Tag Archives: ಗದಗ

ಭೂ ಸ್ವಾಧೀನ ವಿರೋಧಿ ಸಮಾವೇಶ

-ಅರುಣ್ ಜೋಳದಕೂಡ್ಲಿಗಿ

ಅಕ್ಟೋಬರ್ 17 ರಂದು ಗದಗಿನಲ್ಲಿ ರಾಜ್ಯಮಟ್ಟದ ಭೂಸ್ವಾಧೀನ ವಿರೋಧಿ ಸಮಾವೇಶ ನಡೆಯಿತು. ಇಂದು ಜಾತಿವಾದಿ,ಕೋಮುವಾದಿ ಬೆಂಬಲಿತ ಸಮಾವೇಶಗಳು ನಡೆವ ಹೊತ್ತಲ್ಲಿ ಇಂತಹದ್ದೊಂದು ಸಮಾವೇಶ ಸಾಂಸ್ಕೃತಿಕವಾಗಿ ಮಹತ್ವದ ಸಂಗತಿ. ಒಂದೆಡೆ ಭೂ ಕಬಳಿಕೆಯ ಆರೋಪ ಹೊತ್ತು ಆಳುವವರು ಜೈಲು ಸೇರಿದ್ದಾರೆ. ಕೆಲವರು ಸರದಿಯಲ್ಲಿದ್ದಾರೆ. ಇನ್ನೊಂದೆಡೆ ಹೋರಾಟ ಕೂಗು ಕೆಲಸಕ್ಕೆ ಬಾರದ್ದು ಎಂದು ಸಿನಿಕರಾದ ಜನ ಮೌನವಾಗಿದ್ದಾರೆ. ಮತ್ತೊಂದೆಡೆ ಜನಪರವಾದ ಪ್ರಾಮಾಣಿಕ ಕೆಲ ಮನಸ್ಸುಗಳು ಒಂದೆಡೆ ಸೇರಿ ಭೂ ಸ್ವಾದೀನವನ್ನು ವಿರೋಧಿಸುತ್ತಿದ್ದಾರೆ. ಇವು ಕರ್ನಾಟಕವನ್ನು ಅರ್ಥ ಮಾಡಿಕೊಳ್ಳಬಹುದಾದ ವೈರುಧ್ಯದ ಚಿತ್ರಗಳು.

ಪೋಸ್ಕೋದಂತಹ ದೈತ್ಯ ಕಂಪನಿ ಬಾಲ ಮುದುರಿಕೊಂಡು ಹಿಂದೆ ಸರಿವಂತೆ ಎಚ್ಚರಿಕೆ ನೀಡಿದ ನೆಲದಲ್ಲಿಯೇ ಈ ಸಮಾವೇಶ ನಡೆದದ್ದು ಅರ್ಥಪೂರ್ಣ. ಇದನ್ನು ಕರ್ನಾಟಕದಾದ್ಯಂತ ವಿಸ್ತರಿಸಬೇಕಿದೆ. ಪ್ರಭುತ್ವವನ್ನು ಹಾಡಿ ಹೊಗಳುವ ಸ್ವಾಮೀಜಿಗಳ ಪೈಕಿ, ಗದಗದ ತೋಂಟದ ಸಿದ್ದಲಿಂಗ ಸ್ವಾಮಿಗಳು ಭಿನ್ನವಾಗಿ ನಿಲ್ಲುತ್ತಾರೆ. ಸ್ವಾಮೀಜಿಗಳು ರೈತಪರವಾಗಿ ಪ್ರಭುತ್ವದ ಕಿವಿಹಿಂಡುವ ಗುಣ ಪಡೆದರೆ ಆಗಬಹುದಾದ ಪರಿಣಾಮಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಅವರು ಮಾತನಾಡುತ್ತಾ ಹೊಲ ಕೆಲವರಿಗೆ ಸೇರಿದ್ದರೆ ಈ ನೆಲ ಎಲ್ಲರಿಗೂ ಸೇರಿದ್ದು. ಹಾಗಾಗಿ ನಾವು ನೆಲದ ಬಗ್ಗೆ ಮಾತನಾಡುತ್ತಿದ್ದೇವೆ, ನೆಲವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ಇಡೀ ಸಮಾವೇಶದ ಆಶಯವನ್ನು ತಾತ್ವಿಕವಾಗಿ ಮಂಡಿಸಿದರು.

ಈ ಸಮಾವೇಶವನ್ನು ಉದ್ಘಾಟನೆ ಮಾಡಿದ್ದು ಹಿರಿಯ ಸ್ವಂತಂತ್ರ್ಯ ಹೋರಾಟಗಾರರಾದ ಹೆಚ್.ಎಸ್. ದೊರೆಸ್ವಾಮಿಯವರು. ಅನ್ನಕೊಡುವ ರೈತರ ಭೂಮಿಯನ್ನು ಕಸಿಯುವುದು ಕೆಚ್ಚಲನ್ನೇ ಕೊಯ್ಯುವಂತಹ ಹೇಯ ಕೃತ್ಯ ಇದನ್ನು ತಡೆಯಬೇಕೆಂಬ ಆತಂಕ ವ್ಯಕ್ತಪಡಿಸಿ, ಸಮಾವೇಶದ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದರು. ಸಿದ್ದನಗೌಡ ಪಾಟೀಲರು ಜಾಗತೀಕರಣದಿಂದಾಗಿ ಭೂಕೇಂದ್ರೀಕರಣವಾಗುತ್ತಿದೆ, ಸರಕಾರದಿಂದ ಅಧಿಕೃತವಾಗಿ, ಖಾಸಗಿಯವರಿಂದ ಅನಧಿಕೃತವಾಗಿ ಭೂ ಒತ್ತುವರಿಗಳು ನಡೆಯುತ್ತಲೇ ಇವೆ. ಇಂತಹ ಒತ್ತುವರಿಗಳನ್ನು ಪ್ರಜ್ಞಾವಂತರೆಲ್ಲಾ ವಿರೋಧಿಸಬೇಕಿದೆ ಎಂದರು. ಮಾವಳ್ಳಿ ಶಂಕರ್, ಬಾಬಾಗೌಡ ಪಾಟೀಲ್, ಮಾರುತಿ ಮಾನ್ಪಡೆ, ಶೌಕತ್ ಆಲಿ ಆಲೂರು, ರುದ್ರಮುನಿ ಆರದಗೆರೆ ಮುಂತಾದವರು ಸಮಾವೇಶದ ಆಶಯಗಳನ್ನು ಬೇರೆ ಬೇರೆ ನೆಲೆಯಲ್ಲಿ ವಿವರಿಸಿದರು.

ರಹಮತ್ ತರೀಕರೆಯವರು ಜನಸಮುದಾಯ ಯಾವುದನ್ನು ವಿರೋಧಿಸಬೇಕೆಂದು ಸಮಾವೇಶ ಮಾಡುತ್ತಿದ್ದೇವೆಯೋ ಯಾವುದು ಬೇಕು ಎಂದು ಕೂಡ ಹಕ್ಕೋತ್ತಾಯದಂತೆ ಕೇಳಬೇಕಾಗಿದೆ, ಹಲವು ಚಳವಳಿಗಳ ಏಕೀಕರಣವಾಗಬೇಕಿದೆ ಎಂದರು. ಟಿ. ಆರ್. ಚಂದ್ರಶೇಖರ್ ಅವರು ಗದಗ ಜಿಲ್ಲೆಯ ಅಭಿವೃದ್ಧಿಯ ಸಾದ್ಯತೆಗಳ ಬಗ್ಗೆ ತುಂಬಾ ವಾಸ್ತವವಾಗಿ ಮಾತನಾಡಿದರು. ಕೇಂದ್ರದ ಭೂ ಸ್ವಾಧೀನ ಮಸೂದೆ ಮತ್ತು ರೈತರ ಹಿತಾಸಕ್ತಿ ಕುರಿತಂತೆ ಕೆ.ಪಿ. ಸುರೇಶ್ ಅವರು ವ್ಯಂಗ್ಯಬರಿತ ವಿಷಾಧವನ್ನು ವ್ಯಕ್ತಪಡಿಸಿದರು. ಕೃಷಿ ವಲಯ: ಜಾಗತಿಕ ಬಂಡವಾಳದ ಹರವಿನ ನೆಲೆಗಳು ಕುರಿತಂತೆ ಶಿವಸುಂದರ್ ಕಟುವಾದ ಸತ್ಯಗಳನ್ನು ಬಯಲಿಗೆಳೆದರು. ಜಿ. ರಾಮಕೃಷ್ಣ ಅವರು ಕನರ್ಾಟಕದ ಸದ್ಯದ ನಡೆಯ ಬಗ್ಗೆ ವಿಮಶರ್ಾತ್ಮಕವಾಗಿ ಚಚರ್ಿಸಿದರು. ಹೀಗೆ ಇಡೀ ಸಮಾವೇಶ ವರ್ತಮಾನ ಮತ್ತು ಭವಿಷ್ಯದಲ್ಲಿ ರೈತಸಮುದಾಯ ಎದುರಿಸಬೇಕಾದ ಬಿಕ್ಕಟ್ಟುಗಳು ಮತ್ತು ಅವುಗಳನ್ನು ಬಿಡಿಸಿಕೊಳ್ಳಲು ಇರಬಹುದಾದ ದಾರಿಗಳನ್ನು ಕುರಿತಂತೆ ಒಂದು ಗಂಭೀರ ಚರ್ಚೆ ಸಾದ್ಯವಾಯಿತು.

ಈ ಸಮಾವೇಶದಲ್ಲಿ ರೈತ ಸಮುದಾಯ, ರೈತಪರ ಜನ ಹೆಚ್ಚಾಗಿಯೇ ಸೇರಿದ್ದರು. ವೆಂಕಟೇಶಯ್ಯ, ಇಪ್ಟಾ, ಸಮುದಾಯ ತಂಡಗಳ ಹೋರಾಟದ ಹಾಡುಗಳು ಈ ಸಮಾವೇಶದ ಆಶಯವನ್ನು ವಿಸ್ತರಿಸುವಂತಹ ಶಕ್ತಿ ಪಡೆದಿದ್ದವು. ಮುತ್ತು ಹಾಳಕೇರಿ, ಹು.ಬಾ. ವಡ್ಡಟ್ಟಿ ಅವರಿಂದ ಪೋಸ್ಕೋ ಹೋರಾಟದ ಛಾಯಚಿತ್ರ ಮತ್ತು ಪತ್ರಿಕಾ ವರದಿಗಳ ಪ್ರದರ್ಶನ ಸಮಾವೇಶದ ಪರಿಣಾಮವನ್ನು ಹೆಚ್ಚಿಸುವಂತಿದ್ದವು. ಅಂತೆಯೇ ಭೀಮೇಶ ತಂಡದಿಂದ `ಭೂಮಿ ಕೊಡುವ ಮಾತಾಯಿತು’ ನಾಟಕ ಸದ್ಯದ ರೈತರ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು.

ಈ ಸಮಾವೇಶ ಹಲವು ಸಂಘಟನೆಗಳ ಫಲ. ಹೀಗೆ ಒಂದು ಸಮಾನ ಉದ್ದೇಶ ಸಾಧನೆಗಾಗಿ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದು ಕೂಗಿಗೆ ತಮ್ಮ ದ್ವನಿ ಸೇರಿಸುವ ಅಗತ್ಯವಿದೆ. ಹಲವು ಸಂಘಟನೆಗಳ ಏಕೀಕರಣಕ್ಕೆ ಕಾರಣವಾದ ಗದಗದ ಭೂ ಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿಯವರನ್ನು ಈ ಸಂದರ್ಭದಲ್ಲಿ ನೆನೆಯಬಹುದು. ಎಲ್ಲರನ್ನೂ ಒಂದೆಡೆ ಸೇರಿಸುವುದರಲ್ಲಿ ಬಸವರಾಜ ಸೂಳಿಬಾವಿ ಅವರ ಶ್ರಮ ಹೆಚ್ಚಿನದು. ಹೀಗೆ ಕರ್ನಾಟಕದಾದ್ಯಾಂತ ಈ ಸಮಾವೇಶವನ್ನು ವಿಸ್ತರಿಸುವ ಮತ್ತು ಆ ಮೂಲಕ ರೈತರಲ್ಲಿ ಒಂದು ಬಗೆಯ ಹೊಸ ಸಂಚಲನವನ್ನು ಉಂಟುಮಾಡುವ ಅಗತ್ಯವಿದೆ. ಇದಕ್ಕೆ ಆಯಾ ಭಾಗದ ಪ್ರಜ್ಞಾವಂತ ಜನ ಕೈ ಜೋಡಿಸಬೇಕಾಗಿದೆ. ಇದು ಸದ್ಯದ ಕರ್ನಾಟಕದಲ್ಲಿ ಆಗಲೇಬೇಕಾದ ಕೆಲಸಗಳಲ್ಲಿ ಪ್ರಮುಖವಾದುದು.

ಪೋಸ್ಕೋ ಪಲಾಯನದ ಹಿಂದಿನ ರಾಜಕಾರಣ ಮತ್ತು ಕಾಡುತ್ತಿರುವ ಪ್ರಶ್ನೆಗಳು

ಹು.ಬಾ. ವಡ್ಡಟ್ಟಿ

ಪೋಸ್ಕೋ ಎಂಬ ಸ್ಟೀಲ್ ಉತ್ಪಾದಿಸುವ ದ.ಕೋರಿಯಾದ ಕಂಪನಿ ಗದಗ ಜಿಲ್ಲೆಯ ಹಳ್ಳಿಗುಡಿಯ ರೈತರ ಹೊಲಗಳಲ್ಲಿ ಸ್ಟೀಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪನೆ ಮಾಡುತ್ತಾರೆ ಎನ್ನುವ ಗಾಳಿ ಸುದ್ಧಿ ಮೊದಲು ದಲ್ಲಾಳಿಗಳ ಕಿವಿ ತಲುಪಿದಾಗ ದಲ್ಲಾಳಿಗಷ್ಟು ಖುಷಿ ಪಟ್ಟವರು ಈ ಜಗತ್ತಿನಲ್ಲಿ ಯಾರು ಇರಲಾರರು ಅನಿಸುತ್ತದೆ. ಆದರೆ 2011 ರ ಜೂನ್ ಕೊನೆಯ ವಾರದಲ್ಲಿ ಧಾರವಾಡದ ಕೆಐಎಡಿಬಿ(ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿ)ಯಿಂದ ರೈತರ ಮನೆ ಬಾಗಿಲಿಗೆ “ನಿಮ್ಮ ಭೂಮಿಯನ್ನು ಪೋಸ್ಕೋಗಾಗಿ ವಶಪಡಿಸಿಕೊಳ್ಳಲಾಗುತ್ತದೆ, ಆಕ್ಷೇಪಣೆಗಳು ಇದ್ಧರೆ ಧಾರವಾಡಕ್ಕೆ ಬಂದು ಕೆಐಎಡಿಬಿ ಗೆ ಸಲ್ಲಿಸಬಹುದು,” ಅನ್ನುವ ಸೂಚನೆಯು ತಲೆತಲಾಂತರಿಂದ ಭೂಮಿ ನಂಬಿ ಬದುಕಿರುವ ರೈತಾಪಿ ಜೀವಗಳಿಗೆ ಒಮ್ಮಿ೦ದೊಮ್ಮೆಲೆ ಬರಸಿಡಿಲು ಬಡಿದಂತೆ ಆಗಿ, ರೈತರು ಭೂಮಿ ಜೊತೆ ಹೊಂದಿರುವ ಭಾವನಾತ್ಮಾಕವಾದ ಸಂಬಂಧ ಹಾಗೂ ಭೂಮಿ ಆಧರಿಸಿ ಬದುಕು ಸಾಗಿಸುವುದಕ್ಕೆ ಕೊಡಲಿ ಪೆಟ್ಟುಬೀಳುತ್ತದೆ, ಆದ್ದರಿಂದ ಬದುಕು ಮುಂದೇನು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿತು.

ಅಭಿವೃದ್ದಿಯೆಂಬ ಬಿಸಿಲುಕುದುರೆಯ ನಾಗಾಲೋಟಕ್ಕೆ ಹಳ್ಳಿಗುಡಿ, ಜಂತ್ಲಿಶಿರೂರ್ , ಮೇವುಂಢಿ, ರೈತರು ಭೂಮಿಯನ್ನು ಕೊಡುವದರ ಮೂಲಕ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬಹುದೆಂಬ ಹುಸಿ ಕಲ್ಫನೆಯನ್ನು ಆಡಳಿತಾರೂಢ ಬಿಜೆಪಿಯ ಬೆಂಬಲಿಗರು ಜನರಲ್ಲಿ ಹುಟ್ಟುಹಾಕಿದರು. ಆದರೆ ಪೋಸ್ಕೋ ಆಗಮನದಿಂದ ಇಲ್ಲಿನ ಜನರ ಬದುಕಿಗೆ ನೆಮ್ಮದಿ ಸಿಗುತ್ತಾ ಮೂಲಭೂತ ಕಾಳಜಿಯಿಂದ ಪರಿಸರದ ಮೇಲೆ ಎಂಥ ಪರಿಣಾಮ ಉಂಟಾಗಬಹುದು ಎಂಬ ಆತಂಕ ಪರಿಸರವಾದಿಗಳು, ಪ್ರಗತಿಪರರು, ಮಠಾಧೀಶರದ್ದಾಗಿತ್ತು.ಆದರೂ ಪೋಸ್ಕೋ ಕಂಪನಿಯು ಉಕ್ಕು ಘಟಕ ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ನೀರು ಸುಲಭವಾಗಿ ಕೈ ಅಳತೆಯಲ್ಲಿ ನಿರಾಯಾಸವಾಗಿ ದೊರಕುವುದು ಎಂದು ರಾಜಕಾರಣಿಗಳು, ದಲ್ಲಾಳಿಗಳು, ಅಭಿವೃದ್ದಿಯ ಮಂತ್ರ ಜಪಿಸುವ ಭೂಮಾಫೀಯಾದ ಕುಳಗಳು, ಪೋಸ್ಕೋ “ಯಜ್ಙ”ಕ್ಕೆ ಹಳ್ಳಿಗುಡಿಯ ರೈತರನ್ನು, ಭೂಮಿಯನ್ನು ಸಮಿತ್ತಾಗಿ ಸಿದ್ದಗೊಳಿಸತೊಡಗಿದರು.

ಇದರ ಹಿಂದಿರುವ ಹುನ್ನಾರ ಎಂದರೆ ಪಕ್ಕದಲ್ಲಿಯೇ ಇರುವ ರಾಷ್ಟ್ರೀಯ ಹೆದ್ದಾರಿ – 63 ಹುಬ್ಬಳ್ಳಿ- ಗುಂಟಕಲ್ಲನ್ನು ಜೊಡಿಸುವ ಬ್ರಾಡಗೇಜ್ ರೈಲು ಅದಕ್ಕಿಂತಲು, ಶಿಂಗಟಾಲುರುಗಳಂತಿರುವ  ಏತ ನೀರಾವರಿಯ ನೀರನ್ನು ಉಕ್ಕು ಘಟಕಕ್ಕೆ ಬಳಸಬಹುದು. ಜೊತೆಗೆ ಉಕ್ಕು ಘಟಕಕ್ಕೆ ಬೇಕಾಗುವ ಆದಿರನ್ನು 15 ಕಿ ಮೀ ಅಂತರದಲ್ಲಿರುವ ಕಪ್ಪತ್ತ ಗುಡ್ಡದಿಂದ ಕೊಳ್ಳೆಹೂಡೆಯಲು ಅನೂಕೂಲವಾಗುತ್ತದೆ ಎನ್ನುವ ದೂ(ದು)ರಾಲೊಚನೆಯೊಂದಿಗೆ ಪೋಸ್ಕೋ ಕಂಪನಿಗೆ, ಭೂಮಿ ಕಬಳಿಸುವ ದುಷ್ಟ ಯೋಜನೆಗೆ, ಸರ್ಕಾರವು ಕೈ ಹಾಕಿತು.

ಸರ್ಕಾರವು 2011 ರ ಮಾರ್ಚನಲ್ಲಿ ಕೈಗಾರಿಕೆಯ ಸಲುವಾಗಿ ಲ್ಯಾಂಡ್ ಬ್ಯಾಂಕ್ ಮಾಡಲು ಭೂಮಿ ಒಳಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆಯನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತ್ತು. ಈ ಪ್ರಕಟಣೆಯು ಜನರಿಗೆ, ರೈತರ ಗಮನಕ್ಕೆ ಬಂದಿರಲಿಲ್ಲ. ಈ ಮೊದಲೇ ಗದಗ್ ಜಿಲ್ಲಾ ಉಸ್ತಾವಾರಿ ಸಚಿವಾರಾಗಿದ್ದ ಬಿ.ಶ್ರೀ ರಾಮುಲು ಅವರು ಹಳ್ಳಿಗುಡಿ – ಹಳ್ಳಿಕೇರಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿಯೇ 2 ಸಾವಿರ ಕೋಟಿ ರೂಪಾಯಿವೆಚ್ಚದಲ್ಲಿ ಉಕ್ಕು ಕಾರ್ಖಾನೆಯನ್ನು  ಸ್ಥಾಪಿಸಲಾಗುತ್ತದೆ  ಎನ್ನುವ ಮುನ್ಸುಚನೆ, 2009 ರಲ್ಲಿಯೇ ನೀಡಿದ್ದರಲ್ಲದೆ, ಉಕ್ಕು ಕಾರ್ಖಾನೆಯು ಗದಗ್ ಜಿಲ್ಲೆಯನ್ನು  ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ, ಗದಗ್ ಜಿಲ್ಲೆಯಲ್ಲಿ ಕಾರ್ಖಾನೆಯಿಂದಾಗಿ  , ಅಭಿವೃದ್ಧಿಯು, ತಾನೇ-ತಾನಾಗಿ ಜನರ ಬದುಕಿನಲ್ಲಿ  ಫಲಗಳನ್ನು ತಂದುಹಾಕುತ್ತದೆ. ಇನ್ನು ಮುಂದೆ ಸುಖದ, ನೆಮ್ಮದಿಯ ದಿನಗಳು ಬರಲಿವೆ ಎನ್ನುವ ಕನಸು ಕಾಣ ತೊಡಗಿದರು.

ಇದಕ್ಕೆ ಪೂರಕವಾಗುವಂತೆ ಎಪ್ರಿಲ್ 15-2011 ರಲ್ಲಿ ಮೊದಲ ನೋಟಿಸ್, ‘1966 ರ ಕಲಂ 28 (2) ಮೇರೆಗೆ ಭೂಮಿಯು ಸ್ವಾಧೀನಪಡಿಸಿಕೊಳ್ಳುವ  ದಿಶೆಯಲ್ಲಿ ರೈತರಿಗೆ  ನಿಮ್ಮ ಆಕ್ಷೇಪಣೆಗಳಿದ್ದರೆ ಲಿಖಿತ ರೂಪದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು,’ ಕೆಐಎಡಿಬಿಯ ಧಾರವಾಡದ ಕಾರ್ಯಾಲಯವು ಗಡುವು ನೀಡಿತ್ತು.

ಜೂನ್ 23-2011 ರಂದು ಧಾರವಾಡ ಕೆಐಎಡಿಬಿಯು ಪುನಃ ರೈತರ ಮನೆಯಬಾಗಿಲಿಗೆ ಬಂದಾಗ, ಆ ನೋಟಿಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿದಂತೆ ಕೈಗಾರಿಕೆ ಸ್ಥಾಪನೆ ಸಂಬಂಧಿಸಿ, ಹಳ್ಳಿಗುಡಿ ಗ್ರಾಮದ 3382-ಏಕರೆ ಭೂಮಿಯನ್ನು ಪೋಸ್ಕೋ ಇಂಡಿಯ ಪ್ರೈ.ಲಿ. ಕೈಗಾರಿಕೆ ಸ್ಥಾಪನೆಗೆ ಬೇಕಾಗಿದೆ ಅದರ ಸಲುವಾಗಿ ಆಪೇಕ್ಷೇಣೆಗಳನ್ನು ಸಲ್ಲಿಸಲು, ರೈತರಿಗೆ 10 ದಿನಗಳ ಗಡುವು ನೀಡಿತು. ರೈತರು, ಮಠಾಧೀಶರು, ಪ್ರಗತಿಪರ ಸಂಘಟನೆ, ರೈತರ ಸಂಘಟನೆಯವರು , ಐತಿಹಾಸಿಕ ಹೋರಾಟಕ್ಕೆ ಸಜ್ಜಾಗತೊಡಗಿದರು.  ಪೋಸ್ಕೋ  ಉಕ್ಕು ಕಾರ್ಖಾನೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕುರಿತು ಹಲವು ಸುದ್ದಿಗಳು ಪ್ರಕಟವಾದವು.

ರೈತರು ಸರ್ಕಾರಕ್ಕೆ ಭೂಮಿ ಕೊಡದಿರುವ ಗಟ್ಟಿ ನಿರ್ಧಾರಕ್ಕೆ  ಮಠಾಧೀಶರು, ಪ್ರಗತಿಪರರು, ಮಾಧ್ಯಮದವರು ಬೆಂಬಲವಾಗಿ  ನಿಂತರು. ಹೋರಾಟವು ಮುಂದುವರೆಯಲು ಹೇಗೆ ಸಾಧ್ಯವಾಯಿತು? ಜೊತೆಗೆ ಅಭಿವೃದ್ದಿಯ ಟೊಳ್ಳು-ಗಟ್ಟಿಯು ಜನರ, ರೈತರ, ಬದುಕಿನೊಂದಿಗೆ ಹೇಗೆ ಚೆಲ್ಲಾಟವಾಡುತ್ತಿದೆ ಎನ್ನುವ ಮುಂದಿರುವ ಪ್ರಶ್ನೆಗಳನ್ನು ಇಟ್ಟುಕೊ0ಡು ಮುಂದಿನ ಭಾಗದಲ್ಲಿ ನೊಡೋಣ.

  • ಗದಗ ಜಿಲ್ಲೆಯ ಅಭಿವೃದ್ದಿಗೆ ಪೋಸ್ಕೋ ಬೇಕೆ?
  • ಕೃಷಿ ಆಧಾರಿತ ಕೈಗಾರಿಕೆಗಳು, ಅನುಕೂಲಕರವೇ?
  • ಪೋಸ್ಕೋದಿಂದ ಪರಿಸರ – ಕಪ್ಪತಗುಡ್ಡದ ಮೇಲಾಗುವ ದುಷ್ಟಪರಿಣಾಮಗಳು ಏನು?
  • ಕಳೆದ 50 ವರ್ಷಗಳಿಂದ ಕೈಗಾರಿಕೆ ಏಕೆ ಸ್ಥಾಪನೆ ಆಗಿರಲಿಲ್ಲ?
  • ಸಿಂಗಾಟಲೂರು ಏತ ನೀರಾವರಿ ಈ ಭಾಗದಲ್ಲಿ ಕನಿಷ್ಟ ರೈತರ ಬದುಕಿಗೆ ಆಸರೆಯಾಗಲಿದೆಯೇ?
  • ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಸರ್ಕಾರ ಹಣವನ್ನು ರೈತರಿಗೆ ನೀಡಿದರೆ ರೈತರ ಬದುಕಿನ ಪಯಣ ಯಾವ ದಿಕ್ಕಿನ ಕಡೆಗೆ?
  • ಭೂಸ್ವಾಧೀನ, “ಹಣ ಕೊಡುವ-ತೆಗೆದುಕೊಳ್ಳುವ” ಪ್ರಕ್ರಿಯೆಗಷ್ಟೆ ಸೀಮಿತವೆ?
  • ಪೋಸ್ಕೋ ಕಂಪನಿಯಿಂದ ಗದಗ್ ಜಿಲ್ಲೆಯಲ್ಲಿ ಎಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ?
  • ಭೂಸ್ವಾಧೀನದಿಂದ ಭೂಹೀನವಾಗುವ ರೈತರ ಕುಟುಂಬಗಳು ಎಷ್ಟು? ಅವರು ಬದುಕಿನ ನೆಲೆ ಕಳೆದುಕೊಂಡಾಗ ಪರ್ಯಾಯ ಉದ್ಯೋಗ ಕಲ್ಪಿಸುವರು ಯಾರು?
  • ಪೋಸ್ಕೋಗೆ ಕೊಡುತ್ತಿರುವ ರೈತರ ಭೂಮಿಯು ಕೃಷಿ ಯೋಗ್ಯವಲ್ಲದ ಬಂಜರು, ಭೂಮಿ – ಕೈಗಾರಿಕೆ ಸಚಿವ ನಿರಾಣಿಯವರ ಹೇಳಿಕೆ.
  • ಪೋಸ್ಕೋಗೆ ತುಂಗಾಭದ್ರೆಯಿಂದ ನೀರು ಕೊಡದೇ, ಆಲಮಟ್ಟಿದಿಂದ ನೀರು ಕೊಡುತ್ತೆವೆ – ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ.

(ಮುಂದುವರೆಯುವುದು…)

ಚಿತ್ರಗಳು: ಲೇಖಕರವು