Tag Archives: ನಕ್ಸಲ್ ಕಥನ

ಪ್ರಜಾ ಸಮರ-4 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಇಪ್ಪತ್ತೊಂದನೇ ಶತಮಾನದ ಆಧುನಿಕ ತಂತ್ರಜ್ಞಾನದ ಮುಂಚೂಣಿಯಲ್ಲಿರುವ ಭಾರತದಲ್ಲಿ ಇರಬಹುದಾದ ಗಿರಿಜನ ಅಥವಾ ಬುಡಕಟ್ಟು ಜನಾಂಗದ ಸಂಖ್ಯೆ ಬಗ್ಗೆ ಇವತ್ತಿಗೂ ನಿಖರವಾದ ಮಾಹಿತಿ ಇಲ್ಲ. ದುರ್ಗಮ ಅರಣ್ಯದ ಒಳಗೆ ವಾಸಿಸುತ್ತಿರುವ ಕೆಲವು ಆದಿವಾಸಿಗಳನ್ನೂ ಸಮೀಕ್ಷೆಯಿಂದ ಗುರುತಿಸಲು ಸಾಧ್ಯವಾಗಿಲ್ಲ. ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹುಟ್ಟು ಹಾಕಿರುವ ಅನೇಕ ನಿಗಮ  ಮತ್ತು ಮಂಡಳಿಗಳು ಕೂಡ ಅಂದಾಜಿನ ಮೇಲೆ ಆದಿವಾಸಿಗಳ ಸಂಖ್ಯೆಯನ್ನು ಆಯಾ ರಾಜ್ಯದ ಜನಸಂಖ್ಯೆಯ ಶೇಕಡವಾರು ಇಷ್ಟಿದೆ ಎಂದು ತಿಳಿಸಿ ಕೈ ತೊಳೆದುಕೊಂಡಿವೆ. ಉದಾಹರಣೆಗೆ ನಾವು ಕರ್ನಾಟಕದಲ್ಲಿ ಇರುವ ಬುಡಕಟ್ಟು ಜನಾಂಗದ ಜನಸಂಖ್ಯೆ ಒಟ್ಟು ರಾಜ್ಯದ ಜನಸಂಖ್ಯೆಯಾದ 6 ಕೋಟಿ 11 ಲಕ್ಷ ಜನರಲ್ಲಿ ಶೇ 6.5 ಎಂದು ಹೇಳಲಾಗಿದೆ. ಇದನ್ನು ನಾವು ಅಂದಾಜು 39 ಲಕ್ಷ ಎಂದು ಭಾವಿಸಿಕೊಳ್ಳಬೇಕು. ಇದೇ ಆಧಾರದಲ್ಲಿ ಭಾರತದ ಬುಡಕಟ್ಟು ಅಥವಾ ಅರಣ್ಯವಾಸಿಗಳ ಜನಸಂಖ್ಯೆ ಸುಮಾರು ಹತ್ತರಿಂದ ಹನ್ನೊಂದು ಕೋಟಿ ಜನ ಎಂದು ಅಂದಾಜಿಸಬಹುದು. (ಭಾರತದ ಒಟ್ಟು ಜನಸಂಖ್ಯೆ 118 ಕೋಟಿ) ಇವರಲ್ಲಿ ಸುಮಾರು ಒಂದೂವರೆ ಕೋಟಿ ಅಲೆಮಾರಿ ಬುಡಕಟ್ಟು ಜನಾಂಗಳಿವೆ. ಈ ಅಲೆಮಾರಿ ಜನಾಂಗಗಳಲ್ಲಿ ಹಾವು, ಮಂಗ, ಮತ್ತು ಕರಡಿ ಆಟ ಆಡಿಸುವ, ದೊಂಬರಾಟದ ವೃತ್ತಿಯಲ್ಲಿರುವ, ಇಲ್ಲವೇ ರಸ್ತೆ ಬದಿಯಲ್ಲಿ ಗಿಡಮೂಲಿಕೆ ಮಾರುವ, ಅಥವಾ ಜಾನುವಾರು, ಅಥವಾ ಕುರಿಗಳನ್ನು ಮೇಯಿಸುತ್ತಾ ಊರಿಂದ ಊರಿಗೆ ಅಲೆಯುವ ಹೀಗೆ ಅನೇಕ ತರಾವರಿ ವೃತ್ತಿಯಲ್ಲಿ ತೊಡಗಿಕೊಂಡು ಯಾವುದೇ ಸಮೀಕ್ಷೆಗೆ ನಿಲುಕದವರಾಗಿದ್ದಾರೆ. ಇವರಲ್ಲಿ ಹಲವು ಜನಾಂಗಗಳಿಗೆ ಬ್ರಿಟಿಷರು ಕಳ್ಳರು, ದರೋಡೆಕೋರರು ಎಂದು ನಾಮಕರಣ ಮಾಡಿದ್ದಾರೆ. ಉದಾಹರಣೆಗೆ ಕೊರಚ, ಕೊರ್ಮ, ಇತ್ಯಾದಿ. ಇಂತಹ ಅಯೋಮಯ ಸ್ಥಿತಿಯಲ್ಲಿ ಅರಣ್ಯದ ನಡುವಿನ ಬುಡಕಟ್ಟು ಜನಾಂಗದ ಅಭಿವೃದ್ಧಿಯ ಯೋಜನೆಗಳು ಸರ್ಕಾರದ ಹಾಳೆಗಳ ಮೇಲೆ ಸೃಷ್ಟಿಯಾಗುವ ಯೋಜನೆಗಳಾಗಿವೆ ಹೊರತು, ಅಭಿವೃದ್ಧಿಯ ಫಲ ಅಮಾಯಕರಿಗೆ ತಲುಪಿಲ್ಲ.

ಈ ದೇಶದ ನಿಜವಾದ ಮೂಲನಿವಾಸಿಗಳು ಎಂದು ಗುರುತಿಸಲಾದ, ಸುಮಾರು ಆರು ಸಾವಿರ ವರ್ಷಗಳ ಇತಿಹಾಸವಿರುವ ಭಾರತದ ಆದಿವಾಸಿಗಳ ಬದುಕು ಚಲನಶೀಲ ಗುಣವನ್ನು ಕಳೆದುಕೊಂಡು ನಿಂತ ನೀರಾಗಿದೆ. ಕೆಲವು ಇತಿಹಾಸಕಾರರು ಇವರನ್ನು ಆರ್ಯ ಮತ್ತು ದ್ರಾವಿಡ ಜನಾಂಗಗಳಿಗಿಂತ ಮೊದಲು ಭಾರತದಲ್ಲಿದ್ದ ಪೂರ್ವಿಕರು ಎಂದು ಗುರುತಿಸಿದ್ದಾರೆ. ಜೊತೆಗೆ ಪೂರ್ವದ ಏಷ್ಯಾಖಂಡವನ್ನು ಗೊಂಡಾಲ್ಯಾಂಡ್ ಎಂದು ಕರೆಯಲಾಗುತ್ತಿತ್ತು ಎಂದು ವಾದಿಸಿದ್ದಾರೆ. ಇವರುಗಳು ಇಪ್ಪತ್ತು ಮತ್ತು ಇಪ್ಪತ್ತೊಂದನೇ ಶತಮಾನದಲ್ಲೂ ಶಿಕ್ಷಣ ಮತ್ತು ಆರೋಗ್ಯದಿಂದ ವಂಚಿತರಾಗಲು ಬುಡಕಟ್ಟು ಜನಾಂಗದ ನೆಲದ ಸಂಸ್ಕೃತಿ ಕೂಡ ಪರೋಕ್ಷವಾಗಿ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಇವರಿಗೆ 18 ನೇ ಶತಮಾನದಿಂದ ಬ್ರಿಟಿಷರು, ಮರಾಠರು, ಸ್ಥಳೀಯ ಸಾಮಂತರು ಮತ್ತು ರಾಜರುಗಳ ವಿರುದ್ದ ತಮ್ಮ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡಿದ ಸುಧೀರ್ಘ ಇತಿಹಾಸವಿದೆ.

ಈಶಾನ್ಯ ಭಾರತದ ರಾಜ್ಯಗಳ ಬುಡಕಟ್ಟು ಜನರಲ್ಲಿ ಹಲವು ಜನಾಂಗಗಳು ಕ್ರೈಸ್ತ ಮಿಷನರಿಗಳಿಂದ ಪ್ರೇರಿತರಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ. ಮತ್ತೇ ಕೆಲವು ಬುಡಕಟ್ಟು ಜನಾಂಗ ತಮ್ಮ ಸಂಸ್ಕೃತಿಯನ್ನು ತೊರೆಯದೇ ಹಾಗೇಯೇ ಉಳಿಸಿಕೊಂಡು ಮಿಷನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಪಡೆದು ಎಲ್ಲಾ ಸವಲತ್ತುಗಳನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಕಾರಣಕ್ಕಾಗಿ ಆಧುನಿಕ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಮೀಸಲಾದ ಆರ್ಥಿಕ ಸೌಲಭ್ಯದಿಂದ ಹಿಡಿದು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಮೀಸಲಾದ ಸೀಟುಗಳು ಈಶಾನ್ಯ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗದ ಪಾಲಾಗುತ್ತಿವೆ. ಆದರೆ, ತಮ್ಮ ಮೂಲ ಸಂಸ್ಕೃತಿಯನ್ನು ಬಿಡಲಾಗದ, ಮಧ್ಯ ಭಾರತದ ಮತ್ತು ಪೂರ್ವ ಭಾರತದ ರಾಜ್ಯಗಳ ಆದಿವಾಸಿಗಳಲ್ಲಿ ಪ್ರತಿ ಸಾವಿರಕ್ಕೆ ಒಬ್ಬ ಪದವೀಧರನನ್ನು ಹುಡುಕುವುದು ಕಷ್ಟವಾಗಿದೆ. ಇವರ ಸ್ಥಿತಿ ಗತಿ ಈ ದೇಶದ ದಲಿತರ ಬದುಕಿಗಿಂತ ಶೋಚನೀಯವಾಗಿದೆ.  ಉನ್ನತ ಶಿಕ್ಷಣದಿಂದ ವಂಚಿತರಾದವರ ಪೈಕಿ ದಲಿತರು ಶೇ.23.8 ರಷ್ಟು ಇದ್ದರೆ, ಆದಿವಾಸಿಗಳದು ಶೇ.30.1ರಷ್ಟು ಇದೆ. ಶಾಲೆ ಬಿಟ್ಟವರಲ್ಲಿ ದಲಿತರದು ಶೇ 15ರಷ್ಟು ಇದ್ದರೆ, ಆದಿವಾಸಿಗಳ ಪಾಲು ಶೇಕಡಾ 62.5ರಷ್ಟಿದೆ. ಬಡತನದ ರೇಖೆಯ ಕೆಳಗೆ ಶೇ. 41.5ರಷ್ಟು ದಲಿತರಿದ್ದರೆ, ಶೇ.49.5ರಷ್ಟು ಆದಿವಾಸಿಗಳಿದ್ದಾರೆ.

1894 ರಲ್ಲಿ ಭಾರತದ ಆದಿವಾಸಿಗಳ ಕುರಿತಂತೆ ಬ್ರಿಟಿಷರು ರೂಪಿಸಿದ ಕಾನೂನುಗಳು ಅಲ್ಪ ಸ್ವಲ್ಪ ಬದಲಾವಣೆಗಳ ಜೊತೆ ಇಂದಿಗೂ ಅಸ್ತಿತ್ವದಲ್ಲಿವೆ. 1950ರಲ್ಲಿ ಸಂಸತ್ತು ಅಂಗೀಕರಿಸಿದ ಶಾಸನದ ಪ್ರಕಾರ ಆರಣ್ಯದಲ್ಲಿ ಆದಿವಾಸಿಗಳು ವಾಸಿಸಬಹುದು, ಆದರೆ ಭೂಮಿ ಮತ್ತು ಅರಣ್ಯ ಸಂಪತ್ತಿನ ಒಡೆತನ ಮಾತ್ರ ಸರ್ಕಾರಕ್ಕೆ ಒಳಪಟ್ಟಿರುತ್ತದೆ. (ಇತ್ತೀಚೆಗೆ ಅರಣ್ಯದ ಕಿರು ಉತ್ಪನ್ನಗಳ ಪಾಲನ್ನು ಆದಿವಾಸಿಗಳಿಗೆ ಕೇಂದ್ರ ಸರ್ಕಾರ ದಯಪಾಲಿಸಿದೆ.) ಭಾರತದಲ್ಲಿ ರೈಲು ಮಾರ್ಗ ವಿಸ್ತರಿಸುವ ಸಂದರ್ಭದಲ್ಲಿ ರೈಲ್ವೆ ಹಳಿಯ ಕೆಳಗೆ ಹಾಸುವ ಮರದ ದಿಮ್ಮಿಗಳಿಗಾಗಿ ಅಪಾರ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಯಿತು. ಇದರ ಸಲುವಾಗಿಯೇ ಬ್ರಿಟಿಷರು ಇಂತಹ ಕಾನೂನು ಜಾರಿಗೆ ತಂದಿದ್ದರು. ಆಧುನಿಕ ಭಾರತದ ಬ್ರಿಟಿಷರ ವಂಶಪರಂಪರೆಯ ಕುಡಿಗಳಂತಿರುವ ನಮ್ಮ ಜನಪ್ರತಿನಿಧಿಗಳು, ಬುಡಕಟ್ಟು ಜನಾಂಗ ವಾಸಿಸುತ್ತಿರುವ ಅರಣ್ಯ ಭೂಮಿಯಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತನ್ನು ಲೂಟಿ ಮಾಡಲು ಇದೇ ಕಾನೂನನ್ನು ಅಸ್ತ್ರವಾಗಿ ಬಳಸಿಕೊಂಡು ಅರಣ್ಯ ನಾಶದಲ್ಲಿ ತೊಡಗಿದ್ದಾರೆ.

ಒರಿಸ್ಸಾ, ಛತ್ತೀಸ್‌ಘಡ, ಮಧ್ಯಪ್ರದೇಶ, ಜಾರ್ಖಂಡ್. ಪಶ್ಚಿಮ ಬಂಗಾಳ ಮತ್ತು ಆಂಧ್ರ ರಾಜ್ಯಗಳು ಕಳೆದ ಒಂದು ದಶಕದಲ್ಲಿ ಕಲ್ಲಿದ್ದಲು, ಬಾಕ್ಸೈಟ್, ತಾಮ್ರ, ಕಬ್ಬಿಣದ ಅದಿರು ಮತ್ತು ಪಿಂಗಾಣಿ ವಸ್ತುಗಳ ತಯಾರಿಕೆಗೆ ಬಳಸಲಾಗುವ ಮಣ್ಣು ಇವುಗಳ ಗಣಿಗಾರಿಕೆಗಾಗಿ ಅಂತರಾಷ್ಟ್ರೀಯ ಮತ್ತು ಭಾರತದ ಖಾಸಗಿ ಕಂಪನಿಗಳ ಜೊತೆ ಒಟ್ಟು 389 ಪರಸ್ಪರ ಒಪ್ಪಂದಗಳಿಗೆ ಸಹಿ ಹಾಕಿವೆ. ಇವುಗಳಲ್ಲಿ ಒರಿಸ್ಸಾ ಸರ್ಕಾರವೊಂದೇ 104 ಒಪ್ಪಂದಗಳಿಗೆ ಸಹಿ ಹಾಕಿದೆ. ಅಲ್ಲಿನ ಅರಣ್ಯ ಪ್ರದೇಶದಲ್ಲಿ ಅಲ್ಯೂಮಿನಿಯಂ ತಯಾರಿಕೆ ಸಿಗುವ ಬಾಕ್ಷೈಟ್ ಅದಿರಿಗೆ ವೇದಾಂತ ಕಂಪನಿ ತಳ ಊರಿದ್ದರೆ, ಮಧ್ಯಪ್ರದೇಶ, ಛತ್ತೀಸ್‌ಘಡ ಮತ್ತು ಪ.ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಟಾಟಾ, ಪೋಸ್ಕೋ, ಮತ್ತು ಎಸ್ಸಾರ್ ಸ್ಟೀಲ್ ಕಂಪನಿಗಳು ತಳ ಊರಿವೆ. ಕಲ್ಲಿದ್ದಲು ಗಣಿಕಾರಿಕೆ ಮಹಾರಾಷ್ಟ್ರದ ನಾಗಪುರ ಮೂಲದ 24 ಬೇನಾಮಿ ಕಂಪನಿಗಳ ಪಾಲಾಗಿದ್ದರೆ, (ಈ ಕಂಪನಿಗಳು ಬಹುತೇಕ ನಮ್ಮ ಸಂಸದರು ಮತ್ತು ಸಚಿವರಿಗೆ ಸೇರಿದವು) ಆಂಧ್ರದ ವಿಶಾಖಪಟ್ಟಣದ ಅರಕು ಕಣಿವೆ ಎಂಬ ಗಿರಿಧಾಮದ ಬಳಿ 14 ಬುಡಕಟ್ಟು ಜನಾಂಗ ವಾಸಿಸುವ ಅರಣ್ಯ ಪ್ರದೇಶ ಪಿಂಗಾಣಿ ವಸ್ತುಗಳ ಉತ್ಪಾದನೆಗಾಗಿ ವಿದೇಶಿ ಕಂಪನಿಯ ಪಾಲಾಗಿದೆ.

ಭಾರತದಲ್ಲಿ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಅರಣ್ಯದಲ್ಲಿ ವಾಸಿಸುತ್ತಿದ್ದ ಸುಮಾರು 90 ಲಕ್ಷ ಆದಿವಾಸಿಗಳು ನೆಲೆ ಕಳೆದುಕೊಂಡಿದ್ದರೆ, ಸಧ್ಯದ ಗಣಿಗಾರಿಕೆಯಿಂದ 40 ಲಕ್ಷ ಆದಿವಾಸಿಗಳು ಅತಂತ್ರರಾಗಿದ್ದಾರೆ, ಕಾನೂನಿನ ತಿಳುವಳಿಕೆ ಅಥವಾ ಅಕ್ಷರಜ್ಞಾನವಾಗಲಿ, ಇಲ್ಲವೇ ಹೋರಾಟದ ಗಂಧವಾಗಲಿ ಏನೂ ಅರಿಯದ ಈ ಮುಗ್ಧ ಜನರನ್ನು ಒಕ್ಕಲೆಬ್ಬಿಸುವುದು ಸರ್ಕಾರಗಳಿಗೆ ಮತ್ತು ಕಂಪನಿಗಳಿಗೆ ತ್ರಾಸದಾಯಕವಲ್ಲ. ಜೊತೆಗೆ ಈ ಮುಗ್ಧ ಜನರ ಬೆಂಬಲಕ್ಕೆ ನಿಲ್ಲುವ ಸ್ವಯಂ ಸೇವಾ ಸಂಘಟನೆಯ ಕಾರ್ಯಕರ್ತರಿಗೆ ಸರ್ಕಾರಗಳಿಂದ ನಕ್ಸಲರು ಅಥವಾ ನಕ್ಸಲಿಯರ ಬೆಂಬಲಿಗರು ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ.

ಈ ಅರಣ್ಯಪ್ರದೇಶಗಳಿಗೆ ಲಗ್ಗೆ ಇಟ್ಟಿರುವ ಭಾರತದ ಕಂಪನಿಗಳು ಸೇರಿದಂತೆ, ಬಹುರಾಷ್ಟ್ರೀಯ ಕಂಪನಿಗಳ ಬಣ್ಣದ ಜಾಹಿರಾತು ಈ ಮೇಲಿನ ಎಲ್ಲಾ ರಾಜ್ಯಗಳ ಪ್ರಮುಖ ನಗರದ ರಸ್ತೆಗಳಲ್ಲಿ ರಾರಾಜಿಸುತ್ತಿವೆ. ಆದಿವಾಸಿಗಳ, ಶಿಕ್ಷಣ ಮತ್ತು ಆರೋಗ್ಯಕ್ಕೆ ಮತ್ತು ಅವರ ಮೂಲಭೂತ ಸೌಕರ್ಯಗಳಿಗೆ ಮತ್ತು ಪರಿಸರ ರಕ್ಷಣೆಗೆ ಹಮ್ಮಿಕೊಂಡಿರುವ ಯೋಜನೆಗಳನ್ನು ಜಾಹಿರಾತು ಮೂಲಕ ಪ್ರಚುರಪಡಿಸುತ್ತಿವೆ. ಈ ಕಂಪನಿಗಳ ಕಾರ್ಯತಂತ್ರವನ್ನು ಲೇಖಕಿ ಅರುಂಧತಿರಾಯ್ ತಮ್ಮ ಪೀಪಲ್ಸ್ ಮಾರ್ಚ್ ಪ್ರಬಂಧದಲ್ಲಿ ಅರ್ಥಪೂರ್ಣವಾಗಿ ಬಣ್ಣಿಸಿದ್ದಾರೆ. ನಮ್ಮ ಚಲನ ಚಿತ್ರಗಳಲ್ಲಿ ಪ್ರಖ್ಯಾತ ನಟನೊಬ್ಬ ಏಕಕಾಲಕ್ಕೆ ನಾಯಕ ಮತ್ತು ಖಳನಾಯಕನ ದ್ವಿಪಾತ್ರ ಅಭಿನಯಿಸಿದಂತಿದೆ ಎಂದಿದ್ದಾರೆ. ಒಂದೆಡೆ ನೆಲದ ಅಮೂಲ್ಯ ಸಂಪತ್ತನ್ನೂ ಲೂಟಿ ಹೊಡೆಯುತ್ತಾ, ಇನ್ನೊಂದೆಡೆ ಭ್ರಷ್ಟ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳನ್ನು ಲಂಚದ ಮೂಲಕ ಪೋಷಣೆ ಮಾಡುತ್ತಾ, ಜನಸಾಮಾನ್ಯರು ಸೇರಿದಂತೆ ಮುಗ್ಧ ಬುಡಕಟ್ಟು ಜನಾಂಗವನ್ನು ಕತ್ತಲೆಯ ಕೂಪಕ್ಕೆ ತಳ್ಳುವ ವ್ಯವಸ್ಥೆಯ ಈ ಅಮಾನುಷ ಕ್ರಿಯೆಗೆ ನಮ್ಮ ಮಾಧ್ಯಮಗಳು ಕೂಡ ಪರೋಕ್ಷವಾಗಿ ಕೈಜೋಡಿಸಿವೆ. ಈ ಅನೈತಿಕ ಒಪ್ಪಂದದಲ್ಲಿ ಕಂಪನಿಗಳು ನೀಡುವ ಕೋಟ್ಯಾಂತರ ರೂಪಾಯಿಯ ಜಾಹಿರಾತಿಗೆ ವಾಸ್ತವವನ್ನು ಮರೆ ಮಾಚುವ ಕ್ರಿಯೆ ಸದ್ದಿಲ್ಲದೆ ಜರುಗುತ್ತಿದೆ.

ಇಂತಹ ಅನ್ಯಾಯಗಳ ವಿರುದ್ಧ ಸಿಡಿದೆದ್ದ ಆದಿವಾಸಿಗಳನ್ನು ನಮ್ಮ ಸರ್ಕಾರಗಳು ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಹೊಸಕಿ ಹಾಕುವ ಕಲೆಯನ್ನು ಸಹ ಕರಗತ ಮಾಡಿಕೊಂಡಿವೆ. ಇದಕ್ಕೆ ಆಂಧ್ರದಲ್ಲಿ ನಡೆದ ಘಟನೆ ನಮ್ಮೆದೆರು ಸಾಕ್ಷಿಯಾಗಿದೆ.

1981 ರ ಏಪ್ರಿಲ್ ತಿಂಗಳ 20 ರಂದು ಆಂಧ್ರ ಪ್ರದೇಶದ ಅದಿಲಾಬಾದ್ ಜಿಲ್ಲೆಯ ಇಂದ್ರಾವಳಿ ಎಂಬ ಪಟ್ಟಣದಲ್ಲಿ ಜರುಗಿದ ಗೊಂಡ ಜನಾಂಗದ ನರಮೇಧ ಆದಿವಾಸಿಗಳ ಇತಿಹಾಸದಲ್ಲಿ ಒಂದು ನೋವಿನ ಅಧ್ಯಾಯ. ಆದಿವಾಸಿಗಳ ಭೂಮಿಯನ್ನು ಅತಿಕ್ರಮಿಸುತ್ತಿದ್ದ ಭೂಮಾಲಿಕರ ವಿರುದ್ಧ ಅಲ್ಲಿನ ಗಿರಿಜನ ರೈತ ಮತ್ತು ಕೂಲಿ ಸಂಘಟನೆ ಆದಿನ ಬೃಹತ್ ರ್‍ಯಾಲಿಯನ್ನು ಏರ್ಪಡಿಸಿತ್ತು. ವಿಷಯ ತಿಳಿದ ಅದಿಲಾಬಾದ್‌ನ ಪೊಲೀಸ್ ವರಿಷ್ಟಾಧಿಕಾರಿ ಹಿಂದಿನ ದಿನ ಅಂದರೆ, ಏಪ್ರಿಲ್ 19 ರಂದು ಇಂದ್ರಾವಳಿ ಪಟ್ಟನದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧ ಹೇರಿದ. ಈ ಕುರಿತು ಪರಿವಿಲ್ಲದೆ. ಮಾರನೇ ದಿನ ಅರಣ್ಯದಿಂದ ಚಕ್ಕಡಿಯಲ್ಲಿ, ಕಾಲ್‌ನಡಿಗೆಯಲ್ಲಿ  ಪ್ರವಾಹೊಪಾದಿಯಲ್ಲಿ ಗಿರಿಜನರು ಇಂದ್ರಾವಳಿ ಪಟ್ಟಣಕ್ಕೆ ಬಂದರು. ಪ್ರತಿಭಟನೆಗೆ ಇಳಿದವರ ಮೇಲೆ ಗುಂಡು ಹಾರಿಸಿದ ಪರಿಣಾಮ 60 ಗೊಂಡ ಜನಾಂಗದ ಆದಿವಾಸಿಗಳು ಸ್ಥಳದಲ್ಲಿ ಮೃತ ಪಟ್ಟರು.

ಘಟನೆ ಕುರಿತು ಸೃಷ್ಟೀಕರಣ ನೀಡಿದ ಆಂಧ್ರ ಸರ್ಕಾರ ಕೇವಲ 13 ಆದಿವಾಸಿಗಳು ಮತ್ತು ಓರ್ವ ಪೊಲೀಸ್ ಪೇದೆ ಘಟನೆಯಲ್ಲಿ ಮೃತಪಟ್ಟಿದ್ದಾರೆಂದು ಹೇಳಿಕೆ ನೀಡಿತು. ಗೋಲಿಬಾರ್ ನಡೆದ ದಿನ ರಾತ್ರಿಯೇ ಪೊಲೀಸರು ಮೃತಪಟ್ಟ ಆದಿವಾಸಿಗಳ ಶವಗಳನ್ನು ಅದಿಲಾಬಾದ್ ನಗರದ ಗುಪ್ತ ಸ್ಥಳಕ್ಕೆ ಕೊಂಡೊಯ್ದು ಸುಟ್ಟು ಹಾಕಿದ್ದರು. ಈ ಕುರಿತು ಸ್ವತಂತ್ರ ತನಿಖೆ ನಡೆಸಿದ ನಾಗರಿಕ ಹಕ್ಕುಗಳ ಸಮಿತಿ ಪೊಲೀಸರ ಪೈಶಾಚಿಕ ಕೃತ್ಯವನ್ನು ಹೊರೆಗೆಳೆಯಿತು. ಭಾರತದ ಪ್ರತಿಷ್ಠಿತ ಪತ್ರಿಕೆಯಾದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ತನ್ನ ಜೂನ್ 13ರ ಸಂಚಿಕೆಯಲ್ಲಿ ಗೊಂಡ ಜನಾಂಗದ ನರಮೇಧ ಕುರಿತು ಕಾರ್ನಜ್ ಅಟ್ ಇಂದ್ರಾವಳಿ ಎಂಬ ಹೆಸರಿನಲ್ಲಿ ವಿಸ್ತ್ರುತ ವರದಿ ಪ್ರಕಟಿಸಿತು. ನಮ್ಮನ್ನಾಳುವ ಸರ್ಕಾರಗಳ ಇಂತಹ ಕ್ರೌರ್ಯ ಇವತ್ತಿಗೂ ಕೂಡ ಮುಂದುವರಿದಿದೆ. ಬಸ್ತಾರ್ ಮತ್ತು ಮಧ್ಯ ಭಾರತದ ಅರಣ್ಯ ವಲಯದಲ್ಲಿ ಗಣಿಕಾರಿಕೆಯನ್ನು ವಿರೋಧಿಸುತ್ತಿರುವ ಆದಿವಾಸಿಗಳನ್ನು ಬಗ್ಗು ಬಡಿಯುವ ಉದ್ದೇಶದಿಂದ ಅವರುಗಳು ವಾಸಿಸುವ ಹಳ್ಳಿಗಳ ಸುತ್ತ ಅರಣ್ಯದಲ್ಲಿ ಮುಳ್ಳು ತಂತಿಯ ಬೇಲಿಯ ನಿರ್ಮಾಣ ಮಾಡಿ ಪರೋಕ್ಷವಾಗಿ ಅವರ ಮೇಲೆ ನಿರ್ಬಂಧ ಹೇರಲಾಗಿದೆ.

ಇಂತಹ ಅನಾಥ ಪ್ರಜ್ಞೆಯ ಸ್ಥಿತಿಯಲ್ಲಿ ಆದಿವಾಸಿಗಳಿಗೆ ಆಸರೆಯಾದವರು ಮಾವೋವಾದಿ ನಕ್ಸಲರು. ಇಲ್ಲಿನ ಆದಿವಾಸಿಗಳು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ನಂಬುವ ಬದಲು ನಕ್ಸಲರನ್ನು ನಂಬುತ್ತಾರೆ. ಅವರನ್ನು ಅಣ್ಣ ಮತ್ತು ಅಕ್ಕಾ ಎಂದು ಸಂಭೋದಿಸುತ್ತಾರೆ. ಈ ಕಾರಣಕ್ಕಾಗಿ ಈ ನತದೃಷ್ಟರು ಸರ್ಕಾರದ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವರ ಪಾಲಿಗೆ ಅರಣ್ಯ ಪ್ರದೇಶದಲ್ಲಿ ವಸತಿ ಶಾಲೆ ಮೂಲಕ ಶಿಕ್ಷಣವನ್ನು ನೀಡುತ್ತಿರುವ ರಾಮಕೃಷ್ಣ ಮಿಷನ್ ಹಾಗೂ ಕೆಲವು ಸ್ವಯಂ ಸೇವಾ ಸಂಘಟನೆಯ ಶಿಕ್ಷಕರು, ಆರೋಗ್ಯ ಸೇವೆ ನೀಡುತ್ತಿರುವ ಡಾ, ಬಿಯಾಂಕ ಸೇನ್ ಮತ್ತು ಅವರ ಪತ್ನಿ ಇಳಾಸೇನ್ ಮತ್ತು ಆದಿವಾಸಿಗಳ ಹಕ್ಕಿಗಾಗಿ ಪ್ರತಿಪಾದಿಸುತ್ತಿರುವ ಮಾಜಿ ಐ.ಎ.ಎಸ್. ಅಧಿಕಾರಿ ಬಿ.ಡಿ. ಶರ್ಮ (ಅಪಹರಣಕ್ಕೊಳಾಗಾಗಿದ್ದ ಸುಕ್ಮ ಜಿಲ್ಲೆಯ ಜಿಲ್ಲಾಧಿಕಾರಿ ಅಲೆಕ್ಷ್ ಮೆನನ್ನನ್ನು ನಕ್ಸಲರಿಂದ ಬಿಡುಗಡೆ ಮಾಡಿಸಿದವರು) ಇವರೆಲ್ಲಾ ಅದಿವಾಸಿಗಳು ಮತ್ತು ನಕ್ಸಲರ ಪಾಲಿಗೆ ನಡೆದಾಡುವ ದೇವರಾಗಿದ್ದರೆ, ಮಧ್ಯಪ್ರದೇಶ, ಛತ್ತೀಸ್‍ಘಡ, ಮಹಾರಾಷ್ಟ್ರದ ಗಡಿಭಾಗದ ಚಂದ್ರಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಗಾಂಧಿವಾದಿ ಬಾಬಾ ಅಮ್ಟೆ ಸ್ಥಾಪಿಸಿದ ಆನಂದವನ ಎಂಬ ಆಸ್ಪತ್ರೆ ಮತ್ತು ಆಶ್ರಮಗಳು ದೇಗುಲಗಳಾಗಿವೆ. ಬಾಬಾ ಅಮ್ಟೆ ನಿಧನಾನಂತರ ಅವರ ಮಕ್ಕಳಾದ ಡಾ. ಪ್ರಕಾಶ್ ಮತ್ತು ಡಾ. ವಿಕಾಶ್ ಹಾಗೂ ಅವರ ಪತ್ನಿಯರಾದ ಡಾ.ಮಂದಾಕಿನಿ ಮತ್ತು ಡಾ.ಭಾರತಿ ಇವರುಗಳು ಸೇವೆಯನ್ನು ಮುಂದುವರಿಸಿದ್ದಾರೆ. ಈ ಆಸ್ಪತ್ರೆ ಮಧ್ಯಭಾರತದ 92 ಲಕ್ಷ ಆದಿವಾಸಿಗಳ ಪಾಲಿಗೆ ಸಂಜೀವಿನಿಯಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಪೀಪಲ್ಸ್ ವಾರ್ ಗ್ರೂಪ್ ಎಂಬ ಹೆಸರನ್ನು ಸಿ.ಪಿ.ಐ (ಎಮ್.ಎಲ್) ಮಾವೋವಾದಿ ಕಮ್ಯುನಿಸ್ಟ್ಸ್ ಎಂದು ಬದಲಿಸಿಕೊಂಡು, ಪಿ.ಜಿ.ಎ. (ಪೀಪಲ್ಸ್ ಗ್ರೂಪ್ ಆರ್ಮಿ) ಎಂಬ ನಕ್ಸಲ್ ಸೇನೆಯನ್ನು ಹುಟ್ಟಿ ಹಾಕಿರುವ ನಕ್ಸಲರು ತಮ್ಮ ಮೂಲ ನೆಲೆಯಾದ ಆಂಧ್ರದಿಂದ ಮಧ್ಯ ಭಾರತದ ಅರಣ್ಯ ಪ್ರದೇಶಕ್ಕೆ ತಮ್ಮ ಹೋರಾಟವನ್ನು ವಿಸ್ತರಿಸುವಲ್ಲಿ ಆಕಸ್ಮಿಕವಾಗಿ ಜರುಗಿದ ಒಂದು ಘಟನೆ ಕಾರಣವಾಯಿತು.

ಪೀಪಲ್ಸ್ ವಾರ್‌ಗ್ರೂಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಕೊಂಡಪಲ್ಲಿ ಸೀತಾರಾಮಯ್ಯನವರ ಪುತ್ರಿ ಇದಕ್ಕೆ ಪರೋಕ್ಷ ಕಾರಣ ಎಂಬುದುರ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ಇಲ್ಲ. ತನ್ನ ಹೆಸರನ್ನಾಗಲಿ ಅಥವಾ ತಾನು ಇಂತಹ ವ್ಯಕ್ತಿಯ ಪುತ್ರಿಯೆಂದು ಹೇಳಿಕೊಳ್ಳದ, ಸೀತಾರಾಮಯ್ಯನವರ ಪುತ್ರಿ ವೈದ್ಯೆಯಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿದರು. ಈಕೆ ಪ್ರೀತಿಸಿ ಮದುವೆಯಾದ ವೈದ್ಯನೊಬ್ಬನ ಜೊತೆ ಸದ್ದಿಲ್ಲದೆ, ಸುದ್ಧಿಯಾಗದೆ, ಕಳೆದ ಮುವತ್ತೈದು ವರ್ಷಗಳ ಕಾಲ ಅರಣ್ಯವಾಸಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದರು. ಆಂಧ್ರದ ಉತ್ತರ ತೆಲಂಗಾಣ ಪ್ರಾಂತ್ಯದಲ್ಲಿ ತನ್ನ ತಂದೆ ಗಿರಿಜನರ ನೆಮ್ಮದಿಯ ಬದುಕಿಗೆ ಹೋರಾಟ ಮಾಡುತ್ತಿದ್ದಾಗ, ಇತ್ತ ಮಧ್ಯಭಾರತದ ಅರಣ್ಯ ಪ್ರದೇಶದಲ್ಲಿ ಅಪ್ಪನಿಂದ ಪ್ರೇರಿತಳಾಗಿದ್ದ ಮಗಳು, ತನ್ನ ಪತಿಯ ಜೊತೆಗೂಡಿ ಅರಣ್ಯವಾಸಿಗಳಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಿದಳು. ಈ ವೈದ್ಯ ದಂಪತಿಗಳು 30 ವರ್ಷದ ಹಿಂದೆ ಪ್ರತಿ ವರ್ಷ ತಮ್ಮ ರಜಾ ದಿನಗಳಲ್ಲಿ ದಂಡಕಾರಣ್ಯ ಅರಣ್ಯ ಪ್ರದೇಶಕ್ಕೆ ಬಂದು ಅಲ್ಲಿನ ಆದಿವಾಸಿಗಳಿಗೆ ವೈದ್ಯಕೀಯ ಶಿಬಿರ ಏರ್ಪಡಿಸಿ ಸೇವೆ ಸಲ್ಲಿಸಿ ಹೋಗುತ್ತಿದ್ದರು. ಆಗಿನ್ನು ನಕ್ಸಲರು ಈ ಪ್ರದೇಶಕ್ಕೆ ಕಾಲಿಟ್ಟಿರಲಿಲ್ಲ.

ಒಮ್ಮೆ ಈ ವೈದ್ಯ ದಂಪತಿಗಳು ವಾಪಸ್ ದೆಹಲಿಗೆ ತೆರಳುವ ಮುನ್ನ ವಾರಂಗಲ್ ಜಿಲ್ಲೆಯ ಅರಣ್ಯ ಪ್ರದೇಶದ ಅಂಚಿನಲ್ಲಿ ದಲಿತರ ಗುಡಿಸಲಿನಲ್ಲಿ ತಲೆ ಮರೆಸಿಕೊಂಡಿದ್ದ ಕೊಂಡಪಲ್ಲಿ ಸೀತಾರಾಮಯ್ಯನನ್ನು ಭೇಟಿ ಮಾಡುವ ಕಾರ್ಯಕ್ರಮ ಏರ್ಪಾಡಾಗಿತ್ತು. ಆದಿನ ಬೆಳದಿಂಗಳ ರಾತ್ರಿಯಲ್ಲಿ ಗುಡಿಸಲುಗಳ ಮುಂದಿನ ಆವರಣದಲ್ಲಿ ಮೊಸರನ್ನ ತಿನ್ನುತ್ತಾ ಕುಳಿತ ಸಂದರ್ಭದಲ್ಲಿ ತನ್ನ ತಂದೆ ಜೊತೆ ಮಾತನಾಡುತ್ತಾ ಭಾವುಕಳಾದ ಸೀತಾರಾಮಯ್ಯನವರ ಪುತ್ರಿ, ಮಧ್ಯಭಾರತದ ಅರಣ್ಯವಾಸಿಗಳ ಧಾರುಣ ಬದುಕನ್ನು ಅಪ್ಪನೆದುರು ಸವಿವರವಾಗಿ ತೆರದಿಟ್ಟಳು.

ಆ ರಾತ್ರಿಯೇ ಮಗಳು ಮತ್ತು ಅಳಿಯನನ್ನು ದೆಹಲಿಗೆ ಬೀಳ್ಕೊಟ್ಟ ಸೀತಾರಾಮಯ್ಯ ಆವರಣದಲ್ಲಿ ಛಾಪೆ ಹಾಸಿಕೊಂಡು ಮಲಗಿದಾಗ ಅವರ ತಲೆಯೊಳಗೆ ಮಗಳು ಹೇಳಿದ ಆದಿವಾಸಿಗಳ ನೋವಿನ ಕಥನ ಕಾಡತೊಡಗಿತು. ಆ ಕ್ಷಣಕ್ಕೆ ಕೊಂಡಪಲ್ಲಿಯವರ ಎದೆಯೊಳಗೆ ಆಂಧ್ರಕ್ಕೆ ಮೀಸಲಾಗಿದ್ದ ತಮ್ಮ ಯುದ್ಧವನ್ನು ನೆರೆಯ ಮಧ್ಯಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ, ಬಿಹಾರಕ್ಕೆ ವಿಸ್ತರಿಸಬೇಕೆಂಬ ಯೋಚನೆ ಗಟ್ಟಿಯಾಗಿ ತಳವೂರಿತು. ಅದರ ಪರಿಣಾಮವಾಗಿ ಇಂದು ಮೂರು ಲಕ್ಷ ಮಾವೋವಾದಿ ನಕ್ಸಲರು ದೇಶದ 11 ರಾಜ್ಯಗಳ  109 ಜಿಲ್ಲೆಗಳನ್ನು ಆವರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2003 ರಲ್ಲಿ ಅಧಿಕೃತವಾಗಿ ಹತ್ತು ಸಾವಿರ ಕೋಟಿ ಹಣ ತಮ್ಮ ಬಳಿ ಇದೆ ಎಂದು ಘೋಷಿಸಿಕೊಂಡಿದ್ದ ಪ್ರಜಾಸಮರಂ ಗ್ರೂಪ್ ಸಂಘಟನೆಯಲ್ಲಿ  ಈಗ  ಸುಮಾರು 18ರಿಂದ 20 ಸಾವಿರ ಕೋಟಿ ಹಣವಿರಬಹುದೆಂದು ಅಂದಾಜಿಸಲಾಗಿದೆ. ಮಾವೋವಾದಿ ನಕ್ಸಲರ ಬಳಿ ಇರುವ ಈ ಆರ್ಥಿಕ ಸಂಪತ್ತು, ನಕ್ಸಲ್ ಪೀಡಿತ ಪ್ರದೇಶಗಳ ಗುತ್ತಿಗೆದಾರರು, ಗಣಿಗಾರಿಕೆ ನಡೆಸುವ ಕಂಪನಿಗಳು, ಅರಣ್ಯಾಧಿಕಾರಿಗಳು, ಸರ್ಕಾರಿ ನೌಕರರು, ವೈದ್ಯರು, ಇಂಜಿನಿಯರ್‌ಗಳು ನಿಯಮಿತವಾಗಿ ಸಲ್ಲಿಸುವ ವಂತಿಕೆ ರೂಪದ ಹಣ ಎಂದು ನಕ್ಸಲ್ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿಕೊಂಡಿದೆ.

( ಮುಂದುವರಿಯುವುದು)

ಪ್ರಜಾ ಸಮರ – 3 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲರ ಹೋರಾಟದ ಕಥನವೆಂದರೆ, ಒಂದರ್ಥದಲ್ಲಿ ಇದು ಪರೋಕ್ಷವಾಗಿ, ಬಾಯಿಲ್ಲದವರಂತೆ ಅರಣ್ಯ ಮತ್ತು ಅದರ ಅಂಚಿನಲ್ಲಿ ಬದುಕುತ್ತಿರುವ ಬಡಕಟ್ಟು ಜನಾಂಗ ಮತ್ತು ಗಿರಿಜನರ ನೋವಿನ ಕಥನವೇ ಆಗಿದೆ. ಈವರೆಗೆ ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಮುಚ್ಚಿ ಹೋಗಿರುವ ಇವರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಗಿರಿಜನರನ್ನು ನಿರಂತರ ಶೋಷಿಸುವ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತು ವಂಚನೆಗೆ ಇಷ್ಟೊಂದು ಕರಾಳ ಮುಖಗಳು ಹಾಗೂ ಕೈಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.

ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ಜಮೀನ್ದಾರರು. ಹಣ ಲೇವಿದಾರರು, ಮರದ ವ್ಯಾಪಾರಿಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಬುಡಕಟ್ಟು ಜನಾಂಗ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಲು ತೆರಳಿ, ತಣ್ಣಗೆ ಹೊರಜಗತ್ತಿಗೆ ತಿಳಿಯದ ಹಾಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ವಿದ್ವಾಂಸರು, ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದಾರೆ. ಇವರಲ್ಲಿ ಹೊರ ಜಗತ್ತಿಗೆ ಭಾರತದ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಪರಿಚಯಿಸಿ, ಭಾರತದ ಗಿರಿಜನ ಪ್ರಪಂಚದ ಪಿತಾಮಹ ಎಂದು ಕರೆಸಿಕೊಳ್ಳುತ್ತಿರುವ ವೇರಿಯರ್ ಎಲ್ವನ್ ಎಂಬ ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಮುಂಚೂಣಿಯಲ್ಲಿದ್ದಾನೆ ಎಂದರೆ, ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಕಟು ವಾಸ್ತವದ ಸಂಗತಿ. ಗಿರಿಜನರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸಿದ ವೇರಿಯರ್ ಎಲ್ವಿನ್ ಎಂಬ ವಿದ್ವಾಂಸನ ವಂಚನೆಯ ಪ್ರಪಂಚವನ್ನು ಇಲ್ಲಿ ನಿಮ್ಮೆದುರು ದಾಖಲೆ ಸಹಿತ ಅನಾವರಣಗೊಳಿಸುತ್ತಿದ್ದೇನೆ.

1902 ರಲ್ಲಿ ಇಂಗ್ಲೆಂಡ್‌ನಲ್ಲಿ ಜನಸಿದ ವೇರಿಯರ್ ಎಲ್ವಿನ್ ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಅಲ್ಲಿಯೇ ಕೆಲ ಕಾಲ ಇಂಗ್ಲೀಷ್ ಉಪನ್ಯಾಸಕನಾಗಿದ್ದ. 1927ರಲ್ಲಿ ಪೂನಾ ಮೂಲದ ಮಿಷನರಿ ಸಂಸ್ಥೆಗೆ ಕ್ರೈಸ್ತ ಮಿಷನರಿಯಾಗಿ (ಪಾದ್ರಿ) ಬಂದ ಇವನಿಗೆ ಧರ್ಮ ಪ್ರಚಾರದ ಜೊತೆಗೆ ಮತಾಂತರ ಮಾಡುವ ಜವಾಬ್ದಾರಿಯನ್ನು ವಹಿಸಲಾಯಿತು. 1930-40 ರ ದಶಕದಲ್ಲಿ ಈಶಾನ್ಯ ಭಾರತ ಮತ್ತು ಮಧ್ಯ ಭಾರತದ ಅರಣ್ಯದ ನಡುವೆ ಇದ್ದ ಆದಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಸೇವೆ ನೀಡುವುದರ ಮೂಲಕ ಅವರ ಮನ ಪರಿವರ್ತಿಸಿ, ಕ್ರೈಸ್ತ ಸಮುದಾಯಕ್ಕೆ ಪರಿವರ್ತಿಸುವುದು ಅಂದಿನ ಮಿಷನರಿಗಳ ಗುಪ್ತ ಅಜೆಂಡವಾಗಿತ್ತು. ಈಶಾನ್ಯ ಭಾರತದ ಅಸ್ಸಾಂ, ನಾಗಾಲ್ಯಾಂಡ್. ಮಿಜೋರಾಂ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ಮಿಷನರಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಮಧ್ಯ ಹಾಗೂ ಪೂರ್ವ ಭಾರತದ, ಅಂದಿನ ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವನ್ನು ಪರಿವರ್ತಿಸುವಲ್ಲಿ ಮಿಷನರಿಗಳು ಕಿಂಚಿತ್ತೂ ಯಶಸ್ವಿಯಾಗಲಿಲ್ಲ. ಏಕೆಂದರೆ, ಈ ಪ್ರದೇಶದಲ್ಲಿ ಬದುಕಿದ್ದ ಐನೂರಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳು ತಮ್ಮದೇ ಆದ ನೆಲಮೂಲ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಚರಿಸಿಕೊಂಡು ಬಂದಿದ್ದವು. ಈ ಜನಾಂಗಳಲ್ಲಿ ಗೊಡ, ಕೋಯಾ, ಚೆಂಚೂ, ಕೊಂಡರೆಡ್ಡಿ, ಮರಿಯ, ಜನಾಂಗಗಳು ಪ್ರಮುಖವಾದವು.

1930 ರ ಸಮಯದಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಬಂದ ವೇರಿಯರ್ ಎಲ್ವಿನ್ ಮಿಷನರಿಯ ಪಾದ್ರಿ ವೃತ್ತಿಯನ್ನು ತೊರೆದು, ಭಾರತದ ಬುಡಕಟ್ಟು ಜನಾಂಗಗಳ ಬದುಕು, ಅವರ ನಂಬಿಕೆ, ಆಚಾರ, ವಿಚಾರಗಳ ಬಗ್ಗೆ ಆಸಕ್ತಿ ಬೆಳಸಿಕೊಂಡ. ಜೊತೆಗೆ ಗಾಂಧೀಜಿ ಮತ್ತು ಅವರ ಚಿಂತನೆಗಳಿಂದ ಕೂಡ ಪ್ರಭಾವಿತನಾಗಿದ್ದ. ಈ ಕಾರಣಕ್ಕಾಗಿ ಜಬಲ್‌ಪುರದ ಒಬ್ಬ ಆದಿವಾಸಿಯನ್ನು ಭಾಷಾಂತರಕ್ಕಾಗಿ ಸಹಾಯಕನನ್ನಾಗಿ ಮಾಡಿಕೊಂಡು, ಕ್ಯಾಮರಾ ಮತ್ತು ಟೈಪ್‌ರೈಟರ್ ಜೊತೆ ಆರಣ್ಯಕ್ಕೆ ಬಂದು ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದ. ಒಂದು ದಶಕದ ಕಾಲ ಆದಿವಾಸಿಗಳ ಜೊತೆ ವಾಸಿಸಿ, ಅವರ ಬದುಕನ್ನು ಅಧ್ಯಯನ ಮಾಡತೊಡಗಿದ. ಈ ಕುರಿತಂತೆ ಜಗತ್ತಿನ ಅನೇಕ ಪತ್ರಿಕೆಗಳಿಗೆ ಲೇಖನ ಬರೆಯತೊಡಗಿದ.

ಇದೇ ವೇಳೆ ಬ್ರಹ್ಮಚಾರಿಯಾಗಿದ್ದ ಎಲ್ವಿನ್, ಬುಡಕಟ್ಟು ಜನಾಂಗದ ವಿಶ್ವಾಸಗಳಿಸುವ ನಿಟ್ಟಿನಲ್ಲಿ 1940 ರ ಏಪ್ರಿಲ್ 4 ರಂದು ತನ್ನ 38 ನೇ ವಯಸ್ಸಿನಲ್ಲಿ ತನಗಿಂತ 25 ವರ್ಷ ಚಿಕ್ಕವಳಾದ 13 ವರ್ಷದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ನಾಯಕನೊಬ್ಬನ ಮಗಳಾದ ಕೋಶಿ ಎಂಬಾಕೆಯನ್ನು ಮದುವೆಯಾದ. ಮೊದಲು ಈ ಪ್ರಸ್ತಾಪಕ್ಕೆ ಆಕೆಯ ತಂದೆ ಪ್ರತಿರೋಧ ವ್ಯಕ್ತಪಡಿಸಿದರೂ ನಂತರ ಬಿಳಿಸಾಹೇಬನ ಜೊತೆ ಮಗಳು ಸುಖವಾಗಿರಲಿ ಎಂಬ ಆಸೆಯಿಂದ ಒಪ್ಪಿಗೆ ಸೂಚಿಸಿದ್ದ. ವಿವಾಹದ ನಂತರ ಬಸ್ತರ್ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ ಎಲ್ವಿನ್ ಆಕೆಯ ಜೊತೆ ವಾಸಿಸುತ್ತಾ, ಭಾರತದ ಬುಡಕಟ್ಟು ಜನಾಂಗಗಳು ಮತ್ತು ಅವರ ಸಂಸ್ಕೃತಿಯ ಬಗ್ಗೆ 1940 ರಿಂದ 1947ರ ನಡುವಿನ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿರಚಿಸಿ ಪ್ರಸಿದ್ಧನಾದ.  ಅಲ್ಲಿಯವರೆಗೂ ಹೊರಜಗತ್ತಿಗೆ ಗೊತ್ತಿರದ ಅನೇಕ ಬುಡಟ್ಟು ಜನಾಂಗಗಳ ಸಂಸ್ಕೃತಿಯನ್ನು, ಅವರ ಆಹಾರ, ಉಡುಪು, ವಿಚಾರ, ನಂಬಿಕೆ, ಆಚರಣೆ ಇವುಗಳನ್ನು ವಿವರವಾಗಿ ಶಿಸ್ತು ಬದ್ಧ ಅಧ್ಯಯನದ ಮೂಲಕ ಪರಿಚಯಿಸಿದ. ಇವನ ಆಸಕ್ತಿ ಅಂದಿನ ನಾಯಕರಾದ ನೆಹರೂರವರ ಗೆಳೆತನವನ್ನು ಸಂಪಾದಿಸಿಕೊಟ್ಟಿತು. ಜೊತೆಗೆ ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಕಾರಣ ಭಾರತದ ಬಹುತೇಕ ನಾಯಕರ ನೇರ ಪರಿಚಯ ಅವನಿಗಿತ್ತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ವೇರಿಯರ್ ಎಲ್ವಿನ್ ಭಾರತೀಯ ಪೌರತ್ವ ಸ್ವೀಕರಿಸಿದ. ಈತನ ಭಾರತದ ಪ್ರೀತಿಯನ್ನು ಗಮನಿಸಿದ ಪ್ರಧಾನಿಯಾದ ನೆಹರೂರವರು ವೇರಿಯರ್ ಎಲ್ವಿನ್‌ನನ್ನು ಈಶಾನ್ಯ ಮತ್ತು ಮಧ್ಯ ಹಾಗೂ ಪೂರ್ವ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಮಾರ್ಗದರ್ಶಿಯನ್ನಾಗಿ ನೇಮಕ ಮಾಡಿದರು.

ಹತ್ತು ವರ್ಷಗಳ ಕಾಲ ’ಗೊಂಡ’ ಜನಾಂಗದ ಹೆಣ್ಣು ಮಗಳು ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿದ ವೇರಿಯರ್ ಎಲ್ವಿನ್, ಅವಳಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದ. 1951ರಲ್ಲಿ ಪ್ರಧಾನಿ ನೆಹರೂರವರು ಈತನನ್ನು ಆಂಥ್ರಪಾಲಜಿಕಲ್ ಸರ್ವೆ ಆಫ್ ಇಂಡಿಯಾದ ಡೆಪ್ಯೂಟಿ ಡೈರಕ್ಟರ್ ಹುದ್ದೆಗೆ ನೇಮಕ ಮಾಡಿದಾಗ, ವೇರಿಯರ್ ಎಲ್ವಿನ್‌ನ ವಾಸ್ತವ್ಯ ಬಸ್ತರ್ ಅರಣ್ಯ ಪ್ರದೇಶದಿಂದ ಈಶಾನ್ಯ ಭಾಗದ ನಾಗಾಲ್ಯಾಂಡ್‌ಗೆ ಬದಲಾಯಿತು. ಈ ಸಂದರ್ಭದಲ್ಲಿ ಕೋಶಿಯನ್ನು ತೊರೆದು ತನ್ನ ಹಿರಿಯ ಮಗು ಜವಹರ್ ಸಿಂಗ್‌ನನ್ನು ಎತ್ತಿಕೊಂಡು ನಾಗಲ್ಯಾಂಡ್‌ನತ್ತ ಪಯಣ ಬೆಳಸಿದ. ನಂತರದ ದಿನಗಳಲ್ಲಿ ಎಲ್ವಿನ್ ಕೋಶಿಯತ್ತ ಮತ್ತೆ ತಿರುಗಿ ನೋಡಲಿಲ್ಲ. ಆಕೆ ಅವನ ಪಾಲಿಗೆ ಬಳಸಿ ಬಿಸಾಡಿದ ಬಟ್ಟೆಯಾಗಿದ್ದಳು. ಎಲ್ವಿನ್ ಆಕೆಯನ್ನು ತ್ಯೆಜಿಸಿದಾಗ ತುಂಬು ಗರ್ಭಿಣಿಯಾಗಿದ್ದ ಈ ಬುಡಕಟ್ಟು ಹೆಣ್ಣುಮಗಳು, ಅವನ ನಿರ್ಗಮನದ ನಂತರದ ಕೆಲವೇ ದಿನಗಳಲ್ಲಿ ಮತ್ತೊಂದು ಗಂಡುಮಗುವಿಗೆ ಜನ್ಮವಿತ್ತಳು.

ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿ, ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ, ನೆಹರೂ ಮುಂತಾದವರಿಗೆ ಆಕೆಯನ್ನು ಪತ್ನಿಯೆಂದು ಪರಿಚಯಿಸಿ, ಅವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡು. ನಂತರ ಏಕಾಏಕಿ ಅವಳನ್ನು ಬಿಟ್ಟು ಅನಾಥೆಯನ್ನಾಗಿ ಮಾಡಿ ಹೋದ ವೇರಿಯರ್ ಎಲ್ವಿನ್ ವಿರುದ್ಧ ಆತನಿಗೆ ಬಸ್ತರ್ ಅರಣ್ಯದಲ್ಲಿ ಸಹಾಯಕನಾಗಿ ದುಡಿದಿದ್ದ ಶ್ಯಾಮರಾವ್ ಹಿವಾಳೆ ಎಂಬಾತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ. ಇದರ ಪರಿಣಾಮ ಪ್ರತಿ ತಿಂಗಳು ಕೋಶಿಗೆ 25 ರೂಪಾಯಿ ಮಾಸಿಕ ಜೀವನಾಂಶ ದೊರೆಯುವಂತಾಯಿತು. ಆ ವೇಳೆಗಾಗಲೆ ನಾಗಾಲ್ಯಾಂಡ್‌ನಲ್ಲಿ ನಾಗಾ ಜನಾಂಗದ ಲೀಲಾ ಎಂಬಾಕೆಯನ್ನು ಎಲ್ವನ್ ಎರಡನೇ ವಿವಾಹವಾಗಿದ್ದ.

ಇತ್ತ ಮಧ್ಯಪ್ರದೇಶದ ಜಬಲ್‌ಪುರ್ ಪಟ್ಟಣದಲ್ಲಿ ತನ್ನ ಮಾಜಿ ಪತಿ ಎಲ್ವಿನ್ ನೀಡುತ್ತಿದ್ದ 25 ರೂಪಾಯಿ ಮಾಸಾಶನದಲ್ಲಿ ಬಾಡಿಗೆ ಕೊಂಠಡಿಯಲ್ಲಿ ಕಿರಿಯ ಮಗನ (ವಿಜಯ) ಜೀವನ ದೂಡುತ್ತಿದ್ದ ಕೋಶಿಗೆ 1964ರಲ್ಲಿ ವೇರಿಯರ್ ಎಲ್ವಿನ್ ನಿಧನಾನಂತರ ಮಾಸಾಶನ ನಿಂತು ಹೋಯಿತು. ಇದರಿಂದಾಗಿ ದಿಕ್ಕು ತೋಚದ ಕೋಶಿ ತನ್ನ ಮಗನ ಜೊತೆತನ್ನ ಊರಾದ ಅದೇ ಮಧ್ಯಪ್ರದೇಶದ ದಿಂಡೊರ ಜಿಲ್ಲೆಯ ರೈತ್ವಾರ್ ಎಂಬ ಹಳ್ಳಿಗೆ ಬಂದು ವಾಸಿಸತೊಡಗಿದಳು.

1964ರ ಪೆಬ್ರವರಿ ತಿಂಗಳಿನಲ್ಲಿ ಕಾರ್ಯನಿಮಿತ್ತ ದೆಹಲಿಗೆ ಬಂದಿದ್ದ ವೇರಿಯರ್‌ ಎಲ್ವಿನ್ ತನ್ನ 62ನೇ ವಯಸ್ಸಿನಲ್ಲಿ ಹೃದಯಾಘತದಿಂದ ತೀರಿಕೊಂಡ. ಆವೇಳೆಗೆ ಅವನು ಸಂಪಾದಿಸಿದ್ದ, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಕೊಲ್ಕತ್ತ ನಗರದ ಮನೆ ಮತ್ತು ನಾಗಾಲ್ಯಾಂಡ್‌ನಲ್ಲಿ ಇದ್ದ 60 ಎಕರೆ ಎಸ್ಟೇಟ್ ಎಲ್ಲವೂ ಎರಡನೇ ಪತ್ನಿ ಲೀಲಾಳ ಪಾಲಾದವು. ಎಲ್ವಿನ್ ಸಾಕಿ ಬೆಳಸಿದ್ದ ಹಿರಿಯ ಮಗ ಜವಹರ್ ಸಿಂಗ್ ಭಾರತೀಯ ಸೇನಾ ವಿಭಾಗದ ಅಸ್ಸಾಂ ರೈಫಲ್‌ನಲ್ಲಿ ಸೇವೆಯಲ್ಲಿದ್ದ, ಆದರೆ, ಮಿತಿ ಮೀರಿದ ಮಧ್ಯಪಾನದಿಂದ ಅತಿ ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ. 1964ರಲ್ಲಿ ವೇರಿಯರ್ ಎಲ್ವಿನ್ ಮರಣಾನಂತರ ಅವನ ಮಹತ್ತರ ಕೃತಿ “The tribal world of Verier Elwin” ಪ್ರಕಟವಾಯಿತು. (ಇದನ್ನು ನಮ್ಮ ಕನ್ನಡದ ಜಾನಪದ ತಜ್ಞ ಡಾ.ಹೆಚ್. ಎಲ್.ನಾಗೇಗೌಡ “ವೇರಿಯರ್ ಎಲ್ವಿನ್‌ನ ಗಿರಿಜನ ಪ್ರಪಂಚ” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.)

ಜಬಲ್‌ಪುರದಿಂದ 375 ಕಿಲೋಮೀಟರ್ ದೂರದ ದಿಂಡೋರ ಜಿಲ್ಲೆಯ ಅರಣ್ಯದ ನಡುವೆ ಇರುವ ರೈತ್ವಾರ್ ಎಂಬ ಹಳ್ಳಿಯಲ್ಲಿ ಮಗನ ಜೊತೆ ಇದ್ದ ಬುಡಕಟ್ಟು ಜನಾಂಗದ ಹೆಣ್ಣುಮಗಳು ಕೋಶಿ ಈಗ ಅಕ್ಷರಶಃ ಏಕಾಂಗಿ. ಚಿತ್ರಗಳಿಗೆ ಚೌಕಟ್ಟು (ಪೊಟೋ ಪ್ರೇಮ್) ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎರಡನೇ ಮಗ ವಿಜಯ್ ಕೂಡ ತನ್ನ ಪತ್ನಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಇತ್ತೀಚೆಗೆ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಸೊಸೆ ಮತ್ತು ಮೂವರು ಮೊಮಕ್ಕಳೊಂದಿಗೆ ಬದುಕುತ್ತಿರುವ ವೃದ್ಧೆ ಕೋಶಿಗೆ ಮಧ್ಯ ಪ್ರದೇಶ ಸರ್ಕಾರ ವಿಶೇಷವಾಗಿ ನೀಡುತ್ತಿರುವ 600 ರೊಪಾಯಿ ಮಾಸಾಶನವೇ ಜೀವನಕ್ಕೆ ಆಧಾರವಾಗಿದೆ. ಸೊಸೆ ಕೃಷಿ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಾಳೆ.

ವೇರಿಯರ್ ಎಲ್ವಿನ್ ಇಂದು ಜಗತ್ ಪ್ರಸಿದ್ಧ ಲೇಖಕನಾಗಿ, ಸಮಾಜ ಶಾಸ್ತ್ರಜ್ಞನಾಗಿ ಜಗತ್ತಿಗೆ ಪರಿಚಿತನಾಗಿದ್ದಾನೆ. ಅವನ ಎಪ್ಪತ್ತಕ್ಕೂ ಹೆಚ್ಚಿನ ಕೃತಿಗಳು ಈಗಲೂ ಪ್ರತಿಷ್ಟಿತ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸೇರಿದಂತೆ ಅನೇಕ ಪ್ರಕಾಶನ ಸಂಸ್ಥೆಗಳಿಂದ ಮರು ಮುದ್ರಣಗೊಳ್ಳುತ್ತಿವೆ. ಭಾರತವೂ ಸೇರಿದಂತೆ ಜಗತ್ತಿನ ನೂರಾರು ವಿ.ವಿ.ಗಳಲ್ಲಿ ಅವನ ಕೃತಿಗಳು ಸಮಾಜ ಶಾಸ್ತ್ರದ ಪಠ್ಯಗಳಾಗಿವೆ. ಇದರಿಂದ ಬರುವ ಗೌರವ ಧನ ಎರಡನೇ ಪತ್ನಿ ಲೀಲಾ ಕುಟುಂಬದ ಪಾಲಾಗುತ್ತಿದೆ.ಆದರೆ, ಹತ್ತು ವರ್ಷಗಳ ಕಾಲ ಅವನೊಂದಿಗೆ ಮೈ ಮತ್ತು ಮನಸ್ಸು ಹಂಚಿಕೊಂಡ ಆದಿವಾಸಿ ಹೆಣ್ಣುಮಗಳು, ಕೋಶಿ ಇಂದು ವೃದ್ಧೆಯಾಗಿ ಒಂದು ಹಿಡಿ ಅನ್ನಕ್ಕಾಗಿ ಸರ್ಕಾರ ನೀಡುವ ಹಣಕ್ಕಾಗಿ ಕಾಯುತ್ತಾ ಕೂತ್ತಿದ್ದಾಳೆ. ಅವಳ ಬಳಿ ಇರುವ ಆಸ್ತಿಯೆಂದರೆ, ವೇರಿಯರ್ ಎಲ್ವಿನ್ ನ ಒಂದು ಕಪ್ಪು ಬಿಳುಪಿನ ಭಾವಚಿತ್ರ ಮತ್ತು ಅವನ ಜೊತೆ ಸುತ್ತಾಡಿದ ನೆನಪುಗಳು ಮಾತ್ರ.

ವೇರಿಯರ್ ಎಲ್ವಿನ್ ತನ್ನ ಆತ್ಮ ಕಥನದಲ್ಲಿ ಕೇವಲ ಎರಡು ಸಾಲಿನಲ್ಲಿ, “ನಾನು ಹತ್ತು ವರ್ಷಗಳ ಕಾಲ ಬುಡಕಟ್ಟು ಜನಾಂಗದ ಒಬ್ಬ ಹೆಣ್ಣು ಮಗಳ ಜೊತೆ ಜೀವನ ನಡೆಸಿದ್ದೆ, ಅದು ವಿವರವಾಗಿ ಹೇಳಲಾಗದ ಅವ್ಯಕ್ತ ನೋವಿನ ಕಥೆ,” ಎಂದಷ್ಟೇ ದಾಖಲಿಸಿದ್ದಾನೆ. ಇತಿಹಾಸದ ಕಾಲಗರ್ಭದಲ್ಲಿ ಹೂತುಹೋಗುತ್ತಿದ್ದ ವೇರಿಯರ್ ಎಲ್ವಿನ್‌ನ ಈ ವಂಚನೆಯ ಪ್ರಪಂಚವನ್ನು ಜಗತ್ತಿಗೆ ಮೊದಲ ಬಾರಿಗೆ ತೆರೆದಿಟ್ಟವನು ರಮಣ್ ಕೃಪಾಳ್ ಎಂಬ ಜಬಲ್‌ಪುರ್ ಮೂಲದ ಪತ್ರಕರ್ತ. ಆನಂತರ 2008ರಲ್ಲಿ ಈ ಪತ್ರಕರ್ತನ ಲೇಖನವನ್ನು ಆಧರಿಸಿ, ಕೋಶಿಯನ್ನು ಸಂದರ್ಶನ ಮಾಡಿದ ಲಂಡನ್‌ನಿನ ಬಿ.ಬಿ.ಸಿ. ಚಾನಲ್ “British scholar’s Indian widow in penury” (ಬ್ರಿಟಿಷ್ ವಿದ್ವಾಂಸ ಮತ್ತು ಭಾರತದ ವಿಧವೆಯೊಬ್ಬಳ ಬಡತನ) ಎಂಬ ಹೆಸರಿನಲ್ಲಿ 30 ನಿಮಿಷದ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡಿತು.

ದುರಂತ ಮತ್ತು ನೋವಿನ ಸಂಗತಿಯೆಂದರೆ, ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದ್ದ ಬುಡಕಟ್ಟು ಜನಾಂಗದಿಂದ ಬಂದಿದ್ದ ಕೋಶಿ ಎಂಬ ಆ ಹೆಣ್ಣುಮಗಳಿಗೆ ಇದ್ದ ಬದ್ಧತೆ ವಿದ್ವಾಂಸ ಮತ್ತು ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಎನಿಸಿಕೊಂಡ ವೇರಿಯರ್ ಎಲ್ವಿನ್‌ಗೆ ಇರಲಿಲ್ಲ.

ತನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎಲ್ವಿನ್ ಕೋಶಿಯನ್ನು ಮುಂಬೈ ನಗರಕ್ಕೆ ಕರೆದೊಯ್ದಿದ್ದ. ಅಂದು ರಾತ್ರಿ ಆಕೆ ನೆಹರೂ ಜೊತೆ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಳು. ಗರ್ಭಿಣಿಯಾಗಿದ್ದ ಕೋಶಿಯನ್ನು ನೋಡಿ ಮಾತನಾಡಿಸಿದ ನೆಹರೂರವರು, ‘ಗಂಡು ಮಗುವಾದರೇ, ಏನು ಹೆಸರು ಇಡುತ್ತಿಯಾ?’ ಎಂದು ಕೇಳಿದ್ದರು, ಅದಕ್ಕೆ ಕೋಶಿ, ಗಂಡು ಮಗುವಾದರೆ ನಿಮ್ಮ ಹೆಸರು ಇಡುತ್ತೀನಿ ಎಂದು ಮುಗ್ಧವಾಗಿ ನಕ್ಕು ಹೇಳಿದ್ದಳು. ಅವಳ ಮಾತಿನಿಂದ ಖುಷಿಯಾದ ನೆಹರೂ ಆಕೆಗೆ ಸಾವಿರ ರೂಪಾಯಿಯ ಕೊಡುಗೆ ನೀಡಿದ್ದರು. ಆನಂತರ ಗಂಡು ಮಗುವಾದಾಗ ಕೋಶಿ ನೆಹರೂಗೆ ಕೊಟ್ಟ ಮಾತಿನಂತೆ ತನ್ನ ಮಗುವಿಗೆ ಜವಹರ ಸಿಂಗ್ ಎಂದು ನಾಮಕರಣ ಮಾಡಿದಳು. ಇಂತಹ ಬದ್ಧತೆ ಎಲ್ವಿನ್‌ಗೆ ಇದ್ದಿದ್ದರೆ, ಇಂದು ಕೋಶಿಯ ಬದುಕು ಈ ರೀತಿ ಬೀದಿಗೆ ಬೀಳುತ್ತಿರಲಿಲ್ಲ.

(ಮುಂದುವರಿಯುವುದು)

ಪ್ರಜಾ ಸಮರ-2 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕಳೆದ ಜೂನ್ 29 ರಂದು ನಕ್ಸಲ್ ಪೀಡಿತ ರಾಜ್ಯವಾದ ಛತ್ತೀಸ್‌ಘಡದಲ್ಲಿ ನಡೆದ ಘಟನೆ ಇದು. ಅಂದು ರಾತ್ರಿ ಸೂಕ್ಮ ಮತ್ತು ಬಿಜಾಪುರ್ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ ಮತ್ತು ಛತ್ತೀಸ್‌ಘಡದ ನಕ್ಸಲ್ ನಿಗ್ರಹ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 21 ಮಂದಿ ಮಾವೋವಾದಿ ನಕ್ಸಲರು ಮೃತಪಟ್ಟರೆಂಬ ಸುದ್ಧಿ ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ, ಪತ್ರಿಕೆಗಳಲ್ಲಿ ತಲೆ ಬರಹದ ವರದಿಯಾಗಿ ಪ್ರಕಟವಾಯಿತು. ಆದರೆ, ಛತ್ತೀಸ್‌ಘಡ ಸರ್ಕಾರ ಮಾರನೇ ದಿನ ತನ್ನ ವರಸೆ ಬದಲಿಸಿ ಘಟನೆಯಲ್ಲಿ ಮೃತಪಟ್ಟವರು ಶಂಕಿತ ಮಾವೋವಾದಿಗಳು (ನಕ್ಸಲರು) ಎಂದು ಹೇಳಿತು.

ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ರವಾನಿಸಿತು. ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಮೃತ ಪಟ್ಟ ವ್ಯಕ್ತಿಗಳ ಶವಗಳನ್ನು ಗಮನಿಸಿದಾಗ ಅವರು ಶಂಕಿತ ನಕ್ಸಲರಲ್ಲ ಎಂಬ ಸಂಶಯ ಮೇಲು ನೋಟಕ್ಕೆ ಗೋಚರಿಸುತ್ತಿತ್ತು. ಶವಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೃತಪಟ್ಟವರು ಸ್ಥಳೀಯ ಕೋಟಗುಡ ಮತ್ತು ಸರ್ಕೆಗುಡ ಎಂಬ ಹಳ್ಳಿಯ ಆದಿವಾಸಿಗಳಾಗಿದ್ದರು.  ಕೊನೆಗೆ ಸಂಶಯದ ಜಾಡು ಹಿಡಿದು ಹೊರಟ ಪತ್ರಕರ್ತರಿಗೆ ಇದು ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಪಡೆ ಜಂಟಿಯಾಗಿ ನಡೆಸಿದ ಮುಗ್ದ ಆದಿವಾಸಿಗಳ ಮಾರಣ ಹೋಮದ ಕೃತ್ಯ ಎಂಬುದು ಮನದಟ್ಟಾಯಿತು.

ಘಟನೆಯಲ್ಲಿ ಗಾಯಗೊಂಡು ಬದುಕುಳಿದ ಮೂವರು ಆದಿವಾಸಿಗಳ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಬಾಲಕನನ್ನು ಜಗದಾಲ್‌ಪುರದ ಮಹಾರಾಣಿ ಆಸ್ಪತ್ರೆಗೆ ಸಾಗಿಸಿ ಗುಪ್ತವಾಗಿ ಚಿಕಿತ್ಸೆ ಕೊಡಿಸುತ್ತಿರುವುದನ್ನು ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ವರದಿಗಾರ ಪತ್ತೆ ಹಚ್ಚಿದರೆ, ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕಾಲಿಗೆ ಗಾಯಗೊಂಡಿದ್ದ ಇಬ್ಬರು ಆದಿವಾಸಿಗಳನ್ನು (ಕಕಸೆಂಟಿ ಮತ್ತು ಮರ್ಕಮ್ ಸೋಮ) ಟೈಮ್ಸ್ ಆಫ್ ಇಂಡಿಯಾ ವರದಿಗಾರ ಪೊಲೀಸರ ಕಣ್ಣು ತಪ್ಪಿಸಿ ವಾರ್ಡ್‌ಬಾಯ್ ವೇಷದಲ್ಲಿ ಆಸ್ಪತ್ರೆಯ ಒಳಹೊಕ್ಕು ಪತ್ತೆ ಹಚ್ಚಿದ್ದ, ಅಲ್ಲದೆ ಅವರನ್ನು ಮಾತನಾಡಿಸಿ ಆ ರಾತ್ರಿ ನಡೆದ ಘಟನೆಯನ್ನು ದಾಖಲು ಮಾಡಿಕೊಂಡಿದ್ದ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಯುದ್ಧ ಗೆದ್ದ ಉತ್ಸಾಹದಲ್ಲಿ 21 ಮಂದಿ ನಕ್ಸಲಿಯರನ್ನು ಸದೆ ಬಡಿದ ಕಥೆಯನ್ನು ಮಾಧ್ಯಮದ ಮುಂದೆ ಹೆಮ್ಮೆಯಿಂದ ಹೇಳುಕೊಳ್ಳುತ್ತಿದ್ದರೆ, ಇತ್ತ ಮಧ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಸತ್ತವರು ಅಮಾಯಕ ಆದಿವಾಸಿಗಳು ಎಂಬ ವರದಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಜುಲೈ 3ರಂದು ಪೂನಾದಿಂದ ಹೊರಡುವ ಅಜಾದ್ ಎಕ್ಸ್‌ಪ್ರಸ್ ರೈಲಿನಲ್ಲಿ ಹೊರಟು 4ರಂದು ಮಧ್ಯಾಹ್ನ ಬಿಲಾಸ್‌ಪುರ್ ತಲುಪಿ, ಸಂಜೆ ವೇಳೆಗೆ ರಾಯ್‌ಪುರ್ ತಲುಪಿದ ನನಗೆ ಅಲ್ಲಿ ಸಿಕ್ಕ ಮಾಹಿತಿ ಬೇರೆಯದೇ ಆಗಿತ್ತು. ವಾಸ್ತವವಾಗಿ ಅಲ್ಲಿ ನಡೆದ ಘಟನೆ ಇದು. ಈ ಬಾರಿಯ ಮುಂಗಾರು ಮಳೆ ಆರಂಭವಾಗುವ ಮುನ್ನ ಆದಿವಾಸಿಗಳಿಗೆ ಬೇಸಾಯಕ್ಕೆ ಅರಣ್ಯ ಭೂಮಿಯನ್ನು ಹಂಚುವುದಕ್ಕಾಗಿ ಇಬ್ಬರು ಸ್ಥಳೀಯ ನಕ್ಸಲ್ ನಾಯಕರು ಸಭೆ ಕರೆದಿದ್ದರು. ನಕ್ಸಲ್ ನಾಯಕರಿಗೆ ಬೆಂಗಾವಲಾಗಿ ಮತ್ತಿಬ್ಬರು ನಕ್ಸಲರು ಬಂದೂಕ ಹಿಡಿದು ಸಭೆಗೆ ಬಂದಿದ್ದರು. 150ಕ್ಕೂ ಹೆಚ್ಚು ಮಂದಿ ಸೇರಿದ್ದ ಈ ಗ್ರಾಮ ಸಭೆಯಲ್ಲಿ ನಾಲ್ವರು ನಕ್ಸಲರು ಹೊರತು ಪಡಿಸಿದರೆ, ಉಳಿದವರೆಲ್ಲಾ ಸ್ಥಳೀಯ ಹಳ್ಳಿಗಳ ಆದಿವಾಸಿಗಳಾಗಿದ್ದರು. ಈ ಕುರಿತಂತೆ ಜುಲೈ ಮೊದಲ ವಾರ ಹಿಂದೂ ದಿನಪತ್ರಿಕೆ ಮತ್ತು ಟೈಮ್ಸ್ ಆಫ್ ಇಂಡಿಯ ಪತ್ರಿಕೆಗಳು ಸಮಗ್ರ ತನಿಖಾ ವರದಿಯನ್ನು ಪ್ರಕಟಿಸಿದ ಮೇಲೆ ರಾಜಧಾನಿ ದೆಹಲಿಯಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಗೃಹ ಸಚಿವ ಪಿ.ಚಿದಂಬರಂ, ಛತ್ತೀಸ್‌ಘಡ ಸರ್ಕಾರದ ತಪ್ಪು ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಬೇಕಾಯಿತೆಂದು ದೇಶದ ಮುಂದೆ ವಿಷಾದ ವ್ಯಕ್ತಪಡಿಸಿದರು. ನಕ್ಸಲರ ಹೋರಾಟವನ್ನು ಕೊನೆಗಾಣಿಸಬೇಕೆಂಬ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಎಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂಬುದಕ್ಕೆ ಸರ್ಕಾರದ ಈ ಕೆಳಗಿನ ಹೇಳಿಕೆ ಮತ್ತು ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಇದೇ ಸೆಪ್ಟಂಬರ್ 9 ರ ಶನಿವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೆಹಲಿಯಲ್ಲಿ ಕರೆದಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಭೆಯಲ್ಲಿ ದೇಶದ ಬುದ್ಧಿಜೀವಿಗಳು ನಕ್ಸಲ್ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿ, ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ನಕ್ಸಲ್ ಚಟುವಟಿಕೆ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ತನ್ನ 2011-12ರ ವಾರ್ಷಿಕ ವರದಿಯಲ್ಲಿ ದೇಶದ ಒಂಬತ್ತು ರಾಜ್ಯಗಳ 106 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಪ್ರಕಟಿಸಿದೆ. ಇದೇ ಆಗಸ್ಟ್ 29ರಂದು ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿರುವ ಗೃಹ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, 12 ರಾಜ್ಯಗಳ 84 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಹೇಳಿದ್ದಾರೆ. ಪ್ರಧಾನಿಯಿಂದ ಹಿಡಿದು ಗೃಹ ಸಚಿವ ಹಾಗೂ ಅವರ ಸಹಾಯಕ ಸಚಿವ ಮತ್ತು ಗೃಹ ಇಲಾಖೆಯವರೆಗೂ ನಕ್ಸಲ್ ಚಟುವಟಿಕೆ ಕುರಿತ ಮಾಹಿತಿಯಲ್ಲಿ ಸಾಮ್ಯತೆ ಇಲ್ಲವೆಂದ ಮೇಲೆ ಇವರ ಹೇಳಿಕೆಗಳಿಗೆ ಯಾವ ಮಹತ್ವವಿದೆ ಯೋಚಿಸಿ?

ನಕಲಿ ಎನ್‌ಕೌಂಟರ್‌‌ನಲ್ಲಿ ಸತ್ತ ಅಮಾಯಕ ಆದಿವಾಸಿಗಳ ಕುಟುಂಬಳಿಗೆ ಈವರೆಗೆ ಕೇಂದ್ರ ಸರ್ಕಾರದಿಂದಾಗಲಿ, ಛತ್ತೀಸ್‌ಘಡ ಸರ್ಕಾರದಿಂದಾಗಲಿ ಯಾವುದೇ ಪರಿಹಾರ ದೊರಕಿಲ್ಲ. ಅರಣ್ಯ ರೋಧನ ಎಂಬ ಮಾತಿಗೆ ಅಥವಾ ಶಬ್ಧಕ್ಕೆ ನಾವು ಶಬ್ಧಕೋಶ ನೋಡಿ ಅರ್ಥ ತಿಳಿಯಬೇಕಾಗಿಲ್ಲ. ಮಧ್ಯ ಮತ್ತು ಪೂರ್ವ ಭಾರತದ ಅರಣ್ಯದ ಒಳ ಹೊಕ್ಕು ಅಲ್ಲಿನ ನಿವಾಸಿಗಳ ನೋವು ಮತ್ತು ಆಕ್ರಂಧನ ಇವುಗಳಿಗೆ ಕಣ್ಣು ಮತ್ತು ಕಿವಿಯಾದರೆ ಸಾಕು ಅದರ ನಿಜವಾದ ಅರ್ಥ ನಮಗೆ ಮನದಟ್ಟಾಗಬಲ್ಲದು.

ಇದು ಕಳೆದ ವರ್ಷ 2011 ರ ಪೆಬ್ರವರಿಯಲ್ಲಿ ನಡೆದ ಘಟನೆ. (ಈ ಅಮಾನವೀಯ ವರದಿ ಹಿಂದೂ ಪತ್ರಿಕೆಯಲ್ಲಿ ಕೂಡ ವರದಿಯಾಗಿತ್ತು.) ಕಳೆದ ವರ್ಷ ನಡೆದ ಐ.ಪಿ.ಎಲ್. ಕ್ರಿಕೆಟ್ ಟೂರ್ನಿಗೆ ಹಿಂದಿ ಸಿನಿಮಾ ನಟ ಶಾರುಖ್‌ಖಾನ್ ಮಾಲಿಕತ್ವದ ಕೊಲ್ಕತ್ತ ನೈಟ್ ರೈಡರ್ಸ್ ತಂಡ ದೆಹಲಿಯ ಗೌತಮ್ ಗಂಭೀರ್ ಎಂಬ ಆಟಗಾರರನ್ನು 13 ಕೋಟಿ ರೂಪಾಯಿಯ ದಾಖಲೆ ಹರಾಜಿನಲ್ಲಿ ಖರೀದಿಸಿತ್ತು. ಮುಂಬೈನ ಪಂಚತಾರಾ ಹೋಟೆಲ್‌‍ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ದೂರದ ಛತ್ತೀಸ್‌ಘಡದ ದಂಡಕಾರಣ್ಯದ ನಡುವೆ ಇದ್ದ ಕುಗ್ರಾಮದ ಹಳ್ಳಿಯೊಂದರ ಆದಿವಾಸಿಯೊಬ್ಬನ  ಒಂಬತ್ತು ವರ್ಷದ ಮಗಳೊಬ್ಬಳು ಅಸಹಜ ಸಾವನ್ನಪ್ಪಿದ್ದಳು. ಆದಿನ ಸಾಯಂಕಾಲ ಆದಿವಾಸಿ ದಂಪತಿಗಳು ಮಗಳ ಅಂತ್ಯ ಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿರುವಾಗಲೇ ಅಡ್ಡಿ ಮಾಡಿದ ಪೊಲೀಸರು ಮರಣೋತ್ತರ ಶವ ಪರೀಕ್ಷೆ ಮಾಡಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಬೇಕೆಂದು ಆದೇಶವಿತ್ತರು. ಪೊಲೀಸರಿಗೆ ಲಂಚ ಕೊಡಲು ಅಸಮರ್ಥನಾದ ಆ ಮಗ್ಧ ಆದಿವಾಸಿ ಇಡೀ ರಾತ್ರಿ ಶವವನ್ನು ತನ್ನ ಮನೆಯ ವರಾಂಡದಲ್ಲಿ ಇಟ್ಟುಕೊಂಡು, ಬೆಳಗಿನ ಜಾವ ಐದು ಗಂಟೆಗೆ ಎದ್ದು 40 ಕಿಲೋಮೀಟರ್ ದೂರದ ಜಗದಾಲ್‌ಪುರ್ ಆಸ್ಪತ್ರೆಗೆ ತನ್ನ ಸೈಕಲ್‌ನ ಹಿಂಭಾಗಕ್ಕೆ ಕಟ್ಟಿಗೆ ಹೊರೆ ಕಟ್ಟಿದಂತೆ ಕಟ್ಟಿಕೊಂಡು ಸೈಕಲ್ ತುಳಿದ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಮರೋಣತ್ತರ ಪರೀಕ್ಷೆಗೆ ಶವ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿ ಸಂಜೆ ಸಂಜೆ ಆರು ಗಂಟೆಗೆ ಆತನಿಗೆ ಶವ ಒಪ್ಪಿಸಿದರು. ಶವ ಪರೀಕ್ಷೆಗಾಗಿ ಕುತ್ತಿಗೆಯಿಂದ ಕಿಬ್ಬೊಟ್ಟೆಯವರೆಗೆ ಆ ಹೆಣ್ಣು ಮಗಳ ಶವವನ್ನು ಸೀಳಿ, ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಆ ಬಡ ಆದಿವಾಸಿ ರೈತನ ಬಳಿ ಇದ್ದ ನಲವತ್ತು ರೂಪಾಯಿಯನ್ನು ಆಸ್ಪತ್ರೆ ಸಿಬ್ಬಂದಿ ಕಸಿದುಕೊಂಡಿದ್ದರು. ಆನಂತರ ಸರಿಯಾಗಿ ಹೊಲಿಗೆ ಹಾಕದೆ, ಈಚಲ ಛಾಪೆಯಲ್ಲಿ ಸುತ್ತಿದ ಮಗಳ ಶವವನ್ನು ಅವನಿಗೆ ನೀಡಲಾಯಿತು. ರಕ್ತ ಸೋರುತ್ತಿದ್ದ ತನ್ನ ಕರುಳ ಕುಡಿಯ ಶವವನ್ನು ಮತ್ತೇ ಸೈಕಲ್ಲಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಜಿಲ್ಲಾ ಕೇಂದ್ರದಿಂದ ತನ್ನ ಹಳ್ಳಿಗೆ ಆ ಮುಗ್ಧ ಅಮಾಯಕ ಸೈಕಲ್ ತುಳಿಯತೊಡಗಿದ. ಮಗಳ ಸಾವಿನ ನೋವಿನಿಂದ ಹೊರಬರಲಾರದ ಸ್ಥಿತಿಯಲ್ಲಿ ಆತ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಏನನ್ನೂ ತಿನ್ನದೆ, 80 ಕಿಲೋಮೀಟರ್ ದೂರ ಸೈಕಲ್ ತುಳಿದು ರಾತ್ರಿ ತನ್ನ ಹಳ್ಳಿಗೆ ಬಂದು ಶವದ ಅಂತ್ಯ ಕ್ರಿಯೆ ಮುಗಿಸಿದಾಗ ನಡುರಾತ್ರಿ ಮೀರಿತ್ತು. ಮತ್ತೇ ಮಾರನೇ ದಿನ ಬೆಳಿಗ್ಗೆ ಆತ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮರಣೋತ್ತರ ಪರೀಕ್ಷೆಯ ವರದಿ ತಲುಪಿಸಬೇಕಾಗಿತ್ತು.

ಪ್ರಿಯ ಓದುಗರೆ, ಒಂದು ಕ್ಷಣ ನಿಮ್ಮ ಅಸ್ತಿತ್ವವನ್ನು ಮರೆತು ಆ ಬಡ ಹೆಣ್ಣು ಮಗಳ ತಂದೆಯಾಗಿ ನಿಮ್ಮನ್ನು ಊಹಿಸಿಕೊಂಡು ಚಿಂತಿಸಿ? ಅನಕ್ಷರಸ್ಥ ಮುಗ್ಧ ಆದಿವಾಸಿಯೊಬ್ಬ ಅನುಭವಿಸಿದ ನೋವಿಗೆ ಶಬ್ಧಗಳಾಗಲಿ, ಅಕ್ಷರವಾಗಲಿ, ಭಾವನೆಗಳಾಗಲಿ ಮೂಡಿ ಬರಲು ಸಾಧ್ಯವೆ? ಇದು ವ್ಯವಸ್ಥೆಯ ಕ್ರೌರ್ಯ ಎಂದು ಅನಿಸುವುದಿಲ್ಲವೆ? ನಮಗೆ ಗೋಚರಿಸದ, ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದ ಇಂತಹ ಸಾವಿರಾರು ನೋವಿನ ಕಥೆಗಳು ಅರಣ್ಯದಲ್ಲಿ ನೊಂದವರ ನಡುವೆ ಪ್ರತಿಧ್ವನಿಸುತ್ತಿವೆ. ಅಕ್ಷರ ಲೋಕದಿಂದ ವಂಚಿತರಾದವರ ನೋವು ಒಂದು ಬಗೆಯಾದರೆ, ಅಕ್ಷರ ಕಲಿತು ತಮ್ಮ ಹಕ್ಕುಗಳಿಗೆ ಪ್ರತಿಪಾದಿಸಿ ಕತ್ತಲ ಲೋಕದಲ್ಲಿ ಕೊಳೆಯುತ್ತಿರುವ ಆದಿವಾಸಿ ಜನಗಳ ನೋವು ಇನ್ನೊಂದು ಬಗೆಯದು.

2011 ರ ಆಗಸ್ಟ್ ತಿಂಗಳಿನಲ್ಲಿ ಛತ್ತೀಸ್‌ಘಡದ ರಾಯ್‌ಪುರನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆದಿವಾಸಿಗಳ ಪರವಾಗಿ ಕಪ್ಪು ಬಾವುಟ ಪ್ರದರ್ಶಿಸಲು ನಿರಾಕರಿಸಿದ ಸೋನಿ ಸೂರಿ ಎಂಬ 35 ವರ್ಷದ ಆದಿವಾಸಿ ಜನಾಂಗದ ಶಿಕ್ಷಕಿ ಹಾಗೂ ಅವಳ ಚಿಕ್ಕಪ್ಪನ ಮಗ ಲಿಂಗರಾಮ್ ಬಸ್ತರ್ ವಲಯದಲ್ಲಿ ನಕ್ಸಲರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಆದರೂ ಚತ್ತೀಸ್‌ಘಡ ಪೊಲೀಸರಿಗೆ ಇವರ ಮೇಲೆ ನಕ್ಸಲಿಯರ ಬೆಂಬಲಿಗರೆಂಬ ಗುಮಾನಿ. ಈ ಕಾರಣಕ್ಕಾಗಿ ಈ ಇಬ್ಬರೂ ಬಸ್ತರ್ ವಲಯದ ಜಿಲ್ಲಾಧಿಕಾರಿ ಶ್ರೀನಿವಾಸಲು ಎಂಬ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿಯನ್ನು ಭೇಟಿಯಾಗಿ ತಮಗೆ ಮತ್ತು ತಮ್ಮ ಜನಾಂಗಕ್ಕೆ ನಕ್ಸಲ್ ಮಾವೋವಾದಿಗಳು ಮತ್ತು ಪೊಲೀಸರಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಇದನ್ನು ಸ್ವತಃ ಜಿಲ್ಲಾಧಿಕಾರಿ ಧೃಡಪಡಿಸಿದ್ದಾನೆ. ಮೆಟ್ರಿಕ್‌ವರೆಗೆ ಓದಿ, ವಾಹನ ಚಾಲಕನ ಪರವಾನಿಗೆ ಪಡೆದಿದ್ದ ಲಿಂಗರಾಮ್‌ಗೆ ಪೊಲೀಸರು ತಮ್ಮ ಇಲಾಖೆಯ ಜೀಪ್ ಚಾಲಕನಾಗಿ, ನಕ್ಸಲಿಯರ ಅಡಗುತಾಣಗಳನ್ನು ತೋರಿಸಬೇಕೆಂದು ಒತ್ತಾಯಿಸಿದಾಗ ಆತ ನಕ್ಸಲರ ಭಯದಿಂದ ಕೆಲಸ ನಿರಾಕರಿಸುವುದರ ಜೊತೆಗೆ ದೆಹಲಿಗೆ ಹೋಗಿ ಮಾನವ ಹಕ್ಕುಗಳ ಸ್ವಯಂ ಸೇವಾ ಸಂಘಟನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಳ್ಳತ್ತಾನೆ. ಇವುಗಳ ನಡುವೆ ಛತ್ತೀಸ್‌ಘಡ ಸೇರಿದಂತೆ ದಂಡಕಾರಣ್ಯದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಆದಿವಾಸಿ ಜನಾಂಗದ ಮೇಲೆ ನಡೆಸಿದ ಅತಿಕ್ರಮಣ, ಅತ್ಯಾಚಾರ, ಶೋಷಣೆ ಇವೆಲ್ಲವೂ ಮಾನವ ಹಕ್ಕುಗಳ ಸಂಘಟನೆ ಮೂಲಕ ಹೊರ ಜಗತ್ತಿಗೆ ಬಹಿರಂಗವಾಗುತ್ತಿರುವುದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಶಿಕ್ಷಕಿ ಮತ್ತು ಅವಳ ಸಹೋದರರು ಕಾರಣ ಎಂಬ ಗುಮಾನಿ ಛತ್ತೀಸ್‌ಘಡ ಪೊಲೀಸರಿಗೆ ಇತ್ತು. ಇದರಿಂದಾಗಿ ಅಲ್ಲಿನ ಪೊಲೀಸರಿಗೆ ಶಿಕ್ಷಕಿ ಸೋನಿ ಸೂರಿ ಕುಟುಂಬದ ಬಗ್ಗೆ ದ್ವೇಷ ಬೆಳೆಯಲು ಕಾರಣವಾಯಿತು. ಇದೇ ವೇಳೆ ಲಂಡನ್‌ ನಗರದಲ್ಲಿ ವಿಕಿಲಿಕ್ಸ್ ಅಂತರ್ಜಾಲ ಪತ್ರಿಕೆ ಬಿಡುಗಡೆ ಮಾಡಿದ್ದ ಭಾರತದ ಅಮೇರಿಕಾ ರಾಯಭಾರಿ ಕಚೇರಿಯ ಸಂದೇಶಗಳ ಪೈಕಿ, ಎಸ್ಸಾರ್ ಸ್ಟೀಲ್ ಕಂಪನಿ ಅಪಾರ ಪ್ರಮಾಣದಲ್ಲಿ ಮಾವೋವಾದಿ ನಕ್ಸಲರಿಗೆ ಹಣವನ್ನು ನೀಡಿ ಛತ್ತೀಸ್‌ಘಡದಲ್ಲಿ ಗಣಿಕಾರಿಕೆ ನಡೆಸುತ್ತಿದೆ ಎಂಬುದನ್ನು ಬಹಿರಂಗಗೊಳಿಸಿತ್ತು. ಇದನ್ನು ಆಧಾರವಾಗಿಕೊಂಡು ದಂತೆವಾಡದ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್‌ಗತ  ಎಂಬಾತ ಪಲ್‌ನಾರ್ ಎಂಬ ಹಳ್ಳಿಯ ಬಳಿ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸೋನಿ ಸೂರಿಯನ್ನು ಬಂಧಿಸಿದ.

ಇದಕ್ಕೂ ಎರಡು ತಿಂಗಳ ಮುನ್ನ ಆಕೆಯ ಪತಿಯನ್ನು ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಎಸ್ಸಾರ್ ಕಂಪನಿಯಿಂದ ಹಣವನ್ನು ಪಡೆದು ನಕ್ಸಲಿಯರಿಗೆ ಕೊಂಡೊಯ್ಯುತ್ತಿದ್ದಳು ಎಂಬ ಆರೋಪದಡಿ ಈಕೆಯನ್ನು 40 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಇಡೀ ಭಾರತದ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಈಕೆಯ ಬಂಧನದ ಅವಧಿಯಲ್ಲಿ ಜರುಗಿ ಹೋಯಿತು. ನ್ಯಾಯಾಲಯದ ಮುಂದೆ ಹಾಜರು ಪಡಿಸದೆ, ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವೇಳೆ ಈಕೆಯ ಗುಪ್ತಾಂಗಕ್ಕೆ ಕಲ್ಲು ಇಟ್ಟಿಗೆ ಚೂರುಗಳನ್ನು ತುರುಕಿ ಚಿತ್ರ ಹಿಂಸೆ ನೀಡಲಾಯಿತು. ಇದು ಹೊರಜಗತ್ತಿಗೆ ಬಹಿರಂಗವಾಗುವ ವೇಳೆಗೆ ಸೋನು ಸೂರಿಯನ್ನು ಗುಪ್ತವಾಗಿ ಕೊಲ್ಕತ್ತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿರುವ ಅಮೇರಿಕಾದ ನೋಮ್ ಚಾಮ್‌ಸ್ಕಿ ಸೇರಿದಂತೆ ಭಾರತದ ಅರುಣಾ ರಾಯ್ ಮತ್ತು ಅರುಂಧತಿ ರಾಯ್, ಸಿನಿಮಾ ನಿರ್ದೇಶಕ ಆನಂದ್‌ ಪಟುವರ್ಧನ್ ಹಾಗೂ ಅಶೋಕ್ ಮೆಂಡರ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ ಪರಿಣಾಮ ಸುಪ್ರೀಂ ಕೋರ್ಟ್ ಈಕೆಯ ಬಂಧನದ ವಿಷಯವನ್ನು ವಿಚಾರಣೆಗೆ ಎತ್ತಿಕೊಂಡಿತು. ಈ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಪೊಲೀಸರು ನೀಡಿದ ಹೇಳಿಕೆ ಕೂಡ ಬದಲಾಗಿತ್ತು. ಎಸ್ಸಾರ್ ಕಂಪನಿಯ ದಲ್ಲಾಳಿಯೊಬ್ಬ ನಕ್ಸಲಿಯರಿಗೆ 15 ಲಕ್ಷ ಹಣ ಸಂದಾಯ ಮಾಡುತ್ತಿದ್ದಾಗ ಜೊತೆಯಲ್ಲಿ ಸೋನು ಸೂರಿ ಇದ್ದಳು ಎಂಬುದು ಪೊಲೀಸರ ಹೇಳಿಕೆ. ಇವರ ಹೇಳಿಕೆ ನಿಜವೇ ಆಗಿದ್ದರೆ, ಆ ದಿನ ಸಂತೆಯಲ್ಲಿದ್ದ ಸಾವಿರಾರು ಮಂದಿ ಕೂಡ ಪೊಲೀಸರ ದೃಷ್ಟಿಯಲ್ಲಿ ಅಪರಾಧಿಗಳಾಗಬೇಕು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸೋನು ಸೂರಿಯ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ದೆಹಲಿಯ ವೈದ್ಯರ ವರದಿ ಕೂಡ ಈಕೆಯ ಗುಪ್ತಾಂಗ ಮತ್ತು ಗರ್ಭಕೋಶದ ಬಳಿ ಕಲ್ಲು ಮತ್ತು ಇಟ್ಟಿಗೆ ಚೂರುಗಳು ಇದ್ದುದನ್ನು ಧೃಡಪಡಿಸಿದೆ. ಈಗ ಸೋನು ಸೂರಿ ಕೊಲ್ಕತ್ತ ಆಸ್ಪತ್ರೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಚೇತರಿಸಿಕೊಳ್ಳುತ್ತಿದ್ದಾಳೆ. ಈಕೆಯ ಪತಿ ಜೈಲಿನಲ್ಲಿದ್ದಾನೆ. ಈಕೆಯ ತಂದೆಯನ್ನು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮಗೆ ಬೆಂಬಲಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ನಕ್ಸಲಿಯರು ಗುಂಡಿಟ್ಟು ಕೊಂದಿದ್ದರು. ಇವಳ ಐದು ವರ್ಷದ ಮಗು ದಂತೆವಾಡದ ಅರಣ್ಯ ಪ್ರದೇಶದಲ್ಲಿನ ಹಳ್ಳಿಯೊಂದರಲ್ಲಿ ವೃದ್ಧ ಅಜ್ಜಿಯ ಹಾರೈಕೆಯಲ್ಲಿದೆ. ಶಿಕ್ಷಕಿ ಸೋನು ಸೂರಿಗೆ ಅಮಾನುಷ ಚಿತ್ರ ಹಿಂಸೆ ನೀಡಿದ ದಂತೆವಾಡದ ಪೊಲೀಸ್ ಅಧಿಕಾರಿಗೆ ಈ ವರ್ಷ ಕೇಂದ್ರ ಸರ್ಕಾರ ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕವನ್ನು ನೀಡಿದೆ.

ಅಮಾಯಕರ ವಿರುದ್ಧ ವ್ಯವಸ್ಥೆಯ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಹ ಸ್ಥಿತಿಯಲ್ಲಿ ಮಧ್ಯ ಭಾರತದ ಅರಣ್ಯವಾಸಿಗಳು ಬದುಕುತ್ತಿದ್ದಾರೆ. ಇದರ ವಿರುದ್ಧ  ಧ್ವನಿ ಎತ್ತಿದ ವಿದ್ಯಾವಂತರು ನಕ್ಸಲಿಯರ ಬೆಂಬಲಿಗರು ಎಂಬ ಆರೋಪದಡಿ ಜೈಲಿಗೆ ನೂಕಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇಲ್ಲಿನ ದಂಪತಿಗಳ ಚಿತ್ರ ಗಮನಿಸಿ, ಇವರು ಉತ್ತರ ಪ್ರದೇಶದ ಅಲಹಾಬಾದಿನ ವಿದ್ಯಾವಂತ ದಂಪತಿಗಳು. ಸೀಮಾ ಅಜಾದ್ ಹೆಸರಿನ ಈಕೆ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ, ಅಲಹಾಬಾದ್ ನಗರದಲ್ಲಿ ತನ್ನ ಪತಿ ವಿಶ್ವವಿಜಯ್ ಜೊತೆಯಲ್ಲಿ ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತೆ, ಅಲ್ಲದೆ ದಸ್ತಕ್ ಎಂಬ ಪತ್ರಿಕೆಯ ಸಂಪಾದಕಿ. 2010 ರಲ್ಲಿ ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಮತ್ತು ನಲವತ್ತು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡ ಉತ್ತರ ಪ್ರದೇಶದ ಪೊಲೀಸರು ಈ ದಂಪತಿಗಳನ್ನು ಮಾವೋವಾದಿ ನಕ್ಸಲ್ ಸಂಘಟನೆಯ ಬೆಂಬಲಿಗರು ಎಂಬ ಆರೋಪದಡಿ ಬಂಧಿಸಿದ್ದಾರೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅಲಹಾಬಾದ್ ಸ್ಥಳೀಯ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ದಂಪತಿಗಳು ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಮುಂದುವರೆದಿದೆ. ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಇತ್ತು ಎನ್ನುವುದಾದರೆ, ಅದು ಪೊಲೀಸರ ದೃಷ್ಟಿಯಲ್ಲಿ ಅಪರಾಧ ಎನ್ನುವುದಾದರೆ, ಸಾವಿರಾರು ಪುಟಗಳಷ್ಟು ಮಾಹಿತಿ ಇಟ್ಟುಕೊಂಡು ಬರೆಯುತ್ತಿರುವ ನಾನು ಮತ್ತು ಈ ಕ್ಷಣದಲ್ಲಿ ಇದನ್ನು ಓದುತ್ತಿರುವ ನೀವೂ ಕೂಡ ಅಪರಾಧಿಗಳು. ಹಿಂಸೆಯನ್ನು ಹತ್ತಿಕ್ಕಲು ಹಿಂಸೆಯ ಹಾದಿ ಪರ್ಯಾಯವಲ್ಲ. ಆದರೆ, ಪೊಲೀಸರು ಈ ಹಾದಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವರ್ತಮಾನದ ದುರಂತ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನ ಮನೆಯಲ್ಲಿ ಸಿಕ್ಕ ನಕ್ಸಲ್ ಸಾಹಿತ್ಯವೆಂದರೆ, ಭಗತ್ ಸಿಂಗನ ಆತ್ಮಚರಿತ್ರೆ, ಮತ್ತು 200 ಗ್ರಾಂ ಚಹಾಪುಡಿ ಮಾತ್ರ. ಆದರೂ ಆತ ಸೆರೆಮನೆಗೆ ದೂಡಲ್ಪಟ್ಟ.

ಈಗಲೂ ನಕ್ಸಲರು ಹಿಂಸೆಯನ್ನು ಮುಂದುವರೆಸುತ್ತಿರುವುದಕ್ಕೆ (ವಿಶೇಷವಾಗಿ ಗಿರಿಜನರಿರುವ ಪ್ರದೇಶಗಳಲ್ಲಿ) ಮತ್ತು ಅದಕ್ಕೆ ಈ ವ್ಯವಸ್ಥೆ ಮತ್ತು ಪೋಲಿಸರ ಅಮಾನುಷ ದೌರ್ಜನ್ಯವೂ ಒಂದು ಪ್ರಮುಖ ಕಾರಣವಾಗಿ ಹೇಗೆ ಪೂರಕವಾಗಿದೆ ಎಂಬ ಪ್ರಶ್ನೆಗಳಿಗೆ ಈ ಮೇಲಿನ ಘಟನೆಗಳು ನಮಗೆ ಕೆಲವೊಂದು ಉತ್ತರಗಳನ್ನು ಕೊಡಬಲ್ಲವು. ಹಾಗೇಯೇ, ಈ ಸಮಸ್ಯೆಗೆ ಒಂದಷ್ಟು ಪರಿಹಾರದ ದಾರಿಗಳನ್ನೂ.

(ಮುಂದುವರೆಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-12)


– ಡಾ.ಎನ್.ಜಗದೀಶ್ ಕೊಪ್ಪ


1960ರ ದಶಕದಲ್ಲಿ ಹಿಂಸಾತ್ಮಕ ಘಟನೆಗಳ ಮೂಲಕ ಬೆಂಕಿ, ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟಕ್ಕೆ 70ರ ದಶಕದ ನಂತರ ಚಾರು ಮತ್ತು ಅವನ ಸಂಗಡಿಗರ ಹತ್ಯೆಯಿಂದಾಗಿ ಹಿನ್ನಡೆಯುಂಟಾಯಿತು. ಚಾರು ಮುಜುಂದಾರ್ ಮತ್ತು ವೆಂಪಟಾಪು ಸತ್ಯನಾರಾಯಣ ಇವರಿಬ್ಬರೂ ಕನಸು ಕಂಡಿದ್ದಂತೆ ಕೃಷಿಕೂಲಿ ಕಾರ್ಮಿಕರ ಹಾಗೂ ಆದಿವಾಸಿಗಳ ಬದುಕು ಹಸನಾಗದಿದ್ದರೂ ಅವರುಗಳ ಸಾಮಾಜಿಕ ಬದುಕಿನಲ್ಲಿ ಒಂದು ಮಹತ್ತರ ಬದಲಾವಣೆಯ ಕ್ರಾಂತಿಗೆ ನಕ್ಸಲ್ ಹೋರಾಟ ಕಾರಣವಾಯಿತು.

ನಕ್ಸಲ್ ಹೋರಾಟಕ್ಕೆ ಮುನ್ನ ಪೂರ್ವ ಮತ್ತು ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ದಲಿತರು, ಹಿಂದುಳಿದವರು, ಹಾಗೂ ಬಡ ಆದಿವಾಸಿಗಳು ಜಮೀನ್ದಾರರ ಪಾಳೇಗಾರ ಸಂಸ್ಕೃತಿಯಿಂದ ನಲುಗಿಹೋಗಿದ್ದರು. ಯಾರೊಬ್ಬರು ತಲೆಗೆ ಮುಂಡಾಸು ಕಟ್ಟುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಧರಿಸುವಂತಿರಲಿಲ್ಲ, ತಮ್ಮ ಮನೆಯ ಒಳಗೆ ಅಥವಾ ಹೊರಗೆ ಚಾರ್ ಪಾಯ್ ಮಂಚ ಬಳಸುವಂತಿರಲಿಲ್ಲ. (ತೆಂಗಿನ ಅಥವಾ ಸೆಣಬಿನ ನಾರು ಹಗ್ಗದಲ್ಲಿ ನೇಯ್ದು ಮಾಡಿದ ಮಂಚ. ಈಗಿನ ಹೆದ್ದಾರಿ ಪಕ್ಕದ ಡಾಬಗಳಲ್ಲಿ ಇವುಗಳನ್ನು ಕಾಣಬಹುದು) ಅಷ್ಟೇ ಏಕೆ? ತಮ್ಮ ಸೊಂಟಕ್ಕೆ ಪಂಚೆ ಅಥವಾ ಲುಂಗಿ ಕಟ್ಟುವಂತಿರಲಿಲ್ಲ. ನಕ್ಸಲರ ಆಗಮನದಿಂದಾಗಿ, ಆಂಧ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ಶತ ಶತಮಾನಗಳ ಕಾಲ ಮುಕ್ತ ಪ್ರಾಣಿಗಳಂತೆ ಬದುಕಿದ್ದ ಬಡಜನತೆ ತಲೆ ಎತ್ತಿ ನಡೆಯುವಂತಾಯಿತು. ನಾವು ಸಿಡಿದೆದ್ದರೆ, ಭೂಮಿಯನ್ನು ತಲೆಕೆಳಗಾಗಿ ಮಾಡಬಲ್ಲೆವು ಎಂಬ ಆತ್ಮ ವಿಶ್ವಾಸವನ್ನು ನಕ್ಸಲ್ ಹೋರಾಟ ದೀನದಲಿತರಿಗೆ ತಂದುಕೊಟ್ಟಿತು. ನಕ್ಸಲಿಯರ ಈ ಹೋರಾಟ ಚಾರುವಿನ ಅನಿರೀಕ್ಷಿತ ಸಾವಿನಿಂದಾಗಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಬಹುತೇಕ ಕವಲು ಹಾದಿಯಲ್ಲಿ ಸಾಗಿತು. ಏಕೆಂದರೆ, ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಞಾಸೆ ಮೂಡಿ, ಭಿನ್ನಭಿಪ್ರಾಯಕ್ಕೆ ಕಾರಣವಾಯಿತು. ಚಾರು ಮುಜುಂದಾರ್ ಕನಸಿದ್ದ ಹೋರಾಟದ ಮಾರ್ಗವನ್ನು (ಗೆರಿಲ್ಲಾ ಯುದ್ಧ ತಂತ್ರ ಮತ್ತು ಹಿಂಸೆ) ತುಳಿಯಲು ಹಲವು ನಾಯಕರಿಗೆ ಇಷ್ಟವಿರಲಿಲ್ಲ. ಚಾರು ರೂಪಿಸಿದ್ದ ಹೋರಾಟದ ಮೂರು ಮುಖ್ಯ ಸೂತ್ರಗಳೆಂದರೆ,

  • ಪ್ರತಿ ಹಂತದಲ್ಲಿ ಸಶಸ್ತ್ರಗಳನ್ನು ಬಳಸಿ, ಕಾರ್ಯಕರ್ತರ ಮನಸ್ಸನ್ನು ಸದಾ ಶತ್ರುಗಳ ವಿರುದ್ದ ಉನ್ಮಾದದ ಸ್ಥಿತಿಯಲ್ಲಿ ಇಡಬೇಕು. ಇದಕ್ಕಾಗಿ ಪ್ರತಿದಿನ ಭೂ ಮಾಲೀಕರ ಪಾಳೆಗಾರ ಸಂಸ್ಕೃತಿಯ ವಿರುದ್ಧ ಯುದ್ಧ ಜರುಗುತ್ತಲೇ ಇರಬೇಕು.
  • ನಕ್ಸಲ್ ಹೋರಾಟಕ್ಕೆ ಎಲ್ಲಾ ವಿದ್ಯಾವಂತ ವರ್ಗ ಧುಮುಕುವಂತೆ ಪ್ರೇರೇಪಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಗರಗಳಲ್ಲಿ ಗುಪ್ತ ಸಭೆಗಳನ್ನು ನಡೆಸಬೇಕು. ಅವರುಗಳಿಗೆ ಬಡವರ ಬವಣೆಗಳನ್ನು ಮನಮುಟ್ಟುವಂತೆ ವಿವರಿಸಬೇಕು. ಪ್ರತಿ ನಗರ ಹಾಗೂ ಪಟ್ಟಣಗಳಲ್ಲಿ ನಾಲ್ಕು ಅಥವಾ ಐದು ಜನರ ತಂಡವನ್ನು ತಯಾರಿಸಿ ನಕ್ಸಲ್ ಸಿದ್ಧಾಂತ ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು.
  • ಗ್ರಾಮಗಳಲ್ಲಿ ಕೃಷಿಕರು, ಕೂಲಿಗಾರರು ಇವರುಗಳನ್ನು ಸಂಘಟಿಸಿ, ಸಣ್ಣ ಮಟ್ಟದ ರ್‍ಯಾಲಿಗಳನ್ನು ನಡೆಸುವುದರ ಮೂಲಕ ಅವರುಗಳಿಗೆ ಶ್ರೀಮಂತರ ಸುಲಿಗೆ, ಸರ್ಕಾರದ ಇಬ್ಬಂದಿತನ, ಇವುಗಳನ್ನು ವಿವರಿಸಿ, ಅವರನ್ನು ಶೋಷಣೆಯಿಂದ ಮುಕ್ತರಾಗಲು ಹೋರಾಟವೊಂದೇ ಅಂತಿಮ ಮಾರ್ಗ ಎಂಬ ಮನಸ್ಥಿತಿಗೆ ತಂದು ನಿಲ್ಲಿಸಬೇಕು.

ಆದರೆ, ಇವುಗಳನ್ನು ಅನುಷ್ಠಾನಗೊಳಿಸಲು ಕೆಲವು ನಾಯಕರಿಗೆ ಮನಸ್ಸಿರಲಿಲ್ಲ.

ಚಾರು ಮುಜುಂದಾರ್‌ಗೆ 1975 ರ ಒಳಗೆ ಇಡೀ ಭಾರತವನ್ನು ಮಾವೋವಾದಿ ಕಮ್ಯೂನಿಷ್ಟರ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹೆಬ್ಬಯಕೆ ಇತ್ತು. ಈ ಕಾರಣಕ್ಕಾಗಿ ಅವನು ಯುವಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದ. ವಸಾಹತು ಕಾಲದಲ್ಲಿ ಬ್ರಿಟಿಷರ ಶೋಷಣೆ, ಸ್ವಾತಂತ್ರ್ಯದ ನಂತರದ ಶ್ರೀಮಂತ ಭೂಮಾಲೀಕರು, ಮತ್ತು ಭ್ರಷ್ಟ ಅಧಿಕಾರಿಗಳ ಶೋಷಣೆಯ ಬಗ್ಗೆ ಯುವ ಜನಾಂಗಕ್ಕೆ ಮನಮುಟ್ಟುವಂತೆ ತಲುಪಿಸುವಲ್ಲಿ ಅವನು ಯಶಸ್ವಿಯಾದ. ಜೊತೆಗೆ ರಾಷ್ಟ್ರೀಯ ನಾಯಕರ ಬಗ್ಗೆ ವಿಶೇಷವಾಗಿ, ಗಾಂಧಿ, ನೆಹರೂ, ಪಟೇಲ್, ರವೀಂದ್ರನಾಥ ಟ್ಯಾಗೂರ್, ಈಶ್ವರ ಚಂದ್ರ ವಿದ್ಯಾಸಾಗರ್ ಇವರುಗಳ ಬಗ್ಗೆ ಯುವಜನಾಂಗದಲ್ಲಿ ಇದ್ದ ಗೌರವ ಭಾವನೆಯನ್ನು ಅಳಿಸಿಹಾಕಿದ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದ ಬಡ ರೈತರ ಬಗ್ಗೆ, ಕೃಷಿಕೂಲಿ ಕಾರ್ಮಿಕರ ಬಗ್ಗೆ ಧ್ವನಿ ಎತ್ತದ ಈ ನಾಯಕರುಗಳೆಲ್ಲಾ ಚಾರುವಿನ ದೃಷ್ಟಿಯಲ್ಲಿ ಸೋಗಲಾಡಿತನದ ವ್ಯಕ್ತಿಗಳು ಎಂಬಂತಾಗಿದ್ದರು. ಚಾರುವಿನ ಪ್ರಚೋದನಕಾರಿ ಭಾಷಣ ಪಶ್ಚಿಮ ಬಂಗಾಳದಲ್ಲಿ ಹಲವು ಬಿಸಿ ರಕ್ತದ ತರುಣರನ್ನು ನಕ್ಸಲ್ ಹೋರಾಟಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಪೊಲೀಸ್ ಠಾಣೆಗಳನ್ನು, ಮತ್ತು ಸರ್ಕಾರಿ ಕಚೇರಿ ಕಟ್ಟಡಗಳನ್ನು ಚಾರು ಹಿಂಸಾತ್ಮಕ ದಾಳಿಗೆ ಗುರಿಯಾಗಿರಿಸಿಕೊಂಡಿದ್ದ. ಇದಕ್ಕೆ ಮೂಲ ಕಾರಣ, ಒಂದು ಕಡೆ ಸರ್ಕಾರದ ನೈತಿಕತೆಯನ್ನು ಕುಗ್ಗಿಸುತ್ತಾ, ಇನ್ನೊಂದೆಡೆ, ಸಂಘಟನೆಗೆ ಬೇಕಾದ ಬಂದೂಕಗಳು ಮತ್ತು ಗುಂಡುಗಳನ್ನು ಅಪಹರಿಸುವುದು ಅವನ ಉದ್ದೇಶವಾಗಿತ್ತು.

ಚಾರು ಮುಜುಂದಾರ್ ತಾನು ಪೊಲೀಸರಿಂದ 1971 ರಲ್ಲಿ ಹತ್ಯೆಯಾಗುವ ಮುನ್ನ, ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಕೇವಲ ಒಂದು ವರ್ಷದ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 3200 ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿದ್ದ. ಕೊಲ್ಕತ್ತ ನಗರವೊಂದರಲ್ಲೇ ಕಾರ್ಯಕರ್ತರು ಸೇರಿದಂತೆ ಒಟ್ಟು 139 ಮಂದಿ ಹತ್ಯೆಯಾದರು. ಇವರಲ್ಲಿ 78 ಮಂದಿ ಪೊಲೀಸರು ನಕ್ಸಲ್ ದಾಳಿಗೆ ಬಲಿಯಾದರು. ನಕ್ಸಲರು ಒಂದು ವರ್ಷದಲ್ಲಿ ಪೊಲೀಸ್ ಠಾಣೆಗಳಿಂದ 370 ಬಂದೂಕುಗಳನ್ನು ಅಪಹರಿಸುವಲ್ಲಿ ಯಶಸ್ವಿಯಾದರು. ಪಶ್ಚಿಮ ಬಂಗಾಳದ ಹೋರಾಟ ಪರೋಕ್ಷವಾಗಿ ಬಿಹಾರ್ ಮತ್ತು ಆಂಧ್ರ ರಾಜ್ಯದಲ್ಲಿ ಪರಿಣಾಮ ಬೀರಿ. ಅಲ್ಲಿಯೂ ಕೂಡ ಕ್ರಮವಾಗಿ 220 ಮತ್ತು 70 ಹಿಂಸಾತ್ಮಕ ಘಟನೆಗಳು ಜರುಗಿದವು. ಇದು ಅಂತಿಮವಾಗಿ ಚಾರುವಿನ ಹತ್ಯೆಗೆ ಪಶ್ಚಿಮ ಬಂಗಾಳದ ಪೊಲೀಸರನ್ನು ಪ್ರಚೋದಿಸಿತು.

ಚಾರುವಿನ ಸಾವಿನ ನಂತರ ಮಾವೋವಾದಿ ಸಂಘಟನೆ ಎರಡನೇ ವರ್ಗದ ನಾಯಕರ ಸ್ವಾರ್ಥ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಒಟ್ಟು 30 ಗುಂಪುಗಳಾಗಿ ಸಿಡಿದುಹೋಯಿತು. ಎಲ್ಲರ ಗುರಿ ಒಂದಾದರೂ ಕೂಡ ಬಹುತೇಕ ನಾಯಕರು ಹೋರಾಟದ ಮುಂಚೂಣಿಗೆ ಬರುವ ಆಸೆಯಿಂದ, ನಮ್ಮ ಕರ್ನಾಟಕದ ರೈತಸಂಘ, ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಗಳ ಮಾದರಿಯಲ್ಲಿ  ಒಡೆದು ಚೂರಾಯಿತು. ಇವುಗಳಲ್ಲಿ ಮುಖ್ಯವಾಗಿ ಚಾರುವಿನ ಸಿದ್ಧಾಂತವನ್ನು ಒಪ್ಪಿಕೊಂಡ ಒಂದು ಸಂಘಟನೆ ಹಾಗೂ ವಿರೋಧಿಸುವ ಇನ್ನೊಂದು ಸಂಘಟನೆ ಇವೆರಡು ಮಾತ್ರ ಜೀವಂತವಾಗಿ ನಕ್ಸಲ್ ಚಳವಳಿಯನ್ನು ಮುಂದುವರಿಸಿದವು. ಉಳಿದವುಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ಆಯಾ ಪ್ರಾಂತ್ಯಗಳಿಗೆ ಸೀಮಿತವಾದವು.

ನಕ್ಸಲ್ ಹೋರಾಟವನ್ನು ಮುನ್ನಡೆಸುತ್ತಾ, ಮಾವೋತ್ಸೆ ತುಂಗನ ಪರಮ ಆರಾಧಕನಾಗಿದ್ದ ಚಾರು ಮುಜುಂದಾರ್ ಹೋರಾಟದ ಉನ್ಮಾದದಲ್ಲಿ ಮಾವೋನ ಪ್ರಮುಖ ಸಿದ್ಧಾಂತವನ್ನು ಮರೆತದ್ದು ಪ್ರಥಮ ಹಂತದ ಹೋರಾಟದ ಯಶಸ್ವಿಗೆ ಅಡ್ಡಿಯಾಯಿತು. ಮಾವೋತ್ಸೆ ತುಂಗನ ಪ್ರಕಾರ, ಕಮ್ಯೂನಿಷ್ಟರು ಭವಿಷ್ಯ ನುಡಿಯುವ ಜೋತಿಷಿಗಳಲ್ಲ. ಅವರು ಸಮಾಜ ಮತ್ತು ಜನತೆ ಸಾಗಬೇಕಾದ ದಿಕ್ಕನ್ನು ಮತ್ತು ಮಾರ್ಗವನ್ನು ತೋರುವವರು ಮಾತ್ರ. ಕಮ್ಯೂನಿಷ್ಟರು ಅಭಿವೃದ್ಧಿಗೆ ಮಾರ್ಗದರ್ಶಕರೇ ಹೊರತು, ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ಗುರಿ ತಲುಪಬೇಕೆಂಬ ಹುಚ್ಚು ಆವೇಶವನ್ನು ಇಟ್ಟುಕೊಂಡವರಲ್ಲ. ಚಾರು, ಮಾವೋನ ಇಂತಹ ಮಾತುಗಳನ್ನು ಮರೆತ ಫಲವೋ ಏನೊ, ಪರೋಕ್ಷವಾಗಿ ದುರಂತ ಸಾವನ್ನು ಕಾಣಬೇಕಾಯಿತು.

ಇದೇ ವೇಳೆಗೆ 1970ರ ಆಗಸ್ಟ್ 11 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಜ್ಯಸಭೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ದೇಶಾದ್ಯಂತ ನಕ್ಸಲಿಯ ಚಟುವಟಿಕೆಗಳನ್ನು ಹತ್ತಿಕ್ಕಲು ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಣೆಗೆ ಆದೇಶ ನೀಡಿದರು. ಅರೆಸೇನಾಪಡೆ ಮತ್ತು ಆಯಾ ರಾಜ್ಯಗಳ ವಿಶೇಷ ಪೊಲೀಸ್ ಪಡೆಯೊಂದಿಗೆ “ಆಪರೇಷನ್ ಸ್ಟೀಪಲ್ ಚೇಸ್” ಎಂಬ ಹೆಸರಿನಲ್ಲಿ ಪ್ರಾರಂಭವಾದ ಕಾರ್ಯಾಚರಣೆಯಿಂದಾಗಿ 1971ರ ಜುಲೈನಲ್ಲಿ ಸಂಭವಿಸಿದ ಚಾರುವಿನ ಮರಣಾನಂತರ, ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ಚಳವಳಿಯ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಯಿತು. ನಕ್ಸಲ್ ಹೋರಾಟ ಮುಗಿಸಲು ಹೋರಾಡಿ ಎಂದು ಇಂದಿರಾ ನೀಡಿದ ಕರೆಗೆ ಅಭೂತಪೂರ್ವ ಯಸಸ್ಸು ದೊರಕಿತು. ದೇಶದ ಎಲ್ಲಾ ನಕ್ಸಲ್ ನಾಯಕರು ಬಂಧಿತರಾಗಿ ಸರೆಮನೆಗೆ ತಳ್ಳಲ್ಪಟ್ಟರು. ಪ್ರಮುಖ ನಾಯಕರಾದ ಕನುಸನ್ಯಾಲ್, ಜಂಗಲ್ ಸಂತಾಲ್, ನಾಗಭೂಷಣ್ ಪಟ್ನಾಯಕ್, ಕುನ್ನಿಕಲ್ ನಾರಾಯಣನ್, ಅಶೀಮ್ ಚಟರ್ಜಿ, ಹೀಗೆ, ಆಂಧ್ರದಲ್ಲಿ 1400, ಬಿಹಾರದಲ್ಲಿ 2000, ಪಶ್ಚಿಮ ಬಂಗಾಳದಲ್ಲಿ 4000, ಕೇರಳ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾದಲ್ಲಿ 1000 ಮಂದಿ ನಕ್ಸಲ್ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರುಗಳನ್ನು ಬಂಧಿಸಲಾಯಿತು. ಇದರಿಂದಾಗಿ ಸುಮಾರು ಆರು ವರ್ಷಗಳ ಕಾಲ (1971 ರಿಂದ 1977 ರ ವರೆಗೆ) ನಕ್ಸಲ್ ಹೋರಾಟಕ್ಕೆ ಹಿನ್ನಡೆಯುಂಟಾಯಿತು.

ಈ ನಡುವೆ ಚಾರು ಸಿದ್ಧಾಂತದಿಂದ ದೂರವಾಗಿ ತಮ್ಮದೇ ಬಣಗಳನ್ನು ಕಟ್ಟಿಕೊಂಡಿದ್ದ ಹಲವರು ನಕ್ಸಲ್ ಹೋರಾಟವನ್ನು ಜೀವಂತವಾಗಿ ಇಡುವಲ್ಲಿ ಸಫಲರಾದರು. ಚಾರು ಸಿದ್ಧಾಂತವನ್ನು ಒಪ್ಪಿಕೊಂಡವರು ಲಿನ್ ಬಯೋ ಗುಂಪು ಎಂದೂ, ವಿರೋಧಿ ಬಣವನ್ನು ಲಿನ್ ಬಯೋ ವಿರೋಧಿ ಬಣವೆಂದು ಕರೆಯುವ ವಾಡಿಕೆ ಆದಿನಗಳಲ್ಲಿ ಚಾಲ್ತಿಯಲ್ಲಿತ್ತು. (ಲಿನ್ ಬಯೋ ಎಂಬಾತ ಚೀನಾದಲ್ಲಿ ಮಾವೋ ನಂತರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಮ್ಯೂನಿಷ್ಟ್ ನಾಯಕ.) ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಾದ ಅಹಿರ್, ಕುರ್ಮಿಸ್ ಮತ್ತು ಕೊಯಿರಿಸ್ ಜಾತಿಯ ಜನರನ್ನ ಜಗದೀಶ್ ಮಾತೊ ಎಂಬ ಶಿಕ್ಷಕ ಸಂಘಟಿಸಿ ಹೋರಾಟಕ್ಕೆ ಚಾಲನೆ ನೀಡಿದ. ಇವನಿಗೆ ರಾಮೇಶ್ವರ್ ಅಹಿರ್ ಎಂಬಾತ ಜೊತೆಯಾಗಿ ನಿಂತ. ಇವರಿಬ್ಬರ ಮುಖ್ಯ ಗುರಿ, ಕೆಳಜಾತಿಯ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದ ಭೂಮಾಲೀಕರುಗಳನ್ನ ನಿರ್ನಾಮ ಮಾಡುವುದೇ ಆಗಿತ್ತು. ದೇಶದ ಪ್ರಮುಖ ನಕ್ಸಲ್ ನಾಯಕರಲ್ಲಾ ಬಂಧಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವಾಗ ಇವರಿಬ್ಬರು ಸಾರಿದ ಸಮರ ಬಿಹಾರ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವನ್ನೂ ನಡುಗಿಸಿತು. 1971 ರಿಂದ 77 ರ ಅವಧಿಯಲ್ಲಿ ಇವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 90 ಮಂದಿ ಭೂಮಾಲೀಕರು ನಿರ್ಧಯವಾಗಿ ಕೊಲ್ಲಲ್ಪಟ್ಟರು. ಕೊನೆಗೆ ಬಿಹಾರ ಪೊಲೀಸರು ‘ಆಪರೇಷನ್ ಥಂಡರ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜಗದೀಶ್ ಮಾತೊ, ಮತ್ತು ರಾಮೇಶ್ವರ್ ಅಹಿರ್ ಇಬ್ಬರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವುದರೊಂದಿಗೆ ನಕ್ಸಲ್ ಹೋರಾಟವನ್ನು ಸದೆಬಡಿದರು.

ಈ ನಡುವೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲೂ ಸಹ ಚಾರು ಸಿದ್ಧಾಂತವನ್ನು ವಿರೋಧಿಸಿ ಹೊರಬಂದಿದ್ದ ನಕ್ಸಲರ ಬಣವೊಂದು ನಾಗಿರೆಡ್ಡಿಯ ನೇತೃತ್ವದಲ್ಲಿ ಸಂಘಟಿತವಾಯಿತು. ಇದೇ ರೀತಿ ಮತ್ತೇ ಬಿಹಾರದಲ್ಲಿ ಸತ್ಯನಾರಾಯಣಸಿಂಗ್ ನೇತೃತ್ವದಲ್ಲಿ ನಕ್ಸಲ್ ಬಣವೊಂದು ತಲೆಎತ್ತಿತು. ನಕ್ಸಲ್ ಚಳವಳಿಯಲ್ಲಿ ಚಾರು ಮುಜುಂದಾರ್ ಉಗ್ರವಾದದ ಹೋರಾಟವನ್ನು ಅಳಿಸಿ ಹಾಕಿ, ಸಮಾಜದ ಎಲ್ಲಾ ವರ್ಗದ ಜನತೆಯ ವಿಶ್ವಾಸಗಳಿಸಿಕೊಂಡು ಹೋರಾಟವನ್ನು ಮುನ್ನೆಡಸಬೇಕೆಂಬುದು, ಸತ್ಯನಾರಾಯಣಸಿಂಗ್‌ನ ಆಶಯವಾಗಿತ್ತು. ಈ ಕಾರಣಕ್ಕಾಗಿ ಅವನು ಮೊದಲು ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದ. 1975ರ ಆ ದಿನಗಳಲ್ಲಿ ನಕ್ಸಲ್ ಹೋರಾಟವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟದ ಮೂಲಕ ಕೊಂಡೊಯ್ಯಬೇಕೆಂಬುದು ಅವನ ಕನಸಾಗಿತ್ತು. ಸಾಧ್ಯವಾದರೆ, ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಚುನಾವಣೆಗೆ ನಿಂತು, ದಲಿತರು ಮತ್ತು ಬಡವರ ಶೋಷಣೆಯ ವಿರುದ್ಧ ಜನಪ್ರತಿನಿಧಿಗಳ ಸಭೆಯಲ್ಲಿ ಹೋರಾಡಬೇಕೆಂದು ಸತ್ಯನಾರಾಯಣ ಸಿಂಗ್ ಕರೆಯಿತ್ತ. ಈತನ ಹಲವಾರು ವಿಚಾರಗಳಿಗೆ ನಾಯಕರು ವಿಶೇಷವಾಗಿ ಕನುಸನ್ಯಾಲ್, ಅಶೀಮ್ ಚಟರ್ಜಿ, ನಾಗಭೂಷಣ್ ಪಟ್ನಾಯಕ್ ಮುಂತಾದವರು ಜೈಲಿನಿಂದಲೇ ತಮ್ಮ ವಿರೋಧ ವ್ಯಕ್ತಪಡಿಸಿದರು.

1975 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಎಲ್ಲಾ ರಾಜ್ಯಗಳಲ್ಲಿ ತಲೆ ಎತ್ತಿರುವ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಇದರಿಂದಾಗಿ ಹೊರಗೆ ಉಳಿದಿದ್ದ ಇನ್ನಿತರೆ 650 ಮಂದಿ ನಾಯಕರೂ ಸಹ ಜೈಲು ಸೇರಬೇಕಾಯಿತು. ಯಾವುದೇ ಹಿಂಸೆಯ ಘಟನೆಯಲ್ಲಿ ಪಾಲ್ಗೊಳ್ಳದ ಸತ್ಯನಾರಾಯಣ ಸಿಂಗ್ ಬಿಹಾರ ರಾಜ್ಯದಲ್ಲಿ ಭೂಗತನಾಗುವುದರ ಮೂಲಕ ಬಂಧನದಿಂದ ತಪ್ಪಿಕೊಂಡ.

1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪತನಗೊಂಡು, ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರದ ಗದ್ದುಗೆ ಹಿಡಿಯಿತು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿ, ಚರಣ್ ಸಿಂಗ್ ಗೃಹ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಮಂತ್ರಿ ಚರಣ್‌ಸಿಂಗ್‌ರವರನ್ನು ಭೇಟಿಯಾದ ಸತ್ಯನಾರಾಯಣಸಿಂಗ್, ಜನತಾ ಪಕ್ಷಕ್ಕೆ ಮಾವೋವಾದಿಗಳ ಕಮ್ಯೂನಿಷ್ಟ ಪಕ್ಷದ ಬೆಂಬಲವಿದೆ ಎಂದು ತಿಳಿಸಿ, ಯಾವ ಕಾರಣಕ್ಕೂ ದೇಶದ ಆಂತರೀಕ ಭದ್ರತೆಗೆ ಧಕ್ಕೆಯುಂಟುಮಾಡುವುದಿಲ್ಲ ಎಂದು ಭರವಸೆ ನೀಡಿದ; ಅಲ್ಲದೆ ಮಿಸಾ ಅಡಿ ಬಂಧನದಲ್ಲಿರುವ ನಕ್ಸಲ್ ನಾಯಕರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ.

ಲೋಕಸಭೆಯ ಸದಸ್ಯ ಹಾಗೂ ಆಲ್ ಇಂಡಿಯ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ಅಂಡ್ ಡೆಮಾಕ್ರಟಿಕ್ ರೈಟ್ಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೃಷ್ಣಕಾಂತ್ ಇವರ ದೆಹಲಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣ ಸಿಂಗ್, ಹಿಂಸೆ ನಮ್ಮ ಗುರಿಯಲ್ಲ. ಪ್ರಜಾಪ್ರಭುತ್ವದ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲಿಯರ ಬೆಂಬಲವಿದೆ ಎಂದು ಘೋಷಿಸಿದ. ಆದರೆ, ಜೈಲು ಸೇರಿದ್ದ ಬಹುತೇಕ ನಾಯಕರು, ಸರ್ಕಾರದ ಜೊತೆಗಿನ ಮಾತುಕತೆಗೆ ನಮ್ಮ ಸಹ ಮತವಿಲ್ಲ ಎಂದು ಜಂಟಿಹೇಳಿಕೆ ನೀಡಿದರು. ಈ ಹೇಳಿಕೆಗೆ ಕನುಸನ್ಯಾಲ್, ಜಂಗಲ್ ಸಂತಾಲ್, ಅಶೀಮ್ ಚಟರ್ಜಿ ಹಾಗೂ ಸುರೇನ್ ಬೋಸ್ ಮುಂತಾದವರು ಸಹಿ ಹಾಕಿದ್ದರು.

ಅಂತಿಮವಾಗಿ 1977ರ ಮೇ 3 ರಂದು ಪ್ರಧಾನಿ ಮುರಾರ್ಜಿ ದೇಸಾಯಿ ನಕ್ಸಲ್ ನಾಯಕರ ವಿರುದ್ಧ ಇರುವ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದರು. ಈ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ್ದ ಜ್ಯೋತಿಬಸು ತಮ್ಮ ರಾಜ್ಯದಲ್ಲಿ ಬಂಧಿತರಾಗಿದ್ದ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಲ್ಲದೆ, ನೆರೆಯ ಆಂಧ್ರ ಮತ್ತು ಬಿಹಾರ, ಒರಿಸ್ಸಾದಲ್ಲಿ ಬಂಧನದಲ್ಲಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು.

1977ರ ಅಂತ್ಯದ ವೇಳೆಗೆ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತ್ಯನಾರಾಯಣ ಸಿಂಗ್ ಬಣದ ಐವರು ಅಭ್ಯರ್ಥಿಗಳು (ಪ.ಬಂಗಾಳದಲ್ಲಿ ಮೂವರು, ಬಿಹಾರ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು) ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅಂತಿಮವಾಗಿ, ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಕ್ಷೇತ್ರದಿಂದ ನಕ್ಸಲ್ ನಾಯಕ ಸಂತೋಷ್ ರಾಣಾ ಇವನ ಪತ್ನಿ ನಾಗರೀಕ ಹಕ್ಕುಗಳ ಹೋರಾಟಗಾರ್ತಿ, ಜಯಶ್ರೀ ರಾಣಾ ಗೆಲ್ಲುವಲ್ಲಿ ಯಶಸ್ವಿಯಾದಳು.

ಹೀಗೆ ಚಾರು ಮುಜುಂದಾರನ ನಿಧನದ ನಂತರ ಹಲವು ಬಣಗಳಾಗಿ ಸಿಡಿದುಹೋದ ನಕ್ಸಲ್ ಹೋರಾಟ, 1971 ರಿಂದ 1980ರ ವರೆಗೆ ನಿರಂತರ ಒಂಬತ್ತು ವರ್ಷಗಳ ಕಾಲ ನಾಯಕರ ತಾತ್ವಿಕ ಸಿದ್ಧಾಂತ ಮತ್ತು ಆಚರಣೆಗೆ ತರಬೇಕಾದ ಪ್ರಯೋಗಗಳ ಕುರಿತ ಭಿನ್ನಾಭಿಪ್ರಾಯದಿಂದ ತನ್ನ ಶಕ್ತಿ ಮತ್ತು ಸಾಮಥ್ಯವನ್ನು ಕುಂದಿಸಿಕೊಂಡಿತು. ಆದರೆ,  1980ರ ದಶಕದಲ್ಲಿ ಮತ್ತೇ ಫಿನಿಕ್ಸ್ ಹಕ್ಕಿಯಂತೆ ಪ್ರಜಾಸಮರ (ಪೀಪಲ್ಸ್ ವಾರ್ ಗ್ರೂಪ್) ಹೆಸರಿನಲ್ಲಿ ತಲೆ ಎತ್ತಿ ನಿಂತಿತು. ಇದನ್ನು ನಕ್ಸಲ್ ಇತಿಹಾಸದಲ್ಲಿ ಎರಡನೇ ಹಂತದ ಹೋರಾಟ ಎಂದು ಗುರುತಿಸಲಾಗುತ್ತಿದೆ. ಇದರ ಪ್ರಮುಖ ನಾಯಕರು, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಕಿಶನ್ ಜಿ, ರಾಜೇಂದ್ರಕುಮಾರ್ ಭಾಸ್ಕರ್, ಸಾಕೇತ್ ರಾಜನ್, ಸುನೀತ್ ಕುಮಾರ್ ಘೋಸ್ ಮುಂತಾದವರು.

 (ಮೊದಲ ಹಂತದ ಅಂತಿಮ ಅಧ್ಯಾಯ)


ಕೊನೆಯ ಮಾತು- ಪ್ರಿಯ ಓದುಗ ಮಿತ್ರರೇ, ಇಲ್ಲಿಗೆ ನಕ್ಸಲ್ ಇತಿಹಾಸದ ಮೊದಲ ಹಂತದ  ಹನ್ನೆರೆಡು ಅಧ್ಯಾಯಗಳ ಜೊತೆ ನನ್ನ ಕಥನವನ್ನು ಮುಗಿಸುತ್ತಿದ್ದೇನೆ. ಎರಡು ಮತ್ತು ಮೂರನೇ ಹಂತದ ನಕ್ಸಲ್ ಇತಿಹಾಸವನ್ನು ನೀವು ನವಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನನ್ನ ಕೃತಿಯಲ್ಲಿ ಓದಬಹುದು. ಮತ್ತೇ ಒಂದಿಷ್ಟು ಅಧ್ಯಯನಕ್ಕಾಗಿ  ಜುಲೈ ಮೊದಲವಾರ ಮಹಾರಾಷ್ಟ್ರ, ಛತ್ತೀಸ್‌ಘಡ್ ಮತ್ತು ಮಧ್ಯಪ್ರಧೇಶ ರಾಜ್ಯಗಳ ನಡುವೆ ಇರುವ ದಂಡಕಾರಣ್ಯ (ಗಡ್ ಚಿರೋಲಿ, ದಂತೆವಾಡ, ರಾಯ್‌ಪುರ್, ಗೊಂಡಿಯ, ಬಾಳ್‌ಘಾಟ್) ಪ್ರದೇಶಕ್ಕೆ ತೆರಳುತ್ತಿದ್ದೇನೆ. ಜೊತೆಗೆ ಭಾರತದ ನಕ್ಸಲ್ ಪೀಡಿತ ಪ್ರದೇಶಗಳ ಕುರಿತಂತೆ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪ್ರಬಂಧಗಳು “ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್” ಸಂಸ್ಥೆಯಿಂದ ಪ್ರಕಟವಾಗಿವೆ. ಅಲ್ಲದೇ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಯ ಸಮಾಜ ಶಾಸ್ತ್ರಜ್ಞರು ಅಧ್ಯಯನ ಮಾಡಿರುವ ಪೂರ್ವ ಭಾರತದ ಬುಡಕಟ್ಟು ಜನಾಂಗಗಳ ಸ್ಥಿತಿ ಗತಿಯ ಬಗ್ಗೆ ಮಾಡಿರುವ ಅಧ್ಯಯನ ಕೂಡ ಪ್ರಕಟವಾಗಿದೆ. ಸದ್ಯಕ್ಕೆ ಕಥನಕ್ಕೆ ವಿರಾಮ ಹೇಳಿ ಅಧ್ಯಯನದ ಈ ಕೃತಿಗಳನ್ನು ಅವಲೋಕಿಸುತ್ತಿದ್ದೇನೆ.

ನಮಸ್ಕಾರ.
ಡಾ.ಎನ್. ಜಗದೀಶ್ ಕೊಪ್ಪ

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-11)


– ಡಾ.ಎನ್.ಜಗದೀಶ್ ಕೊಪ್ಪ


 

The seed ye sow, another reaps;
The wealth ye find, another keeps;
The robes ye weave, another wears;
The arms ye forge, another bears
-Shelley.

ಇವರ ಮೇಲೆ ದಾಳಿ ಮಾಡಿದ್ದ, ನರಸಿಂಗ್‌ಪುರ್‌ ಗ್ರಾಮದ ಜಮೀನ್ದಾರ ಬಿಜಿಲಿಸಿಂಗ್ ಹಾಗೂ ಅವನ ಸೇವಕರನ್ನು ಹಾಡು ಹಗಲೇ ಬೀದಿಯಲ್ಲಿ ಕೊಚ್ಚಿಹಾಕಿ, ಅವರ ದೇಹದ ತುಂಡುಗಳನ್ನು ರಸ್ತೆಯುದ್ಧಕ್ಕೂ ಬಿಸಾಡಿದರು. ಒಂದು ವರ್ಷ ಪಶ್ಚಿಮ ಬಂಗಾಳ ಮತ್ತು ಆಂಧ್ರದಲ್ಲಿ 1960 ರ ದಶಕದಲ್ಲಿ ಹೊತ್ತಿಕೊಂಡ ನಕ್ಸಲ್ ಹೋರಾಟದ ಕಿಡಿ, 70ರ ದಶಕದ ವೇಳೆಗೆ ಚಳವಳಿಯ ಪ್ರಮುಖ ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಚಾರುಮುಜಂದಾರ್ ಇವರ ಹತ್ಯೆಯಿಂದ ಈ ಎರಡು ರಾಜ್ಯಗಳಲ್ಲಿ ಕೆಲವು ದಿನಗಳ ಕಾಲ ತಣ್ಣಗಾಯಿತಾದರೂ, ಅದು ಭಾರತದ ಹನ್ನೊಂದು ರಾಜ್ಯಗಳಿಗೆ ವ್ಯಾಪಿಸುವಲ್ಲಿ ಸಹಕಾರಿಯಾಯಿತು. ಒರಿಸ್ಸಾ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಮ್, ಜಮ್ಮು, ಕಾಶ್ಮೀರ, ತಮಿಳುನಾಡು, ಕೇರಳ, ರಾಜಸ್ಥಾನ್, ದೆಹಲಿ ರಾಜ್ಯಗಳಿಗೆ ನಕ್ಸಲ್ ಹೋರಾಟದ ಬೆಂಕಿಯ ನದಿ ಹರಿಯಿತಾದರೂ, ಅದು ತನ್ನ ಕಾವನ್ನು ಉಳಿಸಿಕೊಂಡಿದ್ದು, ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ. ಒರಿಸ್ಸಾ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಬೆಂಕಿಯ ಕಾವು ಇನ್ನೂ ಜೀವಂತವಾಗಿದೆ. 70ರ ದಶಕದಲ್ಲಿ ಚಾರುವಿನ ಸಾವಿಗೆ ಮುನ್ನ ಈ ರಾಜ್ಯಗಳಲ್ಲಿ ನಡೆದ ಘಟನೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.

ಬಿಹಾರದ ಮುಜಾಪುರ್ ಜಿಲ್ಲೆಯ ಮುಶ್ರಾಯ್ ಎಂಬ ತಾಲೂಕಿನ ಹಳ್ಳಿಗಳ ಹತ್ತುಸಾವಿರ ಜನತೆ ಪ್ರಪಥಮ ಬಾರಿಗೆ ಜಮೀನ್ದಾರರ ವಿರುದ್ಧ ಸಿಡಿದೆಳುವುದರ ಮೂಲಕ ಬಿಹಾರದಲ್ಲಿ ಕೆಂಪು ಬಾವುಟವನ್ನು ಹಾರಿಸಿದರು. ಇವರೆಲ್ಲರೂ ಭೂಹೀನ ಕೃಷಿ ಕಾಮರ್ಮಿಕರಾಗಿದ್ದು, ದಲಿತ ವರ್ಗಕ್ಕೆ ಸೇರಿದವರಾಗಿದ್ದರು. ಉತ್ತರ ಬಿಹಾರದ ಈ ಪ್ರಾಂತ್ಯದ ಜನ, ಪಶ್ಚಿಮ ಬಂಗಾಳದ ಸಿಲಿಗುರಿಯ ನಕ್ಸಲ್‌ಬಾರಿ ಹಳ್ಳಿಯಲ್ಲಿ ನಡೆದ ಘಟನೆಯಿಂದ ಪ್ರೇರಿತರಾಗಿದ್ದು ವಿಶೇಷ. ಮೊದಲಿಗೆ ಗಂಗಾಪುರ್ ಎಂಬ ಸಾಮಾನ್ಯ ಹಳ್ಳಿಯಲ್ಲಿ ಕೃಷಿಕಾರ್ಮಿಕರು, 1968ರ ಏಪ್ರಿಲ್ ತಿಂಗಳಿನಲ್ಲಿ  ಜಮೀನ್ದಾರನ ಹೊಲಕ್ಕೆ ದಾಳಿ ಇಟ್ಟು, ಬೆಳೆದಿದ್ದ ಅರಾರ್ ಎಂಬ ದ್ವಿದಳ ಧಾನ್ಯದ ಬೆಳೆಯನ್ನು ಕುಯಿಲು ಮಾಡಿ ಕೊಂಡೊಯ್ದರು. ಇದರಿಂದ ಸಿಟ್ಟಿಗೆದ್ದ ಬಿಜಿಲಿಸಿಂಗ್ ಎಂಬ ಜಮೀನ್ದಾರ, ಮುನ್ನೂರು ಗೂಂಡಾ ಸೇವಕರನ್ನು ಕರೆದು ಕೊಂಡು, ಆನೆಯ ಮೇಲೆ, ಕಲ್ಲು, ಬಡಿಗೆ, ಇವುಗಳನ್ನು ಹೇರಿಕೊಂಡು ಬಂದು, ಹಳ್ಳಿಗಳಿಗೆ ದಾಳಿ ಇಟ್ಟು, ಎಲ್ಲಾ ದಲಿತ ಕೂಲಿ ಕಾರ್ಮಿಕರನ್ನ ಮನಸೋ ಇಚ್ಚೆ ಥಳಿಸಿದ.

ಈ ಘಟನೆ ಇಡೀ ಪ್ರಾಂತ್ಯದ ರೈತರು ಮತ್ತು ಕೂಲಿ ಕಾರ್ಮಿಕರನ್ನು ಕೆರಳಿಸಿತು. ಹನ್ನೆರೆಡು ಹಳ್ಳಿಗಳ ಎಲ್ಲಾ ದಲಿತರು, ರೈತರು, ಸಂಘಟಿತರಾಗಿ, ಸತ್ಯನಾರಾಯಣಸಿಂಗ್ ಎಂಬಾತನ ನೇತೃತ್ವದಲ್ಲಿ  “ಕಿಸಾನ್ ಸಂಗ್ರಾಮ್ ಸಮಿತಿ” ಮತ್ತು “ಗ್ರಾಮ್ ರಕ್ಷಣ್ ದಳ್” ಎಂಬ ಹೆಸರಿನಲ್ಲಿ ಸಮಿತಿಗಳನ್ನು ರಚಿಸಿಕೊಂಡರು. ಇವರಿಗೆ ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿ ನೀಡಲು, ನೆರೆಯ ಪಶ್ಚಿಮಬಂಗಾಳದಿಂದ ನಾಯಕರು ಬಂದು, ದಾಳಿಗೆ ಮಾರ್ಗದರ್ಶನ ನೀಡಿದರು. 1969 ಜನವರಿ ವೇಳೆಗೆ ಚಂಡಮಾರುತದಂತೆ ಉತ್ತರ ಬಿಹಾರವನ್ನು ಆವರಿಸಿಕೊಂಡ ಹೋರಾಟಗಾರರು, ಶೋಷಣೆಯನ್ನೇ ವೃತ್ತಿ ಮಾಡಿಕೊಂಡಿದ್ದ ಭೂಮಾಲಿಕರಿಗೆ, ಬಡ್ಡಿ ಹಣದ ಲೇವಾದೇವಿಗಾರರಿಗೆ ಹಿಂಸೆಯ ರುಚಿಯನ್ನು ಪ್ರಥಮ ಬಾರಿಗೆ ತೋರಿಸಿಕೊಟ್ಟರು. ಹಿಂದೊಮ್ಮೆದ ಅವಧಿಯಲ್ಲಿ ಹದಿಮೂರು ಮಂದಿ ಭೂಮಾಲೀಕರು ಹತ್ಯೆಯಾಗುವುದರ ಮೂಲಕ ಉತ್ತರ ಬಿಹಾರವೆಂದರೆ, ಭೂಮಾಲೀಕರ ರುಧ್ರಭೂಮಿ ಎಂಬಂತಾಯಿತು. ಮುಜಾಪುರ್ ಜಿಲ್ಲೆಯ ಈ ಹೋರಾಟ ಸಹಜವಾಗಿ ದರ್ಭಾಂಗ ಮತ್ತು ಚಂಪಾರಣ್ಯ ಜಿಲ್ಲೆಗಳಿಗೂ ಹರಡಿತು. ಇದರ ಜೊತೆಗೆ ಚೋಟಾ ನಾಗ್ಪುರ್ ಪ್ರದೇಶದಲ್ಲಿ ಆದಿವಾಸಿಗಳ ಪ್ರತ್ಯೇಕ ಹೋರಾಟ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತು. ಎಂ,ಎಂ,ಜಿ. (Man, Money, Gun) ಇದರ ನೇತೃತ್ವವನ್ನು ಬಂಗಾಳಿ ಮೂಲದ ಸುಬೋತ್ರ ರಾಯ್ ಎಂಬಾತ ವಹಿಸಿಕೊಂಡಿದ್ದ. ಈ ತಂಡದ ಬಹುತೇಕ ಸದಸ್ಯರು ನಗರ ಜೀವನದಿಂದ ಬಂದವರಾಗಿದ್ದರಿಂದ ಅರಣ್ಯದಲ್ಲಿ ಅಡಗಿ ಹೋರಾಟ ನಡೆಸಲು ಸಾಧ್ಯವಾಗದೆ, ಅತಿ ಶೀಘ್ರದಲ್ಲಿ ಬಿಹಾರ ಪೊಲೀಸರಿಂದ ಬಂಧಿತರಾದರು. 54 ಮಂದಿ ಬಂಧಿತ ಸದಸ್ಯರಲ್ಲಿ ಮೇರಿ ಟೈಲರ್ ಎಂಬ ಓರ್ವ ಬ್ರಿಟಿಷ್ ಯುವತಿ ಸಿಕ್ಕಿ ಬಿದ್ದುದು ವಿಶೇಷ. (ವಿಚಾರಣೆಯ ನಂತರ ಈಕೆಯನ್ನ ತಾಯ್ನಾಡಿಗೆ ಗಡಿಪಾರು ಮಾಡಲಾಯಿತು)

ಬಿಹಾರ ಪೊಲೀಸರ ಕಾರ್ಯಾಚರಣೆಯ ನಡುವೆಯೂ, ನಕ್ಸಲ್ ಚಳವಳಿ, ರಾಂಚಿ ಮತ್ತು ಸಿಂಘಭೂಮಿ ಜಿಲ್ಲೆಗಳಿಗೆ ಹರಡಿತು. ಇದರಿಂದಾಗಿ ಚೋಟಾ ಕಲ್ಕತ್ತ ಎಂದು ಕರೆಯಲ್ಪಡುತ್ತಿದ್ದ ಜೆಮ್‌ಶೆಡ್‌‍ಪುರ ನಕ್ಸಲ್ ಹಾವಳಿಗೆ ತುತ್ತಾಗಬೇಕಾಯಿತು. 1970ರ ಅಕ್ಡೋಬರ್ ತಿಂಗಳಿನಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಟಾಟ ಕಂಪನಿ ನೌಕರರ ವಸತಿ ಕಾಲೋನಿಯ ಭದ್ರತಾ ದಳದ ಅಧಿಕಾರಿಯೊಬ್ಬನನ್ನು ಹೋರಾಟಗಾರರು ಕೊಂದು ಹಾಕಿದರು. ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡಗಳನ್ನು ಧ್ವಂಸಗೊಳಿಸಿದ ನಕ್ಸಲ್ ಹೋರಾಟಗಾರರು ಜೆಮ್‌ಸೆಡ್‌ಪುರಕ್ಕೆ ತಾವು ಕಾಲಿಟ್ಟರಿವ ಬಗ್ಗೆ ಸರ್ಕಾರಕ್ಕೆ ಪರೋಕ್ಷ ಸೂಚನೆಯನ್ನು ನೀಡಿದ್ದರು. 1971 ರಲ್ಲಿ ಸರ್ಕಾರಕ್ಕೆ ಸೇರಿದ ನಾಲ್ಕು ಸಾರಿಗೆ ಬಸ್ಸುಗಳನ್ನು ಸುಟ್ಟು ಹಾಕಿದ್ದಲ್ಲದೆ,  ಜೆಮ್‌ಸೆಡ್‌ಪುರ ವಿಮಾನ ಕ್ಲಬ್‌ಗೆ ಸೇರಿದ ಪುಷ್ವಕ್ ಎಂಬ ಲಘು ವಿಮಾನವನ್ನು ಬಾಂಬ್ ಇಟ್ಟು ಸ್ಪೋಟಿಸಿದರು. ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಜಿಲ್ಲೆಯ ಗಡಿಭಾಗ ಹೊಂದಿದ್ದ, ಸಿಂಘಭೂಮಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಿಂಸೆ, ಕೊಲೆಯ ಯತ್ನ ಮತ್ತು ಲೂಟಿಗಳು ನಡೆದವು. ಈ ಎಲ್ಲಾ ಘಟನೆಗಳ ಹಿಂದೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ನಕ್ಸಲ್ ನಾಯಕರ ಕೈವಾಡವಿತ್ತು. ಚಾರು ಮುಜಂದಾರ್ ಬೆಂಬಲಿಗರು, ಬಿಹಾರದಲ್ಲಿ ಮೇಲ್ವರ್ಗದ ಜಾತಿ ಮತ್ತು ಶ್ರೀಮಂತ ಸಮುದಾಯದ ಶೋಷಣೆಯಿಂದ ನರಳಿದ್ದ ದಲಿತರಿಗೆ, ಭೂಹೀನ ಕೃಷಿ ಕಾರ್ಮಿಕರಿಗೆ ನಕ್ಸಲ್ ಹೋರಾಟದ ದೀಕ್ಷೆ ನೀಡುವುದರ ಮೂಲಕ ಬಿಹಾರದಲ್ಲಿ ನಕ್ಸಲ್ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಒಂದು ಎನಿಸಿರುವ ಉತ್ತರ ಪ್ರದೇಶಕ್ಕೆ 1970 ರಲ್ಲಿ ಚಾರುವಿನ ಹತ್ಯೆಯ ನಂತರ ನಕ್ಸಲ್ ಹೋರಾಟ ವ್ಯಾಪಿಸಿತು. ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಹಳ್ಳಿಗಳನ್ನ, ಬಡವರನ್ನ, ಮತ್ತು ಹಿಂದುಳಿದ ಜಾತಿಯ ಸಮುದಾಯಗಳನ್ನು ಹೊಂದಿರುವ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನು ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಪಡೆದಿವೆ. ಬಡತನ, ಶೋಷಣೆ ಮತ್ತು ಅನ್ಯಾಯಗಳೇ ತಾಂಡವವಾಡುವ ಈ ಪ್ರದೇಶಗಳಲ್ಲಿ ನಕ್ಸಲ್ ಹೋರಾಟ ಹರಡುವುದು ಕಷ್ಟಕರವೇನಲ್ಲ ಎಂಬ ಸತ್ಯವನ್ನು ಪಶ್ಚಿಮ ಬಂಗಾಳದ ಮತ್ತು ಆಂಧ್ರದ ನಕ್ಸಲ್ ನಾಯಕರು ಚೆನ್ನಾಗಿ ಅರಿತಿದ್ದರು. ಉತ್ತರ ಪ್ರದೇಶದಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಿದ್ದು, ಉತ್ತರ ಭಾಗದ ಲಕ್ಷೀಪುರ್ ಜಿಲ್ಲೆಯಲ್ಲಿ. ಇದು, ತೆಹ್ರಿ ಪ್ರಾಂತ್ಯಕ್ಕೆ ಹೊಂದಿಕೊಂಡಿದ್ದು, ಅರಣ್ಯ ಪ್ರದೇಶದಿಂದ ಆವೃತ್ತವಾಗಿದೆ. ಥಾರುಸ್ ಎಂಬ ಬುಡಕಟ್ಟು ಜನಾಂಗ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ, 1960ರ ದಶಕದಲ್ಲಿ ಉತ್ತರಪ್ರದೇಶ ಸರ್ಕಾರ ಆದಿವಾಸಿಗಳಿಗೆ ಒಂದು ವಿಶೇಷ ಕಾನೂನನ್ನು ರೂಪಿಸಿತ್ತು. ಯಾವುದೇ ಆದಿವಾಸಿ ಕುಟುಂಬ 10 ರಿಂದ 12 ಎಕರೆ ಅರಣ್ಯ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು, ಬೇಸಾಯ ಮಾಡಬಹುದು ಎಂಬ ಈ ಕಾಯ್ದೆ ನಿಜಕ್ಕೂ ಆದಿವಾಸಿಗಳ ಪಾಲಿಗೆ ವರದಾನವಾಗಿತ್ತು. ಆದರೆ, ಇಲ್ಲೂ ಕೂಡ, ಅಕ್ಷರ ಲೋಕದಿಂದ ವಂಚಿತರಾದ ಈ ಮುಗ್ಧ ಜನಾಂಗ ದಳ್ಳಾಳಿಗಳಿಂದ ಮತ್ತು ಜಮೀನ್ದಾರರಿಂದ ವಂಚಿತರಾಗಬೇಕಾಯಿತು. ವಿಶ್ವನಾಥ ತಿವಾರಿ ಎಂಬ ನಕ್ಸಲ್ ನಾಯಕನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 1969 ರಿಂದ 1972 ರ ನಡುವೆ ಅನೇಕ ಹಿಂಸಾಚಾರದ ಘಟನೆ ಮತ್ತು ಭೂಮಾಲೀಕರ ಹತ್ಯೆಗಳು ಜರುಗಿದವು. ಇದರ ಜೊತೆ ಜೊತೆಗೆ ನೆರೆಯ ಪಾಲಿಯ ಜಿಲ್ಲೆಗೆ ಹಿಂಸಾತ್ಮಕ ಹೋರಾಟ ವ್ಯಾಪಿಸಿತು.

ಪಾಲಿಯ ಜಿಲ್ಲೆ ನೇಪಾಳದ ಗಡಿ ಭಾಗವನ್ನು ಹೊಂದಿದ್ದರಿಂದ ನಾಯಕರಿಗೆ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ನೆರೆಯ ನೇಪಾಳಕ್ಕೆ ಪಲಾಯನ ಮಾಡಲು ಸೂಕ್ತ ಸ್ಥಳವಾಗಿತ್ತು. ಪಾಲಿಯ ಜಿಲ್ಲೆ ಜೊತೆಗೆ ಕಾನ್ಪುರ, ವಾರಾಣಾಸಿ, ಫರುಕ್ಕಾಬಾದ್, ಉನ್ನಾವೊ, ರಾಯ್ ಬರೇಲಿ, ಮೊರದಾಬಾದ್, ಅಜಮ್ಘರ್ ಜಿಲ್ಲೆಗಳಿಗೆ ನಕ್ಸಲ್ ಚಳವಳಿ ವ್ಯಾಪಿಸಿ 70ರ ದಶಕದಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದವು. ಉತ್ತರ ಪ್ರದೇಶದಲ್ಲಿ ಅಲ್ಲಿನ ಜನರ ಬಡತನ ಮತ್ತು ಅನಕ್ಷರತೆಯ ಕಾರಣದಿಂದ ನಕ್ಸಲ್ ಹೋರಾಟ ಪ್ರಭಾವಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಕರಪತ್ರ ಮತ್ತು ಭಾಷಣ ಗಳ ಮೂಲಕ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುವುದಕ್ಕೆ ಅಲ್ಲಿನ ನಾಯಕರು ತಮ್ಮ ಸಮಯವನ್ನು ವಿನಿಯೋಗಿಸಿದರು. ಆದರೆ, ಹಸಿದವನ ಮುಂದೆ ಉಪದೇಶ ಪ್ರಯೋಜನಕ್ಕೆ ಬಾರದು ಎಂಬಂತೆ, ಅಲ್ಲಿನ ಬಡವರನ್ನು ಹೋರಾಟಕ್ಕೆ ಸೆಳೆಯುವ ಯತ್ನ ವಿಫಲವಾಯಿತು.

ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ಒರಿಸ್ಸಾದ ಕೊರಾಪೇಟ್ ಮತ್ತು ಗಂಜಾಂ ಜಿಲ್ಲೆಗಳಿಗೆ 1968 ರಲ್ಲೇ ನಕ್ಸಲ್ ಚಳವಳಿ ವ್ಯಾಪಿಸಿತ್ತು. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಹೋರಾಟದಿಂದ ಸ್ಪೂರ್ತಿ ಪಡೆದಿದ್ದ ಇಲ್ಲಿನ ಡಿ.ಬಿ.ಎಂ. ಪಟ್ನಾಯಕ್, ಜಲಧರ್ನಂದಾ, ರಬಿದಾಸ್, ಕುಂದನ್ರಾಮ್, ನಾಗಭೂಷಣ ಪಟ್ನಾಯಕ್, ಧೀನಬಂಧುಸಮಲ್, ಜಗನ್ನಾಥ್ ಮಿಶ್ರಾ ಮುಂತಾದವರು ಹೋರಾಟದ ಮುಂಚೂಣಿಯಲ್ಲಿದ್ದರು. 1969 ರಲ್ಲಿ ಚಾರುಮುಜಂದಾರ್ ಮನವಿ ಮೇರೆಗೆ ತಮ್ಮ ಸಂಘಟನೆಯನ್ನು ಸಿ.ಪಿ.ಎಂ. (ಎಮ್.ಎಲ್) ಸಂಘಟನೆಯೊಂದಿಗೆ ವಿಲೀನಗೊಳಿಸಿದರು. ಅಲ್ಲದೆ ಒರಿಸ್ಸಾದ ಜಿಲ್ಲೆಗಳ ಹೋರಾಟದ ನಿರ್ವಹಣೆಯನ್ನು ಕ್ರಮವಾಗಿ, ಪಶ್ಚಿಮ ಬಂಗಾಳ ಮತ್ತು ಆಂಧ್ರದ ನುರಿತ ತಂಡಗಳಿಗೆ ವಹಿಸಲಾಗಿತ್ತು. ಒರಿಸ್ಸಾದಲ್ಲಿ ಪ್ರಥಮ ಹಿಂಸಾಚಾರದ ಘಟನೆ 1971ರ ಪೆಬ್ರವರಿ 21 ರಂದು, ಸರ್ಕಾರದ ಮಾಹಿತಿದಾರರು ಎಂಬ ಆರೋಪದಡಿ ಶಾಲಾಶಿಕ್ಷಕ ಹಾಗೂ ಗ್ರಾಮಸಹಾಯಕ ಇವರನ್ನು ಹತ್ಯೆ ಮಾಡುವುದರೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಜುಲೈ 5ರಂದು ಬೊಲ್ಲ ಎಂಬ ಹಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಪೇದೆಯನ್ನು ಇರಿದು ಗಾಯಗೊಳಿಸಿ, ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಈ ಎರಡು ಘಟನೆಗಳು ಸಂಭವಿಸಿದ ಕೆಲ ದಿನಗಳಲ್ಲೇ ಒರಿಸ್ಸಾದ ಹೋರಾಟದ ನಾಯಕತ್ವ ವಹಿಸಿದ್ದ, ಪಶ್ಚಿಮ ಬಂಗಾಳದ ಅಸೀಮ್‌ಚಟರ್ಜಿ ಮತ್ತು ಸಂತೋಷ್ ರಾಣ ಇವರ ಬಂಧನದೊಂದಿಗೆ ಮೊದಲ ಹಂತದ ಹೋರಾಟ ತಣ್ಣಗಾಯಿತು. ಇದರ ಪರಿಣಾಮವಾಗಿ ಎರಡನೇ ವರ್ಗದ ನಾಯಕರು ನೆರೆಯ ಆಂಧ್ರ ಮತ್ತು ಪಶ್ಚಿಮ ಬಂಗಾಳಕ್ಕೆ ಪಲಾಯನಗೈದು ನೆಲೆಕಂಡುಕೊಂಡರು.

ಮಧ್ಯಪ್ರದೇಶದ ಈಗಿನ ಛತ್ತೀಸ್‌ಗಡ್ ರಾಜ್ಯಕ್ಕೆ ಸೇರಿರುವ ರಾಯ್‌ಪುರ, ದರ್ಗ್, ಬಿಲಾಸ್ಪುರ, ಬಸ್ತರ್, ರಾಯ್‌ಗರ್ ಜಿಲ್ಲೆಗಳಲ್ಲಿ 70ರ ದಶಕದಲ್ಲಿ ನಕ್ಸಲ್ ಹೋರಾಟ ಕಾಲಿಟ್ಟಿತು. (2000ನೇ ಇಸವಿಯಲ್ಲಿ ಛತ್ತೀಸ್‌ಗಡ್ ಮಧ್ಯಪ್ರದೇಶದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯಿಸಿತು.)  ಇಲ್ಲಿನ ಜೊಗುರಾಯ್ ಎಂಬ ಮಾವೋವಾದಿ ಕಮ್ಯೂನಿಷ್ಟ್ ಪಕ್ಷದ ನಾಯಕ ಬುಡಕಟ್ಟು ಜನಾಂಗವನ್ನು “ಕ್ರಾಂತಿಕಾರಿ ಕಿಸಾನ್ ಮಜ್ದೂರ್” ಎಂಬ ಸಂಘಟನೆಯ ಹೆಸರಿನಲ್ಲಿ ಒಂದುಗೂಡಿಸಿ ಸರ್ಕಾರದ ವಿರುದ್ಧ ಯುದ್ಧ ಸಾರಿದನು. ಕ್ರಮೇಣ ಚಳವಳಿ, ಭೂಪಾಲ್, ಜಬಲ್ ಪುರ, ಉಜ್ಜಯನಿ ಜಿಲ್ಲೆಗಳಿಗೂ ಹರಡಿತು. ಪಂಜಾಬ್ ಹರಿಯಾಣ ರಾಜ್ಯಗಳಿಗೆ ದೆಹಲಿ ಮೂಲಕ ನಕ್ಸಲ್ ಚಳವಳಿಯನ್ನು ವಿಸ್ತರಿಸುವ ಪ್ರಯತ್ನ ನಡೆಯಿತಾದರೂ ಅದು ಯಶಸ್ವಿಯಾಗಲಿಲ್ಲ. 1971 ರಲ್ಲಿ ಸಂಗ್ರೂರ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಡೆಪ್ಯೂಟಿ ಪೊಲೀಸ್ ಸೂಪರಿಡೆಂಟೆಂಟ್ ಒಬ್ಬನನ್ನು ಹತ್ಯೆ ಮಾಡಲಾಯಿತು. ಯುವ ವಿದ್ಯಾರ್ಥಿಗಳು, ಮತ್ತು ಕೆಳವರ್ಗದ ಜನರನ್ನು ಸಂಘಟಿಸುವ ಯತ್ನ ಯಶಸ್ವಿಯಾಗಲಿಲ್ಲ. ಇದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಲೋಕ್ ಯುಧ್ಧ್, ಪೀಪಲ್ಸ್ ಪಾಥ್, ಎಂಬ ಎರಡು ಪತ್ರಿಕೆಗಳನ್ನು ಸಹ ಹೊರ ತರಲಾಗಿತ್ತು.

1970 ರ ದಶಕದ ಪ್ರಾರಂಭದ ದಿನಗಳಲ್ಲಿ ಚಾರುಮುಜಂದಾರ್ ಕನಸಿನಂತೆ ದೇಶಾದ್ಯಂತ ನಕ್ಸಲ್ ಹೋರಾಟ ವಿಸ್ತರಿಸಲು ಎಲ್ಲಾ ಬಗೆಯ ಪ್ರಯತ್ನ ನಡೆಯಿತು. ಮಹಾರಾಷ್ಟ್ರ, ರಾಜಸ್ಥಾನ, ಜಮ್ಮು, ಕಾಶ್ಮೀರ, ಕೇರಳ ತಮಿಳುನಾಡು. ಈಶಾನ್ಯ ಭಾಗದ ಅಸ್ಸಾಮ್ ಮುಂತಾದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೆಲೆಯೂರಿ, ಒಂದು ಅಥವಾ ಎರಡು ಹಿಂಸಾತ್ಮಕ ಘಟನೆಗಳಿಗೆ ಚಳವಳಿ ಸೀಮಿತಗೊಂಡಿತು. ಪ್ರಾಯೋಗಿಕವಾಗಿ ಮಾವೋವಾದಿ ನಕ್ಸಲಿಯರ ಪ್ರಥಮ ಹಂತದ ಹೋರಾಟ ದೇಶಾದ್ಯಂತ ಯಶಸ್ವಿಯಾಗದಿದ್ದರೂ, ಸೈದ್ಧಾಂತಿಕವಾಗಿ ಹಲವಾರು ಯುವ ಮನಸ್ಸುಗಳನ್ನ ಚಳವಳಿಗೆ ಸೆಳೆದುಕೊಳ್ಳುವಲ್ಲಿ ಸಫಲವಾಯಿತು. ದೇಶದ ಅಧಿಕಾರದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ಸೇರ್ಪಡೆಗೊಂಡರು. ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್, ಸೆಂಟ್ ಸ್ಟೀಪನ್ ಕಾಲೇಜು, ದೆಹಲಿ ವಿ.ವಿ. ಇವುಗಳಿಂದ ಸಾವಿರಾರು ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ದುಮುಕಿದರು, ಇವರುಗಳಲ್ಲಿ, ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳು, ಮತ್ತು ಸರ್ಕಾರದ ಹಿರಿಯ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿದ್ದು ವಿಶೇಷ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ತಮ್ಮ ಗೆಳೆಯರಿಂದ ಆಕರ್ಷಿತರಾದ ಹಲವು ವಿದ್ಯಾಥಿನೀಯರು, ವಿಶೇಷವಾಗಿ, ಲೇಡಿ ಶ್ರಿರಾಮ್ ಕಾಲೇಜಿನಿಂದ ಬಂದವರು ಹೋರಾಟದ ನದಿಗೆ ಧುಮುಕಿದರು.

ದೆಹಲಿಯ ಈ ವಿದ್ಯಾರ್ಥಿಗಳ ಸಂಘಟನೆ ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ವಿಚಾರ ಸಂಕಿರಣ, ನಾಟಕ ಪ್ರದರ್ಶನ ಮುಂತಾದವುಗಳನ್ನು ಏರ್ಪಡಿಸುವುದರ ಮೂಲಕ ಎಡಪಂಥೀಯ ಸಿದ್ಧಾಂತಗಳನ್ನು ಜೀವಂತವಾಗಿಟ್ಟಿತು. ಇದು ಮುಂದಿನ ದಿನಗಳಲ್ಲಿ ಅಂದರೆ, 1980 ದಶಕದಲ್ಲಿ ಪ್ರಾರಂಭವಾದ ಪೀಪಲ್ಸ್ ವಾರ್ ಹೆಸರಿನ ಎರಡನೇ ಹಂತದ  ನಕ್ಸಲ್ ಹೋರಾಟಕ್ಕೆ ಭದ್ರ ಬುನಾದಿ ಹಾಕಿತು.

(ಮುಂದುವರಿಯುವುದು)