Tag Archives: ಮಾಧ್ಯಮ

Deccan Herald - Mining Payments

ಆದರ್ಶ ಎಂಬುವುದು ಮಾರುಕಟ್ಟೆಯ ಸರಕಲ್ಲ


– ಡಾ.ಎನ್.ಜಗದೀಶ ಕೊಪ್ಪ


[ಕರ್ನಾಟಕ ವಿ.ವಿ.ಯ ಪತ್ರಿಕೋದ್ಯಮ ವಿದಾರ್ಥ್ಯಿಗಳು  ಪತ್ರಿಕೋದ್ಯಮ ಮತ್ತು ಆದರ್ಶ ಕುರಿತಂತೆ ಕೇಳಿದ್ದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆಯ ಲಿಖಿತ ರೂಪ.]

ವರ್ತಮಾನದ ಬದುಕಲ್ಲಿ ಅದರಲ್ಲೂ ವಿಶೇಷವಾಗಿ ಪತ್ರಿಕೋದ್ಯಮಕ್ಕೆ ಸಂಬಧಪಟ್ಟಂತೆ ಆದರ್ಶ ಮತ್ತು ವಾಸ್ತವ ಕುರಿತು ಮಾತನಾಡುವುದು ಅಥವಾ ಬರೆಯುವುದು ಕ್ಲೀಷೆಯ ಸಂಗತಿ. ಇವತ್ತಿನ ಪತ್ರಿಕೋದ್ಯಮದಲ್ಲಿ ನೀತಿ, ಅನೀತಿಗಳ ನಡುವಿನ ಗಡಿರೇಖೆ ಸಂಪೂರ್ಣ ಅಳಿಸಿ ಹೋಗಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಆಧ್ಯತೆ ಕೂಡ ಬದಲಾಗಿದೆ. ಎಲ್ಲರೂ ಎಲ್ಲವನ್ನು ವ್ಯವಹಾರದ ದೃಷ್ಟಿಕೋನದಿಂದ ನೋಡುತ್ತಾ, ಇಡೀ ಮಾಧ್ಯಮ ಲೋಕವನ್ನು ಲಾಭದಾಯಕ ಉಧ್ಯಮವನ್ನಾಗಿ ಪರಿವರ್ತಿಸುವ ಉಮೇದಿನಲ್ಲಿರುವಾಗ ಆದರ್ಶ ಕುರಿತು ಮಾತನಾಡುವುದು ಅಸಂಗತ ಎಂದು ಅನಿಸತೊಡಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಎಂದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಇರಬೇಕಾದ ಸಂವಹನದ ಸೇತುವೆ ಎಂಬ ಭಾವನೆ ಇತ್ತು. ಪತ್ರಿಕೆ ಮತ್ತು ಪತ್ರಕರ್ತ ಇಬ್ಬರೂ ಓದುಗರಿಗೆ ಉತ್ತರದಾಯಕತ್ವದ ಭಾಗವಾಗಿದ್ದರು. ಒಬ್ಬ ಪತ್ರಕರ್ತನಿಗೆ ನಾನು ಯಾರಿಗಾಗಿ ಬರೆಯುತಿದ್ದೇನೆ, ನನ್ನ ಓದುಗರು ಯಾರು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ದೃಶ್ಯ ಮಾಧ್ಯಮಗಳು ಬಂದ ನಂತರ ಅದೃಶ್ಯ ವೀಕ್ಷಕರಿಗೆ ಸುದ್ಧಿಯನ್ನು ಉಣಬಡಿಸುತ್ತಿರುವಾಗ ಏನೂ ಮಾಡಿದರೂ ಚಲ್ತಾ ಹೈ ಎಂಬ ಉಢಾಪೆತನ ಈಗ ಪತ್ರಕರ್ತ್ರನಲ್ಲಿ ಮನೆ ಮಾಡಿಕೊಂಡಿದೆ. ಹಾಗಾಗಿ ಇಲ್ಲಿ ಯಾವುದೇ ಪತ್ರಕರ್ತನಿಗೆ ಆದರ್ಶಗಳು ಇರಬೇಕು ಎಂಬ ಕಟ್ಟುಪಾಡುಗಳಿಲ್ಲ. ಜೊತೆಗೆ ಆದರ್ಶವೆಂಬುವುದು ಅಂಗಡಿಯಲ್ಲಿ ದೊರೆಯುವ ವಸ್ತು ಕೂಡ ಅಲ್ಲ.

ಇತ್ತೀಚೆಗಿನ ಪತ್ರಿಕೋದ್ಯಮದ ಧೋರಣೆ ಕುರಿತು ಆಕ್ಷೇಪ ವ್ಯಕ್ತವಾದಾಗಲೆಲ್ಲಾ, ಪತ್ರಿಕೋದ್ಯಮಿಗಳು ತಮ್ಮ ರಕ್ಷಣೆಗಾಗಿ ಗುರಾಣಿಯಂತೆ ಬಳಸುವುದು, ಲಾಭ ಮತ್ತು ನಷ್ಟದ ವಿಷಯಗಳನ್ನು ಮಾತ್ರ. ಭಾರತದ ಒಂದು ಶತಮಾನದ ಪತ್ರಿಕೆಗಳ ಇತಿಹಾಸ ಗಮನಿಸಿದರೆ, ಇವರು ಅಪ್ಪಟ ಸುಳ್ಳುಗಾರರು ಎಂಬುದು ಸಾಬೀತಾಗುತ್ತದೆ. ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ಸಂಸ್ಥಾಪಕರು ಚೆನ್ನೈ ನಗರದ ನಾಲ್ವರು ವಕೀಲರು, ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯನ್ನು ಬ್ರಿಟಿಷರಿಂದ ಕೊಂಡವರು ಮಾರವಾಡಿ ಮನೆತನದ ಜೈನ್ ಕುಟುಂಬ, ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಸಂಸ್ಥಾಪಕ ರಾಮನಾಥ್ ಗೊಯಂಕ ವ್ಯಾಪಾರಸ್ಥ ಕುಟುಂಬದಿಂದ ಬಂದ ವ್ಯಕ್ತಿ, ಅಷ್ಟೇ ಏಕೆ, ನಮ್ಮ ಕನ್ನಡದ ದಿನಪತ್ರಿಕೆ ಪ್ರಜಾವಾಣಿಯ ಸಂಸ್ಥಾಪಕ ಕೆ. ಎನ್. ಗುರುಸ್ವಾಮಿ ಹೆಂಡ ಮಾರುವ ವೃತ್ತಿಯಿಂದ ಬಂದವರು (ಇವರ ಮೂಲ, ಆಂಧ್ರಪ್ರದೇಶದ ಆಧೋನಿ).

ಇವರುಗಳಿಗೆ ಸಮಾಜಕ್ಕೆ ನಾವು ಏನಾದರೂ ಮಾಡಬೇಕು ಎಂಬ ಆದರ್ಶ ಇದ್ದುದರಿಂದಲೇ ಪತ್ರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಇವರುಗಳಿಗೆ ಲಾಭ ಮೊದಲ ಆದ್ಯತೆಯಾಗಿರಲಿಲ್ಲ. ಈ ಎಲ್ಲಾ ಪತ್ರಿಕೆಗಳು ನಷ್ಟದಲ್ಲಿದ್ದರೆ, ಇಷ್ಟು ದೂರ ಸಾಗಿಬಂದು ಇವತ್ತಿನ ಹೆಮ್ಮರಗಳಾಗಿ ಬೆಳೆಯಲು ಸಾಧ್ಯವಿತ್ತೆ? ಈ ಆದರ್ಶವಾದಿಗಳಿಗೆ ಲಾಭಕೋರತನ ಎಂದೂ ಗುರಿಯಾಗಿರಲಿಲ್ಲ ಅಂದ ಮಾತ್ರಕ್ಕೆ ಪತ್ರಿಕೆಯನ್ನು ನಷ್ಟದಲ್ಲಿ ನಡೆಸಬೇಕೆಂಬ ಉಮೇದು ಇರಲಿಲ್ಲ. ಪತ್ರಿಕೆಯ ಓದುಗರೇ ನಿಜವಾದ ವಾರಸುದಾರರು ಎಂದು ಇವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಪತ್ರಿಕೆಯ ಮುಖಪುಟದ ಜಾಹಿರಾತು ಯಾವ ಕಾರಣಕ್ಕೂ ಕಾಲು ಪುಟಕ್ಕೆ ಮೀರದಂತೆ ಅಲಿಖಿತ ನಿಯಮವನ್ನು ರೂಪಿಸಿಕೊಂಡಿದ್ದರು.

ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಬಲಿಷ್ಟ ರಾಜಕಾರಣಿಗಳ ಮತ್ತು ಕಾರ್ಪೋರೇಟ್ ಕುಳಗಳ ಪಾಲಾಗಿವೆ ಹಾಗಾಗಿ ಹಣ ತರುವ ಜಾಹಿರಾತಿಗಾಗಿ ಇಡೀ ಮುಖಪುಟವನ್ನು ಒತ್ತೆ ಇಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತನಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯ?.

ಮೂರು ದಶಕಗಳ ಹಿಂದೆ ನನ್ನ ತಲೆಮಾರು ಪತ್ರಿಕೋದ್ಯಮ ಪ್ರವೇಶಿಸಿದಾಗ ಪತ್ರಿಕೋದ್ಯಮ ಕುರಿತಂತೆ ಬೋಧಿಸುವ ಯಾವ ಪಠ್ಯಗಳು ಇರಲಿಲ್ಲ,  ಯಾವುದೇ ವಿ.ವಿ.ಯಲ್ಲಿ ಇದು ಜ್ಞಾನ ಶಿಸ್ತುವಾಗಿ ಬೆಳದಿರಲಿಲ್ಲ. ನಮಗೆ ಪತ್ರಿಕೋದ್ಯಮದ ಅ. ಆ. ಇ. ಈ. ಕಲಿಸಿದ ಹಿರಿಯರ ಬದುಕು, ಬರವಣಿಗೆ, ಅವರುಗಳು ನೈತಿಕತೆ ಕುರಿತಂತೆ ಹಾಕಿಕೊಂಡಿದ್ದ ಲಕ್ಷ್ಮಣರೇಖೆ ಇವೆಲ್ಲೂ ನಮ್ಮ ಪಾಲಿಗೆ ನಿಜವಾದ ಪಠ್ಯಗಳಾಗಿದ್ದವು.

ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷ ಇರಬಾರದು. ಓದುಗರಿಗೆ ನಮ್ಮ ಬರವಣೆಗೆ ಮೂಲಕ ನಿಷ್ಟರಾಗಿರಲು ಇರುವ ಏಕೈಕ ಮಾರ್ಗವೆಂದರೆ ಅಧಿಕಾರಯುತ ವ್ಯಕ್ತಿಗಳಿಂದ (ರಾಜಕಾರಣಿ ಮತ್ತು ಅಧಿಕಾರಿ ಇವರುಗಳಿಂದ) ಅಂತರ ಕಾಪಾಡಿಕೊಳ್ಳುವುದು, ಜಾತಿ, ಧರ್ಮ ಇವುಗಳ ವಕಾಲತ್ತು ವಹಿಸಿ ಬರವಣಿಗೆ ಮಾಡಬಾರದು, ನಾವು ಬರೆಯುವ ಒಂದೊಂದು ಅಕ್ಷರದಲ್ಲಿ ಜೀವಪರವಾದ ಧ್ವನಿ ಇರಬೇಕು, ಇವೆಲ್ಲವನ್ನೂ ನನ್ನ ತಲೆಮಾರಿನ ಪತ್ರಕರ್ತರು, ಖಾದ್ರಿ ಶಾಮಣ್ಣ, ಟಿ.ಎಸ್.ಆರ್.,  ವೈ.ಎನ್.ಕೆ.,  ಕೆ. ಶಾಮರಾವ್,  ಎಂ.ಬಿ. ಸಿಂಗ್, ವಡ್ಡರ್ಸೆ ರಘುರಾಮಶೆಟ್ಟಿ, ಪಿ.ಲಂಕೇಶ್, ಜಯಶೀಲರಾವ್, ಐ.ಕೆ. ಜಾಗೀರ್‌ದಾರ್, ಪಾ.ವೆಂ. ಆಚಾರ್ಯ, ಸುರೇಂದ್ರಧಾನಿ ಮುಂತಾದ ಮಹನೀಯರಿಂದ ಕಲಿತುಕೊಂಡಿದ್ದರು.

Deccan Herald - Mining Paymentsಈ ತಲೆಮಾರಿನ ಮುಂದಿರುವ ಆದರ್ಶವೆಂದರೆ, ಸಾಧ್ಯವಾದಷ್ಟು ಹಣ ಮಾಡಬೇಕು, ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು, ಓಡಾಡಲು ಕಾರಿರಬೇಕು. ಇನ್ನೂ ಸಾಧ್ಯವಾದರೆ, ನಗರದ ಹೊರವಲಯದಲ್ಲಿ ಒಂದು ತೋಟ ಇರಬೇಕು. ಇಂತಹವರಿಂದ ಏನನ್ನು ತಾನೆ ಕಲಿಯಲು ಸಾಧ್ಯ? ಕೇವಲ 15 ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದಿದ್ದವರೆಲ್ಲಾ ಇಂದು ಕೋಟಿ ಕೋಟಿ ರೂಗಳ ಒಡೆಯರು. ಗಣಿಧಣಿಗಳ ಎಂಜಲು ಕಾಸಿಗೆ ಕೈಯೊಡ್ಡಿದವರೆಲ್ಲಾ ಇಂದು ಸ್ಟಾರ್ ಪತ್ರಕರ್ತರು. ಇಂತಹ ಅಯೋಮಯ ಸ್ಥಿತಿಯಲ್ಲಿ ಹೊಸ ತಲೆಮಾರಿನ ಪತ್ರಕರ್ತರಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇತ್ತೀಚೆಗಿನ ಯುವ ಜನಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಹನೆ ಎದ್ದು ಕಾಣುತ್ತಿದೆ. ಎಲ್ಲೆಡೆ ಪ್ರಾಮಾಣಿಕತೆಯನ್ನು ಬಯಸುವ ಮನೋಭಾವ ಬೆಳೆದು ಬಂದಿದೆ. ಜೊತೆಗೆ ತಾವೂ ಪ್ರಾಮಾಣಿಕರಾಗಿ ಇರಲು ಬಯಸುತ್ತಾರೆ. ಇದು ಪತ್ರಿಕೋದ್ಯಮ ಹೊರತು ಪಡಿಸಿ ಉಳಿದ ರಂಗಗಳ ಯುವಜನತೆಯಲ್ಲಿ ಕಾಣುವ ಅಂಶ ಎಂದು ತೀವ್ರ ವಿಷಾದದಿಂದ ಹೇಳಲು ಬಯಸುತ್ತೇನೆ.

ಇವತ್ತಿನ ಕಾಲೇಜು ಅಥವಾ ವಿ.ವಿ ಗಳಲ್ಲಿ ನಾವು ಪಡೆಯುತ್ತಿರುವ ಪದವಿ ಉದ್ಯೋಗಕ್ಕೆ ಒಂದು ಪರವಾನಗಿ ಅಷ್ಟೇ, ಅದರಾಚೆ ಅದು ಈ ಯುವ ತಲೆಮಾರಿಗೆ ಏನನ್ನೂ ಕಲಿಸಿಕೊಡುವುದಿಲ್ಲ, ಬೋಧಿಸುವುದಿಲ್ಲ. ಅದು ದೃಶ್ಯಮಾಧ್ಯಮವಾಗಿರಲಿ, ಮುದ್ರಣ ಮಾಧ್ಯಮವಾಗಿರಲಿ, ಇಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ಯುವಕರು ನೈತಿಕತೆ ಮತ್ತು ಆದರ್ಶಗಳನ್ನು ಸ್ವಯಂ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬನೂ ಏಕಲವ್ಯನಾಗಲು ಸಿದ್ಧನಿರಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡರೆ, ಬದುಕಿನ ಕಟು ವಾಸ್ತವಗಳು ಏನು ಎಂಬುದು ತಂತಾನೆ ಅರ್ಥವಾಗುವ ಸಂಗತಿ.

ಮಾಧ್ಯಮಗಳ ಮೇಲೊಂದು ಟಿಪ್ಪಣಿ


-ಬಿ. ಶ್ರೀಪಾದ ಭಟ್  


“ಮೌಲ್ಯಗಳು ಹಾಗೂ ನೈತಿಕತೆ ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಕೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು.” -ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಜಾಗತೀಕರಣಗೊಂಡು ಇಪ್ಪತ್ತು ವರ್ಷಗಳ ನಂತರದ ಇಂದಿನ ಸಂದರ್ಭದಲ್ಲಿ ದೇಶದಲ್ಲಿನ ಅನೇಕ ವಲಯಗಳಂತೆ ಪತ್ರಿಕೋದ್ಯಮವೆನ್ನುವುದು ಸಹ ತನ್ನ ಹಿಂದಿನ ರೂಪದಲ್ಲಿ ಉಳಿದಿಲ್ಲ. ಇಂದು ಮಾರುಕಟ್ಟೆ ಆಧಾರಿತ ಆರ್ಥಿಕ ಸ್ಥಿತಿಯಲ್ಲಿ  ಜಾಗತೀಕರಣದ ಮೂಲ ಮಂತ್ರವಾದ, ಸಂಪಾದನೆ ಹಾಗೂ ಸಂಪಾದನೆ ಮತ್ತಷ್ಟು ಸಂಪಾದನೆ ಎನ್ನುವ ಸಿದ್ಧಾಂತವನ್ನು ಇಂದು ತನ್ನದಾಗಿಸಿಕೊಂಡಿರುವ ಪತ್ರಿಕೋದ್ಯಮವೂ ಕೂಡ ಒಂದು ಮಾರ್ಕೆಟಿಂಗ್ ವ್ಯವಸ್ಥೆಯಾಗಿ ಬೆಳೆದುಬಿಟ್ಟಿದೆ. ಇದರ ಫಲವೇ ಮುಕ್ತ ಆರ್ಥಿಕತೆ ಹೇಳುವಂತೆ ವ್ಯವಸ್ಥೆಯಲ್ಲಿ ನೀನು ನಿರಂತರವಾಗಿ ಬದುಕಿ ಉಳಿಯಬೇಕೆನ್ನವುದಾದರೆ ನಿನ್ನ ಉತ್ಪಾದನೆಗಳನ್ನು ಮಾರುಕಟ್ಟೆಗೆ ತಳ್ಳುತ್ತಲೇ ಇರಬೇಕು, ಈ ತಳ್ಳುವಿಕೆ ನಿರಂತರವಾಗಿರಬೇಕು. ಬಹುಪಾಲು ದೃಶ್ಯ ಮಾಧ್ಯಮಗಳು ಈ ಮುಕ್ತ ಆರ್ಥಿಕ ನೀತಿಯ ತಳ್ಳುವಿಕೆಯನ್ನು ತಮ್ಮ ಪತ್ರಿಕೋದ್ಯಮದ ಮೂಲ ಮಂತ್ರ,ತಿರುಳನ್ನಾಗಿಸಿಕೊಂಡಿವೆ.

ಈ ರೀತಿಯಾಗಿ ಬದುಕಿ ಉಳಿಯುವುದಕ್ಕಾಗಿ ತನ್ನನ್ನು ತಾನು ವ್ಯವಸ್ಥೆಯಲ್ಲಿ ತಳ್ಳುವ ಪ್ರಕ್ರಿಯಲ್ಲಿ ಈ ಬಹುಪಾಲು ಮಾಧ್ಯಮಗಳು ಪತ್ರಿಕೋದ್ಯಮದ ಮೂಲಭೂತ ಸಿದ್ಧಾಂತಗಳು, ನೈತಿಕ ಪಾಠಗಳು, ವೈಯುಕ್ತಿಕ ಪರಿಶುದ್ಧತೆ ಮುಂತಾದವುಗಳನ್ನೆಲ್ಲವನ್ನೂ ಕೂಡ ಹಳ್ಳಕ್ಕೆ ತಳ್ಳಿ ಬಿಟ್ಟಿವೆ. ಈಗ ಮಾಧ್ಯಮವೆನ್ನುವುದು ಒಂದು ಪ್ಯಾಕೇಜ್ ಆಗಿ ಪರಿವರ್ತಿತಗೊಂಡಿದೆ. ಇಲ್ಲಿ ಮಾಲೀಕನ ವ್ಯವಹಾರಿಕ ಬದ್ಧತೆಗಳು ಹಾಗೂ ಅವನ ಉದ್ಯೋಗಿಯಾದ ಸಂಪಾದಕನೊಬ್ಬನ ಸಾಂಸ್ಕೃತಿಕ, ಸಾಮಾಜಿಕ ಬದ್ಧತೆಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿಹೋಗಿದೆ. ಈ ಪ್ಯಾಕೇಜ್ ಪದ್ಧತಿಯ ಪ್ರಕಾರ  ಪ್ರತಿಯೊಂದು ದೃಶ್ಯ ಮಾಧ್ಯಮಗಳು ಒಪ್ಪಿಸುವ ಗಿಣಿ ಪಾಠವೆಂದರೆ, ‘ಮೊದಲನೆಯದಾಗಿ ನಾವು ಜನರಿಗೆ ಏನು ಬೇಕು, ಅದರಲ್ಲೂ ಜನ ಸಾಮಾನ್ಯರಿಗೆ ಏನು ಬೇಕೋ, ಅದರಲ್ಲೂ ಜನಸಾಮಾನ್ಯರ ನಂಬಿಕೆಗಳು ಏನಿವೆಯೋ, ಅವನ್ನು ನಾವು ಅತ್ಯಂತ ನಿಯಮಬದ್ಧವಾಗಿ, ಕರಾರುವಕ್ಕಾಗಿ, ಕ್ರಮಬದ್ಧವಾಗಿ ಮರಳಿ ಜನರಿಗೆ ತಲುಪಿಸುತ್ತೇವೆ.’

ಇಲ್ಲಿ ಭಾರತದಂತಹ ದೇಶದಲ್ಲಿ ಇಲ್ಲಿನ ಜನರ ನಂಬಿಕೆಗಳನ್ನು, ಅವರ ಬೇಕು ಬೇಡಗಳನ್ನು ಋಣಾತ್ಮವಾಗಿ ಗ್ರಹಿಸಿರುವುದರ ಫಲವೇ ಇಂದು ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ಹಿಂಜರಿಕೆ, ಅನುಮಾನಗಳು ಹಾಗೂ ನಾಚಿಕೆ ಇಲ್ಲದೆ ಮೂಢನಂಬಿಕೆಗಳನ್ನಾಧರಿಸಿದ ಹತ್ತಾರು ಕಾರ್ಯಕ್ರಮಗಳು ದಿನವಿಡೀ ಬಿತ್ತರಗೊಳ್ಳುತ್ತಿರುತ್ತವೆ. ಏಕೆಂದರೆ ಇವು ಜನರಿಗೆ ಬೇಕಲ್ಲವೇ! ಅವರು ಇದನ್ನು ನಂಬುತ್ತಾರಲ್ಲಾ! ಆದರೆ ಈ ಮೂಢನಂಬಿಕೆ ಆಧಾರಿತ ಕಾರ್ಯಕ್ರಮಗಳು ಸಮಾಜವನ್ನು ದಿಕ್ಕು ತಪ್ಪಿಸಿ ಅಮಾಯಕ, ಮುಗ್ಧ ವೀಕ್ಷಕರನ್ನು ಗೊಂದಲಗೊಳಿಸಿ ಅವರನ್ನು ಇನ್ನಷ್ಟು ಕತ್ತಲಲ್ಲಿ ಕೊಳೆಯುವಂತೆ ಮಾಡುತ್ತಿರುವ ಬಗ್ಗೆ ಈ ದೃಶ್ಯ ಮಾಧ್ಯಮಗಳಿಗೆ ಕೊಂಚವೂ ಕೀಳರಿಮೆ ಇಲ್ಲ. ಇದು ಯಾರ ಆಸ್ತಿ ನಿಮ್ಮ ಆಸ್ತಿ ಎಂದು ಹೇಳಿಕೊಂಡು ಬರುವ ಖಾಸಗಿ ಚಾನಲ್‌ಗಳ ಉದ್ದೇಶ ಕೂಡ ಅಷ್ಟೇ. ಜನರಿಂದ ಹಾಗೂ ಜನರಿಗಾಗಿ ಎನ್ನುತ್ತಾ ಜನರನ್ನು ಹಾದಿ ತಪ್ಪಿಸುವುದು. ಸತ್ಯ ದರ್ಶನದ ಹೆಸರಿನಲ್ಲಿ ಚರ್ಚೆಗಳು, ಚೆಕ್‌ಬಂದಿಗಳು ನಡೆಸುವ ವೇದಿಕೆಗಳನ್ನು ನ್ಯಾಯಾಲಯವಾಗಿ ಮಾರ್ಪಡಿಸಿ ಅಲ್ಲಿ ತಾವೊಬ್ಬ ನ್ಯಾಯಾದೀಶನಂತೆಯೂ, ಇಲ್ಲಿನ ಎಲ್ಲಾ ರೋಗಗಳಿಗೆ ತಾನೊಬ್ಬನೇ ಸರ್ವಮುದ್ದು ನೀಡುವ ವೈದ್ಯನೆಂಬಂತೆ ವರ್ತಿಸುತ್ತಾ ಆಳದಲ್ಲಿ ಇವರೊಬ್ಬ ಜಾಹೀರಾತಿನ ರೂಪದರ್ಶಿಗಳಷ್ಟೇ ಎನ್ನುವ ನಿಜವನ್ನು ಮರೆಮಾಚುತ್ತಾರೆ. ಇಲ್ಲಿರುವುದು ಅನುಕೂಲಸಿಂಧು, ಅವಕಾಶವಾದಿ ಪತ್ರಿಕೋದ್ಯಮ. ಇಲ್ಲಿ ಮಾಧ್ಯಮವೆನ್ನುವುದು ಒಂದು ಪ್ರಾಡಕ್ಟ್. ಇದನ್ನು ಅತ್ಯಂತ ಕೊಳಕಾಗಿ ಉತ್ಪಾದಿಸಿ ವ್ಯಾವಹಾರಿಕವಾಗಿ ಸದಾ ಲಾಭದ ಆಧಾರದ ಮೇಲೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿ ಸರಿ ತಪ್ಪುಗಳ ಜಿಜ್ನಾಸೆಯೇ ಬರುವುದಿಲ್ಲ ಹಾಗು ಕಾಡುವುದಿಲ್ಲ. ಇಲ್ಲಿ ದೃಶ್ಯ ಮಾಧ್ಯಮವೆನ್ನುವುದು ಒಂದು ಕಂಪನಿಯಾಗಿ ಮಾರ್ಪಟ್ಟ ಬಳಿಕ ಅಲ್ಲಿ ನೈತಿಕತೆ ಅಥವಾ ಅನೈತಿಕತೆಯ ಪ್ರಶ್ನೆಯೇ ಇರುವುದಿಲ್ಲ.

ಇಲ್ಲಿರುವುದು ಒಂದೇ ಮಂತ್ರ. ಅದು ಲಾಭ ಮತ್ತು ಟಿಅರ್‌ಪಿ. ಅದಕ್ಕಾಗಿ ಇಲ್ಲಿ ನಿಮಿಷಕ್ಕೊಮ್ಮೆ ತಿರಸ್ಕಾರಯೋಗ್ಯವಾದ ಬ್ರೇಕಿಂಗ್ ಸುದ್ದಿ ಬಿತ್ತರಗೊಳ್ಳಲೇ ಬೇಕು, ಇಲ್ಲಿ ಕೆಲವರ ಚಾರಿತ್ಯವಧೆ ನಡೆಯುತ್ತಿರಲೇಬೇಕು, ನಿರ್ಭಯ ಪತ್ರಿಕೋದ್ಯಮದ ಹೆಸರಿನಲ್ಲಿ ಹಸೀ ಹಸೀ ಸುಳ್ಳುಗಳನ್ನು ಬೊಗಳುತ್ತಿರಬೇಕು, ರೋಮಾಂಚಕ ಪತ್ರಿಕೋದ್ಯಮದ ಲಜ್ಜೆಗೇಡಿತನ ಎಲ್ಲೆಲ್ಲೂ ರಾಚುತ್ತಿರಬೇಕು. ಇವೆಲ್ಲ ಇಂದು ದೃಶ್ಯ ಮಾಧ್ಯಮಗಳ ದಿನನಿತ್ಯದ ವಹಿವಾಟಾಗಿದೆ. ಏಕೆಂದರೆ ಇವೆಲ್ಲಾ ಮಾರ್ಕೆಟ್ ವ್ಯವಸ್ಥೆಯ ಆಕಾಂಕ್ಷೆಗಳಿಗೆ ಬದ್ಧತೆಗೊಳಪಟ್ಟಿರುತ್ತವೆ. ಇದು ಪ್ಯಾಕೇಜ್ ನಿಯಮ. ಈ ನೆಲದ ಭಾವನೆಗಳಿಗೆ ಅತ್ಯಂತ ಅಸೂಕ್ಷವಾಗಿ ಸ್ಪಂದಿಸುವ ಈ ದೃಶ್ಯ ಮಾಧ್ಯಮದ ಪತ್ರಕರ್ತರು ಪ್ರಚಲಿತ ವಿದ್ಯಾಮಾನಗಳಿಗೆ ತಾವೇ ಸ್ವತಹ ಬ್ರಾಂಡ್ ಆಗಿಬಿಡುತ್ತಾರೆ ಹೊರತಾಗಿ ಅದರ ಆಳಕ್ಕಿಳಿದು ಸತ್ಯಾಸತ್ಯತೆಗಳನ್ನು ಬಗೆದು ನೋಡುವುದಿಲ್ಲ. ಇಲ್ಲಿನ ಪತ್ರಕರ್ತರು ತಮ್ಮ ಚಾನಲ್ ಜನಪ್ರಿಯಗೊಳ್ಳುತ್ತಿದೆ, ತಾವೊಬ್ಬ ಜನಪ್ರಿಯ ಪತ್ರಕರ್ತ, ಎನ್ನುವ ಭ್ರಮೆಗೆ ಬಲಿಯಾದ ಕ್ಷಣದಿಂದ ಆತ ತನ್ನ ಜೊತೆ ಜೊತೆಗೆ ಗಣರಾಜ್ಯದ ಆದರ್ಶಗಳನ್ನು ಕೂಡ ಮಣ್ಣುಪಾಲು ಮಾಡುತ್ತಾನೆ. ಆಗ ಎಲ್ಲರನ್ನೂ ಆತ ಸಂಬೋಧಿಸುವುದು ಹೊಲಸು ಭಾಷೆಯಿಂದ, ಏಕವಚನದಿಂದ, ತಿರಸ್ಕಾರದಿಂದ, ಆಕ್ಷೇಪಣೆಗಳಿಂದ.

ಅತ್ಯಂತ ಲಾಭದಾಯಕವಾದ ಮಾಧ್ಯಮವಾಗಿರುವುದರಿಂದಲೇ ಇಂದು ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುವುದರ ಬಗೆಗೆ ದಿನನಿತ್ಯ ಕಾರ್ಯಕ್ರಮಗಳಿರುತ್ತವೆ. ಆದರೆ ಹಸಿವಿನ ಬಗೆಗೆ, ಅಪೌಷ್ಟಿಕತೆ ಬಗೆಗೆ ಚರ್ಚಿಸಲು ತಮ್ಮ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಯಾವುದೇ ಬಗೆಯ SLOT ದೊರೆಯುವುದಿಲ್ಲ! ಅಸ್ಪೃಶ್ಯರ ಮಾನವ ಹಕ್ಕುಗಳು ಪದೇ ಪದೇ ಹಲ್ಲೆಗೊಳಗಾದಾಗ ,ಅಲ್ಪಸಂಖ್ಯಾತರು ದಿನನಿತ್ಯದ ಅವಮಾನಗಳಿಗೆ ತುತ್ತಾಗುತ್ತಿದ್ದಾಗ, ಬಲಿಷ್ಟ ಜಾತಿಯ ಧನದಾಸೆಗೆ ದಲಿತನೊಬ್ಬನ ನರಬಲಿ ನಡೆದಾಗ, ಇದಕ್ಕೆ ಸಂಬಂಧಪಟ್ಟ ವರದಿಗಳಿಗೆ, ಚರ್ಚೆಗಳಿಗೆ ದಿನನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಸ್ಥಾನವೇ ಇರುವುದಿಲ್ಲ. ಆದರೆ ಕ್ರೈಂ ಸ್ಟೋರಿಗಳು, ಭೀಭತ್ಸ ವರದಿಗಳು, ಜನ್ಮಾಂತರದ ಬೊಗಳೆಗಳು ಪ್ರತಿದಿನ ಪ್ರಸಾರಗೊಳ್ಳುತ್ತಿರುತ್ತವೆ. ಏಕೆಂದರೆ ಇದು ಪ್ಯಾಕೇಜ್ ನಿಯಮ. ಮುಕ್ತ ಮಾರುಕಟ್ಟೆ ಇದನ್ನು ರೂಪಿಸಿದೆ.

ಇಲ್ಲಿ ಗಂಭೀರ, ವಿಚಾರಶೀಲ, ವೈಚಾರಿಕ, ನೈತಿಕತೆಯ ಪತ್ರಿಕೋದ್ಯಮವೆನ್ನುವುದು ( ದೃಶ್ಯ ಮಾಧ್ಯಮ) ತೀರಿಕೊಂಡು ಗೋರಿ ಸೇರಿದೆ.

ಕೊಲಂಬಿಯಾ ದೇಶದ ಪ್ರಖ್ಯಾತ ಲೇಖಕ “ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್” ಸುಮಾರು 2004-05 ರಲ್ಲಿ ಸೆಮಿನಾರ್ ಒಂದರಲ್ಲಿ ಮಂಡಿಸಿದ ಪ್ರಬಂಧವನ್ನು ನಾವು ಮತ್ತೊಮ್ಮೆ ಓದಲೇಬೇಕು. ಪತ್ರಿಕೋದ್ಯಮದ ಬಗ್ಗೆ ಸ್ವತಃ ಪತ್ರಕರ್ತರಾಗಿದ್ದ ಮಾರ್ಕೆಜ್‌ನ ಚಿಂತನೆಗಳನ್ನು ಇಲ್ಲಿ ಸಂಗ್ರಹವಾಗಿ ಹಾಗು ಸಂಕ್ಷಿಪ್ತವಾಗಿ ಅನುವಾದಿಸಲಾಗಿದೆ.

“50 ವರ್ಷಗಳ ಹಿಂದೆ ಪತ್ರಿಕೋದ್ಯಮದ ಶಾಲೆಗಳು ವ್ಯಾವಹಾರಿಕವಾಗಿ ಆಕರ್ಷಕವಾಗಿರಲಿಲ್ಲ. ಪತ್ರಿಕೋದ್ಯಮದ ಕಸುಬನ್ನು ನಾವೆಲ್ಲಾ ಸುದ್ದಿಮನೆಗಳಲ್ಲಿ, ಮುದ್ರಣಾಲಯಗಳಲ್ಲಿ, ಟೀ ಅಂಗಡಿಗಳಲ್ಲಿ ಕಲಿಯುತ್ತಿದ್ದೆವು. ಇಲ್ಲಿ ನಮಗೆ ಸರಿಯಾದ ಮೂಲಭೂತ ತರಬೇತಿಯನ್ನು ನೀಡಲಾಗುತ್ತಿತ್ತು, ಇದು ಒಂದು ಸೌಹಾರ್ದಯುತ, ಜೀವಂತ, ಲವಲವಿಕೆಯ ವಾತಾವರಣದಲ್ಲಿ ನಡೆಯುತ್ತಿತ್ತು. ಆ ಕಾಲದಲ್ಲಿ ಪತ್ರಿಕೋದ್ಯಮವೆನ್ನುವುದನ್ನು ಸುದ್ದಿ, ಸಂಪಾದಕೀಯ, ವರ್ತಮಾನ ಹಾಗೂ ಭವಿಷ್ಯದ ವಿಶ್ಲೇಷಣೆಗಳು, ಈ ರೀತಿಯಾಗಿ ಮೂರು ವಿಭಾಗಗಳಾಗಿ ವಿಂಗಡಿಸಲಾಗುತ್ತಿತ್ತು. ಈ ಮೂರೂ ವಿಭಾಗಗಳಲ್ಲಿ ಸಂಪಾದಕೀಯಕ್ಕೆ ಅತ್ಯಂತ ಘನತೆ ಮತ್ತು ಹೆಚ್ಚು ಒತ್ತು ನೀಡಲಾಗುತ್ತಿತ್ತು. ಈ ಪತ್ರಿಕೋದ್ಯಮವನ್ನು ಪ್ರವೇಶಿಸಲು ಸಾಂಸ್ಕೃತಿಕ ಅರಿವು ಹಾಗೂ ಅದರ ಹಿನ್ನೆಲೆಗಳ ಬಗೆಗಿನ ತಿಳುವಳಿಕೆ ಅತ್ಯಂತ ಅವಶ್ಯಕವಾಗಿತ್ತು. ಇದನ್ನು ಅಲ್ಲಿನ ವಾತಾವರಣದಲ್ಲಿ ಕಲಿಸಿಕೊಡುತ್ತಿದ್ದರು. ನಿರಂತರ ಓದುವಿಕೆ ಕೂಡ ಪೂರಕ ಅಗತ್ಯವಾಗಿತ್ತು. ಆದರೆ ಇಂದು ಪತ್ರಿಕೋದ್ಯಮದಲ್ಲಿ ಅಕಡೆಮಿಕ್‌ನ, ಚಿಂತನೆಗಳ ಪರಿಣಿತಿಯ ಕೊರತೆಯನ್ನು ನೀಗಿಸುವುದಕ್ಕಾಗಿಯೇ ಪತ್ರಿಕೋದ್ಯಮದ ಶಾಲೆಗಳನ್ನು ತೆರೆಯಲಾಯಿತು. ಇಲ್ಲಿ ಪತ್ರಿಕೋದ್ಯಮಕ್ಕೆ ಬೇಕಾಗುವ ಪೂರಕ ವಿಷಯಗಳನ್ನು ಹೇಳಿಕೊಡುತ್ತಾರೆ, ಆದರೆ ಪತ್ರಿಕೋದ್ಯಮದ ಬಗೆಗೆ ಹೇಳಿಕೊಡುವುದು ಬಹಳ ಕಡಿಮೆ. ಇಲ್ಲಿ ಮಾನವೀಯ ಅಂಶಗಳಿಗೆ ಹೆಚ್ಚು ಸಮಯವನ್ನು ಮೀಸಲಿಡವುದರ ಬದಲಾಗಿ ಮಹಾತ್ವಾಕಾಂಕ್ಷೆ ಹಾಗೂ ಜಡತೆಗೆ ಹೆಚ್ಚು ಒತ್ತು ಕೊಡುತ್ತಾರೆ.

“ಈ ಶಾಲೆಗಳಲ್ಲಿ ಸಂಶೋಧನೆಯನ್ನುವುದು ಹೆಚ್ಚುವರಿ ವಿಷಯವನ್ನಾಗಿ ಕಲಿಸದೆ ಪತ್ರಿಕೋದ್ಯಮದ ಒಂದು ಭಾಗವಾಗಿ ಕಲಿಸಬೇಕು. ಅತ್ಯಂತ ಮುಖ್ಯವಾದದ್ದು ಮೌಲ್ಯಗಳು ಹಾಗೂ ನೈತಿಕತೆ. ಅವು ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ ಝೇಂಕಾರದಂತಿರಬೇಹೆ ಹೊರತು ಕೇವಲ ಒಂದು ಪಠ್ಯಪುಸ್ತಕದ ವಿಷಯ ಮಾತ್ರವಾಗಿರಬಾರದು. ಇದನ್ನು ನವ ಪೀಳಿಗೆಯ ಪತ್ರಕರ್ತರು ಮನದಟ್ಟು ಮಾಡಿಕೊಳ್ಳಬೇಕು. ಆದರೆ ಇಂದು ಪತ್ರಿಕೋದ್ಯಮ ಶಾಲೆಗಳಲ್ಲಿ ಕಲಿತು ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳು ಅತ್ಯಂತ ಅಸಹಜವಾದ ಅಪಾರ ನಿರೀಕ್ಷೆಗಳನ್ನು ಹೊತ್ತಿರುತ್ತಾರೆ. ಇವರಿಗೆ ವಾಸ್ತವದ ಪರಿಚಯವಾಗಲಿ ಅಥವಾ ಅದರೊಂದಿಗಿನ ನಂಟಾಗಲಿ ಇರುವುದಿಲ್ಲ. ಸ್ವಹಿತಾಸಕ್ತಿಯನ್ನು,ತಮ್ಮ ಭವಿಷ್ಯದ ಆತಂಕಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ಈ ಪದವೀಧರರು ತಾವು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವಾಗ ಕ್ರಿಯಾಶೀಲತೆ ಹಾಗೂ ಅನುಭವಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟಿರುತ್ತಾರೆ. ಇಂದಿನ ಉದಯೋನ್ಮುಖ ಪತ್ರಕರ್ತರು ಮಂತ್ರಿಗಳ, ಅಧಿಕಾರಿಗಳ ಸುಪರ್ದಿಯಲ್ಲಿರುವ ಗುಪ್ತ ದಾಖಲೆಗಳನ್ನು ಅಮೂಲಾಗ್ರವಾಗಿ ಓದುವುದರಲ್ಲಿ, ಸಂದರ್ಶನದ ವೇಳೆಯಲ್ಲಿ ಆತ್ಮೀಯತೆಯಿಂದ ಹೇಳಿದ ಮಾತುಗಳನ್ನು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸದೆ ಅದನ್ನು ಮುದ್ರಿಸುವುದರಲ್ಲಿ ಅತ್ಯಂತ ಉತ್ಸುಕತೆ ತೋರುತ್ತಾರೆ ಹಾಗೂ ಆ ರೀತಿ ನಡೆದುಕೊಳ್ಳುವುದರ ಬಗೆಗೆ ಹೆಮ್ಮೆಯನ್ನು ವ್ಯಕ್ತ ಪಡಿಸುತ್ತಾರೆ. “ಆಫ಼್ ದಿ ರೆಕಾರ್ಡ್” ಎಂದು ಹೇಳಿದ್ದರೂ ಅದನ್ನು ಅತ್ಯಂತ ರೋಮಾಂಚಕ ಸುದ್ದಿಯನ್ನಾಗಿ ಪ್ರಚಾರ ಮಾಡುವುದರಲ್ಲಿ ಇವರಿಗೆ ಅಪಾರ ಆಸಕ್ತಿ. ಇಲ್ಲಿ ದುಖಕರ ಸಂಗತಿಯೆಂದರೆ ಈ ಎಲ್ಲಾ ತರಹದ ಅನೈತಿಕ ನಡಾವಳಿಗಳನ್ನು ಈ ಉದಯೋನ್ಮುಖ ಪತ್ರಕರ್ತರು ಅತ್ಯಂತ ಸಹಜವಾಗಿಯೇ ಸ್ವೀಕರಿಸುತ್ತಾರೆ ಹಾಗೂ ಇದನ್ನು ತಮ್ಮ ಪ್ರಜ್ಞೆಯೊಳಗೆ ಬೇರು ಬಿಡುವಂತೆ ನೋಡಿಕೊಳ್ಳುತ್ತಾರೆ. ಅತ್ಯುತ್ತಮ ಸುದ್ದಿಯನ್ನು ಮೊದಲು ಪ್ರಕಟಿಸುವುದಕ್ಕಿಂತಲೂ ಮುಖ್ಯವಾದದ್ದು ಅದನ್ನು ಅಷ್ಟೇ ಉತ್ತಮವಾಗಿ ಮಂಡಿಸಬೇಕು ಎನ್ನುವುದನ್ನು ಮರೆಯುತ್ತಾರೆ. ವ್ಯವಸ್ಥೆಯಲ್ಲಿ ಅಡಕವಾಗಿರುವ ಘಟನೆಗಳನ್ನು, ಸುದ್ದಿಗಳನ್ನು, ತನಿಖಾ ವರದಿಗಳನ್ನು ಪ್ರಕಟಿಸುವಾಗ ಮೊದಲು ಜಾಗಕ್ಕೆ ತೆರಳಿ, ಅಮೂಲಗ್ರವಾಗಿ ಸಂಶೋಧಿಸಿ ನಂತರ ಈ ವರದಿಗಳನ್ನು ವ್ಯಾಕರಣದ ತಪ್ಪಿಲ್ಲದೆ ಬರೆಯುವುದಕ್ಕೆ ಅಪಾರವಾದ ಜ್ಞಾನ, ಸಂಯಮ, ವೇಳೆ, ಮತ್ತಷ್ಟು ಸಂಶೋಧನೆಯನ್ನು ಮಾಡುವ ಹುಮ್ಮಸ್ಸು, ಬರೆಯುವ ಕಸಬುದಾರಿಕೆ, ಎಲ್ಲವೂ ಒಂದೇ ಕಡೆ ಅಡಕಗೊಂಡಿರಬೇಕು. ವರದಿಯೆನ್ನುವುದು ನಡೆದ ಒಂದು ಘಟನೆಯನ್ನು ಅತ್ಯಂತ ಕೂಲಂಕುಷವಾಗಿ, ಪಕ್ಷಪಾತವಿಲ್ಲದೆ, ಆದಷ್ಟು ಸತ್ಯಕ್ಕೆ ಹತ್ತಿರವಾಗಿ ಪುನರ್‌ನಿರ್ಮಾಣ ಮಾಡುವ ಕಲೆ ಎನ್ನುವುದನ್ನು ಇವರು ಮರೆಯುತ್ತಾರೆ.

“ಈ ಟೇಪ್ ರಿಕಾರ್ಡರ್ ಬರುವುದಕ್ಕಿಂತ ಮೊದಲು ಪತ್ರಿಕೋದ್ಯಮದಲ್ಲಿ ನಾವು ಬಳಸುತ್ತಿದ್ದ ಪರಿಕರಗಳೆಂದರೆ ಒಂದು ನೋಟ್ ಬುಕ್, ಪಕ್ಷಪಾತವಿಲ್ಲದ ನಮ್ಮ ಜೋಡಿ ಕಿವಿಗಳು, ಹಾಗು ಹೊಂದಾಣಿಕೆ ಮಾಡಿಕೊಳ್ಳದ ನಮ್ಮ ಪ್ರಾಮಾಣಿಕತೆ. ಕ್ಯಾಸೆಟ್ ಎನ್ನುವುದು ಎಂದಿಗೂ ವ್ಯಕ್ತಿಯೊಬ್ಬನ ನೆನಪಿನ ಶಕ್ತಿಯ ಬದಲೀ ಸಾಧನವಲ್ಲ. ಅದೊಂದು ಉಪಕರಣ ಅಷ್ಟೇ. ಈ ರೆಕಾರ್ಡರ್ ಎನ್ನುವುದು ಕೇಳಿಸಿಕೊಳ್ಳುತ್ತದೆ ಆದರೆ ಮನನ ಮಾಡಿಕೊಳ್ಳುವುದಿಲ್ಲ ಎನ್ನುವ ಸತ್ಯವನ್ನು ನಮ್ಮ ಇಂದಿನ ತಲೆಮಾರಿನ ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಪತ್ರಕರ್ತರು ರೆಕಾರ್ಡರ್ ಅನ್ನು ಕೇವಲ ಸಾಕ್ಷಿಯಾಗಿ ಬಳಸಿಕೊಳ್ಳಬೇಕು. ಏಕೆಂದರೆ ಕಡೆಗೂ ಉಪಯೋಗಿಸಬೇಕಾಗಿರುವುದು ನ್ಯಾಯದ ಪಕ್ಷಪಾತವಿರುವಂತಹ ಮನಸ್ಸಿನ ತರಬೇತಿಯನ್ನು ಮಾತ್ರ. ಅದರೆ ಇಲ್ಲಿ ಪತ್ರಿಕೋದ್ಯಮದ ತರಬೇತಿ ವಿಷಯಗಳನ್ನು ಕಾಲಕಾಲಕ್ಕೆ ತಕ್ಕ ಹಾಗೆ ಅಂದಿನ ಪ್ರಸ್ತುತತೆಗೆ ಅನುವಾಗುವಂತೆ ಸೂಕ್ತ ಬದಲಾವಣೆಗಳಿಗೆ ಒಳಪಡಿಸುತ್ತಾ, ಇದನ್ನು ಕಲಿಸುವುದಕ್ಕಾಗಿ ಸದಾಕಾಲ ಹೊಸ ಹೊಸ ಪರಿಕರಗಳನ್ನು ಹುಡುಕಿಕೊಳ್ಳಬೇಕು. ಆದರೆ ನಾವು ಹಳೇ ಕಾಲದ ಕೇಳುವ ಹಾಗೂ ಕಲಿಯುವ ಪದ್ಧತಿಯನ್ನು ನವೀಕರಿಸುತ್ತಿದ್ದೇವೆ. ಇದರಿಂದ ಏನೂ ಉಪಯೋಗವಾಗುವುದಿಲ್ಲ.

ಸತ್ಯದೊಂದಿಗೆ ಸದಾ ಮುಖಾಮುಖಿಯಾಗುತ್ತಲೇ ಮಾನವೀಯತೆಯನ್ನು ಈ ಪತ್ರಿಕೋದ್ಯಮವೆನ್ನುವ ಅನುಶಕ್ತಿಯೊಂದಿಗೆ ಮಿಳಿತಗೊಳಿಸಬೇಕಾಗುತ್ತದೆ. ಯಾವನು ಇದನ್ನು ತನ್ನ ವ್ಯಕ್ತಿತ್ವದೊಳಗೆ ರಕ್ತಗತ ಮಾಡಿಕೊಂಡಿರುವುದಿಲ್ಲವೋ ಅವನು ಇದರ ಮಾಂತ್ರಿಕತೆಯನ್ನೂ ಕೂಡ ಗ್ರಹಿಸಲಾರ. ಇದರ ಅನುಭವದ ತೆಕ್ಕೆಗೆ ಒಳಪಡದವನು ಕೇವಲ ರೋಮಾಂಚಕ ವರದಿಗಳಿಗೆ, ಈ ವರದಿಗಳು ತಂದುಕೊಡುವ ಹುಸಿ ರೋಚಕತೆಗೆ ಬಲಿಯಾಗುತ್ತಾನೆ. ಆ ಮೂಲಕ ತನಗರಿವಿಲ್ಲದೆಯೇ ಅನೈತಿಕತೆಯ ಆಳಕ್ಕೆ ಕುಸಿದಿರುತ್ತಾನೆ.”

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ಅಸಹಜ ನಿರೀಕ್ಷೆಗಳ ಮಧ್ಯೆ ಜನಶ್ರೀ

-ಭೂಮಿ ಬಾನು

ಸದ್ಯದ ಮಟ್ಟಿಗೆ ಒಂದಿಷ್ಟು ಸೆನ್ಸಿಬಲ್ ಚಾನೆಲ್ ಎನ್ನಬಹುದಾದ ಜನಶ್ರೀ ಸುದ್ದಿ ವಾಹಿನಿ ಇಂದು (ಫೆಬ್ರವರಿ 18) ಒಂದು ವರ್ಷ ಪೂರೈಸಿದೆ. ಚಾನೆಲ್‌ನ ಕ್ರಿಯಾಶೀಲ ಹಾಗೂ ಸೂಕ್ಷ್ಮ ಮನಸ್ಸಿನ  ಸಿಬ್ಬಂದಿಗೆ ಅಭಿನಂದನೆಗಳು.

ಹೇಳಿ ಕೇಳಿ ಚಾನೆಲ್ ಅನ್ನು ಆರಂಭಿಸಿದ್ದು ಗಣಿ ವ್ಯವಹಾರದಲ್ಲಿ ಹಣ ಗಳಿಸಿದ್ದ ಜನಾರ್ಧನ ರೆಡ್ಡಿ. ಅವರಿಗೆ ಜ್ಯೋತಿಷ್ಯದ ಬಗ್ಗೆಯಾಗಲಿ, ವೈಜ್ಞಾನಿಕ ಚಿಂತನೆಯ ಅಗತ್ಯತೆಯಾಗಲಿ, ಸ್ಪಷ್ಟ ಆಲೋಚನೆಗಳೇನೂ ಇರಲಿಲ್ಲ. ದೈವದ ಬಗ್ಗೆ ಅತೀವ ಭಕ್ತಿ ಇತ್ತು, ಆದರೆ ಸಾರ್ವಜನಿಕ ಸಂಪತ್ತಿನ ದುರಪಯೋಗದ ಬಗ್ಗೆ ಮುಜುಗರ ಇರಲಿಲ್ಲ. ಇಂತಹವರಿಂದ ಒಂದು ಮೂಢನಂಬಿಕೆ ವಿರೋಧಿ ಸುದ್ದಿವಾಹಿನಿಯೊಂದನ್ನು ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ಅದರಲ್ಲೂ ಪೈಪೋಟಿಯಲ್ಲಿರುವ ಇತರೆ ಚಾನೆಲ್ ಗಳು ಜ್ಯೋತಿಷ್ಯ, ಅಂಧ ಶ್ರದ್ಧೆಗಳನ್ನು ಢಾಳಾಗಿ ತೋರಿಸಿ ನೋಡುಗರನ್ನು ಆಕರ್ಷಿಸುತ್ತಿರುವಾಗ ಒಂದು ವರ್ಷದ ಹಿಂದೆ ಆರಂಭವಾದ ಚಾನೆಲ್  ಭಿನ್ನವಾಗಿರಬೇಕೆಂಬ ನಿರೀಕ್ಷೆಯೇ ಅಸಹಜವಾಗಿತ್ತು.

ಆದರೆ ಚಾನೆಲ್ ಭಿನ್ನವಾಗಿಯೇ ಹೊರಬಂತು. ಅದಕ್ಕೆ ಕಾರಣ ಮಾಲಿಕರಲ್ಲ, ಕ್ರಿಯಾಶೀಲ ಸಿಬ್ಬಂದಿ. ರಾಶಿ ಭವಿಷ್ಯ, ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ.…ತಲೆದಂಡದಂತಹ ಕಾರ್ಯಕ್ರಮಗಳನ್ನು ಇವರು ಪ್ರಸಾರ ಮಾಡಲಿಲ್ಲ. ಗ್ರಹಣದ ಸಂದರ್ಭಗಳಲ್ಲೂ ಜ್ಯೋತಿಷ್ಯದ ಜೊತೆ ವೈಜ್ಞಾನಿಕ ಚಿಂತನೆಯನ್ನು ಮುಖಾಮುಖಿಯಾಗಿಸಿದರು. ನಿನ್ನೆ (ಫೆ.17) ಕೂಡ ರೈಸ್ ಪುಲ್ಲಿ ಯಿಂದ ಮೋಸ ಹೋಗುವವರನ್ನು ಎಚ್ಚರಗೊಳಿಸಲು ಒಂದು ಉತ್ತಮ ಕಾರ್ಯಕ್ರಮ ಮಾಡಿದ ಹೆಗ್ಗಳಿಕೆ ಜನಶ್ರೀಗೆ ಸೇರುತ್ತದೆ.

ಟಿ.ಆರ್.ಪಿ ಗಳಿಕೆಯಲ್ಲಿ ಜನಶ್ರೀ ಯಾವ ಸ್ಥಾನದಲ್ಲಿದೆಯೋ ಹೊರ ಜಗತ್ತಿಗೆ ಅದು ಗೊತ್ತಾಗುವುದಿಲ್ಲ. ಗೊತ್ತಾದರೂ, ಅದು ಕೆಲವೇ ವರ್ಗಗಳಿಗೆ ಸೀಮಿತವಾದ ಮಾಹಿತಿಯಾಗಿ ಉಳಿದುಬಿಡುತ್ತದೆ. ವಿಭಿನ್ನ, ವಿಶಿಷ್ಟವಾದ ಅನೇಕ ಕಾರ್ಯಕ್ರಮಗಳು ಈ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿವೆ. ಒಂದು ಸಿನಿಮಾ ಕತೆ, ಈಗ ನಾನು, ಒಂದೊಳ್ಳೆ ಕೆಲಸ, ಜನಶ್ರೀ ತನಿಖೆ, ಡೆಡ್ ಲೈನ್… ಕೆಲವು ಉದಾಹರಣೆಗಳಷ್ಟೆ.

ಹಾಗಂತ ಚಾನೆಲ್ ಎಲ್ಲಾ ಲೋಪಗಳಿಂದ ಮುಕ್ತ ಎಂದೇನಲ್ಲ. ಬಳ್ಳಾರಿ ಗಣಿ ಸುದ್ದಿಗಳು ಗೌಣವಾಗಿ ಬಿತ್ತರಗೊಳ್ಳುತ್ತವೆ. ಚಾನೆಲ್ ಮಾಲಿಕರು ಜೈಲಿಗೆ ಹೋದದ್ದು ಸುದ್ದಿಯಾದರೂ, ಯಡಿಯೂರಪ್ಪನ ಜೈಲು ಸಹವಾಸ ಅಥವಾ ಶ್ರೀರಾಮುಲು ಗೆಲುವಿನ ಸುದ್ದಿಯಷ್ಟಲ್ಲ.

ಗುಂಡಿಗಳಿರುವ ರಸ್ತೆ, ಹಾಳಾದ ಸೇತುವೆ, ತಲುಪದ ಪಿಂಚಣಿ, ಅನರ್ಹರಿಗೆ ವಿಶ್ವವಿದ್ಯಾನಿಲಯಗಳು ಹಾಕಿದ ಮಣೆ…ಹೀಗೆ ಅನೇಕ ಸುದ್ದಿಗಳಾಗುತ್ತವೆ. ಆದರೆ ಸಾಮಾಜಿಕ ನ್ಯಾಯದ ನೆಲೆಯಲ್ಲಿ ನಿಂತು ನೋಡಿದಾಗ ಇನ್ನೂ ಶೋಷಣೆ ಇದೆ. ಜಾತಿ ಜಾತಿಗಳ ನಡುವಿನ ಸೇತುವೆ ಶಿಥಿಲಗೊಂಡಿದೆ. ದಲಿತರು, ಹಿಂದುಳಿದವರು ಸಾಗಬೇಕಾದ ಪ್ರಗತಿ ಪಥದಲ್ಲಿ ಗುಂಡಿಗಳೇ ಹೆಚ್ಚು. ಅತ್ತ ಕಡೆಯೂ ಒಂದಿಷ್ಟು ಗಮನ ಹರಿಸಬೇಕಿದೆ. ಅಥವಾ ಈ ನಿಟ್ಟಿನಲ್ಲಿ ಎಷ್ಟೇ ಗಮನ ಹರಿಸಿದರೂ ಕಡಿಮೆಯೇ.

ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

– ಸದಾನಂದ ಕೋಟ್ಯಾನ್

ಮಂಗಳೂರಿನಲ್ಲಿ ಪತ್ರಿಕಾ ಭವನದ ಮೂರನೇ ಮಹಡಿ ಉದ್ಘಾಟನೆ ಆಗಿದೆ. ಕರಾವಳಿಯವರೇ ಆದ ಮುಖ್ಯಮಂತ್ರಿ ಸದಾನಂದ ಗೌಡರು ಭವನ ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ರಾಜ್ಯಾಂಗಕ್ಕೆ ದಾಸನಾಗಿರುವುದಕ್ಕೆ ಇಡೀ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂಬಂತೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತುಂಬ ರಾಜಕಾರಣಿಗಳು. ಅವರ ಅಕ್ಕಪಕ್ಕದಲ್ಲಿ ರಾಜಕಾರಣಿಗಳು ನೀಡಿದ ಕೊಡುಗೆಯನ್ನು ಪ್ರಶಂಸಿಸುವ ಆಸ್ಥಾನ ಭಟರ ಪಾತ್ರಧಾರಿಗಳಾಗಿ ಪರಿವರ್ತನೆ ಹೊಂದಿದ ಪತ್ರಕರ್ತರು. ಇಡೀ ಸಮಾರಂಭ ಮಂಗಳೂರಿನಲ್ಲಿ ಮಾಧ್ಯಮ ಎತ್ತ ಸಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿತ್ತು.

ಸೋರುತ್ತಿರುವ ಸ್ಥೈರ್ಯ, ರಾಜ್ಯಾಂಗ ಮತ್ತು ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ ಸಾಮರ್ಥ್ಯ ಕಳೆದುಕೊಂಡ ಲೇಖನಿಗಳಿಗೆ ಪ್ರಸ್ತುತ ಅಗತ್ಯವಾಗಿ ಶಕ್ತಿ ತುಂಬಬೇಕಾಗಿದೆ. ಪತ್ರಿಕಾ ಭವನದಲ್ಲಿ ಅಪಾರ ಹಣವಿದೆ. ದೇಶದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಪತ್ರಕರ್ತರು ಇದ್ದಾರೆ. ಅವರ ಸ್ಫೂರ್ತಿಯ ಗೊಡವೆಗೆ ಹೋಗದ, ಲೋಕಲ್ ದಾಸ್ಯಕ್ಕೆ ಶರಣಾದ ಪತ್ರಕರ್ತರು ಭವನದ ನೆಪದಲ್ಲಿ ಮತ್ತಷ್ಟು ಕೆಳಗಿಳಿದರು. ಅದಕ್ಕೆ ಪಕ್ಕಾ ಸಾಕ್ಷಿ ಉದ್ಘಾಟನಾ ಆಹ್ವಾನ ಪತ್ರದಲ್ಲಿರುವ ಕಳಂಕಿತ ಶಾಸಕರೊಬ್ಬರ ಹೆಸರು.

ಹಾಗೆ ನೋಡಿದರೆ ಮಂಗಳೂರಿನ ಪತ್ರಕರ್ತ ಗೆಳೆಯರಿಗೆ ಈಗ ಕಡು ಕಷ್ಠದ ಕಾಲ. ಅವರನ್ನು ಕಷ್ಟದಿಂದ ಪಾರು ಮಾಡುವ ಕೃಷ್ಣಣ್ಣ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು ಈ ನೀಲಿಚಿತ್ರದ ಪೊಲೀ ಹುಡುಗನ ಕೃಷ್ಣ ಲೀಲೆಗಳನ್ನು ವರದಿ ಮಾಡುತ್ತಾ ಛೀ ಥೂ ಎಂದು ಉಗಿಯುತ್ತಿದ್ದರೆ ಮಂಗಳೂರಿನ ಮಾಧ್ಯಮದ ಗೆಳೆಯರು ತಮ್ಮ ಪತ್ರಕರ್ತರ ಸಂಘದ ಮೂರನೇ ಮಹಡಿಯ ಸಭಾಂಗಣದ ಉದ್ಘಾಟಣೆಗೆ ಕೃಷ್ಣ ಲೀಲೆ ಬಹಿರಂಗಗೊಂಡ ಮರು ದಿವಸವೇ ಕಾರ್‍ಯಕಾರಿ ಸಮಿತಿಯ ಸಭೆ ಸೇರಿ ಆಹ್ವಾನಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಬಹಳ ನೋವಿನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಕೃಷ್ಣ ಪಾಲೇಮಾರ್ ಹೆಸರಿನ ಕೆಳಗೆ ನಮೂದಿಸಿದ್ದಾರೆ. ನೀಲಿಚಿತ್ರ ಸರಬರಾಜುದಾರ ಎಂದು ಇಡೀ ರಾಜ್ಯ ಮತ್ತು ದೇಶದ ಜನತೆ ಟೀಕಿಸುತ್ತಿದ್ದರೆ ಮಂಗಳೂರಿನ ಕಾರ್‍ಯನಿರತ ಪತ್ರಕರ್ತರಿಗೆ ಕೃಷ್ಣ ಜೆ ಪಾಲೇಮಾರ್ “ಮುಖ್ಯ ಅತಿಥಿ”. ಅಷ್ಟು ಮಾತ್ರವಲ್ಲದೆ ತಾವು ಕೆಲಸ ಮಾಡುವ ಮಾಧ್ಯಮಗಳಲ್ಲಿ ತಮ್ಮ ಋಣ ತೀರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷ್ಣಣ್ಣನಿಗೆ ಮೊಬೈಲ್ ಬಳಸಲೇ ಗೊತ್ತಿಲ್ಲ, ಯಾರೋ ಅಪಾಪೋಲಿಗಳು ಕಳುಹಿಸಿರುವ ಎಂಎಂಎಸ್ ಎಂದು ವೈಭವೀಕರಿಸಿ ಬರೆಯುವುದರ ಜೊತೆಗೆ ಕೃಷ್ಣಣ್ಣ ನೈತಿಕ ಹೊಣೆ ಹೊತ್ತು (ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹುದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದಂತೆ) ರಾಜೀನಾಮೆ ನೀಡಿದ್ದಾರೆ ಎಂದು ಹುತಾತ್ಮ ಪಟ್ಟವನ್ನು ಕಟ್ಟಲು ಹೆಣಗಾಡಿ ನಗೆಪಾಟೀಲಿಗೀಡಾಗುತ್ತಿದ್ದಾರೆ.

ಹೀಗೆ ಮಂಗಳೂರು ಪತ್ರಕರ್ತರ ಕಾರುಬಾರು ಪಟ್ಟಿ ಮಾಡುವುದಾದರೆ :

  • ಇಡೀ ಕರ್ನಾಟಕ ರಾಜ್ಯದಲ್ಲಿ ಕೆಐಎಡಿಬಿ ಹಗರಣಗಳು ಹೊರಬೀಳುತ್ತಿದ್ದರೆ ಮಂಗಳೂರಿನ ಪತ್ರಕರ್ತರು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
  • ವರದಿಗಾರಿಕೆಯಲ್ಲಿ ಪ್ರಾಯೋಜಕರತ್ತಲೇ ನಿಷ್ಠೆ ಹೊರತು ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಿಲ್ಲ
  • ನೈತಿಕ ಪೊಲೀಸ್‌ಗಿರಿಗೆ ಸದಾ ಬೆಂಬಲಿಸುತ್ತಿದ್ದ ಮಾಧ್ಯಮ, ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಆರಂಭಿಸಿದ ನಂತರವಷ್ಟೇ ಬಹಿರಂಗ ಬೆಂಬಲವನ್ನು ನಿಲ್ಲಿಸಿ, ನಿಜವಾದ ಸುದ್ದಿಯತ್ತ ಪ್ರಾಮುಖ್ಯತೆ ಕೊಟ್ಟರು.
  • ಬ್ರಹ್ಮಕಲಶ, ನಾಗಮಂಡಲಗಳ ಜಾಹೀರಾತಿಗೇ ಕಾಯುವ ಪತ್ರಿಕೆಗಳು ದೇವರ ಆರಾಧನೆಗಿಂತಲೂ ಜಾಹೀರಾತು ಆರಾಧನೆಗೇ ಒತ್ತು ಕೊಡುತ್ತಿರುವುದು ಇಂದಿಗೂ ವಾಸ್ತವ.

ಇನ್ನು  ಕೃಷ್ಣ ಜೆ. ಪಾಲೇಮಾರ್ ಕೃಪಾಪೋಷಿತ ಮಾಫಿಯಾಗಳ ವಿಚಾರ ಕೇಳಬೇಕೇ? ನಗರದಲ್ಲಿರುವ ಅಕ್ರಮ ಮಾಲ್ ಒಂದರ ಪಾಲುದಾರರೊಬ್ಬರಿಗೆ ಪಾಲೇಮಾರ್ ಪರವಾದ ಪ್ರತಿಭಟನೆ ಮಾಡಲು ಐಡಿಯಾ ಕೊಟ್ಟವರೂ ಪತ್ರಕರ್ತರು. ನಾವೇ ನಮ್ಮಷ್ಟಕ್ಕೆ ಬರೆದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ, ನಮ್ಮ ವರದಿಗೆ ಪೂರಕವಾಗಿ ನಿಮ್ಮ ದ್ವನಿಯೂ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಪತ್ರಕರ್ತರದ್ದು. ಬಳ್ಳಾರಿಯಿಂದ ಗಣಿ ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಮಾಫಿಯಾದ ಹಿಂದೆ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಕೈ ಕೆಲಸ ಮಾಡಿತ್ತು. ಆದರೆ ಮಂಗಳೂರಿನ ಪತ್ರಕರ್ತರು ಈ ಬಗ್ಗೆ ವರದಿಗಳನ್ನು ಮಾಡಿದ್ದೇ ಇಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ರಾಜೀನಾಮೆಗೆ ಪಾಲೇಮಾರ್ ಕಾರಣರಾಗಿದ್ದ ಸಂಧರ್ಭ ಬೆಂಗಳೂರು ಮತ್ತು ಕಾರವಾರದಿಂದ ಪಾಲೇಮಾರ್ ವಿರುದ್ಧ ವರದಿಗಳು ಪ್ರಕಟಗೊಂಡವು. ಆದರೆ ಮಂಗಳೂರಿನ ಶಾಸಕ, ಸಚಿವರಾಗಿದ್ದ ಪಾಲೇಮಾರ್ ಬಗ್ಗೆ ಪತ್ರಕರ್ತರು ಆಸಕ್ತಿ ವಹಿಸಿ ಪ್ರಕರಣವನ್ನು ಫಾಲೋ ಮಾಡಲೇ ಇಲ್ಲ. ಕೆಐಎಡಿಬಿ ಹಗರಣ ರಾಜ್ಯಾಧ್ಯಂತ ಸುದ್ಧಿಯಾದಾಗ ಮಂಗಳೂರು ಕೆಐಎಡಿಬಿ ಹಗರಣಗಳ ಹೂರಣವನ್ನು ಕೆದಕಲು ಹೋಗಲೇ ಇಲ್ಲ. ಕೆಐಎಡಿಬಿ ಕಡತಗಳ ಯಾವುದೋ ಒಂದು ಮೂಲೆಯಲ್ಲಿ ಪಾಲೇಮಾರ್ ಹೆಸರು ಇರಲೇ ಬೇಕು ಎಂಬುದು ಕರಾವಳಿಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇರುವ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿ ಫ್ಲ್ಯಾಟು, ಲೇಔಟ್, ಮಾಲ್, ಬಹುಮಹಡಿ ಕಟ್ಟಡಗಳ ನಿರ್ಮಾಣದ ಹಿಂದೆ ಪಾಲೇಮಾರ್ ಪಾಲುದಾರಿಕೆ ಇದೆ. ಪಾಲೇಮಾರ್ ಜಮೀನಿನಲ್ಲಿ ಪತ್ತೆಯಾದ ಅಕ್ರಮ ಮರಳು ಶೇಖರಣೆಗೆ ಜಿಲ್ಲಾಧಿಕಾರಿ ತಂಡ ದಾಳಿ ಮಾಡಿದಾಗಲೂ ಮಂಗಳೂರಿನ ಕೆಲವೊಂದು ಪತ್ರಿಕೆಗಳಿಗೆ ಅದು ಸುದ್ಧಿಯೇ ಆಗಿರಲಿಲ್ಲ. ಸಚಿವರೊಬ್ಬರ ವ್ಯವಹಾರಕ್ಕೆ ಅಧಿಕಾರಿಗಳು ತಂಡ ದಾಳಿ ಮಾಡಿ ಮರಳನ್ನು ವಶಪಡಿಸಿಕೊಳ್ಳುವುದು ಸುದ್ಧಿಯೇ ಅಲ್ಲ ಎಂಬುದು ಪಾಲೇಮರ್ ಮತ್ತು ಪತ್ರಕರ್ತರ ಮಧ್ಯದ ಸಂಬಂಧವನ್ನು ಎತ್ತಿ ತೋರಿಸುತ್ತದೆ.

Hope good sense dawn on all media men in 2012

Kariyappa Gudadahalli

The role of media began this year (2011) with exposing corruption of unimaginable magnitude and ended with attracting strong criticism from the present chairman of Press Council of India. Besides, a few powerful media people had embarrassing days for having friendship with Niira Radia, a PR person interested in setting up the cabinet as per the wishes of her clients.

‘Sensationalising’, ‘trivialising’, ‘ignoring’ and sometimes ‘glorifying’ are some of the charges generally levelled against media. Media’s role this year was no different. It sensationalised violence on its late evening crime bulletins, trivialised ‘news’ by giving undue importance to incidents worth ignoring. It also ignored the issues worth an in-depth coverage. On top of all these, the one thing which vast media never failed to perform was ‘glorifying’. No doubt, this is in reference to Anna movement in general and Anna Hazare in particular.

A group of five people claimed to have conducted consultations with crores of people over a draft bill consisting innumerable clauses and sub-clauses. And, the media believed it. Hardly made any attempts to question the process of consultation. Needless to state that Anna movement, despite many follies within, succeeded to evoke conscience of public against corruption. But the impact has not yet reached the grassroots. Nobody can state that earnings of a traffic police inspector or an RTO or a sub registrar in Revenue Department or a minister/MLA have come down following the Anna movement. There are no instances of the educated class, which rallied behind Anna, taking up a fight against corrupt officer on demanding bribe either.

Forget the government establishments, the media which gave the possible widest coverage to anti-corruption movement, has not been able to throw out the corrupt within. Journalists, better known as lobbyists, continue to enjoy good will of the management and get regular hikes and promotions.

A Kannada news channel, whose owner was actively identified with Anna movement, attracted attention of other media people by changing its approach in reporting charges of corruption, misuse of office faced by former Chief Minister B.S Yeddyurappa. Any layman regularly watching the channel could notice ‘the change’ within days of Yeddyurappa’s release from the central prison. The change was well displayed in his two-hour long interview with two anchors and a journalist. Anchors generally known for conducting media trial were on a different mission that day. Except the bloggers and websites, no media house raised a voice demanding an inquiry into reports of ‘top journalists’ receiving huge cash from Bellary brothers, accused of illegal mining.

In simple terms, media houses glorified Anna movement against corruption and ignored blatant corruption within. No editor has come forward to declare his assets voluntarily. But they ask their reporters to file a story if the new Lokayukta fails to do it soon after assuming his office. Let the veterans come out with sites, houses they own and declare whether the property they own is in proportionate to their known sources of income.

Nobody would dare to object to the comment that media have continued with their attempts to take society backwards this year too. They gave undue time and space for astrologers and soothsayers. Husbands of women named Lakshmi had a nightmarish experience when a Kannada news channel shamelessly aired a programme professing that whoever married women named Lakshmi had to face hardships throughout their life. The channel people seemed to have not understood the impact the programme had on innocent viewers, particularly girls named Lakshmi.

Going by the present trend one can’t be hopeful of a better year ahead. Of course, the same people continue to hold positions, continue with sermons on objectivity, honesty and many other virtues in their columns. Columns by a couple of senior journalists, committed to democratic principles and diversity are an exception. One can hope a better year in prompt efforts aimed at working out alternatives to mainstream media. Such efforts do not demand huge investment and need to compromise with values. Though their audience is limited it can expand through continuous effort.

Hope good sense prevail upon all media men and media houses in 2012.