Tag Archives: ಜಲಾಶಯ

ಜೀವನದಿಗಳ ಸಾವಿನ ಕಥನ – 13

– ಜಗದೀಶ್ ಕೊಪ್ಪ

ಹರಿಯುವ ಎಲ್ಲಾ ನದಿಗಳೂ ಸ್ವಚ್ಛವಾದ ತಿಳಿನೀರನ್ನು ಒಳಗೊಂಡಿರುವುದಿಲ್ಲ. ಜಗತ್ತಿನ ಎಲ್ಲಾ ನದಿಗಳೂ ನೀರಿನ ಜೊತೆ ಹೂಳನ್ನು ಹೊತ್ತು ಹರಿಯುವುದು ಸಹಜ. ಅದರಲ್ಲೂ ಬಹುತೇಕ ನದಿಗಳ ನೀರು ಕಲ್ಮಶ ಹಾಗೂ ಮಣ್ಣಿನಿಂದ ಕೂಡಿದ್ದು, ಇವುಗಳಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟುಗಳು ನೀರು ಸಂಗ್ರಹದ ಜಲಾಶಯಗಳಾಗುವ ಬದಲು ಹೂಳು ಸಂಗ್ರಹ ಗುಂಡಿಗಳಾಗಿವೆ. ಹಾಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗುವ ಹೂಳು ಎಲ್ಲಾ ಸರಕಾರಗಳಿಗೆ, ತಂತ್ರಜ್ಞರಿಗೆ ಇಂದಿಗೂ ದೊಡ್ಡ ಸವಾಲಾಗಿದೆ.

ಅಮೆರಿಕಾದ ಜಾರ್ಜ್  ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಖಲೀದ್ ಮಹಮದ್ ಅವರ ಪ್ರಕಾರ, ಪ್ರತಿ ವರ್ಷ ಐವತ್ತು ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಗತ್ತಿನಾದ್ಯಂತ ಜಲಾಶಯಗಳಲ್ಲಿ ಸಂಗ್ರಹವಾಗುತ್ತಿದೆ. 1990 ರಲ್ಲೇ ಜಗತ್ತಿನಾದ್ಯಂತ 1,300 ಕ್ಯೂಬಿಕ್ ಕಿ.ಮೀ. ನಷ್ಟು ಹೂಳು ಜಲಾಶಯಗಳಲ್ಲಿ ತುಂಬಿಹೋಗಿತ್ತು. ಇದೀಗ ಎರಡು ದಶಕಗಳ ನಂತರ ದುಪ್ಪಟ್ಟಾಗಿದ್ದರೂ ಆಶ್ಚರ್ಯವಿಲ್ಲ. ಬಹಳಷ್ಟು ಜಲಾಶಯಗಳ ಆಯುಷ್ಯ ಅವುಗಳ ಗಾತ್ರ, ನೀರು ಶೇಖರಿಸುವ ಸಾಮಥ್ರ್ಯಗಳಿಂದ ನಿರ್ಧಾರವಾಗುತ್ತದೆ. ಸಣ್ಣ ಜಲಾಶಯಗಳು ಎರಡು ಮೂರು ದಶಕಗಳಲ್ಲೇ ಹೂಳಿನಿಂದ ತುಂಬಿಹೋಗಿರುವ ಉದಾಹರಣೆಗಳು ಹಲವಾರಿವೆ.

ಚೀನಾದ ಹಳದಿ ನದಿ

ಸಾಮಾನ್ಯವಾಗಿ ಹರಿಯುವ ನದಿಗಳ ನೀರಿನಲ್ಲಿರುವ ಹೂಳಿನ ಪ್ರಮಾಣ ಶೇ.0.2ರಿಂದ 0.5ರವರೆಗೆ ಇದ್ದು, ಚೀನಾದ ನದಿಗಳಲ್ಲಿ ಮಾತ್ರ ಈ ಪ್ರಮಾಣ 2.3ರಷ್ಟಿದೆ. ಜಲಾಶಯದ ಹೂಳು ಮತ್ತು ನದಿನೀರಿನ ಕಲ್ಮಶ ಜಾಗತಿಕ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗಿದೆ. ಬಹುತೇಕ ಅಣೆಕಟ್ಟುಗಳನ್ನು ವಿದ್ಯುತ್ ಉತ್ಪಾದನೆಯನ್ನೇ ಗುರಿಯಾಗಿಸಿ ನಿರ್ಮಿಸಲಾಗಿದೆ. ಇಂತಹ ಸ್ಥಳಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹಾಯಿಸುವ ಕೊಳವೆಗಳು, ಟರ್ಬನ್ ಇಂಜಿನ್ ಬ್ಲೇಡುಗಳು ಕೆಸರಿನಿಂದ ಕಲ್ಮಶವಾದ ನೀರಿನಿಂದಾಗಿ ತುಕ್ಕು ಹಿಡಿಯುತ್ತಿದ್ದು, ಇವುಗಳ ದುರಸ್ತಿ ವೆಚ್ಚ ವಿದ್ಯುತ್ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ.

ಜಗತ್ತಿನ ಅತ್ಯಂತ ಕಲ್ಮಷಯುಕ್ತ ನದಿಯೆಂದೇ ಪರಿಗಣಿಸಿರುವ ಚೀನಾದ ಹಳದಿ ನದಿ ಉತ್ತರ ಚೀನಾದಿಂದ ಹರಿದು ಬರುವಾಗ ನೀರಿಗಿಂತ ಹೆಚ್ಚಾಗಿ ಕೆಸರನ್ನೇ ತನ್ನೊಡಲೊಳಗೆ ಸಾಗಿಸುತ್ತದೆ. ಇದರ ಪ್ರಮಾಣ ಗತ್ತಿನ ಇತರೆ ನದಿಗಳಿಗಿಂತ ಶೇ.9ರಷ್ಟು ಹೆಚ್ಚಾಗಿದೆ. 1957ರಲ್ಲಿ ಅಂದಿನ ಸೋವಿಯತ್ ಸರಕಾರದ ತಾಂತ್ರಿಕ ನೆರವಿನಿಂದ ಹಳದಿನದಿಯ ಕೆಳ ಪಾತ್ರದಲ್ಲಿ ಪ್ರವಾಹ ನಿಯಂತ್ರಣಕ್ಕಾಗಿ ಮೂರು ಗೇಟಿನ ಜಾರ್ಜ್  ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಪರಿಸರ ತಜ್ಞರು, ಅತಿ ಶೀಘ್ರದಲ್ಲೇ ಹೂಳು ತುಂಬುವ ಸಂಭವ ಇದೆ ಎಂದು ಎಚ್ಚರಿಸಿದರೂ, ಸರಕಾರ ಇವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. 1960ರಲ್ಲಿ ಅಣೆಕಟ್ಟು ಮುಕ್ತಾಯಗೊಂಡು, 1962ರ ವೇಳೆಗೆ 50 ಮಿಲಿಯನ್ ಟನ್ ಹೂಳು ಶೇಖರವಾಗಿತ್ತು. ಹೂಳು ತುಂಬಿದ ಕಾರಣ ಜಲಾಶಯದ ಹಿನ್ನೀರಿನ ವಿಸ್ತೀರ್ಣವೂ ಹೆಚ್ಚಾಯಿತು. ಆಗ ಎಚ್ಚೆತ್ತುಗೊಂಡ ಚೀನಾ ಸರಕಾರ 1962ರಿಂದ 1973ರವರೆಗೆ ಸತತವಾಗಿ, ಅಣೆಕಟ್ಟಿನ ವಿನ್ಯಾಸವನ್ನು ಬದಲಿಸಿ, ಶೇಖರವಾಗುವ ಹೂಳು ಪ್ರವಾಹ ಸಂದರ್ಭದಲ್ಲಿ ಹೊರಹೋಗುವಂತೆ ಕಾಮಗಾರಿಯನ್ನು ಮಾಡಿತು. ಪ್ರವಾಹ ನಿಯಂತ್ರಣದ ಜೊತೆಗೆ 1,200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನೂ ಹಾಕಿಕೊಳ್ಳಲಾಗಿತ್ತು. ಆದರೆ ಹೂಳಿನ ಪರಿಣಾಮದಿಂದ ಕೇವಲ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರ ಸಾಧ್ಯವಾಯಿತು.

ಇಂತಹದ್ದೇ ಘಟನೆ ಚೀನಾದ ಯಂಗೊಕ್ಷಿಯಾ ಎಂಬ ನದಿಗೆ 57 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸುವಾಗ  ಮತ್ತೆ ಮರುಕಳಿಸಿತು. 1967ರಲ್ಲಿ ನಿರ್ಮಿಸಲಾಗದ ಈ ಜಲಾಶಯ ಹೂಳಿನಿಂದ ತುಂಬಿಹೋಗಿ, ನೀರಿನ ಶೇಖರಣೆಗಿಂತ ಹೂಳಿನ ಶೇಖರಣೆಯೇ ಈ ಜಲಾಶಯದ ಗುರಿಯೇನೊ ಎಂಬಂತಾಗಿದೆ. ಹೂಳು ಮಿಶ್ರಿತ ನೀರು ಹರಿಯುವ ನದಿಗಳ ಸಂಗತಿ ಹೊಸದೇನಲ್ಲ. ಆದರೆ ನಮ್ಮ ಅಣೆಕಟ್ಟು ತಜ್ಞರು, ಜಗತ್ತಿನ ಎಲ್ಲಾ ನದಿಗಳೂ ಸ್ವಚ್ಛ ತಿಳಿನೀರಿನ ನದಿಗಳೆಂದೇ ಭಾವಿಸಿ ಅಣೆಕಟ್ಟು ನಿರ್ಮಾಣಕ್ಕೆ  ಮುಂದಾಗಿರುವುದೇ ಅಣೆಕಟ್ಟುಗಳ ದುರಂತಕ್ಕೆ ಕಾರಣವಾಗಿದೆ.

ಆಯಾ ಪ್ರಾದೇಶಿಕ ಹವಾಗುಣ, ಮಣ್ಣಿನ ಗುಣ, ಸವಕಲು ಮಣ್ಣಿನ ನದಿಯ ಇಕ್ಕೆಲಗಳು ನದಿಗಳು ಹೂಳು ತುಂಬಿ ಹರಿಯಲು ಕಾರಣವಾಗಿವೆ. ಹಾಗಾಗಿ ಯಾವುದೇ ನದಿಗೆ ಅಣೆಕಟ್ಟು ಕಟ್ಟುವ ಮುನ್ನ ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ಅವಶ್ಯಕ. ಜೊತೆಗೆ ಈಗಾಗಲೇ ನಿಮರ್ಿಸಿರುವ ಅಣೆಕಟ್ಟಿನಲ್ಲಿ ಶೇಖರವಾಗಿರುವ ಹೂಳಿನ ಪ್ರಮಾಣವದ ಪರಿಶೀಲಿನೆ ಅಗತ್ಯ. ಕೆಲವು ನದಿಗಳು ಮಳೆಗಾಲದ ಪ್ರವಾಹದಿಂದ ಉಕ್ಕಿ ಹರಿಯುವ ಸಂದರ್ಭದಲ್ಲಿ ಹೂಳು ತುಂಬಿದ ನೀರಿನೊಡನೆ ಹರಿದರೆ, ಹಲವು ನದಿಗಳು ವರ್ಷದ ಎಲ್ಲಾ ದಿನಗಳಲ್ಲೂ ಹೂಳಿನಿಂದ ಕೂಡಿದ ನೀರಿನಿಂದಲೇ ಹರಿಯುತ್ತವೆ.

ನದಿಗಳು ಹೂಳು ತುಂಬಿದ ನೀರಿನೊಡನೆ ಹರಿಯಲು ಕಾರಣವೆಂದರೆ, ಅಗ್ನಿಜ್ವಾಲೆ ಮತ್ತು ಪರ್ವತದ ತಪ್ಪಲಿನಲ್ಲಿ ಭೂಕಂಪನದಿಂದಾಗಿ ಉಂಟಾಗುವ ಮಣ್ಣಿನ ಕುಸಿತ. ಅಮೆರಿಕಾ, ಏಷ್ಯಾದ ಭಾರತ ಮುಂತಾದ ರಾಷ್ಟ್ರಗಳಲ್ಲಿ ಪ್ರವಾಹದಿಂದ ನದಿಗಳು ಹೂಳು ತುಂಬಿ ಹರಿದರೆ, ಚೀನಾದ ಬಹುತೇಕ ನದಿಗಳು ವರ್ಷದ ಎಲ್ಲಾ ಋತುಗಳಲ್ಲೂ ಹೂಳಿನೊಡನೆ ಹರಿಯುತ್ತವೆ. ಇಂತಹ ಯಾವುದೇ ಅಂಕಿ ಅಂಶಗಳನ್ನು ಪರಿಗಣಿಸದೇ ಜಗತ್ತಿನ ಶೇ.80ಕ್ಕೂ ಹೆಚ್ಚು ಅಣೆಕಟ್ಟುಗಳು ನಿರ್ಮಾಣವಾಗಿವೆ, ಆಗುತ್ತಿವೆ. ಇದಕ್ಕೆ ಉದಾಹರಣೆಯೆಂದರೆ, 1981ರಲ್ಲಿ ನೇಪಾಳದಲ್ಲಿ ನಿರ್ಮಾಣ ವಾದ ಕುಲೇಖಾನಿ ಎಂಬ ಅಣೆಕಟ್ಟು. ಈ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಲು ಕನಿಷ್ಠ 75ರಿಂದ 100 ವರ್ಷಗಳು ಬೇಕಾಗಬಹುದೆಂದು ಅಣೆಕಟ್ಟು ತಜ್ಞರು ಊಹಿಸಿದ್ದರು. ಆದರೆ 1993ರಲ್ಲಿ ಅಣೆಕಟ್ಟಿನ ಮೇಲ್ಭಾಗದ ನದಿ ಪಾತ್ರದಲ್ಲಿ ಉಂಟಾದ ಭೂ ಕುಸಿತದಿಂದ ಕೇವಲ 30 ಗಂಟೆಗಳ ಅವಧಿಯಲ್ಲಿ ಜಲಾಶಯದ ಸಾಮರ್ಥ್ಯದ 10ನೇ ಒಂದು ಭಾಗದಷ್ಟು ಹೂಳು ತುಂಬಿತು. ಆ ನಂತರ 19 ವರ್ಷಗಳ ಅವಧಿಯಲ್ಲಿ ಅಂದರೆ 2000 ಇಸವಿಗೆ 114 ಅಡಿ ಎತ್ತರದ ಅಣೆಕಟ್ಟಿನ ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಳು ತುಂಬಿ, ಯಾವ ಪ್ರಯೋಜನಕ್ಕೂ ಬಾರದಾಯಿತು.

ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕಾಗಿ ನಿರ್ಮಿಸಲಾಗಿದ್ದ  ಅಣೆಕಟ್ಟು ಯೋಜನೆಯಿಂದ ನೇಪಾಳ ಸರಕಾರ ವಿಶ್ವಬ್ಯಾಂಕ್ ಸಾಲದ ಸುಳಿಗೆ ಸಿಲುಕುವಂತಾಯಿತು. ಇದೇ ರೀತಿ ಜಗತ್ತಿನಾದ್ಯಂತ ವಿಶ್ವಬ್ಯಾಂಕ್ ಹಾಗೂ ಅಮೆರಿಕಾದ ಇಂಟರ್ ಅಮೇರಿಕನ್ ಬ್ಯಾಂಕಿನಿಂದ ಸಾಲಪಡೆದ ದಕ್ಷಿಣ ಅಮೆರಿಕಾದ ರಾಷ್ಟ್ರಗಳು, ಗ್ವಾಟೆಮಾಲಾ, ಹಂಡುರಾಸ್, ಕಾಸ್ಪರಿಕಾ ಮುಂತಾದ ದೇಶಗಳಲ್ಲಿ ನಿರ್ಮಾಣವಾಗಿರುವ ಅಣೆಕಟ್ಟುಗಳು ನಿಷ್ಪ್ರಯೋಜಕವಾಗಿವೆ. 1993ರಲ್ಲಿ ಅಮೆರಿಕಾದ ಆರ್ಮ್  ಕಾರ್ಪ್ಸ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ತಾಂತ್ರಿಕ ಸಲಹೆಯಿಂದ ಎಲ್ಸೆಲ್ಫಡಾರ್ನಲ್ಲಿ 135 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಾಣವಾದ   ಸೆರ್ರೆನ್ ಗ್ಯ್ರಾಂಡ್ ಎಂಬ ಅಣೆಕಟ್ಟು ಕೇವಲ 30 ವರ್ಷಗಳಲ್ಲಿ ಹೂಳು ತುಂಬಿ ಕೆಲಸಕ್ಕೆ ಬಾರದಂತಾಯಿತು. ಈ ಜಲಾಶಯದಲ್ಲಿ ಹೂಳು ತುಂಬಲು 350 ವರ್ಷಗಳು ಬೇಕು ಎಂದು ಅಮೆರಿಕ ಸಂಸ್ಥೆ ಯೋಜನಾ ವರದಿಯಲ್ಲಿ ತಿಳಿಸಿತ್ತು. ಭಾರತದ ಪರಿಸ್ಥಿತಿ ಕೂಡ ಮೇಲಿನ ರಾಷ್ಟ್ರಗಳಿಗಿಂತ ಭಿನ್ನವಾಗಿಲ್ಲ.

ಭಾರದ 11 ಜಲಾಶಯಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೂಳು ಶೇಖರವಾಗುತ್ತಿದೆ. ಪಂಜಾಬಿನ ಬಾಕ್ರಾನಂಗಲ್ ಅಣೆಕಟ್ಟು ಜಲಾಶಯದಿಂದ ಹಿಡಿದು ದಕ್ಷಿಣದ ಆಂಧ್ರದ ನಿಜಾಂಸಾಗಸ್ ಜಲಾಶಯದವರೆಗೆ ಶೇ.135ರಿಂದ ಶೇ.1650 ಪಟ್ಟು ವೇಗದಲ್ಲಿ ಹೂಳು ಶೇಖರವಾಗುತ್ತಿದೆ. ಕೇವಲ ಅಣೆಕಟ್ಟು ನಿಮರ್ಾಣವನ್ನೇ ತಮ್ಮ ಲಾಭದಾಯಕ ದಂಧೆಯನ್ನಾಗಿ ಮಾಡಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ, ಅಣೆಕಟ್ಟುಗಳ ದುರಂತದ ಬಗ್ಗೆಯಾಗಲಿ, ಭವಿಷ್ಯದ ಬಗ್ಗೆಯಾಗಲಿ ಉತ್ತರದಾಯಕತ್ವ ಇಲ್ಲದಿರುವುದು ಕೂಡ ಗಮನಾರ್ಹ ಸಂಗತಿ. ಯಾವುದೇ ನದಿಗೆ ಅಣೆಕಟ್ಟು ನಿಮರ್ಿಸುವ ಮುನ್ನ ನದಿಯ ನೀರಿನ ಹರಿವಿನ ಪ್ರಮಾಣವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅಣೆಕಟ್ಟು ನಿರ್ಮಾಣವಾಗುವ ಸ್ಥಳದ ಮೇಲ್ಭಾಗದ ನದಿಯ ಪಾತ್ರ ಹಾಗೂ ಇಕ್ಕೆಗಳ ಭೂಮಿ, ಅಲ್ಲಿನ ಮಣ್ಣಿನ ಗುಣ ಇವೆಲ್ಲವನ್ನೂ ಗಮನಿಸಬೇಕಾಗುತ್ತದೆ. ಮಣ್ಣು ಮರಳು ಮಿಶ್ರಿತವಾಗಿದ್ದು ಸವಕಳು ಗುಣ ಹೊಂದಿದ್ದರೆ ನದಿಯ ಇಕ್ಕೆಲಗಳಲ್ಲಿ ಮರಗಳನ್ನು ಬೆಳೆಸುವುದರ ಜೊತೆಗೆ ಅಲ್ಲಲ್ಲಿ ಸಣ್ಣ-ಸಣ್ಣ ಬ್ಯಾರೇಜ್ಗಳನ್ನು ನಿರ್ಮಿಸಿ, ನೀರಿನಲ್ಲಿ ಹರಿಯುವ ಹೂಳನ್ನು ತಡೆಯುವ ಯೋಜನೆಗಳನ್ನು ರೂಪಿಸಬೇಕು.

ಆದರೆ ನದಿಗಳ ಸಹಜ ಹರಿಯುವಿಕೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದೊಂದನ್ನೇ ಗುರಿಯಾಗಿರಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಸಾಲ ನೀಡುವ ಏಜನ್ಸಿಗಳಿಗೆ ಈ ಬಗ್ಗೆ ಯಾವುದೇ ಕಾಳಜಿ ಇಲ್ಲ. ಏಕೆಂದರೆ ಭವಿಷ್ಯದಲ್ಲಿ ಜಲಾಶಯ ಹೂಳಿನಿಂದ ತುಂಬಿದರೆ ಈ ಸಂಸ್ಥೆಗಳಿಗೆ ಲಾಭ. ಹೂಳು ತೆಗೆಯುವ ಕಾಮಗಾರಿಯನ್ನೂ ಇವರೇ ಪಡೆಯಬಹುದು. ಸಾಮಾನ್ಯವಾಗಿ ಜಲಾಶಯಗಳಲ್ಲಿ ಶೇಖರವಾಗುವ ನೀರಿನ ಪ್ರಮಾಣವನ್ನು ಎರಡು ಹಂತಗಳಲ್ಲಿ ಗುರುತಿಸಲಾಗುತ್ತದೆ. ಒಂದು ಜೀವ ಶೇಖರಣೆ(Live storege) ಇನ್ನೊಂದು ನಿರ್ಜೀವ  ಶೇಖರಣೆ(Dead storage) ಅಂದರೆ ಮೊದಲ ಹಂತದಲ್ಲಿ ಶೇಖರವಾಗುವ ನೀರನ್ನು ನೀರಾವರಿ ಇಲ್ಲವೆ ಜಲವಿದ್ಯುತ್ ಉತ್ಪಾದನೆಗೆ ಬಳಸಬಹುದು.

ಎರಡನೇ ಹಂತದಲ್ಲಿ ಶೇಖರವಾಗುವ ನೀರು, ಅಣೆಕಟ್ಟಿನ ತೂಬು ಅಥವಾ ನೀರು ಹೊರ ಹೋಗುವ ಗೇಟ್ಗಳ ಕೆಳಹಂತದ ಮಟ್ಟದಲ್ಲಿ ಶೇಖರವಾಗುವ ನೀರು. ಇದು ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಶೇಖರಣೆಯಾಗಿರುತ್ತದೆ. ಬಹುತೇಕ ಎಲ್ಲಾ ಹಂತಗಳಲ್ಲಿ ಹೂಳು ಈ ನಿಜರ್ೀವ ಶೇಖರಣೆ ಎನ್ನುವ ಜಲಾಶಯದ ತಳಮಟ್ಟದಲ್ಲಿ ಸಂಗ್ರಹವಾಗುವುದರಿಂದ, ಪ್ರವಾಹದಂತಹ ಸಂದರ್ಭದಲ್ಲೂ ಗೇಟ್ ಮೂಲಕ ಹರಿಸುವ ನೀರಿನ ಜೊತೆ ಹೂಳು ಹೊರಹೋಗುವುದಿಲ್ಲ. ನದಿಯ ಕೆಳ ಪಾತ್ರದ ಭೂಮಿಯ ವಿನ್ಯಾಸ ಕೂಡ ಈ ಸಂದರ್ಭದಲ್ಲಿ ಮುಖ್ಯ. ತೀರ ಇಳಿಜಾರಾಗಿದ್ದರೆ, ಜಲಾಶಯದ ಹೂಳು ನೀರಿನ ಜೊತೆ ಹರಿದು ಹೋಗಲು ಸಾಧ್ಯ. ಭೂಮಿ ಸಮತಟ್ಟಾಗಿದ್ದರೆ ಹೂಳು ಹರಿಯುವ ಸಾಧ್ಯತೆ ಬಹಳ ಕಡಿಮೆ.

ಇಂತಹ ಸ್ಥಿತಿಯಲ್ಲಿ  ಹೂಳೂ ತೆಗೆಯುವ ಯಂತ್ರಗಳ ಸಹಾಯದಿಂದ ತೆಗೆಸಬೇಕಾಗುತ್ತದೆ. ನೀರು ಮಿಶ್ರಿತ ಹೂಳನ್ನು ದೊಡ್ಡ ಮಟ್ಟದ ಪಂಪ್ಗಳಿಂದ ಪೈಪ್ ಮೂಲಕ ಹೊರಕ್ಕೆ ಸಾಗಿಸಲಾಗುತ್ತದೆ. ಇದು ದುಬಾರಿ ವೆಚ್ಚದ ಕೆಲಸ. ನಮ್ಮನ್ನಾಳುವ ಸರಕಾರಗಳು ಯಾವುದೇ ಒಂದು ಯೋಜನೆ ಆರಂಭಿಸುವ ಮುನ್ನ ಅದರ ಆಳ – ಅಗಲ, ಸಿಗಬಹುದಾದ ಪ್ರತಿಫಲ ಅಥವಾ ಆಗಬಹುದಾದ ನಷ್ಟ ಇವೆಲ್ಲವನ್ನೂ ಎಲ್ಲಾ ಕೋನಗಳಿಂದ ಗ್ರಹಿಸಿ ವಿಶ್ಲೇಷಿಸಬೇಕು. ಜೊತೆಗೆ ನೈಸಗರ್ಿಕವಾಗಿ, ಸಾಮಾಜಿಕವಾಗಿ, ಆಥರ್ಿಕವಾಗಿ ಉಂಟಾಗುವ ಪರಿಣಾಮಗಳನ್ನೂ ಗ್ರಹಿಸಬೇಕು. ಇವುಗಳ ವಿವೇಚನೆ ಇಲ್ಲದೆ ಜಾಗತಿಕವಾಗಿ ಕೈಗೊಳ್ಳುವ ಅನೇಕ ಬೃಹತ್ ಯೋಜನೆಗಳು ಅಭಿವೃದ್ಧಿ ಹೆಸರಿನ ಅವಘಡಗಳಾಗುತ್ತವೆ ಅಷ್ಟೆ.

( ಮುಂದುವರಿಯುವುದು)

ಜೀವನದಿಗಳ ಸಾವಿನ ಕಥನ – 6

– ಡಾ.ಎನ್.ಜಗದೀಶ್ ಕೊಪ್ಪ

ಜಲಾಶಯದಲ್ಲಿ ಸಂಗ್ರಹವಾಗುವ ನೀರಿನಲ್ಲಿ ನಡೆಯುವ ತೀವ್ರತರವಾದ ರಾಸಾಯನಿಕ ಕ್ರಿಯೆಯಿಂದಾಗಿ ನೀರಿನ ಗುಣಮಟ್ಟದ ಬದಲಾವಣೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಜಲಾಶಯಗಳಲ್ಲಿ ತಿಂಗಳು ಇಲ್ಲವೆ ವರ್ಷಾನುಗಟ್ಟಲೆ ಶೇಖರವಾಗುವ ನೀರು ಜಲಚರಗಳಿಗಷ್ಟೇ ಅಲ್ಲ, ಅದು ಕುಡಿಯಲು ಹಾಗೂ ಕೃಷಿಚಟುವಟಿಕೆಗೆ ಬಳಸುವ ಗುಣಮಟ್ಟ ಹೊಂದಿರುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.

ಸಾಮಾನ್ಯವಾಗಿ ಜಲಾಶಯದಿಂದ ಬಿಡುಗಡೆಯಾಗಿ ಹರಿಯುವ ನೀರು ಬೇಸಿಗೆಯಲ್ಲಿ ತಣ್ಣಗೆ, ಚಳಿಗಾಲದಲ್ಲಿ ಬೆಚ್ಚಗಿನ ಉಷ್ಣಾಂಶವನ್ನು ಹೊಂದಿರುತ್ತದೆ. ಈ ರೀತಿಯ ಪ್ರಕ್ರಿಯೆ ನೀರಿನಲ್ಲಿ ಬಿಡುಗಡೆಯಾಗುವ ಆಮ್ಲಜನಕದ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಈ ವ್ಯತ್ಯಾಸದಿಂದಾಗಿ ಸಿಹಿ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಿದ್ದ ಸೀಗಡಿ ಹಾಗೂ ಅನೇಕ ಜಲಚರ ಪ್ರಭೇದಗಳಿಗೆ ಮಾರಕವಾಗಿದೆ.

ಜಲಾಶಯದಲ್ಲಿ ಮೊದಲ ವರ್ಷ ಶೇಖರಗೊಳ್ಳುವ ನೀರು, ಅತ್ಯಂತ ಹೆಚ್ಚಿನ ರೀತಿಯಲ್ಲಿ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಹಿನ್ನೀರಿನಲ್ಲಿ ಮುಳುಗಡೆಯಾಗುವ ಭೂಮಿ, ಅಲ್ಲಿನ ಅರಣ್ಯ ಪ್ರದೇಶ, ಗಿಡ-ಮರ, ನೀರಿನಲ್ಲಿ ಸತ್ತ ಪ್ರಾಣಿಗಳ ಅವಶೇಷಗಳ ಕೊಳೆಯುವಿಕೆಯಿಂದಾಗಿ ನೀರಿನಲ್ಲಿ ಅತ್ಯಧಿಕ ಮಟ್ಟದ ಮಿಥೇನ್ ಅನಿಲ ಮತ್ತು ಇಂಗಾಲಾಮ್ಲ ಬಿಡುಗಡೆಯಾಗುತ್ತದೆ.

1964ರಲ್ಲಿ ದಕ್ಷಿಣ ಅಮೆರಿಕಾದ ಬ್ರೊಕೊಪಾಂಡೊ ಎಂಬ ಅಣೆಕಟ್ಟು ನಿರ್ಮಾಣವಾದಾಗ, ಸುರಿನಾಮ್ ಪ್ರದೇಶದ 1,500 ಚ.ಕಿ.ಮೀ. ಮಳೆಕಾಡು ಜಲಾಶಯದ ಹಿನ್ನೀರಿನಲ್ಲಿ ಮುಳುಗಿಹೋಯಿತು. ಜಲಾಶಯದಲ್ಲಿ ಮೊದಲ ವರ್ಷ ಶೇಖರವಾದ ನೀರಿನಲ್ಲಿ ಹೈಡ್ರೊಜನ್ ಸಲ್ಫೈಡ್ ಅತ್ಯಧಿಕ ಮಟ್ಟದಲ್ಲಿ ಉತ್ಪಾದನೆಯಾದ್ದರಿಂದ ನೀರಿನ ದುರ್ವಾಸನೆಯಿಂದಾಗಿ, ಮೊದಲ ಎರಡು ವರ್ಷಗಳ ಕಾಲ ಅಣೆಕಟ್ಟು ನಿರ್ವಹಣಾ ಸಿಬ್ಬಂಧಿ ಮುಖವಾಡ ತೊಟ್ಟು ಕಾರ್ಯ ನಿರ್ವಹಿಸಬೇಕಾಯಿತು. ಜೊತೆಗೆ ವಿದ್ಯುತ್ ಉತ್ಪಾದನೆಗಾಗಿ ಟರ್ಬೈನ್ ಇಂಜಿನ್ನಿಗೆ ಕೊಳವೆ ಮೂಲಕ ನೀರು ಹಾಯಿಸಿದ ಪ್ರಯುಕ್ತ, ಕೊಳವೆ ಹಾಗೂ ಇಂಜಿನ್ಗಳು ತುಕ್ಕು ಹಿಡಿದು 1971 ರಲ್ಲಿ ಇವುಗಳ ದುರಸ್ತಿಗೆ 40 ದಶಲಕ್ಷ ಡಾಲರ್ ಹಣ ಖರ್ಚಾಯಿತು. ಇದು ಅಣೆಕಟ್ಟು ನಿರ್ಮಾಣ ವೆಚ್ಚದ ಶೇ.1.7 ರಷ್ಟಿತ್ತು. ನಂತರ ಜಲಾಶಯದ ಕೆಳಭಾಗದ 110 ಕಿ.ಮೀ. ದೂರದಲ್ಲಿ ಹರಿವ ನೀರಿನಲ್ಲಿ ಆಮ್ಲಜನಕ ಉತ್ಪತ್ತಿಯಾಗಿ ನೀರಿನ ಗುಣ ಮಟ್ಟ ಸುಧಾರಿಸಿತು.

ಇಂತಹದೇ ನೈಸರ್ಗಿಕ ದುರಂತ ಬ್ರೆಜಿಲ್‌ನಲ್ಲೂ ಸಹ ಸಂಭವಿಸಿತು. ಬಲ್ಖಿನಾ ಅಣೆಕಟ್ಟು ನಿರ್ಮಾಣದಿಂದಾಗಿ ಅಲ್ಲಿನ 2,250 ಚ.ಕಿ.ಮೀ. ಅರಣ್ಯ(ಮಳೆಕಾಡು) ಪ್ರದೇಶ ಜಲಾಶಯದಲ್ಲಿ ಮುಳುಗಿತು. ಇದರಿಂದಾಗಿ ಅಣೆಕಟ್ಟು ನಿರ್ವಹಣಾ ವೆಚ್ಚ ಶೇ. 9ರಷ್ಟು ಅಧಿಕಗೊಂಡಿತು.

ಅರ್ಜೆಂಟೈನಾ, ಪೆರುಗ್ವೆ ದೇಶಗಳ ನಡುವೆ ಯುಕ್ರಿಟಾ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಜಲಾಶಯದ ನೀರಿನ ರಾಸಾಯನಿಕ ಕ್ರಿಯೆಯಿಂದ 1,200ರಷ್ಟು ಜಲಚರ ಪ್ರಬೇಧಗಳು ಸತ್ತುಹೋದವು.  ಕೆನಡಾ, ಫಿನ್ಲ್ಯಾಂಡ್, ಥಾಯ್ಲೆಂಡ್ ದೇಶಗಳ ಜಲಾಶಯಗಳಲ್ಲಿ ಬೆಳೆದ ಮೀನುಗಳಲ್ಲಿ ಹೆಚ್ಚಿನ ಮಟ್ಟದ ಪಾದರಸದ ಅಂಶವಿರುವುದು ಕಂಡುಬಂದಿತು.

ಇವೆಲ್ಲವುಗಳಿಗಿಂತ ಗಂಭೀರ ಸಂಗತಿಯೆಂದರೆ, ಜಲಾಶಯದ ನೀರು ಆವಿಯಾಗುವಿಕೆಯ ಪ್ರಮಾಣ ಆತಂಕವನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ ಹಾಗೂ ಸೂರ್ಯನ ಪ್ರಖರ ಬಿಸಿಲಿನ ಶಾಖದಿಂದ ಜಲಾಶಯದ ನೀರು ಆವಿಯಾಗುವ ಪ್ರಮಾಣ ಒಂದೇ ಸಮನೆ ಹೆಚ್ಚುತ್ತಿದೆ. ಜಗತ್ತಿನ ಎಲ್ಲಾ ಜಲಾಶಯಗಳಲ್ಲಿ ಶೇಖರವಾಗಿರುವ ನೀರಿನಲ್ಲಿ 170 ಘನ ಚ.ಕಿ.ಮೀ.ನಷ್ಟು ನೀರು ವಾರ್ಷಿಕವಾಗಿ ಆವಿಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು ಜಗತ್ತಿನಲ್ಲಿ ಬಳಕೆಯಾಗುತ್ತಿರುವ ಕುಡಿಯುವ ನೀರಿನ ಪ್ರಮಾಣದ ಶೇ.7 ರಷ್ಟು. ಈಜಿಪ್ಟ್ನ ನೈಲ್ ನದಿಯ ನಾಸರ್ ಜಲಾಶಯದಿಂದ ಆವಿಯಾಗುವ ನೀರಿನ ಪ್ರಮಾಣ 11.2 ಘನ ಚ.ಕಿ.ಮೀ. ಅಂದರೆ ಈ ನೀರು ಆಫ್ರಿಕಾ ಖಂಡದ ಎಲ್ಲಾ ರಾಷ್ಟ್ರಗಳು ಗೃಹ ಬಳಕೆಗೆ ಉಪಯೋಗಿಸುತ್ತಿರುವ ಪ್ರಮಾಣದಷ್ಟು.

ಮೀನು ಸಂತತಿಯ ಅವಸಾನ

ಅಭಿವೃದ್ಧಿ ಯುಗದ ರಭಸದ ಬೆಳವಣಿಗೆಯಲ್ಲಿ, ನಮ್ಮಗಳ ಚಿಂತನಾ ಲಹರಿ ನಾಗಾಲೋಟದಲ್ಲಿ ಓಡುತ್ತಿರುವಾಗ, ಅಭಿವೃದ್ಧಿಯ ಯೋಜನೆಯಿಂದಾಗುವ ಸಾಫಲ್ಯದ ಜೊತೆ ಅನಾಹುತಗಳ ಕಡೆಗೂ ನಮ್ಮ ಗಮನವಿರಬೇಕು. ಜೀವಜಾಲದ ಸೂಕ್ಷ್ಮತೆಯನ್ನು ಸಾವಧಾನವಾಗಿ ಅವಲೋಕಿಸುವ ಗುಣವೇ ನಮ್ಮಿಂದ ದೂರವಾಗಿದೆ. ಅಣೆಕಟ್ಟು, ಜಲಾಶಯ, ಅವುಗಳಿಂದ ದೊರೆಯುವ ನೀರು, ವಿದ್ಯುತ್ ಮಾತ್ರ ನಮ್ಮ ಕೇಂದ್ರ ಗುರಿಯಾಗಿದೆ. ನದಿಯ ನೀರಿನ ಓಟಕ್ಕೆ ತಡೆಯೊಡ್ಡಿದ ಪರಿಣಾಮ ಸಾವಿರಾರು ಜಾತಿಯ ಮೀನುಗಳ ಸಂತತಿಗೆ ನಾವು ಅಡ್ಡಿಯಾಗಿದ್ದೇವೆ ಎಂಬ ಅಂಶವೇ ನಮಗೆ ಮರೆತು ಹೋಗಿರುವುದು ವರ್ತಮಾನದ ದುರಂತ.

ಅಮೆರಿಕಾದ ಕೊಲಂಬಿಯಾ ನದಿಯೊಂದರಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮೊದಲು 10 ರಿಂದ 16 ದಶಲಕ್ಷದಷ್ಟಿದ್ದ ಸಾಲ್ಮನ್ ಜಾತಿಯ ಮೀನುಗಳ ಸಂಖ್ಯೆ ನಂತರದ ದಿನಗಳಲ್ಲಿ 1.5 ದಶಲಕ್ಷಕ್ಕೆ ಇಳಿಯಿತು. ಈ ನದಿಯುದ್ದಕ್ಕೂ 30 ಕ್ಕೂ ಹೆಚ್ಚು ಚಿಕ್ಕ ಮತ್ತು ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ಮೀನುಗಾರಿಕೆಯಿಂದ ದೊರೆಯುತ್ತಿದ್ದ 6.5 ಶತಕೋಟಿ ಡಾಲರ್ ಆದಾಯಕ್ಕೆ ಧಕ್ಕೆಯಾಗಿದೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಹಲ್ಸಾ ಎಂಬ ಅಪರೂಪದ ಮೀನಿನ ಸಂತತಿ ಸೇರಿದಂತೆ ಮೊಸಳೆ, ಡಾಲ್ಫಿನ್, ಸೀಗಡಿ ಇವುಗಳ ಸಂತಾನೋತ್ಪತ್ತಿ ಕುಂಠಿತಗೊಂಡಿದೆ.

ಇವುಗಳ ಸಂತಾನೋತ್ಪತ್ತಿಗಾಗಿ ಹಾಗೂ ನದಿ ಮತ್ತು ಜಲಾಶಯಗಳ ನೈಸರ್ಗಿಕ ಪರಿಸರವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ, ಜಗತ್ತಿನ ಬಹುತೇಕ ರಾಷ್ಟ್ರಗಳು ವಾರ್ಷಿಕವಾಗಿ ಕೋಟ್ಯಾಂತರ ಹಣವನ್ನು ವ್ಯಯಿಸುತ್ತಿವೆ.

ಅಮೆರಿಕಾ ದೇಶವೊಂದೆ ಸಾಲ್ಮನ್ ಜಾತಿಯ ಮೀನಿನ ರಕ್ಷಣೆಗಾಗಿ ಕೊಲಂಬಿಯಾ ನದಿ ಪಾತ್ರದಲ್ಲಿ 350 ದಶಲಕ್ಷ ಡಾಲರ್ ಹಣವನ್ನು ಪ್ರತಿ ವರ್ಷ ಖರ್ಚು ಮಾಡುತ್ತಿದೆ.

ಸರಕಾರಗಳು ಏನೇ ಕಸರತ್ತು ನಡೆಸಿದರೂ ಮೀನುಗಳ ಸಂತಾನೋತ್ಪತ್ತಿ ಯೋಜನೆ ವಿಫಲವಾಗಿದೆ. ಸಮುದ್ರದ ಉಪ್ಪು ನೀರಿನಿಂದ ಹೊರ ಬರುತ್ತಿದ್ದ ಹಲವು ಜಾತಿಯ ಮೀನುಗಳು, 15 ದಿನಗಳ ಕಾಲ ಸತತವಾಗಿ ನದಿಗಳಲ್ಲಿ ಈಜಿ, ಸಿಹಿನೀರಿನಲ್ಲಿ ಸಂತಾನೋತ್ಪತ್ತಿ ನಡೆಸಿ ಮತ್ತೆ ತಮ್ಮ ಮರಿಗಳೊಂದಿಗೆ ಸಮುದ್ರ ಸೇರುತ್ತಿದ್ದವು. ಅವುಗಳ ಸರಾಗ ಹಾಗೂ ಸುದೀರ್ಘ ಪಯಣಕ್ಕೆ ಅಣೆಕಟ್ಟು ಅಡ್ಡ ಬಂದ ಪ್ರಯುಕ್ತ ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆಗೆ ಕುತ್ತು ಬಂದಿತು. ಕೆಲವು ರಾಷ್ಟ್ರಗಳಲ್ಲಿ ಅಣೆಕಟ್ಟು ಪ್ರದೇಶದ ಪಕ್ಕದಲ್ಲಿ ನದಿಗೆ ಬೈಪಾಸ್ ರೀತಿಯಲ್ಲಿ ಕೃತಕ ನದಿ ನಿರ್ಮಿಸಿ ಮೀನುಗಳ ಸಂತಾನೋತ್ಪತ್ತಿಗೆ ಪ್ರಯತ್ನಿಸಿದರೂ ಕೂಡ ಈ ಯೋಜನೆ ವಿಫಲವಾಯ್ತು.

ಇಷ್ಟೆಲ್ಲಾ ಅನಾಹುತಗಳ ಹಿಂದೆ, ಅಣೆಕಟ್ಟು ನಿರ್ಮಾಣಕ್ಕೆ ಮುನ್ನ, ಪರಿಸರದ ಮೇಲಿನ ಪರಿಣಾಮ, ಯೋಜನೆಯ ಸಾಧ್ಯತೆಗಳ ಬಗ್ಗೆ ಸಮೀಕ್ಷಾ ವರದಿ ತಯಾರಿಸುವ ಅಂತರಾಷ್ಟ್ರೀಯ ಮಾಫಿಯಾ ಒಂದಿದೆ. ಇದು ಬಹುರಾಷ್ಟ್ರ ಕಂಪನಿಗಳ, ಸಾಲನೀಡುವ ವಿಶ್ವಬ್ಯಾಂಕ್ನ ಕೈಗೊಂಬೆಯಂತೆ ವರ್ತಿಸುತ್ತಿದೆ.

ಪರಿಸರದ ಮೇಲಿನ ಪರಿಣಾಮ ಕುರಿತು ನಡೆಸಲಾಗುವ ಬಹುತೇಕ ಅಧ್ಯಯನಗಳು ಅಮೆರಿಕಾದ ಪ್ರಭಾವದಿಂದ ಪ್ರೇರಿತಗೊಂಡು, ಅಣೆಕಟ್ಟುಗಳ ನಿರ್ಮಾಣದಿಂದ ಆಗಬಹುದಾದ ವಾಸ್ತವ ಚಿತ್ರಣವನ್ನು ಮರೆಮಾಚಲಾಗುತ್ತದೆ.

ಇತ್ತೀಚೆಗಿನ ವರ್ಷಗಳಲ್ಲಿ ಅಣೆಕಟ್ಟು ಕುರಿತಾದ ನೈಸರ್ಗಿಕ ಪರಿಣಾಮ ಹಾಗೂ ಸಾಧಕ-ಬಾಧಕ ಕುರಿತ ವರದಿ ನೀಡುವ ಹಾಗೂ ಅಣೆಕಟ್ಟು ನಿರ್ಮಾಣ ಕಾಮಗಾರಿ ಕುರಿತು ಸಲಹೆ ನೀಡುವ ವೃತ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಪ್ರಮಾಣದ ದಂಧೆಯಾಗಿ ಬೆಳೆದಿದೆ. 1990ರ ದಶಕದಲ್ಲಿ ಬ್ರಿಟೀಷ್ ಕನ್ಸಲ್ಟೆಂಟ್ ಬ್ಯೂರೊ ಎನ್ನುವ ಸಂಸ್ಥೆ 2.5 ಬಿಲಿಯನ್ ಡಾಲರ್ ಹಣವನ್ನು ಕೇವಲ ವರದಿ ಮತ್ತು ಸಲಹೆ ನೀಡುವುದರ ಮೂಲಕ ಗಳಿಸಿತ್ತು.

ಕಳೆದ ಒಂದು ದಶಕದಿಂದ ಅಣೆಕಟ್ಟು ಕಾಮಗಾರಿ ನಿರ್ವಹಿಸುವ ಬೃಹತ್ ಕಂಪನಿಗಳು ತಾವೇ ಇಂತಹ ಸಲಹಾ ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದು, ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ನೀಡುವ ವರದಿ ಅಣೆಕಟ್ಟು ನಿರ್ಮಾಣಕ್ಕೆ ಪೂರವಾಗಿರುತ್ತವೆ. ವರದಿಯಲ್ಲಿ ಕಾಣಿಸುವ ಮುಳುಗಡೆಯಾಗುವ ಪ್ರದೇಶ, ಅರಣ್ಯ, ಒಕ್ಕಲೆಬ್ಬಿಸುವ ಜನವಸತಿ ಪ್ರದೇಶ, ಅವರಿಗೆ ಪುನರ್ವಸತಿ ಕಲ್ಪಿಸುವ ಕುರಿತು ರೂಪಿಸುವ ಅಂದಾಜು ವೆಚ್ಚ ಇವೆಲ್ಲವೂ ನೈಜ ಸ್ಥಿತಿಯಿಂದ ದೂರವಾಗಿರುತ್ತವೆ. ಸರಕಾರಗಳು, ಅದರ ಮಂತ್ರಿಗಳು, ಅಧಿಕಾರಿಶಾಹಿ ಹೀಗೆ ಎಲ್ಲವನ್ನೂ, ಎಲ್ಲರನ್ನೂ ಏಕ ಕಾಲಕ್ಕೆ ನಿಭಾಯಿಸುವ ಕುಶಲತೆಯನ್ನು ಹೊಂದಿರುವ ಈ ಸಲಹಾ ಸಂಸ್ಥೆಗಳು, ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕಲೆಯನ್ನೂ ಸಹ ಕರಗತ ಮಾಡಿಕೊಂಡಿವೆ.

ಇದಕ್ಕೆ ಸ್ಪಷ್ಟ ಉದಾಹರಣೆಗಳೆಂದರೆ, ಥಾಯ್ಲೆಂಡ್‌ನ ನ್ಯಾಮ್ ಚೋಆನ್ ಅಣೆಕಟ್ಟು ನಿರ್ಮಾಣದ ಸಮಯ ಜೈವಿಕ ಪರಿಸರ ನಾಶವಾಗುವ ಪ್ರಮಾಣ ಕುರಿತಂತೆ ನೀಡಿದ ವರದಿಯಲ್ಲಿ 122 ಜಾತಿ ವನ್ಯ ಮೃಗಗಳ ಸಂತತಿಗೆ ಧಕ್ಕೆಯಾಗಲಿದೆ ಎಂದು ಹೇಳಲಾಗಿತ್ತು. ವಾಸ್ತವವಾಗಿ ರಾಯಲ್ ಫಾರೆಸ್ಟ್ ಡಿಪಾರ್ಟ್‌ಮೆಂಟ್ ನಡೆಸಿದ ಸಮೀಕ್ಷೆಯಲ್ಲಿ 338 ಜೈವಿಕ ವೈವಿಧ್ಯತೆಗಳಿಗೆ ಅಪಾಯವಾಗುವ ಸೂಚನೆ ಕಂಡು ಬಂತು,.

ಭಾರತದ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಈ ಮೂರು ರಾಜ್ಯಗಳಲ್ಲೂ ಹರಿಯುವ ನರ್ಮದಾ ನದಿಗೆ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಇದಕ್ಕೆ ವಿಶ್ವಬ್ಯಾಂಕ್ ಹಣಕಾಸಿನ ನೆರವು ನೀಡಿದೆ. ಅಣೆಕಟ್ಟು ನಿರ್ಮಾಣದ ನೈಸರ್ಗಿಕ ಪರಿಣಾಮ ಕುರಿತಂತೆ ವಿಶ್ವಬ್ಯಾಂಕ್ ತಾನೇ ನಿಯೋಜಿಸಿದ್ದ ಸಂಸ್ಥೆಯಿಂದ ವರದಿ ತಯಾರಿಸಿದ್ದು, ಈವರೆಗೆ ಈ ವರದಿಯನ್ನು ಸಾರ್ವಜನಿಕವಾಗಿ ಇರಲಿ ಭಾರತ ಸರಕಾರಕ್ಕೂ ನೀಡಿಲ್ಲ.

ಹೀಗೆ ಅಣೆಕಟ್ಟು ನಿರ್ಮಾಣದ ಹಿಂದೆ ಅಗೋಚರ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳು ಎಲ್ಲಾ ಅಡೆ-ತಡೆಗಳನ್ನು ಧ್ವಂಸ ಮಾಡುವಷ್ಟು ದೈತ್ಯ ಶಕ್ತಿಯನ್ನು ಪಡೆದಿವೆ.

(ಮುಂದುವರಿಯುವುದು)

ಈ ಸರಣಿಯ ಹಿಂದಿನ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ