Tag Archives: ನೀರು

ಕೆಲವೇ ಕೆಲವರ ಸುಖ, ಹಲವರ ದುಃಖದ ಮೂಲವಾಗಬಾರದು

-ಡಾ.ಎಸ್. ಜಿ. ಜೋಗುರ

ಸಂಪತ್ತಿನ ಅಸಮಾನ ಹಂಚಿಕೆ ಎನ್ನುವದು ಅನೇಕ ಬಗೆಯ ಅವಕಾಶಗಳಲ್ಲಿಯೂ ಅಂತರಗಳನ್ನು ಸೃಷ್ಟಿಸಿದೆ. ಬೇಕು ಅನಿಸುವುದನ್ನು ತಕ್ಷಣವೇ ಕೊಂಡು ಬಳಸುವ ಸಾಮರ್ಥ್ಯವಿದ್ದದ್ದು ಕೇವಲ 15 ಪ್ರತಿಶತ ಜನರಿಗೆ ಮಾತ್ರ. ಮಿಕ್ಕ 85 ಪ್ರತಿಶತ ಜನರು ತಮ್ಮ ದುಡಿಮೆಯನ್ನು ನಿರಂತರವಾಗಿ ಒತ್ತೆಯಿಟ್ಟರೂ ಬೇಕು ಅನಿಸಿರುವದನ್ನು ಕೊಂಡುಕೊಳ್ಳಲು ಅನೇಕ ಬಗೆಯ ಸಾಹಸಗಳನ್ನು ಮಾಡಬೇಕಾಗುತ್ತದೆ. ಏನೋ ಒಂದನ್ನು ಪಡೆಯಲು ಏನೋ ಒಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಸೂತ್ರ ಇವರ ಪಾಲಿಗೆ ಅಕ್ಷರಶಃ ಅನ್ವಯವಾಗುತ್ತದೆ. ಅನೇಕ ಬಾರಿ ಬೇಕು ಅನಿಸಿದ್ದು ಬರೀ ಕನಸಾಗಿ, ಕೈಗೆಟುಕದ ಪಾರಿಜಾತವಾಗಿ ಇಡೀ ಬದುಕಿನುದ್ದಕ್ಕೂ ಬಸವಳಿದರೂ ಅದು ದಕ್ಕುವದಿಲ್ಲ. ತನ್ನ ಕೈಲಿ ಆಗದಿದ್ದದ್ದು ತನ್ನ ಮಗ, ಮೊಮ್ಮಗನ ಕೈಯಿಂದಲಾದರೂ ಸಾಧ್ಯವಾಗಲಿ ಎನ್ನುವ ಆಶಯದೊಂದಿಗೆ ಆ ಜೀವ ಕಣ್ಣು ಮುಚ್ಚುವದಿದೆ.

ಬೇಸಿಗೆಯಲ್ಲಿ ನರಕ ಸದೃಶ ಬದುಕಿನ ಹತ್ತಿರದ ಪರಿಚಯವಾಗಬೇಕಿದ್ದರೆ ಉತ್ತರ ಕರ್ನಾಟಕದ ಬಯಲುಸೀಮೆಗಳಿಗೆ ಭೇಟಿ ನೀಡಿ. ಅವರ ಪ್ರತಿನಿತ್ಯದ ಚಡಪಡಿಕೆಗಳು ಯಾವುದೋ ಒಂದು ಸುಖಭೋಗದ ಭೌತಿಕ ವಸ್ತುವಿಗಾಗಿ ಇಲ್ಲ. ಬದಲಾಗಿ ಒಂದು ಕೊಡ ಕುಡಿಯುವ ನೀರಿಗಾಗಿ, ಒಂದಷ್ಟು ಹೊತ್ತಿನ ವಿದ್ಯುತ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಚಿತ್ರಕೃಪೆ: ಸೆಲ್ಕೋ ಫೌಂಡೇಷನ್

ಗಾಗಿ, ಕಚ್ಚಾ ರಸ್ತೆಗಾಗಿ, ತೀರಾ ಕನಿಷ್ಟ ವೈದ್ಯಕೀಯ ಸೌಲಭ್ಯಗಳಿಗಾಗಿದೆ. ಇವುಗಳ ನಡುವೆ ಅವರಿಗೆ ಪೌಷ್ಟಿಕ ಆಹಾರದ ಕೊರತೆ ಒಂದು ಸಮಸ್ಯೆಯೇ ಅಲ್ಲ. ಬರೀ ಒಂದು ತಂಬಿಗೆ ನೀರು ಕುಡಿದು ಒಂದು ದಿನ ಬದುಕುತ್ತೇವೆ ಎನ್ನುವ ಇಚ್ಚಾಶಕ್ತಿ ಇರುವ ಈ ಜನರಿಗೆ ಬದುಕು ಎನ್ನುವುದು ನಿತ್ಯದ ಹೋರಾಟ, ಬವಣೆ. ಅನೇಕ ಬಗೆಯ ಕೊರತೆಗಳ ನಡುವೆಯೂ ಇವರು ಬದುಕಿದ್ದಾರೆ. ಹೇಗೆಂದು ಮಾತ್ರ ಕೇಳಬೇಡಿ. ಈ ಜನಸಮುದಾಯದ ಅಸ್ಥಿತ್ವವೇ ನಗಣ್ಯ ಎನ್ನುವಂತೆ ಇವರು ಬದುಕಿರುವುದಿದೆ. ಇವರು ಪ್ರಜಾಸತ್ತೆಯ ಭಾಗವಾದರೂ ತಮ್ಮ ಹಕ್ಕುಗಳ ಬಗ್ಗೆ, ಅವಕಾಶಗಳ ಬಗ್ಗೆ ಒಟ್ಟ್ತಾರೆಯಾಗಿ ಯೋಚಿಸದವರು. ಯಾವುದರಲ್ಲಿಯೂ ಅಪಾರವಾದ ನಂಬುಗೆಯನ್ನು ಉಳಿಸಿಕೊಂಡಿರದ ಈ ಜನ, ಸಿನಿಕರಾಗಿ ತೀರಾ ಯಥಾರ್ಥವಾಗಿಯೇ ಬದುಕುತ್ತಾರೆ. ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವುದಂತೂ ದೂರ, ಇದ್ದ ಪರಿಸ್ಥಿತಿಗೆ ಹೊಂದಿಕೊಳ್ಳುವುದರಲ್ಲಿಯೇ ಹೈರಾಣಾಗಿ ಹೋಗಿರುತ್ತಾರೆ. ತಮ್ಮನ್ನು ಯಾರೋ ಉದ್ದರಿಸುತ್ತಾರೆ ಎನ್ನುವ ನಿರೀಕ್ಷೆ ಇವರಿಗಿಲ್ಲ. ವಾಸ್ತವದಲ್ಲಿ ಅವರಿಗಿರುವ ಎಲ್ಲ ಬಗೆಯ ಸಂದಿಗ್ದಗಳೇ ಅವರ ನಿಜವಾದ ಬದುಕಿನ ದಿನಚರಿ. ಅವರ ಮನೆಯ ಮಹಿಳೆಯರೊ, ಒಂದು ಕೊಡ ನೀರಿಗಾಗಿ ದೂರದ ದಾರಿಯನ್ನು ಕ್ರಮಿಸುವ, ಕಲಹ, ವೈಮನಸ್ಸುಗಳನ್ನು ಪ್ರದರ್ಶಿಸುವ  ಪರಿಪಾಠ ಸಾಮಾನ್ಯ ಎನ್ನುವ ಇಲ್ಲಿಯ ಬದುಕು ಅತ್ಯಂತ ಕಠೋರವಾದುದು. ಮಹತ್ವಾಕಾಂಕ್ಷೆ ಎನ್ನುವುದು ಇಲ್ಲಿ ಮಣ್ಣುಪಾಲಾಗಿದೆ. ಒಂದು ಕೊಡ ನೀರು ಆ ಕುಟುಂಬದ ಇಡೀ ದಿನದ ಕನವರಿಕೆಯಾಗಿರುವ ನೆಲಗಳಲ್ಲಿ ಅದು ಹೇಗೆ ಅವರಲ್ಲಿ ಮಹತ್ವಾಕಾಂಕ್ಷೆಯನ್ನು, ಹೋರಾಟದ ಹಾದಿಯನ್ನು ತೋರುವುದು..? ಹೀಗೆ ಒಂದು ಬೇಸಿಗೆಯ ನಿರ್ಗಮನವೆನ್ನುವುದು ಆ ಗ್ರಾಮದ ಜನತೆಯ ಒಟ್ಟು ಕಸುವನ್ನೆಲ್ಲಾ ಹಿಂಡಿ ಹಿಪ್ಪೆ ಮಾಡಿದ ಭೌಗೋಳಿಕ ಸ್ಥಿತಿ ಎನ್ನುವಂತಿರುತ್ತದೆ.
ಇನ್ನೊಂದು ಬದಿ ನಮ್ಮ ಕಣ್ಣೆದುರಲ್ಲಿಯೇ ಅಪಾರ ಪ್ರಮಾಣದ ನೀರು, ವಿಧ್ಯುತ್ ಪೋಲಾಗುತ್ತಿರುತ್ತದೆ. ಸಾರ್ವಜನಿಕ ನಲ್ಲಿಗೆ ಆರಂಭವಾಗುವುದು ಮಾತ್ರ ತಿಳಿದಿದೆ ಆದರೆ ಬಂದ್ ಆಗುವ ಕ್ರಿಯೆ ತಿಳಿದಿಲ್ಲ. ಹೀಗಾಗಿ ಧೋ..ಧೋ.. ಎಂದು ಸುರಿಯುವ ನಲ್ಲಿಯ ಟ್ಯಾಪ್ ನ್ನು ಬಂದ್ ಮಾಡಲು ಮನುಷ್ಯರಾದವರಿಗೆ ತಿಳಿಹೇಳಲು, ಮಂಗನ ಮೂಲಕ ಜಾಹೀರಾತನ್ನು ರೂಪಿಸಿ ತೋರಿಸಬೇಕಾಗುತ್ತದೆ. ಅವಶ್ಯವಿರುವಷ್ಟೇ ನೀರು, ವಿದ್ಯುತ್, ಆಹಾರ ಬಳಿಸುವ ತಿಳಿವಳಿಕೆ ಕಡ್ಡಾಯ ಹಾಗೂ ತೀರಾ ಸಾಮಾನ್ಯವಾದ ಬದುಕಿನ ಪಠ್ಯಕ್ರಮವಾಗಬೇಕು. ಮದುವೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ನೀರು ಆಹಾರ ಹಾಳಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆ. ಮದುವೆಯಾಗುವ ಹುಡುಗ-ಹುಡುಗಿಯ ತಂದೆ-ತಾಯಿಗಳ ಅತಿ ಮುಖ್ಯವಾದ ಹೊಣೆಗಾರಿಕೆಗಳಲ್ಲಿ ಅದು ಮೊದಲನೆಯದಾಗಬೇಕು. ಈಚೆಗೆ ಆಂಗ್ಲ ದಿನಪತ್ರಿಕೆಯೊಂದು ಮಹಾನಗರಗಳಲ್ಲಿಯ ಸ್ಟಾರ್ ಹೊಟೆಲುಗಳು ವ್ಯಯಿಸುವ ವಿದ್ತ್ಯುತ್, ನೀರು ಮುಂತಾದವುಗಳ ಬಗ್ಗೆ ಸಮಗ್ರ ಬೆಳಕು ಚೆಲ್ಲುವ ಮೂಲಕ ಒಂದು ಸ್ಟಾರ್ ಹೊಟೇಲ್ ಎಷ್ಟು ಸಾಮಾನ್ಯ ಕುಟುಂಬಗಳ ಮನೆಯ ಬೆಳಕನ್ನು, ನೀರನ್ನು ನಿಗಟುತ್ತಿರುತ್ತದೆ ಎನ್ನುವದನ್ನು ಅಂಕಿ ಅಂಶಗಳ ಮೂಲಕ ತೋರಿಸಿಕೊಟ್ಟಿರುವದಿದೆ.
ಒಂದು ಸಾವಿರ ಮನೆಗಳಿಗೆ ಸಾಕಾಗಬಹುದಾದ ನೀರನ್ನು ಕೇವಲ ಒಂದು ಹೊಟೆಲ್ ಅನುಭೋಗಿಸುವುದನ್ನು ಆ ಪತ್ರಿಕೆ ಹೊರಹಾಕಿದೆ. ದೆಹಲಿಯ ಸುಮಾರು 35 ಸ್ಟಾರ್ ಹೊಟೆಲ್ ಗಳು ಬಳಸುವ ನೀರಿನ ಪ್ರಮಾಣ ಪ್ರತಿನಿತ್ಯ ಸುಮಾರು 15 ಮಿಲಿಯನ ಲೀಟರ್. ಅಷ್ಟು ನೀರಲ್ಲಿ ಪ್ರತಿದಿನ ದೆಹಲಿಯ ಒಂದು ವಿಶಾಲ ಪ್ರದೇಶಕ್ಕೆ ನೀರನ್ನು ಒದಗಿಸಬಹುದಾಗಿದೆ. ಸುಮಾರು 600 ಮನೆಗಳಿಗೆ ಸಾಧ್ಯವಾಗಬಹುದಾದ ವಿಧ್ಯುತ್ ನ್ನು ಕೆವಲ ಒಂದು ಸ್ಟಾರ್ ಹೊಟೆಲ್ ಬಳಸುವ ಬಗ್ಗೆಯೂ ಅದು ಹೇಳಿರುವದಿದೆ. ಒಂದು ಅಂದಾಜಿನಂತೆ ಸ್ಟಾರ್ ಹೊಟೆಲೊಂದು 15 ಸಾವಿರ ಇಲೆಕ್ಟ್ರಿಕ್ ಪಾಯಿಂಟ್ ಗಳನ್ನು ಹೊಂದಿರುವದಿದೆ ಅದರಲ್ಲಿ 3 ಸಾವಿರ ಬಲ್ಬುಗಳು ಅನಾವಶ್ಯಕವಾಗಿದ್ದರೂ ನಿರಂತರವಾಗಿ ಉರಿಯುತ್ತಿರುತ್ತವೆ. ಸುಮಾರು 14 ರಷ್ಟು ಸ್ಟಾರ್ ಹೊಟೇಲುಗಳು ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಬರೀ ವಿದ್ಯುತ್ ನ್ನೇ ಅವಲಂಬಿಸಿವೆ. ಇದರ ಜೊತೆಗೆ ಅಪಾರ ಪ್ರಮಾಣದ ಕಸವನ್ನು ಹೊರಗೆಸೆಯುತ್ತವೆ. ಆ ಮೂಲಕ ನಗರ ಪ್ರದೇಶದ ಕೊಳಗೇರಿಗಳ ವಿಸ್ತಾರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತವೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿ ಹನಿ ನೀರು, ಪ್ರತಿ ತುತ್ತು ಅನ್ನ, ಪೆಟ್ರೋಲ್ ಮತ್ತು ವಿಧ್ಯುತ್ ತುಂಬಾ ಅಮೂಲ್ಯವಾದವುಗಳು. ಇವುಗಳನ್ನು ಬೇಕಾಬಿಟ್ಟಿಯಾಗಿ ಬಳಸುವ ಪರಿಣಾಮ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರತೆಯನ್ನು ಅನುಭವಿಸಬೇಕಾಗುತ್ತದೆ. ಇದು ಕೆವಲ ನಗರಪ್ರದೇಶದ ಹೊಟೆಲ್ ಗಳಿಗೆ ಮಾತ್ರ ಸಂಬಂಧಿಸಿರದೇ ನಾವು ನಿರ್ಮಿಸಿಕೊಳ್ಳುವ ಮನೆಗಳೂ ಈಗೀಗ ತೀರಾ ಐಷಾರಾಮಿಯಾಗಿರುತ್ತವೆ. ಅಲ್ಲಿಯೂ ಅಗತ್ಯಕ್ಕಿಂತಲೂ ಹೆಚ್ಚಿನ ಲೈಟ್ ಪಾಯಿಂಟ್ ಗಳಿರುತ್ತವೆ. ಮನೆಮಂದಿಯೆಲ್ಲಾ ಟಿ.ವಿ.ಯ ಎದುರಲ್ಲಿ ಕುಳಿತಿರುವಾಗಲೂ ಎಲ್ಲ ಕೋಣೆಗಳ ಲೈಟುಗಳು ಬಿಂದಾಸ್ ಆಗಿ ಉರಿಯುತ್ತಿರುತ್ತವೆ. ಹಾಗೆಯೇ ಮನೆ ಎದುರಿನ ನೀರಿನ ಟ್ಯಾಂಕ್ ತುಂಬಿ ಹೆಚ್ಚಾದ ನೀರು ಗಟಾರ್ ಸೇರುವ, ಇಲ್ಲವೇ ರಸ್ತೆಗೆ ಹರಿಯುವ ಕ್ರಿಯೆ ನಮ್ಮ ಕಣ್ಣ ಎದುರೇ ನಡೆದರೂ ನಾವು ಅಷ್ಟಾಗಿ ತಲೆ ಕೆಡಿಸಿಕೊಳ್ಳುವದಿಲ್ಲ. ನೀರು, ವಿದ್ಯುತ್, ಆಹಾರ ಇವೆಲ್ಲವೂ ಹಣ ಕೊಟ್ಟರೂ ಸಿಗದೇ ಇರುವ ಸಂಗತಿಗಳಾಗುವ ದಿನಗಳು ದೂರಿಲ್ಲ.
ದೇಶದ ಕೇವಲ 10 ಪ್ರತಿಶತ ಜನರ ಸುಖಕ್ಕಾಗಿ 90 ಪ್ರತಿಶತ ಜನರ ಅವಕಾಶಗಳನ್ನು, ಹಕ್ಕುಗಳನ್ನು ಕಸಿಯುವದು ಖಂಡಿತ ನ್ಯಾಯವಲ್ಲ. ಅಷ್ಟಕ್ಕೂ ಈ ಸ್ಟಾರ್ ಹೊಟೆಲುಗಳನ್ನು ನಂಬಿಕೊಂಡು ಒಂದು ದೇಶದ ಜನಸಮುದಾಯದ ಬದುಕನ್ನು ನಿರ್ಣಯಿಸುವಂತಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯಕ್ಕಿಂತಲೂ ಮುಖ್ಯವಾಗಿ ನಾವು ಸಮಾನತೆಗೆ ಅವಕಾಶವನ್ನು ಕೊಡಬೇಕಿದೆ. ಆ ಮೂಲಕ ಮೂಲಭೂತ ಸೌಕರ್ಯಗಳು ಕೇವಲ ಉಳ್ಳವರ ಸ್ವತ್ತಾಗುವದನ್ನು ತಪ್ಪಿಸಬೇಕಿದೆ.

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು.

ಆಮೇಲೆ 3 ಬಿಲಿಯನ್ ಅಂದರೆ 300 ಕೋಟಿ ವರ್ಷಗಳು ಅಂದರು.

ಕಡೆಗೆ 456 ಕೋಟಿಗಳು ಎಂಬ ತೀರ್ಮಾನಕ್ಕೆ ಬಂದರು. ಇದನ್ನೇ ಭೂಮಿ  ಹುಟ್ಟಿದ ಕಾಲವೆಂದು,  ಈ ಧೀರ್ಘ ಅವಧಿಯನ್ನು ಡೀಪ್ ಟೈಮ್ ಎಂದು ವಿಜ್ಞಾನಿಗಳು ಕರೆದಿದ್ದಾರೆ.

ಇಲ್ಲಿಗೆ ಭೂಮಿಯ ವಯಸ್ಸು ಎಷ್ಟು ಎಂಬ ವಿಚಾರ ಗೊತ್ತಾಯಿತು. ಆದರೆ ಈ 456 ಕೋಟಿ ವರ್ಷಗಳ ಪಯಣ ಹೇಗಿತ್ತು ಅನ್ನೋದನ್ನು ತಿಳಿಯುವ ಅಗತ್ಯವಿತ್ತು. ವಿಜ್ಞಾನಿಗಳು ಶಿಲೆಗಳನ್ನು, ಸಂಶೋಧನೆಗಳನ್ನು ಕ್ರಮವಾಗಿ ಜೋಡಿಸಿ ಭೂಮಿಯ ವಿಕಾಸದ ಹಾದಿಯನ್ನು ಅದರ ತಿರುವುಗಳನ್ನು ತಿಳಿಯಲು ಮುಂದಾದರು.

ಭೂಮಿ ಬಾಲ್ಯಾವಸ್ಥೆಯಲ್ಲಿದ್ದಾಗ ಉಲ್ಕೆಗಳು ಅಪ್ಪಳಿಸುತ್ತಿದ್ದವು. ಅದಾಗಲೇ ಲಾವಾರಸದಿಂದ ತುಂಬಿದ್ದ ಭೂಮಿ ನಿಧಾನವಾಗಿ ತಣಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಬಿದ್ದ ಉಲ್ಕೆಗಳು ಶಿಲೆಗಳ ರೂಪ ಪಡೆದವು ಎನ್ನುತ್ತಾರೆ ವಿಜ್ಞಾನಿಗಳು.

ವಾಸ್ತವವಾಗಿ ವಿಜ್ಞಾನಿಗಳಿಗೆ ಕೋಟ್ಯಂತರ ವರ್ಷಗಳಷ್ಟು ಪುರಾತನವಾದ ಶಿಲೆಗಳು ಸಿಕ್ಕಿದ್ದು ಕಡಿಮೆ. ಆದರೆ ಅಷ್ಟೇ ಪುರಾತನವಾದ ಯುರೇನಿಯಂನಿಂದ ಕೂಡಿದ ಜರ್ಕಾನ್ ಹರಳುಗಳು ದೊರೆತವು.

ಕೋಟ್ಯಾನುಕೋಟಿ ವರ್ಷಗಳಷ್ಟು ಹಿಂದೆ ಇದ್ದ ವಾತಾವರಣದ ಸ್ವರೂಪವನ್ನು ಕಟ್ಟಿಕೊಟ್ಟ ಹರಳುಗಳಿವು. ಆ ಕಾಲದಲ್ಲಿದ್ದ ನೀರಿನ ಕಣದ ಗುರುತುಗಳೂ ಈ ಹರಳುಗಳಿಂದಲೇ ಸಿಕ್ಕವು.

ನೀರು ಎಲ್ಲಿಂದ ಬಂತು?

ಇಷ್ಟಾಗಿಯೂ ನೀರು ಎಲ್ಲಿಂದ ಬಂತು ಎಂಬ ಬಗ್ಗೆ ನಿರ್ದಿಷ್ಟ ನಿಖರ ಮಾಹಿತಿ ಇಲ್ಲ.

ನೀರಿನ ಮೂಲ ಭೂಮಿಯಲ್ಲ ಎಂದು ಒಂದಿಷ್ಟು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಆಕಾಶವೇ ನೀರಿನ ಮೂಲ. ಉಲ್ಕೆಗಳೂ, ಧೂಮಕೇತುಗಳೂ, ನೀರಿನ ಕಣಗಳನ್ನು ಭೂಮಿಗೆ ತಂದವು ಎನ್ನುತ್ತಾರೆ.

ಇದಕ್ಕೆ ವಿರುದ್ಧವಾದ ವಾದವೂ  ಇದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಆವಿ, ಇಂಗಾಲದ ಡೈಆಕ್ಸೈಡ್ ಜೊತೆ ಬೆರೆತು ದಟ್ಟ ಮೋಡಗಳು ಆದವು. ಭೂಮಿ ಸುತ್ತ ಹರಡಿಕೊಂಡವು. ಆ ಮೋಡಗಳೇ ಭೂಮಿಗೆ ನೀರು ಹರಿಸಿದವು ಎನ್ನುವುದು ಆ ಇನ್ನೊಂದು ವಾದ.

ನೀರಿನ ಕುರಿತ ಈ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ನೀರು ಹೇಗೆ ಭೂಮಿಗೆ ಬಂತೋ ಏನೋ ಬಹುದೊಡ್ಡ ಬದಲಾವಣೇಯನ್ನೇ ತಂತು…

ಮಳೆ ಮಳೆ ಮಳೆ..

ಆಗ ಭೂಮಿಗೆ 400 ಕೋಟಿ ವರ್ಷಗಳು. ಭೂಮಿ ಸುತ್ತ ಹರಡಿಕೊಂಡಿದ್ದ ಮೋಡಗಳ ಮೇಲೆ ಗುಡುಗು ಮಿಂಚುಗಳು ಅಪ್ಪಳಿಸಿ ಮಳೆ ಸುರಿಯಲಾರಂಭಿಸಿತು.

ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ. ಲಕ್ಷಾಂತರ ವರ್ಷಗಳ ಕಾಲ ಮಳೆ ಸುರಿದೇ ಸುರಿಯಿತು. ಭೂಮಿ ಒಂದು ಜಲವಿಶ್ವವಾಗಿ ಪರಿವರ್ತನೆಗೊಂಡಿತು. ಭೂಮಿಯ 90 ಭಾಗ ನೀರು ತುಂಬಿಕೊಂಡು ಅಗಾಧ ಸಾಗರವಾಗಿ ಹೋಯಿತು.

ಇಷ್ಟಾಗಿಯೂ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದವು. ಈ ಅಗಾಧ ಸಾಗರದಲ್ಲಿ ಅಲ್ಲಲ್ಲಿ ಇದ್ದ ದ್ವೀಪಗಳಿಂದ ಲಾವಾರಸ ಉಕ್ಕುವುದು ನಿಂತಿರಲಿಲ್ಲ. ಈ ಲಾವಾರಸ ಸಾಗರ ಸೇರಿ ಕಬ್ಬಿಣಾಂಶ ಹೆಚ್ಚಿ ನೀರು ಹಸಿರು ಬಣ್ಣಕ್ಕೆ ತಿರುಗಿತು. ಮತ್ತೊಂದೆಡೆ ಇಂಗಾಲದ ಡೈಆಕ್ಸೈಡ್ ಆಕಾಶವನ್ನು ದಟ್ಟವಾಗಿ ಆವರಿಸಿಕೊಂಡಿದ್ದರಿಂದ ಕೆಂಪಾಗಿ ಕಾಣುತ್ತಿತ್ತು.

ಭೂಮಿಯ ವಾತಾವರಣದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿತ್ತು. 100 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶವಿತ್ತು. ಲಾವಾರಸ ಬೆರೆತು ಭೂಮಿಯನ್ನು ಆವರಿಸಿದ ನೀರು ಆಸಿಡ್‌ನಷ್ಟು ತೀಕ್ಷ್ಣವಾಗಿತ್ತು. ಸುಮಾರು50 ಕೋಟಿ ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.

ಈ ವಿಷಮ ವಾತಾವರಣ ಮುಂದಿನ ಬೆಳವಣಿಗೆಗೆ ವೇದಿಕೆ ರೂಪಿಸುತ್ತಿದ್ದವು ಎನ್ನಬಹುದೇನೊ. ಇನ್ನೂ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿಗಳು ಹೊಸರೀತಿಯ ಶಿಲಾಪದರವನ್ನು ರೂಪಿಸುತ್ತ, ಭೂಖಂಡಗಳ ಸೃಷ್ಟಿಕಾರ್ಯದಲ್ಲಿ ನಿರತವಾಗಿದ್ದವು. ಭೂಮಿ ಅಗಾಧವಾದ, ಅನನ್ಯವಾದ ಗ್ರಹ ಆಗುವ ಕಾಲ ಹತ್ತಿರವಾಗುತ್ತಿತ್ತು.

ಭೂಮಿ ಹುಟ್ಟಿ 100 ಕೋಟಿ ವರ್ಷಗಳಾಗುವ ಹೊತ್ತಿಗೆ ಎಲ್ಲಿ ನೋಡಿದರೂ ನೀರೆ ತುಂಬಿಕೊಂಡಿತ್ತು. ಜೊತೆಗೆ ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮುತ್ತಲೇ ಇದ್ದವು ಕೂಡ. ಈ ಪ್ರಕ್ರಿಯೆಯಲ್ಲಿ ಒಂದು ವಿಧದ ಶಿಲೆ ಸೃಷ್ಟಿಯಾಯಿತು. ಅದೇ ಗ್ರಾನೈಟ್ ಶಿಲೆ. ಇದೇ ಭೂಮಿಯ ಪದರವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತು.

ಭೂಮಿ ಜಲಾವೃತವಾಗಿ, ಸಾಗರದೊಳಗೆ ಜ್ವಾಲಾಮುಖಿಗಳು ಸಿಡಿಯುತ್ತಿದ್ದಾಗ ಶಿಲೆಯೊಂದು ರಚನೆಯಾಗಲಾರಂಭಿಸಿತು. ಕುದಿವ ನೀರು, ಲಾವಾರಸದ ಮಿಶ್ರಣದಿಂದ ಅತ್ಯಂತ ಕಠಿಣವಾದ ಭಾರದ ಶಿಲೆ ರಚನೆಯಾಯಿತು. ಅದೇ ಗ್ರಾನೈಟ್.

ದಕ್ಷಿಣ ಆಫ್ರಿಕಾದ ಸ್ಥಳವೊಂದರಲ್ಲಿ ಪತ್ತೆಯಾದ ಬಂಡೆಗಳು ಗ್ರಾನೈಟ್ ಶಿಲೆಯ ರಹಸ್ಯ ಬಿಚ್ಚಿಟ್ಟವು. ಈ ಬಂಡೆಗಳ ಅಧ್ಯಯನದಿಂದ ಗ್ರಾನೈಟ್ ಭೂಮಿಯ ತೊಗಟೆಯಾಗಿ ವಿಸ್ತರಿಸಿಕೊಂಡಿದ್ದು ವಿಜ್ಞಾನಿಗಳಿಗೆ ತಿಳಿದುಬಂತು.

ಹೀಗೆ ಗ್ರಾನೈಟ್ ಭೂಮಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿತು. ಕಾಲಾನಂತರದಲ್ಲಿ ಅಲ್ಲಲ್ಲಿ ಬಿರುಕುಬಿಟ್ಟು ಸಾಗರದ ನೀರು ಭೂಗರ್ಭ ಸೇರಲಾರಂಭಿಸಿತು.

250 ಕೋಟಿ ವರ್ಷಗಳು

ಈ ಹೊತ್ತಿಗೆ ಸಾಗರಗಳ ಪಾರುಪತ್ಯೆ ಕಡಿಮೆ ಆಯಿತು. ಭೂಮಿಯ ಬಹುಪಾಲು ಮೇಲ್ಮೈ ಘನರಚನೆಗಳಿಂದ ಕೂಡಿತ್ತು. ಭೂಖಂಡಗಳ ಉಗಮವಾಗಿತ್ತು. ಇದೇ ವೇಳೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಕೂಡ ಕಾಣಿಸಿಕೊಂಡಿತು. ಭೂಮಿಯಲ್ಲಿ ನೀರು ಕಾಣಿಸಿಕೊಂಡ ಕೋಟ್ಯಾಂತರ ವರ್ಷಗಳಲ್ಲಿ ಏಕಕೋಶ ಜೀವಿಗಳು ಕಾಣಿಸಿಕೊಂಡವು. ಅವುಗಳಿಂದ ಆಮ್ಲಜನಕ ಉತ್ಪತ್ತಿಯಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಅಂತಹ ಜೀವಿಗಳು ಇದ್ದವೆ ಎಂಬ ಸಾಧ್ಯತೆ ಹೊಳೆದದ್ದೆ ಸ್ಟ್ರೊಮೆಟೊಲೈಟ್‌ಗಳನ್ನು ನೋಡಿದ ಮೇಲೆ.

1 ಅಡಿ ಅಗಲ, 2 ಅಡಿ ಎತ್ತರದ ಕಲ್ಲಿನಂತೆ ಕಾಣುವ  ರಚನೆಗಳೇ ಸ್ಟ್ರೊಮೆಟೊಲೈಟ್‌ಗಳು. ಬ್ಯಾಕ್ಟೀರಿಯಲ್ ಆಲ್ಗೇಗಳಿಂದ ಆದ ಇವು ಭೂಮಿಗೆ ಉಸಿರುಕೊಟ್ಟ ಜೀವಿಗಳು.

ಫಿಲಿಫ್ ಫ್ಲೈಫರ್ಡ್ ಎಂಬ ವಿಜ್ಞಾನಿ ಇವುಗಳನ್ನು ಪತ್ತೆ ಮಾಡಿದ್ದು. ನಂತರ ವಿಜ್ಞಾನಿಗಳು ಸ್ಟ್ರೊಮೆಟೊಲೈಟ್‌ಗಳ ಪಳೆಯುಳಿಕೆಗಳನ್ನು ಗುರುತಿಸಿದರು. ಏಕಕೋಶ ಜೀವಿಗಳ ಹಲವು ಪದರಗಳಿಂದಾದ ಈ ಸ್ಟ್ರೊಮೆಟೊಲೈಟ್‍ಗಳು ಭೂಮಿಯ ಬಹುಭಾಗಗಳಲ್ಲಿ ಹರಡಿಕೊಂಡಿದ್ದು ಕಂಡು ಬಂತು.

ದ್ಯುತಿಸಂಶ್ಲೇಷಣೆಯಿಂದ ವಾತಾವರಣಕ್ಕೆ ಆಮ್ಲಜನಕ ಪೂರೈಸಿದ ಮೊದಲ ಜೀವಿಗಳಿವು. ಬರೋಬ್ಬರಿ  200 ಕೋಟಿ ವರ್ಷಗಳು ನಿರಂತರವಾಗಿ ಈ ಪ್ರಕ್ರಿಯೆ ನಡೆಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಬೇ ಬೀಚಿನಲ್ಲಿ ಇವತ್ತಿಗೂ ಸ್ಟ್ರೊಮೆಟೊಲೈಟ್‌ಗಳು ನೋಡಲು ಸಿಗುತ್ತವೆ.

220  ಕೋಟಿ ವರ್ಷಗಳಿಂದ 170 ಕೋಟಿ ವರ್ಷಗಳ ವರೆಗೆ ಸಾಗರದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕ ತುಂಬಿತು.

200 ಕೋಟಿ ವರ್ಷಗಳ ಆಮ್ಲಜನಕೀಕರಣದಿಂದ ಭೂಮಿ ನೀಲಿ ಬಣ್ಣಕ್ಕೆ ತಿರುಗಿತು.

ನೀಲಿ ಆಕಾಶ, ನೀಲಿ ಸಾಗರ….

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: