Tag Archives: ಪ್ರಜಾಪ್ರಭುತ್ವ

ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

-ಡಾ.ಎಸ್.ಬಿ.ಜೋಗುರ

ಕಳೆದ ವರ್ಷವಿಡೀ  ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟ ಜನಲೋಕಪಾಲ್ ಮಸೂದೆ ಸಿಡಿಯದಿರುವ ಪಟಾಕಿಯಂತೆ ಟುಸ್… ಎಂದದ್ದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಕೊಂಚ ನಿರಾಶೆಯನ್ನುಂಟು ಮಾಡಿರುವುದು ಸ್ವಾಭಾವಿಕವೇ ಆದರೂ ರಾಜಕೀಯ ಶಕ್ತಿಗಳು ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳಲು ತಯಾರಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಅವೇನಿದ್ದರೂ ಬಾಯಿ ಮಾತಿನ ಮೂಲಕವೇ ರಾಜಕೀಯ ವಿಪ್ಲವಗಳನ್ನು ಹುಟ್ಟುಹಾಕಬಲ್ಲವೇ ಹೊರತು ಕಾರ್ಯಾತ್ಮಕವಾಗಿ ಅಲ್ಲ. ಹಾಗಾಗಿಯೇ ರಾಜ್ಯಸಭೆಯಲ್ಲಿ ಅದಕ್ಕೆ ಗ್ರೀನ್ ಸಿಗ್ನಲ್ ಸಿಗದಿರುವುದು ನಿರೀಕ್ಷಿತವೇ ಎನ್ನುವಂತಿದೆ. ಆಳುವ ಮತ್ತು ವಿರೋಧ ಪಕ್ಷಗಳೆರಡೂ ಚುನಾವಣೆಯ ಸಂದರ್ಭದಲ್ಲಿ ಕೋಮಾ ಸ್ಥಿತಿಯಲ್ಲಿರುವ ಈ ಲೋಕಪಾಲ್ ಮಸೂದೆಯ ಬಗ್ಗೆ ತಮಗೆ ತಿಳಿದಂತೆ ಮತದಾರನ ಎದುರು ವಿವರಿಸಿ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ಈ ಲೋಕಪಾಲ ಬಿಲ್ ರಾಜ್ಯಸಭೆಯವರೆಗೂ ಬಂದು ಅಟಕಾಯಿಸಿಕೊಂಡಿರುವುದು ಇದೇ ಮೊದಲಂತೂ ಅಲ್ಲ. ಈ ಮುಂಚೆ ಸುಮಾರು ಹನ್ನೊಂದು ಬಾರಿ ಈ ಮಸೂದೆಯು ಸದ್ಯದ ಹಂತದವರೆಗೆ ಬಂದು ತಲುಪಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಿದೆ. 1968 ರಿಂದಲೂ ಈ ಬಗೆಯ ಮರಳಿ ಯತ್ನವ ಮಾಡುವ ಕೆಲಸ ನಿರಂತರವಾಗಿ ನಡದೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದೆನ್ನುವಾಗಲೇ ಅದು ಕೋಮಾ ಹಂತವನ್ನು ತಲುಪುವ ಸ್ಥಿತಿ ಮಾಮೂಲಾಗಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿಯಾದ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತ್ತಾದರೂ ಅವರ ಅಂತಿಮ ಉದ್ದೇಶ ಮಾತ್ರ ಸಾಕಾರಗೊಳ್ಳದಿರುವುದು ವಿಷಾದನೀಯವೇ ಹೌದು. ಜಾರಿಗೊಳಿಸುವುದಿದ್ದರೆ ಬಲಿಷ್ಟ ಜನಲೋಕಪಾಲ ಜಾರಿಗೊಳಿಸಿ, ಇಲ್ಲದಿದ್ದರೆ ಬೇಡ ಎಂದು ಪಟ್ಟು ಹಿಡಿದ ಅಣ್ಣಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿಯೂ ಹೋರಾಟ, ಸತ್ಯಾಗ್ರಹವನ್ನು ಆರಂಭಿಸಿರುವುದಿತ್ತು. ಅಣ್ಣಾನ ಹೋರಾಟಕ್ಕೆ ಸಿಕ್ಕ ಬೆಂಬಲ ಆಳುವ ಪಕ್ಷದ ಸಾಮರ್ಥ್ಯವನ್ನೇ ಕೆಣಕಿದಂತಿತ್ತು. ಹೀಗಾಗಿ ಅಣ್ಣಾನನ್ನು ಬಂಧಿಸಿ ಬಿಡುಗಡೆ ಮಾಡಿಯೂ ಆಯಿತು. ನಂತರ ಬಿಡುಗಡೆ ಮಾಡಿ ಅವರ ಸತ್ಯಾಗ್ರಹಕ್ಕೆ ರಾಮಲೀಲಾದಂತಹ ಚಾರಿತ್ರಿಕವಾದ ಸ್ಥಳವನ್ನೇ ನೀಡಿತು.

ಅಣ್ಣಾ ಒಡ್ಡುವ ಶರತ್ತುಗಳನ್ನು ಒಪ್ಪಿಕೊಂಡು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರ ರಾಜ್ಯಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುವುದರಲ್ಲಿ ಅದರದೇಯಾದ ಕೆಲ ರಾಜಕೀಯ ಕಾರಣಗಳು ಇರಬಹುದಾದರೂ ಆ ಮೂಲಕ ಪರೋಕ್ಷವಾಗಿ  ಅಣ್ಣಾ ಹೋರಾಟದ ಸತ್ವ ಕಡಿಮೆ ಮಾಡುವಲ್ಲಿಯೂ ಅವರ ರಾಜಕೀಯ ಧೋರಣೆ ಕಾರಣವಾಯಿತು. ಅದೇ ವೇಳೆಗೆ ಈ ಜನಲೋಕಪಾಲ ಮಸೂದೆಯನ್ನು ಯಾರು ವಿರೋಧಿಸಿದರು ಎನ್ನುವುದಕ್ಕಿಂತಲೂ ರಾಜಕೀಯ ಹಿತಾಸಕ್ತಿಗಳ ಗಮನವೇ ಇಲ್ಲಿ ಮುಖ್ಯವಾಗಿ ಬಲಿಷ್ಟ ಲೋಕಪಾಲ ಮಸೂದೆ ಸೊರಗುವಂತಾಯಿತು. ಅದೇ ವೇಳೆಗೆ ಅಣ್ಣಾ ಬಳಗದಲ್ಲಿಯ ಕೆಲವರ ಮಾತುಗಳಲ್ಲಿ ಗೊಂದಲಗಳು, ರಾಜಕೀಯ ಪಕ್ಷವೊಂದರ ಪರವಾದ ಮಾತುಗಳಂತೆ ಕೇಳಬರತೊಡಗಿದವು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಅಣ್ಣಾ ಟೀಮಿಗೆ ಇದ್ದ ನಾಯಕತ್ವದ ರಭಸ ವರ್ಷದ ಅಂತ್ಯದಲ್ಲಿ ತನ್ನ ಗಡುಸುತನವನ್ನು ಕಳೆದುಕೊಳ್ಳತೊಡಗಿತು.

ಜನತೆಗೆ ಅದರಲ್ಲೂ ದುಡಿದು ಬದುಕುವ ಸಾಮಾನ್ಯರಿಗೆ ಈ ಲೋಕಪಾಲ ಮಸೂದೆಯ ಜಾರಿಗೊಳ್ಳುವಿಕೆ, ಜಾರಿಯಾಗದಿರುವಿಕೆ ಎರಡೂ ಅಷ್ಟಾಗಿ ಬಾಧಿಸುವುದಿಲ್ಲ. ಹಾಗೆಯೇ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ನಿರಂತರವಾಗಿ ನೆನಪಿಟ್ಟು ಆ ದಿಶೆಯಲ್ಲಿ ನಡೆಯಬೇಕಾದ ನಿರಂತರ ಹೋರಾಟವನ್ನು ರೂಪಿಸುವಷ್ಟು ಇವರ ಬದುಕು ಸುಭದ್ರವಾಗಿಲ್ಲ. ಈಗ ಅದೇ ಅಣ್ಣಾ ಮತ್ತೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರೆ ಸಾಮಾನ್ಯ ಮಧ್ಯಮವರ್ಗದ ಜನ ಮೊದಲಿನ ಹುರುಪಿನಲ್ಲಿಯೇ ಅಣ್ಣಾ ಕೂಗಿಗೆ ಸ್ಪಂದಿಸುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ ಸಾಮಾನ್ಯನ ಬದುಕೇ ಹಾಗಿದೆ. ಆತ ಯಾವುದನ್ನೂ ತುಂಬಾ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲಾರ. ಜೊತೆಗೆ ಅತ್ಯಂತ ಬೇಗ ಆತ ಒಂದು ವ್ಯವಸ್ಥೆಯ ಬಗ್ಗೆ ಸಿನಿಕತನವನ್ನು ಹೊಂದುವುದೂ ಇದೆ.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ತಮ್ಮ ಕರಾಳ ವ್ಯವಹಾರಗಳಿಗೆ ಕುತ್ತು ಬರುವಂತಹ ಯಾವ ನಿಯಮಗಳನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿರುವುದು ತೀರಾ ಅಪರೂಪ. ಅಂತಹದರಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡು ಎಲ್ಲರೂ ಲೋಕಪಾಲ ಮಸೂದೆಗೆ ಒಳಪಡಬೇಕು ಎನ್ನುವ ಅಣ್ಣಾನ ಒತ್ತಾಸೆ ಈಡೇರುವದಾದರೂ ಹೇಗೆ..?

ಅಣ್ಣಾ ಜನಲೋಕಪಾಲ ಮಸೂದೆಯ ವಿಷಯದಲ್ಲಿ ತನ್ನ ಮಿತಿಗಳನ್ನೂ ಮೀರಿ ಹೋರಾಟ ಮಾಡಿದ. ಹಾಗೆಯೇ ಹಿಂದೆಂದೂ ಯಾರಿಗೂ ಸಿಗದ ಅಪಾರ ಪ್ರಮಾಣದ ಜನಬೆಂಬಲವೂ ಅವನಿಗೆ ದೊರೆಯಿತು. ಅಂತಿಮವಾಗಿ ಆಗಬೇಕಾದ ಮಹತ್ತರವಾದ ಕೆಲಸವೊಂದು ಹಾಗೇ ಉಳಿದುಹೋಯಿತು. ಪರೋಕ್ಷವಾಗಿ ಈ ಬಗೆಯ ಬಲಿಷ್ಟ ಲೋಕಪಾಲ ಮಸೂದೆ ಬಹುತೇಕ ರಾಜಕಾರಣಿಗಳಿಗೆ ಬೇಕಾಗದಿರುವಂತೆ, ಭ್ರಷ್ಟ ಅಧಿಕಾರಿ ಸಮೂಹಕ್ಕೂ ಬೇಕಾಗಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ಜನಸಾಮಾನ್ಯ ಮಾತ್ರ ತನ್ನ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಎಂದಿನಂತೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದಾನೆ. ಮತ್ತೆ ಅಣ್ಣಾ ಒಂದೊಮ್ಮೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆ ನೀಡಿದರೆ ಭ್ರಷ್ಟಾಚಾರ ವಿಷಯದಲ್ಲಿ ಅಪಾರ ಪ್ರಮಾಣದಲ್ಲಿ ಮಾತಾಡಿ, ಆ ಬಗ್ಗೆ  ಕೇಳಿ ಯಥಾಸ್ಥಿತಿಯನ್ನೇ ಅನುಭವಿಸುವಂತಾದ ಜನ ಅದೇ ಮೊದಲಿನ ಪ್ರಮಾಣದಲ್ಲಿ ಅಣ್ಣಾಗೆ ಸಾಥ್ ನೀಡುತ್ತಾರೆಂದು ನನಗನಿಸದು.

ರಾಮಕೃಷ್ಣ ಹೆಗ್ಡೆಯ ನುಡಿಗಳು ಮತ್ತು ಯಡಿಯೂರಪ್ಪನ ನಡೆಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಇದು 2003ರ ಡಿಸೆಂಬರ್ ತಿಂಗಳ ಒಂದು ಘಟನೆ. ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುಧಾ ಮೂರ್ತಿಯವರ ಪ್ರವಾಸಕಥನ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಚಳುವಳಿ ಕುರಿತ ಎರಡು ಕೃತಿಗಳನ್ನು ಪ್ರಕಟಿಸಿ, ಬಿಡುಗಡೆಗಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರನ್ನು ಆಹ್ವಾನಿಸಿತ್ತು. ಅಂದಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳ ಹಾವಳಿ ಈಗಿನ ಹಾಗೆ ಇರಲಿಲ್ಲ. ನಾಲ್ಕು ದಿನಪತ್ರಿಕೆ ಹಾಗೂ ಎರಡು ಚಾನಲ್‌ಗಳು ಮಾತ್ರ ಇದ್ದವು.

ಸಂಜೆ 6 ಗಂಟೆಗೆ ಪತ್ರಿಕೆಕೆಯ ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾವು ಆರು ಮಂದಿ ಪತ್ರಕರ್ತರು ಸುಮಾರು 5:30ರ ವೇಳೆಗೆ ಕಾರ್ಯಕ್ರಮಕ್ಕೆ ಹಾಜರಾದಾಗ ಪತ್ರಿಕೆಯ ಟ್ರಸ್ಟ್ ಅಧ್ಯಕ್ಷರ ಕಚೇರಿಯಲ್ಲಿ ಲಘು ಉಪಹಾರ ಏರ್ಪಡಿಸಲಾಗಿತ್ತು. ಆ ವೇಳೆಗಾಗಲೇ ಆಗಮಿಸಿದ್ದ ರಾಮಕೃಷ್ಣ ಹೆಗ್ಡೆ ನಮ್ಮೊಂದಿಗೆ ತಿಂಡಿ ತಿನ್ನುತ್ತಾ ಇದ್ದಕ್ಕಿದ್ದಂತೆ ತಮ್ಮ ಒಂದು ಬಾಲ್ಯದ ಅನುಭವವನ್ನು ನಮ್ಮ ಮುಂದೆ ಬಿಚ್ಚಿಟ್ಟರು. ಅವರ ಮಾತಿನ ಲಹರಿ ಹೀಗಿತ್ತು:

ನನಗಾಗ ಕೇವಲ ಆರು ಅಥವಾ ಏಳು ವರ್ಷವಿರಬಹುದು. ಸಿದ್ದಾಪುರದ ಗದ್ದೆಯ ನಡುವೆ ಇದ್ದ ನಮ್ಮ ಮನೆ ಆ ಕಾಲಕ್ಕೆ ಬ್ರಿಟೀಷರ ವಿರುದ್ಧ ಹೋರಾಡುತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ರೀತಿಯಲ್ಲಿ ತಂಗುದಾಣವಾಗಿತ್ತು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಗಡಿಭಾಗದಲ್ಲಿದ್ದ ನಮ್ಮ ಮನೆ ಸ್ವಾತಂತ್ರ್ಯ ಹೋರಾಟಗಾರರು ಪೋಲಿಸರಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಹ ಸ್ಥಳವಾಗಿತ್ತು.

ಶಿವಮೊಗ್ಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಬೇಲಿ ನೆಗೆದು ನಮ್ಮ ಮನೆಗೆ ಬಂದರೆ ಹಿಡಿಯುವಂತಿರಲಿಲ್ಲ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆ ಪೋಲಿಸರು ಬಂದರೆ ಸಲೀಸಾಗಿ ಬೇಲಿ ನೆಗೆದು ಶಿವಮೊಗ್ಗ ಗಡಿಪ್ರದೇಶಕ್ಕೆ ತೆರಳಬಹುದಾಗಿತ್ತು. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನನ್ನ ತಂದೆ ಮಹಾಬಲೇಶ್ವರ ಹೆಗಡೆ ಯಾರೇ ನಮ್ಮ ಮನೆಗೆ ಬಂದರೂ ಜಾತಿ ಧರ್ಮ ಬೇಧವಿಲ್ಲದೆ ಆತಿಥ್ಯ ನೀಡುತಿದ್ದರು. ನನ್ನ ತಾಯಿ ಸರಸ್ವತಿ ಹೆಗಡೆ ಕೂಡ ಅಕ್ಷರಶಃ ಅನ್ನಪೂರ್ಣೆಯಂತೆ ನಡೆದುಕೊಳ್ಳುತಿದ್ದರು.

ನಮ್ಮ ಮನೆ ಬ್ರಿಟೀಷರಿಗೆ ತಲೆನೋವಾದ ಕಾರಣ ಸರ್ಕಾರ ಗದ್ದೆಯ ಬಯಲಿನಲ್ಲಿ ಇದ್ದ ನಮ್ಮ ಮನೆಯನ್ನು ಧ್ವಂಸ ಮಾಡುವಂತೆ ಪೋಲಿಸರಿಗೆ ಆದೇಶ ಜಾರಿ ಮಾಡಿತು. ಒಂದು ಬೆಳಗಿನ ಜಾವ ಮನೆಗೆ ಬಂದ ಪೋಲಿಸರು ನಮ್ಮ ಹೆಂಚಿನ ಮನೆ, ಅದರೊಳಗೆ ಅತಿಥಿಗಳಿಗಾಗಿ ನಿರ್ಮಿಸಿದ್ದ ಅಟ್ಟ, ಪಾತ್ರೆ, ದಿನಸಿ ಸಾಮಾನುಗಳನ್ನು ನಾಶ ಮಾಡಿ ಹೊರಟು ಹೋಯಿತು.

ನನ್ನ ಅಪ್ಪ, ಅಮ್ಮ, ನಾನು, ನನ್ನ ಸಹೋದರ ಎಲ್ಲರೂ ಬಯಲಿಗೆ ಬಿದ್ದೆವು. ದೃತಿಗೆಡೆದ ನನ್ನಪ್ಪ ನನ್ನನ್ನು ತಮ್ಮ ಹೆಗಲ ಮೇಲೆ ಕೂರಿಸಿಕೊಂಡು ಸಿದ್ದಾಪುರದ ಸಂತೆಗೆ ಹೋಗಿ ಒಂದಿಷ್ಟು ಮಡಕೆಗಳನ್ನು ಕೊಂಡು ತಂದರು. ನಾವು ಸಂತೆಯಿಂದ ಬರುವ ವೇಳೆಗೆ ನಮ್ಮೂರಿನ ಸುತ್ತ ಮುತ್ತಲಿನ ಜನ ಅಕ್ಕಿ, ಬೇಳೆ, ಉಪ್ಪು, ಮೆಣಸಿನಕಾಯಿ, ಸಾಂಬಾರ್ ಪುಡಿ ಹೀಗೆ ಹಲವು ವಸ್ತುಗಳನ್ನು ಅಮ್ಮನ ಬಳಿ ಕೊಟ್ಟು ಹೋಗಿದ್ದರು. ಆ ದಿನ ನನ್ನಮ್ಮ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಅಡುಗೆ ಮಾಡಿ ನಮಗೆ ಬಡಿಸಿದಳು. ಆದಿನ ನಾನು ನನ್ನ ಕುಟುಂಬ ತಿಂದ ಅನ್ನ, ಬೇಳೆ ಅಥವಾ ಉಪ್ಪು ಯಾರ ಮನೆಯದು, ಯಾರ ಜಾತಿಯದು, ಯಾವ ಧರ್ಮದ್ದೆಂದು ನಾವ್ಯಾರು ಕೇಳಲಿಲ್ಲ. ಎಲ್ಲಾ ಧರ್ಮದ, ಎಲ್ಲ ಜಾತಿಯ ಋಣ ನನ್ನ ರಕ್ತದಲ್ಲಿ ಹರಿಯುತ್ತಿದೆ. ಹಾಗಾಗಿ ನಾನು ಇವುಗಳ ಬಗ್ಗೆ ಎಂದೂ ವಕಾಲತ್ತು ವಹಿಸಲಾರೆ.

ಅತ್ಯಂತ ತಾಳ್ಮೆಯಿಂದ ಯಾವುದೇ ಭಾವೋದ್ರೇಕವಿಲ್ಲದೆ, ತಣ್ಣನೆಯ ದನಿಯಲ್ಲಿ ಅವರು ಮಾತನಾಡುತ್ತಿದ್ದಾಗ ಅವರ ಕಣ್ಣುಗಳಿಂದ ಧಾರಾಕಾರವಾಗಿ ಹರಿಯುತ್ತಿದ್ದ ನೀರು ಅವರ ಕುರುಚಲು ಗಡ್ಡದಲ್ಲಿ ಲೀನವಾಗುತಿತ್ತು. ಅವರ ಮಾತುಗಳನ್ನು ಕೇಳುತ್ತಿದ್ದ ನಮ್ಮ ಕಣ್ಣುಗಳು ಸಹ ಒದ್ದೆಯಾಗಿದ್ದವು.

ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿಯ ಕುರ್ಚಿ ಬಿಟ್ಟು ಬೇರೆಲ್ಲೂ ನನ್ನ ಅಂಡು ಸ್ಥಳವೂರಲಾರದು ಎಂಬಂತೆ ವರ್ತಿಸುತ್ತ ಹಲವು ಅವತಾರಗಳನ್ನು ತಾಳುತ್ತಿರುವ ಯಡಿಯೂರಪ್ಪ ಎಂಬ ಅವಿವೇಕಿ ಮತ್ತು ಜಾತಿಯ ಹೆಸರಿನಲ್ಲಿ ಅವನ ಭಟ್ಟಂಗಿಗಳು ಮತ್ತು ಚೇಲಾಗಳು ಕರ್ನಾಟಕದಲ್ಲಿ ನಡೆಸುತ್ತಿರುವ ರಾಜಕೀಯ ವರಸೆ ನೋಡಿ ಏಕೋ ಏನೋ ರಾಮಕೃಷ್ಣ ಹೆಗ್ಡೆ ನೆನಪಾದರು.

ತನ್ನ #*$% ತೋರಿಸುತ್ತಿರುವ ಈ “ವರದಿಗಾರ” ಯಾರು?

-ಶಿವರಾಮ್

ಈ ವೀಡಿಯೋ ಒಮ್ಮೆ ನೋಡಿ, ನಿಮ್ಮೊಳಗೆ ಅಸಹ್ಯ ಹುಟ್ಟುತ್ತದೆ. ಪತ್ರಕರ್ತರಾಗಿದ್ದಲ್ಲಿ ತಲೆತಗ್ಗಿಸಬೇಕೆನಿಸುತ್ತದೆ. ಸುದ್ದಿ ವಾಹಿನಿಯ ಲೋಗೋವನ್ನು ಬಲಗೈಯಲ್ಲಿ ಹಿಡಿದು ವರದಿಗಾರನೊಬ್ಬ ವಕೀಲ ವೃಂದಕ್ಕೆ ತನ್ನ  #*$%ವನ್ನು ತೋರಿಸಲು ಯತ್ನಿಸುತ್ತಿರುವ ತೀರಾ ಮುಜುಗರ ಹುಟ್ಟಿಸುವ ದೃಶ್ಯವಿದು. ಈ ದೃಶ್ಯವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ವಕೀಲರ ಪ್ರಕಾರ, ಮಾರ್ಚ್ ಎರಡರಂದು ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳಿಗೆ ಇದು ಮೂಲ ಕಾರಣ.

ಈ ಅಸಹ್ಯಕರ ದೃಶ್ಯದಲ್ಲಿ ಹಿಂದುಗಡೆ ಅನೇಕ ಕೆಮರಾಗಳಿವೆ, ಮತ್ತು ಅವು ಸುಸ್ಥಿತಿಯಲ್ಲಿವೆ. ಅದರರ್ಥ ಈ ದೃಶ್ಯದ ನಂತರವಷ್ಟೆ ಪರ್ತಕರ್ತರ ಮೇಲೆ ಹಲ್ಲೆಗಳಾದವು. ‘ಅಲ್ಲಿ ಪತ್ರಕರ್ತರ ಮೇಲೆ ನಡೆದದ್ದು ಅಪ್ರಚೋದಿತ ಹಲ್ಲೆ’ ಎಂದು ಪದೇ ಪದೇ ಹೇಳುತ್ತಿರುವ ದೃಶ್ಯ ಮಾಧ್ಯಮಗಳ ವರದಿಗಾರರು, ಸಂಪಾದಕರು ಈಗಲಾದರೂ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪ್ರತಿ ದಿನ ಪತ್ರಕರ್ತರ ಮೇಲೆ ದಾಳಿ ಮಾಡಿದ ವಕೀಲರ ಮುಖಗಳನ್ನು ತೋರಿಸಿ, ‘ಇವರನ್ನು ಇನ್ನೂ ಏಕೆ ಬಂಧಿಸಿಲ್ಲ?’ ಎಂದು ಪ್ರಶ್ನೆ ಕೇಳುವ ಸುದ್ದಿ ವಾಹಿನಿಗಳ ಸಂಪಾದಕರೆ, ಈ ದೃಶ್ಯದಲ್ಲಿರುವ ವರದಿಗಾರ ಮತ್ತು ಅವನ ಜೊತೆಯಲ್ಲಿರುವವರು ಯಾರು? ಅವರನ್ನು ಗುರುತಿಸಲು ನಿಮಗೇಕೆ ಸಾಧ್ಯವಾಗಿಲ್ಲ? “ವಕೀಲರ ಸಂಘ ‘ಗೂಂಡಾ ವಕೀಲರನ್ನು’ ಗುರುತಿಸಲಿ, ಅವರನ್ನು ಶಿಕ್ಷಿಸಲಿ,” ಎಂದು ಕೇಳುವ ಸುದ್ದಿ ವಾಹಿನಿಯವರು, ನಿಮ್ಮೊಳಗಿರುವ ಇಂಥವರನ್ನು (ಗೂಂಡಾ ಎನ್ನಬೇಕೊ, ಪುಂಡ ಎನ್ನಬೇಕೋ ತಿಳಿಯುತ್ತಿಲ್ಲ) ನೀವೇಕೆ ಸರಿದಾರಿಗೆ ತರುವುದಿಲ್ಲ?

ಸರಕಾರ ಈ ಘಟನೆ ಬಗ್ಗೆ ಆರ್.ಕೆ. ದತ್ತಾ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದೆ. ತನಿಖೆ ವೇಳೆ ಇಂತಹ ವೀಡಿಯೋಗಳನ್ನೂ ಪರಿಶೀಲಿಸಬಹುದು.

ರಾಹುಲ್, ಅಖಿಲೇಶ್ : ಗೆಲುವು ಕೊಡುವ ಸೌಂದರ್ಯ


-ಬಿ. ಶ್ರೀಪಾದ ಭಟ್


 

“ನೀನು ಶ್ರೇಷ್ಟನಾಗುವುದು ಮಹಾತ್ವಾಕಾಂಕ್ಷೆಯಿದ್ದಾಗ. ಅದರೆ ಅದರ ಜೊತೆಗೆ ಬರುವ ಖಾಯಿಲೆಗಳಿಂದ ಮುಕ್ತನಾದಾಗ. ಮಾಡುವ ಕೆಲಸಗಳು ಪವಿತ್ರವಾಗಿರಬೇಕೆಂದು ಅರಿವಾದಾಗ.” – ಲೇಡಿ ಮ್ಯಾಕ್ ಬೆತ್ ( ಅನು.:ರಾಮಚಂದ್ರ ದೇವ )

ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ಸೌಂದರ್ಯ ಅವನ/ಅವಳ ದೈಹಿಕ ಅಂದದ ಮೂಲಕ ಅಳೆಯುತ್ತೇವೆ. ಅಥವ ಅಳೆಯಲ್ಪಡುತ್ತದೆ. ಅವರ ಬಣ್ಣ, ಎತ್ತರ, ಕಣ್ಣು, ಮೂಗು, ತೂಕ, ಹೀಗೆ ಅನೇಕ ಸಂಗತಿಗಳು ಗಣನೆಗೆ ಒಳಪಡುತ್ತವೆ .ಈ ಬಾಹ್ಯ ಸೌಂದರ್ಯ ಹೆಚ್ಚಾಗಿ ಆಕರ್ಷಣೆಗೆ ಪರಿಗಣಿತವಾಗುತ್ತದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಜನಪ್ರಿಯ ವ್ಯಕ್ತಿಗಳಾದ ಅನೇಕ ಸಿನಿಮಾ ನಟ/ನಟಿಯರು, ಆಟಗಾರರು, ಅಥ್ಲೀಟ್ ಗಳು ,ರಾಜಕಾರಣಿಗಳು ಅಥವಾ ನಾವು ದಿನ ನಿತ್ಯ ಮುಖಾಮುಖಿಯಾಗುವ ವ್ಯಕ್ತಿಗಳು, ಹೀಗೆ ಈ ಬಾಹ್ಯ ಸೌಂದರ್ಯದ ಆಕರ್ಷಣೆಗೆ, ಮನಸೋಲುವಿಕೆಗೆ ಅನೇಕ ಮಜಲುಗಳಿವೆ .ಇದು ಸಹಜವಾದದ್ದು. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಆದರೆ ವ್ಯಕ್ತಿಯೊಬ್ಬನ ದೈಹಿಕ ಸೌಂದರ್ಯವನ್ನು ಮೀರಿ, ದೈಹಿಕ ಆಕರ್ಷಣೆಯ ಕೊರತೆಯಿದ್ದರೂ, ತಮ್ಮ ಅನೇಕ ದೈಹಿಕ ನೂನ್ಯತೆಗಳ ನಡುವೆಯೂ ತನ್ನ ಕಾರ್ಯಕ್ಷೇತ್ರದಲ್ಲಿನ ಸಾಧನೆಯಿಂದ ಅವನು/ಅವಳು ಆಕರ್ಷಕವಾಗಿ ಕಂಗೊಳಿಸುವುದು ನಿಜಕ್ಕೂ ವಿಶೇಷವೆನಿಸುತ್ತದೆ.

ಇತ್ತೀಚೆಗೆ “ಪಾನ್ ಸಿಂಗ್ ಟೋಮರ್” ಎನ್ನುವ ಹಿಂದಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಇರ್ಫ಼ಾನ್ ಖಾನ್ ಅತ್ಯಂತ ಸಾಧಾರಣ ರೂಪಿನ ನಟ. ಹತ್ತರಲ್ಲೊಬ್ಬ. ಆದರೆ ತನ್ನ ಶ್ರೇಷ್ಟ ನಟನೆಯ ಮೂಲಕ, ಆ ಚಿತ್ರದ ಗೆಲುವಿನ ಮೂಲಕ, ಇಂದು ಆಕರ್ಷಕ ನಟನಾಗಿ ಮೇಲೇರುತ್ತಿದ್ದಾನೆ. ಇದೇ ಮಾತು ನಾಸಿರುದ್ದೀನ್ ಶಾ ಹಾಗೂ ಓಂಪುರಿ ಅವರಂತಹ ಸಾಧಾರಣ ರೂಪಿನ ಶ್ರೇಷ್ಟ ನಟರಿಗೂ ಅನ್ವಯಿಸುತ್ತದೆ. ಇದೇ ಮಾತು ಸ್ಮಿತಾ ಪಾಟೀಲ್‌ಳಂತಹ ಅದ್ಭುತ ನಟಿಗೆ ಕೂಡ ಅನ್ವಯಿಸುತ್ತದೆ. ಸುಂದರಿಯರಾದ, ಮಾದಕ ರೂಪಿನ ಶ್ರೀದೇವಿ. ಜಯಪ್ರದ ಅವರಿಗಿಂತಲೂ ಕಪ್ಪಗಿನ ಅನಾಕರ್ಷಕ ರೂಪಿನ ಸ್ಮಿತಾ ಪಾಟೀಲ್, ಶಬನ ಅಜ್ಮಿ‌ರಂತಹ ಅದ್ಭುತ ನಟಿಯರು ಎಂಬತ್ತರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದ ನಮಗೆ ಕನಸಿನ ರಾಣಿಯರಾಗಿದ್ದರು. ಇದಕ್ಕೆ ಕಾರಣ ಅವರ ಮನೋಜ್ನ ಅಭಿನಯದ ಸೌಂದರ್ಯ. ಅವರ ಬುದ್ಧಿಜೀವಿ ವ್ಯಕ್ತಿತ್ವ. ಇದೇ ಮಾತು ನಮ್ಮ ಪಿ.ಟಿ.ಉಷಾ ಎನ್ನುವ ಅದ್ಭುತ ಆಟಗಾರ್ತಿ ಬಗೆಗೂ ನಿಜ. ನೋಡಲಿಕ್ಕೆ ಕಪ್ಪಗೆ, ತೆಳ್ಳಗೆ, ಅತ್ಯಂತ ಸಾಧಾರಣ ರೂಪಿನ ಹುಡುಗಿಯಾಗಿದ್ದ ಈ ಪಿ.ಟಿ.ಉಷಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಗೆಲ್ಲತೊಡಗಿದಾಗ ಅವಳ ವ್ಯಕ್ತಿತ್ವವೇ ಆಕರ್ಷಕವಾಗಿ ಕಂಗೊಳಿಸತೊಡಗಿತು. ಅವಳ ಕಪ್ಪಗಿನ ಸಾಧಾರಣ ರೂಪ ನೇಪಥ್ಯಕ್ಕೆ ಸರೆಯಿತು.

ತನ್ನ ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ದೇಹದಿಂದ ಅನಾಕರ್ಷಕವಾಗಿ ಕಂಡುಬರುತ್ತಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ “ಅಖಿಲೇಶ್ ಸಿಂಗ್ ಯಾದವ್” ತಾನು ಹಗಲಿರುಳೂ ದುಡಿದು ,ಹಾದಿ ತಪ್ಪಿದ, ಸೋತಿದ್ದ ಸಮಾಜವಾದಿ ಪಕ್ಷವನ್ನು ತಳಮಟ್ಟದಿಂದ ,ಕಾರ್ಯಕರ್ತರ ಮೂಲಕ ಮರಳಿ ಅಖಾಡಕ್ಕೆ ಕರೆತಂದು 2012ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಹುಮತ ಗಳಿಸುವಂತೆ ಮಾಡಿ ಮತ್ತೆ ಅಧಿಕಾರವನ್ನು ತಂದು ಕೊಟ್ಟಿದ್ದಾನೆ. ಈ ಮೂಲಕ ಸಮಾಜವಾದಿ ಪಕ್ಷದ ಗೆಲುವಿನ ರೂವಾರಿಯಾಗಿದ್ದಾನೆ. ಇನ್ನು ಮುಂದಿನ ಒಂದು ತಿಂಗಳು ಈ ಅಖಿಲೇಶ ಯಾದವ್ ಸುದ್ದಿ ಮಾಧ್ಯಮಗಳ ಕೇಂದ್ರ ಬಿಂದು. ಈ ಅಖಿಲೇಶ್ ತನ್ನ ಈ ಸ್ವಯಾರ್ಜಿತ ಗೆಲುವಿನ ಮೂಲಕ ಸಹಜವಾಗಿಯೇ ಆಕರ್ಷಕವಾಗಿ ಕಾಣತೊಡಗಿದ್ದಾನೆ. ಮೇಲ್ಕಾಣಿಸಿದ ಆತನ ಸಾಧಾರಣ ರೂಪ ಇಂದು ಅಸಾಧಾರಣವಾಗಿಯೂ, ಸುಂದರವಾಗಿಯೂ ಕಾಣಲ್ಪಡತೊಡಗುತ್ತದೆ. ಎಲ್ಲರೂ ಈ ಅಖಿಲೇಶ್ ಯಾದವ್‌ನಲ್ಲಿ ನಾಯಕನ ರೂಪು ಕಾಣತೊಡಗಿದ್ದಾರೆ.ಇದೇ ಗೆಲುವಿನ ಗಮ್ಮತ್ತು. ಆದೇ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ದೈಹಿಕವಾಗಿ ಆಕರ್ಷಕವಾಗಿದ್ದ, ಕಣ್ಣು, ಮೂಗು, ಬಣ್ಣ, ಎತ್ತರ, ಧ್ವನಿ ಮುಂತಾದವುಗಳೆನ್ನೆಲ್ಲಾ ಸಮರೂಪವಾಗಿ ಪಡೆದಿದ್ದ, ತನ್ನ 42ರ ವಯಸ್ಸಿನಲ್ಲಿಯೂ ಅತ್ಯಂತ ಸುಂದರನಾಗಿ ಕಾಣುತ್ತಿದ್ದ ಈ ರಾಹುಲ್ ಗಾಂಧಿಯ ಡ್ರೆಸ್ ಕೋಡ್ ಕೂಡ ಅತನ ಸುಂದರ ರೂಪಿಗೆ ಮೆರುಗು ನೀಡುತ್ತಿತ್ತು. ಅತನ ಕುರುಚಲು ಗಡ್ದ ಸಹ! ಆದರೆ ಏನಾಯಿತು? ರಾಹುಲ್ ಗಾಂಧಿ ತನ್ನ ರಾಜಕೀಯ ಸ್ಥಾನಮಾನವನ್ನು,ತನ್ನ ಘನತೆಯನ್ನು ಪಣಕ್ಕಿಟ್ಟು ಹೋರಾಡಿದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಂತ ದಯನೀಯವಾಗಿ ಸೋಲನ್ನು ಅನುಭವಿಸಿ ಹೆಚ್ಚೂ ಕಡಿಮೆ ನೆಲ ಕಚ್ಚಿದೆ. ಅಲ್ಲದೆ ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ. ಇದರ ವಿಶ್ಲೇಷಣೆಗೆ ಬೇರೆಯೆದೇ ವೇದಿಕೆ ಬೇಕಾಗುತ್ತದೆ.ಆದರೆ ಇಂದು ಈ ತನ್ನ ಹೀನಾಯ ಸೋಲಿನ ಮೂಲಕ ಸುಂದರನಾದ ರಾಹುಲ್ ಗಾಂಧಿ ಅತ್ಯಂತ ಅನಾಕರ್ಷಕವಾಗಿ ಕಾಣತೊಡಗಿದ್ದಾನೆ. ಈ ರಾಹುಲ್ ಗಾಂಧಿ ಎನ್ನುವ ಕಾಂಗ್ರೆಸ್ ಯುವರಾಜ ರಾಜಕೀಯ ಯುದ್ಧದಲ್ಲಿ ಸೋತಂತಹ ದಿನಗಳಲ್ಲಿ ಇಂದು ಆತನ ಮನಮೋಹಕ ಬಣ್ಣ, ಹೊಳಪು, ಸುಂದರ ಕಾಯ ಯಾವುದೂ ಈತನನ್ನು ಮೇಲಕ್ಕೆತ್ತಲಾರವು. ಗೆಲುವಿಗೆ ಮಾತ್ರ ಆ ಸಾಧ್ಯತೆ ಇತ್ತು. ಇದು ಅಖಿಲೇಶ್ ಯಾದವ್ ಪಾಲಿಗೆ ನಿಜವೆಂದು ಸಾಬೀತಾಗಿದೆ. ಉದ್ದನೆಯ, ಸೊಟ್ಟ ಮೂಗಿನ, ಕುಳ್ಳಗಿನ ಅನಾಕರ್ಷಕ ಅಖಿಲೇಶ್ ಯಾದವ್ ತನ್ನ ಗೆಲುವಿನ ಮೂಲಕ ಆಕರ್ಷಕವಾಗಿ ಎಲ್ಲರ ಕಣ್ಮಣಿಯಾಗಿ ಕಂಗೊಳಿಸುತ್ತಿದ್ದರೆ ಆಕರ್ಷಕ, ಸುಂದರ ಪುರುಷ ರಾಹುಲ್ ಗಾಂಧಿ ತನ್ನ ಹೀನಾಯ ಸೋಲಿನೊಂದಿಗೆ ಮೂಲೆಗೆ ತಳ್ಳಲ್ಪಟ್ಟಿದ್ದಾನೆ. ಅನಾಕರ್ಷಕವಾಗಿ ಕಾಣುತ್ತಿದ್ದಾನೆ. ಇದೇ ಪ್ರಾಮಾಣಿಕ ಗೆಲುವಿನ ಮನಮೋಹಕ ಆದರೆ ನಿಷ್ಟುರ ಕಠೋರ ದೃಶ್ಯಗಳು.

ಇಂದು ಯಶಸ್ಸಿನ ಅಲೆಯ ಮೇಲಿರುವ ಅಖಿಲೇಶ್ ಸಿಂಗ್ ಯಾದವ್‌ಗೆ ಮ್ಯಾಕ್ ಬೆತ್ ನಾಟಕದಲ್ಲಿ ಬ್ಯಾಂಕೋ ಹೇಳಿದ “ಹೊಸ ಗೌರವಗಳು ಅವನಿಗೆ ಸಂದಿವೆ, ಅವು ಹೊಸ ಬಟ್ಟೆಗಳಂತೆ; ದೇಹಕ್ಕೆ ಒಗ್ಗುವುದು ಉಪಯೋಗಿಸತೊಡಗಿದ ಮೇಲೆ,”ಎನ್ನುವ ಮನೋಜ್ಞ ಮಾತುಗಳು ಅರ್ಥವಾದರೆ ಎಷ್ಟು ಚೆನ್ನ! ರಾಮ ಮನೋಹರ ಲೋಹಿಯಾ ಅವರನ್ನು ಓದತೊಡಗಿದರೆ ಎಷ್ಟು ಚೆನ್ನ! ಒಂದು ವರ್ಷದ ನಂತರ ಲೋಹಿಯಾರ ಕೆಲವು ಮಾತುಗಳನ್ನು ತನ್ನ ತೊದಲು ನುಡಿಗಳಲ್ಲಿ ಹೇಳುವಂತಾದರೆ ಎಷ್ಟು ಚೆನ್ನ! ಬುಂದೇಲಖಂಡ, ಪೂರ್ವಾಂಚಲದಲ್ಲಿನ ಅನೇಕ ದಲಿತರ ಓಟುಗಳು ಈ ಬಾರಿ ಸಮಾಜವಾದಿ ಪಕ್ಷಕ್ಕೆ ಸಂದಿದ್ದರ ಹಿಂದಿನ ಸಾಮಾಜಿಕತೆ ಈ ಅಖಿಲೇಶ್ ಅರ್ಥ ಮಾಡಿಕೊಂಡರೆ, ಮುಸ್ಲಿಂರ ಓಟ್ ಬ್ಯಾಂಕ್ ಹೇಗೆ ಮತ್ತು ಏಕೆ ಸಂಘಟಿತವಾಗಿ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿತು ಎನ್ನುವುದನ್ನು ಈ ಅಖಿಲೇಶ್ ಅರಿತರೆ, ಯಾದವರು ಇಂದು ಒಂದು ಹಿಂದುಳಿದ ಜಾತಿಯಾಗಿ ಉಳಿದಿಲ್ಲ ಅದು ಒಂದು ಮಧ್ಯಮ ವರ್ಗದ, ಬಲಿಷ್ಟ ದಬ್ಬಾಳಿಕೆಯ ಜಮೀನ್ದಾರಿ ಜಾತಿಯಾಗಿ ಮೆರೆಯುತ್ತಿದೆ ಎನ್ನುವುದರ ಹಿನ್ನೆಲೆಯ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳನ್ನು ಮನನ ಮಾಡಿಕೊಂಡರೆ, ಎಷ್ಟು ಚೆನ್ನ ಅಲ್ಲವೆ? ಇದೆಲ್ಲದಕ್ಕಿಂತ ಮುಖ್ಯವಾದದ್ದು ಅಖಿಲೇಶ್ ಸಿಂಗ್ ಯಾದವ್ ಎನ್ನುವ ಯುವ ನಾಯಕನಿಗೆ 25 ರಿಂದ 30 ರ ವಯಸ್ಸಿನ ಆಜುಬಾಜಿರುವ ಶೇಕಡ 35 ರಷ್ಟು ಯವ ಜನಾಂಗ ಇಂದು ಸಂಪೂರ್ಣವಾಗಿ ಬೆಂಬಲಿಸಿದೆ. ಈ ಯವ ಜನತೆಯ ಬೆಂಬಲವೇ ಇವತ್ತಿನ ಸಮಾಜವಾದಿ ಪಕ್ಷದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದ್ದು, ಬಲು ದೊಡ್ಡ ತಿರುವು ನೀಡಿದ್ದು. ಸಹಜವಾಗಿಯೇ Generation next ಹುಡುಗನಂತಿರುವ ಯುವರಾಜ “ರಾಹುಲ್ ಗಾಂಧಿ”ಯನ್ನು ಏತಕ್ಕೆ ಕೈ ಬಿಟ್ಟು ಅಖಿಲೇಶ್ ಸಿಂಗ್ ಯಾದವ್ ನನ್ನು ಕೈ ಹಿಡಿದರು ಎನ್ನುವುದರ ಒಳ ನೋಟಗಳನ್ನು ಈ ಅಖಿಲೇಶ್ ಅರ್ಥ ಮಾಡಿಕೊಂಡ ದಿನ, ಮುಂದಿನ ಎರಡು ವರ್ಷಗಳಲ್ಲಿ ತನಗೆ ಅರ್ಥವಾದಷ್ಟನ್ನು, ದಕ್ಕಿದಷ್ಟನ್ನು ಕಾರ್ಯರೂಪಕ್ಕೆ ತರುವ ಯೋಜನೆಗಳ Blue print ಅನ್ನು ಈ ಅಖಿಲೇಶ್ ಸಿಂಗ್ ಯಾದವ್ ತಯಾರಿಸಿಕೊಂಡ ದಿನ ನಿಜಕ್ಕೂ ಉತ್ತರ ಪ್ರದೇಶದ ಭವಿಷ್ಯದ ಅರ್ಥಪೂರ್ಣ ಕನುಸುಗಳು ಸಾಕಾರಗೊಳ್ಳಬಹುದೇನೋ ಎನ್ನುವ ಅನುಮಾನಗಳ ಬೀಜ ಹುಟ್ಟಿಕೊಳ್ಳುವ ಹೊಸ ಚಿಂತನೆಗಳಿಗೆ ನಾಂದಿ ಹಾಡಿದಂತಾಗುತ್ತದೆ.

ಕಡೆಯದಾಗಿ ಈ ಅಖಿಲೇಶ್ ಸಿಂಗ್ ಯಾದವ್, “ನಾನು ಉತ್ತರ ಪ್ರದೇಶದ ಎಲ್ಲಾ ವರ್ಗಗಳ ,ಜಾತಿಗಳ ಪ್ರತಿನಿಧಿ ಆಗಿರುವವರೆಗೂ ಇಲ್ಲಿ ಇನ್ನೆಂದೂ ಗೂಂಡಾ ರಾಜ್ ತಲೆಯತ್ತಲಾರದು, ಇಲ್ಲಿ ಇನ್ನೆಂದೂ ದಲಿತರ ಹತ್ಯಾಕಾಂಡಗಳು ನಡೆಯಲಾರವು, ಸಾಚಾರ್ ಕಮಿಟಿಯನ್ನು ಜಾರಿಗೊಳಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ,” ಎಂದು ಮೊದಲು ಘೋಷಿಸಿಲೇಬೇಕು. ಏಕೆಂದರೆ ಇದು minimum requirement ಗೆದ್ದ ನಾಯಕನಿಂದ. ಏಕೆಂದರೆ “ನೇತಾಜಿ”ಗೆ ವಯಸ್ಸಾಗಿದೆ. ಅವರು ಇದನ್ನು ಹೇಳುವುದಿರಲಿ ಇಂತಹ ಮಾತುಗಳೂ ಕೂಡ ನೆನಪಿರಲಾರವು.

(ಚಿತ್ರಕೃಪೆ: ವಿಕಿಪೀಡಿಯ, ದಿ ಹಿಂದು)

ನಾಡಿನ ನಕ್ಸಲ್ ನಿಗ್ರಹ ದಳದಿಂದ ಕಾಡಿನ ಅಮಾಯಕ ವಿದ್ಯಾರ್ಥಿಯ ಬಂಧನ

-ನವೀನ್ ಸೂರಿಂಜೆ

ಕರ್ನಾಟಕದ ನಕ್ಸಲ್ ನಿಗ್ರಹ ದಳದ ಅಟ್ಟಹಾಸಕ್ಕೆ ಇದೀಗ ಅಮಾಯಕ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ಬಲಿಪಶುವಾಗಿದ್ದಾನೆ. ನಕ್ಸಲ್ ಬೆಂಬಲಿಗರೆಂಬ ಆರೋಪದಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬೆಳ್ತಂಗಡಿಯ ಕುತ್ಲೂರು ಪರಿಸರದಲ್ಲಿ ಕಳೆದ ಶನಿವಾರ ಬಂಧಿಸಿರುವ ಮೂವರಲ್ಲಿ ಓರ್ವನಾದ ವಿಠ್ಠಲ ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ನೂರು ಶೇಕಡಾ ತರಗತಿ ಹಾಜರಾತಿಯನ್ನು ಹೊಂದಿರುವ ಬುದ್ದಿವಂತ ವಿದ್ಯಾರ್ಥಿ ನಕ್ಸಲ್ ಪೀಡಿತ ಗ್ರಾಮದ ಮಲೆಕುಡಿಯ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಜೈಲಲ್ಲಿ ಕೊಳೆಯುವಂತಾಗಿದೆ.

ನಕ್ಸಲ್ ವಿರೋಧಿ ಎಡಪಕ್ಷವಾದ ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನಲ್ಲಿ ಸಕ್ರಿಯನಾಗಿದ್ದ ವಿಠ್ಠಲ ಕಳೆದ ಆಗಸ್ಟ್ ತಿಂಗಳಿನಿಂದ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಆರಂಭಿಸಿದ್ದ. ತನ್ನ ಹುಟ್ಟೂರಿನಲ್ಲಿ ನಕ್ಸಲ್ ಚಟುವಟಿಕೆಗಳಿಂದ ಬೇಸತ್ತಿದ್ದ ವಿಠ್ಠಲ್, ಎಡ ಪಕ್ಷದ ಅಂಗ ಸಂಘಟನೆಯಾದ ದಲಿತ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯನಾಗಿಸಿಕೊಂಡಿದ್ದ. ವಿಶೇಷವೆಂದರೆ ಮಲೆಕುಡಿಯ ಜನಾಂಗಕ್ಕೆ ಸೇರಿದ ವಿಠ್ಠಲ ಕುತ್ಲೂರಿನ ಮಲೆಕುಡಿಯ ಸಮುದಾಯದಲ್ಲಿ ಎಸ್ಎಸ್ಎಲ್‌‍ಸಿಗಿಂತ ಮೇಲ್ಮಟ್ಟದ ವಿದ್ಯಾಭ್ಯಾಸದ ಹಂತವನ್ನು ತಲುಪಿರುವ ಏಕೈಕ ಯುವಕ. ಕಾಡಿನಲ್ಲಿ ಶತ ಶತಮಾನಗಳಿಂದ ಬದುಕಿದ್ದವರನ್ನು ಒಕ್ಕಲೆಬ್ಬಿಸಲು ಪ್ರತೀ ಕುಟುಂಬಕ್ಕೆ ಹತ್ತು ಲಕ್ಷ ನೀಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದಾಗ ಅದನ್ನು ವಿರೋಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿರುವಲ್ಲಿ ವಿಠ್ಠಲ್ ಪಾತ್ರ ಪ್ರಮುಖವಾದುದು. ಅಲ್ಲಿಯವರೆಗೆ ಅಧಿಕಾರಿಗಳು ತೋರಿಸಿದ ಕಾಗದಕ್ಕೆ ಹೆಬ್ಬೆಟ್ಟು ಒತ್ತುತ್ತಿದ್ದವರು ವಿಠ್ಠಲ್‍ನ ವಿದ್ಯಾಬ್ಯಾಸದ ನಂತರ ಚಿತ್ರಣ ಬದಲಾಗಿತ್ತು. ಈ ಕಾರಣದಿಂದಾಗಿಯೇ ಇಂದಿಗೂ ನಲ್ವತ್ತು ಕುಟುಂಬಗಳನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಇದು ಎಎನ್ಎಫ್ ಮತ್ತು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿತ್ತು.

ಮಂಗಳೂರು ವಿವಿಯ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದುಕೊಂಡು ಕಳೆದ ಒಂದು ವರ್ಷದಿಂದೀಚೆಗೆ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ವಿಠ್ಠಲನಿಗೆ ಪತ್ರಿಕೋಧ್ಯಮ ಕ್ಷೇತ್ರವನ್ನು ಆಯ್ದುಕೊಳ್ಳುವಂತೆ ಸಲಹೆ ನೀಡಿದ್ದೇ ಮಂಗಳೂರಿನ ಪತ್ರಕರ್ತರು. ನಾನೂ ಸೇರಿದಂತೆ ಮಂಗಳೂರಿನ ಪತ್ರಕರ್ತ ಮಿತ್ರರೆಲ್ಲಾ ನಕ್ಸಲ್ ಪೀಡಿತ ಪ್ರದೇಶಕ್ಕೆ ವರದಿಗಾಗಿ ತೆರಳಿದ್ದ ಸಂದರ್ಭ ಪದವಿ ಶಿಕ್ಷಣ ಮುಗಿಸಿದ್ದ ವಿಠ್ಠಲ ಕಣ್ಣಿಗೆ ಬಿದ್ದಿದ್ದ. ನಂತರ ಹಲವಾರು ಬಾರಿ ಕುತ್ಲೂರು ಪ್ರದೇಶಕ್ಕೆ ವರದಿಗಾಗಿ ನಾವು ತೆರಳಿದ್ದ ಸಂಧರ್ಭ ನಮಗೆಲ್ಲಾ ಕಾಡಿನಲ್ಲಿ ಆಶ್ರಯ ನೀಡಿದ್ದು ಇದೇ ವಿಠ್ಠಲ್ ಮನೆ. ನಂತರ ವಿಠ್ಠಲ್ ನಮ್ಮವನಾಗಿದ್ದ. ನಮ್ಮ ವರದಿಗಾರಿಕೆಯ ಕೆಲಸಗಳನ್ನು ಮೌನವಾಗಿ ಗಮನಿಸುತ್ತಿದ್ದ ವಿಠ್ಠಲ್‍ಗೆ ತಾನೂ ಪತ್ರಕರ್ತನಾಗಬೇಕು ಎಂಬ ಆಶೆ ಮೊಳಕೆಯೊಡೆದಿತ್ತು. ಅದನ್ನು ನಮ್ಮ ಬಳಿ ಹೇಳಿಕೊಂಡಿದ್ದ. ನಾವು ತಕ್ಷಣ ಅದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದೆವು. ನೇರ ಮಂಗಳೂರಿಗೆ ಕರೆಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿ ವ್ಯವಸ್ಥೆಗಳನ್ನು ಮಾಡಿದ್ದೆವು.

ಪತ್ರಕರ್ತ ಮಿತ್ರರೆಲ್ಲಾ ಸೇರಿ ಪುಸ್ತಕಗಳ ವ್ಯವಸ್ಥೆಯನ್ನೂ ಮಾಡಿಕೊಟ್ಟೆವು. ನಂತರ ವಿಠ್ಠಲ್ ತಿರುಗಿ ನೋಡಿದ್ದೇ ಇಲ್ಲ. ಕಾಲೇಜಿನಲ್ಲಿ ನೀಡೋ ಎಸೈನ್‍ಮೆಂಟ್‍ಗಳನ್ನು ಅಸ್ಥೆಯಿಂದ ನಿರ್ವಹಿಸುತ್ತಿದ್ದ. ಯಾವುದೇ ಸುದ್ಧಿಯ ಎಸೈನ್‍ಮೆಂಟ್ ನೀಡಿದರೂ ನೇರ ನನ್ನಲ್ಲಿಗೆ ಬಂದು ಸಲಹೆಗಳನ್ನು ಪಡೆದುಕೊಂಡು ಪರಿಪೂರ್ಣ ವರದಿ ತಯಾರಾಗುವಂತೆ ನೋಡಿಕೊಳ್ಳುತ್ತಿದ್ದ. ಆತ ಕಾಲೇಜಿಗೆ ಸೇರಿದ ದಿನದಿಂದ ಒಂದೇ ಒಂದು ತರಗತಿಯನ್ನೂ ತಪ್ಪಿಸಿಲ್ಲ. ನೂರು ಶೇಕಡಾ ಹಾಜರಾತಿ ಇದೆ ಎಂದು ಕಾಲೇಜು ದಾಖಲೆಗಳು ದೃಢೀಕರಿಸುತ್ತದೆ. ರಜೆಯ ಸಂಧರ್ಭದಲ್ಲಿ ಎಲ್ಲೆಲ್ಲಿ ವಿಚಾರ ಸಂಕಿರಣಗಳಿವೆ ಎಂದು ನನ್ನಲ್ಲಿ ತಿಳಿದುಕೊಂಡು ಹಾಜರಾಗುತ್ತಿದ್ದ. ಒಟ್ಟಾರೆ ಆತನೊಬ್ಬ ಭರವಸೆಯ ಪತ್ರಕರ್ತನಾಗಿ ಎಲ್ಲಾ ರೀತಿಯಲ್ಲೂ ರೂಪುಗೊಳ್ಳುತ್ತಿದ್ದ ಎಂದು ನನಗನ್ನಿಸುತ್ತಿತ್ತು.

ಕಳೆದ ಎರಡು ವಾರದಿಂದ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಕೂಂಬಿಕ್ ಕಾರ್ಯಾಚರಣೆ ನಡೆಯುತ್ತಿದೆ. ಕುತ್ಲೂರಿನಲ್ಲಿ ಕೂಂಬಿಕ್ ನಡೆಸಿದ ಎಎನ್ಎಫ್ ತಂಡವು ಚೀಂಕ್ರ ಮಲೆಕುಡಿಯನನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿತ್ತು. ನಂತರ ಎಎನ್ಎಫ್ ತಂಡವು ನೇರವಾಗಿ ವಿಠ್ಠಲ್ ಮನೆಗೆ ತೆರಳಿ ವಿಠ್ಠಲ್ ತಂದೆ ಲಿಂಗಣ್ಣ ಮಲೆಕುಡಿಯರನ್ನು ವಿಚಾರಣೆ ನಡೆಸಿತು. ರಾತ್ರಿಯಿಡೀ ಗೃಹ ಬಂಧನದಲ್ಲಿರಿಸಿದ ಎಎನ್ಎಫ್ ತಂಡವು ವೃದ್ಧ ಲಿಂಗಣ್ಣರಿಗೆ ಬೇಕಾಬಿಟ್ಟಿ ಥಳಿಸಿತ್ತು. ಇದನ್ನು  ಮರುದಿನ ಬೆಳಿಗ್ಗೆ ಪಕ್ಕದ ಮನೆಯ ಪೂವಪ್ಪ ಮಲೆಕುಡಿಯ ವಿಠ್ಠಲ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಮರುದಿನ ಬೆಳಗ್ಗೆ ಕುತ್ಲೂರಿಗೆ ಹೊರಟು ನಿಂತ ವಿಠ್ಠಲ ಈ ಬಗ್ಗೆ ನನಗೆ ಮತ್ತು ಆತನ ಪರಿಚಯದ ಕೆಲ ಮಾಧ್ಯಮ ಮಿತ್ರರಿಗೂ ತನ್ನ ತಂದೆಯ ಬಗ್ಗೆ ಮಾಹಿತಿ ನೀಡಿದ್ದ. “ತಂದೆಯನ್ನು ನೋಡಲೇ ಬೇಕೆಂದಿದ್ದರೆ ಹೋಗು. ಇಲ್ಲದೆ ಇದ್ದರೆ ಪೂವಪ್ಪ ಮತ್ತು ಇತರರು ತಂದೆಯನ್ನು ಆಸ್ಪತ್ರೆಗೆ ದಾಖಲಿಸುವಂತೆ ನಾನು ಹೇಳುತ್ತೇನೆ” ಎಂದು ಅವನಿಗೆ ನಾನೇ ಹೇಳಿದ್ದೆ. ಆದರೂ ಆತನ ಮನಸ್ಸು ತಂದೆ ಮತ್ತು ತಾಯಿಯನ್ನು ನೋಡಬೇಕು ಎಂದು ಹಂಬಲಿಸುತ್ತಿರುವುದನ್ನು ನಾನು ಬಲ್ಲವನಾದೆ.” ಸರಿ ಹೋಗು. ಆದರೆ ನಿನ್ನ ಕಾಲೇಜಿನ ಗುರುತು ಪತ್ರವನ್ನು ತೆಗೆದುಕೊಂಡು ಹೋಗು. ಮತ್ತು ಕಾಡಿನಲ್ಲಿ ಎಎನ್ಎಫ್ ಪೊಲೀಸರು ಎದುರಾದರೆ ನೀನಾಗಿಯೇ ಗುರುತು ಪತ್ರ  ತೋರಿಸಿ ಮಾತನಾಡು. ನಂತರ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಅವಕಾಶ ನೀಡುವಂತೆ ಕೇಳಿಕೊ” ಎಂದು ಅತನಿಗೆ ಸಲಹೆಗಳನ್ನು ನೀಡಿದ್ದೆ.

ಬಸ್ಸು ಇಳಿದು ಎರಡು ಗಂಟೆಗಳ ಕಾಲ ದಟ್ಟ ಅರಣ್ಯದಲ್ಲಿ ಎಲ್ಲೂ ಕೂಡಾ ಎಎನ್ಎಫ್ ಸಿಬ್ಬಂದಿಗಳು ವಿಠ್ಠಲ್‍ಗೆ ಸಿಕ್ಕಿಲ್ಲ. ಎತ್ತರದ ಗುಡ್ಡ ಸಿಕ್ಕಾಗೆಲ್ಲಾ ಆತನ ಮೊಬೈಲ್ ನೆಟ್‍ವರ್ಕ್ ಸಿಗುತ್ತಿತ್ತು. ಆಗೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದ. ನಾನು ಇನ್ನಷ್ಟೂ ಸಲಹೆಗಳನ್ನು ನೀಡುತ್ತಿದ್ದೆ. ಮಧ್ಯಾಹ್ನದ ವೇಳೆಗೆ ಕುತ್ಲೂರಿನ ದಟ್ಟ ಅರಣ್ಯದ ನಡುವಿನ ತನ್ನ ಮನೆಗೆ ತಲುಪಿದ್ದ ವಿಠ್ಠಲನನ್ನು ವಿಚಾರಣೆಯ ನೆಪದಲ್ಲಿ ತಂದೆ ಲಿಂಗಣ್ಣನ ಜೊತೆ ಎಎನ್ಎಫ್ ತಂಡ ಬಂಧಿಸಿ ಕರೆದೊಯ್ದು ಎಫ್ಐಆರ್ ದಾಖಲಿಸಿ ಜೈಲಿಗಟ್ಟಿದೆ.

ಎಎನ್ಎಫ್ ತಂಡವು ಬಂಧಿತ ವಿಠ್ಠಲನ ಮನೆಯಲ್ಲಿ ಕರಪತ್ರ, ಬೈನಾಕ್ಯುಲರ್‌ನಂತಹ ಸಲಕರಣೆಗಳು ದೊರಕಿವೆ ಎಂಬುದಾಗಿ ಹೇಳಿಕೊಂಡಿದೆ. ವಿಠ್ಠಲನ ಬಳಿ ನಕ್ಸಲ್ ಪರವಾದ ಲೇಖನಗಳು, ನಕ್ಸಲ್ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹಾಗೂ ನಕ್ಸಲರು ಮೃತರಾದ ವರದಿಗಳ ಪತ್ರಿಕಾ ಸಂಗ್ರಹ ಕೂಡಾ ಇತ್ತು ಎಂಬ ಆರೋಪವನ್ನೂ ಹೊರಿಸಿದೆ. (ಮಾಮೂಲಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಂಗಳೂರು ನಗರದಲ್ಲಿರುವ ಮೂನ್ಶೈನ್ ಎಂಬ ಬ್ಯೂಟಿ ಪಾರ್ಲರಿನ ಡ್ರಾವರ್‌‌‌‌‌‌ನಲ್ಲಿ ಕಾಂಡೋಮ್ ಪ್ಯಾಕೇಟ್ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಮಹಿಳಾ ಕಾರ್ಮಿಕರನ್ನು ಅರೆಸ್ಟ್ ಮಾಡಿದವರಿಗೆ ಕರಪತ್ರ ಇಡೋದೇನೂ ಮಹಾಸಂಗತಿಯಲ್ಲ ಬಿಡಿ.)

ಈ ನಡುವೆ, ವಿಠ್ಠಲ ಮತ್ತು ಆತನ ತಂದೆಯ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಬೆಳ್ತಂಗಡಿಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಎನ್ಎಫ್ ತಂಡವು ಸುಳ್ಳು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ವಿಠ್ಠಲನನ್ನು ಹತ್ತಿರದಿಂದ ಬಲ್ಲ ಸಹಪಾಠಿಗಳು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಚಿನ್ನಪ್ಪ ಗೌಡರಿಗೆ ವಿವಿ ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ವಿಠ್ಠಲನ ತಂದೆ ವಯೋವೃದ್ಧರಾದ ಲಿಂಗಣ್ಣ ಮಲೆಕುಡಿಯರಿಗೆ ಪೊಲೀಸರು ನೀಡಿರುವ ದೈಹಿಕ ದೌರ್ಜನ್ಯದಿಂದಾಗಿ ಕಾಲಿನ ಮಣಿಗಂಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರನ್ನೀಗ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ವಿವಿ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದು ತರಗತಿಯಲ್ಲಿ ನೂರು ಶೇಕಡಾ ಹಾಜರಾತಿಯನ್ನು ಹೊಂದಿದ್ದ ವಿಠ್ಠಲ್ ಮೇಲೆ ಪೊಲೀಸರು ಸೆಕ್ಷನ್ 10 ಮತ್ತು 13(2) ಅನ್ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಷನ್) ಆ್ಯಕ್ಟ್ ಮೂಲಕ ರಾಜದ್ರೋಹದ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಉಜ್ವಲ ಭವಿಷ್ಯದ ಕನಸು ಹೊತ್ತಿದ್ದ ಯುವಕ ಮತ್ತಾತನ ಮನೆಯವರಿಗೆ ಇದೀಗ ಎಎನ್ಎಫ್ ತಂಡವು ನಕ್ಸಲ್ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟಿರುವುದು ನಿಜಕ್ಕೂ ವಿಷಾದನೀಯ.