Tag Archives: ಭೂಮಿ ಹುಟ್ಟಿದ್ದು ಹೇಗೆ

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 4

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


150 ಕೋಟಿ ವರ್ಷಗಳ ಹಿಂದೆ – ಭೂಮಿಯಲ್ಲಿ ಖಂಡಗಳು ವ್ಯಾಪಿಸಿಕೊಂಡವು. ಅಷ್ಟೇ ಅಲ್ಲದೆ ಈ ಭೂಪ್ರದೇಶಗಳು ಚಲಿಸುವುದಕ್ಕೂ ಆರಂಭಿಸಿದ್ದವು. 1912ರಲ್ಲಿ ಆಲ್ಫ್ರೆಡ್ ವ್ಯಾಗ್ನರ್ ಎಂಬ ವಿಜ್ಞಾನಿ ಖಂಡಗಳ ಅಲೆತದ ಸಿದ್ಧಾಂತವನ್ನು ಮಂಡಿಸಿದರು. ಒಮ್ಮೆ ಖಂಡಗಳು ಒಂದೇ ಆಗಿದ್ದು ಕಾಲಾನಂತರ ಭಿನ್ನವಾಗಿ ಹರಡಿಕೊಂಡವು ಎಂದು ವ್ಯಾಗ್ನರ್ ಪ್ರತಿಪಾದಿಸಿದರು. ವಿಜ್ಞಾನಿಗಳು ಅವರ ವಾದವನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಪ್ರತಿಪಾದನೆಗೆ ತಕ್ಕ ಪುರಾವೆ ಹುಡುಕಾಟದಲ್ಲಿ ವ್ಯಾಗ್ನರ್ ವಿಧಿವಶವಾದರು. ಆದರೆ ಅವರು ಪ್ರತಿಪಾದಿಸಿದ ವಿಚಾರ ನಿಜವಾಯಿತು.

ಸಾಗರದ ತಳದಲ್ಲಿ ಶಿಲಾರಸ ಸದಾ ಚಲಿಸುತ್ತಲೇ ಇತ್ತು. ತೀವ್ರವಾದ ಶಾಖದಿಂದ ಭೂಮಿಯ ಮೇಲ್ಪದರ ಬಿರುಕು ಕಾಣಿಸಿಕೊಂಡು ಶಿಲಾರಸ ಹೊಸ ಭೂಮಿ ಪ್ರದೇಶವನ್ನು ಸೃಷ್ಟಿ ಮಾಡುತ್ತಿತ್ತು. ಜೊತೆಗೆ ನಿರಂತರವಾಗಿ ಚಲಿಸುತ್ತಲೆ ಇರುತ್ತಿದ್ದ ಲಾವಾರಸ ಬಿರುಕುಬಿಟ್ಟ ಭೂತೊಗಟೆಯನ್ನು ತನ್ನೊಂದಿಗೆ ಸೆಳೆದೊಯ್ಯುತ್ತಿತ್ತು. ಈ ಪ್ರಕ್ರಿಯೆ ಭೂಭಾಗಗಳನ್ನು ಚಲಿಸುವಂತೆ ಮಾಡಿತ್ತು.

ಉದಾಹರಣೆ, ಫಿಷರ್ ಎನ್ನುವ ಜ್ವಾಲಾಮುಖಿ ಒಂದೇ ಆಗಿದ್ದ ಯೂರೋಪ್ ಮತ್ತು ಅಮೆರಿಕ ಖಂಡಗಳನ್ನು ಬೇರ್ಪಡಿಸಿತು.

ಹೀಗೆ ಖಂಡಗಳ ಅಲೆತ ಕೂಡ ಬಹಳ ವರ್ಷಗಳ ಕಾಲ ನಡೆಯಿತು. ವರ್ಷಕ್ಕೆ ಮೂರು ಸೆಂಟಿ ಮೀಟರ್ ನಂತೆ ಖಂಡಗಳು ಚಲಿಸಿದವು.

ಮಹಾಖಂಡ

ಚಲಿಸುತ್ತಿದ್ದ ಖಂಡಗಳ ನಡುವೆ ಮಹಾಘರ್ಷಣೆಯೊಂದು ಸಂಭವಿಸಿತು. ಆಗ ಹುಟ್ಟಿದ್ದು ಒಂದು ಮಹಾಖಂಡ.

100 ಕೋಟಿ ವರ್ಷಗಳ ಹಿಂದೆ ಭೂಖಂಡಗಳ ನಿರಂತರ ಚಲನೆಯ ಪರಿಣಾಮ ಕೆನಡ ಮತ್ತು ಅಮೆರಿಕಗಳ ನಡುವೆ ಬೇರೆಬೇರೆ ಭೂಖಂಡಗಳು ಡಿಕ್ಕಿ ಹೊಡೆದವು.

ಹೀಗೆ ಸೇರಿದ ಭೂಖಂಡ ಒಂದು ಮಹಾಖಂಡವನ್ನೇ ನಿರ್ಮಿಸಿದವು. ಇದನ್ನು ವಿಜ್ಞಾನಿಗಳು ರೊಡೀನಿಯಾ, ಅಂದರೆ ತಾಯಿನಾಡು ಅಂತ ಕರೆದರು.  ರೊಡೀನಿಯಾ ಬಂಜರು ಖಂಡವಾಗಿತ್ತು. ಅಲ್ಲಿ ಯಾವ ರೀತಿಯ ಜೀವಿಗಳೂ ಇರಲಿಲ್ಲ. ಆದರೆ ಸಾಗರದೊಳಗಿನ ಜೀವಿಗಳಿಗೆ ದೊಡ್ಡ ಆಘಾತವನ್ನು ನೀಡಿತು.

ಈ ಮಹಾಖಂಡ ಭೂಮಿಯ ಮೇಲೆ ಹರಿಯುತ್ತಿದ್ದ ಬೆಚ್ಚನೆಯ ನೀರಿನ ಪ್ರವಾಹಕ್ಕೆ ಅಡ್ಡವಾಯಿತು. ಇದರಿಂದ ಧ್ರುವಪ್ರದೇಶದ ಹಿಮ ತನ್ನ ವ್ಯಾಪ್ತಿ ವಿಸ್ತರಿಸಿತು. ನಿಧಾನವಾಗಿ ಇಡೀ ಸಾಗರಗಳುಹಿಮದ ಪದರಗಳಿಂದ ಮುಚ್ಚಲ್ಪಟ್ಟವು. ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗೆ ಇಳಿಯಿತು. ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹಿಮ ವ್ಯಾಪಿಸಿಕೊಂಡಿತು.

ಭೂಮಿ ಹಿಮದ ಗೋಳವಾಯಿತು.

ಬೆಂಕಿಯುಂಡೆ, ಜಲಪ್ರಳಯವನ್ನು ನೋಡಿದ ಭೂಮಿ ಈಗ ಸಂಪೂರ್ಣ ಹಿಮಗಡ್ಡೆಯಾಗಿ ಹೋಗಿತ್ತು. ರೊಡೀನಿಯಾ ಖಂಡ ಸೃಷ್ಟಿಸಿದ ಈ ಹವಾಮಾನ ವೈಪರೀತ್ಯದಿಂದಾಗಿ ಈ ಗ್ರಹದ ಮೇಲಿದ್ದ ಸಾಗರ ಜೀವಿಗಳು ನಾಶವಾದವು.

ಆದರೆ ಹಿಮನದಿಯ ಅಡಿಯಲ್ಲೂ ಜ್ವಾಲಾಮುಖಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಇದರಿಂದಾಗಿ ಬಿಡುಗಡೆಯಾದ ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ಹಿಮಗಡ್ಡೆಯ ದಟ್ಟಪದರದಲ್ಲಿ ಬಿರುಕು ಮೂಡಿಸಿತು. ರೊಡೇನಿಯಾ ಮಹಾಖಂಡ ಒಡೆಯಿತು.

ಭೂಮಿಯನ್ನು ಆವರಿಸಿಕೊಂಡಿದ್ದ ಮಂಜಿನ ಪದರ ಕರಗಿತು. ಆಮ್ಲಜನಕದ ಪ್ರಮಾಣ ಹೆಚ್ಚಿತು. ಸಾಗರದೊಳಗೆ ಬದುಕುಳಿದ ಜೀವಿಗಳು ವಿಕಾಸಗೊಂಡವು. ವಿಚಿತ್ರವಾದ ಮತ್ತು ಅಪಾಯಕಾರಿ ಜೀವಿಗಳು ಬೆಳೆದವು.

ಭೂಮಿಯ ವಾತಾವರಣದಲ್ಲಿ ಈಗ ಹಿಂದೆಂದಿಗಿಂತ ಅಪಾರ ಪ್ರಮಾಣದಲ್ಲಿ ಆಮ್ಲಜನಕವಿತ್ತು. ಜೀವವಿಕಾಸಕ್ಕೆ ಇದು ಪ್ರಮುಖ ಕಾರಣವಾಯಿತು.

ಕೆನಡಾದ ಬರ್ಬಸ್ ಶೆಲ್ ಕ್ವಾರಿ ಪಳೆಯುಳಿಕೆ ಜಗತ್ತಿನ ಕಿಟಕಿ ಎನಿಸಿಕೊಂಡಿರುವ ಸ್ಥಳ. ಅತ್ಯಲ್ಪಕಾಲದಲ್ಲಿ ಜೀವಿಗಳು ವಿಕಾಸ ಹೊಂದಿದ್ದಕ್ಕೆ ಮತ್ತು ವಿಕಾಸ ಹೊಂದಿದ ಜೀವಿಗಳ ವೈವಿಧ್ಯತೆಗೆ ಪುರಾವೆ ಸಿಕ್ಕಿದ್ದು ಇಲ್ಲಿಂದಲೆ.

ಅಮೆರಿಕದ ವಿಜ್ಞಾನಿ ಚಾರ್ಲ್ಸ್ ಡ್ಯುಲಮ್ ಈ ಕ್ವಾರ್ರಿಯನ್ನು ಪತ್ತೆ ಮಾಡಿದ್ದು. ಸ್ವತಃ ವಾಲ್ಕರ್ ಈ ಕ್ವಾರ್ರಿಯಲ್ಲಿ 60 ಸಾವಿರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಒಂದು ಲಕ್ಷಕೂ ಹೆಚ್ಚು ಪಳೆಯುಳಿಕೆಗಳನ್ನು ವಿವಿಧ ವಿಜ್ಞಾನಿಗಳು ಸಂಗ್ರಹಿಸಿದರು.

50 ಕೋಟಿ ವರ್ಷಗಳ ಹಿಂದೆ ಜೀವಿಗಳು ಸ್ಫೋಟಕ ವೇಗದಲ್ಲಿ ವಿಕಾಸ ಹೊಂದಿದ್ದು ಈ ಪಳೆಯುಳಿಕೆಗಳಿಂದ ತಿಳಿದು ಬಂತು. ಇದನ್ನೇ ಕ್ಯಾಂಬ್ರಿಯನ್ ಸ್ಫೋಟವೆಂದು ಕರೆಯಲಾಯಿತು. ಈ ಕಾಲದ ಸಾಗರ ಜೀವಿಗಳು ಕೇವಲ ಸಸ್ಯಗಳನ್ನಷ್ಟೇ ತಿಂದು ಬದುಕುತ್ತಿರಲಿಲ್ಲ. ಅವು ಮತ್ತೊಂದು ಸಹ-ಜೀವಿಯನೇ ತಿಂದು ಬದುಕಲು ಆರಂಭಿಸಿದ್ದವು.

ಇದೇ ಸಮಯದಲು ಅವುಗಳ ದೇಹ ಹಲವು ಮಾರ್ಪಾಟುಗಳನ್ನು ಕಾಣಲು ಆರಂಭಿಸಿದವು. ಕಣು, ಅಸ್ಥಿಪಂಜರ, ಹಲ್ಲು ಮುಂತಾದವು ಹಲವು ಜೀವಿಗಳಲ್ಲು ವಿಕಾಸವಾಗಿದ್ದವು. ಆಧುನಿಕ ಜೀವಿಗಳು ಭೂಮಿಗೆ ಬಂದವು.

ನಂತರದ 10 ಕೋಟಿ ವರ್ಷಗಳಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಹೆಚ್ಚಳದಿಂದ ಓಜೋನ್ ಪದರ ರಚನೆಯಾಗಿ ಭೂಮಿಯನ್ನು ಸುತ್ತುವರೆಯಿತು. ಇದು ಸೂಕ್ಷ್ಮ ಅತಿನೇರಳೆ ಕಿರಣಗಳಿಂದ ಭೂಮಿಯ ಮೇಲಿದ್ದ ಸೂಕ್ಷ್ಮ ಜೀವಿಗಳನ್ನು ಉಳಿಸಿತು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು.

ಆಮೇಲೆ 3 ಬಿಲಿಯನ್ ಅಂದರೆ 300 ಕೋಟಿ ವರ್ಷಗಳು ಅಂದರು.

ಕಡೆಗೆ 456 ಕೋಟಿಗಳು ಎಂಬ ತೀರ್ಮಾನಕ್ಕೆ ಬಂದರು. ಇದನ್ನೇ ಭೂಮಿ  ಹುಟ್ಟಿದ ಕಾಲವೆಂದು,  ಈ ಧೀರ್ಘ ಅವಧಿಯನ್ನು ಡೀಪ್ ಟೈಮ್ ಎಂದು ವಿಜ್ಞಾನಿಗಳು ಕರೆದಿದ್ದಾರೆ.

ಇಲ್ಲಿಗೆ ಭೂಮಿಯ ವಯಸ್ಸು ಎಷ್ಟು ಎಂಬ ವಿಚಾರ ಗೊತ್ತಾಯಿತು. ಆದರೆ ಈ 456 ಕೋಟಿ ವರ್ಷಗಳ ಪಯಣ ಹೇಗಿತ್ತು ಅನ್ನೋದನ್ನು ತಿಳಿಯುವ ಅಗತ್ಯವಿತ್ತು. ವಿಜ್ಞಾನಿಗಳು ಶಿಲೆಗಳನ್ನು, ಸಂಶೋಧನೆಗಳನ್ನು ಕ್ರಮವಾಗಿ ಜೋಡಿಸಿ ಭೂಮಿಯ ವಿಕಾಸದ ಹಾದಿಯನ್ನು ಅದರ ತಿರುವುಗಳನ್ನು ತಿಳಿಯಲು ಮುಂದಾದರು.

ಭೂಮಿ ಬಾಲ್ಯಾವಸ್ಥೆಯಲ್ಲಿದ್ದಾಗ ಉಲ್ಕೆಗಳು ಅಪ್ಪಳಿಸುತ್ತಿದ್ದವು. ಅದಾಗಲೇ ಲಾವಾರಸದಿಂದ ತುಂಬಿದ್ದ ಭೂಮಿ ನಿಧಾನವಾಗಿ ತಣಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಬಿದ್ದ ಉಲ್ಕೆಗಳು ಶಿಲೆಗಳ ರೂಪ ಪಡೆದವು ಎನ್ನುತ್ತಾರೆ ವಿಜ್ಞಾನಿಗಳು.

ವಾಸ್ತವವಾಗಿ ವಿಜ್ಞಾನಿಗಳಿಗೆ ಕೋಟ್ಯಂತರ ವರ್ಷಗಳಷ್ಟು ಪುರಾತನವಾದ ಶಿಲೆಗಳು ಸಿಕ್ಕಿದ್ದು ಕಡಿಮೆ. ಆದರೆ ಅಷ್ಟೇ ಪುರಾತನವಾದ ಯುರೇನಿಯಂನಿಂದ ಕೂಡಿದ ಜರ್ಕಾನ್ ಹರಳುಗಳು ದೊರೆತವು.

ಕೋಟ್ಯಾನುಕೋಟಿ ವರ್ಷಗಳಷ್ಟು ಹಿಂದೆ ಇದ್ದ ವಾತಾವರಣದ ಸ್ವರೂಪವನ್ನು ಕಟ್ಟಿಕೊಟ್ಟ ಹರಳುಗಳಿವು. ಆ ಕಾಲದಲ್ಲಿದ್ದ ನೀರಿನ ಕಣದ ಗುರುತುಗಳೂ ಈ ಹರಳುಗಳಿಂದಲೇ ಸಿಕ್ಕವು.

ನೀರು ಎಲ್ಲಿಂದ ಬಂತು?

ಇಷ್ಟಾಗಿಯೂ ನೀರು ಎಲ್ಲಿಂದ ಬಂತು ಎಂಬ ಬಗ್ಗೆ ನಿರ್ದಿಷ್ಟ ನಿಖರ ಮಾಹಿತಿ ಇಲ್ಲ.

ನೀರಿನ ಮೂಲ ಭೂಮಿಯಲ್ಲ ಎಂದು ಒಂದಿಷ್ಟು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಆಕಾಶವೇ ನೀರಿನ ಮೂಲ. ಉಲ್ಕೆಗಳೂ, ಧೂಮಕೇತುಗಳೂ, ನೀರಿನ ಕಣಗಳನ್ನು ಭೂಮಿಗೆ ತಂದವು ಎನ್ನುತ್ತಾರೆ.

ಇದಕ್ಕೆ ವಿರುದ್ಧವಾದ ವಾದವೂ  ಇದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಆವಿ, ಇಂಗಾಲದ ಡೈಆಕ್ಸೈಡ್ ಜೊತೆ ಬೆರೆತು ದಟ್ಟ ಮೋಡಗಳು ಆದವು. ಭೂಮಿ ಸುತ್ತ ಹರಡಿಕೊಂಡವು. ಆ ಮೋಡಗಳೇ ಭೂಮಿಗೆ ನೀರು ಹರಿಸಿದವು ಎನ್ನುವುದು ಆ ಇನ್ನೊಂದು ವಾದ.

ನೀರಿನ ಕುರಿತ ಈ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ನೀರು ಹೇಗೆ ಭೂಮಿಗೆ ಬಂತೋ ಏನೋ ಬಹುದೊಡ್ಡ ಬದಲಾವಣೇಯನ್ನೇ ತಂತು…

ಮಳೆ ಮಳೆ ಮಳೆ..

ಆಗ ಭೂಮಿಗೆ 400 ಕೋಟಿ ವರ್ಷಗಳು. ಭೂಮಿ ಸುತ್ತ ಹರಡಿಕೊಂಡಿದ್ದ ಮೋಡಗಳ ಮೇಲೆ ಗುಡುಗು ಮಿಂಚುಗಳು ಅಪ್ಪಳಿಸಿ ಮಳೆ ಸುರಿಯಲಾರಂಭಿಸಿತು.

ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ. ಲಕ್ಷಾಂತರ ವರ್ಷಗಳ ಕಾಲ ಮಳೆ ಸುರಿದೇ ಸುರಿಯಿತು. ಭೂಮಿ ಒಂದು ಜಲವಿಶ್ವವಾಗಿ ಪರಿವರ್ತನೆಗೊಂಡಿತು. ಭೂಮಿಯ 90 ಭಾಗ ನೀರು ತುಂಬಿಕೊಂಡು ಅಗಾಧ ಸಾಗರವಾಗಿ ಹೋಯಿತು.

ಇಷ್ಟಾಗಿಯೂ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದವು. ಈ ಅಗಾಧ ಸಾಗರದಲ್ಲಿ ಅಲ್ಲಲ್ಲಿ ಇದ್ದ ದ್ವೀಪಗಳಿಂದ ಲಾವಾರಸ ಉಕ್ಕುವುದು ನಿಂತಿರಲಿಲ್ಲ. ಈ ಲಾವಾರಸ ಸಾಗರ ಸೇರಿ ಕಬ್ಬಿಣಾಂಶ ಹೆಚ್ಚಿ ನೀರು ಹಸಿರು ಬಣ್ಣಕ್ಕೆ ತಿರುಗಿತು. ಮತ್ತೊಂದೆಡೆ ಇಂಗಾಲದ ಡೈಆಕ್ಸೈಡ್ ಆಕಾಶವನ್ನು ದಟ್ಟವಾಗಿ ಆವರಿಸಿಕೊಂಡಿದ್ದರಿಂದ ಕೆಂಪಾಗಿ ಕಾಣುತ್ತಿತ್ತು.

ಭೂಮಿಯ ವಾತಾವರಣದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿತ್ತು. 100 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶವಿತ್ತು. ಲಾವಾರಸ ಬೆರೆತು ಭೂಮಿಯನ್ನು ಆವರಿಸಿದ ನೀರು ಆಸಿಡ್‌ನಷ್ಟು ತೀಕ್ಷ್ಣವಾಗಿತ್ತು. ಸುಮಾರು50 ಕೋಟಿ ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.

ಈ ವಿಷಮ ವಾತಾವರಣ ಮುಂದಿನ ಬೆಳವಣಿಗೆಗೆ ವೇದಿಕೆ ರೂಪಿಸುತ್ತಿದ್ದವು ಎನ್ನಬಹುದೇನೊ. ಇನ್ನೂ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿಗಳು ಹೊಸರೀತಿಯ ಶಿಲಾಪದರವನ್ನು ರೂಪಿಸುತ್ತ, ಭೂಖಂಡಗಳ ಸೃಷ್ಟಿಕಾರ್ಯದಲ್ಲಿ ನಿರತವಾಗಿದ್ದವು. ಭೂಮಿ ಅಗಾಧವಾದ, ಅನನ್ಯವಾದ ಗ್ರಹ ಆಗುವ ಕಾಲ ಹತ್ತಿರವಾಗುತ್ತಿತ್ತು.

ಭೂಮಿ ಹುಟ್ಟಿ 100 ಕೋಟಿ ವರ್ಷಗಳಾಗುವ ಹೊತ್ತಿಗೆ ಎಲ್ಲಿ ನೋಡಿದರೂ ನೀರೆ ತುಂಬಿಕೊಂಡಿತ್ತು. ಜೊತೆಗೆ ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮುತ್ತಲೇ ಇದ್ದವು ಕೂಡ. ಈ ಪ್ರಕ್ರಿಯೆಯಲ್ಲಿ ಒಂದು ವಿಧದ ಶಿಲೆ ಸೃಷ್ಟಿಯಾಯಿತು. ಅದೇ ಗ್ರಾನೈಟ್ ಶಿಲೆ. ಇದೇ ಭೂಮಿಯ ಪದರವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತು.

ಭೂಮಿ ಜಲಾವೃತವಾಗಿ, ಸಾಗರದೊಳಗೆ ಜ್ವಾಲಾಮುಖಿಗಳು ಸಿಡಿಯುತ್ತಿದ್ದಾಗ ಶಿಲೆಯೊಂದು ರಚನೆಯಾಗಲಾರಂಭಿಸಿತು. ಕುದಿವ ನೀರು, ಲಾವಾರಸದ ಮಿಶ್ರಣದಿಂದ ಅತ್ಯಂತ ಕಠಿಣವಾದ ಭಾರದ ಶಿಲೆ ರಚನೆಯಾಯಿತು. ಅದೇ ಗ್ರಾನೈಟ್.

ದಕ್ಷಿಣ ಆಫ್ರಿಕಾದ ಸ್ಥಳವೊಂದರಲ್ಲಿ ಪತ್ತೆಯಾದ ಬಂಡೆಗಳು ಗ್ರಾನೈಟ್ ಶಿಲೆಯ ರಹಸ್ಯ ಬಿಚ್ಚಿಟ್ಟವು. ಈ ಬಂಡೆಗಳ ಅಧ್ಯಯನದಿಂದ ಗ್ರಾನೈಟ್ ಭೂಮಿಯ ತೊಗಟೆಯಾಗಿ ವಿಸ್ತರಿಸಿಕೊಂಡಿದ್ದು ವಿಜ್ಞಾನಿಗಳಿಗೆ ತಿಳಿದುಬಂತು.

ಹೀಗೆ ಗ್ರಾನೈಟ್ ಭೂಮಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿತು. ಕಾಲಾನಂತರದಲ್ಲಿ ಅಲ್ಲಲ್ಲಿ ಬಿರುಕುಬಿಟ್ಟು ಸಾಗರದ ನೀರು ಭೂಗರ್ಭ ಸೇರಲಾರಂಭಿಸಿತು.

250 ಕೋಟಿ ವರ್ಷಗಳು

ಈ ಹೊತ್ತಿಗೆ ಸಾಗರಗಳ ಪಾರುಪತ್ಯೆ ಕಡಿಮೆ ಆಯಿತು. ಭೂಮಿಯ ಬಹುಪಾಲು ಮೇಲ್ಮೈ ಘನರಚನೆಗಳಿಂದ ಕೂಡಿತ್ತು. ಭೂಖಂಡಗಳ ಉಗಮವಾಗಿತ್ತು. ಇದೇ ವೇಳೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಕೂಡ ಕಾಣಿಸಿಕೊಂಡಿತು. ಭೂಮಿಯಲ್ಲಿ ನೀರು ಕಾಣಿಸಿಕೊಂಡ ಕೋಟ್ಯಾಂತರ ವರ್ಷಗಳಲ್ಲಿ ಏಕಕೋಶ ಜೀವಿಗಳು ಕಾಣಿಸಿಕೊಂಡವು. ಅವುಗಳಿಂದ ಆಮ್ಲಜನಕ ಉತ್ಪತ್ತಿಯಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಅಂತಹ ಜೀವಿಗಳು ಇದ್ದವೆ ಎಂಬ ಸಾಧ್ಯತೆ ಹೊಳೆದದ್ದೆ ಸ್ಟ್ರೊಮೆಟೊಲೈಟ್‌ಗಳನ್ನು ನೋಡಿದ ಮೇಲೆ.

1 ಅಡಿ ಅಗಲ, 2 ಅಡಿ ಎತ್ತರದ ಕಲ್ಲಿನಂತೆ ಕಾಣುವ  ರಚನೆಗಳೇ ಸ್ಟ್ರೊಮೆಟೊಲೈಟ್‌ಗಳು. ಬ್ಯಾಕ್ಟೀರಿಯಲ್ ಆಲ್ಗೇಗಳಿಂದ ಆದ ಇವು ಭೂಮಿಗೆ ಉಸಿರುಕೊಟ್ಟ ಜೀವಿಗಳು.

ಫಿಲಿಫ್ ಫ್ಲೈಫರ್ಡ್ ಎಂಬ ವಿಜ್ಞಾನಿ ಇವುಗಳನ್ನು ಪತ್ತೆ ಮಾಡಿದ್ದು. ನಂತರ ವಿಜ್ಞಾನಿಗಳು ಸ್ಟ್ರೊಮೆಟೊಲೈಟ್‌ಗಳ ಪಳೆಯುಳಿಕೆಗಳನ್ನು ಗುರುತಿಸಿದರು. ಏಕಕೋಶ ಜೀವಿಗಳ ಹಲವು ಪದರಗಳಿಂದಾದ ಈ ಸ್ಟ್ರೊಮೆಟೊಲೈಟ್‍ಗಳು ಭೂಮಿಯ ಬಹುಭಾಗಗಳಲ್ಲಿ ಹರಡಿಕೊಂಡಿದ್ದು ಕಂಡು ಬಂತು.

ದ್ಯುತಿಸಂಶ್ಲೇಷಣೆಯಿಂದ ವಾತಾವರಣಕ್ಕೆ ಆಮ್ಲಜನಕ ಪೂರೈಸಿದ ಮೊದಲ ಜೀವಿಗಳಿವು. ಬರೋಬ್ಬರಿ  200 ಕೋಟಿ ವರ್ಷಗಳು ನಿರಂತರವಾಗಿ ಈ ಪ್ರಕ್ರಿಯೆ ನಡೆಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಬೇ ಬೀಚಿನಲ್ಲಿ ಇವತ್ತಿಗೂ ಸ್ಟ್ರೊಮೆಟೊಲೈಟ್‌ಗಳು ನೋಡಲು ಸಿಗುತ್ತವೆ.

220  ಕೋಟಿ ವರ್ಷಗಳಿಂದ 170 ಕೋಟಿ ವರ್ಷಗಳ ವರೆಗೆ ಸಾಗರದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕ ತುಂಬಿತು.

200 ಕೋಟಿ ವರ್ಷಗಳ ಆಮ್ಲಜನಕೀಕರಣದಿಂದ ಭೂಮಿ ನೀಲಿ ಬಣ್ಣಕ್ಕೆ ತಿರುಗಿತು.

ನೀಲಿ ಆಕಾಶ, ನೀಲಿ ಸಾಗರ….

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಭೂಮಿ ಹುಟ್ಟಿದ್ದು ಹೇಗೆ – DVD ಪಡೆದುಕೊಳ್ಳುವುದು ಹೇಗೆ?


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ನೆನ್ನೆ ಈ ಸಾಕ್ಷ್ಯಚಿತ್ರದ ಬಗ್ಗೆ ಬರೆದಾಗಿನಿಂದ ಹಲವರು ಇದರ ಡಿವಿಡಿ ಪಡೆದುಕೊಳ್ಳುವುದು ಹೇಗೆ ಎಂದು ಫೋನಿನಲ್ಲಿ ಮತ್ತು ಕಾಮೆಂಟ್ ವಿಭಾಗಲ್ಲಿಯೂ ಕೇಳಿದ್ದಾರೆ. ಹೀಗೆ ಮಾಡಬಹುದು: ನೀವು ಬೆಂಗಳೂರಿನಲ್ಲಿ ಇದ್ದರೆ ಮತ್ತು ಕೆಳಗಿನ ವಿಳಾಸಕ್ಕೆ ಬರಬಹುದಾದರೆ ಫೋನ್ ಮಾಡಿ ಬಂದು ತೆಗೆದುಕೊಂಡು ಹೋಗಬಹುದು. ಆಗದೆ ಇದ್ದಲ್ಲಿ ಈ ಕೆಳಗಿನ ವಿಳಾಸಕ್ಕೆ “Ravi Krishna Reddy” ಹೆಸರಿಗೆ ಎಂ.ಒ./ಚೆಕ್/ಡಿಡಿ (ರೂ. 250) ಕಳುಹಿಸಿದರೆ ನಿಮಗೆ ಆದಷ್ಟು ಬೇಗ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮನಿ ಆರ್ಡರ್ ಮಾಡಿದರೆ ಸ್ಪಷ್ಟವಾಗಿ ನಿಮ್ಮ ವಿಳಾಸ ಮತ್ತು ಫೋನ್ ಸಂಖ್ಯೆ ಬರೆಯಿರಿ. ಚೆಕ್ ಅಥವ ಡಿಡಿ ಕಳುಹಿಸಿದರೆ ಒಂದು ಕಾಗದಲ್ಲಿ ನಿಮ್ಮ ಹೆಸರು, ವಿಳಾಸ, ಮತ್ತು ಫೋನ್ ಸಂಖ್ಯೆ ಬರೆದು ಪೋಸ್ಟ್ ಮಾಡಿ.

ವಿಳಾಸ:
ರವಿ ಕೃಷ್ಣಾರೆಡ್ಡಿ
೨೨೨, B೪, ತುಂಗಭದ್ರ,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ,
ಬೆಂಗಳೂರು – ೫೬೦೦೪೭
ಪೋ: ೯೬೮೬೦-೮೦೦೦೫

ಭೂಮಿ ಹುಟ್ಟಿದ್ದು ಹೇಗೆ? ಕನ್ನಡ ಸಾಕ್ಷ್ಯಚಿತ್ರ


– ರವಿ ಕೃಷ್ಣಾರೆಡ್ಡಿ


ಸ್ನೇಹಿತರೆ,

ಇಂದು ಕರ್ನಾಟಕದ ಮನೆಮನೆಯ ಒಳಗೆ ಜ್ಯೋತಿಷಿಗಳು, ಮಂತ್ರವಾದಿಗಳು, ಪೂಜಾರಿಗಳು, ಗ್ರಹ-ನಕ್ಷತ್ರಗಳ ಸುಳ್ಳು ಆಧಾರದ ಮೇಲೆ ಭವಿಷ್ಯ ಹೇಳುವವರು, ವಾಮಾಚಾರಿಗಳು, ಮೂಢರು, ದಡ್ಡರು ಟಿವಿ ಎನ್ನುವ ಪೆಟ್ಟಿಗೆಯ ಮೂಲಕ ಬೆಳ್ಳಂಬೆಳಗ್ಗೆಯ ಬಂದು ಕೂರುತ್ತಿದ್ದಾರೆ. ಕ್ರಮೇಣ ಜನರಲ್ಲಿ ಮೂಢನಂಬಿಕೆ ಹೆಚ್ಚುತ್ತಲೇ ಹೋಗುತ್ತಿದೆ.

ತಮ್ಮ ಮಕ್ಕಳು ಇಂಜಿನಿಯರ್-ಡಾಕ್ಟರ್ ಆಗಬೇಕೆಂದು ಬಯಸುವ ಅಕ್ಷರಸ್ಠರು ಸಹ ಯಾವುದೇ ರೀತಿಯ ವೈಜ್ಞಾನಿಕ ತಿಳಿವಳಿಕೆಗೆ ತೆರೆದುಕೊಳ್ಳದೆ ವಿಶೇಷ ಪೂಜೆ, ವ್ರತ, ಯಜ್ಞ-ಯಾಗಾದಿಗಳಲ್ಲಿ, ವಾಮಾಚಾರದಲ್ಲಿ ತಮ್ಮ ಅವಕಾಶ-ಯಶಸ್ಸುಗಳನ್ನು ಹುಡುಕುತ್ತಿದ್ದಾರೆ. ಹರಕೆ ಹೊತ್ತುಕೊಳ್ಳುವುದು, ಸ್ವಲ್ಪ ದುಡ್ಡು ಬರುವಷ್ಟರಲ್ಲಿ ದೂರದ ದೇವಸ್ಥಾನಗಳಿಗೆ ಹೋಗುವುದು, ಅಸಹ್ಯ ಎನ್ನಿಸುವ ರೀತಿಯಲ್ಲಿ ಕಾಣಿಕೆ ಕೊಡುವುದು ಹೆಚ್ಚಾಗುತ್ತಿದೆ.

ಇವೆಲ್ಲವಕ್ಕೂ ಕ್ಯಾಟಲಿಸ್ಟ್ ರೀತಿಯಲ್ಲಿ ನಮ್ಮ ದೃಶ್ಯ ಮಾಧ್ಯಮಗಳು ಪೂರಕವಾಗಿ ಕೆಲಸ ಮಾಡುತ್ತಿವೆ.

ಇದನ್ನು ಎದುರಿಸುವುದು ಹೇಗೆ. ಯಾವ ಕಡೆಯಿಂದ ಎನ್ನುವುದು ನನ್ನನ್ನು ಬಹಳ ದಿನದಿಂದ ಕಾಡುತ್ತಿತ್ತು.

ಈ ಹಿನ್ನೆಲೆಯಲ್ಲಿ಼ ನಾನು ಅಮೆರಿಕದಿಂದ ಬಂದ ನಂತರ ವರ್ಷದ ಹಿಂದೆ ಕಡಿಮೆ ಖರ್ಚಿನಲ್ಲಿ ನಮ್ಮ ಬ್ರಹ್ಮಾಂಡ, ಸೂರ್ಯ, ಭೂಮಿ, ಚಂದ್ರ ರೂಪುಗೊಂಡ ಬಗ್ಗೆ ಮತ್ತು ಕಳೆದ ಕೋಟ್ಯಾಂತರ ವರ್ಷಗಳಲ್ಲಿ ಭೂಮಿ ಮತ್ತು ಇಲ್ಲಿಯ ಜೀವಗಳು ರೂಪುಗೊಂಡ ಬಗ್ಗೆ ಒಂದು ಕನ್ನಡ ಡಾಕ್ಯುಮೆಂಟರಿ ಮಾಡಬೇಕೆಂದು ತೀರ್ಮಾನಿಸಿದೆ. ಇದಕ್ಕೆ ಗೆಳೆಯರಾದ ಕುಮಾರ್, ಈಶ್ವರ್, ಶ್ರೀಮಂತ್, ಮತ್ತಿತರರು ಸಹಕರಿಸಿದರು. ಸುಮಾರು 15 ರಿಂದ 20 ಸಾವಿರ ಖರ್ಚು ಬಂತು.

45 ನಿಮಿಷಗಳ ಈ ಡಾಕ್ಯುಮೆಂಟರಿಯ ಬಹುತೇಕ ಕೆಲಸ ಮುಗಿದು ಸುಮಾರು ಐದಾರು ತಿಂಗಳಾಯಿತು. ಹತ್ತಾರು ಜನ ಸ್ನೇಹಿತರಿಗೆ ಪರಿಚಿತರಿಗೆ ನೋಡಿ ಅಭಿಪ್ರಾಯ ಹೇಳಲು ಕೊಟ್ಟಿದ್ದೆ. ಸ್ನೇಹಿತರೊಬ್ಬರು ತಾವು ಕೆಲಸ ಮಾಡುವ ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೋಸ್ಕರ ಇದರ ಪ್ರದರ್ಶನ ಇಟ್ಟಿದ್ದರು. ಯುವ ವಿದ್ಯಾರ್ಥಿಗಳ ಅಂದಿನ ಪ್ರತಿಕ್ರಿಯೆ ನೋಡಿ ಇದೊಂದು ಸಾರ್ಥಕ ಪ್ರಯತ್ನ ಎಂದು ಅನ್ನಿಸಿತ್ತು.

ಈ ಸಾಕ್ಷ್ಯಚಿತ್ರದ ಪ್ರದರ್ಶನ ಇಟ್ಟು ಇದನ್ನು ಬಿಡುಗಡೆ ಮಾಡಬೇಕು ಎನ್ನಿಸಿತ್ತು. ಆದರೆ, ಸಾವಿರಾರು ರೂಪಾಯಿ ಖರ್ಚು ಮಾಡಿ ಹಲವೆ ಜನ ಬಂದು ನೋಡಿದರೆ ಅದು ಒಂದು ರೀತಿಯ ಅನೈತಿಕ ವೆಚ್ಚ ಎನ್ನಿಸಿ ಸುಮ್ಮನಾದೆ. ಬದಲಿಗೆ ಇದನ್ನು ಹೆಚ್ಚು ಜನ ನೋಡಲಿ ಎಂದು ಯೂಟ್ಯೂಬ್‌ಗೆ ಸೇರಿಸಿದ್ದೇನೆ. (ಡಿವಿಡಿಯಲ್ಲಿಯ ಚಿತ್ರ-ದೃಶ್ಯದ ಗುಣಮಟ್ಟ ಇನ್ನೂ ಚೆನ್ನಾಗಿದೆ. ಇಲ್ಲಿ ಅಂತರ್ಜಾಲಕ್ಕಾಗಿ 240 ಪಿಕ್ಸೆಲ್‌ಗಳಿಗೆ ಸೀಮಿತಗೊಳಿಸಲಾಗಿದೆ.)

ಇದೊಂದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಸಾಕ್ಷ್ಯಚಿತ್ರ. ಯಾವುದೇ ಹಣಕಾಸಿನ ಲಾಭವನ್ನು ನಾನು ಇಲ್ಲಿ ಅಪೇಕ್ಷಿಸುತ್ತಿಲ್ಲ. ಯಾವುದೇ ಕಾಪಿರೈಟ್ಸ್ ಇಲ್ಲ. ಇದರ ಡಿವಿಡಿ ಪಡೆದುಕೊಂಡು ಯಾರು ಎಷ್ಟು ಕಾಪಿ ಮಾಡಿಯಾದರೂ ಹಂಚಬಹುದು.

ನಿಮ್ಮಲ್ಲಿ ಯಾರಿಗಾದರೂ ಈ ಸಾಕ್ಷ್ಯಚಿತ್ರದ ಡಿವಿಡಿ ಬೇಕಾದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ. ಬೆಲೆ ಕೇವಲ 25 ರೂಪಾಯಿ. (ಒಂದು ಖಾಲಿ ಡಿವಿಡಿಯ ಬೆಲೆಯೆ 12 ರಿಂದ 25 ಇರುತ್ತದೆ.) ಆದರೆ ಒಂದು ಡಿವಿಡಿ ಬರ್ನ್ ಮಾಡಲು ಸಾಕಷ್ಟು ಸಮಯ ಮತ್ತು ಶ್ರಮ ಹಿಡಿಸುವುದರಿಂದ ನೀವು ಕನಿಷ್ಟ ಹತ್ತು ಕೊಳ್ಳಬೇಕಾಗುತ್ತದೆ. ಅಂದರೆ 250 ರೂಪಾಯಿ ಕೊಟ್ಟರೆ ನಿಮಗೆ ಹತ್ತು ಡಿವಿಡಿಗಳು ಸಿಗುತ್ತವೆ. ಇವುಗಳನ್ನು ನೀವು ನಿಮ್ಮ ಸ್ನೇಹಿತರಿಗೆ, ನೆಂಟರಿಗೆ, ನೀವು ಓದಿದ ಶಾಲಾಕಾಲೇಜುಗಳಿಗೆ ಉಡುಗೊರೆಯಾಗಿ ಕೊಡಬಹುದು. ಈ ಡಾಕ್ಯುಮೆಂಟರಿಯನ್ನು ಒಮ್ಮೆ ನೋಡಿದರೆ ಇದನ್ನು ಯಾರು ನೋಡಬೇಕು ಎನ್ನುವ ಕಲ್ಪನೆ ನಿಮಗಾಗುತ್ತದೆ ಎನ್ನುವ ನಂಬಿಕೆ ನನ್ನದು.

ಮೊದಲೆ ಹೇಳಿದಂತೆ ಇದು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾಡಿದ ಪ್ರಯತ್ನ. ಇನ್ನೂ ಹಲವು ವೈಜ್ಞಾನಿಕ ಮತ್ತು ವೈಚಾರಿಕ ವಿಷಯಗಳ ಬಗ್ಗೆ ಇಂತಹುದೇ ಇನ್ನೂ ಕೆಲವು ಪ್ರಯತ್ನ ಮಾಡಬೇಕೆಂಬ ಆಲೋಚನೆಗಳಿವೆ. ನಿಮ್ಮಲ್ಲಿ ಯಾರಿಗಾದರೂ ಇಂತಹ ಪ್ರಯತ್ನದಲ್ಲಿ ಪಾಲ್ಗೊಳ್ಳಬೇಕೆಂಬ ಇಚ್ಚೆಯಿದ್ದಲ್ಲಿ ಮತ್ತು ನಿಮಗೆ ಸ್ಚ್ರಿಪ್ಟ್ ಬರೆಯುವ, ಅಥವ ವಿಡಿಯೊ ಎಡಿಟಿಂಗ್ ಮಾಡುವ ಅನುಭವವಿದ್ದಲ್ಲಿ ದಯವಿಟ್ಟು ಸಂಪರ್ಕಿಸಿ. (ತಮ್ಮ ಬಿಡುವಿನ ಸಮಯದಲ್ಲಿ ಇಂತಹ ಕೆಲಸಗಳಲ್ಲಿ ತೊಡಗಿಕೊಳ್ಳುವ ಮನಸ್ಸಿರುವ volunteers ಮಾತ್ರ. ಉದ್ಯೋಗಾಕಾಂಕ್ಷಿಗಳಲ್ಲ.)

ದೂರವಾಣಿ: ೯೬೮೬೦-೮೦೦೦೫