– ಡಾ.ಎನ್.ಜಗದೀಶ ಕೊಪ್ಪ
ಗೆಳೆಯರೇ,
ಮಾರ್ಚ್ ಎರಡರ ಶುಕ್ರವಾರ, ಅಂದರೆ ಈ ದಿನ, ಕರ್ನಾಟಕದ ಪಾಲಿಗೆ ಕಪ್ಪು ಚುಕ್ಕೆಯ ದಿನ ಮಾತ್ರವಲ್ಲ, ಕರಾಳ ದಿನವೂ ಕೂಡ ಹೌದು. ಈ ದಿನ ಬೆಂಗಳೂರಿನಲ್ಲಿ ಕಪ್ಪುಕೋಟಿನ ಕೆಲವು ವಕೀಲರು ನಡೆಸಿರುವ ದಾಂಧಲೆ, ಗೂಂಡಾಗಿರಿ, ಮತ್ತು ಮಾಧ್ಯಮದವರು, ಪೋಲಿಸರು, ವಿದ್ಯಾರ್ಥಿಗಳ ಮೇಲೆ ಅವರು ನಡೆಸಿರುವ ಅಮಾನುಷ ಹಲ್ಲೆ ಈ ಕೃತ್ಯಗಳನ್ನು ಗಮನಿಸಿದಾಗ ಇಡೀ ನಾಗರೀಕ ಜಗತ್ತು ತಲೆತಗ್ಗಿಸುವಂತಿತ್ತು.
ಇವರುಗಳು ವಕೀಲರೊ? ಅಥವಾ ದಂಡುಪಾಳ್ಯದ ಗ್ಯಾಂಗಿನ ಸದಸ್ಯರೊ? ಎಂಬ ಅನುಮಾನ ಕಾಡತೊಡಗಿದೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ವಕೀಲರು ಎನಿಸಿಕೊಂಡ ಕೆಲ ಗೂಂಡಾಗಳು ವರ್ತಿಸುತ್ತಿರುವ ವೈಖರಿ ನಿಜಕ್ಕೂ ನಾಗರೀಕರಲ್ಲಿ ಜಿಗುಪ್ಸೆ ಮೂಡಿಸಿತ್ತು. ಅದು ಈ ದಿನ ಪರಕಾಷ್ಟೆ ಮುಟ್ಟಿತು.
ಕಳೆದ ತಿಂಗಳು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ವಕೀಲರುಗಳು ಸತತ ಏಳುಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ನಾಗರೀಕರ ಮೇಲೆ ಹಲ್ಲೆ ನಡೆಸಿದಾಗ ಪೋಲಿಸರು ಮತ್ತು ಸರ್ಕಾರ ತಮ್ಮ ನಿಷ್ಕ್ರಿಯತೆಯನ್ನು ಬದಿಗಿಟ್ಟು ಆ ದಿನವೇ ಕಠಿಣ ಕ್ರಮ ತೆಗೆದುಕೊಂಡಿದ್ದರೆ, ನಾವುಗಳು ಈ ದಿನದ ಈ ಕರಾಳ ಕೃತ್ಯಕ್ಕೆ ಸಾಕ್ಷಿಯಾಗಬೇಕಿರಲಿಲ್ಲ.
ನನ್ನ ಮೂರು ದಶಕಗಳ ಪತ್ರಿಕೋದ್ಯಮದ ವೃತ್ತಿಯಲ್ಲಿ ಹಲವಾರು ವಕೀಲರನ್ನು ನೋಡಿದ್ದೇನೆ. ಇವತ್ತಿಗೂ, ಬೆಂಗಳೂರಿನ ಸಿ.ಎಚ್. ಹನುಮಂತರಾಯ, ಪ್ರೊ. ರವಿವರ್ಮಕುಮರ್, ಸಿ.ಎಸ್. ದ್ವಾರಕನಾಥ್, ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಮಂಡ್ಯದ ಕೇಶವಮೂರ್ತಿ, ಮೈಸೂರಿನ ರಾಧಾಮಣಿ, ಧಾರವಾಡದ ಬಸವಪ್ರಭು ಹೊಸಕೇರಿ ಮುಂತಾದ ಹಿರಿಯ ವಕೀಲರು ನನ್ನ ಗೆಳೆಯರಾಗಿದ್ದಾರೆ ನಿಜ. ಆದರೆ, ಇವರ್ಯಾರು ತಮ್ಮ ವೃತ್ತಿಯ ಘನತೆಯನ್ನಾಗಲಿ, ಅಥವಾ ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಗರೀಕನಿಗೆ ಇರಬೇಕಾದ ಜವಬ್ದಾರಿಗಳನ್ನಾಗಲಿ ಮರೆತು ಎಂದೂ ಕೀಳಾಗಿ ವರ್ತಿಸಿದವರಲ್ಲ. ಏನಾಗಿದೆ ಈ ಯುವ ವಕೀಲರಿಗೆ? ಇವರ ವರ್ತನೆಯನ್ನ ವೀಕ್ಷಿಸಿದರೆ, ಇವರುಗಳು ವಿಶ್ವವಿದ್ಯಾಲಯಗಳಿಂದ ಕಾನೂನು ಪದವಿ ಪಡೆದು ಬಂದವರಂತೆ ಕಾಣುವುದಿಲ್ಲ, ಬದಲಾಗಿ ಯಾವುದೋ ಕೊಳಚೆಗೇರಿಯಲ್ಲಿ ಮಚ್ಚು ಲಾಂಗುಗಳ ಜೊತೆ ಬೆಳೆದು ಬಂದವರಂತೆ ಭಾಸವಾಗುತ್ತಾರೆ.
ಕಳೆದ ತಿಂಗಳು 17ರಂದು ಇವರುಗಳ ಮುಷ್ಕರದಿಂದ ಸಾರ್ವಜನಿಕರಿಗೆ ಆದ ತೊಂದರೆಯನ್ನು ಪರಿಣಾಮಕಾರಿಯಾಗಿ ಬಿತ್ತರಿಸಿದ ದೃಶ್ಯ ಮಾಧ್ಯಮಗಳ ಮೇಲೆ ಸೇಡಿನ ಭಾವನೆಯನ್ನು ಜೀವಂತವಾಗಿ ಇರಿಸಿಕೊಂಡಿದ್ದ ಈ ವಕೀಲರು ಈ ದಿನ ಏಕಾಏಕಿ ಕ್ಯಾಮರಾಮೆನ್ಗಳ ಮೇಲೆ ಮೃಗಗಳಂತೆ ಮುಗಿಬಿದ್ದು ಹಲ್ಲೆ ನಡೆಸಿದ ಕ್ರಮ ಇಡೀ ವಕೀಲರ ಸಮುದಾಯವೇ ತಲೆ ತಗ್ಗಿಸುವ ಸಂಗತಿ. ಕಳೆದ ತಿಂಗಳ ಘಟನೆಯನ್ನು ಮಾಧ್ಯಮದಲ್ಲಿ ಬಹಿರಂಗವಾಗಿ ಖಂಡಿಸಿದ್ದ ಪೊ.ರವಿವರ್ಮಕುಮಾರ್ರವರಿಗೆ ಇದೇ ಗೂಂಡಗಳು ಜೀವ ಬೆದರಿಕೆ ಹಾಕಿದ್ದನ್ನು ಸಹ ಇಲ್ಲಿ ನೆನೆಯಬಹುದು.
ಕಳೆದ ಒಂದು ದಶಕದಿಂದ ವಕೀಲಿ ವೃತ್ತಿಗೆ ಬರುತ್ತಿರುವ ಬಹುತೇಕ ಮಂದಿ ನಾಲಾಯಕ್ಕಾದವರು. ( ಈ ಬಗ್ಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾನು ಬರೆದ “ನಿಂತ ನೀರಾಗಿ ಕೊಳೆತವರು” ಎಂಬ ಲೇಖನ ಇದೇ ವರ್ತಮಾನದಲ್ಲಿ ಪ್ರಕಟವಾಗಿದೆ ಗಮನಿಸಿ.)
ಈ ದಿನ ಬೆಳಿಗ್ಗೆ 10 ಗಂಟೆಯಿಂದಲೇ ಕಾವೇರಿ ಭವನದ ಹಿಂಭಾಗದ ಸಿವಿಲ್ ನ್ಯಾಯಾಲಯ ಸಂಕೀರ್ಣ ರಣರಂಗವಾಗಿಹೋಯಿತು. ಖೈದಿಗಳನ್ನು ವಿಚಾರಣೆಗೆ ಕರೆತಂದ ಪೋಲಿಸರು ಮತ್ತು ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ ನಾಗರೀಕರನ್ನು ಸಂಜೆಯವರೆಗೂ ಒತ್ತೆಯಾಳುಗಳಾಗಿ ಇರಿಸಿಕೊಂಡು ವಕೀಲರು ನಡೆಸುತಿದ್ದ ದಾಂಧಲೆಯನ್ನು, ವಾಹನಗಳಿಗೆ ಬೆಂಕಿ ಹಚ್ಚಿ, ಪೋಲಿಸರತ್ತ ಕಲ್ಲು ತೂರುತಿದ್ದ ಅವರ ಕ್ರಿಯೆಯನ್ನು ಗಮನಿಸುತ್ತಿದ್ದರೆ, ಈ ರಾಜ್ಯದಲ್ಲಿ ಸರ್ಕಾರವೆಂಬುದು ಅಸ್ತಿತ್ವದಲ್ಲಿ ಇದೆಯಾ? ಎಂಬ ಪ್ರಶ್ನೆ ಮನಸಿನಲ್ಲಿ ಒಮ್ಮೆ ಹಾದುಹೋಯಿತು.
ರಾಜಧಾನಿಯಲ್ಲಿ ಘಟನೆ ಸಂಭವಿಸಿ ಮೂರು ಗಂಟೆಗಳ ನಂತರವೂ, ಗುಪ್ತಚರ ಇಲಾಖೆಯನ್ನು ತನ್ನ ಬಳಿ ಇಟ್ಟುಕೊಂಡ ಒಬ್ಬ ಮುಖ್ಯಮಂತ್ರಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರ ನೀಡುತ್ತಾನೆ, ಪತ್ರಕರ್ತರ ಪ್ರಶ್ನೆಗೆ ಯಾವ ಉತ್ತರವನ್ನು ನೀಡದ ಒಬ್ಬ ಗೃಹಸಚಿವ ಪೇಲವ ನಗೆ ಬೀರುತ್ತಾನೆ, ಇಡೀ ನಗರದ ರಕ್ಷಣೆ ಹೊತ್ತ ಒಬ್ಬ ಪೋಲಿಸ್ ಆಯುಕ್ತ ಘಟನಾ ಸ್ಥಳಕ್ಕೆ ತೆರಳಿ ಒಬ್ಬ ಪೋಲಿಸ್ ಪೇದೆಯಂತೆ ಅಸಹಾಯಕನಾಗಿ ನಿಂತು ಮಾತಿಲ್ಲದೆ ತೆರಳುತ್ತಾನೆ ಅಂದರೆ, ಇವರುಗಳ ವರ್ತನೆಯನ್ನು ಹೇಗೆ ವ್ಯಾಖ್ಯಾನಿಸಬೇಕು, ಅಥವಾ ಹೇಗೆ ಅರ್ಥೈಸಿಕೊಳ್ಳಬೇಕು ನೀವೇ ನಿರ್ಧರಿಸಿ.
ಇದೀಗ ರಾಜ್ಯ ಸರ್ಕಾರ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಇದೊಂದು ತಿಪ್ಪೆ ಸಾರಿಸುವ ಕ್ರಮ ಅಷ್ಟೇ. ಕರ್ನಾಟಕದ ಇತಿಹಾಸದಲ್ಲಿ ಯಾವ ನ್ಯಾಯಾಂಗದ ತನಿಖೆಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ ಅಥವಾ ವರದಿ ಅನ್ವಯ ಯಾರಿಗೆ ಶಿಕ್ಷೆಯಾಗಿದೆ ಎಂಬುದನ್ನು ಬಲ್ಲವರು ಉತ್ತರಿಸಬೇಕಾಗಿದೆ.
ಕೊನೆಯ ಮಾತು- ಈ ದಿನದ ಘಟನೆ ಕುರಿತಂತೆ ನಮ್ಮ ದೃಶ್ಯ ಮಾಧ್ಯಮಗಳು ವರದಿ ಮಾಡುವಾಗ ಬಳಸಿದ ಭಾಷೆ ವೃತ್ತಿಗೆ ಘನತೆ ತರುವಂತಿರಲಿಲ್ಲ. ವಿಶೇಷವಾಗಿ ಸುವರ್ಣವಾಹಿನಿಯ ರಂಗನಾಥ್ ಭಾರಧ್ವಜ್ ಮತ್ತು ಪಬ್ಲಿಕ್ ಟಿ.ವಿ.ಯ ನಮ್ಮ ರಂಗಣ್ಣ ತೀವ್ರ ಭಾವೋಧ್ವೇಗಕ್ಕೆ ಒಳಗಾಗಿ ಒರಟು ಭಾಷೆಯನ್ನು ಬಳಸಿದರು. ಇಡೀ ಘಟನಾವಳಿಗಳನ್ನು ಸಂಯಮದಿಂದ ವರದಿ ಮಾಡಿದ ಕೀರ್ತಿ ಟಿ.ವಿ.9 ವರದಿಗಾರ ಕಿರಣ್ಗೆ ಸಲ್ಲಬೇಕು.
(ಚಿತ್ರಕೃಪೆ: ಹಿಂದು, ಸಿಎನ್ಎನ್-ಐಬಿಎನ್)