Tag Archives: ಸಂಸತ್ತು

Anna_Hazare

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಈಗಿನ ಭ್ರಷ್ಛಾಚಾರ ವಿರೋಧಿ ಆಂದೋಳನ ನಮ್ಮ ಸಮಾಜದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಸರ್ಕಾರ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರದ ಬಗ್ಗೆಯೇ ಹೆಚ್ಚು ಮಾತನಾಡುತ್ತಿರುವುದು. ಮತ್ತು ಈ ಮೂಲಕ ಈ ಆಂದೋಳನ ಕೇಳಿದ್ದು ಒಂದು ಮಸೂದೆಯನ್ನು. ಆದರೆ ಈ ಪರಿಸ್ಥಿತಿಯ ಮತ್ತು ಸಮಸ್ಯೆಯ ಮೂಲ ಇರುವುದು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಮತ್ತು ನಾವು ಆರಿಸಿಕೊಳ್ಳುತ್ತಿರುವ ಜನರ ಅರ್ಹತೆಯಲ್ಲಿ. ಹಾಗಾಗಿ ಇದು ಕೊನೆಗೂ ಮುಟ್ಟುವುದು ಆ ಬೇರಿಗೇ. ಅದನ್ನೇ ಅಣ್ಣಾ ಹಜಾರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತ ಚುನಾವಣಾ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಈ ಕೆಳಗಿನ ಲೇಖನವನ್ನು ನಾನು ಬರೆದಿದ್ದು ಕಳೆದ ಜೂನ್ 15, 2011ರ ಸಮಯದಲ್ಲಿ. ಬಹುಶಃ ಅದೇ ವಾರದ ಒಂದು ದಿನ ಅದು “ವಿಜಯ ಕರ್ನಾಟಕ”ದಲ್ಲಿ ಪ್ರಕಟವಾಗಿತ್ತು. ಅಲ್ಲಿ ನಾನು ಅಂತಿಮವಾಗಿ ಹೇಳಬಯಸಿದ್ದು, ‘ನಮ್ಮ ರಾಜಕೀಯ ನಾಯಕರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.’ ಅದು ಬಹುಶಃ ಒಂದಷ್ಟು ಮಟ್ಟಿಗೆ ನಿಜವಾಗುವ ಸಾಧ್ಯತೆಗಳು ಈಗಾಗಲೆ ಕಾಣಿಸುತ್ತಿವೆ. ಆ ಲೇಖನದ ಪೂರ್ಣಭಾಗ ಇದು:

ಭ್ರಷ್ಟಾಚಾರ ವಿರೋಧಿ ಆಂದೋಳನ : ಹೊರಗಿನವರ ಹಸ್ತಕ್ಷೇಪ ಎಂಬ ಅಸಾಂದರ್ಭಿಕ ಭಯ

ಇವತ್ತು ಭ್ರಷ್ಟಾಚಾರದ ಸುತ್ತ ಚಳವಳಿ ಮಟ್ಟದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಇದಕ್ಕೆ ಇತ್ತೀಚಿನ ದಿನಗಳ ಮುಖ್ಯ ಪ್ರೇರಣೆ ಎಂದರೆ ನಮ್ಮ ಜನಪ್ರತಿನಿಧಿಗಳು ಅನೈತಿಕ ಕಾರ್ಯಗಳಿಂದ ಭ್ರಷ್ಟಾಚಾರದ ಹಗರಣಗಳಲ್ಲಿ ತೊಡಗಿರುವುದು ಜನಕ್ಕೆ ಮಾಧ್ಯಮಗಳ ಮೂಲಕ ನೇರಾನೇರವಾಗಿ ಗೊತ್ತಾಗುತ್ತಿರುವುದು. ದೇಶದ ಜನಕ್ಕೆ ತಾವು ತಮ್ಮ ದೈನಂದಿನ ಕೆಲಸದಲ್ಲಿ ನಿತ್ಯ ಕಾಣುವ ಮತ್ತು ಅನುಭವಿಸುವ ಭ್ರಷ್ಟಾಚಾರಕ್ಕಿಂತ ಹೆಚ್ಚಾಗಿ ರಾಜಕಾರಣಿಗಳ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಜೀವನದಲ್ಲಿನ ಅಧ:ಪತನ ಬಾಧಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದಿನ ಚಳವಳಿ ಒಂದು ಮಟ್ಟದ ಅಧಿಕೃತತೆ ಪಡೆದುಕೊಂಡಿರುವುದು ಸುಳ್ಳಲ್ಲ. ಹೀಗಾಗಿ ಶಾಸಕರು-ಸಂಸದರು ರಚಿಸಬೇಕಾದ, ಮಂಡಿಸಬೇಕಾದ ಕಾನೂನು-ಮಸೂದೆಗಳನ್ನು ಅವರಿಗಾಗಿ ಕಾಯದೆ ಈ ರಾಜಕೀಯೇತರ ಸಾಮಾಜಿಕ ನಾಯಕರೆ ರಚಿಸಲು ಮುಂದಾಗುತ್ತಿದ್ದಾರೆ. ಅವುಗಳ ಮಂಡನೆ ಮತ್ತು ಅಂಗೀಕಾರಕ್ಕೆ ಎಲ್ಲಾ ರೀತಿಯ ಒತ್ತಡಗಳನ್ನು ಹಾಕುತ್ತಿದ್ದಾರೆ. ಈ ಪರಿಸ್ಥಿತಿಗೆ ಭ್ರಷ್ಟಾಚಾರದಲ್ಲಿ ನಿರತರಾದ ಶಾಸಕರು, ಸಂಸದರು, ಅಧಿಕಾರರೂಢರಷ್ಟೇ ಕಾರಣರಾಗಿದ್ದರೆ ಮತ್ತು ಅವರ ಪ್ರಮಾಣ ಅಲ್ಪಪ್ರಮಾಣದಲ್ಲಿ ಇದ್ದಿದ್ದರೆ ಈ ಶಾಸನಸಭೆಯ ಹೊರಗಿನವರ ಮಧ್ಯಪ್ರವೇಶ ಪ್ರಜಾಪ್ರಭುತ್ವದಲ್ಲಿ ಗಂಭೀರ ವಿಷಯವೆ ಆಗಿರುತ್ತಿತ್ತು. ಆದರೆ ನಮ್ಮ ಇಂದಿನ ಬಹುಪಾಲು ಜನಪ್ರತಿನಿಧಿಗಳು ತಮ್ಮ ಮೂಲಭೂತ ಕರ್ತವ್ಯಗಳಾದ ಕಾನೂನು ರಚನೆ ಮತ್ತು ತಿದ್ದುಪಡಿ, ಮತ್ತು ಕಾನೂನಿನ ಅನುಷ್ಠಾನದ ಉಸ್ತುವಾರಿಯಲ್ಲಿ ಇಂದು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಇದಕ್ಕೆ ನಿದರ್ಶನವಾಗಿ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ತೀರಾ ಇತ್ತೀಚಿನ ವಿಧಾನಮಂಡಲ ಅಧಿವೇಶನ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲೇ ಜರುಗಿತು. ಇದರಿಂದಾಗಿ ವಿಧಾನಸಭಾ ಕಲಾಪವನ್ನು ಬಹಳ ದಿನ ನಡೆಸಲಾಗದೆ ತರಾತುರಿಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಿ ಮುಂದೂಡಲಾಯಿತು. ಆದರೆ ಮುಂದೂಡುವುದಕ್ಕೆ ಕೆಲವು ಗಂಟೆಗಳ ಮೊದಲು ಐದು ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆಯೇ ಅಂಗೀಕರಿಸಲಾಯಿತು. ಶಾಸನಸಭೆಯಲ್ಲಿ ಮಂಡಿಸುವ ಮಸೂದೆಗಳ ಕುರಿತು ಶಾಸಕರಿರಲಿ, ತಮ್ಮ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸಿದ ಮಸೂದೆಗಳನ್ನು ಮಂಡಿಸುವ ಸಚಿವ ಮಹಾಶಯರಿಗೂ ಅವುಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇರುವುದು ಸಂಶಯಾಸ್ಪದ. ಇನ್ನು ಆ ಕಾನೂನುಗಳು ಯಾವ ರೀತಿ ಜನಪರವಾಗಿರಬಲ್ಲವು? ಅವುಗಳಲ್ಲಿ ಯಾರ ಹಿತಾಸಕ್ತಿಗಳು ಮೇಲುಗೈ ಸಾಧಿಸಿರಬಹುದು? ಇನ್ನು ಮೇಲುನೋಟಕ್ಕಾದರೂ ತಮ್ಮ ಭ್ರಷ್ಟ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಕಾನೂನುಗಳ ಅನುಷ್ಠಾನದ ವಿಚಾರದಲ್ಲಿ ಯಾವ ಸ್ವಾರ್ಥಿಗಳು ತಾನೆ ಆಸಕ್ತಿ ತಾಳುತ್ತಾರೆ? ಇದು ಕೇವಲ ಕರ್ನಾಟಕದ್ದಷ್ಟೇ ಕತೆಯಲ್ಲ. ಭಾರತದ ಬಹುಪಾಲು ವಿಧಾನಸಭೆಗಳು ಮತ್ತು ಸಂಸತ್ತಿನಲ್ಲೂ ಇಂತಹುದೇ ಪರಿಸ್ಥಿತಿ ಇದೆ.

ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವುದು ಪ್ರಬುದ್ಧವಾದ, ಪ್ರಬಲವಾದ ಕಾನೂನುಗಳಿಂದ ಮತ್ತು ಅವುಗಳ ಅನುಷ್ಠಾನದಿಂದ. ಹೊಸ ಕಾನೂನುಗಳ ರಚನೆ ಮಾಡುವುದು ಮತ್ತು ಈಗಾಗಲೇ ಇದ್ದಿರುವ ಕಾನೂನುಗಳಲ್ಲಿ ಇದ್ದಿರಬಹುದಾದ ಲೋಪದೋಷಗಳಿಗೆ ಸೂಕ್ತ ತಿದ್ದುಪಡಿ ಮಾಡುವುದು ಶಾಸಕರ-ಸಂಸದರ ಕರ್ತವ್ಯ. ಇಂದಿನ ಬಹುತೇಕ ಜನಪ್ರತಿನಿಧಿಗಳಿಗೆ ಈ ಕರ್ತವ್ಯದ ಅರಿವೇ ಇಲ್ಲ. ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆಯೂ ಅವರಿಗಿಲ್ಲ. ವಿದ್ಯಾರ್ಹತೆಯ ಮಾತು ಒಂದೆಡೆ ಇರಲಿ; ನ್ಯಾಯಪರವಾಗಿರಬೇಕು, ನೀತಿಪರವಾಗಿರಬೇಕು ಎಂಬ ಮೂಲ ನೈತಿಕ ಪಾಠವೂ ಇಂದಿನ ಜನಪ್ರತಿನಿಧಿಗಳಿಗೆ ಇಲ್ಲ. ಅನೈತಿಕ ಮತ್ತು ಅಕ್ರಮ ಮಾರ್ಗಗಳಿಂದ ಹಣ ಮಾಡಿರುವವರೆ ಇಂದು ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಬಹುಸಂಖ್ಯೆಯಲ್ಲಿ ಗೆದ್ದುಬರುತ್ತಿದ್ದಾರೆ. ಹೀಗಿರುವಾಗ ಇವರಿಂದ ಕಾಲಕಾಲಕ್ಕೆ ವ್ಯವಸ್ಥೆಯಲ್ಲಿನ ಭ್ರಷ್ಟತೆಯನ್ನು ತಡೆಗಟ್ಟುವಂತಹ ಕಾನೂನುಗಳನ್ನು ಅಪೇಕ್ಷಿಸುವುದು ಕಡುಮೂರ್ಖತನ. ಇವರು ಭ್ರಷ್ಟತೆಯಲ್ಲಿ ಪಾಲುದಾರರಷ್ಟೇ ಅಲ್ಲ, ಅದರ ಪೋಷಕರೂ ಕೂಡಾ ಹೌದು.

ಆದರೆ ಈ ನಾಡನ್ನು ಪ್ರೀತಿಸುವ, ಭಾರತದ ಜನಸಮುದಾಯ ನೈತಿಕತೆಯ ತಳಹದಿಯ ಮೇಲೆ ವಿಕಾಸಗೊಳ್ಳಬೇಕು ಮತ್ತು ಅದು ವಿಶ್ವದ ಸ್ವಾತಂತ್ರ್ಯಪ್ರೇಮಿಗಳಿಗೆ ಮತ್ತು ಪ್ರಜಾಪ್ರಭುತ್ವವಾದಿಗಳಿಗೆ ಆಶಾಕಿರಣವಾಗಿ ಆಸರೆಯಾಗಿ ಇರಬೇಕು ಎಂದು ಬಯಸುವ ಜನರೂ ಈ ದೇಶದಲ್ಲಿದ್ದಾರೆ. ನಮ್ಮ ಸಮಾಜ ತನ್ನ ಮೌಲ್ಯಗಳನ್ನು ಕಳೆದುಕೊಂಡು ಅಧ:ಪತನದತ್ತ ನಡೆಯುವಾಗಲೆಲ್ಲ ಇಂತಹವರು ಧ್ವನಿ ಎತ್ತುತ್ತಾರೆ. ಈಗ ಆಗುತ್ತಿರುವುದೂ ಅದೇ. ಇದರಲ್ಲಿ ಚಿತ್ತಶುದ್ಧಿಯಿಲ್ಲದ ಮತ್ತು ಈ ಚಳವಳಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಆಸೆಯುಳ್ಳ ಸ್ವಾರ್ಥಿಗಳೂ ಹಲವರಿರಬಹುದು. ಆದರೆ ಈಗಿನ ಎಲ್ಲ ವಿರೋಧಕ್ಕೂ ಮತ್ತು ಚಳವಳಿಯ ಆರಂಭಕ್ಕೆ ಪ್ರೇರಕರಾದವರು ಮಾತ್ರ ಇಂದಿನ ಅಧ:ಪತನವನ್ನು ಕಾಣಬಲ್ಲವರು ಮತ್ತು ಅದರ ಸುತ್ತ ಜನಾಭಿಪ್ರಾಯವನ್ನು ರೂಪಿಸುವ ಇಚ್ಚೆಯುಳ್ಳವರು. ಈ ಹಿನ್ನೆಲೆಯಲ್ಲಿ ನಾಡಿನ ಜನತೆ ಇಂದಿನ ಭಷ್ಟಾಚಾರ ವಿರೋಧಿ ಆಂದೋಲನವನ್ನು ಅದರ ಸದುದ್ದೇಶಗಳಿಗಾದರೂ ಬೆಂಬಲಿಸಬೇಕಿದೆ.

ನಮ್ಮ ಈಗಿನ ಗಣರಾಜ್ಯ ವ್ಯವಸ್ಥೆಯನ್ನು ಹತ್ತಿರದಿಂದ ಮತ್ತು ಕಾಳಜಿಯಿಂದ ನೋಡಬಲ್ಲಂತಹ ಕೆಲವರು, ಈ ಚಳವಳಿ ನಮ್ಮ ಜನಪ್ರತಿನಿಧಿಗಳನ್ನು ಮತ್ತು ಪಾರ್ಲಿಮೆಂಟನ್ನು ನಿಷ್ಪ್ರಯೋಜಕಗೊಳಿಸಿ ಪ್ರಜಾಪ್ರಭುತ್ವಕ್ಕೆ ಕೇಡು ಮಾಡುತ್ತದೆ, ಎನ್ನುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿಲ್ಲದ ಸಾಮಾಜಿಕ ನಾಯಕರು ಸಂವಿಧಾನೇತರ ಶಕ್ತಿಗಳಾಗಿ ಹೊಮ್ಮುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರ ಈ ಮಾತಲ್ಲಿ ಸತ್ಯಾಂಶವಿದೆ. ಆದರೆ ಇವತ್ತಿನ ವಾಸ್ತವ ಏನೆಂದರೆ, ಜನಪ್ರತಿನಿಧಿಗಳು ನಿಭಾಯಿಸಬೇಕಾದ ಜವಾಬ್ದಾರಿಗಳು ಈಗಾಗಲೇ ಸಂಪೂರ್ಣವಾಗಿ ಕುಸಿದುಹೋಗಿವೆ. ರಸ್ತೆಗಳಲ್ಲಿ ರಕ್ತ ಹರಿಯುತ್ತಿಲ್ಲ ಎನ್ನುವುದನ್ನು ಬಿಟ್ಟರೆ, ನಮ್ಮದು ಇಂದು ಮೌಲ್ಯಗಳಿಲ್ಲದ, ಕಾನೂನುಗಳಿಲ್ಲದ, ವ್ಯವಸ್ಥೆಯನ್ನು ಕೊಂಡುಕೊಳ್ಳಬಲ್ಲ ತಾಕತ್ತಿನವರ ಅವ್ಯವಸ್ಥಿತ ರಾಜಕೀಯ ಪರಿಸ್ಥಿತಿ. ಒಂದು ಕೋನದಿಂದ ಈ ಅವ್ಯವಸ್ಥಿತ ಅರಾಜಕ ಅಸ್ಥಿರತೆಯೂ ಒಂದು ರೀತಿಯ ಸ್ಥಿರ ವ್ಯವಸ್ಥೆಯಾಗಿ ಕಾಣಿಸುತ್ತದೆ ಅಷ್ಟೇ. ಅದು ಮರಳುಗಾಡಿನ ಮರೀಚಿಕೆ. ಹಾಗಾಗಿಯೇ ಈಗಿನ ಚಳವಳಿ, ಈಗ ಆಗಿರುವ ಪ್ರಜಾಪ್ರಭುತ್ವದ ಅವಹೇಳನ ಮತ್ತು ನಿರ್ವಿಯತೆಗಿಂತ ಇನ್ನೂ ಹೆಚ್ಚಿನ ನಿರ್ವಿಯತೆಯನ್ನೇನೂ ಉಂಟು ಮಾಡುವುದಿಲ್ಲ. ಮಾಡುವುದಿದ್ದರೆ ಅದು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪ್ರಜಾಪ್ರಭುತ್ವದ ಬೇರುಮಟ್ಟದ ಪಸರಿಸುವಿಕೆಗೆ ಸಹಾಯ ಮಾಡೀತೆ ಹೊರತು ಅದರ ದಮನಕ್ಕಲ್ಲ. ಈ ಬಗ್ಗೆ ಭಯ ಪಡುವುದಕ್ಕಿಂತ ನಮ್ಮ ರಾಜಕೀಯ ನಾಯಕರ ಕುತಂತ್ರ ಮತ್ತು ಅಯೋಗ್ಯತೆಯತ್ತ ನಮ್ಮ ಗಮನ ಇರಬೇಕು. ಅವರನ್ನು ಯೋಗ್ಯರಾಗುವ ಮತ್ತು ಪ್ರಾಮಾಣಿಕರಾಗುವ ರೀತಿಯಲ್ಲಿ ರೂಪಿಸುವುದೆ ಈ ಚಳವಳಿಯ ಪರೋಕ್ಷವಾದ ಆದರೆ ಬಹುಮುಖ್ಯವಾದ ಸಾಧನೆಯಾಗುತ್ತದೆ.

ಚಿತ್ರಕೃಪೆ: ವಿಕಿಪೀಡಿಯ

ರವಿ ಕೃಷ್ಣಾ ರೆಡ್ಡಿ

Anna_Hazare

ಅಣ್ಣಾ ಹಜಾರೆ ಹೋರಾಟವನ್ನು ಗ್ರಹಿಸಬೇಕಾದ ರೀತಿ…

ಅಣ್ಣಾ ಹಜಾರೆಯವರ ಹೋರಾಟ ಈಗ ನಿರ್ಣಾಯಕ ಹಂತ ತಲುಪಿದೆ. ಯಾವುದೋ ಒಂದು ಲೊಕಪಾಲ್ ಮಸೂದೆ ಮುಂದಿನ ಒಂದೆರಡು ತಿಂಗಳಿನಲ್ಲಿ ಅಂಗೀಕಾರವಾಗುವುದು ಈಗ ನಂಬಬಹುದಾದ ವಿಚಾರ. ಇಂದಲ್ಲ ನಾಳೆ ಯಾವುದೋ ಒಂದು ಲೋಕ್‌ಪಾಲ್ ಬರುತ್ತಿತ್ತು. ಆದರೆ, ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹ ಇಲ್ಲದೇ ಹೋಗಿದ್ದರೆ ಅದು ಇಷ್ಟು ಬೇಗ ಆಗುತ್ತಿರಲಿಲ್ಲ. ಮತ್ತು ಇಷ್ಟು ಪರಿಣಾಮಕಾರಿಯಾಗಿಯೂ ಇರುತ್ತಿರಲಿಲ್ಲ.

Anna_Hazare

Anna_Hazare

ನಮ್ಮ ದೇಶದಲ್ಲಿ ಭ್ರಷ್ಟಾಚಾರದ ಮೂಲ ಬೇರು ಇರುವುದು ನಮ್ಮ ಸಮಾಜದಲ್ಲಿ ಸಾರ್ವತ್ರಿಕವಾಗಿಲ್ಲದ ಮೌಲ್ಯಗಳಿಂದ ಮತ್ತು ಪ್ರಜಾಪ್ರಭುತ್ವದ ಆಳವಾದ ಕಲ್ಪನೆ ನಮ್ಮ ಬಹುತೇಕ ದೇಶವಾಸಿಗಳಿಗೆ ಇಲ್ಲದಿರುವುದರಿಂದ. ಮೂರ್ನಾಲ್ಕು ದಶಕಗಳ ಹಿಂದೆ ಕಳ್ಳತನ-ಕೊಲೆ-ಸುಲಿಗೆಯಲ್ಲಿ ತೊಡಗಿದ ಜನರನ್ನು, ಲಂಚ ತೆಗೆದುಕೊಂಡು ಸಿಕ್ಕಿಬೀಳುತ್ತಿದ್ದವರನ್ನು ಸಮಾಜ ಒಂದು ರೀತಿ ನೋಡುತ್ತಿತ್ತು. ಅಘೋಷಿತ ಬಹಿಷ್ಕಾರ ಹಾಕುತ್ತಿತ್ತು. ಆದರೆ ಯಾವಾಗ ದುಡ್ಡು ಮತ್ತು ನಮ್ಮ ಈಗಿನ ಬುದ್ಧಿಗೇಡಿ ಭ್ರಷ್ಟ ರಾಜಕಾರಣಿಗಳ ಅಭಿವೃದ್ಧಿಯ ಕಲ್ಪನೆ ಸಮಾಜದಲ್ಲಿ ಸ್ಥಾನ ಪಡೆದುಕೊಂಡಿತೊ, ಆಗ ನಮ್ಮ ಸಮಾಜದಲ್ಲಿದ್ದ ಅಷ್ಟಿಷ್ಟು ನೀತಿ-ನಿಜಾಯಿತಿಗಳೆಲ್ಲ ಮೂಲೆಗುಂಪಾದವು. ನ್ಯಾಯವಾಗಿರುವುದು, ಸರಳ-ಆದರ್ಶ ಜೀವನ ನಡೆಸುವುದು ಸಮಾಜದ ಪ್ರಕಾರ ಕೇವಲ ಸೋತವರ ಮೌಲ್ಯಗಳಾದವೇ ಹೊರತು ಸಮಾಜದ ಮೌಲ್ಯಗಳಾಗಲಿಲ್ಲ. ನಮ್ಮದೇ ದೇಶದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಕಾನೂನಿನ ಪ್ರಕಾರ ನಡೆದುಕೊಳ್ಳುವುದಕ್ಕೆ, ಕಾನೂನು ಪಾಲಿಸುವುದಕ್ಕೆ ನಾವು ಯಾಕಾಗಿ ಲಂಚ ನೀಡಬೇಕು ಎಂದು ಜನ ನಿಂತು ಯೋಚಿಸಲಿಲ್ಲ. ಕೊಡದಿದ್ದರೆ ಕೆಲಸ ಆಗುವುದಿಲ್ಲ; ಎಲ್ಲರೂ ಕೊಡುತ್ತಾರೆ, ನಾವೂ ಕೊಡುವುದರಲ್ಲೇನು ತಪ್ಪು; ಇದು ಲೋಕಸಮ್ಮತ ಎನ್ನುವ ತೀರ್ಮಾನಕ್ಕೆ ಬಹುತೇಕ ಜನ ಬಂದ ಸಂದರ್ಭ ಇದು.

ಇದೇ ಸಮಯದಲ್ಲಿ ನಮ್ಮ ಜನರಿಗೆ ರಾಜಕೀಯ ಪಕ್ಷಗಳಲ್ಲಿ ಆಯ್ಕೆಗಳೂ ಇರಲಿಲ್ಲ. ನಾನು ಇತ್ತೀಚೆಗೆ ಎಲ್ಲರಿಗೂ ಹೇಳುವ ವಿಷಯ ಏನೆಂದರೆ, ’ಯಾವುದಾದರೂ ಒಂದು ಒಳ್ಳೆಯ ನಾಯಕನ ಅಥವ ಪಕ್ಷದ ಆಯ್ಕೆ ಕರ್ನಾಟಕದ ಜನಕ್ಕೆ ಇದ್ದಿದ್ದರೆ ಇಲ್ಲಿ ವರ್ಷದ ಹಿಂದೆಯೇ ಕ್ರಾಂತಿಯಾಗಿಬಿಡುತ್ತಿತ್ತು,’ ಎಂದು. ನಿಸ್ಸಂಶಯವಾಗಿ ಯಡ್ಡಯೂರಪ್ಪ ಮತ್ತವರ ಪಕ್ಷದ ಆಡಳಿತ ಹಗಲುದರೋಡೆಕೋರರದ್ದು. ಆ ಹಗಲುದರೋಡೆಯಿಂದಲೇ ಇಷ್ಟರಲ್ಲಿಯೇ ಮತ್ತೊಂದಷ್ಟು ಕರ್ನಾಟಕದ ರಾಜಕಾರಣಿಗಳು ಜೈಲು ಸೇರಬೇಕಾಗಿ ಬರಬಹುದು. ಆದರೆ ಮಿಕ್ಕ ಪಕ್ಷಗಳ ಕತೆ ಏನು? ಬಿಜೆಪಿಯದು ಹಗಲುದರೋಡೆಯಾದರೆ ಇತರರದು ಒಂದು ರೀತಿಯಲ್ಲಿ ರಾತ್ರಿದರೋಡೆ. ಕರ್ನಾಟಕದ ಕಾಂಗ್ರೆಸ್‌ನಲ್ಲಾಗಲಿ, ಜೆಡಿಎಸ್‌ನಲ್ಲಾಗಲಿ ಆದರ್ಶ ಮತ್ತು ಪ್ರಾಮಾಣಿಕತೆಯನ್ನು ಜನರಲ್ಲಿ ಉತ್ತೇಜಿಸುವ, ತಮ್ಮ ಮಾತುಗಳಲ್ಲಿ ಜನರಿಗೆ ನಂಬಿಕೆ ಉಂಟುಮಾಡುವಂತಹ ಒಬ್ಬನೇ ಒಬ್ಬ ಸಮೂಹನಾಯಕನಿಲ್ಲ. ’ಬಿಜೆಪಿಯವರಿಗೆ ಮಾತ್ರ ಆಡಳಿತ ನಡೆಸುವುದಕ್ಕೆ ಮತ್ತು ಅಕ್ರಮ ರೀತಿಯಲ್ಲಿ ಹಣ ಮಾಡುವುದಕ್ಕೆ ಅವಕಾಶ ಇದೆ, ನಮಗಿಲ್ಲ, ದಯವಿಟ್ಟು ನಮಗೂ ಆ ಅವಕಾಶ ಮಾಡಿಕೊಡಿ,’ ಎನ್ನುವಂತಹ ಮಾತುಗಳು ಇವರಿಂದ ಬರುತ್ತಿತ್ತೇ ಹೊರತು, ’ನಾವು ಅಕ್ರಮ-ಭ್ರಷ್ಟಾಚಾರಗಳಿಲ್ಲದ ರಾಜಕಾರಣ ಮತ್ತು ಆಡಳಿತ ನಡೆಸುತ್ತೇವೆ,’ ಎಂದು ಅವರು ಹೇಳಲು ಆಗಲೇ ಇಲ್ಲ. ಈಗಲೂ ಹೇಳುತ್ತಿಲ್ಲ. ಅವರು ಈ ಸಂದರ್ಭದಲ್ಲಿ ಬಿಜೆಪಿಗಿಂತ ಭಿನ್ನವಾದ ಆಡಳಿತ ಕೊಡಬಲ್ಲರು ಎನ್ನುವಂತಹ ನಂಬಿಕೆ ಕರ್ನಾಟಕದ ಜನಕ್ಕೆ ಬರದೇ ಇದ್ದುದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸ್ವಯಂ‍ಕೃತಾಪರಾಧಗಳು ಕಾರಣವೇ ವಿನಃ ಅನ್ಯವಲ್ಲ.

Sansad_Bhavan

Sansad_Bhavan

ಬಹುಶಃ ಇಂತಹ ಕಾರಣಗಳಿಂದಲೇ ಕರ್ನಾಟಕದ ಜನ ಕಳೆದ ಎರಡು ಮೂರು ವರ್ಷಗಳ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಾಕಷ್ಟು ಬೆಂಬಲ ಕೊಡದೇ ಇದ್ದದ್ದು. ಅದರ ಜೊತೆಗೆ ಜನರ ವೈಯಕ್ತಿಕ ಜಾತಿ ಮೂಲದ ಭ್ರಷ್ಟತೆಯೂ ಸೇರಿತ್ತು. ನಮ್ಮ ಜಾತಿಯವನು ಮಾಡಿದರೆ ಮಾತ್ರ ತಪ್ಪಾ ಎನ್ನುವಂತಹ ಸಮರ್ಥನೆ ನೀಚತನದ್ದು, ಅದನ್ನು ಆಡಲು ಸಂಕೋಚಪಟ್ಟುಕೊಳ್ಳಬೇಕು ಎಂದು ಜಾತಿವಾದಿಗಳು ಅಂದುಕೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿಯೇ ನಾವು ಇಂದಿನ ಅಣ್ಣಾ ಹಜಾರೆ ಹೋರಾಟಕ್ಕೆ ಕರ್ನಾಟಕದಲ್ಲಿ ದೊರೆಯುತ್ತಿರುವ ಜನಬೆಂಬಲವನ್ನು ಗ್ರಹಿಸಲು ಯತ್ನಿಸಬೇಕು. ಇಷ್ಟೂ ದಿನ ಭ್ರಷ್ಟಾಚಾರದ ವಿರುದ್ಧ ಹೋರಾಡಿಕೊಂಡು ಬಂದ ಕರ್ನಾಟಕದ ಹಲವು ಆಕ್ಟಿವಿಸ್ಟ್‌ಗಳಿಗೆ ಹಜಾರೆ ಹೋರಾಟಕ್ಕೆ ದೊರೆಯುತ್ತಿರುವ ಬೆಂಬಲ ಕಸಿವಿಸಿ ಉಂಟುಮಾಡಿರುವುದು ಸಹಜ. ಆದರೆ ಈ ಹೋರಾಟಗಾರರು ಮುಟ್ಟಲು ಸಾಧ್ಯವಾಗದಿದ್ದ ಜನವರ್ಗವನ್ನು ಈ ಅಣ್ಣಾ ಹಜಾರೆ ತಂಡ ಮುಟ್ಟಿದೆ ಎಂದು ಅವರು ತಿಳಿದುಕೊಂಡರೆ ಅವರ ಕಸಿವಿಸಿ ಮತ್ತು ಕೋಪ ಸ್ವಲ್ಪ ಮಟ್ಟಿಗೆ ತಣ್ಣಗಾಗಬಹುದು. ಈ ಹೋರಾಟಕ್ಕೆ ಅಜ್ಜ-ಗಾಂಧೀವಾದಿ-ಅಹಿಂಸೆ-ಉಪವಾಸ ಎಂಬಂತಹ ಸಾಂಸ್ಕೃತಿಕ-ಸಾಮಾಜಿಕ ರೂಪ ಇದೆ ಮತ್ತು ಅದಕ್ಕೆ ಟಿವಿ-ಪತ್ರಿಕಾ ಮಾಧ್ಯಮಗಳ ಅತಿಯಾದ ಉತ್ತೇಜನ ಮತ್ತು ಪ್ರಚಾರವೂ ದೊರಕಿದೆ. ಇದೊಂದು ರೀತಿಯಲ್ಲಿ ಈ ಸಂದರ್ಭದಲ್ಲಿ ಮಾತ್ರವೇ ಸಾಧ್ಯವಾಗಬಹುದಾದ ಘಟನೆಯೇ ಹೊರತು ಎರಡು-ಮೂರು ವರ್ಷಗಳ ಮೊದಲು ಘಟಿಸಲು ಸಾಧ್ಯವೇ ಇರಲಿಲ್ಲ. ಇದು 2G-CWG-ಗಣಿ ಮುಂತಾದ ಬಯಲಿಗೆ ಬಂದಂತಹ ಹಗರಣಗಳ ತದನಂತರದ ಕಾಲಘಟ್ಟದಲ್ಲಿ ಘಟಿಸಿದ ಕ್ರಿಯೆಯೇ ಹೊರತು, ಅವು ಈ ಮಟ್ಟದಲ್ಲಿ ಬಯಲಿಗೆ ಬರದೇ ಹೋಗಿದ್ದಲ್ಲಿ ಇದೇ ಅಣ್ಣಾ ಹಜಾರೆ ಎಷ್ಟೇ ಉಪವಾಸ ಕೂತಿದ್ದರೂ ಜನರಾಗಲಿ ಅಥವ ಮಾಧ್ಯಮಗಳಾಗಲಿ ಈ ಪರಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಅಣ್ಣಾ ಹಜಾರೆ ಮತ್ತವರ ತಂಡದ ಬಗ್ಗೆ ಚಿಂತಕರ ಒಂದು ಗುಂಪಿನ ತಕರಾರು ಏನೇ ಇರಲಿ, ಅದು ಜನಸಾಮಾನ್ಯರಿಗೆ ಅಷ್ಟೇನೂ ಮುಖ್ಯವಾದದ್ದಲ್ಲ. ಸೈದ್ಧಾಂತಿಕ ಹಿನ್ನೆಲೆ ಮತ್ತು ಅದಕ್ಕೆ ಬೇಕಾದ ಓದು ಇಲ್ಲದ ಜನತೆ ಯಾವುದೇ ಸಂದರ್ಭದಲ್ಲಾಗಲಿ ಕೆಟ್ಟತನದ ವಿರುದ್ಧ ಮಾತನಾಡುತ್ತಿರುವವನ ಪರ ನಿಲ್ಲುವುದು ನಿಜಕ್ಕೂ ಉತ್ತಮ ಬೆಳವಣಿಗೆಯೇ. ಈ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ದೊರಕುತ್ತಿರುವ ಜನಬೆಂಬಲ ನಿಜಕ್ಕೂ ಪ್ರಶಂಸನಾರ್ಹ. ಜನರಿಗೆ ಒಂದಲ್ಲ ಒಂದು ಸಮಯದಲ್ಲಿ ಆದರ್ಶಗಳು ಬೇಕು. ನ್ಯಾಯ-ನೀತಿಗಳು ಬೇಕು. ಅದರ ಪರ ನಿಲ್ಲಬೇಕು. ಅದನ್ನೇ ಈಗ ಬಹುತೇಕರು ಮಾಡುತ್ತಿರುವುದು.

ಹಾಗೆಂದ ಮಾತ್ರಕ್ಕೆ ಹಜಾರೆ ತಂಡದ ಕಾರ್ಯವೈಖರಿ ಮತ್ತು ಅವರು ಮುಂದೊಡ್ಡೂತ್ತಿರುವ ಮಸೂದೆಯಲ್ಲಿನ ಲೋಪದೋಷಗಳನ್ನು ವಿಮರ್ಶಿಸುತ್ತಿರುವವರನ್ನು ವಿಮರ್ಶಿಸುವುದಾಗಲಿ, ಅವರನ್ನು ಕೀಳುಮಾಡುವುದಾಗಲ್ಲಿ ಸರಿಯಲ್ಲ. ಇದು ಒಂದು ರೀತಿಯಲ್ಲಿ ಜನಪ್ರೀಯತೆ ಕಳೆದುಕೊಳ್ಳುವ ಕೆಲಸವಾದರೂ ಆಗಲೇಬೇಕಾದ ಕೆಲಸ. ಈ ನಿಟ್ಟಿನಲ್ಲಿ ನಾವು ಅರುಣಾ ರಾಯ್ ಮತ್ತವರ ಸಹಚರರನ್ನು ಮತ್ತು ಆರುಂಧತಿ ರಾಯ್‌ರಂತಹವರನ್ನು ಅಭಿನಂದಿಸಲೇಬೇಕು. ಈ ಸಂದರ್ಭದಲ್ಲಿ ನಾವು ಗಮನವಿಟ್ಟು ಅವಲೋಕಿಸಿದಾಗ, ಅಣ್ಣಾ ಹಜಾರೆ ತಂದದವರ್‍ಯಾರೂ ಅರುಣಾ ರಾಯ್ ಮತ್ತವರ ತಂಡದವರ ವಿರುದ್ಧ ವೈಯಕ್ತಿಕ ದಾಳಿ ಮಾಡುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಜನ್‌ಲೋಕ್‍ಪಾಲ್ ನೈಜ ರೀತಿಯಲ್ಲಿ ಜನರ ಕಾನೂನಾಗುವುದಕ್ಕೆ ಈ ರೀತಿಯ ವಿಮರ್ಶೆ ಅಗತ್ಯ ಎನ್ನುವ ಅರಿವು ಮತ್ತು ತಮ್ಮ ನಿಲುವಿನಲ್ಲಿಯೂ ಕೆಲವೊಂದು ತಪ್ಪುಗಳಿರಬಹುದು ಎನ್ನುವಂತಹ ವಿನಯ ಹಜಾರೆ ತಂಡದಲ್ಲಿರುವುವರಲ್ಲಿ ಇರುವ ಲಕ್ಷಣಗಳಿವೆ. ಅರುಣಾ ರಾಯ್ ಮತ್ತು ಅಣ್ಣಾ ಹಜಾರೆ ತಂಡದವರ ಸೌಜನ್ಯಯುತವಾದ ಭಿನ್ನಾಭಿಪ್ರಾಯ ಮಾದರಿಯಾದಂತಹುದು.

ಇದೇ ಸಂದರ್ಭದಲ್ಲಿ ದೇಶದ ಕೆಲವು ದಲಿತ ವರ್ಗದ ಹಿನ್ನೆಲೆಯ ಚಿಂತಕರು ಈ ಚಳವಳಿ ಮೇಲ್ಜಾತಿಯ-ಮೇಲ್ವರ್ಗಗಳ ಪಿತೂರಿ ಎನ್ನುವಂತೆ ಅಭಿಪ್ರಾಯ ಪಡುತ್ತಿದ್ದಾರೆ. ಅವರು ಹಾಗೆ ಹೇಳಲು ಸಾಕಷ್ಟು ಸಾಕ್ಷ್ಯಗಳು ಮೇಲ್ನೋಟಕ್ಕೇ ಕಾಣಿಸುತ್ತವೆ. ಆಧ್ಯಾತ್ಮ ಎಂಬ ಢೋಂಗಿಯ ಪುಂಗಿಯನ್ನು ಊದುವವರೂ ಈ ಚಳವಳಿಯ ಮುಖ್ಯಪಾತ್ರಧಾರಿಗಳಾಗಿರುವುದು ಈ ಚಳವಳಿಯ ಮಿತಿಗಳಲ್ಲಿ ಒಂದು. ಪ್ರಗತಿಪರ ಚಿಂತನೆ ಮತ್ತು ಸಮಾನತಾವಾದದ ವಿರೋಧಿಗಳು ಈ ಚಳವಳಿಯ ಮೂಲಕ ಜನಮಾನಸದಲ್ಲಿ ಚಲಾವಣೆಯಾಗಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಆದರೆ ಮೇಧಾ ಪಾಟ್ಕರ್‌ರಂತಹವರು, ಹಿಂದೂ ಸಮಾಜದ ಕೆಟ್ಟ ಆಚರಣೆಗಳ ವಿರುದ್ಧ ಧ್ವನಿಯೆತ್ತುತ್ತಲೆ ಬಂದಿರುವ, ಕೋಮುವಾದವನ್ನು ವಿರೋಧಿಸುವ ಅಗ್ನಿವೇಶ್‌ರಂತಹವರೂ ಈ ಚಳವಳಿಯ ಮುಂಚೂಣಿಯಲ್ಲಿರುವುದರಿಂದ ನಮ್ಮ ವಿಮರ್ಶೆ ಸಂಯಮದಿಂದ ಕೂಡಿರಬೇಕಾದ ಮತ್ತು ಕೆಲವು ವ್ಯಕ್ತಿ-ಗುಂಪುಗಳಿಗೆ ಸೀಮಿತಗೊಳಿಸಬೇಕಾದ ಅವಶ್ಯಕತೆ ಇದೆ. ಆಡಳಿತದಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿ, ಭ್ರಷ್ಟರಿಗೆ ಶಿಕ್ಷೆಯಾದರೆ, ಅದರ ಒಳಿತು ಸಮಾಜದ ಎಲ್ಲಾ ವರ್ಗಗಳಿಗೂ ಇರುತ್ತದೆಯೇ ಹೊರತು ಕೇವಲ ಕೆಲವೇ ಜನವರ್ಗಗಳಿಗೆ ಅಲ್ಲ. ಮಿಕ್ಕ ವಿಷಯಗಳನ್ನು ಪ್ರಸ್ತಾಪಿಸಲು, ಹೋರಾಡಲು, ಮತ್ತೊಂದು ಸಮಯ-ಸಂದರ್ಭ ಇದ್ದೇ ಇರುತ್ತದೆ. ಆ ವಿಷಯಗಳನ್ನು ಪ್ರಾಮಾಣಿಕವಾಗಿ ಎತ್ತಬಲ್ಲ ಜನರೂ ಇರುತ್ತಾರೆ. ಅಣ್ಣಾ ಹಜಾರೆ ಸಮಾಜದ ಎಲ್ಲಾ ವಿಚಾರಗಳನ್ನು ಯೋಚಿಸಬಲ್ಲಂತಹ ಚಿಂತಕರಾಗಲಿ, ಸಮಾಜ ಸುಧಾರಕರಾಗಲಿ ಅಲ್ಲ. ನಮ್ಮ ಎಲ್ಲಾ ವಿಚಾರಗಳಿಗೆ, ಸಮಸ್ಯೆಗಳಿಗೆ ಅವರೇ ನಾಯಕರಾಗಲಿ, ಆದರ್ಶವಾಗಲಿ, ಪರಿಹಾರವಾಗಲಿ, ಅಲ್ಲ. ಆದರೆ, ಈ ಸಂದರ್ಭದಲ್ಲಿ, ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ಅವರನ್ನು ನಾಯಕರನ್ನಾಗಿ, ಆದರ್ಶವನ್ನಾಗಿ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಇಲ್ಲಿಯವರೆಗಿನ ಜೀವನದಲ್ಲಿ ಅವರು ಇಂತಹ ಹೋರಾಟವನ್ನು ಮಾಡಿಕೊಂಡೂ ಬಂದಿದ್ದಾರೆ. ಹಾಗಾಗಿ ಅವರು ಯೋಗ್ಯರೂ ಹೌದು, ಸಮರ್ಥರೂ ಹೌದು.

ಮತ್ತು, ಅಣ್ಣಾ ಹಜಾರೆ ನಮ್ಮ ಈಗಿನ ವಿಸ್ಮೃತಿಯಲ್ಲಿದ್ದ ಸಮಾಜವನ್ನು ಗಾಂಧಿಗೆ, ಅವರ ವಿಚಾರಕ್ಕೆ, ಆಚಾರಕ್ಕೆ ಎದುರು ತಂದು ನಿಲ್ಲಿಸಿದ್ದಾರೆ. ಗಾಂಧಿಯವರ ಅವಹೇಳನೆ ಮಾಡುವುದನ್ನೇ ಒಂದು ಮೌಲ್ಯ ಎಂದುಕೊಂಡ ಗುಂಪನ್ನೂ ಅವರು ತಮ್ಮ ಹಿಂದೆ ಬರುವಂತೆ ಮಾಡಿದ್ದಾರೆ. ದೇಶ ಈ ಮೂಲಕವಾದರೂ ಗಾಂಧಿಯನ್ನು ಮತ್ತೊಮ್ಮೆ ಪರಿಚಯಿಸಿಕೊಂಡರೆ ಅದು ಈ ಚಳವಳಿಯ ಸಾರ್ಥಕ್ಯದಲ್ಲೊಂದೆಂದು ನಾವು ಭಾವಿಸಬೇಕು. ದೇಶದ ಅನೇಕ ಕಡೆ ಅಕ್ಷರಶಃ ಲಕ್ಷಾಂತರ ಜನರು ಬೀದಿಗಿಳಿದಿದ್ದರೂ ಈ ಚಳವಳಿ ಅಹಿಂಸೆ ಮತ್ತು ಸೌಜನ್ಯತೆಯನ್ನು ಕಾಪಾಡಿಕೊಂಡಿದೆ ಎಂದರೆ ಅದು ಕೋಮು ಉನ್ಮಾದದಲ್ಲಿ ಆಗಾಗ ಜ್ವಲಿಸುವ ದೇಶದಲ್ಲಿ ಗಾಂಧಿಮಾರ್ಗದ ಜಯವಾಗಿಯೇ ಕಾಣಿಸುತ್ತಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನೋಡಿದರೆ, ಇಲ್ಲಿ ಅನೇಕ ಜನ ಅನೇಕ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇವರು ಕೇವಲ ಒಂದು ಪಕ್ಷದ ಭ್ರಷ್ಟಾಚಾರವನ್ನು ಮಾತ್ರ ಟೀಕಿಸುತ್ತಿಲ್ಲ. ಎಲ್ಲರ ಭ್ರಷ್ಟಾಚಾರವನ್ನೂ ಟೀಕಿಸುತ್ತಿದ್ದಾರೆ, ಕೇವಲ ಅದಷ್ಟನ್ನೇ ಅಲ್ಲ, ಅವರು ಮಠಗಳ ಭ್ರಷ್ಟಾಚಾರವನ್ನೂ ಎತ್ತುತ್ತಿದ್ದಾರೆ. ಸಮಾಜದ ಅನೇಕ ಲೋಪದೋಷಗಳನ್ನೂ ಎತ್ತುತ್ತಿದ್ದಾರೆ, ಹಾಗೆಯೇ ಪ್ರಜಾಪ್ರಭುತ್ವದ ಪಾಠವನ್ನೂ ಮಾಡುತ್ತಿದ್ದಾರೆ. ಅತಿರೇಕಗಳೂ ಇರುತ್ತವೆ, ನಿಜ. ಆದರೆ, ಅವೆಲ್ಲವುಗಳ ಮಧ್ಯೆ ಮುಕ್ತವಾದ ವಾತಾವರಣದಲ್ಲಿ ಜನರನ್ನು ಮುಕ್ತವಾಗಿ ಮಾತನಾಡಲು ಬಿಟ್ಟಿರುವುದು ಗಮನಿಸಬೇಕಾದ ಅಂಶ. ಕನ್ನಡದ ಚಿಂತಕ ವರ್ಗ ಮತ್ತು ಕ್ರಾಂತಿಗೀತೆಗಳನ್ನು ಹಾಡಿಕೊಂಡೇ ಒಂದೆರಡು ತಲೆಮಾರುಗಳನ್ನು ಪ್ರಭಾವಿಸುತ್ತ ಬಂದಂತಹ ಗಾಯಕರು ಇಲ್ಲಿ ಮಾಯವಾಗಿರುವುದು ವಿಪರ್ಯಾಸ. ಇದು ಆಯೋಜಕರ ಆಲೋಚನೆಯ ಮಿತಿಯೂ ಹೌದು, ಮತ್ತು ಈ ಚಿಂತಕ-ಗಾಯಕರ ಬದ್ಧತೆಯ ಪ್ರಶ್ನೆಯೂ ಹೌದು. ಇಲ್ಲಿ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಿಂತ ವೈಯಕ್ತಿಕ ದೌರ್ಬಲ್ಯಗಳೇ ಕಾರಣವಾಗಿ ಕಾಣಿಸುತ್ತವೆ.

ದುಡ್ಡು ಕೊಟ್ಟು ಜನರನ್ನು ಸೇರಿಸಿ ರ್‍ಯಾಲಿ ಸಂಘಟಿಸುವುದನ್ನು ಕಂಡೂಕಂಡು ನಮ್ಮ ಪ್ರಜಾಪ್ರಭುತ್ವದ ಅಧೋಗತಿಯ ಬಗ್ಗೆ ಚಿಂತಿತರಾಗಿದ್ದವರಿಗೆ ಇಲ್ಲೊಂದು ಉದಾಹರಣೆ ಇದೆ. ಈ ಚಳವಳಿಗೆ ಮಧ್ಯವಯಸ್ಕರು, ಉದ್ಯೋಗದಲ್ಲಿರುವವರು, ಜನಸಾಮಾನ್ಯರು, ಸ್ವಯಂಪ್ರೇರಿತರಾಗಿ ಬರುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ನಮ್ಮ ಮುಂದಿನ ಚಳವಳಿಗಳು ಮತ್ತು ರಾಜಕಾರಣ ನಡೆಯಬೇಕಿರುವುದೇ ಈ ರೀತಿಯಲ್ಲಿ. ಆದರೆ, ಈಗ ಯಾವುದೋ ಹುಮ್ಮಸ್ಸಿನಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ಜನತೆ ಮತ್ತೆ ಚುನಾವಣಾ ಸಮಯದಲ್ಲಿ ತಮ್ಮ ಬೇಜವಾಬ್ದಾರಿ ತೋರಿಸಿದರೆ ಆಗ ಈ ಚಳವಳಿಯ ಮಿತಿ ಗೊತ್ತಾಗುತ್ತದೆ. ಕಳೆದ ಒಂದೆರಡು ಚುನಾವಣೆಗಳಲ್ಲಿ ಇದೇ ಜನ ಯೋಗ್ಯರಾದವರನ್ನು ಆರಿಸಿಕೊಂಡಿದ್ದರೆ ಈ ಚಳವಳಿಯ ಜರೂರತ್ತೇ ಇರುತ್ತಿರಲಿಲ್ಲ. ದೇಶಕ್ಕೆ ಅಗತ್ಯವಾದ ಕಾನೂನುಗಳನ್ನು ಸಂಸದರು ಮತ್ತು ಶಾಸಕರೇ ಬರೆಯುತ್ತಿದ್ದರು. ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇಂತಹುದೊಂದು ಚಳವಳಿಯಲ್ಲಿ ಮಾತ್ರ ಪಾಲ್ಗೊಳ್ಳಲು ಬರುತ್ತಿರುವವರೇ ಇಲ್ಲಿ ದೋಷಿಗಳು. ಭ್ರಷ್ಟಾಚಾರದ ವಿರುದ್ಧ ಕೂಗುವ ಧಿಕ್ಕಾರ ಇವರ ಭ್ರಷ್ಟಾಚಾರಕ್ಕೂ ಮತ್ತು ಬೇಜವಾಬ್ದಾರಿತನಕ್ಕೂ ಕೂಗುವ ಧಿಕ್ಕಾರವೂ ಹೌದು. ಪಕ್ಷಾತೀತವಾದ ಈ ಹೋರಾಟದ ನಂತರ ಜನ ಮತ್ತೆ ತಮಗಿಷ್ಟವಾದ ಪಕ್ಷವನ್ನು ವಿಮರ್ಶೆಗೊಳಪಡಿಸದೇ ಬೆಂಬಲಿಸಿದರೆ ಅದು ಅವರು ಈ ಚಳವಳಿಯಿಂದ ಏನನ್ನೂ ಕಲಿಯಲಿಲ್ಲ ಎಂದಾಗುತ್ತದೆ. ಜಾತಿವಾದಕ್ಕೆ, ಕೋಮುವಾದಕ್ಕೆ, ಹಣಕ್ಕೆ, ಬಲಕ್ಕೆ, ವಿವಿಧ ಲಾಲಸೆಗಳಿಗೆ ಬಲಿಯಾಗದೆ ಬಹುಸಂಖ್ಯಾತ ಜನ ಪ್ರಾಮಾಣಿಕವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡಾಗಲಷ್ಟೇ ನಮ್ಮ ಬಹುತೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ. ಅದು ನಿಜವಾದ ಬದ್ಧತೆ.

(ಚಿತ್ರಕೃಪೆ: ವಿಕಿಪೀಡಿಯ)

ರವಿ ಕೃಷ್ಣಾ ರೆಡ್ಡಿ

Sansad_Bhavan

ಸಂಸತ್ತಿನ ಪರಮಾಧಿಕಾರ ಎಂದರೆ ಏನು?

ಅರವಿಂದ ಚೊಕ್ಕಾಡಿ

ಅಣ್ಣಾ ಹಜಾರೆ ಉಪವಾಸ ಮಾಡುವುದು, ಚಿದಂಬರಂ, ಕಪಿಲ್ ಸಿಬಲ್, ಮನಮೋಹನ್ ಸಿಂಗ್ ಎಲ್ಲ ಸೇರಿಕೊಂಡು ಸಂಸತ್ತಿನ ಪರಮಾಧಿಕಾರ ಎನ್ನುವುದು ; ಇದೆಲ್ಲ ಒಟ್ಟಾಗಿ ಒಂದು ದಾರಿ ತಪ್ಪಿಸುವ ವ್ಯವಸ್ಥೆ ನಿರ್ಮಾಣ ಆಗಿದೆ.

Sansad_Bhavan

Sansad_Bhavan

ಅಣ್ಣಾ ಹಜಾರೆ ಅವರ ಕಡೆಯಲ್ಲಿ ಒಂದು ಸಮಸ್ಯೆ ಇದೆ. ಇವತ್ತು ಅಣ್ಣಾ ಹಜಾರೆ ಅವರ ಹಿಂದೆ ಇರುವುದು ಭ್ರಷ್ಟಾಚಾರದ ಬಗ್ಗೆ ರೋಸಿ ಹೋಗಿರುವ ಜನರ ಆಕ್ರೋಶದ-ಆವೇಶದ ಬೆಂಬಲ ಹೊರತು ಪ್ರಜ್ಞಾವಂತವಾದ ಭ್ರಷ್ಟಾಚಾರದ ವಿರುದ್ಧದ ಅರಿವಲ್ಲ. ಅಂತಹ ಅರಿವನ್ನು ರಾಷ್ಟ್ರವ್ಯಾಪಿಯಾಗಿ ಉಂಟು ಮಾಡುವ ಪ್ರಯತ್ನವನ್ನು ಅಣ್ಣಾ ಹಜಾರೆಯವರ ತಂಡ ಮಾಡಿಲ್ಲ. ಒಂದು ರೀತಿ ಪೂರ್ವ ಸಿದ್ಧತೆ ಸಾಕಷ್ಟಿಲ್ಲದ ಹೋರಾಟ. ಇದರಿಂದಾಗಿ ಏನಾಗಿದೆಯೆಂದರೆ ಏನು ನಡೆಯುತ್ತಿದೆ, ತಾವು ಪ್ರಜ್ಞಾಪೂರ್ವಕವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಯೋಚನೆ ಮಾಡುವುದಕ್ಕೂ ಜನರಿಗೆ ಪುರುಸೊತ್ತಿಲ್ಲ. ಯೋಚನೆ ಮಾಡುವುದಕ್ಕೆ ಜನರಿಗೆ ಪುರುಸೊತ್ತು ಕೊಡದೆ ಅಣ್ಣಾ ಅವರ ತಂಡ ತಾನು ಮಾಡುತ್ತಿರುವುದು ಎಲ್ಲವೂ ಸರಿಯಾಗಿಯೇ ಇದೆ; ಜನರು ತಮ್ಮ ನಿಲುವನ್ನು ವಿಮರ್ಶಿಸಬೇಕಾದ ಅಗತ್ಯವೇ ಇಲ್ಲ ಎನ್ನುವ ಧೋರಣೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಹೋಗುತ್ತಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಹೋರಾಟಗಾರ ತನ್ನ ನಿಲುವಿನ ಬಗ್ಗೆ ಯೋಚನೆ ಮಾಡಲೂ ಜನರಿಗೆ ಪುರುಸೊತ್ತು ಕೊಡದೆ ಜನರ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇನೆಂದು ಹೇಳುವುದು ಸರಿಯಲ್ಲ. ನಿಜವಾಗಿ ಅಣ್ಣಾ ಭ್ರಷ್ಟಾಚಾರದ ವಿರುದ್ಧ ವಿದ್ದಾರೆ ಎಂಬುದನ್ನು ಬಿಟ್ಟರೆ ಅವರ ಖಚಿತವಾದ ಬೇಡಿಕೆ ಏನು, ಅವರ ಯಾವ ಬೇಡಿಕೆಯನ್ನು ಸರಕಾರ ಒಪ್ಪುತ್ತಿಲ್ಲ, ಯಾಕೆ ಒಪ್ಪುತ್ತಿಲ್ಲ, ಸರಕಾರ ಜಾರಿಗೊಳಿಸಲು ಹೊರಟಿರುವ ಲೋಕಪಾಲ ಮಸೂದೆಯು ಹೇಗಿದೆ ಎನ್ನುವ ಬಗ್ಗೆಯೆಲ್ಲ ಬಹಳ ಮಂದಿಗೆ ಗೊತ್ತಿಲ್ಲ. ಭ್ರಷ್ಟಾಚಾರ ವಿರುದ್ಧ ವಿದ್ದಾರೆ ಎಂಬ ಕಾರಣಕ್ಕಾಗಿ ಅಣ್ಣಾ ಅವರನ್ನು ಕಣ್ಣು ಮುಚ್ಚಿ ಬೆಂಬಲಿಸುತ್ತಿದ್ದಾರೆ. ಭ್ರಷ್ಟಾಚಾರದ ವ್ಯಾಪ್ತಿ ಎಷ್ಟೇ ಎಷ್ಟೇ ಬಲಿಷ್ಠವಿದ್ದರೂ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಅಧಿಕಾರದಲ್ಲಿರುವಾಗ ಲೋಕಪಾಲರಿಂದ ಅವರನ್ನು ಹೊರಗಿಡಬೇಕು. ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಅಗತ್ಯವಾಗಿದೆ. ಪ್ರಧಾನಮಂತ್ರಿಗಿಂತ ಲೋಕಪಾಲರ ಮೇಲೆ ನಮಗೆ ಜಾಸ್ತಿ ವಿಶ್ವಾಸ ಎಂದಾದರೆ ಅಂತಹ ಲೋಕಪಾಲರನ್ನು ನೇಮಿಸಲು ಸರಕಾರಕ್ಕಾಗಲಿ, ಸಂಸತ್ತಿಗಾಗಲಿ ಅಧಿಕಾರವೂ ಇರಬಾರದಲ್ಲವೆ? ಪ್ರಧಾನಿಯ ಮೇಲೆಯೇ ಕನಿಷ್ಠ ಮಟ್ಟದ ವಿಶ್ವಾಸವೂ ಇಲ್ಲದ ರಾಷ್ಟ್ರವು ಸಂಸದೀಯ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಲಾರದು. ಇದನ್ನು ಅಣ್ಣಾ ಅವರು ಅರ್ಥಮಾಡಿಕೊಳ್ಳುತ್ತಿಲ್ಲ. ಮೇಲಾಗಿ ಸರಕಾರ ಈಗಾಗಲೇ ಒಂದು ಲೋಕಪಾಲ ಮಸೂದೆಯನ್ನು ತರಲು ಹೊರಟಿರುವಾಗ ಮೊದಲು ಅದನ್ನು ಜಾರಿಗೆ ಬರಲು ಅವಕಾಶವನ್ನು ಕೊಟ್ಟು ನಂತರ ಅಗತ್ಯವಿರುವ ತಿದ್ದುಪಡಿಗಳಿಗಾಗಿ ಒತ್ತಡವನ್ನು ತರಬಹುದಾಗಿತ್ತು. ಆದರೆ ಅಣ್ಣಾ ಅವರ ತಂಡ ಒತ್ತಡಕ್ಕಿಂತ ಹೆಚ್ಚಾಗಿ ಪ್ರತಿಸರ್ಕಾರದ ಸ್ಟೈಲ್‌ನಲ್ಲಿ ವರ್ತಿಸುತ್ತಿರುವುದು ಸರಿಯಾಗಿಲ್ಲ.

Anna_Hazare

Anna_Hazare

ಇಷ್ಟೆಲ್ಲ ಆದರೂ ಅಣ್ಣಾ ಅವರ ತಂಡಕ್ಕೆ ಇರಬೇಕಾದ ಜವಾಬ್ದಾರಿಗಿಂತ ಹೆಚ್ಚಿನ ಜವಾಬ್ದಾರಿ ಭಾರತ ಸರಕಾರಕ್ಕೆ ಇರುತ್ತದೆ. ಜಾಣತಂತ್ರವನ್ನು ಬಳಸಬಹುದು ಎನ್ನುವುದಾದರೆ ಸರಕಾರವು ಅಣ್ಣಾ ಅವರು ಹೇಳಿದ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಹುದಾಗಿತ್ತು. ಆ ಮಸೂದೆ ಲೋಕಸಭೆಯಲ್ಲಾಗಲಿ, ರಾಜ್ಯ ಸಭೆಯಲ್ಲಾಗಲಿ ಸ್ವೀಕೃತವಾಗುತ್ತಲೇ ಇಲ್ಲ. ಆಗ ಕೇಂದ್ರ ಸರಕಾರವು ಸುಲಭವಾಗಿ ತಾನು ಮಾಡುವ ಅಪರಾಧಕ್ಕೆ ಬಿಜೆಪಿಯನ್ನೂ ಎಳೆದುಕೊಂಡೇ ಹೊಂಡಕ್ಕೆ ಬೀಳಬಹುದಾಗಿತ್ತು! ಮಸೂದೆಯನ್ನು ಅನುಮೋದಿಸದಿರುವ ಜವಾಬ್ದಾರಿ ಸಂಸತ್ತಿಗೆ ಬರುತ್ತಿತ್ತು. ಸರಕಾರ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅಥವಾ ಅಣ್ಣಾ ಅವರನ್ನು ಅವರ ಪಾಡಿಗೆ ಸತ್ಯಾಗ್ರಹ ಮಾಡಲು ಬಿಟ್ಟು ತಾನು ತನ್ನ ಪಾಡಿಗೆ ಮಸೂದೆಯನ್ನು ಮಂಡಿಸಿ ತಾನು ಎಷ್ಟನ್ನು ಮಾಡಲು ಸಾಧ್ಯವಾಗುತ್ತಿದೆ ಎನ್ನುವುದನ್ನು ರಾಷ್ಟ್ರಕ್ಕೆ ವಿವರಿಸಬಹುದಾಗಿತ್ತು.

ಆದರೆ ಸರಕಾರವು ತನ್ನ ನಡವಳಿಕೆಯಿಂದ ತಾನು ಭ್ರಷ್ಟಾಚಾರದ ಪರವಾಗಿದ್ದೇನೆ ಎಂಬ ಕೆಟ್ಟ ವರ್ಚಸ್ಸು ತನಗೆ ಬರುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಅಣ್ಣಾ ಅವರ ಮೇಲೆ ಹರಿಹಾಯಲು ಶುರು ಮಾಡಿತು. ಸರಕಾರದ ಕಡೆಯಿಂದ ಮಾತನಾಡಿದವರೆಲ್ಲ ಸಂಸತ್ತಿನ ಪರಮಾಧಿಕಾರ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಮಾತನಾಡಿದರು. ನಿಜವಾಗಿಯೂ ಸಂಸತ್ತಿಗೆ ಆ ರೀತಿಯ ಪರಮಾಧಿಕಾರ ಇರುವುದಾದರೆ ‘ಪ್ರತಿಭಟನೆಯನ್ನು ಮಾಡತಕ್ಕದ್ದಲ್ಲ’ ಎಂದು ಸಂಸತ್ತು ಒಂದು ನಿರ್ಣಯವನ್ನು ಅಂಗೀಕರಿಸಬೇಕಾಗಿತ್ತು. ಕನಿಷ್ಠ ಪಕ್ಷ ಕೇಂದ್ರ ಕ್ಯಾಬಿನೆಟ್ ಈ ರೀತಿಯ ನಿರ್ಣಯವನ್ನು ಮಾಡಬೇಕಾಗಿತ್ತು. ಅಥವಾ ರಾಷ್ಟ್ರಪತಿಯವರು ಸುಗ್ರೀವಾಜ್ಞೆಯನ್ನು ಮಾಡಬೇಕಾಗಿತ್ತು. ಆದರೆ ಆ ಮೂರನ್ನೂ ಮಾಡಲು ಆಗುವುದಿಲ್ಲ. ಯಾಕೆಂದರೆ ಆ ರೀತಿ ನಿರ್ಣಯವನ್ನು ಮಾಡಿದರೆ ಅಂತಹ ನಿರ್ಣಯವು ತಾನೇ ತಾನಾಗಿ ಅಸಾಂವಿಧಾನಿಕವೆಂದು ಪರಿಗಣಿಸಲ್ಪಟ್ಟು ಸಂವಿಧಾನದ ಪರಮೋಚ್ಛ ಆದೇಶಾನುಸಾರ ತಾನೇ ತಾನಗಿ ರದ್ದಾಗುತ್ತದೆ. ಆ ಕಾರಣಕ್ಕಾಗಿಯೇ ಸಂಸತ್ತಿನ ಸರ್ವೋಚ್ಛ ಅಧಿಕಾರ ಎಂದು ಚಿದಂಬರಂ ಹೇಳುತ್ತಾರೆ, ಕಪಿಲ್ ಸಿಬಲ್ ಹೇಳುತ್ತಾರೆ, ಮನಮೋಹನ್ ಸಿಂಗ್ ಹೇಳುತ್ತಾರೆ. ನಮಗೂ ಹೇಳಲು ಅಧಿಕಾರವಿರುವುದರಿಂದ ನಾನು, ನೀವು ಎಲ್ಲರೂ ಹೇಳಬಹುದು. ಆದರದು ಹೇಳಿಕೆಯಾಗಿ ‘ಚರ್ಚೆ’ ಆಗುತ್ತದೆಯೆ ಹೊರತು ನಿರ್ಣಯ ಆಗುವುದಿಲ್ಲ.

ಸಂಸತ್ತಿನ ಸರ್ವೋಚ್ಛ ಅಧಿಕಾರವು ಸಂವಿಧಾನದಿಂದ ನಿಯಂತ್ರಿತವಾಗಿದೆ. ಸಂವಿಧಾನದ ಮೂಲ ತತ್ವಗಳನ್ನು ಸಂಸತ್ತು ಕೂಡ ರದ್ದುಪಡಿಸುವ ಹಾಗಿಲ್ಲ. ಸಂಸತ್ತು ಒಂದು ಒಂದು ನಿರ್ಣಯವನ್ನು ಮಾಡಿ ಭಾರತ ಸಂವಿಧಾನವನ್ನು ರದ್ದುಪಡಿಸಿ ಮಿಲಿಟರಿ ಆಡಳಿತವನ್ನು ಜಾರಿಗೆ ತರಲು ಆಗುವುದಿಲ್ಲ. ಭಾರತದ ಭೂ, ಜಲ, ವಾಯು ವ್ಯಾಪ್ತಿಯಲ್ಲಿ ಸಂವಿಧಾನದ ಮೂಲ ತತ್ವಗಳನ್ನು ಉಲ್ಲಂಘಿಸುವ ಯಾವ ಆದೇಶವನ್ನು ಯಾರೇ ಮಾಡಿದರೂ ಅದು ಸಂವಿಧಾನದ ಪರಮೋಚ್ಛ ಆದೇಶಾನುಸಾರ ರದ್ದಾಗುತ್ತದೆ.

ಇಂಥಲ್ಲಿ ‘ಪ್ರಜಾಪ್ರಭುತ್ವ’ ಎನ್ನುವುದು ಸಂವಿಧಾನದ ಮೂಲ ತತ್ವವಾಗಿದೆ. ‘ಪ್ರಜಾಪ್ರಭುತ್ವ’ ಎಂದ ತಕ್ಷಣ ತಾನೇ ತಾನಾಗಿ ಆಡಳಿತವನ್ನು ಪ್ರತಿಭಟಿಸುವ ಹಕ್ಕು ಜನರಿಗೆ ಪ್ರಾಪ್ತವಾಗುತ್ತದೆ. ಸರ್ವೋಚ್ಛ ಅಧಿಕಾರದ ಬಗ್ಗೆ ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಶಬ್ದ ಪ್ರಾರಂಭವಾಗುವುದೇ ‘We the people of India…’ ಎಂದು. ಸಂವಿಧಾನವು ಆಡಿರುವ ಈ ಶಬ್ದಕ್ಕೆ ಸಂವಿಧಾನದ ಉದ್ದಕ್ಕೂ ವಿವರಣೆಗಳು ಸಿಗುತ್ತವೆ. ಈ ಮಾತಿನ ಮುಖಾಂತರ ಸಂವಿಧಾನವು ರಾಷ್ಟ್ರದ ಸರ್ವೋಚ್ಛ ಅಧಿಕಾರವನ್ನು ರಾಷ್ಟ್ರದ ಜನರದ್ದು ಎಂದು ತಿಳಿಸುತ್ತದೆ. ಜನತಾ ಪರಮಾಧಿಕಾರವನ್ನು ಧಿಕ್ಕರಿಸುವ ಅಧಿಕಾರ ಸಂಸತ್ತಿಗಿಲ್ಲ. ಹಾಗಾದರೆ ಅಣ್ಣಾ ಹಜಾರೆ ರಾಷ್ಟ್ರದ ಜನರ ಸಮಗ್ರ ಪ್ರತಿನಿಧಿಯೇ ಎಂದು ಕೇಳಿದರೆ ‘ಅಲ್ಲ’ ಎನ್ನುವುದೇ ಉತ್ತರವಾಗಿದೆ. ಯಾವ ರಾಷ್ಟ್ರದಲ್ಲಿಯೂ ಒಬ್ಬ ಹೋರಾಟಗಾರ ಎಲ್ಲ ಜನರ ಅಧಿಕೃತ ಪ್ರತಿನಿಧಿಯಾಗಿರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಒಂಟಿಯಾಗಿದ್ದಾಗಲೂ ಕೂಡ ಅವನಿಗಿರುವ ಪರಮಾಧಿಕಾರವನ್ನು ಚಲಾಯಿಸಲು ಹಕ್ಕುಳ್ಳವನೇ ಆಗಿದ್ದಾನೆ. ಅಣ್ಣಾ ಅವರು ಅದನ್ನೇ ಮಾಡುತ್ತಿದ್ದಾರೆ. ಅಣ್ಣಾ ಸಂಸತ್ತಿನ ಅಧಿಕಾರವನ್ನು ನಿರಾಕರಿಸಿಲ್ಲ. ಸಂಸತ್ತು ಇಂಥಾದ್ದನ್ನು ಮಾಡಬೇಕು ಎನ್ನುತ್ತಿದ್ದಾರೆ. ಸಂಸತ್ತನ್ನು ‘ಡಿಕ್ಟೇಟ್’ ಮಾಡುತ್ತಿದ್ದಾರೆ ಎಂದು ಸರಕಾರ ಭಾವಿಸುವುದಾದರೆ ಆ ರೀತಿ ‘ಡಿಕ್ಟೇಟ್’ ಮಾಡುವ ಹಕ್ಕು ಅಣ್ಣಾ ಅವರಿಗೆ ಇದೆ. ಅದನ್ನು ಸ್ವೀಕರಿಸದೆ ಇರುವ ಹಕ್ಕು ಸಂಸತ್ತಿಗೂ ಇದೆ. ಆದರೆ ‘ಡಿಕ್ಟೇಟ್’ ಮಾಡಲು ಅಣ್ಣಾ ಅವರಿಗಿರುವ ಹಕ್ಕನ್ನು ಮೊಟಕುಗೊಳಿಸುವ ಅಧಿಕಾರ ಸಂಸತ್ತಿಗೂ ಇಲ್ಲ. ಇವರಿಗೆ ಸಂಸತ್ತು ಕಲಾಪ ನಡೆಯುವಾಗ ಕಲಾಪದಲ್ಲಿ ಭಾಗವಹಿಸಬೇಕೆಂಬ ಅರಿವು ಇಲ್ಲ. ಬಾಂಗ್ಲಾ ದೇಶದವನು ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ನಿಂತು ಭಾರತದ ಲೋಕಸಭೆಗೆ ಆರಿಸಿ ಬಂದರೆ ಸಂಸತ್ತಿನ ಪರಮಾಧಿಕಾರದ ಉಲ್ಲಂಘನೆ ಎನಿಸುವುದಿಲ್ಲ. ರಾಷ್ಟ್ರದ ಸಂಪತ್ತಿನ ಮಹಾನ್ ಸಂರಕ್ಷಕನಾಗಿ ಸಂಸತ್ತು ಕಾರ್ಯನಿರ್ವಹಿಸಬೇಕೆಂದು ಸಂವಿಧಾನವು ನೀಡಿದ ಆದೇಶವನ್ನು ಪಾಲಿಸಲು ಆಗುವುದಿಲ್ಲ. ಪ್ರತಿಭಟನೆ ಮಾಡಿದರೆ ಸಂಸತ್ತಿನ ಪರಮಾಧಿಕಾರದ ಪ್ರಶ್ನೆ ಬರುತ್ತದೆ. ಶೇಮ್, ಶೇಮ್.

(ಚಿತ್ರ-ಕೃಪೆ : ವಿಕಿಪೀಡಿಯ)