Tag Archives: ಕಟ್ಟಾ ಸುಬ್ರಮಣ್ಯ ನಾಯ್ಡು

ರಥಯಾತ್ರೆ ಎಂಬ ವೃದ್ಧಾಪ್ಯದ ವ್ಯಸನ

-ಡಾ. ಎನ್.ಜಗದೀಶ್ ಕೊಪ್ಪ

ವ್ಯಯಕ್ತಿಕವಾಗಿ ಹಾಗೂ ತಾತ್ವಿಕವಾಗಿ ನಮ್ಮ ಸಿಟ್ಟು ಮತ್ತು ತಕಾರಾರುಗಳು ಏನೇ ಇರಲಿ ಭಾರತೀಯ ಜನತಾ ಪಾರ್ಟಿ ಎಂಬ ಪಕ್ಷದಲ್ಲಿ ಗೌರವಿಸಬೇಕಾದ ಇಬ್ಬರು ವ್ಯಕ್ತಿಗಳೆಂದರೆ, ಒಬ್ಬರು ವಾಜಪೇಯಿ, ಮತ್ತೊಬ್ಬರು ಎಲ್.ಕೆ.ಅಧ್ವಾನಿ. ಈ ಇಬ್ಬರು ಮಹನೀಯರು ತಮ್ಮ ತತ್ವ ಸಿದ್ಧಾಂತಗಳ ಜೊತೆಗೆ, ಸಾರ್ವಜನಿಕ ಬದುಕಿನಲ್ಲಿ ಒಬ್ಬ ರಾಜಕಾರಣಿಗೆ ಇರಬೇಕಾದ ಬದ್ಧತೆ, ಪ್ರಾಮಾಣಿಕತೆ, ಶುದ್ಧ ಚಾರಿತ್ರ್ಯ, ಇವುಗಳನ್ನು ತಮ್ಮ ಬದುಕಿನುದ್ದಕ್ಕೂ ಕಾಪಾಡಿಕೊಂಡು ಬಂದವರು.

ವಾಜಪೇಯಿ ಈ ದೇಶದ ಪ್ರಧಾನ ಮಂತ್ರಿಯ ಹುದ್ದೆ ಅಲಂಕರಿಸಿ ವೃದ್ಧಾಪ್ಯದ ಕಾರಣಕ್ಕಾಗಿ ರಾಜಕೀಯದಿಂದ ನಿವೃತ್ತಿಗೊಂಡಿದ್ದರೆ, ಕಳೆದ ಒಂದು ದಶಕದಿಂದ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾದ ಅಧ್ವಾನಿಯವರು ಇದೀಗ ತಮ್ಮ ಪಕ್ಷದಲ್ಲಿ ಹುದ್ದೆಗಾಗಿ ಹೋರಾಟ ಮಾಡಬೇಕಾಗಿ ಬಂದಿರುವುದು ಬಿ.ಜೆ.ಪಿ. ಪಕ್ಷದ ವರ್ತಮಾನದ ವಾಸ್ತವ.

10 ವರ್ಷದ ಹಿಂದೆ “ಭಾರತ ಬೆಳುಗುತಿದೆ” ಎಂಬ ಘೋಷಣೆ ಇಟ್ಟುಕೊಂಡು ಎಷ್ಟೇ ಪ್ರಚಾರ ಮಾಡಿದರೂ ಎನ್.ಡಿ.ಎ. ಮೈತ್ರಿಕೂಟವನ್ನು ಭಾರತೀಯ ಮತದಾರ ತಿರಸ್ಕರಿಸಿ, “ಅಮ್ ಆದ್ಮಿ” ಎಂಬ ಘೋಷಣೆಗೆ ಒಲಿದು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಮೈತ್ರಿಕೂಟವನ್ನು ಅಧಿಕಾರಕ್ಕೆ ತಂದ. ಇದರಿಂದಾಗಿ ಮುಂದಿನ ಪ್ರಧಾನಿ ಎಂದು ಎಲ್ಲೆಡೆ ಪ್ರತಿಬಿಂಬಿಸಿದ್ದ ಅಧ್ವಾನಿ ಕನಸು ನುಚ್ಚು ನೂರಾಯಿತು. ಆದರೆ, ಅವರು ಎದೆಗುಂದಲಿಲ್ಲ. 84ರ ಈ ಇಳಿ ವಯಸ್ಸಿನಲ್ಲೂ ತಮ್ಮ ಆರೋಗ್ಯ ಮತ್ತು ತತ್ವ ಸಿದ್ದಾಂತಗಳನ್ನು ಕಾಪಾಡಿಕೊಂಡು ಬಂದು ಮತ್ತೊಮ್ಮೆ ರಥಯಾತ್ರೆ ಮೂಲಕ ಯುದ್ಧಕ್ಕೆ ಅಣಿಯಾಗಿದ್ದಾರೆ.

ಸೋಜಿಗದ ಸಂಗತಿಯೆಂದರೆ, ಪಕ್ಷಕ್ಕೆ ಮರಳಿರುವ ಉಮಾಭಾರತಿ ಹೊರತಪಡಿಸಿದರೆ, ಯಾವೊಬ್ಬ ರಾಷ್ಟ್ರೀಯ ನಾಯಕರು ಅಧ್ವಾನಿ ನಮ್ಮ ಪಕ್ಷದ ಮುಂದಿನ ಪ್ರಧಾನಿ ಎಂದು ಹೇಳಲು ಸಿದ್ಧರಿಲ್ಲ. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ನರೇಂದ್ರ ಮೋದಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ತೆರೆಮರೆಯಲ್ಲಿ ಪ್ರಧಾನಿ ಹುದ್ದೆಗೆ ಪೈಪೋಟಿ ನಡೆಸಿರುವುದು ಅಧ್ವಾನಿಯವರಿಗೆ ನುಂಗಲಾರಾದ ತುತ್ತಾಗಿದೆ. ಯು.ಪಿ.ಎ. ಸರ್ಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಎಂದು ಅವರು ಘೋಷಿಸಿಕೊಂಡಿದ್ದರೂ, ಇದು ತಮ್ಮ ಅಸ್ತಿತ್ವಕ್ಕಾಗಿ ಅಧ್ವಾನಿ ನಡೆಸಿರುವ ಹೋರಾಟ ಎಂಬುದನ್ನ ಎಲ್ಲರೂ ಬಲ್ಲರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಬಿ.ಜೆ.ಪಿ ಪಕ್ಷದಿಂದ ಕಿತ್ತುಕೊಂಡಿರುವ ನಮ್ಮ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಕಟ್ಟಾ ಸುಬ್ರಮಣ್ಯ ನಾಯ್ಡು ಎಲ್ಲಾ  ಮುಖಂಡರ ಬಾಯಿಗೆ ಬೀಗ ಜಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಕರ್ನಾಟಕ ಮಾತ್ರವಲ್ಲ, ಈ ದೇಶದ ಪ್ರತಿಯೊಬ್ಬ ನಾಗರಿಕ ತಲೆತಗ್ಗಿಸುವಂತಹದ್ದು.

ಇವತ್ತಿಗೂ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗಾಲಿ ಜನಾರ್ಧನರೆಡ್ಡಿ, ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ದು, ಕೃಷ್ಣಯ್ಯ ಶೆಟ್ಟಿ, ಮೊಕದ್ದಮೆ ಎದುರಿಸುತ್ತಿರುವ ಶಾಸಕ ಸಂಪಂಗಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಂಬಿ ಎಣಿಸಲು ಸಿದ್ದವಾಗುತ್ತಿರುವ ಹಾಲಪ್ಪ, ಇವರನ್ನು ನೈತಿಕತೆಯ ಆಧಾರದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಾಗದಿರುವ ಸ್ಥಿತಿಯಲ್ಲಿ ಪಕ್ಷ ಇರುವಾಗ ಭ್ರಷ್ಠಾಚಾರದ ಕುರಿತು ಬಿ.ಜೆ.ಪಿ ನಾಯಕರು ಮಾತನಾಡುವುದು ನಿಜಕ್ಕೂ ನಗೆಪಾಟಿಲಿನ ಸಂಗತಿ.

ಆರೋಪಿ ಮತ್ತು ಆಪಾದಿತ ಎಂಬ ಕಾನೂನಿನ ಪರಿಭಾಷೆಯ ಪದಗಳನ್ನು ರಕ್ಷಣೆಗೆ ಗುರಾಣಿ ಮಾಡಿಕೊಂಡಿರುವ ಬಿ.ಜೆ.ಪಿ ಪಕ್ಷ ಮುಂದಿನ ದಿನಗಳಲ್ಲಿ ಆಪರೇಶನ್ ಕಮಲ ಎಂಬ ಅನೈತಿಕಯ ರಾಜಕೀಯ ಚಟುವಟಿಕೆಯಲ್ಲಿ ತೊಡಗಿ ಉಪಚುನಾವಣೆಗಳ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನ ಖರ್ಚು ಮಾಡಿಸಿದ ಬಗ್ಗೆ ಜನರಿಗೆ ಉತ್ತರಿಸಬೇಕಾಗಿದೆ. (ಕೊಪ್ಪಳ ಉಪಚುನಾವಣೆಗೆ ಖರ್ಚಾದ ಹಣದಮೊತ್ತ 65 ಲಕ್ಷ ರೂಪಾಯಿ, ಇದು ಚನಾವಣಾ ಆಯೋಗ ಸಿಬ್ಬಂದಿಗಾಗಿ ಖರ್ಚು ಮಾಡಿದ ಹಣ.)

ಸಾಮಾಜಿಕ ನ್ಯಾಯದ ಬಗ್ಗೆ ರಾಜ್ಯ ಬಿ.ಜೆ.ಪಿ. ನಾಯಕರು ನಮ್ಮ ಸಂವಿಧಾನದ ಮೂಲ ಆಧಾರಗಳಾದ ಜಾತ್ಯಾತೀತ ಹಾಗೂ ಧರ್ಮಾತೀತ ಮನೋಭಾವವನ್ನು ಮರೆತು ರಾಜ್ಯದ ವಿ.ವಿ.ಗಳಿಗೆ ಉಪಕುಲಪತಿಗಳ ನೇಮಕ ಹಾಗೂ ಇತರೆ ಉನ್ನತ ಹುದ್ದೆಗಳ ನೇಮಕದಲ್ಲಿ ಒಂದೇ ಜಾತಿಗೆ ಪ್ರಾಧಾನ್ಯ ನೀಡಿದ್ದರ ಬಗ್ಗೆ ಜೊತೆಗೆ ಎಗ್ಗಿಲ್ಲದೆ ಮಠ ಮಾನ್ಯಗಳಿಗೆ ಪ್ರಸಾದದಂತೆ ರಾಜ್ಯ ಬೊಕ್ಕಸದ ಹಣವನ್ನು ಹಂಚಿದರ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳ್ಲಬೇಕಾಗಿದೆ.

ದಸರಾ ಉದ್ಘಾಟನೆಗೆ ಬರಗೂರು ರಾಮಚಂದ್ರಪ್ಪನವರ ನಂತರ, ಧಾರ್ಮಿಕ ನಾಯಕನ್ನು ಹೊರತು ಪಡಿಸಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದ ಯಾವುದೇ ರಂಗದಲ್ಲಿ ಒಬ್ಬ ಗಣ್ಯ ವೈಕ್ತಿ ಬಿ.ಜೆ.ಪಿ ಸರ್ಕಾರಕ್ಕೆ ಏಕೆ ಸಿಗಲಿಲ್ಲ?

ಕರ್ನಾಟಕದ ಬೆಳವಣಿಗೆ ಕುರಿತು ಮೊದಲಿನಿಂದಲೂ ಅಸಮಾಧಾನ ವ್ಯಕ್ತ ಪಡಿಸಿದ ಏಕೈಕ ನಾಯಕರೆಂದರೆ ಎಲ್.ಕೆ. ಅಧ್ವಾನಿ ಮಾತ್ರ. ಅವರ ಮಾತಿಗೆ ಪಕ್ಷ ಮೊದಲೇ ಬೆಲೆ ನೀಡಿದ್ದರೆ, ಪಕ್ಷಕ್ಕೆ ಇಂದು ರಾಷ್ಟಮಟ್ಟದಲ್ಲಿ ಈ ರೀತಿಯ ಮುಜುಗರ ಅನುಭವಿಸುವ ಸ್ಥಿತಿ ಬರುತ್ತಿರಲಿಲ್ಲ.

ಪಕ್ಷದ ರಾಷ್ಟೀಯ ಅಧ್ಯಕ್ಷರಾದ ನಿತೀನ್ ಗಡ್ಕರಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ರಾಜ್ಯ ನಾಯಕರ ಜೊತೆ ಚೌಕಾಶಿ ಶುರುವಿಟ್ಟುಕೊಂಡು ನಾಗಪುರದಲ್ಲಿ ತಮ್ಮ ಪುತ್ರನ ವಿವಾಹಕ್ಕೆ 13 ಕೋಟಿ ರೂ.ಹಣ ಖರ್ಚು ಮಾಡಿದಾಗಲೇ ಪಕ್ಷ ವಾಜಪೇಯಿ ಮತ್ತು ಅಧ್ವಾನಿ ಕಾಲದಲ್ಲಿ ಕಾಪಾಡಿಕೊಂಡು ಬಂದಿದ್ದ ನೈತಿಕತೆಯ ನೆಲೆಗಟ್ಟು ಕುಸಿದು  ಹೋಗಿದೆ ಎಂದು ನಾಗರೀಕರಿಗೆ ಮನದಟ್ಟಾಗಿ ಹೋಯಿತು.

ಇಂತಹ ದಯನೀಯ ಸ್ಥಿತಿಯಲ್ಲಿ ಮುಂದಿನ ಪ್ರಧಾನಿಯಾಗಲು ಹೊರಟಿರುವ ಪಕ್ಷದ ಹಿರಿಯ ನಾಯಕ ಅಧ್ವಾನಿಯವರ ಹಾದಿ ಸುಗುಮವಾಗಿಲ್ಲ. ಕಾಲ ಬದಲಾದಂತೆ ತಲೆಮಾರುಗಳ ಚಿಂತನೆ ಕೂಡ ಬದಲಾಗುತ್ತಿದೆ. ಈ ಕಟು ವಾಸ್ತವ ಸ್ಥಿತಿಯನ್ನು ಅಧ್ವಾನಿಯವರು ಜೀರ್ಣಿಸಿಕೊಳ್ಳಬೇಕಾಗಿದೆ.