Tag Archives: ದಲಿತ

ಮಲೆನಾಡಿನಲ್ಲಿ ರೈತ ಚಳವಳಿ


-ಪ್ರಸಾದ್ ರಕ್ಷಿದಿ   


[ಇದು ಎನ್.ಎಸ್ ಶಂಕರ್ ಅವರ “ದಲಿತ ರೈತ ಚಳವಳಿಗಳು” ಲೇಖನಕ್ಕೆ ಪೂರಕವಾಗಿ ಒಂದಷ್ಟು ಮಾಹಿತಿ. ಪ್ರಸಾದ್ ರಕ್ಷಿದಿಯವರ “ಬೆಳ್ಳೇಕೆರೆ ಹಳ್ಳಿ ಥೇಟರ್” ಪುಸ್ತಕದ ಒಂದು ಭಾಗ.]

ರೈತ ಸಂಘ ಪ್ರಬಲವಾಗಿದ್ದ  ಸಮಯದಲ್ಲಿ ತಮಗೆ ಅನ್ಯಾಯವಾಗಿದೆಯೆಂದು ಯಾರಾದರೂ ಸಂಘಕ್ಕೆ ದೂರು ಕೊಟ್ಟರೆ ಸಂಬಂಧ ಪಟ್ಟವರಿಗೆ ತೀರ್ಮಾನಕ್ಕಾಗಿ ಸಂಘದ ಪಂಚಾಯ್ತಿಗೆ ಬರಬೇಕೆಂದು ನೋಟಿಸ್ ಕಳುಹಿಸುತ್ತಿದ್ದೆವು. ಸಂಘ ಬಲವಾಗಿದ್ದಲ್ಲಿ ನೋಟಿಸ್ ಪಡೆದವರು ತಕರಾರಿಲ್ಲದೆ ಪಂಚಾಯ್ತಿಗೆ ಬರುತ್ತಿದ್ದರು. ಸಂಘ ಬಲವಾಗಿಲ್ಲದ ಕಡೆಗಳಲ್ಲಿ ಕೆಲವರು ಈ ನೋಟಿಸುಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಅಂಥ ಕಡೆಗಳಲ್ಲಿ ಸಾಕಷ್ಟು ಘರ್ಷಣೆಗಳೂ ಆದವು.

ಸ್ವಂತಕ್ಕೆ ಮರ ಕೊಯ್ದುಕೊಳ್ಳಲು ಯಾರೂ ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆಯುವ ಅಗತ್ಯವಿಲ್ಲವೆಂದೂ ರೈತರು ಸ್ವಂತ ಉಪಯೋಗಕ್ಕೆ ಯಾರ ಅನುಮತಿಗೂ ಕಾಯದೆ ತಮ್ಮ ಜಮೀನಿನಲ್ಲಿ ಬೆಳೆದ ಮರವನ್ನು ಕೊಯ್ದು ಕೊಳ್ಳಬಹುದೆಂದೂ ರೈತಸಂಘ ಪ್ರಚಾರ ಮಾಡಿತ್ತು. ರೈತ ಸಂಘ ಬಲವಾಗಿದ್ದಲ್ಲಿ ನಮಗೇಕೆ ಕಷ್ಟ ಎಂದು ಅರಣ್ಯ ಇಲಾಖೆಯವರು ಆ ಕಡೆ ತಲೆ ಹಾಕಲೂ ಇಲ್ಲ ಆದರೆ ಇನ್ನು ಕೆಲವರು ಅತೀ ಬುದ್ಧಿವಂತರು ರೈತ ಸಂಘಕ್ಕೂ ಅರ್ಜಿ ಸಲ್ಲಿಸಿದರು. ಗುಟ್ಟಾಗಿ ಅರಣ್ಯ ಇಲಾಖೆಯವರಿಗೂ ಕಾಣಿಕೆ ಒಪ್ಪಿಸಿದರು. ಹೀಗೆ ಎರಡೂ ಕಡೆ ಒಳ್ಳೆಯವರಾದರು.!  ಅರಣ್ಯ ಇಲಾಖೆಯವರು ರೈತ ಸಂಘದಿಂದಾಗಿ ದೇಶದ ಅರಣ್ಯವೆಲ್ಲಾ ನಾಶವಾಯ್ತೆಂದೂ, ರೈತ ಸಂಘದವರು ನಮ್ಮನ್ನು ಹಳ್ಳಿಗಳಿಗೆ ಕಾಲಿಡಲೂ ಬಿಡುತ್ತಿಲ್ಲವೆಂದೂ ಪ್ರಚಾರ ಮಾಡುತ್ತಾ ಒಳಗಿಂದೊಳಗೇ ಹಣ ಪಡೆಯುತ್ತಾ ಕುಳಿತರು. ಇದೇ ಸಂದರ್ಭವೆಂದು ಕಳ್ಳ ನಾಟಾ ಮಾಡುವವರು ಸರ್ಕಾರಿ ಜಾಗದಲ್ಲಿ ಸಾಕಷ್ಟು ಮರಗಳನ್ನು ಬೋಳಿಸಿದರು. ಒಟ್ಟು ಎಲ್ಲಾ ಗೊಂದಲವಾಯ್ತು.

ನಮ್ಮ ಬೆಳ್ಳೇಕೆರೆಯ ಸುತ್ತಮುತ್ತ ಅನೇಕ ತೋಟಗಳ ಕಾರ್ಮಿಕರಿಂದ ಮಾಲೀಕರ ವಿರುದ್ಧ ದೂರುಗಳು ಬರತೊಡಗಿದವು. ಹೆಚ್ಚಿನ ದೂರುಗಳೆಲ್ಲ ಸಂಬಳದ ತಕರಾರುಗಳು ಇಲ್ಲವೇ ಮಾಲೀಕರ ದಬ್ಬಾಳಿಕೆಯ ಬಗ್ಗೆ ಇರುತ್ತಿದ್ದವು. ದೂರಿನಲ್ಲಿ ನಿಜಾಂಶ ಕಂಡುಬಂದರೆ  ಅದನ್ನು ಕಾರ್ಮಿಕ ಕಾನೂನಿಗೆ ಅನುಗುಣವಾಗಿಯೇ ತೀರ್ಮಾನ ಮಾಡುತ್ತಿದ್ದೆವು. ಈ ಕಾರ್ಮಿಕ ಕಾನೂನುಗಳು ಕೂಲಿ ಕೆಲಸಗಾರರಿಗೆ ಪೂರ್ಣವಾಗಿ ನ್ಯಾಯವನ್ನು ಒದಗಿಸಲಾರವೆಂಬ ಅರಿವು ನಮಗಿದ್ದರೂ, ನಾವು ಕಾನೂನಿನ ಮಿತಿಯನ್ನು ಮೀರುವಂತಿರಲಿಲ್ಲ. ಕೆಲವು ತೋಟ, ಮಾಲೀಕರು- ಕಾರ್ಮಿಕ ಕಾನೂನನ್ನೇ ಒಪ್ಪಲು ತಯಾರಿರಲ್ಲದಂತಹ ಪರಿಸ್ಥಿತಿಯಲ್ಲಿ ಅವರನ್ನು ನಾವು ಕಾನೂನಿನ ಚೌಕಟ್ಟಿನೊಳಗೆ ತರಲು ಕೂಡಾ ರೈತ ಸಂಘಟನೆಯ ಬಲ ಬೇಕಾಗುತ್ತಿತ್ತು. ಆದರೆ ರೈತ ಸಂಘದಲ್ಲಿದ್ದ ಅನೇಕರಿಗೆ ಈ ಕಾನೂನುಗಳ ಅರಿವಿರಲಿಲ್ಲವಷ್ಟೇ ಅಲ್ಲ, ಈ ಕಾನೂನುಗಳೇ ರೈತ ವಿರೋಧಿಯಾದವು ಎಂದು ನಂಬಿದವರಿದ್ದರು!  ಆದ್ದರಿಂದ ನಾವು ಈ ತೋಟಗಳ ಮಾಲೀಕರು ನಮ್ಮ ಮೇಲೆ ಪೋಲೀಸು ಕಂಪ್ಲೇಂಟು ಕೊಡದಂತೆ ನಮ್ಮ ಮಿತಿಯೊಳಗೇ ಏನಾದರೂ ಮಾಡಬೇಕಿತ್ತು. ಇಲ್ಲವೇ ಬಲವಾದ ಸಂಘಟನೆಯ ಮೂಲಕ ದೀರ್ಘ ಕಾಲದ ಹೋರಾಟಕ್ಕೆ ಅಣಿಯಾಗಬೇಕಿತ್ತು. ಈ ಎಲ್ಲಾ ಮಿತಿಗಳೊಳಗೇ ನಾವು ಹಲವು ಕಡೆಗಳಲ್ಲಿ ತೀರ್ಮಾನಗಳನ್ನು ಮಾಡಿದೆವು.

ಇವುಗಳಲ್ಲೆಲ್ಲಾ ಸಾಮಾನ್ಯವಾಗಿ ನಾಗರಾಜ್- ಮುರಳೀಧರ್, ಅಶೋಕ, ಮುಳ್ಳಯ್ಯ ನಾವುಗಳೆಲ್ಲಾ ಇರುತ್ತಿದ್ದೆವು. ಇದರಿಂದಾಗಿ ನಾವು ಕೆಲವು ತೋಟಗಳ ಮಾಲೀಕರ ವಿರೋಧ ಕಟ್ಟಿಕೊಳ್ಳ ಬೇಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಒಂದು ತೋಟದಲ್ಲಿ ರೈಟರ್ ಒಬ್ಬ ಟಿಂಬರ್ ವ್ಯಾಪಾರಿಯೊಡನೆ ಸೇರಿ ತನ್ನ ಮಾಲೀಕರನ್ನೇ ಹೆದರಿಸಿ ಸಾಕಷ್ಟು ಮರಗಳನ್ನು ಕದ್ದು ಮಾರುವ ಹುನ್ನಾರ ಮಾಡಿದ್ದ. ಆ ರೈಟರ್‌ನ ಮಗನೊಬ್ಬ ಎಲ್ಲಾ ದುಶ್ಚಟಗಳನ್ನು ಬೆಳೆಸಿಕೊಂಡಿದ್ದು ಹಣಕ್ಕಾಗಿ ದಾರಿಯಲ್ಲಿ ನಿಂತು ಅದೇ ತೋಟದ ಕೆಲಸಗಾರರನ್ನು ಬೆದರಿಸಿ ಹಣ ಕೀಳುತ್ತಿದ್ದ. ತೋಟದ ಮಾಲೀಕರು ಪೋಲಿಸ್ ಕಂಪ್ಲೇಂಟ್ ಕೊಡಲು ಹೋದರೆ ಪೋಲೀಸರು ಈಗೆಲ್ಲ ರೈತ ಸಂಘದವರದ್ದೇ ದರ್ಬಾರು ನೀವು ಅವರಿಗೆ ಹೇಳಿ ಎಂದರಂತೆ!  ಈ ತಂದೆ ಮಕ್ಕಳ ಉಪಟಳ ತಾಳಲಾರದೆ ಸೋತು ಮಾಲೀಕರೇ ನಮ್ಮಲ್ಲಿಗೆ ದೂರು ಕೊಡಲು ಬಂದರು. ನಾವೆಲ್ಲ ಹೋಗಿ ವಿಚಾರಿಸಿದಾಗ ಮಾಲೀಕರ ದೂರು ನಿಜವೆಂದು ತಿಳಿಯಿತು. ಅಷ್ಟೆಲ್ಲ ಮಾಡಿಯೂ ಆ ತಂದೆ – ಮಕ್ಕಳು ನಮಗೆ ರೈತ ಸಂಘದವರ ಬೆಂಬಲವಿದೆಯೆಂದೂ ಹೇಳಿಕೊಂಡಿದ್ದರು! ರೈಟರ್ ಮತ್ತು ಅವನ ಮಗನಿಂದ  ಮುಚ್ಚಳಿಕೆ ಬರೆಸಿಕೊಂಡು ಅವರನ್ನೆಲ್ಲಾ ಅಲ್ಲಿಂದ ಓಡಿಸಿದೆವು.

ಗುಂಡೂರಾಯರ ಸರ್ಕಾರವಿದ್ದಾಗ ಬಲಗೊಳ್ಳುತ್ತಾ ಹೋದ ರೈತಸಂಘ, ಗುಂಡೂರಾವ್ ಸರ್ಕಾರವನ್ನು ಅಧಿಕಾರದಿಂದ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಆದರೆ ಹೆಗಡೆ ಸರ್ಕಾರ ಬಂದ ನಂತರ ರೈತ ಸಂಘ ದುರ್ಬಲವಾಗುತ್ತಾ ಹೋಯಿತು. ನಮ್ಮಲ್ಲಿ  ರೈತ ಸಂಘದ ಪ್ರಬಲ ಸಮರ್ಥಕರಾಗಿದ್ದವರೆಲ್ಲ ಹೆಚ್ಚಿನವರು ಹಳ್ಳಿಗಳ ಸಣ್ಣ ರೈತರೇ. ಕಾಫಿ ವಲಯದ ಹೆಚ್ಚಿನ ಪ್ಲಾಂಟರುಗಳೆಲ್ಲ ರೈತ ಸಂಘದ ವಿರೋಧವೇ ಇದ್ದರು. ತೋಟ ಕಾರ್ಮಿಕರಲ್ಲೂ ರೈತಸಂಘದ ಬಗ್ಗೆ ಅಂಥಾ ಒಲವೇನೂ ಇರಲಿಲ್ಲ. ರೈತ ಸಂಘವೆಂದರೆ ಜಮೀನಿದ್ದವರ ಸಂಘವೆಂದೇ ಅವರು ತಿಳಿದಿದ್ದರು. ಅದಲ್ಲದೆ ರೈತ ಸಂಘಕ್ಕೆ ಮಲೆನಾಡಿನಲ್ಲಿ ಭೂ ರಹಿತ ಕೂಲಿ ಕಾರ್ಮಿಕರ- ದಲಿತರ ಬೆಂಬಲ ಕೂಡಾ ಅಷ್ಟಾಗಿ ದೊರಕಲೇ ಇಲ್ಲ. ಇದಕ್ಕೆ ರೈತ ಸಂಘದ ಸೈದ್ಧಾಂತಿಕ ನೆಲೆಗಟ್ಟಿನ ದೌರ್ಬಲ್ಯವೇ ಕಾರಣವಾಗಿತ್ತು. ನಮ್ಮಲ್ಲಿನಂತಹ ಕೆಲವು ಶಾಖೆಗಳನ್ನು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ರೈತ ಸಂಘದ ಸದಸ್ಯರು ಕೂಲಿ ಕಾರ್ಮಿಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿರಲಿ, ಏಕ ಪಕ್ಷೀಯವಾಗಿ ಕೃಷಿ ಕೂಲಿಯನ್ನು ಇಳಿಸುವಂತಹ ಕ್ರಮಕ್ಕೂ ಮುಂದಾಗಿದ್ದರು. ಇದರೊಂದಿಗೆ ರೈತ ಸಂಘದ ನಗರ – ಹಳ್ಳಿ ವಿಭಜನೆ ಕೂಡಾ ಸ್ಪಷ್ಟತೆಯನ್ನು ಪಡೆದುಕೊಳ್ಳದೆ ನಗರಗಳ ಕೆಳವರ್ಗದ ಜನರ ಬೆಂಬಲ ಕೂಡಾ ರೈತ ಸಂಘಕ್ಕೆ ಸಿಗದೇ ಹೋಯಿತು. ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ರೈತ ಸಂಘದಲ್ಲಿದ್ದ ಅನೇಕರು ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅಲ್ಲದೆ ಸರ್ಕಾರ ಕೂಡಾ ರೈತ ಸಂಘವನ್ನು ಒಂದೆಡೆ ಪೋಲಿಸ್ ಬಲದಿಂದ ತುಳಿಯುತ್ತಾ ಇನ್ನೊಂದೆಡೆ ಓಲೈಸುತ್ತಾ ಜನರಲ್ಲಿ ಗೊಂದಲ ಸೃಷ್ಟಿಸಿ ಬಿಟ್ಟಿತು. ಅದಕ್ಕೆ ಸರಿಯಾಗಿ ಪಂಚಾಯತ್ ಚುನಾವಣೆ ಮಟ್ಟದಲ್ಲಿ ಪ್ರಯತ್ನಿಸದೆ ಏಕಾಏಕಿ ಪಾರ್ಲಿಮೆಂಟಿಗೇ ಅಭ್ಯರ್ಥಿಗಳನ್ನು ಹಾಕುವಂತಹ ಆತುರದ ನಿರ್ಧಾರವನ್ನು ರೈತ ಸಂಘ ಮಾಡಿತು. ಈ ಎಲ್ಲಾ ಕಾರಣಗಳಿಂದ ಅನೇಕರು ರೈತ ಸಂಘದಿಂದ  ದೂರವಾಗಿ ಅನೇಕ ಪಕ್ಷಗಳಲ್ಲಿ ಹಂಚಿಹೋದರು. ಹೆಚ್ಚಿನವರು ಜನತಾದಳಕ್ಕೆ ಹೋದರು. ಈ ಎಲ್ಲಾ ಕಾರಣಗಳಿಂದ ಮಲೆನಾಡಿನ ಕಾಫಿ ವಲಯದಲ್ಲಿ ರೈತ ಸಂಘ ನಾಮಾವಶೇಷವಾಗಿ ಹೋಯಿತು.

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – ಕೊನೆ ಕಂತು


– ಎನ್.ಎಸ್. ಶಂಕರ್


 

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6

 

2002ರ ನಾಗಲಾಪಲ್ಲಿ ದುರಂತದ ವೇಳೆಗೆ ದಲಿತ ಸಂಘದೊಳಗಿನ ಎಡಗೈ- ಬಲಗೈ ಒಡಕು ಮುಗಿದು, ಬಲಗೈ ಸಮುದಾಯದ ಒಳಗೇ ವಿಭಜನೆಯ ಸೊಲ್ಲು ಏಳತೊಡಗಿತ್ತು. ಉತ್ತರವಾಗಿ, ಮೊಟ್ಟ ಮೊದಲ ಒಡಕಿನ ಸಂದರ್ಭದಲ್ಲೇ ಕ್ಷೀಣವಾಗಿ ಆರಂಭವಾಗಿದ್ದ ‘ದಲಿತ ಸಂಘಟನೆ ವಿಸರ್ಜನೆ’ಯ ಸೊಲ್ಲು ಈಗ ಗಟ್ಟಿಯಾಗತೊಡಗಿತು. (86- 87ರಲ್ಲೇ ರಾಮಯ್ಯ, ‘ದಲಿತ ಚಳವಳಿಯ ಹೆಣದ ಮೆರವಣಿಗೆ ಮಾಡಬೇಕಾ?’ ಎಂಬ ಪ್ರಶ್ನೆಯೆತ್ತಿದ್ದರು.) ಇದೀಗ ಕೋಲಾರದ ಒಂದು ಸಭೆಯಲ್ಲಿ ರಾಮಯ್ಯ, ಗೋವಿಂದಯ್ಯ ಇಬ್ಬರೂ ‘ದಲಿತ ಚಳವಳಿ ಸತ್ತಿದೆ. ಇನ್ನು ಅದನ್ನು ವಿಧ್ಯುಕ್ತವಾಗಿ ದಫನ್ ಮಾಡುವುದೊಂದೇ ಮಾರ್ಗ. ಈಗ ಸಂಘರ್ಷ ಸಮಿತಿಯನ್ನು ವಿಸರ್ಜಿಸಿ  ಒಂದು ವರ್ಷ ಪೂರ್ತಿ ರಾಜ್ಯಾದ್ಯಂತ ಓಡಾಡೋಣ; ಮರು ಸಂಘಟನೆ ಮಾಡೋಣ. ಅದೊಂದೇ ದಾರಿ’ ಎಂಬ ಚಿಂತನೆ ಮುಂದಿಟ್ಟರು.

ನಾಗಲಾಪಲ್ಲಿ ಪ್ರತಿಭಟನೆ ಸಮಯದಲ್ಲಿ ಒಗ್ಗೂಡಿದ ಎಲ್ಲ ಮುಂದಾಳುಗಳು ಮತ್ತೆ ಇದೇ ಚರ್ಚೆಯನ್ನು ಕೈಗೆತ್ತಿಕೊಂಡರು. ಆಗ ಡಿ.ಜಿ. ಸಾಗರ್ ದಸಂಸ ರಾಜ್ಯ ಸಂಚಾಲಕರು. ಈ ವಿಸರ್ಜನೆಯ ಪ್ರಸ್ತಾಪವನ್ನು ಸಮಿತಿ ಪದಾಧಿಕಾರಿಗಳ ಮುಂದಿಟ್ಟು ‘ಬೇಡಿಕೊಂಡಾದರೂ ಒಪ್ಪಿಸೋಣ’ ಎಂಬ ಸೂಚನೆ- ಮುಖ್ಯವಾಗಿ ಗೋವಿಂದಯ್ಯನವರಿಂದ- ಬಂತು. ಕೆಲವೇ ದಿನಗಳಲ್ಲಿ ಈ ಚಿಂತನೆಗೆ ಅಂತಿಮ ರೂಪ ಕೊಡಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂದಿನ ‘ಸಂಸ’ ಬಯಲು ರಂಗಮಂದಿರದ ಕಟ್ಟೆಯ ಮೇಲೆ ದಲಿತ ಮುಂದಾಳುಗಳು ಸಭೆ ಸೇರಿದರು. ಅಲ್ಲಿ ಚರ್ಚೆ ಆರಂಭವಾದಾಗ ಆ ವೇಳೆಗಿನ್ನೂ ದೇವನೂರ ಮಹಾದೇವ ಸಭೆಗೆ ಬಂದಿರಲಿಲ್ಲ. ಮಾತಾಡುತ್ತ ಆಡುತ್ತ ಬಹುತೇಕ ಎಲ್ಲರೂ ಆ ಚಿಂತನೆಗೆ ಸಹಮತ ವ್ಯಕ್ತಪಡಿಸಿದರು. ಆದರೆ ಮಹಾದೇವ ಬರಬರುತ್ತಿದ್ದಂತೆಯೇ ‘ಈಗ ದಲಿತರಿಗೆ ಇದೊಂದು ದನಿಯಾದರೂ ಇದೆ. ಇದೂ ಇಲ್ಲವಾದರೆ ದಲಿತರು ತಬ್ಬಲಿಗಳಾಗಬಹುದು, ಬೇಡ ಬೇಡ’ ಎನ್ನುತ್ತ ವಿಸರ್ಜನೆಯ ಸೂಚನೆಯನ್ನು ತಳ್ಳಿಹಾಕಿ ಎಲ್ಲರನ್ನೂ ಎಬ್ಬಿಸಿಯೇಬಿಟ್ಟರು…

(‘ಹಾಗೇಕೆ ಮಾಡಿದಿರಿ?’ ಎಂದು ಈಗ ಕೇಳಿದ್ದಕ್ಕೆ ದೇವನೂರು ನೀಡಿದ ಸ್ಪಷ್ಟನೆ: ‘ನಾನು ಆ ಸಮಯದಲ್ಲಿ ದಸಂಸ ಪದಾಧಿಕಾರಿಯೂ ಅಲ್ಲ, ಏನೂ ಅಲ್ಲ. ಕೇವಲ ಹಿತೈಷಿ ಅಷ್ಟೇ. ಆದರೆ ನಾನೊಬ್ಬ ತೀರ್ಮಾನಿಸಿದರೆ ಸಂಘಟನೆಯನ್ನು ಸುಲಭವಾಗಿ ವಿಸರ್ಜಿಸಬಹುದು ಅಂತ ಮಿಕ್ಕವರು ತಿಳಿದುಕೊಂಡಿದ್ದರು. ಹಾಗಲ್ಲ. ಎಲ್ಲರೂ ಒಪ್ಪಿದರೆ ವಿಸರ್ಜನೆಯೇ ಒಳ್ಳೆಯದು ಎಂದು ನಾನೂ ಪ್ರಯತ್ನ ಮಾಡಿ ಸುಸ್ತಾಗಿದ್ದೆ. ಮೊದಲ ಒಡಕಿನ ಸಮಯದಲ್ಲೇ ನಾನು, ಸಿದ್ದಲಿಂಗಯ್ಯ ವಿಭಜನೆ ತಪ್ಪಿಸಲು ಕೈ ಕಾಲು ಹಿಡಿದು ಗೋಗರೆದರೂ ಯಾರೂ ನಮ್ಮ ಮಾತು ಕೇಳಿರಲಿಲ್ಲ. ಈಗ ನಾವು ಹಟ ಹಿಡಿದರೆ ಅದು ನಮ್ಮ ಅಹಂಕಾರವಾಗುತ್ತದೆ. ಹೆಚ್ಚೆಂದರೆ ನಮ್ಮದೇ ಒಂದು ‘ದಲಿತ ಸಂಘರ್ಷ ವಿಸರ್ಜನಾ ಸಮಿತಿ’ ಅಂತ ಸೃಷ್ಟಿಯಾಗಬಹುದಿತ್ತು..’) ಅಂತೂ ಸಂಘಟನೆಯನ್ನು ಮುರಿದು ಮತ್ತೆ ಕಟ್ಟುವ ನೈತಿಕ ತ್ರಾಣ ಯಾರಲ್ಲೂ ಉಳಿದಿರಲಿಲ್ಲ ಎಂಬುದು ಸ್ಪಷ್ಟವಾಯಿತು.

ಇದಾದ ಮೇಲೂ ಅದೇ ಚಿಂತನೆಯಿಂದ ಸ್ಫೂರ್ತಿ ಪಡೆದಂತೆ, ಮಹಾದೇವ ಮತ್ತು ಸಿದ್ದಲಿಂಗಯ್ಯ ಇಬ್ಬರೂ ಸೇರಿ ರಾಜ್ಯಾದ್ಯಂತ ಒಂದು ವರ್ಷ ಕಾಲ ಪ್ರವಾಸ ಮಾಡಿ ಎಲ್ಲರನ್ನೂ ಮಾತಾಡಿಸುತ್ತ, ಗಾಯಗಳನ್ನು ವಾಸಿ ಮಾಡುತ್ತ ಸಂಘಟನೆಯನ್ನು ಹೊಸದಾಗಿ ಕಟ್ಟುವ ಪ್ರಯತ್ನ ಮಾಡುವುದಾಗಿ ಒಂದು ಹೇಳಿಕೆ ನೀಡಿದರು (2004). ಅದಾಗಿ ಹದಿನೈದೇ ದಿನಕ್ಕೆ ಬಲಗೈ ಗುಂಪಿನಲ್ಲೇ ದೊಡ್ಡ ಒಡಕು ಸಂಭವಿಸಿ ಸಾಗರ್- ಲಕ್ಷ್ಮೀನಾರಾಯಣ ನಾಗವಾರ ಬಣಗಳು ಉದ್ಭವಿಸಿದವು. ಅಷ್ಟೇ ಅಲ್ಲ, ಮರುಸಂಘಟನೆಯ ಹೇಳಿಕೆಗೆ ಸಹಿ ಹಾಕಿದ್ದ ಸಿದ್ದಲಿಂಗಯ್ಯ, ನಾಗವಾರ ನೇತೃತ್ವದ ಸಮಾವೇಶದಲ್ಲಿ ಹಾಜರಾಗಿ ಒಂದು ಬಣದೊಂದಿಗೆ ಅಳುಕಿಲ್ಲದೆ ಗುರುತಿಸಿಕೊಂಡೂ ಬಿಟ್ಟರು! ಅತ್ತ ಒಂದೇ ವರ್ಷದಲ್ಲಿ ದೇವನೂರು ‘ಸರ್ವೋದಯ’ದಲ್ಲಿ ಮುಳುಗಿಹೋದರು…!

ಅಲ್ಲಿಂದಾಚೆಗೆ ದಲಿತ ಸಂಘಟನೆ ‘ಎತ್ತಿ ಬಿಸಾಡಿದ ಗಾಜಿನಂತೆ’ ಚುಪ್ಪಾನ ಚೂರಾಗುತ್ತ ಛಿದ್ರಛಿದ್ರವಾಯಿತು. ಲೆಟರ್‌ಹೆಡ್ ಸಂಸ್ಥೆಗಳು ಅಣಬೆಯಂತೆ ತಲೆಯೆತ್ತಿದವು. ಸಂಘಟನೆಯ ಕಿರಿಯ ಗೆಳೆಯರೊಬ್ಬರು ಹೇಳಿದಂತೆ- ಇಂದು ಅಂಥ 360 ಲೆಟರ್‌ಹೆಡ್ ಸಂಸ್ಥೆಗಳು ಅಸ್ತಿತ್ವದಲ್ಲಿವೆ…!

ರೈತಸಂಘದ ಒಡಲಲ್ಲೂ ಇಂಥದೇ ಒಡಕಿನ ಪುರಾಣವಿರಬಹುದೆಂಬ ಸೂಚನೆ ಕಡಿದಾಳು ಶಾಮಣ್ಣನವರ ಪುಸ್ತಕದಲ್ಲಿ ಸಿಕ್ಕುತ್ತದೆ.

ಇಂದು ದಲಿತ ಹೋರಾಟದ ಮೂರು ಮಾದರಿಗಳು ನಮ್ಮ ಕಣ್ಣ ಮುಂದಿವೆ. ಒಂದು: ಇದೇ ಲೆಟರ್‌ಹೆಡ್ ಸಂಸ್ಥೆಗಳ ‘ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ರೋಲ್ಕಾಲ್’ನ ಮಾದರಿ. ಎರಡನೆಯದು- ಎಷ್ಟೇ ಕ್ಷೀಣ ಪ್ರಯತ್ನದಂತಿದ್ದರೂ, ಚಳವಳಿಯ ಮುಂದುವರಿಕೆಯಂತೆಯೇ ಕಾಣುವ- ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ದ ಸಾಂಸ್ಕೃತಿಕ ಮರುಎಚ್ಚರದ ಪ್ರಯೋಗ. ಮೂರನೆಯದು ರೈತಸಂಘದ ಪುಟ್ಟಣ್ಣಯ್ಯನವರನ್ನು ಒಳಗೊಂಡ ದೇವನೂರರ ಚುನಾವಣಾಕೇಂದ್ರಿತ ರಾಜಕೀಯದ ಮಾದರಿ. (ಕರ್ನಾಟಕದಲ್ಲಿ ಬಿಎಸ್ಪಿ ಪ್ರಯತ್ನಗಳೂ ಮೊದಲ ಹಾಗೂ ಮೂರನೇ ಮಾದರಿಗಳಲ್ಲಿ ಹಂಚಿಹೋದದ್ದನ್ನು ಕಾಣಬಹುದು.)

ಆಗ ಆ ಚಳವಳಿಗಳು ನನ್ನ ಪೀಳಿಗೆಯಲ್ಲಿ ಸಮಾನತೆಯ, ಸಮಾಜ ಪರಿವರ್ತನೆಯ ಮಹಾ ಕನಸು ಬಿತ್ತಿದ್ದವು. ಒಂದು ಇಡೀ ತಲೆಮಾರಿನ ಜನರಲ್ಲಿ, ಸ್ವಂತದ್ದನ್ನು ಮೀರಿದ ಸ್ಪಂದನ ಹುಟ್ಟಲು ಕಾರಣವಾಗಿದ್ದವು. ಅಷ್ಟಕ್ಕಾದರೂ ಅವು ಇಂದಿಗೂ ಜೀವಂತವಾಗಿ ಉಳಿದು ಬರಬೇಕಿತ್ತು ಎಂದು ಆಸೆಪಟ್ಟರೆ ನನ್ನ ನಿಟ್ಟುಸಿರನ್ನು ಯಾರೂ ಅಪಹಾಸ್ಯ ಮಾಡಲಾರರು ಅಂದುಕೊಂಡಿರುವೆ. ಆದರೆ ಚಳವಳಿಗಳ ದೋಣಿಯಲ್ಲಿ ಒಡಕು ಮೂಡಿದ ಕೂಡಲೇ ದೋಣಿ ಮುಳುಗುವುದು ನಿಶ್ಚಯವಾಯಿತು. ಒಡಕನ್ನು ಜೀರ್ಣಿಸಿಕೊಳ್ಳುವ ಆತ್ಮಬಲ ಯಾವ ಚಳವಳಿಗೂ ಇರುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಯಾಕೆಂದರೆ ಎಲ್ಲ ಒಡಕಿನ ಮೂಲ- ಸ್ವಾರ್ಥ ಮಾತ್ರ. ಪ್ರೊಫೆಸರರು ಸ್ವತಃ ಎಷ್ಟು ದೈತ್ಯಬಲದವರಾದರೂ, ಅಂತಾರಾಷ್ಟ್ರೀಯ ರೈತ ನಾಯಕರಾಗಿ ಬೆಳೆದರೂ, ರೈತಸಂಘದ ಒಡಕಿನ ನಂತರ (80ರ ದಶಕದ ಉತ್ತರಾರ್ಧ ಮತ್ತು 90ರ ದಶಕಗಳಲ್ಲಿ) ಏನು ಹೋರಾಟ ಮಾಡಿದರೂ ಅದು ನರಪೇತಲನ ಕುಸ್ತಿಯಂತೆ ಕಂಡಿದ್ದು ಅವರ ತಪ್ಪೇನಲ್ಲ.

ಚಳವಳಿಗಳು ಇಂದು ನೆಲೆ ಕಳೆದುಕೊಂಡಿದ್ದರೆ ಅದರ ಹಿಂದಿರುವ- ಅನಿವಾರ್ಯವೂ ಅಗೋಚರವೂ ಆದ ಚಾರಿತ್ರಿಕ ಒತ್ತಾಯವನ್ನೂ ಮರೆಯುವಂತಿಲ್ಲ. ಯಾವ ಸಮಾಜವೂ ತನ್ನ ದಿಕ್ಕು ಮತ್ತು ಜಾಯಮಾನಕ್ಕೆ ಎದುರಾಗುವ ಸವಾಲುಗಳನ್ನು ತಾಳಿಕೊಳ್ಳುವುದು ಸಂಕ್ರಮಣ ಕಾಲದಲ್ಲಿ ಮಾತ್ರ. ಆ ಕಾಲ ಜಾರಿದಂತೆ, ಇಡೀ ಸಮಾಜವೇ ಸಹಸ್ರ ಸಹಸ್ರ ಸ್ಥೂಲ ಸೂಕ್ಷ್ಮ ವಿಧಾನಗಳಲ್ಲಿ ತಿರುಗೇಟು ಕೊಡುವ ಮೂಲಕ ತನ್ನ ಮೂಲ ‘ಸಹಜ’ ರೂಪಕ್ಕೆ ಮರಳಲು ಹವಣಿಸುತ್ತದೆ. 90ರ ದಶಕದ ಜಾಗತೀಕರಣದ ನಂತರ ನಾವೀಗ ಕೈ ಚೆಲ್ಲಿ ವೀಕ್ಷಿಸುತ್ತಿರುವುದು ಈ ಛಚಿಛಿಞಟಚಿ- ತಿರುಗೇಟನ್ನೇ. 70-80ರ ದಶಕಗಳ ಕಲಮಲಕ್ಕೆ ಈಗಿನ ಎರಡು ದಶಕಗಳು ನೀಡುತ್ತಿರುವ ಮಾರುತ್ತರವಿದು. ರೈತಸಂಘ, ಫ್ಯೂಡಲ್ ಜಾತಿಗಳ ಒಕ್ಕೂಟವಾಗಿ ಹುಟ್ಟಿ ಅದನ್ನು ಮೀರಲು ಹೆಣಗಿ ಸೋತದ್ದಾಗಲೀ; ಅಥವಾ ಜಾತ್ಯತೀತ ಆಶಯವಾಗಿ ಹುಟ್ಟಿದರೂ ಹೊರಳಿ ಬಂದು ಜಾತಿಯಲ್ಲೇ ಹೂತುಹೋದ ದಲಿತ ಸಂಘವಾಗಲೀ- ಇವೆರಡರ ಹಿಂದೆಯೂ ಕಾಣುವುದು ಈ ಚಾರಿತ್ರಿಕ ಒತ್ತಾಯದ ಚಿಹ್ನೆಗಳೇ ತಾನೇ?

ಇಂದು ಆ ಅಳಿದುಳಿದ ಚಳವಳಿಗಳು- ಒಂದು ಕಡೆ ರೈತರ ಸರಣಿ ಆತ್ಮಹತ್ಯೆ, ಇನ್ನೊಂದು ಕಡೆ ದಲಿತರ ಜಲಿಯನ್ವಾಲಾಬಾಗ್ ಎನಿಸಿದ ಕಂಬಾಲಪಲ್ಲಿ ಮಾರಣಹೋಮದಂಥ- ವಿರಾಟ್ ದುರಂತಗಳೆದುರು ನಿಸ್ಸಹಾಯಕವಾದ ಸ್ಥಿತಿಯಲ್ಲಿವೆ. ಅಂದರೆ ಚಳವಳಿಗಳ ಪ್ರಾಣಶಕ್ತಿ ಇಂಗಿಹೋಗಿದೆ. ‘ಸರ್ವೋದಯ’ದ ಸ್ವರೂಪದಲ್ಲಿ ಉಳಿದಿರುವುದು ಅದರ ಸಿಪ್ಪೆಹೊಟ್ಟು ಮಾತ್ರ . ಆ ದಿನಗಳಲ್ಲಿ ‘ಕಣ್ಣೆದುರೇ ಕಳೆದುಹೋದ ಸಮಾಜವಾದಿ ಚಳವಳಿಯನ್ನು’ ನೆನೆಸಿಕೊಂಡು ದೇವನೂರ ಮಹಾದೇವ ‘ನಾನು ಅತ್ತೆ’ ಎಂದು ಬರೆದಿದ್ದರು.

ವಿಷಾದವೆಂದರೆ, ಈಗ ನಮ್ಮ ‘ಕಣ್ಣೆದುರೇ ಕಳೆದುಹೋದ ಚಳವಳಿಗಳನ್ನು’ ನೆನೆದು ಅಳುವವರೂ ಉಳಿದಿಲ್ಲ…

(ಮುಗಿಯಿತು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1

-ಎನ್.ಎಸ್. ಶಂಕರ್

1982ರ ಮಾತು. ತಿಂಗಳು ಮರೆತಿದ್ದೇನೆ. ಬೆಂಗಳೂರು ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ರೈತ ಚಳವಳಿ ಕುರಿತು ರಾಜ್ಯ ರೈತಸಂಘ ವಿಚಾರ ಸಂಕಿರಣ ಏರ್ಪಡಿಸಿತ್ತು. ಶಿವಮೊಗ್ಗ, ಹಾಸನ ಮತ್ತಿತರ ಕಡೆಗಳಿಂದ ಸಾಕಷ್ಟು ಮಂದಿ ರೈತಮಿತ್ರರು ಬಂದಿದ್ದರು. ಸಭೆಯಲ್ಲಿ ಮಾತಾಡಲು ಗೆಳೆಯರಾದ ಇಂದೂಧರ ಹೊನ್ನಾಪುರ ಹಾಗೂ ಕೋಟಿಗಾನಹಳ್ಳಿ ರಾಮಯ್ಯನವರನ್ನೂ ಕರೆದಿದ್ದರು.

ಪ್ರೊ. ಎಂ.ಡಿ. ನಂಜುಂಡಸ್ವಾಮಿ ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂಬ ಪೀಠಿಕೆಯ ಮೂಲಕ ಸಭೆಗೆ ಚಾಲನೆ ಕೊಟ್ಟರು. ಅಂದು ಸುಮಾರು ಜನ ಭಾಷಣಕಾರರಿದ್ದರೂ, ಈ ತಾತ್ವಿಕ ವಿವರಣೆಯನ್ನು, ಮೂರ್ತವಾದ ಸಂಶಯಗಳ ಮೂಲಕ ಎದುರಿಸಿ, ಕೆಲವು ಸ್ಪಷ್ಟನೆ ಪಡೆಯಲು ಮತ್ತು ನೀಡಲು ಯತ್ನಿಸಿದವರು ರಾಮಯ್ಯ ಮತ್ತು ಇಂದೂಧರ ಇಬ್ಬರೇ. ವೇದಿಕೆ ಮೇಲೆ ರಾಮಯ್ಯ ತುಸು ಅಳುಕಿನಿಂದ ಮತ್ತು ಇಂದೂಧರ ಇನ್ನಷ್ಟು ಗಟ್ಟಿ ದನಿಯಲ್ಲಿ ಹೇಳಿದ್ದಿಷ್ಟೇ:

“ರೈತ ಚಳವಳಿ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾದ ಟ್ರೇಡ್ ಯೂನಿಯನ್ ಹೋರಾಟಗಳ ಥರ ಆಗಬಾರದು. ತನ್ನ ಸದಸ್ಯರ ಆಂತರಿಕ ಶಿಸ್ತು ಮತ್ತು ಮನುಷ್ಯತ್ವದ ಬೆಳವಣಿಗೆಗೂ ಮಹತ್ವ ಕೊಡಬೇಕು. ಹಾಗಾಗದಿದ್ದರೆ, ಈಗಿನ ಸ್ಥಿತಿಯಲ್ಲೇ ಹಳ್ಳಿಗಳಿಗೆ ಹೆಚ್ಚಿನ ಅಧಿಕಾರ ಕೊಡುವುದೆಂದರೆ (ರೈತಸಂಘದ ಬೇಡಿಕೆಗಳಲ್ಲಿ ಇದೂ ಒಂದು) ಅದು ಮೇಲ್ವರ್ಗದ ಪಾಲಾಗಿ, ದಲಿತರು ಇನ್ನಷ್ಟು ತುಳಿತಕ್ಕೆ ಒಳಗಾಗುತ್ತಾರೆ…”- ಇದು ಅವರಿಬ್ಬರ ವಾದದ ಸಾರ.

ನಿಜಕ್ಕೂ ಸಭೆಯ ನಡಾವಳಿ ಕೌತುಕಮಯವಾದದ್ದು- ಈ ಮಾತುಗಳು ಹೊರಬಿದ್ದ ಮೇಲೆ. ಒಮ್ಮೆಲೇ ಹೆಚ್ಚೂಕಮ್ಮಿ ಇಡೀ ಸಭೆ ಎದ್ದು ನಿಂತು ‘ರೈತಚಳವಳಿಗೂ, ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರತಿಭಟಿಸತೊಡಗಿತು. ಅದೂ ವ್ಯವಸ್ಥಿತವಾದ, ತಾಳ್ಮೆ, ಸೌಜನ್ಯಗಳ ಗಡಿ ದಾಟದ ಸಹೃದಯ ಭಿನ್ನಾಭಿಪ್ರಾಯವೂ ಅಲ್ಲ. ಹೋ ಎಂಬ ಅರಚಾಟ; ಒಬ್ಬರ ಮಾತುಗಳು ಇನ್ನೊಬ್ಬರ ಕೂಗಿನೊಡನೆ ಕಲಸಿ ಬಿದ್ದಾಡುವ ಮಹಾ ಗೊಂದಲದ ಗದ್ದಲ. ಆ ಗದ್ದಲದಲ್ಲೇ ಸಭೆಯಿಂದ ಕೇಳಿ ಬಂದ ಮಾತು: ‘ಎರಡು ಕರಿಮೀನು ಬಂದವೆ. ಎಳಕಳ್ರೋ, ಹುರ್ಕೊಂಡು ತಿಂದುಬಿಡಣ…’! ಸ್ವಲ್ಪ ಹೊತ್ತಾದ ಮೇಲೆ ಇದೇ ಗಲಾಟೆಯ ಹಿನ್ನೆಲೆಯಲ್ಲಿ ಸಭಿಕರ “ಸಂದೇಹಗಳಿಗೆ” ಉತ್ತರ ಕೊಡಲು ಮತ್ತೆ ಕರೆದಾಗ ಆ ‘ಕರಿಮೀನು’ಗಳಲ್ಲೊಂದಾದ ಇಂದೂಧರ ಇಡೀ ದೃಶ್ಯವನ್ನು ವರ್ಣಿಸಿದ್ದು ಹೀಗೆ: “ನಮ್ಮೂರಲ್ಲಿ ನಮ್ಮಕ್ಕ ತಂಗಿಯರನ್ನು ಯಾರಾದರೂ `ದೊಡ್ಡವರು’ ಕೆಡಿಸಿದಾಗ ನಾವು ಪ್ರತಿಭಟನೆ ತೋರಿದರೆ, ನಮ್ಮ ಧ್ವನಿಯನ್ನು ಮುಚ್ಚಿಹಾಕಲು ಏಳುವ ಗದ್ದಲದ ಹಾಗಿದೆ ನಿಮ್ಮ ಕೂಗು. ಇದು ನಿಮ್ಮ ಶತಮಾನಗಳ ಕೊಬ್ಬು ಮತ್ತು ಅಹಂಕಾರದ ಫಲ…” ಆ ಮಾತಿನಲ್ಲಿ, ಬೇಕೆಂದೇ ಕೆಣಕುವ ಸವಾಲಿನ ದನಿ ಇದ್ದುದು ನಿಜ. ಆದರೆ ನೇರ ಮರ್ಮಕ್ಕೆ ನಾಟುವ ಇಂಥ ಮಾತು ಕೂಡ ಸಭೆಯನ್ನು ಇನ್ನಷ್ಟು ರೊಚ್ಚಿಗೆಬ್ಬಿಸುವಲ್ಲಿ ಮಾತ್ರ ಯಶಸ್ವಿಯಾಯಿತು. ನಂಜುಂಡಸ್ವಾಮಿಯವರ ಕೆಲವು ಸಹಾನುಭೂತಿಯ ಹೇಳಿಕೆಗಳ ಹೊರತಾಗಿ ಇನ್ನಾರೂ ಇಂದೂಧರ, ರಾಮಯ್ಯನ ನಿಲುವು ಒಪ್ಪುವುದಿರಲಿ, ಅವರನ್ನು ಅರ್ಥ ಮಾಡಿಕೊಳ್ಳಲೂ ತಯಾರಿರಲಿಲ್ಲ.

ಸಭಾಂಗಣದಲ್ಲಿ ರಾಮಯ್ಯ, ಇಂದೂಧರನ ಮೇಲೆ ಹರಿಹಾಯ್ದವರು ಅವರಿಬ್ಬರನ್ನೂ ಚೆನ್ನಾಗಿ ಬಲ್ಲ ಗೆಳೆಯರೇ ಎಂಬುದೇನೂ ಅನಿರೀಕ್ಷಿತವಲ್ಲ. ಆ ಗೆಳೆಯರು ಸಭಿಕರಾಗಿದ್ದಾಗ- ಮಬ್ಬಾದ ಒಂದು ನಿರಾಕಾರ ಮಂದೆಯಾಗಿದ್ದಾಗ ಪ್ರತಿನಿಧಿಸುತ್ತಿದ್ದುದು ಗುಂಪಿನ ಸ್ವಭಾವವನ್ನು; ಅಂದರೆ ಜಾತಿ- ಒಂದು ಸಮೂಹದ ಮನೋಧರ್ಮವಾಗಿ ತಳೆಯುವ- ‘ನಿತ್ಯಸಹಜ’ ಎನ್ನಬಹುದಾದ- ನಿಷ್ಕರುಣೆಯನ್ನು. ಸಭೆ ಮುಗಿಯಿತು. ಎಲ್ಲ ಆಚೆ ಬಂದರು. ಸೆನೆಟ್ ಹಾಲ್ ಹೊರಗಿನ ಮಬ್ಬುಗತ್ತಲಲ್ಲಿ ಈ ಗೆಳೆಯರೇ ಇಂದೂಧರನ ಜೊತೆ ಮತ್ತೆ ವಾದ ಮುಂದುವರೆಸುವಾಗ ಅವರ ನೋಟ ಬದಲಾಗದಿದ್ದರೂ, ಧಾಟಿ ಬದಲಾಗಿತ್ತು! ಒಳಗೆ ಏರುದನಿಯಲ್ಲಿ ದಬಾಯಿಸುವ ಗತ್ತಿನಲ್ಲಿದ್ದವರೇ ಇಲ್ಲಿ ನಯವಾಗಿ ಒಪ್ಪಿಸುವ ಧಾಟಿಗಿಳಿದಿದ್ದರು! ಅಂದರೆ ಮಂದೆಯ ಮನೋವೃತ್ತಿ ಕರಗಿ ಅವರ ವ್ಯಕ್ತಿಗತ ಔದಾರ್ಯ ಮರುಕಳಿಸಿತ್ತು…

ಇದೊಂದು ಕ್ಷುಲ್ಲಕ ಪ್ರಕರಣವೆಂದು ನಾನು ಬಲ್ಲೆ. ರೈತ, ದಲಿತ ಚಳವಳಿಗಳನ್ನು ಕುರಿತು ಪಂಚಮ 1983ರಲ್ಲಿ ಹೊರತಂದ ವಿಶೇಷಾಂಕದಲ್ಲಿ ಇದೇ ಘಟನೆಯನ್ನು ಉಲ್ಲೇಖಿಸಿ ನಾನು ಆಗ ಟಿಪ್ಪಣಿಯೊಂದನ್ನು ಬರೆಯದೇ ಹೋಗಿದ್ದಿದ್ದರೆ ಪ್ರಾಯಶಃ ಈಗ ನನಗೂ ಮರೆತುಹೋಗಿರುತ್ತಿತ್ತು! ಆದರೆ ಇಷ್ಟು ವರ್ಷಗಳ ನಂತರ, ಇದೀಗ ಚಳವಳಿಗಳನ್ನು ಒಟ್ಟಾರೆಯಾಗಿ ವಿವೇಚಿಸಲು ಯತ್ನಿಸುವಾಗ ಈ ಜುಜುಬಿ ಪ್ರಸಂಗವೇ ಹಲವು ಇಂಗಿತಗಳನ್ನು ಧ್ವನಿಸಬಲ್ಲ ಘಟನೆಯಂತೆ ಕಾಣುತ್ತಿದೆ. ಯಾಕೆಂದರೆ ರೈತಸಂಘಟನೆ, ಆಗ ಸ್ವತಃ ಸಮಾನತೆಗಾಗಿ, ಅನ್ಯಾಯದ ವಿರುದ್ಧ ಹೊಡೆದಾಡುತ್ತಿದ್ದರೂ ಹಳ್ಳಿಗಾಡಿನ ಚೌಕಟ್ಟಿನಲ್ಲಿ ಯಜಮಾನ ಸಮೂಹವನ್ನು ಪ್ರತಿನಿಧಿಸುತ್ತಿತ್ತು. ಹಾಗಾಗಿ ರೈತಸಂಘಟನೆಯ ಆಂತರ್ಯದಲ್ಲೇ ಒಂದು ವಿರೋಧಾಭಾಸವಿತ್ತು. ಮಧ್ಯಮಜಾತಿಗಳ ರೈತಸಮೂಹ ಹಳ್ಳಿಯಲ್ಲಿ ದಲಿತನನ್ನು ತುಳಿಯುತ್ತ, ಪಟ್ಟಣಕ್ಕೆ ಬಂದಾಗ ಸಮಾನ ವೇದಿಕೆಗಾಗಿ ಕೈ ಚಾಚುತ್ತಿತ್ತು! ಮತ್ತು ಎಂದೂ ಈ ದ್ವಂದ್ವದಿಂದ ಮುಕ್ತಿ ಸಿಗಲೇ ಇಲ್ಲವಾದ್ದರಿಂದ ರೈತಸಂಘ ಉದ್ದಕ್ಕೂ, ದಲಿತ ಸಂಘಟನೆಯಿಂದ ಆತ್ಮಸಾಕ್ಷಿ ಕೆಣಕುವ, ಮುಜುಗರದ ಪ್ರಶ್ನೆಗಳನ್ನು ಎದುರಿಸುತ್ತಲೇ ಹೋಗಬೇಕಾಯಿತು.

ಅದೇ ಪಂಚಮ ವಿಶೇಷಾಂಕದಲ್ಲಿ ಪ್ರೊ. ನಂಜುಂಡಸ್ವಾಮಿಯವರನ್ನು ದೇವನೂರ ಮಹಾದೇವ ಕೇಳಿದರು:

ರೈತಸಂಘದಲ್ಲಿ ಲಿಂಗಾಯಿತ ಒಕ್ಕಲಿಗ ಜನತೆಯೇ ಹೆಚ್ಚಾಗಿದ್ದು ಈ ರೈತ ಜನಸ್ತೋಮವು ಅಸ್ಪೃಶ್ಯ ಜನಾಂಗವನ್ನು ಅವಮಾನಿಸುತ್ತ, ವಂಚಿಸುತ್ತ, ತುಳಿಯುತ್ತ, ಕೊಲ್ಲುತ್ತ ಬರುತ್ತಿರುವ ಜಟಿಲ ಪರಿಸ್ಥಿತಿಯನ್ನು ಮಾನವೀಯಗೊಳಿಸುವ ಕಡೆ ತಮ್ಮ ಚಿಂತನೆ, ಕಾರ್ಯಕ್ರಮಗಳೇನು?

 ಪ್ರೊ. ನಂಜುಂಡಸ್ವಾಮಿ: ನಮ್ಮ ಹಳ್ಳಿಯ ಆಸ್ತಿ ಸಂಬಂಧವನ್ನು ಬದಲಾವಣೆ ಮಾಡುವುದೇ ನಿಮ್ಮ ಮೇಲಿನ ಪ್ರಶ್ನೆಗೆ ಉತ್ತರ. ಸಾಮಾಜಿಕ ಅಸಮಾನತೆ ನಿವಾರಣೆಗೆ ಶೋಷಕ- ಶೋಷಿತ ಇಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ…

ಅಂದರೆ ಇಂಥ ಮುಜುಗರದ ಪ್ರಶ್ನೆಗೆ, ಪ್ರೊಫೆಸರ್ ತಕ್ಷಣಕ್ಕೇನು ಮಾಡಬಹುದು, ತಲೆ ಕೆಡಿಸಿಕೊಳ್ಳಲೇ ಇಲ್ಲ; ಬದಲಿಗೆ ಅಷ್ಟೇನೂ ವಾಸ್ತವಿಕವಲ್ಲದ ಉನ್ನತ ಆದರ್ಶದ ಉತ್ತರ ನೀಡಿ ನುಣುಚಿಕೊಂಡಂತಿಲ್ಲವೇ?! ಇದಷ್ಟೇ ಅಲ್ಲ, ಇಡೀ ಸಂದರ್ಶನವೇ ಆ ಧಾಟಿಯಲ್ಲಿದೆ! ಮಹಾದೇವ ಎತ್ತಿದ ಜಾತಿ ವೈಷಮ್ಯದ ಎಲ್ಲ ಪ್ರಶ್ನೆಗಳಿಗೂ ಪ್ರೊಫೆಸರ್ ತಾವು ಪಡೆದ ಸಮಾಜವಾದಿ ತರಬೇತಿಯ ‘ಕಲಿತ’ ಉತ್ತರಗಳ ಮೂಲಕವೇ ಸಂಭಾಳಿಸುವಂತೆ ಕಾಣುತ್ತಾರೆಯೇ ಹೊರತು, ಹಳ್ಳಿಗಾಡಿನ ಮೂಲ ಮಾರ್ಪಾಡುಗಳ ಬಗ್ಗೆ ಗಂಭೀರವಾಗಿ ಧ್ಯಾನಿಸಿ, ಪರದಾಡಿದವರಂತಲ್ಲ.

ಪ್ರಶ್ನೋತ್ತರದ ಇನ್ನೂ ಕೆಲವು ತುಣುಕುಗಳು:

…ದಲಿತನೇನಾದರೂ ಧ್ವನಿ ಎತ್ತರಿಸಿದರೆ ರೈತಸಂಘ ಬಯಸುವ ‘ಹಳ್ಳಿಯೇ ಒಂದು ಘಟಕ’ ನಡೆಯುವುದಿಲ್ಲವಲ್ಲ?

ನಿಜ, ದಲಿತ ಸಮಾನತೆಗೆ ನಿಂತಾಗ ಅಲ್ಲಿ ಸಾಮರಸ್ಯ ಹೋಗಿಬಿಡ್ತದೆ….

ಹಾಗಾದರೆ ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿ ಆಚರಣೆಗೆ ತರುವ ತಾಕತ್ತು ರೈತಸಂಘಕ್ಕೆ ಇದೆಯೇ?

ಸಾವಿರಾರು ವರ್ಷದ ಜಡ್ಡನ್ನು ಒಂದೆರಡು ದಿನದಲ್ಲಿ ನಾಶ ಮಾಡುವ ಆಶಾವಾದವನ್ನೂ ನಾನು ಇಟ್ಟುಕೊಂಡಿಲ್ಲ. ಮೊದಲು ನಾನು ಉದಾಹರಣೆ ಆಗುವ ಮೂಲಕ…

ನೀವು ಬ್ಯಾಡ್ರಪ್ಪ. ಒಂದ್ಸಲ ಉಂಡಾದ ಮೇಲೆ ಸಾಕು. ನಾವು ಎಲ್ಲಿಂದ ತಂದಿಕ್ಕುವ? ನಾನು ಕೇಳ್ತಾ ಇರೋದು ‘ಅಸ್ಪೃಶ್ಯನ ಮನೆಯಲ್ಲಿ ಉಂಡವನು ಮಾತ್ರ ರೈತಸಂಘದಲ್ಲಿ ಓಟು ಮಾಡಲು ಹಕ್ಕುಳ್ಳವನು’ ಎಂದು ಆಚರಣೆಗೆ ಹೊರಟರೆ ರೈತಸಂಘಕ್ಕೆ ನುಂಗಲಾರದ ತುತ್ತಾಗುವುದಿಲ್ಲವೇ? ರೈತಸಂಘವೇ ಇಲ್ಲದಂತೂ ಆಗಬಹುದಲ್ಲವೇ?

ಆ ಮಟ್ಟಕ್ಕೆ ರೈತಸಂಘ ಹೋಗಿಲ್ಲ. ಇದು ನುಂಗಲಾರದ ತುತ್ತಾದರೂ ಮಾಡಲೇಬೇಕು. ಭಯಪಡಬೇಕಾಗಿಲ್ಲ…

ಕೆಲವು ಕಡೆ ರೈತಸಂಘದವರೇ ಅಸ್ಪೃಶ್ಯರಿಗೆ ಬಹಿಷ್ಕಾರ ಹಾಕಿರುವುದಾಗಿ ಸುದ್ದಿ ಇದೆಯಲ್ಲ?

ಎಲ್ಲಿ? ವಿವರ ಕೊಡಿ. We are not allowing such things to happen. We will expel that village from ರೈತಸಂಘ. ಗೊತ್ತೇನು?…

ಅದೇ ಪ್ರೊಫೆಸರ್ ಶೈಲಿ! ನಾವೆಲ್ಲ ಮೆಚ್ಚಿದ ಶೈಲಿ…

ವಾಸ್ತವವೆಂದರೆ, ಈ ಜಾತಿ ಸಂಬಂಧಗಳ ಕಗ್ಗಂಟನ್ನು ರೈತಸಂಘಟನೆ ಎಂದೂ ಕ್ರಿಯಾಶೀಲವಾಗಿ ಎದುರುಗೊಳ್ಳಲೇ ಇಲ್ಲ. ‘ಸಮಗ್ರ ಸಾಮಾಜಿಕ ಪರಿವರ್ತನೆ ರೈತ ಚಳವಳಿಯ ಗುರಿ. ಎಲ್ಲ ಬಗೆಯ ಶೋಷಣಾ ಸಂಬಂಧಗಳ ನಾಶ ರೈತ ಚಳವಳಿಯ ಗುರಿ’ ಎಂದು ನಂಜುಂಡಸ್ವಾಮಿಯವರು ಘೋಷಿಸಿದರೂ, ಅದು ಕೇವಲ ಮಾತಿನ ಶೈಲಿಯಾಯಿತೇ ಹೊರತು ರೈತಸಂಘದ ಕಾರ್ಯಕ್ರಮವಲ್ಲ. ಚಳವಳಿಯ ಉಚ್ಛ್ರಾಯ ಸ್ಥಿತಿಯಲ್ಲಿ ಸಂಘಟನೆ ಆಶ್ರಯದಲ್ಲಿ ಅನೇಕ ಅಂತರ್ಜಾತಿ ಮದುವೆಗಳು ನಡೆದಿದ್ದು ಹೌದು. ಅವನ್ನೇ ರೈತಸಂಘದ ಜಾತಿವಿನಾಶ ಕಾರ್ಯಕ್ರಮವಾಗಿ ಕಾಣುವವರೂ ಇದ್ದಾರೆ. ಆದರೆ ಒಂದು ಕಡೆ ಇದು, ರೈತ- ದಲಿತ ಚಳವಳಿಗಳೆರಡೂ ಪರಸ್ಪರ ಸೆಣೆಸುತ್ತ, ಬೆನ್ನುಜ್ಜಿಕೊಳ್ಳುತ್ತ, ಕೆರೆಯುತ್ತ ಒಂದರಿಂದೊಂದು ಕೊಟ್ಟು ಪಡೆದು ಮಾಡಿದ್ದರ ಪರಿಣಾಮವಾಗಿದ್ದಂತೆಯೇ ಮತ್ತೊಂದೆಡೆ ರೈತ ಮುಖಂಡರ ಸಮಾಜವಾದಿ ತಿಳುವಳಿಕೆಯೂ ಇದರ ಬೆನ್ನಿಗಿತ್ತು. ಆದರೆ ಅದರಾಚೆಗೆ ಜಾತಿ ತಾರತಮ್ಯದ ಪ್ರಶ್ನೆ ರೈತಸಂಘಟನೆಗೆ ಎಂದೂ ಜೀವನ್ಮರಣದ ಕಾಳಜಿ ಆಗಲೇ ಇಲ್ಲ. 1980ರಲ್ಲಿ ಲಂಕೇಶರು ರೈತಚಳವಳಿ ಬಗ್ಗೆ ಬರೆಯುವಾಗ ಚರ್ಚೆಗ ಎತ್ತಿಕೊಂಡ ಪ್ರಶ್ನೆಗಳಿಗೆ ಇದೇ ಹಿನ್ನೆಲೆಯಿತ್ತು.

(ಮುಂದುವರೆಯುವುದು)

ದಲಿತರ ಮೇಲೆ ದೌರ್ಜನ್ಯ ನಡೆಸುವ ವ್ಯವಸ್ಥೆಯ ಹೆಸರು – ಸರಕಾರ!

ಭೂಮಿ ಬಾನು

ಇಂದು ಒಂದು ದುರಂತ ನಡೆದು ಹೋಗಿದೆ. ಕೆಜಿಎಫ್ ನಲ್ಲಿ ಮಲದ ಗುಂಡಿ ಶುಚಿಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸೋ ಕಾಲ್ಡ್ ನಾಗರಿಕ ಸಮಾಜ ತಲೆ ತಗ್ಗಿಸುವುದಷ್ಟೇ ಅಲ್ಲ, ಮಂಡಿ ಊರಿ ಕೂರಬೇಕು. ಸರಕಾರ, ಉಳ್ಳವರು ಎಲ್ಲರೂ ಇದಕ್ಕೆ ಹೊಣೆ.

ಊರಿನ ರಸ್ತೆ ಸರಿಯಿಲ್ಲ, ಕುಡಿವ ನೀರಿಲ್ಲ, ಬಸ್ ನಿಲ್ದಾಣದಲ್ಲಿ ಶೆಡ್ ಇಲ್ಲ, ಎಂದೆಲ್ಲಾ ಪ್ರತಿಭಟನೆ ಮಾಡುವ ‘ಮರ್ಯಾದಸ್ಥ’ ಜನ ನಮ್ಮೂರಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಮಲದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳಿಲ್ಲ ಎಂದು ದನಿ ಎತ್ತಿದ್ದು ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ಅಲ್ಲಲ್ಲಿ ಇಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.

ಬಸವಲಿಂಗಯ್ಯ ಮಲಹೊರುವ ಪದ್ಧತಿಯನ್ನು ರದ್ದು ಮಾಡುವ ಬಗ್ಗೆ ಮಂತ್ರಿ ಮಂಡಲ ಸಭೆಯಲ್ಲಿ ಮಾತೆತ್ತಿದಾಗ ಜೊತೆಯಲ್ಲಿದ್ದ ಕೆಲವರು “ಆ ಅಸಹ್ಯದ ಬಗ್ಗೆ ಎಷ್ಟು ಹೊತ್ತು ಮಾತಾಡ್ತೀರಿ?” ಎಂದು ಮೂದಲಿಸಿದರಂತೆ. ಬಸವಲಿಂಗಯ್ಯ ಪ್ರತಿಕ್ರಿಯಿಸಿ “ಆ ವಿಷಯ ಮಾತನಾಡೋಕೇ ಇಷ್ಟು ಅಸಹ್ಯ ಪಡ್ತೀರಲ್ಲ, ಅದೇ ಅಸಹ್ಯವನ್ನು ತಲೆಯಲ್ಲಿ ಹೊತ್ತು ಸಾಗಿಸೋರ ಪಾಡೇನು”, ಎಂದು ಪ್ರಶ್ನಿಸಿದ್ದರು. ಆ ‘ಕೆಲ ಮಂತ್ರಿಗಳಂಥದೇ’ ಮನಸುಗಳು ಈ ಹೊತ್ತಿನ ಪರಿಸ್ಥಿತಿಗೆ ಕಾರಣ.

ಕೇಂದ್ರ ಸರಕಾರ 1993 ರಲ್ಲಿಯೇ ಮಲ ಹೊರುವ ಪದ್ಧತಿಯನ್ನು ಕಾನೂನು ತಂದು ನಿಷೇಧಿಸಿತು. ವಿಪರ್ಯಾಸ ನೋಡಿ, ಇದುವರೆಗೆ ಯಾವ ಸರಕಾರಗಳೂ ಆ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಕಾನೂನು ತಂದರಷ್ಟೆ ಸಾಕೆ?

ಮಲ ಹೊರುವ ಪದ್ಧತಿ ನಿಷೇಧ ಎಂದಾಕ್ಷಣ ಮಲದ ಗುಂಡಿಗಳು ತುಂಬುವುದು ನಿಲ್ಲುತ್ತದೆಯೆ? ಒಳ ಚರಂಡಿ ವ್ಯವಸ್ಥೆ ಇಲ್ಲದ ಮಂದಿ ಎಂದಿನಂತೆ ಆ ಕೆಲಸ ಮಾಡುವವರನ್ನು ಹುಡುಕಿ ಹೋಗುತ್ತಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟು ಗುಂಡಿ ಖಾಲಿ ಮಾಡಿಸುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಬೇಕಾದ ಸ್ಥಿತಿಯಲ್ಲಿರುವ ಅನೇಕ ದಲಿತ ಕುಟುಂಬಗಳು ಅನ್ನಕ್ಕಾಗಿ ಅನಿವಾರ್ಯವಾಗಿ ಆ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಸಾಯುತ್ತಾರೆ. (ಆದರೆ ಅದೇ ಮೇಲ್ಜಾತಿಯ ಯಾರೇ ಆಗಲಿ ಎಷ್ಟೇ ಬಡತನವಿದ್ದರೂ, ಎಷ್ಟೇ ದುಡ್ಡು ಕೊಡುತ್ತೇನೆಂದರೂ ಈ ಕೆಲಸಕ್ಕೆ ಕೈ ಹಾಕುವುದಿಲ್ಲ ಎನ್ನುವುದು ವಾಸ್ತವ).
ಕಾನೂನು ತಂದು ಒಂದು ದಶಕವಾಯಿತು. ಇನ್ನಾದರೂ ಕರ್ನಾಟಕದ ಬಹುಪಾಲು ನಗರ, ಪಟ್ಟಣಗಳಲ್ಲಿ ಯಂತ್ರಗಳನ್ನು ಬಳಸಿ ಮಲದ ಗುಂಡಿಗಳನ್ನು ಶುಚಿಗೊಳಿಸುವ ಪದ್ಧತಿ ಜಾರಿಯಾಗಿಲ್ಲ.

ಹಾಸನ ಜಿಲ್ಲೆ ಆಲೂರಿನಂತ ತಾಲೂಕು ಕೇಂದ್ರದದಲ್ಲಿ ಒಳ ಚರಂಡಿ ವ್ಯವಸ್ಥೆಯೂ ಇಲ್ಲ, ತುಂಬಿದ ಗುಂಡಿಗಳನ್ನು ಶುಚಿಗೊಳಿಸಲು ಯಂತ್ರಗಳೂ ಇಲ್ಲ. ರಾಜ್ಯದಾದ್ಯಂತ ಇಂತಹ ಅದೆಷ್ಟೋ ತಾಲೂಕುಗಳಿವೆ.

ನೂತನ ಕಾನೂನಿನ ಪ್ರಕಾರ ಮಲದ ಗುಂಡಿಯನ್ನು ಶುಚಿಗೊಳಿಸಲು ದಲಿತರನ್ನು ನಿಯೋಜಿಸಿಕೊಂಡರೆ, ದಲಿತರ ಮೇಲೆ ನಡೆಸಿದ ದೌರ್ಜನ್ಯ ಎಂದು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬಹುದು. ಆದರೂ ಈ ಪದ್ದತಿ ನಿಲ್ಲದೇ ಇರಲು ಪ್ರಮುಖ ಕಾರಣ ಸರಕಾರದ ನಿರ್ಲಕ್ಷ್ಯ.

ದಲಿತರ ಮೇಲೆ ದೌರ್ಜನ್ಯ ನಡೆಸಿದ ಬಹುದೊಡ್ಡ ವ್ಯವಸ್ಥೆ – ಸರಕಾರ!

ಚಿತ್ರ: persecution.in

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು

-ಡಾ.ಎಚ್.ಎಸ್. ಅನುಪಮಾ
-ಕೆ.ಎಲ್. ಚಂದ್ರಶೇಖರ್ ಐಜೂರ್

1932 ಸೆಪ್ಟೆಂಬರ್ 24 ರಂದು ಹಿಂದೂ ಮುಖಂಡರು ಹಾಗೂ ಅಂಬೇಡ್ಕರ್ ಸೇರಿದಂತೆ ಶೋಷಿತ ವರ್ಗಗಳ ಮುಖಂಡರ ನಡುವೆ ಏರ್ಪಟ್ಟ ಪೂನಾ ಒಪ್ಪಂದ ಐತಿಹಾಸಿಕವೆಂದು ಪರಿಗಣಿಸಲ್ಪಟ್ಟಿದೆ. ಅದು ಐತಿಹಾಸಿಕವಾಗಿದ್ದು ಒಂದಲ್ಲ ಹಲವು ಕಾರಣಗಳಿಗೆ. ಹಿಂದೂಧರ್ಮದ ಅಸ್ಪೃಶ್ಯತೆ ಕಳಂಕವನ್ನು ತೊಡೆದುಹಾಕಲು ಮತ್ತು ಮೇಲ್ಜಾತಿ ಹಿಂದೂಗಳ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಬೇಕೆಂದು 1932ರ ಸೆಪ್ಟೆಂಬರ್ 20 ರಂದು ಗಾಂಧಿ ಪೂನಾದ ಯರವಾಡಾ ಜೈಲಿನಲ್ಲಿ ಆಮರಣಾಂತ ಉಪವಾಸ ಶುರುಮಾಡಿದರು. ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಶೋಷಿತ ಸಮುದಾಯಗಳಿಗೆ ಹಿಂದೂಗಳಿಂದ ಪ್ರತ್ಯೇಕ ಮತದಾನ ವ್ಯವಸ್ಥೆ ನೀಡಿದ್ದನ್ನು ಅವರು ಒಪ್ಪಿರಲಿಲ್ಲ. ಅದರ ರದ್ದತಿಗೆ ಅಂಬೇಡ್ಕರ್ ಮತ್ತಿತರ ನಾಯಕರ ಮನವೊಲಿಸುವುದು ಉಪವಾಸದ ಹಿಂದಿನ ಮತ್ತೊಂದು ಉದ್ದೇಶವಾಗಿತ್ತು. ಕೊನೆಗೆ ಸೆಪ್ಟೆಂಬರ್ ೨೪ನೇ ತಾರೀಕು ಹಿಂದೂ ಮುಖಂಡರು ಮತ್ತು ಅಂಬೇಡ್ಕರ್ ಸಹವರ್ತಿಗಳ ನಡುವೆ ಒಪ್ಪಂದವೇರ್ಪಟ್ಟು ಪ್ರತ್ಯೇಕ ಮತದಾನ ವ್ಯವಸ್ಥೆಯ ಬದಲಾಗಿ ಶೋಷಿತ ಸಮುದಾಯಗಳಿಗೆ ಸ್ಥಾನ ಮೀಸಲು, ಮೀಸಲು ಕ್ಷೇತ್ರಗಳಲ್ಲಿ ಎರಡು ಹಂತದ ಚುನಾವಣೆ, ಕೆಲಕಾಲಾವಧಿಯ ನಂತರ ಪ್ರಾಥಮಿಕ ಚುನಾವಣೆ ರದ್ದತಿ, ಮೀಸಲು ಸ್ಥಾನಗಳ ಏರಿಕೆ ಮಾಡಲಾಯಿತು. ಗಾಂಧಿ ಉಪವಾಸ ಕೂತ ನಂತರ ಹಿಂದೂ ದೇವಾಲಯಗಳು ದಲಿತರಿಗೆ ಪ್ರವೇಶ ನೀಡಬೇಕೆಂಬ ಶೋಷಿತರ ಕೂಗಿಗೆ ಜೀವಬಂದು ದೇಶದ ಅಲ್ಲಲ್ಲಿ ಅಸ್ಪೃಶ್ಯತೆ ಆಚರಿಸುವುದಿಲ್ಲವೆಂದು ಪಣತೊಟ್ಟ ಸಾರ್ವಜನಿಕ ಪ್ರಕಟಣೆಗಳು ಹೊರಬಿದ್ದವು. ದೇಶಾದ್ಯಂತ ಅಸ್ಪೃಶ್ಯತೆ ಪಾಪ ಎಂದು ಸವರ್ಣೀಯ ಹಿಂದೂಗಳೆಲ್ಲ ಭಾವಿಸಿ ಅದಿನ್ನು ಮಾಯವಾಗೇ ಬಿಟ್ಟಿತೇನೋ ಎಂಬಂತಹ ವಾತಾವರಣವು ಕೆಲಕಾಲ ಮೂಡಿತು.

ಬೂದಿ ಮಾತ್ರ ಬಲ್ಲದು ಬೇಯುವ ಬೇಗೆಯನ್ನು. ಕಡತದ ಹೊಟ್ಟೆಯೊಳಗೆ ಅವಿತು ಕೂತಿದ್ದ ಕಾಗದದ ಮೇಲಿನ ಅಂಕಿಅಂಶಗಳು ರೋಚಕ ಕತೆಗಳನ್ನು ಹೇಳುತ್ತಿದ್ದರೆ, ವಾಸ್ತವ ಮಾತ್ರ ತನ್ನ ಎಂದಿನ ವಿಕೃತ ಮುಖವನ್ನೇ ಹೊದ್ದು ಕುಣಿಯುತ್ತಿತ್ತು. ಶೋಷಿತರಿಗೆ ದೇವಾಲಯ ಪ್ರವೇಶದ ಹೆಸರಿನಲ್ಲಿ ಹೆಸರೇ ಇಲ್ಲದೆ ಶಿಥಿಲಗೊಂಡ, ಕುಸಿದು ಬೀಳುತ್ತಿರುವ, ಯಾರೂ ಹೋಗದ ಪಾಳು ದೇವಾಲಯಗಳು ಮಹಾತ್ಮನಿಗೆ ಬೆಂಬಲ ತೋರಿಸುವ ನೆಪದಲ್ಲಿ ಸೇರಿಕೊಂಡಿದ್ದನ್ನು ಗುರುತಿಸಿದ ಅಂಬೇಡ್ಕರ್, ಅದರಲ್ಲಿ ಗಾಂಧೀಜಿಯ ಕ್ರಿಯಾಕ್ಷೇತ್ರವಾದ ಗುಜರಾತಿನ ಒಂದೇ ಒಂದು ದೇವಾಲಯವೂ ಇಲ್ಲವೆಂದು, ಅದು ಅಂದಿಗೂ ಸಾಮಾಜಿಕವಾಗಿ ಅಷ್ಟೇ ಗಡುಸಾಗಿ, ಪ್ರತಿಗಾಮಿಯಾಗಿ ಉಳಿದಿರುವುದನ್ನು ಗುರುತಿಸಿದ್ದರು. ಅಂಬೇಡ್ಕರ್‌ಗೆ ಎಂದೋ ಗೊತ್ತಾಗಿದ್ದ ಹಿಂದೂ ಧರ್ಮ ಮತ್ತು ಅಸ್ಪೃಶ್ಯರ ವಿಮೋಚನೆ ಒಟ್ಟೊಟ್ಟಿಗೆ ಚಲಿಸಲಾರವು ಎಂಬ ಕಹಿ ಸತ್ಯವನ್ನು ಗಾಂಧಿ ಪಾಳಯ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಹಿಂದೂ ಧರ್ಮದ ಮೂಲಕವೇ ಅಸ್ಪೃಶ್ಯತೆಯನ್ನು ತೊಡೆದು ಹಾಕುವೆನೆಂಬ ಹುಂಬ ವಿಶ್ವಾಸದಲ್ಲಿ ಗಾಂಧಿ ನಿಂತಿದ್ದರು. ನಂತರ ನಡೆದ ವಿದ್ಯಮಾನಗಳು “ಪೂನಾ ಒಪ್ಪಂದಕ್ಕೆ ಸಹಿಮಾಡಿದ್ದು ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು,” ಎಂದು ಅಂಬೇಡ್ಕರ್ ಪರಿತಪಿಸುವಂತೆ ಮಾಡಿದವು. ಅಂಬೇಡ್ಕರ್ ಹಾಗೆ ಭಾವಿಸಲು ಕಾರಣವಾದ ಘಟನೆಗಳನ್ನು ಒಪ್ಪಂದದ ನಂತರದ ಘಟನೆಗಳಲ್ಲಿ ಹುಡುಕಬೇಕು. ಸೆಪ್ಟೆಂಬರ್ ಕೊನೆಯಿಂದ 1933 ಏಪ್ರಿಲ್‌ವರೆಗೆ ನಡೆದಿದ್ದನ್ನು ಅವರ ಜೀವನಚರಿತ್ರೆಯಿಂದ ನೋಡಿದರೆ ಇದು ಸ್ಪಷ್ಟವಾಗುತ್ತದೆ.

1930ರಲ್ಲಿ ನಾಸಿಕದ ಕಾಳಾರಾಮ್ ದೇವಾಲಯ ಪ್ರವೇಶ, 1931ರಲ್ಲಿ ಕೇರಳದ ಕೆಳಪ್ಪನ್ ಅವರ ಗುರುವಾಯೂರು ದೇವಾಲಯ ಪ್ರವೇಶಕ್ಕೆ ನಡೆಸಿದ ಪ್ರಯತ್ನಗಳು ಕಾಂಗ್ರೆಸ್ಸಿನ ಗಮನ ಸೆಳೆಯದೇ ಹೋಗಿದ್ದವು. ಗಾಂಧಿ ಉಪವಾಸ ಶುರುಮಾಡಿದ ಮರುದಿನವೇ ಮಲಬಾರ್‌ನ ಕೆಳಪ್ಪನ್ ಅಸ್ಪೃಶ್ಯರ ದೇವಾಲಯ ಪ್ರವೇಶ ಕುರಿತು ಗುರುವಾಯೂರು ದೇವಸ್ಥಾನದೆದುರು ಉಪವಾಸ ಕುಳಿತರು. ಅವರಿಗೆ ಗಾಂಧಿ ತಾವಿಬ್ಬರೂ 1933 ಜನವರಿ ಒಂದರಿಂದ ಒಟ್ಟಿಗೇ ಉಪವಾಸ ಶುರು ಮಾಡೋಣವೆಂದು ಹೇಳಿದ್ದರಿಂದ, ದೇವಾಲಯ ಪ್ರವೇಶಕ್ಕಿಂತ ಅವರ ಜೀವವೇ ದೊಡ್ಡದೆಂದೂ, ಉಪವಾಸ ನಿಲ್ಲಿಸಬೇಕೆಂದೂ ಅಂಬೇಡ್ಕರ್ ಕೇಳಿಕೊಂಡಿದ್ದರಿಂದ ಉಪವಾಸ ನಿಲ್ಲಿಸಿದ್ದರು.

1932 ಸೆಪ್ಟೆಂಬರ್ 26: ನಾಸಿಕ್ ದೇವಾಲಯ ಪ್ರವೇಶ ಹೋರಾಟ ಮಾಡಿದ್ದರೂ ಅಂಬೇಡ್ಕರ್ ಈ ವೇಳೆಗೆ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದರು. ತನ್ನ ಜನ ದೇವಾಲಯ ಪ್ರವೇಶಕ್ಕಿಂತ ರಾಜಕೀಯ ಅಧಿಕಾರ ಪಡೆಯಲು, ಲೌಕಿಕ ಸವಲತ್ತುಗಳನ್ನು ಪಡೆಯಲು ಮೊದಲು ಶ್ರಮಿಸಬೇಕು ಎಂದು ಭಾವಿಸಿದ್ದರು. ಮುಂಬಯಿಯ ಸಭೆಯೊಂದರಲ್ಲಿ ಮಾತನಾಡುತ್ತ, “ಕುತ್ತಿಗೆಯ ಸುತ್ತಲಿನ ತುಳಸಿಮಾಲೆ ನಿಮ್ಮನ್ನು ಸಾಲಗಾರರ ಕೈಯಿಂದ ಪಾರುಮಾಡುವುದಿಲ್ಲ. ರಾಮಭಜನೆ ಹಾಡಿದರೆ ಮನೆ ಬಾಡಿಗೆ ಕಡಿಮೆಯಾಗುವುದಿಲ್ಲ. ಪಂಢರಾಪುರ ಯಾತ್ರೆ ತಿಂಗಳ ಕೊನೆಗೆ ಸಂಬಳ ತರುವುದಿಲ್ಲ. ದೇವಾಲಯ ಪ್ರವೇಶ ನಿಮ್ಮ ಆಹಾರಕ್ಕೆ, ಉಡುವ ಬಟ್ಟೆಗೆ, ಶಿಕ್ಷಣಾವಕಾಶಕ್ಕೆ, ರೋಗದ ಮದ್ದಿಗೆ ಹಣ ನೀಡುವುದಿಲ್ಲ. ಬಹುಪಾಲು ಜನ ಅರ್ಥವಾಗದ ಬದುಕಿನ ನಿಗೂಢಗಳ ಕುರಿತು ಮೂಢನಂಬಿಕೆಗಳಲ್ಲಿ ಮುಳುಗಿರುವುದರಿಂದ ಕೆಲವರು ಅದೇ ಅವಕಾಶ ಬಳಸಿ ಸಮಾಜವಿರೋಧಿ ಕೆಲಸದಲ್ಲಿ ತೊಡಗಿದ್ದಾರೆ. ಆದ್ದರಿಂದ ನಿಮ್ಮ ಹೋರಾಟ ರಾಜಕೀಯ ಮತ್ತು ಆರ್ಥಿಕ ಶಕ್ತಿ ಬೆಳೆಸಿಕೊಳ್ಳುವತ್ತ ಇರಲಿ,” ಎಂದು ಸ್ಪಷ್ಟವಾಗಿ ಹೇಳಿದರು.

ಅಕ್ಟೋಬರ್ 19ರಂದು ಮುಖ್ಯವಾದ ಕ್ರಿಮಿನಲ್ ಕೇಸೊಂದರ ಸಲುವಾಗಿ ಸಾವಂತವಾಡಿಯ ಕೋರ್ಟಿಗೆ ಹೊರಟಿದ್ದ ಅಂಬೇಡ್ಕರ್ ದಾರಿಯಲ್ಲಿ ಗಾಂಧೀಜಿಯನ್ನು ಯರವಾಡಾ ಜೈಲಿನಲ್ಲಿ ಭೇಟಿಯಾದರು. ಅಸ್ಪೃಶ್ಯತೆ ವಿರೋಧಿ ಸಂಘದಲ್ಲಿರಬೇಕಾದ ವ್ಯಕ್ತಿಗಳ ಕುರಿತು ಮಾತನಾಡುತ್ತಾ ಅದರ ವಿವಿಧ ಸಮಿತಿಗಳಲ್ಲಿ ಅಸ್ಪೃಶ್ಯರೇ ಹೆಚ್ಚು ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಗಾಂಧೀಜಿ ಬಳಿ ಶೋಷಿತ ಸಮುದಾಯಗಳ ಸಬಲೀಕರಣ ಯತ್ನಗಳು ಇತ್ತೀಚೆಗೆ ಕಡಿಮೆಯಾಗಿರುವ ಬಗ್ಗೆ, ವಿಶೇಷ ಗಣತಿಯ ಅವಶ್ಯಕತೆ ಕುರಿತು ಗಮನ ಸೆಳೆದರು. ಅಸ್ಪೃಶ್ಯತೆ ವಿರೋಧಿ ಸಂಘದ ಚಟುವಟಿಕೆಗಳು ಮುಖ್ಯವಾಗಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಉನ್ನತಿಗೆ ಶ್ರಮಿಸುವಂಥವಾಗಿರಬೇಕೆಂದು ಸೂಚಿಸಿದರು.

ಅಕ್ಟೋಬರ್ 28ಕ್ಕೆ ಮುಂಬಯಿಯ ಮತ್ತೊಂದು ಸಭೆಯಲ್ಲಿ ಮಾತನಾಡುತ್ತಾ, “ದೇವಾಲಯ ಪ್ರವೇಶ ಮತ್ತು ಸಹಪಂಕ್ತಿ ಭೋಜನದ ಸಂಭ್ರಮದಲ್ಲಿ ಕಳೆದುಹೋಗಬೇಡಿ. ನಿಮ್ಮ ಕಷ್ಟಗಳು ಪೂರ್ವ ಜನ್ಮದ ಕರ್ಮವೆಂದು ನೀವು ಭಾವಿಸದೇ ಇದ್ದರೆ ಒಳ್ಳೆಯದು. ನಿಮ್ಮ ಬಡತನ ಅನಿವಾರ್ಯವೆಂಬ ಭಾವನೆ ತಪ್ಪು. ನಿಮ್ಮನ್ನೇ ನೀವು ಗುಲಾಮರೆಂದು ಭಾವಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಿ,” ಎಂದರು.

ನವೆಂಬರ್ 7: ಮೂರನೆಯ ದುಂಡುಮೇಜಿನ ಪರಿಷತ್ತಿನ ಸಲುವಾಗಿ ಲಂಡನ್ನಿಗೆ ಹೊರಟರು. ಹಡಗಿನಲ್ಲಿ ಪ್ರಯಾಣಿಸುವಾಗ ಮಿತ್ರನಿಗೆ ಪತ್ರವೊಂದರಲ್ಲಿ, “ನನಗೆ ಶುಭವಿದಾಯ ಹೇಳಲು ಅಪಾರ ಜನ ಸೇರಿದ್ದರು. ನನ್ನ ಮನಸ್ಸು ಏಕಾಂತ ಮತ್ತು ಪ್ರಶಾಂತ ವಾತಾವರಣಕ್ಕಾಗಿ ಹಾತೊರೆಯುತ್ತಿದೆ. ಅಭಿಮಾನಿಗಳ ಈ ತೆರನ ಮೂರ್ತಿಪೂಜೆ ಉಸಿರುಕಟ್ಟಿಸುತ್ತಿದೆ,” ಎಂದು ಬರೆದರು. ಆ ವೇಳೆಗೆ ಹರಿಜನ ಚಳುವಳಿಯ ಕುರಿತು ಗಾಂಧೀಜಿ ನೀಡಿದ ಹೇಳಿಕೆಗಳನ್ನು ತಿಳಿದುಕೊಂಡು, “ಗಾಂಧಿ ನಮ್ಮ ದಾರಿಗೆ ಬರುತ್ತಿದ್ದಾರೆ, ಆದರೆ ಗಾಂಧೀಜಿಯ ಮನಸ್ಸು ಅಂತರ್ಜಾತಿ ವಿವಾಹ ಮತ್ತು ಸಹಭೋಜನವನ್ನು ಒಪ್ಪುವಷ್ಟು ಇನ್ನೂ ಮಾಗಿಲ್ಲ,” ಎಂದು ಬರೆದರು.

ಆ ಹಡಗಿನಲ್ಲಿಯೇ ಅಂಬೇಡ್ಕರರಿಗೆ ಒಂದು ಕಹಿ ಅನುಭವವಾಯಿತು. ಸರ್ ಪಟ್ಟಾನಿ ಎನ್ನುವವರ ಭೇಟಿಯಾಯಿತು. ಆತ ಮಾತನಾಡುತ್ತಾ “ಅಂದು ಮುಂಬಯಿ ಸಭೆಯಿಂದ ಅರ್ಧಕ್ಕೇ ಎದ್ದು ಹೋದೆ. ನಂತರ ಏನು ನಡೆಯಿತು?” ಎಂದು ಪ್ರಶ್ನಿಸಿದರು. ಅಂಬೇಡ್ಕರ್ “ನಡುವೆ ಏಕೆ ಎದ್ದು ಹೋದಿರಿ?” ಎಂದು ಕೇಳಿದಾಗ, “ಹಿಂದೂ ಧರ್ಮಗ್ರಂಥಗಳ ಪ್ರಕಾರ ಒಳ್ಳೆಯ ವ್ಯಕ್ತಿಗೆ ದುಷ್ಟನೊಬ್ಬ ಮಾನಹಾನಿ ಆಗುವಂತೆ ಮಾತನಾಡುತ್ತಿದ್ದರೆ ಆ ಸ್ಥಳ ಬಿಟ್ಟು ಎದ್ದು ಹೋಗಬೇಕು ಅಥವಾ ದುಷ್ಟನ ನಾಲಿಗೆ ಎಳೆದು ಕತ್ತರಿಸಬೇಕು. ಅದಕ್ಕೇ ಎದ್ದು ಹೋದೆ,” ಎಂದರು. ಸಿಟ್ಟಿನಿಂದ ಉರಿದು ಹೋದರೂ ತೋರಗೊಡದ ಅಂಬೇಡ್ಕರ್ ವ್ಯಂಗ್ಯದ ದನಿಯಲ್ಲಿ ತಣ್ಣಗೆ, “ನಿಮ್ಮ ಹಿಂದೂ ಧರ್ಮ ಗ್ರಂಥಗಳು ಹೊಗಳುಭಟ್ಟರಿಗೆ, ಸೋಗಲಾಡಿಗಳಿಗೆ ಏನು ಶಿಕ್ಷೆ ವಿಧಿಸಿವೆ ನೈಟ್ ಸಾಹೇಬರೇ?” ಎಂದು ಕೇಳಿದಾಗ ಆತ, “ನೀವು, ಯಾರ ಬಗ್ಗೆ ಏನು ಮಾತನಾಡುತ್ತಿದ್ದೀರಿ ಎಂದು ಗೊತ್ತು ತಾನೇ?” ಎಂದರು. ಅಂಬೇಡ್ಕರ್, “ನಾನು ಯಾರ ಬಗ್ಗೆ ಮಾತನಾಡುತ್ತಿದ್ದೀನೆಂದು ನನಗೂ ಗೊತ್ತು, ನಿಮಗೂ ಗೊತ್ತು. ಗಾಂಧಿಯ ಸುತ್ತ ತುಂಬಿಹೋಗಿರುವ ಹೊಗಳುಭಟ್ಟರನ್ನು ಮೊದಲು ಆಚೆ ಸರಿಸಿ,” ಎಂದು ಖಾರವಾಗಿ ಹೇಳಿದರು. ಅವರ ಕಾವೇರಿದ ಚರ್ಚೆಯನ್ನು ತಣಿಸಲು ಹಡಗಿನ ಪೊಲೀಸ್ ಆಫೀಸರ್ ಬರಬೇಕಾಯಿತು.

ನವೆಂಬರ್ 14: ಅಸ್ಪೃಶ್ಯತಾ ವಿರೋಧಿ ಸಂಘದ ಅಧ್ಯಕ್ಷ ಠಕ್ಕರ್ ಬಾಪಾಗೆ ಅಂಬೇಡ್ಕರ್ ಒಂದು ಪತ್ರ ಬರೆದರು. ಅಸ್ಪೃಶ್ಯತೆ ನಿವಾರಣೆಗಾಗಿ ಹಿಂದೂ ಸಮಾಜ ಸುಧಾರಕರಿಗೆ ನೀಡಿದ ಅತಿಮೌಲಿಕ ಸಲಹೆ ಎಂದು ಪರಿಗಣಿಸಲಾಗಿರುವ ಆ ಪತ್ರದ ಸಾರಾಂಶ ಹೀಗಿದೆ: “ಸ್ಪೃಶ್ಯ-ಅಸ್ಪೃಶ್ಯರು ಕಾನೂನಿನಿಂದಾಗಲೀ, ಪ್ರತ್ಯೇಕ ಅಥವಾ ಒಂದೇ ಮತಪಟ್ಟಿಯಿಂದಾಗಲೀ ಒಂದಾಗಲು ಸಾಧ್ಯವಿಲ್ಲ. ಅವರನ್ನು ಒಟ್ಟಿಗೆ ಬಂಧಿಸಬಲ್ಲದ್ದು ಒಂದೇ – ಪ್ರೀತಿ. ಶೋಷಿತ ಸಮುದಾಯಗಳು ತಮ್ಮ ಕಷ್ಟದಿಂದ ಮುಕ್ತಿ ಹೊಂದಬೇಕಾದರೆ ಮೇಲ್ಜಾತಿ ಹಿಂದೂ ಯೋಚಿಸುವಂತೆ ಮಾಡಿ ಆತ ಬದಲಾಗುವಂತೆ ಮಾಡಬೇಕು. ಮೇಲ್ಜಾತಿ ಹಿಂದೂಗಳ ಮನಸ್ಥಿತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕಿದೆ. ಅಸ್ಪೃಶ್ಯತೆ ವಿರೋಧಿ ಸಂಘವು ಶೋಷಿತ ಸಮುದಾಯಗಳಿಗೆ ನೀರು, ರಸ್ತೆ, ಶಾಲೆಗಳನ್ನು ಬಳಸುವ ಅವಕಾಶ ಮಾಡಿಕೊಡಬೇಕು. ಇದು ಹಿಂದೂ ಸಮಾಜದಲ್ಲಿ ಕ್ರಾಂತಿಯನ್ನುಂಟುಮಾಡಿದಂತೆ. ಅದಕ್ಕಾಗಿ ನಿಮ್ಮ ಸಂಘಕ್ಕೆ ಕಾರ್ಯಕರ್ತರ ಸೇನೆಯೇ ಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೇಕಾಗಿದ್ದಾರೆ. ಇಂತಹ ಕಾರ್ಯಕ್ರಮ ಸಮಾಜದಲ್ಲಿ ಅಶಾಂತಿ ಮತ್ತು ಹಿಂಸಾತ್ಮಕ ಸನ್ನಿವೇಶ ಸೃಷ್ಟಿಸುತ್ತದೆ ಎನ್ನುವುದು ನಿಜವಾದರೂ ಅಸ್ಪೃಶ್ಯತೆ ನಿವಾರಣೆಗೆ ಕನಿಷ್ಟ ಪ್ರತಿರೋಧ ವಿಧಾನ ಉಪಯೋಗವಾಗುವುದಿಲ್ಲ. ಸವರ್ಣೀಯರ ಸಾಂಪ್ರದಾಯಿಕ ರೂಢಿನಿಯಮಗಳ ವಿರುದ್ಧ ಪ್ರಹಾರ ಮಾಡಬೇಕು. ಆಗ ತುರ್ತುಸ್ಥಿತಿಯೊಂದು ಹುಟ್ಟುತ್ತದೆ. ಈ ತುರ್ತು ಹಿಂದೂವನ್ನು ಯೋಚಿಸಲು ಹಚ್ಚುತ್ತದೆ. ಆಗ ಆತ ಬದಲಾವಣೆಯನ್ನು ಸುಲಭವಾಗಿ ಒಪ್ಪಿಕೊಳ್ಳಬಲ್ಲ. ಕನಿಷ್ಠ ಪ್ರತಿರೋಧ ಅಥವಾ ಮೌನ ಕ್ರಾಂತಿ ಯಾವ ತುರ್ತನ್ನೂ ಹುಟ್ಟಿಸುವುದಿಲ್ಲ. ಕಾಳಾರಾಮ್ ದೇವಾಲಯ ಪ್ರವೇಶ, ಚೌಡರ್ ಕೆರೆ, ಗುರುವಾಯೂರು ಪ್ರವೇಶ ಹೋರಾಟಗಳು ಸಮಾಜ ಸುಧಾರಕರು ವರ್ಷಗಟ್ಟಲೆ ಸಾಧಿಸಲಾಗದ್ದನ್ನು ಕೆಲವೇ ದಿನಗಳಲ್ಲಿ ಸಾಧಿಸಿವೆ.

“ಶೋಷಿತ ಸಮುದಾಯಗಳ ದೀನ ಸ್ಥಿತಿಗೆ, ಬಡತನಕ್ಕೆ ಸಮಾನ ಅವಕಾಶ ಸಿಗದಿರುವುದೇ ಮುಖ್ಯ ಕಾರಣ. ಸಂಘವು ಈ ಬಗ್ಗೆ ಕೆಲಸ ಮಾಡಲು ಶೋಷಿತ ಸಮುದಾಯಗಳ ಕಾರ್ಯಕರ್ತರನ್ನೇ ತಯಾರು ಮಾಡಬೇಕು. ಸ್ವತಃ ನೋವುಂಡವರು ಸವರ್ಣೀಯ ಕಾರ್ಯಕರ್ತರಿಗಿಂತ ಹೆಚ್ಚು ಪ್ರಾಮಾಣಿಕವಾಗಿ, ನಿಷ್ಠೆಯಿಂದ ಕೆಲಸ ಮಾಡಬಲ್ಲರು. ಟಾಲ್‌ಸ್ಟಾಯ್ ಹೇಳಿದಂತೆ “ಪ್ರೀತಿಸಬಲ್ಲವನು ಮಾತ್ರ ಸೇವೆ ಮಾಡಬಲ್ಲ.” ಆದ್ದರಿಂದ ಸಂಬಳ ಪಡೆವ ಕೆಲಸಗಾರರು ಈ ವಿಷಯದಲ್ಲಿ ಉತ್ತಮ ಆಯ್ಕೆಯಾಗಲಾರರು.

ಡಿಸೆಂಬರ್ 1932: ಅಂಬೇಡ್ಕರ್ ಲಂಡನ್ ಬಿಡುವ ವೇಳೆಗೆ ಭಾರತದಲ್ಲಿ ದೇವಾಲಯ ಪ್ರವೇಶ ವಿಚಾರ ಬಿಸಿಸುದ್ದಿಯಾಗಿತ್ತು. ಜನವರಿ ಒಂದರಿಂದ ಗುರುವಾಯೂರು ದೇವಾಲಯ ಪ್ರವೇಶದ ಸಲುವಾಗಿ ಕೆಳಪ್ಪನ್ ಜೊತೆಗೆ ತಾನೂ ಉಪವಾಸ ಕೂರುವೆನೆಂದು ಹೇಳಿ ಗಾಂಧಿ ಸಂಚಲನ ಮೂಡಿಸಿದ್ದರು. ಆದರೆ ಗಾಂಧಿ ಅನುಯಾಯಿಗಳಲ್ಲಿ ಭಿನ್ನಮತ ಶುರುವಾಗಿತ್ತು. ಪೂನಾ ಒಪ್ಪಂದದ ಮೊದಲು ಗಾಂಧಿ ಉಪವಾಸ ನಿಲ್ಲಿಸಲಿ ಎಂಬ ಅನುಕಂಪದಿಂದ ಸುಧಾರಣೆ ಮಾಡಹೊರಟ ಕೆಲವರು ಈಗ ನಿಜ ಬಣ್ಣ ತೋರಿದರು. ಕೇರಳದ ಜಾಮೊರಿನ್ ದೊರೆ ಗುರುವಾಯೂರು ದೇವಸ್ಥಾನಕ್ಕೆ ಅಸ್ಪೃಶ್ಯರ ಪ್ರವೇಶ ನಿರಾಕರಿಸಿದ. ಆ ಹಿಂದೂ ರಾಜನ ಅರಮನೆಯ ಎಷ್ಟೋ ಆಚರಣೆಗಳಲ್ಲಿ ಮುಸ್ಲಿಮರು ಇರುತ್ತಿದ್ದರು. ಪೊನ್ನಾನಿ ತಾಲೂಕಿನ ಜನರೆದುರು ಆಯ್ಕೆಯನ್ನಿಟ್ಟು ಬಹುಸಂಖ್ಯಾತರು ಬಯಸಿದಂತೆ ಮಾಡಿ ಎಂದು ಗಾಂಧಿ ಒಂದು ಸಲಹೆ ಮುಂದಿಟ್ಟರು. ಬಹುಸಂಖ್ಯಾತರು ಅಸ್ಪೃಶ್ಯರ ದೇವಾಲಯ ಪ್ರವೇಶವನ್ನು ಸಮ್ಮತಿಸಿದರು. ಆದರೂ ಜಾಮೊರಿನ್ ಜಗ್ಗಲಿಲ್ಲ. ಇದೇ ಸಮಯಕ್ಕೆ ರಂಗಾ ಅಯ್ಯರ್ ಸೆಂಟ್ರಲ್ ಅಸೆಂಬ್ಲಿಯಲ್ಲಿ ದೇವಾಲಯ ಪ್ರವೇಶ ಸುಲಭಗೊಳಿಸಲು ಅಸ್ಪೃಶ್ಯತಾ ನಿಷೇಧ ಕಾಯ್ದೆ ಮಂಡಿಸಿದ್ದರು. ರಾಜಾ, ಗ್ಯಾನ್ ಪ್ರಸಾದ್ ಸಿಂಗ್, ಮಿತ್ರ ಮೊದಲಾದವರೂ ಅವರ ಜೊತೆಗಿದ್ದರು. ಆ ಸಮಯದಲ್ಲಿ ಗಾಂಧಿ ಗುರುವಾಯೂರು ಉಪವಾಸ ಮುಂದೂಡಿರುವುದಾಗಿ, ಗವರ್ನರ್ ಜನರಲ್ ಅವರ ನಿರ್ಧಾರಕ್ಕಾಗಿ ಕಾಯುವುದಾಗಿ ಪ್ರಕಟಿಸಿದಾಗ ಅವರ ನಡೆ ಅಂಬೇಡ್ಕರ್ ಬೆಂಬಲಿಗರಲ್ಲಿ ಅನುಮಾನ ಹುಟ್ಟಿಸಿತು.

ಜನವರಿ 23, 1933: ಭಾರತಕ್ಕೆ ವಾಪಸಾದ ಅಂಬೇಡ್ಕರ್ ಸಂದರ್ಶನವೊಂದರಲ್ಲಿ ದೇವಾಲಯ ಪ್ರವೇಶ ಮಸೂದೆ ಬಗ್ಗೆ ಪ್ರತಿಕ್ರಿಯಿಸುತ್ತಾ, “ವೈಸ್‌ರಾಯ್ ತಕ್ಷಣಕ್ಕೆ ಒಪ್ಪಿಗೆ ನೀಡುವ ಲಕ್ಷಣಗಳಿಲ್ಲ. ದೇವಾಲಯ ಪ್ರವೇಶದ ಸಲುವಾಗಿ ಗಾಂಧಿ ತಮ್ಮ ಜೀವ ಕೊಡುವುದು ಬೇಡ. ವೈಸ್‌ರಾಯ್ ಕೂಡಾ ಶಾಸನ ಸಭೆಯಲ್ಲಿ ಈ ಚರ್ಚೆಯನ್ನು ತಡೆಹಿಡಿಯದೇ ಜನಹಿತವಿದೆ ಎನಿಸಿದಲ್ಲಿ ವಿಟೊ ಬಳಸಿಯಾದರೂ ಮಸೂದೆ ಜಾರಿಗೊಳಿಸಬೇಕು,” ಎಂದು ತಿಳಿಸಿದರು.

ಮುಂಬಯಿಯಲ್ಲಿ ಇಳಿದ ಕೂಡಲೇ ಗಾಂಧಿ ಯರವಾಡಾ ಜೈಲಿನಲ್ಲಿ ತಮ್ಮನ್ನು ಭೇಟಿಯಾಗುವಂತೆ ಟೆಲಿಗ್ರಾಂ ಕಳಿಸಿದರು. ದೆಹಲಿಗೆ ಹೋಗಿ ಹಿಂದಿರುಗುತ್ತಾ ಫೆಬ್ರುವರಿ 4ರ ಮಧ್ಯಾಹ್ನ ಅಂಬೇಡ್ಕರ್ ಗಾಂಧಿ ಭೇಟಿಯಾದರು. ಎದ್ದು, ಕೈ ಕುಲುಕಿ ಬರಮಾಡಿಕೊಂಡ ಗಾಂಧಿ ದೇವಾಲಯ ಪ್ರವೇಶ ಕುರಿತು ಮಾತು ಶುರುಮಾಡಿ ಸುಬ್ಬರಾಯನ್ ಮತ್ತು ರಂಗಾ ಅಯ್ಯರ್ ಮಂಡಿಸುವ ಮಸೂದೆಗೆ ಬೆಂಬಲ ನೀಡಬೇಕೆಂದು ಕೋರಿದರು. ಅದನ್ನು ನೇರಾನೇರ ನಿರಾಕರಿಸಿ ಅಂಬೇಡ್ಕರ್ ಹೇಳಿದ ಮಾತುಗಳು ಮಾರ್ಮಿಕವಾಗಿವೆ:

“ಆ ಮಸೂದೆ ಅಸ್ಪೃಶ್ಯತೆ ಪಾಪ ಎನ್ನುವುದಿಲ್ಲ. ಅಸ್ಪೃಶ್ಯರನ್ನು ದೇವಾಲಯದೊಳಗೆ ಬಿಡಿ ಎನ್ನುತ್ತದೆಯೇ ಹೊರತು ದೇವಾಲಯ ಪ್ರವೇಶ ಅವರ ಹಕ್ಕು ಎನ್ನುವುದಿಲ್ಲ. ಶೋಷಿತ ಸಮುದಾಯಗಳು ವರ್ಣ ವ್ಯವಸ್ಥೆಯ ಶೂದ್ರರಾಗಲು ಇಚ್ಛಿಸುವುದಿಲ್ಲ. ನಾನು ಹಿಂದೂ ಎಂದು ಕರೆದುಕೊಳ್ಳಬಯಸುವುದಿಲ್ಲ. ಯಾವ ವ್ಯವಸ್ಥೆ ನನ್ನನ್ನು ಕೀಳಾಗಿ ಕಂಡಿದೆಯೋ ಅದರ ಬಗ್ಗೆ ನಾನೇಕೆ ಹೆಮ್ಮೆ ಪಡಲಿ? ಜಾತಿವ್ಯವಸ್ಥೆ ಹೀಗೇ ಮುಂದುವರೆಯುವುದಾದರೆ ದೇವಾಲಯ ಪ್ರವೇಶದಿಂದ ಏನೂ ಲಾಭವಿಲ್ಲ.”

ಗಾಂಧಿ ಉತ್ತರಿಸಿದರು: “ವರ್ಣ ವ್ಯವಸ್ಥೆ ಕೆಟ್ಟ ವ್ಯವಸ್ಥೆಯಲ್ಲ. ಮೇಲ್ಜಾತಿ ಹಿಂದೂಗಳು ತಮ್ಮ ಪಾಪ ತೊಳೆದುಕೊಳ್ಳಲು, ಹಿಂದೂ ಧರ್ಮವನ್ನು ಶುದ್ಧೀಕರಣಗೊಳಿಸಿಕೊಳ್ಳಲು ಒಂದು ಅವಕಾಶ ಕೊಡಿ. ಈ ಸುಧಾರಣೆಯಾದರೆ ಅಸ್ಪೃಶ್ಯರೂ ಸಮಾಜದಲ್ಲಿ ಉನ್ನತಿ ಹೊಂದಬಹುದು. ನೀವೀಗ ದೇವಾಲಯ ಪ್ರವೇಶ ವಿರೋಧಿಸಿದರೆ ಸನಾತನಿಗಳು ಮತ್ತು ಸರ್ಕಾರ ಅದರ ದುರ್ಲಾಭ ಪಡೆಯುತ್ತಾರೆ.”

ಅಂಬೇಡ್ಕರ್ ಒಪ್ಪಲಿಲ್ಲ. ಅವರ ಅಭಿಪ್ರಾಯ ಭಿನ್ನವಾಗಿತ್ತು.

“ಅಸ್ಪೃಶ್ಯರು ಆರ್ಥಿಕ, ಶೈಕ್ಷಣಿಕ, ರಾಜಕೀಯ ಉನ್ನತಿ ಸಾಧಿಸಿದರೆ ದೇವಾಲಯ ಪ್ರವೇಶ ತಾನೇ ತಾನಾಗಿ ಸಾಧ್ಯವಾಗುತ್ತದೆ. ಬಹಿಷ್ಕೃತರು ಜಾತಿ ವ್ಯವಸ್ಥೆಯ ಉಪಉತ್ಪನ್ನಗಳು. ಜಾತಿ ವ್ಯವಸ್ಥೆ ಇರುವ ತನಕ ಅವರೂ ಇರುತ್ತಾರೆ. ಜಾತಿಪದ್ಧತಿ ನಾಶವಾಗದೇ ಅವರ ಉದ್ಧಾರ ಸಾಧ್ಯವೇ ಇಲ್ಲ. ಹಿಂದೂ ನಂಬಿಕೆಯಿಂದ ಜಾತಿಯೆಂಬ ಹೇಯ ಮತ್ತು ಕ್ರೂರ ತತ್ವವನ್ನು ತೆಗೆದುಹಾಕುವವರೆಗೆ ಹಿಂದೂ ಧರ್ಮ ಉಳಿಯುವುದಿಲ್ಲ,” ಎಂದು ಫೆಬ್ರವರಿ 11 ರಂದು ಹೊರಬಂದ “ಹರಿಜನ” ಮೊದಲ ಸಂಚಿಕೆಯಲ್ಲಿ ಅಂಬೇಡ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಫೆಬ್ರವರಿ 12ರಂದು “ಪ್ರಿಯ ಮಹಾತ್ಮಾಜೀ..” ಎಂದು ಪತ್ರ ಶುರುಮಾಡಿದ ಅಂಬೇಡ್ಕರ್ ಹೀಗೆ ಬರೆದರು: “ಪಾಪ ಮತ್ತು ಅನೈತಿಕತೆಯನ್ನು ಬಹುಸಂಖ್ಯಾತರು ಒಪ್ಪಿಕೊಂಡಿದ್ದಾರೆಂದು ತಾಳಲಾಗುವುದಿಲ್ಲ. ಅಸ್ಪೃಶ್ಯತೆ ಪಾಪ ಮತ್ತು ಅನೈತಿಕವಾಗಿದ್ದಲ್ಲಿ ಬಹುಸಂಖ್ಯಾತರ ಮರ್ಜಿ ಹಿಡಿಯದೇ ನೀವು ಅದನ್ನು ನಾಶಗೊಳಿಸಬೇಕು. ಆದರೆ ನಿಮ್ಮ ಮಸೂದೆ ಅದನ್ನು ಹೇಳುವುದಿಲ್ಲ. ಶೋಷಿತ ವರ್ಗಗಳ ಮುಕ್ತಿ ಮಾರ್ಗ ಶಿಕ್ಷಣ, ಉದ್ಯೋಗ, ಆರ್ಥಿಕ ಉನ್ನತಿಯಲ್ಲಿದೆಯೇ ಹೊರತು ದೇವಾಲಯ ಪ್ರವೇಶದಲ್ಲಿಲ್ಲ. ದೇವಾಲಯಗಳ ಬಾಗಿಲು ತೆರೆಯಬೇಕೋ ಬಿಡಬೇಕೋ ಎನ್ನುವುದು ನೀವು ಚರ್ಚಿಸಬೇಕಾದ ವಿಚಾರ. ನಾವದಕ್ಕೆ ಹೋರಾಟ ಮಾಡುವುದಿಲ್ಲ. ಮನುಷ್ಯನನ್ನು ಕೀಳಾಗಿ ಕಾಣುವುದು ಸಭ್ಯನಡತೆಯಲ್ಲ ಎಂದು ನೀವು ಭಾವಿಸಿದರೆ ದೇವಾಲಯಗಳ ಬಾಗಿಲು ತೆರೆಯಿರಿ. ಸಭ್ಯತೆಗಿಂತ ಹಿಂದೂ ಆಗಿ ಉಳಿಯುವುದೇ ಮುಖ್ಯವಾದಲ್ಲಿ ನಿಮ್ಮ ದೇವಾಲಯಗಳ ಬಾಗಿಲು ಹಾಕಿಕೊಳ್ಳಿ, ನಮಗೆ ಒಳಬರಬೇಕಾದ ತುರ್ತು ಇಲ್ಲ. ಸಾಮಾಜಿಕ ಅಸಮಾನತೆಯನ್ನು ಪ್ರತಿಪಾದಿಸುವ ಧರ್ಮವನ್ನು ಸಹಿಸಲಾಗದು ಎಂದು ಅಸ್ಪೃಶ್ಯರು ನಿರ್ಧರಿಸಿದ್ದಾರೆ. ಹಿಂದೂ ಧರ್ಮ ಸಮಾನತೆಯನ್ನು ಒಪ್ಪಿಕೊಳ್ಳುವುದಾದರೆ ಅಸ್ಪೃಶ್ಯರನ್ನು ಪರದೇಶಿಗಳಂತೆ ನೋಡುವುದನ್ನು ನಿಲ್ಲಿಸಬೇಕು. ದೇವಾಲಯ ಪ್ರವೇಶ ನೀಡಿದರಷ್ಟೇ ಸಾಲದು, ಚಾತುರ್ವರ್ಣ್ಯ ತತ್ವವನ್ನೂ ಕೈಬಿಡಬೇಕು. ಅಸಮಾನತೆ, ತಾರತಮ್ಯ ಮತ್ತು ಜಾತಿ ಪದ್ಧತಿಯ ಮೂಲ ವರ್ಣಾಶ್ರಮ ಧರ್ಮದ ಬೇರುಗಳಲ್ಲಿ ಅಡಗಿ ಕೂತಿವೆ. ನಾನೀಗ ದೇವಾಲಯ ಪ್ರವೇಶ ಮಸೂದೆಗೆ ಸಹಮತ ಸೂಚಿಸಿ ನಂತರ ಚಾತುರ್ವರ್ಣ್ಯ ಮತ್ತು ಜಾತಿಪದ್ಧತಿಯ ನಾಶಕ್ಕೆ ಹೋರಾಡಿದರೆ ಗಾಂಧಿ ಯಾವ ಕಡೆ ನಿಲ್ಲುತ್ತಾರೆ? ಅವರು ವರ್ಣಾಶ್ರಮ ಬೆಂಬಲಿಸಿ ವಿರೋಧಿ ಪಾಳಯದಲ್ಲಿ ನಿಲ್ಲುವುದಾದರೆ ನಾನೀಗ ಅವರ ಜೊತೆ ನಿಲ್ಲಲಾರೆ.”

ಗಾಂಧಿ-ಅಂಬೇಡ್ಕರ್ ದಾರಿ ಸ್ಪಷ್ಟವಾಗಿ ಬೇರೆಯಾಗಿದ್ದು ಹೀಗೆ. ರಂಗಾ ಅಯ್ಯರ್ ದೇವಾಲಯ ಪ್ರವೇಶ ಮಸೂದೆಯನ್ನು ಕಟ್ಟಾ ಸನಾತನಿಗಳಷ್ಟೇ ಅಲ್ಲ, ಅರೆ ಸನಾತನಿಗಳು, ಸನಾತನ ಸಮಾಜ ಸುಧಾರಕರೂ ವಿರೋಧಿಸಿದರು. ಕಾನೂನು ಧಾರ್ಮಿಕ ವಿಷಯಗಳಲ್ಲಿ ತಲೆಹಾಕಬಾರದು ಎನ್ನುವುದು ಅವರ ವಾದವಾಗಿತ್ತು. ಪಂಡಿತ ಮದನ ಮೋಹನ ಮಾಳವೀಯ ಅವರಂತೂ ಕೋಪಾವಿಷ್ಟರಾಗಿ ದೇವಾಲಯ ವಿಚಾರದಲ್ಲಿ ಕಾನೂನು ಪರೋಕ್ಷವಾಗಿಯೂ ಹಸ್ತಕ್ಷೇಪ ಮಾಡಬಾರದು ಎಂದು ಗುಡುಗಿ ಪೂನಾ ಒಪ್ಪಂದ ಇದಕ್ಕೆ ಅನ್ವಯಿಸುವುದಿಲ್ಲವೆಂದು ಹೇಳಿದರು! ಹೀಗೆ ಯಾವ ಉದ್ದೇಶಕ್ಕಾಗಿ ಗಾಂಧಿ ಉಪವಾಸ ಕೂತು ಪೂನಾ ಒಪ್ಪಂದಕ್ಕೆ ಸಹಿ ಪಡೆದಿದ್ದರೋ ಅದರ ಸೋಲಿನ ಮೊದಲ ಹೆಜ್ಜೆಯಾಗಿ ಮಾರ್ಚ್ 24ರಂದು ರಂಗಾ ಅಯ್ಯರ್ ಅವರ ದೇವಾಲಯ ಪ್ರವೇಶ ಮಸೂದೆ ಬಿದ್ದುಹೋಯಿತು.

ಈ ಹೊತ್ತಿಗೆ ಪೂನಾ ಒಪ್ಪಂದದ ನಿಜ ಬಣ್ಣ ಬಯಲಾಗತೊಡಗಿತ್ತು. ಹೆಚ್ಚು ಕಡಿಮೆ ಪೂನಾ ಒಪ್ಪಂದ ಅಂಗೀಕರಿಸಿದ್ದ ಎಲ್ಲ ಹಿಂದೂ ರಾಜಕೀಯ ಮುಖಂಡರು ಅದನ್ನು ವಿರೋಧಿಸತೊಡಗಿದ್ದರು. ಗಾಂಧೀಜಿ ಶುರುಮಾಡಿದ ಹರಿಜನ ಚಳುವಳಿಯ ಉತ್ಸಾಹ ಇಂಗಿಹೋಗತೊಡಗಿತ್ತು. ಪೂನಾಕ್ಕೆ ಗಾಂಧೀಜಿಯನ್ನು ನೋಡಲು ಬಂದು ಅವರೆದೆಯ ಮೇಲೆ ಮುಖವಿಟ್ಟು ಬಿಕ್ಕಿದ್ದ ಟ್ಯಾಗೋರ್ ಈಗ ಬೇರೆ ಹಾಡು ಶುರುಮಾಡಿದ್ದರು. ಪೂನಾ ಒಪ್ಪಂದವನ್ನು ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ಪ್ರತ್ಯೇಕ ಸಮ್ಮೇಳನ ಮಾಡಿ ಅಂಗೀಕರಿಸಿದ್ದ ಹಿಂದೂ ಮಹಾಸಭಾದ ಮುಖಂಡರು ಅದಕ್ಕೆ ತಿದ್ದುಪಡಿಯಾಗಬೇಕೆಂದು ಬಯಸಿದರು. ಪಂಜಾಬಿನಲ್ಲಿ ಅಸ್ಪೃಶ್ಯತೆ ಸಮಸ್ಯೆಯೇ ಇಲ್ಲದಿರುವುದರಿಂದ ಅಲ್ಲಿ ಅದನ್ನು ಅನ್ವಯಿಸಬಾರದೆಂದು ಹೇಳಿದರು. ಬಂಗಾಳ ಶಾಸನಸಭೆ ಪ್ರಸ್ತಾವವೊಂದನ್ನು ಅಂಗೀಕರಿಸಿ ಪೂನಾ ಒಪ್ಪಂದ ರದ್ದತಿಗೆ ಒತ್ತಾಯಿಸಿತು. ಬಂಗಾಳದ ಒಬ್ಬ ಹಿಂದೂ ಪ್ರತಿನಿಧಿಯೂ ಪೂನಾ ಒಪ್ಪಂದದಲ್ಲಿ ಭಾಗೀದಾರ ಆಗಿಲ್ಲದಿರುವುದರಿಂದ ಅದು ತಮಗೆ ಅನ್ವಯಿಸುವುದಿಲ್ಲ ಎನ್ನುವುದು ಅವರ ವಾದವಾಗಿತ್ತು. ಬ್ರಿಟಿಷ್ ಸರ್ಕಾರ ಈ ಬಗ್ಗೆ ಅಂಬೇಡ್ಕರರಿಗೆ ಪತ್ರ ಬರೆಯಿತು. ಅದಕ್ಕೆ ಉತ್ತರಿಸುತ್ತ ಅವರು, “ಪೂನಾ ಒಪ್ಪಂದದ ಸಮಯದಲ್ಲಿ ಸಂಧಾನಕಾರರಾಗಿ ಅನೇಕ ಬಂಗಾಳಿ ಹಿಂದೂಗಳು ಪ್ರಮುಖ ಪಾತ್ರ ವಹಿಸಿರುವಾಗ ಹೀಗೆ ಹೇಳುತ್ತಿರುವುದು ತಪ್ಪು. ಬ್ರಿಟಿಷ್ ಸರ್ಕಾರ ತೆಗೆದುಕೊಳ್ಳುವ ತೀರ್ಮಾನವು ಪೂರಾ ಬ್ರಿಟಿಷ್ ಇಂಡಿಯಾಕ್ಕೆ ಅನ್ವಯವಾಗುವಾಗ ಬಂಗಾಳವು ತಪ್ಪಿಸಿಕೊಳ್ಳಲಾರದು. ಅಷ್ಟೇ ಅಲ್ಲ, ಬಂಗಾಳದ ಶೋಷಿತ ಸಮುದಾಯಗಳ ಮುಖಂಡರು 50 ಸ್ಥಾನ ಬಯಸಿದ್ದಾಗ 30 ಸ್ಥಾನಕ್ಕೆ ಅವರನ್ನು ತೃಪ್ತಗೊಳಿಸಿ ಪೂನಾ ಒಪ್ಪಂದಕ್ಕೆ ಬದ್ಧರಾಗಿರುವಂತೆ ಒಪ್ಪಿಸಿದ್ದೇನೆ. ಅಲ್ಲಷ್ಟೇ ಅಲ್ಲ, ಮುಂಬಯಿ, ಬಿಹಾರ್, ಪಂಜಾಬ್, ಉತ್ತರ ಪ್ರದೇಶ, ಒರಿಸ್ಸಾದ ಶೋಷಿತ ಸಮುದಾಯವೂ ಸ್ಥಾನಸಂಖ್ಯೆಯ ಕುರಿತು ಅಸಮಾಧಾನ ಹೊಂದಿವೆ,” ಎಂದು ಬರೆದರು.

ಜಂಟಿ ಸಂಸದೀಯ ಸಮಿತಿಯಲ್ಲಿ ಭಾಗವಹಿಸಲು ಏಪ್ರಿಲ್‌ನಲ್ಲಿ ಮತ್ತೆ ಲಂಡನ್ನಿಗೆ ಹೊರಟ ಅಂಬೇಡ್ಕರ್‌ರನ್ನು ಗಾಂಧಿ ಯರವಾಡಾ ಜೈಲಿನಲ್ಲಿ ಮತ್ತೆ ಭೇಟಿ ಮಾಡುವಂತೆ ಕೇಳಿದರು. ಯರವಾಡಾದಲ್ಲಿ ಗಾಂಧೀಜಿಯ ಜೊತೆ ಪ್ರಾಥಮಿಕ ಚುನಾವಣೆ ಹಾಗೂ ಅಭ್ಯರ್ಥಿಗಳ ಪಟ್ಟಿ ತಯಾರಿಯ ಕುರಿತು ಚರ್ಚೆಯಾಯಿತು. ಸಾರ್ವತ್ರಿಕ ಚುನಾವಣೆ ಎದುರಿಸುವ ಶೋಷಿತ ಸಮುದಾಯದ ಅಭ್ಯರ್ಥಿ ಪ್ರಾಥಮಿಕ ಹಂತದಲ್ಲಿ ಕನಿಷ್ಠ 25% ಮತ ಗಳಿಸಿರಬೇಕು ಎಂದು ಅಂಬೇಡ್ಕರ್ ಹೇಳಿದರು. ಆ ವಿಷಯದ ಕುರಿತು ಅಂಬೇಡ್ಕರ್ ಅವರ ಲಂಡನ್ ವಿಳಾಸಕ್ಕೆ ಪತ್ರ ಬರೆಯುವುದಾಗಿ ಹೇಳಿದ ಗಾಂಧಿ, ಅಂಬೇಡ್ಕರ್ ಕೈಗೆ ಹೂಗುಚ್ಛವನ್ನಿತ್ತು ಮಾತನ್ನು ಅಸ್ಪೃಶ್ಯತೆ ನಿವಾರಣೆ ಕಡೆಗೆ ತಿರುಗಿಸಿದರು.

*****

ಒಂದು ವೇಳೆ ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್ ತಮ್ಮ ನಿಲುವನ್ನು ಕೊಂಚವೂ ಬದಲಿಸದೆ ಕಠಿಣವಾಗಿ ಉಳಿದುಬಿಟ್ಟಿದ್ದಿದ್ದರೆ ಉಪವಾಸದಿಂದ ಬಳಲಿ ಮಲಗಿದ್ದ ಗಾಂಧಿ ತೀರಿಕೊಳ್ಳುವ ಸಾಧ್ಯತೆಗಳಿದ್ದವು. ಆಗ ಅಂಬೇಡ್ಕರರನ್ನು ಖಳನನ್ನಾಗಿಸಿ, ಈ ದೇಶದಲ್ಲಿ ಶೋಷಿತರ ಮಾರಣಹೋಮವೇ ನಡೆದುಹೋಗುತ್ತಿತ್ತು. ಬಹುಶಃ ಅಂಬೇಡ್ಕರರಿಗಿದ್ದ ದೂರದೃಷ್ಟಿ ಈ ದುರಂತ ಸಂಭವಿಸದಂತೆ ನೋಡಿಕೊಂಡಿತು.

ಹೀಗೆ ಪೂನಾ ಒಪ್ಪಂದವು ರಾಜಕೀಯ ಒಪ್ಪಂದವಾಗಿದ್ದರೂ ಅದಕ್ಕೆ ವಿಶಾಲ ಧಾರ್ಮಿಕ, ಸಾಮಾಜಿಕ ಆಯಾಮಗಳಿದ್ದವು. ಅದರ ಪರಿಣಾಮದ ಬಗ್ಗೆ ಒಪ್ಪಂದದ ಆರಂಭದ ದಿನಗಳಲ್ಲಿ ಉತ್ಸಾಹಿತರಾದಂತೆ ಕಂಡುಬಂದ ಅಂಬೇಡ್ಕರ್ ನಂತರ ಕ್ರಮೇಣ ಯಥಾಸ್ಥಿತಿ ಮುಂದುವರೆದಿದ್ದನ್ನು ಖಿನ್ನತೆಯಿಂದ ಗಮನಿಸುತ್ತಾರೆ. ದಿನಕಳೆದಂತೆ ಅಸ್ಪೃಶ್ಯತೆ ನಿವಾರಣೆ ಅಷ್ಟು ಸುಲಭವಲ್ಲವೆಂದೂ, ಅದರ ಬೇರು ನಾಶವಾಗದೇ ಬರಿಯ ಟೊಂಗೆಗಳನ್ನು ಕಡಿದು ಉಪಯೋಗವಿಲ್ಲವೆಂದೂ ಅವರಿಗೆ ಮನದಟ್ಟಾಗುತ್ತದೆ. ಕಲಿತ, ತಿಳಿದ, ಪ್ರಭಾವಿ ಅಧಿಕಾರಸ್ಥರಾದ ತಾವೇ ತಾರತಮ್ಯ ಎದುರಿಸುತ್ತಿರಬೇಕಾದರೆ ಹಳ್ಳಿಹಳ್ಳಿಗಳಲ್ಲಿ ಬದುಕಿರುವ ಕೋಟ್ಯಂತರ ಬಡ ಶೋಷಿತರ ಪಾಲಿಗೆ ದೇವಾಲಯ ಪ್ರವೇಶದಂತಹ ಕಣ್ಣೊರೆಸುವ ತಂತ್ರಗಳು ಶಾಶ್ವತ ಪರಿಹಾರ ಒದಗಿಸಲಾರವು ಎಂದೆನಿಸಿ ಮತಾಂತರ ನಿರ್ಧಾರಕ್ಕೆ, ಸ್ಥಾನಮೀಸಲು ಹೋರಾಟಕ್ಕೆ ತಾತ್ವಿಕ ನೆಲೆ ಒದಗಿಸುತ್ತದೆ.

ಹೀಗೆ ಪೂನಾ ಒಪ್ಪಂದವು ಸ್ವಾತಂತ್ರ್ಯ ಹೋರಾಟ, ಗಾಂಧಿ-ಅಂಬೇಡ್ಕರ್ ಸಂಘರ್ಷ, ಹಿಂದೂ ಸಮಾಜ ಸುಧಾರಣೆಯ ಕಷ್ಟಗಳು, “ಹರಿಜನ”ರಿಂದ ಆತ್ಮಾಭಿಮಾನಿ “ದಲಿತ”ರ ಹುಟ್ಟು, ಅಂಬೇಡ್ಕರರ ಮತಾಂತರ ಒಲವಿಗೆ ಕಾರಣಗಳನ್ನು ಅನಾವರಣಗೊಳಿಸುತ್ತ ಇತಿಹಾಸದ ಪುಟಗಳನ್ನು ಏಕೆ ಮತ್ತೆಮತ್ತೆ ತಿರುವಿ ಹಾಕಬೇಕೆಂದು ಸ್ಪಷ್ಟಪಡಿಸುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)