Tag Archives: ಪತ್ರಕರ್ತ

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.

ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

 

– ದಿನೇಶ್ ಕುಮಾರ್ ಎಸ್. ಸಿ

“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿ‍ಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.

ಎಲ್ಲ ಸರಿ, ಇಷ್ಟೆಲ್ಲದರ ನಡುವೆ ಪತ್ರಕರ್ತರು ವೃತ್ತಿ ಧರ್ಮವನ್ನೇಕೆ ಮರೆತರು ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಾಗುತ್ತದೆ. ನಿನ್ನೆಯಿಂದ ಫೇಸ್ ಬುಕ್‍ನಂಥ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕೇಳಿಬರುತ್ತಿವೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಘಟನೆಯ ನಂತರ ಮಧ್ಯಾಹ್ನದ ಸುಮಾರಿಗೆ ನಡೆದ ಲಾಠಿ ಚಾರ್ಜ್ ಮತ್ತು ಕೋರ್ಟ್ ಒಳಗೆ ನಡೆದ ಪೊಲೀಸ್ ದೌರ್ಜನ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ನಾಪತ್ತೆಯಾಗಿದ್ದವು. ಇವತ್ತಿನ ಪತ್ರಿಕೆಗಳಲ್ಲೂ ಅದು ಕಾಣೆಯಾಗಿವೆ ಅಥವಾ ಕಾಣದಂತಾಗಿವೆ.

ದಿ ಹಿಂದೂ ಪತ್ರಿಕೆ ಮಾತ್ರ ಘಟನೆಯ ಎಲ್ಲ ಆಯಾಮಗಳನ್ನು ವಿವರಿಸುವ ಪ್ರಯತ್ನ ಮಾಡಿದೆ. (ಈ ಕೆಲಸವನ್ನು ಪ್ರಜಾವಾಣಿಯಾದರೂ ಮಾಡಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು.) ಕೆಲ ಕನ್ನಡ ಪತ್ರಿಕೆಗಳು ಸಿಟಿ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಬೂದಿಹಾಳ್ ಅವರ ಮೇಲೆ ವಕೀಲರೇ ದೌರ್ಜನ್ಯವೆಸಗಿದರು ಎಂದು ವರದಿ ಮಾಡಿವೆ. ಆದರೆ ನ್ಯಾಯಮೂರ್ತಿಗಳು ಲಾಠಿ ಚಾರ್ಜ್‍ನಿಂದ ಗಾಯಗೊಂಡಿದ್ದರು.

ಕೆಲ ಪತ್ರಕರ್ತರು ಮಧ್ಯಾಹ್ನದ ನಂತರ ಪೊಲೀಸರೊಂದಿಗೆ ಸೇರಿ ಪ್ರತೀಕಾರದ ದಾಳಿ ನಡೆಸಿದರು ಎಂದು ಹಿಂದೂ ವರದಿ ಮಾಡಿದೆ. ವಕೀಲರ ಮತ್ತು ನ್ಯಾಯಾಧೀಶರ ವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಒಡೆದುಹಾಕಲಾಯಿತು ಎಂದು ಈ ವರದಿ ಹೇಳುತ್ತದೆ. ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದರು ಎಂಬುದನ್ನೂ ವರದಿ ಬಹಿರಂಗಪಡಿಸುತ್ತದೆ. (ಕೆಲ ನ್ಯಾಯವಾದಿಗಳು ಪೊಲೀಸರೇ ವಾಹನಗಳಿಗೆ ಬೆಂಕಿಹಚ್ಚುವ ವಿಡಿಯೋಗಳನ್ನು ಈಗಾಗಲೇ ಫೇಸ್ ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.) ದಿ ಹಿಂದು ಪತ್ರಿಕೆ ವರದಿ ಪ್ರಕಾರ, ವಕೀಲರ ಮೇಲೆ ದಾಳಿ ಮಾಡುತ್ತಿದ್ದ ಪತ್ರಕರ್ತರನ್ನು ತಡೆಯಲು ಹೋದ ಸಮಚಿತ್ತದ ಒಬ್ಬ ಪತ್ರಕರ್ತರ ಮೇಲೆಯೂ ಇದೇ ಪತ್ರಕರ್ತರು ಹಲ್ಲೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಒಳಗೆ ನುಗ್ಗಿದ ಪೊಲೀಸರು ಹೊರಗೆ ನಡೆದ ಘಟನೆಗೆ ಸಂಬಂಧವೇ ಇಲ್ಲದ ವಕೀಲರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಂಟೀನು, ಬಾರ್ ಅಸೋಸಿಯೇಷನ್ ಒಳಗೂ ನುಗ್ಗಿ ದಾಳಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ ಆದರೆ ಎಷ್ಟು ಮಂದಿ ವಕೀಲರು ಗಾಯಗೊಂಡಿದ್ದಾರೆ? ಹೇಗೆ ಗಾಯಗೊಂಡರು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು? ಎಂಬೆಲ್ಲ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಉತ್ತರವಿಲ್ಲ.

ಒಂದು ವಾಹಿನಿಯ ಪ್ರಕಾರ ಮೂರು ಮಂದಿ ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ, ಮತ್ತೊಂದು ಇಬ್ಬರ ಸಾವು ಎಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಸತ್ತ ಪೊಲೀಸರ ಹೆಸರುಗಳನ್ನೂ ಪ್ರಸಾರ ಮಾಡಲಾಯಿತು.! ದಿ ಹಿಂದೂ ವರದಿಯ ಪ್ರಕಾರ ಈ ಸುದ್ದಿಯನ್ನು ಸ್ಫೋಟಿಸಿದ ನಂತರ ನಗರದ ಹಲವು ವೃತ್ತಗಳಲ್ಲಿ ಕರಿಕೋಟು ಹಾಕಿಕೊಂಡು ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸಿದರು! ವಕೀಲರು ಮನೆಗಳನ್ನು ತಲುಪಿಕೊಳ್ಳುವುದೇ ಕಷ್ಟವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ಖಚಿತಪಡಿಸಿದ ಮೇಲೂ ಒಂದು ವಾಹಿನಿ ಸುದ್ದಿವಾಚಕರು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು.

ಇಡೀ ಘಟನಾವಳಿಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಕಾಣೋದು ವಕೀಲ, ಪತ್ರಕರ್ತ ಮತ್ತು ಪೊಲೀಸು ಎಂಬ ಮೂರು ವ್ಯವಸ್ಥೆಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಅವುಗಳು ಬೆಳೆಸಿಕೊಂಡು ಬಂದಿರುವ ಅಹಂನಿಂದಾಗಿರುವ ಅನಾಚಾರಗಳು. ವ್ಯವಸ್ಥೆಯ ಈ ಮೂರೂ ಅಂಗಗಳೂ ಬಲಶಾಲಿಯಾಗಿವೆ. ಎಲ್ಲರೂ ತಮ್ಮನ್ನು ತಾವು ಸುಪ್ರೀಂ ಎಂದು ಭಾವಿಸಿಕೊಂಡಂತಿದೆ. ಈ ಅಹಂಗಳ ನಡುವಿನ ಸಂಘರ್ಷ ಇವತ್ತು ತಾರಕಕ್ಕೇರಿದೆ.

ತಿಂಗಳ ಹಿಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ಲುಲ್ಲಕ ಕಾರಣಕ್ಕೆ ವಕೀಲರು ಸತತ ಏಳುಗಂಟೆಗಳ ಕಾಲ ರಸ್ತೆತಡೆ ನಡೆಸಿ ಉದ್ಧಟತನ ತೋರಿದರು. ಅದನ್ನು ಖಂಡಿಸಿ ಮಾಧ್ಯಮಗಳು ವರದಿ ಮಾಡಿದವು. ತಮ್ಮ ವಿರುದ್ಧ ಮಾಧ್ಯಮಗಳು ಬಳಸಿದ ಭಾಷೆಯಿಂದ ವ್ಯಗ್ರಗೊಂಡ ವಕೀಲ ಸಮುದಾಯದ ರಣಧೀರರು ಸೇಡಿಗಾಗಿ ಕಾತರಿಸಿದ್ದರು,. ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ವಕೀಲರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಗೆ ಸಿಲುಕಿದ್ದ ಪೊಲೀಸರು ಕೂಡ ವಕೀಲರ ಮೇಲೆ ಸೇಡಿಗೆ ಕಾದಿದ್ದರು.

ಮಾಧ್ಯಮ ವರದಿಗಳ ಪ್ರಕಾರವೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಪತ್ರಕರ್ತರ ಮೇಲೆ ದಾಳಿ ನಡೆಯುವಾಗ ಪೊಲೀಸರು ಸುಮ್ಮನಿದ್ದರು, ಕೆಲವರಂತೂ ನಗುತ್ತಾ ನಿಂತಿದ್ದರು! ಅದಾದ ಅರ್ಧಗಂಟೆಗೆ ಇದ್ದಕ್ಕಿದ್ದಂತೆ ಪೊಲೀಸರಿಗೆ ಪೌರುಷ ಬಂದಿದ್ದು ಹೇಗೆ? ಹೈಕೊರ್ಟ್‍ನ ನಾಲ್ವರು ನ್ಯಾಯಮೂರ್ತಿ‍ಗಳು ಕೋರ್ಟ್ ಪ್ರವೇಶಿಸಿ, ಒಳಗಿದ್ದ ಪೊಲೀಸರನ್ನು ಹೊರಗೆ ಕರೆಸಿಕೊಳ್ಳುವಂತೆ ಗೃಹಸಚಿವ, ಡಿಜಿಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಕೋರ್ಟ್ ಒಳಗೇ ಲಾಠಿ ಚಾರ್ಜ್ ಮಾಡಿದ್ದು ಏಕೆ?

ವಕೀಲರಿಗೆ ಮಾಧ್ಯಮಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಪೊಲೀಸರಿಗೆ ವಕೀಲರ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಮಾಧ್ಯಮಗಳಿಗೂ ವಕೀಲರ ಮೇಲೆ ಅಸಹನೆ ಕುದಿಯುತ್ತಿತ್ತು, ಅವರೂ ಸೇಡು ತೀರಿಸಿಕೊಂಡಿದ್ದಾರೆ. ಇದು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ಚಿತ್ರ: ಪೊಲೀಸರ ಲಾಟಿ ಏಟಿಗೆ ಗಾಯಗೊಂಡ ವಕೀಲ.

ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ


– ಸೂರ್ಯ ಮುಕುಂದರಾಜ್

B.A., LL.B.


 

ಶುಕ್ರವಾರದ (2/3/12) ಬೆಳಿಗ್ಗೆ ದೃಶ್ಯಮಾಧ್ಯಮದ ಮಂದಿ ರಾಜ್ಯದ ಜನತೆಯಲ್ಲಿ ಇನ್ನಿಲ್ಲದಂತೆ ಕುತೂಹಲ ಕೆರಳಿಸಿ ರೋಚಕ ಸುದ್ದಿ ನೀಡಿ ತಮ್ಮ ಬೆನ್ನನ್ನು ತಾವೇ exclusive ಎಂದು ತಟ್ಟಿಕೊಳ್ಳುವ ತವಕದಲ್ಲಿದ್ದರು. ಜನಾರ್ದನ ರೆಡ್ಡಿ ಎಂಬ ಅಂತರರಾಷ್ಟ್ರೀಯ ಗಣಿಕಳ್ಳನ ಮುಖವನ್ನು ರಾಜ್ಯದ ಜನತೆಗೆ ಇನ್ನಿಲ್ಲದಂತೆ ತೋರಿಸುವ ಆತುರದಲ್ಲಿ 24×7 ಸುದ್ದಿವಾಹಿನಿಗಳ ಕ್ಯಾಮೆರಾಗಳು ಸನ್ನದ್ಧವಾಗಿ ನಿಂತಿದ್ದವು. ವಾರ್ತಾವಾಚಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತನ್ನ ಪ್ರತಿನಿಧಿಗೆ ಕೇಳುತ್ತಿದ್ದ, ಅವನ ಪ್ರಶ್ನೆಗಳು ರೆಡ್ಡಿಯನ್ನು ಕರೆತಂದ ಬಸ್‌ಗೆ ಏಸಿ ಇದೆಯಾ, ರೆಡ್ಡಿ ಸ್ನಾನ ಮಾಡಿದ್ರಾ, ತಿಂಡಿ ಏನು ಕೊಟ್ಟಿದ್ದಾರೆ, ಇತ್ಯಾದಿ ಇತ್ಯಾದಿ. ರೆಡ್ಡಿಗೆ ತಂದಿಟ್ಟ ಖಾರಾಬಾತ್, ಇಡ್ಲಿಯನ್ನು ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಸಿ ಈ ದೃಶ್ಯಾವಳಿ ನಮ್ಮ ಟೀವಿಯಲ್ಲಿ ಮಾತ್ರವೆಂಬ ಸೀಲನ್ನು ಹೆಮ್ಮೆಯಿಂದ ಹೊಡೆದುಕೊಂಡವು. ಹಲಸೂರು ಗೇಟ್ ಠಾಣೆಯಿಂದ ಹೊರಟ ರೆಡ್ಡಿಯಿದ್ದ ಪೊಲೀಸ್ ವಾಹನದ ಬೆನ್ನತ್ತಿದ ಮಾಧ್ಯಮಗಳು ಸಿವಿಲ್ ಕೋರ್ಟ್ ಸಮುಚ್ಛಯದಲ್ಲಿರುವ ಸಿ.ಬಿ.ಐ. ನ್ಯಾಯಾಲಯದವರೆಗೂ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸಿದ್ದರು. ಬಹುಶಃ ರೆಡ್ಡಿಯ ಮುಖವನ್ನು ಜನತೆಗೆ ತೋರಿಸುವ ತವಕದಲ್ಲಿ ಕೆಲವು ತಿಂಗಳ ಹಿಂದೆ ವಕೀಲರನ್ನು ಗೂಂಡಾಗಳೆಂದು ಕರೆದು ದ್ವೇಷ ಕಟ್ಟಿಕೊಂಡದ್ದನ್ನು ಮರೆತು ಸಿವಿಲ್ ಕೋರ್ಟ್ ಆವರಣದೊಳಗೆ ಕಾಲಿಟ್ಟ ಮಾಧ್ಯಮಗಳಿಂದಾಗಿ ಒಂದು ಕರಾಳ ಘಟನೆ ಸಂಭವಿಸಿತು.

ಮಾಧ್ಯಮಗಳು ಇಂತಹ ಪರಿಸ್ಥಿತಿಗೆ ಮುಖಾಮುಖಿಯಾಗಲು ಕಾರಣ ತಮ್ಮ ಸೋಗಲಾಡಿತನದ ವರ್ತನೆಯೆಂದು ಮರೆಯಬಾರದು. ಸುದ್ದಿಗೆ ರೋಚಕತೆ ತುಂಬಿ ಜನರ ಮನಸ್ಸಲ್ಲಿ ಗೊಂದಲ ಬಿತ್ತುವ ಕೆಲಸಗಳನ್ನು ಟಿವಿ ಮಾಧ್ಯಮಗಳು ಮಾಡುತ್ತಿಲ್ಲವೆ? ಯಾವುದೇ ವಿಚಾರವನ್ನು ಸುದ್ದಿ ಮಾಡುವಾಗ ತಾವು ತೋರಿಸಿದ ಸುದ್ದಿಯೇ ನೈಜವಾದದ್ದು ಎನ್ನುತ್ತಾರೆ. ಮದುವೆ ಮನೆಗಳಿಗೆ ಹುಡುಗಿಯ ತವರುಮನೆ ಕಡೆಯವರನ್ನು ಕಟ್ಟಿಕೊಂಡು ನುಗ್ಗಿ ಗೂಸಾ ಕೊಡಿಸಿ ಮಜಾ ತೆಗೆದು ಕೊಳ್ಳುವ ಮಾಧ್ಯಮಗಳ ಸುದ್ದಿದಾಹಕ್ಕೆ ಬಲಿಯಾದವರೆಷ್ಟು ಜನ? ಒಂದು ಸುದ್ದಿಯನ್ನು ಜಡ್ಜ್‌ಮೆಂಟ್ ನೀಡುವ ನ್ಯಾಯಾಧೀಶರಂತೆ ತೀರ್ಪು ನೀಡುವ ಕಾರ್ಯವನ್ನು ಇಂದಿನ ಚಾನಲ್‌ಗಳ ನಿರೂಪಕರು ಮಾಡುತ್ತಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ಒಂದು ಸಣ್ಣ ಘಟನೆ ಈ ಮಟ್ಟದ ಪ್ರಭಾವ ಬೀರಲು ಕಾರಣವಾ ಎಂಬ ಪ್ರಶ್ನೆಯೇಳಬಹುದು. ಅದೊಂದೆ ಘಟನೆ ಮಾಧ್ಯಮ ಮತ್ತು ವಕೀಲರ ನಡುವಿನ ಕದನಕ್ಕೆ ಕಾರಣವಲ್ಲ. ನಟ ದರ್ಶನ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಂತಹದೇ ಸುದ್ದಿಬಾಕ ಹಪಹಪಿಯಲ್ಲಿ ತಮ್ಮ ದಂಡಿನೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆವು ಕಾಲಿಟ್ಟಿವೆ. ದರ್ಶನ್ ವಿಚಾರಣೆಯ ನಂತರ ಪರಪ್ಪನ ಅಗ್ರಹಾರಕ್ಕೆ ಕರೊದಯ್ಯಲು ಹೊರಟ ವಾಹನದ ಹಿಂದೆ ಹೋಗಲು ತವಕಿಸುತ್ತಿದ್ದ ಸಮಯ ಚಾನಲ್‌ನ ವಾಹನ ಚಾಲಕ ವಕೀಲರೊಬ್ಬರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ವಕೀಲರಿಗೆ ದಬಾಯಿಸಿದ್ದಾರೆ. ಅಂದು ಖಾಸಗಿ ಚಾನಲ್‌ನ ವರದಿಗಾರರ ದರ್ಪ ಪ್ರದರ್ಶನಕ್ಕೆ ಅಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಕೀಲರು ತಿರುಗಿಬಿದ್ದಿದ್ದಾರೆ. ನಿಮಗೆ ಸುದ್ದಿ ಬೇಕಿದ್ದರೆ ಕೋರ್ಟ್‌ನ ಹೊರಗೆ ಚಿತ್ರೀಕರಿಸಿ, ಇಲ್ಲಿ ವಾತಾವರಣ ಕದಡಬೇಡಿಯೆಂದು ಮಾಧ್ಯಮಗಳ ಪ್ರವೇಶವನ್ನು ಅಂದಿನಿಂದ ತಡೆದಿದ್ದಾರೆ. ಒಂದು ಸಣ್ಣ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತೆ ಜನವರಿ ತಿಂಗಳ ವಕೀಲರ 7ಗಂಟೆ ರಸ್ತೆ ತಡೆ ಪ್ರಕರಣ ಸಂಭವಿಸಿತು. ವಕೀಲರಿಂದ ಆ ದಿನ ಸಾವಿರಾರು ಜನರು ಪರದಾಡಬೇಕಾಯಿತು ನಿಜ. ಆದರೆ ಆ ಘಟನೆಗೆ ಕಾರಣವಾದ ವಕೀಲನೊಬ್ಬನ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಧರಣಿ ನಡೆಸಿದ ವಕೀಲರನ್ನೇ ಗೂಂಡಾಗಳಂತೆ ಮಾಧ್ಯಮಗಳು ಚಿತ್ರಿಸಿದವು. ಪೊಲೀಸ್ ಕಮೀಶನರ್ ಮಿರ್ಜಿ ಘಟನೆ 12.30 ಕ್ಕೆ ಆರಂಭವಾದ ಬಗ್ಗೆ ತಿಳಿದರೂ ಸಂಜೆ 5ಕ್ಕೆ ಬಂದಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದೆ ಆಗಿದ್ದರೆ ಅಂದೇಕೆ ಒಬ್ಬ ಹಲ್ಲೆ ನಡೆಸಿದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಳ್ಳಲುಇಷ್ಟು ಹೊತ್ತು ಬೇಕಾಯಿತೆ ಎಂದೇಕೆ ಮಾಧ್ಯಮಗಳು ಗೃಹ ಸಚಿವರನ್ನು ಅಂದು ಕೇಳಲಿಲ್ಲ?.

ವಕೀಲರನ್ನು ಜನರ ಕಣ್ಣಲ್ಲಿ ವಿಲನ್‌ಗಳಂತೆ ಚಿತ್ರಿಸಿದ ಮಾಧ್ಯಮಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೇ? ಭ್ರಷ್ಟ ರಾಜಕಾರಣಿಗಳಿಂದ ಎಂಜಲು ಕಾಸಿಗಾಗಿ ಸೈಟಿಗಾಗಿ ಕೈಯೊಡ್ಡಿ ಸುದ್ದಿ ಬರೆಯುವ ಪತ್ರಕರ್ತರೆಲ್ಲಿ, ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಜೈಲಿಗಟ್ಟಿದ ವಕೀಲರೆಲ್ಲಿ? ಎಷ್ಟೋ ಘಟನೆಗಳನ್ನು ಸೃಷ್ಟಿಸಿ, ತಿರುಚಿ ತೋರಿಸುವ ಸುದ್ದಿಮಾಧ್ಯಮಗಳಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಾಗಿದೆ. ಖಾಸಗಿ ವಿಚಾರಗಳನ್ನು ಸಾರ್ವಜನಿಕಗೊಳಿಸಿ ಮಾನಹಾನಿ ಮಾಡುವ ಮಾಧ್ಯಮಗಳಿಂದ ಜವಾಬ್ದಾರಿಯುತ ಪತ್ರಿಕೋದ್ಯಮ ನಿರೀಕ್ಷಸಲು ಸಾಧ್ಯವೇ? ಶುಕ್ರವಾರದ ಘಟನೆಯನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯೆಂದು ಜನರ ಮುಂದೆ ದುಃಖ ತೋಡಿಕೊಳ್ಳುತ್ತಿರುವ ಮಾಧ್ಯಮಗಳು ಪೊಲೀಸರೊಂದಿಗೆ ಸೇರಿ ಕೆ.ಆರ್. ವೃತ್ತದಲ್ಲಿ ಒಬ್ಬೊಬ್ಬ ವಕೀಲರನ್ನೇ ಇಟ್ಟಾಡಿಸಿಕೊಂಡು ಹೊಡೆದದ್ದನ್ನೇಕೆ ಬಿತ್ತರಿಸಲಿಲ್ಲ? ಸಾಮಾನ್ಯ ಜನರಿಗೆ ಪೊಲೀಸರಿಂದ ದೌರ್ಜನ್ಯವಾದರೆ ನೆನಪಾಗುವುದು ಮಾಧ್ಯಮಗಳಲ್ಲ, ವಕೀಲರು ಅವರ ಕಣ್ಣಿಗೆ ಮೊದಲು ಕಾಣಿಸುವುದು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೆದರುವ ಎಷ್ಟೋ ಜನರಿಗೆ ವಕೀಲರಿದ್ದರೆ ಎಂತಹದ್ದೋ ಒಂದು ಧೈರ್ಯ. ಖಾಕಿಧಾರಿಗಳ ದರ್ಪ ವಕೀಲರ ಮುಂದೆ ನಡೆಯುವುದಿಲ್ಲ. ಅವಕಾಶವಾದಿ ಪೊಲೀಸರು ಪಾಟಿ ಸವಾಲಿನ ಸೋಲಿಗೊಳಗಾರುತಾರೆ. ವಕೀಲರೆಂದರೆ ಅವರಲ್ಲಿ ಎಂತಹದ್ದೋ ಒಂದು ಸಣ್ಣ ಕಂಪನವಿದೆ. ಇಂತಹ ಪೊಲೀಸರು ಮಾಧ್ಯಮದವರೊಂದಿಗೆ ಸೇರಿ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ವಕೀಲರಿಗೆ ಒಡೆಯಿರಿ ನಾವಿದ್ದೇವೆಂದು ಉಬ್ಬಿಸಿ ಕಲ್ಲಲ್ಲಿ ಹೊಡೆಸಿದ್ದನ್ನೇಕೆ ನೇರ, ದಿಟ್ಟತನವಿರುವ ಸುದ್ದಿವಾಹಿನಿಗಳು ಬಿತ್ತರಿಸಲಿಲ್ಲ?

ದೃಶ್ಯ ಮಾಧ್ಯಮಗಳು ಇಂದು ಬಳಸುವ ಭಾಷೆಯನ್ನು ಕೇಳಿದರೆ ಎಂತಹ ಕೊಳಕುತನ ಅವರಲ್ಲಿ ತುಂಬಿದೆಯೆಂಬ ಅರಿವಾಗುತ್ತದೆ. ಪಬ್ಲಿಕ್ ಟಿವಿಯ ರಂಗನಾಥ್ ಸಿವಿಲ್ ಕೋರ್ಟ್ ಏನು ವಕೀಲರ ಅಪ್ಪನ ಆಸ್ತಿಯೇ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಸುದ್ದಿಗಾಗಿ ಕೋರ್ಟ್‌ನೊಳಗೆ ನುಗ್ಗಲು ಇವರಿಗೆ ಅನುಮತಿಯಿದೆಯೇ? ಸಾರ್ವಜನಿಕರಿಗೆ ತೊಂದರೆ ನೀಡಿ ಜನಾರ್ದನ ರೆಡ್ಡಿಯ ಮುಖವನ್ನು ತೋರಿಸಿರೆಂದು ಯಾರಾದರೂ ದುಂಬಾಲು ಬಿದ್ದಿದ್ದರೆ? ಇವರ ವಾಹಿನಿಯಲ್ಲಿ ಜನಲೋಕಾಯುಕ್ತರೆಂಬ ಅಣೆಪಟ್ಟಿ ಕಟ್ಟಿಕೊಂಡು ಇವರು ನಡೆಸುವ ರೇಡುಗಳು ನ್ಯಾಯಯುತವೆ? ಮಾಧ್ಯಮವೊಂದರ ಒಡೆಯನೆಂಬ ಕಾರಣಕ್ಕೆ ಕಾನೂನು ಇವರ ಸ್ವತ್ತೇ? ಇನ್ನೊಬ್ಬ ಪತ್ರಕರ್ತ ವಿಶ್ವೇಶ್ವರ್ ಭ‌ಟ್‌ರ ಚಾನಲ್‌ನ ಭಾಷಾ ಬಳಕೆ ನಿಜಕ್ಕೂ ಬೀದಿ ಕುಡುಕನ ಪದಬಳಕೆಯಾಗಿತ್ತು. ರಾಜ್ಯದ ಗೃಹ ಸಚಿವರನ್ನೇ ಬಳೆತೊಟ್ಟಿದ್ದೀರಾ ಎಂದು ಕೇಳುವ, ಕರಿಕೋಟಿನ ಉಗ್ರರು ಎನ್ನುವ, ವಕೀಲರ ಸಂಘದ ಅಧ್ಯಕ್ಷರಿಗೆ ಕಡುಬು ತಿನ್ನುತ್ತಿದ್ದೀರಾ ಎಂದು ಹೀಗೆಳೆಯುವ ಇವರು ಮಟಮಟ ಮಧ್ಯಾಹ್ನವೇ ತೀರ್ಥಸೇವಿಸಿದ್ದರೇನೊ ಎಂದುಕೊಳ್ಳಬಹುದಲ್ಲವೇ? ಪತ್ರಕರ್ತರಿಗಿರಬೇಕಾದ ಕನಿಷ್ಟ ಜ್ಞಾನವೂ ಇವರಲ್ಲಿ ಇಲ್ಲವೆನಿಸುತ್ತದೆ. ಇವರ ಪದಬಳಕೆ ಇವರ ಮನಸ್ಸಲ್ಲಿರುವ ಕೊಳಕುತನ ಮತ್ತು ಅಪ್ರಬುದ್ಧತೆ ತೋರುತ್ತದೆ.

“ಅಗ್ನಿ” ವಾರಪತ್ರಿಕೆಯ ಮಾರ್ಚ್ 8, 2012ರ ಸಂಚಿಕೆಯಲ್ಲಿ ಸದಾನಂದ ಗಂಗನಬೀಡು ತಮ್ಮ ಲೇಖನ ‘ಭಯೋತ್ಪಾದನಾ ದಾಳಿ – ದೃಶ್ಯ ಮಾಧ್ಯಮಗಳ ಯುದ್ಧ ಸಂಭ್ರಮ”ದಲ್ಲಿ  ’26 ನವೆಂಬರ್, 2008 ರಂದು ಮುಂಬೈ ಮೇಲೆ ಆದ ಭಯೋತ್ಪಾದನೆಯ ದಾಳಿಯ ಲೈವ್ ಟೆಲಿಕಾಸ್ಟ್ ಮಾಡಲು ಮಾಧ್ಯಮಗಳು ಪೈಪೋಟಿಗಿಳಿದು ಎನ್ಎಸ್‌ಜಿ ಯೋಧರು ರೂಪಿಸುತ್ತಿದ್ದ ಯುದ್ಧತಂತ್ರ ಭಯೋತ್ಪಾದಕರಿಗೆ ತಿಳಿಯುವಂತೆ ಮಾಡಿದವು, ಇದರ ಫಲವಾಗಿ ನಮ್ಮ ರಾಜ್ಯದ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಏಳು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ದೇಶದ ಮಾಧ್ಯಮಗಳು ಯುದ್ಧ ಸಂಭ್ರಮದಿಂದ ಅವನತಿಯ ಅಂಚಿಗೆ ತಲುಪುತ್ತಿವೆ, ದೇಶದ ಭವಿಷ್ಯವನ್ನೂ ಗಂಡಾಂತರಕ್ಕೆ ಸಿಲುಕಿಸುತ್ತಿವೆ,’ ಎಂದು ಹೇಳುತ್ತಾರೆ. ಮತ್ತು ಮಾಧ್ಯಮಗಳ ಈ ದಾಹವನ್ನು ತಮಂಧದ ಕೇಡು ಎನ್ನುತ್ತಾರೆ.

ಹೀಗೆ ಕೇಡುಗಾಲದ ರಣಕೇಕೆಗೆ ಸದಾ ಹಪಿಹಪಿಸುವ ಮಾಧ್ಯಮಗಳು ಜಡ್ಜ್‌ಮೆಂಟಲ್ ಆಗುವುದನ್ನು ಬಿಟ್ಟು ನೈಜ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ಜನರಿಗೆ ತೋರಿಸಲಿ. ಮಾಧ್ಯಮಗಳ ಪದಪ್ರಯೋಗ ಪ್ರಚೋದನಕಾರಿಯಾಗಿ ಇಲ್ಲದ್ದಿದ್ದರೆ ವಕೀಲ ಸಮುದಾಯ ಪ್ರಚೋದನೆಗೊಳಗಾಗುತ್ತಿರಲಿಲ್ಲ. ಮಾಧ್ಯಮಗಳ ಏಕಪಕ್ಷೀಯ ಧೋರಣೆಗೆ ಸುದ್ದಿಯಾಗಿ ನಲುಗಿದ ಎಷ್ಟೋ ಜನ ಅಮಾಯಕರ ನಿಟ್ಟುಸಿರಿಗೆ ಹೋಲಿಸಿದರೆ ಮಾಧ್ಯಮಗಳಿಗೆ ಆದ ಪರಿಸ್ಥಿತಿ ಏನೇನು ಅಲ್ಲ ಎನ್ನಬಹುದು. ವಕೀಲರನ್ನು ಕ್ರಿಮಿನಲ್‌ಗಳು, ರೌಡಿಗಳು ಎಂದೆಲ್ಲಾ ಹೇಳುವ ನೈತಿಕತೆ ಮಾಧ್ಯಮಗಳಿಗಿಲ್ಲ. ಇಂದು ಮಾಧ್ಯಮಗಳು ತೋರಿಸುತ್ತಿರುವ ಸುದ್ದಿಗಳು ಜನರ ಮನದಲ್ಲಿ ವಕೀಲರು ದುಷ್ಟರೆಂದು ಕಾಣಿಸುತ್ತಿರಬಹುದು, ಒಂದು ದಿನ ಸುದ್ದಿಯ ಬೆನ್ನತ್ತಿ ಪತ್ರಿಕಾ ಧರ್ಮವನ್ನೇ ಮರೆತ ಮಾಧ್ಯಮಗಳ ಮುಖವಾಡದ ದುಷ್ಟತನದ ಅನುಭವ ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಯಾರು ಸರಿಯೆಂದು ಗೊತ್ತಾಗುತ್ತದೆ. ಒಂದಷ್ಟು ಪತ್ರಕರ್ತರು ಕಾಸಿಗಾಗಿ ಸುದ್ದಿ ಪ್ರಕಟಿಸುತ್ತಾರೆಂದ ಮಾತ್ರಕ್ಕೆ ಎಲ್ಲಾ ಪತ್ರಕರ್ತರು ಕಾಸಿಗಾಗಿ ಕೈಯೊಡ್ಡುತ್ತಾರೆ ಎಂದು ಹೇಳುವುದು ನ್ಯಾಯವಲ್ಲ, ಅಲ್ಲವೇ?

ಕರಿಕೋಟಿನ ದಂಡು ಪಾಳ್ಯದ ಗ್ಯಾಂಗ್


– ಡಾ.ಎನ್.ಜಗದೀಶ ಕೊಪ್ಪ


 

ಗೆಳೆಯರೇ,

ಮಾರ್ಚ್ ಎರಡರ ಶುಕ್ರವಾರ, ಅಂದರೆ ಈ ದಿನ, ಕರ್ನಾಟಕದ ಪಾಲಿಗೆ ಕಪ್ಪು ಚುಕ್ಕೆಯ ದಿನ ಮಾತ್ರವಲ್ಲ, ಕರಾಳ ದಿನವೂ ಕೂಡ ಹೌದು. ಈ ದಿನ ಬೆಂಗಳೂರಿನಲ್ಲಿ ಕಪ್ಪುಕೋಟಿನ ಕೆಲವು ವಕೀಲರು ನಡೆಸಿರುವ ದಾಂಧಲೆ, ಗೂಂಡಾಗಿರಿ, ಮತ್ತು ಮಾಧ್ಯಮದವರು, ಪೋಲಿಸರು, ವಿದ್ಯಾರ್ಥಿಗಳ ಮೇಲೆ ಅವರು ನಡೆಸಿರುವ ಅಮಾನುಷ ಹಲ್ಲೆ ಈ ಕೃತ್ಯಗಳನ್ನು ಗಮನಿಸಿದಾಗ ಇಡೀ ನಾಗರೀಕ ಜಗತ್ತು ತಲೆತಗ್ಗಿಸುವಂತಿತ್ತು.

ಇವರುಗಳು ವಕೀಲರೊ? ಅಥವಾ ದಂಡುಪಾಳ್ಯದ ಗ್ಯಾಂಗಿನ ಸದಸ್ಯರೊ? ಎಂಬ ಅನುಮಾನ ಕಾಡತೊಡಗಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲರು ಎನಿಸಿಕೊಂಡ ಕೆಲ ಗೂಂಡಾಗಳು ವರ್ತಿಸುತ್ತಿರುವ ವೈಖರಿ ನಿಜಕ್ಕೂ ನಾಗರೀಕರಲ್ಲಿ ಜಿಗುಪ್ಸೆ ಮೂಡಿಸಿತ್ತು. ಅದು ಈ ದಿನ ಪರಕಾಷ್ಟೆ ಮುಟ್ಟಿತು.

ಕಳೆದ ತಿಂಗಳು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರುಗಳು ಸತತ ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ನಾಗರೀಕರ ಮೇಲೆ ಹಲ್ಲೆ ನಡೆಸಿದಾಗ ಪೋಲಿಸರು ಮತ್ತು ಸರ್ಕಾರ ತಮ್ಮ ನಿಷ್ಕ್ರಿಯತೆಯನ್ನು ಬದಿಗಿಟ್ಟು ಆ ದಿನವೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ, ನಾವುಗಳು ಈ ದಿನದ ಈ ಕರಾಳ ಕೃತ್ಯಕ್ಕೆ ಸಾಕ್ಷಿಯಾಗಬೇಕಿರಲಿಲ್ಲ.

ನನ್ನ ಮೂರು ದಶಕಗಳ ಪತ್ರಿಕೋದ್ಯಮದ ವೃತ್ತಿಯಲ್ಲಿ ಹಲವಾರು ವಕೀಲರನ್ನು ನೋಡಿದ್ದೇನೆ. ಇವತ್ತಿಗೂ, ಬೆಂಗಳೂರಿನ ಸಿ.ಎಚ್. ಹನುಮಂತರಾಯ, ಪ್ರೊ. ರವಿವರ್ಮಕುಮರ್, ಸಿ.ಎಸ್. ದ್ವಾರಕನಾಥ್, ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಮಂಡ್ಯದ ಕೇಶವಮೂರ್ತಿ, ಮೈಸೂರಿನ ರಾಧಾಮಣಿ, ಧಾರವಾಡದ ಬಸವಪ್ರಭು ಹೊಸಕೇರಿ ಮುಂತಾದ ಹಿರಿಯ ವಕೀಲರು ನನ್ನ ಗೆಳೆಯರಾಗಿದ್ದಾರೆ ನಿಜ. ಆದರೆ, ಇವರ್ಯಾರು ತಮ್ಮ ವೃತ್ತಿಯ ಘನತೆಯನ್ನಾಗಲಿ, ಅಥವಾ ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಗರೀಕನಿಗೆ ಇರಬೇಕಾದ ಜವಬ್ದಾರಿಗಳನ್ನಾಗಲಿ ಮರೆತು ಎಂದೂ ಕೀಳಾಗಿ ವರ್ತಿಸಿದವರಲ್ಲ. ಏನಾಗಿದೆ ಈ ಯುವ ವಕೀಲರಿಗೆ? ಇವರ ವರ್ತನೆಯನ್ನ ವೀಕ್ಷಿಸಿದರೆ, ಇವರುಗಳು ವಿಶ್ವವಿದ್ಯಾಲಯಗಳಿಂದ ಕಾನೂನು ಪದವಿ ಪಡೆದು ಬಂದವರಂತೆ ಕಾಣುವುದಿಲ್ಲ, ಬದಲಾಗಿ ಯಾವುದೋ ಕೊಳಚೆಗೇರಿಯಲ್ಲಿ ಮಚ್ಚು ಲಾಂಗುಗಳ ಜೊತೆ ಬೆಳೆದು ಬಂದವರಂತೆ ಭಾಸವಾಗುತ್ತಾರೆ.

ಕಳೆದ ತಿಂಗಳು 17ರಂದು ಇವರುಗಳ ಮುಷ್ಕರದಿಂದ ಸಾರ್ವಜನಿಕರಿಗೆ ಆದ ತೊಂದರೆಯನ್ನು ಪರಿಣಾಮಕಾರಿಯಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳ ಮೇಲೆ ಸೇಡಿನ ಭಾವನೆಯನ್ನು ಜೀವಂತವಾಗಿ ಇರಿಸಿಕೊಂಡಿದ್ದ ಈ ವಕೀಲರು ಈ ದಿನ ಏಕಾಏಕಿ ಕ್ಯಾಮರಾಮೆನ್‌ಗಳ ಮೇಲೆ ಮೃಗಗಳಂತೆ ಮುಗಿಬಿದ್ದು ಹಲ್ಲೆ ನಡೆಸಿದ ಕ್ರಮ ಇಡೀ ವಕೀಲರ ಸಮುದಾಯವೇ ತಲೆ ತಗ್ಗಿಸುವ ಸಂಗತಿ. ಕಳೆದ ತಿಂಗಳ ಘಟನೆಯನ್ನು ಮಾಧ್ಯಮದಲ್ಲಿ ಬಹಿರಂಗವಾಗಿ ಖಂಡಿಸಿದ್ದ ಪೊ.ರವಿವರ್ಮಕುಮಾರ್‌ರವರಿಗೆ ಇದೇ ಗೂಂಡಗಳು ಜೀವ ಬೆದರಿಕೆ ಹಾಕಿದ್ದನ್ನು ಸಹ ಇಲ್ಲಿ ನೆನೆಯಬಹುದು.

ಕಳೆದ ಒಂದು ದಶಕದಿಂದ ವಕೀಲಿ ವೃತ್ತಿಗೆ ಬರುತ್ತಿರುವ ಬಹುತೇಕ ಮಂದಿ ನಾಲಾಯಕ್ಕಾದವರು. ( ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾನು ಬರೆದ  “ನಿಂತ ನೀರಾಗಿ ಕೊಳೆತವರು” ಎಂಬ ಲೇಖನ ಇದೇ ವರ್ತಮಾನದಲ್ಲಿ ಪ್ರಕಟವಾಗಿದೆ ಗಮನಿಸಿ.)

ಈ ದಿನ ಬೆಳಿಗ್ಗೆ 10 ಗಂಟೆಯಿಂದಲೇ ಕಾವೇರಿ ಭವನದ ಹಿಂಭಾಗದ ಸಿವಿಲ್ ನ್ಯಾಯಾಲಯ ಸಂಕೀರ್ಣ ರಣರಂಗವಾಗಿಹೋಯಿತು. ಖೈದಿಗಳನ್ನು ವಿಚಾರಣೆಗೆ ಕರೆತಂದ ಪೋಲಿಸರು ಮತ್ತು ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ ನಾಗರೀಕರನ್ನು ಸಂಜೆಯವರೆಗೂ ಒತ್ತೆಯಾಳುಗಳಾಗಿ ಇರಿಸಿಕೊಂಡು ವಕೀಲರು ನಡೆಸುತಿದ್ದ ದಾಂಧಲೆಯನ್ನು, ವಾಹನಗಳಿಗೆ ಬೆಂಕಿ ಹಚ್ಚಿ, ಪೋಲಿಸರತ್ತ ಕಲ್ಲು ತೂರುತಿದ್ದ ಅವರ ಕ್ರಿಯೆಯನ್ನು ಗಮನಿಸುತ್ತಿದ್ದರೆ, ಈ ರಾಜ್ಯದಲ್ಲಿ ಸರ್ಕಾರವೆಂಬುದು ಅಸ್ತಿತ್ವದಲ್ಲಿ ಇದೆಯಾ? ಎಂಬ ಪ್ರಶ್ನೆ ಮನಸಿನಲ್ಲಿ ಒಮ್ಮೆ ಹಾದುಹೋಯಿತು.

ರಾಜಧಾನಿಯಲ್ಲಿ ಘಟನೆ ಸಂಭವಿಸಿ ಮೂರು ಗಂಟೆಗಳ ನಂತರವೂ, ಗುಪ್ತಚರ ಇಲಾಖೆಯನ್ನು ತನ್ನ ಬಳಿ ಇಟ್ಟುಕೊಂಡ ಒಬ್ಬ ಮುಖ್ಯಮಂತ್ರಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರ ನೀಡುತ್ತಾನೆ, ಪತ್ರಕರ್ತರ ಪ್ರಶ್ನೆಗೆ ಯಾವ ಉತ್ತರವನ್ನು ನೀಡದ ಒಬ್ಬ ಗೃಹಸಚಿವ ಪೇಲವ ನಗೆ ಬೀರುತ್ತಾನೆ, ಇಡೀ ನಗರದ ರಕ್ಷಣೆ ಹೊತ್ತ ಒಬ್ಬ ಪೋಲಿಸ್ ಆಯುಕ್ತ ಘಟನಾ ಸ್ಥಳಕ್ಕೆ ತೆರಳಿ ಒಬ್ಬ ಪೋಲಿಸ್ ಪೇದೆಯಂತೆ ಅಸಹಾಯಕನಾಗಿ ನಿಂತು ಮಾತಿಲ್ಲದೆ ತೆರಳುತ್ತಾನೆ ಅಂದರೆ, ಇವರುಗಳ ವರ್ತನೆಯನ್ನು ಹೇಗೆ ವ್ಯಾಖ್ಯಾನಿಸಬೇಕು, ಅಥವಾ ಹೇಗೆ ಅರ್ಥೈಸಿಕೊಳ್ಳಬೇಕು ನೀವೇ ನಿರ್ಧರಿಸಿ.

ಇದೀಗ ರಾಜ್ಯ ಸರ್ಕಾರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಇದೊಂದು ತಿಪ್ಪೆ ಸಾರಿಸುವ ಕ್ರಮ ಅಷ್ಟೇ. ಕರ್ನಾಟಕದ ಇತಿಹಾಸದಲ್ಲಿ ಯಾವ ನ್ಯಾಯಾಂಗದ ತನಿಖೆಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಅಥವಾ ವರದಿ ಅನ್ವಯ ಯಾರಿಗೆ ಶಿಕ್ಷೆಯಾಗಿದೆ ಎಂಬುದನ್ನು ಬಲ್ಲವರು ಉತ್ತರಿಸಬೇಕಾಗಿದೆ.

ಕೊನೆಯ ಮಾತು- ಈ ದಿನದ ಘಟನೆ ಕುರಿತಂತೆ ನಮ್ಮ ದೃಶ್ಯ ಮಾಧ್ಯಮಗಳು ವರದಿ ಮಾಡುವಾಗ ಬಳಸಿದ ಭಾಷೆ ವೃತ್ತಿಗೆ ಘನತೆ ತರುವಂತಿರಲಿಲ್ಲ. ವಿಶೇಷವಾಗಿ ಸುವರ್ಣವಾಹಿನಿಯ ರಂಗನಾಥ್ ಭಾರಧ್ವಜ್ ಮತ್ತು ಪಬ್ಲಿಕ್ ಟಿ.ವಿ.ಯ ನಮ್ಮ ರಂಗಣ್ಣ ತೀವ್ರ ಭಾವೋಧ್ವೇಗಕ್ಕೆ ಒಳಗಾಗಿ ಒರಟು ಭಾಷೆಯನ್ನು ಬಳಸಿದರು. ಇಡೀ ಘಟನಾವಳಿಗಳನ್ನು ಸಂಯಮದಿಂದ ವರದಿ ಮಾಡಿದ ಕೀರ್ತಿ ಟಿ.ವಿ.9  ವರದಿಗಾರ ಕಿರಣ್‌ಗೆ ಸಲ್ಲಬೇಕು.

(ಚಿತ್ರಕೃಪೆ: ಹಿಂದು, ಸಿಎನ್‍ಎನ್-ಐಬಿಎನ್)

ವೈಜ್ಞಾನಿಕ ಮನೋಭಾವ ಮತ್ತು ದೇಶದ ಮುನ್ನಡೆಯ ಸಂಬಂಧ

-ಆನಂದ ಪ್ರಸಾದ್

ವಿಜ್ಞಾನವು ಇಂದು ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಜೀವನಕ್ಕೆ ನೆಮ್ಮದಿಯನ್ನೂ, ಸಂತೋಷವನ್ನೂ, ಭದ್ರತೆಯನ್ನೂ ಕೊಡುವಲ್ಲಿ ವಿಜ್ಞಾನದ ಪಾತ್ರ ಮಹತ್ತರವಾದುದು. ಒಂದು ಕಾಲವಿತ್ತು, ಅದೂ ಹೆಚ್ಚು ಹಿಂದಿನದಲ್ಲ ಕೆಲವೇ ದಶಕಗಳ ಹಿಂದೆ ಜನ ಪ್ಲೇಗು, ಮಲೇರಿಯಾ, ಕ್ಷಯ, ರೇಬೀಸ್, ಕಾಲರಾ ಮೊದಲಾದ ರೋಗಗಳು ಬಂದರೆ ಸಾವನ್ನೇ ಎದುರು ನೋಡಬೇಕಾಗಿತ್ತು. ವಿಜ್ಞಾನವು ಇವುಗಳ ಕಾರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಔಷಧಿಗಳನ್ನು ಕಂಡು ಹಿಡಿದು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಲಕ್ಷಾಂತರ ಅಮೂಲ್ಯ ಜೀವಗಳನ್ನು ಉಳಿಸಿದೆ, ಉಳಿಸುತ್ತಿದೆ. ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸಿದ ಕಾರಣವೇ ವಿಜ್ಞಾನಿಗಳು ಇಂಥ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸುವವರಿಗೆ ಸೂಕ್ತ ಪ್ರೋತ್ಸಾಹ ಇಲ್ಲ, ಬದಲಿಗೆ ಕಿರುಕುಳ ಸಿಕ್ಕುತ್ತದೆ. ಹೀಗಾಗಿ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ್ದರೂ ವಿಶ್ವಖ್ಯಾತಿಯ ವಿಜ್ಞಾನಿಗಳನ್ನು ಬೆಳೆಸಲಿಲ್ಲ. ಲಕ್ಷಾಂತರ ಜೀವಗಳನ್ನು ಉಳಿಸಲು ಕಾರಣವಾದ ವಿಜ್ಞಾನಿಗಳನ್ನು ನಮ್ಮ ಯಾವ ಟಿವಿ ವಾಹಿನಿಗಳೂ ಕೊಂಡಾಡಿದ್ದು, ಹಾಡಿ ಹೊಗಳುವುದು ಬಿಡಿ, ಕನಿಷ್ಠ ಅವರ ಪರಿಚಯವನ್ನೂ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಾಣುವುದಿಲ್ಲ. ಆದರೆ ಪವಾಡ ಪುರುಷರನ್ನು ಮಾತ್ರ ಅಪಾರವಾಗಿ ಹಾಡಿ ಹೊಗಳುವುದನ್ನು ಕಾಣುತ್ತೇವೆ. ಜ್ಯೋತಿಷಿಗಳು, ವಾಸ್ತು ಎಂಬ ಹೆಸರಿನಲ್ಲಿ ಮೋಸ ಮಾಡುವ ಜನರಿಗೆ ನಮ್ಮ ಟಿವಿ ಮಾಧ್ಯಮದಲ್ಲಿ ಅಗ್ರ ಸ್ಥಾನ.

ಕೆಲವು ದಶಕಗಳ ಹಿಂದೆ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಹಲವಾರು ಗಂಟೆಗಳನ್ನು ಅಥವಾ ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು ಹಾಗೂ ಭಾರೀ ಶ್ರಮದಾಯಕವಾಗಿತ್ತು. ಇಂದು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಂಚರಿಸ ಬಹುದಾದರೆ ಅದಕ್ಕೆ ಕಾರಣ ವಿಜ್ಞಾನಿಗಳು ರೂಪಿಸಿದ ಆಧುನಿಕ ಮೋಟಾರು ವಾಹನಗಳು ಹಾಗೂ ತಂತ್ರಜ್ಞಾನಗಳು. ಈ ಯಾವ ತಂತ್ರಜ್ಞಾನವನ್ನೂ ರೂಪಿಸಿದವರು ನಮ್ಮ ದೇಶದವರಲ್ಲ. ನಮ್ಮ ದೇಶದಲ್ಲಿ ಏನಿದ್ದರೂ ಅದು ಪರದೇಶದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ. ಇದಕ್ಕೆ ಕಾರಣ ಹೊಸ ತೆರನಾಗಿ ಯೋಚಿಸಲು ಅವಕಾಶ ಕೊಡದ ನಮ್ಮ ಬಾಗಿಲು ಮುಚ್ಚಿದ ಮಾನಸಿಕತೆ. ನಾವು ಎಲ್ಲವೂ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಹೊಸದನ್ನು ಚಿಂತಿಸುವುದನ್ನೇ ಬಿಟ್ಟಿದ್ದೇವೆ. ನಮ್ಮ ಮಾನಸಿಕತೆ ಇನ್ನೂ ಹಲವು ಶತಮಾನಗಳ ಹಿಂದೆ ಇದೆ. ಇದರ ಪರಿಣಾಮವೇ ಇಂದು ನಾವು ಟಿವಿ ವಾಹಿನಿಗಳಲ್ಲಿ ನೋಡುತ್ತಿರುವ ಅವೈಜ್ಞಾನಿಕ ಚಿಂತನೆಗಳ ಮಹಾಪೂರ. ಇಂದು ಒಂದು ನಿಮಿಷದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜನರನ್ನು ಸಂಪರ್ಕಿಸಲು ಸಾಧ್ಯ. ಅದಕ್ಕೆ ಕಾರಣವಾಗಿರುವುದು ಕೂಡ ವಿಜ್ಞಾನವೇ. ಯಾವುದೇ ಹಳ್ಳಿ ಮೂಲೆಯಲ್ಲಿದ್ದರೂ ಇಂದು ಸಾಮಾನ್ಯ ಮನುಷ್ಯನೂ ಡಿ.ಟಿ. ಹೆಚ್ ತಂತ್ರಜ್ಞಾನದ ಮೂಲಕ ಹತ್ತಾರು ಟಿವಿ ವಾಹಿನಿಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರುವುದು ವಿಜ್ಞಾನದ ಕೊಡುಗೆಯಿಂದಲೇ. ಆದರೆ ಆ ತಂತ್ರಜ್ಞಾನ ಮಾತ್ರ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಕೆಯಾಗುತ್ತಿಲ್ಲ. ಇದು ಎಂಥಾ ವಿಪರ್ಯಾಸ! ನಮ್ಮ ಮನೋಭಾವ ಜಡ್ಡುಗಟ್ಟಿದೆ. ಹೀಗಾಗಿ ನಮ್ಮ ದೇಶ ಪ್ರಗತಿಶೀಲ ಚಿಂತನೆಯಲ್ಲಿ ಬಹಳ ಹಿಂದುಳಿದಿದೆ. ನಮ್ಮ ಜನ ಇನ್ನೂ ಆದಿವಾಸಿ ಮನೋಭಾವದಿಂದ ಹೊರಬಂದಿಲ್ಲ ಎಂಬುದು ನಮ್ಮ ಟಿವಿ ವಾಹಿನಿಗಳನ್ನು ಬೆಳಗ್ಗೆ 6 ರಿಂದ 10 ಘಂಟೆವರೆಗೆ ನೋಡಿದರೆ ಅರ್ಥವಾಗುತ್ತದೆ.

ಇಂದು ವಿಜ್ಞಾನದ ಬೆಳವಣಿಗೆಯಿಂದಾಗಿ ಆಹಾರ ಭದ್ರತೆ ಬಂದಿದೆ. ಬರಗಾಲ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಜನ ಆಹಾರ ಇಲ್ಲದೆ ಬಳಲುವ ಪರಿಸ್ಥಿತಿ ಸಂಪೂರ್ಣ ಮಾಯವಾಗಿದೆ. ಹಲವಾರು ಯಂತ್ರಗಳು ಬಂದಿರುವುದರಿಂದಾಗಿ ಮಾನವನ ದೈಹಿಕ ಶ್ರಮ ಎಷ್ಟೋ ಕಡಿಮೆಯಾಗಿದೆ. ಇದನ್ನೆಲ್ಲಾ ಸಾಧ್ಯವಾಗಿಸಿದ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು . ಆದರೆ ವಾಸ್ತವವಾಗಿ ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರುವುದು ಕಂಡು ಬರುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲೂ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಮನ್ನಣೆ ಅಷ್ಟಕ್ಕಷ್ಟೇ. ವೈಜ್ಞಾನಿಕ ಮನೋಭಾವವಂತೂ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ.

ನಮ್ಮ ದೇಶದಲ್ಲಿ ಹೊಸ ಚಿಂತನೆಗಳಿಗೆ ಬರ ಇದೆ. ಹೀಗಾಗಿಯೇ ದೇಶದ ರಾಜಕೀಯ ರಂಗ ಮರಗಟ್ಟಿದೆ. ದೇಶದ ಶಾಸಕಾಂಗ ವ್ಯವಸ್ಥೆ ಹೊಸ ಜನೋಪಯೋಗಿ ಕಾನೂನುಗಳನ್ನು ರೂಪಿಸಲು ಬಹುತೇಕ ವಿಫಲವಾಗಿದೆ. ಕಾರ್ಯಾಂಗ ಜಡ್ಡುಗಟ್ಟಿದೆ. ನ್ಯಾಯಾಂಗವೂ ಭಾರೀ ವಿಳಂಬ ಗತಿಯಲ್ಲಿ ತೆವಳುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿ ಸುಧಾರಣೆಗಳನ್ನು ತರಬೇಕೆಂಬ ಚಿಂತನೆಯೇ ಇಲ್ಲದಿರುವುದು. ಕಾಲ ಕಾಲಕ್ಕೆ ದೇಶದ ಕಾನೂನುಗಳಲ್ಲಿ ಜನೋಪಯೋಗಿ ಸುಧಾರಣೆ ಮಾಡದೇ ಹೋದರೆ ಪ್ರಜಾಪ್ರಭುತ್ವ ಜಡ್ಡುಗಟ್ಟುತ್ತದೆ. ಇದನ್ನೆಲ್ಲಾ ಮಾಡಬೇಕಾದವರು ಯಾರು?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡುವ ಸಾಮರ್ಥ್ಯ ಇರುವುದು ಶಾಸಕಾಂಗಕ್ಕೆ. ಆದರೆ ನಮ್ಮ ಶಾಸಕಾಂಗಕ್ಕೆ ಆಯ್ಕೆಯಾಗುವವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲವೇ ಇಲ್ಲವೆಂದರೂ ಸರಿ. ಹೀಗಾಗಿ ಎಲ್ಲೆಡೆಯೂ ಹೊಸ ಚಿಂತನೆಗಳ ಬರ ಇದೆ.

ದೇಶದ ಮಾಧ್ಯಮ ರಂಗವನ್ನು ನೋಡಿದರೆ ಇದೇ ಸ್ಥಿತಿ ಇದೆ. ಇಲ್ಲಿಯೂ ಮೂಢ ನಂಬಿಕೆಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಧ್ಯಮಗಳನ್ನು ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿರುವುದರಿಂದ ಇಲ್ಲಿ ಯಾವುದೇ ಹೊಸ ಚಿಂತನೆಗಳನ್ನು ನಿರೀಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಏನಾದರೂ ಬದಲಾವಣೆ, ಹೊಸತನ ತರುವ ಸಾಮರ್ಥ್ಯ ಇರುವುದು ಬಂಡವಾಳಗಾರರಿಗೆ ಮಾತ್ರ. ಬಂಡವಾಳಗಾರರಿಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ತುಡಿತ ಇದ್ದರೆ ಇಂದೂ ಕೂಡ ಮಾರುಕಟ್ಟೆ ಶಕ್ತಿಗಳನ್ನೂ ಮೀರಿ ಹೊಸ ಚಿಂತನೆಗಳಿಗೆ, ವೈಜ್ಞಾನಿಕ ಮನೋಭಾವಕ್ಕೆ ತಮ್ಮ ಮಾಧ್ಯಮಗಳಲ್ಲಿ ಒತ್ತು ಕೊಡಲು ಸಾಧ್ಯವಿದೆ. ತಮ್ಮ ಬೇರೆ ಉದ್ಯಮಗಳಲ್ಲಿ ಬರುವ ಅಪಾರ ಲಾಭದ ಒಂದಂಶವನ್ನು ಬಳಸಿ ಮಾಧ್ಯಮಗಳನ್ನು ನಡೆಸಲು ಸಾಧ್ಯವಿದೆ.

ಮಾಧ್ಯಮಗಳನ್ನು ನಡೆಸಲು ಜಾಹೀರಾತುಗಳನ್ನೇ, ಮಾರುಕಟ್ಟೆ ಶಕ್ತಿಗಳನ್ನೇ ಅವಲಂಬಿಸ ಬೇಕಾದ ಅಗತ್ಯವಿಲ್ಲ. ನಮ್ಮ ಭಾರೀ ಬಂಡವಾಳಗಾರರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯ ಕೊರತೆ ಇರುವುದರಿಂದಾಗಿ ಇಂಥ ಒಂದು ಚಿಂತನೆಯೇ ಅವರಲ್ಲಿ ಕಂಡುಬರುತ್ತಿಲ್ಲ. ನಮ್ಮ ಬಹುತೇಕ ಬಂಡವಾಳಗಾರರೂ ಕಂದಾಚಾರ, ಮೌಢ್ಯ, ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲದೆ ಹೋಗಿದ್ದರೆ, ಕೆಲವೇ ಕೆಲವು ಬಂಡವಾಳಗಾರರಾದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ದೇಶದ ಸ್ಥಿತಿಯನ್ನೇ ಗಮನಾರ್ಹವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಲು ಇಂದು ಸಾಧ್ಯವಿರುವುದು ಟಿವಿ ಮಾಧ್ಯಮಕ್ಕೆ. ಈ ಮಾಧ್ಯಮವನ್ನು ಬಳಸಿಕೊಂಡೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ. ಈ ಕೆಲಸ ವೈಯಕ್ತಿಕವಾಗಿ ಇಂದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರ ಸಂಘಟನೆ ಮಾಡಿಕೊಂಡು ಇಡೀ
ದೇಶದಲ್ಲಿ ಜಾಗೃತಿ ಮಾಡಬೇಕಾದರೆ ಜೀವವನ್ನೇ ತೇಯಬೇಕಾದೀತು. ತಮ್ಮ ಕುಟುಂಬ, ವೃತ್ತಿ ಬಿಟ್ಟು ಅದಕ್ಕೆ ಯಾರೂ ಸಿದ್ಧರಿರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದೇ ಕೆಲಸವನ್ನು ಟಿವಿ ಮಾಧ್ಯಮವು ಸುಲಭವಾಗಿ, ಏಕಕಾಲದಲ್ಲಿ ಮಾಡಲು ಸಾಧ್ಯವಿದೆ. ವೈಜ್ಞಾನಿಕ ಮನೋಭಾವ ಇರುವ ಕೆಲವು ಜನ ಬಂಡವಾಳಗಾರರು ತಮ್ಮ ಇತರ ಉದ್ಯಮಗಳ ಭಾರೀ ಲಾಭಾಂಶದ ಒಂದು ಅಂಶವನ್ನು ಜನಪರ, ದೇಶಪರ ಟಿವಿ ಮಾಧ್ಯಮವನ್ನು ಕಟ್ಟಲು ಬಳಸಿದರೆ ದೇಶದಲ್ಲಿ ಭಾರೀ ಬದಲಾವಣೆಯನ್ನೇ ತರಲು ಸಾಧ್ಯವಿದೆ.

ಇಂದು ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅಗತ್ಯ ಇದೆ. ಶಾಸಕಾಂಗದಲ್ಲಿ ಮಹತ್ತರ ಬದಲಾವಣೆ ತರಬೇಕಾದರೆ ಇಂದು ದೇಶಭಕ್ತರ ಹೊಸ ರಾಷ್ಟ್ರೀಯ ಪಕ್ಷವನ್ನು ಕಟ್ಟಬೇಕಾದ ಅಗತ್ಯ ಇದೆ. ಆ ಪಕ್ಷವು ಚುನಾವಣೆಗಳಲ್ಲಿ ನಿಂತು ಗೆದ್ದು ಸರ್ಕಾರ ರೂಪಿಸಿ ಜನಪರವಾದ ಕಾನೂನುಗಳನ್ನು ರೂಪಿಸುವ ಮೂಲಕ ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ತನ್ಮೂಲಕ ಇಡೀ ರಾಷ್ಟ್ರದ ಸ್ಥಿತಿಯನ್ನು ಬದಲಾಯಿಸಲು ಪ್ರಜಾಸತ್ತಾತ್ಮಕವಾಗಿಯೇ ಸಾಧ್ಯವಿದೆ. ಹೊಸ ಪಕ್ಷವನ್ನು ರೂಪಿಸುವಾಗ ಅದರಲ್ಲಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಉದಾಹರಣೆಗೆ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಗಳ ಮೂಲಕವೇ ಅಯ್ಕೆಯಾಗಬೇಕು, ಪಕ್ಷದಲ್ಲಿ ವಂಶವಾಹಿ ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ನಿಯಮ ರೂಪಿಸುವುದು, ಚುನಾವಣೆಗಳಲ್ಲಿ ನಿಲ್ಲುವವರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿ ಪಡಿಸುವುದು; ಭ್ರಷ್ಟರು, ಆಪಾದಿತರು, ಅಪರಾಧಿಗಳು ಚುನಾವಣೆಗಳಿಗೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು; ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಇತರ ಮಂತ್ರಿಗಳ ಸ್ಥಾನಗಳಿಗೆ ಅರ್ಹತೆಯೊಂದನ್ನೇ ಆಧಾರವಾನ್ನಗಿಸುವುದು; ಪಕ್ಷದ ನೀತಿ ನಿಯಮ ಉಲ್ಲಂಘಿಸಿದವರನ್ನು ಹೊರಹಾಕಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು, ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶವಾಗದಂತೆ ನಿಯಮ ರೂಪಿಸುವುದು ಮೊದಲಾದವುಗಳನ್ನು ಮಾಡಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಜನವಿರೋಧಿಯಾಗುವುದನ್ನು ತಪ್ಪಿಸಬಹುದು. ಇದನ್ನು ಈಗ ಇರುವ ರಾಜಕೀಯ ಪಕ್ಷಗಳೂ ಮಾಡಬಹುದು.

ಒಂದು ಸ್ಪಷ್ಟವಾದ ಪರ್ಯಾಯ ಚಿಂತನೆಗಳ, ಜನಪರ ಸೈದ್ದಾಂತಿಕ ಧೋರಣೆಯ ರಾಷ್ಟ್ರೀಯ ಪಕ್ಷವು ರೂಪುಗೊಂಡರೆ ಅದರ ಪರವಾಗಿ ನಮ್ಮ ಟಿವಿ ವಾಹಿನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡುವುದು ಅಸಾಧ್ಯವೇನೂ ಅಲ್ಲ. ದೇಶದಾದ್ಯಂತ ಈಗ ಇರುವ ರಾಜಕೀಯ ಪಕ್ಷಗಳಿಂದ ರೋಸಿ ಹೋಗಿರುವ ಜನತೆ ಹೊಸತನಕ್ಕಾಗಿ ಹಂಬಲಿಸುತ್ತಿರುವುದು ಸಹಜವೇ ಆಗಿದೆ. ಜನ ಸ್ವಚ್ಛ, ಭ್ರಷ್ಟಾಚಾರ ರಹಿತ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಕಂಡು ಬಂದಿದೆ. ಆದರೆ ಆ ಹೋರಾಟ ರಾಜಕೀಯಕರಣಗೊಂಡು ದುರ್ಬಲವಾಗಿದೆ. ಅಣ್ಣಾ ಹಜಾರೆ ಹಾಗೂ ಅವರ ತಂಡದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇರುವುದೂ ಕಂಡು ಬಂದಿದೆ. ಇದೇ ತಂಡದಲ್ಲಿ ಸ್ಪಷ್ಟವಾದ ವೈಜ್ಞಾನಿಕ ಮನೋಭಾವ ಇದ್ದಿದ್ದರೆ ಇದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿತ್ತು. ಈಗ ಹಜಾರೆಯವರ ಹೋರಾಟವನ್ನು ನೋಡುವುದಾದರೆ ಅದು ಒಂದು ರಾಜಕೀಯ ಪಕ್ಷದ ಪರವಾಗಿ ದೇಶದಲ್ಲಿ ಜನಾಭಿಪ್ರಾಯ ಹುಟ್ಟು ಹಾಕಲು ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಅದು ದುರ್ಬಲವಾಗಿದೆ. ಈಗ ಹಜಾರೆಯವರು ಯಾವ ಪಕ್ಷದ ಪರವಾಗಿ ಹವಾ ಉಂಟು ಮಾಡಲು ಬಯಸುತ್ತಿದ್ದಾರೋ ಆ ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಹಾಗೂ ಆ ಪಕ್ಷದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸ್ಥಾನವೂ ಇಲ್ಲದಿರುವುದೂ ಕಂಡು ಬರುತ್ತದೆ.