Tag Archives: ಭ್ರಷ್ಟಾಚಾರ

ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಧರ್ಮದ ಸವಾರಿ – ಮತದಾರರು ಎಚ್ಚೆತ್ತುಕೊಳ್ಳಬೇಕು

-ಆನಂದ ಪ್ರಸಾದ್

ಕರ್ನಾಟಕ ಕಂಡ ಮುಖ್ಯ ಮಂತ್ರಿಗಳ ಪೈಕಿ ಯಡಿಯೂರಪ್ಪನವರು ಅತ್ಯಂತ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ನಿರ್ಲಜ್ಜ ಮುಖ್ಯಮಂತ್ರಿಯೆಂದು ಹೇಳಲು ಹೆಚ್ಚಿನ ಪಾಂಡಿತ್ಯವೇನೂ ಬೇಕಾಗಿಲ್ಲ ಎನಿಸುತ್ತದೆ. ಈವರೆಗೆ ಈ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಪ್ರಕರಣಗಳು ದಾಖಲಾಗಿ ಜೈಲಿಗೆ ಹೋದ ಉದಾಹರಣೆ ಇಲ್ಲ. ಹೀಗಿದ್ದರೂ ಯಡಿಯೂರಪ್ಪನವರು ಮಹಾ ನಾಯಕ ಎಂದು ರಾಜ್ಯದ ಲಿಂಗಾಯತ ಮಠಾಧೀಶರು ಅವರನ್ನು ಬೆಂಬಲಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ವಿದ್ಯಮಾನವಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಯಡಿಯೂರಪ್ಪ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಯಡಿಯೂರಪ್ಪ ಬಿಜೆಪಿಯನ್ನು ಅಧಿಕಾರಕ್ಕೆ ತಂದದ್ದು ಅನ್ನುವುದಕ್ಕಿಂತ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿದ್ದ ಜನತಾ ಪರಿವಾರದ ಒಡಕು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದು ಎಂಬುದು ಹೆಚ್ಚು ಸೂಕ್ತವಾಗುತ್ತದೆ. ಇಲ್ಲಿ ಜನತಾ ಪರಿವಾರ ಒಡೆಯದೆ ಗಟ್ಟಿಯಾಗಿದ್ದಿದ್ದರೆ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಇರಲಿಲ್ಲ. ಈ ನಿಟ್ಟಿನಲ್ಲಿ ದೇವೇಗೌಡರು ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪರೋಕ್ಷವಾಗಿ ಕೊಡುಗೆಯನ್ನು ನೀಡಿದ್ದಾರೆ ಎಂದೇ ಹೇಳಬೇಕಾಗುತ್ತದೆ.

ಯಡಿಯೂರಪ್ಪ ಅವರು ಕರ್ನಾಟಕ ಈವರೆಗೆ ಕಂಡ ಅತ್ಯಂತ ಮೂಢನಂಬಿಕೆಯ ಮುಖ್ಯಮಂತ್ರಿಯಾಗಿಯೂ ಕಂಡು ಬರುತ್ತಾರೆ. ದೇಶದ ಹಲವಾರು ದೇವಸ್ಥಾನಗಳಿಗೆ ಎಡತಾಕಿದ ಇನ್ನೊಬ್ಬ ಮುಖ್ಯಮಂತ್ರಿಯನ್ನು ಕರ್ನಾಟಕ ಕಂಡಿಲ್ಲ. ‘ಯಜ್ಞ, ಯಾಗ, ಮಾಟ ಮಂತ್ರ’ಗಳ ಮೊರೆಹೋದ ಇನ್ನೊಬ್ಬ ಮುಖ್ಯಮಂತ್ರಿಯನ್ನೂ ಕರ್ನಾಟಕ ಕಂಡಿಲ್ಲ. ಇಷ್ಟೆಲ್ಲಾ ದೈವ ಭಕ್ತಿ ಇರುವ, ಸ್ವಾಮೀಜಿಗಳ ಮುದ್ದಿನ ಕೂಸಾದ ಯಡಿಯೂರಪ್ಪನವರನ್ನು ಅವರ ಧರ್ಮ ಶ್ರದ್ದೆ, ದೈವ ಭಕ್ತಿ ಅಡ್ಡ ದಾರಿಯಲ್ಲಿ ನಡೆಯದಂತೆ ತಡೆಯಲಿಲ್ಲ. ಹೀಗಾದರೆ ಧರ್ಮ ಶ್ರದ್ಧೆ, ಮಹಾನ್ ದೈವಭಕ್ತಿಯ ಸಾಧನೆಯಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಕರ್ನಾಟಕಕ್ಕೆ ವಿಶ್ವಾದ್ಯಂತ ಕೆಟ್ಟ ಹೆಸರು ತಂದ ಯಡಿಯೂರಪ್ಪನವರು ಸದಾ ವಿರೋಧ ಪಕ್ಷಗಳನ್ನು ದೂರುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಪದೇ ಪದೇ ವಿರೋಧ ಪಕ್ಷಗಳು ಆಡಳಿತ ನಡೆಸಲು ಬಿಡಲಿಲ್ಲ ಎಂಬುದು ಅವರ ಅತ್ಯಂತ ಬಾಲಿಶ ಹೇಳಿಕೆಯಾಗಿತ್ತು. ಆಡಳಿತ ಪಕ್ಷದ ಬಳಿ ಎಲ್ಲ ಸಂಪನ್ಮೂಲ, ಅಧಿಕಾರಿ ವರ್ಗ, ಅಧಿಕಾರ ಇರುವಾಗ ವಿರೋಧ ಪಕ್ಷಗಳು ಅಭಿವೃದ್ಧಿ ಕೆಲಸ ಮಾಡಲು ಬಿಡಲಿಲ್ಲ ಎಂಬುದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುತ್ತದೆ. ಈವರೆಗಿನ ಕರ್ನಾಟಕದ ಇತಿಹಾಸದಲ್ಲಿ ನೋಡಿದರೆ ಯಾವ ಮುಖ್ಯಮಂತ್ರಿಯೂ ಇಂಥ ಬಾಲಿಶ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಬಲಿದಾನ ಹಾಗೂ ಹೋರಾಟಗಳ ಫಲವಾಗಿ ಲಭಿಸಿರುವುದು. ಹೀಗಾಗಿ ನಮ್ಮ ಮತದಾರರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಾಮೀಜಿಗಳ ಅವಲಂಬಿತ ಪಾಳೆಗಾರಿಕೆ ವ್ಯವಸ್ಥೆಯಾಗಲು ಬಿಡಬಾರದು. ಜಾತಿ ನೋಡಿ ಮತ್ತು ಸ್ವಾಮೀಜಿಗಳ ಸೂಚನೆಯಂತೆ ಮತ ಹಾಕುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ನಮ್ಮ ಮತದಾರರು ಸ್ವಾಮೀಜಿಗಳ ಗುಲಾಮರಾಗದೆ ಸ್ವಾತಂತ್ರ್ಯ ಮನೋಭಾವದಿಂದ ಮತ ಹಾಕುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಹಾಗಾದಾಗ ಸ್ವಾಮೀಜಿಗಳನ್ನು ಒಲಿಸಿ ಭ್ರಷ್ಟರು ಅಧಿಕಾರಕ್ಕೆ ಏರಲು ಹವಣಿಸುವುದು ನಿಲ್ಲಬಹುದು. ಇತ್ತೀಚೆಗಿನ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹರಿಸುವ ರೀತಿಯಲ್ಲಿ ಸ್ವಾಮೀಜಿಗಳ ಗುಂಪು ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ತಲೆ ಹಾಕುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾಮೀಜಿಗಳು ರಾಜಕೀಯ ವ್ಯವಸ್ಥೆಯನ್ನು ನಿರ್ಧರಿಸುವುದಾದರೆ ಚುನಾವಣೆಗಳನ್ನು ನಡೆಸುವ ಅಗತ್ಯವೇ ಇಲ್ಲ.

ಯಡಿಯೂರಪ್ಪನವರು ಅಪರೇಷನ್ ಕಮಲ ಎಂಬ ಅತ್ಯಂತ ಲಜ್ಚೆಗೇಡಿ ಕೆಲಸವನ್ನು ಮಾಡಿದಾಗ ಯಾವುದೇ ಸ್ವಾಮೀಜಿಗಳು ಅದನ್ನು ಖಂಡಿಸಲಿಲ್ಲ. ಬಹುತೇಕ ಕರ್ನಾಟಕದ ಮಾಧ್ಯಮಗಳೂ ಅದನ್ನು ಖಂಡಿಸಿ ಜನಜಾಗೃತಿ ಮಾಡಿದ್ದು ಕಾಣಲಿಲ್ಲ. ಹೀಗಾಗಿಯೇ ಯಡಿಯೂರಪ್ಪನವರಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಯೋಚನೆ ಬಂದಿರಬೇಕು. ಅದಕ್ಕೆ ಸರಿಯಾಗಿ ಮತದಾರರೂ ಭ್ರಷ್ಟರಾಗಿ ಅಪರೇಷನ್ ಕಮಲಕ್ಕೆ ಒಳಗಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಲೇ ಬಂದರು. ಹೀಗಾಗಿ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಗಳು ಎಂಬುದು ಒಂದು ಅಣಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಎಚ್ಚರಿಸಲು ಕರ್ನಾಟಕದ ಮಾಧ್ಯಮಗಳು ಮುಂದಾಗಲಿಲ್ಲ. ಇದರ ದುಷ್ಫಲ ಇಂದು ನಾವು ಕಾಣುತ್ತಿದ್ದೇವೆ.

ಯಡಿಯೂರಪ್ಪನವರಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಅಭಿರುಚಿಗಳೂ ಇರುವಂತೆ ಕಾಣುವುದಿಲ್ಲ. ಒಬ್ಬ ಉತ್ತಮ ನಾಯಕನು ಬಹಳಷ್ಟು ಓದಿಕೊಂಡಿರುತ್ತಾನೆ. ಹೀಗಾಗಿ ಅವನಲ್ಲಿ ಚಿಂತನಶಕ್ತಿ ಬೆಳೆದಿರುತ್ತದೆ. ಇಂಥ ನಾಯಕನು ಎಂಥ ಸಂದರ್ಭಗಳಲ್ಲೂ ಭ್ರಷ್ಟನಾಗುವುದಿಲ್ಲ. ಯಡಿಯೂರಪ್ಪನವರಲ್ಲಿ ಕಾಣುವುದು ಹಳ್ಳಿಯ ಗೌಡಿಕೆಯ ಠೇ೦ಕಾರ, ಸೇಡು ತೀರಿಸಿಕೊಳ್ಳಬೇಕೆಂಬ ತವಕ ಹಾಗೂ ಇನ್ನಷ್ಟು ಮತ್ತಷ್ಟು ಸಂಪತ್ತು ಕೂಡಿ ಹಾಕಬೇಕೆಂಬ ದುರಾಶೆ. ಇದರಿಂದಾಗಿಯೇ ಅಧಿಕಾರ ದೊರಕಿದಾಗ ಅದನ್ನು ಜನಕಲ್ಯಾಣಕ್ಕಾಗಿ ಬಳಸದೆ ತನ್ನ ಪರಿವಾರದ ಸಂಪತ್ತು ಬೆಳೆಸಲು ಬಳಸಿಕೊಂಡರು. ತನ್ನ ಸುತ್ತಮುತ್ತ ಹೊಗಳುಭಟರ ಪಡೆಯನ್ನು ಕಟ್ಟಿಕೊಂಡು ವಾಸ್ತವದಿಂದ ವಿಮುಖರಾದರು. ಕರ್ನಾಟಕದ ಪತ್ರಕರ್ತರನ್ನೂ ಭ್ರಷ್ಟಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತಮ್ಮ ಪರವಾಗಿ ಬರೆಯಲು ಮತ್ತು ವರದಿ ಮಾಡಲು ಪತ್ರಕರ್ತರಿಗೆ ಅವರು ಸಾಕಷ್ಟು ಆಮಿಷಗಳನ್ನು ಒಡ್ಡಿ ವಿಮರ್ಶೆಯೇ ಬರದಂತೆ ನೋಡಿಕೊಂಡರು. ಇದರ ಪರಿಣಾಮ ಏನೆಂದರೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೂ ಎಚ್ಚರಿಸದ ಮಾಧ್ಯಮಗಳು ಇನ್ನಷ್ಟು ತಪ್ಪು ದಾರಿಯಲ್ಲಿ ಹೋಗಲು ಅವರನ್ನು ಪ್ರೇರೇಪಿಸಿತು. ಮಾಧ್ಯಮಗಳನ್ನು ಭ್ರಷ್ಟಗೊಳಿಸುವುದು ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಸರ್ವಾಧಿಕಾರಿ ಪ್ರವೃತ್ತಿಯನ್ನು ಬೆಳೆಸಲು ಕಾರಣವಾಗುತ್ತದೆ. ಕರ್ನಾಟಕದಲ್ಲಿ ಆದದ್ದೂ ಅದೇ. ಹೀಗಾಗಿ ಮಾಧ್ಯಮಗಳನ್ನು ಒಬ್ಬ ಉತ್ತಮ ನಾಯಕ ಎಂದೂ ಭ್ರಷ್ಟಗೊಳಿಸಲು ಹೋಗುವುದಿಲ್ಲ.

ರಾಜಕಾರಣಿಗಳ ಅಣೆ’ಕಟ್ಟು’ ಕಥೆ

– ಮಲ್ಲಿಕಾರ್ಜುನ ಹೊಸಪಾಳ್ಯ

ಒಂದು ಭಾರೀ ಅಣೆಕಟ್ಟು ಕಟ್ಟುವ ಯೋಜನೆ ಅಬ್ಬರದಿಂದ ಪ್ರಾರಂಭವಾಗುತ್ತದೆ. ಕೋಟಿಗಟ್ಟಲೆ ಮೊತ್ತದ ಕ್ರಿಯಾ ಯೋಜನೆಗಳು, ಟೆಂಡರುಗಳು, ಸ್ಥಳ ಪರಿಶೀಲನೆ ಮುಂತಾಗಿ ಹತ್ತು-ಹಲವು ಚಟುವಳಿಕೆಗಳ ಭರಾಟೆ ಜೋರಾಗಿರುತ್ತದೆ. ಆದರೆ ಈ ಯೋಜನೆಗೆ ಪರ-ವಿರೋಧ ರಾಜಕಾರಣಿಗಳಿರುತ್ತಾರೆ. ಅವರವರ ಹಿತಾಸಕ್ತಿಗನುಗುಣವಾಗಿ ವಕಾಲತ್ತು ನಡೆದಿರುತ್ತದೆ.

ಅಣೆಕಟ್ಟು ಕಟ್ಟುವುದನ್ನು ವಿರೋಧಿಸುವ ಗುಂಪಿನ ರಾಜಕಾರಣಿಗಳು ಕಾಮಗಾರಿ ನಡೆಯುತ್ತಿದ್ದ ಜಾಗಕ್ಕೆ ಬರುತ್ತಾರೆ. ಸ್ಥಳೀಯ ರೈತರನ್ನು ಸೇರಿಸಿ ಯೋಜನೆಯನ್ನು ವಿರೋಧಿಸುವಂತೆ ಕರೆ ಕೊಡುತ್ತಾರೆ. ಯೋಜನೆ ಯಾಕೆ ಬೇಡ ಎಂಬುದಕ್ಕೆ ಅವರ ಭಾಷಣದಲ್ಲಿ ಈ ರೀತಿ ವಿವರಣೆ ಇರುತ್ತದೆ.

“ನಮ್ಮ ನದಿ ನೀರಿಗೆ ಅಣೆಕಟ್ಟು ಕಟ್ಟಿ, ಆ ನೀರಿನಿಂದ ಕರೆಂಟು ಉತ್ಪಾದಿಸಿ, ನಂತರ ಆ ನೀರನ್ನು ನಮಗೆ ಬಿಡುತ್ತಾರೆ. ನೀರಿನಲ್ಲಿರುವ ಕರೆಂಟು ತೆಗೆದರೆ ಅದು ಉಪಯೋಗಕ್ಕೆ ಬರದಂತಾಗುತ್ತದೆ, ಅದರಲ್ಲಿ ಸಾರವೇ ಇರುವುದಿಲ್ಲ. ಆ ನೀರನ್ನು ಬೆಳೆಗೆ ಹಾಯಿಸಿದರೆ ಏನೂ ಉಪಯೋಗವಾಗುವುದಿಲ್ಲ, ಹಾಗಾಗಿ ಈ ಯೋಜನೆಯನ್ನು ವಿರೋಧಿಸಿ,”  ಎಂದು ಮನಮುಟ್ಟುವಂತೆ ವಿವರಿಸುತ್ತಾರೆ. ರೈತರಿಗೆ ಇವರು ಹೇಳುವುದು ನಿಜ ಎನಿಸುತ್ತದೆ. ಕರೆಂಟು ತೆಗೆದ ಬಂಜೆ ನೀರು ನಮಗೇಕೆ ಬೇಕು? ಈ ಯೋಜನೆಯೇ ಬೇಡವೆಂದು ವಿರೋಧಿಸುತ್ತಾರೆ. ಅಣೆಕಟ್ಟು ಕೆಲಸ ಅರ್ಧಕ್ಕೇ ನಿಂತು ಹೋಗುತ್ತದೆ.

ಆಗ ಯೋಜನೆ ಪರವಾದ ರಾಜಕಾರಣಿಗಳು ಅಲ್ಲಿಗೆ ಬರುತ್ತಾರೆ. ರೈತರನ್ನು ಸೇರಿಸುತ್ತಾರೆ. ಅವರ ಮುಖಂಡ ಭಾಷಣ ಶುರು ಮಾಡುತ್ತಾನೆ. “ಕರೆಂಟನ್ನು ಕೈಯಲ್ಲಿ ಮುಟ್ಟಿದರೆ ಏನಾಗುತ್ತದೆ? ಶಾಕ್ ಹೊಡೆಯುತ್ತದೆ, ಮುಟ್ಟಿದವರು ಸಾಯುತ್ತಾರೆ, ಅಂದರೆ ನೀರಿನಲ್ಲಿರುವ ಕರೆಂಟು ಕೆಟ್ಟದ್ದು, ಅಪಾಯಕಾರಿ, ಇಂತಹ ಅಪಾಯಕಾರಿಯಾದ ಕರೆಂಟನ್ನು ನೀರಿನಿಂದ ತೆಗೆದು ಒಳ್ಳೆಯ, ಅಪಾಯಕಾರಿಯಲ್ಲದ ನೀರನ್ನು ಮಾತ್ರ ನಿಮಗೆ ಕೊಡುತ್ತೇವೆ, ನೀವು ಅದನ್ನು ಹೇಗೆ ಬೇಕಾದರೂ ಮುಟ್ಟಬಹುದು, ಬೆಳೆಗೂ ಬಳಸಬಹುದು, ಇಂತಹ ಯೋಜನೆ ನಿಮಗೆ ಬೇಡವೇ.?” ಎಂದು ಕೇಳುತ್ತಾರೆ. ಈ ಮುಖಂಡರ ವಾದಕ್ಕೆ ರೈತರು ತಲೆದೂಗುತ್ತಾರೆ. ನಮ್ಮ ಒಳ್ಳೆಯದಕ್ಕೆಂದು ಇರುವ ಈ ಯೋಜನೆ ಬರಲಿ ಎನ್ನುತ್ತಾರೆ. ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಅಲ್ಲಿ ಬೃಹತ್ ಅಣೆಕಟ್ಟು ತಲೆ ಎತ್ತುತ್ತದೆ.

[ನಮ್ಮ ರೈತರು, ಮುಗ್ಧ ಹಳ್ಳಿಗರನ್ನು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ. ಕಾಲಾನುಕ್ರಮದಿಂದಲೂ ಇದು ನಡೆಯುತ್ತಲೇ ಇದೆ. ಬಣ್ಣ-ಬಣ್ಣದ ಮಾತುಗಳು, ಅಂಕಿ-ಅಂಶಗಳು, ಆಕರ್ಷಕ ಹೆಸರಿನ ಯೋಜನೆಗಳ ಸುರಿಮಳೆಯಲ್ಲಿಯೇ ರೈತರನ್ನು ವಂಚಿಸಲಾಗುತ್ತಿದೆ. ರೈತರ ಬಜೆಟ್ ಎಂಬುದೂ ಸಹ ಇಂತಹುದೇ ಒಂದು ಗಿಮಿಕ್.]

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಮಾಧ್ಯಮಗಳ ಮೇಲೊಂದು ಟಿಪ್ಪಣಿ


-ಬಿ. ಶ್ರೀಪಾದ ಭಟ್  


“ಮೌಲ್ಯಗಳು ಹಾಗೂ ನೈತಿಕತೆ ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಕೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು.” -ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಜಾಗತೀಕರಣಗೊಂಡು ಇಪ್ಪತ್ತು ವರ್ಷಗಳ ನಂತರದ ಇಂದಿನ ಸಂದರ್ಭದಲ್ಲಿ ದೇಶದಲ್ಲಿನ ಅನೇಕ ವಲಯಗಳಂತೆ ಪತ್ರಿಕೋದ್ಯಮವೆನ್ನುವುದು ಸಹ ತನ್ನ ಹಿಂದಿನ ರೂಪದಲ್ಲಿ ಉಳಿದಿಲ್ಲ. ಇಂದು ಮಾರುಕಟ್ಟೆ ಆಧಾರಿತ ಆರ್ಥಿಕ ಸ್ಥಿತಿಯಲ್ಲಿ  ಜಾಗತೀಕರಣದ ಮೂಲ ಮಂತ್ರವಾದ, ಸಂಪಾದನೆ ಹಾಗೂ ಸಂಪಾದನೆ ಮತ್ತಷ್ಟು ಸಂಪಾದನೆ ಎನ್ನುವ ಸಿದ್ಧಾಂತವನ್ನು ಇಂದು ತನ್ನದಾಗಿಸಿಕೊಂಡಿರುವ ಪತ್ರಿಕೋದ್ಯಮವೂ ಕೂಡ ಒಂದು ಮಾರ್ಕೆಟಿಂಗ್ ವ್ಯವಸ್ಥೆಯಾಗಿ ಬೆಳೆದುಬಿಟ್ಟಿದೆ. ಇದರ ಫಲವೇ ಮುಕ್ತ ಆರ್ಥಿಕತೆ ಹೇಳುವಂತೆ ವ್ಯವಸ್ಥೆಯಲ್ಲಿ ನೀನು ನಿರಂತರವಾಗಿ ಬದುಕಿ ಉಳಿಯಬೇಕೆನ್ನವುದಾದರೆ ನಿನ್ನ ಉತ್ಪಾದನೆಗಳನ್ನು ಮಾರುಕಟ್ಟೆಗೆ ತಳ್ಳುತ್ತಲೇ ಇರಬೇಕು, ಈ ತಳ್ಳುವಿಕೆ ನಿರಂತರವಾಗಿರಬೇಕು. ಬಹುಪಾಲು ದೃಶ್ಯ ಮಾಧ್ಯಮಗಳು ಈ ಮುಕ್ತ ಆರ್ಥಿಕ ನೀತಿಯ ತಳ್ಳುವಿಕೆಯನ್ನು ತಮ್ಮ ಪತ್ರಿಕೋದ್ಯಮದ ಮೂಲ ಮಂತ್ರ,ತಿರುಳನ್ನಾಗಿಸಿಕೊಂಡಿವೆ.

ಈ ರೀತಿಯಾಗಿ ಬದುಕಿ ಉಳಿಯುವುದಕ್ಕಾಗಿ ತನ್ನನ್ನು ತಾನು ವ್ಯವಸ್ಥೆಯಲ್ಲಿ ತಳ್ಳುವ ಪ್ರಕ್ರಿಯಲ್ಲಿ ಈ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಮೂಲಭೂತ ಸಿದ್ಧಾಂತಗಳು, ನೈತಿಕ ಪಾಠಗಳು, ವೈಯುಕ್ತಿಕ ಪರಿಶುದ್ಧತೆ ಮುಂತಾದವುಗಳನ್ನೆಲ್ಲವನ್ನೂ ಕೂಡ ಹಳ್ಳಕ್ಕೆ ತಳ್ಳಿ ಬಿಟ್ಟಿವೆ. ಈಗ ಮಾಧ್ಯಮವೆನ್ನುವುದು ಒಂದು ಪ್ಯಾಕೇಜ್ ಆಗಿ ಪರಿವರ್ತಿತಗೊಂಡಿದೆ. ಇಲ್ಲಿ ಮಾಲೀಕನ ವ್ಯವಹಾರಿಕ ಬದ್ಧತೆಗಳು ಹಾಗೂ ಅವನ ಉದ್ಯೋಗಿಯಾದ ಸಂಪಾದಕನೊಬ್ಬನ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿಹೋಗಿದೆ. ಈ ಪ್ಯಾಕೇಜ್ ಪದ್ಧತಿಯ ಪ್ರಕಾರ  ಪ್ರತಿಯೊಂದು ದೃಶ್ಯ ಮಾಧ್ಯಮಗಳು ಒಪ್ಪಿಸುವ ಗಿಣಿ ಪಾಠವೆಂದರೆ, ‘ಮೊದಲನೆಯದಾಗಿ ನಾವು ಜನರಿಗೆ ಏನು ಬೇಕು, ಅದರಲ್ಲೂ ಜನ ಸಾಮಾನ್ಯರಿಗೆ ಏನು ಬೇಕೋ, ಅದರಲ್ಲೂ ಜನಸಾಮಾನ್ಯರ ನಂಬಿಕೆಗಳು ಏನಿವೆಯೋ, ಅವನ್ನು ನಾವು ಅತ್ಯಂತ ನಿಯಮಬದ್ಧವಾಗಿ, ಕರಾರುವಕ್ಕಾಗಿ, ಕ್ರಮಬದ್ಧವಾಗಿ ಮರಳಿ ಜನರಿಗೆ ತಲುಪಿಸುತ್ತೇವೆ.’

ಇಲ್ಲಿ ಭಾರತದಂತಹ ದೇಶದಲ್ಲಿ ಇಲ್ಲಿನ ಜನರ ನಂಬಿಕೆಗಳನ್ನು, ಅವರ ಬೇಕು ಬೇಡಗಳನ್ನು ಋಣಾತ್ಮವಾಗಿ ಗ್ರಹಿಸಿರುವುದರ ಫಲವೇ ಇಂದು ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಹಿಂಜರಿಕೆ, ಅನುಮಾನಗಳು ಹಾಗೂ ನಾಚಿಕೆ ಇಲ್ಲದೆ ಮೂಢನಂಬಿಕೆಗಳನ್ನಾಧರಿಸಿದ ಹತ್ತಾರು ಕಾರ್ಯಕ್ರಮಗಳು ದಿನವಿಡೀ ಬಿತ್ತರಗೊಳ್ಳುತ್ತಿರುತ್ತವೆ. ಏಕೆಂದರೆ ಇವು ಜನರಿಗೆ ಬೇಕಲ್ಲವೇ! ಅವರು ಇದನ್ನು ನಂಬುತ್ತಾರಲ್ಲಾ! ಆದರೆ ಈ ಮೂಢನಂಬಿಕೆ ಆಧಾರಿತ ಕಾರ್ಯಕ್ರಮಗಳು ಸಮಾಜವನ್ನು ದಿಕ್ಕು ತಪ್ಪಿಸಿ ಅಮಾಯಕ, ಮುಗ್ಧ ವೀಕ್ಷಕರನ್ನು ಗೊಂದಲಗೊಳಿಸಿ ಅವರನ್ನು ಇನ್ನಷ್ಟು ಕತ್ತಲಲ್ಲಿ ಕೊಳೆಯುವಂತೆ ಮಾಡುತ್ತಿರುವ ಬಗ್ಗೆ ಈ ದೃಶ್ಯ ಮಾಧ್ಯಮಗಳಿಗೆ ಕೊಂಚವೂ ಕೀಳರಿಮೆ ಇಲ್ಲ. ಇದು ಯಾರ ಆಸ್ತಿ ನಿಮ್ಮ ಆಸ್ತಿ ಎಂದು ಹೇಳಿಕೊಂಡು ಬರುವ ಖಾಸಗಿ ಚಾನಲ್‌ಗಳ ಉದ್ದೇಶ ಕೂಡ ಅಷ್ಟೇ. ಜನರಿಂದ ಹಾಗೂ ಜನರಿಗಾಗಿ ಎನ್ನುತ್ತಾ ಜನರನ್ನು ಹಾದಿ ತಪ್ಪಿಸುವುದು. ಸತ್ಯ ದರ್ಶನದ ಹೆಸರಿನಲ್ಲಿ ಚರ್ಚೆಗಳು, ಚೆಕ್‌ಬಂದಿಗಳು ನಡೆಸುವ ವೇದಿಕೆಗಳನ್ನು ನ್ಯಾಯಾಲಯವಾಗಿ ಮಾರ್ಪಡಿಸಿ ಅಲ್ಲಿ ತಾವೊಬ್ಬ ನ್ಯಾಯಾದೀಶನಂತೆಯೂ, ಇಲ್ಲಿನ ಎಲ್ಲಾ ರೋಗಗಳಿಗೆ ತಾನೊಬ್ಬನೇ ಸರ್ವಮುದ್ದು ನೀಡುವ ವೈದ್ಯನೆಂಬಂತೆ ವರ್ತಿಸುತ್ತಾ ಆಳದಲ್ಲಿ ಇವರೊಬ್ಬ ಜಾಹೀರಾತಿನ ರೂಪದರ್ಶಿಗಳಷ್ಟೇ ಎನ್ನುವ ನಿಜವನ್ನು ಮರೆಮಾಚುತ್ತಾರೆ. ಇಲ್ಲಿರುವುದು ಅನುಕೂಲಸಿಂಧು, ಅವಕಾಶವಾದಿ ಪತ್ರಿಕೋದ್ಯಮ. ಇಲ್ಲಿ ಮಾಧ್ಯಮವೆನ್ನುವುದು ಒಂದು ಪ್ರಾಡಕ್ಟ್. ಇದನ್ನು ಅತ್ಯಂತ ಕೊಳಕಾಗಿ ಉತ್ಪಾದಿಸಿ ವ್ಯಾವಹಾರಿಕವಾಗಿ ಸದಾ ಲಾಭದ ಆಧಾರದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಸರಿ ತಪ್ಪುಗಳ ಜಿಜ್ನಾಸೆಯೇ ಬರುವುದಿಲ್ಲ ಹಾಗು ಕಾಡುವುದಿಲ್ಲ. ಇಲ್ಲಿ ದೃಶ್ಯ ಮಾಧ್ಯಮವೆನ್ನುವುದು ಒಂದು ಕಂಪನಿಯಾಗಿ ಮಾರ್ಪಟ್ಟ ಬಳಿಕ ಅಲ್ಲಿ ನೈತಿಕತೆ ಅಥವಾ ಅನೈತಿಕತೆಯ ಪ್ರಶ್ನೆಯೇ ಇರುವುದಿಲ್ಲ.

ಇಲ್ಲಿರುವುದು ಒಂದೇ ಮಂತ್ರ. ಅದು ಲಾಭ ಮತ್ತು ಟಿಅರ್‌ಪಿ. ಅದಕ್ಕಾಗಿ ಇಲ್ಲಿ ನಿಮಿಷಕ್ಕೊಮ್ಮೆ ತಿರಸ್ಕಾರಯೋಗ್ಯವಾದ ಬ್ರೇಕಿಂಗ್ ಸುದ್ದಿ ಬಿತ್ತರಗೊಳ್ಳಲೇ ಬೇಕು, ಇಲ್ಲಿ ಕೆಲವರ ಚಾರಿತ್ಯವಧೆ ನಡೆಯುತ್ತಿರಲೇಬೇಕು, ನಿರ್ಭಯ ಪತ್ರಿಕೋದ್ಯಮದ ಹೆಸರಿನಲ್ಲಿ ಹಸೀ ಹಸೀ ಸುಳ್ಳುಗಳನ್ನು ಬೊಗಳುತ್ತಿರಬೇಕು, ರೋಮಾಂಚಕ ಪತ್ರಿಕೋದ್ಯಮದ ಲಜ್ಜೆಗೇಡಿತನ ಎಲ್ಲೆಲ್ಲೂ ರಾಚುತ್ತಿರಬೇಕು. ಇವೆಲ್ಲ ಇಂದು ದೃಶ್ಯ ಮಾಧ್ಯಮಗಳ ದಿನನಿತ್ಯದ ವಹಿವಾಟಾಗಿದೆ. ಏಕೆಂದರೆ ಇವೆಲ್ಲಾ ಮಾರ್ಕೆಟ್ ವ್ಯವಸ್ಥೆಯ ಆಕಾಂಕ್ಷೆಗಳಿಗೆ ಬದ್ಧತೆಗೊಳಪಟ್ಟಿರುತ್ತವೆ. ಇದು ಪ್ಯಾಕೇಜ್ ನಿಯಮ. ಈ ನೆಲದ ಭಾವನೆಗಳಿಗೆ ಅತ್ಯಂತ ಅಸೂಕ್ಷವಾಗಿ ಸ್ಪಂದಿಸುವ ಈ ದೃಶ್ಯ ಮಾಧ್ಯಮದ ಪತ್ರಕರ್ತರು ಪ್ರಚಲಿತ ವಿದ್ಯಾಮಾನಗಳಿಗೆ ತಾವೇ ಸ್ವತಹ ಬ್ರಾಂಡ್ ಆಗಿಬಿಡುತ್ತಾರೆ ಹೊರತಾಗಿ ಅದರ ಆಳಕ್ಕಿಳಿದು ಸತ್ಯಾಸತ್ಯತೆಗಳನ್ನು ಬಗೆದು ನೋಡುವುದಿಲ್ಲ. ಇಲ್ಲಿನ ಪತ್ರಕರ್ತರು ತಮ್ಮ ಚಾನಲ್ ಜನಪ್ರಿಯಗೊಳ್ಳುತ್ತಿದೆ, ತಾವೊಬ್ಬ ಜನಪ್ರಿಯ ಪತ್ರಕರ್ತ, ಎನ್ನುವ ಭ್ರಮೆಗೆ ಬಲಿಯಾದ ಕ್ಷಣದಿಂದ ಆತ ತನ್ನ ಜೊತೆ ಜೊತೆಗೆ ಗಣರಾಜ್ಯದ ಆದರ್ಶಗಳನ್ನು ಕೂಡ ಮಣ್ಣುಪಾಲು ಮಾಡುತ್ತಾನೆ. ಆಗ ಎಲ್ಲರನ್ನೂ ಆತ ಸಂಬೋಧಿಸುವುದು ಹೊಲಸು ಭಾಷೆಯಿಂದ, ಏಕವಚನದಿಂದ, ತಿರಸ್ಕಾರದಿಂದ, ಆಕ್ಷೇಪಣೆಗಳಿಂದ.

ಅತ್ಯಂತ ಲಾಭದಾಯಕವಾದ ಮಾಧ್ಯಮವಾಗಿರುವುದರಿಂದಲೇ ಇಂದು ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುವುದರ ಬಗೆಗೆ ದಿನನಿತ್ಯ ಕಾರ್ಯಕ್ರಮಗಳಿರುತ್ತವೆ. ಆದರೆ ಹಸಿವಿನ ಬಗೆಗೆ, ಅಪೌಷ್ಟಿಕತೆ ಬಗೆಗೆ ಚರ್ಚಿಸಲು ತಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಯಾವುದೇ ಬಗೆಯ SLOT ದೊರೆಯುವುದಿಲ್ಲ! ಅಸ್ಪೃಶ್ಯರ ಮಾನವ ಹಕ್ಕುಗಳು ಪದೇ ಪದೇ ಹಲ್ಲೆಗೊಳಗಾದಾಗ ,ಅಲ್ಪಸಂಖ್ಯಾತರು ದಿನನಿತ್ಯದ ಅವಮಾನಗಳಿಗೆ ತುತ್ತಾಗುತ್ತಿದ್ದಾಗ, ಬಲಿಷ್ಟ ಜಾತಿಯ ಧನದಾಸೆಗೆ ದಲಿತನೊಬ್ಬನ ನರಬಲಿ ನಡೆದಾಗ, ಇದಕ್ಕೆ ಸಂಬಂಧಪಟ್ಟ ವರದಿಗಳಿಗೆ, ಚರ್ಚೆಗಳಿಗೆ ದಿನನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಥಾನವೇ ಇರುವುದಿಲ್ಲ. ಆದರೆ ಕ್ರೈಂ ಸ್ಟೋರಿಗಳು, ಭೀಭತ್ಸ ವರದಿಗಳು, ಜನ್ಮಾಂತರದ ಬೊಗಳೆಗಳು ಪ್ರತಿದಿನ ಪ್ರಸಾರಗೊಳ್ಳುತ್ತಿರುತ್ತವೆ. ಏಕೆಂದರೆ ಇದು ಪ್ಯಾಕೇಜ್ ನಿಯಮ. ಮುಕ್ತ ಮಾರುಕಟ್ಟೆ ಇದನ್ನು ರೂಪಿಸಿದೆ.

ಇಲ್ಲಿ ಗಂಭೀರ, ವಿಚಾರಶೀಲ, ವೈಚಾರಿಕ, ನೈತಿಕತೆಯ ಪತ್ರಿಕೋದ್ಯಮವೆನ್ನುವುದು ( ದೃಶ್ಯ ಮಾಧ್ಯಮ) ತೀರಿಕೊಂಡು ಗೋರಿ ಸೇರಿದೆ.

ಕೊಲಂಬಿಯಾ ದೇಶದ ಪ್ರಖ್ಯಾತ ಲೇಖಕ “ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್” ಸುಮಾರು 2004-05 ರಲ್ಲಿ ಸೆಮಿನಾರ್ ಒಂದರಲ್ಲಿ ಮಂಡಿಸಿದ ಪ್ರಬಂಧವನ್ನು ನಾವು ಮತ್ತೊಮ್ಮೆ ಓದಲೇಬೇಕು. ಪತ್ರಿಕೋದ್ಯಮದ ಬಗ್ಗೆ ಸ್ವತಃ ಪತ್ರಕರ್ತರಾಗಿದ್ದ ಮಾರ್ಕೆಜ್‌ನ ಚಿಂತನೆಗಳನ್ನು ಇಲ್ಲಿ ಸಂಗ್ರಹವಾಗಿ ಹಾಗು ಸಂಕ್ಷಿಪ್ತವಾಗಿ ಅನುವಾದಿಸಲಾಗಿದೆ.

“50 ವರ್ಷಗಳ ಹಿಂದೆ ಪತ್ರಿಕೋದ್ಯಮದ ಶಾಲೆಗಳು ವ್ಯಾವಹಾರಿಕವಾಗಿ ಆಕರ್ಷಕವಾಗಿರಲಿಲ್ಲ. ಪತ್ರಿಕೋದ್ಯಮದ ಕಸುಬನ್ನು ನಾವೆಲ್ಲಾ ಸುದ್ದಿಮನೆಗಳಲ್ಲಿ, ಮುದ್ರಣಾಲಯಗಳಲ್ಲಿ, ಟೀ ಅಂಗಡಿಗಳಲ್ಲಿ ಕಲಿಯುತ್ತಿದ್ದೆವು. ಇಲ್ಲಿ ನಮಗೆ ಸರಿಯಾದ ಮೂಲಭೂತ ತರಬೇತಿಯನ್ನು ನೀಡಲಾಗುತ್ತಿತ್ತು, ಇದು ಒಂದು ಸೌಹಾರ್ದಯುತ, ಜೀವಂತ, ಲವಲವಿಕೆಯ ವಾತಾವರಣದಲ್ಲಿ ನಡೆಯುತ್ತಿತ್ತು. ಆ ಕಾಲದಲ್ಲಿ ಪತ್ರಿಕೋದ್ಯಮವೆನ್ನುವುದನ್ನು ಸುದ್ದಿ, ಸಂಪಾದಕೀಯ, ವರ್ತಮಾನ ಹಾಗೂ ಭವಿಷ್ಯದ ವಿಶ್ಲೇಷಣೆಗಳು, ಈ ರೀತಿಯಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಈ ಮೂರೂ ವಿಭಾಗಗಳಲ್ಲಿ ಸಂಪಾದಕೀಯಕ್ಕೆ ಅತ್ಯಂತ ಘನತೆ ಮತ್ತು ಹೆಚ್ಚು ಒತ್ತು ನೀಡಲಾಗುತ್ತಿತ್ತು. ಈ ಪತ್ರಿಕೋದ್ಯಮವನ್ನು ಪ್ರವೇಶಿಸಲು ಸಾಂಸ್ಕೃತಿಕ ಅರಿವು ಹಾಗೂ ಅದರ ಹಿನ್ನೆಲೆಗಳ ಬಗೆಗಿನ ತಿಳುವಳಿಕೆ ಅತ್ಯಂತ ಅವಶ್ಯಕವಾಗಿತ್ತು. ಇದನ್ನು ಅಲ್ಲಿನ ವಾತಾವರಣದಲ್ಲಿ ಕಲಿಸಿಕೊಡುತ್ತಿದ್ದರು. ನಿರಂತರ ಓದುವಿಕೆ ಕೂಡ ಪೂರಕ ಅಗತ್ಯವಾಗಿತ್ತು. ಆದರೆ ಇಂದು ಪತ್ರಿಕೋದ್ಯಮದಲ್ಲಿ ಅಕಡೆಮಿಕ್‌ನ, ಚಿಂತನೆಗಳ ಪರಿಣಿತಿಯ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಪತ್ರಿಕೋದ್ಯಮದ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ ಪತ್ರಿಕೋದ್ಯಮಕ್ಕೆ ಬೇಕಾಗುವ ಪೂರಕ ವಿಷಯಗಳನ್ನು ಹೇಳಿಕೊಡುತ್ತಾರೆ, ಆದರೆ ಪತ್ರಿಕೋದ್ಯಮದ ಬಗೆಗೆ ಹೇಳಿಕೊಡುವುದು ಬಹಳ ಕಡಿಮೆ. ಇಲ್ಲಿ ಮಾನವೀಯ ಅಂಶಗಳಿಗೆ ಹೆಚ್ಚು ಸಮಯವನ್ನು ಮೀಸಲಿಡವುದರ ಬದಲಾಗಿ ಮಹಾತ್ವಾಕಾಂಕ್ಷೆ ಹಾಗೂ ಜಡತೆಗೆ ಹೆಚ್ಚು ಒತ್ತು ಕೊಡುತ್ತಾರೆ.

“ಈ ಶಾಲೆಗಳಲ್ಲಿ ಸಂಶೋಧನೆಯನ್ನುವುದು ಹೆಚ್ಚುವರಿ ವಿಷಯವನ್ನಾಗಿ ಕಲಿಸದೆ ಪತ್ರಿಕೋದ್ಯಮದ ಒಂದು ಭಾಗವಾಗಿ ಕಲಿಸಬೇಕು. ಅತ್ಯಂತ ಮುಖ್ಯವಾದದ್ದು ಮೌಲ್ಯಗಳು ಹಾಗೂ ನೈತಿಕತೆ. ಅವು ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಹೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು. ಇದನ್ನು ನವ ಪೀಳಿಗೆಯ ಪತ್ರಕರ್ತರು ಮನದಟ್ಟು ಮಾಡಿಕೊಳ್ಳಬೇಕು. ಆದರೆ ಇಂದು ಪತ್ರಿಕೋದ್ಯಮ ಶಾಲೆಗಳಲ್ಲಿ ಕಲಿತು ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಅತ್ಯಂತ ಅಸಹಜವಾದ ಅಪಾರ ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಇವರಿಗೆ ವಾಸ್ತವದ ಪರಿಚಯವಾಗಲಿ ಅಥವಾ ಅದರೊಂದಿಗಿನ ನಂಟಾಗಲಿ ಇರುವುದಿಲ್ಲ. ಸ್ವಹಿತಾಸಕ್ತಿಯನ್ನು,ತಮ್ಮ ಭವಿಷ್ಯದ ಆತಂಕಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ಈ ಪದವೀಧರರು ತಾವು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವಾಗ ಕ್ರಿಯಾಶೀಲತೆ ಹಾಗೂ ಅನುಭವಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟಿರುತ್ತಾರೆ. ಇಂದಿನ ಉದಯೋನ್ಮುಖ ಪತ್ರಕರ್ತರು ಮಂತ್ರಿಗಳ, ಅಧಿಕಾರಿಗಳ ಸುಪರ್ದಿಯಲ್ಲಿರುವ ಗುಪ್ತ ದಾಖಲೆಗಳನ್ನು ಅಮೂಲಾಗ್ರವಾಗಿ ಓದುವುದರಲ್ಲಿ, ಸಂದರ್ಶನದ ವೇಳೆಯಲ್ಲಿ ಆತ್ಮೀಯತೆಯಿಂದ ಹೇಳಿದ ಮಾತುಗಳನ್ನು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸದೆ ಅದನ್ನು ಮುದ್ರಿಸುವುದರಲ್ಲಿ ಅತ್ಯಂತ ಉತ್ಸುಕತೆ ತೋರುತ್ತಾರೆ ಹಾಗೂ ಆ ರೀತಿ ನಡೆದುಕೊಳ್ಳುವುದರ ಬಗೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾರೆ. “ಆಫ಼್ ದಿ ರೆಕಾರ್ಡ್” ಎಂದು ಹೇಳಿದ್ದರೂ ಅದನ್ನು ಅತ್ಯಂತ ರೋಮಾಂಚಕ ಸುದ್ದಿಯನ್ನಾಗಿ ಪ್ರಚಾರ ಮಾಡುವುದರಲ್ಲಿ ಇವರಿಗೆ ಅಪಾರ ಆಸಕ್ತಿ. ಇಲ್ಲಿ ದುಖಕರ ಸಂಗತಿಯೆಂದರೆ ಈ ಎಲ್ಲಾ ತರಹದ ಅನೈತಿಕ ನಡಾವಳಿಗಳನ್ನು ಈ ಉದಯೋನ್ಮುಖ ಪತ್ರಕರ್ತರು ಅತ್ಯಂತ ಸಹಜವಾಗಿಯೇ ಸ್ವೀಕರಿಸುತ್ತಾರೆ ಹಾಗೂ ಇದನ್ನು ತಮ್ಮ ಪ್ರಜ್ಞೆಯೊಳಗೆ ಬೇರು ಬಿಡುವಂತೆ ನೋಡಿಕೊಳ್ಳುತ್ತಾರೆ. ಅತ್ಯುತ್ತಮ ಸುದ್ದಿಯನ್ನು ಮೊದಲು ಪ್ರಕಟಿಸುವುದಕ್ಕಿಂತಲೂ ಮುಖ್ಯವಾದದ್ದು ಅದನ್ನು ಅಷ್ಟೇ ಉತ್ತಮವಾಗಿ ಮಂಡಿಸಬೇಕು ಎನ್ನುವುದನ್ನು ಮರೆಯುತ್ತಾರೆ. ವ್ಯವಸ್ಥೆಯಲ್ಲಿ ಅಡಕವಾಗಿರುವ ಘಟನೆಗಳನ್ನು, ಸುದ್ದಿಗಳನ್ನು, ತನಿಖಾ ವರದಿಗಳನ್ನು ಪ್ರಕಟಿಸುವಾಗ ಮೊದಲು ಜಾಗಕ್ಕೆ ತೆರಳಿ, ಅಮೂಲಗ್ರವಾಗಿ ಸಂಶೋಧಿಸಿ ನಂತರ ಈ ವರದಿಗಳನ್ನು ವ್ಯಾಕರಣದ ತಪ್ಪಿಲ್ಲದೆ ಬರೆಯುವುದಕ್ಕೆ ಅಪಾರವಾದ ಜ್ಞಾನ, ಸಂಯಮ, ವೇಳೆ, ಮತ್ತಷ್ಟು ಸಂಶೋಧನೆಯನ್ನು ಮಾಡುವ ಹುಮ್ಮಸ್ಸು, ಬರೆಯುವ ಕಸಬುದಾರಿಕೆ, ಎಲ್ಲವೂ ಒಂದೇ ಕಡೆ ಅಡಕಗೊಂಡಿರಬೇಕು. ವರದಿಯೆನ್ನುವುದು ನಡೆದ ಒಂದು ಘಟನೆಯನ್ನು ಅತ್ಯಂತ ಕೂಲಂಕುಷವಾಗಿ, ಪಕ್ಷಪಾತವಿಲ್ಲದೆ, ಆದಷ್ಟು ಸತ್ಯಕ್ಕೆ ಹತ್ತಿರವಾಗಿ ಪುನರ್‌ನಿರ್ಮಾಣ ಮಾಡುವ ಕಲೆ ಎನ್ನುವುದನ್ನು ಇವರು ಮರೆಯುತ್ತಾರೆ.

“ಈ ಟೇಪ್ ರಿಕಾರ್ಡರ್ ಬರುವುದಕ್ಕಿಂತ ಮೊದಲು ಪತ್ರಿಕೋದ್ಯಮದಲ್ಲಿ ನಾವು ಬಳಸುತ್ತಿದ್ದ ಪರಿಕರಗಳೆಂದರೆ ಒಂದು ನೋಟ್ ಬುಕ್, ಪಕ್ಷಪಾತವಿಲ್ಲದ ನಮ್ಮ ಜೋಡಿ ಕಿವಿಗಳು, ಹಾಗು ಹೊಂದಾಣಿಕೆ ಮಾಡಿಕೊಳ್ಳದ ನಮ್ಮ ಪ್ರಾಮಾಣಿಕತೆ. ಕ್ಯಾಸೆಟ್ ಎನ್ನುವುದು ಎಂದಿಗೂ ವ್ಯಕ್ತಿಯೊಬ್ಬನ ನೆನಪಿನ ಶಕ್ತಿಯ ಬದಲೀ ಸಾಧನವಲ್ಲ. ಅದೊಂದು ಉಪಕರಣ ಅಷ್ಟೇ. ಈ ರೆಕಾರ್ಡರ್ ಎನ್ನುವುದು ಕೇಳಿಸಿಕೊಳ್ಳುತ್ತದೆ ಆದರೆ ಮನನ ಮಾಡಿಕೊಳ್ಳುವುದಿಲ್ಲ ಎನ್ನುವ ಸತ್ಯವನ್ನು ನಮ್ಮ ಇಂದಿನ ತಲೆಮಾರಿನ ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಪತ್ರಕರ್ತರು ರೆಕಾರ್ಡರ್ ಅನ್ನು ಕೇವಲ ಸಾಕ್ಷಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕಡೆಗೂ ಉಪಯೋಗಿಸಬೇಕಾಗಿರುವುದು ನ್ಯಾಯದ ಪಕ್ಷಪಾತವಿರುವಂತಹ ಮನಸ್ಸಿನ ತರಬೇತಿಯನ್ನು ಮಾತ್ರ. ಅದರೆ ಇಲ್ಲಿ ಪತ್ರಿಕೋದ್ಯಮದ ತರಬೇತಿ ವಿಷಯಗಳನ್ನು ಕಾಲಕಾಲಕ್ಕೆ ತಕ್ಕ ಹಾಗೆ ಅಂದಿನ ಪ್ರಸ್ತುತತೆಗೆ ಅನುವಾಗುವಂತೆ ಸೂಕ್ತ ಬದಲಾವಣೆಗಳಿಗೆ ಒಳಪಡಿಸುತ್ತಾ, ಇದನ್ನು ಕಲಿಸುವುದಕ್ಕಾಗಿ ಸದಾಕಾಲ ಹೊಸ ಹೊಸ ಪರಿಕರಗಳನ್ನು ಹುಡುಕಿಕೊಳ್ಳಬೇಕು. ಆದರೆ ನಾವು ಹಳೇ ಕಾಲದ ಕೇಳುವ ಹಾಗೂ ಕಲಿಯುವ ಪದ್ಧತಿಯನ್ನು ನವೀಕರಿಸುತ್ತಿದ್ದೇವೆ. ಇದರಿಂದ ಏನೂ ಉಪಯೋಗವಾಗುವುದಿಲ್ಲ.

ಸತ್ಯದೊಂದಿಗೆ ಸದಾ ಮುಖಾಮುಖಿಯಾಗುತ್ತಲೇ ಮಾನವೀಯತೆಯನ್ನು ಈ ಪತ್ರಿಕೋದ್ಯಮವೆನ್ನುವ ಅನುಶಕ್ತಿಯೊಂದಿಗೆ ಮಿಳಿತಗೊಳಿಸಬೇಕಾಗುತ್ತದೆ. ಯಾವನು ಇದನ್ನು ತನ್ನ ವ್ಯಕ್ತಿತ್ವದೊಳಗೆ ರಕ್ತಗತ ಮಾಡಿಕೊಂಡಿರುವುದಿಲ್ಲವೋ ಅವನು ಇದರ ಮಾಂತ್ರಿಕತೆಯನ್ನೂ ಕೂಡ ಗ್ರಹಿಸಲಾರ. ಇದರ ಅನುಭವದ ತೆಕ್ಕೆಗೆ ಒಳಪಡದವನು ಕೇವಲ ರೋಮಾಂಚಕ ವರದಿಗಳಿಗೆ, ಈ ವರದಿಗಳು ತಂದುಕೊಡುವ ಹುಸಿ ರೋಚಕತೆಗೆ ಬಲಿಯಾಗುತ್ತಾನೆ. ಆ ಮೂಲಕ ತನಗರಿವಿಲ್ಲದೆಯೇ ಅನೈತಿಕತೆಯ ಆಳಕ್ಕೆ ಕುಸಿದಿರುತ್ತಾನೆ.”

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

– ಸದಾನಂದ ಕೋಟ್ಯಾನ್

ಮಂಗಳೂರಿನಲ್ಲಿ ಪತ್ರಿಕಾ ಭವನದ ಮೂರನೇ ಮಹಡಿ ಉದ್ಘಾಟನೆ ಆಗಿದೆ. ಕರಾವಳಿಯವರೇ ಆದ ಮುಖ್ಯಮಂತ್ರಿ ಸದಾನಂದ ಗೌಡರು ಭವನ ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ರಾಜ್ಯಾಂಗಕ್ಕೆ ದಾಸನಾಗಿರುವುದಕ್ಕೆ ಇಡೀ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂಬಂತೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತುಂಬ ರಾಜಕಾರಣಿಗಳು. ಅವರ ಅಕ್ಕಪಕ್ಕದಲ್ಲಿ ರಾಜಕಾರಣಿಗಳು ನೀಡಿದ ಕೊಡುಗೆಯನ್ನು ಪ್ರಶಂಸಿಸುವ ಆಸ್ಥಾನ ಭಟರ ಪಾತ್ರಧಾರಿಗಳಾಗಿ ಪರಿವರ್ತನೆ ಹೊಂದಿದ ಪತ್ರಕರ್ತರು. ಇಡೀ ಸಮಾರಂಭ ಮಂಗಳೂರಿನಲ್ಲಿ ಮಾಧ್ಯಮ ಎತ್ತ ಸಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿತ್ತು.

ಸೋರುತ್ತಿರುವ ಸ್ಥೈರ್ಯ, ರಾಜ್ಯಾಂಗ ಮತ್ತು ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ ಸಾಮರ್ಥ್ಯ ಕಳೆದುಕೊಂಡ ಲೇಖನಿಗಳಿಗೆ ಪ್ರಸ್ತುತ ಅಗತ್ಯವಾಗಿ ಶಕ್ತಿ ತುಂಬಬೇಕಾಗಿದೆ. ಪತ್ರಿಕಾ ಭವನದಲ್ಲಿ ಅಪಾರ ಹಣವಿದೆ. ದೇಶದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಪತ್ರಕರ್ತರು ಇದ್ದಾರೆ. ಅವರ ಸ್ಫೂರ್ತಿಯ ಗೊಡವೆಗೆ ಹೋಗದ, ಲೋಕಲ್ ದಾಸ್ಯಕ್ಕೆ ಶರಣಾದ ಪತ್ರಕರ್ತರು ಭವನದ ನೆಪದಲ್ಲಿ ಮತ್ತಷ್ಟು ಕೆಳಗಿಳಿದರು. ಅದಕ್ಕೆ ಪಕ್ಕಾ ಸಾಕ್ಷಿ ಉದ್ಘಾಟನಾ ಆಹ್ವಾನ ಪತ್ರದಲ್ಲಿರುವ ಕಳಂಕಿತ ಶಾಸಕರೊಬ್ಬರ ಹೆಸರು.

ಹಾಗೆ ನೋಡಿದರೆ ಮಂಗಳೂರಿನ ಪತ್ರಕರ್ತ ಗೆಳೆಯರಿಗೆ ಈಗ ಕಡು ಕಷ್ಠದ ಕಾಲ. ಅವರನ್ನು ಕಷ್ಟದಿಂದ ಪಾರು ಮಾಡುವ ಕೃಷ್ಣಣ್ಣ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು ಈ ನೀಲಿಚಿತ್ರದ ಪೊಲೀ ಹುಡುಗನ ಕೃಷ್ಣ ಲೀಲೆಗಳನ್ನು ವರದಿ ಮಾಡುತ್ತಾ ಛೀ ಥೂ ಎಂದು ಉಗಿಯುತ್ತಿದ್ದರೆ ಮಂಗಳೂರಿನ ಮಾಧ್ಯಮದ ಗೆಳೆಯರು ತಮ್ಮ ಪತ್ರಕರ್ತರ ಸಂಘದ ಮೂರನೇ ಮಹಡಿಯ ಸಭಾಂಗಣದ ಉದ್ಘಾಟಣೆಗೆ ಕೃಷ್ಣ ಲೀಲೆ ಬಹಿರಂಗಗೊಂಡ ಮರು ದಿವಸವೇ ಕಾರ್‍ಯಕಾರಿ ಸಮಿತಿಯ ಸಭೆ ಸೇರಿ ಆಹ್ವಾನಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಬಹಳ ನೋವಿನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಕೃಷ್ಣ ಪಾಲೇಮಾರ್ ಹೆಸರಿನ ಕೆಳಗೆ ನಮೂದಿಸಿದ್ದಾರೆ. ನೀಲಿಚಿತ್ರ ಸರಬರಾಜುದಾರ ಎಂದು ಇಡೀ ರಾಜ್ಯ ಮತ್ತು ದೇಶದ ಜನತೆ ಟೀಕಿಸುತ್ತಿದ್ದರೆ ಮಂಗಳೂರಿನ ಕಾರ್‍ಯನಿರತ ಪತ್ರಕರ್ತರಿಗೆ ಕೃಷ್ಣ ಜೆ ಪಾಲೇಮಾರ್ “ಮುಖ್ಯ ಅತಿಥಿ”. ಅಷ್ಟು ಮಾತ್ರವಲ್ಲದೆ ತಾವು ಕೆಲಸ ಮಾಡುವ ಮಾಧ್ಯಮಗಳಲ್ಲಿ ತಮ್ಮ ಋಣ ತೀರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷ್ಣಣ್ಣನಿಗೆ ಮೊಬೈಲ್ ಬಳಸಲೇ ಗೊತ್ತಿಲ್ಲ, ಯಾರೋ ಅಪಾಪೋಲಿಗಳು ಕಳುಹಿಸಿರುವ ಎಂಎಂಎಸ್ ಎಂದು ವೈಭವೀಕರಿಸಿ ಬರೆಯುವುದರ ಜೊತೆಗೆ ಕೃಷ್ಣಣ್ಣ ನೈತಿಕ ಹೊಣೆ ಹೊತ್ತು (ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹುದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದಂತೆ) ರಾಜೀನಾಮೆ ನೀಡಿದ್ದಾರೆ ಎಂದು ಹುತಾತ್ಮ ಪಟ್ಟವನ್ನು ಕಟ್ಟಲು ಹೆಣಗಾಡಿ ನಗೆಪಾಟೀಲಿಗೀಡಾಗುತ್ತಿದ್ದಾರೆ.

ಹೀಗೆ ಮಂಗಳೂರು ಪತ್ರಕರ್ತರ ಕಾರುಬಾರು ಪಟ್ಟಿ ಮಾಡುವುದಾದರೆ :

  • ಇಡೀ ಕರ್ನಾಟಕ ರಾಜ್ಯದಲ್ಲಿ ಕೆಐಎಡಿಬಿ ಹಗರಣಗಳು ಹೊರಬೀಳುತ್ತಿದ್ದರೆ ಮಂಗಳೂರಿನ ಪತ್ರಕರ್ತರು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
  • ವರದಿಗಾರಿಕೆಯಲ್ಲಿ ಪ್ರಾಯೋಜಕರತ್ತಲೇ ನಿಷ್ಠೆ ಹೊರತು ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಿಲ್ಲ
  • ನೈತಿಕ ಪೊಲೀಸ್‌ಗಿರಿಗೆ ಸದಾ ಬೆಂಬಲಿಸುತ್ತಿದ್ದ ಮಾಧ್ಯಮ, ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಆರಂಭಿಸಿದ ನಂತರವಷ್ಟೇ ಬಹಿರಂಗ ಬೆಂಬಲವನ್ನು ನಿಲ್ಲಿಸಿ, ನಿಜವಾದ ಸುದ್ದಿಯತ್ತ ಪ್ರಾಮುಖ್ಯತೆ ಕೊಟ್ಟರು.
  • ಬ್ರಹ್ಮಕಲಶ, ನಾಗಮಂಡಲಗಳ ಜಾಹೀರಾತಿಗೇ ಕಾಯುವ ಪತ್ರಿಕೆಗಳು ದೇವರ ಆರಾಧನೆಗಿಂತಲೂ ಜಾಹೀರಾತು ಆರಾಧನೆಗೇ ಒತ್ತು ಕೊಡುತ್ತಿರುವುದು ಇಂದಿಗೂ ವಾಸ್ತವ.

ಇನ್ನು  ಕೃಷ್ಣ ಜೆ. ಪಾಲೇಮಾರ್ ಕೃಪಾಪೋಷಿತ ಮಾಫಿಯಾಗಳ ವಿಚಾರ ಕೇಳಬೇಕೇ? ನಗರದಲ್ಲಿರುವ ಅಕ್ರಮ ಮಾಲ್ ಒಂದರ ಪಾಲುದಾರರೊಬ್ಬರಿಗೆ ಪಾಲೇಮಾರ್ ಪರವಾದ ಪ್ರತಿಭಟನೆ ಮಾಡಲು ಐಡಿಯಾ ಕೊಟ್ಟವರೂ ಪತ್ರಕರ್ತರು. ನಾವೇ ನಮ್ಮಷ್ಟಕ್ಕೆ ಬರೆದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ, ನಮ್ಮ ವರದಿಗೆ ಪೂರಕವಾಗಿ ನಿಮ್ಮ ದ್ವನಿಯೂ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಪತ್ರಕರ್ತರದ್ದು. ಬಳ್ಳಾರಿಯಿಂದ ಗಣಿ ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಮಾಫಿಯಾದ ಹಿಂದೆ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಕೈ ಕೆಲಸ ಮಾಡಿತ್ತು. ಆದರೆ ಮಂಗಳೂರಿನ ಪತ್ರಕರ್ತರು ಈ ಬಗ್ಗೆ ವರದಿಗಳನ್ನು ಮಾಡಿದ್ದೇ ಇಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ರಾಜೀನಾಮೆಗೆ ಪಾಲೇಮಾರ್ ಕಾರಣರಾಗಿದ್ದ ಸಂಧರ್ಭ ಬೆಂಗಳೂರು ಮತ್ತು ಕಾರವಾರದಿಂದ ಪಾಲೇಮಾರ್ ವಿರುದ್ಧ ವರದಿಗಳು ಪ್ರಕಟಗೊಂಡವು. ಆದರೆ ಮಂಗಳೂರಿನ ಶಾಸಕ, ಸಚಿವರಾಗಿದ್ದ ಪಾಲೇಮಾರ್ ಬಗ್ಗೆ ಪತ್ರಕರ್ತರು ಆಸಕ್ತಿ ವಹಿಸಿ ಪ್ರಕರಣವನ್ನು ಫಾಲೋ ಮಾಡಲೇ ಇಲ್ಲ. ಕೆಐಎಡಿಬಿ ಹಗರಣ ರಾಜ್ಯಾಧ್ಯಂತ ಸುದ್ಧಿಯಾದಾಗ ಮಂಗಳೂರು ಕೆಐಎಡಿಬಿ ಹಗರಣಗಳ ಹೂರಣವನ್ನು ಕೆದಕಲು ಹೋಗಲೇ ಇಲ್ಲ. ಕೆಐಎಡಿಬಿ ಕಡತಗಳ ಯಾವುದೋ ಒಂದು ಮೂಲೆಯಲ್ಲಿ ಪಾಲೇಮಾರ್ ಹೆಸರು ಇರಲೇ ಬೇಕು ಎಂಬುದು ಕರಾವಳಿಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇರುವ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿ ಫ್ಲ್ಯಾಟು, ಲೇಔಟ್, ಮಾಲ್, ಬಹುಮಹಡಿ ಕಟ್ಟಡಗಳ ನಿರ್ಮಾಣದ ಹಿಂದೆ ಪಾಲೇಮಾರ್ ಪಾಲುದಾರಿಕೆ ಇದೆ. ಪಾಲೇಮಾರ್ ಜಮೀನಿನಲ್ಲಿ ಪತ್ತೆಯಾದ ಅಕ್ರಮ ಮರಳು ಶೇಖರಣೆಗೆ ಜಿಲ್ಲಾಧಿಕಾರಿ ತಂಡ ದಾಳಿ ಮಾಡಿದಾಗಲೂ ಮಂಗಳೂರಿನ ಕೆಲವೊಂದು ಪತ್ರಿಕೆಗಳಿಗೆ ಅದು ಸುದ್ಧಿಯೇ ಆಗಿರಲಿಲ್ಲ. ಸಚಿವರೊಬ್ಬರ ವ್ಯವಹಾರಕ್ಕೆ ಅಧಿಕಾರಿಗಳು ತಂಡ ದಾಳಿ ಮಾಡಿ ಮರಳನ್ನು ವಶಪಡಿಸಿಕೊಳ್ಳುವುದು ಸುದ್ಧಿಯೇ ಅಲ್ಲ ಎಂಬುದು ಪಾಲೇಮರ್ ಮತ್ತು ಪತ್ರಕರ್ತರ ಮಧ್ಯದ ಸಂಬಂಧವನ್ನು ಎತ್ತಿ ತೋರಿಸುತ್ತದೆ.