Tag Archives: ಯಡಿಯೂರಪ್ಪ

advt-details-from-news-information-dept-to-various-dailies

ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು…

 -ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವು ಸ್ವತಂತ್ರವಾಗಿಲ್ಲ.

ನಾನು ಕಳೆದ ವಾರ ಬರೆದ ಪತ್ರಕ್ಕೆ ಉತ್ತರವಾಗಿ ಸಂಪಾದಕೀಯ ಬಳಗ ಒಂದು ಪತ್ರ ಬರೆದಿತ್ತು. ಅದರಲ್ಲಿ “ಹೊಸ ದಿಗಂತ” ಪತ್ರಿಕೆಯ ಕುರಿತು ಹೀಗೆ ಬರೆಯಲಾಗಿತ್ತು:

“ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?”

ಇಂದು ಯಡ್ಡ್‌ಯೂರಪ್ಪನವರಿಗೆ ಜಾಮೀನು ಸಿಕ್ಕರೂ ಸಿಗಬಹುದು. ನಾಳೆ ಯಾವಯಾವ ಪತ್ರಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೊ? ಇಂದು ಕನ್ನಡ ಪತ್ರಿಕೆಗಳನ್ನು ಸುದ್ದಿಗಾಗಿ ಓದುವುದಕ್ಕಿಂತ ಅವುಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಪ್ರಾಮಾಣಿಕತೆ/ಅಪ್ರಾಮಾಣಿಕತೆಯನ್ನು ಅಳೆಯಲು ಅವುಗಳ ಪತ್ರಿಕೆಗಳ ಪುಟ ತಿರುವಬೇಕಿದೆ.

ತೆಹಲ್ಕಾದಲ್ಲಿ ಬಂದಿರುವ ಲೇಖನವೊಂದರ ಬಗ್ಗೆ ನಮ್ಮಲ್ಲಿ ನೆನ್ನೆ ಒಂದು ಸಣ್ಣ “ದುರಾಡಳಿತದ ಲಾಭ ಪಡೆದವರು” ಲೇಖನ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿ ನಮಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು ಅವನ್ನು ಇಲ್ಲಿ ಕೊಡಲಾಗುತ್ತಿದೆ.

ಆದರೆ, ಇಷ್ಟಕ್ಕೂ ಇದರಿಂದ ಏನಾಗುತ್ತದೆ? ಸರ್ಕಾರದ ಭ್ರಷ್ಟತೆಯನ್ನು ಮತ್ತು ಅನೀತಿಯನ್ನು ಹುಡುಕಿ, ವಿಚಾರಣೆಗೆ ಕೋರ್ಟಿಗೆಳೆಯುವ ಒಂದು ಸರ್ಕಾರಿ ಸಂಸ್ಥೆ ನಮ್ಮಲ್ಲಿ ಇಲ್ಲ. ಲೋಕಾಯುಕ್ತವೂ ಸಹ ದೂರು ಕೊಟ್ಟರೆ ವಿಚಾರಣೆ ಎಂಬ ಹಂತದಲ್ಲಿದೆ. ಸ್ವತಂತ್ರ ಆಂತರಿಕ ವಿಚಾರಣಾ ಸಂಸ್ಠೆಯೊಂದು ಇಂದು ತೀರಾ ಅಗತ್ಯವಿದೆ. ಇಲ್ಲದಿದ್ದರೆ, ಇಂತಹ ಕರ್ಮಕಾಂಡಗಳು ಜನರಿಗೆ ಗೊತ್ತಾಗುತ್ತದೆ. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಫಲಾನುಭವಿಗಳು ವಿಚಾರಣೆಗೊಳಪಡುವುದಿಲ್ಲ. ಸುಳ್ಳು ದಾಖಲೆ ಕೊಟ್ಟ ತಪ್ಪಿತಸ್ಥರಿಗೆ, ಅದರ ಮೇಲೆ ತೀರ್ಮಾನ ಕೈಗೊಳುವ ಸ್ವಜನಪಕ್ಷಪಾತಿಗಳಿಗೆ ಶಿಕ್ಷೆಯಾಗುವುದಿಲ್ಲ. ಎಂದು ನಾವು ಇದನ್ನು ಮೀರುವುದು?

ಆದರೂ…

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

 

objection-to-yeddyurappa's-approval-for-statewide-paper-page1

objection-to-yeddyurappa's-approval-for-statewide-paper-page1

 

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

 

objection-to-yeddyurappa's-approval-for-statewide-paper-page3

objection-to-yeddyurappa's-approval-for-statewide-paper-page3

 

hosadiganta-requesting-industrial-shed-yeddyurappas-approval

hosadiganta-requesting-industrial-shed-yeddyurappas-approval

 

industrial-shed-approval-letter-to-hosadiganta

industrial-shed-approval-letter-to-hosadiganta

 

advt-details-from-news-information-dept-to-various-dailies

advt-details-from-news-information-dept-to-various-dailies

 

20-lakhs-advt-in-2months-to-hosadiganta

 

ಫೋರ್ಜರಿ ನಡೆಸಿದ್ದು ಸಚಿವ ನಿರಾಣಿಯೇ.? ಮತ್ತೊಂದು ಭೂಹಗರಣದ ಸುತ್ತ…

-ಶಿವಪುತ್ರ

“ಸರ್ಕಾರದ ಕೆಲಸ ದೇವರ ಕೆಲಸ” ಎಂದು ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಬರೆಸಿ ಹೋಗಿರುವ ಆ ಪುಣ್ಯಾತ್ಮ ಇಂದೇನಾದರೂ ಬದುಕಿದ್ದರೆ ಖಂಡಿತಾ ಅಲ್ಲೇ ಹೋಗಿ ನೇಣು ಹಾಕಿಕೊಳ್ಳುತ್ತಿದ್ದರೇನೋ? ಈ ಹಿಂದೆಯೂ ಸರ್ಕಾರಗಳು, ಸರ್ಕಾರ ನಡೆಸುವವರು ತಂತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಆದರೆ ಭ್ರಷ್ಟಾಚಾರವೇ ಆಳ್ವಿಕೆ ಎಂದುಕೊಂಡು ಸರ್ಕಾರ ನಡೆಸಿರುವ ಕೀರ್ತಿ ಮಾತ್ರ ಮಾಜಿ ಮುಖ್ಯಮಂತ್ರಿ ಹಾಲಿ ಖೈದಿ ನಂ. 10462 ಡಾ. ಯಡಿಯೂರಪ್ಪನವರಿಗೆ, ಮತ್ತವರ ಮಂತ್ರಿಮಂಡಲಕ್ಕೇ ಸೇರಬೇಕು!

ಬಿಜೆಪಿ ಸರ್ಕಾರದಲ್ಲಿ ಕಂಡು ಬಂದ ಸಾಲು ಸಾಲು ಹಗರಣಗಳಿಗೆ ಈಗ ಹೊಸ ಸೇರ್ಪಡೆ ಎಂದರೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು KIADBಯೊಂದಿಗೆ ಸೇರಿ ಮಾಡಿರುವ ಫೋರ್ಜರಿ ಭೂಹಗರಣ.

ವಾಸ್ತವವಾಗಿ, KIADB ಎನ್ನುವುದೇ ಸರ್ಕಾರದ ರಿಯಲ್ ಏಜೆಂಟ್ ಕಂಪನಿ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಶುರು ಆಗಿದ್ದು 1966ರಲ್ಲಿ. ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ಮಾಡುವುದಕ್ಕೆ ಮತ್ತು ಆ ಜಮೀನುಗಳನ್ನು ಕೈಗಾರಿಕೊದ್ಯಮಿಗಳಿಗೆ ಹಂಚುವುದಕ್ಕೆ ಇರುವುದು ಈ ಸಂಸ್ಥೆಯೆ. ಈ ಸಂಸ್ಥೆಗೆ ಪ್ರತ್ಯೇಕ ಕಾನೂನೂ ಇದೆ. ಕಳೆದ 50-60 ವರ್ಷಗಳಲ್ಲಿ ರಾಜ್ಯದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಅದು ಭೂಮಿ ಕಳೆದುಕೊಂಡವರಿಗೆ ಕೊಡುವ ಪರಿಹಾರ ಮತ್ತು ಪುನರ್‌ವಸತಿಯೂ ಮಾನವೀಯ ನೆಲೆಯಲ್ಲಿ ಇಲ್ಲ.

ಇನ್ನು, ಕೈಗಾರಿಕೆ ಸ್ಥಾಪಿಸುವ ಹೆಸರಿನಲ್ಲಿ ಅಕ್ವೈರ್​ ಮಾಡಿಕೊಂಡಿರುವ ಭೂಮಿಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಉದ್ದಿಮೆಗಳು ಆರಂಭವಾಗಿಲ್ಲ. ಬೆಂಗಳೂರು ಸುತ್ತಮುತ್ತ ಬಿಟ್ಟರೆ ಬೇರೆ ಕಡೆ ಸ್ವಾಧೀನ ಮಾಡಿಕೊಂಡಿರುವ ಪ್ರದೇಶಗಳು ಈಗಲೂ ಪಾಳು ಬಿದ್ದಿವೆ. ಶೇ.35 ರಷ್ಟು ಪ್ರದೇಶ ಖಾಲಿ ಇದ್ದರೆ, ಶೇ.25 ರಷ್ಟು ಮಾತ್ರ ಬಳಕೆ ಆಗುತ್ತಿವೆ. 30 ವರ್ಷದ ಹಿಂದೆ ಅಭಿವೃದ್ಧಿ ಪಡಿಸಿದ ಪ್ರದೇಶಗಳಲ್ಲಿ ಆರಂಭವಾಗಿರುವ ಶೇ.40ರಲ್ಲಿ ಶೇ.50 ಕೈಗಾರಿಕೆಗಳು ಈಗಾಗಲೇ ಮುಚ್ಚಿ ಹೋಗಿವೆ. ಆದರೂ ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದು ನಿಂತಿಲ್ಲ.

ಜೊತೆಗೆ ಲಂಚ ತೆಗೆದುಕೊಂಡು ಪ್ರೈಮ್ ಲ್ಯಾಂಡ್ ಅನ್ನು ಡಿನೋಟಿಫೈ ಮಾಡುವ, , ಕಳ್ಳ ದಾಖಲೆಗಳನ್ನು ಸೃಷ್ಟಿಸಿ ಇಲ್ಲದ ಜಮೀನಿಗೆ ಪರಿಹಾರದ ಹಣ ಹೊಡೆಯುವ,  ಒಂದು ವ್ಯವಸ್ಥಿತ ಜಾಲವೇ ಇಲ್ಲಿದೆ.

ಇಂತಹ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಜವಾಗಿಯೇ ಕೈಗಾರಿಕೆ ಸಚಿವರ ಅಧೀನದಲ್ಲಿ ಬರುತ್ತದೆ. ಹೀಗಾಗಿ ಆ ಸಚಿವರು ಹೇಳಿದುದನ್ನು ಮಂಡಳಿ ಪಾಲಿಸಬೇಕು. 80, 90ರ ದಶಕದಲ್ಲಿದ್ದ ಕೈಗಾರಿಕೆ ಮಂತ್ರಿಗಳು ಭೂಸ್ವಾಧೀನಕ್ಕೆ ಮತ್ತು ಅಲ್ಲಿಯ ಭ್ರಷ್ಟಾಚಾರಕ್ಕೆ ಅಂತಹ ಮಹತ್ವವನ್ನಾಗಲಿ ಪ್ರೋತ್ಸಾಹವನ್ನಾಗಲಿ ಕೊಟ್ಟಿರಲಿಲ್ಲ. ರಾಜ್ಯಕ್ಕೆ ಕೈಗಾರಿಕೆಗಳನ್ನು ತಂದು ರಾಜ್ಯವನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ನೈಜ ಕಾಳಜಿ ಮತ್ತು ತಾತ್ವಿಕತೆ ಅವರಲ್ಲಿತ್ತು. ಆದರೆ ಇತ್ತೀಚಿನ ದಶಕದಲ್ಲಿ ಆಗಿದ್ದೇ ಬೇರೆ. ಅನೈತಿಕ ಕಳ್ಳರು, ವಂಚಕರೆಲ್ಲ ಅಧಿಕಾರ ಸ್ಥಾನವನ್ನು ಹಿಡಿದಿದ್ದರ ಮತ್ತು ಅವರು ಸಿಕ್ಕಿಹಾಕಿಕೊಳ್ಳದ್ದರ ಪರಿಣಾಮ ಇದು.

‘ಅಭಿವೃದ್ಧಿ’ ಎನ್ನುವ ಆ ಬಡಪಾಯಿ ಪದವನ್ನು ಅದೆಷ್ಟು ಸಲ ಆಡಿದ್ದರೋ ಯಡಿಯೂರಪ್ಪನವರು? ಆದರೆ ಅವರು ಮತ್ತು ಅವರ ಪಟಾಲಂ ಸೇರಿ ‘ಅಭಿವೃದ್ಧಿ’ಯ ಹೆಸರಲ್ಲಿ ಮಾಡಿದ ಎಲ್ಲಾ ಭಾನಗಡಿಗಳು ಒಂದಲ್ಲಾ ಒಂದು ದಿನ ಬಯಲಾಗಲೇಬೇಕು.

ಈಗ, ತೀರಾ ಇತ್ತೀಚೆಗೆ ಬಯಲಾಗಿರುವ ಹಗರಣ ಮಾಜಿ ಮುಖ್ಯಮಂತ್ರಿಯವರು ರಾಜ್ಯದ ಕೈಗಾರಿಕಾ ‘ಪ್ರಗತಿ’ಯ ದೃಷ್ಟಿಯಿಂದ ವಿಶ್ವ ಹೂಡಿಕೆದಾರರ ಸಮಾವೇಶವನ್ನು ನಡೆಸಿದ್ದರ ಸುತ್ತ ನಡೆದಿರುವಂತಾದ್ದು. ಭಾರೀ ಪ್ರಚಾರ ಮಾಡಿ ನಡೆಸಿದ ಆ ಹೂಡಿಕೆದಾರರ ಸಮ್ಮೇಳನಕ್ಕೆ ಉತ್ಸುಕತೆಯಿಂದ ಆಗಮಿಸಿದ್ದ ನೂರಾರು ಕೈಗಾರಿಕೋದ್ಯಮಿಗಳಿಗೆ ‘ಚಂದ್ರನನ್ನೇ ತಂದಿಳಿಸುವ’ ಭರವಸೆಯನ್ನು ಸರ್ಕಾರ ನೀಡಿದ್ದರೂ ಕೊನೆಗೆ ಎಂಥಾ ಚೊಂಬುಗಳನ್ನೂ ನೀಡಲಾಗಿತ್ತು ಎನ್ನುವುದಕ್ಕೆ ಈಗ ದಾಖಲೆಗಳು ಸಿಗುತ್ತಿವೆ.

2010ರಲ್ಲಿ ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ದೊಡ್ಡ ದೊಡ್ಡ ಯೋಜನೆಗಳಿಗೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿಯ ಸುತ್ತಮುತ್ತ ಸುಮಾರು 6000 ಎಕರೆಗಳನ್ನು ಉದ್ಯಮಿಗಳಿಗೆ ಕೊಡುವ ಸಲುವಾಗಿ ಸರ್ಕಾರವು ಭೂಸ್ವಾಧೀನ ನಡೆಸಿದೆ ಎಂದು ಘೋಷಿಸಲಾಗಿತ್ತು. ಈ ಸಮ್ಮೇಳನದಲ್ಲಿ ಭಾಗವಹಿಸಿದ ಹಲವಾರು ಕಂಪನಿಗಳಲ್ಲಿ ‘ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ಕೂಡಾ ಒಂದು. ಹೀಗೆ ಅಂದು ಉತ್ಸಾಹದಿಂದ ಭಾಗವಹಿಸಿದ್ದ ಈ ಕಂಪನಿಯ ಒಡೆಯ ಪಾಶ್  ಅವರಿಗೆ ಅಂದು ತಾವು ಎಂಥಾ ಗುಂಡಿಯಲ್ಲಿ ಬಿದ್ದಿದೆವು ಎಂಬ ಅನುಭವ ಇದೀಗ ಆಗುತ್ತಿದೆ. ತಾವು ಭಾರೀ ವಂಚನೆಗೊಳಗಾಗಿರುವ ಸಂಗತಿ ಪಾಶ್ ಅರಿವಿಗೆ ಬಂದು ಸರ್ಕಾರದಿಂದ ತಮಗಾದ ಅನ್ಯಾಯದ ವಿರುದ್ಧ ಯಡಿಯೂರಪ್ಪ ಹಾಗೂ ಮುರುಗೇಶ್ ನಿರಾಣಿಯವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ಬಗ್ಗೆ ತನಿಖೆ ನಡೆದಲ್ಲಿ ಕಟ್ಟಾ, ಗಾಲಿ ಜನಾರ್ಧನ ರೆಡ್ಡಿ, ಯಡ್ಡಿ ಜೊತೆ ನಿರಾಣಿಯವರೂ ‘ಕ್ಯೂ’ನಲ್ಲಿ ನಿಲ್ಲಬೇಕಾಗುತ್ತದೆ.

ಪ್ರಕರಣ ಏನು?
ಆಲಂ ಪಾಶಾ ಹುಟ್ಟುಹಾಕಿದ್ದ “ಪಾಶ್ ಸ್ಪೇಸ್ ಇಂಟರ್ನ್ಯಾಷನಲ್ ಪ್ರೈವೈಟ್ ಲಿಮಿಟೆಡ್” 1999ರಲ್ಲಿ ಬೆಂಗಳೂರಿನ ಇಂದಿರಾ ನಗರದಲ್ಲಿ ತನ್ನ ಕಛೇರಿಯನ್ನು ಸ್ಥಾಪಿಸಿಕೊಂಡಿತ್ತು. ಇದು ಮೂಲಸೌಕರ್ಯ ಕ್ಷೇತ್ರದಲ್ಲಿ ಕಾಮಗಾರಿ ನಡೆಸಿಕೊಂಡು ಬರುತ್ತಿದೆ. ದೇವನಹಳ್ಳಿ ಬಳಿ ಇರುವ ಹಾರ್ಡ್‌ವೇರ್ ಪಾರ್ಕಿನಲ್ಲಿ ಒಟ್ಟು 26 ಎಕರೆ ಜಮೀನನ್ನು ಪಾಶಾ ಅವರ ಕಂಪನಿಗೆ ಕೊಡುವ ಕುರಿತು ಒಪ್ಪಂದವಾಗಿತ್ತು. ಈ ಕಂಪನಿ ತಾನು 600 ಕೋಟಿ ರೂಪಾಯಿ ಬಂಡವಾಳ ಹೂಡಿ ಆರ್ಥಿಕವಾಗಿ ಹಿಂದುಳಿದವರಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ಕೈಗೊಳ್ಳುವ ಕುರಿತು ಮಾತುಕೊಟ್ಟಿತ್ತು. 700 ಚದರಡಿಯಿಂದ 1000 ಚದರಡಿ ವಿಸ್ತೀರ್ಣದಲ್ಲಿ 3000 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಇದು. ಈ ಕಾಮಗಾರಿಯಲ್ಲಿ 500 ಜನರಿಗೆ ಉದ್ಯೋಗ ಸಿಗುತ್ತದೆ ಎಂದೂ ತಿಳಿಸಲಾಗಿತ್ತು. ಈ ಯೋಜನೆಗೆ 2010ರ ಜೂನ್ 19ರಂದು ಅಂದಿನ ಸಿಎಂ ಯಡಿಯೂರಪ್ಪ ಅವರ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಒಪ್ಪಿಗೆ ದೊರೆತಿತ್ತು. (ಅದರ ದಾಖಲೆ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ.) ಇದರ ನಂತರ ಸರ್ಕಾರಿ ಆದೇಶವೂ ಆಗಿ GO ಪ್ರತಿ ಆಲಂ ಪಾಶಾ ಅವರ ಕೈ ಸೇರಿತ್ತು. 2010ರ ಅಕ್ಟೋಬರ್ 10 ರಂದು ಇಎಂಡಿ ಡಿಪಾಜಿಟ್, ಅಪ್ಲಿಕೇಶನ್ ಕೂಡಾ ಪಾಶಾ ಅವರ ಕೈ ಸೇರಿತ್ತು.

ಆದರೆ ಅಸಲಿಯತ್ತು ಬೇರೆಯದೇ ಆಗಿತ್ತು. ಯಾವಾಗ ಪಾಶಾ ಅವರು ತಮ್ಮ ಕಂಪನಿಯ ಸುಪರ್ದಿಗೆ ಬಂದಿದೆಯೆಂದುಕೊಂಡ ಜಮೀನನ್ನು ನೋಡಲಿಕ್ಕೆಂದು ಅದೇ ತಿಂಗಳಲ್ಲಿ ಹೋದರೋ ಅಲ್ಲಿ ಅವರಿಗೆ ಆಘಾತವೇ ಕಾದಿತ್ತು. ಜಮೀನಿಗೆ ಮಾಲೀಕರೇ ಅಲ್ಲದಿರುವವರೆಲ್ಲಾ ಸುತ್ತುವರೆದು, ಈ ಜಮೀನಿನಲ್ಲಿ ನಮ್ಮ ಷೇರೂ ಇದೆ, ಇದಕ್ಕೆ ಪೋಡಿನೂ ಆಗಿಲ್ಲ, ಈ ಏರಿಯಾಕ್ಕೆ ಯಾರೂ ಬರಕೂಡದು ಎಂದು ಆವಾಜ್ ಹಾಕಿಬಿಟ್ಟರು! ಇದೇನಿದು ಹೀಗಾಯ್ತು ಎಂದು ತಲೆಬಿಸಿ ಮಾಡಿಕೊಂಡ ಆಲಂ ಪಾಶ KIADB ಅಧಿಕಾರಿಗಳನ್ನ ಕೇಳಿದರೆ ಅಧಿಕಾರಿಗಳೇ ಇವರಿಗೆ ಕ್ಲಾಸ್ ತೆಗೆದುಕೊಳ್ಳುವುದೇ? ಅದೂ ಬರೀ ಬಾಯಿ ಮಾತಲ್ಲಿ ಅಲ್ಲ. ಪಾಶಾ ಅವರನ್ನು ಕರೆದು ‘ನಿಮ್ಮ ಹೆಸರಿಗೆ ಇದ್ದ ಆ ಯೋಜನೆ ರದ್ದಾಗಿದೆ. ನೀವೇ ಆ ಪ್ರಾಜೆಕ್ಟ್ ಮುಂದುವರೆಸಲಿಕ್ಕೆ ಇಷ್ಟ ಇಲ್ಲ ಎಂದು ಪತ್ರ ಬರೆದಿದ್ದಿರಲ್ಲ, ನೋಡಿ ಇಲ್ಲಿ’ ಒಂದು ಪತ್ರವನ್ನು ನೀಡಿದರು. (ಅದರ ಪ್ರತಿ ಇಲ್ಲಿದೆ.)

ಈ ಪತ್ರವನ್ನು ನೋಡಿದ್ದೇ ಪಾಶಾ ಅವರಿಗೆ ಉಮ್ಮಳಿಕೆ ಬಂದಂಗಾಗಿತ್ತು. ಅರೆ, ಇದೇನಿದು?! ತಮ್ಮದೇ ಕಂಪನಿಯ ಲೆಟರ್‌ಹೆಡ್, ತಮ್ಮದೇ ಸಹಿ! ತಮ್ಮ ಕಣ್ಣುಗಳಳನ್ನು ತಮಗೇ ನಂಬಲಿಕ್ಕಾಗುತ್ತಿಲ್ಲ. ಇದೆಲ್ಲಾ ಹೇಗೆ ಸಾಧ್ಯ?

ಅದು ಫೋರ್ಜರಿ ಪತ್ರ! ಸಚಿವ ನಿರಾಣಿ ಮನೆಯಲ್ಲಿ ತಯಾರಾದದ್ದು!!

ಈ ಪತ್ರ ಜನವರಿ 20, 2011ರ ದಿನಾಂಕದಲ್ಲಿದೆ. ಅದರಲ್ಲಿ, “…ದೇವನಹಳ್ಳಿಯ ‘ವ್ಯಾಲ್ಯೂ ಹೋಮ್ಸ್’ ಯೋಜನೆಯನ್ನು ಮುಂದುವರೆಸಲು ನಮಗೆ ಇಚ್ಛೆ ಇಲ್ಲದಿರುವುದರಿಂದ ನಮಗೆ ನೀಡಿದ ಆ ಅನುದಾನವನ್ನು ರದ್ದುಗೊಳಿಸಲು ಕೋರುತ್ತೇವೆ. ” ಎಂದಿದೆ.

ಸಂಶಯವೇ ಬೇಡ ಅದು ಪಾಶಾ ಅವರದ್ದೇ ಸಹಿ!!

ಆದರೆ, ಅಲಂ ಪಾಶಾ ಅವರು ಹೇಳುವ ಪ್ರಕಾರ, ಇಂತಹ ಒಂದು ಪತ್ರವನ್ನು ಅವರು ಬರೆದೇ ಇರಲಿಲ್ಲ. ಅವರೆಂದೂ ಈ ಯೋಜನೆಯನ್ನು ಕೈ ಬಿಡುವ ಯೋಚನೆಯನ್ನೂ ಮಾಡಿರಲಿಲ್ಲವೆಂದ ಮೇಲೆ ಇಂತಹ ಪತ್ರವನ್ನು ಹೇಗೆ ಬರೆಯಲು ಸಾಧ್ಯ?

ಇದನ್ನು ನೋಡಿ ಇಲ್ಲಿ ನಡೆದಿರುವ ಮಸಲತ್ತನ್ನು ಗ್ರಹಿಸಿದ ಪಾಶಾ ಅವರು ಇದರ ಬೆನ್ನಟ್ಟಿ ಹೋದಾಗ ಕೆಲವು ವಿಷಯಗಳು ಮನದಟ್ಟಾದವು.

ಜನವರಿ 24, 2011ಕ್ಕೆ ಅಂದಿನ ಮುಖ್ಯಮಂತ್ರಿ ಹಾಗೂ ಹೈ ಪವರ್ ಕಮಿಟಿ ಅಧ್ಯಕ್ಷ ಯಡಿಯೂರಪ್ಪ, ಕೈಗಾರಿಕಾ ಮಂತ್ರಿ ಹಾಗೂ ಕಮಿಟಿ ಉಪಾಧ್ಯಕ್ಷ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಸಭೆಯೊಂದು ನಡೆದಿತ್ತು.  ಅಲ್ಲಿ ಕೆಲ ನಿರ್ಣಯಗಳನ್ನ ತೆಗೆದುಕೊಳ್ಳಲಾಗಿತ್ತು. ಆ ನಿರ್ಣಯಗಳನ್ವಯ ತರಾತುರಿಯಲ್ಲಿ ಸರ್ಕಾರಿ ಆದೇಶಾನೂ ಹೊರಡಿಸಲಾಗಿತ್ತು. ಅದರ ಪ್ರಕಾರ:

  • ಯೋಜನೆ ಮುಂದುವರೆಸಲು ಕಂಪನಿಗೆ ಇಷ್ಟವಿಲ್ಲ
  • ಪಾಶ್ ಕಂಪನಿಗೆ ನೀಡಿದ್ದ ಯೋಜನೆ ಕೈ ಬಿಡಬೇಕು
  • ಮೊದಲು ಹೊರಡಿಸಿದ್ದ ಅದೇಶ ರದ್ದುಗೊಳಿಸುವುದು
  • ಪಾಶ್ ಕಂಪನಿಗೆ 26 ಎಕರೆ ಹಸ್ತಾಂತರ ಮಾಡಬಾರದು
  • ಕೆಐಎಡಿಬಿಗೆ ಸಮಿತಿ ಸೂಚನೆ ನೀಡುವುದು.

ಇಂಥದ್ದೊಂದು ಸಭೆ ನಡೆಯುವ ಮಾಹಿತಿ ಸ್ವತಃ ಆ ಯೋಜನೆಯಲ್ಲಿ ಪಾಲುದಾರನಾಗಿರುವ  ಕಂಪನಿಯ ಎಂ.ಡಿ.ಗೇ ಇರಲಿಲ್ಲ. ಇಷ್ಟಿದ್ದರೂ ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯು ಇಡೀ ಯೋಜನೆಯನ್ನೇ ರದ್ದುಕೊಳಿಸಿತ್ತು.

ಹೀಗೆ ಸ್ವತಃ ಮುಖ್ಯಮಂತ್ರಿಗಳು ಮತ್ತು ಕೈಗಾರಿಕಾ ಸಚಿವರೇ ಖುದ್ದಾಗಿ ನಿಂತು ಜಾಗತಿಕ ಹೂಡಿಕೆದಾರರ ಸಮ್ಮೇಳನಲ್ಲಿ ಒಪ್ಪಿಗೆಯಾಗಿದ್ದ ಈ ಯೋಜನೆಯನ್ನು ಯಾವ ಕಾರಣಕ್ಕಾಗಿ ಹಾಗೂ ಯಾರ ಕಾರಣಕ್ಕೆ ಹಿಂತೆಗೆದುಕೊಳ್ಳಲು ವಾಪಾಸು ಪಡೆಯುವ ತಂತ್ರ ಮಾಡಿದರು, ಯಾರ ಭೂದಾಹ ಇಲ್ಲಿ ಕೆಲಸ ಮಾಡಿತ್ತು ಇವೆಲ್ಲಾ ಈಗ ತನಿಖೆಯಾಗಬೇಕಿದೆ.

ಹೀಗೆ ಯಾವುದೋ ಹಿತಾಸಕ್ತಿಯಿಂದ ಈ ಯೋಜನೆಯನ್ನು ರದ್ದು ಮಾಡಿರುವ ದೊಡ್ಡ ಮನುಷ್ಯರು ಅದನ್ನು ದಾಖಲೆ ಸಮೇತ ಮಾಡಬೇಕೆಂದು ಭಯಂಕರ ಬುದ್ಧಿ ಉಪಯೋಗಿಸಿ ಸೃಷ್ಠಿ ಮಾಡಿದ್ದೇ ಆ ಫೋರ್ಜರಿ ಲೆಟರ್. ಅದು ಬೇರೆಲ್ಲೂ ತಯಾರಾಗದೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರ ಮನೆಯಲ್ಲೇ ಯೋಜಿತಗೊಂಡು ತಯಾರಾಗಿದೆ ಎನ್ನುವುದು ಪಾಶಾ ಅವರ ಅಭಿಮತ. ಇಡೀ ರಾಜ್ಯದ ಅಧಿಕಾರವೇ ತಮ್ಮ ಕೈಯಲ್ಲಿರುವಾಗ ತಾವು ಏನೇ ಮಾಡಿದರೂ ಯಾರೂ ತಮ್ಮನ್ನು ಏನೂ ಮಾಡಲಾರರು ಎಂಬ ಧಾರ್ಷ್ಟ್ಯವೇ ಇವರನ್ನು ಹೀಗೆ ಮಾಡಿಸಿದೆ. ಪಾಶ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೈಟ್ ಲಿಮಿಟೆಡ್‌ನ ಲೆಟರ್ ಹೆಡ್‌ನ್ನು ಅಂತರ್ಜಾಲದ ಸಹಾಯದಿಂದ ಡೌನ್ ಲೋಡ್ ಮಾಡಿಕೊಳ್ಳಲಾಗಿದೆ. ಕಂಪನಿಯ ಎಂ.ಡಿ.ಪಾಶಾ ಅವರ ಸಹಿಯನ್ನು ಸ್ಕ್ಯಾನ್ ಮಾಡಿ, ಝೆರಾಕ್ಸ್ ಮಾಡ್ಕೊಂಡಿರುವ ಲೆಟರ್‌ನಲ್ಲಿ ಮ್ಯಾನುಯಲ್ ಟೈಪಿಂಗ್ ಮಾಡಲಾಗಿದೆ. ಆಲಂ ಪಾಶ ಅವರು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದಿದ್ದಾರೆ ಎಂದು ಹೇಳುವ ಈ ಫೋರ್ಜರಿ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಜನವರಿ 24ರಂದು ನಡೆದ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮೇಲೆ ತಿಳಿಸಿದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಪತ್ರ ಉದ್ಯೋಗ ಮಿತ್ರ ಇಲಾಖೆ ಕೈ ಸೇರಿದ್ದು ಫೆ.1, 2011ಕ್ಕೆ. ಸರ್ಕಾರದ ನೋಂದಣಿ ಪುಸ್ತಕದಲ್ಲೇ ಉಲ್ಲೇಖ ಮಾಡಿ ಪತ್ರದ ಮೇಲೆ ಸೀಲು ಮತ್ತು ಡೇಟೂ ನಮೂದಾಗಿದೆ. ಅಂದರೆ  ಪತ್ರ ಕೈ ಸೇರುವ 7 ದಿವಸ ಮೊದಲೇ ಸರ್ಕಾರ ಪೂರ್ವನಿಯೋಜಿತವಾಗಿ ತೀರ್ಮಾನ ತೆಗೆದುಕೊಂಡಿರುವುದು ಸ್ಫಟಿಕ-ಸ್ಪಷ್ಟ.

ಇದೆಲ್ಲಾ ತಿಳಿದ ತಕ್ಷಣ ಕಂಪನಿ ತಕರಾರು ತೆಗೆಯಿತು. ಸರ್ಕಾರಕ್ಕೆ ಗಂಭೀರವಾಗಿ ಪತ್ರವನ್ನೂ ಬರೆಯಿತು.  ಈ ವಿಷಯ ರಾಜ್ಯಪಾಲರ ಮನೆಗೂ ಹೋಯಿತು. ಆಗ ದಿಗಿಲುಗೊಂಡ ಯಡಿಯೂರಪ್ಪ ಮತ್ತು ನಿರಾಣಿ ಇದೊಳ್ಳೆ ಕೆಲಸ ಕೆಟ್ಟಿತಲ್ಲಾ ಎಂದುಕೊಂಡು  ಇಡೀ ಪ್ರಕರಣಕ್ಕೆ ತೇಪೆ ಹಾಕುವ ಕೆಲಸ ಮಾಡಿದರು.

ಪಾಶ್ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿದ್ದ ಯೋಜನೆಯನ್ನು ಕೈ ಬಿಡುವ ಬಗ್ಗೆ ಹೊರಡಿಸಿದ್ದ 2ನೇ ಆದೇಶವನ್ನ ನಿರಾಣಿ ನೇತೃತ್ವದ ಅಧಿಕಾರಿಗಳ ತಂಡ ಹಿಂದಕ್ಕೆ ಪಡೆಯಿತು. ಯೋಜನೆ ಮಂಜೂರಾಗಿದೆ ಅಂತ ಮೊದಲೇ ಹೊರಡಿಸಿದ್ದ ಆದೇಶವನ್ನೇ ರೆಸ್ಟೋರ್ ಮಾಡಲಾಗುತ್ತದೆಯೆಂದೂ ಆದರೆ ಇದನ್ನು ಇನ್ನೊಮ್ಮೆ ನಡೆಯುವ ಹೈಪವರ್ ಕಮಿಟಿ ಸಭೆಯಲ್ಲಿ ಅಧಿಕೃತವಾಗಿ ಆದೇಶ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸೂಚಿಸಿದರು.  ಅದರಂತೆ ಜೂನ್ 24, 2011 ರಂದು ನಡೆದ ಸಭೆಯಲ್ಲಿ ಕಂಪನಿ ಪ್ರತಿನಿಧಿಯೂ ಭಾಗವಹಿಸಿದ್ದರು. ಆದರೆ ಅವರು ಒಪ್ಪಿಕೊಂಡಿದ್ದ ಪ್ರಕಾರ ಹಳೆಯ ಆದೇಶಕ್ಕೆ ಮಾನ್ಯತೆ ನೀಡಲೇ ಇಲ್ಲ. ತಾವು ಮೊದಲ ಬಾರಿ ರದ್ದು ಮಾಡಿದ್ದಕ್ಕೆ ಕೊಟ್ಟ ಕಾರಣಗಳ ಬಗ್ಗೆಯಾಗಲಿ, ಪಾಶಾರವರು ಕೊಟ್ಟಿದ್ದ ಫೋರ್ಜರಿ ದೂರಿನ ಬಗ್ಗೆ ತನಿಖೆಯಾಗಬೇಕಾದ ಅಗತ್ಯತೆಯ ಬಗ್ಗೆಯಾಗಲಿ ತೀರ್ಮಾನ ಮಾಡಲಿಲ್ಲ. ಬಹುಶ: ಅಂತಹ ನ್ಯಾಯ ಮತ್ತು ನೈತಿಕತೆ ಆ ಸಭೆಯಲ್ಲಿದ್ದವರಿಗೆ ಶೂನ್ಯಪ್ರಮಾಣದಲ್ಲಿ ಇತ್ತು ಎನಿಸುತ್ತದೆ. ಈಗ ಈ ಯೋಜನೆ ಯಾವ ಹಂತದಲ್ಲಿ ಇದೆ ಎನ್ನುವುದೇ ಪಾಶಾರವರಿಗೆ ಗೊತ್ತಾಗುತ್ತಿಲ್ಲ. ಯಾಕೆಂದರೆ ಮೂಲಒಪ್ಪಂದವನ್ನು ಗೌರವಿಸಬೇಕೆಂಬ ಆದೇಶವನ್ನು ಸರ್ಕಾರ ratify ಮಾಡುತ್ತಿಲ್ಲ. KIADB ಜಮೀನು ಸ್ವಾಧೀನಕ್ಕೆ ಕೊಡುತ್ತಿಲ್ಲ.

ಹೀಗೆ ಮತ್ತೆ ತಮಗೆ ಅನ್ಯಾಯ ಮಾಡಿದ ಸರ್ಕಾರ ಮತ್ತು ಮುರುಗೇಶ್ ನಿರಾಣಿಯವರ ವಿರುದ್ಧ ಕಂಪನಿ ಈಗ ಕಾನೂನು ಸಮರ ಸಾರಿದೆ. ಇದಕ್ಕಾಗಿ ಅವರು ಸಾಕಷ್ಟು ದಾಖಲೆಗಳನ್ನೂ ಕಲೆ ಹಾಕಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆ ನಡೆದರೆ ನೇರವಾಗಿ ಮುರುಗೇಶ್ ನಿರಾಣಿಯವರನ್ನು ಮತ್ತು KIADBಯನ್ನು ಸುತ್ತಿಕೊಳ್ಳುವ ಈ ಫೋರ್ಜರಿ ಪ್ರಕರಣದಲ್ಲಿ ಭೂಹಗರಣದ ಮತ್ತಷ್ಟು ಸತ್ಯ ಮತ್ತು ನಮ್ಮನ್ನು ಆಳುತ್ತಿರುವ ಈ ಸರ್ಕಾರದ ಅಧಿಕೃತ modus operandi ಯೇ ಹೊರಬೀಳಬಹುದು.

ಆದರೆ, ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ರಾಜೀನಾಮೆ ನೀಡಿ, ಕೇವಲ ಒಬ್ಬ ಉಪಲೋಕಾಯುಕ್ತರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೋಕಾಯುಕ್ತ ಸಂಸ್ಥೆ ಈಗಾಗಲೆ ಅನೇಕ ಹಗರಣಗಳ ವಿಚಾರಣೆಯಲ್ಲಿ ತೊಡಗಿಕೊಂಡಿದೆ. ಬಹುಶಃ ಆ ಸಂಸ್ಥೆಯಲ್ಲಿರುವ  ಪ್ರಾಮಾಣಿಕ ಅಧಿಕಾರಿಗಳಿಗೆ ಇದು ಬಹಳ ವ್ಯಸ್ತ ಕಾಲ. ದಿನದ 24 ಗಂಟೆ ದುಡಿದರೂ ಅವರಿಗೆ ರಾಜ್ಯದ ಭ್ರಷ್ಟಾಚಾರದ ಮೇಲಿನ ಹಗರಣಗಳ ವಿಚಾರಣೆ ಮುಗಿಯುವುದೇ ಇಲ್ಲವಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ಸದರಿ ಪ್ರಕರಣದ ಮೇಲಿನ ವಿಚಾರಣೆಯನ್ನು ಅದು ಯಾವ ವೇಗದಲ್ಲಿ ನಡೆಸುತ್ತದೆ ಎನ್ನುವುದೇ ಸದ್ಯದ ಪ್ರಶ್ನೆ.

ರಥಯಾತ್ರೆ ಎಂಬ ವೃದ್ಧಾಪ್ಯದ ವ್ಯಸನ

-ಡಾ. ಎನ್.ಜಗದೀಶ್ ಕೊಪ್ಪ

ವ್ಯಯಕ್ತಿಕವಾಗಿ ಹಾಗೂ ತಾತ್ವಿಕವಾಗಿ ನಮ್ಮ ಸಿಟ್ಟು ಮತ್ತು ತಕಾರಾರುಗಳು ಏನೇ ಇರಲಿ ಭಾರತೀಯ ಜನತಾ ಪಾರ್ಟಿ ಎಂಬ ಪಕ್ಷದಲ್ಲಿ ಗೌರವಿಸಬೇಕಾದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು ವಾಜಪೇಯಿ, ಮತ್ತೊಬ್ಬರು ಎಲ್.ಕೆ.ಅಧ್ವಾನಿ. ಈ ಇಬ್ಬರು ಮಹನೀಯರು ತಮ್ಮ ತತ್ವ ಸಿದ್ಧಾಂತಗಳ ಜೊತೆಗೆ, ಸಾರ್ವಜನಿಕ ಬದುಕಿನಲ್ಲಿ ಒಬ್ಬ ರಾಜಕಾರಣಿಗೆ ಇರಬೇಕಾದ ಬದ್ಧತೆ, ಪ್ರಾಮಾಣಿಕತೆ, ಶುದ್ಧ ಚಾರಿತ್ರ್ಯ, ಇವುಗಳನ್ನು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದವರು.

ವಾಜಪೇಯಿ ಈ ದೇಶದ ಪ್ರಧಾನ ಮಂತ್ರಿಯ ಹುದ್ದೆ ಅಲಂಕರಿಸಿ ವೃದ್ಧಾಪ್ಯದ ಕಾರಣಕ್ಕಾಗಿ ರಾಜಕೀಯದಿಂದ ನಿವೃತ್ತಿಗೊಂಡಿದ್ದರೆ, ಕಳೆದ ಒಂದು ದಶಕದಿಂದ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾದ ಅಧ್ವಾನಿಯವರು ಇದೀಗ ತಮ್ಮ ಪಕ್ಷದಲ್ಲಿ ಹುದ್ದೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಬಿ.ಜೆ.ಪಿ. ಪಕ್ಷದ ವರ್ತಮಾನದ ವಾಸ್ತವ.

10 ವರ್ಷದ ಹಿಂದೆ “ಭಾರತ ಬೆಳುಗುತಿದೆ” ಎಂಬ ಘೋಷಣೆ ಇಟ್ಟುಕೊಂಡು ಎಷ್ಟೇ ಪ್ರಚಾರ ಮಾಡಿದರೂ ಎನ್.ಡಿ.ಎ. ಮೈತ್ರಿಕೂಟವನ್ನು ಭಾರತೀಯ ಮತದಾರ ತಿರಸ್ಕರಿಸಿ, “ಅಮ್ ಆದ್ಮಿ” ಎಂಬ ಘೋಷಣೆಗೆ ಒಲಿದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ. ಇದರಿಂದಾಗಿ ಮುಂದಿನ ಪ್ರಧಾನಿ ಎಂದು ಎಲ್ಲೆಡೆ ಪ್ರತಿಬಿಂಬಿಸಿದ್ದ ಅಧ್ವಾನಿ ಕನಸು ನುಚ್ಚು ನೂರಾಯಿತು. ಆದರೆ, ಅವರು ಎದೆಗುಂದಲಿಲ್ಲ. 84ರ ಈ ಇಳಿ ವಯಸ್ಸಿನಲ್ಲೂ ತಮ್ಮ ಆರೋಗ್ಯ ಮತ್ತು ತತ್ವ ಸಿದ್ದಾಂತಗಳನ್ನು ಕಾಪಾಡಿಕೊಂಡು ಬಂದು ಮತ್ತೊಮ್ಮೆ ರಥಯಾತ್ರೆ ಮೂಲಕ ಯುದ್ಧಕ್ಕೆ ಅಣಿಯಾಗಿದ್ದಾರೆ.

ಸೋಜಿಗದ ಸಂಗತಿಯೆಂದರೆ, ಪಕ್ಷಕ್ಕೆ ಮರಳಿರುವ ಉಮಾಭಾರತಿ ಹೊರತಪಡಿಸಿದರೆ, ಯಾವೊಬ್ಬ ರಾಷ್ಟ್ರೀಯ ನಾಯಕರು ಅಧ್ವಾನಿ ನಮ್ಮ ಪಕ್ಷದ ಮುಂದಿನ ಪ್ರಧಾನಿ ಎಂದು ಹೇಳಲು ಸಿದ್ಧರಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ತೆರೆಮರೆಯಲ್ಲಿ ಪ್ರಧಾನಿ ಹುದ್ದೆಗೆ ಪೈಪೋಟಿ ನಡೆಸಿರುವುದು ಅಧ್ವಾನಿಯವರಿಗೆ ನುಂಗಲಾರಾದ ತುತ್ತಾಗಿದೆ. ಯು.ಪಿ.ಎ. ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಎಂದು ಅವರು ಘೋಷಿಸಿಕೊಂಡಿದ್ದರೂ, ಇದು ತಮ್ಮ ಅಸ್ತಿತ್ವಕ್ಕಾಗಿ ಅಧ್ವಾನಿ ನಡೆಸಿರುವ ಹೋರಾಟ ಎಂಬುದನ್ನ ಎಲ್ಲರೂ ಬಲ್ಲರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಬಿ.ಜೆ.ಪಿ ಪಕ್ಷದಿಂದ ಕಿತ್ತುಕೊಂಡಿರುವ ನಮ್ಮ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲಾ  ಮುಖಂಡರ ಬಾಯಿಗೆ ಬೀಗ ಜಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಕರ್ನಾಟಕ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕ ತಲೆತಗ್ಗಿಸುವಂತಹದ್ದು.

ಇವತ್ತಿಗೂ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗಾಲಿ ಜನಾರ್ಧನರೆಡ್ಡಿ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ದು, ಕೃಷ್ಣಯ್ಯ ಶೆಟ್ಟಿ, ಮೊಕದ್ದಮೆ ಎದುರಿಸುತ್ತಿರುವ ಶಾಸಕ ಸಂಪಂಗಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸಲು ಸಿದ್ದವಾಗುತ್ತಿರುವ ಹಾಲಪ್ಪ, ಇವರನ್ನು ನೈತಿಕತೆಯ ಆಧಾರದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗದಿರುವ ಸ್ಥಿತಿಯಲ್ಲಿ ಪಕ್ಷ ಇರುವಾಗ ಭ್ರಷ್ಠಾಚಾರದ ಕುರಿತು ಬಿ.ಜೆ.ಪಿ ನಾಯಕರು ಮಾತನಾಡುವುದು ನಿಜಕ್ಕೂ ನಗೆಪಾಟಿಲಿನ ಸಂಗತಿ.

ಆರೋಪಿ ಮತ್ತು ಆಪಾದಿತ ಎಂಬ ಕಾನೂನಿನ ಪರಿಭಾಷೆಯ ಪದಗಳನ್ನು ರಕ್ಷಣೆಗೆ ಗುರಾಣಿ ಮಾಡಿಕೊಂಡಿರುವ ಬಿ.ಜೆ.ಪಿ ಪಕ್ಷ ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಎಂಬ ಅನೈತಿಕಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿ ಉಪಚುನಾವಣೆಗಳ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನ ಖರ್ಚು ಮಾಡಿಸಿದ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ. (ಕೊಪ್ಪಳ ಉಪಚುನಾವಣೆಗೆ ಖರ್ಚಾದ ಹಣದಮೊತ್ತ 65 ಲಕ್ಷ ರೂಪಾಯಿ, ಇದು ಚನಾವಣಾ ಆಯೋಗ ಸಿಬ್ಬಂದಿಗಾಗಿ ಖರ್ಚು ಮಾಡಿದ ಹಣ.)

ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯ ಬಿ.ಜೆ.ಪಿ. ನಾಯಕರು ನಮ್ಮ ಸಂವಿಧಾನದ ಮೂಲ ಆಧಾರಗಳಾದ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವವನ್ನು ಮರೆತು ರಾಜ್ಯದ ವಿ.ವಿ.ಗಳಿಗೆ ಉಪಕುಲಪತಿಗಳ ನೇಮಕ ಹಾಗೂ ಇತರೆ ಉನ್ನತ ಹುದ್ದೆಗಳ ನೇಮಕದಲ್ಲಿ ಒಂದೇ ಜಾತಿಗೆ ಪ್ರಾಧಾನ್ಯ ನೀಡಿದ್ದರ ಬಗ್ಗೆ ಜೊತೆಗೆ ಎಗ್ಗಿಲ್ಲದೆ ಮಠ ಮಾನ್ಯಗಳಿಗೆ ಪ್ರಸಾದದಂತೆ ರಾಜ್ಯ ಬೊಕ್ಕಸದ ಹಣವನ್ನು ಹಂಚಿದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳ್ಲಬೇಕಾಗಿದೆ.

ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪನವರ ನಂತರ, ಧಾರ್ಮಿಕ ನಾಯಕನ್ನು ಹೊರತು ಪಡಿಸಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಯಾವುದೇ ರಂಗದಲ್ಲಿ ಒಬ್ಬ ಗಣ್ಯ ವೈಕ್ತಿ ಬಿ.ಜೆ.ಪಿ ಸರ್ಕಾರಕ್ಕೆ ಏಕೆ ಸಿಗಲಿಲ್ಲ?

ಕರ್ನಾಟಕದ ಬೆಳವಣಿಗೆ ಕುರಿತು ಮೊದಲಿನಿಂದಲೂ ಅಸಮಾಧಾನ ವ್ಯಕ್ತ ಪಡಿಸಿದ ಏಕೈಕ ನಾಯಕರೆಂದರೆ ಎಲ್.ಕೆ. ಅಧ್ವಾನಿ ಮಾತ್ರ. ಅವರ ಮಾತಿಗೆ ಪಕ್ಷ ಮೊದಲೇ ಬೆಲೆ ನೀಡಿದ್ದರೆ, ಪಕ್ಷಕ್ಕೆ ಇಂದು ರಾಷ್ಟಮಟ್ಟದಲ್ಲಿ ಈ ರೀತಿಯ ಮುಜುಗರ ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ.

ಪಕ್ಷದ ರಾಷ್ಟೀಯ ಅಧ್ಯಕ್ಷರಾದ ನಿತೀನ್ ಗಡ್ಕರಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ರಾಜ್ಯ ನಾಯಕರ ಜೊತೆ ಚೌಕಾಶಿ ಶುರುವಿಟ್ಟುಕೊಂಡು ನಾಗಪುರದಲ್ಲಿ ತಮ್ಮ ಪುತ್ರನ ವಿವಾಹಕ್ಕೆ 13 ಕೋಟಿ ರೂ.ಹಣ ಖರ್ಚು ಮಾಡಿದಾಗಲೇ ಪಕ್ಷ ವಾಜಪೇಯಿ ಮತ್ತು ಅಧ್ವಾನಿ ಕಾಲದಲ್ಲಿ ಕಾಪಾಡಿಕೊಂಡು ಬಂದಿದ್ದ ನೈತಿಕತೆಯ ನೆಲೆಗಟ್ಟು ಕುಸಿದು  ಹೋಗಿದೆ ಎಂದು ನಾಗರೀಕರಿಗೆ ಮನದಟ್ಟಾಗಿ ಹೋಯಿತು.

ಇಂತಹ ದಯನೀಯ ಸ್ಥಿತಿಯಲ್ಲಿ ಮುಂದಿನ ಪ್ರಧಾನಿಯಾಗಲು ಹೊರಟಿರುವ ಪಕ್ಷದ ಹಿರಿಯ ನಾಯಕ ಅಧ್ವಾನಿಯವರ ಹಾದಿ ಸುಗುಮವಾಗಿಲ್ಲ. ಕಾಲ ಬದಲಾದಂತೆ ತಲೆಮಾರುಗಳ ಚಿಂತನೆ ಕೂಡ ಬದಲಾಗುತ್ತಿದೆ. ಈ ಕಟು ವಾಸ್ತವ ಸ್ಥಿತಿಯನ್ನು ಅಧ್ವಾನಿಯವರು ಜೀರ್ಣಿಸಿಕೊಳ್ಳಬೇಕಾಗಿದೆ.

ಯಡ್ಡ್‌ಯೂರಪ್ಪ ಬಂಧನ – ವ್ಯವಸ್ಥೆ ಸುಧಾರಿಸುತ್ತಿರುವ ಭ್ರಮೆ ಬೇಡ

-ರವಿ ಕೃಷ್ಣಾ ರೆಡ್ಡಿ

ಒಂದೆರಡು ತಿಂಗಳ ಹಿಂದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ ವಿಚಾರಣಾಧೀನ ಕೈದಿಗಳಾಗಿ ಬಂಧಿತರಾಗಿದ್ದು, ಈಗ ಯಡ್ದ್‌ಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಬಂಧನಕ್ಕೊಳಗಾಗಿರುವುದು, ಇವು ಯಾವುವೂ ಅನಿರೀಕ್ಷಿತವಾಗಿಲ್ಲ. ಆದರೆ ಇದು ಇಷ್ಟು ತಡವಾಗಿ ಆಗುತ್ತಿರುವುದೇ ಒಂದು ಅವಮಾನ. ಇನ್ನೂ ಹತ್ತು-ಹಲವಾರು ಶಾಸಕರು/ಸಂಸದರು/ಸಚಿವರು/ಮಾಜಿ ಸಚಿವರು/ಮುಖ್ಯಮಂತ್ರಿಗಳೂ ಬಂಧನಕ್ಕೆ ಮತ್ತು ವಿಚಾರಣೆಗೊಳಪಡದೇ ಇರುವುದೇ ಸದ್ಯಕ್ಕೆ ಆತಂಕಕಾರಿ ವಿಷಯ. ಆ ಆತಂಕಗಳು ಬೇಗ ನಿವಾರಣೆಯಾಗಿ ಭ್ರಷ್ಟರೆಲ್ಲರಿಗೂ ಶಿಕ್ಷೆಯಾದರೆ ಮಾತ್ರ ಆ ಆತಂಕ ಕಮ್ಮಿಯಾಗಬಹುದು.

ಈ ಸಂದರ್ಭದಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಸರಿ ಹೋಗುತ್ತಿದೆ ಎಂಬ ಭ್ರಮೆಗಳನ್ನು ನಾವು ಇಟ್ಟುಕೊಳ್ಳುವುದು ಬೇಡ. ಇತ್ತೀಚೆಗೆ ಬಂಧನಕ್ಕೊಳಗಾಗುತ್ತಿರುವ ಯಾವ ರಾಜಕಾರಣಿಗೂ, ಆತನ ಮನೆಯವರಿಗೂ, ಆತನ ಹಿಂಬಾಲಕರಿಗೂ, ಇದೊಂದು ಅವಮಾನದ ಪ್ರಶ್ನೆ; ನಾವು ತಪ್ಪಿಮಾಡಿದೆವು; ಮುಂದಕ್ಕಾದರೂ ತಿದ್ದಿಕೊಳ್ಳಬೇಕು, ಎಂಬ ಭಾವನೆ ಹುಟ್ಟಿದೆ/ಹುಟ್ಟುತ್ತದೆ ಎಂಬ ಅವಾಸ್ತವಿಕೆ ಕಲ್ಪನೆಗಳನ್ನು ನಾವು ಇಟ್ಟುಕೊಳ್ಳಬಾರದು. ಇವೆಲ್ಲಾ ತಾತ್ಕಾಲಿಕ ರಾಜಕೀಯ ಅಥವ ವೈಯಕ್ತಿಕ ಬದುಕಿನ ಹಿನ್ನಡೆ ಎಂದು ಅವರು ಭಾವಿಸುತ್ತಿದ್ದಾರೆಯೇ ಹೊರತು ಬೇರೆ ರೀತಿ ಅವರ್ಯಾರೂ ಪರಿಭಾವಿಸುತ್ತಿಲ್ಲ.. ಬಹುಶಃ ಕರ್ನಾಟಕದ ಜನಸಾಮಾನ್ಯರೂ ಸಹ ಮೆರೆದವರ ಅಹಂಕಾರಕ್ಕೆ ಪೆಟ್ಟು ಬಿತ್ತು ಎಂದು ಬಾವಿಸುತ್ತಿದ್ದಾರೆಯೇ ಹೊರತು, ಇಡೀ ಸಮಾಜ ತನ್ನ ನಡೆಯನ್ನು ಬದಲಾಗಿಸಿಕೊಳ್ಳಬೇಕು, ಈ ಭ್ರಷ್ಟಾಚಾರ ಒಂದು ಕೆಟ್ಟ ಮೌಲ್ಯ ಮತ್ತು ಅದನ್ನು ತಾವೂ ಪ್ರತಿರೋಧಿಸಬೇಕು ಎಂಬ ತೀರ್ಮಾನಕ್ಕೆ/ಹಂತಕ್ಕೆ ಬಂದಿದೆ ಎಂದು ನನಗನ್ನಿಸುವುದಿಲ್ಲ. ಹಗಲುದರೋಡೆ ಕಮ್ಮಿಯಾಗಬಹುದು. ಆದರೆ ದರೋಡೆ ಕೆಟ್ಟದ್ದು ಎಂಬ ಮೌಲ್ಯ ಪುನ: ಮುಂಚೂಣಿಗೆ ಬಂದಿದೆ ಎನ್ನುವುದನ್ನು ನಾನು ಒಪ್ಪಲಾರೆ.

ಬಿಜೆಪಿಯ ನಡವಳಿಕೆಯನ್ನೇ ಗಮನಿಸಿ. ಆ ಪಕ್ಷದ ಮುಖಂಡರೆಲ್ಲ ಒಬ್ಬೊಬ್ಬರಾಗಿ ಬಂಧನಕ್ಕೊಳಗಾಗುತ್ತಿದ್ದು, ಆ ಬಂಧಿತರ ಮೇಲಿನ ಆರೋಪಗಳೆಲ್ಲ ಮೇಲ್ನೋಟಕ್ಕೆ ಸಾಬೀತಾಗುವಷ್ಟು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಆ ಪಕ್ಷದ ರಾಜ್ಯ ನಾಯಕತ್ವ ಈಗಲೂ ಅವರ ಪರ ವಹಿಸಿಯೇ ಮಾತನಾಡುತ್ತಿದೆ. ಐದಾರು ಶಾಸಕರು ಬಂಧಿತರ ಜೊತೆಗೆ ಜೈಲಿನ ಬಾಗಿಲಿನ ತನಕ ಹೋಗಿ ಬೀಳ್ಕೊಟ್ಟು ಬರುತ್ತಾರೆ. ಕೇಂದ್ರ ನಾಯಕತ್ವ ಅವರ ಪರ ನಿಲ್ಲುತ್ತೇವೆ ಎನ್ನುತ್ತದೆ. ದೇಶದ ಎರಡನೇ ದೊಡ್ಡ ಪಕ್ಷಕ್ಕೆ ತನ್ನ ಪಕ್ಷದಲ್ಲಿನ ಭ್ರಷ್ಟರನ್ನು disown ಮಾಡಬೇಕು ಎನ್ನುವ ಭಾವನೆಯೇ ಬರುತ್ತಿಲ್ಲ. ತನ್ನ ಪಕ್ಷದ ಸ್ಥಿತಿಯನ್ನೇ ಲೇವಡಿ ಮಾಡುವಂತಿದೆ ಅದ್ವಾನಿಯವರ ಇತ್ತೀಚಿನ ರಥಯಾತ್ರೆ.

ಇನ್ನು, ಲೋಕಾಯುಕ್ತರ ವರದಿಯನ್ನು ಒಪ್ಪಿಕೊಳ್ಳಲಾಗದ ಬಿಜೆಪಿ ಸರ್ಕಾರ ತಾಂತ್ರಿಕ ಕಾರಣಗಳ ಮೊರೆ ಹೋಗಿದೆ. ಇದು ದಾರಿ ತಪ್ಪಿಸುವ ಭ್ರಷ್ಟ ನಡವಳಿಕೆ. ಆದರೆ, ಸರ್ಕಾರದ ಈ ಭಂಡ ತೀರ್ಮಾನಕ್ಕೆ ಜನರ ಮತ್ತು ರಾಜಕಾರಣಿಗಳ ಪ್ರತಿಕ್ರಿಯೆ ನೋಡಿ. ಇಂದು ಈ ವಿಷಯದ ಬಗ್ಗೆ ಸಂತೋಷ ಹೆಗಡೆಯವರು ಮಾತನಾಡಿರುವುದು ಬಿಟ್ಟರೆ ಮಿಕ್ಕ ಯಾವ ಜನಪ್ರತಿನಿಧಿಗಳೂ, ನಾಗರಿಕ ಸಮಾಜದ ನಾಯಕರೂ, ಗಟ್ಟಿಯಾಗಿ ಮಾತನಾಡಿದ್ದು ಕಾಣಿಸುತ್ತಿಲ್ಲ. ಈ ವರದಿಯ ಮಂಜೂರಾತಿಗೆ ಆಗ್ರಹಿಸಿ ಜನಾಂದೋಲನ ರೂಪಿಸಬೇಕಿದ್ದ ಕಾಂಗ್ರೆಸ್‍ ತನ್ನ ಜವಾಬ್ದಾರಿಯನ್ನೇ ಮರೆತಿದೆ. ಇನ್ನು ಆ ಕೆಲಸ ಜೆಡಿಎಸ್ ಮಾಡಲಾರದು. ಮಿಕ್ಕವರೆಲ್ಲ ಕರ್ನಾಟಕದ ಮಟ್ಟಿಗೆ ನಗಣ್ಯ ಮತ್ತು ಅವರು ಸಶಕ್ತ ಜನಾಂದೋಲನ ರೂಪಿಸುವ ಸ್ಥಿತಿಯಲ್ಲಾಗಲಿ, ಜನ ಅದಕ್ಕೆ ಬೆಂಬಲಿಸುವ ಪರಿಸ್ಥಿತಿಯಾಗಲಿ ಕರ್ನಾಟಕದಲ್ಲಿಲ್ಲ.

ಇವೆಲ್ಲವನ್ನೂ ನೋಡಿದರೆ, ಯಡ್ಡ್‌ಯೂರಪ್ಪನವರ ಬಂಧನ ಈ ವ್ಯವಸ್ಥೆ ಸುಧಾರಿಸುತ್ತಿರುವ ಲಕ್ಷಣ ಎಂದೇನೂ ನನಗೆ ಅನ್ನಿಸುತ್ತಿಲ್ಲ. ಇದು ಕೆಲವೇ ಕೆಲವು ದಡ್ಡ ಅಥವ ಅಹಂಕಾರಿ ಭ್ರಷ್ಟರಿಗೆ ಆದ ಹಿನ್ನಡೆ ಅಷ್ಟೇ. ಇದು ಸಮಾಜದಲ್ಲಿನ ಭ್ರಷ್ಟಾಚಾರಕ್ಕೆ ಆದ ಹಿನ್ನಡೆ ಅಲ್ಲ.

ಇವತ್ತಿನ ವಿಷಯದ ಮಟ್ಟಿಗೆ ಹೇಳುವುದಾದರೆ, ಕೃಷ್ಣಯ್ಯ ಶೆಟ್ಟಿಯ ನಡವಳಿಕೆ ಮಾನಗೇಡಿಯದ್ದು. (ಇನ್ನು ಯಡ್ಡ್‌ಯೂರಪ್ಪನವರ ಇಂದಿನ ನಗುಮೊಗ ಬಹುಶ: ಆ ವ್ಯಕ್ತಿಗೆ ತಾನು ಚರಿತ್ರೆಯಲ್ಲಿ ದಾಖಲಾಗುತ್ತಿದ್ದೇನೆ ಎಂಬ ಹೆಮ್ಮೆಯಲ್ಲಿ ಇರುವ ಹಾಗೆ ತೋರುತ್ತಿತ್ತು. ಈ ವ್ಯಕ್ತಿಯ ಮಾನಸಿಕ ಸ್ಥಿತಿ ಖಂಡಿತವಾಗಿ ಸಹಜವಾಗಿದ್ದಂತಿಲ್ಲ.) ಕೃಷ್ಣ್ಯಯ್ಯ ಶೆಟ್ಟಿಗೆ ಯಾರೋ ತನಗೆ ವಂಚನೆ ಮಾಡಿದ ಹಾಗೆ ಎನ್ನಿಸಿರಬಹುದೇ ಹೊರತು ಅವರಿಗೆ ತಾನೊಬ್ಬ ಪ್ರಜಾಪ್ರತಿನಿಧಿಯಾಗುವ ಅರ್ಹತೆಯಿಲ್ಲ ಕ್ಷುದ್ರ ವಂಚಕ ಎಂಬ ತಿಳಿವಳಿಕೆಯೇ ಇದ್ದಂತಿಲ್ಲ. ಯಡ್ಡ್‌ಯೂರಪ್ಪನವರ ಸರ್ಕಾರದಲ್ಲಿ ಎಲ್ಲರಿಗಿಂತ ಮೊದಲು ಜೈಲು ಸೇರಬೇಕಾಗಿದ್ದರೆ ಅದು ಶೆಟ್ಟಿಯೇ ಆಗಿದ್ದರು. ಆದರೆ ನಮ್ಮ ಪೋಲಿಸ್-ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆಗಳು-ಕಾನೂನು-ವಿರೋಧ ಪಕ್ಷಗಳು, ಇವು ಯಾವುವೂ ಕೃಷ್ಣಯ್ಯ ಶೆಟ್ಟಿ ರಾಜೀನಾಮೆ ನೀಡಿದ ಕೇಸಿಗೆ ಸಂಬಂಧಿಸಿದಂತೆ ತಮ್ಮ ಕಾರ್ಯ ಸಂಪೂರ್ಣವಾಗಿ ನಿರ್ವಹಿಸಲೇ ಇಲ್ಲ. ಆಗಲೇ ಶೆಟ್ಟಿಯ ಬಂಧನವಾಗಿ ಶಿಕ್ಷೆಯಾಗಿದ್ದರೆ ಇವತ್ತಿನ ಈ ಮಹಾದ್ರೋಹಗಳು ಈ ಮಟ್ಟಿಗೆ ಬೆಳೆಯುತ್ತಿರಲಿಲ್ಲ. ಎಲ್ಲರಿಗಿಂತಲೂ ಮೊದಲು ಬಂಧನವಾಗಿ, ಶಿಕ್ಷೆಯೂ ಪಡೆಯಬೇಕಿದ್ದ ವ್ಯಕ್ತಿಯ ಆ ಹಗರಣ ಮರೆತುಹೋಗಿರುವುದೇ ಒಂದು ಅವಮಾನ. ಆ ಮನುಷ್ಯ ಅಂತಹುದರಲ್ಲೆಲ್ಲ ಬಚಾವಾಗಿ ಬಂದ ಭಂಡತನವೇ ನಮ್ಮ ರಾಜಕೀಯ ನಾಯಕರಿಗೆ ಇನ್ನೂ ಹೆಚ್ಚಿನ ಭಂಡರೂ ಭ್ರಷ್ಟರೂ ಆಗುವುದಕ್ಕೆ ಧೈರ್ಯ ಕೊಟ್ಟಿತು ಎನ್ನಿಸುತ್ತದೆ. ಆ ಹಗರಣದ ಬಗ್ಗೆ 2009ರಲ್ಲಿ ಬರೆದ ಈ ಲೇಖನ ಈಗಲೂ ಪ್ರಸ್ತುತ ಎಂದು ಇಲ್ಲಿ ಕೊಡುತ್ತಿದ್ದೇನೆ.

ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ…
[ವಿಕ್ರಾಂತ ಕರ್ನಾಟಕದ ಆಗಸ್ಟ್ 7, 2009ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.]

ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಒಳಗೆ ಮತ್ತು ಅದರ ಸುತ್ತಮುತ್ತ ನಡೆದ ಹಗರಣಗಳನ್ನು ನೆನಪಿಸಿಕೊಳ್ಳಿ… ಹೇಗೆ ತಾನೆ ಅಷ್ಟು ಸುಲಭವಾಗಿ ನೆನಪಾದೀತು? ಇಲ್ಲ, ನಾನು Public memory is short ಎಂಬ ಗಾದೆಯ ಆಧಾರದ ಮೇಲೆ ನಿಮ್ಮನ್ನು ಚುಡಾಯಿಸುತ್ತಿಲ್ಲ. ನಿಜಕ್ಕೂ ನಮಗೆ ಗೊತ್ತಾದ, ಜನಮಾನಸಕ್ಕೆ ಗಂಭೀರ ಎನ್ನಿಸಿದಂತಹ, ಸರ್ಕಾರವೆ ಬೀಳುವಂತಹ ಹಗರಣಗಳು ನಡೆದದ್ದು ಕಮ್ಮಿಯೆ. ಛಾಪಾ ಕಾಗದದ ಹಗರಣ, ಅಕ್ಕಿ ಹಗರಣ,… ದೊಡ್ಡ ಹಗರಣಗಳನ್ನು ನೆನಪಿಸಿಕೊಳ್ಳುತ್ತ ನನ್ನ ನೆನಪೂ ಅಲ್ಲಿಗೇ ನಿಲ್ಲುತ್ತದೆ.

ಈಗ ಕಳೆದ ಹತ್ತೇ ವರ್ಷಗಳಲ್ಲಿ ಶ್ರೀಮಂತಿಕೆಯ ಅನೇಕ ಮಜಲುಗಳನ್ನು ದಾಟಿದ ಕರ್ನಾಟಕದ ರಾಜಕಾರಣಿಗಳ ವಿಚಾರಕ್ಕೆ ಬರೋಣ. ಇವತ್ತಿನ ಯಾವುದೆ ಪ್ರಸಿದ್ಧ ರಾಜಕಾರಣಿಯನ್ನು, ಶಾಸಕನನ್ನು, ಮಂತ್ರಿಯನ್ನು ತೆಗೆದುಕೊಂಡರೂ ಅವರು ತಾವು ರಾಜಕೀಯಕ್ಕೆ ಅಥವ ಅಧಿಕಾರಕ್ಕೆ ಬರುವ ಮೊದಲು ಇದ್ದ ಆರ್ಥಿಕ ಸ್ಥಿತಿಯಲ್ಲಿ ಇವತ್ತು ಇಲ್ಲ. ಇಲ್ಲಿ ಬೆರಳೆಣಿಕೆಯಷ್ಟು ಅಪವಾದಗಳಿರಬಹುದು. ಅವನ್ನು ಸದ್ಯದ ಚರ್ಚೆಯಲ್ಲಿ ಉಪೇಕ್ಷಿಸೋಣ. ಇವತ್ತು ಕನಿಷ್ಠ ಹತ್ತಿಪ್ಪತ್ತು ರಾಜಕಾರಣಿಗಳಾದರೂ ಒಬ್ಬೊಬ್ಬರೂ ಸಾವಿರ ಕೋಟಿಗಿಂತ ಬೆಲೆ ಬಾಳುತ್ತಾರೆ. ಒಂದಿಬ್ಬರು (ವ್ಯಕ್ತಿ ಅಥವ ಕುಟುಂಬಗಳು) ಡಾಲರ್ ಲೆಕ್ಕದಲ್ಲೂ ಬಿಲಿಯನೇರ್‌ಗಳಾಗಿರಬಹುದು (ಸುಮಾರು 5000 ಕೋಟಿ ರೂಪಾಯಿ.) ಇನ್ನು ರೂಪಾಯಿ ಬಿಲಿಯನೇರ್ (ಶತಕೋಟಿ) ಗಳಂತೂ ಸುಲಭವಾಗಿ ನೂರು ದಾಟಬಹುದು. ಇವರಲ್ಲಿ ಬಹುಪಾಲು ಜನ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಒಂದಷ್ಟು ಜನ ಆಗರ್ಭ ಶ್ರೀಮಂತರೂ ಇರಬಹುದು. ಆದರೆ ಅವರ ಉದ್ದಿಮೆ ಅಥವ ಆದಾಯಗಳು ನೂರಾರು ಕೋಟಿ ಮುಟ್ಟುವ ಹಾಗೇನೂ ಇದ್ದಿರಲಾರದು.

ಇಷ್ಟಾದರೂ, ಅದು ಹೇಗೆ ನಮ್ಮ ಹಾಲಿ-ಮಾಜಿ ಶಾಸಕರು, ಮಂತ್ರಿಗಳು, ಸಂಸದರು ಈ ಪರಿಯಲ್ಲಿ ಶ್ರೀಮಂತರಾದರು? ಆಗುತ್ತಿದ್ದಾರೆ? ಯಾವುದೊ ಸರ್ಕಾರಿ ಯೋಜನೆಯಲ್ಲಿ ಅಥವ ಇನ್ಯಾವುದೊ ಇಲಾಖೆಯಲ್ಲಿ ಜನರ ದುಡ್ಡಿಗೆ ಮೋಸ ಮಾಡಿದ್ದಾರೆ ಎಂದು ಹೇಳೋಣ ಎಂದರೆ, ಅಂತಹ ಹಗರಣಗಳೂ ಕಾಣಿಸುತ್ತಿಲ್ಲ. ಹಾಗಾದರೆ, ಇನ್ಯಾವ ಪವಾಡಗಳನ್ನು ಮಾಡಿ, ಜಾದೂ ಮಾಡಿ, ಇವರು ಇಷ್ಟು ಹಣ ಗಳಿಸಿದ್ದು, ಗಳಿಸುತ್ತಿರುವುದು?

ಮಾರ್ಥಾ ಸ್ಟುವರ್ಟ್ ಎನ್ನುವ ಅಮೆರಿಕನ್ ಮಹಿಳೆ ಇವತ್ತು ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಸಂಪತ್ತಿನ ಒಡತಿ. ಹಲವು ಪುಸ್ತಕಗಳನ್ನು ಬರೆದಿರುವ, ಟಿವಿಯಲ್ಲಿ ಟಾಕ್ ಷೋ ನಡೆಸುತ್ತಿದ್ದ, ಮ್ಯಾಗಝೀನ್ ಒಂದರ ಮತ್ತು ಹಲವಾರು ವ್ಯವಹಾರ-ಉದ್ದಿಮೆಗಳ ಒಡತಿಯೂ ಆಗಿರುವ ಈಕೆ ಅಮೆರಿಕದ ಪ್ರಸಿದ್ಧ ಹೆಂಗಸರಲ್ಲಿ ಒಬ್ಬಳು. ಫ್ಯಾಷನ್ ಉದ್ದಿಮೆಯಲ್ಲೂ ದೊಡ್ಡ ಹೆಸರು. 1999ರಲ್ಲಿ ಷೇರು ಮಾರುಕಟ್ಟೆಗೆ ಬಿಟ್ಟ ತನ್ನ ಕಂಪನಿಯ ಷೇರುಗಳ ಲೆಕ್ಕಾಚಾರದಲ್ಲಿ ರಾತ್ರೋರಾತ್ರಿ ಬಿಲಿಯನೇರ್ ಸಹ ಆಗಿದ್ದಳು. ಆದರೆ ನಾನು ಈಗ ಪ್ರಸ್ತಾಪಿಸಲಿರುವುದು ಆಕೆಯ ಸಾಧನೆ ಅಥವ ಯಶಸ್ಸುಗಳ ಕತೆಯನ್ನಲ್ಲ. ತನ್ನ ಯಶಸ್ಸಿನ ಉತ್ತುಂಗದಲ್ಲಿ, ಸಾವಿರಾರು ಕೋಟಿಗಳ ಒಡತಿಯಾಗಿದ್ದ ಸಮಯದಲ್ಲಿ, ಕೇವಲ 20 ಲಕ್ಷ ರೂಪಾಯಿಯ ನಷ್ಟ ಸರಿದೂಗಿಸಿಕೊಳ್ಳಲು ಆಕೆ ಒಂದು ತಪ್ಪು ಮಾಡಿದಳು. ಅದಕ್ಕಾಗಿ 2004 ರಲ್ಲಿ ಐದು ತಿಂಗಳು ಜೈಲಿನಲ್ಲಿದ್ದಳು. ಬಿಡುಗಡೆಯಾದ ನಂತರ ಮತ್ತೆ ಐದು ತಿಂಗಳು ತನ್ನದೆ ಮನೆಯಲ್ಲಿ ಗೃಹಬಂಧನದಲ್ಲಿದ್ದಳು ಮತ್ತು ಆ ಸಮಯದಲ್ಲಿ ಆಕೆಯ ಕಾಲಿಗೆ ಆಕೆ ಯಾವ ಸಮಯದಲ್ಲಿ ಎಲ್ಲಿ ಇದ್ದಾಳೆ ಎಂದು ಟ್ರ್ಯಾಕ್ ಮಾಡಬಲ್ಲ ಎಲೆಕ್ಟ್ರಾನಿಕ್ ತಾಯಿತವೊಂದನ್ನು ಕಟ್ಟಲಾಗಿತ್ತು. ಅದಾದ ನಂತರವೂ ಆಕೆ ಐದು ವರ್ಷಗಳ ಕಾಲ ಯಾವುದೆ ಕಂಪನಿಯ ಮುಖ್ಯಸ್ಥೆ ಆಗದಂತೆ ಅಥವ ಯಾವುದೆ ಕಂಪನಿಯ ನಿರ್ದೇಶಕ ಹುದ್ದೆ ಒಪ್ಪಿಕೊಳ್ಳಲಾಗದಂತೆ ನಿರ್ಬಂಧ ಹೇರಲಾಯಿತು. ಈಗಲೂ ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಆಸ್ತಿಯ ಒಡತಿಯಾಗಿರುವ ಈ ಪ್ರಸಿದ್ಧ ಮಹಿಳೆಗೆ ಕಳೆದ ವರ್ಷ ತಾನೆ ಬ್ರಿಟಿಷ್ ಸರ್ಕಾರ ತನ್ನ ದೇಶಕ್ಕೆ ವೀಸಾ ಸಹಾ ನಿರಾಕರಿಸಿತ್ತು.

ಇಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು?

ಷೇರು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಕಂಪನಿಗಳು ತಮ್ಮ ಹಿರಿಯ ಅಧಿಕಾರಿಗಳಿಗೆ, ಮುಖ್ಯ ನೌಕರರಿಗೆ, ಮತ್ತು ನಿರ್ದೇಶಕ ಮಂಡಳಿಯ ನಿರ್ದೇಶಕರಿಗೆ ಕೇವಲ ಸಂಬಳವನ್ನಷ್ಟೆ ಅಲ್ಲದೆ ಬೋನಸ್ ರೀತಿಯಲ್ಲಿ ಒಂದಷ್ಟು ಷೇರುಗಳನ್ನೂ ನೀಡಿರುತ್ತದೆ. ಇದು ಸಾವಿರಗಳಿಂದ ಲಕ್ಷಗಳನ್ನು ದಾಟುತ್ತದೆ; ಅವರವರ ಯೋಗ್ಯತೆಯ ಮೇಲೆ. ತಮ್ಮದೇ ಕಂಪನಿಯ ಆ ಷೇರುಗಳನ್ನು ಕಂಪನಿಯ ಲಾಭನಷ್ಟದ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಯಾವಾಗಲೆಂದರೆ ಆಗ ಮಾರಾಟ ಮಾಡುವ ಹಾಗೆ ಇಲ್ಲ. ‘ಕಂಪನಿ ಈ ತ್ರೈಮಾಸಿಕದಲ್ಲಿ ಲಾಭ ಮಾಡಿದೆ, ಆ ವಿಚಾರ ಇನ್ನೂ ಹೊರಗಿನವರಿಗೆ ಗೊತ್ತಿಲ್ಲ, ಗೊತ್ತಾದ ನಂತರ ಷೇರುಗಳ ಬೆಲೆ ಮೇಲೆ ಹೋಗುತ್ತದೆ, ಲಾಭ ಮಾಡಿಕೊಳ್ಳಲು ಇದೇ ಸಮಯ, ಹಾಗಾಗಿ ಒಂದಷ್ಟು ಷೇರುಗಳನ್ನು ಈಗಿನ ಕಮ್ಮಿ ಬೆಲೆಗೆ ಕೊಂಡುಕೊಳ್ಳೋಣ,’ ಎಂದೆಲ್ಲ ಲೆಕ್ಕ ಹಾಕಿ ಅವರು ತಕ್ಷಣವೆ ಷೇರುಗಳನ್ನು ಕೊಳ್ಳುವ ಹಾಗೆ ಇಲ್ಲ. ಅದೇ ರೀತಿ ತಮ್ಮ ಕಂಪನಿ ನಷ್ಟದ ಹಾದಿಯಲ್ಲಿರುವ ಲಕ್ಷಣಗಳು ಗೊತ್ತ್ತಾದರೆ ಮತ್ತು ಅವರಿಗೆ ಗೊತ್ತಿರುವ ವಿಚಾರಗಳು ಬಹಿರಂಗವಾದ ಮೇಲೆ ಅವರ ಕಂಪನಿಯ ಷೇರಿನ ಬೆಲೆ ಇಳಿಯುತ್ತದೆ ಎನ್ನುವ ಸೂಕ್ಷ್ಮಗಳು ಗೊತ್ತಾದಾಗಲೂ ತಮ್ಮಲ್ಲಿರುವ ಷೇರುಗಳನ್ನು ಕೂಡಲೆ ಮಾರುವ ಹಾಗೂ ಇಲ್ಲ. ಅದು ಅನೈತಿಕ. ತಮ್ಮ ಸ್ಥಾನದ ಬಲದಿಂದ ತಮಗೆ ಗೊತ್ತಾದ ವಿಚಾರವೊಂದನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಹೀನ, ಮೌಲ್ಯರಹಿತ, ಅನೈತಿಕ ನಡವಳಿಕೆ (Unethical) ಅದು. ಕಂಪನಿಯೊಂದರ ಷೇರುಗಳನ್ನು ಕೊಂಡುಕೊಂಡಿರುವ ಸಾರ್ವಜನಿಕರಿಗೆ ಎಸಗುವ ಮಹಾವಂಚನೆ. ಅದನ್ನು ಬ್ಯುಸಿನೆಸ್ ಪ್ರಪಂಚದ ಪರಿಭಾಷೆಯಲ್ಲಿ Insider Trading ಎನ್ನುತ್ತಾರೆ. ಯಾರಾದರೂ ಹಾಗೆ ಮಾಡಿದ್ದು ಸಾಬೀತಾದರೆ ಅದೊಂದು ಕ್ರಿಮಿನಲ್ ಅಪರಾಧ. ಅದಕ್ಕೆ ಜೈಲು ಶಿಕ್ಷೆಯೂ ಆಗುತ್ತದೆ.

ಮಾರ್ಥಾ ಸ್ಟುವರ್ಟ್ ಎಸಗಿದ ಅಪರಾಧವೂ ಅದೇನೆ. 2001ನೇ ಇಸವಿಯ ಸುಮಾರಿನಲ್ಲಿ ಇಮ್ಕ್ಲೋನ್ ಎನ್ನುವ ಕಂಪನಿಯ ಬೋರ್ಡಿನಲ್ಲಿ ಆಕೆ ನಿರ್ದೇಶಕಿ ಆಗಿದ್ದಳು. ಅದೊಂದು ದಿನದ ಮೀಟಿಂಗ್‌ನಲ್ಲಿ ಆ ಕಂಪನಿಯ ವೈದ್ಯಕೀಯ ಉತ್ಪನ್ನವೊಂದಕ್ಕೆ ಸರ್ಕಾರದ ಪರವಾನಗಿ ಸಿಕ್ಕಿಲ್ಲ ಎಂಬ ವಿಚಾರ ಆಕೆಗೂ ಸೇರಿದಂತೆ ಆ ಕಂಪನಿಯ ಮುಖ್ಯ ಮಂದಿಗೆಲ್ಲ ಗೊತ್ತಾಯಿತು. ಅದರಲ್ಲಿ ಒಂದಷ್ಟು ಜನ ಅಂದೇ ತಮ್ಮ ಷೇರುಗಳನ್ನು ಮಾರಿಕೊಂಡರು. ತನಗೆ ಆಗಬಹುದಾಗಿದ್ದ 45 ಸಾವಿರ ಡಾಲರ್‌ಗಳ ನಷ್ಟವನ್ನು ನಿವಾರಿಸಿಕೊಳ್ಳಲು ಸ್ವತಃ ಬಿಲಿಯನೇರ್ ಆಗಿದ್ದ ಮಾರ್ಥಾಳೂ ಆ ಕಂಪನಿಯ ತನ್ನ ಷೇರುಗಳನ್ನು ಮಾರಿಬಿಡಲು ಕೂಡಲೆ ತನ್ನ ಏಜೆಂಟನಿಗೆ ತಿಳಿಸಿದಳು. ಮಾರನೆಯ ದಿನ ಆ ಕಂಪನಿಯ ಉತ್ಪನ್ನಕ್ಕೆ ಪರವಾನಗಿ ಸಿಕ್ಕಿಲ್ಲದ ವಿಚಾರ ಬಹಿರಂಗವಾಯಿತು. ಒಂದೇ ದಿನದಲ್ಲಿ ಆ ಕಂಪನಿಯ ಷೇರುಗಳ ಬೇಲೆ ಶೇ.18 ರಷ್ಟು ಬಿದ್ದು ಹೋಯಿತು. ಅಂದಿನ ಹಿಂದಿನ ದಿನ ಕೆಲವು Insiders ತಮ್ಮ ಷೇರುಗಳನ್ನು ಮಾರಾಟ ಮಾಡಿರುವ ವಿಚಾರ ನಂತರದ ದಿನಗಳಲ್ಲಿ ಬಯಲಿಗೆ ಬಂತು. ಮಾರ್ಥಾ ಏನೇನೊ ನಾಟಕ ಆಡಿದಳು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಕೆಯಿಂದಾಗಲಿಲ್ಲ. ತನ್ನ ಆ ಅನೈತಿಕ ಕೃತ್ಯಕ್ಕೆ ಈಗಲೂ ಆಕೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ದುಡ್ಡಿನ ವಿಚಾರದಲ್ಲಿ ಅದೊಂದು ಸಣ್ಣ ಮೊತ್ತದ ತಪ್ಪು. ಆದರೆ ಮೌಲ್ಯ, ನೀತಿ, ಮತ್ತು ನೈತಿಕತೆಯ ದೃಷ್ಟಿಯಿಂದ ಅದೊಂದು ಗಂಭೀರ ಅಪರಾಧ. ತಮ್ಮ ಸ್ಥಾನಬಲವನ್ನು ಸ್ವಂತಲಾಭಕ್ಕೆ ಬಳಸಿಕೊಳ್ಳುವ ಹೀನಾತಿಹೀನ ನಡವಳಿಕೆ. (ನಮ್ಮಲ್ಲಿ ಕೆಲವರಿಗೆ ಈ ಪದಬಳಕೆ ಮತ್ತು ಈ ಅಭಿಪ್ರಾಯ ಕಠೋರವೆಂದೂ, ಮಾರ್ಥಾ ಸ್ಟುವರ್ಟ್ ಮಾಡಿದ್ದು ಅಂತಹ ದೊಡ್ಡ ತಪ್ಪೇನೂ ಅಲ್ಲವೆಂದೂ ಅನ್ನಿಸಿದರೆ, ಹಾಗೆ ಅನ್ನಿಸುವುದು ಅಸಹಜ ಎಂದೇನೂ ನಾನು ಭಾವಿಸುವುದಿಲ್ಲ. ದುರದೃಷ್ಟಕರ ವಾತಾವರಣ ಇದು. ಅದಕ್ಕೆ ಕಾರಣಗಳನ್ನು ನ್ಯಾಯ-ಮೌಲ್ಯ-ನೈತಿಕತೆಯನ್ನು ನಮ್ಮಲ್ಲಿ ಪರಿಭಾವಿಸಿರಬಹುದಾದ ಮತ್ತು ಶಿಕ್ಷಣದ ಗುಣಮಟ್ಟದ ನೆಲೆಯಲ್ಲಿ ಗುರುತಿಸಬೇಕು.)

ಈಗ, ಮಾರ್ಥಾ ಸ್ಟುವರ್ಟ್‌ಳ ಹಗರಣವನ್ನು ಮೂಲವಾಗಿ ಇಟ್ಟುಕೊಂಡು ನಮ್ಮಲ್ಲಿ ಒಂದೆರಡು ವಾರದ ಹಿಂದೆ ತಾನೆ ಬಯಲಿಗೆ ಬಂದ ಕೃಷ್ಣಯ್ಯ ಶೆಟ್ಟಿ ಮತ್ತು ಶಿಡ್ಲಘಟ್ಟ ಭೂಹಗರಣವನ್ನು ವಿಶ್ಲೇಷಿಸೋಣ. ಸರ್ಕಾರದಲ್ಲಿ ಯಾವಯಾವ ಯೋಜನೆಗಳು ಯಾವಯಾವ ಸ್ಥಳದಲ್ಲಿ ಎಂತಹ ಸಮಯದಲ್ಲಿ ಅನುಷ್ಠಾನಕ್ಕೆ ಬರಲಿವೆ ಎನ್ನುವ ವಿಚಾರಗಳು ಕೆಲವು ಹಿರಿಯ ಅಧಿಕಾರಿಗಳಿಗೂ, ಮಂತ್ರಿಗಳಿಗೂ, ಮುಖ್ಯಮಂತ್ರಿಗಳಿಗೂ, ಅವರ ಹಿಂಬಾಲಕರಿಗೂ, ಮತ್ತು ಒಂದಷ್ಟು ಶಾಸಕರಿಗೂ ನಿಖರವಾಗಿ ಗೊತ್ತಾಗುತ್ತದೆ. ತಕ್ಷಣವೆ ಈ ಗುಂಪಿನಲ್ಲಿರುವ ಖದೀಮರು ಯೋಜನೆಯೊಂದು ಅನುಷ್ಠಾನಕ್ಕೆ ಬರಲಿರುವ ಸುತ್ತಮುತ್ತಲ ಸ್ಥಳವನ್ನು ತುಂಬ ಅಗ್ಗವಾಗಿ ರಾತ್ರೋರಾತ್ರಿ ತಮ್ಮ ಸಂಬಂಧಿಗಳ ಹೆಸರಿನಲ್ಲಿ, ಹಿಂಬಾಲಕರ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ, ಕೊಂಡುಕೊಂಡುಬಿಡುತ್ತಾರೆ. ನಂತರ ಅದೇ ಜಮೀನನ್ನು ತಮ್ಮದೆ ಸುಪರ್ದಿಯಲ್ಲಿರುವ ಸರ್ಕಾರಕ್ಕೆ ಅಸಹಜವಾದ ಬೆಲೆಗೆ, “ಮಾರುಕಟ್ಟೆ ಬೆಲೆ” ಎಂಬ ಹೆಸರಿನಲ್ಲಿ ಮಾರಿಬಿಡುತ್ತಾರೆ. ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು, ಗೃಹಮಂಡಳಿ ಭೂಸ್ವಾಧೀನಗಳ ಜಮೀನೆಲ್ಲ ಸ್ವಾಧೀನದ ಸಮಯಕ್ಕೆ ಈ ಖದೀಮ ಗುಂಪಿನವರದೇ ಆಗಿರುತ್ತದೆ. ಮತ್ತೆ ಎಷ್ಟೋ ಸಲ ಸರ್ಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರುವುದೆ ಕೆಲವು ಪಟ್ಟಭದ್ರರ ಜಮೀನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಇರುವ ಕಾರಣದಿಂದ. ಶಿಡ್ಲಘಟ್ಟದಲ್ಲಾಗಿದ್ದೂ ಇದೆ. ಅಣ್ಣನ ಇಲಾಖೆಗೆ ಜಮೀನು ಬೇಕಾದ ವಿವರ ತಮ್ಮನಿಗೆ ತಿಳಿಸಲಾಯಿತು ಅಥವ ಗೊತ್ತಾಯಿತು. ಮಂತ್ರಿಯ ತಮ್ಮ ಸ್ವತಃ ತಾನೇ ಹೋಗಿ ವ್ಯಾಪಾರಕ್ಕೆ ನಿಂತರು. ರೈತನಿಂದ ಆರು ಕಾಸಿಗೆ ಕೊಂಡು ಅರವತ್ತು ಕಾಸಿಗೆ ಅಣ್ಣನ ಇಲಾಖೆಗೆ ಮಾರಿದರು. ನೈತಿಕತೆ ಮತ್ತು ಅಧಿಕಾರದುರುಪಯೋಗದ ಹಿನ್ನೆಲೆಯಿಂದ ಇದನ್ನು ನೀವು ಗಮನಿಸದೆ ಹೋದರೆ ಈ ಇಡೀ ಪ್ರಕರಣದಲ್ಲಿ ತಪ್ಪಾದರೂ ಎಲ್ಲಿದೆ?

ಇಂತಹ ಅನೈತಿಕ ಕೆಲಸಗಳನ್ನು ಮಾಡುವ Insiderಗಳನ್ನು ದಾಖಲೆಯ ಸಮೇತ ಕಂಡುಹಿಡಿಯುವಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಜೊತೆಗೆ, ಇಂತಹ ಕೃತ್ಯಗಳು ಅನೈತಿಕ ಹಾಗೂ ಶಿಕ್ಷಿಸಲು ಅರ್ಹವಾದವು ಎಂದು ನಮ್ಮ ಬಹುಸಂಖ್ಯಾತ ಸಮಾಜ ಇನ್ನೂ ಭಾವಿಸಿಲ್ಲ. ಹಾಗಾಗಿ ಇಂತಹುದೆ ಹಗಲುದರೋಡೆಗಳು ಕಳೆದ ಹತ್ತಿಪ್ಪತ್ತು ವರ್ಷಗಳ “ಅಭಿವೃದ್ಧಿ ಶಕೆ”ಯಲ್ಲಿ ನಿರ್ಬಾಧಿತವಾಗಿ ನಡೆದುಕೊಂಡು ಬರುತ್ತಿವೆ. ಈ ಭೂವ್ಯವಹಾರಗಳು ಅಧಿಕಾರಸ್ಥರು ಅಕ್ರಮವಾಗಿ ಹಣ ಮಾಡುವ ಒಂದು ಮಾರ್ಗವಷ್ಟೆ. ತಮ್ಮ ಸ್ಥಾನಬಲವನ್ನು Unethical ಆಗಿ ಬಳಸಿಕೊಂಡು ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳದೆ ದುಡ್ಡು ಮಾಡುವ ಅನೇಕ ಮಾರ್ಗಗಳು ಸರ್ಕಾರದ ಒಳಗೆ ಮತ್ತು ಹೊರಗೆ ಇವೆ. ಹಾಗಾಗಿಯೆ, ಸಿಕ್ಕಿಹಾಕಿಕೊಳ್ಳುವಂತಹ ಹಗರಣಗಳನ್ನು ಮಾಡದೆ ಇವತ್ತಿನ ನಮ್ಮ ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗದ ಖದೀಮತನದಿಂದ ಕೋಟ್ಯಾಂತರ ದುಡ್ಡು ಮಾಡುತ್ತಲೆ ಇದ್ದಾರೆ. ಅದೇ ದುಡ್ಡಿನ ಬಲದಿಂದ ಪ್ರಜಾಪ್ರಭುತ್ವವನ್ನು ಮತ್ತು ಸಮಾಜದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಲೆ ಹೋಗುತ್ತಿದ್ದಾರೆ.

ವಿಪರ್ಯಾಸವೇನೆಂದರೆ, ಇದನ್ನೆಲ್ಲ ಘಟ್ಟಿಸಿ ಕೇಳಬೇಕಾದ, ಜನತೆಯನ್ನು Educate ಮಾಡಬೇಕಾದ ವಿರೋಧಪಕ್ಷದವರೂ ಅದೇ ಮಾರ್ಗದಲ್ಲಿ ಸಾಗಿ ಬಂದಿದ್ದಾರೆ.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಶೋಭಾಕರಂದ್ಲಾಜೆ.ಕಾಮ್)

Anna_Hazare

ಅಣ್ಣಾ ಹಜಾರೆ ಹೋರಾಟ : ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ?

ಪರಶುರಾಮ ಕಲಾಲ್

ಅಣ್ಣಾ ಅಂದರೆ ಇಂಡಿಯಾ ಎಂದು ನಾವೆಲ್ಲರೂ ತುಂಬಾ ಗೌರವಿಸಿದ್ದ ಕಿರಣ್ ಬೇಡಿ ಎಂಬ ಮಾಜಿ ಅಧಿಕಾರಿ ಭಾರತದ ಭಾವುಟ ಹಿಡಿದು ಕುಣಿದಾಡುವುದು. ಕೇಜ್ರಿವಾಲ ಎಂಬ ವ್ಯಕ್ತಿ ಥೇಟ್ ಸ್ವಯಂ ಸೇವಾ ಸಂಸ್ಥೆಯ ವಕ್ತಾರನಾಗಿ ಸರ್ಕಾರದ ವಿರುದ್ಧ ಕಿಡಿ ಕಾರುವುದು.

ಪ್ರತಿನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು, ಸಂಘ, ಸಂಸ್ಥೆಗಳು ಮೊಂಬತ್ತಿ ಹಿಡಿದು ಮೆರವಣಿಗೆ ತೆಗೆಯುವುದು ಜನ ಲೋಕ್‌ಪಾಲ್ ಮಸೂದೆಗೆ ಆಗ್ರಹಿಸುವುದು ನನಗೆ ತಮಾಷೆಯಾಗಿ ಕಾಣುತ್ತಿದೆ.
ಈ ಅಸಂಗತ ನಾಟಕವನ್ನು ನಾವು ದಿನ ನೋಡಬೇಕಲ್ಲ ಎಂಬ ಖೇದವೂ ಕಾಡುತ್ತದೆ.

Anna_Hazare

Anna_Hazare (Pic courtesy: wikipedia)

ಸುಮ್ಮನೆ ಹೇಳಿ ಬಿಡುತ್ತೇನೆ. ಎಲ್ಲಾ ಸಂಸದರು ಲೋಕಸಭೆಯಲ್ಲಿ ಒಮ್ಮತದಿಂದ ಒಪ್ಪಿ ಅಣ್ಣಾ ಹಜಾರೆ ತಂಡ ಪ್ರತಿಪಾದಿಸುವ ಜನ ಲೋಕ್‌ಪಾಲ್ ಮಸೂದೆಯನ್ನು ಜಾರಿಗೆ ತಂದು ಬಿಟ್ಟರು ಎಂದು ಕೊಳ್ಳೋಣ. ಭ್ರಷ್ಟಾಚಾರ ಮಾಡಿದ ಪ್ರಧಾನಿ ಅಥವಾ ಸುಪ್ರೀಂಕೋರ್ಟು ನ್ಯಾಯಮೂರ್ತಿ ಇವರನ್ನು ಈ ಲೋಕ್‌ಪಾಲ್ ಗಲ್ಲಿಗೆ ಹಾಕುತ್ತದೆ ಎಂದೇ ಭಾವಿಸೋಣ. ಇದರಿಂದ ಭ್ರಷ್ಟಾಚಾರ ನಿಲ್ಲುತ್ತದೆಯೇ? (ಇದು ಕಾರ್ಯಸಾಧುವಲ್ಲದ ಕಲ್ಪನೆ, ಆ ಮಾತು ಬೇರೆ.)

ನನ್ನ ಪ್ರಶ್ನೆ ಇಷ್ಟು? ಈ ದೇಶದಲ್ಲಿ ಸರ್ಕಾರಿ ನೌಕರರು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು ಸೇರಿ ಎಷ್ಟು? ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರನ್ನು ಒಳಗೊಂಡ ನೌಕರರು ಎಷ್ಟು? ನಮ್ಮ ಎಲ್ಲಾ ರಾಷ್ಟ್ರೀಯ ಹಾಗೂ ಚೋಟಾ, ಮೋಟಾ ಪ್ರಾದೇಶಿಕ ಪಕ್ಷಗಳ ಜನ ಪ್ರತಿನಿಧಿಗಳ ಸಂಖ್ಯೆ ಎಷ್ಟು? ಇವರಲ್ಲಿ ಗ್ರಾ.ಪಂ.ಸದಸ್ಯರಿಂದ ಹಿಡಿದು, ಲೋಕಸಭೆ ಸದಸ್ಯರವರೆಗೆ ಈ ಎಲ್ಲರನ್ನೂ ಒಟ್ಟು ಸೇರಿಸಿದರೆ ಈ ದೇಶದ ಶೇ.2ರಷ್ಟು ಸಂಖ್ಯೆಯನ್ನು ಇದು ದಾಟುವುದಿಲ್ಲ. ಈ ಎರಡರಷ್ಟು ಸಂಖ್ಯೆಯ ಜನರನ್ನು ತೋರಿಸಿ, ಇಡೀ ರಾಷ್ಟ್ರದ ಜ್ವಲಂತ ಸಮಸ್ಯೆ ಇದೊಂದೆ ಎನ್ನುವಂತೆ ಬಿಂಬಿಸಿ ಹೋರಾಟ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?

ಸುಮ್ಮನೆ ಲೋಕಾಯುಕ್ತರ ವರದಿಯನ್ನು ಪ್ರಸ್ತಾಪಿಸುತ್ತೇನೆ. ಈ ವರದಿ ಆಕ್ರಮ ಗಣಿಗಾರಿಕೆ, ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದು ರಫ್ತು ಮಾಡಿದ್ದು, ತೀವ್ರ ಭ್ರಷ್ಟಾಚಾರ ಎಲ್ಲವನ್ನೂ ಬಯಲು ಮಾಡಿದ್ದಾರೆ. ಸಂತೋಷ ಹೆಗಡೆಯವರು ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಿದ್ದು ನನಗೆ ಇಲ್ಲಿ ಮುಖ್ಯ ಅನ್ನಿಸುತ್ತದೆ. ಸರ್ಕಾರದ ತೆರಿಗೆ ವಂಚಿಸಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಈ ಹಣವನ್ನು ಸರ್ಕಾರ ವಶ ಪಡೆಸಿಕೊಳ್ಳಬೇಕು. ಕಾನೂನು ಪ್ರಕಾರ ಇದಕ್ಕಿಂತಲೂ ಬೇರೇನೂ ಮಾಡಲು ಸಾಧ್ಯವಿದೆ ಪಾಪ ಸಂತೋಷ ಹೆಗಡೆಯವರಿಗೆ.

ಇಲ್ಲಿ ಯಡಿಯೂರಪ್ಪ, ಸೋಮಣ್ಣ, ರೆಡ್ಡಿ ಬ್ರದರ್ಸ್ ಇವರೆಲ್ಲಾ ತುಂಬಾ ಭ್ರಷ್ಟರು. ಇದನ್ನೆಲ್ಲಾ ಒಪ್ಪಿಕೊಳ್ಳೋಣ. ಅವರನ್ನು ಜನ ಕ್ಯಾಕರಿಸಿ ಛೀ, ಥೂ ಎಂದು ಉಗಿಯುತ್ತಾರೋ ಬಿಡುತ್ತಾರೋ ಅದನ್ನು ಮುಂದೆ ನೋಡೋಣ.

ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಘೋಷಿಸಿ ಸತ್ಯ ಹರಿಶ್ಚಂದ್ರರೆಂದು ವೇದಿಕೆ ಮೇಲೆ ಕಂಗೊಳಿಸುವ ಕಾರ್ಪೋರೇಟ್ ಸಂಸ್ಥೆಗಳ ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಭಾಗವನ್ನು ಹೇಳುವ ಮೂಲಕ ನನ್ನ ಮಾತನ್ನು ವಿಸ್ತರಿಸುವೆ. ರಾಜ್ಯ ಸರ್ಕಾರದ ಒಡೆತನ ಇರುವ ಮೈಸೂರು ಮಿನರಲ್ಸ್ ಲಿ., ಕಂಪನಿ (ಎಂಎಂ.ಎಲ್.) ಜೊತೆ ಜಿಂದಾಲ್ ಉಕ್ಕು ಕಾರ್ಖಾನೆಯು ವಿಜಯನಗರ ಮಿನರಲ್ಸ್ ಪ್ರೈ. ಲಿ., (ವಿಎಂಪಿಲ್) ಎಂಬ ಹೆಸರಿನಲ್ಲಿ ಜಂಟಿಯಾಗಿ ಸಂಡೂರಿನ ಪ್ರದೇಶದಲ್ಲಿ ತಿಮ್ಮಪ್ಪನ ಗುಡಿ ಐರನ್ ಓರ್ ಕಂಪನಿ (ಟಿಐಓಎಂ) ಗಣಿಗಾರಿಕೆ ಆರಂಭಿಸಿತು. ಕರಾರಿನಲ್ಲಿ ಮೂರನೆ ವ್ಯಕ್ತಿಗೆ ಕಬ್ಬಿಣದ ಅದಿರು ಮಾರುವಂತಿಲ್ಲ ಎಂದಿದೆ. ಸೌಥ್ ವೆಸ್ಟ್ ಮೈನಿಂಗ್ ಲಿ., ಕಂಪನಿಯು 85,022 ಮೆಟ್ರಿಕ್  ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ. 2003-04ರಿಂದ 2004-05ರವರೆಗೆ 3,65,594 ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿದೆ.

ಜಿಂದಾಲ್ ಉಕ್ಕಿನ ಕಾರ್ಖಾನೆಯು ತನ್ನ ಅವಶ್ಯಕತೆಗೆ ಮೀರಿ ಕಬ್ಬಿಣದ ಅದಿರು ಖರೀದಿಸಿದೆ. ಮತ್ತು ಅದನ್ನು ಆಕ್ರಮವಾಗಿ ರಫ್ತು ಮಾಡಿದೆ. ತನ್ನ ಉಕ್ಕು ಉದ್ಯಮಕ್ಕೆ ಬೇಕಾಗಿದ್ದಕ್ಕಿಂತಲೂ 12,97,707 ಮೆಟ್ರಿಕ್ ಟನ್ ಕಬ್ಬಿಣದ ಅದಿರು ಖರೀದಿಸಿದೆ. ಆಕ್ರಮವಾಗಿ ಇದನ್ನು ರಫ್ತು ಮಾಡಿದೆ. ಒಂದು ಟನ್ ಕಬ್ಬಿಣದ ಅದಿರಿಗೆ 2500 ರೂ. ಎಂದು ಲೆಕ್ಕ ಹಾಕಿದರೂ ಇದರ ಮೌಲ್ಯವು 324,42,52,500 ರೂ. ಆಗುತ್ತದೆ.

ಈ ಕಾರ್ಪೋರೇಟ್ ಸಂಸ್ಥೆಯ ಗಣಿದಾಹ, ಭ್ರಷ್ಟಾಚಾರದ ಬಗ್ಗೆ ಯಾರು ಮಾತನಾಡಬೇಕು?

ತನ್ನ ಹೊಲಸು ಕೈಗಳನ್ನು ರಾಜಕಾರಣಿಗಳ ಬಿಳಿ ಬಟ್ಟೆಗೆ ಹಚ್ಚಿ, ಅವರ ಜೇಬು ಹೊಲಸು ಮಾಡಿ, ನೋಡಿ ಕಳ್ಳರು ಎಲ್ಲಿದ್ದಾರೆ ಎಂದು ಹೇಳುತ್ತಾ ಭಾರತದ ಭಾವುಟ ಹಿಡಿದು, ಮೊಂಬತ್ತಿ ಹಚ್ಚಿ ತಮ್ಮ ಕರಾಳ ಮುಖ ಬಚ್ಚಿಟ್ಟುಕೊಂಡು ದೇಶಭಕ್ತರಾಗಿ ಕಾಣುವ ಇವರ ಬಗ್ಗೆ ಜನ ಲೋಕ್‌ಪಾಲ್ ಮಸೂದೆಯಲ್ಲಿ ಉತ್ತರ ಇದೆಯಾ? ನನಗೆ ಗೊತ್ತು, ನಾನು ಹುತ್ತ ಹೊಡೆದಿದ್ದೇನೆ. ಪ್ರತಿಕ್ರಿಯೆಗಳು ಬರಲಿ, ನಂತರ ನನ್ನ ಸಂವಾದ ಮುಂದುವರೆಸುವೆ.