Tag Archives: ನಕ್ಸಲ್

ಅಪಪ್ರಚಾರದ ಪತ್ರಿಕೋದ್ಯಮ, ನಕ್ಸಲ್ ಹಣೆಪಟ್ಟಿ ಕಟ್ಟಲು ಅತ್ಯುತ್ಸಾಹ

ಸದಾನಂದ ಕೋಟ್ಯಾನ್

ತಪ್ಪು ಮಾಡುವುದು ಮಾನವನ ಸಹಜ ಗುಣ. ಆದರೆ ನಮ್ಮ ಸಮಾಜದಲ್ಲಿ ತಪ್ಪು ಮಾಡದೇ ಇರುವವರನ್ನು ತಪ್ಪು ದಾರಿಗೆ ಎಳೆಯವ ಜನ ಕೂಡಾ ಕಡಿಮೆ ಇಲ್ಲ. ಇಂತಹ ಪಾತ್ರವನ್ನು ಉದಯವಾಣಿ ಸಮರ್ಥವಾಗಿ ನಿಭಾಯಿಸಿದೆ. ಎಲ್ಲೋ ಕಾಡಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಹೊರಟ ಹುಡುಗನೊಬ್ಬನಿಗೆ ಈ ಕಾಡಲ್ಲಿ ಹುಟ್ಟಿದ್ದೇ ತಪ್ಪಾಯ್ತು ಅನ್ನಿಸುವ ಮಟ್ಟಿಗೆ ಪೊಲೀಸರಿಗಿಂತಲೂ ಉದಯವಾಣಿ ಕಾಟ ಕೊಡುತ್ತಿದೆ. ವಿನಾಕಾರಣ ಪೊಲೀಸರ ಅತಿಥಿಯಾಗಿರುವ ಕುತ್ಲೂರಿನ ವಿಠ್ಠಲ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಈತ ಹನ್ನೊಂದು ವರ್ಷದ ಮಗುವಾಗಿರುವಾಗಲೇ ನಕ್ಸಲರ ಸಮಾವೇಶದಲ್ಲಿ ಭಾಗವಸಿದ್ದ ಎಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿದೆ. ಯಾರೂ ಊಹೆ ಮಾಡಲೂ ಸಾದ್ಯವಾಗದ ಮಾಹಿತಿ ತಮಗೆ ಸಿಕ್ಕಿದೆ ಅನ್ನುವ ರೀತಿಯಲ್ಲಿ ಕತೆ ಹೇಳುವ ಈ ಪತ್ರಿಕೆಗೆ ಕನಿಷ್ಠ ಪ್ರಜ್ಞೆಯಾದರೂ ಇರಬೇಕಿತ್ತು.

ನಕ್ಸಲ್ ಬೆಂಬಲಿಗ ಎಂಬ ಆರೋಪ ಹೊರಿಸಿ ನಕ್ಸಲ್ ನಿಗ್ರಹ ದಳದ ಪೊಲೀಸರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪತ್ರಿಕೋಧ್ಯಮ ವಿದ್ಯಾರ್ಥಿಯನ್ನು ಬಂಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವನ್ನು ಸರ್ಕಾರ ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಕುತ್ಲೂರು ಗ್ರಾಮದಲ್ಲಿ ಈಗ 22 ಮನೆಗಳಿದ್ದು, ಎಲ್ಲಾ ಕುಟುಂಬಗಳು ಮಲೆಕುಡಿಯ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು. ಕಾಡಿನೊಳಗೆ ಊರನ್ನು ಹೊಂದಿರುವ ಈ ಗ್ರಾಮದಲ್ಲಿ ಎಸ್ಎಸ್ಎಲ್‍ಸಿ ಪಾಸು ಮಾಡಿದ ಹುಡುಗನೆಂದರೆ ಅದು ವಿಠ್ಠಲ ಮಾತ್ರ. ಬಸ್ಸು ಇಳಿದು ದಟ್ಟ ಕಾಡಿನಲ್ಲಿ ಮೂರು ಗಂಟೆ ನಡೆಯಬೇಕಿರುವ ಈ ಗ್ರಾಮದ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ವಿಠ್ಠಲ ಪರಿಚಿತನಾಗಿದ್ದ. ವಿಠ್ಠಲನ ಓದುವ ಆಶೆಯನ್ನು ಅರಿತು ಮಂಗಳೂರು ನಗರಕ್ಕೆ ಕರೆದುಕೊಂಡು ಬಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿಗಳನ್ನು ಮಾಡಿಸಿದ್ದೇ ಮಂಗಳೂರಿನ ಪತ್ರಕರ್ತರು. ಆನಂತರ ವಿಠ್ಠಲ ಹಿಂತಿರುಗಿ ನೋಡಿದ್ದೇ ಇಲ್ಲ. ನೂರು ಶೇಕಡಾ ಹಾಜರಾತಿಯನ್ನು ಹೊಂದಿರುವ ವಿಠ್ಠಲ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಶೇಕಡಾ 80ಕ್ಕಿಂತಲೂ ಅಧಿಕ ಹಾಜರಾತಿಯನ್ನು ಹೊಂದಿದ್ದಾನೆ ಎಂದು ವಿವಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಡಾ.ವಹಿದಾ ಸುಲ್ತಾನ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. (ದಾಖಲೆಗಳು ಇವೆ)

ಉಡುಪಿ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬಿಗಿಯಾದ ನಕ್ಸಲ್ ಕೂಂಬಿಂಗ್ ನಡೆಸುತ್ತಿದ್ದರು. ಕುತ್ಲೂರು ಗ್ರಾಮಕ್ಕೂ ಎಎನ್ಎಫ್ ಸಿಬ್ಬಂದಿ ಬಂದಿದ್ದರು. ಎಲ್ಲಾ ಮಲೆಕುಡಿಯ ಕುಟುಂಬಗಳ ಮನೆಗೆ ತೆರಳಿದ ಎಎನ್ಎಫ್ ಸಿಬ್ಬಂದಿಗಳು ರಾತ್ರಿಯಾಗುತ್ತಿದ್ದಂತೆ ವಿಠ್ಠಲನ ಮನೆಯಲ್ಲಿ ಉಳಿದುಕೊಂಡರು. ಅಲ್ಲೇ ವಿಠ್ಠಲನ ತಾಯಿಯಿಂದ ಅಡುಗೆ ಮಾಡಿಸಿ ಉಂಡ ಎಎನ್ಎಫ್ ಸಿಬ್ಬಂದಿಗೆ ಅದೇನು ಅನ್ನಿಸಿತೋ ಗೊತ್ತಿಲ್ಲ, ರಾತ್ರೋ ರಾತ್ರಿ ಎದ್ದು ವಿಠ್ಠಲನ ತಂದೆ ನಿಂಗಣ್ಣ ಮಲೆಕುಡಿಯರ ವಿಚಾರಣೆಗೆ ತೊಡಗಿದರು. ನಕ್ಸಲರ ಬಗ್ಗೆ ಏನೇನೂ ಗೊತ್ತಿಲ್ಲದ ವೃದ್ದ ವಿಠ್ಠಲನ ತಂದೆಯ ಕಾಲು ಮುರಿಯುವವರೆಗೆ ಹೊಡೆದರು. ಮರುದಿನ ಮಂಗಳೂರು ಹಾಸ್ಟೆಲ್‍ನಲ್ಲಿದ್ದ ವಿಠ್ಠಲ್‍ಗೆ ವಿಷಯ ತಿಳಿದು ತಂದೆಯನ್ನು ನೋಡಲು ಮನೆಗೆ ಬಂದಾಗ ವಿಠ್ಠಲ್‍ನನ್ನೂ ಬಂಧಿಸಿ ವೇಣೂರು ಠಾಣೆಗೆ ಕರೆದೊಯ್ದರು. ತಂದೆಯ ಕಾಲು ಮುರಿದಿದ್ದನ್ನು ಪತ್ರಕರ್ತರ ಮಧ್ಯೆ ಇರುವ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠ್ಠಲ್ ಸುಧ್ಧಿ ಮಾಡಿಸುತ್ತಾನೆ ಎಂಬ ಮುಂದಾಲೋಚನೆಯಿಂದ ಎಎನ್ಎಫ್ ಪೊಲೀಸರು ವಿಠ್ಠಲನನ್ನು ಬಂಧಿಸಿದ್ದಾರೆ. ಮತ್ತೆ ಎಎನ್ಎಫ್ ಸಿಬ್ಬಂದಿಗಳೇ ಆತನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶುರುವಾಯಿತು ಉದಯವಾಣಿ ಟಾರ್ಚರ್

ವಿವಿ ವಿದ್ಯಾರ್ಥಿ ವಿಠ್ಠಲ್ ಬಗ್ಗೆ ಎಲ್ಲಾ ಪತ್ರಕರ್ತರಿಗೂ ಗೊತ್ತು. ಆತನ ಬಂಧನದ ನಂತರ ಎಲ್ಲಾ ಪತ್ರಿಕೆಗಳು ವಿಠ್ಠಲ್ ಪರವಾಗಿಯೇ ಸುದ್ಧಿ ಮಾಡಿದವು. ಪೊಲೀಸರು ವಿನಾಕಾರಣ ತಂದೆಯನ್ನು ನೋಡಲು ಹೋದ ಹಾಸ್ಟೆಲ್ ವಾಸಿ ವಿದ್ಯಾರ್ಥಿಯನ್ನು ನಕ್ಸಲ್ ಬೆಂಬಲಿಗ ಎಂದು ಹಣೆಪಟ್ಟಿ ಕಟ್ಟಿ ಆತನ ಭವಿಷ್ಯ ಹಾಳು ಮಾಡಿದರು ಎಂದೇ ಬರೆದವು. ಆದರೆ ಪ್ರಾರಂಭದಿಂದಲೂ ಉದಯವಾಣಿ ಮಾತ್ರ ಪೊಲೀಸರ ಪರವಾಗಿಯೇ ವರದಿಗಳನ್ನು ಬರೆಯಲಾರಂಭಿಸಿತು. ಜೈಲಿನಲ್ಲಿರುವ ವಿಠ್ಠಲನೇ ಹೇಳುವ ಪ್ರಕಾರ ಪೊಲೀಸ್ ಕಸ್ಟಡಿಯಲ್ಲಿದ್ದ ವಿಠ್ಠಲ್‍ಗೆ ಪೊಲೀಸರು ಕನಿಷ್ಠ ಲಾಠಿಯಿಂದಲೂ ಹೊಡೆದಿಲ್ಲವಂತೆ. ಆದರೆ ಉದಯವಾಣಿ ಮಾತ್ರ ಕೊಟ್ಟ ಹಿಂಸೆ ಎಂತಹ ಪೊಲೀಸ್ ಟಾರ್ಚರನ್ನೂ ಮೀರಿಸುವಂತದ್ದು.

ವೃದ್ಧೆ ತಾಯಿಯನ್ನೂ ಬಿಡದ ವರದಿ

ವರದಿಯ ಪ್ರಾರಂಭದಲ್ಲಿ ವಿಠ್ಠಲ್‍ನ ವೃದ್ದೆ ತಾಯಿಯನ್ನು ಟೀಕೆ ಮಾಡಿ ಬರೆಯಲಾಗಿದೆ. “ಈತನ ತಾಯಿ ಕೂಡಾ ನಕ್ಸಲರೆಂದರೆ ಯಾರು ಎಂಬುದು ನಮಗೆ ಗೊತ್ತಿಲ್ಲ ಎಂದು ಗೋಳಾಡಿದ್ದರು………'” ಎಂದಿದೆ. ವಿಠ್ಠಲನ ತಾಯಿಯನ್ನು ನೋಡಿದರೆ ಅಳು ಬರುವ ರೀತಿಯಲ್ಲಿ ಅವರಿದ್ದಾರೆ. ತಾಯಿ ಹೃದಯ ಬಲ್ಲ ಎಂತವನೂ ಈ ರೀತಿ ವೃದ್ಧ ತಾಯಿಯ ಬಗ್ಗೆ ಬರೆಯಲಾರ. (ತಾಯಿಯ ಫೋಟೋ ನೋಡಿ) ಕಾಡಿನಲ್ಲಿ ಹುಟ್ಟಿ, ಕಾಡುತ್ಪತ್ತಿ ಸಂಗ್ರಹಿಸಿ ಬೆಳೆದ ವಿಠ್ಠಲನ ತಾಯಿ ಹೊನ್ನಮ್ಮರಿಗೆ ತುಳು ಭಾಷೆ ಬಿಟ್ಟು ಬೇರೇನೂ ತಿಳಿಯದು. ಅವರು ಮಾತನಾಡಿದ್ದು ಕೇಳಬೇಕೆಂದರೆ ಅವರ ಮುಖದ ಹತ್ತಿರ ನಮ್ಮ ಕಿವಿಯನ್ನು ಕೊಂಡೊಯ್ಯಬೇಕಾಗುತ್ತದೆ. ಉದಯವಾಣಿ ವರದಿಗಾರ ಬೆಳ್ತಂಗಡಿಯಲ್ಲಿ ಆ ಅಮ್ಮನ ಬಳಿ ಮಾತನಾಡಿದ್ದೂ ಅದೇ ರೀತಿ. ಕಾಲೇಜು ದಾಖಲೆಗಳನ್ನು ಪಡೆಯಲು ಮಂಗಳೂರಿಗೆ ಕರೆ ತಂದಿದ್ದ ಈ ತಾಯಿಯನ್ನು ಮಗನನ್ನು ನೋಡಲು ಜೈಲಿಗೆ ಕರೆದುಕೊಂಡು ಬಂದರೆ “ಉಂದು ಎನ್ನ ಮಗೆ ಕಲ್ಪುನ ಶಾಲೆನಾ” (ಇದು ನನ್ನ ಮಗ ಕಲಿಯುತ್ತಿರುವ ಶಾಲೆಯ?) ಅಂತ ಕೇಳುತ್ತಾರೆ. ಇಂತವರು ಗೋಳಾಡಿ ನಾಟಕ ಮಾಡಲು ಸಾದ್ಯಾನಾ ಎಂಬ ಕನಿಷ್ಠ ಮಾನವೀಯ ಮುಖವಾದರೂ ಪತ್ರಕರ್ತರಿಗೆ ಇರಬೇಕಲ್ವೇ..

ಮಗುವಾಗಿದ್ದಾಗಲೇ ನಕ್ಸಲರ ಆಹ್ವಾನ !

ವಿಠ್ಠಲ ಮಗುವಾಗಿದ್ದಾಗಲೇ ನಕ್ಸಲರಿಂದ ಆಹ್ವಾನ ಪಡೆದಿದ್ದ ಎಂಬ ಎಕ್ಸ್‌ಕ್ಲೂಸಿವ್ ವರದಿಯನ್ನು ಉದಯವಾಣಿ ಪ್ರಕಟಿಸಿದೆ. “2001 ರಲ್ಲಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರಿನಲ್ಲಿ ನಡೆದ ನಕ್ಸಲರ ಸಮಾವೇಶದಲ್ಲಿ ವಿಠ್ಠಲ ಭಾಗವಹಿಸಿದ್ದ. ಅದೂ ನಕ್ಸಲರ ಆಹ್ವಾನದ ಮೇರೆಗೆ!” ಎಂದು ಆಶ್ಚರ್ಯ ಸೂಚನ ಚಿನ್ಹೆಯನ್ನು ಹಾಕಿದೆ. ಪೊಲೀಸ್ ಎಫ್ಐಆರ್ ಮತ್ತು ವಿವಿ ದಾಖಲೆಗಳ ಪ್ರಕಾರ ಈಗ ವಿಠ್ಠಲನಿಗೆ 23 ವರ್ಷ. 2001 ರಲ್ಲಿ ಆತನಿಗೆ 12 ವರ್ಷ ಆಗಿರಬಹುದು. ಅಂದರೆ ಆರನೇ ತರಗತಿ ವಿದ್ಯಾರ್ಥಿ ನಕ್ಸಲ್ ಸಮಾವೇಶದಲ್ಲಿ ಭಾಗವಹಿಸಿದ್ದ. ಶಾಲಾ ಬಾಲಕನೊಬ್ಬ ನಕ್ಸಲ್ ಸಮಾವೇಶದಲ್ಲಿ ಭಾಗವಹಿಸಲು ನಕ್ಸಲರು ಸಮಾವೇಶವನ್ನೇನು ಊರ ಜಾತ್ರೆಯ ಹೊರಾಂಗಣದಲ್ಲಿ ಚಪ್ಪರ ಹಾಕಿ ಮಾಡ್ತಾರಾ? ಸೈದ್ದಾಂತಿಕವಾಗಿ ಗನ್ನು ಹಿಡಿದು ವ್ಯವಸ್ಥೆಯ ವಿರುದ್ಧ (ಕೆಟ್ಟ) ಹೋರಾಟ ಮಾಡುತ್ತಿರುವ ನಕ್ಸಲರು ನೀಲಿ ಬಿಳಿ ಯೂನಿಫಾರಂ ಹಾಕಿ ಐಸ್ ಕ್ಯಾಂಡಿ ಚೀಪುವ ಶಾಲಾ ಬಾಲಕನಿಗೆ ವಿಶೇಷ ಆಹ್ವಾನ ನೀಡಲು ಅವರೇನು ತಲೆಕೆಟ್ಟವರೇ? ಸುಮಾರು 30 ರಿಂದ 40 ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ವಿಠ್ಠಲ ಮಾಹಿತಿ ನೀಡಿದ್ದಾನೆ ಮತ್ತು ಯಾರ್ಯಾರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನೂ ಆತ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಉದಯವಾಣಿ ವರದಿಯಲ್ಲಿ ಹೇಳಲಾಗಿದೆ. ಮಾರ್ಚ್ 20 ರ ಉದಯವಾಣಿಯಲ್ಲಿ ಈ ವರದಿ ಪ್ರಕಟವಾಗಿದೆ. ಮಾರ್ಚ್ 19 ಕ್ಕೆ ವಿಠ್ಠಲನ ಪೊಲೀಸ್ ಕಸ್ಟಡಿ ಅಂತ್ಯವಾಗಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ನಕ್ಸಲರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರೆ ಪೊಲೀಸರು ನಕ್ಸಲರ ಜಾಡು ಹಿಡಿಯಲು ಆತನ ಪೊಲೀಸ್ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಬೇಕಿತ್ತು. ಆದರೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ಕಸ್ಟಡಿ ವಿಸ್ತರಣೆಗೆ ಮನವಿ ಮಾಡಲೇ ಇಲ್ಲ. ಆದ್ದರಿಂದಲೇ ಪೊಲೀಸ್ ಕಸ್ಟಡಿ ಅಂತ್ಯವಾಗಿ 19ರ ರಾತ್ರಿಯಿಂದಲೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಂದೆಡೆ ನಕ್ಸಲರ ಬಗ್ಗೆ ಆತನ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದೇ ಹೌದಾದಲ್ಲಿ ಅದನ್ನು ಪೊಲೀಸ್ ಮೂಲಗಳು ಎಂದು ಸಂಶಯಾಸ್ಪದವಾಗಿ ವರದಿ ಮಾಡಬೇಕಿರಲಿಲ್ಲ. ಎಸ್ಪಿಯ ಬಳಿಯೋ, ಐಜಿಪಿ ಬಳಿಯೋ ಹೇಳಿಕೆ ಪಡೆದು ಪ್ರಕಟಿಸಬಹುದಿತ್ತು. ಉದಯವಾಣಿಯ ಈ ಸುದ್ಧಿ ಮೂಲವೇ ಒಂದು ಕಟ್ಟು ಕತೆಯಷ್ಟೆ. ಪೊಲೀಸರಿಗೆ ಈತ ನಕ್ಸಲ್ ಬಗ್ಗೆ ಮಾಹಿತಿ ನೀಡಿದ್ದೂ ಹೌದೇ ಆಗಿದ್ದಲ್ಲಿ ಬೆಳ್ತಂಗಡಿ ಪೊಲೀಸರು ತಕ್ಷಣ ಆ ಎಲ್ಲಾ ಮಾಹಿತಿಯನ್ನು ಗುಪ್ತಚರ ಇಲಾಖೆ ಮತ್ತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಪೊಲೀಸರು ಅವ್ಯಾವುದನ್ನೂ ಈವರೆಗೂ ಮಾಡಿಲ್ಲ.

ಎಡವಟ್ಟು ಮಾಡಿದ ಸ್ಪಷ್ಟಣೆ

ಮಾರ್ಚ್ 20ರ ಉದಯವಾಣಿಯಲ್ಲಿ 2001 ರಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ನಕ್ಸಲ್ ಸಮಾವೇಶ ನಡೆದಿದ್ದು, ಅದರಲ್ಲಿ ವಿಠ್ಠಲ್ ಪಾಲ್ಗೊಂಡಿದ್ದ ಎಂಬ ವರದಿಯ ಬಗ್ಗೆ ಮಾರ್ಚ್ 21ರ ಆವೃತ್ತಿಯಲ್ಲಿ ಸ್ಪಷ್ಟಣೆ ನೀಡಲಾಗಿದೆ. 2011 ರ ಸಮಾವೇಶದಲ್ಲಿ ವಿಠ್ಠಲ್ ಪಾಲ್ಗೊಂಡಿದ್ದ ಎಂಬುದು ಮುದ್ರಣ ದೋಷದಿಂದಾಗಿ 2001 ಎಂದಾಗಿತ್ತು ಎಂದು ಸ್ಪಷ್ಟೀಕರಿಸಲಾಗಿದೆ. ನಕ್ಸಲ್ ವಿಷಯದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸ್ಪೆಷಲ್ ಸ್ಟೋರಿ ಮಾಡುವವರು ಆ ವಿಷಯದ ಬಗ್ಗೆ ಆಳವಾಗಿ ಆಧ್ಯಯನ ಮಾಡಿರಬೇಕು. ಕಂಡಂತಹ ಸುದ್ದಿ ಬರೆಯಲು ವಿಶೇಷ ಅಧ್ಯಯನ ಬೇಕಿಲ್ಲ. ವಿಶೇಷ ತನಿಖಾ ವರದಿ ಬರೆಯುವಾಗ ಅಧ್ಯಯನ ಅತ್ಯಗತ್ಯ. ಮೊನ್ನೆ ಮೊನ್ನೆ ಅಂದರೆ ಇದೇ ತಿಂಗಳ 11ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಎಂಬ ಗ್ರಾಮದ ಕಾಡಿನಲ್ಲಿ ನಕ್ಸಲ್ ಸಮಾವೇಶ ನಡೆದಿತ್ತು. ಅಲ್ಲಿಗೆ ಪೊಲೀಸ್ ದಾಳಿ ನಡೆದಿದ್ದು, ಪೊಲೀಸ್ ಪೇದೆಗೆ ಗಾಯ ಆಗಿದ್ದು, ಅಪಾರ ಪ್ರಮಾಣದ ಗ್ರಾನೈಟ್, ಮದ್ದು ಗುಂಡುಗಳು, ಗನ್‍ಗಳು ಇರುವ ಹತ್ತು ಕ್ಯಾಂಪ್‍ಗಳು ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನಕ್ಸಲ್ ವಿಚಾರಧಾರೆ ಎನ್ನುವುದು ಪಕ್ಕಾ ರಾಜಕೀಯ ವಿಷಯ. ನಕ್ಸಲರು ಸಿಪಿಐ (ಮಾವೋವಾದಿ) ಎಂಬ ನಿಷೇದಿತ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದವರಾಗಿರುತ್ತಾರೆ. ಇದು ನಿಷೇದಿತವಾದರೂ ನಕ್ಸಲರಿಗೆ ಇದೊಂದು ರಾಜಕೀಯ ಪಕ್ಷ. ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳಂತೆಯೇ ಮಾವೋವಾದಿ ಕಮ್ಯೂನಿಸ್ಟ್ ಪಕ್ಷ ಕೂಡಾ ವಾರ್ಷಿಕ ಸಮಾವೇಶಗಳನ್ನು ನಡೆಸುತ್ತದೆ. ಅದಕ್ಕಾಗಿ ಅದು ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳಂತೆ ವರ್ಷಕ್ಕೊಂದು ಬೇರೆ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡುತ್ತದೆ. 2011 ರಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಸಮಾವೇಶ ನಡೆಸಿದ್ದರೆ, 2012 ರಲ್ಲಿ ಮತ್ತೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ ಸಮಾವೇಶ ನಡೆಸಲು ಸಾಧ್ಯವೇ ಇಲ್ಲ. ಇದೆಲ್ಲಾ ರಾಜಕೀಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. 2011 ರಲ್ಲಿ ಕುತ್ಲೂರಿನಲ್ಲಿ ನಕ್ಸಲ್ ಸಮಾವೇಶ ನಡೆದಿದೆ ಎಂದಿಟ್ಟುಕೊಳ್ಳೋಣ. ಕುತ್ಲೂರಿನ ಇಬ್ಬರು ಯುವಕರು ನಕ್ಸಲರಾಗಿ ಎನ್‍ಕೌಂಟರ್‌ಗೆ ಗುರಿಯಾದ ನಂತರ ಮತ್ತು ಇಲ್ಲಿಯದ್ದೇ ಯುವತಿ ಸುಂದರಿ ಎಂಬಾಕೆ ನಕ್ಸಲ್ ನಾಯಕಿಯಾದ ನಂತರ ಪ್ರತೀ ದಿನ ಎಎನ್ಎಫ್‍ನ ಅಥವಾ ವೇಣೂರು ಠಾಣೆಯ ಕನಿಷ್ಠ ಒರ್ವ ಸಿಬ್ಬಂದಿ ಈ ಕಾಡಿನಲ್ಲಿ ನಿತ್ಯ ಬೀಟ್ ಮಾಡ್ತಾ ಇರ್ತಾರೆ. ಎರಡು ದಿನಕ್ಕೊಮ್ಮೆ ಐದರಿಂದ ಆರು ಎಎನ್ಎಫ್ ಪೊಲೀಸರ ತಂಡ ಇಲ್ಲಿಗೆ ಭೇಟಿ ಕೊಡುತ್ತದೆ. ಕುತ್ಲೂರಿನಲ್ಲಿ ಕಳೆದ ವರ್ಷ ಸಮಾವೇಶ ನಡೆದಿದ್ದು ಹೌದೇ ಆದಲ್ಲಿ ಕಳೆದ ವರ್ಷದ ಯಾವ ದಿನ ಯಾವ ಕಾರಣಕ್ಕಾಗಿ ಪೊಲೀಸರು ಕುತ್ಲೂರಿಗೆ ಭೇಟಿ ಕೊಟ್ಟಿಲ್ಲ ಎಂದು ಪೊಲೀಸರು ಉತ್ತರಿಸಬೇಕಾಗುತ್ತದೆ.

ಪ್ರಜಾಪ್ರಭುತ್ವವನ್ನು ಒಪ್ಪುವ ಯಾವುದೇ ವ್ಯಕ್ತಿ ನಿಷೇದಿತ ನಕ್ಸಲ್ ಚಳವಳಿಯನ್ನು ಒಪ್ಪುವಂತೆಯೇ ಇಲ್ಲ. ಹಾಗೆಂದು ಕಾಡಿನ ಮೂಲ ನಿವಾಸಿಗಳು ನಕ್ಸಲರ ಜೊತೆ ಸಂಪರ್ಕದಲ್ಲಿದ್ದರೆ ಅದು ಮೂಲ ನಿವಾಸಿಗಳ ತಪ್ಪಲ್ಲ. ವಿದ್ಯುತ್, ದೂರವಾಣಿ, ರಸ್ತೆ ಸಂಪರ್ಕಗಳೇ ಇಲ್ಲದ ದಟ್ಟ ಕಾಡಲ್ಲಿ ವಾಸಿಸೋ ಮಲೆಕುಡಿಯರ ಮನೆಗೆ ನಕ್ಸಲರು ಬಂದೂಕು ಹಿಡಿದುಕೊಂಡು ಬಂದು ಅನ್ನ ನೀರು ಕೇಳಿದರೆ ಕೊಡದೇ ಇರಲು ಬದುಕೇನು ಸಿನೇಮಾ ಕಥೆಯಲ್ಲ. ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನಕ್ಸಲರ ಉಪಟಳ. ನೀಡದೇ ಇದ್ದರೆ ಪೊಲೀಸರ ಕಿರುಕುಳ. ಪೊಲೀಸರು ಮತ್ತು ವ್ಯವಸ್ಥೆ ಮಲೆಕುಡಿಯರ ಬಗ್ಗೆ ಹೊಂದಿರೋ ನಿಲುವುಗಳು ಮತ್ತು ಮಾಡೋ ದೌರ್ಜನ್ಯಗಳೇ ನಕ್ಸಲರು ಮಲೆಕುಡಿಯ ಮೇಲೆ ಪ್ರಭಾವ ಬೀರಲು ಬಳಸೋ ಅಸ್ತ್ರಗಳು. ಅಂತದ್ದರಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದುಕೊಂಡ ವಿಠ್ಠಲ್‍ನಂತಹ ಯುವಕರನ್ನು ಎಎನ್ಎಫ್‍ನವರು ಬಂಧಿಸಿ ಕಿರುಕುಳ ನೀಡಿದಾಗ ಪೊಲೀಸರದ್ದೇ ಸರಿ ಎಂದು ಪೊಲೀಸರ ಪರ ವಹಿಸಿದರೆ ಅದು ನಕ್ಸಲ್ ಪರವಾಗಿರುತ್ತದೆ ಎಂಬುದು ನಮಗೆ ಗೊತ್ತಿರಬೇಕು

ನಾಡಿನ ನಕ್ಸಲ್ ನಿಗ್ರಹ ದಳದಿಂದ ಕಾಡಿನ ಅಮಾಯಕ ವಿದ್ಯಾರ್ಥಿಯ ಬಂಧನ

-ನವೀನ್ ಸೂರಿಂಜೆ

ಕರ್ನಾಟಕದ ನಕ್ಸಲ್ ನಿಗ್ರಹ ದಳದ ಅಟ್ಟಹಾಸಕ್ಕೆ ಇದೀಗ ಅಮಾಯಕ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬ ಬಲಿಪಶುವಾಗಿದ್ದಾನೆ. ನಕ್ಸಲ್ ಬೆಂಬಲಿಗರೆಂಬ ಆರೋಪದಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬೆಳ್ತಂಗಡಿಯ ಕುತ್ಲೂರು ಪರಿಸರದಲ್ಲಿ ಕಳೆದ ಶನಿವಾರ ಬಂಧಿಸಿರುವ ಮೂವರಲ್ಲಿ ಓರ್ವನಾದ ವಿಠ್ಠಲ ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ನೂರು ಶೇಕಡಾ ತರಗತಿ ಹಾಜರಾತಿಯನ್ನು ಹೊಂದಿರುವ ಬುದ್ದಿವಂತ ವಿದ್ಯಾರ್ಥಿ ನಕ್ಸಲ್ ಪೀಡಿತ ಗ್ರಾಮದ ಮಲೆಕುಡಿಯ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಜೈಲಲ್ಲಿ ಕೊಳೆಯುವಂತಾಗಿದೆ.

ನಕ್ಸಲ್ ವಿರೋಧಿ ಎಡಪಕ್ಷವಾದ ಸಿಪಿಐಎಂನ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನಲ್ಲಿ ಸಕ್ರಿಯನಾಗಿದ್ದ ವಿಠ್ಠಲ ಕಳೆದ ಆಗಸ್ಟ್ ತಿಂಗಳಿನಿಂದ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಆರಂಭಿಸಿದ್ದ. ತನ್ನ ಹುಟ್ಟೂರಿನಲ್ಲಿ ನಕ್ಸಲ್ ಚಟುವಟಿಕೆಗಳಿಂದ ಬೇಸತ್ತಿದ್ದ ವಿಠ್ಠಲ್, ಎಡ ಪಕ್ಷದ ಅಂಗ ಸಂಘಟನೆಯಾದ ದಲಿತ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯನಾಗಿಸಿಕೊಂಡಿದ್ದ. ವಿಶೇಷವೆಂದರೆ ಮಲೆಕುಡಿಯ ಜನಾಂಗಕ್ಕೆ ಸೇರಿದ ವಿಠ್ಠಲ ಕುತ್ಲೂರಿನ ಮಲೆಕುಡಿಯ ಸಮುದಾಯದಲ್ಲಿ ಎಸ್ಎಸ್ಎಲ್‌‍ಸಿಗಿಂತ ಮೇಲ್ಮಟ್ಟದ ವಿದ್ಯಾಭ್ಯಾಸದ ಹಂತವನ್ನು ತಲುಪಿರುವ ಏಕೈಕ ಯುವಕ. ಕಾಡಿನಲ್ಲಿ ಶತ ಶತಮಾನಗಳಿಂದ ಬದುಕಿದ್ದವರನ್ನು ಒಕ್ಕಲೆಬ್ಬಿಸಲು ಪ್ರತೀ ಕುಟುಂಬಕ್ಕೆ ಹತ್ತು ಲಕ್ಷ ನೀಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದಾಗ ಅದನ್ನು ವಿರೋಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿರುವಲ್ಲಿ ವಿಠ್ಠಲ್ ಪಾತ್ರ ಪ್ರಮುಖವಾದುದು. ಅಲ್ಲಿಯವರೆಗೆ ಅಧಿಕಾರಿಗಳು ತೋರಿಸಿದ ಕಾಗದಕ್ಕೆ ಹೆಬ್ಬೆಟ್ಟು ಒತ್ತುತ್ತಿದ್ದವರು ವಿಠ್ಠಲ್‍ನ ವಿದ್ಯಾಬ್ಯಾಸದ ನಂತರ ಚಿತ್ರಣ ಬದಲಾಗಿತ್ತು. ಈ ಕಾರಣದಿಂದಾಗಿಯೇ ಇಂದಿಗೂ ನಲ್ವತ್ತು ಕುಟುಂಬಗಳನ್ನು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದಿಂದ ಬಲವಂತವಾಗಿ ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಇದು ಎಎನ್ಎಫ್ ಮತ್ತು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿತ್ತು.

ಮಂಗಳೂರು ವಿವಿಯ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದುಕೊಂಡು ಕಳೆದ ಒಂದು ವರ್ಷದಿಂದೀಚೆಗೆ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ವಿಠ್ಠಲನಿಗೆ ಪತ್ರಿಕೋಧ್ಯಮ ಕ್ಷೇತ್ರವನ್ನು ಆಯ್ದುಕೊಳ್ಳುವಂತೆ ಸಲಹೆ ನೀಡಿದ್ದೇ ಮಂಗಳೂರಿನ ಪತ್ರಕರ್ತರು. ನಾನೂ ಸೇರಿದಂತೆ ಮಂಗಳೂರಿನ ಪತ್ರಕರ್ತ ಮಿತ್ರರೆಲ್ಲಾ ನಕ್ಸಲ್ ಪೀಡಿತ ಪ್ರದೇಶಕ್ಕೆ ವರದಿಗಾಗಿ ತೆರಳಿದ್ದ ಸಂದರ್ಭ ಪದವಿ ಶಿಕ್ಷಣ ಮುಗಿಸಿದ್ದ ವಿಠ್ಠಲ ಕಣ್ಣಿಗೆ ಬಿದ್ದಿದ್ದ. ನಂತರ ಹಲವಾರು ಬಾರಿ ಕುತ್ಲೂರು ಪ್ರದೇಶಕ್ಕೆ ವರದಿಗಾಗಿ ನಾವು ತೆರಳಿದ್ದ ಸಂಧರ್ಭ ನಮಗೆಲ್ಲಾ ಕಾಡಿನಲ್ಲಿ ಆಶ್ರಯ ನೀಡಿದ್ದು ಇದೇ ವಿಠ್ಠಲ್ ಮನೆ. ನಂತರ ವಿಠ್ಠಲ್ ನಮ್ಮವನಾಗಿದ್ದ. ನಮ್ಮ ವರದಿಗಾರಿಕೆಯ ಕೆಲಸಗಳನ್ನು ಮೌನವಾಗಿ ಗಮನಿಸುತ್ತಿದ್ದ ವಿಠ್ಠಲ್‍ಗೆ ತಾನೂ ಪತ್ರಕರ್ತನಾಗಬೇಕು ಎಂಬ ಆಶೆ ಮೊಳಕೆಯೊಡೆದಿತ್ತು. ಅದನ್ನು ನಮ್ಮ ಬಳಿ ಹೇಳಿಕೊಂಡಿದ್ದ. ನಾವು ತಕ್ಷಣ ಅದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದೆವು. ನೇರ ಮಂಗಳೂರಿಗೆ ಕರೆಸಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿ ವ್ಯವಸ್ಥೆಗಳನ್ನು ಮಾಡಿದ್ದೆವು.

ಪತ್ರಕರ್ತ ಮಿತ್ರರೆಲ್ಲಾ ಸೇರಿ ಪುಸ್ತಕಗಳ ವ್ಯವಸ್ಥೆಯನ್ನೂ ಮಾಡಿಕೊಟ್ಟೆವು. ನಂತರ ವಿಠ್ಠಲ್ ತಿರುಗಿ ನೋಡಿದ್ದೇ ಇಲ್ಲ. ಕಾಲೇಜಿನಲ್ಲಿ ನೀಡೋ ಎಸೈನ್‍ಮೆಂಟ್‍ಗಳನ್ನು ಅಸ್ಥೆಯಿಂದ ನಿರ್ವಹಿಸುತ್ತಿದ್ದ. ಯಾವುದೇ ಸುದ್ಧಿಯ ಎಸೈನ್‍ಮೆಂಟ್ ನೀಡಿದರೂ ನೇರ ನನ್ನಲ್ಲಿಗೆ ಬಂದು ಸಲಹೆಗಳನ್ನು ಪಡೆದುಕೊಂಡು ಪರಿಪೂರ್ಣ ವರದಿ ತಯಾರಾಗುವಂತೆ ನೋಡಿಕೊಳ್ಳುತ್ತಿದ್ದ. ಆತ ಕಾಲೇಜಿಗೆ ಸೇರಿದ ದಿನದಿಂದ ಒಂದೇ ಒಂದು ತರಗತಿಯನ್ನೂ ತಪ್ಪಿಸಿಲ್ಲ. ನೂರು ಶೇಕಡಾ ಹಾಜರಾತಿ ಇದೆ ಎಂದು ಕಾಲೇಜು ದಾಖಲೆಗಳು ದೃಢೀಕರಿಸುತ್ತದೆ. ರಜೆಯ ಸಂಧರ್ಭದಲ್ಲಿ ಎಲ್ಲೆಲ್ಲಿ ವಿಚಾರ ಸಂಕಿರಣಗಳಿವೆ ಎಂದು ನನ್ನಲ್ಲಿ ತಿಳಿದುಕೊಂಡು ಹಾಜರಾಗುತ್ತಿದ್ದ. ಒಟ್ಟಾರೆ ಆತನೊಬ್ಬ ಭರವಸೆಯ ಪತ್ರಕರ್ತನಾಗಿ ಎಲ್ಲಾ ರೀತಿಯಲ್ಲೂ ರೂಪುಗೊಳ್ಳುತ್ತಿದ್ದ ಎಂದು ನನಗನ್ನಿಸುತ್ತಿತ್ತು.

ಕಳೆದ ಎರಡು ವಾರದಿಂದ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಕೂಂಬಿಕ್ ಕಾರ್ಯಾಚರಣೆ ನಡೆಯುತ್ತಿದೆ. ಕುತ್ಲೂರಿನಲ್ಲಿ ಕೂಂಬಿಕ್ ನಡೆಸಿದ ಎಎನ್ಎಫ್ ತಂಡವು ಚೀಂಕ್ರ ಮಲೆಕುಡಿಯನನ್ನು ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿತ್ತು. ನಂತರ ಎಎನ್ಎಫ್ ತಂಡವು ನೇರವಾಗಿ ವಿಠ್ಠಲ್ ಮನೆಗೆ ತೆರಳಿ ವಿಠ್ಠಲ್ ತಂದೆ ಲಿಂಗಣ್ಣ ಮಲೆಕುಡಿಯರನ್ನು ವಿಚಾರಣೆ ನಡೆಸಿತು. ರಾತ್ರಿಯಿಡೀ ಗೃಹ ಬಂಧನದಲ್ಲಿರಿಸಿದ ಎಎನ್ಎಫ್ ತಂಡವು ವೃದ್ಧ ಲಿಂಗಣ್ಣರಿಗೆ ಬೇಕಾಬಿಟ್ಟಿ ಥಳಿಸಿತ್ತು. ಇದನ್ನು  ಮರುದಿನ ಬೆಳಿಗ್ಗೆ ಪಕ್ಕದ ಮನೆಯ ಪೂವಪ್ಪ ಮಲೆಕುಡಿಯ ವಿಠ್ಠಲ್‍ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ತನ್ನ ತಂದೆಯನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಮರುದಿನ ಬೆಳಗ್ಗೆ ಕುತ್ಲೂರಿಗೆ ಹೊರಟು ನಿಂತ ವಿಠ್ಠಲ ಈ ಬಗ್ಗೆ ನನಗೆ ಮತ್ತು ಆತನ ಪರಿಚಯದ ಕೆಲ ಮಾಧ್ಯಮ ಮಿತ್ರರಿಗೂ ತನ್ನ ತಂದೆಯ ಬಗ್ಗೆ ಮಾಹಿತಿ ನೀಡಿದ್ದ. “ತಂದೆಯನ್ನು ನೋಡಲೇ ಬೇಕೆಂದಿದ್ದರೆ ಹೋಗು. ಇಲ್ಲದೆ ಇದ್ದರೆ ಪೂವಪ್ಪ ಮತ್ತು ಇತರರು ತಂದೆಯನ್ನು ಆಸ್ಪತ್ರೆಗೆ ದಾಖಲಿಸುವಂತೆ ನಾನು ಹೇಳುತ್ತೇನೆ” ಎಂದು ಅವನಿಗೆ ನಾನೇ ಹೇಳಿದ್ದೆ. ಆದರೂ ಆತನ ಮನಸ್ಸು ತಂದೆ ಮತ್ತು ತಾಯಿಯನ್ನು ನೋಡಬೇಕು ಎಂದು ಹಂಬಲಿಸುತ್ತಿರುವುದನ್ನು ನಾನು ಬಲ್ಲವನಾದೆ.” ಸರಿ ಹೋಗು. ಆದರೆ ನಿನ್ನ ಕಾಲೇಜಿನ ಗುರುತು ಪತ್ರವನ್ನು ತೆಗೆದುಕೊಂಡು ಹೋಗು. ಮತ್ತು ಕಾಡಿನಲ್ಲಿ ಎಎನ್ಎಫ್ ಪೊಲೀಸರು ಎದುರಾದರೆ ನೀನಾಗಿಯೇ ಗುರುತು ಪತ್ರ  ತೋರಿಸಿ ಮಾತನಾಡು. ನಂತರ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಅವಕಾಶ ನೀಡುವಂತೆ ಕೇಳಿಕೊ” ಎಂದು ಅತನಿಗೆ ಸಲಹೆಗಳನ್ನು ನೀಡಿದ್ದೆ.

ಬಸ್ಸು ಇಳಿದು ಎರಡು ಗಂಟೆಗಳ ಕಾಲ ದಟ್ಟ ಅರಣ್ಯದಲ್ಲಿ ಎಲ್ಲೂ ಕೂಡಾ ಎಎನ್ಎಫ್ ಸಿಬ್ಬಂದಿಗಳು ವಿಠ್ಠಲ್‍ಗೆ ಸಿಕ್ಕಿಲ್ಲ. ಎತ್ತರದ ಗುಡ್ಡ ಸಿಕ್ಕಾಗೆಲ್ಲಾ ಆತನ ಮೊಬೈಲ್ ನೆಟ್‍ವರ್ಕ್ ಸಿಗುತ್ತಿತ್ತು. ಆಗೆಲ್ಲಾ ಕರೆ ಮಾಡಿ ಮಾತನಾಡುತ್ತಿದ್ದ. ನಾನು ಇನ್ನಷ್ಟೂ ಸಲಹೆಗಳನ್ನು ನೀಡುತ್ತಿದ್ದೆ. ಮಧ್ಯಾಹ್ನದ ವೇಳೆಗೆ ಕುತ್ಲೂರಿನ ದಟ್ಟ ಅರಣ್ಯದ ನಡುವಿನ ತನ್ನ ಮನೆಗೆ ತಲುಪಿದ್ದ ವಿಠ್ಠಲನನ್ನು ವಿಚಾರಣೆಯ ನೆಪದಲ್ಲಿ ತಂದೆ ಲಿಂಗಣ್ಣನ ಜೊತೆ ಎಎನ್ಎಫ್ ತಂಡ ಬಂಧಿಸಿ ಕರೆದೊಯ್ದು ಎಫ್ಐಆರ್ ದಾಖಲಿಸಿ ಜೈಲಿಗಟ್ಟಿದೆ.

ಎಎನ್ಎಫ್ ತಂಡವು ಬಂಧಿತ ವಿಠ್ಠಲನ ಮನೆಯಲ್ಲಿ ಕರಪತ್ರ, ಬೈನಾಕ್ಯುಲರ್‌ನಂತಹ ಸಲಕರಣೆಗಳು ದೊರಕಿವೆ ಎಂಬುದಾಗಿ ಹೇಳಿಕೊಂಡಿದೆ. ವಿಠ್ಠಲನ ಬಳಿ ನಕ್ಸಲ್ ಪರವಾದ ಲೇಖನಗಳು, ನಕ್ಸಲ್ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಹಾಗೂ ನಕ್ಸಲರು ಮೃತರಾದ ವರದಿಗಳ ಪತ್ರಿಕಾ ಸಂಗ್ರಹ ಕೂಡಾ ಇತ್ತು ಎಂಬ ಆರೋಪವನ್ನೂ ಹೊರಿಸಿದೆ. (ಮಾಮೂಲಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಮಂಗಳೂರು ನಗರದಲ್ಲಿರುವ ಮೂನ್ಶೈನ್ ಎಂಬ ಬ್ಯೂಟಿ ಪಾರ್ಲರಿನ ಡ್ರಾವರ್‌‌‌‌‌‌ನಲ್ಲಿ ಕಾಂಡೋಮ್ ಪ್ಯಾಕೇಟ್ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಮಹಿಳಾ ಕಾರ್ಮಿಕರನ್ನು ಅರೆಸ್ಟ್ ಮಾಡಿದವರಿಗೆ ಕರಪತ್ರ ಇಡೋದೇನೂ ಮಹಾಸಂಗತಿಯಲ್ಲ ಬಿಡಿ.)

ಈ ನಡುವೆ, ವಿಠ್ಠಲ ಮತ್ತು ಆತನ ತಂದೆಯ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಬೆಳ್ತಂಗಡಿಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಎಎನ್ಎಫ್ ತಂಡವು ಸುಳ್ಳು ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ವಿಠ್ಠಲನನ್ನು ಹತ್ತಿರದಿಂದ ಬಲ್ಲ ಸಹಪಾಠಿಗಳು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಚಿನ್ನಪ್ಪ ಗೌಡರಿಗೆ ವಿವಿ ಮಧ್ಯೆ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ವಿಠ್ಠಲನ ತಂದೆ ವಯೋವೃದ್ಧರಾದ ಲಿಂಗಣ್ಣ ಮಲೆಕುಡಿಯರಿಗೆ ಪೊಲೀಸರು ನೀಡಿರುವ ದೈಹಿಕ ದೌರ್ಜನ್ಯದಿಂದಾಗಿ ಕಾಲಿನ ಮಣಿಗಂಟಿನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರನ್ನೀಗ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ವಿವಿ ಬಾಯ್ಸ್ ಹಾಸ್ಟೆಲ್‍ನಲ್ಲಿದ್ದು ತರಗತಿಯಲ್ಲಿ ನೂರು ಶೇಕಡಾ ಹಾಜರಾತಿಯನ್ನು ಹೊಂದಿದ್ದ ವಿಠ್ಠಲ್ ಮೇಲೆ ಪೊಲೀಸರು ಸೆಕ್ಷನ್ 10 ಮತ್ತು 13(2) ಅನ್ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಷನ್) ಆ್ಯಕ್ಟ್ ಮೂಲಕ ರಾಜದ್ರೋಹದ ಆರೋಪ ಹೊರಿಸಿ ಜೈಲಿಗಟ್ಟಿದ್ದಾರೆ. ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಉಜ್ವಲ ಭವಿಷ್ಯದ ಕನಸು ಹೊತ್ತಿದ್ದ ಯುವಕ ಮತ್ತಾತನ ಮನೆಯವರಿಗೆ ಇದೀಗ ಎಎನ್ಎಫ್ ತಂಡವು ನಕ್ಸಲ್ ಬೆಂಬಲಿಗ ಎಂಬ ಹಣೆಪಟ್ಟಿ ಕಟ್ಟಿರುವುದು ನಿಜಕ್ಕೂ ವಿಷಾದನೀಯ.