Tag Archives: ಮಲಹೊರುವ ಪದ್ಧತಿ

ದಲಿತರ ಮೇಲೆ ದೌರ್ಜನ್ಯ ನಡೆಸುವ ವ್ಯವಸ್ಥೆಯ ಹೆಸರು – ಸರಕಾರ!

ಭೂಮಿ ಬಾನು

ಇಂದು ಒಂದು ದುರಂತ ನಡೆದು ಹೋಗಿದೆ. ಕೆಜಿಎಫ್ ನಲ್ಲಿ ಮಲದ ಗುಂಡಿ ಶುಚಿಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋ ಕಾಲ್ಡ್ ನಾಗರಿಕ ಸಮಾಜ ತಲೆ ತಗ್ಗಿಸುವುದಷ್ಟೇ ಅಲ್ಲ, ಮಂಡಿ ಊರಿ ಕೂರಬೇಕು. ಸರಕಾರ, ಉಳ್ಳವರು ಎಲ್ಲರೂ ಇದಕ್ಕೆ ಹೊಣೆ.

ಊರಿನ ರಸ್ತೆ ಸರಿಯಿಲ್ಲ, ಕುಡಿವ ನೀರಿಲ್ಲ, ಬಸ್ ನಿಲ್ದಾಣದಲ್ಲಿ ಶೆಡ್ ಇಲ್ಲ, ಎಂದೆಲ್ಲಾ ಪ್ರತಿಭಟನೆ ಮಾಡುವ ‘ಮರ್ಯಾದಸ್ಥ’ ಜನ ನಮ್ಮೂರಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಮಲದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳಿಲ್ಲ ಎಂದು ದನಿ ಎತ್ತಿದ್ದು ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ಅಲ್ಲಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಬಸವಲಿಂಗಯ್ಯ ಮಲಹೊರುವ ಪದ್ಧತಿಯನ್ನು ರದ್ದು ಮಾಡುವ ಬಗ್ಗೆ ಮಂತ್ರಿ ಮಂಡಲ ಸಭೆಯಲ್ಲಿ ಮಾತೆತ್ತಿದಾಗ ಜೊತೆಯಲ್ಲಿದ್ದ ಕೆಲವರು “ಆ ಅಸಹ್ಯದ ಬಗ್ಗೆ ಎಷ್ಟು ಹೊತ್ತು ಮಾತಾಡ್ತೀರಿ?” ಎಂದು ಮೂದಲಿಸಿದರಂತೆ. ಬಸವಲಿಂಗಯ್ಯ ಪ್ರತಿಕ್ರಿಯಿಸಿ “ಆ ವಿಷಯ ಮಾತನಾಡೋಕೇ ಇಷ್ಟು ಅಸಹ್ಯ ಪಡ್ತೀರಲ್ಲ, ಅದೇ ಅಸಹ್ಯವನ್ನು ತಲೆಯಲ್ಲಿ ಹೊತ್ತು ಸಾಗಿಸೋರ ಪಾಡೇನು”, ಎಂದು ಪ್ರಶ್ನಿಸಿದ್ದರು. ಆ ‘ಕೆಲ ಮಂತ್ರಿಗಳಂಥದೇ’ ಮನಸುಗಳು ಈ ಹೊತ್ತಿನ ಪರಿಸ್ಥಿತಿಗೆ ಕಾರಣ.

ಕೇಂದ್ರ ಸರಕಾರ 1993 ರಲ್ಲಿಯೇ ಮಲ ಹೊರುವ ಪದ್ಧತಿಯನ್ನು ಕಾನೂನು ತಂದು ನಿಷೇಧಿಸಿತು. ವಿಪರ್ಯಾಸ ನೋಡಿ, ಇದುವರೆಗೆ ಯಾವ ಸರಕಾರಗಳೂ ಆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕಾನೂನು ತಂದರಷ್ಟೆ ಸಾಕೆ?

ಮಲ ಹೊರುವ ಪದ್ಧತಿ ನಿಷೇಧ ಎಂದಾಕ್ಷಣ ಮಲದ ಗುಂಡಿಗಳು ತುಂಬುವುದು ನಿಲ್ಲುತ್ತದೆಯೆ? ಒಳ ಚರಂಡಿ ವ್ಯವಸ್ಥೆ ಇಲ್ಲದ ಮಂದಿ ಎಂದಿನಂತೆ ಆ ಕೆಲಸ ಮಾಡುವವರನ್ನು ಹುಡುಕಿ ಹೋಗುತ್ತಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟು ಗುಂಡಿ ಖಾಲಿ ಮಾಡಿಸುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಬೇಕಾದ ಸ್ಥಿತಿಯಲ್ಲಿರುವ ಅನೇಕ ದಲಿತ ಕುಟುಂಬಗಳು ಅನ್ನಕ್ಕಾಗಿ ಅನಿವಾರ್ಯವಾಗಿ ಆ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಸಾಯುತ್ತಾರೆ. (ಆದರೆ ಅದೇ ಮೇಲ್ಜಾತಿಯ ಯಾರೇ ಆಗಲಿ ಎಷ್ಟೇ ಬಡತನವಿದ್ದರೂ, ಎಷ್ಟೇ ದುಡ್ಡು ಕೊಡುತ್ತೇನೆಂದರೂ ಈ ಕೆಲಸಕ್ಕೆ ಕೈ ಹಾಕುವುದಿಲ್ಲ ಎನ್ನುವುದು ವಾಸ್ತವ).
ಕಾನೂನು ತಂದು ಒಂದು ದಶಕವಾಯಿತು. ಇನ್ನಾದರೂ ಕರ್ನಾಟಕದ ಬಹುಪಾಲು ನಗರ, ಪಟ್ಟಣಗಳಲ್ಲಿ ಯಂತ್ರಗಳನ್ನು ಬಳಸಿ ಮಲದ ಗುಂಡಿಗಳನ್ನು ಶುಚಿಗೊಳಿಸುವ ಪದ್ಧತಿ ಜಾರಿಯಾಗಿಲ್ಲ.

ಹಾಸನ ಜಿಲ್ಲೆ ಆಲೂರಿನಂತ ತಾಲೂಕು ಕೇಂದ್ರದದಲ್ಲಿ ಒಳ ಚರಂಡಿ ವ್ಯವಸ್ಥೆಯೂ ಇಲ್ಲ, ತುಂಬಿದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳೂ ಇಲ್ಲ. ರಾಜ್ಯದಾದ್ಯಂತ ಇಂತಹ ಅದೆಷ್ಟೋ ತಾಲೂಕುಗಳಿವೆ.

ನೂತನ ಕಾನೂನಿನ ಪ್ರಕಾರ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತರನ್ನು ನಿಯೋಜಿಸಿಕೊಂಡರೆ, ದಲಿತರ ಮೇಲೆ ನಡೆಸಿದ ದೌರ್ಜನ್ಯ ಎಂದು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬಹುದು. ಆದರೂ ಈ ಪದ್ದತಿ ನಿಲ್ಲದೇ ಇರಲು ಪ್ರಮುಖ ಕಾರಣ ಸರಕಾರದ ನಿರ್ಲಕ್ಷ್ಯ.

ದಲಿತರ ಮೇಲೆ ದೌರ್ಜನ್ಯ ನಡೆಸಿದ ಬಹುದೊಡ್ಡ ವ್ಯವಸ್ಥೆ – ಸರಕಾರ!

ಚಿತ್ರ: persecution.in