Tag Archives: ನದಿಗಳು

ಜೀವನದಿಗಳ ಸಾವಿನ ಕಥನ -12

– ಜಗದೀಶ್ ಕೊಪ್ಪ

ಅಣೆಕಟ್ಟುಗಳ ನಿರ್ಮಾಣದ ವಿಷಯದಲ್ಲಿ, ಜಗತ್ತಿನ ಬಹುತೇಕ ಸರಕಾರಗಳು, ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ವಾಸ್ತವಿಕ ಅಂಕಿ ಅಂಶಗಳನ್ನು ಮರೆಮಾಚುತ್ತಿರುವುದು ಕೂಡ ಹಲವಾರು ಅನಾಹುತಗಳಿಗೆ ಕಾರಣವಾಗಿದೆ. ವಾಸ್ತವವಾಗಿ ಕಾಮಗಾರಿ ವೆಚ್ಚ, ನಿರ್ಮಾಣದ ಅವಧಿ, ವಾಸ್ತವವಾಗಿ ಸಂಗ್ರಹವಾಗುವ ನೀರಿನ ಪ್ರಮಾಣ, ಕಾಮಗಾರಿ ಸ್ಥಳದ ಭೂಮಿಯ ಲಭ್ಯತೆ ಹಾಗೂ ಕಾಮಗಾರಿಗೆ ಈ ಭೂಮಿ ಸೂಕ್ತವೆ ಎಂಬ ಅಂಶ ಇವೆಲ್ಲವುಗಳಲ್ಲಿ ಸತ್ಯಕ್ಕಿಂತ ಸುಳ್ಳಿನ ಪ್ರಮಾಣ ಅಧಿಕವಾಗಿದೆ. ಹಾಗಾಗಿ ಜಗತ್ತಿನ ಯಾವೊಂದು ಅಣೆಕಟ್ಟು ತನ್ನ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಇತಿಹಾಸವಿಲ್ಲ. ಅಷ್ಟೇ ಏಕೆ ಪೂರ್ವ ನಿಗತ ವೆಚ್ಚದೊಳಗೆ ಮುಗಿದ ಉದಾಹರಣೆಗಳಿಲ್ಲ. ಅಣೆಕಟ್ಟು ನಿರ್ಮಾಣಕ್ಕಿಂತ  ಮಿಗಿಲಾಗಿ, ಅಣೆಕಟ್ಟು ಸ್ಥಳ ಹಾಗೂ ಹಿನ್ನೀರಿನಲ್ಲಿ ಮುಳುಗುವ ಪ್ರದೇಶಗಳಿಂದ ಸಂತ್ರಸ್ತರಾಗುವ ಜನತೆಯ ಬಗ್ಗೆ ನಿಜವಾದ ಅಂಕಿ ಅಂಶಗಳನ್ನು ಮುಚ್ಚಿಡುತ್ತಾ ಬಂದಿರುವುದು, ಜಾಗತಿಕವಾಗಿ ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈಗಾಗಲೇ ಆಯಾ ದೇಶಗಳಲ್ಲಿ ತಾಂಡವವಾಡುತ್ತಿರುವ ಬಡತನ ನಿವಾರಣೆ ಅಲ್ಲಿನ ಸರಕಾರಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ ಹೊಸದಾಗಿ ಉದ್ಭವವಾಗುವ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಮತ್ತೊಂದು ತೊಡಕಾಗಿದೆ.

ಅಣೆಕಟ್ಟು ವಿಷಯದಲ್ಲಿ ಕೇವಲ ಲಾಭವನ್ನೇ ಗುರಿಯಾಗಿರಿಸಿಕೊಂಡ ಬಹುರಾಷ್ಟ್ರೀಯ ನಿರ್ಮಾಣ ಕಂಪನಿಗಳಿಗೆ ಉತ್ತರದಾಯಕತ್ವದ ಪ್ರಶ್ನೆಯೇ ಎದುರಾಗುವ ಸಂಭವವಿಲ್ಲದೆ ಇರುವುದರಿಂದ, ತಾಂತ್ರಿಕವಾಗಿ ಅಥವಾ ಗುಣಮಟ್ಟದಲ್ಲಿ ಕಳಪೆ ಇದ್ದರೂ ಕೂಡ, ಮುಂದೆ ಸಂಭವಿಸುವ ಅವಘಡಗಳಿಗೆ ಇವು ಹೊಣೆಹೊರುವ, ಹೊತ್ತಿರುವ ಸಂಧರ್ಭ ತೀರಾ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಯಾವುದೇ ಸ್ಥಳದಲ್ಲಿ ಅಣೆಕಟ್ಟುಗಳನ್ನು ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದರೂ, ಪ್ರತಿಯೊಂದು ಅಣೆಕಟ್ಟಿನ ಸ್ಥಳಕ್ಕೆ ತನ್ನದೇ ಆದ ಲಕ್ಷಣಗಳಿರುತ್ತವೆ. ಕೆಲವೊಂದು ಸ್ಥಳಗಳು ಅಣೆಕಟ್ಟು ನಿರ್ಮಾಣಕ್ಕೆ ಯೋಗ್ಯವಾಗಿರುವುದಿಲ್ಲ. ಅಲ್ಲಿನ ಭೂಮಿಯ ಗುಣಮಟ್ಟ, ಮಣ್ಣಿನ ಗುಣ, ಸಂಗ್ರಹವಾಗುವ ನೀರಿನ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಆದರೆ ಯಾವೊಂದು ಸರಕಾರ ಮತ್ತು ಅಣೆಕಟ್ಟು ನಿರ್ಮಾಣ ಸಂಸ್ಥೆಗಳು ಇವುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದಕ್ಕೆ ಜ್ವಲಂತ ಉದಾಹರಣೆಗಳೆಂದರೆ, 1990ರಲ್ಲಿ ವಿಶ್ವಬ್ಯಾಂಕ್ ತಾನು ಆರ್ಥಿಕ  ನೆರವು ನೀಡಿದ್ದ 49 ಅಣೆಕಟ್ಟುಗಳ ಸಮೀಕ್ಷೆ ನಡೆಸಿದಾಗ ಇವುಗಳಲ್ಲಿ 36 ಅಣೆಕಟ್ಟುಗಳು ಪ್ರಶಸ್ತವಾದ ಸ್ಥಳಗಳಲ್ಲಿ ನಿರ್ಮಾಣ ವಾಗಿರಲಿಲ್ಲ. ಅಮೇರಿಕಾದೇಶದ ಟೆಟಾನ್ ನದಿಗೆ ದಕ್ಷಿಣ ಪ್ರಾಂತ್ಯದಲ್ಲಿ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಯೋಜನೆಗೆ ಕಾಮಗಾರಿ ಆರಂಭಿಸಿದಾಗ ಭೂಗರ್ಭ ಶಾಸ್ತ್ರಜ್ಞರು, ಈ ಸ್ಥಳ ಅಣೆಕಟ್ಟು ಕಾಮಗಾರಿಗೆ ಯೋಗ್ಯವಲ್ಲ ಎಂದು ನೀಡಿದ್ಥೆಚ್ಚರಿಕೆಯನ್ನು ನಿರ್ಲಕ್ಷಿಸಿ, 1970ರಲ್ಲಿ 270 ಅಡಿ ಎತ್ತರದ ಅಣೆಕಟ್ಟು ನಿರ್ಮಾಣ  ಕಾರ್ಯ ಪ್ರಾರಂಭವಾಯಿತು.

1970ರಲ್ಲಿ ಆರಂಭವಾದ ಕಾಮಗಾರಿ 1976ರಲ್ಲಿ ಮುಕ್ತಾಯವಾಗಿ, ಅದೇ ಜೂನ್ ತಿಂಗಳಿನಲ್ಲಿ ಚಾಲನೆ ನೀಡಿದಾಗ, ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಒತ್ತಡದಿಂದ ಅಣೆಕಟ್ಟಿನ ಬಲಭಾಗದ ಭೂಮಿಯಲ್ಲಿ ದೊಡ್ಡ ಬಾವಿಯಾಕಾರದ ರಂಧ್ರವೊಂದು ನಿರ್ಮಾಣವಾಗಿ  ಜಲಾಶಯದ ನೀರು ಅದರೊಳಗೆ ಹರಿಯತೊಡಗಿತು. ಮರುದಿನ ಅಣೆಕಟ್ಟಿನ 270 ಅಡಿ ಎತ್ತರದ ತಡೆಗೋಡೆ ಹೊರತುಪಡಿಸಿ ಅದಕ್ಕೆ ಹೊಂದಿಕೊಂಡಿದ್ದ ಭೂಮಿ ಕೊಚ್ಚಿಹೋದ ಪರಿಣಾಮ ಸುಮಾರು 20 ಅಡಿ ಎತ್ತರದ ಅಣೆಕಟ್ಟಿನ ಗೋಡೆ ಮಗುಚಿಬಿತ್ತು.

ಇದರಿಂದ ನಾಲ್ಕುಸಾವಿರ ಮನೆಗಳು, ಮೂರು ಪಟ್ಟಣಗಳು ಈ ದುರಂತದಲ್ಲಿ ನಿರ್ನಾಮವಾದವು. ಅಪಾತವನ್ನು ಅರಿತ ಅಲ್ಲಿನ ಸರಕಾರ ಮುನ್ನೆಚ್ಚರಿಕೆಯ ಕ್ರಮವಾಗಿ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವ ಸಾವು ನೋವೂ ಸಂಭವಿಸಲಿಲ್ಲ. ಆದರೆ ನೂರು ಕೋಟಿ ಡಾಲರ್ ಹಣ ನೀರಿನಲ್ಲಿ ಹೋಮಮಾಡಿದಂತಾಗಿ ಸಾಲದ ಹೊರೆ ಹೊರಬೇಕಾಯ್ತು. ಇಂತಹದ್ದೇ ಇನ್ನೊಂದು ಘಟನೆ ಸಂಭವಿಸಿದ್ದು ಗ್ವಾಟೆಮಾಲಾದಲ್ಲಿ. ಭೂಕಂಪ ಪೀಡಿತ ಈ ರಾಷ್ಟ್ರದಲ್ಲಿ 1974ರಲ್ಲಿ ಜರ್ಮನ್ ಹಾಗೂ ಸ್ವಿಟ್ಜರ್ಲ್ಯಾಂಡ್ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಕೈಗೆತ್ತಿಕೊಂಡ ಚಿಕ್ಸೊಯ್ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟಿಗೆ ಗ್ವಾಟೆಮಾಲಾ ಸರಕಾರ, ಅಮೆರಿಕಾದ ಇಂಟರ್ ಅಮೆರಿಕನ್ ಡೆವಲಪ್ಮೆಂಟ್ ಬ್ಯಾಂಕ್ನಿಂದ 105 ಮಿಲಿಯನ್ ಡಾಲರ್ ಸಾಲ ಪಡೆದು ಕಾಮಗಾರಿ ಪ್ರಾರಂಭಿಸಿತು.

1976ರಲ್ಲಿ ಜಲಾಶಯದಿಂದ 26 ಕಿ.ಮೀ. ದೂರದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಹರಿಸಲು ನಿರ್ಮಿಸಿದ  ಸುರಂಗ ಕಾಲುವೆಗಳು ಭೂಕಂಪದ ಪರಿಣಾಮ ಮಣ್ಣು ಕುಸಿತದಲ್ಲಿ ಮುಚ್ಚಿಹೋದವು. ಮತ್ತೆ ಇವನ್ನು ದುರಸ್ತಿಗೊಳಿಸಿ, ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಾಗ, ಗ್ವಾಟೆಮಾಲ ಸರಕಾರ ಅಂದಾಜಿಸಿದ್ದ ನಿರ್ಮಾಣ  ವೆಚ್ಚಕ್ಕಿಂತ 375 ಪಟ್ಟು ಹಣ ಹೆಚ್ಚು ಖರ್ಚಾಯಿತ. ಆ ನಂತರವೂ ಸಂಭವಿಸಿದ ವಿವಿಧ ಅವಘಡಗಳಿಂದ 270 ಕೋಟಿ ಡಾಲರ್ ವೆಚ್ಚದಲ್ಲಿ ಮುಗಿಯಬೇಕಿದ್ದ ಅಣೆಕಟ್ಟು ನಿರ್ಮಾಣ , 1988ರಲ್ಲಿ ಅಂತಿಮಗೊಂಡಾಗ 944 ಕೋಟಿ ಡಾಲರ್ ಹಣವನ್ನು ನುಂಗಿಹಾಕಿ, ಗ್ವಾಟೆಮಾಲ ರಾಷ್ಟ್ರವನ್ನು ಅಮೆರಿಕಾದ ಶಾಶ್ವತ ಸಾಲಗಾರನನ್ನಾಗಿ ಮಾಡಿತು.

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮತ್ತೊಂದು ಹಗಲು ದರೋಡೆಯೆಂದರೆ, ನದಿಯೊಂದಕ್ಕೆ ಅಡ್ಡಲಾಗಿ ನಿರ್ಮಿ ಸಲಾಗುವ ಅಣೆಕಟ್ಟಿಗೆ ಮುನ್ನ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ನೀಡುವ ತಪ್ಪು ಮಾಹಿತಿ. ಯಾವುದೇ ಬಹುರಾಷ್ಟ್ರೀಯ ನಿರ್ಮಾಣ  ಸಂಸ್ಥೆಗಳು, ನದಿಯ ಪಾತ್ರದಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣವನ್ನು ಹಿಂದಿನ 20-30 ವರ್ಷಗಳಿಂದ ಹಿಡಿದು ಮುಂದಿನ 50 ವರ್ಷಗಳವರೆಗೂ ಲೆಕ್ಕಾಚಾರ ಹಾಕಿ, ನಂತರ ನದಿಯ ನೀರಿನ ಪ್ರಮಾಣವನ್ನು ಅಂದಾಜು ಮಾಡಬೇಕು.ಆದರೆ ಯಾವುದೋ ಒಂದು ವರ್ಷದ ಮಳೆಯ ಪ್ರಮಾಣವನ್ನು ಹಾಗೂ ನದಿ ನೀರಿನ ಹರಿಯುವಿಕೆಯ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅಣೆಕಟ್ಟು ನಿರ್ಮಿಸಲು ಸರಕಾರಗಳನ್ನು ಪುಸಲಾಯಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಹ ತಪ್ಪು ಲೆಕ್ಕಾಚಾರಗಳಿಂದಾಗಿ ಜಗತ್ತಿನ ಬಹುತೇಕ ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಶೇಖರವಾಗುತ್ತಿಲ್ಲ.

ಜೊತೆಗೆ ವಿುದ್ಯುತ್ ಉತ್ಪಾದನೆ ಕೂಡ ಸಾಧ್ಯವಾಗಿಲ್ಲ. ಸ್ಪೇನ್ ದೇಶದಲ್ಲಿ ಗೌಡಿಯಾಲ ಮತ್ತು ಟ್ಯಾಗೂಸ್ ನದಿಗೆ 1950ರ ದಶಕದಲ್ಲಿ ಜನರಲ್ ಫ್ರಾಂಕೋಸ್ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾದ ಎರಡು ಅಣೆಕಟ್ಟುಗಳ ಜಲಾಶಯಗಳು 2000ದ ಇಸವಿಯವರೆಗೆ ತಮ್ಮ ಸಾಮಥ್ರ್ಯದ ಶೇ.17ರಷ್ಟು ನೀರನ್ನು ಮಾತ್ರ ಸಂಗ್ರಹಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗಿಲ್ಲ. ವಿಶ್ವ ಬ್ಯಾಂಕ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2000ದ ಅಂತ್ಯದ ವೇಳೆಗೆ ತಾನು ಸಾಲ ನೀಡಿದ 25 ಬೃಹತ್ ಜಲಾಶಯಗಳು ಕೇವಲ ಅರ್ಧದಷ್ಟು ಪ್ರಮಾಣದ ನೀರನ್ನು ಸಂಗ್ರಹಿಸಿರುವುದಾಗಿ ಬಹಿರಂಗಪಡಿಸಿದೆ. ಇವುಗಳಲ್ಲಿ ಥಾಯ್ಲೆಂಡ್ ದೇಶದ 7 ಅಣೆಕಟ್ಟುಗಳು, ಭಾರತದ ನರ್ಮದಾ ಸರೋವರದ ಅಣೆಕಟ್ಟು, ಅಮೆರಿಕಾದ ಕೊಲರಾಡೊ ನದಿಗೆ ನಿಮರ್ಿಸಲಾದ ಹೂವರ್ ಅಣೆಕಟ್ಟು ಸೇರಿರುವುದು ಗಮನಾರ್ಹ ಸಂಗತಿ.

(ಮುಂದುವರಿಯುವುದು)