Tag Archives: ಅಮಿತಾಬ್

ಆರಕ್ಷಣ್ ಸಿನಿಮಾ ಮತ್ತು ಶಿಕ್ಷಕರ ದಿನ

“ಇನ್ನುಮುಂದೆ ನೀನು ಶಿಕ್ಷಣ ಕ್ಷೇತ್ರದಿಂದ ಹೊರಗೆ. You will remain a zero” – ಎಂಬರ್ಥದ ಟೀಕೆಗಳಿಂದ ಬೇಸತ್ತ ಪ್ರಿನ್ಸಿಪಾಲ್ ಉಚಿತವಾಗಿ ಬಡ ಮತ್ತು ದಲಿತ ಮಕ್ಕಳಿಗೆ ಪಾಠ ಹೇಳಲು ಆರಂಭಿಸುತ್ತಾರೆ. ಅವರ ಪ್ರಯತ್ನ ಬೃಹತ್ ಪ್ರಮಾಣದ ಯಶಸ್ಸು ನೀಡುತ್ತದೆ. ಸಾವಿರಾರು ರೂಗಳನ್ನು ತೆತ್ತು ಕೋಚಿಂಗ್ ಪಡೆಯಲಾಗದ ನೂರಾರು ವಿದ್ಯಾರ್ಥಿಗಳು ಇವರ ಪ್ರಯತ್ನದ ಸದುಪಯೋಗ ಪಡೆಯುತ್ತಾರೆ. ಇದು ಆರಕ್ಷಣ ಸಿನಿಮಾದ ಕತೆ.

ಅದು ಮೇಲ್ನೋಟಕ್ಕೆ ತಿಳಿಯುವಂತೆ ‘highly cinematic’ ಎಂದು ಹೇಳಿಬಿಡಬಹುದಾದರೂ, ಈ ನೆಲದ ಶಿಕ್ಷಕರಿಗೆ ಉತ್ತಮ ಸಂದೇಶ, ಪ್ರೇರಣೆ ಇಲ್ಲಿದೆ ಎನ್ನುವುದನ್ನು ಒಪ್ಪಲೇಬೇಕು. ಸೋಮವಾರ (ಸೆ.5) ಶಿಕ್ಷಕರ ದಿನ. ಆ ಕಾರಣ ಆ ಸಂದೇಶಕ್ಕೆ ಮಹತ್ವ ಇದೆ. ಈ ಚಿತ್ರದಲ್ಲಿ ಪ್ರಿನ್ಸಿಪಾಲ್ (ಅಮಿತಾಬ್ ಬಚ್ಚನ್) ಚೇಂಬರ್ ನಲ್ಲಿ ಶಿಕ್ಷಕರ ದಿನಾಚರಣೆಗೆ ಕಾರಣರಾದ ಸರ್ವೆಪಲ್ಲಿ ರಾಧಾಕೃಷ್ಣ ರ ಚಿತ್ರಪಟ ಇದೆ ಅಮಿತಾಬ್ ಬಚ್ಚನ್ ಮಾತನಾಡುವ ದೃಶ್ಯಗಳಲ್ಲಿ ಹಿನ್ನೆಲೆಯಲ್ಲಿ ರಾಧಾಕೃಷ್ಣರ ಚಿತ್ರಪಟ ಮತ್ತೆ ಮತ್ತೆ ಕಾಣುತ್ತದೆ. ಚಿತ್ರ ನಿರ್ದೇಶಕರು ಆ ಚಿತ್ರಪಟದ ಮೂಲಕ ಶಿಕ್ಷಕ-ವೀಕ್ಷಕರಿಗೆ ಏನನ್ನೋ ಹೇಳಲು ಬಯಸುತ್ತಾರೆ ಎನ್ನುವುದು ಸ್ಪಷ್ಟ.

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಹಲವು ಬದಲಾವಣೆಗಳಿಗೆ ಒಳಗಾಗಿದೆ. ಸರಕಾರಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಉತ್ತಮ ಸಂಬಳ ಪಡೆಯುತ್ತಿದ್ದಾರೆ. (ಆಫ್ಕೋರ್ಸ್ ‘ಉತ್ತಮ’ ಎನ್ನುವುದು ಸಾಪೇಕ್ಷ). ಆದರೆ ಜನರ ಮಧ್ಯೆ ಚಾಲ್ತಿಯಲ್ಲಿರುವ ಒಂದು ಮಾತು ಶಿಕ್ಷಕರು, ಅದರಲ್ಲೂ ಪ್ರಥಮ ದರ್ಜೆ ಕಾಲೇಜುಗಳ ಬಹುತೇಕ ಉಪನ್ಯಾಸಕರು, ತಮ್ಮ ಪಗಾರಕ್ಕೆ ನ್ಯಾಯ ಒದಗಿಸುವುದಿಲ್ಲ. ಕೊಳ್ಳೇಗಾಲ, ಹುಮ್ನಾಬಾದ್, ಕೊರಟಗೆರೆ – ಇಂತಹ ಸಣ್ಣ ಊರುಗಳಲ್ಲಿರುವ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹತ್ತಿರಹತ್ತಿರ ಒಂದು ಲಕ್ಷ ರೂ ಸಂಬಳ ಪಡೆಯುತ್ತಾರೆ ಎಂದರೆ ಬೇರೆಯವರು ಕಣ್ಣು ಕುಕ್ಕುವುದು ಸಹಜ. ಆದರೆ ಅದೇ ಐಐಟಿ ಅಥವಾ ಐಸೆಕ್ ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರಾಧ್ಯಾಪಕರ ಬಗ್ಗೆ ಇಂತಹ ಧೋರಣೆ ಕಡಿಮೆ.

ಅಷ್ಟು ಸಂಬಳ ಪಡೆದರೂ ದಿನಕ್ಕೆ ಎರಡೋ-ಮೂರೋ ಗಂಟೆ ಪಾಠ ಮಾಡುತ್ತಾರಷ್ಟೆ. ಅವರ ಓದು, ಅಧ್ಯಯನ ಸದೃಢ ಯುವ ಶಕ್ತಿಯನ್ನು ನಿರ್ಮಿಸುವಲ್ಲಿ ಸೋತಿದೆ ಎನ್ನುವ ಆರೋಪಗಳು ಆಗಾಗ್ಗೆ ಕೇಳಿ ಬರುತ್ತವೆ. ಹಾಗಾದರೆ ಶಿಕ್ಷಕರು ಏನು ಮಾಡಬೇಕು? ಈ ಪ್ರಶ್ನೆಗೆ ‘ಆರಕ್ಷಣ’ ಚಿತ್ರದಲ್ಲಿ ಒಂದು ಸಲಹೆ ಇದೆ. ಕಲಿಕೆಯಲ್ಲಿ ಹಿಂದುಳಿದ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬಹುದು.

ಕೊನೆಮಾತು: ಇತ್ತೀಚೆಗೆ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮನೆ ಕಟ್ಟಿದರು. ಕಾರನ್ನೂ ಕೊಂಡರು. ಕೊಲೀಗ್ ಒಬ್ಬರು ‘ನೀವ್ಯಾಕೆ ಕಂಪೂಟರ್ ತಗೋಬಾರದು? ನಿಮ್ಮ ಅಧ್ಯಯನಕ್ಕೂ, ಮಕ್ಕಳಿಗೂ ಉಪಯೋಗ ಆಗುತ್ತೆ. ‘ ಎಂದರು.  ಇದಕ್ಕೆ ಉತ್ತರಿಸಿದ ಪ್ರಾಧ್ಯಾಪಕರು, “ಮಕ್ಕಳ ಕಣ್ಣಿಗೆ ಕಂಪ್ಯೂಟರಿಂದ ತೊಂದರೆ ಆಗುತ್ತೆ ಅದಕ್ಕೆ ಲೇಟ್ ಮಾಡಿದೆ” ಎಂದರು. ನಗಬೇಕೋ, ಅಳಬೇಕೋ ನೀವೇ ಹೇಳಿ.