Tag Archives: ನಕ್ಸಲ್ ಕಥನ

ಪ್ರಜಾ ಸಮರ-9 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಆಂಧ್ರದಲ್ಲಿ ಎನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ 1989ರ ಚುನಾವಣೆಯಲ್ಲಿ ಪತನಗೊಂಡು ಡಿಸಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮುಖ್ಯಮಂತ್ರಿಯಾಗಿ ಡಾ.ಎಂ. ಚೆನ್ನಾರೆಡ್ಡಿ ಅಧಿಕಾರ ವಹಿಸಿಕೊಂಡರು. ಪ್ರಜಾಸಮರಂ ಗ್ರೂಪ್ ಮೇಲೆ ತೆಲುಗು ದೇಶಂ ಸರ್ಕಾರ ಹೇರಲಾಗಿದ್ದ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿತು. ಬಂಧಿಸಲಾಗಿದ್ದ ಎಲ್ಲಾ ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಇದರ ಅಂಗವಾಗಿ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ರ್‍ಯಾಲಿಗೆ ಐದು ಲಕ್ಷ ಜನ ಸೇರುವುದರ ಮೂಲಕ ನಕ್ಸಲಿಯರ ಸಾಮರ್ಥ್ಯ ಏನೆಂಬುದನ್ನು ಸಮಾಜಕ್ಕೆ ತೋರಿಸಿಕೊಡಲಾಯಿತು. ಈ ವೇಳೆಗಾಗಲೇ ವಯಸ್ಸು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಬಸ್ತಾರ್ ಅರಣ್ಯ ಪ್ರದೇಶದ ಗುಪ್ತ ಸ್ಥಳಕ್ಕೆ ಸಾಗಿಸಿ ವಿಶ್ರಾಂತಿ ನೀಡಲಾಗಿತ್ತು.

ಇದೇ ಸಮಯಕ್ಕೆ ಸರಿಯಾಗಿ ಆಂಧ್ರದ ಪಿ.ಡಬ್ಲ್ಯು.ಜಿ. ಗುಂಪಿನ ಸದಸ್ಯರು ತಮಿಳುನಾಡಿನ ಕೆಲವು ಸದಸ್ಯರ ಮೂಲಕ ಶ್ರೀಲಂಕಾದ ಎಲ್.ಟಿ.ಟಿ.ಇ. ಗುಂಪಿನ ಜೊತೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ತಮಿಳು ಮೂಲದ ಎಲ್.ಟಿ.ಟಿ.ಇ. ಸಂಘಟನೆಯ ಸದಸ್ಯರು ಶ್ರೀಲಂಕಾದಿಂದ  ಆಂಧ್ರಕ್ಕೆ ಬಂದು ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳು ಕಾಲ ನಕ್ಸಲಿಯರಿಗೆ ಆಧುನಿಕ ಗೆರಿಲ್ಲಾ ಯುದ್ಧ ತಂತ್ರಗಳನ್ನು ಕಲಿಸಿದರು. ಅಷ್ಟೇ ಅಲ್ಲದೇ ಕೇವಲ ಬಂದೂಕು ಮತ್ತು ಬಾಂಬ್‌‌ಗಳನ್ನು ಬಳಸುತ್ತಿದ್ದ ನಕ್ಸಲರಿಗೆ ಅತ್ಯಾಧುನಿಕ ಶಸ್ರಾಸ್ತ್ರಗಳಾದ ಏ.ಕೆ. 47 ಬಂದೂಕು, ಮಿಷಿನ್‌ಗನ್, ರಾಕೇಟ್‌ಲಾಂಚರ್‌‍ಗಳನ್ನು ಕೊಟ್ಟು ಹೋದರು. ಪಿ.ಡಬ್ಲ್ಯು.ಜಿ. ಮತ್ತು ಎಲ್.ಟಿ.ಟಿ.ಇ. ಸಂಘಟನೆಗಳ ನಡುವೆ ಶಸ್ರಾಸ್ತ್ರಗಳ ಖರೀದಿ ಒಪ್ಪಂದ ಕೂಡ ಏರ್ಪಟ್ಟಿತು.

ಕೇವಲ ಒಂದು ವರ್ಷದ ಅವಧಿಯಲ್ಲಿ, ಅಂದರೆ 1990ರಲ್ಲಿ ಡಾ. ಎಂ. ಚೆನ್ನಾರೆಡ್ಡಿಯ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಬಂದ ಎನ್. ಜನಾರ್ದನ ರೆಡ್ಡಿಯ ಆಗಮನದಿಂದಾಗಿ ಮಾವೋವಾದಿ ನಕ್ಸಲರ ಮತ್ತು ಸರ್ಕಾರದ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿತು. ಉಭಯ ಬಣಗಳ ಸಂಘರ್ಷ  ಮುಂದುವರೆದು, 92ರಲ್ಲಿ ಕಾಂಗ್ರೆಸ್ ಪಕ್ಷದ ಮೂರನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ವಿಜಯಬಾಸ್ಕರ ರೆಡ್ಡಿಯ ಕಾಲದಲ್ಲಿ ತೀವ್ರವಾಗಿ ಉಲ್ಭಣಗೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರ ಕೂಡ ಆಂಧ್ರ ಪ್ರದೇಶದಲ್ಲಿ ಎಲ್ಲಾ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧವನ್ನು  ಜಾರಿ ಮಾಡಿತು.

1995ರಲ್ಲಿ ನಡೆದ ಚುಣಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಎನ್.ಟಿ.ಆರ್. ಮತ್ತೇ ಅಧಿಕಾರಕ್ಕೆ ಬಂದರು. ಆದರೆ ಅವರ ಅವಧಿ ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಏಕೆಂದರೆ, ಎನ್.ಟಿ.ಆರ್. ತಮ್ಮ ವೃದ್ಧಾಪ್ಯದಲ್ಲಿ ಶಿವಪಾರ್ವತಿ ಎಂಬ ಹೆಸರಿನ ಹರಿಕಥೆ ಮಾಡುತ್ತಿದ್ದ ಮಧ್ಯ ವಯಸ್ಸಿನ ಹೆಣ್ಣುಮಗಳನ್ನು ಮೋಹಿಸಿ ವಿವಾಹವಾದ ಕಾರಣಕ್ಕಾಗಿ ಕುಟುಂಬದ ಸದಸ್ಯರಿಂದ ಮತ್ತು ಪಕ್ಷದ ಶಾಸಕರಿಂದ ತಿರಸ್ಕೃತಗೊಂಡರು. ಕ್ಷಿಪ್ರಗತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಎನ್.ಟಿ.ಆರ್. ಸ್ಥಾನಕ್ಕೆ ಅವರ ಅಳಿಯ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಬಂದರು. ನಾಯ್ಡು ಕೂಡ 1996ರ ಜುಲೈ ತಿಂಗಳಿನಲ್ಲಿ ಪ್ರಜಾ ಸಮರಂ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿ, ಕಾರ್ಯಕರ್ತರನ್ನು ಬಂಧಿಸಲು ಸೂಚಿಸಿದರು. ಇದರಿಂದ ಕೆರಳಿದ ನಕ್ಸಲರು ನಾಯ್ಡು ಹತ್ಯೆಗೆ ಸಂಚು ರೂಪಿಸಿದರು. 1998 ರಲ್ಲಿ ಕರೀಂನಗರ ಜಿಲ್ಲೆಯೊಂದರಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ಸಂದರ್ಭದಲ್ಲಿ ಸ್ಪೋಟಕಗಳನ್ನು ಇಡಲಾಗಿದ್ದ ಎತ್ತಿನ ಗಾಡಿಯೊಂದನ್ನು ರಸ್ತೆ ಬದಿ ನಿಲ್ಲಿಸಿ  ನಾಯ್ಡ ಅವರ ಕಾರು ಹಾಯ್ದು ಹೋಗುವಾಗ ಸ್ಪೋಟಿಸಲು ನಕ್ಸಲರು ಯೋಜನೆ ರೂಪಿಸಿದ್ದರು. ಆದರೆ, ಪೊಲೀಸರ ಮುಂಜಾಗ್ರತಾ ಕ್ರಮದಿಂದ ಬಾಂಬುಗಳು ಪತ್ತೆಯಾದ ಕಾರಣ ಆ ದಿನ ಚಂದ್ರಬಾಬು ನಾಯ್ಡುರವರ ಪ್ರಾಣ ಉಳಿಯಿತು.

ಪ್ರಜಾಸಮರ ದಳ ತನ್ನ ಕಾರ್ಯ ಚಟುವಟಿಕೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಪೀಪಲ್ಸ್ ಆರ್ಮಿ ಗ್ರೂಪ್ (ಪಿ.ಜಿ.ಎ.) ಎಂಬ ಇನ್ನೊಂದು ಹೋರಾಟದ ಪಡೆಯನ್ನು 2000ದ ಡಿಸಂಬರ್ ತಿಂಗಳಿನಲ್ಲಿ ಹುಟ್ಟುಹಾಕಿತು. ಇದಕ್ಕೆ ಶ್ರೀಲಂಕಾದ ಎಲ್.ಟಿ.ಟಿ. ಸಂಘಟನೆಯ ಕಾರ್ಯಯೋಜನೆ ಪರೋಕ್ಷವಾಗಿ ಪ್ರೇರಣೆಯಾಗಿತ್ತು. ಈ ಬೆಳವಣಿಗೆಯಿಂದ ವಿಚಲಿತಗೊಂಡ ನಾಯ್ಡು ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಬುಡಸಮೇತ ಕಿತ್ತೊಗೆಯಬೇಕೆಂದು ನಿರ್ಧರಿಸಿದರು. ಈ ಕಾರಣಕ್ಕಾಗಿ ಆಂಧ್ರ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರು. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ಪೊಲೀಸರು ನಕ್ಸಲ್ ನಾಯಕರನ್ನು ನಿರಂತರ ಬೇಟೆಯಾಡಿ ಕೊಂದರು. ಪೊಲೀಸರ ಈ ಆಕ್ರೋಶಕ್ಕೆ ಒಂದು ಬಲವಾದ ಕಾರಣವಿತ್ತು.

1989ರಲ್ಲಿ ನಕ್ಸಲ್ ಚಟುವಟಿಕೆಯ ನಿಗ್ರಹಕ್ಕೆ ಆಂಧ್ರ ಸರ್ಕಾರ ವಿಶೇಷ ಪಡೆಯೊಂದನ್ನು ರೂಪಿಸಿ, ಅದರ ನೇತೃತ್ವವನ್ನು ಹಿರಿಯ ಪೊಲೀಸ್ ಅಧಿಕಾರಿ ಕೆ.ಎಸ್.ವ್ಯಾಸ್ ಅವರಿಗೆ ವಹಿಸಿತ್ತು. ರಾಷ್ಟ್ರೀಯ ಭದ್ರತಾ ಕಮಾಂಡೋ ಪಡೆಯ ಮಾದರಿಯಲ್ಲಿ ಪೊಲೀಸರನ್ನು ತಯಾರು ಮಾಡಲು ವ್ಯಾಸ್ ಅವರು ಅರಣ್ಯದ ಮಧ್ಯೆ ತರಬೇತಿ ಶಿಬಿರ ಆರಂಭಿಸಿ, ಮಿಲಿಟರಿ ಅಧಿಕಾರಿಗಳ ಮೂಲಕ ಆಂಧ್ರ ಪೊಲೀಸರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಈ ತರಬೇತಿ ಮತ್ತು ನಕ್ಸಲ್ ನಿಗ್ರಹ ಪಡೆ ಸೇರುವ ಪೊಲೀಸರಿಗೆ ತಮ್ಮ ವೇತನದ ಶೇ. 60 ರಷ್ಟು ಹೆಚ್ಚು ವೇತನ ನೀಡುವುದಾಗಿ ಆಂಧ್ರ ಸರ್ಕಾರ ಘೋಷಿಸಿತು.

ಆಂಧ್ರ ಸರ್ಕಾರದ ಈ ಯೋಜನೆಗೆ ಹಿಂಸೆಯ ಮೂಲಕ ಪ್ರತಿಕ್ರಿಯಿಸಿದ ನಕ್ಸಲರು 2001ರಲ್ಲಿ ಚಿತ್ತೂರು ಬಳಿ ಚಂದ್ರಬಾಬು ನಾಯ್ಡು ಮಾಲಿಕತ್ವದ ಹೆರಿಟೇಜ್ ಹಾಲು ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದರು. ಇದಲ್ಲದೆ ಚಿತ್ತೂರು ಕೈಗಾರಿಕಾ ವಲಯದಲ್ಲಿ ಇರುವ ಟಾಟಾ ಟೀ ಕಂಪನಿ ಮತ್ತು ಕೋಕಾಕೋಲಾ ಕಂಪನಿಯ ಮೇಲೆ ದಾಳಿ ನಡೆಸಿದರು. ಕೇಂದ್ರ ಸಚಿವರೊಬ್ಬರ ಗ್ರಾನೈಟ್ ಉದ್ದಿಮೆಯ ಘಟಕವನ್ನೂ ಸಹ ನಾಶಪಡಿಸಿದರು. ಈ ಸಂದರ್ಭದಲ್ಲಿ ವಿಚಲಿತಗೊಂಡ ಆಂಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಆಹ್ವಾನಿಸಿತು. 2002 ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸತತವಾಗಿ ನಡೆದ ಮೂರು ಸುತ್ತಿನ ಮಾತುಕತೆಗಳು ವಿಫಲವಾದವು. ಕೇಂದ್ರ ಸರ್ಕಾರ ಕೂಡ 2003ರ ಫೆಬ್ರವರಿ 8ರಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಿತು. ನಕ್ಸಲರ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ನಕ್ಸಲ್ ಪೀಡಿತ ರಾಜ್ಯಗಳ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರತಿ ವರ್ಷ 15 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿತು.

ತಮ್ಮ ಪ್ರತಿರೋಧವನ್ನು ತೀವ್ರಗೊಳಿಸಿದ ನಕ್ಸಲ್ ಕಾರ್ಯಕರ್ತರು 2003ರ ಮಾರ್ಚ್ 23ರಂದು ಅನಂತಪುರದ ಬಳಿ ಇರುವ ತಂಪು ಪಾನೀಯ ತಯಾರಿಕೆಯಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪನಿಯಾದ ಪೆಪ್ಸಿ ಘಟಕದ ಮೇಲೆ ದಾಳಿ ಮಾಡಿದರು. ಮೇ 28ರಂದು ರಾಯಾವರಂ ಎಂಬ ಗ್ರಾಮದಲ್ಲಿ ದೂರವಾಣಿ ಕೇಂದ್ರವನ್ನು ಧ್ವಂಸಗೊಳಿಸಿದರು. ಜುಲೈ ನಾಲ್ಕರಂದು ನಲ್ಗೊಂಡ ಜಿಲ್ಲೆಯ ದೊಂಡಪಡು ಎಂಬ ಗ್ರಾಮದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ದಾಳಿ ನಾಲ್ಕು ಲಕ್ಷ ರೂ ನಗದು ಮತ್ತು ಐವತ್ತು ಲಕ್ಷ ರೂಪಾಯಿ ಮೌಲ್ಯದ ಒಂಬತ್ತು ಕೆ.ಜಿ. ಚಿನ್ನವನ್ನು ದೋಚುವುದರ ಮೂಲಕ ನಕ್ಸಲ್ ಹೋರಾಟ ರಾಯಲಸೀಮಾ (ಕಡಪ,  ಕರ್ನೂಲು, ಅನಂತಪುರ, ಚಿತ್ತೂರು ಜಿಲ್ಲೆಗಳು) ಪ್ರದೇಶಕ್ಕೂ ಕಾಲಿಟ್ಟಿದೆ ಎಂಬ ಸಂದೇಶವನ್ನು ಆಂಧ್ರ ಸರ್ಕಾರಕ್ಕೆ ರವಾನಿಸಿದರು. ಇದೂ ಸಾಲದೆಂಬಂತೆ ಪೊಲೀಸ್ ಅಧಿಕಾರಿ ವ್ಯಾಸ್ ಅವರನ್ನು ತಮ್ಮ ಹಿಟ್ ಲಿಸ್ಟ್‌‌ನಲ್ಲಿ ದಾಖಲಿಸಿಕೊಂಡಿದ್ದ ನಕ್ಸಲರು 1993ರಲ್ಲಿ ಹೈದರಾಬಾದ್ ನಗರದ ಅವರ ನಿವಾಸದ ಮುಂದಿ ಕೈತೋಟದಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ಹತ್ಯೆ ಮಾಡಿದರು.

ಇವುಗಳಿಗೆ ತೃಪ್ತರಾಗದ ಪ್ರಜಾಸೈನ್ಯ ದಳ (ಪಿ.ಜಿ.ಎ.) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹತ್ಯೆಗೆ ಮತ್ತೇ ಯೋಜನೆ ರೂಪಿಸಿತು. 1993 ರ ಅಕ್ಟೋಬರ್ ತಿಂಗಳಿನಲ್ಲಿ ನಾಯ್ಡು ತಿರುಪತಿಗೆ ಭೇಟಿ ನೀಡುವ ಸಮಯದಲ್ಲಿ ರಸ್ತೆಯಲ್ಲಿ ನೆಲಬಾಂಬ್ ಇರಿಸಿ ಕೊಲ್ಲಲು ಪ್ರಯತ್ನಿಸಲಾಯಿತು. ತಿರುಮಲ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಅನ್ನು ಸ್ಪೋಟಿಸಲಾಯಿತಾದರೂ, ನಾಯ್ಡು ಪ್ರಯಾಣಿಸುತ್ತಿದ್ದ ಕಾರಿನ ಮುಂದಿನ ಚಕ್ರ ಮುಂದೆ ಸಾಗಿ, ಕಾರಿನ ಹಿಂದಿನ ಚಕ್ರದ ಬಳಿ ಬಾಂಬ್ ಸಿಡಿಯಿತು. ಮುಂದಿನ ಆಸನದಲ್ಲಿ ಕುಳಿತ್ತಿದ್ದ ನಾಯ್ಡು ಪ್ರಾಣಪಾಯದಿಂದ ಪಾರಾದರೂ ಕೂಡ ಅವರ ಭುಜಕ್ಕೆ ಬಲವಾದ ಪೆಟ್ಟು ಬಿದ್ದು ಪ್ರಜ್ಞಾಹೀನರಾದರು. ವೆಂಕಟೇಶ್ವರನ ದಯೆಯಿಂದ ಉಳಿದುಕೊಂಡೆ ಎಂದು ಹೇಳಿದ ಚಂದ್ರಬಾಬು ನಾಯ್ಡುಗೆ ಆಂಧ್ರದಲ್ಲಿ ನಕ್ಸಲಿಯರ ಬಗ್ಗೆ ಎಷ್ಟೊಂದು ಜೀವಭಯವಿದೆ ಎಂದರೆ, ಇವತ್ತಿಗೂ ಅವರು ಗೋದಾವರಿ ನದಿ ದಾಟಿ ಉತ್ತರ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಿಗೆ ಹೋಗಲು ಹೆದರುತ್ತಾರೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸುವುದಿಲ್ಲ. ಈ ಘಟನೆ ನಡೆದ ಒಂಬತ್ತು ವರ್ಷದ ನಂತರವೂ ಕೂಡ ನಕ್ಸಲರ ಹಿಟ್ ಲಿಸ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಎಂಬ ಹೆಸರು ಮೊದಲನೇ ಸ್ಥಾನದಲ್ಲಿದೆ. ಏಕೆಂದರೆ, ನಾಯ್ಡು ಹತ್ಯೆಗೆ ಸಂಚು ರೂಪಿಸಿದ್ದ ಹಿರಿಯ ಮಾವೋವಾದಿ ನಾಯಕ ಸಂಡೆ ರಾಜಮೌಳಿಯನ್ನು 2007ರಲ್ಲಿ ಬಂಧಿಸದ ಆಂಧ್ರ ಪೊಲೀಸರು ಎನ್‌‍ಕೌಂಟರ್ ಮೂಲಕ ಮುಗಿಸಿದರು. ಈ ನಾಯಕನ ಸುಳಿವಿಗಾಗಿ ಆಂಧ್ರ ಸರ್ಕಾರ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಆಂಧ್ರದಲ್ಲಿ ಪ್ರಜಾಸಮರಂ ಮತ್ತು ಅದರ ಅಂಗ ಘಟಕಗಳಿಂದ ತೀವ್ರತರವಾದ ಹಿಂಸಾತ್ಮಕ ಚಟುವಟಿಕೆ ನಡೆಯಲು ಅದರ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯನವರ ಅನುಪಸ್ಥಿತಿ ಕೂಡ ಪರೋಕ್ಷವಾಗಿ ಕಾರಣವಾಯಿತು. ಈ ನಡುವೆ ಕೊಂಡಪಲ್ಲಿಯವರ ವಿಚಾರಗಳಿಗೆ ಒಪ್ಪದ ಬಿಸಿರಕ್ತದ ಯುವ ನಾಯಕರು ಕೊಂಡಪಲ್ಲಿ ಅವರನ್ನು 1991ರಲ್ಲಿ ಸಂಘಟನೆಯಿಂದ ಹೊರಹಾಕಿದರು. ತನ್ನ ಒಡನಾಡಿ ಕೆ.ಜಿ. ಸತ್ಯಮೂರ್ತಿಯವರನ್ನು ಸೈದ್ಧಾಂತಿಕ ಭಿನ್ನಾಭಿಪ್ರಯಾದ ಮೇಲೆ ಹೊರಹಾಕಿದ್ದ ಕೋಡಪಲ್ಲಿ ಅದೇ ರೀತಿಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯಿಂದ ವೃದ್ಧಾಪ್ಯದಲ್ಲಿ ಹೊರದಬ್ಬಿಸಿಕೊಂಡರು. ಪಾರ್ಕಿಸನ್ ಕಾಯಿಲೆಗೆ ತುತ್ತಾಗಿದ್ದ ಅವರು 1992ರಲ್ಲಿ ತಮ್ಮೂರಾದ ಜೊನ್ನಪಡು ಗ್ರಾಮದ ಮನೆಯಲ್ಲಿದ್ದಾಗ ಆಂಧ್ರ ಪೊಲೀಸರಿಂದ ಬಂಧಿತರಾದರು. ನಾಲ್ಕು ವರ್ಷಗಳ ನಂತರ ಆಂಧ್ರ ಸರ್ಕಾರ ವೃದ್ಧಾಪ್ಯದ ಹಿನ್ನಲೆ ಮತ್ತು ಮಾನವೀಯ ನೆಲೆಯಲ್ಲಿ ಅವರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ರದ್ದು ಪಡಿಸಿ ಬಿಡುಗಡೆ ಮಾಡಿತು. 2002ರ ಏಪ್ರಿಲ್ ತಿಂಗಳಿನ 12 ರಂದು ತಮ್ಮ 87 ನೇ ವಯಸ್ಸಿನಲ್ಲಿ ವಿಜಯವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯ ನಿಧನರಾದರು. ಹತ್ತು ವರ್ಷಗಳ ನಂತರ 2012ರ ಅದೇ ಏಪ್ರಿಲ್ 8 ರಂದು ಅವರ ಒಡನಾಡಿ ಕೆ.ಜಿ.ಸತ್ಯಮೂರ್ತಿ ಸಹ ವಿಜಯವಾಡದ ಸಮೀಪದ ಹಳ್ಳಿಯಲ್ಲಿ ಲಾರಿ ಚಾಲಕನಾಗಿದ್ದ ಅವರ ಕಿರಿಯ ಮಗನ ಮನೆಯಲ್ಲಿದ್ದಾಗ 84 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಇದೇ 2012ರ ಏಪ್ರಿಲ್ ಕೊನೆಯ ವಾರ ಹೈದರಾಬಾದ್ ನಗರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿದ ಇಬ್ಬರು ಮಹಾನ್ ನಾಯಕರ ನೆನಪಿಗೆ ಯಾವುದೇ ಭಾಷಣಗಳಿಲ್ಲದೆ, ಹೋರಾಟದ ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಗೌರವ ಸಮರ್ಪಿಸಿದರು.

ಆಂಧ್ರ ಪ್ರದೇಶದಲ್ಲಿ 2003ರ ವೇಳೆಗೆ, 23 ವರ್ಷಗಳ ಅವಧಿಯಲ್ಲಿ (1980-2003) ಸರ್ಕಾರ ಮತ್ತು ನಕ್ಸಲಿಯರ ನಡುವೆ ನಡೆದ ಸಂಘರ್ಷದಲ್ಲಿ 6 ಸಾವಿರ ಮಂದಿ ಮೃತಪಟ್ಟಿದ್ದರು. ಇದರಲ್ಲಿ ಆಂಧ್ರ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ 1800 ನಕ್ಸಲ್ ನಾಯಕರನ್ನು ಹತ್ಯೆಗೈಯ್ದಿದ್ದರು. ಅಲ್ಲದೇ ನಕ್ಸಲರ ಗುಂಡಿಗೆ 1100ಕ್ಕು ಹೆಚ್ಚು ಪೊಲೀಸರು ಬಲಿಯಾಗಿದ್ದರು. ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅತಿ ಹೆಚ್ಚು ಎನ್‌‍ಕೌಂಟರ್‌ಗಳು ಜರುಗಿದ್ದವು. ಈ ನಡುವೆ ನಕ್ಸಲ್ ಸಂಘಟನೆಯಲ್ಲಿ ಮಹತ್ತರ ಬೆಳವಣಿಗೆಯೊಂದು ಜರುಗಿತು. ಎಂ.ಸಿ.ಸಿ. (ಮಾವೋ ಕಮ್ಯೂನಿಷ್ಟ್ ಸೆಂಟರ್) ಎಂದು ಪ್ರತ್ಯೇಕ ಗೊಂಡಿದ್ದ ಬಣ ಪೀಪಲ್ಸ್ ವಾರ್ ಗ್ರೂಪ್ ಜೊತೆ 2004ರಲ್ಲಿ ಸೇರ್ಪಡೆಗೊಂಡಿತು. ಇದರಿಂದಾಗಿ ಮಧ್ಯಭಾರತ ಮತ್ತು ಪೂರ್ವ ಭಾಗದ ರಾಜ್ಯಗಳ ಮೇಲೆ ಪೀಪಲ್ಸ್ ವಾರ್ ಗ್ರೂಪ್ ಬಣದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಯಿತು.

2004ರಲ್ಲಿ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಸರ್ಕಾರ ಪತನಗೊಂಡು, ಡಾ.ವೈ.ಎಸ್. ರಾಜಶೇಖರರೆಡ್ಡಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾದ ಕೂಡಲೇ ಆಂಧ್ರದ ನಕ್ಸಲ್ ಸಂಘಟನೆಗಳ ಮೇಲಿದ್ದ ನಿಷೇಧವನ್ನು ತೆಗೆದು ಹಾಕಿದರು. ಎಲ್ಲಾ ಸಂಘಟನೆಯ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದರು. 2004ರ ಅಕ್ಟೋಬರ್ 15 ರಿಂದ 18 ರವರೆಗೆ ಹೈದರಾಬಾದ್ ನಗರದಲ್ಲಿ ನಡೆದ ಮಾತುಕತೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್‌‍ನ ಕಾರ್ಯದರ್ಶಿ ರಾಮಕೃಷ್ಣ ಅಲಿಯಾಸ್ ಅಕ್ಕಿರಾಜು ಮತ್ತು ಆಂಧ್ರ-ಒರಿಸ್ಸಾ ಗಡಿಭಾಗದ ಹೊಣೆಹೊತ್ತಿದ್ದ ಸುಧಾಕರ್ ಮತ್ತು ಉತ್ತರ ತೆಲಂಗಾಣ ಭಾಗದಿಂದ ಜಿ.ರವಿ ಹಾಗೂ ಜನಶಕ್ತಿ ಸಂಘಟನೆಯ ನಾಯಕರಾದ ಅಮರ್ ಮತ್ತು ರಿಯಾಜ್ ಸೇರಿದಂತೆ ಹಲವು ಪ್ರಮುಖರು ಮಾತುಕತೆಯಲ್ಲಿ ಪಾಲ್ಗೊಂಡರು. ಆಂಧ್ರ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ನಂತರ ನಾಗರೀಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದ ಎಸ್.ಆರ್. ಶಂಕರನ್ ಉಭಯ ಬಣಗಳ ನಡುವೆ ಮಧ್ಯಸ್ತಿಕೆ ವಹಿಸಿದ್ದರು. ನಕ್ಸಲ್ ಸಂಘಟನೆಗಳ ನಾಯಕರು ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸಿದರು.

ಅವುಗಳೆಂದರೆ:

  1. ಸರ್ಕಾರ ಸ್ವತಂತ್ರ ಆಯೋಗವನ್ನು ರಚಿಸಿ ಸರ್ಕಾರಿ ಭೂಮಿಯನ್ನು ಗುರುತಿಸಬೇಕು.
  2. ಈ ಭೂಮಿಯನ್ನು ಆದಿವಾಸಿಗಳಿಗೆ ಮತ್ತು ಭೂರಹಿತ ಕೃಷಿಕೂಲಿಕಾರ್ಮಿಕರಿಗೆ ಹಂಚಬೇಕು.
  3. ಆಂಧ್ರ ಪ್ರದೇಶದಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ನಡೆಯುತ್ತಿರುವ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಬೇಕು.

ಈ ಬೇಡಿಕೆಗಳನ್ನು ಆಲಿಸಿದ  ಸರ್ಕಾರ ತಕ್ಷಣಕ್ಕೆ ಯಾವುದೇ ಆಶ್ವಾಸನೆ ನೀಡದೇ ಬೇಡಿಕೆಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿ ತೀರ್ಮಾನ ಕೈಗೊಳ್ಳುವುದಾಗಿ  ತಿಳಿಸಿತು. ಶಾಂತಿ ಮಾತುಕತೆಗಾಗಿ ಮೂರು ತಿಂಗಳ ಕಾಲ ಘೋಷಿಸಲಾಗಿದ್ದ ಕದನ ವಿರಾಮ ಮುಕ್ತಾಯದ ಹಂತಕ್ಕೆ ಬಂದರೂ ಕೂಡ ಆಂಧ್ರ ಸರ್ಕಾರದಿಂದ ನಕ್ಸಲರ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಮಾತುಕತೆ ವಿಫಲವಾಯಿತು. ಆದರೆ, ಇದರಿಂದ ಆಂಧ್ರ ಪೊಲೀಸರಿಗೆ ಮಾತ್ರ ಉಪಯೋಗವಾಗಿತ್ತು. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಹಲವಾರು ನಾಯಕರ ಭಾವಚಿತ್ರಗಳನ್ನ ಈ ಸಂದರ್ಭದಲ್ಲಿ ಸೆರೆ ಹಿಡಿದರು.

ಸರ್ಕಾರದೊಂದಿಗೆ ಮಾತುಕತೆ ವಿಫಲಗೊಂಡ ನಂತರ 2004ರ ಡಿಸಂಬರ್ ತಿಂಗಳಿನಲ್ಲಿ ಹೈದರಾಬಾದ್ ಸಮೀಪದ ಘಾಟ್‌ಶೇಖರ್ ಎಂಬ ಪಟ್ಟಣದ ಬಳಿ ಆಂಧ್ರ ಸರ್ಕಾರದ ಪಂಚಾಯತ್ ಖಾತೆ ಸಚಿವ ಎ. ಮಾಧವರೆಡ್ಡಿ ನಕ್ಸಲರ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾಯಿತು. ನಂತರ 2005ರ ಮಾರ್ಚ್ 11ರಂದು ಗುಂಟೂರು ಜಿಲ್ಲೆಯ ಚಿಲ್ಕುರಿಪೇಟ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ನಕ್ಸಲಿಯರು ಏಳು ಮಂದಿ ಪೊಲೀಸರ ಹತ್ಯೆಗೆ ಕಾರಣರಾದರು. ಇದಕ್ಕೆ ಪ್ರತಿಯಾಗಿ ಆಂಧ್ರ ಪೊಲೀಸರು 2005 ರ ಏಪ್ರಿಲ್ 5 ರಂದು ಜನಶಕ್ತಿ ಸಂಘಟನೆಯ ನಾಯಕ ರಿಯಾಜ್‌‍ನನ್ನು ಎನ್‌ಕೌಂಟರ್ ಮೂಲಕ ಮುಗಿಸಿದರು. ಇದರಿಂದ ರೊಚ್ಚಿಗೆದ್ದ ನಕ್ಸಲ್ ಸಂಘಟನೆಗಳು ಎನ್‌ಕೌಂಟರ್‌ಗೆ ಪ್ರತಿಯಾಗಿ 2005ರ ಆಗಸ್ಟ್ 15ರಂದು ಮೆಹಬೂಬ್ ನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ನರಸರೆಡ್ಡಿ ಸೇರಿದಂತೆ ಎಂಟು ಮಂದಿ ಕಾಂಗ್ರೇಸ್ ಕಾರ್ಯಕರ್ತರನ್ನು ಹತ್ಯೆಮಾಡಿದರು. ಅಂತಿಮವಾಗಿ 2005ರ ಆಗಸ್ಟ್ 17ರಂದು ಆಂಧ್ರಾದ್ಯಂತ ಪೀಪಲ್ಸ್ ವಾರ್ ಗ್ರೂಪ್ ಸೇರಿದಂತೆ ಎಲ್ಲಾ ಸಂಘಟನೆಗಳ ಮೇಲೆ ಮತ್ತೇ ನಿಷೇಧ ಹೇರಲಾಯಿತು. ಮತ್ತೇ ಎರಡನೇ ಬಾರಿ ಆಂಧ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ಡಾ. ರಾಜಶೇಖರ್ ರೆಡ್ಡಿ ನಂತರದ ಕೆಲವೇ ದಿನಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಇದರಿಂದಾಗಿ ಸರ್ಕಾರ ಮತ್ತು ನಕ್ಸಲರ ನಡುವಿನ ಸಂಧಾನದ ಬಾಗಿಲು ಮುಚ್ಚಿ ಹೊಯಿತು.

ಈ ನಡುವೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಪ್ರತ್ಯೇಕ ತೆಲಂಗಣಾ ರಾಜ್ಯಕ್ಕೆ ಹೋರಾಟ ತೀವ್ರಗೊಂಡಿದ್ದರಿಂದ ಇಡೀ ರಾಜ್ಯದ ಎಲ್ಲಾ ಜನತೆಯ ಗಮನ ಅತ್ತ ಹರಿಯಿತು. ಇತ್ತೀಚೆಗೆ ಆಂಧ್ರದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಸಂಘರ್ಷ ಕಡಿಮೆಯಾಗಿದ್ದು, ಅಘೋಷಿತ ಕದನ ವಿರಾಮ ಏರ್ಪಟ್ಟಂತೆ ಕಾಣಬರುತ್ತಿದೆ. ನಕ್ಸಲ್ ಸಂಘಟನೆಯ ನಾಯಕರು ತೆಲಂಗಣಾ ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಕಾರ್ಯಚಟುವಟಿಕೆಯನ್ನು ಮಧ್ಯಪ್ರದೇಶ, ಛತ್ತೀಸ್‌ಘಡ ನಡುವಿನ ದಂಡಕಾರಣ್ಯ ಮತ್ತು ಬಸ್ತಾರ್ ಅರಣ್ಯ ಪ್ರದೇಶದ ಆದಿವಾಸಿಗಳಿಗೆ ಮೀಸಲಿರಿಸಿದ್ದಾರೆ. ಆಂಧ್ರದ ಕರೀಂನಗರ, ನಲ್ಗೊಂಡ, ವಾರಂಗಲ್. ಶ್ರೀಕಾಕುಳಂ, ಅದಿಲಾಬಾದ್, ಕೃಷ್ಣಾ, ಗೋದಾವರಿ, ಕಮ್ಮಂ ಜಿಲ್ಲೆಗಳಲ್ಲಿ ಇವತ್ತಿಗೂ ನಕ್ಸಲರ ಪ್ರಾಬಲ್ಯವಿದ್ದು, ಸರ್ಕಾರದ ಎಲ್ಲಾ ಕಾಮಗಾರಿ ಕೆಲಸಗಳ ಗುತ್ತಿಗೆದಾರರು ಮತ್ತು  ಅಬ್ಕಾರಿ ಗುತ್ತಿಗೆದಾರರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಅಬ್ಕಾರಿ ಗುತ್ತಿಗೆಯನ್ನು ತಾವೇ ನಿಭಾಯಿಸುತಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಬಳಿ ಗೋದಾವರಿ ನದಿಗೆ ಪೊಲಾವರಂ ಬಳಿ ನಿರ್ಮಿಸಲು ಉದ್ದೇಶಿಲಾಗಿರುವ ಇಂದಿರಾ ಸಾಗರ ಅಣೆಕಟ್ಟಿನಿಂದ ಎರಡು ಲಕ್ಷ ಆದಿವಾಸಿ ಕುಟುಂಬಗಳು ಅತಂತ್ರರಾಗುವ ಸಂಭವವಿದೆ. ಈ ಅಣೆಕಟ್ಟಿನ ನಿರ್ಮಾಣಕ್ಕೆ ಪೀಪಲ್ಸ್ ವಾರ್ ಸಂಘಟನೆಯ ಈಗಿನ ನಾಯಕ ಗಣಪತಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟ ಸ್ಥಗಿತಗೊಂಡಂತೆ ಭಾಸವಾದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲಾದರೂ ಅಗ್ನಿಪರ್ವತದಂತೆ ಬಾಯಿ ತೆರೆಯಬಹುದು.

(ಮುಂದುವರಿಯುವುದು)

ಪ್ರಜಾ ಸಮರ-8 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕೊಂಡಪಲ್ಲಿ ಸೀತಾರಾಮಯ್ಯ ನಾಯಕತ್ವದ ಯುವ ಮಾವೋ-ಲೆನಿನ್‌ವಾದಿ ಕಮ್ಯೂನಿಷ್ಟ್ ಕಾರ್ಯಕರ್ತರು ಆಂಧ್ರದ ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಊಳಿಗ ಮಾನ್ಯ ವ್ಯವಸ್ಥೆಯ ವಿರುದ್ದ ಸಾರಿದ ಬಹಿರಂಗ ಸಮರದಿಂದಾಗಿ ದೊರೆಗಳಂತೆ ಮೆರೆಯುತ್ತಿದ್ದ ರೆಡ್ಡಿ ಮತ್ತು ವೆಲಮ ಜಾತಿಗೆ ಸೇರಿದ ಜಮೀನ್ದಾರರು ತಮ್ಮ ಸಾವಿರಾರು ಎಕರೆ ಜಮೀನುಗಳನ್ನು ತೊರೆದು ಊರು ಬಿಡುವಂತಹ ವಾತಾವರಣ ಸೃಷ್ಟಿಯಾಯಿತು. ಹಲವರಂತೂ ಜೀವ ಭಯದಿಂದ ಆಕ್ರಮಿಸಿಕೊಂಡಿದ್ದ ದಲಿತರು ಮತ್ತು ಆದಿವಾಸಿಗಳ ಭೂಮಿಯನ್ನು ನಕ್ಸಲಿಯರ ಸಂಘಟನೆಗೆ ಮರು ಮಾತಿಲ್ಲದೆ ಒಪ್ಪಿಸಿದ್ದರು.

ಆಂಧ್ರ ಸಕಾರವೇ ಅಧಿಕೃತವಾಗಿ ಒಪ್ಪಿಕೊಂಡಂತೆ, ಜಮೀನ್ದಾರರಿಂದ ವಶಪಡಿಸಿಕೊಂಡಿದ್ದ 80 ಸಾವಿರ ಎಕರೆ ವ್ಯವಸಾಯದ ಜಮೀನು ಮತ್ತು 1 ಲಕ್ಷದ 20 ಸಾವಿರ ಅರಣ್ಯದ ಭೂಮಿಯನ್ನು ಭೂರಹಿತ ದಲಿತರು ಮತ್ತು ಕೃಷಿ ಕೂಲಿಕಾರ್ಮಿಕರಿಗೆ ಕಮ್ಯೂನಿಷ್ಟ್ ಕಾರ್ಯಕರ್ತರು ಹಂಚಿದ್ದರು. ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ವ್ಯವಸಾಯದ ಕೂಲಿ ದರವನ್ನು 15 ರೂಪಾಯಿಗಳಿಂದ ದಿನವೊಂದಕ್ಕೆ 25 ರೂಪಾಯಿಗಳಿಗೆ ಏರಿಕೆ ಮಾಡಲಾಯಿತು. ಶ್ರೀಮಂತರ ಮನೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಆಳುಗಳ ವಾರ್ಷಿಕ ಸಂಬಳವನ್ನು ಎರಡು ಸಾವಿರದಿಂದ ನಾಲ್ಕು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಈ ಅಚ್ಚರಿಯ ಬೆಳವಣಿಗೆ ದೀನ ದಲಿತರಿಗೆ ನಕ್ಸಲ್ ಹೋರಾಟಗಾರರ ಮೇಲೆ ಪ್ರೀತಿ ವಿಶ್ವಾಸ ಹೆಚ್ಚಲು ಕಾರಣವಾಯಿತು.

‘ಕಾಡಿನಿಂದ ಬಂದ ದೊರೆಗಳಿಂದಾಗಿ ನಾಡಿನ ದೊರೆಗಳ ಕಿರುಕುಳ ತಪ್ಪಿತು ಎಂಬ ಮಾತು ತೆಲಂಗಾಣ ಪ್ರಾಂತ್ಯದ ಗ್ರಾಮಾಂತರ ಪ್ರದೇಶಗಳಲ್ಲಿ 1978-79 ರಲ್ಲಿ ಸಾಮಾನ್ಯವಾಗಿತ್ತು. ಈ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿದ್ದ ’ಆಂಧ್ರಪ್ರಭ’ ದಿನಪತ್ರಿಕೆಯ ಸಂಪಾದಕರಾಗಿದ್ದ ಪೊಟ್ಟೂರಿ ವೆಂಕಟೇಶ್ವರ ರಾವ್ ಈ ಹೋರಾಟವನ್ನು ಬಣ್ಣಿಸುತ್ತಾ ‘ಕೊಂಡಪಲ್ಲಿ ನೇತೃತ್ವದ ಕಾರ್ಯಕರ್ತರು ತೆಲಂಗಾಣದ ಕರೀಂನಗರ, ಅದಿಲಾಬಾದ್ ಮತ್ತು ವಾರಂಗಲ್, ಶ್ರೀಕಾಕುಳಂ, ಜಿಲ್ಲೆಗಳಲ್ಲಿ ಪರ್ಯಾಯ ಸಕಾರವನ್ನೇ ನಡೆಸಿದರು. ಜನತಾ ನ್ಯಾಯಲಯದ ಮೂಲಕ ತಪ್ಪಿತಸ್ಥ ಜಮೀನ್ದಾರರು, ಅರಣ್ಯಾಧಿಕಾರಿಗಳನ್ನು ದಂಡ ಇಲ್ಲವೇ ಶಿಕ್ಷೆ ಮೂಲಕ ದಂಡಿಸಿದರು. ಅರಣ್ಯ ಗುತ್ತಿಗೆದಾರರು, ಲೇವಾದೇವಿದಾರರು, ಸಾರಾಯಿ ಗುತ್ತಿಗೆದಾರರು ಇವರುಗಳಿಂದ ತೆರಿಗೆ ವಸೂಲಿ ಮಾಡುವುದರ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಒತ್ತು ಕೊಟ್ಟು ಭವಿಷ್ಯದ ಚಳವಳಿಗೆ ಭದ್ರ ಬುನಾದಿ ಹಾಕಿಕೊಂಡರು,’ ಎಂದು ವಿಶ್ಲೇಷಿಸಿದ್ದಾರೆ.

ಈ ನಡುವೆ ಮಾವೋ ಮತ್ತು ಲೆನಿನ್‌ವಾದಿ ಕಮ್ಯೂನಿಷ್ಟ್ ಪಕ್ಷ ಎಂದು ಗುರುತಿಸಿಕೊಂಡಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಘಟನೆಗೆ ಹೆಸರು ಬದಲಿಸಬೇಕಾದ ಪ್ರಸಂಗವೊಂದು 1979ರಲ್ಲಿ ನಡೆಯಿತು. ಸೀತಾರಾಮಯ್ಯ ನೀಡಿದ್ದ ಕರೆಯ ಮೇರೆಗೆ ಅಸಂಖ್ಯಾತ ವಿದ್ಯಾರ್ಥಿಗಳು ಕಾಲೇಜು ತೊರೆದು ಕ್ರಾಂತಿಕಾರಿ ಚಳವಳಿಗೆ ದುಮುಕುತ್ತಿರುವುದನ್ನು ಗಮನಿಸಿದ್ದ ವಾರಂಗಲ್ ನಗರದ ಕಾಕತೀಯ ಮೆಡಿಕಲ್ ಕಾಲೇಜಿನ ಹಾಸ್ಟಲ್‌ನ ಅಡುಗೆ ಸಹಾಯಕ ಚಿನ್ನುಲು ಎಂಬ ಅವಿದ್ಯಾವಂತ ಯುವಕ ಉದ್ಯೋಗ ತೊರೆದು ವಿದ್ಯಾರ್ಥಿಗಳ ಜೊತೆ ಸಂಘಟನೆಗೆ ಸೇರಿಕೊಂಡಿದ್ದ. ಅರಣ್ಯ ಅಥವಾ ಹಳ್ಳಿಗಳಲ್ಲಿ ವಿದ್ಯಾರ್ಥಿಗಳ ಜೊತೆ ಇದ್ದು ಅಡುಗೆ ತಯಾರಿಸಿಕೊಡುತ್ತಿದ್ದ. ಯಾವುದೇ ಪ್ರತಿಫಲವನ್ನು ಬೇಡದೇ ಹೊಟ್ಟೆಪಾಡಿನ ಉದ್ಯೋಗ ತ್ಯಜಿಸಿ ಹೋರಾಟದ ಸಾಗರಕ್ಕೆ ದುಮುಕಿದ್ದ ಈ ಹುಡುಗನ ಬಗ್ಗೆ ಕೊಂಡಪಲ್ಲಿಗೆ ಅಪಾರ ಪ್ರೀತಿ ಮತ್ತು ಕರುಣೆಯಿತ್ತು. ಅದೇ ವರ್ಷ ವಾರಂಗಲ್‌ನಲ್ಲಿ ಕಮ್ಯೂನಿಷ್ಟ್ ಪಕ್ಷದ ಎರಡು ಬಣಗಳ ನಡುವೆ ಏರ್ಪಟ್ಟ ಘರ್ಷಣೆಯಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರಿಂದ ಚಿನ್ನುಲು ಹತ್ಯೆಯಾದ. ಈತನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮಯ್ಯ ಸಂಘಟನೆಯ ಹೆಸರನ್ನು ಬದಲಿಸುವ ಮತ್ತು ಯೋಜನೆಯ ಕಾರ್ಯತಂತ್ರಗಳನ್ನು ಮರು ರೂಪಿಸುವ ಬಗ್ಗೆ ಸುಳಿವು ನೀಡಿದರು. ಅದರಂತೆ 1980ರ ಏಪ್ರಿಲ್ 20ರಂದು ಸಂಘಟನೆಯ ಹೆಸರನ್ನು “ಪೀಪಲ್ಸ್ ವಾರ್ ಗ್ರೂಪ್” ಎಂದು ಅಧಿಕೃತವಾಗಿ ಬದಲಾಯಿಸಿದರು.

ತಾವು ಕನಸಿದ್ದ ಸಾಮಾಜಿಕ ಕ್ರಾಂತಿ ಸದ್ಯದ ಕಾರ್ಯತಂತ್ರದ ಮೂಲಕ ಸಾಧ್ಯವಿಲ್ಲ ಎಂಬುದು ಕೊಂಡಪಲ್ಲಿಗೆ ಆ ವೇಳೆಗಾಗಲೇ ಮನದಟ್ಟಾಗಿಬಿಟ್ಟಿತ್ತು. ವಿದ್ಯಾರ್ಥಿಗಳು, ಯುವಕರು, ಮತ್ತು ಜನನಾಟ್ಯಮಂಡಲಿ ಎಂಬ ಸಾಂಸ್ಕೃತಿಕ ಸಂಘಟನೆ ಮೂಲಕ ತೆಲಂಗಾಣ ಮತ್ತು ಗೋದಾವರಿ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದಲ್ಲಿ ಜನಬೆಂಬಲವೇನೊ ವ್ಯಕ್ತವಾಗಿತ್ತು. ಆದರೆ, ಸೀತಾರಾಮಯ್ಯ ಇನ್ನು ಮುಂದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ನಿಜವಾದ ಶತ್ರುಗಳನ್ನು ಹಿಡಿದು ಸದೆಬಡಿಯಬೇಕು ಎಂದು ನಿರ್ಧರಿಸಿದರು. ಅಂದರೆ, ಬಿಲ್ಲು ಬಾಣಗಳನ್ನು, ಪ್ರತಿಭಟನೆ, ಸತ್ಯಾಗ್ರಹ ಇವುಗಳನ್ನು ಬದಿಗೊತ್ತಿ ವ್ಯವಸ್ಥೆಯ ವಿರುದ್ಧ ಶಸ್ತ್ರ ಸಜ್ಜಿತರಾಗಿ ಹೋರಾಡುವುದೊಂದೇ ಅನಿವಾರ್ಯ ಎಂದು ಅವರು ಘೋಷಿಸಿದರು. ಕೊಂಡಪಲ್ಲಿಯವರ ತೀರ್ಮಾನವನ್ನು ಬಹುತೇಕ ಮಂದಿ ಸ್ವಾಗತಿಸಿದರು. ಏಕೆಂದರೆ ಈ ಮೊದಲು ಅವರೆಲ್ಲಾ ಸೀತಾರಾಮಯ್ಯ ನಮ್ಮ ಕೈಗೆ ಬಂದೂಕು ಕೊಡುವ ಬದಲು ಕೊಂಡಪಲ್ಲಿಯ ಗೊಂಬೆಗಳನ್ನು ಕೊಡುವ ಆಲೋಚನೆಯಲ್ಲಿದ್ದಾರೆ ಎಂದು ಗೇಲಿಮಾಡುತ್ತಿದ್ದರು. (ವಿಜಯವಾಡ ನಗರದಿಂದ 20 ಕಿ.ಮಿ. ದೂರದಲ್ಲಿ ಕೊಂಡಪಲ್ಲಿ ಎಂಬ 16 ಸಾವಿರ ಜನಸಂಖ್ಯೆಯ ಗ್ರಾಮವಿದೆ. ಈ ಊರು ನಮ್ಮ ಕರ್ನಾಟಕದ ಚನ್ನಪಟ್ಟಣದ ಹಾಗೇ ಮರದ ಬೊಂಬೆಗಳ ತಯಾರಿಕೆಯಲ್ಲಿ ಆಂಧ್ರಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಊರಿಗೂ ಕೊಂಡಪಲ್ಲಿ ಸೀತಾರಾಮಯ್ಯನವರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಸೀತಾರಾಮಯ್ಯ ಹೆಸರಿನ ಜೊತೆ ಕೊಂಡಪಲ್ಲಿ ಎಂಬುದು ತಳಕು ಹಾಕಿಕೊಂಡಿದೆ.)

ಜಮೀನ್ದಾರರ ದೌರ್ಜನ್ಯ ಮತ್ತು ಅವರ ಬೆಂಬಲವಾಗಿ ನಿಂತಿರುವ ಪೊಲೀಸ್ ವ್ಯವಸ್ಥೆಗೆ ಹಿಂಸೆಯೊಂದೇ ಉತ್ತರ ಎಂಬ ಚಾರುಮುಜುಂದಾರ್‌ನ ವಿಚಾರ ಧಾರೆಯನ್ನು ತಮ್ಮ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಗೆ ಸೀತಾರಾಮಯ್ಯ ಅಳವಡಿಸಿಕೊಂಡರು. ಇದನ್ನು ತನ್ನ ಕಾರ್ಯಕರ್ತರಿಗೆ ಒಂದು ಉಪಮೆ ಮುಖಾಂತರ ಸೀತಾರಾಮಯ್ಯ ಸರಳವಾಗಿ ವಿವರಿಸುತ್ತಿದ್ದರು: ‘ಒಬ್ಬ ರೈತ ಹೊಲದಲ್ಲಿ ದುಡಿಮೆ ಮಾಡುವಾಗ ಅನಾವಶ್ಯಕವಾಗಿ ಬೆಳೆಗೆ ತೊಂದರೆ ಕೊಡುವ ಕಳೆಗಳನ್ನು ಕಿತ್ತು ಬಿಸಾಡುತ್ತಾನೆ. ವಿಷಕಾರಿ ಅಲ್ಲದ ಹಾವುಗಳು ಕಂಡು ಬಂದರೆ ಅವುಗಳನ್ನು ಕೋಲಿನಿಂದ ಎತ್ತಿ ಹೊರಗೆ ಎಸೆಯುತ್ತಾನೆ. ಆದರೆ ತನ್ನ ಜೀವಕ್ಕೆ ಅಪಾಯಕಾರಿಯಾಗುವ ವಿಷಪೂರಿತ ಹಾವುಗಳನ್ನು ಕಂಡರೆ ಕೂಡಲೇ ಕೊಂದು ಹಾಕುತ್ತಾನೆ. ಈಗ ನಾವು ಅನುಸರಿಸಬೇಕಾದ್ದು ರೈತನ ಮಾರ್ಗವನ್ನು,’ ಎಂದು ಅವರು ಪ್ರತಿಪಾದಿಸುತಿದ್ದರು.ಈ ಕಾರಣಕ್ಕಾಗಿ ‘ಆಟ, ಪಾಠ, ಮಾಟ ಬಂದ್’, ಅಂದರೆ, ಹಾಡು, ನೃತ್ಯ, ಭಾಷಣಗಳಿಗೆ ತಾತ್ಕಾಲಿಕ ವಿರಾಮ ಹೇಳಿದರು.

ಈ ನಡುವೆ ಆದಿಲಾಬಾದ್ ಜಿಲ್ಲೆಯಲ್ಲಿ 1981ರ ಏಪ್ರಿಲ್ ತಿಂಗಳಿನಲ್ಲಿ ಗೊಂಡ ಜನಾಂಗದ ನರಮೇಧವೊಂದು ನಡೆದುಹೋಯಿತು. (ಈ ಕುರಿತು ಹಿಂದಿನ ಅಧ್ಯಾಯ-4 ರಲ್ಲಿ ಪ್ರಸ್ತಾಪಿಸಲಾಗಿದೆ.) ಆಂಧ್ರ ಪ್ರದೇಶದಲ್ಲಿ ಗೊಂಡ ಜನಾಂಗದಲ್ಲಿ ಲಂಬದಾಸ್ ಎಂಬ ಉಪ ಪಂಗಡವಿದ್ದು ಈ ಜನಾಂಗಕ್ಕೆ ಬುಡಕಟ್ಟು ಜನಾಂಗದ ಮೀಸಲಾತಿ ಸೌಲಭ್ಯವಿತ್ತು. ಆದರೆ, ನೆರೆಯ ಮಹಾರಾಷ್ಟ್ರದಲ್ಲಿ ಮೀಸಲಾತಿ ಇಲ್ಲದ ಕಾರಣ ಅಲ್ಲಿನ ಜನಾಂಗ ಅದಿಲಾಬಾದ್ ಜಿಲ್ಲೆಗೆ ವಲಸೆ ಬಂದು ಆಂಧ್ರ ಜನರ ಮೀಸಲಾತಿ ಸೌಕರ್ಯವನ್ನು ಕಬಳಿಸತೊಡಗಿತ್ತು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇಂದ್ರಾವಳಿ ಪಟ್ಟಣದಲ್ಲಿ ಗೊಂಡ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ಸಮಾವೇಶದಲ್ಲಿ ಪೊಲೀಸರ ಗೋಲಿಬಾರ್‌ಗೆ 40ಕ್ಕೂ ಹೆಚ್ಚು ಆದಿವಾಸಿಗಳು ಬಲಿಯಾದರು. ಈ ಘಟನೆಯಿಂದ ಸಿಡಿದು ನಿಂತ ಜಿಲ್ಲೆಯ 30 ಸಾವಿರ ಗೊಂಡ ಜನಾಂಗದ ಆದಿವಾಸಿಗಳು ಕೊಂಡಪಲ್ಲಿ ಸೀತಾರಾಮಯ್ಯನವರ ‘ಪ್ರಜಾ ಸಮರಂ ದಳ’ಕ್ಕೆ ಬೆಂಬಲವಾಗಿ ನಿಂತು ಪೊಲೀಸರ ವಿರುದ್ದ ಸಮರ ಸಾರಿದರು.

ಸಂಘಟನೆ ಬಲಗೊಳ್ಳುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಸೀತಾರಾಮಯ್ಯ 1882ರಲ್ಲಿ ಹೈದರಾಬಾದ್ ನಗರ ಬೇಗಂ ಪೇಟ್ ರೈಲ್ವೆ ನಿಲ್ದಾಣದಲ್ಲಿ ಆಂಧ್ರ ಪೊಲೀಸರಿಗೆ ಸಿಕ್ಕಿಬಿದ್ದರು. ಸಂಘಟನೆಯ ನೇರ ಹೊಣೆ ಕೆ.ಜಿ. ಸತ್ಯಮೂರ್ತಿಯವರ ಮೇಲೇ ಬಿತ್ತು. ಮೂಲತಃ ದಲಿತ ಕವಿಯಾಗಿದ್ದ ಸತ್ಯಮೂರ್ತಿ ಸಾಂಸ್ಕೃತಿಕ ಚಟುವಟಿಕೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ನಿಲುವುಳ್ಳವರಾಗಿದ್ದರು. ಭಾವನಾತ್ಮಕವಾಗಿ ಹಿಂಸೆಯನ್ನು ವಿರೋಧಿಸುತ್ತಿದ್ದ ಅವರು ಹಿಂಸಾತ್ಮಕ ಹೋರಾಟಕ್ಕೆ ಹೆಚ್ಚಿ ಆಸಕ್ತಿ ವಹಿಸುತ್ತಿರಲಿಲ್ಲ.

ಇದೇ ವೇಳೆಗೆ ಆಂಧ್ರದಲ್ಲಿ ರಾಜಕೀಯದ ಹೊಸ ಶಕೆಯೊಂದು ಆರಂಭವಾಯಿತು. ಆಂಧ್ರದ ಚಲನಚಿತ್ರರಂಗದಲ್ಲಿ ತನ್ನ ಪೌರಾಣಿಕ ಪಾತ್ರಗಳಿಂದ ಅಲ್ಲಿನ ಜನತೆಯ ಆರಾಧ್ಯ ದೈವವಾಗಿದ್ದ ನಾಯಕ ನಟ ಎನ್.ಟಿ. ರಾಮರಾವ್ ‘ತೆಲುಗು ದೇಶಂ’ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ತಮ್ಮ ಮಗನ ಜೊತೆ ಇಡೀ ಆಂಧ್ರಾದ್ಯಂತ ಪ್ರವಾಸ ಮಾಡಿದರು. ಜೊತೆಗೆ ತೆಲಂಗಾಣ ಪ್ರಾಂತ್ಯದಲ್ಲಿ ಸಾರ್ವಜನಿಕ ಸಭೆಗಳಲ್ಲಿ ನಕ್ಸಲಿಯ ಹೋರಾಟಗಾರರನ್ನು ‘ದೇಶಭಕ್ತಲು’ ಎಂದು ಕರೆದು ಅವರಿಗೆ ತಮ್ಮ ಪಕ್ಷದ ಬೆಂಬಲ ಘೋಷಿಸಿದರು. ಆದರೆ, 1983ರಲ್ಲಿ ತೆಲುಗುದೇಶಂ ಪಕ್ಷ ಕಾಂಗ್ರೇಸ್ ಪಕ್ಷವನ್ನು ಧೂಳಿಪಟ ಮಾಡಿ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿಯಾದ ಎನ್.ಟಿ.ರಾಮರಾವ್ ತಮ್ಮ ಮಾತುಗಳನ್ನು ಮರೆತರು. ಈ ನಡುವೆ ಅನಾರೋಗ್ಯದ ನೆಪದಲ್ಲಿ ಹೈದರಾಬಾದ್ ನಗರದ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಾಗಿದ್ದ ಸೀತಾರಾಮಯ್ಯನವರನ್ನು ಅವರ ಬೆಂಬಲಿಗರು 1984 ರ ಜನವರಿ 4 ರ ನಡುರಾತ್ರಿ ಆಸ್ಪತ್ರೆ ಮೇಲೆ ದಾಳಿ ಮಾಡಿ ಕರ್ತವ್ಯದ ಮೇಲಿದ್ದ ಪೊಲೀಸ್ ಪೇದೆಯನ್ನು ಹತ್ಯೆ ಮಾಡುವುದರ ಮೂಲಕ ಬಿಡಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು. ಇದು ಪರೋಕ್ಷವಾಗಿ ಎನ್.ನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ ಮತ್ತು ಪಿ.ಡಬ್ಲ್ಯು.ಜಿ. ನಡುವೆ ಹಿಂಸೆಯ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

ಚಾರು ಮುಜುಂದಾರ್ ಹಾಕಿಕೊಟ್ಟ ಹಾದಿಯಲ್ಲಿ ಅಂದರೆ, ಊಳಿಗಮಾನ್ಯ ಪದ್ಧತಿಯನ್ನು, ಪಾಳೆಗಾರ ಸಂಸ್ಕೃತಿಯನ್ನು ಹಿಂಸೆಯ ಮೂಲಕ ಬುಡ ಸಮೇತ ಕಿತ್ತು ಹಾಕಲು ಹೊರಟಿದ್ದ ಕೊಂಡಪಲ್ಲಿ ಹಾಗೂ ಸತ್ಯಮೂರ್ತಿ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಬಂದು 1985ರಲ್ಲಿ ಸತ್ಯಮೂರ್ತಿಯನ್ನು ಪೀಪಲ್ಸ್ ವಾರ್ ಗ್ರೂಪ್‌ನಿಂದ ಉಚ್ಛಾಟಿಸಲಾಯಿತು. ಇದನ್ನು ಪ್ರಶ್ನಿಸಿದ ಹಾಗೂ ಪ್ರಜಾಸಮರಂ ಸಂಘಟನೆಗೆ ದಳಂ ಎಂಬ ಹೆಸರಿನಲ್ಲಿ ಬಲಿಷ್ಟ ಯುವ ಕಾರ್ಯಕರ್ತರ ಪಡೆಯನ್ನು ಹುಟ್ಟು ಹಾಕಿದ್ದ ಸತ್ಯನಾರಾಯಣ ರೆಡ್ಡಿಯನ್ನೂ ಸಹ ಸಂಘಟನೆಯಿಂದ ಹೊರ ಕಳಿಸಲಾಯಿತು. ಸೈದ್ದಾಂತಿಕ ಸಂಘರ್ಷದಿಂದಾಗಿ ಈ ಇಬ್ಬರೂ ಬಲಿಷ್ಟ ಮುಖಂಡರನ್ನು ಕಳೆದುಕೊಂಡ ಕೊಂಡಪಲ್ಲಿಯವರು ಇಡೀ ಸಂಘಟನೆಯ ಹೊರೆಯನ್ನು ಹೊರಬೇಕಾಯಿತು.

ಪಿಪಲ್ಸ್ ವಾರ್ ಗ್ರೂಪ್‌ನ ಅಂಗ ಘಟಕಗಳಾಗಿ ಮತ್ತೇ ಹೊಸದಾಗಿ ರೈತು ಕೂಲಿ ಸಂಘಂ, ಕಿಸಾನ್ ಮಜ್ದೂರ್ ಸಂಘಟನೆ, ಮಹಿಳಾ ಶ್ರಾವಂತಿ ಮತ್ತು ಸಿಂಗರೇಣಿ ಕಲ್ಲಿದ್ದಲು ಕಾರ್ಮಿಕರ ಸಂಘಟನೆ ಇವುಗಳನ್ನು ಹುಟ್ಟು ಹಾಕಿ ಇವುಗಳ ನೇತೃತ್ವವನ್ನು ಜನನಾಟ್ಯ ಮಂಡಲಿಗೆ ವಹಿಸಿದರು. ಜೊತೆಗೆ ಇಡೀ ಸಂಘಟನೆಗೆ ಇರಬೇಕಾದ ಗುರಿಗಳನ್ನು ರೂಪಿಸಿದರು. ಪ್ರಮುಖವಾಗಿ

  1. ಭೂಮಿಯ ಮರು ಹಂಚಿಕೆ
  2. ಕೃಷಿ ಕೂಲಿ ಕಾರ್ಮಿಕರಿಗೆ ಕನಿಷ್ಟ ಕೂಲಿ ದರ
  3. ತಪ್ಪು ಎಸಗುವ ವ್ಯಕ್ತಿಗಳ ಮೇಲೆ ತೆರಿಗೆ ಅಥವಾ ದಂಡ ವಿಧಿಸುವುದು
  4. ಜನತಾ ನ್ಯಾಯಲಯಗಳ ಸ್ಥಾಪನೆ
  5. ಸರ್ಕಾರದ ಆಸ್ತಿಗಳನ್ನು ಧ್ವಂಸ ಮಾಡುವುದು
  6. ಸರ್ಕಾರಿ ನೌಕರರನ್ನು ಅಪಹರಣ ಮಾಡುವುದು
  7. ಪೊಲೀಸರ ಮೇಲೆ ದಾಳಿ
  8. ಕಟ್ಟು ನಿಟ್ಟಾದ ಸಾಮಾಜಿಕ ನ್ಯಾಯದ ಮರು ಸ್ಥಾಪನೆ ಇವುಗಳು ಮುಖ್ಯವಾಗಿದ್ದವು.

ಈ ಮೇಲ್ಕಂಡ ಗುರಿಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ 1987ರ ಅಕ್ಟೋಬರ್ 5 ರಂದು 60 ಜನರಿದ್ದ ನಕ್ಸಲಿಯರ ತಂಡ ಕರೀಂನಗರ ಜಿಲ್ಲೆಯ ರಾಮಗೊಂಡಂ ಎಂಬ ಕಲ್ಲಿದ್ದಲು ಗಣಿಗಾರಿಕೆ ನಡೆಯುವ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಸರಕು ಸಾಗಾಣಿಕೆ ರೈಲಿನ ಮೇಲೆ ದಾಳಿ ಮಾಡಿದರು. 1988ರ ಮಾರ್ಚ್ 1 ರಂದು ಕಾಗಜ್ ಪುರ್ ರೈಲ್ವೆ ನಿಲ್ದಾಣದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದರು. ಇವುಗಳ ನಡುವೆ ಸರ್ಕಾರಿ ಬಸ್‌ಗಳಿಗೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿತ್ತು. 1988ರ ಮಾರ್ಚ್ 11ರಂದು ವಾರಂಗಲ್ ಜಿಲ್ಲೆಯಲ್ಲಿ ನಕ್ಸಲ್ ಸಂಘಟನೆಯ ಪ್ರಮುಖ ನಾಯಕನಾಗಿದ್ದ ದಗ್ಗು ರಾಯಲಿಂಗು ಎಂಬಾತನನ್ನು ಆಂಧ್ರ ಪೊಲೀಸರು ಎನ್ಕೌಂಟರ್ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕಾರವಾಗಿ ಕರೀಂ ನಗರ ಮತ್ತು ವಾರಂಗಲ್ ಜಿಲ್ಲೆಯಲ್ಲಿ ಪಿ.ಡಬ್ಲ್ಯು.ಜಿ. ಗ್ರೂಪ್‌ನ ನಕ್ಸಲ್ ಸದಸ್ಯರಿಂದ ಹಿಂಸಾಚಾರ ಭುಗಿಲೆದ್ದಿತು. ಎರಡು ರೈಲ್ವೆ ನಿಲ್ದಾಣಗಳು, ಅಸಂಖ್ಯಾತ ದೂರವಾಣಿ ವಿನಿಮಯ ಕೇಂದ್ರಗಳು, ಬಾನುಲಿ ಮರು ಪ್ರಸಾರದ ಕೇಂದ್ರಗಳು ಮತ್ತು ಬೀಡಿ ತಯಾರಿಕೆಗೆ ಬಳಸುವ ಎಲೆಗಳನ್ನು ಶೇಖರಿಸಿ ಇಟ್ಟಿದ್ದ ಗೋದಾಮುಗಳು ಬೆಂಕಿಗೆ ಆಹುತಿಯಾದವು.

ಪೊಲೀಸರಿಂದ ಸೆರೆಯಾದ ತಮ್ಮ ಸಹಚರರನ್ನು ಬಿಡುಗಡೆ ಮಾಡಿಸಲು ಸರ್ಕಾರಿ ಅಧಿಕಾರಿಗಳನ್ನು ಅಪಹರಿಸುವ ಕಾರ್ಯತಂತ್ರವನ್ನು ಸಹ ರೂಪಿಸಲಾಯಿತು. 1987ರ ಡಿಸಂಬರ್ 27ರಂದು ಗೋದಾವರಿ ಜಿಲ್ಲೆಯಲ್ಲಿ ಪುಲಿಮಾಟು ಎಂಬ ಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬುಡಕಟ್ಟು ಜನರ ಅಭಿವೃದ್ಧಿ ಕುರಿತ ಸಮಾವೇಶ ಮುಗಿಸಿ ಬರುತಿದ್ದ ಆರು ಮಂದಿ ಐ.ಎ.ಎಸ್. ಅಧಿಕಾರಿಗಳನ್ನು ನಕ್ಸಲರು ಅಪಹರಿಸಿದರು. ಇವರಲ್ಲಿ ಆಂಧ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಇದ್ದುದು ವಿಶೇಷವಾಗಿತ್ತು. ಸರ್ಕಾರ ಬಂಧಿಸಿದ್ದ ಎಂಟು ಮಂದಿ ನಕ್ಸಲ್ ನಾಯಕರನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಅಪಹೃತರನ್ನು ಕೊಲ್ಲುವದಾಗಿ ಬೆದರಿಕೆ ಹಾಕಿದರು. ದಿಲ್ಲಿಯಿಂದ ಕಮಾಂಡೋ ಕರೆಸಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾದ ಸರ್ಕಾರ ನಂತರ ನಕ್ಸಲಿಯರ ಒತ್ತಡಕ್ಕೆ ಮಣಿದು ರಾಜಮಂಡ್ರಿ ಜೈಲಿನಲ್ಲಿದ್ದ ನಾಯಕರನ್ನು ಬಿಡುಗಡೆ ಮಾಡಿತು.

ಈ ಘಟನೆಯಿಂದ ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡ ನಕ್ಸಲಿಯರು ಮುಖ್ಯಮಂತ್ರಿಯಾಗಿದ್ದ ಎನ್.ಟಿ. ರಾಮರಾವ್‌ರವರ ಅಳಿಯ ಹಾಗೂ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ವೆಂಕಟೇಶ್ವರ ರಾವ್ ಇವರ ತಂದೆಯನ್ನು ಪ್ರಕಾಶಂ ಜಿಲ್ಲೆಯಲ್ಲಿ ಗುಂಡಿಟ್ಟು ಕೊಂದರು. ಈ ಹತ್ಯೆಯಿಂದ ಭಯ ಭೀತರಾದ ತೆಲುಗು ದೇಶಂ ಪಕ್ಷದ ಶಾಸಕರು, ಸಂಸದರು, ಗ್ರಾಮ ಪಂಚಾಯತ್ ಅಧ್ಯಕ್ಷರು ತಮ್ಮ ಊರುಗಳನ್ನು ಬಿಟ್ಟು ನಗರಗಲ್ಲಿ ವಾಸಿಸತೊಡಗಿದರು.

ತೆಲಂಗಾಣ ಪ್ರಾಂತ್ಯದಲ್ಲಿ ನಕ್ಸಲ್ ಚಟುವಟಿಕೆ ನಿಯಂತ್ರಿಸಲು ಹಾಗೂ ನಕ್ಸಲ್ ಹೋರಾಟವನ್ನು ಸದೆಬಡಿಯಲು ಅರಣ್ಯದಲ್ಲಿ ಪೊಲೀಸರ ತರಬೇತಿ ಶಿಬಿರ ಪ್ರಾರಂಭಿಸಿದ  ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಪಿ.ಡಬ್ಲ್ಯು.ಜಿ. ಕಾರ್ಯಕರ್ತರು ಪ್ರತಿಕಾರವಾಗಿ ಒಬ್ಬ ಡಿ.ವೈ.ಎಸ್.ಪಿ. ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಹತ್ಯೆಗೈದರು. 1987ರಲ್ಲಿ ಆಂಧ್ರದಲ್ಲಿ ಹತ್ಯೆಯಾದ ಪೊಲೀಸರ ಸಂಖ್ಯೆ ನಿಜಕ್ಕೂ ಗಾಬರಿ ಮೂಡಿಸುವ ಸಂಗತಿಯಾಯಿತು. 1984 ರಲ್ಲಿ ಎರಡು, 1985 ರಲ್ಲಿ ಆರು, 1986 ರಲ್ಲಿ ನಾಲ್ಕು ಮಂದಿ ಪೊಲೀಸರು ಹತ್ಯೆಯಾದರೆ, 87ರ ಒಂದೇ ವರ್ಷದಲ್ಲಿ ಅಧಿಕಾರಿಗಳು ಸೇರಿ ಇಪ್ಪತ್ತೈದು ಮಂದಿ ಪೊಲೀಸ್ ಸಿಬ್ಬಂದಿ ಹತ್ಯೆಯಾಗಿದ್ದರು.

ಆಂಧ್ರದ ಉತ್ತರದ ತೆಲಂಗಾಣದ ಪ್ರಾಂತ್ಯದಲ್ಲಿ ಪರ್ಯಾಯ ಸರ್ಕಾರವನ್ನೇ ನಡೆಸತೊಡಗಿದದ ಪಿ.ಡಬ್ಲ್ಯು.ಜಿ. ನಕ್ಸಲ್ ಸಂಘಟನೆ ಹಳ್ಳಿಗಳಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಿತು. ತಾಲೂಕು ಕೇಂದ್ರ ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ವೈಶ್ಯಾವಾಟಿಕೆಯ ಚಟುವಟಿಕೆಗಳಿಗೆ ನಿಯಂತ್ರಣ ಹೇರಲಾಯಿತು. ತಮ್ಮ ಮಾತು ಮೀರಿದ ಸಾರಾಯಿ ಗುತ್ತಿಗೆದಾರರನ್ನು ಬಂಧಿಸಿ, ಅವರಿಗೆ ದಂಡ ವಿಧಿಸಿ, ತಪ್ಪೊಪ್ಪಿಗೆ ಪತ್ರ ಬರೆಸಿ ಬಿಡುಗಡೆಗೊಳಿಸಲಾಯಿತು. ತಮ್ಮ ಚಲನ ವಲನಗಳ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ 197 ಮಂದಿ ಮಾಹಿತಿದಾರರ ಕೈ ಕಾಲುಗಳನ್ನು ನಿರ್ಧಯವಾಗಿ ಕತ್ತರಿಸಿ ಶಾಶ್ವತ ಅಂಗವಿಕಲರನ್ನಾಗಿ ಮಾಡಲಾಯಿತು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜೂಜಾಟ ನಿಷೇಧಿಸಿ ಕರಪತ್ರ ಹಂಚಲಾಯಿತು. ಕರೀಂ ನಗರ ಜಿಲ್ಲಾ ಕೇಂದ್ರದ ಇಬ್ಬರು ಬಾರ್ ಮಾಲೀಕರನ್ನು ನಡು ರಸ್ತೆಯಲ್ಲಿ ಮನಸ್ಸೋ ಇಚ್ಚೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ನಕ್ಸಲಿಯರ ಇಂತಹ ನಿರ್ಧಾಕ್ಷಿಣ್ಯ ಕ್ರಮಗಳಿಂದಾಗಿ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಲ್ಲಿ ಕೆಲಸ ಮಾಡುವ ಪೊಲೀಸರು, ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದು ನಿಷ್ಟೆಯಿಂದ ಕೆಲಸ ಮಾಡುವಂತಾಯಿತು. ಇದರ ಪರಿಣಾಮವಾಗಿ ತೆಲಂಗಾಣ ಜಿಲ್ಲೆಗಳಲ್ಲಿ ಭ್ರಷ್ಟಾಚಾರಕ್ಕೆ ಇನ್ನಿಲ್ಲದಂತೆ ಕಡಿವಾಣ ಬಿದ್ದಿತು.

 (ಮುಂದುವರಿಯುವುದು)

ಪ್ರಜಾ ಸಮರ-7 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕೊಂಡಪಲ್ಲಿ ಸೀತಾರಾಮಯ್ಯನವರ ಸಂಘಟನಾ ಚಾತುರ್ಯದಿಂದ 1978ರ ಸೆಪ್ಟಂಬರ್ ವೇಳೆಗೆ ಆಂಧ್ರದಲ್ಲಿ ಯುವಶಕ್ತಿ ಧ್ರುವೀಕರಣಗೊಂಡಿತ್ತು. ಈ ಕಾರಣದಿಂದಾಗಿ ಕ್ರಾಂತಿಯ ಯುವ ಶಕ್ತಿ ಏನೆಂಬುದನ್ನು ಜನಸಾಮಾನ್ಯರ ಕಷ್ಟಕೋಟಲೆಗಳಿಗೆ ಕಣ್ಮುಚ್ಚಿ ಕುಳಿತಿದ್ದ ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆಗೆ ತೋರಿಸಲು ಮುಂದಾಯಿತು. ಪ್ರಥಮವಾಗಿ 1972 ರಲ್ಲಿ ಇಬ್ಬರು ರೈತರನ್ನು ನೇಣಿಗೇರಿಸಲು ಕಾರಣನಾದ ಆದಿಲಾಬಾದ್ ಜಿಲ್ಲೆಯ ಜಮೀನ್ದಾರ ಮತ್ತು ಒಂದು ಬಾರಿ ಶಾಸಕನಾಗಿದ್ದ 65 ವರ್ಷದ ಪಿತಾಂಬರರಾವ್ ಎಂಬುವನ ವಿರುದ್ಧ ಸಂಘಟನೆಯ ಕಾರ್ಯಕರ್ತರು ಕಾರ್ಯಾಚರಣೆಗೆ ಇಳಿದರು. ಈ ಮುನ್ನ ಎರಡು ವರ್ಷದ ಹಿಂದೆ ನಕ್ಸಲಿಯರಿಂದ ಈ ಜಮೀನ್ದಾರ ಪಿತಾಂಬರರಾವ್ ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾಗಿದ್ದ.

1976 ರಲ್ಲೇ ಈತನನ್ನು ಮುಗಿಸಲು ತೀರ್ಮಾನಿಸಿದ್ದ ನಕ್ಸಲಿಯರು ಸೆಪ್ಟಂಬರ್ 25 ರಂದು ಸಂಜೆ ಅವನ ಸ್ವಂತ ಊರಾದ ಅದಿಲಾಬಾದ್ ಜಿಲ್ಲೆಯ ತಪ್ಪಲಪುರದಲ್ಲಿ ಅವನ ಬಂಗಲೆಯ ಎದುರು ಕತ್ತಲಲ್ಲಿ ಕಾದು ಕುಳಿತಿದ್ದರು. ಮೊದಲೇ ತೀರ್ಮಾನಿಸಿದಂತೆ ಒಂದು ತಂಡ ಅವನ ಮನೆಯ ಬಳಿ ಕಾದು ಕುಳಿತು, ಅವನ ಕುಟುಂಬದ ಚಲನವಲನ ಗಮನಿಸುವುದು, ಇನ್ನೊಂದು ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮನೆಯ ಮೇಲೆ ದಾಳಿ ಮಾಡುವುದು ಎಂದು ನಿರ್ಧರಿಸಲಾಗಿತ್ತು.

ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದಲ್ಲಿ ರೆಡ್ಡಿಗಳಷ್ಟೇ ಮತ್ತೊಂದು ಬಲಿಷ್ಟ ಸಮುದಾಯವಾದ ವೆಲಮ ಜಾತಿಗೆ ಸೇರಿದ ಪಿತಾಂಬರರಾವ್ ತನ್ನ ಕ್ರೌರ್ಯ ಮತ್ತು ದರ್ಪದಿಂದ  ಸುತ್ತ ಮುತ್ತಲಿನ ಹಳ್ಳಿಗಳಿಗೆ ಸಿಂಹಸ್ವಪ್ನವಾಗಿದ್ದ. ವೆಲಮ ಜಾತಿಯ ಬಗ್ಗೆ ಆಂಧ್ರದಲ್ಲಿ ಒಂದು ಹಾಸ್ಯದ ಮಾತೊಂದು ಈಗಲೂ ಚಾಲ್ತಿಯಲ್ಲಿದೆ.  ಯಾರಾದರೂ ವೆಲಮ ಜಾತಿಗೆ ಸೇರಿದ ವ್ಯಕ್ತಿಯ ಮುಕುಳಿಗೆ ಬೆಂಕಿ ಹಚ್ಚಿದರೆ, ಅವನು ಬೆಂಕಿ ಆರಿಸಿಕೊಳ್ಳುವ ಬದಲು ಇನ್ನೊಬ್ಬರು ಬಂದು ಆರಿಸಲಿ ಎಂದು ಕಾಯುತ್ತಾನೆ ಎಂದು. ಪ್ರತಿಯೊಂದು ಕೆಲಸಕ್ಕೂ ಇನ್ನೊಬ್ಬರನ್ನು ಆಶ್ರಯಿಸಿ ಶೋಷಿಸುವುದನ್ನು ವೃತ್ತಿಯಾಗಿಸಿಕೊಂಡಿದ್ದ ಪಿತಾಂಬರರಾವ್‌ನನ್ನು ಮುಗಿಸುವುದು ನಕ್ಸಲಿಯರ ಮೊದಲ ಆದ್ಯತೆಯಾಗಿತ್ತು. ಏಕೆಂದರೆ ಈತ 1972 ರಲ್ಲಿ ನಡೆದ ಇಬ್ಬರು ಜಮೀನ್ದಾರರ ಕೊಲೆಗೆ ಸಂಬಂಧಿಸಿದಂತೆ ಭೂಮಯ್ಯ ಮತ್ತು ಕ್ರಿಸ್ತಗೌಡ ಎಂಬ ಇಬ್ಬರು ಅಮಾಯಕ ಸಣ್ಣ ರೈತರನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದ. ಪಿತಾಂಬರರಾವ್ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಜಮೀನನ್ನು ವಾಪಸ್ ಪಡೆಯಲು ಈ ರೈತರು ನಕ್ಸಲಿಯರ ಮೊರೆ ಹೋಗಿದ್ದರು. ಇದು ಪಿತಾಂಬರರಾವ್‌ನ ಸಿಟ್ಟಿಗೆ ಕಾರಣವಾಗಿತ್ತು. ಈ ನತದೃಷ್ಟ ರೈತರ ಬಿಡುಗಡೆಗಾಗಿ ಮಾನವ ಹಕ್ಕು ಸಂಘಟನೆಗಳು ಸತತ ಕಾನೂನು ಹೋರಾಟ ನಡೆಸಿದವು. ಆದರೆ, ಪಿತಾಂಬರರಾವ್ ಚಿತಾವಣೆಯಿಂದಾಗಿ ಸೃಷ್ಟಿಯಾದ ನಕಲಿ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಆಂಧ್ರ ಹೈಕೋರ್ಟ್ ರೈತರಿಗೆ 1974ರಲ್ಲಿ ಗಲ್ಲು ಶಿಕ್ಷೆ ವಿಧಿಸಿತು. 1975 ರಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಂಧ್ರ ಸರ್ಕಾರ ಡಿಸಂಬರ್ ಒಂದರಂದು ಈ ಇಬ್ಬರು ರೈತರನ್ನು ಮುಷಿರಾಬಾದ್ ಸೆರೆಮನೆಯಲ್ಲಿ ನೇಣಿಗೇರಿಸಿತು. ಭಾರತದಲ್ಲಿ ಸ್ವಾತಂತ್ರ್ಯಾನಂತರ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ 1948 ರಲ್ಲಿ ನಾಥುರಾಮ್ ಗೂಡ್ಸೆಯನ್ನು ಗಲ್ಲಿಗೇರಿಸಿದ ಘಟನೆಯನ್ನು ಹೊರತುಪಡಿಸಿದರೆ, ಪ್ರಪ್ರಥಮವಾಗಿ ಈ ಅಮಾಯಕ ರೈತರು ತಮ್ಮದಲ್ಲದ ತಪ್ಪಿಗೆ ನೇಣುಗಂಬದಲ್ಲಿ ಸಾವು ಕಂಡರು.

ಈ ಘಟನೆ ನಕ್ಸಲ್ ಸಂಘಟನೆಯ ಯುವಕರ ಸಿಟ್ಟಿಗೆ ಮೂಲಕಾರಣವಾಗಿತ್ತು. ಅಂದು ಸಂಜೆ ಮಬ್ಬುಗತ್ತಲಲ್ಲಿ ಪಿತಾಂಬರರಾವ್‌ನ ಬಲಿಗಾಗಿ ಕಾಯುತಿದ್ದ ಯುವಕರಲ್ಲಿ ಒಬ್ಬಾತ ವಿಜ್ಞಾನ ಪದವೀಧರನಾಗಿದ್ದು ಶಿಕ್ಷಕನಾಗಿ ಕೆಲಸ ನಿರ್ವಹಿಸುತಿದ್ದ. ದೈತ್ಯಾಕಾರದ ಭೀಮನಂತೆ ಗೋಚರಿಸುತಿದ್ದ ಇನ್ನೊಬ್ಬ ಯುವಕ ಗೆರಿಲ್ಲಾ ಯುದ್ಧತಂತ್ರದಲ್ಲಿ ಪಳಗಿದವನಾಗಿದ್ದ. ಆದರೆ ಆ ದಿನ ಸಂಜೆ ಅವರ ಕಾರ್ಯತಂತ್ರ ಯಶಸ್ವಿಯಾಗಲಿಲ್ಲ. ಇವರುಗಳು  ಮನೆಯ ಮುಂದೆ ಕತ್ತಲಲ್ಲಿ ಕಾದು ಕುಳಿತಿರುವುದನ್ನು ಪಿತಾಂಬರರಾವ್ ಮನೆಯ ಆಳು ಗಮನಿಸಿದ ಕೂಡಲೇ ಕೂಗತೊಡಗಿದ. ಕೆಲವು ಯುವಕರು ನೆಗೆದು ಅವನನ್ನು ಹಿಡಿದು ಬಾಯಿ ಮುಚ್ಚಿಸುವುದರಲ್ಲಿ ಆತ ಜೋರಾಗಿ ಅರಚಾಡಿದ ಫಲವಾಗಿ ಇತರೆ ಆಳುಗಳು ಓಡೋಡಿ ಬಂದರು. ಅಷ್ಟರಲ್ಲಿ ನಕ್ಸಲ್ ಯುವಕರು ತಮ್ಮ ಬಳಿ ಇದ್ದ ಕಚ್ಛಾ ಬಾಂಬ್‌ಗಳನ್ನು ಪಿತಾಂಬರರಾವ್ ಮನೆಯ ಮೇಲೆ ಎಸೆದು ಕತ್ತಲಲ್ಲಿ ಪರಾರಿಯಾದರು

ತಮ್ಮ ಮೊದಲ ಯತ್ನದಲ್ಲಿ ಸೋಲು ಕಂಡರೂ ವಿಚಲಿತರಾಗದ ನಕ್ಸಲ್ ಯುವಕರು ಎರಡು ವರ್ಷದ ನಂತರ ಅಂದರೆ, 1978 ನವಂಬರ್ ಏಳರಂದು ಮತ್ತೇ ಪಿತಾಂಬರರಾವ್ ಮನೆಯೆದರು ಶಸ್ತ್ರ ಸಜ್ಜಿತರಾಗಿ ಹಾಜರಾದರು. ಆದಿನ ಮನೆಯ ಗೇಟಿನ ಬಳಿ ಗ್ರಾಮಸ್ಥರ ಜೊತೆ ಮಾತನಾಡುತ್ತಾ ನಿಂತಿದ್ದ ಆತನ ಇಬ್ಬರು ವಯಸ್ಕ ಪುತ್ರರು ಹಾಗೂ ರಕ್ಷಣೆಗೆ ನೇಮಕಗೊಂಡಿದ್ದ ಓರ್ವ ಪೊಲೀಸ್ ಪೇದೆ ಕ್ಷಣಾರ್ಧದಲ್ಲಿ ಗುಂಡಿಗೆ ಬಲಿಯಾದರು.

ನಂತರ ಬಾಂಬುಗಳ ಸುರಿಮಳೆಗಯ್ಯುತ್ತಾ ವಿಶಾಲವಾದ ಅರಮನೆಯಂತಹ ಬಂಗಲೆಯ ಒಳ ಹೊಕ್ಕು ಜಮೀನ್ದಾರನಿಗೆ ಹುಡುಕಾಡಿದರು. ಆ ದಿನ ಅವನ ಅದೃಷ್ಟ ಚೆನ್ನಾಗಿದ್ದ ಕಾರಣ ಆತ ಮನೆಯಲ್ಲಿ ಇರಲಿಲ್ಲ. ದಾಳಿಗೆ ಪ್ರತಿರೋಧ ತೋರಿದ ಹತ್ತಕ್ಕೂ ಹೆಚ್ಚು ಸೇವಕರು ಬಾಂಬ್ ಮತ್ತು ಗುಂಡಿನ ದಾಳಿಗೆ ಬಲಿಯಾದರು. ತಪ್ಪಲಪುರದಿಂದ ನೆರೆಯ ಗ್ರಾಮಕ್ಕೆ ಹೊರಟ ನಕ್ಸಲ್ ಯುವಕರ ತಂಡ ಪಿತಾಂಬರರಾವ್‌ಗೆ ಗುಮಾಸ್ತನಾಗಿದ್ದುಕೊಂಡು ಆತನ ಎಲ್ಲಾ ಅಕ್ರಮಗಳಿಗೆ ಸೂತ್ರಧಾರನಾಗಿದ್ದ ವ್ಯಕ್ತಿಯ ಮನೆ ಹೊಕ್ಕು ಅವನ ಬಳಿ ಇದ್ದ ಪಿತಾಂಬರರಾವ್‌ನ ಎಲ್ಲಾ ಭೂದಾಖಲೆಗಳನ್ನು ಸುಟ್ಟುಹಾಕಿ ಗುಮಾಸ್ತನನ್ನು ನಡುರಸ್ತೆಗೆ ಕರೆತಂದು ಗಂಟಲು ಸೀಳಿ ಕೊಂದು ಹಾಕಿತು. ಇಷ್ಟಕ್ಕೂ ತೃಪ್ತಿಯಾಗದ ಯುವಕರು ರೈತರ ವಿರುದ್ದ ಸುಳ್ಳು ಸಾಕ್ಷಿ ಹೇಳಿ ಗಲ್ಲು ಶಿಕ್ಷೆ ನೀಡಲು ಕಾರಣನಾದ ವ್ಯಕ್ತಿಯನ್ನು ಅದೇ ಹಳ್ಳಿಯಲ್ಲಿ ಅರಸುತ್ತಾ ಹೊರಟಿತು. ನಕ್ಸಲರು ತನ್ನನ್ನು ಅರಸುತ್ತಾ ಬರುತ್ತಿರುವ ಸುದ್ಧಿ ಕೇಳಿ ಓಡಿ ಹೋಗುತಿದ್ದ ಆತನ ಮೇಲೆ ಗುಂಡು ಹಾರಿಸಿದರು. ಅದೃಷ್ಟವಶಾತ್ ಕತ್ತಲೆಯಲ್ಲಿ ಗುಂಡು ತಗುಲದೇ ಅಪಾಯದಿಂದ ಪಾರಾಗಿ ತಲೆಮರೆಸಿಕೊಂಡ. ನಂತರದ ದಿನಗಳಲ್ಲಿ ನಕ್ಸಲ್ ನಾಯಕರ ಎದುರು ಹಾಜರಾಗಿ ಕ್ಷಮೆ ಕೋರಿ ಜೀವಧಾನಕ್ಕಾಗಿ ಬೇಡಿಕೊಂಡ. ಜನತಾ ನ್ಯಾಯಾಲಯದಲ್ಲಿ ಅವನನ್ನು ಕ್ಷಮಿಸಿದ ನಾಯಕರು ಅವನಿಂದ ಪಿತಾಂಬರರಾವ್ ರೈತರಿಂದ ಕಸಿದುಕೊಂಡಿದ್ದ ಜಮೀನುಗಳ ಎಲ್ಲಾ ಮಾಹಿತಿ ಪಡೆದರು.

1978ರ ನವಂಬರ್ ತಿಂಗಳಿನಲ್ಲಿ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಆಂಧ್ರ ಪ್ರದೇಶದಲ್ಲಿ ನಕ್ಸಲ್ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ  ಕರೀಂ ನಗರ, ಪೂರ್ವಗೋದಾವರಿ, ವಾರಂಗಲ್, ಶ್ರೀಕಾಕುಳಂ ಜಿಲ್ಲೆಗಳ ಜಮೀನ್ದಾರರ ಎದೆಯಲ್ಲಿ ಜೀವ ಭಯದ ಬೀಜವನ್ನು ಬಿತ್ತಿತು. ಜೊತೆಗೆ ಸಣ್ಣ ರೈತರು ಕೂಲಿಕಾರ್ಮಿಕರು ಮತ್ತು ಆದಿವಾಸಿಗಳಿಗೆ ಇನ್ನಿಲ್ಲದ ಆತ್ಮಬಲವನ್ನು ತಂದುಕೊಟ್ಟಿತು.

>ಆಂಧ್ರದಲ್ಲಿ ಶ್ರೀಕಾಕುಳಂ ಜಿಲ್ಲೆಯಲ್ಲಿ 60 ರ ದಶಕದಲ್ಲಿ ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಉಂಟುಮಾಡಿದ್ದ ಸಂಚಲನವನ್ನು ಮತ್ತೇ ಅದಿಲಾಬಾದ್ ಜಿಲ್ಲೆಯಲ್ಲಿ ಪಿತಾಂಬರರಾವ್ ಕುಟುಂಬವನ್ನು ಬಲಿತೆಗೆದುಕೊಳ್ಳುವುದರ ಮೂಲಕ (ಘಟನೆಯಲ್ಲಿ ಬದುಕುಳಿದಿದ್ದ ಪಿತಾಂಬರರಾವ್ 1980ರಲ್ಲಿ ವೃದ್ಧಾಪ್ಯದಿಂದ ಸಾವನ್ನಪ್ಪಿದ) ಸೃಷ್ಟಿ ಮಾಡಿದ ಯುವಕ ಮತ್ತು ವಿಜ್ಞಾನ ಪದವೀಧರ ಶಿಕ್ಷಕ ಯಾರೆಂದರೆ, ನಲ್ಲ ಆದಿರೆಡ್ಡಿ ಅಲಿಯಾಸ್ ಕಾಮ್ರೇಡ್ ಶ್ಯಾಮ್. ಈತ ಆ ಸಂದರ್ಭದಲ್ಲಿ ಕರೀಮ್ ನಗರ ಜಿಲ್ಲೆಯ ಸಂಘಟನಾ ನಾಯಕನಾಗಿ ಕಾರ್ಯನಿರ್ವಹಿಸುತಿದ್ದ. ಈತನ ಜೊತೆ ಇದ್ದವರು ಸಂತೋಷ್ ರೆಡ್ಡಿ ಅಲಿಯಾಸ್ ಮಹೇಶ್ ಮತ್ತು ಶೀಲಂನಾಗೇಶ್ ಅಲಿಯಾಸ್ ಮುರುಳಿ ಎಂಬ ಇಬ್ಬರು ಯುವನಾಯಕರು.

ಈ ಮೂವರು ನತದೃಷ್ಟರು ಘಟನೆ ನಡೆದ 21 ವರ್ಷಗಳ ನಂತರ 1999 ಡಿಸಂಬರ್ ಎರಡರಂದು ಬೆಂಗಳೂರಿನ ಗಾಂಧಿನಗರದ ಹೋಟೆಲ್ ಒಂದರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾದರು. ಅಂದು ರಾತ್ರಿಯೇ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಂಧ್ರಕ್ಕೆ ಕೊಂಡೊಯ್ದ ಪೊಲೀಸರು ಮರುದಿನ ಬೆಳಗಿನ ಜಾವ ಹೈದರಾಬಾದ್ ನಗರಕ್ಕೆ ಕರೆತಂದರು. ನಂತರ ವಿಚಾರಣೆಯ ನೆಪದಲ್ಲಿ ಕೊಯ್ಯೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮೂವರನ್ನು ಗುಂಡಿಟ್ಟು ಕೊಲ್ಲುವುದರ ಮೂಲಕ ಎನ್ ಕೌಂಟರ್ ಹಣೆಪಟ್ಟಿ ಹಚ್ಚಿದರು. ಬೆಂಗಳೂರಿನಲ್ಲಿ ಆಶ್ರಯ ಕೊಡುತ್ತೀನಿ ಎಂದು ನಂಬಿಸಿ ಕರೆ ತಂದಿದ್ದ ಪೊಲೀಸ್ ಮಾಹಿತಿದಾರನೊಬ್ಬನ ಸಂಚಿಗೆ ಈ ಮೂವರು ನಕ್ಸಲ್ ನಾಯಕರು ಬಲಿಯಾಗಿದ್ದರು. ಇವರ ಪೈಕಿ ತಪ್ಪಲಪುರದ ಪಿತಾಂಬರರಾವ್ ಮನೆ ಮೇಲಿನ ದಾಳಿಯಲ್ಲಿ ಭಾಗವಹಿಸಿ, ಪೊಲೀಸರ ಸಂಚಿನಿಂದ ತಪ್ಪಿಸಿಕೊಂಡು ಬದುಕುಳಿದ ಇನ್ನೋರ್ವ ನಾಯಕನೆಂದರೆ, ವೆಲಮ  ಜಾತಿಗೆ ಸೇರಿದ

ಕಳೆದ ವರ್ಷ ನವಂಬರ್‌ನಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಧ್ಯ ಮತ್ತು ಪೂರ್ವ ಭಾರತದ ಹಿರಿಯ ನಾಯಕ ಕಿಷನ್‌ಜಿ ಪೊಲೀಸರ ಗುಂಡಿಗೆ ಬಲಿಯಾದ. ಇದರ ಬೆನ್ನಲ್ಲೇ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ನಿಪುಣರಾಗಿದ್ದ ಮತ್ತೊಬ್ಬ ಹಿರಿಯ ನಾಯಕ ಆರ್.ಕೆ. (ರಾಮಕೃಷ್ಣ) ಈ ವರ್ಷದ ಮೇ ತಿಂಗಳಿನಲ್ಲಿ ಕೊಲ್ಕತ್ತ ಪೊಲೀಸರಿಂದ ಬಂಧನಕ್ಕೆ ಒಳಗಾದರು. ನಕ್ಸಲ್ ಹೋರಾಟದ ಅನಿರೀಕ್ಷಿತ ಹಿನ್ನಡೆಯ ನಡುವೆಯೂ ದೇಶದ 11 ರಾಜ್ಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯೋಜಿಸಿರುವ 75 ಸಾವಿರ ಪೊಲೀಸರು, ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಶಸಸ್ತ್ರ ಮೀಸಲು ಪಡೆಯ ಸೈನಿಕರ ಪ್ರತಿರೋಧದ ನಡುವೆ ಆಂಧ್ರ ಮೂಲದ ಗಣಪತಿ ನಕ್ಸಲ್ ಹೋರಾಟವನ್ನು ಈಗ ಮುನ್ನಡೆಸುತಿದ್ದಾರೆ.

1970 ದಶಕದ ಅದಿಲಾಬಾದ್ ಜಿಲ್ಲೆಯ ಸಾಮಾಜಿಕ ಕ್ರಾಂತಿಯ ಹೋರಾಟ ನೆರೆಯ ಕರೀಂನಗರದ ಜಿಲ್ಲೆಗೂ ವಿಸ್ತರಿಸಿ ಮಾವೋ-ಲೆನಿನ್‌ವಾದಿ ಕಮ್ಯೂನಿಷ್ಟ್ ಕಾರ್ಯಕರ್ತರಿಗೆ ಯಶಸ್ಸು ತಂದುಕೊಡುವುದರ ಜೊತೆಗೆ ಮಾನಸಿಕವಾಗಿ ಸ್ಥೈರ್ಯವನ್ನು ತುಂಬಿಕೊಟ್ಟಿತು. ಕರೀಂನಗರದ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿ ಅದಿಲಾಬಾದ್ ಜಿಲ್ಲೆಗಿಂತ ಭಿನ್ನವಾಗಿರಲಿಲ್ಲ. ಇಲ್ಲಿ ಶ್ರೀಮಂತ ಜಮೀನ್ದಾರರ ಎದುರು ದಲಿತರು ಚಪ್ಪಲಿಯನ್ನು ಧರಿಸಿ ಓಡಾಡುವಂತಿರಲಿಲ್ಲ, ಅಲ್ಲದೇ ಭೂಮಿಯ ಮೇಲಿನ ಹಕ್ಕನ್ನು ಹೊಂದುವಂತಿರಲಿಲ್ಲ. ಆದರೆ, 1977ರಲ್ಲಿ ಕಮ್ಯೂನಿಷ್ಟ್ ಕಾರ್ಯಕರ್ತರಿಂದ ಪ್ರೇರಿತನಾಗಿದ್ದ ದಲಿತ ಕೂಲಿಕಾರ್ಮಿಕ ಲಕ್ಷ್ಮೀರಾಜು ಎಂಬಾತ ತನ್ನ ಹಳ್ಳಿಯಲ್ಲಿ ಚಪ್ಪಲಿ ತೊಟ್ಟು ಓಡಾಡತೊಡಗಿದ. ದಸರಾ ಸಮಯದಲ್ಲಿ ಜಮೀನ್ದಾರರು ಸಾಮಾಜಿಕವಾಗಿ ನಿಷೇದ ಹೇರಿದ್ದ ದಲಿತರೇ ಅಭಿನಯಿಸಿ ಪ್ರದರ್ಶಿಸುತ್ತಿದ್ದ ದಕ್ಕಮ್ಮ ಎಂಬ ನಾಟಕವನ್ನು ದಲಿತ ಯುವಕರೊಂದಿಗೆ ಕರೀಂನಗರ ಜಿಲ್ಲೆಯಾದ್ಯಂತ ಹಳ್ಳಿಗಳಲ್ಲಿ ಪ್ರದರ್ಶಿಸತೊಡಗಿದ.

ಕೊಂಡಪಲ್ಲಿಯವರ ಯೋಜನೆಗಳಲ್ಲಿ ಒಂದಾದ ಹಳ್ಳಿಗಳತ್ತ ಪಯಣಿಸಿ ಕಾರ್ಯಕ್ರಮದ ಅನ್ವಯ ನಗರಗಳಿಂದ ಬಂದಿದ್ದ ವಿದ್ಯಾರ್ಥಿಗಳು ಈತನಿಗೆ ಬೆನ್ನೆಲುಬಾಗಿ ನಿಂತರು. ತಮ್ಮ ರಜಾದಿನಗಳಲ್ಲಿ ಹಳ್ಳಿಗಳಿಗೆ ಬರುತಿದ್ದ ಈ ವಿದ್ಯಾರ್ಥಿಗಳು ದಲಿತರು, ಆದಿವಾಸಿಗಳು ಮತ್ತು ಇತರೆ ಹಿಂದುಳಿದ ಜನಾಂಗದ ಜನರಿಗೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಬಗ್ಗೆ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಜಾಗೃತಿ ಮೂಡಿಸುತಿದ್ದರು. ಇದರ ಜೊತೆ ಜೊತೆಯಲ್ಲಿ ಗುಡ್ಡಗಾಡು ಪ್ರದೇಶದ ಭೂಮಿ ಅಥವಾ ಪಾಳು ಬಿದ್ದಿರುವ ಸರ್ಕಾರಿ ಭೂಮಿಯಲ್ಲಿ ಬೇಸಾಯ ಮಾಡಲು ಪ್ರೋತ್ಸಾಹಿಸುತ್ತಿದ್ದರು. ಇದರಿಂದ ಪ್ರೇರಿತರಾದ ದಲಿತ ಲಕ್ಷ್ಮೀರಾಜು ಮತ್ತು ಆದಿವಾಸಿ ಯುವಕ ಪೋಸೆಟ್ಟ ಈ ಇಬ್ಬರೂ ತಮ್ಮ ಹಳ್ಳಿಗಳಲ್ಲಿ ಪಾಳು ಬಿದ್ದಿದ್ದ ಸರ್ಕಾರಿ ಭೂಮಿಗೆ ಬೇಲಿ ಹಾಕಿ ಉಳುಮೆ ಮಾಡತೊಡಗಿದರು. ಇಂತಹ ಬೆಳವಣಿಗೆ ವೆಲಮ ಜಾತಿಗೆ ಸೇರಿದ ಜಮೀನ್ದಾರರಿಗೆ ಸಹಜವಾಗಿ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಮ್ಮ ಗೂಂಡಾ ಪಡೆಯ ಸದಸ್ಯರ ಮೂಲಕ ಇಬ್ಬರನ್ನೂ ಹತ್ಯೆ ಮಾಡಿಸುವುದರ ಮೂಲಕ ಪರೋಕ್ಷವಾಗಿ ಕರೀಂನಗರ ಜಿಲ್ಲೆಗೆ ಕಮ್ಯೂನಿಷ್ಟರಿಗೆ ಹೋರಾಟಕ್ಕಾಗಿ ಆಹ್ವಾನವಿತ್ತರು.

ಲಕ್ಷ್ಮೀರಾಜು ಮತ್ತು ಪೋಸೆಟ್ಟಿ ಹತ್ಯೆಗೆ ಪ್ರತಿಯಾಗಿ ಕಮ್ಯೂನಿಷ್ಟ್ ಕಾರ್ಯಕರ್ತರು ಈ ಬಾರಿ ನೇರವಾಗಿ ಕಾರ್ಯಾಚರಣೆಗೆ ಇಳಿಯುವ ಬದಲು ಜಮೀನ್ದಾರರಿಗೆ ಪಾಠ ಕಲಿಸಲು ಬೇರೋಂದು ಮಾರ್ಗೋಪಾಯವನ್ನು ಕಂಡುಕೊಂಡಿದ್ದರು. ಜಿಲ್ಲೆಯಾದ್ಯಂತ ಯಾವೊಬ್ಬ ದಲಿತನೂ ಜಮೀನ್ದಾರರ ಭೂಮಿಯಲ್ಲಿ ಜೀತದಾಳಾಗಿ ದುಡಿಯದಂತೆ ಕರೆನೀಡಿದರು. ಅಲ್ಲದೇ ಜೀತದಾಳುಗಳಾಗಿ ದುಡಿಯುತ್ತಿರುವವರು ದೊರೆಗಳ ಮನೆಯಿಂದ ಹೊರಬಂದರೆ ಅಂತಹವರಿಗೆ ಎರಡು ಎಕರೆ ಭೂಮಿ ಒದಗಿಸಿಕೊಡುವುದಾಗಿ ಕರೆನೀಡಿದರು. ಇದು ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಜಿಲ್ಲೆಯಾದ್ಯಂತ ಒಂದು ಲಕ್ಷ ದಲಿತರು ಮತ್ತು ಭೂರಹಿತ ಕೂಲಿಕಾರ್ಮಿಕರು ಕಮ್ಯೂನಿಷ್ಟ್ ಕಾರ್ಯಕರ್ತರ ಬಳಿ ಅರ್ಜಿ ಹಿಡಿದು ಬಂದರು. ಇವರನ್ನು ಒಗ್ಗೂಡಿಸಿದ ಕಾರ್ಯಕರ್ತರು ಸುಮಾರು 150ಕ್ಕೂ ಹೆಚ್ಚು ಹಳ್ಳಿಗಳ ಒಂದೂವರೆ ಲಕ್ಷ ಜನರನ್ನು ಒಂದುಗೂಡಿಸಿ ಜಾಗ್ತಿಯಾಳ್ ಎಂಬ ಪಟ್ಟಣದಲ್ಲಿ ಸಾರ್ವಜನಿಕ ಸಭೆ ನಡೆಸಿ, ಕರೀಂನಗರ ಜಿಲ್ಲೆಯಲ್ಲಿ ಜಮೀನ್ದಾರರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯನ್ನು ಒಂದು ತಿಂಗಳ ಒಳಗಾಗಿ ಸರ್ಕಾರದ ವಶಕ್ಕೆ ಒಪ್ಪಿಸಬೇಕು, ಈ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಭೂರಹಿತ ಕೂಲಿಕಾರ್ಮಿಕರು ಮತ್ತು ದಲಿತರಿಗೆ ಹಂಚಬೇಕೆಂದು ಗಡುವು ನೀಡಿದರು.

ಜೊತೆಗೆ ಸರ್ಕಾರಿ ಅಧಿಕಾರಿಗಳಿಗೆ, ಜಮೀನ್ದಾರರಿಗೆ ಮತ್ತು ಅವರಿಗೆ ಬೆಂಗಾವಲಾಗಿ ನಿಂತ ಪೊಲೀಸರಿಗೆ ಜಿಲ್ಲೆಯಾದ್ಯಂತ ವಿನೂತನ ಬಹಿಷ್ಕಾರ ಹಾಕಲಾಯಿತು. ಯಾವೊಬ್ಬ ದಲಿತ, ಕ್ಷೌರಿಕ, ಅಗಸ, ಚಮ್ಮಾರ, ಕಂಬಾರ, ಬಡಗಿ ಇವರುಗಳ ಸೇವೆಯನ್ನು ಬಂದ್ ಮಾಡಲಾಯಿತು. ಈ ಮೊದಲೇ ಜಾಗ್ತಿಯಾಳ್ ಪಟ್ಟಣದಲ್ಲಿ ಜರುಗಿದ ಸಮಾವೇಶದಿಂದ ನಡುಗಿಹೋಗಿದ್ದ ಜಮೀನ್ದಾರರು ಬಹಿಷ್ಕಾರ ಮತ್ತು ಜೀವಭಯದಿಂದ ತಮ್ಮ ಬಳಿ ಇದ್ದ ಅಕ್ರಮ ಜಮೀನುಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಿದರು. ಈ ಜಮೀನನ್ನು ಕಮ್ಯೂನಿಷ್ಟ್ ಕಾರ್ಯಕರ್ತರು ಭೂಮಿಯ ಲಭ್ಯತೆಯ ಅನುಸಾರ ಎಲ್ಲರಿಗೂ ಸಮನಾಗಿ ಹಂಚಿದರು. ಹೋರಾಟಕ್ಕೆ ಯಾವ ಪ್ರತಿಕ್ರಿಯೆ ನೀಡದೆ ತಣ್ಣಗಿದ್ದ ಜಿಲ್ಲಾಡಳಿತ ನಂತರದ ದಿನಗಳಲ್ಲಿ ನಾಲ್ಕು ಸಾವಿರ ದಲಿತರು ಮತ್ತು ಕೂಲಿಕಾರ್ಮಿಕರ ಮೇಲೆ ಮೊಕದ್ದಮೆ ದಾಖಲಿಸಿ, ಈ ಪ್ರದೇಶವನ್ನು ಗಲಭೆ ಪೀಡಿತ ಪ್ರದೇಶವೆಂದು ಘೋಷಿಸಿತು. ಭಾರತದ ಸಾಮಾಜಿಕ ಹೋರಾಟದಲ್ಲಿ ಪ್ರಥಮಬಾರಿಗೆ ಮೇಲ್ವರ್ಗದ ಜನಕ್ಕೆ ಬಹಿಷ್ಕಾರ ಹಾಕಿದ “ಜಾಗ್ತಿಯಾಳ್ ಯಾತ್ರ” ಎಂದು ಆಂಧ್ರ ಪ್ರದೇಶದ ಇತಿಹಾಸದಲ್ಲಿ ದಾಖಲಾಗಿರುವ ಈ ಹೋರಾಟದ ನೇತೃತ್ವವನ್ನು  ಕೊಂಡಪಲ್ಲಿ ಸೀತಾರಾಮಯ್ಯನವರ ಚಿಂತನೆಯ ಮೂಸೆಯಲ್ಲಿ ಬೆಳೆದು ನೆಚ್ಚಿನ ಯುವಕರಾಗಿದ್ದ ಗಣಪತಿ ಮತ್ತು ಮಲ್ಲೋಜ ಕೋಟೇಶ್ವರರಾವ್ ಅಲಿಯಾಸ್ ಕಿಷನ್‌ಜಿ ವಹಿಸಿಕೊಂಡಿದ್ದರು.

ಪಶ್ಚಿಮ ಬಂಗಾಳ, ಬಿಹಾರ ಮತ್ತು ಒರಿಸ್ಸಾ, ಛತ್ತೀಸ್‌ಘಡ, ಮಧ್ಯಪ್ರದೇಶ ರಾಜ್ಯಗಳ 16 ಸಾವಿರ ಹಳ್ಳಿಗಳ ಆದಿವಾಸಿಗಳು ಮತ್ತು ದಲಿತರ ಪಾಲಿಗೆ ಆರಾಧ್ಯ ದೈವನಾಗಿದ್ದ ಕಿಷನ್‌ಜಿ ಕಳೆದ ವರ್ಷ ನವಂಬರ್ 25ರಂದು ಪಶ್ಚಿಮ ಬಂಗಾಳದ ಪೊಲೀಸರು ಮಿಡ್ನಾಪುರ ಅರಣ್ಯ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾದ. (ಈ ನಕ್ಸಲ್ ಕಥನಕ್ಕೆ ಪ್ರೇರಣೆಯಾದ ವ್ಯಕ್ತಿ ಕಿಷನ್‌ಜಿ.) ಇದಕ್ಕೂ ಮುನ್ನ ಕೊಲ್ಕತ್ತ ನಗರದಲ್ಲಿ ಬಂಧಿಸಲ್ಪಟ್ಟ ಮಾವೋವಾದಿ ಕಾರ್ಯಕರ್ತನೊಬ್ಬನ ಲ್ಯಾಪ್‌ಟ್ಯಾಪ್‌ನಲ್ಲಿ ದೊರೆತ ಸುಳಿವಿನ ಆಧಾರದ ಮೇಲೆ ಮೊಬೈಲ್ ಸಿಮ್ ಕಾರ್ಡ್‌ನ ಸಂಪರ್ಕ ಜಾಲವನ್ನು ಹಿಂಬಾಲಿಸಿ ಕಿಷನ್‌ಜಿಯನ್ನು ಸರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. 36 ವರ್ಷಗಳ ಹಿಂದೆ ಕರೀಂನಗರ ಜಿಲ್ಲೆಯ ಪೆದ್ದಂಪಲ್ಲಿ ಗ್ರಾಮದಿಂದ ಬಂದು ನಕ್ಸಲ್ ಹೋರಾಟಕ್ಕೆ ಧುಮುಕಿದ ನಂತರ ಈತ ಒಮ್ಮೆಯೂ ತಾನು ಹುಟ್ಟಿ ಬೆಳೆದ ಕುಟುಂಬದತ್ತ ತಲೆ ಹಾಕಿರಲಿಲ್ಲ. ಹೆತ್ತ ತಾಯಿಯ ಮುಖ ನೋಡಿರಲಿಲ್ಲ. ಕೊಲ್ಕತ್ತ ನಗರದ ಆಸ್ಪತ್ರೆಯಲ್ಲಿ ಹೆಣವಾಗಿ ಮಲಗಿದ್ದ ಕಿಷನ್‌ಜಿ ಶವವನ್ನು ಅವನ ತಾಯಿ ಮತ್ತು ಅಣ್ಣನ ಮಗಳು ಆಂಧ್ರದಿಂದ ಬಂದು ಗುರುತಿಸಿದರು. (ಕೊಲ್ಕತ್ತ ನಗರದಲ್ಲಿ ಅವನ ಹಿತೈಷಿಗಳು ಆಸ್ಪತ್ರೆಯ ಶವಗಾರದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ಸಂದರ್ಭದ ಹಾಜರಿದ್ದು ತೆಗೆದ ಚಿತ್ರ ಇದು.) ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಕಿಷನ್‌ಜಿ ಶವವನ್ನು ಅವನ ಕುಟುಂಬಕ್ಕೆ ಒಪ್ಪಿಸಿ, ಆಂಧ್ರದ ಕರೀಂನಗರ ಜಿಲ್ಲೆಯ ಆತನ ಹುಟ್ಟಿದೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ವಾಹನ ಸೌಕರ್ಯವನ್ನು ಸಹ ಒದಗಿಸಿಕೊಟ್ಟಿತು. ಡಿಸಂಬರ್ ಮೊದಲವಾರ ಕಿಷನ್ ಜಿ ಹುಟ್ಟೂರಾದ ಪೆದ್ದಂಪಲ್ಲಿ ಗ್ರಾಮದಲ್ಲಿ ಸಾವಿರಾರು ಅಭಿಮಾನಿಗಳ ನಡುವೆ ಅಂತ್ಯಕ್ರಿಯೆ ನೆರವೇರಿತು.

(ಮುಂದುವರಿಯುವುದು)

ಪ್ರಜಾ ಸಮರ-6 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


1980ರಲ್ಲಿ ಆಂಧ್ರದಲ್ಲಿ ಪ್ರಜಾಸಮರ ದಳಂ (P.W.G.) ಎಂಬ ನಕ್ಸಲ್ ಸಂಘಟನೆಯನ್ನು ಹುಟ್ಟುಹಾಕಿದ ಕೊಂಡಪಲ್ಲಿ ಸೀತಾರಾಮಯ್ಯನವರಾಗಲಿ, ಅಥವಾ ಅವರ ಸಹಚರ ಕೆ.ಜಿ.ಸತ್ಯಮೂರ್ತಿಯಾಗಲಿ ಧಿಡೀರನೆ ನಕ್ಸಲ್ ಹೋರಾಟಕ್ಕೆ ದುಮುಕಿದವರಲ್ಲ. ಇವರಿಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಕೊಂಡು 70 ರ ದಶಕದಿಂದ ಕಮ್ಯೂನಿಷ್ಟ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದು, ಪಕ್ಷ ವಿಭಜನೆಗೊಂಡಾಗ, ಚಾರು ಮುಜುಂದಾರ್ ನೇತೃತ್ವದ ಸಿ.ಪಿ.ಐ. (ಎಂ.ಎಲ್) ಬಣದ ಜೊತೆ ಗುರುತಿಸಿಕೊಂಡವರು. ತೆಲಂಗಾಣ ಪ್ರಾಂತ್ಯದ ರೈತರ, ಆದಿವಾಸಿಗಳ ಮತ್ತು ಕೂಲಿ ಕಾರ್ಮಿಕರ ಹೋರಾಟಗಳಿಗೆ ಕೈಜೋಡಿಸಿ ಜೊತೆ ಜೊತೆಯಲ್ಲಿ ಹೋರಾಡಿದವರು. ಮತ್ತು ಪಶ್ಚಿಮ ಬಂಗಾಳದಲ್ಲಿ ಪೊಲೀಸರಿಂದ ಹತ್ಯೆಯಾದ ತಮ್ಮ ನಾಯಕ ಚಾರು ಮುಜುಂದಾರ್ ಆದರ್ಶವನ್ನು ಎತ್ತಿ ಹಿಡಿಯಲು ಶಿಕ್ಷಕ ವೃತ್ತಿಯನ್ನು ತೊರೆದು 1972ರಲ್ಲಿ ನೇರವಾಗಿ ಹೋರಾಟದ ಕಣಕ್ಕೆ ಇಳಿದವರು.

ಕೊಂಡಪಲ್ಲಿ ಸೀತಾರಾಮಯ್ಯ ಕೃಷ್ಣಾ ಜಿಲ್ಲೆಯ ಲಿಂಗಾವರಂ ಎಂಬ ಗ್ರಾಮದ ಶ್ರೀಮಂತ ಕುಟುಂಬದಲ್ಲಿ ಜನಿಸಿ ನಂತರ ಜೊನ್ನಪಡು ಎಂಬ ಗ್ರಾಮದಲ್ಲಿ ಬೆಳದವರು. ಕೆ.ಜಿ.ಸತ್ಯಮೂರ್ತಿ ಸಹ ಇದೇ ಕೃಷ್ಣಾ ಜಿಲ್ಲೆಯ ಗಂಗಾವರಂ ಎಂಬ ಹಳ್ಳಿಯ ದಲಿತ ಕುಟುಂಬದಲ್ಲಿ ಜನಿಸಿದವರು. ಇಬ್ಬರೂ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿದ್ದ ಪಾತಿಮಾ ಎಂಬ ಶಾಲೆಯಲ್ಲಿ ಶಿಕ್ಷಕರಾಗಿ ದುಡಿಯುತ್ತಾ ಎಂಡಪಂಥೀಯ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದರು. ಸೀತಾರಾಮಯ್ಯ ಹಿಂದಿ ಶಿಕ್ಷಕರಾಗಿದ್ದರೆ, ಕೆ.ಜಿ. ಸತ್ಯಮೂರ್ತಿ ಇಂಗ್ಲಿಷ್ ಶಿಕ್ಷರಾಗಿದ್ದರು. ಜೊತೆಗೆ ಶಿವಸಾಗರ ಎಂಬ ಕಾವ್ಯ ನಾಮದಲ್ಲಿ ಆಂಧ್ರದ ದಲಿತ ಲೋಕದ ನೋವು ಮತ್ತು ಅಸಮಾನತೆಗಳನ್ನು ಕಾವ್ಯದ ಮೂಲಕ ಅನಾವರಣಗೊಳಿಸುತ್ತಾ ಸತ್ಯಮೂರ್ತಿ, ಆ ಕಾಲದ ಆಂಧ್ರದ ಪ್ರಮುಖ ದಲಿತ ಕವಿಯಾಗಿ ಹೆಸರುವಾಸಿಯಾಗಿದ್ದರು.

ಕೊಂಡಪಲ್ಲಿ ಸೀತಾರಾಮಯ್ಯ ಚಾರುಮುಜಂದಾರ್‌ನಿಂದ ಪ್ರೇರಿತರಾಗಿದ್ದರೂ ಸಹ ನಕ್ಸಲ್ ಸಂಘಟನೆಯನ್ನು ವಿಭಿನ್ನವಾಗಿ ರೂಪಿಸಬೇಕೆಂದು ಬಯಸಿದ್ದರು. ದೀನ ದಲಿತರ ಮುಕ್ತಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ನಾಡಿನ ಎಲ್ಲಾ ವರ್ಗದ ಜನರು ಪಾಲ್ಗೊಳ್ಳಬೇಕೆಂದು ಅವರು ಕನಸು ಕಂಡಿದ್ದರು. ಸೀತಾರಾಮಯ್ಯನವರಲ್ಲಿ ಇದ್ದ ಒಂದು ವಿಶಿಷ್ಟ ಗುಣವೆಂದರೆ, ಇತರರು ಯಾರೇ ಆಗಿರಲಿ ಯಾವುದೇ ರೀತಿಯ ಸಲಹೆ ಅಥವಾ ಅಭಿಪ್ರಾಯ ನೀಡಿದರೆ, ಅವುಗಳನ್ನು ಸಹನೆಯಿಂದ ಆಲಿಸುತ್ತಿದ್ದರು. ನಂತರ ತಮ್ಮ ವಿಚಾರಗಳನ್ನು ಅವರ ಮುಂದಿಟ್ಟು ಮನವೊಲಿಸುತ್ತಿದ್ದರು. ಕೊಂಡಪಲ್ಲಿ ಸೀತಾರಾಮಯ್ಯನವರ ಇಂತಹ ಗುಣವೇ ಅವರನ್ನು ದೇಶದ ನಕ್ಸಲ್ ಸಂಘಟನೆಯ ಮಹಾ ನಾಯಕನನ್ನಾಗಿ ರೂಪಿಸಿತು ಎಂದು ವರವರರಾವ್ ಅಭಿಪ್ರಾಯ ಪಟ್ಟಿದ್ದಾರೆ. ಅದು ಅಕ್ಷರಶಃ ನಿಜಕೂಡ ಹೌದು. ಕೊಂಡಪಲ್ಲಿಯವರ ಹೋರಾಟದ ಹೆಜ್ಜೆ ಗುರುತುಗಳನ್ನು ಅವಲೋಕಿಸುತ್ತಾ ಹೋದರೆ ಈ ಅಂಶ ಸತ್ಯವೆನಿಸುತ್ತದೆ.

ನಕ್ಸಲ್ ಸಂಘಟನೆಯನ್ನು ಭೂಗತವಾಗಿ ಸಜ್ಜುಗೊಳಿಸಬೇಕೆಂಬುದು ಚಾರು ಮುಜಂದಾರನ ಆಶಯ ಮತ್ತು ಗುರಿಯಾಗಿತ್ತು. ಈ ಕುರಿತು 1970ರಲ್ಲಿ ನಡೆದ ಸಿ.ಪಿ.ಐ. (ಎಂ.ಎಲ್.) ಸಭೆಯಲ್ಲೂ ಕೂಡ ಬಲವಾಗಿ ಪ್ರತಿಪಾತಿಸಿದ್ದ. ಆದರೆ, ಇದಕ್ಕೆ ಭಿನ್ನವಾಗಿ ಸೀತಾರಾಮಯ್ಯ ಆಂಧ್ರದಲ್ಲಿ ಬಹಿರಂಗವಾಗಿ ನಕ್ಸಲ್ ಸಂಘಟನೆಯನ್ನು ರೂಪಿಸತೊಡಗಿದರು. ಏಕೆಂದರೆ, ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಳಗೊಳ್ಳದ ಯಾವುದೇ ಹೋರಾಟ ಯಶಸ್ವಿಯಾಗುವುದಿಲ್ಲ ಎಂಬುದು ಅವರ ಧೃಡನಿಲುವಾಗಿತ್ತು. ಈ ಕಾರಣಕ್ಕಾಗಿ ಅವರು ವಾರಂಗಲ್‌ನ ಓರ್ವ ಇಂಜಿನಿಯರಿಂಗ್ ವಿಧ್ಯಾರ್ಥಿಯನ್ನು (ರಾಮರೆಡ್ಡಿ) ಮೂರು ತಿಂಗಳ ಕಾಲ ಮುಲ್ಲುಗು ಎಂಬ ಅರಣ್ಯ ಪ್ರದೇಶಕ್ಕೆ ಕಳುಹಿಸಿ, ಅಲ್ಲಿನ ಆದಿವಾಸಿಗಳ ಬಗ್ಗೆ ಅಧ್ಯಯನ ನಡೆಸಿ ಆದಿವಾಸಿಗಳ ಬದುಕು ಕುರಿತಂತೆ ಮಾಹಿತಿ ಕಲೆ ಹಾಕಿದ್ದರು. ತಾವು ಮುನ್ನಡೆಸುವ ಹೋರಾಟಕ್ಕೆ ಆಧಾರ ಸ್ಥಂಭವಾಗಬೇಕಾಗಿರುವ ಅನಕ್ಷರಸ್ಥ ಆದಿವಾಸಿಗಳು, ದಲಿತರು, ಬಡ ರೈತ ಮತ್ತು ಕೂಲಿಕಾರ್ಮಿಕರನ್ನು ತಲುಪಬೇಕಾದರೆ, ಭಾಷಣದಿಂದ ಅಥವಾ ಅವರೊಂದಿಗೆ ನಡೆಸುವ ಚರ್ಚೆಯೊಂದಿಗೆ ಸಾಧ್ಯವಿಲ್ಲ ಎಂಬುದುನ್ನು ಸೀತಾರಾಮಯ್ಯ ಅನುಭವದಿಂದ ಅರಿತಿದ್ದರು.

ಅನಕ್ಷರಸ್ಥರನ್ನು ತಲುಪಲು ಹಾಡು, ನೃತ್ಯ, ಬಯಲು ನಾಟಕವೇ ಸೂಕ್ತ ಎಂದು ತೀರ್ಮಾನಿಸಿ 1972ರಲ್ಲಿ “ಜನ ನಾಟ್ಯ ಮಂಡಲಿ” ಎಂಬ ಸಾಂಸ್ಕೃತಿಕ ಅಂಗ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆಯ ಮೂಲಕ ಬೆಳಕಿಗೆ ಬಂದ ಅದ್ಭುತ ಪ್ರತಿಭೆಯೇ ಗದ್ದಾರ್ ಎಂಬ ಜನಪ್ರಿಯ ಗಾಯಕ.

ಗುಮ್ಮುಡಿ ವಿಠಲರಾವ್ ಎಂಬ ಹೆಸರಿನ ದಲಿತ ಕುಟುಂಬದ ಈ ಜಾನಪದ ಕೋಗಿಲೆ 1949 ರಲ್ಲಿ ಮೇಡಕ್ ಜಿಲ್ಲೆಯ ಹಳ್ಳಿಯೊಂದರಿಂದ ಬಂದವರು. ಸೀತಾರಾಮಯ್ಯನವರ ಕರೆಗೆ ಓಗೊಟ್ಟು ಹೈದರಾಬಾದಿನ ತಮ್ಮ ಇಂಜಿನಿಯರಿಂಗ್ ವಿಧ್ಯಾಭ್ಯಾಸವನ್ನು ಅರ್ಧದಲ್ಲಿ ಕೈಬಿಟ್ಟು ಬಂದು ಜನನಾಟ್ಯ ಮಂಡಲಿಗೆ ಸೇರಿ ಅದಕ್ಕೆ ಉಸಿರಾದವರು. ನಾಡಿನ ಜ್ವಲಂತ ಸಮಸ್ಯೆಗಳನ್ನು, ಹಳ್ಳಿಗಾಡಿನ ಜನರ ನೋವುಗಳನ್ನು ಮತ್ತು ದಲಿತರ, ಶೋಷಿತ ಸಮುದಾಯದ ಹೆಣ್ಣುಮಕ್ಕಳ ಅವ್ಯಕ್ತ ಭಾವನೆಗಳೆಲ್ಲವನ್ನೂ ಹಾಡಾಗಿಸಿ ಆಂಧ್ರದ ಹಳ್ಳಿಗಾಡಿನ ಪ್ರತಿ ಮನೆ ಮತ್ತು ಮನಕ್ಕೂ ನೇರವಾಗಿ ತಲುಪಿದ ಅಪ್ರತಿಮ ಗಾಯಕ ಮತ್ತು ನೃತ್ಯಗಾರ ಈ ಗದ್ದಾರ್. ಇವರು ಹಾಡುತಿದ್ದ ಸತ್ಯಮೂರ್ತಿಯವರ ಕವಿತೆಗಳು, ಶ್ರೀ.ಶ್ರೀ.ಯವರ ಬಂಡಾಯದ ಕಾವ್ಯದ ಸಾಲುಗಳು ಹಾಗೂ ಆ ಕ್ಷಣಕ್ಕೆ ತಾವೇ ಕಟ್ಟಿ ಹಾಡುತಿದ್ದ ಹಳ್ಳಿಗರ ಮತ್ತು ಆದಿವಾಸಿಗಳ ನೋವಿನ ಕಥನ ಗೀತೆಗಳು ಮತ್ತು ಅವರು ಮಾಡುತಿದ್ದ ನೃತ್ಯ ಇವೆಲ್ಲವೂ ಪರೋಕ್ಸವಾಗಿ ಆಂಧ್ರ ಪ್ರದೇಶದಲ್ಲಿ ನಕ್ಸಲ್ ಹೋರಾಟ ಜನ ಸಾಮಾನ್ಯರ ನಡುವೆ ಕಾಡ್ಗಿಚ್ಚಿನಂತೆ ಹರಡಲು ಸಹಾಕಾರಿಯಾಯಿತು. ಭಾಷಣದಲ್ಲಿ ನಾಯಕರು ಹೇಳಬೇಕಾದ ಸಂಗತಿಗಳನ್ನು ಗದ್ದಾರ್ ಹಾಡಿನ ಮೂಲಕ ಸರಳವಾಗಿ ತಲುಪಿಸಿಬಿಡುತ್ತಿದ್ದರು. ದಣಿವರಿಯದ ಅವರ ಕಳೆದ ನಾಲ್ಕು ದಶಕದ ಹಾಡು ನೃತ್ಯದ ಅಭಿಯಾನ ಈಗಲೂ ಮುಂದುವರಿದಿದೆ. (ಗದ್ದಾರ್ ಇತ್ತೀಚೆಗೆ ಪ್ರತ್ಯೇಕ ತೆಲಂಗಾಣ ಹೋರಾಟದ ಜೊತೆ ಕೈ ಜೋಡಿಸಿದ್ದು ಚಳವಳಿಯ ನಾಯಕ ಟಿ.ಆರ್. ಚಂದ್ರಶೇಖರ್ ರಾವ್ ಜೊತೆ ಹೋರಾಟ ನಡೆಸುತಿದ್ದಾರೆ.)

ತಮ್ಮ ಹೋರಾಟಕ್ಕೆ ಸಾಂಸ್ಕೃತಿಕ ಸಂಘಟನೆಯ ಜೊತೆಗೆ ಯುವಕರನ್ನು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸಲು ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ ಎಂಬ ಸಂಘಟನೆಯನ್ನು ಸೀತಾರಾಮಯ್ಯ ಹುಟ್ಟುಹಾಕಿದರು. ಏಕಕಾಲದಲ್ಲಿ ನಕ್ಸಲ್ ಚಟುವಟಿಕೆಯನ್ನು ಭೂಗತವಾಗಿ ಮತ್ತು ಬಹಿರಂಗವಾಗಿ ಮುನ್ನೆಡೆಸುವುದು ಅವರ ಗುರಿಯಾಗಿತ್ತು. ಆ ವೇಳೆಗಾಗಲೇ ಬಲಿಷ್ಟ ಜಮೀನ್ದಾರರು ಮತ್ತು ಅವರ ಬೆಂಬಲಿಗರಾಗಿ ನಿಂತಿರುವ ಪೊಲೀಸರ ವಿರುದ್ಧ ಹೋರಾಡಲು ಕೇವಲ ಬಿಲ್ಲು ಬಾಣಗಳು ಸಾಲುವುದಿಲ್ಲ ಎಂಬುದನ್ನು ಶ್ರೀಕಾಕುಳಂ ಜಿಲ್ಲೆಯ ಘಟನೆಗಳ ಅನುಭವದಿಂದ ಅರಿತಿದ್ದ ಸೀತಾರಾಮಯ್ಯ ಬಂದೂಕಗಳ ಸಂಗ್ರಹಕ್ಕೂ ಸಹ ಮುಂದಾದರು. ಇದಕ್ಕೆ ಬೇಕಾದ ಹಣಕ್ಕಾಗಿ ಜಮೀನ್ದಾರರ ಮತ್ತು ಹಣದ ಲೇವಾದೇವಿದಾರರ ಮನೆಗಳಿಗೆ ಕಾರ್ಯಕರ್ತರನ್ನು ನುಗ್ಗಿಸುವುದರ ಮೂಲಕ ಅಪಾರ ಸಂಪತ್ತನ್ನು ದೋಚತೊಡಗಿದರು.

ಸೀತಾರಾಮಯ್ಯನವರ ಇಂತಹ ಕ್ರಾಂತಿಕಾರಕ ಧೋರಣೆಗಳು ಆಂಧ್ರಪ್ರದೇಶದಲ್ಲಿ ನಕ್ಸಲ್ ಸಂಘಟನೆಗೆ ಅಪಾರ ಯುವ ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಹೈದರಾಬಾದ್‌ನ ಉಸ್ಮಾನಿಯಾ ವಿ.ವಿ. ಮತ್ತು ವಾರಂಗಲ್ ಪಟ್ಟಣದ ರೀಜನಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಮಾಹಿತಿ ನೀಡದೆ ಅರ್ಧಕ್ಕೆ ವಿದ್ಯಾಭ್ಯಾಸ ತೊರೆದು ನಕ್ಸಲ್ ಹೋರಾಟಕ್ಕೆ ದುಮುಕಿದರು. ಕೆಲವರು ಬಂದೂಕು ಮತ್ತು ಗೆರಿಲ್ಲಾ ಯುದ್ಧ ತಂತ್ರದ ತರಬೇತಿಗಾಗಿ ಗುಂಟೂರು, ತಿರುಪತಿ, ವಿಶಾಖಪಟ್ಟಣ ಮುಂತಾದ ಕಡೆ ಅರಣ್ಯ ಪ್ರದೇಶಗಳಲ್ಲಿ ಭೂಗತರಾದರು.

1973-74 ರ ವೇಳೆಗೆ ಆಂಧ್ರದಲ್ಲಿ ನಕ್ಸಲ್ ಸಂಘಟನೆ ಬಿಸಿರಕ್ತದ ವಿದ್ಯಾವಂತ ಯುವಕರಿಂದ ಕೂಡಿದ ಬಲಿಷ್ಟ ಸಂಘಟನೆಯಾಗಿ ಹೊರಹೊಮ್ಮಿತ್ತು. 1975ರ ಪೆಬ್ರವರಿ ತಿಂಗಳಿನಲ್ಲಿ ಹೈದರಾಬಾದ್ ನಗರದಲ್ಲಿ ನಡೆದ ಬೃಹತ್ ಯುವ ಸಮಾವೇಶದಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಸರ್ಕಾರದ ಕೆಂಗಣ್ಣಿಗೆ ಗುರಿಯಾದರು. ಅಮಾಯಕ ಆದಿವಾಸಿಗಳನ್ನು ಮತ್ತು ಬಡ ರೈತ ಹಾಗೂ ಕೂಲಿಕಾರ್ಮಿಕರನ್ನು ಶೋಷಣೆಗೆ ಒಳಪಡಿಸಿರುವ ಅರಣ್ಯಾಧಿಕಾರಿಗಳು, ಜಮೀನ್ದಾರರು, ಬಡ್ಡಿ ಹಣದ ಮೂಲಕ ಬಡವರನ್ನು ಸುಲಿಯುತ್ತಿರುವ ಲೇವಾದೇವಿದಾರರ ಇವರುಗಳ ಮೇಲೆ ನೇರ ಕ್ರಮ ಜರುಗಿಸಲು ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆಗೆ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿಯೆದ್ದು ಪ್ರಧಾನಿಯಾಗಿದ್ದ  ಇಂದಿರಾಗಾಂಧಿ ನೇತೃತ್ವ ಕಾಂಗ್ರೇಸ್ ಸರ್ಕಾರದಿಂದ ತನ್ನ ಅಧಿಕಾರದ ಗದ್ದುಗೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 1975ರ ಜುಲೈ ತಿಂಗಳಿನಲ್ಲಿ ರಾಷ್ಟ್ರಾದ್ಯಂತ ತುರ್ತುಪರಿಸ್ಥಿತಿ ಜಾರಿಗೊಳಿಸಿ, ನಾಗರೀಕರ ಹಕ್ಕುಗಳ ಮೇಲೆ ನಿರ್ಭಂಧ ಹೇರಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವ್ಯವಸ್ಥೆಗೆ ಇದು ಇನ್ನೊಂದು ರೀತಿಯಲ್ಲಿ ಅನೂಕೂಲವಾಗಿ ಪರಿಣಮಿಸಿತು. ಆಂಧ್ರ ಪ್ರದೇಶದಲ್ಲಿ ಸರ್ಕಾರದ ವಕ್ರದೃಷ್ಟಿಗೆ ಗುರಿಯಾಗಿದ್ದ ಎಲ್ಲಾ ಪ್ರಗತಿಪರ ಸಂಘಟನೆಗಳ ಮೇಲೆ ನಿಷೇಧ ಹೇರಿ ನಾಯಕರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆಂಧ್ರದ ರ್‍ಯಾಡಿಕಲ್ ಯೂತ್ ಸಂಘಟನೆಯ ನೂರಾರು ಯುವಕರನ್ನು ದರೋಡೆ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಬಂಧಿಸಲಾಯಿತು. ಸಂಘಟನೆಯ ಮುಂಚೂಣಿಯಲ್ಲಿದ್ದ ಯುವ ನಾಯಕರಾದ ಜನಾರ್ಧನ್, ಮುರಳಿ, ಆನಂದ್ ಮತ್ತು ಸುಧಾಕರ್ ಎಂಬ ನಾಲ್ವರು ವಿದ್ಯಾರ್ಥಿಗಳನ್ನು ನಿರ್ಜನ ಅರಣ್ಯಕ್ಕೆ ಕರೆದೊಯ್ದ ಆಂಧ್ರ ಪೊಲೀಸರು, ಎನ್ಕೌಂಟರ್ ನೆಪದಲ್ಲಿ ಗುಂಡಿಕ್ಕಿ ಕೊಂದರು. ಇಂತಹ ಅಮಾನುಷ ನರಮೇಧದ ಮೂಲಕ ಆಂಧ್ರ ಪೊಲೀಸರು ತಮಗೆ ಅರಿವಿಲ್ಲದಂತೆ ಆಂಧ್ರದ ನೆಲದಲ್ಲಿ ಇವತ್ತಿಗೂ ತಾಂಡವವಾಡುತ್ತಿರುವ ನಕ್ಸಲ್ ಹೋರಾಟದ ರಕ್ತ ಚರಿತ್ರೆಗೆ ಮುನ್ನುಡಿ ಬರೆದಿದ್ದರು. ಈ ಘಟನೆ ಆಂಧ್ರದಲ್ಲಿ  ಕೊಂಡಪಲ್ಲಿ ಸೀತಾರಾಮಯ್ಯ, ಕೆ.ಜಿ. ಸತ್ಯಮೂರ್ತಿ ಮತ್ತು ಬಂಗಾಳದ ಸುನೀತ್ ಕುಮಾರ್ ಘೋಷ್‌ರವರನ್ನು ಸಹಜವಾಗಿ ಕೆರಳಿಸಿತು. ಈವರೆಗೆ ಕೇವಲ ಪಟ್ಟಭದ್ರ ಹಿತಾಶಕ್ತಿಗಳನ್ನು ಮಾತ್ರ ತಮ್ಮ ಹಿಟ್ಲಿಸ್ಟ್ ಗುರಿಯಾಗಿರಿಸಿಕೊಂಡಿದ್ದ ಅವರು ಈ ಪಟ್ಟಿಗೆ ಆಂಧ್ರದ ಪೊಲೀಸರನ್ನು ಸೇರಿಸಿದರು.

ಈ ನಡುವೆ ಸಂಘಟನೆಗೆ ಶಸ್ತ್ರಾಸಗಳನ್ನು ಖರೀದಿಸಲು ಮಹಾರಾಷ್ಟ್ರಕ್ಕೆ ತೆರಳಿದ್ದ ಸೀತಾರಾಮಯ್ಯ ಅಪಾರ ಮದ್ದುಗುಂಡು, ಸ್ಪೋಟಕ ಸಾಮಾಗ್ರಿಗಳು ಮತ್ತು ಬಂದೂಕುಗಳನ್ನು ಸಂಗ್ರಹಿಸಿಕೊಂಡು ಆಂಧ್ರಕ್ಕೆ ವಾಪಾಸಾಗುತಿದ್ದ ವೇಳೆ 1976ರ ಏಪ್ರಿಲ್ 26ರಂದು ನಾಗಪುರ ಪೊಲೀಸರ ಕೈಗೆ ವಾಹನ ಸಮೇತ ಸಿಕ್ಕಿಬಿದ್ದರು. ಮೂರು ತಿಂಗಳ ನಂತರ ಜಾಮೀನಿನ ಮೇಲೆ ಬಂಧನದಿಂದ ಬಿಡುಗಡೆಯಾದ ಅವರು ಪ್ರಥಮ ಬಾರಿಗೆ ಭೂಗತರಾಗುವ ಮೂಲಕ ನಕ್ಸಲ್ ಸಂಘಟನೆಯನ್ನು ಮುನ್ನಡೆಸತೊಡಗಿದರು. 1978ರಲ್ಲಿ ದೇಶಾದ್ಯಂತ ಹೇರಲಾಗಿದ್ದ ತುರ್ತುಪರಿಸ್ಥಿತಿಯನ್ನು ತೆರವುಗೊಳಿಸಿದ ನಂತರ, ಅದೇ ವರ್ಷ ಕೊಂಡಪಲ್ಲಿ ಸೀತಾರಾಮಯ್ಯ ಜನನಾಟ್ಯಮಂಡಲಿ ಮತ್ತು ರ್‍ಯಾಡಿಕಲ್ ಸ್ಟೂಡೆಂಟ್ ಯೂನಿಯನ್ ಜೊತೆಗೆ ರ್‍ಯಾಡಿಕಲ್ ಯೂತ್ ಲೀಗ್ ಎಂಬ ಮತ್ತೊಂದು ಸಂಘಟನೆಯನ್ನು ಹುಟ್ಟು ಹಾಕಿ ಈ ಮೂರು ಸಂಘಟನೆಗಳನ್ನು ಸಿ.ಪಿ.ಐ. (ಎಂ.ಎಲ್) ಎಂಬ ಮಾತೃ ಸಂಘಟನೆಯ ಮೂಲಕ ಹೋರಾಟದ ಹಾದಿಯಲ್ಲಿ ಕೊಂಡೊಯ್ಯಲು ನಿರ್ಧರಿಸಿದರು.

ವಿದ್ಯಾರ್ಥಿಗಳನ್ನು ಬೇಸಿಗೆ ರಜಾದಿನಗಳಲ್ಲಿ ಗುಡ್ಡ ಗಾಡು ಪ್ರದೇಶದ ಆದಿವಾಸಿಗಳ ಹಾಡಿಗಳಿಗೆ (ಗ್ರಾಮ) ಮತ್ತು ಅರಣ್ಯದ ಅಂಚಿನ ಹಳ್ಳಿಗಾಡಿನಲ್ಲಿ ವಾಸಿಸುತಿದ್ದ ರೈತರು ಮತ್ತು ಕೂಲಿ ಕಾರ್ಮಿಕರ ಬಳಿ ಕಳುಹಿಸಿ ಅವರ ಜೊತೆ ವಾಸಿಸುವಂತೆ ಪ್ರೊತ್ಸಾಹಿಸಿದರು. ವ್ಯವಸ್ಥೆಯ ಕ್ರೌರ್ಯದ ಮುಖಗಳನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಲು ಮಾರ್ಗದರ್ಶನ ನೀಡಿದರು. ಜೊತೆಗೆ ಸಂಘಟನೆಗೆ ಮತ್ತು ಹೋರಾಟಕ್ಕೆ ಆಸಕ್ತಿ ತೋರಿದ ಯುವಕರ ಮಾಹಿತಿಯನ್ನು ಕಲೆ ಹಾಕತೊಡಗಿದರು. ಅವರ ಈ ಆಲೋಚನೆ ನಿರೀಕ್ಷೆಗೂ ಮೀರಿ ಫಲಪ್ರದವಾಯಿತು. ಕೇವಲ ನಗರ, ಪಟ್ಟಣ ಮೂಲದ ವಿದ್ಯಾರ್ಥಿಗಳನ್ನು ಒಳಗೊಂಡಿದ್ದ ನಕ್ಸಲ್ ಸಂಘಟನೆಗೆ ಹಳ್ಳಿಗಾಡಿನ ಯುವಕರು, ಆದಿವಾಸಿಗಳು ಸೇರಿದ ನಂತರ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ (1978ರಿಂದ 2003ರವರೆಗೆ) ಆಂಧ್ರದ ನೆಲ ನಕ್ಸಲ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತು.

(ಮುಂದುವರಿಯುವುದು)

ಪ್ರಜಾ ಸಮರ-5 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಇತಿಹಾಸವನ್ನು ನಕ್ಸಲ್‌ ಬಾರಿ ಎಂಬ ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್ ಪ್ರಾಂತ್ಯದ ಹಳ್ಳಿಯಲ್ಲಿ 1967ರ ಮೇ ತಿಂಗಳಿನಲ್ಲಿ ನಡೆದ ಘಟನೆಯೊಂದಿಗೆ ಗುರುತಿಸುವುದು ವಾಡಿಕೆಯಾಗಿದೆ. ವಾಸ್ತವವಾಗಿ ಈ ಘಟನೆಗೂ ಮುನ್ನ ಒಂದು ದಶಕದ ಹಿಂದೆಯೇ ಆಂಧ್ರದ ಉತ್ತರ ತೆಲಂಗಾಣ ಪ್ರಾಂತ್ಯದ ಶ್ರೀಕಾಕುಳಂ ಜಿಲ್ಲೆಯಲ್ಲಿ ರೈತ ಮತ್ತು ಕೂಲಿ ಕಾರ್ಮಿಕರ ಹೋರಾಟ ಆರಂಭಗೊಂಡಿತ್ತು.

1925 ರಲ್ಲಿ ಭಾರತಕ್ಕೆ ಕಾಲಿಟ್ಟ ಎಡಪಂಥಿಯ ಚಿಂತನೆಗಳು ಆ ಕಾಲದಲ್ಲಿ ಆಂಧ್ರ ಪ್ರದೇಶದುದ್ದಕ್ಕೂ ಹರಡಿದ್ದವು. ಆಗಿನ ಆಂಧ್ರಪ್ರಭ ಎಂಬ ತೆಲುಗು ದಿನಪತ್ರಿಕೆ ಕಮ್ಯೂನಿಷ್ಟ್ ಪಕ್ಷದ ವಿಚಾರಧಾರೆಯನ್ನು ಪ್ರಕಟಿಸುವುದರಲ್ಲಿ ಮುಂಚೂಣಿಯಲ್ಲಿತ್ತು. ಅಲ್ಲಿನ ಕಮ್ಯೂನಿಷ್ಟರ ಪ್ರಭಾವ ಮತ್ತು ಸಹಕಾರದೊಂದಿಗೆ ತೆಲಂಗಾಣ ಪ್ರಾಂತ್ಯದ ಅರಣ್ಯಗಳಲ್ಲಿ ವಾಸಿಸುತ್ತಿದ್ದ ಆದಿವಾಸಿಗಳು ಮತ್ತು ರೈತ ಹಾಗೂ ಕೂಲಿ ಕಾರ್ಮಿಕರು, ಆಂಧ್ರದಲ್ಲಿ ದೊರೆಗಳು ಎಂದು ಕರೆಸಿಕೊಳ್ಳುತ್ತಿದ್ದ ಜಮೀನ್ದಾರರ ದಬ್ಬಾಳಿಕೆ ಮತ್ತು ಕ್ರೌರ್ಯದ ವಿರುದ್ಧ ತಿರುಗಿಬಿದ್ದಿದ್ದರು. ಇವರಿಗೆ 1947ಕ್ಕೆ ಮುನ್ನವೇ ಅಂದಿನ ಹೈದರಾಬಾದ್ ನಿಜಾಮನ ವಿರುದ್ಧ ತಿರುಗಿ ಬಿದ್ದಿದ್ದ ಕಮ್ಯೂನಿಷ್ಟ್ ಕಾರ್ಯಕರ್ತರ ಹೋರಾಟ ಮಾದರಿಯಾಗಿತ್ತು.

ಸ್ವಾತಂತ್ಯಕ್ಕೆ ಪೂರ್ವದಲ್ಲಿ ತೆಲಂಗಾಣ ಪ್ರಾಂತ್ಯ ಕೂಡ ಹೈದರಾಬಾದ್ ಸಂಸ್ಥಾನವನ್ನು ಆಳುತ್ತಿದ್ದ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. ತನ್ನ ರಾಜ್ಯದ ಜನರ ಹಿತಾಸಕ್ತಿಯನ್ನು ಬದಿಗೊತ್ತಿ ಸದಾ ಸುಖದ ಲೋಲುಪತೆಯಲ್ಲಿ ಮುಳುಗಿ ಅಕ್ಷರಶಃ ಸರ್ವಾಧಿಕಾರಿಯಂತೆ ಆಳಿದ ಈ ನಿಜಾಮನ ಬಗ್ಗೆ ಸಾಮಾನ್ಯ ಜನರ ಎದೆಯೊಳಗೆ ಸಹಜವಾಗಿ ಆಕ್ರೋಶ ಮಡುವುಗಟ್ಟಿತ್ತು. ಎಂಬತ್ತಾರು ಮಂದಿ ಪತ್ನಿಯರನ್ನು ಹೊಂದಿದ್ದ ಹಾಗೂ ಆ ಕಾಲದ ಜಗತ್ತಿನ ಅತಿ ಶ್ರೀಮಂತರಲ್ಲಿ ಒಬ್ಬನಾಗಿದ್ದ ಇವನ ಕೈಕೆಳಗೆ ಇದ್ದ ಆಡಳಿತಗಾರರು, ಪ್ರಾಂತ್ಯಗಳ ಪಾಳೆಗಾರರು, ಜಮೀನ್ದಾರರು ಮತ್ತು ರಜಾಕಾರರು ನಿಜಾಮನಷ್ಟೇ ಕ್ರೂರಿಗಳಾಗಿದ್ದರು. ಆಳುವವರೆಲ್ಲಾ ಮುಸ್ಲಿಂರಾಗಿದ್ದುದು ಬಹು ಸಂಖ್ಯಾತರಾಗಿದ್ದ ಅಂದಿನ ಹೈದರಾಬಾದ್ ಸಂಸ್ಥಾನದ ಹಿಂದುಗಳಲ್ಲಿ ನಿಜಾಮನ ಆಡಳಿತ ಕುರಿತಂತೆ ಅಂತರಂಗದಲ್ಲಿ ಅಸಮಧಾನವಿದ್ದ ಕಾರಣಕ್ಕಾಗಿ ನಿಜಾಮನ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ ಜನಸಾಮಾನ್ಯರ ಪರ ಧ್ವನಿ ಎತ್ತಿದ ಕಮ್ಯೂನಿಷ್ಟ್ ಪಕ್ಷದ ಮೇಲೆ ಹೈದರಾಬಾದ್‌ ನಿಜಾಮ ನಿಷೇಧವನ್ನು ಹೇರಿದ್ದ.

1946ರಲ್ಲಿ ಆಂಧ್ರದ ಎಲ್ಲಾ ಕಮ್ಯೂನಿಷ್ಟ್ ನಾಯಕರು ಒಗ್ಗೂಡಿ ಆಂಧ್ರ ಮಹಾಸಭಾ ಸಂಘಟನೆಯ ಅಡಿಯಲ್ಲಿ ನಿಜಾಮನ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದರು. ಅಪಾರ ಪ್ರಮಾಣದಲ್ಲಿ ರೈತರು ಮತ್ತು ಕೂಲಿ ಕಾರ್ಮಿಕರ ಬೆಂಬಲ ಪಡೆದಿದ್ದ ಎಡಪಂಥಿಯ ಹೋರಾಟವನ್ನು ಬಗ್ಗು ಬಡಿಯುವುದು ನಿಜಾಮನಿಗೆ ಸುಲಭದ ಸಂಗತಿಯಾಗಿರಲಿಲ್ಲ. ಆಂಧ್ರದ ನೆಲದಲ್ಲಿ ಪ್ರಥಮಬಾರಿಗೆ ನಿಜಾಮನ ವಿರುದ್ಧ ಸಂಘಟಿತವಾಗಿ ಕಮ್ಯೂನಿಷ್ಟರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ನಲ್ಗೊಂಡ, ಕಮ್ಮಂ, ವಾರಂಗಲ್ ಜಿಲ್ಲೆಗಳಲ್ಲಿ ಸುಮಾರು ಐದು ಸಾವಿರ ರೈತರು ಮತ್ತು ಕೂಲಿಕಾರ್ಮಿಕರು ಸಹ ಸಂಘಟಿತರಾಗಿ ತಮ್ಮನ್ನು ಶೋಷಣೆ ಮಾಡುತ್ತಿದ್ದ ಭೂಮಾಲಿಕರ ವಿರುದ್ಧ ಸಿಡಿದೆದ್ದರು. ಕಮ್ಯೂನಿಷ್ಟ್ ಕಾರ್ಯಕರ್ತರ ಬೆಂಬಲದೊಂದಿಗೆ ಭೂಮಾಲಿಕರ ಜಮೀನುಗಳಿಗೆ ನುಗ್ಗಿದ ರೈತರು ಬೆಳೆದು ನಿಂತಿದ್ದ ಫಸಲನ್ನು ಕುಯ್ಲು ಮಾಡಿ ಕೊಂಡೊಯ್ದು ನಂತರ ಎಲ್ಲರೂ ಸಮನಾಗಿ ಹಂಚಿಕೊಂಡರು.

ಆಂಧ್ರದ ಕ್ರಾಂತಿಕಾರಿ ಲೇಖಕ ಮತ್ತು ಕವಿಯಾಗಿರುವ ಹಾಗೂ ನಕ್ಸಲ್ ಚಳವಳಿಯ ಬೆಂಬಲಿಗರಲ್ಲಿ ಒಬ್ಬರಾಗಿರುವ ವರವರರಾವ್ ತಮ್ಮ ’ಸೆರೆಮನೆಯ ದಿನಚರ” ಎಂಬ ಕೃತಿಯಲ್ಲಿ ಭೂಮಾಲಿಕರ ದಬ್ಬಾಳಿಕೆ ಆಂಧ್ರಪ್ರದೇಶದಲ್ಲಿ ನಕ್ಸಲ್ ಹೋರಾಟ ಹುಟ್ಟಿಕೊಳ್ಳಲು ಪರೋಕ್ಷವಾಗಿ ಕಾರಣವಾಯಿತು ಎಂದಿದ್ದಾರೆ. ಅಲ್ಲದೆ, ಆಂಧ್ರದಲ್ಲಿ ಸಂಸ್ಥಾನಗಳ ಮಾಂಡಲೀಕರಂತೆ ಬದುಕಿದ ಭೂಮಾಲಿಕರ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಆ ಕಾಲದಲ್ಲಿ ಜಮೀನುಗಳಲ್ಲಿ ದುಡಿಯುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು ತಮ್ಮ ಹಸುಗೂಸುಗಳನ್ನು ಜೊತೆಯಲ್ಲಿ ಕೊಂಡೊಯ್ದು ಹೊಲದ ಬದಿಯಲ್ಲಿ ಗಿಡಗಳ ನೆರಳಲ್ಲಿ ಮಲಗಿಸಿ ದುಡಿಯುವುದು ಸಾಮಾನ್ಯವಾಗಿತ್ತು. ತಮ್ಮ ಮಕ್ಕಳಿಗೆ ಮಣ್ಣಿನ ಕುಡಿಕೆಯೊಂದರಲ್ಲಿ ಒಂದಿಷ್ಟು ಹಾಲನ್ನು ಜೊತೆಯಲ್ಲಿ ಕೊಂಡೊಯ್ಯುತ್ತಿದ್ದರು. ಮಕ್ಕಳು ಅತ್ತಾಗ, ಅವುಗಳಿಗೆ ಹಾಲುಣಿಸಲು ಬಿಡಲಾರದಷ್ಟು ಕ್ರೂರಿಗಳಾಗಿದ್ದ ಜಮೀನ್ದಾರರು ಹಲವು ವೇಳೆ ಹಾಲಿನ ಮಡಕೆಗಳಿಗೆ ಮಣ್ಣು ತುಂಬಿ ಅವುಗಳನ್ನು ಹೊಲದಲ್ಲಿ ಹರಡುತ್ತಿದ್ದರು. ಈ ಘಟನಾವಳಿಗಳನ್ನ ವರವರರಾವ್ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

1947ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭ್ಯವಾದರೂ ಹೈದರಾಬಾದ್ ಸಂಸ್ಥಾನಕ್ಕೆ ಮಾತ್ರ ಸ್ವಾತಂತ್ರ್ಯ ದೊರಕಿರಲಿಲ್ಲ. ಸ್ವತಂತ್ರ ಭಾರತದೊಂದಿಗೆ ಹೈದರಾಬಾದ್ ಸಂಸ್ಥಾನವನ್ನು ವಿಲೀನಗೊಳಿಸಲು ನಿರಾಕರಿಸಿದ್ದ ನಿಜಾಮ, ಹೈದರಾಬಾದ್ ಅನ್ನು ಪ್ರತ್ಯೇಕ ರಾಷ್ಟ್ರವಾಗಿಸಲು ಯತ್ನಿಸಿ ಬ್ರಿಟಿಷರ ನೆರವು ಕೋರಿದ್ದ. ಭಾರತದ ಸಂಸ್ಥಾನಗಳ ವಿಲೀನ ಪ್ರಕ್ರಿಯೆಯಲ್ಲಿ ತೊಡಗಿದ್ದ ಸ್ವತಂತ್ರ ಭಾರತದ ಗೃಹ ಮಂತ್ರಿ ಸರ್ದಾರ್ ವಲ್ಲಬಾಯ್ ಪಟೇಲ್ ನಿಜಾಮನ ವರ್ತನೆಯಿಂದ ಸಿಟ್ಟಿಗೆದ್ದು 1948ರಲ್ಲಿ ಭಾರತೀಯ ಸೇನೆಯನ್ನು ಹೈದರಾಬಾದ್ ಸಂಸ್ಥಾನದ ಮೇಲೆ ಮುತ್ತಿಗೆ ಹಾಕಲು ರವಾನಿಸಿದಾಗ, ಹೆದರಿದ ನಿಜಾಮ ಅಂತಿಮವಾಗಿ ಭಾರತ ಸರ್ಕಾರಕ್ಕೆ ಶರಣಾಗಿದ್ದನು. ಆ ವೇಳೆಗಾಗಲೇ ನಿಜಾಮನ ದುರಾಡಳಿತದಿಂದ ಬೇಸತ್ತಿದ್ದ ತೆಲಂಗಾಣ ಪ್ರಾಂತ್ಯದ ರೈತರು ಮತ್ತು ಕೃಷಿಕೂಲಿ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಬಲಿಷ್ಠ ಸಂಘಟನೆಗಳನ್ನು ಹುಟ್ಟು ಹಾಕಿಕೊಂಡಿದ್ದರು ಜೊತೆಗೆ ಇವುಗಳನ್ನು ನೆರೆಯ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಿಗೂ ವಿಸ್ತರಿಸಿದ್ದರು.

1948 ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದೊಂದಿಗೆ ವಿಲೀನಗೊಂಡ ನಂತರ ಸ್ವತಂತ್ರ ಭಾರತದ ನೂತನ ಸರ್ಕಾರದ ಆಳ್ವಿಕೆಯಲ್ಲಿ ಆಂಧ್ರದಲ್ಲಿ ಅಘೋಷಿತವಾಗಿ ಜಾರಿಯಲ್ಲಿದ್ದ ಊಳಿಗಮಾನ್ಯ ಪದ್ಧತಿಯ ವಿರುದ್ಧದ ಹೋರಾಟ ಮುಂದುವರಿಸಬೇಕೆ ಅಥವಾ ಬೇಡವೆ? ಎಂಬ ಚರ್ಚೆ ಮತ್ತು ಜಿಜ್ಞಾಸೆ ಕಮ್ಯೂನಿಷ್ಟ್ ಹೋರಾಟಗಾರರಲ್ಲಿ ಹುಟ್ಟಿಕೊಂಡಿತು. ಮುಂದುವರಿಸುವುದಾದರೆ, ಹೋರಾಟವನ್ನು ಯಾವ ಪಥದಲ್ಲಿ ಕೊಂಡೊಯ್ಯಬೇಕೆಂಬ ಪ್ರಶ್ನೆ ಸಹ ಎದುರಾಯಿತು. ಇಂತಹ ಗೊಂದಲ ಮತ್ತು ಜಿಜ್ಞಾಸೆಗಳು ಹಲವು ವರ್ಷಗಳ ಕಾಲ ಆಂಧ್ರದ ಎಡಪಥೀಯ ಚಿಂತಕರಲ್ಲಿ ಮುಂದುವರಿದವು. ಆದರೆ, ಕೆಲವು ನಾಯಕರಿಗೆ ಯಾವ ಕಾರಣಕ್ಕೂ ಹೋರಾಟವನ್ನು ಸ್ಥಗಿತಗೊಳಿಸುವುದು ಬೇಕಾಗಿರಲಿಲ್ಲ. ಏಕೆಂದರೆ, ತೆಲಂಗಾಣ ಪ್ರಾಂತ್ಯದದಲ್ಲಿ ಬಲಿಷ್ಟರಾಗಿದ್ದ ರೆಡ್ಡಿ ಮತ್ತು ವೆಲಮ ಜನಾಂಗದ ಜಮೀನ್ದಾರರು,  ಶ್ರೀಮಂತರು, ಹಾಗೂ ಹಣದ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಮಹಾರಾಷ್ಟ್ರ ಮೂಲದ ಪಟ್ವಾರಿಗಳು, ದಲಿತರು ಮತ್ತು ಆದಿವಾಸಿಗಳನ್ನು ಹಲವು ವರ್ಷಗಳಿಂದ ಇನ್ನಿಲ್ಲದಂತೆ ಶೋಷಿಸಿಕೊಂಡು ಬಂದಿದ್ದರು.

ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಬಡವ ಬಲ್ಲಿದ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ನಾವು ಪಂಚೆ ಧರಿಸುವ ಹಾಗೆ ಕಚ್ಚೆ ಉಡುವ ಪದ್ಧತಿ ಆಚರಣೆಯಲ್ಲಿತ್ತು. (ಆಂಧ್ರದ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಇದೆ.) ಆದರೆ, ಯಾವೊಬ್ಬ ದಲಿತ ಅಥವಾ ಆದಿವಾಸಿ ಯಾವ ಕಾರಣಕ್ಕೂ ತನ್ನ ಮಂಡಿಯ ಕೆಳಕ್ಕೆ ಬರುವ ಹಾಗೆ ಕಚ್ಚೆ ಉಡಬಾರದು ಎಂಬ ಅಘೋಷಿತ ಕಾನೂನು ಜಾರಿಯಲ್ಲಿತ್ತು. ಅಲ್ಲದೆ, ಹೆಗಲ ಮೇಲೆ ಯಾವುದೇ ವಸ್ತ್ರ ಹಾಕಬಾರದು ಮತ್ತು ಶ್ರೀಮಂತರೆದುರು ತಲೆಗೆ ಮುಂಡಾಸು ಸುತ್ತಬಾರದು ಎಂಬ ನಿಯಮಗಳು ಸಹ ಜಾರಿಯಲ್ಲಿದ್ದವು. ರೆಡ್ಡಿ ಜನಾಂಗದ ಜಮೀನ್ದಾರರು, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಪಟ್ವಾರಿಗಳು ಮುಂತಾದವರು ಮಾತ್ರ ತಮ್ಮ ಮೊಣಕಾಲುಗಳು ಮುಚ್ಚಿ, ಪಾದ ಮಟ್ಟುವಂತೆ ಕಚ್ಚೆಗಳನ್ನು ಧರಿಸಿ, ಹೆಗಲ ಮೇಲೆ ಶಾಲು, ಅಥವಾ ಶಲ್ಯ ಹಾಕಬಹುದಿತ್ತು. ದಲಿತರ ಮತ್ತು ಆದಿವಾಸಿ ಕುಟುಂಬದ ಹೆಣ್ಣು ಮಕ್ಕಳು, ಅಥವಾ ಪತ್ನಿಯರು ತಮ್ಮ ಗಂಡಂದಿರ ಜೊತೆ ದೊರೆಗಳು ಎಂದು ಕರೆಸಿಕೊಳ್ಳುತ್ತಿದ್ದ ಜಮೀನ್ದಾರರ ಮನೆಗಳಲ್ಲಿ ವಾರ್ಷಿಕವಾಗಿ ನೀಡುತ್ತಿದ್ದ ಒಂದಿಷ್ಟು ಧವಸ, ಧಾನ್ಯ ಮತ್ತು ಬಟ್ಟೆಗಳಿಗಾಗಿ ಜೀತದಾಳುಗಳಾಗಿ ದುಡಿಯಬೇಕಿತ್ತು. ದೊರೆಗಳ ದೃಷ್ಟಿಯಲ್ಲಿ ದಲಿತರು ಮತ್ತು ಆದಿವಾಸಿಗಳು ಭೂಮಿಯ ಹಕ್ಕನ್ನು ಪಡೆಯುವುದು ಅಪರಾಧವಾಗಿತ್ತು. ಇಂತಹ ಹಲವಾರು ಅಮಾನುಷ ಅಲಿಖಿತ ಕಾನೂನುಗಳಿಂದ ನಲುಗಿದ್ದ ಆಂಧ್ರದ ಕೋಯಾ ಮತ್ತು ಗೊಂಡ ಬುಡಕಟ್ಟು ಜನಾಂಗ ಮತ್ತು ಕೃಷಿಕೂಲಿ ಕಾರ್ಮಿಕರಾದ ದಲಿತರು ಕಮ್ಯೂನಿಷ್ಟ್ ಕಾರ್ಯಕರ್ತರ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಇದರ ಪ್ರತಿಫಲವೆಂಬಂತೆ ಪರೋಕ್ಷವಾಗಿ ಅವರಿಗೆ ಜಮೀನ್ದಾರರ ಶೋಷಣೆಗಳು ಕಡಿಮೆಯಾಗತೊಡಗಿದವು. ಆದರೆ, ಆಂಧ್ರ ಸರ್ಕಾರ ಇವರುಗಳ ಹೋರಾಟ ಹತ್ತಿಕ್ಕಲು ಅನೈತಿಕ ಮಾರ್ಗವನ್ನು ಹಿಡಿಯತೊಡಗಿತು.

ತಮ್ಮ ಆತ್ಮ ರಕ್ಷಣೆಗಾಗಿ ಸಂಘಟಿತ ಗೊಂಡಿದ್ದ ರೈತ ಮತ್ತು ಕೂಲಿಕಾರ್ಮಿಕರು ಭೂಮಾಲಿಕರ ವಿರುದ್ಧ ತಮ್ಮ ಸಂಘರ್ಷವನ್ನು ಮುಂದುವರಿಸುವುದರ ಜೊತೆ ಜೊತೆಗೆ ಹೋರಾಟವನ್ನು ಗೋದಾವರಿ ನದಿ ತೀರದ ಎರಡು ಬದಿಯ ಜಿಲ್ಲೆಗಳಿಗೂ ವಿಸ್ತರಿಸಿದರು. ಅತಿ ಶೀಘ್ರದಲ್ಲಿ ಈ ಹೋರಾಟ ಕೃಷ್ಣಾ, ಕರೀಂನಗರ ನಲ್ಗೊಂಡ ಮತ್ತು ಅದಿಲಾಬಾದ್, ಶ್ರೀಕಾಕುಳಂ ಜಿಲ್ಲೆಗಳ ಅರಣ್ಯ ಪ್ರದೇಶಕ್ಕೆ ವಿಸ್ತರಿಸಿತು. ಇದರಿಂದ ಆತಂಕಗೊಂಡ ಸರ್ಕಾರ ಅರಣ್ಯದಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದ ಗುಡಿಸಲುಗಳಿಗೆ ಬೆಂಕಿ ಹಚ್ಚುವುದರ ಮೂಲಕ ಅವರನ್ನು ಅರಣ್ಯದಿಂದ ಒಕ್ಕಲೆಬ್ಬಿಸಿತು. ಸರ್ಕಾರದ ಈ ಕ್ರಮದಿಂದಾಗಿ ಕೋಯಾ, ಗೊಂಡ ಮತ್ತು ಜಟಾಪು, ಮತ್ತು ಸವರ ಬುಡಕಟ್ಟು ಜನಾಂಗಗಳ ಸುಮಾರು ನಲವತ್ತು ಸಾವಿರ ಆದಿವಾಸಿಗಳು 60 ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ನೆಲೆ ಕಳೆದುಕೊಂಡು ಅತಂತ್ರರಾದರು.

ಇಂತಹ ವೇಳೆಯಲ್ಲಿ ಇವರ ನೆರವಿಗೆ ಬಂದವರು ಇಬ್ಬರು ಶಿಕ್ಷಕರು. ಅವರೆಂದರೆ, ವೆಂಪಟಾಪು ಸತ್ಯನಾರಾಯಣ ಮತ್ತು ಮತ್ತು ಕೈಲಾಸಂ. (ಇವರಿಬ್ಬರನ್ನು ಕುರಿತು, ಮತ್ತು ಹೋರಾಟದ ವಿವರಗಳನ್ನು ನಕ್ಸಲ್ ಕಥನದ ಮೊದಲ ಭಾಗವಾದ ಎಂದೂ ಮುಗಿಯದ ಯುದ್ದ ಸರಣಿಯ ಎಂಟು ಮತ್ತು ಒಂಬತ್ತರ ಅಧ್ಯಾಯಗಳಲ್ಲಿ ಸವಿವರವಾಗಿ ದಾಖಲಿಸಲಾಗಿದೆ. ಗಮನಿಸಿ.)

ಇತ್ತ ಆಂಧ್ರಪ್ರದೇಶದ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ಹಣೆಪಟ್ಟಿಯಿಲ್ಲದೆ ರೈತರ ಮತ್ತು ಕೃಷಿಕೂಲಿ ಕಾರ್ಮಿಕರ ಹೋರಾಟ ಮುಂದುವರಿಯುತ್ತಿದ್ದಾಗ, ಅತ್ತ ಎಡಪಂಥೀಯ ಚಿಂತನೆಗಳ ಕೇಂದ ಬಿಂದುವಾಗಿದ್ದ ಪಶ್ಚಿಮ ಬಂಗಾಳದ ಉತ್ತರ ಭಾಗದ ಡಾರ್ಜಲಿಂಗ್ ಗುಡ್ಡಗಾಡು ಪ್ರಾಂತ್ಯದ ಚಹಾತೊಟಗಳಲ್ಲಿ ದುಡಿಯುತ್ತಿದ್ದ ಕೂಲಿಕಾರ್ಮಿಕರು ಸಹ ವೇತನ ಹೆಚ್ಚಳಕ್ಕಾಗಿ ಮತ್ತು ಶೋಷಣೆಯಿಲ್ಲದ ನೆಮ್ಮದಿಯ ಬದುಕಿಗೆ ಹೋರಾಟ ನಡೆಸಿದ್ದರು. ಅಲ್ಲಿಯೂ ಕೂಡ ಕಮ್ಯೂನಿಷ್ಟ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಚಾರು ಮುಜಂದಾರ್ ಮತ್ತು ಕನು ಸನ್ಯಾಲ್ ಹಾಗೂ ನಾಗಭೂಷಣ್ ಪಟ್ನಾಯಕ್ ಮುಂತಾದವರು ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

ಕೃಷಿಕರು ಮತ್ತು ಕಾರ್ಮಿಕರ ಅಭ್ಯುದಯವನ್ನು ಮೂಲ ಮಂತ್ರವಾಗಿರಿಸಿಕೊಂಡಿದ್ದ ಕಮ್ಯೂನಿಷ್ಟ್ ಪಕ್ಷದಲ್ಲಿ ಸರ್ಕಾರದ ವಿರುದ್ಧ ಮತ್ತು ದೀನ ದಲಿತರು ಮತ್ತು ಕಾರ್ಮಿಕರನ್ನು ಶೋಷಿಸುತ್ತಿರುವ ಶ್ರೀಮಂತ ವರ್ಗದ ವಿರುದ್ಧ ಹೋರಾಟವನ್ನು ಮುಂದುವರಿಸುವ ಬಗ್ಗೆ ಪಶ್ಚಿಮ ಬಂಗಾಳದಲ್ಲೂ ಕೂಡ ಆಂಧ್ರ ಪ್ರದೇಶದ ಕಮ್ಯೂನಿಷ್ಟ್ ನಾಯಕರಿಗೆ ಇದ್ದ ಹಾಗೆ ಗೊಂದಲಗಳಿದ್ದವು. ಅಂತಿಮವಾಗಿ ಎರಡು ರಾಜ್ಯಗಳ ನಾಯಕರ ನಡುವೆ ಸೌಮ್ಯವಾದಿಗಳು ಮತ್ತು ಉಗ್ರವಾದಿಗಳು ಎಂಬ ಬಣಗಳು ಸೃಷ್ಟಿಯಾದವು. ಇದರ ಪ್ರಯುಕ್ತವಾಗಿ 1964ರಲ್ಲಿ ಕಮ್ಯೂನಿಷ್ಟ್ ಪಕ್ಷ ಅಧಿಕೃತವಾಗಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ, ಮತ್ತು ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ (ಮಾವೋ ಮತ್ತು ಲೆನಿನ್) ಎಂಬ ಎರಡು ಪಕ್ಷಗಳಾಗಿ ವಿಭಜನೆಗೊಂಡಿತು. ಪಶ್ಚಿಮ ಬಂಗಾಳದಲ್ಲಿ ಚಾರು ಮುಜುಂದಾರ್ ಉಗ್ರವಾದಿಗಳ ಬಣದ ನೇತೃತ್ವ ವಹಿಸಿದನು. ಆಂಧ್ರದಲ್ಲಿ ವೆಂಪಟಾಪು ಸತ್ಯನಾರಾಣ ಎಂಬ ಶಿಕ್ಷಕ ಮತ್ತು ಕೈಲಾಸಂ ಇಬ್ಬರೂ ಚಾರು ಮುಜುಂದಾರ್ ನೇತೃತ್ವದ ಸಿ.ಪಿ.ಐ. (ಎಂ.ಎಲ್.) ಬಣದ ಜೊತೆ ಗುರುತಿಸಿಕೊಂಡು ಹೋರಾಟ ಮುಂದುವರಿಸಿದರು.

1967 ರ ಮೇ ತಿಂಗಳ 23 ರಂದು ಪಶ್ಚಿಮ ಬಂಗಾಳದ ನಕ್ಸಲ್ ಬಾರಿ ಹಳ್ಳಿಯಲ್ಲಿ ಪ್ರಥಮ ಬಾರಿಗೆ ಪೊಲೀಸರು ಮತ್ತು ಕೃಷಿ ಕೂಲಿಕಾರ್ಮಿಕರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿಂದಂತೆ ಒಂಬತ್ತು ಆದಿವಾಸಿಗಳ (ಇವರಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮತ್ತು ಓರ್ವ ಆದಿವಾಸಿ ಪುರುಷ) ಸಾವಿನೊಂದಿಗೆ ಭಾರತದಲ್ಲಿ ನಕ್ಸಲ್ ಹೋರಾಟದ ರಕ್ತ ಚರಿತ್ರೆಯ ಮೊದಲ ಅಧ್ಯಾಯ ಆರಂಭಗೊಡಿತು. ಇದೇ ವರ್ಷ ಅಂದರೆ, 1967 ರ ಅಕ್ಟೋಬರ್ 31 ರಂದು ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಪಾರ್ವತಿ ಪುರಂ ತಾಲೂಕಿನ ಲೆವಿಡಿ ಎಂಬ ಗ್ರಾಮದಲ್ಲಿ ಜಮೀನ್ದಾರನೊಬ್ಬನ ಮನೆಗೆ ನುಗ್ಗಿದ ಆದಿವಾಸಿಗಳು ಮತ್ತು ಪೊಲೀಸರ ನಡುವೆ ಕಾಳಗ ನಡೆದು ಆಂಧ್ರದ ನೆಲದಲ್ಲಿ ಪ್ರಥಮ ಬಾರಿಗೆ ಇಬ್ಬರು ಆದಿವಾಸಿಗಳ ಹೆಣ ಬೀಳುವುದರೊಂದಿಗೆ ನಕ್ಸಲ್ ಯುದ್ಧದ ಎರಡನೇ ಅಧ್ಯಾಯ ಪ್ರಾರಂಭವಾಯಿತು. (ಈಘಟನೆಗಳ ಕುರಿತು ಈಗಾಗಲೇ ಎಂದೂ ಮುಗಿಯದ ಯುದ್ದ ಮೊದಲ ಭಾಗದಲ್ಲಿ ದಾಖಲಿಸಲಾಗಿದೆ. ಒಂದರಿಂದ ನಾಲ್ಕರ ವರೆಗಿನ ಅಧ್ಯಾಯಗಳನ್ನು ವರ್ತಮಾನ.ಕಾಮ್‌ನ ನಕ್ಸಲ್ ಕಥನದ ಸರಣಿ ಲೇಖನಗಳ ಮಾಲಿಕೆಯಲ್ಲಿ ಆಸಕ್ತರು ಗಮನಿಸಬಹುದು.)

ಈ ಎರಡು ರಾಜ್ಯಗಳಲ್ಲಿನ ಉಗ್ರವಾದಿ ಕಮ್ಯೂನಿಷ್ಟ್ ನಾಯಕರ ಬೆಂಬಲದ ಹೋರಾಟದ ಫಲವಾಗಿ 1970ರ ವೇಳೆಗೆ ಆಂಧ್ರದಲ್ಲಿ ಮುನ್ನೂರಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 160 ಗುಡ್ಡಗಾಡು ಪ್ರದೇಶದ ಗ್ರಾಮಗಳ ರೈತರು ಆದಿವಾಸಿಗಳು ಮತ್ತು ಕೃಷಿಕೂಲಿ ಕಾರ್ಮಿಕರು ಭೂಮಾಲೀಕರ ಕಪಿಮುಷ್ಟಿಯಿಂದ ಬಿಡುಗಡೆಗೊಂಡಿದ್ದರು. ಇಂತಹ ಗ್ರಾಮಗಳನ್ನು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸರ್ಕಾರಗಳು ರೆಡ್ ಏರಿಯಾ ಎಂದು ಗುರುತಿಸಿದ್ದವು.

ನಕ್ಸಲ್ ಹೋರಾಟದಿಂದ ವಿಚಲಿತಗೊಂಡ ಆಂಧ್ರ ಪೊಲೀಸರು 1969 ರ ಮೇ 27 ರಂದು ಆಂಧ್ರ ಯುವ ಕ್ರಾಂತಿಕಾರಕ ನಾಯಕರಲ್ಲಿ ಒಬ್ಬನಾಗಿದ್ದ ಪಂಚಡಿ ಕೃಷ್ಣಮೂರ್ತಿಯನ್ನು ಬಂಧಿಸಿ ಎನ್ ಕೌಂಟರ್ ಮೂಲಕ ಹತ್ಯೆಗೈದರು. ಮತ್ತೇ  ಮರುವರ್ಷ 1970ರ ಜುಲೈ 10ರಂದು ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇವರಿಬ್ಬರನ್ನು ಬಂಧಿಸಿ ಶ್ರೀಕಾಕುಳಂ ಜಿಲ್ಲೆಯ ಅರಣ್ಯ ಪ್ರದೇಶದ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಗುಂಡಿಟ್ಟು ಕೊಲ್ಲುವುದರ ಮೂಲಕ ನಕ್ಸಲ್ ಚಳವಳಿಗೆ ತಾತ್ಕಾಲಿಕ ವಿರಾಮ ನೀಡಿದರು. ಅತ್ತ ಪಶ್ಚಿಮ ಬಂಗಾಳದಲ್ಲೂ ಕೂಡ ಚಾರು ಮುಜುಂದಾರನನ್ನು 1972 ರ ಜುಲೈ 16ರಂದು ಬಂದಿಸಿದ ಕೊಲ್ಕತ್ತ ನಗರದ ಪೊಲೀಸರು ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಹನ್ನೆರೆಡು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಿ ಜುಲೈ 28ರಂದು ಕೊಲ್ಲುವುದರ ಮೂಲಕ ನಕ್ಸಲ್ ಹೋರಾಟಕ್ಕೆ ತೆರೆ ಎಳೆದರು.

ಕಮ್ಯೂನಿಷ್ಟ್ ನಾಯಕರ ಈ ಹತ್ಯೆಯಿಂದಾಗಿ ನಕ್ಸಲ್ ಹೋರಾಟಕ್ಕೆ ಉಂಟಾಗಿದ್ದ ಹಿನ್ನಡೆ ಕೇವಲ ತಾತ್ಕಾಲಿಕವಾಗಿತ್ತು. ಏಕೆಂದರೆ, ಅಷ್ಟರ ವೇಳೆಗಾಗಲೇ ನಕ್ಸಲ್ ಹೋರಾಟಗಾರರು ಹಚ್ಚಿದ್ದ ಕಿಚ್ಚಿನ ಜ್ವಾಲೆಯ ಪಂಜನ್ನು ಆರದಂತೆ ಕಾಪಾಡಲು ಆಂಧ್ರದ ವಾರಂಗಲ್ ಜಿಲ್ಲೆಯಲ್ಲಿ ಇಬ್ಬರು ನಾಯಕರು ಹೊರ ಹೊಮ್ಮಿದ್ದರು. ಅವರೆಂದರೆ, ಪೀಪಲ್ಸ್ ವಾರ್ ಗ್ರೂಪ್ (ಪ್ರಜಾ ಸಮರಂ) ಹೆಸರಿನಲ್ಲಿ ಸಂಘಟನೆಯನ್ನು ಹುಟ್ಟು ಹಾಕಿ ಚಾರು ಮುಜಂದಾರ್ ಹಾದಿಯಲ್ಲಿ ನಕ್ಸಲ್ ಹೋರಾಟವನ್ನು ಮುನ್ನೆಡೆಸಿದ ಕೊಂಡಪಲ್ಲಿ ಸೀತಾರಾಮಯ್ಯ ಎಂಬ ಹಿಂದಿ ಶಿಕ್ಷಕ ಮತ್ತು ಕೆ.ಜಿ.ಸತ್ಯಮೂರ್ತಿ ಎಂಬ ದಲಿತ ಕವಿ ಮತ್ತು ಇಂಗ್ಲೀಷ್ ಶಿಕ್ಷಕ. ಈ ಇಬ್ಬರ ನಾಯಕರ ಹೋರಾಟದ ಫಲವಾಗಿ ನಕ್ಸಲ್ ಸಂಘಟನೆ ಇಂದು ಹಲವು ಶಾಖೆಗಳಾಗಿ ವಿಭಜನೆಗೊಂಡು ದೇಶಾದ್ಯಂತ ನಮ್ಮನ್ನಾಳುವ ಸರ್ಕಾರಗಳಿಗೆ ಮಗ್ಗುಲ ಮುಳ್ಳಾಗಿ ಬೆಳೆದು ನಿಂತಿದೆ.

(ಮುಂದುವರಿಯುವುದು)