Tag Archives: ಶ್ರೀರಾಮುಲು

ನಮ್ಮ ಆದರ್ಶವನ್ನೆಂದೂ ಮರೆಯಬಾರದು


-ಬಿ. ಶ್ರೀಪಾದ ಭಟ್


“ಸಂಧಾನ ಕೂಡ ಒಂದು ಅಸ್ತ್ರವಾಗಿದ್ದು ಅದನ್ನು ರಾಜಕೀಯ ಹೋರಾಟದ ಕಾಲಕ್ಕೆ ಆಗಾಗ ಬಳಸುವುದು ಅವಶ್ಯಕವಾಗುತ್ತದೆ. ಅದರಿಂದ ಒಂದು ಘೋರ ಹೋರಾಟದಿಂದ ಬಸವಳಿದ ಜನತೆಗೆ ಕೆಲ ಕಾಲ ವಿರಾಮ ಸಿಕ್ಕಂತಾಗುತ್ತದೆ. ಆದರೆ ಈ ಸರಳ ಸಂಧಾನಗಳನ್ನು ಮಾಡಿಕೊಂಡರೂ ನಾವು ನಮ್ಮ ಆದರ್ಶವನ್ನೆಂದೂ ಮರೆಯಬಾರದು. ಅದು ಯಾವತ್ತೂ ನಮ್ಮ ದೃಷ್ಟಿಯಲ್ಲಿರಬೇಕು. ನಾವು ಯಾವ ಉದ್ದೇಶಕ್ಕಾಗಿ ಹೋರಾಡುತ್ತಿದ್ದೇವೆಯೋ ಅದಕ್ಕೆ ಸಂಬಂಧಿಸಿದಂತೆ ನಮ್ಮ ವಿಚಾರಗಳು ಸ್ಪಷ್ಟವಾಗಿರಬೇಕು, ಧೃಡವಾಗಿರಬೇಕು.”  – ಭಗತ್ ಸಿಂಗ್ ( ಕೃಷ್ಣ ಸಹಾಯ್  “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”) (ನರೇಂದ್ರ ಪಾಠಕ್ ರವರ  “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

“ರಾಜಕಾರಣಿಗಳ ಎರಡು ಕಣ್ಣುಗಳು ಎರಡು ತರವಾಗಿರಬೇಕು. ಒಂದು ಶುಭ್ರ ಹಾಗೂ ಮತ್ತೊಂದು ಕೆಂಪಾಗಿರಬೇಕು. ಶುಭ್ರತೆ ಪ್ರೀತಿಯ ಸಂಕೇತವಾದರೆ ಕೆಂಪು ಕ್ರೋಧದ ಸಂಕೇತ. ಶೋಷಿತರು, ದಲಿತರು, ಉಪೇಕ್ಷಿತರ ಬಗ್ಗೆ ಪ್ರೀತಿಯನ್ನು, ಸುಲಿಗೆ ಕೋರರು, ಹತ್ಯಾಚಾರಿಗಳು ಹಾಗೂ ಶೋಷಕರ ಬಗ್ಗೆ ಕ್ರೋಧವನ್ನು ವ್ಯಕ್ತಪಡಿಸುವುದು ಅತ್ಯವಶ್ಯವಾದದ್ದು. ಆದರೆ ಈ ಕ್ರೋಧ ಅಹಿಂಸಾತ್ಮಕವಾಗಿರಬೇಕು, ಸಾತ್ವಿಕವಾಗಿರಬೇಕು.” – ರಾಮ ಮನೋಹರ ಲೋಹಿಯಾ (ಕೃಷ್ಣ ಸಹಾಯ್ “ಸೊಷಲಿಸ್ಟ್ ಮೂವ್‍ಮೆಂಟ್ಸ್ ಇನ್ ಇಂಡಿಯಾ”)  (ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ”ದಿಂದ)

ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಮೇಲಿನೆರಡನ್ನೂ ಮೈಗೂಡಿಸಿಕೊಂಡ ಅಪೂರ್ವ ಸೋಷಲಿಸ್ಟ್ ರಾಜಕಾರಣಿಗಳಾಗಿದ್ದರು. ನಯೀಂ ಸುರಕೋಡ ಅನುವಾದಿಸಿರುವ  ನರೇಂದ್ರ ಪಾಠಕ್ ರವರ “ಕರ್ಪೂರಿ ಠಾಕೂರ್ ಮತ್ತು ಸಮಾಜವಾದದ” ಕೃತಿಯಿಂದ ಸಂಗ್ರಹ ಪೂರ್ಣವಾಗಿ ಆಯ್ದ ಕರ್ಪೂರಿ ಠಾಕೂರ್ ಅವರ ಜೀವನ ಚಿತ್ರಣವನ್ನು ಇಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ.

ಭಾರತ  ರಾಷ್ಟ್ರೀಯ ಕಾಂಗ್ರೆಸ್‍ನ ಸಾಂಪ್ರದಾಯಿಕ ನಿಲುವುಗಳು, ಅಲ್ಲಿ ಬಲಪಂಥೀಯರ ಪ್ರಭಾವ ಹೆಚ್ಚುತ್ತಿದೆಯೇನೋ ಎನ್ನುವ ಅನುಮಾನ, ಹಾಗೂ ಪ್ರಮುಖವಾಗಿ ಸಮಾಜವಾದದ ಬಲು ದೊಡ್ಡ ಪ್ರಭಾವ, ಇವೆಲ್ಲದರ ಕಾರಣಕ್ಕಾಗಿ ಕಾಂಗ್ರೆಸ್‍ನೊಳಗೇ ಒಂದು ಸಮಾಜವಾದಿ ಗುಂಪನ್ನು ರಚಿಸಲು ಅಂದಿನ ತರುಣ ಸಮಾಜವಾದಿಗಳಾಗಿದ್ದ ರಾಮ ಮನೋಹರ ಲೋಹಿಯಾ, ಮಿನೂ ಮಸಾನಿ, ಅಶೋಕ ಮೆಹ್ತ, ಯೂಸುಫ಼್ ಮೆಹ್ರೋಲಿ, ಅಚ್ಯುತ್ ಪಟುವರ್ಧನ್ ರಂತಹವರು ಮುಂದಾದರು. ಇವರಿಗೆ ಅರುಣ ಅಸ್ರಫ್ ಅಲಿ, ಕಮಲಾದೇವಿ ಚಟ್ಟೋಪಾಧ್ಯಾಯ, ಎನ್.ಜಿ.ಗೋರೆ ಮುಂತಾದ ಸಂಘಟನೆಕಾರರು ಬೆಂಬವಿತ್ತಿದ್ದರು. ಇದರ ಫಲಶ್ರುತಿಯಾಗಿ 1934ರ ಅಕ್ಟೋಬರ್‌ನಲ್ಲಿ “ಕಾಂಗ್ರೆಸ್ ಸಮಾಜವಾದಿ ಪಕ್ಷ” ಸ್ಥಾಪನೆಯಾಯ್ತು. ಈ ಪಕ್ಷಕ್ಕೆ ಆಚಾರ್ಯ ನರೇಂದ್ರ ದೇವ ಅಧ್ಯಕ್ಷರಾದರೆ, ಜಯಪ್ರಕಾಶ್ ನಾರಾಯಣ್ ಕಾರ್ಯದರ್ಶಿ ಯಾದರು, ಲೋಹಿಯಾ ಅವರು ಸಂಘಟನಾ ಸದಸ್ಯರಾದರು.

ಇದಕ್ಕೆ ಹದಿಮೂರು ವರ್ಷಗಳ ಹಿಂದೆ 1921 ರ ಜನವರಿ 24 ರಂದು ಬಿಹಾರಿನ ದರ್ಭಾಂಗ  (ಈಗಿನ ಸಮುಷ್ಟಿಪುರ)  ಜಿಲ್ಲೆಯ ಪಿತೋಝಿಯಾ ಗ್ರಾಮದಲ್ಲಿ ಕ್ಷೌರಿಕ ಕುಟುಂಬದಲ್ಲಿ ಕರ್ಪೂರಿ ಠಾಕೂರ್ ಜನಿಸಿದರು. ಇವರ ಆ ಗ್ರಾಮ ಹಾಗೂ ಉತ್ತರ ಬಿಹಾರ ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ಅಲ್ಲಿ ಮಕ್ಕಳು ಹುಟ್ಟುತ್ತಲೇ ಕೆಲಸಕ್ಕೆ, ಕೂಲಿಗೆ ಕಳುಹಿಸುತ್ತಿದ್ದರು. ನಂತರ ಕರ್ಪೂರಿಯವರು ಎರಡು ದಶಕಗಳ ಕಾಲ  (1967 — 1987) ಭಾರತದ ರಾಜಕೀಯದಲ್ಲಿ ಹಿಂದುಳಿದವರ, ದಲಿತರ ಪ್ರಮುಖ ನಾಯಕರಾಗಿಯೂ, ಗಾಂಧೀಜಿ ಹಾಗೂ ಲೋಹಿಯಾರವರ ಚಿಂತನೆಗಳನ್ನು, ಸಮಾಜವಾದಿ ತತ್ವಗಳನ್ನು ರಾಜಕೀಯವಾಗಿಯೂ ಹಾಗೂ ಸಾಮಾಜಿಕವಾಗಿಯೂ ಅನುಷ್ಟಾನಗೊಳಿಸಲು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು. ಈ ಮೂಲಕ ಬಿಹಾರದ ನೆಲೆಯಿಂದ ರೂಪುಗೊಂಡ ಇಂಡಿಯಾದ ಒಬ್ಬ ಪ್ರಮುಖ ರಾಜಕೀಯ ನಾಯಕರಾಗಿ ಕರ್ಪೂರಿ ಠಾಕೂರ್ ಹೆಸರುಗಳಿಸಿದರು. ಕರ್ಪೂರಿ ಹುಟ್ಟಿದ ಆ 20ರ ದಶಕ ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕವಾದ ಪ್ರಮುಖ ಘಟ್ಟವಾಗಿತ್ತು. ಸೌತ್ ಆಫ್ರಿಕಾದಿಂದ ಮರಳಿದ ಗಾಂಧೀಜಿ ನೇರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ನಂತರದ ವರ್ಷಗಳಲ್ಲಿ ಅಸಹಾಕಾರ ಚಳವಳಿಯನ್ನು ಹುಟ್ಟಿಹಾಕಿದರು. ಆ ಮೂಲಕ  ದೇಶದಾದ್ಯಂತ ಅನೇಕ ತರುಣ, ತರುಣಿಯರನ್ನು ತಮ್ಮ ಈ ಪ್ರಯೋಗಕ್ಕೆ ಆಕರ್ಷಿಸಿದರು. ಇದಕ್ಕಾಗಿ ಬಿಹಾರಿನ ಚಂಪಾರಣ್ಯವನ್ನು ತಮ್ಮ ಆರಂಭದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು.

ಇಂತಹ ತಲ್ಲಣಗಳ ಕಾಲ ಘಟ್ಟದಲ್ಲಿ ಅತ್ಯಂತ ಹಿಂದುಳಿದ ಕ್ಷೌರಿಕ ಕುಟುಂಬದಲ್ಲಿ ಹುಟ್ಟಿದ ಕರ್ಪೂರಿಯವರ ಬಾಲ್ಯ ಅತ್ಯಂತ ಬಡತನದಿಂದ ಕೂಡಿತ್ತು. ಅವರನ್ನು ಹತ್ತಿರದಿಂದ ಬಲ್ಲ ಕೃಷ್ಣ ನಂದನ್ ಠಾಕೂರ್‌ರವರ ಪ್ರಕಾರ “ಪರೀಕ್ಷೆಗಳಿಗೆ ಫೀಸ್ ಕಟ್ಟಲು ದುಡ್ಡಿಲ್ಲದಂತಹ ಅನೇಕ ಸಂದರ್ಭಗಳು ಕರ್ಪೂರಿಯವರ ಬಾಲ್ಯ ಜೀವನದಲ್ಲಿ ಎದುರಾಗಿದ್ದವು. ಇಂತಹ ದುರ್ಭರ ಸಂದರ್ಭಗಳಲ್ಲಿ ಅವರ ತಂದೆ ಮಾಜಿ ಮಂತ್ರಿ ಸತ್ಯನಾರಾಯಣ ಸಿಂಗ್ ಅವರಿಂದ ಸಾಲ ಪಡೆದು ಫೀಸ್ ಕಟ್ಟಿದ್ದರು.” ಅದೇ ರೀತಿ ಅವರ ದರ್ಭಾಂಗ ಕಾಲೇಜಿನ ಅಧ್ಯಾಪಕರಾದ ಪ್ರೊ.ಬಿ.ಎಂ.ಕೆ.ಸಿನ್ಹಾ ಹೇಳುವುದು “ಕರ್ಪೂರಿ ಠಾಕೂರ್ ನಿಸ್ಸಂದೇಹವಾಗಿ ಬಡವರಾಗಿದ್ದರು. ಆದರೆ ಅವರು ಸಕ್ರಿಯ ರಾಜಕೀಯದಲ್ಲಿ ತಮ್ಮ ಕಾರ್ಯಬಾಹುಳ್ಯದಿಂದಾಗಿ ಹಾಗೂ ಚಟುವಟಿಕೆಗಳನ್ನು ಹೆಚ್ಚಿಸುವುದಕ್ಕಾಗಿ ತಮ್ಮ ಬಿ.ಎ. ತೃತೀಯ ವರ್ಷದ ಓದನ್ನು ನಿಲ್ಲಿಸಿದರೇ ಹೊರತು ಬಡತನದಿಂದಲ್ಲ. ಅವರಲ್ಲಿ ನಾನು ಒಂದು ಬಗೆಯ ತಳಮಳವನ್ನು ಕಾಣುತ್ತಿದ್ದೆ. ಏನಾದರೂ ಮಾಡಲು ಅವರು ನಿರಂತರವಾಗಿ ಚಡಪಡಿಸುತ್ತಿದ್ದರು. ಸುಮಾರು ಆರು ತಿಂಗಳ ನಂತರ ಲಹೇರಿಯಾ ಸರಾಯ್ ನಿಲ್ದಾಣದಲ್ಲಿ ನಾನು ಅವರನ್ನು ನೋಡಿದೆ. ಕುರ್ತಾ, ಪೈಜಾಮ ತೊಟ್ಟಿದ್ದರು, ಆದರೆ ಬರಿಗಾಲಲ್ಲಿ ಇದ್ದರು. ‘ನೀವು ಕಾಲೇಜಿಗೆ ಬರುತ್ತಿಲ್ಲ, ಯಾಕೆ’ ಎಂದು ಅವರನ್ನು ಕೇಳಿದೆ. ‘ಸರ್, ನಾನು ರಾಜಕೀಯಕ್ಕೆ ಇಳಿದಿದ್ದೇನೆ, ಗಾಂಧೀಜಿಯ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇನ್ನೆಂದು ಕಾಲೇಜಿಗೆ ಬರಲಾರೆ,’ ಎಂದರು.”

ಕರ್ಪೂರಿ ಠಾಕೂರ್ ಅವರ ನಿಧನದ  ನಂತರ ಅವರೊಬ್ಬರ ಸಂಗಾತಿ ಕಪಿಲ್ ದೇವ್ ಹೇಳಿದ್ದು ಹೀಗೆ: “1987 ರ ನವೆಂಬರ್ ತಿಂಗಳಲ್ಲಿ ಒಂದು ದಿನ ಕರ್ಪೂರೀಜಿ ನನ್ನ ಮನೆಗೆ ಬಂದಿದ್ದರು. ಊಟ ಮುಗಿಸಿ ಹೊರಟು ನಿಂತಾಗ ಅವರು ಏಕಾಂತದಲ್ಲಿ ನನಗೆ 35 ಸಾವಿರ ರೂಪಾಯಿ ನೀಡಿ ‘ಕಪಿಲ್ ಭಾಯಿ ಇದು ನನ್ನ ಜೀವಮಾನದ ಗಳಿಕೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ, ನನ್ನ ಹಳ್ಳಿಯಲ್ಲಿ ಒಂದು ಮನೆ ಕಟ್ಟಿಸಿರಿ.’  ಈ ಹಣದಲ್ಲಿ ಮನೆ ಕಟ್ಟುವುದಿರಲಿ ಒಂದು ಕೋಣೆಯನ್ನೂ ಕಟ್ಟಿಸುವುದು ಸಾಧ್ಯವಿರಲಿಲ್ಲ ಎಂದು ಕಪಿಲ್ ದೇವ್‍ಗೆ ಅನ್ನಿಸಿತು. ದುರದೃಷ್ಟವಶಾತ್ ಕೆಲವೇ ತಿಂಗಳುಗಳಲ್ಲಿ ಕರ್ಪೂರಿ ಠಾಕೂರ್ ನಿಧನರಾದರು. ಅವರ ನಿಧನರಾದ ನಂತರ ಈ ಹಣವನ್ನು ಅವರ ಕುಟುಂಬಕ್ಕೆ ತಲುಪಿಸಲಾಯಿತು. ಪಿತೋಝಿಯಾದಲ್ಲಿ ಅವರ ಪೂರ್ವಜರ ಮನೆ ಇಂದು ಕೂಡ ಹಾಗೆ ನಿಂತಿದೆ. ಸಾರ್ವಜನಿಕ ಬದುಕನ್ನು ಬದುಕುವ ವ್ಯಕ್ತಿ ಮನೆ ಮಾರು ಎನ್ನುವ ಮಾಯೆಯಿಂದ ದೂರವಿರಬೇಕು ಎಂದು ಸಾರಲು ಆ ಮನೆ (ಗುಡಿಸಲು) ಬಿಹಾರದಲ್ಲಿ ಇನ್ನೂ ಸೂರಿಲ್ಲದವರ ಸಂಖ್ಯೆ ಕಡಿಮೆ ಇಲ್ಲ ಎನ್ನುವುದಕ್ಕೆ ಸಂಕೇತವೂ ಆಗಿದೆ.”

ಬಹುಶಃ ಗಾಂಧೀಜಿ, ಅಂಬೇಡ್ಕರ್, ಲೋಹಿಯಾರಂತಹ ರಾಜಕೀಯ ನಾಯಕರು ಹಾಗೂ ಚಿಂತಕರ ಅತ್ಯಂತ ಕಟ್ಟಾ ಅನುಯಾಯಿಯಾಗಿದ್ದ ಕರ್ಪೂರಿಯಂತಹ ರಾಜಕೀಯ ನಾಯಕರಿಂದ ಇದು ನಿರೀಕ್ಷಿತವೇ. ಏಕೆಂದರೆ ಅವರ ಸ್ನೇಹಿತ ಲಾಡಲಿ ಮೋಹನ್ ನಿಗಂ ಅವರ ಪ್ರಕಾರ “ಕರ್ಪೂರಿ ಕೇವಲ ವ್ಯಕ್ತಿಯಾಗಿರಲಿಲ್ಲ, ಅವರ ಬಳಿ ಒಂದು ಕನಸಿತ್ತು. ಕನಸು, ಸಂಕಲ್ಪ, ಹಾಗೂ ತ್ಯಾಗ ಇವು ಮೂರೂ ಕರ್ಪೂರಿಯವರನ್ನು ರೂಪಿಸಿದ್ದವು. ಅವರು ಹಗಲು ರಾತ್ರಿ ಬಡವರನ್ನು ಕುರಿತು ಚಿಂತಿಸುತ್ತಿದ್ದರು. ಅವರು ವ್ಯಕ್ತಿಯಾಗಿರಲಿಲ್ಲ, ರಾಜಕೀಯ ಹಾಗೂ ವೈಚಾರಿಕತೆಯ, ಒಂದು ಮೌಲ್ಯದ ಸಂಕೇತವಾಗಿದ್ದರು.”

ಪತ್ರಕರ್ತ ಅರುಣ್ ರಂಜನ್ ಪ್ರಕಾರ “ಹರಿಜನರ ಮೇಲಿನ ದೌರ್ಜನ್ಯ ಕರ್ಪೂರಿಯವರ ಮನಸ್ಸನ್ನು ತಲ್ಲಣಗೊಳಿಸುತ್ತಿತ್ತು. ಇಂದು ಅವರು ಬದುಕಿದ್ದರೆ ಪ್ರಾಯಶಃ ಹಿಂದಿ ಪ್ರದೇಶದಲ್ಲಿ ಹಿಂದುಳಿದವರ ಕೂಗು ಹರಿಜನರ ಶಕ್ತಿಯೊಂದಿಗೆ ಮಿಳಿತಗೊಂಡು ಬಲಶಾಲಿಯಗುತ್ತಿತ್ತು.” ತಮ್ಮ ಕಾಲೇಜಿನ ವಿದ್ಯಾರ್ಥಿ ದಿನಗಳಲ್ಲಿ ತದ ನಂತರ ಕರ್ಪೂರಿಯವರು ಲೋಹಿಯಾ, ಜಯಪ್ರಕಾಶ್ ನಾರಾಯಣ, ರಾಹುಲ ಸಾಂಕೃತ್ಯಾಯನ್, ರಾಮಕೃಷ್ಣ ಬೇನಿಪುರಿರಂತಹ ನಾಯಕರ ಗರಡಿಯಲ್ಲಿ ಪಳಗುತ್ತಾರೆ. ಆ ಕಾಲದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲಿಗೆ ಕೂಡ ಸೇರುತ್ತಾರೆ. ನಂತರ 1947 ರಲ್ಲಿ ಸ್ಥಾಪಿಸಿದ “ಅಖಿಲ ಭಾರತೀಯ ಹಿಂದ್ ಕಿಸಾನ್ ಪಂಚಾಯತ್” ಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ತಮ್ಮ ರಾಜಕೀಯ ಹಾಗೂ ಸಾಮಾಜಿಕ ಹೋರಾಟದ ಅಧ್ಯಾಯವನ್ನು ಪ್ರಾರಂಭಿಸುತ್ತಾರೆ. ಇಲ್ಲಿ ಇವರು ರಾಜಕೀಯ ಕಾರ್ಯಕರ್ತರೂ ಹೌದು, ಸಾಮಾಜಿಕ ಕಾರ್ಯಕರ್ತರೂ ಹೌದು. 1952 ರಲ್ಲಿ ದೇಶದಲ್ಲಿ ನಡೆದ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ತಾಜಪುರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗುವುದರ ಮೂಲಕ 1980 ರವರೆಗೆ ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದಾರೆ. 1967 ರಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಯಾಗಿ ತಮ್ಮ ಅಧಿಕಾರದ ರಾಜಕೀಯವನ್ನು ಆರಂಭಿಸಿದ ಕರ್ಪೂರಿ ಠಾಕೂರ್ 1969ರಲ್ಲಿ ಅಲ್ಪ ಕಾಲಾವಧಿಗೆ ಮುಖ್ಯಮಂತ್ರಿಯಾಗಿಯೂ ನಂತರ 1977 ರಿಂದ 1979 ರ ವರೆಗೆ 22  ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು.

ಈ 1969 ರಿಂದ 1980ರ ರಾಜಕೀಯ ಕಾಲಘಟ್ಟವನ್ನು ಕೆಲವೇ ಮಾತುಗಳಲ್ಲಿ ಬರೆದಿಡಲು ಸಾಧ್ಯವೇ ಇಲ್ಲ. ಅದೊಂದು ಅಸಾಧ್ಯ ಹಾಗೂ ಅಸಂಬದ್ಧ ತಿರುವುಗಳ ಮಹಾಕಥೆ. ಈ ಕಾಲಘಟ್ಟದಲ್ಲಿ ಕರ್ಪೂರಿ ಠಾಕೂರ್ ಅತ್ಯಂತ ಪ್ರಮುಖ ರಾಜಕಾರಣಿಯಾಗಿದ್ದರು. ಅನೇಕ ಸ್ಥಿತ್ಯಂತರಗಳಿಗೂ ಕಾರಣರಾಗಿದ್ದರು. ಪಕ್ಷಾಂತರಿಯೆಂದು ಅಪಾದನೆಗೆ ಗುರಿಯಾಗಿದ್ದರು. ಅನೇಕ ಸಂದರ್ಭಗಳಲ್ಲಿ ರಾಜಿ ಮಾಡಿಕೊಂಡಿದ್ದರು ಅದಕ್ಕಾಗಿ ಅಪಾರ ಪ್ರಮಾಣದಲ್ಲಿ ಟೀಕೆಗೆ ಗುರಿಯಾಗಿದ್ದರು. ಆದರೆ ಅವರು ರಾಜಿಯಾಗಿದ್ದು ತಮ್ಮ ಆಳದ ಧ್ಯೇಯವಾದ ಸಮಾಜವಾದದ ನೀತಿಗಳನ್ನು ಹೇಗಾದರೂ ಮಾಡಿ ಅನುಷ್ಟಾನಗೊಳಿಸಬೇಕು ಹಾಗೂ ಕಾಂಗ್ರೆಸ್ಸೇತರ ರಾಜಕೀಯ ಎನ್ನುವ ಒಂದು ಮಹಾ ಸಂಘಟನೆಗಳಿಗಾಗಿ ಮಾತ್ರ. ಇಲ್ಲಿ ವೈಯುಕ್ತಿಕ ಲಾಭದ ಅಂಶ ಲವಲೇಶವೂ ಇರಲಿಲ್ಲ. ಅದರೆ ಇವರ ಅಧಿಕಾರ ಅವಧಿಯ ಅತ್ಯಂತ ಕಪ್ಪು ಚುಕ್ಕೆ ಎಂದರೆ 1978 ರಲ್ಲಿ ಬಿಹಾರದ ಪಟ್ನಾ ಜಿಲ್ಲೆಯ ಬೆಲ್ಚಿಯಲ್ಲಿ  ಠಾಕೂರರ ತೋಳ್ಬಲ, ಸಂಕುಚಿತ ಮನೋಭಾವ, ದುರಹಂಕಾರದಿಂದ ನಡೆದ ದಲಿತರ ದಾರುಣ ಸಾಮೂಹಿಕ ಕಗ್ಗೊಲೆ.

ಇದು ಆ ರಾಜ್ಯದ ಮಧ್ಯಮ ಜಾತಿಯ ವರ್ಗಗಳು ನಡೆಸಿದ ನರಮೇಧವಾಗಿತ್ತು. ಆಗ ಹಿಂದುಳಿದವರ ನೇತಾರ ಹಾಗೂ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರ ಅಧಿಕಾರದ ಅವಧಿಯಲ್ಲಿ ಈ ಬರ್ಬರ ಕೃತ್ಯ ನಡೆದದ್ದು ಕರ್ಪೂರಿಯವರನ್ನು ಇನ್ನಿಲ್ಲದ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಲುಕಿಸಿತ್ತು. ಇದರ ಬಿಕ್ಕಟ್ಟಿನಿಂದ ಕರ್ಪೂರಿಯವರಿಗೆ ಹೊರ ಬರಲು ಕಡೆಯವರೆಗೂ ಸಾಧ್ಯವೇ ಅಗಲಿಲ್ಲ. ಇದರಿಂದಾದ ಮತ್ತೊಂದು ದುರಂತವೆಂದರೆ ಈ ಹಿಂದುಳಿದವರಿಗೆ ಪಾಠ ಕಲಿಸಲು ದಲಿತರ ಹಾಗೂ ಮೇಲ್ಜಾತಿಗಳ ಧೃವೀಕರಣ ನಡೆದದ್ದು. ಮತ್ತೆ ಇದಕ್ಕೆ ಬಲಿಯಾದದ್ದು ಕರ್ಪೂರಿ ಠಾಕೂರ್. ಆಗ ಈ ಧೃವೀಕರಣದ ಲಾಭ ಪಡೆದದ್ದು ಕಾಂಗ್ರೆಸ್ ಪಕ್ಷ. ತಾನು ನಂಬಿದ, ಬೆಳಿಸಿದ ಆದರ್ಶ ತತ್ವಗಳಿಗೆ ವ್ಯತಿರಿಕ್ತವಾಗಿ ನಡೆದ ಅಮಾನವೀಯ ಘಟನೆಗಳು ಹಾಗೂ ಇದಕ್ಕಾಗಿ ಕರ್ಪೂರಿ ತಲೆದಂಡ ಕೊಡಬೇಕಾಗಿರುವುದು ಇದು ಬಹುಶ ಸ್ವಾತಂತ್ರ್ಯ ಭಾರತದ ರಾಜಕೀಯದಲ್ಲಿ ಕರ್ಪೂರಿ ಠಾಕೂರರಂತಹ ದುರಂತ ರಾಜಕಾರಣಿ ಮತ್ತೊಬ್ಬರಿರಲಿಕ್ಕಿಲ್ಲವೆಂದೆನಿಸುತ್ತದೆ. ಇದರಿಂದ ಜರ್ಝರಿತಗೊಂಡ ಕರ್ಪೂರಿ ಮತ್ತೆ  ರಾಜಕೀಯವಾಗಿ ಮೇಲೇಳಲೇ ಇಲ್ಲ. ತಾವು ಅಧಿಕಾರದಲ್ಲಿದ್ದಂತಹ ಸಂದರ್ಭಗಳಲ್ಲಿ ಕರ್ಪೂರಿ ಅತ್ಯಂತ ದಕ್ಷತೆಯಿಂದ, ಪ್ರಗತಿಪರ ಕಾರ್ಯ ನೀತಿಗಳಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. 1969 ರಲ್ಲಿ ಬಿಹಾರನಲ್ಲಿ ಭೀಕರ ಬರ ಬಂದಾಗ ಅತ್ಯಂತ ಆಡಳಿತ ದಕ್ಷತೆಯ ಅನುಭವವನ್ನು, ರಾಜಕೀಯ ಇಚ್ಛಾಶಕ್ತಿಯನ್ನು ಬಳಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಕಾನೂನು ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರು. ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಸಂವಿಧಾನ ಕಲ್ಪಿಸಿದ ಅವಕಾಶಗಳಿಗೆ ಅನುಗುಣವಾಗಿ ಸಾಮಾಜಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಶೋಷಿತ, ದಲಿತ ಹಾಗೂ ಉಪೇಕ್ಷಿತ ವರ್ಗಕ್ಕೆ ಹಾಗೂ ಎಲ್ಲಾ ಜಾತಿಯ ಬಡ ಮಹಿಳೆಯರಿಗೆ ಮೀಸಲಾತಿ ನೀಡುವ ಕಾರ್ಯಕ್ರಮ ಜಾರಿಗೊಳಿಸಿದ್ದರು. ಇದು ಆ ಕಾಲದಲ್ಲಿ ಕರ್ಪೂರಿ ಸೂತ್ರವೆಂದೇ ಪ್ರಸಿದ್ದಿಯಾಗಿತ್ತು .ಇದು ಆ ಕಾಲದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಿಗೆ ರಾಜಕೀಯವಾಗಿ ಮನ್ನಣೆಗಳು, ಸ್ಥಾನಗಳು ದೊರಕತೊಡಗಿದವು.

[ಮೇಲಿನದಷ್ಟು ನರೇಂದ್ರ ಪಾಠಕ್ ಬರೆದ ಸುರುಕೋಡ ಅನುವಾದಿಸಿದ ಪುಸ್ತಕದಿಂದ ಆಯ್ದ ಕರ್ಪೂರಿಯವರ ಜೀವನದ ಸಂಕ್ಷಿಪ್ತ ಸಾರಾಂಶ.]

ಆದರೆ ಕರ್ಪೂರಿ ಠಾಕೂರ್ ಅವರು ಅತ್ಯಂತ ಮಾನವೀಯ ಹಾಗೂ ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ದುರ್ಬಲ ವರ್ಗದ ಸಬಲೀಕರಣಕ್ಕಾಗಿ ಜಾರಿಗೆ ತಂದಂತಹ ಈ ಸೂತ್ರಗಳು ಅನುಷ್ಟಾನಗೊಂಡು ಅದರೆ ತನ್ನ ಮೂಲ ಧ್ಯೇಯಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರತೊಡಗಿದವು. ಈ ಮೂಲಕ ಸಬಲೀಕರಣದ ನೆಪದಲ್ಲಿ ಬಿಹಾರ್‌ನ ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ರಾಜಕೀಯ ಹಿಂಸಾಚಾರಕ್ಕಿಳಿದಿದ್ದು ಆ ಹಿಂಸಾಚಾರಕ್ಕೆ ಬಲಿಯಾದದ್ದು ದಲಿತರಾಗಿದ್ದರು. ಅಲ್ಲಿ ಜಾತೀಯ ಉನ್ಮಾದ ಸೃಷ್ಟಿಯಾಗತೊಡಗಿತ್ತು. ತಾವು ಅತ್ಯಂತ ನಿಸ್ವಾರ್ಥದಿಂದ, ಕಷ್ಟಪಟ್ಟು ಕಟ್ಟಿದ ಹಿಂದುಳಿದ ವರ್ಗಗಳ ಚಳುವಳಿ ಈ ರೀತಿ ಇತರೇ ಹಿಂದುಳಿದವರು (OBC)  ಹಾಗೂ ಅತಿ ಹಿಂದುಳಿದವರು (MBC) ಎಂದು ಮತ್ತೊಂದು ಮಟ್ಟದಲ್ಲಿ ವಿಭಜನೆಗೊಂಡದ್ದು ಕರ್ಪೂರಿಯವರಲ್ಲಿ ಇನ್ನಿಲ್ಲದ ಗೊಂದಲಗಳನ್ನು, ಸಿನಿಕತನವನ್ನು, ಸೋಲಿನ ಮನೋಭಾವನೆಯನ್ನು ಹುಟ್ಟಿ ಹಾಕಿದವು. ಎಪ್ಪತ್ತರ ದಶಕದ ಅಂತ್ಯದ ವೇಳೆಗೆ ಬಿಹಾರನಲ್ಲಿ ಶತ್ರುವಿನ ಶತ್ರು ನಮ್ಮ ಮಿತ್ರ ಅನ್ನುವ ಅವಕಾಶವಾದಿ ತತ್ವದಡಿ ಬ್ರಾಹ್ಮಣ ಹಾಗೂ ದಲಿತರ ಧೃವೀಕರಣ ಶುರುವಾಗಿತ್ತು. ಇದರ ಕರಾಳ ಒಡಬಂಡಿಕೆಗಳು ಹಾಗೂ ಇದರ ಮೂಲಕ ಮತ್ತೆ ದಲಿತರು ನಾಶವಾಗುತಿದ್ದದ್ದು, ಹಿಂದುಳಿದ ವರ್ಗಗಳಲ್ಲಿ ಕೆಲವು ಬಲಿಷ್ಟ ಜಾತಿಗಳು ತನ್ನ ಸಾರ್ವಭೌಮತ್ವಕ್ಕಾಗಿ ತೋಳ್ಬಲದ ರಾಜಕೀಯವನ್ನು ಒಂದು ಮಾದರಿಯನ್ನಾಗಿಯೇ ಜಾರಿಗೊಳಿಸಿದ್ದು, ಇವೆಲ್ಲವೂ ಕರ್ಪೂರಿ ಠಾಕೂರ್‌ರನ್ನು ಸಂಪೂರ್ಣ ಹತಾಶೆಗೆ ಕೆಡವಿತ್ತು. ಅವರ ಅಂತ್ಯ ಅತ್ಯಂತ ದುರಂತ ಅಧ್ಯಾಯದಲ್ಲಿ ಪರ್ಯಾವಸಾನಗೊಂಡಿತು. ಇಲ್ಲಿ ಸುಸಂಬದ್ಧವಾದ ಮತ್ತು ಪೂರ್ವ ಯೋಜನೆಗಳಿಲ್ಲದೆ ಮುಗ್ಧತೆಯೇ ಮೂಲಾಧಾರವನ್ನಾಗಿ ಮಾಡಿಕೊಂಡು, ಸಮಾಜವಾದದಲ್ಲಿ ಅತಿ ನಿಷ್ಟೆಯನ್ನು ಇಟ್ಟುಕೊಂಡು ಜನನಾಯಕರಾದ, ನಿಷ್ಟಾವಂತ, ಸತ್ಯವಂತ ಸಮಾಜವಾದಿಗಳ ಬದುಕು ಹೀಗೇನೇ ಎನ್ನುವ ತೆಳು ಚಿಂತನೆಗಳು ಕೂಡ ಹುಟ್ಟಿಕೊಂಡಿತು. (ಇಂಡಿಯಾದ ಸಮಾಜವಾದವನ್ನು ಲೋಹಿಯಾರ ಮೂಲಕ ತೆರೆದಿಡುತ್ತಾ, ಆ ಮೂಲಕ ಸಮಾಜವಾದದ ಚಿಂತನೆ ಹಾಗೂ ಚಳುವಳಿಗಳ ಅನೇಕ ಮಗ್ಗುಲುಗಳನ್ನು ಕನ್ನಡದಲ್ಲಿ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣ, ನಟರಾಜ್ ಹುಳಿಯಾರ್ ಅವರು ಅತ್ಯಂತ ಅಳವಾದ ಅಧ್ಯಯನಗಳನ್ನು ನಡೆಸಿ ಈ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಸಂಪಾದಿಸಿದ್ದಾರೆ. ಈ ಕೃತಿಗಳು ನಿಜಕ್ಕೂ ಸಮಾಜವಾದಿ ಅಧ್ಯಯನಕ್ಕೆ ಅತ್ಯಂತ ಮೌಲಿಕ, ಸೃಜನಶೀಲ, ವೈಚಾರಿಕ ಕೃತಿಗಳು. ಅಲ್ಲದೆ ಹಸಂ ನಯೀಮ್ ಸುರುಕೋಡ ಅನುವಾದಿಸಿದ ಸಮಾಜವಾದದ ಪುಸ್ತಕಗಳು ನಿಜಕ್ಕೂ ಕೈದೀಪಗಳು). ಆದರೆ ಒಟ್ಟಾರೆಯಾಗಿ ಕರ್ಪೂರಿಯವರಿಗೆ ಸಮಾಜವಾದದ ಮಂತ್ರ ಗೊತ್ತಿತ್ತು, ಬಲು ಪರಿಪಕ್ವವಾಗಿಯೇ ಇದನ್ನು ಲೋಹಿಯಾರಿಂದ ಕಲಿತಿದ್ದರು. ಆದರೆ ಅದನ್ನು ಬಳಸುವ ಮಂತ್ರದಂಡ ಮಾತ್ರ ಆಗಾಗ್ಗೆ ಅಥವಾ ಅನೇಕ ವೇಳೆ ಕೈಕೊಡುತ್ತಿತ್ತು ಹಾಗೂ ಇವರು ಬಳಸಿದ ಮಂತ್ರದಂಡವೇ ದೋಷಪೂರಿತವಾಗಿತ್ತೇನೋ!

ಹಿಂದುಳಿದವರ ಸಬಲೀಕರಣ, ರಾಜಕೀಯವಾಗಿ ಅಧಿಕಾರವನ್ನು ಪಡೆದುಕೊಳ್ಳುವುದರ ಬಗೆಗೆ ಹಾಗೂ ಹಾವನೂರು ವರದಿಯನ್ನು ಜಾರಿಗೊಳಸಿದ್ದು, ಉಳುವವನೇ ಹೊಲದೊಡೆಯನೆಂಬ ಅತ್ಯಂತ ಪ್ರಗತಿಪರ ಕಾಯ್ದೆಯನ್ನು ಜಾರಿಗೆ ತಂದದ್ದು, ಇವೆಲ್ಲವನ್ನು ದೇವರಾಜ್ ಅರಸು ತಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಹಿಂಸೆ ಹಾಗೂ ಪ್ರತಿ ಹಿಂಸೆ ಇಲ್ಲದೇ ತಮ್ಮ ರಾಜಕೀಯ ಚಾಣಾಕ್ಷತೆ, ಇಚ್ಛಾಶಕ್ತಿಯನ್ನು ಬಳಸಿ ಅನುಷ್ಟಾನಗೊಳಿಸಿದರು. ಆದರೆ ಇದೇ ಮಾದರಿ ಹಾಗೂ ಕ್ಷಮತೆ ಕರ್ಪೂರಿ ಠಾಕೂರರಿಗೆ ಏಕೆ ಸಾಧ್ಯವಾಗದೇ ಹೋಯ್ತು ಎಂದು ಈ ದೇಶದ ರಾಜಕೀಯ ಪಂಡಿತರು ಹಾಗೂ ಚಿಂತಕರು ಕರ್ಪೂರಿ ಅವರನ್ನು ದೇವರಾಜ ಅರಸರೊಂದಿಗೆ ಹೋಲಿಸಿ ವಿಶ್ಲೇಷಿಸುತ್ತಾರೆ. ಆದರೆ ಈ ಮಾದರಿಯ ಕಪ್ಪು ಬಿಳುಪಿನ  ವಿಶ್ಲೇಷಣೆ ನಿಜಕ್ಕೂ ಅಪೂರ್ಣವೆನಿಸುತ್ತದೆ. ಅಲ್ಲದೆ ಅನೇಕ ಸಂದರ್ಭಗಳಲ್ಲಿ ಅಮಾನವೀಯವೆನಿಸುತ್ತದೆ. ಏಕೆಂದರೆ ಅರಸು ಅವರಿಗೆ ಇದ್ದ ಅನೇಕ ಸವಲತ್ತುಗಳು ಕರ್ಪೂರಿ ಅವರಿಗೆ ಇರಲಿಲ್ಲ. ಮೊದಲನೇಯದಾಗಿ ರಾಜಕೀಯ ಪಕ್ಷ. ಆ ಕಾಲದಲ್ಲಿ ಕಾಂಗ್ರೆಸ್ ನಂತಹ ಬಲಿಷ್ಟ ರಾಷ್ಟ್ರೀಯ ಪಕ್ಷ ಅರಸರ ಬೆಂಬಲಕ್ಕಿತ್ತು. ಅವರಿಗೆ ಬಹುಮತವಿತ್ತು. ಈ ಸೌಕರ್ಯ ಕರ್ಪೂರಿ ಠಾಕೂರರಿಗೆ ಇರಲೇ ಇಲ್ಲ. ಇಲ್ಲಿ ಕರ್ಪೂರಿ ನೆಚ್ಚಿದ್ದು ಕೇವಲ ತಮ್ಮ ಆಳದ ಸಮಾಜವಾದದ ಅನುಭವ, ಸಾಮಾಜಿಕ ನ್ಯಾಯದ ಪರ ಒಲವು ಹಾಗೂ ಪ್ರೌಢಿಮೆ, ರಾಜಕೀಯ ಬಲಾಬಲ ಹಾಗೂ ತಮ್ಮ ಹಿಂದಿರುವ ರಾಜಕೀಯ ಕಾರ್ಯಕರ್ತರ ಸಂಖ್ಯೆ. ಇಲ್ಲಿ ಕರ್ಪೂರಿಯವರು ತಮ್ಮದಲ್ಲದ ತಪ್ಪಿಗೂ ದಯನೀಯವಾಗಿ ಸೋಲುತ್ತಾರೆ. ತಲೆದಂಡ ನೀಡಬೇಕಾಗುತ್ತದೆ. ಇನ್ನೊಂದು ಅತ್ಯಂತ ಪ್ರಮುಖ ಸಂಗತಿಯೆಂದರೆ ಕರ್ನಾಟಕದ ರಾಜಕೀಯ ನೆಲೆಗಳು ಹಾಗೂ ಜಾತಿಗಳ ಸಂರಚನೆಗೂ ಉತ್ತರ ಭಾರತದ ಅದರಲ್ಲೂ ಬಿಹಾರಿನಂತಹ ರಾಜ್ಯಗಳಲ್ಲಿನ ರಾಜಕೀಯ ಇತಿಹಾಸ ಹಾಗೂ ಜಾತಿಗಳ ಸಂರಚನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರ್ನಾಟಕದಲ್ಲಿನ ಪ್ರಗತಿಪರ ಹೋರಾಟ, ಬ್ರಾಹ್ಮಣೇತರ ಚಳುವಳಿಗಳಿಗೆ ಶತಮಾನ ಕಾಲದಷ್ಟು ಇತಿಹಾಸವಿದೆ.

1900 ರಲ್ಲಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಶುರುವಾದ ಪ್ರಗತಿಪರ ಆಡಳಿತಾತ್ಮಕ ಯೋಜನೆಗಳು ಹಾಗೂ ಅವುಗಳ ಅನುಷ್ಟಾನ ಹಾಗೂ ಇಂದಿಗೆ 110 ವರ್ಷಗಳಷ್ಟು ಹಿಂದೆಯೇ ಹಿಂದುಳಿದವರ ಪರವಾದ ಮೀಸಲಾತಿ ಕರ್ನಾಟಕದಲ್ಲಿ ಕರಡು ನೀತಿಯನ್ನು ರೂಪಿಸಲಾಗಿತ್ತು. ಇಂತಹ ಅನೇಕ ಸಾಂಸ್ಕೃತಿಕ, ಮೀಸಲಾತಿ ಪರ ಚಳುವಳಿಗಳಿಂದ, ಶಾಂತವೇರಿ ಗೋಪಾಲ ಗೌಡರ ಹಾಗೂ ಅವರ ಸಮಾಜವಾದಿ ಗೆಳೆಯರ (ಲೇಖಕ ‘ಪೀರ್ ಬಾಷ’ ಬರೆದ ಕರ್ನಾಟಕ  ಸಮಾಜವಾದಿಗಳ ಸಂದರ್ಶನ ಆಧಾರಿತ ಪುಸ್ತಕ ಇದರ ಬಗ್ಗೆ ಅತ್ಯುತ್ತಮ ಒಳನೋಟಗಳನ್ನು ನೀಡುತ್ತದೆ. ಇದು ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.) ನಿಸ್ವಾರ್ಥ ಜನಪರ ಹೋರಾಟಗಳಿಂದ, ಎಂ.ಡಿ.ನಂಜುಂಡ ಸ್ವಾಮಿಯವರ ನೇತೃತ್ವದಲ್ಲಿನ ಸಮಾಜವಾದಿ ಹೋರಾಟಗಳಿಂದ, ಪ್ರಗತಿಪರ ಸಾಹಿತಿಗಳು, ಚಿಂತಕರಿಂದ ಕೂಡಿದ್ದ ಅರವತ್ತು, ಎಪ್ಪತ್ತರ ದಶಕದ ಕರ್ನಾಟಕದ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪರಿಸರಗಳು ಅರಸರಂತಹ ರಾಜಕಾರಣಿಗಳಿಗೆ ಸಾಮಾಜಿಕ ನ್ಯಾಯದ ಪರವಾಗಿ ಪ್ರಯೋಗ ನಡೆಸಲು ಇಲ್ಲಿನ ನೆಲವನ್ನು ಸಂಪೂರ್ಣವಾಗಿ ಹದಗೊಳಿಸಿದ್ದವು. ಇದು ಸಾಮಾಜಿಕ ನ್ಯಾಯಕ್ಕಾಗಿ ಪರಿಪಕ್ವ ವಾತಾವರಣವನ್ನೇ ನಿರ್ಮಿಸಿತ್ತು. ಆಗ ರಾಜಕೀಯ ಇಚ್ಛಾಶಕ್ತಿ, ಎಲ್ಲವನ್ನೂ ಸರಿದೂಗಿಸಬಲ್ಲ ಸಧೃಡ ನಾಯಕತ್ವ, ಹಾಗೂ ನಾಯಕನಲ್ಲಿ ಆಳದ ಕಳಕಳಿಯ ಅವಶ್ಯಕತೆ ಬೇಕಾಗಿತ್ತು. ಇದನ್ನು ದೇವರಾಜು ಅರಸು ಅವರು ಹಿಂದುಳಿದ ವರ್ಗಗಳನ್ನು ಮೇಲೆತ್ತುವುದಕ್ಕೆ ಸಂಪೂರ್ಣವಾಗಿ ಬಳಸಿಕೊಂಡರು. ಅಲ್ಲದೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪರವರಂತಹ ಕಾಂಗ್ರೆಸ್ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷಕ್ಕೆ ಅನೇಕ ರೀತಿಯ ಪ್ರಾಮಾಣಿಕತೆಯ, ದಕ್ಷ ಆಡಳಿತದ ಹೆಸರನ್ನೂ ತಂದಿತ್ತಿದ್ದರು. ಆದರೆ ಬಿಹಾರ ರಾಜ್ಯದ ಸಾಮಾಜಿಕ ಸ್ಥಿಗತಿಗಳು, ಅಲ್ಲಿನ ಪ್ರಗತಿಪರ ಹೋರಾಟದ ಇತಿಹಾಸಗಳು ಎಲ್ಲಿಯೂ ಕರ್ನಾಟಕಕ್ಕೆ ಸರಿಗಟ್ಟುವುದೇ ಇಲ್ಲ. ಇದಕ್ಕಾಗಿ ಮತ್ತೊಂದು ಬಗೆಯ ಚಿಂತನೆ ಹಾಗೂ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡಬೇಕಾಗುತ್ತದೆ. ಆದರೆ ಕಡೆಯದಾಗಿ 80 ದಶಕದ ಆರಂಭದಲ್ಲಿ  ದೇವರಾಜು ಅರಸು ಹಾಗೂ ಕರ್ಪೂರಿ ಠಾಕೂರ್ ಇಬ್ಬರೂ ಹಿಂದುಳಿದ ನಾಯಕರು ತಾವು ನಂಬಿದ ತಮ್ಮ ಪಕ್ಷ ತಮ್ಮನ್ನು ಅನಾಮತ್ತಾಗಿ ಹಾಗೂ ಅಮಾನವೀಯವಾಗಿ ಕೈ ಬಿಟ್ಟಿದ್ದರ ಪರಿಣಾಮವಾಗಿ, ತಮ್ಮ  ಹಿಂಬಾಲಕರು ಹಾಗೂ ತಾವು ರಾಜಕೀಯವಾಗಿ ಬೆಳಸಿದ ಹಿಂದುಳಿದ ನಾಯಕರು ತಾವು ಅತಂತ್ರರಾದಂತಹ ಸಂದರ್ಭದಲ್ಲಿ ತಮಗೆ ಕೈಕೊಟ್ಟಿದ್ದರ ಪರಿಣಾಮವಾಗಿ ಹಾಗೂ ಅಂದಿನ ಬದಲಾದ ರಾಜಕೀಯ ಸಂದರ್ಭದಲ್ಲಿ  ಎಲ್ಲಿಯೂ ಸಲ್ಲದವರಾಗಿ, ತಮ್ಮದಲ್ಲದ ತಪ್ಪಿಗೆ ರಾಜಕೀಯವಾಗಿ ನಗಣ್ಯವಾಗಿ ಎಂಬತ್ತರ ದಶಕದ ಆರಂಭದ ವೇಳೆಗೆ ಸಂಪೂರ್ಣವಾಗಿ ಏಕಾಂಗಿಗಳಾದರು, ಅಸಹಾಯಕರಾಗಿದ್ದರು, ದುರಂತ ನಾಯಕರ ಹಣೆಪಟ್ಟಿ ಹೊತ್ತಿದ್ದರು.

ಅತಿ ಹಿಂದುಳಿದ ಜಾತಿಗಳಿಂದ ಬಂದ ಕರ್ಪೂರಿ ಹಾಗೂ ದೇವರಾಜ್ ಅರಸ್ ತಮ್ಮ ಸಕ್ರಿಯ ರಾಜಕಾರಣದುದ್ದಕ್ಕೂ ಜನನಾಯಕರಾಗಿ ಹೊರಹೊಮ್ಮಿದರೇ ಹೊರತಾಗಿ ಎಲ್ಲಿಯೂ ಜಾತಿ ನಾಯಕರಾಗಲಿಲ್ಲ. ಯಾವುದೇ ಜಾತಿಯ ಮುಖಂಡರಾಗಲಿಲ್ಲ. ಬದಲಾಗಿ ಇವರ ಕಾಲದಲ್ಲಿ ಬಲಿಷ್ಟ ಜಾತಿಗಳ ಅಹಮ್, ದುರಹಂಕಾರಗಳು ತೆರೆಮರೆಗೆ ಸರಿದು ಅನೇಕ ಬಗೆಯ ಹಿಂದುಳಿದ ಜಾತಿಗಳು ಪ್ರಾಮುಖ್ಯತೆ ಪಡೆದು ವರ್ಗಗಳಾಗಿ ಪರಿವರ್ತನೆಗೊಂಡು ವ್ಯವಸ್ಥೆಯಲ್ಲಿ ತಮ್ಮದೇ ಆದ ಒಂದು ನೆಲೆ ಹಾಗೂ ಬೆಲೆಯನ್ನು ಕಂಡುಕೊಂಡವು. ಇದರ ಫಲವಾಗಿಯೇ ಮಹತ್ವಾಕಾಂಕ್ಷಿ ರಾಜಕಾರಣಿಯೊಬ್ಬನಿಗೆ ತನ್ನಲ್ಲಿನ ಅನೇಕ ದೌರ್ಬಲ್ಯಗಳ ನಡುವೆಯೂ ಜಾತ್ಯಾತೀತನಾಗಿ ಜನನಾಯಕರಾಗಿ ರಾಜಕೀಯವಾಗಿ ಮನ್ನಣೆಗಳಿಸುವುದು ಅರವತ್ತರ ದಶಕದ ಅಂತ್ಯದಲ್ಲಿ, ಎಪ್ಪತ್ತರ ದಶಕ, ಎಂಬತ್ತರ ದಶಕದ ಮಧ್ಯದವರೆಗೂ ಒಂದು ಮಾನದಂಡವಾಗಿಬಿಟ್ಟಿತು. ಆಗ ರಾಜಕಾರಣಿಗಳ ಜಾತೀಯತೆ ಬಹಿರಂಗವಾಗಿ ಚರ್ಚಿತವಾಗುತ್ತಿದ್ದುದು ಅವರು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಕ್ಕಿಕೊಂಡಾಗ, ತಮ್ಮ ಜಾತಿಯ ಶಾಸಕ ಅಥವಾ ಮಂತ್ರಿಯನ್ನು ಹಿಡಿದು ಸರ್ಕಾರಿ ಉದ್ಯೋಗಗಳನ್ನು, ಬಿಸಿನೆಸ್ ಪರ್ಮಿಟ್ ಪಡೆದುಕೊಳ್ಳುವಾಗ ಮತ್ತು ಚುನಾವಣೆಗಳ ಸಂದರ್ಭಗಳಲ್ಲಿ ಮಾತ್ರವೇ ಹೊರತು ಜಾತಿಯೊಂದರ ಪ್ರಶ್ನಾತೀತ, ಪ್ರಭಾವಶಾಲಿ ರಾಜಕಾರಣಿ ಎನ್ನುವ ಒಂದು ಸರ್ವಕಾಲಿಕ ಶಾಶ್ವತ ರಾಜಕೀಯ ವಾತಾವರಣವೇ ಇರಲಿಲ್ಲ. ಇದೆಲ್ಲ ಬದಲಾದದ್ದು ವಿ.ಪಿ.ಸಿಂಗ್ ಸಂಘ ಪರಿವಾರದ ಕೋಮುವಾದಿ ರಾಜಕೀಯವನ್ನು ಹತ್ತಿಕ್ಕಲು ಅತ್ಯಂತ ಮುಗ್ಧತೆಯಿಂದ, ಪ್ರಾಮಾಣಿಕತೆಯಿಂದ, ಯಾವುದೇ ಸಿದ್ಧತೆಗಳಿಲ್ಲದೆಯೇ ತಂದಂತಹ ಮಂಡಲ್ ವರದಿಯ ನಂತರ. ಇದರ ಬಗ್ಗೆ ಅನೇಕ ರೀತಿಯ ಚರ್ಚೆಗಳಾಗಿವೆ. ಆದರೆ ಇಂದು ನಮ್ಮ ಕರ್ನಾಟಕದ ದುರಂತವೆಂದರೆ  ಈ ಜಾತ್ಯಾತೀತೆಯ ಅತ್ಯಂತ ಸೂಕ್ಷ್ಮ ನೇಯ್ಗೆಯನ್ನು ಕರ್ನಾಟಕದ ರಾಜಕೀಯದಲ್ಲಿ ಧ್ವಂಸಗೊಳಿಸಿದ ಕುಖ್ಯಾತಿ ಈ  ಈ ಯಡಿಯೂರಪ್ಪನವರಂತಹ ಅತ್ಯಂತ ಹಾಸ್ಯಾಸ್ಪದ, ಭ್ರಷ್ಟ ರಾಜಕಾರಣಿಗಳದ್ದು  ಹಾಗೂ ಇದಕ್ಕೆ ಅಷ್ಟೇ ಜವಾಬ್ದಾರರು ಈ ಕುಕೃತ್ಯಕ್ಕೆ ಬೆಂಬಲ ನೀಡಿದ ಬಿಜೆಪಿ ಹಾಗೂ ಆರ್.ಎಸ್.ಎಸ್. ನವರದ್ದು. ಬಹುಪಾಲು ಮಠಗಳಿಗೆ ಜನರ ರೊಕ್ಕವನ್ನು, ಸರ್ಕಾರದ ಹಣವನ್ನು ಕಾನೂನು ಬಾಹಿರವಾಗಿ ಬೇಕಾ ಬಿಟ್ಟಿಯಾಗಿ ಹಂಚಿ ಬ್ಲಾಕ್‍ಮೇಲ್ ತಂತ್ರದ ಮೂಲಕ ಮಠಗಳನ್ನು ಹಾಗೂ ಮಠಾಧಿ ಪತಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಾ ಪ್ರಜಾಪ್ರಭುತ್ವದ ಮೂಲ ನೀತಿಗಳನ್ನೇ ಧ್ವಸಂ ಗೊಳಿಸಿಬಿಟ್ಟರು ಈ ಯಡಿಯೂರಪ್ಪನವರು. ಸ್ವಜನ ಪಕ್ಷ ಪಾತವೆನ್ನುವುದು, ಸ್ವಜಾತಿಯ ನಾಯಕನೆನ್ನುವುದರ ಬಗೆಗಿನ ವ್ಯಾಮೋಹ ಇಂದು ಕರ್ನಾಟಕ ರಾಜಕೀಯದಲ್ಲಿ ಹಾಗೂ ಸಮಾಜದಲ್ಲಿ ಒಂದು ಪ್ರಚ್ಛನ್ನ ಸ್ವೇಚ್ಛಾಚ್ಚಾರ ತೆವಲಾಗಿ ನಿರ್ಮಿಸಿ ಬಿಟ್ಟಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇಲ್ಲದಿದ್ದರೆ ಈ ನಿರಾಣಿ, ಈ ರೇಣುಕಾಚಾರ್ಯ, ಈ ಗೋಪಾಲಕೃಷ್ಣ, ಈ ಹರೀಶ, ಈ ಬೊಮ್ಮಾಯಿ,  ಇತ್ಯಾದಿಗಳು ಇಷ್ಟೊಂದು ಅನಾಚಾರ, ಸ್ವೇಚ್ಛಾಚಾರದ, ಬೇಜಾವಬ್ದಾರಿಯ, ಸ್ವಚ್ಛಂದ ಜಾತೀವಾದದ ಪ್ರವೃತ್ತಿಗಳನ್ನು ಬಹಿರಂಗವಾಗಿ ನಡೆದುಕೊಳ್ಳುತ್ತಿರುವುದಕ್ಕೆ ಕಾರಣ ಜನನಾಯಕನಾಗುವ ಮೂಲಕ ರಾಜಕಾರಣಿ ಎನ್ನುವ ತತ್ವ ಹೆಚ್ಚೂ ಕಡಿಮೆ ಕಣ್ಮರೆಯಾಗಿ ಜಾತಿ ನಾಯಕನಾಗಿ ರಾಜಕಾರಣಿ ಎನ್ನುವ ಸಿದ್ಧಾಂತ ಇಲ್ಲಿ ತಳವೂರಿಬಿಟ್ಟಿರುವುದು ಹಾಗೂ ಸರ್ಕಾರದ ರೊಕ್ಕವನ್ನು ಪಡೆದಂತಹ  ಮಠಗಳು ಜಾತಿ ಆಧಾರದ ಮೇಲೆ ಇವರನ್ನು ಬೆಂಬಲಿಸುತ್ತವೆ!

ಅದಕ್ಕೇ ಇವರು ಉಪ ಚುನಾವಣೆಗಳಲ್ಲಿ ಜನ ನಮ್ಮನ್ನು ಗೆಲ್ಲಿಸುತ್ತಿಲ್ಲವೇ, ನನ್ನನ್ನು ನಾಯಕನನ್ನಾಗಿ ಮಾಡಿ ನಿಮಗೆ 150 ಸೀಟು ಗೆಲ್ಲಿಸುತ್ತೇನೆ ಎಂದು ಅತ್ಯಂತ ದುರಹಂಕಾರದಿಂದ ನಮ್ಮ ರಾಜ್ಯದ ಜನತೆಯ ಆತ್ಮ ಸಾಕ್ಷಿಯನ್ನೇ ಪ್ರಶ್ನಿಸುತ್ತಿದ್ದಾರೆ ಹಾಗೂ ಈ ರಾಜ್ಯದ ಜನತೆಯ ನೈತಿಕತೆಯ ಮೂಲ ಬೇರನ್ನು ಹೆಚ್ಚೂ ಕಡಿಮೆ ವಿಷಗೊಳಿಸಿದ್ದಾರೆ ಈ ಯಡಿಯೂರಪ್ಪ ಹಾಗೂ ಬಿಜೆಪಿ. ಇದು ನಿಜಕ್ಕೂ ನಮ್ಮೆಲ್ಲರಿಗೆ ಅವಮಾನವೇ ಸರಿ. ಅಲ್ಲದೆ ಇದೇ ಯಡಿಯೂರಪ್ಪನವರು  ಕರ್ನಾಟಕದ ಸಕಲ ವೀರಶೈವ ಜಾತಿಗೆ ಏಕಮೇದ್ವೇತೀಯ ವಾರಸುದಾರ ಹಾಗೂ ನಾಯಕ ಎನ್ನುವ ಠೇಂಕಾರದ ಜೊತೆಗೆ ತಮ್ಮ ಹುಟ್ಟು ಹಬ್ಬದಂದು ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ!! ಇವರ ಬಫೂನ್ ಗಿರಿಗೆ, ಅಧ್ವಾನಗಳಿಗೆ ಮತ್ತೆ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ!!!  ಈ ಕಾಂಗ್ರೆಸ್‍ನ0ತಹ ಆತ್ಮಸಾಕ್ಷಿಯನ್ನೇ ಕಳೆದುಕೊಂಡಂತಹ, ಸಂಪೂರ್ಣವಾಗಿ ಸೋತ, ದಿಕ್ಕು ದೆಸೆಯಿಲ್ಲದ, ನೆಲಕಚ್ಚಿದ ವಿರೋಧ ಪಕ್ಷವಿರುವಾಗ ಕರ್ನಾಟಕಕ್ಕೆ ಮತ್ತೆ ಮತ್ತೆ ಪ್ರಾಥಮಿಕವಾಗಿ, ತುರ್ತಾಗಿ ಬೇಕಾಗಿರುವುದು ಕರ್ಪೂರಿ ಠಾಕೂರ್ ಅವರ ಸಮಾಜವಾದದ ಆದರ್ಶ ಮತ್ತು ದಣಿವರಿಯದ ಹೋರಾಟದ, ಪ್ರಾಮಾಣಿಕತೆಯ ರಾಜಕಾರಣದ ಮಾದರಿ (ಅನೇಕ ಮಿತಿಗಳ ನಡುವೆಯೂ). ನಂತರವಷ್ಟೇ ನಾವು ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರನ್ನು ಮುಟ್ಟಲು ಸಾಧ್ಯ.

ಇದೆಲ್ಲದರ ಈ ಅವಾಂತಕಾರಿ, ಗೊಂದಲಗಳ ರಾಜಕೀಯದ ಮಧ್ಯೆ, ಇಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ 2012 ರ ಸಂವತ್ಸರದಲ್ಲಿ ಅತ್ಯಂತ ಭ್ರಷ್ಟ, ಹಾಗೂ ಸಂಪೂರ್ಣವಾಗಿ ಹಾದಿ ತಪ್ಪಿದ ಶ್ರೀರಾಮುಲು ಎನ್ನುವ ಅವಕಾಶವಾದಿ ನಾಯಕ ತಾನೊಬ್ಬ ಹಿಂದುಳಿದ ವರ್ಗಗಳ ನಾಯಕನಾಗಲು ಹೊರಟಿದ್ದಾರೆ. ಅಮಾಯಕತೆಯ ನಟನೆಯನ್ನು ಮಾಡುತ್ತಿದ್ದಾರೆ. ಮಳ್ಳಿ ತರಹದ ವರ್ತನೆಯನ್ನು ತೋರಿಸುತ್ತಿದ್ದಾರೆ. ಅದಕ್ಕಾಗಿ ಇಷ್ಟರಲ್ಲೇ ಹಿಂದುಳಿದವರ ಬಡವರ ಪಕ್ಷ ಸ್ಥಾಪಿಸುತ್ತೇನೆ ಎಂದು ಪದೇ ಪದೇ ಹೆದರಿಸುತ್ತಿದ್ದಾರೆ. ಈ ಶ್ರೀರಾಮುಲು ಎನ್ನುವ ಹಿಂದುಳಿದ ನಾಯಕ ಯಾವುದೇ ಸಿದ್ಧಾಂತದ ಹಿನ್ನೆಲೆ ಇಲ್ಲದಂತಹ ನಾಯಕ. ಇವರ ಸಿದ್ಧಾಂತವೆಂದರೆ ಒಂದೇ ಅದು ತೋಳ್ಬಲದ ರಾಜಕೀಯ, ಹಣವನ್ನು ಚೆಲ್ಲಿಯೇ ಅಧಿಕಾರವನ್ನು ಗಳಿಸಬೇಕು ಎನ್ನುವ ಏಕಸೂತ್ರದ, ಆತ್ಮದ್ರೋಹದ, ಅವಕಾಶವಾದಿ ರಾಜಕೀಯ. ಅಕ್ರಮವಾಗಿ, ಭ್ರಷ್ಟ ತನದಿಂದ ಸಂಪಾದಿಸಿದ ರೊಕ್ಕವನ್ನು ಮುಗ್ಧ ಜನಗಳಿಗೆ ಭಿಕ್ಷೆಯಂತೆ ಪುಡಿಗಾಸನ್ನು ನೀಡಿ ಅವರನ್ನು ತನ್ನ ಹಂಗಿನರಮನೆಯೊಳಗೆ ಬಂಧಿಸಿರುವುದು ಇಡೀ ಬಳ್ಳಾರಿ ಜಿಲ್ಲೆಯಾದ್ಯಾಂತ ಕಣ್ಣಿಗೆ ರಾಚುತ್ತದೆ. ನಾನು ಹಾಗೂ ನನ್ನ ಸ್ನೇಹಿತರು ಅಲ್ಲಿನ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ನಿರಂತರವಾಗಿ ತಿರುಗಿದಾಗ ಇದು ನಮಗೆ ಸ್ಪಷ್ಟವಾಗಿ ಗೊತ್ತಾಯಿತು. ಇದನ್ನೇ ನಮ್ಮ ಕೆಲ ಪತ್ರಕರ್ತರು ಇದು ಶ್ರೀರಾಮುಲು ಅವರ ಜನಪ್ರಿಯತೆ ಎಂದು ಇನ್ನಿಲ್ಲದೆ ಬಡಬಡಿಸುತ್ತಿದ್ದಾರೆ. ಇದು ಆತ್ಮವಂಚನೆಯಲ್ಲದೆ ಮತ್ತಿನ್ನೇನಲ್ಲ. ಇದನ್ನು ಅರ್ಥೈಸಲು ಅಂತಹ ಸಂಶೋಧನೆಗಳೇನು ಬೇಕಾಗಿಲ್ಲ. ಅಲ್ಲದೆ ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ಹಣವನ್ನು ಚೆಲ್ಲಲ್ಲು ರೆಡ್ಡಿ ಸೋದರರೊಂದಿಗೆ  ಕೈಜೋಡೀಸಿ ರಾಜ್ಯದ, ಬಳ್ಳಾರಿ ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡಿದ ರೊಕ್ಕ ಇದ್ದೇ ಇದೆಯಲ್ಲ!! ಇವರಿಗೆ ಯಾವುದೇ ಪಕ್ಷದ ಸಿದ್ಧಾಂತಗಳೂ ಕೇವಲ ಅಧಿಕಾರ ಗ್ರಹಣಕ್ಕಾಗಿ ಮಾತ್ರ. ಯಾವುದೇ ಆದರ್ಶಗಳಿಲ್ಲದ, ಸಿದ್ಧಾಂತಗಳಿಲ್ಲದ ಶ್ರೀರಾಮುಲು ಅವರಂತಹ ರಾಜಕಾರಣಿಯಿಂದ ಇಂತಹ ನಡೆಗಳು ಸಾಮಾನ್ಯವೆನ್ನಬಹುದು, ಆದರೆ ಇಲ್ಲಿನ ದುರಂತವೆಂದರೆ ಇಂತಹ ಭ್ರಷ್ಟ ಶ್ರೀರಾಮುಲು ಅವರಿಗೆ ದೇವರಾಜ್ ಅರಸರ ವೇಷವನ್ನು ತೊಡಿಸುವಂತೆ ಇನ್ನಿಲ್ಲದ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕೆ ಬಳಸಿಕೊಳ್ಳಲಾಗುತ್ತಿರುವುದು ವಾಲ್ಮೀಕಿ ಜನಾಂಗವನ್ನು. ಇದಕ್ಕಿಂತಲೂ ದುರಂತ ಬೇರೊಂದಿಲ್ಲವೆನಿಸುತ್ತದೆ. ನೂರು ಸುಳ್ಳುಗಳನ್ನು ಪದೇ ಪದೇ ಹೇಳಿ ಅದನ್ನು ಸತ್ಯವೆನ್ನುವಂತೆ ಭ್ರಮೆ ಮೂಡಿಸುವ ಇಂತಹ ಒಂದು ದುಷ್‍ಕೃತ್ಯ ನಿಜಕ್ಕೂ ಖಂಡನೀಯ. ಇದೆಲ್ಲವನ್ನೂ ಮತ್ತೆ ಮತ್ತೆ ಏತಕ್ಕೆ ಹೇಳ ಬೇಕಾಗಿದೆಯೆಂದರೆ ಎಲ್ಲವೂ ನೆಲಕಚ್ಚಿದಂತಹ ಇಂದಿನ ರಾಜಕೀಯ ಸನ್ನಿವೇಶದಲ್ಲಿ ಈ ಭ್ರಷ್ಟ ನಾಯಕ ಶ್ರೀರಾಮುಲು ತನ್ನಲ್ಲಿರುವ ಎಲ್ಲಾ ಅಸ್ತ್ರಗಳನ್ನೂ ಬಳಸುತ್ತಿದ್ದಾರೆ. ತಾವೊಬ್ಬ ಅಮಾಯಕರಂತೆಯೂ, ಒಬ್ಬಂಟಿಯಂತೆಯೂ ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸದ್ಯಕ್ಕೆ ಈ ಶ್ರೀರಾಮುಲುಗಿರುವ ಪ್ರಬಲ ಅಸ್ತ್ರವೆಂದರೆ ಅಹಿಂದ ಸಂಘಟನೆ. ಈ ನಾಯಕ ಇಂದು ಅಕ್ಷರಶಹ ತಬ್ಬಲಿಯಾಗಿರುವ, ದಿಕ್ಕಿಲ್ಲದ, ಅನಾಯಕತ್ವದ ಈ ಅಹಿಂದ ಸಂಘಟನೆಗೆ ತನ್ನ ನಾಯಕತ್ವದ ಸ್ಪರ್ಶ ನೀಡುವುದರ ಮೂಲಕ ಅದನ್ನು ಮತ್ತೆ ಪುನುರುಜ್ಜೀವನಗೊಳಿಸುವ ಒಂದಂಶದ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ನಮ್ಮಲ್ಲಿನ ಕೆಲವು  ಸಂಘಟನೆಗಳನ್ನು ಆಪೋಶನ ತೆಗೆದುಕೊಳ್ಳುವ ಸೂಚನೆಗಳು ಗೋಚರಿಸುತ್ತಿವೆ. ಆದರೆ ಈ ಶ್ರೀರಾಮುಲುವಿನ ಈ ಕುಟಿಲತೆಗೆ, ಗುಪ್ತ ಕಾರ್ಯಾಚರಣೆಗೆ ನಮ್ಮಲ್ಲಿನ ಈ ಕೆಲವು ಸಂಘಟನೆಗಳು ಬಲಿಯಾಗುತ್ತವೆಯೇ? ಎಲ್ಲಕ್ಕೂ ಕಾಲವೇ ಉತ್ತರ ನೀಡಬೇಕು.

ಆದರೆ ಒಂದಂತೂ ಸ್ಪಷ್ಟ. ಮುಂದಿನ ತಲೆಮಾರಿಗೆ ನಾವೆಲ್ಲ ನಿರ್ಮಿಸಬೇಕಾದ ವೇದಿಕೆ ಹಾಗೂ ಒಂದು ಸಹನಶೀಲ, ಸೆಕ್ಯುಲರ್ ವ್ಯವಸ್ಥೆ ಇದಂತೂ ಖಂಡಿತ ಅಲ್ಲ. ಯಾವುದೇ ಕಾರಣಕ್ಕಾಗಿಯಾಗಲೀ ನಮ್ಮ ರಾಜ್ಯದ ಈ ಸಂವೇದನಾಶೀಲ, ಪ್ರಗತಿಪರ ಚಿಂತನೆ, ಸಾಮಾಜಿಕ ಬದುಕು, ಸಂಘಟನೆ ಹಾಗೂ ರಾಜಕಾರಣ ನಮ್ಮ ರಾಜ್ಯದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ರೆಡ್ಡಿಗಳ ಸಂಗಾತಿಯಾಗಿದ್ದ ಈ ಶ್ರೀರಾಮುಲುನಂತಹ ರಾಜಕಾರಣಿಗೆ ಎಂದೂ ಬಲಿಯಾಗಲಾರೆವೆಂಬ ಎಚ್ಚರಿಕೆ, ಆತ್ಮಸಾಕ್ಷಿಯನ್ನು ತಮ್ಮೊಳಗೆ ಸದಾ ಜೀವಂತವಾಗಿಟ್ಟು ಕೊಳ್ಳಬೇಕಾಗಿದೆ. ಈ ಮೂಲಕ ಶ್ರೀರಾಮುಲು ತೋಡಿದ ಖೆಡ್ಡಾಗೆ ಆಗಲೇ ಬಂದು ಬೀಳುತ್ತಿರುವ ಅಸಹಾಯಕ ಹಿಂದುಳಿದ ವರ್ಗಗಳನ್ನು, ಅಮಾಯಕ ತರುಣರನ್ನೂ ಇದರಿಂದ ಪಾರುಮಾಡಬೇಕಾದ ಜವಬ್ದಾರಿಯೂ ಕನ್ನಡದ ಪ್ರಜ್ಞಾವಂತರ ಮೇಲಿದೆ. ಈಗಾಗಲೇ ಹಿಂದುಳಿದ ವರ್ಗಗಳ ಅಮಾಯಕ ತರುಣರು ಕೇಸರಿ ಪಡೆಗೆ ಬಲಿಯಾಗಿ ತಮ್ಮ ಜೀವನವನ್ನು ನಾಶಪಡಿಸಿಕೊಂಡಿದ್ದಾಗಿದೆ. ಇನ್ನು ಶ್ರೀರಾಮುಲು ಇದಕ್ಕೆ ತಮ್ಮ ಕೈ ಜೋಡಿಸಿದರೆ ಕೇಸರಿಕರಣಗೊಂಡ ಈ ಹಿಂದುಳಿದ ವರ್ಗಗಳ ಅಮಾಯಕರಿಗೆ ಮುಂದಿನ ಭವಿಷ್ಯವೇ ಅತಂತ್ರವಾಗುತ್ತದೆ. ಇಲ್ಲಿ ನಮಗೆ ಗಾಂಧಿ, ಲೋಹಿಯಾ, ಅಂಬೇಡ್ಕರ್ ರವರಂತಹ ಜೊತೆ ಜೊತೆಗೆ ಕನಿಷ್ಟ ಕರ್ಪೂರಿ ಠಾಕೂರರವರ ಸಮಾಜವಾದಿ ಜೀವನ ಹಾಗೂ ಸಮಾಜವಾದದ ನೆಲೆಗಟ್ಟಿನ ರಾಜಕೀಯ, ಸಾಮಾಜಿಕ ಹೋರಾಟಗಳು, ಆರವತ್ತರ, ಎಪ್ಪತ್ತರ ದಶಕದ ಅವರ ಅಸಹಾಯಕತೆಗಳು, ಅವರ ಅತ್ಯಂತ ಸರಳ ಜೀವನ ಶೈಲಿ, ನಮ್ಮಲ್ಲರಿಗೆ ಮುಂದಿನ ನಡೆಗಳ ಬಗೆಗೆ ದಾರಿ ತೋರಬೇಕಲ್ಲವೇ, ಇಂತಹ ಸಂದರ್ಭದಲ್ಲಿಯೇ  ಏನಿಲ್ಲದ್ದಿದ್ದರೂ ಶ್ರೀರಾಮುಲುವಿನ ನೆಪದಲ್ಲಿ ಈ  ಧೀಮಂತ ನಾಯಕರಾದ ದೇವರಾಜ್ ಅರಸ್  ಹೆಸರು ಕೆಡುವುದಕ್ಕಿಂತ ಮೊದಲು ಹಿಂದುಳಿದವರ ನಾಯಕತ್ವದ ನಿಜವಾದ ಮಾದರಿ (ಅನೇಕ ಮಿತಿಗಳ ನಡುವೆಯೂ) ಈ ದೇವರಾಜ ಅರಸ್ ಹಾಗೂ ಕರ್ಪೂರಿ ಠಾಕೂರ್ ಅವರದ್ದು, ಅವರ ಶೈಲಿಯದ್ದು ಎಂದು ನಾವು ವಿವರವಾಗಿ  ಮತ್ತೆ ಮತ್ತೆ ಮಾತನಾಡಬೇಕಲ್ಲವೇ, ಕನಿಷ್ಟ ಈ ಮೂಲಕವಾದರೂ ದೇವರಾಜ್ ಅರಸ್ ಹಾಗೂ ಕರ್ಪೂರಿ ಠಾಕೂರರ ರಾಜಕೀಯ ಮಾದರಿಗಳನ್ನು, ಸಾಮಾಜಿಕ ನ್ಯಾಯದ ನಿಜದ ಕಳಕಳಿಗಳನ್ನು, ಅದಕ್ಕಾಗಿ ಅವರ ತ್ಯಾಗವನ್ನೂ ಇಂದಿನ ತಲೆಮಾರಿನ ಮುಂದಿಡುವ ಜವಾಬ್ದಾರಿ ನಮ್ಮಂತಹವರ ಮೇಲಿದೆಯಲ್ಲವೇ? ಈ ಪ್ರಕ್ರಿಯೆಯಲ್ಲಿ ಈ ಬಿಜೆಪಿಯ ಸಂಪೂರ್ಣ ದಿವಾಳಿಖೋರತನದ, ಭ್ರಷ್ಟ ರಾಜಕಾರಣದ ವಿರುದ್ಧ ಕೊಂಚವಾದರೂ ಬೆಳಕು ದೊರಕಬಹುದಲ್ಲವೇ?

(ಚಿತ್ರಕೃಪೆ: ವಿಕಿಪೀಡಿಯ, ಪಾಟ್ನಾಡೈಲಿ)

ಮಾಯಾ-ಮುಲಾಯಮ್ ಹಿನ್ನೆಲೆಯಲ್ಲಿ ವರ್ತಮಾನ ಕರ್ನಾಟಕದ “ಹಿಂದ” ರಾಜಕೀಯ

-ಬಿ.ಶ್ರೀಪಾದ ಭಟ್

“ಯಾವ ಪಕ್ಷದಲ್ಲಿ ಸ್ತ್ರೀಯರು, ಹರಿಜನರು, ಶೂದ್ರರು ಹಾಗೂ ಮುಸುಲ್ಮಾನರು ಅಗ್ರಪಂಕ್ತಿಯಲ್ಲಿದ್ದು ಪ್ರಭಾವಶಾಲಿಗಳಾಗುತ್ತಾರೋ ಅಂತಹ ಪಕ್ಷ ಮಾತ್ರ ಭಾರತವನ್ನು ಸುಖೀ, ಸಮೃದ್ಧ, ಬಲಶಾಲಿ, ಸತ್ಯಸಂಧ ರಾಷ್ಟ್ರವನ್ನಾಗಿ ಮಾಡಬಲ್ಲದೆಂದು ನನಗೆ ಖಾತ್ರಿಯಾಗಿದೆ. ಸೀತೆ, ಶಂಭೂಕರ ಅಕ್ಷವನ್ನು ಇನ್ನಷ್ಟು ಬಲಪಡಿಸಬೇಕು.” –ರಾಮ ಮನೋಹರ ಲೋಹಿಯಾ

ಅದು ಸುಮಾರು 1995 ರ ವರ್ಷವಿರಬೇಕು. ಬೆಂಗಳೂರಿನ “ಯವನಿಕ” ಸಭಾಂಗಣದಲ್ಲಿ ಒಂದು ಚಿಂತನ ಗೋಷ್ಟಿ ಹಾಗೂ ಸಂವಾದ ಇತ್ತು. ಅದರಲ್ಲಿ ಸಮಾಜವಾದಿ ನಾಯಕ “ಕಿಶನ್ ಪಟ್ನಾಯಕ್” ಅವರು ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಅದೇ ಕಾಲಕ್ಕೆ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷಗಳ ಸಹಭಾಗಿತ್ವದಲ್ಲಿ ಸರ್ಕಾರವನ್ನು ಸ್ಥಾಪಿಸಲಾಗಿತ್ತು. ಅದರ ಹಿನ್ನೆಯಲ್ಲಿ ಸಂವಾದದಲ್ಲಿ ಭಾಗವಸಿದ್ದ ಕಿಶನ್ ಪಟ್ನಾಯಕ್ ಅವರು ಅಂದು ಅತ್ಯಂತ ಉತ್ಸಾಹದಿಂದ “ಇಂಡಿಯಾದಲ್ಲಿ ಹಿಂದುಳಿದ ಹಾಗೂ ದಲಿತರ ಒಗ್ಗೂಡಿಕೆಯ ದೊಡ್ಡ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ಇದು ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡದಾದ ರೂಪವನ್ನು ಪಡೆದುಕೊಳ್ಳತೊಡಗಿದರೆ ಸಮಾಜವಾದಿಗಳು ಈ ಅಭೂತಪೂರ್ವ ಮೈತ್ರಿಗೆ ಕೈ ಜೋಡಿಸಬೇಕು. ಈ ಮಹಾ ಮೈತ್ರಿ ಇಂಡಿಯಾದ ಇತಿಹಾಸವನ್ನೇ ಬದಾಲಾವಣೆಗೊಳಿಸುವ ಎಲ್ಲಾ ಕ್ಷಮತೆಯನ್ನು ತನ್ನಲ್ಲಿ ತುಂಬಿಕೊಂಡಿದೆ,” ಎಂದು ಅತ್ಯಂತ ಉತ್ಸಾಹದಿಂದ ಮಾತನಾಡುತ್ತಿದ್ದರು. ಅವರಿಗೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮಾಯವತಿ ಅವರಲ್ಲಿ ಭವಿಷ್ಯದ ಕನಸನ್ನು ಕಂಡಿದ್ದರು. ಇವರಿಬ್ಬರೂ ಒಟ್ಟಾಗಿ ಉತ್ತರ ಪ್ರದೇಶದ ಹಿಂದುಳಿದ ಹಾಗೂ ದಲಿತರ ಏಳಿಗೆಗೆ ಶ್ರಮಿಸಬಲ್ಲವರಾದರೆ ಇದೇ ಮೈತ್ರಿಯ ಹಿನ್ನೆಲೆಯನ್ನು ಬಳಸಿಕೊಂಡು ಭಾರತದ ಇತರ ರಾಜ್ಯಗಳಲ್ಲೂ ಈ ಪ್ರಯೋಗ ಮಾಡಬೇಕು ಇದರಲ್ಲಿ ಸಮಾಜವಾದಿಗಳು ತುಂಬಾ ದೊಡ್ಡ ಪಾತ್ರವಹಿಸಬೇಕಾಗುತ್ತದೆ ಎಂದು ಆಗ ನಮ್ಮಂತಹ ಯುವ ಉತ್ಯಾಹಿಗಳಲ್ಲಿ ಒಂದು ರೀತಿಯ ರೋಮಾಂಚನವನ್ನು ಉಂಟು ಮಾಡಿದ್ದರು. ಇದಾಗಿ 15 ವರ್ಷಗಳ ಮೇಲಾಗಿದೆ. ಅಹಿಂದ ವರ್ಗಗಳ ಒಗ್ಗೂಡುವಿಕೆಯ ಆ ಉತ್ಸಾಹ, ರೋಮಾಂಚನ ಕೊನೆಗೊಂಡು ಇಂದಿಗೆ 13 ವರ್ಷಗಳಾಗಿವೆ. ಸಮಾಜವಾದಿ ಕನಸುಗಾರ ಕಿಷನ್ ಪಟ್ನಾಯಕ್ ತೀರಿಕೊಂಡು 7 ವರ್ಷಗಳಾಗಿವೆ. ಏಕೆಂದರೆ 1997 ರಲ್ಲಿ ಇದೇ ಮಾಯಾವತಿ ಹಾಗೂ ಮುಲಾಯಮ್ ಸಿಂಗ್ ಯಾದವ್ ಬದ್ಧ ವೈರಿಗಳಾಗಿ ಮಾರ್ಪಟ್ಟು ಮಾಯಾವತಿ ಅವರ ದಲಿತರ ಆಶಾಕಿರಣದ ಬಹುಜನ ಪಕ್ಷ ಕೋಮುವಾದಿ, ಜಾತಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿಯಿತು. ಈ ಅನೈತಿಕ ಮೈತ್ರಿ ಯಾವ ನಾಚಿಕೆಯೂ ಇಲ್ಲದೆ 2002 ರಲ್ಲೂ ಪುನರಾವರ್ತನೆಯಾಯಿತು. ಅತ್ತ ಮುಲಾಯಮ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ ಒಂದು ಗೂಂಡಾಗಳ, ಕೊಬ್ಬಿದ, ಜಾತೀವಾದಿ ಕ್ಲಬ್ ತರಹ ರೂಪಾಂತರಗೊಂಡಿತು. ಇತ್ತ ಕರ್ನಾಟಕದಲ್ಲಿ ಈ ಅಹಿಂದ ಮೈತ್ರಿಕೂಟ ಶಾಂತವೇರಿ ಗೋಪಾಲ ಗೌಡರ ಸಮಾಜವಾದಿ ಕನಸನ್ನು, ದೇವರಾಜ್ ಅರಸರ ಹಿಂದುಳಿದ, ದಲಿತರ ಸಾಮಾಜಿಕ ಸಬಲೀಕರಣವನ್ನು ತನ್ನ ಧ್ಯೇಯವಾಗಿಟ್ಟುಕೊಂಡು   ಕೋಲಾರದಲ್ಲಿ ಒಂದು ರಾಜಕೀಯೇತರ ಸಂಘಟನೆಯಾಗಿ ಆರಂಭಗೊಂಡಿತು. ತದ ನಂತರ ತನ್ನ ಅನೇಕ ಏಳುಬೀಳುಗಳ ನಡುವೆ ರಾಜಕೀಯ ನಾಯಕರ ಆಡೊಂಬಲವಾಗಿ ಏದುಸಿರು ಬಿಡುತ್ತಿದೆ.

ಸರಿ ಸುಮಾರು 40 ವರ್ಷಗಳ ಹಿಂದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಟದ ಹಾದಿಗೆ ಅಡಿಯಿಟ್ಟ ಕಾನ್ಸೀರಾಮ್ ಅವರು ನಂತರ ತುಳಿದ ಹಾದಿ ಅತ್ಯಂತ ಕಷ್ಟಕರವಾದದ್ದು. ದಲಿತರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರಿ ಹುದ್ದೆಯನ್ನೆ ತ್ಯಜಿಸಿದ ಕಾನ್ಸೀರಾಮ್ ದಲಿತರ ಹಕ್ಕುಗಳ ಪರವಾಗಿ ಹೋರಾಟ ಆರಂಭಿಸಿದಾಗ ಅವರು ಅಡಿಗಡಿಗೂ ಮೇಲ್ಜಾತಿ, ಮೇಲ್ವರ್ಗಗಳ ಕೊಂಕನ್ನು, ಹೀಯಾಳಿಕೆಯನ್ನು ಎದುರಿಸಬೇಕಾಯಿತು. ಆದರೆ ಇದಕ್ಕೆ ಸೊಪ್ಪು ಹಾಕದ ಕಾನ್ಸೀರಾಮ್ ತಮ್ಮ ಸ್ನೇಹಿತ ಖಾಪರ್ಡೆ ಹಾಗೂ ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿಕೊಂಡು ದಲಿತ ಹಾಗೂ ಆದಿವಾಸಿ, ಹಿಂದುಳಿದ ಜಾತಿಗಳ ನೌಕರರ ಒಕ್ಕೂಟವನ್ನು ಸ್ಥಾಪಿಸಿದರು. ಮುಂದೆ ಅಖಿಲ ಭಾರತ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಸ್ಥಾಪಿಸಿದರು (BAMCEF). ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ, ಚಳುವಳಿ” ಎನ್ನುವ ಧ್ಯೇಯ ಮಂತ್ರವನ್ನೇ ಈ ಒಕ್ಕೂಟದ ಮೂಲ ಉದ್ದೇಶವನ್ನಾಗಿಸಿದರು. ಇದರ ಮೂಲ ಉದ್ದೇಶ ಸರ್ಕಾರಿ ಹಾಗೂ ಸಾಮಾಜಿಕ ವಲಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಅವಮಾನಕ್ಕೀಡಾಗುತ್ತಿದ್ದ, ದಬ್ಬಾಳಿಕೆಗೆ ತುತ್ತಾಗುತ್ತಿದ್ದ ದಲಿತ ಹಾಗೂ ಹಿಂದುಳಿದವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದೇ ಆಗಿತ್ತು. ಇದಕ್ಕಾಗಿ ಇವರು ತಮ್ಮ ಸಂಘಟನ ಚಾತುರ್ಯವನ್ನು ಬಳಸಿ  ರಾಷ್ಟಮಟ್ಟದಲ್ಲಿ ಹಗಲಿರುಳೂ ದುಡಿದು ರೀತಿ ಮಾತ್ರ ಬೆರಗುಗೊಳಿಸುವಂತದ್ದು. ಇಲ್ಲಿ ನಿಸ್ವಾರ್ಥವಿತ್ತು. ಆದರೆ 70ರ ದಶಕದ ಅಂತ್ಯದ ವೇಳೆಗೆ ಅತ್ಯಂತ ಮಹಾತ್ವಾಕಾಂಕ್ಶೆಯ ನಾಯಕರಾಗಿ ಹೊರಹೊಮ್ಮಿದ ಕಾನ್ಸೀರಾಮ್ ಅವರಿಗೆ ಕೇವಲ ಸರ್ಕಾರಿ ನೌಕರರ ಮಟ್ಟದಲ್ಲಿ ಸಂಘಟನೆ ನಡೆಸುವುದು ಒಂದು ಕಾಲ ಕ್ಷೇಪವೆನಿಸತೊಡಗಿತು. ಆಗ 1981ರಲ್ಲಿ  ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ದಲಿತ ನೌಕರರಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜ್ಯನ್ಯವನ್ನು, ಹೀಯಾಳಿಕೆಗಳಿಗೆ ಪ್ರತಿಭಟನೆಯಾಗಿ ಸಂಘಟನೆಗೊಳ್ಳಲು ಒಂದು ವೇದಿಕೆಯನ್ನಾಗಿ ಬಳಸಿಕೊಳ್ಳಲು ಅವಕಾಶವನ್ನು ದೊರಕಿಸಿಕೊಟ್ಟರು. ಅಲ್ಲದೆ ಇದನ್ನು ಒಂದು ರಾಜಕೀಯ ವೇದಿಕೆಯನ್ನಾಗಿ ಪರಿವರ್ತಿಸಿದರು. ಈ ಕಾಲಘಟ್ಟದಲ್ಲೇ ಕಾನ್ಸೀರಾಮ್ ದುಡಿದ ರೀತಿ ಬಣ್ಣನೆಗೂ ನಿಲುಕದ್ದು. ಅವರು ಸೈಕಲ್ ಮೇಲೆ ಸವಾರಿ ನಡೆಸಿ ಇಡೀ ಉತ್ತರ ಭಾರತದ ಹಳ್ಳಿ ಹಳ್ಳಿಗಳನ್ನು, ಪಟ್ಟಣಗಳನ್ನು ಸುತ್ತಿದರು. ಅಲ್ಲಿನ ಒಟ್ಟು ಜನಸಂಖ್ಯೆಯ ವಿವರಗಳು ಈ ಜನಸಂಖ್ಯೆಯಲ್ಲಿ ಮೇಲ್ಜಾತಿಯವರೆಷ್ಟು, ಮಧ್ಯಮ ಜಾತಿಗಳೆಷ್ಟು, ಹಿಂದುಳಿದವಗಳ, ತಳ ಸಮುದಾಯಗಳ ಶೇಕಡಾವಾರು ಪ್ರಮಾಣ, ಅವರ ಸಾಮಾಜಿಕ ಸ್ಥಿತಿಗಳು, ಎಲ್ಲವನ್ನೂ ಆ ವರ್ಷಗಳಲ್ಲಿ ತಮ್ಮ ಅವಿರತ ಅಧ್ಯಯನದಿಂದ, ಹಗಲೂ ರಾತ್ರಿ ತಿರುಗಾಡಿ ಕಲೆಹಾಕಿದರು. 1984ರಲ್ಲಿ ಬಹುಜನ ಪಕ್ಷವನ್ನು ಸ್ಥಾಪಿಸುವಷ್ಟರಾಗಲೇ ಇಡೀ ಉತ್ತರಭಾರತದ ಸಾಮಾಜಿಕ ಸ್ವರೂಪಗಳು, ಅಲ್ಲಿನ ಜಾತಿಗಳು, ಅದರ ಆಳ, ಅವರ ಬದುಕು, ಶಕ್ತಿ, ದೌರ್ಬಲ್ಯ ಎಲ್ಲವೂ ಕಾನ್ಸೀರಾಮ್ ಅವರು ಸಂಪೂರ್ಣವಾಗಿ ಅರೆದು ಕುಡಿದಿದ್ದರು. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ರಾಜಕೀಯ ಸಂಘಟನೆಗಳನ್ನು ದೇಶದ ಉತ್ತರ ರಾಜ್ಯಕ್ಕೆ ತಲುಪಿಸುವ ಸೇತುವೆಯಾಗಿದ್ದರು ಈ ಕಾನ್ಸೀರಾಮ್.

ಕಾನ್ಸೀರಾಮ್ ಅವರಿಗೆ ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಬೆಳೆದ, ಯಾವುದೇ ಆರ್ಥಿಕ, ರಾಜಕೀಯ ಬಲವಿಲ್ಲದೆ ಸೈದ್ಧಾಂತಿಕ ಚಿಂತನೆ, ಸಾಹಿತ್ಯ, ಸಂಘಟನೆಗಳನ್ನು ಬಲವಾಗಿ ತಬ್ಬಿಕೊಂಡು ದಲಿತರ ಪರವಾದ ಹೋರಾಟ ನಡೆಸುತ್ತಿದ್ದ ದಲಿತ ಪ್ಯಾಂಥರ್ಸ್, ಆರ್.ಪಿ.ಐ. ದಂತಹ ಪಕ್ಷಗಳು  ಅಲ್ಲಿನ ಪಟ್ಟಭದ್ರ, ಕೋಮುವಾದಿ ರಾಜಕೀಯ ಪಕ್ಷಗಳ ಪಿತೂರಿಗೆ ಸುಲಭವಾಗಿ ತುತ್ತಾದದ್ದು. ಅಲ್ಲಿಂದ ಇಲ್ಲಿಯವರೆಗೂ ಆ ಕಾಲಘಟ್ಟದ ನಾಮದೇವ್ ಢಸಾಳ್ ರಂತಹ ಧೀಮಂತ ದಲಿತ ಚಿಂತಕರಿಂದ ಮೊದಲುಗೊಂಡು ಇಂದಿನ ರಾಮದಾಸ್ ಅಟವಳೆ ರವರವರೆಗೂ ಎಲ್ಲರೂ ಈ ಪಟ್ಟಭದ್ರ ಹಿತಾಸಕ್ತಿ ಪಕ್ಷಗಳ ಸಂಚಿನಿಂದ ಎಲ್ಲಿಗೂ ಸಲ್ಲದೆ ತಮ್ಮನ್ನು ತಾವೇ ಕತ್ತಲಿಗೆ ನೂಕಿಕೊಂಡದ್ದು. ಈ ತರಹದ ಅನೇಕ ಉದಾಹರಣೆಗಳನ್ನು ಹತ್ತಿರದಿಂದ ಕಂಡಿದ್ದ ಕಾನ್ಸೀರಾಮ್ ರವರಿಗೆ ಕೇವಲ ಚಿಂತನೆ, ಸಂಘಟನೆ ಹಾಗೂ ಚಳುವಳಿಯ ಮುಖಾಂತರ ದಲಿತರಿಗೆ ಈ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಸಮಾನವಾದ, ಆತ್ಮಾಭಿಮಾನದ, ಅಧಿಕಾರದ ಬದುಕಿಗೆ ಹತ್ತಿರಕ್ಕೂ ತಂದುಕೊಡಲು ಸಾಧ್ಯವಿಲ್ಲ ಎನ್ನುವುದು ಮಹಾರಾಷ್ಟ್ರಾದ ದಲಿತ ಸಂಘಟನೆಗಳಿಂದ ಕಾನ್ಶೀರಾಮ್ ಅವರಿಗೆ ಎಂದೋ ಅರಿವಾಗಿ ಹೋಗಿತ್ತು. ಅದಕ್ಕಾಗಿಯೇ ಅಕಡೆಮಿಕ್ ಮಾದರಿ ಚಿಂತನ ಹಾಗೂ ಮಂಥನಗಳನ್ನು, ಆ ಮಾದರಿಯ ಎಡಪಂಥೀಯ ಒಲವುಳ್ಳ ಬುದ್ಧಿಜೀವಿಗಳನ್ನು ತಮ್ಮ ಹಾಗು ತಮ್ಮ ಒಕ್ಕೂಟದ ಹತ್ತಿರಕ್ಕೂ ಬಿಟ್ಟುಕೊಳ್ಳದೆ, ಅಂಬೇಡ್ಕರ್ ವಾದದ ಮೂಲ ಮಂತ್ರವಾದ “ಶಿಕ್ಷಣ, ಸಂಘಟನೆ, ಚಳುವಳಿ” ಗಳಲ್ಲಿ ಸದಾ ಕಾಲ ಎಚ್ಚರದ ಹೆಜ್ಜೆಗಳನ್ನು ಇಡುವಂತೆ ಪ್ರೇರೇಪಿಸುವ ಚಿಂತನೆಯ ನುಡಿಕಟ್ಟುಗಳಿಗೆ ಸಂಪೂರ್ಣ ತಿಲಾಂಜಲಿ ಕೊಟ್ಟು ಸಂಘಟನೆಯನ್ನು ನೆಚ್ಚಿ ಚಳುವಳಿಗಳ ಮೂಲಕ ರಾಜಕೀಯದ ಅಧಿಕಾರವನ್ನು ದಲಿತರಿಗೆ ತಂದುಕೊಡಬೇಕು ಎನ್ನುವ ಒಂದಂಶದ ಕಾರ್ಯಕ್ರಮದ ಫಲವಾಗಿ 1984 ರಲ್ಲಿ ಬಹುಜನ ಸಮಾಜ ಪಕ್ಷ ಎನ್ನುವ ರಾಜಕೀಯ ಪಕ್ಷ ಜನ್ಮ ತಾಳಿತು. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಹುಜನ ಪಕ್ಷ ಬ್ರಾಹ್ಮಣರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಅವರಿಗೇ ನೀಡುತ್ತೇವೆ ಎಂದು ಘೋಷಿಸುವುದರ ಮೂಲಕ ಬ್ರಾಹ್ಂಅಣರಲ್ಲಿ ಸಂಚಲನ ಮೂಡಿಸಿದ್ದರು. ತಮ್ಮ ಒಂದು ದಶಕದ ಅನುಭವ, ಸಂಘಟನಾ ಚತುರತೆಯನ್ನು ಬಳಸಿ ಕಾಲ 1984 ರಿಂದ  ನಂತರ ಒಂದು ದಶಕದವರೆಗೂ ಮತ್ತದೇ ಹೋರಾಟ, ಕಾರ್ಯತಂತ್ರಗಳು ಎಲ್ಲವೂ 1995ರಲ್ಲಿ ಬಿಎಸ್‌ಪಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ, ಬೆಹೆನ್ ಜೀ ಮಾಯಾವತಿ ದೇಶದ ದೊಡ್ಡ ರಾಜ್ಯದ  ದೇಶದ ಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡಿದರು. ದಲಿತ ಹಾಗೂ ಹಿಂದುಳಿದ ವರ್ಗಗಳ ಮೈತ್ರಿ, ಅದರ ಉಮೇದಿ, ಆ ಸಂಭ್ರಮ ಎಲ್ಲವೂ ಪ್ರಥಮವೇ. ಇಲ್ಲಿಂದ ಶುರುವಾದ ಕಾನ್ಸೀರಾಮ್ ಅವರ ರಾಜಕೀಯ ನಡಿಗೆ ನಂತರ ಓಟದ ರೂಪ ಪಡೆದುಕೊಂಡು 90ರ ದಶಕದ ಹೊತ್ತಿಗೆ ದಾಪುಗಾಲು ಇಡತೊಡಗಿತ್ತು. ನಂತರ ಕಾನ್ಸೀರಾಮ್ ದಣಿದಿದ್ದು 2000ರ ನಂತರವೇ.

ಅದರೆ ಈ ಸಂಭ್ರಮದ ಬೆಲೂನಿಗೆ ಸೂಜಿಯ ಮೊನೆ ತಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಈ “ಮಾಯಾಲೋಕ”ದ ಕಾಲದಲ್ಲಿ 1995 ರಿಂದ ಇಲ್ಲಿಯವರೆಗೂ ನಡೆದದ್ದು, ಆ ವಿಘಟನೆಗಳು, ಅತುರದ ನಡೆಗಳು, ಅತ್ಮಹತ್ಯಾತ್ಮಕ, ವಿವೇಚನಾಶೂನ್ಯ ನಿರ್ಧಾರಗಳು ಎಲ್ಲವೂ ಹೊಸ ದುರಂತಕ್ಕೆ ನಾಂದಿ ಹಾಡಿದವು. ಇದೆಲ್ಲ ಶುರುವಾದದ್ದು ತಾವು ನಡೆಯುವ ಹಾದಿಯನ್ನು, ನೆಲವನ್ನು ಅಸಮರ್ಪಕವಾಗಿ, ಪದೇ ಪದೇ ಜಾರಿಬೀಳುವಂತೆ ರೂಪಿಸಿಕೊಂಡಿದ್ದರಿಂದ. ರಾಜಕೀಯವಾಗಿ ಮಹಾತ್ವಾಕಾಂಕ್ಷಿಯಾಗಿ ಮಿಂಚತೊಡಗಿದ್ದ ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿ ಸೂತ್ರಬದ್ಧ ಕಾರ್ಯಕ್ರಮಗಳನ್ನು ರೂಪಿಸುವುದರ ಬದಲು ಉದ್ವೇಗದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವತ್ತ ನಂತರ ಅದರಿಂದುಟಾಗುವ ವಾದವಿವಾದಗಳಲ್ಲಿ ತಮ್ಮ ಶಕ್ತಿ ವ್ಯಯಿಸತೊಡಗುವತ್ತ ತೀವ್ರ ಆಸಕ್ತಿ ವಹಿಸತೊಡಗಿದರು. ಇದರ ಪರಿಣಾವಾಗಿ ಗಾಂಧಿ ಹಾಗೂ ಅಂಬೇಡ್ಕರ್ ನಡುವಿನ ಸೈದ್ಧಾಂತಿಕ ಭಿನ್ನಭಿಪ್ರಾಯಗಳನ್ನು ಬಂಡವಾಳ ಮಾಡಿಕೊಂಡು ಗಾಂಧೀಜಿಯವರನ್ನು ಮನುವಾದಿ ಎಂದು ಹೀಯಾಳಿಸುತ್ತ ಅವರ ಚಿಂತನೆಗಳಿಗೆ ದಲಿತ ವಿರೋಧಿ ಬಣ್ಣ ಕೊಡತೊಡಗಿದ್ದು ಈ ಮೂಲಕ ಮುಗ್ಧ ದಲಿತರನ್ನು ಅನಗತ್ಯವಾಗಿ ದಿಕ್ಕುತಪ್ಪಿಸತೊಡಗಿದರು. ಇದು 90ರ ದಶಕದುದ್ದಕ್ಕೂ ಉತ್ತರಭಾರತದಲ್ಲಿ ಗಾಂಧಿ ವಿರೋಧಿ ನೆಲೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಗೆ  ಅಂಬೇಡ್ಕರ್ ಅವರ  “ಶಿಕ್ಷಣ, ಸಂಘಟನೆ, ಚಳುವಳಿ” ತನ್ನ ಅವಸಾನದತ್ತ ಸಾಗತೊಡಗಿತ್ತು. ಆದರೆ ನಮ್ಮ ಕರ್ನಾಟದಲ್ಲಿ ದಲಿತ ಚಳುವಳಿ ಬಿ.ಕೃಷ್ಣಪ್ಪರವರ ಅಂಬೇಡ್ಕರ್ ವಾದ, ದೇವನೂರು ಮಹಾದೇವರ ಸಮಾಜವಾದದ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡು ತನ್ನೊಡಳಲೊಳಗೆ ಗಾಂಧೀಜಿಯವರನ್ನು ಸ್ವೀಕರಿಸಿದ ರೀತಿ ಹಾಗು ಅದನ್ನು ದಲಿತ ಚಳುವಳಿಗೆ ರೂಪಿಸಕೊಂಡ ರೀತಿ ಅನನ್ಯವಾದದ್ದು. ಈ ಗಾಂಧೀವಾದಿ ಪ್ರೇರಣೆಯಿಂದಲ್ಲವೇ ಕರ್ನಾಟಕದ ದಲಿತರು ಅಂಬೇಡ್ಕರ್ ಜನ್ಮದಿನದಂದು ಸಮಾಜದ ಎಲ್ಲ ಜಾತಿಯ ಜನರಿಗೆ ತಮ್ಮ ಕೈಯಾರೆ ನೀರುಣಿಸಿದ್ದು ಆ ಮೂಲಕ ಮೌನವಾಗಿಯೇ ಮೇಲ್ಜಾತಿ ಹಾಗೂ ಮಧ್ಯಮ ಜಾತಿಗಳ ಅಹಂಗೆ ಪೆಟ್ಟು ನೀಡಿದ್ದು. ಕರ್ನಾಟಕದ ಈ ಸಮೃದ್ಧವಾದ ವೈಚಾರಿಕ ನೆಲೆಗಟ್ಟು ಇಲ್ಲಿನ ದಲಿತ ಚಳುವಳಿಗೆ ಒಂದು ರೀತಿಯಲ್ಲಿ ಸದಾಕಾಲ ನೈತಿಕ ಶಕ್ತಿಯಾಗಿ ಕಾದಿದ್ದು ಉತ್ತರ ರಾಜ್ಯದ ಬಹುಜನ ಪಕ್ಷಕ್ಕೆ ಇದು ದಕ್ಕಲಿಲ್ಲ. ಇದಕ್ಕೆ ಮೂಲಭೂತ ಕಾರಣ ಕಾನ್ಸೀರಾಮ್ ಹಾಗೂ ಮಾಯಾವತಿ ಜೋಡಿ ತಮ್ಮ ಜೀವಿತದುದ್ದಕ್ಕೂ ಈ ಅಕಡೆಮಿಕ್ ಚಿಂತಕರನ್ನೂ ಕೇವಲ ಬುರೆಡೇ ದಾಸರು ಎಂದೇ ತೀರ್ಮಾನಿಸಿದ ಫಲವಾಗಿ ತಮ್ಮ ಪಕ್ಷದ  ಹತ್ತಿರಕ್ಕೂ ಬಿಟ್ಟುಕೊಳ್ಳದಿದ್ದದ್ದು. ಸಾಮಾಜಿಕವಾಗಿ ಎಷ್ಟೇ ಬಲಶಾಲಿಯಾಗಿ, ಸಕ್ರಿಯವಾಗಿ, ಅತ್ಯಂತ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದರೂ ಅದು ಎಲ್ಲೂ ಭೌದ್ಧಿಕವಾಗಿ, ಆರ್ಥಿಕವಾಗಿ ಭ್ರಷ್ಟವಾಗದಂತೆ ಸದಾ ನೈತಿಕ ಕಾವಲುಗಾರರಾದ ಚಿಂತಕರ ಅನುಪಸ್ಥಿತಿ ಬಹುಜನ ಪಕ್ಷವನ್ನು ಸಂಪೂರ್ಣ ದಿಕ್ಕುತಪ್ಪಿಸಿತ್ತು. ಇದರ ಫಲವೇ ಸ್ವತಹ ದಲಿತ ವಿರೋಧಿ ಚಿಂತನೆಗಳ ಕೋಮುವಾದಿ ಸಿದ್ಧಾಂತಗಳ ಬಿಜೆಪಿ ಪಕ್ಷದೊಂದಿಗೆ ಈ ಜೋಡಿ ಎರಡು ಬಾರಿ ಅಧಿಕಾರವನ್ನು ಹಂಚಿಕೊಂಡಿದ್ದು. ಇಲ್ಲಿಂದ ಆನೆ ತುಳಿದಿದ್ದೇ ಹಾದಿ ಎನ್ನುವಂತೆ ಕಾನ್ಶಿರಾಮ್ ಹಾಗೂ ಮಾಯಾವತಿ ಜೋಡಿ ಉತ್ತರ ಪ್ರದೇಶದ ರಾಜಕಾರಣದ ದಿಕ್ಕನ್ನು ಸದಾಕಾಲ “ಮಾಯಾಲೋಕ” ಸುತ್ತಲೇ ಪರಿಭ್ರಮಿಸುವಂತೆ ಮಾಡಿದ್ದರೂ ಅದಕ್ಕಾಗಿ ಆ ಪಕ್ಷ ಹಾಗೂ ದಲಿತರು ತೆತ್ತ ಬೆಲೆ ಅಪಾರ.

ಕಾನ್ಸೀರಾಮ್ ಹಾಗು ಮಾಯಾವತಿ ಜೋಡಿಯ ಮತ್ತೊಂದು ಬಲು ದೊಡ್ಡ ಸೋಲೆಂದರೆ ಭ್ರಷ್ಟಾಚಾರವನ್ನು ಸಾರ್ವತ್ರೀಕರಣಗೊಳಿಸಿದ್ದು. ಅದನ್ನು ಸಮರ್ಥಿಸಿಕೊಳ್ಳಲು ಬಳಸಿದ್ದು ಮೇಲ್ಜಾತಿಯವರು ಮಾಡಿದರೆ ಕಣ್ಣು ಮುಚ್ಚುತ್ತೀರಿ ನಾವು ಮಾಡಿದರೆ ಕೆಂಗಣ್ಣೇಕೆ ಎನ್ನುವ ಉಡಾಫೆಯ ಹಾದಿತಪ್ಪಿದ ಸಾಮಾಜಿಕ ನ್ಯಾಯದ ಧೋರಣೆ. ಇದಕ್ಕಾಗಿಯೇ ಕಾಯುತ್ತಿದ್ದ ಬಹುಪಾಲು ಮಾಧ್ಯಮಗಳು ಮಾಯಾವತಿ ಹಾಗು ಬಿಎಸ್‌ಪಿ ಪಕ್ಷವನ್ನು ಭ್ರಷ್ಟಾಚಾರದ ಮತ್ತೊಂದು ಅವತಾರವೆನ್ನುವಂತೆ ಬಿಂಬಿಸಿದ್ದು. ಮುಂದೆ ಇದು ಬಹುಜನ ಸಮಾಜ ಪಕ್ಷ ಹಾಗೂ ಮಾಯಾವತಿಯವರ ವರ್ಚಸನ್ನೇ ಸಂಪೂರ್ಣವಾಗಿ ನುಂಗಿ ನೀರು ಕುಡಿಯಿತು. ಇವೆಲ್ಲದರಿಂದ ಹೊರಬರಲು ಮಾಯಾವತಿ ಅವರು ತಮ್ಮ ಆಡಳಿತದ, ರಾಜಕೀಯ ಶೈಲಿಯನ್ನೇ ಭಾವೋದ್ವೇಗದ, ಬಿಗಿಮುಷ್ಟಿಯ, ಉಪೇಕ್ಷೆಯ ಮಟ್ಟಕ್ಕೆ ನಿಲ್ಲಿಸಿಕೊಂಡು ಈಗಲೂ ತಮ್ಮ ಈ ಬಲೆಯಿಂದ ಹೊರಬರಲು ಇನ್ನಿಲ್ಲದೆ ಹೆಣಗುತ್ತಿರುವುದು ನಿಜಕ್ಕೂ ದುಖದ ಸಂಗತಿ. ತಮ್ಮ ಹಾದಿತಪ್ಪಿದ ರಾಜಕೀಯ ಲೆಕ್ಕಾಚಾರ ಹಾಗು ಗೊತ್ತುಗುರಿಯಿಲ್ಲದ ಆಡಳಿತದಿಂದಾಗಿ ಮತ್ತೆ ಬಲಿಯಾದದ್ದು ಅಲ್ಲಿನ ದಲಿತರು. ಕಾನ್ಸೀರಾಮ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ನಿಸ್ವಾರ್ಥದಿಂದ ದಲಿತರ ಸಬಲೀಕರಣಕ್ಕಾಗಿ ಕಟ್ಟಿದ ಸಂಘಟನೆಯನ್ನು ತಮ್ಮ ಗೊತ್ತು ಗುರಿಯಿಲ್ಲದ ನೀತಿಗಳ ಮೂಲಕ ಸ್ವತಹ ತಾವೇ ಕೈಯಾರೆ ಕೆಡವಿದ್ದು ಇಂಡಿಯಾದ ಚರಿತ್ರೆಯಲ್ಲಿ ಒಂದು ದುರಂತ ಇತಿಹಾಸವಾಗಿಯೇ ನಮ್ಮೆಲ್ಲರನ್ನು ಅಣಕಿಸುತ್ತಿರುತದೆ.

20 ವರ್ಷಗಳ ಅವಿರತ ಹೋರಾಟ, ಅಭೂತಪೂರ್ವ, ಸ್ವಾರ್ಥರಹಿತ ಹೋರಾಟಕ್ಕೆ ಈ ಗತಿಯಾದರೆ ಇನ್ನು ಕೇವಲ ಭ್ರಷ್ಟಾಚಾರ, ಹುಂಬ, ಸರ್ವಾಧಿಕಾರದ ಹಿನ್ನೆಲೆಯಿಂದ, ಯಾವುದೇ ಸೈದ್ಧಾಂತಿಕ ಬದ್ಧತೆ ಇಲ್ಲದ ರಾಜಕೀಯ ನಡೆಸಿದ ಶ್ರೀರಾಮುಲು ಎನ್ನುವ ಗೊತ್ತು ಗುರಿ ಇಲ್ಲದ ನಾಯಕರು ಮುಂದಿನ ತಿಂಗಳು ಹೊಸ ಬಡವರ, ಹಿಂದುಳಿದ ವರ್ಗಗಳ ಪಕ್ಷ ಹುಟ್ಟಿಹಾಕುತ್ತೇನೆ ಎಂದು ಹೇಳುತ್ತಿರುವುದರ ಗತಿ ಈಗಲೇ ಸರ್ವವಿದಿತವಾಗಿದೆ. ಇವರೆಲ್ಲರ ರಾಜಕೀಯ ಮಹಾತ್ವಾಕಾಂಕ್ಷೆಗೋಸ್ಕರ ಅಮಾಯಕ ಹಿಂದುಳಿದ ವರ್ಗಗಳು ಕುರಿಗಳಂತೆ ಹಳ್ಳಕ್ಕೆ ಬೀಳುವುದು ಗ್ಯಾರಂಟಿ. ಇದರಿಂದ ಅವರಿಗಷ್ಟೇ ಹಾನಿಯಲ್ಲ ನಮ್ಮೆಲ್ಲರ ನೈತಿಕತೆಯೂ ಹಾನಿಗೊಳ್ಳುತ್ತದೆ ಹಾಗೂ ಪ್ರಶ್ನಾರ್ಹವಾಗುತ್ತದೆ.

ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ

ಬಿ.ಶ್ರೀಪಾದ ಭಟ್

ಇಂಡಿಯಾ ದೇಶ ಜಾಗತೀಕರಣಕ್ಕೆ ತುತ್ತಾಗಿ 20 ವರ್ಷಗಳು ತುಂಬಿದ ಗಳಿಗೆಯಲ್ಲಿ, ಇಲ್ಲಿನ ಹತಾಶ ವ್ಯವಸ್ಥೆ ಭ್ರಷ್ಟ ಮಂತ್ರಿ ಶರದ್ ಪವಾರ್ ಗೆ ಕಪಾಳ ಮೋಕ್ಷ ಮಾಡುವುದರ ಮೂಲಕ ಜಾಗತೀಕರಣದ ಹೆಮ್ಮಾರಿ ತನ್ನ  20ನೇ ವಾರ್ಷಿಕೋತ್ಸವವನ್ನು ಸಾಂಕೇತಿಕವಾಗಿ ಆರಂಬಿಸಿದೆ. ಇನ್ನೂ ಮುಂದೆ ಇನ್ನೂ ಅನೇಕ ಕಪಾಳ ಮೋಕ್ಷಗಳು ಕಾದಿವೆ.

ದೃಶ್ಯ 1 : ಕುಪಿತ ಸಿಖ್ ವ್ಯಕ್ತಿಯೊಬ್ಬನಿಂದ ಕಪಾಳ ಮೋಕ್ಷಕ್ಕೆ ಒಳಗಾದ ಕೇಂದ್ರದ ವ್ಯವಸಾಯ ಮಂತ್ರಿ ಶರದ್ ಪವಾರ್ ಅವರ ಮಗಳಾದ ಸುಪ್ರಿಯಾ ಹೇಳಿದ್ದು ” ನನ್ನ ತಂದೆಯವರ ಆಪರೇಶನ್ ಮಾಡಿಸಿಕೊಂಡ ಕಪಾಳಕ್ಕೆ ಏಟು ಬಿದ್ದಿದೆ. ಅದು ಇನ್ನು ಯಾವ ಸ್ವರೂಪ ಪಡೆಯುತ್ತದೆಯೋ ಹೇಳಲಿಕ್ಕಾಗದು” ಇಷ್ಟು ಹೇಳುವಷ್ಟರಲ್ಲಾಗಲೆ ಅವರ ಕಣ್ಣು ತುಂಬಿ ಬಂದಿದ್ದವು. ಇದು ಸಹಜ.ಆದರೆ ಮಾನ್ಯ ಶರದ ಪವಾರ್ ಮತ್ತು ಸುಪ್ರಿಯಾರವರೆ ಅಷ್ಟೇ ಸಹಜವಾದದ್ದು ಈ ಕೆಳಗಿನ ಅಂಶಗಳು:

1997 ರಿಂದ ಇಲ್ಲಿಯವರೆಗೂ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಗಳು ಇವರ ನೆರವಿಗೆ ಬಾರದೆ ಇದ್ದದ್ದಕ್ಕೆ. ಜಾಗತೀಕರಣದ ಅಮಲಿನಲ್ಲಿ ದೇಶದ ಬೆನ್ನೆಲೆಬು ಎನಿಸಿಕೊಂಡ ವ್ಯವಸಾಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದಕ್ಕೆ. ಈ ಸರ್ಕಾರ ಕುರುಡಾಗಿ, ಯಾವ ಪೂರ್ವಭಾವಿ ಸಿದ್ಧತೆಗಳು, ಮುಂದಾಲೋಚನೆಗಳು, ತರ್ಕಬದ್ಧವಾದ ಚಿಂತನೆಗಳು ಇಲ್ಲದೆ, ಈ ದೇಶದ ಶೇಕಡ 70 ರಷ್ಟಿರುವ ಬಡಜನತೆಯ, ರೈತರ, ತಳಸಮುದಾಯಗಳ ಹಿತಾಸಕ್ತಿಗಳು, ಎಲ್ಲವನ್ನೂ ಕಡೆಗಣಿಸಿ ಒಂದು ರೀತಿಯಲ್ಲಿ ಗೊತ್ತು ಗುರಿಯಿಲ್ಲದೆ ರೂಪಿಸಿದ ಮುಕ್ತ ಮಾರುಕಟ್ಟೆಯ ನೀತಿಯ ಫಲವಾಗಿ ಕಳೆದ 20 ವರ್ಷಗಳಲ್ಲಿ ಮೇಲಿನ ಎಲ್ಲ ಸಮುದಾಯಗಳು ನೆಲ ಕಚ್ಚಿದವು.

ಈ ಸಂಧರ್ಭದಲ್ಲಿ ಸಂಪೂರ್ಣ ಸೋತುಹೋದ ರೈತ ಏನು ಮಾಡಬಹುದಿತ್ತು? ಹೋರಾಡಬಹುದಿತ್ತೇ? ಯಾರ ಬಲದಿಂದ? ಪ್ರಭುತ್ವದ ಎದುರು ಏಕಾಂಗಿಯಾಗಿ ಎಷ್ಟು ದೀರ್ಘ ಕಾಲ? ಶಾಸಕರತ್ತ, ಮಂತ್ರಿಗಳತ್ತ ಚಪ್ಪಲಿ ತೂರಬಹುದಾಗಿತ್ತೇ? ಅವರ ಕಪಾಳ ಮೋಕ್ಷ ಮಾಡಬಹುದಾಗಿತ್ತೇ? ಆದರೆ ಪ್ರಜಾಪ್ರಭುತ್ವದ ಎಲ್ಲಾ ದಾರಿಗಳು ಮುಚ್ಚಿಕೊಂಡಂತಹ ಸಂಧರ್ಭದಲ್ಲಿ ಇದಾವುದನ್ನು ಮಾಡದ ನಮ್ಮ ನೆಲದ ಸಂಪನ್ನ ರೈತ  ಸ್ವತಃ ತನ್ನ ಜೀವವನ್ನೇ ಬಲಿ ಕೊಟ್ಟು ವ್ಯವಸ್ಥೆಗೆ, ಸರ್ಕಾರಕ್ಕೆ, ಅವರ ಆತ್ಮಸಾಕ್ಷಿಗೆ, ನೈತಿಕತೆಗೆ, ಸವಾಲು ಎಸೆದಿದ್ದಾನೆ. ಆದರೆ ಭ್ರಷ್ಟಚಾರದ ಹಿನ್ನೆಲೆಯುಳ್ಳ ಶರದ ಪವಾರ್ ರಂತಹ ರಾಜಕಾರಣಿಗಳು ನಿರ್ಲಜ್ಜೆಯಿಂದ ತನ್ನ ಇಲಾಖೆಗೆ ಸೇರಿದ, ಈ ದೇಶದ ಬೆನ್ನೆಲುಬಾದ ವ್ಯವಸಾಯರಂಗವನ್ನು ಸಂಪೂರ್ಣವಾಗಿ ತುಳಿದು ನಾಚಿಕೆಯಿಲ್ಲದೆ ಅದೇ ಖಾತೆಯಲ್ಲಿ ಮುಂದುವರೆದಿರುವುದಕ್ಕೆ ನಾವೆಲ್ಲ ಹತಾಶೆಯಿಂದ, ಸೋಲಿನಿಂದ ತಲೆತಗ್ಗಿಸಬೇಕಷ್ಟೆ. ಯಾವುದೇ ಕೆಚ್ಚೆದೆಯುಳ್ಳ, ಮಾನವಂತ ಸಮಾಜ ಈ ಶರದ ಪವಾರ್ ರಂತಹವರನ್ನು ಎಂದೋ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತಿತ್ತು. ಈ ಪವಾರ್ ಎಂದೋ ನ್ಯಾಯದೇವತೆಯ ಕಪಾಳ ಮೋಕ್ಷಕ್ಕೆ ತುತ್ತಾಗಬಹುದಾದಿತ್ತು. ಆದರೆ ನಮ್ಮದು ಅನುಕೂಲಸಿಂಧು, ಸೋತ, ದಣಿದ ಸಮಾಜವಲ್ಲವೇ?

ದೃಶ್ಯ 2 : ನಮ್ಮ ಪ್ರಧಾನ ಮಂತ್ರಿಗಳಾದ ಮನಮೋಹನ್ ಸಿಂಗ್ ರವರನ್ನು ಆರ್ಥ ಮಾಡಿಕೊಳ್ಳದೆ ಈ ಯುಪಿಎ -2 ಸರ್ಕಾರದ ಕರ್ಮಕಾಂಡಗಳಾಗಲಿ, ಆತ್ಮಹತ್ಯಾತ್ಮಕ ನಿಲುವುಗಳಾಗಲಿ, ಭ್ರಷ್ಟಾಚಾರಗಳಾಗಲಿ ಅರ್ಥವಾಗುವ ಸಾಧ್ಯತೆಗಳು ಕೇವಲ ಅಪೂರ್ಣ ಅಥವಾ ಅರ್ಧ ಸತ್ಯ ಅಥವಾ ಅರ್ಧ ಸುಳ್ಳು. ಸರಿಯಾಗಿ 20 ವರ್ಷಗಳ ಹಿಂದೆ ಇಂಡಿಯಾದ ರಾಜಕಾರಣದಲ್ಲಿ, ಅದರಲ್ಲೂ ದಿಲ್ಲಿ ಎನ್ನುವ ಮಾಯಾವಿಯ ಗದ್ದುಗೆಗೆ ಹತ್ತಿರದ ರಾಜಕಾರಣದಲ್ಲಿ ಕಂಡೂ ಕಾಣದಂತೆ ಗೋಚರಿಸಿದ ಮನಮೋಹನ್ ಸಿಂಗ್ ಬಗ್ಗೆ ಆಗೆಲ್ಲ ಒಬ್ಬ ಹಣಕಾಸು ತಜ್ಞರು ಎನ್ನುವ ಭಾವನೆ ಇತ್ತು. 5 ವರ್ಷಗಳ ನಂತರ ಮನಮೋಹನ್ ಸಿಂಗ್ ರವರ ಮುಕ್ತ ಮಾರುಕಟ್ಟೆ ನೀತಿಯ ಫಲವಾಗಿ ಜಾಗತೀಕರಣವೆನ್ನುವ ಡೈನೋಸಾರ್ ತನ್ನ ದಾಪುಗಾಲನ್ನಿಡಲಾರಂಬಿಸಿತು. ಅದರ ಹರಿಕಾರರಾದ ಮನಮೋಹನ್ ಸಿಂಗ್ ತಮ್ಮ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವ ದಿಂದಾಗಿ ನಿಧಾನವಾಗಿ ಆದರೆ ಗಟ್ಟಿಯಾಗಿ ಮಧ್ಯಮ, ಮೇಲ್ವರ್ಗಗಳ ಕಣ್ಮಣಿಯಾಗಿ ಮಿಂಚತೊಡಗಿದರು. ಈ ಮಧ್ಯಮ ವರ್ಗಗಳು ಯಾವಾಗಲೂ ಬಯಸುವ ಸಂತೃಪ್ತಿ ಬದುಕಿನ ಕನಸಿಗೆ, ತಮ್ಮ ಕೊಳ್ಳುಬಾಕತನ ಸಂಸ್ಕೃತಿಗೆ ಈ ಮನಮೋಹನ ಸಿಂಗ್ ಸಾಕ್ಷಾತ್ಕಾರಗೊಳಿಸುವ ದೂತರಂತೆಯೇ ಕಂಡರು.

ಆಮೇಲೆ ನಡೆದಿದ್ದು ಇತಿಹಾಸ ಅಥವಾ ಅಧಃಪತನಗಳ ಸರಣಿ. ಅದು ಮೌಲ್ಯಗಳ ಅಧಃಪತನ, ಸ್ವಂತಿಕೆಯ ಅಧಃಪತನ, ಈ ನೆಲದ, ಮಣ್ಣಿನ ಸಂಸ್ಕೃತಿಯ ,ಜನಪದ ಲೋಕದ, ಹಳ್ಳಿಗಳ ಅವಸಾನದ ಪ್ರಕ್ರಿಯೆ, ಸರ್ಕಾರ ಉದ್ದಿಮೆಗಳು ಈ ದೇಶವನ್ನು ದಿವಾಳಿ ಎಬ್ಬಿಸಿವೆ ಎನ್ನುವ  ಖಳನ ಪಟ್ಟ ಹೊತ್ತುಕೊಂಡಿತು ( ಇದೂ ಕೂಡ ಅರ್ಧ ಸತ್ಯ ಹಾಗೂ ಅರ್ಧ ಸುಳ್ಳು). ಉತ್ತಮ ಖಾಸಗೀಕರಣವೆನ್ನುವುದೇ ಒಂದು ಲೊಳಲೊಟ್ಟೆ ಎನ್ನುವ ನಿಜದ ಮಾತನ್ನು ಸಂಪೂರ್ಣವಾಗಿ ಮರೆತರು.

ನಮ್ಮ ರಾಜ್ಯದ ಒಂದು ಉದಾಹರಣೆಯೊಂದಿಗೆ ಇದನ್ನು ವಿವರಿಸಬಹುದು. ಸರ್ಕಾರಿ ಒಡೆತನದ ಗೃಹ ನಿರ್ಮಾಣ ಮಂಡಳಿಗಳು ನಿರ್ಮಿಸಿ ನಂತರ ಜನತೆಗೆ ಮಾರುವ L.I.G., M.I.G., H.I.G., ಬಡಾವಣೆಗಳನ್ನುನಾವು ಅವಲೋಕಿಸಬಹುದು. ಹೌದು ಸರ್ಕಾರದ ಆರ್ಥಿಕತೆಯ ಭ್ರಷ್ಟಾಚಾರದಿಂದ ಆ ಮನೆಗಳ ಗುಣಮಟ್ಟ ಯಾವತ್ತೂ ಕಳಪೆಯಾಗಿರುತ್ತದೆ. ಈ ಮನೆಗಳನ್ನು ಕೊಂಡವರು ಮತ್ತೆ ಅದನ್ನು ಪುನರ್ ನಿರ್ಮಾಣ ಮಾಡಿಸಿಕೊಳ್ಳುತ್ತಾರೆ. ಆದರೆ ಅಲ್ಲಿರುವ ಜ್ಯಾತ್ಯಾತೀತ ವ್ಯವಸ್ಥೆ ಮಾತ್ರ ಅಪೂರ್ವವಾದದ್ದು. ಅಲ್ಲಿ ಬ್ರಾಹ್ಮಣರ ಮನೆ ಪಕ್ಕ ಮುಸ್ಲಿಂರ ಮನೆ ಇರುತ್ತದೆ, ಅಥವಾ ಲಿಂಗಾಯತರ ಮನೆ ಪಕ್ಕ ದಲಿತರ ಮನೆ ಇರುತ್ತದೆ. ಒಟ್ಟಿನಲ್ಲಿ ಅಲ್ಲಿ ಎಲ್ಲಾ ಜಾತಿಯ ಸಂಸಾರಗಳು ಒಂದು ಕಾಲನಿಯಲ್ಲಿ ಬಾಳುತ್ತಿರುತ್ತವೆ. ಇದು ಯಾವುದೇ ಉದ್ದೇಶಪೂರ್ವಕ ಒತ್ತಡಗಳಿಲ್ಲದೆ ತಂತಾನೆ ಆದದ್ದು. ಇದು ಸಾಧ್ಯವಾದದ್ದು ಸರ್ಕಾರದ ಸಂಸ್ಥೆಗಳು ಸಹಜವಾಗಿಯೇ, ಅನಿರ್ವಾಯವಾಗಿಯೇ ಸಂವಿಧಾನದ ಜಾತ್ಯಾತೀತ, ಸಾಮಾಜಿಕ ನ್ಯಾಯದ, ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅದರ ಫಲವೇ ಮೇಲಿನ ಒಂದು ಉದಾಹರಣೆ.

ಇದೇ ರಾಜ್ಯದ ಅನೇಕ ಖಾಸಗಿ ಒಡೆತನದ ಕೆಲವು ಲೇಔಟ್ ಗಳನ್ನು ನೋಡಿದರೆ ಅಲ್ಲಿನ ಜಾತೀಯತೆಯ ದುರ್ನಾತ ಕಣ್ಣಿಗೆ ರಾಚುತ್ತದೆ. ಏಕೆಂದರೆ ಖಾಸಗಿಯವರಿಗೆ ಸಂವಿಧಾನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೂಡ ಅನ್ವಯಿಸಬಹುದು. ಇವರು ಕೇವಲ ಗುಣಮಟ್ಟದ ಹೆಸರಿನಲ್ಲಿ ಈ ದೇಶದ ಸಂವಿಧಾನದ ಚೌಕಟ್ಟಿಗೇ ಕೊಡಲಿ ಪೆಟ್ಟು ಕೊಟ್ಟಿರುವುದು, ಈಗಲೂ ಕೊಡುತ್ತಿರುವುದು ಸರ್ವರಿಗೂ ವಿದಿತವಾಗಿದೆ.

ಇಷ್ಟೆಲ್ಲ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳದೆಯೆ, ತನ್ನ ಒಡೆತನದ ಉದ್ದಿಮೆಗಳನ್ನು, ಸಂಸ್ಥೆಗಳನ್ನು ಭ್ರಷ್ಟತೆಯಿಂದ, ಜಾತೀಯತೆಯಿಂದ ಮುಕ್ತಗೊಳಿಸುವ ನಿರ್ದಿಷ್ಟ ಕಾರ್ಯ ಸೂಚಿಗಳು, ಯೋಜನೆಗಳಿಲ್ಲದೆಯೆ, ನೆಗಡಿ ಬಂದರೆ ಮೂಗನ್ನು ಕೊಯ್ಯುವ ನೀತಿಯನ್ನು ಅನುಸರಿಸಿ ಈ ಸರ್ಕಾರಗಳು ಸರ್ವರೋಗಕ್ಕೂ ಖಾಸಗೀಕರಣವೇ ಮದ್ದು ಎನ್ನುವ ಒಂದು ಸರ್ಕಾರೀ ದೋರಣೆ, ಹಾಗೂ ನಮಗೆ ಬೇಕು ಖಾಸಗೀಕರಣ ಎನ್ನುವ ಮಧ್ಯಮ, ಮೇಲ್ವರ್ಗಗಳ, ಖಾಸಗೀ ಉದ್ದಿಮೆದಾರರ ಹಪಾಹಪಿತನ ಎಲ್ಲವೂ ಒಂದಂಕ್ಕೊಂದು ಪೂರಕವಾಗಿ ಸಮಾನರೂಪಿಯಾಗಿ ಹೊಂದಿಕೊಂಡು ಇದು ಕಳೆದ 20 ವರ್ಷಗಳಿಂದ ಈ ದೇಶವನ್ನು ಬೆಳವಣಿಗೆಯ ಹೆಸರಿನಲ್ಲಿ ದುರಂತದ ಅಂಚಿಗೆ ತಂದು ನಿಲ್ಲಿಸಿವೆ. ಖಾಸಗೀಕರಣದ ಇನ್ನೂ ಬೇಕು, ಇನ್ನೂ ಬೇಕೆನ್ನುವ ಅಸಹ್ಯಕರ, ಸ್ವಾರ್ಥ ಸಂಸ್ಕೃತಿ ಇಲ್ಲಿ ಸಂಪೂರ್ಣವಾಗಿ ನೆಲೆಗೊಂಡಿತು. ಇಂದಿಗೂ ಕೂಡ ಇದೇ ಪರಿಸ್ಥಿತಿ. ನಮ್ಮ ಮಾತೃಭಾಷೆಯ ಅಕ್ಷರ ಸಂಸ್ಕೃತಿ ತನ್ನ ಕವಲು ದಾರಿಯಲ್ಲಿ ಎತ್ತಲೂ ಹೊರಳಲು ಸಾಧ್ಯವಾಗದೆ ಕಕ್ಕಾಬಿಕ್ಕಿಯಾಗಿ ನಿಂತಿತ್ತು.

ಈ ಗೊಂದಲಮಯ ಪರಿಸ್ಥಿಯ ಲಾಭ ಪಡೆದುಕೊಂಡ ಮೇಲ್ಜಾತಿ, ಮೇಲ್ವರ್ಗಗಳು ತಮ್ಮ ಜೀವನದ ಅತ್ಯಂತ ಮೇಲ್ಮಟ್ಟವನ್ನು ತಲುಪತೊಡಗಿದ್ದವು. ಸಾವಿರಾರು ವರ್ಷಗಳಂತೆ ಈ ಕಾಲಘಟ್ಟದಲ್ಲೂ ಕೂಡ ತಳ ಸಮುದಾಯಗಳು, ಅಲ್ಪ ಸಂಖ್ಯಾತರು, ಆದಿವಾಸಿಗಳು ಎಲ್ಲಿಯೂ ಸಲ್ಲದೆ ಇದರ ಅಟ್ಟಹಾಸದಲ್ಲಿ ಸಂಪೂರ್ಣವಾಗಿ ದಿಕ್ಕೆಟ್ಟರು. ಅವರು ಅಕ್ಷರಶಹ ತಬ್ಬಲಿಗಳಾಗಿ ಬೀದಿಗೆ ಬಿದ್ದದ್ದು ಇನ್ನೂ ನಮ್ಮ ಕಣ್ಮುಂದೆ ಇದೆ. ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎನ್ನುವ ಸಮತಾವಾದದ ನೀತಿಗಳೇ ಬುಡಮೇಲುಗೊಂಡು ಶೇಕಡ 7 ರಿಂದ 10 ರ ವ್ಯವಸ್ಥೆಯ ಭಾಗದ ಜನಜೀವನದ ಶೈಲಿ ಉತ್ತಮಗೊಳ್ಳುವಿಕೆಯೇ ಈ ದೇಶದ ಭವಿಷ್ಯದ ದಿಕ್ಸೂಚಿ ಎನ್ನುವಂತೆ ಬಿಂಬಿಸಲಾಯಿತು. ಸೆನ್ಸೆಕ್ಸ್ ಗಳಲ್ಲಿ ಮೂಡುವ ಆ ಮಾಯಾವಿ ಅಂಕೆಸಂಖ್ಯೆಗಳೇ  ನಮ್ಮ ದೇಶದ ಅಭಿವ್ರುದ್ದಿಯ ಮಾನದಂಡಗಳು ಎನ್ನುವ ಸರ್ಕಾರ, ಖಾಸಗಿ ಉದ್ದಿಮೆದಾರರು, ಮಧ್ಯಮ ,ಮೇಲ್ವರ್ಗ, ಹಾಗೂ ದೃಶ್ಯ ಮಾಧ್ಯಮ ಗಳು ಇವರೆಲ್ಲರ ಅಜ್ಞಾನದ, ಗೊತ್ತು ಗುರಿಯಿಲ್ಲದ, ಅಮಾನವೀಯ ಭಾಷ್ಯೆಗಳೇ ಕಳೆದ 20 ವರ್ಷಗಳಿಂದ ಚಾಲ್ತಿಯಲ್ಲಿತ್ತು. ಅಲ್ಲದೇ ಇದೇ ಈ ದೇಶವನ್ನು ಪೊರೆದಿತ್ತು. ಇದರ ದುರಂತ ಈಗ ನೋಡುತ್ತಿದ್ದೇವೆ.

ಈ ದೇಶದ ಶೇಕಡ 70 ರಷ್ಟು ಜನಸಂಖ್ಯೆ ಇಂದು ಅತಂತ್ರ ಸ್ಥಿತಿಯಲ್ಲಿ ನರಳುತ್ತಿವೆ. ವರ್ತಮಾನ ಭೀಕರವಾಗಿಯೂ, ಭವಿಷ್ಯವೇ ಇಲ್ಲದ ಅವರ ದಿನದ ಅದಾಯದ ಮೇಲೆ ಅಸಹ್ಯಕರ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನೊಂದು ನೆಲೆಯಲ್ಲಿ ಈ ಜಾಗತೀಕರಣವೆಂಬ ಪೆಡಂಭೂತ ಸಕಲ ಸರ್ಕಾರೀ ಮರ್ಯಾದೆಗಳೊಂದಿಗೆ ತನ್ನ ದಾಪುಗಾಲನ್ನು ಇಡುತ್ತ ಮನೆಯ ಅಂಗಳವನ್ನು ದಾಟಿ, ವರಾಂಡವನ್ನು ದಾಟಿ, ನಡುಮನೆಗೆ ಬಂದು ಕೂತಾಗಿದೆ. ಈ ಕಾಲಘಟ್ಟದುದ್ದಕ್ಕೂ ಈ ಪೆಡಂಭೂತದ ವಿರುದ್ಧ ಹೋರಾಡಲು ಅಪಾರ ತಿಳುವಳಿಕೆ, ಸಿದ್ಧತೆಗಳು, ಪೂರ್ವ ಯೋಜನೆಗಳು, ನಿರಂತರವಾಗಿ ಸಂಘರ್ಷವನ್ನು ನಡೆಸುವ ಮಾನಸಿಕ ಸಿದ್ದತೆಗಳು ಇರಬೇಕಾದ ಜಾಗದಲ್ಲಿ ಪ್ರಗತಿಪರ ಸಂಘಟನೆಗಳು, ಚಿಂತಕರು, ಎಡಪಂಥೀಯ ಶಕ್ತಿಗಳು ಬಳಸಿದ್ದು ಉಳ್ಳಾಗಡ್ಡಿಯನ್ನು ಹೆಚ್ಚಲು ಬಳಸುವ ಮೊಂಡು ಚಾಕುವನ್ನು. ಇದರ ಫಲವಾಗಿ ನಾವೆಲ್ಲ ಅನೇಕ, ಸುದೀರ್ಘ ಪ್ರತಿರೋಧಗಳ ಮಧ್ಯೆಯೂ ಸೋಲೊಪ್ಪಿಕ್ಕೊಳ್ಳಬೇಕಾಯಿತು. ಅಪಹಾಸ್ಯಕ್ಕೀಡಾಗಬೇಕಾಯಿತು.

ಇಲ್ಲಿ ಕುತೂಹಲಕರ ಸಂಗತಿಯೆಂದರೆ ಇದೇ ಕಾಲ ಘಟ್ಟದಲ್ಲಿ ಘಟಿಸಿದ ಸಂಘ ಪರಿವಾರದ ವ್ಯವಸ್ಥಿತ, ಅಪಾರ ಸಿದ್ಧತೆಗಳನ್ನೊಳಗೊಂಡ, ಪೂರ್ವ ನಿಯೋಜಿತ ಕೋಮುವಾದದ ಸರಣಿ ಹತ್ಯೆಗಳ ವಿರುದ್ಧ ತಮ್ಮ ಎಲ್ಲ ಮಿತಿಗಳ ನಡುವೆಯೂ, ಈ  ಪ್ರಗತಿಪರ ಸಂಘಟನೆಗಳು, ಚಿಂತಕರು, ಜಾತ್ಯಾತೀತ ಶಕ್ತಿಗಳು 20 ವರ್ಷಗಳ ಕಾಲ ಬಿಡಿ, ಬಿಡಿಯಾಗಿ, ಸದರಿ ಸಂಘಟಿತ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ನಿರಂತರವಾಗಿ ತಮ್ಮ ಮಿತಿಯಲ್ಲೇ ನಡೆಸಿದ ತಮ್ಮ ಅಸಂಘಟಿತ ಹೋರಾಟದಲ್ಲಿ ತಮ್ಮೆಲ್ಲ ಶಕ್ತಿಯನ್ನು ಪೋಲು ಮಾಡಿಕೊಳ್ಳಬೇಕಾಗಿ ಬಂದಿರುವುದೂ ಕೂಡ ಈ ಜಾಗತೀಕರಣದ ಯಶಸ್ಸಿಗೆ ಒಂದು ಕಾರಣ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಇಂದಿನ  ಅಡ್ಡಾದಿಡ್ಡಿಯಾಗಿಯೇ, ಗೊತ್ತು ಗುರಿಯಿಲ್ಲದೆಯೇ ,ಯೋಜನೆಗಳು, ಮುಖ್ಯವಾಗಿ ಕನಸುಗಳು ಇಲ್ಲದ ಕೇವಲ ಸಿನಿಕತನದ ಮನಸ್ಥಿತಿ  ಕೂಡ ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ.

ಅನಗತ್ಯವಾಗಿ ಇಷ್ಟೆಲ್ಲ ಚರ್ವಿತ ಚರ್ವಣ ಪೀಠಿಕೆ ಯಾತಕ್ಕೆ ಹೇಳಬೇಕಾಯಿತು ಎಂದರೆ ಅಪಾರ ಪ್ರತಿಭೆ, ಪ್ರಾಮಾಣಿಕತೆ, ಮಿ.ಕ್ಲೀನ್ ಇಮೇಜ್, ಸರಳ ವ್ಯಕ್ತಿತ್ವದ ನಮ್ಮ ಪ್ರಧಾನ ಮಂತ್ರಿ ಮನಮೋಹ ಸಿಂಗ್ ರವರಿಗೆ ಇಷ್ಟೆಲ್ಲಾ ಸಂಕೀರ್ಣತೆ, ಗೋಜಲುಗಳು, ಸಾಮಾಜಿಕ ನ್ಯಾಯದ ವಿವಿಧ ಮಜಲುಗಳು 1992 ರಲ್ಲೂ ಅರ್ಥವಾಗಿರಲಿಲ್ಲ, 2001 ರಲ್ಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, 2012ರ ವೇಳೆಗೂ ಏನೂ ತೋಚದೆ ಸಂಪೂರ್ಣ ಕಂಗೆಟ್ಟ ಸ್ಥಿತಿಯಲ್ಲಿ, ಒಬ್ಬಂಟಿತನದ, ಗೊಂದಲದ, ತಬ್ಬಲಿತನದ ಮನಸ್ಥಿಯಿಂದ ಈ ದೇಶವನ್ನು ಒಂದಲ್ಲ ಒಂದು ರೀತಿ ತಳಮಳಗಳ ಗೂಡಾಗಿಸಿರಿದ್ದಾರೆ ಈ ನಮ್ಮೆಲ್ಲರ ಪ್ರೀತಿಯ ಮನಮೋಹನ ಸಿಂಗ್. ಇದಕ್ಕೆ ಮೂಲಭೂತ ಕಾರಣ ಇವರು ರಾಜಕೀಯ ನಾಯಕರಲ್ಲದಿರುವುದು. ಇದಕ್ಕೆ ಮೂಲಭೂತ ಕಾರಣ ಇವರ ನಾಯಕಿ ಸೋನಿಯಾ ಗಾಂಧಿ ರಾಜಕೀಯ ನಾಯಕಿಯಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ ವಿಶ್ವವಲಯದಲ್ಲಿ ಭಾರತದ ಅತ್ಯಂತ ಪ್ರಭಾವಿ ರಾಜಕಾರಣಿಗಳು ಎಂದು ಗುರುತಿಸಿಕೊಳ್ಳುವ ಇವರಿಬ್ಬರೂ ರಾಜಕಾರಣದ ಮೂಲಭೂತ ಕರ್ತವ್ಯಗಳಾದ ನಿರಂತರ ಜನಸಂಪರ್ಕ ಹಾಗೂ ಅವರೊಂದಿಗೆ ನಿರಂತರ ಸಂವಾದದ ನೀತಿಗಳನ್ನು ಕಳೆದ 20 ವರ್ಷಗಳಿಂದ ಮಾಡದೇ ಇರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಇವರಿಬ್ಬರೂ ಸದನದಲ್ಲಿ ಆತ್ಮಸಾಕ್ಷಿಯಿಂದ, ಅಧಿಕೃತ ಅಂಕಿಅಂಶಗಳಿಂದ ಸುಧೀರ್ಘವಾಗಿ ಮಾತನಾಡುವ ಮೂಲಭೂತ ಅಗತ್ಯವನ್ನೇ ಮರೆತಂತಿರುವುದು, ಇದಕ್ಕೆಲ್ಲ ಮೂಲಭೂತ ಕಾರಣ ಈ ದೇಶದ ಸಂಕೀರ್ಣತೆಯನ್ನು, ಅದರ ಗೊಂದಲಗಳು, ಇಲ್ಲಿನ ಪ್ರಛ್ಛನ್ನ ಜಾತೀಯತೆ, ಅಂಕೆಗೆ ಸಿಗದ ಕೋಮುವಾದ,  ಅದರ ಗುಪ್ತ ಕಾರ್ಯಸೂಚಿಗಳು, ಜಾತಿ ಮೀರಿದ ಭ್ರಷ್ಟತೆ. ಇವೆಲ್ಲವನ್ನೂ ಸರಳವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ದೇಶದ ಪ್ರಭಾವಿ ವ್ಯಕ್ತಿಗಳೆನಿಸಿಕೊಂಡ ಇವರಿಬ್ಬರಿಗೂ ಇಲ್ಲದಿರುವುದು. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳು, ಆಂತರಿಕ ಬಿಕ್ಕಟ್ಟು ಇಂದಿಗೂ ನಮ್ಮ ಪ್ರೀತಿಯ ಮನಮೋಹನ ಸಿಂಗ್ ರವರಿಗೆ ಅರ್ಥವಾಗಿಲ್ಲ, ಗೊತ್ತಿಲ್ಲ, ಇನ್ನು ಪಳಗಿಸಿಕೊಳ್ಳುವ ಮಾತಂತೂ ಈ ಶತಮಾನದಲ್ಲಿ ಸಾಧ್ಯವಿಲ್ಲದ್ದು ಬಿಡಿ. ಇದಕ್ಕೆಲ್ಲ ಮೂಲಭೂತ ಕಾರಣ 125 ವರ್ಷಗಳ ಇತಿಹಾಸವಿರುವ ಪಕ್ಷವೆಂದು ಕರೆಸಿಕೊಳ್ಳುವ ಕಾಂಗ್ರೆಸ್ ಹಾಗೂ ಅದರ ಅಂತರಂಗ, ಒಳಗುಟ್ಟುಗಳನ್ನು, ಆಂತರಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವ ದೇಶದ ಅತ್ಯಂತ ಪ್ರಭಾವಿ ನಾಯಕಿ ಸೋನಿಯಾ ಗಾಂಧಿಯವರಿಗೆ ಅದನ್ನು ಪಳಗಿಸುವ ಮಂತ್ರದಂಡ ಕಾಲ ಕಾಲಕ್ಕೆ ಕೈಕೊಡುತ್ತಿರುವುದು. ಅಲ್ಲದೆ ಇದಕ್ಕೆ ಸೂಕ್ತ ರಾಜಕಾರಣಿಗಳನ್ನು ತನ್ನ ಅಪ್ತವಲಯದಲ್ಲಿ ಬಿಟ್ಟುಕೊಳ್ಳದಿರುವುದು,

ಇದೆಲ್ಲದರ ಫಲವೇ ಇಂದಿನ ಗೋಜಲು ಸ್ಥಿತಿ. ಇದೆಲ್ಲದರ ಫಲವೇ ಇಂದು ಇನ್ನೇನು ದಿಲ್ಲಿ ಮಾಯಾವಿಯ ಗದ್ದುಗೆ ತಮ್ಮ ಕೈಯಳತಲ್ಲಿದೆ, ಕೊಂಚ ಶ್ರಮ ಪಟ್ಟರೆ ಸಾಕು ಅದನ್ನು ನಾವು ಹತ್ತಿ ಕೂಡಬಹುದು ಎನ್ನುವ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಅಡ್ವಾನಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ ತರಹದ ಕೋಮುವಾದಿಗಳ ಗುಂಪು. ಇದೇನಾದರು ಸಾಧ್ಯವಾದರೆ ನಮ್ಮೆಲ್ಲರ ಪ್ರೀತಿಯ ಅಪಾರ ಪ್ರತಿಭೆಯ, ಪ್ರಾಮಾಣಿಕತೆಯ, ಸರಳ ವ್ಯಕ್ತಿತ್ವದ ಮನಮೋಹನ ಸಿಂಗ್ ಹಾಗೂ ಪ್ರಭಾವಿ ನಾಯಕಿ ಎನಿಕೊಂಡ ಸೋನಿಯ ಗಾಂಧಿ ಹಾಗೂ ದಿವಾಳಿ ಎದ್ದ ಕಾಂಗ್ರೆಸ್ ಪಕ್ಷ ಈ ದುರಂತದ ಅಪವಾದವನ್ನು ನೇರವಾಗಿ ಹೊರಬೇಕಾಗುತ್ತದೆ. ಜೊತೆಗೆ ಪ್ರಜ್ಞಾವಂತರೆನಿಸಿಕೊಂಡ, ಪ್ರಗತಿಪರರೆನಿಸಿಕೊಂಡವರೆಲ್ಲ ಇದಕ್ಕೆ ಹೊಣೆಗಾರರಾಗಬೇಕಾಗುತ್ತದೆ.

ದೃಶ್ಯ 3 : ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೇ ಕಾಂಗ್ರೆಸ್ ನವರ ಸೋಮಾರಿತನ ,ಜಡತ್ವ, ಕಂಗಾಲುತನ, ದಿಕ್ಕು ತಪ್ಪಿದ ಸ್ಥಿತಿ, ಕುಮಾರಸ್ವಾಮಿಯವರು ತಮ್ಮ ಆತ್ಮಹತ್ಯಾತ್ಮಕ, ಸ್ವಯಂಕೃತ ಅಪರಾಧಗಳನ್ನು ಕಾಲ ಕಾಲಕ್ಕೆ ತಿದ್ದಿಕೊಳ್ಳದೆ ಮತ್ತೆ ಮತ್ತೆ ಅದಕ್ಕೆ ಕೈ ಹಾಕುತ್ತಿರುವ, ನಿಗೂಢ, ಅನೈತಿಕ ನಡೆಗಳು, ಇನ್ನು ಶ್ರೀರಾಮುಲು ತನ್ನ ಅಸಹ್ಯಕರ, ಭ್ರಷ್ಟ ಗೆಲುವನ್ನೇ ಮುಂದಿಟ್ಟುಕೊಂಡು, ಅಮಾಯಕ ಹಿಂದುಳಿದವರನ್ನು ಮುಂದಿಟ್ಟುಕೊಂಡು ಹುಟ್ಟು ಹಾಕಲಿರುವ  ಅನಾಹುತಕಾರಿ, ಪ್ರಜಾಪ್ರ್ಭತ್ವ ವಿರೋಧಿ ನಿರ್ಧಾರಗಳು, ಈ ಕರ್ನಾಟಕ ರಾಜ್ಯವೆನ್ನುವುದು ಆ ದೇವರು ನನಗೆ ಬರೆದುಕೊಟ್ಟ ಜಹಗೀರು, ಇದರ ಒಡೆತನ ನನ್ನ ಆಜನ್ಮಸಿದ್ಧ ಹಕ್ಕು ಎನ್ನುವಂತೆ ಅತ್ಯಂತ ಕುತಂತ್ರ, ಮೂಢಮಯ, ಭ್ರಷ್ಟ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ, ಇವರೆಲ್ಲರ ಈ ಸ್ವಾರ್ಥ ನಡೆಗಳು ಮುಂಬರಲಿರುವ ದಿನಗಳಲ್ಲಿ ನಮ್ಮ ರಾಜ್ಯದ ದಿಕ್ಸೂಚಿಯನ್ನು ಸೂಚಿಸುತ್ತವೆ.

ದೃಶ್ಯ 4 : ಇಷ್ಟೆಲ್ಲ  ಹತಾಶೆಯ, ಆತಂಕದ  ಮಾತುಗಳೇಕೆಂದರೆ, ಜನ ಸಾಮಾನ್ಯನಾದ ನನ್ನಂತವನ ಆತಂಕವೇನೆಂದರೆ ಇಂದಿಗೆ 5 ಅಥವಾ 10 ವರ್ಷಗಳ ನಂತರ ಜನತೆ “ಆ ಯಡಿಯೂರಪ್ಪನವರ ಸರ್ಕಾರವೇ ಪರವಾಗಿಲ್ಲ ಮಾರಾಯ್ರೆ ಕಡೇ ಪಕ್ಷ ಸ್ಕೂಲ್ ಮಕ್ಕಳಿಗೆ ಸೈಕಲ್ ಕೊಡಿಸಿದರು ,ಸಾರಾಯಿ ಬಂದು ಮಾಡಿಸಿದರು,” ಎನ್ನುವ ಸ್ಥಿತಿಗೆ ನಮ್ಮ ರಾಜ್ಯ ಬಂದು ತಲುಪಿದರೆ ನಾವೆಲ್ಲ ಅವಮಾನದಿಂದ, ಈ ಸ್ಥಿತಿಗೆ ಸಾಕ್ಷಿಗಳಾಗಿ, ಅಸಹಾಯಕ ಪ್ರೇಕ್ಷಕರಾಗಿದ್ದ ಅಪವಾದಗಳನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ಎಲ್ಲಿಗೆ ಹೋಗಬೇಕಾಗುತ್ತದೆ ಎನ್ನುವುದು.

ಬಳ್ಳಾರಿ (ಗ್ರಾ) ಉಪ ಚುನಾವಣೆ: ಗಣಿ ಎಂಜಲೆಲೆಯ ಮೇಲೆ ಉರುಳಾಡಿದ ರಾಜಕಾರಣಿಗಳು

-ಪರುಶುರಾಮ ಕಲಾಲ್

ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಕೊಳಕುತನವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆ.

ಗಣಿಯ ಕಪ್ಪ ಪಡೆಯದ ರಾಜಕಾರಣಿ ಯಾರು? ಎನ್ನುವಂತೆ ಎಲ್ಲಾ ಪಕ್ಷಗಳು ಗಣಿಧಣಿಗಳೊಂದಿಗೆ ಗುರುತಿಸಿಕೊಂಡೆ ಉಪ ಚುನಾವಣೆಯನ್ನು ಎದುರಿಸಿದರು. ಹೆಚ್ಚು ಗಣಿ ಹಣ ಖರ್ಚು ಮಾಡಿದ ಬಿ. ಶ್ರೀರಾಮುಲು ಬಿಜೆಪಿಯನ್ನು ಅವರೇ ಸೃಷ್ಠಿಸಿಕೊಂಡ “ಆಪರೇಷನ್ ಕಮಲ”ದ ತಂತ್ರದ ಮೂಲಕವೇ ಆಪರೇಷನ್ ಮಾಡಿ, ಚಿಂದಿ ಮಾಡಿ ಹಾಕಿದರು.

ಬಳ್ಳಾರಿ ಉಪ ಚುನಾವಣೆಯ ಮತದಾರರಿಗೆ ಆಯ್ಕೆಗಳೇ ಇರಲಿಲ್ಲ. ಅವರಾದರೂ ಏನು ಮಾಡಿಯಾರು? ಗಣಿ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡಲೇ ಬೇಕಿತ್ತು. ಅವರಿಗೆ ರಾಮುಲು ಹೆಚ್ಚು ಸಭ್ಯನಾಗಿ ಕಂಡಿರಬೇಕು.

ಈ ಚುನಾವಣೆಯಲ್ಲಿ ಮತದಾರರು ಕುಕ್ಕೆ ಸುಬ್ರಮಣ್ಯಂ ದೇವಾಲಯದ ಮಲೆಕುಡಿಯರಂತೆ ಆಗಿದ್ದರು. ಗಣಿಯ ಎಂಜಲೆಲೆಯ ಮೇಲೆ ಉರುಳಾಡುವ ರಾಜಕಾರಣಿಗಳನ್ನೇ ನೋಡಿದ ಮೇಲೆ ನಾವು ಅದರಲ್ಲಿ ಉರುಳಾಡಿದರೆ ತಪ್ಪೇನೂ ಇಲ್ಲ ಎಂದೇ ಅನ್ನಿಸಿಬಿಟ್ಟಿತು. ಬೇರೆ ಆಯ್ಕೆಯೇ ಇಲ್ಲದಾಗ ಅಸಹಾಯಕ ಸ್ಥಿತಿ ನಿರ್ಮಾಣವಾಗುತ್ತದೆ. ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಇಳಿಯುತ್ತಾರೆ. ಮತದಾರರು ಕೂಡಾ ಇದೇ ಹಾದಿ ತುಳಿದರು. ರಾಮುಲು ಮತ್ತೊಮ್ಮೆ ಗೆದ್ದರು. ಮತದಾರರು ಮಾತ್ರ ಸೋತು ಸುಣ್ಣವಾದರು.

ಬಿ.ಶ್ರೀರಾಮುಲು ಗೆಲುವಿಗೆ ನಾಲ್ಕು ಮುಖ್ಯ ಕಾರಣಗಳು ಇವೆ. ಮೊದಲನೆಯದು ಹಣದ ಬಲ, ತೋಳ್ಬಲ. ಈ ಚುನಾವಣೆಯಲ್ಲಿ ಬರೊಬ್ಬರಿ 120 ಕೋಟಿಯಷ್ಟು ಹಣವನ್ನು ಅವರು ಖರ್ಚು ಮಾಡಿದ್ದಾರೆಂದು ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಳ್ಳಿ ಹಳ್ಳಿಗಳಿಗೆ ತೆರಳಿ ಹಣದ ಬಟವಾಡೆಯನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಎಲ್ಲವೂ ಎಷ್ಟು ವ್ಯವಸ್ಥಿತವಾಗಿ ಮಾಡಲಾಯಿತು ಎಂದರೆ ಮತದಾರರ ಸಹಿ ಮೂಲಕವೇ ಹಣ ವಿತರಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಸಹಿ, ಹೆಬ್ಬಟ್ಟಿನ ಗುರುತು ಅಂದರೆ ಅದಕ್ಕೆ ಬಹಳ ಮಹತ್ವವಿದೆ. ಆಸ್ತಿ ಮಾರಾಟ, ಕೊಟ್ಟ ಮಾತು ಎಲ್ಲವನ್ನೂ ಅದು ಧ್ವನಿಸುತ್ತದೆ. ಸಹಿ ಮಾಡಿದ ಮೇಲೆ ಅದಕ್ಕೆ ಅವರು ಬದ್ಧ ಎನ್ನುವ ಸಂದೇಶವೊಂದನ್ನು ಅದು ರವಾನಿಸುತ್ತದೆ. ಊಳಿಗಮಾನ್ಯ ಸಮಾಜದ ಗುಣಲಕ್ಷಣಗಳನ್ನು ಮೈಗೊಡಿಸಿಕೊಂಡಿರುವ ಈ ಕ್ಷೇತ್ರದ ಮತದಾರರು ರಾಮುಲುಗೆ ಬದ್ಧತೆ ತೋರಿಸಬೇಕಿತ್ತು.

ಎರಡನೆಯ ಕಾರಣವೆಂದರೆ ವಾಲ್ಮೀಕಿ ನಾಯಕ ಸಮಾಜದ ಮತದಾರರು (ಇದು ಪರಿಶಿಷ್ಟ ಪಂಗಡದ ಕ್ಷೇತ್ರವೂ ಹೌದು) ರಾಮುಲು ಅವರನ್ನು ಪಕ್ಷಾತೀತವಾಗಿ ತಮ್ಮ ನಾಯಕನೆಂದು ಒಪ್ಪಿಕೊಂಡರು. ವಾಲ್ಮೀಕಿ ಸಮಾಜದಲ್ಲಿ ರಾಮುಲು ಒಬ್ಬರೇ ನಾಯಕರಿಲ್ಲ. ಆದರೆ ರಾಮುಲು ಗಣಿಧಣಿಗಳ ಜೊತೆ ಗುರುತಿಸಿಕೊಂಡು ತಮ್ಮದೇ ಆದ ಪ್ರಭಾವ ಗಳಿಸಿಕೊಂಡಿದ್ದಾರೆ. ರಾಮುಲು ಪವರ್ ಏನೆಂದು ಇವರಿಗೆ ಗೊತ್ತು. ಹೀಗಾಗಿ ಇತನೇ ನಮ್ಮ ನಾಯಕ ಎಂದು ಮತದಾರರು ಭಾವಿಸಿದರು. ಇವರ ಜೊತೆಗೆ ಭೋವಿ ಸಮಾಜ ಕೈಗೂಡಿಸಿತು.

ಮೂರನೆಯ ಕಾರಣ, ಬಳ್ಳಾರಿಯ ಮುಸ್ಲಿಂ ಮತದಾರರು. ಇವರು ರೆಡ್ಡಿ ಬ್ರದರ್ಸ್‌ರನ್ನು ಮೊದಲಿಂದಲೂ, ಅವರು ಬಿಜೆಪಿಯಲ್ಲಿದ್ದಾಗಲೇ ಬೆಂಬಲಿಸಿದ್ದರು. ಇದಕ್ಕೆ ಸ್ಥಳೀಯ ಕಾರಣಗಳು ಮುಖ್ಯವಾಗಿವೆ. ರೆಡ್ಡಿ ಬ್ರದರ್ಸ್ ಎಷ್ಟೇ ರಾಜಕಾರಣ ಮಾಡಲಿ, ಕೋಮುವಾದ ರಾಜಕಾರಣಕ್ಕೆ ಆಸ್ಪದ ಕೊಟ್ಟಿರಲಿಲ್ಲ. ರೆಡ್ಡಿ ಬ್ರದರ್ಸ್ ಮತ್ತು ರಾಮುಲುರವರಿಗೆ ತಾಯಿ ಸುಷ್ಮಾ ಸ್ವರಾಜ್‌ರನ್ನೇ ದರ್ಗಾಕ್ಕೆ ಕರೆದುಕೊಂಡು ಹೋಗಿ ನಮಸ್ಕಾರ ಮಾಡಿಸಿ, ತಲೆಯ ಮೇಲೆ ಹಸಿರು ಟವೆಲ್ ಹಾಕಿಸಿದ ಕೀರ್ತಿಯೂ ಸೇರುತ್ತದೆ. ರಾಮುಲು ಬಿಜೆಪಿಯಿಂದ ಹೊರ ಬಂದಿದ್ದು ಅವರಿಗೆ ಇನ್ನೂ ಹೆಚ್ಚು ಖುಷಿ ಕೊಟ್ಟ ವಿಷಯವಾಗಿತ್ತು. ಮರು ಆಲೋಚನೆ ಮಾಡದೇ ರಾಮುಲು ಅವರನ್ನು ಮತ್ತೊಮ್ಮೆ ಅಪ್ಪಿಕೊಂಡರು.

ನಾಲ್ಕನೆಯದು, ಜೆಡಿಎಸ್.

ಜೆಡಿಎಸ್ ಜಾತ್ಯಾತೀತತೆ:
ಜೆಡಿಎಸ್ ಬಿಜೆಪಿ ಮಧುಚಂದ್ರದ ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹೊಸಪೇಟೆಯಲ್ಲಿ ಬೃಹತ್ ನಾಯಕ ಸಮಾಜದ ರಾಜ್ಯಮಟ್ಟದ ಸಮಾವೇಶ ನಡೆಸಿದರು. ನಾಯಕ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದಾಗ ಪ್ರಯತ್ನ ನಡೆಸಿದ್ದರು. ರಾಜ್ಯದ ರಾಜಕಾರಣದಲ್ಲಿ ಕುರುಬ ಸಮುದಾಯ ತಮ್ಮ ನಾಯಕನೆಂದೇ ಭಾವಿಸಿರುವ ಸಿದ್ಧರಾಮಯ್ಯ ಅವರನ್ನು ಹಿಂದಕ್ಕೆ ಸರಿಸಲು ಇದು ಅವರಿಗೆ ಅತ್ಯಗತ್ಯವಾಗಿತ್ತು.  “ಅಹಿಂದ”ವನ್ನು ಒಡೆಯಲು ಸಹ ಇದು ಅಗತ್ಯವಾಗಿತ್ತು. ನಾಯಕ ಸಮುದಾಯ ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾದ ಕೀರ್ತಿಯನ್ನು ಈ ಹಿನ್ನೆಲೆಯಲ್ಲಿ ಪಡೆಯಲು ಕುಮಾರಸ್ವಾಮಿ ಪ್ರಯತ್ನ ನಡೆಸಿದರು. ಈ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಒಂದು ನೆಲೆ ಕಂಡುಕೊಳ್ಳುವುದೇ ಆಗಿತ್ತು. ಆದರೆ ನಂತರ ನಡೆದ ರಾಜಕೀಯ ಬದಲಾವಣೆಗಳು ಈ ಪ್ರಯೋಗಕ್ಕೆ ಆಸ್ಪದ ಕೊಡಲಿಲ್ಲ. ಪರಿಶಿಷ್ಟ ಪಂಗಡದ ಶಾಸಕರು ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ನಾಯಕ, ಲಂಬಾಣಿ, ಭೋವಿ ಸಮಾಜಗಳು ಬಿಜೆಪಿಯಲ್ಲಿ ಗುರುತಿಸಿಕೊಂಡವು. ಈ ಹಿಂದೆ ಕಾಂಗ್ರೆಸ್ ಮತಬ್ಯಾಂಕ್ ಆಗಿದ್ದ ಈ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಜೆಡಿಎಸ್ ಪ್ರಯತ್ನ ವಿಫಲವಾಗಿತ್ತು

ಈ ಉಪ ಚುನಾವಣೆಯಲ್ಲಿ ರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಂತೆ ಜೆಡಿಎಸ್ ತನ್ನ ಹಳೆಯ ಪ್ರಯೋಗವನ್ನು ಇಲ್ಲಿ ಪ್ರಯೋಗಿಸಲು ರಾಮುಲುವನ್ನೇ ಅಸ್ತ್ರ ಮಾಡಿಕೊಂಡರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ರಾಮುಲು ಹೊಸ ಪಕ್ಷ ಸ್ಥಾಪಿಸಲು ಇವರೇ ನೀರು ಎರೆಯುತ್ತಿದ್ದಾರೆ. ಜೆಡಿಎಸ್ ಪಕ್ಷ ಸೇರ್ಪಡೆಗಿಂತ ಹೊಸ ಪಕ್ಷವೇ ಅವರಿಗೆ ಖುಷಿ ಕೊಡುವ ಸಂಗತಿಯಾಗಿದೆ. ಹೊಂದಾಣಿಕೆ ಮಾಡಿಕೊಂಡು ರಾಜ್ಯದ ರಾಜಕಾರಣವನ್ನು ನಿರ್ವಹಿಸಲು ಯೋಜಿಸಿದ್ದಾರೆ. ಬಿಜೆಪಿ ಮತ ಬ್ಯಾಂಕ್ ಛಿದ್ರಗೊಳಿಸುವ ಯಾವುದೇ ಶಕ್ತಿ ಇರಲಿ. ಅದು ಜೆಡಿಎಸ್ ಮಿತ್ರ ಪಕ್ಷ.

ಜೆಡಿಎಸ್ ಜಾತ್ಯಾತೀತತೆ ಅಂದರೆ ಜಾತಿ ಲೆಕ್ಕಚಾರವೇ ಆಗಿದೆ.

ಇನ್ನು, ಪಾಪ ಕಾಂಗ್ರೆಸ್ ಪಕ್ಷ ಮಾತ್ರ ಒಂದು ಶತಮಾನದಷ್ಟು ಹಿಂದಿನ ಗತ ವೈಭವದಲ್ಲಿಯೇ ಇನ್ನೂ ಲೆಕ್ಕಚಾರ ಹಾಕುತ್ತಾ ಕುಳಿತುಕೊಂಡಿದೆ.