Tag Archives: ಜೀವನದಿಗಳ ಸಾವಿನ ಕಥನ

ಜೀವನದಿಗಳ ಸಾವಿನ ಕಥನ – ಅಂತಿಮ ಅಧ್ಯಾಯ (24)


– ಡಾ.ಎನ್.ಜಗದೀಶ್ ಕೊಪ್ಪ    


[ಗೆಳೆಯರೆ, ನಮ್ಮ ವರ್ತಮಾನ.ಕಾಮ್ ಆರಂಭವಾದ ಒಂದು ತಿಂಗಳ ಒಳಗೇ ಆರಂಭವಾದ (4/9/2011) ಜಗದೀಶ್ ಕೊಪ್ಪರ ಈ ಲೇಖನ ಸರಣಿ ತನ್ನ ನಿಲುವು ಮತ್ತು ಅಧ್ಯಯನಶೀಲತೆಯಿಂದ ನಮ್ಮನಿಮ್ಮೆಲ್ಲರನ್ನು ಪ್ರಭಾವಿಸಿದ್ದು ಮಾತ್ರವಲ್ಲದೆ, ಚಿಂತನೆಗೂ ಹಚ್ಚಿತ್ತು. ಇಂದಿನದು ಆ ಸರಣಿಯ ಅಂತಿಮ ಅಧ್ಯಾಯ. ವರ್ತಮಾನ.ಕಾಮ್‌ನಲ್ಲಿ ಇದನ್ನು ಪ್ರಥಮ ಬಾರಿಗೆ ಪ್ರಕಟಿಸಲು ಇಚ್ಚಿಸಿದ್ದಕ್ಕಾಗಿ ಶ್ರೀ ಜಗದೀಶ್ ಕೊಪ್ಪರವರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದಷ್ಟು ಬೇಗ ಇದು ಪುಸ್ತಕರೂಪದಲ್ಲಿಯೂ ಬಂದು ಇನ್ನೂ ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸುತ್ತೇನೆ. ಹಾಗೆಯೇ, ಅಂತರ್ಜಾಲದಲ್ಲಿನ ನಮ್ಮ ವರ್ತಮಾನ.ಕಾಮ್ ಪ್ರಯತ್ನಕ್ಕೆ ಮೊದಲಿನಿಂದಲೂ ಕ್ರಿಯಾಶೀಲವಾಗಿ ಬೆಂಬಲಿಸುತ್ತ ಬಂದಿರುವ ಜಗದೀಶ್ ಕೊಪ್ಪರ ಸಹಾಯ ದೊಡ್ಡದು. ಮತ್ತೊಮ್ಮೆ ಅವರಿಗೆ ಧನ್ಯವಾದಗಳು ಮತ್ತು ಕನ್ನಡದಲ್ಲಿ ಇಂತಹುದೊಂದು ಅಪರೂಪದ ವಿಷಯದ ಬಗ್ಗೆ ಬರೆದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. -ರವಿ…]

ಜಗತ್ತಿನ ನದಿಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬದ್ಧತೆ, ಕಾಳಜಿ ಹಾಗೂ ಸ್ವಾಭಿಮಾನದ ಮೂಲಕ ಘನತೆ ತಂದುಕೊಟ್ಟವರು ಬ್ರೆಜಿಲ್ ಮತ್ತು ಭಾರತದ ಪರಿಸರವಾದಿ ಸತ್ಯಾಗ್ರಾಹಿಗಳು. ತಮ್ಮ ಎದೆಯೊಳಗಿನ ಕಿಚ್ಚು ಮತ್ತು ಸಂಕಟಗಳನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿ ಅಣೆಕಟ್ಟುಗಳ ವಿರುದ್ಧದ ಹೋರಾಟಕ್ಕೆ ಎಲ್ಲರನ್ನೂ ಕ್ರೂಢೀಕರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬ್ರೆಜಿಲ್ ದೇಶದ ಮೂಲ ನಿವಾಸಿಗಳು ಮತ್ತು ಭಾರತದ ನರ್ಮದಾ ಬಚಾವ್ ಆಂದೋಲನದ ಚಳವಳಿಗಾರರು ತಮ್ಮ ಅವಿರತ ಪ್ರತಿಭಟನೆಯ ಮೂಲಕ ವಿಶ್ವದ ಗಮನ ಸೆಳೆದರು ಅಲ್ಲದೆ ಇತರೆ ರಾಷ್ಟ್ರಗಳಿಗೆ ಮಾದರಿಯಾಗಿ ಪರಿಸರವಾದಿಗಳಿಗೆ ಸ್ಪೂರ್ತಿಯಾಗಿ ನಿಂತರು.

ಅದು 1989ರ ಪಬ್ರವರಿ ತಿಂಗಳಿನ ಮೊದಲ ವಾರದ ಒಂದು ದಿನ. ಬ್ರೆಜಿಲ್ ಈಶಾನ್ಯ ಭಾಗದ ಅಮಜೋನಿಯಾ ಪ್ರಾಂತ್ಯದ ಅಲ್ಟಮಿರಾ ಎಂಬ ಪಟ್ಟಣದ ಸಮುದಾಯ ಭವನದಲ್ಲಿ ಅಲ್ಲಿನ 20ಕ್ಕು ಹೆಚ್ಚಿನ ಬುಡಕಟ್ಟು ಜನಾಂಗದ ಪ್ರತಿನಿಧಿಗಳು ಹಾಗೂ ಸರ್ಕಾರದ ಅಧಿಕಾರಿಗಳ ನಡುವೆ ಸಂಧಾನ ಸಭೆ ಏರ್ಪಟ್ಟಿತ್ತು. ಸಮಾರು ಒಂದು ಸಾವಿರಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದ ಆ ಸಭೆಯಲ್ಲಿ ಬ್ರೆಜಿಲ್ ಸರ್ಕಾರದ ಅಣೆಕಟ್ಟು ನಿರ್ಮಾಣ ಹಾಗೂ ವಿದ್ಯುತ್ ಉತ್ಪಾದನೆಯ ಉಸ್ತುವಾರಿ ಹೊತ್ತಿದ್ದ ಮುಖ್ಯ ಇಂಜಿನಿಯರ್ ಸರ್ಕಾರದ ರೂಪು ರೇಷೆ ಮತ್ತು ಪುನರ್ವಸತಿ ಕುರಿತಂತೆ, ಸರ್ಕಾರ ನೀಡುವ ಪರಿಹಾರ ಧನ ಕುರಿತಂತೆ ಮಾತನಾಡುತಿದ್ದ. ಆ ದೇಶದ ಎಲ್ಲಾ ಸುದ್ಧಿ ಮಾಧ್ಯಮಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು. ಬ್ರೆಜಿಲ್‌ನ ಮುಖ್ಯ ನದಿಗಳಲ್ಲಿ ಒಂದಾದ ಕ್ಷಿಂಗು ನದಿಗೆ ಕಟ್ಟಲಾಗುವ ಅಣೆಕಟ್ಟುಗಳು, ಹಿನ್ನೀರಿನಲ್ಲಿ ಮುಳುಗಡೆಯಾಗುವ ಅರಣ್ಯಪ್ರದೇಶ, ವಸತಿ ಪ್ರದೇಶದ ವಿವರ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಇವುಗಳ ಕುರಿತು ಸ್ಥಳೀಯ ಮೂಲನಿವಾಸಿಗಳಿಗೆ ಸವಿವರವಾಗಿ ಮನದಟ್ಟು ಮಾಡಿಕೊಡುತಿದ್ದ.

ಆ ಸಭೆಯಲ್ಲಿ ಕುಳಿತಿದ್ದ ಕಯಾಪು ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕುಡುಗೋಲು ಆಕಾರದ ಆಯುಧದೊಂದಿಗೆ ಮುಂದೆ ಬಂದು ಅದನ್ನು ನೇರವಾಗಿ ಮುಖ್ಯ ಇಂಜಿನಿಯರ್ ಆಂಟೋನಿಯಾ ಎಂಬಾತನ ಕುತ್ತಿಗೆಗೆ ಹಿಡಿದು, “ನೀನೊಬ್ಬ ಅಪ್ಪಟ ಸುಳ್ಳುಗಾರ, ನಮಗೆ ನಿನ್ನ ವಿದ್ಯುತ್ ಬೇಕಾಗಿಲ್ಲ ನಿನ್ನ ವಿದ್ಯುತ್‌ನಿಂದ ನಮಗೆ ಆಹಾರ ದಕ್ಕುವುದಿಲ್ಲ. ನಮಗೆ ಆಹಾರ ಸಿಗುವುದು ನೀನು ಮುಳುಗಡೆ ಮಾಡಲಿರುವ ಅರಣ್ಯದಿಂದ. ಅದು ನಮ್ಮನ್ನು ಪೊರೆಯುವ ತಾಯಿ. ಈ ಅರಣ್ಯ ಹೀಗೆ ಇರಬೇಕು, ಈ ನದಿ ಇದೇ ರೀತಿ ಹರಿಯಬೇಕು,” ಎಂದು ಅವನು ತೋರಿಸುತಿದ್ದ ನಕಾಶೆಯತ್ತ ಕೈ ಮಾಡಿ ದೊಡ್ಡ ಗಂಟಲಿನಲ್ಲಿ ಬಡಬಡಸಿದಳು. ಇಡೀ ದೃಶ್ಯ ಟಿ.ವಿ. ಚಾನಲ್ ಗಳಲ್ಲಿ ನೇರಪ್ರಸಾರವಾಗುತಿತ್ತು. ಆತ ಸ್ತಂಭೀಭೂತನಾಗಿ ಮಾತಿಲ್ಲದೆ, ಬೆವರುತ್ತಾ ನಿಂತಿದ್ದ. ಈ ಬುಡಕಟ್ಟು ಮಹಿಳೆಯ ಸಿಟ್ಟು ಕೇವಲ ಅವಳೊಬ್ಬಳ ಒಡಲಾಳದ ಸಂಕಟವಾಗಿರಲಿಲ್ಲ. ಅದು ಇಡೀ ಬ್ರೆಜಿಲ್ ದೇಶದ ಮೂಲನಿವಾಸಿಗಳ ಆಕ್ರೋಶದ ಧ್ವನಿಯಾಗಿತ್ತು.

ಕ್ಷಿಂಗ್ ನದಿಯ ಹರಿವಿನುದ್ದಕ್ಕು ಒಟ್ಟು ಆರು ಅಣೆಕಟ್ಟುಗಳನ್ನ ನಿಮಿಸಲು ಬ್ರೆಜಿಲ್ ಸರ್ಕಾರ ಯೋಜನೆಗಳನ್ನ ರೂಪಿಸಿತ್ತು. ಇವುಗಳಲ್ಲಿ 11 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾನೆಯೂ ಸೇರಿತ್ತು. ಈ ಯೋಜನೆಗಳಿಗಾಗಿ ಅಪರೂಪದ ಸಾವಿರಾರು ಹೆಕ್ಟೇರ್ ಮಳೆಕಾಡು ಹಿನ್ನೀರಿನಲ್ಲಿ ಮುಳುಗಡೆಯಾಗುವುದು ಮತ್ತು ಅನೇಕ ಬುಡಕಟ್ಟು ಜನಾಂಗಗಳು ನಿರ್ವಸತಿರಾಗುವುದು ಅನಿವಾರ್ಯವಾಗಿತ್ತು. ಅಭಿವೃದ್ಧಿಯ ಅಂಧಯುಗಲ್ಲಿ ಸಾಗುತಿದ್ದ ಅಲ್ಲಿನ ಸರ್ಕಾರಕ್ಕೆ ನೂರಾರು ವರ್ಷಗಳಿಂದ ಅರಣ್ಯದಲ್ಲಿ ಪರಿಸರಕ್ಕೆ ಮಾರಕವಾಗದಂತೆ ಜೀವಿಸಿದ್ದ ಮೂಲನಿವಾಸಿಗಳು ತೃಣಸಮಾನರಾಗಿದ್ದರು ಯಾವ ಕ್ಷಣದಲ್ಲಿ ಬೇಕಾದರೂ ಇವರನ್ನು ಹೊಸಕಿ ಹಾಕಬಹುದು ಎಂಬ ಅಹಂಕಾರವನ್ನ ಬ್ರೆಜಿಲ್ ಸರ್ಕಾರ ಬೆಳೆಸಿಕೊಂಡಿತ್ತು.

ಇದಕ್ಕು ಮುನ್ನ ಸರ್ಕಾರ ಸ್ಥಳೀಯ ನದಿಯೊಂದಕ್ಕೆ ಟುಕುರ್ವ ಎಂಬ ಅಣೆಕಟ್ಟನ್ನು ನಿರ್ಮಿಸಿ ಅಲ್ಲಿನ ಸ್ಥಳೀಯ ನಿವಾಸಿಗಳಾದ ಗೇವಿಯೊ ಎಂಬ ಬುಡಕಟ್ಟು ಜನಾಂಗಕ್ಕೆ ಆಸೆ ಆಮಿಷಗಳನ್ನು ತೋರಿಸಿ ಅವರನ್ನು ಒಕ್ಕಲೆಬ್ಬಿಸಿತ್ತು. ಆ ಜನಾಂಗದ ನಾಯಕನೊಬ್ಬ ಸಭೆಗೆ ಆಗಮಿಸಿ ತನ್ನ ಜನಾಂಗದ ಬದುಕು ಮೂರಾಬಟ್ಟೆಯಾದುದನ್ನು ಹೃದಯಕ್ಕೆ ನಾಟುವಂತೆ ವಿವರಿಸಿದ್ದ.

ಅಂತಿಮವಾಗಿ ಬ್ರೆಜಿಲ್‌ನ ಬುಡಕಟ್ಟು ಜನಾಂಗದ ನಾಯಕರು ಒಗ್ಗೂಡಿ, ಅಮೇರಿಕಾಕ್ಕೆ ತೆರಳಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಿಶ್ವಬ್ಯಾಂಕ್ ಅಧಿಕಾರಿಗಳನ್ನ ಬೇಟಿಮಾಡಿ ಸರ್ಕಾರದ ವಂಚನೆಯನ್ನ ವಿವರಿಸಿ, ಅಣೆಕಟ್ಟುಗಳ ವಿಷಯವಾಗಿ ಬ್ರೆಜಿಲ್ ಸರ್ಕಾರಕ್ಕೆ ಯಾವುದೇ ಆರ್ಥಿಕ ನೆರವು ನೀಡದಂತೆ ಮನವಿ ಸಲ್ಲಿಸಿದರು.ಇದರಿಂದ ಆಕ್ರೋಶಗೊಂಡ ಬ್ರೆಜಿಲ್ ಸರ್ಕಾರ ಆ ಮೂವರು ನಾಯಕರ ಮೇಲೆ ದೇಶದ್ರೋಹದ ಆರೋಪ ಹೊರಿಸಿತು. ಅಲ್ಲದೆ ವಿದೇಶಿಯರು ನಡೆಸಬಹುದಾದ ಬುಡಮೇಲು ಕೃತ್ಯದಂತಹ ಗುರುತರ ಆರೋಪ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿತು.ಈ ಘಟನೆ ಸಹಜವಾಗಿ ಬ್ರೆಜಿಲ್‌ನ ಎಲ್ಲಾ ನಾಗರೀಕರನ್ನು ಕೆರಳಿಸಿತು. ಅಲ್ಲಿನ ಟಿ.ವಿ.ಚಾನಲ್ ಒಂದರ ನಿರೂಪಕ ಸಚಿವನೊಬ್ಬನನ್ನು ಚರ್ಚೆಗೆ ಆಹ್ವಾನಿಸಿ, ಬುಡಕಟ್ಟು ಜನಾಂಗದ ನಾಯಕರು ವಿದೇಶಿ ಪ್ರಜೆಗಳಾದರೆ, ಇಲ್ಲಿ ಚರ್ಚೆ ಮಾಡುತ್ತಿರುವ ನಾನು ನೀವು ಯಾವ ದೇಶದ ಪ್ರಜೆಗಳು ಎಂದು ಪ್ರಶ್ನೆ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ. ಈ ದೃಶ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿದ ಅಲ್ಲಿನ ಪ್ರಜೆಗಳು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಅಂತಿಮವಾಗಿ ಮೂಲನಿವಾಸಿಗಳ ಮತ್ತು ಜನಗಳ ಒತ್ತಾಯಕ್ಕೆ ಮಣಿದ ಬ್ರೆಜಿಲ್ ಸರ್ಕಾರ ಆರು ಅಣೆಕಟ್ಟುಗಳ ಯೋಜನೆಯನ್ನು ರದ್ದುಪಡಿಸಿತು. ಇದರಿಂದಾಗಿ 7.200 ಹೆಕ್ಟೇರ್ ಪ್ರದೇಶದ ಮಳೆಕಾಡು ಹಾಗೂ ಅರಣ್ಯದೊಳಗೆ ವಾಸವಾಗಿದ್ದ 20 ಕ್ಕೂ ಹೆಚ್ಚು ಬುಡಕಟ್ಟು ಜನಾಂಗ ಹಿನ್ನೀರಿನಲ್ಲಿ ಮುಳುಗುವುದರಿಂದ ಪಾರಾದವು.

ದಕ್ಷಿಣ ಏಷ್ಯಾದ ಸುಂದರ ಭೌಗೋಳಿಕ ಪ್ರದೇಶಗಳಿಂದ, ಅಲ್ಲಿನ ಕಡಲ ತೀರಗಳಿಂದ, ಹೆಸರುವಾಸಿಯಾದ ಥಾಯ್ಲೆಂಡ್ ದೇಶ ಇತ್ತೀಚಿಗೆ ಪ್ರವಾಸೋದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದೆ. 1980ರಿಂದ ಅಲ್ಲಿ ತೀವ್ರಗೊಂಡ ಉದ್ಯಮೀಕರಣದಿಂದ ವಿದ್ಯುತ್ ಬೇಡಿಕೆ ಹೆಚ್ಚಾಯಿತು. ಈ ಕಾರಣಕ್ಕಾಗಿ ಥಾಯ್ಲೆಂಡ್ ಸರ್ಕಾರ 1982ರಲ್ಲಿ ವಿಶ್ವಬ್ಯಾಂಕ್ ಹಾಗೂ ಜಪಾನ್ ಸರ್ಕಾರದ ನೆರವಿನಿಂದ ಅಲ್ಲಿನ ಪ್ರಸಿದ್ದ ಕ್ವಾಯ್ ನದಿಗೆ 187 ಮೀಟರ್ ಎತ್ತರದ ನಾಮ್ ಚೋನ್ ಎಂಬ ಅಣೆಕಟ್ಟು ನಿರ್ಮಿಸಲು ಆರಂಭಿಸಿತು. ಈ ಅಣೆಕಟ್ಟಿನ ಹಿನ್ನೀರಿನಲ್ಲಿ 75 ಕಿ.ಮಿ. ವ್ಯಾಪ್ತಿಯ ಅಭಯಾರಣ್ಯ ಹಾಗೂ ಆನೆಗಳು ಚಲಿಸುವ ಕಾರಿಡಾರ್ ಮುಳುಗುವ ಸಂಭವ ಹೆಚ್ಚಾಯಿತು. ಜೊತೆಗೆ ಎರಡು ಸಾವಿರ ಕರೇನ್ ಎಂಬ ಮೀನುಗಾರಿಕೆಯನ್ನ ಕಸಬಾಗಿಸಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಸಹ ಒಕ್ಕಲೆಬ್ಬಿಸಲು ಸರ್ಕಾರ ನೊಟೀಸ್ ಜಾರಿ ಮಾಡಿತ್ತು. ಈ ಅಭಯಾರಣ್ಯದಲ್ಲಿ ಅಪರೂಪದ ಪಕ್ಷಿ ಸಂಕುಲವಿದ್ದುದನ್ನು ಮನಗಂಡಿದ್ದ ಬ್ರಿಟನ್ ರಾಜಕುಮಾರ ಪ್ರಿನ್ಸ್ ಪಿಲಿಪ್ ಹಾಗೂ ಅವನ ಪುತ್ರ ಪ್ರಿನ್ಸ್ ಚಾರ್ಲ್ಸ್ ಅಭಯಾರಣ್ಯದ ರಕ್ಷಣೆಗೆ ಆರ್ಥಿಕ ನೆರವು ನೀಡಿದ್ದರು. ಇವೆಲ್ಲವನ್ನು ಲೆಕ್ಕಿಸದ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾದಾಗ ಅಲ್ಲಿನ ವಿದ್ಯಾರ್ಥಿ ಸಂಘಟನೆ, ನಾಗರೀಕರು, ಪರಿಸರವಾದಿಗಳು ಪ್ರತಿಭಟನೆಗೆ ಮುಂದಾದರು. ಇವರುಗಳಿಗೆ ರಾಜಧಾನಿ ಬ್ಯಾಂಕಾಕ್‌ನ ಸ್ವಯಂ ಸೇವಾ ಸಂಘಟನೆ ನೆರವಿಗೆ ಬಂದಿತು. ನಾಮ್ಚೋನ್ ಅಣೆಕಟ್ಟು ಮತ್ತು ಇದರಿಂದ ಸೃಷ್ಟಿಯಾಗುವ ಜಲಾಶಯದಿಂದ ಆಗುವ ದುಷ್ಪಾರಿಣಾಮಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿ ವರದಿಯನ್ನ ಹೊರಜಗತ್ತಿಗೆ ಬಿಡುಗಡೆ ಮಾಡಿತು. ನಂತರ ಅಣೆಕಟ್ಟಿನ ವಿರುದ್ಧ ಸ್ಥಳೀಯವಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ಎದುರಾದಾಗ ಥಾಯ್ಲೆಂಡ್ ಸರ್ಕಾರ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ಯಾವುದೇ ಅಣೆಕಟ್ಟುಗಳನ್ನು ನಿರ್ಮಿಸುವುದಿಲ್ಲ ಎಂದು ಘೋಷಿಸಿತು. ಥಾಯ್ಲೆಂಡ್ ನಾಗರೀಕರ ಈ ಹೋರಾಟ ನೆರೆಯ ಬರ್ಮಾ, ಕಾಂಬೋಡಿಯ, ಲಾವೋಸ್ ರಾಷ್ಟ್ರಗಳ ನಾಗರೀಕರಿಗೆ ಸ್ಪೂರ್ತಿ ನೀಡಿತು.

ಭಾರತದಲ್ಲಿ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ಪ್ರಾರಂಭವಾದದ್ದು 1946ರಲ್ಲಿ ಆರಂಭವಾದ ದೇಶದ ಪ್ರಥಮ ಹಿರಾಕುಡ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ. ಅಲ್ಲಿನ ಸಂತ್ರಸ್ತರ ಪ್ರತಿಭಟನೆಯನ್ನ ಪೊಲಿಸರು ಲಾಠಿಚಾರ್ಜ್ ಮಾಡುವುದರ ಮೂಲಕ ಹತ್ತಿಕ್ಕಿದರು. 1978ರಲ್ಲಿ ಬಿಹಾರದ ಸುವರ್ಣರೇಖ ನದಿಗೆ ಕಟ್ಟಲಾದ ಚಾಂಡಿಲ್ ಅಣೆಕಟ್ಟು ಅನೇಕ ಹಿಂಸೆ ಸಾವು ನೋವಿಗೆ ಕಾರಣವಾಯಿತು. ಭಾರತದಲ್ಲೆ ಪ್ರಥಮ ಬಾರಿಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಿ ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿದರು. 1982ರಲ್ಲಿ 8 ಸಾವಿರ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ನಡೆದ ಘರ್ಷಣೆಯಲ್ಲಿ ಪೋಲಿಸರ ಗುಂಡಿಗೆ ಮೂವರು ಬಲಿಯಾದರು. ಘಟನೆಯ ನಂತರ ಸಂತ್ರಸ್ತರಿಗೆ ನೀಡುವ ಪರಿಹಾರ ಕುರಿತಂತೆ ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡತೊಡಗಿತು.

ಇದಾದ ನಂತರ ಅಣೆಕಟ್ಟುಗಳ ವಿರುದ್ಧ ವಿರೋಧ ಇವತ್ತಿಗೂ ಮುಂದುವರಿದುಕೊಂದು ಬಂದಿದೆ, ಪಶ್ಚಿಮ ಹಿಮಾಲಯದ ತೆಹ್ರಿ ಅಣೆಕಟ್ಟು ವಿಷಯದಲ್ಲಿ ಅಲ್ಲಿನ ಪರಿಸರವಾದಿ ಹಾಗೂ ಮರಗಳ ರಕ್ಷಣೆಗಾಗಿ ಅಪ್ಪಿಕೊ ಚಳುವಳಿಯನ್ನು ಹುಟ್ಟು ಹಾಕಿದ ನೇತಾರ ಸುಂದರ್ ಲಾಲ್ ಬಹುಗುಣ ಇವರ ಪ್ರಬಲ ವಿರೋಧದ ಫಲವಾಗಿ ಅಣೆಕಟ್ಟು ಸಾಧ್ಯವಾಗಿಲ್ಲ.

ಭಾರತದ ಪರಿಸರವಾದಿಗಳಿಗೆ ನೈತಿಕ ವಿಜಯವನ್ನು ಕೇರಳದ ಮೌನ ಕಣಿವೆಯ ಅಣೆಕಟ್ಟು ತಂದಿಕೊಟ್ಟಿತು. 1980ರ ದಶಕದಲ್ಲಿ 120 ಮೀಟರ್ ಎತ್ತರದ ಅಣೆಕಟ್ಟನ್ನು ಕೇರಳದ ಇಡುಕ್ಕಿ ಜಿಲ್ಲೆಯ ಮೌನಕಣಿವೆಯಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಹೊರಟಾಗ ಪಶ್ಚಿಮಘಟ್ಟದ ಜೀವ ಸಂಕುಲಗಳ ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಎಲ್ಲಾ ವರ್ಗದ ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 1983ರಲ್ಲಿ ಅಂದಿನ ಪ್ರದಾನಿ ಇಂದಿರಾಗಾಂಧಿ ಯೋಜನೆಯನ್ನ ರದ್ದುಪಡಿಸಿದರು.

ಭಾರತದ ಅಣೆಕಟ್ಟುಗಳ ಪ್ರತಿಭಟನೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೆಂದರೆ ನರ್ಮದಾ ಬಚಾವ್ ಆಂಧೋಲನ. ಮಹರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ನಡುವೆ ಹರಿಯುವ ನರ್ಮದಾ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟುಗಳ ವಿರುದ್ಧ ದನಿಯೆತ್ತಿ ನಿರಾಶ್ರಿತರ ಪರವಾಗಿ ಹೋರಾಡುತ್ತಾ ಹೋರಾಟಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟ ಕೀರ್ತಿ ಮೇಧಾ ಪಾಟ್ಕರ್‌ರಿಗೆ ಸಲ್ಲುತ್ತದೆ.

1985 ರಲ್ಲಿ 30 ವರ್ಷ ವಯಸ್ಸಿನ ಮೇಧಾ ಪಾಟ್ಕರ್ ನರ್ಮದಾ ಅಣೆಕಟ್ಟಿನಿಂದ ಮುಳುಗಡೆಯಾಗುವ ಹಳ್ಳಿಗಳ ಅಧ್ಯಯನಕ್ಕೆ ಬಂದವರು, ಅಲ್ಲಿನ ಹಳ್ಳಿಗರ ನೋವು, ಆಕ್ರಂದನ, ಸರ್ಕಾರದ ಅಧಿಕಾರಿಗಳ ಶೋಷಣೆಯನ್ನ ಸಹಿಸಲಾರದೆ ನಿರಾಶ್ರಿತರ ಪರವಾಗಿ ಅಧ್ಯಯನ ಕೈಬಿಟ್ಟು ಹೋರಾಟಕ್ಕೆ ನಿಂತರು. ಸತತ 27 ವರ್ಷಗಳಿಂದ ಮನೆ ಮಠ ತೊರೆದು, ಅವಿವಾಹಿತರಾಗಿ ಉಳಿದು ಹೋರಾಟ ನಡೆಸುತ್ತಿರುವ ಮೇಧಾರಿಂದ ಸ್ಫೂರ್ತಿ ಪಡೆದ ಅನೇಕ ಇಂಜಿನಿಯರ್‌ಗಳು, ವೈದ್ಯರು, ಸಾಮಾಜಿಕ ಸೇವಾಕರ್ತರು ಇವರ ಜೊತೆ ಕೈಜೋಡಿಸಿದ್ದಾರೆ.. ಈ ಹೋರಾಟಕ್ಕೆ ಅನೇಕ ಮಗ್ಗಲುಗಳಿದ್ದು ಆಸಕ್ತರು ಲೇಖಕಿ ಅರುಂಧತಿರಾಯ್ ರವರ “ದ ಗ್ರೇಟರ್ ಕಾಮನ್ ಗುಡ್” ಕೃತಿಯನ್ನು ಅವಲೋಕಿಸಬಹುದು. (ಪ್ರಕಾಶಕರು: ಇಂಡಿಯಾ ಬುಕ್ ಹೌಸ್-1999)

ಸಮಾರು 200 ಕಿಲೋಮೀಟರ್ ಪಾದಯಾತ್ರೆ ಮಾಡಿ ನಿರಾಶ್ರಿತರ ಬವಣೆಗಳನ್ನ ಅರಿತ ಮೇಧಾ ನರ್ಮದಾ ಕಣಿವೆಯಲ್ಲಿರುವ ಆದಿವಾಸಿಗಳಿಗೆ ಬದುಕು ಕಟ್ಟಿಕೊಡಲು ನಡೆಸಿದ ಹೋರಾಟ ವಿಶ್ವಾದ್ಯಂತ ಪ್ರಸಿದ್ಧಿಯಾಗಿದೆ. ಇವರ ಹೋರಾಟಕ್ಕೆ ಮಣಿದ ವಿಶ್ವಬ್ಯಾಂಕ್ ಕೆಲವು ವರ್ಷಗಳ ಕಾಲ ಆರ್ಥಿಕ ನೆರವನ್ನ ತಡೆಹಿಡಿತ್ತು.

ಸರ್ಕಾರದ ಸುಳ್ಳು ಮಾಹಿತಿಗಳು, ಪರಿಹಾರದಲ್ಲಿ ಮಾಡಲಾದ ವಂಚನೆಗಳು ಇವಲ್ಲವನ್ನೂ ಅಮೇರಿಕಾಕ್ಕೆ ತೆರಳಿ ವಿಶ್ವಬ್ಯಾಂಕ್‌ಗೆ ಮನದಟ್ಟು ಮಾಡಿಕೊಟ್ಟು ಬಂದ ದಿಟ್ಟ ಹೆಣ್ಣು ಮಗಳು ಈಕೆ. ಈಗ ನರ್ಮದಾ ಸರೋವರ ಅಣೆಕಟ್ಟಿನ ಎತ್ತರವನ್ನು 63 ಮೀಟರ್‌ಗಿಂತ ಹೆಚ್ಚು ಮಾಡಕೂಡದೆಂಬ ಎಚ್ಚರಿಕೆಯನ್ನು ಗುಜರಾತ್ ಸರ್ಕಾರಕ್ಕೆ ರವಾನಿಸಿರುವ ಮೇಧಾ ಪಾಟ್ಕರ್ ತಮ್ಮ ಹೋರಾಟವನ್ನು ಇಂದಿಗೂ ಮುಂದುವರಿಸಿ ಜಗತ್ತಿನ ಅನೇಕ ರಾಷ್ಟ್ರಗಳ ಹೋರಾಟಗಾರರಿಗೆ ಮಾದರಿಯಾಗಿ ನಿಂತಿದ್ದಾರೆ.

ಜೀವನದಿಗಳ ರಕ್ಷಣೆ ಮತ್ತು ಅಣೆಕಟ್ಟುಗಳ ವಿರೋಧಕ್ಕೆ ಅಂತರಾಷ್ಟ್ರೀಯ ವೇದಿಕೆ ನಿರ್ಮಾಣ ಮಾಡಿಕೊಟ್ಟವರೆಂದರೆ, ಎಡ್ವರ್ಡ್ ಗೊಲ್ಡ್‌ಸ್ಮಿತ್ ಮತು ನಿಕೊಲಸ್ ಹಿಲ್ಡ್‌ಯಾರ್ಡ್. ಈ ಇಬ್ಬರು ಮಹನೀಯರು ಸೇರಿ 1984ರಲ್ಲಿ ರಚಿಸಿದ “ದ ಸೊಷಿಯಲ್ ಅಂಡ್ ಎನ್ವಿರಾನ್ಮೆಂಟಲ್ ಎಪೆಕ್ಟ್ಸ್ ಆಪ್ ಲಾರ್ಜ್ ಡ್ಯಾಮ್ಸ್” ಕೃತಿ ಪರಿಸರವಾದಿಗಳಿಗೆ ಆಧಾರವಾಯಿತು. ಈ ಇಬ್ಬರು ಲೇಖಕರು ತಾವು ಸಂಪಾದಕರಾಗಿದ್ದ “ದ ಎಕಾಲಜಿಸ್ಟ್” ಪತ್ರಿಕೆಯಲ್ಲಿ ಕೂಡ ನಿರಂತರ ಲೇಖನಗಳನ್ನು ಬರೆದು ಅಣೆಕಟ್ಟುಗಳ ಕ್ರೂರ ಇತಿಹಾಸವನ್ನು ಬಿಚ್ಚಿಟ್ಟರು. ಇದರಿಂದಾಗಿ “ಇಂಟರ್‌ನ್ಯಾಷನಲ್ ರಿವರ್ ನೆಟ್ವರ್ಕ್” ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.

ಈಗ ಜಗತ್ತಿನಾದ್ಯಂತ ಅಣೆಕಟ್ಟು ಕುರಿತಂತೆ ಸರ್ಕಾರಗಳಿಗೆ ಇದ್ದ ಕುರುಡು ನಂಬಿಕೆ ಅಳಿಸಿಹೋಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿದೆ. ಸಣ್ಣದು ಸುಂದರ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಙ ಶೂಮಾಕರ್ನ ತತ್ವ ಅರಿವಾಗತೊಡಗಿದೆ. ಹಾಗಾಗಿ ಜೀವನದಿಗಳ ಮಾರಣ ಹೋಮಕ್ಕೆ ತಡೆಯುಂಟಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕಮ್ಯುನಿಸ್ಟ್ ಪ್ರಭುತ್ವ ಇರುವ ಚೀನಾ ದೇಶದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಿ ಅಣೆಕಟ್ಟುಗಳನ್ನು ಸಮರೋಪಾದಿಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ಬಗ್ಗೆ ಇತ್ತೀಚಿಗೆ ಬಿಡುಗಡೆಯಾದ ಲೇಖಕ ಬ್ರಹ್ಮ ಚೆಲ್ಲನೀ ಅವರ “ವಾಟರ್: ಏಷ್ಯಾಸ್ ನ್ಯೂ ಬ್ಯಾಟಲ್‌ಗ್ರೌಂಡ್” ಕೃತಿಯಲ್ಲಿ ಸವಿವರವಾಗಿ ವಿವರಿಸಲಾಗಿದೆ.

ಒಟ್ಟಾರೆ ಹಲವು ತ್ಯಾಗಮಯಿ ಜೀವಿಗಳಿಂದ, ಈ ನೆಲದ ಮೆಲಿನ ಅಕ್ಕರೆಯಿಂದ, ಇಲ್ಲಿ ನೆಲ ಜಲ ನಮ್ಮ ಪಾಲಿಗೆ, ನಮ್ಮ ಮುಂದಿನ ತಲೆಮಾರಿಗೆ ಉಳಿದುಕೊಂಡಿವುದು ನಮ್ಮ ಪುಣ್ಯವಿಶೇಷವೆಂದೇ ಹೇಳಬೇಕು. ನಾವು ಜೀವನಪೂರ್ತಿ ಈ ಹೋರಾಟಗಾರರಿಗೆ ಚಿರಋಣಿಯಾಗಿರಬೇಕು.

(ಮುಗಿಯಿತು.)

ಜೀವನದಿಗಳ ಸಾವಿನ ಕಥನ – 23


– ಡಾ.ಎನ್.ಜಗದೀಶ್ ಕೊಪ್ಪ


ಬೃಹತ್ ಅಣೆಕಟ್ಟುಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಅಮೆರಿಕಾದ ನೆಲದಲ್ಲೆ ಅಣೆಕಟ್ಟು ಎಂಬ ಪರಿಕಲ್ಪನೆ  ಮನುಷ್ಯನ ಅವಿವೇಕಿತನದ ಪರಮಾವಧಿ ಎಂಬ ವಿವೇಕ ಮತ್ತು ಜ್ಞಾನ ಮೂಡಿದ್ದು ಅಚ್ಚರಿಯ ಸಂಗತಿಗಳಲ್ಲಿ ಒಂದು.

1980 ರ ದಶಕದ ವೇಳೆಗೆ ವಿಶ್ವ ವ್ಯಾಪಿಯಾಗಿ ವಿಸ್ತರಿಸಿದ ಅಣೆಕಟ್ಟುಗಳ ವಿರುದ್ಧದ ಆಂದೋಲನ 20 ನೇ ಶತಮಾನದ ಅಂತ್ಯದ ವೇಳೆಗೆ ಅಣೆಕಟ್ಟುಗಳನ್ನು ಪ್ರತಿಪಾದಿಸುತ್ತಾ ಬಂದಿದ್ದ ಬಹುರಾಷ್ಟ್ರೀಯ ಕಂಪನಿಗಳು, ವಿಶ್ವಬ್ಯಾಂಕ್ ಹಾಗೂ ಅವುಗಳ ಪ್ರತಿನಿಧಿಗಳನ್ನು ಮರುಚಿಂತನೆಗೆ ಹಚ್ಚಿದ್ದು  ಜಗತ್ತಿನ ಪರಿಸರವಾದಿಗಳ ಮಹತ್ವದ ವಿಜಯ ಎಂದು ವ್ಯಾಖ್ಯಾನಿಸಿದರೆ ಅತಿಶಯವಾಗಲಾರದು.

ಮನುಕುಲದ ಬಗ್ಗೆ, ಈ ನೆಲದ ಜೀವಜಾಲದ ಬಗ್ಗೆ ಅಪಾರ ಆಸಕ್ತಿ ಮತ್ತು ಕಾಳಜಿ ಹೊಂದಿದ್ದ ತಜ್ಞರು, ಚಿಂತಕರು ಇಂತಹ ಮಹನೀಯರು ತೋರಿದ ಹಾದಿಯಲ್ಲಿ ಎಲ್ಲಾ ರಾಷ್ಟ್ರಗಳಲ್ಲಿ ಜನಸಾಮಾನ್ಯರಿಗೆ ನದಿಗಳ ಕುರಿತು, ಪರಿಸರ ಕುರಿತು ಜಾಗೃತಿ ಉಂಟಾಯಿತು. ಇದರ ಪರಿಣಾಮ ಬೃಹತ್ ಅಣೆಕಟ್ಟುಗಳ ಭ್ರಮೆ ಎಲ್ಲೆಡೆ ಕಳಚಿ ಬಿದ್ದಿದೆ. ಆಧುನಿಕ ಜಗತ್ತಿಗೆ ಬೃಹತ್ ಯೋಜನೆಗಳು ಮಾದರಿಯಲ್ಲ ಎಂಬ ಸತ್ಯ ಅರಿವಾಗತೊಡಗಿದೆ. ಅಣೆಕಟ್ಟುಗಳ ನಿರ್ಮಾಣಕ್ಕೆ  ಆರ್ಥಿಕ ಸಹಾಯ ನೀಡುತ್ತಾ ಅವುಗಳ ಪಾಲಿಗೆ ತಾಯಿಯಂತೆ ಇದ್ದ ವಿಶ್ವಬ್ಯಾಂಕ್ ಕೂಡ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ಇದರಿಂದಾಗಿ ನಮ್ಮ ಜೀವನದಿಗಳಿಗೆ ಮರುಜೀವ ದೊರೆತಂತಾಗಿದೆ. ಇದಕ್ಕೆ ಕಾರಣವಾದ ಪ್ರತಿಭಟನೆಯ ಇತಿಹಾಸ ಇಲ್ಲಿದೆ.

ಜಗತ್ತಿನೆಲ್ಲೆಡೆ ಹರಿಯುವ ಜೀವನದಿಗಳಿಗೆ ಅಡ್ಡಲಾಗಿ ನಿರ್ಮಾಣ ಮಾಡುವ ಅಣೆಕಟ್ಟುಗಳ ಬಗ್ಗೆ ಪ್ರತಿಭಟನೆಯ ಕಿಡಿ ಹೊತ್ತಿಕೊಡಿದ್ದು, 1940ರ ದಶಕದ ಅಮೇರಿಕಾದ ಕ್ಯಾಲಿಪೋರ್ನಿಯಾದ ನೆಲದಲ್ಲಿ. ಅಲ್ಲಿನ ಕಾಡು ಮೇಡು ಹಾಗೂ ನದಿಗಳ ಕುರಿತಂತೆ ಅಪಾರ ಆಸಕ್ತಿ ತಾಳಿದ್ದ ಸಮಾನ ಮನಸ್ಕರ ಗುಂಪೊಂದು ಸಿಯೆರಾ ಕ್ಲಬ್ ಹೆಸರಿನ ಸಂಸ್ಥೆಯೊಂದನ್ನು ಜಾನ್ ಮ್ಯುಯರ್ ಎಂಬಾತನ ನೇತೃತ್ವದಲ್ಲಿ (1892) ಆರಂಭಿಸಿತ್ತು.

ಈತನ ನಿಧನದ ನಂತರ ಕ್ಲಬ್‌ನ ಚುಕ್ಕಾಣಿ ಹಿಡಿದ ಡೆವಿಡ್ ಬ್ರೌವರ್ ಅಮೇರಿಕಾ ಸರ್ಕಾರ  ಕೊಲರಾಡೊ ನದಿಗೆ ಅಣೆಕಟ್ಟು ನಿರ್ಮಿಸಲು ಮುಂದಾದಾಗ, ಅಣೆಕಟ್ಟು ನಿರ್ಮಾಣದಿಂದ ನಿಸರ್ಗಕ್ಕೆ ಆಗುವ ಪರಿಣಾಮಗಳನ್ನು ಜನತೆಗೆ ವಿವರಿಸತೊಡಗಿದ. ಮುಂದೆ ಇದೊಂದು ಚಳುವಳಿಯಾಗಿ ಪರಿವರ್ತನೆಗೊಂಡಿತು. ಹಾಗಾಗಿ ಸಿಯೆರಾ ಕ್ಲಬ್‌ನ ಈ ಇಬ್ಬರು ಮಹನೀಯರನ್ನು ಅಮೇರಿಕಾ ಜನತೆ 20ನೇ ಶತಮಾನದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಎಂದು ಗುರುತಿಸಿ ಗೌರವಿಸಿದೆ.

ಅಮೇರಿಕಾ ಸರ್ಕಾರ ಕೊಲರಾಡೊ ನದಿಗೆ ಅಣೆಕಟ್ಟು ಕಟ್ಟಲು ರೂಪು ರೇಷೆಗಳನ್ನು ಸಿದ್ಧಪಡಿಸುತಿದ್ದಂತೆ ಡೆವಿಡ್ ಬ್ರೌವರ್ ತನ್ನ ಕ್ಲಬ್ ಸದಸ್ಯರು ಹಾಗು ಜನಸಾಮಾನ್ಯರನ್ನು ನದಿಯ ನೀರಿನಲ್ಲಿ ದೋಣಿಗಳ ಮೂಲಕ ಕೊಂಡೊಯ್ದು ಅಣೆಕಟ್ಟು ನಿರ್ಮಾಣದಿಂದ ಆಗುವ ಅನಾಹುತ ಮತ್ತು ಹಿನ್ನೀರಿನಿಂದ ಮುಳುಗಡೆಯಾಗುವ ರಾಷ್ಟ್ರೀಯ ಸ್ಮಾರಕ ಇವುಗಳ ಬಗ್ಗೆ ವಿವರಿಸಿ ಜನರಲ್ಲಿ ಜಾಗೃತಿ ಮೂಡಿಸಿದ. ಇಂತಹ ಒಂದು ಪ್ರಕ್ರಿಯೆಯನ್ನು ಊಹಿಸದ ಅಲ್ಲಿನ ರಾಜಕೀಯ ನಾಯಕರು ಮಾತ್ರವಲ್ಲದೆ, ಪತ್ರಿಕೆಗಳೂ ಈ ಅಚ್ಚರಿಯ ಬೆಳವಣಿಗೆಯಿಂದ ಬೆಚ್ಚಿಬಿದ್ದವು.

ಅಣೆಕಟ್ಟು ನಿರ್ಮಾಣ ಸರ್ಕಾರ  ಕುರಿತಂತೆ ಅಮೇರಿಕಾ ಫೆಡರಲ್ ಸರ್ಕಾರ  ಮುಚ್ಚಿಟ್ಟಿದ್ದ ಅನೇಕ ಸಂಗತಿಗಳನ್ನು ಬ್ರೌವರ್ ಕಿರು ಹೊತ್ತಿಗೆಯಲ್ಲಿ ಪ್ರಕಟಿಸಿ, ಅಲ್ಲಿ ಜನತೆ ಮತ್ತು ಸಂಸತ್ ಸದಸ್ಯರಿಗೆ ಹಂಚಿದ. ಇದರ ಪರಿಣಾಮ 1956ರಲ್ಲಿ ಅಣೆಕಟ್ಟು  ನಿರ್ಮಾಣದ ವಿರುದ್ಧ ಸದಸ್ಯರು ಮತ ಚಲಾಯಿಸಿ ಅಣೆಕಟ್ಟನ್ನು ತಡೆಹಿಡಿದರು. ಇದರಿಂದ ವಿಚಿಲಿತವಾಗದ ಅಮೇರಿಕಾ ಸರ್ಕಾರ ಅದೇ ನದಿಗೆ ಬೇರೆ ಬೇರೆ ಸ್ಥಳಗಳಲ್ಲಿ ಪರಿಸರಕ್ಕೆ ಮಾರಕವಾಗದಂತೆ ಅನೆಕಟ್ಟುಗಳ ನಿರ್ಮಾಣಕ್ಕೆ ಮುಂದಾಯಿತು. ವಿದ್ಯುತ್ ಉತ್ಪಾದನೆ ಹಾಗೂ ಅರಿಜೋನ ಪ್ರಾಂತ್ಯದ ನಗರಗಳಿಗೆ ಕುಡಿಯುವ ನೀರಿನ ಯೋಜನೆಗಾಗಿ ಗ್ಲೇನ್ ಕ್ಯಾನಲ್ ಮತ್ತು ಪೋವೆಲ್ ಜಲಾಶಯಗಳ ಪ್ರಸ್ತಾವನೆಯನ್ನು ಜನತೆಯ ಮುಂದಿಟ್ಟಿತು. ಸರ್ಕಾರದ ಪ್ರಸ್ತಾವನೆಗೆ ಮರುಳಾಗದ ಪರಿಸರವಾದಿಗಳು, ಇವುಗಳ ನಿರ್ಮಾಣಕ್ಕೆ ಹೂಡುವ ಬಂಡವಾಳದ ಅರ್ಧ ವೆಚ್ಚದಲ್ಲಿ ಅಣುವಿದ್ಯುತ್ ಹಾಗೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದಿಸಬಹುದೆಂದು ಕರಪತ್ರಗಳ ಚಳುವಳಿಯನ್ನು ಪ್ರಾರಂಭಿಸಿದರು.

ಅಮೇರಿಕಾ ಪರಿಸರವಾದಿಗಳ ಅರ್ಥಪೂರ್ಣ ಚಳುವಳಿಯಿಂದಾಗಿ 1970ರ ದಶಕದ ವೇಳೆಗೆ ದೇಶಾದ್ಯಂತ ಅಣೆಕಟ್ಟುಗಳ ವಿರುದ್ಧದ ಪ್ರತಿಭಟನೆ ವ್ಯಾಪಿಸತೊಡಗಿತು. ಇದೇ ಸಮಯಕ್ಕೆ ಅಲ್ಲಿನ ಪ್ರಸಿದ್ದ ಚಿಂತಕ ಡಾ. ಬ್ರೆಂಟ್ಬ್ಲಾ ಕ್ವೆಲ್ಡರ್ ಎಂಬಾತನ ನೇತೃತ್ವದಲ್ಲಿ “ಅಮೇರಿಕಾ ನದಿಗಳ ರಕ್ಷಣಾ ಪರಿಷತ್” ಎಂಬ ಮತ್ತೊಂದು ಪರಿಸರ ಸಂಘಟನೆ ಆರಂಭಗೊಂಡಿತು. ಈತನ ನೇತೃತ್ವದಲ್ಲಿ ಸತತ 13 ವರ್ಷಗಳ ಕಾಲ ಅಂದರೆ, 1970ರಿಂದ 1983ರ ವರೆಗೆ ನಡೆದ ಹೋರಾಟದಲ್ಲಿ ಅಮೇರಿಕಾದ 140 ಬೃಹತ್ ನೀರಾವರಿ ಯೋಜನೆಗಳು ಮತ್ತು ಅಣೆಕಟ್ಟುಗಳ ನಿರ್ಮಾಣ ಸ್ಥಗಿತಗೊಂಡವು.

1977ರಲ್ಲಿ ಅಮೇರಿಕಾದ ಅಧ್ಯಕ್ಷನಾಗಿ  ಶೆಂಗಾ ಬೆಳೆಯುತಿದ್ದ ಸಾಮಾನ್ಯ ರೈತನ ಮಗ ಜಿಮ್ಮಿಕಾರ್ಟರ್ ಆಯ್ಕೆಯಾದಾಗ ಬ್ಲಾಕ್ವೆಲ್ಡರ್ ಮತ್ತು ಆತನ ಸಂಗಡಿಗರು ಜಿಮ್ಮಿ ಕಾರ್ಟರ್‌ನನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಇವರ ನಿರೀಕ್ಷೆಗಳನ್ನು ಜಿಮ್ಮಿ ಕಾರ್ಟರ್ ಹುಸಿಗೊಳಿಸಲಿಲ್ಲ. ಅಧಿಕಾರ ಸ್ವೀಕರಿಸಿದ ತಕ್ಷಣ ಅಮೇರಿಕಾದಲ್ಲಿ ವಿವಾದಕ್ಕೆ ಒಳಾಗಾಗಿದ್ದ ಎಲ್ಲಾ 19 ಅಣೆಕಟ್ಟು ಯೋಜನೆಗಳನ್ನು ರದ್ದು ಪಡಿಸಿದ. ಇದಕ್ಕೆ ಜಿಮ್ಮಿ ಕಾರ್ಟರ್ ಕೊಟ್ಟ ಉತ್ತರ ಮಾರ್ಮಿಕವಾಗಿತ್ತು.  ನೀರಾವರಿ ಅಥವಾ ವಿದ್ಯುತ್ ಯೋಜನೆಗಳಿಂದ ಸಿಗುವ ಪ್ರತಿಫಲಗಳಿಗಿಂತ ನದಿಯ ಇಕ್ಕೆಲಗಳಲ್ಲಿರುವ ಜೀವಜಾಲದ ವ್ಯವಸ್ಥೆಗೆ ಬೆಲೆ ಕಟ್ಟಲಾಗದು ಎಂದು ಜಿಮ್ಮಿ ಕಾರ್ಟರ್ ಅಭಿಪ್ರಾಯ ಪಟ್ಟಿದ್ದ.

ಆದರೆ, 1981ರಲ್ಲಿ ಅಧಿಕಾರಕ್ಕೆ ಬಂದ ಪ್ಲೇ ಬಾಯ್ ಖ್ಯಾತಿಯ ರೋನಾಲ್ಡ್ ರೇಗನ್ ಮತ್ತೇ ಅಣೆಕಟ್ಟು ಹಾಗೂ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ. ಇದಕ್ಕಾಗಿ ಫಡರಲ್ ಸರ್ಕಾರದಿಂದ ಎರಡು ಶತಕೋಟಿ ಡಾಲರ್ ಹಣವನ್ನು ಸಹ ಮೀಸಲಾಗಿಟ್ಟ. ರೇಗನ್ ಇಲ್ಲೊಂದು ತನ್ನ ಚಾಣಾಕ್ಷತನವನ್ನು ತೋರಿದ್ದ. ಅದೇನೆಂದರೆ, ಅಣೆಕಟ್ಟುಗಳ  ನಿರ್ಮಾಣಕ್ಕೆ ಫೆಡರಲ್ ಸರ್ಕಾರದ ಜೊತೆಗೆ ಆಯಾ ರಾಜ್ಯಗಳು ಸಹ ಬಂಡವಾಳ ಹೂಡುವಂತೆ ಮಾಡಿ ಒಂದಿಷ್ಟು ಜವಾಬ್ದಾರಿ ಹಾಗೂ ತೊಂದರೆಗಳನ್ನು ವರ್ಗಾವಣೆ  ಮಾಡಿದ್ದ. ಇದರಿಂದಾಗಿ ಅಮೇರಿಕಾದಲ್ಲಿ ಅಣೆಕಟ್ಟುಗಳ ಬೇಡಿಕೆ ಕುಂಠಿತಗೊಂಡಿತು.

1991ರಲ್ಲಿ ಅಮೇರಿಕಾ ಅಧ್ಯಕ್ಷನಾಗಿ ಆಯ್ಕೆಯಾದ ಬಿಲ್ ಕ್ಲಿಂಟನ್ ಮಾಡಿದ ಮಹತ್ವದ ಕಾರ್ಯವೆಣದರೆ, ಅಣೆಕಟ್ಟುಗಳ ನಿರ್ಮಾಣಕ್ಕೆ ಮೀಸಲಿಡುತಿದ್ದ ಹಣದ ಪ್ರಮಾಣವನ್ನು ಕಡಿತಗೊಳಿಸಿ, ಪರಿಸರದ ರಕ್ಷಣೆಗೆ ನಿಧಿಯೊಂದನ್ನು ಸ್ಥಾಪಿಸಿದ. ಅಮೇರಿಕಾದಲ್ಲಿ ಹೀಗೆ ತಮ್ಮ ನಿರಂತರ ಹೋರಾಟದ ಮೂಲಕ ಜಾಗೃತಿಯುನ್ನುಂಟು ಮಾಡಿದ ಪರಿಸರವಾದಿಗಳು ಈಗ ಕಿರು ಅಣೆಕಟ್ಟುಗಳು ಹಾಗೂ ಅಂತರ್ಜಲ ಹೆಚ್ಚಿಸುವ ನೀರಿನ ಹೊಂಡಗಳ ಕುರಿತಂತೆ ಅಭಿಯಾನದ ಮೂಲಕ ಜನತೆಯನ್ನು ಎಚ್ಚರಿಸುತಿದ್ದಾರೆ. ಅಮೆರಿಕಾದಲ್ಲಿ ಹುಟ್ಟಿಕೊಂಡ ಅಣಕಟ್ಟುಗಳ ವಿರುದ್ದ ಚಳುವಳಿ ಅಲ್ಪಾವಧಿಯಲ್ಲೇ ಜಗತ್ತಿನಾದ್ಯಂತ ವಿಸ್ತರಿಸಿತು. ಪಶ್ಚಿಮದ ಆಸ್ಟ್ರೇಲಿಯ, ಹಂಗೇರಿ,  ಬಲ್ಗೇರಿಯ, ಅಂದಿನ ಚಕೊಸ್ಲೊವೇಕಿಯ ಗಣರಾಜ್ಯ ಮುಂತಾದ ರಾಷ್ಟ್ರಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಎಲ್ಲಾ ರಾಷ್ಟ್ರಗಳು ಪರಿಸರವಾದಿಗಳಿಂದ ತೀವ್ರವಾದ ಪ್ರತಿಭಟನೆ ಎದುರಿಸಬೇಕಾಯಿತು.

ಆಸ್ಟ್ರೇಲಿಯಾದ ತಾಸ್ಮೇನಿಯಾ ಪ್ರಾಂತ್ಯದಲ್ಲಿ ಪೆಡ್ಡರ್ ಎಂಬ ನಿಸರ್ಗದತ್ತ ಹಾಗೂ ಶುದ್ಧತಿಳಿನೀರಿನ, ಏಳು ಕಿಲೋಮೀಟರ್ ವ್ಯಾಪ್ತಿಯ ಸರೋವರವಿದೆ. ಇದರ ಪಕ್ಕದಲ್ಲೇ ಹರಿಯುವ ನದಿಯೊಂದಕ್ಕೆ ಅಣೆಕಟ್ಟು ನಿರ್ಮಾಣ ಮಾಡಿ, ಜಲಾಶಯದ ಜೊತೆ ಸರೋವರವನ್ನು ವಿಲೀನಗೊಳಿಸುವ ಯೋಜನೆಯನ್ನು ತಾಸ್ಮೇನಿಯಾ ಸರ್ಕಾರ ರೂಪಿಸಿತು. ಜೊತೆಗೆ ಗಾರ್ಡಾನ್ ನದಿಗೆ ಪ್ರಾಂಕ್ಲಿನ್ ಅಣೆಕಟ್ಟು ನಿರ್ಮಿಸಿ ವಿದ್ಯುತ್ ಉತ್ಪಾದನೆಗೆ ಮುಂದಾಯಿತು. ಈ ಎರಡು ಯೋಜನೆಗಳಿಗೆ ಆಸ್ಷ್ರೇಲಿಯಾ ಸರ್ಕಾರ ಅನುಮೋದನೆ ನೀಡಿ ಆರ್ಥಿಕ ನೆರವು ಸಹ ನೀಡಿತ್ತು. ಪ್ರಾಂಕ್ಲಿನ್ ಜಲಾಶಯದ ಹಿನ್ನೀರಿನಲ್ಲಿ 20 ಸಾವಿರ ವರ್ಷಗಳಷ್ಟು ಹಳೆಯದಾದ ಗುಹೆಗಳು, ಅಪರೂಪದ ಅಭಯಾರಣ್ಯ ಮುಳುಗಿಹೋಗುವುದನ್ನು ಅಲ್ಲಿ ಜನತೆ ಪ್ರತಿಭಟಿಸಿ ಉಳಿಸಿಕೊಂಡರು. ವೃತ್ತಿಯಲ್ಲಿ ವೈದ್ಯನಾಗಿದ್ದ ಬಾಬ್ ಬ್ರೌನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಅಧಿಕ ಪರಿಸರವಾದಿಗಳು ದಶಕಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಪೆಡ್ಡರ್ ಸರೋವನ್ನು ಸಹ ಯಥಾಸ್ಥಿತಿಯಲ್ಲಿ ಉಳಿಸಿಕೊಂಡರು. ಇವರ ಈ ಹೋರಾಟ 32 ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಣೆಕಟ್ಟುಗಳ ವಿರುದ್ದದ ಪ್ರತಿಭಟನೆಗೆ ಸ್ಪೂರ್ತಿಯಾಯಿತು.

ಹಂಗೇರಿಯಲ್ಲಿ ಆಡಳಿತದಲ್ಲಿದ್ದ ಕಮ್ಯೂನಿಷ್ಟ್ ಸರ್ಕಾರದ ವಿರುದ್ದ ಅಲ್ಲಿ ಜನತೆ ಅಣೆಕಟ್ಟುಗಳ ವಿಷಯದಲ್ಲಿ ದನಿಯೆತ್ತಿದ್ದು ಇಂದಿಗೂ ಅದೊಂದು ಕ್ರಾಂತಿಯ ಮೈಲಿಗಲ್ಲು. ಹಂಗೇರಿ ಹಾಗೂ ಇಂದಿನ ಸ್ಲೋವೇಕಿಯಾ ನಡುವೆ ಹರಿಯುತ್ತಿರುವ ನದಿಗೆ ಹಂಗೇರಿ ಸರ್ಕಾರ ನ್ಯಾಗಿಮಾರೊ ಎಂಬ ಸ್ಥಳದಲ್ಲಿ ಹಾಗೂ ಸ್ಲೋವೇಕಿಯಾ ಸರ್ಕಾರ ಗ್ಯಾಬಿಕ್ಕೋವ ಎಂಬ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದವು. ಈ ಯೋಜನೆಗೆ ವಿದ್ಯುತ್ ಅಭಾವ ಎದುರಿಸುತಿದ್ದ ಆಸ್ಟ್ರಿಯಾ ದೇಶ ಹಣ ವಿನಿಯೋಗಿಸಲು ಒಪ್ಪಿಗೆ ನೀಡಿತ್ತು. ಹಂಗೇರಿಯ 15 ಸಾವಿರ ಮತ್ತು ಸ್ಲೋವೇಕಿಯಾದ 10 ಸಾವಿರ ಜನರ ಪ್ರತಿಭಟನೆಗೆ ಮಣಿದ ಎರಡು ಸರ್ಕಾರಗಳು ಅಂತಿಮವಾಗಿ ಯೋಜನೆಯನ್ನು ಕೈಬಿಟ್ಟವು. 1980ರಲ್ಲಿ ಪ್ರಾರಂಭವಾದ ಈ ಹೋರಾಟ 1989ರಲ್ಲಿ ಮುಕ್ತಾಯವಾಯಿತು.

ಬಲ್ಗೇರಿಯಾ ರಾಷ್ಟ್ರದಲ್ಲಿ ಕೂಡ ಅಂದಿನ ಸೋವಿಯತ್ ರಷ್ಯಾ ನೆರವಿನಿಂದ ಅಲ್ಲಿ ಸರ್ಕಾರ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿತ್ತು. ಇವುಗಳಲ್ಲಿ ಎರಡು ಅಣೆಕಟ್ಟುಗಳು ಮುಕ್ತಾಯದ ಹಂತ ತಲುಪಿದ್ದವು. ನದಿಗಳ ರಕ್ಷಣೆಗಾಗಿ ಅಲ್ಲಿನ 30 ಸಾವಿರ ಜನತೆ ಬೀದಿಗಿಳಿದಾಗ, ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ  ಜಾರ್ಜಿಯಾದ ಗ್ರೀನ್ ಎಂಬ ಪರಿಸರ ಸಂಘಟನೆಯ ಬೆಂಬಲದಿಂದ ಬೃಹತ್ ಪ್ರತಿಭಟನೆ ನಡೆಸಿ ಕಾಮಗಾರಿಗಳನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ಹೋರಾಟಕ್ಕೆ ಜಾರ್ಜಿಯಾದ 8 ಸಾವಿರ ಪರಿಸರವಾದಿಗಳು ಕೈಜೋಡಿಸಿದ್ದರು.

(ಮುಂದುವರೆಯುವುದು)

ಜೀವನದಿಗಳ ಸಾವಿನ ಕಥನ – 21


– ಡಾ.ಎನ್. ಜಗದೀಶ್ ಕೊಪ್ಪ


ಅಣೆಕಟ್ಟುಗಳ ನೆಪದಲ್ಲಿ ಜೀವನದಿಗಳನ್ನ ಕೊಲ್ಲುತ್ತಿರುವ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಜಗತ್ತಿನಾದ್ಯಂತ ವ್ಯಾಪಕವಾಗಿ ಪ್ರತಿಭಟನೆಗಳು ಜರುಗುತ್ತಿವೆ. ಎಲ್ಲಾ ಸರ್ಕಾರಗಳಿಗೆ ಪ್ರತಿಭಟನೆಯ ಬಿಸಿ ತಾಕತೊಡಗಿದೆ. ನದಿಗಳ ರಕ್ಷಣೆಗಾಗಿ ಅನೇಕ ಸ್ವಯಂ ಸೇವಾ ಸಂಘಟನೆಗಳು, ಕಾರ್ಯಕರ್ತರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಇತ್ತೀಚಿಗೆ ಪ್ರಭಾವಿ ಮಾಧ್ಯಮಗಳಾಗಿ ಮುಂಚೂಣಿಗೆ ಬಂದ ಫೇಸ್‌ಬುಕ್, ಗೂಗ್ಲ್ ಪ್ಲಸ್, ಮುಂತಾದ ಸಾಮಾಜಿಕ ತಾಣಗಳು, ಇ-ಮೈಲ್, ಬ್ಲಾಗ್‌ಗಳು ಪರಿಸರ ಪ್ರೇಮಿಗಳಿಗೆ ಅನುಕೂಲಕರ ವೇದಿಕೆಗಳಾಗಿ ಮಾರ್ಪಟ್ಟಿವೆ.

ಅಣೆಕಟ್ಟುಗಳನ್ನ ವಿರೋಧಿಸುವುದಾದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಏನು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ನಗರೀಕರಣ, ನೀರು, ವಿದ್ಯುತ್‌ಗಳ ಬೇಡಿಕೆ, ಜನಸಂಖ್ಯೆಗೆ ಅನುಗುಣವಾಗಿ ಬೆಳೆಯಬೇಕಾದ ಆಹಾರ ಧಾನ್ಯ, ಇದಕ್ಕಾಗಿ ನೀರಾವರಿ ವ್ಯವಸ್ಥೆ, ಇವುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ವರ್ತಮಾನದ ಜಗತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನವೊಂದೇ ಉತ್ತರವಲ್ಲ. ಹಾಗೆಂದ ಮಾತ್ರಕ್ಕೆ ದಿಡೀರ್ ಪರಿಹಾರಕ್ಕೆ ಯಾವ ಮಂತ್ರ ದಂಡ ಯಾರ ಬಳಿಯೂ ಇಲ್ಲ ನಿಜ. ಆದರೆ ನಾವೀಗ ನಮ್ಮ ಪೂರ್ವಿಕರು ನಡೆದು ಬಂದ ಹಾದಿಯಲ್ಲಿ ನಾವು ಹಾದಿ ತಪ್ಪಿದ್ದು ಎಲ್ಲಿ ಎಂಬುದನ್ನ ಕಂಡುಕೊಳ್ಳುವುದರ ಮೂಲಕ ಉತ್ತರ ಹುಡಕಬೇಕಾಗಿದೆ. ನಮ್ಮನ್ನು ತಾಯಿಯಂತೆ ಪೋಷಿಸುತ್ತಿರುವ ನಿಸರ್ಗದಲ್ಲಿ, ಅದರ ಜೀವಜಾಲ ವ್ಯವಸ್ಥೆಯಲ್ಲಿ ನಮ್ಮೆಲ್ಲಾ ಪ್ರಶ್ನೆಗಳಿಗೆ ಪರಿಹಾರವಿದೆ. ಅದನ್ನು ಗ್ರಹಿಸುವ, ಅರ್ಥಮಾಡಿಕೊಳ್ಳುವ ಮನಸ್ಸುಗಳು ಬೇಕಷ್ಟೆ. ನದಿ ನೀರು ಕಲ್ಮಶವಾಗದಂತೆ ಕಾಪಾಡುವ, ಪ್ರವಾಹವನ್ನು ನಿಯಂತ್ರಿಸುವ, ಹೂಳನ್ನು ತಡೆಗಟ್ಟುವ ಬಗ್ಗೆ ನಮ್ಮ ಪೂರ್ವಿಕರು ಅನುಕರಿಸುತಿದ್ದ ಪದ್ದತಿಗಳತ್ತ ನಾವು ಗಮನ ಹರಿಸಬೇಕಾಗಿದೆ.

ನದಿಯ ನೀರಿನ ಕಲ್ಮಶಕ್ಕೆ ಮೂಲ ಕಾರಣ ಮಳೆಯ ನೀರು. ಈ ನೀರು ನೆಲಕ್ಕೆ ಬಿದ್ದಾಗ ಭೂಮಿಯಲ್ಲಿ ಇಂಗಿ ಹೋಗದೆ ನೇರವಾಗಿ ನದಿಗೆ ಸೇರುತ್ತಿದೆ. ನದಿ ಪಾತ್ರದಲ್ಲಿದ್ದ ಅರಣ್ಯ, ಗಿಡ ಮರಗಳ ನಾಶ ಮತ್ತು ನೀರಿನ ತಾಣಗಳ (ಹೊಂಡ) ನಾಶದಿಂದಾಗಿ ನದಿಗಳ ಪ್ರವಾಹ, ಹೂಳು ತುಂಬುವಿಕೆಗೆ ಕಾರಣವಾಗಿದೆ. ಅರಣ್ಯ ಹಾಗೂ ನದಿಯ ಇಕ್ಕೆಲಗಳಲ್ಲಿ ಇರುತ್ತಿದ್ದ ಗಿಡ ಮರಗಳಿಂದ ಉದುರುತಿದ್ದ ಎಲೆಗಳು ಭೂಮಿಯಲ್ಲಿ ಶೇಖರಗೊಂಡು ಮಳೆ ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ನೀರನ್ನು ಇಂಗಿಸುತಿದ್ದವು. ಗಿಡ ಮರಗಳ ಕೆಳಗೆ ಹತ್ತಿಯ ಹಾಸಿಗೆಯಂತಹ ಒಂದು ಪದರ  ನಿರ್ಮಾಣವಾಗುತ್ತಿತ್ತು. ಇದಕ್ಕೆ ಮಳೆಗಾಲದಲ್ಲಿ ಬಿದ್ದ ನೀರನ್ನು ಹರಿಯದಂತೆ ತಡೆದು ಭೂಮಿಗೆ ನೀರುಣಿಸುವ ಸಾಮರ್ಥ್ಯವಿತ್ತು. ಅದೇ ರೀತಿ ನೀರಿನ ಹೊಂಡಗಳಲ್ಲಿ ಮಳೆ ನೀರು ಶೇಖರವಾಗಿ ಅಂತರ್ಜಲ ಹೆಚ್ಚಲು ಸಹಕಾರಿಯಾಗುತ್ತಿತ್ತು. ಜೊತೆಗೆ ನದಿಗಳ ದಡದ ಇಕ್ಕೆಲಗಳಲ್ಲಿ ಬೆಳೆದ ಗಿಡ ಮರಗಳ ಬೇರುಗಳು ಮಣ್ಣು ಕುಸಿದು ನದಿಗೆ ಸೇರದಂತೆ ತಡೆದು ಹಿಡಿದಿಟ್ಟುಕೊಳ್ಳುತ್ತಿದ್ದವು. ಪರಿಸರದ ಸ್ವಯಂಕೃತವಾದ ಈ ವ್ಯವಸ್ಥೆಯ ಬಗ್ಗೆ ಪೂರ್ಣ ಅರಿವಿದ್ದ ನಮ್ಮ ಪೂರ್ವಿಕರು ನಿಸರ್ಗದ ನೈಜ ಚಟುವಟಿಕೆಗೆ ಕೈ ಹಾಕದೇ ಹಾಗೇ ಪೋಷಿಸಿಕೋಡು ಬಂದಿದ್ದರು.

ಇಂದಿನ ಆಧುನಿಕ ಅಭಿವೃದ್ಧಿಯ ಅಂಧಯುಗದಲ್ಲಿ ನಗರೀಕರಣ ರಭಸದಿಂದ ಸಾಗುತ್ತಿರುವಾಗ, ನಿಸರ್ಗವಿರುವುದೇ ನಮಗಾಗಿ ಎಂಬ ಅಹಂಕಾರ ನಮ್ಮಲ್ಲಿ ಮನೆ ಮಾಡಿರುವಾಗ, ಅರಣ್ಯ, ನೀರಿನ ತಾಣ, ಗಿಡ ಮರ ಅವನತಿಯತ್ತಾ  ಸಾಗಿ ನದಿಗಳು ಈಗ ನಗರ ಪಟ್ಟಣಗಳ ಕೊಳಚೆ ನೀರನ್ನು ಸಾಗಿಸುವ ವ್ಯವಸ್ಥೆಗಳಾಗಿ ಮಾರ್ಪಟ್ಟಿವೆ. ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಪ್ರತಿಪಾದಿಸುವ ಸರ್ಕಾರಗಳು, ತಜ್ಞರು ನಮ್ಮ ಮುಂದಿಡುವ ವಾದವೆಂದರೆ, ನದಿಗಳ ಪ್ರವಾಹ ನಿಯಂತ್ರಣ ಮತ್ತು ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹಿಸುವ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಇವರ ದೃಷ್ಟಿಯಲ್ಲಿ ಸಣ್ಣ ಮಟ್ಟದ ಜಲಾಶಯಗಳು ನಿಷ್ಪ್ರಯೋಜಕ. ನಿಸರ್ಗದ ಇತಿಹಾಸ ಬಲ್ಲವರು, ಅದರ ಚಟುವಟಿಕೆ ಅರ್ಥ ಮಾಡಿಕೊಂಡವರು ಆಧುನಿಕ ತಂತ್ರಜ್ಞಾನವನ್ನು ಒಪ್ಪುವುದಿಲ್ಲ. ಅಣೆಕಟ್ಟುಗಳ ಮೊದಲಿಗೆ ಇದ್ದ ನೀರಿನ ತಾಣಗಳು, ಅವು ಸಣ್ಣ ಸ್ವರೂಪದವುಗಳಾಗಿದ್ದು, ಕೊಳವಾಗಿರಲಿ, ಕೆರೆಯಾಗಿರಲಿ ಇವುಗಳ ಮಹತ್ವವನ್ನು ಅರಿಯದವರು ಮಾತ್ರ ದೊಡ್ಡ ಅಣೆಕಟ್ಟುಗಳ ಬಗ್ಗೆ ಮಾತನಾಡುತ್ತಾರೆ.

ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿಕೊಂಡು ಭೂಮಿಯ ಅಂತರ್ಜಲ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದ ಇವುಗಳು ನೀರಿನ ಕಲ್ಮಶವನ್ನು ತಡೆಗಟ್ಟಿ ನದಿಗೂ ಪರಿಶುದ್ಧ ನೀರನ್ನು ಹರಿಯಬಿಡುತಿದ್ದವು. ಈಗಲೂ ಕೂಡ ಆಳವಾದ ನದಿಗಳ ದಡದಲ್ಲಿ ಈ ರೀತಿಯ ನೀರು ಜಿನುಗುವುದರ ಮೂಲಕ ನದಿ ಸೇರುವುದನ್ನು ನಾವು  ಕಾಣಬಹುದು. ಅರಣ್ಯ ನಾಶ ಕೇವಲ ಅಂತರ್ಜಲ ಕೊರತೆಗೆ ಮಾತ್ರ ಕಾರಣವಾಗಿಲ್ಲ, ಆಯಾ ಪ್ರದೇಶದಲ್ಲಿ ಬೀಳುತ್ತಿದ್ದ ಸರಾಸರಿ ಮಳೆಯ ಪ್ರಮಾಣದ ಕುಸಿತಕ್ಕೂ ಕಾರಣವಾಗಿದೆ. ಅರಣ್ಯ ಮತ್ತು ಗಿಡ ಮರಗಳ ನಾಶದಿಂದ ಭೂಮಿಯ ಮೇಲಿರುತಿದ್ದ ಎಲೆಗಳ ಹೊದಿಕೆ ನಾಶವಾಗಿ ಮಳೆಯ ನೀರಿಗೆ ಭೂಮಿಯ ಮೇಲ್ಪದರು ಕೊಚ್ಚಿ ಹೋಗಿ ನದಿಗೆ ಸೇರ್ಪಡೆಯಾಗುತ್ತಿದೆ. ಇದು ಪರೋಕ್ಷವಾಗಿ ನದಿಗಳಲ್ಲಿ ಹೂಳು ಶೇಖರವಾಗಲು ಕಾರಣವಾಗುತ್ತಿದೆ. ಇದಕ್ಕೆ ಜೀವಂತ ಉದಾಹರಣೆಯಂದರೆ, ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಹೆಸರಾಗಿದ್ದ ಈಶಾನ್ಯ ಭಾರತದ ಚಿರಾಪುಂಜಿಯಲ್ಲಿ ವರ್ಷವೊಂದಕ್ಕೆ ಸರಾಸರಿ 900 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಅಲ್ಲಿನ ಅರಣ್ಯನಾಶದಿಂದಾಗಿ ಈಗ ಮಳೆಯ ಪ್ರಮಾಣ 400 ರಿಂದ 530 ಮಿಲಿ ಮೀಟರ್‌ಗೆ ಕುಸಿದಿದೆ.

ಅರಣ್ಯದಲ್ಲಿ ಬೆಳೆಯುತಿದ್ದ ದಟ್ಟವಾದ ಹುಲ್ಲು ಮಳೆ ನೀರಿಗೆ ಭೂಮಿಯ ಮಣ್ಣು ಕೊಚ್ಚಿ ಹೋಗದಂತೆ ತಡೆಯುತ್ತಿತ್ತು. ಅರಣ್ಯ ಬರಿದಾದ ಮೇಲೆ ಮಳೆನೀರಿನ ಜೊತೆ ಹರಿಯುತ್ತಿರುವ ಮಣ್ಣು ನದಿಯ ಒಡಲು ಸೇರುತ್ತಿದೆ. ಜಗತ್ತಿನಾದ್ಯಂತ 1990ರ ದಶಕದಲ್ಲಿ ವರ್ಷವೊಂದಕ್ಕೆ ಒಂಬೈನೂರು ಕೋಟಿ ಟನ್ ಮಣ್ಣು ನದಿಗಳಿಗೆ ಸೇರ್ಪಡೆಯಗುತ್ತಿತ್ತು. ಈಗ ಅದರ ಪ್ರಮಾಣ ನಾಲ್ಕುವರೆ ಸಾವಿರ ಕೋಟಿ ಟನ್‌ಗೆ ಏರಿಕೆಯಾಗಿದೆ. ನದಿ ಮತ್ತು ಅದರ ನೀರಿನ ರಕ್ಷಣೆಗೆ ಇರುವ ಏಕೈಕ ಪರ್ಯಾಯವೆಂದರೆ, ಕೃಷಿನೀರಿನ ತಾಣ ಮತ್ತು ಅರಣ್ಯದ ರಕ್ಷಣೆ ಮಾತ್ರ.  ಇವುಗಳಿಂದಾಗಿ ಜೈವಿಕ ಪರಿಸರ ಸಮತೋಲನದಲ್ಲಿರುತ್ತದೆ. ಬಹುತೇಕ ಸರ್ಕಾರಗಳು ಕಾಯ್ದಿಟ್ಟ ಅರಣ್ಯ ಅಥವಾ ರಾಷ್ಡೀಯ ಉದ್ಯಾನವನ ಎಂಬ ಯೋಜನೆಯಡಿ ಅರಣ್ಯ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿವೆ. ಇವರನ್ನು ಹೊರಹಾಕುವ ಹಿಂದೆ ಮರಗಳ್ಳರ ಮಾಫಿಯ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಅರಣ್ಯಕ್ಕಾಗಲಿ, ಅಲ್ಲಿನ ಪರಿಸರ ಅಥವಾ ಪ್ರಾಣಿಗಳ ಬದುಕಿಗೆ ಧಕ್ಕೆಯಾಗದಂತೆ ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಶತಮಾನಗಳುದ್ದಕ್ಕೂ ಅದರ ರಕ್ಷಕರಂತೆ ಬಾಳಿದ್ದ ಇವರು ಈಗ ಅಕ್ಷರಶಃ ಅನಾಥರು. ಇವರನ್ನು ಅರಣ್ಯದಿಂದ ಹೊರ ಹಾಕಿದ ನಂತರ ಅರಣ್ಯ ಮತ್ತಷ್ಟು ನಾಶವಾಗಿದೆಯೇ ಹೊರತು ಉದ್ಧಾರವಾಗಿಲ್ಲ. ಈಗ ಭಾರತ ಸರ್ಕಾರ  ಅರಣ್ಯವಾಸಿಗಳಿಗೆ ಹಕ್ಕನ್ನು ದಯಪಾಲಿಸಿದ್ದು ಯಾವ ಸರ್ಕಾರಗಳೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಅರಣ್ಯದ ಕಿರು ಉತ್ಪನ್ನಗಳ ಜೊತೆ ಜೀವಿಸುವ ಹಕ್ಕನ್ನು ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಇವರ ಅಭಿವೃದ್ಧಿಗಾಗಿ ಕಳೆದ ನಲವತ್ತು ವರ್ಷಗಳಿಂದಲೂ ದುಡಿಯುತ್ತಿರುವ ಡಾ. ಹೆಚ್. ಸುದರ್ಶನ್‌ರವರ ಪರಿಶ್ರಮವಿದೆ. ಇವರಂತೆ ಹಲವಾರು ಸಮಾಜ ಸೇವಕರು ಒರಿಸ್ಸಾ, ಮಧ್ಯಪ್ರದೇಶ, ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಕೆಲಸ ಮಾಡುತಿದ್ದು, ಇವರಿಗೆ ದೆಹಲಿ ಮೂಲದ ಪರಿಸರಕ್ಕೆ ಮೀಸಲಾದ “ಡೌನ್ ಟು ಅರ್ಥ್” ಮಾಸಪತ್ರಿಕೆ ಬೆನ್ನೆಲುಬಾಗಿ ನಿಂತಿದೆ.

ಭೂಮಿಯ ಮೇಲಿನ ಮಣ್ಣಿನ ಪದರು ನಾಶವಾಗದಂತೆ ತಡೆಗಟ್ಟಲು ನಮ್ಮ ಪೂರ್ವಿಕರು ಅನುಸರಿಸುತಿದ್ದ ಸಾಂಪ್ರದಾಯಿಕ ದೇಶಿ ಕೃಷಿ ಪದ್ಧತಿ ಇವತ್ತಿಗೂ ನಮಗೆ ಮಾದರಿಯಾಗಬಲ್ಲದು. ಈ ಪದ್ಧತಿಯಲ್ಲಿ ರೈತರು ಬೇಸಾಯದ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಋತುಮಾನಗಳಿಗೆ ಅನುಗುಣವಾಗಿ ಬೆಳೆಯುತ್ತಿದ್ದರಿಂದ ಭೂಮಿಯ ಫಲವತ್ತತೆಯ ಜೊತೆಗೆ ಮಣ್ಣು ಕೊಚ್ಚಿ ಹೋಗದಂತೆ ದ್ವಿದಳ ಧಾನ್ಯಗಳ ಬೆಳೆಗಳ ಬೇರುಗಳು ತಡೆಯುತ್ತಿದ್ದವು. ಗುಡ್ಡಗಾಡು ಇಲ್ಲವೆ ಇಳಿಜಾರು ಪ್ರದೇಶದಲ್ಲಿ ಕೃಷಿಕರು ಭೂಮಿಯನ್ನು ಹಂತ ಹಂತವಾಗಿ ಮೆಟ್ಟಿಲುಗಳ ಆಕಾರದಲ್ಲಿ ವಿನ್ಯಾಸಗೊಳಿಸಿ ಬೇಸಾಯ ಮಾಡುತ್ತಿದ್ದುದ್ದರಿಂದ ಮಳೆನೀರು ಬಿದ್ದ ಸ್ಥಳದಲ್ಲೇ ಭೂಮಿಗೆ ಸೇರುತಿತ್ತು.

ದೇಶಿ ಕೃಷಿ ಪದ್ಧತಿಯಲ್ಲಿ ರೈತರು ಸಾವಯವ ರೀತಿಯನ್ನು ಅಳವಡಿಸಿಕೊಂಡು ಯಾವುದೇ ರಸಾಯನಿಕ ಗೊಬ್ಬರ ಅಥವಾ ಕೀಟನಾಶಕ ಬಳಸುತ್ತಿರಲಿಲ್ಲ. ಇದರಿಂದಾಗಿ ಜೈವಿಕ ಜೀವಜಾಲಕ್ಕೆ, ಮತ್ತು  ಬೆಳೆಗಳಿಗೆ ಆವರಿಸುತ್ತಿದ್ದ ಕೀಟಗಳ ಭಕ್ಷಣೆಗೆ ಬರುತಿದ್ದ ಪಕ್ಷಿ ಪ್ರಭೇದಗಳಿಗೆ ತೊಂದರೆಯಾಗುತ್ತಿರಲಿಲ್ಲ. ಇಂತಹ ಕೃಷಿ ಪದ್ಧತಿಯನ್ನು ನಾವು ಇಂದಿಗೂ ಗುಡ್ಡಗಾಡು ಪ್ರದೇಶದ ಅರಣ್ಯವಾಸಿಗಳಲ್ಲಿ ಕಾಣಬಹುದು. ಅವರು ಒಂದು ಪ್ರದೇಶದಲ್ಲಿ ಬೆಳೆ ತೆಗೆದ ನಂತರ ಆ ಭೂಮಿಯನ್ನ ವರ್ಷಗಟ್ಟಲೆ ಹಾಗೆ ಬಿಟ್ಟು ಬೇರೊಂದು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಇದು ಭೂಮಿಯ ಫಲವತ್ತತೆ ಕಾಪಾಡಲು ಅವರು ಅನುಕರಿಸುತ್ತಿದ್ದ ತಂತ್ರ.

ಆಧುನಿಕ ಯುಗದಲ್ಲಿ ರೂಪುಗೊಳ್ಳುತ್ತಿರುವ ಜಲಾಶಯಗಳು, ನೀರಾವರಿ ಕಾಲುವೆಗಳು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಕೊಂದು ಹಾಕಿದವು. ನಮ್ಮ ಸರ್ಕಾರಗಳು ರೈತರನ್ನು ಒಂದೇ ರೀತಿಯ ಬೆಳೆ ತೆಗೆಯುವಂತೆ ಒತ್ತಾಯಿಸುತ್ತಿವೆ. ರೈತರೂ ಸಹ ಹಣದ ಆಸೆಗೆ ಬಲಿ ಬಿದ್ದು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಅರಣ್ಯ, ನದಿ, ಮಳೆ, ಭೂಮಿ, ನೀರು, ಜೈವಿಕ ವೈವಿಧ್ಯ ಇವೆಲ್ಲವೂ ಒಂದಕ್ಕೊಂದು ಸರಪಳಿಯಂತೆ ಬೆಸೆದುಕೊಂಡಿದ್ದು ಒಂದು ಕೊಂಡಿ ಕಳಚಿಕೊಂಡರೆ, ಇಡೀ ವೈವಸ್ಥೆಯೆ ಕುಸಿದು ಬೀಳುವ ಸ್ಥಿತಿ. ಈ ಸೂಕ್ಷವನ್ನು ರೈತರು, ನೀರಾವರಿ ತಜ್ಙರು ಕೃಷಿವಿಜ್ಞಾನಿಗಳು ಅರಿಯಬೇಕಾಗಿದೆ.

ಪ್ರವಾಹ ನಿಯಂತ್ರಣದ ನೆಪದಲ್ಲಿ ಅಣೆಕಟ್ಟುಗಳ ಮೂಲಕ ನದಿಗಳನ್ನು ನಿಯಂತ್ರಿಸಲು ಹೊರಟಿರುವ ಆಧುನಿಕ ನೀರಾವರಿ ತಜ್ಞರು ನದಿಗಳ ಪ್ರವಾಹದ ಜೊತೆ ಬದುಕು ಸಾಗಿಸುತ್ತಿರುವ ಜನತೆಯ ಕಾರ್ಯವಿಧಾನ, ಅವರ ಕೃಷಿ ಚಟುವಟಿಕೆಗಳನ್ನು ಗಮನಿಸಬೇಕಾಗಿದೆ. ನದಿಗಳನ್ನು ಮಣಿಸಬೇಕೆ? ಅಥವಾ ಬೇಡವೆ? ಇದು ಇವತ್ತಿನ ಪ್ರಶ್ನೆಯಲ್ಲ, ಅದು ಶತಮಾನಗಳ ಉದ್ದಕ್ಕೂ ಮನುಕುಲವನ್ನು ಕಾಡಿರುವ ಪ್ರಶ್ನೆ. ಚೀನಾದ ಪ್ರಸಿದ್ಧ ಚಿಂತಕ ಚಿಯೊಜಂಗ್ ಎಂಬಾತ ನದಿಗಳ ಕುರಿತು ಈ ರೀತಿ ಬಣ್ಣಿಸಿದ್ದಾನೆ: “ನದಿಗಳೆಂದರೆ ಮಗುವಿನ ಬಾಯಿ ಇದ್ದಂತೆ. ಅದನ್ನು ಮುಚ್ಚಲು ಹೊರಟರೆ ಕರ್ಕಶ ಶಬ್ದ ಕೇಳಬೇಕು, ಇಲ್ಲವೇ ಉಸಿರುಗಟ್ಟಿ ಸಾಯುವುದನ್ನು ನೋಡುವುದಕ್ಕೆ ಸಿದ್ದವಾಗಿರಬೇಕು.”

ಚೀನಾದಲ್ಲೂ ಕೂಡ ನದಿಗಳನ್ನು ಪ್ರವಾಹದ ನೆಪದಲ್ಲಿ ಮಣಿಸಲು ಹೊರಟಾಗ ನಡೆದ ಪರ-ವಿರೋಧಗಳ ಸಂಘರ್ಷಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ನದಿಗಳು ಪ್ರವಾಹದ ಸಂದರ್ಭದಲ್ಲಿ ತುಂಬಿ ಹರಿದು ಇಕ್ಕೆಲಗಳ ಒಣಭೂಮಿಗೆ ನೀರು ಉಣಿಸುವುದರಿಂದ ತೇವಾಂಶಭರಿತ ಭೂಮಿಯಲ್ಲಿ ಅಲ್ಪಾವಧಿಯ ಬೆಳೆ ತೆಗೆಯುವ ಕಲೆಯನ್ನು ನಮ್ಮ  ಪೂರ್ವಿಕರು ಕರಗತ ಮಾಡಿಕೊಂಡಿದ್ದರು. ಇದು ಜಗತ್ತಿನ ನಾಗರೀಕತೆಯ ಇತಿಹಾಸದಿಂದ ಹಿಡಿದು ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಪ್ರವಾಹದ ನದಿಗಳಿರುವ ನಮ್ಮ ನೆರೆಯ ಬಾಂಗ್ಲಾ ದೇಶದಲ್ಲಿ ಮೇಘನಾ, ಬ್ರಹ್ಮಪುತ್ರ, ಗಂಗಾನದಿಗಳ  ಪ್ರವಾಹದ ಜೊತೆ ಅಲ್ಲಿ ಜನರ ಸಾಹಸಮಯ ಬದುಕು ಕುತೂಹಲಕಾರಿಯಾಗಿದೆ. ಪ್ರವಾಹ ಬರುವ ಮುನ್ನವೇ ನದಿಯ ಪಾತ್ರದಲ್ಲಿ 5 ರಿಂದ 8 ಅಡಿ ಎತ್ತರ ಬೆಳೆಯುವ ದೇಶಿ ಬತ್ತದ ಬೀಜವನ್ನು ಬಿತ್ತುತ್ತಾರೆ. ಪ್ರವಾಹ ಇಳಿಮುಖವಾದ ನಂತರ ಫಸಲನ್ನು ಪಡೆಯುತ್ತಾರೆ. ಅದೇ ತೇವ ಭರಿತವಾದ ಭೂಮಿಯಲ್ಲಿ ಅಲ್ಪಾವಧಿ ಬೆಳೆಗಳಾದ ಕಲ್ಲಂಗಡಿ, ಸೌತೆ. ಹಾಗೂ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ.

1850 ರಿಂದಲೂ ಸಹ ಅಮೇರಿಕಾದ ಮಿಸಿಸಿಪ್ಪಿ ನದಿ ಪ್ರಾಂತ್ಯದಲ್ಲಿ ಪ್ರವಾಹ ನಿಯಂತ್ರಣದ ಬಗ್ಗೆ ಗೊಂದಲ ಇನ್ನೂ ಮುಂದುವರಿದಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಅಣೆಕಟ್ಟುಗಳು ಅಥವಾ ನೀರಾವರಿ ಕಾಲುವೆಗಳು ಇವುಗಳಿಂದ ದೂರವಾಗಿ ಒಣಭೂಮಿಯಲ್ಲಿ ಮಳೆನೀರನ್ನು ಸಂಗ್ರಹಿಸಿಟ್ಟುಕೊಂಡು ಶೇ.70 ರಷ್ಟು ಜನ ಬೇಸಾಯ ಮಾಡುತಿದ್ದಾರೆ.

ಆಪ್ರಿಕಾದ ಸಹರಾ ಮರುಭುಮಿಯ ಕನಿಷ್ಟ ಮಳೆ ಬೀಳುವ ಪ್ರದೇಶದಲ್ಲಿ ಹುಲ್ಲುಗಾವಲನ್ನು ಆಶ್ರಯಿಸಿಕೊಂಡು ಜಾನುವಾರು ಸಾಕಿಕೊಂಡು ಕಡಿಮೆ ಮಳೆ ಮತು ಉಷ್ಣವನ್ನು ಸಹಿಸಿಕೊಳ್ಳುವ ಶಕ್ತಿಯುಳ್ಳ ಕಿರುಧಾನ್ಯಗಳನ್ನು ಬೆಳೆದು ಜನರು ಜೀವನ ಸಾಗಿಸುತ್ತಿದ್ದಾರೆ. ಚೀನಾದ ಮಂಗೋಲಿಯ ಪ್ರಾಂತ್ಯದಲ್ಲೂ ಕೂಡ ಇಂತಹದೇ ಬದುಕನ್ನು ನಾವು ಕಾಣಬಹುದು. ಋತುಮಾನಗಳಿಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಈ ಜನತೆ ವಲಸೆ ಹೋಗುವುದುಂಟು. ಜೊತೆಗೆ ತಾವು ವಾಸಿಸುವ ಸ್ಥಳದಲ್ಲಿ ಬೀಳುವ ಅಲ್ಪ ಮಳೆಯನ್ನು ಸಂಗ್ರಹಿಸಿ ಜೀವನ ಸಾಗಿಸುವ ಕಲೆಯನ್ನೂ ಇವರು ಬಲ್ಲರು.

ಭಾರತದ ರಾಜಸ್ಥಾನ, ಗುಜರಾತ್, ದಕ್ಷಿಣ ಇಸ್ರೇಲ್ ಭಾಗದ ನೆಬೇಟಿಯನ್ ಜನಾಂಗ ಮಳೆ ನೀರು ಸಂಗ್ರಹದಲ್ಲಿ ಸಿದ್ಧಹಸ್ತರು. ಇಸ್ರೇಲ್ ಜನತೆ ಮಳೆನೀರು ಆಧಾರಿತ ಕೃಷಿಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಾವಿರದ ಮುನ್ನೂರು ವರ್ಷಗಳ ಇತಿಹಾಸವಿದೆ. ಈ ಪ್ರದೇಶದಲ್ಲಿ ಕನಿಷ್ಟ ನೂರು ಮಿಲಿ ಮೀಟರ್ ಮಳೆ ಬಿದ್ದರೂ ಇಲ್ಲಿನ ಜನ ಬೇಸಾಯ ಮಾಡಬಲ್ಲರು. ಜಗತ್ತಿಗೆ ಹನಿ ನೀರಾವರಿ ಪದ್ಧತಿ ಪರಿಚಯಿಸಿದ ಕೀರ್ತಿ ಇಲ್ಲಿನ ಜನತೆಗೆ ಸಲ್ಲುತ್ತದೆ.

ಎರಡು ಸಾವಿರ ವರ್ಷಗಳ ಹಿಂದೆ ಅಮೇರಿಕಾದ ನೈರುತ್ಯ ಭಾಗದ ಎತ್ತರ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆ ನೀರನ್ನು ಮಣ್ಣಿನ ಕೊಳವೆ ಮೂಲಕ ಕೆಳಗಿನ ಪ್ರದೇಶಕ್ಕೆ ಸಾಗಿಸಿ ಅಲ್ಲಿನ ಮೂಲನಿವಾಸಿಗಳು ಬೇಸಾಯ ಮಾಡುತ್ತಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಈ ಪದ್ಧತಿಗೆ ಅಲ್ಲಿನ ಜನ ಅನ್ಸೀಜಿ ಎಂದು ಕರೆಯುತಿದ್ದರು. ( ಸ್ಥಳೀಯ ಭಾಷೆಯಲ್ಲಿ ಪ್ರಾಚೀನವಾದದು ಎಂದರ್ಥ.)

ಆಪ್ರಿಕಾದ ಜನತೆ ಮೂರು ಸಾವಿರ ವರ್ಷಗಳ ಹಿಂದೆ ನದಿ ತೀರದಲ್ಲಿ 12 ರಿಂದ 15 ಅಡಿ ಎತ್ತರ ಬೆಳೆಯುತ್ತಿದ್ದ ಭತ್ತದ ಬೇಳೆ ತೆಗೆಯುತಿದ್ದರು. ಇತ್ತೀಚಿಗಿನ 10 ವರ್ಷಗಳ ಹಿಂದೆ ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲೂ 6 ಅಡಿ ಎತ್ತರದ ಭತ್ತದ ಬೆಳೆ ತೆಗೆಯುವ ಪದ್ಧತಿ ಚಾಲ್ತಿಯಲ್ಲಿತ್ತು.

ಭಾರತದ ರಾಜಸ್ಥಾನದ ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಮಳೆ ನೀರನ್ನು ಸಂಗ್ರಹಿಸುವ ವೈವಿಧ್ಯಮಯ ವಿಧಾನಗಳಿವೆ. ರಾಜಸ್ಥಾನದ ಜೋಧಪುರ, ಜೈಪುರ, ಜೈಸಲ್ಮೇರ್, ಉತ್ತರ ಪ್ರದೇಶದ ಗ್ವಾಲಿಯರ್, ಮಹರಾಷ್ಟ್ರದ ಔರಂಗಬಾದ್, ದೌಲತಬಾದ್ ಮುಂತಾದ ನಗರಗಳ ಎತ್ತರ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೋಟೆಗಳಲ್ಲಿ ಅಂದಿನ ರಾಜರು ಮಳೆ ನೀರು ಸಂಗ್ರಹಕ್ಕೆ ಮಾಡಿದ್ದ ವ್ಯವಸ್ಥೆಗಳು ಇಂದಿಗೂ ನಮಗೆ ಮಾದರಿಯಾಗಬಲ್ಲವು.

ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ಕಾಡೀಸ್ ಎಂಬ ಪದ್ಧತಿಯಲ್ಲಿ ಇಳಿಜಾರು ಪ್ರದೇಶದಲ್ಲಿ 4 ರಿಂದ  5ಅಡಿ ಎತ್ತರದ ದಿಬ್ಬಗಳನ್ನು ನಿರ್ಮಿಸಿ ಮಳೆನೀರು ಸಂಗ್ರಹಿಸಿ ಬೇಸಾಯ ಮಾಡುವ ವೃತ್ತಿ ಈಗಲೂ ಚಾಲ್ತಿಯಲ್ಲಿದೆ. ಮಳೆನೀರಿಗೆ ಕೊಚ್ಚಿಹೋಗದಂತೆ ದಿಬ್ಬಗಳ ಮೇಲೆ ಗಿಡ ಮರಗಳನ್ನು ಬೆಳಸಿರುವುದರಿಂದ ಒಂದಿಷ್ಟು ಹಸಿರು ಸಹ ಕಾಣತೊಡಗಿದೆ.

1970 ರಲ್ಲಿ ಈ ಪ್ರದೇಶಕ್ಕೆ ಇಂದಿರಾಗಾಂಧಿ ನಾಲುವೆ ಹರಿದ ಪ್ರಯುಕ್ತ ರೈತರು ತಮ್ಮ ದೇಶಿ ಕೃಷಿ ಕೈಬಿಟ್ಟರು. ಮತ್ತೇ 1986 ರಿಂದ ರೈತರು ದೇಶಿ ಕೃಷಿ ನೀರಾವರಿ ಪದ್ಧತಿಗೆ ಒಲವು ತೋರಿದ್ದು, ಸಹಕಾರ ತತ್ವದಡಿ ನದಿಗಳಿಗೆ ಸಣ್ಣ ಮಟ್ಟದ ಅಣೆಕಟ್ಟುಗಳನ್ನು ಸ್ವಂತ   ಖರ್ಚಿನಲ್ಲಿ ನಿರ್ಮಿಸಿಸಕೊಂಡು 100 ರಿಂದ 250 ಎಕರೆ ಪ್ರದೇಶವನ್ನು ನೀರಾವರಿಗೆ ಒಳಪಡಿಸಿ ಯಶಸ್ವಿಯಾಗಿದ್ದಾರೆ. ಪರಿಸರ ಪ್ರೇಮಿ ಹಾಗೂ ನೈಸ ರ್ಗಿಕ ನೀರಿನ ತಜ್ಞ ಡಾ. ರಾಜೇಂದ್ರಸಿಂಗ್ ನೇತೃತ್ವದಲ್ಲಿ ಅಲ್ಲಿನ ರೈತರು ಇಡೀ ಭಾರತಕ್ಕೆ ಮಾದರಿಯಾಗಿದ್ದಾರೆ.

(ಮುಂದುವರೆಯುವುದು)

(ಚಿತ್ರಕೃಪೆ: ವಿಕಿಪೀಡಿಯ)

Almatti-Dam

ಜೀವನದಿಗಳ ಸಾವಿನ ಕಥನ – 20

ಡಾ. ಎನ್. ಜಗದೀಶ್ ಕೊಪ್ಪ

“ಹಸಿರು ಕ್ರಾಂತಿ ಯೋಜನೆಯಡಿ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಂಡಿರುವ ಕೃಷಿ ಚಟುವಟಿಕೆಗಳಾಗಲಿ, ಅಥವಾ ನೀರಾವರಿ ಯೋಜನೆಗಳಾಗಲಿ ತಮ್ಮ ಮೂಲಭೂತ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಹಸಿವು ಇಂದಿಗೂ ತಾಂಡವವಾಡುತ್ತಿದೆ.” ಇವು ಎರಡು ದಶಕದ ಹಿಂದೆ ನೈಸರ್ಗಿಕ ಕೃಷಿ ಆಂದೋಲನದಲ್ಲಿ ಕೇಳಿ ಬಂದ ಮಾತುಗಳು. ದುರಂತವೆಂದರೆ, ಹಸಿವು ಕುರಿತಂತೆ ಜಗತ್ತಿನ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ.

ಜಗತ್ತಿನ ಹಿರಿಯಣ್ಣನೆಂದು ತೊಡೆ ತಟ್ಟಿ ನಿಂತಿರುವ ಅಮೇರಿಕಾದಲ್ಲೂ ಕೂಡ ಜನತೆ ಹಸಿವಿನಿಂದ ಮುಕ್ತರಾಗಿಲ್ಲ. ಕ್ಯಾಲಿಫೋರ್ನಿಯದಂತಹ ಸಮೃದ್ಧ ನೀರಾವರಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯ ಬೆಳೆಯುತಿದ್ದರೂ ಕೂಡ ಅಮೇರಿಕಾದ ಪ್ರತಿ ಆರು ಜನರಲ್ಲಿ ಒಬ್ಬ ವ್ಯಕ್ತಿ ಹಸಿವಿನಿಂದ ಬಳಲುತಿದ್ದಾನೆ. ಇದು ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದ ಸಂಶೋಧಕರು ಬಹಿರಂಗ ಪಡಿಸಿರುವ ಸತ್ಯ.

ಇವತ್ತಿಗೂ ತೃತೀಯ ಜಗತ್ತಿನ ರಾಷ್ಟಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಂಗ್ಲಾದೇಶ ಮುಂತಾದ ದೇಶಗಳಲ್ಲಿ ಪ್ರತಿದಿನ ಕೋಟ್ಯಾಂತರ ಜನ ಹಸಿವಿನಿಂದ ನರಳುತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಕೋಟ್ಯಾಧೀಶರ ಸಂಖ್ಯೆ ಹೆಚ್ಚಾಗುತ್ತಿರುವುದು ನಮ್ಮ ಮಾಧ್ಯಗಳಿಗೆ ಹೆಮ್ಮೆಯ ಸುದ್ಧಿಯೇ ಹೊರತು, ನಮ್ಮ ಜನಪ್ರತಿನಿಧಿಗಳ, ಯೋಜನೆಗಳ ನಿರ್ಮಾಪಕರ ಕೆನ್ನೆಗೆ ಹೊಡೆದಂತೆ ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಆದಿವಾಸಿ ಮತ್ತು ಬುಡಕಟ್ಟು ಜನಾಂಗ ಹಸಿವಿನಿಂದ ಸಾಯುತ್ತಿರುವುದು ಸುದ್ಧಿಯಲ್ಲ. ಇದು ಸುದ್ಧಿ ಮಾಧ್ಯಮಗಳ ಅಜ್ಙಾನವೊ, ಅಥವಾ ಅಸಡ್ಡೆತನವೋ ತಿಳಿಯಲಾಗದು.

ಭಾರತ ಈಗ ಆಹಾರದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಿದ್ದು, ದೇಶದ ಗೋದಾಮುಗಳಲ್ಲಿ ಬಡವರಿಗೆ ವಿತರಣೆಯಾಗದೆ 30 ಲಕ್ಷ ಟನ್ ಆಹಾರ ಕೊಳೆಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಎಲ್ಲರೂ ಬಲ್ಲ ಸಂಗತಿ. ನ್ಯಾಯಾಲಯ ಕಪಾಳಕ್ಕೆ ಬಾರಿಸಿದ ನಂತರವೂ ಸರ್ಕಾರಗಳಾಗಲಿ, ಜನಪ್ರತಿನಿಧಿಗಳಾಗಲಿ ಎಚ್ಚೆತ್ತುಕೊಂಡಿಲ್ಲ.

ತೃತೀಯ ಜಗತ್ತಿನ ಹಸಿವಿನ ಕುರಿತು ವಾಖ್ಯಾನಿಸಿರುವ ಕೃಷಿತಜ್ಙ ರಾಬರ್ಟ್ ಛೇಂಬರ್ಸ್, ದಕ್ಷಿಣ ಏಷ್ಯಾದಲ್ಲಿ ಮೂಲಭೂತವಾಗಿ ಹಸಿವು ಒಂದು ಸಮಸ್ಯೆಯಲ್ಲ, ಅಲ್ಲಿನ ಜನರು ಪಾರಂಪರಿಕವಾಗಿ ಅನೇಕ ಕಿರು ಧಾನ್ಯಗಳನ್ನು ಬೆಳೆದು ಹಸಿವಿನಿಂದ ಮುಕ್ತರಾಗುತಿದ್ದರು. ಆದರೆ, ಆಧುನಿಕ ಸರ್ಕಾರಗಳ ಒತ್ತಡದಿಂದ ರೈತರು ಎಣ್ಣೆಕಾಳು, ಕಬ್ಬು ಹತ್ತಿ ಮುಂತಾದ ವಾಣಿಜ್ಯ ಬೆಳೆಗಳಿಗೆ ಶರಣು ಹೋದದ್ದರಿಂದ ಅವರು ತಮಗೆ ಅರಿವಿಲ್ಲದಂತೆ ಹಸಿವಿನ ಬಲೆಯೊಳಗೆ ಸಿಲುಕಿಬಿಟ್ಟಿದ್ದಾರೆ ಎಂದಿದ್ದಾನೆ.

1960 ರಿಂದ 1985 ರವರೆಗಿನ 25 ವರ್ಷಗಳಲ್ಲಿ ಭಾರತದಲ್ಲಿ ಜರುಗಿದ ಹಸಿರು ಕ್ರಾಂತಿಯ ಫಲವಾಗಿ ಭತ್ತ ಮತ್ತು ಗೋಧಿಯ ಫಸಲು ನೀರಾವರಿ ಪ್ರದೇಶಗಳಲ್ಲಿ ಮೂರು ಪಟ್ಟು ಹೆಚ್ಚಾಯಿತು. ಇವುಗಳ ಜೊತೆಗೆ ಎಣ್ಣೆಕಾಳು ಬೆಳೆಗಳು ಸಹ ದ್ವಿಗುಣಗೊಂಡವು. ಆದರೆ, ಪೌಷ್ಟಿಕ ಅಂಶಗಳನ್ನು ಒಳಗೊಂಡಿದ್ದ ಸಾಂಪ್ರದಾಯಕ ಬೆಳೆಗಳಾದ ಜೋಳ, ಸಜ್ಜೆ, ನವಣೆ, ಮುಂತಾದ ಕಿರುಧಾನ್ಯಗಳು ಕುಂಠಿತಗೊಂಡವು. ಭಾರತ ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ನೀರಾವರಿ ಯೋಜನೆಗಳಿಗೆ ವಿನಿಯೋಗಿಸಿದ್ದು ಕೇವಲ ಭತ್ತ ಮತ್ತು ಗೋಧಿ ಮುಂತಾದ ಬೆಳೆಗಳಿಗೆ ಹೊರತು, ಸಾಂಪ್ರದಾಯಕ ಬೆಳೆಗಳಿಗಲ್ಲ. ಕಿರುಧಾನ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ರಾಜಸ್ತಾನದ ಥಾರ್ ಮರುಭೂಮಿಯಲ್ಲಿ 1970 ರ ದಶಕದಲ್ಲಿ ಅಲ್ಲಿಗೆ ಇಂದಿರಾಗಾಂಧಿ ಬೃಹತ್ ನೀರಾವರಿ ನಾಲುವೆ ಯೋಜನೆ ಬರುವ ಮುನ್ನ ಅಲ್ಲಿನ ಜನತೆ ದೇಶಿ ತಂತ್ರಜ್ಙಾನ ಬಳಸಿ ಮಳೆನೀರನ್ನು ಶೇಖರಿಸಿಟ್ಟುಕೊಂಡು ಹಲವಾರು ರೀತಿಯ ಸಾಂಪ್ರದಾಯಿಕ ಬೆಳೆ ತೆಗೆಯುತಿದ್ದರು. ಇವುಗಳಲ್ಲಿ ಜೋಳ, ಸಜ್ಜೆ, ಸಾಸಿವೆ, ಮೆಣಸಿನಕಾಯಿ, ಎಳ್ಳು ಮುಂತಾದ ಬೆಳೆಗಳಿದ್ದವು. ಹೀಗೆ ತಮ್ಮ ಅವಶ್ಯಕತೆಗೆ ತಕ್ಕಂತೆ, ಹವಾಮಾನಕ್ಕೆ ಅನುಗುಣವಾಗಿ ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಿದ್ದರು.

1990 ರಲ್ಲಿ ನಾಲುವೆ ಕಾಮಗಾರಿ ಪೂರ್ಣಗೊಂಡ ನಂತರ ನೀರಾವರಿಗೆ ಒಳಪಟ್ಟ 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 12 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 13 ಸಾವಿರ ಹೆಕ್ಟೇರ್ ನಲ್ಲಿ ಗೋಧಿ, ಉಳಿದ 2 ಸಾವಿರ ಹೆಕ್ಟೇರ್ ಪ್ರದೇಶ್ಲ ಎಣ್ಣೆಕಾಳು, ಭತ್ತ, ಬೆಳೆಗಳಿಗೆ ಸೀಮಿತವಾಯಿತು. ಅಲ್ಲಿನ ರೈತರು ಅನೇಕ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆದರೂ ಸಹ, ದಲ್ಲಾಳಿಗಳು, ಮಧ್ಯವರ್ತಿಗಳ ಮುಂತಾದವರ ಕಪಿಮುಷ್ಟಿಗೆ ಸಿಲುಕಿ ತಮ್ಮ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುವಲ್ಲಿ ವಿಪಲರಾದರು. ಕೃಷಿಗಾಗಿ ತಾವು ಬ್ಯಾಂಕಿನಿಂದ ಪಡೆದ ಸಾಲ ತೀರಿಸಲಾರದೆ ಅತಂತ್ರರಾದರು. ಆತಂಕದ ಸಂಗತಿಯೆಂದರ, ನೀರಾವರಿ ಪ್ರದೇಶದ ಜನತೆ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕೇಂದ್ರ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿತು. ರಾಜಸ್ತಾನದ ಬರಪೀಡಿತ ಜಿಲ್ಲೆಗಳ ಜನತೆಗಿಂತ ಕಡಿಮೆಯ ಕ್ಯಾಲೊರಿ ಆಹಾರವನ್ನು ಇವರು ಸೇವಿಸುತಿದ್ದರು. ದೀಪದ ಕೆಳೆಗೆ ಕತ್ತಲು ಎಂಬಂತೆ ಮಕ್ಕಳೂ ಸಹ ಅಪೌಷ್ಟಿಕತೆಯಿಂದ ಸಾಯುತ್ತಿರುವುದು ಬೆಳಕಿಗೆ ಬಂತು.

ಇದು ಭಾರತದ ಸಂಕಟದ ಕಥೆಯಾದರೆ, ಆಫ್ರಿಕಾದ ಸೂಡಾನಿನ ಗೆರ್ಣಜೇರಿಯಾ ಪ್ರಾಂತ್ಯದ 84 ಸಾವಿರ ಹೆಕ್ಟೇರ್ ಪ್ರದೇಶದ ರೈತರ ಗೋಳಿನ ಕತೆಯು ಇಂತಹದ್ದೇ ಆಗಿದೆ. ಅಲ್ಲಿನ ಬ್ಲೂನೈಲ್ ನದಿಯ ನೀರನ್ನು ಬಳಸಿಕೊಂಡು 1920ರ ದಶಕದಲ್ಲೇ ಬ್ರಿಟೀಷರು ಹತ್ತಿ ಬೆಳೆಯಲು ಪ್ರಾರಂಭಿಸಿದ್ದರು. ನಂತರದ ದಿನಗಳಲ್ಲಿ ಸೂಡಾನ್ ಸರ್ಕಾರ ಈ ನದಿಗೆ ಸೆನ್ನಾರ್ ಮತ್ತು ರೂಸಿಯರ್ ಅಣೆಕಟ್ಟುಗಳನ್ನು ನಿರ್ಮಿಸಿ ರೈತರಿಗೆ ಮತ್ತೆ ಹತ್ತಿ ಮತ್ತು ಕಬ್ಬು ಬೆಳೆಯಲು ಆದೇಶ ಹೊರಡಿಸಿತು. ಇದರಿಂದಾಗಿ ಇಲ್ಲಿನ ರೈತರು ಜೋಳ, ಮೆಕ್ಕೆಜೋಳ, ಗೆಣಸು ಮುಂತಾದ ಸಾಂಪ್ರದಾಯಕ ಬೆಳೆಗಳು ಹಾಗೂ ಪಶುಪಾಲನೆ, ಮೀನುಗಾರಿಕೆ, ಕೋಳಿಸಾಕಾಣಿಯಂತಹ ಕಸುಬುಗಳಿಂದ ವಂಚಿತರಾದರು.

ನೀರಾವರಿ ಯೋಜನೆಗಳಿಗಾಗಿ ನಿರ್ಮಿಸಿದ ಕಾಲುವೆಗಳ ನಿಮಾರ್ಣದ ವಿಷಯವೇ ಈಗ ಜಗತ್ತಿನಾದ್ಯಂತ ವಿವಾದಕ್ಕೆ ಗುರಿಯಾಗಿದೆ. ಇದೊಂದು ವ್ಯಾಪಕ ಭ್ರಷ್ಟಾಚಾರಕ್ಕಾಗಿ ನಮ್ಮನ್ನಾಳುವ ಸರ್ಕಾರಗಳು, ಜನಪ್ರತಿನಿಧಿಗಳು ರೂಪಿಸಿಕೊಂಡ ವ್ಯವಸ್ಥೆ ಎಂಬ ಆರೋಪವಿದೆ. 1986ರಲ್ಲಿ ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಭಾರತದ ನೀರಾವರಿ ಯೋಜನೆಗಳ ಕುರಿತಂತೆ ಹೀಗೆ ಹತಾಶರಾಗಿ ನುಡಿದಿದ್ದರು. ಭಾರತದಲ್ಲಿ 1951 ರಿಂದ 246 ಬೃಹತ್ ನೀರಾವರಿ ಯೋಜನೆಗಳನ್ನು ಕೈಗೆತ್ತಿಗೊಂಡಿದ್ದರೂ ಈವರೆಗೆ 65 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. 180 ಯೋಜನೆಗಳು ಇವತ್ತಿಗೂ ಮುಗಿದಿಲ್ಲ. ನಾವು ಹೆಮ್ಮೆಯಿಂದ ಎದೆಯುಬ್ಬಿಸಿ ಇಂತಹ ಯೋಜನೆಗಳ ಬಗ್ಗೆ ಮಾತನಾಡಬಲ್ಲೆವು ಅಷ್ಟೇ. ರೈತರ ಪಾಲಿಗೆ ಕಾಲುವೆಯೂ ಇಲ್ಲ, ನೀರೂ ಇಲ್ಲ. ರೈತರ ಕೃಷಿ ಬದುಕಿನ ಬಗ್ಗೆ ಇಂತಹ ಸ್ಥಿತಿಯಲ್ಲಿ ಮಾತನಾಡುವುದು ಎಂದರೆ, ಅದೊಂದು ಆತ್ಮವಂಚನೆಯ ಸಂಗತಿ; ರಾಜೀವ್ ಗಾಂಧಿಯವರ ಮಾತು ಮೇಲ್ನೋಟಕ್ಕೆ ಆತ್ಮವಿಮರ್ಶೆ ಮಾತುಗಳಂತೆ ಕಂಡುಬಂದರೂ ಸಹ ವಾಸ್ತವಿಕವಾಗಿ ಭಾರತದ ಸಂದರ್ಭದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಭಾರತದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಕೂಡ ರಾಜೀವ್ ಗಾಂಧಿಯವರ ಮಾತನ್ನು ಪುಷ್ಟೀಕರಿಸುತ್ತದೆ.

Almatti-Dam

Almatti Dam

ಭಾರತದಲ್ಲಿ ಸ್ವಾತಂತ್ರ ನಂತರ ಈವರೆಗೂ ಒಂದೇ ಒಂದು ಬೃಹತ್ ನೀರಾವರಿ ಯೋಜನೆ ನಿಗದಿತ ಅವಧಿಯೊಳಗೆ, ನಿಗದಿತ ಅಂದಾಜು ವೆಚ್ಚದೊಳಗೆ ಪೂರ್ಣಗೊಂಡಿಲ್ಲ ಎಂದು ವರದಿ ತಿಳಿಸಿದೆ. ಅಷ್ಟೇ ಏಕೆ? ಕರ್ನಾಟಕದ ಆಲಮಟ್ಟಿ ಜಲಾಶಯ ಲಾಲ್ ಬಹದ್ದೂರ್ ಶಾಸ್ರಿಯವರಿಂದ ಶಂಕುಸ್ಥಾಪನೆಗೊಂಡ 35 ವರ್ಷಗಳ ನಂತರ ಹೆಚ್.ಡಿ. ದೇವೆಗೌಡರಿಂದ ಉದ್ಘಾಟನೆಯಾದದ್ದು ಕನ್ನಡಿಗರೆಲ್ಲಾ ಬಲ್ಲ ಸಂಗತಿ. ಭಾರತವಷ್ಟೇ ಅಲ್ಲ ಜಗತ್ತಿನ ನೂರಾರು ಯೋಜನೆಗಳು ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿವೆ. ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿ ಇಂತಹ ಪ್ರಮಾದಗಳು ಹೆಚ್ಚಾಗಿ ಜರುಗಿವೆ.

ನೈಜೀರಿಯ ಸರ್ಕಾರ 1970 ರ ದಶಕದಲ್ಲಿ 3ಲಕ್ಷ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಯೋಜನೆಯನ್ನು ರೂಪಿಸಿ ಇದಕ್ಕಾಗಿ ಅಂತರಾಷ್ಟೀಯ ಮಟ್ಟದಲ್ಲಿ ಕೋಟ್ಯಾಂತರ ಡಾಲರ್ ಹಣವನ್ನು ಸಾಲ ತಂದು ವ್ಯಯ ಮಾಡಿತು. 30 ವರ್ಷಗಳ ಕಾಲ ನಡೆದ ಕಾಮಗಾರಿ 2000 ದಲ್ಲಿ ಮುಕ್ತಾಯಗೊಂಡಾಗ ನೀರುಣಿಸಲು ಸಾಧ್ಯವಾದದ್ದು ಕೇವಲ 31 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಮಾತ್ರ. ಯಾವುದೇ ಒಂದು ಯೋಜನೆ ರೂಪಿಸುವಾಗ ಕಾಲುವೆಗಳ ಆಳ, ಅಗಲ, ಉದ್ದ, ವಿನ್ಯಾಸ ಇವುಗಳ ಜೊತೆಗೆ ಜಲಾಶಯದಲ್ಲಿ ಸಿಗುವ ನೀರಿನ ಪ್ರಮಾಣ ಇಂತಹ ವಿಚಾರಗಳ ಬಗ್ಗೆ ಗಂಭೀರವಾದ ಅಧ್ಯಯನ ನಡೆಸದಿದ್ದರೆ ಇಂತಹ ಅನಾಹುತಗಳು ಕಟ್ಟಿಟ್ಟ ಬುತ್ತಿ. ನಾಲುವೆಗಳಲ್ಲಿ ಸೋರಿ ಹೋಗುವ ನೀರಿನ ಪ್ರಮಾಣವನ್ನು ಯಾವೊಂದು ಸರ್ಕಾರಗಳು ಈವರೆಗೆ ಗಣನೆಗೆ ತೆಗೆದುಕೊಂಡಿಲ್ಲ. ಇದರಿಂದಾಗಿ ಕಾಲುವೆಯ ಮೊದಲ ಭಾಗದ ರೈತರಿಗೆ ಸಿಗುವಷ್ಟು ನೀರು ಕೊನೆಯ ಭಾಗದ ರೈತರಿಗೆ ದೊರಕುವುದಿಲ್ಲ.

ನೀರಾವರಿ ಕಾಲುವೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ನೀರು ಬೇಡುವ ಕಬ್ಬು, ಭತ್ತ ಮುಂತಾದ ಬೆಳೆಗಳಿಗೆ ರೈತರು ಮುಂದಾಗುತ್ತಾರೆ ಅವರುಗಳಿಗೆ ಪರೋಕ್ಷವಾಗಿ ಸಕ್ಕರೆ ಕಂಪನಿಗಳು, ಅಕ್ಕಿ ಗಿರಣಿಗಳು ಬೆಂಬಲಕ್ಕೆ ಇರುತ್ತವೆ. ಇವೆಲ್ಲವೂ ಬಲಿಷ್ಠ ರಾಜಕಾರಣಿಗಳು ಇಲ್ಲವೆ, ಬೃಹತ್ ಕಾರ್ಪೊರೇಟ್ ಕಂಪನಿಗಳ ಒಡೆತನದಲ್ಲಿರುತ್ತವೆ. ಇದರ ಲಾಭಿ ಸರ್ಕಾರಗಳನ್ನು ಮಣಿಸುವಷ್ಟು ಶಕ್ತಿಯುತವಾಗಿರುತ್ತದೆ. ಮಹರಾಷ್ಟದ ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶದ್ಲ ಶೇ.70 ರಷ್ಟು ಭಾಗದಲ್ಲಿ ರೈತರು ಕಬ್ಬು ಬೆಳೆಯುತಿದ್ದಾರೆ. ಅಲ್ಲಿನ ಸಕ್ಕರೆ ಕಾರ್ಖಾನೆಗಳ ಲಾಭಿಗೆ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವ ವಹಿಸಿರುವುದು ಎಲ್ಲರೂ ತಿಳಿದ ವಿಷಯ.

ಗುಜರಾತ್‌ನ ಕಛ್ ಮತ್ತು ಸೌರಾಷ್ಟದ ಮರುಭೂಮಿಗೆ ನೀರು ಒದಗಿಸುವ ಯೋಜನೆಯೆಂದು ಪ್ರಾರಂಭವಾದ ನರ್ಮದಾ ನದಿಯ ಸರ್ದಾರ್ ಸರೋವರ್ ಜಲಾಶಯದ ನೀರು ಈವರೆಗೆ ನಾಲುವೆ ಕೊನೆಯ ಭಾಗದ ರೈತರಿಗೆ ಸಿಕ್ಕಿಲ್ಲ. ನಾಲುವೆ ಪ್ರಾರಂಭದ ಅಚ್ಚುಕಟ್ಟು ಪ್ರದೇಶದಲ್ಲಿ 10 ಬೃಹತ್ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಾಗಿದ್ದು, ರೈತರಿಗೆ ಕಬ್ಬು ಬೆಳೆಯಲು ಪ್ರೊತ್ಸಾಹಿಸಿವೆ. ಇದರಿಂದ ನಾಲುವೆ ಕೊನೆ ಭಾಗದ ರೈತರು ನರ್ಮದಾ ನೀರಿನಿಂದ ವಂಚಿತರಾದರು. ನದಿಗಳಲ್ಲಿ ವಾಸ್ತವವಾಗಿ ನೀರು ದೊರಕುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಾಲುವೆಗಳ ಮೂಲಕ ನೀರು ಹರಿಸಲಾಗುವುದೆಂದು ಸರ್ಕಾರಗಳು ಸುಳ್ಳು ಹೇಳುವುದರ ಮೂಲಕ ರೈತರನ್ನು ವಂಚಿಸುತ್ತಿವೆ. ಅಣೆಕಟ್ಟು ನಾಲುವೆ ಮುಂತಾದವುಗಳ ವೆಚ್ಚ ಮಿತಿ ಮೀರಿದಾಗ ಜನಸಾಮಾನ್ಯರ ಕಣ್ಣೊರೆಸಲು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಇಂತಹ ಸುಳ್ಳಿಗೆ ಮುಂದಾಗುತ್ತವೆ.

ಜಗತ್ತಿ ನೀರಾವರಿ ಯೋಜನೆಗಳ ಸಾದಕ ಬಾಧಕಗಳ ಕುರಿತಂತೆ ವಿಶ್ವಬ್ಯಾಂಕ್ ತನ್ನ ತಜ್ಞರ ತಂಡದ ಮೂಲಕ ನಡೆಸಿದ ಅಧ್ಯಯನ ಎಂತಹವರನ್ನೂ ಬೆಚ್ಚಿ ಬೇಳಿಸುತ್ತದೆ. ಸಾಮಾನ್ಯವಾಗಿ ಒಂದು ಅಣೆಕಟ್ಟು ಯೋಜನೆ ರೂಪಿಸುವಾಗ ಅದಕ್ಕೆ ತಗಲುವ ವೆಚ್ಚ, ನೀರಾವರಿ ಯೋಜನೆಗಳಿಂದ ಸಿಗುವ ಪ್ರತಿಫಲ, ಇವುಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಶ್ವಬ್ಯಾಂಕ್ ಲೆಕ್ಕಾಚಾರದ ಪ್ರಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಬಾರತದಲ್ಲಿ 15ರಿಂದ 25ಸಾವಿರ, ಬ್ರೆಜಿಲ್ ನಲ್ಲಿ 30ಸಾವಿರ, ಮೆಕ್ಸಿಕೊನಲ್ಲಿ 50ಸಾವಿರ, ಆಫ್ರಿಕಾ ಖಂಡದ ದೇಶಗಳಲ್ಲಿ 60ಸಾವಿರದಿಂದ 1ಲಕ್ಷದವರೆಗೆ ಖರ್ಚು ಬರುತ್ತಿದೆ. (ಈ ವೆಚ್ಚದಲ್ಲಿ ಭೂ ಪರಿಹಾರ, ಪುನರ್ವಸತಿ ಎಲ್ಲವೂ ಸೇರಿದೆ.) ಇವುಗಳ ಪ್ರತಿಫಲ ಈ ರೀತಿ ಇದೆ. ನೀರಾವರಿ ಯೋಜನೆಗಳಲ್ಲಿ ಭಾರತ ಶೇ. 60ರಷ್ಟು ಸಾಧನೆ ಸಾಧಿಸಿದ್ದು, ಸಮರ್ಪಕವಾಗಿ ನೀರನ್ನು ಬಳಸಿಕೊಂಡ ಯೋಜನೆಗಳ ಕಾರ್ಯಕ್ಷಮತೆ ಕೇವಲ ಶೆ. 25ರಿಂದ 35ರಷ್ಟು ಮಾತ್ರ. ಜಾಗತಿಕವಾಗಿ ನೀರಾವರಿ ಯೋಜನೆಗಳು ಯಶಸ್ವಿಯಾಗಿರುವುದು ಶೇ.40 ರಷ್ಟು ಮಾತ್ರ.

ಭಾರತದ ನೀರಾವರಿ ಯೋಜನೆ ಕುರಿತಂತೆ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಇಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿವೆ. ಭಾರತದ ನಾಲುವೆಗಳಾಗಲಿ, ಒಳಚರಂಡಿಗಳಾಗಲಿ ಇವುಗಳ ಕಾಮಗಾರಿಯ ಗುಣಮಟ್ಟ ತೀರ ಕಳಪೆಯದ್ದಾಗಿವೆ ರೈತರ ಬಗ್ಗೆ. ನಿಜವಾಗಿ ಇರಬೇಕಾದ ಕಾಳಜಿ ಇಲ್ಲವಾಗಿದ್ದು, ಕೆಲವೆಡೆ ರಾಜಕೀಯ ಹಿತಾಸಕ್ತಿಗಾಗಿ ಯೋಜನೆಗಳ ವಿನ್ಯಾಸಗಳನ್ನೇ ಬದಲಿಸಲಾಗಿದೆ. ನಿಜಕ್ಕೂ ಇದು ಅಘಾತಕರ ಸಂಗತಿ. ಈ ವ್ಯಾಖ್ಯಾನವನ್ನು ಅವಲೋಕಿಸಿದಾಗ ನಮ್ಮ ನೀರಾವರಿಗಳ ನಿಜವಾದ ಗುರಿ ಏನು? ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಯೋಜನೆಗಳಿಗೆ ಬದ್ಧತೆ, ಪ್ರಾಮಾಣಿಕತೆ, ನಿಖರತೆ ಇಲ್ಲದಿದ್ದರೆ, ಇವುಗಳ ದುರಂತದ ಹೊಣೆಯನ್ನು ಜನಸಾಮಾನ್ಯರು ಹೊರಬೇಕಾಗುತ್ತದೆ. ಶ್ರೀಲಂಕಾದಲ್ಲಿ 16 ಸಾವಿರ ರೈತ ಕುಟುಂಬಗಳಿಗೆ ನೀರುಣಿಸುವ ಗುರಿಯಿಟ್ಟುಕೊಂಡು 200 ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಹಾವೇಲಿ ನದಿಗೆ ವಿಕ್ಟೋರಿಯಾ ಅಣೆಕಟ್ಟು ನಿರ್ಮಿಸಲಾಯಿತು. 1982ರಲ್ಲಿ ಆರಂಭವಾಗಿ 1990ರಲ್ಲಿ ಮುಗಿದ ಈ ಯೋಜನೆಯಲ್ಲಿ ಈವರೆಗೆ ನೀರಿನ ಕರ ರೂಪದಲ್ಲಿ ವಾಪಸ್ ಬಂದಿರುವ ಬಂಡವಾಳ ಶೇ.5 ರಷ್ಟು ಮಾತ್ರ. ಇಂತಹದ್ದೇ ಕಥೆ ನೇಪಾಳ. ಥ್ಯಾಲೆಂಡ್, ದಕ್ಷಿಣಕೊರಿಯಾ ದೇಶಗಳದ್ದು.

(ಮುಂದುವರೆಯುವುದು)

ಜೀವನದಿಗಳ ಸಾವಿನ ಕಥನ – 19

ಡಾ. ಎನ್.ಜಗದೀಶ್ ಕೊಪ್ಪ 

ಜಗತ್ತಿನಾದ್ಯಂತ 1960 ರಲ್ಲಿ ಭಾರತವೆಂದರೆ, ಹಸಿದವರ, ಅನಕ್ಷರಸ್ತರ, ಸೂರಿಲ್ಲದವರ, ಹಾವಾಡಿಗರ, ಬಡವರ ದೇಶವೆಂದು ಪ್ರತಿಬಿಂಬಿಸಲಾಗುತಿತ್ತು. ಅಂದಿನ ದಿಗಳಲ್ಲಿ ಅಮೇರಿಕಾ ಭಾರತದ ಮಕ್ಕಳಿಗಾಗಿ ಕೇರ್ ಎಂಬ ಸಂಸ್ಥೆ ಅಡಿಯಲ್ಲಿ ಗೋಧಿ ಮತ್ತು ಹಾಲಿನ ಪುಡಿಯನ್ನು ಪೂರೈಕೆ ಮಾಡುತಿತ್ತು. ಇದನ್ನು ಶಾಲಾ ಮಕ್ಕಳಿಗೆ ಮಧ್ಯಾದ ಉಪಹಾರವಾಗಿ ಉಪ್ಪಿಟ್ಟು ಹಾಗು ಹಾಲನ್ನು ವಿತರಿಸಲಾಗುತಿತ್ತು. (1966 ರಿಂದ 1969 ರವರೆಗೆ 5, 6, ಮತ್ತು 7ನೇ ತರಗತಿಯಲ್ಲಿ ಓದುತಿದ್ದ ಈ ಲೇಖಕ ಕೂಡ ಇದರ ಫಲಾನುಭವಿಗಳಲ್ಲಿ ಒಬ್ಬ.)

ಆವತ್ತಿನ ಸಂಕಷ್ಟದ ದಿನಗಳಲ್ಲಿ ಭಾರತದ ಹಸಿದ ಹೊಟ್ಟೆಗಳ ಹಾಹಾಕಾರಕ್ಕೆ ಆಸರೆಯಾಗಿ ಬಂದದ್ದು ಹಸಿರು ಕ್ರಾಂತಿಯೋಜನೆ. ಅದೇ ತಾನೆ ಅಮೇರಿಕಾದಲ್ಲಿ ಬಿಡುಗಡೆಯಾಗಿದ್ದ ನೂತನ ಗೋಧಿ ತಳಿ ಮತ್ತು  ಪಿಲಿಪೈನ್ಸ್ ನಲ್ಲಿ ಬಿಡುಗಡೆಯಾಗಿದ್ದ ಅಧಿಕ ಇಳುವರಿ ಕೊಡುವ ಭತ್ತದ ತಳಿ ಭಾರತದ ಪಾಲಿಗೆ ಅಕ್ಷಯ ಪಾತ್ರೆಯಾಗಿ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು.

ಅಧಿಕ ಇಳುವರಿ ನೀಡುವ ಹೈಬ್ರಿಡ್ ತಳಿಗಳ ಅವಿಷ್ಕಾರ ರೈತರ ಬದುಕಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು ನಿಜ, ಆದರೆ ಈ ಉಲ್ಲಾಸ ಬಹಳ ದಿನ ಉಳಿಯಲಿಲ್ಲ. ಉತ್ತರಭಾರತದಲ್ಲಿ ನಿರ್ಮಾಣವಾದ ಬೃಹತ್ ಅಣೆಕಟ್ಟುಗಳ ಮೂಲಕ ಸಹಸ್ರಾರು ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿತು. ಪಾಕಿಸ್ತಾನದಲ್ಲೂ ಕೂಡ ಇಂತಹದ್ದೇ ಕ್ರಾಂತಿ ಜರುಗಿತು. ಕಾಲುವೆ ಮುಖಾಂತರ ರೈತರ ಭೂಮಿಗೆ ಹರಿಸಿದ ನೀರು ಅವರ ಬದುಕಿನ ಅಧ್ಯಾಯವನ್ನು ಬದಲಿಸಿತು. ಆದರೆ ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ ಏಕೆಂದರೆ, ಹೈಬ್ರಿಡ್ ತಳಿಗಳು ಬೇಡುವ ಅಧಿಕ ಮಟ್ಟದ ನೀರು, ರಸಾಯನಿಕ ಗೊಬ್ಬರ, ಕೀಟನಾಶಕ ಇವುಗಳಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ಇಳುವರಿ ಕುಂಠಿತಗೊಂಡಿತು. ಆಧುನಿಕ ತಳಿಗಳ ಬೇಸಾಯ ರೈತರನ್ನು ಬಸವಳಿಯುವಂತೆ ಮಾಡಿತು.

ಹೈಬ್ರಿಡ್ ತಳಿಗಳ ಬಗ್ಗೆ ನಮ್ಮ ತಕರಾರುಗಳು ಏನೇ ಇದ್ದರೂ ಕೂಡ ರೈತರು ಅವುಗಳನ್ನೇ ಆಶ್ರಯಿಸಿದ್ದಾರೆ. ಜಾಗತಿಕವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಇದಕ್ಕೆ ಕಾರಣವಾಗಿದೆ. ಜೊತೆಗೆ ನಮ್ಮ ನಾಟಿ ಬಿತ್ತನೆ ತಳಿಗಳು ಹೈಬ್ರಿಡ್ ತಳಿಗಳ ಸಂಕರದಿಂದಾಗಿ ನಾಶವಾಗತೊಡಗಿವೆ. ಪ್ರಾರಂಭದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ 10 ಟನ್ ಭತ್ತದ ಇಳುವರಿ ನೀಡುತಿದ್ದ ಹೈಬ್ರಿಡ್ ಬೀಜಗಳಿಂದ ಈಗ ಏಷ್ಯಾ ಖಂಡದ ದೇಶಗಳಲ್ಲಿ ಕೇವಲ 2.6 ರಿಂದ 3.7 ಟನ್ ಇಳುವರಿ ಸಾಧ್ಯವಾಗಿದೆ. ಈ ಕುರಿತು ಸೃಷ್ಟೀಕರಣ ನೀಡಿರುವ ಪಿಲಿಪೈನ್ಸ್ ದೇಶದ ಮನಿಲಾದ ಭತ್ತದ ಸಂಶೋಧನಾ ಸಂಸ್ಥೆಯ ವಿಜ್ಙಾನಿಗಳು, ವರ್ಷವೊಂದಕ್ಕೆ ಒಂದು ಬೆಳೆ ತೆಗೆಯುತಿದ್ದ ಭೂಮಿಯಲ್ಲಿ ಎರಡು ಅಥವಾ ಮೂರು ಬೆಳೆ ತೆಗೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ನಾಶವಾಗತೊಡಗಿದ್ದು ಇಳುವರಿ ಕಡಿಮೆಯಾಗಿರುವುದಕ್ಕೆ ಕಾರಣ ಎಂದಿದ್ದಾರೆ. ಇಂತಹ ಸಂಗತಿಗಳು ನಮ್ಮ ಅರಿವಿಗೆ ಬಾರದಂತೆ ಹೇಗೆ ಸಾಮಾಜಿಕ ಪರಿಣಾಮಗಳನ್ನು ಬೀರಬಲ್ಲವು ಎಂಬುದಕ್ಕೆ ಸಣ್ಣ ಉದಾಹರಣೆ ಮಾತ್ರ.

ಆಧುನಿಕ ನೀರಾವರಿ ಪದ್ಧತಿಯಿಂದಾಗಿ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಸಂಭವಿಸಿದ್ದು  ಈ ಕುರಿತಂತೆ ಸಮಾಜಶಾಸ್ತ್ರಜ್ಙರು ಜಗತ್ತಿನಾದ್ಯಂತ ಅಧ್ಯಯನ ನಡೆಸುತಿದ್ದಾರೆ. ಈಗಾಗಲೆ ಕೆಲವು ಅಂಶಗಳನ್ನು ನಿಖರವಾಗಿ ಗುರುತಿಸಿದ್ದಾರೆ. ಆಧುನಿಕ ನೀರಾವರಿ ಪದ್ಧತಿ ಬಳಕೆಗೆ ಬಂದ ನಂತರ ಕೃಷಿ ಕುರಿತಂತೆ ರೈತರಿಗೆ ಇದ್ದ ಅನೇಕ ಹಕ್ಕುಗಳು ಮತ್ತು ಚಿಂತನೆಗಳು ನಾಶವಾದವು. ಈ ಮೊದಲು ರೈತ ತನ್ನ ಭೂಮಿಯಲ್ಲಿ ಯಾವ ಬೆಳೆಯನ್ನು ಯಾವ ಕಾಲದಲ್ಲಿ ಬೆಳೆಯ ಬೇಕು ಎಂದು ನಿರ್ಧರಿಸುತಿದ್ದ. ಈಗ ಇವುಗಳನ್ನು ನೀರಾವರಿ ಇಲಾಖೆ ಇಲ್ಲವೆ ಸರಕಾರಗಳು ನಿರ್ಧರಿಸುತ್ತಿವೆ.

ನಮ್ಮ ಪ್ರಾಚೀನ ಭಾರತದ ದೇಶಿ ಕೃಷಿ ಪದ್ಧತಿಯ ನೀರಾವರಿ ಚಟುವತಿಕೆಗಳನ್ನು ಆಯಾ ರೈತ ಸಮುದಾಯ ನಿರ್ಧರಿಸುತಿತ್ತು. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ  ನೀರು ಹಂಚಿಕೆ ಕುರಿತು ಇದ್ದ ಪದ್ಧತಿಯನ್ನು ಕಂಡು ಬ್ರಿಟೀಷರು ಬೆರಗಾಗಿದ್ದರು. ಆಯಾ ಕೆರೆಗಳಿಂದ ಹಿಡಿದು ಕಾಲುವೆಗಳ ದುರಸ್ತಿ, ನಿರ್ವಹಣೆ ಎಲ್ಲವನ್ನು ರೈತರೇ ನಿರ್ವಹಿಸುತಿದ್ದರು. ಇದು ಚೋಳರ, ಪಾಂಡ್ಯರ ಆಡಳಿತ ಕಾಲದಿಂದಲೂ ನಡೆದುಬಂದ ಪದ್ಧತಿಯಾಗಿತ್ತು. ಇಂತಹದೆ ಪದ್ಧತಿ ಏಷ್ಯಾದ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಇಂಡೊನೇಷಿಯಾದ ಬಾಲಿ ದ್ವೀಪದ ರೈತರು ಸುಬಕ್ ಎಂಬ ವ್ಯವಸ್ಥೆಯ ಹೆಸರಿನಡಿ ಭತ್ತದ ಬೆಳೆಗೆ ನೀರನ್ನು ಹಂಚಿಕೊಳ್ಳುವ ಪದ್ಧತಿಯನ್ನು ನಾವು ಇಂದಿಗೂ ಕಾಣಬಹುದು.

ಜಲಾಶಯದ ನೆಪದಲ್ಲಿ ಆಧುನಿಕ ನೀರಾವರಿ ಯೋಜನೆಗಳು ಜಾರಿಗೆ ಬಂದ ನಂತರ ರೈತರ ಹಕ್ಕುಗಳು ಮತ್ತು ಪರಿಸರಕ್ಕೆ ಪೂರಕವಾಗಿದ್ದ ದೇಶಿ ತಂತ್ರಜ್ಞಾನಗಳು ಮರೆಯಾಗಿ ರೈತರೆಲ್ಲರೂ ಸರಕಾರಗಳ ಗುಲಾಮರಂತೆ ಬದುಕಬೇಕಾಗಿದೆ. ಇದಕ್ಕೆ ಸೂಡಾನ್ ದೇಶದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಸೂಡಾನ್ ನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಮೆಕ್ಕೆಜೊಳ, ಗೆಣಸು, ಅನೇಕ ಬಗೆಯ ಕಿರುಧಾನ್ಯಗಳನ್ನು ಬೆಳೆಯುತಿದ್ದ ರೈತರನ್ನು, ಅಲ್ಲಿ ಹೊಸದಾಗಿ ಜಾರಿಗೆ ಬಂದ ಹಾಲ್ಪ ಎಂಬ ಸರಕಾರದ ನೀತಿಯಿಂದಾಗಿ ರೈತರು ಬಲವಂತವಾಗಿ ಹತ್ತಿ ಬೆಳೆಯುವಂತಾಯಿತು. ತುಟ್ಟಿಯಾದ ಬಿತ್ತನೆ ಬೀಜದ ಬೆಲೆ, ಗೊಬ್ಬರ, ಕೀಟನಾಶಕ ಇವುಗಳಿಂದ ತತ್ತರಿಸಿ ಹೋದ ರೈತರು ಲಾಭ ಕಾಣದೆ ಕಂಗಾಲಾದರು. ಇಂತಹದ್ದೇ ಸ್ಥಿತಿ ಅಂದಿನ ಸೋವಿಯತ್ ಒಕ್ಕೂಟದಲ್ಲೂ ಸಹ ಜಾರಿಯಲ್ಲಿತ್ತು. ಕಮ್ಯೂನಿಷ್ಟ್ ಸರಕಾರದ ಈ ನಿರ್ಧಾರಗಳನ್ನು ಆಗ ಕಜಕಿಸ್ಥಾನದ ಇಬ್ಬರು ಪಕ್ಷದ ಪದಾಧಿಕಾರಿಗಳು ಬಲವಾಗಿ ಖಂಡಿಸಿ ಇದು ರೈತರ ಹಕ್ಕುಗಳನ್ನು ಧಮನ ಮಾಡುವ ಸರ್ವಾಧಿಕಾರದ ನೀತಿ ಎಂದು ಪ್ರತಿಭಟಿಸಿದ್ದರು.

ನೀರಾವರಿ ಯೋಜನೆಗಳಲ್ಲಿ ಸರಕಾರಗಳು ನೇರವಾಗಿ ಹಸ್ತಕ್ಷೇಪ ಮಾಡುವುದರಿಂದ ಹಲವಾರು ಬಾರಿ ಯೋಜನೆಗಳು ತಮ್ಮ ಮೂಲ ಉದ್ದೇಶಿತ ಗುರಿ ತಲುಪವಲ್ಲಿ ವಿಫಲವಾಗಿರುವುದುಂಟು. 1970 ರ ದಶಕದಲ್ಲಿ ಇರಾನಿನ ಅತ್ಯಂತ ಎತ್ತರದ ಅಣೆಕಟ್ಟು ಡೆಜ್ ಜಲಾಶಯದಿಂದ 80 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಪ್ರಮಾನದಲ್ಲಿ ಸಣ್ಣ ಹಿಡುವಳಿದಾರರಿದ್ದರು. ಆದರೆ, ಆಗಿನ ದೊರೆಯಾಗಿದ್ದ ಷಾ ಇಡೀ ಯೋಜನೆಯ ರೂಪು ರೇಷೆಗಳನ್ನು ಬದಲಿಸಿ ಅಮೇರಿಕಾದ ಬಹುರಾಷ್ಟೀಯ ಕಂಪನಿಗಳ ಬೃಹತ್ ಕೃಷಿ ಚಟುವಟಿಕೆಗಳಿಗೆ ನೀರು ಸರಬರಾಜು ಮಾಡಿದರು. ಇದರ ಲಾಭ ಪಡೆದ ಕಂಪನಿಗಳೆಂದರೆ, ಶೆಲ್ , ಡೆಲ್ ಅಂಡ್ ಕೊ, ಮತ್ತು ಟ್ರಾನ್ಸ್‌ವರ್ಲ್ಡ್  ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಕಾರ್ಪೊರೇಶನ್ ಇತ್ಯಾದಿ ಕಂಪನಿಗಳು. ಇಂತಹದ್ದೇ ಕಥನಗಳು ಜಗತ್ತಿನ ಹಲವಾರು ದೇಶಗಳಲ್ಲಿ ಜರುಗಿವೆ.

ಇದು 70 ದಶಕದಲ್ಲಿ ಭಾರತದಲ್ಲಿ ನಡೆದ ಘಟನೆ. ರಾಜಸ್ಥಾನದಲ್ಲಿ ನಿರ್ಮಿಸಲಾದ ಇಂದಿರಾಗಾಂಧಿ ಬೃಹತ್ ನಾಲುವೆಗಾಗಿ ಭೂಮಿ ಕಳೆದುಕೊಂಡ ಸಾವಿರಾರು ರೈತ ಕುಟಂಬಗಳೂ ಸೇರಿ ಹಲವಾರು ಭೂಹೀನ ರೈತರಿಗೆ ತಲಾ 2 ರಿಂದ 5 ಹೆಕ್ಟೇರ್ ಜಮೀನು ನೀಡಿ, ಅವರ ಭೂಮಿಗೆ ಉಚಿತವಾಗಿ ನೀರು, ಸಬ್ಸಿಡಿ ರೂಪದಲ್ಲಿ ಬೀಜ ಗೊಬ್ಬರ ಒದಗಿಸಲಾಗುವುದೆಂದು ಆಶ್ವಾಸನೆ ನೀಡಲಾಗಿತ್ತು. ಅದರಂತೆ ಈ ಪ್ರದೇಶಕ್ಕೆ ನೀರೂ ಹರಿಯಿತು. ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಭೂಮಿಯೆಲ್ಲಾ  ಪ್ರಭಾವಿ ರಾಜಕಾಣಿಗಳ, ಶ್ರೀಮಂತರ, ದಲ್ಲಾಳಿಗಳ ಪಾಲಾಗಿ ಅಲ್ಲಿನ ರೈತರು ತಮ್ಮದೇ ಭೂಮಿಯಲ್ಲಿ ಜೀತದಾಳುವಿನಂತೆ ದುಡಿಯುತಿದ್ದರು. 1989 ರಲ್ಲಿ ಸಮೀಕ್ಷೆ ನಡೆಸಿದಾಗ ಕೇವಲ ಶೇ.30 ರಷ್ಟು ರೈತರು ಮಾತ್ರ ಭೂಮಿ ಉಳಿಸಿಕೊಂಡಿದ್ದರು.

ಉತ್ತರ ಪ್ರದೇಶದ ಸದರ್ಲಾರ್ ಸಹಾಯಕ್ ಕಾಲುವೆಯ ಫಲಾನುಭವಿಗಳು ಕೂಡ ಅತಿ ದೊಡ್ಡ ಶ್ರೀಮಂತ ಜಮೀನಿದಾರರಾಗಿದ್ದಾರೆ. ಇವರೆಲ್ಲಾ ನೀರು ಉಪಯೋಗಿಸಿದ ನಂತರ ಉಳಿದ ನೀರನ್ನು ಕಾಲುವೆ ಕೊನೆ ಭಾಗದ ಸಣ್ಣ ಹಿಡುವಳಿದಾರರು ಬಳಸುವ ವ್ಯವಸ್ಥೆ ಇಂದಿಗೂ ಜಾರಿಯಲ್ಲಿದೆ.

ಕರ್ನಾಟಕದ ತುಂಗಭದ್ರಾ, ಕಾವೇರಿ, ತಮಿಳುನಾಡಿನ ಮೆಟ್ಟೂರು ಜಲಾಶಯಗಳ ಕೃಷಿ ಚಟುವಟಿಕೆ ಕುರಿತು ಅಧ್ಯಯನ ನಡೆಸಿರುವ ನ್ಯೂಯಾರ್ಕ್ ನಗರದ ಸಿರಾಕಸ್ ವಿ.ವಿ.ಯ ಪ್ರೀತಿ ರಾಮಚಂದ್ರನ್ ಎಂಬಾಕೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದ್ದ ಮಹಿಳೆ ಬೇಸಾಯದಿಂದ ವಿಮುಖವಾಗಿರುವುದನ್ನು ಗುರುತಿಸಿದ್ದಾರೆ.

ಅಮೇರಿಕಾದ ಬಹುತೇಕ ಕೃಷಿ ಚಟುವಟಿಕೆ ಬೃಹತ್ ಕಂಪನಿಗಳ ಇಲ್ಲವೆ ಶ್ರೀಮಂತರ ಪಾಲಾಗಿದೆ. ಅಲ್ಲಿನ ಫೆಡರಲ್ ಸರ್ಕಾರದ ನೀರಾವರಿ ಯೋಜನೆ ಕುರಿತಂತೆ ಮಸೂದೆಯನ್ನು ಜಾರಿಗೆ ತಂದಿತ್ತು. ಇದರ ಅನ್ವಯ 160 ಎಕರೆ ಮಿತಿಯೊಳಗೆ ಇರುವ ರೈತರಿಗೆ ಸಬ್ಸಿಡಿ ರೂಪದಲ್ಲಿ ನೀರು ಒದಗಿಸಲಾಗುತಿತ್ತು. ನಂತರ   ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದ ಸಕಾðರ ಭೂಮಿತಿಯನ್ನು 900 ಎಕರೆಗೆ ವಿಸ್ತರಿಸಿತು. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿ ಇಂತಹ ಅವಕಾಶಗಳನ್ನು  ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಬೃಹತ್ ಕಂಪನಿಗಳು ಸಮರ್ಥವಾಗಿ ಬಳಸಿಕೊಂಡವು.

ನಮ್ಮನ್ನು ಆಳುವ ಸರ್ಕಾರಗಳ ಇಂತಹ ದ್ವಂದ್ವ ನಿಲುವಿನಿಂದಾಗಿ ಹಲವೆಡೆ ಹಿಂಸೆ ಸಾವಿನ ಘಟನೆಗಳು ಜರುಗಿವೆ. ಪಶ್ಚಿಮ ಆಫ್ರಿಕಾದ ಸೆನಗಲ್ ಮತ್ತು ಮಾರಿಷೇನಿಯಾ ನಡುವೆ ಹರಿಯುವ ನದಿಗೆ ಮಿನಂಟಾಲಿ ಎಂಬ ಅಣೆಕಟ್ಟು ನಿರ್ಮಿಸಲಾಯಿತು. ಈ ಮೊದಲು ನದಿಯು ತಂದು ಹಾಕುತಿದ್ದ ಮೆಕ್ಕಲು ಮಣ್ಣಿನ ಕಣಜ ಭೂಮಿಯಲ್ಲಿ ಸೆನಗಲ್ ದೇಶದ ಕರಿಯ ವರ್ಣದ ರೈತರು ಬೇಸಾಯ ಮಾಡುತಿದ್ದರು. ಜಲಾಶಯ ನಿರ್ಮಾಣವಾದ ನಂತರ ಮಾರಿಷೇನಿಯದ ಬಿಳಿಯ ಬಣ್ಣದ ಅರಬ್ಬರು ಬೃಹತ್ ಮಟ್ಟದಲ್ಲಿ ಕೃಷಿ ಚಟುವಟಿಕೆಗೆ ತೊಡಗಿಕೊಂಡದ್ದರಿಂದ ನೀರಿಲ್ಲದೆ  ನದಿ ಕೆಳಗಿನ ಪ್ರಾಂತ್ಯದ ಸೆನಗಲ್ ರೈತರು ದಂಗೆಯೆದ್ದ ಪರಿಣಾಮ 250 ಮಂದಿ ಅರಬ್ಬರು ಅಸುನೀಗಿದರು. ಮಾರಿಷೇನಿಯಾದಲ್ಲಿದ್ದ ಸಾವಿರಾರು ಸೆನಗಲ್ ದೇಶದ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ನಂತರ ಉಭಯ ದೇಶಗಳು ಜಂಟಿಯಾಗಿ ನಡೆಸಿದ ವಿಚಾರಣೆಯಲ್ಲಿ 600 ಮಂದಿ ರೈತರನ್ನು ನೇಣು ಹಾಕಲಾಯಿತು. ದಕ್ಷಿಣ ಆಫ್ರಿಕಾದ ಮಾನವ ಹಕ್ಕುಗಳ ಸಮಿತಿಯ ವರದಿಯ ಪ್ರಕಾರ, ಇಂದು ಸೆನಗಲ್ ದೇಶದ ಲಕ್ಷಾಂತರ ಹೆಕ್ಟೇರ್ ರೈತರ ಭೂಮಿ ಅಮೇರಿಕಾದ ಬೃಹತ್ ಕಂಪನಿಗಳ ಪಾಲಾಗಿದೆ. ಇವುಗಳ ಸಂರಕ್ಷಣೆಗೆ ಅಲ್ಲಿನ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ರೈತರು ಅತಂತ್ರರಾಗಿ ಕಡಿಮೆ ಕೂಲಿ ದರಕ್ಕೆ ಕಂಪನಿಗಳಲ್ಲಿ ಜೀತದಾಳುಗಳಂತೆ ದುಡಿಯುತಿದ್ದಾರೆ.

(ಮುಂದುವರಿಯುವುದು)