Tag Archives: ಮಡೆಸ್ನಾನ

ದಲಿತ, ಶೂದ್ರರು – ಹಿಂದೂಗಳಲ್ಲ ಎಂದು ತಿಳಿಯಬೇಕಿದೆ

: ಭೂಮಿ ಬಾನು

ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಮಡೆಸ್ನಾನ ಕುರಿತು ಬೆಂಗಳೂರಿನಲ್ಲಿ ಭಾನುವಾರ ನಡೆದ ಸಂವಾದ ಒಂದು ಬಹುಮುಖ್ಯ ಸಮಾರಂಭ. ಮಡೆಸ್ನಾನ ಅಷ್ಟೇ ಅಲ್ಲದೆ, ಅನೇಕ ವಿಚಾರಗಳು ಅಲ್ಲಿ ಚರ್ಚೆಗೆ ಬಂದವು. ಯಾವ ಪ್ರಶ್ನೆಗಳಿಗೂ ಸೂಕ್ತ ಪರಿಹಾರಗಳು ಸಿಗದಿದ್ದರೂ, ಚರ್ಚೆಗೆ ವೇದಿಕೆ ಸಿದ್ಧಗೊಂಡಿತ್ತು ಎನ್ನುವುದೇ ಸಮಾಧಾನದ ಸಂಗತಿ.

ಪೇಜಾವರ ಮಠದ ವಿಶ್ವೇಶತೀರ್ಥರು ಸಂವಾದದಲ್ಲಿ ಪಾಲ್ಗೊಂಡ ಏಕೈಕ ಕಾರಣಕ್ಕೆ ಅಭಿನಂದನಾರ್ಹರು. ಸಂವಾದದ ಚರ್ಚೆಗಳು, ಅಭಿಪ್ರಾಯ ವಿನಿಯಮ ಅವರ ಆಲೋಚನಾ ಕ್ರಮದಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಆದರೂ, ಹೀಗೊಂದು ಚರ್ಚೆಯಲ್ಲಿ ಪಾಲ್ಗೊಳ್ಳಬಲ್ಲ ಪುರೋಹಿತಶಾಹಿ ಸ್ವಾಮಿ ಅವರೊಬ್ಬರೇ. ಅವರೂ ಕೂಡ ತಾನು ಬರುವುದಿಲ್ಲ ಎಂದು ನಿರಾಕರಿಸಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಅವರನ್ನು ಒತ್ತಾಯ ಮಾಡಲಾಗುತ್ತಿರಲಿಲ್ಲ. ಆದರೆ ಅವರ ಗುಂಪಿನ ಇತರೆ ಸ್ವಾಮಿಗಳನ್ನು ಇಂತಹದೊಂದು ಸಂವಾದಕ್ಕೆ ಒಪ್ಪಿಸಿ ಕರೆತರುವುದು ಊಹಿಸಲೂ ಸಾಧ್ಯವಿಲ್ಲ.

ಪೇಜಾವರ ಶ್ರೀಗಳು ತಮ್ಮ ಕೆಲ ಕಾರ್ಯಕ್ರಮಗಳಿಂದ (ದಲಿತರ ಕೇರಿಯಲ್ಲಿ ಪಾದಯಾತ್ರೆ, ದಲಿತ ಸ್ವಾಮಿಯೊಂದಿಗೆ ಭೋಜನ) ತಾವು ಸಮುದಾಯಗಳ ಮಧ್ಯೆ ಸಾಮರಸ್ಯ ಬಯಸುತ್ತೇವೆ ಎಂದು ತೋರಿದ್ದರೂ, ಅದರ ಹಿಂದೆ ‘ಹಿಂದೂ ಧರ್ಮ’ ಎಂಬ ದೊಡ್ಡ ಬ್ಯಾನರ್ ನ ಅಸ್ಥಿತ್ವವನ್ನು ಗಟ್ಟಿಗೊಳಿಸುವುದೇ ಹೊರತು ಬೇರೆ ಉದ್ದೇಶ ಇದ್ದಂತೆ ಕಾಣುವುದಿಲ್ಲ.

ಮಡೆಸ್ನಾನ ಕುರಿತ ಚರ್ಚೆಯಲ್ಲಿ ಪೇಜಾವರ ಶ್ರೀಯ ಒಳಗಡೆ ಎಂಥ ಕಠೋರ ಕೋಮುವಾದಿ ಅಡಗಿದ್ದಾನೆ ಎನ್ನುವುದು ಗೊತ್ತಾಯಿತು. ಮುಸಲ್ಮಾನ ಬಾಂಧವರು ರಂಜಾನ್ ವೇಳೆ ಉಪವಾಸ ಅಂತ್ಯ ಮಾಡುವಾಗ ಕುಟುಂಬ ವರ್ಗ, ಸ್ನೇಹಿತರೆಲ್ಲಾ ಸೇರಿ ಒಂದೇ ಅರಿವಾಣ (ತಟ್ಟೆ) ದಲ್ಲಿ ಊಟಮಾಡುವ ಶ್ರೇಷ್ಠ ನಡೆಯನ್ನು (gesture) ಮಡೆಸ್ನಾನದಂತಹ ಅನಿಷ್ಟ ಪದ್ಧತಿಗೆ ಹೋಲಿಸುತ್ತಾರೆ.

ಚರ್ಚೆಯ ಸಂದರ್ಭದಲ್ಲಿ ಮುಸಲ್ಮಾನ ಬಾಂಧವರೊಬ್ಬರು ತಮ್ಮ ಸಂಪ್ರದಾಯ ಭ್ರಾತೃತ್ವದ ಸಂಕೇತ ಎಂದು ಸ್ಪಷ್ಟಪಡಿಸಿದ ನಂತರವೂ, ಸ್ವಾಮೀಜಿ ಬದಲಾಗಲಿಲ್ಲ. ಅವರ ಪ್ರಕಾರ ಅದು ಒಬ್ಬರ ಎಂಜಲನ್ನು ಇನ್ನೊಬ್ಬರು ತಿಂದಂತೆಯೇ. ಅಪ್ಪ, ಮಗ, ಸ್ನೇಹಿತ ಎಲ್ಲರೂ ಒಂದೇ ತಟ್ಟೆಯಲ್ಲಿ ಕುಳಿತು ಊಟಮಾಡುವಾಗ ಅಸಹ್ಯ ಹುಟ್ಟಿಸುವ ಸಂಗತಿಯಾದರೂ ಏನಿರುತ್ತೆ? ಇಂತಹ ನಡೆಯನ್ನು ಸಮಚಿತ್ತದಿಂದ ಗ್ರಹಿಸದಷ್ಟು ಮೂಢರಲ್ಲ ಸ್ವಾಮೀಜಿ. ಆದರೆ ಅವರಲ್ಲಿ ಕೋಮುದ್ವೇಷ ಭಾವನೆಗಳು ಆಳವಾಗಿ ನೆಲೆಯೂರಿವೆ. ಆ ಕಾರಣವೇ ಅವರು ಮಡೆಸ್ನಾನ ಚರ್ಚೆ ಸಂದರ್ಭದಲ್ಲಿ ಮುಸಲ್ಮಾನರಲ್ಲಿ ಜಾರಿಯಲ್ಲಿರುವ ಕ್ರೂರ ವಿವಾಹ ವಿಚ್ಚೇದನ ಪದ್ಥತಿಯನ್ನು ಉದಾಹರಿಸುವ ಪ್ರಯತ್ನ ಮಾಡುತ್ತಾರೆ. ಮಹಿಳೆಯರನ್ನು ಶೋಷಿಸುವ ಅಂತಹ ಕ್ರೂರ ಪದ್ಥತಿ ಟೀಕೆಗೆ ಅರ್ಹವೇ. ಅದು ಬದಲಾಗಬೇಕು. ಆದರೆ ಮಡೆಸ್ನಾನದ ಸಮರ್ಥನೆಗೆ ದಾಳವಾಗಬಾರದಷ್ಟೆ.

ವೀರಭದ್ರ ಚನ್ನಮಲ್ಲ ಸ್ವಾಮಿಯವರು ಇಂತಹದೊಂದು ಚರ್ಚೆ ಆಯೋಜನೆಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪಾತ್ರ ಶ್ಲಾಘನೀಯ. ಅಂತೆಯೇ ಸಾಣೇಹಳ್ಳಿ ಪಂಡಿತಾರಾಧ್ಯರು ಮತ್ತಿತರ ಸ್ವಾಮೀಜಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಇವರೆಲ್ಲಾ ಸೇರಿ ಮಡೆಸ್ನಾನ ನಿಷೇಧಕ್ಕೆ ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ. ಆದರೆ, ನೆನಪಿಡಲೇಬೇಕಾದ ಬಹುಮುಖ್ಯ ಸಂಗತಿ ಎಂದರೆ, ಶೂದ್ರ ಸಮುದಾಯಗಳನ್ನು ಪ್ರತಿನಿಧಿಸುವ ಬಹುಮುಖ್ಯ ಮತ್ತು ಪ್ರಭಾವಶಾಲಿ ಮಠಗಳನ್ನು ಪ್ರತಿನಿಧಿಸುವವರ ಅನುಪಸ್ಥಿತಿ ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ಕೊಡುವವರನ್ನ, ಆರ್.ಎಸ್.ಎಸ್ ಬೈಠಕ್ ಗಳಲ್ಲಿ ಕುಂತು ಬರುವವರನ್ನು ಇಂತಹದೊಂದು ಸಂವಾದಕ್ಕೆ ಕರೆಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವ ನಿರ್ಧಾರಕ್ಕೆ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಬಂದಿದ್ದರೆ ತಪ್ಪೇನಿಲ್ಲ.

ಚನ್ನಮಲ್ಲ ಸ್ವಾಮೀಜಿಯವರು ಪೇಜಾವರರ ಮುಂದೆ ಕೆಲವು ಬೇಡಿಕೆಗಳನ್ನಿಟ್ಟರು. ಪಂಕ್ತಿಬೇಧವನ್ನು ನಿಲ್ಲಿಸಿ, ಶೂದ್ರ, ದಲಿತ ಸಮುದಾಯ ಪ್ರತಿನಿಧಿಸುವ ಗುರುಗಳಿಗೆ ವರ್ಷಕ್ಕೆ ಒಮ್ಮೆಯಾದರೂ ಉಡುಪಿ ಕೃಷ್ಣನನ್ನು ಪೂಜಿಸುವ ಅವಕಾಶ ಕಲ್ಪಿಸಿ ಎಂದು ಮನವಿ ಇಟ್ಟರು. ಪೇಜಾವರರಿಂದ ಇದಾವುದರ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಅವರಿಂದ ಅದನ್ನು ನಿರೀಕ್ಷಿಸುವುದೂ ತಪ್ಪು. ಮುಖ್ಯವಾಗಿ ಅವರೊಬ್ಬ ಸಂಪ್ರದಾಯನಿಷ್ಠ, ಜಾತಿವ್ಯವಸ್ಥೆ ನಿಷ್ಠ, ಅತಿಯಾದ ಕೋಮುಭಾವನೆಗಳನ್ನು ತುಂಬಿಕೊಂಡಿರುವ ಸ್ವಾಮೀಜಿ.

ಮುಖ್ಯವಾಗಿ ಶೂದ್ರ ಹಾಗೂ ದಲಿತ ವರ್ಗಗಳು ಅರಿತು ಕೊಳ್ಳಬೇಕಿರುವ ಸತ್ಯ, ಅವರ್ಯಾರೂ ಹಿಂದುಗಳಲ್ಲ, ಬದಲಿಗೆ ಹಿಂದುಗಳೆಂದು ‘ಗುರುತಿಸಲ್ಪಡುತ್ತಿರುವವರು’. ದಲಿತ ಅಥವಾ ಶೂದ್ರ ಕುಟುಂಬಗಳಲ್ಲಿ ಚಾಲ್ತಿಯಲ್ಲಿರುವುದು ಜಾತಿ ಮಾತ್ರ, ಧರ್ಮವಲ್ಲ. ಹುಟ್ಟಿದ ಮಗುನಿಗೆ ಅಪ್ಪ-ಅಮ್ಮ ತಾವು ಯಾವ ಜಾತಿಯವರು ಎಂಬುದನ್ನು ಹೇಳಿಕೊಡುತ್ತಾರೆಯೇ ಹೊರತು ಯಾವ ಧರ್ಮದವರೆಂದಲ್ಲ. ಅಪ್ಪ-ಅಮ್ಮ ನೇ ‘ನೀನು ಇಂತಹ ಧರ್ಮಕ್ಕೆ ಸೇರಿದವನು’ ಹೇಳಿಲ್ಲ. ಹಿಂದುಗಳೆಂದು ಗುರುತಿಸುವುದು, ಗುರುತಿಸಿಕೊಳ್ಳುವುದು ಇತ್ತೀಚಿನ ಸಂಪ್ರದಾಯ. ಯಾರು ಕ್ರಿಶ್ಚಿಯನ್ ಅಲ್ಲವೋ, ಯಾರು ಜೈನರಲ್ಲವೋ, ಯಾರು ಮುಸಲ್ಮಾನರಲ್ಲವೋ ಅವರನ್ನೆಲ್ಲಾ ಹಿಂದೂಗಳೆಂದು ಗುರುತಿಸುವ ಪ್ರಕ್ರಿಯೆ ಇತ್ತೀಚಿನದ್ದು. ಈ ಮಾತನ್ನು ಅನೇಕರು ಒಪ್ಪದೇ ಇರಬಹುದು. ಸಾವಿರಾರು ವರ್ಷಗಳ ಹಿಂದಿನ ಪುರಾತನ ಗ್ರಂಥಗಳನ್ನು ಉಲ್ಲೇಖಿಸಿ ‘ಶೂದ್ರ, ದಲಿತರೆಲ್ಲಾ ಹಿಂದುಗಳೇ’ ಎಂದು ಹೇಳಲು ಬರಬಹುದು. ಆದರೆ ಒಂದಂತೂ ಸ್ಪಷ್ಟ. ದಲಿತ, ಶೂದ್ರರಿಗೆ ಶತಶತಮಾನಗಳಿಂದ ಅಕ್ಷರ ಜ್ಞಾನ ನಿರಾಕರಿಸಲಾಗಿತ್ತು. ಹಾಗಾಗಿ ಯಾವು ಪುರಾತನ ಗ್ರಂಥಗಳ ಉಲ್ಲೇಖಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ.

ಈ ನಿಟ್ಟಿನಲ್ಲಿ ಯೋಚನೆ ಆರಂಭವಾದಾಗ, ಜಾಗೃತಿಯಾದಾಗ, ಸಹಪಂಕ್ತಿ ಭೋಜನಕ್ಕೆ, ಗರ್ಭಗುಡಿ ಪ್ರವೇಶಕ್ಕೆ, ಬೇಡಿಕೆ ಇಡುವ ಚಾಳಿ ಬಿಟ್ಟುಹೋಗುತ್ತದೆ. ಆಗ ಸಮಾಜದಲ್ಲಿ ನಿಜ ಅಲ್ಪಸಂಖ್ಯಾತರು ಯಾರು ಎಂಬುದು ಅರಿವಾಗುತ್ತದೆ. ಹಾಗಾದಾಗ, ಮಡೆಸ್ನಾನದಂತಹ ಅನಿಷ್ಟ ಪದ್ಧತಿಗಳು ತಾನೇತಾನಾಗಿ ನಿಂತುಹೋಗುತ್ತವೆ.

ನನ್ನ ಭಯಾತಂಕಗಳು, ಮಡೆಸ್ನಾನ, ನಮ್ಮ ರಾಜಕಾರಣ…

-ರವಿ ಕೃಷ್ಣಾರೆಡ್ಡಿ

ಕಳೆದೆರಡು ವರ್ಷಗಳಿಂದ ನನಗಿರುವ ಭಯಾತಂಕಗಳೇ ಬೇರೆ. ಅವು ಬಹುಶಃ ನನ್ನ ಅನೇಕ ಸ್ನೇಹಿತರಿಗಿರುವ ಅಥವ ಇದ್ದಿರಬಹುದಾದ ಭಯಾತಂಕಗಳಿಗಿಂತ ಭಿನ್ನವಾದವು. ಹೆಚ್ಚುತ್ತಿರುವ ಜಾಗತಿಕ ತಾಪಮಾನವೆ ನನ್ನ ಭಯಾತಂಕಕ್ಕೆ ಮೂಲ ಕಾರಣ. ಏಳು ವರ್ಷದ ಮಗಳಿಗೆ ಮತ್ತು ಎರಡು ಮುಟ್ಟುತ್ತಿರುವ ಮಗನಿಗೆ ತಂದೆಯಾಗಿ ನನ್ನ ಆತಂಕ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.

ಈ ಆತಂಕದ ಹಿನ್ನೆಲೆಯೆಲ್ಲಿಯೇ ನಾನು ಸಸ್ಯಾಹಾರಿಯಾಗಲು ತೀರ್ಮಾನಿಸಿದ್ದು. ಅಮೇರಿಕದಲ್ಲಿದ್ದಾಗ ಅದಕ್ಕೊಂದಿಷ್ಟು ಅರ್ಥವಿತ್ತು. ಆದರೆ ಅದಕ್ಕೆ ಇಲ್ಲಿ ಅಷ್ಟು ಘನವಾದ ಅರ್ಥವಿಲ್ಲ. ಆದರೂ ನಾನು ಸುಡುವ ಪೆಟ್ರೋಲು ಮತ್ತು ವಿದ್ಯುತ್‌ಗೆ ಮತ್ತು ಜಾಗತಿಕ ತಾಪಮಾನ ವೃದ್ಧಿಗೆ ನನ್ನ ಕೊಡುಗೆ ಇದ್ದಿರಬಹುದಾದ ಇತರ ವೈಯಕ್ತಿಕ ಕ್ರಿಯೆಗಳಿಗೆ ಪ್ಯಾಯಶ್ಚಿತ್ತವೆಂಬಂತೆ ಅದನ್ನು ನಡೆಸಿಕೊಂಡು ಬರುತ್ತಿದ್ದೇನೆ. ಇನ್ನು ಸ್ಥಳೀಯ ಆಹಾರ ಪದಾರ್ಥಗಳನ್ನೇ–ಕಾರ್ಬನ್ ಫೂಟ್‌ಪ್ರಿಂಟ್ ಆದಷ್ಟೂ ಕಮ್ಮಿ ಇರುವುದನ್ನೇ, ತಿನ್ನಬೇಕು ಎನ್ನುವ ಆಶಯ ಇನ್ನೂ ಆರಂಭಿಸಲೇ ಆಗಿಲ್ಲ.

ಈ ವರ್ಷದ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿದ್ದಾಗ ಈ “Hot: Living Through the Next Fifty Years on Earth” ಎನ್ನುವ ಪುಸ್ತಕ ಅಮೆಜಾನ್.ಕಾಮ್‌ನಲ್ಲಿ ಕಣ್ಣಿಗೆ ಬಿದ್ದದ್ದು. ನನ್ನ ಮಗಳದೇ ವಯಸ್ಸಿನ ಮಗಳೊಬ್ಬಳ ತಂದೆಯಾಗಿರುವ ಅಮೇರಿಕನ್ ಪತ್ರಕರ್ತ ಮಾರ್ಕ್ ಹರ್ಟ್ಸ್‌ಗಾರ್ಡ್ ತನ್ನ ಮಗಳ ಮುಂದಿನ ದಿನಗಳು ಹೇಗಿರುತ್ತವೆ ಮತ್ತು ಅವಳು ಹೇಗೆ ಜೀವನ ಸಾಗಿಸಬೇಕಾದೀತು ಎನ್ನುವ ಬಗ್ಗೆ ಬರೆದಿರುವ ಪುಸ್ತಕ ಎನ್ನುವ ಬ್ಲರ್ಬ್ ಓದಿಯೇ ಅದನ್ನು ಕೊಂಡಿದ್ದೆ. ಈಗ ಅದನ್ನು ಓದಲು ಆರಂಭಿಸಿರುವೆ. ನನ್ನ ರಾಜ್ಯದ ಮತ್ತು ರಾಷ್ಟ್ರದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಓದು ನನ್ನ ಭಯಾತಂಕಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಈ  ಹಿನ್ನೆಲೆಯಲ್ಲಿ ನಾನು ಕಳೆದ ವಾರದಿಂದ ಚರ್ಚೆಯಾಗುತ್ತಿರುವ ಎಂಜಲು ಮಡೆಸ್ನಾನದ ಬಗ್ಗೆ ಟಿಪ್ಪಣಿ ಮಾಡಬಯಸುತ್ತೇನೆ. ಯಾರು ಯಾರ ಎಂಜಲೆಲೆಯ ಮೇಲೆ ಉರುಳಾಡಿದರೂ ಅದು ಅವಮಾನದ ಪ್ರಶ್ನೆಯೇ. ಬಾಹ್ಮಣೇತರರು ಉಂಡೆದ್ದ ಎಲೆಯ ಮೇಲೆ ಬ್ರಾಹ್ಮಣರು ಉರುಳಾಡಿದರೂ (ಅಂತಹ ಒಂದು ಸಾಧ್ಯತೆ ಭಾರತದಲ್ಲೆಲ್ಲೂ ಇದ್ದ ಹಾಗೆ ಇಲ್ಲ; ಅದು ಬೇರೆ ಪ್ರಶ್ನೆ.) ಅದು ಮನುಷ್ಯನ ಘನತೆಯೆ ಹಿನ್ನೆಲೆಯಲ್ಲಿ ಅಸಹ್ಯವೇ ಮತ್ತು ಅವಮಾನವೆ. ಇನ್ನು ಬ್ರಾಹ್ಮಣರು ತಿಂದು ಎಂಜಲು ಬಳಿದು ಬಿಟ್ಟ ಎಲೆಯ ಮೇಲೆ ಬ್ರಾಹ್ಮಣೇತರರು ಉರುಳಾಡುವುದರಲ್ಲಿ ಕೇವಲ ವ್ಯಕ್ತಿಗತ ಘನತೆಯ ಪ್ರಶ್ನೆ ಮಾತ್ರವಲ್ಲ, ಜಾತೀಯತೆಯ, ಅದು ಪೋಷಿಸಿಕೊಂಡು ಬಂದ ಅಸ್ಪೃಶ್ಯತೆಯ, ಅಸಮಾನತೆಯ, ಹಿಂದೂ ಸಮಾಜದ ತಾರತಮ್ಯಗಳ ಪ್ರಶ್ನೆಗಳೆಲ್ಲಾ ಅಡಗಿವೆ. ಇದನ್ನು ನಿಲ್ಲಿಸಬೇಕೆ ಬೇಡವೆ ಎನ್ನುವುದು ನನ್ನಂತಹವನಿಗೆ ಚರ್ಚಾಸ್ಪದ ಪ್ರಶ್ನೆಯೇ ಅಲ್ಲ. ಕೆಲವರು ಕಳೆದ ವರ್ಷ ತಮ್ಮ ಅಹಂಕಾರದಲ್ಲಿ ಇದನ್ನು ಕೂದಲು ಸೀಳುವ ಪ್ರಶ್ನೆ ಮಾಡಿಕೊಂಡಿದ್ದರು. ಉದ್ದಟರು ಮತ್ತು ಮೂರ್ಖರು. ಒಂದು ಅಸಹ್ಯ ಸಾಮೂಹಿಕ ಕ್ರಿಯೆಯನ್ನು ಬಹಿರಂಗವಾಗಿ ಯಾವುದೇ ಸಂಕೋಚ-ನಾಚಿಕೆಗಳಿಲ್ಲದೆ ಸಮರ್ಥಿಸಿಕೊಳ್ಳುವಷ್ಟು ನಮ್ಮ ಸಮಾಜ ಹಿನ್ನಡೆದಿದೆ ಎಂದರೆ ಏನು ಹೇಳುವುದು?

ಇಲ್ಲಿ ನಾಜೂಕಾಗಿ ಮಾತನಾಡುವವರೂ ಹಲವರಿದ್ದಾರೆ. ಪೇಜಾವರ ವಿಶ್ವೇಶ್ವರ ತೀರ್ಥರೆಂಬ ಪೂರ್ಣಾವಧಿ ಮತೀಯ ರಾಜಕೀಯ ಕಾರ್ಯಕರ್ತ ಮತ್ತು ಅಲ್ಪಾವಧಿ ಮಠಾಧೀಶರನ್ನು ಕೆಲವು ಟಿವಿ ಚಾನಲ್‌ಗಳು ಸಂದರ್ಶಿಸಿದವು. ಅವರು ಹೇಳಿದ್ದು, ’ಈ ವಿಷಯದ ಬಗ್ಗೆ ನಾನು ತಟಸ್ಥ’. ತಾನು ಅದರ ಪರವೂ ಇಲ್ಲ, ವಿರುದ್ಧವೂ ಇಲ್ಲ ಎನ್ನುವ ಇವರು ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ? Status quo ಕಾಯ್ದುಕೊಳ್ಳಬೇಕು ಎನ್ನುವುದರಲ್ಲಿಯೇ ಎಂಜಲು ಮಡೆಸ್ನಾನದ ಪರವಾದ ಬಲವಾದ ನಿಲುವು ಇದೆ. ಅವರ ಇಡೀ ಮಾತಿನ ಅರ್ಥ ಅದೇ ಇತ್ತು. ತಾನು ತಟಸ್ಥ ಎಂದು ಹೇಳುವುದು ತಾನು ಎಂಜಲು ಮಡೆಸ್ನಾನದ ಪರ ಇದ್ದೇನೆ ಎನ್ನುವುದನ್ನು ಧ್ವನಿಸುತ್ತದೆ ಎಂದು ಗೊತ್ತಾಗದಷ್ಟು ಮುಗ್ಧ ಅಥವ ಮೂರ್ಖರೇ ಇವರು? ಯಾರಾದರೂ ಈ ವಿಷಯದ ಬಗ್ಗೆ ತಾನು ತಟಸ್ಥ, ನೋ ಕಾಮೆಂಟ್ಸ್ ಎಂದರೆಂದರೆ ಅವರು ಎಂಜಲು ಸ್ನಾನದ ಪರ ಇದ್ದಾರೆ ಎಂದೇ ಅರ್ಥ.

ಇನ್ನು ರಾಜಕಾರಣಿಗಳ ವಿಷಯ. ಇಂದು ಕರ್ನಾಟಕದ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಇದರ ಬಗ್ಗೆ ಗಂಭೀರವಾಗಿ ಮಾತನಾಡುತ್ತಿಲ್ಲ. ಇದು ಕೇವಲ ಸಾಮಾಜಿಕ ಅಥವ ಮತಾಚರಣೆಯ ಪ್ರಶ್ನೆ ಅಲ್ಲ. ಇಂತಹ ಒಂದು ವಿಷಯದ ಬಗ್ಗೆ ತೆಗೆದುಕೊಳ್ಳುವ ನಿಲುವು ನಮ್ಮ ಭವಿಷ್ಯದ ನಿಲುವುಗಳನ್ನೂ ನಿರ್ದೇಶಿಸುತ್ತದೆ. ಈ ಇಡೀ ಚರ್ಚೆಯನ್ನು ಪ್ರಗತಿಪರ ಮತ್ತು ಉದಾರವಾದಿ ಹಿನ್ನೆಲೆಯಲ್ಲಿ ನೋಡಿ ರಾಜ್ಯದ ಜನತೆಯ ಮುಂದೆ ಹೇಗೆ ಇದು ಅಸಹ್ಯ ಮತ್ತು ಒಂದು ಕೆಟ್ಟ ಪರಂಪರೆಯೊಂದರ ಪಳೆಯುಳಿಕೆ, ಯಾಕಾಗಿ ಇದನ್ನು ನಿಲ್ಲಿಸಬೇಕು ಮತ್ತು ವಿರೋಧಿಸಬೇಕು, ಜನ ಮತ್ತು ಸರ್ಕಾರ ಈಗ ಮಾಡಬೇಕಿರುವುದು ಏನು ಎಂದು ಹೇಳಬಲ್ಲ ಒಬ್ಬನೇ ಒಬ್ಬ ರಾಜಕಾರಣಿ ನಮ್ಮ ಮಧ್ಯದಲ್ಲಿಲ್ಲ.

ಇದೇ ಈ ಹೊತ್ತಿನ ದೊಡ್ಡ ದುರಂತ.

ನಾವು ಅಧಿಕಾರ ರಾಜಕಾರಣಿಗಳನ್ನು ಬೆಳೆಸುತ್ತಿದ್ದೇವೆ. ಆದರೆ ನಮ್ಮ ವರ್ತಮಾನವನ್ನು ಸಹನೀಯಗೊಳಿಸಬಲ್ಲ ಮತ್ತು ನಮ್ಮ ಮತ್ತು ನಮ್ಮ ಮುಂದಿನ ತಲೆಮಾರಿಗೆ ಭವಿಷ್ಯವನ್ನು ಕಟ್ಟಿಕೊಡಬಲ್ಲ ಮುಂದಾಳುಗಳನ್ನು ಬೆಳೆಸುತ್ತಿಲ್ಲ. ನಾವು ಬೆಳೆಸುತ್ತಿರುವುದೆಲ್ಲ ಓಟಿನ ಮೇಲೆ ಗಮನವಿಟ್ಟುಕೊಂಡಿರುವ ಸ್ವಾರ್ಥಿಗಳನ್ನು, ಗಂಭೀರ ವಿಷಯದ ಬಗ್ಗೆ ಮಾತನಾಡಲು ಧೈರ್ಯ ಸಾಲದ ಹೆದರುಪುಕ್ಕಲರನ್ನು, ಇಲ್ಲವೆ ಇವು ಯಾವೊಂದೂ ಅರ್ಥವಾಗದ ಮೂರ್ಖರನ್ನು. ಇಂದು ಕರ್ನಾಟಕದಲ್ಲಿ ಯಾವೊಬ್ಬ ಪ್ರಮುಖ ರಾಜಕಾರಣಿಯೂ ಪ್ರಗತಿಪರ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ ಎಂದರೆ ಅದಕ್ಕೆ ಎರಡು ಕಾರಣಗಳಿವೆ. ಒಂದು, ಈ ರಾಜಕಾರಣಿಗಳು ಇಂತಹುದರ ಬಗ್ಗೆ ಮಾತನಾಡಬಲ್ಲಷ್ಟು ಅರ್ಹತೆ ಪಡೆದಿಲ್ಲದಿರುವುದು, ಎರಡನೆಯದು, ಅರ್ಹತೆ ಇದ್ದರೂ ಅವರ ಮಾತನ್ನು ಸಾವಧಾನದಿಂದ ಕೇಳುವಂತಹ ಮತ್ತು ಪ್ರಶಂಸಿಸುವಂತಹ ವಾತಾವರಣವೆ ಇಲ್ಲಿ ಇಲ್ಲದಿರಬಹುದು. ಎರಡೂ ಒಳ್ಳೆಯ ಲಕ್ಷಣಗಳಲ್ಲ.

ನಮ್ಮ ಭವಿಷ್ಯದ ದಿನಗಳು ನಿಜಕ್ಕೂ ಕರಾಳವಾಗಲಿವೆ. ಕಳೆದ ಆರೇಳು ವರ್ಷದಿಂದ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಳೆ ಹೇಳಿಕೊಳ್ಳುವ ರೀತಿಯಲ್ಲಿ ಕೈಕೊಟ್ಟಿಲ್ಲ. ಆದರೆ ಇದೊಂದು ಚಕ್ರದ ರೀತಿ. ಎಲ್ ನೀನ್ಯೊ ಪರಿಣಾಮವಾಗಿ ಮುಂದಿನ ವರ್ಷಗಳಲ್ಲಿ ಮಳೆ ಕೈಕೊಡಲಿದೆ. ಇದನ್ನು ಹೇಳಲು ಕಾಲಜ್ಞಾನಿಯೇ ಬೇಕಿಲ್ಲ. ವಿಜ್ಞಾನ ಮತ್ತು ಕಳೆದ ಹಲವು ದಶಕಗಳ ಮಳೆಬೆಳೆಗಳ ಗಮನಿಕೆಯೇ ಸಾಕು. ಇದರ ಜೊತೆಗೆ ಊಹಿಸಲು ಸಾಧ್ಯವಾಗದಂತಹ ದಿನಗಳು ಜಾಗತಿಕ ತಾಪಮಾನ ಏರಿಕೆಯಿಂದ ನಮ್ಮದಾಗಲಿವೆ. ವಿಶೇಷವಾಗಿ ಮಳೆಯಾಶ್ರಿತ ಬಯಲುಸೀಮೆಯ ಜನರ ಸ್ಥಿತಿ ದುರ್ಭರವಾಗಲಿದೆ. ಪ್ಪ್ರತಿಯೊಂದು ಆಹಾರಪದಾರ್ಥಕ್ಕೂ ಕೈಚಾಚುವ ನಗರವಾಸಿಗಳ ಸ್ಥಿತಿಯೂ ಘೋರವಾಗಲಿದೆ. ಆ ದಿನಗಳ ಸವಾಲಿಗೆ ನಮ್ಮ ಇಂದಿನ ರಾಜಕಾರಣಿಗಳು ಸಿದ್ದರಿದ್ದಾರೆಯೇ? ಅಂದಿಗೆ ನಾಯಕತ್ವ ಕೊಡಬಲ್ಲ, ಸತ್ಯ ನುಡಿಯಬಲ್ಲ, ವಿಜ್ಞಾನ ಗಮನಿಸಬಲ್ಲ, ಸ್ವಾರ್ಥ ತೊರೆಯಬಲ್ಲವರಂತಹವರನ್ನು ನಾವು ನಮ್ಮ ಪ್ರತಿನಿಧಿಗಳನ್ನಾಗಿ ಆರಿಸಿಕೊಂಡಿದ್ದೇವೆಯೇ? ಅಥವ, ಅಂದಿನ ದಿನಗಳು ಬಯಸುವ ನಾಯಕತ್ವವನ್ನು ಸಾಧ್ಯವಾಗಿಸುವಂತಹ ಪೂರಕ ವಾತಾವರಣವನ್ನು ನಾವು ನಿರ್ಮಿಸುತ್ತಿದ್ದೇವೆಯೇ?

ಹೌದು ಎಂದು ಹೇಳಲು ನನಗೆ ಯಾವ ಸೂಚನೆ ಸಂಕೇತಗಳೂ ಕಾಣಿಸುತ್ತಿಲ್ಲ. ನಮ್ಮ ಸಮಾಜ ಆತ್ಮಹತ್ಯಾತ್ಮಕ ರೀತಿಯಲ್ಲಿಯೇ ವರ್ತಿಸುತ್ತಿದೆ.

ಈ ಹಿನ್ನೆಲೆಯಲ್ಲಿಯೇ, ನನ್ನೆಲ್ಲ ಸಾಮಾಜಿಕ ಜವಾಬ್ದಾರಿಗಳನ್ನು ಮರೆತು ಕೇವಲ ಒಬ್ಬ ತಂದೆಯಾಗಿ ಯೋಚಿಸಿದಾಗಲೆಲ್ಲ ನನ್ನ ಭಯಾತಂಕಗಳು ಹೆಚ್ಚುತ್ತಲೇ ಹೋಗುತ್ತವೆ. ಎಂಜಲು ಮಡೆಸ್ನಾನದಂತಹ ಸರಳ ವಿಷಯದ ಬಗ್ಗೆ ನಿಲುವು ತೆಗೆದುಕೊಳ್ಳಲಾಗದ ಸಮಾಜ ಮತ್ತು ಸರ್ಕಾರಗಳು ಇದಕ್ಕಿಂತ ಗಂಭೀರವಾದ ವಿಷಯಗಳ ಬಗ್ಗೆ ಏನೆಲ್ಲಾ ಮಾಡಬಹುದು? ಅವರು ಏನು ಮಾಡಿದರೂ ಅದು ಸರಿಯಾದ ಕ್ರಮ ಆಗಿರುವುದಿಲ್ಲ. ಯಾಕೆಂದರೆ ಹಾಗೆ ನಿರ್ಧಾರ ತೆಗೆದುಕೊಳ್ಳುವವರ್‍ಯಾರಿಗೂ ಅಂತಹ ವಿಷಯಗಳ ಬಗ್ಗೆ ಮೂಲಭೂತ ಜ್ಞಾನ ಇರುವುದೂ ಸಂದೇಹವೆ.

ಆದರೂ, ಈ ಎಲ್ಲಾ ಭಯಾತಂಕಗಳ ನಡುವೆಯೂ ನನಗಿರುವ ಏಕೈಕ ಧೈರ್ಯ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಅದನ್ನು ನಾವು ಸ್ವಚ್ಚವಾಗಿ ಉಳಿಸಿಕೊಂಡರೆ ಭವಿಷ್ಯ ಎಂತಹ ಸವಾಲು ಒಡ್ಡಿದರೂ ಕೊನೆಗೆ ಒಂದು ನಾಗರೀಕತೆಯಾಗಿ ನಾವು ಉಳಿಯುತ್ತೇವೆ, ಗೆಲ್ಲುತ್ತೇವೆ.

ನಮ್ಮ ಮುಂದಿನ ದಿನಮಾನಗಳನ್ನು define ಮಾಡುವ ವಿದ್ಯಮಾನ ಒಂದಿದ್ದರೆ ಅದು ಜಾಗತಿಕ ತಾಪಮಾನ ಏರಿಕೆ ಮತ್ತು ಬದಲಾಗುವ ಹವಾಮಾನ. ಆ ಕಾರಣದಿಂದಾಗಿಯೇ ನಮ್ಮ “ವರ್ತಮಾನ.ಕಾಮ್”ನಲ್ಲಿ ಈ ವಿದ್ಯಮಾನದ ಕುರಿತಾಗಿ ನಿಯಮಿತವಾಗಿ ಚರ್ಚೆಯಾಗುವಂತೆ ನೋಡಿಕೊಳ್ಳುವ ಜರೂರು ಇದೆ ಎನ್ನಿಸುತ್ತಲೆ ಇದೆ. ಯಾರಾದರು ಓದುಗರು ಇದರ ಬಗ್ಗೆ ಗಮನ ಹರಿಸಿದ್ದರೆ ದಯವಿಟ್ಟು ಬರೆಯಿರಿ. ಇಲ್ಲವೆ, ಕರ್ನಾಟಕದಲ್ಲಿ ಅಂತಹವರ್ಯಾರಾದರೂ ಇದ್ದರೆ ತಿಳಿಸಿ, ಅವರ ಕೈಯ್ಯಲ್ಲಿ ಬರೆಸಲು ಪ್ರಯತ್ನಿಸೋಣ. ನಾನು ಆಗಲೇ ಹೇಳಿದಂತೆ ಬೇರೆಲ್ಲಾ ವಿಷಯಗಳಿಗಿಂತ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ, ಬದಲಾಯಿಸುವ ಸಂಗತಿ ಇದೇ ಎನ್ನುವುದು ನನ್ನ ಅಭಿಪ್ರಾಯ. ಅದಕ್ಕೆ ನಾವು ನಮ್ಮದೇ ನೆಲೆಯಲ್ಲಿ ರಾಜಕೀಯ-ಸಾಮಾಜಿಕ-ಆರ್ಥಿಕ ನೆಲೆಗಳಲ್ಲಿ ಸಿದ್ಧವಾಗುವುದು ಸೂಕ್ತ. ನಮ್ಮ ಭವಿಷ್ಯದ ಸವಾಲುಗಳನ್ನು ಎದುರಿಸಲು ಸೂಕ್ತವಾದಂತಹ ಪೂರಕವಾದ ರಾಜಕಿಯ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ನಾವು ವಿಫಲರಾದರೆ, ಒಂದು ನಾಗರೀಕತೆಯಾಗಿಯೂ ನಾವು ವಿಫಲರಾದಂತೆಯೆ.

ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ…

-ಹನುಮಂತ ಹಾಲಿಗೇರಿ

“ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ” ಅಂತ ಬೇಸರ ಮಾಡ್ಕೋಬೇಡಿ. ನಾನು ಏನು ಆಗಬಾರದು ಅಂತ ಆಶಿಸಿ ಮಡೆಸ್ನಾನದ ಬಗ್ಗೆ ಲೇಖನ ಬರೆದಿದ್ದೇನೋ ನನ್ನ ಲೇಖನಕ್ಕೂ ಅದೆ ಗತಿಯಾಗಿದೆ. ಲೇಖನಕ್ಕೆ ಪರ-ವಿರೋಧಗಳ ಪ್ರತಿಕ್ರಿಯೆಗಳು ಬಂದಿವೆಯಾದರೂ ಅದರಲ್ಲಿ ಬಹುತೇಕ ಮೇಲ್ವರ್ಗದವರು ಮಡೆಸ್ನಾನದ ಪರವಾಗಿಯೂ ಕೆಳವರ್ಗದವರು ವಿರೋಧವಾಗಿಯೂ ಬರೆದಿದ್ದಾರೆ. ಇದು ಸ್ವಲ್ಪ ಬದಲಾಗಿ ಪ್ರತಿಯೊಬ್ಬ ಮೇಲ್ವರ್ಗದವರೂ ವಿರೋಧವಾಗಿದ್ದಿದ್ದರೆ ಎಷ್ಟೊಂದು ಚಂದವಿರುತ್ತಿತ್ತಲ್ಲವೇ?

ಲೇಖನ ಪ್ರಕಟವಾದ ದಿನ ಫೇಸ್‌ಬುಕ್‌ನಲ್ಲಿ ಕೆಲವರಂತೂ ನಿನಗೆ ಒಂದೆರಡು ಪ್ರಶಸ್ತಿಗಳು ಬಂದಿದ್ದು, ಅವು ನಿನ್ನನ್ನು ಹೀಗೆ ಬರೆಸುತ್ತವೆ. ದೇವರ ಸಮಾನವಾದ ಗೋವು ಕಡಿದು ಗೋಮಾಂಸ ತಿನ್ನುವ ಅಸಹ್ಯ ಎನಿಸದ ನಿಮ್ಮಂಥ ವಿಕೃತ ಮನಸ್ಸಿನವರಿಗೆ ಮಡೆಸ್ನಾನದಂತಹ ಆಚರಣೆಗಳು ಮಾತ್ರ ಅಸಹ್ಯ ಎನಿಸುತ್ತವೆ ಎಂದು ನನ್ನ ವೈಯಕ್ತಿಕ ನಿಂದನೆಗೆ ಇಳಿದುಬಿಟ್ಟರು.

ನಮ್ಮ ಮನೆಯಲ್ಲಿ ಕೂಡ ಆಕಳು, ಎಮ್ಮೆ, ಕುರಿ, ಕೋಳಿ, ಮೇಕೆ, ನಾಯಿ, ಬೆಕ್ಕುಗಳಿವೆ. ಈಗಲೂ ಕೂಡ ನಾನು ಊರಿಗೆ ಹೋದಾಗ ಎಮ್ಮೆ-ಆಕಳಗಳ ಮೈದಡವಿ ಮೈತೊಳೆದು, ಸಗಣಿ ಬಾಚಿ, ಮೇವು ಹಾಕುವ ಕೆಲಸವನ್ನು ಖುಷಿಯಿಂದ ಮಾಡುತ್ತೇನೆ. ಆದರೆ ಅವೆಲ್ಲ ನಮಗೆ ದೇವರು ಎನ್ನುವುದಕ್ಕಿಂತಲೂ ನಮ್ಮ ತೋಟ ಎಂಬ ಮಿನಿ ವಿಶ್ವದ ಜೀವ ಸದಸ್ಯರು. ಒಮ್ಮೊಮ್ಮೆ ನಾಯಿ ಮೇಕೆ ಮರಿಯನ್ನು, ಬೆಕ್ಕು ಕೋಳಿಮರಿಯನ್ನು ಬೇಟೆಯಾಡುವುದು ಇರುತ್ತದೆ. ಹಾಗಂತ ನಮ್ಮ ತೋಟದ ಮಾಲಿಕ ನಮ್ಮಪ್ಪ ಬೆಕ್ಕು ಅಥವಾ ನಾಯಿಯ ಜೀವ ತೆಗೆಯುವಂಥ ಕ್ರಮ ತೆಗೆದುಕೊಂಡಿದ್ದಿಲ್ಲ. ಹಣದ ಅಗತ್ಯಕ್ಕೆ ಅನುಗುಣವಾಗಿ ಈ ಜೀವ ಸದಸ್ಯರನ್ನು ಮಾರಾಟ ಮಾಡೊದು ಅಥವಾ ಮುದಿಯಾದ ಆಕಳು, ಎತ್ತು ಅಥವಾ ಎಮ್ಮೆಗಳನ್ನು ಕಟುಕರಿಗೆ ಮಾರುವುದು ಇದೆ. ಕೆಲವೊಮ್ಮೆ ಮನೆಗೆ ನೆಂಟರು ಬಂದ ಖುಷಿಯಲ್ಲಿ ಘಮಘಮಿಸುವ ಕೋಳಿ ಸಾರು ಸಿದ್ದವಾಗುತ್ತದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿ ಬಂತೆಂದರೆ ಮಾಂಸಾಹಾರ ನಿಸರ್ಗದ ನಿಯಮದಲ್ಲಿಯೆ ಮಿಳಿತವಾಗಿರುವಾಗ ಅದನ್ನು ಅಸಹ್ಯ ಎಂದರೆ ಏನು ಹೇಳುವುದು. ಒಂದು ಜೀವಿಯಲ್ಲಿಯೆ ಇನ್ನೊಂದು ಜೀವಿಯ ಆಹಾರವಿದೆ. ಹಾಲು ಕೊಡುವ ಆಕಳು, ಕರು, ಹೊಲ ಉಳುಮೆ ಮಾಡಲು ಅರ್ಹವಿರುವ ಎತ್ತನ್ನು ಹತ್ಯೆ ಮಾಡಬಾರದು, ಇನ್ನುಳಿದಂತೆ ಮುದಿಯಾದ ಗೋವನ್ನು ಮಾಂಸಕ್ಕೆ ಬಳಸಬಹುದು ಎಂದು ದೇಶದ ಕಾನೂನೆ ಹೇಳುತ್ತೆ. ಅಷ್ಟಕ್ಕೂ ಗೋವು ಒಂದನ್ನೆ ಮಾತ್ರ ಹತ್ಯೆ ಮಾಡಬಾರದು ಎಂದು ಪಟ್ಟು ಹಿಡಿಯುವ ಇಬ್ಬಂದಿತನದ ಹಿಂದಿನ ಹುನ್ನಾರವೇನು? ಒಂದು ವೇಳೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಮಂಸಾಹಾರವನ್ನು ಅವಲಂಭಿಸಿರುವ ಜನರ ಪರ್ಯಾಯ ವ್ಯವಸ್ಥೆ ಏನು? ಹಾಗೆ ನೋಡಿದರೆ ನಮ್ಮೂರ ಉತ್ತರ ಕರ್ನಾಟಕದ ಕಡೆ ಹೈನುಗಾರಿಕೆಗೆ ಸೂಕ್ತವಾದ ಪ್ರಾಣಿ ಎಮ್ಮೆ. ನಮ್ಮೂರಿನ ಹುಡುಗರು ಈಗಲೂ ಕೂಡ ಎಮ್ಮೆ ಹಾಲು, ಮೊಸರು, ಬೆಣ್ಣೆ ತಿಂದುಕೊಂಡೆ ಗರಡಿ ಮನೆ ಸಾಥ್ ಮಾಡುವುದು. ಔಷಧಿಗೆ ಹೆಚ್ಚು ಬಳಕೆಯಾಗುವುದು ಮೇಕೆ ಹಾಲು. ಆದರೆ ಗೋಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಂತೆ ಎಮ್ಮೆ-ಮೇಕೆಗಳ ಹತ್ಯೆ ವಿರೋಧಿಸಿ ಪ್ರತಿಭಟನೆಗಳು ನಡೆದದ್ದನ್ನು ನಾನು ಎಲ್ಲಿಯೂ ಕೇಳಿಲ್ಲ.

ಅಷ್ಟಕ್ಕೂ ಪ್ರಾಣಿಬಲಿಯನ್ನು ಸಾರ್ವಜನಿಕವಾಗಿ ಹಬ್ಬದಂತೆ (ಮಡೆಸ್ನಾನದಂತೆ) ಆಚರಿಸುವುದನ್ನು ನಾನು ವಿರೋಧಿಸುತ್ತೇನೆ. ಸರಕಾರವೇ ಪ್ರಾಣಿಬಲಿಯನ್ನು ನಿಷೇಧಿಸಿದೆಯಲ್ಲ? ಆದರೂ ಕೆಲವು ದಲಿತ ಸಮುದಾಯಗಳು ಕದ್ದುಮುಚ್ಚಿ ತಮ್ಮ ದೇವರುಗಳಿಗೆ ಪ್ರಾಣಿಬಲಿ ಕೊಡುವುದು ಮತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗುವುದು ಆಗಾಗ ನಡೆಯುತ್ತಲೆ ಇರುತ್ತದೆ.

ಆದರೆ ಈ ಮಡೆಸ್ನಾನ ಎಂಬ ಘನ ಆಚರಣೆಗೆ ಸರಕಾರ ಮತ್ತು ಕೆಲವು ಮಠಾಧಿಪತಿಗಳೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ವಿ.ಎಸ್.ಆಚಾರ್ಯ ಎಂಬ ಮಾನ್ಯ ಸಚಿವರಂತೂ `ಜನರ ನಂಬಿಕೆಗಳನ್ನು ನಾವು ಮುಟ್ಟುವುದಿಲ್ಲ. ಈ ಮಡೆಸ್ನಾನದಿಂದ  ಅವರ ಚರ್ಮವ್ಯಾದಿಗಳು ಕಡಿಮೆಯಾಗುವುದಿದ್ದರೆ ಅದಕ್ಕೆ ನಾವೇಕೆ ಅಡ್ಡಬರುವುದು,” ಎಂದು ತಿಪ್ಪೆ ಸಾರಿದ್ದಾರೆ. ಅವರು ಈ ಹಿಂದೆ ಡಾಕ್ಟರಿಕೆಯನ್ನು ಓದಿ ವೈದ್ಯರು ಆಗಿದ್ದುದರಿಂದ ಅವರ ಹೇಳಿಕೆ ವಿಶೇಷ ಕಳೆಯಿಂದ ಕೂಡಿದೆ.

ಪ್ರಾಣಿಬಲಿಯಂಥ ಆಚರಣೆಗಳನ್ನು ದಲಿತರು ಆಚರಿಸಿದರೆ ಅವರನ್ನು ಒದ್ದು ಜೈಲಿಗೆ ಹಾಕುವ ಸರಕಾರ, ಇನ್ನೊಂದೆಡೆ ಮೇಲ್ವರ್ಗದವರು ದಲಿತರ ಮೇಲೆ ವಿಜಯೋತ್ಸವದಂತೆ ಆಚರಿಸುವ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಬೆಂಬಲ ಘೋಷಿಸುತ್ತದೆ. ಕೆಲವರು ಎಂಜಲೆಲೆಯ ಮೇಲೆ  ಕೇವಲ ದಲಿತರಷ್ಟೆ, ಎಲ್ಲ ವರ್ಗದವರು ಉರುಳುತ್ತಾರೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಉಂಡು ಎಂಜಲು ಮಾಡುವವರು ಬ್ರಾಹ್ಮಣರು ಮಾತ್ರವಲ್ಲವೆ? ಇಷ್ಟಕ್ಕೂ ಯಾರೆ ಉರುಳಾಡಲಿ. ದೇವರ ಹೆಸರಿನಲ್ಲಿ ಹೀಗೆ ಎಂಜಲಿನ ಮೇಲೆ ಉರುಳಾಡುವುದು ಸರಿಯೆ?. ದೇವರು ದೈರ್ಯ ವಹಿಸಿ ಪ್ರತ್ಯಕ್ಷವಾಗುವಂತಿದ್ದರೆ ಈ ಅಸಹ್ಯವನ್ನು ಸಹಿಸಿಕೊಳ್ಳುತ್ತಿದ್ದನೆ?

ಮಡೆಸ್ನಾನ ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದರ ಬಗ್ಗೆ ನನಗೆ ಅತೀವ ಬೇಸರವಾಗಿದೆ. ಹೀಗೆ ಸಮರ್ಥಿಸಿಕೊಳ್ಳವವರಲ್ಲಿ ಬಹುತೇಕ ಮೇಲ್ವರ್ಗದವರೆ ಅಗಿರುವುದು ಕಾಕತಾಳಿಯವೆಂದೆನೂ ಅನಿಸುವುದಿಲ್ಲ. ಅಥವಾ ಅವರಿಗೆ ಮಡೆಸ್ನಾನ ತಪ್ಪು ಎಂದು ಎನಿಸುತ್ತಿಲ್ಲವೆಂದರೆ ಅದು ನಮ್ಮ ದೇಶದ ಮಹಾನ್ ಸಂಸ್ಕೃತಿಯ ದೌರ್ಭಾಗ್ಯ.

ಅಸ್ಪಶ್ಯತೆಯಂತಹ ನೆನಪಿಸಿಕೊಳ್ಳಲಿಕ್ಕೂ ಅಸಹ್ಯವೆನಿಸುವಂಥ ದೌರ್ಜನ್ಯಗಳನ್ನು  ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ಮಾಡಿಕೊಂಡು ಬಂದಿರುವ ಮೇಲ್ಜಾತಿಯವರು ಈಗಲೂ ಏಕೆ ತಮ್ಮ ಹಠವನ್ನೆ ಸಾಧಿಸಲೆತ್ನಿಸುತ್ತಾರೆಯೋ ತಿಳಿಯದು. ಈಗಷ್ಟೆ ಗತ ಅವಮಾನಗಳಿಂದ ಚೇತರಿಸಿಕೊಳ್ಳುತ್ತಿರುವ ದಲಿತರ ಮೇಲೆ ಮಡೆಸ್ನಾನದಂತಹ ಆಯುಧಗಳನ್ನು ಸೃಷ್ಟಿಸಿ ಪ್ರಯೋಗಿಸುವುದು ಸರಿಯೆ? ದಲಿತರೆ ಆಯುಧ, ದಲಿತರೆ ವೈರಿ.

ಮೇಲ್ಜಾತಿಯವರೆ ನೇತೃತ್ವ ವವಹಿಸಿಕೊಂಡು ಮಡೆಸ್ನಾನವನ್ನು ವಿರೋಧಿಸುತ್ತಿದ್ದರೆ ಎಷ್ಟೊಂದು ಚಂದವಾಗಿರುತ್ತಿತ್ತು? ಶಿವರಾಮು ಅವರ ಸಂಘಟನೆಯ ಬದಲಿಗೆ ಬ್ರಾಹ್ಮಣರ ಸಂಘಟನೆಯೊಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪ್ರತಿಭಟಿಸಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು? ದಲಿತ ಸಂತ ದೇವನೂರು ಮಹಾದೇವ ಅವರು ಬಯಸುವಂತೆ ಈ ದೇಶದಲ್ಲಿನ ಎಲ್ಲ ಮನುಷ್ಯರು ಪರಸ್ಪರ ಭಾವ-ಮೈದುನರಾಗುವ, ನೆಂಟಸ್ಥರಾಗಿ ತೊಡೆಗೆ ತೊಡೆ ತಾಗಿಸಿಕೊಂಡು ಕುಳಿತು ಸಹಪಂಕ್ತಿ ಭೋಜನ ಮಾಡುವಂತಾಗಿದ್ದರೆ ಎಷ್ಟೊಂದು ಚಂದ ಅನಿಸುತ್ತಿತ್ತಲ್ಲವೇ? ಆ ದಿನ ನಮ್ಮ ತಲೆಮಾರಿನವರ ಆಯುಷ್ಯದಲ್ಲಿಯೆ ಬರಲಿ ಎಂದು ಆಶಿಸುತ್ತೇನೆ. ಕಾಯುತ್ತೇನೆ ಕೂಡ!

ಪ್ರಗತಿಪರರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಲು ಪಾಸ್ ಪೋರ್ಟ್ ಬೇಕಾ?

ಭೂಮಿ ಬಾನು

“ನೀವು ಉತ್ತರ ಕೊಡ್ರಿ. ನೀವ್ಯಾಕೆ ಇಲ್ಲಿಗೆ ಬಂದ್ರಿ. ನಾನೂರು ಕಿಲೋಮೀಟರ್ ದೂರದಿಂದ ಇಲ್ಲಿಗೆ ಬಂದು ಇಲ್ಲಿಯ ಸ್ಥಳೀಯರ ಭಾವನೆ ಕೆರಳಿಸ್ತೀರಾ…?”

“ನೀವು ಸುಮ್ಮನೆ, ಎಸಿ ಯವರಿಗೆ ಮನವಿ ಕೊಟ್ರಲ್ಲಾ. ಅಷ್ಟು ಸಾಕು. ಮತ್ತೇಕೆ ಇಲ್ಲಿಗೆ ಬಂದಿರಿ…?”

“ನಾನೂ ಈ ಸ್ಟೇಷನ್ ಗೆ ಹೊಸಬ. ನನಗೂ ಮಡೆಸ್ನಾನ ಅಂದರೆ ಗೊತ್ತಿರಲಿಲ್ಲ. ನಾನು ಒಂದು ಗಂಟೆ ನಿಂತು ನೋಡಿದೆ. ಅಲ್ಲಿ ಅವರು ಅವರ ಇಚ್ಛೆಯಂತೆ ಹಾಗೆ ಮಾಡ್ತಾರೆ. ಯಾರ ಒತ್ತಾಯವಿಲ್ಲ. ಎಲ್ಲಾ ಜಾತಿಯವರೂ ಇದ್ದಾರೆ. ಸರಕಾರ, ಪೊಲೀಸ್ ಏನಾದ್ರು ಬಲವಂತದಿಂದ ಹಾಗೆ ಮಾಡಿಸುತ್ತಿದೆಯಾ..?”

“ಇದು ಪೊಲೀಸ್ ಸ್ಟೇಷನ್. ನಿಮ್ಮಪ್ಪನ ಮನೆ ಅಲ್ಲ…”

ಬುಧವಾರ ಮಧ್ಯಾಹ್ನ ಸಮಯ ಸುದ್ದಿ ವಾಹಿನಿಯಲ್ಲಿ ಬಿತ್ತರವಾದ ಸುದ್ದಿಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅಧಿಕಾರಿ ಹಲ್ಲೆಗೊಳಗಾಗ ಕೆ.ಎಸ್ ಶಿವರಾಂ ಮತ್ತಿತತರೊಂದಿಗೆ ಮಾತನಾಡುತ್ತ ಕೇಳಿಬಂದ ವಾಕ್ಯಗಳಿವು. ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಮುಖಂಡರಾದ ಶಿವರಾಂ ಈಗಾಗಲೇ ಮಡೆಸ್ನಾನ ಆಚರಣೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿ ಈ ಪದ್ಧತಿ ಆಚರಣೆಯನ್ನು ಪ್ರಶ್ನಿಸುವ ಉದ್ದೇಶದಿಂದ ಪ್ರತ್ಯಕ್ಷವಾಗಿ ದೇವಾಲಯದಲ್ಲಿ ನಡೆಯುವ ಆಚರಣೆ ಬಗ್ಗೆ ತಿಳಿದುಕೊಳ್ಳಲು ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.

ದೇವಾಲಯ ಪ್ರವೇಶಕ್ಕೆ ನಿರ್ಬಂಧವಿಲ್ಲ. ಪ್ರವೇಶ ದ್ವಾರದ ಹತ್ತಿರ ಅವರು ತಮ್ಮನ್ನು ಮಾತನಾಡಿಸಿದ ಸುದ್ದಿ ವಾಹಿನಿ ವರದಿಗಾರರಿಗೆ ಬೈಟ್ ಕೊಡುತ್ತಿರುವಾಗ ಏಳೆಂಟು ಜನ ಅವರ ಮೇಲೆ ಎರಗಿದರು. ಹಿಗ್ಗಾ ಮುಗ್ಗಾ ಥಳಿಸಿದರು. ಒಬ್ಬ ಮಹಾಶಯನಂತೂ ಶಿವರಾಂ ಅವರ ಮುಖಕ್ಕೆ ವಸ್ತ್ರವನ್ನು ಮುಚ್ಚಿ ಅವರ ಮೇಲೆ ದಾಳಿಗೆ ಇಳಿಯುತ್ತಾನೆ.

ಈ ದಾಳಿ ಕೆಲವೇ ಕ್ಷಣಗಳಲ್ಲಿ ಸುದ್ದಿಯಾಯಿತು. ಪ್ರತಿಕ್ರಿಯೆಗಳು ವ್ಯಕ್ತವಾದವು. ಶಿವರಾಂ ಮತ್ತವರ ಸ್ನೇಹಿತರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿದ್ದ ಅಧಿಕಾರಿ ದಾಳಿಗೆ ಒಳಗಾದವರನ್ನೇ ಹೀಯಾಳಿಸಿ ಮಾತನಾಡಿದ್ದೂ ಜಗಜ್ಜಾಹೀರಾಗಿದೆ. ಈ ರಾಜ್ಯದ ಗೃಹಮಂತ್ರಿಗೆ ಒಂದಿಷ್ಟು ಕಾನೂನು ಪ್ರಜ್ಞೆ ಇದ್ದಿದ್ದರೆ ಆ ಅಧಿಕಾರಿ ಈ ಹೊತ್ತಿಗೆ ಅಮಾನತ್ತಾಗಬೇಕಿತ್ತು. ದಾಳಿ ಮಾಡಿದವರನ್ನು ಹಿಡಿಯದೆ, ದೂರು ಕೊಟ್ಟು ರಕ್ಷಣೆ ಕೋರಲು ಬಂದವರನ್ನು ಹೀಗೆ ನಡೆಸಿಕೊಳ್ಳುವುದಾದರೆ, ರಾಜ್ಯದ ಜನತೆ ಅದ್ಯಾವ ಧೈರ್ಯದ ಮೇಲೆ ಪೊಲೀಸ್ ವ್ಯವಸ್ಥೆಗೆ ವಿಶ್ವಾಸ ಇಡಬೇಕು? ಈ ಪೊಲೀಸಪ್ಪ ಹೇಳುವುದನ್ನು ನೋಡಿದರೆ, ಸುಬ್ರಹ್ಮಣ್ಯಕ್ಕೆ ಹೋಗುವ ಯಾವುದೇ ಪ್ರಗತಿಪರ ಚಿಂತಕರಿಗೆ ಪಾಸ್ ಪೋರ್ಟ್ ಬೇಕು, ಪೊಲೀಸರ ವಿಶೇಷ ಅನುಮತಿ ಬೇಕು.

ಮಡೆಸ್ನಾನ (ಎಂಜಲು ಸ್ನಾನ) ಅವಮಾನಕರ. ಪದ್ಧತಿ ಆಚರಣೆ ನಡೆಸುವವರು ಅವರು ಸ್ವ ಇಚ್ಚೆಯಿಂದಲೇ ಮಾಡುತ್ತಿರಬಹುದು. ಕೆಲ ವರ್ಷಗಳ ಹಿಂದೆ ಬೆತ್ತಲೆ ಸೇವೆ ಮಾಡುತ್ತಿದ್ದವರೂ ಇಚ್ಚೆಯಿಂದಲೇ ಮಾಡುತ್ತಿದ್ದರು! ಹಾಗಂತ ಅಂತಹದೊಂದು ಅನಿಷ್ಟ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕಾ? ಮತ್ತೊಬ್ಬನ ಎಂಜಲ ಮೇಲೆ ಉರುಳಾಡುವುದೆಂದರೆ ಅದು ಅಸಹ್ಯ, ಅವಮಾನಕರ ಎಂದು ಗ್ರಹಿಸದಷ್ಟು ಮೂಢರೇ ನಾವು? ಮೊದಲು ಬ್ರಾಹ್ಮಣರು ಉಂಡೇಳುತ್ತಾರೆ. ನಂತರ ಬ್ರಾಹ್ಮಣರನ್ನು ‘ಮೊದಲುಗೊಂಡು’ ಇತರರು ಅವರು (ಬ್ರಾಹ್ಮಣರು) ಉಂಡ ಎಲೆಗಳ ಮೇಲೆ ಉರುಳುತ್ತಾರೆ. ಅನೇಕರು ಈ ವಿಚಾರವಾಗಿ ವಾದ ಮಂಡಿಸುವಾಗ ಅನಗತ್ಯ ಗೊಂದಲ ಸೃಷ್ಟಿಸುತ್ತಾರೆ. ಈ ಪದ್ಧತಿ ಪ್ರಕಾರ ಕೇವಲ ದಲಿತರು ಸೇವೆ ಮಾಡುವುದಿಲ್ಲ. ಬ್ರಾಹ್ಮಣರೂ ಮಾಡುತ್ತಾರೆ. ಹಾಗಾಗಿ ಇದು ದಲಿತ, ಹಿಂದುಳಿದವರನ್ನು ಶೋಷಿಸುವ ಕೃತ್ಯ ಅಲ್ಲ ಎಂದು ವಾದಿಸುತ್ತಾರೆ. ಬ್ರಾಹ್ಮಣರೂ ಸೇವೆ ಮಾಡುತ್ತಾರೆ ಎಂದಾಕ್ಷಣ ಉಳಿದವರಿಗೆ ಅದು ಅವಮಾನವಲ್ಲ ಎಂದು ಗ್ರಹಿಸಬೇಕೆ?

ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ಅಲ್ಲಿ ಬ್ರಾಹ್ಮಣರು ಉಂಡೆಲೆಗಳ ಮೇಲೆ ಬ್ರಾಹ್ಮಣರೂ ಸೇರಿದಂತೆ ಇತರರು ಉರುಳುತ್ತಾರೆ. ಇದೇ ಬ್ರಾಹ್ಮಣರು, ದಲಿತ ಅಥವಾ ಹಿಂದುಳಿದವರು ಉಂಡೆದ್ದ ಎಲೆಗಳ ಮೇಲೆ ಉರುಳಲು ಸಿದ್ಧರೇ?

ಸುಬ್ರಹ್ಮಣ್ಯದ ವರದಿಗಾರರೊಬ್ಬರ ಪ್ರಕಾರ ಶಿವರಾಂ ಅವರ ಮೇಲೆ ದಾಳಿ ಮಾಡಿದವರು ದಲಿತರಂತೆ. ಇದನ್ನೂ ಒಂದು ತಂತ್ರವಾಗಿಯೇ ನೋಡಬೇಕು. ದಾಳಿಯಂತಹ ದೈಹಿಕ ಶ್ರಮ ಬಯಸುವ ಕೆಲಸಗಳಿಗೆ ಬೇಕಾಗುವವರು ಅವರೇ. ಪಾಪ ಅವರಿಗೆ ಅದರಿಂದ ಉಂಟಾಗುವ ಕಾನೂನು ಪರಿಣಾಮಗಳ ಅರಿವು ಇರುವುದಿಲ್ಲ. ಅವರ ಮುಗ್ಧತೆ, ಅಮಾಯಕತೆಯ ಲಾಭ ಪಡೆಯುವವರು ಬುದ್ದಿವಂತರು.

ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

– ಹನುಮಂತ ಹಾಲಿಗೇರಿ

ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು ಯಾರು’ ಎಂದು ಪ್ರತ್ಯಕ್ಷವಾಗಿಯೆ ಮಡೆಸ್ನಾನವನ್ನು ಬೆಂಬಲಿಸುವ ವಿತಂಡವಾದಿಗಳು. ಎರಡನೆಯದಾಗಿ ‘ಮಡೆಸ್ನಾನ ಅನಾದಿ ಕಾಲದಿಂದ ನಡೆದುಕೊಂಡ ಆಚರಣೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು. ದಿಡೀರ್ ಎಂದು ನಿಷೇಧಿಸಲಿಕ್ಕೆ ಆಗುವುದಿಲ್ಲ. ಕಾಲ ಉರುಳುವಿಕೆಯಲ್ಲಿ ಅದೆ ನಿಲ್ಲುತ್ತದೆ’ ಎಂದು ಅಪರೋಕ್ಷವಾಗಿ  ಬೆಂಬಲಿಸುವವರು. ಇನ್ನು ಕೊನೆಯದಾಗಿ ಮಡೆಸ್ನಾನದಂತಹ ಅಸಹ್ಯ ಆಚರಣೆಯನ್ನು ತಕ್ಷಣವೇ ನಿಲ್ಲಿಸಲೇಬೇಕು ಎಂದು ಕಟುವಾಗಿ ವಿರೋಧಿಸುವವರು.

ಕೇವಲ ಇದು ಕೇವಲ ನಂಬಿಕೆಯ ವಿಷಯವಾಗಿದ್ದರೆ ಬೇರೆ ಮಾತು. ಆದರೆ  ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ. ಮೇಲುವರ್ಗದವರು ಉಂಡ ಎಂಜೆಲೆಲೆಯ ಮೇಲೆ ಕೆಳವರ್ಗದವರು ಉರುಳಾಡಿದರೆ ಅವರ ಚರ್ಮವ್ಯಾದಿಗಳೆಲ್ಲವೂ ಕಡಿಮೆಯಾಗುತ್ತವೆ ಎಂದರೆ ಮೂಢನಂಬಿಕೆಯಲ್ಲದೆ ಮತ್ತೇನೂ? ಒಬ್ಬರು ಕುಡಿದ ಲೋಟದಿಂದ ಮತ್ತೊಬ್ಬರು ಕುಡಿಯುವುದು ಅಸಹ್ಯ ಎನಿಸುವ, ಅಚಾನಕ್ಕಾಗಿ ಎಂಜಲು ತಾಕಿದರೆ ಸೋಪು ಹಚ್ಚಿ ತೊಳೆದುಕೊಳ್ಳುವವರು ಹೆಚ್ಚಾಗಿರುವ ಈ ಕಾಲದಲ್ಲಿ ಉಂಡ ಎಂಜಲದ ಮೇಲೆ ಉರುಳಾಡುವ ಮನಸ್ಥಿತಿಯನ್ನು ದಲಿತರಲ್ಲಿ ಬಿತ್ತಿದವರು ಯಾರು ಎಂಬುದು ಮುಖ್ಯ ಪ್ರಶ್ನೆ. ಎಂಜಲೆಲೆಯಲ್ಲಿ ಔಷಧೀಯ ಗುಣಗಳಿದ್ದರೆ ಇಷ್ಟೊಂದು ಆಸ್ಪತ್ರೆಗಳೇಕೆ ಹುಟ್ಟಿಕೊಳ್ಳುತ್ತಿದ್ದವು. ಒಂದು ವೇಳೆ ಇದು ನಿಜವೇ ಆಗಿದ್ದರೇ ಉಣ್ಣುವವರು ಬ್ರಾಹ್ಮಣರೇ ಏಕೆಯಾಗಬೇಕು? ಒಂದೊಂದು ವರ್ಷ ಆಚರಣೆ ತಿರುಗುಮುರುಗಾಗಲಿ. ದಲಿತರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಒಂದೊಂದು ವರ್ಷ ಉರುಳಾಡಲಿ!

ಇರಲಿ, ಇದೆಲ್ಲ ವಿತಂಡವಾದವನ್ನು ಪಕ್ಕಕ್ಕೆ ಇಟ್ಟು ಮೇಲಿನ ಎರಡು ವಾದಗಳ ಬಗ್ಗೆ ಚರ್ಚೆ ಮಾಡೋಣ. `ಮಡೆಸ್ನಾನ ನಂಬಿಕೆಗೆ ಸಂಬಂಧಪಟ್ಟದ್ದು ಉರುಳುವವರಿಗೆ ತಮ್ಮ ಖಾಯಿಲೆಗಳು ಕಡಿಮೆಯಾಗುತ್ತವೆ ಎಂಬ ಸಮಾಧಾನವಾಗುವಂತಿದ್ದರೆ ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ. ಇದನ್ನು ನಾನು ಪರ್ವಾಗ್ರಹ ಪೀಡಿತನಾಗಿ ಹೇಳುತ್ತಿಲ್ಲ. ಪೇಸ್‌ಬುಕ್ ತೆಗೆದುನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಡೆಸ್ನಾನದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಠಾಧಿಪತಿಗಳು ಪೇಜಾವರ ಶ್ರೀಗಳು ಕೂಡ ಇದೆ ಮಾತನ್ನು ಹೇಳಿದ್ದಾರೆ. ಚೋರ್ ಗುರು ಚಂಡಾಲ ಶಿಷ್ಯಂದಿರು!

ಮೊದಲು ಸರಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಸರಕಾರ ಒಮ್ಮೆಲೆ ನಿಷೇದಿಸಿದ್ದಕ್ಕೆ ನಮ್ಮಂಥವರ ಮನಸ್ಸುಗಳು ನಿರಾಳಗೊಂಡಿದ್ದವು. ನಂತರ ಯಾವದೋ ಹುನ್ನಾರದಿಂದ, ಯಾರದೋ ಒತ್ತಡಕ್ಕೆ ಮಣಿದಂತೆ ನಾಟಕವಾಡಿದ ಸರಕಾರ ನಿಷೇಧವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡಿದ್ದು ನಾಚಿಕೆಗೇಡು. “ಮಲೆಕುಡಿಯರು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಏಕಾಏಕಿ ಮಡೆಸ್ನಾನ ಆಚರಣೆ ನಿಲ್ಲಿಸುವುದು ಬೇಡ. ಈ ಬಗ್ಗೆ ಮುಂದೆ ಮಠದಲ್ಲಿ ಪ್ರಶ್ನೆ’ ಕಾರ್ಯಕ್ರಮದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು,” ಎಂದು ಸಚಿವ ವಿ.ಎಸ್.ಆಚಾರ್ಯ ಹೇಳಿಕೆ ನೀಡಿ ಜಾರಿಕೊಂಡರು. ಮಲೆಕುಡಿಯರ ಪ್ರತಿಭಟನೆಯಲ್ಲಿ ಮೇಲುವರ್ಗದವರ ಕೈವಾಡವಿರಲೇಬೇಕಲ್ಲವೇ.  ಏಕೆಂದರೆ ಈ ಆಚರಣೆ ಆರಂಭದಲ್ಲಿ ಪ್ರಾರಂಭವಾಗಲಿಕ್ಕೆ ಪುರೋಹಿತಶಾಹಿಗಳ ಹುನ್ನಾರವೇ ಕಾರಣವಲ್ಲವೇ?

ಅದುದರಿಂದ ಹೀಗೆ ಅಮಾನುಷವಾದ, ಕೆಲವರಲ್ಲಿ ಅಸಹ್ಯ ಮೂಡಿಸುವ ಈ ಆಚರಣೆಯನ್ನು ಬೆಂಬಲಿಸುವ ಮೊದಲವಾದಿಗಳು ದಯವಿಟ್ಟು ತಮ್ಮ ವಾದವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಮ್ಮ ಎಂಜಲದ ಮೇಲೆ ಮತ್ತೊಬ್ಬ ಮನುಷ್ಯ ಉರುಳಾಡುವುದು ಬೇಡ ಎಂಬ ಕನಿಷ್ಠ ಮಾನವೀಯತೆ ನಿಮಗಿದ್ದರೆ ದಯವಿಟ್ಟು ಸುಮ್ಮನಿದ್ದು ಬಿಡಿ. ಮೇಲುವರ್ಗದ ಪ್ರಜ್ಞಾವಂತರೆ ಮುಂದೆ ನಿಂತು ಈ ಆಚರಣೆಯನ್ನು ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಜಾರಿಕೊಂಡರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಪದ್ದತಿ ಮುಂತಾದವುಗಳೆಲ್ಲವೂ ಸಹ ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಮತ್ತೆ ಆಚರಣೆಗೆ ತರಲು ಸಾಧ್ಯವೆ?

ಇನ್ನೂ ಎರಡನೆ ವಾದದವರು `ಕಾಲ ಪಕ್ವವಾಗಿಲ್ಲ’ ಎಂಬ ನೆಪದಿಂದ ಆಚರಣೆಯ ಪರವಾಗಿಯೆ ನಿಲ್ಲುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂಥ ಆಚರಣೆ ನಿಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದು ಜಾರಿಕೊಳ್ಳುವುದು ಹೇಡಿತನ. ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರಿಗೆ ನಿಜವಾಗಲೂ ಇದು ಅಸಹ್ಯ ಎನಿಸದಿರಬಹುದು. ಆದರೆ ಇದು ಇಡಿ ಮನುಕುಲಕ್ಕೆ ಅನಾಗರಿಕತೆ, ಅಸಹ್ಯ ಮತ್ತು ಅವಮಾನ. ಮಲೆಕುಡಿಯರಂಥ ದಲಿತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ ಖಂಡಿತ ಈ ಆಚರಣೆ ಮುಂದಿನ ವರ್ಷದಿಂದಲಾದರೂ ನಿಲ್ಲುತ್ತದೆ.

ಇದು ಬಿಟ್ಟು ಈ ಆಚರಣೆ ಧಾರ್ಮಿಕ ನಂಬಿಕೆ ಸಂಬಂಧಪಟ್ಟದ್ದು ಈ ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವ ಸರಕಾರ ತನ್ನ ಮನೋಇಂಗಿತವನ್ನು ಅನಾವರಣಗೊಳಿಸಿದೆ. ತಪ್ಪು ಎಂದು ಗೊತ್ತಾದ ಮೇಲೂ  ನಿಷೇಧಿಸಬೇಕೋ ಬೇಡವೋ ಎಂದು ಅಷ್ಟಮಂಗಲ ಪ್ರಶ್ನೆ ಕೇಳುತ್ತೇವೆ ಎನ್ನುವುದು ಯಾವ ಸೀಮೆ ನ್ಯಾಯ? ಸಾಕ್ಷರರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಮಣೆ ಹಾಕುತ್ತಿರುವುದು ಪ್ರಜ್ಞಾವಂತ ಸಾಕ್ಷರರಿಗೆ ಒಪ್ಪುವ ಮಾತಲ್ಲ.