Tag Archives: ಪೋಸ್ಕೊ

ಪೋಸ್ಕೊ ಕಣ್ಣು ಕಪ್ಪತ್ತ ಗುಡ್ಡದ ಮೇಲೆ

-ಹು.ಬಾ. ವಡ್ಡಟ್ಟಿ

ಗದಗ ತಾಲೊಕಿನ ಬಿಂಕದ ಕಟ್ಟಿಯಿಂದ ಮುಂಡರಗಿ ತಾಲೊಕಿನ ಶಿಂಗಟಾಲೊರು ವೀರಭದ್ರೇಶ್ವರ ದೇವಸ್ಧಾನದವರೆಗೆ ಹಬ್ಬಿರುವ  ಕಪ್ಪತ್ತ ಗುಡ್ಡದ ಸಾಲು 64.ಕಿ.ಮಿ.ಉದ್ದ, 4 ರಿ0ದ 5 ಕಿ.ಮಿ. ಅಗಲ, ಹಾಗೂ 18000 ಹೆಕ್ಟೇರ್ ಪ್ರದೇಶದಲ್ಲಿ ಕಾಡು ವ್ಯಾಪಿಸಿದೆ. “ಎಪ್ಪತ್ತ ಗುಡ್ಡ ನೋಡುವದಕ್ಕಿಂತ ಕಪ್ಪತ್ತ ಗುಡ್ಡ ನೋಡಬೇಕು,”  “ಸಸ್ಯಕಾಶಿ” ಎ0ಬ  ವಿಶೇಷಣೆಯನ್ನು ಸಹ ಹೊಂದಿದೆ. “ಕಪ್ಪತ್ತ ಮಳೆಯೇ ಕಾರಿ ಮಳೆಯೇ,” ಎಂಬ ಮಳೆಯನ್ನು ಸ್ತುತಿಸುವ ಜಾನಪದ ಹಾಡುಗಳು ಕಪ್ಪತ್ತ ಗಿರಿಯು ಮಳೆಯನ್ನು ತರುತ್ತದೆ ಎನ್ನುವುದಾಗಿದೆ.

ಇಂತಹ ಸಸ್ಯ ಸಂಕುಲದ ಕಪ್ಪತ್ತ ಗುಡ್ಡವು ಅಪಾರವಾದ ಜೀವ ವೈವಿಧ್ಯವುಳ್ಳ ಔಷಧೀಯ ಸಸ್ಯವನ್ನು ಒಳಗೊಂಡಿದೆ. ಕನಿಷ್ಠ 1800 ರಷ್ಟು ಔಷಧೀಯ ಸಸ್ಯ ಪ್ರಬೇಧಗಳು ಈ ಬೆಟ್ಟ ಸಾಲಿನಲ್ಲಿ ಇವೆಯೆಂದು ಅಂದಾಜು ಮಾಡಲಾಗಿದೆ. ಇ0ತಹ ವಿಶೇಷವಾದ ಸಸ್ಯ ರಾಶಿಯ ಕಪ್ಪತ್ತ ಗುಡ್ಡವು ಅಪಾರವಾದ ಖನಿಜ ಸಂಪತ್ತು ಹೊಂದಿದ್ದು, ಅದರಲ್ಲಿ ಬಹುಮುಖ್ಯವಾಗಿ ಕಬ್ಬಿಣದ ಅದಿರು, ಬಂಗಾರ ನಿಕ್ಷೇಪವು ಇದೆ. ಕಬ್ಬಿಣದ ಗಣಿಗಾರಿಕೆ 1970 ದಶಕದಲ್ಲಿಯೇ ಪ್ರಾರ0ಭವಾಗಿದ್ದರೂ, ಅದಕ್ಕಿಂತಲೂ ಮುಂಚಿತವಾಗಿ 1830ರ ದಶಕದಲ್ಲಿ ಬ್ರೀಟಿಷ ಭೂವಿಜ್ಞಾನಿ ನಿಲ್ಬೋಲ್ಟ್ ಎ0ಬುವನು ಬಂಗಾರದ ನಿಕ್ಷೇಪವಿರುವದನ್ನು ಪತ್ತೆ ಹಚ್ಚಿದ್ದರಿಂದಾಗಿ ಬ0ಗಾರದ ಗಣಿಗಾರಿಕೆಯು ಪ್ರಾರ0ಭಗೊಂಡಿತ್ತು. ನಷ್ಟದ ಪರಿಣಾಮವಾಗಿ ಆಗ ಆ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಅದರ ಕುರುಹುಗಳನ್ನು ಈಗಲು  ನೋಡಬಹುದಾಗಿದೆ.

ಕಬ್ಬಿಣ ಅದಿರಿನ  ಅಕ್ರಮ ಗಣಿಕಾರಿಗೆಯು 2005ರ ನಂತರ ಚುರುಕುಗೊಂಡು, ಹಳೆಯ ಅದಿರಿನ ಗಣಿಗಾರಿಕೆಯ ಪ್ರದೇಶದಿಂದ ಹರಿದು ಬಂದ ಮಣ್ಣನ್ನು ಸಾಗಿಸುವ ನೆಪದಲ್ಲಿ ಅವ್ಯಾಹತವಾಗಿ  ಕಪ್ಪತ್ತ ಗುಡ್ಡದ ಕಬ್ಬಿಣದ ಅದಿರನ್ನು ಲೂಟಿ ಹೊಡೆಯುವ ಅಕ್ರಮ ಕೆಲಸಕ್ಕೆ ರಾಜಕೀಯ ಪುಡಾರಿಗಳು ಕೈ ಹಚ್ಚಿರುವದು ಕಪ್ಪತ್ತ ಗುಡ್ಡದ ನಾಶಕ್ಕೆ ಕಾರಣವಾಗಿದೆ.

ಲಕ್ಷಾಂತರ ಟನ್ನ ಕಬ್ಬಿಣದ ಅದಿರಿನ ಮೇಲೆ ಕಣ್ಣು ಹಾಕಿರುವ ಅಕ್ರಮ ಗಣಿ ಲೂಟಿಕೋರರು ಪೋಸ್ಕೊ ಸ್ಟೀಲ್ ಕಂಪನಿಯನ್ನು ಈ ಭಾಗದಲ್ಲಿ ಸ್ಧಾಪಿಸಿ ಕಪ್ಪತ್ತ ಗುಡ್ಡವನ್ನು ಸರ್ವನಾಶ ಮಾಡುವ ತಂತ್ರವನ್ನು ಹೆಣೆದು ಅದಕ್ಕೆ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದೆ.

ಜೀವ ವೈವಿಧ್ಯತೆಯ ಸಸ್ಯಸಂಕುಲ, ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿರುವ ಅದಿರಿನ ನಿಕ್ಷೇಪವನ್ನು ಅಭಿವೃದ್ದಿ ನೆಪದಲ್ಲಿ ಲೂಟಿ ಮಾಡಲು  ಹೊರಟಿರುವ ಅಭಿವೃದ್ದಿಯ ಹರಿಕಾರರು ಪೋಸ್ಕೊ ಸ್ಟೀಲ್  ಈ ಭಾಗಕ್ಕೆ ಬರುವುದರಿಂದ ಗುಡ್ಡಕ್ಕೆ ಯಾವದೇ ಧಕ್ಕೆಯಾಗುವದಿಲ್ಲವೆಂದು ಸುಳ್ಳಿನಮಾತು ಹೇಳುವುದು ಎಷ್ಟುರ ಮಟ್ಟಿಗೆ ಸರಿ? ಹಾಗಾದರೇ ಪೋಸ್ಕೊಗೆ ಕಬ್ಬಿಣದ  ಅದಿರನ್ನು ಎಲ್ಲಿ0ದ ತ0ದು ಸ್ಟೀಲ್ ಉತ್ಪಾದನೆ ಮಾಡುವ ಹುನ್ನಾರ ನಡೆಸಿದ್ದಾರೆ ಎನ್ನುವ ಒಳಗುಟ್ಟನ್ನು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳು  ಬಾಯಿಬಿಡಲೇ ಇಲ್ಲಾ.

ಪೋಸ್ಕೊ ಸ್ಧಾಪನೆಯಾಗುತ್ತಿದ್ದ ಹಳ್ಳಿಗುಡಿಯಿಂದ ಕಪ್ಪತ್ತ ಗುಡ್ಡದ ಅಂತರ ಬರೀ 10ಕಿ ಮೀ ಆಗುತ್ತಿತ್ತು. ಪೋಸೊ ಉಗುಳಲಿದ್ದ ವಿಷಕಾರಿ ಹೊಗೆಯು ಕಪ್ಪತ್ತ ಗುಡ್ಡದ ಔಷಧೀಯ ಸಸ್ಯಗಳ ಮೇಲೆ ದುಷ್ಪರಿಣಾಮ ಬೀರುವದಿಲ್ಲವೆನ್ನುವದು ಯಾವ ಗ್ಯಾರಂಟಿ? ಸೂಕ್ಷ್ಮ ಸಸ್ಯಸಂಕುಲವು ನಾಶ ಹೊಂದಿದರೆ ನಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ. ಪರಿಸರ ಸಂರಕ್ಷಣೆಯ ಅರಿವು ಇಲ್ಲದೆ ಬರೀ ಹಸಿರು ನೋಟುಗಳು ಮೇಲೆ ಕಣ್ಣಿಟ್ಟರೆ ಪರಿಸರ ಯಾವ ಲೆಕ್ಕ? ಎಲ್ಲವೂ ಬರೀ ಹಣದ ಲೆಕ್ಕಾಚಾರವಾಗುತ್ತದೆ.

(ಚಿತ್ರಗಳು: ಲೇಖಕರವು)

ಪೋಸ್ಕೊ ಕ೦ಪನಿಯ ರಾಜಕಾರಣ – ಹೋರಾಟದ ದಾರಿಯಲ್ಲಿ ಹಲವು ಪ್ರಶ್ನೆಗಳು – ಕೆಲವೇ ಉತ್ತರಗಳು

ಹು.ಬಾ.ವಡ್ಡಟ್ಟಿ

ಪೋಸ್ಕೊ ಸ್ಟೀಲ್ ಕ೦ಪನಿಯ ಸ್ಥಾಪನೆಯು ಗದಗ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೊರಕವಾಗಿರುತ್ತದೆ. ಅಭಿವೃದ್ಧಿಯ ನಕ್ಷೆಯಲ್ಲಿ ಗದಗ ಜಿಲ್ಲೆ ಗುರುತಿಸಲ್ಪಡುತ್ತದೆ. ಅಭಿವೃದ್ದಿ ನಾಗಾಲೋಟವು ಯಾವುದೇ ಅಡೆ-ತಡೆಯಿಲ್ಲದೇ ಸಾಗುತ್ತದೆ ಅನ್ನುವ ಪು೦ಕಾನುಪು೦ಕವಾದ ತಲೆ ಬುಡವಿಲ್ಲದ ವಾದಗಳನ್ನು ಬಿಜೆಪಿ ಪರವಾಗಿರುವ ದಲ್ಲಾಳಿಗಳು ಬಿಡತೊಡಗಿದರು. ಗದಗ ಜಿಲ್ಲೆಯಲ್ಲಿ ಕಳೆದ 50 ವರ್ಷಗಳಲ್ಲಿ ದೊಡ್ಡ ಗಾತ್ರದ ಕೈಗಾರಿಕೆಗಳು ಸ್ಧಾಪಿಸಲ್ಪಟ್ಟಿರಲಿಲ್ಲ. ಪೋಸ್ಕೊ ಕ೦ಪನಿಯಿ೦ದಾಗಿ ಕೈಗಾರಿಕಾ ಬೆಳವಣಿಗೆ ಹಾಗೂ ಜನರ ಜೀವನಮಟ್ಟ ಸುಧಾರಿಸುತ್ತದೆ. 2-3 ಚೀಲ ಗೋಧಿ-ಜೋಳ ಬೆಳೆಯುವ ಭೊಮಿಯನ್ನು ಮಾರಿದರೆ ಲಕ್ಷ-ಲಕ್ಷಗಟ್ಟಲೇ ಹಣವನ್ನು ಪಡೆದುಕೊ೦ಡು ಆರಾಮವಾಗಿ ಐಷಾರಾಮಿ ಜೀವನ ಸಾಗಿಸಬಹುದೆ೦ಬ ಕಲ್ಪನೆಯನ್ನು ಬಡ ರೈತರಲ್ಲಿ ಕನಸೆ೦ಬ೦ತೆ ದಲ್ಲಾಳಿಗಳು, ಪುಡಿ ರಾಜಕಾರಣಿಗಳು ಬಿತ್ತ ತೊಡಗಿದರು.

ಜಿಲ್ಲೆಯಲ್ಲಿಯೇ ದೊಡ್ಡ ಕೈಗಾರಿಕೆಗಳು ಎ೦ದರೆ ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್, ಲಕ್ಷ್ಮೇಶ್ವರದ ನೂಲಿನ ಗಿರಣಿ, ಮತ್ತು ಮು೦ಡರಗಿ ತಾಲ್ಲೂಕಿನಲ್ಲಿರುವ ವಿಜಯನಗರ ಶುಗರ್‍ಸ ಸಕ್ಕರೆ ಕಾರ್ಖಾನೆ. ಹುಲಕೋಟಿಯ ಸ್ಪಿನ್ನಿ೦ಗ್ ಜಿನ್ನಿ೦ಗ್ ಮಿಲ್ ಮತ್ತು ಲಕ್ಷ್ಮೇಶ್ವರದ ನೂಲಿನ ಗಿರಣಿ ಸಹಕಾರಿ ಸ೦ಘದ್ದು ಆಗಿದ್ದರೆ, ವಿಜಯನಗರ ಶುಗರ್‍ಸ ಖಾಸಗಿ ಒಡೆತನದಲ್ಲಿದೆ. ಹೀಗಾಗಿ ಪೋಸ್ಕೊ ಸ್ಟೀಲ ಉತ್ಪಾದನಾ ಕ೦ಪನಿಯು ದೊಡ್ಡ ಸ೦ಚಲನವನ್ನು ಉ೦ಟು ಮಾಡುತ್ತದೆ ಅನ್ನುವ ಭ್ರಮೆಗಳು ಯುವ ರೈತರಲ್ಲಿ ಪುಟಿಯ ತೊಡಗಿದವು.

ಆದರೆ ವಾಸ್ತವಾ೦ಶಗಳೇ ಬೇರೆಯಾಗಿರುವದನ್ನು ಕಾಣಬಹುದಾಗಿದೆ . 50 ವರ್ಷಗಳಲ್ಲಿ ಮಾಡದಿರುವ ಅಭಿವೃದ್ದಿಯನ್ನು ಸರಕಾರ ಈಗಲೆ ಕೈಗೆತ್ತಿಕೊ೦ಡಿದ್ದು ಏಕೆ? ಎಂಬ ಸಹಜ ಪ್ರಶ್ನೆಯು ತಾನಾಗಿಯೇ ಬರುತ್ತದೆ. ಹಾಗಾದರೇ, ಅದರ ಹಿನ್ನೆಲೆಯ ಕುರಿತಾಗಿ ನೋಡಬೇಕಿದೆ.

ಮು೦ಡರಗಿ ತಾಲ್ಲೂಕಿನ ಹಳ್ಳಿಗುಡಿ, ಜ೦ತ್ಲಿ-ಶಿರೊರು, ಹರ್ಲಾಪುರ ಗ್ರಾಮಗಳು ಮಳೆಯಾಧಾರಿತ ಫಲವತ್ತಾದ ಕೃಷಿ ಭೂಮಿಯನ್ನು ಹೊ೦ದಿದೆ. ಕಪ್ಪು ಮಣ್ಣಿನ ಫಲವತ್ತಾದ ಈ ನೆಲವು ರೈತರ ಬದುಕಿಗೆ ಸಾವಿರಾರು ವರ್ಷಗಳಿ೦ದ ಅನ್ನ ನೀಡಿ ಸಲಹುತ್ತಾ ಬ೦ದಿದೆ. ಇಲ್ಲಿಯೇ ಪೋಸ್ಕೊ ಸ್ಧಾಪಿಸಲು ಸರಕಾರ ಹೊರಟ್ಟಿದ್ದು ಏಕೆ? ಈ ಪ್ರದೇಶದ ಹಳ್ಳಿಗುಡಿಯನ್ನು ಹೊರತುಪಡಿಸಿದರೆ ಜ೦ತ್ಲಿ-ಶಿರೊರು, ಹರ್ಲಾಪುರ ಪೇಠಾಲೊರು ಮತ್ತು ಮೇವು೦ಡಿ ಶಿ೦ಗಟಾಲೊರು ಏತ ನೀರಾವರಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಏತ ನೀರಾವರಿಯ ಕಾಮಗಾರಿಯು ತೀವ್ರಗತಿಯಲ್ಲಿ ಇರುವದರಿ೦ದ ನೀರಾವರಿಗೆ ಪೈಪಲೈನ ಮೂಲಕ ತರುತ್ತಿರುವ ನೀರನ್ನು ಪೋಸ್ಕೊ ಕ೦ಪನಿಗೆ.ಯಾವದೇ ಅಡೆ-ತಡೆಯಿಲ್ಲದೆ ಕೊಡಬಹುದು. ಇದು ನೀರಾವರಿ ಹೆಸರಲ್ಲಿ ಕ೦ಪನಿಗೆ ನೀರು ಕೊಟ್ಟರೆ ಯಾರೂ ಗಮನಿಸುವದಿಲ್ಲಾ, ಹೇಗೊ ನಡೆಯುತ್ತದೆ, ಅನ್ನುವ ಹುನ್ನಾರ ಸರಕಾರದ ಮನ:ಪಟಲದಲ್ಲಿ ಇತ್ತು ಅನಿಸುತ್ತದೆ.

ಅಲ್ಲದೇ. ನೀರಾವರಿಯ ಕಾಮಗಾರಿಯ ತೀವ್ರತೆಯು ರೈತರಿಗೆ ನೀರು ಕೊಡುವ ಕಡೆಗಿ೦ತಲು ಕ೦ಪನಿಗೆ.ನೀರು ನೀಡುವ ಹುನ್ನಾರವನ್ನು ಸರಕಾರವು ನಡೆಸಿತ್ತೆ? ಎಂಬ ಸ೦ಶಯವೂ ಈ ಸಂದರ್ಭದಲ್ಲಿ ಕಾಡದೇ ಇರದು?

ಬರಿ ನೀರಿನ ಪ್ರಶ್ನೆಯೋ? ರೈತನ ಬದುಕಿನ ಪ್ರಶ್ನೆಯೋ?
ಶಿ೦ಗಟಾಲೊರು ಎತ ನೀರಾವರಿಯ ಬ್ಯಾರೇಜನಲ್ಲಿ ನೀರಿನ ಸ೦ಗ್ರಹಣಾ ಸಾಮರ್ಥ್ಯವು 18.5 ಟಿಎ೦ಸಿಯುಷ್ಟು ಇದ್ದು, ಇದರಲ್ಲಿ 2 ಟಿಎ೦ಸಿ ಕುಡಿಯುವ ನೀರಿನ ಬಳಕೆಗೆ ಎ೦ದು ಅ೦ದಾಜು ಮಾಡಲಾಗಿದೆ. ಉಳಿದ 7.5 ಟಿಎ೦ಸಿ ನೀರಿನಲ್ಲಿ ಹೊವಿನಹಡಗಲಿ, ಮು೦ಡರಗಿ, ಕೊಪ್ಪಳ, ಹಗರಿಬೊಮ್ಮನಹಳ್ಳಿಯ ತಾಲ್ಲೂಕಿನ ರೈತರ ಕೃಷಿ ಭೂಮಿಗೆ ನೀರಾವರಿ ಮಾಡಲು ಬಳಸಬಹುದಾಗಿದೆ. ಇದರಿ೦ದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಗದಗ ಜಿಲ್ಲೆಯ ಮು೦ಡರಗಿ ತಾಲ್ಲೂಕು, ಮತ್ತು ಕೊಪ್ಪಳ ಜಿಲ್ಲೆಯ ರೈತರ ಹೊಲಗಳಿಗೆ 2.5 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಆಗುತ್ತದೆ.

ಪೋಸ್ಕೊ ಕ೦ಪನಿಯ ಸ್ಥಾಪನೆ ಆಗುವ ಸಾಧ್ಯತೆಯಿದ್ದರೆ ಕನಿಷ್ಠ 2 ರಿ೦ದ 3 ಟಿಎ೦ಸಿ ನೀರನ್ನು ಪೋಸ್ಕೊ ಕ೦ಪನಿಯು ಬಳಸುತ್ತಿತ್ತು. ರೈತರ ಭೂಮಿಯ ನೀರಾವರಿ ಸಲುವಾಗಿ ಇರುವ 7.5 ಟಿಎ೦ಸಿ ನೀರಿನಲ್ಲಿ 2 ರಿ೦ದ 3 ಟಿಎ೦ಸಿ ನೀರಿಗೆ ಕನ್ನ ಬಿದ್ದಿದ್ದರೆ ರೈತರ ಭೂಮಿ ನೀರಾವರಿ ಮಾಡಲು ಬರೀ 4.5 ಟಿಎ೦ಸಿಯಷ್ಟೇ ನೀರು ಉಳಿಯುತ್ತಿತ್ತು. ಅಭಿವೃದ್ದಿಯ ಕುರಿತು ಮಾತನಾಡುವವರು ಒ೦ದೆಡೆ ರೈತರ ಸಾವಿರಾರು ಎಕರೆ ಭೂಮಿಯುನ್ನು ಕಸಿದುಕೊಳ್ಳುತ್ತಿದ್ದರೆ ಅದರ ಜೊತೆ-ಜೊತೆಯಲ್ಲಿಯೇ ರೈತರ ಭೂಮಿಗೆ ಬೇಕಿರುವ ನೀರನ್ನೂ ಕಸಿದುಕೊ೦ಡಿದ್ದರೆ ರೈತರ ಬದುಕಿಗೆ ಕ೦ಬ ಮತ್ತು ಕೈಯ ಹೊಡೆತಗಳು ಏಕಕಾಲಕ್ಕೆ ಬೀಳುತ್ತಿತು. ರೈತರ ಬದುಕು ಮತ್ತಷ್ಟು ಹೈರಾಣ ಆಗುವ ದು:ಸ್ಧಿತಿಗೆ ತ೦ದೊಡ್ಡುತ್ತಿತ್ತು. ಇದು ರೈತರನ್ನು ದ್ವಿಮುಖವಾಗಿ ಕೊಳ್ಳೆ ಹೊಡೆಯುವ ತ೦ತ್ರವಾಗಿ ಸರಕಾರವು ಯೋಚಿಸುತ್ತಿರಬಹುದೇ ಅನಿಸದೇ ಇರಲಾರದು. ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು “ಪೋಸ್ಕೊಗೆ ನೀರು ಕೊಡುವದಿಲ್ಲ” ಎನ್ನುವ ಹೇಳಿಕೆ, “ಆಲಮಟ್ಟಿ ನೀರು ಕೋಡುತ್ತೇವೆ” ಎಂಬ ಮರುಹೇಳಿಕೆ, “ನೀರೇ ಕೊಡುವದಿಲ್ಲ” ಎನ್ನುವ ಮರುಮರುಹೇಳಿಕೆ ಕ೦ಪನಿಯು ಮಳೆಯನ್ನು ಆಶ್ರಯಿಸಿ ಅ೦ತರ್ಜಲವನ್ನು ಬಳಸಿಕೊಳ್ಳಲಿ ಅನ್ನುವದು ಸರಕಾರದ ದ್ವಂದ್ವ ನೀತಿಯನ್ನು ಪ್ರತಿಪಾದಿಸುತ್ತದೆ.

ಎರಿ ಇದ್ದವ ದೊರೆ.
ಎಷ್ಟೆಲ್ಲಾ ತಾಪಪ್ರಯ, ಮಳೆಯಿಲ್ಲದೆ ಬ೦ದ ಬೆಳೆಯಲ್ಲಿಯೇ ಸ೦ತೃಪ್ತಿ ಕಾಣುವ ರೈತರ ಬದುಕು, ಸಮೃದ್ಧಿಯಿಲ್ಲದೇ ಇದ್ದರೂ ಸಮಾಧಾನದ ಬದುಕು ಸಾಗಿಸಲು ಅಡ್ಡಿಯಿಲ್ಲಾ ಎಂಬ ಭಾವದಲ್ಲಿ ಬದುಕು ಸಾಗಿಸುತ್ತಾರೆ. ಕಪ್ಪು ನೆಲದ ಎರಿ ಮಣ್ಣು ಫಲವತ್ತತ್ತೆಯನ್ನು ಹೊ೦ದಿದ್ದು, ಇದು ಭಾರತದಲ್ಲಿ ಫಲವತ್ತಾದ ಮಣ್ಣು ಎ೦ದು ಕೃಷಿ ತಜ್ಞರು ಗುರುತಿಸುತ್ತಾರೆ. ಜನಪದಗಾರರು ಹಳ್ಳಿಗಾಡಿನ ಸೊಗಡಿನಲ್ಲಿ “ಎರಿ ಇದ್ದಾ೦ದ ದೊರಿ” ಅನ್ನುವ ನುಡಿಗಟ್ಟು ಕಪ್ಪುಮಣ್ಣು ಸುಖ-ಸಮೃದ್ಧಿ ಫಸಲನ್ನು ತರುತ್ತದೆ, ಇದರಿ೦ದ ರಾಜಮಹಾರಾಜರ೦ತೆ ಬಾಳಬಹುದು ಎಂದು ಪ್ರತಿಪಾದಿಸುತ್ತದೆ. ವಾಸ್ತವವಾಗಿ ಅದು ನಿಜ ಕೂಡಾ ಆಗಿದೆ.

ಇ೦ತಹ ಸಮೃದ್ದಿಯಾಗಿ ಬೆಳೆ ಬೆಳೆಯಲು ಯೋಗ್ಯವಾದ ಭೂಮಿಗೆ ಕೈಗಾರಿಕಾ ಸಚಿವ ನಿರಾಣಿಯವರ ಹಳ್ಳಿಗುಡಿಯಲ್ಲಿ ಭೂಸ್ವಾಧೀನಕ್ಕೆ ಒಳಪಡಲಿರುವ ಭೂಮಿಯು ಬ೦ಜರು ಆಗಿದೆ ಎಂಬ ಹೇಳಿಕೆಯು ಅವರ ಕೃಷಿ ಭೂಮಿಯ ಬಗೆಗಿನ ಅಜ್ಞಾನವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ, ಅದು  ಹಾಸ್ಯಾಸ್ಪದ ಕೂಡಾ ಆಗಿದೆ. ಅದಕ್ಕೆ ಉತ್ತರವೆ೦ಬ೦ತೆ ಜಗದ್ಗುರು ಡಾ|| ತೊ೦ಟದ ಸಿದ್ದಲಿ೦ಗ ಮಹಾಸ್ವಾಮಿಗಳು, ಪೋಸ್ಕೊ ಕ೦ಪನಿಯ ಭೂಸ್ವಾಧೀನಕ್ಕೆ ವಶಪಡಿಸಿಕೊಳ್ಳಲಿದ್ದ ಹಳ್ಳಿಗುಡಿ ಭೂಮಿಯಲ್ಲಿ ಅಡ್ಡಾಡಿ, “ಈ ಭೂಮಿ ಬ೦ಜರು ಅಲ್ಲ, ಫಲವತ್ತಾದ ಭೂಮಿಯನ್ನು ಹೊ೦ದಿದೆ, ಸಮೃದ್ಧ ಬೆಳೆ ಬರುತ್ತದೆ,” ಎನ್ನುವದನ್ನು ಮಾಧ್ಯಮದವರ ಎದುರು ತೋರಿಸಿಕೊಟ್ಟರು,

ಆನ೦ತರವೇ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ ಭೂಮಿಯ ಬಗೆಗಿನ ಅಜ್ಞಾನದ ಅರಿವು ಉ೦ಟಾಗಿ “ಇಲ್ಲಾ, ಇಲ್ಲ. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿ೦ದ ಬ೦ಜರು ಎಂಬ ಪದ ಬಳಕೆ ಮಾಡಿದ್ದೇನೆ. ಅದರ ಬದಲು ಅದು ನೀರಾವರಿ ಭೂಮಿ ಅಲ್ಲ,” ಎಂದು ಒತ್ತಿ ಹೇಳ ತೊಡಗಿದರು.

(ಮುಂದುವರೆಯುವುದು…)

ಚಿತ್ರಗಳು : ಲೇಖಕರವು

Gwangyang Steelworks

ಕೂಡ್ಲಿಗಿಗೆ ಪೋಸ್ಕೊ ಬೇಡ, ಗುಡಿಕೈಗಾರಿಕೆಗಳು ಬೇಕು.

ಪ್ರಜಾವಾಣಿ (ವಾಚಕರವಾಣಿ 24.08.2011)ಯ ಬಿ.ಎಂ ಪ್ರಭುದೇವ ಎಂಬುವವರ ಪತ್ರದಲ್ಲಿ ಪೋಸ್ಕೊ ಕೂಡ್ಲಿಗಿಗೆ ಬರಲಿ ಎಂಬ ಆಶಯ ವ್ಯಕ್ತವಾಗಿತ್ತು. ಕೂಡ್ಲಿಗಿಗೆ ಪೋಸ್ಕೋ ಕಂಪನಿ ಬರುತ್ತದೆಯಂತೆ, ಅದಕ್ಕಾಗಿ ಭೂಮಿಯನ್ನು ಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತದೆಯಂತೆ ಮುಂತಾದ ಗಾಳಿ ಮಾತುಗಳು ಈ ಭಾಗದಲ್ಲಿ ಪ್ರಚಲಿತದಲ್ಲಿವೆ. ಅದೇನೇ ಇರಲಿ, ಈಗ ಪ್ರಶ್ನೆ ಏಳುವುದು ಪೋಸ್ಕೊ ಬಂದಾಕ್ಷಣ ಕೂಡ್ಲಿಗಿಯ ಸಮಗ್ರ ಅಭಿವೃದ್ಧಿಯಾಗುತ್ತದೆಯೆ ಎನ್ನುವುದು. ಹಾಗೆ ಅಂದುಕೊಂಡರೆ ಅದೊಂದು ಭ್ರಮೆ. ಕಾರಣ ಆ ಬೃಹತ್ ಕಂಪನಿ ಸ್ಥಳೀಯ ಉತ್ಪಾದನೆಯನ್ನಾಧರಿಸಿ ನಡೆಯುವುದಿಲ್ಲ. ಬದಲಾಗಿ ಇಲ್ಲಿಯ ಭೂಮಿ, ನೀರು, ವಿದ್ಯುತ್, ಮಾನವ ಸಂಪನ್ಮೂಲ ಬಳಸಿಕೊಂಡು ತನ್ನ ರಾಕ್ಷಸೀ ಹೊಟ್ಟೆಯನ್ನು ತುಂಬಿಸಿಕೊಳ್ಳುವಂತದ್ದು.

ಹಾಗಾಗಿ ಕಾರ್ಖಾನೆ ಸ್ಥಾಪನೆಯಾದರೆ, ಸ್ಥಾಪಿತ ಸ್ಥಳದ ಸುತ್ತಮತ್ತ ಒಂದಷ್ಟು ಅಂಗಡಿ ಮುಗ್ಗಟ್ಟುಗಳು, ಕೆಲವು ಜನರಿಗೆ ಗೇಟು ಕಾಯುವ ಕೆಲಸ, ಉGwangyang Steelworksಳಿದಂತೆ ಒಂದಷ್ಟು ಕೆಳದರ್ಜೆಯ ಕೆಲಸಗಳು ಸಿಗುವುದನ್ನು ಬಿಟ್ಟರೆ ಅದರಿಂದ ಕೂಡ್ಲಿಗಿ ತಾಲೂಕಿಗೆ ದೊಡ್ಡ ಉಪಕಾರವಾಗದು. ಆದರೆ ಅದು ಉಂಟು ಮಾಡುವ ದಮನಕಾರಿ ಪರಿಣಾಮಗಳನ್ನು ಮಾತ್ರ ಕೂಡ್ಲಿಗಿ ಜನತೆ ಸಮಾನವಾಗಿ ಅನುಭವಿಸಬೇಕಾಗುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಬೇಕಿಲ್ಲ. ಬಳ್ಳಾರಿ ಜಿಲ್ಲೆ ತೋರಣಗಲ್ಲು ಸಮೀಪದ ಜಿಂದಾಲ್‌ನ ಸುತ್ತಮುತ್ತಲ ಹಳ್ಳಿಗಳು ರೋಗಿಷ್ಟಗಳಾಗಿ ನರಳುತ್ತಿರುವುದನ್ನು ನೋಡಿದರೆ ತಿಳಿಯುತ್ತದೆ.

ಈ ಹೊತ್ತು ಕೂಡ್ಲಿಗಿಗೆ ಬೇಕಾಗಿರುವುದು ಪೋಸ್ಕೊದಂತಹ ರಾಕ್ಷಸಿ ಕಂಪನಿಗಳಲ್ಲ, ಬದಲಾಗಿ ಗಾಂಧೀಜಿ ಹೇಳಿದ ಗುಡಿ ಕೈಗಾರಿಕೆಗಳು. ಈ ನೆಲೆಯಲ್ಲಿ ಕೂಡ್ಲಿಗಿಯ ನಿಧಾನಗತಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸಬಹುದು. ಕೂಡ್ಲಿಗಿ ಹಿಂದುಳಿದ ತಾಲೂಕುಗಳಲ್ಲಿ ಒಂದು. ಇದು ಎರಡೂವರೆ ಲಕ್ಷ ಜನಸಂಖ್ಯೆ, 217 ಹಳ್ಳಿಗಳ, ಬೆರಳೆಣಿಕೆಯ ಪಟ್ಟಣಗಳ ತಾಲೂಕು. ಇಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ. ಈ ಚರ್ಚೆ ಇಂದು ಅಗತ್ಯ.

ತಾಲೂಕಿನ ಹೊಸಹಳ್ಳಿ ಜೋಗಿಹಳ್ಳಿ ಭಾಗದಲ್ಲಿ ಶೇಂಗ ಪ್ರಮುಖ ಬೆಳೆ. ಸರಕಾರ ಎಣ್ಣೆ ಮಿಲ್ಲುಗಳನ್ನು ಸ್ಥಾಪಿಸಿದರೆ ಶೇಂಗ, ಸೂರ್ಯಕಾಂತಿ, ಎಳ್ಳು, ಮುಂತಾದ ಎಣ್ಣೆಕಾಳುಗಳ ಬೆಳೆಗಾರರನ್ನೂ ಒಳಗೊಂಡಂತಾಗುತ್ತದೆ. ಅಂತೆಯೇ ನಿಂಬಳಗೆರೆ ಮುಂತಾದ ಕಡೆ ರೇಶ್ಮೆ ಬೆಳೆ ಹೆಚ್ಚಾಗಿದೆ. ಇಲ್ಲಿ ರೇಶ್ಮೆ ಗೂಡುಗಳನ್ನು ಮಾರಲು ದೂರದ ರಾಮನಗರಕ್ಕೆ ಒಯ್ಯುತ್ತಾರೆ. ಈ ರೇಶ್ಮೆ ಬೆಳೆಗಾರರನ್ನು ಆಶ್ರಯಿಸಿ ರೇಶ್ಮೆ ನೂಲು ತೆಗೆವ, ರೇಶ್ಮೆ ಸೀರೆಗಳನ್ನು ನೇಯುವ ಗುಡಿ ಕೈಗಾರಿಕೆಯನ್ನು ಸ್ಥಾಪಿಸಬೇಕಿದೆ. ಅಂತೆಯೇ ಕೂಡ್ಲಿಗಿಯಲ್ಲಿ ಎಥೇಚ್ಚವಾಗಿ ಹತ್ತಿ ಬೆಳೆಗಾರರಿದ್ದಾರೆ. ಹಾಗಾಗಿ ಸರಕಾರ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಅಗತ್ಯವಿದೆ. ಉಜ್ಜಿನಿ ಮುಂತಾದ ಭಾಗಗಳಲ್ಲಿ ಕುರಿ ಸಾಕಣೆಯೂ, ಕುರಿ ಹುಣ್ಣೆಯಿಂದ ಕಂಬಳಿ ನೇಯ್ಗೆಯೂ ಇದೆ. ಇಲ್ಲಿ ಕಂಬಳಿ ನೇಕಾರರಿಗೆ ಅನುಕೂಲವಾಗುವಂತಹ ಕೈಮಗ್ಗಗಳನ್ನು ಸ್ಥಾಪಿಸಬೇಕಿದೆ. ಅಂತೆಯೇ ಕಂಬಳಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಬೇಕಿದೆ.

ಕೂಡ್ಲಿಗಿ ತಾಲೂಕು ಹುಣಸೆ ವ್ಯಾಪಾರಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿ. ಈ ಹುಣಸೆ ವ್ಯಾಪಾರದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕಿದೆ. ಗುಡೇಕೋಟೆ ಭಾಗದ ಸೀತಾಫಲ ಹಣ್ಣುಗಳು ದೇಶವಿದೇಶಗಳಿಗೆ ರಪ್ತಾಗುತ್ತಿವೆ. ಈ ಸೀತಾಫಲದ ಬೆಳೆಯ ಅಭಿವೃದ್ದಿಗಾಗಿ ತೋಟಗಾರಿಕೆ ಇಲಾಖೆಯವರು ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಗುಡೇಕೋಟೆಯ ಜೇನು ತುಂಬಾ ಪ್ರಸಿದ್ಧ. ಇದನ್ನು ಆಧರಿಸಿ ಜೇನು ಸಾಕಣೆಕೇಂದ್ರವಾಗಲಿ ಇದಕ್ಕೆ ಪೂರವಾದ ವಾತವರಣವನ್ನು ಸೃಷ್ಟಿಸಬೇಕು. ಈಗ ಮೆಕ್ಕೆಜೋಳದ ಬೆಳೆ ಹೆಚ್ಚಾಗಿದೆ. ಮೆಕ್ಕೆಜೋಳದ ಉಪ ಉತ್ಪನ್ನಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕಿದೆ. ಕೊಟ್ಟೂರಿನ ಮಂಡಕ್ಕಿ (ಪುರಿ) ಹೆಚ್ಚು ಪ್ರಸಿದ್ಧಿ. ಹಾಗಾಗಿ ಸರಕಾರ ಮಂಡಕ್ಕಿ ಭಟ್ಟಿಗಳನ್ನು ಸ್ಥಾಪಿಸಿ, ಪೂರಕವಾದ ಮಾರುಕಟ್ಟೆಯನ್ನು ಸೃಷ್ಠಿಸಬೇಕು.

ಈಗ ಕೂಡ್ಲಿಗಿಯಲ್ಲಿ ಹೈನುಗಾರಿಕೆ ಹೆಚ್ಚಾಗುತ್ತದೆ. ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನೆರವಾಗುವಂತಹ ಯೋಜನೆಗಳನ್ನು ಸರಕಾರ ಕೈಗೊಳ್ಳಬೇಕಿದೆ.  ಚರ್ಮೊಧ್ಯವನ್ನು ಅವಲಂಬಿಸಿದವರೂ ಹೆಚ್ಚಿದ್ದಾರೆ, ಹಾಗಾಗಿ ಚರ್ಮೊದ್ಯಮವನ್ನೂ ಅಭಿವೃದ್ಧಿಪಡಿಸಬೇಕಿದೆ. ಹೀಗೆ ವೃತ್ತಿ ಕಸಬನ್ನು ಆಶ್ರಯಿಸಿದ ನೇಕಾರರು, ಬಡಿಗೇರರು, ಕಂಬಾರರು, ಕಮ್ಮಾರರು, ಬುಟ್ಟಿ ಎಣೆವ ಕೊರವರು, ವಡ್ಡರು (ಬೋವಿಗಳು), ಜೀರರು(ಹೂಮಾರುವವರು), ಮಡಿವಾಳರು ಮುಂತಾದ ವೃತ್ತಿ ಕಸಬಿನವರು ಆಯಾ ಕಸಬನ್ನು ನಂಬಿ ಬದುಕುವಂತಹ ಯೋಜನೆಗಳನ್ನು ರೂಪಿಸಬೇಕಿದೆ. ಹಾಗಾದಲ್ಲಿ ಕೂಡ್ಲಿಗಿ ತಾಲೂಕಿನ ಸಮಗ್ರ ಅಭಿವೃದ್ಧಿ ನಿಧಾನಗತಿಯಲ್ಲಿ ಆಗುವ ಸಾದ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಇಲ್ಲಿ ಹೇಳಿದ ಅಭಿವೃದ್ಧಿಯ ಮಾದರಿ ಕೇವಲ ಕೂಡ್ಲಿಗಿ ತಾಲೂಕಿಗೆ ಮಾತ್ರ ಅನ್ವಯವಾಗದೆ, ಎಲ್ಲಾ ತಾಲೂಕುಗಳ ಅಭಿವೃದ್ಧಿಯ ನೆಲೆಯಲ್ಲೂ ಅನ್ವಯಿಸಬಹುದು. ಈ ಬಗೆಯ ಅಭಿವೃದ್ಧಿಯ ಮಾದರಿಯಿಂದ ಜನರು ತಾವು ನಂಬಿದ, ತಮಗೆ ತಿಳಿದ ವೃತ್ತಿ ಕಸಬುಗಳಲ್ಲಿ ಹೊಸ ನಂಬಿಕೆ ಬರುತ್ತದೆ. ಅವರುಗಳಲ್ಲಿ ತಮ್ಮ ಬದುಕಿನ ಕ್ರಮದ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ತಮ್ಮ ಮಕ್ಕಳನ್ನು ಆಯಾ ಕಸಬುಗಳಲ್ಲಿ ಮುಂದುವರೆಸಲು ದೈರ್ಯವೂ ಬರುತ್ತದೆ. ಅವರುಗಳಿಗೆ ಅದಕ್ಕಾಗಿ ಪ್ರತ್ಯೇಕ ತರಬೇತಿಗಳ ಅಗತ್ಯವೂ ಇರುವುದಿಲ್ಲ, ಅದು ಅವರ ಬದುಕಿನ ಭಾಗವೇ ಆಗಿರುತ್ತದೆ. ಈ ಬಗೆಯ ಯೋಜನೆಗಳಲ್ಲಿ ಜನರು ಸ್ವತಃ ಪಾಲುದಾರರಾಗುತ್ತಾರೆ. ಕೇವಲ ಗುಡಿಕೈಗಾರಿಕೆಯಲ್ಲಿ ಕೆಲಸ ಮಾಡುವವರಲ್ಲದೆ, ಆ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವವರೂ ಸಹ ಆ ಕೈಗಾರಿಕೆಯ ಫಲಾನುಭವಿಗಳಾಗುತ್ತಾರೆ. ಆಗ ಆಯಾ ಬೆಳೆ, ಆಯಾ ಕಸುಬನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ.

ಮುಖ್ಯವಾಗಿ ಇಲ್ಲಿ ಹೇಳಿದ್ದನ್ನು ಸರಕಾರ ಮಾಡಲು ಕಾನೂನು ರೀತ್ಯವಾಗಿಯೇ ಹಲವಾರು ಅವಕಾಶಗಳಿವೆ.  ಅಂತೆಯೇ ಇದಕ್ಕಾಗಿ ಕೆಲವು ಹೊಸ ಕಾನೂನು ಕಾಯ್ದೆಗಳನ್ನೂ ಮಾರ್ಪಡಿಸುವ ಅಗತ್ಯವೂ ಇದೆ. ಹೀಗೆ ಹೇಳಿದ ಎಲ್ಲಾ ಬಗೆಯ ಗುಡಿ ಕೈಗಾರಿಕೆಗಳು ಇದ್ದಾಗಲೂ ಅವುಗಳನ್ನು ನಿರ್ವಹಿಸುವ ಅಧಿಕಾರಿಗಳಿಗೆ ಜನರೊಂದಿಗೆ ಬೆರೆಯುವ, ಜನರ ಶ್ರಮಸಂಸ್ಕೃತಿಯನ್ನು ಗೌರವಿಸುವ ಮತ್ತು ಆ ಮೂಲಕ ಕ್ರಿಯಾಶೀಲವಾಗಿ ದುಡಿವ ಮನಸ್ಸು ಇಲ್ಲದಿದ್ದರೆ ಅವೂ ಸಹ ಜಿಡ್ಡುಗಟ್ಟುತ್ತವೆ.

ಕೂಡ್ಲಿಗಿಯಲ್ಲಿ ಯಾವುದೇ ಗುಡಿ ಕೈಗಾರಿಕೆಗಳು ಇಲ್ಲವೆಂತಲ್ಲ. ಇದ್ದರೂ ಇಲ್ಲದಂತಿರುವುದು ಇಂದಿನ ಸಮಸ್ಯೆ. ಅಂತೆಯೇ ಅವುಗಳ ವ್ಯಾಪ್ತಿಯೂ ಬಹುಜನರನ್ನು ಒಳಗೊಳ್ಳುವಷ್ಟು ಹಿರಿದಾಗಿಲ್ಲ. ಅದರಲ್ಲೂ ಇದ್ದ ಕೆಲವಾದರೂ ಎಣ್ಣೆ ಗಿರಣಿ, ಹತ್ತಿ ಗರಣಿಗಳು ಖಾಸಗಿ ಧಣಿಗಳ ಕೈವಶದಲ್ಲಿವೆ. ಕೂಡ್ಲಿಗಿ ತಾಲೂಕಿನಲ್ಲಿ ಹೆಚ್ಚಿನ ಅರಣ್ಯ ಭೂಮಿಯಿದೆ, ಅದನ್ನು ಪುಡಾರಿ ನಾಯಕರುಗಳು ರೈತರ ಹೆಸರಲ್ಲಿ ಸಾಗುವಳಿ ಭೂಮಿಯನ್ನಾಗಿ ಸೃಷ್ಟಿಸಿ ಕೊಳ್ಳೆಹೊಡೆಯುತ್ತಿದ್ದಾರೆ. ಇದನ್ನು ತಪ್ಪಿಸಿ ಕುರುಚಲು ಕಾಡಿನಂತಿರುವ ಅರಣ್ಯ ಭೂಮಿಯನ್ನು ಸಮೃದ್ಧ ಕಾಡನ್ನಾಗಿ ಬೆಳೆಸಬೇಕಿದೆ. ನೀರು ತಡೆಯ ಗೋಕಟ್ಟೆಗಳನ್ನು ಹೆಚ್ಚಾಗಿ ನಿರ್ಮಿಸಿ, ಆ ಮೂಲಕ ಅಂತರ್ಜಲ ಹೆಚ್ಚಿಸುವ ಅಗತ್ಯವಿದೆ.

ಈ ಮಾತುಗಳನ್ನು ತಾಲೂಕಿನ ಶಾಸಕರಾದ ಬಿ.ನಾಗೇಂದ್ರ ಅವರು, ತಹಶೀಲ್ದಾರರು, ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು, ಸದಸ್ಯರುಗಳು, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕಿವಿಯಲ್ಲಿ ಹಾಕಿಕೊಂಡು ಕ್ರಿಯಾಶೀಲವಾಗಬೇಕೆನ್ನುವುದು ನನ್ನ ಆಶಯ. ಹೀಗೆ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಮಾತ್ರ ಕೂಡ್ಲಿಗಿ ತಾಲೂಕು ಭವಿಷ್ಯದಲ್ಲಿ ಅಭಿವೃದ್ಧಿಯಾಗಲು ಸಾದ್ಯವಿದೆ. ಇದಾಗದ ಹೊರತು ಇನ್ನೂ ಒಂದು ಶತಮಾನ ಕಳೆದರೂ ಹಿಂದುಳಿದ ತಾಲೂಕಿನ ಅಣೆಪಟ್ಟಿಯನ್ನು ಅಳಿಸಲಾಗದು.

-ಅರುಣ್ ಜೋಳದಕೂಡ್ಲಿಗಿ.
ಸಂಪರ್ಕ: ಜೋಳದಕೂಡ್ಲಿಗಿ, ಕೂಡ್ಲಿಗಿ ತಾಲೂಕು, ಬಳ್ಳಾರಿ ಜಿಲ್ಲೆ ಪಿನ್-583134 ಮೊ:9901445702

ಚಿತ್ರಕೃಪೆ : ವಿಕಿಪೀಡಿಯ