Tag Archives: ಸವಣೂರು

ಮಲ ಸುರಿದುಕೊಂಡವರಿಗೆ ಇನ್ನೂ ನೆಲೆ ಇಲ್ಲ: ಮಲ ಹೊರುವುದು ನಿಂತಿಲ್ಲ

-ಹನುಮಂತ ಹಾಲಿಗೇರಿ

ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದ ಸವಣೂರು ಪುರಸಭೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಸವಣೂರಿನ ಭಂಗಿ ಸಮುದಾಯಕ್ಕೆ ಇನ್ನೂ ನೆಲೆ ಸಿಕ್ಕಿಲ್ಲ! ಮಲ ಹೊರುವ ಅನಿಷ್ಟ ಪದ್ದತಿಯೂ ನಿಂತಿಲ್ಲ.

ಮಲ ಸುರಿದುಕೊಂಡು ಒಂದು ವರ್ಷದ ಮೇಲೆ ಎರಡು ತಿಂಗಳು ಕಳೆದಿದ್ದು,  ಇಷ್ಟೊಂದು ದಿನಗಳಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ವಾರ್ತಾಭಾರತಿಯು ಭಂಗಿ ಸಮುದಾಯದ ಮಂಜುನಾಥ್ ಭಂಗಿಯವರಿಂದ ಮಾಹಿತಿ ಸಂಗ್ರಹಿಸಿತು. ಒಂದು ರೀತಿಯ ಉದಾಸೀನತೆಯಿಂದಲೆ ಮಾತಿಗಿಳಿದ ಮಂಜುನಾಥ್ ಅವರು ಪತ್ರಿಕೆಯೊಂದಿಗೆ ಮಾತಿಗಿಳಿದರು.

ಮಲ ಸುರಿದುಕೊಂಡ ವಿಷಯವು ದೇಶದಾದ್ಯಂತ ಬಿಸಿಬಿಸಿಯಾಗಿ ಸುದ್ದಿಯಾಗುತ್ತಿರುವಾಗ ಸವಣೂರು ಪುರಸಭೆಯು ನಗರದ ಹೊರಗೆ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿತ್ತು. ಅದರಂತೆ ಜನತಾ ಮನೆಗಳನ್ನು ಕಟ್ಟಿಸಿದ್ದರೂ ಕೂಡ ಅವುಗಳ ಗೊಡೆಗಳು ಕಟ್ಟಿದ ತಿಂಗಳುಗಳಲ್ಲಿಯೆ ಬಿರುಕುಬಿಟ್ಟು ಬೀಳತೊಡಗಿದ್ದರಿಂದ ನಮ್ಮವರ್ಯಾರು ಈ ಬಿರುಕುಬಿಟ್ಟ ಮನೆಗೆ ಹೋಗಿಲ್ಲ. ಆ ಜನತಾ ಮನೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ನಾವು ಇನ್ನು ಕೂಡ ಅದೆ ಮುರುಕಲು ಗುಡಿಸಲುಗಳಲ್ಲಿ ಕಾಲ ತಳ್ಳುತ್ತಿದ್ದೇವೆ ಎಂದು ಅವರು ಅಲವತ್ತುಕೊಂಡರು.

ಕೈ ಎತ್ತಿದ ಮುರಘಾ ಶರಣರು: `ನೀವು ಮತ್ತೆ ಮಲ ಸುರಿದುಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮಗೆ ಮಠದ ಖರ್ಚಿನಲ್ಲಿಯೆ ಮನೆ ಕಟ್ಟಿಸಿಕೊಡಲಾಗುವುದು’ ಎಂದು ಮಾಧ್ಯಮಗಳ ಮುಂದೆ ಚಿತ್ರದುರ್ಗದ ಮುರುಘಾ ಶರಣರು ಘೋಷಿಸಿದ್ದರು. ಆದರೆ ಘೋಷಿಸಿ ವರ್ಷ ಕಳೆದಿದ್ದರೂ ಶ್ರೀಗಳು ಸವಣೂರಿನತ್ತ ತಲೆ ಹಾಕಲಿಲ್ಲ. “ಈ ಬಗ್ಗೆ ಶರಣರನ್ನೆ ಕೇಳಲು ನಾವೆಲ್ಲರೂ ಒಂದು ದಿನ ಶ್ರೀಗಳ ಮಠಕ್ಕೆ ಪಾದ ಬೆಳೆಸಿದೆವು. ಶ್ರೀಗಳನ್ನು ಕಂಡು ಅವರು ನೀಡಿದ್ದ ವಚನವನ್ನು ನೆನಪಿಸಿದೆವು. ಆದರೆ ಶ್ರೀಗಳು `ನಾನು ಕಟ್ಟಿಸಿಕೊಡುತ್ತೇನೆ ಎಂದು ಹೇಳಿರಲಿಲ್ಲ. ಸರಕಾರದಿಂದ ಕಟ್ಟಿಸಿಕೊಡುತ್ತೇನೆ’ಎಂದು ಹೇಳಿದ್ದೆ ಎಂದು ಜಾರಿಕೊಂಡರು,” ಎಂದು ಮಂಜುನಾಥ್ ಹೇಳಿದರು.

ಮಲ ಹೊರುವುದು ಇನ್ನು ನಿಂತಿಲ್ಲ: ಪುರಸಭೆ ಮಲ ಹೊರುವ ಪದ್ದತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ಕೂಡ ಈ ಅನಿಷ್ಟ ಪದ್ದತಿ ಇನ್ನೂ ನಿಂತಿಲ್ಲ. ನಗರದ ಜನರು ತಮ್ಮ ಮನೆಗಳಲ್ಲಿನ ಶೌಚಾಲಯಗಳು ತುಂಬಿ ಬಾಯಿ ಕಟ್ಟಿದರೆ ನಮ್ಮ ಮನೆಗಳ ಹತ್ತಿರ ಬಂದು, ಹೆಚ್ಚು ಹಣದ ಆಸೆ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಕಹಿಸತ್ಯವನ್ನು ಅವರು ಒಪ್ಪಿಕೊಂಡರು.

ಮನೆ ಕೇಳಿದರೆ ದನ ಕೊಡಿಸಿದರು: ನಾವು ಮನೆ ಕೇಳಿದರೆ ಪುರಸಭೆಯವರು ಸಾಲದ ಮೇಲೆ ನಮಗೆ ದನ, ಕುರಿ, ಮೇಕೆಗಳನ್ನು ಕೊಡಿಸಿದರು. ನಮಗೆ ಮನೆ ಇಲ್ಲದ್ದರಿಂದ ಅವುಗಳನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ನಮಗೆ ಅವುಗಳನ್ನು ಸಾಕುವ ವಿಧಾನ ಗೊತ್ತಿರಲಿಲ್ಲ. ಅವುಗಳಿಗೆ ಮೇವು ಕೂಡ ಇಲ್ಲದ್ದರಿಂದ ಅವುಗಳಲ್ಲಿ ಕೆಲವು ಸತ್ತವು. ಉಳಿದವುಗಳನ್ನು ನಾವೆ ಮಾರಿದೆವು. ಈಗ ಅವುಗಳ ಮೇಲಿನ ಸಾಲ ತೀರಿಸಿ ಎಂದು ಪುರಸಭೆ ಪೀಡಿಸುತ್ತಿದೆ ಎಂದು ಅವರು ದೂರಿದರು.

ಖಾಯಂ ಕೆಲಸ ಕೊಟ್ಟಿಲ್ಲ: ಖಾಯಂ ಕೆಲಸ ಕೊಡುತ್ತೇವೆ ಎಂದು ಸರಕಾರದ ಮಂತ್ರಿಗಳು ಹೇಳಿದ್ದರು. ಆದರೆ ಇಂದು ಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳ ನೀಡಿ ಪೌರ ಕಾಮರ್ಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಈಗ ಸರಕಾರದವರು ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸರಕಾರದ ಕಣ್ಣು ತೆರೆಯಲಿ
ಕಳೆದ ರವಿವಾರ ನಾಡಿನ ಹಿರಿಯ ಕವಿ ಎಸ್.ಜಿ.ಸಿದ್ದರಾಮಯ್ಯ ಅವರು ತಮ್ಮ ಇತ್ತೀಚಿಗಿನ `ಅರಿವು ನಾಚಿತ್ತು’ ಆಧುನಿಕ ವಚನಗಳ ಕೃತಿಯನ್ನು ಇದೆ ಸವಣೂರಿನ ಭಂಗಿ ಸಮುದಾಯದ ಮಂಜುನಾಥ್ ಅವರಿಂದ ಮಲ ಸುರಿದಕೊಂಡ  ಸ್ಥಳದಲ್ಲಿಯೆ ಬಿಡುಗಡೆ ಮಾಡಿಸಿದ್ದರು.

ಅವರು ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿ, “ಭಂಗಿ ಸಮುದಾಯದವರ ಬೇಡಿಕೆಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವರ ಬೇಡಿಕೆಗಳು ಮತ್ತೊಮ್ಮೆ ನಾಡಿನಾದ್ಯಂತ ಚರ್ಚೆಯಾಗಬೇಕು. ಆ ಮೂಲಕ ರಾಜ್ಯ ಸರಕಾರದ ಕಣ್ಣು ತೆರೆಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಿಂದ ದೂರವಿರುವ ಸವಣೂರಿಗೆ ಹೋಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,” ಎಂದು ತಿಳಿಸಿದರು.

ಮೀನುಗಳ ದುರ್ವಾಸನೆಯಲ್ಲಿ ದಿನದ ಬದುಕು: ನಾವು ವಾಸಿಸುವ ಬಡಾವಣೆಯ ಮುಂದೆಯೆ ಕೆಲವರು ಹಸಿ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಅದರ ದುರ್ವಾಸನೆಯಿಂದಾಗಿ ಹಲವಾರು ರೋಗಗಳು ನಮ್ಮ ಮನೆಯ ಹೆಣ್ಣ್ಣುಮಕ್ಕಳನ್ನು ಸದಾ ಹಾಸಿಗೆಯಲ್ಲಿಯೆ ಇರುವಂತೆಯೆ ಮಾಡುತ್ತಿದ್ದವು. ಇದು ಕೂಡ ಮಲ ಸುರಿದುಕೊಳ್ಳಲು ಕಾರಣವಾಗಿತ್ತು. ಆದರೆ ಪ್ರತಿಭಟನೆಯ ನಂತರ ಮೀನು ವ್ಯಾಪಾರವನ್ನು ಬಂದ್ ಮಾಡಿದ್ದರು. ಈಗ ಮತ್ತೆ ಮೀನು ವ್ಯಾಪಾರ ನಮ್ಮ ಗುಡಿಸಲುಗಳ ಮುಂದೆಯೆ ಪ್ರಾರಂಭವಾಗಿದೆ. ಇದರ ಬಗ್ಗೆ ಪುರಸಭೆ ಯಾವ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಮಲ ಸುರಿದಕೊಂಡ ಸಂದರ್ಭದಲ್ಲಿ ಇಡಿ ಆಡಳಿತ ಯಂತ್ರವೇ ಸವಣೂರಿಗೆ ಪಾದ ಬೆಳೆಸಿ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ನಿಧಾನಕ್ಕೆ ಮಲ ಸುರಿದಕೊಂಡ ಸುದ್ದಿ ರದ್ದಿ ಸೇರಿದ ಮೇಲೆ ಸರಕಾರ ತಾನು ನೀಡಿದ್ದ ಭರವಸೆಯನ್ನು ಮರೆತು ನಿದ್ರೆಗೆ ಜಾರಿರುವುದು ದುರದೃಷ್ಟಕರ. ಸವಣೂರಿನ ಭಂಗಿಗಳು ರೋಸಿ ಹೋಗಿ ಮತ್ತೊಮ್ಮೆ ಮಲ ಸುರಿದುಕೊಳ್ಳುವ ಮುನ್ನವೆ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಮಾನವೀಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿ
ಈ ಹಿಂದೆ ಗ್ರಾಮೀಣ ಕೃಪಾಂಕ ಯೋಜನೆಯಡಿ ನೇಮಕ ಮಾಡಿಕೊಂಡಿದ್ದ ನೌಕರರನ್ನು ಕಾನೂನು ತೊಡಕಿನಿಂದ ಮತ್ತೆ ರದ್ದುಪಡಿಸಿ ಮನೆಗೆ ಕಳುಹಿಸಲಾಗಿತ್ತು. ಆಗ ಬಹಳಷ್ಟು ನೌಕರರು ಸರಕಾರದ ನಿರ್ಧಾರದಿಂದ ರೋಸಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರ ಕೂಡಲೆ ಕಾರ್ಯೋನ್ಮುಖವಾಗಿ ಅಳಿದುಳಿದ ನೌಕರರನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ  ನೇಮಕ ಮಾಡಿಕೊಂಡಿತ್ತು. ಅದೆ ರೀತಿಯಲ್ಲಿ ಈ ಸವಣೂರಿನ ಬಂಗಿ ಸಮುದಾಯದ ಯುವಕರನ್ನು ನೇಮಕ ಮಾಡಿಕೊಳ್ಳಬೇಕಿದೆ
-ಬಿ.ಶ್ರೀನಿವಾಸ್, ಜಿಲ್ಲೆಯ ಕಥೆಗಾರರು