Tag Archives: ಫ್ಯಾಂಟಮ್ ಭೂತ

ವಕೀಲರು, ಪತ್ರಕರ್ತರು ಮತ್ತು ಫ್ಯಾಂಟಮ್ ಭೂತ


– ಪರಶುರಾಮ ಕಲಾಲ್


 

ಮಾಧ್ಯಮಗಳು ಮತ್ತು ವಕೀಲರ ನಡುವೆ ನಡೆದ ಯುದ್ಧವನ್ನು ನಾವು ಎಲ್ಲರೂ ನೋಡಿದ್ದೇವೆ. ನೋಡಿದ್ದೇವೆ ಏನು ಬಂತು ರೇಸಿಗೆಯಾಗುವಷ್ಟು ದೃಶ್ಯಮಾಧ್ಯಮಗಳು ಉಣ ಬಡಿಸಿವೆ. ವಕೀಲರದು ಸರಿಯೇ ? ಮಾಧ್ಯಮದ್ದು ಸರಿಯೇ ಈ ಪ್ರಶ್ನೆಯನ್ನು ನಾವು ಹಾಕಿಕೊಳ್ಳುವುದಕ್ಕಿಂತ ಇದು ಯಾಕೇ ನಡೆಯಿತು ? ಏನು ಸಮಸ್ಯೆ ಇದಕ್ಕೆ ಕಾರಣ ಎಂದು ಎಲ್ಲರೂ ಯೋಚಿಸಬೇಕಿದೆ.

ಈ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ ಕುಸಿದ ಸಂದರ್ಭದಲ್ಲಿ ನ್ಯಾಯಾಂಗ ಒಂದಿಷ್ಟು ಮಾನವಂತ ಕೆಲಸ ಮಾಡಿತು ಎನ್ನುವದನ್ನು ಒಪ್ಪುವ ಒಂದು ವರ್ಗ ಇದೆ. ಚರ್ಚೆಯನ್ನು ಇಲ್ಲಿಂದಲೇ ಆರಂಭಿಸೋಣ. ಅಣ್ಣಾ ಹಜಾರೆ ಭೃಷ್ಠಾಚಾರದ ವಿರುದ್ಧ ಹೋರಾಟದವರೆಗೆ ಇದನ್ನು ಎಳೆದುಕೊಂಡು ಹೋಗಬಹುದು. ಗಣಿ ಹಗರಣ ಕುರಿತಂತೆ ಆಂಧ್ರ ಹಾಗೂ ಕರ್ನಾಟಕದಲ್ಲಿ  ಸಿಬಿಐ ತನಿಖೆ ನಡೆಸುತ್ತಿರುವುದು. ಯಡಿಯೂರಪ್ಪ ಗಣಿ ಕಪ್ಪ ಪಡೆದ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ನಡೆಸಲು ಸಾಧ್ಯವೇ ವರದಿ ನೀಡಲು ಸಿಇಸಿ (ಕೇಂದ್ರ ಉನ್ನತಾಧಿಕಾರಿಗಳ ತಂಡ) ಸೂಚಿಸಿದೆ. ಇಲ್ಲಿ ಮಾಧ್ಯಮಗಳಿಗಿಂತ ನ್ಯಾಯಾಂಗ ಇಡೀ ಪ್ರಕರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯಾಂಗವೆಂದರೆ ನ್ಯಾಯಾಧೀಶರು ಮಾತ್ರವಲ್ಲ, ಅಲ್ಲಿ ವಕೀಲರು ಇರುತ್ತಾರೆ. ಅವರ ಪಾತ್ರವೂ ಸಹ ಬಹಳ ಮುಖ್ಯ.

ಮತ್ತೊಂದು; ನಾವು ದೃಶ್ಯ ಮಾಧ್ಯಮಗಳ ಕಡೆ ನೋಡೋಣ. ದೃಶ್ಯಮಾಧ್ಯಮಗಳು ಸುದ್ದಿ ಮಾಧ್ಯಮವಾಗಿ ಬಂದ ಮೇಲೆ ರೋಚಕ ಸುದ್ದಿಗಳಿಗೆ ಹೆಚ್ಚು ಗಮನ ಕೊಟ್ಟವು. ಮತ್ತೊಂದು ಕಡೆ ಇವೇ ನ್ಯಾಯಾಲಯಗಳಾಗಿ ಕೆಲಸ ಮಾಡ ತೊಡಗಿದವು. ಆರೋಪಿಗಳನ್ನು ಆರೋಪಿಗಳೆಂದು ಕರೆಯದೇ ಈ ಕೃತ್ಯವೆಸಗಿದ ಪಾತಕಿಗಳು, ದುಷ್ಟರು, ಖೂಳರು ಎಂದೇ ಚಿತ್ರಿಸಿದವು. ಎಷ್ಟೋ ಸಾರಿ ಇವರೇ ನ್ಯಾಯಾಧೀಶರಾಗಿ ತೀರ್ಪು ನೀಡಿದ ರೀತಿಯಲ್ಲಿ ವರದಿ ಮಾಡಿದ್ದು ಇದೆ. ಇದು ಸಾಲದು ಎಂಬಂತೆ ಚಿತ್ರನಟಿಯರನ್ನು ಕುಳ್ಳರಿಸಿ, ಕುಟುಂಬ ನ್ಯಾಯಾಲಯವನ್ನು ತೆರೆದು ಗಂಡ-ಹೆಂಡತಿ ಜಗಳ ಬಿಡಿಸುವ ನ್ಯಾಯಾಧೀಶರ ಪಾತ್ರ ನೀಡಿದರು. ಜನರಿಗೆ ಮನರಂಜನೆ ನೀಡುತ್ತಾ ಕೆಳ ಮಧ್ಯಮವರ್ಗದವರ ಬದುಕು ಬೀದಿಪಾಲಾಗಿಸಿ, ಎಷ್ಟೋ ಪ್ರಕರಣಗಳಲ್ಲಿ ನೇರವಾಗಿ ಹೊಡೆದಾಡಿಸುವ ದೃಶ್ಯಗಳನ್ನು ಸಹ ಲೈವ್ ಆಗಿಯೇ ಬಿತ್ತರಿಸಿದವು. ಈಗ ಕುಟುಂಬ ಜಗಳವಿರಲಿ, ಏನೋ ಸಮಸ್ಯೆ ಇರಲಿ ಎಲ್ಲರೂ ಈ ದೃಶ್ಯಮಾಧ್ಯಮಗಳ ಬಾಗಿಲು ತಟ್ಟುವಂತೆ ಮಾಡಿ ಬಿಟ್ಟಿವೆ. ಯಾರಿಗೂ ನಾವು ಹೆದುರುವುದಿಲ್ಲ. ನಾವು ಮಾಧ್ಯಮದವರು. ಏನು ಬೇಕಾದರೂ ಮಾಡುತ್ತೇವೆ ಎಂಬ ದುಸ್ಸಾಹಸದ ಮಾತುಗಳನ್ನು ಆಡಿದವು.

ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿರುವ ವಕೀಲರೂ ಇದೇ ದುಸ್ಸಾಹಸದ ಮಾತುಗಳನ್ನು ಖಾಸಗಿಯಾಗಿ ಆಡುತ್ತಾರೆ. ಆಡಿಕೊಳ್ಳಲಿ ಬಿಡಿ. ಎಷ್ಟೇ ಆಗಲಿ, ಅದು ಅವರ ಖಾಸಗಿ ಮಾತು ಎನ್ನಬಹುದು. ದೃಶ್ಯ ಮಾಧ್ಯಮದವರು, ಮುದ್ರಣ ಮಾಧ್ಯಮದವರು ಇದೇ ಮಾತನ್ನು ಆಡಿದಾಗ ಭಯ ಆವರಿಸುತ್ತೆ . ಯಾಕೆಂದರೆ ಅದು ಸಾರ್ವಜನಿಕವಾಗಿ ಆಡಿ ಬಿಟ್ಟಾಗ. ಖಾಸಗಿಯಾಗಿ ಏನೋ ಬೇಕಾದರೂ ಹೇಳಿಕೊಳ್ಳಲಿ, ಆದರೆ ಅದನ್ನು ಪತ್ರಿಕೆಗಳಲ್ಲಿ ಬರೆದು, ದೃಶ್ಯಮಾಧ್ಯಮದಲ್ಲಿ ಆಡಿ ತೋರಿಸಿದಾಗ ಇವರೆಲ್ಲಾ ಏನು ಮಾಡುತ್ತಿದ್ದಾರೆ ? ಏನು ಮಾಡಬೇಕು ಎಂದುಕೊಂಡಿದ್ದಾರೆ ? ವಕೀಲರು ಹಾಗೂ ಮುಖ್ಯವಾಗಿ ದೃಶ್ಯ ಮಾಧ್ಯಮದವರು ಇವರಿಬ್ಬರಿಗೆ ಸುಪ್ರಮಸಿ ಸಮಸ್ಯೆ ಕಾಡುತ್ತಿದೆ. ಇದು ಒಂದು ರೀತಿಯ ಫ್ಯಾಂಟಮ್ ಭೂತ ಆವರಿಸಿಕೊಂಡಿದೆ. ನಾವೇ ಸೂಪರ್ ಮ್ಯಾನ್ ಎನ್ನುವ ಎರಡು ಸೂಪರ್ ಮ್ಯಾನ್‌ಗಳ ನಡುವೆ ನಡೆಯುತ್ತಿರುವ ಯುದ್ಧವಿದು. ಇದಕ್ಕಿಂತ ಬೇರೇನೂ ಇದರ ಹಿಂದೆ ಇಲ್ಲ.

ಇದಕ್ಕೆ ಮುದ್ರಣ ಮಾಧ್ಯಮವೂ ಕೈಗೊಡಿಸಿದೆ. ಮುದ್ರಣ ಮಾಧ್ಯಮವೂ ಈಗ ರೋಚಕ ಸುದ್ದಿಗೆ, ಟ್ಯಾಬ್ಲಾಯ್ಡ್  ಭಾಷೆಗೆ ಒಳಗಾಗಿರುವ ಹೊತ್ತಿನಲ್ಲಿ ಅದನ್ನೇ ದೊಡ್ಡ ತನಿಖೆ ವರದಿ ಎಂದು ಬಿಂಬಿಸಿಕೊಳ್ಳುತ್ತಿರುವಾಗ ಅವರು ಬೆಂಬಲಿಸಲೇಬೇಕು. ಬೆಂಬಲಿಸಿದ್ದಾರೆ. ಅವರು ಯುದ್ಧವನ್ನು ಘೋಷಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್  ಕೋರ್ಟ್ ಆವರಣ ಬಿಟ್ಟು ದೃಶ್ಯಮಾಧ್ಯಮದ ಕಣ್ಣು ಬೇರೆ ಕಡೆ ಹೋಗಲೇ ಇಲ್ಲ. ಇಡೀ ದಿನ ಕರ್ನಾಟಕವೇ  ಹತ್ತಿ ಉರಿಯುತ್ತಿದೆ ಎಂಬ ಚಿತ್ರಣವನ್ನು ನೀಡಿದರು. ರೆಡ್ಡಿಯನ್ನು ಅದುವರೆಗೆ ಹೊಸ ಬಟ್ಟೆ, ಧರಿಸಿದ್ದರು. ಇಡ್ಲಿ ತಿಂದರು, ಕಾಫಿ ಕುಡಿದರು ಎಂದೆಲ್ಲಾ ವರ್ಣಿಸುತ್ತಿದ್ದ  ದೃಶ್ಯ ಮಾಧ್ಯಮಗಳು ರೆಡ್ಡಿಯನ್ನು ಕೈ ಬಿಟ್ಟು ಬಿಟ್ಟರು. ಇದು ರೆಡ್ಡಿ ಗ್ಯಾಂಗ್ಗೂ, ಸರ್ಕಾರಕ್ಕೂ  ಸ್ವಲ್ಪ ಖುಷಿಯ ವಿಷಯ. ಈ ಘಟನೆಯಾಗದಿದ್ದರೆ ಗಣಿ ಹಗರಣದಲ್ಲಿ ಯಾರಿರಬಹುದು ಎಂದು ಎಲ್ಲರ ಹೆಸರನ್ನು ಇರಬಹುದು ಎಂದು ಹೇಳಲಾಗುತ್ತಿದೆ ಎಂದು ಅವರೇ ತೀರ್ಪು  ನೀಡಿ ಬಿಡುತ್ತಿದ್ದರು.

ಕೊನೆ ಗುಟುಕು : ಒಬ್ಬ ಪೊಲೀಸ್ ಪೇದೆ ಮಹದೇವಯ್ಯ ವಕೀಲರ ಕಲ್ಲು ತೂರಾಟದಿಂದ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೇ ಸತ್ತು ಹೋಗಿ ಬಿಟ್ಟ ಎಂದೇ ಬಹುತೇಕ ದೃಶ್ಯ ಮಾಧ್ಯಮಗಳು ಹೇಳಿಯೇ ಬಿಟ್ಟವು. ಅದು ಸುಳ್ಳಾಗಿತ್ತು. ಸುಳ್ಳಾಗಿದ್ದರ ಬಗ್ಗೆ ಯಾವ ಕ್ಷಮೆಯನ್ನೂ ಕೇಳದೇ ಇರುವುದನ್ನು ನೋಡಿದರೆ ಇದು ನಿರ್ಲಜ್ಜೆಯ  ಪರಮಾವಧಿ ಎನ್ನದೇ ಬೇರೆ ಪದವೇ ಇಲ್ಲ.