Tag Archives: ಪ್ರಜಾವಾಣಿ

ಡಿನೋಟಿಫಿಕೇಷನ್ ಹಗರಣದ ಸುಳಿಯಲ್ಲಿ ಪ್ರಜಾವಾಣಿ

– ರಮೇಶ್ ಅರಕಲಗೂಡು

ಪತ್ರಕರ್ತರು ಗಣಿ ಮಾಲೀಕರಿಂದ ಲಕ್ಷಗಟ್ಟಲೆ ಕಪ್ಪ ಪಡೆದದ್ದು ಬೆಳಕಿಗೆ ಬಂತು. ಅನೇಕ ಹಗರಣಗಳಲ್ಲಿ ಪತ್ರಕರ್ತರು ದಳ್ಳಾಳಿಗಳ ಕೆಲಸ ಮಾಡಿದ್ದೂ ಕಂಡುಬಂತು. ಪತ್ರಕರ್ತರು ಬರಿಯ ಪತ್ರಕರ್ತರಾಗಿ ಉಳಿಯದೆ ರಾಜಕಾರಣಿಗಳ ಅನೈತಿಕ ದಂಧೆಗಳಲ್ಲಿ ಪಾಲುದಾರರಾಗಿರುವುದು ಇವತ್ತಿನ ಕಹಿ ಸತ್ಯ. ಈಗ ಹೊರಬಂದಿದೆ ಕನ್ನಡದ ವಿಶ್ವಾಸಾರ್ಹ ಪತ್ರಿಕೆ ಪ್ರಜಾವಾಣಿಯ ಮಾಲೀಕರು ಪಾಲ್ಗೊಂಡಿರುವ ಡಿನೋಟಿಫಿಕೇಷನ್ ಹಗರಣ. ಇದು ಅತ್ಯಂತ ಆಘಾತಕಾರಿ ಸುದ್ದಿ.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಆಲಂ ಪಾಷ ಎಂಬುವವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದಾವೆಯ ಕುರಿತು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಈ ಪ್ರಕರಣದಲ್ಲಿ ನಿರಾಣಿಗೆ ಕ್ಲೀನ್ ಚಿಟ್ ನೀಡಿದ್ದರೂ, ಈ ದೂರಿನಲ್ಲಿ ಉಲ್ಲೇಖವಾಗಿದ್ದ ಇನ್ನೆರಡು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ವರದಿ ನೀಡಿದ್ದಾರೆ.

ಲೋಕಾಯುಕ್ತ ನಗರ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ 77 ಪುಟಗಳ ತನಿಖಾ ವರದಿ ಹಾಗು 2000 ಪುಟಗಳ ದಾಖಲೆಯನ್ನು ಮೊನ್ನೆ (21/5/12) ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪಪಟ್ಟಿಯನ್ನು ಸ್ವೀಕರಿಸುವ ಸಂಬಂಧ ಇದೇ ತಿಂಗಳ 31ರಂದು ತೀರ್ಪು ನೀಡುವುದಾಗಿ ನ್ಯಾಯಮೂರ್ತಿ ಎಚ್.ಎಸ್.ಸುಧೀಂದ್ರ ರಾವ್ ತಿಳಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ.

ತನಿಖಾಧಿಕಾರಿ ನೀಡಿರುವ ವರದಿಯ ಕೆಲವು ಅಂಶಗಳು ಹೀಗಿವೆ:

“ಬೆಂಗಳೂರು ಉತ್ತರ ತಾಲ್ಲೂಕು ಜಾಲಾ ಹೋಬಳಿ ಹೂವಿನಾಯಕನಹಳ್ಳಿ ಗ್ರಾಮದ ಸರ್ವೆ ನಂಬರುಗಳಾದ 124, 125, 126ರಲ್ಲಿ ಒಟ್ಟು 20 ಎಕರೆ ಜಮೀನಿಗೆ ಲೇಟ್ ಶ್ರೀ ಗುರುಸ್ವಾಮಿ ಕೆ.ಎನ್., ಲೇಟ್ ಶ್ರೀ ಕೆ.ಎನ್.ನೆಟ್ಟಕಲ್ಲಪ್ಪ, ಲೇಟ್ ಶ್ರೀಮತಿ ಜಾಂಬವತಿರವರುಗಳು ಪೌತಿ ಖಾತೆದಾರರಾಗಿರುತ್ತಾರೆ. ಶ್ರೀ ಕೆ.ಎನ್.ಹರಿಕುಮಾರ್, ಶ್ರೀ ಕೆ.ಎನ್.ತಿಲಕ್ ಕುಮಾರ್ ಮತ್ತು ಶ್ರೀ ಕೆ.ಎನ್.ಶಾಂತಕುಮಾರ್ ರವರುಗಳು ಶ್ರೀಮತಿ ಜಾಂಬವತಿ ಮತ್ತು ಶ್ರೀ ಕೆ.ಎನ್.ನೆಟ್ಟಕಲ್ಲಪ್ಪರವರುಗಳ ಮಕ್ಕಳಾಗಿದ್ದು, ಶ್ರೀ ಗುರುಸ್ವಾಮಿಯವರ ಮೊಮ್ಮಕ್ಕಳಾಗಿರುತ್ತಾರೆ ಮತ್ತು ಎಂ.ಆರ್.ಸಂಖ್ಯೆ 6/1996-97 ದಿ.6-3-2009ರ ಮೂಲಕ ಸದರಿ ಸ್ಥಿರಾಸ್ತಿಗೆ ಹಕ್ಕುದಾರರಾಗಿರುತ್ತಾರೆ. ದಿ. 26-12-2006ರಂದು ಸದರಿ ಜಮೀನನ್ನು ಸರ್ಕಾರವು ಹಾರ್ಡ್‌ವೇರ್ ಪಾರ್ಕ್ ಸ್ಥಾಪನೆಗಾಗಿ ಕೆಐಎಡಿ ಆಕ್ಟ್ 1966ರ ಕಲಂ 28(1) ಪ್ರಕಾರ ಅಧಿಸೂಚನೆ ಹೊರಡಿಸಿರುತ್ತದೆ. ದಿನಾಂಕ. 31-8-2007ರಂದು ಮೇಲ್ಕಂಡ ಖಾತೆದಾರರು ಸ್ವತಃ ತಮ್ಮ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ತಿಳಿಸಿ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬಾರದೆಂದು ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. ಆದರೂ ಸಹ ವಿಶೇಷ ಭೂಸ್ವಾಧೀನಾಧಿಕಾರಿಯು ಸದರಿ ಆಕ್ಷೇಪಣೆಗಳನ್ನು ಮಾನ್ಯ ಮಾಡದೇ ದಿ.4-3-2010ರಂದು ಕೆಐಎಡಿ ಆಕ್ಟ್ 1966ರ ಕಲಂ 28(4)ರ ಪ್ರಕಾರ ಅಂತಿಮ ಅಧಿಸೂಚನೆಗೆ ಒಳಪಡಿಸಿರುತ್ತಾರೆ. ತದನಂತರ ದಿನಾಂಕ 2-7-2008ರಂದು ಕೆಐಎಡಿ ಆಕ್ಟ್ 1966ರ ಕಲಂ 28(8)ರ ಪ್ರಕಾರ ಸದರಿ ಜಮೀನನ್ನು ಕೆಐಎಡಿಬಿಗೆ ಹಸ್ತಾಂತರಿಸುತ್ತದೆ. ಭೂಮಾಲೀಕರು ಸ್ವತಃ ಹೊಟೇಲ್ ಉದ್ದಿಮೆಯನ್ನು ಸ್ಥಾಪಿಸುವುದಾಗಿ ಸರ್ಕಾರಕ್ಕೆ ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ, ತಮ್ಮ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಕೋರಿರುತ್ತಾರೆ.

“ಈ ಪ್ರಕರಣದ ತನಿಖಾ ಸಮಯದಲ್ಲಿ ವಿವಿಧ ಇಲಾಖೆಗಳಿಂದ ಪಡೆದುಕೊಂಡ ಕಡತಗಳ ಪರಿಶೀಲನೆಯಿಂದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬೆಂಗಳೂರು ಉತ್ತರ ತಾಲ್ಲೂಕು, ಜಾಲಾ ಹೋಬಳಿ, ಹೂವಿನಾಯ್ಕನಹಳ್ಳಿ ಸರ್ವೆ ನಂ. 124, 124 ಮತ್ತು 126ರಲ್ಲಿ ಒಟ್ಟು 20 ಎಕರೆ ಜಮೀನನ್ನು ಕಾನೂನುಬಾಹಿರವಾಗಿ ಡಿ-ನೋಟಿಫಿಕೇಷನ್ ಮಾಡಿರುವ ಬಗ್ಗೆ ದಾಖಲಾತಿಗಳಿಂದ ಸಾಬೀತಾಗುತ್ತದೆ. ಹೇಗೆಂದರೆ, ಸದರಿ ಜಮೀನು ಕೆಐಎಡಿ ಆಕ್ಟ್ 1966ರ ಕಲಂ 28(8)ರ ಪ್ರಕಾರ ಅಧಿಸೂಚನೆಯಾಗಿತ್ತು. ಆದ ಕಾರಣ ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಹಾಗು ಅಪರ ಕಾರ್ಯದರ್ಶಿಗಳು ಈ ಜಮೀನನ್ನು ಡಿನೋಟಿಫಿಕೇಷನ್ ಮಾಡಲು ಬರುವುದಿಲ್ಲವೆಂದು ಕಡತದ ಟಿಪ್ಪಣಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಶ್ರೀ ಬಿ.ಎಸ್.ಯಡಿಯೂರಪ್ಪ, ಹಿಂದಿನ ಮುಖ್ಯಮಂತ್ರಿಯವರು ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು ಕೆಐಎಡಿ ಆಕ್ಟ್ 1966ರ ಕಲಂ 4ರಡಿಯಲ್ಲಿ ಪ್ರಶ್ನಿತ ಜಮೀನನ್ನು ಭೂಸ್ವಾಧೀನದಿಂದ ಕೈಬಿಡಲು ಅನುಮೋದಿಸಿರುತ್ತಾರೆ. ಈ ಸಲಹೆಯನ್ನು ಆರೋಪಿ-1 ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಅನುಮೋದಿಸಿರುತ್ತಾರೆ. ಈ ಪ್ರಕಾರ ಅಧಿಕಾರಿಗಳು ಅಭಿವೃದ್ಧಿ ಶುಲ್ಕ ಮತ್ತು ಮಂಡಳಿಯ ಸೇವಾಶುಲ್ಕವನ್ನು ಲೆಕ್ಕಿಸಿ ಅಧಿಕಾರಿಗಳ ಮುಖಾಂತರ ಕಡತವು ಶ್ರೀ ಬಿ.ಎಸ್.ಯಡಿಯೂರಪ್ಪ ಹಿಂದಿನ ಮುಖ್ಯಮಂತ್ರಿಗಳಿಗೆ ಮಂಡನೆಯಾಗಿರುತ್ತದೆ. ಅಂದಿನ ಮುಖ್ಯಮಂತ್ರಿಗಳು ಇನ್ನೊಮ್ಮೆ ಚರ್ಚಿಸಲು ಸೂಚಿಸಿದಾಗ ಆಗ ಅಧಿಕಾರಿಗಳು ಅಭಿವೃದ್ಧಿ ಶುಲ್ಕವನ್ನಾಗಲೀ, ಮಂಡಳಿಯ ಸೇವಾ ಶುಲ್ಕವನ್ನಾಗಲೀ ಅಥವಾ ಭೂಮಾಲೀಕರು ತಮ್ಮ ಯೋಜನಾ ವರದಿಯನ್ನು ಎಸ್‌ಎಚ್‌ಎಲ್‌ಸಿಸಿಗೆ ಸಲ್ಲಿಸಿ ಅಲ್ಲಿಂದ ಮಂಜೂರಾತಿ ಪಡೆದರೆ ಮಾತ್ರ ಸದರಿ ಜಮೀನನ್ನು ಭೂಮಾಲೀಕರಿಗೆ ಮರುಹಂಚಿಕೆ ಮಾಡಬಹುದೆಂದು ಸಲಹೆ ನೀಡಿರುತ್ತಾರೆ. ಇದರಲ್ಲಿ ಅಂದಿನ ಮುಖ್ಯಮಂತ್ರಿಗಳು ಭೂಮಾಲೀಕರಿಂದ ತಮ್ಮ ಸ್ವಾರ್ಥಕ್ಕಾಗಿ ಯಾವುದೇ ರೀತಿಯಲ್ಲಿ ಲಂಚ ಪಡೆದ (ಪೆಕ್ಯೂನಿಯರಿ ಅಡ್ವಾಂಟೇಜ್) ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಿಲ್ಲದಿದ್ದರೂ ಸಹ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತನ್ನ ನಿರಂಕುಶ ಹಾಗು ಸ್ವೇಚ್ಛಾನುಸಾರದ ನಿರ್ಣಯದೊಂದಿಗೆ ಭೂಮಾಲೀಕರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ 20 ಎಕರೆ ಜಮೀನನ್ನು ಕೆಐಎಡಿ ಕಾಯ್ದೆಯ ಉಪಬಂಧಗಳನ್ನು ವ್ಯತಿರಿಕ್ತಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಸೇವಾಶುಲ್ಕ ರೂ. 2,64,00,000-00 ಅಥವಾ ಅಭಿವೃದ್ಧಿ ಶುಲ್ಕ 6 ಕೋಟಿ ರೂಗಳನ್ನು ಮನ್ನಾ ಮಾಡಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, 1988ರ ಕಲಂ 13(1)(ಡಿ) ಸಬ್ ಕ್ಲಾಸ್ 1 ಮತ್ತು 3 ಸಹವಾಚ 13(2)ರ ಪ್ರಕಾರ ಅಪರಾಧವೆಸಗಿರುವುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುತ್ತದೆ……”

ತನ್ನ ಜಮೀನು ನೋಟಿಫಿಕೇಷನ್ ಆದಾಗ ಯಾವುದೇ ಭೂಮಾಲೀಕರು ಅದನ್ನು ಸಕಾರಣಗಳಿಗೆ ಡಿನೋಟಿಫಿಕೇಷನ್ ಮಾಡಲು ಅರ್ಜಿ ಸಲ್ಲಿಸುವುದು ತಪ್ಪೇನಲ್ಲ. ಅದು ಅನೈತಿಕವೂ ಅಲ್ಲ. ಆದರೆ ಸರ್ಕಾರದ ಮೇಲೆ ಯಾವ ಪ್ರಮಾಣದ ಒತ್ತಡ ಬಿದ್ದಿದೆಯೆಂಬುದನ್ನು ಗಮನಿಸಿ. ಸ್ವತಃ ಮುಖ್ಯಮಂತ್ರಿಗಳೇ ಅಭಿವೃದ್ಧಿ ಶುಲ್ಕ ಮತ್ತು ಸೇವಾಶುಲ್ಕ ಪಡೆದು ಇನ್ನೊಮ್ಮೆ ಚರ್ಚಿಸಲು ಸೂಚಿಸುತ್ತಾರೆ. ಅದರಂತೆ ಕಡತಗಳ ಮಂಡನೆಯೂ ಆಗುತ್ತದೆ. ಆದರೆ ಅಂತಿಮವಾಗಿ ಬಿಡಿಗಾಸೂ ಪಡೆಯದೆ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟವನ್ನುಂಟುಮಾಡಿ ಡಿನೋಟಿಫಿಕೇಷನ್ ಮಾಡಲಾಗುತ್ತದೆ.

ತನಿಖಾಧಿಕಾರಿ ಪೆಕ್ಯೂನಿಯರಿ ಅಡ್ವಾಂಟೇಜ್ ಎಂಬ ಪದಬಳಕೆ ಮಾಡಿದ್ದಾರೆ. ಆ ಥರ ಹಣದ ಕೈಬದಲು ವ್ಯವಹಾರ ನಡೆಯದೇ ಇರುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಗಾಬರಿ ಹುಟ್ಟಿಸುವ ಅಂಶವೆಂದರೆ ಅರ್ಜಿದಾರರು ಕರ್ನಾಟಕದ ಎರಡು ಅತ್ಯಂತ ಪ್ರಮುಖ ದಿನಪತ್ರಿಕೆಗಳ (ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್) ಮಾಲೀಕರುಗಳು. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಯಡಿಯೂರಪ್ಪನವರು ಡಿನೋಟಿಫಿಕೇಷನ್ ಮಾಡಿರುವ ಉದ್ದೇಶದ ಹಿಂದೆ ಬೇರೆ ಅಡ್ವಾಂಟೇಜ್‌ಗಳು ಇರಬಹುದು ಎಂಬುದು ಸಾಮಾನ್ಯ ನಾಗರಿಕರೂ ಊಹಿಸಬಲ್ಲರು. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಮೀಡಿಯಾ ಮ್ಯಾನೇಜ್‌ಮೆಂಟ್ ಹೇಗೆ ಹೇಗೆ ಮಾಡಿದರು ಎಂಬುದು ಈ ಕ್ಷೇತ್ರದಲ್ಲಿರುವವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಜನಮಾನಸದಲ್ಲಿ ಪ್ರಭಾವ ಬೀರಬಲ್ಲ ಪ್ರಜಾವಾಣಿಯಂಥ ಪತ್ರಿಕೆಯಿಂದ ಯಡಿಯೂರಪ್ಪ ಯಾವ ಸ್ವರೂಪದ ಲಾಭ ಪಡೆದಿರಬಹುದು? ಇದು ಸದ್ಯಕ್ಕೆ ಊಹೆಯ ವಿಷಯವಷ್ಟೆ. ಲೋಕಾಯುಕ್ತ ನ್ಯಾಯಾಲಯ ತೀರ್ಪಿಗೆ ಕಾದು ನೋಡಬೇಕು.

ವರ್ತಮಾನದಲ್ಲಿ ಇತ್ತೀಚಿಗೆ ಪ್ರಕಟಗೊಂಡ “ದಲಿತ ಸಂಚಿಕೆ: ಓದುಗರ ವಿಶ್ವಾಸವನ್ನು ‘ರಿಫ್ರೆಶ್’ ಮಾಡಿಕೊಳ್ಳುವ ಪ್ರಯತ್ನ” ಲೇಖನದಲ್ಲಿ ಒಂದು ವಿಷಯ ಪ್ರಸ್ತಾಪ ಮಾಡಲಾಗಿತ್ತು. ಯಡಿಯೂರಪ್ಪನವರ ಡಿನೋಟಿಫಿಕೇಷನ್ ಹಗರಣಗಳು ಒಂದರ ಮೇಲೊಂದರಂತೆ ಸರಣಿಯಾಗಿ ಪ್ರಕಟಗೊಳ್ಳುವ ಮೊದಲು ಈ ದಾಖಲೆಗಳು ಮೊದಲು ತಲುಪಿದ್ದೇ ಪ್ರಜಾವಾಣಿ ಕಚೇರಿಯನ್ನು. ಆದರೆ ಅವುಗಳನ್ನು ಸುದ್ದಿ ಮಾಡಲು ನಿರಾಕರಿಸಲಾಯ್ತು. ಸ್ವತಃ ಪತ್ರಿಕೆಯ ಮಾಲೀಕರುಗಳೇ ಡಿನೋಟಿಫಿಕೇಷನ್ ಹಗರಣವೊಂದರಲ್ಲಿ ಪಾಲ್ಗೊಂಡಿರುವಾಗ ಮುಖ್ಯಮಂತ್ರಿಗಳ ಇತರ ಹಗರಣಗಳನ್ನು ಹೇಗೆ ಬಯಲಿಗೆ ತರಲಾದೀತು?

ಪ್ರಜಾವಾಣಿ ದಶಕಗಳಿಂದ ಕನ್ನಡ ಜನರ ಅಂತಃಸಾಕ್ಷಿಯಂತೆ ಕೆಲಸ ಮಾಡಿದ ಪತ್ರಿಕೆ. ನೂರಾರು ಮಂದಿ ಜನಪರ ಪತ್ರಕರ್ತರು ಈ ಪತ್ರಿಕೆಯನ್ನು ಜನಮುಖಿಯಾಗಿ ರೂಪಿಸಿದ್ದಾರೆ. ವಿಶ್ವಾಸಾರ್ಹ ಪತ್ರಿಕೆಯೆಂಬ ಘೋಷಣೆಗೆ ಅನ್ವರ್ಥವಾಗುವಂತೆ ಪತ್ರಿಕೆ ನಡೆದುಕೊಂಡುಬಂದಿದೆ. ಆದರ್ಶಗಳಲ್ಲಿ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟವರು ಇವತ್ತಿಗೂ ನಂಬಬಹುದಾದ ಪತ್ರಿಕೆಯೆಂದರೆ ಅದು ಪ್ರಜಾವಾಣಿಯೇ ಹೌದು.

ಆದರೆ ಈಗ ಅಂಟಿರುವ ಕೆಸರು ಸಾಮಾನ್ಯದ್ದೇನೂ ಅಲ್ಲ. ಅಷ್ಟು ಸುಲಭವಾಗಿ ಕೊಡವಿಕೊಳ್ಳಬಹುದಾದ ಗಲೀಜೂ ಅದಲ್ಲ. ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳ ಮಾಲೀಕರ ನಡುವೆ ಕೆಲ ಪತ್ರಕರ್ತರು ದಲ್ಲಾಳಿಗಳ ಕೆಲಸ ಮಾಡುತ್ತಿರುವುದು ಹೊಸದೇನೂ ಅಲ್ಲ. ಇಂಥ ದಲ್ಲಾಳಿಗಳಿಗೆ ಪ್ರಜಾವಾಣಿ ಮಾಲಿಕತ್ರಯರು ಬಲಿಯಾದರೆ?

ಯಡಿಯೂರಪ್ಪ, ನಿರಾಣಿ ಮೇಲಿರುವ ಆರೋಪಗಳಿಗೆ ಯಾರೂ ಆಘಾತಪಡುವುದೂ ಇಲ್ಲ, ಗಾಬರಿಯಾಗುವುದೂ ಇಲ್ಲ. ಆದರೆ ಪ್ರಜಾವಾಣಿಗೆ ಅಂಟಿಕೊಂಡ ಕಳಂಕ ನಿಜಕ್ಕೂ ಆಘಾತಕಾರಿ. ಸೀಜರನ ಹೆಂಡತಿ ಸಂಶಯಾತೀತಳಾಗಿರಬೇಕು ಎಂಬ ಮಾತು ಬಳಸಿ ಬಳಸಿ ಸವಕಲಾಗಿಹೋಗಿದೆ. ಕರ್ನಾಟಕದ ಹೊಸಪೀಳಿಗೆಯ ಯುವಕ-ಯುವತಿಯರಿಗೆ ಕಣ್ಣೆದುರು ಯಾವ ಆದರ್ಶವೂ ಇಲ್ಲದಂತಾಗುವುದು ಘೋರ. ಇನ್ನೂ ಏನೇನನ್ನು ನಾವು ಕಳೆದುಕೊಳ್ಳುವುದಕ್ಕಿದೆಯೋ? ಯಾರಿಗೆ ಗೊತ್ತು?

ಇದು ಇದೇ ವಿಷಯದ ಬಗ್ಗೆ ಹಿಂದು ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ:

 

ಹೊಸ ಪತ್ರಿಕೆಯ ಸುತ್ತಮುತ್ತ..


– ಪರಶುರಾಮ ಕಲಾಲ್    


ವಿಜಯ ಸಂಕೇಶ್ವರರ ಹೊಸ ಪತ್ರಿಕೆ ರಂಗಕ್ಕಿಳಿಯಲು ದಿನಗಣನೆ ಆರಂಭವಾಗಿವೆ. ಪತ್ರಿಕೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಜಿಲ್ಲಾ ವರದಿಗಾರರು, ಸುದ್ದಿ ಸಂಪಾದಕರು, ಉಪ ಸಂಪಾದಕರು ಎಲ್ಲರೂ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಸುದ್ದಿ ಕಳಿಸುವುದು. ತಿದ್ದುವುದು. ಪೇಜು ಸಿದ್ಧಪಡಿಸುವುದು ಎಲ್ಲಾ ನಡೆಯುತ್ತಿದೆ. ತಾವು ರೂಪಿಸಿದ ಪತ್ರಿಕೆಯನ್ನು ತಾವೇ ನೋಡಿಕೊಂಡು ಡೆಸ್ಕಿನಲ್ಲಿರುವವರು ಸಂತೋಷ ಪಡುತ್ತಿದ್ದಾರೆ.

ಜಿಲ್ಲಾ ವರದಿಗಾರರು, ಹಿರಿಯ ವರದಿಗಾರರು ಯುದ್ಧ ಎದುರಿಸಲು ಸಜ್ಜಾಗಿ ಸೇನಾನಿಗಳಂತೆ ಪೆನ್ನು ಚಾಚಿಯೇ ಕುಳಿತುಕೊಂಡಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳನ್ನು ಹೇಗೆ ಎದುರಿಸಬೇಕೆಂದು ಯೋಜಿಸಲಾಗಿದೆ. ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ ಬರೆಯುವ ‘ಬೆತ್ತಲೆ ಜಗತ್ತು’ ರೀತಿಯಲ್ಲಿ ಹೊಸ ದಿಗಂತ ಪತ್ರಿಕೆಯಲ್ಲಿ ‘ಮೇರಾ ಭಾರತ್ ಮಹಾನ್’ ಎಂಬ ಅಂಕಣ ಬರೆಯುತ್ತಿದ್ದ ರವೀಂದ್ರ ದೇಶಮುಖ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ಉಪ ಸಂಪಾದಕ ಸ್ಥಾನ ನೀಡಲಾಗಿದ್ದು, ಪ್ರತಿವಾರ ಅಂಕಣ ಹಾಗೂ ಸಂಪಾದಕೀಯ ಬರೆಯುವ ಕೆಲಸ ಒಪ್ಪಿಸಿದ್ದಾರೆ. ಆರೆಸೆಸ್ಸ್ ಪತ್ರಿಕೆಯಲ್ಲಿ ಬರುವ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ‘ಮೇರಾ ಭಾರತ್ ಮಹಾನ್’ ಎಂದು ತಮ್ಮ ಬೈಲೈನ್ ಹಾಕಿಕೊಳ್ಳುತ್ತಿದ್ದರು ರವೀಂದ್ರ ದೇಶಮುಖ್. ಈಗ ಸ್ವತಂತ್ರವಾಗಿ ಮತ್ತೊಂದು ಬೆತ್ತಲೆ ಜಗತ್ತು ಅವರು ಅನಾವರಣ ಮಾಡಬೇಕಿದೆ.

ವಿಜಯ ಕರ್ನಾಟಕ ಮಾತ್ರ ಬರಲಿರುವ ಹೊಸ ಪತ್ರಿಕೆಯನ್ನು ಎದುರಿಸಲು ಸಜ್ಜಾಗಿ, ಕೋಟೆಯನ್ನು ಭದ್ರ ಪಡಿಸಿಕೊಳ್ಳುವ ಕೆಲಸ ನಡೆಸಿದೆ. ಯುವ ಘರ್ಜನೆ ಎನ್ನುವುದು ಅದರ ಅಂತಹ ಒಂದು ಪ್ರಯತ್ನದ ಭಾಗ. ಪ್ರಜಾವಾಣಿಯು ಇಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೂ ಆಪಾಯ ಎದುರಿಸಲು ಅದು ಪ್ರಯತ್ನ ಮಾಡುತ್ತಿದೆ. ಸಾಪ್ತಾಹಿಕ ಪುರವಣಿ ಜೊತೆ ದೇಶಕಾಲದ ಜೊತೆಗೆ ನೀಡುತ್ತಿದ್ದ ಸಾಹಿತ್ಯ ಪುರವಣಿಯನ್ನು ಈಗ ತಾನೇ ನಿರ್ವಹಿಸುತ್ತಾ ಉಳಿಸಿಕೊಂಡಿದೆ. ಯುವಜನರಿಗಾಗಿ ಕಾಮನ ಬಿಲ್ಲು ಎಂಬ ಸಣ್ಣ ಪುರವಣಿಯನ್ನು ಹೊರ ತರುತ್ತಿದೆ. ಕನ್ನಡ ಪ್ರಭದ ಸ್ಥಿತಿಯಂತೂ ಶೋಚನೀಯವಾಗಿದೆ. ಅದರ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ‘ನೋಡುತ್ತಾ ಇರಿ, ಏನೋ ಮಾಡುತ್ತೇವೆ’ ಅಂತಾ ಎಂದು ಸಂಪಾದಕ ವಿಶ್ವೇಶ್ವರ ಭಟ್ರು, ಹಾವಾಡಿಗರು ತಮ್ಮ ತೆರೆಯದ ಬುಟ್ಟಿ ತೋರಿಸಿ “ಧರ್ಮಸ್ಥಳದಿಂದ ಹಿಡಿದುಕೊಂಡು ಬಂದಿರುವ ಹಾವು ಇದೆ, ತೋರಿಸುತ್ತೇವೆ” ಎಂದು ಆಟದಲ್ಲಿ ಹೇಳುತ್ತಾ ಕೊನೆಗೂ ಹಾವು ತೋರಿಸುವುದಿಲ್ಲ, ಹಾಗೇ ಆಗಿ ಬಿಟ್ಟಿದೆ ಅವರ ಹೇಳಿಕೆ.

ಉದಯವಾಣಿ, ಸಂಯುಕ್ತ ಕರ್ನಾಟಕ  ತಮ್ಮ ಲೇಔಟ್ ಚೇಂಜ್ ಮಾಡಿಕೊಂಡಿದ್ದು ಬಿಟ್ಟರೆ ಉಳಿದಂತೆ ಆದರ ಪ್ರಯತ್ನ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಈಗ್ಗೆ 12 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಹುಟ್ಟಿದಾಗ ಏನಿತ್ತು ಪರಿಸ್ಥಿತಿ. ಇವತ್ತಿನ ಪರಿಸ್ಥಿತಿ ಏನಿದೆ ಎನ್ನುವುದು ಪರಿಶೀಲಿಸುವುದು ಇಲ್ಲಿ ಬಹಳ ಮುಖ್ಯ ಸಂಗತಿಯಾಗಿದೆ. ಪ್ರಜಾವಾಣಿ ಕನ್ನಡದ ಅತ್ಯಂತ ಜನಪ್ರಿಯ ದಿನ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿ, ನಂದಿಯಂತೆ ವಿರಾಜಮಾನವಾಗಿತ್ತು. ಕನ್ನಡ ಪ್ರಭ ಎರಡನೇಯ ಸ್ಥಾನದಲ್ಲಿತ್ತು. ಉದಯವಾಣಿ, ಸಂಯುಕ್ತ ಕರ್ನಾಟಕ ಬೆಂಗಳೂರಿನಲ್ಲಿ ಕಚೇರಿ, ಎಡಿಷನ್ ಹೊಂದಿದ್ದರೂ ಅವು ಪ್ರಾದೇಶಿಕ ಪತ್ರಿಕೆಗಳಾಗಿಯೇ ಇದ್ದವು.

ಪ್ರಜಾವಾಣಿಯ ಏಜೆನ್ಸಿ ತೆಗೆದುಕೊಳ್ಳುವುದು ಎಂದರೆ ಪೆಟ್ರೂಲ್ ಬಂಕ್ ಪಡೆಯುವಂತೆ ಕಷ್ಟ ಪಡಬೇಕಿತ್ತು. ಅಷ್ಟು ಡಿಮ್ಯಾಂಡ್ ಆಗ. ಕನ್ನಡ ಪ್ರಭದ ಏಜೆಂಟ್ರು ಹತ್ತು ಪತ್ರಿಕೆ ಹೆಚ್ಚು ಮಾಡಲು ಹರ ಸಾಹಸ ಮಾಡಬೇಕಿತ್ತು. ಆಗ ಕನ್ನಡ ಪ್ರಭದ ಪ್ರಸರಣ ವಿಭಾಗದವರು ಪತ್ರಿಕೆ ಸಂಖ್ಯೆ ಹೆಚ್ಚಿಸಬೇಡಿ, ಇದ್ದಷ್ಟೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳುತ್ತಿದ್ದರು. ಕಳೆದ 20 ವರ್ಷದಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಿದೆ. ಅವರನ್ನು ತಲುಪಬೇಕೆಂಬ ಉದ್ದೇಶ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಪ್ರಸರಣ ಹೆಚ್ಚಾದರೆ ಲಾಭವಿಲ್ಲ. ಬದಲು ನಷ್ಠವೇ ಹೆಚ್ಚು ಎಂಬ ಲೆಕ್ಕಾಚಾರ ಎಲ್ಲರದ್ದೂ ಆಗಿತ್ತು. ಬೆಲೆ ಏರಿಕೆ ನಡೆಯುತ್ತಾ ಹೋಗುತ್ತಿರುವ ಲೆಕ್ಕದಲ್ಲಿ ಹೋದರೆ ಇವತ್ತು ಕನ್ನಡ ದಿನ ಪತ್ರಿಕೆಗಳ ಬೆಲೆಯು 8 ರೂ. ಮುಟ್ಟಬೇಕಿತ್ತು.

ಇಂತಹ ಸಂದರ್ಭದಲ್ಲಿಯೇ ವಿಜಯ ಕರ್ನಾಟಕ ಕಾಲಿಟ್ಟಿತು. ಎಲ್ಲಾ ಕಡೆ ಎಡಿಷನ್ ಮಾಡುವ ಮೂಲಕ ಎಲ್ಲರಿಗೂ ಪತ್ರಿಕೆ ಮುಟ್ಟಿಸುವ ಕೆಲಸ ಆರಂಭಿಸಿತು. ಹಳ್ಳಿಗಳಲ್ಲಿ ಬೆಳಿಗ್ಗೆ 10, 11ಕ್ಕೆ ಸಿಗುತ್ತಿದ್ದ ಪ್ರಜಾವಾಣಿಯ ಬದಲು ಬೆಳಿಗ್ಗೆ 6ಕ್ಕೆಲ್ಲಾ ಸಿಗುವಂತಾಯಿತು. ಪತ್ರಿಕೆ ಏಜೆನ್ಸಿ ಅನ್ನುವುದು ಇಷ್ಟು ಸುಲಭ ಎನ್ನುವುದನ್ನು ತೋರಿಸಿ ಬಿಟ್ಟರು. ಹಳ್ಳಿ ಹಳ್ಳಿಗೂ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಒಂದು ಊರಿನಲ್ಲಿ ಎಷ್ಟು ಬೇಕು ಅಷ್ಟು ಏಜೆನ್ಸಿ ಕೊಡುವ ಮೂಲಕ ಪತ್ರಿಕೆ ಪ್ರಸರಣವನ್ನು ವಿಸ್ತರಿಸಿಬಿಟ್ಟರು. ದರ ಸಮರವನ್ನು ಸಾರಿ ಬಿಟ್ಟರು. ಉಳಿದ ಪತ್ರಿಕೆಗಳು ಎಚ್ಚೆತ್ತುಕೊಂಡು ಪ್ರಸರಣ ವಿಸ್ತರಿಸುವ ಪ್ರಯತ್ನಗಳ ನಡುವೆ ವಿಜಯಕರ್ನಾಟಕ ನಂಬರ್ ವನ್ ಆಗಿಯೇ ಬಿಟ್ಟಿತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ತ್ರಿವಳಿ ಮಂತ್ರವನ್ನು ಜಪಿಸಲಾರಂಭಿಸಲಾಯಿತೋ ಆಗ ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಪಡೆಯಲು ಎಬಿಸಿ ಎನ್ನುವ ಪ್ರಸರಣ ಸಂಖ್ಯೆಯ ಪಟ್ಟಿ ಮುಖ್ಯವಾಗಿ ಹೊಯಿತು. ಪತ್ರಿಕೆಗಳ ಸರಕಾಗಲು ತುದಿಗಾಲಿನ ಮೇಲೆ ನಿಂತವು. ಈಗಾಗಿ ಪತ್ರಿಕೆಗೆ ಮೌಲಿಕ ಓದುಗರಗಿಂತ ಗ್ರಾಹಕ ಓದುಗರು ಮುಖ್ಯವಾದರು. ಅಥವಾ ಓದುಗರನ್ನು ಗ್ರಾಹಕರನ್ನಾಗಿ ಮಾಡಲು ಪೈಪೋಟಿಗೆ ಇಳಿಯಬೇಕಾಯಿತು. ವಿಜಯ ಕರ್ನಾಟಕ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಈಗ ಎಲ್ಲಾ ದಿನ ಪತ್ರಿಕೆಗಳು ಎಡಿಷನ್ ಮಾಡಿ, ತಮ್ಮ ಪತ್ರಿಕೆಯ ವಿಸ್ತರಣೆ ಕೆಲಸಕ್ಕೆ ಕೈ ಹಾಕಿವೆ. ಪ್ರಜಾವಾಣಿ ಎಡಿಷನ್ ಮಾಡಿ, ಏಜೆನ್ಸಿಯ ಬಿಗಿ ನೀತಿ ಸಡಿಲಿಸಿ, ಅದು ಹಳ್ಳಿ ಹಳ್ಳಿಗೂ ಏಜೆನ್ಸಿಯನ್ನು ನೀಡಿ ಪ್ರಸರಣಕ್ಕೆ ಅದ್ಯತೆ ನೀಡುತ್ತಿದೆ. ಇದೇ ಸಾಲಿನಲ್ಲಿ ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ನಡೆಸಿವೆ. ಇವುಗಳ ಜೊತೆಗೆ ಈಗ ಹೊಸ ದಿಗಂತವೂ ಸೇರಿಕೊಂಡಿದೆ.

ಮುಖ ಪುಟದಲ್ಲಿ ಪದಗಳ ಜೊತೆ ಆಟ, ಅದೇ ದೊಡ್ಡದು ಎನ್ನುವ ರೀತಿಯ ವಿಜೃಂಭಣೆ, ಟ್ಯಾಬ್ಲೊಯಿಡ್ ಪತ್ರಿಕೆಗಳ ಭಾಷೆ ಬಳುಸುವುದು, ಇಂತಹ ಸರ್ಕಸ್ ನಡೆಸುವ ಮೂಲಕ ಸಂಪಾದಕರು ಎನ್ನುವವರು ಈಗ ಸರ್ಕಸ್ ಕಂಪನಿಯ ಮ್ಯಾನೇಜರ್ ಆಗಿ ಬಿಟ್ಟಿದ್ದಾರೆ. ಅದೇ ಸಂಪಾದಕರ ಚಹರೆ ಹಾಗೂ ಮಾನದಂಡವಾಗಿ ಬಿಟ್ಟಿದೆ. ಪತ್ರಿಕೆಯನ್ನು ಅಗ್ಗದ ಸರಕಾಗಿ ಮಾರಾಟ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಇಂತಹ ವಾತಾವರಣದಲ್ಲಿ ಹೊಸ ಪತ್ರಿಕೆ ವಿಜಯ ವಾಣಿಯ ನಡಿಗೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಎಲ್ಲರೂ ಈಗ ಓಡುತ್ತಿದ್ದಾರೆ. ಈ ಓಟದ ಸಾಲಿನಲ್ಲಿ ವಿಜಯವಾಣಿ ಸೇರಿಕೊಳ್ಳಬೇಕಾಗಿದೆ. ಅನ್ಯಮಾರ್ಗವೇ ಇಲ್ಲ.

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ

– ಪರಶುರಾಮ ಕಲಾಲ್

’ಪತ್ರಕರ್ತರಾಗಿ ಬರುವವರು ಸಾಹಿತ್ಯ, ಸಂಸ್ಕೃತಿ ಇತ್ಯಾದಿ ಓದಿಕೊಂಡಿರುವುದಿಲ್ಲ. ಇತ್ತೀಚೆಗಂತೂ ಬರುವ ಪತ್ರಕರ್ತರಿಗೆ ರಾಜಕೀಯ ಪರಿಜ್ಞಾನವೂ ಇರುವುದಿಲ್ಲ,’ ಎಂಬ ಮಾತುಗಳನ್ನು ಕೇಳುತ್ತಿದ್ದೇವೆ. ಪತ್ರಕರ್ತ ಹುದ್ದೆಗೆ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಪಂಪ, ರನ್ನ ಗೊತ್ತಿಲ್ಲ ಎಂಬ ದಿಗ್ಭ್ರಮೆಯನ್ನು ಸಂಪಾದಕರೊಬ್ಬರು ಬರೆದುಕೊಂಡಿದ್ದರು. ಅವರ ಪತ್ರಿಕೆಯೇ ಇತ್ತೀಚೆಗೆ ವರದಿಗಾರರು/ಉಪ ಸಂಪಾದಕರು ಬೇಕಾಗಿದ್ದಾರೆ ಎಂಬ ಜಾಹಿರಾತಿನಲ್ಲಿ ವಯಸ್ಸಿನ ಸಂಖ್ಯೆಯನ್ನು 30ಕ್ಕೆ ಸೀಮಿತಗೊಳಿಸಿದ್ದಾರೆ. ಈ ವಯಸ್ಸಿನಲ್ಲಿ ಬರುವ ಯುವಕರಿಗೆ ಪಂಪ, ರನ್ನ ಹೇಗೆ ಗೊತ್ತಾಗಲು ಸಾಧ್ಯ? ಅದೃಷ್ಟವಶಾತ್ ತೆಳ್ಳಗೆ, ಬೆಳ್ಳಗೆ ನೋಡಲು ಚೆಂದ ಇರಬೇಕು ಎಂದು ಹೇಳದಿರುವುದು ನಮ್ಮ ಪುಣ್ಯ ಎಂದೇ ಭಾವಿಸಬೇಕಾಗಿದೆ.

ಈಗ ದಿನಪತ್ರಿಕೆಗಳಿಗೆ ಬೇಕಿರುವುದು ಪಿಗ್ಮಿ ಏಜೆಂಜರು ಮಾತ್ರ. ಅವರು ಆಯಾ ಎಡಿಷನ್‌ಗಳ ಫೇಜ್ ತುಂಬಿಸುತ್ತಾ ಹೋಗಬೇಕು. ಹೀಗೆ ನಿವ್ವಳ ಗುಡ್ಡೆ ಹಾಕುವ ಕೆಲಸಕ್ಕೆ ವರದಿಗಾರರು ಬೇಕಾಗಿದ್ದಾರೆ ಹೊರತು ಅವರು ಹೇಗೆ ಬರೆಯಬಲ್ಲರು? ಅವರಲ್ಲಿ ಒಳನೋಟ ಇರುವ ಬರವಣಿಗೆ ತೆಗೆಯಲು ಸಾಧ್ಯವೇ? ಅವರನ್ನು ಹೇಗೆ ಮಾನಿಟರ್ ಮಾಡಬೇಕು. ಸಿದ್ಧಗೊಳಿಸಬೇಕು ಎಂಬ ಕಳಕಳಿ ಈಗ ಯಾವ ಪತ್ರಿಕೆಯಲ್ಲೂ ಉಳಿದಿಲ್ಲ.

ಉಪ ಸಂಪಾದಕರು/ ಜಿಲ್ಲಾ ವರದಿಗಾರರು ಕೂಡಾ ಸ್ಥಳೀಯ ಪೇಜು ತುಂಬಿಸುವವರಾಗಿಯೇ ಹೋಗಿದ್ದಾರೆ. ಬಿಡಿ ಸುದ್ದಿಗಾರರಂತೂ ಒಂದೆರಡು ಫೋಟೋ, ಎರಡುಮೂರು ಸುದ್ದಿ ಹಾಕಿ, ನಿಟ್ಟಿಸಿರು ಬಿಡುತ್ತಾರೆ.

ಈ ಪೇಜ್ ನೋಡಿಕೊಳ್ಳುವ ಉಪ ಸಂಪಾದಕ ಮಹಾಶಯರು ಬೇಗನೇ ಪೇಜು ಮುಗಿಸಿ ಮನೆಗೆ ಹೋಗುವ ಧಾವಂತದಲ್ಲಿ ಬಣವಿ ತರಹ ಸುದ್ದಿಗಳನ್ನು ಜೋಡಿಸಿ, ಕೈ ತೊಳೆದು ಕೊಂಡು ಹೋಗಿ ಬಿಡುತ್ತಾರೆ. ಈ ಎಡಿಷನ್ ಹಾವಳಿಯಿಂದ ಈ ಸ್ಥಳೀಯ ಪೇಜ್‌ಗಳು ಎಷ್ಟು ಹಾಳಾಗಿವೆ ಎಂದರೆ ಅಲ್ಲಿ ಕಾಗುಣಿತ ದೋಷ ಸೇರಿದಂತೆ ಪತ್ರಿಕೆಗಳಿಗೆ ಇರುವ ತನ್ನದೇ ಆದ ಭಾಷೆಯೇ (ಸ್ಟೈಲ್‌ಷೀಟ್) ಮಾಯವಾಗಿ ಹೋಗಿರುತ್ತದೆ.

ನಮ್ಮ ಬಳ್ಳಾರಿ ಜಿಲ್ಲೆಯ ಉದಾಹರಣೆಯನ್ನು ತೆಗೆದುಕೊಂಡರೆ ಪ್ರಜಾವಾಣಿ ಎರಡು ಪುಟಗಳನ್ನು ಬಳ್ಳಾರಿ ಜಿಲ್ಲೆಗೆ ಮೀಸಲಿಟ್ಟಿದೆ (2-3ನೇ ಪೇಜ್‌ಗಗಳು). ಜಾಹಿರಾತು ಹೆಚ್ಚಾದರೆ ಮತ್ತೇ ಎರಡು ಪೇಜ್‌ಗಳನ್ನು ಹೆಚ್ಚಿಗೆ ಕೊಡುತ್ತದೆ. ವಿಜಯ ಕರ್ನಾಟಕದ್ದಂತೂ ಇನ್ನೂ ವಿಚಿತ್ರ. ಯಾವ ಪುಟದಲ್ಲಿ ಯಾವುದು ಲೋಕಲ್, ಯಾವುದು ಸ್ಟೇಟ್ ನ್ಯೂಸ್ ಎಂದು ಗೊತ್ತಾಗದಷ್ಟು ಮಿಕ್ಸ್  ಮಾಡಿ ಹಾಕಲಾಗಿರುತ್ತೆ. ಕೆಲವೊಮ್ಮೆ ಮುಖ ಪುಟದಲ್ಲಿ ಬಂದಿರುವ ಸುದ್ದಿ ಇನ್ನೊಂದು ಎಡಿಷನ್‌ನಲ್ಲಿ ಮಂಗಮಾಯ ಆಗಿರುತ್ತದೆ. ಕನ್ನಡಪ್ರಭ, ಉದಯವಾಣಿಯದು ಕೂಡಾ ಇದೇ ಕಥೆ.

ಗಣಿಗಾರಿಕೆಯ ಉಬ್ಬರ ಇರುವಾಗ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾದ ಅನೇಕ ಅಂಶಗಳನ್ನು ಬಿಡಿ ಸುದ್ದಿಗಾರರು ಬರೆದಿದ್ದಾರೆ. ಈ ಸುದ್ದಿಗಳು ಬಂದಿವೆ ಕೂಡಾ. ರಾಜ್ಯಮಟ್ಟದ ಸುದ್ದಿಯನ್ನಾಗಿ ಮಾಡಬಹುದಾದ ಗಮನ ಸೆಳೆಯುವ ಸುದ್ದಿಗಳೇ ಅವು. ಬರೆಯುವ ಶೈಲಿಯಲ್ಲಿ ಹೆಚ್ಚುಕಡಿಮೆ ಇರಬಹುದು. ಡೆಸ್ಕ್‌ನಲ್ಲಿ ಇರುವ ಉಪ ಸಂಪಾದಕರು ಅದರ ಮಹತ್ವ ನೋಡಿ, ಪುನಃ ಬರೆಸಿ, ಅದನ್ನು ರಾಜ್ಯ ಸುದ್ದಿಯನ್ನಾಗಿ ಮಾಡಬೇಕಿತ್ತು. ಆದರೆ ಪೇಜ್ ತುಂಬಿಸುವ ಧಾವಂತ, ಬಿಡಿ ಸುದ್ದಿಗಾರರ ಬಗ್ಗೆ ಇರುವ ಉಪೇಕ್ಷೆ ಎಲ್ಲವೂ ಸ್ಥಳೀಯ ಪೇಜ್‌ಗಳಲ್ಲಿ ಬಂದು ಅಂತಹ ಸುದ್ದಿಗಳು ಕಳೆದು ಹೋಗಿ ಬಿಡುತ್ತವೆ. ಎಷ್ಟು ಸುದ್ದಿಗಳು ಹೀಗೆ ಕಳೆದು ಹೋಗಿವೆ?

ರಾಜ್ಯಮಟ್ಟದ ಸುದ್ದಿಗಳಿಗಾಗಿ ಎಷ್ಟು ಪೇಜ್‌ಗಳನ್ನು ಮೀಸಲಿಟ್ಟಿವೆ. ಯಾವುದು ರಾಜ್ಯದ ಸುದ್ದಿ? ಇದು ಒಂದು ಪ್ರಶ್ನೆಯಾದರೆ ಮತ್ತೊಂದು ಅಂಕಣಕೋರರ ಹಾವಳಿ. ಪ್ರಜಾವಾಣಿಯನ್ನು ಹೊರತು ಪಡೆಸಿ, ಉಳಿದ ದಿನ ಪತ್ರಿಕೆಗಳನ್ನು ನೋಡಿ ಅಲ್ಲಿ ಮುಕ್ಕಾಲು ಎಕರೆ ಭೂಮಿಯನ್ನು ಭೋಗ್ಯಕ್ಕೆ ಪಡೆದು ಈ ಅಂಕಣಕಾರರೇ ಸಾಗುವಳಿ ಮಾಡುತ್ತಿರುತ್ತಾರೆ. ಈ ಅಂಕಣಕೋರರ ಹಾವಳಿಯಿಂದಾಗಿ ಜಿಲ್ಲಾ ವರದಿಗಾರರು, ಉಪ ಸಂಪಾದಕರು ಕೂಡಾ ಏನೂ ಬರೆಯದ ಸ್ಥಿತಿ ನಿರ್ಮಾಣವಾಗಿದೆ. ಇರುವ ಸ್ಥಳೀಯ ಪೇಜ್‌ಗಳಲ್ಲಿಯೇ ಅವರು ಕೃಷಿ ಮಾಡಲಾರಂಭಿಸುತ್ತಾರೆ. ಬೈಲೈನ್ ಹಾಕಿಕೊಂಡು ಚರಂಡಿ, ಟ್ರಾಫಿಕ್, ಹಂದಿಗಳ ಹಾವಳಿ ಎಂದೆಲ್ಲಾ ಬರೆದುಕೊಳ್ಳುತ್ತಾರೆ. ಅಂಕಣಕೋರನೊಬ್ಬ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿದ್ದು ಕೇಳಿ, ಅಯ್ಯೋ ಎಲ್ಲಿಗೆ ಬಂತು ಜರ್ನಲಿಸಂ ಪ್ರತಾಪ ಅಂತಾ ಲೊಚಗುಡುವುದು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯ?

ಹೀಗೆ ಪ್ರಶ್ನೆಗಳು ಸಾಕಷ್ಟು ಎದ್ದು ಬರುತ್ತವೆ. ಒಡನೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂಬುದು ಸಹ ಈಗ ನಮ್ಮ ಮುಂದಿರುವ ಪ್ರಶ್ನೆಯಾಗಿದೆ.