಿಲ್ಲ. ’ಬಿಜೆಪಿಯವರಿಗೆ ಮಾತ್ರ ಆಡಳಿತ ನಡೆಸುವುದಕ್ಕೆ ಮತ್ತು ಅಕ್ರಮ ರೀತಿಯಲ್ಲಿ ಹಣ ಮಾಡುವುದಕ್ಕೆ ಅವಕಾಶ ಇದೆ, ನಮಗಿಲ್ಲ, ದಯವಿಟ್ಟು ನಮಗೂ ಆ ಅವಕಾಶ ಮಾಡಿಕೊಡಿ,’ ಎನ್ನುವಂತಹ ಮಾತುಗಳು ಇವರಿಂದ ಬರುತ್ತಿತ್ತೇ ಹೊರತು, ’ನಾವು ಅಕ್ರಮ-ಭ್ರಷ್ಟಾಚಾರಗಳಿಲ್ಲದ ರಾಜಕಾರಣ ಮತ್ತು ಆಡಳಿತ ನಡೆಸುತ್ತೇವೆ,’ ಎಂದು ಅವರು ಹೇಳಲು ಆಗಲೇ ಇಲ್ಲ. ಈಗಲೂ ಹೇಳುತ್ತಿಲ್ಲ. ಅವರು ಈ ಸಂದರ್ಭದಲ್ಲಿ ಬಿಜೆಪಿಗಿಂತ ಭಿನ್ನವಾದ ಆಡಳಿತ ಕೊಡಬಲ್ಲರು ಎನ್ನುವಂತಹ ನಂಬಿಕೆ ಕರ್ನಾಟಕದ ಜನಕ್ಕೆ ಬರದೇ ಇದ್ದುದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ವಯಂ‍ಕೃತಾಪರಾಧಗಳು ಕಾರಣವೇ ವಿನಃ ಅನ್ಯವಲ್ಲ.

Sansad_Bhavan

Sansad_Bhavan

ಬಹುಶಃ ಇಂತಹ ಕಾರಣಗಳಿಂದಲೇ ಕರ್ನಾಟಕದ ಜನ ಕಳೆದ ಎರಡು ಮೂರು ವರ್ಷಗಳ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಾಕಷ್ಟು ಬೆಂಬಲ ಕೊಡದೇ ಇದ್ದದ್ದು. ಅದರ ಜೊತೆಗೆ ಜನರ ವೈಯಕ್ತಿಕ ಜಾತಿ ಮೂಲದ ಭ್ರಷ್ಟತೆಯೂ ಸೇರಿತ್ತು. ನಮ್ಮ ಜಾತಿಯವನು ಮಾಡಿದರೆ ಮಾತ್ರ ತಪ್ಪಾ ಎನ್ನುವಂತಹ ಸಮರ್ಥನೆ ನೀಚತನದ್ದು, ಅದನ್ನು ಆಡಲು ಸಂಕೋಚಪಟ್ಟುಕೊಳ್ಳಬೇಕು ಎಂದು ಜಾತಿವಾದಿಗಳು ಅಂದುಕೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿಯೇ ನಾವು ಇಂದಿನ ಅಣ್ಣಾ ಹಜಾರೆ ಹೋರಾಟಕ್ಕೆ ಕರ್ನಾಟಕದಲ್ಲಿ ದೊರೆಯುತ್ತಿರುವ ಜನಬೆಂಬಲವನ್ನು ಗ್ರಹಿಸಲು ಯತ್ನಿಸಬೇಕು. ಇಷ್ಟೂ ದಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಬಂದ ಕರ್ನಾಟಕದ ಹಲವು ಆಕ್ಟಿವಿಸ್ಟ್‌ಗಳಿಗೆ ಹಜಾರೆ ಹೋರಾಟಕ್ಕೆ ದೊರೆಯುತ್ತಿರುವ ಬೆಂಬಲ ಕಸಿವಿಸಿ ಉಂಟುಮಾಡಿರುವುದು ಸಹಜ. ಆದರೆ ಈ ಹೋರಾಟಗಾರರು ಮುಟ್ಟಲು ಸಾಧ್ಯವಾಗದಿದ್ದ ಜನವರ್ಗವನ್ನು ಈ ಅಣ್ಣಾ ಹಜಾರೆ ತಂಡ ಮುಟ್ಟಿದೆ ಎಂದು ಅವರು ತಿಳಿದುಕೊಂಡರೆ ಅವರ ಕಸಿವಿಸಿ ಮತ್ತು ಕೋಪ ಸ್ವಲ್ಪ ಮಟ್ಟಿಗೆ ತಣ್ಣಗಾಗಬಹುದು. ಈ ಹೋರಾಟಕ್ಕೆ ಅಜ್ಜ-ಗಾಂಧೀವಾದಿ-ಅಹಿಂಸೆ-ಉಪವಾಸ ಎಂಬಂತಹ ಸಾಂಸ್ಕೃತಿಕ-ಸಾಮಾಜಿಕ ರೂಪ ಇದೆ ಮತ್ತು ಅದಕ್ಕೆ ಟಿವಿ-ಪತ್ರಿಕಾ ಮಾಧ್ಯಮಗಳ ಅತಿಯಾದ ಉತ್ತೇಜನ ಮತ್ತು ಪ್ರಚಾರವೂ ದೊರಕಿದೆ. ಇದೊಂದು ರೀತಿಯಲ್ಲಿ ಈ ಸಂದರ್ಭದಲ್ಲಿ ಮಾತ್ರವೇ ಸಾಧ್ಯವಾಗಬಹುದಾದ ಘಟನೆಯೇ ಹೊರತು ಎರಡು-ಮೂರು ವರ್ಷಗಳ ಮೊದಲು ಘಟಿಸಲು ಸಾಧ್ಯವೇ ಇರಲಿಲ್ಲ. ಇದು 2G-CWG-ಗಣಿ ಮುಂತಾದ ಬಯಲಿಗೆ ಬಂದಂತಹ ಹಗರಣಗಳ ತದನಂತರದ ಕಾಲಘಟ್ಟದಲ್ಲಿ ಘಟಿಸಿದ ಕ್ರಿಯೆಯೇ ಹೊರತು, ಅವು ಈ ಮಟ್ಟದಲ್ಲಿ ಬಯಲಿಗೆ ಬರದೇ ಹೋಗಿದ್ದಲ್ಲಿ ಇದೇ ಅಣ್ಣಾ ಹಜಾರೆ ಎಷ್ಟೇ ಉಪವಾಸ ಕೂತಿದ್ದರೂ ಜನರಾಗಲಿ ಅಥವ ಮಾಧ್ಯಮಗಳಾಗಲಿ ಈ ಪರಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಅಣ್ಣಾ ಹಜಾರೆ ಮತ್ತವರ ತಂಡದ ಬಗ್ಗೆ ಚಿಂತಕರ ಒಂದು ಗುಂಪಿನ ತಕರಾರು ಏನೇ ಇರಲಿ, ಅದು ಜನಸಾಮಾನ್ಯರಿಗೆ ಅಷ್ಟೇನೂ ಮುಖ್ಯವಾದದ್ದಲ್ಲ. ಸೈದ್ಧಾಂತಿಕ ಹಿನ್ನೆಲೆ ಮತ್ತು ಅದಕ್ಕೆ ಬೇಕಾದ ಓದು ಇಲ್ಲದ ಜನತೆ ಯಾವುದೇ ಸಂದರ್ಭದಲ್ಲಾಗಲಿ ಕೆಟ್ಟತನದ ವಿರುದ್ಧ ಮಾತನಾಡುತ್ತಿರುವವನ ಪರ ನಿಲ್ಲುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ದೊರಕುತ್ತಿರುವ ಜನಬೆಂಬಲ ನಿಜಕ್ಕೂ ಪ್ರಶಂಸನಾರ್ಹ. ಜನರಿಗೆ ಒಂದಲ್ಲ ಒಂದು ಸಮಯದಲ್ಲಿ ಆದರ್ಶಗಳು ಬೇಕು. ನ್ಯಾಯ-ನೀತಿಗಳು ಬೇಕು. ಅದರ ಪರ ನಿಲ್ಲಬೇಕು. ಅದನ್ನೇ ಈಗ ಬಹುತೇಕರು ಮಾಡುತ್ತಿರುವುದು.

ಹಾಗೆಂದ ಮಾತ್ರಕ್ಕೆ ಹಜಾರೆ ತಂಡದ ಕಾರ್ಯವೈಖರಿ ಮತ್ತು ಅವರು ಮುಂದೊಡ್ಡೂತ್ತಿರುವ ಮಸೂದೆಯಲ್ಲಿನ ಲೋಪದೋಷಗಳನ್ನು ವಿಮರ್ಶಿಸುತ್ತಿರುವವರನ್ನು ವಿಮರ್ಶಿಸುವುದಾಗಲಿ, ಅವರನ್ನು ಕೀಳುಮಾಡುವುದಾಗಲ್ಲಿ ಸರಿಯಲ್ಲ. ಇದು ಒಂದು ರೀತಿಯಲ್ಲಿ ಜನಪ್ರೀಯತೆ ಕಳೆದುಕೊಳ್ಳುವ ಕೆಲಸವಾದರೂ ಆಗಲೇಬೇಕಾದ ಕೆಲಸ. ಈ ನಿಟ್ಟಿನಲ್ಲಿ ನಾವು ಅರುಣಾ ರಾಯ್ ಮತ್ತವರ ಸಹಚರರನ್ನು ಮತ್ತು ಆರುಂಧತಿ ರಾಯ್‌ರಂತಹವರನ್ನು ಅಭಿನಂದಿಸಲೇಬೇಕು. ಈ ಸಂದರ್ಭದಲ್ಲಿ ನಾವು ಗಮನವಿಟ್ಟು ಅವಲೋಕಿಸಿದಾಗ, ಅಣ್ಣಾ ಹಜಾರೆ ತಂದದವರ್‍ಯಾರೂ ಅರುಣಾ ರಾಯ್ ಮತ್ತವರ ತಂಡದವರ ವಿರುದ್ಧ ವೈಯಕ್ತಿಕ ದಾಳಿ ಮಾಡುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಜನ್‌ಲೋಕ್‍ಪಾಲ್ ನೈಜ ರೀತಿಯಲ್ಲಿ ಜನರ ಕಾನೂನಾಗುವುದಕ್ಕೆ ಈ ರೀತಿಯ ವಿಮರ್ಶೆ ಅಗತ್ಯ ಎನ್ನುವ ಅರಿವು ಮತ್ತು ತಮ್ಮ ನಿಲುವಿನಲ್ಲಿಯೂ ಕೆಲವೊಂದು ತಪ್ಪುಗಳಿರಬಹುದು ಎನ್ನುವಂತಹ ವಿನಯ ಹಜಾರೆ ತಂಡದಲ್ಲಿರುವುವರಲ್ಲಿ ಇರುವ ಲಕ್ಷಣಗಳಿವೆ. ಅರುಣಾ ರಾಯ್ ಮತ್ತು ಅಣ್ಣಾ ಹಜಾರೆ ತಂಡದವರ ಸೌಜನ್ಯಯುತವಾದ ಭಿನ್ನಾಭಿಪ್ರಾಯ ಮಾದರಿಯಾದಂತಹುದು.

ಇದೇ ಸಂದರ್ಭದಲ್ಲಿ ದೇಶದ ಕೆಲವು ದಲಿತ ವರ್ಗದ ಹಿನ್ನೆಲೆಯ ಚಿಂತಕರು ಈ ಚಳವಳಿ ಮೇಲ್ಜಾತಿಯ-ಮೇಲ್ವರ್ಗಗಳ ಪಿತೂರಿ ಎನ್ನುವಂತೆ ಅಭಿಪ್ರಾಯ ಪಡುತ್ತಿದ್ದಾರೆ. ಅವರು ಹಾಗೆ ಹೇಳಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೇ ಕಾಣಿಸುತ್ತವೆ. ಆಧ್ಯಾತ್ಮ ಎಂಬ ಢೋಂಗಿಯ ಪುಂಗಿಯನ್ನು ಊದುವವರೂ ಈ ಚಳವಳಿಯ ಮುಖ್ಯಪಾತ್ರಧಾರಿಗಳಾಗಿರುವುದು ಈ ಚಳವಳಿಯ ಮಿತಿಗಳಲ್ಲಿ ಒಂದು. ಪ್ರಗತಿಪರ ಚಿಂತನೆ ಮತ್ತು ಸಮಾನತಾವಾದದ ವಿರೋಧಿಗಳು ಈ ಚಳವಳಿಯ ಮೂಲಕ ಜನಮಾನಸದಲ್ಲಿ ಚಲಾವಣೆಯಾಗಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಆದರೆ ಮೇಧಾ ಪಾಟ್ಕರ್‌ರಂತಹವರು, ಹಿಂದೂ ಸಮಾಜದ ಕೆಟ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತುತ್ತಲೆ ಬಂದಿರುವ, ಕೋಮುವಾದವನ್ನು ವಿರೋಧಿಸುವ ಅಗ್ನಿವೇಶ್‌ರಂತಹವರೂ ಈ ಚಳವಳಿಯ ಮುಂಚೂಣಿಯಲ್ಲಿರುವುದರಿಂದ ನಮ್ಮ ವಿಮರ್ಶೆ ಸಂಯಮದಿಂದ ಕೂಡಿರಬೇಕಾದ ಮತ್ತು ಕೆಲವು ವ್ಯಕ್ತಿ-ಗುಂಪುಗಳಿಗೆ ಸೀಮಿತಗೊಳಿಸಬೇಕಾದ ಅವಶ್ಯಕತೆ ಇದೆ. ಆಡಳಿತದಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿ, ಭ್ರಷ್ಟರಿಗೆ ಶಿಕ್ಷೆಯಾದರೆ, ಅದರ ಒಳಿತು ಸಮಾಜದ ಎಲ್ಲಾ ವರ್ಗಗಳಿಗೂ ಇರುತ್ತದೆಯೇ ಹೊರತು ಕೇವಲ ಕೆಲವೇ ಜನವರ್ಗಗಳಿಗೆ ಅಲ್ಲ. ಮಿಕ್ಕ ವಿಷಯಗಳನ್ನು ಪ್ರಸ್ತಾಪಿಸಲು, ಹೋರಾಡಲು, ಮತ್ತೊಂದು ಸಮಯ-ಸಂದರ್ಭ ಇದ್ದೇ ಇರುತ್ತದೆ. ಆ ವಿಷಯಗಳನ್ನು ಪ್ರಾಮಾಣಿಕವಾಗಿ ಎತ್ತಬಲ್ಲ ಜನರೂ ಇರುತ್ತಾರೆ. ಅಣ್ಣಾ ಹಜಾರೆ ಸಮಾಜದ ಎಲ್ಲಾ ವಿಚಾರಗಳನ್ನು ಯೋಚಿಸಬಲ್ಲಂತಹ ಚಿಂತಕರಾಗಲಿ, ಸಮಾಜ ಸುಧಾರಕರಾಗಲಿ ಅಲ್ಲ. ನಮ್ಮ ಎಲ್ಲಾ ವಿಚಾರಗಳಿಗೆ, ಸಮಸ್ಯೆಗಳಿಗೆ ಅವರೇ ನಾಯಕರಾಗಲಿ, ಆದರ್ಶವಾಗಲಿ, ಪರಿಹಾರವಾಗಲಿ, ಅಲ್ಲ. ಆದರೆ, ಈ ಸಂದರ್ಭದಲ್ಲಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ಅವರನ್ನು ನಾಯಕರನ್ನಾಗಿ, ಆದರ್ಶವನ್ನಾಗಿ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಇಲ್ಲಿಯವರೆಗಿನ ಜೀವನದಲ್ಲಿ ಅವರು ಇಂತಹ ಹೋರಾಟವನ್ನು ಮಾಡಿಕೊಂಡೂ ಬಂದಿದ್ದಾರೆ. ಹಾಗಾಗಿ ಅವರು ಯೋಗ್ಯರೂ ಹೌದು, ಸಮರ್ಥರೂ ಹೌದು.

ಮತ್ತು, ಅಣ್ಣಾ ಹಜಾರೆ ನಮ್ಮ ಈಗಿನ ವಿಸ್ಮೃತಿಯಲ್ಲಿದ್ದ ಸಮಾಜವನ್ನು ಗಾಂಧಿಗೆ, ಅವರ ವಿಚಾರಕ್ಕೆ, ಆಚಾರಕ್ಕೆ ಎದುರು ತಂದು ನಿಲ್ಲಿಸಿದ್ದಾರೆ. ಗಾಂಧಿಯವರ ಅವಹೇಳನೆ ಮಾಡುವುದನ್ನೇ ಒಂದು ಮೌಲ್ಯ ಎಂದುಕೊಂಡ ಗುಂಪನ್ನೂ ಅವರು ತಮ್ಮ ಹಿಂದೆ ಬರುವಂತೆ ಮಾಡಿದ್ದಾರೆ. ದೇಶ ಈ ಮೂಲಕವಾದರೂ ಗಾಂಧಿಯನ್ನು ಮತ್ತೊಮ್ಮೆ ಪರಿಚಯಿಸಿಕೊಂಡರೆ ಅದು ಈ ಚಳವಳಿಯ ಸಾರ್ಥಕ್ಯದಲ್ಲೊಂದೆಂದು ನಾವು ಭಾವಿಸಬೇಕು. ದೇಶದ ಅನೇಕ ಕಡೆ ಅಕ್ಷರಶಃ ಲಕ್ಷಾಂತರ ಜನರು ಬೀದಿಗಿಳಿದಿದ್ದರೂ ಈ ಚಳವಳಿ ಅಹಿಂಸೆ ಮತ್ತು ಸೌಜನ್ಯತೆಯನ್ನು ಕಾಪಾಡಿಕೊಂಡಿದೆ ಎಂದರೆ ಅದು ಕೋಮು ಉನ್ಮಾದದಲ್ಲಿ ಆಗಾಗ ಜ್ವಲಿಸುವ ದೇಶದಲ್ಲಿ ಗಾಂಧಿಮಾರ್ಗದ ಜಯವಾಗಿಯೇ ಕಾಣಿಸುತ್ತಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನೋಡಿದರೆ, ಇಲ್ಲಿ ಅನೇಕ ಜನ ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರು ಕೇವಲ ಒಂದು ಪಕ್ಷದ ಭ್ರಷ್ಟಾಚಾರವನ್ನು ಮಾತ್ರ ಟೀಕಿಸುತ್ತಿಲ್ಲ. ಎಲ್ಲರ ಭ್ರಷ್ಟಾಚಾರವನ್ನೂ ಟೀಕಿಸುತ್ತಿದ್ದಾರೆ, ಕೇವಲ ಅದಷ್ಟನ್ನೇ ಅಲ್ಲ, ಅವರು ಮಠಗಳ ಭ್ರಷ್ಟಾಚಾರವನ್ನೂ ಎತ್ತುತ್ತಿದ್ದಾರೆ. ಸಮಾಜದ ಅನೇಕ ಲೋಪದೋಷಗಳನ್ನೂ ಎತ್ತುತ್ತಿದ್ದಾರೆ, ಹಾಗೆಯೇ ಪ್ರಜಾಪ್ರಭುತ್ವದ ಪಾಠವನ್ನೂ ಮಾಡುತ್ತಿದ್ದಾರೆ. ಅತಿರೇಕಗಳೂ ಇರುತ್ತವೆ, ನಿಜ. ಆದರೆ, ಅವೆಲ್ಲವುಗಳ ಮಧ್ಯೆ ಮುಕ್ತವಾದ ವಾತಾವರಣದಲ್ಲಿ ಜನರನ್ನು ಮುಕ್ತವಾಗಿ ಮಾತನಾಡಲು ಬಿಟ್ಟಿರುವುದು ಗಮನಿಸಬೇಕಾದ ಅಂಶ. ಕನ್ನಡದ ಚಿಂತಕ ವರ್ಗ ಮತ್ತು ಕ್ರಾಂತಿಗೀತೆಗಳನ್ನು ಹಾಡಿಕೊಂಡೇ ಒಂದೆರಡು ತಲೆಮಾರುಗಳನ್ನು ಪ್ರಭಾವಿಸುತ್ತ ಬಂದಂತಹ ಗಾಯಕರು ಇಲ್ಲಿ ಮಾಯವಾಗಿರುವುದು ವಿಪರ್ಯಾಸ. ಇದು ಆಯೋಜಕರ ಆಲೋಚನೆಯ ಮಿತಿಯೂ ಹೌದು, ಮತ್ತು ಈ ಚಿಂತಕ-ಗಾಯಕರ ಬದ್ಧತೆಯ ಪ್ರಶ್ನೆಯೂ ಹೌದು. ಇಲ್ಲಿ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತ ವೈಯಕ್ತಿಕ ದೌರ್ಬಲ್ಯಗಳೇ ಕಾರಣವಾಗಿ ಕಾಣಿಸುತ್ತವೆ.

ದುಡ್ಡು ಕೊಟ್ಟು ಜನರನ್ನು ಸೇರಿಸಿ ರ್‍ಯಾಲಿ ಸಂಘಟಿಸುವುದನ್ನು ಕಂಡೂಕಂಡು ನಮ್ಮ ಪ್ರಜಾಪ್ರಭುತ್ವದ ಅಧೋಗತಿಯ ಬಗ್ಗೆ ಚಿಂತಿತರಾಗಿದ್ದವರಿಗೆ ಇಲ್ಲೊಂದು ಉದಾಹರಣೆ ಇದೆ. ಈ ಚಳವಳಿಗೆ ಮಧ್ಯವಯಸ್ಕರು, ಉದ್ಯೋಗದಲ್ಲಿರುವವರು, ಜನಸಾಮಾನ್ಯರು, ಸ್ವಯಂಪ್ರೇರಿತರಾಗಿ ಬರುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ನಮ್ಮ ಮುಂದಿನ ಚಳವಳಿಗಳು ಮತ್ತು ರಾಜಕಾರಣ ನಡೆಯಬೇಕಿರುವುದೇ ಈ ರೀತಿಯಲ್ಲಿ. ಆದರೆ, ಈಗ ಯಾವುದೋ ಹುಮ್ಮಸ್ಸಿನಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ಜನತೆ ಮತ್ತೆ ಚುನಾವಣಾ ಸಮಯದಲ್ಲಿ ತಮ್ಮ ಬೇಜವಾಬ್ದಾರಿ ತೋರಿಸಿದರೆ ಆಗ ಈ ಚಳವಳಿಯ ಮಿತಿ ಗೊತ್ತಾಗುತ್ತದೆ. ಕಳೆದ ಒಂದೆರಡು ಚುನಾವಣೆಗಳಲ್ಲಿ ಇದೇ ಜನ ಯೋಗ್ಯರಾದವರನ್ನು ಆರಿಸಿಕೊಂಡಿದ್ದರೆ ಈ ಚಳವಳಿಯ ಜರೂರತ್ತೇ ಇರುತ್ತಿರಲಿಲ್ಲ. ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಸಂಸದರು ಮತ್ತು ಶಾಸಕರೇ ಬರೆಯುತ್ತಿದ್ದರು. ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇಂತಹುದೊಂದು ಚಳವಳಿಯಲ್ಲಿ ಮಾತ್ರ ಪಾಲ್ಗೊಳ್ಳಲು ಬರುತ್ತಿರುವವರೇ ಇಲ್ಲಿ ದೋಷಿಗಳು. ಭ್ರಷ್ಟಾಚಾರದ ವಿರುದ್ಧ ಕೂಗುವ ಧಿಕ್ಕಾರ ಇವರ ಭ್ರಷ್ಟಾಚಾರಕ್ಕೂ ಮತ್ತು ಬೇಜವಾಬ್ದಾರಿತನಕ್ಕೂ ಕೂಗುವ ಧಿಕ್ಕಾರವೂ ಹೌದು. ಪಕ್ಷಾತೀತವಾದ ಈ ಹೋರಾಟದ ನಂತರ ಜನ ಮತ್ತೆ ತಮಗಿಷ್ಟವಾದ ಪಕ್ಷವನ್ನು ವಿಮರ್ಶೆಗೊಳಪಡಿಸದೇ ಬೆಂಬಲಿಸಿದರೆ ಅದು ಅವರು ಈ ಚಳವಳಿಯಿಂದ ಏನನ್ನೂ ಕಲಿಯಲಿಲ್ಲ ಎಂದಾಗುತ್ತದೆ. ಜಾತಿವಾದಕ್ಕೆ, ಕೋಮುವಾದಕ್ಕೆ, ಹಣಕ್ಕೆ, ಬಲಕ್ಕೆ, ವಿವಿಧ ಲಾಲಸೆಗಳಿಗೆ ಬಲಿಯಾಗದೆ ಬಹುಸಂಖ್ಯಾತ ಜನ ಪ್ರಾಮಾಣಿಕವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಾಗಲಷ್ಟೇ ನಮ್ಮ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ. ಅದು ನಿಜವಾದ ಬದ್ಧತೆ.

(ಚಿತ್ರಕೃಪೆ: ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ

Sansad_Bhavan

ಸಂಸತ್ತಿನ ಪರಮಾಧಿಕಾರ ಎಂದರೆ ಏನು?

ಅರವಿಂದ ಚೊಕ್ಕಾಡಿ

ಅಣ್ಣಾ ಹಜಾರೆ ಉಪವಾಸ ಮಾಡುವುದು, ಚಿದಂಬರಂ, ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಎಲ್ಲ ಸೇರಿಕೊಂಡು ಸಂಸತ್ತಿನ ಪರಮಾಧಿಕಾರ ಎನ್ನುವುದು ; ಇದೆಲ್ಲ ಒಟ್ಟಾಗಿ ಒಂದು ದಾರಿ ತಪ್ಪಿಸುವ ವ್ಯವಸ್ಥೆ ನಿರ್ಮಾಣ ಆಗಿದೆ.

Sansad_Bhavan

Sansad_Bhavan

ಅಣ್ಣಾ ಹಜಾರೆ ಅವರ ಕಡೆಯಲ್ಲಿ ಒಂದು ಸಮಸ್ಯೆ ಇದೆ. ಇವತ್ತು ಅಣ್ಣಾ ಹಜಾರೆ ಅವರ ಹಿಂದೆ ಇರುವುದು ಭ್ರಷ್ಟಾಚಾರದ ಬಗ್ಗೆ ರೋಸಿ ಹೋಗಿರುವ ಜನರ ಆಕ್ರೋಶದ-ಆವೇಶದ ಬೆಂಬಲ ಹೊರತು ಪ್ರಜ್ಞಾವಂತವಾದ ಭ್ರಷ್ಟಾಚಾರದ ವಿರುದ್ಧದ ಅರಿವಲ್ಲ. ಅಂತಹ ಅರಿವನ್ನು ರಾಷ್ಟ್ರವ್ಯಾಪಿಯಾಗಿ ಉಂಟು ಮಾಡುವ ಪ್ರಯತ್ನವನ್ನು ಅಣ್ಣಾ ಹಜಾರೆಯವರ ತಂಡ ಮಾಡಿಲ್ಲ. ಒಂದು ರೀತಿ ಪೂರ್ವ ಸಿದ್ಧತೆ ಸಾಕಷ್ಟಿಲ್ಲದ ಹೋರಾಟ. ಇದರಿಂದಾಗಿ ಏನಾಗಿದೆಯೆಂದರೆ ಏನು ನಡೆಯುತ್ತಿದೆ, ತಾವು ಪ್ರಜ್ಞಾಪೂರ್ವಕವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುವುದಕ್ಕೂ ಜನರಿಗೆ ಪುರುಸೊತ್ತಿಲ್ಲ. ಯೋಚನೆ ಮಾಡುವುದಕ್ಕೆ ಜನರಿಗೆ ಪುರುಸೊತ್ತು ಕೊಡದೆ ಅಣ್ಣಾ ಅವರ ತಂಡ ತಾನು ಮಾಡುತ್ತಿರುವುದು ಎಲ್ಲವೂ ಸರಿಯಾಗಿಯೇ ಇದೆ; ಜನರು ತಮ್ಮ ನಿಲುವನ್ನು ವಿಮರ್ಶಿಸಬೇಕಾದ ಅಗತ್ಯವೇ ಇಲ್ಲ ಎನ್ನುವ ಧೋರಣೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಹೋರಾಟಗಾರ ತನ್ನ ನಿಲುವಿನ ಬಗ್ಗೆ ಯೋಚನೆ ಮಾಡಲೂ ಜನರಿಗೆ ಪುರುಸೊತ್ತು ಕೊಡದೆ ಜನರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆಂದು ಹೇಳುವುದು ಸರಿಯಲ್ಲ. ನಿಜವಾಗಿ ಅಣ್ಣಾ ಭ್ರಷ್ಟಾಚಾರದ ವಿರುದ್ಧ ವಿದ್ದಾರೆ ಎಂಬುದನ್ನು ಬಿಟ್ಟರೆ ಅವರ ಖಚಿತವಾದ ಬೇಡಿಕೆ ಏನು, ಅವರ ಯಾವ ಬೇಡಿಕೆಯನ್ನು ಸರಕಾರ ಒಪ್ಪುತ್ತಿಲ್ಲ, ಯಾಕೆ ಒಪ್ಪುತ್ತಿಲ್ಲ, ಸರಕಾರ ಜಾರಿಗೊಳಿಸಲು ಹೊರಟಿರುವ ಲೋಕಪಾಲ ಮಸೂದೆಯು ಹೇಗಿದೆ ಎನ್ನುವ ಬಗ್ಗೆಯೆಲ್ಲ ಬಹಳ ಮಂದಿಗೆ ಗೊತ್ತಿಲ್ಲ. ಭ್ರಷ್ಟಾಚಾರ ವಿರುದ್ಧ ವಿದ್ದಾರೆ ಎಂಬ ಕಾರಣಕ್ಕಾಗಿ ಅಣ್ಣಾ ಅವರನ್ನು ಕಣ್ಣು ಮುಚ್ಚಿ ಬೆಂಬಲಿಸುತ್ತಿದ್ದಾರೆ. ಭ್ರಷ್ಟಾಚಾರದ ವ್ಯಾಪ್ತಿ ಎಷ್ಟೇ ಎಷ್ಟೇ ಬಲಿಷ್ಠವಿದ್ದರೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಧಿಕಾರದಲ್ಲಿರುವಾಗ ಲೋಕಪಾಲರಿಂದ ಅವರನ್ನು ಹೊರಗಿಡಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಅಗತ್ಯವಾಗಿದೆ. ಪ್ರಧಾನಮಂತ್ರಿಗಿಂತ ಲೋಕಪಾಲರ ಮೇಲೆ ನಮಗೆ ಜಾಸ್ತಿ ವಿಶ್ವಾಸ ಎಂದಾದರೆ ಅಂತಹ ಲೋಕಪಾಲರನ್ನು ನೇಮಿಸಲು ಸರಕಾರಕ್ಕಾಗಲಿ, ಸಂಸತ್ತಿಗಾಗಲಿ ಅಧಿಕಾರವೂ ಇರಬಾರದಲ್ಲವೆ? ಪ್ರಧಾನಿಯ ಮೇಲೆಯೇ ಕನಿಷ್ಠ ಮಟ್ಟದ ವಿಶ್ವಾಸವೂ ಇಲ್ಲದ ರಾಷ್ಟ್ರವು ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಲಾರದು. ಇದನ್ನು ಅಣ್ಣಾ ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಮೇಲಾಗಿ ಸರಕಾರ ಈಗಾಗಲೇ ಒಂದು ಲೋಕಪಾಲ ಮಸೂದೆಯನ್ನು ತರಲು ಹೊರಟಿರುವಾಗ ಮೊದಲು ಅದನ್ನು ಜಾರಿಗೆ ಬರಲು ಅವಕಾಶವನ್ನು ಕೊಟ್ಟು ನಂತರ ಅಗತ್ಯವಿರುವ ತಿದ್ದುಪಡಿಗಳಿಗಾಗಿ ಒತ್ತಡವನ್ನು ತರಬಹುದಾಗಿತ್ತು. ಆದರೆ ಅಣ್ಣಾ ಅವರ ತಂಡ ಒತ್ತಡಕ್ಕಿಂತ ಹೆಚ್ಚಾಗಿ ಪ್ರತಿಸರ್ಕಾರದ ಸ್ಟೈಲ್‌ನಲ್ಲಿ ವರ್ತಿಸುತ್ತಿರುವುದು ಸರಿಯಾಗಿಲ್ಲ.

Anna_Hazare

Anna_Hazare

ಇಷ್ಟೆಲ್ಲ ಆದರೂ ಅಣ್ಣಾ ಅವರ ತಂಡಕ್ಕೆ ಇರಬೇಕಾದ ಜವಾಬ್ದಾರಿಗಿಂತ ಹೆಚ್ಚಿನ ಜವಾಬ್ದಾರಿ ಭಾರತ ಸರಕಾರಕ್ಕೆ ಇರುತ್ತದೆ. ಜಾಣತಂತ್ರವನ್ನು ಬಳಸಬಹುದು ಎನ್ನುವುದಾದರೆ ಸರಕಾರವು ಅಣ್ಣಾ ಅವರು ಹೇಳಿದ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಹುದಾಗಿತ್ತು. ಆ ಮಸೂದೆ ಲೋಕಸಭೆಯಲ್ಲಾಗಲಿ, ರಾಜ್ಯ ಸಭೆಯಲ್ಲಾಗಲಿ ಸ್ವೀಕೃತವಾಗುತ್ತಲೇ ಇಲ್ಲ. ಆಗ ಕೇಂದ್ರ ಸರಕಾರವು ಸುಲಭವಾಗಿ ತಾನು ಮಾಡುವ ಅಪರಾಧಕ್ಕೆ ಬಿಜೆಪಿಯನ್ನೂ ಎಳೆದುಕೊಂಡೇ ಹೊಂಡಕ್ಕೆ ಬೀಳಬಹುದಾಗಿತ್ತು! ಮಸೂದೆಯನ್ನು ಅನುಮೋದಿಸದಿರುವ ಜವಾಬ್ದಾರಿ ಸಂಸತ್ತಿಗೆ ಬರುತ್ತಿತ್ತು. ಸರಕಾರ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅಥವಾ ಅಣ್ಣಾ ಅವರನ್ನು ಅವರ ಪಾಡಿಗೆ ಸತ್ಯಾಗ್ರಹ ಮಾಡಲು ಬಿಟ್ಟು ತಾನು ತನ್ನ ಪಾಡಿಗೆ ಮಸೂದೆಯನ್ನು ಮಂಡಿಸಿ ತಾನು ಎಷ್ಟನ್ನು ಮಾಡಲು ಸಾಧ್ಯವಾಗುತ್ತಿದೆ ಎನ್ನುವುದನ್ನು ರಾಷ್ಟ್ರಕ್ಕೆ ವಿವರಿಸಬಹುದಾಗಿತ್ತು.

ಆದರೆ ಸರಕಾರವು ತನ್ನ ನಡವಳಿಕೆಯಿಂದ ತಾನು ಭ್ರಷ್ಟಾಚಾರದ ಪರವಾಗಿದ್ದೇನೆ ಎಂಬ ಕೆಟ್ಟ ವರ್ಚಸ್ಸು ತನಗೆ ಬರುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಅಣ್ಣಾ ಅವರ ಮೇಲೆ ಹರಿಹಾಯಲು ಶುರು ಮಾಡಿತು. ಸರಕಾರದ ಕಡೆಯಿಂದ ಮಾತನಾಡಿದವರೆಲ್ಲ ಸಂಸತ್ತಿನ ಪರಮಾಧಿಕಾರ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಮಾತನಾಡಿದರು. ನಿಜವಾಗಿಯೂ ಸಂಸತ್ತಿಗೆ ಆ ರೀತಿಯ ಪರಮಾಧಿಕಾರ ಇರುವುದಾದರೆ ‘ಪ್ರತಿಭಟನೆಯನ್ನು ಮಾಡತಕ್ಕದ್ದಲ್ಲ’ ಎಂದು ಸಂಸತ್ತು ಒಂದು ನಿರ್ಣಯವನ್ನು ಅಂಗೀಕರಿಸಬೇಕಾಗಿತ್ತು. ಕನಿಷ್ಠ ಪಕ್ಷ ಕೇಂದ್ರ ಕ್ಯಾಬಿನೆಟ್ ಈ ರೀತಿಯ ನಿರ್ಣಯವನ್ನು ಮಾಡಬೇಕಾಗಿತ್ತು. ಅಥವಾ ರಾಷ್ಟ್ರಪತಿಯವರು ಸುಗ್ರೀವಾಜ್ಞೆಯನ್ನು ಮಾಡಬೇಕಾಗಿತ್ತು. ಆದರೆ ಆ ಮೂರನ್ನೂ ಮಾಡಲು ಆಗುವುದಿಲ್ಲ. ಯಾಕೆಂದರೆ ಆ ರೀತಿ ನಿರ್ಣಯವನ್ನು ಮಾಡಿದರೆ ಅಂತಹ ನಿರ್ಣಯವು ತಾನೇ ತಾನಾಗಿ ಅಸಾಂವಿಧಾನಿಕವೆಂದು ಪರಿಗಣಿಸಲ್ಪಟ್ಟು ಸಂವಿಧಾನದ ಪರಮೋಚ್ಛ ಆದೇಶಾನುಸಾರ ತಾನೇ ತಾನಗಿ ರದ್ದಾಗುತ್ತದೆ. ಆ ಕಾರಣಕ್ಕಾಗಿಯೇ ಸಂಸತ್ತಿನ ಸರ್ವೋಚ್ಛ ಅಧಿಕಾರ ಎಂದು ಚಿದಂಬರಂ ಹೇಳುತ್ತಾರೆ, ಕಪಿಲ್ ಸಿಬಲ್ ಹೇಳುತ್ತಾರೆ, ಮನಮೋಹನ್ ಸಿಂಗ್ ಹೇಳುತ್ತಾರೆ. ನಮಗೂ ಹೇಳಲು ಅಧಿಕಾರವಿರುವುದರಿಂದ ನಾನು, ನೀವು ಎಲ್ಲರೂ ಹೇಳಬಹುದು. ಆದರದು ಹೇಳಿಕೆಯಾಗಿ ‘ಚರ್ಚೆ’ ಆಗುತ್ತದೆಯೆ ಹೊರತು ನಿರ್ಣಯ ಆಗುವುದಿಲ್ಲ.

ಸಂಸತ್ತಿನ ಸರ್ವೋಚ್ಛ ಅಧಿಕಾರವು ಸಂವಿಧಾನದಿಂದ ನಿಯಂತ್ರಿತವಾಗಿದೆ. ಸಂವಿಧಾನದ ಮೂಲ ತತ್ವಗಳನ್ನು ಸಂಸತ್ತು ಕೂಡ ರದ್ದುಪಡಿಸುವ ಹಾಗಿಲ್ಲ. ಸಂಸತ್ತು ಒಂದು ಒಂದು ನಿರ್ಣಯವನ್ನು ಮಾಡಿ ಭಾರತ ಸಂವಿಧಾನವನ್ನು ರದ್ದುಪಡಿಸಿ ಮಿಲಿಟರಿ ಆಡಳಿತವನ್ನು ಜಾರಿಗೆ ತರಲು ಆಗುವುದಿಲ್ಲ. ಭಾರತದ ಭೂ, ಜಲ, ವಾಯು ವ್ಯಾಪ್ತಿಯಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುವ ಯಾವ ಆದೇಶವನ್ನು ಯಾರೇ ಮಾಡಿದರೂ ಅದು ಸಂವಿಧಾನದ ಪರಮೋಚ್ಛ ಆದೇಶಾನುಸಾರ ರದ್ದಾಗುತ್ತದೆ.

ಇಂಥಲ್ಲಿ ‘ಪ್ರಜಾಪ್ರಭುತ್ವ’ ಎನ್ನುವುದು ಸಂವಿಧಾನದ ಮೂಲ ತತ್ವವಾಗಿದೆ. ‘ಪ್ರಜಾಪ್ರಭುತ್ವ’ ಎಂದ ತಕ್ಷಣ ತಾನೇ ತಾನಾಗಿ ಆಡಳಿತವನ್ನು ಪ್ರತಿಭಟಿಸುವ ಹಕ್ಕು ಜನರಿಗೆ ಪ್ರಾಪ್ತವಾಗುತ್ತದೆ. ಸರ್ವೋಚ್ಛ ಅಧಿಕಾರದ ಬಗ್ಗೆ ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಶಬ್ದ ಪ್ರಾರಂಭವಾಗುವುದೇ ‘We the people of India…’ ಎಂದು. ಸಂವಿಧಾನವು ಆಡಿರುವ ಈ ಶಬ್ದಕ್ಕೆ ಸಂವಿಧಾನದ ಉದ್ದಕ್ಕೂ ವಿವರಣೆಗಳು ಸಿಗುತ್ತವೆ. ಈ ಮಾತಿನ ಮುಖಾಂತರ ಸಂವಿಧಾನವು ರಾಷ್ಟ್ರದ ಸರ್ವೋಚ್ಛ ಅಧಿಕಾರವನ್ನು ರಾಷ್ಟ್ರದ ಜನರದ್ದು ಎಂದು ತಿಳಿಸುತ್ತದೆ. ಜನತಾ ಪರಮಾಧಿಕಾರವನ್ನು ಧಿಕ್ಕರಿಸುವ ಅಧಿಕಾರ ಸಂಸತ್ತಿಗಿಲ್ಲ. ಹಾಗಾದರೆ ಅಣ್ಣಾ ಹಜಾರೆ ರಾಷ್ಟ್ರದ ಜನರ ಸಮಗ್ರ ಪ್ರತಿನಿಧಿಯೇ ಎಂದು ಕೇಳಿದರೆ ‘ಅಲ್ಲ’ ಎನ್ನುವುದೇ ಉತ್ತರವಾಗಿದೆ. ಯಾವ ರಾಷ್ಟ್ರದಲ್ಲಿಯೂ ಒಬ್ಬ ಹೋರಾಟಗಾರ ಎಲ್ಲ ಜನರ ಅಧಿಕೃತ ಪ್ರತಿನಿಧಿಯಾಗಿರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಒಂಟಿಯಾಗಿದ್ದಾಗಲೂ ಕೂಡ ಅವನಿಗಿರುವ ಪರಮಾಧಿಕಾರವನ್ನು ಚಲಾಯಿಸಲು ಹಕ್ಕುಳ್ಳವನೇ ಆಗಿದ್ದಾನೆ. ಅಣ್ಣಾ ಅವರು ಅದನ್ನೇ ಮಾಡುತ್ತಿದ್ದಾರೆ. ಅಣ್ಣಾ ಸಂಸತ್ತಿನ ಅಧಿಕಾರವನ್ನು ನಿರಾಕರಿಸಿಲ್ಲ. ಸಂಸತ್ತು ಇಂಥಾದ್ದನ್ನು ಮಾಡಬೇಕು ಎನ್ನುತ್ತಿದ್ದಾರೆ. ಸಂಸತ್ತನ್ನು ‘ಡಿಕ್ಟೇಟ್’ ಮಾಡುತ್ತಿದ್ದಾರೆ ಎಂದು ಸರಕಾರ ಭಾವಿಸುವುದಾದರೆ ಆ ರೀತಿ ‘ಡಿಕ್ಟೇಟ್’ ಮಾಡುವ ಹಕ್ಕು ಅಣ್ಣಾ ಅವರಿಗೆ ಇದೆ. ಅದನ್ನು ಸ್ವೀಕರಿಸದೆ ಇರುವ ಹಕ್ಕು ಸಂಸತ್ತಿಗೂ ಇದೆ. ಆದರೆ ‘ಡಿಕ್ಟೇಟ್’ ಮಾಡಲು ಅಣ್ಣಾ ಅವರಿಗಿರುವ ಹಕ್ಕನ್ನು ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗೂ ಇಲ್ಲ. ಇವರಿಗೆ ಸಂಸತ್ತು ಕಲಾಪ ನಡೆಯುವಾಗ ಕಲಾಪದಲ್ಲಿ ಭಾಗವಹಿಸಬೇಕೆಂಬ ಅರಿವು ಇಲ್ಲ. ಬಾಂಗ್ಲಾ ದೇಶದವನು ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಂತು ಭಾರತದ ಲೋಕಸಭೆಗೆ ಆರಿಸಿ ಬಂದರೆ ಸಂಸತ್ತಿನ ಪರಮಾಧಿಕಾರದ ಉಲ್ಲಂಘನೆ ಎನಿಸುವುದಿಲ್ಲ. ರಾಷ್ಟ್ರದ ಸಂಪತ್ತಿನ ಮಹಾನ್ ಸಂರಕ್ಷಕನಾಗಿ ಸಂಸತ್ತು ಕಾರ್ಯನಿರ್ವಹಿಸಬೇಕೆಂದು ಸಂವಿಧಾನವು ನೀಡಿದ ಆದೇಶವನ್ನು ಪಾಲಿಸಲು ಆಗುವುದಿಲ್ಲ. ಪ್ರತಿಭಟನೆ ಮಾಡಿದರೆ ಸಂಸತ್ತಿನ ಪರಮಾಧಿಕಾರದ ಪ್ರಶ್ನೆ ಬರುತ್ತದೆ. ಶೇಮ್, ಶೇಮ್.

(ಚಿತ್ರ-ಕೃಪೆ : ವಿಕಿಪೀಡಿಯ)

ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ?

ಅಣ್ಣಾ ಹಜಾರೆಯವರ ಮತ್ತವರ ಹೋರಾಟದ ಬಗ್ಗೆ ಹಲವರಿಗೆ ಹಲವು ಸಂದೇಹ ಮತ್ತು ಸಂಶಯಗಳಿರುವುದು ಸಹಜ. ಅದರಲ್ಲೂ ನಗರಕೇಂದ್ರಿತ ಮತ್ತು ಮಧ್ಯಮವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಈ ಹೋರಾಟ ನೈಜವಾದದ್ದಲ್ಲ, ಮಾಧ್ಯಮ ಸೃಷ್ಟಿ, ಎಂಬ ಗಂಭೀರ ಆರೋಪಗಳಿವೆ.

ನೆನ್ನೆ (17/8/11) NDTV ಯಲ್ಲಿ ಒಂದು ಜನಮತ ನಡೆಸಿದರು. ಈ ಚಳವಳಿ ಕೇವಲ ನಗರ-ಮಧ್ಯಮವರ್ಗ ಕೇಂದ್ರಿತ ಮಾತ್ರವೇ? ಎಂಬುದಾಗಿ. ಮೊಬೈಲ್‌ ಎಸ್‍ಎಂ‍ಎಸ್ ಮೂಲಕ ನಡೆದ ಜನಾಭಿಪ್ರಾಯ ಅದು. ಶೇ.55 ಜನ ಹೌದು ಎಂದರೆ, ಅಲ್ಲ ಎಂದವರು ಶೇ.45.

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೆ, ಯಾವುದೇ ಒಂದು ಜನಪರ ವಿಚಾರದ ಕುರಿತು ಗಂಭೀರ ಹೋರಾಟವನ್ನೇ ತಮ್ಮ ಬದುಕಾಗಿಸಿಕೊಂಡಿರುವ ಹಲವಾರು ಜನ ಮತ್ತು ಸಂಘಟನೆಗಳು ಈ ಹೋರಾಟದಿಂದ ದೂರವೇ ಉಳಿದಿವೆ. ಇದು ಕೇವಲ ಕರ್ನಾಟಕದ ಉದಾಹರಣೆ ಮಾತ್ರವಲ್ಲ ಎಂದು ನಾವು ಕೆಲವು ಇಂಗ್ಲಿಷ್ ಚಾನಲ್‌ಗಳನ್ನು ಗಮನಿಸಿದಾಗ ಗೊತ್ತಾಗುತ್ತದೆ. ಯಾಕೆ ಹೀಗೆ? ಒಂದು ರೀತಿಯಲ್ಲಿ ನೈಜ ಹೋರಾಟಗಾರರು ಎನಿಸಿಕೊಂಡಿರುವವರೆಲ್ಲ ಈ ಹೋರಾಟದಿಂದ ವಿಮುಖರಾಗಿಯೇ ಉಳಿದಿದ್ದಾರೆ. ಕೊನೆಗೆ ವೃತ್ತಿಪರ ಹೋರಾಟಗಾರರೂ ಸಹ!

ಈ ಜನ ಹಗಲುರಾತ್ರಿ ಬೆವರು ಸುರಿಸಿ ಓಡಾಡುವವರು; ಸಂಘಟನೆ ಕಟ್ಟುವವರು; ಅವಕಾಶ ಸಿಕ್ಕ ಎಲ್ಲಾ ವೇದಿಕೆಗಳಲ್ಲಿ ಭ್ರಷ್ಟಾಚಾರದ ವಿರುದ್ಧ, ಅಸಮಾನತೆಯ ವಿರುದ್ಧ ಮಾತನಾಡುವವರು. ರಾಜಕೀಯವಾಗಿ, ಸಾಮಾಜಿಕವಾಗಿ ತಮ್ಮದೇ ಆದ ಗಂಭೀರ ನಿಲುವುಗಳನ್ನಿಟ್ಟುಕೊಂಡಿರುವವರು. ಸಾಕಷ್ಟು ಬದ್ಧತೆ ಉಳಿಸಿಕೊಂಡವರು. ಕೇವಲ ಬಾಯಿಮಾತಿನ ಆಡಂಬರ ಅಲ್ಲದೆ ಚುನಾವಣೆಯಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು. ಕಡ್ಡಾಯವಾಗಿ ಮತ ಹಾಕುವವರು. ಹಾಗಿದ್ದಲ್ಲಿ ಇವರೇಕೆ ಈ “ಭ್ರಷ್ಟಾಚಾರದ ವಿರುದ್ಧ ಭಾರತ”ದ ಹೋರಾಟದಲ್ಲಿ ತೊಡಗಿಸಿಕೊಂಡಿಲ್ಲ?

ಇದು, ಈಗಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಹಿಪಾಕ್ರಸಿಯನ್ನು ಮತ್ತು ಅವರ ಇಲ್ಲಿಯವರೆಗಿನ ಬೇಜವಾಬ್ದಾರಿಯನ್ನು ನೋಡಿ ಅವರಲ್ಲಿ ನಂಬಿಕೆ ಇಲ್ಲದೆ ಆಗಿರುವ ಸಿನಿಕತೆಯೆ? ಅಥವ ಇಲ್ಲಿ ಅದಕ್ಕಿಂತ ಗಂಭೀರವಾದ ನಗರ-ಗ್ರಾಮೀಣ, ಮೇಲ್ವರ್ಗ-ಕೆಳವರ್ಗ, ಮೇಲ್ಜಾತಿ-ಕೆಳಜಾತಿ, ಇಂತಹುವುಗಳ ಹಿನ್ನೆಲೆಯಲ್ಲಿ ಹುಟ್ಟಿರುವ ಅಪನಂಬಿಕೆಯೆ?

ಈಗ ಒಂದಷ್ಟು ಜನ ಸ್ವಯಂ‍ಪ್ರೇರಿತರಾಗಿ ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಜನ, ವಿಶೇಷವಾಗಿ ಕಾಲೇಜು ಹುಡುಗರು, ಕೆಲವು ವಿದ್ಯಾರ್ಥಿ ಸಂಘಟನೆಗಳ ಒತ್ತಾಯದಿಂದ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಕೆಲವು ಲೆಟರ್-ಹೆಡ್ ಸಂಘಗಳ ಪದಾಧಿಕಾರಿಗಳು ಚಲಾವಣೆಯಲ್ಲಿ ಉಳಿಯುವ ಕಾರಣಕ್ಕಾಗಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಇವರೆಲ್ಲರ ಬದ್ಧತೆ ಎಷ್ಟು ದಿನ? ಯಾವ ರೀತಿ?

ನನ್ನ ಪ್ರಕಾರ ಈಗಿನ ಚಳವಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅದೂ ನಗರಗಳಲ್ಲಿ ಬೆಂಬಲ ವ್ಯಕ್ತವಾಗಬೇಕಿತ್ತು. ಎಲ್ಲಾ ವಯೋಮಾನದ ಜನ ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಇದರಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಹಾಗೆ ಮಾಡುತ್ತಿರುವವರು ಸಾವಿರಕ್ಕೆ ಒಬ್ಬರಿದ್ದಂತಿಲ್ಲ. ತ್ಯಾಗಕ್ಕೆ ಸಿದ್ದರಿಲ್ಲದ ಜನ ಬಾಯಿಮಾತಿನ ಬೆಂಬಲ ನೀಡುತ್ತಿದ್ದಾರೆ. ಯಾಕೆ?

ಜೊತೆಗೆ, ಈಗ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವ ಜನರ ಚಿತ್ತಶುದ್ಧಿ ಎಷ್ಟರ ಮಟ್ಟಿಗೆ ಇದೆ? ಇದು ಅಣ್ಣಾ ಹಜಾರೆ ಎಂಬ ವ್ಯಕ್ತಿಯ ಪರವಾಗಿ ಮಾತ್ರವೇ? ಅಥವ ಕೇವಲ ರಾಜಕಾರಣಿ-ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಮಾತ್ರವೇ? ಅಥವ ಜನಲೋಕ್‌ಪಾಲ್ ಮಸೂದೆಯ ಜಾರಿಗಾಗಿ ಮಾತ್ರವೇ? ಅಥವ, ಅದಕ್ಕೂ ಮಿಗಿಲಾಗಿ, ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಾವೂ ಜವಾಬ್ದಾರಿತನದಿಂದ ಪಾಲ್ಗೊಳ್ಳುವ ನಿಟ್ಟಿನಲ್ಲಿ ತಮಗೆ ತಾವೇ ನೀಡಿಕೊಳ್ಳುತ್ತಿರುವ ವಚನವೆ?

ಹಾಗೆಯೇ, ಯಾಕಾಗಿ ಗ್ರಾಮೀಣ ಜನತೆ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕಾಣಿಸುತ್ತಿಲ್ಲ? ಅವರು ಭ್ರಷ್ಟಾಚಾರದ ಮೌನ-ಪೋಷಕರೆ, ಅಥವ ಈ ಚಳವಳಿಯನ್ನು ರೂಪಿಸಿರುವ ರೀತಿಯಲ್ಲಿಯೇ ದೋಷಗಳಿವೆಯೆ? ಮೇಣದ ಬತ್ತಿ ಹತ್ತಿಸುವುದು ಮತ್ತು ಪೆಂಡಾಲ್ ಕೆಳಗೆ ಕೂತು ಘೋಷಣೆ ಕೂಗಿ ಮಾತು ಕೇಳಿಸಿಕೊಂಡು ಎದ್ದು ಹೋಗುವುದು, ಗ್ರಾಮೀಣರಿಗೆ ಪರಕೀಯವಾಗಿ ಕಾಣಿಸುತ್ತಿದೆಯೆ?

ಗಾಂಧಿಜಿಯವರ ಹೋರಾಟದಲ್ಲಿ ಪಾಲ್ಗೊಂಡ ಜನ ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲೂ ತೊಡಗಿಸಿಕೊಂಡರು. ಅನೇಕ ಜನ ತಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಂಡು ಹೊಸ ಆದರ್ಶಗಳನ್ನು ಮೈದುಂಬಿಸಿಕೊಂಡರು. ಈಗಿನ ಚಳವಳಿಯಿಂದ ಅದು ಸಾಧ್ಯವಿದೆಯೆ? ಈಗ ಬೀದಿಗೆ ಇಳಿದಿರುವವರು ಮುಂದಿನ ಚುನಾವಣೆಗಳಲ್ಲಿ ಕನಿಷ್ಠ ಪಕ್ಷ ಜಾತಿ-ಹಣ-ತೋಳ್ಬಲಗಳನ್ನು ಮೀರಿ ಮತ ಚಲಾಯಿಸಲಿದ್ದಾರೆಯೆ? ಕೊನೆಗೆ ಮತಗಟ್ಟೆಗಾದರೂ ಹೋಗಲಿದ್ದಾರೆಯೆ?

ಈಗಿನ ಚಳವಳಿಯನ್ನು ರೂಪಿಸುತ್ತಿರುವವರು ಈ ಮಾತುಗಳನ್ನು ಆಡದೇ ಇದ್ದಲ್ಲಿ ಮತ್ತು ಆ ನಿಟ್ಟಿನಲ್ಲೂ ಜನ ಜಾಗೃತಿ ಮೂಡಿಸದಿದ್ದಲ್ಲಿ ಇದೊಂದು ಕ್ಷಣಿಕ ಭಾವಾವೇಶದ ಪ್ರತಿಭಟನೆ. ಈ ತಲೆಮಾರಿನ defining-moment ಇನ್ನೂ ಬಂದಿಲ್ಲ ಎಂದೇ ಭಾವಿಸಬೇಕಾಗುತ್ತದೆ. ಹಾಗಾದಲ್ಲಿ ಅದೊಂದು ದುರಂತಗಳ ನಾಳೆಯಾಗುತ್ತದೆ.

(ಚಿತ್ರ-ಕೃಪೆ : ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ.