Tag Archives: ಬೇಟೆ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -3)

– ಡಾ.ಎನ್.ಜಗದೀಶ ಕೊಪ್ಪ

ನೈನಿತಾಲ್ನಲ್ಲಿ ಕಾರ್ಬೆಟ್  ಜನಿಸಿದ್ದು 1875ರ ಜುಲೈ25ರಂದು. ಆತನ ತಾಯಿ ಮೇರಿಗೆ ಇದು 12ನೇ ಹೆರಿಗೆ (ಆಕೆಯ ಮೊದಲ ಪತಿಯ ನಾಲ್ಕು ಮಕ್ಕಳು ಸೇರಿ) ಮೇರಿಯ 38 ನೆ ವಯಸ್ಸಿಗೆ ಜನಿಸಿದ ಈತನ ನಿಜ ನಾಮಧೇಯ ಎಡ್ವರ್ಡ್  ಜೇಮ್ಸ್ ಕಾರ್ಬೆಟ್  ಎಂದು. ಆದರೆ ಕುಟುಂಬದ ಸದಸ್ಯರೆಲ್ಲಾ ಪ್ರೀತಿಯಿಂದ ಕರೆಯತೊಡಗಿದ ಜಿಮ್ ಎಂಬ ಹೆಸರು ಆತನಿಗೆ ಶಾಶ್ವತವಾಗಿ ಉಳಿದುಹೋಯಿತು.   ತಾಯಿಯ ಹೆರಿಗೆಗೆ ಸೂಲಗಿತ್ತಿ ಗಿತ್ತಿಯಾಗಿ ಕೆಲಸ ಮಾಡಿದವಳು ಕಾರ್ಬೆಟ್‌ನ ಮೊದಲನೇ ಮಲ ಅಕ್ಕ ಎಂಜಿನಾ. ಹೆರಿಗೆ ವೇಳೆಯಲ್ಲಿ ಈತನ ತಾಯಿ ಬದುಕುವ ಸಂಭವವೇ ಇರಲಿಲ್ಲ. ಚೇತರಿಸಿಕೊಂಡ ಈಕೆ ಮತ್ತೇ ಎರಡು ವರ್ಷದಲ್ಲಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದಳು.

ಇಡೀ ಕಾರ್ಬೆಟ್  ಕುಟುಂಬವೇ ಒಂದು ಶಾಲೆಯ ಮಾದರಿಯಲ್ಲಿ ಇತ್ತು. ಕುಟುಂಬದಲ್ಲಿ ಈ ದಂಪತಿಗಳ ಮೊದಲ ವಿವಾಹದ ಮಕ್ಕಳೂ ಸೇರಿದಂತೆ 14 ಮಕ್ಕಳನ್ನು ಸಾಕುವ ಸಲುಹುವ ಹೊಣೆಗಾರಿಕೆಯಿತ್ತು. ಅದನ್ನು ಇ ದಂಪತಿಗಳು ಸಮರ್ಥವಾಗಿ ನಿರ್ವಹಿಸಿದರು. ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ವಿಲಿಯಮ್ಸ್ ನ ಮೊದಲ ಮಗ ಥಾಮಸ್ ತಂದೆಯ ಕಚೇರಿಯಲ್ಲೇ  ಜ್ಯೂನಿಯರ್ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದರಿಂದ ಉಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿಲ್ಲ. ಎಲ್ಲರೂ ವೈದ್ಯ ಮತ್ತು ಇಂಜಿನಿಯರ್ ವೃತ್ತಿಯಲ್ಲಿ ಪದವಿಗಳಿಸಿ ದೇಶ ವಿದೇಶಗಳಲ್ಲಿ ಉದ್ಯೋಗ ದೊರಕಿಸಿಕೊಂಡರು.

ಕ್ರಿಸ್ಟೊಫರ್‌ನ ಅಕ್ಕಳ ಪತಿ ಅನಿರೀಕ್ಷಿತವಾಗಿ ತೀರಿ ಹೋದ್ದರಿಂದ ಆಕೆಯು ಸೇರಿದಂತೆ ನಾಲ್ವರು ಮಕ್ಕಳನ್ನು ಸಲುಹುವ ಜವಬ್ದಾರಿ ಕಾರ್ಬೆಟ್  ಕುಟುಂಬದ ಮೇಲೆ ಬಿತ್ತು. ಆ ವೇಳೆಗೆ ಕಾರ್ಬೆಟ್  ನ ತಂದೆ ಕ್ರಿಸ್ಟೊಫರ್‌ಗೆ  ನಿವೃತ್ತಿಯಾಗಿ ಪಿಂಚಣಿ ಹಣದಲ್ಲಿ ಸಂಸಾರ ಸಾಕುವ ಸವಾಲು ಎದುರಾಯಿತು. ಈ ಸಂದರ್ಭದಲ್ಲಿ ಕುಟುಂಬಕ್ಕೆ ಆಧಾರ ಸ್ಥಂಭವಾಗಿ ನಿಂತವಳು ಕಾರ್ಬೆಟ್  ತಾಯಿ ಮೇರಿ.

ತನ್ನ ಮೊದಲ ವಿವಾಹದಲ್ಲಿ ಪತಿಯನ್ನು ಕಳೆದುಕೊಂಡು ನಾಲ್ವರು ಮಕ್ಕಳ ಜೊತೆ ಹೋರಾಟದ ಬದುಕನ್ನ ಕಟ್ಟಿಕೊಂಡಿದ್ದ ಮೇರಿಗೆ ಸವಾಲುಗಳನ್ನು ಎದುರಿಸುತ್ತಾ ಜೀವನ ನಿರ್ವಹಣೆ ಮಾಡುವ ಅನುಭವ ಇದ್ದುದರಿಂದ ಆಕೆ ಎದೆಗುಂದಲಿಲ್ಲ. ಆಗ ತಾನೆ ಹೊರಜಗತ್ತಿಗೆ ತೆರೆದುಕೊಳ್ಳುತಿದ್ದ ನೈನಿತಾಲ್ನಲ್ಲಿ ಖಾಲಿ ನಿವೇಶನಗಳನ್ನ ಖರೀದಿಸಿ ಅಲ್ಲಿ ಮನೆಗಳನ್ನ ನಿರ್ಮಿಸಿ ಮಾರುವ ವ್ಯವಹಾರಕ್ಕೆ ಇಳಿದಳು. ಅಲ್ಪ ಕಾಲದಲ್ಲೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶಸ್ವಿಯಾದಳು. ಲಾಭದ ಹಣವನ್ನು ಮತ್ತೆ ಭೂಮಿಗೆ ಹಾಕುತಿದ್ದ ಮೇರಿ, ಮನೆಗಳು ಮಾರಾಟವಾಗದಿದ್ದ ಸಮಯದಲ್ಲಿ ಅವುಗಳನ್ನು ಬೇಸಿಗೆಗೆ ಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅಲ್ಪ ಸಮಯಕ್ಕೆ ಬಾಡಿಗೆ ನೀಡುತಿದ್ದಳು. ಅಲ್ಲದೆ, ನೈನಿತಾಲ್ನಲ್ಲಿ ಮನೆಗಳನ್ನು ಹೊಂದಿ ಉದ್ಯೋಗದ ಮೇಲೆ ಹೊರ ಜಾಗಗಳಿಗೆ ಹೋಗಿರುವ ಆಂಗ್ಲರ ಮನೆಗಳನ್ನು ಪಡೆದು ಕಮಿಷನ್ ಆಧಾರದ ಮೇಲೆ ಬಾಡಿಗೆಗೆ ನೀಡುತಿದ್ದಳು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ ಮೇರಿಯ ರಿಯಲ್ ಎಸ್ಟೇಟ್ ವ್ಯವಹಾರ ಕಾರ್ಬೆಟ್  ಕುಟುಂಬಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿತು.

ನಿವೇಶನಗಳ ಜೊತೆಗೆ ಹಳೆಯ ಮನೆಗಳನ್ನು ಖರೀದಿಸಿ ಅವುಗಳನ್ನು ನವೀಕರಿಸಿ ಮಾರಾಟ ಮಾಡುತಿದ್ದಳು. ಮನೆ ನಿರ್ಮಾಣದ  ಕಚ್ಚಾ ಸಾಮಾಗ್ರಿಗಳನ್ನು ದೂರದ ಊರುಗಳಿಂದ ಕೊಂಡು ತರುವುದನ್ನು ತಪ್ಪಿಸಲು ತಾನೇ ನೈನಿತಾಲ್ನಲ್ಲಿ ಅಂಗಡಿಯೊಂದನ್ನು ತೆರೆದಳು. ಈಕೆಯ ವ್ಯವಹಾರ ಕುಶಲತೆ, ಮತ್ತು ಸ್ಥಳೀಯ ಆಂಗ್ಲರಿಗೆ ನೆರವಾಗುವ ಶೈಲಿ ಇವೆಲ್ಲವೂ ಮೇರಿಯನ್ನು ನೈನಿತಾಲ್ ಗಿರಿಧಾಮದ ಪಟ್ಟಣದ ಗೌರವಾನ್ವಿತ ಮಹಿಳೆಯಾಗಿ ರೂಪಿಸಿದವು.

ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಕೂಡ ನೈನಿತಾಲ್ ಪಟ್ಟಣದ ಹಿರೀಯ ಹಾಗೂ ಗೌರವಾನ್ವಿತ ನಾಗರೀಕನಾಗಿ, ಅಲ್ಲಿನ ಪುರಸಭೆಯ ಪ್ರಾರಂಭಕ್ಕೆ ಕಾರಣನಾದುದಲ್ಲದೆ ಹಲವಾರು ವರ್ಷಗಳ ಕಾಲ ಸದಸ್ಯನಾಗಿ, ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದನು. ಅಲ್ಲಿನ ಮನೆಗಳಿಂದ ಹೊರಬೀಳುವ ಕೊಳಚೆ ನೀರು ನೈನಿತಾಲ್ ಸರೋವರಕ್ಕೆ ಸೇರಿ ಕಲ್ಮಶವಾಗದಂತೆ ತಡೆಗಟ್ಟಲು ಪ್ರಥಮವಾಗಿ ಆಲೋಚಿಸಿದವನು ಕ್ರಿಸ್ಟೊಫರ್. ( ನಂತರ ಮುಂದಿನ ದಿನಗಳಲ್ಲಿ ಮಗ ಜಿಮ್ ಕಾರ್ಬೆಟ್  ಇದೇ ಪುರಸಭೆಯ ಉಪಾಧ್ಯಕ್ಷನಾದ ಸಂದರ್ಭದಲ್ಲಿ ಭಾರತದಲ್ಲೇ ಪ್ರಥಮಬಾರಿಗೆ ನೈನಿತಾಲ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಿದನು.)

ಕಾರ್ಬೆಟ್   ಕುಟುಂಬ ನೈನಿತಾಲ್ ನಲ್ಲಿ ಸುಖಮಯ ಜೀವನ ಸಾಗಿಸುತಿದ್ದಾಗಲೇ, 1880ರಲ್ಲಿ ನೈಸರ್ಗಿಕ  ದುರಂತವೊಂದು ಸಂಭವಿಸಿತು. ಆ ವರ್ಷದ ಸೆಪ್ಟಂಬರ್ 16 ರಂದು ಸತತ 40 ಗಂಟೆಗಳ ಕಾಲ ಬಿದ್ದ ಮಳೆಯಿಂದಾಗಿ ಇವರು ವಾಸವಾಗಿದ್ದ ನೈನಿತಾಲಿನ  ಕೇಂದ್ರ ಭಾಗದ ಬಝಾರ್ ರಸ್ತೆ ಸಮೀಪದ  ಗುಡ್ಡದ ಬಹುಭಾಗ ಕುಸಿದುಬಿತ್ತು. ಇದರಿಂದಾಗಿ ಕಾರ್ಬೆಟ್   ಕುಟುಂಬಕ್ಕೆ ಆದಾಯ ತರುತಿದ್ದ ಅನೇಕ ಬಾಡಿಗೆ ಮನೆಗಳು ನೆಲಸಮವಾದವು. ಇದರಿಂದ ವಿಚಲಿತರಾದ ಕಾರ್ಬೆಟ್   ತಂದೆ ತಾಯಿ ಅಲ್ಲಿದ್ದ ತಮ್ಮ ಮನೆಯನ್ನು ಮಾರಿ ಸರೋವರದ ಪೂರ್ವ ದಿಕ್ಕಿನಲ್ಲಿದ್ದ ಎತ್ತರದ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸತೊಡಗಿದರು. ಇಲ್ಲಿ ಸೂರ್ಯನ ಉದಯವಾಗಲಿ ಅಥವಾ ಬಿಸಿಲಾಗಲಿ ಇವುಗಳ ದರ್ಶನವಾಗುವುದೇ ಕಷ್ಟಕರವಾಗಿತ್ತು. ಆನಂತರ ಅದೇ ಪ್ರದೇಶದ ಬಹು ದೂರ ದಕ್ಷಿಣ ದಿಕ್ಕಿನಲ್ಲಿದ್ದ ಪುರಾತನ ಮನೆಯೊಂದನ್ನ ಖರೀದಿಸಿ, ಸಂಪೂರ್ಣ ನವೀಕರಿಸಿ ಅದಕ್ಕೆ ಗಾರ್ನ್ ಹೌಸ್ ಎಂದು ನಾಮಕರಣ ಮಾಡಿ ಹೊಸ ಬಂಗಲೆಗೆ ಸ್ಥಳಾಂತರಗೊಂಡರು. ಮುಂದೆ ಕಾರ್ಬೆಟ್  ಕುಟುಂಬಕ್ಕೆ ಇದೇ ಶಾಶ್ವತ ನೆಲೆಯಾಯಿತು.

ಕಾರ್ಬೆಟ್  ಜನಿಸಿದ ಸಮಯದಲ್ಲಿ ಕುಟುಂಬಕ್ಕೆ ಯಾವುದೇ ಬಡತನವಿರಲಿಲ್ಲ. ಆತನ ತಾಯಿ ತನ್ನ ವ್ಯವಹಾರ ಕುಶಲತೆಯಿಂದ ಇಡೀ ಕುಟುಂಬ ನೆಮ್ಮದಿಯಿಂದ ಬದುಕುವ ಹಾಗೆ ಆದಾಯದ ಮಾರ್ಗಗಳನ್ನ ರೂಪಿಸಿದ್ದಳು. ಕಾರ್ಬೆಟ್  ಪುಟ್ಟ ಬಾಲಕನಾಗಿದ್ದಾಗ ಅವನ ಮಲ ಸಹೋದರರು, ಸಹೋದರಿಯರು, ಪ್ರೌಢವಸ್ಥೆಗೆ ತಲುಪಿದ್ದರು. ಅವನ ಸ್ವಂತ ಸಹೋದರರು ಅವನಿಗಿಂತ 10-12 ವರ್ಷ ಹಿರಿಯರಾಗಿದ್ದರು ಹಾಗಾಗಿ ಅವನ ಬಾಲ್ಯದ ಒಡನಾಟವಲ್ಲಾ ಅವನಿಗಿಂತ ಒಂದು ವರ್ಷ ಹಿರಿಯವಳಾದ ಅಕ್ಕ ಮ್ಯಾಗಿ ಜೊತೆ ಸಾಗುತಿತ್ತು. ಅಕ್ಕನಿಗೂ ತಮ್ಮ ಜಿಮ್ ಎಂದರೆ ಎಲ್ಲಿಲ್ಲದ ಅಕ್ಕರೆ. ದಿನದ 24 ಗಂಟೆಯೂ ಒಬ್ಬರಿಗೊಬ್ಬರು ಅಂಟಿಕೊಂಡು ಇರುತಿದ್ದರು. ಹಾಗಾಗಿ ಇವರ ತಾಯಿ ಮೇರಿ ಇವರಿಬ್ಬರಿಗೂ ಬ್ರೆಡ್- ಜಾಮ್ ಎಂದು ಅಡ್ಡ ಹೆಸರೊಂದನ್ನು ಇಟ್ಟಿದ್ದಳು. ಸೋಜಿಗವೆಂಬಂತೆ ಇವರಿಬ್ಬರೂ ತಮ್ಮ ಕಡೆಯ ಉಸಿರು ಇರುವ ತನಕ ಹಾಗೆಯೇ ಉಳಿದರು. ತಮ್ಮನ ಮೇಲಿನ ಪ್ರೀತಿಯಿಂದ ಅಕ್ಕ ಅವಿವಾಹಿತಳಾಗಿ ಅವನ ಆಸರೆಗೆ ನಿಂತಳು. ತಮ್ಮ ಕಾರ್ಬೆಟ್   ಕೂಡ ಅಕ್ಕನ ತ್ಯಾಗಕ್ಕೆ ಮನಸೋತು ತಾನೂ ಕೂಡ ಅವಿವಾಹಿತನಾಗಿ ಉಳಿದು ಬದುಕಿನುದ್ದಕ್ಕೂ ಆಕೆಯ ನೆರಳಿನಂತೆ ಬದುಕಿದ.

ನೈನಿತಾಲ್ ಹಾಗು ಕಲದೊಂಗಿಯಲ್ಲಿ ವಾಸವಾಗಿದ್ದ ಆಂಗ್ಲ ಮನೆತನಗಳ ಪೈಕಿ ಸುಸಂಸ್ಕೃತ ಕುಟುಂಬವಾಗಿದ್ದ ಕಾರ್ಬೆಟ್‌ನ  ಮನೆಯಲ್ಲಿ ಯಾವುದಕ್ಕೂ ಕೊರತೆಯಿರಲಿಲ್ಲ. ಬಾಲ್ಯದಲ್ಲಿ ಅವನ ಪಾಲನೆ, ಪೋಷಣೆ ನೋಡಿಕೊಳ್ಳಲು ಅವನ ತಾಯಿ ಮನೆತುಂಬಾ ಸೇವಕಿಯರನ್ನ ನೇಮಿಸಿದ್ದಳು. ಕಾರ್ಬೆಟ್  ಗೆ ಬಾಲ್ಯದಿಂದಲೇ ಏಕಕಾಲಕ್ಕೆ ಎರಡು ಸಂಸ್ಕೃತಿಯನ್ನು ಗ್ರಹಿಸಲು ಸಾಧ್ಯವಾಯಿತು. ತನ್ನ ಮನೆಯ ವಾತಾವರಣ ಸಂಪೂರ್ಣ ಇಂಗ್ಲೀಷ್ಮಯವಾಗಿತ್ತು. ಅವನ ಆಹಾರ ಉಡುಪು ಎಲ್ಲವೂ ಆಂಗ್ಲ ಮಕ್ಕಳಂತೆ ಇದ್ದವು ನಿಜ. ಆದರೆ ಅವನು ಬೆಳೆದಂತೆ ಅವನಿಗೆ ಅರಿವಿಲ್ಲದಂತೆ ಭಾರತೀಯ ಸಂಸ್ಕೃತಿಯ ಬೀಜಗಳು ಅವನೆದೆಯಲ್ಲಿ ನೆಲೆಯೂರಿದ್ದವು. ಕಾರ್ಬೆಟ್   ಗೆ  ಭಾರತೀಯರು, ಅದರಲ್ಲೂ ಹಳ್ಳಿಗಾಡಿನ ಬಡಜನತೆಯ ಬಗ್ಗೆ ಅಷ್ಟೋಂದು ಅಕ್ಕರೆ ಏಕೆ? ಎಂಬುದಕ್ಕೆ ನಮಗೆ ಉತ್ತರ ಸಿಗುವುದು ಇಲ್ಲೇ.

ಕಾರ್ಬೆಟ್  ನ ತಾಯಿ ಮೇರಿಯ  ರಿಯಲ್ಎಸ್ಟೇಟ್ ವೈವಹಾರ ದೊಡ್ಡದಾಗುತಿದ್ದಂತೆ ಆಕೆ ಮಕ್ಕಳ ಪಾಲನೆಗೆ ಸ್ಥಳೀಯ ಬಡ ಹೆಣ್ಣುಮಕ್ಕಳನ್ನು. ನೇಮಕ ಮಾಡಿಕೊಂಡಿದ್ದಳು. ಇವರೆಲ್ಲಾ ಬಾಲಕ ಕಾರ್ಬೆಟ್   ಅತ್ತಾಗ ಕಣ್ಣೀರು ಒರೆಸಿ, ಹಸಿವಾದಾಗ ಅನ್ನ ತಿನ್ನಿಸಿ, ತಮ್ಮ ಮಾತೃ ಬಾಷೆಯಾದ ಕುಮಾವನ್ ವೈಖರಿಯ ಹಿಂದಿ ಭಾಷೆಯಲ್ಲಿ ಅವನಿಗೆ ಜೋಗುಳವಾಡಿದರು. ಮಲ ವಿಸರ್ಜಿಸಿದಾಗ  ಹೆತ್ತ ತಾಯಿಯಂತೆ ಬೇಸರಿಸದೆ ಅವನ ಅಂಡು ತೊಳೆದರು, ಆಟವಾಡುತ್ತಾ ಮೈ ಕೈ ಕೊಳೆ ಮಾಡಿಕೊಂಡಾಗ ಅವನಿಗೆ ಸ್ನಾನ ಮಾಡಿಸಿ ಹೊಸ ಪೋಷಾಕು ಹಾಕಿದರು. ಇದರಿಂದಾಗಿ ತನ್ನ ಮನೆಯ ಸಂಸ್ಕೃತಿಯ ಜೊತೆ ಜೊತೆಗೆ ಇನ್ನೋಂದು ಭಾಷೆ ಮತ್ತು ಸಂಸ್ಕೃತಿಗೆ ಕಾರ್ಬೆಟ್   ತನಗರಿವಿಲ್ಲದಂತೆ ತೆರೆದುಕೊಂಡ. ಆ ಬಡ ಹೆಣ್ಣುಮಕ್ಕಳ ಪ್ರೀತಿ ಅವನೆದೆಯಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿತು ಇದು ಅವನ ಬದುಕಿನುದ್ದಕ್ಕೂ ಬಡವರಿಗೆ ನೆರವಾಗಲು ಪ್ರೇರಣೆಯಾಯಿತು.

ಕಾರ್ಬೆಟ್   ನ ಪ್ರಾಥಮಿಕ ವಿದ್ಯಾಭ್ಯಾಸ ನೈನಿತಾಲ್ನಲ್ಲೇ ನಡೆಯಿತು. ಮನೆಯಲ್ಲಿ ಹಿರಿಯವರಾಗಿದ್ದ ಆತನ  ಅಣ್ಣಂದಿರು, ಅಕ್ಕಂದಿರು ಅವನಿಗೆ ಪಾಠ ಹೇಳುವಲ್ಲಿ ನೆರವಾದರು. ಮನೆಯೊಳಗೆ ಭಾರತ ಮತ್ತು ಇಂಗ್ಲೇಂಡ್ ಇತಿಹಾಸದ ಕೃತಿಗಳು, ಛಾಸರ್ನ ಜಾನಪದ ಶೈಲಿಯ ಕೌತುಕದ ಕಥಾ ಮತ್ತು ಕವಿತೆಯ ಪುಸ್ತಕ ಮತ್ತು ವಿಲಿಯಮ್ ಷೇಕ್ಷ್ ಪಿಯರ್ನ ನಾಟಕಗಳು, ಇವೆಲ್ಲಕಿಂತ ಹೆಚ್ಚಾಗಿ ಆರ್ಯವೇದ ಮತ್ತು ಅಲೊಪತಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಸದಾ ಕೈಗೆಟುಕುವಂತೆ ಇರುತಿದ್ದವು. ಪಕ್ಷಿ ಪ್ರಾಣಿ ಕುರಿತಾದ ಸಚಿತ್ರ ಮಾಹಿತಿ ಪುಸ್ತಕಗಳು ಹೆಚ್ಚಾಗಿ ಅವನ ಗಮನ ಸೆಳೆದವು.

ಕಾರ್ಬೆಟ್  ಮೂರು ವರ್ಷದ ಬಾಲಕನಾಗಿದ್ದಾಗಲೇ ತನ್ನ ಹಿರಿಯಣ್ಣಂದಿರಲ್ಲಿ ಒಬ್ಬನಾಗಿದ್ದ ಜಾನ್ ಕ್ವಿಂಟಾನ್ ಕೈಹಿಡಿದು ನೈನಿ ಸರೋವರ, ಅಲ್ಲಿರುವ ನೈನಾದೇವಿಯ ದೇಗುಲ, ಬಝಾರ್ ರಸ್ತೆ ಇವುಗಳನ್ನ ಸುತ್ತು ಹಾಕುತಿದ್ದ. ತನ್ನ ಮನೆಗೆ ಅತಿ ಸನೀಹದಲ್ಲಿದ್ದ ಸರೋವರಕ್ಕೆ ಬರುವ ಬಗೆ ಬಗೆಯ ಪಕ್ಷಿಗಳೆಂದರೆ ಕಾರ್ಬೆಟ್ಗೆ ಎಲ್ಲಿಲ್ಲದ ಆಸಕ್ತಿ. ರಾತ್ರಿಯ ವೇಳೆ ತನ್ನ ಮನೆಯ ಸಮೀಪದ ಅರಣ್ಯದಲ್ಲಿನ ಹುಲಿ, ಚಿರತೆಗಳ ಘರ್ಜನೆಯ ಶಬ್ದಗಳನ್ನು ಕುತೂಹಲದಿಂದ ಆಲಿಸುತಿದ್ದ. ಅಪರೂಪಕ್ಕೆ ಅರಣ್ಯದಲ್ಲಿ ಆನೆಗಳ ಹಿಂಡು ಸಾಗುವ ದೃಶ್ಯವೂ ಅವನಿಗೆ ಲಭ್ಯವಾಗುತಿತ್ತು. ಹೀಗೆ ಬಾಲ್ಯದಿಂದ ನಿಸರ್ಗವನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದ ಕಾರ್ಬೆಟ್  ನಿಗೆ ಮುಂದೆ ಅದು ಅವನ ಜೀವನದ ಹವ್ಯಾಸವಾಗಿ ಬೆಳೆದುಹೋಯಿತು.

ಕಾರ್ಬೆಟ್‌ನ ತಂದೆ ತಾಯಿಗಳಾದ ಕ್ರಿಸ್ಟೊಫರ್‌ ವಿಲಿಯಮ್ಸ್ ಹಾಗು ಮೇರಿಜನ್ ಇವರಿಗೆ ಕುಟುಂಬ ಕುರಿತಂತೆ ಯಾವುದೇ ಅಸ್ತಿರತೆ ಇರಲಿಲ್ಲ. ಕ್ರಿಸ್ಟೊಫರ್‌ ತನ್ನ ಮೊದಲ ಪತ್ನಿಯಿಂದ ಪಡೆದಿದ್ದ ಇಬ್ಬರು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೇಂಡ್ನಲ್ಲಿ ನೆಲೆಯೂರಿದ್ದರು. ಅದೇ ರೀತಿ ಮೇರಿ ತನ್ನ ಮೊದಲ ಪತಿಯಿಂದ ಪಡೆದು ಉಳಿದುಕೊಂಡಿದ್ದ ಏಕೈಕ ಪುತ್ರಿ ಎಂಜಿನಾಮೇರಿ ಶುಶ್ರೂಷಕಿಯಾಗಿ ಬ್ರಿಟಿಷ್ ಸಕರ್ಾರದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಳು. ಉಳಿದ ಮಕ್ಕಳ ಶಿಕ್ಷಣ ಕೂಡ ಯಾವುದೇ ಅಡೆ ತಡೆಯಿಲ್ಲದೆ ಸಾಗುತಿತ್ತು.

ಕಾರ್ಬೆಟ್   ಕುಟುಂಬ ನೆಮ್ಮದಿಯ ಜೀವನ ಸಾಗಿಸುತಿದ್ದಾಗಲೇ 1881ರಲ್ಲಿ ಕಾರ್ಬೆಟ್‌ನ ತಂದೆ ಕ್ರಿಸ್ಟೊಫರ್‌ ಹೃದಯಾಪಘಾತದಿಂದ ಮರಣ ಹೊಂದಿದ. ಕೇವಲ 59ನೆ ವಯಸ್ಸಿಗೆ ತೀರಿ ಹೋದ ಪತಿಯ ಸಾವು ಪತ್ನಿ ಮೆರಿಯ ಪಾಲಿಗೆ ಅನಿರೀಕ್ಷಿತ ಆಘಾತವಾಯಿತು.

ನೈನಿತಾಲ್ ಪಟ್ಟಣವನ್ನು ರೂಪಿಸುವಲ್ಲಿ ಅಪಾರ ಶ್ರಮ ವಹಿಸಿ, ಅಲ್ಲಿ ಪುರಸಭೆಯ ಸಂಸ್ಥಾಪಕಕನಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ  ಕ್ರಿಸ್ಟೊಫರ್‌ ವಿಲಿಯಮ್ಸ್ ಬಗ್ಗೆ ಪಟ್ಟಣದ ನಾಗರೀಕರಲ್ಲಿ ಮತ್ತು ಅಲ್ಲಿ ವಾಸವಾಗಿದ್ದ ಆಂಗ್ಲರ ಕುಟುಂಬಗಳಲ್ಲಿ ವಿಶೇಷ ಗೌರವಗಳಿದ್ದವು. ಹಾಗಾಗಿ ನೈನಿತಾಲ್ ಹೃದಯ ಭಾಗದಲ್ಲಿದ್ದ ಚರ್ಚ್ ನಲ್ಲಿ ಆತನ ಪಾರ್ಥಿವ ಶರೀರಕ್ಕೆ ಎಲ್ಲಾ ಗಣ್ಯರು ಪ್ರಾರ್ಥನೆ ಮತ್ತು ಗೌರವ ಸಲ್ಲಿಸಿ ಸಮೀಪದಲ್ಲಿ ಇದ್ದ ಕ್ರೈಸ್ತ ಸಮುದಾಯದ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಲಾಯಿತು. ಈಗ ಮುಚ್ಚಲ್ಪಟ್ಟಿರುವ ಆ ಸ್ಮಶಾನ ಭೂಮಿಯ ಮುಖ್ಯಬಾಗಿಲಿನ ಬಲಭಾಗದಲ್ಲಿ ಈಗಲೂ ಅವನ ಸಮಾಧಿಯನ್ನು ನಾವು ನೋಡಬಹುದು.

(ಮುಂದುವರೆಯುವುದು)