Tag Archives: ಲಾವಾರಸ

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 4

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


150 ಕೋಟಿ ವರ್ಷಗಳ ಹಿಂದೆ – ಭೂಮಿಯಲ್ಲಿ ಖಂಡಗಳು ವ್ಯಾಪಿಸಿಕೊಂಡವು. ಅಷ್ಟೇ ಅಲ್ಲದೆ ಈ ಭೂಪ್ರದೇಶಗಳು ಚಲಿಸುವುದಕ್ಕೂ ಆರಂಭಿಸಿದ್ದವು. 1912ರಲ್ಲಿ ಆಲ್ಫ್ರೆಡ್ ವ್ಯಾಗ್ನರ್ ಎಂಬ ವಿಜ್ಞಾನಿ ಖಂಡಗಳ ಅಲೆತದ ಸಿದ್ಧಾಂತವನ್ನು ಮಂಡಿಸಿದರು. ಒಮ್ಮೆ ಖಂಡಗಳು ಒಂದೇ ಆಗಿದ್ದು ಕಾಲಾನಂತರ ಭಿನ್ನವಾಗಿ ಹರಡಿಕೊಂಡವು ಎಂದು ವ್ಯಾಗ್ನರ್ ಪ್ರತಿಪಾದಿಸಿದರು. ವಿಜ್ಞಾನಿಗಳು ಅವರ ವಾದವನ್ನು ಒಪ್ಪಿಕೊಳ್ಳಲಿಲ್ಲ. ತಮ್ಮ ಪ್ರತಿಪಾದನೆಗೆ ತಕ್ಕ ಪುರಾವೆ ಹುಡುಕಾಟದಲ್ಲಿ ವ್ಯಾಗ್ನರ್ ವಿಧಿವಶವಾದರು. ಆದರೆ ಅವರು ಪ್ರತಿಪಾದಿಸಿದ ವಿಚಾರ ನಿಜವಾಯಿತು.

ಸಾಗರದ ತಳದಲ್ಲಿ ಶಿಲಾರಸ ಸದಾ ಚಲಿಸುತ್ತಲೇ ಇತ್ತು. ತೀವ್ರವಾದ ಶಾಖದಿಂದ ಭೂಮಿಯ ಮೇಲ್ಪದರ ಬಿರುಕು ಕಾಣಿಸಿಕೊಂಡು ಶಿಲಾರಸ ಹೊಸ ಭೂಮಿ ಪ್ರದೇಶವನ್ನು ಸೃಷ್ಟಿ ಮಾಡುತ್ತಿತ್ತು. ಜೊತೆಗೆ ನಿರಂತರವಾಗಿ ಚಲಿಸುತ್ತಲೆ ಇರುತ್ತಿದ್ದ ಲಾವಾರಸ ಬಿರುಕುಬಿಟ್ಟ ಭೂತೊಗಟೆಯನ್ನು ತನ್ನೊಂದಿಗೆ ಸೆಳೆದೊಯ್ಯುತ್ತಿತ್ತು. ಈ ಪ್ರಕ್ರಿಯೆ ಭೂಭಾಗಗಳನ್ನು ಚಲಿಸುವಂತೆ ಮಾಡಿತ್ತು.

ಉದಾಹರಣೆ, ಫಿಷರ್ ಎನ್ನುವ ಜ್ವಾಲಾಮುಖಿ ಒಂದೇ ಆಗಿದ್ದ ಯೂರೋಪ್ ಮತ್ತು ಅಮೆರಿಕ ಖಂಡಗಳನ್ನು ಬೇರ್ಪಡಿಸಿತು.

ಹೀಗೆ ಖಂಡಗಳ ಅಲೆತ ಕೂಡ ಬಹಳ ವರ್ಷಗಳ ಕಾಲ ನಡೆಯಿತು. ವರ್ಷಕ್ಕೆ ಮೂರು ಸೆಂಟಿ ಮೀಟರ್ ನಂತೆ ಖಂಡಗಳು ಚಲಿಸಿದವು.

ಮಹಾಖಂಡ

ಚಲಿಸುತ್ತಿದ್ದ ಖಂಡಗಳ ನಡುವೆ ಮಹಾಘರ್ಷಣೆಯೊಂದು ಸಂಭವಿಸಿತು. ಆಗ ಹುಟ್ಟಿದ್ದು ಒಂದು ಮಹಾಖಂಡ.

100 ಕೋಟಿ ವರ್ಷಗಳ ಹಿಂದೆ ಭೂಖಂಡಗಳ ನಿರಂತರ ಚಲನೆಯ ಪರಿಣಾಮ ಕೆನಡ ಮತ್ತು ಅಮೆರಿಕಗಳ ನಡುವೆ ಬೇರೆಬೇರೆ ಭೂಖಂಡಗಳು ಡಿಕ್ಕಿ ಹೊಡೆದವು.

ಹೀಗೆ ಸೇರಿದ ಭೂಖಂಡ ಒಂದು ಮಹಾಖಂಡವನ್ನೇ ನಿರ್ಮಿಸಿದವು. ಇದನ್ನು ವಿಜ್ಞಾನಿಗಳು ರೊಡೀನಿಯಾ, ಅಂದರೆ ತಾಯಿನಾಡು ಅಂತ ಕರೆದರು.  ರೊಡೀನಿಯಾ ಬಂಜರು ಖಂಡವಾಗಿತ್ತು. ಅಲ್ಲಿ ಯಾವ ರೀತಿಯ ಜೀವಿಗಳೂ ಇರಲಿಲ್ಲ. ಆದರೆ ಸಾಗರದೊಳಗಿನ ಜೀವಿಗಳಿಗೆ ದೊಡ್ಡ ಆಘಾತವನ್ನು ನೀಡಿತು.

ಈ ಮಹಾಖಂಡ ಭೂಮಿಯ ಮೇಲೆ ಹರಿಯುತ್ತಿದ್ದ ಬೆಚ್ಚನೆಯ ನೀರಿನ ಪ್ರವಾಹಕ್ಕೆ ಅಡ್ಡವಾಯಿತು. ಇದರಿಂದ ಧ್ರುವಪ್ರದೇಶದ ಹಿಮ ತನ್ನ ವ್ಯಾಪ್ತಿ ವಿಸ್ತರಿಸಿತು. ನಿಧಾನವಾಗಿ ಇಡೀ ಸಾಗರಗಳುಹಿಮದ ಪದರಗಳಿಂದ ಮುಚ್ಚಲ್ಪಟ್ಟವು. ಉಷ್ಣಾಂಶ -40 ಡಿಗ್ರಿ ಸೆಲ್ಷಿಯಸ್ ಗೆ ಇಳಿಯಿತು. ಒಂದು ಮೈಲಿಗೂ ಹೆಚ್ಚು ಆಳಕ್ಕೆ ಹಿಮ ವ್ಯಾಪಿಸಿಕೊಂಡಿತು.

ಭೂಮಿ ಹಿಮದ ಗೋಳವಾಯಿತು.

ಬೆಂಕಿಯುಂಡೆ, ಜಲಪ್ರಳಯವನ್ನು ನೋಡಿದ ಭೂಮಿ ಈಗ ಸಂಪೂರ್ಣ ಹಿಮಗಡ್ಡೆಯಾಗಿ ಹೋಗಿತ್ತು. ರೊಡೀನಿಯಾ ಖಂಡ ಸೃಷ್ಟಿಸಿದ ಈ ಹವಾಮಾನ ವೈಪರೀತ್ಯದಿಂದಾಗಿ ಈ ಗ್ರಹದ ಮೇಲಿದ್ದ ಸಾಗರ ಜೀವಿಗಳು ನಾಶವಾದವು.

ಆದರೆ ಹಿಮನದಿಯ ಅಡಿಯಲ್ಲೂ ಜ್ವಾಲಾಮುಖಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಇದರಿಂದಾಗಿ ಬಿಡುಗಡೆಯಾದ ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ಹಿಮಗಡ್ಡೆಯ ದಟ್ಟಪದರದಲ್ಲಿ ಬಿರುಕು ಮೂಡಿಸಿತು. ರೊಡೇನಿಯಾ ಮಹಾಖಂಡ ಒಡೆಯಿತು.

ಭೂಮಿಯನ್ನು ಆವರಿಸಿಕೊಂಡಿದ್ದ ಮಂಜಿನ ಪದರ ಕರಗಿತು. ಆಮ್ಲಜನಕದ ಪ್ರಮಾಣ ಹೆಚ್ಚಿತು. ಸಾಗರದೊಳಗೆ ಬದುಕುಳಿದ ಜೀವಿಗಳು ವಿಕಾಸಗೊಂಡವು. ವಿಚಿತ್ರವಾದ ಮತ್ತು ಅಪಾಯಕಾರಿ ಜೀವಿಗಳು ಬೆಳೆದವು.

ಭೂಮಿಯ ವಾತಾವರಣದಲ್ಲಿ ಈಗ ಹಿಂದೆಂದಿಗಿಂತ ಅಪಾರ ಪ್ರಮಾಣದಲ್ಲಿ ಆಮ್ಲಜನಕವಿತ್ತು. ಜೀವವಿಕಾಸಕ್ಕೆ ಇದು ಪ್ರಮುಖ ಕಾರಣವಾಯಿತು.

ಕೆನಡಾದ ಬರ್ಬಸ್ ಶೆಲ್ ಕ್ವಾರಿ ಪಳೆಯುಳಿಕೆ ಜಗತ್ತಿನ ಕಿಟಕಿ ಎನಿಸಿಕೊಂಡಿರುವ ಸ್ಥಳ. ಅತ್ಯಲ್ಪಕಾಲದಲ್ಲಿ ಜೀವಿಗಳು ವಿಕಾಸ ಹೊಂದಿದ್ದಕ್ಕೆ ಮತ್ತು ವಿಕಾಸ ಹೊಂದಿದ ಜೀವಿಗಳ ವೈವಿಧ್ಯತೆಗೆ ಪುರಾವೆ ಸಿಕ್ಕಿದ್ದು ಇಲ್ಲಿಂದಲೆ.

ಅಮೆರಿಕದ ವಿಜ್ಞಾನಿ ಚಾರ್ಲ್ಸ್ ಡ್ಯುಲಮ್ ಈ ಕ್ವಾರ್ರಿಯನ್ನು ಪತ್ತೆ ಮಾಡಿದ್ದು. ಸ್ವತಃ ವಾಲ್ಕರ್ ಈ ಕ್ವಾರ್ರಿಯಲ್ಲಿ 60 ಸಾವಿರ ಪಳೆಯುಳಿಕೆಗಳನ್ನು ಸಂಗ್ರಹಿಸಿದರು. ನಂತರದ ದಿನಗಳಲ್ಲಿ ಒಂದು ಲಕ್ಷಕೂ ಹೆಚ್ಚು ಪಳೆಯುಳಿಕೆಗಳನ್ನು ವಿವಿಧ ವಿಜ್ಞಾನಿಗಳು ಸಂಗ್ರಹಿಸಿದರು.

50 ಕೋಟಿ ವರ್ಷಗಳ ಹಿಂದೆ ಜೀವಿಗಳು ಸ್ಫೋಟಕ ವೇಗದಲ್ಲಿ ವಿಕಾಸ ಹೊಂದಿದ್ದು ಈ ಪಳೆಯುಳಿಕೆಗಳಿಂದ ತಿಳಿದು ಬಂತು. ಇದನ್ನೇ ಕ್ಯಾಂಬ್ರಿಯನ್ ಸ್ಫೋಟವೆಂದು ಕರೆಯಲಾಯಿತು. ಈ ಕಾಲದ ಸಾಗರ ಜೀವಿಗಳು ಕೇವಲ ಸಸ್ಯಗಳನ್ನಷ್ಟೇ ತಿಂದು ಬದುಕುತ್ತಿರಲಿಲ್ಲ. ಅವು ಮತ್ತೊಂದು ಸಹ-ಜೀವಿಯನೇ ತಿಂದು ಬದುಕಲು ಆರಂಭಿಸಿದ್ದವು.

ಇದೇ ಸಮಯದಲು ಅವುಗಳ ದೇಹ ಹಲವು ಮಾರ್ಪಾಟುಗಳನ್ನು ಕಾಣಲು ಆರಂಭಿಸಿದವು. ಕಣು, ಅಸ್ಥಿಪಂಜರ, ಹಲ್ಲು ಮುಂತಾದವು ಹಲವು ಜೀವಿಗಳಲ್ಲು ವಿಕಾಸವಾಗಿದ್ದವು. ಆಧುನಿಕ ಜೀವಿಗಳು ಭೂಮಿಗೆ ಬಂದವು.

ನಂತರದ 10 ಕೋಟಿ ವರ್ಷಗಳಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಹೆಚ್ಚಳದಿಂದ ಓಜೋನ್ ಪದರ ರಚನೆಯಾಗಿ ಭೂಮಿಯನ್ನು ಸುತ್ತುವರೆಯಿತು. ಇದು ಸೂಕ್ಷ್ಮ ಅತಿನೇರಳೆ ಕಿರಣಗಳಿಂದ ಭೂಮಿಯ ಮೇಲಿದ್ದ ಸೂಕ್ಷ್ಮ ಜೀವಿಗಳನ್ನು ಉಳಿಸಿತು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ: