Tag Archives: ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.

ರೌಡಿಗಳ ಪಟ್ಟಿಗೆ ಹೊಸಬರ ಸೇರ್ಪಡೆ!

 

– ದಿನೇಶ್ ಕುಮಾರ್ ಎಸ್. ಸಿ

“ವಕೀಲರ ರೌಡಿಸಂಗೆ ಸಿಎಂ ಹೆದರ್ತಾರೆ, ಗೃಹಮಂತ್ರಿ ನಡುಗ್ತಾರೆ, ಆದ್ರೆ ನಾವು… ಮಾಧ್ಯಮದವರು ಹೆದರೋದಿಲ್ಲ…” ಇದು ಇವತ್ತಿನ ಉದಯವಾಣಿಯ ಮುಖಪುಟದ ಶೀರ್ಷಿಕೆ. ಕನ್ನಡಪ್ರಭ “ಏನ್ ಲಾ” ಎಂಬ ಎರಡು ಅರ್ಥ ಹೊರಡಿಸುವ ಶೀರ್ಷಿಕೆ ನೀಡಿದೆ. ಈ ಶೀರ್ಷಿಕೆಗಳು ಮಾಧ್ಯಮರಂಗದ ಆತ್ಮವಿಶ್ವಾಸದಂತೆಯೂ, ಅಹಂಕಾರದಂತೆಯೂ ಏಕಕಾಲಕ್ಕೆ ಧ್ವನಿ ಹೊರಡಿಸುತ್ತದೆ. ಸಿಟಿ ಸಿವಿಲ್ ಕೋರ್ಟ್ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯಿಂದ ಕನ್ನಡ ಮಾಧ್ಯಮ ಸಮೂಹ ಕೆರಳಿ ನಿಂತಿದೆ ಎಂಬುದಂತೂ ಸ್ಪಷ್ಟ. ಕೆರಳುವುದು, ಕೆರಳಿಸುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಜಾಯಮಾನ. ಯಾಕೆಂದರೆ ಅವುಗಳ ಟಿ‍ಆರ್‌ಪಿ ಯೊಂದಿಗೆ ಈ ಕೆರಳುವಿಕೆಗೆ ಸಂಬಂಧಿಸಿದೆ. ಈ ಬಾರಿ ಪತ್ರಿಕೆಗಳೂ ಸಹ ಕೆರಳಿವೆ. ಅದಕ್ಕೆ ಕಾರಣಗಳೂ ಇವೆ.

ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕೆಲ ವಕೀಲರು ನಡೆಸಿದ ಪುಂಡಾಟಿಕೆ ಅಸಹನೀಯ ಮತ್ತು ಅಸಮರ್ಥನೀಯ. ಅದು ಅಕ್ಷರಶಃ ಗೂಂಡಾಗಿರಿಯೇ ಹೌದು. ಘಟನೆಗೆ ಕಾರಣವಾಗಿರಬಹುದಾದ ಪ್ರಚೋದನೆ ಏನೇ ಆಗಿದ್ದರೂ ಇಂಥ ಪುಂಡಾಟಿಕೆ ಅನಪೇಕ್ಷಿತ ಮತ್ತು ಕಾನೂನು ಬಾಹಿರ. ಇಂಥ ಕೃತ್ಯ ಎಸಗಿದ ವಕೀಲರು ಜೈಲು ಸೇರಲು ಲಾಯಕ್ಕಾದವರು ಮಾತ್ರವಲ್ಲ, ಅವರು ಮತ್ತೆಂದೂ ಕರಿಕೋಟು ಹಾಕುವಂತಾಗಬಾರದು.

ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಕೆರಳುವಿಕೆಯೂ ಅರ್ಥ ಮಾಡಿಕೊಳ್ಳುವಂಥದ್ದು. ನ್ಯೂಸ್ ಚಾನಲ್‍ಗಳು ಎರಡು ನಿಮಿಷಗಳ ಕಾಲ ಪ್ರಸಾರವನ್ನೇ ನಿಲ್ಲಿಸಿ ಪ್ರತಿಭಟಿಸಿದವು. ದಿನವಿಡೀ ಕಪ್ಪು ಬಣ್ಣದ ಹಿನ್ನೆಲೆಯನ್ನು ಪರದೆಯ ಮೇಲೆ ಬಳಸಿದವು. ಕಪ್ಪು ಪಟ್ಟಿ ಕಟ್ಟಿಕೊಂಡೇ ಸುದ್ದಿ ಓದಲಾಯಿತು. ಒಂದು ವಾಹಿನಿಯಲ್ಲಂತೂ ಬಾಯಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಸುದ್ದಿ ಓದಲಾಯಿತು.

ಎಲ್ಲ ಸರಿ, ಇಷ್ಟೆಲ್ಲದರ ನಡುವೆ ಪತ್ರಕರ್ತರು ವೃತ್ತಿ ಧರ್ಮವನ್ನೇಕೆ ಮರೆತರು ಎಂಬ ಪ್ರಶ್ನೆಗೂ ಉತ್ತರ ಕೊಡಬೇಕಾಗುತ್ತದೆ. ನಿನ್ನೆಯಿಂದ ಫೇಸ್ ಬುಕ್‍ನಂಥ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಈ ಪ್ರಶ್ನೆಗಳು ಕೇಳಿಬರುತ್ತಿವೆ. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪತ್ರಕರ್ತರನ್ನು ಥಳಿಸಿದ ಘಟನೆಯ ನಂತರ ಮಧ್ಯಾಹ್ನದ ಸುಮಾರಿಗೆ ನಡೆದ ಲಾಠಿ ಚಾರ್ಜ್ ಮತ್ತು ಕೋರ್ಟ್ ಒಳಗೆ ನಡೆದ ಪೊಲೀಸ್ ದೌರ್ಜನ್ಯದ ಸುದ್ದಿ ಎಲ್ಲ ವಾಹಿನಿಗಳಲ್ಲೂ ನಾಪತ್ತೆಯಾಗಿದ್ದವು. ಇವತ್ತಿನ ಪತ್ರಿಕೆಗಳಲ್ಲೂ ಅದು ಕಾಣೆಯಾಗಿವೆ ಅಥವಾ ಕಾಣದಂತಾಗಿವೆ.

ದಿ ಹಿಂದೂ ಪತ್ರಿಕೆ ಮಾತ್ರ ಘಟನೆಯ ಎಲ್ಲ ಆಯಾಮಗಳನ್ನು ವಿವರಿಸುವ ಪ್ರಯತ್ನ ಮಾಡಿದೆ. (ಈ ಕೆಲಸವನ್ನು ಪ್ರಜಾವಾಣಿಯಾದರೂ ಮಾಡಬಹುದು ಎಂಬ ನನ್ನ ನಿರೀಕ್ಷೆ ಸುಳ್ಳಾಯಿತು.) ಕೆಲ ಕನ್ನಡ ಪತ್ರಿಕೆಗಳು ಸಿಟಿ ಸಿವಿಲ್ ಕೋರ್ಟ್ ನ್ಯಾಯಮೂರ್ತಿ ಬೂದಿಹಾಳ್ ಅವರ ಮೇಲೆ ವಕೀಲರೇ ದೌರ್ಜನ್ಯವೆಸಗಿದರು ಎಂದು ವರದಿ ಮಾಡಿವೆ. ಆದರೆ ನ್ಯಾಯಮೂರ್ತಿಗಳು ಲಾಠಿ ಚಾರ್ಜ್‍ನಿಂದ ಗಾಯಗೊಂಡಿದ್ದರು.

ಕೆಲ ಪತ್ರಕರ್ತರು ಮಧ್ಯಾಹ್ನದ ನಂತರ ಪೊಲೀಸರೊಂದಿಗೆ ಸೇರಿ ಪ್ರತೀಕಾರದ ದಾಳಿ ನಡೆಸಿದರು ಎಂದು ಹಿಂದೂ ವರದಿ ಮಾಡಿದೆ. ವಕೀಲರ ಮತ್ತು ನ್ಯಾಯಾಧೀಶರ ವಾಹನಗಳನ್ನು ಜಂಟಿ ಕಾರ್ಯಾಚರಣೆಯಲ್ಲಿ ಒಡೆದುಹಾಕಲಾಯಿತು ಎಂದು ಈ ವರದಿ ಹೇಳುತ್ತದೆ. ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ಕೆಲ ವಾಹನಗಳಿಗೆ ಬೆಂಕಿ ಹಚ್ಚಿದರು ಎಂಬುದನ್ನೂ ವರದಿ ಬಹಿರಂಗಪಡಿಸುತ್ತದೆ. (ಕೆಲ ನ್ಯಾಯವಾದಿಗಳು ಪೊಲೀಸರೇ ವಾಹನಗಳಿಗೆ ಬೆಂಕಿಹಚ್ಚುವ ವಿಡಿಯೋಗಳನ್ನು ಈಗಾಗಲೇ ಫೇಸ್ ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.) ದಿ ಹಿಂದು ಪತ್ರಿಕೆ ವರದಿ ಪ್ರಕಾರ, ವಕೀಲರ ಮೇಲೆ ದಾಳಿ ಮಾಡುತ್ತಿದ್ದ ಪತ್ರಕರ್ತರನ್ನು ತಡೆಯಲು ಹೋದ ಸಮಚಿತ್ತದ ಒಬ್ಬ ಪತ್ರಕರ್ತರ ಮೇಲೆಯೂ ಇದೇ ಪತ್ರಕರ್ತರು ಹಲ್ಲೆ ಮಾಡಿದ್ದಾರೆ.

ಸಿಟಿ ಸಿವಿಲ್ ಕೋರ್ಟ್ ಒಳಗೆ ನುಗ್ಗಿದ ಪೊಲೀಸರು ಹೊರಗೆ ನಡೆದ ಘಟನೆಗೆ ಸಂಬಂಧವೇ ಇಲ್ಲದ ವಕೀಲರ ಮೇಲೆ ಲಾಠಿ ಬೀಸಿದ್ದಾರೆ. ಕ್ಯಾಂಟೀನು, ಬಾರ್ ಅಸೋಸಿಯೇಷನ್ ಒಳಗೂ ನುಗ್ಗಿ ದಾಳಿ ಮಾಡಿದ್ದಾರೆ. ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ ಆದರೆ ಎಷ್ಟು ಮಂದಿ ವಕೀಲರು ಗಾಯಗೊಂಡಿದ್ದಾರೆ? ಹೇಗೆ ಗಾಯಗೊಂಡರು? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು? ಎಂಬೆಲ್ಲ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಉತ್ತರವಿಲ್ಲ.

ಒಂದು ವಾಹಿನಿಯ ಪ್ರಕಾರ ಮೂರು ಮಂದಿ ಪೊಲೀಸ್ ಪೇದೆಗಳು ಮೃತಪಟ್ಟಿದ್ದಾರೆ, ಮತ್ತೊಂದು ಇಬ್ಬರ ಸಾವು ಎಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಸತ್ತ ಪೊಲೀಸರ ಹೆಸರುಗಳನ್ನೂ ಪ್ರಸಾರ ಮಾಡಲಾಯಿತು.! ದಿ ಹಿಂದೂ ವರದಿಯ ಪ್ರಕಾರ ಈ ಸುದ್ದಿಯನ್ನು ಸ್ಫೋಟಿಸಿದ ನಂತರ ನಗರದ ಹಲವು ವೃತ್ತಗಳಲ್ಲಿ ಕರಿಕೋಟು ಹಾಕಿಕೊಂಡು ಓಡಾಡುವವರ ಮೇಲೆ ಪೊಲೀಸರು ಲಾಠಿ ಬೀಸಿದರು! ವಕೀಲರು ಮನೆಗಳನ್ನು ತಲುಪಿಕೊಳ್ಳುವುದೇ ಕಷ್ಟವಾಯಿತು. ಸ್ವತಃ ಮುಖ್ಯಮಂತ್ರಿಗಳೇ ಘಟನೆಯಲ್ಲಿ ಯಾರೂ ಸತ್ತಿಲ್ಲ ಎಂದು ಖಚಿತಪಡಿಸಿದ ಮೇಲೂ ಒಂದು ವಾಹಿನಿ ಸುದ್ದಿವಾಚಕರು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದೇ ಹೇಳುತ್ತಿದ್ದರು.

ಇಡೀ ಘಟನಾವಳಿಗಳನ್ನು ಗಮನಿಸಿದಾಗ ಸ್ಪಷ್ಟವಾಗಿ ಕಾಣೋದು ವಕೀಲ, ಪತ್ರಕರ್ತ ಮತ್ತು ಪೊಲೀಸು ಎಂಬ ಮೂರು ವ್ಯವಸ್ಥೆಗಳ ನಡುವಿನ ಆಂತರಿಕ ಸಂಘರ್ಷ ಮತ್ತು ಅವುಗಳು ಬೆಳೆಸಿಕೊಂಡು ಬಂದಿರುವ ಅಹಂನಿಂದಾಗಿರುವ ಅನಾಚಾರಗಳು. ವ್ಯವಸ್ಥೆಯ ಈ ಮೂರೂ ಅಂಗಗಳೂ ಬಲಶಾಲಿಯಾಗಿವೆ. ಎಲ್ಲರೂ ತಮ್ಮನ್ನು ತಾವು ಸುಪ್ರೀಂ ಎಂದು ಭಾವಿಸಿಕೊಂಡಂತಿದೆ. ಈ ಅಹಂಗಳ ನಡುವಿನ ಸಂಘರ್ಷ ಇವತ್ತು ತಾರಕಕ್ಕೇರಿದೆ.

ತಿಂಗಳ ಹಿಂದೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕ್ಲುಲ್ಲಕ ಕಾರಣಕ್ಕೆ ವಕೀಲರು ಸತತ ಏಳುಗಂಟೆಗಳ ಕಾಲ ರಸ್ತೆತಡೆ ನಡೆಸಿ ಉದ್ಧಟತನ ತೋರಿದರು. ಅದನ್ನು ಖಂಡಿಸಿ ಮಾಧ್ಯಮಗಳು ವರದಿ ಮಾಡಿದವು. ತಮ್ಮ ವಿರುದ್ಧ ಮಾಧ್ಯಮಗಳು ಬಳಸಿದ ಭಾಷೆಯಿಂದ ವ್ಯಗ್ರಗೊಂಡ ವಕೀಲ ಸಮುದಾಯದ ರಣಧೀರರು ಸೇಡಿಗಾಗಿ ಕಾತರಿಸಿದ್ದರು,. ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ವಕೀಲರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಹಾಯಕತೆಗೆ ಸಿಲುಕಿದ್ದ ಪೊಲೀಸರು ಕೂಡ ವಕೀಲರ ಮೇಲೆ ಸೇಡಿಗೆ ಕಾದಿದ್ದರು.

ಮಾಧ್ಯಮ ವರದಿಗಳ ಪ್ರಕಾರವೇ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಿನ್ನೆ ಪತ್ರಕರ್ತರ ಮೇಲೆ ದಾಳಿ ನಡೆಯುವಾಗ ಪೊಲೀಸರು ಸುಮ್ಮನಿದ್ದರು, ಕೆಲವರಂತೂ ನಗುತ್ತಾ ನಿಂತಿದ್ದರು! ಅದಾದ ಅರ್ಧಗಂಟೆಗೆ ಇದ್ದಕ್ಕಿದ್ದಂತೆ ಪೊಲೀಸರಿಗೆ ಪೌರುಷ ಬಂದಿದ್ದು ಹೇಗೆ? ಹೈಕೊರ್ಟ್‍ನ ನಾಲ್ವರು ನ್ಯಾಯಮೂರ್ತಿ‍ಗಳು ಕೋರ್ಟ್ ಪ್ರವೇಶಿಸಿ, ಒಳಗಿದ್ದ ಪೊಲೀಸರನ್ನು ಹೊರಗೆ ಕರೆಸಿಕೊಳ್ಳುವಂತೆ ಗೃಹಸಚಿವ, ಡಿಜಿಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಕೋರ್ಟ್ ಒಳಗೇ ಲಾಠಿ ಚಾರ್ಜ್ ಮಾಡಿದ್ದು ಏಕೆ?

ವಕೀಲರಿಗೆ ಮಾಧ್ಯಮಗಳ ಮೇಲೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಪೊಲೀಸರಿಗೆ ವಕೀಲರ ಮೇಲೆ ಸೇಡು ತೀರಿಸಿಕೊಳ್ಳಬೇಕಿತ್ತು, ತೀರಿಸಿಕೊಂಡರು. ಮಾಧ್ಯಮಗಳಿಗೂ ವಕೀಲರ ಮೇಲೆ ಅಸಹನೆ ಕುದಿಯುತ್ತಿತ್ತು, ಅವರೂ ಸೇಡು ತೀರಿಸಿಕೊಂಡಿದ್ದಾರೆ. ಇದು ಇಲ್ಲಿಗೆ ಮುಗಿಯುವ ಹಾಗೆ ಕಾಣುತ್ತಿಲ್ಲ.

ಚಿತ್ರ: ಪೊಲೀಸರ ಲಾಟಿ ಏಟಿಗೆ ಗಾಯಗೊಂಡ ವಕೀಲ.

ಮಾಧ್ಯಮಗಳ ಸುದ್ದಿಬಾಕತನ ಮತ್ತು ವಕೀಲರ ವಿರೋಧ


– ಸೂರ್ಯ ಮುಕುಂದರಾಜ್

B.A., LL.B.


 

ಶುಕ್ರವಾರದ (2/3/12) ಬೆಳಿಗ್ಗೆ ದೃಶ್ಯಮಾಧ್ಯಮದ ಮಂದಿ ರಾಜ್ಯದ ಜನತೆಯಲ್ಲಿ ಇನ್ನಿಲ್ಲದಂತೆ ಕುತೂಹಲ ಕೆರಳಿಸಿ ರೋಚಕ ಸುದ್ದಿ ನೀಡಿ ತಮ್ಮ ಬೆನ್ನನ್ನು ತಾವೇ exclusive ಎಂದು ತಟ್ಟಿಕೊಳ್ಳುವ ತವಕದಲ್ಲಿದ್ದರು. ಜನಾರ್ದನ ರೆಡ್ಡಿ ಎಂಬ ಅಂತರರಾಷ್ಟ್ರೀಯ ಗಣಿಕಳ್ಳನ ಮುಖವನ್ನು ರಾಜ್ಯದ ಜನತೆಗೆ ಇನ್ನಿಲ್ಲದಂತೆ ತೋರಿಸುವ ಆತುರದಲ್ಲಿ 24×7 ಸುದ್ದಿವಾಹಿನಿಗಳ ಕ್ಯಾಮೆರಾಗಳು ಸನ್ನದ್ಧವಾಗಿ ನಿಂತಿದ್ದವು. ವಾರ್ತಾವಾಚಕ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತನ್ನ ಪ್ರತಿನಿಧಿಗೆ ಕೇಳುತ್ತಿದ್ದ, ಅವನ ಪ್ರಶ್ನೆಗಳು ರೆಡ್ಡಿಯನ್ನು ಕರೆತಂದ ಬಸ್‌ಗೆ ಏಸಿ ಇದೆಯಾ, ರೆಡ್ಡಿ ಸ್ನಾನ ಮಾಡಿದ್ರಾ, ತಿಂಡಿ ಏನು ಕೊಟ್ಟಿದ್ದಾರೆ, ಇತ್ಯಾದಿ ಇತ್ಯಾದಿ. ರೆಡ್ಡಿಗೆ ತಂದಿಟ್ಟ ಖಾರಾಬಾತ್, ಇಡ್ಲಿಯನ್ನು ಬ್ರೇಕಿಂಗ್ ಸುದ್ದಿಯಾಗಿ ಬಿತ್ತರಸಿ ಈ ದೃಶ್ಯಾವಳಿ ನಮ್ಮ ಟೀವಿಯಲ್ಲಿ ಮಾತ್ರವೆಂಬ ಸೀಲನ್ನು ಹೆಮ್ಮೆಯಿಂದ ಹೊಡೆದುಕೊಂಡವು. ಹಲಸೂರು ಗೇಟ್ ಠಾಣೆಯಿಂದ ಹೊರಟ ರೆಡ್ಡಿಯಿದ್ದ ಪೊಲೀಸ್ ವಾಹನದ ಬೆನ್ನತ್ತಿದ ಮಾಧ್ಯಮಗಳು ಸಿವಿಲ್ ಕೋರ್ಟ್ ಸಮುಚ್ಛಯದಲ್ಲಿರುವ ಸಿ.ಬಿ.ಐ. ನ್ಯಾಯಾಲಯದವರೆಗೂ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸಿದ್ದರು. ಬಹುಶಃ ರೆಡ್ಡಿಯ ಮುಖವನ್ನು ಜನತೆಗೆ ತೋರಿಸುವ ತವಕದಲ್ಲಿ ಕೆಲವು ತಿಂಗಳ ಹಿಂದೆ ವಕೀಲರನ್ನು ಗೂಂಡಾಗಳೆಂದು ಕರೆದು ದ್ವೇಷ ಕಟ್ಟಿಕೊಂಡದ್ದನ್ನು ಮರೆತು ಸಿವಿಲ್ ಕೋರ್ಟ್ ಆವರಣದೊಳಗೆ ಕಾಲಿಟ್ಟ ಮಾಧ್ಯಮಗಳಿಂದಾಗಿ ಒಂದು ಕರಾಳ ಘಟನೆ ಸಂಭವಿಸಿತು.

ಮಾಧ್ಯಮಗಳು ಇಂತಹ ಪರಿಸ್ಥಿತಿಗೆ ಮುಖಾಮುಖಿಯಾಗಲು ಕಾರಣ ತಮ್ಮ ಸೋಗಲಾಡಿತನದ ವರ್ತನೆಯೆಂದು ಮರೆಯಬಾರದು. ಸುದ್ದಿಗೆ ರೋಚಕತೆ ತುಂಬಿ ಜನರ ಮನಸ್ಸಲ್ಲಿ ಗೊಂದಲ ಬಿತ್ತುವ ಕೆಲಸಗಳನ್ನು ಟಿವಿ ಮಾಧ್ಯಮಗಳು ಮಾಡುತ್ತಿಲ್ಲವೆ? ಯಾವುದೇ ವಿಚಾರವನ್ನು ಸುದ್ದಿ ಮಾಡುವಾಗ ತಾವು ತೋರಿಸಿದ ಸುದ್ದಿಯೇ ನೈಜವಾದದ್ದು ಎನ್ನುತ್ತಾರೆ. ಮದುವೆ ಮನೆಗಳಿಗೆ ಹುಡುಗಿಯ ತವರುಮನೆ ಕಡೆಯವರನ್ನು ಕಟ್ಟಿಕೊಂಡು ನುಗ್ಗಿ ಗೂಸಾ ಕೊಡಿಸಿ ಮಜಾ ತೆಗೆದು ಕೊಳ್ಳುವ ಮಾಧ್ಯಮಗಳ ಸುದ್ದಿದಾಹಕ್ಕೆ ಬಲಿಯಾದವರೆಷ್ಟು ಜನ? ಒಂದು ಸುದ್ದಿಯನ್ನು ಜಡ್ಜ್‌ಮೆಂಟ್ ನೀಡುವ ನ್ಯಾಯಾಧೀಶರಂತೆ ತೀರ್ಪು ನೀಡುವ ಕಾರ್ಯವನ್ನು ಇಂದಿನ ಚಾನಲ್‌ಗಳ ನಿರೂಪಕರು ಮಾಡುತ್ತಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ಒಂದು ಸಣ್ಣ ಘಟನೆ ಈ ಮಟ್ಟದ ಪ್ರಭಾವ ಬೀರಲು ಕಾರಣವಾ ಎಂಬ ಪ್ರಶ್ನೆಯೇಳಬಹುದು. ಅದೊಂದೆ ಘಟನೆ ಮಾಧ್ಯಮ ಮತ್ತು ವಕೀಲರ ನಡುವಿನ ಕದನಕ್ಕೆ ಕಾರಣವಲ್ಲ. ನಟ ದರ್ಶನ್ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇಂತಹದೇ ಸುದ್ದಿಬಾಕ ಹಪಹಪಿಯಲ್ಲಿ ತಮ್ಮ ದಂಡಿನೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆವು ಕಾಲಿಟ್ಟಿವೆ. ದರ್ಶನ್ ವಿಚಾರಣೆಯ ನಂತರ ಪರಪ್ಪನ ಅಗ್ರಹಾರಕ್ಕೆ ಕರೊದಯ್ಯಲು ಹೊರಟ ವಾಹನದ ಹಿಂದೆ ಹೋಗಲು ತವಕಿಸುತ್ತಿದ್ದ ಸಮಯ ಚಾನಲ್‌ನ ವಾಹನ ಚಾಲಕ ವಕೀಲರೊಬ್ಬರ ಕಾಲಿನ ಮೇಲೆ ವಾಹನ ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದ ವಕೀಲರಿಗೆ ದಬಾಯಿಸಿದ್ದಾರೆ. ಅಂದು ಖಾಸಗಿ ಚಾನಲ್‌ನ ವರದಿಗಾರರ ದರ್ಪ ಪ್ರದರ್ಶನಕ್ಕೆ ಅಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಕೀಲರು ತಿರುಗಿಬಿದ್ದಿದ್ದಾರೆ. ನಿಮಗೆ ಸುದ್ದಿ ಬೇಕಿದ್ದರೆ ಕೋರ್ಟ್‌ನ ಹೊರಗೆ ಚಿತ್ರೀಕರಿಸಿ, ಇಲ್ಲಿ ವಾತಾವರಣ ಕದಡಬೇಡಿಯೆಂದು ಮಾಧ್ಯಮಗಳ ಪ್ರವೇಶವನ್ನು ಅಂದಿನಿಂದ ತಡೆದಿದ್ದಾರೆ. ಒಂದು ಸಣ್ಣ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಮಾಧ್ಯಮಗಳಿಗೆ ಮೃಷ್ಟಾನ್ನ ಭೋಜನ ಸಿಕ್ಕಂತೆ ಜನವರಿ ತಿಂಗಳ ವಕೀಲರ 7ಗಂಟೆ ರಸ್ತೆ ತಡೆ ಪ್ರಕರಣ ಸಂಭವಿಸಿತು. ವಕೀಲರಿಂದ ಆ ದಿನ ಸಾವಿರಾರು ಜನರು ಪರದಾಡಬೇಕಾಯಿತು ನಿಜ. ಆದರೆ ಆ ಘಟನೆಗೆ ಕಾರಣವಾದ ವಕೀಲನೊಬ್ಬನ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಧರಣಿ ನಡೆಸಿದ ವಕೀಲರನ್ನೇ ಗೂಂಡಾಗಳಂತೆ ಮಾಧ್ಯಮಗಳು ಚಿತ್ರಿಸಿದವು. ಪೊಲೀಸ್ ಕಮೀಶನರ್ ಮಿರ್ಜಿ ಘಟನೆ 12.30 ಕ್ಕೆ ಆರಂಭವಾದ ಬಗ್ಗೆ ತಿಳಿದರೂ ಸಂಜೆ 5ಕ್ಕೆ ಬಂದಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿದ್ದೆ ಆಗಿದ್ದರೆ ಅಂದೇಕೆ ಒಬ್ಬ ಹಲ್ಲೆ ನಡೆಸಿದ ಪೊಲೀಸ್ ಪೇದೆಯ ಮೇಲೆ ಕ್ರಮ ಕೈಗೊಳ್ಳಲುಇಷ್ಟು ಹೊತ್ತು ಬೇಕಾಯಿತೆ ಎಂದೇಕೆ ಮಾಧ್ಯಮಗಳು ಗೃಹ ಸಚಿವರನ್ನು ಅಂದು ಕೇಳಲಿಲ್ಲ?.

ವಕೀಲರನ್ನು ಜನರ ಕಣ್ಣಲ್ಲಿ ವಿಲನ್‌ಗಳಂತೆ ಚಿತ್ರಿಸಿದ ಮಾಧ್ಯಮಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿವೆಯೇ? ಭ್ರಷ್ಟ ರಾಜಕಾರಣಿಗಳಿಂದ ಎಂಜಲು ಕಾಸಿಗಾಗಿ ಸೈಟಿಗಾಗಿ ಕೈಯೊಡ್ಡಿ ಸುದ್ದಿ ಬರೆಯುವ ಪತ್ರಕರ್ತರೆಲ್ಲಿ, ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡು ಜೈಲಿಗಟ್ಟಿದ ವಕೀಲರೆಲ್ಲಿ? ಎಷ್ಟೋ ಘಟನೆಗಳನ್ನು ಸೃಷ್ಟಿಸಿ, ತಿರುಚಿ ತೋರಿಸುವ ಸುದ್ದಿಮಾಧ್ಯಮಗಳಲ್ಲಿ ಪ್ರಾಮಾಣಿಕತೆಯ ಲವಲೇಶವೂ ಇಲ್ಲದಂತಾಗಿದೆ. ಖಾಸಗಿ ವಿಚಾರಗಳನ್ನು ಸಾರ್ವಜನಿಕಗೊಳಿಸಿ ಮಾನಹಾನಿ ಮಾಡುವ ಮಾಧ್ಯಮಗಳಿಂದ ಜವಾಬ್ದಾರಿಯುತ ಪತ್ರಿಕೋದ್ಯಮ ನಿರೀಕ್ಷಸಲು ಸಾಧ್ಯವೇ? ಶುಕ್ರವಾರದ ಘಟನೆಯನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯೆಂದು ಜನರ ಮುಂದೆ ದುಃಖ ತೋಡಿಕೊಳ್ಳುತ್ತಿರುವ ಮಾಧ್ಯಮಗಳು ಪೊಲೀಸರೊಂದಿಗೆ ಸೇರಿ ಕೆ.ಆರ್. ವೃತ್ತದಲ್ಲಿ ಒಬ್ಬೊಬ್ಬ ವಕೀಲರನ್ನೇ ಇಟ್ಟಾಡಿಸಿಕೊಂಡು ಹೊಡೆದದ್ದನ್ನೇಕೆ ಬಿತ್ತರಿಸಲಿಲ್ಲ? ಸಾಮಾನ್ಯ ಜನರಿಗೆ ಪೊಲೀಸರಿಂದ ದೌರ್ಜನ್ಯವಾದರೆ ನೆನಪಾಗುವುದು ಮಾಧ್ಯಮಗಳಲ್ಲ, ವಕೀಲರು ಅವರ ಕಣ್ಣಿಗೆ ಮೊದಲು ಕಾಣಿಸುವುದು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಹೆದರುವ ಎಷ್ಟೋ ಜನರಿಗೆ ವಕೀಲರಿದ್ದರೆ ಎಂತಹದ್ದೋ ಒಂದು ಧೈರ್ಯ. ಖಾಕಿಧಾರಿಗಳ ದರ್ಪ ವಕೀಲರ ಮುಂದೆ ನಡೆಯುವುದಿಲ್ಲ. ಅವಕಾಶವಾದಿ ಪೊಲೀಸರು ಪಾಟಿ ಸವಾಲಿನ ಸೋಲಿಗೊಳಗಾರುತಾರೆ. ವಕೀಲರೆಂದರೆ ಅವರಲ್ಲಿ ಎಂತಹದ್ದೋ ಒಂದು ಸಣ್ಣ ಕಂಪನವಿದೆ. ಇಂತಹ ಪೊಲೀಸರು ಮಾಧ್ಯಮದವರೊಂದಿಗೆ ಸೇರಿ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳನ್ನು ವಕೀಲರಿಗೆ ಒಡೆಯಿರಿ ನಾವಿದ್ದೇವೆಂದು ಉಬ್ಬಿಸಿ ಕಲ್ಲಲ್ಲಿ ಹೊಡೆಸಿದ್ದನ್ನೇಕೆ ನೇರ, ದಿಟ್ಟತನವಿರುವ ಸುದ್ದಿವಾಹಿನಿಗಳು ಬಿತ್ತರಿಸಲಿಲ್ಲ?

ದೃಶ್ಯ ಮಾಧ್ಯಮಗಳು ಇಂದು ಬಳಸುವ ಭಾಷೆಯನ್ನು ಕೇಳಿದರೆ ಎಂತಹ ಕೊಳಕುತನ ಅವರಲ್ಲಿ ತುಂಬಿದೆಯೆಂಬ ಅರಿವಾಗುತ್ತದೆ. ಪಬ್ಲಿಕ್ ಟಿವಿಯ ರಂಗನಾಥ್ ಸಿವಿಲ್ ಕೋರ್ಟ್ ಏನು ವಕೀಲರ ಅಪ್ಪನ ಆಸ್ತಿಯೇ ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ಸುದ್ದಿಗಾಗಿ ಕೋರ್ಟ್‌ನೊಳಗೆ ನುಗ್ಗಲು ಇವರಿಗೆ ಅನುಮತಿಯಿದೆಯೇ? ಸಾರ್ವಜನಿಕರಿಗೆ ತೊಂದರೆ ನೀಡಿ ಜನಾರ್ದನ ರೆಡ್ಡಿಯ ಮುಖವನ್ನು ತೋರಿಸಿರೆಂದು ಯಾರಾದರೂ ದುಂಬಾಲು ಬಿದ್ದಿದ್ದರೆ? ಇವರ ವಾಹಿನಿಯಲ್ಲಿ ಜನಲೋಕಾಯುಕ್ತರೆಂಬ ಅಣೆಪಟ್ಟಿ ಕಟ್ಟಿಕೊಂಡು ಇವರು ನಡೆಸುವ ರೇಡುಗಳು ನ್ಯಾಯಯುತವೆ? ಮಾಧ್ಯಮವೊಂದರ ಒಡೆಯನೆಂಬ ಕಾರಣಕ್ಕೆ ಕಾನೂನು ಇವರ ಸ್ವತ್ತೇ? ಇನ್ನೊಬ್ಬ ಪತ್ರಕರ್ತ ವಿಶ್ವೇಶ್ವರ್ ಭ‌ಟ್‌ರ ಚಾನಲ್‌ನ ಭಾಷಾ ಬಳಕೆ ನಿಜಕ್ಕೂ ಬೀದಿ ಕುಡುಕನ ಪದಬಳಕೆಯಾಗಿತ್ತು. ರಾಜ್ಯದ ಗೃಹ ಸಚಿವರನ್ನೇ ಬಳೆತೊಟ್ಟಿದ್ದೀರಾ ಎಂದು ಕೇಳುವ, ಕರಿಕೋಟಿನ ಉಗ್ರರು ಎನ್ನುವ, ವಕೀಲರ ಸಂಘದ ಅಧ್ಯಕ್ಷರಿಗೆ ಕಡುಬು ತಿನ್ನುತ್ತಿದ್ದೀರಾ ಎಂದು ಹೀಗೆಳೆಯುವ ಇವರು ಮಟಮಟ ಮಧ್ಯಾಹ್ನವೇ ತೀರ್ಥಸೇವಿಸಿದ್ದರೇನೊ ಎಂದುಕೊಳ್ಳಬಹುದಲ್ಲವೇ? ಪತ್ರಕರ್ತರಿಗಿರಬೇಕಾದ ಕನಿಷ್ಟ ಜ್ಞಾನವೂ ಇವರಲ್ಲಿ ಇಲ್ಲವೆನಿಸುತ್ತದೆ. ಇವರ ಪದಬಳಕೆ ಇವರ ಮನಸ್ಸಲ್ಲಿರುವ ಕೊಳಕುತನ ಮತ್ತು ಅಪ್ರಬುದ್ಧತೆ ತೋರುತ್ತದೆ.

“ಅಗ್ನಿ” ವಾರಪತ್ರಿಕೆಯ ಮಾರ್ಚ್ 8, 2012ರ ಸಂಚಿಕೆಯಲ್ಲಿ ಸದಾನಂದ ಗಂಗನಬೀಡು ತಮ್ಮ ಲೇಖನ ‘ಭಯೋತ್ಪಾದನಾ ದಾಳಿ – ದೃಶ್ಯ ಮಾಧ್ಯಮಗಳ ಯುದ್ಧ ಸಂಭ್ರಮ”ದಲ್ಲಿ  ’26 ನವೆಂಬರ್, 2008 ರಂದು ಮುಂಬೈ ಮೇಲೆ ಆದ ಭಯೋತ್ಪಾದನೆಯ ದಾಳಿಯ ಲೈವ್ ಟೆಲಿಕಾಸ್ಟ್ ಮಾಡಲು ಮಾಧ್ಯಮಗಳು ಪೈಪೋಟಿಗಿಳಿದು ಎನ್ಎಸ್‌ಜಿ ಯೋಧರು ರೂಪಿಸುತ್ತಿದ್ದ ಯುದ್ಧತಂತ್ರ ಭಯೋತ್ಪಾದಕರಿಗೆ ತಿಳಿಯುವಂತೆ ಮಾಡಿದವು, ಇದರ ಫಲವಾಗಿ ನಮ್ಮ ರಾಜ್ಯದ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಏಳು ಯೋಧರು ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ದೇಶದ ಮಾಧ್ಯಮಗಳು ಯುದ್ಧ ಸಂಭ್ರಮದಿಂದ ಅವನತಿಯ ಅಂಚಿಗೆ ತಲುಪುತ್ತಿವೆ, ದೇಶದ ಭವಿಷ್ಯವನ್ನೂ ಗಂಡಾಂತರಕ್ಕೆ ಸಿಲುಕಿಸುತ್ತಿವೆ,’ ಎಂದು ಹೇಳುತ್ತಾರೆ. ಮತ್ತು ಮಾಧ್ಯಮಗಳ ಈ ದಾಹವನ್ನು ತಮಂಧದ ಕೇಡು ಎನ್ನುತ್ತಾರೆ.

ಹೀಗೆ ಕೇಡುಗಾಲದ ರಣಕೇಕೆಗೆ ಸದಾ ಹಪಿಹಪಿಸುವ ಮಾಧ್ಯಮಗಳು ಜಡ್ಜ್‌ಮೆಂಟಲ್ ಆಗುವುದನ್ನು ಬಿಟ್ಟು ನೈಜ ಸುದ್ದಿಯನ್ನು ನಿಸ್ಪಕ್ಷಪಾತವಾಗಿ ಜನರಿಗೆ ತೋರಿಸಲಿ. ಮಾಧ್ಯಮಗಳ ಪದಪ್ರಯೋಗ ಪ್ರಚೋದನಕಾರಿಯಾಗಿ ಇಲ್ಲದ್ದಿದ್ದರೆ ವಕೀಲ ಸಮುದಾಯ ಪ್ರಚೋದನೆಗೊಳಗಾಗುತ್ತಿರಲಿಲ್ಲ. ಮಾಧ್ಯಮಗಳ ಏಕಪಕ್ಷೀಯ ಧೋರಣೆಗೆ ಸುದ್ದಿಯಾಗಿ ನಲುಗಿದ ಎಷ್ಟೋ ಜನ ಅಮಾಯಕರ ನಿಟ್ಟುಸಿರಿಗೆ ಹೋಲಿಸಿದರೆ ಮಾಧ್ಯಮಗಳಿಗೆ ಆದ ಪರಿಸ್ಥಿತಿ ಏನೇನು ಅಲ್ಲ ಎನ್ನಬಹುದು. ವಕೀಲರನ್ನು ಕ್ರಿಮಿನಲ್‌ಗಳು, ರೌಡಿಗಳು ಎಂದೆಲ್ಲಾ ಹೇಳುವ ನೈತಿಕತೆ ಮಾಧ್ಯಮಗಳಿಗಿಲ್ಲ. ಇಂದು ಮಾಧ್ಯಮಗಳು ತೋರಿಸುತ್ತಿರುವ ಸುದ್ದಿಗಳು ಜನರ ಮನದಲ್ಲಿ ವಕೀಲರು ದುಷ್ಟರೆಂದು ಕಾಣಿಸುತ್ತಿರಬಹುದು, ಒಂದು ದಿನ ಸುದ್ದಿಯ ಬೆನ್ನತ್ತಿ ಪತ್ರಿಕಾ ಧರ್ಮವನ್ನೇ ಮರೆತ ಮಾಧ್ಯಮಗಳ ಮುಖವಾಡದ ದುಷ್ಟತನದ ಅನುಭವ ವೈಯಕ್ತಿಕವಾಗಿ ಅನುಭವಿಸಿದಾಗ ಮಾತ್ರ ಯಾರು ಸರಿಯೆಂದು ಗೊತ್ತಾಗುತ್ತದೆ. ಒಂದಷ್ಟು ಪತ್ರಕರ್ತರು ಕಾಸಿಗಾಗಿ ಸುದ್ದಿ ಪ್ರಕಟಿಸುತ್ತಾರೆಂದ ಮಾತ್ರಕ್ಕೆ ಎಲ್ಲಾ ಪತ್ರಕರ್ತರು ಕಾಸಿಗಾಗಿ ಕೈಯೊಡ್ಡುತ್ತಾರೆ ಎಂದು ಹೇಳುವುದು ನ್ಯಾಯವಲ್ಲ, ಅಲ್ಲವೇ?

ನಮ್ಮ ಆದರ್ಶವನ್ನೆಂದೂ ಮರೆಯಬಾರದು


-ಬಿ. ಶ್ರೀಪಾದ ಭಟ್


“ಸಂಧಾನ ಕೂಡ ಒಂದು ಅಸ್ತ್ರವಾಗಿದ್ದು ಅದನ್ನು ರಾಜಕೀಯ ಹೋರಾಟದ ಕಾಲಕ್ಕೆ ಆಗಾಗ ಬಳಸುವುದು ಅವಶ್ಯಕವಾಗುತ್ತದೆ. ಅದರಿಂದ ಒಂದು ಘೋರ ಹೋರಾಟದಿಂದ ಬಸವಳಿದ ಜನತೆಗೆ ಕೆಲ ಕಾಲ ವಿರಾಮ ಸಿಕ್ಕಂತಾಗುತ್ತದೆ. ಆದರೆ ಈ ಸರಳ ಸಂಧಾನಗಳನ್ನು ಮಾಡಿಕೊಂಡರೂ ನಾವು ನಮ್ಮ ಆದರ್ಶವನ್ನೆಂದೂ ಮರೆಯಬಾರದು. ಅದು ಯಾವತ್ತೂ ನಮ್ಮ ದೃಷ್ಟಿಯಲ್ಲಿರಬೇಕು. ನಾವು ಯಾವ ಉದ್ದೇಶಕ್ಕಾಗಿ ಹೋರಾಡುತ್ತಿದ್ದೇವೆಯೋ ಅದಕ್ಕೆ ಸಂಬಂಧಿಸಿದಂತೆ ನಮ್ಮ ವಿಚಾರಗಳು ಸ್ಪಷ್ಟವಾಗಿರಬೇಕು, ಧೃಡವಾಗಿರಬೇಕು.”  – ಭಗತ್ ಸಿಂಗ್ ( ಕೃಷ್ಣ ಸಹಾಯ್  “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”) (ನರೇಂದ್ರ ಪಾಠಕ್ ರವರ  “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

“ರಾಜಕಾರಣಿಗಳ ಎರಡು ಕಣ್ಣುಗಳು ಎರಡು ತರವಾಗಿರಬೇಕು. ಒಂದು ಶುಭ್ರ ಹಾಗೂ ಮತ್ತೊಂದು ಕೆಂಪಾಗಿರಬೇಕು. ಶುಭ್ರತೆ ಪ್ರೀತಿಯ ಸಂಕೇತವಾದರೆ ಕೆಂಪು ಕ್ರೋಧದ ಸಂಕೇತ. ಶೋಷಿತರು, ದಲಿತರು, ಉಪೇಕ್ಷಿತರ ಬಗ್ಗೆ ಪ್ರೀತಿಯನ್ನು, ಸುಲಿಗೆ ಕೋರರು, ಹತ್ಯಾಚಾರಿಗಳು ಹಾಗೂ ಶೋಷಕರ ಬಗ್ಗೆ ಕ್ರೋಧವನ್ನು ವ್ಯಕ್ತಪಡಿಸುವುದು ಅತ್ಯವಶ್ಯವಾದದ್ದು. ಆದರೆ ಈ ಕ್ರೋಧ ಅಹಿಂಸಾತ್ಮಕವಾಗಿರಬೇಕು, ಸಾತ್ವಿಕವಾಗಿರಬೇಕು.” – ರಾಮ ಮನೋಹರ ಲೋಹಿಯಾ (ಕೃಷ್ಣ ಸಹಾಯ್ “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”)  (ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಮೇಲಿನೆರಡನ್ನೂ ಮೈಗೂಡಿಸಿಕೊಂಡ ಅಪೂರ್ವ ಸೋಷಲಿಸ್ಟ್ ರಾಜಕಾರಣಿಗಳಾಗಿದ್ದರು. ನಯೀಂ ಸುರಕೋಡ ಅನುವಾದಿಸಿರುವ  ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಮತ್ತು ಸಮಾಜವಾದದ” ಕೃತಿಯಿಂದ ಸಂಗ್ರಹ ಪೂರ್ಣವಾಗಿ ಆಯ್ದ ಕರ್ಪೂರಿ ಠಾಕೂರ್ ಅವರ ಜೀವನ ಚಿತ್ರಣವನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ.

ಭಾರತ  ರಾಷ್ಟ್ರೀಯ ಕಾಂಗ್ರೆಸ್‍ನ ಸಾಂಪ್ರದಾಯಿಕ ನಿಲುವುಗಳು, ಅಲ್ಲಿ ಬಲಪಂಥೀಯರ ಪ್ರಭಾವ ಹೆಚ್ಚುತ್ತಿದೆಯೇನೋ ಎನ್ನುವ ಅನುಮಾನ, ಹಾಗೂ ಪ್ರಮುಖವಾಗಿ ಸಮಾಜವಾದದ ಬಲು ದೊಡ್ಡ ಪ್ರಭಾವ, ಇವೆಲ್ಲದರ ಕಾರಣಕ್ಕಾಗಿ ಕಾಂಗ್ರೆಸ್‍ನೊಳಗೇ ಒಂದು ಸಮಾಜವಾದಿ ಗುಂಪನ್ನು ರಚಿಸಲು ಅಂದಿನ ತರುಣ ಸಮಾಜವಾದಿಗಳಾಗಿದ್ದ ರಾಮ ಮನೋಹರ ಲೋಹಿಯಾ, ಮಿನೂ ಮಸಾನಿ, ಅಶೋಕ ಮೆಹ್ತ, ಯೂಸುಫ಼್ ಮೆಹ್ರೋಲಿ, ಅಚ್ಯುತ್ ಪಟುವರ್ಧನ್ ರಂತಹವರು ಮುಂದಾದರು. ಇವರಿಗೆ ಅರುಣ ಅಸ್ರಫ್ ಅಲಿ, ಕಮಲಾದೇವಿ ಚಟ್ಟೋಪಾಧ್ಯಾಯ, ಎನ್.ಜಿ.ಗೋರೆ ಮುಂತಾದ ಸಂಘಟನೆಕಾರರು ಬೆಂಬವಿತ್ತಿದ್ದರು. ಇದರ ಫಲಶ್ರುತಿಯಾಗಿ 1934ರ ಅಕ್ಟೋಬರ್‌ನಲ್ಲಿ “ಕಾಂಗ್ರೆಸ್ ಸಮಾಜವಾದಿ ಪಕ್ಷ” ಸ್ಥಾಪನೆಯಾಯ್ತು. ಈ ಪಕ್ಷಕ್ಕೆ ಆಚಾರ್ಯ ನರೇಂದ್ರ ದೇವ ಅಧ್ಯಕ್ಷರಾದರೆ, ಜಯಪ್ರಕಾಶ್ ನಾರಾಯಣ್ ಕಾರ್ಯದರ್ಶಿ ಯಾದರು, ಲೋಹಿಯಾ ಅವರು ಸಂಘಟನಾ ಸದಸ್ಯರಾದರು.

ಇದಕ್ಕೆ ಹದಿಮೂರು ವರ್ಷಗಳ ಹಿಂದೆ 1921 ರ ಜನವರಿ 24 ರಂದು ಬಿಹಾರಿನ ದರ್ಭಾಂಗ  (ಈಗಿನ ಸಮುಷ್ಟಿಪುರ)  ಜಿಲ್ಲೆಯ ಪಿತೋಝಿಯಾ ಗ್ರಾಮದಲ್ಲಿ ಕ್ಷೌರಿಕ ಕುಟುಂಬದಲ್ಲಿ ಕರ್ಪೂರಿ ಠಾಕೂರ್ ಜನಿಸಿದರು. ಇವರ ಆ ಗ್ರಾಮ ಹಾಗೂ ಉತ್ತರ ಬಿಹಾರ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ಅಲ್ಲಿ ಮಕ್ಕಳು ಹುಟ್ಟುತ್ತಲೇ ಕೆಲಸಕ್ಕೆ, ಕೂಲಿಗೆ ಕಳುಹಿಸುತ್ತಿದ್ದರು. ನಂತರ ಕರ್ಪೂರಿಯವರು ಎರಡು ದಶಕಗಳ ಕಾಲ  (1967 — 1987) ಭಾರತದ ರಾಜಕೀಯದಲ್ಲಿ ಹಿಂದುಳಿದವರ, ದಲಿತರ ಪ್ರಮುಖ ನಾಯಕರಾಗಿಯೂ, ಗಾಂಧೀಜಿ ಹಾಗೂ ಲೋಹಿಯಾರವರ ಚಿಂತನೆಗಳನ್ನು, ಸಮಾಜವಾದಿ ತತ್ವಗಳನ್ನು ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಅನುಷ್ಟಾನಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು. ಈ ಮೂಲಕ ಬಿಹಾರದ ನೆಲೆಯಿಂದ ರೂಪುಗೊಂಡ ಇಂಡಿಯಾದ ಒಬ್ಬ ಪ್ರಮುಖ ರಾಜಕೀಯ ನಾಯಕರಾಗಿ ಕರ್ಪೂರಿ ಠಾಕೂರ್ ಹೆಸರುಗಳಿಸಿದರು. ಕರ್ಪೂರಿ ಹುಟ್ಟಿದ ಆ 20ರ ದಶಕ ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕವಾದ ಪ್ರಮುಖ ಘಟ್ಟವಾಗಿತ್ತು. ಸೌತ್ ಆಫ್ರಿಕಾದಿಂದ ಮರಳಿದ ಗಾಂಧೀಜಿ ನೇರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ನಂತರದ ವರ್ಷಗಳಲ್ಲಿ ಅಸಹಾಕಾರ ಚಳವಳಿಯನ್ನು ಹುಟ್ಟಿಹಾಕಿದರು. ಆ ಮೂಲಕ  ದೇಶದಾದ್ಯಂತ ಅನೇಕ ತರುಣ, ತರುಣಿಯರನ್ನು ತಮ್ಮ ಈ ಪ್ರಯೋಗಕ್ಕೆ ಆಕರ್ಷಿಸಿದರು. ಇದಕ್ಕಾಗಿ ಬಿಹಾರಿನ ಚಂಪಾರಣ್ಯವನ್ನು ತಮ್ಮ ಆರಂಭದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು.

ಇಂತಹ ತಲ್ಲಣಗಳ ಕಾಲ ಘಟ್ಟದಲ್ಲಿ ಅತ್ಯಂತ ಹಿಂದುಳಿದ ಕ್ಷೌರಿಕ ಕುಟುಂಬದಲ್ಲಿ ಹುಟ್ಟಿದ ಕರ್ಪೂರಿಯವರ ಬಾಲ್ಯ ಅತ್ಯಂತ ಬಡತನದಿಂದ ಕೂಡಿತ್ತು. ಅವರನ್ನು ಹತ್ತಿರದಿಂದ ಬಲ್ಲ ಕೃಷ್ಣ ನಂದನ್ ಠಾಕೂರ್‌ರವರ ಪ್ರಕಾರ “ಪರೀಕ್ಷೆಗಳಿಗೆ ಫೀಸ್ ಕಟ್ಟಲು ದುಡ್ಡಿಲ್ಲದಂತಹ ಅನೇಕ ಸಂದರ್ಭಗಳು ಕರ್ಪೂರಿಯವರ ಬಾಲ್ಯ ಜೀವನದಲ್ಲಿ ಎದುರಾಗಿದ್ದವು. ಇಂತಹ ದುರ್ಭರ ಸಂದರ್ಭಗಳಲ್ಲಿ ಅವರ ತಂದೆ ಮಾಜಿ ಮಂತ್ರಿ ಸತ್ಯನಾರಾಯಣ ಸಿಂಗ್ ಅವರಿಂದ ಸಾಲ ಪಡೆದು ಫೀಸ್ ಕಟ್ಟಿದ್ದರು.” ಅದೇ ರೀತಿ ಅವರ ದರ್ಭಾಂಗ ಕಾಲೇಜಿನ ಅಧ್ಯಾಪಕರಾದ ಪ್ರೊ.ಬಿ.ಎಂ.ಕೆ.ಸಿನ್ಹಾ ಹೇಳುವುದು “ಕರ್ಪೂರಿ ಠಾಕೂರ್ ನಿಸ್ಸಂದೇಹವಾಗಿ ಬಡವರಾಗಿದ್ದರು. ಆದರೆ ಅವರು ಸಕ್ರಿಯ ರಾಜಕೀಯದಲ್ಲಿ ತಮ್ಮ ಕಾರ್ಯಬಾಹುಳ್ಯದಿಂದಾಗಿ ಹಾಗೂ ಚಟುವಟಿಕೆಗಳನ್ನು ಹೆಚ್ಚಿಸುವುದಕ್ಕಾಗಿ ತಮ್ಮ ಬಿ.ಎ. ತೃತೀಯ ವರ್ಷದ ಓದನ್ನು ನಿಲ್ಲಿಸಿದರೇ ಹೊರತು ಬಡತನದಿಂದಲ್ಲ. ಅವರಲ್ಲಿ ನಾನು ಒಂದು ಬಗೆಯ ತಳಮಳವನ್ನು ಕಾಣುತ್ತಿದ್ದೆ. ಏನಾದರೂ ಮಾಡಲು ಅವರು ನಿರಂತರವಾಗಿ ಚಡಪಡಿಸುತ್ತಿದ್ದರು. ಸುಮಾರು ಆರು ತಿಂಗಳ ನಂತರ ಲಹೇರಿಯಾ ಸರಾಯ್ ನಿಲ್ದಾಣದಲ್ಲಿ ನಾನು ಅವರನ್ನು ನೋಡಿದೆ. ಕುರ್ತಾ, ಪೈಜಾಮ ತೊಟ್ಟಿದ್ದರು, ಆದರೆ ಬರಿಗಾಲಲ್ಲಿ ಇದ್ದರು. ‘ನೀವು ಕಾಲೇಜಿಗೆ ಬರುತ್ತಿಲ್ಲ, ಯಾಕೆ’ ಎಂದು ಅವರನ್ನು ಕೇಳಿದೆ. ‘ಸರ್, ನಾನು ರಾಜಕೀಯಕ್ಕೆ ಇಳಿದಿದ್ದೇನೆ, ಗಾಂಧೀಜಿಯ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇನ್ನೆಂದು ಕಾಲೇಜಿಗೆ ಬರಲಾರೆ,’ ಎಂದರು.”

ಕರ್ಪೂರಿ ಠಾಕೂರ್ ಅವರ ನಿಧನದ  ನಂತರ ಅವರೊಬ್ಬರ ಸಂಗಾತಿ ಕಪಿಲ್ ದೇವ್ ಹೇಳಿದ್ದು ಹೀಗೆ: “1987 ರ ನವೆಂಬರ್ ತಿಂಗಳಲ್ಲಿ ಒಂದು ದಿನ ಕರ್ಪೂರೀಜಿ ನನ್ನ ಮನೆಗೆ ಬಂದಿದ್ದರು. ಊಟ ಮುಗಿಸಿ ಹೊರಟು ನಿಂತಾಗ ಅವರು ಏಕಾಂತದಲ್ಲಿ ನನಗೆ 35 ಸಾವಿರ ರೂಪಾಯಿ ನೀಡಿ ‘ಕಪಿಲ್ ಭಾಯಿ ಇದು ನನ್ನ ಜೀವಮಾನದ ಗಳಿಕೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ, ನನ್ನ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಸಿರಿ.’  ಈ ಹಣದಲ್ಲಿ ಮನೆ ಕಟ್ಟುವುದಿರಲಿ ಒಂದು ಕೋಣೆಯನ್ನೂ ಕಟ್ಟಿಸುವುದು ಸಾಧ್ಯವಿರಲಿಲ್ಲ ಎಂದು ಕಪಿಲ್ ದೇವ್‍ಗೆ ಅನ್ನಿಸಿತು. ದುರದೃಷ್ಟವಶಾತ್ ಕೆಲವೇ ತಿಂಗಳುಗಳಲ್ಲಿ ಕರ್ಪೂರಿ ಠಾಕೂರ್ ನಿಧನರಾದರು. ಅವರ ನಿಧನರಾದ ನಂತರ ಈ ಹಣವನ್ನು ಅವರ ಕುಟುಂಬಕ್ಕೆ ತಲುಪಿಸಲಾಯಿತು. ಪಿತೋಝಿಯಾದಲ್ಲಿ ಅವರ ಪೂರ್ವಜರ ಮನೆ ಇಂದು ಕೂಡ ಹಾಗೆ ನಿಂತಿದೆ. ಸಾರ್ವಜನಿಕ ಬದುಕನ್ನು ಬದುಕುವ ವ್ಯಕ್ತಿ ಮನೆ ಮಾರು ಎನ್ನುವ ಮಾಯೆಯಿಂದ ದೂರವಿರಬೇಕು ಎಂದು ಸಾರಲು ಆ ಮನೆ (ಗುಡಿಸಲು) ಬಿಹಾರದಲ್ಲಿ ಇನ್ನೂ ಸೂರಿಲ್ಲದವರ ಸಂಖ್ಯೆ ಕಡಿಮೆ ಇಲ್ಲ ಎನ್ನುವುದಕ್ಕೆ ಸಂಕೇತವೂ ಆಗಿದೆ.”

ಬಹುಶಃ ಗಾಂಧೀಜಿ, ಅಂಬೇಡ್ಕರ್, ಲೋಹಿಯಾರಂತಹ ರಾಜಕೀಯ ನಾಯಕರು ಹಾಗೂ ಚಿಂತಕರ ಅತ್ಯಂತ ಕಟ್ಟಾ ಅನುಯಾಯಿಯಾಗಿದ್ದ ಕರ್ಪೂರಿಯಂತಹ ರಾಜಕೀಯ ನಾಯಕರಿಂದ ಇದು ನಿರೀಕ್ಷಿತವೇ. ಏಕೆಂದರೆ ಅವರ ಸ್ನೇಹಿತ ಲಾಡಲಿ ಮೋಹನ್ ನಿಗಂ ಅವರ ಪ್ರಕಾರ “ಕರ್ಪೂರಿ ಕೇವಲ ವ್ಯಕ್ತಿಯಾಗಿರಲಿಲ್ಲ, ಅವರ ಬಳಿ ಒಂದು ಕನಸಿತ್ತು. ಕನಸು, ಸಂಕಲ್ಪ, ಹಾಗೂ ತ್ಯಾಗ ಇವು ಮೂರೂ ಕರ್ಪೂರಿಯವರನ್ನು ರೂಪಿಸಿದ್ದವು. ಅವರು ಹಗಲು ರಾತ್ರಿ ಬಡವರನ್ನು ಕುರಿತು ಚಿಂತಿಸುತ್ತಿದ್ದರು. ಅವರು ವ್ಯಕ್ತಿಯಾಗಿರಲಿಲ್ಲ, ರಾಜಕೀಯ ಹಾಗೂ ವೈಚಾರಿಕತೆಯ, ಒಂದು ಮೌಲ್ಯದ ಸಂಕೇತವಾಗಿದ್ದರು.”

ಪತ್ರಕರ್ತ ಅರುಣ್ ರಂಜನ್ ಪ್ರಕಾರ “ಹರಿಜನರ ಮೇಲಿನ ದೌರ್ಜನ್ಯ ಕರ್ಪೂರಿಯವರ ಮನಸ್ಸನ್ನು ತಲ್ಲಣಗೊಳಿಸುತ್ತಿತ್ತು. ಇಂದು ಅವರು ಬದುಕಿದ್ದರೆ ಪ್ರಾಯಶಃ ಹಿಂದಿ ಪ್ರದೇಶದಲ್ಲಿ ಹಿಂದುಳಿದವರ ಕೂಗು ಹರಿಜನರ ಶಕ್ತಿಯೊಂದಿಗೆ ಮಿಳಿತಗೊಂಡು ಬಲಶಾಲಿಯಗುತ್ತಿತ್ತು.” ತಮ್ಮ ಕಾಲೇಜಿನ ವಿದ್ಯಾರ್ಥಿ ದಿನಗಳಲ್ಲಿ ತದ ನಂತರ ಕರ್ಪೂರಿಯವರು ಲೋಹಿಯಾ, ಜಯಪ್ರಕಾಶ್ ನಾರಾಯಣ, ರಾಹುಲ ಸಾಂಕೃತ್ಯಾಯನ್, ರಾಮಕೃಷ್ಣ ಬೇನಿಪುರಿರಂತಹ ನಾಯಕರ ಗರಡಿಯಲ್ಲಿ ಪಳಗುತ್ತಾರೆ. ಆ ಕಾಲದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲಿಗೆ ಕೂಡ ಸೇರುತ್ತಾರೆ. ನಂತರ 1947 ರಲ್ಲಿ ಸ್ಥಾಪಿಸಿದ “ಅಖಿಲ ಭಾರತೀಯ ಹಿಂದ್ ಕಿಸಾನ್ ಪಂಚಾಯತ್” ಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ತಮ್ಮ ರಾಜಕೀಯ ಹಾಗೂ ಸಾಮಾಜಿಕ ಹೋರಾಟದ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಇಲ್ಲಿ ಇವರು ರಾಜಕೀಯ ಕಾರ್ಯಕರ್ತರೂ ಹೌದು, ಸಾಮಾಜಿಕ ಕಾರ್ಯಕರ್ತರೂ ಹೌದು. 1952 ರಲ್ಲಿ ದೇಶದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ತಾಜಪುರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುವುದರ ಮೂಲಕ 1980 ರವರೆಗೆ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. 1967 ರಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಯಾಗಿ ತಮ್ಮ ಅಧಿಕಾರದ ರಾಜಕೀಯವನ್ನು ಆರಂಭಿಸಿದ ಕರ್ಪೂರಿ ಠಾಕೂರ್ 1969ರಲ್ಲಿ ಅಲ್ಪ ಕಾಲಾವಧಿಗೆ ಮುಖ್ಯಮಂತ್ರಿಯಾಗಿಯೂ ನಂತರ 1977 ರಿಂದ 1979 ರ ವರೆಗೆ 22  ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು.

ಈ 1969 ರಿಂದ 1980ರ ರಾಜಕೀಯ ಕಾಲಘಟ್ಟವನ್ನು ಕೆಲವೇ ಮಾತುಗಳಲ್ಲಿ ಬರೆದಿಡಲು ಸಾಧ್ಯವೇ ಇಲ್ಲ. ಅದೊಂದು ಅಸಾಧ್ಯ ಹಾಗೂ ಅಸಂಬದ್ಧ ತಿರುವುಗಳ ಮಹಾಕಥೆ. ಈ ಕಾಲಘಟ್ಟದಲ್ಲಿ ಕರ್ಪೂರಿ ಠಾಕೂರ್ ಅತ್ಯಂತ ಪ್ರಮುಖ ರಾಜಕಾರಣಿಯಾಗಿದ್ದರು. ಅನೇಕ ಸ್ಥಿತ್ಯಂತರಗಳಿಗೂ ಕಾರಣರಾಗಿದ್ದರು. ಪಕ್ಷಾಂತರಿಯೆಂದು ಅಪಾದನೆಗೆ ಗುರಿಯಾಗಿದ್ದರು. ಅನೇಕ ಸಂದರ್ಭಗಳಲ್ಲಿ ರಾಜಿ ಮಾಡಿಕೊಂಡಿದ್ದರು ಅದಕ್ಕಾಗಿ ಅಪಾರ ಪ್ರಮಾಣದಲ್ಲಿ ಟೀಕೆಗೆ ಗುರಿಯಾಗಿದ್ದರು. ಆದರೆ ಅವರು ರಾಜಿಯಾಗಿದ್ದು ತಮ್ಮ ಆಳದ ಧ್ಯೇಯವಾದ ಸಮಾಜವಾದದ ನೀತಿಗಳನ್ನು ಹೇಗಾದರೂ ಮಾಡಿ ಅನುಷ್ಟಾನಗೊಳಿಸಬೇಕು ಹಾಗೂ ಕಾಂಗ್ರೆಸ್ಸೇತರ ರಾಜಕೀಯ ಎನ್ನುವ ಒಂದು ಮಹಾ ಸಂಘಟನೆಗಳಿಗಾಗಿ ಮಾತ್ರ. ಇಲ್ಲಿ ವೈಯುಕ್ತಿಕ ಲಾಭದ ಅಂಶ ಲವಲೇಶವೂ ಇರಲಿಲ್ಲ. ಅದರೆ ಇವರ ಅಧಿಕಾರ ಅವಧಿಯ ಅತ್ಯಂತ ಕಪ್ಪು ಚುಕ್ಕೆ ಎಂದರೆ 1978 ರಲ್ಲಿ ಬಿಹಾರದ ಪಟ್ನಾ ಜಿಲ್ಲೆಯ ಬೆಲ್ಚಿಯಲ್ಲಿ  ಠಾಕೂರರ ತೋಳ್ಬಲ, ಸಂಕುಚಿತ ಮನೋಭಾವ, ದುರಹಂಕಾರದಿಂದ ನಡೆದ ದಲಿತರ ದಾರುಣ ಸಾಮೂಹಿಕ ಕಗ್ಗೊಲೆ.

ಇದು ಆ ರಾಜ್ಯದ ಮಧ್ಯಮ ಜಾತಿಯ ವರ್ಗಗಳು ನಡೆಸಿದ ನರಮೇಧವಾಗಿತ್ತು. ಆಗ ಹಿಂದುಳಿದವರ ನೇತಾರ ಹಾಗೂ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರ ಅಧಿಕಾರದ ಅವಧಿಯಲ್ಲಿ ಈ ಬರ್ಬರ ಕೃತ್ಯ ನಡೆದದ್ದು ಕರ್ಪೂರಿಯವರನ್ನು ಇನ್ನಿಲ್ಲದ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿತ್ತು. ಇದರ ಬಿಕ್ಕಟ್ಟಿನಿಂದ ಕರ್ಪೂರಿಯವರಿಗೆ ಹೊರ ಬರಲು ಕಡೆಯವರೆಗೂ ಸಾಧ್ಯವೇ ಅಗಲಿಲ್ಲ. ಇದರಿಂದಾದ ಮತ್ತೊಂದು ದುರಂತವೆಂದರೆ ಈ ಹಿಂದುಳಿದವರಿಗೆ ಪಾಠ ಕಲಿಸಲು ದಲಿತರ ಹಾಗೂ ಮೇಲ್ಜಾತಿಗಳ ಧೃವೀಕರಣ ನಡೆದದ್ದು. ಮತ್ತೆ ಇದಕ್ಕೆ ಬಲಿಯಾದದ್ದು ಕರ್ಪೂರಿ ಠಾಕೂರ್. ಆಗ ಈ ಧೃವೀಕರಣದ ಲಾಭ ಪಡೆದದ್ದು ಕಾಂಗ್ರೆಸ್ ಪಕ್ಷ. ತಾನು ನಂಬಿದ, ಬೆಳಿಸಿದ ಆದರ್ಶ ತತ್ವಗಳಿಗೆ ವ್ಯತಿರಿಕ್ತವಾಗಿ ನಡೆದ ಅಮಾನವೀಯ ಘಟನೆಗಳು ಹಾಗೂ ಇದಕ್ಕಾಗಿ ಕರ್ಪೂರಿ ತಲೆದಂಡ ಕೊಡಬೇಕಾಗಿರುವುದು ಇದು ಬಹುಶ ಸ್ವಾತಂತ್ರ್ಯ ಭಾರತದ ರಾಜಕೀಯದಲ್ಲಿ ಕರ್ಪೂರಿ ಠಾಕೂರರಂತಹ ದುರಂತ ರಾಜಕಾರಣಿ ಮತ್ತೊಬ್ಬರಿರಲಿಕ್ಕಿಲ್ಲವೆಂದೆನಿಸುತ್ತದೆ. ಇದರಿಂದ ಜರ್ಝರಿತಗೊಂಡ ಕರ್ಪೂರಿ ಮತ್ತೆ  ರಾಜಕೀಯವಾಗಿ ಮೇಲೇಳಲೇ ಇಲ್ಲ. ತಾವು ಅಧಿಕಾರದಲ್ಲಿದ್ದಂತಹ ಸಂದರ್ಭಗಳಲ್ಲಿ ಕರ್ಪೂರಿ ಅತ್ಯಂತ ದಕ್ಷತೆಯಿಂದ, ಪ್ರಗತಿಪರ ಕಾರ್ಯ ನೀತಿಗಳಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. 1969 ರಲ್ಲಿ ಬಿಹಾರನಲ್ಲಿ ಭೀಕರ ಬರ ಬಂದಾಗ ಅತ್ಯಂತ ಆಡಳಿತ ದಕ್ಷತೆಯ ಅನುಭವವನ್ನು, ರಾಜಕೀಯ ಇಚ್ಛಾಶಕ್ತಿಯನ್ನು ಬಳಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಕಾನೂನು ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಸಂವಿಧಾನ ಕಲ್ಪಿಸಿದ ಅವಕಾಶಗಳಿಗೆ ಅನುಗುಣವಾಗಿ ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಶೋಷಿತ, ದಲಿತ ಹಾಗೂ ಉಪೇಕ್ಷಿತ ವರ್ಗಕ್ಕೆ ಹಾಗೂ ಎಲ್ಲಾ ಜಾತಿಯ ಬಡ ಮಹಿಳೆಯರಿಗೆ ಮೀಸಲಾತಿ ನೀಡುವ ಕಾರ್ಯಕ್ರಮ ಜಾರಿಗೊಳಿಸಿದ್ದರು. ಇದು ಆ ಕಾಲದಲ್ಲಿ ಕರ್ಪೂರಿ ಸೂತ್ರವೆಂದೇ ಪ್ರಸಿದ್ದಿಯಾಗಿತ್ತು .ಇದು ಆ ಕಾಲದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಿಗೆ ರಾಜಕೀಯವಾಗಿ ಮನ್ನಣೆಗಳು, ಸ್ಥಾನಗಳು ದೊರಕತೊಡಗಿದವು.

[ಮೇಲಿನದಷ್ಟು ನರೇಂದ್ರ ಪಾಠಕ್ ಬರೆದ ಸುರುಕೋಡ ಅನುವಾದಿಸಿದ ಪುಸ್ತಕದಿಂದ ಆಯ್ದ ಕರ್ಪೂರಿಯವರ ಜೀವನದ ಸಂಕ್ಷಿಪ್ತ ಸಾರಾಂಶ.]

ಆದರೆ ಕರ್ಪೂರಿ ಠಾಕೂರ್ ಅವರು ಅತ್ಯಂತ ಮಾನವೀಯ ಹಾಗೂ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ದುರ್ಬಲ ವರ್ಗದ ಸಬಲೀಕರಣಕ್ಕಾಗಿ ಜಾರಿಗೆ ತಂದಂತಹ ಈ ಸೂತ್ರಗಳು ಅನುಷ್ಟಾನಗೊಂಡು ಅದರೆ ತನ್ನ ಮೂಲ ಧ್ಯೇಯಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರತೊಡಗಿದವು. ಈ ಮೂಲಕ ಸಬಲೀಕರಣದ ನೆಪದಲ್ಲಿ ಬಿಹಾರ್‌ನ ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ರಾಜಕೀಯ ಹಿಂಸಾಚಾರಕ್ಕಿಳಿದಿದ್ದು ಆ ಹಿಂಸಾಚಾರಕ್ಕೆ ಬಲಿಯಾದದ್ದು ದಲಿತರಾಗಿದ್ದರು. ಅಲ್ಲಿ ಜಾತೀಯ ಉನ್ಮಾದ ಸೃಷ್ಟಿಯಾಗತೊಡಗಿತ್ತು. ತಾವು ಅತ್ಯಂತ ನಿಸ್ವಾರ್ಥದಿಂದ, ಕಷ್ಟಪಟ್ಟು ಕಟ್ಟಿದ ಹಿಂದುಳಿದ ವರ್ಗಗಳ ಚಳುವಳಿ ಈ ರೀತಿ ಇತರೇ ಹಿಂದುಳಿದವರು (OBC)  ಹಾಗೂ ಅತಿ ಹಿಂದುಳಿದವರು (MBC) ಎಂದು ಮತ್ತೊಂದು ಮಟ್ಟದಲ್ಲಿ ವಿಭಜನೆಗೊಂಡದ್ದು ಕರ್ಪೂರಿಯವರಲ್ಲಿ ಇನ್ನಿಲ್ಲದ ಗೊಂದಲಗಳನ್ನು, ಸಿನಿಕತನವನ್ನು, ಸೋಲಿನ ಮನೋಭಾವನೆಯನ್ನು ಹುಟ್ಟಿ ಹಾಕಿದವು. ಎಪ್ಪತ್ತರ ದಶಕದ ಅಂತ್ಯದ ವೇಳೆಗೆ ಬಿಹಾರನಲ್ಲಿ ಶತ್ರುವಿನ ಶತ್ರು ನಮ್ಮ ಮಿತ್ರ ಅನ್ನುವ ಅವಕಾಶವಾದಿ ತತ್ವದಡಿ ಬ್ರಾಹ್ಮಣ ಹಾಗೂ ದಲಿತರ ಧೃವೀಕರಣ ಶುರುವಾಗಿತ್ತು. ಇದರ ಕರಾಳ ಒಡಬಂಡಿಕೆಗಳು ಹಾಗೂ ಇದರ ಮೂಲಕ ಮತ್ತೆ ದಲಿತರು ನಾಶವಾಗುತಿದ್ದದ್ದು, ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ತನ್ನ ಸಾರ್ವಭೌಮತ್ವಕ್ಕಾಗಿ ತೋಳ್ಬಲದ ರಾಜಕೀಯವನ್ನು ಒಂದು ಮಾದರಿಯನ್ನಾಗಿಯೇ ಜಾರಿಗೊಳಿಸಿದ್ದು, ಇವೆಲ್ಲವೂ ಕರ್ಪೂರಿ ಠಾಕೂರ್‌ರನ್ನು ಸಂಪೂರ್ಣ ಹತಾಶೆಗೆ ಕೆಡವಿತ್ತು. ಅವರ ಅಂತ್ಯ ಅತ್ಯಂತ ದುರಂತ ಅಧ್ಯಾಯದಲ್ಲಿ ಪರ್ಯಾವಸಾನಗೊಂಡಿತು. ಇಲ್ಲಿ ಸುಸಂಬದ್ಧವಾದ ಮತ್ತು ಪೂರ್ವ ಯೋಜನೆಗಳಿಲ್ಲದೆ ಮುಗ್ಧತೆಯೇ ಮೂಲಾಧಾರವನ್ನಾಗಿ ಮಾಡಿಕೊಂಡು, ಸಮಾಜವಾದದಲ್ಲಿ ಅತಿ ನಿಷ್ಟೆಯನ್ನು ಇಟ್ಟುಕೊಂಡು ಜನನಾಯಕರಾದ, ನಿಷ್ಟಾವಂತ, ಸತ್ಯವಂತ ಸಮಾಜವಾದಿಗಳ ಬದುಕು ಹೀಗೇನೇ ಎನ್ನುವ ತೆಳು ಚಿಂತನೆಗಳು ಕೂಡ ಹುಟ್ಟಿಕೊಂಡಿತು. (ಇಂಡಿಯಾದ ಸಮಾಜವಾದವನ್ನು ಲೋಹಿಯಾರ ಮೂಲಕ ತೆರೆದಿಡುತ್ತಾ, ಆ ಮೂಲಕ ಸಮಾಜವಾದದ ಚಿಂತನೆ ಹಾಗೂ ಚಳುವಳಿಗಳ ಅನೇಕ ಮಗ್ಗುಲುಗಳನ್ನು ಕನ್ನಡದಲ್ಲಿ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ, ನಟರಾಜ್ ಹುಳಿಯಾರ್ ಅವರು ಅತ್ಯಂತ ಅಳವಾದ ಅಧ್ಯಯನಗಳನ್ನು ನಡೆಸಿ ಈ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಈ ಕೃತಿಗಳು ನಿಜಕ್ಕೂ ಸಮಾಜವಾದಿ ಅಧ್ಯಯನಕ್ಕೆ ಅತ್ಯಂತ ಮೌಲಿಕ, ಸೃಜನಶೀಲ, ವೈಚಾರಿಕ ಕೃತಿಗಳು. ಅಲ್ಲದೆ ಹಸಂ ನಯೀಮ್ ಸುರುಕೋಡ ಅನುವಾದಿಸಿದ ಸಮಾಜವಾದದ ಪುಸ್ತಕಗಳು ನಿಜಕ್ಕೂ ಕೈದೀಪಗಳು). ಆದರೆ ಒಟ್ಟಾರೆಯಾಗಿ ಕರ್ಪೂರಿಯವರಿಗೆ ಸಮಾಜವಾದದ ಮಂತ್ರ ಗೊತ್ತಿತ್ತು, ಬಲು ಪರಿಪಕ್ವವಾಗಿಯೇ ಇದನ್ನು ಲೋಹಿಯಾರಿಂದ ಕಲಿತಿದ್ದರು. ಆದರೆ ಅದನ್ನು ಬಳಸುವ ಮಂತ್ರದಂಡ ಮಾತ್ರ ಆಗಾಗ್ಗೆ ಅಥವಾ ಅನೇಕ ವೇಳೆ ಕೈಕೊಡುತ್ತಿತ್ತು ಹಾಗೂ ಇವರು ಬಳಸಿದ ಮಂತ್ರದಂಡವೇ ದೋಷಪೂರಿತವಾಗಿತ್ತೇನೋ!

ಹಿಂದುಳಿದವರ ಸಬಲೀಕರಣ, ರಾಜಕೀಯವಾಗಿ ಅಧಿಕಾರವನ್ನು ಪಡೆದುಕೊಳ್ಳುವುದರ ಬಗೆಗೆ ಹಾಗೂ ಹಾವನೂರು ವರದಿಯನ್ನು ಜಾರಿಗೊಳಸಿದ್ದು, ಉಳುವವನೇ ಹೊಲದೊಡೆಯನೆಂಬ ಅತ್ಯಂತ ಪ್ರಗತಿಪರ ಕಾಯ್ದೆಯನ್ನು ಜಾರಿಗೆ ತಂದದ್ದು, ಇವೆಲ್ಲವನ್ನು ದೇವರಾಜ್ ಅರಸು ತಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಹಿಂಸೆ ಹಾಗೂ ಪ್ರತಿ ಹಿಂಸೆ ಇಲ್ಲದೇ ತಮ್ಮ ರಾಜಕೀಯ ಚಾಣಾಕ್ಷತೆ, ಇಚ್ಛಾಶಕ್ತಿಯನ್ನು ಬಳಸಿ ಅನುಷ್ಟಾನಗೊಳಿಸಿದರು. ಆದರೆ ಇದೇ ಮಾದರಿ ಹಾಗೂ ಕ್ಷಮತೆ ಕರ್ಪೂರಿ ಠಾಕೂರರಿಗೆ ಏಕೆ ಸಾಧ್ಯವಾಗದೇ ಹೋಯ್ತು ಎಂದು ಈ ದೇಶದ ರಾಜಕೀಯ ಪಂಡಿತರು ಹಾಗೂ ಚಿಂತಕರು ಕರ್ಪೂರಿ ಅವರನ್ನು ದೇವರಾಜ ಅರಸರೊಂದಿಗೆ ಹೋಲಿಸಿ ವಿಶ್ಲೇಷಿಸುತ್ತಾರೆ. ಆದರೆ ಈ ಮಾದರಿಯ ಕಪ್ಪು ಬಿಳುಪಿನ  ವಿಶ್ಲೇಷಣೆ ನಿಜಕ್ಕೂ ಅಪೂರ್ಣವೆನಿಸುತ್ತದೆ. ಅಲ್ಲದೆ ಅನೇಕ ಸಂದರ್ಭಗಳಲ್ಲಿ ಅಮಾನವೀಯವೆನಿಸುತ್ತದೆ. ಏಕೆಂದರೆ ಅರಸು ಅವರಿಗೆ ಇದ್ದ ಅನೇಕ ಸವಲತ್ತುಗಳು ಕರ್ಪೂರಿ ಅವರಿಗೆ ಇರಲಿಲ್ಲ. ಮೊದಲನೇಯದಾಗಿ ರಾಜಕೀಯ ಪಕ್ಷ. ಆ ಕಾಲದಲ್ಲಿ ಕಾಂಗ್ರೆಸ್ ನಂತಹ ಬಲಿಷ್ಟ ರಾಷ್ಟ್ರೀಯ ಪಕ್ಷ ಅರಸರ ಬೆಂಬಲಕ್ಕಿತ್ತು. ಅವರಿಗೆ ಬಹುಮತವಿತ್ತು. ಈ ಸೌಕರ್ಯ ಕರ್ಪೂರಿ ಠಾಕೂರರಿಗೆ ಇರಲೇ ಇಲ್ಲ. ಇಲ್ಲಿ ಕರ್ಪೂರಿ ನೆಚ್ಚಿದ್ದು ಕೇವಲ ತಮ್ಮ ಆಳದ ಸಮಾಜವಾದದ ಅನುಭವ, ಸಾಮಾಜಿಕ ನ್ಯಾಯದ ಪರ ಒಲವು ಹಾಗೂ ಪ್ರೌಢಿಮೆ, ರಾಜಕೀಯ ಬಲಾಬಲ ಹಾಗೂ ತಮ್ಮ ಹಿಂದಿರುವ ರಾಜಕೀಯ ಕಾರ್ಯಕರ್ತರ ಸಂಖ್ಯೆ. ಇಲ್ಲಿ ಕರ್ಪೂರಿಯವರು ತಮ್ಮದಲ್ಲದ ತಪ್ಪಿಗೂ ದಯನೀಯವಾಗಿ ಸೋಲುತ್ತಾರೆ. ತಲೆದಂಡ ನೀಡಬೇಕಾಗುತ್ತದೆ. ಇನ್ನೊಂದು ಅತ್ಯಂತ ಪ್ರಮುಖ ಸಂಗತಿಯೆಂದರೆ ಕರ್ನಾಟಕದ ರಾಜಕೀಯ ನೆಲೆಗಳು ಹಾಗೂ ಜಾತಿಗಳ ಸಂರಚನೆಗೂ ಉತ್ತರ ಭಾರತದ ಅದರಲ್ಲೂ ಬಿಹಾರಿನಂತಹ ರಾಜ್ಯಗಳಲ್ಲಿನ ರಾಜಕೀಯ ಇತಿಹಾಸ ಹಾಗೂ ಜಾತಿಗಳ ಸಂರಚನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕದಲ್ಲಿನ ಪ್ರಗತಿಪರ ಹೋರಾಟ, ಬ್ರಾಹ್ಮಣೇತರ ಚಳುವಳಿಗಳಿಗೆ ಶತಮಾನ ಕಾಲದಷ್ಟು ಇತಿಹಾಸವಿದೆ.

1900 ರಲ್ಲಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಶುರುವಾದ ಪ್ರಗತಿಪರ ಆಡಳಿತಾತ್ಮಕ ಯೋಜನೆಗಳು ಹಾಗೂ ಅವುಗಳ ಅನುಷ್ಟಾನ ಹಾಗೂ ಇಂದಿಗೆ 110 ವರ್ಷಗಳಷ್ಟು ಹಿಂದೆಯೇ ಹಿಂದುಳಿದವರ ಪರವಾದ ಮೀಸಲಾತಿ ಕರ್ನಾಟಕದಲ್ಲಿ ಕರಡು ನೀತಿಯನ್ನು ರೂಪಿಸಲಾಗಿತ್ತು. ಇಂತಹ ಅನೇಕ ಸಾಂಸ್ಕೃತಿಕ, ಮೀಸಲಾತಿ ಪರ ಚಳುವಳಿಗಳಿಂದ, ಶಾಂತವೇರಿ ಗೋಪಾಲ ಗೌಡರ ಹಾಗೂ ಅವರ ಸಮಾಜವಾದಿ ಗೆಳೆಯರ (ಲೇಖಕ ‘ಪೀರ್ ಬಾಷ’ ಬರೆದ ಕರ್ನಾಟಕ  ಸಮಾಜವಾದಿಗಳ ಸಂದರ್ಶನ ಆಧಾರಿತ ಪುಸ್ತಕ ಇದರ ಬಗ್ಗೆ ಅತ್ಯುತ್ತಮ ಒಳನೋಟಗಳನ್ನು ನೀಡುತ್ತದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.) ನಿಸ್ವಾರ್ಥ ಜನಪರ ಹೋರಾಟಗಳಿಂದ, ಎಂ.ಡಿ.ನಂಜುಂಡ ಸ್ವಾಮಿಯವರ ನೇತೃತ್ವದಲ್ಲಿನ ಸಮಾಜವಾದಿ ಹೋರಾಟಗಳಿಂದ, ಪ್ರಗತಿಪರ ಸಾಹಿತಿಗಳು, ಚಿಂತಕರಿಂದ ಕೂಡಿದ್ದ ಅರವತ್ತು, ಎಪ್ಪತ್ತರ ದಶಕದ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪರಿಸರಗಳು ಅರಸರಂತಹ ರಾಜಕಾರಣಿಗಳಿಗೆ ಸಾಮಾಜಿಕ ನ್ಯಾಯದ ಪರವಾಗಿ ಪ್ರಯೋಗ ನಡೆಸಲು ಇಲ್ಲಿನ ನೆಲವನ್ನು ಸಂಪೂರ್ಣವಾಗಿ ಹದಗೊಳಿಸಿದ್ದವು. ಇದು ಸಾಮಾಜಿಕ ನ್ಯಾಯಕ್ಕಾಗಿ ಪರಿಪಕ್ವ ವಾತಾವರಣವನ್ನೇ ನಿರ್ಮಿಸಿತ್ತು. ಆಗ ರಾಜಕೀಯ ಇಚ್ಛಾಶಕ್ತಿ, ಎಲ್ಲವನ್ನೂ ಸರಿದೂಗಿಸಬಲ್ಲ ಸಧೃಡ ನಾಯಕತ್ವ, ಹಾಗೂ ನಾಯಕನಲ್ಲಿ ಆಳದ ಕಳಕಳಿಯ ಅವಶ್ಯಕತೆ ಬೇಕಾಗಿತ್ತು. ಇದನ್ನು ದೇವರಾಜು ಅರಸು ಅವರು ಹಿಂದುಳಿದ ವರ್ಗಗಳನ್ನು ಮೇಲೆತ್ತುವುದಕ್ಕೆ ಸಂಪೂರ್ಣವಾಗಿ ಬಳಸಿಕೊಂಡರು. ಅಲ್ಲದೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪರವರಂತಹ ಕಾಂಗ್ರೆಸ್ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಅನೇಕ ರೀತಿಯ ಪ್ರಾಮಾಣಿಕತೆಯ, ದಕ್ಷ ಆಡಳಿತದ ಹೆಸರನ್ನೂ ತಂದಿತ್ತಿದ್ದರು. ಆದರೆ ಬಿಹಾರ ರಾಜ್ಯದ ಸಾಮಾಜಿಕ ಸ್ಥಿಗತಿಗಳು, ಅಲ್ಲಿನ ಪ್ರಗತಿಪರ ಹೋರಾಟದ ಇತಿಹಾಸಗಳು ಎಲ್ಲಿಯೂ ಕರ್ನಾಟಕಕ್ಕೆ ಸರಿಗಟ್ಟುವುದೇ ಇಲ್ಲ. ಇದಕ್ಕಾಗಿ ಮತ್ತೊಂದು ಬಗೆಯ ಚಿಂತನೆ ಹಾಗೂ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಆದರೆ ಕಡೆಯದಾಗಿ 80 ದಶಕದ ಆರಂಭದಲ್ಲಿ  ದೇವರಾಜು ಅರಸು ಹಾಗೂ ಕರ್ಪೂರಿ ಠಾಕೂರ್ ಇಬ್ಬರೂ ಹಿಂದುಳಿದ ನಾಯಕರು ತಾವು ನಂಬಿದ ತಮ್ಮ ಪಕ್ಷ ತಮ್ಮನ್ನು ಅನಾಮತ್ತಾಗಿ ಹಾಗೂ ಅಮಾನವೀಯವಾಗಿ ಕೈ ಬಿಟ್ಟಿದ್ದರ ಪರಿಣಾಮವಾಗಿ, ತಮ್ಮ  ಹಿಂಬಾಲಕರು ಹಾಗೂ ತಾವು ರಾಜಕೀಯವಾಗಿ ಬೆಳಸಿದ ಹಿಂದುಳಿದ ನಾಯಕರು ತಾವು ಅತಂತ್ರರಾದಂತಹ ಸಂದರ್ಭದಲ್ಲಿ ತಮಗೆ ಕೈಕೊಟ್ಟಿದ್ದರ ಪರಿಣಾಮವಾಗಿ ಹಾಗೂ ಅಂದಿನ ಬದಲಾದ ರಾಜಕೀಯ ಸಂದರ್ಭದಲ್ಲಿ  ಎಲ್ಲಿಯೂ ಸಲ್ಲದವರಾಗಿ, ತಮ್ಮದಲ್ಲದ ತಪ್ಪಿಗೆ ರಾಜಕೀಯವಾಗಿ ನಗಣ್ಯವಾಗಿ ಎಂಬತ್ತರ ದಶಕದ ಆರಂಭದ ವೇಳೆಗೆ ಸಂಪೂರ್ಣವಾಗಿ ಏಕಾಂಗಿಗಳಾದರು, ಅಸಹಾಯಕರಾಗಿದ್ದರು, ದುರಂತ ನಾಯಕರ ಹಣೆಪಟ್ಟಿ ಹೊತ್ತಿದ್ದರು.

ಅತಿ ಹಿಂದುಳಿದ ಜಾತಿಗಳಿಂದ ಬಂದ ಕರ್ಪೂರಿ ಹಾಗೂ ದೇವರಾಜ್ ಅರಸ್ ತಮ್ಮ ಸಕ್ರಿಯ ರಾಜಕಾರಣದುದ್ದಕ್ಕೂ ಜನನಾಯಕರಾಗಿ ಹೊರಹೊಮ್ಮಿದರೇ ಹೊರತಾಗಿ ಎಲ್ಲಿಯೂ ಜಾತಿ ನಾಯಕರಾಗಲಿಲ್ಲ. ಯಾವುದೇ ಜಾತಿಯ ಮುಖಂಡರಾಗಲಿಲ್ಲ. ಬದಲಾಗಿ ಇವರ ಕಾಲದಲ್ಲಿ ಬಲಿಷ್ಟ ಜಾತಿಗಳ ಅಹಮ್, ದುರಹಂಕಾರಗಳು ತೆರೆಮರೆಗೆ ಸರಿದು ಅನೇಕ ಬಗೆಯ ಹಿಂದುಳಿದ ಜಾತಿಗಳು ಪ್ರಾಮುಖ್ಯತೆ ಪಡೆದು ವರ್ಗಗಳಾಗಿ ಪರಿವರ್ತನೆಗೊಂಡು ವ್ಯವಸ್ಥೆಯಲ್ಲಿ ತಮ್ಮದೇ ಆದ ಒಂದು ನೆಲೆ ಹಾಗೂ ಬೆಲೆಯನ್ನು ಕಂಡುಕೊಂಡವು. ಇದರ ಫಲವಾಗಿಯೇ ಮಹತ್ವಾಕಾಂಕ್ಷಿ ರಾಜಕಾರಣಿಯೊಬ್ಬನಿಗೆ ತನ್ನಲ್ಲಿನ ಅನೇಕ ದೌರ್ಬಲ್ಯಗಳ ನಡುವೆಯೂ ಜಾತ್ಯಾತೀತನಾಗಿ ಜನನಾಯಕರಾಗಿ ರಾಜಕೀಯವಾಗಿ ಮನ್ನಣೆಗಳಿಸುವುದು ಅರವತ್ತರ ದಶಕದ ಅಂತ್ಯದಲ್ಲಿ, ಎಪ್ಪತ್ತರ ದಶಕ, ಎಂಬತ್ತರ ದಶಕದ ಮಧ್ಯದವರೆಗೂ ಒಂದು ಮಾನದಂಡವಾಗಿಬಿಟ್ಟಿತು. ಆಗ ರಾಜಕಾರಣಿಗಳ ಜಾತೀಯತೆ ಬಹಿರಂಗವಾಗಿ ಚರ್ಚಿತವಾಗುತ್ತಿದ್ದುದು ಅವರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಕ್ಕಿಕೊಂಡಾಗ, ತಮ್ಮ ಜಾತಿಯ ಶಾಸಕ ಅಥವಾ ಮಂತ್ರಿಯನ್ನು ಹಿಡಿದು ಸರ್ಕಾರಿ ಉದ್ಯೋಗಗಳನ್ನು, ಬಿಸಿನೆಸ್ ಪರ್ಮಿಟ್ ಪಡೆದುಕೊಳ್ಳುವಾಗ ಮತ್ತು ಚುನಾವಣೆಗಳ ಸಂದರ್ಭಗಳಲ್ಲಿ ಮಾತ್ರವೇ ಹೊರತು ಜಾತಿಯೊಂದರ ಪ್ರಶ್ನಾತೀತ, ಪ್ರಭಾವಶಾಲಿ ರಾಜಕಾರಣಿ ಎನ್ನುವ ಒಂದು ಸರ್ವಕಾಲಿಕ ಶಾಶ್ವತ ರಾಜಕೀಯ ವಾತಾವರಣವೇ ಇರಲಿಲ್ಲ. ಇದೆಲ್ಲ ಬದಲಾದದ್ದು ವಿ.ಪಿ.ಸಿಂಗ್ ಸಂಘ ಪರಿವಾರದ ಕೋಮುವಾದಿ ರಾಜಕೀಯವನ್ನು ಹತ್ತಿಕ್ಕಲು ಅತ್ಯಂತ ಮುಗ್ಧತೆಯಿಂದ, ಪ್ರಾಮಾಣಿಕತೆಯಿಂದ, ಯಾವುದೇ ಸಿದ್ಧತೆಗಳಿಲ್ಲದೆಯೇ ತಂದಂತಹ ಮಂಡಲ್ ವರದಿಯ ನಂತರ. ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗಿವೆ. ಆದರೆ ಇಂದು ನಮ್ಮ ಕರ್ನಾಟಕದ ದುರಂತವೆಂದರೆ  ಈ ಜಾತ್ಯಾತೀತೆಯ ಅತ್ಯಂತ ಸೂಕ್ಷ್ಮ ನೇಯ್ಗೆಯನ್ನು ಕರ್ನಾಟಕದ ರಾಜಕೀಯದಲ್ಲಿ ಧ್ವಂಸಗೊಳಿಸಿದ ಕುಖ್ಯಾತಿ ಈ  ಈ ಯಡಿಯೂರಪ್ಪನವರಂತಹ ಅತ್ಯಂತ ಹಾಸ್ಯಾಸ್ಪದ, ಭ್ರಷ್ಟ ರಾಜಕಾರಣಿಗಳದ್ದು  ಹಾಗೂ ಇದಕ್ಕೆ ಅಷ್ಟೇ ಜವಾಬ್ದಾರರು ಈ ಕುಕೃತ್ಯಕ್ಕೆ ಬೆಂಬಲ ನೀಡಿದ ಬಿಜೆಪಿ ಹಾಗೂ ಆರ್.ಎಸ್.ಎಸ್. ನವರದ್ದು. ಬಹುಪಾಲು ಮಠಗಳಿಗೆ ಜನರ ರೊಕ್ಕವನ್ನು, ಸರ್ಕಾರದ ಹಣವನ್ನು ಕಾನೂನು ಬಾಹಿರವಾಗಿ ಬೇಕಾ ಬಿಟ್ಟಿಯಾಗಿ ಹಂಚಿ ಬ್ಲಾಕ್‍ಮೇಲ್ ತಂತ್ರದ ಮೂಲಕ ಮಠಗಳನ್ನು ಹಾಗೂ ಮಠಾಧಿ ಪತಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ಧ್ವಸಂ ಗೊಳಿಸಿಬಿಟ್ಟರು ಈ ಯಡಿಯೂರಪ್ಪನವರು. ಸ್ವಜನ ಪಕ್ಷ ಪಾತವೆನ್ನುವುದು, ಸ್ವಜಾತಿಯ ನಾಯಕನೆನ್ನುವುದರ ಬಗೆಗಿನ ವ್ಯಾಮೋಹ ಇಂದು ಕರ್ನಾಟಕ ರಾಜಕೀಯದಲ್ಲಿ ಹಾಗೂ ಸಮಾಜದಲ್ಲಿ ಒಂದು ಪ್ರಚ್ಛನ್ನ ಸ್ವೇಚ್ಛಾಚ್ಚಾರ ತೆವಲಾಗಿ ನಿರ್ಮಿಸಿ ಬಿಟ್ಟಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇಲ್ಲದಿದ್ದರೆ ಈ ನಿರಾಣಿ, ಈ ರೇಣುಕಾಚಾರ್ಯ, ಈ ಗೋಪಾಲಕೃಷ್ಣ, ಈ ಹರೀಶ, ಈ ಬೊಮ್ಮಾಯಿ,  ಇತ್ಯಾದಿಗಳು ಇಷ್ಟೊಂದು ಅನಾಚಾರ, ಸ್ವೇಚ್ಛಾಚಾರದ, ಬೇಜಾವಬ್ದಾರಿಯ, ಸ್ವಚ್ಛಂದ ಜಾತೀವಾದದ ಪ್ರವೃತ್ತಿಗಳನ್ನು ಬಹಿರಂಗವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಕಾರಣ ಜನನಾಯಕನಾಗುವ ಮೂಲಕ ರಾಜಕಾರಣಿ ಎನ್ನುವ ತತ್ವ ಹೆಚ್ಚೂ ಕಡಿಮೆ ಕಣ್ಮರೆಯಾಗಿ ಜಾತಿ ನಾಯಕನಾಗಿ ರಾಜಕಾರಣಿ ಎನ್ನುವ ಸಿದ್ಧಾಂತ ಇಲ್ಲಿ ತಳವೂರಿಬಿಟ್ಟಿರುವುದು ಹಾಗೂ ಸರ್ಕಾರದ ರೊಕ್ಕವನ್ನು ಪಡೆದಂತಹ  ಮಠಗಳು ಜಾತಿ ಆಧಾರದ ಮೇಲೆ ಇವರನ್ನು ಬೆಂಬಲಿಸುತ್ತವೆ!

ಅದಕ್ಕೇ ಇವರು ಉಪ ಚುನಾವಣೆಗಳಲ್ಲಿ ಜನ ನಮ್ಮನ್ನು ಗೆಲ್ಲಿಸುತ್ತಿಲ್ಲವೇ, ನನ್ನನ್ನು ನಾಯಕನನ್ನಾಗಿ ಮಾಡಿ ನಿಮಗೆ 150 ಸೀಟು ಗೆಲ್ಲಿಸುತ್ತೇನೆ ಎಂದು ಅತ್ಯಂತ ದುರಹಂಕಾರದಿಂದ ನಮ್ಮ ರಾಜ್ಯದ ಜನತೆಯ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸುತ್ತಿದ್ದಾರೆ ಹಾಗೂ ಈ ರಾಜ್ಯದ ಜನತೆಯ ನೈತಿಕತೆಯ ಮೂಲ ಬೇರನ್ನು ಹೆಚ್ಚೂ ಕಡಿಮೆ ವಿಷಗೊಳಿಸಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇದು ನಿಜಕ್ಕೂ ನಮ್ಮೆಲ್ಲರಿಗೆ ಅವಮಾನವೇ ಸರಿ. ಅಲ್ಲದೆ ಇದೇ ಯಡಿಯೂರಪ್ಪನವರು  ಕರ್ನಾಟಕದ ಸಕಲ ವೀರಶೈವ ಜಾತಿಗೆ ಏಕಮೇದ್ವೇತೀಯ ವಾರಸುದಾರ ಹಾಗೂ ನಾಯಕ ಎನ್ನುವ ಠೇಂಕಾರದ ಜೊತೆಗೆ ತಮ್ಮ ಹುಟ್ಟು ಹಬ್ಬದಂದು ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ!! ಇವರ ಬಫೂನ್ ಗಿರಿಗೆ, ಅಧ್ವಾನಗಳಿಗೆ ಮತ್ತೆ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ!!!  ಈ ಕಾಂಗ್ರೆಸ್‍ನ0ತಹ ಆತ್ಮಸಾಕ್ಷಿಯನ್ನೇ ಕಳೆದುಕೊಂಡಂತಹ, ಸಂಪೂರ್ಣವಾಗಿ ಸೋತ, ದಿಕ್ಕು ದೆಸೆಯಿಲ್ಲದ, ನೆಲಕಚ್ಚಿದ ವಿರೋಧ ಪಕ್ಷವಿರುವಾಗ ಕರ್ನಾಟಕಕ್ಕೆ ಮತ್ತೆ ಮತ್ತೆ ಪ್ರಾಥಮಿಕವಾಗಿ, ತುರ್ತಾಗಿ ಬೇಕಾಗಿರುವುದು ಕರ್ಪೂರಿ ಠಾಕೂರ್ ಅವರ ಸಮಾಜವಾದದ ಆದರ್ಶ ಮತ್ತು ದಣಿವರಿಯದ ಹೋರಾಟದ, ಪ್ರಾಮಾಣಿಕತೆಯ ರಾಜಕಾರಣದ ಮಾದರಿ (ಅನೇಕ ಮಿತಿಗಳ ನಡುವೆಯೂ). ನಂತರವಷ್ಟೇ ನಾವು ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರನ್ನು ಮುಟ್ಟಲು ಸಾಧ್ಯ.

ಇದೆಲ್ಲದರ ಈ ಅವಾಂತಕಾರಿ, ಗೊಂದಲಗಳ ರಾಜಕೀಯದ ಮಧ್ಯೆ, ಇಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ 2012 ರ ಸಂವತ್ಸರದಲ್ಲಿ ಅತ್ಯಂತ ಭ್ರಷ್ಟ, ಹಾಗೂ ಸಂಪೂರ್ಣವಾಗಿ ಹಾದಿ ತಪ್ಪಿದ ಶ್ರೀರಾಮುಲು ಎನ್ನುವ ಅವಕಾಶವಾದಿ ನಾಯಕ ತಾನೊಬ್ಬ ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ. ಅಮಾಯಕತೆಯ ನಟನೆಯನ್ನು ಮಾಡುತ್ತಿದ್ದಾರೆ. ಮಳ್ಳಿ ತರಹದ ವರ್ತನೆಯನ್ನು ತೋರಿಸುತ್ತಿದ್ದಾರೆ. ಅದಕ್ಕಾಗಿ ಇಷ್ಟರಲ್ಲೇ ಹಿಂದುಳಿದವರ ಬಡವರ ಪಕ್ಷ ಸ್ಥಾಪಿಸುತ್ತೇನೆ ಎಂದು ಪದೇ ಪದೇ ಹೆದರಿಸುತ್ತಿದ್ದಾರೆ. ಈ ಶ್ರೀರಾಮುಲು ಎನ್ನುವ ಹಿಂದುಳಿದ ನಾಯಕ ಯಾವುದೇ ಸಿದ್ಧಾಂತದ ಹಿನ್ನೆಲೆ ಇಲ್ಲದಂತಹ ನಾಯಕ. ಇವರ ಸಿದ್ಧಾಂತವೆಂದರೆ ಒಂದೇ ಅದು ತೋಳ್ಬಲದ ರಾಜಕೀಯ, ಹಣವನ್ನು ಚೆಲ್ಲಿಯೇ ಅಧಿಕಾರವನ್ನು ಗಳಿಸಬೇಕು ಎನ್ನುವ ಏಕಸೂತ್ರದ, ಆತ್ಮದ್ರೋಹದ, ಅವಕಾಶವಾದಿ ರಾಜಕೀಯ. ಅಕ್ರಮವಾಗಿ, ಭ್ರಷ್ಟ ತನದಿಂದ ಸಂಪಾದಿಸಿದ ರೊಕ್ಕವನ್ನು ಮುಗ್ಧ ಜನಗಳಿಗೆ ಭಿಕ್ಷೆಯಂತೆ ಪುಡಿಗಾಸನ್ನು ನೀಡಿ ಅವರನ್ನು ತನ್ನ ಹಂಗಿನರಮನೆಯೊಳಗೆ ಬಂಧಿಸಿರುವುದು ಇಡೀ ಬಳ್ಳಾರಿ ಜಿಲ್ಲೆಯಾದ್ಯಾಂತ ಕಣ್ಣಿಗೆ ರಾಚುತ್ತದೆ. ನಾನು ಹಾಗೂ ನನ್ನ ಸ್ನೇಹಿತರು ಅಲ್ಲಿನ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ನಿರಂತರವಾಗಿ ತಿರುಗಿದಾಗ ಇದು ನಮಗೆ ಸ್ಪಷ್ಟವಾಗಿ ಗೊತ್ತಾಯಿತು. ಇದನ್ನೇ ನಮ್ಮ ಕೆಲ ಪತ್ರಕರ್ತರು ಇದು ಶ್ರೀರಾಮುಲು ಅವರ ಜನಪ್ರಿಯತೆ ಎಂದು ಇನ್ನಿಲ್ಲದೆ ಬಡಬಡಿಸುತ್ತಿದ್ದಾರೆ. ಇದು ಆತ್ಮವಂಚನೆಯಲ್ಲದೆ ಮತ್ತಿನ್ನೇನಲ್ಲ. ಇದನ್ನು ಅರ್ಥೈಸಲು ಅಂತಹ ಸಂಶೋಧನೆಗಳೇನು ಬೇಕಾಗಿಲ್ಲ. ಅಲ್ಲದೆ ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಹಣವನ್ನು ಚೆಲ್ಲಲ್ಲು ರೆಡ್ಡಿ ಸೋದರರೊಂದಿಗೆ  ಕೈಜೋಡೀಸಿ ರಾಜ್ಯದ, ಬಳ್ಳಾರಿ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡಿದ ರೊಕ್ಕ ಇದ್ದೇ ಇದೆಯಲ್ಲ!! ಇವರಿಗೆ ಯಾವುದೇ ಪಕ್ಷದ ಸಿದ್ಧಾಂತಗಳೂ ಕೇವಲ ಅಧಿಕಾರ ಗ್ರಹಣಕ್ಕಾಗಿ ಮಾತ್ರ. ಯಾವುದೇ ಆದರ್ಶಗಳಿಲ್ಲದ, ಸಿದ್ಧಾಂತಗಳಿಲ್ಲದ ಶ್ರೀರಾಮುಲು ಅವರಂತಹ ರಾಜಕಾರಣಿಯಿಂದ ಇಂತಹ ನಡೆಗಳು ಸಾಮಾನ್ಯವೆನ್ನಬಹುದು, ಆದರೆ ಇಲ್ಲಿನ ದುರಂತವೆಂದರೆ ಇಂತಹ ಭ್ರಷ್ಟ ಶ್ರೀರಾಮುಲು ಅವರಿಗೆ ದೇವರಾಜ್ ಅರಸರ ವೇಷವನ್ನು ತೊಡಿಸುವಂತೆ ಇನ್ನಿಲ್ಲದ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಬಳಸಿಕೊಳ್ಳಲಾಗುತ್ತಿರುವುದು ವಾಲ್ಮೀಕಿ ಜನಾಂಗವನ್ನು. ಇದಕ್ಕಿಂತಲೂ ದುರಂತ ಬೇರೊಂದಿಲ್ಲವೆನಿಸುತ್ತದೆ. ನೂರು ಸುಳ್ಳುಗಳನ್ನು ಪದೇ ಪದೇ ಹೇಳಿ ಅದನ್ನು ಸತ್ಯವೆನ್ನುವಂತೆ ಭ್ರಮೆ ಮೂಡಿಸುವ ಇಂತಹ ಒಂದು ದುಷ್‍ಕೃತ್ಯ ನಿಜಕ್ಕೂ ಖಂಡನೀಯ. ಇದೆಲ್ಲವನ್ನೂ ಮತ್ತೆ ಮತ್ತೆ ಏತಕ್ಕೆ ಹೇಳ ಬೇಕಾಗಿದೆಯೆಂದರೆ ಎಲ್ಲವೂ ನೆಲಕಚ್ಚಿದಂತಹ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಈ ಭ್ರಷ್ಟ ನಾಯಕ ಶ್ರೀರಾಮುಲು ತನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನೂ ಬಳಸುತ್ತಿದ್ದಾರೆ. ತಾವೊಬ್ಬ ಅಮಾಯಕರಂತೆಯೂ, ಒಬ್ಬಂಟಿಯಂತೆಯೂ ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸದ್ಯಕ್ಕೆ ಈ ಶ್ರೀರಾಮುಲುಗಿರುವ ಪ್ರಬಲ ಅಸ್ತ್ರವೆಂದರೆ ಅಹಿಂದ ಸಂಘಟನೆ. ಈ ನಾಯಕ ಇಂದು ಅಕ್ಷರಶಹ ತಬ್ಬಲಿಯಾಗಿರುವ, ದಿಕ್ಕಿಲ್ಲದ, ಅನಾಯಕತ್ವದ ಈ ಅಹಿಂದ ಸಂಘಟನೆಗೆ ತನ್ನ ನಾಯಕತ್ವದ ಸ್ಪರ್ಶ ನೀಡುವುದರ ಮೂಲಕ ಅದನ್ನು ಮತ್ತೆ ಪುನುರುಜ್ಜೀವನಗೊಳಿಸುವ ಒಂದಂಶದ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ನಮ್ಮಲ್ಲಿನ ಕೆಲವು  ಸಂಘಟನೆಗಳನ್ನು ಆಪೋಶನ ತೆಗೆದುಕೊಳ್ಳುವ ಸೂಚನೆಗಳು ಗೋಚರಿಸುತ್ತಿವೆ. ಆದರೆ ಈ ಶ್ರೀರಾಮುಲುವಿನ ಈ ಕುಟಿಲತೆಗೆ, ಗುಪ್ತ ಕಾರ್ಯಾಚರಣೆಗೆ ನಮ್ಮಲ್ಲಿನ ಈ ಕೆಲವು ಸಂಘಟನೆಗಳು ಬಲಿಯಾಗುತ್ತವೆಯೇ? ಎಲ್ಲಕ್ಕೂ ಕಾಲವೇ ಉತ್ತರ ನೀಡಬೇಕು.

ಆದರೆ ಒಂದಂತೂ ಸ್ಪಷ್ಟ. ಮುಂದಿನ ತಲೆಮಾರಿಗೆ ನಾವೆಲ್ಲ ನಿರ್ಮಿಸಬೇಕಾದ ವೇದಿಕೆ ಹಾಗೂ ಒಂದು ಸಹನಶೀಲ, ಸೆಕ್ಯುಲರ್ ವ್ಯವಸ್ಥೆ ಇದಂತೂ ಖಂಡಿತ ಅಲ್ಲ. ಯಾವುದೇ ಕಾರಣಕ್ಕಾಗಿಯಾಗಲೀ ನಮ್ಮ ರಾಜ್ಯದ ಈ ಸಂವೇದನಾಶೀಲ, ಪ್ರಗತಿಪರ ಚಿಂತನೆ, ಸಾಮಾಜಿಕ ಬದುಕು, ಸಂಘಟನೆ ಹಾಗೂ ರಾಜಕಾರಣ ನಮ್ಮ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ರೆಡ್ಡಿಗಳ ಸಂಗಾತಿಯಾಗಿದ್ದ ಈ ಶ್ರೀರಾಮುಲುನಂತಹ ರಾಜಕಾರಣಿಗೆ ಎಂದೂ ಬಲಿಯಾಗಲಾರೆವೆಂಬ ಎಚ್ಚರಿಕೆ, ಆತ್ಮಸಾಕ್ಷಿಯನ್ನು ತಮ್ಮೊಳಗೆ ಸದಾ ಜೀವಂತವಾಗಿಟ್ಟು ಕೊಳ್ಳಬೇಕಾಗಿದೆ. ಈ ಮೂಲಕ ಶ್ರೀರಾಮುಲು ತೋಡಿದ ಖೆಡ್ಡಾಗೆ ಆಗಲೇ ಬಂದು ಬೀಳುತ್ತಿರುವ ಅಸಹಾಯಕ ಹಿಂದುಳಿದ ವರ್ಗಗಳನ್ನು, ಅಮಾಯಕ ತರುಣರನ್ನೂ ಇದರಿಂದ ಪಾರುಮಾಡಬೇಕಾದ ಜವಬ್ದಾರಿಯೂ ಕನ್ನಡದ ಪ್ರಜ್ಞಾವಂತರ ಮೇಲಿದೆ. ಈಗಾಗಲೇ ಹಿಂದುಳಿದ ವರ್ಗಗಳ ಅಮಾಯಕ ತರುಣರು ಕೇಸರಿ ಪಡೆಗೆ ಬಲಿಯಾಗಿ ತಮ್ಮ ಜೀವನವನ್ನು ನಾಶಪಡಿಸಿಕೊಂಡಿದ್ದಾಗಿದೆ. ಇನ್ನು ಶ್ರೀರಾಮುಲು ಇದಕ್ಕೆ ತಮ್ಮ ಕೈ ಜೋಡಿಸಿದರೆ ಕೇಸರಿಕರಣಗೊಂಡ ಈ ಹಿಂದುಳಿದ ವರ್ಗಗಳ ಅಮಾಯಕರಿಗೆ ಮುಂದಿನ ಭವಿಷ್ಯವೇ ಅತಂತ್ರವಾಗುತ್ತದೆ. ಇಲ್ಲಿ ನಮಗೆ ಗಾಂಧಿ, ಲೋಹಿಯಾ, ಅಂಬೇಡ್ಕರ್ ರವರಂತಹ ಜೊತೆ ಜೊತೆಗೆ ಕನಿಷ್ಟ ಕರ್ಪೂರಿ ಠಾಕೂರರವರ ಸಮಾಜವಾದಿ ಜೀವನ ಹಾಗೂ ಸಮಾಜವಾದದ ನೆಲೆಗಟ್ಟಿನ ರಾಜಕೀಯ, ಸಾಮಾಜಿಕ ಹೋರಾಟಗಳು, ಆರವತ್ತರ, ಎಪ್ಪತ್ತರ ದಶಕದ ಅವರ ಅಸಹಾಯಕತೆಗಳು, ಅವರ ಅತ್ಯಂತ ಸರಳ ಜೀವನ ಶೈಲಿ, ನಮ್ಮಲ್ಲರಿಗೆ ಮುಂದಿನ ನಡೆಗಳ ಬಗೆಗೆ ದಾರಿ ತೋರಬೇಕಲ್ಲವೇ, ಇಂತಹ ಸಂದರ್ಭದಲ್ಲಿಯೇ  ಏನಿಲ್ಲದ್ದಿದ್ದರೂ ಶ್ರೀರಾಮುಲುವಿನ ನೆಪದಲ್ಲಿ ಈ  ಧೀಮಂತ ನಾಯಕರಾದ ದೇವರಾಜ್ ಅರಸ್  ಹೆಸರು ಕೆಡುವುದಕ್ಕಿಂತ ಮೊದಲು ಹಿಂದುಳಿದವರ ನಾಯಕತ್ವದ ನಿಜವಾದ ಮಾದರಿ (ಅನೇಕ ಮಿತಿಗಳ ನಡುವೆಯೂ) ಈ ದೇವರಾಜ ಅರಸ್ ಹಾಗೂ ಕರ್ಪೂರಿ ಠಾಕೂರ್ ಅವರದ್ದು, ಅವರ ಶೈಲಿಯದ್ದು ಎಂದು ನಾವು ವಿವರವಾಗಿ  ಮತ್ತೆ ಮತ್ತೆ ಮಾತನಾಡಬೇಕಲ್ಲವೇ, ಕನಿಷ್ಟ ಈ ಮೂಲಕವಾದರೂ ದೇವರಾಜ್ ಅರಸ್ ಹಾಗೂ ಕರ್ಪೂರಿ ಠಾಕೂರರ ರಾಜಕೀಯ ಮಾದರಿಗಳನ್ನು, ಸಾಮಾಜಿಕ ನ್ಯಾಯದ ನಿಜದ ಕಳಕಳಿಗಳನ್ನು, ಅದಕ್ಕಾಗಿ ಅವರ ತ್ಯಾಗವನ್ನೂ ಇಂದಿನ ತಲೆಮಾರಿನ ಮುಂದಿಡುವ ಜವಾಬ್ದಾರಿ ನಮ್ಮಂತಹವರ ಮೇಲಿದೆಯಲ್ಲವೇ? ಈ ಪ್ರಕ್ರಿಯೆಯಲ್ಲಿ ಈ ಬಿಜೆಪಿಯ ಸಂಪೂರ್ಣ ದಿವಾಳಿಖೋರತನದ, ಭ್ರಷ್ಟ ರಾಜಕಾರಣದ ವಿರುದ್ಧ ಕೊಂಚವಾದರೂ ಬೆಳಕು ದೊರಕಬಹುದಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ, ಪಾಟ್ನಾಡೈಲಿ)

ರಾಜಕಾರಣಿಗಳ ಅಣೆ’ಕಟ್ಟು’ ಕಥೆ

– ಮಲ್ಲಿಕಾರ್ಜುನ ಹೊಸಪಾಳ್ಯ

ಒಂದು ಭಾರೀ ಅಣೆಕಟ್ಟು ಕಟ್ಟುವ ಯೋಜನೆ ಅಬ್ಬರದಿಂದ ಪ್ರಾರಂಭವಾಗುತ್ತದೆ. ಕೋಟಿಗಟ್ಟಲೆ ಮೊತ್ತದ ಕ್ರಿಯಾ ಯೋಜನೆಗಳು, ಟೆಂಡರುಗಳು, ಸ್ಥಳ ಪರಿಶೀಲನೆ ಮುಂತಾಗಿ ಹತ್ತು-ಹಲವು ಚಟುವಳಿಕೆಗಳ ಭರಾಟೆ ಜೋರಾಗಿರುತ್ತದೆ. ಆದರೆ ಈ ಯೋಜನೆಗೆ ಪರ-ವಿರೋಧ ರಾಜಕಾರಣಿಗಳಿರುತ್ತಾರೆ. ಅವರವರ ಹಿತಾಸಕ್ತಿಗನುಗುಣವಾಗಿ ವಕಾಲತ್ತು ನಡೆದಿರುತ್ತದೆ.

ಅಣೆಕಟ್ಟು ಕಟ್ಟುವುದನ್ನು ವಿರೋಧಿಸುವ ಗುಂಪಿನ ರಾಜಕಾರಣಿಗಳು ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಬರುತ್ತಾರೆ. ಸ್ಥಳೀಯ ರೈತರನ್ನು ಸೇರಿಸಿ ಯೋಜನೆಯನ್ನು ವಿರೋಧಿಸುವಂತೆ ಕರೆ ಕೊಡುತ್ತಾರೆ. ಯೋಜನೆ ಯಾಕೆ ಬೇಡ ಎಂಬುದಕ್ಕೆ ಅವರ ಭಾಷಣದಲ್ಲಿ ಈ ರೀತಿ ವಿವರಣೆ ಇರುತ್ತದೆ.

“ನಮ್ಮ ನದಿ ನೀರಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಕರೆಂಟು ಉತ್ಪಾದಿಸಿ, ನಂತರ ಆ ನೀರನ್ನು ನಮಗೆ ಬಿಡುತ್ತಾರೆ. ನೀರಿನಲ್ಲಿರುವ ಕರೆಂಟು ತೆಗೆದರೆ ಅದು ಉಪಯೋಗಕ್ಕೆ ಬರದಂತಾಗುತ್ತದೆ, ಅದರಲ್ಲಿ ಸಾರವೇ ಇರುವುದಿಲ್ಲ. ಆ ನೀರನ್ನು ಬೆಳೆಗೆ ಹಾಯಿಸಿದರೆ ಏನೂ ಉಪಯೋಗವಾಗುವುದಿಲ್ಲ, ಹಾಗಾಗಿ ಈ ಯೋಜನೆಯನ್ನು ವಿರೋಧಿಸಿ,”  ಎಂದು ಮನಮುಟ್ಟುವಂತೆ ವಿವರಿಸುತ್ತಾರೆ. ರೈತರಿಗೆ ಇವರು ಹೇಳುವುದು ನಿಜ ಎನಿಸುತ್ತದೆ. ಕರೆಂಟು ತೆಗೆದ ಬಂಜೆ ನೀರು ನಮಗೇಕೆ ಬೇಕು? ಈ ಯೋಜನೆಯೇ ಬೇಡವೆಂದು ವಿರೋಧಿಸುತ್ತಾರೆ. ಅಣೆಕಟ್ಟು ಕೆಲಸ ಅರ್ಧಕ್ಕೇ ನಿಂತು ಹೋಗುತ್ತದೆ.

ಆಗ ಯೋಜನೆ ಪರವಾದ ರಾಜಕಾರಣಿಗಳು ಅಲ್ಲಿಗೆ ಬರುತ್ತಾರೆ. ರೈತರನ್ನು ಸೇರಿಸುತ್ತಾರೆ. ಅವರ ಮುಖಂಡ ಭಾಷಣ ಶುರು ಮಾಡುತ್ತಾನೆ. “ಕರೆಂಟನ್ನು ಕೈಯಲ್ಲಿ ಮುಟ್ಟಿದರೆ ಏನಾಗುತ್ತದೆ? ಶಾಕ್ ಹೊಡೆಯುತ್ತದೆ, ಮುಟ್ಟಿದವರು ಸಾಯುತ್ತಾರೆ, ಅಂದರೆ ನೀರಿನಲ್ಲಿರುವ ಕರೆಂಟು ಕೆಟ್ಟದ್ದು, ಅಪಾಯಕಾರಿ, ಇಂತಹ ಅಪಾಯಕಾರಿಯಾದ ಕರೆಂಟನ್ನು ನೀರಿನಿಂದ ತೆಗೆದು ಒಳ್ಳೆಯ, ಅಪಾಯಕಾರಿಯಲ್ಲದ ನೀರನ್ನು ಮಾತ್ರ ನಿಮಗೆ ಕೊಡುತ್ತೇವೆ, ನೀವು ಅದನ್ನು ಹೇಗೆ ಬೇಕಾದರೂ ಮುಟ್ಟಬಹುದು, ಬೆಳೆಗೂ ಬಳಸಬಹುದು, ಇಂತಹ ಯೋಜನೆ ನಿಮಗೆ ಬೇಡವೇ.?” ಎಂದು ಕೇಳುತ್ತಾರೆ. ಈ ಮುಖಂಡರ ವಾದಕ್ಕೆ ರೈತರು ತಲೆದೂಗುತ್ತಾರೆ. ನಮ್ಮ ಒಳ್ಳೆಯದಕ್ಕೆಂದು ಇರುವ ಈ ಯೋಜನೆ ಬರಲಿ ಎನ್ನುತ್ತಾರೆ. ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಅಲ್ಲಿ ಬೃಹತ್ ಅಣೆಕಟ್ಟು ತಲೆ ಎತ್ತುತ್ತದೆ.

[ನಮ್ಮ ರೈತರು, ಮುಗ್ಧ ಹಳ್ಳಿಗರನ್ನು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ. ಕಾಲಾನುಕ್ರಮದಿಂದಲೂ ಇದು ನಡೆಯುತ್ತಲೇ ಇದೆ. ಬಣ್ಣ-ಬಣ್ಣದ ಮಾತುಗಳು, ಅಂಕಿ-ಅಂಶಗಳು, ಆಕರ್ಷಕ ಹೆಸರಿನ ಯೋಜನೆಗಳ ಸುರಿಮಳೆಯಲ್ಲಿಯೇ ರೈತರನ್ನು ವಂಚಿಸಲಾಗುತ್ತಿದೆ. ರೈತರ ಬಜೆಟ್ ಎಂಬುದೂ ಸಹ ಇಂತಹುದೇ ಒಂದು ಗಿಮಿಕ್.]